Monday, September 22, 2025

ಒಂದು ಕಪ್ಪು ಚುಕ್ಕೆ


ಕಳೆದ ವಾರದ ಎರಡು ಸಂಚಿಕೆಗಳಾದ "ಯಯಾತಿಯ ಮೊಮ್ಮಕ್ಕಳು" ಮತ್ತು ಅದರ ಮುಂದಿನ ಭಾಗವಾದ "ಮಾಧವಿಯ ಮಕ್ಕಳು" ಅನೇಕ ಪ್ರತಿಕ್ರಿಯೆಗಳನ್ನು ತಂದಿವೆ. (ಈ ಸಂಚಿಕೆಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ವಿಶೇಷವಾಗಿ ಕನ್ನಡದ ಒಂದು ಪ್ರಸಿದ್ಧ ಕೃತಿ, ಖ್ಯಾತ ಲೇಖಕ, ನಟ, ನಿರ್ದೇಶಕ, ಜ್ಞಾನ ಪೀಠ ಪ್ರಶಸ್ತಿ ವಿಜೇತ ಶ್ರೀ ಗಿರೀಶ್ ಕಾರ್ನಾಡ್ ಅವರ "ಯಯಾತಿ" ನಾಟಕ ಓದಿರುವವರು, ಅದರ ಪ್ರಯೋಗವನ್ನು ರಂಗಮಂಚದ ಮೇಲೆ ನೋಡಿದವರು ಕಳಿಸಿರುವ ಪ್ರತಿಕ್ರಿಯೆಗಳು. ಕೆಲವರು ಇದರ ಬಗ್ಗೆ ಪ್ರಶ್ನೆಗಳನ್ನು ಹಾಕಿ, ಸ್ವಲ್ಪ ವಿಸ್ತಾರ ಮಾಡಬೇಕೆಂದು ಕೇಳಿದ್ದಾರೆ. ಈ ಸಂಚಿಕೆಗಳಲ್ಲಿರುವ ಅಂಶಗಳನ್ನು ಒಳಗೊಂಡಂತೆ ಒಂದು ರಂಗನಾಟಕ ಬರೆಯಬೇಕೆಂದೂ ಅನೇಕರು ಸಲಹೆ ನೀಡಿದ್ದಾರೆ. 

ಸಾಮಾನ್ಯವಾಗಿ ಅನೇಕ ಓದುಗರು ಮಹಾಭಾರತ, ಭಾಗವತ ಮತ್ತು ಹಲವು ಪುರಾಣಗಲ್ಲಿರುವ ಚಂದ್ರವಂಶದವರ ಕುರಿತಾದ ಬಲು ವಿಸ್ತಾರವಾದ ಸರಕನ್ನು ಓದಿರುವುದಿಲ್ಲ. ಅದು ಎಲ್ಲರಿಗೂ ಸಾಧ್ಯವಾಗುವುದೂ ಇಲ್ಲ. ಅವುಗಳ ಗಾತ್ರ ಬಲು ದೊಡ್ಡದು. ಜೊತೆಗೆ ಮೂಲ ಕೃತಿಗಳು ಇರುವುದು ಸಂಸ್ಕೃತದಲ್ಲಿ. ಕಳೆದ ತಲೆಮಾರಿನ ಮತ್ತು ಇಂದಿನ ಅನೇಕ ಸಾಹಿತಿಗಳು ರಾಮಾಯಣ ಮತ್ತು ಮಹಾಭಾರತದ ಯಾವುದಾದರೂ ಒಂದು ಎಳೆಯನ್ನು ಹಿಡಿದು, ಅದರ ವಿಸ್ತಾರದಲ್ಲಿ ತಮ್ಮ ಕೃತಿಗಳ ರಚನೆ ಮಾಡಿರುತ್ತಾರೆ. ವ್ಯಾಸ, ವಾಲ್ಮೀಕಿಗಳ ಸೆಳೆತ, ಸತ್ವ ಅಂತಹುದು. ಈ ಮಹಾಮಹಿಮರು ಸೃಷ್ಟಿಸಿರುವ, ಬಣ್ಣಿಸಿರುವ ಪಾತ್ರ ಪ್ರಪಂಚ ಎಲ್ಲರನ್ನೂ ಅಯಸ್ಕಾಂತದಂತೆ ಆಕರ್ಷಿಸುತ್ತದೆ. ಅಂತಹ ಬೃಹತ್ ಕೃತಿಗಳನ್ನು ಹೊಸದಾಗಿ ನಿರ್ಮಾಣ ಮಾಡುವ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ. 

ಯಾವುದೋ ಒಂದು ಪಾತ್ರದ ಒಂದು ಒಳ್ಳೆಯ ಗುಣವನ್ನೋ, ದುರ್ಗುಣವನ್ನೋ ಹಿಗ್ಗಿಸಿ ಮರುಸೃಷ್ಟಿ ಮಾಡಿದ ಕೃತಿಗಳು ಅತ್ಯಂತ ಜನಪ್ರಿಯವಾದಾಗ ಅವುಗಳಲ್ಲಿ ಬಿಂಬಿತವಾದ ಹೂರಣವೇ ಸತ್ಯವೆಂದು ಸಾಮಾನ್ಯ ಜನ ನಂಬುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಅದರಲ್ಲಿಯೂ ಅರ್ಥ, ಕಾಮಗಳ ಪ್ರಪಂಚ, ಇನ್ನೂ ವಿಶೇಷವಾಗಿ ದೈಹಿಕ ಕಾಮದ ವಿವರಣೆಗಳ ಆಕರ್ಷಣೆ ಹಾಗೆ. ಇದರಲ್ಲಿ ತಪ್ಪೇನೂ ಇಲ್ಲ. ಇದೂ ಸಹ ಮನುಷ್ಯನ ಸಹಜ ಜೀವನದ ಒಂದು ಮುಖವೇ. ಹೀಗಿದ್ದಾಗ ಯಾವುದೋ ಸಂದರ್ಭದಲ್ಲಿ ಬೇರೆ ಸಂಗತಿಗಳು ಗಮನಕ್ಕೆ ಬಂದಾಗ "ಒಹೋ, ಹೀಗೂ ಉಂಟೋ!" ಎಂದು ಆಶ್ಚರ್ಯ ಆಗುತ್ತದೆ. 

*****

ಯಾವುದೇ ಒಂದು ವಿಷಯದ ಮೇಲೆ ಚರ್ಚೆ ನಡೆದಾಗ ಪರಸ್ಪರ ವಿರೋಧ ದಿಕ್ಕಿನ ವಿಚಾರಗಳು ಬರುವುದು ಸಹಜ. ಒಬ್ಬ ವ್ಯಕ್ತಿಯಲ್ಲಿ ಅಥವಾ ಒಂದು ಪದಾರ್ಥದಲ್ಲಿ ಅನೇಕ ಗುಣಗಳಿದ್ದಾಗ ಒಂದು ಅವಗುಣ (ದುರ್ಗುಣ) ಕಂಡರೆ ಅದು ಹೇಗೆ ಧ್ವನಿತವಾಗುತ್ತದೆ ಎನ್ನುವುದಕ್ಕೆ ಕೆಳಗಿನ ಉದಾಹರಣೆ ನೋಡಬಹುದು. 

ಕವಿಕುಲಗುರು ಕಾಳಿದಾಸನು ತನ್ನ "ಕುಮಾರಸಂಭವ" ಮಹಾಕಾವ್ಯದ ಮೊದಲ ಸರ್ಗದ ಮೂರನೆಯ ಪದ್ಯದಲ್ಲಿ ಹೀಗೆ ಹೇಳುತ್ತಾನೆ:

ಅನಂತರತ್ನ ಪ್ರಭವಸ್ಯ ಯಸ್ಯ ಹಿಮಂನ ಸೌಭಾಗ್ಯವಿಲಾಪಿಜಾತಂ 
ಏಕೋಹಿ ದೋಷೋ ಗುಣಸನ್ನಿಪಾತೇ ನಿಮಜ್ಜತೀಂದೋಃ ಕಿರಣೀಶ್ವಿವಾಂಕಃ 

ಹಿಮಾಲಯದಲ್ಲಿ ಬೇಕಾದಷ್ಟು ಶ್ರೇಷ್ಠ ವಸ್ತುಗಳಿವೆ. ಆದ್ದರಿಂದ ಎಲ್ಲೆಡೆಯೂ ಹಿಮವಿದ್ದರೂ ಅದರ ಯೋಗ್ಯತೆ ಕಡಿಮೆಯಾಗಲಿಲ್ಲ. ಚಂದ್ರನ ಕಾಂತಿಯಲ್ಲಿ ಅವನ ಕಳಂಕವು ಮರೆಯಾದಂತೆ ಅನೇಕ ಗುಣಗಳಿಂದ ಒಂದು ದೋಷವೇ ಮರೆಯಾಗುತ್ತದೆ. 

ಇದಕ್ಕೆ ವಿರುದ್ಧವಾಗಿ ಶೃಂಗಾರ ಪ್ರಕಾಶ ಹೀಗೆ ಹೇಳುತ್ತದೆ: 

ಏಕೋಹಿದೋಷೋ ಗುಣಸನ್ನಿಪಾತೇ ನಿಮಜ್ಜತೀಂದೋರಿತಿ ಯೋ ಬಭಾಷೇ 

ತೇನಾಪಿ ನೂನಂ ಕವಿನಾ ನ ದೃಷ್ಟ೦ ದಾರಿದ್ರ್ಯದೋಷ: ಗುಣರಾಶಿನಾಶೀ 

ಅನೇಕ ಗುಣಗಳಿದ್ದಾಗ ಒಂದು ದೋಷವು ಮುಚ್ಚಿಹೋಗುತ್ತದೆ ಎಂದು ಹೇಳಿದ ಕವಿಗೆ, ದಾರಿದ್ರ್ಯ (ಬಡತನ) ಎನ್ನುವ ಒಂದು ದೋಷವೇ ಎಲ್ಲಾ ಗುಣಗಳನ್ನೂ ನುಂಗಿಹಾಕುತ್ತದೆ ಎನ್ನುವುದು ಕಾಣಲಿಲ್ಲ! 

ಹೀಗೆ ಪರಸ್ಪರ ಅಭಿಪ್ರಾಯ ಭೇದವಿರುವುದು ಸರಿಯಾದರೂ ಇಲ್ಲಿ ಒಟ್ಟಾರೆ ಆಗುವ ಪರಿಣಾಮ ಸನ್ಮಾರ್ಗ ಪ್ರೇರಕವೇ ಆಗಿದೆ. ದಾರಿದ್ರ್ಯದ ಭೀಕರತೆ ತೋರಿಸಿದರೂ, ಅದು ಬಡತನವನ್ನು ಅತಿಯಾಗಿ ಗಮನಿಸದೆ ಗುಣಗ್ರಾಹಿಯಾಗಬೇಕೆಂದು ಸೂಚಿಸುತ್ತದೆ. 

*****

ಪರಮಪುರುಷನೊಬ್ಬನೇ ಸಕಲ ದೋಷದೂರನಾದವನು. ಅವನೊಬ್ಬನೇ ಅನಂತ ಕಲ್ಯಾಣಗುಣ ಪರಿಪೂರ್ಣ. ಇದು ಒಂದು ಪ್ರಮೇಯ. ಅನೇಕ ತಾತ್ವಿಕ ನಿಲುವುಗಳು ಇದರ ಮೇಲೆ ನಿಂತಿವೆ. ಆದ್ದರಿಂದ ಪರಮಾತ್ಮನನ್ನು ನೆನೆಯುವುದು ಅಂದರೆ ಅವನ ಅನಂತ ಗುಣಗಳಲ್ಲಿ ನಮಗೆ ಚಿಂತನೆಗೆ ಸಿಲುಕುವ, ನಿಲುಕುವ ಗುಣಗಳ ಚಿಂತನೆಯೇ ಆಗಿದೆ. ಬೇರೆಯ ದೇವತೆಗಳೂ, ಮನುಷ್ಯರೂ ಈ ಅಳತೆಯಲ್ಲಿ ಕಡಿಮೆ ಬೀಳುವುದು ಸಹಜವೇ. ಎಲ್ಲ ದೇವತೆಗಳೂ, ಮನುಷ್ಯರೂ ದೋಷ ದೂರರಾದರೆ, ಸಕಲ ಗುಣಗಳ ಖನಿಗಳಾದರೆ, ಅವರು ಮನುಷ್ಯರಾಗಿಯೋ ಅಥವಾ ದೇವತೆಗಳಾಗಿಯೋ ಉಳಿಯುವುದಿಲ್ಲ. ಅವರೂ ದೇವರೇ ಆಗಿಬಿಡುತ್ತಾರೆ!

ಇಂತಹ ಪರಿಸ್ಥಿತಿಯಲ್ಲಿ ನಮ್ಮ ದೃಷ್ಟಿಕೋನ ಹೇಗಿರಬೇಕು? ನಮ್ಮ ಹಿರಿಯ ಸ್ನೇಹಿತರೊಬ್ಬರು ಸೂಚಿಸಿರುವಂತೆ "ನಾವು ಗುಣಾನ್ವೇಷಣೆಯಲ್ಲಿ ತೊಡಗಬೇಕೇ ಹೊರತು ದೋಷಾನ್ವೇಷಣೆಯಲ್ಲಿ ಅಲ್ಲ". ರಾಮಾಯಣ, ಮಹಾಭಾರತ, ಪುರಾಣಗಳು ಮುಂತಾದುವುಗಳಲ್ಲಿ ಕಂಡು ಬರುವ ದುಷ್ಟ ಪಾತ್ರಗಳನ್ನೇ ವೈಭವೀಕರಿಸಿ, ಅವರನ್ನೇ ನಾಯಕರುಗಳನ್ನಾಗಿ ಮಾಡಿ ರಚಿಸಿರುವ ಸಾಹಿತ್ಯ ಎಲ್ಲ ಭಾಷೆಗಳಲ್ಲಿ ವಿಪುಲವಾಗಿಯೇ ಇವೆ. ಸಾಹಿತ್ಯದ ಮೂಲೋದ್ದೇಶ "ರಸಾಸ್ವಾದನೆ" ಆದುದರಿಂದ ಆ ದೃಷ್ಟಿಯಲ್ಲಿ ಇದು ಅಸಾಧುವೂ ಅಲ್ಲ. ಆದರೆ ಅದು ಅಲ್ಲಿಗೇ ನಿಲ್ಲಬೇಕು. ಅದನ್ನು ಬಿಟ್ಟು ಇಂತಹ ವ್ಯಾಖ್ಯಾನಗಳೇ ಸತ್ಯ ಎಂದು ಜನಜನಿತವಾದರೆ ಮೂಲ ಕೃತಿಗಳ ಮೂಲಭೂತ ಆಶಯಕ್ಕೇ ಕೊಡಲಿಪೆಟ್ಟು ಬೀಳುತ್ತದೆ. 

ಪ್ರಾಚಾರ್ಯ ತಿ. ನಂ. ಶ್ರೀ ಅವರು ತಮ್ಮ "ಭಾರತೀಯ ಕಾವ್ಯ ಮೀಮಾಂಸೆ" ಮೇರು ಕೃತಿಯಲ್ಲಿ ಹೇಳಿರುವಂತೆ "ಓದುವಾಗ ರಸಾಸ್ವಾದವೇ ಮುಖ್ಯವಾದರೂ, ಅದರಿಂದ ಒದಗುವ ಆನಂದವೇ ಪ್ರಿಯವಾದರೂ, ಅಂತ್ಯ ಪ್ರಯೋಜನ ಅದರಿಂದ ಒದಗುವ ಸಂಸ್ಕಾರ". ಇನ್ನೂ ಸ್ವಲ್ಪ ಮುಂದೆ ಅವರು ಸೂಚಿಸುವಂತೆ "ವಾಚಕನ ಮನಸ್ಸು ಸಂಸ್ಕಾರ ಹೊಂದಿ, ಅವನಿಗೆ ಧರ್ಮಾಧರ್ಮಗಳ ಪರಿಜ್ಞಾನ ಒದಗಿ, ಸನ್ಮಾರ್ಗದಲ್ಲಿ ನಡೆಯಬೇಕೆಂಬ ಪ್ರವೃತ್ತಿ ಉಂಟಾಗುವುದೇ ಸಾಹಿತ್ಯದ ಪರಮ ಪ್ರಯೋಜನ. ಇದನ್ನೇ ಸತ್ಪ್ರೇರಣೆ ಅನ್ನುತ್ತಾರೆ". 

ಕೃತಿ ರಚನಾ ಸ್ವಾತಂತ್ರ್ಯ ಎಲ್ಲರಿಗೂ ಉಂಟು. ಆದರೆ ಕಡೆಗೆ "ಕೃತಿಯ ಒಟ್ಟಾರೆ ಪರಿಣಾಮ ಏನಾಗುವುದು?" ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಭೀಕರ ಅಪರಾಧಗಳನ್ನು ಮಾಡಿ ನಿಭಾಯಿಸಿಕೊಂಡವರ ಬಗ್ಗೆ ಚಲನಚಿತ್ರಗಳು ಬಂದಿವೆ. ಅವುಗಳನ್ನು ನೋಡಿ ಅದನ್ನೇ ಅನುಕರಿಸಿ ಅಪರಾಧಗಳನ್ನು ಮಾಡಿ ಸಿಕ್ಕಿಹಾಕಿಕೊಂಡವರು ಇಂತಹ ಚಿತ್ರಗಳೇ ಅವರ ಪ್ರೇರಕ ಶಕ್ತಿ ಎಂದು ಹೇಳಿರುವುದು ಗಮನಿಸಬೇಕಾದ ಅಂಶ. ಅಭಿವ್ಯಕ್ತಿ ಸ್ವಾತಂತ್ರ್ಯ, ರಸಾನುಭವ, ಮನರಂಜನೆ, ಜನಪ್ರಿಯತೆ ಇವೆಲ್ಲವೂ ಮುಖ್ಯವಾದರೂ ಸಮಾಜದ ಮೇಲೆ ಆಗುವ ಪೂರ್ಣ ಪರಿಣಾಮವೂ ಅಷ್ಟೇ ಮುಖ್ಯ ಎನ್ನುವುದು ಗಮನಿಸಬೇಕಾದ ಅಂಶ. 

*****

ಚಕ್ರವರ್ತಿ ಯಯಾತಿ ವಿಷಯದಲ್ಲಿ ಗಮನಿಸುವುದಾದರೆ, ಅವನನ್ನು ಕೇಂದ್ರೀಕರಿಸಿ ಮರಾಠಿ ಭಾಷೆಯ ಶ್ರೇಷ್ಠ ಲೇಖಕರಲ್ಲಿ ಒಬ್ಬರಾದ ಶ್ರೀ ವಿಷ್ಣು ಸಖಾರಾಮ ಖಾಂಡೇಕರ್ ಅವರು 1959 ರಲ್ಲಿ ಮರಾಠಿಯಲ್ಲಿ "ಯಯಾತಿ" ಏನುವ ಹೆಸರಿನ ಕಾದಂಬರಿ ಹೊರತಂದರು. ಅವರಿಗೆ ಈ ಕಾದಂಬರಿ ಬಹಳ ಕೀರ್ತಿ ತಂದಿತು. 1974 ವರ್ಷದ "ಜ್ಞಾನಪೀಠ" ಪ್ರಶಸ್ತಿಯೂ ಅವರಿಗೆ ಈ ಪುಸ್ತಕಕ್ಕಾಗಿ ಸಿಕ್ಕಿತು. 

