Wednesday, June 17, 2026

ವಿಷಮ ದಾಂಪತ್ಯ



ಇಡ್ಲಿ-ಚಟ್ನಿ ಅಥವಾ ಇಡ್ಲಿ-ಸಾಂಬಾರ್, ಇಲ್ಲವೇ ಇನ್ನೂ ಹೆಚ್ಚಿನ ರಸಕವಳ ಬೇಕೆಂದರೆ ತುಪ್ಪದ ಜೊತೆ ಇಡ್ಲಿ-ಸಾಂಬಾರ್-ಚಟ್ನಿ ತಿನ್ನುವವರ ಮನೆಯಲ್ಲಿ ಕುಕ್ಕರ್ ಒಳಗೆ ಇಡ್ಲಿಹಿಟ್ಟು ಹಾಕಿಟ್ಟು ಇಡ್ಲಿ ಮಾಡಲು ಇಡುವ ಇಡ್ಲಿ ಸ್ಟ್ಯಾoಡು ಇರುತ್ತವೆ. ಮನೆಯಲ್ಲಿ ವಾಸವಿರುವ ಜನರು ಮತ್ತು ಅವರ ಆಹಾರ ಸೇವನೆಯ ಸಾಮರ್ಥ್ಯ ಅವಲಂಬಿಸಿ ಅದಕ್ಕೆ ಸರಿಯಾದ ಕುಕ್ಕರ್ ಮತ್ತು ಇಡ್ಲಿ ಸ್ಟ್ಯಾಂಡುಗಳನ್ನು ಇಟ್ಟುಕೊಂಡಿರುತ್ತಾರೆ. ಎರಡು ಅಥವಾ ಮೂರು ಮಂದಿ ಇರುವ ಮನೆಯಲ್ಲಿ 3x3=9 ಇಡ್ಲಿ ಮಾಡುವ ಸ್ಟಾಂಡ್ ಇರಬಹುದು. ಮನೆಯಲ್ಲಿ ಹೆಚ್ಚು ಹಸಿವಿರುವ ನಾಲ್ಕು ಮಂದಿ ಇದ್ದರೆ 4x6=24 ಇಡ್ಲಿ ಮಾಡುವ ಸ್ಟಾಂಡ್ ಇರಬಹುದು. ಪಕ್ಕದ ರಸ್ತೆಯಲ್ಲಿರುವ ದರ್ಶಿನಿಯಲ್ಲಿ 6x6=36 ಇಡ್ಲಿ ಮಾಡುವ ಹತ್ತು ಚೌಕಾಕಾರದ ತಟ್ಟೆಗಳ ದೊಡ್ಡ ಇಡ್ಲಿ ಮೇಕರ್ ಇರುತ್ತದೆ. ಒಂದೇ ಸಲ 360 ಇಡ್ಲಿಗಳು! SLV ರೀತಿಯ ಇಡ್ಲಿ ಸ್ಥಳಗಳಲ್ಲಿ ಇವೂ ಸಾಲುವುದಿಲ್ಲ. ಇಂತಹ ಎರಡು-ಮೂರು ಇಟ್ಟುಕೊಂಡು ಸರತಿಯ ಮೇಲೆ ಬಳಸುತ್ತಾರೆ. 

ಚತುರ್ಮುಖ ಬ್ರಹ್ಮದೇವರು ಆದಿ ಸೃಷ್ಟಿಕರ್ತರು. ಅವರೂ ಇದೇ ತತ್ವವನ್ನು ಅನುಸರಿಸಿದ್ದಾರೆ. ವಾಸ್ತವವಾಗಿ ಅವರು ಮೊದಲು ಪ್ರಾರಂಭಿಸಿದ ಮಾದರಿಯನ್ನು ನಾವು ಮುಂದುವರೆಸಿದ್ದೇವೆ ಅನ್ನುವುದು ಹೆಚ್ಚು ಸರಿಯಾದೀತು. ಮಹಾಪ್ರಳಯದ ನಂತರ ಸೃಷ್ಟಿ ಪ್ರಾರಂಭದಲ್ಲಿ ಹೆಚ್ಚು ಜೀವಿಗಳು ಬೇಕಾಗಿದ್ದರಿಂದ ಈ ಕೆಲಸಕ್ಕಾಗಿ ಸಹಾಯಕವಾಗಲು ಅವರು ಮೊದಲಿಗೆ "ಪ್ರಜಾಪತಿ" ಅನ್ನುವವರನ್ನು ತಮ್ಮ ಮಾನಸಪುತ್ರರಾಗಿ ಹೊರತಂದರು. ಈ ಪ್ರಜಾಪತಿಗಳ ಮೂಲಕ ಮುಂದೆ ಸೃಷ್ಟಿ ದೊಡ್ಡದಾಗುತ್ತಾ ಹೋಯಿತು. ಈ ರೀತಿಯ ಪ್ರಜಾಪತಿಗಳ ಹೆಸರಿಗೆ ಉದಾಹರಣೆ ಕೊಡಬೇಕೆಂದರೆ ದಕ್ಷ ಪ್ರಜಾಪತಿ, ಕರ್ದಮ ಪ್ರಜಾಪತಿ, ಮುಂತಾದವರು. ಮರೀಚಿ, ಅಂಗೀರಸ ಮುಂತಾದವರೂ ಪ್ರಜಾಪತಿಗಳೇ. ಆದರೂ ಪ್ರಜಾಪತಿ ಅನ್ನುವ ಪದ ಕೇಳಿದ ತಕ್ಷಣ ನಮ್ಮ ನೆನಪಿಗೆ ಬರುವುದು ದಕ್ಷನ ಹೆಸರೇ ಅಲ್ಲವೇ? 

ಸಂತಾನವಾಗುವುದು ಹೇಗೆ? ಸಂತಾನ ಸೃಷ್ಟಿಯಲ್ಲಿ ಎಷ್ಟು ವಿಧ? ಈ ಪ್ರಶ್ನೆಗಳಿಗೆ ಹಿಂದೊಂದು ಸಂಚಿಕೆಯಲ್ಲಿ ಉತ್ತರ ಹುಡುಕಿದ್ದೇವೆ. ಆಸಕ್ತರು "ಸಂತಾನ ಸೃಷ್ಟಿಯ ವಿಧಗಳು" ಎಂಬ ಶೀರ್ಷಿಕೆಯಲ್ಲಿರುವ ಆ  ಲೇಖನವನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಸ್ತ್ರೀ-ಪುರುಷರ ಸಂಸರ್ಗದ ಮೂಲಕ ಮಕ್ಕಳನ್ನು ಪಡೆಯುವ ವ್ಯವಸ್ಥೆಯನ್ನು ಮೊದಲು ತಂದವನು ಈ ದಕ್ಷ ಪ್ರಜಾಪತಿ ಎಂದು ಹೇಳುತ್ತಾರೆ. 

*****

"ನಿನ್ನೆ ಕೃಷ್ಣ ಮೂರ್ತಿ ಬಂದಿದ್ದ" ಎಂದು ಯಾರಾದರೂ ಹೇಳಿದರೆ ತಕ್ಷಣ ಕೇಳುವ ಪ್ರಶ್ನೆ "ಯಾವ ಕೃಷ್ಣ ಮೂರ್ತಿ?" ಎಂದು. ಏಕೆ ಹೀಗೆ? ಅನೇಕ ಕೃಷ್ಣ ಮೂರ್ತಿಗಳು ನಮಗೆ ಗೊತ್ತು. ಅವರಲ್ಲಿ ಯಾರು ಎಂದು ತಿಳಿಯಬೇಕು. "ತರಲೆ ಕೃಷ್ಣಮೂರ್ತಿ ಬಂದಿದ್ದ" ಅಂತ ಹೇಳಿದರೆ ತಕ್ಷಣ ಗೊತ್ತಾಗುತ್ತದೆ. ಅಥವಾ ಒಬ್ಬರ ಕುಟುಂಬದಲ್ಲಿ "ಕಮಲು ಮಗ ಕೃಷ್ಣಮೂರ್ತಿ" ಅನ್ನಬಹುದು. ಇನ್ನೊಬ್ಬರ ಮನೆಯಲ್ಲಿ ರಮಾ ಗಂಡ ಕೃಷ್ಣಮೂರ್ತಿ ಇರಬಹುದು. ಹೀಗೆ. 

ಇದೇ ರೀತಿ ವೈದಿಕ ವಾಗ್ಮಯದಲ್ಲಿಯೂ ಒಂದೇ ಹೆಸರಿನ ಅನೇಕರು ಇದ್ದಾರೆ. "ರಾಮ" ಎಂದರೆ ಯಾರು? ಪರಶುರಾಮ ಇದ್ದಾನೆ. ಬಲರಾಮ ಇದ್ದಾನೆ. ಶ್ರೀರಾಮನೂ ಇದ್ದಾನೆ. ಅದೇ ರೀತಿ ಒಬ್ಬನಿಗೆ ಅನೇಕ ಹೆಸರುಗಳೂ ಉಂಟು. ತ್ರೇತಾಯುಗದ ರಾಮ ಹುಟ್ಟಿದ ಕೂಡಲೇ "ಶ್ರೀರಾಮ". ಕೌಸಲ್ಯೆಯ ಮಡಿಲಲ್ಲಿದ್ದಾಗ "ಕೌಸಲ್ಯಾರಾಮ". ದಶರಥನ ತೊಡೆಯ ಮೇಲೆ ಏರಿದಾಗ "ದಶರಥರಾಮ". ಅಯೋಧ್ಯೆಯಲ್ಲಿ ಓಡಾಡುತ್ತಿದ್ದಾಗ "ಅಯೋಧ್ಯಾರಾಮ". ಸೀತೆಯನ್ನು ಮದುವೆಯಾದಾಗ "ಸೀತಾರಾಮ". (ಅವಳಿಗೂ ಅನೇಕ ಹೆಸರು! ಅದಕ್ಕೇ "ಜಾನಕಿರಾಮ" ಸೇರಿಕೊಂಡಿತು). ಬಿಲ್ಲು ಹಿಡಿದಾಗ "ಕೋದಂಡರಾಮ". ಕಡೆಗೆ ಪಟ್ಟಾಭಿಷಿಕ್ತನಾದಾಗ "ಪಟ್ಟಾಭಿರಾಮ". ಮುಂದೆ ರಾಜ್ಯ ಆಳುವಾಗ "ರಾಜಾರಾಮ". ಈ ರೀತಿ. ಒಂದು ಹೆಸರಿನ ಅನೇಕರು ಮತ್ತು ಅನೇಕ ಹೆಸರಿನ ಒಬ್ಬರು. ಹೀಗೂ ಉಂಟು. ಹಾಗೂ ಉಂಟು. 

ದಕ್ಷನ ಸಂದರ್ಭದಲ್ಲಿಯೂ ಇದೇ ರೀತಿ. ಇಬ್ಬರು ದಕ್ಷರಿದ್ದಾರೆ. ಭಾಗವತ ಹೇಳುವಂತೆ ಸ್ವಾಯಂಭುವ ಮನ್ವಂತರದ ದಕ್ಷ ಒಬ್ಬ. ಚಾಕ್ಷುಷ ಮನ್ವಂತರದ ದಕ್ಷ ಇನ್ನೊಬ್ಬ. ಈ ಚಾಕ್ಷುಷ ಮನ್ವಂತರದ ದಕ್ಷ ಪ್ರಜಾಪತಿಗೆ ಅನೇಕ ಹೆಣ್ಣುಮಕ್ಕಳು. ಅವರಲ್ಲಿ ಒಟ್ಟಿಗೆ ಇಪ್ಪತ್ತೇಳು ಹೆಣ್ಣುಮಕ್ಕಳನ್ನು (ಬೇಕಿದ್ದರೆ ಒಂದು ಬ್ಯಾಚ್ ಅಂದುಕೊಳ್ಳಬಹುದು) ಚಂದ್ರನಿಗೆ ಮದುವೆ ಮಾಡಿಕೊಟ್ಟ. ಅಶ್ವಿನಿ, ಭರಣಿ, ಕೃತ್ತಿಕಾ, ಮುಂತಾಗಿ ಅವರ ಹೆಸರುಗಳು. ಕಡೆಯವಳು ರೇವತಿ. (ರೈವತರಾಜನ ಮಗಳು, ಬಲರಾಮನ ಹೆಂಡತಿ ರೇವತಿ ಬೇರೆ). ಇಪ್ಪತ್ತೇಳು ಅಕ್ಕ-ತಂಗಿಯರ ಮಧ್ಯದಲ್ಲಿ ರೋಹಿಣಿ ಎನ್ನುವ ಹೆಸರಿನ ಒಬ್ಬಳು. ಹೀಗೆ. 

*****

ನಾವು ಶಾಲಾ-ಕಾಲೇಜುಗಳಲ್ಲಿ ಓದುತ್ತಿದ್ದಾಗ ವರುಷಕ್ಕೊಮ್ಮೆ "ವಿಜ್ಞಾನದ ವಸ್ತುಪ್ರದರ್ಶನ" ನಡೆಸುತ್ತಿದ್ದರು. ಈಗ ಇನ್ನೂ ಚೆನ್ನಾಗಿ ನಡೆಸುತ್ತಿರಬಹುದು. ಅದರಲ್ಲಿ ಖಗೋಳದ ಒಂದು ಮಾದರಿ ಇಟ್ಟಿರುತ್ತಿದ್ದರು. ಗ್ರಹಗಳು ತಮ್ಮ ಅಕ್ಷದ ಮೇಲೆ ಸುತ್ತುತ್ತಾ ಸುತ್ತುತ್ತಾ ಹಾಗೆಯೇ ಸೂರ್ಯನ ಸುತ್ತ ಕೂಡ ಸುತ್ತುತ್ತಿದ್ದವು. ಭೂಮಿ ಹೀಗೆ ತನ್ನ ಅಕ್ಷದ ಸುತ್ತ ಸುತ್ತುವುದರಿಂದ ಹಗಲು-ರಾತ್ರಿಗಳೂ, ಸೂರ್ಯನ ಸುತ್ತ ಸುತ್ತುವುದರಿಂದ ಋತುಗಳೂ ಆಗುವುವು ಎಂದು ತಿಳಿಹೇಳುತ್ತಿದ್ದರು. ಹೀಗೆ ಸುತ್ತುವುದರಿಂದ ಅವು 360 ಡಿಗ್ರಿ ಕ್ರಮಿಸುತ್ತವೆ. ಸರಳ ರೇಖೆಯಲ್ಲಿ ಅಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ 360 ಡಿಗ್ರಿ ವರ್ತುಲವನ್ನು ಮೂವತ್ತು ಡಿಗ್ರಿಗಳ 12 ಭಾಗ ಮಾಡಿ ಅವುಗಳನ್ನು "ಹನ್ನೆರಡು ರಾಶಿಗಳು" ಅಂದರು. ಆಯಾ ಭಾಗಗಳಲ್ಲಿರುವ ನಕ್ಷತ್ರಪುಂಜಗಳ ಹೆಸರಿನಲ್ಲಿ ಮೇಷ, ವೃಷಭ, ಮಿಥುನ ಮುಂತಾಗಿ ಹೆಸರಿಟ್ಟರು. ಹನ್ನೆರಡನೇಯದು ಮೀನ ರಾಶಿಯಾಯಿತು. 

ಸರಳ ರೇಖೆಗೆ (Straight Line) ಮೊದಲು ಮತ್ತು ಕೊನೆ ಉಂಟು. ವರ್ತುಲಕ್ಕೆ (Circle) ಕೊನೆಮೊದಲಿಲ್ಲ. ರಾಶಿಚಕ್ರ ನಾವು ನಮ್ಮ ಅನುಕೂಲಕ್ಕೆ ಮಾಡಿಕೊಂಡಿರುವ ವ್ಯವಸ್ಥೆ. ಸೂರ್ಯನು ಏಪ್ರಿಲ್ ಮಧ್ಯದಲ್ಲಿ ಮೇಷ ರಾಶಿಗೆ ಬರುತ್ತಾನೆ. ಆಗ ಸೌರಮಾನ ಲೆಕ್ಕದ  ಹೊಸ ವರ್ಷ. ಜ್ಯೋತಿಷ್ಯದಲ್ಲಿ ಸೂರ್ಯನು ಯಾವ ರಾಶಿಯಲ್ಲಿ ಇದ್ದಾನೋ, ಆ ತಿಂಗಳಿಗೆ ಅದೇ ಹೆಸರು. ಸೂರ್ಯನ ಗತಿಗೆ (ಅಥವಾ ಸೂರ್ಯನ ಸುತ್ತ ಸುತ್ತುವ ಗ್ರಹಗಳ ಗತಿಗೆ) ಕೊನೆ ಮೊದಲಿಲ್ಲ. ಮೀನ ರಾಶಿ ಕಳೆಯಿತು ಎಂದು ಸುಮ್ಮನೆ ಕೂಡುವಂತಿಲ್ಲ. ತಕ್ಷಣ ಮೇಷಕ್ಕೆ. ಹೀಗೆ ಚಲನೆ. ಅದಕ್ಕೆ ರಾಶಿಗಳನ್ನು ಎಣಿಸಿದಾಗ ಮೀನ ಆದನಂತರ ಮೇಷ ಬಂದೇಬಿಟ್ಟಿತು. ಈ ಕಾರಣದಿಂದ "ಮೀನ-ಮೇಷ ಎಣಿಸುವುದು" ಎನ್ನುವ ಗಾದೆ ಬಂದಿತು. "ಎಣಿಸುವುದರಲ್ಲೇ ಕಾಲ ಕಳೆಯಬೇಡ. ಬೇಗ ಕೆಲಸ ಶುರು ಮಾಡು" ಎನ್ನುವ ಅರ್ಥದಲ್ಲಿ. 

