Monday, July 14, 2025

ಸಂಪತ್ತು ಕಳೆಯುವ ಕಾರಣಗಳು


ಹಿಂದೊಂದು ಸಂಚಿಕೆಯಲ್ಲಿ "ದೇವರಲ್ಲಿ ಬೇಡುವ ಅಷ್ಟ ಐಶ್ವರ್ಯಗಳು" ಎನ್ನುವ ಶೀರ್ಷಿಕೆಯ ಅಡಿಯಲ್ಲಿ "ಅಷ್ಟ ಐಶ್ವರ್ಯಗಳು" ಮತ್ತು ಅವನ್ನು ಬೇಡುವ ಯುಕ್ತಾಯುಕ್ತತೆಯ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚಿಸಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಈ ಎಂಟು ಐಶ್ವರ್ಯಗಳಲ್ಲಿ ಆಯುಸ್ಸು, ಆರೋಗ್ಯ ಮತ್ತು ಐಶ್ವರ್ಯಗಳು ಎಲ್ಲಕ್ಕಿಂತ ಮೊದಲು ಮತ್ತು ಅತಿ ಮುಖ್ಯವಾದವು ಎಂದು ನೋಡಿದ್ದೆವು. ಇವುಗಳನ್ನು ಒಟ್ಟಾಗಿ ಕೋರುವುದು ಸಂಪ್ರದಾಯವಾಗಿ ಬಂದಿದೆ. "ಆಯುರಾರೋಗ್ಯ ಐಶ್ವರ್ಯಾದಿಗಳು" ಎಂದು ಹೇಳುವ  ವಾಡಿಕೆ ಇದೆ. ಆಯುಸ್ಸು ಮತ್ತು ಆರೋಗ್ಯ ಅವಳಿ ಕೋರಿಕೆಗಳು. ಆರೋಗ್ಯವಿಲ್ಲದ ದೀರ್ಘ ಆಯುಸ್ಸು, ಮತ್ತು ಆಯುಷ್ಯ ಇಲ್ಲದ ಒಳ್ಳೆಯ ಆರೋಗ್ಯ ಎರಡೂ ಪ್ರಯೋಜನಕ್ಕೆ ಬಾರದವು. ಇವೆರಡು ಚೆನ್ನಾಗಿದ್ದು ಐಶ್ವರ್ಯ ಇಲ್ಲ ಎಂದರೂ ಪರವಾಗಿಲ್ಲ. ಹಾಗಾಗಬೇಕೆಂದು ಯಾರೂ  ಆಶಿಸುವುದಿಲ್ಲ ಎನ್ನುವುದು ನಿಜವಾದರೂ, ಈ ಮೂರರಲ್ಲಿ ಎರಡು ಮಾತ್ರ ಕೊಡುತ್ತೇವೆ ಎಂದರೆ ಆಯುಸ್ಸು ಮತ್ತು ಆರೋಗ್ಯವನ್ನೇ ಕೋರಿಕೊಳ್ಳುವುದು ಅಷ್ಟೇ ಸತ್ಯ.  

ಅನೇಕರಿಗೆ ಜೀವನದಲ್ಲಿ ಇವುಗಳು ಯುಕ್ತ ಪ್ರಮಾಣದಲ್ಲಿ ಸಿಗುವುದಿಲ್ಲ. ಕೆಲವರಿಗೆ ಅಕಾಲ ಮೃತ್ಯು ಬಂದು ಜೀವನ ಯಾತ್ರೆ ಚಿಕ್ಕ ವಯಸ್ಸಿನಲ್ಲೇ ಮುಗಿದುಹೋಗುತ್ತದೆ. ಮತ್ತೆ ಕೆಲವರಿಗೆ ಆಯುಸ್ಸು ಇದ್ದು ಸುಮಾರಾದ ಕಾಲ ಬದುಕಿದರೂ ಜೀವನ ಪೂರ್ತಿ ಅನಾರೋಗ್ಯದಿಂದ ನರಳುವುದೇ ಆಗುತ್ತದೆ. ಮೂರನೆಯ ಗುಂಪಿಗೆ ಆಯುಸ್ಸು ಮತ್ತು ಆರೋಗ್ಯ ಇದ್ದರೂ ಕಡು ಬಡತನ ಕಾಡುವುದರಿಂದ ಜೀವನ ಬಹಳ ಕಷ್ಟಕರವಾಗಿ ಸಾಗುತ್ತದೆ.  ಮೂರೂ ಚೆನ್ನಾಗಿ ಇರುವುದು ಒಂದು ಸೌಭಾಗ್ಯವೇ ಸರಿ. 

