ಅಣ್ಣ-ತಮ್ಮಂದಿರು ಆಸ್ಪತ್ರೆಯ ಕೋಣೆಯೊಂದರಲ್ಲಿ ಸಂಧಿಸಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡ ಒಂದು ಸಂದರ್ಭದ ನೆನಪನ್ನು ಹಿಂದಿನ ಸಂಚಿಕೆಯಲ್ಲಿ ಮಾಡಿಕೊಂಡೆವು. "ಯಾರು ಮೊದಲು ಪ್ರಯಾಣ?" ಅನ್ನುವ ಶೀರ್ಷಿಕೆಯ ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
ಈ ಸಂಚಿಕೆಯನ್ನು ಕುರಿತು ಅನೇಕ ಪ್ರತಿಕ್ರಿಯೆಗಳು ಬಂದಿವೆ. ಜ್ಯೋತಿಷ್ಯದ ಬಗ್ಗೆ ನಂಬಿಕೆ ಸರಿಯೇ? ನಂಬಬೇಕೇ ಅಥವಾ ಬೇಡವೇ? ನಂಬಿದರೆ ಎಷ್ಟು ಮಟ್ಟಕ್ಕೆ ನಂಬಬೇಕು? ಸಾವಿನ ಬಗ್ಗೆ ಮುಕ್ತ ಚರ್ಚೆ ಒಳ್ಳೆಯದೇ? "ಸಾವಿನ ಬಗ್ಗೆ ಮಾತನಾಡಬಾರದು" ಅನ್ನುತ್ತಾರಲ್ಲಾ? ಜ್ಯೋತಿಷ್ಯ ಶಾಸ್ತ್ರ ನಂಬುವವರೂ ಸಾವಿನ ಬಗ್ಗೆ ತಿಳಿದುಕೊಂಡು ಬದುಕಬಹುದೇ? ತನ್ನ ಕುಂಡಲಿಯನ್ನು ತಾನೇ ಅಭ್ಯಾಸ ಮಾಡಬಾರದು, ಅಲ್ಲವೇ? ಹೀಗೆ ಮಾಡುವುದರಿಂದ ಉಳಿದ ಮುಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಆಗುವುದಿಲ್ಲವೇ? ಹೀಗೆ ಅನೇಕ ಸಂದೇಹಗಳು, ಪ್ರಶ್ನೆಗಳು ಬಂದು ನಿಂತಿವೆ. ಇವುಗಳ ಬಗ್ಗೆ ಈಗ ಸ್ವಲ್ಪ ನೋಡೋಣ.
ಜ್ಯೋತಿಷ್ಯ ಶಾಸ್ತ್ರ ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ಕೆಲವರು ಬಳಸುವ ಒಂದು ಜೀವನ ವಿಧಾನ ಎಂದು ನಂಬುವವರು ಕೆಲವರು. ಅದನ್ನು ಜೀವನದ ಪರಮ ಧ್ಯೇಯ ಎಂದು ನಂಬಿ ಅದರ ಆಚರಣೆಯಿಂದ ಜೀವನ ಹಾಳು ಮಾಡಿಕೊಂಡವರೂ ಉಂಟು. ಅನುಕೂಲವಿದ್ದಾಗ ನಂಬಿ, ಬೇಡವಾದಾಗ ಬಿಟ್ಟು ಎಡಬಿಡಂಗಿ ಆದವರಿಗೂ ಕಮ್ಮಿಯಿಲ್ಲ!
*****
ಆಸ್ಪತ್ರೆಯಲ್ಲಿ ಮಾತುಕತೆ ಮುಗಿದ ನಂತರ ಅಣ್ಣ ಮತ್ತು ಅವರನ್ನು ಅಲ್ಲಿಗೆ ಕರೆದುಕೊಂಡು ಬಂದಿದ್ದ ಅವರ ಮಗ ಮನೆಗೆ ಹೊರಟರು. ಜೊತೆಯಲ್ಲಿ ಬಂದಿದ್ದ ಮಗನಿಗೆ ವಿಚಾರ ವಿನಿಮಯದ ಅಲ್ಪ-ಸ್ವಲ್ಪ ಭಾಗ ಅರ್ಥ ಆಯಿತು. ಆದರೆ ಹೀಗೆ ಆಸ್ಪತ್ರೆಯಲ್ಲಿ ವಿಚಾರ ಮಾಡಿದುದು ಸರಿಯಲ್ಲ ಎಂದೂ ಮನಸ್ಸಿನಲ್ಲಿ ಒಂದು ಕಡೆ ಅನಿಸಿತು. ಏನೋ, ದೊಡ್ಡವರ ವಿಚಾರ ಎಂದು ಬಿಟ್ಟುಬಿಟ್ಟರೂ "ಪಂಚಾಂಗ ನೋಡಿ, ಹೀಗೆ ಲೆಕ್ಕಾಚಾರ ಮಾಡಿದುದು ನಂಬಿ ಮುಂದಿನ ಹೆಜ್ಜೆಗಳನ್ನು ಇಡುವುದು ಎಷ್ಟು ಸರಿ?" ಎನ್ನುವ ಪ್ರಬಲವಾದ ಸಂದೇಹ ಕಾಡಿತು. ಮುಂದಿನ ವಿಷಯ ತಂದೆಯೊಂದಿಗೆ ಹೇಗೆ ಪ್ರಸ್ತಾಪ ಮಾಡಬೇಕು ಅನ್ನುವುದನ್ನು ಹಿಂದಿರುಗುವ ದಾರಿಯಲ್ಲಿ ನಿರ್ಧರಿಸಿ ಮನೆ ಸೇರಿದ್ದಾಯಿತು.
