Showing posts with label Mantralaya. Show all posts
Showing posts with label Mantralaya. Show all posts

Friday, August 28, 2026

ಹನುಮನ ಭಕ್ತಿ ಮತ್ತು ಕಾವ್ಯದಲ್ಲಿ "ಧ್ವನಿ"


ಹನುಮನ ಶಕ್ತಿ ಅಸಾಮಾನ್ಯವಾದದ್ದು. ಅದರ ಸರಿಯಾದ ಅನುಭವವನ್ನು ರಾವಣನಂತಹ ಮಹಾಬಲಶಾಲಿಯನ್ನು ತನ್ನ ಬಾಲದಲ್ಲಿ ಕಟ್ಟಿಕೊಂಡು ನಾಲ್ಕು ದಿಕ್ಕುಗಳ ಸಮುದ್ರಗಳಲ್ಲಿ ಮುಳುಗಿಸಿದ್ದ ಧೀರ ವಾಲಿ ಪಡೆದ್ದಿದ್ದ. ಹನುಮನ ಭಕ್ತಿ ಕೂಡ ಅಂತೆಯೇ. ಅತಿಹೆಚ್ಚು ಶಕ್ತಿವಂತನಿಗೂ, ಅತ್ಯಂತ ಭಕ್ತಿವಂತನಿಗೂ ಒಂದು ಉದಾಹರಣೆ ಕೊಡಲು ಹನುಮನೇ ಆಗಬೇಕು. ಅಂತೆಯೇ, ಒಂದು ಅಗಾಧವಾದ ಕೆಲಸ ಮಾಡಲು ಬೇಕಾದ ಶಕ್ತಿ, ಯುಕ್ತಿ ಮತ್ತು ಸಮಯ ಪ್ರಜ್ಞೆ, ಇವೆಲ್ಲಕ್ಕೂ ಹನುಮನೇ ಕೊನೆಯ ಮಾತು. ಅನೇಕ ಅತಿ ಬಲವಂತರ ಅಹಂಕಾರ ಮುರಿಯಲು ಅವರನ್ನು ಹನುಮನ ಬಳಿ ಕಳಿಸಿದ ಕಥೆಗಳು ಬಹಳವಿವೆ.

ಭಾರತದ ಈಗಿನ ವಿದೇಶಾಂಗ ಮಂತ್ರಿಗಳಾದ ಶ್ರೀ ಎಸ್. ಜೈಶಂಕರ್ ಅವರ ಅನೇಕ ವಿಡಿಯೋಗಳಲ್ಲಿ ಒಂದು ಬಹಳ ಪ್ರಚಲಿತವಿದೆ. "ಒಬ್ಬ ಒಳ್ಳೆಯ ರಾಜದೂತ ಮತ್ತು ರಾಯಭಾರಿ ಯಾರು? ಅವರಲ್ಲಿ ಇರಬೇಕಾದ ಗುಣಗಳು ಯಾವುವು?" ಎಂದು ಅವರನ್ನು ಒಮ್ಮೆ ಪ್ರಶ್ನೆ ಮಾಡಲಾಯಿತು. "ನನ್ನ ಪ್ರಕಾರ ಒಬ್ಬ ಒಳ್ಳೆಯ ರಾಜದೂತನಿಗೆ ಉದಾಹರಣೆ ಹನುಮಂತ. ಒಬ್ಬ ಒಳ್ಳೆಯ ರಾಯಭಾರಿಗೆ ಉದಾಹರಣೆ ಶ್ರೀಕೃಷ್ಣ" ಎಂದು ಉತ್ತರಿಸಿ, ಅವರಿಗೆ ಇರಬೇಕಾದ ಗುಣಗಳ ಪಟ್ಟಿ ಮಾಡಿರುವ ಜೈಶಂಕರ್ ಅವರ ವಿಡಿಯೋ ಒಂದನ್ನು ಪ್ರಾಯಶಃ ಎಲ್ಲರೂ ನೋಡಿದ್ದಾರೆ.

ಹನುಮನು ಲಂಕೆಗೆ ಹಾರಿ ಹೋಗಿ, ಬೇಕೆಂದೇ ಸೆರೆ ಸಿಕ್ಕಿ, ರಾವಣನ ಮುಂದೆ ಕುಳಿತು ಮಾತನಾಡಿದ ಭಾಗ ಶ್ರೀಮದ್ ರಾಮಾಯಣದಲ್ಲಿ ಬಹಳ ರಸವತ್ತಾದ ಭಾಗ. "ಏಳೇಳು ಶರಧಿಯು ಏಕವಾಗಿದೆ ಕಂಡ್ಯ, ಹೇಗೆ ಬಂದೆಯೋ ಹೇಳೋ ಕೋತಿ" ಎನ್ನುವ ರಾವಣನ ಪ್ರಶ್ನೆಗೆ "ಏಳೇಳು ಶರಧಿಯು ಎನಗೇಳು ಕಾಲುವೆಯು, ಹಾರಿ ಲಂಘಿಸಿ ಬಂದೆ ಭೂತ" ಎಂದು ಹೇಳುವ ಶ್ರೀ ಪುರಂದರದಾಸರ ದೇವರನಾಮ ಬಹಳ ಪ್ರಸಿದ್ಧ. ಇದನ್ನು ಯಕ್ಷಗಾನ ಪ್ರಸಂಗಗಳಲ್ಲಿ ಬಹಳ ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ. "ಭಲೇ ಭಾಸ್ಕರ್" ಹೆಸರಿನ ಕನ್ನಡ ಚಲನಚಿತ್ರದಲ್ಲಿ (1971) ಇದರ ಭಾಗವೊಂದನ್ನು ಸೊಗಸಾಗಿ ಸೇರಿಸಿದ್ದಾರೆ. ಯುಟ್ಯೂಬ್ನಲ್ಲಿ ಲಭ್ಯವಿದೆ. ಶ್ರೀ ಬಾಲಮುರಳಿಕೃಷ್ಣ ಅವರು ಹಾಡಿರುವ ಪೂರ್ಣ ಹಾಡೂ ಅಲ್ಲಿ ಸಿಗುತ್ತದೆ. ಆಸಕ್ತರು ಕೇಳಬಹುದು. 

ಶ್ರೀ ವಾದಿರಾಜರ "ಎಷ್ಟು ಸಾಹಸವಂತ, ನೀನೇ ಬಲವಂತ! ದಿಟ್ಟ ಮೂರುತಿ, ಭಳಿರೆ ಭಳಿರೇ ಹನುಮಂತ" ಅನ್ನುವ ಕೃತಿಯಲ್ಲಿ, ಇನ್ನೊಂದು ಸಂದರ್ಭದಲ್ಲಿ, ಹನುಮ ರಾವನಿಗೆ ಬುದ್ಧಿವಾದ ನೀಡುವಾಗ ಹೇಳಿದ ಈ ಭಾಗವುಂಟು:

ದುರುಳ ರಾವಣನೆ ನಿನ್ನ ಬಡಿದು ಹಾಕುವೆನು 
ರಾಮರಪ್ಪಣೆ ಇಲ್ಲ ಎಂದು ತಾಳಿಹೆನು 

ಹನುಮ ಮನಸ್ಸು ಮಾಡಿದ್ದರೆ, ಸಂಯಮ ತೋರದಿದ್ದರೆ, ರಾವಣನ ಕಥೆ ಅಂದೇ ಮುಗಿದು ರಾಮಾಯಣ "ಹನುಮಾಯಣ" ಆಗುತ್ತಿತ್ತು.

*****

ರಾಮ-ರಾವಣರ ಯುದ್ಧದಲ್ಲಿ ಕಡೆಯ ಭಾಗ ನಡೆಯುತ್ತಿತ್ತು. ಮಗ ಮೇಘನಾದ ಮತ್ತು ತಮ್ಮ ಕುಂಭಕರ್ಣನನ್ನು ಯುದ್ಧದಲ್ಲಿ ಕಳೆದುಕೊಂಡಿದ್ದ ರಾವಣ ಬಹಳ ಕುಪಿತನಾಗಿದ್ದ. ಯುದ್ಧ ಭೂಮಿಯಲ್ಲಿ ವಿಭೀಷಣನನ್ನು ನೋಡಿದ ಕೂಡಲೇ ಅವನಿಗೆ ತಡೆಯಲಾರದ ಕೋಪ ಬಂದಿತು. ಇವನಿಂದಲೇ ತನ್ನ ಎಲ್ಲ ನಷ್ಟಗಳು ಎಂದು ತನ್ನ ಅತ್ಯಂತ ಶಕ್ತಿಯುತ ಆಯುಧವನ್ನು ವಿಭೀಷಣನ ಕಡೆ ಎಸೆದ. ಅವನನ್ನು ಉಳಿಸುವ ಸಲುವಾಗಿ ಲಕ್ಷ್ಮಣ ಅಡ್ಡ ಬಂದ. ಶಕ್ತಿಯ ಹೊಡೆತಕ್ಕೆ ಮೂರ್ಛೆ ಹೋದ. ವೈದ್ಯ ಸುಷೇಣನನ್ನು ಕರೆದು ತಂದರು. ಅವನು ಅಮೂಲ್ಯ ಮೂಲಿಕೆಗಳನ್ನು ತಕ್ಷಣ ತರಿಸಿ ಅಂದ. ಅವು ಇದ್ದದ್ದು ಹಿಮಾಲಯದಲ್ಲಿ. ಬೆಳಗಾಗುವುದರಲ್ಲಿ ಅವನ್ನು ತಂದು ಕೊಡಬೇಕು. ಯಾರು ಮಾಡಬೇಕು? ಹನುಮ ಆ ಕೆಲಸ ಮಾಡಿದ.

ಇಂದ್ರಜಿತ್ ಎಸೆದ ಶಕ್ತಿಯಿಂದ ಲಕ್ಷ್ಮಣ ಮೂರ್ಛೆ ಹೋದ ಎಂದು ಅನೇಕರು ತಿಳಿದಿರುವುದು ತಪ್ಪು ಕಲ್ಪನೆ. ಶ್ರೀಮದ್ ರಾಮಾಯಣದ ಯುದ್ಧಕಾಂಡದ 101ನೆಯ ಸರ್ಗ ಇದನ್ನು ವಿವರಿಸಿದೆ. ಆಸಕ್ತರು ಇಲ್ಲಿ ಕ್ಲಿಕ್ ಮಾಡಿ ಇಂಗ್ಲಿಷಿನಲ್ಲಿ ಇರುವ ಸಂಬಂಧಿಸಿದ ಬ್ಲಾಗ್ ಪೋಸ್ಟ್ ಓದಬಹುದು. 

ಹನುಮ ಹೀಗೆ ತಂದ ಪರ್ವತದ ಸುತ್ತಳತೆ ಒಂದು ನೂರು ಯೋಜನ! ಅದು ಇದ್ದದ್ದು ಯುದ್ಧಭೂಮಿಯಿಂದ ಒಂದು ಸಾವಿರ ಯೋಜನ ದೂರ! ಅಂತಹ ಪರ್ವತವನ್ನು ಆಕಾಶ ಮಾರ್ಗವಾಗಿ ಹನುಮ ತರುವಾಗ ಹಿಡಿದುಕೊಂಡಿದ್ದದ್ದು ಒಂದೇ ಕೈಯ್ಯಲ್ಲಿ. ಅದಕ್ಕೆ ಎರಡೂ ಕೈಗಳು ಬೇಕಾಗಲಿಲ್ಲ. ಹಿಡಿದದ್ದು ಅಂತಹ ದೊಡ್ಡ ಪರ್ವತ. ಹಾರುತ್ತಿದ್ದುದು ಆಕಾಶ ಮಾರ್ಗದಲ್ಲಿ. ವೇಗವೋ ಕೆಲವೇ ಗಂಟೆಗಳಲ್ಲಿ ಎರಡು ಸಾವಿರ ಯೋಜನ ದೂರ ಕ್ರಮಿಸಿದುದು. ಹೋಗಲು ಒಂದು ಸಾವಿರ ಯೋಜನ. ಹಿಂದಿರುಗಲು ಇನ್ನೊಂದು ಸಾವಿರ ಯೋಜನ. 

ಹೀಗೆ ಪರ್ವತ ಹಿಡಿದು ತಂದ ಹನುಮನಿಗೆ ಸುಸ್ತಾಗಿತ್ತೇ? ಬಂದ ತಕ್ಷಣ ಕುಡಿಯಲು ನೀರು ಕೇಳಿದನೇ? ಯಾರಾದರೂ ಗಾಳಿ ಹಾಕಿದರೇ? (ಅವನೇ ವಾಯುಪುತ್ರ. ಗಾಳಿ ಹಾಕುವವರು ಯಾರು?). ಸ್ವಲ್ಪ ಹೊತ್ತು ಕುಳಿತು ಸುಧಾರಿಸಿಕೊಂಡನೇ? ಒಂದೂ ಇಲ್ಲ. ಸುಷೇಣನ ಕೆಲಸ ಆಯಿತು. ಈಗ ಬೆಟ್ಟವನ್ನು ಯುದ್ಧ ಭೂಮಿಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಏನು ಮಾಡುವುದು? ಹನುಮನನ್ನು ಇನ್ನೊಂದು ಬಾರಿ ಕಳಿಸಿ ಬೆಟ್ಟ ಅಲ್ಲಿ ಇಟ್ಟು ಬರುವಂತೆ ಹೇಳುವುದೇ?

ಹನುಮ ಮತ್ತೊಮ್ಮೆ ಒಂದು ಕೈಯ್ಯಲ್ಲಿ ಪರ್ವತ ಹಿಡಿದ. ಹಿಡಿದವನು ನಿಂತಲ್ಲಿಂದಲೇ ಅದನ್ನು ಎಸೆದ. ಎಸೆದ ಬೆಟ್ಟ ಒಂದು ಸಾವಿರ ಯೋಜನ ಹೋಗಿ ಮೊದಲಿದ್ದ ಜಾಗದಲ್ಲಿ ಕುಳಿತಿತು. ಹೇಗೆ ಕುಳಿತಿತು? ನಾವು ಯಾವುದಾದರೂ ಪದಾರ್ಥ ಎತ್ತಿಕೊಂಡು ಮತ್ತೆ ಅದು ಇದ್ದಲ್ಲಿ ಇಟ್ಟರೆ ಸ್ಥಳ ಪಲ್ಲಟ ಆಗಿದ್ದು ಕೂಡಲೇ ಗೊತ್ತಾಗುತ್ತದೆ. ಹನುಮ ಎಸೆದ ಪರ್ವತ ಅದನ್ನು ಕಿತ್ತು ಕೊಂಡುಹೋಗಿದ್ದ ಗುರುತೂ ಇಲ್ಲದಂತೆ ಮೊದಲಿನ ಜಾಗದಲ್ಲಿ ಕುಳಿತುಕೊಂಡಿತು. ಆಯಾಸವೇ? ಹಾಗೆಂದರೇನು? ಹನುಮನಿಗೆ ಗೊತ್ತಿಲ್ಲ.

*****

ಎಲ್ಲಾ ಪದಾರ್ಥಗಳಿಗಿಂತ ಹೂವು ಬಹಳ ಸೂಕ್ಷ್ಮ. ಅದೊಂದು ತೂಕವಿಲ್ಲದ ವಸ್ತು. ಕಷ್ಟದ ಕೆಲಸ ಸುಲಭವಾಗಿ ಆದಾಗ "ನಮ್ಮ ಕೆಲಸ ಹೂವು ಎತ್ತಿದಂತೆ ಸುಲಭವಾಗಿ ಆಯಿತು" ಎಂದು ಹೇಳುವುದುಂಟು. ಬೆಳಗಿನ ಪೂಜೆಗೆ ಹೂವು ತಂದಾಗ ಅದೊಂದು ಆಯಾಸದ ಕೆಲಸ ಎಂದು ಯಾರೂ ಹೇಳುವುದಿಲ್ಲ.

ಹನುಮನ "ರಾಮಭಕ್ತಿ" ಮಾತಿನಲ್ಲಿ ಹೇಳುವಂಥದಲ್ಲ. ಅದಕ್ಕೆ ಸಾಟಿಯಾದದ್ದು ಇನ್ನೊಂದಿಲ್ಲ. ದೇವರ ಪೂಜೆಗೆ ಹೂವು ಬೇಕು. ಹೂವನ್ನು ತರಬೇಕು. ಒಮ್ಮೆ ಉಪಯೋಗಿಸಿದ ಹೂವನ್ನು ಮತ್ತೆ ಉಪಯೋಗಿಸುವಂತಿಲ್ಲ. ಆದ್ದರಿಂದ ಹನುಮ ಹೂವು ತರುವಾಗ ಅದರ ಸುವಾಸನೆ ಸೇವಿಸಬಾರದು. (ಈ ರೀತಿ ನೋಡಿದರೆ ನಾವು ಅರ್ಪಿಸುವ ಎಲ್ಲ ಹೂವುಗಳೂ ನಿರ್ಮಾಲ್ಯವೇ!) ಶ್ರೀರಾಮರ ಪೂಜೆಗೆ ಹೂವು ತರುವಾಗ ಹನುಮನಿಗೆ ಎರಡೂ ಕೈ ಸೇರಿಸಿ ಬೊಗಸೆ ಆಗಬೇಕು. ತರುವ ಹೂವು ಬೇರೆ ಕೆಲಸಕ್ಕೆ ಉಪಯೋಗಿಸುವ ಆಲೋಚನೆ ಕೂಡ ಬರಬಾರದು. ವಾಸನೆ ಸ್ವಲ್ಪ ಕೂಡ ಅಘ್ರಾಣಿಸಬಾರದು. ಹಾಗೆ ಜೋಪಾನವಾಗಿ ತರಬೇಕು.

ಈ ಕಾರಣದಿಂದ ಅತಿ ಗಮನವಿಟ್ಟು, ಎರಡೂ ಕೈಗಳಿಂದ ಮಾಡಿದ ಬೊಗಸೆಯಲ್ಲಿ, ನಡು ಬಗ್ಗಿಸಿ, ಬಹಳ ಭಕ್ತಿಯಿಂದ ಹನುಮ ಹೂವುಗಳನ್ನು ತರುತ್ತಾನೆ.

ಬೆಟ್ಟ ಎತ್ತಲು, ಎತ್ತಿಕೊಂಡು ಹಾರಲು, ಹಿಂದಿರುಗಿ ಎಸೆಯಲು ಒಂದೇ ಕೈ ಸಾಕು. ಮೈ ಬಗ್ಗಿಸುವ ಅಗತ್ಯವಿಲ್ಲ. ಆದರೆ ಶ್ರೀರಾಮರ ಪೂಜೆಗೆ ಹೂವು ತರುವಾಗ ಎರಡೂ ಕೈಗಳ ಬೊಗಸೆ ಬೇಕು. ಮೈ ಬಗ್ಗಿಸಬೇಕು. ಹೀಗೆ ಭಯ-ಭಕ್ತಿಯಿಂದ ತರಬೇಕು!

*****  

ಯುದ್ಧಕಾಲದಲ್ಲಿ ಪರ್ವತ ತಂದಿದ್ದು, ಮತ್ತು ಪೂಜಾಕಾಲದಲ್ಲಿ ಹೂವುಗಳನ್ನು ತರುವುದು, ಈ ಎರಡೂ ಕೆಲಸಗಳನ್ನು ಹನುಮ ಮಾಡಿದ ರೀತಿಯನ್ನು ಶ್ರೀ ನಾರಾಯಣ ಪಂಡಿತಾಚಾರ್ಯರು ತಮ್ಮ "ಶ್ರೀಮಧ್ವ ವಿಜಯ" ಕಾವ್ಯದಲ್ಲಿ ("ಸುಮಧ್ವ ವಿಜಯ" ಎಂದು ಹೇಳುವು ಹೆಚ್ಚು ಬಳಕೆ), ಮೊದಲ ಸರ್ಗದ 19ನೆಯ ಶ್ಲೋಕದಲ್ಲಿ, ಹೀಗೆ ವರ್ಣಿಸುತ್ತಾರೆ: 

ರಾಮರ್ಚನೇ ಯೋ ನಯತಃ ಪ್ರಸೂನಂ 
ದ್ವಾಭ್ಯಾ೦ ಕರಾಭ್ಯಾ೦ ಅಭವತ್ ಪ್ರಯತ್ನ: 
ಏಕೇನ ದೋಷ್ಣಾ ನಯತೋ ಗಿರೀ೦ದ್ರಂ 
ಸಂಜೀವನಾದ್ಯಾಶ್ರಯಮಸ್ಯ ನಾಭೂತ್ 

ಶ್ರೀರಾಮರ ಅರ್ಚನೆಗೆ ಹೂವುಗಳನ್ನು ತರುವಾಗ (ಹನುಮನಿಗೆ) ಬೇಕಾದ ಎರಡೂ ಕೈಗಳ ಅವಶ್ಯಕತೆ ಅನೇಕ ಗಿಡ, ಮೂಲಿಕೆ, ಕಲ್ಲು, ಮಣ್ಣು, ಪಶು-ಪಕ್ಷಿ ಮುಂತಾವುದುವುಗಳಿಂದ ತುಂಬಿದ  ಪರ್ವತವನ್ನು ತರುವಾಗ ಬೇಕಾಗಲಿಲ್ಲ.

ಹನುಮನಿಗೆ ಬೇರೆ ಎಲ್ಲಾ ಕೆಲಸಗಳೂ ಹೂವು ಎತ್ತುವುದಕ್ಕಿಂತ ಸುಲಭ. ರಾಮರ ಪೂಜೆಗೆ ಹೂವುಗಳನ್ನು ತರುವುದು ಅವೆಲ್ಲಕ್ಕಿಂತ ಹೆಚ್ಚು ಮುಖ್ಯ. (ಅದರಿಂದ ಪ್ರಯಾಸವೆಂದಲ್ಲ. ಹೆಚ್ಚಿನ ಗಮನ ಮತ್ತು ಭಯ-ಭಕ್ತಿ ಕಾರಣದಿಂದ ಎರಡೂ ಕೈಗಳ ಉಪಯೋಗ ಆಯಿತು ಎಂದು ತಿಳಿಯಬೇಕು). 

*****
 
ಕಾವ್ಯಮೀಮಾಂಸೆಯ ಸಂದರ್ಭದಲ್ಲಿ "ರಸ" ಮತ್ತು "ಧ್ವನಿ" ಎನ್ನುವ ಎರಡು ಪದಗಳಿಗೆ ವಿಶೇಷ ಮಹತ್ವವಿದೆ. ರಸ ಅನ್ನುವುದು ಸಾಮಾನ್ಯವಾಗಿ ತಿಳಿದಿರುವ ವಿಷಯ. ಈ "ಧ್ವನಿ" ಎಂದರೇನು? 

ಮೇಲಿನ ಶ್ಲೋಕದಲ್ಲಿ ಭಕ್ತಿ ಮತ್ತು ಶಕ್ತಿ ಎನ್ನುವ ಪದಗಳ ಬಳಕೆಯೇ ಇಲ್ಲ. ಬೆಟ್ಟ ಒಂದು ಕೈಯಲ್ಲಿ ಮತ್ತು ಹೂವು ಎರಡೂ ಕೈಯ್ಯಲ್ಲಿ ಎಂದು ಮಾತ್ರ ಹೇಳಿದೆ. ಆದರೆ ಬೆಟ್ಟ ತರುವಾಗ ಶಕ್ತಿ ಬೇಕು. ಹೂವು ತರುವಾಗ ಭಕ್ತಿ ಬೇಕು. ಈ ಎರಡು ವಿಷಯಗಳು ಎಲ್ಲರಿಗೂ ಗೊತ್ತು. ಹೇಳದೆ ಇದ್ದರೂ ಶಕ್ತಿಗಿಂತ ಭಕ್ತಿಗೆ ಹನುಮನ ಪ್ರಾಮುಖ್ಯತೆ ಹೆಚ್ಚು ಎನ್ನುವುದು ಓದಿದ ಅಥವಾ ಕೇಳಿದ ತಕ್ಷಣ ಎಲ್ಲರಿಗೂ ಗೊತ್ತಾಗುತ್ತದೆ. ಇಂತಹ ವಿಷಯವನ್ನು ಮನಸ್ಸಿನಲ್ಲಿ ಚಿಂತಿಸುವಾಗಲೇ ಒಂದು ವಿಶಿಷ್ಟ ರೀತಿಯ ಆನಂದದ ಅನುಭವ ಆಗುವುದು. 