ಸಂಪತ್ತುಗಳಲ್ಲಿ ಅತಿ ಮುಖ್ಯವಾದ ಈ ಮೂರು ಏಕೆ ಎಲ್ಲರಿಗೂ ಸಿಗುವುದಿಲ್ಲ, ಮತ್ತು ಕೆಲವರಿಗೆ ಸಿಕ್ಕರೂ ಏಕೆ ಮಧ್ಯದಲ್ಲಿ ಹಾಳಾಗುತ್ತದೆ ಎನ್ನುವುದನ್ನು ಈಗ ಸ್ವಲ್ಪಮಟ್ಟಿಗೆ ನೋಡೋಣ. 

*****

ನಮ್ಮ ವೈದಿಕ ವಾಂಗ್ಮಯದಲ್ಲಿ ಇವುಗಳ (ಅಂದರೆ ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯ) ಹ್ರಾಸ ಆಗುವಿಕೆಗೆ ಕಾರಣಗಳನ್ನು ಕೊಟ್ಟಿದ್ದಾರೆ. (ಕಡಿಮೆ ಆಗುವುದು, ಮೊಟಕಾಗುವುದು ಅಥವಾ ಸೋರಿಕೆ ಆಗುವುದಕ್ಕೆ "ಹ್ರಾಸ" ಎನ್ನುತ್ತಾರೆ). ಇವನ್ನು ನಂಬುವುದೂ ಬಿಡುವುದೂ ಅವರವರಿಗೆ ಸೇರಿದ್ದು. ಕೆಲವರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇರುವುದಿಲ್ಲ. ಆದರೂ ಈ ಸಂಪತ್ತುಗಳ ಹಾನಿ ಆಗುವ ಕಾರಣಗಳನ್ನು ತಿಳಿದು ಅವನ್ನು ಬಿಟ್ಟು ಬದುಕುವುದರಿಂದ ಈಗಿನ ಜೀವನವಾರರೂ ಹಸನಾಗುತ್ತದೆ ಅನ್ನುವುದು ಒಪ್ಪಬೇಕಾದ ವಿಷಯ. 

ಮನುಷ್ಯನಿಗೆ ಬರುವ ಕಷ್ಟ-ಕಾರ್ಪಣ್ಯಗಳಿಗೆ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪಕರ್ಮಗಳೇ ಕಾರಣ ಎಂದು ನಂಬಿಕೆ. ಕೆಲವು ಪಾಪ ಕರ್ಮಗಳು ಮುಂದಿನ ಯಾವುದೋ ಜನ್ಮದಲ್ಲಿ ಕಾಡುವುದು ಎಂದರೂ, ಕೆಲವು ಪ್ರಬಲ ಕರ್ಮಗಳು ಇದೇ ಜನ್ಮದಲ್ಲಿ ಹಿಂಸಿಸುವುದೂ ಉಂಟು. ಇದೇ ರೀತಿ ಈ ಜನ್ಮದ ಪುಣ್ಯ ಕರ್ಮಗಳು ಮುಂದೆ ಫಲ ಕೊಡಬಲ್ಲವಾದರೂ ಕೆಲವು ಪ್ರಬಲ ಪುಣ್ಯ ಕರ್ಮಗಳೂ ಕೂಡ ಇದೇ ಜನ್ಮದಲ್ಲಿ ಫಲಪ್ರದವಾಗುವುದೂ ಉಂಟು. ಇದರಲ್ಲಿಯೂ, ದೊಡ್ಡವರ ಆಶೀರ್ವಾದ ಪೂರ್ವಕವಾಗಿ ಬರುವಂತಹ ಪುಣ್ಯ ಕಾರ್ಯಗಳ ಯೋಗಗಳು ಅತಿ ಶೀಘ್ರವಾಗಿ ಒಳ್ಳೆಯ ಪರಿಣಾಮಗಳನ್ನು ಮಾಡುವುದು ಅನೇಕ ಉದಾಹರಣೆಗಳ ಮೂಲಕ ನಮ್ಮ ಅನುಭವಗಳಲ್ಲೇ ಕಂಡು ಬಂದಿರುವುದೂ ಉಂಟು. ಅನೇಕ ವಿಷ ಪದಾರ್ಥಗಳು ಬಹಳ ನಿಧಾನವಾಗಿ ಪರಿಣಾಮ ಮಾಡುವಂತೆ (ಸೀಸ ಅಥವಾ ಲೆಡ್, ಪಾದರಸ ಅಥವಾ ಮರ್ಕ್ಯುರಿ ಮುಂತಾದ ವಿಷಕಾರಿಗಳಂತೆ), ಮತ್ತೆ ಕೆಲವು ವಿಷ ಪದಾರ್ಥಗಳು (ಸಯನೈಡ್ ಮುಂತಾದುವು)  ಕ್ಷಣಾರ್ಧದಲ್ಲಿ ಮಾರಕವಾಗುವಂತೆ ಇವುಗಳ ಪರಿಣಾಮ. 