ಭೂಮಿ ಸೂರ್ಯನ ಸುತ್ತ ಒಂದು ಸುತ್ತು ಬರುವುದಕ್ಕೆ (360 ಡಿಗ್ರಿ) ಹನ್ನೆರಡು ತಿಂಗಳು ಕಾಲ. ಅಂದರೆ 30 ಡಿಗ್ರಿಗೆ ಒಂದು ತಿಂಗಳು. ಆದರೆ ಚಂದ್ರ ಇಪ್ಪತ್ತೆಂಟು ದಿನಕ್ಕೆ ಒಂದು ಸುತ್ತು ಬರುತ್ತಾನೆ. ಆದ್ದರಿಂದ ಚಾಂದ್ರಮಾನ ತಿಂಗಳಿಗೆ ದಿನ ಕಡಿಮೆಯಾಯಿತು. ಈ ತಿಂಗಳುಗಳಿಗೆ ಚೈತ್ರ, ವೈಶಾಖ, ಮುಂತಾಗಿ ಹೆಸರು. ಈ ಎರಡು ರೀತಿಯ ವರ್ಷಗಳಿಗೆ ವ್ಯತ್ಯಾಸ ಸರಿ ಮಾಡಿ ಸಮಸ್ಥಿತಿಗೆ ತರಲು ಚಂದ್ರಮಾನದಲ್ಲಿ ಆಗಾಗ "ಅಧಿಕ ಮಾಸ" ಬರುತ್ತದೆ. 33 ತಿಂಗಳಿಗೆ ಒಂದು ಅಧಿಕ ಮಾಸ. ಈಗ ತಾನೇ "ಅಧಿಕ ಜ್ಯೇಷ್ಠ ಮಾಸ" ಮುಗಿಯಿತು. 

*****

ಚಂದ್ರನು ಇಪ್ಪತ್ತೇಳು ಅಕ್ಕ-ತಂಗಿಯರನ್ನು ಒಟ್ಟಿಗೆ ಮದುವೆಯೇನೋ ಆದನು. ಆದರೆ ಅವನಿಗೆ ಎಲ್ಲರಿಗಿಂತ ರೋಹಿಣಿ ಮೇಲೆ ಅಧಿಕ ಮನಸ್ಸು. ಅವಳ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದನಂತೆ. ಇದರಿಂದ ಅಸೂಯೆಗೊಂಡ ಮಿಕ್ಕ ಇಪ್ಪತ್ತಾರು ಸೋದರಿಯರು ಅಪ್ಪನಾದ ದಕ್ಷನ ಬಳಿ ದೂರು ಹೇಳಿದರು. ದಕ್ಷ ಚಂದ್ರನಿಗೆ ಕ್ಷಯಿಸಿಹೋಗು ಎಂದು ಶಾಪ ಕೊಟ್ಟ. ಕೊನೆಗೆ ಕುಟುಂಬದ ಎಲ್ಲರೂ ಸೇರಿ ನ್ಯಾಯ ತೀರ್ಮಾನ ಆಯಿತು. ಚಂದ್ರನಿಗೆ ಭಾಗಶಃ ವಿಶಾಪ ಆಯಿತು. ನಮ್ಮ ಕೋರ್ಟುಗಳು "Partial Relief" ಕೊಡುವಂತೆ. ಹದಿನೈದು ದಿನ ಕುಗ್ಗುವುದು. ಮತ್ತೆ ಹದಿನೈದು ದಿನ ಹಿಗ್ಗುವುದು. ಹೀಗೆ ಕೃಷ್ಣಪಕ್ಷ-ಶುಕ್ಲಪಕ್ಷ ಆಯಿತು. ಮತ್ತೆ ಅಕ್ಕ-ತಂಗಿಯರ ಗತಿ? ಪ್ರತಿಯೊಬ್ಬರ ಮನೆಯಲ್ಲಿ ಒಂದೊಂದು ದಿನ ಇರುವುದು ಎಂದು ತೀರ್ಮಾನ ಆಯಿತು. ಒಂದು ಸುತ್ತು ಎಲ್ಲರ ಮನೆ ವಾಸ ಮುಗಿಸುವ ಹೊತ್ತಿಗೆ ತಿಂಗಳೂ ಕಳೆಯಿತು. ಮತ್ತೆ ಮುಂದಿನ ಪರ್ಯಾಯ. ಹೀಗೆ ನಡೆಯುತ್ತಿದೆ. ಚಂದ್ರನು ತನ್ನ ವರ್ತುಲದ ದಾರಿಯಲ್ಲಿ ಉದ್ದಕ್ಕೂ ಇಪ್ಪತ್ತೇಳು ಮನೆಗಳು ಕಟ್ಟಿಕೊಟ್ಟು ಈ ಹೆಂಡತಿಯರ ಜೊತೆ ಇರುತ್ತಾನಂತೆ. 

ಈ ಸೂರ್ಯನ ಹನ್ನೆರಡು ಮನೆಗಳಿಗೂ ಚಂದ್ರನ ಇಪ್ಪತ್ತೇಳು ಮನೆಗಳಿಗೂ ತಾಳೆ ಹಾಕುವುದು ಹೇಗೆ? ಚಂದ್ರನ ಇಪ್ಪತ್ತೇಳು ಮನೆಗಳನ್ನು ಹನ್ನೆರಡರಿಂದ ಭಾಗಿಸಿದರೆ (2.25) ಎರಡೂಕಾಲು ಭಾಗ ಬಂತು. ಹೀಗಾಗಿ ಅಶ್ವಿನಿ, ಭರಣಿಯರಿಗೆ ಮೇಷದಲ್ಲಿ ಮನೆ ಸಿಕ್ಕಿತು. ಕೃತ್ತಿಕೆಗೆ ಕಾಲುಭಾಗ ಮೇಷದಲ್ಲಿ ಮತ್ತು ಮೂರು ಭಾಗ ವೃಷಭದಲ್ಲಿ. ರೋಹಿಣಿಗೆ ಪೂರ್ತಿ ವೃಷಭದಲ್ಲಿ. ಮೃಗಶಿರಳಿಗೆ ಅರ್ಧ ವೃಷಭದಲ್ಲಿ ಮತ್ತು ಇನ್ನರ್ಧ ಮಿಥುನದಲ್ಲಿ.  ಹೀಗೆ ನಡೆಯುತ್ತಾ ಹೋಗುತ್ತದೆ. ಒಂದು ನಕ್ಷತ್ರಕ್ಕೆ ನಾಲ್ಕು ಭಾಗ. ಇಪ್ಪತ್ತೇಳು ನಕ್ಷತ್ರಕ್ಕೆ ಒಂದು ನೂರ ಎಂಟು ಭಾಗ. ಹೀಗೆ ಹಂಚಿದ್ದರಿಂದ ಪ್ರತಿಭಾಗವೂ ಒಂದು "ಪಾದ" (Quarter) ಎಂದಾಯಿತು. ಜ್ಯೋತಿಷ್ಯ ಬಲ್ಲವರಿಗೆ ಸೂತ್ರಗಳು (formula) ಗೊತ್ತು. "ಕೃತ್ತಿಕಾ: ಪ್ರಥಮಂ ಮೇಷ:" ಅನ್ನುತ್ತಾರೆ. ಅಂದರೆ ಕೃತ್ತಿಕಾ ನಕ್ಷತ್ರ ಮೊದಲನೇ ಪಾದದವರೆಗೆ ಮೇಷ ರಾಶಿ ಎಂದು. ಹೀಗೆಯೇ ಬೇರೆ ಮನೆಗಳಿಗೂ ಲೆಕ್ಕ. ಜ್ಯೋತಿಷ್ಯವೆಂದರೆ ಬಹುಪಾಲು ಗಣಿತವೇ. Mathematics is the language of Science" ಎಂದು ಹೇಳುತ್ತಾರೆ ತಿಳಿದವರು. ಜ್ಯೋತಿಷ್ಯವೂ ಹಾಗೆಯೇ.

ಹೀಗೆ ಲೆಕ್ಕ ಮಾಡಿದ ಮಾತ್ರಕ್ಕೇ ಅವರ ಮನೆಗಳು ಚೂರು ಚೂರಾಗಿವೆ ಎಂದು ಅರ್ಥವಲ್ಲ. ಅಮೇರಿಕ ಮತ್ತು ಕೆನಡಾ ದೇಶಗಳ ನಡುವೆ ಗಡಿಯಾಗಿ ಹರಿಯುವ ವಿಶಾಲವಾದ ಸೈನ್ಟ್ ಲಾರೆನ್ಸ್ ನದಿಯ ಮಧ್ಯ ಜಲರಾಶಿಯ ಪ್ರದೇಶಗಳಲ್ಲಿ ಬಹಳ ಸುಂದರ, ಅತಿ ಪ್ರೇಕ್ಷಣೀಯ "Thousand Islands" ಅನ್ನುವ ಹೆಸರಿನ ಪ್ರದೇಶವಿದೆ. ಒಟ್ಟು ಸುಮಾರು ಒಂದು ಸಾವಿರದ ಎಂಟು ನೂರು ದ್ವೀಪಗಳು. ಇವುಗಳಲ್ಲಿ ಕೆಲವು ಯು.ಎಸ.ಏ. ದೇಶಕ್ಕೂ, ಮತ್ತೆ ಕೆಲವು ಕೆನಡಾ ದೇಶಕ್ಕೂ ಸೇರುತ್ತವೆ. ಒಂದು ಮನೆಯ ಬಹುಭಾಗ ಕೆನಡಾದಲ್ಲಿ ಇದ್ದರೆ ಸ್ವಲ್ಪ ಭಾಗ ಇನ್ನೊಂದು ದೇಶದಲ್ಲಿ! ಅಡಿಗೆ, ಊಟ, ಟಿ.ವಿ. ನೋಡುವುದು ಕೆನಡಾದಲ್ಲಿ. ಮಲಗುವುದು ಯು.ಎಸ.ಎ. ದೇಶದಲ್ಲಿ. ಮನೆಯ ಮಧ್ಯೆ ಗಡಿ ರೇಖೆ ಹಾದು ಹೋಗುತ್ತದೆ. 

ಒಂದು ಮನೆಯಂತೂ ಎರಡು ಪುಟ್ಟ ದ್ವೀಪಗಳಲ್ಲಿ ಕಟ್ಟಿದ್ದಾರೆ. ಮನೆಯೆಲ್ಲ ಒಂದು ದೊಡ್ಡ ದ್ವೀಪದಲ್ಲಿ (ಎರಡರಲ್ಲಿ ದೊಡ್ಡದು ಅಷ್ಟೇ. ಅದೂ ಪುಟ್ಟ ದ್ವೀಪವೇ!) ಇದೆ. ದೋಣಿ ನಿಲ್ಲಿಸುವ ಗ್ಯಾರೇಜು ಮಾತ್ರ ಇನ್ನೊಂದು ದೇಶದಲ್ಲಿ. ಎರಡರ ಮಧ್ಯೆ ಒಂದು ಸಣ್ಣ ಮರದ ಸೇತುವೆ ಇದೆ. ಪ್ರಾರಂಭದಲ್ಲಿ ಮೇಲೆ ಕೊಟ್ಟಿರುವ ದೊಡ್ಡ ಚಿತ್ರದಲ್ಲಿ ಅದನ್ನು ನೋಡಬಹುದು. (ಚಿತ್ರವನ್ನು ಇನ್ನಷ್ಟು ದೊಡ್ಡದು ಮಾಡಿ ನೋಡಿದರೆ ಸೇತುವೆಯ ಒಂದು ಕಡೆ ಕೆನಡಾ ದೇಶದ ಬಾವುಟ ಮತ್ತು ಇನ್ನೊಂದು ಕಡೆ ಯುಎಸ್ಏ ಬಾವುಟ ನೋಡಬಹುದು). ಇದು ಪ್ರಪಂಚದಲ್ಲಿ ಎರಡು ದೇಶಗಳ ನಡುವೆ ಇರುವ ಅತಿ ಚಿಕ್ಕ ಸೇತುವೆ! "Just Room Enough" ಅನ್ನುವ ಒಂದು ದ್ವೀಪದ ಮನೆ ಪಕ್ಕದ ಚಿತ್ರದಲ್ಲಿ ಕೊಟ್ಟಿದೆ. ಅಲ್ಲಿ ಮನೆಯಿಂದ ಹೊರಗಡೆ ಕಾಲಿಟ್ಟರೆ ನೀರು. ಕಾರಿನಲ್ಲಿ ಓಡಾಟವಿಲ್ಲ. ಎಲ್ಲಾ ದೋಣಿಗಳ (ಬೋಟ್) ಮೇಲೆ ಅವಲಂಬನೆ.  ಈ ರೀತಿ! ಆದರೆ ಜನ ಸಂತೋಷವಾಗಿಯೇ ಇದ್ದಾರೆ. ಈ ಮನೆಗಳೆಲ್ಲಾ ಮಿಲಿಯನ್ ಡಾಲರ್ ಮನೆಗಳು. 

ಚಂದ್ರನ ಕೆಲವು ಹೆಂಡತಿಯರ ಮನೆಗಳೂ ಹೀಗೆಯೇ ಎಂದು ತಿಳಿಯಬೇಕು. 

ಪಂಚಾಂಗಗಳಲ್ಲಿ ಪ್ರತಿದಿನ ಗ್ರಹಗಳು ಯಾವ ಸ್ಥಳದಲ್ಲಿ ಇವೆ ಎಂದು ತೋರಿಸಿರುತ್ತಾರೆ. ಒಂದು ವ್ಯಕ್ತಿ ಹುಟ್ಟಿದ ದಿನ, ಸಮಯದಲ್ಲಿ ಚಂದ್ರ ಇರುವ ನಕ್ಷತ್ರ, ಅದರ ಪಾದ ನೋಡುತ್ತಾರೆ. ಅದೇ ಜನ್ಮ (ಹುಟ್ಟಿದ) ನಕ್ಷತ್ರ. ಉದಾಹರಣೆಗೆ ಅನುರಾಧ ಎರಡನೇ ಪಾದ ಅಂದಂತೆ. ಅದಕ್ಕೆ ಸರಿಯಾದ ರಾಶಿಯೇ  ಜನ್ಮ ರಾಶಿ. ಈ ರೀತಿ ಲೆಕ್ಕ ಹಾಕಿ ಕುಂಡಲಿ ಬರೆಯುತ್ತಾರೆ. ಚಂದ್ರನಿಗೆ ಅಷ್ಟು ಮಹತ್ವ.

ಈ ಲೆಕ್ಕ ಮೊದಲಿಗೆ ಸ್ವಲ್ಪ ಕಷ್ಟ. ಗೊತ್ತಾಗದಿದ್ದರೆ ನಷ್ಟವಿಲ್ಲ. ಪಂಚಾಂಗದಲ್ಲಿ ಸುಲಭವಾಗಿ ನೋಡಬಹುದು. ಇಲ್ಲದಿದ್ದರೆ ಜ್ಯೋತಿಷ್ಕರನ್ನು ಕೇಳಬಹುದು. ಜ್ಯೋತಿಷ್ಯ ನಂಬದಿದ್ದರೆ ಎರಡೂ ಬೇಕಿಲ್ಲದೆ ನಿರಾಳವಾಗಿ ಇರಬಹುದು. 
*****

ಕಳೆದ ತಿಂಗಳು "ಅನುಕೂಲ ದಾಂಪತ್ಯ" ಅನ್ನುವ ಒಂದು ಸಂಚಿಕೆಯಲ್ಲಿ ಗಂಡ-ಹೆಂಡಿರ ಸಹಜೀವನದ ಬಗ್ಗೆ ವಿಚಾರ ಮಾಡುತ್ತಾ "ಅನುರೂಪ ದಾಂಪತ್ಯ" ಮತ್ತು "ಅನುಕೂಲ ದಾಂಪತ್ಯ" ಅನ್ನುವ ಬಗ್ಗೆ ಸ್ವಲ್ಪ ಯೋಚಿಸಿದ್ದೆವು. "ಅನುಕೂಲ ದಾಂಪತ್ಯ" ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಇವೆರಡು ರೀತಿಯ (ಅನುರೂಪ ಮತ್ತು ಅನುಕೂಲ) ದಾಂಪತ್ಯಗಳ ಜೊತೆಯಲ್ಲಿ "ವಿಷಮ ದಾಂಪತ್ಯ" ಅಂತ ಕೂಡ ಒಂದು ಉಂಟು. ಇದು ಕಷ್ಟದ ದಾಂಪತ್ಯ. ಹೆಣಗಾಡಿಕೊಂಡು ಜೊತೆಯಲ್ಲಿ ಬದುಕುವುದು! "ನವಜೀವನ" ಕನ್ನಡ ಚಲನಚಿತ್ರದ "ಹೆಣಗಾಟದೀ ಜನ್ಮ ಏಕೆ ಕೊಟ್ಟನೋ ಆ ಬ್ರಹ್ಮ" ಅನ್ನುವ ಹಾಡಿನಂತೆ. (ಬಾಮಾ-ಭಾಮಾ, ನಾನರಿಯೆ ಮನದ ಮರ್ಮ...... ಅನ್ನುವ ಹಾಡು).