ಜೀವನದ ಅನುಭವದಲ್ಲಿ ಮಾಗಿದ ತಂದೆಗೆ ಮಗನ ಮನಸ್ಸಿನಲ್ಲಿ ನಡೆಯುತ್ತಿದ್ದ ಈ ತುಮಲದ ಅರಿವು ಆಯಿತು. ಉಪಾಧ್ಯಾಯ ವೃತ್ತಿಯಲ್ಲಿ ಪಳಗಿದವರಿಗೆ ಎದುರಿಗಿದ್ದವರ ಮನಸ್ಸಿನಲ್ಲಿ ಸಂದೇಹ ಬಂದುದು ಅವರ ಮುಖ ನೋಡಿಯೇ ತಿಳಿಯುತ್ತದೆ. ಇದು ನುರಿತ ಶಿಕ್ಷಕರ ಶಸ್ತ್ರಾಗಾರದ ಪ್ರಬಲ ಅಸ್ತ್ರಗಳಲ್ಲಿ ಒಂದು. ರಾತ್ರಿಯ ಊಟವಾದ ನಂತರ ಅಪ್ಪ ಮಗನನ್ನು ಕರೆದರು.
"ಏನು? ಆಸ್ಪತ್ರೆಯಿಂದ ಬಂದ ಮೇಲೆ ನಿನ್ನ ಮನಸ್ಸಿನಲ್ಲಿ ಏನೋ ಸಂದೇಹ ಇದ್ದಂತಿದೆ"
"ಸಂದೇಹ ಎಂದಲ್ಲ. ಏನೋ ಕೆಲವು ಅನುಮಾನಗಳು"
"ಭಯವೇನೂ ಇಲ್ಲ. ಸ್ವಲ್ಪ ಅಂಜಿಕೆ" ಅಂದಂತೆ. "ಏನು ಕೇಳಬೇಕೋ ಕೇಳಿಬಿಡು"
"ಏನಿಲ್ಲ. ಸಾವಿನ ಬಗ್ಗೆ ಮಾತಾಡಬಾರದು ಅನ್ನುತ್ತಾರಲ್ಲ. ನೀವಿಬ್ಬರು ಮಾತಾಡಿದ್ದು ಅದೇ ಅಲ್ಲವೇ?"
"ಅದರ ಬಗ್ಗೆ ಮಾತಾಡಬಾರದು ಅನ್ನುವವರು ಯಾರು?"
"ಅನೇಕರು. ನೀವೇ ಹಾಗೆ ಕೆಲವು ವೇಳೆ ಹೇಳಿಲ್ಲವೇ?'
"ಹೌದು. ಹಾಗೆ ಹೇಳುವುದರ ಅರ್ಥ ಮತ್ತು ಔಚಿತ್ಯ ಏನು?"
"ಎಲ್ಲರೂ ಹಾಗೆ ಹೇಳುತ್ತಾರೆ. ಬಹಳ ಜನರಿಗೆ ಅದರ ಬಗ್ಗೆ ಮಾತಾಡಲು ಭಯ"
"ವೈದ್ಯರು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಆಗಾಗ ಸಾವು ನೋಡುತ್ತಿರುತ್ತಾರೆ. ಅಲ್ಲವೇ?'
"ಹೌದು. ಅದು ಅವರ ವೃತ್ತಿಯ ಒಂದು ಬಾಗ"
"ಸ್ಮಶಾನದಲ್ಲಿ ಕೆಲಸ ಮಾಡುವ ಕೆಲವರು?"
"ಅವರ ಕೆಲಸವೇ ಅದಲ್ಲವೇ?"
"ಹಾಗಿದ್ದರೆ ಅವರು ಇದರ ಬಗ್ಗೆ ಮಾತಾಡಬಹುದು ಎಂದಂತಾಯಿತು"
"ಆಡದಿದ್ದರೆ ಅವರ ಕೆಲಸ ನಡೆಯುವುದಾದರೂ ಹೇಗೆ?"