ಆರೋಗ್ಯ ಹಾನಿಗೆ ವ್ಯಭಿಚಾರ, ಆಯುಷ್ಯ ಹ್ರಾಸಕ್ಕೆ ಪರನಿಂದೆ, ಐಶ್ವರ್ಯ ನಾಶಕ್ಕೆ ಪರವಿತ್ತಾಪಹಾರ ಕಾರಣಗಳೆಂದು ವಿವರಣೆಗಳಿವೆ. ಅನಾರೋಗ್ಯದ ನೇರ ಕಾರಣ ವ್ಯಭಿಚಾರ ಕ್ರಿಯೆಗಳು. ಅನವಶ್ಯಕ ಪರನಿಂದೆ ಆಯುಸ್ಸನ್ನು ಕೊಡಲಿಯ ಏಟು ಮರವನ್ನು ಕಡಿಯುವಂತೆ ತುಂಡಿರಿಸುವ ಕೆಲಸ ಮಾಡುತ್ತದೆ. ಇನ್ನೊಬ್ಬರ ಗಂಟು ಹೊಡೆದು ಸಂತೋಷಿಸುವುದು ಮುಂದೆ ನಮ್ಮ ಸಂಪತ್ತಿನ ನಾಶದ ದುಃಖದ ಮೂಲಕ ಸಮ ಮಾಡುತ್ತದೆ. 
***** 

"ಪೂರ್ವ ಜನ್ಮ ಕೃತಂ ಪಾಪಂ ವ್ಯಾಧಿ ರೂಪೇಣ ಪೀಡ್ಯತೇ" ಎಂದು ಅನೇಕ ಕಡೆಗಲ್ಲಿ, ವಿಶೇಷವಾಗಿ ಆಯುರ್ವೇದದ ಗ್ರಂಥಗಳ ಚರ್ಚೆಗಳಲ್ಲಿ ಹೇಳಿದೆ. ವ್ಯಭಿಚಾರ ಅನ್ನುವುದು ಸಮಾಜದಲ್ಲಿ ಮನುಷ್ಯನನ್ನು ಕೀಳಾಗಿ ಬದುಕುವಂತೆ ಮಾಡುತ್ತದೆ. ಕೆಲವು ವ್ಯಭಿಚಾರ ಪ್ರಸಂಗಗಳು ಯಾರಿಗೂ ಗೊತ್ತಾಗದಂತೆ ನಡೆಯುತ್ತವೆ. ಮತ್ತೆ ಕೆಲವು ಜಗಜ್ಜಾಹೀರಾಗುತ್ತವೆ. ಆರೋಗ್ಯದ ಮೇಲೆ ಇದರ ಪರಿಣಾಮ ಮಾತ್ರ ಒಂದೇ ರೀತಿ. ಅನೇಕ ವ್ಯಭಿಚಾರಗಳನ್ನು ಒಂದೇ ಜನ್ಮದಲ್ಲಿ ಮಾಡಿದವರು ಮುಂದೆ ಒಂದೇ ಜೀವಿತ ಕಾಲದಲ್ಲಿ ಅನೇಕ ರೋಗಗಳನ್ನು ಅನುಭವಿಸಬೇಕಾದ ಪ್ರಮೇಯವನ್ನು ತಂದೊಡ್ಡುತ್ತದೆ. 

