Sunday, August 3, 2025

ವಿದುರ, ಯುಧಿಷ್ಠಿರ ಮತ್ತು ವೀರಬಾಹು


ಸೂರ್ಯ ವಂಶದ ಮಹಾರಾಜ ಸತ್ಯವ್ರತ ಸಶರೀರವಾಗಿ ಸ್ವರ್ಗಕ್ಕೆ ಹೋಗಲು ಆಸೆಪಟ್ಟ. ಸ್ವರ್ಗಕ್ಕೆ ಹೋಗುವ ಯೋಗ್ಯತೆ ಪಡೆದ ಜೀವಿಗಳಿಗೆ ದೇವತೆಗಳು ಒಂದು ದಿವ್ಯ ಶರೀರವನ್ನು ಕೊಟ್ಟು ಅಲ್ಲಿಗೆ ಬರಮಾಡಿಕೊಳ್ಳುತ್ತಾರೆ. ಭೂಲೋಕದಲ್ಲಿ "ಪಾರ್ಥಿವ ಶರೀರ" ಹೊಂದಿರುವ ಮನುಷ್ಯರು ಅದೇ ಶರೀರದಲ್ಲಿ ಸ್ವರ್ಗಕ್ಕೆ ಹೋಗಲಾರರು. ಇದು ಒಂದು ನಿಯಮ. ಸತ್ಯವ್ರತನಿಗೆ ಅದೇನೋ ಪಾರ್ಥಿವ ಶರೀರದ ಮೇಲೆ ಮೋಹ. (ಪಾರ್ಥಿವ ಶರೀರದ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಈ ನಿಯಮವನ್ನು ಮೀರಿ ಅಲ್ಲಿಗೆ ಹೋಗಬೇಕೆಂಬ ಅಭಿಲಾಷೆ. ಕುಲಗುರುಗಳಾದ ವಸಿಷ್ಠರು ಈ ಮನವಿಗೆ ಒಪ್ಪಲಿಲ್ಲದ ಕಾರಣ ಅವರ ಎದುರಾಳಿ ಎಂದು ತಿಳಿದು ಮಹರ್ಷಿ ವಿಶ್ವಾಮಿತ್ರರನ್ನು ಈ ಕೆಲಸಕ್ಕೆ ಆಶ್ರಯಿಸಿದ. 

ಅವನಿಂದ ಒಂದು ಹೊಸ ರೀತಿಯ ಯಾಗ ಮಾಡಿಸಿ, ಅದರ ಫಲದ ಬಲದಿಂದ ಮಹರ್ಷಿ ವಿಶ್ವಾಮಿತ್ರರು ಅವನನ್ನು ಸ್ವರ್ಗಕ್ಕೆ ಕಳಿಸಿದರು. ದೇವೇಂದ್ರನು ಅದನ್ನು ಒಪ್ಪದೇ ಸತ್ಯವ್ರತನನ್ನು ಸ್ವರ್ಗದಿಂದ ಹೊರಕ್ಕೆ ತಳ್ಳಿಸಿದ. ಕೆಳಗೆ ಬೀಳುತ್ತಿರುವ ರಾಜನು ಮಹರ್ಷಿ ವಿಶ್ವಾಮಿತ್ರರನ್ನು ಕೂಗಿ ಕರೆದ. ಅವರು ತಮ್ಮ ತಪ:ಶಕ್ತಿಯಿಂದ ತಲೆ ಕೆಳಗಾಗಿ ಬೀಳುತ್ತಿದ್ದ ಅವನನ್ನು ಅಲ್ಲೇ ನಿಲ್ಲಿಸಿ ಅವನಿಗೆ ಹೊಸದೊಂದು ಸ್ವರ್ಗವನ್ನೇ ಸೃಷ್ಟಿಸಿದರು. ಹೀಗಾಗಿ ಅವನು ಸ್ವರ್ಗಕ್ಕೂ, ಭೂಲೋಕಕ್ಕೂ ಮಧ್ಯೆ ನಿಂತ. ಈ ಕಾರಣದಿಂದ ಅವನು "ತ್ರಿಶಂಕು" ಎಂದು ಹೆಸರು ಪಡೆದ. ಹೀಗೂ ಇಲ್ಲ, ಹಾಗೂ ಇಲ್ಲ ಎನ್ನುವಂತಾಗಿ ಮಧ್ಯದಲ್ಲಿ ಸಿಕ್ಕಿ ನೇತಾಡುವ ಸ್ಥಿತಿಗೆ ಅಂದಿನಿಂದ "ತ್ರಿಶಂಕು ಸ್ವರ್ಗ" ಅಥವಾ "ತ್ರಿಶಂಕು ಪರಿಸ್ಥಿತಿ" ಎಂದು ಹೇಳುವುದು ಬಂದಿತು. (ಇಂದಿನ ಕಾಲದ ಚುನಾವಣೆಗಳ ನಂತರ ಯಾವುದೇ ಒಂದು ಪಕ್ಷಕ್ಕೆ ಅಥವಾ ಗುಂಪಿಗೆ ಬಹುಮತ ಬರದೇ ಇದ್ದಾಗ ಈ ಪದ ಬಹಳ ಜನಪ್ರಿಯ).  

ಈ ತ್ರಿಶಂಕು ಮಹಾರಾಜನ ಮಗನೇ ರಾಜಾ ಹರಿಶ್ಚಂದ್ರ. ಸತ್ಯಕ್ಕೆ ಇನ್ನೊಂದು ಹೆಸರಾದ ಈ ಹರಿಶ್ಚಂದ್ರ ಕಾರಣಾಂತರಗಳಿಂದ ವಿಶ್ವಾಮಿತ್ರರ ಪರೀಕ್ಷೆಗೆ ಗುರಿಯಾಗಬೇಕಾಯಿತು. ತನ್ನ ಮಾತನ್ನು ಉಳಿಸಿಕೊಳ್ಳುವ ಕಾರಣ ರಾಜ್ಯ-ಕೋಶಗಳನ್ನು ಕಳೆದುಕೊಂಡು, ಹೆಂಡತಿ-ಮಗನನ್ನು ಮಾರಿಕೊಂಡ. (ಮೇಲೆ ಕೊಟ್ಟಿರುವ ಚಿತ್ರ ಹೀಗೆ ಅವನು ಹೆಂಡತಿ-ಮಗನನ್ನು ಮಾರಿಕೊಳ್ಳುತ್ತಿರುವ ಪ್ರಸಂಗವನ್ನು ರಾಜ ರವಿವರ್ಮ ಚಿತ್ರಿಸಿರುವುದು). ಕಡೆಗೆ ತನ್ನನ್ನೇ ಮಾರಿಕೊಂಡು ವಿಶ್ವಾಮಿತ್ರರಿಗೆ ಕೊಡಬೇಕಾದ ಹಣ ಸಂದಾಯಮಾಡಿ ಸತ್ಯನಿಷ್ಠ ಎನಿಸಿದ. ಹೀಗೆ ಅವನು ಮಾರಾಟಕ್ಕೆಂದು ಕಾಶಿ ಕ್ಷೇತ್ರದಲ್ಲಿ ನಿಂತಾಗ ಅವನನ್ನು ಹರಾಜಿನಲ್ಲಿ ಕೊಂಡುಕೊಂಡವನೇ ವೀರಬಾಹು ಎನ್ನುವ ಸ್ಮಶಾನದ ಒಡೆಯ. ಈಗಿನ ಕಾಲದ ಸ್ಮಶಾನದ ಉಸ್ತುವಾರಿ ಪಡೆದ ಕಂಟ್ರಾಕ್ಟರ್ ಇದ್ದಂತೆ ಎನ್ನಬಹುದು. 

ಈ ವೀರಬಾಹು ಯಾರು? ಅವನದೂ ಒಂದು ದೊಡ್ಡ ಕಥೆಯೇ! ಹಿಂದೆ ಕೆಲವು ಸಂಚಿಕೆಗಳಲ್ಲಿ ಸೋಮಶರ್ಮ ಮತ್ತು ಅವನ ಹೆಂಡತಿಯಾದ ಸುಮನಾ ಎಂಬ ಚ್ಯವನ ಋಷಿಗಳ ಮಗಳ ನಡುವೆ ನಡೆದ ಸಂವಾದದ ಸಂಚಿಕೆಗಳನ್ನು ನೋಡಿದ್ದೆವು. ಈ ವೀರಬಾಹುವಿನ ವೃತ್ತಾಂತ ಅದರಲ್ಲಿಯೇ ಒಂದು ಕಡೆ ಬರುತ್ತದೆ. ಸೋಮಶರ್ಮನು ಸುಮನಾ ಧರ್ಮಪುರುಷನ ಬಗ್ಗೆ ಕೊಡುವ ವಿವರಣೆ ಕೇಳಿ ಆಶ್ಚರ್ಯ ಪಟ್ಟು ಮುಂದೆ ಧರ್ಮಪುರುಷನ ಸ್ವರೂಪದ ಬಗ್ಗೆ ಕೇಳುತ್ತಾನೆ. ಆಗ ಸುಮನಾ ಕೊಡುವ ವಿಷಯಗಳ ನಿರೂಪಣೆಯಿಂದ ಈ ವೀರಬಾಹುವಿನ ಸುಳುಹು ಸಿಗುತ್ತದೆ. ಅದನ್ನಿಷ್ಟು ಈಗ ನೋಡೋಣ. 
*****

"ಸಪ್ತರ್ಷಿಗಳು" ಎಂದು ಹೆಸರಾದ ಏಳು ಜನ ಮಹಾತಪಸ್ವಿಗಳಲ್ಲಿ ಅತ್ರಿ ಮಹರ್ಷಿಗಳೂ ಒಬ್ಬರು. ಇವರು ಚತುರ್ಮುಖ ಬ್ರಹ್ಮನ ಮಾನಸ ಪುತ್ರರು. ಕರ್ದಮ ಮಹರ್ಷಿ ಮತ್ತು ದೇವಹೂತಿ ದಂಪತಿಗಳ ಮಗಳಾದ ಅನಸೂಯ ಇವರ ಪತ್ನಿ. ತ್ರಿಮೂರ್ತಿಗಳ ವರದಿಂದ ಇವರಿಗೆ ಮೂರು ಮಕ್ಕಳಾಗುತ್ತಾರೆ. ಬ್ರಹ್ಮನ ವರದಿಂದ ಚಂದ್ರನೂ, ವಿಷ್ಣುವಿನ ವರದಿಂದ ದತ್ತಾತ್ರೇಯನೂ ಮತ್ತು ಪರಶಿವನ ವರದಿಂದ ದೂರ್ವಾಸರೂ ಜನಿಸುತ್ತಾರೆ. (ಮೂವರ ವರದ ಕಾರಣ ಸಂಯುಕ್ತವಾಗಿ ಮೂರು ತಲೆಯ "ದತ್ತಾತ್ರೇಯ" ಜನಿಸಿದ್ದು ಎಂದು ಒಂದು ನಂಬಿಕೆ. ಇದು ಚಲನಚಿತ್ರಗಳ ಮೂಲಕ ಮತ್ತು ಹರಿಕಥಾ ಕಾಲಕ್ಷೇಪಗಳ ಮೂಲಕ ಹೆಚ್ಚು ಪ್ರಚಾರದಲ್ಲಿದೆ).  

ಧರ್ಮದೇವತೆಯನ್ನು ಪೂರ್ಣವಾಗಿ ಕಂಡವರು ಬಹಳ ಕಡಿಮೆ ಜನ. ಧರ್ಮದೇವತೆಗೆ ಎರಡು ರೂಪಗಳು. ಒಂದು ಯಮ ರೂಪ. ಪಾಪಿಗಳಿಗೆ ಕೇವಲ ಯಮದೂತರ ದರ್ಶನ ಆಗುತ್ತದೆ. ಕೆಲವರಿಗೆ ಯಮ ರೂಪದ ದರ್ಶನ ಆಗುತ್ತದೆ. ಆದರೆ ಪುಣ್ಯಾತ್ಮರಿಗೆ ಧರ್ಮದೇವತೆಯ ಎರಡನೆಯ ರೂಪವಾದ ಧರ್ಮನ ಸ್ವಲ್ಪ ದರ್ಶನ ಆಗುತ್ತದೆ. ಹೀಗೆ ಧರ್ಮದೇವತೆಯ ಪೂರ್ಣ ಸ್ವರೂಪವನ್ನು ನೋಡಬೇಕೆಂದು ತಪಸ್ಸು ಮಾಡಿ ಮುಖತಃ ಕಂಡವರು ಅತ್ರಿ-ಅನಸೂಯರ ಮಕ್ಕಳಾದ ದತ್ತಾತ್ರೇಯ ಮತ್ತು ದೂರ್ವಾಸರು ಎಂದು ಪದ್ಮ ಪುರಾಣ ಹೇಳುತ್ತದೆ. 

ದೂರ್ವಾಸರು ಒಂದು ಲಕ್ಷ ವರ್ಷ ಧರ್ಮದೇವತೆಯನ್ನು ನೋಡುವುದಕ್ಕೆ ಘನಘೋರ ತಪಸ್ಸು ಮಾಡಿದರು. ತಪಸ್ಸಿನ ಕಾಲ ಏರುತ್ತಿದ್ದಂತೆ ಅವರಿಗೆ ಕೋಪವೂ ಏರಿತು. ಅದು ಎಷ್ಟರ ಮಟ್ಟಿಗೆ  ಹಿಗ್ಗಿತು ಎಂದರೆ ಯಾವ ದೇವತೆಯನ್ನು ಕುರಿತು ತಪಸ್ಸು ಮಾಡಿದರೋ ಆ ದೇವತೆಯ ಮೇಲೆ ಕೋಪ ಬರಲು ಕಾರಣವಾಯಿತು. ಕಡೆಗೆ ಧರ್ಮದೇವತೆ ತನ್ನ ಪರಿವಾರದ ಸಮೇತ ಪ್ರತ್ಯಕ್ಷನಾದನು. ಧರ್ಮದೇವತೆಯ ಪಕ್ಕದಲ್ಲಿ ಐದು ಜನ ಮಹಾತೇಜಸ್ವಿಗಳಾದ ಪುರುಷರೂ ಮತ್ತು ಒಂಭತ್ತು ಮಂದಿ ಪರಮ ಸುಂದರಿಯರಾದ ಸ್ತ್ರೀಯರೂ, ಒಬ್ಬ ತೇಜೋಮಯಿಯಾದ ವೃದ್ಧ ತಪಸ್ವಿನಿಯೂ ನಿಂತಿದ್ದರು. 

"ಮಹರ್ಷಿ, ನೋಡು. ನಾನು ಬಂದಿದ್ದೇನೆ."
"ಯಾರು ನೀನು? ಈ ತೇಜಸ್ವಿ ಪುರುಷರು ಯಾರು? ಈ ದಿವ್ಯ ಸುಂದರಿಯರು ಯಾರು?"

"ಈ ತೇಜಸ್ವಿ ಪುರುಷರು ಕ್ರಮವಾಗಿ ಬ್ರಹ್ಮಚರ್ಯ, ತಪಸ್ಸು, ದಮ, ನಿಯಮ ಮತ್ತು ಶೌಚ ಎಂಬುವುವು. ಈ ಸುಂದರ ಸ್ತ್ರೀಯರು ಕ್ರಮವಾಗಿ ಕ್ಷಮೆ, ಶಾಂತಿ, ಅಹಿಂಸೆ, ಶುಶ್ರೂಷೆ,  ಕಲ್ಪನೆ, ಬುದ್ಧಿ, ಪ್ರಜ್ಞೆ, ಶ್ರದ್ದೆ ಮತ್ತು ಮೇಧೆ. ಹತ್ತನೆಯವಳಾದ ವೃದ್ಧ ತಪಸ್ವಿನಿ ನನ್ನ ತಾಯಿಯಾದ ದಯೆ. ನಾನು ನೀನು ನೋಡಲು ಅಪೇಕ್ಷಿಸಿದ ಧರ್ಮಪುರುಷ."

"ನೀನೇಕೆ ಇಷ್ಟು ತಡ ಮಾಡಿದೆ? ನೋಡು, ಒಂದು ಲಕ್ಷ ವರುಷ ತಪಸ್ಸು ಮಾಡಿ ಹೇಗೆ ಸೊರಗಿದ್ದೇನೆ. ನಿನ್ನ ವಿಳಂಬ ನೀತಿಯಿಂದ ನನಗೆ ಬಹಳ ಕೋಪ ಬಂದಿದೆ."
"ನೀನು ಮಹಾ ತಪಸ್ವಿ. ನಿನ್ನಂತಹವರಿಗೆ ಕೋಪವು ಒಳ್ಳೆಯದಲ್ಲ. ಶಾಂತನಾಗು."
"ಶಾಂತನಾಗುವುದು ಸುಲಭವಲ್ಲ. ನಿನಗೆ ಶಾಪ ಕೊಡುತ್ತೇನೆ."
"ಕೋಪವು ನಿನಗೆ ಶೋಭಿಸದು. ಶಾಪವನ್ನು ಕೊಟ್ಟಾದರೂ ಶಾಂತನಾಗು. ನನ್ನನು ದಾಸೀಪುತ್ರನನ್ನಾಗಿ ಮಾಡು. ರಾಜನನ್ನಾಗಿ ಮಾಡು. ಇಲ್ಲವೇ. ಚಂಡಾಲನನ್ನಾಗಿ ಮಾಡು. ಆದರೆ ನೀನು ಶಾಂತನಾಗು."

"ನೀನು ದಾಸೀಪುತ್ರನಾಗಿ ಜನ್ಮ ತಾಳು. ಭರತ ವಂಶದಲ್ಲಿ ರಾಜನಾಗಿ ಜನಿಸು. ಚಂಡಾಲನಾಗಿಯೂ ಹುಟ್ಟು"

ದೂರ್ವಾಸರ ಕೋಪ ಅಂತಹುದು. ಧರ್ಮದೇವತೆಯನ್ನು ನೋಡಲು ತಪಸ್ಸು ಮಾಡಿದರು. ಕಡೆಗೆ ದರ್ಶನ ಕೊಡಲು ಬಂದ ಧರ್ಮದೇವತೆಗೇ ಮೂರು ಶಾಪ ಕೊಟ್ಟು ಹೊರತು ಹೋದರು. 

ಹೀಗೆ ಮೂರು ಶಾಪ ಪಡೆದ ಧರ್ಮದೇವತೆ ದಾಸೀಪುತ್ರನಾಗಲು ವಿದುರ ಆಗಿ ಹುಟ್ಟಿದ. ಭರತ ವಂಶದ ಚಕ್ರವರ್ತಿ ಯುಧಿಷ್ಠಿರ ಆಗಿ ಜನಿಸಿದ. 

ಮೂರನೆಯ ಶಾಪವನ್ನು ಉಪಯೋಗಿಸಿಕೊಂಡು ತ್ರಿಶಂಕುವಿನ ಮಗ ಹರಿಶ್ಚಂದ್ರ ಕಾಶಿಯಲ್ಲಿ ಮಾರಾಟಕ್ಕೆ ಬರುವ ವೇಳೆಯಲ್ಲಿ "ವೀರಬಾಹು" ಎನ್ನುವ ಹೆಸರಿನಿಂದ ಹುಟ್ಟಿ, ಸ್ಮಶಾನದ ಮಾಲೀಕನಾಗಿ ಹರಿಶ್ಚಂದ್ರನನ್ನು ಕೊಂಡುಕೊಂಡು ಕೆಲಸಕ್ಕೆ ಇಟ್ಟುಕೊಂಡ. 

*****

"ಸತ್ಯ ಹರಿಶ್ಚಂದ್ರ" ಹೆಸರಿನ ಅನೇಕ ಚಲನಚಿತ್ರಗಳು ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ. ಕನ್ನಡದ "ಸತ್ಯ ಹರಿಶ್ಚಂದ್ರ" ಚಲನಚಿತ್ರ ಜನಪ್ರಿಯ ನಾಯಕ ನಟ ರಾಜಕುಮಾರ್ ಅವರಿಗೆ ಅಪಾರ ಹೆಸರು ತಂದಿತು. ಇಂದಿಗೂ ಈ ಚಿತ್ರ ಪ್ರದರ್ಶನವಾದ ಕಡೆ ನೂಕುನುಗ್ಗಲು, ಜನಸಂದಣಿ ಇರುತ್ತದೆ. ಎಂ. ಪಿ. ಶಂಕರ್ ಅವರ ವೀರಬಾಹು ಪಾತ್ರ ಮತ್ತು ಅದರ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ" ಹಾಡು ಅತ್ಯಂತ ಜನಪ್ರಿಯ. ಈ ಹಾಡಿನಲ್ಲಿ ಅನೇಕ ತತ್ವಗಳೂ ಅಡಗಿವೆ. 

