Wednesday, September 2, 2026

ವಾದಿರಾಜರ ರುಕ್ಮಿಣೀಶ ವಿಜಯ


ಮಹಾಕಾವ್ಯಗಳ ಸಂದರ್ಭದಲ್ಲಿ ಮಾಘ ಕವಿಯ ಬಹು ಮಾನ್ಯ ಕೃತಿ "ಶಿಶುಪಾಲ ವಧ" ಮತ್ತು ಅದಕ್ಕೆ ಸಂಬಂಧಿಸಿದಂತೆ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ" ಕೃತಿಯ ಬಗ್ಗೆ ಸ್ವಲ್ಪ ವಿಚಾರವನ್ನು ಹಿಂದಿನ ಒಂದು ಸಂಚಿಕೆಯಲ್ಲಿ ಮಾಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು. ಶ್ರೀ ವಾದಿರಾಜರ "ರುಕ್ಮಿಣೀಶ ವಿಜಯ" ಕೃತಿ ಸಹ ಇದೇ ಕಥಾವಸ್ತು ಒಳಗೊಂಡದ್ದು. 

"ಕವಿಕುಲಗುರು" ಎಂದು ಗೌರವ ಪಡೆದಿರುವ ಕಾಳಿದಾಸ ಮಹಾಕವಿಯ "ರಘುವಂಶ" ಮತ್ತು "ಕುಮಾರಸಂಭವ", ಭಾರವಿ ಕವಿಯ "ಕಿರಾತಾರ್ಜುನೀಯಂ", ಮಾಘ ಕವಿಯ "ಶಿಶುಪಾಲ ವಧ" ಮತ್ತು ಶ್ರೀಹರ್ಷ ಕವಿಯ "ನೈಷಧೀಯ ಚರಿತ", ಈ ಐದು ಕಾವ್ಯಗಳು ಸಂಸ್ಕೃತದ "ಪಂಚ ಮಹಾಕಾವ್ಯಗಳು" ಎಂದು ಪ್ರಸಿದ್ಧವಾಗಿವೆ. ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳಿಗೆ ಈ ಐದು ಕಾವ್ಯಗಳಲ್ಲಿ ಯಾವುದಾದರೂ ಒಂದನ್ನು ಓದಲೇಬೇಕೆಂಬ ಅಲಿಖಿತ ನಿಯಮ ಉಂಟು. ಒಂದಕ್ಕಿಂತ ಹೆಚ್ಚು ಓದಿದರೆ ಒಳ್ಳೆಯದು. ಎಲ್ಲವನ್ನೂ ಓದಿದರೆ ಬಹಳ ಒಳ್ಳೆಯದು. ಕೆಳಗಿನ ದರ್ಜೆ ತರಗತಿಗಳಿಗೆ ಇವುಗಳ ಯಾವುದಾದರೂ ಒಂದು ಭಾಗವನ್ನಾದರೂ ಪಠ್ಯ ಕ್ರಮದಲ್ಲಿ ಸೇರಿಸಿರುತ್ತಾರೆ. 

ಕಾಳಿದಾಸ ಕವಿಯ ಕಾಲದ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಕ್ರಿಸ್ತಪೂರ್ವ ಕಾಲದಿಂದ ಕ್ರಿಸ್ತಶಕ ನಾಲ್ಕು-ಐದನೆಯ ಶತಮಾನದವರೆಗೂ ಅವನ ಕಾಲವನ್ನು ಎಳೆದಾಡುತ್ತಾರೆ. ಭಾರವಿಯು ಆರನೆಯ ಶತಮಾನದ ಕವಿ. ಮಾಘನು ಅವನ ನಂತರ, ಅಂದರೆ ಏಳನೆಯ ಶತಮಾನದವನು. ಶ್ರೀಹರ್ಷನು ಹನ್ನೆರಡನೆಯ ಶತಮಾನದ ಕವಿ. ವೇದಾಂತ ದೇಶಿಕರು ಹದಿಮೂರು-ಹದಿನಾಲ್ಕನೆಯ ಶತಮಾನದವರು. ವಾದಿರಾಜರು ಹದಿನಾರನೆಯ ಶತಮಾನದವರು. ನೂರಾರು ವರ್ಷಗಳು ಕಳೆದರೂ ಈ ಕೃತಿಗಳು ಇನ್ನೂ ಜನಪ್ರಿಯವಾಗಿ ಮಾನ್ಯವಾಗಿವೆ.

ಮಾಘನ "ಶಿಶುಪಾಲ ವಧ" ಶ್ರೀಕೃಷ್ಣನ ಕಥೆಗೆ ಸಂಬಂಧಿಸಿದುದು. ವೇದಾಂತ ದೇಶಿಕರ "ಯಾದವಾಭ್ಯುದಯ' ಮತ್ತು ವಾದಿರಾಜರ "ರುಕ್ಮಿಣೀಶ ವಿಜಯ" ಕೂಡ ಹೀಗೆಯೇ ಶ್ರೀ ಕೃಷ್ಣನ ಕಥೆಯೇ. ಮೇಲೆ ಹೇಳಿದ ಸಂಚಿಕೆಯಲ್ಲಿ "ಯಾದವಾಭ್ಯುದಯ" ಬಗೆಗೆ ನೋಡಿದೆವು. ಈಗ ವಾದಿರಾಜರ "ರುಕ್ಮಿಣೀಶ ವಿಜಯ" ಕೃತಿಯ ಬಗ್ಗೆ ನೋಡೋಣ.

******

ಶ್ರೀ ವಾದಿರಾಜ ತೀರ್ಥರು (1481-1600) ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಸೋದೆ ಮಠದ ಪೀಠಾಧಿಪತಿಗಳಾಗಿದ್ದವರು. ಒಂದು ನೂರಾ ಇಪ್ಪತ್ತು ವರ್ಷಗಳ ದೀರ್ಘ ಜೀವನ ನಡೆಸಿದವರು. ಶ್ರೀ ವಾಗೀಶ ತೀರ್ಥರ ಬಳಿ ವಿದ್ಯಾಭ್ಯಾಸ ಮಾಡಿದವರು. ಉಡುಪಿಯ ಶ್ರೀಕೃಷ್ಣನ ಪೂಜೆಗೆ ಹಿಂದೆ ಇದ್ದ ಅಷ್ಟ ಮಠಗಳ ಎರಡೆರಡು ತಿಂಗಳ ಸರಣಿಯನ್ನು ಎರಡೆರಡು ವರ್ಷ ಪರ್ಯಾಯ ಎಂದು ಮಾಡಿದವರು ಇವರು. ಎರಡೆರಡು ವರುಷಗಳ ಪರ್ಯಾಯ ಇದ್ದರೆ ಪರ್ಯಾಯ ಪೀಠಾಧಿಪತಿಗಳು ಹೆಚ್ಚಿನ ಧಾರ್ಮಿಕ ಕೆಲಸಗಳನ್ನು ನಡೆಸಲು ಅನುಕೂಲ ಆಗುವುದು, ಮತ್ತು ಇತರ ಪೀಠಾಧಿಪತಿಗಳು ದೀರ್ಘ ದೇಶ ಸಂಚಾರ ಮಾಡಬಹುದು ಎನ್ನುವ ಕಾರಣಕ್ಕೆ ಹೀಗೆ ಬದಲಾವಣೆ ಮಾಡಿದರು ಎಂದು ಹೇಳುತ್ತಾರೆ. ಕಾಲು ನಡಿಗೆಯಲ್ಲಿ ಸಂಚಾರ ಮಾಡಬೇಕಿದ್ದ ಸಮಯದ ಬದಲಾವಣೆ ಇದು. 

ಹೀಗೆ ಎರಡು ವರುಷಗಳ ಅವಧಿ ಒಂದು ಪರ್ಯಾಯ ಮಾಡಿದುದರಿಂದ ಒಂದು ಮಠಕ್ಕೆ ಹದಿನಾಲ್ಕು ವರುಷಗಳಿಗೆ ಒಮ್ಮೆ ಶ್ರೀಕೃಷ್ಣನ ಪೂಜಾ ಸರದಿ ಸಿಗುತ್ತದೆ. ಹೀಗೆ ಎರಡು ವರುಷಗಳಿಗೆ ಒಮ್ಮೆ ಪರ್ಯಾಯ ಬದಲಾವಣೆ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯುವುದನ್ನು ನಾವು ಈಗಲೂ ನೋಡುತ್ತೇವೆ. ಮೂರು ಬಾರಿ ಎರಡು ತಿಂಗಳ ಪರ್ಯಾಯಗಳ ನಂತರ, ಹದಿನಾಲ್ಕು ವರ್ಷಗಳ ದೀರ್ಘ ಅವಧಿ ಆದರೂ ಐದು ಬಾರಿ ತಾವೇ ಎರಡು ವರ್ಷಗಳ ಪರ್ಯಾಯ ಪೀಠಾಧೀಶರಾಗಿದ್ದುದು ಶ್ರೀ ವಾದಿರಾಜರ ಹೆಗ್ಗಳಿಕೆ. ನೂರಾ ಇಪ್ಪತ್ತು ವರುಷ ಜೀವನ ನಡೆಸಿದುದರಿಂದ ಇದು ಸಾಧ್ಯ ಆಯಿತು. ಕೆಳದಿ ಮತ್ತು ಸೋದೆ ಸಂಸ್ಥಾನಗಳ ಅರಸರು ಇವರನ್ನು ರಾಜಗುರುಗಳಾಗಿ ನಡೆಸಿಕೊಂಡು ಅನೇಕ ಜಹಗೀರುಗಳನ್ನು ಕೊಟ್ಟಿದ್ದರು. 

ಶ್ರೀ ವಾದಿರಾಜರು ಕುಂದಾಪುರ ಬಳಿಯ ಹೂವಿನಕೆರೆ ಗ್ರಾಮದಲ್ಲಿ ಜನಿಸಿದವರು. ದ್ವೈತ ಪರಂಪರೆಯಲ್ಲಿ ಪೀಠಾಧಿಪತಿಗಳಾಗಿ ಅನೇಕ ಸ್ವತಂತ್ರ ಕೃತಿಗಳನ್ನೂ, ಹಿಂದಿನ ಅನೇಕ ಗ್ರಂಥಗಳಿಗೆ ಟೀಕೆ-ಟಿಪ್ಪಣಿಗಳನ್ನೂ ರಚಿಸಿದ್ದಾರೆ. ಸಂಸ್ಕೃತ ಭಾಷೆ ಮಾತ್ರವಲ್ಲದೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಅನೇಕ ದೇವರನಾಮ ಮತ್ತು ದೀರ್ಘ ಗೇಯಕವನ ರಚಿಸಿದ್ದಾರೆ. "ಯುಕ್ತಿಮಾಲಿಕಾ", "ವೈಕುಂಠ ವರ್ಣನೆ", "ಲಕ್ಷ್ಮಿ ಶೋಭಾನೆ" ಮುಂತಾದುವು ಜನಪ್ರಿಯ ಕೃತಿಗಳು. ತಮ್ಮ ದೇಶ ಸಂಚಾರದ ಕಾಲದಲ್ಲಿ ಕಂಡ ಕ್ಷೇತ್ರಗಳ ವಿವರಣೆಯನ್ನು "ತೀರ್ಥ ಪ್ರಭಂಧ" ಎಂಬ ಗ್ರಂಥದಲ್ಲಿ ಕೊಟ್ಟಿದ್ದಾರೆ. "ಹಯವದನ" ಎನ್ನುವ ತಮ್ಮ ಆರಾಧ್ಯ ದೈವದ ಅಂಕಿತದಲ್ಲಿ ಅನೇಕ ಕನ್ನಡ ದೇವರನಾಮಗಳನ್ನು ರಚಿಸಿದ್ದಾರೆ. ಈಗಲೂ ಇವು ಜನಪ್ರಿಯವಾಗಿ ಪ್ರತಿನಿತ್ಯ ಮನೆಮನೆಗಳಲ್ಲಿ ಹಾಡಲ್ಪಡುತ್ತಿವೆ.
******

ಹೀಗೆ ಒಮ್ಮೆ ದೀರ್ಘಕಾಲದ ದೇಶ ಸಂಚಾರದಲ್ಲಿದ್ದ ಸಮಯದಲ್ಲಿ ಶ್ರೀ ವಾದಿರಾಜರು ಪುಣ್ಯಪಟ್ಟಣ ತಲುಪಿದರು. ಪುಣ್ಯಪಟ್ಟಣ ಅನ್ನುವುದು ಈಗಿನ ಪೂನಾ ಅಥವಾ ಪುಣೆ ನಗರದ ಹಿಂದಿನ ಹೆಸರು. ಆಗ ಅಲ್ಲಿ ಪೇಶ್ವೆಯವರ ಆಡಳಿತ ಕಾಲ. ಪೇಶ್ವೆ ಅನ್ನುವುದು ಒಂದು ಹುದ್ದೆ. ಹೆಚ್ಚಿನ ಜನ ತಿಳಿದಿರುವಂತೆ ಅದು ಮರಾಠ ರಾಜರ ಕಾಲದಲ್ಲಿ ಬಂದ ಹುದ್ದೆ ಅಲ್ಲ. ಅದೊಂದು ಪರ್ಷಿಯನ್ ಭಾಷೆಯ ಪದ. ಅದರ ಅರ್ಥ "ನಾಯಕ" ಅಥವಾ "ಅಗ್ರೇಸರ" ಎಂದು. ಮೊದಲು ಈ ಪದವನ್ನು ಹದಿನಾಲ್ಕು-ಹದಿನೈದನೆಯ ಶತಮಾನದಲ್ಲಿ ಬಳಕೆಗೆ ತಂದವರು ಬಹಮನಿ ಸುಲ್ತಾನರು. ಸುಲ್ತಾನರ ನಂತರದ ಅಧಿಕಾರಿಗಳಲ್ಲಿ ಪೇಶ್ವೆ ಅತ್ಯಂತ ಎತ್ತರದವರು. ಮರಾಠ ರಾಜರ ಕಾಲದಲ್ಲಿ ಶಿವಾಜಿ ಮಹಾರಾಜರು ಮೋರೋಪಂತ ಪಿಂಗಳೆ ಅವರನ್ನು ಮೊದಲ ಮರಾಠ ಪೇಶ್ವೆ ಆಗಿ ನೇಮಕ ಮಾಡಿದರು. ಪೇಶ್ವೆ ಪದಕ್ಕೆ ಸಮಾನಾಂತರವಾಗಿ "ಪಂತ ಪ್ರಧಾನ" (ಪ್ರಧಾನ ಮಂತ್ರಿ) ಎನ್ನುವ ಪದ ಬಳಕೆ ಆಯಿತು. ಪಂತ ಪ್ರಧಾನ ಅನ್ನುವ ಪದ ಮರಾಠಿ ಭಾಷೆಯಲ್ಲಿ ಈಗಲೂ ಬಳಕೆಯಲ್ಲಿ ಉಂಟು. ಆದರೂ ಪೇಶ್ವೆ ಅನ್ನುವ ಪದದ ಬಳಕೆ ಜನಸಾಮಾನ್ಯರಲ್ಲಿ ಮುಂದುವರೆಯಿತು. "ತಹಸೀಲ್ದಾರ್" ಅನ್ನುವ ಪದ ಬಂದರೂ ನಮ್ಮ ಜನ "ಅಮಲ್ದಾರ್" ಪದ ಬಳಸುತ್ತಿದ್ದ ರೀತಿಯಲ್ಲಿ.