ಅರವತ್ತು-ಎಪ್ಪತ್ತು ವರುಷಗಳ ಹಿಂದೆ ವಿವಾಹ ಮಾಡುವ ಮುನ್ನ ವಧು ಮತ್ತು ವರರ ಜಾತಕ ಪರಿಶೀಲಿಸಿ ತಾಳೆ ಹಾಕುತ್ತಿದ್ದರು. ಕೆಲವು "ಕೂಟ" ನೋಡುತ್ತಿದ್ದರು. ರಾಶಿ ಕೂಟ, ಗ್ರಹಮೈತ್ರ ಕೂಟ, ರಜ್ಜು ಕೂಟ, ಯೋನಿ ಕೂಟ, ಹೀಗೆ ಹೆಸರುಗಳು. ಪರೀಕ್ಷೆಯಲ್ಲಿ ಅಂಕಗಳನ್ನು ಕೊಟ್ಟಂತೆ ಲೆಕ್ಕ ಮಾಡಿ ಸರಿಹೊಂದಿದರೆ ಮದುವೆಗೆ ಒಪ್ಪಿಗೆ ಕೊಡುತ್ತಿದ್ದರು. ಎಲ್ಲಾ ಕೂಟಗಳು "ಅತ್ಯುತ್ತಮ" ಆಗಿದ್ದರೆ ಗರಿಷ್ಟ (Maximum) 36 ಮಾರ್ಕ್ಸ್. ಕನಿಷ್ಠ (Minimum) 18 ಬರಬೇಕು. ಇಲ್ಲದಿದ್ದರೆ ಒಪ್ಪುತ್ತಿರಲಿಲ್ಲ. ಕೆಲವರು ಮೊದಲು ರಾಶಿಕೂಟ ಮತ್ತು ಗ್ರಹಮೈತ್ರ ಕೂಟಗಳನ್ನು ನೋಡುತ್ತಿದ್ದರು. ಇವು ಕೂಡಲಿಲ್ಲ ಅಂದರೆ ಹದಿನೆಂಟಕ್ಕಿಂತಲೂ ಹೆಚ್ಚು ನಂಬರು ಬಂದರೂ ಮದುವೆಯಿಲ್ಲ. ಪರೀಕ್ಷೆಯಲ್ಲಿ compulsory paper ಇದ್ದಂತೆ. ಬೇರೆಲ್ಲ ಪೇಪರ್ ಮೊದಲ ದರ್ಜೆಯಲ್ಲಿ ಪಾಸಾದರೂ ಇದು ಆಗಲಿಲ್ಲ ಅಂದರೆ ಫೇಲ್ ಅಂದಂತೆ. ಅನೇಕರಿಗೆ ಹುಡುಗ ಅಥವಾ ಹುಡುಗಿ ಒಪ್ಪಿಗೆಯಾಗದಿದ್ದರೆ "ಬೇಡ" ಅನ್ನುವುದಕ್ಕೆ "ಜಾತಕ ಹೊಂದಲಿಲ್ಲ" ಅನ್ನುವುದು ಸುಲಭ ಕಾರಣ ಆಗುತ್ತಿತ್ತು. 

ಕೆಲವರು "ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು" ಅನ್ನುವ ಗಾದೆಯನ್ನು ಮನೆದೇವರಂತೆ ಪ್ರೀತಿಸುತ್ತಿದ್ದರು. ಸುಳ್ಳು ಜಾತಕ ಬರೆಸುವುದೂ ನಡೆಯುತ್ತಿತ್ತು. ಈ ಕಾರಣಕ್ಕೆ ಕೆಲವರು ಉಪಾಯವಾಗಿ ಹುಟ್ಟಿದ ದಿನ ಅಕ್ಕ-ಪಕ್ಕದ ಮನೆಯವರಿಂದ ತಿಳಿದುಕೊಂಡು ತಾವೇ ಜಾತಕ ಬರೆಸಿ ತಾಳೆ ನೋಡುತ್ತಿದ್ದರು. ರಾಜಕುಮಾರ್-ಮಾಧವಿ-ಗೀತಾ ನಟಿಸಿರುವ ಕನ್ನಡ ಚಲನಚಿತ್ರ "ಶ್ರುತಿ ಸೇರಿದಾಗ" ಹೀಗೆ ಜಾತಕದ ಕಾರಣ ಮದುವೆಯೊಂದು ನಿಂತು ಹೋದ ಕಥೆಯದ್ದು. 

ಒಂದು ಹುಡುಗ ಇದ್ದಾನೆ. ಅವನ ಜಾತಕದಲ್ಲಿ ಚಂದ್ರ ಮೇಷ ರಾಶಿಯಲ್ಲಿದ್ದಾನೆ. ಮದುವೆಗೆ ಒಂದು ಹುಡುಗಿಯ ಜಾತಕ ಬಂದಿದೆ. ಅವಳ ಜಾತಕದಲ್ಲಿ ಚಂದ್ರ ಕನ್ಯಾ ರಾಶಿಯಲ್ಲಿದ್ದಾನೆ. ಲೆಕ್ಕ ಮಾಡಿದರೆ ವರನ ಕಡೆಯಿಂದ ವಧುವಿನದು ಆರನೆಯ ಮನೆ. ವಧುವಿನ ಕಡೆಯಿಂದ ವರನದು ಎಂಟನೆಯ ಮನೆ. ಇದು ಆರು-ಎಂಟರ ನಂಟು. ಸಂಸ್ಕೃತದಲ್ಲಿ ಇದನ್ನು "ಷಷ್ಟಾಷ್ಟಕ" ಅನ್ನುತ್ತಾರೆ. ಇಂತಹವರ ದಾಂಪತ್ಯ ಹೇಗೆ? 

ವಿಷಮ ದಾಂಪತ್ಯಕ್ಕೆ ಅನೇಕ ಕಾರಣಗಳು ಇರುತ್ತವೆ. ಈ ಆರು-ಎಂಟರ ನಂಟು ಒಂದು ಕಾರಣ ಅನ್ನುತ್ತಾರೆ ಜ್ಯೋತಿಷ್ಕರು. ಗಂಡ "ಆರು" ಎಂದರೆ ಹೆಂಡತಿ "ಇಲ್ಲ, ಎಂಟು" ಅನ್ನುವಂತೆ. "ಹೋಗಲಿ, ಏಳಕ್ಕೆ ಒಪ್ಪಿಕೊಳ್ಳೋಣ" ಅನ್ನಲು ಇಬ್ಬರೂ ತಯಾರಿಲ್ಲ. ಇಂತಹ ದಂಪತಿಗಳಲ್ಲಿ ತಾಳ-ಮೇಳ ಇರುವುದಿಲ್ಲ ಎಂದು ಕೆಲವರ ನಂಬಿಕೆ. "ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು" ಅನ್ನುವ ಗಾದೆ ಇಂತಹ ಜೋಡಿಗೇ ಹೇಳಿ ಮಾಡಿಸಿದ್ದು. ಜಾತಕ ನಂಬುವವರು ಈ ರೀತಿಯ ಮದುವೆಗಳನ್ನು ಒಪ್ಪುವುದಿಲ್ಲ. ಇದು ಅವರವರ ಜೀವನದ ದೃಷ್ಟಿಕೋನಕ್ಕೆ, ನಂಬಿಕೆಗಳಿಗೆ ಸಂಬಂಧಿಸಿದ್ದು. 

*****

ಮುಂದಿನ ಸಂಚಿಕೆಯಲ್ಲಿ ಇದರ ಬಗ್ಗೆ ಇನ್ನಷ್ಟು ವಿವರಣೆ ನೋಡೋಣ. ಹಾಗೆಯೇ "ಸಾವಿರ ದ್ವೀಪಗಳು" (Thousand Islands) ಬಗೆಗೂ ಬೇರೊಂದು ಸಂಚಿಕೆಯಲ್ಲಿ ತಿಳಿಯೋಣ.

Monday, June 15, 2026

ನಾಳೆಯೂ ಕಾರ್ಯಕ್ರಮ ಇರುತ್ತದೆ!


ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳು, ತೀವ್ರ ಅಧಿಕಾರದಾಹ ಹುಟ್ಟಿಸುತ್ತಿರುವ ಕದನಗಳು, ಬಿಗಿತಪ್ಪುತ್ತಿರುವ ಆಡಳಿತ, ಮತ್ತು ಇಂತಹ ಸಂದರ್ಭದಲ್ಲಿ ಗೊತ್ತು-ಗುರಿ ಇಲ್ಲದೆ ಓಡುತ್ತಿರುವ ಸಮಾಜದ ಬಗ್ಗೆ ಕೆಲವು ವಿಷಯಗಳನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ನಮ್ಮ ಸುತ್ತಮುತ್ತಲೇ ಇದ್ದು ಹೆಣಗಾಡಿದ ಕೆಲವರು ಸ್ವಾತಂತ್ರ್ಯ ಸೇನಾನಿಗಳ ಬಗೆಗೂ ತಿಳಿದಂತಾಯಿತು. "ಸಂಸ್ಕೃತಿ ಪ್ರಸಾರ" ಎಂಬ ಶೀರ್ಷಿಕೆಯ ಈ ಹಿಂದಿನ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಕರ್ನಾಟಕ ಏಕೀಕರಣ ಆಗುವ ಮುನ್ನಿನ, ಆಗಿನ ಮೈಸೂರು ರಾಜ್ಯದ ಮೊದಲ ಚುನಾಯಿತ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಕೆಂಗಲ್ ಹನುಮಂತಯ್ಯನವರ ಆಸೆಯ ಕೂಸಾಗಿ "ಸಂಸ್ಕೃತಿ ಪ್ರಸಾರ" ಸರಣಿಯ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆದವು. ಇದರ ಜೊತೆಜೊತೆಯಾಗಿ ಕೇಂದ್ರ ಸರ್ಕಾರದ "ವಾರ್ತಾ ಮತ್ತು ಪ್ರಸಾರ ಇಲಾಖೆ" ಸಹ ತನ್ನ "Song and Drama" ವಿಭಾಗದ ವತಿಯಿಂದ ಅನೇಕ ಕಡೆ "ರಸಸಂಜೆ" ಕಾರ್ಯಕ್ರಮಗಳನ್ನು ನಡೆಸುತ್ತಿತ್ತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ್ಯ "ಕುಟುಂಬ ಯೋಜನೆ" ಮತ್ತು ಅದರಲ್ಲಿಯೂ ಮುಖ್ಯವಾಗಿ "ಮಿತ ಸಂತಾನ" ಕಾರ್ಯಕ್ರಮದ ಪ್ರಚಾರವೇ ಆಗಿದ್ದಿತು. 

ಅನೇಕ ಕಲಾವಿದರು ಈ ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇಂತಹ ಸಂಜೆ ನಡೆಯುವ ಕೂಟಗಳಲ್ಲಿ ಬಂದ ಜನತೆಗೆ ಮನರಂಜನೆ ಮತ್ತು ಕೆಲವು ರೀತಿಯ ಜ್ಞಾನಪ್ರಸಾರ ಸಹ ಮಾಡಿದರು. ಶ್ರೀಯುತ ಪಿ. ಕಾಳಿಂಗ ರಾಯರು ನಡೆಸಿಕೊಡುವ ಕಾರ್ಯಕ್ರಮಗಳು ಬಹಳ ಜನಪ್ರಿಯವಾದವು. ಅವರು "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಗೀತೆಯಿಂದ ಪ್ರಾರಂಭಿಸಿ ಕೊನೆಯಲ್ಲಿ "ಬಾನಿಗೊಬ್ಬ ರವಿಯಿರಬೇಕು, ಬಾಳಿಗೊಬ್ಬ ಮಗನಿರಬೇಕು, ತಂಪುಕೊಡುವ ಚಂದ್ರಿಕೆಯಂಥ ಚೆಲುವೆಯಾದ ಮಗಳಿರಬೇಕು" ಎಂದು ಮಿತ ಸಂತಾನದ ಪರವಾದ ಗೀತೆಯಿಂದ ಮುಗಿಸುತ್ತಿದ್ದರು. 

ಶ್ರೀ ಹನುಮಂತಯ್ಯನವರ ಸರ್ಕಾರ ಇದ್ದಾಗ ಸ್ವಾತಂತ್ರ್ಯ ಬಂದ ಹೊಸದು. ಮೊದಲನೇ ಪಂಚವಾರ್ಷಿಕ ಯೋಜನೆಯ ಮೂಲ ಗುರಿ ಕೃಷಿಗೆ ಉತ್ತೇಜನ ಕೊಡುವುದೇ ಆಗಿತ್ತು. ಆಗ ಅನೇಕ ಹಳ್ಳಿಗಳಲ್ಲಿ ಶಾಲೆಗಳಿರಲಿಲ್ಲ. ಒಟ್ಟಾರೆ ಜನಸಂಖ್ಯೆಯಲ್ಲಿ ಅನಕ್ಷರಸ್ಥರ ಸಂಖ್ಯೆ ಬಲು ದೊಡ್ಡದಿತ್ತು. ಅನೇಕ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ರಸ್ತೆಗಳೂ ಬಸ್ ಪ್ರಯಾಣದ ವ್ಯವಸ್ಥೆಯೂ ಇರಲಿಲ್ಲ. ನೀರಾವರಿ ಅನುಕೂಲಗಳು ಈಗಿನಂತೆ ಇರದೇ ಬಹುಪಾಲು ರೈತರು ಮಳೆಯನ್ನೇ ಅವಲಂಬಿಸಿಕೊಂಡು ಬೆಳೆ ತೆಗೆಯುವುದರಲ್ಲಿ ನಿರತರಾಗಿದ್ದರು. 

ಸಂಸ್ಕೃತಿ ಪ್ರಸಾರ ಕಾರ್ಯಕ್ರಮವನ್ನು ಮತ್ತು ಅದರ ಅನುಷ್ಠಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಈ ಹಿನ್ನೆಲೆ ಮತ್ತು ಹಿಂದಿನ ಸಂಚಿಕೆ ವಿವರಗಳು ತಿಳಿದಿರುವುದು ಅವಶ್ಯಕ. 

*****

1952ರಲ್ಲಿ ಚುನಾಯಿತ ಸರ್ಕಾರ ಅಧಿಕಾರ ವಹಿಸಿಕೊಂಡು ಹೊಸ ಕಾರ್ಯಕ್ರಮಗಳ ರೂಪು-ರೇಷೆ ಸಿದ್ಧಪಡಿಸಿ, ಹಣ-ಕಾಸಿನ ವ್ಯವಸ್ಥೆ ಮಾಡಿ ಸಂಬಂಧಿಸಿದ ಚಟುವಟಿಕೆಗಳು ಪೂರ್ಣವಾಗಿ ರೂಪುಗೊಳ್ಳಲು ಸುಮಾರು ಎರಡು ವರುಷಗಳು ಹಿಡಿದವು. ನಂತರ ವ್ಯವಸ್ಥಿತವಾಗಿ ಕಾರ್ಯಕ್ರಮಗಳು ನಡೆಯಲಾರಂಭಿಸಿದವು. ಅನೇಕ ವಿದ್ವಾಂಸರು, ಗಮಕಿಗಳು, ಕಲಾವಿದರು ಭಾಗವಹಿಸಲಾರಂಭಿಸಿದರು. 

ಒಂದು ಸರ್ಕಾರಿ ಕಾರ್ಯಕ್ರಮದ ಉದ್ಘಾಟನೆಯ ನಂತರ ಚಹಾಕೂಟ ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಸಂಬಂಧಿಸಿದ  ಮಂತ್ರಿಗಳಾದ ಶ್ರೀ ಎ. ಜಿ. ರಾಮಚಂದ್ರ ರಾವ್ ಅಂದು ಬಂದಿದ್ದ ಪತ್ರಕರ್ತರ ಜೊತೆಯಲ್ಲಿ ಮಾತನಾಡುತ್ತಿದ್ದರು. ಪತ್ರಿಕಾ ಪ್ರತಿನಿಧಿಯಾಗಿ ಅಲ್ಲಿ ಬಂದಿದ್ದ ಶ್ರೀ ಸಿ. ಕೆ. ನಾಗರಾಜ ರಾವ್ ಅವರ ಕಣ್ಣಿಗೆ ಬಿದ್ದರು. ರಾಮಚಂದ್ರರಾಯರು ಅವರನ್ನು ಕರೆದು ಕುಶಲೋಪರಿ ವಿಚಾರಿಸಿದರು. 