ಚಿತ್ರದ ಕಡೆಯಲ್ಲಿ ವಸಿಷ್ಠ-ವಿಶ್ವಾಮಿತ್ರರೂ, ದೇವೇಂದ್ರನೂ ಮೊದಲಾದವರು ಹರಿಶ್ಚಂದ್ರನಿಗೆ ಮತ್ತೆ ರಾಜ್ಯಭಾರವನ್ನು ವಹಿಸಿಕೊಳ್ಳಲು ಹೇಳುತ್ತಾರೆ. ಆಗ ಅವನು "ನಾನು ಸ್ಮಶಾನ ಕಾಯುವ ಕೆಲಸ ಮಾಡಿದವನು. ಈಗ ಅದಕ್ಕೆ ಯೋಗ್ಯನಲ್ಲ. ಕ್ಷಮಿಸಿ" ಅನ್ನುತ್ತಾನೆ. ಆಗ ಅವರು "ನೀನು ಕಾದದ್ದು ಸ್ಮಶಾನವಲ್ಲ. ಅಲ್ಲಿ ನೋಡು. ನಿನ್ನನ್ನು ಕೊಂಡುಕೊಂಡವನು ಧರ್ಮರಾಜನು. ನೀನು ಕಾಯುತ್ತಿದ್ದುದು ಅನೇಕ ಋಷಿಗಳ ಹೋಮಕುಂಡಗಳು" ಎಂದು ತೋರಿಸುತ್ತಾರೆ. ಚಿತ್ರದ ಕೊನೆಯ ಕೆಲವು ಸೆಕೆಂಡುಗಳ ಈ ಭಾಗವನ್ನು ಯಾರೂ ಹೆಚ್ಚಾಗಿ ಗಮನಿಸುವುದಿಲ್ಲ. ಮತ್ತೊಮ್ಮೆ ನೋಡಿದರೆ ಗೊತ್ತಾಗುವುದು. ಚಿತ್ರ ಯೂಟ್ಯೂಬಿನಲ್ಲಿ ಲಭ್ಯವಿದೆ. 

"ದಯೆಯೇ ಧರ್ಮದ ಮೂಲವಯ್ಯ" ಎನ್ನುವ ಶರಣಶ್ರೇಷ್ಠರ ವಚನಗಳಿಗೂ, ಧರ್ಮಪುರುಷನು "ದಯೆ ನನ್ನ ತಾಯಿ" ಎಂದು "ಪದ್ಮ ಪುರಾಣ"  ಸಂದರ್ಭದ ಸಂಭಾಷಣೆಯಲ್ಲಿ ಹೇಳುವುದಕ್ಕೂ ಸಾಮ್ಯವನ್ನು ಕಾಣಬಹುದು. 

*****

ದೂರ್ವಾಸರು ಧರ್ಮದೇವತೆಗೆ ಶಾಪ ಕೊಟ್ಟದ್ದು ಸರಿಯೇ? ಧರ್ಮದೇವತೆ ಅದನ್ನು ಯಾಕೆ ಒಪ್ಪಿಕೊಂಡನು? ಧರ್ಮದೇವತೆಗೆ ಅದನ್ನು ತಪ್ಪಿಸಿಕೊಳ್ಳಲು ಆಗಲಿಲ್ಲವೇ? ಇವೇ ಮುಂತಾದ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರ ಹುಡುಕೋಣ. 

Wednesday, July 30, 2025

ಪುರಾಣಗಳ ವಿಸ್ತಾರ


ಕಳೆದ ಕೆಲವು ಸಂಚಿಕೆಗಳಲ್ಲಿ, ಅನೇಕ ವಿಷಯಗಳ ಸಂದರ್ಭಗಳಲ್ಲಿ "ಪದ್ಮ ಪುರಾಣ" ಮತ್ತು "ನಾರದೀಯ ಪುರಾಣ" ಇವುಗಳ ಕೆಲವು ಅಂಶಗಳನ್ನು ಚರ್ಚೆಯಲ್ಲಿ ಕಂಡಿದ್ದೆವು. ಇವುಗಳನ್ನು ಗಮನಿಸಿದ ಮಿತ್ರರೊಬ್ಬರು ಈ ಪುರಾಣಗಳ ವಿಸ್ತಾರ, ಮತ್ತು ಆಸಕ್ತರು ಇವುಗಳನ್ನು ಓದಬೇಕಾದರೆ ಎಲ್ಲಿ ಹುಡುಕಬೇಕು ಎನ್ನುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇವುಗಳನ್ನು  ಕುರಿತು ಸ್ವಲ್ಪ ಈಗ ನೋಡೋಣ. 

ಪುರಾಣಗಳ ಸಂದರ್ಭದಲ್ಲಿ ಸಾಮಾನ್ಯವಾಗಿ "ಅಷ್ಟಾದಶ ಪುರಾಣಗಳು" ಎಂದು ಹೇಳುವ ಪರಿಪಾಠ ಇದೆ. ಈ "ಹದಿನೆಂಟು ಪುರಾಣಗಳು" ಭಗವಾನ್ ವೇದವ್ಯಾಸರಿಂದ ರಚಿತವಾಗಿವೆ ಎಂದು ನಂಬಿಕೆ. ಇವುಗಳಲ್ಲದೇ ಬೇರೆ ಪುರಾಣಗಳು ಮತ್ತು ಇವುಗಳ ಜೊತೆಗೆ ಅನೇಕ ಉಪ-ಪುರಾಣಗಳೂ ಇವೆ. ಅನೇಕ ಜೈನ ಪುರಾಣಗಳೂ ಪ್ರಸಿದ್ಧವಾಗಿವೆ. ಅನೇಕರು ಇವುಗಳಲ್ಲಿ ಕೆಲವನ್ನು ಮಾನ್ಯ ಮಾಡುವುದಿಲ್ಲ. ಕೆಲವರು ವೈಷ್ಣವ ಪುರಾಣಗಳನ್ನು ಒಪ್ಪುವುದಿಲ್ಲ. ಮತ್ತೆ ಕೆಲವರು ಶೈವ ಪುರಾಣಗಳನ್ನು ಒಪ್ಪುವುದಿಲ್ಲ. "ಅಯ್ಯೋ, ಈ ಪುರಾಣಗಳ ಪುರಾಣವೇ ಬೇಡಪ್ಪ" ಅನ್ನುವವರಿಗೂ ಕಡಿಮೆಯಿಲ್ಲ. 

ಪುರಾಣಗಳಿಗೆ ವೈದಿಕ ವಾಂಗ್ಮಯದಲ್ಲಿ ವಿಶಿಷ್ಟ ಸ್ಥಾನವಿದೆ. ರಾಮಾಯಣ, ಮಹಾಭಾರತಗಳ ಜೊತೆ ಜೊತೆಯಾಗಿ ಇವುಗಳ ಉಲ್ಲೇಖ ಬರುತ್ತದೆ. ಅನೇಕ ಸಂದರ್ಭಗಳು, ಕಥೆಗಳು, ವಿವರಗಳು ಇವುಗಳೆಲ್ಲದರಲ್ಲೂ ಸಿಗುತ್ತವೆ. ಕೆಲವು ವಿವರಗಳು ಒಂದೇ ರೀತಿ ಇವೆ. ಮತ್ತೆ ಕೆಲವು ಅಲ್ಲಲ್ಲಿ ವ್ಯತ್ಯಾಸಗಳನ್ನೂ ಹೊಂದಿವೆ. 
*****

ಪುರಾಣಗಳನ್ನು "ಧರ್ಮ ಗ್ರಂಥಗಳು" ಎಂದು ಓದುವವರಿದ್ದಾರೆ. ಇವುಗಳನ್ನು ಕೇವಲ ಒಂದು ಸಾಹಿತ್ಯ ಪ್ರಕಾರ ಎಂದೂ ಓದಬಹುದು. ಅನೇಕ ಪುರಾಣಗಳ ಭಾಗಗಳು ಒಳ್ಳೆಯ ಕಾವ್ಯವೂ ಹೌದು. ನಮ್ಮ ದೈನಂದಿನ ಜೀವನದಲ್ಲಿ ಕಂಡುಬರುವ ಅನೇಕ ವಿಷಯಗಳ ಚರ್ಚೆ ಇವುಗಳಲ್ಲಿ ಕಾಣಬಹುದು. ಜೀವನವನ್ನು ಹಸನು ಮಾಡಿಕೊಳ್ಳಲು ಬೇಕಾದ ಅಂಶಗಳನ್ನು ಹೇರಳವಾಗಿ ಇವುಗಳಲ್ಲಿ ನೋಡಬಹುದು. ನಮಗೆ ಅರ್ಥವಾಗದ ಅನೇಕ ಗೋಜಲು ಪ್ರಶ್ನೆಗಳಿಗೆ ಇವುಗಳಲ್ಲಿ ಉತ್ತರವನ್ನೂ ಕಂಡುಕೊಳ್ಳಬಹುದು. 

ಅನೇಕ ಪುರಾಣಗಳ ಶ್ಲೋಕಗಳು ನಮ್ಮಲ್ಲಿ ಅನೇಕರು ದೈನಂದಿನ ಜೀವನದಲ್ಲಿ ಪೂಜೆ-ಪುನಸ್ಕಾರಗಳಲ್ಲಿ ಹೇಳುವ ಅಭ್ಯಾಸವೂ ಇದೆ. ಇವು ಪುರಾಣಗಳ ಶ್ಲೋಕಗಳು ಎಂದು ಅನೇಕರಿಗೆ ಗೊತ್ತಿಲ್ಲ. ಅಷ್ಟೇ. ಹಿಂದಿನ "ಏಕಾದಶಿ ಮತ್ತು ರುಕ್ಮಾ೦ಗದ ಮಹಾರಾಜ" ಅನ್ನುವ ಸಂಚಿಕೆಯಲ್ಲಿ "ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮಃ" ಎನ್ನುವ ಶ್ಲೋಕದ ಮೂಲ "ನಾರದ ಪುರಾಣ"ದಲ್ಲಿದೆ ಎಂದು ನೋಡಿದೆವು. (ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು).  ಸರ್ವಸಮರ್ಪಣ ಕಾಲದಲ್ಲಿ ಹೇಳುವ "ಕಾಯೇನ ವಾಚಾ, ಮನಸಾ ಇಂದ್ರಿಯೈರ್ವಾ, ಬುಧ್ಯಾತ್ಮನಾವಾ"  ಅನ್ನುವುದೂ ಶ್ರೀಮದ್ ಭಾಗವತದಿಂದ ಬಂದಿರುವುದು. ಹೀಗೆ ಅನೇಕ ಉದಾಹರಣೆಗಳು ಉಂಟು. 

"ಪುರಾಣಗಳನ್ನು ಓದದಿದ್ದರೆ ಏನಾಗುತ್ತದೆ?" ಎಂದು ಯಾರಾದರೂ ಕೇಳಬಹುದು. ಅದಕ್ಕೆ ಪ್ರಾಯಶಃ ಸರಿಯಾದ ಉತ್ತರ "ಏನೂ ಆಗುವುದಿಲ್ಲ" ಎಂದೇ ಇರಬೇಕು! ಪುರಾಣಗಳು ಎಂದು ಒಂದು ಇದೆ ಅನ್ನುವುದೇ ಗೊತ್ತಿಲ್ಲದವರೂ ಸುಖವಾಗಿ ಜೀವನ ಮಾಡಿಕೊಂಡಿದ್ದಾರೆ ಅನ್ನುವುದು ನಮ್ಮ ಕಣ್ಣ ಮುಂದೆ ಇದೆ. ಓದು-ಬರಹ ಗೊತ್ತಿಲ್ಲದೇ ಅನೇಕರು ಇಡೀ ಜೀವನವನ್ನೇ ಕಳೆಯುವುದೂ ಉಂಟು. ಸುಖ ಅನ್ನುವುದರ ಪರಿಭಾಷೆ ಏನು ಅನ್ನುವುದರ ಮೇಲೆ ಇದರ ಉತ್ತರವನ್ನು ಅವರವರು ತಮಗೆ ಸರಿಬಂದಂತೆ ಕಂಡುಕೊಳ್ಳಬಹುದು. 

*****

"ಗ್ರಂಥ" ಅನ್ನುವ ಪದವನ್ನು ಅನೇಕ ಸಂದರ್ಭಗಳಲ್ಲಿ ಉಪಯೋಗಿಸುತ್ತೇವೆ. "ಗ್ರಂಥಾಲಯ" (ಲೈಬ್ರರಿ), "ಗ್ರಂಥಪಾಲಕ" (ಲೈಬ್ರರಿಯನ್), "ಗ್ರಂಥ ಸಂಪತ್ತು" (ಲಿಟರೇಚರ್) ಮುಂತಾಗಿ ಮಾತಿನಲ್ಲಿ ಪ್ರಯೋಗಿಸುವುದರ ಜೊತೆಗೆ ಅಲ್ಲಲ್ಲಿ ಫಲಕಗಳನ್ನೂ (ಬೋರ್ಡುಗಳು) ಕಾಣಬಹುದು. ಈ "ಗ್ರಂಥ" ಅಂದರೇನು? ಗ್ರಂಥ ಅನ್ನುವುದಕ್ಕೆ ಅನೇಕ ಅರ್ಥಗಳಿವೆ. ದಾರಗಳಿಂದ ಕಟ್ಟಿಟ್ಟದ್ದು ಎನ್ನುವುದೂ ಒಂದು ಅರ್ಥ. ತಾಳೆಗರಿಯ ಮೇಲೆ ಬರೆದಿರುವ ಕೃತಿಗಳನ್ನು ದಾರಗಳಿಂದ ಸೇರಿಸಿ ಕಟ್ಟಿಡುತ್ತಿದ್ದುದರಿಂದ ಹೀಗೆ ಪ್ರಯೋಗ ಬಂದಿರಬಹುದು. ಸಿಖ್ಖರ ಧರ್ಮಗ್ರಂಥ "ಗುರು ಗ್ರಂಥ್ ಸಾಹಿಬ್" ಅಂದು ಕರೆಯಲ್ಪಡುತ್ತದೆ. ಅದರ ರಕ್ಷಣೆ ಮಾಡುವ ಪಾಲಕರಿಗೆ "ಗ್ರಂಥಿ" ಅನ್ನುತ್ತಾರೆ. ಯೋಗ ಮತ್ತು ಆಯುರ್ವೇದಗಳಲ್ಲಿ "ಗ್ರಂಥಿ" ಅನ್ನುವುದಕ್ಕೆ ಬೇರೆ ಅರ್ಥಗಳಿವೆ. 

ಸಂಸ್ಕೃತ ಸಾಹಿತ್ಯದ ಸಂದರ್ಭದಲ್ಲಿ "ಗ್ರಂಥ" ಎಂದರೆ ಮೂವತ್ತೆರಡು ಅಕ್ಷರಗಳು (32 ಅಕ್ಷರಗಳು) ಉಳ್ಳ ಒಂದು ಶ್ಲೋಕ. ಹೀಗೆ ನೋಡಿದಾಗ ರಾಮಾಯಣ 24,000 ಶ್ಲೋಕಗಳುಳ್ಳದ್ದು. ಮಹಾಭಾರತ ಅದರ ಐದುಪಟ್ಟು ದೊಡ್ಡದು. ಮಹಾಭಾರತದ ವಿಸ್ತಾರ 1,25,000 ಶ್ಲೋಕಗಳು. ಹೆಸರಾಂತ ಗ್ರೀಕ್ ಮಹಾಕೃತಿಗಳಾದ, ಹೋಮರ್ ಮಹಾಕವಿಯ "ಇಲಿಯಡ್" ಮತ್ತು "ಒಡಿಸ್ಸಿ" ಇವುಗಳ ಒಟ್ಟು ಗಾತ್ರಕ್ಕಿಂತ ಸುಮಾರು ಹತ್ತು ಪಟ್ಟು ದೊಡ್ಡದು ಮಹಾಭಾರತ. (ಇಲಿಯಡ್ ಸುಮಾರು 15,700 ಸಾಲುಗಳ ಕೃತಿ. ಒಡಿಸ್ಸಿ ಸುಮಾರು 12,100 ಸಾಲುಗಳುಳ್ಳದ್ದು. ಇವುಗಳ ಒಟ್ಟು ಗಾತ್ರ 27,800 ಸಾಲುಗಳು). ಮಹಾಭಾರತದ ಗಾತ್ರ (ಹರಿವಂಶವನ್ನೂ ಸೇರಿಸಿದರೆ) ಸುಮಾರು 2,50,000 ಸಾಲುಗಳಿಗಿಂತಲೂ ಹೆಚ್ಚು. ಹೀಗೆ ಲೆಕ್ಕಾಚಾರ. 

"ಸುಮಾರು" ಎಂದು ಏಕೆ ಹೇಳುತ್ತಾರೆ? ಸಂಸ್ಕೃತ ಕೃತಿಗಳಲ್ಲಿ ಎರಡು ಸಾಲಿನ ಮತ್ತು ನಾಲ್ಕು ಸಾಲಿನ ಶ್ಲೋಕಗಳಿರುತ್ತವೆ. ಅನೇಕ ವೇಳೆ ಮಧ್ಯೆ ಮಧ್ಯೆ ಗದ್ಯವೂ ಸೇರಿರುತ್ತದೆ. ಈ ಕಾರಣಗಳಿಗಾಗಿ. ಇದರ ಜೊತೆಗೆ ಅಚ್ಚು ಮತ್ತು ಕಾಗದದ ಮೇಲೆ ಮುದ್ರಣ ಇಲ್ಲದ ಕಾಲದಲ್ಲಿ, ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ಕೇವಲ ಬಾಯಿಪಾಠದ ಮೂಲಕ ವರ್ಗಾವಣೆ ಆಗುತ್ತಿದ್ದ ಸಮಯದಲ್ಲಿ, ಶ್ಲೋಕಗಳ ರೂಪ ಬಹಳ ಅನುಕೂಲಕರವಾಗಿತ್ತು. ಇದೇ ಕಾರಣಕ್ಕೆ ಒಂದು ಕಡೆಯ ಪಾಠದಿಂದ (ವರ್ಷನ್) ಮತ್ತೊಂದು ಕಡೆಯ ಪಾಠಕ್ಕೆ ವ್ಯತ್ಯಾಸಗಳಾಗಿ "ಪಾಠಾ೦ತರ" ಏನುವ ಕ್ರಮ ನಡೆದು ಬಂತು. 

