Showing posts with label santana. Show all posts
Showing posts with label santana. Show all posts

Wednesday, June 17, 2026

ವಿಷಮ ದಾಂಪತ್ಯ



ಇಡ್ಲಿ-ಚಟ್ನಿ ಅಥವಾ ಇಡ್ಲಿ-ಸಾಂಬಾರ್, ಇಲ್ಲವೇ ಇನ್ನೂ ಹೆಚ್ಚಿನ ರಸಕವಳ ಬೇಕೆಂದರೆ ತುಪ್ಪದ ಜೊತೆ ಇಡ್ಲಿ-ಸಾಂಬಾರ್-ಚಟ್ನಿ ತಿನ್ನುವವರ ಮನೆಯಲ್ಲಿ ಕುಕ್ಕರ್ ಒಳಗೆ ಇಡ್ಲಿಹಿಟ್ಟು ಹಾಕಿಟ್ಟು ಇಡ್ಲಿ ಮಾಡಲು ಇಡುವ ಇಡ್ಲಿ ಸ್ಟ್ಯಾoಡು ಇರುತ್ತವೆ. ಮನೆಯಲ್ಲಿ ವಾಸವಿರುವ ಜನರು ಮತ್ತು ಅವರ ಆಹಾರ ಸೇವನೆಯ ಸಾಮರ್ಥ್ಯ ಅವಲಂಬಿಸಿ ಅದಕ್ಕೆ ಸರಿಯಾದ ಕುಕ್ಕರ್ ಮತ್ತು ಇಡ್ಲಿ ಸ್ಟ್ಯಾಂಡುಗಳನ್ನು ಇಟ್ಟುಕೊಂಡಿರುತ್ತಾರೆ. ಎರಡು ಅಥವಾ ಮೂರು ಮಂದಿ ಇರುವ ಮನೆಯಲ್ಲಿ 3x3=9 ಇಡ್ಲಿ ಮಾಡುವ ಸ್ಟಾಂಡ್ ಇರಬಹುದು. ಮನೆಯಲ್ಲಿ ಹೆಚ್ಚು ಹಸಿವಿರುವ ನಾಲ್ಕು ಮಂದಿ ಇದ್ದರೆ 4x6=24 ಇಡ್ಲಿ ಮಾಡುವ ಸ್ಟಾಂಡ್ ಇರಬಹುದು. ಪಕ್ಕದ ರಸ್ತೆಯಲ್ಲಿರುವ ದರ್ಶಿನಿಯಲ್ಲಿ 6x6=36 ಇಡ್ಲಿ ಮಾಡುವ ಹತ್ತು ಚೌಕಾಕಾರದ ತಟ್ಟೆಗಳ ದೊಡ್ಡ ಇಡ್ಲಿ ಮೇಕರ್ ಇರುತ್ತದೆ. ಒಂದೇ ಸಲ 360 ಇಡ್ಲಿಗಳು! SLV ರೀತಿಯ ಇಡ್ಲಿ ಸ್ಥಳಗಳಲ್ಲಿ ಇವೂ ಸಾಲುವುದಿಲ್ಲ. ಇಂತಹ ಎರಡು-ಮೂರು ಇಟ್ಟುಕೊಂಡು ಸರತಿಯ ಮೇಲೆ ಬಳಸುತ್ತಾರೆ. 

ಚತುರ್ಮುಖ ಬ್ರಹ್ಮದೇವರು ಆದಿ ಸೃಷ್ಟಿಕರ್ತರು. ಅವರೂ ಇದೇ ತತ್ವವನ್ನು ಅನುಸರಿಸಿದ್ದಾರೆ. ವಾಸ್ತವವಾಗಿ ಅವರು ಮೊದಲು ಪ್ರಾರಂಭಿಸಿದ ಮಾದರಿಯನ್ನು ನಾವು ಮುಂದುವರೆಸಿದ್ದೇವೆ ಅನ್ನುವುದು ಹೆಚ್ಚು ಸರಿಯಾದೀತು. ಮಹಾಪ್ರಳಯದ ನಂತರ ಸೃಷ್ಟಿ ಪ್ರಾರಂಭದಲ್ಲಿ ಹೆಚ್ಚು ಜೀವಿಗಳು ಬೇಕಾಗಿದ್ದರಿಂದ ಈ ಕೆಲಸಕ್ಕಾಗಿ ಸಹಾಯಕವಾಗಲು ಅವರು ಮೊದಲಿಗೆ "ಪ್ರಜಾಪತಿ" ಅನ್ನುವವರನ್ನು ತಮ್ಮ ಮಾನಸಪುತ್ರರಾಗಿ ಹೊರತಂದರು. ಈ ಪ್ರಜಾಪತಿಗಳ ಮೂಲಕ ಮುಂದೆ ಸೃಷ್ಟಿ ದೊಡ್ಡದಾಗುತ್ತಾ ಹೋಯಿತು. ಈ ರೀತಿಯ ಪ್ರಜಾಪತಿಗಳ ಹೆಸರಿಗೆ ಉದಾಹರಣೆ ಕೊಡಬೇಕೆಂದರೆ ದಕ್ಷ ಪ್ರಜಾಪತಿ, ಕರ್ದಮ ಪ್ರಜಾಪತಿ, ಮುಂತಾದವರು. ಮರೀಚಿ, ಅಂಗೀರಸ ಮುಂತಾದವರೂ ಪ್ರಜಾಪತಿಗಳೇ. ಆದರೂ ಪ್ರಜಾಪತಿ ಅನ್ನುವ ಪದ ಕೇಳಿದ ತಕ್ಷಣ ನಮ್ಮ ನೆನಪಿಗೆ ಬರುವುದು ದಕ್ಷನ ಹೆಸರೇ ಅಲ್ಲವೇ? 

ಸಂತಾನವಾಗುವುದು ಹೇಗೆ? ಸಂತಾನ ಸೃಷ್ಟಿಯಲ್ಲಿ ಎಷ್ಟು ವಿಧ? ಈ ಪ್ರಶ್ನೆಗಳಿಗೆ ಹಿಂದೊಂದು ಸಂಚಿಕೆಯಲ್ಲಿ ಉತ್ತರ ಹುಡುಕಿದ್ದೇವೆ. ಆಸಕ್ತರು "ಸಂತಾನ ಸೃಷ್ಟಿಯ ವಿಧಗಳು" ಎಂಬ ಶೀರ್ಷಿಕೆಯಲ್ಲಿರುವ ಆ  ಲೇಖನವನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಸ್ತ್ರೀ-ಪುರುಷರ ಸಂಸರ್ಗದ ಮೂಲಕ ಮಕ್ಕಳನ್ನು ಪಡೆಯುವ ವ್ಯವಸ್ಥೆಯನ್ನು ಮೊದಲು ತಂದವನು ಈ ದಕ್ಷ ಪ್ರಜಾಪತಿ ಎಂದು ಹೇಳುತ್ತಾರೆ. 

*****

"ನಿನ್ನೆ ಕೃಷ್ಣ ಮೂರ್ತಿ ಬಂದಿದ್ದ" ಎಂದು ಯಾರಾದರೂ ಹೇಳಿದರೆ ತಕ್ಷಣ ಕೇಳುವ ಪ್ರಶ್ನೆ "ಯಾವ ಕೃಷ್ಣ ಮೂರ್ತಿ?" ಎಂದು. ಏಕೆ ಹೀಗೆ? ಅನೇಕ ಕೃಷ್ಣ ಮೂರ್ತಿಗಳು ನಮಗೆ ಗೊತ್ತು. ಅವರಲ್ಲಿ ಯಾರು ಎಂದು ತಿಳಿಯಬೇಕು. "ತರಲೆ ಕೃಷ್ಣಮೂರ್ತಿ ಬಂದಿದ್ದ" ಅಂತ ಹೇಳಿದರೆ ತಕ್ಷಣ ಗೊತ್ತಾಗುತ್ತದೆ. ಅಥವಾ ಒಬ್ಬರ ಕುಟುಂಬದಲ್ಲಿ "ಕಮಲು ಮಗ ಕೃಷ್ಣಮೂರ್ತಿ" ಅನ್ನಬಹುದು. ಇನ್ನೊಬ್ಬರ ಮನೆಯಲ್ಲಿ ರಮಾ ಗಂಡ ಕೃಷ್ಣಮೂರ್ತಿ ಇರಬಹುದು. ಹೀಗೆ. 

ಇದೇ ರೀತಿ ವೈದಿಕ ವಾಗ್ಮಯದಲ್ಲಿಯೂ ಒಂದೇ ಹೆಸರಿನ ಅನೇಕರು ಇದ್ದಾರೆ. "ರಾಮ" ಎಂದರೆ ಯಾರು? ಪರಶುರಾಮ ಇದ್ದಾನೆ. ಬಲರಾಮ ಇದ್ದಾನೆ. ಶ್ರೀರಾಮನೂ ಇದ್ದಾನೆ. ಅದೇ ರೀತಿ ಒಬ್ಬನಿಗೆ ಅನೇಕ ಹೆಸರುಗಳೂ ಉಂಟು. ತ್ರೇತಾಯುಗದ ರಾಮ ಹುಟ್ಟಿದ ಕೂಡಲೇ "ಶ್ರೀರಾಮ". ಕೌಸಲ್ಯೆಯ ಮಡಿಲಲ್ಲಿದ್ದಾಗ "ಕೌಸಲ್ಯಾರಾಮ". ದಶರಥನ ತೊಡೆಯ ಮೇಲೆ ಏರಿದಾಗ "ದಶರಥರಾಮ". ಅಯೋಧ್ಯೆಯಲ್ಲಿ ಓಡಾಡುತ್ತಿದ್ದಾಗ "ಅಯೋಧ್ಯಾರಾಮ". ಸೀತೆಯನ್ನು ಮದುವೆಯಾದಾಗ "ಸೀತಾರಾಮ". (ಅವಳಿಗೂ ಅನೇಕ ಹೆಸರು! ಅದಕ್ಕೇ "ಜಾನಕಿರಾಮ" ಸೇರಿಕೊಂಡಿತು). ಬಿಲ್ಲು ಹಿಡಿದಾಗ "ಕೋದಂಡರಾಮ". ಕಡೆಗೆ ಪಟ್ಟಾಭಿಷಿಕ್ತನಾದಾಗ "ಪಟ್ಟಾಭಿರಾಮ". ಮುಂದೆ ರಾಜ್ಯ ಆಳುವಾಗ "ರಾಜಾರಾಮ". ಈ ರೀತಿ. ಒಂದು ಹೆಸರಿನ ಅನೇಕರು ಮತ್ತು ಅನೇಕ ಹೆಸರಿನ ಒಬ್ಬರು. ಹೀಗೂ ಉಂಟು. ಹಾಗೂ ಉಂಟು. 