ಪುಣೆಯ ನಗರದ ಪೇಶ್ವೆಗಳು ಸಾಹತ್ಯ-ಸಂಸ್ಕೃತಿಗಳ ಪೋಷಕರು ಆಗಿದ್ದರು. ಶ್ರೀ ವಾದಿರಾಜರು ಅಲ್ಲಿದ್ದ ಕಾಲದಲ್ಲಿ ಪೇಶ್ವೆಗಳು ಒಂದು ವಿದ್ವನ್ಮಂಡಳಿ ಏರ್ಪಡಿಸಿ, ಸಂಸ್ಕೃತ ಕಾವ್ಯಗಳ ತೌಲನಿಕ ಅಧ್ಯಯನ ಏರ್ಪಡಿಸಿದ್ದರು. ಈ ಅಧ್ಯಯನದಲ್ಲಿ ಮಾಘ ಕವಿಯ "ಶಿಶುಪಾಲ ವಧ" ಶ್ರೇಷ್ಠ ಕಾವ್ಯ ಎಂದು ತೀರ್ಮಾನಿಸಿದರು. ಕಾವ್ಯವನ್ನು ಆನೆಯ ಮೇಲಿನ ಅಂಬಾರಿಯಲ್ಲಿ ಇಟ್ಟು, ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌರವ ಅರ್ಪಿಸಿದರು. ಈ ಸಂಭ್ರಮ ಶ್ರೀ ವಾದಿರಾಜರಿಗೆ ತಿಳಿಯಿತು. ಕಾವ್ಯದ ಹೆಸರು ಅವರಿಗೆ ರುಚಿಸಲಿಲ್ಲ. ಖಳನಾಯಕನಾದ ಶಿಶುಪಾಲನಿಗೆ ಗ್ರಂಥದ ಹೆಸರಿನಲ್ಲಿ ಪ್ರಾಮುಖ್ಯತೆ ಕೊಟ್ಟು ಕಥಾನಾಯಕನಾದ ಶ್ರೀಕೃಷ್ಣನನ್ನು ಕೈಬಿಟ್ಟುದುದು ಅವರಿಗೆ ಸರಿ ಬರಲಿಲ್ಲ. 

ಶ್ರೀ ವಾದಿರಾಜರು ನಂತರ ಪೇಶ್ವೆಯವರನ್ನು ಭೇಟಿ ಮಾಡಿದರು. "ಇದೇ ಕಥಾವಸ್ತುವಿನ ಮೇಲೆ ನಾವೂ ಒಂದು ಕಾವ್ಯ ರಚಿಸಿದ್ದೇವೆ. "ಶ್ರೀ ರುಕ್ಮಿಣೀಶ ವಿಜಯ" ಎಂದು ಅದರ ಹೆಸರು. ಅದು ನಮ್ಮ ಮೂಲ ಸ್ಥಾನವಾದ ಉಡುಪಿ ನಗರದಲ್ಲಿದೆ. ಅದನ್ನು ತರಿಸಲು ನಮಗೆ ಇಪ್ಪತ್ತು ದಿನಗಳು ಕಾಲಾವಕಾಶ ಬೇಕು. ಅಲ್ಲಿಂದ ತರಿಸುತ್ತೇವೆ. ಅದನ್ನೂ ನಿಮ್ಮ ವಿದ್ವನ್ಮಂಡಳಿ ಪರಿಶೀಲಿಸಬೇಕು ಎಂದು ನಮ್ಮ ಅಭಿಲಾಷೆ" ಎಂದರು. ಪೇಶ್ವೆಯವರು ಅದಕ್ಕೆ ಒಪ್ಪಿದರು. 

******

ಹೀಗೆ ನಡೆದಾಗ ಗ್ರಂಥ ಇನ್ನೂ ರಚನೆ ಆಗಿರಲಿಲ್ಲ. ಮಾರನೆಯ ದಿನದಿಂದ ಶ್ರೀ ವಾದಿರಾಜರು ತಮ್ಮ ಸಂಸ್ಥಾನ ಪೂಜೆಯ ನಂತರ, ಭಿಕ್ಷಾ ಸ್ವೀಕರ ಮಾಡುವ ಮೊದಲು, ಈ ನಡುವಿನ ವೇಳೆಯಲ್ಲಿ ಪ್ರತಿದಿನ ಒಂದೊಂದು ಸರ್ಗದಂತೆ ತಮ್ಮ ಶಿಷ್ಯರಿಗೆ ಹೇಳುತ್ತಾ ಹೋದರು. ಶಿಷ್ಯರು ಬರೆದಿಟ್ಟುಕೊಂಡರು. ಒಟ್ಟು ಗ್ರಂಥ 19 ಸರ್ಗಗಳಲ್ಲಿ 1241 ಶ್ಲೋಕಗಳನ್ನು ಒಳಗೊಂಡಿದೆ. ಹತ್ತೊಂಬತ್ತು ದಿನಗಳಲ್ಲಿ ಗ್ರಂಥ ಪೂರ್ಣವಾಯಿತು. ಪ್ರತಿದಿನ ಸುಮಾರು ಅರವತ್ತು-ಎಪ್ಪತ್ತು ಶ್ಲೋಕಗಳು. ಹೀಗೆ ರಚನೆ. ಸತತ ಶ್ರೀಮದ್ಭಾಗವತ ಪಾಠ-ಪ್ರವಚನ ಮಾಡುತ್ತಿದ್ದ ಅವರಿಗೆ ವಿಷಯದ ಹುಡುಕಾಟ ಇರಲಿಲ್ಲ. ಗೊತ್ತಿದ್ದ ವಿಷಯವನ್ನೇ ಕಾವ್ಯವಾಗಿ ಪರಿವರ್ತಿಸಬೇಕಿತ್ತು. ಶ್ರೀಮದ್ಭಾಗವತದ ಹತ್ತನೆಯ ಸ್ಕಂದದ ಶ್ರೀಕೃಷ್ಣನ ಅವತಾರದಿಂದ ರುಕ್ಮಿಣಿ ಸ್ವಯಂವರ ನಡೆಯುವವರೆಗಿನ ಕಥೆ. ಅದಾಯಿತು. 

ಇಪ್ಪತ್ತನೆಯ ದಿನ ಪೂರ್ಣವಾದ ಕಾವ್ಯದ ವಾಚನವಾಯಿತು. ಇಪ್ಪತ್ತೊಂದನೆಯ ದಿನ ಗ್ರಂಥವನ್ನು ವಿದ್ವನ್ಮಂಡಳಿ ಮುಂದೆ ಪರಿಶೀಲನೆಗೆ ಇಡಲಾಯಿತು. ಮಂಡಳಿ ತನ್ನ ಅವಗಾಹನೆಯ ನಂತರ ಗ್ರಂಥ ಉತ್ತಮ ಕಾವ್ಯ ಗುಣಗಳಿಂದ ಕೂಡಿದ ತೂಕದ ಕೃತಿ ಎಂದು ತೀರ್ಮಾನಿಸಿತು. ಪೇಶ್ವೆಯವರು ಈ ಗ್ರಂಥವನ್ನೂ ಆನೆಯ ಮೇಲೆ ಅಂಬಾರಿಯಲ್ಲಿಟ್ಟು ಪುಣೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದರು. 

ಶ್ರೀ ರುಕ್ಮಿಣೀಶ ವಿಜಯ ರಚನೆಯ ಸಂದರ್ಭ ಕುರಿತು ಜನಜನಿತವಾಗಿರುವ ಸಂಗತಿ ಇದು. ಶ್ರೀ ವಾದಿರಾಜರು ಸೋದೆಗೆ ಹಿಂದಿರುಗಿದ ನಂತರ ಸೋದೆಯ ಅರಸರು ಸಹ ತಮ್ಮ ರಾಜಧಾನಿಯಲ್ಲಿ ಪುಣೆಯಲ್ಲಿ ನಡೆದಂತೆಯೇ ಈ ಗ್ರಂಥದ ಮೆರವಣಿಗೆ ಮಾಡಿಸಿದರು. 

ಶ್ರೀ ರುಕ್ಮಿಣೀಶ ವಿಜಯ ಗ್ರಂಥದ ಒಂದೆರಡು ಸಂಗತಿಗಳನ್ನು ಮತ್ತೊಮ್ಮೆ ನೋಡೋಣ.

******

ನಮ್ಮಲ್ಲಿ ಉಪಲಬ್ಧವಿರುವ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಉತ್ತಮ ಕಾವ್ಯ ಗುಣಗಳು ತುಂಬಿರುವ ಅನೇಕ ಕೃತಿಗಳಿವೆ. ಈಗಾಗಲೇ ಪರಕೀಯರ ಧಾಳಿಗಳಲ್ಲಿ ಅನೇಕ ಬಹುಮೂಲ್ಯ ಗ್ರಂಥಗಳು ನಷ್ಟವಾಗಿ ನಮಗೆ ಉಳಿದಿರುವುದು ಬಹಳ ಅಲ್ಪ. ಭಾರತೀಯ ತತ್ವ ಶಾಸ್ತ್ರದ ಯಾವುದೇ ಶಾಖೆಯಿರಲಿ, ಅದರ ಪ್ರವರ್ತಕರು ಮತ್ತು ಮುಂದೆ ಅವನ್ನು ಬಲಪಡಿಸಿದ ಮಹನೀಯರುಗಳು ಅಪ್ರತಿಮ ವಿದ್ವಾಂಸರುಗಳು. ಹೀಗಿಲ್ಲದಿದ್ದ ಪಕ್ಷದಲ್ಲಿ ಈ ಕೃತಿಗಳು ನೂರಾರು-ಸಾವಿರಾರು ವರುಷಗಳು ಉಳಿದುಕೊಂಡು ಬಂದು ಪ್ರಚಲಿತ ಇರುತ್ತಿರಲಿಲ್ಲ. ದುರದೃಷ್ಟವಶಾತ್ ಇಂತಹ ಕೃತಿಗಳನ್ನು ನಿರ್ವಿಕಾರ ಭಾವದಿಂದ ನೋಡುವ ಮನಸ್ಥಿತಿ ಅನೇಕ ಜನರಿಗಿಲ್ಲ. ಈ ಕಾರಣದಿಂದಾಗಿ ಈ ಗ್ರಂಥಗಳು ಕೇವಲ ಅವರವರ ಮತಗಳ ಚೌಕಟ್ಟಿನಲ್ಲಿಯೇ ಬಂದಿಯಾಗಿವೆ. 

ನಮ್ಮ ತೋಟದ ಹಣ್ಣು ನಮಗೆ ಚೆನ್ನ. ಸರಿ. ಹಾಗೆಂದು ಬೇರೆ ತೋಟದ ಹಣ್ಣುಗಳು ನಮಗೆ ಬೇಡವೇ ಬೇಡ ಅನ್ನುವುದು ಎಷ್ಟು ಸರಿ? ಹಾಗೆ ಅಭಿಪ್ರಾಯಪಟ್ಟಲ್ಲಿ ನಷ್ಟ ನಮಗೇ ಅಲ್ಲವೇ?

Friday, August 28, 2026

ಹನುಮನ ಭಕ್ತಿ ಮತ್ತು ಕಾವ್ಯದಲ್ಲಿ "ಧ್ವನಿ"


ಹನುಮನ ಶಕ್ತಿ ಅಸಾಮಾನ್ಯವಾದದ್ದು. ಅದರ ಸರಿಯಾದ ಅನುಭವವನ್ನು ರಾವಣನಂತಹ ಮಹಾಬಲಶಾಲಿಯನ್ನು ತನ್ನ ಬಾಲದಲ್ಲಿ ಕಟ್ಟಿಕೊಂಡು ನಾಲ್ಕು ದಿಕ್ಕುಗಳ ಸಮುದ್ರಗಳಲ್ಲಿ ಮುಳುಗಿಸಿದ್ದ ಧೀರ ವಾಲಿ ಪಡೆದ್ದಿದ್ದ. ಹನುಮನ ಭಕ್ತಿ ಕೂಡ ಅಂತೆಯೇ. ಅತಿಹೆಚ್ಚು ಶಕ್ತಿವಂತನಿಗೂ, ಅತ್ಯಂತ ಭಕ್ತಿವಂತನಿಗೂ ಒಂದು ಉದಾಹರಣೆ ಕೊಡಲು ಹನುಮನೇ ಆಗಬೇಕು. ಅಂತೆಯೇ, ಒಂದು ಅಗಾಧವಾದ ಕೆಲಸ ಮಾಡಲು ಬೇಕಾದ ಶಕ್ತಿ, ಯುಕ್ತಿ ಮತ್ತು ಸಮಯ ಪ್ರಜ್ಞೆ, ಇವೆಲ್ಲಕ್ಕೂ ಹನುಮನೇ ಕೊನೆಯ ಮಾತು. ಅನೇಕ ಅತಿ ಬಲವಂತರ ಅಹಂಕಾರ ಮುರಿಯಲು ಅವರನ್ನು ಹನುಮನ ಬಳಿ ಕಳಿಸಿದ ಕಥೆಗಳು ಬಹಳವಿವೆ.

ಭಾರತದ ಈಗಿನ ವಿದೇಶಾಂಗ ಮಂತ್ರಿಗಳಾದ ಶ್ರೀ ಎಸ್. ಜೈಶಂಕರ್ ಅವರ ಅನೇಕ ವಿಡಿಯೋಗಳಲ್ಲಿ ಒಂದು ಬಹಳ ಪ್ರಚಲಿತವಿದೆ. "ಒಬ್ಬ ಒಳ್ಳೆಯ ರಾಜದೂತ ಮತ್ತು ರಾಯಭಾರಿ ಯಾರು? ಅವರಲ್ಲಿ ಇರಬೇಕಾದ ಗುಣಗಳು ಯಾವುವು?" ಎಂದು ಅವರನ್ನು ಒಮ್ಮೆ ಪ್ರಶ್ನೆ ಮಾಡಲಾಯಿತು. "ನನ್ನ ಪ್ರಕಾರ ಒಬ್ಬ ಒಳ್ಳೆಯ ರಾಜದೂತನಿಗೆ ಉದಾಹರಣೆ ಹನುಮಂತ. ಒಬ್ಬ ಒಳ್ಳೆಯ ರಾಯಭಾರಿಗೆ ಉದಾಹರಣೆ ಶ್ರೀಕೃಷ್ಣ" ಎಂದು ಉತ್ತರಿಸಿ, ಅವರಿಗೆ ಇರಬೇಕಾದ ಗುಣಗಳ ಪಟ್ಟಿ ಮಾಡಿರುವ ಜೈಶಂಕರ್ ಅವರ ವಿಡಿಯೋ ಒಂದನ್ನು ಪ್ರಾಯಶಃ ಎಲ್ಲರೂ ನೋಡಿದ್ದಾರೆ.