"ಹುಟ್ಟಿದವರಲ್ಲಿ ಎಷ್ಟು ಜನ ಸಾವು ಕಾಣದೇ ಉಳಿಯುತ್ತಾರೆ?"
"ನಾವು ಕೇಳಿದಂತೆ ಚಿರಂಜೀವಿಗಳು ಅನಿಸಿಕೊಂಡವರು. ಮಾರ್ಕಂಡೇಯರು ಮತ್ತೊಬ್ಬರು"
"ಅಂದರೆ ಹುಟ್ಟಿದವರೆಲ್ಲ ಒಂದು ದಿನ ಸಾಯಲೇಬೇಕಲ್ಲವೇ?'
"ಹೌದು. ಆದರೆ ಅದರ ಬಗ್ಗೆ ಯಾಕೆ ಮಾತಾಡಬೇಕು?"
"ಮಾತನಾಡದಿದ್ದರೆ ಸಾವು ದೂರ ಹೋಗುವುದೋ?"
"ಮಾತಾಡಿದರೆ ದೂರ ಹೋಗುವುದೋ?"
"ಎರಡೂ ಇಲ್ಲ. ಆಡಿದ್ದರಿಂದ ಹತ್ತಿರ ಬರುವುದೂ ಇಲ್ಲ"
ಇನ್ನೂ ಸ್ವಲ್ಪ ಯೋಚನೆ ಮಾಡಬೇಕಾದ ಪ್ರಸಂಗ ಬಂತು!
******
"ಸಾವು ಜೀವನದ ಪರಮ ಸತ್ಯ ಅನ್ನುವುದು ನಿಜ. "ಜಾತಸ್ಯ ಹಿ ಧ್ರುವಂ ಮೃತ್ಯು: ತಸ್ಮಾದಪರಿಹಾರ್ಯೇರ್ಥೇ ನ ತ್ವಂ ಶೋಚಿತುಮರ್ಹಸಿ" ಅಂತ ಗೀತಾಚಾರ್ಯನೇ ಹೇಳಿದ್ದಾನೆ. ಜೀವನ ಇರುವುದು ಬದುಕುವುದಕ್ಕೆ. ಸಾರ್ಥಕವಾಗಿ ಜೀವಿಸುವುದಕ್ಕೆ. ಸಾಯುವುದಕ್ಕಲ್ಲ. ಇದು ಒಪ್ಪಲೇಬೇಕಾದ ಮಾತು. ಆದರೆ ಎಲ್ಲಕಾಲಕ್ಕೂ ನಾನು ಬದುಕಿರುತ್ತೇನೆ ಎಂದು ನಂಬುವುದು ಸರಿಯಲ್ಲ. ನಮಗೆ ಇಷ್ಟ ಇರಲಿ, ಬಿಡಲಿ. ಪ್ರತಿ ಕ್ಷಣ ನಾವು ಸಾವಿನ ಹತ್ತಿರ ಹೋಗುತ್ತಲೇ ಇರುತ್ತೇವಲ್ಲ!"
"ಹಾಗಂತ ಅದರ ಬಗ್ಗೆ ಏಕೆ ಚಿಂತಿಸಬೇಕು?"
"ಹಾಗೆ ಚಿಂತಿಸಲು ಎರಡು ಕಾರಣಗಳು ಉಂಟು. ಮೊದಲನೆಯದು, ನಾವು ಒಂದು ದಿನ ಇಲ್ಲಿಂದ ಹೋಗಬೇಕು ಎನ್ನುವುದು ಯೋಚಿಸಿದಾಗ ವಯಸ್ಸಾಗುತ್ತಿದ್ದಂತೆ ಲೌಕಿಕ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿ, ಹೊಣೆಗಳನ್ನು ದಾಟಿ, ಮುಂದಿನ ವ್ಯವಸ್ಥೆಗಳನ್ನು ಮಾಡುವ ಮನಸ್ಸು ಮತ್ತು ಕರ್ತೃತ್ವ ಶಕ್ತಿ ಬರುತ್ತವೆ"
"ಎರಡನೆಯದು?"
"ಸದಾ ಇಲ್ಲಿರುವುದಿಲ್ಲ ಎನ್ನುವ ಪರಿಜ್ಞಾನದಿಂದ ಅಡ್ಡ ದಾರಿ ಹಿಡಿಯದೇ ನೇರ ಜೀವನ ನಡೆಸುವ ಇರಾದೆ ಪಕ್ವವಾಗುತ್ತದೆ"
"ಹೌದು ಅನ್ನೋಣ. ಆದರೆ ಅದರ ಬಗ್ಗೆ ಚಿಂತಿಸುವುದರಿಂದ ಮತ್ತು ಮಾತನಾಡುವುದರಿಂದ, ಹೇಗಿದ್ದರೂ ಹೋಗಬೇಕು ಎನ್ನುವ ಯೋಚನೆ ಪ್ರಬಲವಾಗಿ ಜೀವನದಲ್ಲಿ ನಿರಾಸಕ್ತಿ ಮೂಡಿದರೆ?"