ಒಂದು ದೇಹಕ್ಕೆ ಒಳ್ಳೆಯ ವಸ್ತ್ರ ತೊಡಿಸಿ, ಒಡವೆಗಳನ್ನು ಹಾಕಿ, ಅಲಂಕಾರ ಮಾಡಿ, ಕೂಡಿಸಿದರೆ ಚಂದವಾಗಿ ಏನೋ ಕಾಣಬಹುದು. ಆದರೆ ಆ ದೇಹ ಉಸಿರಾಡದೇ ಇದ್ದರೆ ಏನು ಪ್ರಯೋಜನ? ಅದೇ ರೀತಿ, ಕಾವ್ಯದಲ್ಲಿ ಎಲ್ಲಾ ಕಸರತ್ತುಗಳನ್ನೂ ಸೇರಿಸಿ, ಧ್ವನಿ ಇಲ್ಲದಿದ್ದರೆ ಪ್ರಯೋಜನವಿಲ್ಲ. ಕಾವ್ಯದ ಆತ್ಮವೇ ಧ್ವನಿ ಎನ್ನುವ ವಸ್ತು. ಮಾತಿನಲ್ಲಿ ಹೇಳದಿದ್ದರೂ ಅದರ ಹೂರಣದ ಅರ್ಥ ಓದುಗರಿಗೆ ಅಥವಾ ಕೇಳುಗರಿಗೆ ಆಗಬೇಕು. ಇದೇ ಕಾವ್ಯದಲ್ಲಿ "ಧ್ವನಿ" ಅನ್ನಿಸಿಕೊಳ್ಳುತ್ತದೆ. ಹೀಗೆ ಪದಗಳಲ್ಲಿ ಹೇಳದೆ ಇದ್ದರೂ ಅದರ ಅಂತರಾರ್ಥವನ್ನು ತಿಳಿಯುವಂತೆ ಮಾಡುವುದೇ ಧ್ವನಿಯ ವಿಶೇಷತೆ. 

*****

ಇಂದಿನಿಂದ ಮೂರು ದಿನ ಶ್ರೀ ರಾಘವೇಂದ್ರ ಗುರು ರಾಯರ ಆರಾಧನೆ. ರಾಯರಿಗೆ ಹನುಮನೇ ಆದಿ ಗುರು. ಅವನೇ ಆದರ್ಶ. ಅದಕ್ಕೇ ಮೊದಲು ಹನುಮನನ್ನು ಪ್ರತಿಷ್ಠಾಪಿಸಿ, ಅವನ ಎದುರಿಗೆ ವೃಂದಾವನದಲ್ಲಿ ನೆಲೆಸಿದ್ದಾರೆ. ಮಂತ್ರಾಲಯ ಕ್ಷೇತ್ರಕ್ಕೆ ಹೋದವರು ಶ್ರೀರಾಯರ ಜೊತೆ ಜೊತೆಯಲ್ಲಿ ಹನುಮನನ್ನೂ ನೋಡುತ್ತಾರೆ. 

Friday, August 14, 2026

ಇಷ್ಟು ಹೇಳಿದರೆ ನೀನು ಪಂಡಿತ!


ಕಳೆದ ಸಂಚಿಕೆಯಲ್ಲಿ "ನಮಗೆ ಅವರೇ ಬೇಕು!" ಅನ್ನುವ ಶೀರ್ಷಿಕೆಯಡಿ ಕುಂಭಕೋಣ ಮಠದ ಶ್ರೀ ಸುರೇಂದ್ರ ತೀರ್ಥರು ಪೂರ್ವಾದಿ ಮಠದ ಯತಿಗಳಾದ ಶ್ರೀ ವ್ಯಾಸರಾಜರಿಂದ ಅವರ ಪ್ರೀತಿಯ ಶಿಷ್ಯರಾದ ಶ್ರೀ ವಿಷ್ಣುತೀರ್ಥರನ್ನು ದತ್ತು ಪಡೆದುಕೊಂಡು, ಅವರಿಗೆ "ಶ್ರೀ ವಿಜಯೀ೦ದ್ರ ತೀರ್ಥ" ಎಂದು ಮರುನಾಮಕರಣ ಮಾಡಿ, ತಮ್ಮ ನಂತರ ಪೀಠಾಧಿಪತಿಗಳನ್ನಾಗಿ ಮಾಡಿದ ವಿಚಾರ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಶ್ರೀ ವಿಜಯೀ೦ದ್ರ ತೀರ್ಥರ ವಿಚಾರದಲ್ಲಿ ಕೆಲವು ಓದುಗರು ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳ ಬಗ್ಗೆ ಈ ಸಂಚಿಕೆಯಲ್ಲಿ ಸ್ವಲ್ಪ ವಿಚಾರ ಮಾಡೋಣ. 

ಶ್ರೀ ವಿಜಯೀ೦ದ್ರ  ತೀರ್ಥರ ಬಾಲ್ಯದ ಬಗ್ಗೆ ಹೆಚ್ಚು ತಿಳಿಯುವುದಿಲ್ಲ. ಅವರು ಶ್ರೀ ವ್ಯಾಸತೀರ್ಥರ ಪೂರ್ವಾಶ್ರಮದ ಕಡೆಯ ಸಂಬಂಧಿ ಎಂದು ಒಂದು ಅಭಿಪ್ರಾಯವಿದೆ. ಅವರು "ಗೌಡ ಸಾರಸ್ವತ" ಕುಟುಂಬದವರು ಎಂದು ಹೇಳುವ ಕೊಂಕಣಿ ಭಾಷೆಯ ವಿಡಿಯೋ ಒಂದು ಪ್ರಚಲಿತವಿದೆ. ಸ್ನೇಹಿತರೊಬ್ಬರು ಅದನ್ನು ಮೊನ್ನೆ ಕಳಿಸಿಕೊಟ್ಟಿದ್ದಾರೆ. ಅದಕ್ಕೆ ಯಾವುದೇ ಆಧಾರ ಸಿಗುವುದಿಲ್ಲ. ಇದು ಐದು ನೂರು ವರುಷ ಕಳೆದ ಮಾತು. ಆಧಾರ ಎಲ್ಲಿ ಸಿಗಬೇಕು? ಆಗ ಈಗಿನಂತೆ ಅಧಿಕೃತವಾಗಿ ದಾಖಲೆಗಳು ಇರಲಿಲ್ಲವಲ್ಲ.

"ಹಂಸ-ಕ್ಷೀರ ನ್ಯಾಯ", "ಬೀಜ-ವೃಕ್ಷ ನ್ಯಾಯ", "ಕಾಕ-ತಾಳ ನ್ಯಾಯ" ಮುಂತಾದುವುಗಳಂತೆ "ಪುತ್ರಿಕಾ-ಪುತ್ರ ನ್ಯಾಯ" ಎಂದು ಒಂದುಂಟು. ಹೆಣ್ಣು ಮಗಳು ಪಡೆದಿದ್ದು, ಮಗನು ಇಲ್ಲದ ದಂಪತಿಗಳು ಆ ಕಾರಣಕ್ಕಾಗಿ ಅವಳ ವಿವಾಹದ ಸಮಯದಲ್ಲಿ ಅಳಿಯನಲ್ಲಿ ಒಂದು ಬೇಡಿಕೆ ಇಡುತ್ತಿದ್ದರು. ಮುಂದೆ ಆ ದಂಪತಿಗಳಿಗೆ ಹುಟ್ಟುವ ಮೊದಲ ಗಂಡು ಶಿಶುವನ್ನು ತಮಗೆ ದತ್ತು ಕೊಡಬೇಕೆಂದು ಕೇಳುವುದು. ಹೀಗೆ ದತ್ತು ಬಂದ ಮೊಮ್ಮಗನನ್ನು ಮಗ ಎಂದು ಸ್ವೀಕರಿಸುವುದು. ಇದನ್ನು "ಪುತ್ರಿಕಾ-ಪುತ್ರ ನ್ಯಾಯ" ಅನ್ನುತ್ತಾರೆ. ನಮ್ಮ ಬಾಲ್ಯದಲ್ಲಿ ಈ ರೀತಿಯ ಕೆಲವು ಪ್ರಕರಣಗಳನ್ನು ನೋಡಿದ್ದೇವೆ. ಈಗ ಈ ರೀತಿಯ ಉದಾಹರಣೆಗಳು ಸಿಗುವುದಿಲ್ಲ.

ಅನೇಕ ಮಕ್ಕಳಿಲ್ಲದ ದಂಪತಿಗಳು ಆಗಿನ ತಪಸ್ವಿ ಯತಿಗಳನ್ನು ಸಂತಾನಕ್ಕಾಗಿ ಕೋರಿಕೊಳ್ಳುತ್ತಿದ್ದರು. ಹೀಗೆ ಸಂತಾನ ಆಗಲೆಂದು ವರಕೊಟ್ಟ ಯತಿಗಳು ಮೊದಲ ಮಗನನ್ನು ತಮಗೆ ಕೊಡಬೇಕೆಂದೂ, ಮುಂದೆ ಹುಟ್ಟುವ ಮಗುವನ್ನು ಆ ದಂಪತಿಗಳು ಸಂತಾನವಾಗಿ ಇಟ್ಟುಕೊಳ್ಳಬಹುದೆಂದು ಸೂಚಿಸುತ್ತಿದ್ದ ಪದ್ಧತಿ ಇತ್ತು. ಈ ರೀತಿ ಪಡೆದುಕೊಂಡ ಶಿಶುವಿಗೆ ಸನ್ಯಾಸ ಕೊಟ್ಟು ಉತ್ತರಾಧಿಕಾರಿ ಪಡೆದುಕೊಂಡ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತವೆ. ಶ್ರೀ ವಿಷ್ಣು ತೀರ್ಥರು ಹೀಗೆ ಶ್ರೀ ವ್ಯಾಸರಾಜರಿಗೆ ದೊರೆತವರು ಎಂದು ಒಂದು ಅಭಿಪ್ರಾಯ ಇದೆ. ಅವರ ಬಾಲ್ಯದ ಹೆಸರು ವಿಠಲಾಚಾರ್ಯ ಎಂಬುದಾಗಿತ್ತು ಎಂದು ತಿಳಿದುಬರುತ್ತದೆ. ಏಳು-ಎಂಟು ವರುಷದವರಾಗಿದ್ದ ಸಮಯದಲ್ಲೇ ಸನ್ಯಾಸ ಆಗಿದ್ದಿತಂತೆ.

******

ಇಲ್ಲಿ, ಪಕ್ಕದಲ್ಲಿ ಒಬ್ಬ ಬಾಲಕ ಕುಳಿತಿದ್ದಾನೆ. ಅವನಿಗೆ ಭೂಗೋಳದ ಬಗ್ಗೆ ಅಪಾರ ಒಲವಿತ್ತು. ಈಗ ಅದು ಚರಿತ್ರೆ ಬಗ್ಗೆ ಹೊರಳಿದೆ. ಚರಿತ್ರೆಯ ಬಗೆಗಿನ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗಳಿಸುವ ಪ್ರಯತ್ನ. ಅಮೇರಿಕ ಸಂಯುಕ್ತ ಸಂಸ್ಥಾನ (USA) ದೇಶದ ಅಧ್ಯಕ್ಷರ ಬಗ್ಗೆ ಅಭ್ಯಾಸ ಮಾಡುತ್ತಿದ್ದಾನೆ. ಸುತ್ತ ಐದಾರು ಪುಸ್ತಕಗಳು ಹರಡಿವೆ. ಇಲ್ಲಿಯವರೆಗೆ 47 ಅಧ್ಯಕ್ಷರು ತಮ್ಮ ತಮ್ಮ ಸರದಿಯಂತೆ ಅಧ್ಯಕ್ಷ ಪದವಿ ಪಡೆದು ದೇಶವನ್ನು ಮುನ್ನಡೆಸಿದ್ದಾರೆ. ಒಬ್ಬರು 13 ವರುಷದಷ್ಟು ದೀರ್ಘಕಾಲ. ಮತ್ತನೇಕರು ಎಂಟೆಂಟು ವರುಷಗಳು. ಕೆಲವರು ನಾಲ್ಕು ವರುಷ. ಹೀಗೆ ಒಟ್ಟು 45 ಮಹನೀಯರು ಈ 47 ಸರದಿಗಳಲ್ಲಿ ಅಧ್ಯಕ್ಷಪೀಠ ಅಲಂಕರಿಸಿದ್ದಾರೆ. ಮೊದಲ ಅಧ್ಯಕ್ಷರಾದ ಶ್ರೀ ಜಾರ್ಜ್ ವಾಶಿಂಗಟನ್ ಅವರಿಂದ ಈಗಿನ ಅಧ್ಯಕ್ಷರಾದ ಶ್ರೀ ಡೊನಾಲ್ಡ್ ಟ್ರಂಪ್ ಅವರತನಕ ಎಲ್ಲ 45 ಹೆಸರುಗಳನ್ನೂ ತಪ್ಪಿಲ್ಲದೆ ಹೇಳುವುದು ಒಂದು ಸವಾಲು. ಅದಕ್ಕೆ ತಯಾರಿ ನಡೆದಿದೆ. 

ಇದು ಕೇವಲ ಮೊದಲ ಹೆಜ್ಜೆ. ಮುಂದೆ ಈ ಎಲ್ಲ ಅಧ್ಯಕ್ಷರ ಕಾಲಗಳಲ್ಲಿ ನಡೆದ ವಿಶೇಷ ಘಟನೆಗಳು ಮತ್ತು ಸಂಬಂಧಪಟ್ಟ ವಿವರಗಳನ್ನು ಕಲಿತು ತಯಾರಾಗಬೇಕು. 45 ಹೆಸರುಗಳ ಎರಡರಷ್ಟು ಆದರೆ? ಅದಕ್ಕಿಂತ ಹೆಚ್ಚು ಆದರೆ? ಅದೆಷ್ಟು ಪ್ರಯಾಸದ ಕೆಲಸ!

ಮಂತ್ರಾಲಯಕ್ಕೆ ಹೋಗಿಬಂದವರಿಗೆ, ಗುರುರಾಯರ ವೃಂದಾವನದ ದರ್ಶನ ಮಾಡಿದವರಿಗೆ ಈಗ ಮುಂದೆ ಹೇಳುವ ವಿಷಯ ಗೊತ್ತು. ಶ್ರೀ ರಾಘವೇಂದ್ರ ರಾಯರ ವೃಂದಾವನದ ಪಕ್ಕದಲ್ಲೇ ಅದೇ ರೀತಿಯ ಇನ್ನೊಂದು ಭವ್ಯ ವೃಂದಾವನ ಇದೆ. ಅದು ಶ್ರೀ ರಾಯರ ನಂತರ ಐದನೆಯವರಾಗಿ ಪೀಠ ಏರಿದ ಶ್ರೀ ವಾದೀಂದ್ರ ತೀರ್ಥ ಶ್ರೀಪಾದರದ್ದು. ಅಂದರೆ, ಶ್ರೀ ವಿಜಯೀ೦ದ್ರ  ತೀರ್ಥ ಗುರುಗಳ ನಂತರ ಏಳನೆಯವರು. ಅವರು 37 ಶ್ಲೋಕಗಳ "ಗುರುಗುಣಸ್ತವನ" ಎಂಬ ಸ್ತೋತ್ರ ಗ್ರಂಥ ರಚಿಸಿದ್ದಾರೆ. ಅದರ ಪ್ರಾರಂಭದಲ್ಲಿ, ಎಂಟನೆಯ ಶ್ಲೋಕದಲ್ಲಿ, ಶ್ರೀ ವಿಜಯೀ೦ದ್ರ ತೀರ್ಥರ ಬಗ್ಗೆ ಹೇಳುತ್ತಾ "ಚತುರಧಿಕ ಶತ ಗ್ರಂಥರತ್ನ ಪ್ರಣೇತಾ" ಎಂದು ವಿವರಿಸುತ್ತಾರೆ. ಶ್ರೀ ವಿಜಯೀ೦ದ್ರ ತೀರ್ಥರು 104 ಗ್ರಂಥ ರತ್ನಗಳನ್ನು ರಚಿಸಿದ ಮಹಾನುಭಾವರು! 

ಮಾಧ್ವ ಸಿದ್ಧಾಂತ ಗ್ರಂಥಗಳ ಅಧ್ಯಯನ ಮಾಡುವ ವಿದ್ವಾಂಸರಲ್ಲಿ ಒಂದು ನಾಣ್ನುಡಿ ಇದೆ. ಆ ವಿಶಾಲ ವಾಗ್ಮಯದ ಆಳ-ಅಗಲಗಳ ಮಾತು ಅತ್ತ ಇಡೋಣ. "ಶ್ರೀ ವಿಜಯೀ೦ದ್ರ ತೀರ್ಥರ 104 ಗ್ರಂಥಗಳ ಹೆಸರು ತಪ್ಪಿಲ್ಲದೆ ಹೇಳು. ಹಾಗೆ ಹೇಳಿದರೆ ಸಾಕು. ಇಷ್ಟು ಹೇಳಿದರೆ ನೀನು ಪಂಡಿತ ಎಂದು ನಾವು ಒಪ್ಪುತ್ತೇವೆ" ಎಂದು. 

ಅಷ್ಟು ಗ್ರಂಥಗಳ ಹೆಸರು ನೆನಪಿಡುವುದೇ ಕಷ್ಟ. ಇನ್ನು ಅಷ್ಟು ಗಾಢ ಪಾಂಡಿತ್ಯಪೂರ್ಣ ಕೃತಿಗಳ ರಚನೆಯ ಬಗೆಗೆ ಏನು ಹೇಳುವುದು? ಈ ಜನಪ್ರಿಯ ಹೇಳಿಕೆ ಶ್ರೀ ವಿಜಯೀ೦ದ್ರ ತೀರ್ಥರ ವಿದ್ವತ್ತಿಗೆ ಮತ್ತು ಕೃತಿ ರಚನಾ ಕೌಶಲ್ಯಕ್ಕೆ ಒಂದು ಕನ್ನಡಿ ಹಿಡಿದಂತೆ.

*******

ಶ್ರೀ ವಿಜಯೀ೦ದ್ರರು (1517-1614) ಕುಂಭಕೋಣಕ್ಕೆ ಬಂದಾಗ ಅದು ಅನೇಕ ವಿದ್ವಾಂಸರ ಬೀಡಾಗಿತ್ತು. ಅಷ್ಟು ಪಂಡಿತ ಮಂಡಳಿಯ ನಡುವೆ ಹೊಸಬರೊಬ್ಬರು ಬಂದು ತಳ ಊರುವುದು ಸಾಮಾನ್ಯ ಮಾತಾಗಿರಲಿಲ್ಲ. ಶ್ರೀ ಅಪ್ಪಯ್ಯ ದೀಕ್ಷಿತರು (1520-1593) ಅದ್ವೈತ ಸಿದ್ಧಾಂತ ಪ್ರತಿಪಾದಕರಲ್ಲಿ ಒಂದು ಬಲು ದೊಡ್ಡ ಹೆಸರು. ಇಬ್ಬರೂ ಸಮ ವಯಸ್ಕರು. ಜೀವನ ಪೂರ್ತಿ ಜೊತೆಯಲ್ಲಿ ಬಾಳಿದವರು. ಸುಮಾರು ಐವತ್ತು ವರುಷ ಕಾಲ ತಮ್ಮ ತಮ್ಮ ಸಿದ್ಧಾಂತವನ್ನು ಎತ್ತಿ ಹಿಡಿದ ಮಹನೀಯರು. ಒಬ್ಬರು ಪ್ರಬಲ ದ್ವೈತಿ. ಇನ್ನೊಬ್ಬರು ಅಂತೆಯೇ ಪ್ರಬಲ ಅದ್ವೈತಿ. ಆದರೂ ತಮ್ಮ ತಮ್ಮ ಸಿದ್ಧಾಂತವನ್ನು ಬಿಡದೆ ಸಾಮರಸ್ಯದಿಂದ ಬಾಳಿದವರು. 

ಸುಮಾರು ನಲವತ್ತು ವರುಷಗಳ ಹಿಂದೆ ಕುಂಭಕೋಣಕ್ಕೆ ಹೋಗಿದ್ದಾಗ ಅಲ್ಲಿನ ಹಿರಿಯರು ಹೇಳಿದ ಮಾತು. ಕುಂಭಕೋಣ ಮಠ ಮತ್ತು ಶ್ರೀ ಅಪ್ಪಯ್ಯ ದೀಕ್ಷಿತರ ಮನೆ ಅಕ್ಕ-ಪಕ್ಕದಲ್ಲಿ. ಮಠದ ಪಕ್ಕದಲ್ಲಿ ದೀಕ್ಷಿತರ ಮನೆ ಎಂದು ತೋರಿಸುತ್ತಿದ್ದರು. ಇವರು ಸನ್ಯಾಸಿಗಳು. ಅವರು ಗೃಹಸ್ಥರು. ಇವರು ದ್ವೈತಿಗಳು. ಅವರು ಅದ್ವೈತಿಗಳು. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶಾಲ ಗ್ರಂಥ ರಾಶಿ ನಿರ್ಮಾಣ ಮಾಡಿದವರು. ಇವರಿಗೆ ವಿಜಯನಗರದ ಅರಸರ ಆಸ್ಥಾನದಲ್ಲಿ ಗುರುಪೀಠ. ಅವರಿಗೆ ವೆಲ್ಲೂರಿನ ಚಿನ್ನಬೋಮ್ಮ ನಾಯಕನ ಆಸ್ಥಾನದಲ್ಲಿ ವಿಶೇಷ ಮನ್ನಣೆ. ಹೀಗೆ ಸಮಾನಾಂತರವಾದ ಜೀವನಗಳು.

ಇವರಿಬ್ಬರ ಮೊದಲ ಭೇಟಿ ಬಗ್ಗೆ ಒಂದು ವಿಶೇಷ ಪ್ರಸಂಗ ಹೇಳುತ್ತಾರೆ. ಒಂದು ಕಾಡಿನ ಕಡಿದಾದ ದಾರಿ. ಇತ್ತಕಡೆಯಿಂದ ಶ್ರೀ ವಿಜಯೀ೦ದ್ರರೂ, ಅತ್ತಕಡೆಯಿಂದ ಶ್ರೀ ಅಪ್ಪಯ್ಯ ದೀಕ್ಷಿತರೂ ಅವರವರ ಶಿಷ್ಯರ ಸಂಗಡ ಬಂದು ಎದುರುಬದರಾದರು. ಆ ದಾರಿಯಲ್ಲಿ ಒಬ್ಬರು ಮಾತ್ರ ನಡೆದು ಹೋಗಬಹುದು. ಇಬ್ಬರಲ್ಲಿ ಒಬ್ಬರು ಹಿಂದೆ ಸರಿದು ದಾರಿ ಬಿಡಬೇಕು. "ಯಾರು ಹಿಂದೆ ಸರಿಯಬೇಕು?" ಎಂದು ಪ್ರಶ್ನೆ ಬಂದಿತು. ಜೊತೆಯಲ್ಲಿದ್ದ ವಿದ್ವಾಂಸರೊಬ್ಬರು "ಈ ಕಾಡನ್ನು ವರ್ಣಿಸಿ ಒಂದು ವಾಕ್ಯವನ್ನು ಇಬ್ಬರೂ ಹೇಳಲಿ. ಯಾವುದು ಚೆನ್ನವಿದೆ ಎಂದು ನಾವೆಲ್ಲಾ ಒಪ್ಪುತ್ತೇವೋ, ಅವರಿಗೆ ಇನ್ನೊಬ್ಬರು ದಾರಿ ಬಿಡಲಿ" ಎಂದು ಸೂಚಿಸಿದರು.  

ಮೊದಲು ಶ್ರೀ ಅಪ್ಪಯ್ಯ ದೀಕ್ಷಿತರು ಹೇಳಿದರು: 
ಅಸ್ತ್ಯರಣ್ಯಂ ತರಣ್ಯ೦ಘರಿ ತರಣ್ಯನ್ತರ್ಧಿ ಪಾದಪಂ 

"ಈ ಕಾಡಿನಲ್ಲಿ ಬೆಳೆದಿರುವ ಹೆಮ್ಮರಗಳು ಸೂರ್ಯನ ಕಿರಣಗಳೇ ಭೂಮಿಗೆ ಬೀಳದಂತೆ ತಡೆದಿವೆ"  ಎಂದು ಅರ್ಥ. ಮರಗಳು ಕಾಲಿನಿಂದ (ಪಾದದಿಂದ-ಅಂದರೆ ಬೇರಿನಿಂದ) ನೀರು ಕುಡಿಯುವುದರಿಂದ ಪಾದಪಗಳು. ತರಣಿ ಅಂದರೆ ಸೂರ್ಯ. ಹೀಗೆ ಪ್ರಾಸಗಳಿಂದ ಕೂಡಿದ ವಿಶೇಷ ರಚನೆ. 

