Showing posts with label Kundali. Show all posts
Showing posts with label Kundali. Show all posts

Wednesday, July 8, 2026

ಜ್ಯೋತಿಷ್ಯ, ವಿಮಾನ ಮತ್ತು ಜೀವನ


ಕಳೆದ ಮೂರು ಸಂಚಿಕೆಗಳಲ್ಲಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕೆಲವು ಸಂಗತಿಗಳನ್ನು ನೋಡಿದೆವು. "ಜ್ಯೋತಿಷ್ಯದಲ್ಲಿ ನಂಬಿಕೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ಈ ವಿಷಯದಲ್ಲಿ ಅವರವರ ನಂಬಿಕೆ-ಅಪನಂಬಿಕೆ ಬಗ್ಗೆ ವಿಚಾರ ನಡೆದಿತ್ತು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆ ಓದಬಹುದು. ಅದರ ಹಿಂದಿನ ಸಂಚಿಕೆಗಳ ಕೊಂಡಿಗಳು ಅಲ್ಲಿ ಸಿಗುತ್ತವೆ. 

ಯಾವುದೋ ಒಂದು ಜನಗಳ ಗುಂಪು. ಒಬ್ಬರಿಗೊಬ್ಬರು ಪರಿಚಯ ಇರಬಹುದು, ಇಲ್ಲದಿರಬಹುದು. ಬಸ್ ನಿಲ್ದಾಣದಲ್ಲಿರಬಹುದು. ಮದುವೆ ಮನೆಯಲ್ಲಿರಬಹುದು. ಕ್ರಿಕೆಟ್ ಪಂದ್ಯದ ಊಟದ ವಿರಾಮದ ವೇಳೆಯಲ್ಲಿರಬಹುದು. ಸಂಗೀತ ಕಚೇರಿ ಪ್ರಾರಂಭ ತಡವಾದ ಸಮಯದಲ್ಲಿ ಇರಬಹುದು. ಇಂಥದೇ ಸಮಯ, ಸ್ಥಳ, ಕೂಟ ಎಂದೇನಿಲ್ಲ. ಯಾರೋ ಒಬ್ಬರು ಮೈ ಮುರಿದು ಅವರದೇ ಅಂಗೈ ನೋಡಿಕೊಂಡರೂ ಅವರ ಮುಂದೆ ಇನ್ನೈವರು ಅಂಗೈ ಚಾಚುವರು! ಅಪಘಾತದಲ್ಲಿ ಕೈ ಕಳೆದುಕೊಂಡವರು ಬಹಳ ಬೇಸರಿಸುವರು. ಮುಖ್ಯವಾದ ಒಂದು ಅಂಗವಾದ "ಕೈ" ಉಪಯೋಗ ಇಲ್ಲವೆನ್ನುವುದಕ್ಕಿಂತಲೂ ಮಿಗಿಲಾಗಿ ಕೈ ತೋರಿಸಿ ಭವಿಷ್ಯ ತಿಳಿಯುವ ಅವಕಾಶ ಹೋಯಿತು ಅನ್ನುವ ದುಃಖ. "ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡಂತೆ" ಅನ್ನುವ ಗಾದೆ ಗೊತ್ತಿರುವವರೂ ಎರಡೂ ಕೈ ಚಾಚುವರು. ಇದು ಮನುಜ ಸಹಜ ಗುಣ. ಕಾಣದಿರುವ ನಾಳಿನ ಜೀವನ ಹೇಗಿದೆ ಎನ್ನುವುದನ್ನು ಇಂದೇ ತಿಳಿಯುವ ಹಂಬಲ. 

"ಹಸ್ತ ಸಾಮುದ್ರಿಕ" ಅನ್ನಬಹುದು. "ಪ್ರಶ್ನೆ" ಕೇಳಿ ಉತ್ತರ ಪಡೆದು ಸಮಸ್ಯೆ ಪರಿಹರಿಸಿಕೊಳ್ಳುವ ಕಾತರ ಇರಬಹುದು. "ಕವಡೆ ಶಾಸ್ತ್ರ" ಆಗಬಹುದು. "ಕುಂಡಲಿ" ತೋರಿಸಿ ಹಿಂದೆ ನಡೆದದ್ದು, ಈಗ ನಡೆಯಬೇಕಾದದ್ದು, ಮುಂದೆ ನಡೆಯಬಹುದಾದದ್ದು, ಇವೆಲ್ಲವನ್ನೂ ಚಾಚೂ ತಪ್ಪದೆ ತಿಳಿದುಕೊಂಡು ನಿರಾಳವಾಗುವ ಬಯಕೆಗಳು ತೀರಿಸುವವನಿರಬಹುದು. ರಸ್ತೆಯಲ್ಲಿ ಚಾಪೆ ಹಾಸಿಕೊಂಡು ಕುಳಿತಿರುವ "ಗಿಣಿಶಾಸ್ತ್ರ" ಪಾರಂಗತನಿರಬಹುದು. ಮನೆಯ ಮುಂದೆ ಬಂದು ನಿಂತ "ಬುಡುಬುಡಿಕೆ" ವ್ಯಕ್ತಿ ಇರಬಹುದು. ಮೊದಲೇ ಸಮಯ ಗೊತ್ತುಪಡಿಸಿಕೊಂಡು (ಅಪಾಯಿಂಟ್ಮೆಂಟ್ ಪಡೆದುಕೊಂಡು) ಕಾಣಬೇಕಾದ ಕಂಪ್ಯೂಟರ್ ತಜ್ಞ ಆಧುನಿಕ "ಅಸ್ಟ್ರಾಲಜರ್" ಆಗಬಹುದು.  ಅವನ ಭವಿಷ್ಯವೇ ಗೊತ್ತಿಲ್ಲದೇ ತೊಳಲಾಡುತ್ತಿರುವ "ಅಜ್ಞ" ಆದರೂ ಆಗಬಹುದು. ಅಲ್ಲಿ ಹೋದವರ ಮನಸ್ಸಿನಲ್ಲಿ ತಿಳಿಯುವ ಕುತೂಹಲ ಒಂದೇ ರೀತಿಯದು. 

ಅಂದಂತೆ, ಈ "ಪಾರಂಗತ" ಅನ್ನುವ ಶಬ್ದಕ್ಕೆ ಅರ್ಥ ಏನು? ಒಂದು ವಿಶಾಲ ಜಲರಾಶಿ ಇದೆ. ಸಮುದ್ರ ಅನ್ನಿ. ಕಣ್ಣು ನಮಗೆ ತೋರಿಸುವವರೆಗೆ ನೀರೇ ನೀರು. ಜಲರಾಶಿಯ ಆ ಕಡೆ ಏನು ಇದೆ? ನಮಗೆ ಗೊತ್ತಿಲ್ಲ. ಯಾರೋ ಒಬ್ಬ ಅಲ್ಲಿ, ಅಷ್ಟು ದೂರ, ನಮಗೆ ಗೊತ್ತಿಲದಷ್ಟು ದೂರ, ಹೋಗಿ ನೋಡಿಕೊಂಡು ಬಂದಿದ್ದಾನೆ. ಅವನು ನಾವು ಕಾಣದ ಆ ದಡ ಕಂಡವನು. "ಪಾರ" ಅಂದರೆ ಆ ಕಡೆಯ ದಡ. ಕಾಣದ ತೀರ.  "ಪಾರಂ ದೃಷ್ಟವಾನ್". ಆ ದಡಕ್ಕೆ ಹೋಗಿ ನೋಡಿ ಬಂದವನು. ಪಾರಂ ಗತವಾನ್. ಆದ್ದರಿಂದ "ಪಾರಂಗತ". ("ಪಾರುಗಾಣಿಸೋ ಹರಿಯೇ!" ಎಂದು ಕೂಗುವುದೂ ಅದಕ್ಕೇ. ಕಾಣದ ತೀರವನ್ನು ತಲುಪಿಸಿ, ಮಧ್ಯದಲ್ಲಿ ಮುಳುಗುವುದನ್ನು ತಪ್ಪಿಸು ಎಂದು ಬೇಡುವುದು).