"ಇಲ್ಲಿಯೇ ಮನುಷ್ಯನ ನಿಜವಾದ ಯೋಗ್ಯತೆ ಒರೆ ಹಚ್ಚುವುದು. ಈ ಜೀವನ ಒಂದು ದಿನ ಕೊನೆ ಆಗುತ್ತದೆ ಅನ್ನುವ ಎಚ್ಚರ ಇರಬೇಕು. ಇರುವವರೆಗೂ ಕರ್ತವ್ಯಗಳನ್ನು ಮಾಡುತ್ತಲೇ ಇರಬೇಕೆಂಬ ಪ್ರಜ್ಞೆ ಜಾಗೃತವಾಗಿರಬೇಕು. ಇದೇ ಅಲ್ಲವೇ ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ ಕರ್ಮಯೋಗ?"
"ತಾವರೆ ಎಲೆಯ ಮೇಲಿನ ನೀರನ ಹನಿಯಂತೆ ಅನ್ನುವುದಕ್ಕೆ ಈ ವಿಶಾಲ ಅರ್ಥವೇ?"
"ಕರ್ತವ್ಯಗಳನ್ನು ಮಾಡುತ್ತಿರುವಾಗ ಅವುಗಳಿಗೆ ಸಂಬಂಧಿಸಿದವರ ಮತ್ತು ಸಾಧನಗಳ ಮೇಲೆ ಅತಿಯಾದ ಮೋಹ ಇರಬಾರದು ಅನ್ನುವುದನ್ನು ಅದಕ್ಕೆ ಸೇರಿಸಿಕೊಳ್ಳಬೇಕು"
ಸಾವಿನ ಬಗ್ಗೆ ಮಾತನಾಡುವುದು ತಪ್ಪಲ್ಲ. ಅದರ ಬಗ್ಗೆಯೇ ಮಾತನಾಡುತ್ತ ಬೇರೆಲ್ಲ ಬಿಡುವುದು ತಪ್ಪು ಎಂದಾಯಿತು. ಗಮನವಿರಬೇಕು. ಅತಿಯಾದ ಗಮನವಿರಬಾರದು. ಇಲ್ಲಿಯೂ ಕತ್ತಿಯ ಅಲುಗಿನ ಮೇಲೆ ನಡೆದಂತೆ!
******
"ನೀವು ಹೇಳಿದುದರಂತೆ ಸಾವಿನ ಬಗ್ಗೆಯೇ ಮಾತನಾಡುತ್ತಿರಬಾರದು. ಅದರೊಡನೆ ಎಲ್ಲರ ಕೂಡ ಮಾತನಾಡುತ್ತಿರಬಾರದು. ಹಾಗಿದ್ದರೆ ಯಾರೊಡನೆ ಮಾತಾಡಬೇಕು? ಯಾವಾಗ ಮಾತಾಡಬೇಕು? ಈ ಎರಡು ಪ್ರಶ್ನೆಗಳು ಉಳಿದವು"
"ಇವುಗಳ ಮೊದಲು ಇನ್ನೊಂದು ವಿಚಾರವಿದೆ"
"ಏನದು?"
"ತಂದೆ ಬದುಕಿರುವವರು (ಜೀವಿತಪಿತೃಗಳು) ಸ್ಮಶಾನಘಟ್ಟಕ್ಕೆ ಹೋಗಬಾರದು ಅನ್ನುವುದು"
"ಅದನ್ನು ಈಗಲೂ ಎಲ್ಲರೂ ಪಾಲಿಸುತ್ತಾರಲ್ಲ"
"ಹಿಂದೆ ಇದನ್ನು ಕಟ್ಟುನಿಟಾಗಿ ಪಾಲಿಸುತ್ತ್ತಿದ್ದರು. ಕೆಲವು ಪಂಗಡಗಳಲ್ಲಿ ಎಲ್ಲರೂ ಹೋಗುತ್ತಾರೆ. ಕೆಲವರಲ್ಲಿ ಇಲ್ಲ"
"ಹೀಗೆ ನಿಬಂಧನೆ ಮಾಡಲು ಕಾರಣ?"