"ಸರ್ಕಾರ "ಸಂಸ್ಕೃತಿ ಪ್ರಸಾರ" ಕಾರ್ಯಕ್ರಮ ನಡೆಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯಲ್ಲವೇ?"
"ಬಂದಿದೆ. ನಮ್ಮ ಪತ್ರಿಕೆಯಲ್ಲಿ ವರದಿಗಳನ್ನೂ ಮಾಡುತ್ತಿದ್ದೇವಲ್ಲ"
"ಅನೇಕರು ಕ್ರಮವಾಗಿ ಅರ್ಜಿ ಹಾಕಿಕೊಂಡು, ಅನುಮೋದನೆ ಪಡೆದು ಕಾರ್ಯಕ್ರಮ ನಡೆಸುತ್ತಿದ್ದಾರೆ"
"ಹೌದು. ಗೊತ್ತು"
"ನೀವು ಅನೇಕ ವಿಷಯಗಳ ಬಗ್ಗೆ ಉಪನ್ಯಾಸ ಮಾಡಬಲ್ಲಿರಿ. ಹಳಗನ್ನಡ ಸಾಹಿತ್ಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತೀರಿ. ಬಿ. ಎಂ. ಶ್ರೀ ಅವರ "ಗದಾಯುದ್ಧ" ನಾಟಕ ಆಡುವಂತಹ "ಯುನೈಟೆಡ್ ಆರ್ಟಿಸ್ಟ್ಸ್" ತಂಡ ಕಟ್ಟಿದ್ದೀರಿ. ಸಾಹಿತಿ ಎಂದು ಸಮಾಜ ನಿಮ್ಮನ್ನು ಗುರುತಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಆಗಿದ್ದೀರಿ. ಹೀಗಿದ್ದೂ ನೀವೇಕೆ ಈ ಕಡೆ ಆಸಕ್ತಿ ತೋರಿಸಿಲ್ಲ?"
"ಪ್ರಯಾಣ ಮಾಡಿ ಕಾರ್ಯಕ್ರಮ ಕೊಡುವಷ್ಟು ಬಿಡುವಿಲ್ಲ. ಮತ್ತೆ ಸರ್ಕಾರಕ್ಕೆ ಅರ್ಜಿ ಹಾಕಿ ಓಡಾಡುವಷ್ಟು ವ್ಯವಧಾನವೂ ಇಲ್ಲ"

"ನಿಮ್ಮ ಶ್ರೀಮತಿ ರಾಜಾಮಣಿಯವರು ಭಾರತದ ಬಿಂದೂರಾಯರ ಗಮಕ ಶಾಲೆಯಲ್ಲಿ ಪ್ರಥಮ ಶಿಷ್ಯೆಯರ ಗುಂಪಿಗೆ ಸೇರಿದವರು. ಮಕ್ಕಳಿಗೆ ಸಂಗೀತ ಹೇಳಿಕೊಡುವವರು. ವೀಣಾ ರಾಜರಾಯರಲ್ಲಿ ಹೆಚ್ಚಿನ ವೀಣಾವಾದನ ಕಲಿತವರು.  ಅವರಿಂದ ಗಮಕ ವಾಚನವಾದರೂ ಮಾಡಿಸಬಹುದಲ್ಲ?"
"ಮನೆಯಲ್ಲಿ ಹಿರಿಯರ ಯೋಗಕ್ಷೇಮ ನೋಡಬೇಕು. ನನ್ನ ಕಾರ್ಯಬಾಹುಳ್ಯದಿಂದ ಮನೆಗೆ ಬಂದು-ಹೋಗುವವರು ಹೆಚ್ಚು. ಮೂರು ಸಣ್ಣ ಮಕ್ಕಳು. ಬಿಡುವೆಲ್ಲಿ?"

"ನೀವು ಹೇಳುವುದೆಲ್ಲಾ ಸರಿ ಎಂದು ಒಪ್ಪುತ್ತೇನೆ. ಆದರೆ ರಾಜಧಾನಿಯಿಂದ ದೂರದಲ್ಲಿ, ಸಣ್ಣ ಸಣ್ಣ ಊರಿನಲ್ಲಿರುವ ಜನರಿಗೆ ಒಳ್ಳೆಯ ವಿದ್ವಾಂಸರ ಕಾರ್ಯಕ್ರಮದ ಅವಕಾಶ ಆಗಬೇಡವೇ? ಅದಿಲ್ಲದೆ ಇಂತಹ ಕಾರ್ಯಕ್ರಮಗಳು ಸಿದ್ಧಿಸುವುದಾದರೂ ಹೇಗೆ?"
"ನಿಮ್ಮ ಮಾತಿನ ಒಟ್ಟು ಅರ್ಥವನ್ನು ಒಪ್ಪುತ್ತೇನೆ. ಆದರೆ ನಮಗೆ ಕಷ್ಟ"
"ಹಾಗೆಂದು ಬಿಡುವುವಂತಿಲ್ಲ. ಆಗಾಗ ಬಿಡುವು ಮಾಡಿಕೊಳ್ಳಿ. ಎಲ್ಲರೂ ಅರ್ಜಿ ಹಾಕಿ ಕಾಯಬೇಕಿಲ್ಲ. ಕೆಲವರನ್ನು ನಾವೇ ನೇರವಾಗಿ ಆಹ್ವಾನಿಸಬಹುದು. ನಿಮಗೆ ಹೀಗೆ ಆಹ್ವಾನ ಬರುತ್ತದೆ. ಕೆಲವು ಕಾರ್ಯಕ್ರಮ ಮಾಡಿಕೊಡಿ. ಅದರ ಅನುಭವದಲ್ಲಿ ನಿಮಗೇ ಇನ್ನಷ್ಟು ಉತ್ಸಾಹ ಬರಬಹುದು!"

ರಾಮಚಂದ್ರರಾಯರ ಮಾತಿನ ಧಾಟಿಯಲ್ಲಿ ಮರುಮಾತಿಗೆ ಅವಕಾಶ ಇರಲಿಲ್ಲ. ಮುಂದಿನ ವಾರವೇ ಸರ್ಕಾರದ ಇಲಾಖೆಯಿಂದ ಕಾರ್ಯಕ್ರಮ ನಿಗದಿ ಮಾಡಿ ಪತ್ರ ಬಂದೇ ಬಿಟ್ಟಿತು. ಮೊದಲ ಗಮಕವಾಚನ ಕಾರ್ಯಕ್ರಮ ರಾಮಚಂದ್ರರಾಯರ ನೇರ ಕಾರ್ಯಕ್ಷೇತ್ರ ಹಾಸನ ಜಿಲ್ಲೆಯ ಹಳ್ಳಿ ಒಂದರಲ್ಲಿ ನಿಯೋಜಿಸಿತ್ತು. 
*****

ಇಂತಹ ಕಾರ್ಯಕ್ರಮಗಳು ಸಂಜೆ ಐದು ಗಂಟೆಯ ಹಾಗೆ ಪ್ರಾರಂಭವಾಗಿ ಸೂರ್ಯಾಸ್ತದ ಸ್ವಲ್ಪ ಸಮಯಕ್ಕೆ ಮುಗಿದುಬಿಡಬೇಕಿತ್ತು. ಇಲ್ಲದಿದ್ದರೆ ಬೆಳಕಿನ ತೊಂದರೆ. ಜೊತೆಗೆ ಕಾರ್ಯಕ್ರಮಕ್ಕೆ ಬಂದ ಆಹ್ವಾನಿತರು ಕಡೆಯ ಬಸ್ಸು ಹಿಡಿದು ಹಿಂದಿರುಗಬೇಕಾಗಿತ್ತು. ಕಡೆಯ ಬಸ್ಸು ತಪ್ಪಿದರೆ ಅಂದು ರಾತ್ರಿ ಹಳ್ಳಿಯಲ್ಲಿಯೇ ಕಾಲಕಳೆಯಬೇಕು. ತಂಗಲು ಅನುಕೂಲಗಳು ಇರುತ್ತಿರಲಿಲ್ಲ. ಊರಿನ ಶಾನುಭೋಗರೋ, ಪಟೇಲರೋ ಅಥವಾ ಇನ್ಯಾರೋ ಗಣ್ಯ ವ್ಯಕ್ತಿಗಳು ಕಾರ್ಯಕ್ರಮಕ್ಕೆ ಸಹಕಾರ ಕೊಟ್ಟು ನಡೆಸಿಕೊಡಬೇಕು. ಊರಿನ ಅರಳಿ ಕಟ್ಟೆ ಬಳಿಯೋ ಅಥವಾ ದೊಡ್ಡ ಮನೆಯ ಅಂಗಳದಲ್ಲೋ, ಇದ್ದರೆ ರಾಮಮಂದಿರ ಅಥವಾ ಭಜನ ಮಂದಿರದಲ್ಲೋ ಕಾರ್ಯಕ್ರಮ. ಹೀಗೆ ನಡೆಯಬೇಕು. 

ಕಾರ್ಯಕ್ರಮ ನಿಗದಿಯಾದ ದಿನ ಬೆಳಿಗ್ಗೆ ನಾಗರಾಜರಾವ್ ದಂಪತಿಗಳು ಬೆಂಗಳೂರಿನಿಂದ ಬಸ್ಸಿನಲ್ಲಿ ಹೊರಟು ಹಾಸನ ತಲುಪಿ, ಸ್ನೇಹಿತರ ಮನೆಯಲ್ಲಿ ಊಟ ಮುಗಿಸಿ, ಮತ್ತೊಂದು ಬಸ್ಸಿನಲ್ಲಿ ಕಾರ್ಯಕ್ರಮ ಇರುವ ಊರು ತಲುಪಿದಾಗ ಮಧ್ಯಾನ್ಹ ಮೂರು ಗಂಟೆಯ ಸಮಯ. ಸಿಕ್ಕಿದ್ದ ಸೂಚನೆಯಂತೆ ಶಾನುಭೋಗ ಚನ್ನಪ್ಪನವರ ಮನೆ ವಿಚಾರಿಸಿಕೊಂಡರು ತಲುಪಿದರು. ಮನೆಯ ಮುಂದೆ ಎಂಟು-ಹತ್ತು ವರುಷದ ಬಾಲಕಿಯೊಬ್ಬಳು ಕುಂಟೆಬಿಲ್ಲೆ ಆಡುತಿದ್ದಳು. ಇವರನ್ನು ನೋಡಿದವಳು ಮನೆಯ ಬಾಗಿಲ ಬಳಿ ಹೋಗಿ "ಅಮ್ಮಾ, ಯಾರೋ ಬಂದಿದ್ದಾರೆ. ನೋಡು" ಎಂದು ಕೂಗಿ ತನ್ನ ಆಟ ಮುಂದುವರೆಸಿದಳು. 

ಹೊರಗಡೆ ಬಂದು ನೋಡಿದ ಗೃಹಿಣಿ ಪಡಸಾಲೆಯಲ್ಲಿ ಸುತ್ತಿಟ್ಟಿದ್ದ ಚಾಪೆ ಹಾಸಿ "ಕುಳಿತುಕೊಳ್ಳಿ. ಅವರು ಹೊಲದ ಕಡೆ ಹೋಗಿದ್ದಾರೆ. ಇನ್ನೇನು ಬರುವ ಹೊತ್ತು" ಎಂದು ಹೇಳಿ ಮನೆಯ ಒಳಗಡೆ ಹೊರಟುಹೋದರು. 

ಸುಮಾರು ಕಾಲು ಗಂಟೆ ಸಮಯ ಕಳೆಯಿತು. ಮನೆಯ ಒಳಗಡೆಯಿಂದ "ರತ್ನಾ, ಇಲ್ಲಿ ಬಾ" ಎಂದು ಕೂಗು ಬಂತು. ಕುಂಟೆಬಿಲ್ಲೆ ಆಡುತ್ತಿದ್ದ ಹುಡುಗಿ ಒಳಗೆ ಹೋದಳು. ಒಂದೊಂದಾಗಿ ಎರಡು ಲೋಟ ಕಾಫಿ ತಂದು ಪಡಸಾಲೆಯಲ್ಲಿ ಕುಳಿತಿದ್ದವರ ಮುಂದೆ ಇಟ್ಟು ತನ್ನ ಆಟ ಮುಂದುವರೆಸಿದಳು. ಗಂಟಲು ಒಣಗಿತ್ತು. ಕಾಫಿ ಕುಡಿದರು. ಇನ್ನರ್ಧ ಗಂಟೆ ಕಳೆಯಿತು. ಸುಮಾರು ನಲವತ್ತು-ನಲವತ್ತೈದು ವರುಷದ ವ್ಯಕ್ತಿ ಬಂದರು. ಕುಳಿತಿದ್ದವರನ್ನು ನೋಡಿದರು. 

"ನಮಸ್ಕಾರ. ಇಂದಿನ ಕಾರ್ಯಕ್ರಮ ನಡೆಸಲು ಬಂದವರೋ?"
"ಹೌದು. ಶಾನುಭೋಗ ಚನ್ನಪ್ಪನವರನ್ನು ಕಾಣುವಂತೆ ಸೂಚನೆಯಿತ್ತು. ಬಂದಿದ್ದೇವೆ"
"ನಾನೇ ಚನ್ನಪ್ಪ. ನನಗೆ ಬೆಳಿಗ್ಗೆ ತಾನೇ ಪತ್ರ ಬಂದಿತು. ಇದೇನು, ಇಲ್ಲೇ ಕುಳಿತಿರಿ. ರತ್ನಾ, ಒಳಗಡೆ ಕೂಡಿಸಬಾರದಿತ್ತೇ ಪುಟ್ಟ"

ಮನೆಯ ಒಳಗಡೆ ಕರೆದುಕೊಂಡು ಹೋದರು.

*****

ಕೈ ಕಾಲು ಮುಖ ತೊಳೆದು ದಣಿವಾರಿಸಿಕೊಂಡ ಮೇಲೆ ಚನ್ನಪ್ಪ ಮಾತು ಮುಂದುವರೆಸಿದರು. 

"ನೀವು ಎರಡು ವರುಷದ ಹಿಂದೆ ಬೇಲೂರು ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಬಂದಿದ್ದಿರಲ್ಲವೇ? ಅಲ್ಲಿ ನಿಮ್ಮನ್ನು ನೋಡಿದಹಾಗಿದೆ"
"ಹೌದು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಪರ್ಕದಿಂದ ಸಮ್ಮೇಳನ ಆಯೋಜಿಸುವ ಹೊಣೆ ನನ್ನ ಮೇಲೆ ಇತ್ತು. ಹೀಗಾಗಿ ಆಗ ಕೆಲವು ದಿನಗಳು ಬೇಲೂರಿನಲ್ಲಿಯೇ ಇದ್ದೆ. ಅಲ್ಲಿ ನೋಡಿರಬಹುದು"
"1952ರ ಬೇಲೂರು ಸಮ್ಮೇಳನವನ್ನು ಈ ಸುತ್ತಲಿನ ಜನ ಆಗಾಗ ನೆನೆಸಿಕೊಳ್ಳುತ್ತಾರೆ"
"ಸಮ್ಮೇಳನ ಚೆನ್ನಾಗಿ ಆಯಿತು ಅಂದು ಬಂದವರು ಅಂದರೆ ನಮ್ಮ ಕೆಲಸ ಸಾರ್ಥಕವಾಯಿತು"
"ಅಷ್ಟೇ ಅಲ್ಲ. ನಿಮ್ಮನ್ನು ಅದಕ್ಕೂ ಮುಂಚೆ ನೋಡಿದ ಹಾಗಿದೆ. ಸುಮಾರು ಹತ್ತು ವರುಷಗಳ ಹಿಂದೆ ಬೇಲೂರು ದೇವಸ್ಥಾನದ ಅರ್ಚಕ ಮಂಡಲಿಯ ಪ್ರಧಾನರು ಶ್ರೀ ಮುತ್ತು ಭಟ್ಟರ ಮನೆಗೆ ಡಿ.ವಿ.ಜಿ. ಅವರು ಬಂದಿದ್ದಾಗ ನೀವು ಅವರ ಜೊತೆ ಬಂದಿದ್ದೀರಾ?"
"ಹೌದು. ಡಿ.ವಿ.ಜಿ. ಅವರ "ಅಂತಃಪುರ ಗೀತೆ" ಮುದ್ರಣದ ಪುಸ್ತಕಕ್ಕೆ ಚನ್ನಕೇಶವನ ದೇವಾಲಯದ ಶಿಲಾಬಾಲಿಕೆಯರ ಫೋಟೋಗಳನ್ನು ಹಾಕುವ ಕೆಲಸವಿತ್ತು. ಗುಂಡಪ್ಪನವರು ಆ ಜವಾಬ್ದಾರಿ ನನಗೆ ವಹಿಸಿದ್ದರು. ಆ ಸಂದರ್ಭದಲ್ಲಿ ಬಂದಿದ್ದೆ. ನಿಟ್ಟೂರು ಶ್ರೀನಿವಾಸರಾಯರು, ಮಾನ್ವಿ ನರಸಿಂಗರಾಯರೂ ಬಂದಿದ್ದರು"

ಚನ್ನಪ್ಪನವರು ಉಂಡೆ ಮತ್ತು ಹುರಿಗಾಳು ತಂದರು. 

"ನಾನು ಗುಂಡಪ್ಪನವರ ಜೊತೆ ಬಂದಿದ್ದುದು ನಿಮಗೆ ಹೇಗೆ ಗೊತ್ತು?"
"ನನ್ನ ತಾಯಿಯ ತೌರು ಮನೆ ಅದೇ ಬೀದಿಯಲ್ಲಿದೆ. ಸೋದರಮಾವಂದಿರು ಈಗಲೂ ಅಲ್ಲಿದ್ದಾರೆ. ಆಗಾಗ ಅಲ್ಲಿ ಹೋಗುತ್ತಿರುತ್ತೇನೆ. ಹೀಗಾಗಿ ಡಿ.ವಿ.ಜಿ. ಅವರು ಬಂದಾಗ ನಾವೆಲ್ಲಾ ಅವರನ್ನು ನೋಡಲು ಮುತ್ತುಭಟ್ಟರ ಮನೆಗೆ ಬಂದಿದ್ದೆವು. ನನ್ನಮ್ಮ ನನಗೆ "ಚನ್ನಕೇಶವ" ಎಂದೇ ಹೆಸರಿಟ್ಟಿದ್ದಾಳೆ!"
"ಮತ್ತೆ "ಚನ್ನಪ್ಪ" ಎಂದು ಕರೆಯುತ್ತಾರಲ್ಲ?"
"ಇಲ್ಲಿ ಕೇಶವಯ್ಯ ಎಂದು ಹಿರಿಯರೊಬ್ಬರಿದ್ದರು. ಎರಡು ಕೇಶವ ಆಗಬಾರದು ಎಂದು ಚನ್ನಕೇಶವನಾದ ನನ್ನನು ಚನ್ನಪ್ಪ ಮಾಡಿಬಿಟ್ಟರು!"

ಎಲ್ಲರೂ ಘೊಳ್ಳೆಂದು ನಕ್ಕರು. ಮತ್ತೊಮ್ಮೆ ಕಾಫಿ ಆಯಿತು. ಕಾರ್ಯಕ್ರಮದ ಸಮಯವೂ ಆಯಿತು. 

