Friday, July 17, 2026

Mysore Silk Sarees


Forming a line for anything and everything is becoming a hallmark of our civilisation. Starting from getting into a bus, train or an aircraft and up to buying something, line formation can be seen anywhere. Line formation starts from birth of a child at the labour room and continues through nursery school and so on. Those who have visited electric crematorium know that there is a long line of dead bodies there too, waiting for their turn to be burnt down to ashes. Wherever there is no line formation, chaos is assured. There are many news reports about stampedes and deaths and injuries from time to time, most of which happen due to not following "line discipline". In fact, line discipline comes earlier than "lane discipline" on roads to manage traffic. 

We often have situations where one line leads to another. When the first cricket test was played in Bangalore between India and West indies, many people moved for half an hour in a line near the stadium and then realised that they were in the line to buy a ticket while they already had a season ticket! They were in the wrong line to enter the playground. We form lines to buy a ticket first, then a line to enter the place or vehicle and then a line even to exit and come out. Lines, lines and lines everywhere! Someone violates a line somewhere, fist fights are assured. Even those not suffering from "High Blood Pressure" develop one instantaneously if someone crashes an existing line.  "Might is right" works sometimes, but generally lines always work. 

However, a news item a few months ago about women standing in queue from as early as 4 AM in the morning before the Mysore Silks showroom in the silk factory at Mysore made a lot of news and interesting reading. A fixed number of sarees were up for sale there and in order to avoid huge rush of prospective buyers, the showroom announced that only one saree per customer was available and the sale will be regulated by issue of tokens, on first come first served basis. In fact, the queue was not for buying sarees, but get tokens! Some 50,000 sarees were said to be on sale and yet long lines were seen in front of many such outlets. 
*****

One of the factories of KSIC (Karnataka Silk Industries Corporation) that makes the famous Mysore Silk sarees was also in the news recently. The factory at T Narasipura near Mysore supplies processed raw silk for weaving these sarees, to other manufacturing units. A parcel of five acres of land out of the factory area was allotted to the Department of Youth Affairs by the Government for construction of a taluk level stadium for sports and allied activities. Protests soon followed on the assumption that the factory will be closed. State Government had to yield to popular pressure and the Government ultimately issued orders cancelling the allotment and confirming that the factory will not be closed. 

The allotment and cancellation of land to construct a stadium had its side effects too. It is a travesty of justice that most of the workers in the factory that make these sarees are themselves unable to buy one for their own use, in their life time. These sarees (good quality) cost anywhere between 25,000 rupees (USD 250) to 2,50,000 rupees (USD 2,500) and most households won't be able to buy one as the cost far exceeds their total family earnings for several months. Bhagyamma worked in the factory for 30 years. Her husband also worked there for 15 years. Yet, the family responsibilities did not allow her to buy a Mysore Silk saree. Many factory workers participated in the strike for several days and made sacrifice by way of losing wages for the strike period. After the land allotment to the stadium was cancelled, as a mark of honouring the workers who fought for saving the factory, KSIC introduced a scheme for employees to buy sarees at concessional rates in instalments. Bhagyamma availed the benefits of the scheme and bought a Mysore Silk Saree for herself!

*****

What makes Mysore Silk sarees tick despite the high cost and lower supply? The answer lies in its luxurious, highly lustrous, handwoven pure mulberry silk coupled with authentic Jari (a combination of silver and gold threads). It has a long history behind it. The craftsmanship of generation of weavers has kept the premium quality alive. It is not possible to increase production level easily because it takes years to train these weavers. Strict quality controls also restrict availability. 

The present edition of Mysore silk started in the year 1912 when the then Maharaja of Mysore started the factory in Mysore. The sarees last for generations if cared and preserved properly. As the sales punch line says "Your granddaughter will wear it", we know by personal experience that this is true indeed. There are also pure Mysore Silk Dhotis, Ties, Shirting materials as well. 

Karnataka accounts for nearly 50% of all silk produced in the country. Most of it is centred around Mysore and Bangalore, though there are other pockets as well. The production of silk at the stage of cocoon rearing is a difficult one due to the vagaries like disease for silkworms, variation in yields and fluctuation in market rates for cocoons. Cocoons are to be sold immediately and cannot be stored away for sale when you get a good rate. Sometimes one makes a bumper profit and at other times everything may be lost. It is also labour intensive and the farmer has to keep constant vigil on the activity. Slight carelessness results in entire crop being lost.

Conversion of agricultural lands into industrial and real estate business is constantly reducing the land available for mulberry cultivation. Younger generation from weaver families are taking up other jobs like being cab drivers, delivery personnel etc. as these activities give immediate income as against waiting for lump sum income with some doubt about it actually coming always lurking in the side.

******

The total value of Mysore Silk Saree industry is approximately valued at around 1,000 crore rupees with a production of around 300 sarees per day. The various factors detailed above has kept the supply at much lower levels than the demand.

It's time to buy a Mysore Silk Saree for your granddaughter now! Of course, you (or your spouse) and your daughter can use it till it is passed on to her!

Wednesday, July 8, 2026

ಜ್ಯೋತಿಷ್ಯ, ವಿಮಾನ ಮತ್ತು ಜೀವನ


ಕಳೆದ ಮೂರು ಸಂಚಿಕೆಗಳಲ್ಲಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕೆಲವು ಸಂಗತಿಗಳನ್ನು ನೋಡಿದೆವು. "ಜ್ಯೋತಿಷ್ಯದಲ್ಲಿ ನಂಬಿಕೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ಈ ವಿಷಯದಲ್ಲಿ ಅವರವರ ನಂಬಿಕೆ-ಅಪನಂಬಿಕೆ ಬಗ್ಗೆ ವಿಚಾರ ನಡೆದಿತ್ತು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆ ಓದಬಹುದು. ಅದರ ಹಿಂದಿನ ಸಂಚಿಕೆಗಳ ಕೊಂಡಿಗಳು ಅಲ್ಲಿ ಸಿಗುತ್ತವೆ. 

ಯಾವುದೋ ಒಂದು ಜನಗಳ ಗುಂಪು. ಒಬ್ಬರಿಗೊಬ್ಬರು ಪರಿಚಯ ಇರಬಹುದು, ಇಲ್ಲದಿರಬಹುದು. ಬಸ್ ನಿಲ್ದಾಣದಲ್ಲಿರಬಹುದು. ಮದುವೆ ಮನೆಯಲ್ಲಿರಬಹುದು. ಕ್ರಿಕೆಟ್ ಪಂದ್ಯದ ಊಟದ ವಿರಾಮದ ವೇಳೆಯಲ್ಲಿರಬಹುದು. ಸಂಗೀತ ಕಚೇರಿ ಪ್ರಾರಂಭ ತಡವಾದ ಸಮಯದಲ್ಲಿ ಇರಬಹುದು. ಇಂಥದೇ ಸಮಯ, ಸ್ಥಳ, ಕೂಟ ಎಂದೇನಿಲ್ಲ. ಯಾರೋ ಒಬ್ಬರು ಮೈ ಮುರಿದು ಅವರದೇ ಅಂಗೈ ನೋಡಿಕೊಂಡರೂ ಅವರ ಮುಂದೆ ಇನ್ನೈವರು ಅಂಗೈ ಚಾಚುವರು! ಅಪಘಾತದಲ್ಲಿ ಕೈ ಕಳೆದುಕೊಂಡವರು ಬಹಳ ಬೇಸರಿಸುವರು. ಮುಖ್ಯವಾದ ಒಂದು ಅಂಗವಾದ "ಕೈ" ಉಪಯೋಗ ಇಲ್ಲವೆನ್ನುವುದಕ್ಕಿಂತಲೂ ಮಿಗಿಲಾಗಿ ಕೈ ತೋರಿಸಿ ಭವಿಷ್ಯ ತಿಳಿಯುವ ಅವಕಾಶ ಹೋಯಿತು ಅನ್ನುವ ದುಃಖ. "ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡಂತೆ" ಅನ್ನುವ ಗಾದೆ ಗೊತ್ತಿರುವವರೂ ಎರಡೂ ಕೈ ಚಾಚುವರು. ಇದು ಮನುಜ ಸಹಜ ಗುಣ. ಕಾಣದಿರುವ ನಾಳಿನ ಜೀವನ ಹೇಗಿದೆ ಎನ್ನುವುದನ್ನು ಇಂದೇ ತಿಳಿಯುವ ಹಂಬಲ. 

"ಹಸ್ತ ಸಾಮುದ್ರಿಕ" ಅನ್ನಬಹುದು. "ಪ್ರಶ್ನೆ" ಕೇಳಿ ಉತ್ತರ ಪಡೆದು ಸಮಸ್ಯೆ ಪರಿಹರಿಸಿಕೊಳ್ಳುವ ಕಾತರ ಇರಬಹುದು. "ಕವಡೆ ಶಾಸ್ತ್ರ" ಆಗಬಹುದು. "ಕುಂಡಲಿ" ತೋರಿಸಿ ಹಿಂದೆ ನಡೆದದ್ದು, ಈಗ ನಡೆಯಬೇಕಾದದ್ದು, ಮುಂದೆ ನಡೆಯಬಹುದಾದದ್ದು, ಇವೆಲ್ಲವನ್ನೂ ಚಾಚೂ ತಪ್ಪದೆ ತಿಳಿದುಕೊಂಡು ನಿರಾಳವಾಗುವ ಬಯಕೆಗಳು ತೀರಿಸುವವನಿರಬಹುದು. ರಸ್ತೆಯಲ್ಲಿ ಚಾಪೆ ಹಾಸಿಕೊಂಡು ಕುಳಿತಿರುವ "ಗಿಣಿಶಾಸ್ತ್ರ" ಪಾರಂಗತನಿರಬಹುದು. ಮನೆಯ ಮುಂದೆ ಬಂದು ನಿಂತ "ಬುಡುಬುಡಿಕೆ" ವ್ಯಕ್ತಿ ಇರಬಹುದು. ಮೊದಲೇ ಸಮಯ ಗೊತ್ತುಪಡಿಸಿಕೊಂಡು (ಅಪಾಯಿಂಟ್ಮೆಂಟ್ ಪಡೆದುಕೊಂಡು) ಕಾಣಬೇಕಾದ ಕಂಪ್ಯೂಟರ್ ತಜ್ಞ ಆಧುನಿಕ "ಅಸ್ಟ್ರಾಲಜರ್" ಆಗಬಹುದು.  ಅವನ ಭವಿಷ್ಯವೇ ಗೊತ್ತಿಲ್ಲದೇ ತೊಳಲಾಡುತ್ತಿರುವ "ಅಜ್ಞ" ಆದರೂ ಆಗಬಹುದು. ಅಲ್ಲಿ ಹೋದವರ ಮನಸ್ಸಿನಲ್ಲಿ ತಿಳಿಯುವ ಕುತೂಹಲ ಒಂದೇ ರೀತಿಯದು. 

ಅಂದಂತೆ, ಈ "ಪಾರಂಗತ" ಅನ್ನುವ ಶಬ್ದಕ್ಕೆ ಅರ್ಥ ಏನು? ಒಂದು ವಿಶಾಲ ಜಲರಾಶಿ ಇದೆ. ಸಮುದ್ರ ಅನ್ನಿ. ಕಣ್ಣು ನಮಗೆ ತೋರಿಸುವವರೆಗೆ ನೀರೇ ನೀರು. ಜಲರಾಶಿಯ ಆ ಕಡೆ ಏನು ಇದೆ? ನಮಗೆ ಗೊತ್ತಿಲ್ಲ. ಯಾರೋ ಒಬ್ಬ ಅಲ್ಲಿ, ಅಷ್ಟು ದೂರ, ನಮಗೆ ಗೊತ್ತಿಲದಷ್ಟು ದೂರ, ಹೋಗಿ ನೋಡಿಕೊಂಡು ಬಂದಿದ್ದಾನೆ. ಅವನು ನಾವು ಕಾಣದ ಆ ದಡ ಕಂಡವನು. "ಪಾರ" ಅಂದರೆ ಆ ಕಡೆಯ ದಡ. ಕಾಣದ ತೀರ.  "ಪಾರಂ ದೃಷ್ಟವಾನ್". ಆ ದಡಕ್ಕೆ ಹೋಗಿ ನೋಡಿ ಬಂದವನು. ಪಾರಂ ಗತವಾನ್. ಆದ್ದರಿಂದ "ಪಾರಂಗತ". ("ಪಾರುಗಾಣಿಸೋ ಹರಿಯೇ!" ಎಂದು ಕೂಗುವುದೂ ಅದಕ್ಕೇ. ಕಾಣದ ತೀರವನ್ನು ತಲುಪಿಸಿ, ಮಧ್ಯದಲ್ಲಿ ಮುಳುಗುವುದನ್ನು ತಪ್ಪಿಸು ಎಂದು ಬೇಡುವುದು).

*****

ಮುಂದಿನ ಚರ್ಚೆಯ ವಿಷಯ ಅರ್ಥವಾಗುವುದಕ್ಕೆ ಸ್ವಲ್ಪ ವಿಮಾನಗಳ ಹೆಚ್ಚಿನ ತಿಳುವಳಿಕೆ ಅಗತ್ಯ. ಒಂದು ದೊಡ್ಡ ಬೋಯಿಂಗ್ ಅಥವಾ ಏರ್-ಬಸ್ ವಿಮಾನದಲ್ಲಿ ಅರವತ್ತು ಲಕ್ಷ ಮೀರಿದ (ಆರು ಮಿಲಿಯನ್) ಬಿಡಿ ಭಾಗಗಳು ಇರುತ್ತವಂತೆ. ಬಿಡಿ ಭಾಗಗಳು ಅನೇಕ ಫ್ಯಾಕ್ಟರಿಗಳಲ್ಲಿ ತಯಾರಾಗುತ್ತವೆ. ಕಡೆಯಲ್ಲಿ ಎಲ್ಲವೂ ಒಂದು ಕಡೆ ಬಂದು ಸೇರುತ್ತವೆ. ಇಂತಹ ಸಂಗಮ ಸ್ಥಳಕ್ಕೆ "ಕಡೆಯ ಜೋಡಣಾ ಸಾಲು" ಅನ್ನುತ್ತಾರೆ. ಇಂಗ್ಲಿಷ್ನಲ್ಲಿ Final Assembly Line (FAL). ಬೋಯಿಂಗ್ ಸಂಸ್ಥೆಯ ಎವೆರೆಟ್ಟ್ (Everette, near Seattle, WA, USA) ಫ್ಯಾಕ್ಟರಿ ಮತ್ತು ಕಳೆದ ವರ್ಷ ಅಲಬಾಮಾ ರಾಜ್ಯದ ಮೊಬೈಲ್ (Mobile, Alabama, USA) ಎಂಬಲ್ಲಿ ವಿಸ್ತರಿಸಲಾದ ಏರ್-ಬಸ್ ಫ್ಯಾಕ್ಟರಿ, ಈ ಸ್ಥಳಗಳಲ್ಲಿ ನೋಡಬಂದ ವೀಕ್ಷಕರಿಗೆ ಇಡೀ ಜೋಡಣೆ ತೋರಿಸುವ ವ್ಯವಸ್ಥೆ (Visitor tours) ಇದೆ. (ಏರ್-ಬಸ್ ಸಂಸ್ಥೆಗೆ ಯೂರೋಪಿನಲ್ಲಿ ಸಹ ಈ ರೀತಿ ಇದೆ). ಹೆಚ್ಚಿನ ವಿವರಗಳಿಗೆ ಇಂಗ್ಲಿಷ್ನಲ್ಲಿ ಇರುವ ಲೇಖನ ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಹೀಗೆ ಫ್ಯಾಕ್ಟರಿಯ ಜೋಡಣಾ ಸಾಲಿನಲ್ಲಿ ಒಮ್ಮೆಗೇ ಮೂರು ವಿಮಾನಗಳು ತಯಾರಾಗುತ್ತಿರುತ್ತವೆ. ಪ್ರತಿಯೊಂದೂ ಮೂರು ಮುಖ್ಯ ಭಾಗಗಳಾಗಿ ಬಂದಿರುತ್ತವೆ. ಇವುಗಳನ್ನು ಒಂದು ಚಲಿಸುವ ವೇದಿಕೆಯ (moving platform) ಮೇಲೆ ಇಟ್ಟಿರುತ್ತಾರೆ. ಮೂರು ಪಾಳಿಯಲ್ಲಿ ಕೆಲಸಗಾರರು ಹಗಲು-ರಾತ್ರಿ ಕೆಲಸ ಮಾಡುತ್ತಾರೆ. ರಜೆ ಎಂಬುದಿಲ್ಲ. ಮೂರು ಭಾಗಗಳಾಗಿ ಬಂದದ್ದು ಈ ಕೊನೆಯಿಂದ ವೇದಿಕೆಯ ಮೇಲೆ ನಿಧಾನವಾಗಿ ಚಲಿಸುತ್ತಿದ್ದಂತೆ ಎಂಜಿನು, ರೆಕ್ಕೆಗಳ ಸೇರುವಿಕೆಯ ನಂತರ, ಮೂರನೆಯ ದಿನ ಆ ಕೊನೆಯಲ್ಲಿ ತಯಾರಾಗಿ ನಿಂತು, ಒಟ್ಟಿಗೆ ಹಾರಿ, ಬೇರೆ ಬೇರೆ ದಿಕ್ಕಿನಲ್ಲಿ ಚಲಿಸುತ್ತಾ, ಅವನ್ನು ಕೊಂಡುಕೊಂಡಿರುವ ಸಂಸ್ಥೆಯ ದೇಶಕ್ಕೆ ಹೋಗುತ್ತವೆ!  

ಹೀಗೆ ಒಂದೇ ಸಲ ತಯಾರಾದ ಮೂರು ವಿಮಾನಗಳು ಒಂದೇ ಸಮಯದಲ್ಲಿ ಹುಟ್ಟಿದ ಮೂರು ಮಕ್ಕಳಂತೆ. ಅವು ಮೂರು ಹಾರಿ ಹೋಗುವ ದಿನ ಫ್ಯಾಕ್ಟರಿಯಲ್ಲಿ ಒಂದು ಹಬ್ಬದ ವಾತಾವರಣ! ಅವುಗಳಿಗೆ ಮನುಷ್ಯರಿಗೆ ಬರೆದಂತೆ ಕುಂಡಲಿ ಬರೆದರೆ ಮೂರಕ್ಕೂ ಒಂದೇ ಕುಂಡಲಿ ಇರಬೇಕು. ಒಂದು ಬ್ಯಾಚಿನ ಮೂರು ವಿಮಾನಗಳಿಗೆ ಒಂದೇ ವಿವರಗಳು: ಒಟ್ಟು ತೂಕ, ಎಂಜಿನ್ನುಗಳ ಶಕ್ತಿ, ಒಟ್ಟು ಪ್ರಯಾಣಿಕರ ಕುರ್ಚಿಗಳ ಸಂಖ್ಯೆ, ಇಂಧನ ಟ್ಯಾಂಕುಗಳ ಗಾತ್ರ, ಹಾರುವ ವೇಗ ಕ್ಷಮತೆ, ಹೀಗೆ ಎಲ್ಲ ವಿವರಗಳು. "ತ್ರಿವಳಿಗಳು" ಎಂದು ಧಾರಾಳವಾಗಿ ಕರೆಯಬಹುದು. 

*****

ಹಿಂದಿನ ಸಂಚಿಕೆಯಲ್ಲಿ ನಡೆಯುತ್ತಿದ್ದ ತಂದೆ-ಮಗನ ಸಂವಾದ ಮುಂದುವರೆಯಿತು.

"ನಿನ್ನೆ ಭವಿಷ್ಯ ಹೇಳುವ ಜ್ಯೋತಿಷಿಯ ವಿವೇಚನೆಯ ಬಗ್ಗೆ ಮಾತಾಯಿತು"
"ಹೌದು. ಅದರ ಬಗ್ಗೆ ಈಗ ಏನು?"
"ಈ ವಿವೇಚನೆ ಅನ್ನುವುದು ಹೇಗೆ ತಿಳಿಯುವುದು?"
"ಒಂದೇ ಫ್ಯಾಕ್ಟರಿಯಲ್ಲಿ, ಒಂದೇ ದಿನ ತಯಾರಾದ ಮೂರು ಒಂದೇ ರೀತಿಯ ವಿಮಾನಗಳನ್ನು ತೆಗೆದುಕೊಳ್ಳೋಣ. ತಯಾರಾಗಿ ಕಾರ್ಖಾನೆಯಿಂದ ಹೊರಬಂದ ದಿನ ಎಲ್ಲವೂ ಸಮ ಸಮ. ಅಲ್ಲವೇ?"
"ಹೌದು"
"ಅವುಗಳ ಪರಿಪೂರ್ಣ ಸಾಮ್ಯತೆ ಅಲ್ಲಿಗೆ ಮುಗಿಯಿತು. ಮುಂದಿನ ನಡಾವಳಿ ಒಂದೇ ರೀತಿ ಇರುವುದಿಲ್ಲವಲ್ಲ"
"ಹೌದು"
"ಒಂದು ವಿಮಾನ ನಿಲ್ದಾಣದಿಂದ ಪೂರ್ವಕ್ಕೆ ಹಾರಿತು. ಮತ್ತೊಂದು ಪಶ್ಚಿಮಕ್ಕೆ. ಮೂರನೆಯದು ಉತ್ತರಕ್ಕೆ"
"ಇರಬಹುದು"
"ಪೂರ್ವದಲ್ಲಿ ಸುಗಮ ಹವಾಮಾನ. ಅನುಕೂಲ ವಾತಾವರಣ. ಒಳ್ಳೆಯ ಅನುಚರ ವಾಯು. ಇಂಗ್ಲಿಷಿನಲ್ಲಿ Tail Wind"
" ಹಾರಾಟ ಸುಗಮವಾಗಿರುತ್ತದೆ. ಅದರ ವೇಗದ ಜೊತೆ ಗಾಳಿಯ ಸಹಕಾರ ಸಿಕ್ಕಿದೆ"
"ಪಶ್ಚಿಮಕ್ಕೆ ಹಾರಿದ ವಿಮಾನಕ್ಕೆ ಕೂಡ ಸುಗಮ ಹವಾಮಾನ ಸಿಕ್ಕಿದೆ. ಆದರೆ ಅನುಚರ ವಾಯು ಇಲ್ಲ. ಬದಲಾಗಿ ಪ್ರತಿಕೂಲ ವಾಯು. Heavy Head Wind"
"ಮೊದಲಿನ ವಿಮಾನದಷ್ಟೇ ದೂರ ಕ್ರಮಿಸಲು ಹೆಚ್ಚಿನ ಸಮಯ ಬೇಕು. ಪ್ರಯಾಸ ಸಹ ಜಾಸ್ತಿ. ಹೆಚ್ಚು ಇಂಧನ ಖರ್ಚಾಗುತ್ತದೆ" 
"ಉತ್ತರಕ್ಕೆ ಹಾರಿದ ವಿಮಾನ ಚಂಡಮಾರುತ ತೀವ್ರವಾಗಿರುವ ಹಾದಿಯಲ್ಲಿ ಸಾಗಬೇಕು"
"ಅದೊಂದು ಏರುಪೇರಿನ ಪ್ರಯಾಣ. Bumpy Ride. ಎಲ್ಲ ಕಾಲವೂ ಸೀಟ್ ಬೆಲ್ಟ್ ಕಟ್ಟಿಕೊಂಡೇ ಕೂತಿರಬೇಕು"
"ಅಪಘಾತಗಳಿಗೆ ಹೆಚ್ಚಿನ ಅವಕಾಶ. ಅಲ್ಲವೇ?"
"ಖಂಡಿತ"
"ಜ್ಯೋತಿಷ್ಯದಲ್ಲಿಯೂ ಹಾಗೆಯೇ. ಕೇವಲ ಜನ್ಮ ಕುಂಡಲಿಗಳಿಂದ ಪೂರ್ತಿ ಫಲ ಹೇಳಬಾರದು"
"ಅಂದರೆ?"
"ಜನ್ಮ ಕುಂಡಲಿ ಹುಟ್ಟಿದ ಸಮಯದಲ್ಲಿ ಗ್ರಹಗಳ ಬಲಾಬಲ ಹೇಳುತ್ತದೆ. ಅವುಗಳ ಈಗಿನ ಸ್ಥಿತಿ ಏನು? ಅದನ್ನು "ಗೋಚಾರ" ಅನ್ನುತ್ತಾರೆ. ಇದನ್ನೂ ಗಮನಿಸಬೇಕು"
"ಅಂದರೆ ಹುಟ್ಟಿನ ಕುಂಡಲಿ ಜೊತೆಗೆ ಈಗಿನ ಗೋಚರ ಫಲವನ್ನೂ ಸಾಮ್ಯ ಮಾಡಬೇಕು"
"ಹೌದು"

ಜ್ಯೋತಿಷ್ಯ ಫಲ ಹೇಳಲು ಇಷ್ಟೆಲ್ಲಾ ಬೇಕು! 