ಈಗ ಶ್ರೀ ವಿಜಯೀ೦ದ್ರರ ಸರದಿ: 
ದರೀಸುಪ್ತ ಝರೀದತ್ತ ಪರೀರಂಭ ಸರೀಸೃಪ೦

"ಕಾಡಿನ ಗುಹೆಗಳಲ್ಲಿ ನಾಗ-ನಾಗಿಣಿಯರು ಒಂದಕ್ಕೊಂದು ಹೆಣೆದುಕೊಂಡು ನಿರ್ಭೀತಿಯಿಂದ ಮಲಗಿವೆ" ಎಂದು ಅರ್ಥ. ದರಿ ಅಂದರೆ ಗುಹೆಗಳು. ಗುಹೆಗಳಲ್ಲಿ ಇರುವ ಸರ್ಪಗಳು. ಹೀಗೆ ಪ್ರಾಸಗಳಿಂದ ಕೂಡಿದ ವಿವರಣೆ. 

ಅಂದಿನಿಂದ ಪ್ರಾರಂಭವಾದ ಅವರಿಬ್ಬರ ಜೊತೆ ಮುಂದೆ ಅನೇಕ ದಶಕಗಳು ಮುಂದುವರೆಯಿತು.

******

ಶ್ರೀ ವಿಜಯೀ೦ದ್ರ ತೀರ್ಥರು ಚತುಷಷ್ಠಿ ಕಲೆಗಳಲ್ಲಿ (ಅರವತ್ತನಾಲ್ಕು ವಿದ್ಯೆಗಳು) ಪರಿಣಿತರು. (ಇವುಗಳಲ್ಲಿ ಕೆಲವು ವಿದ್ಯೆಗಳು. ಮತ್ತೆ ಕೆಲವು ಕಲೆಗಳು). ಹೀಗೆ ಪ್ರಸಿದ್ಧರಾದವರನ್ನು ಪರೀಕ್ಷಿಸಲು ಒಬ್ಬ ದೊಂಬರಾಟ ಮಾಡುವವನು ಬಂದನಂತೆ. "ನೀವು ಅಷ್ಟು ವಿದ್ಯೆ ಕಲಿತಿದ್ದರೆ ನನ್ನಂತೆ ಹಗ್ಗದ ಮೇಲೆ ನಡೆದು ತೋರಿಸಿ" ಎಂದು ಸವಾಲು ಹಾಕಿದನಂತೆ. "ಆಗಲಿ. ಮೊದಲು ನಿನ್ನ ವಿದ್ಯೆ ತೋರಿಸು" ಅಂದರಂತೆ ಶ್ರೀ ವಿಜಯೀ೦ದ್ರರು. ಎತ್ತರದಲ್ಲಿ ಎರಡು ಗೂಟಗಳಿಗೆ ಹಗ್ಗ ಕಟ್ಟಿ ದೊಂಬರವನು ನಡೆದು ತೋರಿಸಿದ. ಈಗ ವಿಜಯೀ೦ದ್ರರ ಸರದಿ.

"ನಮಗೆ ನಿನ್ನ ಹಗ್ಗ ತುಂಬಾ ದಪ್ಪ. ಸಣ್ಣದು ಬೇಕು" ಅಂದರಂತೆ. ಆಶ್ಚರ್ಯ ಚಕಿತನಾದ ದೊಂಬರವನು "ನಿಮಗೆ ಎಂತಹ ಹಗ್ಗ ಬೇಕು?" ಎಂದು ಕೇಳಿದನಂತೆ. "ಬಾಳೆಯ ನಾರು ಆಗಬಹುದು" ಅಂದರಂತೆ. ಬಾಳೆಯ ನಾರಿನಮೇಲೆ ನಡೆದು ತೋರಿಸಿದರಂತೆ.

"ಅಣಿಮಾದಿ ಅಷ್ಟ ಸಿದ್ಧಿಗಳು" ಎಂದು ಕೇಳಿದ್ದೇವೆ. "ಅಣಿಮಾ" ಅಂದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು. ಹೀಗೆ ಸಿದ್ಧಿ ಪಡೆದವರು ದೇಹದ ತೂಕವನ್ನು ಇರುವೆಯಷ್ಟು ಇರುವಂತೆ ಮಾಡಿಕೊಳ್ಳಬಲ್ಲರಂತೆ. ಹೀಗೆ ಮಾಡಿಕೊಂಡು ಬಾಳೆಯ ನಾರಿನ ಮೇಲೆ ನಡೆದು ತೋರಿಸಿದರಂತೆ!

******

ಅನೇಕ ರೀತಿಯಿಂದ ಅವರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಲು ಪ್ರತಿವಾದಿಗಳು ಪ್ರಯತ್ನಿಸಿದರು. "ನಿಮ್ಮ ಬ್ರಹ್ಮಚರ್ಯ ಪರೀಕ್ಷಿಸಬೇಕು" ಎಂದು ಒಂದು ತಂಡ ಬಂದಿತು. "ಹೇಗೆ ಪರೀಕ್ಷಿಸುತ್ತೀರಿ?" ಎಂದು ಕೇಳಿದರೆ, "ನಾಲ್ವರು ವಾರಾಂಗನೆಯರು ಬಂದು ನಿಮಗೆ ಅಭ್ಯಂಜನ ಮಾಡಿಸುತ್ತಾರೆ. ನಿಮಲ್ಲಿ ಯಾವುದೇ ವಿಕಾರ ಆಗದಿದ್ದರೆ ಆಗ ಒಪ್ಪುತ್ತೇವೆ" ಅಂದರು. ಪರೀಕ್ಷೆ ದಿನ ಬಂತು. ಕೌಪೀನ ಧರಿಸಿ ಶ್ರೀ ವಿಜಯೀ೦ದ್ರರು ಕುಳಿತರು.

ವಾರಾಂಗನೆಯರು ಬಂದರು. ಅವರ ದೇಹಕ್ಕೆ ಎಣ್ಣೆ ಹಚ್ಚಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ದೂರ ನಿಂತರು. "ಏಕೆ? ಮುಂದುವರೆಸಿ" ಅಂದರು ಅವರನ್ನು ಕರೆತಂದವರು. "ಆಗುವುದಿಲ್ಲ. ಮೊದಲು ಎಣ್ಣೆ ಹಚ್ಚಿದೆವು. ಈಗ ಅವರ ಮೈ ಮುಟ್ಟಿದರೆ ಛಳಕು ಹೊಡೆದಂತೆ ಆಗುತ್ತಿದೆ. ನಮ್ಮಿಂದ ಇದು ಸಾಧ್ಯವಿಲ್ಲ" ಎಂದು ಹೇಳಿ, ನಮಸ್ಕರಿಸಿ ಹೊರಟುಹೋದರು. 

ಪರೀಕ್ಷೆಗೆ ಎಂದು ಬಂದವರು ಪರೀಕ್ಷೆಗೆ ಕುಳಿತವರನ್ನು ಎಬ್ಬಿಸಿದರು. ಸ್ವಾಮಿಗಳು "ಅಸಂಪ್ರಜ್ಞಾತ ಸಮಾಧಿ" ಹೊಂದಿ ಕುಳಿತಿದ್ದರು. ಮನಸ್ಸು ಧ್ಯಾನದಲ್ಲಿ ಲೀನವಾಗಿತ್ತು. "ಎಲ್ಲಿ? ಪರೀಕ್ಷಕರು ಬರಲಿಲ್ಲವೇ?" ಎಂದರು. ಪರೀಕ್ಷಕರು ಬಂದು, ಪರೀಕ್ಷೆಯ ಪ್ರಯತ್ನ ಮಾಡಿ, ಹೊರಟುಹೋಗಿ ಎಷ್ಟೋ ಹೊತ್ತಾಗಿತ್ತು. 

ಹೀಗೆ ಸಮಾಧಿಯಲ್ಲಿ ಕುಳಿತವರು "ನಾರಾಯಣ" ಅನ್ನುವ ಪದದ ಅರ್ಥಗಳನ್ನು ಚಿಂತಿಸುತ್ತಿದ್ದರಂತೆ. ಸಮಾಧಿಯಿಂದ ಏಳುವವರೆಗೆ 125 ಅರ್ಥಗಳು ಹೊಳೆದಿತ್ತು. ಅದನ್ನೇ "ನಾರಾಯಣ ಶಬ್ದಾರ್ಥ ನಿರ್ವಚನಂ" ಎನ್ನುವೆ ಹೆಸರಿನಲ್ಲಿ ಗ್ರಂಥ ಮಾಡಿಟ್ಟಿದ್ದಾರೆ. 

*******
ಇವು ಮೂರು ನಾಲ್ಕು ಉದಾಹರಣೆಗಳು. ಅಷ್ಟೇ. ಇವುಗಳಲ್ಲಿ ಕೆಲವನ್ನು ಕೆಲವರು ಅನುಮಾನಿಸಬಹುದು. "ಹೀಗೆ ಸಾಧ್ಯವೇ?" ಎಂದು ಹೇಳಬಹುದು. ಹಿಂದಿನ ದಿನದ ಸಮಸ್ಯೆಗೆ ಮಾರನೆಯ ದಿನ ಒಂದು ಪ್ರಭಂಧ ಬರೆದು ತಂದು ವಿವರಿಸುವವರನ್ನು ನಾವು ಇಂದೂ ಕಾಣಬಹುದು. ಅನೇಕ ಕಲೆಗಳಲ್ಲಿ ಮೂಗಿನ ಮೇಲೆ ಬೆರಳಿಡುವಂತೆ ಸಾಧನೆ ಮಾಡಿದವರು, ಮಾಡುತ್ತಿರುವವರು ಈಗಲೂ ಇದ್ದಾರಲ್ಲವೇ?

ಕನ್ನಡಲ್ಲಿ "ಅಜೇಯ ವಿಜಯೀ೦ದ್ರರು" ಅನ್ನುವ ಗ್ರಂಥವಿದೆ. ಇಂಗ್ಲಿಷಿನಲ್ಲಿ 968 ಪುಟಗಳ, ಮೂರು ಸಂಪುಟಗಳ "The invincible Saint" ಹೆಸರಿನ ಪುಸ್ತಕವಿದೆ. "ಶ್ರೀ ರಾಘವೇಂದ್ರ ವಿಜಯ", "ಶ್ರೀ ಗುರುಗುಣಸ್ತವನ" ಮತ್ತು ಮಾಧವ ಸೂರಿಗಳ "ವಿಜಯೀ೦ದ್ರ ವಿಜಯ" ಇದೆ. ಆಸಕ್ತರು ವಿವರಣೆಗಳನ್ನು ನೋಡಬಹುದು. 

Sunday, August 9, 2026

ನಮಗೆ ಅವರೇ ಬೇಕು!


ಕಳೆದ ವಾರ ಧಾರವಾಡದಲ್ಲಿ ನಡೆದ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯ ಪುರ ಪ್ರವೇಶ ಸಂದರ್ಭದಲ್ಲಿ ಆ ಪ್ರದೇಶದ ಸಂಸತ್ ಸದಸ್ಯರೂ, ಕೇಂದ್ರ ಸರ್ಕಾರದ ಮಂತ್ರಿಗಳೂ ಆದ ಶ್ರೀ ಪ್ರಹ್ಲಾದ್ ಜೋಶಿ ಅವರ ಸ್ವಾಗತ ಭಾಷಣದ ವಿಡಿಯೋವೊಂದು ಹೆಚ್ಚಿನ ಪ್ರಚಾರ ಪಡೆದಿದೆ. ಈಗಿನ ಭಾಷೆಯಲ್ಲಿ ಹೇಳಿದರೆ "ವೈರಲ್" ಆಗಿದೆ. "ಈ ಸಂದರ್ಭದಲ್ಲಿ ನಾನು ಅಲ್ಲಿರಬೇಕೆಂದು ಅಭಿಲಾಷೆ ಇತ್ತು. ಆದರೆ ಈಚಿನ ಕೆಲವು ವಿದ್ಯಮಾನಗಳಿಂದ ಮತ್ತು ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅಲ್ಲಿರಲು ಆಗಲಿಲ್ಲ. ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಶುಭಾಶಯಗಳು" ಮುಂತಾಗಿ ಹೇಳಿರುವ ವಿಡಿಯೋ ಅದು. ಶ್ರೀ ಪ್ರಹ್ಲಾದ ಜೋಶಿ ಅವರಿಗೆ ಹೆಚ್ಚಿನ ಜವಾಬ್ದಾರಿಯಾಗಿ ವಿದ್ಯಾ ಖಾತೆಯನ್ನು ಪ್ರಧಾನಮಂತ್ರಿಗಳು ಈಚೆಗೆ ವಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು. 

"ವೈರ" ಅಥವಾ "ವೈರಸ್" ಎನ್ನುವ ಪದಕ್ಕೆ ಭಯಬೀಳುವ ಪರಿಸ್ಥಿತಿ ಒಂದು ಕಾಲದಲ್ಲಿ ಇತ್ತು. ಈಗ ವಿಡಿಯೋಗಳು ವೈರಲ್ ಆಗಲಿ ಎಂದು ಕೆಲವರು ಪ್ರಾಥಿಸುವ ಕಾಲ ಬಂದಿದೆ!

ಈ ಸಂದರ್ಭದಲ್ಲಿ ಮಿತ್ರರೊಬ್ಬರು ಒಂದು ಪ್ರಶ್ನೆ ಕೇಳಿದ್ದಾರೆ. "ಉತ್ತರಾದಿ ಮಠ" ಎನ್ನುವುದು ಬಹಳ ಪ್ರಸಿದ್ಧಿ ಪಡೆದಿದೆ. ಈ ಹೆಸರು ಹೇಗೆ ಬಂತು? "ಪೂರ್ವಾದಿ ಮಠ" ಒಂದು ಇದೆಯೇ?" ಎನ್ನುವುದು ಆ ಪ್ರಶ್ನೆ. 
******

ಶ್ರೀ ಮಧ್ವಾಚಾರ್ಯರು ಕನ್ನಡನಾಡಿನ ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅಲ್ಲಿನ ಪೂಜಾದಿಗಳ ವ್ಯವಸ್ಥೆಯನ್ನು ಚ್ಯುತಿಯಿಲ್ಲದೆ ಮುಂದುವರೆಸಲು ಎಂಟು ಮಠಗಳನ್ನು ಸ್ಥಾಪಿಸಿ ಯತಿಗಳನ್ನು ನೇಮಕ ಮಾಡಿದರು. ಇವು "ಅಷ್ಟ ಮಠಗಳು" ಎಂದು ಪ್ರಸಿದ್ಧಿ ಪಡೆದಿವೆ. ಇದೇ ರೀತಿ ಅವರ ನೇರ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥ ಮುಂತಾದವರು ದ್ವೈತ ಮತ ಪ್ರಸಾರಕ್ಕಾಗಿ ಘಟ್ಟದ ಮೇಲಿನ ಪ್ರದೇಶಗಳಿಗೆ ಮಠವನ್ನು ಮುಂದುವರೆಸಿಕೊಂಡು ಬಂದರು. ಶ್ರೀ ಪದ್ಮನಾಭ ತೀರ್ಥರ ನಂತರ ಕ್ರಮವಾಗಿ ಶ್ರೀ ನರಹರಿ ತೀರ್ಥರು, ಶ್ರೀ ಮಾಧವ ತೀರ್ಥರು, ಶ್ರೀ ಅಕ್ಷೋಭ್ಯ ತೀರ್ಥರು, ಶ್ರೀ ಜಯತೀರ್ಥರು ಮತ್ತು ಶ್ರೀ ವಿದ್ಯಾಧಿರಾಜ ತೀರ್ಥರು ನಡೆಸಿಕೊಂಡು ಬಂದರು. ಶ್ರೀ ವಿದ್ಯಾಧಿರಾಜ ತೀರ್ಥರ ಕಾಲದಲ್ಲಿ ಅವರ ಇಬ್ಬರು ಪ್ರಮುಖ ಶಿಷ್ಯರಾದ ಶ್ರೀ ರಾಜೇಂದ್ರ ತೀರ್ಥರು ಮತ್ತು ಶ್ರೀ ಕವೀಂದ್ರ ತೀರ್ಥರು, ಇವರುಗಳಿಂದ ಎರಡು ಶಾಖೆಗಳು ಆದವು. 

ಯಾವುದೇ ಒಂದು ವಸ್ತುವನ್ನು ಎರಡು ಭಾಗ ಮಾಡಿದಾಗ ಸಂಸ್ಕೃತದಲ್ಲಿ ಅವನ್ನು ಪೂರ್ವ ಭಾಗ ಮತ್ತು ಉತ್ತರ ಭಾಗ ಎಂದು ವ್ಯವಹರಿಸುವುದು ವಾಡಿಕೆ. ಇಂಗ್ಲಿಷಿನಲ್ಲಿ First Half ಮತ್ತು Second Half ಅನ್ನುವ ರೀತಿ. ಈ ಕಾರಣದಿಂದ ಶ್ರೀ ರಾಜೇಂದ್ರ ತೀರ್ಥರ ಪರಂಪರೆ "ಪೂರ್ವಾದಿ ಮಠ" ಎಂದು ಪ್ರಸಿದ್ಧವಾಯಿತು. ಶ್ರೀ ಕವೀಂದ್ರ ತೀರ್ಥರ ಪರಂಪರೆ "ಉತ್ತರಾದಿ ಮಠ" ಎಂದು ಪ್ರಸಿದ್ಧವಾಯಿತು. 

ಶ್ರೀರಾಮಚಂದ್ರನು ಜನಿಸಿದುದು ಸೂರ್ಯವಂಶದಲ್ಲಿ. ಅನೇಕ ಪ್ರಸಿದ್ಧ ರಾಜರು ಸೂರ್ಯವಂಶದಲ್ಲಿ ರಾಜ್ಯಭಾರ ಮಾಡಿದರು. ಮುಂದೆ ಬಂದ ರಘು ಮಹಾರಾಜ ತನ್ನ ಪೂರ್ವಜರಿಗಿಂತಲೂ ಹೆಚ್ಚು ಪ್ರಸಿದ್ಧನಾದನು. ಲೋಕ ವ್ಯವಹಾರದಲ್ಲಿ ಪ್ರಾರಂಭದಲ್ಲಿ ಮಕ್ಕಳನ್ನು "ಇಂತಹವರ ಮಗ" ಎಂದು ಗುರುತಿಸುತ್ತಾರೆ. ಮುಂದೆ ಮಗನು ಹೆಚ್ಚು ಪ್ರಸಿದ್ಧ ಆದಾಗ ಅವನ ತಂದೆಯನ್ನು "ಇಂತಹವರ ತಂದೆ" ಎನ್ನುತ್ತಾರೆ! ಸೂರ್ಯವಂಶದಲ್ಲಿಯೂ ಹೀಗೆಯೇ ಆಯಿತು. ಕಾಳಿದಾಸ ಮಹಾಕವಿಯ ರಘುವಂಶ ಮಹಾಕಾವ್ಯ ಇದನ್ನೇ ವಿವರಿಸುತ್ತದೆ. ರಘು ಮಹಾರಾಜನ ನಂತರ ಅವನ ಮುಂದಿನವರನ್ನು "ರಘು ವಂಶದವರು" ಎಂದು ಹೇಳುವುದು ರೂಢಿ ಆಯಿತು. ಈ ಕಾರಣದಿಂದ ಶ್ರೀರಾಮಚಂದ್ರನು ರಾಘವ ಎಂದೂ ಪ್ರಖ್ಯಾತನಾದನು.

ಪೂರ್ವದಿ ಮಠ ಪರಂಪರೆಯಲ್ಲಿ ಮುಂದೆ ಶ್ರೀ ವ್ಯಾಸತೀರ್ಥರು ಪೀಠಾಧಿಪತಿಗಳಾದರು. ವಿಜಯನಗರ ಅರಸರಾದವರಿಗೆ ರಾಜಗುರುಗಳಾಗಿ, ಅನೇಕ ಗ್ರಂಥಗಳ ಕರ್ತೃವಾಗಿ, ವಿಶೇಷ ಪಾಂಡಿತ್ಯ, ಸಮಾಜ ಸೇವೆ, ಮುಂತಾದುವುಗಳಿಂದ ಅಧಿಕ ಮನ್ನಣೆಗೆ ಪಾತ್ರರಾದರು. ಶ್ರೀ ವ್ಯಾಸ ತೀರ್ಥ ಎಂದು ಹೆಸರಿದ್ದರೂ "ವ್ಯಾಸರಾಜ" ಎಂದಾಗಿ ಸನ್ಯಾಸಿಗಳಿಗೂ ರಾಜರಂತೆ ಮೆರೆದರು. ಈ ಕಾರಣದಿಂದ "ಪೂರ್ವಾದಿ ಮಠ" ಆ ಹೆಸರಿನ ಬದಲಾಗಿ "ವ್ಯಾಸರಾಜ ಮಠ" ಎಂದು ಹೆಸರುವಾಸಿ ಆಯಿತು. 
******

ಉತ್ತರಾಧಿ ಮಠದ ಪರಂಪರೆಯಲ್ಲಿ ಶ್ರೀ ಕವೀಂದ್ರ ತೀರ್ಥರ ನಂತರ ಶ್ರೀ ವಾಗೀಶ ತೀರ್ಥರು ಮತ್ತು ಶ್ರೀ ರಾಮಚಂದ್ರ ತೀರ್ಥರು ಮುಂದುವರೆದರು. ಶ್ರೀ ರಾಮಚಂದ್ರ ತೀರ್ಥರಿಗೆ ಶ್ರೀ ವಿಬುಧೆಂದ್ರ ತೀರ್ಥರು ಮತ್ತು ಶ್ರೀ ವಿದ್ಯಾನಿಧಿ ತೀರ್ಥರು ಇಬ್ಬರು ಪ್ರಮುಖ ಶಿಷ್ಯರು. ಆ ಕಾಲದಲ್ಲಿ ಮತ್ತೆ ಎರಡು ಭಾಗವಾಗಿ ಶ್ರೀ ವಿಭುದೇಂದ್ರ ತೀರ್ಥರ ಮೊದಲ ಭಾಗ (ಪೂರ್ವದಿ ಮಠ ಆಗಲೇ ಇದ್ದ ಕಾರಣ) ತಮಿಳುನಾಡಿನ ಕುಂಭಕೋಣಂ ಎಂಬ ಸ್ಥಳದಲ್ಲಿ ಇದ್ದುದರಿಂದ "ಕುಂಭಕೋಣ ಮಠ" ಎಂದು ಹೆಸರುವಾಸಿ ಆಯಿತು. ಶ್ರೀ ವಿದ್ಯಾನಿಧಿ ತೀರ್ಥರ ಪರಂಪರೆ ಉತ್ತರಾದಿ ಮಠ ಎಂದು ಮುಂದುವರೆಯಿತು. 

ಈ ಕುಂಭಕೋಣ ಮಠದಲ್ಲಿ ಕಾಲಕ್ರಮದಲ್ಲಿ ಶ್ರೀ ವಿಭುದೇಂದ್ರ ತೀರ್ಥರ ಸಂತತಿಯಲ್ಲಿ, ಅವರ ನಂತರ ಆರನೆಯವರಾಗಿ ಶ್ರೀ ರಾಘವೇಂದ್ರ ತೀರ್ಥರು ಪಟ್ಟ ಏರಿದರು. ಶ್ರೀ ರಾಘವೇಂದ್ರ ತೀರ್ಥರು ಅತ್ಯಧಿಕ ಹೆಸರುವಾಸಿಯಾಗಿ ಶ್ರೀ ರಾಯರು ಎಂದು ಕರೆಸಿಕೊಳ್ಳುತ್ತಾರೆ. ಅವರು ವೃಂದಾವನಸ್ಥರಾದದ್ದು ಆಂಧ್ರ ಪ್ರದೇಶದ ಮಂತ್ರಾಲಯದಲ್ಲಿ. ಶ್ರೀ ವ್ಯಾಸತೀರ್ಥರ ಕಾರಣ ಪೂರ್ವಾದಿ ಮಠ ವ್ಯಾಸರಾಜ ಮಠ ಆದಂತೆ, ಶ್ರೀ ರಾಘವೇಂದ್ರ ತೀರ್ಥರ ಕಾರಣ ಕುಂಭಕೋಣ ಮಠ "ರಾಯರ ಮಠ" ಅಥವಾ "ಮಂತ್ರಾಲಯ ಮಠ" ಎಂದು ಪ್ರಸಿದ್ಧವಾಗಿದೆ. 