ಹನುಮನು ಲಂಕೆಗೆ ಹಾರಿ ಹೋಗಿ, ಬೇಕೆಂದೇ ಸೆರೆ ಸಿಕ್ಕಿ, ರಾವಣನ ಮುಂದೆ ಕುಳಿತು ಮಾತನಾಡಿದ ಭಾಗ ಶ್ರೀಮದ್ ರಾಮಾಯಣದಲ್ಲಿ ಬಹಳ ರಸವತ್ತಾದ ಭಾಗ. "ಏಳೇಳು ಶರಧಿಯು ಏಕವಾಗಿದೆ ಕಂಡ್ಯ, ಹೇಗೆ ಬಂದೆಯೋ ಹೇಳೋ ಕೋತಿ" ಎನ್ನುವ ರಾವಣನ ಪ್ರಶ್ನೆಗೆ "ಏಳೇಳು ಶರಧಿಯು ಎನಗೇಳು ಕಾಲುವೆಯು, ಹಾರಿ ಲಂಘಿಸಿ ಬಂದೆ ಭೂತ" ಎಂದು ಹೇಳುವ ಶ್ರೀ ಪುರಂದರದಾಸರ ದೇವರನಾಮ ಬಹಳ ಪ್ರಸಿದ್ಧ. ಇದನ್ನು ಯಕ್ಷಗಾನ ಪ್ರಸಂಗಗಳಲ್ಲಿ ಬಹಳ ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ. "ಭಲೇ ಭಾಸ್ಕರ್" ಹೆಸರಿನ ಕನ್ನಡ ಚಲನಚಿತ್ರದಲ್ಲಿ (1971) ಇದರ ಭಾಗವೊಂದನ್ನು ಸೊಗಸಾಗಿ ಸೇರಿಸಿದ್ದಾರೆ. ಯುಟ್ಯೂಬ್ನಲ್ಲಿ ಲಭ್ಯವಿದೆ. ಶ್ರೀ ಬಾಲಮುರಳಿಕೃಷ್ಣ ಅವರು ಹಾಡಿರುವ ಪೂರ್ಣ ಹಾಡೂ ಅಲ್ಲಿ ಸಿಗುತ್ತದೆ. ಆಸಕ್ತರು ಕೇಳಬಹುದು. 

ಶ್ರೀ ವಾದಿರಾಜರ "ಎಷ್ಟು ಸಾಹಸವಂತ, ನೀನೇ ಬಲವಂತ! ದಿಟ್ಟ ಮೂರುತಿ, ಭಳಿರೆ ಭಳಿರೇ ಹನುಮಂತ" ಅನ್ನುವ ಕೃತಿಯಲ್ಲಿ, ಇನ್ನೊಂದು ಸಂದರ್ಭದಲ್ಲಿ, ಹನುಮ ರಾವನಿಗೆ ಬುದ್ಧಿವಾದ ನೀಡುವಾಗ ಹೇಳಿದ ಈ ಭಾಗವುಂಟು:

ದುರುಳ ರಾವಣನೆ ನಿನ್ನ ಬಡಿದು ಹಾಕುವೆನು 
ರಾಮರಪ್ಪಣೆ ಇಲ್ಲ ಎಂದು ತಾಳಿಹೆನು 

ಹನುಮ ಮನಸ್ಸು ಮಾಡಿದ್ದರೆ, ಸಂಯಮ ತೋರದಿದ್ದರೆ, ರಾವಣನ ಕಥೆ ಅಂದೇ ಮುಗಿದು ರಾಮಾಯಣ "ಹನುಮಾಯಣ" ಆಗುತ್ತಿತ್ತು.

*****

ರಾಮ-ರಾವಣರ ಯುದ್ಧದಲ್ಲಿ ಕಡೆಯ ಭಾಗ ನಡೆಯುತ್ತಿತ್ತು. ಮಗ ಮೇಘನಾದ ಮತ್ತು ತಮ್ಮ ಕುಂಭಕರ್ಣನನ್ನು ಯುದ್ಧದಲ್ಲಿ ಕಳೆದುಕೊಂಡಿದ್ದ ರಾವಣ ಬಹಳ ಕುಪಿತನಾಗಿದ್ದ. ಯುದ್ಧ ಭೂಮಿಯಲ್ಲಿ ವಿಭೀಷಣನನ್ನು ನೋಡಿದ ಕೂಡಲೇ ಅವನಿಗೆ ತಡೆಯಲಾರದ ಕೋಪ ಬಂದಿತು. ಇವನಿಂದಲೇ ತನ್ನ ಎಲ್ಲ ನಷ್ಟಗಳು ಎಂದು ತನ್ನ ಅತ್ಯಂತ ಶಕ್ತಿಯುತ ಆಯುಧವನ್ನು ವಿಭೀಷಣನ ಕಡೆ ಎಸೆದ. ಅವನನ್ನು ಉಳಿಸುವ ಸಲುವಾಗಿ ಲಕ್ಷ್ಮಣ ಅಡ್ಡ ಬಂದ. ಶಕ್ತಿಯ ಹೊಡೆತಕ್ಕೆ ಮೂರ್ಛೆ ಹೋದ. ವೈದ್ಯ ಸುಷೇಣನನ್ನು ಕರೆದು ತಂದರು. ಅವನು ಅಮೂಲ್ಯ ಮೂಲಿಕೆಗಳನ್ನು ತಕ್ಷಣ ತರಿಸಿ ಅಂದ. ಅವು ಇದ್ದದ್ದು ಹಿಮಾಲಯದಲ್ಲಿ. ಬೆಳಗಾಗುವುದರಲ್ಲಿ ಅವನ್ನು ತಂದು ಕೊಡಬೇಕು. ಯಾರು ಮಾಡಬೇಕು? ಹನುಮ ಆ ಕೆಲಸ ಮಾಡಿದ.

ಇಂದ್ರಜಿತ್ ಎಸೆದ ಶಕ್ತಿಯಿಂದ ಲಕ್ಷ್ಮಣ ಮೂರ್ಛೆ ಹೋದ ಎಂದು ಅನೇಕರು ತಿಳಿದಿರುವುದು ತಪ್ಪು ಕಲ್ಪನೆ. ಶ್ರೀಮದ್ ರಾಮಾಯಣದ ಯುದ್ಧಕಾಂಡದ 101ನೆಯ ಸರ್ಗ ಇದನ್ನು ವಿವರಿಸಿದೆ. ಆಸಕ್ತರು ಇಲ್ಲಿ ಕ್ಲಿಕ್ ಮಾಡಿ ಇಂಗ್ಲಿಷಿನಲ್ಲಿ ಇರುವ ಸಂಬಂಧಿಸಿದ ಬ್ಲಾಗ್ ಪೋಸ್ಟ್ ಓದಬಹುದು. 

ಹನುಮ ಹೀಗೆ ತಂದ ಪರ್ವತದ ಸುತ್ತಳತೆ ಒಂದು ನೂರು ಯೋಜನ! ಅದು ಇದ್ದದ್ದು ಯುದ್ಧಭೂಮಿಯಿಂದ ಒಂದು ಸಾವಿರ ಯೋಜನ ದೂರ! ಅಂತಹ ಪರ್ವತವನ್ನು ಆಕಾಶ ಮಾರ್ಗವಾಗಿ ಹನುಮ ತರುವಾಗ ಹಿಡಿದುಕೊಂಡಿದ್ದದ್ದು ಒಂದೇ ಕೈಯ್ಯಲ್ಲಿ. ಅದಕ್ಕೆ ಎರಡೂ ಕೈಗಳು ಬೇಕಾಗಲಿಲ್ಲ. ಹಿಡಿದದ್ದು ಅಂತಹ ದೊಡ್ಡ ಪರ್ವತ. ಹಾರುತ್ತಿದ್ದುದು ಆಕಾಶ ಮಾರ್ಗದಲ್ಲಿ. ವೇಗವೋ ಕೆಲವೇ ಗಂಟೆಗಳಲ್ಲಿ ಎರಡು ಸಾವಿರ ಯೋಜನ ದೂರ ಕ್ರಮಿಸಿದುದು. ಹೋಗಲು ಒಂದು ಸಾವಿರ ಯೋಜನ. ಹಿಂದಿರುಗಲು ಇನ್ನೊಂದು ಸಾವಿರ ಯೋಜನ. 

ಹೀಗೆ ಪರ್ವತ ಹಿಡಿದು ತಂದ ಹನುಮನಿಗೆ ಸುಸ್ತಾಗಿತ್ತೇ? ಬಂದ ತಕ್ಷಣ ಕುಡಿಯಲು ನೀರು ಕೇಳಿದನೇ? ಯಾರಾದರೂ ಗಾಳಿ ಹಾಕಿದರೇ? (ಅವನೇ ವಾಯುಪುತ್ರ. ಗಾಳಿ ಹಾಕುವವರು ಯಾರು?). ಸ್ವಲ್ಪ ಹೊತ್ತು ಕುಳಿತು ಸುಧಾರಿಸಿಕೊಂಡನೇ? ಒಂದೂ ಇಲ್ಲ. ಸುಷೇಣನ ಕೆಲಸ ಆಯಿತು. ಈಗ ಬೆಟ್ಟವನ್ನು ಯುದ್ಧ ಭೂಮಿಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಏನು ಮಾಡುವುದು? ಹನುಮನನ್ನು ಇನ್ನೊಂದು ಬಾರಿ ಕಳಿಸಿ ಬೆಟ್ಟ ಅಲ್ಲಿ ಇಟ್ಟು ಬರುವಂತೆ ಹೇಳುವುದೇ?

ಹನುಮ ಮತ್ತೊಮ್ಮೆ ಒಂದು ಕೈಯ್ಯಲ್ಲಿ ಪರ್ವತ ಹಿಡಿದ. ಹಿಡಿದವನು ನಿಂತಲ್ಲಿಂದಲೇ ಅದನ್ನು ಎಸೆದ. ಎಸೆದ ಬೆಟ್ಟ ಒಂದು ಸಾವಿರ ಯೋಜನ ಹೋಗಿ ಮೊದಲಿದ್ದ ಜಾಗದಲ್ಲಿ ಕುಳಿತಿತು. ಹೇಗೆ ಕುಳಿತಿತು? ನಾವು ಯಾವುದಾದರೂ ಪದಾರ್ಥ ಎತ್ತಿಕೊಂಡು ಮತ್ತೆ ಅದು ಇದ್ದಲ್ಲಿ ಇಟ್ಟರೆ ಸ್ಥಳ ಪಲ್ಲಟ ಆಗಿದ್ದು ಕೂಡಲೇ ಗೊತ್ತಾಗುತ್ತದೆ. ಹನುಮ ಎಸೆದ ಪರ್ವತ ಅದನ್ನು ಕಿತ್ತು ಕೊಂಡುಹೋಗಿದ್ದ ಗುರುತೂ ಇಲ್ಲದಂತೆ ಮೊದಲಿನ ಜಾಗದಲ್ಲಿ ಕುಳಿತುಕೊಂಡಿತು. ಆಯಾಸವೇ? ಹಾಗೆಂದರೇನು? ಹನುಮನಿಗೆ ಗೊತ್ತಿಲ್ಲ.

*****

ಎಲ್ಲಾ ಪದಾರ್ಥಗಳಿಗಿಂತ ಹೂವು ಬಹಳ ಸೂಕ್ಷ್ಮ. ಅದೊಂದು ತೂಕವಿಲ್ಲದ ವಸ್ತು. ಕಷ್ಟದ ಕೆಲಸ ಸುಲಭವಾಗಿ ಆದಾಗ "ನಮ್ಮ ಕೆಲಸ ಹೂವು ಎತ್ತಿದಂತೆ ಸುಲಭವಾಗಿ ಆಯಿತು" ಎಂದು ಹೇಳುವುದುಂಟು. ಬೆಳಗಿನ ಪೂಜೆಗೆ ಹೂವು ತಂದಾಗ ಅದೊಂದು ಆಯಾಸದ ಕೆಲಸ ಎಂದು ಯಾರೂ ಹೇಳುವುದಿಲ್ಲ.

ಹನುಮನ "ರಾಮಭಕ್ತಿ" ಮಾತಿನಲ್ಲಿ ಹೇಳುವಂಥದಲ್ಲ. ಅದಕ್ಕೆ ಸಾಟಿಯಾದದ್ದು ಇನ್ನೊಂದಿಲ್ಲ. ದೇವರ ಪೂಜೆಗೆ ಹೂವು ಬೇಕು. ಹೂವನ್ನು ತರಬೇಕು. ಒಮ್ಮೆ ಉಪಯೋಗಿಸಿದ ಹೂವನ್ನು ಮತ್ತೆ ಉಪಯೋಗಿಸುವಂತಿಲ್ಲ. ಆದ್ದರಿಂದ ಹನುಮ ಹೂವು ತರುವಾಗ ಅದರ ಸುವಾಸನೆ ಸೇವಿಸಬಾರದು. (ಈ ರೀತಿ ನೋಡಿದರೆ ನಾವು ಅರ್ಪಿಸುವ ಎಲ್ಲ ಹೂವುಗಳೂ ನಿರ್ಮಾಲ್ಯವೇ!) ಶ್ರೀರಾಮರ ಪೂಜೆಗೆ ಹೂವು ತರುವಾಗ ಹನುಮನಿಗೆ ಎರಡೂ ಕೈ ಸೇರಿಸಿ ಬೊಗಸೆ ಆಗಬೇಕು. ತರುವ ಹೂವು ಬೇರೆ ಕೆಲಸಕ್ಕೆ ಉಪಯೋಗಿಸುವ ಆಲೋಚನೆ ಕೂಡ ಬರಬಾರದು. ವಾಸನೆ ಸ್ವಲ್ಪ ಕೂಡ ಅಘ್ರಾಣಿಸಬಾರದು. ಹಾಗೆ ಜೋಪಾನವಾಗಿ ತರಬೇಕು.

ಈ ಕಾರಣದಿಂದ ಅತಿ ಗಮನವಿಟ್ಟು, ಎರಡೂ ಕೈಗಳಿಂದ ಮಾಡಿದ ಬೊಗಸೆಯಲ್ಲಿ, ನಡು ಬಗ್ಗಿಸಿ, ಬಹಳ ಭಕ್ತಿಯಿಂದ ಹನುಮ ಹೂವುಗಳನ್ನು ತರುತ್ತಾನೆ.