*****

"ಇವೆರಡು ಸರಿಯಾಗಿ ನೋಡಿದರೆ ಆಯಿತು"
"ಇಷ್ಟೇ ಅಲ್ಲ. ಇನ್ನೂ ಒಂದಿದೆ"
"ಅದೇನು?"
"ಪ್ರತಿ ಜೀವಿಯ ಮೇಲೂ ಅನ್ಯರ ಪ್ರಭಾವ ಇರುತ್ತದೆ"
"ಇರಬಹುದು. ಅದಕ್ಕೂ ಇದಕ್ಕೂ ಏನು ಸಂಬಂಧ?"
"ಅಶ್ವಪತಿ ಮಹಾರಾಜನಿಗೆ ಮಗ ಹುಟ್ಟಿದಾಗ ಜ್ಯೋತಿಷ್ಕರು ಮಗು ಅಲ್ಪಾಯು ಎಂದು ಹೇಳಿದರು"
"ಸರಿ"
"ಅವನ ಹೆಸರು ಸತ್ಯವಾನ. ಆದರೆ ಇದನ್ನು ತಿಳಿದೂ ಸಾವಿತ್ರಿ ಹಠ ಹಿಡಿದು ಅವನನ್ನು ಮದುವೆ ಆದಳು"
"ಹೌದು"
"ಅವಳು "ದೀರ್ಘ ಸುಮಂಗಲಿ" ಯೋಗ ಇದ್ದವಳು"
"ಮುಂದೆ?"
"ಯಮನೊಡನೆ ಹೋರಾಡಿ ಗಂಡನನ್ನು ಬದುಕಿಸಿಕೊಂಡಳು"
"ಅಂದರೆ?"
"ಅನೇಕರಿಗೆ ತಂದೆ-ತಾಯಿ, ಹೆಂಡತಿ, ಮಕ್ಕಳು, ಅಣ್ಣ-ತಮ್ಮಂದಿರು, ಮುಂತಾದ ಕಡೆಗಳಿಂದ ವಿಶೇಷ ಸಹಾಯ ಸಿಗುತ್ತದೆ. ಹಾಗೆಯೇ ಕೆಲವರ ಕಡೆಯಿಂದ ಹೆಚ್ಚಿನ ತೊಂದರೆ ಕೂಡ ಆಗಬಹುದು"
"ಇದರ ಸಮನ್ವಯ ಹೇಗೆ?"
"ಜ್ಯೋತಿಷ್ಯ ಫಲ ಹೇಳುವುದು ಕೇವಲ "ಪುಸ್ತಕದ ಬದನೇಕಾಯಿ" ಎಂಬಂತೆ ಆಗಬಾರದು. ಫಲ ಹೇಳುವವನಿಗೆ ಚೆನ್ನಾದ ಲೌಕಿಕ ಜ್ಞಾನ ಇರಬೇಕು"

ಇನ್ನೂ ಹೆಚ್ಚಿನ ಆಳಕ್ಕೆ ಇಳಿಯುವ ಅವಶ್ಯಕತೆ ಇದೆ!

*****

"ಮೂರು ವಿಮಾನಗಳನ್ನು ಮತ್ತೆ ತೆಗೆದುಕೊಳ್ಳೋಣ"
"ಮತ್ತಿನ್ನೇನು?"
"ಒಂದರ ಪೈಲಟ್ಗಳು ಇನ್ನೂ ಹೊಸಬರು. ಮತ್ತೊಂದರವರು ನುರಿತವರು. ಮೂರನೆಯವರು ಮೊದಲ ಬಾರಿ ಸ್ವತಂತ್ರವಾಗಿ ವಿಮಾನ ಚಾಲನೆ ಮಾಡುತ್ತಿದ್ದಾರೆ"
"ಇದು ಬಹಳ ಗಾಢವಾದ ಪರಿಣಾಮ ಮಾಡುತ್ತದೆ"
"ಜೊತೆಗೆ ಇಳಿಯುವ ನಿಲ್ದಾಣದ ಕಾರ್ಯ ಕ್ಷಮತೆ, ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ಸಹಕಾರ, ಮುಂತಾದುವೂ ಮುಖ್ಯ ಆಗುತ್ತವೆ. ಅಲ್ಲವೇ?"
"ಹೌದು"
"ಹತ್ತು ರೂಪಾಯಿ ಪುಸ್ತಕ ಕೊಂಡು, ಐದು ಸಲ ಓದಿ, ಜಾತಕ ಫಲ ಹೇಳಬಾರದು"
"ಅಂದರೆ?"
"ಇನ್ನೂ ಅನೇಕ ಸೂಕ್ಷ್ಮಗಳು ಇರುತ್ತವೆ. ನಂಬಿಕೆ ಇದ್ದರೆ ಕ್ರಮವಾಗಿ ಅಭ್ಯಾಸ ಮಾಡಬೇಕು"
"ಹುಂ"
"ತಿಳಿದವರೊಡನೆ ಒಡನಾಡಿ ಕಲಿಯಬೇಕು"
"ಗ್ರಹ ಸಮಯ ಎಂದೊಂದು ಉಂಟು. ಅದನ್ನೂ ನೋಡಬೇಕು"
"ಅಂದರೆ?"
"ಇಲ್ಲಿ ಇಬ್ಬರಿದ್ದಾರೆ. ಇಬ್ಬರಿಗೂ ಸೋದರಮಾವನ ಕಡೆಯಿಂದ ವಿಶೇಷ ಸಹಾಯ ಎಂದಿದೆ"
"ಸರಿ"
"ಒಬ್ಬನ ಸೋದರಮಾವ ಈಗ ಮಂತ್ರಿ ಆಗಿದ್ದಾನೆ"
"ಇನ್ನೊಬ್ಬನ ಸೋದರಮಾವ?'
"ಯಾವುದೋ ಕಾರಣಕ್ಕೆ ಅವನಿಗೆ ಜೈಲು ವಾಸ ನಡೆಯುತ್ತಿದೆ"
"ಒಹೋ! ಹೀಗೂ ಉಂಟೋ?"
"ಆದಕಾರಣ ಹುಟ್ಟು ಕಾಲದ ಫಲ, ಗೋಚಾರ ಫಲ, ವಾತಾವರಣ ಮುಂತಾದುವನ್ನು ಸಮನ್ವಯ ಮಾಡಬೇಕು"

ಇದು ಅಷ್ಟು ಸುಲಭದ ಕೆಲಸವಲ್ಲ!

*****

"ಇನ್ನೊಂದು ಉದಾಹರಣೆ ಕೊಡುತ್ತೇನೆ, ವಿನೋದಕ್ಕಾಗಿ"
"ಏನು?"
"ಮೂವರಿಗೆ "ಶತ್ರು ನಾಶ ಯೋಗ" ಇದೆ"
"ಹೀಗೊಂದು ಯೋಗ ಇದೆಯೇ?"
"ಇದೊಂದು ಉದಾಹರಣೆ. ಕೆಲವರಿಗೆ ಶತ್ರುಗಳನ್ನು ಜಯಿಸುವ ಯೋಗಗಳು ಇರುತ್ತವೆ"
"ಸರಿ"
"ಒಬ್ಬ ಸೈನ್ಯ ಸೇರುತ್ತಾನೆ. ಇನ್ನೊಬ್ಬ ಪಂಡಿತ ಆಗುತ್ತಾನೆ. ಮೂರನೆಯವ ಅಡಿಗೆ ಭಟ್ಟ ಆಗುತ್ತಾನೆ"
"ಮುಂದೆ?"
"ಸೈನ್ಯಕ್ಕೆ ಸೇರಿದವನು ನಿಜವಾಗಿ ಶತ್ರುಗಳನ್ನು ಕೊಚ್ಚಿ ಹಾಕಬಹುದು"
"ಅದು ಸಾಧ್ಯ"
"ಪಂಡಿತ?"
"ಅವನದೇನು?"
"ಅವನು ಪ್ರತಿವಾದಿಗಳನ್ನು ಸೋಲಿಸುತ್ತಾ ಯಶಸ್ಸು ಪಡೆಯಬಹುದು"
"ಹೌದು. ಅಡಿಗೆ ಭಟ್ಟ?"
"ಅವನು ಬಾಣಸಿಗನಾಗಿ ಅಡಿಗೆ ಮನೆಯಲ್ಲಿ ಸೊಪ್ಪು-ತರಕಾರಿ ಮುಂತಾದುವುಗಳನ್ನು ಚೆನ್ನಾಗಿ ಕತ್ತರಿಸುತ್ತಾ ಸೊಗಸಾಗಿ ಅಡಿಗೆ ಮಾಡುತ್ತಾನೆ!"

ಜೋರಾಗಿ ನಗುವುದನ್ನು ಬಿಟ್ಟು ಮತ್ತಿನ್ನೇನು ಮಾಡುವುದು? ಜ್ಯೋತಿಷಿಗೆ "ಹಾಸ್ಯ ಪ್ರಜ್ಞೆ" ಸಹ ಇರಬೇಕೆ?

*****

ಸ್ವಂತ ಕುಂಡಲಿಗಳ ನಿರೀಕ್ಷಣೆ ಮತ್ತು ದೈವ ಸಹಾಯ ಎನ್ನುವ ಇನ್ನೆರಡು ಪದರಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Friday, July 3, 2026

ಜ್ಯೋತಿಷ್ಯದಲ್ಲಿ ನಂಬಿಕೆ


ಆಸ್ಪತ್ರೆಯ ಕೋಣೆಯೊಂದರಲ್ಲಿ ಅಣ್ಣ-ತಮ್ಮ ಇಬ್ಬರ ನಡುವೆ ನಡೆದ ಸಂಬಾಷಣೆಯನ್ನೂ, ಅದರ ಹಿನ್ನೆಲೆಯಲ್ಲಿ ತಂದೆ-ಮಗನ ನಡುವೆ ನಡೆದ ವಿಚಾರ ವಿನಿಮಯವನ್ನೂ ನೋಡಿದೆವು. "ಅಂತರಂಗದ ಮಾತುಗಳು" ಎನ್ನುವ ಶೀರ್ಷಿಕೆಯ, ಕಳೆದ ಸಂಚಿಕೆಯಲ್ಲಿ ಇದರ ವಿವರಗಳಿವೆ. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು.

ಸಹೋದರರ ನಡುವೆ ನಡೆದ ಮಾತು-ಕತೆ ಹುಟ್ಟುಹಾಕಿದ ಅನೇಕ ಅನುಮಾನಗಳಲ್ಲಿ "ಸಾವಿನ ಬಗ್ಗೆ ಮುಕ್ತ ಚರ್ಚೆ ಮಾಡಬೇಕೇ ಅಥವಾ ಮಾಡಬಾರದೇ? ಆಸ್ಪತ್ರೆಯಲ್ಲಿದ್ದವರೊಂದಿಗೆ ಹಾಗೆ ಮಾತನಾಡಿದುದು ಸರಿಯೇ? ಅಲ್ಲಿ ಅನೇಕ ಇತರರು ಇದ್ದರೂ ಚರ್ಚೆ ಮಾಡಿದುದು ಸಾಧುವೇ?" ಅನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿಯಾಯಿತು. ಇನ್ನೂ ಕೆಲವು ಮುಖ್ಯ ಪ್ರಶ್ನೆಗಳು ಉಳಿದಿವೆ. "ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಇಡುವುದು ಸರಿಯೇ? ಇಟ್ಟರೆ ಎಷ್ಟು ಮಟ್ಟದವರೆಗೆ ನಂಬಿಕೆ ಇಡಬಹುದು?" ಅನ್ನುವ ಪ್ರಶ್ನೆ ಉಳಿದಿದೆ. ಹಾಗೆಯೇ, "ತಮ್ಮ ಕುಂಡಲಿಯನ್ನು ತಾವೇ ಪರಿಶೀಲಿಸಿ ನೋಡುವುದು ಸರಿಯೇ?" ಮತ್ತು "ಹೀಗೆ ನಂಬಿ ಬಾಳುವುದರಿಂದ ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳು ಆಗುವುದಿಲ್ಲವೇ?" ಎನ್ನುವ ಪ್ರಶ್ನೆಗಳು ಉಳಿದಿವೆ. ಈ ಚರ್ಚೆಗಳ ಸಂದರ್ಭದಲ್ಲಿ ಅವುಗಳಿಂದ ಹುಟ್ಟುವ ಬೇರೆ ಪ್ರಶ್ನೆಗಳೂ ಮುಂದೆ ಕಾಣಸಿಗಬಹುದು!

"ಜ್ಯೋತಿಷ್ಯದಲ್ಲಿ ನಂಬಿಕೆ" ಅನ್ನುವ ಬಗ್ಗೆ ಈ ಸಂಚಿಕೆಯಲ್ಲಿ ಸ್ವಲ್ಪ ವಿಚಾರ ಮಾಡೋಣ. 

*****

ಮತ್ತೊಮ್ಮೆ ವಿರಾಮವಾಗಿ ಕುಳಿತಾಗ ತಂದೆ-ಮಗನ ಮಾತುಕತೆ ಮುಂದುವರೆಯಿತು.

"ನಿನ್ನೆ ಮಾತನಾಡಿದುದರ ಬಗ್ಗೆ ಏನಾದರೂ ಅನುಮಾನಗಳು ಉಳಿದಿವೆಯೋ?"
"ಇಲ್ಲ. ಮಾತಾಡಿದಾಗ ಎಲ್ಲಾ ಪರಿಹಾರವಾದಂತಿರುತ್ತದೆ. ನಂತರ ಅನುಮಾನ ಬರಬಹುದು"
"ಹಾಗಾಗುವುದು ಉಂಟು. ಕೆಲವೊಮ್ಮೆ ಒಬ್ಬರಿಂದ ಪ್ರಶ್ನೆಗೆ ಉತ್ತರ ಬಂದರೆ ಮನಸ್ಸಿಗೆ ಸಮಾಧಾನ ಆಗುವುದಿಲ್ಲ. ಇನ್ನೊಬ್ಬರನ್ನು ಕೇಳಬೇಕು ಅನ್ನಿಸಬಹುದು"
"ಆಗ ಏನು ಮಾಡುವುದು?"
"ತಿಳಿದವರನ್ನು ಕೇಳಬಹುದು. ಸಿಕ್ಕಸಿಕ್ಕವರನ್ನೆಲ್ಲ ಕೇಳುತ್ತಾ ಹೋಗಬಾರದು. ಅಷ್ಟೇ"
"ಹೇಳುವವರಲ್ಲಿ ಅಭಿಪ್ರಾಯ ಭೇದ ಕಂಡುಬಂದರೆ?"
"ಕಾಲಮಾನದಲ್ಲಿ ಗಟ್ಟಿಯಾಗಿ ನಿಂತ ಗ್ರಂಥಗಳಿವೆ. ಹಿಂದಿನವರ ಅನುಭವದ ಸಾರಸಂಗ್ರಹ ಇದೆ. ಇವುಗಳ ಉಪಯೋಗ ಪಡೆಯಬಹುದು"
"ಕಡೆಗೆ ಯಾವ ತೀರ್ಮಾನ ಉಳಿಯುತ್ತದೆ?"
"ಇವೆಲ್ಲಾ ಪರಾನುಭವದ ತಿಳಿವು. ಕಡೆಗೆ ನಮ್ಮ ಅನುಭವದ ತಿಳಿವಿಗೆ ದಾರಿ ತೋರಬೇಕಷ್ಟೆ"

"ಜ್ಯೋತಿಷ್ಯ ನಂಬಬೇಕೆ? ನಂಬಬಾರದೇ? ಇದು ಒಂದು ದೊಡ್ಡ ಪ್ರಶ್ನೆ ಆಗಿದೆ"
"ಜ್ಯೋತಿಷ್ಯದ ಉಗಮ ಎಲ್ಲಿ?"
"ಆರು ವೇದಾಂಗಗಳಲ್ಲಿ ಜ್ಯೋತಿಷ್ಯ ಒಂದು ಅನ್ನುತ್ತಾರೆ"
"ಹೌದು. ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಕಲ್ಪ ಮತ್ತು ಜ್ಯೋತಿಷ್ಯ, ಇವು ಆರು ವೇದಾಂಗಗಳು"
"ಇವುಗಳ ಪ್ರಯೋಜನವೇನು?"
"ಅನೇಕ ಸ್ರೋತಗಳಿಂದ ಬಂದ ಅರಿವನ್ನು ಕ್ರೋಢೀಕರಿಸಿ ಒಟ್ಟು ಜ್ಞಾನವನ್ನು ಸ್ಫುಟ ಮಾಡಲು ಇವು ಸಹಾಯಕ"
"ಜ್ಯೋತಿಷ್ಯ ನಂಬಬೇಕೆ? ಅಥವಾ ನಂಬಬಾರದೇ?"
"ಪಕ್ಕದ ಮನೆ ರಾಮರಾಯರನ್ನು ನಂಬಬೇಕೆ? ನಂಬಬಾರದೇ?"
"ಅದಕ್ಕೂ ಇದಕ್ಕೂ ಏನು ಸಂಬಂಧ?"
"ಈ ಪ್ರಶ್ನೆಗೆ ಉತ್ತರದಂತೆ ಅದೂ ಕೂಡ"
"ಅದು ಹೇಗೆ?"
"ಕೆಲವರು ಅವರನ್ನು ನಂಬಬಹುದು ಅನ್ನುತ್ತಾರೆ. ಮತ್ತೆ ಕೆಲವರು ನಂಬಬೇಡ ಅನ್ನುತ್ತಾರೆ"
"ಹಾಗೆ ಹೇಳುವುದಕ್ಕೆ ಏನಾದರೂ ಆಧಾರ ಬೇಡವೇ?'
"ರಾಮರಾಯರನ್ನು ಸರಿಯಾಗಿ ತಿಳಿದುಕೊಂಡವರನ್ನು ಕೇಳಬೇಕು. ಅವರನ್ನು ಕಾರಣವಿಲ್ಲದೆ ಇಷ್ಟ ಪಡುವವರನ್ನು ಕೇಳಿದರೆ? ಅವರ ವಿನಾಕಾರಣ ಶತ್ರುಗಳನ್ನು ಕೇಳಿದರೆ?"
"ಇಬ್ಬರಿಂದಲೂ ಅತಿರೇಕದ ಅಭಿಪ್ರಾಯಗಳು ಬರಬಹುದು"
"ಇದೂ ಹಾಗೆಯೇ"

ಇದು ಯಾಕೋ ಸರಿಬರುತ್ತಿಲ್ಲ!
*****

"ಜ್ಯೋತಿಷ್ಯ ಖಗೋಳ ಶಾಸ್ತ್ರದಿಂದ ಉಗಮವಾಯಿತು ಎನ್ನುತ್ತಾರೆ. ಗ್ರಹಗಳ ಬಲಾಬಲ, ನಮ್ಮ ಜೀವನದ ಮೇಲೆ ಅವುಗಳ ಪ್ರಭಾವ, ಇವನ್ನು ಅರಸುವ ವಿದ್ಯೆ"
"ಗ್ರಹಗಳ ಪ್ರಭಾವ ನಮ್ಮ ಮೇಲೆ ಇದೆ ಎಂದು ಹೇಗೆ ನಂಬುವುದು?"
"ನಮ್ಮ ಮೇಲೆ ಹಗಲು-ರಾತ್ರಿಗಳ ಪ್ರಭಾವ ಇದೆಯೇ?"
"ಇದೆ. ನಮ್ಮ ಜೀವನ ಕ್ರಮವೇ ಇದರ ಮೇಲೆ ನಡೆಯುತ್ತಿಲ್ಲವೇ?"
"ಋತುಗಳ-ಸಂವತ್ಸರಗಳ ಪ್ರಭಾವ ಇದೆಯೇ?"
"ಖಂಡಿತ ಇದೆ"
"ಹಗಲು-ರಾತ್ರಿ, ಋತುಮಾನಗಳು ಇವೆಲ್ಲಾ ಗ್ರಹಗಳ ಚಲನೆಯಿಂದ ತಾನೇ?"
"ಹೌದು"
"ಜ್ಯೋತಿಷ್ಯವೂ ಇದನ್ನೇ ಹೇಳುವುದು"
"ಏನೋ ಲೆಕ್ಕ ಹಾಕಿ ಹೇಳುವುದು ಎಷ್ಟು ಸರಿಯಾದೀತು?"
"ಮನೆಗಳಲ್ಲಿ ಪಂಚಾಗ ಇರುತ್ತದಲ್ಲ?"
"ಅನೇಕ ಮನೆಗಳಲ್ಲಿ ಇರುತ್ತದೆ. ಮತ್ತನೇಕ ಮನೆಗಳಲ್ಲಿ ಇರುವುದಿಲ್ಲ"
"ಕೆಲವು ರೂಪಾಯಿ ಕೊಟ್ಟು ಪಂಚಾಂಗ ತಂದು ಮನೆಯಲ್ಲಿ ಇಟ್ಟಿರುತ್ತೇವೆ"
"ಹೌದು. ಯುಗಾದಿಯ ದಿನ "ಪಂಚಾಂಗ ಶ್ರವಣ" ಸಹ ನಡೆಸುತ್ತೇವಲ್ಲ"
"ಹೀಗೆ ಯಾರೋ ಲೆಕ್ಕ ಹಾಕಿ, ಬರೆದು, ಮುದ್ರಿಸಿರುವ ಪಂಚಾಂಗದಲ್ಲಿ ಗ್ರಹಣಗಳ ವಿವರ ಬರೆದಿರುತ್ತಾರಲ್ಲ"
"ಹೌದು. ಬರೆದಿರುತ್ತಾರೆ"
"ಗ್ರಹಣ ಹಿಡಿಯುವ ಸಮಯ, ಮಧ್ಯದ ಸಮಯ, ಬಿಡುವ ಸಮಯ ಬರೆದಿರುತ್ತಾರಲ್ಲ"
"ಹೌದು. ಎಲ್ಲ ವಿವರಗಳೂ ಇರುತ್ತವೆ"
"ಈಗ ವಿಜ್ಞಾನದಲ್ಲಿ ಪ್ರಚಂಡ ಬೆಳವಣಿಗೆ ಆಗಿದೆ. ಪಂಚಾಂಗಗಳು ಬಹಳ ಹಿಂದಿನಿಂದಲೂ ಇವೆ. ಆಗಿನಿಂದಲೂ ಇದೇ ರೀತಿ ವಿವರಗಳು ಇರುತ್ತಿದ್ದವಲ್ಲ. ಗ್ರಹಣದ ದಿನ ಹಾಗೇ ಆಗುತ್ತದೋ?"
"ಆಗುವುದನ್ನು ನಾವು ನೋಡುತ್ತೇವಲ್ಲ. ಚಂದ್ರ ಗ್ರಹಣದಲ್ಲಂತೂ ಚೆನ್ನಾಗಿ ಗೊತ್ತಾಗುತ್ತದೆ"
"ಸೂರ್ಯ ಗ್ರಹಣದಲ್ಲೂ ಹಗಲಿನಲ್ಲಿ ಕತ್ತಲಾಗುತ್ತದಲ್ಲ"
"ಅದೂ ಕಣ್ಣಿಗೆ ಕಾಣುವ ಮಾತೇ"
"ಅಂದರೆ ಅದರಲ್ಲಿ ಸತ್ಯ ಇದೆ ಎಂದಾಯಿತಲ್ಲವೇ?"
"ಹೌದು ಅಂತಲೇ ಹೇಳಬೇಕಾಗುತ್ತದೆ"
"ಮತ್ತೆ ಜ್ಯೋತಿಷ್ಯದಲ್ಲಿ ಅನುಮಾನ ಯಾಕೆ?"

ಯೋಚಿಸಬೇಕಾದ ವಿಷಯವೇ. ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ ಮೊದಲಾದುವು ಖಚಿತವಾಗಿ ಹೇಳಿರುತ್ತಾರಲ್ಲ. ಗ್ರಹಣಾದಿಗಳು ಪ್ರಪಂಚದ ಯಾವ ಭಾಗಗಳಲ್ಲಿ ಕಾಣಿಸುತ್ತವೆ ಅನ್ನುವುದನ್ನೂ ನಿಖರವಾಗಿ ಹಾಕಿರುತ್ತಾರಲ್ಲ! 

