Wednesday, June 18, 2025

ಕುಳಿತುಕೊಳ್ಳುವ ಆಸನಗಳು


ಹಿಂದಿನ ಸಂಚಿಕೆಯಲ್ಲಿ "ಚಂದ್ರ, ಸೂರ್ಯ ಮತ್ತು  ಬೆಲ್ಲದ ಪಾಯಸ" ಎಂಬ ಶೀರ್ಷಿಕೆಯಡಿ ಧ್ಯಾನ, ಜಪಾದಿಗಳಿಗೆ ಕುಳಿತುಕೊಳ್ಳುವಾಗ "ಒಳ್ಳೆಯ ಆಸನದ ಮೇಲೆ ಕುಳಿತು" ಎಂದು ಹೇಳಿತ್ತು. ಮಿತ್ರರೊಬ್ಬರು "ಒಳ್ಳೆಯ ಆಸನ" ಅಂದರೆ ಏನು? ಯಾವುದರ ಮೇಲೆ ಕುಳಿತುಕೊಳ್ಳಬೇಕು? ಯಾವುದರ ಮೇಲೆ ಕುಳಿತುಕೊಳ್ಳಬಾರದು? ಮುಂತಾದ ಬಹಳ ಆಸಕ್ತಿ ಹುಟ್ಟಿಸುವ ಪ್ರಶ್ನೆಗಳನ್ನು ಕೇಳಿದ್ದಾರೆ. (ಹಿಂದಿನ "ಚಂದ್ರ, ಸೂರ್ಯ ಮತ್ತು ಬೆಲ್ಲದ ಪಾಯಸ" ಎಂಬ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) 

ಇಲ್ಲಿ ಕುಳಿತುಕೊಳ್ಳುವ ಆಸನ ಅಂದರೆ ಸಾಧಕನು ಕುಳಿತುಕೊಳ್ಳುವ ಪದ್ಮಾಸನ, ವಜ್ರಾಸನ, ಸುಖಾಸನ, ಸಿದ್ಧಾಸನ ಮುಂತಾದ ಆಸನಗಳಲ್ಲ. ಬರೀ ನೆಲದ ಮೇಲೆ ಕುಳಿತುಕೊಳ್ಳುವ ಬದಲು ಪೀಠವಾಗಿ ಉಪಯೋಗಿಸುವ ಸಾಧನಗಳ ವಿಷಯ. ಹಿಂದೆ ಅನೇಕ ಮನೆಗಳಲ್ಲಿ  ಕೃಷ್ಣಾಜಿನ (ಜಿಂಕೆಯ ಚರ್ಮ) ಅಥವಾ ವ್ಯಾಘರಾಜಿನ (ಹುಲಿಯ ಚರ್ಮ) ಇರುತ್ತಿದ್ದವು. ಈಗ ಪ್ರಾಣಿಗಳನ್ನು ಮನಸೋಇಚ್ಛೆ ಕೊಂದ ಪರಿಣಾಮವಾಗಿ ಇವು ಸಿಗುತ್ತಿಲ್ಲ. ವನ್ಯ ಮೃಗ ಸಂರಕ್ಷಣಾ ಕಾಯಿದೆ ಮತ್ತು ಕೆಲವು ಇತರ ಕಾನೂನುಗಳ ಪ್ರಕಾರ ಇಂತಹ ಪ್ರಾಣಿಗಳ ಚರ್ಮವನ್ನು ಇಟ್ಟುಕೊಳ್ಳುವುದು, ಮಾರುವುದು ಮುಂತಾದುವು ನಿಷೇಧಕ್ಕೆ ಒಳಗಾಗಿವೆ. ಇದು ಕಾನೂನಿನಲ್ಲಿ ಅಪರಾಧವೂ ಹೌದು. ವನ್ಯ ಜೀವಿಗಳ ರಕ್ಷಣೆಗಾಗಿ ಇಂತಹ ಕ್ರಮ ಅವಶ್ಯಕವೂ ಹೌದು. 