******


ಸುಮಾರು 1535 ಇಸವಿಯ ಕಾಲ. ಶ್ರೀ ವ್ಯಾಸರಾಯರು (1460-1539) ಪೂರ್ವಾದಿ ಮಠದ ಅಧಿಪತಿಯಾಗಿ ಇದ್ದ ದಿನಗಳು. ಅವರ ಬಳಿ ಒಂದು ಬಲು ದೊಡ್ಡ ಶಿಷ್ಯ ವೃಂದವೇ ಇತ್ತು. ವಿಜಯನಗರದ ರಾಜಗುರುಗಳು. ಶ್ರೀ ಕೃಷ್ಣದೇವರಾಯ ಮೊದಲಾದ ರಾಜರು ಅವರ ಆಜ್ಞಾಧಾರಕರಾಗಿ ನಡೆಯುತ್ತಿದ್ದ ಸಮಯ. ಶ್ರೀಕೃಷ್ಣದೇವರಾಯ ರಾಜ್ಯ ಆಳಿದ (1509-1529) ಕಾಲ ಕಳೆದು ಅವನ ತಮ್ಮ ಶ್ರೀ ಅಚ್ಯುತ ದೇವರಾಯ ರಾಜನಾಗಿದ್ದ ಸಮಯ. ಬ್ರಹ್ಮಚಾರಿ ಮತ್ತು ಗೃಹಸ್ಥ ಶಿಷ್ಯರಲ್ಲದೇ ಅನೇಕ ಸನ್ಯಾಸಿ ಶಿಷ್ಯರೂ ಶ್ರೀ ವ್ಯಾಸರಾಜರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಶ್ರೀ ಕೇಶವ ತೀರ್ಥ ಅನ್ನುವ ಹೆಸರಿನಿಂದ ಶ್ರೀ ಕೃಷ್ಣ ತೀರ್ಥ ಅನ್ನುವವರೆಗೆ 24 ಸನ್ಯಾಸಿ ಶಿಷ್ಯರು ಅವರಲ್ಲಿ ಇದ್ದರಂತೆ. 

ಈ ಶಿಷ್ಯರಲ್ಲಿ ಐದನೆಯವರು ಶ್ರೀ ವಿಷ್ಣು ತೀರ್ಥ. ಬಲು ಚೂಟಿ ಬಾಲ ಸನ್ಯಾಸಿ. ಶ್ರೀ ವ್ಯಾಸ ತೀರ್ಥರ ಬಳಿ ಅನೇಕ ಬಾರಿ ಶ್ರೀಮನ್ ನ್ಯಾಯಸುಧಾ ಮತ್ತು ಸರ್ವಮೂಲ ಗ್ರಂಥ ಪಾಠ ಕಲಿತಿದ್ದರೆಂದು ಉಲ್ಲೇಖವಿದೆ. (ಶ್ರೀ ಮಧ್ವಾಚಾರ್ಯರ ಸಮಸ್ತ ಕೃತಿಗಳ ಒಟ್ಟು ಹೆಸರು "ಸರ್ವಮೂಲ ಗ್ರಂಥಗಳು" ಎಂದು). ಒಂದೊಂದು ಬಾರಿ ಪಾಠ ಹೇಳುವಾಗಲೂ ಹೊಸ ಹೊಸ ವಿಷಯಗಳು. ಹೇಳಿದ್ದನ್ನೇ ಹೇಳಿದರು ಅನ್ನುವಂತಿಲ್ಲ. ಶ್ರೀ ವ್ಯಾಸತೀರ್ಥರ ಸಂಸ್ಥಾನ ಪೂಜೆಗೆ ಬೆಳಗಿನ ವೇಳೆ ಹೂವು-ತುಳಸಿ ಹೊಂದಿಸಿಡುವುದು ಈ ವಿಷ್ಣುತೀರ್ಥರ ಕೆಲಸ. ಒಂದು ದಿನ ಬೆಳಗ್ಗೆ ಶ್ರೀ ವ್ಯಾಸತೀರ್ಥರು ಪೂಜಾಸಮಯಕ್ಕೆ ಬಂದು ಕುಳಿತರು. ಎದುರಿಗಿದ್ದ ತುಳಸಿ ಅವರ ಕಣ್ಣಿಗೆ ಬಿತ್ತು.

"ವಿಷ್ಣು ತೀರ್ಥ, ತುಳಸಿ ಎಲ್ಲಿಂದ ತಂದೆ?"
"ನದಿಯ ದಂಡೆಯ ತೋಟದಿಂದ ಗುರುಗಳೇ"
"ಇದು ಆಗಲೇ ಪರಮಾತ್ಮನಿಗೆ ಅರ್ಪಣೆ ಆಗಿದೆ. ಇದು ನಿರ್ಮಾಲ್ಯ"
"ಗಿಡದಿಂದ ನಾನೇ ಬಿಡಿಸಿ ತಂದಿದ್ದು, ಗುರುಗಳೇ"
"ಇರಬಹುದು. ಆದರೆ ಇದು ಅರ್ಪಣೆ ಆಗಿದೆ. ಬೇರೆ ತೆಗೆದುಕೊಂಡು ಬಾ"

ಬೇರೆ ತುಳಸಿ ತಂದು ಪೂಜೆ ನಡೆಯಿತು. (ಒಮ್ಮೆ ಅರ್ಪಿತವಾದ ಹೂವು ಮತ್ತೆ ಬಳಸುವಂತಿಲ್ಲ. ಆದರೆ ತುಳಸಿಗೆ ಹಾಗಲ್ಲ. ಒಮ್ಮೆ ಅರ್ಪಿಸಿದ್ದರೂ, ಬೇರೆ ಇಲ್ಲದಿದ್ದರೆ ಪೂಜಿಸಿದ ತುಳಸಿಯನ್ನು ತೊಳೆದು ಮತ್ತೆ ಉಪಯೋಗಿಸಬಹುದಂತೆ).

"ವಿಷ್ಣು ತೀರ್ಥ, ನದಿ ದಂಡೆಗೆ ಮತ್ತೆ ಹೋಗು. ಸುತ್ತ ಮುತ್ತ ನೋಡು. ಅಲ್ಲಿ ಯಾರೋ ಮಹಾತ್ಮರು ಬಂದಿದ್ದಾರೆ. ಅವರನ್ನು ಕಂಡು, ಇಲ್ಲಿಗೆ ಕರೆದುಕೊಂಡು ಬಾ"

ವಿಷ್ಣು ತೀರ್ಥರು ಮತ್ತೆ ಅಲ್ಲಿಗೆ ಹೋದರು. ಗುರುಗಳು ಹೇಳಿದ್ದಂತೆ ಅಲ್ಲಿ ತೇಜಸ್ವಿಯಾದ ಸನ್ಯಾಸಿ ಒಬ್ಬರು ಕೆಲ ಶಿಷ್ಯರ ಜೊತೆ ಬಿಡಾರ ಮಾಡಿದ್ದರು. ನಯ-ವಿನಯಗಳಿಂದ ಅವರನ್ನು ಕರೆದುಕೊಂಡು ಬಂದರು.

ಬಂದವರು ಕುಂಭಕೋಣ ಮಠದ ಪರಂಪರೆಯಿಂದ ಬಂದ ಶ್ರೀ ಸುರೇಂದ್ರ ತೀರ್ಥರು. ಶ್ರೀ ಸುರೇಂದ್ರ ತೀರ್ಥರು (1504-1575) ಮಹಾತಪಸ್ವಿಗಳು. ಗಿಡಗಳಿದ್ದ ಇಡೀ ತುಳಸಿಯ ವನವನ್ನೇ ಮಾನಸ ಪೂಜೆ ಮಾಡಿ ಪರಮಾತ್ಮನಿಗೆ ಅರ್ಪಿಸಿದ್ದರು. ಅವರು ಉಪವಾಸ ವ್ರತಗಳಲ್ಲಿ ಎತ್ತಿದ ಕೈ. ಮೂರು ಬಾರಿ ಪಾದಚಾರಿಯಾಗಿ ಇಡೀ ದೇಶ ಸಂಚಾರ ಮಾಡಿದ ಧೀಮಂತರು. ವ್ಯಾಸರಾಜರಿಗಿಂತ ವಯಸ್ಸಿನಲ್ಲಿ ನಲವತ್ತು ವರುಷದಷ್ಟು ಚಿಕ್ಕವರು. ಹಾಲು-ಜೇನು ಬೆರೆತಂತೆ ಆಯಿತು.

****** 

ಮಾರನೆಯ ದಿನ ಭಿಕ್ಷಾಸ್ವೀಕಾರದ ಸಮಯ. ಶ್ರೀ ಸುರೇಂದ್ರ ತೀರ್ಥರು ಅಂಗಯ್ಯಲ್ಲಿ ತೀರ್ಥ ಹಿಡಿದು ಹಾಗೆಯೇ ಕುಳಿತರು. ಶ್ರೀ ವ್ಯಾಸತೀರ್ಥರು ನೋಡಿದರು.

"ಎಲ್ಲ ಆಯಿತು. ತಾವು ಧರಿಸಬಹುದು"
"ತಮ್ಮಲ್ಲಿ ನಮ್ಮದೊಂದು ಕೋರಿಕೆ ಇದೆ"
"ನಮ್ಮಲ್ಲಿ ಕೋರಿಕೆಯೇ? ನಿಮಗೆ ಕೊಡಬಹುದಾದದ್ದು ನಮ್ಮಲ್ಲಿ ಏನಿದೆ? ಮಠದ ಪಟ್ಟದ ದೇವರನ್ನು ನಾವು ಕೊಡುವಂತಿಲ್ಲ. ಈ ವಿಷ್ಣು ತೀರ್ಥ ನಮ್ಮ ಪ್ರಿಯ ಶಿಷ್ಯ. ಇವೆರಡನ್ನು ಬಿಟ್ಟು ಬೇರೆ ಏನನ್ನು ಕೇಳಿದರೂ ನಾವು ಕೊಡಲು ಸಿದ್ಧರಿದ್ದೇವೆ. ಸಂಕೋಚವಿಲ್ಲದೆ ಹೇಳಿ"
"ಪಟ್ಟದ ದೇವರನ್ನು ನಾವು ಕೇಳುವುದಿಲ್ಲ. ನಮಗೆ ನಮ್ಮ ಗುರುಗಳಿಂದ ಬಂದಿರುವುದು ಇದೆ"
"ಹಾಗಿದ್ದರೆ ಮತ್ತೇನು?"
"ನಮಗೆ ವಿಷ್ಣು ತೀರ್ಥರನ್ನು ಕೊಡಿ"
"ಇದೇ ಆಗಬೇಕೇ?"
"ನಮಗೆ ಅವರೇ ಬೇಕು"
"ಇದೇ ತಮ್ಮ ಇಚ್ಛೆಯೇ?"
"ಹೌದು. ಹಾಗೆಂದು ನಮಗೆ ಶ್ರೀಹರಿಯ ಪ್ರೇರಣೆ ಆಗಿದೆ"
"ಸರಿ. ಆಗಬಹುದು. ಆಪೋಶನ ಧರಿಸಿರಿ"

ಭಿಕ್ಷಾಸ್ವೀಕಾರ ಆಯಿತು. ಪ್ರಾಯಶಃ ಶ್ರೀ ವ್ಯಾಸತೀರ್ಥರು ವಿಷ್ಣು ತೀರ್ಥರನ್ನು ತಮ್ಮ ಮುಂದೆ ಪಟ್ಟಕ್ಕೆ ಇರಲಿ ಎಂದುಕೊಂಡಿದ್ದಿರಬಹುದು. ಕೊಟ್ಟ ಮಾತಿನಂತೆ ಶ್ರೀ ವಿಷ್ಣುತೀರ್ಥರು ಪೂರ್ವಾದಿ ಮಠದಿಂದ ಕುಂಭಕೋಣ ಮಠಕ್ಕೆ ವರ್ಗಾವಣೆ ಆದರ

ಬಾಲಕರನ್ನು "ದತ್ತು ಸ್ವೀಕಾರ" ಮಾಡುವಾಗ ಹಾಗೆ ದತ್ತು ತೆಗೆದುಕೊಂಡವರು ತಮ್ಮ ಮನೆತನಕ್ಕೆ ತಕ್ಕುದಾಗಿ ಹೆಸರು ಬದಲಿಸುವ ಪದ್ಧತಿ ಉಂಟು. ಮನೆಗೆ ಮದುವೆಯಾಗಿ ಬಂದ ಸೊಸೆಗೆ ಹೀಗೇ ಹೆಸರು ಬಲಿಸುವ ಪದ್ಧತಿ ಅನೇಕ ಮನೆತನಗಳಲ್ಲಿ ಉಂಟು. ಸನ್ಯಾಸಿಗಳನ್ನು ಹೀಗೆ ದತ್ತು ಸ್ವೀಕಾರ ಮಾಡುವಾಗ "ದಂಡ ಪಲ್ಲಟ" ಅನ್ನುವ ಕ್ರಮದಂತೆ ಅವರ ದಂಡ (ಸನ್ಯಾಸಿಗಳು ಹಿಡಿದಿರುವ ಕೋಲು) ಬದಲಾಯಿಸಿ ಸ್ವೀಕರಿಸುತ್ತಾರೆ. 

ಹೀಗೆ ಮಾಡಿದಾಗ ಶ್ರೀ ವಿಷ್ಣು ತೀರ್ಥರು "ಶ್ರೀ ವಿಜಯೇಂದ್ರ ತೀರ್ಥ" ಎಂದು ಹೆಸರು ಪಡೆದು ಕುಂಭಕೋಣ ಮಠದಲ್ಲಿ ಪ್ರಖ್ಯಾತರಾದರು. 104 ಗ್ರಂಥಗಳನ್ನು ರಚಿಸಿ, ಮಹಾನ್ ಪಂಡಿತರನ್ನು ಜಯಿಸಿ ಹೆಸರಿಗೆ ತಕ್ಕಂತೆ ವಿಜಯೇಂದ್ರರೇ ಆದರು.

*******

ಶ್ರೀ ರಾಘವೇಂದ್ರ ರಾಯರ ಸ್ತೋತ್ರದಲ್ಲಿ "ವಿಜಯೇಂದ್ರ ಕರಾಬ್ಜೋತ್ಥಾ ಸುಧೀಂದ್ರ ವರಪುತ್ರಕಃ" ಎಂದು ಹೇಳುತ್ತೇವೆ. ಶ್ರೀ ವಿಜಯೇಂದ್ರ ಗುರುಗಳ ಶಿಷ್ಯರು ಶ್ರೀ ಸುಧೀಂದ್ರ ತೀರ್ಥರು. ಶ್ರೀ ಸುಧೀಂದ್ರ ತೀರ್ಥರ ಶಿಷ್ಯರೇ ಶ್ರೀ ರಾಘವೇಂದ್ರ ಗುರು ಸಾರ್ವಭೌಮರು. 

Monday, March 30, 2026

ಅಕ್ಷಯ ತೃತೀಯಾ ಗಂಧ ಲೇಪನ

 

ಇನ್ನು ಕೆಲವೇ ದಿನಗಳಲ್ಲಿ "ಅಕ್ಷಯ ತೃತೀಯಾ" ಬರುವುದಿದೆ. ಪ್ರತಿ ವರ್ಷ ವೈಶಾಖ ಮಾಸದ ಮೂರನೆಯ ದಿನ (ವೈಶಾಖ ಶುಕ್ಲ ತೃತೀಯ) ಒಂದು ವಿಶೇಷವಾದ ದಿನ. ಆ ದಿನವನ್ನು ಒಂದು "ಸ್ವಯಂ ಸಿದ್ಧ ಮುಹೂರ್ತ" ಎಂದು ತಿಳಿದು ಅದಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಆ ದಿನ ಮಂತ್ರಾಲಯದಲ್ಲಿರುವ ಶ್ರೀ ಗುರು ರಾಘವೇಂದ್ರ ರಾಯರ ಮೂಲ ಬೃಂದಾವನ ಮತ್ತು ದೇಶದ ವಿವಿಧ ಕಡೆಗಳಲ್ಲಿ ಇರುವ "ಮೃತ್ತಿಕಾ ಬೃಂದಾವನ" (ಈಗ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿಯೂ ಉಂಟು. ಅಮೇರಿಕ ಸಂಯುಕ್ತ ಸಂಸ್ಥಾನ (USA) ಒಂದರಲ್ಲಿಯೇ ಹನ್ನೆರಡು ಇಂತಹ ಬೃಂದಾವನಗಳಿವೆಯಂತೆ) ಇವುಗಳನ್ನು ಶ್ರೀಗಂಧ ಲೇಪನದಿಂದ ಅಲಂಕರಿಸಲಾಗುತ್ತದೆ. ಇದೊಂದು ವಿಶೇಷ ಸೇವೆ. ಅಂದು ಭಕ್ತಾದಿಗಳು ಸರತಿಯಲ್ಲಿ ಕಾದಿದ್ದು ದರ್ಶನ ಪಡೆಯುತ್ತಾರೆ. 

ಅಕ್ಷಯ ತೃತೀಯಾ ದಿನದಂದು ಹೀಗೆ ವೃಂದಾವನಕ್ಕೆ ಗಂಧ ಲೇಪನ ಏಕೆ ಮಾಡುತ್ತಾರೆ? ಹೀಗೆ ಪ್ರಶ್ನೆ ಮಾಡಿದರೆ ಅನೇಕ ವೇಳೆ ಸರಿಯಾದ ಉತ್ತರ ಬರುವುದಿಲ್ಲ. "ಬೇಸಿಗೆ ಕಾಲ. ಆದ್ದರಿಂದ ತಂಪಾಗಿರಲಿ ಎಂದು ಹೀಗೆ ಮಾಡುತ್ತಾರೆ" ಅನ್ನುವುದು ಸಾಮಾನ್ಯ ಉತ್ತರ. ಹಾಗಿದ್ದರೆ, ಎರಡು-ಮೂರು ತಿಂಗಳ ಕಾಲ ಕಡು ಬೇಸಿಗೆ ಇರುತ್ತದೆ. ಅದರಲ್ಲಿ ಈ ದಿನವನ್ನೇ ಏಕೆ ಆರಿಸಿಕೊಂಡರು? ಬಾಕಿ ದಿನ ಬೇಸಗೆಯ ಬೇಗೆ ಇಲ್ಲವೇ? ಆಗಾಗ ಏಕೆ ಮಾಡುವುದಿಲ್ಲ? ಇವೆಲ್ಲಾ ಸಾಧುವಾದ ಪ್ರಶ್ನೆಗಳೇ. ಅಕ್ಷಯ ತೃತೀಯ ಹನ್ನೆರಡು ತಿಂಗಳ ಮಧ್ಯದಲ್ಲಿ ಬರುವ ಒಂದು ದಿನ. ಅದು ಹೇಗೆ "ಸ್ವಯಂ ಸಿದ್ಧ ಮುಹೂರ್ತ" ಆಯಿತು? ಅದಕ್ಕೆ ಅಂತಹ ವಿಶೇಷವೇನು? ಇದೂ ಸಹ ಯೋಚಿಸಬೇಕಾದ ವಿಷಯವೇ. 

*****

ಪ್ರತಿ ಸಂವತ್ಸರದ ಪ್ರಾರಂಭದ ದಿನ ಯುಗಾದಿ. ಅದು ಕಾಲಮಾನದ ಲೆಕ್ಕದ ಪ್ರಾರಂಭ. ಹೀಗಾಗಿ ಅದೊಂದು ಸ್ವಯಂ ಸಿದ್ಧ ಮುಹೂರ್ತ ಆಯಿತು. ವಿಜಯದಶಮಿ ವಿಶೇಷ ಎಲ್ಲರಿಗೂ ಗೊತ್ತಿರುವುದೇ. ಅದೂ ಸರಿ. ಬಲಿಪಾಡ್ಯಮಿ ಅರ್ಧ ದಿನವೂ ಒಂದು ವಿಶೇಷವೇ. ಅಂದು ಬಲಿಯಿಂದ ವಾಮನನು ಮೂರು ಲೋಕಗಳ ಅಧಿಪತ್ಯವನ್ನು ಕಸಿದುಕೊಂಡು ದೇವೇಂದ್ರನಿಗೆ ಹಿಂದಿರುಗಿಸಿದನು. ಇದರ ವಿವರಗಳಿಗೆ ಸಂಬಂಧಿಸಿದ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಆದರೆ ಈ ಅಕ್ಷಯ ತೃತೀಯ ಹೇಗೆ ವಿಶೇಷ? 

ಚತುರ್ಮುಖ ಬ್ರಹ್ಮ ದೇವರು ತಮ್ಮ ಸೃಷ್ಟಿಕಾರ್ಯ ಪ್ರಾರಂಭ ಮಾಡಿದ ದಿನ ಅಕ್ಷಯ ತೃತೀಯಾ. ಯುಗಾದಿ ಕಾಲಮಾನದ ಲೆಕ್ಕದ ಕಾರಣ ಮುಖ್ಯವಾದರೆ ಅಕ್ಷಯ ತೃತೀಯಾ ಸೃಷ್ಟಿಯ ಪ್ರಾರಂಭವಾದದ್ದರಿಂದ ವಿಶೇಷವಾಯಿತು. ಅದೂ ಒಂದು ಸ್ವಯಂ ಸಿದ್ಧ ಮುಹೂರ್ತ ಆಯಿತು. ಯಾವುದೇ ಕೆಲಸ ಪ್ರಾರಂಭ ಮಾಡಲು, ಮತ್ತು ಮುಖ್ಯವಾದ ಕಾರ್ಯಗಳನ್ನು ಮಾಡಲು ದಿನ ಶುದ್ದಿ ನೋಡಿ ಒಳ್ಳೆಯ ಸಮಯ ನಿರ್ಧರಿಸುವ ಪರಿಪಾಠ ಇದೆ. ಆದರೆ ಈ ನಾಲ್ಕು ದಿನಗಳಲ್ಲಿ ಅವುಗಳ ಅವಶ್ಯಕತೆ ಇಲ್ಲ ಎಂದು ನಂಬುತ್ತಾರೆ. 

ಅಕ್ಷಯ ತೃತೀಯಾ ದಿನದಂದು ಮಾಡಿದ ಒಳ್ಳೆಯ ಕೆಲಸಗಳಿಗೆ (ದಾನ, ಜಪ, ತಪ ಮುಂತಾದುವು) ಹೆಚ್ಚಿನ ಫಲ ಎಂದು ನಂಬಿಕೆ. ಆದರೆ ಈಗ ಅದೊಂದು "ಮಾರಾಟ ಮಾಡುವ ಮೋಡಿ" ಆಗಿದೆ. ಇದರ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

*****

ಶ್ರೀ ವೈಕುಂಠದ ದ್ವಾರ ಪಾಲಕರಾದ ಜಯ-ವಿಜಯರು ಸನಕ-ಸನಂದನಾದಿಗಳಿಗೆ ಶ್ರೀಮನ್ನಾರಾಯಣನ ದರ್ಶನಕ್ಕೆ ಅಡ್ಡಿ ಮಾಡಿದ ಕಾರಣದಿಂದ ಶಾಪಕ್ಕೊಳಗಾದ ಕಥೆ ಎಲ್ಲರಿಗೂ ಗೊತ್ತು. ಆ ಕಾರಣದಿಂದ ಅವರು ಮೂರು ಅಸುರ ಜನ್ಮ ಪಡೆದರು. ಶ್ರೀಹರಿಯ ಹೇಳಿಕೆಯ ಅನುಸಾರ ಅವನೇ ಮೂರು ಅವತಾರ ತೆಗೆದು ಅವರ ವಧೆ ಮಾಡಿ ಅವರ ಶಾಪ ವಿಮೋಚನೆ ಮಾಡಿದನು. 