*****

ಈ ಹಿನ್ನೆಲೆಯಲ್ಲಿ ಪುರಾಣಗಳ ವಿಸ್ತಾರವೇನು? ಇವುಗಳ ಲೆಕ್ಕ ಎಲ್ಲಿ ಸಿಗುತ್ತದೆ? ಇವು ಬಹಳ ಆಸಕ್ತಿ ಹುಟ್ಟಿಸುವ ಪ್ರಶ್ನೆಗಳು. ಹದಿನೆಂಟು ಪುರಾಣಗಳ ಖಚಿತವಾದ ಲೆಕ್ಕ ನಮಗೆ ಸಿಗುವುದು "ನಾರದ ಪುರಾಣ" ಪ್ರಾರಂಭದ ಶ್ಲೋಕಗಳಲ್ಲಿ. ಚತುರ್ಮುಖ ಬ್ರಹ್ಮನು ತನ್ನ ಮಗ ಮರೀಚಿಗೆ ತಿಳಿಸಿದಂತೆ ಹದಿನೆಂಟು ಪುರಾಣಗಳು ಮತ್ತು ಅವುಗಳ ಗಾತ್ರ ಈ ರೀತಿ ಇದೆ:

01.  ಬ್ರಹ್ಮ ಪುರಾಣ              10,000
02.  ಪದ್ಮ ಪುರಾಣ               55,000
03.  ವಿಷ್ಣು ಪುರಾಣ               23,000
04.  ವಾಯು ಪುರಾಣ            24,000 
05.  ಭಾಗವತ ಪುರಾಣ          18,000
06.  ನಾರದೀಯ ಪುರಾಣ       25,000
07.  ಮಾರ್ಕಂಡೇಯ ಪುರಾಣ    9,000
08.  ಆಗ್ನೇಯ ಪುರಾಣ           15,000
09.  ಭವಿಷ್ಯ ಪುರಾಣ             14,000
10.  ಬ್ರಹ್ಮವೈವರ್ತ ಪುರಾಣ    18,000
11.  ಲಿಂಗ ಪುರಾಣ               11,000
12.  ವರಾಹ ಪುರಾಣ             24,000
13.  ಸ್ಕಾ೦ದ ಪುರಾಣ             81,000
14.  ವಾಮನ ಪುರಾಣ            10,000
15.  ಕೂರ್ಮ ಪುರಾಣ             17,000
16.  ಮತ್ಸ್ಯ ಪುರಾಣ               14,000
17.  ಗರುಡ ಪುರಾಣ               19,000
18.  ಬ್ರಹ್ಮಾಂಡ ಪುರಾಣ          12,000

ಹದಿನೆಂಟು ಪುರಾಣಗಳು       3,99,000   

ಹದಿನೆಂಟು ಪುರಾಣಗಳ ಒಟ್ಟು ಗಾತ್ರ ನಾಲ್ಕು ಲಕ್ಷ ಶ್ಲೋಕಗಳು ಎಂದು ಹೇಳುವುದಕ್ಕೆ ಆಧಾರ ಇದು. ಇದರ ಪ್ರಕಾರ ಹದಿನೆಂಟು ಪುರಾಣಗಳ ಒಟ್ಟು ಗಾತ್ರ ರಾಮಾಯಣದ ಗಾತ್ರಕ್ಕಿಂತ ಹದಿನಾರರಷ್ಟು! ಮಹಾಭಾರತಕ್ಕಿಂತ ಮೂರುಪಟ್ಟಿಗೂ ಹೆಚ್ಚು. ಮಹಾಕವಿ ಹೋಮರನ ಕೃತಿಗಳ ಸುಮಾರು ಮೂವತ್ತೈದರಷ್ಟು. ಇಷ್ಟು ಅಗಾಧ ಹರವು ಅಷ್ಟಾದಶ ಪುರಾಣಗಳದ್ದು. 

*****

ಈ ಪುರಾಣಗಳ ಆಳ-ಅಗಲಗಳನ್ನು ಪ್ರವೇಶಿಸಿದರೆ ಧಾರ್ಮಿಕ, ಆಧ್ಯಾತ್ಮಿಕ ವಿಷಯಗಳನ್ನು ಬಿಟ್ಟೂ ಸಹ, ಜೀವನದ ಅನೇಕ ಆಯಾಮಗಳ ಬಗ್ಗೆ ಸಾವಿರಾರು ವರುಷಗಳ ಹಿಂದೆಯೇ ನಮ್ಮ ಹಿರಿಯರು ಎಷ್ಟು ಆಳವಾದ ಅಧ್ಯಯನ ನಡೆಸಿ, ಅವುಗಳ ಸಂಚಿತ ಜ್ಞಾನವನ್ನು ಹೇಗೆ ಕೂಡಿಟ್ಟಿದ್ದಾರೆ ಎಂದು ತಿಳಿಯಬಹುದು. ಒಮ್ಮೆ ಇವುಗಳನ್ನು ಓದುವುದೇ ಒಂದು ಪ್ರಯಾಸದ ಕೆಲಸ. ಇಂತಹ ಕೃತಿಗಳನ್ನು ಹೇಗೆ ರಚಿಸಿದರು, ಅವುಗಳು ಅನೇಕ ಕಠಿಣ ಸಂದರ್ಭಗಳಲ್ಲಿಯೂ ಉಳಿದುಕೊಂಡು ಇಂದಿಗೂ ನಮಗೆ ಲಭ್ಯವಿವೆ ಎನ್ನುವುದು ಒಂದು ದೊಡ್ಡ ವಿಸ್ಮಯವೇ ಸರಿ. 

ಈ ಪುರಾಣಗಳ ರಚನೆಯ ಬಗ್ಗೆ ಇರುವ ಅಭಿಪ್ರಾಯಗಳು, ಆಸಕ್ತರು ಓದಲು ಇರುವ ಅನುಕೂಲಗಳು ಮುಂತಾದ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Saturday, July 26, 2025

ಲಾಭವೂ ನಿನ್ನದೇ; ನಷ್ಟವೂ ನಿನ್ನದೇ!


ಮನುಷ್ಯನಿಗೆ ಬಹಳ ಮುಖ್ಯವಾದ ಮೂರು ಸಂಪತ್ತುಗಳು ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯ. ಈ ಮೂರು ಸಂಪತ್ತುಗಳು ಎಲ್ಲರಿಗೂ ಸಿಕ್ಕುವುದಿಲ್ಲ. ಏಕೆ ಸಿಕ್ಕುವುದಿಲ್ಲ? ಇದಕ್ಕೆ ಕಾರಣಗಳನ್ನು ಹಿಂದೆ "ಸಂಪತ್ತು ಕಳೆಯುವ ಕಾರಣಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದ್ದೆವು. "ಕೆಸರಿಂದ ಕೆಸರ ತೊಳೆದಂತೆ" ಎಂಬ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ  ಇದರ ಮುಂದಿನ ಭಾಗವನ್ನೂ ನೋಡಿದ್ದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಿ ನೆನಪಿಸಿಕೊಳ್ಳಬಹುದು. 

ನಾವು ಮಾಡುವ ತಪ್ಪುಗಳಿಗೆ ಸಮಾಜದಲ್ಲಿ ಶಿಕ್ಷೆ ಎಂಬುದೊಂದಿದೆ. ಕಾನೂನು-ಕಟ್ಟಲೆಗಳು ಪ್ರತಿಯೊಂದು ತಪ್ಪಿಗೂ ಅದಕ್ಕೆ ಪರ್ಯಾಯವಾದ ಶಿಕ್ಷೆಯನ್ನು ನಿಗದಿ ಪಡಿಸಿವೆ. ಒಂದೇ ತರಹದ ತಪ್ಪುಗಳಾದರೂ ಅವುಗಳ ತೀವ್ರತೆ ಗಮನಿಸಿ ನ್ಯಾಯಾಧೀಶರು ಶಿಕ್ಷೆ ನಿಗದಿ ಪಡಿಸುತ್ತಾರೆ. ಇದೇ ರೀತಿ ನಮ್ಮ ನಂಬಿಕೆಗಳ ಪ್ರಕಾರ ದುಷ್ಕರ್ಮಗಳಿಗೆ ಶಿಕ್ಷೆ ಉಂಟು. ಇಲ್ಲಿಯೂ ಅಂತಹ ಶಿಕ್ಷಾರ್ಹ ತಪ್ಪುಗಳನ್ನು ಮಾಡುವವನ ಪರಿಸ್ಥಿತಿಯನ್ನು ಕಂಡು ಅನುಭವಿಸಬೇಕಾದ ತೀವ್ರತೆ ನಿರ್ಧಾರ ಆಗುತ್ತದೆ. 

ಪರಮಾತ್ಮನ ಸೃಷ್ಟಿಯಲ್ಲಿ ಸರಿ-ತಪ್ಪುಗಳಿಗೆ ವೈದೃಶ್ಯ ಅಥವಾ ಪ್ರತಿಭಾರ ಇರುವುದಿಲ್ಲ. (ಇದನ್ನು ಇಂಗ್ಲಿಷಿನಲ್ಲಿ ಸೆಟ್-ಆಫ್ ಅನ್ನುತ್ತಾರೆ). ಉದಾಹರಣೆಗೆ: ಒಬ್ಬನು ಹತ್ತು ತೂಕ ಪುಣ್ಯ ಮಾಡಿ ಐದು ತೂಕ ಪಾಪ ಮಾಡಿದ್ದಾನೆ ಎನ್ನುವ. "ಐದು ತೂಕ ಪಾಪಕ್ಕೆ ಐದು ತೂಕ ಪುಣ್ಯ ವಜಾ ಹಾಕಿಕೊಳ್ಳಿ. ಮಿಕ್ಕಿದ ಐದು ತೂಕದ ಪುಣ್ಯಕ್ಕೆ ಸುಖ ಕೊಡಿ. ದುಃಖ ಬೇಡ" ಎಂದು ಅವನು ಕೇಳಿದರೆ ಅದನ್ನು ಒಪ್ಪಿಕೊಳ್ಳುವ ಹಾಗಿಲ್ಲ. ಐದು ತೂಕ ಪಾಪದ ದುಃಖ ಅನುಭವಿಸಲೇ ಬೇಕು. ಅಂತೆಯೇ, ಹತ್ತು ತೂಕ ಪುಣ್ಯದ ಫಲವನ್ನೂ ಉಣ್ಣಬೇಕಾಗುತ್ತದೆ. ಹೀಗಾಗಿ ಮಾಡಿದ ಪ್ರತಿ ಕರ್ಮವೂ ಅದಕ್ಕೆ ನಿಗದಿಯಾದ ಸುಖ ಅಥವಾ ದುಃಖ ತಂದೇ ತರುತ್ತದೆ. ತಪ್ಪಿಸಿಕೊಳ್ಳುವಹಾಗಿಲ್ಲ. 

ಹಿಂದೆ ಒಂದು ಸಂಚಿಕೆಯಲ್ಲಿ "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಫಲವು, ಅಸುನಾಥ ಹರಿಯೇ ಪೊರೆಯೊ" ಎನ್ನುವುದನ್ನು ಚರ್ಚಿಸಿದ್ದೆವು. ಇದನ್ನು ಇನ್ನೂ ಸ್ವಲ್ಪ ವಿವರವಾಗಿ ನೋಡಿದರೆ ಒಳ್ಳೆಯದು ಎಂದು ಮಿತ್ರರೊಬ್ಬರು ಸೂಚಿಸಿದ್ದಾರೆ. ಅದನ್ನು ಈಗ ನೋಡೋಣ. 

*****

ಏನೋ ಒಂದು ಕಾರಣದಿಂದ, ತಿಳಿದೋ ತಿಳಿಯದೆಯೋ ಒಂದು ತಪ್ಪು ಆಗಿದೆ. ಮಳೆಯಲ್ಲಿ ನೆನೆದುವು ಅನ್ನೋಣ. ಅದರಿಂದ ಒಂದು ಖಾಯಿಲೆಯೋ, ಜ್ವರವೋ ಬಂತು. ಆಯಿತು. ಅದನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ? ಇರುತ್ತದೆ. ವೈದ್ಯರ ಬಳಿ ಹೋದರೆ ರೋಗಕ್ಕೆ ತಕ್ಕ ಮದ್ದು ಕೊಡುತ್ತಾರೆ. ಆ ಮದ್ದಿನಿಂದ ಖಾಯಿಲೆ ಗುಣ ಆಗಬಹುದು. ಆದರೆ ಸರಿಯಾದ ವೈದ್ಯರ ಬಳಿಗೆ ಹೋಗಬೇಕು. "ಸರಿಯಾದ ವೈದ್ಯ ಸಿಗುವುದು, ಅನುಕೂಲಕರನಾದ ಗಂಡ ಅಥವಾ ಅನುಕೂಲಕರಳಾದ ಹೆಂಡತಿ ಸಿಗುವುದು, ಇವೆರಡೂ ಒಂದು ರೀತಿಯ ಲಾಟರಿ" ಎನ್ನುವುದು ಅನೇಕರ ಅನುಭವದಿಂದ ತಿಳಿದ ಸತ್ಯ. ಇದರ ಫಲಿತಾಂಶ ಗೊತ್ತಾಗುವುದು ಕೆಲ ಕಾಲದ ನಂತರವೇ. ಥರ್ಮಾಮೀಟರ್ ನೋಡಿ ಜ್ವರ ಕಂಡುಹಿಡಿಯುವಂತೆ ಇದಕ್ಕೆ ಇನ್ನೂ ಯಾವುದೇ ಮೀಟರ್ ಬಂದಿಲ್ಲ. 

ಒಳ್ಳೆಯ ವೈದ್ಯರೇ ಸಿಕ್ಕಿದರು ಎನ್ನೋಣ. ವೈದ್ಯರು ಬರೆದುಕೊಟ್ಟ ಚೀಟಿಯಂತೆ ಸರಿಯಾದ ಮದ್ದೂ ಸಿಗಬೇಕು. ಇಂದಿನ ಮಾರುಕಟ್ಟೆಯಲ್ಲಿ ನಕಲಿ ವೈದ್ಯರೂ ಉಂಟು. ಅದ್ಕಕಿಂತ ಹೆಚ್ಚಾಗಿ ನಕಲಿ ಔಷಧಗಳೂ ಉಂಟು. ಈಗಿನ ಮದ್ದುಗಳಿಗೆ ಒಂದು ವಿಶೇಷ ಗುಣವಿರುತ್ತದೆ. ಔಷಧದ ಬಾಟಲಿನ ಮೇಲೆ ಅಂಟಿಸಿದ ಚೀಟಿಯಲ್ಲಿ ಎರಡು ಪಟ್ಟಿಗಳಿರುತ್ತವೆ. ಮೊದಲನೆಯದು ಅದು ಗುಣಪಡಿಸುವ ಖಾಯಿಲೆಗಳು. ಎರಡನೆಯದು ಅದರಿಂದ ಆಗಬಹುದಾದ ಅಡ್ಡ ಪರಿಣಾಮಗಳು (ಸೈಡ್ ಎಫೆಕ್ಟ್ಸ್). ಅನೇಕ ವೇಳೆ ಮೊದಲಿನ ಪೆಟ್ಟಿಗಿಂತ ಎರಡನೆಯದೇ ದೊಡ್ಡದಿರುತ್ತದೆ. ವೈದರಿಗೂ ಇದು ಚೆನ್ನಾಗಿ ಗೊತ್ತು. ಆದ್ದರಿಂದ ಮದ್ದು ಕೊಡುವಾಗಲೇ ಜೊತೆಯಲ್ಲಿ ಇನ್ನೊಂದನ್ನು ಕೊಟ್ಟಿರುತ್ತಾರೆ. "ಕೆಲವರಿಗೆ ಈ ಮದ್ದಿನಿಂದ ಹೊಟ್ಟೆ ನೋವು ಬರುತ್ತದೆ. ಹಾಗೆ ಬಂದರೆ ಎರಡನೆಯ ಮದ್ದು ತೆಗೆದುಕೊಳ್ಳಿ" ಎಂದು ಅವರೇ ಹೇಳಿ ಉಪಕಾರ ಮಾಡಿರುತ್ತಾರೆ. 

ಪಾಪ ಕರ್ಮ ಮಾಡಿದ್ದೋ, ಅದಾಗದೆ ಆಯಿತೋ, ಒಟ್ಟಿನಲ್ಲಿ ಅಂಟಿಕೊಂಡಿದೆ. ಅಂಟಿರುವುದು ಗೊತ್ತಾಯಿತು. ಅದಕ್ಕೆ ಪರಿಹಾರ ಹೇಳುವವರು ಒಬ್ಬರು ಬೇಕು. ಅವರು ಸರಿಯಾಗಿರಬೇಕು. ಅವರು ಹೇಳಿದ ಪರಿಹಾರವೂ ಸರಿಯಾಗಿರಬೇಕು. ಯಾವುದೋ ಒಂದು ಹೋಮ ಮಾಡಿ ಎಂದರು. ಅದು ಸರಿಯಾದ ಪ್ರಾಯಶ್ಚಿತ್ತ ಆಗಿರಬೇಕು. ಕ್ರಮವಾಗಿ ಮಾಡಿಸುವವರು ಸಿಗಬೇಕು. ತಂದ ಪದಾರ್ಥಗಳು ಶುದ್ಧವಾಗಿರಬೇಕು. ಮಾಡುವಾಗ ಭಾವ ಶುದ್ದಿ ಇರಬೇಕು. ಎಲ್ಲವೂ ಸರಿಯಾಗಿ ಆಗಬೇಕು. ಆಗ ಸರಿಯಾದ ಪರಿಹಾರ ಸಿಗಬಹುದು. 

ಮಾಡಹೊರಟಿದ್ದು ಒಳ್ಳೆಯ ಕೆಲಸವೇ. ಆದರೆ ಇವುಗಳಲ್ಲಿ ಎಲ್ಲಿಯೋ, ಏನೋ, ಎಡವಟ್ಟಾಯಿತು. ಮಾಡಿಸುವವರು, ತಿದ್ದುವವರೇ ಎಡವಿದರು. ಪದಾರ್ಥಗಳಲ್ಲಿ ಕಂಡೋ, ಕಾಣದೆಯೋ ದೋಷ ಇತ್ತು. ಮಾಡುವಾಗ ಮನಸ್ಸು ಚಂಚಲ ಆಯಿತು. ಪರಿಣಾಮ ಏನು?

ಕೆಸರಿನಿಂದ ಕೊಳಕಾದ ವಸ್ತ್ರ ತೊಳೆಯಲು ಕೊಳಕು ನೀರು ಉಪಯೋಗಿಸಿದಂತೆ ಆಯಿತು. ಒಂದು ದುಷ್ಕರ್ಮ ಕಳೆಯಲು ಏನೋ ಮಾಡ ಹೋಗಿ ಮತ್ತೊಂದು ದುಷ್ಕರ್ಮ ಅಂಟಿಕೊಂಡಿತು. ಬಟ್ಟೆ ಶುದ್ಧವಾಗುವ ಬದಲು ಇನ್ನಷ್ಟು ಕೊಳಕಾಯಿತು. ಕೆಸರಿಂದ ಕೆಸರು ತೊಳೆದಂತೆ ಆಯಿತು. ಇದನ್ನೇ ದಾಸರು "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು" ಎಂದರು. ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ?

*****

ನಮ್ಮ ಮನೆಯ ಎದುರುಗಡೆ ಎರಡು ಅಂಗಡಿಗಳಿವೆ. ಮೊದಲನೆಯದು ಯಜಮಾನನೇ ನಡೆಸುವ ಅಂಗಡಿ. ಬೆಳಗಿನಿಂದ ಸಂಜೆಯವರೆಗೆ ಅವನು ಎಲ್ಲ ವ್ಯವಹಾರ ನಡೆಸುತ್ತಾನೆ. ದಿನದ ಕೊನೆಯಲ್ಲಿ ಲೆಕ್ಕ ನೋಡುತ್ತಾನೆ. ವಹಿವಾಟಿನಲ್ಲಿ ಬಂದ ಹಣವನ್ನೆಲ್ಲಾ ತಿಜೋರಿಯಲ್ಲಿ ಭದ್ರವಾಗಿಡುತ್ತಾನೆ. ವರ್ಷದ ಕೊನೆಯಲ್ಲಿ ಎಲ್ಲಾ ಜಮಾ-ಖರ್ಚು ತಾಳೆ ಹಾಕುತ್ತಾನೆ. ಖರ್ಚಿಗಿಂತ ಆದಾಯ ಜಾಸ್ತಿಯಾದರೆ ಅವನಿಗೆ ಲಾಭ. ಆದಾಯಕ್ಕಿಂತ ಖರ್ಚು ಜಾಸ್ತಿ ಆದರೆ ಅವನಿಗೆ ನಷ್ಟ. ರಾತ್ರಿ ಅಂಗಡಿ ಬಾಗಿಲು ಹಾಕಿದ್ದಾಗ ಕಳ್ಳರು ನುಗ್ಗಿ ಹಣ ದೋಚಿದರೆ ಅವನ ಲಾಭವೆಲ್ಲ ಗೋತ. ಯಾವಾಗಲೂ ಲಾಭದ ಚಿಂತೆ. ನಷ್ಟದ ಭೀತಿ. 