"ಚಿಕ್ಕ ವಯಸ್ಸಿನಲ್ಲಿ ರುದ್ರಭೂಮಿ ಅಂದರೆ ಒಂದು ರೀತಿಯ ಭಯ ಇರುತ್ತದೆ. ಆಗ ಅಲ್ಲಿಗೆ ಹೋಗಲೇಬೇಕಾದ ಪರಿಸ್ಥಿತಿ ಇರುವುದಿಲ್ಲ. ಈ ಕಾರಣಗಳು"
"ಹಾಗಿದ್ದರೆ ತಂದೆ ಬದುಕಿದ್ದಾಗಲೂ ಹೋಗಬಹುದೋ?"
"ಯಾರಾದರೂ ತೀರಿಕೊಂಡಾಗ ಅವರ ಅಂತ್ಯ ಸಂಸ್ಕಾರಕ್ಕೆ ಸಹಕಾರ ಕೊಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ. ಅಗಲಿದ ವ್ಯಕ್ತಿಗೆ ನಮ್ಮ ಗೌರವದ ಸೂಚಕ"
"ಅಂದರೆ?"
"ಈಗ ಕೊನೆಯಯಾತ್ರೆಗೆ ವಾಹನಗಳು ಬಂದಿವೆ. ಮೊದಲೆಲ್ಲ ಹೆಗಲ ಮೇಲೆ ಹೊತ್ತುಕೊಂಡು ಹೋಗಬೇಕಾಗಿತ್ತು. ಶವಸಂಸ್ಕಾರದ ಅನುಕೂಲಗಳಿರಲಿಲ್ಲ. ಹೀಗಾಗಿ ಸಹಕಾರ ಕೊಡುವುದು ಅತ್ಯವಶ್ಯಕ ಆಗಿತ್ತು. ತಂದೆ ಅನಾರೋಗ್ಯದಿಂದಲೋ, ವೃದ್ಧಾಪ್ಯದಿಂದಲೋ ಹೋಗಲಾಗದಿದ್ದರೆ ವಯಸ್ಕ ಮಕ್ಕಳಿಗೆ ಹೋಗುವಂತೆ ಅನುಮತಿ ಕೊಡುವುದು ನಾನು ನೋಡಿದ್ದೇನೆ. ಈಗ ಅದರ ಅವಶ್ಯಕತೆ ಅಷ್ಟಾಗಿ ತೋರಿಬರುತ್ತಿಲ್ಲ. ಚಲನಚಿತ್ರಗಳಲ್ಲಿ ಚಿತಾದಹನದ ದೃಶ್ಯಗಳನ್ನು ದೊಡ್ಡದಾಗಿ ತೋರಿಸುತ್ತಾರೆ. ಕೆಲವು ಗಣ್ಯ ವ್ಯಕ್ತಿಗಳು, ರಾಜಕೀಯ ನಾಯಕರು ಕಾಲವಾದಾಗ ಗಂಟೆಗಟ್ಟಲೆ ದೂರದರ್ಶನದಲ್ಲಿ ನೇರ ಪ್ರಸಾರ ತೋರಿಸುತ್ತಾರೆ. ಪುಟ್ಟ ಮಕ್ಕಳೂ ಇದನ್ನು ನೋಡುತ್ತವೆ. ಈಗ ಈ ದೃಶ್ಯಗಳಿಗೆ ಘನತೆಯೂ ಉಳಿದಿಲ್ಲ; ಭಯವೂ ಇಲ್ಲ"
"ಅಂದರೆ ತಂದೆಯ ಅನುಮತಿ ಪಡೆದು ಹೋಗಬಹುದು ಎಂದಾಯಿತು"
"ಹೋಗಬಾರದು ಎಂದು ಪದ್ಧತಿ ಇರುವ ಕುಟುಂಬಗಳಿಗೆ ಹೀಗೆ. ಎಲ್ಲರೂ ಹೋಗುವ ಕುಟುಂಬಗಳಿಗೆ ಇದರ ಅವಶ್ಯಕತೆ ಇಲ್ಲವಲ್ಲ"
*****
"ಮುಂದಿನ ಪ್ರಶ್ನೆ ಯಾವುದು?"
"ಆಸ್ಪತ್ರೆಯಲ್ಲಿ ಈ ವಿಷಯದಲ್ಲಿ ಮಾತುಕತೆ ಮಾಡಿದುದು"
"ಅದು ಬೇಕೆಂದೇ ಮಾಡಿದುದಲ್ಲ. ಈ ರೀತಿಯ ವಿಚಾರಗಳನ್ನು ನಾವು ಈ ಹಿಂದೆಯೂ ಅನೇಕ ಬಾರಿ ಚರ್ಚೆ ಮಾಡಿದ್ದೇವೆ. ಸಾಮಾನ್ಯವಾಗಿ ಹೀಗೆ ಪ್ರಸ್ತಾಪ ಮಾಡುವಾಗ ನಾವಿಬ್ಬರೇ ಇರುತ್ತಿದ್ದುದು. ಈ ಸಾರಿ ಮಾತ್ರ ಅದು ಬಹಿರಂಗವಾಗಿ ಆಸ್ಪತ್ರೆಯಲ್ಲಿ ಆಗಬೇಕಾಯಿತು. ಹಿಂದಿನ ಸಂದರ್ಭಗಳಲ್ಲಿ ಅದು ಮತ್ಯಾರದೋ ವಿಷಯ ಆಗಿರುತ್ತಿತ್ತು. ಈ ಬಾರಿ ನಮ್ಮದೇ ಆಯಿತು. ಅಷ್ಟೇ!"