ಮೊದಲಿಗೆ ಅವರು ಹಿರಣ್ಯಾಕ್ಷ-ಹಿರಣ್ಯಕಶಿಪು ಆಗಿ ಒಂದೇ ತಾಯಿ ದಿತಿಯ ಅವಳಿ ಮಕ್ಕಳಾಗಿ ಹುಟ್ಟಿದರು. ಎರಡನೆಯ ಬಾರಿ ಒಂದೇ ತಾಯಿ ಕೈಕಸೆಯ ಬೇರೆ ಬೇರೆ ಇಬ್ಬರು ಮಕ್ಕಳು ರಾವಣ-ಕುಂಭಕರ್ಣ ಆಗಿ ಹುಟ್ಟಿದರು. ಮೂರನೆಯ ಸಾರಿ ಅಕ್ಕ-ತಂಗಿಯರ ಮಕ್ಕಳು (ಶ್ರುತದೇವೆ ಮತ್ತು ಶ್ರುತಶ್ರವೆ - ವಸುದೇವನ ತಂಗಿಯರು) ಶಿಶುಪಾಲ-ದಂತವಕ್ತ್ರ ಆಗಿ ಹುಟ್ಟಿದರು. ಕ್ರಮವಾಗಿ ಮೊದಲಿಗೆ ವರಾಹ-ನರಸಿಂಹ ಎಂಬ ಎರಡು ರೂಪ, ಎರಡನೆಯದಾಗಿ ಶ್ರೀರಾಮ ರೂಪ ಮತ್ತು ಕಡೆಯದಾಗಿ ಶ್ರೀಕೃಷ್ಣ ರೂಪದಿಂದ ಅವರ ನಿಗ್ರಹವನ್ನು ಶ್ರೀಹರಿಯು ಮಾಡಿದನು. 

ಅವಳಿ ಮಕ್ಕಳಲ್ಲಿ ಲೋಕಾರೂಢಿಯಂತೆ ಮೊದಲು ತಾಯಿಯ ಗರ್ಭದಿಂದ ಬಂದವನು ಅಣ್ಣ ಎಂದೂ, ನಂತರ ಜನಿಸಿದವನು ತಮ್ಮ ಎಂದೂ ವ್ಯವಹರಿಸುತ್ತಾರೆ. ಆದರೆ ನಂತರ ಹುಟ್ಟಿದವನ ಗರ್ಭಧಾರಣೆ ಮೊದಲು ಆಗಿರುತ್ತದೆ. ಮೊದಲು ಜನಿಸಿದವನ ಗರ್ಭಧಾರಣೆ ಆಮೇಲೆ ಆಗಿರುತ್ತದೆ. ಈ ಕಾರಣದಿಂದ ವಾಸ್ತವವಾಗಿ ಹಿರಣ್ಯ ಕಷಿಪು ನಂತರ ಹುಟ್ಟಿದರೂ ಅಣ್ಣನು. ಹಿರಣ್ಯಾಕ್ಷನು ಮೊದಲು ಜನಿಸಿದರೂ ತಮ್ಮ. ಇದು ಸೂಕ್ಷ್ಮವಾದ ವಾಸ್ತವ. ಶ್ರೀಹರಿಯು ಮೊದಲು ವರಾಹರೂಪದಿಂದ ಹಿರಣ್ಯಾಕ್ಷನನ್ನೂ, ನಂತರ ನರಸಿಂಹ ರೂಪದಿಂದ ಹಿರಣ್ಯಕಶಿಪುವನ್ನೂ ಸಂಹರಿಸಿದನು. 

*****

ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದನನ್ನು ತಂದೆಯು ಬಹಳವಾಗಿ ಹಿಂಸಿಸಿದನು. ಪ್ರಹ್ಲಾದನು ಶ್ರೀಹರಿಯನ್ನು ಬಲವಾಗಿ ನಂಬಿ ಎಲ್ಲ ತೊಂದರೆಗಳನ್ನೂ ಧೈರ್ಯವಾಗಿ ಎದುರಿಸಿದನು. ಕಡೆಗೆ ನರಸಿಂಹರೂಪದಿಂದ ಹಿರಣ್ಯನ ಸಂಹಾರವಾಯಿತು. ನರಸಿಂಹನ ಸ್ತುತಿ ಮಾಡಿದ ಬಾಲಕ ಪ್ರಹ್ಲಾದನು ವರಾಹ ಮತ್ತು ನರಸಿಂಹ ರೂಪ ಎರಡನ್ನೂ ಒಟ್ಟಿಗೆ ನೋಡಬೇಕೆಂದು ಶ್ರೀಹರಿಯನ್ನು ಪ್ರಾರ್ಥಿಸಿದನು. ಆಗ ಶ್ರೀಹರಿಯು ಎರಡು ರೂಪಗಳನ್ನೂ ಒಟ್ಟಿಗೆ ತೋರಿಸಿದನಂತೆ. ಸಾಮಾನ್ಯವಾಗಿ ಕೆಲವೇ ಕೆಲವು ವರಾಹ ರೂಪಿ ಶ್ರೀಹರಿಯ ದೇವಾಲಯಗಳು ಉಂಟು. ನರಸಿಂಹ ರೂಪಿ ಶ್ರೀಹರಿಯ ದೇವಾಲಯಗಳು ಅನೇಕ. ಆದರೆ, ಶ್ರೀವರಾಹ-ನರಸಿಂಹ ರೂಪಿ ಶ್ರೀಹರಿಯ ದೇವಾಲಯ ಒಂದಾಗಿ ಇರುವುದು ಒಂದೇ ಕಡೆ.  ಅದು ಆಂಧ್ರ ಪ್ರದೇಶದ ಸಿಂಹಾಚಲದಲ್ಲಿ. 

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರದ ಉತ್ತರಭಾಗದಲ್ಲಿ "ಸಿಂಹಾಚಲ ಪರ್ವತ ಶ್ರೇಣಿ" ಇದೆ. ಈ ಬೆಟ್ಟ ಪ್ರದೇಶದಲ್ಲಿ ಸಿಂಹಾಚಲ ವರಾಹ-ಲಕ್ಷ್ಮಿನರಸಿಂಹ ದೇವಾಲಯವಿದೆ. ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಿಂದ ಸುಮಾರು ಇಪ್ಪತ್ತು ಕಿಲೋಮೀಟರು ದೂರ. ಈಗ ಈ ಭಾಗ ನಗರದಲ್ಲಿಯೇ ಸೇರಿಹೋದಂತಿದೆ. ಮೇಲಿನ ಚಿತ್ರದಲ್ಲಿ ಕಾಡಿನ ಮಧ್ಯೆ ಇರುವ ದೇವಾಲಯವನ್ನು ನೋಡಬಹುದು. 

ಈ ದೇವಾಲಯದಲ್ಲಿ ಒಂದು ವಿಶೇಷ. ಇಬ್ಬರು ರಕ್ಕಸರನ್ನು ಸಂಹರಿಸಿದ ಶ್ರೀಹರಿಯು ಆ ಸಮಯದಲ್ಲಿ ಅತಿ ಉಗ್ರ ರೂಪವನ್ನು ಧಾರಣೆ ಮಾಡಿದ್ದನಂತೆ. ಆ ರೂಪಗಳನ್ನು ನೋಡಲು ದೇವತೆಗಳಿಗೂ ಅಸಾಧ್ಯವಾಗಿತ್ತಂತೆ. ನೇರವಾಗಿ ನೋಡಲು ಕಷ್ಟವಾದ ತೇಜೋಮೂರ್ತಿಗಳ ಸಂಗಮ. ಅತಿ ಉಗ್ರ ರೂಪ. ಬಾಲಕ ಪ್ರಹ್ಲಾದನು ಭಯವಿಲ್ಲದೆ ನೋಡಿದ ಮಹಾನುಭಾವ. ಅವನಿಗೆ ಈ ಉಗ್ರರೂಪಗಳ ಶ್ರೀಹರಿಯೂ, ಸೌಮ್ಯ ರೂಪಿ ಶ್ರೀಹರಿಯೂ ಒಂದೇ!

*****


ಪುರಾತನವಾದ ಈ ದೇವಸ್ಥಾನ ಕಾಡಿನಲ್ಲಿ ಮುಚ್ಚಿಹೋಗಿತ್ತಂತೆ. ಅದನ್ನು ಚಂದ್ರನ ಮೊಮ್ಮಗ, ಬುಧ-ಇಳಾ ದಂಪತಿಯರ ಮಗನಾದ ಪುರೂರವ ಮತ್ತು ಊರ್ವಶಿಯರು (ನಹುಷನ ತಂದೆ ಮತ್ತು ಯಯಾತಿಯ ತಾತ) ಪುನಃ ಜನರಿಗೆ ದರ್ಶನ ಸಿಗುವಂತೆ ಮಾಡಿದರು ಎಂದು ಸ್ಥಳ ಪುರಾಣ ಹೇಳುತ್ತದೆ. ಈ ದೇವಳದಲ್ಲಿ ಹದಿನಾರು ಕಂಭಗಳ ನಾಟ್ಯಮಂಟಪ ಮತ್ತು ತೊಂಬತ್ತಾರು ಕಂಭಗಳ ಕಲ್ಯಾಣ ಮಂಟಪ ಉಂಟು. 

ಉಗ್ರ ವರಾಹ-ಲಕ್ಷ್ಮೀನರಸಿಂಹ ವಿಗ್ರಹವನ್ನು ವರುಷದ ಒಂದು ದಿನ ಬಿಟ್ಟು, ಬಾಕಿ ಎಲ್ಲಾ ದಿನಗಳಲ್ಲೂ ಶ್ರೀಗಂಧ ಲೇಪನದಿಂದ ಮುಚ್ಚಿರುತ್ತಾರೆ. ಈ ಕಾರಣದಿಂದ ಅದು ಒಂದು ದೊಡ್ಡ ಶಿವಲಿಂಗ ಇರುವಂತೆ ಕಾಣುತ್ತದೆ. ಆ ಗಂಧದಿಂದ ತುಂಬಿದ ಮೂರ್ತಿಯ ಮೇಲೆ ನಾಮ, ಕಣ್ಣು, ಮೂಗು, ಮುಂತಾದುವನ್ನು ಅಂಟಿಸಿ ಅರ್ಚಿಸುತ್ತಾರೆ. ದರ್ಶನಕ್ಕೆ ಬಂದ ಭಕ್ತರಿಗೆ ಕಾಣುವ ಮೂರ್ತಿಯು ಮೇಲಿನ ಚಿತ್ರದಂತೆ ಇರುತ್ತದೆ. 

ವರುಷದ ಒಂದು ದಿನ ಮಾತ್ರ, ಅಕ್ಷಯ ತೃತೀಯಾ ದಿನದಂದು, ಈ ಗಂಧ ಲೇಪನ ಎಲ್ಲವನ್ನೂ ತೆಗೆದು ಮೂಲ ವಿಗ್ರಹವನ್ನು ನೋಡಲು ಅವಕಾಶ ಮಾಡಿಕೊಡುತ್ತಾರೆ. ಆ ದಿನವೂ ವಿಗ್ರಹವನ್ನು ನೇರವಾಗಿ ನೋಡಿದರೆ ಕಣ್ಣುಗಳು ಉರಿಯುತ್ತವೆ ಮತ್ತು ರಕ್ತ ಬರುತ್ತದೆ ಎಂದು ನಂಬಿಕೆ. ಆದ ಕಾರಣ ಅಕ್ಷಯ ತೃತೀಯಾ ದಿನದಂದು ಮೂಲ ವಿಗ್ರಹದ ಮುಂದೆ ಒಂದು ಅತಿ ತೆಳುವಾದ ಪರದೆ ಇರುತ್ತದೆ. ಈ ಪರದೆಯ ಮೂಲಕ ವಿಗ್ರಹ ಚೆನ್ನಾಗಿ ಕಾಣುತ್ತದಂತೆ. ಅಂದು ದರ್ಶನ ಪಡೆಯಲು ಜನಜಂಗುಳಿ. ತಿರುಪತಿಯ ಶ್ರೀನಿವಾಸನ ದರ್ಶನದಂತೆ ದರ್ಶನ ಬಲು ಕಠಿಣವಂತೆ. ದರ್ಶನ ಸಿಕ್ಕರೆ ಸಿಗಬಹುದು. ಇಲ್ಲದಿದ್ದರೆ ಇಲ್ಲ. ಹೀಗೆಂದು ನೋಡಿ ಬಂದ  ಮಹಾನುಭಾವರು ಹೇಳುತ್ತಾರೆ. 

*****

ಪರಮಾತ್ಮನಿಗೆ ಅರ್ಪಿಸಿದ ಪ್ರತಿಯೊಂದು ಪದಾರ್ಥವೂ ಪೂಜ್ಯವೇ. ಪೂಜೆಯ ನಂತರ ಅವು ಪ್ರಸಾದವೇ. ಹೀಗಾಗಿ ಅವಕ್ಕೆ ಹೆಚ್ಚಿನ ಮಹತ್ವವುಂಟು. ನಾವು ಸಾಮಾನ್ಯವಾಗಿ ತಿಳಿದಂತೆ ಹಣ್ಣು-ಹಂಪಲು, ತಿಂಡಿ-ಆಹಾರ ಪದಾರ್ಥಗಳು ಮಾತ್ರ ಪ್ರಸಾದ ಅಲ್ಲ. ಹೂವು-ತುಲಸಿಗಳೂ ಪ್ರಸಾದವೇ. ಪೂಜೆಯ ವೇಳೆ ಕೊಟ್ಟ ವಸ್ತ್ರವೂ ಪ್ರಸಾದವಾಗಿ "ಶೇಷ ವಸ್ತ್ರ" ಎಂದು ಉಪಯೋಗ ಆಯಿತು. ಧೂಪಕ್ಕೆ ಉಪಯೋಗಿಸಿದ ಕೆಂಡವು ಆರಿದ ಬಳಿಕ ಇಜ್ಜಲಾಯಿತು. ಅದೂ ಪ್ರಸಾದ ಆದುದರಿಂದ ಹಣೆಯಲ್ಲಿ ಅಂಗಾರ ಆಗಿ ಸ್ವೀಕಾರ ಆಯಿತು. ತಿಂಡಿ-ತಿನಿಸುಗಳು, ಹಣ್ಣು-ಹಂಪಲುಗಳು ಸೇವನೆಗೆ ಯೋಗ್ಯ ಪರಮ ಪ್ರಸಾದ ಆಯಿತು. ಹೀಗೆ ಅವುಗಳ ಪೂಜ್ಯತೆ. 

ಪೂಜೆಗೆ ಗಂಧ ತೆಗೆದು ಅರ್ಪಿಸಿದ್ದಾಯಿತು. ಅದರಲ್ಲಿ ಮಿಕ್ಕಿದ್ದು ಹೀಗೆಯೇ ಪ್ರಸಾದ ಆಯಿತು. ನಮ್ಮ ದೇಹದ ಮೇಲೆ ಹಚ್ಚಿಕೊಳ್ಳುವುದಾಯಿತು. ಅದೇ ಪ್ರಸಾದ ಆದಮೇಲೆ ಅವನ ವಿಗ್ರಹದ ಮೇಲೆ ಏರಿಸಿದ ಗಂಧ ದೊಡ್ಡ ಪ್ರಸಾದ ಎಂದು ಬೇರೆ ಹೇಳಬೇಕಾಗಿಲ್ಲ. ಪ್ರಹ್ಲಾದರಾಜರು ಅವನ್ನು ಪ್ರಸಾದರೂಪದಲ್ಲಿ ಧರಿಸಿದರಂತೆ. 

ಇದೇ ಪ್ರಹ್ಲಾದರಾಜರು ಈಗ ಶ್ರೀ ರಾಘವೇಂದ್ರ ರಾಯರಾಗಿ ಮಂತ್ರಾಲಯದಲ್ಲಿ ವೃಂದಾವನದಲ್ಲಿ ಕುಳಿತಿದ್ದಾರೆ ಎಂದು ನಂಬಿಕೆ. ಅದೇ ಭಾವ ಮೃತ್ತಿಕಾ ವೃಂದಾವನಗಳಲ್ಲಿಯೂ ಉಂಟು. "ಅಂಥ  ಇಂಥವರಲ್ಲ" ಅನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಇದನ್ನು ನೋಡಿದ್ದೇವೆ. (ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು). ಈ ಕಾರಣ ಅಕ್ಷಯ ತೃತೀಯಾ ದಿನದಂದು ಸಿಂಹಾಚಲ ಶ್ರೀ ವರಾಹ-ಲಕ್ಷ್ಮಿ ನರಸಿಂಹನ ದೇವಾಲಯದಲ್ಲಿ ಮೂಲ ಮೂರ್ತಿಗೆ ಗಂಧವಿಲ್ಲದ ದಿನ ಇಲ್ಲಿ ಶ್ರೀ ರಾಯರ ವೃಂದಾವನಕ್ಕೆ ಅವನ ಪ್ರಸಾದ ರೂಪದ ಗಂಧ ಲೇಪನ. ವರುಷದ ಎಲ್ಲ ದಿನ ಅಲ್ಲಿ ಅವನಿಗೆ ಗಂಧ ಲೇಪನ ಮತ್ತು ಭಕ್ತರಿಗೆ ಹಾಗೆ ದರ್ಶನ. ಅವನಿಗೆ ಹೀಗೆ ಗಂಧವಿಲ್ಲದ ಒಂದು ದಿನ ಇಲ್ಲಿ ಶ್ರೀ ರಾಯರಿಗೆ ಅವನ ಪ್ರಸಾದರೂಪದ ಗಂಧ ಲೇಪನ ಮತ್ತು ಭಕ್ತರಿಗೆ ಹೀಗೆ ದರ್ಶನ. ಮಾರನೆಯ ದಿನ ವೃಂದಾವನದ ಮೇಲಿರುವ ಗಂಧ ಶ್ರೀ ರಾಯರ ಪ್ರಸಾದ. ಅದಕ್ಕೆ ಬಹಳ ಗೌರವ ಮತ್ತು ಬೆಲೆ. ಹೀಗೆ ನಡೆಯುತ್ತಿದೆ!

Thursday, December 25, 2025

ಅಂಥ ಇಂಥವರಲ್ಲ


ಅರವತ್ತು ವರುಷಗಳ ಹಿಂದಿನ ಮಾತು. ಆಗ ಸಂಚಾರ ಸೌಲಭ್ಯಗಳು ಇಂದಿನಂತೆ ಇರಲಿಲ್ಲ. ಪರಸ್ಥಳಗಳಿಗೆ ಪ್ರಯಾಣ ಮಾಡಲು ರೈಲು ಅಥವಾ ಬಸ್ಸುಗಳನ್ನು ಅವಲಂಬಿಸಬೇಕಿತ್ತು. ಕೆಲವು ಗಂಟೆಗಳ ಪ್ರಯಾಣಕ್ಕೆ ಬಸ್ಸುಗಳ ಉಪಯೋಗ. ಬಲು ದೂರದ ಪ್ರಯಾಣಗಳಿಗೆ (ಕೆಲವು ಕಡೆ ಎರಡು-ಮೂರು ದಿನಗಳ ಪ್ರಯಾಣ) ರೈಲು ಪ್ರಯಾಣವೇ ದಾರಿ. ವಿಮಾನಯಾನ ಬಹುಪಾಲು ಜನರ ಕೈಗೆಟುಕುವಂತೆ ಇರಲಿಲ್ಲ. ಕಾರುಗಳು ಇದ್ದದ್ದು ಅಲ್ಲೊಂದು-ಇಲ್ಲೊಂದು. ಮುಂಗಡ ರಿಸೆರ್ವಶನ್ ಅನ್ನುವುದು ಬಹಳ ಅಪರೂಪ. ರೈಲಿನಲ್ಲಿ ಮೂರು ದರ್ಜೆಗಳು. ಮೂರನೆಯ ದರ್ಜೆಯಲ್ಲೂ ಕಾದಿರಿಸದ ಬೋಗಿಗಳಲ್ಲಿ ಪ್ರಯಾಣ. ಅಸಾಧ್ಯ ಜನಜಂಗುಳಿ. ಕಬ್ಬಿಣದ ಪೆಟ್ಟಿಗೆಗಳಲ್ಲಿ ಪದಾರ್ಥಗಳು. ಹಾಸಿಗೆ ಅಥವಾ ಹೋಲ್ಡಾಲುಗಳು. ರೈಲು ತಂಬಿಗೆಗಳು. ಪ್ರತಿ ಪ್ರಯಾಣವೂ ಒಂದು ಪ್ರಯಾಸವೇ. 

ಬೆಂಗಳೂರಿನ ಸುತ್ತಮುತ್ತಲಿನ ಜನ ಮಂತ್ರಾಲಯ ತಲುಪಲು ಮೊದಲು ಬಸ್ಸಿನಲ್ಲಿ ಬೆಂಗಳೂರಿಗೆ ಹೋಗಬೇಕಿತ್ತು. ಅಲ್ಲಿಂದ ಮುಂದಕ್ಕೆ ಪ್ರತಿದಿನ ಒಂದೋ-ಎರಡೋ ಬಸ್ಸುಗಳು ಮಂತ್ರಾಲಯಕ್ಕೆ ಹೋಗುತ್ತಿದ್ದವು. ಕೂಡಲು ಸ್ಥಳ ಸಿಗುವುದು ಕಷ್ಟ. ಎಂಟು-ಹತ್ತು ಗಂಟೆಗಳ ಪ್ರಯಾಣ ನಿಂತು ಹೋಗುವುದು ಅಸಾಧ್ಯ. ಆದ ಕಾರಣ ರೈಲು ಪ್ರಯಾಣ. ಬೆಂಗಳೂರು-ಗುಂತಕಲ್ಲು ರೈಲು ಮಾರ್ಗ ಆಗ ಇನ್ನೂ ಮೀಟರುಗೇಜು. ಗುಂತಕಲ್ಲಿನಿಂದ ಮುಂದಕ್ಕೆ "ಮಂತ್ರಾಲಯಂ ರೋಡ್" ಅನ್ನುವ ಸ್ಟೇಷನ್ ತನಕ ಬ್ರಾಡ್ ಗೇಜು. ಅನೇಕ ರೈಲುಗಳಿಗೆ ಮಂತ್ರಾಲಯಂ ರೋಡ್ ಸ್ಟೇಷನ್ನಿನಲ್ಲಿ ನಿಲುಗಡೆ ಇರಲಿಲ್ಲ. ಗುಂತಕಲ್ಲಿನಲ್ಲಿ ರೈಲು ಬದಲಾಯಿಸಬೇಕು. ಮಂತ್ರಾಲಯಂ ರೋಡ್ ಸ್ಟೇಷನ್ ವರೆಗೆ ಲೋಕಲ್ ರೈಲು. ಪ್ರತಿ ಸಣ್ಣ ಸ್ಟೇಷನ್ನಲ್ಲೂ ನಿಲುಗಡೆ. "ಕೋಸಗಿ", "ಇಸವಿ" ಮುಂತಾಗಿ ಸ್ಟೇಷನ್ ಹೆಸರುಗಳು. ಚಿಕ್ಕವಯಸ್ಸಿನ ಮಕ್ಕಳಿಗೆ ಅದೊಂದು ವಿನೋದ. 

ರಾತ್ರಿ ಹತ್ತು ಗಂಟೆಗೆ ಬೆಂಗಳೂರಿನಿಂದ ಹೊರಡುವ ರೈಲು ಬೆಳಗಿನ ಆರು ಗಂಟೆಗೆ ಗುಂತಕಲ್ಲು ತಲುಪುತ್ತಿತ್ತು. ಅಲ್ಲಿಂದ ಎಂಟು ಗಂಟೆಯ ಲೋಕಲ್ ರೈಲಿನಲ್ಲಿ ಮಂತ್ರಾಲಯಂ ರೋಡ್ ವರೆಗೆ ಸುಮಾರು ಮೂರು ಗಂಟೆ ಪ್ರಯಾಣ. ಮುಂದೆ ಏಳು ಮೈಲು ದೂರದ ಮಂತ್ರಾಲಯಕ್ಕೆ ನಡೆದು ಹೋಗುವುದು. ದಿನಕ್ಕೆ ಮೂರೋ, ನಾಲ್ಕೋ ಬಸ್ಸುಗಳಿದ್ದವು. ಅಶಕ್ತರು ಬಸ್ಸಿಗೆ ಕಾಯುತ್ತಿದ್ದರು. ಮಿಕ್ಕವರು ನಡೆದೇ ಹೋಗುವುದು. ಗುಂಪು ಗುಂಪಾಗಿ ರಾಯರ ಕುರಿತಾದ ಹಾಡುಗಳನ್ನು ಹಾಡುತ್ತಾ ನಡೆಯುವುದು. "ಭಾಗ್ಯವಂತ" ಕನ್ನಡ ಚಲನಚಿತ್ರದಲ್ಲಿ "ವಾರ ಬಂತಮ್ಮಾ, ಗುರುವಾರ ಬಂತಮ್ಮಾ" ಎಂದು ರಾಜ್ ಕುಮಾರ್ ನೇತೃತ್ವದಲ್ಲಿ ಹೋಗುವ ಗುಂಪಿನಂತೆ. ಹೀಗೆ ಪ್ರಯಾಣ.  ಆ ಚಿತ್ರ ಸುಮಾರು ನಲವತ್ತು ವರುಷಗಳ ಹಿಂದಿನದು. ಇದು ಅದಕ್ಕೂ ಇಪ್ಪತ್ತು ವರುಷಗಳ ಹಿಂದಿನ ಸಮಾಚಾರ. 