*****

"ಲೆಕ್ಕ ಹಾಕಿ ಹೇಳುತ್ತಾರೆ ಅಂದಮಾತ್ರಕ್ಕೆ ನಂಬಬೇಕೇ?"
"ಒಂದು ವಿದ್ಯಾರ್ಥಿಗಳ ತರಗತಿ ಇದೆ ಅನ್ನೋಣ. ಗಣಿತದ ಪಾಠ ನಡೆಯುತ್ತಿದೆ. ಗುರುಗಳು ಒಂದು ಗಣಿತದ ಪ್ರಶ್ನೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಸಮಸ್ಯೆ ಬಿಡಿಸಿ ಉತ್ತರ ಬರೆದಿಟ್ಟಿದ್ದಾರೆ. ಗುರುಗಳು ಉತ್ತರಗಳನ್ನು ಪರಿಶೀಲಿಸುತ್ತಿದ್ದಾರೆ. ಸಾಮಾನ್ಯವಾಗಿ ಕಂಡುಬರುವ ದೃಶ್ಯ ಹೇಗಿರುತ್ತದೆ?"
"ಕೆಲವು ವಿದ್ಯಾರ್ಥಿಗಳ ಉತ್ತರಗಳು ಸರಿ ಇರುತ್ತವೆ. ಕೆಲವರದು ತಪ್ಪು ಇರುತ್ತವೆ"
"ಸರಿ ಇರುವ ಉತ್ತರಗಳು ಎಲ್ಲವೂ ಒಂದೇ ಆಗಿರಬೇಕಲ್ಲವೇ?"
"ಹೌದು. ಅದರಲ್ಲಿ ವ್ಯತ್ಯಾಸ ಆಗುವಂತಿಲ್ಲ"
"ತಪ್ಪು ಉತ್ತರಗಳಲ್ಲಿ?"
"ಎಲ್ಲ ತಪ್ಪು ಉತ್ತರಗಳೂ ಒಂದೇ ಇರಬೇಕೆಂದಿಲ್ಲ"
"ಕೆಲವೊಮ್ಮೆ ಅನೇಕ ವಿದ್ಯಾರ್ಥಿಗಳು ಒಂದೇ ತಪ್ಪು ಉತ್ತರ ಬರೆದಿರಬಹುದೋ?"
"ಅದು ಸಾಧ್ಯ. ಯಾವುದೋ ಒಂದು ಸೂತ್ರ ಅಥವಾ ತತ್ವ ಅನೇಕ ವಿದ್ಯಾರ್ಥಿಗಳು ಒಂದೇ ರೀತಿ ತಪ್ಪಾಗಿ ಪ್ರಯೋಗಿಸಿದ್ದರೆ ಅವರೆಲ್ಲಾ ಒಂದೇ ತಪ್ಪು ಉತ್ತರ ಪಡೆದಿರುತ್ತಾರೆ. ಇತರರು ಬೇರೆ ಬೇರೆ ತಪ್ಪು ಉತ್ತರ ಪಡೆದಿರಬಹುದು"
"ಕೆಲವು ವಿದ್ಯಾರ್ಥಿಗಳು ತಪ್ಪು ಉತ್ತರ ಪಡೆದಿದ್ದಾರೆ ಅಂದರೆ ಗಣಿತವೇ ತಪ್ಪು ಅನ್ನಬಹುದೇ? ಉತ್ತರ ತಪ್ಪಿದ್ದರೆ ಗಣಿತವೇ ತಪ್ಪೇ?"
"ಅದು ಹೇಗೆ ಸಾಧ್ಯ? ಅದು ವಿದ್ಯಾರ್ಥಿಗಳ ತಪ್ಪು. ಗಣಿತದ್ದಲ್ಲ"
"ಜ್ಯೋತಿಷ್ಯದಲ್ಲಿಯೂ ಹೀಗೆ ಅಲ್ಲವೇ? ತಪ್ಪು ಭವಿಷ್ಯವಾಣಿ ಹೇಳಿದರೆ ಅದು ಜ್ಯೋತಿಷಿಯ ತಪ್ಪೋ, ಅಥವಾ ಜ್ಯೋತಿಷ್ಯದ್ದೋ?"

ಯೋಚಿಸಬೇಕಾದ ವಿಷಯವೇ. ಒಂದೇ ಕುಂಡಲಿ, ಒಬ್ಬನೇ ವ್ಯಕ್ತಿ ಬಗ್ಗೆ ಬೇರೆ ಬೇರೆ ಜ್ಯೋತಿಷ್ಕರು ಹೇಳಿದುದು ಬೇರೆ ಬೇರೆ ಆಗಿರಬಹುದು. ಹೀಗಾಗಲು ಕಾರಣ?

*****

"ಇದೆಲ್ಲಾ ಸರಿ. ಒಂದೇ ವಿಷಯದ ಬಗ್ಗೆ ಬೇರೆ ಬೇರೆ ವ್ಯಕ್ತಿಗಳು ಹೇಳಿದ ಭವಿಷ್ಯಗಳು ಏಕೆ ಒಂದೇ ಆಗಿರುವುದಿಲ್ಲ?"
"ಅಲ್ಲಿ ಗಸಗಸೆ ಪಾಯಸ ಮಾಡಿಟ್ಟಿದ್ದಾರೆ. ಹತ್ತು ಜನ ಸೇವಿಸುತ್ತಾರೆ. ಅವರ ಅಭಿಪ್ರಾಯಗಳು ಏನು ಹೇಳುತ್ತವೆ?"
"ಕೆಲವರು ಚೆನ್ನಾಗಿದೆ ಅನ್ನುತ್ತಾರೆ. ಕೆಲವರು ತುಂಬಾ ಚೆನ್ನಾಗಿದೆ ಅನ್ನುತ್ತಾರೆ. ಕೆಲವರು ಅಷ್ಟು ಸರಿಯಿಲ್ಲ ಅನ್ನಬಹುದು"
"ಹೀಗೆ ಆಗಲು ಕಾರಣ?'
"ಪಾಯಸ ಒಂದೇ ಆದರೂ ಅವರವರ ಅನುಭವ, ಇಷ್ಟ-ಅನಿಷ್ಟ, ನಿರೀಕ್ಷೆ, ಇವುಗಳ ಛಾಯೆ ಅವರವರ ಅಭಿಪ್ರಾಯದಲ್ಲಿ ಕಂಡುಬರುತ್ತದೆ"
"ಜ್ಯೋತಿಷ್ಯದಲ್ಲೂ ಅಷ್ಟೇ. ಒಂದೇ ಸಂದರ್ಭವನ್ನು ಅರ್ಥ ಮಾಡಿ ವಿಶ್ಲೇಷಿಸುವಾಗ ಹೀಗೆ ಮಾಡುವವರ ಗುಣಗಳ ಛಾಯೆಯೂ ಬೀಳುತ್ತದೆ. ಮೊದಲ ಬಾರಿ ಪಾಯಸ ತಿಂದವನ ಅಭಿಪ್ರಾಯಕ್ಕೂ, ಅನೇಕ ಬಾರಿ ಪಾಯಸ ತಿಂದವನ ಅಭಿಪ್ರಾಯಕ್ಕೂ ಬೇಧ ಇರುವುದಿಲ್ಲವೇ? ಒಂದೇ ಕಡೆ ಅನೇಕ ಬಾರಿ ಪಾಯಸ ತಿಂದವನಿಗೂ, ಅನೇಕ ಕಡೆ ಅನೇಕ ಬಾರಿ ಪಾಯಸ ತಿಂದವನಿಗೂ ಅಭಿಪ್ರಾಯ ವ್ಯತ್ಯಾಸ ಇರುವುದಿಲ್ಲವೇ? ಪಾಯಸ ತಯಾರಿ ಮಾಡಿದವರನ್ನು ಸಂತೋಷಪಡಿಸಲು ಹೇಳುವವನಿಗೂ, ವಸ್ತುನಿಷ್ಠ ರೀತಿಯಲ್ಲಿ ಹೇಳುವವನಿಗೂ ಒಂದೇ ರೀತಿ ಇರುತ್ತದೆಯೇ?"
"ಹೀಗಿದ್ದರೆ ಕೇಳುವವನಿಗೆ ವ್ಯತ್ಯಾಸ ಗೊತ್ತಾಗುವುದು ಹೇಗೆ? ಯಾರು ವಸ್ತುನಿಷ್ಠವಾಗಿ ಹೇಳುತ್ತಾರೆ ಎಂದು ತಿಳಿಯುವ ಬಗೆ?'
"ಇಲ್ಲಿ ನಮ್ಮ ನಮ್ಮ ವಿವೇಚನೆ ಕೆಲಸ ಮಾಡಬೇಕು"

ಇದು ಸುಲಭದ ಕೆಲಸವಲ್ಲ. ಎಷ್ಟೋ-ಇಷ್ಟೂ ತಿಳಿದು, ಪುಸ್ತಕ ಓದಿ, ಜ್ಯೋತಿಷ್ಯ ಹೇಳುವುದು ಕೆರೆಯ ಏರಿಯ ಮೇಲೆ ನಿಂತು ನೀರಿನ ಆಳ ಹೇಳಿದಂತೆ.

*****

"ಆಯಿತು. ನೀವು ಜ್ಯೋತಿಷ್ಯ ಶಾಸ್ತ್ರ ಅಧ್ಯಯನ ಮಾಡಿದ್ದೀರಿ. ಅನುಭವ ಇದೆ. ನೀವು ಅದನ್ನು ನಂಬುತ್ತೀರಾ?"
"ನಾನು ನಂಬುವುದೂ ಬಿಡುವುದೂ ನನಗೆ ಸೇರಿದ್ದು"
"ಇರಲಿ. ಈ ಪ್ರಶ್ನೆಗೆ ನೇರ ಉತ್ತರ ಏನು?"
"ಒಂದು ಪರೀಕ್ಷೆ ಇದೆ. ಹಲವರು ಪರೀಕ್ಷೆ ಬರೆಯಲು ಹೋಗುತ್ತಾರೆ. ತಯಾರಿ ಮಾಡಿಕೊಂಡು ಹೋಗುವುದು ಒಳ್ಳೆಯದೋ, ಇಲ್ಲವೇ ಸುಮ್ಮನೆ ಹೋಗುವುದು ಒಳ್ಳೆಯದೋ?'
"ತಯಾರಿ ಮಾಡಿಕೊಂಡು ಹೋಗುವುದೇ ಒಳ್ಳೆಯದು"
"ಜೀವನದಲ್ಲಿಯೂ ಹಾಗೆ. ಪುರುಷ ಪ್ರಯತ್ನ ಮತ್ತು ದೈವ ಸಂಕಲ್ಪ ಎಂದು ಎರಡು ಇವೆ. ಪುರುಷ ಪ್ರಯತ್ನವೇ ದೊಡ್ಡದು ಎನ್ನುವ ಅನೇಕ ಹೇಳಿಕೆಗಳಿವೆ. ದೈವಸಹಾಯವೇ ದೊಡ್ಡದು ಎನ್ನುವುದಕ್ಕೂ ಅಷ್ಟೇ ಹೇಳಿಕೆಗಳಿವೆ. ಎರಡೂ ಬೇಕು ಎನ್ನುವುದು ನನ್ನ ಅಭಿಮತ"
"ಅಂದರೆ?"
"ತಯಾರಿ ಮಾಡಿಕೊಂಡು ಪರೀಕ್ಷೆಗೆ ಹೋದವರೆಲ್ಲ ಪಾಸ್ ಆಗುತ್ತಾರೆ ಅನ್ನುವಂತಿಲ್ಲ. ನೂರು ಪ್ರಶ್ನೆಗೆ ಉತ್ತರ ತಿಳಿದು ಅಲ್ಲಿ ಹೋಗಿ ಕೂಡಬಹುದು. ನೂರಾ ಒಂದರಿಂದ ನೂರಾ ಹತ್ತರವರೆಗಿನ ಪ್ರಶ್ನೆ ಅಲ್ಲಿ ಕೇಳಬಹುದು. ಅಂದಮಾತ್ರಕ್ಕೆ ಏನೂ ಓದದೇ ಪರೀಕ್ಷೆಗೆ ಹೋಗುವುದು ಜಾಣತನವಲ್ಲ"
"ಜ್ಯೋತಿಷ್ಯದ ಸಂದರ್ಭದಲ್ಲಿ ಇದರ ಅನ್ವಯ ಹೇಗೆ?"
"ಪರವೂರಿಗೆ ಪ್ರಯಾಣ ಹೋಗಬೇಕು. ನೇರವಾಗಿ ಬಸ್ ನಿಲ್ದಾಣಕ್ಕೆ ಹೋಗಿ ಕೂಡಬಹುದು. ಇಲ್ಲವೇ ಬಸ್ ವೇಳಾಪಟ್ಟಿ ನೋಡಿಕೊಂಡು ಬಸ್ ಸಿಗುವ ವೇಳೆಗೆ ಹೋಗಬಹುದು. ನಿಲ್ದಾಣಕ್ಕಂತೂ ಹೋಗಬೇಕು"
"ಅಂದರೆ?"
"ಗ್ರಹಗತಿ ನೋಡಿ ಅನುಕೂಲ ಸಮಯದಲ್ಲಿ ಕೆಲಸಗಳನ್ನು ಮಾಡಿದರೆ ಬಹುತೇಕ ಯಶಸ್ಸು ಕಾಣಬಹುದು"
"ನಮ್ಮ ಬಳಿ ಬಸ್ಸಿನ ವೇಳಾಪಟ್ಟಿಯೇ ಇಲ್ಲದಿದ್ದರೆ?" 
"ಅಂತಹ ಸಮಯದಲ್ಲಿಯೂ ಬಸ್ ನಿಲ್ದಾಣಕ್ಕೆ ಹೋಗಿ ಬಸ್ಸು ಹಿಡಿದಿರುವುದು ಉಂಟು. ನಮ್ಮ ಕುಟುಂಬದಲ್ಲಿಯೇ ವಧೂ-ವರರು ಪರಸ್ಪರ ಒಪ್ಪಿ ಮುಂದೆ ಬಂದು ನಿಂತಾಗ ಜಾತಕಗಳ ಬಗ್ಗೆ ಯೋಚಿಸದೇ ವಿವಾಹ ಮಾಡಿಸಿದ್ದೇನೆ. ಅವರು ಚೆನ್ನಾಗಿ ಬಾಳಿ-ಬದುಕುತ್ತಿರುವುದೂ ಉಂಟು"

"ಅಂತೂ ಈ ನಂಬಿಕೆಯ ವಿಷಯ ಬಹಳ ಕಷ್ಟದ್ದು. ಅಲ್ಲವೇ?"
"ನಾನು ಏನನ್ನೂ ನಂಬುವುದಿಲ್ಲ ಅನ್ನುವವನೂ ಅದನ್ನು ನಂಬುತ್ತಾನೆ. "ದೇವರಿಲ್ಲ" ಅನ್ನುವ ನಿರೀಶ್ವರವಾದಿಯೂ ಆ ತತ್ವವನ್ನು ನಂಬುತ್ತಾನೆ! ನಂಬಿಕೆಯಿಲ್ಲದೆ ಜೀವನವಿಲ್ಲ"

ನಂಬಿಕೆಯ ಬಗ್ಗೆ ಇನ್ನಷ್ಟು ಪ್ರಶ್ನೆಗಳು! ಮತ್ತೊಮ್ಮೆ ಇವುಗಳ ಬಗ್ಗೆ ನೋಡೋಣ.

*****

ಯೋಗಾಯೋಗದಿಂದ ಇದು 550 ಸಂಖ್ಯೆಯ ಸಂಚಿಕೆ. ಕಳೆದ ಹದಿನಾರು ವರುಷಗಳಿಂದ ಇವುಗಳನ್ನು ಓದಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಓದುಗರಿಗೂ, ಹಿತೈಷಿಗಳಿಗೂ ಅನಂತಾನಂತ ವಂದನೆಗಳು. 

Wednesday, July 1, 2026

ಅಂತರಂಗದ ಮಾತುಗಳು


ಅಣ್ಣ-ತಮ್ಮಂದಿರು ಆಸ್ಪತ್ರೆಯ ಕೋಣೆಯೊಂದರಲ್ಲಿ ಸಂಧಿಸಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡ ಒಂದು ಸಂದರ್ಭದ ನೆನಪನ್ನು ಹಿಂದಿನ ಸಂಚಿಕೆಯಲ್ಲಿ ಮಾಡಿಕೊಂಡೆವು. "ಯಾರು ಮೊದಲು ಪ್ರಯಾಣ?" ಅನ್ನುವ ಶೀರ್ಷಿಕೆಯ ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಈ ಸಂಚಿಕೆಯನ್ನು ಕುರಿತು ಅನೇಕ ಪ್ರತಿಕ್ರಿಯೆಗಳು ಬಂದಿವೆ. ಜ್ಯೋತಿಷ್ಯದ ಬಗ್ಗೆ ನಂಬಿಕೆ ಸರಿಯೇ? ನಂಬಬೇಕೇ ಅಥವಾ ಬೇಡವೇ? ನಂಬಿದರೆ ಎಷ್ಟು ಮಟ್ಟಕ್ಕೆ ನಂಬಬೇಕು? ಸಾವಿನ ಬಗ್ಗೆ ಮುಕ್ತ ಚರ್ಚೆ ಒಳ್ಳೆಯದೇ? "ಸಾವಿನ ಬಗ್ಗೆ ಮಾತನಾಡಬಾರದು" ಅನ್ನುತ್ತಾರಲ್ಲಾ? ಜ್ಯೋತಿಷ್ಯ ಶಾಸ್ತ್ರ ನಂಬುವವರೂ ಸಾವಿನ ಬಗ್ಗೆ ತಿಳಿದುಕೊಂಡು ಬದುಕಬಹುದೇ? ತನ್ನ ಕುಂಡಲಿಯನ್ನು ತಾನೇ ಅಭ್ಯಾಸ ಮಾಡಬಾರದು, ಅಲ್ಲವೇ? ಹೀಗೆ ಮಾಡುವುದರಿಂದ ಉಳಿದ ಮುಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಆಗುವುದಿಲ್ಲವೇ? ಹೀಗೆ ಅನೇಕ ಸಂದೇಹಗಳು, ಪ್ರಶ್ನೆಗಳು ಬಂದು ನಿಂತಿವೆ. ಇವುಗಳ ಬಗ್ಗೆ ಈಗ ಸ್ವಲ್ಪ ನೋಡೋಣ.

ಜ್ಯೋತಿಷ್ಯ ಶಾಸ್ತ್ರ ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ಕೆಲವರು ಬಳಸುವ ಒಂದು ಜೀವನ ವಿಧಾನ ಎಂದು ನಂಬುವವರು ಕೆಲವರು. ಅದನ್ನು ಜೀವನದ ಪರಮ ಧ್ಯೇಯ ಎಂದು ನಂಬಿ ಅದರ ಆಚರಣೆಯಿಂದ ಜೀವನ ಹಾಳು ಮಾಡಿಕೊಂಡವರೂ ಉಂಟು. ಅನುಕೂಲವಿದ್ದಾಗ ನಂಬಿ, ಬೇಡವಾದಾಗ ಬಿಟ್ಟು ಎಡಬಿಡಂಗಿ ಆದವರಿಗೂ ಕಮ್ಮಿಯಿಲ್ಲ!

*****

ಆಸ್ಪತ್ರೆಯಲ್ಲಿ ಮಾತುಕತೆ ಮುಗಿದ ನಂತರ ಅಣ್ಣ ಮತ್ತು ಅವರನ್ನು ಅಲ್ಲಿಗೆ ಕರೆದುಕೊಂಡು ಬಂದಿದ್ದ ಅವರ ಮಗ ಮನೆಗೆ ಹೊರಟರು. ಜೊತೆಯಲ್ಲಿ ಬಂದಿದ್ದ ಮಗನಿಗೆ ವಿಚಾರ ವಿನಿಮಯದ ಅಲ್ಪ-ಸ್ವಲ್ಪ ಭಾಗ ಅರ್ಥ ಆಯಿತು. ಆದರೆ ಹೀಗೆ ಆಸ್ಪತ್ರೆಯಲ್ಲಿ ವಿಚಾರ ಮಾಡಿದುದು ಸರಿಯಲ್ಲ ಎಂದೂ ಮನಸ್ಸಿನಲ್ಲಿ ಒಂದು ಕಡೆ ಅನಿಸಿತು. ಏನೋ, ದೊಡ್ಡವರ ವಿಚಾರ ಎಂದು ಬಿಟ್ಟುಬಿಟ್ಟರೂ "ಪಂಚಾಂಗ ನೋಡಿ, ಹೀಗೆ ಲೆಕ್ಕಾಚಾರ ಮಾಡಿದುದು ನಂಬಿ ಮುಂದಿನ ಹೆಜ್ಜೆಗಳನ್ನು ಇಡುವುದು ಎಷ್ಟು ಸರಿ?" ಎನ್ನುವ ಪ್ರಬಲವಾದ ಸಂದೇಹ ಕಾಡಿತು. ಮುಂದಿನ ವಿಷಯ ತಂದೆಯೊಂದಿಗೆ ಹೇಗೆ ಪ್ರಸ್ತಾಪ ಮಾಡಬೇಕು ಅನ್ನುವುದನ್ನು ಹಿಂದಿರುಗುವ ದಾರಿಯಲ್ಲಿ ನಿರ್ಧರಿಸಿ ಮನೆ ಸೇರಿದ್ದಾಯಿತು. 

ಜೀವನದ ಅನುಭವದಲ್ಲಿ ಮಾಗಿದ ತಂದೆಗೆ ಮಗನ ಮನಸ್ಸಿನಲ್ಲಿ ನಡೆಯುತ್ತಿದ್ದ ಈ ತುಮಲದ ಅರಿವು ಆಯಿತು. ಉಪಾಧ್ಯಾಯ ವೃತ್ತಿಯಲ್ಲಿ ಪಳಗಿದವರಿಗೆ ಎದುರಿಗಿದ್ದವರ ಮನಸ್ಸಿನಲ್ಲಿ ಸಂದೇಹ ಬಂದುದು ಅವರ ಮುಖ ನೋಡಿಯೇ ತಿಳಿಯುತ್ತದೆ. ಇದು ನುರಿತ ಶಿಕ್ಷಕರ ಶಸ್ತ್ರಾಗಾರದ ಪ್ರಬಲ ಅಸ್ತ್ರಗಳಲ್ಲಿ ಒಂದು. ರಾತ್ರಿಯ ಊಟವಾದ ನಂತರ ಅಪ್ಪ ಮಗನನ್ನು ಕರೆದರು. 

"ಏನು? ಆಸ್ಪತ್ರೆಯಿಂದ ಬಂದ ಮೇಲೆ ನಿನ್ನ ಮನಸ್ಸಿನಲ್ಲಿ ಏನೋ ಸಂದೇಹ ಇದ್ದಂತಿದೆ"
"ಸಂದೇಹ ಎಂದಲ್ಲ. ಏನೋ ಕೆಲವು ಅನುಮಾನಗಳು"
"ಭಯವೇನೂ ಇಲ್ಲ. ಸ್ವಲ್ಪ ಅಂಜಿಕೆ" ಅಂದಂತೆ. "ಏನು ಕೇಳಬೇಕೋ ಕೇಳಿಬಿಡು"
"ಏನಿಲ್ಲ. ಸಾವಿನ ಬಗ್ಗೆ ಮಾತಾಡಬಾರದು ಅನ್ನುತ್ತಾರಲ್ಲ. ನೀವಿಬ್ಬರು ಮಾತಾಡಿದ್ದು ಅದೇ ಅಲ್ಲವೇ?"
"ಅದರ ಬಗ್ಗೆ ಮಾತಾಡಬಾರದು ಅನ್ನುವವರು ಯಾರು?"
"ಅನೇಕರು. ನೀವೇ ಹಾಗೆ ಕೆಲವು ವೇಳೆ ಹೇಳಿಲ್ಲವೇ?'
"ಹೌದು. ಹಾಗೆ ಹೇಳುವುದರ ಅರ್ಥ ಮತ್ತು ಔಚಿತ್ಯ ಏನು?"
"ಎಲ್ಲರೂ ಹಾಗೆ ಹೇಳುತ್ತಾರೆ. ಬಹಳ ಜನರಿಗೆ ಅದರ ಬಗ್ಗೆ ಮಾತಾಡಲು ಭಯ"

"ವೈದ್ಯರು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಆಗಾಗ ಸಾವು ನೋಡುತ್ತಿರುತ್ತಾರೆ. ಅಲ್ಲವೇ?'
"ಹೌದು. ಅದು ಅವರ ವೃತ್ತಿಯ ಒಂದು ಬಾಗ"
"ಸ್ಮಶಾನದಲ್ಲಿ ಕೆಲಸ ಮಾಡುವ ಕೆಲವರು?"
"ಅವರ ಕೆಲಸವೇ ಅದಲ್ಲವೇ?"
"ಹಾಗಿದ್ದರೆ ಅವರು ಇದರ ಬಗ್ಗೆ ಮಾತಾಡಬಹುದು ಎಂದಂತಾಯಿತು"
"ಆಡದಿದ್ದರೆ ಅವರ ಕೆಲಸ ನಡೆಯುವುದಾದರೂ ಹೇಗೆ?"
"ಹುಟ್ಟಿದವರಲ್ಲಿ ಎಷ್ಟು ಜನ ಸಾವು ಕಾಣದೇ ಉಳಿಯುತ್ತಾರೆ?"
"ನಾವು ಕೇಳಿದಂತೆ ಚಿರಂಜೀವಿಗಳು ಅನಿಸಿಕೊಂಡವರು. ಮಾರ್ಕಂಡೇಯರು ಮತ್ತೊಬ್ಬರು"
"ಅಂದರೆ ಹುಟ್ಟಿದವರೆಲ್ಲ ಒಂದು ದಿನ ಸಾಯಲೇಬೇಕಲ್ಲವೇ?'
"ಹೌದು. ಆದರೆ ಅದರ ಬಗ್ಗೆ ಯಾಕೆ ಮಾತಾಡಬೇಕು?"
"ಮಾತನಾಡದಿದ್ದರೆ ಸಾವು ದೂರ ಹೋಗುವುದೋ?"
"ಮಾತಾಡಿದರೆ ದೂರ ಹೋಗುವುದೋ?"
"ಎರಡೂ ಇಲ್ಲ. ಆಡಿದ್ದರಿಂದ ಹತ್ತಿರ ಬರುವುದೂ ಇಲ್ಲ"

ಇನ್ನೂ ಸ್ವಲ್ಪ ಯೋಚನೆ ಮಾಡಬೇಕಾದ ಪ್ರಸಂಗ ಬಂತು!