ಎರಡನೆಯ ಅಂಗಡಿಯನ್ನೂ ಒಬ್ಬ ನಡೆಸುತ್ತಿದ್ದಾನೆ. ಅದು ಅವನ ಯಜಮಾನನ ಅಂಗಡಿ. ಯಜಮಾನ ಎಲ್ಲಿಯೋ ಇದ್ದಾನೆ. ಎಲ್ಲ ಭಾರ ಇಲ್ಲಿ ನಡೆಸುವವನ ಮೇಲೆ ಬಿಟ್ಟಿದ್ದಾನೆ. ಇವನು ನಿರ್ವಂಚನೆಯಿಂದ ನಡೆಸುತ್ತಿದ್ದಾನೆ. ಮೊದಲ ಅಂಗಡಿಯವನಂತೆ ಇವನೂ ಎಲ್ಲಾ ಮಾಡುತ್ತಾನೆ. ಸಂಜೆ ಹಣ ತಿಜೋರಿಯಲ್ಲಿ ಭದ್ರ ಮಾಡಿ ಕೀಲಿಕೈ ಯಜಮಾನನಿಗೆ ಒಪ್ಪಿಸುತ್ತಾನೆ. "ಲಾಭವೂ ನಿನ್ನದೇ. ನಷ್ಟವೂ ನಿನ್ನದೇ. ನನ್ನದೇನಿದ್ದರೂ ನ್ಯಾಯವಾಗಿ ವ್ಯವಹಾರ ಮಾಡುವುದು" ಎಂದು ನಡೆಯುತ್ತಾನೆ. ಅಂಗಡಿ ಅವನದಲ್ಲ ಎನ್ನುವ ಪ್ರಜ್ಞೆ ಅವನಿಗಿದೆ. ರಾತ್ರಿ ಹಣ ಕಳುವಾದರೆ ಅವನ ಹಣವಲ್ಲ. ಲಾಭ ಅಥವಾ ನಷ್ಟ ಅವನದಲ್ಲ. ಮೊದಲನೆಯ ಅಂಗಡಿಯವಂತೆ ಇವನಿಗೆ ಲಾಭ-ನಷ್ಟದ ಚಿಂತೆಯಿಲ್ಲ. 

ಬ್ಯಾಂಕಿನಿಂದ ಸಾಲ ತಂದಿದ್ದಾಯಿತು. ಈಗ ತೀರಿಸಲೇಬೇಕು. ತೀರಿಸದಿದ್ದರೆ ವಸೂಲಿ ತಂಡದವರು ಪ್ರಾಣ ತಿನ್ನುತ್ತಾರೆ. ನೋಟೀಸು ಕೊಡುತ್ತಾರೆ. ಆಸ್ತಿ ಹರಾಜು ಹಾಕುತ್ತಾರೆ. ಬಂದಿಖಾನೆಗೂ ದೂಡಬಹುದು. ಸಾಲ ತರಬಾರದಿತ್ತು. ತಂದಾಯಿತು. ಈಗ ಏನು ಮಾಡುವುದು?

ಇದಕ್ಕೂ ಒಂದು ಪರಿಹಾರ ಇದೆ. ಬ್ಯಾಂಕಿನವರ ಬಳಿ ನಮ್ಮ ಕಷ್ಟ-ಸುಖ ಹೇಳಿಕೊಳ್ಳಬೇಕು. ಅವರು ಒಪ್ಪಬಹುದು. ಒಪ್ಪದೇ ಇರಬಹುದು. ಪ್ರಯತ್ನವನ್ನಂತೂ ಮಾಡಬಹುದು. ಅವರು ಒಪ್ಪಿಕೊಂಡು "ಹೋಗಲಿ ಬಿಡಿ. ನಿಮಗೆ ಹಿಂದೆ ಕೊಡುವ ಶಕ್ತಿ ಇಲ್ಲ. ಸಾಲ ಮನ್ನಾ ಮಾಡಿದ್ದೇವೆ" ಅಂದರೆ ಈ ಸಾಲದಿಂದ ಬಿಡುಗಡೆ!

*****

"ದುಷ್ಕರ್ಮ ಪರಿಹರಿಸೋ, ಸ್ವಾಮಿ" ಎಂದು ದಾಸರು ಕೇಳಿರುವುದೂ ಇದರಂತೆಯೇ. ಅವನು ಯಜಮಾನ. ನಾನು ಕೇವಲ ಅಂಗಡಿ ನಡೆಸುವ ಎರಡನೆಯ ಅಂಗಡಿಯವನಂತೆ ಎನ್ನುವುದು ಮರೆತು ಮೊದಲಿನ ಅಂಗಡಿಯವಂತೆ ಬದುಕಿದೆವು. ಲಾಭ-ನಷ್ಟ ನಮಗೆ ಅಂಟಿಕೊಂಡಿತು. ಎರಡನೆಯವನಂತೆ ಇದ್ದಿದ್ದರೆ ಆಗ ನಿಷ್ಕಾಮ ಕರ್ಮ ಆಗುತ್ತಿತ್ತು. ಈಗ ಈ ಭಾರ ಹೊರಲು ಆಗುತ್ತಿಲ್ಲ. ಅವನನ್ನೇ ಮೊರೆ ಹೋಗಿ ಕೇಳುವುದು. "ದಯವಿಟ್ಟು ಈ ಸಾಲ ಮನ್ನಾ ಮಾಡು. ಈ ದುಷ್ಕರ್ಮ ಪರಿಹಾರ ಮಾಡು" ಎಂದು ಕೂಗುವುದು. 

ಅವನು ಒಪ್ಪಬಹುದು. ಒಪ್ಪಿಯಾನು. ಅವನೋ, "ಕರ್ತು೦, ಆಕರ್ತು೦, ಅನ್ಯಥಾ ಕರ್ತು೦ ಶಕ್ತ:". ಏನನ್ನು ಬೇಕಾದರೂ ಮಾಡಬಲ್ಲ. ಮಾಡಿದ್ದನ್ನು ಅಳಿಸಬಲ್ಲ. ಮತ್ತೇನನ್ನೋ ಮಾಡಬಲ್ಲ.  ಸಾಲ ಮನ್ನಾ ಮಾಡಬಹುದು. ಹೊತ್ತಿರುವ ಪಾಪ ಕರ್ಮಗಳ ರಾಶಿಯನ್ನು ಕ್ಷಣಾರ್ಧದಲ್ಲಿ ಸುತ್ತು ಭಸ್ಮ ಮಾಡಿ ಹೆಗಲಿನ ಭಾರದಿಂದ ಮುಕ್ತಿ ಕೊಡಬಹುದು. 

*****

ನಂಬುವವರು ನಂಬಬಹುದು. ಬಿಡುವವರು ಬಿಡಬಹುದು. ಇದು ಒಂದು ರೀತಿಯ ತರ್ಕ. ಅನೇಕರು ಪುನರ್ಜನ್ಮವನ್ನು ನಂಬುವುದಿಲ್ಲ. ದೇವರಿದ್ದಾನೆ ಅನ್ನುವುದನ್ನೂ ನಂಬುವುದಿಲ್ಲ. ಅವರವರಿಗೆ ಬಿಟ್ಟದ್ದು. 

ಎರಡನೇ ಅಂಗಡಿಯವನಂತೆ ಜೀವನ ನಡೆಸಿದವನಿಗೆ ಒಂದು ಖಚಿತವಾದ ಲಾಭ ಉಂಟು. ಈ ಜನ್ಮದಲ್ಲಿ ಬ್ಲಡ್ ಪ್ರೆಶರ್ ಚೆನ್ನಾಗಿರುತ್ತದೆ. ಊಟ ಸೇರುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ದಿನಗಳು ಚೆನ್ನಾಗಿ ಕಳೆಯುತ್ತವೆ. ಮುಂದಿನದನ್ನು ಮುಂದೆ ನೋಡಬಹುದು! 

Thursday, July 24, 2025

ಸತ್ಪುತ್ರ ಪ್ರಾಪ್ತಿ


ಚ್ಯವನ ಋಷಿಗಳ ಮಗಳಾದ ಸುಮನಾ ಮತ್ತು ಅವಳ ಗಂಡ ಸೋಮಶರ್ಮನ ವೃತ್ತಾಂತವನ್ನು ಹಿಂದಿನ ಒಂದು ಸಂಚಿಕೆಯಲ್ಲಿ ನೋಡಿದೆವು. ಸೋಮಶರ್ಮನು ಒಳ್ಳೆಯ ರೀತಿಯ ಜೀವನ ನಡೆಸುತ್ತಿದ್ದರೂ ಬಡತನ ಮತ್ತು ಮಕ್ಕಳಿಲ್ಲದರ ಕೊರಗಿನಿಂದ ಚಿಂತಿತನಾಗಿದ್ದನು. ಗಂಡನ ಅನ್ಯಮನಸ್ಕತೆಯನ್ನು (ಮನಸ್ಸು ಮಾಡುವ ಕೆಲಸಗಳ ಮೇಲೆ  ಇಲ್ಲದೇ ಮತ್ತೆಲ್ಲೋ ಇರುವುದನ್ನು ಅನ್ಯ ಮನಸ್ಕತೆ ಅನ್ನುತ್ತಾರೆ) ಗಮನಿಸಿದ ಸುಮನಾ ಆತನಿಗೆ ಹೆಚ್ಚಿನ ಯೋಚನೆ ಮಾಡದಂತೆ ಸಲಹೆ ಮಾಡುತ್ತಾಳೆ. "ಚಿಂತೆಯೇ ಎಲ್ಲ ಕಾರಣಗಳಿಗೂ ಮೂಲ. ಲೋಭದಿಂದ ಮನುಷ್ಯ ಹಾಳಾಗುತ್ತಾನೆ" ಎಂದು ಬುದ್ಧಿವಾದ ಹೇಳುತ್ತಾಳೆ. ಈ ಚಿಂತೆಯ ಕಾರಣ ಉಂಟಾಗುವ ಮುಂದಿನ ತೊಂದರೆಗಳ ವಿವರಣೆಯನ್ನು "ಚಿಂತೆ ಎನ್ನುವ ವಿಶಾಲವಾದ ವೃಕ್ಷ" ಎನ್ನುವ ಸಂಚಿಕೆಯಲ್ಲಿ ನೋಡಿದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಮಕ್ಕಳು ಹುಟ್ಟುವ ಕಾರಣಗಳು ಮತ್ತು ನಾಲ್ಕು ವಿಧದ ಮಕ್ಕಳ ರೀತಿಗಳನ್ನು ಕೂಡ ಸುಮನಾ ಗಂಡನಿಗೆ ತಿಳಿಸಿ ಹೇಳುತ್ತಾಳೆ. ಸತ್ಪುತ್ರರು ಐದನೆಯ ರೀತಿಯವರು ಮತ್ತು ಅವರು ಜನಿಸುವ ಸಂದರ್ಭಗಳನ್ನು ಸಹ ವಿವರಿಸುತ್ತಾಳೆ. ಇದನ್ನು "ಐದು ರೀತಿಯ ಮಕ್ಕಳು" ಎನ್ನುವ ಸಂಚಿಕೆಯಲ್ಲಿ ನೋಡಿದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ನಂತರದ ಸಂಚಿಕೆಗಳಲ್ಲಿ ಬೇರೆ ಬೇರೆ ವಿಷಯಗಳ ಕಡೆ ಗಮನ ಹರಿದುದರ ಕಾರಣದಿಂದಾಗಿ ಸುಮನಾ-ಸೋಮಶರ್ಮರನ್ನು ಅಲ್ಲಗೇ ಬಿಡಬೇಕಾದುದು ಅನಿವಾರ್ಯವಾಯಿತು. "ಇದೇನು, ಹೀಗೆ ಮಾಡಿದಿರಿ? ಸೋಮಶರ್ಮನ ಮುಂದಿನ ವೃತ್ತಾಂತವೇನು? ಅಲ್ಲಿಯೇ ಬಿಟ್ಟರೆ ಹೇಗೆ?" ಎಂದು ಮಿತ್ರರೊಬ್ಬರು ಆಕ್ಷೇಪಿಸಿದ್ದಾರೆ. 

ಚಿಂತೆಯ ಮರ ಕವಲುಗಳು ಹೊಂದಿರುವಂತೆ ಚಿಂತನೆಯ ಮರವೂ ಅನೇಕ ಕೊಂಬೆ-ರೆಂಬೆಗಳನ್ನು ಹೊಂದಿದೆಯಷ್ಟೆ! ಆದರೂ ಸುಮನಾ-ಸೋಮಶರ್ಮರ ಕಡೆಗೆ ಮತ್ತೆ ಹಿಂದಿರುಗೋಣ. 

*****

ಸೋಮಶರ್ನುನ ಹೆಂಡತಿ ಸುಮನಾ ಅನೇಕ ಧರ್ಮ ಸೂಕ್ಷ್ಮಗಳನ್ನು ಇಷ್ಟು ಸಹಜವಾಗಿ ಮತ್ತು ವಿವರವಾಗಿ ತಿಳಿಸಿ ಹೇಳುವುದನ್ನು ಕಂಡು ಸೋಮಶರ್ಮನಿಗೆ ಆಶ್ಚರ್ಯವಾಗುತ್ತದೆ. ಅವಳನ್ನು ಸಂದೇಹ ನಿವಾರಣೆಗಾಗಿ ಪ್ರಶಿಸುತ್ತಾನೆ. 

"ಅನೇಕ ಧರ್ಮ ಸೂಕ್ಷ್ಮಗಳನ್ನು ನೀನು ಬಹಳ ಸುಂದರವಾಗಿ ಮತ್ತು ಯಾವುದೇ ಸಂದೇಹವಿಲ್ಲದೆ ವಿವರಿಸಬಲ್ಲೆ. ಇದು ಹೇಗೆ ಸಾಧ್ಯವಾಯಿತು? ಇದಕ್ಕೆ ಕಾರಣ ವಿಶೇಷವೇನು?"
"ನಾನು ಚಿಕ್ಕವಳಿದ್ದಾಗ ನಮ್ಮ ತಂದೆಯವರನ್ನು ಕಾಣಲು ಅನೇಕ ತಪಸ್ವಿಗಳು ಬರುತ್ತಿದ್ದರು. ಅವರಲ್ಲಿ ಅನೇಕ ಸಂದೇಹಗಳ ಬಗ್ಗೆ ಸಮಾಧಾನ ಕೇಳುತ್ತಿದ್ದರು. ತಂದೆಯವರೂ ತಮ್ಮನ್ನು ಆಹ್ವಾನಿಸಿದ ಕಡೆಗಳಲ್ಲಿ ಹೋಗಿ ಅನೇಕರ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಕೆಲವು ವೇಳೆ ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ಕಾರಣದಿಂದ ನನಗೆ ಅವರು ತಿಳಿಸಿ ಹೇಳುತ್ತಿದ್ದ ಕೆಲವು ವಿಷಯಗಳು ಗೊತ್ತಾದುವು"

"ಈಗ ನಮಗೆ ಸಂತಾನವಿಲ್ಲದಿರುವುದಕ್ಕೆ ಏನು ಕಾರಣ?"
"ನಾಲ್ಕು ರೀತಿಯ ಪುತ್ರರು ಹುಟ್ಟಲು ಕಾರಣಗಳಿಲ್ಲ. ನಮ್ಮಿಂದ ಸಾಲ ವಸೂಲಾತಿಗಾಗಲೀ, ಹಿಂದಿನ ಸುಲಿಗೆಗೆ ಗುರಿಯಾಗಿ ಕೆಟ್ಟವರಾಗಲೀ ಇರಲಿಲ್ಲ. ನಮ್ಮ ಉಪಕಾರದಿಂದ ಹುಟ್ಟುವ ಅನುಕೂಲ ಪುತ್ರರೂ ಇಲ್ಲ. ಉದಾಸೀನ ಪುತ್ರರೂ ಹುಟ್ಟಲಿಲ್ಲ" 
"ಮತ್ತೆ ಮುಂದಿನ ದಾರಿ?"
"ಐದನೆಯ ತರಹದ ಸತ್ಪುತ್ರರು ಉಂಟಾಗಲು ಪ್ರಯತ್ನ ಪಡಬೇಕಷ್ಟೆ"
"ಅದರಲ್ಲಿ ಹೇಗೆ ಮುಂದುವರೆಯುವುದು?"
"ಬ್ರಹ್ಮರ್ಷಿ ವಸಿಷ್ಠರು ದಯಾಪರರು. ಅವರಲ್ಲಿ ಶರಣು ಹೋದರೆ ಕೃಪೆ ಮಾಡಿ ಯೋಗ್ಯವಾದ ದಾರಿ ತೋರಿಸುತ್ತಾರೆ"

ಸೋಮಶರ್ಮನು ಸುಮನಾಳ ಸಲಹೆಯನ್ನು ಅಂಗೀಕರಿಸಿದನು. ಬ್ರಹ್ಮರ್ಷಿ ವಸಿಷ್ಠರ ಬಳಿಗೆ ಹೋದನು. 

*****

ಸೋಮಶರ್ಮನು ಭಗವಾನ್ ವಸಿಷ್ಟರ ಆಶ್ರಮಕ್ಕೆ ಬಂದು ತಲುಪಿ ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಅರ್ಪಿಸಿದ. ಬ್ರಹ್ಮರ್ಷಿಗಳು ಅವನನ್ನು ಸೂಕ್ತವಾಗಿ ಉಪಚರಿಸಿ ಮಾತನಾಡಿಸಿದರು. 

"ಎಲ್ಲಾ ಕುಶಲವೇ?"
"ತಮ್ಮಂತಹ ಹಿರಿಯರ ಆಶೀರ್ವಾದದಿಂದ ಎಲ್ಲಾ ಕುಶಲ"
"ಈಗ ಬಂದ ಉದ್ದೇಶ್ಯವೇನು?"
"ಭಗವನ್, ನಾನು ದಾರಿದ್ರ್ಯದಿಂದ ಬಳಲುತ್ತಿದ್ದೇನೆ. ಪುತ್ರ ಸಂತಾನವಿಲ್ಲ. ನನಗೆ ಅನುಗ್ರಹಿಸಬೇಕು"
"ನೀನು ಹಿಂದಿನ ಜನ್ಮದಲ್ಲಿ ಕಡುಲೋಭಿಯಾಗಿದ್ದೆ. ಹೆಂಡತಿ, ಮಕ್ಕಳನ್ನೂ ಪ್ರೀತಿಸಲಿಲ್ಲ. ಹಣ ಕೂಡಿಸುವುದರಲ್ಲೇ ಜೀವನ ಕಳೆಯಿತು. ಗಳಿಸಿದ ಹಣವನ್ನು ಅವರಿಗೂ ಕೊಡದೇ, ಅದು ಎಲ್ಲಿದೆಯೆಂದು ಅವರಿಗೆ ಹೇಳದೇ ನಿನ್ನ ಸಾವು ಬಂದಿತು. ಆದ ಕಾರಣ ಈಗ ದರಿದ್ರನೂ, ಸಂತಾನವಿಲ್ಲದವನೂ ಆಗಿದ್ದೀಯೆ"
"ಹಾಗಿದ್ದರೂ ನನಗೆ ಈಗ ಒಳ್ಳೆಯ ಜನ್ಮ ಹೇಗೆ ಬಂದಿತು?"
"ಒಮ್ಮೆ ಒಬ್ಬ ಯಾತ್ರಿಕನು ತೀರ್ಥಯಾತ್ರೆ ಮಾಡುತ್ತಾ ನಿನ್ನ ಮನೆಗೆ ಬಂದನು. ನೀನು ಅವನನ್ನು ಗೋಶಾಲೆಯಲ್ಲಿ ಇರಗೊಟ್ಟೆ. ಮಾರನೆಯ ದಿನ "ಶಯನೀ ಏಕಾದಶಿ". ಅವನಿಂದ ಅದರ ಬಗ್ಗೆ ಕೇಳಿ ನೀನು ಆಗ ಏಕಾದಶಿ ವ್ರತ ಮಾಡಿದೆ. ಅದರಿಂದ ಈ ಒಳ್ಳೆಯ ಜನ್ಮ ಬಂದಿದೆ. ಆದರೆ, ಲೋಭಿಯಾಗಿದ್ದರಿಂದ ದರಿದ್ರನಾಗಿದ್ದೆಯೆ. ಹೆಂಡತಿ ಮಕ್ಕಳನ್ನು ಪ್ರೀತಿಸದುದರಿಂದ ಸಂತಾನವಿಲ್ಲ"
"ಈಗ ಇದರಿಂದ ಹೊರಬರಲು ನಾನು ಏನು ಮಾಡಬೇಕು?"
"ನಾರಾಯಣನನ್ನು ಶರಣು ಹೊಂದು. ಅವನನ್ನು ಭಜಿಸು. ನಿನಗೆ ಒಳ್ಳೆಯದಾಗುತ್ತದೆ"

ಸೋಮಶರ್ಮನು ಅವರಿಗೆ ವಂದಿಸಿ ಹಿಂದಿರುಗಿದ. ಸುಮನಾಳಿಗೆ ಎಲ್ಲ ಸಂಗತಿ ತಿಳಿಸಿದ. 