ಯಾವ ಆಸನ ಜಪ-ತಪಾದಿಗಳಿಗೆ ಒಳ್ಳೆಯದು? ಯಾವುದರಿಂದ ಮನಸ್ಸಿನ ಮೇಲೆ ಎಂತಹ ಪರಿಣಾಮ ಆಗುತ್ತದೆ? ಇವುಗಳ ಬಗ್ಗೆ ನಮ್ಮ ಹಿರಿಯರು ಒಂದು ಕೋಷ್ಠಕದ ರೀತಿಯ ಸೂತ್ರವನ್ನೇ ಕೊಟ್ಟಿದ್ದಾರೆ. ನಮ್ಮ ಪರಿಸರ ಅನುಕೂಲವಾಗಿದ್ದರೆ ಮನಸ್ಸನ್ನು ಸ್ವಲ್ಪಮಟ್ಟಿಗಾದರೂ ಹಿಡಿತದಲ್ಲಿಟ್ಟುಕೊಳ್ಳುವುದು ಸಾಧ್ಯ ಎನ್ನುವುದು ನಮ್ಮ ಅನುಭವಗಳಿಂದ ತಿಳಿದ ವಿಚಾರ. ತುಂಬಾ ಗದ್ದಲವಿರುವ ಪರಿಸರದಲ್ಲಿ ಧ್ಯಾನಾದಿಗಳು ಸುಲಭವಲ್ಲ. ಎಲ್ಲವೂ ಸರಿಯಿದ್ದಾಗಲೇ ಮನಸ್ಸು ನಮ್ಮ ಮಾತು ಕೇಳುವುದಿಲ್ಲ. ಇನ್ನು ತೊಂದರೆಗಳು ಮುತ್ತಿಕೊಂಡಿದ್ದಾಗ ಅದಕ್ಕೆ ಅಲ್ಲಿ ಇಲ್ಲಿ ಹರಿದಾಡಲು ಇನ್ನೂ ಸಲೀಸು. 

ಯಾವ ಯಾವ ರೀತಿಯ ಆಸನಗಳ ಮೇಲೆ ಕುಳಿತುಕೊಳ್ಳುವುದರಿಂದ ಸಾಧಕನಿಗೆ ಅನುಕೂಲ ಅಥವಾ ಅನಾನುಕೂಲ ಆಗುತ್ತದೆ, ಎನ್ನುವ ವಿಚಾರದ ಬಗ್ಗೆ ಸ್ವಲ್ಪ ಯೋಚಿಸೋಣ. 

*****

ಮೊದಲಿಗೆ ಯಾವ ರೀತಿಯ ಆಸನಗಳು ಸಿಗಬಹುದು ಎನ್ನುವುದನ್ನು ನೋಡೋಣ. ಸಾಮಾನ್ಯವಾಗಿ ಸುಲಭವಾಗಿ ಸಿಕ್ಕುವ, ಮತ್ತು ಪ್ರಯತ್ನಪೂರ್ವಕ ಪಡೆದುಕೊಳ್ಳಬಹುದ್ದಾದ ಆಸನಗಳೆಂದರೆ: 
  • ಧರಣಿ ಅಥವಾ ಶುದ್ಧವಾದ ನೆಲ (ಭೂಮಿಯ ಮೇಲೆ ಕುಳಿತುಕೊಳ್ಳುವುದು). 
  • ಹುಲ್ಲಿನ ಆಸನ (ಚಾಪೆಯಂತಹವು}. 
  • ದರ್ಭಾಸನ (ದರ್ಭೆ ಎಂಬ ಒಂದು ರೀತಿಯ ವಿಶೇಷವಾದ ಹುಲ್ಲು). 
  • ವಂಶಾಸನ (ಬಿದಿರಿನಿಂದ ಮಾಡಿದ ಆಸನ). 
  • ಪಾಷಾಣಾಸನ (ಕಲ್ಲಿನಲ್ಲಿ ಕೆತ್ತಿದ ಆಸನ). 
  • ದಾರುಕಾಸನ (ಮರದಿಂದ ಮಾಡಿದ ಮಣೆ ಮುಂತಾದುವು). 
  • ವ್ಯಾಘ್ರsಜಿನ (ಹುಲಿಯ ಚರ್ಮ).
  • ಕೃಷ್ಣಾಜಿನ (ಜಿಂಕೆಯ ಚರ್ಮ).

ಇವುಗಳ ಮೇಲೆ ಕುಳಿತುಕೊಳ್ಳುವುದರಿಂದ ಆಗುವ ಪರಿಣಾಮಗಳೇನು? ಈ ಕೆಳಗಿನ ಶ್ಲೋಕ ಅದರ ವಿವರಗಳನ್ನು ಕೊಡುತ್ತದೆ:

ವಂಶಾಸನೇ ದರಿದ್ರಸ್ಯಾತ್  ಪಾಷಾಣೇ ವ್ಯಾಧಿಸಂಭವಃ 
ಧರಣ್ಯಾ೦ ಸುಖಮಾಪ್ನೋತಿ  ದೌರ್ಭಾಗ್ಯ೦ ದಾರುಕಾಸನೇ
ತೃಣಾಸನೇ ಯಶೋಹಾನಿ: ಕುಶಾಸನೇ ಸರ್ವಸಿದ್ಧಿ:
ಕೃಷ್ಣಾಜಿನೇ ಜ್ಞಾನಸಿದ್ಧಿ: ಮೋಕ್ಷಸ್ಯಾತ್ ವ್ಯಾಘ್ರಚರ್ಮಣಿ 