ಎರಡು ವರ್ಷಗಳ ನಂತರ, 1961 ರಲ್ಲಿ ಕನ್ನಡದಲ್ಲಿ "ಯಯಾತಿ" ನಾಟಕ ರೂಪದಲ್ಲಿ ಶ್ರೀ ಗಿರೀಶ್ ಕಾರ್ನಾಡ್ ಅವರಿಂದ ಹೊರಬಂತು. ಈ ಕೃತಿ ರಚಿಸಿದಾಗ ಅವರಿಗೆ ಕೇವಲ 23 ವರ್ಷ ವಯಸ್ಸು. ಆ ಚಿಕ್ಕ ವಯಸ್ಸಿನಲ್ಲೇ ಇಂತಹ ಪ್ರಖರ ಕೃತಿ ಹೊರತಂದಿದ್ದು ಅವರ ಅಪಾರ ಪ್ರತಿಭೆಗೆ ಸಾಕ್ಷಿ. ಮುಂದೆ ಅವರು ಮಾಡಿದ ಒಟ್ಟಾರೆ ಸಾಹಿತ್ಯ ಸೇವೆಗೆ ಅವರಿಗೆ 1998 ರಲ್ಲಿ "ಜ್ಞಾನಪೀಠ" ಪ್ರಶಸ್ತಿ ಸಿಕ್ಕಿತು. 

ಮಹಾಭಾರತ ಮತ್ತು ಪುರಾಣಗಳಲ್ಲಿ ಸಿಗುವ ಯಯಾತಿಯ ಪೂರ್ತಿ ವಿವರಗಳನ್ನು ಗಮನಿಸಿದಾಗ ಅವನು ತನ್ನ ಮಗನಿಂದ ಯೌವನ ಪಡೆದುದು ಒಂದು ಆಕಸ್ಮಿಕ. ದೇವಯಾನಿಯ ದೂರಿನ ಕಾರಣವಾಗಿ ದೈತ್ಯಗುರು ಶುಕ್ರಾಚಾರ್ಯರಿಗೆ ಬಂದ ಕೋಪದ ಫಲಶ್ರುತಿಯಾಗಿ ಅವರು ಯಯಾತಿಗೆ "ಅಕಾಲ ವೃದ್ಧಾಪ್ಯ ಬರಲಿ" ಎಂದು ಶಾಪ ಕೊಟ್ಟರು. ಹೀಗೆ ಶಾಪ ಬಂದಾಗ ಅವನು ಅವರಲ್ಲಿ ಕ್ಷಮೆ ಬೇಡಿ ವಿಶಾಪ ಕೋರಿದಾಗ ಅವರು ತೋರಿಸಿದ ದಾರಿ ಯಾವುದು? "ನಿನ್ನ ಮಕ್ಕಳಲ್ಲಿ ಯಾರಾದರೂ ನಿನ್ನ ವೃದ್ಧಾಪ್ಯ ತೆಗೆದುಕೊಂಡು ಅವನ ಯೌವನ ನಿನಗೆ ಕೊಟ್ಟರೆ ತೆಗೆದುಕೋ" ಎಂದರು! ಅವನು ಆ ದಾರಿಯಲ್ಲಿ ಹೋದ. ತಾನಾಗಿ ಅದನ್ನು ಕೇಳಿದವನಲ್ಲ. ಮುಂದೆ ಒಂದು ಸಾವಿರ ವರುಷ ಮಗನ ಯುವತನ ಪಡೆದಿದ್ದನಂತೆ. ಕಡೆಗೆ ಏನು ಮಾಡಿದರೂ, ಎಷ್ಟು ಭೋಗ ಸವಿದರೂ, ತೃಪ್ತಿಯಾಗುವುದಿಲ್ಲ ಎಂದು ತಿಳಿಯಿತು. ಆಗ ತಕ್ಷಣ ಅದೇ ಮಗನಿಗೆ ಯೌವನ ಹಿಂದಿರುಗಿಸಿ ವಾನಪ್ರಸ್ಥಕ್ಕೆ ಹೊರಟ. ಈ ಘಟನೆ ಅವನ ಜೀವನದಲ್ಲಿ ನಡೆದ ಒಂದು ದುರ್ದೈವದ ನಡೆ. 

ಮಗನ ಯೌವನ ಪಡೆದ ಅವನನ್ನು ನೋಡುವ ಎರಡು ದೃಷ್ಟಿ ಕೋಣಗಳು ಇವೆ. ಒಂದರಲ್ಲಿ ಗಂಡ ತನ್ನ ಬಳಿ ಬಂದಾಗ ಅವನ ಹೆಂಡತಿ "ನನ್ನ ಹತ್ತಿರ ಬರಬೇಡ. ನಿನ್ನಲ್ಲಿ ನನ್ನ ಮಗ ಕಾಣಿಸುತ್ತಾನೆ" ಎಂದು ಹೇಳುವುದು. ಇನ್ನೊಂದರಲ್ಲಿ ಅವನ ಸೊಸೆ ಅವನ ಬಳಿ ಬಂದು "ಈಗ ನೀನೇ ನನ್ನ ಗಂಡ" ಅನ್ನುವುದು. ಒಂದು ಆ ವಯಸ್ಸಿಗೆ ತಕ್ಕ ಉದಾತ್ತತೆ. ಇನ್ನೊಂದು ಈ ವಯಸ್ಸಿಗೆ ತಕ್ಕ ಅವಶ್ಯಕತೆ. ಯಾವುದು ಸರಿ ಎಂದು ಹೇಳುವಂತಿಲ್ಲ. ಅದರ ಜಾಗದಲ್ಲಿ ಅದು ಸರಿ. ಇದರ ಜಾಗದಲ್ಲಿ ಇದು ಸರಿ. 

*****

ಯಯಾತಿಯ ತಂದೆ ನಹುಷ ಚಕ್ರವರ್ತಿಯ ಮಹಾಭಾರತ, ಪುರಾಣಗಳ ಚಿತ್ರಣದ ದೋಷವೊಂದನ್ನು ಪರಿಹರಿಸಿ ದೇವುಡು ನರಸಿಂಹ ಶಾಸ್ತ್ರಿಗಳು "ಮಹಾಕ್ಷತ್ರಿಯ" ಎನ್ನುವ ದಿವ್ಯ ಪೌರಾಣಿಕ ಕಾದಂಬರಿ ಕೊಟ್ಟರು. ದುಷ್ಯಂತನ ಒಂದು ದೋಷವನ್ನು ಒಂದು ಉಂಗುರದ ಪ್ರಭಾವವನ್ನು ತಂದು ಪರಿಹರಿಸಿ ಮಹಾಕವಿ ಕಾಳಿದಾಸನು "ಅಭಿಜ್ಞಾನ ಶಾಕುಂತಲ" ನಾಟಕವನ್ನು ಕೊಟ್ಟ. 

ಅಭಿವ್ಯಕ್ತಿ ಸ್ವಾತಂತ್ರ್ಯ, ಕೃತಿ ರಚಿಸುವವನ ಪ್ರತಿಭೆ, ಸಮಾಜದಲ್ಲಿ ಇರುವ ಸಂಬಂಧಗಳು ಮತ್ತು ಮೌಲ್ಯಗಳ ಹಿನ್ನೆಲೆಯಲ್ಲಿ ಆಯಾ ಕೃತಿಗಳ ವಿಮರ್ಶೆ ಮಾಡಬೇಕಲ್ಲದೆ, ಯಯಾತಿಯ ಬಗ್ಗೆ ನಮ್ಮ ಒಟ್ಟಾರೆ ಅಭಿಪ್ರಾಯ ರೂಪಿಸುವ ತುಲನೆ ಮಾಡುವಾಗ ಅವನ ವ್ಯಕ್ತಿತ್ವದ ಒಂದು ಕಪ್ಪು ಚುಕ್ಕೆಯನ್ನೇ ಗಮನಿಸಿ ಮಿಕ್ಕ ವಿಶಾಲ ಶುಭ್ರ ಶ್ವೇತ ಗುಣಗಳನ್ನು ಮರೆಯಬಾರದೆಂಬುದೇ ಇಷ್ಟೆಲ್ಲಾ ಚರ್ಚೆಯ ಆಶಯ. ಹಾಗೆ ಮಾಡಿದರೆ ಅದು ಕಳಂಕವಿದೆ ಎಂದು ಚಂದ್ರನನ್ನೇ ಪಕ್ಕಕ್ಕೆ ತಳ್ಳಿದ ಹಾಗೆ. 

Sunday, September 21, 2025

Time Bank


This was some sixty years ago. 

i was studying in the middle school in those years (5th to 7th years of schooling days). The school had a 45 minutes lunch break. Some teachers and students residing near the school used to go to their homes for lunch. Some of us who lived a little away from the school stayed back in the school premises, either playing in the school playground or just sitting idle in the shade of the three trees around the school building. One of the peons was illiterate, but very much interested in knowing about various happenings in the state and the country. He would bring the day's newspaper from the headmaster's room and ask me to read out the headlines to him. 

One such school day I had just started reading the newspaper when one of the teachers called out my name. He took me to his house situated close-by. I did not know the purpose of the visit. He gave me a bag with some lunch boxes and a vessel with water (called as "Rail Chambu" in those days, as it was usually taken along on long train journeys). i was advised to take them to the nearby hospital and give it to his wife who was admitted there, and return to the school before the afternoon session commenced. This continued for about a week, when she was discharged from the hospital. 

i returned home from the school in the evening. My father saw me later in the evening and called me. i went to him. 

"What happened in the school today?"
"Nothing special. As on any other given day"
"During lunch time?"
"Narasimha Rao took me home and sent me to the hospital to give lunch boxes to his wife. She is admitted there"
"Did it not interfere with your classes?"
"No. Lunch break allowed sufficient time for it"
"Good. She was admitted yesterday evening. He was worried about managing cooking at home, school timings and delivering food to the hospital. I had told him to ask you for support. She may be in the hospital for a few days more. Give him all possible help. If he wants, in the evenings also"

That was my first experience with assisting people with hospital errands.

*****

Modren life has many advantages. There are many gadgets that have simplified life. A lot of things that were once considered difficult to do are now done by machines rather easily. There are still pockets of poverty and resultant suffering, but living conditions have by and large improved all around us. Developments in science and technology, trade and commerce and communications have helped provide a better living condition for vast majority of population around the world.

Improvements in medical field have rendered better healthcare facilities available now to more and more people, as compared to four or five decades ago. Cost of healthcare and unfair practices by some medical practitioners and institutions are no doubt a serious concern even today. Medical insurance is a very costly affair allover the world. It is also not available to the super elderly people, when actually it is most required. Many senior citizen do not have the umbrella of employer provided health insurance facilities. 

One serious problem that haunts most elderly people is one of proper assistance, care and company in the advanced years. Care is available when they are hospitalised or under rehabilitation cycle. But once they are discharged from these facilities or they are not in acute distress requiring hospitalisation but need support at home, there is a gap in support that needs to be filled. There are many efforts made to bridge this gap in the last decade. 
*****

Demands of remunerative employment take the younger generation family members to different countries and far off places within the country. This results in the elderly family members to live on their own in the advanced years of their lives. It is not always possible for the younger people to keep their parents or elders with them due to income constraints, especially in the early years of their careers. Even when they are able to do so, many issues involved in the areas of obtaining visas or residency status restricts such efforts. The many uncertainties haunting the various sections of people in this area, rendered even more acute due to the recent developments in some countries, is contributing to the problem of lack of support for elderly people at home. 

There are some people in advanced age who are better placed financially, either because they had earned and saved well in their working years, or their children can contribute to their living expenses. They are somewhat in a better position compared to those who are not comfortable on the financial front. Even in their cases, physical support is essential but there is a gap to be filled. 

Visits to medical facilities, immediate care after discharge from hospitalisation and relief from boredom from living alone are basic issues for such elderly people. Door delivery of essentials, cooked food and medicines have somewhat eased the distress, but human company cannot be substituted with anything else. Even during routine visits for check-ups or minor surgical intervention, someone has to drive them to the facility and get them back home as they are advised not to drive after such visits due effects of medication and discomfort due to surgical interventions.

*****

There are many options available to the sick and elderly to address the above problems. Some of them are:
  • Most of the big hospitals now provide "Chaperone" services for a small fee. Patients going along for checkups and minor surgical procedures not requiring hospitalisation can use this services. 
  • Some hospitals also give contact numbers of service providers along with instructions for minor procedures for pickup from home and drop off after completing hospital work. These service providers have trained persons operating vehicles, and can provide emergency aid to patients, assist them from getting in and out of vehicles and move up to the assigned rooms. The vehicles are wheelchair compliant and provide safety, comfort and reliability to patients. 
  • There are NGOs in various communities providing such services. Volunteers can register with such organisations for providing patient services in their spare time. Charges are usually reasonable and very reliable about following timings and safety. 
  • There are also organisations that provide an entire range of services for a fee and companionship for physical support when patients or elderly people require them. 
  • There are many people who provide services on their own, without being affiliated to any organisations. They provide support whenever they can and can be contacted by people known to them. This runs more on person-to-person basis and is usually free of charge.
There may be other sources as well. Enquiries in the community may reveal such support systems.

*****

There are certain messages circulating in WhatsApp University during the past one week, relating to the above issues. There is one video in which a young man is worried and his friend enquires about the reasons for his worry. He states that his aged parents are in India and need help with hospital visits, but he is in a far away country. She advises him to contact a certain organisation that gives such support as well as all other requirements, and sends a bill to her for payments. Charges are reasonable and services reliable.

What about volunteers who do this job in their spare time without expecting financial rewards? They are fine today and can provide support to others. What about their own requirements down the time line? They may themselves require support on a future date. Who will give them such support when they really need it? They help scores of people now, but they themselves may not find anyone to lend a helping hand three decades later!

The concept of "Time Bank" has found answer for this question. There are organisations in various communities that run an efficient system of enrolling volunteers, assigning service requirements to them, and keeping a record of time they spend in helping others. They are given "Time Credits" for each efforts. 

The measurement is purely in terms of hours spent by them in serving others. Their account in the "Time Bank" is credited with "Time Hours" or "Time Dollars" with no expiry period. They can encash it future with assured support from the organisation when they truly need!

*****

An enquiry in your community may provide the details of many organisations that provide such services. If you are young and capable, enroll with them fast. 

What to do if there is no such organisation around you? Well, that is an opportunity for you to start one yourself!

*****

This happens to be my blog post number 500. My sincere and heartfelt thanks to all my family members, friends and readers who have constantly encouraged me with their kind words and regular feedback.

Saturday, September 20, 2025

ಮಾಧವಿಯ ಮಕ್ಕಳು


ಹಿಂದಿನ ಸಂಚಿಕೆಯಲ್ಲಿ "ಯಯಾತಿಯ ಮೊಮ್ಮಕ್ಕಳು" ಎನ್ನುವ ಶೀರ್ಷಿಕೆಯಡಿ ಯಯಾತಿ ಚಕ್ರವರ್ತಿ ಸ್ವರ್ಗದಿಂದ ದೂಡಲ್ಪಟ್ಟು ಭೂಮಿಯ ಮೇಲೆ ಬಿದ್ದದ್ದು, ಚತುರ್ಮುಖ ಬ್ರಹ್ಮದೇವರ ಕರುಣೆಯಿಂದ ನೈಮಿಷಾರಣ್ಯದಲ್ಲಿ ಯಜ್ಞ ನಡೆಸುತ್ತಿದ್ದ ತನ್ನ ನಾಲ್ಕು ದೌಹಿತ್ರರ ನಡುವೆ ಬಂದದ್ದು, ಮುಂತಾದ ಕೆಲವು ವಿಚಾರಗಳನ್ನು ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಆ ನಾಲ್ವರು ಯಯಾತಿಯ ಮಗಳಾದ ಮಾಧವಿಯ ಮಕ್ಕಳೆಂದೂ, ಪ್ರತಿಯೊಬ್ಬರೂ ಬಲು ಪ್ರಚಂಡರೆಂದೂ ತಿಳಿದೆವು. ಅವರ ಹುಟ್ಟಿನ ಸಂದರ್ಭಗಳನ್ನು ಮತ್ತು ಅವರ ವಿಶೇಷ ಸಾಧನೆಗಳ ಬಗ್ಗೆ ಸ್ವಲ್ಪವನ್ನು ತಿಳಿಯಲು ಈಗ ಪ್ರಯತ್ನ ಪಡೋಣ. 

*****

ವಿಶ್ವಾಮಿತ್ರ ಮಹರ್ಷಿಯ ಬಳಿ ಗಾಲವ ಎನ್ನುವ ಋಷಿಕುಮಾರ ಶಿಷ್ಯತ್ವ ವಹಿಸಿ ವಿದ್ಯಾರ್ಜನೆ ಮಾಡಿದರು. ಗುರುಗಳಿಗೆ ಅಚ್ಚುಮೆಚ್ಚಿನ ಶಿಷ್ಯ. ಶಿಷ್ಯನಿಗೆ ಅತ್ಯಂತ ಪ್ರಿಯರಾದ ಗುರುಗಳು. ಕಾಲಕ್ರಮದಲ್ಲಿ ವಿದ್ಯಾಭ್ಯಾಸ ಪೂರ್ಣವಾಯಿತು. ಈಗ ಗಾಲವ ಋಷಿಕುಮಾರ ಮಹರ್ಷಿ ಗಾಲವ ಆಗಿದ್ದಾರೆ. ಲೋಕದ ಕ್ರಮದಂತೆ ಶಿಷ್ಯನು ವಿದ್ಯಾಭ್ಯಾಸ ಮುಗಿದ ನಂತರ ಗುರುಕುಲ ತೊರೆದು ಹೋಗಲೇಬೇಕಲ್ಲ. ಆ ಸಮಯ ಬಂದಿತು. 

"ಗಾಲವ, ನಿನ್ನ ವಿದ್ಯಾಭ್ಯಾಸ ಪೂರ್ತಿಯಾಯಿತು. ನೀನಿನ್ನು ಗುರುಕುಲದಿಂದ ಹೊರಟು, ಸ್ವತಂತ್ರವಾಗಿ ಯೋಗ್ಯ ಜೀವನ ನಡೆಸು"
"ನಿಮ್ಮನ್ನು ಬಿಟ್ಟು ಹೋಗಲು ಮನಸ್ಸಿಲ್ಲ"
"ನನಗೂ ನಿನ್ನನ್ನು ಕಳಿಸಲು ಇಷ್ಟವಿಲ್ಲ. ಆದರೂ ಕಾಲಚಕ್ರಕ್ಕೆ ನಾವೇಲ್ಲರೂ ಬಾಗಬೇಕಲ್ಲವೇ?"
"ತಮ್ಮಾಜ್ಞೆ. ಗುರುದಕ್ಷಿಣೆ ನೀಡುವುದು ಉಳಿದಿದೆ. ನಿಮಗೆ ಏನಾದರೂ ಕೊಡುವ ಯೋಗ್ಯತೆ ನನಗಿಲ್ಲ. ಆದರೂ ಏನು ಕೊಟ್ಟರೆ ತಮಗೆ ಸಮ್ಮತ ಎಂದು ದಯಮಾಡಿ ತಿಳಿಸಬೇಕು"
"ಶಿಷ್ಯವೃತ್ತಿಯ ಪೂರ್ಣ ಕಾಲವೂ ಮನತುಂಬಿ ನನ್ನ ಮತ್ತು ಆಶ್ರಮದ ಸೇವೆ ಮಾಡಿದ್ದೀಯೆ. ಅದೇ ಸಾಕು. ಗುರುದಕ್ಷಿಣೆ ಏನೂ ಬೇಡ"
"ಹಾಗಲ್ಲ. ನನ್ನಿಂದ ಲೋಪ ಆಗಬಾರದು. ಕೃಪೆಮಾಡಿ ಏನಾದರೂ ಹೇಳಿ"
"ಹೇಳಿದಮೇಲೆ ಮುಗಿಯಿತು. ನೀನು ಹೋಗಲು ನನ್ನ ಅಪ್ಪಣೆಯಿದೆ"
"ಮತ್ತೊಮ್ಮೆ ಬೇಡುತ್ತೇನೆ. ದಯಮಾಡಿ ಹೇಳುವವರಾಗಿ"

ಗುರುಗಳಿಗೆ ಈಗ ಕೋಪ ಬಂತು. 