ದಕ್ಷನ ಸಂದರ್ಭದಲ್ಲಿಯೂ ಇದೇ ರೀತಿ. ಇಬ್ಬರು ದಕ್ಷರಿದ್ದಾರೆ. ಭಾಗವತ ಹೇಳುವಂತೆ ಸ್ವಾಯಂಭುವ ಮನ್ವಂತರದ ದಕ್ಷ ಒಬ್ಬ. ಚಾಕ್ಷುಷ ಮನ್ವಂತರದ ದಕ್ಷ ಇನ್ನೊಬ್ಬ. ಈ ಚಾಕ್ಷುಷ ಮನ್ವಂತರದ ದಕ್ಷ ಪ್ರಜಾಪತಿಗೆ ಅನೇಕ ಹೆಣ್ಣುಮಕ್ಕಳು. ಅವರಲ್ಲಿ ಒಟ್ಟಿಗೆ ಇಪ್ಪತ್ತೇಳು ಹೆಣ್ಣುಮಕ್ಕಳನ್ನು (ಬೇಕಿದ್ದರೆ ಒಂದು ಬ್ಯಾಚ್ ಅಂದುಕೊಳ್ಳಬಹುದು) ಚಂದ್ರನಿಗೆ ಮದುವೆ ಮಾಡಿಕೊಟ್ಟ. ಅಶ್ವಿನಿ, ಭರಣಿ, ಕೃತ್ತಿಕಾ, ಮುಂತಾಗಿ ಅವರ ಹೆಸರುಗಳು. ಕಡೆಯವಳು ರೇವತಿ. (ರೈವತರಾಜನ ಮಗಳು, ಬಲರಾಮನ ಹೆಂಡತಿ ರೇವತಿ ಬೇರೆ). ಇಪ್ಪತ್ತೇಳು ಅಕ್ಕ-ತಂಗಿಯರ ಮಧ್ಯದಲ್ಲಿ ರೋಹಿಣಿ ಎನ್ನುವ ಹೆಸರಿನ ಒಬ್ಬಳು. ಹೀಗೆ. 

*****

ನಾವು ಶಾಲಾ-ಕಾಲೇಜುಗಳಲ್ಲಿ ಓದುತ್ತಿದ್ದಾಗ ವರುಷಕ್ಕೊಮ್ಮೆ "ವಿಜ್ಞಾನದ ವಸ್ತುಪ್ರದರ್ಶನ" ನಡೆಸುತ್ತಿದ್ದರು. ಈಗ ಇನ್ನೂ ಚೆನ್ನಾಗಿ ನಡೆಸುತ್ತಿರಬಹುದು. ಅದರಲ್ಲಿ ಖಗೋಳದ ಒಂದು ಮಾದರಿ ಇಟ್ಟಿರುತ್ತಿದ್ದರು. ಗ್ರಹಗಳು ತಮ್ಮ ಅಕ್ಷದ ಮೇಲೆ ಸುತ್ತುತ್ತಾ ಸುತ್ತುತ್ತಾ ಹಾಗೆಯೇ ಸೂರ್ಯನ ಸುತ್ತ ಕೂಡ ಸುತ್ತುತ್ತಿದ್ದವು. ಭೂಮಿ ಹೀಗೆ ತನ್ನ ಅಕ್ಷದ ಸುತ್ತ ಸುತ್ತುವುದರಿಂದ ಹಗಲು-ರಾತ್ರಿಗಳೂ, ಸೂರ್ಯನ ಸುತ್ತ ಸುತ್ತುವುದರಿಂದ ಋತುಗಳೂ ಆಗುವುವು ಎಂದು ತಿಳಿಹೇಳುತ್ತಿದ್ದರು. ಹೀಗೆ ಸುತ್ತುವುದರಿಂದ ಅವು 360 ಡಿಗ್ರಿ ಕ್ರಮಿಸುತ್ತವೆ. ಸರಳ ರೇಖೆಯಲ್ಲಿ ಅಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ 360 ಡಿಗ್ರಿ ವರ್ತುಲವನ್ನು ಮೂವತ್ತು ಡಿಗ್ರಿಗಳ 12 ಭಾಗ ಮಾಡಿ ಅವುಗಳನ್ನು "ಹನ್ನೆರಡು ರಾಶಿಗಳು" ಅಂದರು. ಆಯಾ ಭಾಗಗಳಲ್ಲಿರುವ ನಕ್ಷತ್ರಪುಂಜಗಳ ಹೆಸರಿನಲ್ಲಿ ಮೇಷ, ವೃಷಭ, ಮಿಥುನ ಮುಂತಾಗಿ ಹೆಸರಿಟ್ಟರು. ಹನ್ನೆರಡನೇಯದು ಮೀನ ರಾಶಿಯಾಯಿತು. 

ಸರಳ ರೇಖೆಗೆ (Straight Line) ಮೊದಲು ಮತ್ತು ಕೊನೆ ಉಂಟು. ವರ್ತುಲಕ್ಕೆ (Circle) ಕೊನೆಮೊದಲಿಲ್ಲ. ರಾಶಿಚಕ್ರ ನಾವು ನಮ್ಮ ಅನುಕೂಲಕ್ಕೆ ಮಾಡಿಕೊಂಡಿರುವ ವ್ಯವಸ್ಥೆ. ಸೂರ್ಯನು ಏಪ್ರಿಲ್ ಮಧ್ಯದಲ್ಲಿ ಮೇಷ ರಾಶಿಗೆ ಬರುತ್ತಾನೆ. ಆಗ ಸೌರಮಾನ ಲೆಕ್ಕದ  ಹೊಸ ವರ್ಷ. ಜ್ಯೋತಿಷ್ಯದಲ್ಲಿ ಸೂರ್ಯನು ಯಾವ ರಾಶಿಯಲ್ಲಿ ಇದ್ದಾನೋ, ಆ ತಿಂಗಳಿಗೆ ಅದೇ ಹೆಸರು. ಸೂರ್ಯನ ಗತಿಗೆ (ಅಥವಾ ಸೂರ್ಯನ ಸುತ್ತ ಸುತ್ತುವ ಗ್ರಹಗಳ ಗತಿಗೆ) ಕೊನೆ ಮೊದಲಿಲ್ಲ. ಮೀನ ರಾಶಿ ಕಳೆಯಿತು ಎಂದು ಸುಮ್ಮನೆ ಕೂಡುವಂತಿಲ್ಲ. ತಕ್ಷಣ ಮೇಷಕ್ಕೆ. ಹೀಗೆ ಚಲನೆ. ಅದಕ್ಕೆ ರಾಶಿಗಳನ್ನು ಎಣಿಸಿದಾಗ ಮೀನ ಆದನಂತರ ಮೇಷ ಬಂದೇಬಿಟ್ಟಿತು. ಈ ಕಾರಣದಿಂದ "ಮೀನ-ಮೇಷ ಎಣಿಸುವುದು" ಎನ್ನುವ ಗಾದೆ ಬಂದಿತು. "ಎಣಿಸುವುದರಲ್ಲೇ ಕಾಲ ಕಳೆಯಬೇಡ. ಬೇಗ ಕೆಲಸ ಶುರು ಮಾಡು" ಎನ್ನುವ ಅರ್ಥದಲ್ಲಿ. 

ಭೂಮಿ ಸೂರ್ಯನ ಸುತ್ತ ಒಂದು ಸುತ್ತು ಬರುವುದಕ್ಕೆ (360 ಡಿಗ್ರಿ) ಹನ್ನೆರಡು ತಿಂಗಳು ಕಾಲ. ಅಂದರೆ 30 ಡಿಗ್ರಿಗೆ ಒಂದು ತಿಂಗಳು. ಆದರೆ ಚಂದ್ರ ಇಪ್ಪತ್ತೆಂಟು ದಿನಕ್ಕೆ ಒಂದು ಸುತ್ತು ಬರುತ್ತಾನೆ. ಆದ್ದರಿಂದ ಚಾಂದ್ರಮಾನ ತಿಂಗಳಿಗೆ ದಿನ ಕಡಿಮೆಯಾಯಿತು. ಈ ತಿಂಗಳುಗಳಿಗೆ ಚೈತ್ರ, ವೈಶಾಖ, ಮುಂತಾಗಿ ಹೆಸರು. ಈ ಎರಡು ರೀತಿಯ ವರ್ಷಗಳಿಗೆ ವ್ಯತ್ಯಾಸ ಸರಿ ಮಾಡಿ ಸಮಸ್ಥಿತಿಗೆ ತರಲು ಚಂದ್ರಮಾನದಲ್ಲಿ ಆಗಾಗ "ಅಧಿಕ ಮಾಸ" ಬರುತ್ತದೆ. 33 ತಿಂಗಳಿಗೆ ಒಂದು ಅಧಿಕ ಮಾಸ. ಈಗ ತಾನೇ "ಅಧಿಕ ಜ್ಯೇಷ್ಠ ಮಾಸ" ಮುಗಿಯಿತು. 