*****

ಮುಂದಿನ ಚರ್ಚೆಯ ವಿಷಯ ಅರ್ಥವಾಗುವುದಕ್ಕೆ ಸ್ವಲ್ಪ ವಿಮಾನಗಳ ಹೆಚ್ಚಿನ ತಿಳುವಳಿಕೆ ಅಗತ್ಯ. ಒಂದು ದೊಡ್ಡ ಬೋಯಿಂಗ್ ಅಥವಾ ಏರ್-ಬಸ್ ವಿಮಾನದಲ್ಲಿ ಅರವತ್ತು ಲಕ್ಷ ಮೀರಿದ (ಆರು ಮಿಲಿಯನ್) ಬಿಡಿ ಭಾಗಗಳು ಇರುತ್ತವಂತೆ. ಬಿಡಿ ಭಾಗಗಳು ಅನೇಕ ಫ್ಯಾಕ್ಟರಿಗಳಲ್ಲಿ ತಯಾರಾಗುತ್ತವೆ. ಕಡೆಯಲ್ಲಿ ಎಲ್ಲವೂ ಒಂದು ಕಡೆ ಬಂದು ಸೇರುತ್ತವೆ. ಇಂತಹ ಸಂಗಮ ಸ್ಥಳಕ್ಕೆ "ಕಡೆಯ ಜೋಡಣಾ ಸಾಲು" ಅನ್ನುತ್ತಾರೆ. ಇಂಗ್ಲಿಷ್ನಲ್ಲಿ Final Assembly Line (FAL). ಬೋಯಿಂಗ್ ಸಂಸ್ಥೆಯ ಎವೆರೆಟ್ಟ್ (Everette, near Seattle, WA, USA) ಫ್ಯಾಕ್ಟರಿ ಮತ್ತು ಕಳೆದ ವರ್ಷ ಅಲಬಾಮಾ ರಾಜ್ಯದ ಮೊಬೈಲ್ (Mobile, Alabama, USA) ಎಂಬಲ್ಲಿ ವಿಸ್ತರಿಸಲಾದ ಏರ್-ಬಸ್ ಫ್ಯಾಕ್ಟರಿ, ಈ ಸ್ಥಳಗಳಲ್ಲಿ ನೋಡಬಂದ ವೀಕ್ಷಕರಿಗೆ ಇಡೀ ಜೋಡಣೆ ತೋರಿಸುವ ವ್ಯವಸ್ಥೆ (Visitor tours) ಇದೆ. (ಏರ್-ಬಸ್ ಸಂಸ್ಥೆಗೆ ಯೂರೋಪಿನಲ್ಲಿ ಸಹ ಈ ರೀತಿ ಇದೆ). ಹೆಚ್ಚಿನ ವಿವರಗಳಿಗೆ ಇಂಗ್ಲಿಷ್ನಲ್ಲಿ ಇರುವ ಲೇಖನ ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಹೀಗೆ ಫ್ಯಾಕ್ಟರಿಯ ಜೋಡಣಾ ಸಾಲಿನಲ್ಲಿ ಒಮ್ಮೆಗೇ ಮೂರು ವಿಮಾನಗಳು ತಯಾರಾಗುತ್ತಿರುತ್ತವೆ. ಪ್ರತಿಯೊಂದೂ ಮೂರು ಮುಖ್ಯ ಭಾಗಗಳಾಗಿ ಬಂದಿರುತ್ತವೆ. ಇವುಗಳನ್ನು ಒಂದು ಚಲಿಸುವ ವೇದಿಕೆಯ (moving platform) ಮೇಲೆ ಇಟ್ಟಿರುತ್ತಾರೆ. ಮೂರು ಪಾಳಿಯಲ್ಲಿ ಕೆಲಸಗಾರರು ಹಗಲು-ರಾತ್ರಿ ಕೆಲಸ ಮಾಡುತ್ತಾರೆ. ರಜೆ ಎಂಬುದಿಲ್ಲ. ಮೂರು ಭಾಗಗಳಾಗಿ ಬಂದದ್ದು ಈ ಕೊನೆಯಿಂದ ವೇದಿಕೆಯ ಮೇಲೆ ನಿಧಾನವಾಗಿ ಚಲಿಸುತ್ತಿದ್ದಂತೆ ಎಂಜಿನು, ರೆಕ್ಕೆಗಳ ಸೇರುವಿಕೆಯ ನಂತರ, ಮೂರನೆಯ ದಿನ ಆ ಕೊನೆಯಲ್ಲಿ ತಯಾರಾಗಿ ನಿಂತು, ಒಟ್ಟಿಗೆ ಹಾರಿ, ಬೇರೆ ಬೇರೆ ದಿಕ್ಕಿನಲ್ಲಿ ಚಲಿಸುತ್ತಾ, ಅವನ್ನು ಕೊಂಡುಕೊಂಡಿರುವ ಸಂಸ್ಥೆಯ ದೇಶಕ್ಕೆ ಹೋಗುತ್ತವೆ!  

ಹೀಗೆ ಒಂದೇ ಸಲ ತಯಾರಾದ ಮೂರು ವಿಮಾನಗಳು ಒಂದೇ ಸಮಯದಲ್ಲಿ ಹುಟ್ಟಿದ ಮೂರು ಮಕ್ಕಳಂತೆ. ಅವು ಮೂರು ಹಾರಿ ಹೋಗುವ ದಿನ ಫ್ಯಾಕ್ಟರಿಯಲ್ಲಿ ಒಂದು ಹಬ್ಬದ ವಾತಾವರಣ! ಅವುಗಳಿಗೆ ಮನುಷ್ಯರಿಗೆ ಬರೆದಂತೆ ಕುಂಡಲಿ ಬರೆದರೆ ಮೂರಕ್ಕೂ ಒಂದೇ ಕುಂಡಲಿ ಇರಬೇಕು. ಒಂದು ಬ್ಯಾಚಿನ ಮೂರು ವಿಮಾನಗಳಿಗೆ ಒಂದೇ ವಿವರಗಳು: ಒಟ್ಟು ತೂಕ, ಎಂಜಿನ್ನುಗಳ ಶಕ್ತಿ, ಒಟ್ಟು ಪ್ರಯಾಣಿಕರ ಕುರ್ಚಿಗಳ ಸಂಖ್ಯೆ, ಇಂಧನ ಟ್ಯಾಂಕುಗಳ ಗಾತ್ರ, ಹಾರುವ ವೇಗ ಕ್ಷಮತೆ, ಹೀಗೆ ಎಲ್ಲ ವಿವರಗಳು. "ತ್ರಿವಳಿಗಳು" ಎಂದು ಧಾರಾಳವಾಗಿ ಕರೆಯಬಹುದು. 

*****

ಹಿಂದಿನ ಸಂಚಿಕೆಯಲ್ಲಿ ನಡೆಯುತ್ತಿದ್ದ ತಂದೆ-ಮಗನ ಸಂವಾದ ಮುಂದುವರೆಯಿತು.

"ನಿನ್ನೆ ಭವಿಷ್ಯ ಹೇಳುವ ಜ್ಯೋತಿಷಿಯ ವಿವೇಚನೆಯ ಬಗ್ಗೆ ಮಾತಾಯಿತು"
"ಹೌದು. ಅದರ ಬಗ್ಗೆ ಈಗ ಏನು?"
"ಈ ವಿವೇಚನೆ ಅನ್ನುವುದು ಹೇಗೆ ತಿಳಿಯುವುದು?"
"ಒಂದೇ ಫ್ಯಾಕ್ಟರಿಯಲ್ಲಿ, ಒಂದೇ ದಿನ ತಯಾರಾದ ಮೂರು ಒಂದೇ ರೀತಿಯ ವಿಮಾನಗಳನ್ನು ತೆಗೆದುಕೊಳ್ಳೋಣ. ತಯಾರಾಗಿ ಕಾರ್ಖಾನೆಯಿಂದ ಹೊರಬಂದ ದಿನ ಎಲ್ಲವೂ ಸಮ ಸಮ. ಅಲ್ಲವೇ?"
"ಹೌದು"
"ಅವುಗಳ ಪರಿಪೂರ್ಣ ಸಾಮ್ಯತೆ ಅಲ್ಲಿಗೆ ಮುಗಿಯಿತು. ಮುಂದಿನ ನಡಾವಳಿ ಒಂದೇ ರೀತಿ ಇರುವುದಿಲ್ಲವಲ್ಲ"
"ಹೌದು"
"ಒಂದು ವಿಮಾನ ನಿಲ್ದಾಣದಿಂದ ಪೂರ್ವಕ್ಕೆ ಹಾರಿತು. ಮತ್ತೊಂದು ಪಶ್ಚಿಮಕ್ಕೆ. ಮೂರನೆಯದು ಉತ್ತರಕ್ಕೆ"
"ಇರಬಹುದು"
"ಪೂರ್ವದಲ್ಲಿ ಸುಗಮ ಹವಾಮಾನ. ಅನುಕೂಲ ವಾತಾವರಣ. ಒಳ್ಳೆಯ ಅನುಚರ ವಾಯು. ಇಂಗ್ಲಿಷಿನಲ್ಲಿ Tail Wind"
" ಹಾರಾಟ ಸುಗಮವಾಗಿರುತ್ತದೆ. ಅದರ ವೇಗದ ಜೊತೆ ಗಾಳಿಯ ಸಹಕಾರ ಸಿಕ್ಕಿದೆ"
"ಪಶ್ಚಿಮಕ್ಕೆ ಹಾರಿದ ವಿಮಾನಕ್ಕೆ ಕೂಡ ಸುಗಮ ಹವಾಮಾನ ಸಿಕ್ಕಿದೆ. ಆದರೆ ಅನುಚರ ವಾಯು ಇಲ್ಲ. ಬದಲಾಗಿ ಪ್ರತಿಕೂಲ ವಾಯು. Heavy Head Wind"
"ಮೊದಲಿನ ವಿಮಾನದಷ್ಟೇ ದೂರ ಕ್ರಮಿಸಲು ಹೆಚ್ಚಿನ ಸಮಯ ಬೇಕು. ಪ್ರಯಾಸ ಸಹ ಜಾಸ್ತಿ. ಹೆಚ್ಚು ಇಂಧನ ಖರ್ಚಾಗುತ್ತದೆ" 
"ಉತ್ತರಕ್ಕೆ ಹಾರಿದ ವಿಮಾನ ಚಂಡಮಾರುತ ತೀವ್ರವಾಗಿರುವ ಹಾದಿಯಲ್ಲಿ ಸಾಗಬೇಕು"
"ಅದೊಂದು ಏರುಪೇರಿನ ಪ್ರಯಾಣ. Bumpy Ride. ಎಲ್ಲ ಕಾಲವೂ ಸೀಟ್ ಬೆಲ್ಟ್ ಕಟ್ಟಿಕೊಂಡೇ ಕೂತಿರಬೇಕು"
"ಅಪಘಾತಗಳಿಗೆ ಹೆಚ್ಚಿನ ಅವಕಾಶ. ಅಲ್ಲವೇ?"
"ಖಂಡಿತ"
"ಜ್ಯೋತಿಷ್ಯದಲ್ಲಿಯೂ ಹಾಗೆಯೇ. ಕೇವಲ ಜನ್ಮ ಕುಂಡಲಿಗಳಿಂದ ಪೂರ್ತಿ ಫಲ ಹೇಳಬಾರದು"
"ಅಂದರೆ?"
"ಜನ್ಮ ಕುಂಡಲಿ ಹುಟ್ಟಿದ ಸಮಯದಲ್ಲಿ ಗ್ರಹಗಳ ಬಲಾಬಲ ಹೇಳುತ್ತದೆ. ಅವುಗಳ ಈಗಿನ ಸ್ಥಿತಿ ಏನು? ಅದನ್ನು "ಗೋಚಾರ" ಅನ್ನುತ್ತಾರೆ. ಇದನ್ನೂ ಗಮನಿಸಬೇಕು"
"ಅಂದರೆ ಹುಟ್ಟಿನ ಕುಂಡಲಿ ಜೊತೆಗೆ ಈಗಿನ ಗೋಚರ ಫಲವನ್ನೂ ಸಾಮ್ಯ ಮಾಡಬೇಕು"
"ಹೌದು"