******

"ಸಾವು ಜೀವನದ ಪರಮ ಸತ್ಯ ಅನ್ನುವುದು ನಿಜ. "ಜಾತಸ್ಯ ಹಿ ಧ್ರುವಂ ಮೃತ್ಯು: ತಸ್ಮಾದಪರಿಹಾರ್ಯೇರ್ಥೇ ನ ತ್ವಂ ಶೋಚಿತುಮರ್ಹಸಿ" ಅಂತ ಗೀತಾಚಾರ್ಯನೇ ಹೇಳಿದ್ದಾನೆ. ಜೀವನ ಇರುವುದು ಬದುಕುವುದಕ್ಕೆ. ಸಾರ್ಥಕವಾಗಿ ಜೀವಿಸುವುದಕ್ಕೆ. ಸಾಯುವುದಕ್ಕಲ್ಲ. ಇದು ಒಪ್ಪಲೇಬೇಕಾದ ಮಾತು. ಆದರೆ ಎಲ್ಲಕಾಲಕ್ಕೂ ನಾನು ಬದುಕಿರುತ್ತೇನೆ ಎಂದು ನಂಬುವುದು ಸರಿಯಲ್ಲ. ನಮಗೆ ಇಷ್ಟ ಇರಲಿ, ಬಿಡಲಿ. ಪ್ರತಿ ಕ್ಷಣ ನಾವು ಸಾವಿನ ಹತ್ತಿರ ಹೋಗುತ್ತಲೇ ಇರುತ್ತೇವಲ್ಲ!"
"ಹಾಗಂತ ಅದರ ಬಗ್ಗೆ ಏಕೆ ಚಿಂತಿಸಬೇಕು?"

"ಹಾಗೆ ಚಿಂತಿಸಲು ಎರಡು ಕಾರಣಗಳು ಉಂಟು. ಮೊದಲನೆಯದು, ನಾವು ಒಂದು ದಿನ ಇಲ್ಲಿಂದ ಹೋಗಬೇಕು ಎನ್ನುವುದು ಯೋಚಿಸಿದಾಗ ವಯಸ್ಸಾಗುತ್ತಿದ್ದಂತೆ ಲೌಕಿಕ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿ, ಹೊಣೆಗಳನ್ನು ದಾಟಿ, ಮುಂದಿನ ವ್ಯವಸ್ಥೆಗಳನ್ನು ಮಾಡುವ ಮನಸ್ಸು ಮತ್ತು ಕರ್ತೃತ್ವ ಶಕ್ತಿ ಬರುತ್ತವೆ"
"ಎರಡನೆಯದು?"
"ಸದಾ ಇಲ್ಲಿರುವುದಿಲ್ಲ ಎನ್ನುವ ಪರಿಜ್ಞಾನದಿಂದ ಅಡ್ಡ ದಾರಿ ಹಿಡಿಯದೇ ನೇರ ಜೀವನ ನಡೆಸುವ ಇರಾದೆ ಪಕ್ವವಾಗುತ್ತದೆ"

"ಹೌದು ಅನ್ನೋಣ. ಆದರೆ ಅದರ ಬಗ್ಗೆ ಚಿಂತಿಸುವುದರಿಂದ ಮತ್ತು ಮಾತನಾಡುವುದರಿಂದ, ಹೇಗಿದ್ದರೂ ಹೋಗಬೇಕು ಎನ್ನುವ ಯೋಚನೆ ಪ್ರಬಲವಾಗಿ ಜೀವನದಲ್ಲಿ ನಿರಾಸಕ್ತಿ ಮೂಡಿದರೆ?"
"ಇಲ್ಲಿಯೇ ಮನುಷ್ಯನ ನಿಜವಾದ ಯೋಗ್ಯತೆ ಒರೆ ಹಚ್ಚುವುದು. ಈ ಜೀವನ ಒಂದು ದಿನ ಕೊನೆ ಆಗುತ್ತದೆ ಅನ್ನುವ ಎಚ್ಚರ ಇರಬೇಕು. ಇರುವವರೆಗೂ ಕರ್ತವ್ಯಗಳನ್ನು ಮಾಡುತ್ತಲೇ ಇರಬೇಕೆಂಬ ಪ್ರಜ್ಞೆ ಜಾಗೃತವಾಗಿರಬೇಕು. ಇದೇ ಅಲ್ಲವೇ ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ ಕರ್ಮಯೋಗ?"
"ತಾವರೆ ಎಲೆಯ ಮೇಲಿನ ನೀರನ ಹನಿಯಂತೆ ಅನ್ನುವುದಕ್ಕೆ ಈ ವಿಶಾಲ ಅರ್ಥವೇ?"
"ಕರ್ತವ್ಯಗಳನ್ನು ಮಾಡುತ್ತಿರುವಾಗ ಅವುಗಳಿಗೆ ಸಂಬಂಧಿಸಿದವರ ಮತ್ತು ಸಾಧನಗಳ ಮೇಲೆ ಅತಿಯಾದ ಮೋಹ ಇರಬಾರದು ಅನ್ನುವುದನ್ನು ಅದಕ್ಕೆ ಸೇರಿಸಿಕೊಳ್ಳಬೇಕು"

ಸಾವಿನ ಬಗ್ಗೆ ಮಾತನಾಡುವುದು ತಪ್ಪಲ್ಲ. ಅದರ ಬಗ್ಗೆಯೇ ಮಾತನಾಡುತ್ತ ಬೇರೆಲ್ಲ ಬಿಡುವುದು ತಪ್ಪು ಎಂದಾಯಿತು. ಗಮನವಿರಬೇಕು. ಅತಿಯಾದ ಗಮನವಿರಬಾರದು. ಇಲ್ಲಿಯೂ ಕತ್ತಿಯ ಅಲುಗಿನ ಮೇಲೆ ನಡೆದಂತೆ!

******

"ನೀವು ಹೇಳಿದುದರಂತೆ ಸಾವಿನ ಬಗ್ಗೆಯೇ ಮಾತನಾಡುತ್ತಿರಬಾರದು. ಅದರೊಡನೆ ಎಲ್ಲರ ಕೂಡ ಮಾತನಾಡುತ್ತಿರಬಾರದು. ಹಾಗಿದ್ದರೆ ಯಾರೊಡನೆ ಮಾತಾಡಬೇಕು? ಯಾವಾಗ ಮಾತಾಡಬೇಕು? ಈ ಎರಡು ಪ್ರಶ್ನೆಗಳು ಉಳಿದವು"
"ಇವುಗಳ ಮೊದಲು ಇನ್ನೊಂದು ವಿಚಾರವಿದೆ"
"ಏನದು?"
"ತಂದೆ ಬದುಕಿರುವವರು (ಜೀವಿತಪಿತೃಗಳು) ಸ್ಮಶಾನಘಟ್ಟಕ್ಕೆ ಹೋಗಬಾರದು ಅನ್ನುವುದು"
"ಅದನ್ನು ಈಗಲೂ ಎಲ್ಲರೂ ಪಾಲಿಸುತ್ತಾರಲ್ಲ"
"ಹಿಂದೆ ಇದನ್ನು ಕಟ್ಟುನಿಟಾಗಿ ಪಾಲಿಸುತ್ತ್ತಿದ್ದರು. ಕೆಲವು ಪಂಗಡಗಳಲ್ಲಿ ಎಲ್ಲರೂ ಹೋಗುತ್ತಾರೆ. ಕೆಲವರಲ್ಲಿ ಇಲ್ಲ"
"ಹೀಗೆ ನಿಬಂಧನೆ ಮಾಡಲು ಕಾರಣ?"
"ಚಿಕ್ಕ ವಯಸ್ಸಿನಲ್ಲಿ ರುದ್ರಭೂಮಿ ಅಂದರೆ ಒಂದು ರೀತಿಯ ಭಯ ಇರುತ್ತದೆ. ಆಗ ಅಲ್ಲಿಗೆ ಹೋಗಲೇಬೇಕಾದ ಪರಿಸ್ಥಿತಿ ಇರುವುದಿಲ್ಲ. ಈ ಕಾರಣಗಳು"
"ಹಾಗಿದ್ದರೆ ತಂದೆ ಬದುಕಿದ್ದಾಗಲೂ ಹೋಗಬಹುದೋ?"
"ಯಾರಾದರೂ ತೀರಿಕೊಂಡಾಗ ಅವರ ಅಂತ್ಯ ಸಂಸ್ಕಾರಕ್ಕೆ ಸಹಕಾರ ಕೊಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ. ಅಗಲಿದ ವ್ಯಕ್ತಿಗೆ ನಮ್ಮ ಗೌರವದ ಸೂಚಕ"

"ಅಂದರೆ?"
"ಈಗ ಕೊನೆಯಯಾತ್ರೆಗೆ ವಾಹನಗಳು ಬಂದಿವೆ. ಮೊದಲೆಲ್ಲ ಹೆಗಲ ಮೇಲೆ ಹೊತ್ತುಕೊಂಡು ಹೋಗಬೇಕಾಗಿತ್ತು. ಶವಸಂಸ್ಕಾರದ ಅನುಕೂಲಗಳಿರಲಿಲ್ಲ. ಹೀಗಾಗಿ ಸಹಕಾರ ಕೊಡುವುದು ಅತ್ಯವಶ್ಯಕ ಆಗಿತ್ತು. ತಂದೆ ಅನಾರೋಗ್ಯದಿಂದಲೋ, ವೃದ್ಧಾಪ್ಯದಿಂದಲೋ ಹೋಗಲಾಗದಿದ್ದರೆ ವಯಸ್ಕ ಮಕ್ಕಳಿಗೆ ಹೋಗುವಂತೆ ಅನುಮತಿ ಕೊಡುವುದು ನಾನು ನೋಡಿದ್ದೇನೆ. ಈಗ ಅದರ ಅವಶ್ಯಕತೆ ಅಷ್ಟಾಗಿ ತೋರಿಬರುತ್ತಿಲ್ಲ. ಚಲನಚಿತ್ರಗಳಲ್ಲಿ ಚಿತಾದಹನದ ದೃಶ್ಯಗಳನ್ನು ದೊಡ್ಡದಾಗಿ ತೋರಿಸುತ್ತಾರೆ. ಕೆಲವು ಗಣ್ಯ ವ್ಯಕ್ತಿಗಳು, ರಾಜಕೀಯ ನಾಯಕರು ಕಾಲವಾದಾಗ ಗಂಟೆಗಟ್ಟಲೆ ದೂರದರ್ಶನದಲ್ಲಿ ನೇರ ಪ್ರಸಾರ ತೋರಿಸುತ್ತಾರೆ. ಪುಟ್ಟ ಮಕ್ಕಳೂ ಇದನ್ನು ನೋಡುತ್ತವೆ. ಈಗ ಈ ದೃಶ್ಯಗಳಿಗೆ ಘನತೆಯೂ ಉಳಿದಿಲ್ಲ; ಭಯವೂ ಇಲ್ಲ"
"ಅಂದರೆ ತಂದೆಯ ಅನುಮತಿ ಪಡೆದು ಹೋಗಬಹುದು ಎಂದಾಯಿತು"
"ಹೋಗಬಾರದು ಎಂದು ಪದ್ಧತಿ ಇರುವ ಕುಟುಂಬಗಳಿಗೆ ಹೀಗೆ. ಎಲ್ಲರೂ ಹೋಗುವ ಕುಟುಂಬಗಳಿಗೆ ಇದರ ಅವಶ್ಯಕತೆ ಇಲ್ಲವಲ್ಲ"
*****

"ಮುಂದಿನ ಪ್ರಶ್ನೆ ಯಾವುದು?"
"ಆಸ್ಪತ್ರೆಯಲ್ಲಿ ಈ ವಿಷಯದಲ್ಲಿ ಮಾತುಕತೆ ಮಾಡಿದುದು"
"ಅದು ಬೇಕೆಂದೇ ಮಾಡಿದುದಲ್ಲ. ಈ ರೀತಿಯ ವಿಚಾರಗಳನ್ನು ನಾವು ಈ ಹಿಂದೆಯೂ ಅನೇಕ ಬಾರಿ ಚರ್ಚೆ ಮಾಡಿದ್ದೇವೆ. ಸಾಮಾನ್ಯವಾಗಿ ಹೀಗೆ ಪ್ರಸ್ತಾಪ ಮಾಡುವಾಗ ನಾವಿಬ್ಬರೇ ಇರುತ್ತಿದ್ದುದು. ಈ ಸಾರಿ ಮಾತ್ರ ಅದು ಬಹಿರಂಗವಾಗಿ ಆಸ್ಪತ್ರೆಯಲ್ಲಿ ಆಗಬೇಕಾಯಿತು. ಹಿಂದಿನ ಸಂದರ್ಭಗಳಲ್ಲಿ ಅದು ಮತ್ಯಾರದೋ ವಿಷಯ ಆಗಿರುತ್ತಿತ್ತು. ಈ ಬಾರಿ ನಮ್ಮದೇ ಆಯಿತು. ಅಷ್ಟೇ!"
"ಆದರೂ ಆಸ್ಪತ್ರೆಯಲ್ಲಿ ಅಷ್ಟು ಜನರಿದ್ದರಲ್ಲ"
"ಅದಕ್ಕೆ ನಾವೇನು ಮಾಡುವುದು? ನಮ್ಮಿಬ್ಬರ ಜೀವನದ ಕಾಲಘಟ್ಟವನ್ನು ನೋಡು. ವಯಸ್ಸಾದ ಮೇಲೆ ಆಸ್ಪತ್ರೆಯಿಂದ ಪೂರ್ಣ ಗುಣವಾಗಿ ಬರುವುದು ಅಷ್ಟು ಸುಲಭವಲ್ಲ. ಗುಣವಾಗಿ ಬಂದರೂ ಮೊದಲಿನ ಚೈತನ್ಯ ಉಳಿಯುವುದು ಬಹಳ ಅಪರೂಪ. ಆಗಿನ ಚಿಕಿತ್ಸೆ ಏನಿದ್ದರೂ ಬಹುತೇಕ ಹರಿದ ಬಟ್ಟೆಗೆ ತೇಪೆ ಹಾಕಿದಂತೆ. ಭೌತಿಕ ದೇಹಕ್ಕೆ ತನ್ನದೇ ಆದ ಇತಿ-ಮಿತಿಗಳಿವೆ. ನಾವಿಬ್ಬರೂ ಪೂರ್ಣ ಆರೋಗ್ಯವಂತರಾಗಿ ಮತ್ತೆ ಭೇಟಿಯಾಗುವ ಸಾಧ್ಯತೆ ಇದ್ದಿದ್ದರೆ ಅಲ್ಲಿ ಈ ವಿಷಯ ಪ್ರಸ್ತಾಪ ಮಾಡುತ್ತಿರಲಿಲ್ಲ. ಇದು ಹೀಗೆ ಆಗದು ಎಂದು ನನಗೂ ಗೊತ್ತು; ಅವನಿಗೂ ಗೊತ್ತು. ಆದ್ದರಿಂದ ಸಮಯ ಸಿಕ್ಕಾಗ ಮಾತಾಡಬೇಕಾಯಿತು"

ಇದೂ ಒಂದು ಸಮರ್ಥನೆಯೇ.
*****

"ಅಲ್ಲಿ ಸಂವಾದ ನಡೆದದ್ದು ಅನಿವಾರ್ಯ ಎಂದು ಒಪ್ಪಿಕೊಂಡರೂ ಅವರೊಡನೆ, ಆಸ್ಪತ್ರೆಯಲ್ಲಿ ದಾಖಲಾಗಿರುವವರೊಡನೆ ಏಕೆ ಬೇಕಾಗಿತ್ತು?"
"ನಮಗೆ ಬೇಕಾದ ವಿಷಯಗಳನ್ನು ಯಾರೊಡನೆ ಚರ್ಚಿಸಬೇಕು?'
"ನಮಗೆ ಬೇಕಾದವರೊಡನೆ"
"ಅದೇ ಅಲ್ಲವೇ ನಾವಿಬ್ಬರೂ ಮಾಡಿದ್ದು?"
"ಆದರೂ ಅದು ಸರಿ ಎಂದು ಒಪ್ಪುವುದು ಕಷ್ಟ"

"ನಾನು ಎರಡನೇ ಮಹಾಯುದ್ಧ ಕಾಲದಲ್ಲಿ (1939-45) ಸೈನ್ಯದಲ್ಲಿ ಸೇರಿ ಆ ಯುದ್ಧದಲ್ಲಿ ಭಾಗಿಯಾಗಿದ್ದುದು ನಿನಗೆ ಗೊತ್ತು"
"ಕೇಳಿ ಬಲ್ಲೆ. ಫೋಟೋಗಳನ್ನು ನೋಡಿದ್ದೇನೆ. ನೀವು ಆಗಾಗ ಹೇಳಿದ ಅಲ್ಲಿನ ಅನುಭವಗಳನ್ನು ಕೇಳಿದ್ದೇನೆ"
"ಆಗ ನನಗೆ ಇನ್ನೂ ಇಪ್ಪತ್ತು ವರುಷ ವಯಸ್ಸು. ವಿವಾಹವಾಗಿ ಇಬ್ಬರು ಮಕ್ಕಳು. ನನ್ನ ಭಾಗಕ್ಕೆ ಕುಟುಂಬದಿಂದ ಬಂದ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದೆ. ಖಾಯಂ ಕೆಲಸವಿರಲಿಲ್ಲ. ಒಂದು ದಿನ ತಾಲ್ಲೋಕು ಆಫೀಸಿಗೆ ಯಾವುದೊ ಕೆಲಸಕ್ಕೆ ಹೋದೆ. ಸೈನ್ಯಕ್ಕೆ ಯುವಕರ ಭರ್ತಿ ನಡೆಯುತ್ತಿತ್ತು. ಸಾಲಿನಲ್ಲಿ ನಿಂತೆ. ಮನೆಯವರಿಗೆ ಹೇಳಲೂ ಅವಕಾಶ ಇರಲಿಲ್ಲ. ಸಂಜೆಗೆ ಲಾರಿ ಹತ್ತಿಸಿಕೊಂಡು ಬೆಂಗಳೂರು ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋದರು. ಅಲ್ಲಿಂದ ಪೂನಾ. ನಂತರ ಬರ್ಮಾ ಗಡಿಗೆ. ಯುದ್ಧದಲ್ಲಿ ವರ್ಷಗಳು ಕಳೆದವು"
"ಅದು ಸರಿ. ಅದಕ್ಕೂ ಇಂದು ನಡೆದದ್ದಕ್ಕೂ ಸಂಬಂಧ?"
"ಕೆಲವರು ಸೈನ್ಯ ಸೇರಿ ನಿವೃತ್ತರಾಗಬಹುದು. ಒಂದೂ ಯುದ್ಧದಲ್ಲಿ ಭಾಗಿಯಾಗುವ ಕಾಲ ಬಾರದಿರಬಹುದು. ಅದು ಅಪರೂಪ ಆದರೂ ಸಾಧ್ಯ. ನಾನಿದ್ದುದು ಅಷ್ಟೂ ಕಾಲ ಯುದ್ಧ ಭೂಮಿಯಲ್ಲೇ. ಮೊದಲಿಂದ ಕಡೆಯವರೆಗೆ"
"ಏಕೆ ಹಾಗೆ?"
"ಸೇರಿದುದು ಯುದ್ಧ ಪ್ರಾರಂಭವಾದ ದಿನಗಳಲ್ಲಿ. ಯುದ್ಧ ಮುಗಿದ ನಂತರ ಚೀನಾ ಗಡಿಗೆ ವರ್ಗಾಯಿಸಿದರು. ನಾನು ಬೇಡ ಎಂದೆ. ನಿವೃತ್ತಿ ಕೊಟ್ಟು ಉಪಾಧ್ಯಾಯನ ಕೆಲಸ ಕೊಟ್ಟರು"
"ಸರಿ"
"ಯುದ್ಧಭೂಮಿಯಲ್ಲಿ, ಬರ್ಮಾ ಗಡಿಯಲ್ಲಿ ಕಾಲ ಕಳೆಯುವಾಗ ಯಾವ ವಿಷಯದ ಬಗ್ಗೆ ಮಾತಾಡಬೇಕು? ಪ್ರತಿದಿನ ಜೊತೆಯಲ್ಲಿದ್ದವರ ಸಾವಿನ ಸುದ್ದಿಯೇ! ಸಾವಿನ ಭಯ ಹೊರಟುಹೋಯಿತು"
"..............."

"ನಮ್ಮ ಅಂತರಂಗದ ಮಾತುಗಳನ್ನು ಹೇಳಿಕೊಳ್ಳಲು ಪ್ರತಿಯೊಬ್ಬರೂ ಕೆಲವರನ್ನು ಆರಿಸಿಕೊಳ್ಳುತ್ತೇವೆ. ಎಲ್ಲರೊಡನೆ ಎಲ್ಲ ವಿಷಯಗಳನ್ನೂ ಚರ್ಚಿಸಲಾಗುವುದಿಲ್ಲ. ಹಾಗೆ ಆರಿಸಿಕೊಂಡ ವ್ಯಕ್ತಿಗಳು ನಮಗೆ ನಂಬಿಕಸ್ಥರಾಗಬೇಕು. ಗುಟ್ಟುಗಳನ್ನು ಹಿಡಿದಿಟ್ಟುಕೊಳ್ಳುವವರಾಗಬೇಕು. ಮುಕ್ತ ಮನಸ್ಸಿನಿಂದ ಸಲಹೆ-ಸೂಚನೆ ಕೊಡುವವರಾಗಬೇಕು. "ಗುಹ್ಯo ನಿಗೂಹಯತಿ, ಗುಣಾನ್ ಪ್ರಕಟೀಕರೋತಿ" ಎಂದು ಭರ್ತೃಹರಿ ನೀತಿಶತಕದಲ್ಲಿ ಹೇಳಿರುವುದು ಓದಿದ್ದೀಯೆ. ಇಂತಹವರು ಜೀವನದಲ್ಲಿ ಒಬ್ಬರೋ, ಇಬ್ಬರೋ ಸಿಕ್ಕರೆ ಅದು ಭಾಗ್ಯವೇ. ಹತ್ತಾರು ಜನ ಯಾರಿಗೂ ಸಿಗುವುದಿಲ್ಲ"
"ಅದು ಸರಿ"
"ಯುದ್ಧಭೂಮಿಯಲ್ಲಿ ಯಾರಾದರೂ ಸಿಕ್ಕರೆ ಸಾಕು ಅನಿಸುತ್ತದೆ! ಅಲ್ಲಿ ಸಿಕ್ಕವನೇ ಅತಿ ಆಪ್ತ ಆಗುತ್ತಾನೆ!"
"ಊಹೆಯಿಂದ ತಿಳಿಯಬೇಕು"
"ಅಷ್ಟೇ ಅಲ್ಲ. ಅವನು ಯುದ್ಧದಲ್ಲಿ ಬದುಕಿ ಉಳಿಯಬೇಕು"
".........."