ವ್ಯಭಿಚಾರದ ವಿಷಯದಲ್ಲಿ ಬಹಳ ಜನಗಳಿಗೆ ತಪ್ಪು ಅಭಿಪ್ರಾಯ ಇರುವುದು. ಇಡೀ ಪ್ರಪಂಚದಲ್ಲಿ ಕೇವಲ ಹದಿನೈದು-ಇಪ್ಪತ್ತು ಶೇಕಡಾ ಮಂದಿ ಹೀಗೆ ತೊಡಗುತ್ತಾರೆ ಎಂದು ಒಂದು ಅಂದಾಜು. ಆದರೆ ಪಾಪ ಕರ್ಮಗಳು ಕೇವಲ ದೈಹಿಕವಲ್ಲ. ಈ ಅಂದಾಜು ಕೇವಲ ದೈಹಿಕ ವ್ಯಭಿಚಾರಕ್ಕೆ ಸಂಬಂಧಿಸಿದ್ದು. ಅನೇಕರಿಗೆ ವಾಚಿಕ ವ್ಯಭಿಚಾರದ ದೊಡ್ಡ ಗೀಳು ಇರುತ್ತದೆ. ಮಾತು ಪ್ರಾರಂಭಿಸಿದರೆ ಈ ರೀತಿಯ ಕೆಟ್ಟ ಮಾತುಗಳಷ್ಟೇ ಬರುವುದು ಉಂಟು. ಇದೂ ವ್ಯಭಿಚಾರವೇ. ಮಾನಸಿಕ ವ್ಯಭಿಚಾರವಂತೂ ಅಳತೆಗೆ ಸಿಗದು. ಅದು ಅವರವರಿಗೇ ಗೊತ್ತಾಗಬೇಕು. ಈ ಕಾರಣದಿಂದಲೇ ಕಾಯೇನ, ವಾಚಾ ಮತ್ತು ಮನಸಾ ಎಂದು ತ್ರಿಕರಣ ಶುದ್ಧಿಯನ್ನು ಹೇಳುವುದು. 

ಅದು ದೈಹಿಕ ವ್ಯಭಿಚಾರ ಇರಬಹುದು, ವಾಚಿಕ ಅಥವಾ ಮಾನಸಿಕ ವ್ಯಭಿಚಾರ ಇರಬಹುದು, ಕುಕರ್ಮಗಳ ಸಾಲಿನಲ್ಲಿ ಸೇರುತ್ತವೆ. ಅರೋಗ್ಯ ಹ್ರಾಸವಾಗುವುದಕ್ಕೆ ಬೀಜ ರೂಪವಾಗಿ ಕಾಯುತ್ತ ಕುಳಿತುಕೊಳ್ಳುತ್ತವೆ. 
***** 

"ಪರನಿಂದೆ" ಎನ್ನುವ ಪಾಪವನ್ನು ಮಾಡದವರೇ ಪ್ರಾಯಶಃ ಕಾಣಸಿಗರು. ಅನೇಕ ವೇಳೆ ಕಂಡ ಅಥವಾ ಕೇಳಿದ ಪ್ರಸಂಗಗಳ ಸತ್ಯಾಸತ್ಯತೆ ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡದೆ ಇನ್ನೊಬ್ಬರನ್ನು ಜರೆಯುವ ಕೆಲಸ ಮಾಡುತ್ತಿರುತ್ತೇವೆ. ಯಾರೋ ಹೇಳಿದ ಮಾತನ್ನು ನಂಬಿ ನಾವೂ ಪರನಿಂದೆಯಲ್ಲಿ ಭಾಗಿಯಾಗುವುದೂ ಉಂಟು. ಇನ್ನು ಕೆಲವು ಸಂದರ್ಭಗಳಲ್ಲಿ ನಮ್ಮ ವೈಯುಕ್ತಿಕ ಹಿತಾಸಕ್ತಿಗಳ ರಕ್ಷಣೆಗೆ ಅನವಶ್ಯಕ ಕಾರಣಗಳನ್ನು ಕಂಡುಹಿಡಿದು ಪರನಿಂದೆ ಮಾಡುವುದೂ ಉಂಟು. ಸಾಮೂಹಿಕ ಪರನಿಂದೆಯಂತೂ ಒಂದು ಸಾಂಕ್ರಾಮಿಕದಂತೆ. ಗುಂಪು ಸೇರಿದಾಗ ಇದು ಸಾಮಾನ್ಯವಾಗುತ್ತದೆ. 