*****

ಚಂದ್ರನು ಇಪ್ಪತ್ತೇಳು ಅಕ್ಕ-ತಂಗಿಯರನ್ನು ಒಟ್ಟಿಗೆ ಮದುವೆಯೇನೋ ಆದನು. ಆದರೆ ಅವನಿಗೆ ಎಲ್ಲರಿಗಿಂತ ರೋಹಿಣಿ ಮೇಲೆ ಅಧಿಕ ಮನಸ್ಸು. ಅವಳ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದನಂತೆ. ಇದರಿಂದ ಅಸೂಯೆಗೊಂಡ ಮಿಕ್ಕ ಇಪ್ಪತ್ತಾರು ಸೋದರಿಯರು ಅಪ್ಪನಾದ ದಕ್ಷನ ಬಳಿ ದೂರು ಹೇಳಿದರು. ದಕ್ಷ ಚಂದ್ರನಿಗೆ ಕ್ಷಯಿಸಿಹೋಗು ಎಂದು ಶಾಪ ಕೊಟ್ಟ. ಕೊನೆಗೆ ಕುಟುಂಬದ ಎಲ್ಲರೂ ಸೇರಿ ನ್ಯಾಯ ತೀರ್ಮಾನ ಆಯಿತು. ಚಂದ್ರನಿಗೆ ಭಾಗಶಃ ವಿಶಾಪ ಆಯಿತು. ನಮ್ಮ ಕೋರ್ಟುಗಳು "Partial Relief" ಕೊಡುವಂತೆ. ಹದಿನೈದು ದಿನ ಕುಗ್ಗುವುದು. ಮತ್ತೆ ಹದಿನೈದು ದಿನ ಹಿಗ್ಗುವುದು. ಹೀಗೆ ಕೃಷ್ಣಪಕ್ಷ-ಶುಕ್ಲಪಕ್ಷ ಆಯಿತು. ಮತ್ತೆ ಅಕ್ಕ-ತಂಗಿಯರ ಗತಿ? ಪ್ರತಿಯೊಬ್ಬರ ಮನೆಯಲ್ಲಿ ಒಂದೊಂದು ದಿನ ಇರುವುದು ಎಂದು ತೀರ್ಮಾನ ಆಯಿತು. ಒಂದು ಸುತ್ತು ಎಲ್ಲರ ಮನೆ ವಾಸ ಮುಗಿಸುವ ಹೊತ್ತಿಗೆ ತಿಂಗಳೂ ಕಳೆಯಿತು. ಮತ್ತೆ ಮುಂದಿನ ಪರ್ಯಾಯ. ಹೀಗೆ ನಡೆಯುತ್ತಿದೆ. ಚಂದ್ರನು ತನ್ನ ವರ್ತುಲದ ದಾರಿಯಲ್ಲಿ ಉದ್ದಕ್ಕೂ ಇಪ್ಪತ್ತೇಳು ಮನೆಗಳು ಕಟ್ಟಿಕೊಟ್ಟು ಈ ಹೆಂಡತಿಯರ ಜೊತೆ ಇರುತ್ತಾನಂತೆ. 

ಈ ಸೂರ್ಯನ ಹನ್ನೆರಡು ಮನೆಗಳಿಗೂ ಚಂದ್ರನ ಇಪ್ಪತ್ತೇಳು ಮನೆಗಳಿಗೂ ತಾಳೆ ಹಾಕುವುದು ಹೇಗೆ? ಚಂದ್ರನ ಇಪ್ಪತ್ತೇಳು ಮನೆಗಳನ್ನು ಹನ್ನೆರಡರಿಂದ ಭಾಗಿಸಿದರೆ (2.25) ಎರಡೂಕಾಲು ಭಾಗ ಬಂತು. ಹೀಗಾಗಿ ಅಶ್ವಿನಿ, ಭರಣಿಯರಿಗೆ ಮೇಷದಲ್ಲಿ ಮನೆ ಸಿಕ್ಕಿತು. ಕೃತ್ತಿಕೆಗೆ ಕಾಲುಭಾಗ ಮೇಷದಲ್ಲಿ ಮತ್ತು ಮೂರು ಭಾಗ ವೃಷಭದಲ್ಲಿ. ರೋಹಿಣಿಗೆ ಪೂರ್ತಿ ವೃಷಭದಲ್ಲಿ. ಮೃಗಶಿರಳಿಗೆ ಅರ್ಧ ವೃಷಭದಲ್ಲಿ ಮತ್ತು ಇನ್ನರ್ಧ ಮಿಥುನದಲ್ಲಿ.  ಹೀಗೆ ನಡೆಯುತ್ತಾ ಹೋಗುತ್ತದೆ. ಒಂದು ನಕ್ಷತ್ರಕ್ಕೆ ನಾಲ್ಕು ಭಾಗ. ಇಪ್ಪತ್ತೇಳು ನಕ್ಷತ್ರಕ್ಕೆ ಒಂದು ನೂರ ಎಂಟು ಭಾಗ. ಹೀಗೆ ಹಂಚಿದ್ದರಿಂದ ಪ್ರತಿಭಾಗವೂ ಒಂದು "ಪಾದ" (Quarter) ಎಂದಾಯಿತು. ಜ್ಯೋತಿಷ್ಯ ಬಲ್ಲವರಿಗೆ ಸೂತ್ರಗಳು (formula) ಗೊತ್ತು. "ಕೃತ್ತಿಕಾ: ಪ್ರಥಮಂ ಮೇಷ:" ಅನ್ನುತ್ತಾರೆ. ಅಂದರೆ ಕೃತ್ತಿಕಾ ನಕ್ಷತ್ರ ಮೊದಲನೇ ಪಾದದವರೆಗೆ ಮೇಷ ರಾಶಿ ಎಂದು. ಹೀಗೆಯೇ ಬೇರೆ ಮನೆಗಳಿಗೂ ಲೆಕ್ಕ. ಜ್ಯೋತಿಷ್ಯವೆಂದರೆ ಬಹುಪಾಲು ಗಣಿತವೇ. Mathematics is the language of Science" ಎಂದು ಹೇಳುತ್ತಾರೆ ತಿಳಿದವರು. ಜ್ಯೋತಿಷ್ಯವೂ ಹಾಗೆಯೇ.

ಹೀಗೆ ಲೆಕ್ಕ ಮಾಡಿದ ಮಾತ್ರಕ್ಕೇ ಅವರ ಮನೆಗಳು ಚೂರು ಚೂರಾಗಿವೆ ಎಂದು ಅರ್ಥವಲ್ಲ. ಅಮೇರಿಕ ಮತ್ತು ಕೆನಡಾ ದೇಶಗಳ ನಡುವೆ ಗಡಿಯಾಗಿ ಹರಿಯುವ ವಿಶಾಲವಾದ ಸೈನ್ಟ್ ಲಾರೆನ್ಸ್ ನದಿಯ ಮಧ್ಯ ಜಲರಾಶಿಯ ಪ್ರದೇಶಗಳಲ್ಲಿ ಬಹಳ ಸುಂದರ, ಅತಿ ಪ್ರೇಕ್ಷಣೀಯ "Thousand Islands" ಅನ್ನುವ ಹೆಸರಿನ ಪ್ರದೇಶವಿದೆ. ಒಟ್ಟು ಸುಮಾರು ಒಂದು ಸಾವಿರದ ಎಂಟು ನೂರು ದ್ವೀಪಗಳು. ಇವುಗಳಲ್ಲಿ ಕೆಲವು ಯು.ಎಸ.ಏ. ದೇಶಕ್ಕೂ, ಮತ್ತೆ ಕೆಲವು ಕೆನಡಾ ದೇಶಕ್ಕೂ ಸೇರುತ್ತವೆ. ಒಂದು ಮನೆಯ ಬಹುಭಾಗ ಕೆನಡಾದಲ್ಲಿ ಇದ್ದರೆ ಸ್ವಲ್ಪ ಭಾಗ ಇನ್ನೊಂದು ದೇಶದಲ್ಲಿ! ಅಡಿಗೆ, ಊಟ, ಟಿ.ವಿ. ನೋಡುವುದು ಕೆನಡಾದಲ್ಲಿ. ಮಲಗುವುದು ಯು.ಎಸ.ಎ. ದೇಶದಲ್ಲಿ. ಮನೆಯ ಮಧ್ಯೆ ಗಡಿ ರೇಖೆ ಹಾದು ಹೋಗುತ್ತದೆ. 

ಒಂದು ಮನೆಯಂತೂ ಎರಡು ಪುಟ್ಟ ದ್ವೀಪಗಳಲ್ಲಿ ಕಟ್ಟಿದ್ದಾರೆ. ಮನೆಯೆಲ್ಲ ಒಂದು ದೊಡ್ಡ ದ್ವೀಪದಲ್ಲಿ (ಎರಡರಲ್ಲಿ ದೊಡ್ಡದು ಅಷ್ಟೇ. ಅದೂ ಪುಟ್ಟ ದ್ವೀಪವೇ!) ಇದೆ. ದೋಣಿ ನಿಲ್ಲಿಸುವ ಗ್ಯಾರೇಜು ಮಾತ್ರ ಇನ್ನೊಂದು ದೇಶದಲ್ಲಿ. ಎರಡರ ಮಧ್ಯೆ ಒಂದು ಸಣ್ಣ ಮರದ ಸೇತುವೆ ಇದೆ. ಪ್ರಾರಂಭದಲ್ಲಿ ಮೇಲೆ ಕೊಟ್ಟಿರುವ ದೊಡ್ಡ ಚಿತ್ರದಲ್ಲಿ ಅದನ್ನು ನೋಡಬಹುದು. (ಚಿತ್ರವನ್ನು ಇನ್ನಷ್ಟು ದೊಡ್ಡದು ಮಾಡಿ ನೋಡಿದರೆ ಸೇತುವೆಯ ಒಂದು ಕಡೆ ಕೆನಡಾ ದೇಶದ ಬಾವುಟ ಮತ್ತು ಇನ್ನೊಂದು ಕಡೆ ಯುಎಸ್ಏ ಬಾವುಟ ನೋಡಬಹುದು). ಇದು ಪ್ರಪಂಚದಲ್ಲಿ ಎರಡು ದೇಶಗಳ ನಡುವೆ ಇರುವ ಅತಿ ಚಿಕ್ಕ ಸೇತುವೆ! "Just Room Enough" ಅನ್ನುವ ಒಂದು ದ್ವೀಪದ ಮನೆ ಪಕ್ಕದ ಚಿತ್ರದಲ್ಲಿ ಕೊಟ್ಟಿದೆ. ಅಲ್ಲಿ ಮನೆಯಿಂದ ಹೊರಗಡೆ ಕಾಲಿಟ್ಟರೆ ನೀರು. ಕಾರಿನಲ್ಲಿ ಓಡಾಟವಿಲ್ಲ. ಎಲ್ಲಾ ದೋಣಿಗಳ (ಬೋಟ್) ಮೇಲೆ ಅವಲಂಬನೆ.  ಈ ರೀತಿ! ಆದರೆ ಜನ ಸಂತೋಷವಾಗಿಯೇ ಇದ್ದಾರೆ. ಈ ಮನೆಗಳೆಲ್ಲಾ ಮಿಲಿಯನ್ ಡಾಲರ್ ಮನೆಗಳು. 