"ಹೀಗೆ ನಾವು ಆರಿಸಿಕೊಳ್ಳುವ ಆಪ್ತರು ನಮ್ಮ ಹತ್ತಿರದವರೇ ಆಗಬಹುದು. ಒಡಹುಟ್ಟಿದವರೇ ಆಗಬಹುದು. ಜೊತೆಯಲ್ಲಿ ಬೆಳೆದವರೇ ಆಗಬಹುದು."
"ಹೌದು"
"ನಾವು ಮೂವರು ಅಣ್ಣ-ತಮ್ಮಂದಿರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡವರು. ಮಧ್ಯದವನು ಮಧ್ಯ ವಯಸ್ಸಿನಲ್ಲಿಯೇ ತೀರಿಹೋದ. ಮತ್ತೆ ಉಳಿದವರು ನಾವಿಬ್ಬರೇ"
"ಒಡಹುಟ್ಟಿದವರು, ಸಹಪಾಠಿಗಳು ಆದರೆ ಕೆಲವು ಅನುಕೂಲಗಳು ಉಂಟು. ಅವರ ಎಲ್ಲ ವಿಷಯಗಳು ನಮಗೆ ತಿಳಿದಿರುತ್ತವೆ. ನಮ್ಮ ವಿಷಯಗಳೂ ಅವರಿಗೆ ತಿಳಿದಿರುತ್ತವೆ"
"ನಿನ್ನೆ ಆಗಿದ್ದೂ ಅದೇ"

ಆಸ್ಪತ್ರೆಯಲ್ಲಿಯೇ ಏಕೆ ಮಾತು-ಕತೆ ಆಯಿತು? ಅವರೊಡನೆಯೇ ಏಕೆ ಆಯಿತು? ಅಂದೇ ಏಕೆ ಆಯಿತು? ಈ ವಿಷಯಗಳಿಗೆ ಸ್ಪಷ್ಟನೆ ಸಿಕ್ಕಿತು. 

"ಅನುಮಾನಗಳು ಪರಿಹಾರ ಆಯಿತೇ? ಇನ್ನೂ ಏನಾದಾರೂ ಬಾಕಿ ಇದೆಯೋ?"
"ನಿನ್ನಿನ ವಿಚಾರ ತಿಳಿಯಾಯಿತು. ಜ್ಯೋತಿಷ್ಯದ ವಿಷಯ ಕೆಲವಿವೆ"
"ಇಂದು ತಡವಾಯಿತು. ನಾಳೆ ನಿನಗೆ ಆಫೀಸಿಗೆ ಹೋಗಬೇಕಿದೆ. ನಾಳೆ ಸಂಜೆ ಮುಂದುವರೆಸೋಣ"

*****

ಅನುಭವದಿಂದ ಕಲಿತ ಪಾಠಗಳು ಅನುಗಾಲ ನೆನಪಿನಲ್ಲಿ ಇರುತ್ತವೆ. ಅಂತಹ ಸಂದರ್ಭಗಳು ಜೀವನದಲ್ಲಿ ಮತ್ತೆ ಪುನರಾವರ್ತನೆ ಆದಾಗ ಮನಸ್ಸು ಅವನ್ನು ಗಾಢವಾಗಿ ಮೆಲಕು ಹಾಕುತ್ತದೆ.  

Saturday, June 27, 2026

ಯಾರು ಮೊದಲು ಪ್ರಯಾಣ?


ಎಂಭತ್ತು ವರುಷದ ಅಣ್ಣ. ಒಂದೈದು ಆರು ವರುಷಗಳು ಕಡಿಮೆ ಇರುವ ತಮ್ಮ. ಇಬ್ಬರೂ ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದು ನಿವೃತ್ತರಾದವರು. ಅಣ್ಣ ವಂಶಪಾರಂಪರ್ಯವಾಗಿ ಬಂದಿದ್ದ ಮನೆತನದ ಹುಟ್ಟೂರಿನ ದೈವ ಶ್ರೀರಾಮಚಂದ್ರನ ಆರಾಧಕರು. ತಮ್ಮ ಅವರ ದೊಡ್ಡಪ್ಪ ಅದೇ ಊರಿನಲ್ಲಿ ಸ್ಥಾಪಿಸಿದ ಮಂದಿರದ ಅಧಿದೈವ ಶ್ರೀ ದತ್ತಾತ್ರೇಯರ ಉಪಾಸಕರು. 

ತಂದೆಯ ಕಡೆಯಿಂದ ಬಂದಿದ್ದ ಜ್ಯೋತಿಷ್ಯದ ಬಗ್ಗೆ ಇಬ್ಬರಿಗೂ ಆಸಕ್ತಿ. ಒಂದೇ ವಿಷಯವಾದರೂ ಇಬ್ಬರ ವಿಧಾನಗಳು ಸ್ವಲ್ಪ ಬೇರೆ ಬೇರೆ. ಅಣ್ಣನ ಲೆಕ್ಕಾಚಾರ ಹೆಚ್ಚಾಗಿ ಮನಸ್ಸಿನಲ್ಲಿ. ಪೆನ್ನು, ಪುಸ್ತಕ ಹಿಡಿದು ಲೆಕ್ಕ ಮಾಡುವುದು ಕಡಿಮೆ. ಬೇಕಿದ್ದಾಗ ಹಾಗೆ ಮಾಡುವುದೂ ಉಂಟು. ತಮ್ಮ ಮಾತ್ರ ಖಚಿತ ಲೆಕ್ಕಾಚಾರ. ಪ್ರತಿಯೊಂದಕ್ಕೂ ವಿವರವಾಗಿ ನೋಡಿ, ಆಳ-ಅಗಲ ಸೋಸಿ, ಬರೆದಿಡುವುದು ಅಭ್ಯಾಸ. 

ಅಣ್ಣನ ವಾಸ ದಕ್ಷಿಣ ಬೆಂಗಳೂರಿನಲ್ಲಿ. ತಮ್ಮನದು ಉತ್ತರ ಬೆಂಗಳೂರು. ಆಗಲೋ ಈಗಲೋ ಪರಸ್ಪರ ಭೇಟಿ. ಇಬ್ಬರೇ ಇದ್ದಾಗ ಈ ವಿಷಯದಲ್ಲಿ ಚರ್ಚೆ. ಜ್ಯೋತಿಷ್ಯದಲ್ಲಿ ಪ್ರವೇಶ ಇದ್ದವರಿಗೆ ಅವರ ಸಂವಾದ ಅಲ್ಪ-ಸ್ವಲ್ಪ ಅರ್ಥ ಆಗುವುದು. ಇತರರಿಗೆ ಇಬ್ಬರೂ ಜಗಳ ಆಡುತ್ತಿದ್ದಾರೆ ಅನ್ನಿಸಿದರೂ ಆಶ್ಚರ್ಯವಿಲ್ಲ. ಅವರ ಸಂವಾದದ ಸಮಯದಲ್ಲಿ ಯಾರೂ ಮಧ್ಯೆ ಪ್ರವೇಶಿಸುತ್ತಿರಲಿಲ್ಲ. 

*****

ಒಂದು ದಿನ ಅಣ್ಣ ಮನೆಯಲ್ಲಿದ್ದ ತಮ್ಮ ಮಗನನ್ನು ಹತ್ತಿರ ಕರೆದರು. ಭಾನುವಾರದ ಕಾರಣ ಮಗನಿಗೆ ಕೆಲಸಕ್ಕೆ ರಜೆ. ಮನೆಯಲ್ಲಿಯೇ ಇದ್ದ. 

"ಏನು, ಕರೆದಿರಿ"
"ನಿಮ್ಮ ಚಿಕ್ಕಪ್ಪನಿಗೆ ಅನಾರೋಗ್ಯವಂತೆ. ಆಸ್ಪತ್ರೆಗೆ ಸೇರಿಸಿದ್ದಾರಂತೆ"
"ಫೋನ್ ಮಾಡಿ ವಿಚಾರಿಸೋಣವೇ?"
"ಇಲ್ಲ. ಹೋಗಿ ನೋಡಬೇಕು. ಮಧ್ಯಾನ್ಹ ಕರೆದುಕೊಂಡು ಹೋಗು"
"ಯಾವ ಆಸ್ಪತ್ರೆ?"
"ಮತ್ತೀಕೆರೆಯಲ್ಲಿ ಸುಬ್ಬಯ್ಯ ಆಸ್ಪತ್ರೆ ಅಂತೆ. ಅವರ ಮನೆ ಹತ್ತಿರ"
"ಆಯಿತು. ಸಂಜೆ ಸಂದರ್ಶನದ ವೇಳೆ ಇರುತ್ತದೆ. ಹೋಗೋಣ"

ಸಂಜೆ ಇಬ್ಬರೂ ಅಲ್ಲಿಗೆ ಹೋದರು. ಸಂದರ್ಶನದ ವೇಳೆ. ಕೊಠಡಿಗೆ ಹೋಗಿ ಭೇಟಿ ಮಾಡಿದರು. ಅಣ್ಣ-ತಮ್ಮ ಮಾತುಕತೆ ಪ್ರಾರಂಭಿಸಿದರು. 
*****

"ಏನು? ಇಲ್ಲಿಗೆ ಯಾವಾಗ ಬಂದಿ?"
"ಎರಡು ದಿನವಾಯಿತು"
"ಈಗ ಹೇಗಿದ್ದೀ? ಚೇತರಿಕೆ ಕಂಡಿದೆಯೇ?"
"ಸ್ವಲ್ಪ ಪರವಾಗಿಲ್ಲ. ಡಾಕ್ಟರು ಉತ್ತಮವಾಗಿದೆ ಅನ್ನುತ್ತಾರೆ"
"ಯಾವನಾದರೂ ಡಾಕ್ಟರು ಪೇಷಂಟ್ ಬಳಿ "ಉತ್ತಮವಾಗಿಲ್ಲ" ಅಂದಿದ್ದು ಕೇಳಿದ್ದೀಯಾ?"
"ಮತ್ತೆ ಏನು ಮಾಡುವುದು? ಅವರು ಹೇಳಿದ್ದು ತಾನೇ ನಂಬಬೇಕು?"
"ಮನೆಯವರಲ್ಲಿ ಒಬ್ಬರನ್ನು ಪಕ್ಕಕ್ಕೆ ಕರೆದು ಅವರ ಬಳಿ ಸಹಜ ಸ್ಥಿತಿ ಹೇಳುತ್ತಾರೆ"
"ಹೌದು. ಅದು ಅವರ ಅಭ್ಯಾಸ"

"ಅದಿರಲಿ. ನಿನ್ನ ವಿಷಯ ಹೇಳು. ಮೊಮ್ಮಗನಿಗೆ ಮಗ ಹುಟ್ಟಿದನಂತೆ"
"ಹೌದು. "ಪ್ರಪೌತ್ರ ದರ್ಶನ" ಆಗುತ್ತಿದೆ"
"ಅಂತೂ ಅಪರೂಪದ ಚಾನ್ಸು ಹೊಡೆದೆ"
"ಹೌದು. ಅಪರೂಪವೇ. ಅದೇನು ಎಲ್ಲರಿಗೂ ಆಗುವುದಲ್ಲವಲ್ಲ"
"ಕನಕಾಭಿಷೇಕ ಮಾಡಿಸಿಕೊಳ್ಳುತ್ತೀಯೋ?"
"ನನಗೇನು? ಮಾಡಿದರೆ ಮಾಡಿಸಿಕೊಳ್ಳುವುದು"
"ಯಾವಾಗ ಮಾಡುತ್ತಾರಂತೆ?"
"ಮಗ ಬಂದಿದ್ದ. "ಮಗು ಸ್ವಲ್ಪ ದೊಡ್ಡದಾಗಲಿ. ವರುಷದ ಮೇಲೆ ಮಾಡೋಣ" ಅಂದ"
"ಯಾಕಂತೆ ತಡ?"
"ಮಗು ದೊಡ್ಡದಾದರೆ ಕೈಯಲ್ಲಿ ಬಂಗಾರದ ಹೂವು ಹಿಡಿದು ಚೆನ್ನಾಗಿ ಮಾಡುತ್ತೆ ಅಂತ"
"ಅವರ ಅಭಿಪ್ರಾಯ ಸರಿ. ನಿನ್ನ ಲೆಕ್ಕಾಚಾರ ಏನು?"
"ಅವರು ಬೇಕಾದಾಗ ಮಾಡಲಿ. ಆದರೆ ಆಯಿತು. ಇಲ್ಲದಿದ್ದರೆ ಇಲ್ಲ"
"ಅದೇಕೆ ಹಾಗೆ ಹೇಳುತ್ತೀಯೆ?"
"ನಿನಗೇ ಗೊತ್ತಲ್ಲ ಕಾರಣಗಳು. ನೀನು ಗುಣಿಸಿ ನೋಡಿಲ್ಲವೇ?"

*****

ಕುಳಿತು ಕೇಳುತ್ತಿದ್ದವನಿಗೆ ಸ್ವಲ್ಪ ಸಂದೇಹ ಬಂತು. ಕನಕಾಭಿಷೇಕ ಮಾಡುವವರು ಅವರು. ಮಾಡಿಸಿಕೊಳ್ಳುವವರು ಇವರು. ಇದರಲ್ಲಿ ಗುಣಿಸುವುದು ಏನು ಬಂತು? ಸ್ವಲ್ಪ ಯೋಚಿಸಿದಮೇಲೆ ಅರ್ಥ ಆಯಿತು.

"ನನ್ನನ್ನು ಏಕೆ ಕೇಳುತ್ತೀಯೆ? ನೀನು ಲೆಕ್ಕ ಮಾಡಿಲ್ಲವೇ?"
"ಮಾಡಿದ್ದೇನೆ. ನೀನೂ ಮಾಡಿದ್ದೀ ಅಂತಾನೂ ನನಗೆ ಗೊತ್ತು"
"ಸರಿ. ನಿನ್ನ ಅಭಿಪ್ರಾಯವೇನು?'
"ಪ್ರಯಾಣ ಹೋರಾಡಬೇಕಲ್ಲಪ್ಪ. ಅವರು ಮಾಡುವ ದಿನದವರೆಗೆ ನಾನು ಇಲ್ಲಿರಬೇಕಲ್ಲ"
"ನೀನು ಇಲ್ಲಿಯೇ ಇರುತ್ತೇನೆ ಅಂದರೆ ಯಾರ ಅಡ್ಡಿ?"
"ಕೆಂಪಣ್ಣ ಬಿಡಬೇಕಲ್ಲ. ಕಾದು ಕುಳಿತಿದ್ದಾನೆ"
"ಕನಕಾಭಿಷೇಕಕ್ಕೆ ನನ್ನನ್ನು ಕರೆಯುತ್ತೀಯೋ?"
"ಕರೆದರೆ ಬರುತ್ತೀಯೋ?"
"ಬರಬೇಕು. ನನ್ನದೂ ಪ್ರಯಾಣವಿದೆಯಲ್ಲ"
"ಖಂಡಿತ ಬಾ. ಆಮೇಲೆ ನಾವು ಒಬ್ಬರಿಗೊಬ್ಬರು ಸಿಗುವುದು ಕಷ್ಟ" 
"ಆದರೆ ರವಿಯಣ್ಣ ಬರಲು ಬಿಡಬೇಕಲ್ಲ"
"ಹೌದು. ಪ್ರಯಾಣಗಳನ್ನು ಮುಂದೂಡುವಂತಿಲ್ಲವಲ್ಲ"
"ನೋಡೋಣ. ಯಾರು ಮೊದಲು ಪ್ರಯಾಣ?"
"ಒಬ್ಬ ಮುಂದೆ. ಇನ್ನೊಬ್ಬ ಹಿಂದೆ. ಮೊದಲು ಬಂದವನು ಮೊದಲು ಹೋಗುವುದು ನ್ಯಾಯ"

ಕೆಂಪಣ್ಣ ಅಂದರೆ ಕುಜ ಗ್ರಹ. ಕುಜ (ಅಂಗಾರಕ) ಕೆಂಪು ಗ್ರಹ. ಅದಕ್ಕೇ ಕೆಂಪಣ್ಣ ಆದ. ಅವನು ಕೆಂಪಣ್ಣ ಆದ್ದರಿಂದ ಇವನು ರವಿಯಣ್ಣ ಆದ. ಕುಜ ಅವರಿಗೆ ಮಾರಕ. ರವಿ ಇವರಿಗೆ ಮಾರಕ. 

"ನಾನು ಹೇಳುವುದು ಹೇಳಿದ್ದೇನೆ. ಮುಂದಿನ ತಿಂಗಳು ದಿನ ನಿಷ್ಕರ್ಷೆ ಮಾಡಿ ಅಂದೇ ಆಗಬೇಕು ಅಂದಿದ್ದೇನೆ. ಇಷ್ಟರ ಮೇಲೆ ಅವರಿಷ್ಟ"
"ನೀನು ಹಾಗೆ ಖಂಡಿತವಾಗಿ ಹೇಳಿದ ಮೇಲೆ ಅವರು ಮಾಡೇ ಮಾಡುತ್ತಾರೆ. ನಾನೂ ಬರುತ್ತೇನೆ"

ಇವರ ಮಾತಿನ ಧಾಟಿ, ಏರು ಮಾತಿನ ಶಬ್ದ ಅಲ್ಲಿದ್ದವರಿಗೆ ಸ್ವಲ್ಪ ಮೋಜೆನಿಸಿತು. ಕೆಲವರು ವಾರ್ಡಬಾಯ್, ಮತ್ತು ನರ್ಸುಗಳು ಬಾಗಿಲಲ್ಲಿ ಗುಂಪುಗಟ್ಟಿದರು. ರೌಂಡ್ಸ್ ಬಂದ ಡಾಕ್ಟರ್ ಗುಂಪು ನೋಡಿ ಗದರಿದರು.

*****

ಕುಳಿತು ಕೇಳಿಸಿಕೊಳ್ಳುತ್ತಿದ್ದವ ಹೊರಗೆ ಬಂದ. ನಿಂತಿದ್ದವರು ಇಬ್ಬರು ಬಂದು ಅವನನ್ನು ಕೇಳಿದರು.

"ಯಾವ ಊರಿಗೆ ಹೋಗುವ ವಿಚಾರ ಅವರು ಮಾತಾಡುತ್ತಿರುವುದು" 
"ಊರಿಗಲ್ಲ. ಪರಲೋಕಕ್ಕೆ"
"ಅಂತಹ ವಿಷಯ ಇಷ್ಟು ಸುಲಭವಾಗಿ ಮಾತಾಡುತ್ತಾರೆಯೇ?"
"ನೀವೇ ಕೇಳುತ್ತಿದ್ದೀರಲ್ಲ"
"ಮತ್ತೆ ಇಬ್ಬರೂ ನಗುನಗುತ್ತಲೇ ಮಾತಾಡುತ್ತಿದ್ದರಲ್ಲ"
"ಅವರಿಬ್ಬರೂ ಹಾಗೇ. ಅವರ ಸ್ವಭಾವ"
*****

ಅವರು ಹೇಳಿದ್ದ ದಿನವೇ "ಕನಕಾಭಿಷೇಕ" ಆಯಿತು. ಕುಜ ಮೇಲೆ ಹೇಳಿದಂತೆ ಕೆಂಪು ಗ್ರಹ. ವಿಜ್ಞಾನಿಗಳೂ ಅದನ್ನೇ ಹೇಳುತ್ತಾರೆ. ಕುಜ ಮಾರಕ ಆದರೆ ರಕ್ತಗಾಯ ಆಗಿ ಕೊನೆ. ಕಾಲಿನಲ್ಲಿ ಆದ ಗಾಯ ನೆಪವಾಗಿ ಅದೇ ತಿಂಗಳ ಅಮಾವಾಸ್ಯೆ ಕೆಂಪಣ್ಣ ತನ್ನ ಕೆಲಸ ಮಾಡಿದ.

ಮುಂದೆ ಮೂರೇ ವಾರಗಳಲ್ಲಿ ರವಿಯಣ್ಣನೂ ತನ್ನ ಕೆಲಸ ಮುಗಿಸಿದ.

ಈಗ ಇಬ್ಬರೂ ಪರವೂರಿನಲ್ಲಿ ಮತ್ತೊಂದು ವಿಷಯದ ಬಗ್ಗೆ ಚರ್ಚೆ ನಡೆಸಿರಬೇಕು!

Wednesday, June 17, 2026

ವಿಷಮ ದಾಂಪತ್ಯ



ಇಡ್ಲಿ-ಚಟ್ನಿ ಅಥವಾ ಇಡ್ಲಿ-ಸಾಂಬಾರ್, ಇಲ್ಲವೇ ಇನ್ನೂ ಹೆಚ್ಚಿನ ರಸಕವಳ ಬೇಕೆಂದರೆ ತುಪ್ಪದ ಜೊತೆ ಇಡ್ಲಿ-ಸಾಂಬಾರ್-ಚಟ್ನಿ ತಿನ್ನುವವರ ಮನೆಯಲ್ಲಿ ಕುಕ್ಕರ್ ಒಳಗೆ ಇಡ್ಲಿಹಿಟ್ಟು ಹಾಕಿಟ್ಟು ಇಡ್ಲಿ ಮಾಡಲು ಇಡುವ ಇಡ್ಲಿ ಸ್ಟ್ಯಾoಡು ಇರುತ್ತವೆ. ಮನೆಯಲ್ಲಿ ವಾಸವಿರುವ ಜನರು ಮತ್ತು ಅವರ ಆಹಾರ ಸೇವನೆಯ ಸಾಮರ್ಥ್ಯ ಅವಲಂಬಿಸಿ ಅದಕ್ಕೆ ಸರಿಯಾದ ಕುಕ್ಕರ್ ಮತ್ತು ಇಡ್ಲಿ ಸ್ಟ್ಯಾಂಡುಗಳನ್ನು ಇಟ್ಟುಕೊಂಡಿರುತ್ತಾರೆ. ಎರಡು ಅಥವಾ ಮೂರು ಮಂದಿ ಇರುವ ಮನೆಯಲ್ಲಿ 3x3=9 ಇಡ್ಲಿ ಮಾಡುವ ಸ್ಟಾಂಡ್ ಇರಬಹುದು. ಮನೆಯಲ್ಲಿ ಹೆಚ್ಚು ಹಸಿವಿರುವ ನಾಲ್ಕು ಮಂದಿ ಇದ್ದರೆ 4x6=24 ಇಡ್ಲಿ ಮಾಡುವ ಸ್ಟಾಂಡ್ ಇರಬಹುದು. ಪಕ್ಕದ ರಸ್ತೆಯಲ್ಲಿರುವ ದರ್ಶಿನಿಯಲ್ಲಿ 6x6=36 ಇಡ್ಲಿ ಮಾಡುವ ಹತ್ತು ಚೌಕಾಕಾರದ ತಟ್ಟೆಗಳ ದೊಡ್ಡ ಇಡ್ಲಿ ಮೇಕರ್ ಇರುತ್ತದೆ. ಒಂದೇ ಸಲ 360 ಇಡ್ಲಿಗಳು! SLV ರೀತಿಯ ಇಡ್ಲಿ ಸ್ಥಳಗಳಲ್ಲಿ ಇವೂ ಸಾಲುವುದಿಲ್ಲ. ಇಂತಹ ಎರಡು-ಮೂರು ಇಟ್ಟುಕೊಂಡು ಸರತಿಯ ಮೇಲೆ ಬಳಸುತ್ತಾರೆ. 

ಚತುರ್ಮುಖ ಬ್ರಹ್ಮದೇವರು ಆದಿ ಸೃಷ್ಟಿಕರ್ತರು. ಅವರೂ ಇದೇ ತತ್ವವನ್ನು ಅನುಸರಿಸಿದ್ದಾರೆ. ವಾಸ್ತವವಾಗಿ ಅವರು ಮೊದಲು ಪ್ರಾರಂಭಿಸಿದ ಮಾದರಿಯನ್ನು ನಾವು ಮುಂದುವರೆಸಿದ್ದೇವೆ ಅನ್ನುವುದು ಹೆಚ್ಚು ಸರಿಯಾದೀತು. ಮಹಾಪ್ರಳಯದ ನಂತರ ಸೃಷ್ಟಿ ಪ್ರಾರಂಭದಲ್ಲಿ ಹೆಚ್ಚು ಜೀವಿಗಳು ಬೇಕಾಗಿದ್ದರಿಂದ ಈ ಕೆಲಸಕ್ಕಾಗಿ ಸಹಾಯಕವಾಗಲು ಅವರು ಮೊದಲಿಗೆ "ಪ್ರಜಾಪತಿ" ಅನ್ನುವವರನ್ನು ತಮ್ಮ ಮಾನಸಪುತ್ರರಾಗಿ ಹೊರತಂದರು. ಈ ಪ್ರಜಾಪತಿಗಳ ಮೂಲಕ ಮುಂದೆ ಸೃಷ್ಟಿ ದೊಡ್ಡದಾಗುತ್ತಾ ಹೋಯಿತು. ಈ ರೀತಿಯ ಪ್ರಜಾಪತಿಗಳ ಹೆಸರಿಗೆ ಉದಾಹರಣೆ ಕೊಡಬೇಕೆಂದರೆ ದಕ್ಷ ಪ್ರಜಾಪತಿ, ಕರ್ದಮ ಪ್ರಜಾಪತಿ, ಮುಂತಾದವರು. ಮರೀಚಿ, ಅಂಗೀರಸ ಮುಂತಾದವರೂ ಪ್ರಜಾಪತಿಗಳೇ. ಆದರೂ ಪ್ರಜಾಪತಿ ಅನ್ನುವ ಪದ ಕೇಳಿದ ತಕ್ಷಣ ನಮ್ಮ ನೆನಪಿಗೆ ಬರುವುದು ದಕ್ಷನ ಹೆಸರೇ ಅಲ್ಲವೇ? 