ಪರನಿಂದೆಯ ಗುರಿ ಉತ್ತಮ ಜೀವಿಗಳಾದರೆ ಅದರ ಪರಿಣಾಮ ಇನ್ನೂ ಘೋರ. ನಮ್ಮ ಕ್ರಿಮಿನಲ್ ಕಾಯ್ದೆಗಳಲ್ಲಿ "ಪ್ರೇಮೆಡಿಟೇಟೆಡ್ ಕೋಲ್ಡ್ ಬ್ಲಡೆಡ್ ಮರ್ಡರ್" ಎನ್ನುವಂತೆ ಇದು. ಈ ಕಾನೂನುಗಳಂತೆ ಇದಕ್ಕೆ ಪರಿಣಾಮಕಾರಿಯಾದ ಹ್ರಾಸವೂ ಅತ್ಯಧಿಕ ಆಗುತ್ತದೆ. ಉತ್ತಮ ಜೀವಿಗಳು ನಮ್ಮ ನಿಂದೆಯಿಂದ ನೊಂದುಕೊಂಡರಂತೂ ಅದರ ಪರಿಣಾಮ ಬಹಳ ಬೇಗ ಆಗುತ್ತದೆ. 

ಪರನಿಂದೆಯ ಫಲ ಆಯುಷ್ಯ ಹಾನಿ. ಮನುಷ್ಯ ಜೀವಮಾನದ ಕಾಲದಲ್ಲಿ ಪರನಿಂದೆಗೆ ಮೀಸಲಿಟ್ಟಷ್ಟು ಕಾಲವೂ ನೇರವಾಗಿ ಆಯುಷ್ಯ ಪ್ರಮಾಣದಲ್ಲಿ ಕಳೆದಂತೆ. ಜೀವನದಲ್ಲಿ ಸಿಕ್ಕ ಕಾಲವನ್ನು ಪರನಿಂದೆಯಲ್ಲಿ ಅಪವ್ಯಯ ಮಾಡಿದ್ದು ಒಂದು ಕಡೆ. ನಮ್ಮ ಆಯುಸ್ಸಿನಲ್ಲಿ ಅಷ್ಟನ್ನು ಕಳೆದುಕೊಂಡದ್ದು ಇನ್ನೊಂದು ಕಡೆ. ದ್ವಿವಿಧ ಹೊಡೆತ ಈ ಪರನಿಂದೆಯ ಕಾರಣ. 

*****

ಇನ್ನೊಬ್ಬರ ಸ್ವತ್ತನ್ನು ಅಪಹರಿಸುವುದು "ಪರವಿತ್ತಾಪಹಾರ" ಆಗುತ್ತದೆ. ಇದು ಭೌತಿಕವಾಗಿ ಮತ್ತೊಬ್ಬರ ಆಸ್ತಿಯನ್ನು ಲಪಟಾಯಿಸುವುದು ಮಾತ್ರವಲ್ಲ. ಬೇರೆಯವರಿಗೆ ಬರಬೇಕಾದ ಆಸ್ತಿ, ಹೆಸರು, ಮನ್ನಣೆ ಮುಂತಾದುವನ್ನು ತಪ್ಪು ಕಾರಣಗಳನ್ನು ಕೊಟ್ಟು ಬರದಂತೆ ಮಾಡುವುದೂ ಪರವಿತ್ತಾಪಹಾರವೇ ಆಗುತ್ತದೆ. ಹೀಗೆ ಮಾಡಿ ಸುಖ ಅನುಭವಿಸುವುದು ಮತ್ತು ಆ ಕಾಲದಲ್ಲಿ ಇಲ್ಲದ ಹಿಗ್ಗನ್ನು ಆಸ್ವಾದಿಸುವುದು ಕ್ಷಣಿಕ. 

ಚಿಕ್ಕ ವಯಸ್ಸಿನಲ್ಲಿ ಅನೇಕ ಲೌಕಿಕ ಸುಖ ಪ್ರಾಪ್ತಿಗೆ ಎಲ್ಲರೂ ಅವರವರ ಮಟ್ಟದಲ್ಲಿ ಇಂತಹ ಕೆಲಸಗಳನ್ನು ಮಾಡಿರುತ್ತೇವೆ. ಯೌವನದ ಭರದಲ್ಲಿ ಇದು ಅನ್ಯಾಯ ಅನ್ನುವುದೂ ಹೊಳೆಯುವುದಿಲ್ಲ. ಸ್ವಲ್ಪ ವಯಸ್ಸಾದ ಮೇಲೆ, ನಿಧಾನವಾಗಿ ಕುಳಿತು ಯೋಚಿಸುವ ಕಾಲ ಬಂದಾಗ, ಹೀಗೆ ಮಾಡಿದುದಕ್ಕೆ ನಾವೇ ನಾಚಿಕೊಳ್ಳುತ್ತೇವೆ. ಆದರೆ ಆಗ ಕಾಲ ಮಿಂಚಿರುತ್ತದೆ. 