*****

ರಾಮಮಂದಿರದಲ್ಲಿ ಶ್ರೀಮತಿ ರಾಜಾಮಣಿಯವರ ಕಾವ್ಯವಾಚನ. ಕುಮಾರವ್ಯಾಸ ಭಾರತದ ಪ್ರಸಂಗ. ವಿರಾಟಪರ್ವ ಮೂರನೆಯ ಸಂಧಿ. ಕೀಚಕನ ಕೋಟಲೆ ತಾಳಲಾರದೆ ಬೇಸತ್ತ ಸೈರಂಧ್ರಿ (ದ್ರೌಪದಿ) ಅಡಿಗೆಭಟ್ಟ ವಲಲ (ಭೀಮಸೇನ) ಇರುವೆಡೆ ಬಂದು ಕೀಚಕನ ವಧೆಗೆ ಅವನನ್ನು ಒಪ್ಪಿಸುವ ಸಂದರ್ಭ. ಪದ್ಯ ವಾಚನದ ನಂತರ ನಾಗರಾಜರಾಯರ ವ್ಯಾಖ್ಯಾನ. 

ತಯಾರಿ ಮತ್ತು ಪ್ರಚಾರ ಇಲ್ಲದ, ತರಾತುರಿಯಲ್ಲಿ ಜನ ಸೇರಿಸಿದ ಕಾರ್ಯಕ್ರಮ. ಹೆಚ್ಚು ಜನ ಬಂದಿರಲಿಲ್ಲ. ಬಂದಿದ್ದವರು ಕೆಲವರು ಹೆಚ್ಚು ವಿದ್ಯಾವಂತರಲ್ಲದಿದ್ದರೂ ವಿಷಯ ತಿಳಿದವರು. "ಕುರಿತೋದದೆಯುo ಕಾವ್ಯಪ್ರಯೋಗ ಪರಿಣತಮತಿಗಳ್" ಅನ್ನುವ ಕವಿರಾಜಮಾರ್ಗ ನುಡಿಯ ರೀತಿಯವರು. ಕಾರ್ಯಕ್ರಮ ನಡೆಯುತ್ತಿದ್ದಂತೆ ಇನ್ನಷ್ಟು ಜನ ಸೇರಿದರು. ಒಂದೂವರೆ ಗಂಟೆಗಳ ವಾಚನ ನಡೆಯಿತು.

ಚನ್ನಪ್ಪನವರ ವಂದನಾರ್ಪಣೆ ಮೊದಲು ಹಿರಿಯರೊಬ್ಬರು ನಿಂತುಕೊಂಡರು. "ಭೀಮ ಕಷ್ಟವನೆಸಗಿದನು ಹಾಎಂದರಾದೊಡೆ ಮುಸುಡನಮರಾದ್ರಿಯಲಿ ತೇವೆನು ದೇವ ಸಂತತಿಯ" ಅನ್ನುವ ಪದ್ಯದ ಬಗ್ಗೆ "ಭೀಮ ಹಾಗೆ ಹೇಳಿದುದು ಸರಿಯೇ" ಎಂದು ಪ್ರಶ್ನೆ ಮಾಡಿದರು. ನಾಗರಾಜರಾಯರು ಸ್ವಲ್ಪ ವಿವರವಾಗಿಯೇ ಉತ್ತರಿಸಿದರು. "ಇಂತಹ ಕಾರ್ಯಕ್ರಮ ನಡೆಯುವುದು ನಮಗೆ ಸರಿಯಾಗಿ ಗೊತ್ತಾಗಲಿಲ್ಲ. ಅನೇಕ ಆಸಕ್ತರು ಬರಲಾಗಲಿಲ್ಲ" ಅಂದರು ಆ ಹಿರಿಯರು. "ಹೌದು, ಹೌದು" ಎಂದು ಸ್ವಲ್ಪ ಗುಸು ಗುಸು ಮಾತುಗಳಾದವು.

***** 

ಚನ್ನಪ್ಪನವರ ವಂದನಾರ್ಪಣೆ. "ಕಾರ್ಯಕ್ರಮ ಹೇಗಿತ್ತು ಅಂತ ನಾನೇನು ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತಾಗಿದೆ. ಈ ದಿನ ಅನೇಕರಿಗೆ ಬರಲಾಗಿಲ್ಲ. ಬೆಳಕಿನ ವ್ಯವಸ್ಥೆ ಇಲ್ಲ. ಧ್ವನಿವರ್ಧಕ ಇಲ್ಲ. ಆದ ಕಾರಣ ನಾಳೆಯೂ ಕಾರ್ಯಕ್ರಮ ಇರುತ್ತದೆ. ಸುತ್ತಮುತ್ತಲ ಹಳ್ಳಿಯವರಿಗೆ ತಿಳಿಸಿ. ನಾಳೆ ಪೆಟ್ರೋಮ್ಯಾಕ್ಸ್ ದೀಪಗಳ ಮತ್ತು ಧ್ವನಿವರ್ಧಕದ ವ್ಯವಸ್ಥೆ ಮಾಡಿಸುತ್ತೇವೆ. ಊರಹಬ್ಬಕ್ಕೆ ಈ ವ್ಯವಸ್ಥೆ ಮಾಡುವ ಪಾರ್ಟಿಗೇ ಹೇಳಿಕಳಿಸುತ್ತೇನೆ. ಈದಿನ ವಂದನಾರ್ಪಣೆ ಇಲ್ಲ. ಅದು ಏನಿದ್ದರೂ ನಾಳೆಯೇ" ಎಂದು ಹೇಳಿ ಮುಗಿಸಿಬಿಟ್ಟರು.

ಮನೆಗೆ ಬರುವ ದಾರಿಯಲ್ಲಿ ರಾಯರು ಚನ್ನಪ್ಪರನ್ನು ಕೇಳಿದರು. "ಇದೇನು? ಹೀಗೆ ಮಾಡಿಬಿಟ್ಟಿರಿ? ನಮ್ಮನ್ನು ಕೇಳಲೂ ಇಲ್ಲ. ನಮಗೆ ನಾಳೆ ಇರಲು ಅನುಕೂಲವಿಲ್ಲ. ನಾವು ಇಂದೇ ಹಿಂದಿರುಗುವುದು ಎಂದು ಬಂದವರು. ಈ ದಿನ ತಡವಾಯಿತು. ನಾವು ಬೆಳಿಗ್ಗೆ ಬೇಗಲೇ ಹೊರಡಬೇಕು" ಅಂದರು. 

"ಸ್ವಾಮಿ, ಬಡವರ ಮನೆಯಲ್ಲಿ ಆದಷ್ಟೂ ಅನುಕೂಲ ಮಾಡಿ ಕೊಡುತ್ತೇನೆ. ಒಂದು ದಿನ ಸುಧಾರಿಸಿಕೊಳ್ಳಿ. ನೀವು ಮತೊಮ್ಮೆ ನಮ್ಮ ಊರಿಗೆ ಬರುವುದು ಸಾಧ್ಯವಿಲ್ಲ. ಬಂದಿರುವಾಗ ನಿಮಗೆ ಕಷ್ಟವಾದರೂ ನಮ್ಮ ಜನಗಳಿಗೆ ಒಂದು ಒಳ್ಳೆಯ ಕಾರ್ಯಕ್ರಮ ಆಗಲಿ" ಅಂದರು ಚನ್ನಪ್ಪನವರು. 

*****

ಮಾರನೆಯ ದಿನ ಎಲ್ಲಾ ವ್ಯವಸ್ಥೆಗಳೊಂದಿಗೆ ಭರ್ಜರಿ ಕಾರ್ಯಕ್ರಮ ನಡೆಯಿತು. ಊರಿನವರ ಬೇಡಿಕೆಯಂತೆ "ಕುಂತಿ-ಕರ್ಣ" ಪ್ರಸಂಗದ ವಾಚನ ಮಾಡಲಾಯಿತು. ಸುತ್ತ-ಮುತ್ತಲಿನ ಹಳ್ಳಿ ಜನರೆಲ್ಲಾ ಸೇರಿದ್ದರು. ಕಾರ್ಯಕ್ರಮ ನಡೆದ ನಂತರ ದಂಪತಿಗಳಿಗೆ ಔತಣದ ಊಟ ತಯಾರಾಗಿತ್ತು. ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ ಮಾಡಲು ಉಪಕರಣ ತಂದಿದ್ದ ವ್ಯಾನಿನಲ್ಲಿ ಅವರನ್ನು ಉಡುಗೊರೆಗಳ ಸಮೇತ ಹಾಸನಕ್ಕೆ ಕಳಿಸಿಕೊಟ್ಟರು. ಹೊರಡುವ ಸಮಯದಲ್ಲಿ ತಡ ರಾತ್ರಿಯಾಗಿದ್ದರೂ ಅನೇಕರು ಕಾದಿದ್ದು ಬೀಳ್ಕೊಟ್ಟರು. ಮತ್ತೊಮ್ಮೆ ಬನ್ನಿ ಎಂದು ಎಷ್ಟೋವರ್ಷದ ಬಂಧುಗಳನ್ನು ಕೇಳುವಂತೆ ಪ್ರೀತಿಯಿಂದ ಆಹ್ವಾನಿಸಿದರು.  ದಂಪತಿಗಳು ಹಾಸನದಿಂದ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ತಲುಪಿದರು.  

ನಂತರ ನಾಗರಾಜರಾವ್ ದಂಪತಿಗಳು ಅನೇಕ "ಸಂಸ್ಕೃತಿ ಪ್ರಸಾರ" ಕಾರ್ಯಕ್ರಮಗಳನ್ನು ರಾಜ್ಯದ ಅನೇಕ ಕಡೆಗಳಲ್ಲಿ ನಡೆಸಿಕೊಟ್ಟಿರುವುದು ಹಿಂದಿನ ತಲೆಮಾರಿನವರಿಗೆ ಗೊತ್ತಿರುವ ವಿಷಯವೇ.

Saturday, June 13, 2026

ಸಂಸ್ಕೃತಿ ಪ್ರಸಾರ


ದೇಶದ ಅನೇಕ ಕಡೆಗಳಲ್ಲಿ ಈಚೆಗೆ ಪ್ರತಿದಿನ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ದಿಗ್ಬ್ರಮೆ ಉಂಟಾಗುತ್ತದೆ. ನಮ್ಮನ್ನು ಆಳುತ್ತಿರುವವರು ದಿನದಿಂದ ದಿನಕ್ಕೆ ನಡೆಯುತ್ತಿರುವ ದಾರಿಗಳು ನಮ್ಮನ್ನು ಯಾವ ದಿಕ್ಕುಗಳಿಗೆ ಒಯ್ಯುತ್ತವೆ ಎಂದು ಹೇಳಲು ಬರುವುದಿಲ್ಲ. ಚುನಾವಣೆಗಳು ನಡೆದ ನಂತರ ಜನರು ಕೊಡುವ ತೀರ್ಪನ್ನು ಒಪ್ಪಿಕೊಳ್ಳದ ನಾಯಕರುಗಳು ಒಂದು ಕಡೆ. ತಾವು ಗೆದ್ದಾಗ ಮಾತ್ರ ಚುನಾವಣೆಗಳು ಸರಿಯಾಗಿ ನಡೆದುವು ಎನ್ನುವ ಗುಂಪುಗಳು ಇನ್ನೊಂದು ಕಡೆ. ಬೇಕಿದ್ದಾಗ ಪಕ್ಷ ಬದಲಿಸಿ ಅಧಿಕಾರಕ್ಕೆ ಜೋತುಬೀಳುವ ಹಂಬಲವಂತೂ ಎಲ್ಲ ಕಡೆ. ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯಲು ಪರಿತಪಿಸುವ ಪ್ರತಿನಿಧಿಗಳು. ಜಾತಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯಗಳ ಕೂಗುಗಳ ಅತಿರೇಕಗಳು. ಅಧಿಕಾರ ಸಿಕ್ಕಿದ ನಂತರ ಖಾತೆಗಳ ಹಂಚಿಕೆಯಲ್ಲಿ ಗುದ್ದಾಟ. ಶಪಥಗ್ರಹಣ ನಡೆದ ನಂತರ ವಾರಗಳು ಕಳೆದರೂ ಬೇಕಿದ್ದ ಖಾತೆ ಸಿಗಲಿಲ್ಲವೆಂದು ಅಧಿಕಾರಗ್ರಹಣ ಮಾಡದ ಮಂತ್ರಿಗಳು. ಹೊಸ ವಾಹನಗಳು, ದೊಡ್ಡ ಆಫೀಸುಗಳು ಮತ್ತು ನಿವಾಸಗಳು ಮುಂತಾದುವಕ್ಕೆ ಕೊನೆಯಿಲ್ಲದ ಹಪಾಹಪಿ. ಒಟ್ಟಿನಲ್ಲಿ ದಿಕ್ಕು ದೆಸೆಯಿಲ್ಲದ ರಾಜಕೀಯ. 

ಸ್ವಾತಂತ್ರ್ಯಾನಂತರ ನಡೆದ ಮೊದಲ ಚುನಾವಣೆಗಳ ಬಳಿಕ 1952ರಲ್ಲಿ ನಮ್ಮ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಶ್ರೀ ಕೆಂಗಲ್ ಹನುಮಂತಯ್ಯನವರ ಮಂತ್ರಿಮಂಡಲದಲ್ಲಿ ಇದ್ದದ್ದು ಎಂಟು ಜನ ಮಂತ್ರಿಗಳು ಮಾತ್ರ. ಅದು ಮೈಸೂರು ರಾಜ್ಯ. ಇನ್ನೂ "ಕರ್ನಾಟಕ ಏಕೀಕರಣ" ಆಗಿರಲಿಲ್ಲ. ರಾಜ್ಯವೇನೋ ಗಾತ್ರದಲ್ಲಿ ಈಗಿಗಿಂತ ಚಿಕ್ಕದೇ. ಮಂತ್ರಿಮಂಡಲವೂ ಚಿಕ್ಕದೇ. ಬ್ರಿಟಿಷರ ಆಡಳಿತದಿಂದ ಹೊರಬಂದ ಮೇಲೆ ನಮ್ಮ ನಾಡಿನ ಭವ್ಯವಾದ ಸಂಸ್ಕೃತಿ ಎಲ್ಲೆಡೆ ವಿಜೃಂಭಿಸಲಿ ಎನ್ನುವ ಆಸೆಯಿಂದ ಸರ್ಕಾರ "ಸಂಸ್ಕೃತಿ ಪ್ರಸಾರ" ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅದರ ಅಂಗವಾಗಿ ಅಮೂಲ್ಯ ಕೃತಿಗಳ ಮುದ್ರಣ-ಪ್ರಕಾಶನ, ರಾಜ್ಯದ ಮೂಲೆಮೂಲೆಗಳಲ್ಲಿ ವಿದುಷಿ-ವಿದ್ವಾಂಸರಿಂದ ಸಾಹಿತ್ಯ-ಸಂಗೀತ-ಗಮಕ ಮುಂತಾದ ಕಾರ್ಯಕ್ರಮಗಳು, ಉಪನ್ಯಾಸಗಳು, ಮುಂತಾದುವು ಈ ಸಂಸ್ಕೃತಿ ಪ್ರಸಾರದ ಮೂಲಕ ನಡೆದವು. 