ಜ್ಯೋತಿಷ್ಯ ಫಲ ಹೇಳಲು ಇಷ್ಟೆಲ್ಲಾ ಬೇಕು! 

*****

"ಇವೆರಡು ಸರಿಯಾಗಿ ನೋಡಿದರೆ ಆಯಿತು"
"ಇಷ್ಟೇ ಅಲ್ಲ. ಇನ್ನೂ ಒಂದಿದೆ"
"ಅದೇನು?"
"ಪ್ರತಿ ಜೀವಿಯ ಮೇಲೂ ಅನ್ಯರ ಪ್ರಭಾವ ಇರುತ್ತದೆ"
"ಇರಬಹುದು. ಅದಕ್ಕೂ ಇದಕ್ಕೂ ಏನು ಸಂಬಂಧ?"
"ಅಶ್ವಪತಿ ಮಹಾರಾಜನಿಗೆ ಮಗ ಹುಟ್ಟಿದಾಗ ಜ್ಯೋತಿಷ್ಕರು ಮಗು ಅಲ್ಪಾಯು ಎಂದು ಹೇಳಿದರು"
"ಸರಿ"
"ಅವನ ಹೆಸರು ಸತ್ಯವಾನ. ಆದರೆ ಇದನ್ನು ತಿಳಿದೂ ಸಾವಿತ್ರಿ ಹಠ ಹಿಡಿದು ಅವನನ್ನು ಮದುವೆ ಆದಳು"
"ಹೌದು"
"ಅವಳು "ದೀರ್ಘ ಸುಮಂಗಲಿ" ಯೋಗ ಇದ್ದವಳು"
"ಮುಂದೆ?"
"ಯಮನೊಡನೆ ಹೋರಾಡಿ ಗಂಡನನ್ನು ಬದುಕಿಸಿಕೊಂಡಳು"
"ಅಂದರೆ?"
"ಅನೇಕರಿಗೆ ತಂದೆ-ತಾಯಿ, ಹೆಂಡತಿ, ಮಕ್ಕಳು, ಅಣ್ಣ-ತಮ್ಮಂದಿರು, ಮುಂತಾದ ಕಡೆಗಳಿಂದ ವಿಶೇಷ ಸಹಾಯ ಸಿಗುತ್ತದೆ. ಹಾಗೆಯೇ ಕೆಲವರ ಕಡೆಯಿಂದ ಹೆಚ್ಚಿನ ತೊಂದರೆ ಕೂಡ ಆಗಬಹುದು"
"ಇದರ ಸಮನ್ವಯ ಹೇಗೆ?"
"ಜ್ಯೋತಿಷ್ಯ ಫಲ ಹೇಳುವುದು ಕೇವಲ "ಪುಸ್ತಕದ ಬದನೇಕಾಯಿ" ಎಂಬಂತೆ ಆಗಬಾರದು. ಫಲ ಹೇಳುವವನಿಗೆ ಚೆನ್ನಾದ ಲೌಕಿಕ ಜ್ಞಾನ ಇರಬೇಕು"

ಇನ್ನೂ ಹೆಚ್ಚಿನ ಆಳಕ್ಕೆ ಇಳಿಯುವ ಅವಶ್ಯಕತೆ ಇದೆ!

*****

"ಮೂರು ವಿಮಾನಗಳನ್ನು ಮತ್ತೆ ತೆಗೆದುಕೊಳ್ಳೋಣ"
"ಮತ್ತಿನ್ನೇನು?"
"ಒಂದರ ಪೈಲಟ್ಗಳು ಇನ್ನೂ ಹೊಸಬರು. ಮತ್ತೊಂದರವರು ನುರಿತವರು. ಮೂರನೆಯವರು ಮೊದಲ ಬಾರಿ ಸ್ವತಂತ್ರವಾಗಿ ವಿಮಾನ ಚಾಲನೆ ಮಾಡುತ್ತಿದ್ದಾರೆ"
"ಇದು ಬಹಳ ಗಾಢವಾದ ಪರಿಣಾಮ ಮಾಡುತ್ತದೆ"
"ಜೊತೆಗೆ ಇಳಿಯುವ ನಿಲ್ದಾಣದ ಕಾರ್ಯ ಕ್ಷಮತೆ, ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ಸಹಕಾರ, ಮುಂತಾದುವೂ ಮುಖ್ಯ ಆಗುತ್ತವೆ. ಅಲ್ಲವೇ?"
"ಹೌದು"
"ಹತ್ತು ರೂಪಾಯಿ ಪುಸ್ತಕ ಕೊಂಡು, ಐದು ಸಲ ಓದಿ, ಜಾತಕ ಫಲ ಹೇಳಬಾರದು"
"ಅಂದರೆ?"
"ಇನ್ನೂ ಅನೇಕ ಸೂಕ್ಷ್ಮಗಳು ಇರುತ್ತವೆ. ನಂಬಿಕೆ ಇದ್ದರೆ ಕ್ರಮವಾಗಿ ಅಭ್ಯಾಸ ಮಾಡಬೇಕು"
"ಹುಂ"
"ತಿಳಿದವರೊಡನೆ ಒಡನಾಡಿ ಕಲಿಯಬೇಕು"
"ಗ್ರಹ ಸಮಯ ಎಂದೊಂದು ಉಂಟು. ಅದನ್ನೂ ನೋಡಬೇಕು"
"ಅಂದರೆ?"
"ಇಲ್ಲಿ ಇಬ್ಬರಿದ್ದಾರೆ. ಇಬ್ಬರಿಗೂ ಸೋದರಮಾವನ ಕಡೆಯಿಂದ ವಿಶೇಷ ಸಹಾಯ ಎಂದಿದೆ"
"ಸರಿ"
"ಒಬ್ಬನ ಸೋದರಮಾವ ಈಗ ಮಂತ್ರಿ ಆಗಿದ್ದಾನೆ"
"ಇನ್ನೊಬ್ಬನ ಸೋದರಮಾವ?'
"ಯಾವುದೋ ಕಾರಣಕ್ಕೆ ಅವನಿಗೆ ಜೈಲು ವಾಸ ನಡೆಯುತ್ತಿದೆ"
"ಒಹೋ! ಹೀಗೂ ಉಂಟೋ?"
"ಆದಕಾರಣ ಹುಟ್ಟು ಕಾಲದ ಫಲ, ಗೋಚಾರ ಫಲ, ವಾತಾವರಣ ಮುಂತಾದುವನ್ನು ಸಮನ್ವಯ ಮಾಡಬೇಕು"

ಇದು ಅಷ್ಟು ಸುಲಭದ ಕೆಲಸವಲ್ಲ!