*****

ಸೋಮಶರ್ಮ-ಸುಮನಾ ನರ್ಮದಾ ನದಿಯ ಸಂಗಮ ಕ್ಷೇತ್ರದಲ್ಲಿ ಎಲ್ಲ ಅಡೆತಡೆಗಳನ್ನು ಎದುರಿಸಿ ಒಂದೇ ಮನಸ್ಸಿನಿಂದ ವಸಿಷ್ಠರು ಹೇಳಿದಂತೆ ನಡೆದರು.  ಸಿದ್ದೇಶ್ವರ ವಿಷ್ಣುಲಿಂಗದ ಬಳಿ ಒಂದು ನೂರು ವರುಷ ತಪಸ್ಸು ಮಾಡಿದರು. ಅವರ ಸಾಧನೆಗೆ ಅಡ್ಡಿಯಾಗಿ ಅನೇಕ ವಿಘ್ನಗಳು ಬಂದು ಒದಗಿದವು. ಆದರೆ ಅವರು ಅವು ಯಾವುದನ್ನೂ ಲೆಕ್ಕಿಸದೆ ಒಂದೇ ಗುರಿಯಿಂದ ಮುನ್ನಡೆದರು. ಲಕ್ಷ್ಮಿ ಜನಾರ್ದನರ ದರ್ಶನ ಆಯಿತು. 

"ಸೋಮಶರ್ಮ, ನಿನ್ನ ತಪಶ್ಚರ್ಯೆಗೆ ಮೆಚ್ಚಿದ್ದೇನೆ. ನಿನಗೆ ಏನು ಬೇಕು ಕೇಳು"
"ಜನ್ಮ ಜನ್ಮದಲ್ಲಿಯೂ ನಿನ್ನಲ್ಲಿ  ಭಕ್ತಿಯನ್ನು ಕೊಡು. ಅಷ್ಟು ಸಾಕು"
"ಆಗಲಿ. ನೀವು ಬಹುಕಾಲ ಸಕಲ ಸಂಪತ್ತುಗಳನ್ನೂ, ಪುತ್ರಸೌಖ್ಯವನ್ನೂ ಅನುಭವಿಸುವಿರಿ. ಕಡೆಗೆ ಸದ್ಗತಿಯನ್ನು ಹೊಂದುವಿರಿ"

ಕಾಲಕ್ರಮದಲ್ಲಿ ಸುಮನಾ-ಸೋಮಶರ್ಮ ದಂಪತಿಗಳಿಗೆ ಸುಂದರವಾದ ಮಗನೊಬ್ಬ ಜನಿಸಿದ. ಅವನಿಗೆ "ಸುವ್ರತ" ಎಂದು ಹೆಸರಾಯಿತು. 

ಹಿಂದೆ ಇಕ್ಸ್ವಾಕು ಕುಲದ ರುಕ್ಮಾ೦ಗದ ಮಹಾರಾಜನ ಮಗನಾಗಿದ್ದ ಧರ್ಮಾಂಗದನೇ ಸುವ್ರತನಾಗಿ ಹುಟ್ಟಿ ಮುಂದೆ ಇನ್ನೂ ಖ್ಯಾತಿ ಗಳಿಸಿದ. ಸುಮನಾ-ಸೋಮಶರ್ಮರಿಗೆ ದಿವ್ಯ ಲೋಕ ಪ್ರಾಪ್ತಿಯಾಯಿತು. 

*****

ಸುವ್ರತನು ತನ್ನ ಜೀವನದಲ್ಲಿ ಇನ್ನೂ ಅತಿಶಯವಾದ ಸಾಧನೆಗಳನ್ನು ಮಾಡಿ ಮುಂದಿನ ಕಲ್ಪದಲ್ಲಿ ಇಂದ್ರ ಪದವಿಯನ್ನು ಪಡೆದನಂತೆ. 

ಸತ್ಕರ್ಮಗಳು ಇಂದಿಗೂ ವಿಫಲವಾಗುವುದಿಲ್ಲ. ಪ್ರಾರಂಭದಲ್ಲಿ ಸಕಾಮ ಕರ್ಮಗಳಿಂದ ಒಳ್ಳೆಯ ಕೆಲಸಗಳನ್ನು ಮಾಡಿದರೂ, ಕಾಲ ಕ್ರಮದಲ್ಲಿ ಅವುಗಳಿಂದಲೇ ನಿಷ್ಕಾಮ ಕರ್ಮ ಮಾಡಲು ಪ್ರೇರಣೆ ದೊರಕುತ್ತದೆ. 

Tuesday, July 22, 2025

ಏಕಾದಶಿ ಮತ್ತು ರುಕ್ಮಾ೦ಗದ ಮಹಾರಾಜ


ಹಿಂದಿನ ಒಂದು ಸಂಚಿಕೆಯಲ್ಲಿ "ಶಯನೀ ಏಕಾದಶಿ" ಮತ್ತು ಚಾತುರ್ಮಾಸ ಕಾಲದ ಸಂಗತಿಗಳ ಪ್ರಸ್ತಾಪವಾಗಿತ್ತು. ಏಕಾದಶಿಯ ವ್ರತವೆಂದರೆ ಏನು? ಅದರ ಪೂರ್ಣ ಆಚರಣೆ ಹೇಗೆ ಮಾಡಬೇಕು ಮುಂತಾದುವನ್ನು ಸಂಕ್ಷಿಪ್ತವಾಗಿ ನೋಡಿದೆವು. "ಏಕಾದಶಿಯ ದಿನ ಹಾಲು ಹಣ್ಣು ಸೇವಿಸಿ" ಎಂದು ಪುರಾಣದಲ್ಲಿ ಹೇಳಿದುದರ ಕೊನೆಯ ಭಾಗ ಮಾತ್ರ ಕೇಳಿ, ಅದರಂತೆ ಆಚರಿಸಲು ಪ್ರಯತ್ನಿಸಿ, ಶ್ರೀ ಮುಕುಂದರಾಯರು ಪಟ್ಟ ಬವಣೆಯನ್ನು ಅದೇ ಹೆಸರಿನ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಮಾರನೆಯ ದಿನ ಹಿರಿಯರೊಬ್ಬರ ನೆರವಿನಿಂದ ಮುಕುಂದರಾಯರಿಗೆ ಸರಿಯಾದ ವಿಷಯಗಳು ತಿಳಿದು ಪುರಾಣೀಕರು ಹೇಳಿದ್ದ ಹಾಲು "ಭಗವದ್ಗೀತೆ" ಮತ್ತು ಹಣ್ಣು "ಶ್ರೀಮದ್ ಭಾಗವತ" ಎಂದು ಅಥವಾಯಿತು. ಇದಕ್ಕೆ ಕಾರಣಗಳನ್ನು ಕೂಡ "ಗೀತೆ ಎಂಬ ಹಾಲು; ಭಾಗವತವೆಂಬ ಹಣ್ಣು" ಎನ್ನುವ ಸಂಚಿಕೆಯಲ್ಲಿ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.   

ಏಕಾದಶಿಯ ಸಂದರ್ಭದಲ್ಲಿ ನೆನೆಯಲೇಬೇಕಾದ ಎರಡು ಹೆಸರುಗಳು "ರುಕ್ಮಾ೦ಗದ  ಮಹಾರಾಜ" ಮತ್ತು "ಅಂಬರೀಶ ಮಹಾರಾಜ". ಏಕಾದಶಿ ವ್ರತದ ಆಚರಣೆಗೆ ಹೆಸರಾಗಿ, ಅನೇಕ ಕಷ್ಟಗಳನ್ನು ಅನುಭವಿಸಿದರೂ ವ್ರತವನ್ನು ಬಿಡದೇ ಶಾಶ್ವತ ಕೀರ್ತಿಯನ್ನು ಸಂಪಾದಿಸಿದವರು ಇವರಿಬ್ಬರು. 

ಓದುಗರೊಬ್ಬರು ಇವರ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ರುಕ್ಮಾ೦ಗದ ಮಹಾರಾಜನ ವಿಷಯವನ್ನು ಸಂಕ್ಷಿಪ್ತವಾಗಿ ಈಗ ನೋಡೋಣ. 
*****

ಇಕ್ಷ್ವಾಕು ಮಹಾರಾಜನ ವಂಶದ ರಾಜಾ ಋತುಧ್ವಜನ ಮಗ ರುಕ್ಮಾ೦ಗದ ಮಹಾರಾಜ. ಈತನು ವಿದಿಶಾ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಶಾಲ ಸಾಮ್ರಾಜ್ಯವನ್ನು ಆಳುತ್ತಿದ್ದನು. ಬಹಳ ಧರ್ಮಾತ್ಮನಾದ ರಾಜನೆಂದು ಕೀರ್ತಿ ಸಂಪಾದಿಸಿದ್ದನು. ಅವನಿಗೆ ಸಂಧ್ಯಾವಳೀ ಎನ್ನುವ ಹೆಸರಿನ ಹೆಂಡತಿಯಿದ್ದಳು. ಅವಳೂ ಬಹಳ ಯೋಗ್ಯಳಾಗಿ ಪ್ರಜೆಗಳ ಪ್ರೀತಿ ಸಂಪಾದಿಸಿದ್ದಳು. ರುಕ್ಮಾ೦ಗದ ಮಹಾರಾಜನ ರಾಜ್ಯದಲ್ಲಿ ಶಾಂತಿ, ಸುಭಿಕ್ಷಗಳು ನೆಲೆಸಿ ಅದೊಂದು ಸ್ವರ್ಗದಂತೆ ಭಾಸವಾಗುತ್ತಿತ್ತು. 

ರುಕ್ಮಾ೦ಗದ ಮಹಾರಾಜನು ಪ್ರತಿ ದಶಮಿಯ ದಿನ ಆನೆಗಳ ಮೇಲೆ ನಗಾರಿ ಬಾರಿಸುವವರನ್ನು ಬೀದಿ  ಬೀದಿಗಳಿಗೆ ಕಳಿಸಿ ಏಕಾದಶಿ ವ್ರತದ ಬಗ್ಗೆ ಜನಗಳಿಗೆ ಎಚ್ಚರಿಸುತ್ತಿದ್ದನು. ಅವನ ರಾಜ್ಯದಲ್ಲಿ ಏಕಾದಶಿ ವ್ರತ ಮಾಡದಿದ್ದರೆ ಅದು ಒಂದು ಅಪರಾಧವಾಗಿತ್ತು. ಎಂಟು ವರ್ಷ ದಾಟಿದ ಮತ್ತು ಎಂಭತ್ತು ವರುಷ ಒಳಗಿನ ಎಲ್ಲ ಜನರೂ ಏಕಾದಶಿ ವ್ರತ ಮಾಡುವುದು ಕಡ್ಡಾಯವಾಗಿತ್ತು. ಹೀಗೆ ಪ್ರಾರಂಭವಾದ ಏಕಾದಶಿ ವ್ರತ ಕ್ರಮೇಣ ಜನಜೀವನದ ಒಂದು ಅಂಗವೇ ಆಯಿತು. ಕೆಲಕಾಲದ ನಂತರ ಜನರು ಸ್ವಯಂ ಪ್ರೇರಿತರಾಗಿ ಏಕಾದಶಿ ವ್ರತ ಮಾಡಲು ಪ್ರಾರಂಭಿಸಿದರು. 

ಈ ರೀತಿ ಪ್ರಜೆಗಳೆಲ್ಲರೂ ಏಕಾದಶಿ ವ್ರತ ಮಾಡುತ್ತಿದ್ದ ಕಾರಣ ಪಾಪ ಕರ್ಮಗಳು ಮಾಡುವರು ಇಲ್ಲವಾಗಿ ನರಕ ವಾಸ ಅನುಭವಿಸುವ ಜನರೇ  ಕಾಣದಾದರು. ನರಕದಲ್ಲಿ ಬಂದು ಬೀಳುವ ಜನರು ಕಡಿಮೆ ಆದ ಕಾರಣ ನರಕದಲ್ಲಿರುವ ಉದ್ಯೋಗಿಗಳಿಗೆ ಕೆಲಸವೇ ಇಲ್ಲವಾಯಿತು. ಯಮಧರ್ಮನಿಗೆ ನಿರುದ್ಯೋಗ ಸೃಷ್ಟಿಯಾದಂತೆ ಆಯಿತು. ಹೀಗೆ ಒಂದು ಸ್ಥಿತಿ ಬಂದುದರ ಕಾರಣ ಯಮಧರ್ಮನು ವಿಧಿಯಿಲ್ಲದೇ ಚತುರ್ಮುಖ ಬ್ರಹ್ಮನನ್ನು ಕಂಡು ಪರಿಹಾರ ಕೇಳಲು ಸತ್ಯಲೋಕಕ್ಕೆ ಹೋದನು. 

***** 

ಯಮನ ಪೇಚಾಟವನ್ನು ಕಂಡು ಚತುರ್ಮುಖನು "ಜನಗಳು ನ್ಯಾಯವಾದ ರೀತಿಯಲ್ಲಿ ಬಾಳಿ ಧರ್ಮಿಷ್ಠರಾಗುವಂತೆ ಮಾಡುವುದು ರಾಜನ ಕರ್ತವ್ಯ. ರುಕ್ಮಾ೦ಗದನು ನ್ಯಾಯವನ್ನೇ ಮಾಡುತ್ತಿರುವುದರಿಂದ ಅವನದು ಏನೂ ಅಪರಾಧವಿಲ್ಲ. ನಿನ್ನ ಪರಿಸ್ಥಿತಿಗೆ ಏನೂ ಪರಿಹಾರವಿಲ್ಲ" ಎಂದುಬಿಟ್ಟನು. ಅದಲ್ಲದೆ ಈ ರೀತಿ ಹೇಳಿದನು:

ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮೋ 
ದಶಾಶ್ವಮೇಧಾವಭೃತೇನ ತುಲ್ಯ:
ದಶಾಶ್ವಮೇಧೀ ಪುನರೇಪಿಜನ್ಮ 
ಕೃಷ್ಣಪ್ರಣಾಮೀ ನ ಪುನರ್ಭವಾಯ 

"ಒಮ್ಮೆ ಶ್ರೀಕೃಷ್ಣನಿಗೆ ಸರಿಯಾಗಿ ನಮಸ್ಕಾರ ಮಾಡಿದ ಮನುಷ್ಯನ ಪುಣ್ಯವು ಹತ್ತು ಅಶ್ವಮೇಧ ಯಾಗಗಳನ್ನು ಪೂರೈಸಿ ಯಜ್ಞದ ಅವಭೃತ ಸ್ನಾನ ಮಾಡಿದವನಿಗೆ (ಯಜ್ಞ-ಯಾಗಗಳ ಪೂರ್ಣವಾಯಿರುವ ಸಂದರ್ಭದಲ್ಲಿ ಮಾಡುವ ಮಂಗಳ ಸ್ನಾನ) ಬಂದ  ಪುಣ್ಯದಷ್ಟಾಗುತ್ತದೆ. ಇದಲ್ಲದೆ ಹತ್ತು ಅಶ್ವಮೇಧ ಯಾಗ ಮಾಡಿದವನು ಆ ಪುಣ್ಯ ಸಂಪತ್ತು ಅನುಭವಿಸಿ ಕಳೆದ ಮೇಲೆ ಮತ್ತೆ ಹುಟ್ಟಬೇಕು. ಆದರೆ ಶ್ರೀಕೃಷ್ಣನಿಗೆ ಒಂದು ಸಾರಿ ಸರಿಯಾಗಿ ನಮಸ್ಕರಿಸಿದವನು ಮತ್ತೆ ಹುಟ್ಟುವ ಪ್ರಮೇಯವೇ ಬರುವುದಿಲ್ಲ". 

ಯಮಧರ್ಮನು ಈ ಉತ್ತರ ಕೇಳಿ ಏನೂ ತೋಚದೆ ನಿಂತಿರಲು, ಚತುರ್ಮುಖನು ನಕ್ಕು ಒಂದು ಅಪೂರ್ವ ಲಾವಣ್ಯವತಿಯಾದ ಸ್ತ್ರೀರೂಪವನ್ನು ಸೃಷ್ಟಿಸಿದನು. ಆ ರೂಪಕ್ಕೆ ಜೀವ ಕೊಟ್ಟು ಎಲ್ಲರನ್ನೂ ತನ್ನನ್ನು ಕಂಡು ಮೋಹಗೊಳ್ಳುವಂತೆ ಮಾಡಬಲ್ಲವಳಾದುದರಿಂದ ಅವಳಿಗೆ "ಮೋಹಿನಿ" ಎಂದು ಹೆಸರಿಟ್ಟನು. ಆ ಮೋಹಿನಿಯನ್ನು ಕರೆದು ಅವಳಿಗೆ "ರುಕ್ಮಾ೦ಗದನು ನಿನ್ನನ್ನು ಮೋಹಿಸಿ ಮದುವೆಯಾಗುವಂತೆ ಒಪ್ಪಿಸು. ನಂತರ ಹೀಗೆ ಮದುವೆಯಾಗುವ ಸಂದರ್ಭದಲ್ಲಿ ನೀನು ಕೇಳಿದ ಕೋರಿಕೆಯನ್ನು ನಡೆಸಿಕೊಡುವ ವಚನವನ್ನು ಅವನಿಂದ ಪಡೆದುಕೋ. ವಿವಾಹದ ನಂತರ ಅವನಿಂದ ಏಕಾದಶಿ ವ್ರತವನ್ನು ನಿಲ್ಲಿಸುವಂತೆ ಮಾಡು" ಎಂದು ಆಜ್ಞಾಪಿಸಿದನು. 

***** 

ಇತ್ತ ಕಡೆ ರುಕ್ಮಾ೦ಗದ ಮತ್ತು ಸಂಧ್ಯಾವಳೀ ದಂಪತಿಗಳಿಗೆ 'ಧರ್ಮಾಂಗದ" ಎನ್ನುವ ಹೆಸರಿನ ಮಗನಿದ್ದನು. ಅವನು ಪ್ರಾಪ್ತ ವಯಸ್ಕನಾಗಿ ತನ್ನ ತಂದೆ-ತಾಯಿಯರಿಗೆ ಒಪ್ಪುವಂತೆ ಅತ್ಯಂತ ಯೋಗ್ಯನಾದ ಯುವರಾಜನಾದನು. ತಂದೆಗಿಂತಲೂ ಪರಾಕ್ರಮಿಯಾಗಿ ಸುತ್ತ-ಮುತ್ತಲ ಶತ್ರುಗಳನ್ನೆಲ್ಲ ನಿರ್ಮೂಲಮಾಡಿ ರಾಜ್ಯದ ಮೇರೆಗಳನ್ನು ಇನ್ನೂ ವಿಸ್ತಾರ ಮಾಡಿದನು. ಅನೇಕ ರೀತಿಯ ಧನ-ಸಂಪತ್ತುಗಳನ್ನು ಸಂಗ್ರಹಿಸಿ ತಂದೆಗೆ ತಂದು ಒಪ್ಪಿಸಿದನು. ಅತ್ಯಂತ ಜನಪ್ರಿಯನಾದ ಅವನಿಗೆ ರುಕ್ಮಾ೦ಗದನು  ರಾಜ್ಯಭಾರವನ್ನು ಒಪ್ಪಿಸಿ ತೀರ್ಥಯಾತ್ರೆಗೆಂದು ಹೊರಟನು. 