*****

ಮಂತ್ರಾಲಯಂ ರೋಡ್ ರೈಲ್ವೆ ಸ್ಟೇಷನ್ ತಲುಪುವ ವೇಳೆಗೆ ಮಧ್ಯಾನ್ಹ ಹನ್ನೊಂದು ಗಂಟೆ ಸಮಯ. ಇದೇ ರೀತಿ ಉತ್ತರದ ಕಡೆಯಿಂದ ಬಂದವರೂ ಅಲ್ಲಿಗೆ ಬೆಳಿಗ್ಗೆ ಸುಮಾರು ಇದೇ ಸಮಯಕ್ಕೆ ಬಂದು ಸೇರುತ್ತಿದ್ದರು. ಎಷ್ಟು ಬೇಗ ನಡೆದರೂ ಮಂತ್ರಾಲಯ ತಲುಪುವ ವೇಳೆಗೆ ಅಂದಿನ ಬೆಳಗಿನ ದರ್ಶನ, ಪ್ರಸಾದದ ಸಮಯ ದಾಟುತ್ತಿತ್ತು. ಆದ್ದರಿಂದ ಬಹುತೇಕ ಮಂದಿ ಸ್ಟೇಷನ್ ಪಕ್ಕ ತುಂಗಾನದಿಯಲ್ಲಿ ಮಿಂದು, ಪಕ್ಕದ "ಅಣು ಮಂತ್ರಾಲಯ" ಎಂದು ಪ್ರಸಿದ್ಧವಾದ ರಾಯರ ವೃಂದಾವನದ ದರ್ಶನ ಮಾಡಿ ಪ್ರಸಾದ ಸ್ವೀಕರಿಸುತ್ತಿದ್ದರು. ಸ್ವಲ್ಪ ವಿಶ್ರಾಂತಿಯ ನಂತರ, ಬಿಸಿಲು ಕಡಿಮೆ ಆದಮೇಲೆ ನಡೆದುಕೊಂಡು ಸಂಜೆಯ ದರ್ಶನದ ವೇಳೆಗೆ ಮಂತ್ರಾಲಯ ತಲುಪುತ್ತಿದ್ದರು. ಸಂಜೆ ಐದೂವರೆ ಸಮಯಕ್ಕೆ ದಿನದ ಕೊನೆಯ ಬಸ್ಸು. ಕೆಲವರು ಆ ಬಸ್ಸಿಗೆ ಕಾಯುತ್ತಿದ್ದರು. 

ನಮ್ಮ ಕುಟುಂಬ ಹೀಗೆ ಮಂತ್ರಾಲಯ ರಸ್ತೆ ಸ್ಟೇಷನ್ ತಲುಪಿ, ಅಣು ಮಂತ್ರಾಲಯದಲ್ಲಿ ದರ್ಶನ ಮತ್ತು ಪ್ರಸಾದ ಪಡೆದು ಐದು ಗಂಟೆಯ ಬಸ್ಸಿಗೆ ಕಾದೆವು. ಬಸ್ಸಿನ ಮುಂದುಗಡೆ ಬಾಗಿಲಲ್ಲಿ ಹತ್ತಲು ವಯೋವೃದ್ಧೆ ಅಜ್ಜಿ, ದೊಡ್ಡಮ್ಮ, ಅಮ್ಮ ಮತ್ತು ಅಕ್ಕ ಒಂದು ಕಡೆ. ತಂದೆ ಮತ್ತು ನಾನು ಬಸ್ಸಿನ ಹಿಂದಿನ ಬಾಗಿಲಲಿನ ಇನ್ನೊಂದು ಕಡೆ. ಬಸ್ಸು ನಿಲ್ದಾಣಕ್ಕೆ ಬರುವ ವೇಳೆಗೇ ತುಂಬಿ ಬಂದಿತ್ತು. ಹೇಗೋ ಮಾಡಿ ಮುಂದಿನ ಬಾಗಿಲಲ್ಲಿ ಅವರು ಹತ್ತಿದರು. ನಾವಿಬ್ಬರು ಬಾಗಿಲ ಬಳಿಯೇ ಹೋಗಲಾಗಲಿಲ್ಲ. ಬಸ್ಸು ಹೊರಟುಹೋಯಿತು. ಇಬ್ಬರೂ ಹಿಂದುಳಿದೆವು. ಅಂದು ರಾತ್ರಿ ಅಲ್ಲಿಯೇ ಉಳಿದು ಮಾರನೆಯ ದಿನ ಹೋಗುವುದು ಒಂದು ದಾರಿ. ತಕ್ಷಣ ನಡೆಯುತ್ತಾ ಹೊರಟು, ಏಳು ಮೈಲು ನಡೆದು ರಾತ್ರಿ ಮಂತ್ರಾಲಯ ತಲುಪುವುದು ಇನ್ನೊಂದು ದಾರಿ. ನಾವಿಬ್ಬರೂ ನಡೆಯುತ್ತಾ ಹೊರಟೆವು. 

ಹುಣ್ಣಿಮೆಯ ದಿನವಾದುದರಿಂದ ಮಸುಕಾಗಿಯಾದರೂ ರಸ್ತೆ ಕಾಣುತ್ತಿತ್ತು. ಜೊತೆಗೆ ಕೆಲವರು ಸೇರಿದರು. ದಾರಿ ಕಳೆಯಲೆಂದು ತಂದೆಯವರು ರಾಯರ ಚರಿತ್ರೆಯ ಕಥೆಗಳನ್ನು ಹೇಳುತ್ತಿದ್ದರು. ದಾರಿಯಲ್ಲಿ ಮಾದಾವರ ಗ್ರಾಮದ ಕೆರೆಯ ಬಳಿಯ ಬಂಡೆಗಳನ್ನು ನೋಡಿದೆವು. ಇಂತಹ ಒಂದು ಬಂಡೆಯ ಮೇಲೆ ಶ್ರೀರಾಮಚಂದ್ರ ವನವಾಸದ ಕಾಲದಲ್ಲಿ ವಿಶ್ರಾಂತಿಗಾಗಿ ಕುಳಿತಿದ್ದರಂತೆ. ರಾಯರು ಅದೋನಿಯ ನವಾಬನ ದಿವಾನನಾಗಿದ್ದ ತಮ್ಮ ಶಿಷ್ಯ ವೆಂಕಣ್ಣನಿಗೆ ಆ ಬಂಡೆ ತೋರಿಸಿ ಅದರ ಶಿಲೆಯಲ್ಲಿಯೇ ತಮ್ಮ ವೃಂದಾವನ ಮಾಡಲು ಹೇಳಿದರಂತೆ. ರಾತ್ರಿ ಎಂಟು ಗಂಟೆಯ ಸುಮಾರಿಗೆ ಮಂತ್ರಾಲಯ ತಲುಪಿದೆವು. 

ಆಗ ಮಂತ್ರಾಲಯಕ್ಕೆ ಪ್ರತಿದಿನ ಬರುತ್ತಿದ್ದಷ್ಟು ಜನ ಈಗ ಬೇರೆಬೇರೆ ಕಡೆಗಳಲ್ಲಿರುವ "ಮೃತ್ತಿಕಾ ಬೃಂದಾವನ" ಇರುವೆಡೆಯೇ ಬರುತ್ತಾರೆ. ಮಂತ್ರಾಲಯದ ಮೂಲ ಬೃಂದಾವನದ ಮೇಲಿರುವ ಮೃತ್ತಿಕೆ (ಮಣ್ಣು) ಸ್ವಲ್ಪ ತಂದು ಬೇರೆಡೆ ವೃಂದಾವನ ನಿರ್ಮಿಸುತ್ತಾರೆ. ಇವನ್ನು "ಮೃತ್ತಿಕಾ ಬೃಂದಾವನ" ಎಂದು ಕರೆಯುತ್ತಾರೆ. ಇಪ್ಪತ್ತೈದು ವರುಷಗಳ ಹಿಂದೆ ಮದರಾಸಿನ ಟ್ರಿಪ್ಲಿಕೇನ್ ರಾಯರ ಮಠದ ಬಳಿ ಪ್ರತಿ ಗುರುವಾರ ಪೊಲೀಸರು ಬಂದು ದರ್ಶನಕ್ಕೆ ಬರುವ ಜನಜಂಗುಳಿಯ ನಿಯಂತ್ರಣ ಮಾಡುತ್ತಿದ್ದರು. ಆ ರಸ್ತೆಯಲ್ಲಿ ಗುರುವಾರ ಸಂಜೆ ವಾಹನಗಳ ನಡೆಸುವಿಕೆಗೆ ಅವಕಾಶ ಇರಲಿಲ್ಲ. ಈಗ ಜನಸಂದಣಿ ಇನ್ನೂ ಹೆಚ್ಚಾಗಿರಬಹುದು. ಇದೊಂದು ಉದಾಹರಣೆ ಅಷ್ಟೇ. 

ಗುರು ರಾಘವೇಂದ್ರ ರಾಯರು ಸಾಮಾನ್ಯರಲ್ಲ. ಅವರು "ಅಂಥ ಇಂಥವರಲ್ಲ. ಅವರಂಥವರೇ ಬೇಕು ಅಂತ ಹುಡುಕಿದರಿಲ್ಲ" ಅನ್ನುವುದು ಅಲ್ಲಿ ಎಲ್ಲರೂ ಹೇಳುವ ಒಂದು ಮಾತಾಗಿತ್ತು. 

*****

ಶ್ರೀ ಗೋಕಾವಿ ಅನಂತಾದ್ರೀಶ ದಾಸರು (1670-1750) ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಸಂಗಮ ಸ್ಥಾನವಾದ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದವರು. ಗೋಕಾಕ್ ಅನಂತಾಚಾರ್ಯ ಎಂದು ಹೆಸರಿನ ಅವರು ವೇದ-ವೇದಾಂಗಗಳ ಘನ ವಿದ್ವಾಂಸರು. ಗೋಕಾಕ್ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಮುಖ್ಯ ಅರ್ಚಕರಾಗಿದ್ದರಂತೆ. ಆಗಿನ ಸಮಯದ ಪ್ರಸಿದ್ಧ ಗುರುಗಳಾದ ಅಡವಿ ಆಚಾರ್ಯರು ಅಥವಾ ಅರಣ್ಯಕಾಚಾರ್ಯರು ಎಂದು ಹೆಸರು ಪಡೆದ ಮಾದನೂರು ವಿಷ್ಣು ತೀರ್ಥ (1678-1728)  ಅವರ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯರಾದವರು. 

ಉದ್ದಾಮ ಪಂಡಿತರಾದ ಅನಂತಾಚಾರ್ಯರು "ಅನಂತಾದ್ರೀಶ" ಅನ್ನುವ ಅಂಕಿತ ಹೊಂದಿದ ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಅವರ "ಶ್ರೀ ವೆಂಕಟೇಶ ಪಾರಿಜಾತ" ಮತ್ತು "ಶ್ರೀ ಪ್ರಹ್ಲಾದ ಚರಿತ್ರೆ" ಹೆಸರಾದ ಕೃತಿಗಳು. ಮಾಧ್ವ ಸಂಪ್ರದಾಯದವರ ಅನೇಕ ಮನೆಗಳಲ್ಲಿ ಈಗಲೂ ಅವರ ಈ ಕೃತಿಗಳನ್ನು ಪ್ರತಿದಿನ ಹಾಡುತ್ತಾರೆ. "ಭೋ ಯತಿವರದೇಂದ್ರ, ಶ್ರೀ ಗುರು ರಾಯ ರಾಘವೇಂದ್ರ" ಅನ್ನುವುದು ಅವರ ಬಹಳ ಪ್ರಸಿದ್ಧವಾದ ಪದ. "ಬಾರೆ ಭಾಗ್ಯ ನಿಧಿಯೇ" ಅನ್ನುವುದು ಇನ್ನೊಂದು ಪದ. ಹೀಗೆ ಅನೇಕ ಕನ್ನಡ ಪದಗಳನ್ನು ರಚಿಸಿದ್ದಾರೆ. 

ಗೋಕಾವಿ ಅನಂತಾಚಾರ್ಯರು ಜನಿಸಿದ್ದು 1670ನೇ ಇಸವಿಯಲ್ಲಿ. ಶ್ರೀ ರಾಯರು ಬೃಂದಾವನಸ್ಥರಾಗಿದ್ದು 1671ರಲ್ಲಿ. ಅನಂತಾಚಾರ್ಯರ ಜೀವಿತಕಾಲ ಶ್ರೀ ರಾಯರು ಬೃಂದಾವನ ಪ್ರವೇಶ ಮಾಡಿದ ಪ್ರಾರಂಭದ ವರುಷಗಳಲ್ಲಿ. ಹಿರಣ್ಯ ಕಷಿಪುವಿನ ಮಗನಾದ ಪ್ರಹ್ಲಾದರಾಜರು ಮುಂದೆ ಶ್ರೀ ರಾಘವೇಂದ್ರ ತೀರ್ಥರೆಂದು ಅವತರಿಸಿ "ಮಂತ್ರಾಲಯದ ರಾಯರು"  ಎಂದಾಗಿದ್ದರೆ ಎಂದು ಅವರ ಶಿಷ್ಯ ಪರಂಪರೆಯ ನಂಬಿಕೆ. "ಶ್ರೀ ಪ್ರಹ್ಲಾದ ಚರಿತ್ರೆ" ಕೃತಿಯಲ್ಲಿ ಶ್ರೀ ಅನಂತಾದ್ರೀಶರು ಹೇಳುವ ಸಾಲುಗಳು ಹೀಗಿವೆ:

ಅಂಥ ಇಂಥವರಲ್ಲ 
ಇವರಂಥವರೇ ಬೇಕು ಅಂತ ಹುಡುಕಿದರಿಲ್ಲ 
ಎಂತೆಂಥ ವಿಷಯದ ಭ್ರಾಂತಿ ಈತಗೆ ಇಲ್ಲ 
ಅನಂತಾದ್ರೀಶನ ಚಿಂತನದ ಬಗೆ ಬಲ್ಲ 
ಸಂಶಯವು ಇಲ್ಲ 

ಶ್ರೀ ರಾಯರ ಗ್ರಂಥಗಳು ಬೇರೆ ಗ್ರಂಥಗಳ ಅಧ್ಯಯನ ಕಾಲದಲ್ಲಿ ಬರುವ ಸಂಶಯಗಳ ನಿವಾರಣೆಗಾಗಿ ಮಾಡಿದವುಗಳೇ ಹೊರತು ಸಂಶಯ ಹುಟ್ಟಿಸುವುಗಳಲ್ಲ.  ಶ್ರೀ ಅನಂತಾದ್ರೀಶರು ಇದನ್ನೇ ಸೂಚ್ಯವಾಗಿ ಮೇಲಿನಂತೆ ಹೇಳಿದ್ದಾರೆ. 

*****

ಆಚಾರ್ಯ ಶ್ರೀ ಮಧ್ವರು, ಶ್ರೀ ಜಯತೀರ್ಥರು, ಶ್ರೀ ವ್ಯಾಸರಾಜರು ಮೊದಲಾದವರ ದ್ವೈತ ಸಂಪ್ರದಾಯದ ಗ್ರಂಥಗಳ ಅಧ್ಯಯನದಲ್ಲಿ ಬರುವ ಸಂದೇಹ, ಅಲ್ಲಲ್ಲಿ ಬೇಕಾದ ವಿವರಣೆಗಳಿಗೆ ಅವುಗಳ ಅಧ್ಯಯನ ಮಾಡುವ ಪಂಡಿತರು ಮೊದಲಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಗ್ರಂಥಗಳಲ್ಲಿ ಅವುಗಳಿಗೆ ಉತ್ತರ ಹುಡುಕುತ್ತಾರೆ. ಬಹುತೇಕ ಉತ್ತರ ಸಿಗುತ್ತದಂತೆ. ಅಂತಹ ಉದ್ದಾಮ ಪಂಡಿತರಾಗಿದ್ದರೂ ಶ್ರೀ ರಾಯರು ಎಂದೂ ಯಾರ ಮನಸ್ಸನ್ನೂ ನೋಯಿಸುವಂತೆ ಮಾತನಾಡಿದವರಲ್ಲವಂತೆ. ತಮ್ಮೊಡನೆ ವಾದದಲ್ಲಿ ಸೋತ ಪ್ರತಿವಾದಿಗಳೊಡನೆಯೂ ಅತ್ಯಂತ ಗೌರವಯುತವಾದ ನಡವಳಿಕೆಗೆ ಮಾದರಿಯಾಗಿದ್ದರಂತೆ. "ಕೋಪ ಅರಿಯನಮ್ಮ, ಯಾರನು ದೂರ ತಳ್ಳನಮ್ಮ" ಅನ್ನುವುದು ಕೇವಲ ಹೇಳಿಕೆಯ ಮಾತಲ್ಲ. ಆದ್ದರಿಂದಲೇ ಅವರು "ಅಂಥ ಇಂಥವರಲ್ಲ. ಇಂಥವರೇ ಬೇಕು ಅಂತ ಹುಡುಕಿದರಿಲ್ಲ". 

ಈಗ ಮನೆಯ ಮುಂದೆ ವಾಹನ ಏರಿದರೆ ಮಂತ್ರಾಲಯದ ಮಠದ ಮುಂದೆ ವಾಹನದಿಂದ ಇಳಿಯುವಷ್ಟು ಅನುಕೂಲಗಳು ಬಂದಿವೆ. ನೇರವಾಗಿ ಮಂತ್ರಾಲಯಂ ರೋಡ್ ನಿಲ್ದಾಣದವರೆಗೆ ಟ್ರೇನುಗಳೂ ಉಂಟು. ಮೊದಲೇ ಹೋಗಿ-ಬರಲು ಸ್ಥಳ ಕಾದಿರುಸುವ ವ್ಯಸ್ಥೆಯೂ ಉಂಟು. ಬಹುತೇಕ ಜನರ ಕಿಸೆಯಲ್ಲಿ ಹಣವೂ ಉಂಟು. 

ಏನೆಲ್ಲಾ ಬದಲಾವಣೆಗಳಾದರೂ, ವೃಂದಾವನ ಪ್ರವೇಶ ಮಾಡಿ 350 ವರುಷಗಳು ಕಳೆದಿದ್ದರೂ ಶ್ರೀ ರಾಯರು "ಅಂಥ ಇಂಥವರಲ್ಲ" ಅನ್ನುವುದರಲ್ಲಿ ಏನೂ ಬದಲಾವಣೆ ಇಲ್ಲ. 

Sunday, September 14, 2025

ಸರಸ್ವತಿ ದೇವಿಯ ರಂಗಮಂದಿರ


ಒಂದು ತಿಂಗಳ ಹಿಂದೆ, ಶ್ರೀ ರಾಘವೇಂದ್ರ ಸ್ವಾಮಿಗಳ 354ನೆಯ ವರುಷದ ಆರಾಧನೆಯ ಸಂದರ್ಭದಲ್ಲಿ, "ದೊಡ್ಡವರ ಶಾಪಗಳೆಂಬ ವರಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ, ಶಂಕುಕರ್ಣ ಎಂಬ ಕರ್ಮಜದೇವತೆಗೆ ಚತುರ್ಮುಖ ಬ್ರಹ್ಮದೇವರು ಕೊಟ್ಟ ಶಾಪವು ಅನೇಕರಿಗೆ ಹೇಗೆ ವರವಾಗಿ ಪರಿಣಮಿಸಿತು ಎನ್ನುವುದನ್ನು ಸಂಕ್ಷೇಪವಾಗಿ ನೋಡಿದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಇಂತಹ ವಿಷಯಗಳಲ್ಲಿ ಕೆಲವೊಂದು ಕಣ್ಣಿಗೆ ಕಾಣುವ, ಪಂಚೇಂದ್ರಿಯಗಳಿಂದ ತಿಳಿಯುವ ಸತ್ಯಗಳು. ಇನ್ನು ಅನೇಕವು ಅವರವರ ನಂಬಿಕೆಯಿಂದ ಒಪ್ಪುವ, ಸ್ವಾನುಭವ ಮತ್ತು ಪರಾನುಭವದಿಂದ ಅರಿಯುವ ಸಂಗತಿಗಳು.  

ಈ ಸಂಚಿಕೆಯ ಒಂದು ಭಾಗದಲ್ಲಿ ಶಂಕುಕರ್ಣನಿಗೆ ಸರಸ್ವತಿ ದೇವಿಯ ಅನುಗ್ರಹವಾಗಿ ಮುಂದೆ ಅದು ರೂಪತಾಳಿದ ಸೂಚನೆ ಇತ್ತು. ಅದರ ಸ್ವಲ್ಪ ವಿವರಗಳನ್ನು ಈಗ ನೋಡೋಣ. 

ಶ್ರೀ ರಾಘವೇಂದ್ರ ಸ್ವಾಮಿಗಳೆಂದರೆ "ಕಲಿಯುಗದ ಕಾಮಧೇನು", ಸೇವೆ ಮಾಡಿ ಬೇಡಿದರೆ ಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಕರುಣಿಸುವವರು ಎಂದು ಬಹಳ ಜನರಿಗೆ ಗೊತ್ತು. ಅವರನ್ನು "ಪರಿಮಳಾಚಾರ್ಯ" ಎಂದೂ ಕರೆಯುತ್ತರೆ ಎಂದು ಕೆಲವರಿಗೆ ಗೊತ್ತು. ಮಂತ್ರಾಲಯದ ಸಿಹಿ ಪ್ರಸಾದವನ್ನು "ಪರಿಮಳ ಪ್ರಸಾದ" ಎಂದು ಕರೆಯುತ್ತಾರೆ ಎನ್ನುವುದು ಅಲ್ಲಿಗೆ ಹೋದ ಅಥವಾ ಪ್ರಸಾದ ಪಡೆದ ಎಲ್ಲರಿಗೂ ಗೊತ್ತು. ಈ "ಪರಿಮಳ" ಅನ್ನುವ ಪದದ ವಿಶೇಷವೇನು?