ಚಂದ್ರನ ಕೆಲವು ಹೆಂಡತಿಯರ ಮನೆಗಳೂ ಹೀಗೆಯೇ ಎಂದು ತಿಳಿಯಬೇಕು. 

ಪಂಚಾಂಗಗಳಲ್ಲಿ ಪ್ರತಿದಿನ ಗ್ರಹಗಳು ಯಾವ ಸ್ಥಳದಲ್ಲಿ ಇವೆ ಎಂದು ತೋರಿಸಿರುತ್ತಾರೆ. ಒಂದು ವ್ಯಕ್ತಿ ಹುಟ್ಟಿದ ದಿನ, ಸಮಯದಲ್ಲಿ ಚಂದ್ರ ಇರುವ ನಕ್ಷತ್ರ, ಅದರ ಪಾದ ನೋಡುತ್ತಾರೆ. ಅದೇ ಜನ್ಮ (ಹುಟ್ಟಿದ) ನಕ್ಷತ್ರ. ಉದಾಹರಣೆಗೆ ಅನುರಾಧ ಎರಡನೇ ಪಾದ ಅಂದಂತೆ. ಅದಕ್ಕೆ ಸರಿಯಾದ ರಾಶಿಯೇ  ಜನ್ಮ ರಾಶಿ. ಈ ರೀತಿ ಲೆಕ್ಕ ಹಾಕಿ ಕುಂಡಲಿ ಬರೆಯುತ್ತಾರೆ. ಚಂದ್ರನಿಗೆ ಅಷ್ಟು ಮಹತ್ವ.

ಈ ಲೆಕ್ಕ ಮೊದಲಿಗೆ ಸ್ವಲ್ಪ ಕಷ್ಟ. ಗೊತ್ತಾಗದಿದ್ದರೆ ನಷ್ಟವಿಲ್ಲ. ಪಂಚಾಂಗದಲ್ಲಿ ಸುಲಭವಾಗಿ ನೋಡಬಹುದು. ಇಲ್ಲದಿದ್ದರೆ ಜ್ಯೋತಿಷ್ಕರನ್ನು ಕೇಳಬಹುದು. ಜ್ಯೋತಿಷ್ಯ ನಂಬದಿದ್ದರೆ ಎರಡೂ ಬೇಕಿಲ್ಲದೆ ನಿರಾಳವಾಗಿ ಇರಬಹುದು. 
*****

ಕಳೆದ ತಿಂಗಳು "ಅನುಕೂಲ ದಾಂಪತ್ಯ" ಅನ್ನುವ ಒಂದು ಸಂಚಿಕೆಯಲ್ಲಿ ಗಂಡ-ಹೆಂಡಿರ ಸಹಜೀವನದ ಬಗ್ಗೆ ವಿಚಾರ ಮಾಡುತ್ತಾ "ಅನುರೂಪ ದಾಂಪತ್ಯ" ಮತ್ತು "ಅನುಕೂಲ ದಾಂಪತ್ಯ" ಅನ್ನುವ ಬಗ್ಗೆ ಸ್ವಲ್ಪ ಯೋಚಿಸಿದ್ದೆವು. "ಅನುಕೂಲ ದಾಂಪತ್ಯ" ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಇವೆರಡು ರೀತಿಯ (ಅನುರೂಪ ಮತ್ತು ಅನುಕೂಲ) ದಾಂಪತ್ಯಗಳ ಜೊತೆಯಲ್ಲಿ "ವಿಷಮ ದಾಂಪತ್ಯ" ಅಂತ ಕೂಡ ಒಂದು ಉಂಟು. ಇದು ಕಷ್ಟದ ದಾಂಪತ್ಯ. ಹೆಣಗಾಡಿಕೊಂಡು ಜೊತೆಯಲ್ಲಿ ಬದುಕುವುದು! "ನವಜೀವನ" ಕನ್ನಡ ಚಲನಚಿತ್ರದ "ಹೆಣಗಾಟದೀ ಜನ್ಮ ಏಕೆ ಕೊಟ್ಟನೋ ಆ ಬ್ರಹ್ಮ" ಅನ್ನುವ ಹಾಡಿನಂತೆ. (ಬಾಮಾ-ಭಾಮಾ, ನಾನರಿಯೆ ಮನದ ಮರ್ಮ...... ಅನ್ನುವ ಹಾಡು).

ಅರವತ್ತು-ಎಪ್ಪತ್ತು ವರುಷಗಳ ಹಿಂದೆ ವಿವಾಹ ಮಾಡುವ ಮುನ್ನ ವಧು ಮತ್ತು ವರರ ಜಾತಕ ಪರಿಶೀಲಿಸಿ ತಾಳೆ ಹಾಕುತ್ತಿದ್ದರು. ಕೆಲವು "ಕೂಟ" ನೋಡುತ್ತಿದ್ದರು. ರಾಶಿ ಕೂಟ, ಗ್ರಹಮೈತ್ರ ಕೂಟ, ರಜ್ಜು ಕೂಟ, ಯೋನಿ ಕೂಟ, ಹೀಗೆ ಹೆಸರುಗಳು. ಪರೀಕ್ಷೆಯಲ್ಲಿ ಅಂಕಗಳನ್ನು ಕೊಟ್ಟಂತೆ ಲೆಕ್ಕ ಮಾಡಿ ಸರಿಹೊಂದಿದರೆ ಮದುವೆಗೆ ಒಪ್ಪಿಗೆ ಕೊಡುತ್ತಿದ್ದರು. ಎಲ್ಲಾ ಕೂಟಗಳು "ಅತ್ಯುತ್ತಮ" ಆಗಿದ್ದರೆ ಗರಿಷ್ಟ (Maximum) 36 ಮಾರ್ಕ್ಸ್. ಕನಿಷ್ಠ (Minimum) 18 ಬರಬೇಕು. ಇಲ್ಲದಿದ್ದರೆ ಒಪ್ಪುತ್ತಿರಲಿಲ್ಲ. ಕೆಲವರು ಮೊದಲು ರಾಶಿಕೂಟ ಮತ್ತು ಗ್ರಹಮೈತ್ರ ಕೂಟಗಳನ್ನು ನೋಡುತ್ತಿದ್ದರು. ಇವು ಕೂಡಲಿಲ್ಲ ಅಂದರೆ ಹದಿನೆಂಟಕ್ಕಿಂತಲೂ ಹೆಚ್ಚು ನಂಬರು ಬಂದರೂ ಮದುವೆಯಿಲ್ಲ. ಪರೀಕ್ಷೆಯಲ್ಲಿ compulsory paper ಇದ್ದಂತೆ. ಬೇರೆಲ್ಲ ಪೇಪರ್ ಮೊದಲ ದರ್ಜೆಯಲ್ಲಿ ಪಾಸಾದರೂ ಇದು ಆಗಲಿಲ್ಲ ಅಂದರೆ ಫೇಲ್ ಅಂದಂತೆ. ಅನೇಕರಿಗೆ ಹುಡುಗ ಅಥವಾ ಹುಡುಗಿ ಒಪ್ಪಿಗೆಯಾಗದಿದ್ದರೆ "ಬೇಡ" ಅನ್ನುವುದಕ್ಕೆ "ಜಾತಕ ಹೊಂದಲಿಲ್ಲ" ಅನ್ನುವುದು ಸುಲಭ ಕಾರಣ ಆಗುತ್ತಿತ್ತು. 

ಕೆಲವರು "ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು" ಅನ್ನುವ ಗಾದೆಯನ್ನು ಮನೆದೇವರಂತೆ ಪ್ರೀತಿಸುತ್ತಿದ್ದರು. ಸುಳ್ಳು ಜಾತಕ ಬರೆಸುವುದೂ ನಡೆಯುತ್ತಿತ್ತು. ಈ ಕಾರಣಕ್ಕೆ ಕೆಲವರು ಉಪಾಯವಾಗಿ ಹುಟ್ಟಿದ ದಿನ ಅಕ್ಕ-ಪಕ್ಕದ ಮನೆಯವರಿಂದ ತಿಳಿದುಕೊಂಡು ತಾವೇ ಜಾತಕ ಬರೆಸಿ ತಾಳೆ ನೋಡುತ್ತಿದ್ದರು. ರಾಜಕುಮಾರ್-ಮಾಧವಿ-ಗೀತಾ ನಟಿಸಿರುವ ಕನ್ನಡ ಚಲನಚಿತ್ರ "ಶ್ರುತಿ ಸೇರಿದಾಗ" ಹೀಗೆ ಜಾತಕದ ಕಾರಣ ಮದುವೆಯೊಂದು ನಿಂತು ಹೋದ ಕಥೆಯದ್ದು. 