ಬೆಟ್ಟ ಎತ್ತಲು, ಎತ್ತಿಕೊಂಡು ಹಾರಲು, ಹಿಂದಿರುಗಿ ಎಸೆಯಲು ಒಂದೇ ಕೈ ಸಾಕು. ಮೈ ಬಗ್ಗಿಸುವ ಅಗತ್ಯವಿಲ್ಲ. ಆದರೆ ಶ್ರೀರಾಮರ ಪೂಜೆಗೆ ಹೂವು ತರುವಾಗ ಎರಡೂ ಕೈಗಳ ಬೊಗಸೆ ಬೇಕು. ಮೈ ಬಗ್ಗಿಸಬೇಕು. ಹೀಗೆ ಭಯ-ಭಕ್ತಿಯಿಂದ ತರಬೇಕು!

*****  

ಯುದ್ಧಕಾಲದಲ್ಲಿ ಪರ್ವತ ತಂದಿದ್ದು, ಮತ್ತು ಪೂಜಾಕಾಲದಲ್ಲಿ ಹೂವುಗಳನ್ನು ತರುವುದು, ಈ ಎರಡೂ ಕೆಲಸಗಳನ್ನು ಹನುಮ ಮಾಡಿದ ರೀತಿಯನ್ನು ಶ್ರೀ ನಾರಾಯಣ ಪಂಡಿತಾಚಾರ್ಯರು ತಮ್ಮ "ಶ್ರೀಮಧ್ವ ವಿಜಯ" ಕಾವ್ಯದಲ್ಲಿ ("ಸುಮಧ್ವ ವಿಜಯ" ಎಂದು ಹೇಳುವು ಹೆಚ್ಚು ಬಳಕೆ), ಮೊದಲ ಸರ್ಗದ 19ನೆಯ ಶ್ಲೋಕದಲ್ಲಿ, ಹೀಗೆ ವರ್ಣಿಸುತ್ತಾರೆ: 

ರಾಮರ್ಚನೇ ಯೋ ನಯತಃ ಪ್ರಸೂನಂ 
ದ್ವಾಭ್ಯಾ೦ ಕರಾಭ್ಯಾ೦ ಅಭವತ್ ಪ್ರಯತ್ನ: 
ಏಕೇನ ದೋಷ್ಣಾ ನಯತೋ ಗಿರೀ೦ದ್ರಂ 
ಸಂಜೀವನಾದ್ಯಾಶ್ರಯಮಸ್ಯ ನಾಭೂತ್ 

ಶ್ರೀರಾಮರ ಅರ್ಚನೆಗೆ ಹೂವುಗಳನ್ನು ತರುವಾಗ (ಹನುಮನಿಗೆ) ಬೇಕಾದ ಎರಡೂ ಕೈಗಳ ಅವಶ್ಯಕತೆ ಅನೇಕ ಗಿಡ, ಮೂಲಿಕೆ, ಕಲ್ಲು, ಮಣ್ಣು, ಪಶು-ಪಕ್ಷಿ ಮುಂತಾವುದುವುಗಳಿಂದ ತುಂಬಿದ  ಪರ್ವತವನ್ನು ತರುವಾಗ ಬೇಕಾಗಲಿಲ್ಲ.

ಹನುಮನಿಗೆ ಬೇರೆ ಎಲ್ಲಾ ಕೆಲಸಗಳೂ ಹೂವು ಎತ್ತುವುದಕ್ಕಿಂತ ಸುಲಭ. ರಾಮರ ಪೂಜೆಗೆ ಹೂವುಗಳನ್ನು ತರುವುದು ಅವೆಲ್ಲಕ್ಕಿಂತ ಹೆಚ್ಚು ಮುಖ್ಯ. (ಅದರಿಂದ ಪ್ರಯಾಸವೆಂದಲ್ಲ. ಹೆಚ್ಚಿನ ಗಮನ ಮತ್ತು ಭಯ-ಭಕ್ತಿ ಕಾರಣದಿಂದ ಎರಡೂ ಕೈಗಳ ಉಪಯೋಗ ಆಯಿತು ಎಂದು ತಿಳಿಯಬೇಕು). 

*****
 
ಕಾವ್ಯಮೀಮಾಂಸೆಯ ಸಂದರ್ಭದಲ್ಲಿ "ರಸ" ಮತ್ತು "ಧ್ವನಿ" ಎನ್ನುವ ಎರಡು ಪದಗಳಿಗೆ ವಿಶೇಷ ಮಹತ್ವವಿದೆ. ರಸ ಅನ್ನುವುದು ಸಾಮಾನ್ಯವಾಗಿ ತಿಳಿದಿರುವ ವಿಷಯ. ಈ "ಧ್ವನಿ" ಎಂದರೇನು? 

ಮೇಲಿನ ಶ್ಲೋಕದಲ್ಲಿ ಭಕ್ತಿ ಮತ್ತು ಶಕ್ತಿ ಎನ್ನುವ ಪದಗಳ ಬಳಕೆಯೇ ಇಲ್ಲ. ಬೆಟ್ಟ ಒಂದು ಕೈಯಲ್ಲಿ ಮತ್ತು ಹೂವು ಎರಡೂ ಕೈಯ್ಯಲ್ಲಿ ಎಂದು ಮಾತ್ರ ಹೇಳಿದೆ. ಆದರೆ ಬೆಟ್ಟ ತರುವಾಗ ಶಕ್ತಿ ಬೇಕು. ಹೂವು ತರುವಾಗ ಭಕ್ತಿ ಬೇಕು. ಈ ಎರಡು ವಿಷಯಗಳು ಎಲ್ಲರಿಗೂ ಗೊತ್ತು. ಹೇಳದೆ ಇದ್ದರೂ ಶಕ್ತಿಗಿಂತ ಭಕ್ತಿಗೆ ಹನುಮನ ಪ್ರಾಮುಖ್ಯತೆ ಹೆಚ್ಚು ಎನ್ನುವುದು ಓದಿದ ಅಥವಾ ಕೇಳಿದ ತಕ್ಷಣ ಎಲ್ಲರಿಗೂ ಗೊತ್ತಾಗುತ್ತದೆ. ಇಂತಹ ವಿಷಯವನ್ನು ಮನಸ್ಸಿನಲ್ಲಿ ಚಿಂತಿಸುವಾಗಲೇ ಒಂದು ವಿಶಿಷ್ಟ ರೀತಿಯ ಆನಂದದ ಅನುಭವ ಆಗುವುದು. 

ಒಂದು ದೇಹಕ್ಕೆ ಒಳ್ಳೆಯ ವಸ್ತ್ರ ತೊಡಿಸಿ, ಒಡವೆಗಳನ್ನು ಹಾಕಿ, ಅಲಂಕಾರ ಮಾಡಿ, ಕೂಡಿಸಿದರೆ ಚಂದವಾಗಿ ಏನೋ ಕಾಣಬಹುದು. ಆದರೆ ಆ ದೇಹ ಉಸಿರಾಡದೇ ಇದ್ದರೆ ಏನು ಪ್ರಯೋಜನ? ಅದೇ ರೀತಿ, ಕಾವ್ಯದಲ್ಲಿ ಎಲ್ಲಾ ಕಸರತ್ತುಗಳನ್ನೂ ಸೇರಿಸಿ, ಧ್ವನಿ ಇಲ್ಲದಿದ್ದರೆ ಪ್ರಯೋಜನವಿಲ್ಲ. ಕಾವ್ಯದ ಆತ್ಮವೇ ಧ್ವನಿ ಎನ್ನುವ ವಸ್ತು. ಮಾತಿನಲ್ಲಿ ಹೇಳದಿದ್ದರೂ ಅದರ ಹೂರಣದ ಅರ್ಥ ಓದುಗರಿಗೆ ಅಥವಾ ಕೇಳುಗರಿಗೆ ಆಗಬೇಕು. ಇದೇ ಕಾವ್ಯದಲ್ಲಿ "ಧ್ವನಿ" ಅನ್ನಿಸಿಕೊಳ್ಳುತ್ತದೆ. ಹೀಗೆ ಪದಗಳಲ್ಲಿ ಹೇಳದೆ ಇದ್ದರೂ ಅದರ ಅಂತರಾರ್ಥವನ್ನು ತಿಳಿಯುವಂತೆ ಮಾಡುವುದೇ ಧ್ವನಿಯ ವಿಶೇಷತೆ. 

*****

ಇಂದಿನಿಂದ ಮೂರು ದಿನ ಶ್ರೀ ರಾಘವೇಂದ್ರ ಗುರು ರಾಯರ ಆರಾಧನೆ. ರಾಯರಿಗೆ ಹನುಮನೇ ಆದಿ ಗುರು. ಅವನೇ ಆದರ್ಶ. ಅದಕ್ಕೇ ಮೊದಲು ಹನುಮನನ್ನು ಪ್ರತಿಷ್ಠಾಪಿಸಿ, ಅವನ ಎದುರಿಗೆ ವೃಂದಾವನದಲ್ಲಿ ನೆಲೆಸಿದ್ದಾರೆ. ಮಂತ್ರಾಲಯ ಕ್ಷೇತ್ರಕ್ಕೆ ಹೋದವರು ಶ್ರೀರಾಯರ ಜೊತೆ ಜೊತೆಯಲ್ಲಿ ಹನುಮನನ್ನೂ ನೋಡುತ್ತಾರೆ. 

Monday, August 24, 2026

Que Sera, Sera


An English film song clip is circulating repeatedly on WhatsApp during the last one week. In popular language of today's times, it has gone viral. The song in question is "Que Sera, Sera", a song from the 1956 Hollywood English mystery thriller film "The Man Who Knew Too Much", produced and directed by Alfred Hitchcock. Sung and acted in the film by the famous singing actress of yesteryears, Doris Day, it runs like this:

When I was just a little girl
I asked my mother what I will be
Will I be pretty?, Will I be rich?
Here's what she said to me:

Que Sera, Sera
Whatever will be, will be
The future is not ours to see
Que Sera, Sera
What will be, will be!

The song continues in two more stanzas. The little girl grows up and asks her sweetheart the same question when she fell in love. She gets the same answer. Some years after her marriage, her son asks her the same question. Of course, her answer now will be the same!

The Youtube link to the song is given at the end of this blog post, for you to click on it and listen.

When we dwell upon the theme of the song in the Indian context, it makes very interesting reading indeed, as we see below.

******

Alfred Hitchcock (1899-1980) is known for his suspense thrillers. There is hardly anyone who has not seen his movies. His film career covered a large span of time, covering early silent films, black and white film times to modren times. He has directed over 50 films. He also was host of the popular television shows like "Alfred Hitchcock Presents" and "Alfred Hitchcock Hour", which are seen even today worldwide. 

Hitchcock's suspense was basically derived from the light and sound effects, even when there was not much horror scenes on the screen. The tension would build in the mind of the viewer, not due to what he saw but what he perceived. He was knighted and later became Sir Alfred Hitchcock. 

Hitchcock first produced and directed the movie "The man who knew too much" in the year 1934. More than twenty years later, he remade the film with some modifications, but the same name in 1956. James Stewart and Doris Day played the lead roles in the 1956 film that has this song, which has now gone viral.

******

During the years when sound recording and background music and singing integration had not yet reached the perfect levels, singing artistes were in great demand and very popular. There were many stalwarts in Hollywood and other parts of the world as well, who were great singers in their own right, who did very well as film artistes. Artistes like Frank Sinatra, Judy Garland, Elvis Presley and Barbara Streisand are some such names. Doris Day is another such illustrious name and she was on the screen some ten years before another similar artiste, Julie Andrews of Sound of Music fame. 

In India also, we had our own great singing artistes. In North India, we had Kundan Lal Saigal, Pankaj Mallick, Suraiyya, Noor Jehan and others. Kishore Kumar was active for a long time and till much later times. In South India we had the legendary M K Thyagaraja Bhagavatar, P Bhanumati (later Bhanumati Ramakrishna) and many others. In Kannada, Honnappa Bhagavatar was one such well known name. There were many others as well, who had short stints. 

Doris Day (1922-2019) had her great singing career as well as appearance in films on either side of World War II. She won innumerable awards in her long career and lived a full life of 97 years. This song Que Sera Sera won the Oscar for "Best Original Song". She was also honoured with an Oscar for her Life time achievements. 

Her star can be seen on "Hollywood Walk of Fame" in Los Angeles, USA. In "The Butchart Gardens" in Victoria Island, Canada (near Vancouver), a special rose plant is dedicated to Doris Day. 

Doris played the role of Josephine Conway McKenna (Jo Conway) in the film "The man who knew too much" opposite James Stewart, who played as husband Dr Benjamin McKenna (Ben McKenna). The song was used twice in the movie, the second time to help trace their kidnapped son Hank. 

******

What is the origin of the phrase "Que Sera, Sera"? some sources say it is Spanish while some others say it is Italian. Some say it is a hybrid term. It is not an English phrase. But it is used to mean "Whatever will be, will be" in English. What is its equivalent for us? If we look to Sanskrit, it translates to "भवितव्यम् भवत्येव" (Bhavitavyam Bhavatyeva). In essence, it means "Future is not in your control. Don't worry about. Whatever is to happen, it will happen".

Where can we find this term in our literature? There is a Subashita in "Maha Subhashita Sangraha" (Shloka 4,901), which in turn has been picked up from "Samskrita Sookti Ratnakara", compiled by Sri Ramji Upadhyaya. It reads thus:

आपत्सु किं विषादेन सम्पत्तौ विस्मयेन किम् 
भवितव्यं भवत्येव कर्मणामेष निश्चयः 

Aapatsu kim vishadena sampattou vismayena kim
Bhavitavyam bhavatyeva karmanamesha nischayaha 

"Why feel sad in adversity and elated in times of affluence? Whatever is to happen, will happen! It is decided by previous karma. Do your duty and leave the rest to the future".

******

The roots for this Subhashita can be found in Mahabharata, Shanti Parva, Shloka 12.219.10. This is the part in which Bheeshma, while lying on the bed of arrows, condenses his lifetime acquired knowledge and teaches Yudhishtira, as per the instructions of Krishna. 

It reads thus:

यथा यथास्य प्राप्तव्यं प्रप्नेत्यैव तथा तथा 
भवितव्यं यथा यच्च भवत्येव तथा तथा 


Yathaa yathaachha praptavyam prapnetyaiva tathaa tathaa
bhavitavyam yathaa yaccha bhavatyeva tathaa tathaa  

"Just as one is destined to obtain something, one obtains it precisely in that manner. And whatever is destined to occur, it occurs precisely in that manner"

******

Que Sera, Sera is not new to us. It is a teaching that is several thousand years old. As the future is not in our control, it is not something to be worried about. Do your duty and leave the rest to future itself. This is not just a lesson. it is our philosophy of life!