*****



ಚೆನ್ನಾಗಿ ತಿಳಿದ ವಿದ್ಯಾವಂತರನ್ನು, ವಾಚಾಳಿಗಳನ್ನು "ಸರಸ್ವತಿ ಪುತ್ರ" ಎಂದು ಕರೆಯುವುದು ವಾಡಿಕೆ. "ಅವರ ನಾಲಿಗೆಯ ಮೇಲೆ ಸರಸ್ವತಿಯು ನಲಿಯುತ್ತಾಳೆ, ನಾಟ್ಯವಾಡುತ್ತಾಳೆ" ಎಂದು ಹೇಳುವುದು ಉಂಟು. ಚತುರ್ಮುಖ ಬ್ರಹ್ಮದೇವರ ದೇವತಾರ್ಚನೆಯ ಸಮಯದಲ್ಲಿ ಸರಸ್ವತಿ ದೇವಿಯು ನೃತ್ಯ ಸೇವೆ ಒಪ್ಪಿಸುತ್ತಾಳೆ.  ಹಾಗೆ ನೃತ್ಯ ಮಾಡಲು ಆಕೆಗೆ ಒಂದು ಸರಿಯಾದ "ರಂಗಸ್ಥಳ" ಬೇಕು ಅನ್ನಿಸಿತಂತೆ. ಯಾವುದು ಅಂತಹ ಸರಿಯಾದ ವೇದಿಕೆ ಎಂದು ಹುಡುಕಿದಳಂತೆ. ಮನುಷ್ಯನ ನಾಲಿಗೆ ಎಲ್ಲ ಅಂಗಗಳಲ್ಲಿಯೂ ಹೆಚ್ಚು ಕೆಟ್ಟದು! ಅದು ಸುಮ್ಮನಿರುವುದಿಲ್ಲ. ಯಾವಾಗಲೂ ಏನಾದರೂ ತಿನ್ನುತ್ತಿರಬೇಕು. ಇಲ್ಲದಿದ್ದರೆ ಏನಾದರೂ ಅನ್ನುತ್ತಿರಬೇಕು. ಆದರೆ, ಇಂತಹ ನಾಲಿಗೆಯನ್ನು ಇಟ್ಟುಕೊಂಡಿದ್ದೂ ತಿನ್ನಬಾರದ್ದನ್ನು ತಿನ್ನದೇ, ಅನ್ನಬಾರದ್ದನ್ನು ಅನ್ನದೆ ಇರುವವರು ಬಹಳ ಅಪರೂಪಕ್ಕೆ ಸಿಕ್ಕುತ್ತಾರೆ. ಸರಸ್ವತಿ ದೇವಿಯು ಹೀಗೆ ಒಂದು ಸರಿಯಾದ ನೃತ್ಯ ವೇದಿಕೆ ಹುಡುಕಿದಾಗ ಶ್ರೀ ರಾಘವೇಂದ್ರ ಸ್ವಾಮಿಗಳ ನಾಲಿಗೆ ಕಾಣಿಸಿತು. ಎಂದೂ ಯಾರನ್ನೂ ಕಟು ಮಾತಿನಿಂದ ನೋಯಿಸಿದವರಲ್ಲ. ಇನ್ನೊಬ್ಬರನ್ನು ಏನೂ ಬೇಡಿದವರಲ್ಲ. ಸದಾಚಾರ ಸಂಪನ್ನರು. ಸದಾಕಾಲ ಪಾಠ-ಪ್ರವಚನಗಳಲ್ಲೇ ತಮ್ಮ ಕಾಲ ಕಳೆಯುತ್ತಿರುವವರು. ಆದ್ದರಿಂದ ಇದೇ ಸರಿಯಾದ ರಂಗಸ್ಥಳ ಎಂದು ತೀರ್ಮಾನಿಸಿದಳಂತೆ. 

ನೃತ್ಯ ಪ್ರಾರಂಭವಾಯಿತು. ದೇವಲೋಕದ ಮಂದಾರ, ಪಾರಿಜಾತ ಮುಂತಾದ ದಿವ್ಯ ಪುಷ್ಪಗಳ ದಂಡೆಯನ್ನು ಸರಸ್ವತಿ ದೇವಿಯು ತನ್ನ ತುರುಬಿನಲ್ಲಿ ಮುಡಿದಿದ್ದಳು. ಆನಂದದಿಂದ ನರ್ತಿಸುವಾಗ ಆ ಹೂವಿನ ದಂಡೆಯಿಂದ ಅನೇಕ ಹೂವುಗಳು ಅದುರಿ ಉದುರಿದವಂತೆ. ನೃತ್ಯ ಮುಗಿದ ಮೇಲೆ ಆ ಹೂವುಗಳು ಶ್ರೀ ರಾಯರ ನಾಲಿಗೆಯ ಮೇಲೆ ಉಳಿದವು. ಅವರು ಅವನ್ನೆಲ್ಲ ಸೇರಿಸಿ, ಪೋಣಿಸಿ, ಅವುಗಳ ಸುಗಂಧದ ಕಾರಣ "ಪರಿಮಳ" ಎಂದು ಹೆಸರಿಟ್ಟು ಕೊಟ್ಟರಂತೆ. ಅದೇ "ಪರಿಮಳ" ಎಂಬ ಹೆಸರಿನ ಗ್ರಂಥವಾಯಿತಂತೆ!

ಮಂತ್ರಾಲಯಕ್ಕೆ ಹೋದವರು ಶ್ರೀ ರಾಯರ ವೃಂದಾವನದ ಪಕ್ಕದಲ್ಲಿಯೇ ಇರುವ ಇನ್ನೊಂದು ಭವ್ಯ ವೃಂದಾವನ ನೋಡಿರುತ್ತಾರೆ. ಇದು ಶ್ರೀ ರಾಘವೇಂದ್ರ ತೀರ್ಥರ ನಂತರ ಬಂದ ಐದನೆಯವರಾದ ಶ್ರೀ ವಾದೀಂದ್ರ ತೀರ್ಥರದ್ದು. ಈ ಶ್ರೀ ವಾದೀಂದ್ರ ತೀರ್ಥರು ಶ್ರೀ ರಾಘವೇಂದ್ರರ ಕುರಿತಾಗಿ "ಗುರುಗುಣಸ್ತವನ" ಎನ್ನುವ ಗ್ರಂಥವೊಂದನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಯರ "ಪರಿಮಳ" ಎನ್ನುವ ಗ್ರಂಥದ ರಚನೆಯ ಕುರಿತಾಗಿ "ಧೀರಶ್ರೀ ರಾಘವೇಂದ್ರ ತ್ವದತುಲರಸನಾ ರಂಗನೃತ್ಯ ಸ್ವಯಂಭೂ...." ಎನ್ನುವ ಶ್ಲೋಕದಲ್ಲಿ ಮೇಲಿನಂತೆ ಚಮತ್ಕಾರಿಕವಾಗಿ ವರ್ಣಿಸಿದ್ದಾರೆ. 

ಮಧ್ವ ಸಂಪ್ರದಾಯದಲ್ಲಿ ಆಚಾರ್ಯ ಮಧ್ವರ ಕೃತಿಗಳಿಗೆ ಟೀಕಾಗ್ರಂಥಗಳನ್ನು ಬರೆದವರಲ್ಲಿ ಶ್ರೀ ಜಯತೀರ್ಥರು ಅಗ್ರಗಣ್ಯರು. ಅವರಿಗೆ "ಟೀಕಾಚಾರ್ಯರು" ಎಂದು ಕರೆಯುವುದು ವಾಡಿಕೆ. ಅವರ "ಶ್ರೀಮನ್ ನ್ಯಾಯಸುಧಾ" ಗ್ರಂಥವು ಬಲು ವಿಖ್ಯಾತ. ಮೂಲ ಗ್ರಂಥಗಳಲ್ಲಿ, ವಿಶೇಷವಾಗಿ ಶ್ರೀಮನ್ಯಾಯಸುಧಾ ಗ್ರಂಥದಲ್ಲಿ,  ಸುಲಭವಾಗಿ ಅರ್ಥ ಆಗದ ವಿಷಯಗಳನ್ನು ಶ್ರೀ ರಾಘವೇಂದ್ರರು ತಮ್ಮ ಪರಿಮಳ ಗ್ರಂಥದಲ್ಲಿ ವಿವರಿಸಿದ್ದಾರೆ. ಈ ಕಾರಣಕ್ಕೆ ಅವರನ್ನು "ಪರಿಮಳಾಚಾರ್ಯರು" ಎಂದು ಕರೆಯುವುದು. ಮುಂದೆ ಇದೇ ನಡೆದು ಬಂದು ಮಂತ್ರಾಲಯದ ಪ್ರಸಾದವೂ "ಪರಿಮಳ ಪ್ರಸಾದ" ಆಗಿದೆ. 

******


ದೇವರಪೂಜೆಯಲ್ಲಿ ದೀಪ, ಹೂವು, ಹೂವಿನ ಹಾರ, ತುಳಸಿ, ಮಂಗಳಾರತಿ, ನೈವೇದ್ಯಗಳ ಉಪಯೋಗ ಉಂಟು. ಇವುಗಳು ಸ್ವಲ್ಪ ಕಾಲ ಇರುವಂತಹವು. ಹೂವು, ತುಳಸಿ ಮಾರನೆಯ ದಿನ ಬಾಡಿರುತ್ತದೆ. ದೀಪ, ಮಂಗಳಾರತಿ ಸ್ವಲ್ಪ ಸಮಯದ ನಂತರ ಆರಿಹೋಗುತ್ತವೆ.  ಸದಾಕಾಲ ಇರಬೇಕಾದರೆ ಏನು ಮಾಡಬೇಕು? ಶ್ರೀ ರಾಘವೇಂದ್ರ ಸ್ವಾಮಿಗಳು ಇದಕ್ಕೆ ಉಪಾಯ ಹುಡುಕಿದರಂತೆ. 

ಎಡಗಡೆ ಮತ್ತು ಬಲಗಡೆ ಇಡಲು ಎರಡು ದೀಪಗಳಾಗಿ "ಭಾವದೀಪ" ಮತ್ತು "ನ್ಯಾಯದೀಪ" ಎಂದು ಎರಡು ಗ್ರಂಥಗಳನ್ನು ರಚಿಸಿದರಂತೆ. ತುಳಸಿಯ ತೆನೆ ಇರುವ ಕುಡಿಯು ಪೂಜೆಗೆ ವಿಶೇಷವಂತೆ. ಅದಕ್ಕೆ "ಮಂಜರಿ" ಅನ್ನುತ್ತಾರೆ. (ಮೇಲಿನ ಚಿತ್ರದಲ್ಲಿ ನೋಡಬಹುದು). ಒಣಗುವ ತುಳಸಿಯ ಬದಲಾಗಿ "ತತ್ತ್ವ ಮಂಜರಿ" ಎನ್ನುವ ಗ್ರಂಥ. ಪೂಜೆಯ ವೇಳೆ ಹೆಚ್ಚಿನ ಬೆಳಕು ಬರಲು "ಚಂದ್ರಿಕಾ ಪ್ರಕಾಶ" ಎನ್ನುವ ಗ್ರಂಥ. (ಶ್ರೀ ವ್ಯಾಸರಾಯರ "ತಾತ್ಪರ್ಯ ಚಂದ್ರಿಕಾ" ಗ್ರಂಥದ ವಿವರಣೆ). ಮತ್ತೆ ಹೂವು-ಗಂಧಗಳಿಗೆ "ಪರಿಮಳ" ಕೃತಿ. ಹಾರದ ಸ್ಥಳದಲ್ಲಿ "ನ್ಯಾಯ ಮುಕ್ತಾವಳಿ" ಎನ್ನುವ ಮುತ್ತಿನ ಹಾರದಂತಹ ಗ್ರಂಥ. ಮಂಗಳಾರತಿಯ ಸಲುವಾಗಿ "ತಂತ್ರದೀಪಿಕಾ". ನೈವೇದ್ಯದ ಹರಿವಾಣದಲ್ಲಿ ಬಗೆಬಗೆಯ ಇತರ ಅನೇಕ ಗ್ರಂಥಗಳು. 

"ಪ್ರಾತಃ ಸಂಕಲ್ಪ ಗದ್ಯ"  ಎನ್ನುವುದು ಅವರು ಪ್ರತಿದಿನ ಬೆಳಿಗ್ಗೆ ಮಾಡುತ್ತಿದ್ದ "ಟು ಡು ಲಿಸ್ಟ್". "ಸರ್ವ ಸಮರ್ಪಣ" ಎನ್ನುವುದು ಅವರು ದಿನದ ಕೊನೆಯಲ್ಲಿ ಅಂದು ಮಾಡಿದುದನ್ನೆಲ್ಲ ಪರಮಾತ್ಮನಿಗೆ ಒಪ್ಪಿಸುತ್ತಿದ್ದ ರೀತಿ. ದಿನಕ್ಕೆ ಹದಿನೆಂಟು ಗಂಟೆಗಳ ಅಧ್ಯಯನ-ಅಧ್ಯಾಪನ; ಪೂಜೆ-ಅತಿಥಿಸೇವೆ. 

ಹೀಗೆ ಒಂದು ದಿನ ಇದ್ದು ಕೆಡುವ-ಬಾಡುವ ಪದಾರ್ಥಗಳ ಬದಲು ಚಿರಕಾಲ ಉಳಿಯುವ ಗ್ರಂಥಗಳನ್ನು ದೇವರಪೂಜೆಗೆ ಮಾಡಿಟ್ಟದ್ದು ಶ್ರೀ ರಾಘವೇಂದ್ರಸ್ವಾಮಿಗಳ ವಿಶೇಷತೆ ಎಂದು ತಿಳಿದವರು ಹೇಳುತ್ತಾರೆ. 


*****

ಶ್ರೀ ರಾಯರ ಅನೇಕ ಪವಾಡಗಳನ್ನು ಹೇಳುತ್ತಾರೆ. ಈ ಎಲ್ಲ ಪವಾಡಗಳಿಗಿಂತ ಹೆಚ್ಚಿನದು ಅವರ ನಲವತ್ತೈದು ಗ್ರಂಥಗಳ ಭಂಡಾರ. ಇವುಗಳಲ್ಲಿ ಅನೇಕವು ಅವರು "ಶ್ರೀ ರಾಘವೇಂದ್ರ ತೀರ್ಥ" ಎಂದು ಪೀಠ ಸ್ವೀಕರಿಸುವ ಮುಂಚೆ, ವೆಂಕಟನಾಥ ಎಂದು ಹೆಸರಿನ ವಟು ಮತ್ತು ಗೃಹಸ್ಥ ಆಗಿದ್ದಾಗ ರಚಿಸಿದ್ದು. 

ವಿಜಯನಗರದ ಅರಸರ ಆಸ್ಥಾನ ವಿದ್ವಾಂಸರಾಗಿ ಅವರಿಗೆ ವೀಣಾ ಗುರುಗಳಾಗಿದ್ದ ವಿದ್ವಾಂಸರ ವಂಶದಲ್ಲಿ ಜನಿಸಿದ್ದು. ಸಿರಿ-ಸಂಪತ್ತಿನಲ್ಲಿ ನಡೆದುಬಂದ ಕುಟುಂಬವಾದರೂ ಇವರ ಕಾಲಕ್ಕೆ ವಿಜಯನಗರ ಸಾಮ್ರಾಜ್ಯ ಹರಿದು-ಹಂಚಿಹೋಗಿ ಇವರಿಗೆ ಹೇಳತೀರದ ದಾರಿದ್ರ್ಯ. ಅಂತಹ ಸಂದರ್ಭಗಳಲ್ಲಿ ಈ ಗ್ರಂಥಗಳ ರಚನೆ. 

ಭಗವದ್ಗೀತೆಗೆ ಹೊಂದಿದ "ಗೀತಾ ವಿವೃತ್ತಿ", ಬ್ರಹ್ಮಸೂತ್ರ ಭಾಷ್ಯಗಳಿಗೆ ಸಂಬಂಧಿಸಿದಂತೆ "ತಂತ್ರದೀಪಿಕಾ", ಋಗ್ವೇದ ಮಂತ್ರಗಳಿಗೆ "ಮಂತ್ರಾರ್ಥ ಮಂಜರಿ", ಹತ್ತು ಪ್ರಮುಖ ಉಪನಿಷತ್ತುಗಳಿಗೆ ಭಾಷ್ಯಗಳು, ಮತ್ತನೇಕ ಗ್ರಂಥಗಳು. ಹಿಂದಿದ್ದ ಗ್ರಂಥಗಳಿಗೆ ಬಂದಿದ್ದ ಟೀಕಾಗ್ರಂಥಗಳಿಗೆ ಟಿಪ್ಪಣಿಗಳು. ಹಿಂದಿದ್ದ ಗ್ರಂಥಗಳಿಗೆ ಟೀಕೆಗಳು. ಜೊತೆಗೆ ಸ್ವತಂತ್ರ ಗ್ರಂಥಗಳು. ದೊಡ್ಡ ಗ್ರಂಥಗಳನ್ನು ಸಂಗ್ರಹ ಮಾಡಿ ಚಿಕ್ಕದಾಗಿಸಿ ಪ್ರತಿನಿತ್ಯ ಪಾರಾಯಣಕ್ಕೆ ಕೊಟ್ಟರು. ಚಿಕ್ಕದಾದ ಗ್ರಂಥಗಳನ್ನು ವಿವರಿಸಿ ದೊಡ್ಡದು ಮಾಡಿ ಕೊಟ್ಟರು. ಹೀಗೂ ಸರಿ. ಹಾಗೂ ಸರಿ.  ಎಲ್ಲದರಲ್ಲೂ ಪ್ರಚಂಡ ವಿದ್ವತ್ ದರ್ಶನ. 

ಕನ್ನಡದಲ್ಲಿ ರಚಿಸಿದ ರಚನೆಗಳು ಸಿಕ್ಕಿಲ್ಲ. ಸಿಕ್ಕಿರುವ ಒಂದೇ "ಇಂದು ಎನಗೆ ಗೋವಿಂದ" ದೇವರನಾಮ ಎಲ್ಲರ ಬಾಯಲ್ಲಿ. 

ಭಜಿಸಿ ಬೇಡಿದ ಭಕ್ತರಿಗೆ ಕೇಳಿದ್ದು ಕೊಟ್ಟಂತೆ, ವಾಂಗ್ಮಯ ವಿಸ್ತಾರದಲ್ಲೂ ಯಾರಿಗೆ ಏನು ಬೇಕೋ ಅದುಂಟು. 

*****

ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯರ ಅಗಲಿಕೆ. ಅಕ್ಕ-ಭಾವ ಮತ್ತು ಅಣ್ಣನ ನೆರಳಿನಲ್ಲಿ ಬಾಲ್ಯ. ಏಳು ವರುಷಕ್ಕೆ ಅಣ್ಣನಿಂದ ಉಪನಯನ. ಹದಿನೆಂಟು ವರುಷಕ್ಕೆ ವಿವಾಹ. ಇಪ್ಪತ್ತಾರು ವರುಷಕ್ಕೆ ಸನ್ಯಾಸ. ಚಿಕ್ಕ ವಯಸ್ಸಿನ ಹೆಂಡತಿ ಮತ್ತು ಏಳು ವರುಷದ ಮಗನನ್ನು ತೊರೆದು ಯತಿಯಾದದ್ದು. ಕಡು ಬಡತನದ ಜೀವನ. ಈ ಹಿನ್ನೆಲೆಯಲ್ಲಿ ಸಂಪಪಾದಿಸಿದ ಪ್ರಚಂಡ ಪಾಂಡಿತ್ಯ. ರಚಿಸಿದ ಗ್ರಂಥ ರಾಶಿ. ಪೀಠ ಸ್ವೀಕರಿಸಿದ ಮೇಲೆ ಐವತ್ತು ವರುಷ ಪೀಠಾಧಿಪತಿಯಾಗಿ ಸಮಾಜದ ಸೇವೆ. ನಂತರ ಜೀವಂತವಾಗಿದ್ದಾಗಲೇ ವೃಂದಾವನ ಪ್ರವೇಶ.  

ವೇದ-ಉಪನಿಷತ್ತುಗಳು, ತರ್ಕ, ವ್ಯಾಕರಣ, ಅಲಂಕಾರ ಶಾಸ್ತ, ಕಾವ್ಯ-ನಾಟಕ, ಮಹಾಭಾಷ್ಯ, ಪೂರ್ವ ಮೀಮಾಂಸಾ, ಜ್ಯೋತಿಷ್ಯ, ಸಂಗೀತ, ವೀಣಾವಾದನ ಮುಂತಾದ ಅನೇಕ ವಿಷಯಗಳಲ್ಲಿ ಪೂರ್ಣ ಪ್ರಭುತ್ವ. ಅನೇಕ ಕಲೆಗಳಲ್ಲಿ ಪರಿಣತಿ. ಒಂದೊಂದರಲ್ಲಿ ಸಾಧನೆ ಮಾಡಲು ಅನೇಕರಿಗೆ ಕಷ್ಟಸಾಧ್ಯ. ಇವರಿಗೆ ಎಲ್ಲವೂ ಸಲೀಸು. 

ರಾಯರ ಬೇರೆ ಪವಾಡಗಳು ಒತ್ತಟ್ಟಿಗಿರಲಿ. ಇವೆಲ್ಲದರ ಹಿನ್ನೆಲೆಯಲ್ಲಿ ಅವರನ್ನು ನೆನೆದಾಗ, ನೋಡಿದಾಗ ಅವರ ಬದುಕೇ ಒಂದು ದೊಡ್ಡ ಪವಾಡ.   

Monday, August 11, 2025

ದೊಡ್ಡವರ ಶಾಪಗಳೆಂಬ ವರಗಳು


ಹಿಂದಿನ ಸಂಚಿಕೆಯಲ್ಲಿ "ಸೋರಿಹೋಗುವ ನೀರಿನಂತೆ" ಎನ್ನುವ ಶೀರ್ಷಿಕೆಯಡಿ ಶಾಪಗಳ ಕಾರಣಗಳನ್ನೂ ಮತ್ತು ಅವುಗಳ ಪರಿಣಾಮಗಳನ್ನೂ ಸ್ವಲ್ಪ ನೋಡಿದೆವು. (ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು). ಅನೇಕ ವೇಳೆ ಶಾಪಗಳು ದೊಡ್ಡ ರೀತಿಯ ವರಗಳೇ ಆಗಿ ರೂಪಾಂತರವಾಗುವ ಕಥೆಗಳನ್ನು ಕೇಳಿದ್ದೇವೆ. ಶ್ರೀ ರಾಘವೇಂದ್ರ ಸ್ವಾಮಿಗಳ 354 ವರ್ಷದ ಆರಾಧನೆಯ ಸಂದರ್ಭದಲ್ಲಿ ಅವರ ಅವತಾರದ ಬಗ್ಗೆ ಇರುವ ಶಾಪದ ಸಂಗತಿ ನೆನೆಸಿಕೊಳ್ಳುವುದು ಯೋಗ್ಯವೇ. ಆ ಶಾಪವು ಹೇಗೆ ಅನೇಕರಿಗೆ ವರವಾಗಿ ಪರಿಣಮಿಸಿತು ಎನ್ನುವುದನ್ನು ಸ್ವಲ್ಪ ಮಟ್ಟಿಗೆ ನೋಡೋಣ. 

"ಕ್ರೋಧೋಪಿ ದೇವಸ್ಯ ವರೇಣ ತುಲ್ಯ:" ಎಂದು ಒಂದು ಸಂಸ್ಕೃತದ ಹೇಳಿಕೆಯಿದೆ. ಕನ್ನಡದ ಗಾದೆಯಂತೆ. ಮಹಾಭಾರತದ ಶಾಂತಿ ಪರ್ವದ ಸಂದರ್ಭದಲ್ಲಿ ಇದರ ವಿಸ್ತಾರ ಸಿಗುತ್ತದೆ. ಇದರ ಸಂಕ್ಷಿಪ್ತ ಅರ್ಥ "ದೊಡ್ಡವರ ಕೋಪವೂ ವರಕ್ಕೆ ಸಮವು. ಅವರ ಕೋಪವೂ ಮಾನ್ಯವೇ!" ಎಂದು. ಒಬ್ಬರು ಇನ್ನೊಬ್ಬರನ್ನು  ಕಂಡಾಗ ಮೂರು ರೀತಿಗಳಲ್ಲಿ ಪ್ರತಿಕ್ರಯಿಸಬಹುದು. ಮೊದಲನೆಯದು ಉದಾಸೀನತೆ. ನೋಡಿಯೂ ನೋಡದಂತೆ ವ್ಯವಹರಿಸುವುದು. ಇದರಿಂದ ಏನೂ ಪ್ರಯೋಜನವಿಲ್ಲ. ಅದು ನೋವಿನ ಸಂಗತಿಯೇ. ಎರಡನೆಯದು ಸಂತೋಷದಿಂದ ನೋಡುವುದು. ಇದು ಬೇಕಾದದ್ದು. ಮೂರನೆಯದು ಕೋಪದಿಂದ ಗದರಿಸುವುದು ಇತ್ಯಾದಿ. ಇದರಲ್ಲಿ ಪ್ರೀತಿಯಿಲ್ಲದಿದ್ದರೂ ಉದಾಸೀನತೆ ಇಲ್ಲ. ನೋಡಿಯೂ ನೋಡದಿರುವಂತೆ ಇರುವುದಕ್ಕಿಂತ ಇದು ವಾಸಿ! ದೊಡ್ಡವರು ಹುಸಿ ಕೋಪದಿಂದ ಗದರಿಸಿದಂತೆ ಮಾಡಿದರೂ ಅವರು ನಮ್ಮನ್ನು ಗಮನಿದರಲ್ಲಾ, ಅಷ್ಟು ಸಾಕು ಎನ್ನುವ ಸಮಾಧಾನ. ಅದೇ ನಮ್ಮ ಭಾಗ್ಯೋದಯಕ್ಕೆ ದಾರಿ ಮಾಡುತ್ತದೆ ಎನ್ನುವ ಬಲವಾದ ನಂಬಿಕೆ. 