ಒಂದು ಹುಡುಗ ಇದ್ದಾನೆ. ಅವನ ಜಾತಕದಲ್ಲಿ ಚಂದ್ರ ಮೇಷ ರಾಶಿಯಲ್ಲಿದ್ದಾನೆ. ಮದುವೆಗೆ ಒಂದು ಹುಡುಗಿಯ ಜಾತಕ ಬಂದಿದೆ. ಅವಳ ಜಾತಕದಲ್ಲಿ ಚಂದ್ರ ಕನ್ಯಾ ರಾಶಿಯಲ್ಲಿದ್ದಾನೆ. ಲೆಕ್ಕ ಮಾಡಿದರೆ ವರನ ಕಡೆಯಿಂದ ವಧುವಿನದು ಆರನೆಯ ಮನೆ. ವಧುವಿನ ಕಡೆಯಿಂದ ವರನದು ಎಂಟನೆಯ ಮನೆ. ಇದು ಆರು-ಎಂಟರ ನಂಟು. ಸಂಸ್ಕೃತದಲ್ಲಿ ಇದನ್ನು "ಷಷ್ಟಾಷ್ಟಕ" ಅನ್ನುತ್ತಾರೆ. ಇಂತಹವರ ದಾಂಪತ್ಯ ಹೇಗೆ? 

ವಿಷಮ ದಾಂಪತ್ಯಕ್ಕೆ ಅನೇಕ ಕಾರಣಗಳು ಇರುತ್ತವೆ. ಈ ಆರು-ಎಂಟರ ನಂಟು ಒಂದು ಕಾರಣ ಅನ್ನುತ್ತಾರೆ ಜ್ಯೋತಿಷ್ಕರು. ಗಂಡ "ಆರು" ಎಂದರೆ ಹೆಂಡತಿ "ಇಲ್ಲ, ಎಂಟು" ಅನ್ನುವಂತೆ. "ಹೋಗಲಿ, ಏಳಕ್ಕೆ ಒಪ್ಪಿಕೊಳ್ಳೋಣ" ಅನ್ನಲು ಇಬ್ಬರೂ ತಯಾರಿಲ್ಲ. ಇಂತಹ ದಂಪತಿಗಳಲ್ಲಿ ತಾಳ-ಮೇಳ ಇರುವುದಿಲ್ಲ ಎಂದು ಕೆಲವರ ನಂಬಿಕೆ. "ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು" ಅನ್ನುವ ಗಾದೆ ಇಂತಹ ಜೋಡಿಗೇ ಹೇಳಿ ಮಾಡಿಸಿದ್ದು. ಜಾತಕ ನಂಬುವವರು ಈ ರೀತಿಯ ಮದುವೆಗಳನ್ನು ಒಪ್ಪುವುದಿಲ್ಲ. ಇದು ಅವರವರ ಜೀವನದ ದೃಷ್ಟಿಕೋನಕ್ಕೆ, ನಂಬಿಕೆಗಳಿಗೆ ಸಂಬಂಧಿಸಿದ್ದು. 

*****

ಮುಂದಿನ ಸಂಚಿಕೆಯಲ್ಲಿ ಇದರ ಬಗ್ಗೆ ಇನ್ನಷ್ಟು ವಿವರಣೆ ನೋಡೋಣ. ಹಾಗೆಯೇ "ಸಾವಿರ ದ್ವೀಪಗಳು" (Thousand Islands) ಬಗೆಗೂ ಬೇರೊಂದು ಸಂಚಿಕೆಯಲ್ಲಿ ತಿಳಿಯೋಣ.

Tuesday, March 11, 2025

ದ್ವಿತೀಯ ವಿವಾಹ ಮತ್ತು ಮರು ಮದುವೆಗಳು


ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಲು ಮಳೆಯ ಬರುವಿಕೆಯನ್ನು ಖಚಿತವಾಗಿ ತಿಳಿಯಲು ವಾದ್ಯಾರ್ ಬಳಿ ಬಂದ ರೈತ ಪ್ರತಿನಿಧಿ ಮತ್ತು ವಾದ್ಯಾರ್ ನಡುವೆ ನಡೆದ ಸಂಭಾಷಣೆ ಮತ್ತು ಅದರಿಂದ ನಾವು ತಿಳಿಯಬೇಕಾದ ಪಾಠಗಳನ್ನೊಳಗೊಂಡ "ಶ್ರದ್ದೆ ಮತ್ತು ನಂಬಿಕೆ" ಎನ್ನುವ ಶೀರ್ಷಿಕೆಯ ಸಂಚಿಕೆಯು ಓದುಗರ ಬಹಳ ಆಸಕ್ತಿಯ ಪ್ರತಿಕ್ರಿಯೆಗಳನ್ನು ತಂದಿತು. (ಇದನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ.)

ಆ ಸಂಚಿಕೆಯ ಪ್ರತಿಕ್ರಿಯೆಗಳಲ್ಲಿ "ಜನಿವಾರ ಮತ್ತು ನೀರು ಸೇದುವ ಹಗ್ಗ" ಇವುಗಳ ಹೋಲಿಕೆ ಬಗ್ಗೆ ಹೆಚ್ಚಿನ ವಿವರಣೆ ಕೊಟ್ಟ "ಬ್ರಹ್ಮಚಾರಿ, ಗೃಹಸ್ಥ ಮತ್ತು ಸನ್ಯಾಸಿ" ಎಂಬ ಶೀರ್ಷಿಕೆಯ ಸಂಚಿಕೆ ಮತ್ತೂ ಹೆಚ್ಚಿನ ಪ್ರತಿಕ್ರಿಯೆಗಳನ್ನು ತಂದಿತು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.) 

ಎರಡನೇ ಮದುವೆಯಲ್ಲಿ "ಕಾಶಿಯಾತ್ರೆ" ಇರುವುದಿಲ್ಲ ಎನ್ನುವ ವಿಷಯದಲ್ಲಿ ಅನೇಕ ಓದುಗರಿಂದ ಪ್ರಶ್ನೆಗಳು ಮತ್ತು ಹೆಚ್ಚಿನ ವಿವರಣೆಗೆ ಬೇಡಿಕೆ ಬಂದಿದೆ. ಈ ಹಿನ್ನೆಲಿಯಲ್ಲಿ ಎರಡನೆಯ ವಿವಾಹ, ಮರು ಮದುವೆಗಳು ಮತ್ತು ಇವಕ್ಕೆ ಸಂಬಂಧಿಸಿದಂತಹ ವಿಷಯಗಳ ಬಗ್ಗೆ ಸ್ವಲ್ಪ ಚರ್ಚೆ ಮಾಡೋಣ. 

*****

ಎರಡನೇ ವಿವಾಹ ಮತ್ತು ಮರು ಮದುವೆಗಳ ಕುರಿತು ವಿಚಾರ ಮಾಡುವ ಮೊದಲು "ವಿವಾಹದ ಅವಶ್ಯಕತೆ" ಬಗ್ಗೆ ಮೊದಲು ಯೋಚಿಸಬೇಕು. ವಿವಾಹ ಏಕೆ? ಈ ವ್ಯವಸ್ಥೆ ಇಲ್ಲದಿದ್ದರೆ ಸಮಾಜದಲ್ಲಿ ಹೇಗೆ ಅವ್ಯವಸ್ಥೆ ಇರುತ್ತಿತ್ತು ಎನ್ನುವುದು ಬಹಳ ಕುತೂಹಲಕಾರಿ ವಿಷಯ. ವಿವಾಹ ಒಂದು ಸಾಮಾಜಿಕ ವ್ಯವಸ್ಥೆಯ ಕೂಸು. ಸೃಷ್ಟಿಯ ಒಡಲಿನಲ್ಲಿ ಗಂಡು ಹೆಣ್ಣು ಎಂಬ ಭೇದ ಹುಟ್ಟಿತು. ಏಕಕೋಶ ಜೀವಿಗಳಲ್ಲಿ (ಅಮೀಬಾ ಮುಂತಾದುವು) ಕೋಶಗಳೇ ವಿಭಜನೆಗೊಂಡು ಸೃಷ್ಟಿಯ ಸರಪಳಿ ಮುಂದುವರೆಯುತ್ತಿದೆ. ಪ್ರಾಣಿಗಳಲ್ಲಿ ವಿವಾಹ ಅನ್ನುವ ವ್ಯವಸ್ಥೆ ಇಲ್ಲ. ಸಂತಾನ ಉತ್ಪತ್ತಿ ಕಾಲದಲ್ಲಿ ಗಂಡು ಪ್ರಾಣಿ ಮತ್ತು ಹೆಣ್ಣು ಪ್ರಾಣಿ ಕೂಡಿಕೊಂಡು ಸೃಷ್ಟಿ ಮುಂದುವರೆಯುತ್ತದೆ. ಹುಟ್ಟಿದ ಮರಿಗಳು ತಕ್ಷಣ ತಮ್ಮ ತಮ್ಮ ಪಾಡಿಗೆ ಜೀವನ ನಡೆಸಲು ಶುರುಮಾಡುತ್ತವೆ. ಹಸು, ಕುದುರೆ, ಆನೆ ಮೊದಲಾದ ಪ್ರಾಣಿಗಳ ಕರುಗಳೂ ಹುಟ್ಟಿದ ಕೆಲವೇ ನಿಮಿಷಗಳಲ್ಲಿ ತಮ್ಮ ಕಾಲ ಮೇಲೆ ತಾವು ನಿಲ್ಲುತ್ತವೆ. ಮುಂದೆ ಸ್ವಲ್ಪ ದಿನ ತಾಯಿಯ ಜೊತೆ ಮರಿಗಳಿದ್ದರೂ ಮನುಷ್ಯರಂತೆ ಹುಟ್ಟಿದ ಮಕ್ಕಳ ಲಾಲನೆ-ಪಾಲನೆ ಅನೇಕ ವರುಷ ನಡೆಯಬೇಕಾದ್ದಿಲ್ಲ. ಪ್ರಾಣಿಗಳಲ್ಲಿ ತಂದೆಯ ಪಾತ್ರ ಮಹತ್ವದ್ದಿಲ್ಲ. 