*****

"ಇನ್ನೊಂದು ಉದಾಹರಣೆ ಕೊಡುತ್ತೇನೆ, ವಿನೋದಕ್ಕಾಗಿ"
"ಏನು?"
"ಮೂವರಿಗೆ "ಶತ್ರು ನಾಶ ಯೋಗ" ಇದೆ"
"ಹೀಗೊಂದು ಯೋಗ ಇದೆಯೇ?"
"ಇದೊಂದು ಉದಾಹರಣೆ. ಕೆಲವರಿಗೆ ಶತ್ರುಗಳನ್ನು ಜಯಿಸುವ ಯೋಗಗಳು ಇರುತ್ತವೆ"
"ಸರಿ"
"ಒಬ್ಬ ಸೈನ್ಯ ಸೇರುತ್ತಾನೆ. ಇನ್ನೊಬ್ಬ ಪಂಡಿತ ಆಗುತ್ತಾನೆ. ಮೂರನೆಯವ ಅಡಿಗೆ ಭಟ್ಟ ಆಗುತ್ತಾನೆ"
"ಮುಂದೆ?"
"ಸೈನ್ಯಕ್ಕೆ ಸೇರಿದವನು ನಿಜವಾಗಿ ಶತ್ರುಗಳನ್ನು ಕೊಚ್ಚಿ ಹಾಕಬಹುದು"
"ಅದು ಸಾಧ್ಯ"
"ಪಂಡಿತ?"
"ಅವನದೇನು?"
"ಅವನು ಪ್ರತಿವಾದಿಗಳನ್ನು ಸೋಲಿಸುತ್ತಾ ಯಶಸ್ಸು ಪಡೆಯಬಹುದು"
"ಹೌದು. ಅಡಿಗೆ ಭಟ್ಟ?"
"ಅವನು ಬಾಣಸಿಗನಾಗಿ ಅಡಿಗೆ ಮನೆಯಲ್ಲಿ ಸೊಪ್ಪು-ತರಕಾರಿ ಮುಂತಾದುವುಗಳನ್ನು ಚೆನ್ನಾಗಿ ಕತ್ತರಿಸುತ್ತಾ ಸೊಗಸಾಗಿ ಅಡಿಗೆ ಮಾಡುತ್ತಾನೆ!"

ಜೋರಾಗಿ ನಗುವುದನ್ನು ಬಿಟ್ಟು ಮತ್ತಿನ್ನೇನು ಮಾಡುವುದು? ಜ್ಯೋತಿಷಿಗೆ "ಹಾಸ್ಯ ಪ್ರಜ್ಞೆ" ಸಹ ಇರಬೇಕೆ?

*****

ಸ್ವಂತ ಕುಂಡಲಿಗಳ ನಿರೀಕ್ಷಣೆ ಮತ್ತು ದೈವ ಸಹಾಯ ಎನ್ನುವ ಇನ್ನೆರಡು ಪದರಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Wednesday, June 17, 2026

ವಿಷಮ ದಾಂಪತ್ಯ



ಇಡ್ಲಿ-ಚಟ್ನಿ ಅಥವಾ ಇಡ್ಲಿ-ಸಾಂಬಾರ್, ಇಲ್ಲವೇ ಇನ್ನೂ ಹೆಚ್ಚಿನ ರಸಕವಳ ಬೇಕೆಂದರೆ ತುಪ್ಪದ ಜೊತೆ ಇಡ್ಲಿ-ಸಾಂಬಾರ್-ಚಟ್ನಿ ತಿನ್ನುವವರ ಮನೆಯಲ್ಲಿ ಕುಕ್ಕರ್ ಒಳಗೆ ಇಡ್ಲಿಹಿಟ್ಟು ಹಾಕಿಟ್ಟು ಇಡ್ಲಿ ಮಾಡಲು ಇಡುವ ಇಡ್ಲಿ ಸ್ಟ್ಯಾoಡು ಇರುತ್ತವೆ. ಮನೆಯಲ್ಲಿ ವಾಸವಿರುವ ಜನರು ಮತ್ತು ಅವರ ಆಹಾರ ಸೇವನೆಯ ಸಾಮರ್ಥ್ಯ ಅವಲಂಬಿಸಿ ಅದಕ್ಕೆ ಸರಿಯಾದ ಕುಕ್ಕರ್ ಮತ್ತು ಇಡ್ಲಿ ಸ್ಟ್ಯಾಂಡುಗಳನ್ನು ಇಟ್ಟುಕೊಂಡಿರುತ್ತಾರೆ. ಎರಡು ಅಥವಾ ಮೂರು ಮಂದಿ ಇರುವ ಮನೆಯಲ್ಲಿ 3x3=9 ಇಡ್ಲಿ ಮಾಡುವ ಸ್ಟಾಂಡ್ ಇರಬಹುದು. ಮನೆಯಲ್ಲಿ ಹೆಚ್ಚು ಹಸಿವಿರುವ ನಾಲ್ಕು ಮಂದಿ ಇದ್ದರೆ 4x6=24 ಇಡ್ಲಿ ಮಾಡುವ ಸ್ಟಾಂಡ್ ಇರಬಹುದು. ಪಕ್ಕದ ರಸ್ತೆಯಲ್ಲಿರುವ ದರ್ಶಿನಿಯಲ್ಲಿ 6x6=36 ಇಡ್ಲಿ ಮಾಡುವ ಹತ್ತು ಚೌಕಾಕಾರದ ತಟ್ಟೆಗಳ ದೊಡ್ಡ ಇಡ್ಲಿ ಮೇಕರ್ ಇರುತ್ತದೆ. ಒಂದೇ ಸಲ 360 ಇಡ್ಲಿಗಳು! SLV ರೀತಿಯ ಇಡ್ಲಿ ಸ್ಥಳಗಳಲ್ಲಿ ಇವೂ ಸಾಲುವುದಿಲ್ಲ. ಇಂತಹ ಎರಡು-ಮೂರು ಇಟ್ಟುಕೊಂಡು ಸರತಿಯ ಮೇಲೆ ಬಳಸುತ್ತಾರೆ. 

ಚತುರ್ಮುಖ ಬ್ರಹ್ಮದೇವರು ಆದಿ ಸೃಷ್ಟಿಕರ್ತರು. ಅವರೂ ಇದೇ ತತ್ವವನ್ನು ಅನುಸರಿಸಿದ್ದಾರೆ. ವಾಸ್ತವವಾಗಿ ಅವರು ಮೊದಲು ಪ್ರಾರಂಭಿಸಿದ ಮಾದರಿಯನ್ನು ನಾವು ಮುಂದುವರೆಸಿದ್ದೇವೆ ಅನ್ನುವುದು ಹೆಚ್ಚು ಸರಿಯಾದೀತು. ಮಹಾಪ್ರಳಯದ ನಂತರ ಸೃಷ್ಟಿ ಪ್ರಾರಂಭದಲ್ಲಿ ಹೆಚ್ಚು ಜೀವಿಗಳು ಬೇಕಾಗಿದ್ದರಿಂದ ಈ ಕೆಲಸಕ್ಕಾಗಿ ಸಹಾಯಕವಾಗಲು ಅವರು ಮೊದಲಿಗೆ "ಪ್ರಜಾಪತಿ" ಅನ್ನುವವರನ್ನು ತಮ್ಮ ಮಾನಸಪುತ್ರರಾಗಿ ಹೊರತಂದರು. ಈ ಪ್ರಜಾಪತಿಗಳ ಮೂಲಕ ಮುಂದೆ ಸೃಷ್ಟಿ ದೊಡ್ಡದಾಗುತ್ತಾ ಹೋಯಿತು. ಈ ರೀತಿಯ ಪ್ರಜಾಪತಿಗಳ ಹೆಸರಿಗೆ ಉದಾಹರಣೆ ಕೊಡಬೇಕೆಂದರೆ ದಕ್ಷ ಪ್ರಜಾಪತಿ, ಕರ್ದಮ ಪ್ರಜಾಪತಿ, ಮುಂತಾದವರು. ಮರೀಚಿ, ಅಂಗೀರಸ ಮುಂತಾದವರೂ ಪ್ರಜಾಪತಿಗಳೇ. ಆದರೂ ಪ್ರಜಾಪತಿ ಅನ್ನುವ ಪದ ಕೇಳಿದ ತಕ್ಷಣ ನಮ್ಮ ನೆನಪಿಗೆ ಬರುವುದು ದಕ್ಷನ ಹೆಸರೇ ಅಲ್ಲವೇ? 

ಸಂತಾನವಾಗುವುದು ಹೇಗೆ? ಸಂತಾನ ಸೃಷ್ಟಿಯಲ್ಲಿ ಎಷ್ಟು ವಿಧ? ಈ ಪ್ರಶ್ನೆಗಳಿಗೆ ಹಿಂದೊಂದು ಸಂಚಿಕೆಯಲ್ಲಿ ಉತ್ತರ ಹುಡುಕಿದ್ದೇವೆ. ಆಸಕ್ತರು "ಸಂತಾನ ಸೃಷ್ಟಿಯ ವಿಧಗಳು" ಎಂಬ ಶೀರ್ಷಿಕೆಯಲ್ಲಿರುವ ಆ  ಲೇಖನವನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಸ್ತ್ರೀ-ಪುರುಷರ ಸಂಸರ್ಗದ ಮೂಲಕ ಮಕ್ಕಳನ್ನು ಪಡೆಯುವ ವ್ಯವಸ್ಥೆಯನ್ನು ಮೊದಲು ತಂದವನು ಈ ದಕ್ಷ ಪ್ರಜಾಪತಿ ಎಂದು ಹೇಳುತ್ತಾರೆ. 