ಪರವಿತ್ತಾಪಹಾರದ ನೇರ ಫಲ ನಮ್ಮ ಸಂಪತ್ತುಗಳ ನಾಶ. ಈ ಸಂಪತ್ತು ಹಣಕಾಸು, ಮನೆ-ಮಠ, ಒಡವೆ-ವಸ್ತುವೇ ಆಗಬೇಕೆಂದಿಲ್ಲ. ಉದ್ಯೋಗದಲ್ಲಿ ಬಡ್ತಿ, ಸಮಾಜದಲ್ಲಿ ಮನ್ನಣೆ, ಸಿಗಬೇಕಾದ ಗೌರವಗಳು ಕೈ ತಪ್ಪುವುದು ಮುಂತಾದುವು ಸಹ ನಮ್ಮ ನಮ್ಮ ಸಂಪತ್ತು ನಾಶದ ರೂಪಗಳೇ ಅಲ್ಲವೇ?

*****

ನಮ್ಮ ವಾಂಗ್ಮಯದಲ್ಲಿ ಅಲ್ಲಲ್ಲಿ ಹೇಳಿರುವ ಈ ಎಲ್ಲ ಮೇಲಿನ ವಿಷಯಗಳನ್ನೂ ಶ್ರೀ ಗೋಪಾಲದಾಸರು ತಮ್ಮ "ಎನ್ನ ಬಿನ್ನಪ ಕೇಳೋ, ಧನ್ವಂತ್ರಿ ದಯಮಾಡೋ" ಎನ್ನುವ ದೇವರನಾಮದಲ್ಲಿ ಸಂಗ್ರಹಿಸಿದ್ದಾರೆ. ತಮ್ಮ ಗುರುಗಳಾದ ಶ್ರೀ ವಿಜಯದಾಸರ ವಿಷಯದಲ್ಲಿ ಶ್ರೀ ಶ್ರೀನಿವಾಸಾಚಾರ್ಯರು (ಮುಂದೆ ಶ್ರೀ ಜಗನ್ನಾಥದಾಸರು ಎಂದು ಹೆಸರಾದವರು) ಮಾಡಿದರೆನ್ನಲಾದ ಅಪಚಾರದ ಕಾರಣ ಅರೋಗ್ಯ ಮತ್ತು ಆಯಸ್ಸನ್ನು ಕಳೆದುಕೊಂಡ ಸಂದರ್ಭದಲ್ಲಿ, ಅದೇ ಗುರುಗಳ ಆಣತಿಯಂತೆ ಈ ದೇವರನಾಮದ ಮೂಲಕ ಧನ್ವಂತರಿಯನ್ನು ಒಲಿಸಿಕೊಂಡು ಅವರನ್ನು ಪಾರುಮಾಡಿದರೆಂದು ಪ್ರತೀತಿ. ಮುಂದೆ ತಮ್ಮ ಆಯುಷ್ಯದಲ್ಲಿ ನಲವತ್ತು ವರುಷಗಳನ್ನು ಶ್ರೀ ಜಗನ್ನಾಥದಾಸರಿಗೆ ಧಾರೆ ಎರೆದುಕೊಟ್ಟರೆಂದು ಹೇಳುತ್ತಾರೆ. 

ಈ ಹಾಡನ್ನು ಕೆಳಗೆ ಕ್ಲಿಕ್ ಮಾಡಿ ಕೇಳಬಹುದು:


ಈ ವಿಷಯಕ್ಕೆ ಸಂಬಂಧಿಸಿದ ಇನ್ನೂ ಕೆಲವು ವಿವರಣೆಗಳನ್ನು ಹಾಡಿನಲ್ಲಿ ಕಾಣಬಹುದು. 

*****

"ಕೆಸರಿನಿಂದ ಕೆಸರ ತೊಳೆದಂತೆ ಕರ್ಮದ ಪಥವು" ಮತ್ತು "ದುಷ್ಕರ್ಮ ಪರಿಹರಿಸೋ" ಎನ್ನುವ ವಿಷಯಗಳನ್ನು ಮುಂದೊಮ್ಮೆ ನೋಡೋಣ. 