"ನಿನ್ನ ಹಟವೇ ಗೆಲ್ಲಬೇಕೆ? ಸರಿ. ಹಾಗಿದ್ದರೆ ಮೈ ಎಲ್ಲ ಚಂದ್ರಕಿರಣದಂತೆ ಬಿಳಿಯಿರುವ, ಒಂದು ಕಿವಿ ಮಾತ್ರ ಕಪ್ಪಗಿರುವ, ಶ್ರೇಷ್ಠ ತಳಿಯ ಎಂಟು ನೂರು "ಶ್ಯಾಮಲಕರ್ಣ" ಕುದುರೆಗಳನ್ನು ಕೊಡು"
"ಆಗಲಿ ಗುರುಗಳೇ. ಸ್ವಲ್ಪ ಸಮಯದಲ್ಲಿ ತಂದು ಕೊಡುತ್ತೇನೆ"

ಗುರುಗಳ ಅಪ್ಪಣೆ ಪಡೆದು ಗಾಲವರು ಹೊರಟರು. "ಶ್ಯಾಮಲಕರ್ಣ" ಕುದುರೆಗಳು ಬಹಳ ಅಪರೂಪ. ಇಂತಹವನ್ನು ಅಶ್ವಮೇಧ ಯಾಗಗಳಿಗೆ ಮೀಸಲಿಡುತ್ತಾರಂತೆ. ಈಗ ಗಾಲವರಿಗೆ ಅಂತಹ ಎಂಟು ನೂರು ಕುದುರೆಗಳು ಬೇಕು!
*****

ಗಾಲವರು ಯೋಚಿಸಿದರು. ಯಾರನ್ನು ಕೇಳುವುದು? ಆಗ ಯಯಾತಿ ಚಕ್ರವರ್ತಿಯ ಆಳ್ವಿಕೆಯ ಕಾಲ. ಅವನನ್ನೇ ಕೇಳುವುದು ಎಂದು ಪ್ರತಿಷ್ಠಾನ ನಗರಕ್ಕೆ ಬಂದರು. ಯಯಾತಿಯು ಅವರನ್ನು ಬರಗೊಂಡು, ಸತ್ಕರಿಸಿ, ಬಂದ ಕಾರಣವನ್ನು ಕೇಳಿದ. ಗಾಲವರು ಎಂಟು ನೂರು ಶ್ಯಾಮಲಕರ್ಣ ಕುದುರೆಗಳನ್ನು ಕೇಳಿದರು. ಯಯಾತಿಯ ಬಳಿ ಅಂತಹ ಕುದುರೆಗಳಿಲ್ಲ. 

"ಮಹರ್ಷಿಗಳೇ, ನನ್ನ ಬಳಿ ಅಂತಹ ಕುದುರೆಗಳಿಲ್ಲ. ಆದರೆ ನನ್ನ ಬಳಿ ಬಂದಿರುವ ನಿಮ್ಮಂತಹ ಮಾನ್ಯರನ್ನು ಹಾಗೆಯೇ ಕಳಿಸಲಾರೆ. ಒಂದು ಕೆಲಸ ಮಾಡಿ. ನನ್ನ ಮಗಳು "ಮಾಧವಿ" ವಿವಾಹಯೋಗ್ಯಳಿದ್ದಾಳೆ. ಇವಳನ್ನು ನಿಮ್ಮ ನೆರಳಲ್ಲಿ ಕಳಿಸಿಕೊಡುತ್ತೇನೆ. ಇವಳು ಸಾಮಾನ್ಯಳಲ್ಲ. ಅಪೂರ್ವ ಲಾವಣ್ಯವತಿ ಅಷ್ಟೇ ಅಲ್ಲ. ತನ್ನ ಸಾಧನೆಯಿಂದ ವಿಶೇಷ ವರವೊಂದನ್ನು ಪಡೆದುಕೊಂಡಿದ್ದಾಳೆ. ಇವಳು ಒಬ್ಬನನ್ನು ವಿವಾಹವಾಗಿ, ಗರ್ಭವತಿಯಾಗಿ, ಪ್ರಸವವಾದ ನಂತರ ಮತ್ತೆ ಕನ್ಯತ್ವ ಮರಳಿ ಪಡೆಯುತ್ತಾಳೆ. ಮತ್ತೆ ಕನ್ಯೆಯಾಗಿ ವಿವಾಹಯೋಗ್ಯಳಾಗುತ್ತಾಳೆ. ಶ್ಯಾಮಲಕರ್ಣ ಕುದುರೆಗಳಿರುವ ಯಾವುದಾದರೂ ರಾಜನಿಗೆ ಇವಳನ್ನು ಕೊಟ್ಟು ವಿವಾಹ ಮಾಡಿ ನೀವು ಕದುರೆಗಳನ್ನು ಪಡೆಯಿರಿ. ನಿಮ್ಮ ಗುರುಗಳಿಗೆ ದಕ್ಷಿಣೆಯಾಗಿ ಕೊಡಿ"

ಯಾಯಾತಿ ಮಹಾರಾಜನ ಈ ಮಾತಿಗೆ ಮಗಳು ಮಾಧವಿ ಸಮ್ಮತಿಸಿದಳು. ಗಾಲವ ಋಷಿಗಳ ಸಂಗಡ ಹೊರಟಳು. 
*****

ಗಾಲವ, ಮಾಧವಿಯರು ಅಯೋಧ್ಯೆಯ ಅರಸು ಹರ್ಯಶ್ವನ ಬಳಿಗೆ ಹೋದರು. ಅವನ ಬಳಿ ಎರಡು ನೂರು ಶ್ಯಾಮಲಕರ್ಣ ಕುದುರೆಗಳಿದ್ದವು. ಗಾಲವರಿಗೆ ಬೇಕಾದದ್ದು ಎಂಟು ನೂರು ಕುದುರೆಗಳು. ಮಾಧವಿಯು ಹರ್ಯಶ್ವ ಮಹಾರಾಜನಿಗೆ ಹೇಳಿದಳು: "ನನ್ನನ್ನು ಮದುವೆಯಾಗಿ ಎರಡು ನೂರು ಕುದುರೆಗಳನ್ನು ಗಾಲವರಿಗೆ ಕೊಡಿ. ಒಂದು ಮಗು ಜನಿಸಿದ ನಂತರ ನಾನು ಮತ್ತೆ ಕನ್ಯೆಯಾಗಿ ಗಾಲವರೊಂದಿಗೆ ಬೇರೆ ಕುದುರೆಗಳನ್ನು ಆರಸಿಕೊಂಡು ಹೋಗುತ್ತೇನೆ". ಹರ್ಯಶ್ವ ಇದಕ್ಕೆ ಒಪ್ಪಿದ. ಗಾಲವರೂ ಸರಿ ಎಂದರು. 

ವಿವಾಹವಾಯಿತು. ಸ್ವಲ್ಪ ಸಮಯದ ನಂತರ ತೇಜೋವಂತ ಗಂಡು ಮಗುವೊಂದು ಜನಿಸಿತು. ಹರ್ಯಶ್ವನು ಆ ಮಗುವಿಗೆ "ವಸುಮನ" ಎಂದು ಹೆಸರಿಟ್ಟನು. ಆಗಿದ್ದ ಒಪ್ಪಂದದಂತೆ ಮಾಧವಿ ಮತ್ತು ಗಾಲವರು ಎರಡು ನೂರು ಕುದುರೆಗಳೊಂದಿಗೆ ಇನ್ನೂ ಬೇಕಾದ ಆರು ನೂರು ಕುದುರುಗಳನ್ನು ಅರಸುತ್ತಾ ಹೊರಟರು. 

ಮುಂದೆ ವಸುಮನ ತಂದೆಯ ನಂತರ ಅಯೋಧ್ಯೆಯ ಮಹಾರಾಜನಾದನು. ಬಹಳ ಪುಣ್ಯ ಸಂಪಾದನೆ ಮಾಡಿ ಜನಾನುರಾಗಿಯಾದ ಆಡಳಿತ ನೀಡಿದನು. ದೇವತೆಗಳು ಅವನ ಧರ್ಮ ಶ್ರದ್ಧೆಗೆ ಮೆಚ್ಚಿ ದಿವ್ಯವಾದ ಮುತ್ತಿನ ರಥ ಉಡುಗೊರೆಯಾಗಿ ಕೊಟ್ಟರು. ರಥ ಬಂದ ಸಮಯದಲ್ಲಿ ಅದನ್ನು ಕಂಡ ನಾರದ ಮಹರ್ಷಿಗಳು ವಸುಮನನಿಗೆ "ರಥ ಬಹಳ ಚೆನ್ನಾಗಿದೆ" ಎಂದರು. ಮರುಮಾತಿಲ್ಲದೇ ವಸುಮನ ಅದನ್ನು ಅವರಿಗೆ ಕೊಟ್ಟುಬಿಟ್ಟನು. 

ದೇವತೆಗಳು ಅವನಿಗೆ ಕೆಲ ಕಾಲಾನಂತರ ಎರಡನೇ ದಿವ್ಯವಾದ ರಥವನ್ನು ಕೊಟ್ಟರು. ಆಗಲೂ ಅದನ್ನು ಕಂಡ ದೊಡ್ಡವರೊಬ್ಬರು ರಥ ಸೊಗಸಾಗಿದೆ ಎಂದರು. ಮರುಮಾತಿಲ್ಲದೇ ಅದನ್ನೂ ಅವರಿಗೇ ಕೊಟ್ಟುಬಿಟ್ಟನು. 

ಮತ್ತೆ ಸ್ವಲ್ಪ ಕಾಲದ ನಂತರ ದೇವತೆಗಳು ಅವನಿಗೆ ಮೂರನೆಯ ವಿಶೇಷವಾದ ರಥವನ್ನು ಕೊಟ್ಟರು. ಅದನ್ನು ತನ್ನ ಉಪಯೋಗಕ್ಕೆ ಎಂದು ಇಟ್ಟುಕೊಂಡನು. 

***** 

ಹರ್ಯಶ್ವನಿಂದ ಬೀಳ್ಕೊಂಡು ಹೊರಟ ಗಾಲವ, ಮಾಧವಿಯರು ನಂತರ ಕಾಶೀರಾಜನಾದ ದಿವೋದಾಸನ ಬಳಿಗೆ ಬಂದರು. ದಿವೋದಾಸನ ಬಳಿಯೂ ಎರಡು ನೂರು ಶ್ಯಾಮಲಕರ್ಣ ಕುದುರೆಗಳಿದ್ದವು. ಮತ್ತೆ ಕುದುರೆಗಳ ಸಂಖ್ಯೆ ಸಾಲದಾಯಿತು. ಹರ್ಯಶ್ವನ ಬಳಿ ಮಾಡಿದ ಒಪ್ಪಂದದ ರೀತಿ ಇಲ್ಲಿಯೂ ನಡೆಯಿತು. ದಿವೋದಾಸ, ಗಾಲವ, ಮಾಧವಿಯರು ಒಪ್ಪಿದರು. 

ವಿವಾಹವಾಯಿತು. ಕೆಲ ಕಾಲಾನಂತರ ಹೊಳೆಯುವಂತಿದ್ದ ಗಂಡು ಮಗು ಹುಟ್ಟಿತು. ದಿವೋದಾಸನು ಆ ಮಗುವಿಗೆ "ಪ್ರದರ್ತನ" ಎಂದು ಹೆಸರಿಟ್ಟನು. ನಾಲ್ಕು ನೂರು ಶ್ಯಾಮಲಕರ್ಣ ಕುದುರೆಗಳೊಂದಿಗೆ ಗಾಲವ, ಮಾಧವಿಯರು ಮತ್ತೆ ನಾಲ್ಕು ನೂರು ಕುದುರೆಗಳಿಗಾಗಿ ಹುಡುಕುತ್ತ ಹೊರಟರು. 

ಪ್ರದರ್ತನನು ತಂದೆಯ ನಂತರ ಕಾಶೀರಾಜನಾಗಿ ಬಹಳ ಪ್ರಭಾವಶಾಲಿ ಅರಸಾದನು. ಅನೇಕ ದಾನ-ಧರ್ಮಗಳನ್ನು ಮಾಡಿ ಪುಣ್ಯ ಸಂಪಾದನೆ ಮಾಡಿದನು. ಒಮ್ಮೆ ಅವನು ಅತಿಥಿಗಳನ್ನು ದೂರದ ಪ್ರದೇಶದಲ್ಲಿ ಎದುರುಗೊಂಡು ತನ್ನ ಅರಮನೆಗೆ ಸತ್ಕಾರಕ್ಕಾಗಿ ಕರೆತಂದನು. ಅವರನ್ನು ಕೂರಿಸಿದ್ದ ರಥಕ್ಕೆ ನಾಲ್ಕು ಕುದುರೆಗಳಿದ್ದವು. ಮಾರ್ಗದಲ್ಲಿ ಒಂದು ಕುದುರೆ ಸತ್ತಿತು. ಮೂರು ಕುದುರೆಗಳಿಂದ ಎಳೆಯುತ್ತ ರಥ ಮುಂದೆ ಸಾಗಿತು. ಹೀಗೆ ಒಂದೊಂದಾಗಿ ಕುದುರೆಗಳು ಸತ್ತು ಕುದುರೆಗಳೇ ಇಲ್ಲವಾದುವು. ಆಗ ಪ್ರದರ್ತನನು ರಥದಿಂದ ಇಳಿದು ತಾನೇ ರಥವನ್ನು ಎಳೆದುಕೊಂಡು ಅರಮನೆ ತಲುಪಿ ಅತಿಥಿಗಳ ಸತ್ಕಾರ ನಡೆಸಿದ. 

ಪ್ರದರ್ತನನ ಯೋಗ್ಯತೆ ಅಂತಹುದು. 
*****

ಇತ್ತ ಕಡೆ ಕಾಶಿಯಿಂದ ಹೊರಟ ಗಾಲವ, ಮಾಧವಿಯರು ಧಾರಾನಗರದ ಭೋಜವಂಶದ ಅರಸು ಔಶೀನರನ ಬಳಿಗೆ ಬಂದರು. ಅವನ ಬಳಿಯೂ ಎರಡು ನೂರು ಶ್ಯಾಮಲಕರ್ಣ ಕುದುರೆಗಳು ಮಾತ್ರ ಇದ್ದವು. ಹಿಂದಿನಂತೆಯೇ ಔಶೀನರ, ಮಾಧವಿ ಮತ್ತು ಗಾಲವರ ನಡುವೆ ಒಪ್ಪಂದ ಆಯಿತು. 

ಔಶೀನರ ಮತ್ತು ಮಾಧವಿಯರ ಮದುವೆ ಆಯಿತು. ಕೆಲ ಸಮಯದ ನಂತರ ತೇಜೋವಂತ ಗಂಡು ಮಗುವೊಂದು ಹುಟ್ಟಿತು. ಔಶೀನರನು ಆ ಮಗುವಿಗೆ "ಶಿಬಿ" ಎಂದು ಹೆಸರಿಟ್ಟನು. ಒಪ್ಪಂದದಂತೆ ಗಾಲವ, ಮಾಧವಿಯರು ಈಗ ಆರು ನೂರು ಶ್ಯಾಮಲಕರ್ಣ ಕುದುರೆಗಳೊಂದಿಗೆ ಹೊರಟರು. 

ಕಾಲಾನಂತರ ಶಿಬಿಯು ಚಕ್ರವರ್ತಿಯಾದನು. ದತ್ತಿ-ದಾನಗಳಲ್ಲಿ ಅವನ ಸಮ ಇನ್ನೊಬ್ಬರಿಲ್ಲ ಎನ್ನುವಂತೆ ರಾಜ್ಯವಾಳಿದನು. ಒಂದು ದಿನ ಅವನು ಆಸ್ಥಾನದಲ್ಲಿ ಕುಳಿತಿದ್ದಾಗ ಒಂದು ಪಾರಿವಾಳ ಹೆದರಿಕೊಂಡು ಹಾರಿ ಬಂದು ಅವನ ಮಡಿಲಿನಲ್ಲಿ ಅವಿತುಕೊಂಡಿತು. ಅದರ ಹಿಂದೆಯೇ ಹಾರಿ ಬಂದ ಗಿಡುಗವೊಂದು ಶಿಬಿಯನ್ನು ಕುರಿತು "ಅದು ನನ್ನ ಆಹಾರ. ಅದನ್ನು ಬಿಡು" ಎಂದು ಕೇಳಿತು. ಶಿಬಿಯು "ಅದು ನನ್ನ ಶರಣು ಬಂದಿದೆ. ಅದನ್ನು ಬಿಡುವುದಿಲ್ಲ. ನಿನಗೆ ಅದರ ಬದಲಾಗಿ ಬೇರೆ ಅಷ್ಟೇ ತೂಕದ ಮಾಂಸವನ್ನು ಕೊಡುತ್ತೇನೆ" ಎಂದನು. ಗಿಡುಗವು "ಯಾವುದೋ ಮಾಂಸವು ನನಗೆ ಆಗುವುದಿಲ್ಲ. ನಿನ್ನ ದೇಹದ ಮಾಂಸ ಆದರೆ ಆಗಬಹುದು" ಎಂದಿತು. 

ತಕ್ಕಡಿಯನ್ನು ತರಿಸಿ, ಒಂದು ಕಡೆ ಪಾರಿವಾಳವನ್ನು ಕೂಡಿಸಿ, ಶಿಬಿಯು ತನ್ನ ತೊಡೆಯ ಮಾಂಸವನ್ನೇ ಕೊಯ್ದು ಇನ್ನೊಂದು ಕಡೆ ಹಾಕುತ್ತಾ ತೂಗಿ ನೋಡಿದನು. ಆಶ್ಚರ್ಯವೆಂದರೆ ಎಷ್ಟು ಮಾಂಸ ಹಾಕಿದರೂ ಪಾರಿವಾಳದ ತೂಕಕ್ಕೆ ಸಮ ಆಗಲಿಲ್ಲ. ಕಡೆಗೆ ತಾನೇ ತಕ್ಕಡಿಯಲ್ಲಿ ಕುಳಿತನು. ಆಗ ತೂಕ ಸಮವಾಯಿತು. 

ಅಗ್ನಿದೇವ ಮತ್ತು ದೇವೇಂದ್ರ ಪ್ರತ್ಯಕ್ಷರಾದರು. ಶಿಬಿಯ ಗುಣಗಳನ್ನು ಪರೀಕ್ಷಿಸಲು ಅಗ್ನಿಯು ಪಾರಿವಾಳವಾಗಿ, ಇಂದ್ರನು ಗಿಡುಗನಾಗಿ ಬಂದಿದ್ದರು. ಶಿಬಿಗೆ ಬಹಳ ಕೀರ್ತಿ ಬಂದಿತು. ಶಿಬಿಯ ಗುಣ ಅಂತಹದ್ದು. 

*****

ಇತ್ತ ಆರು ನೂರು ಶ್ಯಾಮಲಕರ್ಣ ಕುದುರೆಗಳು ಮತ್ತು ಮಾಧವಿಯೊಂದಿಗೆ ಧಾರಾನಗರದಿಂದ ಹೊರಟ ಗಾಲವರು ಗುರು ವಿಶ್ವಾಮಿತ್ರರ ಆಶ್ರಮಕ್ಕೆ ಬಂದರು. ಅವರಿಗೆ ಆರು ನೂರು ಕುದುರೆಗಳನ್ನು ಮತ್ತು ಮಾಧವಿಯನ್ನು ಒಪ್ಪಿಸಿದರು. ಎರಡು ನೂರು ಕುದುರೆಗಳ ಬದಲಾಗಿ ಮಾಧವಿಯನ್ನು ವಿವಾಹವಾಗಿ ಗುರುದಕ್ಷಿಣೆ ಪೂರ್ಣವಾದಂತೆ ಹರಸುವಂತೆ ಕೇಳಿಕೊಂಡರು. 

ವಿಶ್ವಾಮಿತ್ರರು ಒಪ್ಪಿದರು. ಅವರ ಮತ್ತು ಮಾಧವಿಯ ಮದುವೆಯಾಯಿತು. ಗಾಲವರ ಕೆಲಸ ಪೂರ್ತಿಯಾಗಿ ಅವರು ಮಾಧವಿಗೆ ಕೃತಜ್ಞತೆ ಸಲ್ಲಿಸಿ ಹೊರಟು ಹೋದರು. 