*****

"ನಿನ್ನೆ ಕೃಷ್ಣ ಮೂರ್ತಿ ಬಂದಿದ್ದ" ಎಂದು ಯಾರಾದರೂ ಹೇಳಿದರೆ ತಕ್ಷಣ ಕೇಳುವ ಪ್ರಶ್ನೆ "ಯಾವ ಕೃಷ್ಣ ಮೂರ್ತಿ?" ಎಂದು. ಏಕೆ ಹೀಗೆ? ಅನೇಕ ಕೃಷ್ಣ ಮೂರ್ತಿಗಳು ನಮಗೆ ಗೊತ್ತು. ಅವರಲ್ಲಿ ಯಾರು ಎಂದು ತಿಳಿಯಬೇಕು. "ತರಲೆ ಕೃಷ್ಣಮೂರ್ತಿ ಬಂದಿದ್ದ" ಅಂತ ಹೇಳಿದರೆ ತಕ್ಷಣ ಗೊತ್ತಾಗುತ್ತದೆ. ಅಥವಾ ಒಬ್ಬರ ಕುಟುಂಬದಲ್ಲಿ "ಕಮಲು ಮಗ ಕೃಷ್ಣಮೂರ್ತಿ" ಅನ್ನಬಹುದು. ಇನ್ನೊಬ್ಬರ ಮನೆಯಲ್ಲಿ ರಮಾ ಗಂಡ ಕೃಷ್ಣಮೂರ್ತಿ ಇರಬಹುದು. ಹೀಗೆ. 

ಇದೇ ರೀತಿ ವೈದಿಕ ವಾಗ್ಮಯದಲ್ಲಿಯೂ ಒಂದೇ ಹೆಸರಿನ ಅನೇಕರು ಇದ್ದಾರೆ. "ರಾಮ" ಎಂದರೆ ಯಾರು? ಪರಶುರಾಮ ಇದ್ದಾನೆ. ಬಲರಾಮ ಇದ್ದಾನೆ. ಶ್ರೀರಾಮನೂ ಇದ್ದಾನೆ. ಅದೇ ರೀತಿ ಒಬ್ಬನಿಗೆ ಅನೇಕ ಹೆಸರುಗಳೂ ಉಂಟು. ತ್ರೇತಾಯುಗದ ರಾಮ ಹುಟ್ಟಿದ ಕೂಡಲೇ "ಶ್ರೀರಾಮ". ಕೌಸಲ್ಯೆಯ ಮಡಿಲಲ್ಲಿದ್ದಾಗ "ಕೌಸಲ್ಯಾರಾಮ". ದಶರಥನ ತೊಡೆಯ ಮೇಲೆ ಏರಿದಾಗ "ದಶರಥರಾಮ". ಅಯೋಧ್ಯೆಯಲ್ಲಿ ಓಡಾಡುತ್ತಿದ್ದಾಗ "ಅಯೋಧ್ಯಾರಾಮ". ಸೀತೆಯನ್ನು ಮದುವೆಯಾದಾಗ "ಸೀತಾರಾಮ". (ಅವಳಿಗೂ ಅನೇಕ ಹೆಸರು! ಅದಕ್ಕೇ "ಜಾನಕಿರಾಮ" ಸೇರಿಕೊಂಡಿತು). ಬಿಲ್ಲು ಹಿಡಿದಾಗ "ಕೋದಂಡರಾಮ". ಕಡೆಗೆ ಪಟ್ಟಾಭಿಷಿಕ್ತನಾದಾಗ "ಪಟ್ಟಾಭಿರಾಮ". ಮುಂದೆ ರಾಜ್ಯ ಆಳುವಾಗ "ರಾಜಾರಾಮ". ಈ ರೀತಿ. ಒಂದು ಹೆಸರಿನ ಅನೇಕರು ಮತ್ತು ಅನೇಕ ಹೆಸರಿನ ಒಬ್ಬರು. ಹೀಗೂ ಉಂಟು. ಹಾಗೂ ಉಂಟು. 

ದಕ್ಷನ ಸಂದರ್ಭದಲ್ಲಿಯೂ ಇದೇ ರೀತಿ. ಇಬ್ಬರು ದಕ್ಷರಿದ್ದಾರೆ. ಭಾಗವತ ಹೇಳುವಂತೆ ಸ್ವಾಯಂಭುವ ಮನ್ವಂತರದ ದಕ್ಷ ಒಬ್ಬ. ಚಾಕ್ಷುಷ ಮನ್ವಂತರದ ದಕ್ಷ ಇನ್ನೊಬ್ಬ. ಈ ಚಾಕ್ಷುಷ ಮನ್ವಂತರದ ದಕ್ಷ ಪ್ರಜಾಪತಿಗೆ ಅನೇಕ ಹೆಣ್ಣುಮಕ್ಕಳು. ಅವರಲ್ಲಿ ಒಟ್ಟಿಗೆ ಇಪ್ಪತ್ತೇಳು ಹೆಣ್ಣುಮಕ್ಕಳನ್ನು (ಬೇಕಿದ್ದರೆ ಒಂದು ಬ್ಯಾಚ್ ಅಂದುಕೊಳ್ಳಬಹುದು) ಚಂದ್ರನಿಗೆ ಮದುವೆ ಮಾಡಿಕೊಟ್ಟ. ಅಶ್ವಿನಿ, ಭರಣಿ, ಕೃತ್ತಿಕಾ, ಮುಂತಾಗಿ ಅವರ ಹೆಸರುಗಳು. ಕಡೆಯವಳು ರೇವತಿ. (ರೈವತರಾಜನ ಮಗಳು, ಬಲರಾಮನ ಹೆಂಡತಿ ರೇವತಿ ಬೇರೆ). ಇಪ್ಪತ್ತೇಳು ಅಕ್ಕ-ತಂಗಿಯರ ಮಧ್ಯದಲ್ಲಿ ರೋಹಿಣಿ ಎನ್ನುವ ಹೆಸರಿನ ಒಬ್ಬಳು. ಹೀಗೆ. 

*****

ನಾವು ಶಾಲಾ-ಕಾಲೇಜುಗಳಲ್ಲಿ ಓದುತ್ತಿದ್ದಾಗ ವರುಷಕ್ಕೊಮ್ಮೆ "ವಿಜ್ಞಾನದ ವಸ್ತುಪ್ರದರ್ಶನ" ನಡೆಸುತ್ತಿದ್ದರು. ಈಗ ಇನ್ನೂ ಚೆನ್ನಾಗಿ ನಡೆಸುತ್ತಿರಬಹುದು. ಅದರಲ್ಲಿ ಖಗೋಳದ ಒಂದು ಮಾದರಿ ಇಟ್ಟಿರುತ್ತಿದ್ದರು. ಗ್ರಹಗಳು ತಮ್ಮ ಅಕ್ಷದ ಮೇಲೆ ಸುತ್ತುತ್ತಾ ಸುತ್ತುತ್ತಾ ಹಾಗೆಯೇ ಸೂರ್ಯನ ಸುತ್ತ ಕೂಡ ಸುತ್ತುತ್ತಿದ್ದವು. ಭೂಮಿ ಹೀಗೆ ತನ್ನ ಅಕ್ಷದ ಸುತ್ತ ಸುತ್ತುವುದರಿಂದ ಹಗಲು-ರಾತ್ರಿಗಳೂ, ಸೂರ್ಯನ ಸುತ್ತ ಸುತ್ತುವುದರಿಂದ ಋತುಗಳೂ ಆಗುವುವು ಎಂದು ತಿಳಿಹೇಳುತ್ತಿದ್ದರು. ಹೀಗೆ ಸುತ್ತುವುದರಿಂದ ಅವು 360 ಡಿಗ್ರಿ ಕ್ರಮಿಸುತ್ತವೆ. ಸರಳ ರೇಖೆಯಲ್ಲಿ ಅಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ 360 ಡಿಗ್ರಿ ವರ್ತುಲವನ್ನು ಮೂವತ್ತು ಡಿಗ್ರಿಗಳ 12 ಭಾಗ ಮಾಡಿ ಅವುಗಳನ್ನು "ಹನ್ನೆರಡು ರಾಶಿಗಳು" ಅಂದರು. ಆಯಾ ಭಾಗಗಳಲ್ಲಿರುವ ನಕ್ಷತ್ರಪುಂಜಗಳ ಹೆಸರಿನಲ್ಲಿ ಮೇಷ, ವೃಷಭ, ಮಿಥುನ ಮುಂತಾಗಿ ಹೆಸರಿಟ್ಟರು. ಹನ್ನೆರಡನೇಯದು ಮೀನ ರಾಶಿಯಾಯಿತು. 