*****

ವಿವಿಧ ರೀತಿಯ ಆಸನಗಳು ಮತ್ತು ಅವುಗಳಿಂದ ಆಗುವ ಪರಿಣಾಮಗಳು ಹೀಗಿವೆ:  
  • ವಂಶಾಸನದ ಮೇಲೆ (ಬಿದಿರಿನಿಂದ ಮಾಡಿದ ಆಸನಗಳು - ಬಿದಿರಿನಿಂದ ಮಾಡಿದ ಚಾಪೆ ಮತ್ತು ಪೀಠ ಮುಂತಾಡುವುಗಳು) ಕುಳಿತರೆ ಸಂಪತ್ತು ನಾಶವಾಗಿ ದಾರಿದ್ರ್ಯ ಬರುವುದು. 
  • ಕಲ್ಲಿನ ಮೇಲೆ ಕುಳಿತರೆ ರೋಗಗಳು ಬರುತ್ತವೆ. 
  • ಶುದ್ಧವಾದ ಭೂಮಿಯ ಮೇಲೆ ಕುಳಿತರೆ ಸುಖದ ಅನುಭವವಾಗುತ್ತದೆ. 
  • ಮರದ ಪೀಠ ಮತ್ತು ಕುರ್ಚಿ ಮುಂತಾದುವುಗಳ ಮೇಲೆ ಕುಳಿತರೆ ದೌರ್ಭಾಗ್ಯಕ್ಕೆ ದಾರಿಯಾಗುತ್ತದೆ. 
  • ಹುಲ್ಲು ಹಾಸಿನ ಮೇಲೆ ಕುಳಿತರೆ ಯಶಸ್ಸು ಕ್ಷಯಿಸುತ್ತದೆ. 
  • ಆದರೆ ದರ್ಭೆಯಿಂದ ಮಾಡಿದ ಆಸನವು ಬಹಳ ಒಳ್ಳೆಯದ್ದಾಗಿ ಎಲ್ಲರೀತಿಯಿಂದಲೂ ಸಿದ್ಧಿಯನ್ನು ಕೊಡುತ್ತದೆ. 
  • ಜಿಂಕೆಯ ಚರ್ಮದ ಮೇಲೆ ಕುಳಿತರೆ ಹೆಚ್ಚಿನ ಜ್ಞಾನ ವಿಕಾಸವಾಗುವುದು. 
  • ಹುಲಿಯ ಚರ್ಮದ ಮೇಲೆ ಕುಳಿತರೆ ಮೋಕ್ಷ ಪ್ರಾಪ್ತಿಯಾಗುವುದು. 

ಸಂಸಾರಿಗಳು (ಗೃಹಸ್ಥರು) ಹುಲಿಯ ಚರ್ಮದ ಮೇಲೆ ಕುಳಿತುಕೊಳ್ಳುವ ಪರಿಪಾಠವಿಲ್ಲ. ಹುಲಿಯು ಒಂದು ಹಿಂಸ್ರ ಪಶು ಆದುದರಿಂದ ಅದರ ಮೇಲೆ ಕುಳಿತು ಏಕಾಗ್ರತೆ ಸಾಧಿಸಲು ಹೆಚ್ಚಿನ ಸಿದ್ಧತೆ ಬೇಕು. ಆದ್ದರಿಂದ ಇದನ್ನು ಸನ್ಯಾಸಿಗಳು ಹೆಚ್ಚಾಗಿ ಉಪಯೋಗಿಸುತ್ತಾರೆ. ಸಿಕ್ಕಿದರೆ, ಜಿಂಕೆಯ ಚರ್ಮ ಬಹಳ ಒಳ್ಳೆಯದು.  ಕಲ್ಲು, ಮರ, ಬಿದಿರು ಮುಂತಾದುವುಗಳು ಒಳ್ಳೆಯದಲ್ಲ. 

ದರ್ಭಾಸನ ಬಹಳ ಯೋಗ್ಯವಾದದ್ದು. ಶ್ರಾದ್ಧಾದಿಗಳಲ್ಲಿ ಬಂದವರಿಗೆ ಕೂಡಲು ದರ್ಭೆಗಳನ್ನು ಕೊಡುವುದನ್ನು ಇಲ್ಲಿ  ನೆನೆಸಿಕೊಳ್ಳಬಹುದು. ಯಾವುದೂ ಸಿಕ್ಕದಿದ್ದರೆ ಭೂಮಿಯನ್ನು ಶುದ್ಧಮಾಡಿ ಕುಳಿತುಕೊಳ್ಳುವುದು ಒಳ್ಳೆಯದು. 

No comments:

Post a Comment