"ಆದರೂ ಆಸ್ಪತ್ರೆಯಲ್ಲಿ ಅಷ್ಟು ಜನರಿದ್ದರಲ್ಲ"
"ಅದಕ್ಕೆ ನಾವೇನು ಮಾಡುವುದು? ನಮ್ಮಿಬ್ಬರ ಜೀವನದ ಕಾಲಘಟ್ಟವನ್ನು ನೋಡು. ವಯಸ್ಸಾದ ಮೇಲೆ ಆಸ್ಪತ್ರೆಯಿಂದ ಪೂರ್ಣ ಗುಣವಾಗಿ ಬರುವುದು ಅಷ್ಟು ಸುಲಭವಲ್ಲ. ಗುಣವಾಗಿ ಬಂದರೂ ಮೊದಲಿನ ಚೈತನ್ಯ ಉಳಿಯುವುದು ಬಹಳ ಅಪರೂಪ. ಆಗಿನ ಚಿಕಿತ್ಸೆ ಏನಿದ್ದರೂ ಬಹುತೇಕ ಹರಿದ ಬಟ್ಟೆಗೆ ತೇಪೆ ಹಾಕಿದಂತೆ. ಭೌತಿಕ ದೇಹಕ್ಕೆ ತನ್ನದೇ ಆದ ಇತಿ-ಮಿತಿಗಳಿವೆ. ನಾವಿಬ್ಬರೂ ಪೂರ್ಣ ಆರೋಗ್ಯವಂತರಾಗಿ ಮತ್ತೆ ಭೇಟಿಯಾಗುವ ಸಾಧ್ಯತೆ ಇದ್ದಿದ್ದರೆ ಅಲ್ಲಿ ಈ ವಿಷಯ ಪ್ರಸ್ತಾಪ ಮಾಡುತ್ತಿರಲಿಲ್ಲ. ಇದು ಹೀಗೆ ಆಗದು ಎಂದು ನನಗೂ ಗೊತ್ತು; ಅವನಿಗೂ ಗೊತ್ತು. ಆದ್ದರಿಂದ ಸಮಯ ಸಿಕ್ಕಾಗ ಮಾತಾಡಬೇಕಾಯಿತು"
ಇದೂ ಒಂದು ಸಮರ್ಥನೆಯೇ.
*****
"ಅಲ್ಲಿ ಸಂವಾದ ನಡೆದದ್ದು ಅನಿವಾರ್ಯ ಎಂದು ಒಪ್ಪಿಕೊಂಡರೂ ಅವರೊಡನೆ, ಆಸ್ಪತ್ರೆಯಲ್ಲಿ ದಾಖಲಾಗಿರುವವರೊಡನೆ ಏಕೆ ಬೇಕಾಗಿತ್ತು?"
"ನಮಗೆ ಬೇಕಾದ ವಿಷಯಗಳನ್ನು ಯಾರೊಡನೆ ಚರ್ಚಿಸಬೇಕು?'
"ನಮಗೆ ಬೇಕಾದವರೊಡನೆ"
"ಅದೇ ಅಲ್ಲವೇ ನಾವಿಬ್ಬರೂ ಮಾಡಿದ್ದು?"