The song "Que Sera Sera" can be heard by clicking on the video given below:


Wednesday, August 19, 2026

ವೇದಾಂತ ದೇಶಿಕರ "ಯಾದವಾಭ್ಯುದಯಮ್"


ಶ್ರೀ ಗುರು ರಾಘವೇಂದ್ರ ರಾಯರ ಸ್ತೋತ್ರದಲ್ಲಿ ಬರುವ "ವಿಜಯೀ೦ದ್ರ ಕರಾಬ್ಜೋಥಾ ಸುಧೀಂದ್ರ ವರಪುತ್ರಕಃ" ಎನ್ನುವ ಹೇಳಿಕೆಯ ಹಿನ್ನೆಲೆಯಲ್ಲಿ ಅವರ ಗುರು ಪರಂಪರೆಯ ಶ್ರೀ ಸುರೇಂದ್ರ ತೀರ್ಥರು, ಶ್ರೀ ವಿಜಯೀ೦ದ್ರ ತೀರ್ಥರು ಮತ್ತು  ಶ್ರೀ ಸುಧೀಂದ್ರ ತೀರ್ಥರು, ಇವರುಗಳ ಸ್ವಲ್ಪಮಟ್ಟಿನ ಪರಿಚಯಗಳನ್ನು ಈ ಹಿಂದಿನ ಮೂರು ಸಂಚಿಕೆಗಳಲ್ಲಿ ಮಾಡಿಕೊಂಡೆವು.  

"ಅರಳಿದ ಬಂಗಾರದ ಮಲ್ಲಿಗೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ಶ್ರೀ ಸುಧೀಂದ್ರ ತೀರ್ಥರ ಬಗ್ಗೆ ನೋಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು. ಅವುಗಳ ಹಿಂದಿನ ಸಂಚಿಕೆಗಳ ಕೊಂಡಿಗಳು ಹೀಗೆಯೇ ಅಲ್ಲಲ್ಲಿ ಸಿಕ್ಕುತ್ತವೆ. 

"ಇಷ್ಟು ಹೇಳಿದರೆ ನೀನು ಪಂಡಿತ" ಎಂಬ ಶೀರ್ಷಿಕೆಯ ಸಂಚಿಕೆಯನ್ನು ಓದಿದ ಸ್ನೇಹಿತರೊಬ್ಬರು ಶ್ರೀ ವಿಜಯೀ೦ದ್ರ ತೀರ್ಥರ ಮತ್ತು ಶ್ರೀ ಅಪ್ಪಯ್ಯ ದೀಕ್ಷಿತರ ಒಡನಾಟದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಕೆಲವು ಪುಸ್ತಕಗಳಲ್ಲಿ ಬೇರೆ ರೀತಿಯ ಅರ್ಥ ಬರುವ ವಿವರಗಳಿವೆ ಎನ್ನುವುದು ಅವರ ಅನುಮಾನಕ್ಕೆ ಕಾರಣ. 

"ನಮ್ಮ ಮತವೇ ಶ್ರೇಷ್ಠ. ಉಳಿದುವುಗಳೆಲ್ಲ ಲೆಕ್ಕಕ್ಕಿಲ್ಲ. ಇದನ್ನು ನಂಬಿದರೆ ಮಾತ್ರ ನೀವು ನೇರ ಸ್ವರ್ಗ ಅಥವಾ ಮುಕ್ತಿ ಪಡೆಯುತ್ತೀರಿ. ಇಲ್ಲದಿದ್ದರೆ ನೇರ ನರಕ ತಲುಪುತ್ತೀರಿ" ಎಂದು ಹೇಳುವ ಸಾಹಿತ್ಯ ರಾಶಿಗೆ ಏನೂ ಕಡಿಮೆ ಇಲ್ಲ. ಆದರೆ, ನಾವು ಯುವುದೋ ಒಂದು ಪುಸ್ತಕವನ್ನು ಓದಿ, ಅದನ್ನೇ ಪರಮ ಸತ್ಯ ಎಂದು ನಂಬುವುದು ಎಷ್ಟು ಸರಿ? ಅದಕ್ಕೆ ವಿರುದ್ಧವಾದುವುಗಳೂ ಅನೇಕವಿವೆ. ಎಲ್ಲವನ್ನೂ ತಿಳಿಯುವ ಪ್ರಯತ್ನ ಮಾಡಿ, ನಂತರ ನಾವು ಒಂದು ತೀರ್ಮಾನಕ್ಕೆ ಬರುವುದು ಒಂದು ಉತ್ತಮ ಪಕ್ಷ. 

ಈ ಹಿನ್ನೆಲೆಯಲ್ಲಿ ಶ್ರೀ ಅಪ್ಪಯ್ಯ ದೀಕ್ಷಿತರ ಪಾಂಡಿತ್ಯ ಮತ್ತು ಅವರ ಒಟ್ಟಾರೆ ಭಾವ (sentiment) ಹೇಗಿದ್ದಿತು ಎನ್ನುವುದನ್ನು ಇಲ್ಲಿ ಸ್ವಲ್ಪ ನೋಡೋಣ. 

******

ಜ್ಞಾನದ ಯಾವುದೇ ಒಂದು ಶಾಖೆಯಲ್ಲಿ ಸ್ವಲ್ಪಮಟ್ಟಿನ ಪ್ರಭುತ್ವ ಪಡೆಯಬೇಕಾದರೆ ಹತ್ತಾರು ವರ್ಷಗಳ ಅಧ್ಯಯನ ಅವಶ್ಯಕ. ಗುರುಕುಲಗಳಲ್ಲಿ ಮೊದಲ ಕೆಲವು ವರುಷ ಸಾಮಾನ್ಯ ಜ್ಞಾನ ಪಡೆದ ನಂತರ ವಿದ್ಯಾರ್ಥಿಗಳು ಯಾವುದಾದರೂ ಒಂದು ವಿಭಾಗವನ್ನು ಆರಿಸಿಕೊಂಡು ಅದರಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿದ್ದರು. ಈಗಿನ ಶಿಕ್ಷಣ ಪದ್ದತಿಯಲ್ಲಿಯೂ ಈ ರೀತಿಯ ವಿಶೇಷ ಪರಿಣತಿ ಪಡೆಯುವ ಅವಕಾಶ ಇದೆ. ನಾವು ಮೇಲೆ ಹೇಳಿದ ಹೆಸರುಗಳ ಮಹನೀಯರು ಅನೇಕ ವಿಷಯಗಳಲ್ಲಿ ಪರಿಣತಿ ಸಾಧಿಸಿದ ವ್ಯಕ್ತಿಗಳು. "ಒಂದು ಜೀವಿತ ಕಾಲದಲ್ಲಿ ಇಷ್ಟು ಸಾಧನೆ ಸಾಧ್ಯವೇ?" ಎಂದು ನಾವು ಯೋಚಿಸುವಂತೆ ಮಾಡುವ ಶಕ್ತಿಗಳು ಅವರು.

ಶ್ರೀ ಅಪ್ಪಯ್ಯ ದೀಕ್ಷಿತರು "ಶಿವಾದ್ವೈತ" ವಿಭಾಗದಲ್ಲಿ ಎಲ್ಲ ಕಾಲದ ಶ್ರೇಷ್ಠ ವಿದ್ವಾಂಸರಲ್ಲಿ ಅಗ್ರಗಣ್ಯರು. ಅವರ ಅನೇಕ ಬಿರುದುಗಳಲ್ಲಿ "ಅದ್ವೈತ ವಿದ್ಯಾಚಾರ್ಯ" ಅನ್ನುವುದೂ ಒಂದು ಬಿರುದು. "ಅಲಂಕಾರ ಶಾಸ್ತ್ರ" (Poetics) ವಿಷಯದಲ್ಲಿ ಅವರು ರಚಿಸಿರುವ "ಕುವಲಯಾನಂದ" ಒಂದು ಮೇರು ಕೃತಿ. ನಾವು ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿದ್ದಾಗ ಮೂರು-ನಾಲ್ಕು ಅಲಂಕಾರಗಳ (Figure of Speech) ಬಗ್ಗೆ ಸೂಕ್ಷ್ಮವಾಗಿ ಹೇಳಿಕೊಡುತ್ತಿದ್ದರು. ಉಪಮಾಲಂಕಾರ (Simile), ರೂಪಕಾಲಂಕಾರ (Metaphor), ಉತ್ಪ್ರೇಕ್ಷೆ (Hyperbole) ಮುಂತಾದ ಕೆಲವು. ಕುವಲಯಾನಂದ ಕೃತಿಯಲ್ಲಿ 124 ಅಲಂಕಾರಗಳ ವಿವರಣೆ ಇದೆ!

"ಕುವಲಯಾನಂದ" ಕೃತಿಗೆ "ಪೀಯೂಷವರ್ಷ ಜಯದೇವ" ರಚಿಸಿರುವ "ಚಂದ್ರಾಲೋಕ" ಎಂಬ ಹೆಸರಿನ ವ್ಯಾಖ್ಯಾನ ಇದೆ. 51ನೆಯ ಶ್ಲೋಕದಲ್ಲಿ "ಪ್ರತಿವಸ್ತು ಉಪಮಾಲಂಕಾರ" ಅನ್ನುವ ಅಲಂಕಾರದ ವರ್ಣನೆ ಇದೆ.  ಆ ಶ್ಲೋಕದ ವಿವರಣೆ ಹೀಗಿದೆ:

ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ 
ನ ಹಿ ವಂಧ್ಯಾ ವಿಜಾನಾತಿ ಗುರ್ವಿo  ಪ್ರಸವವೇದನಂ 

ಒಬ್ಬ ವಿದ್ವಾಂಸನ ಶ್ರಮವನ್ನು ಇನ್ನೊಬ್ಬ ವಿದ್ವಾಂಸ ಮಾತ್ರ ತಿಳಿಯಬಲ್ಲನು. (ಕೃತಿ ರಚನೆಯ ಕಷ್ಟವನ್ನು ಕೃತಿಗಳನ್ನು ರಚಿಸಿರುವ ಇನ್ನೊಬ್ಬನು ಮಾತ್ರ ಅರಿಯಬಲ್ಲನು). ಒಂದು ಮಗುವನ್ನೂ ಹಡೆಯದವಳಿಗೆ ಪ್ರಸವ ವೇದನೆ ಏನೆಂಬುದು ಹೇಗೆ ಗೊತ್ತು?

ಸ್ವತಃ ಅದ್ವೈತ ವಿದ್ಯಾಚಾರ್ಯರಾಗಿದ್ದರೂ ಶ್ರೀ ಅಪ್ಪಯ್ಯ ದೀಕ್ಷಿತರು ವೈಷ್ಣವ ಸಿದ್ಧಾಂತ ಸಾರಿ ಹೇಳುವ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯಂ" ಕೃತಿಗೆ ವ್ಯಾಖ್ಯಾನ ಬರೆದಿದ್ದಾರೆ. ವೇದಾಂತ ದೇಶಿಕರಿಗೆ "ಶ್ರೀ ವೈಷ್ಣವಾಚಾರ್ಯ" ಎಂದು ಬಿರುದು. ಕೃತಿ ಬರೆದವರು ಶ್ರೀವೈಷ್ಣವಾಚಾರ್ಯರು. ಅದರ ವ್ಯಾಖ್ಯಾನ ಬರೆದವರು ಅದ್ವೈತವಿದ್ಯಾಚಾರ್ಯರು. ಅದೂ ಸಮಕಾಲೀನ ಕೃತಿಯೊಂದರ ಮೇಲೆ ಬರೆದ ವ್ಯಾಖ್ಯಾನವಲ್ಲ. ಎರಡು ನೂರು ವರುಷ ಹಿಂದಿನ ಕೃತಿ. ಮೇಲೆ ಹೇಳಿದ ಪ್ರತಿವಸ್ತು ಉಪಮಾಲಂಕಾರಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಮತ್ತೆ ಎಲ್ಲಿ ಸಿಕ್ಕೀತು? 

******


ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ನೆನೆಯಬೇಕಾದ ಹೆಸರುಗಳಲ್ಲಿ ಶ್ರೀ ವೇದಾಂತ ದೇಶಿಕ ಆವರದು ಎತ್ತರದ ಹೆಸರು. ಅವರ ಕಾಲ (1268-1369) ದಕ್ಷಿಣ ಭಾರತದ ಇತಿಹಾಸದಲ್ಲಿ ಬಹಳ ಕ್ಷೋಭೆ ತುಂಬಿದ ಸಮಯ. ಅನೇಕ ಅಡೆ-ತಡೆಗಳ ನಡುವೆ ಗುದ್ದಾಡಿ, ಅನೇಕ ಸತ್ವಯುತ ಗ್ರಂಥಗಳನ್ನು ರಚಿಸಿ 101 ವರುಷದ ತುಂಬು ಜೀವನ ನಡೆಸಿದ ಮಹನೀಯರು. ಅವರ ಹೆಸರಿನ ಜೊತೆ ತಳುಕು ಹಾಕಿಕೊಂಡಿರುವ ಬಿರುದುಗಳೇ ಒಂದು ರೋಮಾಂಚನ ಮಾಡುವಂತಹ ಸರಣಿ. "ಕವಿತಾರ್ಕಿಕ ಸಿಂಹ", "ವೇದಾಂತಾಚಾರ್ಯ" ಮತ್ತು "ಸರ್ವ ತಂತ್ರ ಸ್ವತಂತ್ರ" ಎನ್ನುವುವು ಅವುಗಳಲ್ಲಿ ಕೆಲವು. ಸನ್ಯಾಸಿಗಳಾಗದೆ, ಪೀಠದ ಬಲ ಇಲ್ಲದೆ, ತಮ್ಮ ವಿದ್ವತ್ತಿನ ಕಾರಣ ಪೀಠಾಧಿಪತಿಗಳ ಮನ್ನಣೆಯನ್ನೂ ಗಳಿಸಿದ ಹಿರಿಯರು. ಶ್ರೀ ರಾಮಾನುಜಾಚಾರ್ಯ (1077-1157) ಅವರ ಒಂದು ನೂರು ವರುಷಗಳ ನಂತರ ಬಾಳಿದ ಅವರು ತಾವು ನಂಬಿದ ಸಿದ್ಧಾಂತದ ಜೊತೆಗೆ ವಿಪುಲವಾದ ಸಾಹಿತ್ಯ ಸೇವೆ ಮಾಡಿದವರು. 