ಮನುಷ್ಯರಲ್ಲಿ ಹಾಗಿಲ್ಲ. ಹುಟ್ಟಿದ ಕೂಸು ತನ್ನನ್ನು ತಾನು ನೋಡಿಕೊಳ್ಳಬೇಕಾದರೆ ಕೆಲವು ವರ್ಷಗಳೇ ಬೇಕು. ಮಾನಸಿಕ ಮತ್ತು ಬೌದ್ಧಿಕ ವಿಕಾಸ ಬೇರೆ ಪ್ರಾಣಿಗಳಿಗಿಂತ ಹೆಚ್ಚಾಗಿ ಆಗಬೇಕಾದುದರಿಂದ ತಾಯಿಯ ಪಾತ್ರ ದೊಡ್ಡದು. ಸಮಾಜ ವಿಕಸಿತವಾದಂತೆ ಒಂದು ಗಂಡು ಮತ್ತು ಒಂದು ಹೆಣ್ಣು ನಿರ್ದಿಷ್ಟವಾಗಿ ಜೊತೆಯಾಗಿ ಬದುಕುವ ವ್ಯವಸ್ಥೆ ಬಂತು. ಇಂತಹ ವ್ಯವಸ್ಥೆ ಇಲ್ಲದಿದ್ದರೆ ಸಾಮಾಜಿಕ ವಿಪ್ಲವ, ಅಶಾಂತಿ ಆಗುತ್ತದೆ. ಆದ್ದರಿಂದ ವಿವಾಹವು ಕ್ರಮವಾದ ಸಂತಾನೋತ್ಪತ್ತಿ ಮತ್ತು ನಿಖರವಾದ ಸಾಮಾಜಿಕ ವ್ಯವಸ್ಥೆಗೆ ಒಂದು ಭದ್ರವಾದ ತಳಹದಿ ಕೊಟ್ಟಿದೆ. ಬೇರೆ ಪ್ರಾಣಿಗಳಲ್ಲಿ ನನ್ನದು, ನನ್ನ ಅಸ್ತಿ, ನನ್ನ ಕುಟುಂಬ ಇತ್ಯಾದಿ ಸಂಬಂಧಗಳೇ ಇಲ್ಲ. ಮನುಷ್ಯರಲ್ಲಿ ಇವೆಲ್ಲವೂ ಇರುವುದರಿಂದ ಮೊದಲು ಸಮಾಜದಲ್ಲಿ ವ್ಯವಸ್ಥಿತವಾದ ಬದುಕು, ನಂತರ ಸಂತಾನೋತ್ಪತ್ತಿ, ಮುಂದೆ ಸಂಪತ್ತಿನ ಬೆಳವಣಿಗೆ-ರಕ್ಷಣೆ ಇತ್ಯಾದಿ ಕಾರಣಗಳಿಂದ ಮದುವೆ ಮುಖ್ಯವಾಗುತ್ತದೆ. ಸಮಾಜದಲ್ಲಿ ಕಾನೂನು-ಸುವ್ಯವಸ್ಥೆ ಕಟ್ಟುಪಾಡುಗಳು ಬೆಳೆದಂತೆ ಮತ್ತು ಬಿಗಿಯಾದಂತೆ ಮದುವೆಯು ಇನ್ನೂ ಪ್ರಾಮುಖ್ಯತೆ ಪಡೆಯುತ್ತಾ ಹೋಯಿತು. 

ಕಳೆದ ಒಂದೆರಡು ದಶಕಗಲ್ಲಿ ವಿವಾಹೇತರ ಸಹಜೀವನ (ಲಿವಿಂಗ್ ಟುಗೆದರ್) ಯುವಜನಾಂಗಕ್ಕೆ ಹೆಚ್ಚು ಹೆಚ್ಚು ಪ್ರಿಯವಾಗಿದೆ. ಡಜನ್ ಲೆಕ್ಕದಲ್ಲಿ ಮಕ್ಕಳು ಪಡೆಯುವುದು ಬದಲಾಗಿ, "ಎರಡು ಬೇಕು, ಮೂರು ಸಾಕು"  ದಾಟಿ, "ಆರತಿಗೊಂದು, ಕೀರುತಿಗೊಂದು" ಹಾದು, "ಒಂದೇ ಮುತ್ತು ಸಾಕು" ಕೂಡ ಬಿಟ್ಟು ಈಗ ಮಕ್ಕಳೇ ಬೇಡ ಅನ್ನುವ ಪರಿಸ್ಥಿತಿ ಬಂದಿದೆ. ಕೆಲವೆಡೆ ಇದನ್ನೂ ದಾಟಿ "ಮದುವೆಯೇ ಬೇಡ" ಅನ್ನುವುದೂ ಬಂದಿದೆ. ಇದು ಸರಿ ಅಥವಾ ತಪ್ಪಿನ ಪ್ರಶ್ನೆ ಅಲ್ಲ. "ಅವರವ ಜೀವನ ಅವರವರಿಗೆ" ಎಂದು ಸಮಾಜ ಒಪ್ಪಿಕೊಂಡ ಮೇಲೆ ಮುಗಿಯಿತು. ಸಂಬಂಧಪಟ್ಟವರ ಇಷ್ಟ. ಆದರೆ ಈ ವ್ಯವಸ್ಥೆಯಲ್ಲೂ ಹೊಸ ಹೊಸ ಸಮಸ್ಯೆಗಳು ಬರುತ್ತಿವೆ. ಹಿಂದೆ ಹಂತ ಹಂತವಾಗಿ ಆದಂತೆ ಈಗಲೂ ಒಂದು ಹೊಸ ಸಮತೋಲನ ಸ್ಥಿತಿಗೆ ಸಮಾಜ ಕಾಲಕ್ರಮದಲ್ಲಿ ತಲುಪುತ್ತದೆ. 

*****

ಬ್ರಹ್ಮಚರ್ಯ ಅಂದರೆ ಏನು? ಸಾಮಾನ್ಯವಾದ ಅಭಿಪ್ರಾಯದಲ್ಲಿರುವಂತೆ ಗಂಡು-ಹೆಣ್ಣು ಪರಸ್ಪರ ಕೊಡದೇ ಇರುವುದು ಮಾತ್ರವಲ್ಲ. ಪತಿ-ಪತ್ನಿಯರು ಅತಿಯಾದ ಭೋಗಲಾಲಸೆ ಇಲ್ಲದೆ ಕೇವಲ ಸತ್ಸಂತಾನ ಪಡೆಯುವ ಸಲುವಾಗಿ ದಾಂಪತ್ಯದಲ್ಲಿದ್ದರೆ ಅದೂ ಸಹ ಬ್ರಹ್ಮಚರ್ಯವೇ. ಇದು ಅನೇಕರಿಗೆ ಆಶ್ಚರ್ಯವಾಗುವ ಸಂದರ್ಭ ಉಂಟು. ಮಹಾಭಾರತದ ಪ್ರಸಂಗ ನೆನಪಿಸಿಕೊಳ್ಳಿ. ಅಶ್ವತ್ತಾಮರು ಬ್ರಹ್ಮಾಸ್ತ್ರ ಪ್ರಯೋಗಿಸಿದರು. ವಿಧಿಯಿಲ್ಲದೇ ಅರ್ಜುನನೂ ಬ್ರಹ್ಮಾಸ್ತ್ರ ಪ್ರಯೋಗಿಸಿದನು. ಎರಡು ಬ್ರಹ್ಮಾಸ್ತ್ರಗಳು ಸೃಷ್ಟಿಯನ್ನೇ ನುಂಗಲು ಹೋರಟವು. ಆಗ ಭಗವಾನ್ ವೇದವ್ಯಾಸರು ಮಧ್ಯೆ ನಿಂತು ಇಬ್ಬರಿಗೂ ಅಸ್ತ್ರವನ್ನು ಉಪಸಂಹಾರ (ಹಿಂಪಡೆಯುವುದು) ಮಾಡಲು ಹೇಳಿದರು. "ನಾನು ಬ್ರಹ್ಮಚರ್ಯ ಪಾಲನೆ ಮಾಡಿದ್ದರೆ ಅಸ್ತ್ರ ಶಾಂತವಾಗಲಿ" ಎಂದು ಹೇಳಿ ಅರ್ಜುನನು ಬ್ರಹ್ಮಾಸ್ತ್ರ ಹಿಂಪಡೆದನು. ಅಶ್ವತ್ತಾಮರಿಗೆ ಅಸ್ತ್ರ ಹಿಂಪಡೆಯಲು ಆಗಲಿಲ್ಲ. ವ್ಯಾಸರ ಆಣತಿಯಂತೆ ಆ ಅಸ್ತ್ರವನ್ನೂ ಅರ್ಜುನನೇ ಹಿಂಪಡೆದನು!

ದ್ರೌಪದಿಯಲ್ಲದೆ ಸುಭದ್ರೆ, ಉಲೂಪಿ, ಚಿತ್ರಾಂಗದೆ ಮುಂತಾದ ಪತ್ನಿಯರಿದ್ದರೂ ಅರ್ಜುನನು ಬ್ರಹ್ಮಚಾರಿ ಎನಿಸಿದನು. ವಿವಾಹವೇ ಇಲ್ಲದ ಅಶ್ವತ್ತಾಮಚಾರ್ಯರು "ದುರ್ಯೋಧನನ ಪತ್ನಿಯಲ್ಲಿ ಮಗನನ್ನು ಪಡೆದು ರಾಜ್ಯಕ್ಕೆ ವಾರಸುದಾರನನ್ನು ಕೊಡುತ್ತೇನೆ" ಎಂದು ದುರ್ಯೋಧನನಿಗೆ ಮಾತು ಕೊಟ್ಟು ಬ್ರಹ್ಮಚರ್ಯ ಕಳೆದುಕೊಂಡರು. ಊರ್ವಶಿಯಂತಹ ಅಪ್ಸರೆ ಎದುರು ನಿಂತರೂ ಅವಳಲ್ಲಿ ತಾಯಿಯನ್ನು ಕಂಡು ಅರ್ಜುನನು ಬ್ರಹ್ಮಚರ್ಯ ಉಳಿಸಿಕೊಂಡನು. ಹೀಗೆ ಬ್ರಹ್ಮಚರ್ಯದ ಅರ್ಥ ಬಹು ವಿಶಾಲವಾದದ್ದು. 