ಸರಳ ರೇಖೆಗೆ (Straight Line) ಮೊದಲು ಮತ್ತು ಕೊನೆ ಉಂಟು. ವರ್ತುಲಕ್ಕೆ (Circle) ಕೊನೆಮೊದಲಿಲ್ಲ. ರಾಶಿಚಕ್ರ ನಾವು ನಮ್ಮ ಅನುಕೂಲಕ್ಕೆ ಮಾಡಿಕೊಂಡಿರುವ ವ್ಯವಸ್ಥೆ. ಸೂರ್ಯನು ಏಪ್ರಿಲ್ ಮಧ್ಯದಲ್ಲಿ ಮೇಷ ರಾಶಿಗೆ ಬರುತ್ತಾನೆ. ಆಗ ಸೌರಮಾನ ಲೆಕ್ಕದ  ಹೊಸ ವರ್ಷ. ಜ್ಯೋತಿಷ್ಯದಲ್ಲಿ ಸೂರ್ಯನು ಯಾವ ರಾಶಿಯಲ್ಲಿ ಇದ್ದಾನೋ, ಆ ತಿಂಗಳಿಗೆ ಅದೇ ಹೆಸರು. ಸೂರ್ಯನ ಗತಿಗೆ (ಅಥವಾ ಸೂರ್ಯನ ಸುತ್ತ ಸುತ್ತುವ ಗ್ರಹಗಳ ಗತಿಗೆ) ಕೊನೆ ಮೊದಲಿಲ್ಲ. ಮೀನ ರಾಶಿ ಕಳೆಯಿತು ಎಂದು ಸುಮ್ಮನೆ ಕೂಡುವಂತಿಲ್ಲ. ತಕ್ಷಣ ಮೇಷಕ್ಕೆ. ಹೀಗೆ ಚಲನೆ. ಅದಕ್ಕೆ ರಾಶಿಗಳನ್ನು ಎಣಿಸಿದಾಗ ಮೀನ ಆದನಂತರ ಮೇಷ ಬಂದೇಬಿಟ್ಟಿತು. ಈ ಕಾರಣದಿಂದ "ಮೀನ-ಮೇಷ ಎಣಿಸುವುದು" ಎನ್ನುವ ಗಾದೆ ಬಂದಿತು. "ಎಣಿಸುವುದರಲ್ಲೇ ಕಾಲ ಕಳೆಯಬೇಡ. ಬೇಗ ಕೆಲಸ ಶುರು ಮಾಡು" ಎನ್ನುವ ಅರ್ಥದಲ್ಲಿ. 

ಭೂಮಿ ಸೂರ್ಯನ ಸುತ್ತ ಒಂದು ಸುತ್ತು ಬರುವುದಕ್ಕೆ (360 ಡಿಗ್ರಿ) ಹನ್ನೆರಡು ತಿಂಗಳು ಕಾಲ. ಅಂದರೆ 30 ಡಿಗ್ರಿಗೆ ಒಂದು ತಿಂಗಳು. ಆದರೆ ಚಂದ್ರ ಇಪ್ಪತ್ತೆಂಟು ದಿನಕ್ಕೆ ಒಂದು ಸುತ್ತು ಬರುತ್ತಾನೆ. ಆದ್ದರಿಂದ ಚಾಂದ್ರಮಾನ ತಿಂಗಳಿಗೆ ದಿನ ಕಡಿಮೆಯಾಯಿತು. ಈ ತಿಂಗಳುಗಳಿಗೆ ಚೈತ್ರ, ವೈಶಾಖ, ಮುಂತಾಗಿ ಹೆಸರು. ಈ ಎರಡು ರೀತಿಯ ವರ್ಷಗಳಿಗೆ ವ್ಯತ್ಯಾಸ ಸರಿ ಮಾಡಿ ಸಮಸ್ಥಿತಿಗೆ ತರಲು ಚಂದ್ರಮಾನದಲ್ಲಿ ಆಗಾಗ "ಅಧಿಕ ಮಾಸ" ಬರುತ್ತದೆ. 33 ತಿಂಗಳಿಗೆ ಒಂದು ಅಧಿಕ ಮಾಸ. ಈಗ ತಾನೇ "ಅಧಿಕ ಜ್ಯೇಷ್ಠ ಮಾಸ" ಮುಗಿಯಿತು. 

*****

ಚಂದ್ರನು ಇಪ್ಪತ್ತೇಳು ಅಕ್ಕ-ತಂಗಿಯರನ್ನು ಒಟ್ಟಿಗೆ ಮದುವೆಯೇನೋ ಆದನು. ಆದರೆ ಅವನಿಗೆ ಎಲ್ಲರಿಗಿಂತ ರೋಹಿಣಿ ಮೇಲೆ ಅಧಿಕ ಮನಸ್ಸು. ಅವಳ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದನಂತೆ. ಇದರಿಂದ ಅಸೂಯೆಗೊಂಡ ಮಿಕ್ಕ ಇಪ್ಪತ್ತಾರು ಸೋದರಿಯರು ಅಪ್ಪನಾದ ದಕ್ಷನ ಬಳಿ ದೂರು ಹೇಳಿದರು. ದಕ್ಷ ಚಂದ್ರನಿಗೆ ಕ್ಷಯಿಸಿಹೋಗು ಎಂದು ಶಾಪ ಕೊಟ್ಟ. ಕೊನೆಗೆ ಕುಟುಂಬದ ಎಲ್ಲರೂ ಸೇರಿ ನ್ಯಾಯ ತೀರ್ಮಾನ ಆಯಿತು. ಚಂದ್ರನಿಗೆ ಭಾಗಶಃ ವಿಶಾಪ ಆಯಿತು. ನಮ್ಮ ಕೋರ್ಟುಗಳು "Partial Relief" ಕೊಡುವಂತೆ. ಹದಿನೈದು ದಿನ ಕುಗ್ಗುವುದು. ಮತ್ತೆ ಹದಿನೈದು ದಿನ ಹಿಗ್ಗುವುದು. ಹೀಗೆ ಕೃಷ್ಣಪಕ್ಷ-ಶುಕ್ಲಪಕ್ಷ ಆಯಿತು. ಮತ್ತೆ ಅಕ್ಕ-ತಂಗಿಯರ ಗತಿ? ಪ್ರತಿಯೊಬ್ಬರ ಮನೆಯಲ್ಲಿ ಒಂದೊಂದು ದಿನ ಇರುವುದು ಎಂದು ತೀರ್ಮಾನ ಆಯಿತು. ಒಂದು ಸುತ್ತು ಎಲ್ಲರ ಮನೆ ವಾಸ ಮುಗಿಸುವ ಹೊತ್ತಿಗೆ ತಿಂಗಳೂ ಕಳೆಯಿತು. ಮತ್ತೆ ಮುಂದಿನ ಪರ್ಯಾಯ. ಹೀಗೆ ನಡೆಯುತ್ತಿದೆ. ಚಂದ್ರನು ತನ್ನ ವರ್ತುಲದ ದಾರಿಯಲ್ಲಿ ಉದ್ದಕ್ಕೂ ಇಪ್ಪತ್ತೇಳು ಮನೆಗಳು ಕಟ್ಟಿಕೊಟ್ಟು ಈ ಹೆಂಡತಿಯರ ಜೊತೆ ಇರುತ್ತಾನಂತೆ. 

ಈ ಸೂರ್ಯನ ಹನ್ನೆರಡು ಮನೆಗಳಿಗೂ ಚಂದ್ರನ ಇಪ್ಪತ್ತೇಳು ಮನೆಗಳಿಗೂ ತಾಳೆ ಹಾಕುವುದು ಹೇಗೆ? ಚಂದ್ರನ ಇಪ್ಪತ್ತೇಳು ಮನೆಗಳನ್ನು ಹನ್ನೆರಡರಿಂದ ಭಾಗಿಸಿದರೆ (2.25) ಎರಡೂಕಾಲು ಭಾಗ ಬಂತು. ಹೀಗಾಗಿ ಅಶ್ವಿನಿ, ಭರಣಿಯರಿಗೆ ಮೇಷದಲ್ಲಿ ಮನೆ ಸಿಕ್ಕಿತು. ಕೃತ್ತಿಕೆಗೆ ಕಾಲುಭಾಗ ಮೇಷದಲ್ಲಿ ಮತ್ತು ಮೂರು ಭಾಗ ವೃಷಭದಲ್ಲಿ. ರೋಹಿಣಿಗೆ ಪೂರ್ತಿ ವೃಷಭದಲ್ಲಿ. ಮೃಗಶಿರಳಿಗೆ ಅರ್ಧ ವೃಷಭದಲ್ಲಿ ಮತ್ತು ಇನ್ನರ್ಧ ಮಿಥುನದಲ್ಲಿ.  ಹೀಗೆ ನಡೆಯುತ್ತಾ ಹೋಗುತ್ತದೆ. ಒಂದು ನಕ್ಷತ್ರಕ್ಕೆ ನಾಲ್ಕು ಭಾಗ. ಇಪ್ಪತ್ತೇಳು ನಕ್ಷತ್ರಕ್ಕೆ ಒಂದು ನೂರ ಎಂಟು ಭಾಗ. ಹೀಗೆ ಹಂಚಿದ್ದರಿಂದ ಪ್ರತಿಭಾಗವೂ ಒಂದು "ಪಾದ" (Quarter) ಎಂದಾಯಿತು. ಜ್ಯೋತಿಷ್ಯ ಬಲ್ಲವರಿಗೆ ಸೂತ್ರಗಳು (formula) ಗೊತ್ತು. "ಕೃತ್ತಿಕಾ: ಪ್ರಥಮಂ ಮೇಷ:" ಅನ್ನುತ್ತಾರೆ. ಅಂದರೆ ಕೃತ್ತಿಕಾ ನಕ್ಷತ್ರ ಮೊದಲನೇ ಪಾದದವರೆಗೆ ಮೇಷ ರಾಶಿ ಎಂದು. ಹೀಗೆಯೇ ಬೇರೆ ಮನೆಗಳಿಗೂ ಲೆಕ್ಕ. ಜ್ಯೋತಿಷ್ಯವೆಂದರೆ ಬಹುಪಾಲು ಗಣಿತವೇ. Mathematics is the language of Science" ಎಂದು ಹೇಳುತ್ತಾರೆ ತಿಳಿದವರು. ಜ್ಯೋತಿಷ್ಯವೂ ಹಾಗೆಯೇ.