ಕಾಂಚಿಪುರಂ ನಗರದ ಬಳಿಯ ತುಪ್ಪಿಲ್ ಎಂಬಲ್ಲಿ ಜನಿಸಿದ ಅವರು ತಮ್ಮ ಜೀವನದ ಮೊದಲ ಕೆಲವು ವರುಷಗಳನ್ನು ತಮಿಳುನಾಡಿನ ಕಡಲೂರು ಬಳಿಯ, ಅಲ್ಲಿಂದ ಮೂರು-ನಾಲ್ಕು ಮೈಲಿ ದೂರದ, ತಿರುವಹಿಂದ್ರಪುರಮ್ (ತಿರುವಂಡಿಪುರಂ) ಎನ್ನುವ ಸ್ಥಳದಲ್ಲಿ ಕಳೆದರಂತೆ. ಅಲ್ಲಿನ ದೇವನಾಥಸ್ವಾಮಿ ದೇವಾಲಯ ಮತ್ತು ಸಮೀಪದ ಬೆಟ್ಟದ ಮೇಲಿರುವ ಶ್ರೀಲಕ್ಷ್ಮೀ-ಹಯಗ್ರೀವ ದೇವರ ಸನ್ನಿಧಿಯಲ್ಲಿ ಇದ್ದರಂತೆ. ಶ್ರೀ ವೈಷ್ಣವ ಪಂಥದ ಅನುಯಾಯಿಗಳು ಆರಾಧಿಸುವ "108 ದಿವ್ಯದೇಶಂ" ದೇವಾಲಯಗಳಲ್ಲಿ ಇದೂ ಒಂದು. 

ದೇಶಿಕರು ಅಲ್ಲಿ ವಾಸವಿದ್ದ ಸಮಯದಲ್ಲಿ ರಚಿಸಿದ "ರಘುವೀರಗದ್ಯ" ಅವರ ಪಾಂಡಿತ್ಯಕ್ಕೂ, ಕವಿತಾ ಪ್ರೌಢಿಮೆಗೂ ಒಂದು ನಿದರ್ಶನ.  ಈಚಿನ ದಿನಗಳಲ್ಲಿ ವಾಟ್ಸಾಪ್ಪ್ ವಿಡಿಯೋಗಳಲ್ಲಿ ಅದನ್ನು ಅನೇಕರು ಹಾಡಿ ತೋರಿಸಿದ್ದಾರೆ. ಅವರಿಗಿದ್ದ "ಸರ್ವ ತಂತ್ರ ಸ್ವತಂತ್ರ" ಹೆಸರಿನ ಬಿರುದು ಕಂಡ ಗಾರೆ ಕೆಸಲದವನು ಒಬ್ಬನು "ನಿಮಗೆ ಎಲ್ಲ ವಿದ್ಯೆ ಗೊತ್ತಿದ್ದರೆ ಒಂದು ಬಾವಿ ತೋಡಿ ತೋರಿಸಿ, ನೋಡೋಣ!" ಎಂದು ಸವಾಲು ಹಾಕಿದನಂತೆ. ಅವರು ತಮ್ಮ ಕೈಯಾರೆ ಆಗ ತೋಡಿದ ಬಾವಿಯನ್ನು ಈಗಲೂ ನೋಡಬಹುದೆಂದು ಕಂಡವರು ಹೇಳುತ್ತಾರೆ. 

******

ಶ್ರೀರಂಗಂ ಕ್ಷೇತ್ರದ ವಿದ್ವಾಂಸರ ಮನವಿಯ ಮೇರೆಗೆ ದೇಶಿಕರು ಅಲ್ಲಿಗೆ ಹೋದರು. ಆ ಸಮಯದಲ್ಲಿ ದೆಹಲಿ ಸುಲ್ತಾನ ಅಲ್ಲಾಉದ್ದೀನ್ ಖಿಲ್ಜಿ ಸೇನಾಧಿಪತಿ ಮಲ್ಲಿಕಾಫರ್ ಮದುರೈ ಮತ್ತು ಶ್ರೀರಂಗಂ ಪ್ರದೇಶಗಳಲ್ಲಿ ದಂಡೆತ್ತಿ ಬಂದ. ಶ್ರೀರಂಗಂ ದೇವಾಲಯದ ಮೇಲೆ ನಡೆದ ದಾಳಿಗಳಲ್ಲಿ ಮತ್ತು ಅಲ್ಲಿನ ಐಶ್ವರ್ಯದ ಲೂಟಿಯ ಸಂದರ್ಭದಲ್ಲಿ ನೂರಾರು ಮಂದಿ ದೇವಾಲಯದ ಸಿಬ್ಬಂದಿ, ಶ್ರೀವೈಷ್ಣವ ಪಂಡಿತರು ಮತ್ತು ಭಕ್ತರನ್ನು ಮುಘಲ್ ಸೈನಿಕರು ಹತ್ಯೆಗೈದರು. ಅದರ ವಿವರಗಳನ್ನು ಕೇಳಿದರೆ ಕಣ್ಣೀರು ಬರುತ್ತದೆ. 

ಶ್ರೀ ಸುದರ್ಶನ ಸೂರಿಗಳು (ಸುದರ್ಶನ ಭಟ್ಟ ಎಂದೂ ಹೇಳುತ್ತಾರೆ) ಆಚಾರ್ಯ ರಾಮಾನುಜರ ಅನೇಕ ಗ್ರಂಥಗಳಿಗೆ ಟೀಕಾಗ್ರಂಥಗಳನ್ನು ಬರೆದಿರುವ ವಿದ್ವಾಂಸರು. ಆಚಾರ್ಯರ "ಶ್ರೀಭಾಷ್ಯ" ಗ್ರಂಥದ ಮೇಲಿನ ಅವರ "ಶ್ರುತ ಪ್ರಕಾಶಿಕಾ" ಟೀಕಾ ಗ್ರಂಥ ಬಹಳ ಹೆಸರು ಮಾಡಿರುವಂಥದು. ಸೂರಿಗಳು ತಮ್ಮ ಹತ್ಯೆಗೆ ಮೊದಲು ತಮ್ಮಲ್ಲಿದ್ದ ಅಮೂಲ್ಯ ತಾಳೆಗರಿ ಗ್ರಂಥಗಳನ್ನು ಮತ್ತು ಇಬ್ಬರು ಮಕ್ಕಳನ್ನು ವೇದಾಂತ ದೇಶಿಕರ ಕೈಗೆ ಒಪ್ಪಿಸಿದರಂತೆ. ಶ್ರುತ ಪ್ರಕಾಶಿಕಾ ಗ್ರಂಥದ ಅದೊಂದೇ ಪ್ರತಿ ಆಗ ಲಭ್ಯವಿತ್ತಂತೆ. ಆ ಅಸಂಖ್ಯ ಶವಗಳ ರಾಶಿಯಲ್ಲಿ ಈ ಗ್ರಂಥಗಳನ್ನೂ ಮತ್ತು ಆ ಎರಡು ಮಕ್ಕಳನ್ನು ಹಿಡಿದಿಟ್ಟುಕೊಂಡು ಮಲಗಿ, ಆ ಮುಘಲ್ ಸೈನಿಕರ ಆಟಾಟೋಪ ಮುಗಿದ ನಂತರ ಕರ್ನಾಟಕದ ಗಡಿಯ ಸತ್ಯಮಂಗಲ ತಲುಪಿದರಂತೆ. ನಂತರ ಮೇಲುಕೋಟೆ ತಲುಪಿ ಅವೆಲ್ಲವನ್ನೂ ಸುರಕ್ಷಿತ ಮಾಡಿದರಂತೆ. ಸುದರ್ಶನ ಸೂರಿಗಳ ಇಬ್ಬರು ಮಕ್ಕಳಿಗೆ ಉಪನಯನಾದಿಗಳನ್ನು ಮಾಡಿ ಅವರಿಗೆ ನೆಲೆ ಮಾಡಿ ಕೊಟ್ಟರಂತೆ. 

ಇಂತಹ ಅಮೂಲ್ಯ ಗ್ರಂಥಗಳನ್ನು ರಕ್ಷಿಸಿದ್ದಕ್ಕೆ ಈ ಇಬ್ಬರು ಮಹಾನ್ ವಿದ್ವಾಂಸರಿಗೆ ನಾವುಗಳು ಎಂದೂ ಋಣಿಯಾಗಿರಬೇಕು. ಮುಂದೆ ದೇಶಿಕರು ಉತ್ತರ ಭಾರತ ಪ್ರವಾಸ ಮಾಡಿ, ಅಲ್ಲಿನ ದೇವಾಲಯಗಳ ಅವಶೇಷಗಳನ್ನು ನೋಡಿ, ಶ್ರೀರಂಗಂ ಹತ್ಯಾಕಾಂಡದ ಹಿನ್ನೆಲೆಯಲ್ಲಿ "ಅಭೀತಿ ಸ್ತವ" (ಭಯದಿಂದ ಬಿಡುಗಡೆ ಸ್ತೋತ್ರ) ರಚಿಸಿದರು. ಉತ್ತರ ಭಾರತದಿಂದ ಹಿಂದಿರುಗಿದ ನಂತರ ಮತ್ತನೇಕ ಗ್ರಂಥಗಳನ್ನು ರಚಿಸಿ, ಅನೇಕ ಸಾರ್ಥಕ ಕೆಲಸಗಳನ್ನು ನಡೆಸಿದರು. ಬಂದ ಆಪತ್ತುಗಳನ್ನು ಧೈರ್ಯ ಮತ್ತು ಯುಕ್ತಿಗಳಿಂದ ಎದುರಿಸಿ, ಅನೇಕ ಗ್ರಂಥ ರಚನೆ ಮಾಡಿ, ಹಲವಾರು ಶಿಷ್ಯರನ್ನು ಸಂಪಾದಿಸಿ ದೇಶಿಕರು ಕೀರ್ತಿಶೇಷರಾದರು. 
******

ಶ್ರೀಕೃಷ್ಣನ ಜೀವನದ ವಿವರಗಳನ್ನು ಕೊಡುವ ಗ್ರಂಥಗಳಲ್ಲಿ ನಮಗೆ ಹತ್ತಿರವಾದದ್ದು ಶ್ರೀಮದ್ ಭಾಗವತ. ಮಹಾಭಾರತದಲ್ಲಿಯೂ ಮತ್ತು ಇತರ ಗ್ರಂಥಗಳಲ್ಲಿಯೂ ಅಲ್ಲಲ್ಲಿ ಕೆಲವು ವಿವರಗಳು ಸಿಕ್ಕರೂ ಸಮಗ್ರ ಮಾಹಿತಿ ದೊರೆಯುವುದು ಭಾಗವತದಲ್ಲಿಯೇ. ಭಾಗವತವು "ಪುರಾಣ" ಎಂದು ವರ್ಗಿಕೃತವಾಗುತ್ತದೆ. ಹದಿನೆಂಟು ಪುರಾಣಗಳಲ್ಲಿ ಅದು ಒಂದು. ಸಂಸ್ಕೃತ ಮಹಾಕಾವ್ಯಗಳ ಲೆಕ್ಕದಲ್ಲಿ ನೋಡುವುದಾದರೆ ಮಾಘ ಕವಿಯ "ಶಿಶುಪಾಲ ವಧ" ಇಂತಹ ಒಂದು ಮಹಾಕಾವ್ಯ. ಇದನ್ನು ಪಂಚಮಹಾಕಾವ್ಯಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. 

ಶ್ರೀಕೃಷ್ಣನು ವೈಷ್ಣವ ಸಿದ್ಧಾಂತಗಳಲ್ಲಿ ಪರದೈವ. ಹೀಗೆ ಅವನನ್ನು ನಾಯಕನನ್ನಾಗಿ ಮಾಡಿಕೊಂಡು ರಚಿಸಿದ ಕಾವ್ಯಗಳ ಸಾಲಿನಲ್ಲಿ ಎರಡು ಕಾವ್ಯಗಳು ಗಮನ ಸೆಳೆಯುತ್ತವೆ. ಮೊದಲನೆಯದು ಹದಿನಾಲ್ಕನೆಯ ಶತಮಾನದ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ". ಇದು ಶ್ರೀವೈಷ್ಣವ ಸಿದ್ಧಾಂತದ ಪ್ರಮೇಯಗಳನ್ನು ಒಳಗೊಂಡ ಕಾವ್ಯ. ನಂತರದ್ದು ಹದಿನಾರನೆಯ ಶತಮಾನದ ಉಡುಪಿಯ ಎಂಟು ಮಠಗಳಲ್ಲಿ ಒಂದಾದ ಸೋದೆ ಮಠದ ಶ್ರೀ ವಾದಿರಾಜ ತೀರ್ಥ ಅವರು ರಚಿಸಿರುವ "ಶ್ರೀ ರುಕ್ಮಿಣೀಶ ವಿಜಯ". ಇದರಲ್ಲಿ ಮಧ್ವ ಸಿದ್ಧಾಂತದ ಪ್ರಮೇಯಗಳನ್ನು ಕಾಣಬಹುದು.

ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ" 24 ಸರ್ಗಗಳಲ್ಲಿ ಹರಡಿಕೊಂಡಿರುವ ಮಹಾಕಾವ್ಯ. ನವರಸಗಳನ್ನು, ಅನೇಕ ಸ್ತೋತ್ರಗಳನ್ನೂ ಒಡಗೊಂಡಿದೆ. ದೇವಕಿಯ ಗರ್ಭವಾಸ್ಥೆಯಿಂದ ಪ್ರಾರಂಭವಾಗಿ, ಶ್ರೀಕೃಷ್ಣನ ಜೀವಿತದ ಎಲ್ಲ ಹಂತಗಳ ವಿವರಣೆ ಇದರಲ್ಲಿದೆ. ದೇಶಿಕರ ಪಾಂಡಿತ್ಯ ಮತ್ತು ಕೃಷ್ಣ ಭಕ್ತಿ, ಎರಡನ್ನೂ ಬೆಸೆದು ರಚಿಸಿರುವ ಕೃತಿ. 

ಶ್ರೀ ಅಪ್ಪಯ್ಯ ದೀಕ್ಷಿತರು ಈ ಯಾದವಾಭ್ಯುದಯ ಕೃತಿ ರಚನೆಯ ಸುಮಾರು ಎರಡು ನೂರು ವರುಷ ಕಳೆದ ನಂತರ ಇದಕ್ಕೆ ವ್ಯಾಖ್ಯಾನ ರಚಿಸಿದ್ದಾರೆ. ಪ್ರತಿಗಳು ಸುಲಭವಾಗಿ ಲಭ್ಯವಿವೆ. ಆಸಕ್ತರು ಓದಿ ಆನಂದಿಸಬಹುದು.

ಶ್ರೀ ವಾದಿರಾಜ ಯತಿಗಳ "ರುಕ್ಮಿಣೀಶ ವಿಜಯ" ಕೃತಿಯ ಬಗ್ಗೆ ಮತ್ತೊಮ್ಮೆ ನೋಡೋಣ.

*****

ಒಂದು ಹಣ್ಣಿನ ತೋಟವಿದೆ. ಅದರಲ್ಲಿ ಅನೇಕ ಹಣ್ಣು ಕೊಡುವ ಮರಗಳಿವೆ. ಒಬ್ಬೊಬ್ಬರಿಗೆ ಒಂದೊಂದು ಹಣ್ಣಿನ ಮೇಲೆ ಪ್ರೀತಿ. ಯಾವ ಹಣ್ಣು ತೆಗೆದುಕೊಳ್ಳಬೇಕು ಅನ್ನುವುದು ಅವರವರ ಇಷ್ಟ. ಎಲ್ಲರಿಗೂ ಒಂದೇ ಹಣ್ಣು ಪ್ರಿಯವಾಗಬೇಕು ಎಂದಿಲ್ಲ. 