*****

ಮದುವೆಯಾದರೂ ಸತಿ-ಪತಿಯರು ಇಬ್ಬರು ವ್ಯಕ್ತಿಗಳೇ. ಅವರವರ ಆಯಸ್ಸು ಅವರವರಿಗೆ. ಒಬ್ಬರು ಇನ್ನೊಬ್ಬರ ಮುಂದೆ ಹೋಗಲೇಬೇಕಲ್ಲ. ಈ ಕಾರಣದಿಂದ ವಿಧವೆ ಮತ್ತು ವಿಧುರ ಎಂಬ ಪದಗಳು ಹುಟ್ಟಿದವು. ಪುರುಷಪ್ರಧಾನ ಸಮಾಜದಲ್ಲಿ ವಿಧವೆಯರಿಗೆ ಹೆಚ್ಚಿನ ಕಷ್ಟ ಬಂದಿತು. "ಸತಿ ಪದ್ಧತಿ" ಚಾಲ್ತಿಯಲ್ಲಿದ್ದಾಗ ಅನೇಕ ಹೆಣ್ಣು ಮಕ್ಕಳನ್ನು ಜೀವಂತ ಸುಡಲಾಯಿತು. ಒಂದು ಹಂತದಲ್ಲಿ ವಿಧವೆಯರಿಗೆ ತಲೆ ಬೋಳಿಸಿ, ತಣ್ಣೀರ ಸ್ನಾನ, ಒಂದು ಹೊತ್ತಿನ ಊಟ ಇತ್ಯಾದಿ ಕಟ್ಟುಪಾಡು ವಿಧಿಸಿದರು. ಈಗ ಈ ಪದ್ಧತಿಗಳಿಲ್ಲದಿದ್ದರೂ ವಿಧವೆಯರ ಜೀವನ ಕಷ್ಟವೇ. ಪುನರ್ವಿವಾಹಗಳು ಹೆಚ್ಚು ಚಾಲ್ತಿಯಲ್ಲಿ ಬಂದಿದ್ದರಿಂದ ಕಳೆದ ಎರಡು-ಮೂರು ದಶಕಗಳಿಂದ ಕೆಲಮಟ್ಟಿಗೆ ಈ ಸಮಸ್ಯೆಗೆ ಪರಿಹಾರ ಒದಗಿದೆ. 

ವಿಧುರರಿಗೆ ಯಾವುದೇ ಕಟ್ಟುಪಾಡುಗಳಿಲ್ಲ ಎಂದು ಬಹಳ ಮಂದಿ ನಂಬಿದ್ದಾರೆ. ವಾಸ್ತವವಾಗಿ ಅವರಿಗೂ ಕಟ್ಟುಪಾಡುಗಳಿದ್ದವು. ಹವನ-ಹೋಮ-ಯಾಗಾದಿಗಳು ಹೆಂಡತಿಯಿಲ್ಲದವರು ಮಾಡುವಂತಿಲ್ಲ. ಶ್ರೀರಾಮನು ಅಶ್ವಮೇಧ ಮಾಡುವಾಗ ಹೆಂಡತಿ ಹತ್ತಿರದಲ್ಲಿ ಇಲ್ಲದ್ದರಿಂದ ಸೀತಾದೇವಿಯ ಮೂರ್ತಿ ಪಕ್ಕದಲ್ಲಿಟ್ಟು ಯಾಗ ಮಾಡಿಸಿದರು ಎಂದು ಉತ್ತರ ರಾಮಾಯಣದಲ್ಲಿ ನೋಡಿದ್ದೇವೆ. ತಮ್ಮ ಸಾಧನೆಗಾಗಿ ದೇವತಾರ್ಚನೆ, ತಪ-ಜಪ ಮಾತ್ರ ಮಾಡಲು ಅವರಿಗೆ ಅಧಿಕಾರವಿರುತ್ತದೆ. ಹಿಂದೆ ಅನೇಕರು "ಸ್ತ್ರೀಪಾಕ ನೇಮ", "ಸ್ವಪಾಕ ನೇಮ" ಇತ್ಯಾದಿ ವ್ರತಗಳನ್ನು ಹಿಡಿದು ತಾವೇ ಅಡಿಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ವಿಧುರರಿಗೆ ಶ್ರಾದ್ಧಾದಿಗಳಿಗೆ ಆಹ್ವಾನ ಇರುತ್ತಿರಲಿಲ್ಲ. ಸಮಾರಂಭಗಳಲ್ಲಿ ಅವರಿಗೆ ಪಾದಪೂಜೆ ಮಾಡಬೇಕಾದರೂ, ಅವರು ಎಷ್ಟೇ ಹಿರಿಯರಿದ್ದಾಗಲೂ, ಮೊದಲು ಬೇರೊಂದು ದಂಪತಿ ಪೂಜೆ ಮಾಡಿ ನಂತರ ಅವರಿಗೆ ಪಾದಪೂಜೆ ಮಾಡುತ್ತಿದ್ದರು. ಇದು ಸಾಮಾನ್ಯವಾಗಿ ಇಂದಿಗೂ ಮುಂದುವರಿದಿದೆ. ಆದರೂ ವಿಧವೆಯರಷ್ಟು ಕಷ್ಟ ಜೀವನ ಸಮಾಜ ವಿಧುರರಿಗೆ ಕೊಟ್ಟಿರಲಿಲ್ಲ. 

*****

ಹಿಂದಿನ ಶತಮಾನದಲ್ಲಿ ಅನೇಕ ವಿವಾಹಿತ ಸ್ತ್ರೀಯರು ಶಿಶು ಜನನ ಕಾಲದಲ್ಲಿ ಸಾವಿಗೀಡಾಗುತ್ತಿದ್ದರು. ಈಗಿನಂತೆ "ಸಿಸೇರಿಯನ್" ಹೆರಿಗೆಗಳು ಇರಲಿಲ್ಲವಾಗಿ ಗರ್ಭಕೋಶದಲ್ಲಿ ಮಗು ಅಡ್ಡಡ್ಡವಾದಾಗ ಹೆರಿಗೆ ಕಷ್ಟವಾಗಿ ಸಾವು ಸಂಭವಿಸುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಅನೇಕ ಕುಟಿಂಬಗಳಲ್ಲಿ ಆಕೆಯ ತಂಗಿಯನ್ನೇ ಅಳಿಯನಿಗೆ ಕೊಟ್ಟು ಮದುವೆ ಮಾಡುವ ಪದ್ಧತಿ ನಡೆಯುತ್ತಿತ್ತು. ಆಗ ತಂದೆ-ತಾಯಿ ಹೇಳಿದಂತೆ ತಂಗಿಯರು ಭಾವನನ್ನೇ ಮಾಡುವೆ ಆಗುತ್ತಿದ್ದರು. ಬಹಳ ಚಿಕ್ಕ ವಯಸ್ಸಿನಲ್ಲಿ ಈರೀತಿ ಮದುವೆಗಳು ನಡೆಯುತ್ತಿದ್ದುದರಿಂದ ಅವರ ಇಷ್ಟಾನಿಷ್ಟಗಳಿಗೆ ಬೆಲೆಯಿರಲಿಲ್ಲ. ಪುರುಷರಿಗೆ ಸುಲಭವಾಗಿ ಮರು ಮದುವೆ ನಡೆಯುತ್ತಿತ್ತು. ಅಲ್ಲೊಂದು ಇಲ್ಲೊಂದು ವಿಧವಾವಿವಾಹ ನಡೆದರೂ ಅವು ಅತಿ ವಿರಳವಾಗಿದ್ದವು. ಈಗಿನಂತೆ ಕಾನೂನಿನ ಪ್ರಕಾರ ವಿಧವಾವಿವಾಹ ಸರಳವಾಗಿರಲಿಲ್ಲ. 

"ಸಮಾವರ್ತನ ಹೋಮ" ಮಾಡುವಾಗ ಜನಿವಾರ ಧರಿಸುವ ಪದ್ಧತಿ ಇದ್ದ ಕುಟುಂಬಗಳಲ್ಲಿ ಎರಡನೆಯ ಜನಿವಾರ ಹಾಕುತ್ತಿದ್ದರು. ಈಗ ಗುರುಕುಲ ಪದ್ಧತಿ ಇಲ್ಲದಿದ್ದುದರಿಂದ ಮದುವೆಯ ದಿನವೇ ಸಮಾವರ್ತನ ಮಾಡಿ ಎರಡನೆಯ ಜನಿವಾರ ಹಾಕುತ್ತಾರೆ. ಹೋಮ ಮಾಡಿ, ವಿದ್ಯೆ ಪೂರ್ತಿ ಆಗಿ, ಕಾಶಿಗೆ ಹೋಗುವ ದಾರಿಯಲ್ಲಿ ಮದುವೆ ಆಗುತ್ತಿದ್ದರು. ಡಿಗ್ರಿ ಪಡೆದವರೆಲ್ಲಾ ಕೆಲಸಕ್ಕೆ ಸೇರಬೇಕಾಗಿಲ್ಲ. ಸಮಾವರ್ತನ ಆದವರೆಲ್ಲ ವಿವಾಹವಾಗಬೇಕಿಲ್ಲ ಎಂದು ತಮಾಷೆಯಾಗಿ ಹೇಳಬಹುದು. ಒಟ್ಟಿನಲ್ಲಿ ಎರಡನೇ ಜನಿವಾರ ಗೃಹಸ್ಥಾಶ್ರಮ ಯೋಗ್ಯತೆ ಬರಲು ಎಂದು ಉಂಟು. 