ಮುಂದೆ ಕೆಲಕಾಲದಲ್ಲಿ ಈ ದಂಪತಿಗಳಿಗೆ ತೇಜಸ್ವಿ ಗಂಡು ಮಗು ಹುಟ್ಟಿತು. ಅವನಿಗೆ "ಅಷ್ಟಕ" ಎಂದು ಹೆಸರಿಟ್ಟರು. ಅವನು ದೊಡ್ಡವನಾಗಿ ಮಹಾ ತಪಸ್ವಿಯಾಗಿ ಅನೇಕ ಪುಣ್ಯ ಸಂಪಾದನೆ ಮಾಡಿದನು. 

*****

ಅಷ್ಟಕ ಹುಟ್ಟಿದ ಮೇಲೆ ಮಾಧವಿಯು ತಂದೆಯಾದ ಯಯಾತಿಯ ಬಳಿಗೆ ಬಂದಳು. ಆಗ ಯಯಾತಿಯು ಅವಳಿಗೆ ವಿವಾಹಕ್ಕಾಗಿ ಸ್ವಯಂವರವೊಂದನ್ನು ಏರ್ಪಡಿಸಿದ. ಮೊದಲು ಅವಳನ್ನು ಮದುವೆಯಾಗಿದ್ದ ಮಹಾರಾಜರುಗಳನ್ನು ಸೇರಿ ಅನೇಕ ಪ್ರಭಾವಿಗಳು ಅವಳನ್ನು ಕೈಹಿಡಿಯಲು ಕಾತುರರಾಗಿದ್ದರು. ಆದರೆ ಈಗ ಮಾಧವಿಗೆ ವಿವಾಹ ಬೇಡವಾಗಿತ್ತು. ಎಲ್ಲರನ್ನೂ ನಿರಾಕರಿಸಿ, ತಂದೆಯ ಒಪ್ಪಿಗೆ ಪಡೆದು ತಪಸ್ವಿನಿಯಾದಳು. ಕಾಡಿನಲ್ಲಿ ಜಿಂಕೆಗಳಂತೆ ಜೀವನ ನಡೆಸುತ್ತ, ಹುಲ್ಲನ್ನೇ ಆಹಾರವಾಗಿ ಸೇವಿಸುತ್ತಾ ಬಹಳ ಕಾಲ ತಪಸ್ಸು ಮಾಡಿದಳು. ಹೇರಳವಾದ ಪುಣ್ಯಾರಾಶಿಯನ್ನೇ ಸಂಪಾದಿಸಿದಳು. 

ತನ್ನ ನಾಲ್ವರು ಮಕ್ಕಳು ನೈಮಿಷಾರಣ್ಯದಲ್ಲಿ ಯಜ್ಞ ನಡೆಸುತ್ತಿದ್ದ ಸ್ಥಳಕ್ಕೆ, ತಂದೆಯಾದ ಯಯಾತಿಯು ಸ್ವರ್ಗದಿಂದ ಹೊರಬಂದು ಸೇರಿದ ಸಮಯಕ್ಕೆ, ಮಾಧವಿಯೂ ಬಂದಳು. ಅವಳೂ ತನ್ನ ಪುಣ್ಯದಲ್ಲಿ ತಂದೆಗೆ ಪಾಲನ್ನು ನೀಡಿದಳು. ಯಯಾತಿಯು ಮಗಳು ಮಾಧವಿ ಮತ್ತು ದೌಹಿತ್ರರ ಪ್ರೀತಿಗೆ ಕಟ್ಟುಬಿದ್ದು ಇಷ್ಟವಿಲ್ಲದಿದ್ದರೂ ಆ ಪುಣ್ಯಾರಾಶಿಯನ್ನು ಪಡೆದು ಮತ್ತೆ ಸ್ವರ್ಗದಲ್ಲಿ ತನ್ನ ಯೋಗ್ಯ ಸ್ಥಳವನ್ನು ಪಡೆದುಕೊಂಡ. 

*****

ಯಯಾತಿ, ಮಾಧವಿ ಮತ್ತು ಅವಳ ನಾಲ್ಕು ಜನ ಮಕ್ಕಳ ಪ್ರಸಂಗ ಅಧ್ಭುತವಾಗಿದೆ. ಮಾಧವಿಯ ತಾಯಿ ಯಾರು ಎನ್ನುವುದರ ಮಾಹಿತಿ ಸರಿಯಾಗಿ ಸಿಗುವುದಿಲ್ಲ. ಆದರೆ ಮಾಧವಿಯು ತನ್ನ ಬಾಳಿನುದ್ದಕ್ಕೂ ನಡೆದುಕೊಂಡ ರೀತಿ ಅಚ್ಚರಿ ಮೂಡಿಸುತ್ತದೆ. ಯಯಾತಿಯ ದಾನಪರತ್ವ, ಮಾಧವಿಯ ತ್ಯಾಗ ಮತ್ತು ಅವಳ ಮಕ್ಕಳಾದ ನಾಲ್ವರು ಸಹೋದರರ ಯೋಗ್ಯತೆ ಬಹಳ ದೊಡ್ಡದು. ಇದು ಸತ್ಯವಿರಬಹುದು ಅಥವಾ ಕಥೆಯೇ ಆಗಿರಬಹುದು. ನಂಬುವುದೂ ಬಿಡುವುದೂ ಅವರವರಿಗೆ ಸೇರಿದ ವಿಚಾರ. ಕೇವಲ ಕಥೆ ಎಂದುಕೊಂಡರೂ ಅದೆಂಥ ಹರವು; ಎಂತಹ ವಿಸ್ತಾರ! ಕಡೆಗೆ ನೋಡಿದರೆ ಇದು ಮಹಾಭಾರತ ಮತ್ತು ಭಾಗವತಗಳ ಒಂದು ತುಣುಕು ಮಾತ್ರ! ಅವುಗಳಲ್ಲಿ ಇಂತಹ ಅನೇಕ ಪ್ರಸಂಗಗಳು ಸೇರಿಹೋಗಿವೆ. 

ನಾವು ಅಣ್ಣ-ತಮ್ಮಂದಿರಿಗೆ "ಸಹೋದರರು" ಎಂದು ಸುಲಭವಾಗಿ ಹೇಳುತ್ತೇವೆ. ಒಂದೇ ಉದರದಲ್ಲಿ (ಗರ್ಭದಲ್ಲಿ) ಹುಟ್ಟಿದವರು ಸಹೋದರರು. ಅಂದರೆ ಒಂದು ತಾಯಿಯ ಮಕ್ಕಳು. ಆದ್ದರಿಂದ ವಸುಮನ-ಪ್ರದರ್ತನ-ಶಿಬಿ-ಅಷ್ಟಕ ನಾಲ್ಕು ಬೇರೆ ಬೇರೆ ತಂದೆಯರ ಮಕ್ಕಳಾದರೂ ಸಹೋದರರು. ಒಬ್ಬನೇ ತಂದೆಯ, ಆದರೆ ಬೇರೆ ಬೇರೆ ತಾಯಿಯರ ಮಕ್ಕಳು ಅಣ್ಣ-ತಮ್ಮಂದಿರು. ಧರ್ಮರಾಯ-ಭೀಮ-ಅರ್ಜುನ ಸಹೋದರರು. ಹಾಗೆಯೇ, ನಕುಲ-ಸಹದೇವರು ಸಹೋದರರು. ಧರ್ಮರಾಯ-ಭೀಮ-ಅರ್ಜುನ-ನಕುಲ-ಸಹದೇವರು ಅಣ್ಣ-ತಮ್ಮಂದಿರು. ಹೀಗೆ. 

ಸಿಂಧೂನದಿಯ ದಡದಲ್ಲಿ, ಇಂದಿನ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ Sehvan ಎನ್ನುವ ಹೆಸರಿನ ನಗರ ಒಂದಿದೆ. ಪಾಕಿಸ್ತಾನದ ಹೈದರಾಬಾದ್ ನಗರದಿಂದ ಸುಮಾರು 80 ಮೈಲಿಗಳ ದೂರದಲ್ಲಿ. (ಈಗಿನ ತೆಲಂಗಾಣದಲ್ಲಿರುವ ನಮ್ಮ ಹೈದರಾಬಾದ್ ನಗರಕ್ಕೆ ಹಿಂದೆ Hyderabad (Deccan) ಎಂದು ಬರೆಯುತ್ತಿದ್ದು, ಹೇಳುತ್ತಿದ್ದುದು ಇದೇ ಕಾರಣಕ್ಕೆ, ಸ್ವತಂತ್ರಪೂರ್ವದಲ್ಲಿ ಒಂದು ಹೈದರಾಬಾದ್ (ಸಿಂಧ್), ಮತ್ತೊಂದು ಹೈದರಾಬಾದ್ (ದಖನ್) ಎಂದು ಗುರುತಿಸಲು). ಈ Sehvan  ನಗರದ ಹಿಂದಿನ ಹೆಸರು "ಶಿಬಿಸ್ಥಾನ" ಎಂದು. ಶಿಬಿ ಚಕ್ರವರ್ತಿಯ ಹೆಸರಿನಿಂದ ಕಟ್ಟಿದ ಪಟ್ಟಣ ಅದು. ಟರ್ಕಿ ದೇಶದಿಂದ ಬಂದವರ ಧಾಳಿಗೆ ತುತ್ತಾಗಿ ನಂತರ ಷೆವಾನ್ ಎಂದಾಗಿದೆ. 

ತಮಿಳುನಾಡಿನ ತಿರುಚಿನಾಪಳ್ಳಿ ನಗರದಿಂದ ಸುಮಾರು 20 ಮೈಲಿ ದೂರದಲ್ಲಿ ತಿರುವೆಲ್ಲರೈ ಎನ್ನುವ ಸ್ಥಳವೊಂದಿದೆ. ಅಲ್ಲಿ ಪ್ರಸಿದ್ಧವಾದ "ಪುಂಡರೀಕಾಕ್ಷಸ್ವಾಮಿ" ದೇವಾಲಯವೊಂದಿದೆ. ಇದೂ ಶಿಬಿ ಚಕ್ರವರ್ತಿ ಸ್ಥಾಪಿಸಿದ್ದು ಎಂದು ಪ್ರತೀತಿ. 

*****

ಯಯಾತಿ ಚಕ್ರವರ್ತಿಯ ಬಗ್ಗೆ ಅನೇಕ ಅತಿರೇಕದ ಅಭಿಪ್ರಾಯಗಳಿವೆ. ವಾಸ್ತವವಾಗಿ ನಮ್ಮಲ್ಲಿ ಮೂಲ ಗ್ರಂಥಗಳನ್ನು ಸಂಪೂರ್ಣವಾಗಿ ಓದುವ ಅಭ್ಯಾಸವಿಲ್ಲ. ಅಲ್ಲಷ್ಟು-ಇಲ್ಲಷ್ಟು ಓದಿ, ಅವರು ಹೇಳಿದ್ದು- ಇವರು ಹೇಳಿದ್ದು ಕೇಳಿ ನಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವ ಹವ್ಯಾಸವಿದೆ. ಈಗಲೂ ಹಿಂದಿನ ಚಕ್ರವರ್ತಿಗಳ ಹೆಸರುಗಳನ್ನೂ ನೆನೆಸಿಕೊಳ್ಳುವಾಗ ಮಾಂಧಾತ, ನಹುಷ, ಅಂಬರೀಷ, ಯಯಾತಿ, ಯದು ಮುಂತಾದವರು ಎಂದು ಹೇಳುವ ಪರಿಪಾಠ ಉಂಟು. ಸ್ವಲ್ಪವಾದರೂ ದೋಷ ಇಲ್ಲದ ಮನುಷ್ಯ ಎಲ್ಲಿದ್ದಾನೆ? ಅಂದಮಾತ್ರಕ್ಕೆ ಎಲ್ಲೋ ಕಂಡ ಒಂದು ದೋಷವನ್ನೇ ಹಿಗ್ಗಿಸಿ ತೋರಿಸುವುದು ಎಷ್ಟು ಸರಿ? ಜೀವನದಲ್ಲಿ ಹಾದರ ಇದೆ. ಆದರೆ ಹಾದರವೇ ಜೀವನವಲ್ಲ. 

ಈ ವಿಷಯದ ಬಗ್ಗೆ ಹೆಚ್ಚಿನ ಚರ್ಚೆಯನ್ನು ಮುಂದೆ ಎಂದಾದರೂ ಮಾಡೋಣ. 

Friday, September 19, 2025

ಯಯಾತಿಯ ಮೊಮ್ಮಕ್ಕಳು


ಐವತ್ತೈದು ವರುಷಗಳ ಹಿಂದೆ (1971) ಈಶ್ವರಿ ಪ್ರೊಡಕ್ಷನ್ಸ್  ಅವರ "ಕುಲ ಗೌರವ" ಎನ್ನುವ ಹೆಸರಿನ ಕನ್ನಡ ಚಲನಚಿತ್ರವೊಂದು ತೆರೆ ಕಂಡಿತ್ತು. ನಟ ಸಾರ್ವಭೌಮ ದಾಜಕುಮಾರ್ ಮೂರು ಪಾತ್ರಗಳಲ್ಲಿ ಅಭಿನಯಿಸಿದ್ದ ಚಲನಚಿತ್ರ. ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ ಮಾಲೀಕ ಎನ್. ವೀರಾಸ್ವಾಮಿ ಅವರ ಮಗ ರವಿಚಂದ್ರನ್ ಮೊದಲ ಬಾರಿಗೆ ಅದರಲ್ಲಿ ಬಾಲಕಲಾವಿದನಾಗಿ ಅಭಿನಯಿಸಿದ್ದರು. ಮೂರು ತಲೆಮಾರಿನ ಸಂಘರ್ಷವನ್ನು ತೋರಿಸುವ ಕಥೆಯ ಚಿತ್ರವದು. ತಾತ, ಅಪ್ಪ ಮತ್ತು ಮಗ ಅನ್ನುವ ಮೂರು ಪಾತ್ರಗಳು ರಾಜಕುಮಾರ್ ಪಾಲಿಗೆ. 

ತಾತ-ಅಪ್ಪ-ಮಗ ಮತ್ತು ಅಪ್ಪ-ಮಗ-ಮೊಮ್ಮಗ ಎನ್ನುವ ಮೂರು ತಲೆಮಾರುಗಳನ್ನು ಒಟ್ಟಾಗಿ ಸೂಚಿಸುವ ಪದಪ್ರಯೋಗವನ್ನು ನಾವು ಆಗಾಗ್ಗೆ ಕೇಳಬಹುದು. ಅನೇಕ ತಂದೆ-ತಾಯಿಯರಿಗೆ ಹಿಂದೆಲ್ಲ ಅನೇಕ ಮಕ್ಕಳಿರುತ್ತಿದ್ದರು. (ಈಗ ಇದ್ದರೆ ಒಂದೋ ಅಥವಾ ಎರಡೋ ಇರಬಹುದು). ಹೀಗೆ ಇರುತ್ತಿದ್ದ ಅನೇಕ ಮಕ್ಕಳಲ್ಲಿ ಕೆಲವು ಗಂಡು; ಕೆಲವು ಹೆಣ್ಣು. ಗಂಡು ಸಂತಾನಕ್ಕೆ "ಮಗ" ಎಂದೂ ಹೆಣ್ಣು ಸಂತಾನಕ್ಕೆ "ಮಗಳು" ಎಂದೂ ಹೇಳುವುದು. ಈಗಲೂ ಹಾಗೆಯೇ ನಡೆಯುತ್ತಿದೆ. ಎಲ್ಲರನ್ನೂ ಸೇರಿಸಿ ಒಟ್ಟಾಗಿ ನಿರ್ದೇಶಿಸುವಾಗ ಅದು "ಮಕ್ಕಳು" ಎಂದಾಗುತ್ತದೆ. ಇದೇ ರೀತಿ ಮಕ್ಕಳ ಮಕ್ಕಳನ್ನು "ಮೊಮ್ಮಕ್ಕಳು" ಎಂದು ಹೇಳುವುದು. ಈಗಲೂ ಇದು ಹೀಗೆಯೇ ಇದೆ. 

ಮೊಮ್ಮಕ್ಕಳು ಅವರ ತಂದೆ-ತಾಯಿಯರ ತಂದೆ-ತಾಯಿಯರನ್ನು ಏನೆಂದು ಕರೆಯಬೇಕು? ಸಾಮಾನ್ಯವಾಗಿ ನಾವು ಕೇಳುವ ಪದ "ತಾತ" ಮತ್ತು "ಅಜ್ಜಿ" ಎಂದು. ಕೆಲವೊಮ್ಮೆ "ಅಜ್ಜ" ಮತ್ತು "ಅಜ್ಜಿ" ಎಂದು ಹೇಳಬಹುದು. ನಾವು ಚಿಕ್ಕವರಿದ್ದಾಗ ತಂದೆಯ ತಂದೆಯನ್ನು "ತಾತ" ಎಂದೂ, ತಾಯಿಯ ತಂದೆಯನ್ನು "ಅಜ್ಜ" ಎಂದೂ ಕರೆಯುತ್ತಿದ್ದೆವು. ಆದರೆ ಎರಡೂ ಕಡೆಯವರು ಅಜ್ಜಿಯರು. ತೆಲುಗಿನಲ್ಲಿ ತಾಯಿಯ ತಾಯಿಯನ್ನು "ಅಮ್ಮಮ್ಮ" ಅನ್ನುತ್ತಾರೆ. ಈಗಲೂ ಪ್ರಾಯಶಃ ಕರಾವಳಿಯಲ್ಲಿ ಮತ್ತು ಮಲೆನಾಡಿನಲ್ಲಿ "ಅಜ್ಜ" ಅನ್ನುವ ಪದ ಹೆಚ್ಚು ಬಳಕೆಯಲ್ಲಿದೆ ಅನ್ನಿಸುತ್ತದೆ. ಈಗಂತೂ ತಾತ, ಅಜ್ಜ, ಅಜ್ಜಿ ಎಲ್ಲರೂ ಮರೆಯಾಗಿ "ಗ್ರಾಂಡ್ ಪಾ" ಮತ್ತು "ಗ್ರಾಂಡ್ ಮಾ" ಬಂದಿದ್ದಾರೆ. 

ಸಂಸ್ಕೃತದಲ್ಲಿ ಮಗನಿಗೆ ಮತ್ತು ಮಗಳಿಗೆ ನಿರ್ದೇಶಿಸಲು ಅನೇಕ ಪದಗಳು ಇವೆ. ಮಗನಿಗೆ "ಪುತ್ರ" ಎನ್ನುವ ಪದ ಹೆಚ್ಚು ಬಳಕೆಯಲ್ಲುಂಟು. ಹಾಗೆಯೇ ಮಗಳಿಗೆ "ಪುತ್ರೀ" ಎಂದುಂಟು. "ಸುತ" ಮತ್ತು "ಸುತಾ" ಎಂದೂ ಉಂಟು. ಹಾಗೆಯೇ ಉಪಯೋಗಿಸುವ ಅನೇಕ ಪದಗಳಲ್ಲಿ ಮಗಳಿಗೆ "ದುಹಿತಾ" ಎಂದು ಒಂದು ಪದ ಉಂಟು. ತಂದೆಯ ತಂದೆಯನ್ನು "ಪಿತಾಮಹ" ಎಂದು ಸಂಬೋಧಿಸುತ್ತಾರೆ. ಕನ್ನಡದಲ್ಲಿಯೂ ಹೀಗುಂಟು. ತಾಯಿಯ ತಂದೆಯನ್ನು "ಮಾತಾಮಹ" ಎನ್ನುತ್ತಾರೆ. ಹೀಗೆಯೇ ಮಗನ ಮಗನಾದ  ಮೊಮ್ಮಗನಿಗೆ "ಪೌತ್ರ" ಎಂದೂ, ಮಗಳ ಮಗನಾದ ಮೊಮ್ಮಗನಿಗೆ "ದೌಹಿತ್ರ" (ದುಹಿತಾಳ ಮಗ) ಎಂದೂ ಹೇಳುವುದು.  