"ಆದರೂ ಅದು ಸರಿ ಎಂದು ಒಪ್ಪುವುದು ಕಷ್ಟ"
"ನಾನು ಎರಡನೇ ಮಹಾಯುದ್ಧ ಕಾಲದಲ್ಲಿ (1939-45) ಸೈನ್ಯದಲ್ಲಿ ಸೇರಿ ಆ ಯುದ್ಧದಲ್ಲಿ ಭಾಗಿಯಾಗಿದ್ದುದು ನಿನಗೆ ಗೊತ್ತು"
"ಕೇಳಿ ಬಲ್ಲೆ. ಫೋಟೋಗಳನ್ನು ನೋಡಿದ್ದೇನೆ. ನೀವು ಆಗಾಗ ಹೇಳಿದ ಅಲ್ಲಿನ ಅನುಭವಗಳನ್ನು ಕೇಳಿದ್ದೇನೆ"
"ಆಗ ನನಗೆ ಇನ್ನೂ ಇಪ್ಪತ್ತು ವರುಷ ವಯಸ್ಸು. ವಿವಾಹವಾಗಿ ಇಬ್ಬರು ಮಕ್ಕಳು. ನನ್ನ ಭಾಗಕ್ಕೆ ಕುಟುಂಬದಿಂದ ಬಂದ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದೆ. ಖಾಯಂ ಕೆಲಸವಿರಲಿಲ್ಲ. ಒಂದು ದಿನ ತಾಲ್ಲೋಕು ಆಫೀಸಿಗೆ ಯಾವುದೊ ಕೆಲಸಕ್ಕೆ ಹೋದೆ. ಸೈನ್ಯಕ್ಕೆ ಯುವಕರ ಭರ್ತಿ ನಡೆಯುತ್ತಿತ್ತು. ಸಾಲಿನಲ್ಲಿ ನಿಂತೆ. ಮನೆಯವರಿಗೆ ಹೇಳಲೂ ಅವಕಾಶ ಇರಲಿಲ್ಲ. ಸಂಜೆಗೆ ಲಾರಿ ಹತ್ತಿಸಿಕೊಂಡು ಬೆಂಗಳೂರು ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋದರು. ಅಲ್ಲಿಂದ ಪೂನಾ. ನಂತರ ಬರ್ಮಾ ಗಡಿಗೆ. ಯುದ್ಧದಲ್ಲಿ ವರ್ಷಗಳು ಕಳೆದವು"
"ಅದು ಸರಿ. ಅದಕ್ಕೂ ಇಂದು ನಡೆದದ್ದಕ್ಕೂ ಸಂಬಂಧ?"
"ಕೆಲವರು ಸೈನ್ಯ ಸೇರಿ ನಿವೃತ್ತರಾಗಬಹುದು. ಒಂದೂ ಯುದ್ಧದಲ್ಲಿ ಭಾಗಿಯಾಗುವ ಕಾಲ ಬಾರದಿರಬಹುದು. ಅದು ಅಪರೂಪ ಆದರೂ ಸಾಧ್ಯ. ನಾನಿದ್ದುದು ಅಷ್ಟೂ ಕಾಲ ಯುದ್ಧ ಭೂಮಿಯಲ್ಲೇ. ಮೊದಲಿಂದ ಕಡೆಯವರೆಗೆ"
"ಏಕೆ ಹಾಗೆ?"
"ಸೇರಿದುದು ಯುದ್ಧ ಪ್ರಾರಂಭವಾದ ದಿನಗಳಲ್ಲಿ. ಯುದ್ಧ ಮುಗಿದ ನಂತರ ಚೀನಾ ಗಡಿಗೆ ವರ್ಗಾಯಿಸಿದರು. ನಾನು ಬೇಡ ಎಂದೆ. ನಿವೃತ್ತಿ ಕೊಟ್ಟು ಉಪಾಧ್ಯಾಯನ ಕೆಲಸ ಕೊಟ್ಟರು"
"ಸರಿ"
"ಯುದ್ಧಭೂಮಿಯಲ್ಲಿ, ಬರ್ಮಾ ಗಡಿಯಲ್ಲಿ ಕಾಲ ಕಳೆಯುವಾಗ ಯಾವ ವಿಷಯದ ಬಗ್ಗೆ ಮಾತಾಡಬೇಕು? ಪ್ರತಿದಿನ ಜೊತೆಯಲ್ಲಿದ್ದವರ ಸಾವಿನ ಸುದ್ದಿಯೇ! ಸಾವಿನ ಭಯ ಹೊರಟುಹೋಯಿತು"
"..............."