ಹೀಗೆ ಲೆಕ್ಕ ಮಾಡಿದ ಮಾತ್ರಕ್ಕೇ ಅವರ ಮನೆಗಳು ಚೂರು ಚೂರಾಗಿವೆ ಎಂದು ಅರ್ಥವಲ್ಲ. ಅಮೇರಿಕ ಮತ್ತು ಕೆನಡಾ ದೇಶಗಳ ನಡುವೆ ಗಡಿಯಾಗಿ ಹರಿಯುವ ವಿಶಾಲವಾದ ಸೈನ್ಟ್ ಲಾರೆನ್ಸ್ ನದಿಯ ಮಧ್ಯ ಜಲರಾಶಿಯ ಪ್ರದೇಶಗಳಲ್ಲಿ ಬಹಳ ಸುಂದರ, ಅತಿ ಪ್ರೇಕ್ಷಣೀಯ "Thousand Islands" ಅನ್ನುವ ಹೆಸರಿನ ಪ್ರದೇಶವಿದೆ. ಒಟ್ಟು ಸುಮಾರು ಒಂದು ಸಾವಿರದ ಎಂಟು ನೂರು ದ್ವೀಪಗಳು. ಇವುಗಳಲ್ಲಿ ಕೆಲವು ಯು.ಎಸ.ಏ. ದೇಶಕ್ಕೂ, ಮತ್ತೆ ಕೆಲವು ಕೆನಡಾ ದೇಶಕ್ಕೂ ಸೇರುತ್ತವೆ. ಒಂದು ಮನೆಯ ಬಹುಭಾಗ ಕೆನಡಾದಲ್ಲಿ ಇದ್ದರೆ ಸ್ವಲ್ಪ ಭಾಗ ಇನ್ನೊಂದು ದೇಶದಲ್ಲಿ! ಅಡಿಗೆ, ಊಟ, ಟಿ.ವಿ. ನೋಡುವುದು ಕೆನಡಾದಲ್ಲಿ. ಮಲಗುವುದು ಯು.ಎಸ.ಎ. ದೇಶದಲ್ಲಿ. ಮನೆಯ ಮಧ್ಯೆ ಗಡಿ ರೇಖೆ ಹಾದು ಹೋಗುತ್ತದೆ. 

ಒಂದು ಮನೆಯಂತೂ ಎರಡು ಪುಟ್ಟ ದ್ವೀಪಗಳಲ್ಲಿ ಕಟ್ಟಿದ್ದಾರೆ. ಮನೆಯೆಲ್ಲ ಒಂದು ದೊಡ್ಡ ದ್ವೀಪದಲ್ಲಿ (ಎರಡರಲ್ಲಿ ದೊಡ್ಡದು ಅಷ್ಟೇ. ಅದೂ ಪುಟ್ಟ ದ್ವೀಪವೇ!) ಇದೆ. ದೋಣಿ ನಿಲ್ಲಿಸುವ ಗ್ಯಾರೇಜು ಮಾತ್ರ ಇನ್ನೊಂದು ದೇಶದಲ್ಲಿ. ಎರಡರ ಮಧ್ಯೆ ಒಂದು ಸಣ್ಣ ಮರದ ಸೇತುವೆ ಇದೆ. ಪ್ರಾರಂಭದಲ್ಲಿ ಮೇಲೆ ಕೊಟ್ಟಿರುವ ದೊಡ್ಡ ಚಿತ್ರದಲ್ಲಿ ಅದನ್ನು ನೋಡಬಹುದು. (ಚಿತ್ರವನ್ನು ಇನ್ನಷ್ಟು ದೊಡ್ಡದು ಮಾಡಿ ನೋಡಿದರೆ ಸೇತುವೆಯ ಒಂದು ಕಡೆ ಕೆನಡಾ ದೇಶದ ಬಾವುಟ ಮತ್ತು ಇನ್ನೊಂದು ಕಡೆ ಯುಎಸ್ಏ ಬಾವುಟ ನೋಡಬಹುದು). ಇದು ಪ್ರಪಂಚದಲ್ಲಿ ಎರಡು ದೇಶಗಳ ನಡುವೆ ಇರುವ ಅತಿ ಚಿಕ್ಕ ಸೇತುವೆ! "Just Room Enough" ಅನ್ನುವ ಒಂದು ದ್ವೀಪದ ಮನೆ ಪಕ್ಕದ ಚಿತ್ರದಲ್ಲಿ ಕೊಟ್ಟಿದೆ. ಅಲ್ಲಿ ಮನೆಯಿಂದ ಹೊರಗಡೆ ಕಾಲಿಟ್ಟರೆ ನೀರು. ಕಾರಿನಲ್ಲಿ ಓಡಾಟವಿಲ್ಲ. ಎಲ್ಲಾ ದೋಣಿಗಳ (ಬೋಟ್) ಮೇಲೆ ಅವಲಂಬನೆ.  ಈ ರೀತಿ! ಆದರೆ ಜನ ಸಂತೋಷವಾಗಿಯೇ ಇದ್ದಾರೆ. ಈ ಮನೆಗಳೆಲ್ಲಾ ಮಿಲಿಯನ್ ಡಾಲರ್ ಮನೆಗಳು. 

ಚಂದ್ರನ ಕೆಲವು ಹೆಂಡತಿಯರ ಮನೆಗಳೂ ಹೀಗೆಯೇ ಎಂದು ತಿಳಿಯಬೇಕು. 

ಪಂಚಾಂಗಗಳಲ್ಲಿ ಪ್ರತಿದಿನ ಗ್ರಹಗಳು ಯಾವ ಸ್ಥಳದಲ್ಲಿ ಇವೆ ಎಂದು ತೋರಿಸಿರುತ್ತಾರೆ. ಒಂದು ವ್ಯಕ್ತಿ ಹುಟ್ಟಿದ ದಿನ, ಸಮಯದಲ್ಲಿ ಚಂದ್ರ ಇರುವ ನಕ್ಷತ್ರ, ಅದರ ಪಾದ ನೋಡುತ್ತಾರೆ. ಅದೇ ಜನ್ಮ (ಹುಟ್ಟಿದ) ನಕ್ಷತ್ರ. ಉದಾಹರಣೆಗೆ ಅನುರಾಧ ಎರಡನೇ ಪಾದ ಅಂದಂತೆ. ಅದಕ್ಕೆ ಸರಿಯಾದ ರಾಶಿಯೇ  ಜನ್ಮ ರಾಶಿ. ಈ ರೀತಿ ಲೆಕ್ಕ ಹಾಕಿ ಕುಂಡಲಿ ಬರೆಯುತ್ತಾರೆ. ಚಂದ್ರನಿಗೆ ಅಷ್ಟು ಮಹತ್ವ.

ಈ ಲೆಕ್ಕ ಮೊದಲಿಗೆ ಸ್ವಲ್ಪ ಕಷ್ಟ. ಗೊತ್ತಾಗದಿದ್ದರೆ ನಷ್ಟವಿಲ್ಲ. ಪಂಚಾಂಗದಲ್ಲಿ ಸುಲಭವಾಗಿ ನೋಡಬಹುದು. ಇಲ್ಲದಿದ್ದರೆ ಜ್ಯೋತಿಷ್ಕರನ್ನು ಕೇಳಬಹುದು. ಜ್ಯೋತಿಷ್ಯ ನಂಬದಿದ್ದರೆ ಎರಡೂ ಬೇಕಿಲ್ಲದೆ ನಿರಾಳವಾಗಿ ಇರಬಹುದು. 
*****

ಕಳೆದ ತಿಂಗಳು "ಅನುಕೂಲ ದಾಂಪತ್ಯ" ಅನ್ನುವ ಒಂದು ಸಂಚಿಕೆಯಲ್ಲಿ ಗಂಡ-ಹೆಂಡಿರ ಸಹಜೀವನದ ಬಗ್ಗೆ ವಿಚಾರ ಮಾಡುತ್ತಾ "ಅನುರೂಪ ದಾಂಪತ್ಯ" ಮತ್ತು "ಅನುಕೂಲ ದಾಂಪತ್ಯ" ಅನ್ನುವ ಬಗ್ಗೆ ಸ್ವಲ್ಪ ಯೋಚಿಸಿದ್ದೆವು. "ಅನುಕೂಲ ದಾಂಪತ್ಯ" ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಇವೆರಡು ರೀತಿಯ (ಅನುರೂಪ ಮತ್ತು ಅನುಕೂಲ) ದಾಂಪತ್ಯಗಳ ಜೊತೆಯಲ್ಲಿ "ವಿಷಮ ದಾಂಪತ್ಯ" ಅಂತ ಕೂಡ ಒಂದು ಉಂಟು. ಇದು ಕಷ್ಟದ ದಾಂಪತ್ಯ. ಹೆಣಗಾಡಿಕೊಂಡು ಜೊತೆಯಲ್ಲಿ ಬದುಕುವುದು! "ನವಜೀವನ" ಕನ್ನಡ ಚಲನಚಿತ್ರದ "ಹೆಣಗಾಟದೀ ಜನ್ಮ ಏಕೆ ಕೊಟ್ಟನೋ ಆ ಬ್ರಹ್ಮ" ಅನ್ನುವ ಹಾಡಿನಂತೆ. (ಬಾಮಾ-ಭಾಮಾ, ನಾನರಿಯೆ ಮನದ ಮರ್ಮ...... ಅನ್ನುವ ಹಾಡು).