ಈ ಪಿತಾಮಹ, ಮಾತಾಮಹ, ಪೌತ್ರ ಮತ್ತು ದೌಹಿತ್ರ ಎನ್ನುವ ಪದಗಳಿಂದ ಸಂಬಂಧಗಳು ಖಚಿತವಾಗಿ ತಿಳಿಯುತ್ತವೆ. ಈ ಸಂಚಿಕೆಯ ಹೆಸರು "ಯಯಾತಿಯ ಮೊಮ್ಮಕ್ಕಳು" ಎಂದು. ಮುಂದೆ "ದೌಹಿತ್ರ" ಎನ್ನುವ ಪದ ಬರುತ್ತದೆ. ಆದ್ದರಿಂದ ಇಷ್ಟು ಪೀಠಿಕೆ. 

*****

ಪರೀಕ್ಷಿತ್ ಮಾಹಾರಾಜನಿಗೆ ಏಳು ದಿನದೊಳಗೆ ಸಾವು ಸಂಭವಿಸುವುದು ಎಂದು ತಿಳಿದಿದೆ. ಸಾಧನೆಯ ಒಂದು ರೀತಿಯಾಗಿ ಶುಕಾಚಾರ್ಯರಿಂದ "ಶ್ರೀಮದ್ಭಾಗವತ" ಕೇಳುತ್ತಿದ್ದಾನೆ. ಎಂಟು ಸ್ಕಂದಗಳು ಮುಗಿದಿವೆ. ಪರೀಕ್ಷಿತನಿಗೆ ತಾನು ತಾಯಿಯ ಗರ್ಭದಲ್ಲಿದ್ದಾಗ ಅಶ್ವತ್ಥಾಮಾಚಾರ್ಯರ  ಬ್ರಹ್ಮಾಸ್ತ್ರದಿಂದ ತನ್ನನ್ನು ಕಾಪಾಡಿದ ಶ್ರೀಕೃಷ್ಣನ ಕಥೆ ಕೇಳಬೇಕೆಂದು ಆಸೆ. ತಾನೂ ಚಂದ್ರವಂಶದವನು. ಶ್ರೀಕೃಷ್ಣನೂ ಚಂದ್ರವಂಶದವನು. ಚಂದ್ರವಂಶದವರ ಕಥೆಯನ್ನು ವಿವರವಾಗಿ ಹೇಳಬೇಕೆಂದು ಶುಕಾಚಾರ್ಯರನ್ನು ಕೇಳುತ್ತಾನೆ. ಶುಕರು ಒಂಭತ್ತನೆಯ ಸ್ಕಂದದಲ್ಲಿ ಚಂದ್ರವಂಶದವರ ವೃತ್ತಾಂತವನ್ನೂ, ನಂತರ ಹತ್ತನೆಯ ಸ್ಕಂದದಲ್ಲಿ ವಿಸ್ತಾರವಾಗಿ ಶ್ರೀಕೃಷ್ಣನ ಕಥೆಯನ್ನೂ ಹೇಳುತ್ತಾರೆ. 

ಹೀಗೆ ಹೇಳುವಾಗ ಯಯಾತಿಯ ಮತ್ತು ಅವನ ಮಕ್ಕಳ, ಮೊಮ್ಮಕ್ಕಳ ಪ್ರಸಂಗಗಳು ಬರುತ್ತವೆ. ಮಹಾಭಾರತದಲ್ಲೂ ಯಯಾತಿಯ, ಅವನ ಸಂತತಿಯ ವಿವರಗಳು ಸಿಕ್ಕುತ್ತವೆ. 

ಚತುರ್ಮುಖ ಬ್ರಹ್ಮನ ಅನೇಕ ಮಕ್ಕಳಲ್ಲಿ ಅತ್ರಿ ಋಷಿಗಳೂ ಒಬ್ಬರು. ಅನಸೂಯ-ಅತ್ರಿಯರ ಮಗ ಚಂದ್ರ. ಚಂದ್ರನ ಮಗ ಬುಧ. ಬುಧ ಮತ್ತು ಇಳಾ ದಂಪತಿಗಳ ಮಗ ಪುರೂರವ. ಪುರೂರವ ಮತ್ತು ಆಯುಷ್ ದಂಪತಿಗಳ ಮಗ ನಹುಷ ಚಕ್ರವರ್ತಿ. ನಹುಷ ಚಕ್ರವತಿಯು ಕೆಲವು ಕಾಲ ದೇವೇಂದ್ರನ ಪದವಿಯನ್ನೂ ಹೊಂದಿದ್ದವನು. 

ನಹುಷನಿಗೆ ಪಿತೃ ದೇವತೆಗಳ ಮಗಳಾದ ವಿರಜಾ ಎನ್ನುವವಳು ಹೆಂಡತಿ. ಇವರ ಮಗನೇ ಯಯಾತಿ. ಯಯಾತಿಗೆ ಶುಕ್ರಾಚಾರ್ಯರ ಮಗಳಾದ ದೇವಯಾನಿ ಮತ್ತು ವೃಷಪರ್ವ ರಾಜನ ಮಗಳಾದ ಶರ್ಮಿಷ್ಠೆ ಪತ್ನಿಯರು. "ರಾಜಾನೋ ಬಹುವಲ್ಲಭಾ:" ಎನ್ನುವಂತೆ ಬೇರೆ ಹೆಂಡತಿಯರೂ ಇದ್ದರು. 

ಯಯಾತಿಗೆ ದೇವಯಾನಿಯಿಂದ ಯದು ಮತ್ತು ತುರ್ವಸು ಎಂದು ಮಕ್ಕಳು. ಈ ಯದು ಮಹಾರಾಜನ ಸಂತತಿಯವರೇ ಮುಂದೆ "ಯಾದವರು" ಎಂದಾದರು. 

ಯಯಾತಿಗೆ ಶರ್ಮಿಷ್ಠೆಯಿಂದ ದೃಹ್ಯು, ಅನುದೃಹ್ಯು ಮತ್ತು ಪುರು ಎಂದು ಮೂವರು ಮಕ್ಕಳು. ಈ ಪುರು ಮಹಾರಾಜನ ಸಂತತಿಯಲ್ಲಿ ಬಂದ ಕುರು ಮಹಾರಾಜನ ಹೆಸರಿನಿಂದ, ಮುಂದೆ ಕೌರವರು ಮತ್ತು ಪಾಂಡವರು ಎಂದಾಯಿತು. 

ಹೀಗೆ ಯಾದವರು, ಕೌರವರು ಮತ್ತು ಪಾಂಡವರು, ಈ ಮೂರೂ ಸಂತತಿಗಳಿಗೆ ಯಯಾತಿಯು ಮೂಲಪುರುಷ. 
*****

ತನ್ನ ಪಿತಾಮಹನಾದ ಪುರೂರವ ಮತ್ತು ತಂದೆಯಾದ ನಹುಷ ಚಕ್ರವರ್ತಿಗಳಂತೆ ಯಯಾತಿ ಸಹ ಬಹಳ ಪ್ರತಾಪಿಯೂ ಮತ್ತು ಧರ್ಮಿಷ್ಟನೂ ಆಗಿದ್ದನು. ಬಹು ಸಂಖ್ಯಾತ ಯಜ್ಞ-ಯಾಗಾದಿಗಳನ್ನು ಮಾಡಿ, ನ್ಯಾಯವಾಗಿ ರಾಜ್ಯಪಾಲನೆ ಮಾಡಿ ಬಹಳ ಪುಣ್ಯವನ್ನು ಸಂಪಾದಿಸಿದ್ದನು. ಕಾಲಕ್ರಮದಲ್ಲಿ ಅವನಿಗೆ ತನ್ನ ಯೋಗ್ಯತೆಗೆ ಅನುಗುಣವಾಗಿ ಸ್ವರ್ಗ ಪ್ರಾಪ್ತಿಯಾಯಿತು. ಅವನಿಗೆ ಸ್ವರ್ಗದಲ್ಲಿ ವಿಶೇಷ ಗೌರವಗಳಿದ್ದವು. ಅನೇಕ ದೇವತೆಗಳು "ಇಂತಹ ಪುಣ್ಯವಂತನ ದರ್ಶನ ಸಿಗುವುದೇ ದುರ್ಲಭ" ಎಂದು ಪ್ರತಿದಿನ ಅವನನ್ನು ನೋಡಿಹೋಗುತ್ತಿದ್ದರಂತೆ!

ಆಗಾಗ ದೇವೇಂದ್ರನು "ಯಯಾತಿ, ನಿನ್ನಂತೆ ಅನೇಕ ಯಜ್ಞ-ಯಾಗಗಳನ್ನು ಮಾಡಿರುವವರು ಭೂಲೋಕದಲ್ಲಿ ಬೇರೆ ಯಾರಾದರೂ ಇದ್ದಾರೆಯೇ?" ಎಂದು ಕೇಳುವನು. ಯಯಾತಿಯು "ಅಯ್ಯೋ, ನನ್ನದೇನು ದೊಡ್ಡದು. ನನಗಿಂತ ಎಷ್ಟೋ ದೊಡ್ಡ ಮಹಾತ್ಮರು ಇರುವರು" ಎನ್ನುವನು. ಹೀಗೆಯೇ ಅನೇಕ ಬಾರಿ ನಡೆಯಿತು. 

ಒಮ್ಮೆ ಯಯಾತಿಗೆ ದೇವೇಂದ್ರನು ಹೀಗೆ ಮತ್ತೆ ಮತ್ತೆ ಕೇಳುವುದರಿಂದ ಅಹಂಕಾರ ಉಂಟಾಯಿತು. ದೇವೇಂದ್ರನು ಮತ್ತೆ ಕೇಳಿದಾಗ "ನನ್ನಷ್ಟು ಮಾಡಿರುವವರು ಯಾರಿದ್ದಾರು? ನಾನೇ ಹೆಚ್ಚು" ಎಂದುಬಿಟ್ಟನು. ದೇವೇಂದ್ರನು ಅವನನ್ನು ಸ್ವರ್ಗದಿಂದ ಕೆಳಗೆ ತಳ್ಳಿಸಿಬಿಟ್ಟನು. 

ಹೀಗೆ ಕೆಳಗೆ ಬೀಳುವಾಗ ಯಯಾತಿಯು ಚತುರ್ಮುಖ ಬ್ರಹ್ಮರನ್ನು ಪ್ರಾರ್ಥಿಸಿದನು. ಅವರ ದರ್ಶನವಾಯಿತು. "ನನಗೆ ಏಕೆ ಈ ಗತಿ ಬಂತು?" ಎಂದು ಕೇಳಿದನು. ಬ್ರಹ್ಮರು "ಸ್ವರ್ಗದಲ್ಲಿ ಅಹಂಕಾರಿಗಳಿಗೆ ಜಾಗ ಇಲ್ಲ. ಆದ್ದರಿಂದ ಹೀಗಾಯಿತು" ಎಂದರು. "ಹೋಗಲಿ. ಈಗ ಬೀಳುತ್ತಿರುವುದಂತೂ ನಿಜ. ನನ್ನನ್ನು ಯಾರಾದರೂ ಯೋಗ್ಯರ ಮಧ್ಯದಲ್ಲಿ ಬೀಳುವಂತೆ ಮಾಡಿ" ಎಂದು ಕೇಳಿಕೊಂಡನು. ಅವರು "ಆಗಲಿ" ಎಂದರು. 

*****

ನೈಮಿಷಾರಣ್ಯದಲ್ಲಿ (ಈಗಿನ ಉತ್ತರಪ್ರದೇಶದಲ್ಲಿ ಇದೆ) ನಾಲ್ವರು ಮಹಾ ತೇಜಸ್ವಿಗಳಾದ ಅಣ್ಣ-ತಮ್ಮಂದಿರು ಒಂದು ಯಜ್ಞವನ್ನು ನಡೆಸುತ್ತಿದ್ದರು. ಸ್ವರ್ಗದಿಂದ ಕೆಳಗೆ ಬೀಳುತ್ತಿದ್ದ ಯಯಾತಿಯು ಚತುರ್ಮುಖ ಬ್ರಹ್ಮರ ಕರುಣೆಯಿಂದ ಆ ನಾಲ್ವರ ಮಧ್ಯದಲ್ಲಿ ಬಿದ್ದನು. ಅಣ್ಣ-ತಮ್ಮಂದಿರು ಅವನನ್ನು ಉಪಚರಿಸಿ, ಮಾತನಾಡಿಸಿದರು. 

"ಮಹಾತ್ಮರೇ, ನೀವು ಯಾರು?" 
"ನಾನು ಯಯಾತಿ. ಚಂದ್ರವಂಶದ ಚಕ್ರವರ್ತಿಯಾಗಿದ್ದವನು"
"ಹೀಗೆ ಬೀಳಲು ಕಾರಣವೇನು?"
"ನಾನು ಸ್ವರ್ಗದಲ್ಲಿದ್ದೆ. ಕಾರಣಾಂತರದಿಂದ ಪುಣ್ಯಕ್ಷಯವಾಯಿತು"
"ನಮ್ಮ ಪುಣ್ಯಗಳನ್ನು ನಿಮಗೆ ಧಾರೆ ಎರೆಯುತ್ತೇವೆ. ತಾವು ಮತ್ತೆ ಅಲ್ಲಿಗೆ ಹೋಗಿರಿ"
"ನಾನು ಕ್ಷತ್ರಿಯ. ದಾನ ಕೊಡಬಹುದೇ ಹೊರತು ದಾನ ತೆಗೆದುಕೊಳ್ಳುವಂತಿಲ್ಲ"
"ನಮ್ಮಿಂದ ತೆಗೆದುಕೊಳ್ಳಬಹುದು"
"ಅದು ಹೇಗೆ?"
"ನಾವು ಬೇರೆಯವರಲ್ಲ. ನಿಮ್ಮ ದೌಹಿತ್ರರು. ಆದ್ದರಿಂದ ಇದು ಆಗಬಹುದು"
"ದೌಹಿತ್ರರೇ? ನೀವು ಯಾರು?"
"ನಾವು ನಾಲ್ವರೂ ನಿನ್ನ ಮಗಳು ಮಾಧವಿ ಪಡೆದ ಮಕ್ಕಳು. ನೀನು ನಮ್ಮ ಮಾತಾಮಹ! ನೀನು ನಮ್ಮ ನಡುವೆ ಬಂದದ್ದು ನಮ್ಮ ಭಾಗ್ಯ"
*****

ಮಾಧವಿಯ ನಾಲ್ಕು ಮಕ್ಕಳೂ ಪ್ರಚಂಡರು. ವಿಶೇಷ ಸಾಧನೆಗಳನ್ನು ಮಾಡಿ ಬಹಳ ಪುಣ್ಯ ಸಂಪಾದನೆ ಮಾಡಿದವರು. 

ಸಂಚಿಕೆ ದೀರ್ಘವಾಯಿತು. ಮಾಧವಿಯ ಮಕ್ಕಳ ಸಂಗತಿಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Wednesday, September 17, 2025

ಒಂದು ದೇಹದಲ್ಲಿ ಅನೇಕ ದೇಹಗಳು!

ಶ್ರೀಮದ್ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ವಿವರಿಸಿರುವ ಬಹಳ ವಿಷಯಗಳು ಅನೇಕ ಸಾಂದರ್ಭಿಕ  ಕಾರಣಗಳಿಂದ ಮತ್ತೆ ಮತ್ತೆ ನಮ್ಮ ಗಮನಕ್ಕೆ ಬರುತ್ತಿರುತ್ತವೆ. ಹುಟ್ಟು ಮತ್ತು ಸಾವು, ಅವುಗಳ ತಪ್ಪಿಸಲಾಗದ ಚಕ್ರ, ಅವುಗಳ ವಿಷಯದಲ್ಲಿ ಅತಿಯಾಗಿ ದುಃಖಿಸಬಾರದೆಂಬುದು, ಇವುಗಳ ಚರ್ಚೆ ಬೇರೆ ಬೇರೆ ಸಂವಾದಗಳಲ್ಲಿ ಆಗಾಗ ನಡೆಯುತ್ತಿರುತ್ತದೆ. ಇದೇ ಭಗವದ್ಗೀತೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಹೇಳಿರುವ ಇನ್ನೊಂದು ವಿಷಯವು ಹೆಚ್ಚಾಗಿ ಚರ್ಚಿತವಾಗುವುದಿಲ್ಲ.

ಕಳೆದ ತಿಂಗಳು ಹಿಂದಿನ ಒಂದು ಸಂಚಿಕೆಯಲ್ಲಿ, "ಸಾವು ಎದುರಲ್ಲಿ ಬಂದು ನಿಂತಾಗ" ಎನ್ನುವ ಶೀರ್ಷಿಕೆಯಡಿಯಲ್ಲಿ, ಈ ಸಂಬಂಧದ ಕೆಲವು ಪದರಗಳನ್ನು ಚರ್ಚಿಸಿದ್ದೆವು. (ಇಲ್ಲಿ ಕ್ಲಿಕ್ ಮಾಡಿ ಈ ಸಂಚಿಕೆಯನ್ನು ಓದಬಹುದು).  

ಸಾವಿನ ಕಾಲದಲ್ಲಿ ಜೀವನು ಈಗ ಪಡೆದಿರುವ ದೇಹವು ಕೊನೆಗೊಂಡು ಮತ್ತೆ ಮುಂದೆ ಬೇರೊಂದು ದೇಹ ಪಡೆಯುವ ಜನನ-ಮರಣ ಚಕ್ರದ ಜೊತೆಯಲ್ಲಿಯೇ, ಈಗಿನ ಒಂದು ಜೀವಿತಕಾಲದಲ್ಲಿಯೇ ಜೀವಿಯು ಪಡೆದ ದೇಹವೊಂದರಲ್ಲಿ ಅನೇಕ ದೇಹಗಳು ಅಡಗಿರುವ ಗುಟ್ಟನ್ನು ಶ್ರೀಕೃಷ್ಣನು ಹೇಳಿದ್ದಾನೆ. ಇದೇನೂ ಅಂತಹ ಗುಟ್ಟಿನ ವಿಷಯವಲ್ಲ. ಅದು ಎಲ್ಲರಿಗೂ ಚೆನ್ನಾಗಿ ತಿಳಿದಿದ್ದರೂ, ಅದರ ಸುಪ್ತವಾಗಿ ಉಳಿಯುವ ಗುಣದಿಂದ,  ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. 

*****

ಯಾವುದೇ ಪ್ರಾಣಿಯಿರಲಿ, ಅದರಲ್ಲಿ ವಿಶೇಷವಾಗಿ ಮನುಷ್ಯ, ಹುಟ್ಟುವಾಗ ಇದ್ದ ದೇಹಕ್ಕೂ ಜೀವನದ ಕೊನೆಯ ಕಾಲದಲ್ಲಿ ಇರುವ ದೇಹಕ್ಕೂ ಅಜ-ಗಜಾಂತರ (ಆಡು-ಆನೆ) ವ್ಯತ್ಯಾಸ. ತಾಯಿಯ ಗರ್ಭದಿಂದ ಮಗು ಅಥವಾ ಪ್ರಾಣಿಯ ಮರಿ ಹೊರಬಂದಾಗ, ಅಥವಾ ಮೊಟ್ಟೆಯೊಡೆದು ಮರಿ ಹೊರಗೆ ಬಂದಾಗ ಅದರ ಗಾತ್ರ ಬಹಳ ಸಣ್ಣದಿರುತ್ತದೆ. ನಂತರ ಕಾಲಕ್ರಮದಲ್ಲಿ ಅದರ ಗಾತ್ರ ದೊಡ್ಡದಾಗುತ್ತ ಹೋಗುತ್ತದೆ. ಇನ್ನೂ ಮುಂದೆ ಅದು ಮೊದಲಿನಂತೆ ಪೂರ್ತಿ ಚಿಕ್ಕದಾಗದೇ ಇದ್ದರೂ ಸಾಮಾನ್ಯವಾಗಿ ಕುಗ್ಗಿ ಅಥವಾ ಕೃಶವಾಗಿ ಹೋಗುತ್ತದೆ. ಇದು ಎಲ್ಲರಿಗೂ ದಿನಂಪ್ರತಿ ಕಣ್ಣಿಗೆ ಕಾಣುವ ವಾಸ್ತವ ಸಂಗತಿ. 