ಹೀಗೆ ಸಂಚರಿಸುತ್ತಿರುವಾಗ ಮೇರು ಪರ್ವತದ ಸನಿಹದಲ್ಲಿ ಇಂಪಾದ ಗಾನವನ್ನು ಕೇಳಿ ಅದರ ಗಾಯಕಿಯನ್ನು ಅರಸುತ್ತಾ ಬಂದು ಮೋಹಿನಿಯನ್ನು ಕಂಡನು. ಅವಳಲ್ಲಿ ಅನುರಾಗಗೊಂಡು ಮದುವೆಯಾಗಲು ಕೇಳಿಕೊಂಡನು. ಮೋಹಿನಿಯೂ ಒಪ್ಪಿ ತಾನು ಕೇಳಿದ ವರವನ್ನು ಕೊಡುವುದಾದರೆ ವಿವಾಹವಾಗಲು ಸಮ್ಮತಿಸಿದಳು. ಮುಂದೆ ಎಂದಾದರೂ ವರವನ್ನು ಕೇಳುವುದಾಗಿ ಹೇಳಿದ ಅವಳನ್ನು ಮದುವೆಯಾಗಿ, ಜೊತೆಯಲ್ಲಿ  ಕರೆದುಕೊಂಡು ರುಕ್ಮಾ೦ಗದನು ವಿದಿಶಾ ನಗರಕ್ಕೆ ಬಂದನು. 

ಮಹಾರಾಣಿ ಸಂಧ್ಯಾವಳೀ, ರಾಜಕುಮಾರ ಧರ್ಮಾಂಗದ ಮತ್ತು ಇತರರು ರುಕ್ಮಾ೦ಗದ ಮತ್ತು ಮೋಹಿನಿಯರನ್ನು ಆದರಪೂರ್ವಕವಾಗಿ ಬರಮಾಡಿಕೊಂಡು ಸತ್ಕರಿಸಿದರು. ಎಂಟು ವರ್ಷಗಳು ಹೀಗೆ ಕಳೆದ ನಂತರ ಮೋಹಿನಿಯು ಒಂದು ಏಕಾದಶಿಯ ಹಿಂದಿನ ದಿನ ತಾನು ಹಿಂದೆ ಕೇಳಿದ ವರವನ್ನು ಬೇಡಿದಳು. ರುಕ್ಮಾ೦ಗದನು ಏಕದಾಶಿಯ ವ್ರತದ ಮೂರು ದಿನಗಳ ಕಾಲ ಮೋಹಿನಿಯನ್ನು ಬಿಟ್ಟಿರುತ್ತಿದುದರಿಂದ, ಅವಳಿಗೆ ಅವನನ್ನು ಬಿಟ್ಟಿರಲು ಕಷ್ಟವಾಗುವುದರಿಂದ, ಏಕಾದಶಿ ವ್ರತವನ್ನು ನಿಲ್ಲಿಸಬೇಕೆಂದು ಕೇಳಿದಳು. ರುಕ್ಮಾ೦ಗದನು ಇದಕ್ಕೆ ಒಪ್ಪಲಿಲ್ಲ. 

ಕೊಟ್ಟ ಮಾತು ತಪ್ಪಿದನೆಂದು ಮೋಹಿನಿಯು ಪ್ರತಿಭಟಿಸಲು ಸಂಧ್ಯಾವಳಿಯು ಮಧ್ಯೆ ಪ್ರವೇಶಿಸಿ ಏಕಾದಶಿ ವ್ರತ ನಿಲ್ಲಿಸುವ ಬದಲು ಮತ್ತೆ ಯಾವುದಾದರೂ ಬದಲಿ ವರವನ್ನು ಕೇಳಿಕೊಳ್ಳುವಂತೆ ಮೋಹಿನಿಯನ್ನು ಪ್ರಾರ್ಥಿಸಿದಳು. ಮೋಹಿನಿಯು ಹಾಗಿದ್ದರೆ ಮಹಾರಾಜನು ತನ್ನ ಕೈಯಾರೆ ರಾಜಕುಮಾರನಾದ ಧರ್ಮಾಂಗದನ ತಲೆಯನ್ನು ಖಡ್ಗದಿಂದ ಕತ್ತರಿಸಿ ಅವನ ತಲೆಯನ್ನು ತಂದು ಕೊಡಲು ಕೇಳಿದಳು. 

ಬಹಳ ದುರ್ಭರವಾದ ಈ ವರವನ್ನು ಕೊಡುವಂತೆ, ತಾಯಿಯಾಗಿ ಸಂಕಟ ಪಡುತ್ತಿದ್ದರೂ, ಹಿಂದೆ-ಮುಂದೆ ನೋಡದೆ, ಸಂಧ್ಯಾವಳಿಯು ಮಹಾರಾಜನನ್ನು ಕೋರಿದಳು. ಧರ್ಮಾಂಗದನನ್ನು ಕರೆಸಿದರು. ಅವನು ಸ್ವಲ್ಪವೂ ವಿಚಲಿತನಾಗದೆ "ತಂದೆಯು ಕೊಟ್ಟ ಮಾತಿಗೆ ತಪ್ಪಬಾರದು. ಏಕಾದಶಿ ವ್ರತವೂ ಕೆಡಬಾರದು. ಈ ತುಚ್ಛ ಜೀವನ ಹೋಗಿ ಇವೆರಡೂ ಸಾಧ್ಯವಾಗುವುದಾದರೆ ಸಂತೋಷವಾಗಿ ಸಾವು ಸ್ವೀಕರಿಸುತ್ತೇನೆ" ಎಂದನು. 

ರುಕ್ಮಾ೦ಗದನು ಧರ್ಮಾಂಗದನ ಕತ್ತು ಕತ್ತರಿಸಲು ಖಡ್ಗವನ್ನು ತೆಗೆದುಕೊಂಡು ಬೀಸಿದನು. ಆಗ ಮಹಾವಿಷ್ಣುವು ಪ್ರತ್ಯಕ್ಷನಾಗಿ ರುಕ್ಮಾ೦ಗದ, ಸಂಧ್ಯಾವಳೀ ಮತ್ತು ಧರ್ಮಾಂಗದ, ಈ ಮೂವರಿಗೂ ಪರಮಪದವನ್ನು ಕರುಣಿಸಿ ಜೊತೆಯಲ್ಲಿ ಕರೆದೊಯ್ದನು. 

***** 

ರುಕ್ಮಾ೦ಗದ ಚರಿತ್ರೆಯು ನಮ್ಮ ವಿಶಾಲ ವೈದಿಕ ವಾಂಗ್ಮಯದಲ್ಲಿ ಅಲ್ಲಲ್ಲಿ ಬರುತ್ತದೆ. ನಾರದ ಪುರಾಣದಲ್ಲಿ (ನಾರದೀಯ ಪುರಾಣ) ಇದರ ವಿಸ್ತಾರವಾದ ವಿವರಗಳಿವೆ. ಮೇಲೆ ಕಾಣಿಸಿರುವ ಚಿತ್ರವೂ ಇದರ ಆಧಾರದ ಮೇಲೆ "ರಾಜಾ ರವಿವರ್ಮ" ರಚಿಸಿರುವ ಚಿತ್ರ. 

ಮೇಲೆ ಹೇಳಿದ ಕಥೆಯನ್ನು ತಿಳಿಯುವಾಗ ಯಮಧರ್ಮನಿಗೆ ಕಷ್ಟವಾಯಿತೆಂದೂ, ಅವನು ಬಂದಾಗ ಚತುರ್ಮುಖ ಬ್ರಹ್ಮದೇವರಿಗೆ ಏನೂ ಮಾಡಲು ತೋಚಲಿಲ್ಲವೆಂದೂ ತಿಳಿಯಬಾರದು. ಸಿನಿಮಾಗಳಲ್ಲಿ ಅವರನ್ನು ದುರುಳ ಖಳನಾಯಕರನ್ನು ತೋರಿಸುವಂತೆ ಮನರಂಜನೆಗಾಗಿ ಚಿತ್ರಿಸುತ್ತಾರೆ. ರುಕ್ಮಾ೦ಗದ, ಸಂಧ್ಯಾವಳೀ ಮತ್ತು ಧರ್ಮಾಂಗದರ ವ್ರತನಿಷ್ಠೆ ಮತ್ತು ಧರ್ಮಪರಾಯಣತೆ ಪರೀಕ್ಷಿಸಲು ಹೀಗೆ ಮಾಡಿದರು ಎಂದು ತಿಳಿಯಬೇಕು. 

ಮೇಲೆ ಹೇಳಿದ "ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮ: ......" ಎನ್ನುವ ಶ್ಲೋಕವನ್ನು ಅನೇಕರು ಷೋಡಶೋಪಚಾರ ಪೂಜೆಯ ಅಂಗವಾಗಿ ಕಡೆಯಲ್ಲಿ ನಮಸ್ಕಾರ ಮಾಡುವಾಗ ಮತ್ತು ಸ್ತೋತ್ರಾದಿಗಳ ಕೊನೆಯಲ್ಲಿ, ದೇವಾಲಯಗಳಲ್ಲಿ ನಮಸ್ಕರಿಸುವಾಗ ಮುಂತಾಗಿ ಹೇಳುವ ಶ್ಲೋಕಗಳ ಜೊತೆಯಲ್ಲಿ ಹೇಳುತ್ತಾರೆ. ಆದರೆ ಅನೇಕರಿಗೆ ಇದರ ಮೂಲ "ನಾರದೀಯ ಪುರಾಣ"ದ ಉತ್ತರ ಭಾಗದ ಆರನೆಯ ಅಧ್ಯಾಯದಲ್ಲಿದೆ ಎಂದು ಗೊತ್ತಿಲ್ಲ. ಇದು ಆರನೆಯ ಅಧ್ಯಾಯದ ಮೂರನೆಯ ಶ್ಲೋಕ. 

*****

ಮತ್ತೊಬ್ಬ ಏಕಾದಶಿ ವ್ರತ ದುರಂಧರನಾದ ಅಂಬರೀಷ ಮಹಾರಾಜನ ವೃತ್ತಾಂತವನ್ನು ಮುಂದೆ ಎಂದಾದರೂ ನೋಡೋಣ. 

Saturday, July 19, 2025

ಕೆಸರಿಂದ ಕೆಸರು ತೊಳೆದಂತೆ


ಮನುಷ್ಯನ ಅನೇಕ ಮತ್ತು ತೀರದ ಆಸೆಗಳಲ್ಲಿ ಜೀವನ ಸಂಪದ್ಭರಿತವಾಗಿರಬೇಕೆಂಬುದೂ ಒಂದು. ಸಕಲ ಸೌಭಾಗ್ಯಗಳೂ ಇರಬೇಕು. ಸರ್ವ ಸಂಪತ್ತುಗಳೂ ಸುತ್ತ-ಮುತ್ತ ತುಂಬಿರಬೇಕು. ಕುಟುಂಬದ ಸದಸ್ಯರೆಲ್ಲರೂ ಹೇಳಿದಂತೆ ಕೇಳುತ್ತಾ ಓಡಾಡಿಕೊಂಡಿರಬೇಕು. ದೊಡ್ಡ ಅಧಿಕಾರ ಇರಬೇಕು. ಸಮಾಜದಲ್ಲಿ ಮನ್ನಣೆ, ಗೌರವಗಳು ಸಿಗುತ್ತಿರಬೇಕು. ಹೀಗೆ ನಾನಾ ಬಗೆಯ ಅಸಂಖ್ಯ ಆಸೆಗಳು. 

ಅನೇಕ ಭಾಗ್ಯಗಳಲ್ಲಿ ಅಷ್ಟ ಐಶ್ವರ್ಯಗಳೂ ಸೇರಿದುವು. ಈ ಎಂಟರಲ್ಲಿ ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯಗಳು ಬೇಕಾದುವುಗಳ ಪಟ್ಟಿಯಲ್ಲಿ ಎಲ್ಲದರ ಮೇಲೆ ಕೂಡುತ್ತವೆ. ಆದರೆ ಆರೋಗ್ಯವಿದ್ದವರಿಗೆ ಕೆಲವೊಮ್ಮೆ ಆಯುಸ್ಸು ಇರುವುದಿಲ್ಲ. ಆಯುಸ್ಸು ಇದ್ದವರಿಗೆ ಬಹಳ ಅನಾರೋಗ್ಯ ಕಾಡುವುದು. ಆಯುಸ್ಸು ಮತ್ತು ಅರೋಗ್ಯ ಎರಡೂ ಇದ್ದವರಿಗೆ  ಬಡತನದ ಬವಣೆ. ಅಥವಾ ಇನ್ನೇನಾದರೂ ಒಂದಿಲ್ಲ ಎನ್ನುವ ಕೊರಗು. ಕೆಲವರಿಗೆ ಮಕ್ಕಳಿಲ್ಲ ಎನ್ನುವ ಚಿಂತೆ. ಮತ್ತೆ ಕೆಲವರಿಗೆ ಹೆತ್ತ ಮಕ್ಕಳು ಹತ್ತಿರ ಇಲ್ಲ ಅನ್ನುವ ವ್ಯಥೆ. ಮಕ್ಕಳು ಹತ್ತಿರ ಇರುವವರಿಗೆ ಅವರು ಯೋಗ್ಯರಲ್ಲ ಎನ್ನುವ ಯೋಚನೆಗಳು. ಹೀಗೆ ಏನಾದರೂ ಒಂದು ಕೊರತೆ.  

ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯಗಳು ಹಾಳಾಗಲು ಕಾರಣಗಳೇನು? ಈ ವಿಷಯವನ್ನು ಹಿಂದಿನ "ಸಂಪತ್ತು ಕಳೆಯುವ ಕಾರಣಗಳು" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ನೋಡಿದ್ದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.  ಶ್ರೀ ಗೋಪಾಲದಾಸರ "ಎನ್ನ ಬಿನ್ನಪ ಕೇಳು, ಧನ್ವಂತ್ರಿ ದಯ ಮಾಡು" ಎನ್ನುವ ದೇವರನಾಮದಲ್ಲಿ ಸೂಚಿತವಾದ ಈ ಕಾರಣಗಳ ಚರ್ಚೆ ನೋಡಿದ್ದೆವು. ಈ ಹಾಡಿನಲ್ಲಿ "ಕೆಸರಿನಿಂದ ಕೆಸರು ತೊಳೆದಂತೆ ಕರ್ಮದ ಪಥವು, ಅಸುನಾಥ ಹರಿಯೇ ಪೊರೆಯೊ" ಎನ್ನುವ ಅಭಿವ್ಯಕ್ತಿಯ ವಿಶೇಷ ವಿಷಯಗಳನ್ನು ಮುಂದೊಮ್ಮೆ ನೋಡೋಣ ಎಂದಿದ್ದೆವು. ಅದನ್ನು ಈಗ ಸ್ವಲ್ಪ ನೋಡೋಣ. 

*****

"ಕೆಸರಿನಿಂದ ಕೆಸರು ತೊಳೆದಂತೆ ಕರ್ಮದ ಪಥವು" ಅನ್ನುವುದರ ಅರ್ಥವೇನು? ಅದರ ಮೂಲ ಎಲ್ಲಿದೆ? ಯಾರಾದರೂ ಕೆಸರಿನಿಂದ ಕೊಳಕಾಗಿರುವ ವಸ್ತುವನ್ನು ಕೆಸರು ನೀರಿನಿಂದ ತೊಳೆಯುವ ತಪ್ಪು ಮಾಡುತ್ತಾರೆಯೇ? ಇವು ನಿಜವಾಗಿ ಕೇಳಲೇಬೇಕಾದ ಪ್ರಶ್ನೆಗಳು. 

ಯಾವುದೋ ಒಂದು ಕಾರಣಕ್ಕೆ ಬಟ್ಟೆ ಕೊಳಕಾಯಿತು ಅನ್ನೋಣ. ಬಿಳಿ ಬಟ್ಟೆ ಉಟ್ಟು ಹೊರಗಿನ ಕೆಲಸಕ್ಕೆ ಬಂದದ್ದಾಯಿತು. ಮಳೆ ಬಂತು. ಬಟ್ಟೆ ಕೊಳಕಾಯಿತು. ಯಾರೋ ಒಬ್ಬ ಸ್ಕೂಟರ್ ಸವಾರ ಮಳೆಯ ರಸ್ತೆಯಲ್ಲಿಯೇ ವೇಗವಾಗಿ ಹೋದ. ಅವನಿಗೆ ಅದೊಂದು ಆಟ. ನೀರು ಎರಚಿತು. ಬಟ್ಟೆ ಕೆಸರಿನಿಂದ ನೆನೆಯಿತು. ಈಗ ಮಾಡುವುದು? ಮನೆಗೆ ಹೋದಮೇಲೆ ಮೈ ಶುಚಿ ಮಾಡಿಕೊಂಡು, ಕೊಳೆಯ ಬಟ್ಟೆಯನ್ನು ತಿಳಿ ನೀರಿನಿಂದ ಒಗೆದು ಸ್ವಚ್ಛ ಮಾಡಬೇಕು. ಕೆಲವು ವೇಳೆ ಎಷ್ಟೇ ಸ್ವಚ್ಛ ಮಾಡಿದರೂ ಮೊದಲಿನಂತೆ ಬಟ್ಟೆ ಬಿಳಿ ಆಗುವುದಿಲ್ಲ. ಮೂರು-ನಾಲ್ಕು ಒಗೆತ ಆದಮೇಲೆ ಸರಿ ಹೋಗಬಹುದು. ಇಂತಹ ಸ್ಥಿತಿಯಲ್ಲಿ ಆ ಕೊಳೆಯ ಬಟ್ಟೆಯನ್ನು ಅದೇ ರಸ್ತೆಯ ಪಕ್ಕ ನಿಂತಿರುವ ಕೆಸರು ನೀರಿನಿಂದ ಒಗೆದರೆ ಹೇಗಾಗಬೇಡ? ಬಟ್ಟೆಗೆ ಮತ್ತಷ್ಟು ಕೆಸರು ಅಂಟಿಕೊಂಡು ಇನ್ನಷ್ಟು ರಾಡಿಯಾದೀತೇ ವಿನಃ ಸ್ವಚ್ಛವಂತೂ ಆಗುವುದಿಲ್ಲ. 

ಒಂದು ಗಾಜಿನ ಪಾತ್ರೆಯಲ್ಲಿ ಎಲ್ಲರಿಗೂ ಸುರೆ (ವೈನ್ ಅನ್ನೋಣ) ಹಂಚಿದ್ದಾರೆ. ಆ ಕಾರಣ ಅದಕ್ಕೆ ಸ್ವಲ್ಪ ಸುರೆ ಅಂಟಿಕೊಂಡಿದೆ. ಈಗ ಅದನ್ನು ಸ್ವಚ್ಛ ಮಾಡಬೇಕು. ಅದನ್ನು ಇನ್ನಷ್ಟು ಸುರೆ ಸುರಿದು ತೊಳೆದರೆ? ಅದು ಹೇಗೆ ಸ್ವಚ್ಛವಾದೀತು? ತಿಳಿಯಾದ ನೀರಿನಿಂದ ಮಾತ್ರ ಅದು ಶುದ್ಧವಾಗಬಲ್ಲದು. ಇಲ್ಲದಿದ್ದರೆ ಅದು ಇನ್ನಷ್ಟು ಸುರೆಯಲ್ಲಿ ಮುಳುಗೀತೇ ವಿನಃ ಶುದ್ಧವಾಗುವುದು ಸಾಧ್ಯವೇ ಇಲ್ಲ. 

ಇದು ಜೀವನದ ಒಂದು ಕಟು ಸತ್ಯ. 
*****

ಮಹಾಭಾರತದ ಪ್ರಸಂಗ. ಧರ್ಮಕ್ಷೇತ್ರ ಕುರುಕ್ಷೇತ್ರದ ಹದಿನೆಂಟು ದಿನಗಳ ಘನ ಘೋರ ಯುದ್ಧ ಮುಗಿದಿದೆ. ಹದಿನೆಂಟು ಅಕ್ಷೋಹಿಣಿ ಸೈನ್ಯ ನಾಶವಾಗಿದೆ. ಎಲ್ಲರ ಮನೆಯಲ್ಲೂ ಯಾರೋ ಒಬ್ಬರಾದರೂ ಯುದ್ಧದಲ್ಲಿ ಸತ್ತಿದ್ದಾರೆ. ಕೆಲವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಯುದ್ಧದ ನಂತರ ಇಲ್ಲವಾಗಿದ್ದಾರೆ. ಎಲ್ಲೆಲ್ಲೂ ಸೂತಕದ ಛಾಯೆ. ದ್ರೋಣ, ಕರ್ಣ, ಅಭಿಮನ್ಯು, ನೂರು ಮಂದಿ ಕೌರವರು, ಶಲ್ಯ, ಶಕುನಿ, ಮತ್ತನೇಕ ವೀರರು ಸ್ವರ್ಗಸ್ಥರಾದರು. 