ಅರವತ್ತು-ಎಪ್ಪತ್ತು ವರುಷಗಳ ಹಿಂದೆ ವಿವಾಹ ಮಾಡುವ ಮುನ್ನ ವಧು ಮತ್ತು ವರರ ಜಾತಕ ಪರಿಶೀಲಿಸಿ ತಾಳೆ ಹಾಕುತ್ತಿದ್ದರು. ಕೆಲವು "ಕೂಟ" ನೋಡುತ್ತಿದ್ದರು. ರಾಶಿ ಕೂಟ, ಗ್ರಹಮೈತ್ರ ಕೂಟ, ರಜ್ಜು ಕೂಟ, ಯೋನಿ ಕೂಟ, ಹೀಗೆ ಹೆಸರುಗಳು. ಪರೀಕ್ಷೆಯಲ್ಲಿ ಅಂಕಗಳನ್ನು ಕೊಟ್ಟಂತೆ ಲೆಕ್ಕ ಮಾಡಿ ಸರಿಹೊಂದಿದರೆ ಮದುವೆಗೆ ಒಪ್ಪಿಗೆ ಕೊಡುತ್ತಿದ್ದರು. ಎಲ್ಲಾ ಕೂಟಗಳು "ಅತ್ಯುತ್ತಮ" ಆಗಿದ್ದರೆ ಗರಿಷ್ಟ (Maximum) 36 ಮಾರ್ಕ್ಸ್. ಕನಿಷ್ಠ (Minimum) 18 ಬರಬೇಕು. ಇಲ್ಲದಿದ್ದರೆ ಒಪ್ಪುತ್ತಿರಲಿಲ್ಲ. ಕೆಲವರು ಮೊದಲು ರಾಶಿಕೂಟ ಮತ್ತು ಗ್ರಹಮೈತ್ರ ಕೂಟಗಳನ್ನು ನೋಡುತ್ತಿದ್ದರು. ಇವು ಕೂಡಲಿಲ್ಲ ಅಂದರೆ ಹದಿನೆಂಟಕ್ಕಿಂತಲೂ ಹೆಚ್ಚು ನಂಬರು ಬಂದರೂ ಮದುವೆಯಿಲ್ಲ. ಪರೀಕ್ಷೆಯಲ್ಲಿ compulsory paper ಇದ್ದಂತೆ. ಬೇರೆಲ್ಲ ಪೇಪರ್ ಮೊದಲ ದರ್ಜೆಯಲ್ಲಿ ಪಾಸಾದರೂ ಇದು ಆಗಲಿಲ್ಲ ಅಂದರೆ ಫೇಲ್ ಅಂದಂತೆ. ಅನೇಕರಿಗೆ ಹುಡುಗ ಅಥವಾ ಹುಡುಗಿ ಒಪ್ಪಿಗೆಯಾಗದಿದ್ದರೆ "ಬೇಡ" ಅನ್ನುವುದಕ್ಕೆ "ಜಾತಕ ಹೊಂದಲಿಲ್ಲ" ಅನ್ನುವುದು ಸುಲಭ ಕಾರಣ ಆಗುತ್ತಿತ್ತು. 

ಕೆಲವರು "ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು" ಅನ್ನುವ ಗಾದೆಯನ್ನು ಮನೆದೇವರಂತೆ ಪ್ರೀತಿಸುತ್ತಿದ್ದರು. ಸುಳ್ಳು ಜಾತಕ ಬರೆಸುವುದೂ ನಡೆಯುತ್ತಿತ್ತು. ಈ ಕಾರಣಕ್ಕೆ ಕೆಲವರು ಉಪಾಯವಾಗಿ ಹುಟ್ಟಿದ ದಿನ ಅಕ್ಕ-ಪಕ್ಕದ ಮನೆಯವರಿಂದ ತಿಳಿದುಕೊಂಡು ತಾವೇ ಜಾತಕ ಬರೆಸಿ ತಾಳೆ ನೋಡುತ್ತಿದ್ದರು. ರಾಜಕುಮಾರ್-ಮಾಧವಿ-ಗೀತಾ ನಟಿಸಿರುವ ಕನ್ನಡ ಚಲನಚಿತ್ರ "ಶ್ರುತಿ ಸೇರಿದಾಗ" ಹೀಗೆ ಜಾತಕದ ಕಾರಣ ಮದುವೆಯೊಂದು ನಿಂತು ಹೋದ ಕಥೆಯದ್ದು. 

ಒಂದು ಹುಡುಗ ಇದ್ದಾನೆ. ಅವನ ಜಾತಕದಲ್ಲಿ ಚಂದ್ರ ಮೇಷ ರಾಶಿಯಲ್ಲಿದ್ದಾನೆ. ಮದುವೆಗೆ ಒಂದು ಹುಡುಗಿಯ ಜಾತಕ ಬಂದಿದೆ. ಅವಳ ಜಾತಕದಲ್ಲಿ ಚಂದ್ರ ಕನ್ಯಾ ರಾಶಿಯಲ್ಲಿದ್ದಾನೆ. ಲೆಕ್ಕ ಮಾಡಿದರೆ ವರನ ಕಡೆಯಿಂದ ವಧುವಿನದು ಆರನೆಯ ಮನೆ. ವಧುವಿನ ಕಡೆಯಿಂದ ವರನದು ಎಂಟನೆಯ ಮನೆ. ಇದು ಆರು-ಎಂಟರ ನಂಟು. ಸಂಸ್ಕೃತದಲ್ಲಿ ಇದನ್ನು "ಷಷ್ಟಾಷ್ಟಕ" ಅನ್ನುತ್ತಾರೆ. ಇಂತಹವರ ದಾಂಪತ್ಯ ಹೇಗೆ? 

ವಿಷಮ ದಾಂಪತ್ಯಕ್ಕೆ ಅನೇಕ ಕಾರಣಗಳು ಇರುತ್ತವೆ. ಈ ಆರು-ಎಂಟರ ನಂಟು ಒಂದು ಕಾರಣ ಅನ್ನುತ್ತಾರೆ ಜ್ಯೋತಿಷ್ಕರು. ಗಂಡ "ಆರು" ಎಂದರೆ ಹೆಂಡತಿ "ಇಲ್ಲ, ಎಂಟು" ಅನ್ನುವಂತೆ. "ಹೋಗಲಿ, ಏಳಕ್ಕೆ ಒಪ್ಪಿಕೊಳ್ಳೋಣ" ಅನ್ನಲು ಇಬ್ಬರೂ ತಯಾರಿಲ್ಲ. ಇಂತಹ ದಂಪತಿಗಳಲ್ಲಿ ತಾಳ-ಮೇಳ ಇರುವುದಿಲ್ಲ ಎಂದು ಕೆಲವರ ನಂಬಿಕೆ. "ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು" ಅನ್ನುವ ಗಾದೆ ಇಂತಹ ಜೋಡಿಗೇ ಹೇಳಿ ಮಾಡಿಸಿದ್ದು. ಜಾತಕ ನಂಬುವವರು ಈ ರೀತಿಯ ಮದುವೆಗಳನ್ನು ಒಪ್ಪುವುದಿಲ್ಲ. ಇದು ಅವರವರ ಜೀವನದ ದೃಷ್ಟಿಕೋನಕ್ಕೆ, ನಂಬಿಕೆಗಳಿಗೆ ಸಂಬಂಧಿಸಿದ್ದು. 

*****

ಮುಂದಿನ ಸಂಚಿಕೆಯಲ್ಲಿ ಇದರ ಬಗ್ಗೆ ಇನ್ನಷ್ಟು ವಿವರಣೆ ನೋಡೋಣ. ಹಾಗೆಯೇ "ಸಾವಿರ ದ್ವೀಪಗಳು" (Thousand Islands) ಬಗೆಗೂ ಬೇರೊಂದು ಸಂಚಿಕೆಯಲ್ಲಿ ತಿಳಿಯೋಣ.