ಏಕೆ ಹೀಗೆ? ಇದು ಪ್ರಸವ ಅಥವಾ ಮೊಟ್ಟೆಯೊಡೆದು ಮರಿ ಸುಖವಾಗಿ ಹೊರಬರಲು ಪ್ರಕೃತಿ ಮಾಡಿರುವ ಒಂದು ಉಪಾಯ. ಇದರಿಂದ ಮರಿ ಮತ್ತು ತಾಯಿ ಇಬ್ಬರಿಗೂ ಕ್ಷೇಮ. ಒಂದು ಆನೆಯ ಮರಿ ಆನೆಯ ಗಾತ್ರದ್ದೇ ಆಗಿ ಹುಟ್ಟುವ ಪರಿಯನ್ನು ನೆನೆಸಿಕೊಂಡರೆ ಮೊದಲು ನಗು ಬರುತ್ತದೆ. ಇದೇನು, ಇಂತಹ ಹಾಸ್ಯಾಸ್ಪದ ವಿಷಯ ಎನಿಸುತ್ತದೆ. ಕೆಲವೊಮ್ಮೆ ನಾಕೂವರೆ ಅಡಿ ಎತ್ತರವಿರುವ ತಾಯಿ ಮತ್ತು ಆರೂವರೆ ಅಡಿ ಎತ್ತರ ಇರುವ ಮಗನನ್ನು ಜೊತೆಯಾಗಿ ನೋಡಿದಾಗ ಇದರ ವಾಸ್ತವತೆ ಅರಿವಾಗುತ್ತದೆ. 

ಶಿಶುಪಾಲನೆ ಅನೇಕ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಒಂದು ದೊಡ್ಡ ಕೆಲಸವೇ. ಕೆಲವು ಪ್ರಾಣಿಗಳಲ್ಲಿ ಜನನವಾದ ನಂತರ ತಾಯಿ ಮತ್ತು ಮಗುವಿಗೆ ಯಾವುದೇ ಸಂಬಂಧವಿರುವುದಿಲ್ಲ. ಇನ್ನು ಕೆಲವು ಪ್ರಾಣಿಗಳಲ್ಲಿ ಸ್ವಲ್ಪ ಕಾಲ ಮರಿ ತಾಯಿಗೆ ಅಂಟಿಕೊಂಡಂತೆ ಇರುತ್ತದೆ. ಮನುಷ್ಯರಲ್ಲಿ ಪ್ರಾಯಶಃ ಇದರ ಅವಧಿ ಅತ್ಯಂತ ಹೆಚ್ಚು. ಮಗು ಎಷ್ಟು ದೊಡ್ಡದಾದರೂ ತಾಯಿ-ಮಗ ಅಥವಾ ತಾಯಿ-ಮಗಳ ಸಂಬಂಧ ಕೊಂಚವೂ ಮಾಸುವುದಿಲ್ಲ. 

ಸುಮಾರು ಇಪ್ಪತ್ತು ವರುಷಗಳ ಹಿಂದಿನ ಮಾತು. ನಮ್ಮ ಹಿರಿಯ ಸ್ನೇಹಿತರೊಬ್ಬರಿಗೆ ಎಂಭತ್ತರ ವಯಸ್ಸು. ಅವರ ನಿವೃತ್ತಿಯ ನಂತರ ಪರಸ್ಪರ ಈಮೈಲ್ ಮುಖಾಂತರ ಸಂಪರ್ಕ ಇದ್ದರೂ ಮುಖಾಮುಖಿ ಆಗಿರಲಿಲ್ಲ. ಅಪರೂಪಕ್ಕೆ ಅಮೆರಿಕೆಯ ಸಿಯಾಟಲ್ ನಗರದಲ್ಲಿ ಸಿಕ್ಕರು. ಅದು ಒಂದು ಅವಸರದ ಭೇಟಿ ಆಗಿತ್ತು. ಸಿಕ್ಕಾಗ ಬಹಳ ಉಲ್ಲಸಿತರಾಗಿದ್ದರು. "ಏನು, ಇಷ್ಟು ಸಂತೋಷದಲ್ಲಿದ್ದೀರಿ?" ಎಂದೆ. "ಹೌದಪ್ಪ, ಬಹಳ ಆನಂದದ ದಿನ. ನಾಳೆ ಬೆಂಗಳೂರು ಮಾರ್ಗವಾಗಿ ನನ್ನ ದಕ್ಷಿಣ ಕನ್ನಡದ ಹಳ್ಳಿಗೆ ಹೋಗುತ್ತಿದ್ದೇನೆ. ಅಲ್ಲಿ ನನ್ನ ತಾಯಿಯಿದ್ದಾಳೆ. ಅವಳನ್ನು ನೋಡಿ ಹತ್ತು ವರುಷವಾಗಿದೆ. ಕೆಲವು ತಿಂಗಳಲ್ಲಿ ಅವಳಿಗೆ ಶತಮಾನೋತ್ಸವ. ಕುಟುಂಬದ ಎಲ್ಲರೂ ಅಲ್ಲಿ ಸೇರುತ್ತಾರೆ. ಅವಳನ್ನು ನೋಡುವುದೇ ಒಂದು ಪುಳಕ. ಅದರಿಂದ ಈ ಸಂತೋಷ" ಅಂದರು. ಇವರಿಗೆ ಸ್ವಲ್ಪದರಲ್ಲಿ ಸಹಸ್ರ ಪೂರ್ಣ ಚಂದ್ರ ದರ್ಶನ! ಆಕೆಗೆ ಅದರ ಜೊತೆಯಲ್ಲಿ ಶತಮಾನೋತ್ಸವ! ತಾಯಿ-ಮಕ್ಕಳ ಸಂಬಂಧ ಅಂತಹುದು. 

*****

ಮಗು ಪುಟ್ಟದಿರುವಾಗ ಬಲು ಚೆಂದ. ಸ್ವಲ್ಪ ದೊಡ್ಡದಾಗಿ ಓಡಾಡಲು ಪ್ರಾರಂಭಿಸಿದರೆ ಎಲ್ಲರಿಗೂ ಸಂತಸ. ಹುಟ್ಟಿದ ದೇಹ ಈಗ ಹೋಗಿದೆ. ಬೇರೆ ದೇಹ ಬಂದಿದೆ. ಒಂದು ಕಡೆ ಬಿದ್ದುಕೊಂಡಿರುವ ಕೂಸೆಲ್ಲಿ? ಈಗ ಹಿಡಿಯಲು ಕಷ್ಟಪಡುವ ಈ ಮಗುವೆಲ್ಲಿ? ಆದರೆ ನಮ್ಮ ಮಗುವಿನ ಹಳೆಯ ದೇಹ ಹೋಯಿತಲ್ಲಾ ಎಂದು ಯಾರೂ ಗೋಳಾಡುವುದಿಲ್ಲ. ಒಮ್ಮೆಮ್ಮೆ "ಮಗು ಬೆಳೆಯಿತು. ಮೊದಲಿನಂತೆ ಕೈಗೆ ಸಿಗುವುದಿಲ್ಲ" ಎಂದು ಸ್ವಲ್ಪ ಬೇಜಾರಾಗಬಹುದು. ಆದರೆ ಅದರಿಂದ ದುಃಖವಿಲ್ಲ. ಮುಂದೆ ಯುವಕನಾದಾಗ ಅಥವಾ ಯುವತಿಯಾದಾಗ ಬಾಲಕ ಅಥವಾ ಬಾಲಕಿಯ ದೇಹ ಹೋಗಿದೆ. ಬೇರೆ ದೇಹ ಬಂದಿದೆ. ಹಳೆಯ ದೇಹ ಹೋಯಿತು ಎಂದು ದುಃಖವಿಲ್ಲ. ಹೊಸತು ಬಂದಿತು ಎಂದು ಉತ್ಸಾಹ. ವಿವಾಹ ಮಾಡುವ ಚಿಂತೆ. ನಂತರ ಮುಪ್ಪಿನಲ್ಲಂತೂ ಸರಿಯೇ ಸರಿ. ಬೇರೆ ದೇಹವಾಗಿರುವುದು ಕಣ್ಣು ಮುಚ್ಚಿಕೊಂಡವರಿಗೂ ಕಾಣುವುದು. 

ಹೀಗೆ ಪ್ರತಿ ಹಂತದಲ್ಲೂ ಹೊಸ ದೇಹವೇ ಬಂದಿರುತ್ತದೆ. ಹಿಂದೆ ಕನ್ನಡದಲ್ಲಿ "ಕೊರವಂಜಿ' ಎಂದೊಂದು ಹಾಸ್ಯಪತ್ರಿಕೆ ಬರುತ್ತಿತ್ತು. ಅದರಲ್ಲಿ ಒಂದು ನಗೆಹನಿ. ತಾಯಿಯು ನಾಲ್ಕೈದು ವರುಷದ ಮಗನ ಜೊತೆ ತನ್ನ ಹದಿನೈದು ವಷಗಳ ಹಿಂದಿನ ಮದುವೆಯ ಫೋಟೋ ಆಲ್ಬಮ್ ನೋಡುತ್ತಿದ್ದಾಳೆ. ಆರತಕ್ಷತೆಯ ಸುಂದರ ಫೋಟೋ. ಮಗುವಿಗೆ ತಾಯಿಯ ಗುರುತು ಥಟ್ಟೆ೦ದು ಸಿಕ್ಕಿತು. ಅವಳ ಪಕ್ಕದಲ್ಲಿದ್ದ ಗುಂಗುರು ಕೂದಲಿನ ಸುಂದರ ವ್ಯಕ್ತಿಯ ಗುರುತು ಸಿಗಲಿಲ್ಲ. "ಅಮ್ಮ, ಇವನು ಯಾರು?" ಅಂದಿತು ಮಗು. "ಅಯ್ಯೋ ಮರೀ, ಗೊತ್ತಾಗಲಿಲ್ಲವೇ? ಇದು ನಿಮ್ಮಪ್ಪ ಕಾಣೋ" ಅಂದಳು. ತಕ್ಷಣ ಮಗು, "ಹಾಗಿದ್ದರೆ ನಮ್ಮ ಜೊತೆಯಲ್ಲಿದ್ದಾನಲ್ಲ ಬೋಡಮುಂಡ, ಅವನು ಯಾರು?" ಅಂದಿತು. (ಭಾಷೆಗೆ ಕ್ಷಮೆ ಇರಲಿ. ಕೊರವಂಜಿಯಲ್ಲಿ ಇದ್ದಂತೆ ಹೇಳದಿದ್ದರೆ ಅದರ ನಿಜವಾದ ಮೋಜು ಸಿಗದು).   

ಹೀಗೆ ಬೆಳೆಯುವ ಕಾಲದಲ್ಲಿ ಆಗಾಗ ಹಳೆಯ ದೇಹ ಹೋಗಿ ಹೊಸದು ಬರುತ್ತಿದ್ದರೂ ಅದು ಅಷ್ಟಾಗಿ ನಮಗೆ ಭಾಸವಾಗುವುದಿಲ್ಲ. ಮುಂದೆ ಕಾಲಕ್ರಮದಲ್ಲಿ ಯೌವನ ಮತ್ತು ಮಧ್ಯ ಕಾಲಗಳು ಕಳೆದು ವೃದ್ಧಾಪ್ಯ ಬಂದಾಗ ಅದು ಮಾತ್ರ ಚೆನ್ನಾಗಿ ಕಂಡುಬರುತ್ತದೆ. "ಏನಿದು? ಇಷ್ಟು ಮುದುಕನೇ? ಹಲ್ಲೆಲ್ಲಾ ಬಿದ್ದು ಹೋಗಿವೆ. ಕೂದಲು ನರೆತು ಹೋಗಿದೆ" ಎನ್ನಬಹುದು. "ಎಲಬು ಸೊಟ್ಟಗಾಗಿದೆ. ಬೊಕ್ಕತಲೆ ಆಗಿದೆ" ಎಂದು ಆಶ್ಚರ್ಯಪಡಬಹುದು. ನೆಟ್ಟಗೆ ನಡೆಯುತ್ತಿದ್ದವರಿಗೆ ಈಗ ಕೋಲು ಹಿಡಿಯುವಂತಾಗಿದೆ. ಜೀವನದಲ್ಲಿ ಮುಖ್ಯ ಕಾರ್ಯಕ್ರಮವೆಂದರೆ ಮುಂದಿನ ವೈದ್ಯರ ಸಂದರ್ಶನದ ಸಮಯ ನಿಗದಿಮಾಡುವುದು. ಬೇಜಾರಾದಾಗಲೆಲ್ಲಾ ಒಂದು ಗುಳಿಗೆ ನುಂಗುವುದು. ಜೊತೆಗಾರರ ಸಕ್ಕರೆಯ ಅಂಶ ಎಷ್ಟಿದೆ ಎಂದು ಕೇಳಿ, ಅದು ನಮಗಿಂತ ಕಡಿಮೆ ಇದ್ದಾಗ ಸಮಾಧಾನ ಪಟ್ಟುಕೊಳ್ಳುವುದು.  ಹೀಗೆ. 

ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ 'ಒಂದು ದೇಹದಲ್ಲಿ ಅನೇಕ ದೇಹಗಳು" ಎನ್ನುವುದು. 

*****

ಹಾಗಿದ್ದರೆ ಭಗವದ್ಗೀತೆಯಡ್ನಲ್ಲಿ ಶ್ರೀಕೃಷ್ಣನು ಇದರ ಬಗ್ಗೆ ಹೇಳಿರುವುದು ಏನು? ಎರಡನೆಯ ಅಧ್ಯಾಯದ ಹದಿಮೂರನೆಯ ಶ್ಲೋಕ ಹೀಗಿದೆ:

देहिनोऽस्मिन्यथा देहे कौमारं यौवनं जरा |
तथा देहान्तरप्राप्तिर्धीरस्तत्र न मुह्यति ||  

ದೇಹಿನೋಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ
ತಥಾ ದೇಹಾಂತರಪ್ರಾಪ್ತಿ: ಧೀರಸ್ತತ್ರ ನ ಮುಹ್ಯತಿ 


ಹೇಗೆ ಆತ್ಮನು ತನ್ನ ದೇಹದಲ್ಲಿಯೇ ಬಾಲ್ಯ, ಯೌವನ ಮತ್ತು ಮುಪ್ಪಿನಲ್ಲಿ ದೇಹ ಬಲಾವಣೆಗಳನ್ನು ಕಾಣುತ್ತಾನೋ, ಹಾಗೆ  ಸಾವಿನ ನಂತರ ಮತ್ತೊಂದು ದೇಹವನ್ನು ಪಡೆಯುತ್ತಾನೆ. ಆದ್ದರಿಂದ ತಿಳಿದವರು ಇದರ ಬಗ್ಗೆ ಚಿಂತಿಸುವುದಿಲ್ಲ. 


"ಬದುಕಿರುವಾಗ ಹಂತ ಹಂತಗಳಲ್ಲಿ ಹೇಗೆ ಇದೇ ದೇಹದಲ್ಲಿ ಬದಲಾವಣೆಗಳಾಗುವುದೋ, ಹಾಗೆಯೇ ಸಾವಿನ ನಂತರ ಬರುವ ಬೇರೆ ದೇಹವೂ ಒಂದು ಬಲಾವಣೆಯೇ ಆಗಿರುತ್ತದೆ. ಆದ್ದರಿಂದ ಜ್ಞಾನಿಗಳು ಸಾವಿನ ವಿಷಯದಲ್ಲಿ ಯಾವ ದುಃಖವನ್ನೂ ಹೊಂದುವುದಿಲ್ಲ" ಎನ್ನುವುದು ಇದರ ಭಾವ. 

*****

"ಹೆರಾಕ್ಲಿಟಸ್" ಎನ್ನುವ ಗ್ರೀಕ್ ತತ್ವಜ್ಞಾನಿಯೊಬ್ಬ ಸುಮಾರು ಎರಡು ಸಾವಿರದ ಐದು ನೂರು ವರುಷಗಳ ಹಿಂದೆ "No man ever steps into a river twice" ಎಂದು ಹೇಳಿರುವುದೂ ಹೀಗೆ ಸಮಯದಿಂದ ಆಗುವ ಬದಲಾವಣೆಗಳ ಬಗ್ಗೆಯೇ. ಆಸಕ್ತರು ಇಂಗ್ಲೀಷಿನಲ್ಲಿರುವ ಬ್ಲಾಗ್ ಪೋಸ್ಟನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

Sunday, September 14, 2025

ಸರಸ್ವತಿ ದೇವಿಯ ರಂಗಮಂದಿರ


ಒಂದು ತಿಂಗಳ ಹಿಂದೆ, ಶ್ರೀ ರಾಘವೇಂದ್ರ ಸ್ವಾಮಿಗಳ 354ನೆಯ ವರುಷದ ಆರಾಧನೆಯ ಸಂದರ್ಭದಲ್ಲಿ, "ದೊಡ್ಡವರ ಶಾಪಗಳೆಂಬ ವರಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ, ಶಂಕುಕರ್ಣ ಎಂಬ ಕರ್ಮಜದೇವತೆಗೆ ಚತುರ್ಮುಖ ಬ್ರಹ್ಮದೇವರು ಕೊಟ್ಟ ಶಾಪವು ಅನೇಕರಿಗೆ ಹೇಗೆ ವರವಾಗಿ ಪರಿಣಮಿಸಿತು ಎನ್ನುವುದನ್ನು ಸಂಕ್ಷೇಪವಾಗಿ ನೋಡಿದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಇಂತಹ ವಿಷಯಗಳಲ್ಲಿ ಕೆಲವೊಂದು ಕಣ್ಣಿಗೆ ಕಾಣುವ, ಪಂಚೇಂದ್ರಿಯಗಳಿಂದ ತಿಳಿಯುವ ಸತ್ಯಗಳು. ಇನ್ನು ಅನೇಕವು ಅವರವರ ನಂಬಿಕೆಯಿಂದ ಒಪ್ಪುವ, ಸ್ವಾನುಭವ ಮತ್ತು ಪರಾನುಭವದಿಂದ ಅರಿಯುವ ಸಂಗತಿಗಳು.  

ಈ ಸಂಚಿಕೆಯ ಒಂದು ಭಾಗದಲ್ಲಿ ಶಂಕುಕರ್ಣನಿಗೆ ಸರಸ್ವತಿ ದೇವಿಯ ಅನುಗ್ರಹವಾಗಿ ಮುಂದೆ ಅದು ರೂಪತಾಳಿದ ಸೂಚನೆ ಇತ್ತು. ಅದರ ಸ್ವಲ್ಪ ವಿವರಗಳನ್ನು ಈಗ ನೋಡೋಣ. 

ಶ್ರೀ ರಾಘವೇಂದ್ರ ಸ್ವಾಮಿಗಳೆಂದರೆ "ಕಲಿಯುಗದ ಕಾಮಧೇನು", ಸೇವೆ ಮಾಡಿ ಬೇಡಿದರೆ ಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಕರುಣಿಸುವವರು ಎಂದು ಬಹಳ ಜನರಿಗೆ ಗೊತ್ತು. ಅವರನ್ನು "ಪರಿಮಳಾಚಾರ್ಯ" ಎಂದೂ ಕರೆಯುತ್ತರೆ ಎಂದು ಕೆಲವರಿಗೆ ಗೊತ್ತು. ಮಂತ್ರಾಲಯದ ಸಿಹಿ ಪ್ರಸಾದವನ್ನು "ಪರಿಮಳ ಪ್ರಸಾದ" ಎಂದು ಕರೆಯುತ್ತಾರೆ ಎನ್ನುವುದು ಅಲ್ಲಿಗೆ ಹೋದ ಅಥವಾ ಪ್ರಸಾದ ಪಡೆದ ಎಲ್ಲರಿಗೂ ಗೊತ್ತು. ಈ "ಪರಿಮಳ" ಅನ್ನುವ ಪದದ ವಿಶೇಷವೇನು?