ಸಂತಾನವಾಗುವುದು ಹೇಗೆ? ಸಂತಾನ ಸೃಷ್ಟಿಯಲ್ಲಿ ಎಷ್ಟು ವಿಧ? ಈ ಪ್ರಶ್ನೆಗಳಿಗೆ ಹಿಂದೊಂದು ಸಂಚಿಕೆಯಲ್ಲಿ ಉತ್ತರ ಹುಡುಕಿದ್ದೇವೆ. ಆಸಕ್ತರು "ಸಂತಾನ ಸೃಷ್ಟಿಯ ವಿಧಗಳು" ಎಂಬ ಶೀರ್ಷಿಕೆಯಲ್ಲಿರುವ ಆ  ಲೇಖನವನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಸ್ತ್ರೀ-ಪುರುಷರ ಸಂಸರ್ಗದ ಮೂಲಕ ಮಕ್ಕಳನ್ನು ಪಡೆಯುವ ವ್ಯವಸ್ಥೆಯನ್ನು ಮೊದಲು ತಂದವನು ಈ ದಕ್ಷ ಪ್ರಜಾಪತಿ ಎಂದು ಹೇಳುತ್ತಾರೆ. 

*****

"ನಿನ್ನೆ ಕೃಷ್ಣ ಮೂರ್ತಿ ಬಂದಿದ್ದ" ಎಂದು ಯಾರಾದರೂ ಹೇಳಿದರೆ ತಕ್ಷಣ ಕೇಳುವ ಪ್ರಶ್ನೆ "ಯಾವ ಕೃಷ್ಣ ಮೂರ್ತಿ?" ಎಂದು. ಏಕೆ ಹೀಗೆ? ಅನೇಕ ಕೃಷ್ಣ ಮೂರ್ತಿಗಳು ನಮಗೆ ಗೊತ್ತು. ಅವರಲ್ಲಿ ಯಾರು ಎಂದು ತಿಳಿಯಬೇಕು. "ತರಲೆ ಕೃಷ್ಣಮೂರ್ತಿ ಬಂದಿದ್ದ" ಅಂತ ಹೇಳಿದರೆ ತಕ್ಷಣ ಗೊತ್ತಾಗುತ್ತದೆ. ಅಥವಾ ಒಬ್ಬರ ಕುಟುಂಬದಲ್ಲಿ "ಕಮಲು ಮಗ ಕೃಷ್ಣಮೂರ್ತಿ" ಅನ್ನಬಹುದು. ಇನ್ನೊಬ್ಬರ ಮನೆಯಲ್ಲಿ ರಮಾ ಗಂಡ ಕೃಷ್ಣಮೂರ್ತಿ ಇರಬಹುದು. ಹೀಗೆ. 

ಇದೇ ರೀತಿ ವೈದಿಕ ವಾಗ್ಮಯದಲ್ಲಿಯೂ ಒಂದೇ ಹೆಸರಿನ ಅನೇಕರು ಇದ್ದಾರೆ. "ರಾಮ" ಎಂದರೆ ಯಾರು? ಪರಶುರಾಮ ಇದ್ದಾನೆ. ಬಲರಾಮ ಇದ್ದಾನೆ. ಶ್ರೀರಾಮನೂ ಇದ್ದಾನೆ. ಅದೇ ರೀತಿ ಒಬ್ಬನಿಗೆ ಅನೇಕ ಹೆಸರುಗಳೂ ಉಂಟು. ತ್ರೇತಾಯುಗದ ರಾಮ ಹುಟ್ಟಿದ ಕೂಡಲೇ "ಶ್ರೀರಾಮ". ಕೌಸಲ್ಯೆಯ ಮಡಿಲಲ್ಲಿದ್ದಾಗ "ಕೌಸಲ್ಯಾರಾಮ". ದಶರಥನ ತೊಡೆಯ ಮೇಲೆ ಏರಿದಾಗ "ದಶರಥರಾಮ". ಅಯೋಧ್ಯೆಯಲ್ಲಿ ಓಡಾಡುತ್ತಿದ್ದಾಗ "ಅಯೋಧ್ಯಾರಾಮ". ಸೀತೆಯನ್ನು ಮದುವೆಯಾದಾಗ "ಸೀತಾರಾಮ". (ಅವಳಿಗೂ ಅನೇಕ ಹೆಸರು! ಅದಕ್ಕೇ "ಜಾನಕಿರಾಮ" ಸೇರಿಕೊಂಡಿತು). ಬಿಲ್ಲು ಹಿಡಿದಾಗ "ಕೋದಂಡರಾಮ". ಕಡೆಗೆ ಪಟ್ಟಾಭಿಷಿಕ್ತನಾದಾಗ "ಪಟ್ಟಾಭಿರಾಮ". ಮುಂದೆ ರಾಜ್ಯ ಆಳುವಾಗ "ರಾಜಾರಾಮ". ಈ ರೀತಿ. ಒಂದು ಹೆಸರಿನ ಅನೇಕರು ಮತ್ತು ಅನೇಕ ಹೆಸರಿನ ಒಬ್ಬರು. ಹೀಗೂ ಉಂಟು. ಹಾಗೂ ಉಂಟು. 

ದಕ್ಷನ ಸಂದರ್ಭದಲ್ಲಿಯೂ ಇದೇ ರೀತಿ. ಇಬ್ಬರು ದಕ್ಷರಿದ್ದಾರೆ. ಭಾಗವತ ಹೇಳುವಂತೆ ಸ್ವಾಯಂಭುವ ಮನ್ವಂತರದ ದಕ್ಷ ಒಬ್ಬ. ಚಾಕ್ಷುಷ ಮನ್ವಂತರದ ದಕ್ಷ ಇನ್ನೊಬ್ಬ. ಈ ಚಾಕ್ಷುಷ ಮನ್ವಂತರದ ದಕ್ಷ ಪ್ರಜಾಪತಿಗೆ ಅನೇಕ ಹೆಣ್ಣುಮಕ್ಕಳು. ಅವರಲ್ಲಿ ಒಟ್ಟಿಗೆ ಇಪ್ಪತ್ತೇಳು ಹೆಣ್ಣುಮಕ್ಕಳನ್ನು (ಬೇಕಿದ್ದರೆ ಒಂದು ಬ್ಯಾಚ್ ಅಂದುಕೊಳ್ಳಬಹುದು) ಚಂದ್ರನಿಗೆ ಮದುವೆ ಮಾಡಿಕೊಟ್ಟ. ಅಶ್ವಿನಿ, ಭರಣಿ, ಕೃತ್ತಿಕಾ, ಮುಂತಾಗಿ ಅವರ ಹೆಸರುಗಳು. ಕಡೆಯವಳು ರೇವತಿ. (ರೈವತರಾಜನ ಮಗಳು, ಬಲರಾಮನ ಹೆಂಡತಿ ರೇವತಿ ಬೇರೆ). ಇಪ್ಪತ್ತೇಳು ಅಕ್ಕ-ತಂಗಿಯರ ಮಧ್ಯದಲ್ಲಿ ರೋಹಿಣಿ ಎನ್ನುವ ಹೆಸರಿನ ಒಬ್ಬಳು. ಹೀಗೆ. 

*****

ನಾವು ಶಾಲಾ-ಕಾಲೇಜುಗಳಲ್ಲಿ ಓದುತ್ತಿದ್ದಾಗ ವರುಷಕ್ಕೊಮ್ಮೆ "ವಿಜ್ಞಾನದ ವಸ್ತುಪ್ರದರ್ಶನ" ನಡೆಸುತ್ತಿದ್ದರು. ಈಗ ಇನ್ನೂ ಚೆನ್ನಾಗಿ ನಡೆಸುತ್ತಿರಬಹುದು. ಅದರಲ್ಲಿ ಖಗೋಳದ ಒಂದು ಮಾದರಿ ಇಟ್ಟಿರುತ್ತಿದ್ದರು. ಗ್ರಹಗಳು ತಮ್ಮ ಅಕ್ಷದ ಮೇಲೆ ಸುತ್ತುತ್ತಾ ಸುತ್ತುತ್ತಾ ಹಾಗೆಯೇ ಸೂರ್ಯನ ಸುತ್ತ ಕೂಡ ಸುತ್ತುತ್ತಿದ್ದವು. ಭೂಮಿ ಹೀಗೆ ತನ್ನ ಅಕ್ಷದ ಸುತ್ತ ಸುತ್ತುವುದರಿಂದ ಹಗಲು-ರಾತ್ರಿಗಳೂ, ಸೂರ್ಯನ ಸುತ್ತ ಸುತ್ತುವುದರಿಂದ ಋತುಗಳೂ ಆಗುವುವು ಎಂದು ತಿಳಿಹೇಳುತ್ತಿದ್ದರು. ಹೀಗೆ ಸುತ್ತುವುದರಿಂದ ಅವು 360 ಡಿಗ್ರಿ ಕ್ರಮಿಸುತ್ತವೆ. ಸರಳ ರೇಖೆಯಲ್ಲಿ ಅಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ 360 ಡಿಗ್ರಿ ವರ್ತುಲವನ್ನು ಮೂವತ್ತು ಡಿಗ್ರಿಗಳ 12 ಭಾಗ ಮಾಡಿ ಅವುಗಳನ್ನು "ಹನ್ನೆರಡು ರಾಶಿಗಳು" ಅಂದರು. ಆಯಾ ಭಾಗಗಳಲ್ಲಿರುವ ನಕ್ಷತ್ರಪುಂಜಗಳ ಹೆಸರಿನಲ್ಲಿ ಮೇಷ, ವೃಷಭ, ಮಿಥುನ ಮುಂತಾಗಿ ಹೆಸರಿಟ್ಟರು. ಹನ್ನೆರಡನೇಯದು ಮೀನ ರಾಶಿಯಾಯಿತು. 

ಸರಳ ರೇಖೆಗೆ (Straight Line) ಮೊದಲು ಮತ್ತು ಕೊನೆ ಉಂಟು. ವರ್ತುಲಕ್ಕೆ (Circle) ಕೊನೆಮೊದಲಿಲ್ಲ. ರಾಶಿಚಕ್ರ ನಾವು ನಮ್ಮ ಅನುಕೂಲಕ್ಕೆ ಮಾಡಿಕೊಂಡಿರುವ ವ್ಯವಸ್ಥೆ. ಸೂರ್ಯನು ಏಪ್ರಿಲ್ ಮಧ್ಯದಲ್ಲಿ ಮೇಷ ರಾಶಿಗೆ ಬರುತ್ತಾನೆ. ಆಗ ಸೌರಮಾನ ಲೆಕ್ಕದ  ಹೊಸ ವರ್ಷ. ಜ್ಯೋತಿಷ್ಯದಲ್ಲಿ ಸೂರ್ಯನು ಯಾವ ರಾಶಿಯಲ್ಲಿ ಇದ್ದಾನೋ, ಆ ತಿಂಗಳಿಗೆ ಅದೇ ಹೆಸರು. ಸೂರ್ಯನ ಗತಿಗೆ (ಅಥವಾ ಸೂರ್ಯನ ಸುತ್ತ ಸುತ್ತುವ ಗ್ರಹಗಳ ಗತಿಗೆ) ಕೊನೆ ಮೊದಲಿಲ್ಲ. ಮೀನ ರಾಶಿ ಕಳೆಯಿತು ಎಂದು ಸುಮ್ಮನೆ ಕೂಡುವಂತಿಲ್ಲ. ತಕ್ಷಣ ಮೇಷಕ್ಕೆ. ಹೀಗೆ ಚಲನೆ. ಅದಕ್ಕೆ ರಾಶಿಗಳನ್ನು ಎಣಿಸಿದಾಗ ಮೀನ ಆದನಂತರ ಮೇಷ ಬಂದೇಬಿಟ್ಟಿತು. ಈ ಕಾರಣದಿಂದ "ಮೀನ-ಮೇಷ ಎಣಿಸುವುದು" ಎನ್ನುವ ಗಾದೆ ಬಂದಿತು. "ಎಣಿಸುವುದರಲ್ಲೇ ಕಾಲ ಕಳೆಯಬೇಡ. ಬೇಗ ಕೆಲಸ ಶುರು ಮಾಡು" ಎನ್ನುವ ಅರ್ಥದಲ್ಲಿ. 

ಭೂಮಿ ಸೂರ್ಯನ ಸುತ್ತ ಒಂದು ಸುತ್ತು ಬರುವುದಕ್ಕೆ (360 ಡಿಗ್ರಿ) ಹನ್ನೆರಡು ತಿಂಗಳು ಕಾಲ. ಅಂದರೆ 30 ಡಿಗ್ರಿಗೆ ಒಂದು ತಿಂಗಳು. ಆದರೆ ಚಂದ್ರ ಇಪ್ಪತ್ತೆಂಟು ದಿನಕ್ಕೆ ಒಂದು ಸುತ್ತು ಬರುತ್ತಾನೆ. ಆದ್ದರಿಂದ ಚಾಂದ್ರಮಾನ ತಿಂಗಳಿಗೆ ದಿನ ಕಡಿಮೆಯಾಯಿತು. ಈ ತಿಂಗಳುಗಳಿಗೆ ಚೈತ್ರ, ವೈಶಾಖ, ಮುಂತಾಗಿ ಹೆಸರು. ಈ ಎರಡು ರೀತಿಯ ವರ್ಷಗಳಿಗೆ ವ್ಯತ್ಯಾಸ ಸರಿ ಮಾಡಿ ಸಮಸ್ಥಿತಿಗೆ ತರಲು ಚಂದ್ರಮಾನದಲ್ಲಿ ಆಗಾಗ "ಅಧಿಕ ಮಾಸ" ಬರುತ್ತದೆ. 33 ತಿಂಗಳಿಗೆ ಒಂದು ಅಧಿಕ ಮಾಸ. ಈಗ ತಾನೇ "ಅಧಿಕ ಜ್ಯೇಷ್ಠ ಮಾಸ" ಮುಗಿಯಿತು. 

*****

ಚಂದ್ರನು ಇಪ್ಪತ್ತೇಳು ಅಕ್ಕ-ತಂಗಿಯರನ್ನು ಒಟ್ಟಿಗೆ ಮದುವೆಯೇನೋ ಆದನು. ಆದರೆ ಅವನಿಗೆ ಎಲ್ಲರಿಗಿಂತ ರೋಹಿಣಿ ಮೇಲೆ ಅಧಿಕ ಮನಸ್ಸು. ಅವಳ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದನಂತೆ. ಇದರಿಂದ ಅಸೂಯೆಗೊಂಡ ಮಿಕ್ಕ ಇಪ್ಪತ್ತಾರು ಸೋದರಿಯರು ಅಪ್ಪನಾದ ದಕ್ಷನ ಬಳಿ ದೂರು ಹೇಳಿದರು. ದಕ್ಷ ಚಂದ್ರನಿಗೆ ಕ್ಷಯಿಸಿಹೋಗು ಎಂದು ಶಾಪ ಕೊಟ್ಟ. ಕೊನೆಗೆ ಕುಟುಂಬದ ಎಲ್ಲರೂ ಸೇರಿ ನ್ಯಾಯ ತೀರ್ಮಾನ ಆಯಿತು. ಚಂದ್ರನಿಗೆ ಭಾಗಶಃ ವಿಶಾಪ ಆಯಿತು. ನಮ್ಮ ಕೋರ್ಟುಗಳು "Partial Relief" ಕೊಡುವಂತೆ. ಹದಿನೈದು ದಿನ ಕುಗ್ಗುವುದು. ಮತ್ತೆ ಹದಿನೈದು ದಿನ ಹಿಗ್ಗುವುದು. ಹೀಗೆ ಕೃಷ್ಣಪಕ್ಷ-ಶುಕ್ಲಪಕ್ಷ ಆಯಿತು. ಮತ್ತೆ ಅಕ್ಕ-ತಂಗಿಯರ ಗತಿ? ಪ್ರತಿಯೊಬ್ಬರ ಮನೆಯಲ್ಲಿ ಒಂದೊಂದು ದಿನ ಇರುವುದು ಎಂದು ತೀರ್ಮಾನ ಆಯಿತು. ಒಂದು ಸುತ್ತು ಎಲ್ಲರ ಮನೆ ವಾಸ ಮುಗಿಸುವ ಹೊತ್ತಿಗೆ ತಿಂಗಳೂ ಕಳೆಯಿತು. ಮತ್ತೆ ಮುಂದಿನ ಪರ್ಯಾಯ. ಹೀಗೆ ನಡೆಯುತ್ತಿದೆ. ಚಂದ್ರನು ತನ್ನ ವರ್ತುಲದ ದಾರಿಯಲ್ಲಿ ಉದ್ದಕ್ಕೂ ಇಪ್ಪತ್ತೇಳು ಮನೆಗಳು ಕಟ್ಟಿಕೊಟ್ಟು ಈ ಹೆಂಡತಿಯರ ಜೊತೆ ಇರುತ್ತಾನಂತೆ. 

ಈ ಸೂರ್ಯನ ಹನ್ನೆರಡು ಮನೆಗಳಿಗೂ ಚಂದ್ರನ ಇಪ್ಪತ್ತೇಳು ಮನೆಗಳಿಗೂ ತಾಳೆ ಹಾಕುವುದು ಹೇಗೆ? ಚಂದ್ರನ ಇಪ್ಪತ್ತೇಳು ಮನೆಗಳನ್ನು ಹನ್ನೆರಡರಿಂದ ಭಾಗಿಸಿದರೆ (2.25) ಎರಡೂಕಾಲು ಭಾಗ ಬಂತು. ಹೀಗಾಗಿ ಅಶ್ವಿನಿ, ಭರಣಿಯರಿಗೆ ಮೇಷದಲ್ಲಿ ಮನೆ ಸಿಕ್ಕಿತು. ಕೃತ್ತಿಕೆಗೆ ಕಾಲುಭಾಗ ಮೇಷದಲ್ಲಿ ಮತ್ತು ಮೂರು ಭಾಗ ವೃಷಭದಲ್ಲಿ. ರೋಹಿಣಿಗೆ ಪೂರ್ತಿ ವೃಷಭದಲ್ಲಿ. ಮೃಗಶಿರಳಿಗೆ ಅರ್ಧ ವೃಷಭದಲ್ಲಿ ಮತ್ತು ಇನ್ನರ್ಧ ಮಿಥುನದಲ್ಲಿ.  ಹೀಗೆ ನಡೆಯುತ್ತಾ ಹೋಗುತ್ತದೆ. ಒಂದು ನಕ್ಷತ್ರಕ್ಕೆ ನಾಲ್ಕು ಭಾಗ. ಇಪ್ಪತ್ತೇಳು ನಕ್ಷತ್ರಕ್ಕೆ ಒಂದು ನೂರ ಎಂಟು ಭಾಗ. ಹೀಗೆ ಹಂಚಿದ್ದರಿಂದ ಪ್ರತಿಭಾಗವೂ ಒಂದು "ಪಾದ" (Quarter) ಎಂದಾಯಿತು. ಜ್ಯೋತಿಷ್ಯ ಬಲ್ಲವರಿಗೆ ಸೂತ್ರಗಳು (formula) ಗೊತ್ತು. "ಕೃತ್ತಿಕಾ: ಪ್ರಥಮಂ ಮೇಷ:" ಅನ್ನುತ್ತಾರೆ. ಅಂದರೆ ಕೃತ್ತಿಕಾ ನಕ್ಷತ್ರ ಮೊದಲನೇ ಪಾದದವರೆಗೆ ಮೇಷ ರಾಶಿ ಎಂದು. ಹೀಗೆಯೇ ಬೇರೆ ಮನೆಗಳಿಗೂ ಲೆಕ್ಕ. ಜ್ಯೋತಿಷ್ಯವೆಂದರೆ ಬಹುಪಾಲು ಗಣಿತವೇ. Mathematics is the language of Science" ಎಂದು ಹೇಳುತ್ತಾರೆ ತಿಳಿದವರು. ಜ್ಯೋತಿಷ್ಯವೂ ಹಾಗೆಯೇ.

ಹೀಗೆ ಲೆಕ್ಕ ಮಾಡಿದ ಮಾತ್ರಕ್ಕೇ ಅವರ ಮನೆಗಳು ಚೂರು ಚೂರಾಗಿವೆ ಎಂದು ಅರ್ಥವಲ್ಲ. ಅಮೇರಿಕ ಮತ್ತು ಕೆನಡಾ ದೇಶಗಳ ನಡುವೆ ಗಡಿಯಾಗಿ ಹರಿಯುವ ವಿಶಾಲವಾದ ಸೈನ್ಟ್ ಲಾರೆನ್ಸ್ ನದಿಯ ಮಧ್ಯ ಜಲರಾಶಿಯ ಪ್ರದೇಶಗಳಲ್ಲಿ ಬಹಳ ಸುಂದರ, ಅತಿ ಪ್ರೇಕ್ಷಣೀಯ "Thousand Islands" ಅನ್ನುವ ಹೆಸರಿನ ಪ್ರದೇಶವಿದೆ. ಒಟ್ಟು ಸುಮಾರು ಒಂದು ಸಾವಿರದ ಎಂಟು ನೂರು ದ್ವೀಪಗಳು. ಇವುಗಳಲ್ಲಿ ಕೆಲವು ಯು.ಎಸ.ಏ. ದೇಶಕ್ಕೂ, ಮತ್ತೆ ಕೆಲವು ಕೆನಡಾ ದೇಶಕ್ಕೂ ಸೇರುತ್ತವೆ. ಒಂದು ಮನೆಯ ಬಹುಭಾಗ ಕೆನಡಾದಲ್ಲಿ ಇದ್ದರೆ ಸ್ವಲ್ಪ ಭಾಗ ಇನ್ನೊಂದು ದೇಶದಲ್ಲಿ! ಅಡಿಗೆ, ಊಟ, ಟಿ.ವಿ. ನೋಡುವುದು ಕೆನಡಾದಲ್ಲಿ. ಮಲಗುವುದು ಯು.ಎಸ.ಎ. ದೇಶದಲ್ಲಿ. ಮನೆಯ ಮಧ್ಯೆ ಗಡಿ ರೇಖೆ ಹಾದು ಹೋಗುತ್ತದೆ. 

ಒಂದು ಮನೆಯಂತೂ ಎರಡು ಪುಟ್ಟ ದ್ವೀಪಗಳಲ್ಲಿ ಕಟ್ಟಿದ್ದಾರೆ. ಮನೆಯೆಲ್ಲ ಒಂದು ದೊಡ್ಡ ದ್ವೀಪದಲ್ಲಿ (ಎರಡರಲ್ಲಿ ದೊಡ್ಡದು ಅಷ್ಟೇ. ಅದೂ ಪುಟ್ಟ ದ್ವೀಪವೇ!) ಇದೆ. ದೋಣಿ ನಿಲ್ಲಿಸುವ ಗ್ಯಾರೇಜು ಮಾತ್ರ ಇನ್ನೊಂದು ದೇಶದಲ್ಲಿ. ಎರಡರ ಮಧ್ಯೆ ಒಂದು ಸಣ್ಣ ಮರದ ಸೇತುವೆ ಇದೆ. ಪ್ರಾರಂಭದಲ್ಲಿ ಮೇಲೆ ಕೊಟ್ಟಿರುವ ದೊಡ್ಡ ಚಿತ್ರದಲ್ಲಿ ಅದನ್ನು ನೋಡಬಹುದು. (ಚಿತ್ರವನ್ನು ಇನ್ನಷ್ಟು ದೊಡ್ಡದು ಮಾಡಿ ನೋಡಿದರೆ ಸೇತುವೆಯ ಒಂದು ಕಡೆ ಕೆನಡಾ ದೇಶದ ಬಾವುಟ ಮತ್ತು ಇನ್ನೊಂದು ಕಡೆ ಯುಎಸ್ಏ ಬಾವುಟ ನೋಡಬಹುದು). ಇದು ಪ್ರಪಂಚದಲ್ಲಿ ಎರಡು ದೇಶಗಳ ನಡುವೆ ಇರುವ ಅತಿ ಚಿಕ್ಕ ಸೇತುವೆ! "Just Room Enough" ಅನ್ನುವ ಒಂದು ದ್ವೀಪದ ಮನೆ ಪಕ್ಕದ ಚಿತ್ರದಲ್ಲಿ ಕೊಟ್ಟಿದೆ. ಅಲ್ಲಿ ಮನೆಯಿಂದ ಹೊರಗಡೆ ಕಾಲಿಟ್ಟರೆ ನೀರು. ಕಾರಿನಲ್ಲಿ ಓಡಾಟವಿಲ್ಲ. ಎಲ್ಲಾ ದೋಣಿಗಳ (ಬೋಟ್) ಮೇಲೆ ಅವಲಂಬನೆ.  ಈ ರೀತಿ! ಆದರೆ ಜನ ಸಂತೋಷವಾಗಿಯೇ ಇದ್ದಾರೆ. ಈ ಮನೆಗಳೆಲ್ಲಾ ಮಿಲಿಯನ್ ಡಾಲರ್ ಮನೆಗಳು. 