8 comments:

  1. Very nicely explained about the meanings of the word ‘Vyabhichara’. The song is very nice and the composition of the devaranama is very pleasant to hear. UR…..

    ReplyDelete
  2. Very nicely narrated 🙏🙏

    ReplyDelete
  3. ಪೂರ್ವ ಜನ್ಮ ಕೃತಂ ಪಾಪಂ ವ್ಯಾಧಿ ರೂಪೇಣ ಪೀಡ್ಯತೇ". It is impossible to escape from this. Nicely explained.

    ReplyDelete
  4. ರಾಘವೇಂದ್ರJuly 16, 2025 at 4:07 AM

    ಈ ಲೇಖನದ ಆರಂಭದ ಕಂಡಿಕೆ, ಅಕ್ಷರ ಸಹ ನಿಜ.

    ದಾಸರು ಹೇಳಿರುವಂತೆ
    " ಕುದುರೆ ಒಂಟೆ ಆನೆ, ಬಯಸೋದು ನರಚಿತ್ತ , ಪಾದಚಾರಿ ಯಾಗಿ ರುವುದು, ಹರಿ ಚಿತ್ತ ವಯ್ಯ... ಹರಿಚಿತ್ತ ಸತ್ಯ.

    ಆಯಸ್ಸು, ಆರೋಗ್ಯ,ಐಶ್ವರ್ಯ, ಎಲ್ಲವೂ ಬೇಕು ಎಂದರೂ, ಕೊಡುವುದು ಅವನ ಇಚ್ಛೆ.

    ವ್ಯಭಿಚಾರದ ವಶ್ಲೇಶಣೆ, ಸೊಗಸಾಗಿ ದೆ. ಆತ್ಮ ಸುಸ್ತಿ ಪರ ನಿಂದನೆ ಎಂದು ಒಳ್ಳೆಯದಲ್ಲ.

    ಡಿ.ವಿ.ಜಿ ಅವರು ಹೇಳಿರುವ ಹಾಗೆ,
    ನಾವು ಗಳಿಸಿದ ಸಂಪತ್ತು, ನಮ್ಮ ಬೆವರಿನ ಫಲವಾಗಿರಬೇಕು ಬೇರೋಬ್ಬರ ಕಣ್ಣೇರಾಗಬಾರದು.
    ಆಗ ಯಾರೂ ವಶಪಡಿಸಿಕೊ಼ಳ್ಳಲಾಗುವುದಿಲ್ಲ.

    ReplyDelete
  5. Pratiyobbaroo thilidukollabekada chinthana manthana vidu. Hrutpoorvaka Dhanyavaadagalu tamage...
    IN ECK, we have been directed to contemplate on :
    "Do all you have agreed to to" and
    Do not encroach in to other persons and other property"
    Request you kindly to elaborate the quote in your lovely words in Kannada please....

    ReplyDelete


  6. "ನೀನು "ಆಚರಣೆಗೆ ತರುತ್ತೇನೆ'" ಎಂದು ಒಪ್ಪಿಕೊಂಡ ಎಲ್ಲ ಅಂಶಗಳನ್ನುt ತಪ್ಪಿದೆ ಆಚರಿಸು"

    "ಇನ್ನೊಬ್ಬರ ವೈಯುಕ್ತಿಕ ವಿಷಯಗಳು ಮತ್ತು ಸಂಸತ್ತಿನ ಮೇಲೆ ಅತಿಕ್ರಮ ಪ್ರವೇಶ ಮಾಡಬೇಡ"

    ReplyDelete
  7. * "ಸಂಪತ್ತಿನ ಮೇಲೆ ಅತಿಕ್ರಮಣ ಮಾಡಬೇಡ"

    ReplyDelete
  8. I am indebted to KeshavaMurthy Sir for advising recitation of " Enna Binnapa", when my wife Vedavathi was suffering from severe psoriasis.
    It helped her great and she successfully got rid of the dreaded disease.
    I have pasted the print of Lyrics in our ದೇವರ ಮನೆ.
    By sharing the works of Gopala daasaru, Keshava Murthy Sir is also serving humanity just like Gopala daasaru.
    CR Ramesh Babu

    ReplyDelete