ಗುರುರಾಯ ಶ್ರೀ ರಾಘವೇಂದ್ರ ಸ್ವಾಮಿಗಳ ಅವತಾರವೂ ಈ ರೀತಿಯ ದೊಡ್ಡವರ ಒಂದು ಕೋಪದಿಂದಾದ ಶಾಪರೂಪಿ ವರದ ಪ್ರಭಾವ ಎಂದು ಅವರನ್ನು ನಂಬಿದ ಜನ ತಿಳಿಯುತ್ತಾರೆ.  

*****

ಚತುರ್ಮುಖ ಬ್ರಹ್ಮದೇವರೂ ಪ್ರತಿದಿನ ದೇವತಾರ್ಚನೆ ಮಾಡುತ್ತಾರಂತೆ. ಅದು ಮಾಡುವುದು ಒಂದು ತಪ್ಪಿಸಬಾರದ ಕರ್ತವ್ಯವೆಂದು ಎಲ್ಲರಿಗೆ ತೋರಿಸುವ ಸಲುವಾಗಿ. ಅವರು ಪ್ರತಿಕ್ಷಣ ಮಾಡುವುದೂ ಅದನ್ನೇ ಎನ್ನುವುದು ಬೇರೆ ಮಾತು. ಆದರೆ ದಿನಚರಿಯಲ್ಲಿ ಅದೂ ಒಂದು ಕಟ್ಟಲೆ. ಅವರ ಅಪ್ಪ-ಅಮ್ಮನಾದ ಲಕ್ಷ್ಮೀ-ನಾರಾಯಣರ ಅತಿ ದಿವ್ಯವಾದ ಪೂಜೆ-ಪುನಸ್ಕಾರಗಳು. ಅವರ ದೇವರಪೂಜೆ ಅಂದರೆ ಸಾಮಾನ್ಯವಲ್ಲ. ನಮ್ಮಂತೆ ಮನಸ್ಸು ಒಂದು ಕಡೆ, ಮಾತು ಇನ್ನೊಂದರ ಕುರಿತು, ದೇಹ ಮಾತ್ರ ಪೂಜೆಯಲ್ಲಿ. ಹೀಗಲ್ಲ. ಆದ್ದರಿಂದ ಅವರ ಪೂಜೆಯಲ್ಲಿ ಇನ್ನಿಲ್ಲದ ಸೊಗಸು. ಅವರು "ಕೇಶವಾಯ ನಮಃ" ಎಂದರೆ ಕೇಶವರೂಪಿ ಪರಮಾತ್ಮನು ಎದುರು ನಿಂತು ನಗೆಮೊಗದಿಂದ ಸ್ವೀಕರಿಸುತ್ತಾನಂತೆ. ಮತ್ತೆ "ನಾರಾಯಣಾಯ ನಮಃ" ಎಂದರೆ ನಾರಾಯಣ ರೂಪದಲ್ಲಿ ಬಂದು ನಿಲ್ಲುವನು. "ಮತ್ಸ್ಯಾಯ ನಮಃ" ಅಂದರೆ ಮತ್ಸ್ಯರೂಪಿ ಪರಮಾತ್ಮ ಹಾಜರು. "ಕೂರ್ಮಾಯ ನಮಃ" ಎಂದರೆ ಕೂರ್ಮರೂಪದಲ್ಲಿ.  ಹೀಗೆ ಉದ್ದಕ್ಕೂ.  ಅದನ್ನು ನೆನೆಸಿಕೊಂಡರೇ ಅದೊಂದು ದಿವ್ಯವಾದ ಅನುಭವ. 

ಶ್ರೀಮಠಗಳ ಆಸ್ಥಾನ ಪೂಜೆ ವ್ಯವಸ್ಥೆ ಅವನ್ನು ನೋಡಿದವರಿಗೆ ಗೊತ್ತು. ಮಠದ ಶ್ರೀಗಳು ಪೂಜಾದಿಗಳನ್ನು ಮಾಡುವಾಗ ಅವರ ಸಹಾಯಕರಾಗಿ ಶಿಷ್ಯರಿರುತ್ತಾರೆ. ಕಾಲಕಾಲಕ್ಕೆ ತಕ್ಕಂತೆ ಪೂಜಾಸಾಮಗ್ರಿಗಳನ್ನು ಒದಗಿಸಿ ಕೊಡುವುದು ಅವರ ಕೆಲಸ. ಹೂವುಗಳು, ಹಣ್ಣುಗಳು, ಧೂಪ, ದೀಪ ಇತ್ಯಾದಿಗಳು ಅವರು ಕೈ ನೀಡಿದಾಗ ಸಮಯಕ್ಕೆ ಅನುಗುಣವಾಗಿ ಸಿಗಬೇಕು. ಮಂಗಳಾರತಿಯೇ ಒಂದು ಹದಿನೈದು-ಇಪ್ಪತ್ತು ರೀತಿಯವು. ಸಣ್ಣ ತಟ್ಟೆಯಲ್ಲಿ, ದೊಡ್ಡ ತಟ್ಟೆಯಲ್ಲಿ, ಹಲಗಾರತಿ, ಕುಂಭಾರತಿ, ಏಕಾರತಿ, ಅನೇಕಾರತಿ, ಹೀಗೆ ವೈವಿಧ್ಯಪೂರ್ಣ ಮಾದರಿಗಳು. ಎಲ್ಲವೂ ಸರಿಯಾಗಿ ತಯಾರಿರಬೇಕು. ಪೂಜೆ ಎಲ್ಲೂ ಮಧ್ಯೆ ತಡವರಿಸದಂತೆ ಸಾಂಗವಾಗಿ ನಡೆಯಬೇಕು. ಇದು ಒಂದು ಕಟ್ಟುನಿಟ್ಟಾದ ಕ್ರಮ. 

ಚತುರ್ಮುಖ ಬಹ್ಮದೇವರಿಗೆ ಹೀಗೆ ಪೂಜಾಸಮಯದಲ್ಲಿ ಸಹಾಯಕನಾಗಿರುವುದು "ಶಂಖುಕರ್ಣ" ಎಂಬ ಒಬ್ಬ ಕರ್ಮಜದೇವತೆಯ ಕೆಲಸ. ಕಾಲಕಾಲಕ್ಕೆ ಹೂವು ತುಂಬಿದ ತಟ್ಟೆಗಳನ್ನು ಕೈಗೆ ಕೊಡುವುದು ಅದರಲ್ಲಿ ಒಂದು. ಒಂದು ಹರಿವಾಣ ಅರ್ಪಿಸಿ ಬರಿದಾದಂತೆ ಅದನ್ನು ಹಿಂತೆಗೆದುಕೊಂಡು ಹೂವು ತುಂಬಿದ ಮತ್ತೊಂದನ್ನು ತಕ್ಷಣ ಕೊಡಬೇಕು. ಗಮನವೆಲ್ಲ ಇದರ ಮೇಲೆಯೇ ಇರಬೇಕು. ಒಂದು ಕ್ಷಣವೂ ತಪ್ಪಬಾರದು. ಹೀಗೆಯೇ ನಡೆಯಬೇಕು. 

ಒಂದು ದಿನ ಹೀಗೆ ಪೂಜಾಸಮಯದಲ್ಲಿ ಮತ್ಸ್ಯ, ಕೂರ್ಮರ ನಂತರ ವರಾಹರೂಪಿ ಪರಮಾತ್ಮನ ಸ್ಮರಣೆ ಬಂತು. ಅಚ್ಚ ಬಿಳಿಯ ಬಣ್ಣದ "ಶ್ವೇತ ವರಾಹಮೂರ್ತಿ" ಮೈದೋರಿದ. ಆ ಮೂರ್ತಿಯ ದಿವ್ಯ ಸುಂದರ ರೂಪ ನೋಡುತ್ತಾ ಶಂಖುಕರ್ಣ ಮೈಮರೆತ. ಬ್ರಹ್ಮದೇವರು ಕೈ ನೀಡಿದಾಗ ಹೂವು ತುಂಬಿದ ತಟ್ಟೆಯ ಬದಲು ಪಕ್ಕದಲ್ಲಿದ್ದ ಖಾಲಿ ತಟ್ಟೆ ಸಿಕ್ಕಿತು. ಬ್ರಹ್ಮದೇವರು ನೋಡಿದರೆ ಕೈಯಲ್ಲಿ ಖಾಲಿ ತಟ್ಟೆ! ದೊಡ್ಡ ಅಪಚಾರ. ಥಟ್ಟೆ೦ದು ಶಂಖುಕರ್ಣನನ್ನು ನೋಡಿ "ನೀನು ಭೂಲೋಕದಲ್ಲಿ ಅನೇಕ ಜನ್ಮಗಳನ್ನು ತಾಳು" ಎಂದು ಶಪಿಸಿಬಿಟ್ಟರು. 
*****

ಶಪಿಸುವ ಕ್ರಿಯೆಯೆನೋ ನಡೆದುಹೋಯಿತು. ಪಕ್ಕದಲ್ಲಿ ಸಂಗೀತ, ನೃತ್ಯಸೇವೆಗಳಿಗೆ ತಯಾರಾಗಿ ನಿಂತಿದ್ದ ತಾಯಿ ಶಾರದೆ ಇದನ್ನು ಕಂಡಳು. 

"ಇದೇನು! ಹೀಗೆ ಶಪಿಸಿಬಿಟ್ಟಿರಿ?"
"ಅಪಚಾರ ಆಗಲಿಲ್ಲವೇ? ಪರಿಣಾಮ ಅನುಭವಿಸಲೇಬೇಕಲ್ಲ"
"ಪರಮಾತ್ಮನ ದಿವ್ಯ ಮಂಗಳ ಮೂರ್ತಿಯನ್ನು ಕಣ್ಣಾರೆ ಕಂಡು ಮೈ ಮರೆಯದವರು ಯಾರುಂಟು? ಅದಕ್ಕೆ ಹೀಗೆ ಶಾಪ ಕೊಡುವುದೇ?"
"ಕೊಟ್ಟವನು ನಾನಲ್ಲ. ಕೊಡಿಸಿದವನು ಅವನೇ. ಎಲ್ಲರಿಗೂ ಅಪ್ಪನಾದ ನಮ್ಮಪ್ಪ"
"ಶಂಕುಕರ್ಣನ ಮುಂದಿನ ಹಾದಿ?"
"ಅವನಿಗೆ ಈ ಶಾಪವೇ ವರವಾಗುತ್ತದೆ. ಮುಂದೆ ಹಾಗೆ ಜನ್ಮ ತಾಳಿದಾಗ ನರಸಿಂಹ-ರಾಮ-ಕೃಷ್ಣರ ಅಖಂಡ ದರ್ಶನ ಆಗುತ್ತದೆ. ಇನ್ನಿಲ್ಲದಷ್ಟು ಪುಣ್ಯ ಸಂಪಾದನೆಗೆ ಇದೊಂದು ದಾರಿಯಾಗುತ್ತದೆ"
"ಆಮೇಲೆ?"
"ಅಷ್ಟೇ ಅಲ್ಲ. ಅವನ ಅನುಯಾಯಿಗಳಿಗೂ ಬಹುಪರಿಯ ಅನುಗ್ರಹಗಳಾಗುತ್ತವೆ. ನಿನ್ನ ಅನುಗ್ರಹವಂತೂ ಈಗಲೇ ಆಗಿದೆಯಲ್ಲ!"

ಈ ಶಾಪದ ಪರಿಣಾಮವಾಗಿ ಮುಂದೆ ಶಂಖುಕರ್ಣನು ಹಿರಣ್ಯಕಶಿಪು-ಕಯಾದು ದಂಪತಿಗಳ ಮಗನಾದ ಪ್ರಹ್ಲಾದನಾಗಿ ಹುಟ್ಟುತ್ತಾನೆ. ನಂತರ ಕನ್ನಡ ರಾಜ್ಯರಮಾರಮಣ ಶ್ರೀ ಕೃಷ್ಣದೇವರಾಯನ ರಾಜುಗುರು "ವ್ಯಾಸತೀರ್ಥ", ನಂತರ ಗುರು "ರಾಘವೇಂದ್ರ ತೀರ್ಥ" ಆಗಿ ಬರುತ್ತಾರೆ. ಹೀಗೆ ಅವರನ್ನು ನಂಬಿದವರು ಆರಾಧಿಸುತ್ತಾರೆ. ಕ್ರಮವಾಗಿ ನರಸಿಂಹ-ಶ್ರೀಕೃಷ್ಣ-ಮೂಲರಾಮರ ಆರಾಧಕರಾಗಿ, ನಂಬಿದವರ ನೆರವಿಗೆ ನಿಲ್ಲುತ್ತಾರೆ. 
*****

ವೀಣಾ ವೆಂಕಟನಾಥ ಭಟ್ಟರು ಗುರುಗಳಾದ ಶ್ರೀ ಸುದೀಂಧ್ರ ತೀರ್ಥರಿಂದ ಸನ್ಯಾಸ ತೆಗೆದುಕೊಂಡು "ಶ್ರೀ ರಾಘವೇಂದ್ರ ತೀರ್ಥ" ಹೆಸರಿನಿಂದ ಪ್ರಖ್ಯಾತರಾದರು. ಒಂದು ಸಂದರ್ಭದಲ್ಲಿ ವಿದ್ಯೆಯ ಅವಕಾಶವೇ ಇಲ್ಲದ ವೆಂಕಣ್ಣನೆಂಬ ಯುವಕನೊಬ್ಬನಿಗೆ ಅವರ ಅನುಗ್ರಹವಾಗಿ, ಆದವಾನಿ ನವಾಬ ಸಿದ್ದಿ ಮಸೂದ್ ಖಾನ್ ಆಪ್ತನಾಗಿ ಸಂಸ್ಥಾನದ ದಿವಾನನಾದನು. ನವಾಬನು ಒಮ್ಮೆ ಗುರುಗಳನ್ನು ಪರೀಕ್ಷಿಸಲು ಹೋಗಿ ಪಶ್ಚಾತಾಪ ಪಟ್ಟನು. ಅವರಿಗೆ ಏನಾದರೂ ಕೊಡಬೇಕು, ಆ ಮೂಲಕ ತಪ್ಪು ಸರಿಮಾಡಿಕೊಳ್ಳಬೇಕೆಂದು ಆಸೆಪಟ್ಟನು. ರಾಯರು ತಮಗೆ ಏನೂ ಬೇಡವೆಂದರು. ಕಡೆಗೆ ನವಾಬನ ಅನೇಕ ಮನವಿಗಳ ನಂತರ "ಮಂಚಾಲೆ" ಎನ್ನುವ ಗ್ರಾಮವನ್ನು ಕೊಡಲು ಹೇಳಿದರು. ನವಾಬನು "ಅದೊಂದು ಕುಗ್ರಾಮ. ಅದರ ಬದಲು ಬೇರೆ ಕೇಳಿ" ಎಂದನು. ಗುರುಗಳು "ಕೊಡುವುದಿದ್ದರೆ ಅದು ಕೊಡಿ. ಇಲ್ಲದಿದ್ದರೆ ಬೇರೆ ಏನೂ ಬೇಡ" ಎಂದುಬಿಟ್ಟರು. 

ಕಡೆಗೆ ಮಂಚಾಲೆ ಗ್ರಾಮ ಸಿಕ್ಕಿತು. ರಾಯರು ವೆಂಕಣ್ಣನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತುಂಗಾನದಿ ತೀರದ ಸ್ಥಳವೊಂದನ್ನು ತೋರಿಸಿ ಅಲ್ಲಿ ಅಗೆಸಲು ಹೇಳಿದರು. ಹಾಗೆ ಅಗೆದಾಗ ಅಲ್ಲಿನ ಭೂಮಿಯಲ್ಲಿ ಬಹಳ ಹಿಂದಿನ ಹೋಮಕುಂಡಗಳ ಅವಶೇಷಗಳು ಸಿಕ್ಕಿದವು. "ಇವು ಹಿಂದೆ ಪ್ರಹ್ಲಾದರಾಜರು ಯಾಗಗಳನ್ನು ಮಾಡಿದ ಸ್ಥಳ. ನಾವು ಇಲ್ಲಿಯೇ ವೃಂದಾವನ ಪ್ರವೇಶ ಮಾಡುತ್ತೇವೆ" ಎಂದರು. 

ಒಲ್ಲದ ಮನಸ್ಸಿನಿಂದ ವೆಂಕಣ್ಣನು ಒಂದು ಸುಂದರವಾದ ವೃಂದಾವನವನ್ನು ಮಾಡಿಸಿ ಗುರುಗಳಿಗೆ ತೋರಿಸಿದನು. ರಾಯರು ನಕ್ಕು, ವೆಂಕಣ್ಣನನ್ನು ಮಾದಾವರ ಎಂಬ ಗ್ರಾಮಕ್ಕೆ ಕರೆದುಕೊಂಡು ಹೋದರು. (ಈಗಲೂ ಮಂತ್ರಾಲಯಂ ರೋಡ್ ರೈಲು ನಿಲ್ದಾಣದಿಂದ ಮಂತ್ರಾಲಯಕ್ಕೆ ಹೋಗುವ ದಾರಿಯಲ್ಲಿ ಈ ಗ್ರಾಮವಿದೆ). ಅಲ್ಲಿ ಕೆರೆಯ ದಂಡೆಯ ಶಿಲೆಯೊಂದನ್ನು ತೋರಿಸಿದರು. "ಶ್ರೀರಾಮಚಂದ್ರ ದೇವರು ಕಿಷ್ಕಿಂಧೆಯ ಕಡೆ ಬಂದಿದ್ದಾಗ ಇಲ್ಲಿ ಬಂದು ಈ ಶಿಲೆಯ ಮೇಲೆ ಸ್ವಲ್ಪ ಕಾಲ ಕುಳಿತಿದ್ದರು. ಈ ಶಿಲೆಯಲ್ಲಿ ಒಂದು ಮಾರುತಿಯ ವಿಗ್ರಹ ಮಾಡಿಸಿ. ಮಿಕ್ಕಿದ ಶಿಲೆಯಲ್ಲಿಯೇ ನಮ್ಮ ವೃಂದಾವನ ಆಗಬೇಕು" ಎಂದು ಆದೇಶಿಸಿದರು. (ಮಾರುತಿಯ ವಿಗ್ರಹವನ್ನು ಶ್ರೀ ರಾಯರ ಬೃಂದಾವನದ ಮುಂದೆ ಈಗಲೂ ಕಾಣಬಹುದು). 

ವೆಂಕಣ್ಣನಿಗೆ ಸಂಕೋಚವಾಯಿತು. ಈಗ ಮಾಡಿಸಿರುವ ವೃಂದಾವನ ಏನು ಮಾಡುವುದು ಎಂಬ ಯೋಚನೆ. "ಚಿಂತಿಸಬೇಡಿ. ಮುಂದೆ ನಮ್ಮ ಪೀಠದಲ್ಲಿ ಬರುವವರೊಬ್ಬರು ಅದನ್ನು ಉಪಯೋಗಿಸುತ್ತಾರೆ" ಎಂದರು. (ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನದ ಪಕ್ಕದಲ್ಲೇ, ಅದೇ ರೀತಿ ಇರುವ ಭವ್ಯ ಶ್ರೀ ವಾದೀಂದ್ರ ತೀರ್ಥರ ವೃನ್ದಾವನವೇ ಅದು). ತಮ್ಮ ತೀರ್ಮಾನದಂತೆ ಶ್ರಾವಣ ಬಹುಳ ಬಿದಿಗೆಯಂದು ಶ್ರೀ ರಾಯರು ಸಶರೀರವಾಗಿ ವೃಂದಾವನ ಪ್ರವೇಶ ಮಾಡಿದರು. ಅದಾಗಿದ್ದು ಇಂದಿಗೆ 354 ವರುಷಗಳ ಹಿಂದೆ. ಬದುಕಿರುವಾಗಲೇ ವೃಂದಾವನ ಪ್ರವೇಶ ಮಾಡಿದ ಕೆಲವೇ ಮಹನೀಯರಲ್ಲಿ ಶ್ರೀ ರಾಘವೇಂದ್ರ ತೀರ್ಥರೂ ಒಬ್ಬರು. 

ಅವರ ಬೃಂದಾವನದಲ್ಲಿ 732 ಸಾಲಿಗ್ರಾಮಗಳೂ, ಅನೇಕ ದೇವತಾ ಮೂರ್ತಿಗಳೂ ಇವೆ. ಆ ಬೃಂದಾವನಕ್ಕೆ ಒಂದು ಪ್ರದಕ್ಷಿಣೆ ಬಂದರೆ ಒಂದು ಸಾವಿರ ಪ್ರದಕ್ಷಿಣೆಯ ಫಲ ಉಂಟು ಎನ್ನುವುದು ಸುಮ್ಮನೆ  ಹೇಳುವ ಮಾತಲ್ಲ. 

*****

ಸನ್ಯಾಸ ಪಡೆಯುವುದಕ್ಕೆ ಮೊದಲು, ಗೃಹಸ್ಥರಾಗಿದ್ದಾಗ ವೆಂಕಟನಾಥರು ಅತ್ಯಂತ ಬಡತನದಿಂದ ಬಳಲಿದರು. ವಾರಕ್ಕೆ ಮೂರು-ನಾಲ್ಕು ಏಕಾದಶಿ ಮಾಡುತ್ತಿದ್ದಾರೆಂದು ಹೇಳುತ್ತಾರೆ. ಆದರೂ ಒಬ್ಬರಲ್ಲಿ ಒಂದು ಹಿಡಿ ಧಾನ್ಯವನ್ನೂ ಬೇಡಲಿಲ್ಲ. ತಾವಾಗಿ ಕೊಡಲು ಬಂದ ದಾನಿಗಳನ್ನೂ, ದತ್ತಿಗಳನ್ನೂ ನಿರಾಕರಿಸಿದರು. ಅವರು ಅದ್ವಿತೀಯ ವೀಣಾವಾದಕರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಆಸ್ಥಾನ ವಿದ್ವಾಂಸರಾಗಿದ್ದ ಕನಕಾಚಲ ಭಟ್ಟರ ಮೊಮ್ಮಗ. ಸಾಮ್ರಾಟರಿಗೆ ವೀಣಾ ಗುರುಗಳಾಗಿದ್ದ ತಿಮ್ಮಣ್ಣ ಭಟ್ಟರ ಮಗ. ಅದೊಂದು ವಿದ್ಯೆಯಿಂದಲೇ ಸಿರಿವಂತರಾಗಿ ಮೆರೆಯಬಹುದಿತ್ತು. ವೈರಾಗ್ಯ ಮೂರ್ತಿಗಳಾಗಿ ಸಾಧನೆ, ವಿದ್ಯೆ, ಪಾಠ-ಪ್ರವಚನಗಳಿಗೆ ಜೀವನ ಮೀಸಲಿಟ್ಟರು. ಅನೇಕ ಅಮೂಲ್ಯ ಗ್ರಂಥಗಳನ್ನು ರಚಿಸಿದರು. 

ಈಗ ಪ್ರತಿದಿನ ಅವರ ವೃಂದಾವನಗಳಿರುವ ಸ್ಥಳಗಳಲ್ಲಿ ಲಕ್ಷ ಲಕ್ಷ ಮಂದಿ ಪ್ರಸಾದ ಪಡೆಯುತ್ತಾರೆ. ಅವರ ಆರಾಧನೆಯ ದಿನಗಳಲ್ಲಿ ಲಕ್ಷೋಪಲಕ್ಷ ಮಂದಿ ಮೃಷ್ಟಾನ್ನ ಸೇವಿಸುತ್ತಾರೆ. ವಿದೇಶಗಳಲ್ಲೂ ಆರಾಧನೆ ಉತ್ಸವಗಳು ವೈಭವದಿಂದ ನಡೆಯುತ್ತವೆ. ಸಾಲುಗಳಲ್ಲಿ ನಿಂತು ಜನರು ಸೇವೆಗೆ ಹಣನೀಡಲು ಹಾತೊರೆಯುತ್ತಾರೆ. ಅಮೆರಿಕಾದಂತಹ ದೇಶಗಳಲ್ಲಿ ಆರಾಧನೆಯ ದಿನದ ಊಟದ ಸರತಿಯ ಸಾಲು ನೋಡಿದರೆ ಇದು ಮನದಟ್ಟಾಗುತ್ತದೆ. 

ಅವರಿಗೆ ಆದ ತಾಯಿ ಶಾರದೆಯ ಅನುಗ್ರಹದ ವಿಚಾರವನ್ನು ಮತ್ತೊಂದು ದಿನ ನೋಡೋಣ.