*****



ಚೆನ್ನಾಗಿ ತಿಳಿದ ವಿದ್ಯಾವಂತರನ್ನು, ವಾಚಾಳಿಗಳನ್ನು "ಸರಸ್ವತಿ ಪುತ್ರ" ಎಂದು ಕರೆಯುವುದು ವಾಡಿಕೆ. "ಅವರ ನಾಲಿಗೆಯ ಮೇಲೆ ಸರಸ್ವತಿಯು ನಲಿಯುತ್ತಾಳೆ, ನಾಟ್ಯವಾಡುತ್ತಾಳೆ" ಎಂದು ಹೇಳುವುದು ಉಂಟು. ಚತುರ್ಮುಖ ಬ್ರಹ್ಮದೇವರ ದೇವತಾರ್ಚನೆಯ ಸಮಯದಲ್ಲಿ ಸರಸ್ವತಿ ದೇವಿಯು ನೃತ್ಯ ಸೇವೆ ಒಪ್ಪಿಸುತ್ತಾಳೆ.  ಹಾಗೆ ನೃತ್ಯ ಮಾಡಲು ಆಕೆಗೆ ಒಂದು ಸರಿಯಾದ "ರಂಗಸ್ಥಳ" ಬೇಕು ಅನ್ನಿಸಿತಂತೆ. ಯಾವುದು ಅಂತಹ ಸರಿಯಾದ ವೇದಿಕೆ ಎಂದು ಹುಡುಕಿದಳಂತೆ. ಮನುಷ್ಯನ ನಾಲಿಗೆ ಎಲ್ಲ ಅಂಗಗಳಲ್ಲಿಯೂ ಹೆಚ್ಚು ಕೆಟ್ಟದು! ಅದು ಸುಮ್ಮನಿರುವುದಿಲ್ಲ. ಯಾವಾಗಲೂ ಏನಾದರೂ ತಿನ್ನುತ್ತಿರಬೇಕು. ಇಲ್ಲದಿದ್ದರೆ ಏನಾದರೂ ಅನ್ನುತ್ತಿರಬೇಕು. ಆದರೆ, ಇಂತಹ ನಾಲಿಗೆಯನ್ನು ಇಟ್ಟುಕೊಂಡಿದ್ದೂ ತಿನ್ನಬಾರದ್ದನ್ನು ತಿನ್ನದೇ, ಅನ್ನಬಾರದ್ದನ್ನು ಅನ್ನದೆ ಇರುವವರು ಬಹಳ ಅಪರೂಪಕ್ಕೆ ಸಿಕ್ಕುತ್ತಾರೆ. ಸರಸ್ವತಿ ದೇವಿಯು ಹೀಗೆ ಒಂದು ಸರಿಯಾದ ನೃತ್ಯ ವೇದಿಕೆ ಹುಡುಕಿದಾಗ ಶ್ರೀ ರಾಘವೇಂದ್ರ ಸ್ವಾಮಿಗಳ ನಾಲಿಗೆ ಕಾಣಿಸಿತು. ಎಂದೂ ಯಾರನ್ನೂ ಕಟು ಮಾತಿನಿಂದ ನೋಯಿಸಿದವರಲ್ಲ. ಇನ್ನೊಬ್ಬರನ್ನು ಏನೂ ಬೇಡಿದವರಲ್ಲ. ಸದಾಚಾರ ಸಂಪನ್ನರು. ಸದಾಕಾಲ ಪಾಠ-ಪ್ರವಚನಗಳಲ್ಲೇ ತಮ್ಮ ಕಾಲ ಕಳೆಯುತ್ತಿರುವವರು. ಆದ್ದರಿಂದ ಇದೇ ಸರಿಯಾದ ರಂಗಸ್ಥಳ ಎಂದು ತೀರ್ಮಾನಿಸಿದಳಂತೆ. 

ನೃತ್ಯ ಪ್ರಾರಂಭವಾಯಿತು. ದೇವಲೋಕದ ಮಂದಾರ, ಪಾರಿಜಾತ ಮುಂತಾದ ದಿವ್ಯ ಪುಷ್ಪಗಳ ದಂಡೆಯನ್ನು ಸರಸ್ವತಿ ದೇವಿಯು ತನ್ನ ತುರುಬಿನಲ್ಲಿ ಮುಡಿದಿದ್ದಳು. ಆನಂದದಿಂದ ನರ್ತಿಸುವಾಗ ಆ ಹೂವಿನ ದಂಡೆಯಿಂದ ಅನೇಕ ಹೂವುಗಳು ಅದುರಿ ಉದುರಿದವಂತೆ. ನೃತ್ಯ ಮುಗಿದ ಮೇಲೆ ಆ ಹೂವುಗಳು ಶ್ರೀ ರಾಯರ ನಾಲಿಗೆಯ ಮೇಲೆ ಉಳಿದವು. ಅವರು ಅವನ್ನೆಲ್ಲ ಸೇರಿಸಿ, ಪೋಣಿಸಿ, ಅವುಗಳ ಸುಗಂಧದ ಕಾರಣ "ಪರಿಮಳ" ಎಂದು ಹೆಸರಿಟ್ಟು ಕೊಟ್ಟರಂತೆ. ಅದೇ "ಪರಿಮಳ" ಎಂಬ ಹೆಸರಿನ ಗ್ರಂಥವಾಯಿತಂತೆ!

ಮಂತ್ರಾಲಯಕ್ಕೆ ಹೋದವರು ಶ್ರೀ ರಾಯರ ವೃಂದಾವನದ ಪಕ್ಕದಲ್ಲಿಯೇ ಇರುವ ಇನ್ನೊಂದು ಭವ್ಯ ವೃಂದಾವನ ನೋಡಿರುತ್ತಾರೆ. ಇದು ಶ್ರೀ ರಾಘವೇಂದ್ರ ತೀರ್ಥರ ನಂತರ ಬಂದ ಐದನೆಯವರಾದ ಶ್ರೀ ವಾದೀಂದ್ರ ತೀರ್ಥರದ್ದು. ಈ ಶ್ರೀ ವಾದೀಂದ್ರ ತೀರ್ಥರು ಶ್ರೀ ರಾಘವೇಂದ್ರರ ಕುರಿತಾಗಿ "ಗುರುಗುಣಸ್ತವನ" ಎನ್ನುವ ಗ್ರಂಥವೊಂದನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಯರ "ಪರಿಮಳ" ಎನ್ನುವ ಗ್ರಂಥದ ರಚನೆಯ ಕುರಿತಾಗಿ "ಧೀರಶ್ರೀ ರಾಘವೇಂದ್ರ ತ್ವದತುಲರಸನಾ ರಂಗನೃತ್ಯ ಸ್ವಯಂಭೂ...." ಎನ್ನುವ ಶ್ಲೋಕದಲ್ಲಿ ಮೇಲಿನಂತೆ ಚಮತ್ಕಾರಿಕವಾಗಿ ವರ್ಣಿಸಿದ್ದಾರೆ. 

ಮಧ್ವ ಸಂಪ್ರದಾಯದಲ್ಲಿ ಆಚಾರ್ಯ ಮಧ್ವರ ಕೃತಿಗಳಿಗೆ ಟೀಕಾಗ್ರಂಥಗಳನ್ನು ಬರೆದವರಲ್ಲಿ ಶ್ರೀ ಜಯತೀರ್ಥರು ಅಗ್ರಗಣ್ಯರು. ಅವರಿಗೆ "ಟೀಕಾಚಾರ್ಯರು" ಎಂದು ಕರೆಯುವುದು ವಾಡಿಕೆ. ಅವರ "ಶ್ರೀಮನ್ ನ್ಯಾಯಸುಧಾ" ಗ್ರಂಥವು ಬಲು ವಿಖ್ಯಾತ. ಮೂಲ ಗ್ರಂಥಗಳಲ್ಲಿ, ವಿಶೇಷವಾಗಿ ಶ್ರೀಮನ್ಯಾಯಸುಧಾ ಗ್ರಂಥದಲ್ಲಿ,  ಸುಲಭವಾಗಿ ಅರ್ಥ ಆಗದ ವಿಷಯಗಳನ್ನು ಶ್ರೀ ರಾಘವೇಂದ್ರರು ತಮ್ಮ ಪರಿಮಳ ಗ್ರಂಥದಲ್ಲಿ ವಿವರಿಸಿದ್ದಾರೆ. ಈ ಕಾರಣಕ್ಕೆ ಅವರನ್ನು "ಪರಿಮಳಾಚಾರ್ಯರು" ಎಂದು ಕರೆಯುವುದು. ಮುಂದೆ ಇದೇ ನಡೆದು ಬಂದು ಮಂತ್ರಾಲಯದ ಪ್ರಸಾದವೂ "ಪರಿಮಳ ಪ್ರಸಾದ" ಆಗಿದೆ. 

******


ದೇವರಪೂಜೆಯಲ್ಲಿ ದೀಪ, ಹೂವು, ಹೂವಿನ ಹಾರ, ತುಳಸಿ, ಮಂಗಳಾರತಿ, ನೈವೇದ್ಯಗಳ ಉಪಯೋಗ ಉಂಟು. ಇವುಗಳು ಸ್ವಲ್ಪ ಕಾಲ ಇರುವಂತಹವು. ಹೂವು, ತುಳಸಿ ಮಾರನೆಯ ದಿನ ಬಾಡಿರುತ್ತದೆ. ದೀಪ, ಮಂಗಳಾರತಿ ಸ್ವಲ್ಪ ಸಮಯದ ನಂತರ ಆರಿಹೋಗುತ್ತವೆ.  ಸದಾಕಾಲ ಇರಬೇಕಾದರೆ ಏನು ಮಾಡಬೇಕು? ಶ್ರೀ ರಾಘವೇಂದ್ರ ಸ್ವಾಮಿಗಳು ಇದಕ್ಕೆ ಉಪಾಯ ಹುಡುಕಿದರಂತೆ. 

ಎಡಗಡೆ ಮತ್ತು ಬಲಗಡೆ ಇಡಲು ಎರಡು ದೀಪಗಳಾಗಿ "ಭಾವದೀಪ" ಮತ್ತು "ನ್ಯಾಯದೀಪ" ಎಂದು ಎರಡು ಗ್ರಂಥಗಳನ್ನು ರಚಿಸಿದರಂತೆ. ತುಳಸಿಯ ತೆನೆ ಇರುವ ಕುಡಿಯು ಪೂಜೆಗೆ ವಿಶೇಷವಂತೆ. ಅದಕ್ಕೆ "ಮಂಜರಿ" ಅನ್ನುತ್ತಾರೆ. (ಮೇಲಿನ ಚಿತ್ರದಲ್ಲಿ ನೋಡಬಹುದು). ಒಣಗುವ ತುಳಸಿಯ ಬದಲಾಗಿ "ತತ್ತ್ವ ಮಂಜರಿ" ಎನ್ನುವ ಗ್ರಂಥ. ಪೂಜೆಯ ವೇಳೆ ಹೆಚ್ಚಿನ ಬೆಳಕು ಬರಲು "ಚಂದ್ರಿಕಾ ಪ್ರಕಾಶ" ಎನ್ನುವ ಗ್ರಂಥ. (ಶ್ರೀ ವ್ಯಾಸರಾಯರ "ತಾತ್ಪರ್ಯ ಚಂದ್ರಿಕಾ" ಗ್ರಂಥದ ವಿವರಣೆ). ಮತ್ತೆ ಹೂವು-ಗಂಧಗಳಿಗೆ "ಪರಿಮಳ" ಕೃತಿ. ಹಾರದ ಸ್ಥಳದಲ್ಲಿ "ನ್ಯಾಯ ಮುಕ್ತಾವಳಿ" ಎನ್ನುವ ಮುತ್ತಿನ ಹಾರದಂತಹ ಗ್ರಂಥ. ಮಂಗಳಾರತಿಯ ಸಲುವಾಗಿ "ತಂತ್ರದೀಪಿಕಾ". ನೈವೇದ್ಯದ ಹರಿವಾಣದಲ್ಲಿ ಬಗೆಬಗೆಯ ಇತರ ಅನೇಕ ಗ್ರಂಥಗಳು. 

"ಪ್ರಾತಃ ಸಂಕಲ್ಪ ಗದ್ಯ"  ಎನ್ನುವುದು ಅವರು ಪ್ರತಿದಿನ ಬೆಳಿಗ್ಗೆ ಮಾಡುತ್ತಿದ್ದ "ಟು ಡು ಲಿಸ್ಟ್". "ಸರ್ವ ಸಮರ್ಪಣ" ಎನ್ನುವುದು ಅವರು ದಿನದ ಕೊನೆಯಲ್ಲಿ ಅಂದು ಮಾಡಿದುದನ್ನೆಲ್ಲ ಪರಮಾತ್ಮನಿಗೆ ಒಪ್ಪಿಸುತ್ತಿದ್ದ ರೀತಿ. ದಿನಕ್ಕೆ ಹದಿನೆಂಟು ಗಂಟೆಗಳ ಅಧ್ಯಯನ-ಅಧ್ಯಾಪನ; ಪೂಜೆ-ಅತಿಥಿಸೇವೆ. 

ಹೀಗೆ ಒಂದು ದಿನ ಇದ್ದು ಕೆಡುವ-ಬಾಡುವ ಪದಾರ್ಥಗಳ ಬದಲು ಚಿರಕಾಲ ಉಳಿಯುವ ಗ್ರಂಥಗಳನ್ನು ದೇವರಪೂಜೆಗೆ ಮಾಡಿಟ್ಟದ್ದು ಶ್ರೀ ರಾಘವೇಂದ್ರಸ್ವಾಮಿಗಳ ವಿಶೇಷತೆ ಎಂದು ತಿಳಿದವರು ಹೇಳುತ್ತಾರೆ. 


*****

ಶ್ರೀ ರಾಯರ ಅನೇಕ ಪವಾಡಗಳನ್ನು ಹೇಳುತ್ತಾರೆ. ಈ ಎಲ್ಲ ಪವಾಡಗಳಿಗಿಂತ ಹೆಚ್ಚಿನದು ಅವರ ನಲವತ್ತೈದು ಗ್ರಂಥಗಳ ಭಂಡಾರ. ಇವುಗಳಲ್ಲಿ ಅನೇಕವು ಅವರು "ಶ್ರೀ ರಾಘವೇಂದ್ರ ತೀರ್ಥ" ಎಂದು ಪೀಠ ಸ್ವೀಕರಿಸುವ ಮುಂಚೆ, ವೆಂಕಟನಾಥ ಎಂದು ಹೆಸರಿನ ವಟು ಮತ್ತು ಗೃಹಸ್ಥ ಆಗಿದ್ದಾಗ ರಚಿಸಿದ್ದು. 

ವಿಜಯನಗರದ ಅರಸರ ಆಸ್ಥಾನ ವಿದ್ವಾಂಸರಾಗಿ ಅವರಿಗೆ ವೀಣಾ ಗುರುಗಳಾಗಿದ್ದ ವಿದ್ವಾಂಸರ ವಂಶದಲ್ಲಿ ಜನಿಸಿದ್ದು. ಸಿರಿ-ಸಂಪತ್ತಿನಲ್ಲಿ ನಡೆದುಬಂದ ಕುಟುಂಬವಾದರೂ ಇವರ ಕಾಲಕ್ಕೆ ವಿಜಯನಗರ ಸಾಮ್ರಾಜ್ಯ ಹರಿದು-ಹಂಚಿಹೋಗಿ ಇವರಿಗೆ ಹೇಳತೀರದ ದಾರಿದ್ರ್ಯ. ಅಂತಹ ಸಂದರ್ಭಗಳಲ್ಲಿ ಈ ಗ್ರಂಥಗಳ ರಚನೆ. 

ಭಗವದ್ಗೀತೆಗೆ ಹೊಂದಿದ "ಗೀತಾ ವಿವೃತ್ತಿ", ಬ್ರಹ್ಮಸೂತ್ರ ಭಾಷ್ಯಗಳಿಗೆ ಸಂಬಂಧಿಸಿದಂತೆ "ತಂತ್ರದೀಪಿಕಾ", ಋಗ್ವೇದ ಮಂತ್ರಗಳಿಗೆ "ಮಂತ್ರಾರ್ಥ ಮಂಜರಿ", ಹತ್ತು ಪ್ರಮುಖ ಉಪನಿಷತ್ತುಗಳಿಗೆ ಭಾಷ್ಯಗಳು, ಮತ್ತನೇಕ ಗ್ರಂಥಗಳು. ಹಿಂದಿದ್ದ ಗ್ರಂಥಗಳಿಗೆ ಬಂದಿದ್ದ ಟೀಕಾಗ್ರಂಥಗಳಿಗೆ ಟಿಪ್ಪಣಿಗಳು. ಹಿಂದಿದ್ದ ಗ್ರಂಥಗಳಿಗೆ ಟೀಕೆಗಳು. ಜೊತೆಗೆ ಸ್ವತಂತ್ರ ಗ್ರಂಥಗಳು. ದೊಡ್ಡ ಗ್ರಂಥಗಳನ್ನು ಸಂಗ್ರಹ ಮಾಡಿ ಚಿಕ್ಕದಾಗಿಸಿ ಪ್ರತಿನಿತ್ಯ ಪಾರಾಯಣಕ್ಕೆ ಕೊಟ್ಟರು. ಚಿಕ್ಕದಾದ ಗ್ರಂಥಗಳನ್ನು ವಿವರಿಸಿ ದೊಡ್ಡದು ಮಾಡಿ ಕೊಟ್ಟರು. ಹೀಗೂ ಸರಿ. ಹಾಗೂ ಸರಿ.  ಎಲ್ಲದರಲ್ಲೂ ಪ್ರಚಂಡ ವಿದ್ವತ್ ದರ್ಶನ. 

ಕನ್ನಡದಲ್ಲಿ ರಚಿಸಿದ ರಚನೆಗಳು ಸಿಕ್ಕಿಲ್ಲ. ಸಿಕ್ಕಿರುವ ಒಂದೇ "ಇಂದು ಎನಗೆ ಗೋವಿಂದ" ದೇವರನಾಮ ಎಲ್ಲರ ಬಾಯಲ್ಲಿ. 

ಭಜಿಸಿ ಬೇಡಿದ ಭಕ್ತರಿಗೆ ಕೇಳಿದ್ದು ಕೊಟ್ಟಂತೆ, ವಾಂಗ್ಮಯ ವಿಸ್ತಾರದಲ್ಲೂ ಯಾರಿಗೆ ಏನು ಬೇಕೋ ಅದುಂಟು. 

*****

ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯರ ಅಗಲಿಕೆ. ಅಕ್ಕ-ಭಾವ ಮತ್ತು ಅಣ್ಣನ ನೆರಳಿನಲ್ಲಿ ಬಾಲ್ಯ. ಏಳು ವರುಷಕ್ಕೆ ಅಣ್ಣನಿಂದ ಉಪನಯನ. ಹದಿನೆಂಟು ವರುಷಕ್ಕೆ ವಿವಾಹ. ಇಪ್ಪತ್ತಾರು ವರುಷಕ್ಕೆ ಸನ್ಯಾಸ. ಚಿಕ್ಕ ವಯಸ್ಸಿನ ಹೆಂಡತಿ ಮತ್ತು ಏಳು ವರುಷದ ಮಗನನ್ನು ತೊರೆದು ಯತಿಯಾದದ್ದು. ಕಡು ಬಡತನದ ಜೀವನ. ಈ ಹಿನ್ನೆಲೆಯಲ್ಲಿ ಸಂಪಪಾದಿಸಿದ ಪ್ರಚಂಡ ಪಾಂಡಿತ್ಯ. ರಚಿಸಿದ ಗ್ರಂಥ ರಾಶಿ. ಪೀಠ ಸ್ವೀಕರಿಸಿದ ಮೇಲೆ ಐವತ್ತು ವರುಷ ಪೀಠಾಧಿಪತಿಯಾಗಿ ಸಮಾಜದ ಸೇವೆ. ನಂತರ ಜೀವಂತವಾಗಿದ್ದಾಗಲೇ ವೃಂದಾವನ ಪ್ರವೇಶ.  