ಸರ್ಕಾರದ ಆರ್ಥಿಕ ಸಹಾಯದ ಮೂಲಕ ಮೊದಲ ವರ್ಷ ಪ್ರಕಟವಾದ "ಕುಮಾರವ್ಯಾಸ ಭಾರತ" ಪುಸ್ತಕಕ್ಕೆ ಕೇವಲ ಎರಡು ರೂಪಾಯಿ ಬೆಲೆ. ಈ ಗ್ರಂಥಕ್ಕೆ ಕನ್ನಡದ ಹೆಮ್ಮೆಯ ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಪಾದಕರು. ಈ ಕೃತಿಗೆ ಕುವೆಂಪು ಅವರ "ತೋರಣ ನಾಂದಿ". ಈಗಲೂ ಆಗಾಗ ಓದಬೇಕೆಂದು ಅನಿಸುವ, ಅವರೇ ಹೇಳುವಂತೆ ಸಹೃದಯ ವಿಮರ್ಶೆ. ಅನೇಕ ಮನೆಗಳಲ್ಲಿ ಈಗಲೂ ಈ ಪುಸ್ತಕ ಇದೆ. 
*****

ಎ. ಜಿ. ರಾಮಚಂದ್ರ ರಾವ್ ನಮ್ಮ ರಾಜ್ಯದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದು ದೊಡ್ಡ ಹೆಸರು. ಹಾಸನ ಜಿಲ್ಲೆಯ ಅರಕಲಗೂಡಿನ ಅವರು ಅದೇ ಊರಿನ "ಕಾದಂಬರಿ ಸಾರ್ವಭೌಮ" ಆ. ನ. ಕೃಷ್ಣರಾಯರ ಸಮಕಾಲೀನರು. 1942ರ "ಕ್ವಿಟ್ ಇಂಡಿಯಾ" ಚಳುವಳಿಯಲ್ಲಿ ಸಕ್ರಿಯವಾಗಿದ್ದವರು. ಚಳುವಳಿಯ ಮುಂಚೂಣಿಯ ನಾಯಕರಾಗಿದ್ದ ಅವರನ್ನು ಹಿಡಿದು ಬಂದಿಖಾನೆಗೆ ಹಾಕಲು ಪೊಲೀಸರು ಕಾಯುತ್ತಿದ್ದರು. ಚಳುವಳಿಯನ್ನು ಯಶಸ್ವಿಯಾಗಿ ಮುನ್ನಡೆಸಲು ರಾಮಚಂದ್ರ ರಾಯರು ಪೋಲೀಸರ ಕಣ್ಣು ತಪ್ಪಿಸಿ ಕೆಲಕಾಲ ಭೂಗತರಾದರು. ಹೀಗೆ ಪೊಲೀಸರಿಗೆ ಸಿಗದಂತೆ ಓಡಾಡಿ ಚಳುವಳಿ ಸಂಘಟಿಸುವ ನಾಯಕರಿಗೆ ಸಹಕಾರ ಕೊಡಲು ಇತರೆ ಚಳುವಳಿಕಾರರ ತಂಡಗಳು ಇದ್ದವು. ಭೂಗತರಾದವರು ಒಂದೇ ಕಡೆ ಇರುವಂತಿಲ್ಲ. ಮನೆಯಿಂದ ಮನೆಗೆ ಗುಪ್ತವಾಗಿ ಓಡಾಟ. ಹೀಗೆ ಚಳುವಳಿ ನಡೆಯುತ್ತಿತ್ತು,

ಒಂದು ದಿನ ರಾತ್ರಿ ಶ್ರೀ ಹೆಚ್. ಎಸ್ ಸೀತಾರಾಮ್ (ಮುಂದೆ 1954-55ರಲ್ಲಿ ಬೆಂಗಳೂರಿನ ಮೇಯರ್ ಆದವರು. ಸ್ವಾತಂತ್ರ್ಯ ಯೋಧ ಶತಾಯುಷಿ ಶ್ರೀ ಹೆಚ್. ಎಸ್. ದೊರೆಸ್ವಾಮಿ ಅವರ ಅಣ್ಣ) ಅವರ ಕಾರಿನಲ್ಲಿ ಶ್ರೀ ರಾಮಚಂದ್ರ ರಾಯರನ್ನು ಅವರು ಅಡಗಿಕೊಂಡಿದ್ದ ಯಲಹಂಕದ ತಮ್ಮ ಸ್ನೇಹಿತರ ಮನೆಯಿಂದ ಕರೆತಂದು ನರಸಿಂಹರಾಜ ಕಾಲೋನಿಯಲ್ಲಿನ ಶ್ರೀ ಸಿ. ಕೆ. ನಾಗರಾಜ ರಾವ್ ಅವರ ಮನೆಯಲ್ಲಿ ಸೇರಿಸಿದರು. ಆಗ ನಾಗರಾಜ ರಾವ್ ಕನ್ನಡದ ಉದಯೋನ್ಮುಖ ಲೇಖಕ. ಕೆಲ ದಿನ ರಾಮಚಂದ್ರ ರಾಯರ ರಕ್ಷಣೆಯ ಜವಾಬ್ದಾರಿ ಅವರಿಗೆ ವರ್ಗಾವಣೆ ಆಯಿತು.

ರಾಮಚಂದ್ರ ರಾಯರ ಬೆನ್ನು ಹತ್ತಿದ್ದ ಪೊಲೀಸರಿಗೆ ಹೇಗೋ ಈ ಸುಳಿವು ಸಿಕ್ಕಿತು. ಸರ್ಚ್ ವಾರಂಟ್ ಹಿಡಿದುಕೊಂಡು ತಡರಾತ್ರಿ ಪೊಲೀಸರು ನಾಗರಾಜರಾಯರ ಮನೆ ಬಾಗಿಲು ಬಡಿದರು. ಮನೆಯಲ್ಲಿ ತಂದೆ-ತಾಯಿ, ಹೆಂಡತಿ-ಮಕ್ಕಳ ಜೊತೆ ನಾಗರಾಜರಾಯರ ವಾಸ. ಆ ದಿನ ಅವರ ಪತ್ನಿ ಮನೆಯಲ್ಲಿರಲಿಲ್ಲ. ಬಾಗಿಲು ತೆಗೆದರೆ ಪೊಲೀಸು ಅಧಿಕಾರಿಯ ಜೊತೆ ಒಬ್ಬ ಕನಿಷ್ಟಬಿಲ್ಲೆ. ಒಳಗೆ ಬಂದ ಅಧಿಕಾರಿಯನ್ನು ಕೂಡಿಸಿ ರಾಯರು ತಾಯಿಗೆ ಕಾಫಿ ಮಾಡಲು ಹೇಳಿದರು. ಸರ್ಚ್ ವಾರಂಟ್ ತೋರಿಸಿ ಅಧಿಕಾರಿ ತಪಾಸಣೆ ಮಾಡಿದರು. ರಾಯರ ಕೋಣೆಯಲ್ಲಿ ಒಂದು ವ್ಯಕ್ತಿ ಚಾಪೆಯಮೇಲೆ ಪೂರ್ತಿ ಕಂಬಳಿಯಿಂದ ಮುಸುಕು ಹೊದ್ದು ಮಲಗಿದ್ದುದು ಅಧಿಕಾರಿಗೆ ಕಂಡಿತು. 

"ಯಾರು ಅಲ್ಲಿ ಮಲಗಿರುವುದು?"
"ಇನ್ಯಾರು ಇಲ್ಲಿ ಬರುತ್ತಾರೆ? ಅದು ನನ್ನ ಹೆಂಡತಿ"
"ಹಾಗೆ ಯಾಕೆ ದೂರ ಮೂಲೆಯಲ್ಲಿ ಮಲಗಿದ್ದಾರೆ?"
"ಅದಕ್ಕೇನು ಹೇಳುವುದು? ತಿಂಗಳಿಗೆ ಮೂರು ದಿನ ದೂರ ಇರುವ ಪದ್ಧತಿ ಇದೆಯಲ್ಲ. ಅದಕ್ಕೆ"

ಅಧಿಕಾರಿಗೆ ನಂಬಿಕೆ ಬರಲಿಲ್ಲ. 

"ಗಾಢ ನಿದ್ರೆಯಲ್ಲಿದ್ದಾಳೆ. ಬೇಕಿದ್ದರೆ ಎಬ್ಬಿಸುತ್ತೇನೆ"

ಅಧಿಕಾರಿಗೆ ಎಬ್ಬಿಸಲು ಹೇಳುವಂತೆ ಮನಸ್ಸಾಗಲಿಲ್ಲ. ಅಷ್ಟರಲ್ಲಿ ನಾಗರಾಜರಾಯರ ತಾಯಿ ಕಾಫಿ ತಂದರು. ಸಹಾಯಕನ ಜೊತೆ ಒಳ್ಳೆಯ ಕಾಫಿ ಕುಡಿದು ಇಬ್ಬರೂ ಹೊರಟುಹೋದರು. ರಾಮಚಂದ್ರರಾಯರು ಅಂದು ಪಾರಾದರು. 
*****

ಸ್ವಾತಂತ್ರ್ಯ ಬಂದ ನಂತರ ಮೈಸೂರು ರಾಜ್ಯಕ್ಕೆ ಶ್ರೀ ಕೆ. ಚಂಗಲರಾಯ ರೆಡ್ಡಿ ಅವರು ಮುಖ್ಯಮಂತ್ರಿ ಆಗಿ ನಾಮನಿರ್ದೇಶಿತ ಸರ್ಕಾರ ಅಧಿಕಾರ ವಹಿಸಿಕೊಂಡಿತು. ಕೆ.ಸಿ. ರೆಡ್ಡಿ ಅವರ ನೇತೃತ್ವದಲ್ಲಿ ಮೊದಲ ಚುನಾವಣೆಗಳು 1952ರಲ್ಲಿ ನಡೆದುವು. 

ಎ. ಜಿ. ರಾಮಚಂದ್ರರಾಯರು ಹೊಳೆನರಸೀಪುರ ಕ್ಷೇತ್ರದಿಂದ ಎಂ.ಎಲ್.ಎ ಆಗಿ ಚುನಾಯಿತರಾದರು. ಶ್ರೀ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿ ಆಗಿ ಮೊದಲ ಜನಪ್ರಿಯ ಸರ್ಕಾರ ಮೈಸೂರು ರಾಜ್ಯಕ್ಕೆ ಬಂದಿತು. ಹನುಮಂತಯ್ಯನವರ ಸರ್ಕಾರದ ಏಳು ಮಂತ್ರಿಗಳಲ್ಲಿ (ಆವರನ್ನು ಸೇರಿಸಿ ಎಂಟು ಜನ) ಶ್ರೀ ಕಡಿದಾಳ್ ಮಂಜಪ್ಪ ಮತ್ತು ಶ್ರೀ ಎ. ಜಿ. ರಾಮಚಂದ್ರ ರಾವ್ ಸೇರಿದರು. 

ರಾಮಚಂದ್ರರಾವ್ ಕಾನೂನು ಮತ್ತು ವಿದ್ಯಾ ಇಲಾಖೆ ಮಂತ್ರಿಗಳಾದರು. ನಾಗರಾಜರಾಯರ ಮನೆಯಲ್ಲಿ ನೆಲದ ಮೇಲೆ ಮಲಗಿದ್ದುದು ಮಾತ್ರವಲ್ಲ. ಸರ್ಕಾರ ಕೊಟ್ಟ ನಿವಾಸದ ಕೋಣೆಯ ಮಂಚದ ಮೇಲೂ ಅವರು ಮಲಗಲಿಲ್ಲ. ಮಂಚವನ್ನು ದೇವರ ಪೀಠವಾಗಿ ಉಪಯೋಗಿಸಿ ನೆಲದಮೇಲೇ ಮಲಗುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಕಂಡವರು ಹೇಳುತ್ತಿದ್ದರು. ಅಧಿಕಾರ ಮತ್ತು ಸವಲತ್ತುಗಳಿಗೆ ಆಸೆಪಡದ ಸ್ವಾತಂತ್ರ್ಯ ಯೋಧರ ಸಂತತಿಯವರು ಅವರು. 

1957ರಲ್ಲಿ ಹೊಳೆನರಸೀಪುರದಿಂದ ಪ್ರಜಾ ಸೋಷಲಿಸ್ಟ್ ಪಕ್ಷದ ಶ್ರೀ ವೈ. ವೀರಪ್ಪನವರು ಎಂ.ಎಲ್.ಎ ಆದರು. ನಂತರ 1962ರಿಂದ ಸತತ ಆರು ಬಾರಿ ಗೆದ್ದು ಬಂದ, ರಾಜ್ಯದ ಮುಖ್ಯ ಮಂತ್ರಿಗಳು ಮಾತ್ರವಲ್ಲದೆ ದೇಶದ ಪ್ರಧಾನ ಮಂತ್ರಿಗಳೂ ಆದ ಶ್ರೀ ಹೆಚ್. ಡಿ. ದೇವೇಗೌಡ ಅವರು ತಾವು ಎ. ಜಿ. ರಾಮಚಂದ್ರ ರಾಯರ ಗರಡಿಯಲ್ಲಿ ಬೆಳೆದವರು ಎಂದು ಕೃತಜ್ಞತೆಯಿಂದ ನೆನೆಸಿಕೊಳ್ಳುತ್ತಾರೆ. 

*****

ಈಗ ಸಂಸ್ಕೃತಿ ಬೆಳೆಸಲು "ಕನ್ನಡ ಮತ್ತು ಸಂಸ್ಕೃತಿ ಇಲಾಖೆ" ದೊಡ್ಡದಾಗಿ ಬೆಳೆದಿದೆ. "ಕನ್ನಡ ಅಭಿವೃದ್ಧಿ ಪ್ರಾಧಿಕಾರ" ಸಹ ಅಸ್ತಿತ್ವಕ್ಕೆ ಬಂದಿದೆ. ಮಂತ್ರಿಮಂಡಲಗಳೂ ದೊಡ್ಡವಾಗಿ ಬೆಳೆದಿವೆ. 

ಅದೇ ಕೆಂಗಲ್ ಹನುಮಂತಯ್ಯ ಅವರು ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ದೇಶದ "ಆಡಳಿತ ಸುಧಾರಣಾ ಸಂಸ್ಥೆ" (Administrative Reforms Commission) ಹಾಕಿರುವ ಮಿತಿಯಂತೆ ಶಾಸಕಾಂಗದ ಒಟ್ಟು ಸದಸ್ಯರ ಸಂಖ್ಯೆಯ ಶೇಕಡಾ ಹದಿನೈದರಷ್ಟು ಮಾತ್ರ ಮಂತ್ರಿಮಂಡಲದಲ್ಲಿ ಮಂತ್ರಿಗಳಾಗಿರಬಹುದು. ಈ ಮಿತಿ ಹಾಕಿರದಿದ್ದರೆ ಅನಿಮಿತ ಸಂಖ್ಯೆಯ ಮಂತ್ರಿಗಳನ್ನು ಮಾಡಿಟ್ಟು  ಈ ಜಗಳಗಳನ್ನು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದಿತ್ತು!

ಸಂಸ್ಕೃತಿ ಪ್ರಚಾರ ಹೇಗೆ ನಡೆಯುತ್ತಿದೆ ಅನ್ನುವ ಚರ್ಚೆ ಒತ್ತಟ್ಟಿಗಿರಲಿ. ಆಡಳಿತ ಮತ್ತು ರಾಜಕೀಯ ನಾಯಕರ ಸಂಸ್ಕೃತಿಯಂತೂ ಹೇಗೆ ದಿಕ್ಕು ತಪ್ಪಿದೆ ಅನ್ನುವುದು ಯೋಚಿಸಬೇಕಾದ ವಿಷಯವೇ. ಇಂತಹ ಸಂಸ್ಕೃತಿಯ ಪ್ರಚಾರವಂತೂ ಬಹಳ ಚೆನ್ನಾಗಿಯೇ ಆಗುತ್ತಿದೆ. 

*****

ಅನೇಕ ಸಂಸ್ಕೃತಿ ಪ್ರಸಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಶ್ರೀ ಸಿ. ಕೆ. ನಾಗರಾಜರಾವ್ ಮತ್ತು ಅವರ ಶ್ರೀಮತಿ ರಾಜಮಣಿ ನಾಗರಾಜರಾವ್ ಅವರ ಒಂದು ಸುಂದರ ಅನುಭವದ ಸೊಗಸನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Friday, June 5, 2026

ಕಾಣದ ಕಣ್ಣಿನ ನೋವು


"ಎಳೆಗರುo ಎತ್ತಾಗದೇ ಲೋಕದೊಳ್, ನ್ಯಗ್ರೋಧ ಬೀಜಂ ಕೆಲಂ ಸಿಡಿದುಂ ಪೆರ್ಮರನಾಗದೇ, ಹರ ಹರಾ ಶ್ರೀ ಚೆನ್ನಸೋಮೇಶ್ವರಾ" ಎಂದೊಂದು "ಸೋಮೇಶ್ವರ ಶತಕ" ಸರಣಿಯಲ್ಲಿ ವಚನ. ಗಿಡ-ಮರಗಳು ತಮ್ಮ ಸಂತತಿ ಬೆಳೆಸಲು ಅನೇಕ ರೀತಿಯ ಉಪಾಯ ಮಾಡುತ್ತವೆ. ಎಕ್ಕದ ಗಿಡದಲ್ಲಿ ಬಿಡುವ ಹಣ್ಣು (ನಾವು ತಿನ್ನಲಾಗದ ಹಣ್ಣು) ಪಕ್ವವಾಗಿ ಸಿಡಿದಾಗ ಅದರಲ್ಲಿರುವ ಬೀಜಗಳಿಗೆ ಅಂಟಿಕೊಂಡಿರುವ ಪುಕ್ಕಗಳಿಂದ ಗಾಳಿಯಲ್ಲಿ ತೇಲುತ್ತಾ ಹೋಗಿ ಮತ್ತೆಲ್ಲೋ ಬಿದ್ದು ಬೇರೆ ಗಿಡ ಹುಟ್ಟುತ್ತದೆ. ನಾವು ಬಳಸುವ "ಹರಳೆಣ್ಣೆ" ಕೊಡುವ ಹರಳಿನ ಗಿಡದಲ್ಲಿ ಬಲಿತ ಹರಳು ಕಾಯಿ ಸಿಡಿದು, ಬೀಜ ದೂರ ಹಾರಿ ಮತ್ತೊಂದು ಗಿಡ ಹುಟ್ಟುತ್ತದೆ. ಆಲದ ಮರ (ನ್ಯಗ್ರೋಧ) ಕೂಡ ಹೀಗೆಯೇ. ಮರದಿಂದ ಹಾರಿದ ಬೀಜ ಮತ್ತೆಲ್ಲೋ ಭೂಮಿಯನ್ನು ಕಂಡುಕೊಂಡು, ಅಲ್ಲಿ ಗಿಡ ಹುಟ್ಟಿ ವಿಶಾಲವಾದ ಮರ ಬೆಳೆಯುತ್ತದೆ.