ಚಂದ್ರನ ಕೆಲವು ಹೆಂಡತಿಯರ ಮನೆಗಳೂ ಹೀಗೆಯೇ ಎಂದು ತಿಳಿಯಬೇಕು. 

ಪಂಚಾಂಗಗಳಲ್ಲಿ ಪ್ರತಿದಿನ ಗ್ರಹಗಳು ಯಾವ ಸ್ಥಳದಲ್ಲಿ ಇವೆ ಎಂದು ತೋರಿಸಿರುತ್ತಾರೆ. ಒಂದು ವ್ಯಕ್ತಿ ಹುಟ್ಟಿದ ದಿನ, ಸಮಯದಲ್ಲಿ ಚಂದ್ರ ಇರುವ ನಕ್ಷತ್ರ, ಅದರ ಪಾದ ನೋಡುತ್ತಾರೆ. ಅದೇ ಜನ್ಮ (ಹುಟ್ಟಿದ) ನಕ್ಷತ್ರ. ಉದಾಹರಣೆಗೆ ಅನುರಾಧ ಎರಡನೇ ಪಾದ ಅಂದಂತೆ. ಅದಕ್ಕೆ ಸರಿಯಾದ ರಾಶಿಯೇ  ಜನ್ಮ ರಾಶಿ. ಈ ರೀತಿ ಲೆಕ್ಕ ಹಾಕಿ ಕುಂಡಲಿ ಬರೆಯುತ್ತಾರೆ. ಚಂದ್ರನಿಗೆ ಅಷ್ಟು ಮಹತ್ವ.

ಈ ಲೆಕ್ಕ ಮೊದಲಿಗೆ ಸ್ವಲ್ಪ ಕಷ್ಟ. ಗೊತ್ತಾಗದಿದ್ದರೆ ನಷ್ಟವಿಲ್ಲ. ಪಂಚಾಂಗದಲ್ಲಿ ಸುಲಭವಾಗಿ ನೋಡಬಹುದು. ಇಲ್ಲದಿದ್ದರೆ ಜ್ಯೋತಿಷ್ಕರನ್ನು ಕೇಳಬಹುದು. ಜ್ಯೋತಿಷ್ಯ ನಂಬದಿದ್ದರೆ ಎರಡೂ ಬೇಕಿಲ್ಲದೆ ನಿರಾಳವಾಗಿ ಇರಬಹುದು. 
*****

ಕಳೆದ ತಿಂಗಳು "ಅನುಕೂಲ ದಾಂಪತ್ಯ" ಅನ್ನುವ ಒಂದು ಸಂಚಿಕೆಯಲ್ಲಿ ಗಂಡ-ಹೆಂಡಿರ ಸಹಜೀವನದ ಬಗ್ಗೆ ವಿಚಾರ ಮಾಡುತ್ತಾ "ಅನುರೂಪ ದಾಂಪತ್ಯ" ಮತ್ತು "ಅನುಕೂಲ ದಾಂಪತ್ಯ" ಅನ್ನುವ ಬಗ್ಗೆ ಸ್ವಲ್ಪ ಯೋಚಿಸಿದ್ದೆವು. "ಅನುಕೂಲ ದಾಂಪತ್ಯ" ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಇವೆರಡು ರೀತಿಯ (ಅನುರೂಪ ಮತ್ತು ಅನುಕೂಲ) ದಾಂಪತ್ಯಗಳ ಜೊತೆಯಲ್ಲಿ "ವಿಷಮ ದಾಂಪತ್ಯ" ಅಂತ ಕೂಡ ಒಂದು ಉಂಟು. ಇದು ಕಷ್ಟದ ದಾಂಪತ್ಯ. ಹೆಣಗಾಡಿಕೊಂಡು ಜೊತೆಯಲ್ಲಿ ಬದುಕುವುದು! "ನವಜೀವನ" ಕನ್ನಡ ಚಲನಚಿತ್ರದ "ಹೆಣಗಾಟದೀ ಜನ್ಮ ಏಕೆ ಕೊಟ್ಟನೋ ಆ ಬ್ರಹ್ಮ" ಅನ್ನುವ ಹಾಡಿನಂತೆ. (ಬಾಮಾ-ಭಾಮಾ, ನಾನರಿಯೆ ಮನದ ಮರ್ಮ...... ಅನ್ನುವ ಹಾಡು).

ಅರವತ್ತು-ಎಪ್ಪತ್ತು ವರುಷಗಳ ಹಿಂದೆ ವಿವಾಹ ಮಾಡುವ ಮುನ್ನ ವಧು ಮತ್ತು ವರರ ಜಾತಕ ಪರಿಶೀಲಿಸಿ ತಾಳೆ ಹಾಕುತ್ತಿದ್ದರು. ಕೆಲವು "ಕೂಟ" ನೋಡುತ್ತಿದ್ದರು. ರಾಶಿ ಕೂಟ, ಗ್ರಹಮೈತ್ರ ಕೂಟ, ರಜ್ಜು ಕೂಟ, ಯೋನಿ ಕೂಟ, ಹೀಗೆ ಹೆಸರುಗಳು. ಪರೀಕ್ಷೆಯಲ್ಲಿ ಅಂಕಗಳನ್ನು ಕೊಟ್ಟಂತೆ ಲೆಕ್ಕ ಮಾಡಿ ಸರಿಹೊಂದಿದರೆ ಮದುವೆಗೆ ಒಪ್ಪಿಗೆ ಕೊಡುತ್ತಿದ್ದರು. ಎಲ್ಲಾ ಕೂಟಗಳು "ಅತ್ಯುತ್ತಮ" ಆಗಿದ್ದರೆ ಗರಿಷ್ಟ (Maximum) 36 ಮಾರ್ಕ್ಸ್. ಕನಿಷ್ಠ (Minimum) 18 ಬರಬೇಕು. ಇಲ್ಲದಿದ್ದರೆ ಒಪ್ಪುತ್ತಿರಲಿಲ್ಲ. ಕೆಲವರು ಮೊದಲು ರಾಶಿಕೂಟ ಮತ್ತು ಗ್ರಹಮೈತ್ರ ಕೂಟಗಳನ್ನು ನೋಡುತ್ತಿದ್ದರು. ಇವು ಕೂಡಲಿಲ್ಲ ಅಂದರೆ ಹದಿನೆಂಟಕ್ಕಿಂತಲೂ ಹೆಚ್ಚು ನಂಬರು ಬಂದರೂ ಮದುವೆಯಿಲ್ಲ. ಪರೀಕ್ಷೆಯಲ್ಲಿ compulsory paper ಇದ್ದಂತೆ. ಬೇರೆಲ್ಲ ಪೇಪರ್ ಮೊದಲ ದರ್ಜೆಯಲ್ಲಿ ಪಾಸಾದರೂ ಇದು ಆಗಲಿಲ್ಲ ಅಂದರೆ ಫೇಲ್ ಅಂದಂತೆ. ಅನೇಕರಿಗೆ ಹುಡುಗ ಅಥವಾ ಹುಡುಗಿ ಒಪ್ಪಿಗೆಯಾಗದಿದ್ದರೆ "ಬೇಡ" ಅನ್ನುವುದಕ್ಕೆ "ಜಾತಕ ಹೊಂದಲಿಲ್ಲ" ಅನ್ನುವುದು ಸುಲಭ ಕಾರಣ ಆಗುತ್ತಿತ್ತು. 

ಕೆಲವರು "ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು" ಅನ್ನುವ ಗಾದೆಯನ್ನು ಮನೆದೇವರಂತೆ ಪ್ರೀತಿಸುತ್ತಿದ್ದರು. ಸುಳ್ಳು ಜಾತಕ ಬರೆಸುವುದೂ ನಡೆಯುತ್ತಿತ್ತು. ಈ ಕಾರಣಕ್ಕೆ ಕೆಲವರು ಉಪಾಯವಾಗಿ ಹುಟ್ಟಿದ ದಿನ ಅಕ್ಕ-ಪಕ್ಕದ ಮನೆಯವರಿಂದ ತಿಳಿದುಕೊಂಡು ತಾವೇ ಜಾತಕ ಬರೆಸಿ ತಾಳೆ ನೋಡುತ್ತಿದ್ದರು. ರಾಜಕುಮಾರ್-ಮಾಧವಿ-ಗೀತಾ ನಟಿಸಿರುವ ಕನ್ನಡ ಚಲನಚಿತ್ರ "ಶ್ರುತಿ ಸೇರಿದಾಗ" ಹೀಗೆ ಜಾತಕದ ಕಾರಣ ಮದುವೆಯೊಂದು ನಿಂತು ಹೋದ ಕಥೆಯದ್ದು. 

ಒಂದು ಹುಡುಗ ಇದ್ದಾನೆ. ಅವನ ಜಾತಕದಲ್ಲಿ ಚಂದ್ರ ಮೇಷ ರಾಶಿಯಲ್ಲಿದ್ದಾನೆ. ಮದುವೆಗೆ ಒಂದು ಹುಡುಗಿಯ ಜಾತಕ ಬಂದಿದೆ. ಅವಳ ಜಾತಕದಲ್ಲಿ ಚಂದ್ರ ಕನ್ಯಾ ರಾಶಿಯಲ್ಲಿದ್ದಾನೆ. ಲೆಕ್ಕ ಮಾಡಿದರೆ ವರನ ಕಡೆಯಿಂದ ವಧುವಿನದು ಆರನೆಯ ಮನೆ. ವಧುವಿನ ಕಡೆಯಿಂದ ವರನದು ಎಂಟನೆಯ ಮನೆ. ಇದು ಆರು-ಎಂಟರ ನಂಟು. ಸಂಸ್ಕೃತದಲ್ಲಿ ಇದನ್ನು "ಷಷ್ಟಾಷ್ಟಕ" ಅನ್ನುತ್ತಾರೆ. ಇಂತಹವರ ದಾಂಪತ್ಯ ಹೇಗೆ? 

ವಿಷಮ ದಾಂಪತ್ಯಕ್ಕೆ ಅನೇಕ ಕಾರಣಗಳು ಇರುತ್ತವೆ. ಈ ಆರು-ಎಂಟರ ನಂಟು ಒಂದು ಕಾರಣ ಅನ್ನುತ್ತಾರೆ ಜ್ಯೋತಿಷ್ಕರು. ಗಂಡ "ಆರು" ಎಂದರೆ ಹೆಂಡತಿ "ಇಲ್ಲ, ಎಂಟು" ಅನ್ನುವಂತೆ. "ಹೋಗಲಿ, ಏಳಕ್ಕೆ ಒಪ್ಪಿಕೊಳ್ಳೋಣ" ಅನ್ನಲು ಇಬ್ಬರೂ ತಯಾರಿಲ್ಲ. ಇಂತಹ ದಂಪತಿಗಳಲ್ಲಿ ತಾಳ-ಮೇಳ ಇರುವುದಿಲ್ಲ ಎಂದು ಕೆಲವರ ನಂಬಿಕೆ. "ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು" ಅನ್ನುವ ಗಾದೆ ಇಂತಹ ಜೋಡಿಗೇ ಹೇಳಿ ಮಾಡಿಸಿದ್ದು. ಜಾತಕ ನಂಬುವವರು ಈ ರೀತಿಯ ಮದುವೆಗಳನ್ನು ಒಪ್ಪುವುದಿಲ್ಲ. ಇದು ಅವರವರ ಜೀವನದ ದೃಷ್ಟಿಕೋನಕ್ಕೆ, ನಂಬಿಕೆಗಳಿಗೆ ಸಂಬಂಧಿಸಿದ್ದು. 

*****

ಮುಂದಿನ ಸಂಚಿಕೆಯಲ್ಲಿ ಇದರ ಬಗ್ಗೆ ಇನ್ನಷ್ಟು ವಿವರಣೆ ನೋಡೋಣ. ಹಾಗೆಯೇ "ಸಾವಿರ ದ್ವೀಪಗಳು" (Thousand Islands) ಬಗೆಗೂ ಬೇರೊಂದು ಸಂಚಿಕೆಯಲ್ಲಿ ತಿಳಿಯೋಣ.

Monday, June 15, 2026

ನಾಳೆಯೂ ಕಾರ್ಯಕ್ರಮ ಇರುತ್ತದೆ!


ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳು, ತೀವ್ರ ಅಧಿಕಾರದಾಹ ಹುಟ್ಟಿಸುತ್ತಿರುವ ಕದನಗಳು, ಬಿಗಿತಪ್ಪುತ್ತಿರುವ ಆಡಳಿತ, ಮತ್ತು ಇಂತಹ ಸಂದರ್ಭದಲ್ಲಿ ಗೊತ್ತು-ಗುರಿ ಇಲ್ಲದೆ ಓಡುತ್ತಿರುವ ಸಮಾಜದ ಬಗ್ಗೆ ಕೆಲವು ವಿಷಯಗಳನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ನಮ್ಮ ಸುತ್ತಮುತ್ತಲೇ ಇದ್ದು ಹೆಣಗಾಡಿದ ಕೆಲವರು ಸ್ವಾತಂತ್ರ್ಯ ಸೇನಾನಿಗಳ ಬಗೆಗೂ ತಿಳಿದಂತಾಯಿತು. "ಸಂಸ್ಕೃತಿ ಪ್ರಸಾರ" ಎಂಬ ಶೀರ್ಷಿಕೆಯ ಈ ಹಿಂದಿನ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಕರ್ನಾಟಕ ಏಕೀಕರಣ ಆಗುವ ಮುನ್ನಿನ, ಆಗಿನ ಮೈಸೂರು ರಾಜ್ಯದ ಮೊದಲ ಚುನಾಯಿತ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಕೆಂಗಲ್ ಹನುಮಂತಯ್ಯನವರ ಆಸೆಯ ಕೂಸಾಗಿ "ಸಂಸ್ಕೃತಿ ಪ್ರಸಾರ" ಸರಣಿಯ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆದವು. ಇದರ ಜೊತೆಜೊತೆಯಾಗಿ ಕೇಂದ್ರ ಸರ್ಕಾರದ "ವಾರ್ತಾ ಮತ್ತು ಪ್ರಸಾರ ಇಲಾಖೆ" ಸಹ ತನ್ನ "Song and Drama" ವಿಭಾಗದ ವತಿಯಿಂದ ಅನೇಕ ಕಡೆ "ರಸಸಂಜೆ" ಕಾರ್ಯಕ್ರಮಗಳನ್ನು ನಡೆಸುತ್ತಿತ್ತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ್ಯ "ಕುಟುಂಬ ಯೋಜನೆ" ಮತ್ತು ಅದರಲ್ಲಿಯೂ ಮುಖ್ಯವಾಗಿ "ಮಿತ ಸಂತಾನ" ಕಾರ್ಯಕ್ರಮದ ಪ್ರಚಾರವೇ ಆಗಿದ್ದಿತು. 

ಅನೇಕ ಕಲಾವಿದರು ಈ ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇಂತಹ ಸಂಜೆ ನಡೆಯುವ ಕೂಟಗಳಲ್ಲಿ ಬಂದ ಜನತೆಗೆ ಮನರಂಜನೆ ಮತ್ತು ಕೆಲವು ರೀತಿಯ ಜ್ಞಾನಪ್ರಸಾರ ಸಹ ಮಾಡಿದರು. ಶ್ರೀಯುತ ಪಿ. ಕಾಳಿಂಗ ರಾಯರು ನಡೆಸಿಕೊಡುವ ಕಾರ್ಯಕ್ರಮಗಳು ಬಹಳ ಜನಪ್ರಿಯವಾದವು. ಅವರು "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಗೀತೆಯಿಂದ ಪ್ರಾರಂಭಿಸಿ ಕೊನೆಯಲ್ಲಿ "ಬಾನಿಗೊಬ್ಬ ರವಿಯಿರಬೇಕು, ಬಾಳಿಗೊಬ್ಬ ಮಗನಿರಬೇಕು, ತಂಪುಕೊಡುವ ಚಂದ್ರಿಕೆಯಂಥ ಚೆಲುವೆಯಾದ ಮಗಳಿರಬೇಕು" ಎಂದು ಮಿತ ಸಂತಾನದ ಪರವಾದ ಗೀತೆಯಿಂದ ಮುಗಿಸುತ್ತಿದ್ದರು. 

ಶ್ರೀ ಹನುಮಂತಯ್ಯನವರ ಸರ್ಕಾರ ಇದ್ದಾಗ ಸ್ವಾತಂತ್ರ್ಯ ಬಂದ ಹೊಸದು. ಮೊದಲನೇ ಪಂಚವಾರ್ಷಿಕ ಯೋಜನೆಯ ಮೂಲ ಗುರಿ ಕೃಷಿಗೆ ಉತ್ತೇಜನ ಕೊಡುವುದೇ ಆಗಿತ್ತು. ಆಗ ಅನೇಕ ಹಳ್ಳಿಗಳಲ್ಲಿ ಶಾಲೆಗಳಿರಲಿಲ್ಲ. ಒಟ್ಟಾರೆ ಜನಸಂಖ್ಯೆಯಲ್ಲಿ ಅನಕ್ಷರಸ್ಥರ ಸಂಖ್ಯೆ ಬಲು ದೊಡ್ಡದಿತ್ತು. ಅನೇಕ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ರಸ್ತೆಗಳೂ ಬಸ್ ಪ್ರಯಾಣದ ವ್ಯವಸ್ಥೆಯೂ ಇರಲಿಲ್ಲ. ನೀರಾವರಿ ಅನುಕೂಲಗಳು ಈಗಿನಂತೆ ಇರದೇ ಬಹುಪಾಲು ರೈತರು ಮಳೆಯನ್ನೇ ಅವಲಂಬಿಸಿಕೊಂಡು ಬೆಳೆ ತೆಗೆಯುವುದರಲ್ಲಿ ನಿರತರಾಗಿದ್ದರು. 

ಸಂಸ್ಕೃತಿ ಪ್ರಸಾರ ಕಾರ್ಯಕ್ರಮವನ್ನು ಮತ್ತು ಅದರ ಅನುಷ್ಠಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಈ ಹಿನ್ನೆಲೆ ಮತ್ತು ಹಿಂದಿನ ಸಂಚಿಕೆ ವಿವರಗಳು ತಿಳಿದಿರುವುದು ಅವಶ್ಯಕ. 

*****

1952ರಲ್ಲಿ ಚುನಾಯಿತ ಸರ್ಕಾರ ಅಧಿಕಾರ ವಹಿಸಿಕೊಂಡು ಹೊಸ ಕಾರ್ಯಕ್ರಮಗಳ ರೂಪು-ರೇಷೆ ಸಿದ್ಧಪಡಿಸಿ, ಹಣ-ಕಾಸಿನ ವ್ಯವಸ್ಥೆ ಮಾಡಿ ಸಂಬಂಧಿಸಿದ ಚಟುವಟಿಕೆಗಳು ಪೂರ್ಣವಾಗಿ ರೂಪುಗೊಳ್ಳಲು ಸುಮಾರು ಎರಡು ವರುಷಗಳು ಹಿಡಿದವು. ನಂತರ ವ್ಯವಸ್ಥಿತವಾಗಿ ಕಾರ್ಯಕ್ರಮಗಳು ನಡೆಯಲಾರಂಭಿಸಿದವು. ಅನೇಕ ವಿದ್ವಾಂಸರು, ಗಮಕಿಗಳು, ಕಲಾವಿದರು ಭಾಗವಹಿಸಲಾರಂಭಿಸಿದರು. 

ಒಂದು ಸರ್ಕಾರಿ ಕಾರ್ಯಕ್ರಮದ ಉದ್ಘಾಟನೆಯ ನಂತರ ಚಹಾಕೂಟ ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಸಂಬಂಧಿಸಿದ  ಮಂತ್ರಿಗಳಾದ ಶ್ರೀ ಎ. ಜಿ. ರಾಮಚಂದ್ರ ರಾವ್ ಅಂದು ಬಂದಿದ್ದ ಪತ್ರಕರ್ತರ ಜೊತೆಯಲ್ಲಿ ಮಾತನಾಡುತ್ತಿದ್ದರು. ಪತ್ರಿಕಾ ಪ್ರತಿನಿಧಿಯಾಗಿ ಅಲ್ಲಿ ಬಂದಿದ್ದ ಶ್ರೀ ಸಿ. ಕೆ. ನಾಗರಾಜ ರಾವ್ ಅವರ ಕಣ್ಣಿಗೆ ಬಿದ್ದರು. ರಾಮಚಂದ್ರರಾಯರು ಅವರನ್ನು ಕರೆದು ಕುಶಲೋಪರಿ ವಿಚಾರಿಸಿದರು. 

"ಸರ್ಕಾರ "ಸಂಸ್ಕೃತಿ ಪ್ರಸಾರ" ಕಾರ್ಯಕ್ರಮ ನಡೆಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯಲ್ಲವೇ?"
"ಬಂದಿದೆ. ನಮ್ಮ ಪತ್ರಿಕೆಯಲ್ಲಿ ವರದಿಗಳನ್ನೂ ಮಾಡುತ್ತಿದ್ದೇವಲ್ಲ"
"ಅನೇಕರು ಕ್ರಮವಾಗಿ ಅರ್ಜಿ ಹಾಕಿಕೊಂಡು, ಅನುಮೋದನೆ ಪಡೆದು ಕಾರ್ಯಕ್ರಮ ನಡೆಸುತ್ತಿದ್ದಾರೆ"
"ಹೌದು. ಗೊತ್ತು"
"ನೀವು ಅನೇಕ ವಿಷಯಗಳ ಬಗ್ಗೆ ಉಪನ್ಯಾಸ ಮಾಡಬಲ್ಲಿರಿ. ಹಳಗನ್ನಡ ಸಾಹಿತ್ಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತೀರಿ. ಬಿ. ಎಂ. ಶ್ರೀ ಅವರ "ಗದಾಯುದ್ಧ" ನಾಟಕ ಆಡುವಂತಹ "ಯುನೈಟೆಡ್ ಆರ್ಟಿಸ್ಟ್ಸ್" ತಂಡ ಕಟ್ಟಿದ್ದೀರಿ. ಸಾಹಿತಿ ಎಂದು ಸಮಾಜ ನಿಮ್ಮನ್ನು ಗುರುತಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಆಗಿದ್ದೀರಿ. ಹೀಗಿದ್ದೂ ನೀವೇಕೆ ಈ ಕಡೆ ಆಸಕ್ತಿ ತೋರಿಸಿಲ್ಲ?"
"ಪ್ರಯಾಣ ಮಾಡಿ ಕಾರ್ಯಕ್ರಮ ಕೊಡುವಷ್ಟು ಬಿಡುವಿಲ್ಲ. ಮತ್ತೆ ಸರ್ಕಾರಕ್ಕೆ ಅರ್ಜಿ ಹಾಕಿ ಓಡಾಡುವಷ್ಟು ವ್ಯವಧಾನವೂ ಇಲ್ಲ"

"ನಿಮ್ಮ ಶ್ರೀಮತಿ ರಾಜಾಮಣಿಯವರು ಭಾರತದ ಬಿಂದೂರಾಯರ ಗಮಕ ಶಾಲೆಯಲ್ಲಿ ಪ್ರಥಮ ಶಿಷ್ಯೆಯರ ಗುಂಪಿಗೆ ಸೇರಿದವರು. ಮಕ್ಕಳಿಗೆ ಸಂಗೀತ ಹೇಳಿಕೊಡುವವರು. ವೀಣಾ ರಾಜರಾಯರಲ್ಲಿ ಹೆಚ್ಚಿನ ವೀಣಾವಾದನ ಕಲಿತವರು.  ಅವರಿಂದ ಗಮಕ ವಾಚನವಾದರೂ ಮಾಡಿಸಬಹುದಲ್ಲ?"
"ಮನೆಯಲ್ಲಿ ಹಿರಿಯರ ಯೋಗಕ್ಷೇಮ ನೋಡಬೇಕು. ನನ್ನ ಕಾರ್ಯಬಾಹುಳ್ಯದಿಂದ ಮನೆಗೆ ಬಂದು-ಹೋಗುವವರು ಹೆಚ್ಚು. ಮೂರು ಸಣ್ಣ ಮಕ್ಕಳು. ಬಿಡುವೆಲ್ಲಿ?"