ವೇದ-ಉಪನಿಷತ್ತುಗಳು, ತರ್ಕ, ವ್ಯಾಕರಣ, ಅಲಂಕಾರ ಶಾಸ್ತ, ಕಾವ್ಯ-ನಾಟಕ, ಮಹಾಭಾಷ್ಯ, ಪೂರ್ವ ಮೀಮಾಂಸಾ, ಜ್ಯೋತಿಷ್ಯ, ಸಂಗೀತ, ವೀಣಾವಾದನ ಮುಂತಾದ ಅನೇಕ ವಿಷಯಗಳಲ್ಲಿ ಪೂರ್ಣ ಪ್ರಭುತ್ವ. ಅನೇಕ ಕಲೆಗಳಲ್ಲಿ ಪರಿಣತಿ. ಒಂದೊಂದರಲ್ಲಿ ಸಾಧನೆ ಮಾಡಲು ಅನೇಕರಿಗೆ ಕಷ್ಟಸಾಧ್ಯ. ಇವರಿಗೆ ಎಲ್ಲವೂ ಸಲೀಸು. 

ರಾಯರ ಬೇರೆ ಪವಾಡಗಳು ಒತ್ತಟ್ಟಿಗಿರಲಿ. ಇವೆಲ್ಲದರ ಹಿನ್ನೆಲೆಯಲ್ಲಿ ಅವರನ್ನು ನೆನೆದಾಗ, ನೋಡಿದಾಗ ಅವರ ಬದುಕೇ ಒಂದು ದೊಡ್ಡ ಪವಾಡ.   

Saturday, September 6, 2025

ನಾನು ಶಾಲಿಗಾಗಿ ಬಂದವನು, ಗುರುಗಳೇ!


ಗುರು-ಶಿಷ್ಯರ ಸಂಬಂಧದ ಬಗ್ಗೆ "ಗುರು ಪೂರ್ಣಿಮಾ" ಸಮಯದಲ್ಲಿ ಒಂದು ಸಂಚಿಕೆಯಲ್ಲಿ ಸ್ವಲ್ಪ ವಿಚಾರ ಮಾಡಿದ್ದೆವು. ಯೋಗ್ಯನಾದ ಶಿಷ್ಯನು ಸಿಗಲಿ ಎಂದು ಗುರುವು ಕಾಯುತ್ತಿರುವುದು ಮತ್ತು ಸರಿಯಾದ ಗುರು ದೊರೆಯಲಿ ಎಂದು ಜಿಜ್ಞಾಸು ಶಿಷ್ಯನು ಅರಸುವುದು, ಇವುಗಳ ಬಗ್ಗೆ ಕೆಲವು ವಿಷಯಗಳನ್ನು ನೋಡಿದ್ದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). 

ಈ ವಿಷಯದ ಕುರಿತಂತೆ ಬಹಳ ಹಿಂದೆ ತಿಳಿದವರೊಬ್ಬರು ಸಾಂದರ್ಭಿಕವಾಗಿ ಹೇಳಿದ್ದ ಸಂಗತಿಯೊಂದನ್ನು ನೆನಪಿಸಿಕೊಳ್ಳಬಹುದು. ಇದರ ಬಗ್ಗೆ ಹೆಚ್ಚಿನ ವಿಚಾರಗಳು ತಿಳಿದಿಲ್ಲ. ತಿಳಿಯುವ ಪ್ರಯತ್ನ ಮಾಡಿದರೂ ಅವು ಸಫಲವಾಗಲಿಲ್ಲ. ಆದರೆ ಅದನ್ನು ಹೇಳಿದವರು ಸ್ವತಃ ಘನ ವಿದ್ವಾಂಸರು. ಅನೇಕ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತಾಡಬಲ್ಲವರು. ಅದಕ್ಕಿಂತ ಹೆಚ್ಚಾಗಿ ಈ ಪ್ರಸಂಗ ಜ್ಞಾನದಾಹ ಮತ್ತು ಗುರುಗಳ ಶಿಷ್ಯ ವಾತ್ಸಲ್ಯವನ್ನು ತೋರಿಸುವ ಒಂದು ಉತ್ತಮ ಉದಾಹರಣೆ. ಆದ್ದರಿಂದ ಅದನ್ನು ಅದರ ಇತಿ-ಮಿತಿಗಳಲ್ಲೇ ನೋಡೋಣ. 

ತುಂಗಭದ್ರಾ ನದಿಯ ಆಣೆಕಟ್ಟು ಈಗ ತುಂಬಿ ತುಳುಕುತ್ತಿದೆ. ಜಲಾಶಯದ ಎಲ್ಲ ಗೇಟುಗಳನ್ನೂ ತೆಗೆದು ನದಿಯ ಪಾತ್ರಕ್ಕೆ ನೀರು ಬಿಡುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಗೇಟುಗಳಲ್ಲಿ ತೊಂದರೆ ಉಂಟಾಗಿ ನೀರು ಸೋರಿಹೋಗುತ್ತಿದ್ದುದು, ಮತ್ತು ಬಲು ಕಠಿಣ ಪರಿಸ್ಥಿತಿಯಲ್ಲೂ ಕೆಲವು ಎಂಜಿನಿಯರುಗಳು ಕಷ್ಟಪಟ್ಟು ಅದನ್ನು ಸರಿಪಡಿಸಿ ನೀರು ಪೋಲಾಗುವುದನ್ನು ನಿಲ್ಲಿಸಿದುದನ್ನೂ ಕೇಳಿದ್ದೆವು. ಈ ಜಲಾಶಯವು ನೀರು ತುಂಬಿದ್ದಾಗ ನೋಡಲು ಬಹಳ ಸುಂದರ. ಅದಕ್ಕೆ ಸೇರಿದಂತೆ "ಪಂಪಾವನ" ಎನ್ನುವ ಉದ್ಯಾನವಿದೆ. ರಾಮಾಯಣದ ಪ್ರಸಿದ್ಧ "ಋಷ್ಯಮೂಕ" ಬೆಟ್ಟವೂ ಅದರ ಒಂದು ಬದಿಯಲ್ಲಿದೆ. 

ತುಂಗಭದ್ರಾ ಜಲಾಶಯವು ಹೊಸಪೇಟೆಯಿಂದ ಸುಮಾರು ಐದು ಮೈಲು ದೂರದ, ಈಗಿನ ಕೊಪ್ಪಳ ಜಿಲ್ಲೆಗೆ ಸೇರಿದ ಮುನಿರಾಬಾದ್ ಪಟ್ಟಣಕ್ಕೆ ಹೊಂದಿಕೊಂಡಿದೆ. ಹುಲಿಗಿ ಎನ್ನುವ ಸಣ್ಣ ಊರು ಈಗ ಹೆಚ್ಚು-ಕಡಿಮೆ ಈ ಪಟ್ಟಣದಲ್ಲಿ ಸೇರಿಹೋಗಿದೆ. "ಹುಲಿಗೆಮ್ಮ" ಎನ್ನುವ ಇತಿಹಾಸ ಪ್ರಸಿದ್ಧ ದೇವಸ್ಥಾನ ಇಲ್ಲಿನ ಹೆಗ್ಗುರುತು. 

*****

ಹುಲಿಗಿ ಶ್ರೀಪತ್ಯಾಚಾರ್ಯರು ಒಂದು ಕಾಲಘಟ್ಟದಲ್ಲಿ ಅದ್ವಿತೀಯ ತರ್ಕ ಶಾಸ್ತ್ರ ವಿದ್ವಾಂಸರು. ಅವರನ್ನು ಅರಸಿಕೊಂಡು ನಾಡಿನ ಮೂಲೆ ಮೂಲೆಗಳಿಂದ ತರ್ಕ ಶಾಸ್ತ್ರ ಕಲಿಯಬೇಕೆಂದು ಆಸೆಪಡುವ ವಿದ್ಯಾರ್ಥಿಗಳು ಬರುತ್ತಿದ್ದರಂತೆ. ಅವರ ಮನೆಯೇ ಒಂದು ಗುರುಕುಲ. ಆಗ ತಮ್ಮ ಬಳಿ ವಿದ್ಯಾರ್ಜನೆಗೆ ಬರುವವರಿಗೆ ಊಟ-ವಸತಿ ಕೊಟ್ಟು ಪಾಠ ಹೇಳುವ ಕಾಯಕ ಅವರದು. ಹತ್ತು-ಹನ್ನೆರಡು ವಿದ್ಯಾರ್ಥಿಗಳವರೆಗೆ ಒಪ್ಪಿಕೊಳ್ಳುತ್ತಿದ್ದರು. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಸಂಭಾಳಿಸುವುದು ಆಗದ ಕೆಲಸ. 

ಶ್ರೀಪತಿ ಆಚಾರ್ಯರು ತರ್ಕ ಶಾಸ್ತ್ರದ ಜೊತೆಯಲ್ಲಿ ಬೇರೆ ಇತರ ಶಾಖೆಗಳಲ್ಲೂ ಪಂಡಿತರೇ. ಅವರಿಗೆ ಅನೇಕ ಕಡೆಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಗಳು ಬರುತ್ತಿದ್ದವು. ವಿದ್ವತ್ ಗೋಷ್ಠಿಗಳನ್ನು ನಿರ್ವಹಿಸುವುದು, ಉಪನ್ಯಾಸಗಳನ್ನು ನೀಡುವುದು, ಮತ್ತು ಪರೀಕ್ಷೆಗಳಲ್ಲಿ ನಿರ್ಣಾಯಕರಾಗಲು ಅಲ್ಲಲ್ಲಿ ಅವರಿಗೆ ಕರೆಗಳು ಬರುತ್ತಿದ್ದವು. ಹೀಗೆ ಹೋದ ಸಂದರ್ಭಗಳಲ್ಲಿ ಅವರಿಗೆ ಸನ್ಮಾನ ಮಾಡುವುದು ಸರ್ವೇಸಾಮಾನ್ಯವಾಗಿತ್ತು. ಈ ಮನ್ನಣೆಗಳ ಅಂಗವಾಗಿ ಶಾಲುಗಳನ್ನು ಹೊದ್ದಿಸಿ, ಫಲ-ತಾಂಬೂಲಗಳನ್ನು ನೀಡುವುದು ನಡೆಯುತ್ತಿತ್ತು. ಈ ಕಾರಣಗಳಿಂದ ಅವರ ಬಳಿ ಶಾಲುಗಳ ಒಂದು ಸಂಗ್ರಹವೇ ಇರುತ್ತಿತ್ತು. 

ಹೀಗೆ ತಮಗೆ ಕೊಟ್ಟಿರುವ ಶಾಲುಗಳನ್ನು ವಿದ್ಯಾರ್ಥಿಗಳಿಗೆ ಹಂಚುವುದು ಆಚಾರ್ಯರ ಹವ್ಯಾಸ. ಯಾವುದೇ ಪದಾರ್ಥವನ್ನು ಸುಮ್ಮನೆ ಕೊಟ್ಟರೆ ಅದಕ್ಕೆ ಅಷ್ಟು ಬೆಲೆ ಇರುವುದಿಲ್ಲ. ಈ ಕಾರಣದಿಂದ ಆಚಾರ್ಯರು ಆಗಿಂದಾಗ್ಗೆ ವಿದ್ಯಾರ್ಥಿಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಈ ಸ್ಪರ್ಧೆಗಳು ಬೇರೆ ಬೇರೆ ಶಾಖೆಯ ವಿಷಯಗಳ ಮೇಲೆ ಇರುತ್ತಿದ್ದವು. ತಮ್ಮ ಶಿಷ್ಯರ ಜೊತೆಯಲ್ಲಿ ಬೇರೆ ಯಾವುದೇ ವಿದ್ಯಾರ್ಥಿ ಭಾಗವಹಿಸಲು ಅವಕಾಶ ಇರುತ್ತಿತ್ತು. ಒಂದು ವಿಷಯವನ್ನು ಆರಿಸಿ ನಿಗದಿತ ದಿನಾಂಕದಂದು ಸ್ಪರ್ಧೆ. ಅಂದು ಬಂದು ಭಾಗವಹಿಸಿದ ವಿದ್ಯಾರ್ಥಿಗಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಶಾಲುಗಳ ಬಹುಮಾನ. ಈ ರೀತಿಯಿಂದ ವಿದ್ಯಾರ್ಥಿಗಲ್ಲಿ ಸ್ಪರ್ಧಾಮನೋಭಾವದಿಂದ ಕಲಿಕೆಯೂ ನಡೆದು ಶಾಲುಗಳ ವಿತರಣೆಯೂ ಆಗುತ್ತಿತ್ತು. 

***** 

ಹೀಗೆ ಒಂದು ದಿನ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಮೀಮಾಂಸಾ ಶಾಸ್ತ್ರದ "ಮಂಗಳವಾದ" ಎನ್ನುವ ವಿಷಯ. ವೈದಿಕ ಕಾರ್ಯಗಳಲ್ಲಿ ಪ್ರಾರಂಭದಲ್ಲಿ "ಮಂಗಳ" ಎಂಬ ಒಂದು ಪ್ರಾರಂಭಿಕ ಕ್ರಿಯೆ ಬೇಕೇ ಅಥವಾ ಬೇಡವೇ ಎನ್ನುವ ವಿಷಯದಮೇಲೆ ಚರ್ಚೆ. ಅನೇಕ ವಿದ್ಯಾರ್ಥಿಗಳು ಬಂದು ಭಾಗವಹಿಸಿದರು. ತಮಗೆ ಪರಿಚಯವಿಲ್ಲದ ಒಬ್ಬ ವಿದ್ಯಾರ್ಥಿಯ ಪ್ರಖರವಾದ ವಿಷಯ ಮಂಡನೆಯ ರೀತಿ ಶ್ರೀಪತಿ ಆಚಾರ್ಯರಿಗೆ ಬಹಳ ಹಿಡಿಸಿತು. ತೀರ್ಪುಗಾರರ ಮನ್ನಣೆ ಗಳಿಸಿ ಆ ವಿದ್ಯಾರ್ಥಿ ಬಹುಮಾನವಾಗಿ ಶಾಲನ್ನೂ ಗೆದ್ದುಕೊಂಡ. ಶ್ರೀಪತ್ಯಾಚಾರ್ಯರು ಶಾಲನ್ನು ಹೊದಿಸಿ ಅವನನ್ನು ಸ್ವಲ್ಪ ಕಾಲ ಇರುವಂತೆ ಹೇಳಿದರು. 

ಕಾರ್ಯಕ್ರಮ ಎಲ್ಲ ಮುಗಿದ ನಂತರ ಆಚಾರ್ಯರು ಆ ವಿದ್ಯಾರ್ಥಿಯನ್ನು ಕರೆದರು. 

"ನೀನು ಬಹಳ ಚೆನ್ನಾಗಿ ವಿಷಯ ಮಂಡನೆ ಮಾಡಿದಿ"
"ತಮ್ಮ ಅನುಗ್ರಹವಾಯಿತು. ನನ್ನ ಪುಣ್ಯ"
"ಮೀಮಾಂಸಾ ಶಾಸ್ತ್ರವನ್ನು ಎಲ್ಲಿ ಅಧ್ಯಯನ ಮಾಡಿದೆ?"
"ನಾನು ಮೀಮಾಂಸಾ ಶಾಸ್ತ್ರದ ವಿದ್ಯಾರ್ಥಿಯಲ್ಲ. ತರ್ಕದ ವಿದ್ಯಾರ್ಥಿ"
"ಮತ್ತೆ ಈ ವಿಷಯದ ಸ್ಪರ್ಧೆಗೆ ಬಂದಿದ್ದು ಹೇಗೆ?"
"ನಾನು ಬಡವ. ಚಳಿಗಾಲದಲ್ಲಿ ಹೊದೆಯಲು ನನ್ನ ಬಳಿ ಶಾಲಿಲ್ಲ. ತಾವು ಆಗಾಗ ಸ್ಪರ್ಧೆ ಏರ್ಪಡಿಸಿ ಗೆದ್ದವರಿಗೆ ಶಾಲು ಕೊಡುವುದು ತಿಳಿಯಿತು. ಅದಕ್ಕೇ ಈ ವಿಷಯಕ್ಕೆ ತಯಾರಿ ಮಾಡಿಕೊಂಡು ಸ್ಪರ್ಧೆಗೆ ಬಂದೆ. ಕ್ಷಮಿಸಬೇಕು. ನಾನು ಶಾಲಿಗಾಗಿ ಬಂದವನು, ಗುರುಗಳೇ"
"ಸ್ಪರ್ಧೆಗೆ ವಿಷಯ ಸಂಗ್ರಹಣೆಗೆ ಗ್ರಂಥ ಹೇಗೆ ಸಂಪಾದಿಸಿದೆ?"
"ಮೀಮಾಂಸಾ ಶಾಸ್ತ್ರದ ವಿದ್ಯಾರ್ಥಿಯೊಬ್ಬನಿಂದ ಒಂದು ವಾರದ ಮಟ್ಟಿಗೆ ಪಡೆದುಕೊಂಡು, ಅಭ್ಯಸಿಸಿ ಸ್ಪರ್ಧೆಗೆ ಬಂದೆ"
"ಈಗ ಎಲ್ಲಿ ವಾಸವಾಗಿದ್ದೀ"
"ಒಬ್ಬರು ದೂರದ ಬಂಧುಗಳು ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲಿ ಉಳಿದುಕೊಂಡಿದ್ದೇನೆ"
"ತರ್ಕ ಶಾಸ್ತ್ರದಲ್ಲಿ ಆಸಕ್ತಿಯಿದ್ದರೆ ನಮ್ಮ ಬಳಿಯೇ ಕಲಿಯಲು ಬರಬಹುದಿತ್ತಲ್ಲ"

ವಿದ್ಯಾರ್ಥಿಗೆ ಮಾತನಾಡಲಾಗಲಿಲ್ಲ. ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು.

"ಏಕೆ? ಏನಾಯಿತು?" 
"ಕೆಲವು ತಿಂಗಳ ಹಿಂದೆ ತಮ್ಮ ಬಳಿ ಬಂದು ಪ್ರಾರ್ಥಿಸಿದೆ. ಈಗ ನನ್ನ ಬಳಿ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅವಕಾಶ ಇಲ್ಲ. ಬೇರೆಯವರ ಬಳಿ ಪ್ರಯತ್ನಿಸು ಎಂದಿರಿ. ನಾನು ನತದೃಷ್ಟ"
"ಈಗ ಅವಕಾಶವಾದರೆ ನಮ್ಮಲ್ಲಿ ಕಲಿಯಲು ಬರುವಿಯಾ?"
"ಅದಕ್ಕಿಂತ ಬೇರೆ ಭಾಗ್ಯವಿಲ್ಲ ನನಗೆ"

ಮಾರನೆಯ ದಿನದಿಂದ ಅವನು ಆಚಾರ್ಯರ ಗುರುಕುಲದ ವಿದ್ಯಾರ್ಥಿಯಾದ. ಆಚಾರ್ಯರಿಗೆ ಬಹಳ ಕಾಲದಿಂದ ಹುಡುಕುತ್ತಿದ್ದ ಯೋಗ್ಯ ಶಿಷ್ಯ ಸಿಕ್ಕ. ಅವನಿಗೆ ತನ್ನ ಕನಸಿನ ನಿಧಿ ಸಿಕ್ಕಂತೆ ಆಗಿ ಹಾತೊರೆಯುತ್ತಿದ್ದ ಗುರುಗಳು ದೊರಕಿದರು!

*****

ದೇವರ್ಷಿ ನಾರದರಿಗೆ ಪ್ರಹ್ಲಾದನಂತಹ ಶಿಷ್ಯ ಸಿಕ್ಕ ಸಂದರ್ಭದಲ್ಲಿ ಈ ಮೇಲೆ ಹೇಳಿದ ಸಂಗತಿ ಕೇಳಿದಂತೆ ನೆನಪು. 

ಯೋಗ್ಯರಾದ ಶಿಷ್ಯರು ಸಿಗುವುದು ಗುರುಗಳಿಗೆ ಆನಂದ. ಮನಬಿಚ್ಚಿ ಜ್ಞಾನ ಧಾರೆ ಎರೆಯುವ ಗುರುಗಳು ದೊರಕುವುದು ಶಿಷ್ಯರ ಸುಯೋಗ.