ನಮ್ಮ ಸಮಾಜದಲ್ಲಿಯೂ ಹೀಗೆಯೇ ನಡೆಯುತ್ತದೆ. ಹುಟ್ಟಿದ ಊರಿನಲ್ಲೇ ತಮ್ಮ ಜೀವನವನ್ನೆಲ್ಲಾ ಕಳೆಯುವರು ಕೆಲವು ಮಂದಿ. ಹಚ್ಚಿನ ಅವಕಾಶಗಳಿಗಾಗಿ ಹೊರಗಿನ ಸ್ಥಳ, ದೇಶಗಳಿಗೆ ವಲಸೆ ಹೋಗಿ ಅಲ್ಲಿ ಬೇರು ಬಿಟ್ಟು ಜೀವನ ಕಂಡುಕೊಳ್ಳುವವರು ಕ್ರಮೇಣ ಹೆಚ್ಚಾಗುತ್ತಿದ್ದಾರೆ. ಒಂದೇ ಕುಟುಂಬದ ಅನೇಕ ಸದಸ್ಯರು ಪ್ರಪಂಚದ ಬೇರೆ ಬೇರೆ ಕಡೆ ನೆಲೆ ಕಂಡುಕೊಂಡು ಮುನ್ನಡೆಯುವುದು ಹೆಚ್ಚಾಗುತ್ತಿದೆ. ಹೀಗೆ ನಡೆಯುತ್ತಿರುವುದರಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಗಳೂ ಜಾಸ್ತಿಯಾಗುತ್ತಿವೆ. ವಿಮಾನ ಪ್ರಯಾಣ ಸುಲಭವೂ, ಹೆಚ್ಚು ಜನರಿಗೆ ಕೈಗೆಟುಕುವಂತೆ ಆಗುತ್ತಿರುವುದೂ ಇದಕ್ಕೆ ಪೂರಕವಾಗಿದೆ. 

ಹೊರದೇಶಗಳಲ್ಲಿ ದುಡಿಯುತ್ತಿರುವ ಯುವ ಜನತೆಗೆ ತಾಯ್ನಾಡಿಗೆ ಆಗಾಗ ಬರಬೇಕೆಂದು ಆಸೆ ಇದ್ದರೂ ಸಹ ಅದು ಸಾಧ್ಯವಾಗುವುದಿಲ್ಲ. ಕೆಲಸದ ಒತ್ತಡ, ಜೀವನ ಕ್ರಮ, ಹೆಚ್ಚು ಕಾಲ ರಜೆ ಸಿಗದ ಸ್ಥಿತಿ, ವೀಸಾ ಮುಂತಾದುವುಗಳ ಕಟ್ಟುನಿಟ್ಟಿನ ನಿಯಮಗಳು ಮುಂತಾದುವುಗಳ ಬಂಧಕಗಳು ಇರುತ್ತವೆ. ತಂದೆ-ತಾಯಿಯರನ್ನು ನೋಡುವ, ಅವರ ಜೊತೆ ಕಾಲಕಳೆಯುವ ಆಸೆಗೆ ಲಗಾಮು ಬೀಳುತ್ತದೆ. "ನಾವು ಬಂದರೆ ಒಂದೋ-ಎರಡೋ ವಾರ, ಅಷ್ಟೇ. ನೀವೇ ಅಲ್ಲಿಗೆ ಬಂದುಬಿಡಿ. ಕೆಲವು ತಿಂಗಳ ಕಾಲ ಇರಬಹುದು. ಅಲ್ಲಿ ನೋಡುವ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಿದಹಾಗಾಯಿತು" ಎಂದು ಮಕ್ಕಳು ತಂದೆ-ತಾಯಿಯರಿಗೆ ಹೇಳುವುದು ಸರ್ವೇ ಸಾಮಾನ್ಯ.

ಲಂಡನ್, ಫ್ರಾಂಕ್ ಫ಼ರ್ಟ್, ಪ್ಯಾರಿಸ್ ಮುಂತಾದ ಯೂರೋಪಿನ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಕುಳಿತು ಗಮನಿಸಿದರೆ ಈ ರೀತಿ ಪ್ರಯಾಣ ಮಾಡುವ ಅನೇಕ ತಂದೆ-ತಾಯಿಯರನ್ನು ನೋಡಬಹುದು. ಮಗಳ ಅಥವಾ ಸೊಸೆಯ ಬಾಣಂತನ ಮಾಡಲು ಹೋಗುತ್ತಿರುವವರ ಉತ್ಸಾಹದ ಜೊತೆ ಬಾಣಂತನ ಮಾಡಿ ಸುಸ್ತಾಗಿ ಹಿಂದಿರುಗುತ್ತಿರುವ ತಾಯಿಯರನ್ನೋ, ಅತ್ತೆಯರನ್ನೋ ಸುಲಭವಾಗಿ ಕಾಣಬಹುದು.  

*****

ಒಂದು ತಂದೆ-ತಾಯಿಯರ ಜೋಡಿ ಹೀಗೆ ಕೆಲವು ತಿಂಗಳ ಕಾಲ ಮಕ್ಕಳು, ಮೊಮ್ಮಕ್ಕಳ ಜೊತೆ ಅಮೇರಿಕ ದೇಶದಲ್ಲಿ ಕಾಲ ಕಳೆದರು. ಏನು ಮಾಡಿದರೂ ಆರು ತಿಂಗಳ "ಲಕ್ಷ್ಮಣ ರೇಖೆ" ದಾಟುವಂತಿಲ್ಲವಲ್ಲ!  ಹಿಂದಿರುಗುವ ದಿನ ಬಂತು. ಈಗೀಗ ಅಮೇರಿಕಾದ ಕೆಲವು ಮುಖ್ಯ ನಗರಗಳಿಂದ ಭಾರತದ ಕೆಲವು ದೊಡ್ಡ ನಗರಗಳಿಗೆ ನೇರ ವಿಮಾನ ಸಂಪರ್ಕವುಂಟು. ಮೊದಲಿನಂತೆ ಮಧ್ಯದಲ್ಲಿ ಎಲ್ಲೋ ಒಂದು ಕಡೆ ವಿಮಾನ ಬದಲಿಸುವ ಪ್ರಮೇಯವಿಲ್ಲ. ಹದಿನಾರು-ಹದಿನೇಳು ಗಂಟೆಗಳ ಒಂದೇ ಪ್ರಯಾಣದಲ್ಲಿ ಮುಗಿಸಬಹುದು.

ದೀರ್ಘ ಪ್ರಯಾಣ ಆದುದರಿಂದ ಹೆಚ್ಚು ಪ್ರಯಾಸ ಆಗದಿರಲಿ ಎಂದು ಒಂದಕ್ಕೆ ನಾಲ್ಕು ಪಟ್ಟು ಹಣ ತೆತ್ತು ಮೇಲ್ದರ್ಜೆ ಟಿಕೇಟು ಕೊಂಡರು. ಇದರಲ್ಲಿ ಕೆಲವು ಅನುಕೂಲಗಳೂ ಉಂಟು. ಸಾಮಾನ್ಯವಾಗಿ ಇಂತಹ ಟಿಕೇಟುಗಳ ಜೊತೆ ಹೆಚ್ಚು ತೂಕದ ಸಾಮಾನುಗಳನ್ನು ಒಯ್ಯಬಹುದು. ಹೋಗುವಾಗ ಮೊಮ್ಮಕ್ಕಳಿಗೆ ಇಷ್ಟವಾದ ಸಿಹಿತಿಂಡಿ. ಎಲ್ಲರಿಗೂ ಹಪ್ಪಳ-ಉಪ್ಪಿನಕಾಯಿ, ಉಡುಗೊರೆಗಳು, ಇತ್ಯಾದಿ. ಹೀಗೆ ಅವರವರ ಅಭಿರುಚಿಗೆ ತಕ್ಕಂತೆ ಹೆಚ್ಚು ಪದಾರ್ಥಗಳನ್ನು ಪೆಟ್ಟಿಗೆಗಳಲ್ಲಿ ಸೇರಿಸಬಹುದು. ಹಿಂದಿರುಗುವಾಗ ಚಾಕಲೇಟು, ಇಲ್ಲಿರುವವರಿಗೆ ಉಡುಗೊರೆಗಳು, ಹೀಗೆ ಕೆಲವನ್ನು ತರಬಹುದು. ಇದಿದ್ದರೆ ಅದಿಲ್ಲ; ಅದಿದ್ದರೆ ಇದಿಲ್ಲ ಎಂದು ಗೊಣಗುವ ಚಿಂತೆಯಿಲ್ಲ. 

ವಿಮಾನ ಕಂಪನಿಯವರು ಮನೆಯಿಂದ ವಿಮಾನ ನಿಲ್ದಾಣಕ್ಕೆ ತಲುಪಲು ಐಷಾರಾಮಿ ಕಾರು ಕಳಿಸುತ್ತಾರೆ. ಆಕಾಶದಲ್ಲಿ ಹಾರುವ ಮುಂಚೆ ಭೂಮಿಯ ಮೇಲೆ ತೇಲುವ ಅನುಭವ ಪಡೆಯಬಹುದು. ಲಗೇಜು ವಿಮಾನಕ್ಕೆ ಹೋಗುವಂತೆ ಕೊಟ್ಟಮೇಲೆ ಮುಂದಿನ ಎರಡು ಗಂಟೆ ಕಾಲ ಕಳೆಯಲು "ಲೌಂಜ್" ವ್ಯವಸ್ಥೆ ಇರುತ್ತದೆ. ಇಲ್ಲಿ ಸುಖಾಸೀನರಾಗಬಹುದು. ಅನೇಕ ಬಗೆಯ ತಿಂಡಿ-ತೀರ್ಥ ಇರುತ್ತದೆ. ಇಷ್ಟವಿದ್ದವರು ಬೇಕಿದ್ದನ್ನು ಬೇಕಿದ್ದಷ್ಟು ಸೇವಿಸಬಹುದು. ವಿಮಾನ ಹೊರಡುವ ಸಮಯಕ್ಕೆ ಅದರ ಗೇಟಿಗೆ ತಲುಪಲು ವ್ಯವಸ್ಥೆ ಮಾಡುತ್ತಾರೆ. ಹೀಗೆ ಅನುಕೂಲಗಳು. 

ಲಗೇಜು ವಿಮಾನದ ಕಂಪನಿಯ ಕೌಂಟರಿನಲ್ಲಿ ಕೊಟ್ಟಾಗ ಸವಿ ಮಾತಿನಲ್ಲಿ ಆ ಹುಡುಗಿ ಮೆಲ್ಲನೆ ಹೇಳಿದಳು: "ನಿಮಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲು ನಮ್ಮ ಲೌಂಜ್ ನವೀಕರಿಸುತ್ತಿದ್ದೇವೆ. ಆದ್ದರಿಂದ ಇಂದು ನೀವು ಅಲ್ಲಿಗೆ ಹೋಗುವಂತಿಲ್ಲ. ಮುಂದಿನ ಸಲ ನೀವು ಬಂದಾಗ ಅದು ಎಷ್ಟು ಚೆನ್ನವಿದೆ ಎಂದು ನೀವು ನೋಡಬಹುದು". ವಿದ್ಯಾರ್ಥಿ ಭವನ ಮಸಾಲೆ ದೋಸೆ ದೋಸೆ ತಿನ್ನಲು ಗಾಂಧಿ ಬಜಾರ್ ತಲುಪಿದಾಗ ಆ ದಿನ ಶುಕ್ರವಾರ ಎಂದು ನೆನಪಾದಂತೆ ಆಯಿತು. "ನಿಮ್ಮ ಅನುಕೂಲಕ್ಕೆ ಎರಡು ಇಪ್ಪತ್ತು ಡಾಲರಿನ ಕೂಪನ್ ಕೊಡುತ್ತೇನೆ. ಇಲ್ಲಿ ಯಾವುದಾದರೂ ಔಟ್ಲೆಟ್ನಲ್ಲಿ ನಿಮಗೆ ಬೇಕಾದ ತಿಂಡಿ-ಪಾನೀಯ ತೆಗೆದುಕೊಳ್ಳಿ. ಈ ದಿನ ಹೆಚ್ಚು ಪ್ರಯಾಣಿಕರಿಲ್ಲ. ಗೇಟಿನಲ್ಲಿ ಜನಜಂಗುಳಿ ಇಲ್ಲ. ಸುಖವಾಗಿ ಕುಳಿತುಕೊಳ್ಳಿ. ಕೇವಲ ಎರಡು ಗಂಟೆ ಅಷ್ಟೇ!" ಎಂದು ಮುಖ ಅಗಲಿಸಿ, ನಗುವಿನೊಡನೆ ಹೇಳಿ, ಹಿಂದೆ-ಮುಂದೆ ನೋಡುವುದರ ಒಳಗಾಗಿ ಮತ್ತೊಬ್ಬರನ್ನು ಚೆಕಿನ್ನಿಗೆ ಕರೆದುಬಿಟ್ಟಳು.

ಕೈನಲ್ಲಿ ಈಗ ಎರಡು ಕೂಪನ್ನುಗಳು. ಅವುಗಳ ಸದುಪಯೋಗ ಮಾಡಬೇಕು. ದಂಡ ಮಾಡುವಂತಿಲ್ಲ. ಕ್ಯಾಬಿನ್ ಬ್ಯಾಗು ಎಳೆದುಕೊಂಡು ಮೊದಲ ಅಂಗಡಿಗೆ ಹೋದರು. ಸಾಲಿನಲ್ಲಿ ನಿಂತು ಸರತಿ ಕಾದರು. ಬೋರ್ಡಿನಲ್ಲಿ ಇದ್ದದ್ದು ನೋಡಿ ಏನು ಬೇಕೆಂದು ಹೇಳಿದರು. ಅವನು ಕೈಲಿದ್ದ ಕೂಪನ್ ನೋಡಿದ. "ಕ್ಷಮಿಸಿ. ನಾವು ಈ ಕೂಪನ್ ಸ್ವೀಕರಿಸುವುದಿಲ್ಲ" ಎಂದು ಒಂದೇ ಮಾತಿನಲ್ಲಿ ಕೆಲಸ ಮುಗಿಸಿದ. ಏನು ಮಾಡುವುದು? ಮುಂದಿನ ಅಂಗಡಿ. ಅಲ್ಲಿಯೂ ಇದೇ ರಾಗ. ಹೀಗೇ ಆರೇಳು ಅಂಗಡಿ ಆಯಿತು. 

ಜೇಬಿನಲ್ಲಿ ಹಣವುಂಟು. ಕ್ರೆಡಿಟ್ ಕಾರ್ಡುಗಳೂ ಇವೆ. ಆದರೆ ಕೂಪನ್ ಉಪಯೋಗ ಮಾಡಲೇಬೇಕಲ್ಲ. ಇಲ್ಲದಿದ್ದರೆ ಅದು ವ್ಯರ್ಥವಾಗುವುದು. ವಿಮಾನ ಏರಿದಮೇಲೆ ಅದು ನಿರುಪಯೋಗಿ. ಕೂಪನ್ ಕೊಡದಿದ್ದರೆ ಚಂದವಿತ್ತು ಅನ್ನಿಸತೊಡಗಿತು. ಈಗ ಏನು ಮಾಡುವುದು? ಕಡೆಯ ಪ್ರಯತ್ನ ಅಂತ ಎಂಟನೆಯ ಅಂಗಡಿ ತಲುಪಿದ್ದಾಯಿತು. ಆಹಾ! ಇವರು ಕೂಪನ್ ತೆಗೆದುಕೊಳ್ಳಲು ಒಪ್ಪಿದರು. ಆದರೆ ನಮಗೆ ಬೇಕಾದ ಪದಾರ್ಥ ಕೊಡುವುದಿಲ್ಲ. ಅವರು ಹೇಳಿದ ಪದಾರ್ಥಗಳಲ್ಲಿ ಆರಿಸಿಕೊಳ್ಳಬಹುದು. ವಿಧಿ ಇಲ್ಲದೆ ಮನಸ್ಸಿಗೆ ಬೇಡದಿದ್ದರೂ ಯಾವುದೋ ಎರಡು ಪದಾರ್ಥಗಳನ್ನು ಪಡೆದು, ಗೇಟಲ್ಲಿ ಜಾಗ ಹಿಡಿದು ಸೇವಿಸಿದರು. ಪ್ರಯಾಣ ಮುಂದುವರೆಯಿತು. 

*****

ಸಾಧನಗಳಿಂದ ಏನಾದರೂ ಪ್ರಯೋಜನ ಇರಬೇಕು. ಉಪಯೋಗವಿಲ್ಲದ ಸಾಧನ ವ್ಯರ್ಥವೇ ಸರಿ. ಬಳಿಯಿರುವ ಬೆಲೆಯುಳ್ಳ ಪದಾರ್ಥ ಏನೂ ಕೆಲಸಕ್ಕೆ ಬಾರದಿದ್ದರೆ ಅದೊಂದು ಚಿಂತೆಯ ಕಾರಣ ಆಗುತ್ತದೆ. ಅದು ಇಲ್ಲದಿದ್ದರೆ ಹೋಗಲಿ ಎಂದು ಬಿಟ್ಟು ಬಿಡಬಹುದು. ಆದರೆ ಹತ್ತಿರವಿದೆ. ಹಾಗೆಯೇ ಬಿಡುವಂತಿಲ್ಲ. ಆದರೆ ಬೇಕಿದ್ದಕ್ಕೆ ಬಳಸುವಂತಿಲ್ಲ. ಇದೊಂದು ಇಕ್ಕಟ್ಟಿನ ಪರಿಸ್ಥಿತಿ.

ಇಷ್ಟೇ ಆದರೆ ಪರವಾಗಿಲ್ಲ. ವ್ಯರ್ಥವಾಯಿತು ಅನ್ನುವುದು ಒಂದು ನಿರಾಶೆಯ ಕಾರಣವಾದರೂ, ಅದರಿಂದ ತೊಂದರೆಯಂತೂ ಆಗಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಇದಕ್ಕೆ ವಿರುದ್ಧವಾಗಿ ಅದರಿಂದ ಆಗಬೇಕಾದ ಪ್ರಯೋಜನ ಇಲ್ಲದೆ ಬದಲಾಗಿ ಅದರಿಂದ ತೊಂದರೆ ಆಗಲು ಪ್ರಾರಂಭವಾದರೆ? "ಕಾಸು ಕೊಟ್ಟು ಹೊಡೆಸಿಕೊಂಡರು" ಅನ್ನುವ ಗಾದೆ ಇದಕ್ಕೇ ಇದೆ ಎಂದು ನೆನಪಿಸಿಕೊಳ್ಳಬಹುದು. 