ಮುಂದಿನ ಜೀವನ ನಡೆಯಬೇಕಲ್ಲ. ಯುಧಿಷ್ಠಿರನಿಗೆ ಪಟ್ಟಾಭಿಷೇಕವಾಯಿತು. ಅಷ್ಟು ದುಃಖದಲ್ಲಿ ಒಂದಷ್ಟು ಸುಖ. ಜೀವನವೇ ಹೀಗೆ. ಸುಖ-ದುಃಖಗಳು ಜೊತೆ ಜೊತೆ. ಅದಕ್ಕೇ ಯುಗಾದಿಯಂದು ಬೇವು-ಬೆಲ್ಲ ತಿನ್ನುವುದು. ಪಟ್ಟಾಭಿಷೇಕದ ಸಂಭ್ರಮದಲ್ಲೂ ಧರ್ಮರಾಯನಿಗೆ ಸಂತೋಷವಿಲ್ಲ. ಇಷ್ಟೊಂದು ಮಂದಿ ಬಂಧು-ಬಾಂಧವರನ್ನು, ಅದೆಷ್ಟೋ ಅಣ್ಣ-ತಮ್ಮಂದಿರ ಜಗಳಕ್ಕೆ ಸಂಬಂಧಿಸದ ಅಮಾಯಕರನ್ನು ಸೇರಿಸಿ, ಕೊಂದು ಸಂಪಾದಿಸಿದ ಸಾಮ್ರಾಜ್ಯ. ಇಲ್ಲಿ ತಲೆಯ ಮೇಲೆ ಕಿರೀಟ ಬಂದು ಕೂತಿದೆ. ಅಲ್ಲಿ ತಾತ ಭೀಷ್ಮರು ಚೂಪು ಬಾಣಗಳ ಮಂಚದ ಮೇಲೆ ಮಲಗಿದ್ದಾರೆ. ಯಾವ ಸುಖಕ್ಕೆ ಈ ರಾಜ್ಯ-ಕೋಶಗಳು? ಅವನಿಗೆ ತಡೆಯಲಾಗದ ದುಗುಡ-ದುಮ್ಮಾನ. ಪಾರ್ಥನಿಗೆ ಯುದ್ಧಕ್ಕೆ ಮೊದಲು ಕ್ಲೈಬ್ಯ ಬಂದಿತು. ಧರ್ಮರಾಯನಿಗೆ ಯುದ್ಧದ ನಂತರ ಬಂದಿದೆ. 

ಶ್ರೀ ಕೃಷ್ಣನ ಮುಂದೆ ದುಃಖ ತೋಡಿಕೊಳ್ಳುತ್ತಾನೆ. ಶ್ರೀಕೃಷ್ಣ ಅವನನ್ನು ಸಮಾಧಾನ ಪಡಿಸುತ್ತಾನೆ. ಒಂದು ಚಿಕ್ಕ ಗೀತೋಪದೇಶ ಅವನಿಗೂ ಆಗುತ್ತದೆ. ಆದರೆ ಯುಧಿಷ್ಠಿರನಿಗೆ ಸಮಾಧಾನವಿಲ್ಲ. ಶ್ರೀಕೃಷ್ಣನು ಅವನಿಗೆ ಅಶ್ವಮೇಧ ಯಾಗ ಮಾಡಲು ಸೂಚಿಸುತ್ತಾನೆ. ಅದರಿಂದ ಅವನು ಯುದ್ಧದಿಂದ ಬಂದಿದೆ ಅಂದುಕೊಂಡ ಪಾಪಗಳು ತೊಳೆದುಹೋಗುತ್ತವೆ. ಹೀಗೆಂದು ಯಾಗ ಮಾಡಲು ಸೂಚನೆ. 

ಇದಕ್ಕೆ ಉತ್ತರವಾಗಿ ಧರ್ಮರಾಯನು ಹೇಳಿದ್ದನ್ನು ಶ್ರೀಮದ್ ಭಾಗವತದ (1.8.52) ಶ್ಲೋಕ ಹೀಗೆ ಹೇಳುತ್ತದೆ:

ಯಥಾ ಪಂಕೇನ ಪಂಕಾಂಭ: 
ಸುರಯಾ ವಾ ಸುರಾಕೃತಂ 
ಭೂತಹತ್ಯಂ ತಥೈವಕಂ
ನ್ ಯಜ್ನಯಿ ಮರ್ತುಮರ್ಹತಿ    
 
 
"ಹೇಗೆ ಕೆಸರನ್ನು ಕೆಸರಿನಿಂದ ತೊಳೆಯಲಾಗದೋ, ಮತ್ತು ಹೇಗೆ ಮದ್ಯಪಾತ್ರೆಯನ್ನು ಮದ್ಯದಿಂದ ಶುದ್ಧಿಮಾಡಲಾಗದೋ, ಹಾಗೆಯೇ ಮನುಷ್ಯರನ್ನು ಕೊಂದ ಪಾಪಗಳನ್ನು ಪ್ರಾಣಿಗಳನ್ನು ಬಲಿ ಕೊಟ್ಟು ಕಳೆದುಕೊಳ್ಳಲಾಗದು" 

ಧರ್ಮರಾಯನ ಈ ದುಃಖ ಶಮನವಾಗುವ ಮುನ್ನ ರಣರಂಗದಲ್ಲಿ ಶರಶಯ್ಯೆಯಲ್ಲಿ ಮಲಗಿರುವ ಭೀಷ್ಮರನ್ನು ನೋಡಲು ಎಲ್ಲರೂ ಹೋಗುತ್ತಾರೆ. ಅಲ್ಲಿ ಭೀಷ್ಮರು ಧರ್ಮರಾಯನಿಗೆ ಅನೇಕ ವಿಷಯಗಳ ಬಗ್ಗೆ ವಿವಿಧ ರೀತಿಯಲ್ಲಿ ತಿಳಿಸಿಕೊಡುತ್ತಾರೆ. ನಂತರ ಅವನು ಅಶ್ವಮೇಧ ಯಾಗ ಮಾಡುತ್ತಾನೆ. ಈ ವಿವರಗಳೆಲ್ಲ ಮಹಾಭಾರತದಲ್ಲಿ ಅಶ್ವಮೇಧ ಪರ್ವದಲ್ಲಿ ಸಿಗುತ್ತವೆ. 

 ***** 

ಹರಿದಾಸರ ಪದ, ಸುಳಾದಿ, ಉಗಾಭೋಗಗಳಲ್ಲಿ ಬರುವ ಪದಪುಂಜಗಳಲ್ಲಿ ವೈದಿಕ ವಾಂಗ್ಮಯದ ತಿರುಳಿನ ಸೂಚನೆಗಳು ಇರುತ್ತವೆ. ನೋಡುವುದಕ್ಕೆ, ಕೇಳುವುದಕ್ಕೆ ಆಡುಭಾಷೆಯ ಮಾತಾಗಿದ್ದರೂ ಅವುಗಳ ಹಿಂದೆ ಗಾಢವಾದ ಚಿಂತನೆ ಇರುವುದು. ಈ "ಕೆಸರಿನಿಂದ ಕೆಸರು ತೊಳೆದಂತೆ" ಅನ್ನುವುದು ಹೀಗೆಯೇ ಶ್ರೀಮದ್ ಭಾಗವತದ ಮೇಲೆ ಹೇಳಿದ ಶ್ಲೋಕದ ಸಾರಾಂಶವನ್ನು ಹೇಳುವ ರೀತಿ. ವಿಶಾಲ ವಾಂಗ್ಮಯದ ಆಳವಾದ ಪರಿಚಯ ಆಗುತ್ತಿದ್ದಂತೆ ಅವೇ ಪದ, ಸುಳಾದಿಗಳ ವಿಶೇಷಾರ್ಥಗಳು ತೆರೆದುಕೊಳ್ಳುತ್ತವೆ.  

ಪ್ರತಿ ಜೀವಿ ಹುಟ್ಟುವಾಗ ಅವನ (ದೇಹ ಗಂಡಾಗಿರಬಹುದು ಅಥವಾ ಹೆಣ್ಣಾಗಿರಬಹುದು) ಜೊತೆ ಪರಮಾತ್ಮನೂ ಮತ್ತು ಮುಖ್ಯ ಪ್ರಾಣನು ಜನಿಸುತ್ತಾರೆ. ಅವರಿಬ್ಬರೂ ಇರುವವರೆಗೆ ಜೀವನ ಈ ದೇಹದಲ್ಲಿಯ ಜೀವನಯಾತ್ರೆ. ಅವರು ದೇಹ ಬಿಟ್ಟು ಹೊರಟರೆ ವ್ಯಾಪಾರ ಮುಗಿಯಿತು. (ಸಾಮಾನ್ಯ ವ್ಯವಹಾರದಲ್ಲಿ ವ್ಯಾಪಾರ ಎಂದರೆ ಕೊಡು-ಕೊಳ್ಳುವಿಕೆಯ ರೀತಿ, ವ್ಯಾಪಾರಕ್ಕೆ ಇಲ್ಲಿ ಚಟುವಟಿಕೆ (ಆಕ್ಟಿವಿಟಿ) ಎಂದು ಅರ್ಥ).  ಪ್ರಾಣವಾಯು (ಅಸು) ಆಡುವುದು ನಿಂತರೆ "ಅಸು ನೀಗಿದರು" ಎನ್ನುತ್ತಾರೆ. ಆದ್ದರಿಂದ ಆ ಪರಮಾತ್ಮನಿಗೆ "ಅಸುನಾಥ"ಎಂದು ಹೇಳುವುದು. ಉಸಿರು ಎನ್ನುವ ಆಸುವಿಗೆ ಅಥವಾ ಪ್ರಾಣನಿಗೆ ಒಡೆಯ ಆದುದರಿಂದ ಅಸುನಾಥ, ಪ್ರಾಣನಾಥ ಅಥವಾ ಪ್ರಾಣೇಶ. 

*****

"ದುಷ್ಕರ್ಮ ಪರಿಹರಿಸೋ" ಅನ್ನುವುದನ್ನು ಮತ್ತು ಅಂಟಿಕೊಂಡ ಕೊಳೆಯನ್ನು ತೊಳೆಯಲು ಏನು ಮಾಡಬೇಕೆನ್ನುವುದನ್ನು ಮುಂದಿನ ಒಂದು ಸಂಚಿಕೆಯಲ್ಲಿ ನೋಡೋಣ.

Thursday, July 17, 2025

ಪಾರ್ಥಿವ ಶರೀರ


ಚಿತ್ರರಂಗದ ಹಿರಿಯ ನಟಿ, "ಚತುರ್ಭಾಷಾ ತಾರೆ" ಎಂದು ಹೆಸರಾದ ಶ್ರೀಮತಿ ಬಿ. ಸರೋಜಾ ದೇವಿ ಅವರ ನಿಧನ ಕಳೆದ ವಾರ ಸಂಭವಿಸಿ ಕಲಾಲೋಕವನ್ನು ಬಡವಾಗಿಸಿತು.  ಅನೇಕ ದಶಕಗಳ ಕಾಲ ವಿವಿಧ ರೀತಿಯ ಚಲನಚಿತ್ರಗಳ ವಿಶಿಷ್ಟ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ, ಕಲಾಸೇವೆ ಸಲ್ಲಿಸಿ, ಕೀರ್ತಿ ಸಂಪಾದಿಸಿದವರು ಅವರು. ಅವರ ಅಂತ್ಯ ಸಂಸ್ಕಾರಗಳು ತಮ್ಮ ಹುಟ್ಟೂರಾದ ರಾಮನಗರ ಜಿಲ್ಲೆ, ಚನ್ನಪಟ್ಟಣ ಬಳಿಯ ದಶಾವರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ, ಮಂಗಳವಾರ ನಡೆಯಿತು. 

ಈ ಸಂದರ್ಭದಲ್ಲಿ ಕರ್ನಾಟಕ ಮುಖ್ಯ ಮಂತ್ರಿಗಳ ಕಚೇರಿ ನೀಡಿದ ಕನ್ನಡ ಪ್ರಕಟಣೆಯೊಂದು ಅದೇ ಕಚೇರಿಯಿಂದ ಇಂಗ್ಲಿಷಿನಲ್ಲಿ (ಪ್ರಾಯಶಃ ಗೂಗಲ್ ಮೂಲಕ) ತರ್ಜುಮೆಗೊಂಡು "ಮುಖ್ಯ ಮಂತ್ರಿಗಳು ಶ್ರೀಮತಿ ಸರೋಜಾ ದೇವಿಯವರ earthly body ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು" ಎಂದು ತಿಳಿಸಿತು. 

ಕನ್ನಡದಲ್ಲಿ "ಪಾರ್ಥಿವ ಶರೀರ" ಎಂದು ಹೇಳುವ ರೀತಿ ಇಂಗ್ಲೀಷಿನಲ್ಲಿ ಸಾಮಾನ್ಯವಾಗಿ "mortal remains" ಅನ್ನುತ್ತಾರೆ. ಇಂಗ್ಲಿಷಿಗೆ ಹೀಗೆ "earthly body" ಆಗಿ  ಭಾಷಾಂತರಗೊಂಡ ಸಂದರ್ಭದಲ್ಲಿ ಮಿತ್ರರೊಬ್ಬರು "ಹೀಗೆ ಪಾರ್ಥಿವ ಶರೀರ ಎಂದು ಏಕೆ ಹೇಳುತ್ತಾರೆ?" ಎಂದು ಪ್ರಶ್ನಿಸಿದ್ದಾರೆ. ಅದನ್ನಷ್ಟು ನೋಡೋಣ. 

ಪಾರ್ಥಿವ ಅನ್ನುವ ಪದದ ಮೂಲ "ಪೃಥ್ವಿಯಿಂದ ಆದದ್ದು" ಎನ್ನುವುದರಿಂದ ಬಂದದ್ದು. ಈ ಭೂಮಿಗೆ "ಪೃಥ್ವಿ" ಎಂದು ಹೆಸರು ಬಂದದ್ದು "ಪೃಥು ಚಕ್ರವರ್ತಿ" ಕಡೆಯಿಂದ. ಜೀವ ಕೊಟ್ಟವನು ತಂದೆ. ಹಾಗೆಯೇ ಜೀವ ಉಳಿಸಿದವನೂ ತಂದೆಯೇ. ಹಸುವಿನ ರೂಪದಲ್ಲಿ ತಪ್ಪಿಸಿಕೊಂಡು ಓಡುತ್ತಿದ್ದ ಭೂದೇವಿಯ ಸಂಹಾರ ಮಾಡಲು ಹೊರಟ ಪೃಥು, ಅವಳ  ಮನವಿಯ ಮೇರೆಗೆ ಜೀವದಾನ ಮಾಡಿದ. ಆದ್ದರಿಂದ ಭೂದೇವಿಯು ಪೃಥುವಿನ ಮಗಳಾಗಿ, "ಪೃಥ್ವಿ" ಎಂದು ಹೆಸರು ಪಡೆದಳು. ಈ ಪೃಥು ಚಕ್ರವರ್ತಿ ಯಾರು? ನಾವು ವಾಸಿಸುವ ಭೂಮಿಗೆ "ಪೃಥ್ವಿ" ಎಂದು ಹೆಸರು ಏಕೆ ಬಂದಿತು? ಈ ಪ್ರಶ್ನೆಗಳಿಗೆ ಉತ್ತರಕ್ಕೆ ಇಲ್ಲಿ ಕ್ಲಿಕ್ ಮಾಡಿ ಓದಿ ತಿಳಿಯಬಹುದು. 

*****

"ಮಣ್ಣಿಂದ ಕಾಯ ಮಣ್ಣಿಂದ" ಎನ್ನುವುದು ಶ್ರೀ ಪುರಂದರದಾಸರ ಒಂದು ದೇವರನಾಮ. ಅದರಲ್ಲಿ "ಸತ್ತವರನ್ನು ಹೂಳಿ ಸುಡುವುದೇ ಮಣ್ಣು" ಎಂದು ಹೇಳಿದ್ದಾರೆ. "ಪಂಚಭೂತಗಳಿಂದ ಆದ ದೇಹ ಪಂಚಭೂತಗಳಲ್ಲಿ ಲೀನವಾಯಿತು" ಎಂದು ಕಥೆ, ಕಾದಂಬರಿಗಳಲ್ಲಿ ಬರೆಯುತ್ತಾರೆ. "ನುಡಿನಮನ" ನೀಡುವಾಗಲೂ ಈ ರೀತಿ ಹೇಳುತ್ತಾರೆ. ಹಾಗಾದರೆ "ಪಾರ್ಥಿವ ಶರೀರ" ಎಂದರೆ ಏನು? ಇದೇ ರೀತಿ ಬೇರೆಯ ಶರೀರಗಳೂ ಇವೆಯೇ? ಇವೆಲ್ಲ ಕೇಳಬಹುದಾದ, ಕೇಳಬೇಕಾದ ಪ್ರಶ್ನೆಗಳೇ. 

ಸೃಷ್ಟಿಯು ಹೇಗಾಯಿತು? ಅದರ ಕ್ರಮವೇನು? ಈ ಮುಂತಾದ ಪ್ರಶ್ನೆಗಳಿಗೆ ನಮ್ಮ ವೈದಿಕ ವಾಂಗ್ಮಯದಲ್ಲಿ ಅನೇಕ ಕಡೆ ವಿವರಣೆಗಳನ್ನು ಕೊಟ್ಟಿದ್ದಾರೆ. ಉಪನಿಷತ್ತುಗಳು ಮತ್ತು ಪುರಾಣಗಳಲ್ಲಿ ಈ ವಿವರಗಳು ಲಭ್ಯವಿವೆ. ಪದ್ಮ ಪುರಾಣದ ಪ್ರಾರಂಭದಲ್ಲಿಯೇ ಸವಿಸ್ತಾರವಾಗಿ ಇದನ್ನು ನೋಡಬಹುದು. 

ಬ್ರಹ್ಮರ್ಷಿ ವಸಿಷ್ಠರ ಮಗ ಶಕ್ತಿ. ಶಕ್ತಿಯ ಮಗ ಪರಾಶರರು. ಪರಾಶರರ ಮಗ ವೇದವ್ಯಾಸರು. ವೇದವ್ಯಾಸರಿಂದ ಈ ಗ್ರಂಥಗಳೆಲ್ಲ ರಚನೆ ಆದವು. ಶುಕಾಚಾರ್ಯರು ವೇದವ್ಯಾಸರ ಮಗ. ಅವರ ಮೂಲಕ ಶ್ರೀಮದ್ ಭಾಗವತ ಪರೀಕ್ಷಿತ್ ಮಹಾರಾಜನಿಗೆ ಹೇಳಲ್ಪಟ್ಟಿರು. ರೋಮಹರ್ಷಣ ಋಷಿ ವೇದವ್ಯಾಸರ ಮತ್ತೊಬ್ಬ ಮಗ. ಉಗ್ರಶ್ರವಸ್ ರೋಮಹರ್ಷಣರ ಮಗ. ಈ ರೋಮಹರ್ಷಣ ಮತ್ತು ಉಗ್ರಶ್ರವಸ್ ಸಾಕ್ಷಾತ್ ವೇದವ್ಯಾಸರ ಬಳಿ ಅಧ್ಯಯನ ಮಾಡಿದ್ದರಿಂದ ಅವರ ಶಿಷ್ಯರೂ ಹೌದು. ಅನೇಕ ಪುರಾಣಗಳಲ್ಲಿ ಇವರ ಹೆಸರು ಬರುತ್ತದೆ. "ಸೂತಿ" ಅನ್ನುವ ತಾಯಿಯ ಮಗನಾದುದರಿಂದ ಉಗ್ರಶ್ರವಸ್ಸಿಗೆ "ಸೂತ" ಎಂದೂ ಹೆಸರಾಯಿತು. ಪುರಾಣಗಳನ್ನು ಪ್ರಚುರಪಡಿಸಿದ್ದರಿಂದ "ಪುರಾಣೀಕರು" ಎಂದು ವೃತ್ತಿನಾಮ (ಶಾಸ್ತ್ರವನ್ನು ತಿಳಿದು, ಅದನ್ನು ತಿಳಿಸಿ ಹೇಳುವರಿಗೆ ಶಾಸ್ತ್ರೀ ಎನ್ನುವಂತೆ) ಬಂದಿತು. "ಸೂತ ಪುರಾಣೀಕರು" ಎಂದು ಕಥೆಗಳಲ್ಲಿ ಬರುವ ಹೆಸರು ಇವರದೇ. 