ಎಲ್ಲ ಹಣ್ಣುಗಳ ಬಗ್ಗೆ ತಿಳಿದುಕೊಂಡು ಕಡೆಗೆ ನಮಗೆ ಯಾವುದು ಪ್ರಿಯ ಎಂದು ನಿರ್ಧರಿಸಬಹುದು. ನಮ್ಮಲ್ಲಿ ಬಹುತೇಕರು ಮಾಡುವುದು ಏನು? ಮೊದಲಿನಿಂದಲೂ ನಮ್ಮ ಮನೆಯಲ್ಲಿ ಹೀಗೆ ಬಂದಿದೆ. ಆದ್ದರಿಂದ ಅದೇ ಒಳ್ಳೆಯ ಹಣ್ಣು ಎಂಬುದು. ಇರಬಹುದು. ಆದರೆ ಮತ್ತೊಬ್ಬರು ಅವರಿಗೆ ಬೇಕಾದ ಹಣ್ಣು ತಿನ್ನಲಿ. ಅದಕ್ಕೆ ನಮ್ಮ ನಿರ್ಬಂಧವಿಲ್ಲ. 

ಭಾರತೀಯ ತತ್ವಶಾಸ್ತ್ರ ಸಹ ಈ ಹಣ್ಣಿನ ತೋಟದಂತೆ. ನಾವು ನಮ್ಮ ನಮ್ಮ ಮನೆಗಳಲ್ಲಿ ಯಾವ ಆಚರಣೆ ಮಾಡುತ್ತೇವೆ ಅನ್ನುವುದು ನಮಗೆ ಬಿಟ್ಟದ್ದು. ಹಾಗೆ ಅಂದಮಾತ್ರಕ್ಕೆ ಎಲ್ಲರೂ ಅದೇ ಆಚರಣೆ ನಡೆಸಬೇಕು ಎಂದಲ್ಲ. 

ಇಷ್ಟು ತಿಳಿದರೆ ಸಾಮರಸ್ಯ ಮೂಡುವುದು. ವಿಜಯೀoದ್ರರೂ, ಅಪ್ಪಯ್ಯ ದೀಕ್ಷಿತರೂ ಹೀಗಿದ್ದವರು. ಆದ ಕಾರಣ ಪ್ರಬಲ ಅಭಿಪ್ರಾಯ ಭೇದ ಇದ್ದ ಕಡೆಯಲ್ಲಿಯೂ ಸಾಮರಸ್ಯ ಸಾಧ್ಯ ಆಗಿತ್ತು. ನಾವು ಇಷ್ಟು ತಿಳಿದರೆ ಸಾಕು.

Monday, August 17, 2026

ಅರಳಿದ ಬಂಗಾರದ ಮಲ್ಲಿಗೆ


ಬೆಂಗಳೂರು ನಗರದಿಂದ ಉತ್ತರ ದಿಕ್ಕಿನ ಮೂವತ್ತು ಮೈಲಿಗಳ ದೂರದಲ್ಲಿ ದೊಡ್ಡಬಳ್ಳಾಪುರ ಪಟ್ಟಣ ಇರುವುದು ಎಲ್ಲರಿಗೂ ಚಿರಪರಿಚಿತ. ಈ ಪಟ್ಟಣದ ಹೊರವಲಯದಲ್ಲಿ (ಈಗ ಪಟ್ಟಣದಲ್ಲಿಯೇ ಸೇರಿಹೋಗಿದೆ) ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯವಿದೆ. ಈ ದೇವಾಲಯ ಇರುವ ಊರಿಗೆ "ಅರಳುಮಲ್ಲಿಗೆ" ಎಂದು ಹೆಸರು. 

"ಅರಳುಮಲ್ಲಿಗೆ" ಎಂದರೇನು? ಮಲ್ಲಿಗೆ ಬೆಳೆದವರಿಗೆಲ್ಲಾ ಇದು ಗೊತ್ತಿರುವ ವಿಚಾರ. ಮಲ್ಲಿಗೆಯು ಒಂದು ಬಳ್ಳಿಯ ಕುಟುಂಬ ಬಳಗದ ಸಸ್ಯ. ಇದರಲ್ಲಿ ಅನೇಕ ವಿಧಗಳು ಉಂಟು. ಆಸರೆ ಸಿಕ್ಕಿದ ಕಡೆ ಹಬ್ಬಿಕೊಂಡು ಹೋಗುವುದು. ಹೊಲಗಳಲ್ಲಿ ಕೃಷಿ ಮಾಡಿದರೆ ಒಂದು ಪೊದೆಯಂತೆ ಬೆಳೆದು ನಿಲ್ಲುವುದು. ಸಂಜೆಯ ವೇಳೆ ಮೊಗ್ಗು ತುಂಬಿದ ಗಿಡ ಕಾಣಬಹುದು. ಬೆಳಗ್ಗೆ ನೋಡಿದರೆ ಗಿಡದ ತುಂಬಾ ಹೂವುಗಳು. ಮತ್ತೇರಿಸುವ ಸುಗಂಧ. ದೇವರ ಪೂಜೆಗೆ ತುಂಬಾ ಬೇಕಾದ ಹೂವು. ಮದುವೆ-ಮುಂಜಿಗಳಿಗೆ, ಗಣ್ಯರಿಗೆ, ಅತಿಥಿಗಳಿಗೆ ಮಲ್ಲಿಗೆ ಮಾಲೆ ಹಾಕಿ ಸ್ವಾಗತಿಸುವುದು, ಸತ್ಕರಿಸುವುದು ಈಗಲೂ ನಡೆಯುತ್ತದೆ. ಮೈಸೂರಿನ "ದೇವರಾಜ ಮಾರ್ಕೆಟ್" ಒಳಗೆ, ನಾವು ಚಿಕ್ಕವರಿದ್ದಾಗ ಹೂವಿನ ಅಂಗಡಿಗಳ ಮುಂದೆ ಸುಗಂಧ ಸೇವನೆಗಾಗಿ ಸುಮ್ಮನೆ ಈಕಡೆಯಿಂದ ಆಕಡೆ, ಆಕಡೆಯಿಂದ ಈಕಡೆ ಒಮ್ಮೆ ಹೋಗಿ ಬರುತ್ತಿದ್ದುದೂ ಉಂಟು!

ಹಿಂದೆಲ್ಲಾ ಗಂಡು ಮಕ್ಕಳಿಗೂ ಐದಾರು ವರುಷ ಆಗುವವರೆಗೆ ಉದ್ದ ಕೂದಲು ಬೆಳೆಸುತ್ತಿದ್ದರು. ನಂತರ "ಚಂಡಿಕಾ ಕಾರ್ಯಕ್ರಮ" ನಡೆಯುತ್ತಿತ್ತು. "ಚೌಲ" ಅನ್ನುವ ಇದು ಷೋಡಶ (ಹದಿನಾರು) ಕರ್ಮಗಳಲ್ಲಿ ಒಂದಾಗಿತ್ತು. ಕನ್ನಡಲ್ಲಿ "ಮುಡಿ ಕೊಡುವುದು" ಎಂದು ಹೇಳುತ್ತಿದ್ದರು. ಒಂದು ಹಬ್ಬ ಮಾಡಿ, ಕುಲದೇವರ ಮುಂದೆ ಮೊದಲ ಬಾರಿ ತಲೆಯ ಕೂದಲು ಕತ್ತರಿಸುತ್ತಿದ್ದರು. ಅದರ ಹಿಂದಿನ ಒಂದೆರಡು ದಿನಗಳಲ್ಲಿ ಉದ್ದದ ಜಡೆ ಹೆಣೆದು, ಅದಕ್ಕೆ ಮಲ್ಲಿಗೆ, ಕನಕಾಂಬರ, ಸಿಕ್ಕಿದರೆ ತಾಳೆ ಹೂವು, ಮೊದಲಾದ ಹೂವುಗಳಿಂದ "ಮೊಗ್ಗಿನ ಜಡೆ" ಎನ್ನುವ ಹೆಸರಿನಿಂದ ಹೆಣ್ಣು ಮಗುವಿನಂತೆ ಅಲಂಕರಿಸುತ್ತಿದ್ದರು. ಕೆನ್ನೆಯ ಮೇಲೆ ಒಂದು ಕರಿಯ ದೃಷ್ಟಿ ಬೊಟ್ಟು ಇರುತ್ತಿತ್ತು. ನಂತರ ಅವರಿವರ ಮನೆಗೆ ಕರೆದುಕೊಂಡು ಹೋಗಿ ತೋರಿಸಿ, ಫೋಟೋ ಸ್ಟುಡಿಯೋದಲ್ಲಿ ಫೋಟೋ ತೆಗೆಸುತ್ತಿದ್ದರು. ಹೆಣ್ಣು ಮಕ್ಕಳಿಗಂತೂ ಈ "ಮೊಗ್ಗಿನ ಜಡೆ" ಕಾರ್ಯಕ್ರಮ ಆಗಲೇಬೇಕಿತ್ತು. ಕೆಲವರಿಗೆ ಎರಡು-ಮೂರು ಬಾರಿ ಈ ಉತ್ಸವ ಆಗುತ್ತಿದ್ದುದೂ ಉಂಟು. 

******

ಮಲ್ಲಿಗೆ ಗಿಡ ಇರುವ ಕಡೆಗಳಲ್ಲೆಲ್ಲಾ ಸಂಜೆ ಮೊಗ್ಗು ಕಾಣಿಸಿಕೊಂಡು ಮಾರನೆಯ ಬೆಳಿಗ್ಗೆ ಹೂವು ಅರಳಿ ಸುಗಂಧ ಪಸರಿಸುವುದುದು ಇದ್ದದ್ದೇ. ಅಂಥದುದರಲ್ಲಿ ಒಂದು ಊರಿಗೆ ಹೀಗೆ "ಅರಳುಮಲ್ಲಿಗೆ" ಎಂದು ಹೆಸರು ಬರಲು ಕಾರಣ ವಿಶೇಷ ಏನು? ಇದಕ್ಕೆ ಒಂದು ಸೊಗಸಾದ ಇತಿಹಾಸ ಇದೆ. 

ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪರಮ ಗುರುಗಳಾದ ಶ್ರೀ ವಿಜಯೀ೦ದ್ರ ತೀರ್ಥರ ಬಗ್ಗೆ ಹಿಂದಿನ "ಇಷ್ಟು ಹೇಳಿದರೆ ನೀನು ಪಂಡಿತ!" ಅನ್ನುವ ಸಂಚಿಕೆಯಲ್ಲಿ ಕೆಲವು ಸಂಗತಿಗಳನ್ನು ತಿಳಿದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು.

ಸುಮಾರು ನಾಲ್ಕು ನೂರು ವರುಷಗಳ ಹಿಂದಿನ ಮಾತು. ಶ್ರೀ ರಾಘವೇಂದ್ರ ಗುರು ರಾಯರ ನೇರ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರು ಕುಂಭಕೋಣ ಮಠದಲ್ಲಿ ಶ್ರೀ ವಿಜಯೀ೦ದ್ರ ತೀರ್ಥರ ಬಳಿ ಸನ್ಯಾಸ ಸ್ವೀಕರಿಸಿ (1596), ಅಲ್ಲಿ ಕೆಲ ಕಾಲ ಹೆಚ್ಚಿನ ವಿದ್ಯಾರ್ಜನೆ ನಡೆಸಿ, ತಮ್ಮ ಗುರು ಪರಂಪರೆಯ ಎಲ್ಲ ಯತಿಗಳಂತೆ ವ್ಯಾಕರಣ, ತರ್ಕ, ಪೂರ್ವ ಮೀಮಾಂಸಾ, ಉತ್ತರ ಮೀಮಾಂಸಾ ಮೊದಲಾದ ಶಾಸ್ತ್ರಗಳಲ್ಲಿ ವಿಶೇಷ ಪಾಂಡಿತ್ಯ ಗಳಿಸಿದ್ದರು. ತಂಜಾವೂರು ಅರಸರ ಆಸ್ಥಾನದಲ್ಲಿ ನಡೆದ ಅನೇಕ ವಾದಗಳಲ್ಲಿ ಜಯಭೇರಿ ಬಾರಿಸಿ "ಷಟ್-ದರ್ಶನಾಚಾರ್ಯ" ಎಂದು ಬಿರುದನ್ನೂ ಸಂಪಾದಿಸಿದ್ದರು. ಶ್ರೀ ಸುಧೀಂದ್ರ ತೀರ್ಥರು ಯತಿಗಳು ಸಾಮಾನ್ಯವಾಗಿ ಹೆಚ್ಚು ಗಮನ ಕೊಡದ ಕಾವ್ಯ, ಅಲಂಕಾರ, ನಾಟಕ ಮುಂತಾದುವುಗಳಲ್ಲಿ ಸಹ ವಿಶೇಷ ಪರಿಣತಿ ಪಡೆದಿದ್ದರು. ನಂತರ ಗುರುಗಳ ಅಪ್ಪಣೆ ಪ್ರಕಾರ "ವಿಜಯ ಯಾತ್ರೆ" ಹೊರಟಿದ್ದರು. ಹೀಗೆ ಸಂಚಾರದ ಸಮಯದಲ್ಲಿ ದೊಡ್ಡಬಳ್ಳಾಪುರಕ್ಕೆ ಬಂದರು. 

******

ಶ್ರೀ ವಿಜಯೀ೦ದ್ರ ತೀರ್ಥರ ಮೊದಲ ಗುರುಗಳಾದ ಪೂರ್ವದಿ ಮಠದ ಶ್ರೀ ವ್ಯಾಸ ತೀರ್ಥರು ವಿಜಯನಗರದ ಅರಸರ ರಾಜಗುರುಗಳಾಗಿದ್ದವರು. ಅಭೂತಪೂರ್ವ ಕೀರ್ತಿ ಸಂಪಾದಿಸಿ ಜಯಶಾಲಿಗಳಾದವರು. ಶ್ರೀ ಮುಖ್ಯಪ್ರಾಣನ ಉಪಾಸಕರಾದ ಅವರು ದಕ್ಷಿಣ ಭಾರತ ಪ್ರದೇಶಗಳ ಮೂಲೆ ಮೂಲೆಗಳಲ್ಲಿ ಸಂಚರಿಸಿ 732 ಆಂಜನೇಯ ವಿಗ್ರಹಗಳನ್ನು ಪ್ರತಿಷ್ಠೆ ಮಾಡಿದ್ದಾರೆ. ಇವುಗಳ ವಿಶೇಷವೆಂದರೆ ಇಂತಹ ಮೂರ್ತಿಗಳ ಬಾಲದ ಕೊನೆಯಲ್ಲಿ ಒಂದು ಗಂಟೆ ಇರುವುದು.