"ನಮ್ಮ ಅಂತರಂಗದ ಮಾತುಗಳನ್ನು ಹೇಳಿಕೊಳ್ಳಲು ಪ್ರತಿಯೊಬ್ಬರೂ ಕೆಲವರನ್ನು ಆರಿಸಿಕೊಳ್ಳುತ್ತೇವೆ. ಎಲ್ಲರೊಡನೆ ಎಲ್ಲ ವಿಷಯಗಳನ್ನೂ ಚರ್ಚಿಸಲಾಗುವುದಿಲ್ಲ. ಹಾಗೆ ಆರಿಸಿಕೊಂಡ ವ್ಯಕ್ತಿಗಳು ನಮಗೆ ನಂಬಿಕಸ್ಥರಾಗಬೇಕು. ಗುಟ್ಟುಗಳನ್ನು ಹಿಡಿದಿಟ್ಟುಕೊಳ್ಳುವವರಾಗಬೇಕು. ಮುಕ್ತ ಮನಸ್ಸಿನಿಂದ ಸಲಹೆ-ಸೂಚನೆ ಕೊಡುವವರಾಗಬೇಕು. "ಗುಹ್ಯo ನಿಗೂಹಯತಿ, ಗುಣಾನ್ ಪ್ರಕಟೀಕರೋತಿ" ಎಂದು ಭರ್ತೃಹರಿ ನೀತಿಶತಕದಲ್ಲಿ ಹೇಳಿರುವುದು ಓದಿದ್ದೀಯೆ. ಇಂತಹವರು ಜೀವನದಲ್ಲಿ ಒಬ್ಬರೋ, ಇಬ್ಬರೋ ಸಿಕ್ಕರೆ ಅದು ಭಾಗ್ಯವೇ. ಹತ್ತಾರು ಜನ ಯಾರಿಗೂ ಸಿಗುವುದಿಲ್ಲ"
"ಅದು ಸರಿ"
"ಯುದ್ಧಭೂಮಿಯಲ್ಲಿ ಯಾರಾದರೂ ಸಿಕ್ಕರೆ ಸಾಕು ಅನಿಸುತ್ತದೆ! ಅಲ್ಲಿ ಸಿಕ್ಕವನೇ ಅತಿ ಆಪ್ತ ಆಗುತ್ತಾನೆ!"
"ಊಹೆಯಿಂದ ತಿಳಿಯಬೇಕು"
"ಅಷ್ಟೇ ಅಲ್ಲ. ಅವನು ಯುದ್ಧದಲ್ಲಿ ಬದುಕಿ ಉಳಿಯಬೇಕು"
".........."
"ಹೀಗೆ ನಾವು ಆರಿಸಿಕೊಳ್ಳುವ ಆಪ್ತರು ನಮ್ಮ ಹತ್ತಿರದವರೇ ಆಗಬಹುದು. ಒಡಹುಟ್ಟಿದವರೇ ಆಗಬಹುದು. ಜೊತೆಯಲ್ಲಿ ಬೆಳೆದವರೇ ಆಗಬಹುದು."
"ಹೌದು"
"ನಾವು ಮೂವರು ಅಣ್ಣ-ತಮ್ಮಂದಿರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡವರು. ಮಧ್ಯದವನು ಮಧ್ಯ ವಯಸ್ಸಿನಲ್ಲಿಯೇ ತೀರಿಹೋದ. ಮತ್ತೆ ಉಳಿದವರು ನಾವಿಬ್ಬರೇ"
"ಒಡಹುಟ್ಟಿದವರು, ಸಹಪಾಠಿಗಳು ಆದರೆ ಕೆಲವು ಅನುಕೂಲಗಳು ಉಂಟು. ಅವರ ಎಲ್ಲ ವಿಷಯಗಳು ನಮಗೆ ತಿಳಿದಿರುತ್ತವೆ. ನಮ್ಮ ವಿಷಯಗಳೂ ಅವರಿಗೆ ತಿಳಿದಿರುತ್ತವೆ"
"ನಿನ್ನೆ ಆಗಿದ್ದೂ ಅದೇ"
ಆಸ್ಪತ್ರೆಯಲ್ಲಿಯೇ ಏಕೆ ಮಾತು-ಕತೆ ಆಯಿತು? ಅವರೊಡನೆಯೇ ಏಕೆ ಆಯಿತು? ಅಂದೇ ಏಕೆ ಆಯಿತು? ಈ ವಿಷಯಗಳಿಗೆ ಸ್ಪಷ್ಟನೆ ಸಿಕ್ಕಿತು.
"ಅನುಮಾನಗಳು ಪರಿಹಾರ ಆಯಿತೇ? ಇನ್ನೂ ಏನಾದಾರೂ ಬಾಕಿ ಇದೆಯೋ?"
"ನಿನ್ನಿನ ವಿಚಾರ ತಿಳಿಯಾಯಿತು. ಜ್ಯೋತಿಷ್ಯದ ವಿಷಯ ಕೆಲವಿವೆ"
"ಇಂದು ತಡವಾಯಿತು. ನಾಳೆ ನಿನಗೆ ಆಫೀಸಿಗೆ ಹೋಗಬೇಕಿದೆ. ನಾಳೆ ಸಂಜೆ ಮುಂದುವರೆಸೋಣ"
*****
ಅನುಭವದಿಂದ ಕಲಿತ ಪಾಠಗಳು ಅನುಗಾಲ ನೆನಪಿನಲ್ಲಿ ಇರುತ್ತವೆ. ಅಂತಹ ಸಂದರ್ಭಗಳು ಜೀವನದಲ್ಲಿ ಮತ್ತೆ ಪುನರಾವರ್ತನೆ ಆದಾಗ ಮನಸ್ಸು ಅವನ್ನು ಗಾಢವಾಗಿ ಮೆಲಕು ಹಾಕುತ್ತದೆ.