"ನೈಮಿಷಾರಣ್ಯ" ಅನ್ನುವುದು ಈಗಿನ ಉತ್ತರ ಪ್ರದೇಶ ರಾಜ್ಯದ ಸೀತಾಪುರ ಜಿಲ್ಲೆಯಲ್ಲಿದೆ. ಗೋಮತಿ ನದಿಯ ತೀರದ ಕ್ಷೇತ್ರ. ಇದು ಹಿಂದೆ ಒಂದು ದಟ್ಟವಾದ ಕಾಡು ಪ್ರದೇಶ. ಇಲ್ಲಿ "ನಿಮಿಷ" ಅನ್ನುವ ಹಣ್ಣು ಕೊಡುವ ಮರಗಳಿದ್ದವಂತೆ. ಈ ಮರದ ಹಣ್ಣುಗಳು ತಪಸ್ವಿಗಳಿಗೆ ಆಧಾರವಾಗಿದ್ದುದರಿಂದ ಮತ್ತು ದಟ್ಟವಾಗಿ ಈ ಮರಗಳು ಆ ಕಾಡಿನಲ್ಲಿ ಬೆಳೆದಿದ್ದುದರಿಂದ ಅದಕ್ಕೆ "ನೈಮಿಷಾರಣ್ಯ" ಎನ್ನುವ ಹೆಸರು ಬಂದಿತು. "ನಿಮಿಷ" ಅನ್ನುವ ಪದಕ್ಕೆ ಬೇರೆ ಬೇರೆ ವಿವರಣೆಗಳೂ ಉಂಟು. ಅಲ್ಲಿ ಶೌನಕರು ಎನ್ನುವ ಹೆಸರಿನ ಋಷಿಗಳು ಒಂದು ಗುರುಕುಲವನ್ನು ನಡೆಸುತ್ತಿದ್ದರು. ಬಹಳ ತಿಳಿದವರೂ, ಜ್ಞಾನಿಗಳೂ ಆದುದರಿಂದ ಈ ಶೌನಕರನ್ನು ಕಾಣಲು ಮತ್ತು ಅವರಿಂದ ಜ್ಞಾನ ಸಂಪಾದಿಸಲು ಅನೇಕ ಋಷಿ-ಮುನಿಗಳು ದೇಶದ ಎಲ್ಲಕಡೆಗಳಿಂದ ನೈಮಿಷಾರಣ್ಯದಲ್ಲಿ ಬಂದು ಸೇರುತ್ತಿದ್ದರು.  ಆ ಪುಣ್ಯಕ್ಷೇತ್ರದಲ್ಲಿ ಅನೇಕ ಯಜ್ಞ-ಯಾಗಾಡಿಗಳೂ ನಡೆಯುತ್ತಿದ್ದುವು. 

ಇಂತಹ ಸಂದರ್ಭಗಳಲ್ಲಿ ಸೇರಿದ ಎಲ್ಲ ಋಷಿ-ಮುನಿಗಳು ಮತ್ತು ಜಿಜ್ಞಾಸು ಮಹನೀಯರು "ಜ್ಞಾನ ಸಭೆ" ನಡೆಸುತ್ತಿದ್ದರು. ಯಾರಿಗಾದರೂ ಅನುಮಾನ, ಪ್ರಶ್ನೆಗಳಿದ್ದರೆ ಆ ಸಭೆಯಲ್ಲಿ ಪ್ರಸ್ತಾಪ ಮಾಡಬಹುದಿತ್ತು. ಸೂಕ್ತ ಉತ್ತರ, ಸಮಾಧಾನ ತಿಳಿದ ಮತ್ತೊಬ್ಬರು ಅವಕ್ಕೆ ಉತ್ತರ ಕೊಡುತ್ತಿದ್ದರು. ಹೀಗೆ  ನಡೆಯುತ್ತಿದ್ದಾಗ ಅಲ್ಲಿಗೆ ಸೂತ ಪುರಾಣೀಕರು ಬಂದರು. ಅವರ ಜ್ಞಾನಪ್ರಭೆಯ ಬಗ್ಗೆ ತಿಳಿದಿದ್ದ ಎಲ್ಲಾ ಸಜ್ಜನರು ಅವರನ್ನು ಆದರದಿ೦ದ ಬರಮಾಡಿಕೊಂಡು ಸತ್ಕರಿಸಿದರು. ನಂತರ ಅವರ ಮುಂದೆ ತಮ್ಮ ತಮ್ಮ ಪ್ರಶ್ನೆ, ಅನುಮಾನಗಳನ್ನು ಇಡುತ್ತಾ ಪರಿಹಾರ ಕಂಡುಕೊಂಡರು. ಅನೇಕ ಪುರಾಣಗಳು ಮೊದಲ ಬಾರಿಗೆ ಅಲ್ಲಿ ಪ್ರವಚನಗೊಂಡವು. ಪ್ರಶ್ನೆ ಕೇಳುವವರು ಶೌನಕರೇ ಮುಂತಾದ ಜ್ಞಾನಿಗಳು. ಆದ್ದರಿಂದ "ಶೌನಕಾದಿಗಳು" ಎಂದು ಸಂಬೋಧನೆ. ಉತ್ತರ ಹೇಳುವವರು ಸೂತ ಪುರಾಣೀಕರು. ಆದ್ದರಿಂದ ಅನೇಕ ಕಥೆಗಳಲ್ಲಿ "ನೈಮಿಷಾರಣ್ಯವಾಸಿಗಳಾದ ಶೌನಕಾದಿ ಋಷಿಗಳಿಗೆ ಸೂತ ಪುರಾಣೀಕರು ಹೀಗೆ ಹೇಳಿದರು....." ಎಂಬ ವಾಕ್ಯದಿಂದ ಪ್ರಾರಂಭ! 

*****

ಐದರ ಐದು ಗುಂಪುಗಳು ಸೇರಿ ಇಪ್ಪತ್ತೈದು ತತ್ವಗಳಾದುವು. ಐದು ಜ್ಞಾನೇಂದ್ರಿಯಗಳು. ಐದು ಕರ್ಮೇಂದ್ರಿಯಗಳು. ಐದು ಪಂಚಭೂತಗಳು. ಐದು ಪಂಚತನ್ಮಾತ್ರಗಳು. ಮನಸ್ಸು-ಬುದ್ಧಿ-ಅಹಂಕಾರ-ಚಿತ್ತ-ಚೇತನ ಇವು ಮತ್ತೈದು. ಇವುಗಳ ವಿವರವನ್ನು ಮತ್ತೆಂದಾದರೂ ನೋಡೋಣ. 

ಪೃಥ್ವಿ-ಅಪ್ಪು-ತೇಜಸ್ಸು-ವಾಯು-ಆಕಾಶ ಇವು ಪಂಚಭೂತಗಳೆಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಇವನ್ನೇ ಕ್ರಮವಾಗಿ ಮಣ್ಣು-ನೀರು-ಬೆಂಕಿ-ಗಾಳಿ-ಆಕಾಶ ಎನ್ನುವುದು. ತೇಜಸ್ಸು ಅಥವಾ ಬೆಂಕಿ ಎಂದರೆ ಕೇವಲ ಉರಿಯುವ ಅಗ್ನಿಯಲ್ಲ. ಎಲ್ಲ ರೀತಿಯ ಶಕ್ತಿ ಸ್ರೋತಗಳೂ ಅಗ್ನಿಯ ರೂಪಗಳೇ. ಆಕಾಶವೆಂದರೆ ನಮ್ಮ ತಲೆಯ ಮೇಲೆ ಎಲ್ಲೋ ಮೇಲೆ ಇದೆ ಎಂದಲ್ಲ. ಆಕಾಶ ಎಂದರೆ ಚಲನೆಗೆ ಅವಕಾಶ. ಇಂಗ್ಲಿಷಿನಲ್ಲಿ ಸ್ಪೇಸ್ ಅನ್ನಬಹುದು. ಆಕಾಶ ಇಲ್ಲದಿದ್ದರೆ ನಮ್ಮ ಕೈ-ಕಾಲುಗಳು ಆಡಲೂ ಸಾಧ್ಯವಿಲ್ಲ. 

ಏನಾದರೂ ವಸ್ತು ತಯಾರು ಮಾಡಬೇಕಾದರೆ ಅದಕ್ಕೆ ಸೂಕ್ತವಾದ "ಪದಾರ್ಥ" ಬೇಕು. ಇದನ್ನು "ದ್ರವ್ಯ' ಅನ್ನುತ್ತಾರೆ. (ದ್ರವ್ಯ ಅಂದರೆ ಕೇವಲ ಹಣ-ಕಾಸು ಅಲ್ಲ). ಇಂಗ್ಲಿಷಿನಲ್ಲಿ ರಾ ಮಟೇರಿಯಲ್ ಅನ್ನಬಹುದು. ಈ  ದ್ರವ್ಯಗಳ ಮಿಶ್ರಣದಿಂದ ಪದಾರ್ಥಗಳು ತಯಾರಾಗುತ್ತದೆ. ಮಿಶ್ರಣದ ಪ್ರಮಾಣ ಮತ್ತು ಮಾಡುವ ವಿಧಾನ ಬದಲಾದಂತೆ ತಯಾರಾಗುವ ಪದಾರ್ಥವೂ ಬದಲಾಗುತ್ತದೆ. ಅಡಿಗೆ ಮಾಡುವವರಿಗೆ ಇದು ಚೆನ್ನಾಗಿ ಗೊತ್ತು. ಒಂದೇ ರೀತಿಯ ಅಡಿಗೆ ಸಾಮಾನುಗಳನ್ನು ಬಳಸಿ, ಬೇರೆ ಬೇರೆ ಪ್ರಮಾಣದಲ್ಲಿ ಸೇರಿಸಿ, ಮಾಡುವ ಕ್ರಮ, ಕಾಲ ಮತ್ತು ಉಷ್ಣಾ೦ಶ ಬದಲಿಸಿ ವಿವಿಧ ತಿಂಡಿ-ತಿನಿಸುಗಳನ್ನು ತಯಾರಿಸುವಂತೆ. 

*****

ಒಂದು ಮಡಿಕೆ ಮಾಡುವುದನ್ನೇ ನೋಡೋಣ. ಮಡಿಕೆ ಮಾಡಲು ಮೂಲ ದ್ರವ್ಯ ಮಣ್ಣು. ಕೇವಲ ಮಣ್ಣಿನಿಂದ ಮಡಿಕೆ ಮಾಡಲಾಗುವುದಿಲ್ಲ. ಮಣ್ಣು ಪುಡಿ ಪುಡಿಯಾದ ದ್ರವ್ಯ. ಕೈಯಲ್ಲಿ ಹಿಡಿದುಕೊಂಡು ಕೆಳಗೆ ಬಿಟ್ಟರೆ ಒಂದು ಗುಡ್ಡೆಯಾಗಿ ಬೀಳುತ್ತದೆ. ಅದಕ್ಕೆ ಒಂದು ಆಕಾರ ಕೊಡಬೇಕಾದರೆ ಅದಕ್ಕೆ ನೀರು ಸೇರಿಸಬೇಕು. ಮಣ್ಣನ್ನು ನೀರಿನಿಂದ ಕಲೆಸಿದರೆ ಆ ಮಿಶ್ರಣದಿಂದ ಮಡಿಕೆ ಮಾಡಬಹುದು. ಮಡಿಕೆಯನ್ನೇನೋ ಮಾಡಬಹುದು. ಆದರೆ ಅದು ಉಳಿಯುವುದಿಲ್ಲ. ಅದನ್ನು ಬಿಸಿಲಿನಲ್ಲಿ ಒಣಗಿಸಿದರೆ ಸ್ವಲ್ಪಮಟ್ಟಿಗೆ ಉಳಿಯುತ್ತದೆ. ಆದರೆ ಅದರಲ್ಲಿ ನೀರು ಶೇಖರಿಸಬೇಕಾದರೆ, ಅದು ಪ್ರಯೋಜನಕ್ಕೆ ಬರಬೇಕಾದರೆ, ಅದನ್ನು ಬೆಂಕಿಯಲ್ಲಿ ಕಾಯಿಸಬೇಕು. ಇಷ್ಟೆಲ್ಲಾ ಆದ ನಂತರ ಮಡಿಕೆ ಕೆಲವು ಕಾಲ ಇರಬಲ್ಲದು. 

ಮಡಿಕೆಯ ಖಾಲಿ ಇರುವ ಜಾಗದಲ್ಲಿ ಗಾಳಿ ತುಂಬಿಕೊಳ್ಳುತ್ತದೆ. ಅದು ಈಕಡೆ-ಆಕಡೆ ಚಲಿಸಲು ಅವಕಾಶ (ಆಕಾಶ) ಬೇಕು. ತಯಾರು ಮಾಡಲು ಮೂರು ದ್ರವ್ಯಗಳು. ಮತ್ತೆ ಉಪಯೋಗಕ್ಕೆ ಬರಲು ಇನ್ನೆರಡು ದ್ರವ್ಯಗಳು. 

ನಾಲ್ಕು ಭಾಗ ಮಣ್ಣು, ಮೂರು ಭಾಗ ನೀರು ಮತ್ತು ಒಂದು ಭಾಗ ಬೆಂಕಿಯಿಂದ ಆದ ದೇಹಕ್ಕೆ "ಪಾರ್ಥಿವ" ಎನ್ನುತ್ತಾರೆ. ನಮ್ಮಗಳ ದೇಹವೂ ಇದೇ ಪ್ರಮಾಣದ್ದು. ಮಣ್ಣು-ನೀರುಗಳ ಮಿಶ್ರಣವನ್ನು ಶಕ್ತಿ (ಎನರ್ಜಿ) ಹಿಡಿದಿಟ್ಟಿದೆ. ಅದು ಕೆಲಸಮಾಡಲು ವಾಯು ಮತ್ತು ಆಕಾಶಗಳೂ ಬೇಕು. ಮಣ್ಣಿನ (ಪೃಥ್ವಿ) ಪ್ರಮಾಣ ಎಲ್ಲಕ್ಕೂ ಹೆಚ್ಚು ಇರುವುದರಿಂದ ಅದು "ಪಾರ್ಥಿವ ಶರೀರ" ಎಂದಾಯಿತು. 

ನಾಲ್ಕು ಭಾಗ ನೀರು, ಮೂರು ಭಾಗ ಮಣ್ಣು ಮತ್ತು ಒಂದು ಭಾಗ ಬೆಂಕಿಯಿಂದ ಆದ ಶರೀರಕ್ಕೆ "ಜಲೀಯ" ಶರೀರ ಎಂದು ಹೆಸರು. ಹೆಚ್ಚಿನ ಜಲಚರಗಳು ಈ ಗುಂಪಿಗೆ ಸೇರಿದವು. ನೀರಿನ (ಜಲ) ಪ್ರಮಾಣ ಹೆಚ್ಚಿರುವುದರಿಂದ ಅದು "ಜಲೀಯ ಶರೀರ" ಎಂದಾಯಿತು. 

ನಾಲ್ಕು ಭಾಗ ಶಕ್ತಿ , ಮೂರು ಭಾಗ ನೀರು ಮತ್ತು ಒಂದು ಭಾಗ ಮಣ್ಣು, ಇವುಗಳಿಂದ ಆದ ಶರೀರಕ್ಕೆ "ತೈಜಸ" ಎಂದು ಕರೆಯುವರು. ತೇಜಸ್ಸು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಅದು "ತೈಜಸ ಶರೀರ" ಆಯಿತು. ಅನೇಕ ದೇವತೆಗಳು ಈ ರೀತಿಯ ತೈಜಸ ರೂಪದಲ್ಲಿ ದರ್ಶನ ಕೊಡುತ್ತಾರಂತೆ. ಆಗ ಹೆಚ್ಚಿನ ಶಕ್ತಿಯ ಅನುಭವ ಆಗುತ್ತದಂತೆ. 

ಈ ಪಾರ್ಥಿವ ಶರೀರ, ಜಲೀಯ ಶರೀರ ಮತ್ತು ತೈಜಸ ಶರೀರ ಅಲ್ಲದೆ ಮತ್ತೊಂದು ಉಂಟು. ಅದು "ದಿವ್ಯ ಶರೀರ".  ಅದು ಪೂರ್ಣವಾಗಿ ಬೆಳಕಿನ ರೂಪ. ಆ ರೂಪದಲ್ಲಿ ಅಗಾಧವಾದ ಬೆಳಕು. ಅಂದರೆ ಸೂರ್ಯನಂತೆ ಪ್ರಖರತೆ. ಆದರೆ ಅಂತಹ ತಡೆಯಲಾರದ ಶಾಖವಿಲ್ಲ. ಚಂದ್ರನ ಬೆಳಕಿನಂತೆ ಹಿತಕರ. ಎರಡೂ ಗುಣವುಳ್ಳದ್ದು. ಸೂರ್ಯನ ಪ್ರಖರವಾದ ಕಾಂತಿ. ಆದರೆ ಚಂದ್ರನ ಬೆಳಕಿನ ಶಾಂತವಾದ ಅನುಭವ. ಪರಮಾತ್ಮನು ಮತ್ತು ಕೆಲವು ಹಿರಿಯ ದೇವತೆಗಳು ಹೀಗೆ ದರ್ಶನ ಕೊಡುತ್ತಾರಂತೆ. 

*****

ಪಾರ್ಥಿವ ಶರೀರದಿಂದ ಜೀವನು ನಿರ್ಗಮಿಸಿದ ಮೇಲೆ, ಮಡಿಕೆ ಒಡೆದು ಚೂರಾದಾಗ ಹೇಗೆ ಅದು ಮಣ್ಣು, ನೀರು ಮತ್ತು ವಿಶಾಲ ಶಕ್ತಿಯ ಸ್ರೋತದಲ್ಲಿ ಸೇರುತ್ತದೋ ಹಾಗೆ ಪಾರ್ಥಿವ ದೇಹವೂ ಮತ್ತೆ ಪಂಚಭೂತಗಳಲ್ಲಿ ಸೇರುತ್ತದೆ. ಸುಟ್ಟಾಗ ಬೂದಿ. ಅದೂ ಮಣ್ಣೇ. ಹೂಳಿದಾಗ ಮಣ್ಣಂತೂ ಸರಿಯೇ ಸರಿ. ಹೀಗೂ ಮಣ್ಣು. ಹಾಗೂ ಮಣ್ಣು.  ನೀರಿನ ಅಂಶ ಸುಟ್ಟಾಗ ಆವಿಯಾಗಿ ಗಾಳಿಗೆ ಹೋಯಿತು. ಹೂತಾಗ ಮಣ್ಣಿನಲ್ಲಿ ತೇವವಾಗಿ ಸೇರಿತು. ಹೀಗಾದಾಗ ವಾಯುವೂ ಇಲ್ಲ; ಆಕಾಶವೂ ಇಲ್ಲ. ಪಾರ್ಥಿವ ದೇಹ ಪಂಚ ಭೂತಗಳಲ್ಲಿ ಲೀನವಾಯಿತು ಎನ್ನುತ್ತೇವೆ. 

ಪಾರ್ಥಿವ ಶರೀರ ಮತ್ತು ಅದು ಪಂಚ ಭೂತಗಳಲ್ಲಿ ಹೇಗೆ ಲೀನವಾಗುತ್ತದೆ ಎಂದು ತಿಳಿದಂತಾಯಿತು. ಇಪ್ಪತ್ತೈದು ತತ್ವಗಳ ಬಗ್ಗೆ ಮತ್ತೆಂದಾದರೂ ಯೋಚಿಸೋಣ.