"ನೀವು ಹೇಳುವುದೆಲ್ಲಾ ಸರಿ ಎಂದು ಒಪ್ಪುತ್ತೇನೆ. ಆದರೆ ರಾಜಧಾನಿಯಿಂದ ದೂರದಲ್ಲಿ, ಸಣ್ಣ ಸಣ್ಣ ಊರಿನಲ್ಲಿರುವ ಜನರಿಗೆ ಒಳ್ಳೆಯ ವಿದ್ವಾಂಸರ ಕಾರ್ಯಕ್ರಮದ ಅವಕಾಶ ಆಗಬೇಡವೇ? ಅದಿಲ್ಲದೆ ಇಂತಹ ಕಾರ್ಯಕ್ರಮಗಳು ಸಿದ್ಧಿಸುವುದಾದರೂ ಹೇಗೆ?"
"ನಿಮ್ಮ ಮಾತಿನ ಒಟ್ಟು ಅರ್ಥವನ್ನು ಒಪ್ಪುತ್ತೇನೆ. ಆದರೆ ನಮಗೆ ಕಷ್ಟ"
"ಹಾಗೆಂದು ಬಿಡುವುವಂತಿಲ್ಲ. ಆಗಾಗ ಬಿಡುವು ಮಾಡಿಕೊಳ್ಳಿ. ಎಲ್ಲರೂ ಅರ್ಜಿ ಹಾಕಿ ಕಾಯಬೇಕಿಲ್ಲ. ಕೆಲವರನ್ನು ನಾವೇ ನೇರವಾಗಿ ಆಹ್ವಾನಿಸಬಹುದು. ನಿಮಗೆ ಹೀಗೆ ಆಹ್ವಾನ ಬರುತ್ತದೆ. ಕೆಲವು ಕಾರ್ಯಕ್ರಮ ಮಾಡಿಕೊಡಿ. ಅದರ ಅನುಭವದಲ್ಲಿ ನಿಮಗೇ ಇನ್ನಷ್ಟು ಉತ್ಸಾಹ ಬರಬಹುದು!"

ರಾಮಚಂದ್ರರಾಯರ ಮಾತಿನ ಧಾಟಿಯಲ್ಲಿ ಮರುಮಾತಿಗೆ ಅವಕಾಶ ಇರಲಿಲ್ಲ. ಮುಂದಿನ ವಾರವೇ ಸರ್ಕಾರದ ಇಲಾಖೆಯಿಂದ ಕಾರ್ಯಕ್ರಮ ನಿಗದಿ ಮಾಡಿ ಪತ್ರ ಬಂದೇ ಬಿಟ್ಟಿತು. ಮೊದಲ ಗಮಕವಾಚನ ಕಾರ್ಯಕ್ರಮ ರಾಮಚಂದ್ರರಾಯರ ನೇರ ಕಾರ್ಯಕ್ಷೇತ್ರ ಹಾಸನ ಜಿಲ್ಲೆಯ ಹಳ್ಳಿ ಒಂದರಲ್ಲಿ ನಿಯೋಜಿಸಿತ್ತು. 
*****

ಇಂತಹ ಕಾರ್ಯಕ್ರಮಗಳು ಸಂಜೆ ಐದು ಗಂಟೆಯ ಹಾಗೆ ಪ್ರಾರಂಭವಾಗಿ ಸೂರ್ಯಾಸ್ತದ ಸ್ವಲ್ಪ ಸಮಯಕ್ಕೆ ಮುಗಿದುಬಿಡಬೇಕಿತ್ತು. ಇಲ್ಲದಿದ್ದರೆ ಬೆಳಕಿನ ತೊಂದರೆ. ಜೊತೆಗೆ ಕಾರ್ಯಕ್ರಮಕ್ಕೆ ಬಂದ ಆಹ್ವಾನಿತರು ಕಡೆಯ ಬಸ್ಸು ಹಿಡಿದು ಹಿಂದಿರುಗಬೇಕಾಗಿತ್ತು. ಕಡೆಯ ಬಸ್ಸು ತಪ್ಪಿದರೆ ಅಂದು ರಾತ್ರಿ ಹಳ್ಳಿಯಲ್ಲಿಯೇ ಕಾಲಕಳೆಯಬೇಕು. ತಂಗಲು ಅನುಕೂಲಗಳು ಇರುತ್ತಿರಲಿಲ್ಲ. ಊರಿನ ಶಾನುಭೋಗರೋ, ಪಟೇಲರೋ ಅಥವಾ ಇನ್ಯಾರೋ ಗಣ್ಯ ವ್ಯಕ್ತಿಗಳು ಕಾರ್ಯಕ್ರಮಕ್ಕೆ ಸಹಕಾರ ಕೊಟ್ಟು ನಡೆಸಿಕೊಡಬೇಕು. ಊರಿನ ಅರಳಿ ಕಟ್ಟೆ ಬಳಿಯೋ ಅಥವಾ ದೊಡ್ಡ ಮನೆಯ ಅಂಗಳದಲ್ಲೋ, ಇದ್ದರೆ ರಾಮಮಂದಿರ ಅಥವಾ ಭಜನ ಮಂದಿರದಲ್ಲೋ ಕಾರ್ಯಕ್ರಮ. ಹೀಗೆ ನಡೆಯಬೇಕು. 

ಕಾರ್ಯಕ್ರಮ ನಿಗದಿಯಾದ ದಿನ ಬೆಳಿಗ್ಗೆ ನಾಗರಾಜರಾವ್ ದಂಪತಿಗಳು ಬೆಂಗಳೂರಿನಿಂದ ಬಸ್ಸಿನಲ್ಲಿ ಹೊರಟು ಹಾಸನ ತಲುಪಿ, ಸ್ನೇಹಿತರ ಮನೆಯಲ್ಲಿ ಊಟ ಮುಗಿಸಿ, ಮತ್ತೊಂದು ಬಸ್ಸಿನಲ್ಲಿ ಕಾರ್ಯಕ್ರಮ ಇರುವ ಊರು ತಲುಪಿದಾಗ ಮಧ್ಯಾನ್ಹ ಮೂರು ಗಂಟೆಯ ಸಮಯ. ಸಿಕ್ಕಿದ್ದ ಸೂಚನೆಯಂತೆ ಶಾನುಭೋಗ ಚನ್ನಪ್ಪನವರ ಮನೆ ವಿಚಾರಿಸಿಕೊಂಡರು ತಲುಪಿದರು. ಮನೆಯ ಮುಂದೆ ಎಂಟು-ಹತ್ತು ವರುಷದ ಬಾಲಕಿಯೊಬ್ಬಳು ಕುಂಟೆಬಿಲ್ಲೆ ಆಡುತಿದ್ದಳು. ಇವರನ್ನು ನೋಡಿದವಳು ಮನೆಯ ಬಾಗಿಲ ಬಳಿ ಹೋಗಿ "ಅಮ್ಮಾ, ಯಾರೋ ಬಂದಿದ್ದಾರೆ. ನೋಡು" ಎಂದು ಕೂಗಿ ತನ್ನ ಆಟ ಮುಂದುವರೆಸಿದಳು. 

ಹೊರಗಡೆ ಬಂದು ನೋಡಿದ ಗೃಹಿಣಿ ಪಡಸಾಲೆಯಲ್ಲಿ ಸುತ್ತಿಟ್ಟಿದ್ದ ಚಾಪೆ ಹಾಸಿ "ಕುಳಿತುಕೊಳ್ಳಿ. ಅವರು ಹೊಲದ ಕಡೆ ಹೋಗಿದ್ದಾರೆ. ಇನ್ನೇನು ಬರುವ ಹೊತ್ತು" ಎಂದು ಹೇಳಿ ಮನೆಯ ಒಳಗಡೆ ಹೊರಟುಹೋದರು. 

ಸುಮಾರು ಕಾಲು ಗಂಟೆ ಸಮಯ ಕಳೆಯಿತು. ಮನೆಯ ಒಳಗಡೆಯಿಂದ "ರತ್ನಾ, ಇಲ್ಲಿ ಬಾ" ಎಂದು ಕೂಗು ಬಂತು. ಕುಂಟೆಬಿಲ್ಲೆ ಆಡುತ್ತಿದ್ದ ಹುಡುಗಿ ಒಳಗೆ ಹೋದಳು. ಒಂದೊಂದಾಗಿ ಎರಡು ಲೋಟ ಕಾಫಿ ತಂದು ಪಡಸಾಲೆಯಲ್ಲಿ ಕುಳಿತಿದ್ದವರ ಮುಂದೆ ಇಟ್ಟು ತನ್ನ ಆಟ ಮುಂದುವರೆಸಿದಳು. ಗಂಟಲು ಒಣಗಿತ್ತು. ಕಾಫಿ ಕುಡಿದರು. ಇನ್ನರ್ಧ ಗಂಟೆ ಕಳೆಯಿತು. ಸುಮಾರು ನಲವತ್ತು-ನಲವತ್ತೈದು ವರುಷದ ವ್ಯಕ್ತಿ ಬಂದರು. ಕುಳಿತಿದ್ದವರನ್ನು ನೋಡಿದರು. 

"ನಮಸ್ಕಾರ. ಇಂದಿನ ಕಾರ್ಯಕ್ರಮ ನಡೆಸಲು ಬಂದವರೋ?"
"ಹೌದು. ಶಾನುಭೋಗ ಚನ್ನಪ್ಪನವರನ್ನು ಕಾಣುವಂತೆ ಸೂಚನೆಯಿತ್ತು. ಬಂದಿದ್ದೇವೆ"
"ನಾನೇ ಚನ್ನಪ್ಪ. ನನಗೆ ಬೆಳಿಗ್ಗೆ ತಾನೇ ಪತ್ರ ಬಂದಿತು. ಇದೇನು, ಇಲ್ಲೇ ಕುಳಿತಿರಿ. ರತ್ನಾ, ಒಳಗಡೆ ಕೂಡಿಸಬಾರದಿತ್ತೇ ಪುಟ್ಟ"

ಮನೆಯ ಒಳಗಡೆ ಕರೆದುಕೊಂಡು ಹೋದರು.

*****

ಕೈ ಕಾಲು ಮುಖ ತೊಳೆದು ದಣಿವಾರಿಸಿಕೊಂಡ ಮೇಲೆ ಚನ್ನಪ್ಪ ಮಾತು ಮುಂದುವರೆಸಿದರು. 

"ನೀವು ಎರಡು ವರುಷದ ಹಿಂದೆ ಬೇಲೂರು ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಬಂದಿದ್ದಿರಲ್ಲವೇ? ಅಲ್ಲಿ ನಿಮ್ಮನ್ನು ನೋಡಿದಹಾಗಿದೆ"
"ಹೌದು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಪರ್ಕದಿಂದ ಸಮ್ಮೇಳನ ಆಯೋಜಿಸುವ ಹೊಣೆ ನನ್ನ ಮೇಲೆ ಇತ್ತು. ಹೀಗಾಗಿ ಆಗ ಕೆಲವು ದಿನಗಳು ಬೇಲೂರಿನಲ್ಲಿಯೇ ಇದ್ದೆ. ಅಲ್ಲಿ ನೋಡಿರಬಹುದು"
"1952ರ ಬೇಲೂರು ಸಮ್ಮೇಳನವನ್ನು ಈ ಸುತ್ತಲಿನ ಜನ ಆಗಾಗ ನೆನೆಸಿಕೊಳ್ಳುತ್ತಾರೆ"
"ಸಮ್ಮೇಳನ ಚೆನ್ನಾಗಿ ಆಯಿತು ಅಂದು ಬಂದವರು ಅಂದರೆ ನಮ್ಮ ಕೆಲಸ ಸಾರ್ಥಕವಾಯಿತು"
"ಅಷ್ಟೇ ಅಲ್ಲ. ನಿಮ್ಮನ್ನು ಅದಕ್ಕೂ ಮುಂಚೆ ನೋಡಿದ ಹಾಗಿದೆ. ಸುಮಾರು ಹತ್ತು ವರುಷಗಳ ಹಿಂದೆ ಬೇಲೂರು ದೇವಸ್ಥಾನದ ಅರ್ಚಕ ಮಂಡಲಿಯ ಪ್ರಧಾನರು ಶ್ರೀ ಮುತ್ತು ಭಟ್ಟರ ಮನೆಗೆ ಡಿ.ವಿ.ಜಿ. ಅವರು ಬಂದಿದ್ದಾಗ ನೀವು ಅವರ ಜೊತೆ ಬಂದಿದ್ದೀರಾ?"
"ಹೌದು. ಡಿ.ವಿ.ಜಿ. ಅವರ "ಅಂತಃಪುರ ಗೀತೆ" ಮುದ್ರಣದ ಪುಸ್ತಕಕ್ಕೆ ಚನ್ನಕೇಶವನ ದೇವಾಲಯದ ಶಿಲಾಬಾಲಿಕೆಯರ ಫೋಟೋಗಳನ್ನು ಹಾಕುವ ಕೆಲಸವಿತ್ತು. ಗುಂಡಪ್ಪನವರು ಆ ಜವಾಬ್ದಾರಿ ನನಗೆ ವಹಿಸಿದ್ದರು. ಆ ಸಂದರ್ಭದಲ್ಲಿ ಬಂದಿದ್ದೆ. ನಿಟ್ಟೂರು ಶ್ರೀನಿವಾಸರಾಯರು, ಮಾನ್ವಿ ನರಸಿಂಗರಾಯರೂ ಬಂದಿದ್ದರು"

ಚನ್ನಪ್ಪನವರು ಉಂಡೆ ಮತ್ತು ಹುರಿಗಾಳು ತಂದರು. 

"ನಾನು ಗುಂಡಪ್ಪನವರ ಜೊತೆ ಬಂದಿದ್ದುದು ನಿಮಗೆ ಹೇಗೆ ಗೊತ್ತು?"
"ನನ್ನ ತಾಯಿಯ ತೌರು ಮನೆ ಅದೇ ಬೀದಿಯಲ್ಲಿದೆ. ಸೋದರಮಾವಂದಿರು ಈಗಲೂ ಅಲ್ಲಿದ್ದಾರೆ. ಆಗಾಗ ಅಲ್ಲಿ ಹೋಗುತ್ತಿರುತ್ತೇನೆ. ಹೀಗಾಗಿ ಡಿ.ವಿ.ಜಿ. ಅವರು ಬಂದಾಗ ನಾವೆಲ್ಲಾ ಅವರನ್ನು ನೋಡಲು ಮುತ್ತುಭಟ್ಟರ ಮನೆಗೆ ಬಂದಿದ್ದೆವು. ನನ್ನಮ್ಮ ನನಗೆ "ಚನ್ನಕೇಶವ" ಎಂದೇ ಹೆಸರಿಟ್ಟಿದ್ದಾಳೆ!"
"ಮತ್ತೆ "ಚನ್ನಪ್ಪ" ಎಂದು ಕರೆಯುತ್ತಾರಲ್ಲ?"
"ಇಲ್ಲಿ ಕೇಶವಯ್ಯ ಎಂದು ಹಿರಿಯರೊಬ್ಬರಿದ್ದರು. ಎರಡು ಕೇಶವ ಆಗಬಾರದು ಎಂದು ಚನ್ನಕೇಶವನಾದ ನನ್ನನು ಚನ್ನಪ್ಪ ಮಾಡಿಬಿಟ್ಟರು!"

ಎಲ್ಲರೂ ಘೊಳ್ಳೆಂದು ನಕ್ಕರು. ಮತ್ತೊಮ್ಮೆ ಕಾಫಿ ಆಯಿತು. ಕಾರ್ಯಕ್ರಮದ ಸಮಯವೂ ಆಯಿತು. 

*****

ರಾಮಮಂದಿರದಲ್ಲಿ ಶ್ರೀಮತಿ ರಾಜಾಮಣಿಯವರ ಕಾವ್ಯವಾಚನ. ಕುಮಾರವ್ಯಾಸ ಭಾರತದ ಪ್ರಸಂಗ. ವಿರಾಟಪರ್ವ ಮೂರನೆಯ ಸಂಧಿ. ಕೀಚಕನ ಕೋಟಲೆ ತಾಳಲಾರದೆ ಬೇಸತ್ತ ಸೈರಂಧ್ರಿ (ದ್ರೌಪದಿ) ಅಡಿಗೆಭಟ್ಟ ವಲಲ (ಭೀಮಸೇನ) ಇರುವೆಡೆ ಬಂದು ಕೀಚಕನ ವಧೆಗೆ ಅವನನ್ನು ಒಪ್ಪಿಸುವ ಸಂದರ್ಭ. ಪದ್ಯ ವಾಚನದ ನಂತರ ನಾಗರಾಜರಾಯರ ವ್ಯಾಖ್ಯಾನ. 

ತಯಾರಿ ಮತ್ತು ಪ್ರಚಾರ ಇಲ್ಲದ, ತರಾತುರಿಯಲ್ಲಿ ಜನ ಸೇರಿಸಿದ ಕಾರ್ಯಕ್ರಮ. ಹೆಚ್ಚು ಜನ ಬಂದಿರಲಿಲ್ಲ. ಬಂದಿದ್ದವರು ಕೆಲವರು ಹೆಚ್ಚು ವಿದ್ಯಾವಂತರಲ್ಲದಿದ್ದರೂ ವಿಷಯ ತಿಳಿದವರು. "ಕುರಿತೋದದೆಯುo ಕಾವ್ಯಪ್ರಯೋಗ ಪರಿಣತಮತಿಗಳ್" ಅನ್ನುವ ಕವಿರಾಜಮಾರ್ಗ ನುಡಿಯ ರೀತಿಯವರು. ಕಾರ್ಯಕ್ರಮ ನಡೆಯುತ್ತಿದ್ದಂತೆ ಇನ್ನಷ್ಟು ಜನ ಸೇರಿದರು. ಒಂದೂವರೆ ಗಂಟೆಗಳ ವಾಚನ ನಡೆಯಿತು.

ಚನ್ನಪ್ಪನವರ ವಂದನಾರ್ಪಣೆ ಮೊದಲು ಹಿರಿಯರೊಬ್ಬರು ನಿಂತುಕೊಂಡರು. "ಭೀಮ ಕಷ್ಟವನೆಸಗಿದನು ಹಾಎಂದರಾದೊಡೆ ಮುಸುಡನಮರಾದ್ರಿಯಲಿ ತೇವೆನು ದೇವ ಸಂತತಿಯ" ಅನ್ನುವ ಪದ್ಯದ ಬಗ್ಗೆ "ಭೀಮ ಹಾಗೆ ಹೇಳಿದುದು ಸರಿಯೇ" ಎಂದು ಪ್ರಶ್ನೆ ಮಾಡಿದರು. ನಾಗರಾಜರಾಯರು ಸ್ವಲ್ಪ ವಿವರವಾಗಿಯೇ ಉತ್ತರಿಸಿದರು. "ಇಂತಹ ಕಾರ್ಯಕ್ರಮ ನಡೆಯುವುದು ನಮಗೆ ಸರಿಯಾಗಿ ಗೊತ್ತಾಗಲಿಲ್ಲ. ಅನೇಕ ಆಸಕ್ತರು ಬರಲಾಗಲಿಲ್ಲ" ಅಂದರು ಆ ಹಿರಿಯರು. "ಹೌದು, ಹೌದು" ಎಂದು ಸ್ವಲ್ಪ ಗುಸು ಗುಸು ಮಾತುಗಳಾದವು.

***** 

ಚನ್ನಪ್ಪನವರ ವಂದನಾರ್ಪಣೆ. "ಕಾರ್ಯಕ್ರಮ ಹೇಗಿತ್ತು ಅಂತ ನಾನೇನು ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತಾಗಿದೆ. ಈ ದಿನ ಅನೇಕರಿಗೆ ಬರಲಾಗಿಲ್ಲ. ಬೆಳಕಿನ ವ್ಯವಸ್ಥೆ ಇಲ್ಲ. ಧ್ವನಿವರ್ಧಕ ಇಲ್ಲ. ಆದ ಕಾರಣ ನಾಳೆಯೂ ಕಾರ್ಯಕ್ರಮ ಇರುತ್ತದೆ. ಸುತ್ತಮುತ್ತಲ ಹಳ್ಳಿಯವರಿಗೆ ತಿಳಿಸಿ. ನಾಳೆ ಪೆಟ್ರೋಮ್ಯಾಕ್ಸ್ ದೀಪಗಳ ಮತ್ತು ಧ್ವನಿವರ್ಧಕದ ವ್ಯವಸ್ಥೆ ಮಾಡಿಸುತ್ತೇವೆ. ಊರಹಬ್ಬಕ್ಕೆ ಈ ವ್ಯವಸ್ಥೆ ಮಾಡುವ ಪಾರ್ಟಿಗೇ ಹೇಳಿಕಳಿಸುತ್ತೇನೆ. ಈದಿನ ವಂದನಾರ್ಪಣೆ ಇಲ್ಲ. ಅದು ಏನಿದ್ದರೂ ನಾಳೆಯೇ" ಎಂದು ಹೇಳಿ ಮುಗಿಸಿಬಿಟ್ಟರು.

ಮನೆಗೆ ಬರುವ ದಾರಿಯಲ್ಲಿ ರಾಯರು ಚನ್ನಪ್ಪರನ್ನು ಕೇಳಿದರು. "ಇದೇನು? ಹೀಗೆ ಮಾಡಿಬಿಟ್ಟಿರಿ? ನಮ್ಮನ್ನು ಕೇಳಲೂ ಇಲ್ಲ. ನಮಗೆ ನಾಳೆ ಇರಲು ಅನುಕೂಲವಿಲ್ಲ. ನಾವು ಇಂದೇ ಹಿಂದಿರುಗುವುದು ಎಂದು ಬಂದವರು. ಈ ದಿನ ತಡವಾಯಿತು. ನಾವು ಬೆಳಿಗ್ಗೆ ಬೇಗಲೇ ಹೊರಡಬೇಕು" ಅಂದರು. 

"ಸ್ವಾಮಿ, ಬಡವರ ಮನೆಯಲ್ಲಿ ಆದಷ್ಟೂ ಅನುಕೂಲ ಮಾಡಿ ಕೊಡುತ್ತೇನೆ. ಒಂದು ದಿನ ಸುಧಾರಿಸಿಕೊಳ್ಳಿ. ನೀವು ಮತೊಮ್ಮೆ ನಮ್ಮ ಊರಿಗೆ ಬರುವುದು ಸಾಧ್ಯವಿಲ್ಲ. ಬಂದಿರುವಾಗ ನಿಮಗೆ ಕಷ್ಟವಾದರೂ ನಮ್ಮ ಜನಗಳಿಗೆ ಒಂದು ಒಳ್ಳೆಯ ಕಾರ್ಯಕ್ರಮ ಆಗಲಿ" ಅಂದರು ಚನ್ನಪ್ಪನವರು. 

*****

ಮಾರನೆಯ ದಿನ ಎಲ್ಲಾ ವ್ಯವಸ್ಥೆಗಳೊಂದಿಗೆ ಭರ್ಜರಿ ಕಾರ್ಯಕ್ರಮ ನಡೆಯಿತು. ಊರಿನವರ ಬೇಡಿಕೆಯಂತೆ "ಕುಂತಿ-ಕರ್ಣ" ಪ್ರಸಂಗದ ವಾಚನ ಮಾಡಲಾಯಿತು. ಸುತ್ತ-ಮುತ್ತಲಿನ ಹಳ್ಳಿ ಜನರೆಲ್ಲಾ ಸೇರಿದ್ದರು. ಕಾರ್ಯಕ್ರಮ ನಡೆದ ನಂತರ ದಂಪತಿಗಳಿಗೆ ಔತಣದ ಊಟ ತಯಾರಾಗಿತ್ತು. ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ ಮಾಡಲು ಉಪಕರಣ ತಂದಿದ್ದ ವ್ಯಾನಿನಲ್ಲಿ ಅವರನ್ನು ಉಡುಗೊರೆಗಳ ಸಮೇತ ಹಾಸನಕ್ಕೆ ಕಳಿಸಿಕೊಟ್ಟರು. ಹೊರಡುವ ಸಮಯದಲ್ಲಿ ತಡ ರಾತ್ರಿಯಾಗಿದ್ದರೂ ಅನೇಕರು ಕಾದಿದ್ದು ಬೀಳ್ಕೊಟ್ಟರು. ಮತ್ತೊಮ್ಮೆ ಬನ್ನಿ ಎಂದು ಎಷ್ಟೋವರ್ಷದ ಬಂಧುಗಳನ್ನು ಕೇಳುವಂತೆ ಪ್ರೀತಿಯಿಂದ ಆಹ್ವಾನಿಸಿದರು.  ದಂಪತಿಗಳು ಹಾಸನದಿಂದ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ತಲುಪಿದರು.  

ನಂತರ ನಾಗರಾಜರಾವ್ ದಂಪತಿಗಳು ಅನೇಕ "ಸಂಸ್ಕೃತಿ ಪ್ರಸಾರ" ಕಾರ್ಯಕ್ರಮಗಳನ್ನು ರಾಜ್ಯದ ಅನೇಕ ಕಡೆಗಳಲ್ಲಿ ನಡೆಸಿಕೊಟ್ಟಿರುವುದು ಹಿಂದಿನ ತಲೆಮಾರಿನವರಿಗೆ ಗೊತ್ತಿರುವ ವಿಷಯವೇ.