ಪಂಚೇಂದ್ರಿಯಗಳು ಅನ್ನುತ್ತೇವೆ. ಈ ಐದರಲ್ಲಿ ಯಾವುದು ಮುಖ್ಯ? ಇದೆಂತಹ ಪ್ರಶ್ನೆ ಅನ್ನಬಹುದು. ಎಲ್ಲವೂ ಮುಖ್ಯವೇ. ಕಣ್ಣು ಇರುವುದು ನೋಟದಿಂದ ಸುತ್ತಲಿನ ವಿಷಯ ತಿಳಿಯುವುದಕ್ಕೆ. ಕಿವಿಯಿರುವುದು ಶಬ್ದಗ್ರಹಣದ ಮೂಲಕ ಅನುಭವ ಪಡೆಯಲು. ನಾಲಗೆಯೋ ರುಚಿಯ ಅನುಭವದ ಜೊತೆಗೆ ಮಾತನಾಡಲು ಸಹಾಯಕ. ಮೂಗು ಮತ್ತು ಚರ್ಮಗಳು ವಾಸನೆ ಮತ್ತು ಸ್ಪರ್ಶದಿಂದ ಅನುಭವ ಪೂರ್ಣ ಮಾಡಲು ಸಹಾಯಕಗಳು. 

ಕೆಲವರಿಗೆ ವಾಸನೆ ಗೊತ್ತಾಗುವುದಿಲ್ಲ. ಮತ್ತೆ ಕೆಲವರಿಗೆ ಈ ಇಂದ್ರಿಯ ಬಹಳ ಸೂಕ್ಷ್ಮ. ಇನ್ನೊಬ್ಬರ ಸ್ಪರ್ಶಜ್ಞಾನದ ಬಗ್ಗೆ  ನಾವು ತಿಳಿಯುವುದು ಕಷ್ಟ. ಕಿವಿ ಕೇಳದಿದ್ದಾಗ ಮಂದಿಯ ಜೊತೆ ಇದ್ದಾಗ ಇರುಸು-ಮುರುಸು ಆಗುವುದು. ಮಾತು ಬಾರದ ಮೂಗರಿಗೆ ಬಲು ಕಷ್ಟ. ಕಣ್ಣು ಕಾಣದವರಿಗೆ ಆಗುವ ಕಷ್ಟ ಅವರಿಗೇ ಗೊತ್ತು. ಇತರರು ಒಂದು ಮಟ್ಟದವರೆಗೆ ಊಹಿಸಬಹುದಾದರೂ ಅದರ ಹಿಂಸೆಯ ಪೂರ್ತಿ ಅನುಭವ ಆಗಲು ಸಾಧ್ಯವಿಲ್ಲ. ಆದರೂ ಅನೇಕ ಮಂದಿ ಕುರುಡು ಅಥವಾ ಕಿವುಡು-ಮೂಗರು ಆಗಿದ್ದಾಗ್ಯೂ ಅಸಾಧ್ಯ ಸಾಧನೆಗಳನ್ನು ಮಾಡಿರುವುದನ್ನು ಕಂಡಿದ್ದೇವೆ. ಜೀವನದ ನಡೆಯಲ್ಲಿ ಇಂತಹವರು ಎಲ್ಲಾ ಸರಿಯಿರುವವರನ್ನೂ ಹಿಂದೆ ಬಿಟ್ಟು ದಾಪುಗಾಲು ಹಾಕಿರುವ ಪ್ರಚಂಡರು. 

ದೃಷ್ಟಿಯಿಲ್ಲದವರಿಗೆ ಕುರುಡರು ಅನ್ನುತ್ತೇವೆ. ಕೆಲವರಿಗೆ ಕಣ್ಣು ಲಕ್ಷಣವಾಗಿಯೇ ಇರುತ್ತದೆ. ಆದರೆ ದೃಷ್ಟಿ ಇರುವುದಿಲ್ಲ. ಆಗತಾನೇ ಹುಟ್ಟಿದ ಮಕ್ಕಳಿಗೆ ದೃಷ್ಟಿ ಇರುವುದಿಲ್ಲ. "ಮಗುವಿನ ಕಣ್ಣು ಎಷ್ಟು ಚೆನ್ನಾಗಿದೆ" ಎಂದು ನೋಡಿದವರು ಉದ್ಗಾರ ತೆಗೆಯಬಹುದು. "ಬಟ್ಟಲುಗಣ್ಣುಗಳು. ಮಗುವಿಗೆ ವಿಶಾಲಾಕ್ಷಿ ಎಂದೇ ಹೆಸರಿಡಿ" ಅನ್ನಬಹುದು. ಹುಟ್ಟಿದ ದಿನದಿಂದ ಸುಮಾರು ಒಂದು ವಾರ ಕಾಲ ದೃಷ್ಟಿ ಇರುವುದಿಲ್ಲ ಅನ್ನುತ್ತಾರೆ. ಕೇವಲ ಕಪ್ಪು-ಬಿಳುಪು ಮಾತ್ರ ಕಾಣುತ್ತದೆ ಎಂದು ಹೇಳುತ್ತಾರೆ. ವಾರದ ನಂತರ ನಿಧಾನವಾಗಿ ದೃಷಿ ವಿಶಾಲವಾಗಿ ಬಣ್ಣಗಳ ಜ್ಞಾನ ಬರುತ್ತದಂತೆ. ಎಲ್ಲೋ ಕೆಲವರಿಗೆ ಮುಂದೆ ಎಂದೂ ದೃಷ್ಟಿ ಬಾರದೇಹೋಗಿ ಜೀವನವೆಲ್ಲ ದೃಷ್ಟಿಹೀನರಾಗಿ ಬದುಕಬೇಕಾಗಬಹುದು. 

ಇದು ಮಾವಿನ ಹಣ್ಣಿನ ಕಾಲ. ನಮ್ಮ ಬಾಲ್ಯಗಳಲ್ಲಿ ಈ ಕಾಲದಲ್ಲಿ ಒಂದು ರೀತಿಯ ಕಣ್ಣುನೋವು ಬರುತ್ತಿತ್ತು. ಸಣ್ಣ ಕಪ್ಪು ಸೊಳ್ಳೆಗಳು ಕಣ್ಣುಗಳನ್ನು ಮುತ್ತಿಕೊಳ್ಳುತ್ತಿದ್ದವು. ಈಗ ವೈದ್ಯ ವಿಜ್ಞಾನ ಮತ್ತು ನೈರ್ಮಲ್ಯ ಪ್ರಜ್ಞೆ ಮುಂದುವರೆದಿರುವುದರಿಂದ ಇದು ಕಡಿಮೆ ಆಗಿದೆ. ಆದರೂ ಕಣ್ಣು ನೋವು ಅಲ್ಲಲ್ಲಿ, ಆಗಾಗ ಕಂಡು ಬರುವುದು. ಕಣ್ಣುಗಳು ಕೆಂಪಾಗಿ, ನೀರು ಸೋರುತ್ತಾ ಉರಿಯುವ ಅನುಭವ ಆಗುವುದು. ಕಪ್ಪು ಕನ್ನಡಕ ಹಾಕಿಕೊಂಡು ಓಡಾಡಬೇಕಾಗುವುದು. ಐದಾರು ದಿನಗಳಲ್ಲಿ ಔಷಧಗಳಿಂದ ಪರಿಹರಿಸಿಕೊಳ್ಳಬಹುದು. 

ಕಣ್ಣುಕಾಣದವರಿಗೂ ಈ ಕಣ್ಣು ನೋವು ಬರುವುದು ಒಂದು ವಿಪರ್ಯಾಸ. ಅವರಿಗೆ ಕಣ್ಣಿನಿಂದ ಆಗಬೇಕಾದ ಯಾವುದೇ ಪ್ರಯೋಜನವಿಲ್ಲ. ಆದರೆ ಕಣ್ಣು ನೋವಿನ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ. ಇದೇ "ಕಾಣದ ಕಣ್ಣಿನ ನೋವು". ಕಣ್ಣಿನ ಪ್ರಯೋಜನವಿಲ್ಲದೆ ಅನವಶ್ಯಕ ಹಿಂಸೆ ಅನುಭವಿಸುವ ಗೋಳು. 
*****

ನಾವು ಉದ್ಯೋಗ ಪ್ರಾರಂಭ ಮಾಡಿದ ದಿನಗಳಲ್ಲಿ ನಮ್ಮೊಡನೆ ಹಿರಿಯ ಅಧಿಕಾರಿಯೊಬ್ಬರು ಇರುತ್ತಿದ್ದರು. ಅವರಿಗೆ ಎರಡು-ಮೂರು ವರುಷಗಳಿಗೆ ಒಮ್ಮೆ ವರ್ಗಾವಣೆ ಆಗುತ್ತಿತ್ತು. ಹೆಂಡತಿ-ಮಕ್ಕಳೊಡನೆ ಊರಿಂದೂರಿಗೆ ಪ್ರಯಾಣ. ಮಕ್ಕಳಿಗೆ ಶಾಲೆಯಿಂದ ಶಾಲೆಗೆ ವರ್ಗಾವಣೆ. ಒಂದು ಕಡೆ ಜೊತೆಗಾರ ಮಕ್ಕಳೊಡನೆ ಸ್ನೇಹ ಕುದುರುವುದರ ಮೊದಲೇ ಮತ್ತೊಂದು ಸ್ಥಳ. ಅಲ್ಲಿ ಹೊಸ ಶಾಲೆ. ಹೊಸ ಸ್ನೇಹಿತರು. ಹೀಗೆ ಸ್ಥಿರವಿಲ್ಲದ ಬಾಲ್ಯ. 

ಈ ರೀತಿ ಅನೇಕ ಮಕ್ಕಳಿಗೆ ಆಗುತ್ತದೆ. ಹೆಚ್ಚಿನವರು ಈ ರೀತಿಯ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾರೆ. ಅವರ ಒಬ್ಬ ಮಗನಿಗೆ ಈ ರೀತಿಯ ಬೆಳವಣಿಗೆಗೆ ಹೊಂದಿಕೊಳ್ಳುವುದು ಬಹಳ ಕಷ್ಟವಾಯಿತು. ವಿದ್ಯೆ ಹತ್ತಲಿಲ್ಲ. ಕೋಪ-ಹಠ ಹೆಚ್ಚಾಯಿತು. ತಂದೆಗೆ ಕಾರಣ ಗೊತ್ತು. ಸಂಸಾರ ಒಂದು ಕಡೆ ಇರಿಸಿ ತಾವು ಓಡಾಡಿಕೊಂಡಿರಲು ಕುಟುಂಬದಲ್ಲಿ ಅನುಕೂಲಗಳಿರಲಿಲ್ಲ. ಹೀಗೆ ನಡೆಯಿತು.

ಮಗ ದೊಡ್ಡವನಾದ. ಎಲ್ಲರಂತೆ ಅದು ಬೇಕು-ಇದು ಬೇಕು ಅನ್ನುವನು. ತಂದೆ ಬೇಕು-ಬೇಡ ನೋಡಿಕೊಳ್ಳುವರು. ಸಂಪಾದನೆ ಕಡಿಮೆ. ಖರ್ಚು ಹೆಚ್ಚು. ಆದರೂ ಮಗ ಕೇಳಿದ್ದನ್ನು ಕೊಡಿಸುತ್ತಿದ್ದರು. ಚೆನ್ನಾಗಿ ನೋಡಿಕೊಂಡರು. 

"ನೋಡಿ, ನನಗೆ ಭವಿಷ್ಯಕ್ಕೆ ಎಂದು ನಮ್ಮ ತಂದೆ ಎರಡು ಮನೆ ಮಾಡಿ ಕೊಟ್ಟರು. ನಾನು ಆ ಎರಡೂ ಮನೆಗಳನ್ನೂ ಮಾರಿ ಇವನನ್ನು ಕಾಪಾಡುತ್ತಿದ್ದೇನೆ. ನನ್ನ ನಂತರ ಹೇಗೋ, ಏನೋ" ಎಂದು ಹೆಚ್ಚು ವಿಶ್ವಾಸವಿದ್ದ ನಾವು ಕೆಲವರಲ್ಲಿ ಪೇಚಾಡಿಕೊಳ್ಳುತ್ತಿದ್ದರು. 

*****

ವಿಮಾನ ಕಂಪನಿಯವರು ಕೊಟ್ಟ ಕೂಪನ್ನುಗಳುಕಾಣದ ಕಣ್ಣುಗಳಂತೆ. ಬೇಕಿದ್ದು ಕೊಳ್ಳುವಂತಿಲ್ಲ. ಅವರು ಕೊಡುವುದು ನಮಗೆ ಬೇಡ. ಸಾಧನವೇನೋ ಕೈಯ್ಯಲ್ಲಿದೆ. ಪ್ರಯೋಜನವಿಲ್ಲ. ಹಿಡಿದುಕೊಂಡು ಅಲೆಯುವುದು, ಬೇಡದ್ದು ಪಡೆಯುವುದು, ಇವೇ ಆಯಿತು. 

ಮನುಷ್ಯರಿಗೆ ಸಂತಾನದ ಹುಚ್ಚು. ಕೆಲವರಿಗೆ ಸಂತಾನ ತಾನಾಗಿಯೇ ಆಗುತ್ತದೆ. ಮತ್ತೆ ಕೆಲವರಿಗೆ ಆಗುತ್ತಲೇ ಇರುತ್ತದೆ. ಇನ್ನು ಕೆಲವರಿಗೆ ಆಗುವುದು ಕಷ್ಟ. ಔಷದ-ಪಥ್ಯ ಮಾಡಿ, ದೇವರು-ದಿಂಡಿರಿಗೆ ಹರಕೆ ಹೊತ್ತು, ವ್ರತ-ಪೂಜೆ ಇತ್ಯಾದಿಗಳನ್ನು ಮಾಡಿ ಸಂತಾನ ಪಡೆಯುತ್ತಾರೆ. ತಾನಾಗಿಯೇ ಆದ ಅಥವಾ ಹೀಗೆ ಕಷ್ಟ ಪಟ್ಟು ಪಡೆದ ಮಕ್ಕಳು ಯೋಗ್ಯರಾಗಬಹುದು. ಅಯೋಗ್ಯರೂ ಆಗಬಹುದು. ಸಮಾಜಘಾತುಕರೂ ಆಗಬಹುದು. ಕೊನೆಗಾಲದಲ್ಲಿ ಜೀವಿತಕ್ಕೆ ಊರುಗೋಲಾಗಬಹುದು. ಸಮಾಜವು ನಮಗೆ ಹೊಡೆಯಲು ಕಾರಣವಾಗುವ ಬಾರುಕೋಲುಗಳೂ ಆಗಬಹುದು. 

ಹಿತೋಪದೇಶ ಮೊದಲ ಭಾಗದಲ್ಲಿ ಒಂದು ಶ್ಲೋಕ ಮಕ್ಕಳನ್ನೂ ಮತ್ತು ಕುರುಡನ ಕಣ್ಣನ್ನೂ ಹೋಲಿಸಿ ಹೀಗೆ ಹೇಳುತ್ತದೆ:

ಕೋರ್ಥ: ಪುತ್ರೇಣ ಜಾತೇನ ಯೋ ನ ವಿದ್ವಾನ್ ನ ಧಾರ್ಮಿಕ:
ಕಾಣೇನ ಚಕ್ಷುಷಾ ಕಿಂ ವಾ ಚಕ್ಷು:ಪೀಡೈವ ಕೇವಲಮ್ 

ವಿದ್ಯೆವಿಲ್ಲ. ವಿನಯವಿಲ್ಲ. ಒಳ್ಳೆಯ ನಡತೆಯಿಲ್ಲ. ಜೊತೆಯಲ್ಲಿ ಬಾಳುವವರಿಗೆ ಮೂರುಕಾಸಿನ ಉಪಯೋಗವಿಲ್ಲ. ಅಯೋಗ್ಯರಾದ ಮಕ್ಕಳು ಕುರುಡನ ಕಣ್ಣು ಇದ್ದಂತೆ. ತಂದೆ-ತಾಯಿಯರಿಗೆ ಮಕ್ಕಳಿಂದ ಆಗುವ ಯಾವುದೇ ಉಪಯೋಗವೂ ಇಲ್ಲ. (ಅವರು ನಮ್ಮನ್ನು ಉದ್ಧಾರ ಮಾಡುವುದು ಬೇಡ. ಕನಿಷ್ಠ ಸಮಾಜದಿಂದ ದೂರುಗಳನ್ನು ತರದಿದ್ದರೆ ಸಾಕು). ಆದರೆ ಮಕ್ಕಳಿಗೆ ಮಾಡಬೇಕಾದ ಕರ್ತವ್ಯಗಳು ಎಲ್ಲವನ್ನೂ ಮಾಡಬೇಕು. ಜೊತೆಗೆ ಕಾಣದ ಕಣ್ಣಿನ ನೋವಿನಂತಹ ಕಷ್ಟವನ್ನೂ ಅನುಭವಿಸಬೇಕು.

*****

ಯೋಗ್ಯರಾದ ಮಕ್ಕಳು ಸಿಗುವುದು ಒಂದು ದೊಡ್ಡ ಭಾಗ್ಯ. ಅದು ಎಂತಹ ಭಾಗ್ಯ ಅನ್ನುವುದು ಮಕ್ಕಳಿಂದ ಹಿಂಸೆ ಅನುಭವಿಸುವವರನ್ನು ನೋಡಿ ತಿಳಿಯಬಹುದು.