*****

ಹಿಂದಿನ ಇತಿಹಾಸಗಳಲ್ಲಿ ರಾಜ-ಮಹಾರಾಜರು ಅನೇಕ ಮದುವೆಗಳಾಗುವುದು ಸರ್ವೇ ಸಾಮಾನ್ಯವಾಗಿತ್ತು. ಸಾಮ್ರಾಜ್ಯ ವಿಸ್ತಾರ ಮಾಡಲು, ಸಂಧಿಯ ಕರಾರಿನಂತೆ ಮತ್ತು ಸ್ನೇಹ ಹಸ್ತ ಚಾಚಲು ವಿವಾಹಗಳು ಒಂದು ರೀತಿಯ ಆಯುಧಗಳಾಗಿದ್ದುವು. ಪುರಾಣ-ಪುಣ್ಯಕಥೆಗಲ್ಲಿಯೂ ಅನೇಕ ಮರು ವಿವಾಹಗಳು ಕಂಡುಬಂದರೂ, ಸ್ತ್ರೀ ಮರು ವಿವಾಹ ಸಂದರ್ಭಗಳು ಅತಿ ವಿರಳ. ಮಲತಾಯಿ ಹಿಂಸಿಸಿದಳು ಎನ್ನುವುದು ಕೇಳಿ ಬರುತ್ತದೆಯೇ ವಿನಃ ಮಲ ತಂದೆ ಹಿಂಸಿಸಿದ ಎನ್ನುವುದು ಕಾಣದು. ಈಗಲೂ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಬಹುಪತಿತ್ವ (ಒಂದೇ ಹೆಣ್ಣು ಒಂದಕ್ಕಿಂತ ಹೆಚ್ಚು ಗಂಡುಗಳನ್ನು ಮದುವೆಯಾಗುವುದು, ಸಾಮಾನ್ಯವಾಗಿ ಅಣ್ಣ-ತಮ್ಮಂದಿರು) ಮತ್ತು ಚಿಕ್ಕ ವಯಸ್ಸಿನಲ್ಲಿ ಅಣ್ಣ ಸತ್ತ ಮೇಲೆ ಅತ್ತಿಗೆಯನ್ನು ತಮ್ಮ ಮದುವೆಯಾಗುವುದೂ ಉಂಟೆಂದು ಕೇಳಿಬರುತ್ತದೆ. 

ಎರಡನೆಯ ಮದುವೆಯಲ್ಲಿ ಕಾಶಿಯಾತ್ರೆ ಇಲ್ಲ ಎನ್ನುವುದು ಬಹಳ ಆಶ್ಚರ್ಯಕ್ಕೆ ಎಡೆ ಮಾಡಿಕೊಟ್ಟಿದೆ. ಸ್ನಾತಕನು ಕಾಶೀಯಾತ್ರೆಗೆ ಹೋಗುವಾಗ ಮದುವೆ ಆಗುವುದು ಸರಿ. ಒಮ್ಮೆ ಮದುವೆ ಆದಮೇಲೆ ಅವನು ಸ್ನಾತಕನಲ್ಲ. ವಿಧುರ. ಆದ್ದರಿಂದ ಮತ್ತೆ ಕಾಶಿಯಾತ್ರೆ ಇಲ್ಲ. ಅಷ್ಟೇ ಅಲ್ಲ. ಸಾಮಾನ್ಯವಾಗಿ ಇಂತಹ ವಿವಾಹಗಳಲ್ಲಿ ಮೊದಲ ಮದುವೆಯ ಆಡಂಬರ, ಸಂಭ್ರಮ, ಉತ್ಸಾಹಗಳೂ ಇರುವುದಿಲ್ಲ. ಹಿಂದೆಲ್ಲ ಎರಡನೇ ಮದುವೆಗೆ ಸಾಮಾನ್ಯವಾಗಿ ಬಡ ಹೆಣ್ಣುಮಕ್ಕಳು ಅಥವಾ ಮದುವೆ ವಯಸ್ಸು ದಾಟಿದ/ದಾಟುತ್ತಿರುವ (ಸಮಾಜದ ದೃಷ್ಟಿಯಲ್ಲಿ) ಹೆಣ್ಣುಮಕ್ಕಳು ಸಿಕ್ಕಿ ಬೀಳುತ್ತಿದ್ದರು. ಈಗ ಹಾಗೆ ಹೇಳುವಂತಿಲ್ಲ. ಪರಸ್ಪರ ಒಪ್ಪಿ ಇಂತಹ ವಿವಾಹ ನಡೆಯುವುದು ನಾವು ಕಾಣಬಹುದು. 

ಇಂದಿನ ಸಮಾಜದಲ್ಲಿ ವಿವಾಹದಿಂದ ವಿಚ್ಛೇದನ ಪಡೆದ ಗಂಡು ಹೆಣ್ಣುಗಳು ಮದುವೆ ಆಗುವುದು ನೋಡಬಹುದು. ಹಿಂದೆಲ್ಲ ವಿಚ್ಛೇದನ ಅನ್ನುವುದು ಅಷ್ಟಾಗಿ ಇರಲಿಲ್ಲ. ಸಮಾಜ ಬದಲಾದಂತೆ ಹಾಗೂ ಲಿಖಿತ ಕಾನೂನಿನಂತೆ ನಡೆಯುವ ಮದುವೆಗಳು ಎಲ್ಲ ರೀತಿಯ ಗಂಡು ಹೆಣ್ಣುಗಳಿಗೂ ಅನ್ವಯ. ಇವೆಲ್ಲವೂ ಕಾನೂನಿನ ಚೌಕಟ್ಟಿನಲ್ಲಿ ನಡೆಯುವುವು. ಈಗ ಗಂಡು ಮೊದಲ ಮದುವೆಯವನಿರಬಹುದು, ಎರಡನೆಯ ಅಥವಾ ನಂತರದವನಿರಬಹುದು ಅಥವಾ ವಿಧುರನೂ. ವಿಚ್ಛೇದಿತನೂ ಇರಬಹುದು. ಹಾಗೆಯೇ ಸ್ತ್ರೀಸಹ ಮೊದಲ, ನಂತರದ, ವಿಧವೆ ಅಥವಾ ವಿಚ್ಛೇದಿತೆ ಇರಬಹುದು. ಒಟ್ಟಿನಲ್ಲಿ ಕಾನೂನಿನ ಪ್ರಕಾರ ಪ್ರಾಪ್ತ ವಯಸ್ಕರಿರಬೇಕು ಮತ್ತು ಇನ್ಯಾವುದೇ ವಿವಾಹಕ್ಕೆ ಅಡ್ಡ ಬರುವ (ಕಾನೂನಿನಂತೆ) ಕಾರಣಗಳಿರಬಾರದು. ಅಷ್ಟೇ. ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ವಿಷಮ ವಿವಾಹಗಳು ನಡೆಯುವುದು ಕಾಣಬರುತ್ತಿದೆ. 

ಈಗಿನ ಮೀಡಿಯಾದಲ್ಲಿ ಆಗಿಂದಾಗ್ಗೆ ಕೆಲವು ರೋಚಕ ಪ್ರಕರಣಗಳು ವರದಿ ಆಗುವುದನ್ನು ನೋಡುತ್ತೇವೆ. "ಮೂರನೆಯ ಹೆಂಡತಿಯ ಎರಡನೇ ಗಂಡನ ಮೊದಲ ಮಗಳನ್ನು ಮೊದಲ ಗಂಡನ ಎರಡನೇ ಹೆಂಡತಿಯ ಮೂರನೆಯ ಮಗನು ಕೊಲೆ ಮಾಡಿದ" ಎಂದು ವಿವರಿಸುವಾಗ ಏನೂ ಅರ್ಥವಾಗುವುದಿಲ್ಲ. ಹಾಗೆ ಅರ್ಥ ಆಗಲಿಲ್ಲ ಎಂದು ವ್ಯಥೆ ಪಡಬೇಕಾದುದೂ ಇಲ್ಲ. 

*****

ಇಂದಿನ ಪ್ರಪಂಚದಲ್ಲಿ ನಡೆಯುವ ವಿವಾಹಗಳನ್ನು ಹಿಂದಿನ ಕಾಲದ ಭೂತಗನ್ನಡಿಯಲ್ಲಿ ನೋಡುವುದು ಅರ್ಥವಿಲ್ಲದ ಮಾತು. (ಇಬ್ಬರು ಗಂಡಸರು ಅಥವಾ ಇಬ್ಬರು ಹೆಂಗಸರು ಪರಸ್ಪರ ಮದುವೆಯಾಗುವುದೂ ಈಗ ಉಂಟು, ತನ್ನನ್ನು ತಾನೇ ಮದುವೆ ಆದ ಪ್ರಕರಣವೂ ನಡೆದಿದೆ. ಕುಬ್ರಾ ಆಯುಕುಟ್ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ,)  ಒಟ್ಟಿನಲ್ಲಿ ಜೊತೆಯಲ್ಲಿ ಬಾಳು ಸಾಗಿಸಲು ಸೇರುವ ಇಬ್ಬರು ತಮ್ಮ ಹಿಂದಿನ ಬಾಳಿನಲ್ಲಿ ನಡೆದ ಘಟನೆಗಳನ್ನು ಪಕ್ಕಕ್ಕಿಟ್ಟು, ಪರಸ್ಪರ ಪ್ರೀತಿ-ಗೌರವಗಳಿಂದ ಬಾಳಿದರೆ ಮದುವೆಯ ಒಟ್ಟಾರೆ ಉದ್ದೇಶ ಈಡೇರಿದಂತೆ ಆಗಿ ಇಹದಲ್ಲಾದರೂ ಸುಖ ಸಿಗಬಹುದು. ಪರದ (ಪರಲೋಕದ) ವಿಚಾರ ಅಲ್ಲಿ ಹೋದ ಮೇಲೆ ವಿರಾಮವಾಗಿ ಯೋಚಿಸಬಹುದು.