ಶ್ರೀ ಸುಧೀಂದ್ರ ತೀರ್ಥರು ದೊಡ್ಡಬಳ್ಳಾಪುರಕ್ಕೆ ಬಂದಾಗ ಹತ್ತಿರದಲ್ಲೇ ಇದ್ದ, ತಮ್ಮ ಪರಮಗುರುಗಳ ವಿದ್ಯಾಗುರುಗಳಾದ ಶ್ರೀ ವ್ಯಾಸರಾಜ ಪ್ರತಿಷ್ಠಿತ ಮುಖ್ಯಪ್ರಾಣನ ಪೂಜೆ ಮಾಡಲು ಇಚ್ಛಿಸಿದರು. ಅಲ್ಲಿಗೆ ಹೋಗಿ ಪೂಜೆ ಮಾಡುವ ಸಂದರ್ಭದಲ್ಲಿ ಮಲ್ಲಿಗೆ ಹೂವು ಅಥವಾ ಮಾಲೆ ಇರಲಿಲ್ಲ. ಅವರ ಬಳಿ ಚಿನ್ನದಿಂದ ಮಾಡಿದ ಮಲ್ಲಿಗೆ ಮೊಗ್ಗುಗಳ ಸರ ಇತ್ತು. ಅದನ್ನೇ ಆಂಜನೇಯನಿಗೆ ಅರ್ಪಿಸಿ ಪೂಜಿಸಿದರು. ಪೂಜೆಯ ನಂತರ ದೇವಾಲಯದ ಗುಡಿಯ ಬಾಗಿಲು ಹಾಕಿ ಎಲ್ಲರೂ ಹೊರಬಂದರು. ರಾತ್ರಿ ಕಳೆಯಿತು. 

ಮಾರನೆಯ ದಿನ ದೇವಾಲಯದ ಬಾಗಿಲು ತೆರೆದಾಗ ಎಲ್ಲೆಲ್ಲೂ ಮಲ್ಲಿಗೆ ಹೂವುಗಳ ಅಮೋಘ ಪರಿಮಳ. ಆಂಜನೇಯನ ವಿಗ್ರಹಕ್ಕೆ ಹಾಕಿದ್ದ ಬಂಗಾರದ ಮಲ್ಲಿಗೆ ಸರದ ಮೊಗ್ಗುಗಳು ಅರಳಿದ್ದವು. ಅಂದಿನಿಂದ ಆ ಗ್ರಾಮಕ್ಕೆ "ಅರಳುಮಲ್ಲಿಗೆ" ಎಂದು ಹೆಸರಾಯಿತು.

******

ಶ್ರೀ ಸುಧೀಂದ್ರ ತೀರ್ಥರು ತಮ್ಮ ವಿಜಯ ಯಾತ್ರೆಯ ಸಂದರ್ಭದಲ್ಲಿ ಗ್ವಾಲಿಯರ್, ಬರೋಡ, ಜೈಪುರ ಮತ್ತು ಸುತ್ತಮುತ್ತಲಿನ ಇತರೆ ಸಂಸ್ಥಾನಗಳಿಗೂ ಭೇಟಿ ಕೊಟ್ಟಿದ್ದರು. ಗ್ವಾಲಿಯರ್ ಮಹಾರಾಜ ಸಿಂಧಿಯಾ ಅವರ ವಿದ್ವತ್ತಿಗೆ ಮೆಚ್ಚಿ "ರಾಜಗುರು" ಎಂದು ವಿಶೇಷ ಮನ್ನಣೆ ನೀಡಿದ್ದನು. ತಾನು ಉಪಯೋಗಿಸುವಂತಹ ಛತ್ರ, ಚಾಮರ ಮುಂತಾದುವುಗಳನ್ನು ಕೊಟ್ಟು ಗೌರವಿಸಿದನು. ವಿಜಯನಗರದ ವೀರ ವೆಂಕಟರಾಯ ಮಹಾರಾಜನು ಅವರಿಗೆ "ವಿಜಯ ಶಂಖ" ಕೊಟ್ಟು "ರತ್ನಾಭಿಷೇಕ" ಮಾಡಿ ಗೌರವಿಸಿದನು. 

ಬಿಜಾಪುರ ಆಳಿದ ಆದಿಲ್ ಶಾಹಿ ವಂಶದಲ್ಲಿ ಎರಡನೆಯ ಇಬ್ರಾಹಿಂ ಆದಿಲ್ ಷಾ (1579-1626) ಅತ್ಯಂತ ಪ್ರಭಾವಶಾಲಿ ಅರಸು. ಅವನ ಕಾಲದಲ್ಲಿ ಹನ್ನೆರಡು ವರುಷಗಳ ಸುದೀರ್ಘ ಕ್ಷಾಮ ಬಂದಿತ್ತಂತೆ. ಶ್ರೀ ಸುಧೀಂದ್ರ ತೀರ್ಥರಲ್ಲಿ ಬಹಳ ಗೌರವ ಇಟ್ಟಿದ್ದ ಅವನ ಮನವೀಯ ಮೇರೆಗೆ ಅವರು ರಾಜ್ಯದ ಧಾನ್ಯಾಗಾರದಲ್ಲಿ ಒಂದು ವಾರ ಕಾಲ ವಿಶೇಷ ಜಪಾದಿಗಳನ್ನು ನಡೆಸಿದರು. ನಂತರ ಧಾರಾಕಾರ ಮಳೆಯಾಗಿ ಸುಭಿಕ್ಷ ಬಂದಿತು. ಮೊದಲಿಗೆ ಸ್ವಲ್ಪ ಹಿಂಜರಿಯುತ್ತಿದ್ದ ಅವನ ಮಂತ್ರಿಯಾಗಿದ್ದ ಘನಶ್ಯಾಮ ರಾಯ ಅವರ ಶಿಷ್ಯನಾಗಿ "ಆನೆ ಹೊಸೂರು" ಎನ್ನುವ ತನ್ನ ಸ್ವಂತ ಗ್ರಾಮವನ್ನು ಗುರುಗಳಿಗೆ ಬಳುವಳಿಯಾಗಿ ಕೊಟ್ಟನು

ಈ ಎಲ್ಲ ಸಂಗತಿಗಳಿಗೂ ಸಂಬಂಧಪಟ್ಟ ಸ್ಥಳಗಳಲ್ಲಿ ದಾಖಲೆಗಳಿವೆ. ಶ್ರೀ ಸುಧೀಂದ್ರ ತೀರ್ಥರು ಅನೇಕ ಸತ್ವಯುತ ಗ್ರಂಥಗಳ ರಚಯಿತರು. ಅವುಗಳಲ್ಲಿ ಕೆಲವು ಸಿಕ್ಕಿವೆ. ಕೆಲವು ಉಪಲಬ್ಧವಿಲ್ಲ. 

ಶ್ರೀ ರಾಘವೇಂದ್ರ ಗುರುಗಳ ಸ್ತೋತ್ರದಲ್ಲಿ "ವಿಜಯೀ೦ದ್ರ ಕರಾಬ್ಜೋಥಾ ಸುಧೀಂದ್ರ ವರಪುತ್ರಕಃ" ಎಂಧು ಹೇಳುವುದಕ್ಕೆ ಈ ಎಲ್ಲಾ ಹಿನ್ನೆಲೆಗಳಿವೆ.
******

ಈ ತಿಂಗಳ (ಆಗಸ್ಟ್ 2026) 30ನೆಯ ದಿನಾಂಕ ಶ್ರೀ ಗುರು ರಾಘವೇಂದ್ರ ರಾಯರ 355ನೇ ವರ್ಷದ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅವರ ಗುರು ಪರಂಪರೆಯ ಶ್ರೀ ಸುರೇಂದ್ರ ತೀರ್ಥರು, ಶ್ರೀ ವಿಜಯೀ೦ದ್ರ ತೀರ್ಥರು ಮತ್ತು ಶ್ರೀ ಸುದೀಂಧ್ರ ತೀರ್ಥರ ಬಗ್ಗೆ ಸ್ವಲ್ಪ ಪರಿಚಯವನ್ನು ಮೂರು ಸಂಚಿಕೆಗಳಲ್ಲಿ ಮಾಡಿಕೊಂಡೆವು. 

ಒಬ್ಬರು ಕಣ್ಣ ಮುಂದೆ ಇಲ್ಲವಾದ ಬಳಿಕ ಕೆಲವು ವರುಷಗಳ ನಂತರ ಅವರ ಹೆಸರೂ ಇರುವುದಿಲ್ಲ. ನಾಲ್ಕು ಶತಮಾನ ಕಳೆದ ಬಳಿಕವೂ ಈ ಮಹನೀಯರ ಕಾರ್ಯಗಳು, ಕೃತಿಗಳು ಮತ್ತು ಸಾಧನೆಗಳ ವಿವರಗಳು ವಿಪುಲವಾಗಿ ಸಿಗುತ್ತವೆ. ಮೇಲೆ ಹೇಳಿದ ದೂರ ದೂರದ ಸ್ಥಳಗಳಲ್ಲಿಯೂ ಈಗಲೂ ಅವರ ಬಗ್ಗೆ ಗೌರವಾದರಗಳಿವೆ. ರಾಯರ ಆರಾಧನೆಯಂತೂ ವರುಷದಿಂದ ವರುಷಕ್ಕೆ ಇನ್ನೂ ಬೆಳೆಯುತ್ತಲೇ ಇದೆ. 

ಶ್ರಮಪಟ್ಟು ಆಯಾ ಗ್ರಂಥಗಳನ್ನು ಅಭ್ಯಸಿಸಿ, ಸ್ಥಳಗಳನ್ನು ನೋಡಿ ಬಂದರೆ, ಅವುಗಳ ಪರಿಣಾಮವಾಗಿ ಹೆಚ್ಚಿನ ನಂಬಿಕೆ ಬರುತ್ತದೆ. 

Friday, August 14, 2026

ಇಷ್ಟು ಹೇಳಿದರೆ ನೀನು ಪಂಡಿತ!


ಕಳೆದ ಸಂಚಿಕೆಯಲ್ಲಿ "ನಮಗೆ ಅವರೇ ಬೇಕು!" ಅನ್ನುವ ಶೀರ್ಷಿಕೆಯಡಿ ಕುಂಭಕೋಣ ಮಠದ ಶ್ರೀ ಸುರೇಂದ್ರ ತೀರ್ಥರು ಪೂರ್ವಾದಿ ಮಠದ ಯತಿಗಳಾದ ಶ್ರೀ ವ್ಯಾಸರಾಜರಿಂದ ಅವರ ಪ್ರೀತಿಯ ಶಿಷ್ಯರಾದ ಶ್ರೀ ವಿಷ್ಣುತೀರ್ಥರನ್ನು ದತ್ತು ಪಡೆದುಕೊಂಡು, ಅವರಿಗೆ "ಶ್ರೀ ವಿಜಯೀ೦ದ್ರ ತೀರ್ಥ" ಎಂದು ಮರುನಾಮಕರಣ ಮಾಡಿ, ತಮ್ಮ ನಂತರ ಪೀಠಾಧಿಪತಿಗಳನ್ನಾಗಿ ಮಾಡಿದ ವಿಚಾರ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಶ್ರೀ ವಿಜಯೀ೦ದ್ರ ತೀರ್ಥರ ವಿಚಾರದಲ್ಲಿ ಕೆಲವು ಓದುಗರು ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳ ಬಗ್ಗೆ ಈ ಸಂಚಿಕೆಯಲ್ಲಿ ಸ್ವಲ್ಪ ವಿಚಾರ ಮಾಡೋಣ. 

ಶ್ರೀ ವಿಜಯೀ೦ದ್ರ  ತೀರ್ಥರ ಬಾಲ್ಯದ ಬಗ್ಗೆ ಹೆಚ್ಚು ತಿಳಿಯುವುದಿಲ್ಲ. ಅವರು ಶ್ರೀ ವ್ಯಾಸತೀರ್ಥರ ಪೂರ್ವಾಶ್ರಮದ ಕಡೆಯ ಸಂಬಂಧಿ ಎಂದು ಒಂದು ಅಭಿಪ್ರಾಯವಿದೆ. ಅವರು "ಗೌಡ ಸಾರಸ್ವತ" ಕುಟುಂಬದವರು ಎಂದು ಹೇಳುವ ಕೊಂಕಣಿ ಭಾಷೆಯ ವಿಡಿಯೋ ಒಂದು ಪ್ರಚಲಿತವಿದೆ. ಸ್ನೇಹಿತರೊಬ್ಬರು ಅದನ್ನು ಮೊನ್ನೆ ಕಳಿಸಿಕೊಟ್ಟಿದ್ದಾರೆ. ಅದಕ್ಕೆ ಯಾವುದೇ ಆಧಾರ ಸಿಗುವುದಿಲ್ಲ. ಇದು ಐದು ನೂರು ವರುಷ ಕಳೆದ ಮಾತು. ಆಧಾರ ಎಲ್ಲಿ ಸಿಗಬೇಕು? ಆಗ ಈಗಿನಂತೆ ಅಧಿಕೃತವಾಗಿ ದಾಖಲೆಗಳು ಇರಲಿಲ್ಲವಲ್ಲ.

"ಹಂಸ-ಕ್ಷೀರ ನ್ಯಾಯ", "ಬೀಜ-ವೃಕ್ಷ ನ್ಯಾಯ", "ಕಾಕ-ತಾಳ ನ್ಯಾಯ" ಮುಂತಾದುವುಗಳಂತೆ "ಪುತ್ರಿಕಾ-ಪುತ್ರ ನ್ಯಾಯ" ಎಂದು ಒಂದುಂಟು. ಹೆಣ್ಣು ಮಗಳು ಪಡೆದಿದ್ದು, ಮಗನು ಇಲ್ಲದ ದಂಪತಿಗಳು ಆ ಕಾರಣಕ್ಕಾಗಿ ಅವಳ ವಿವಾಹದ ಸಮಯದಲ್ಲಿ ಅಳಿಯನಲ್ಲಿ ಒಂದು ಬೇಡಿಕೆ ಇಡುತ್ತಿದ್ದರು. ಮುಂದೆ ಆ ದಂಪತಿಗಳಿಗೆ ಹುಟ್ಟುವ ಮೊದಲ ಗಂಡು ಶಿಶುವನ್ನು ತಮಗೆ ದತ್ತು ಕೊಡಬೇಕೆಂದು ಕೇಳುವುದು. ಹೀಗೆ ದತ್ತು ಬಂದ ಮೊಮ್ಮಗನನ್ನು ಮಗ ಎಂದು ಸ್ವೀಕರಿಸುವುದು. ಇದನ್ನು "ಪುತ್ರಿಕಾ-ಪುತ್ರ ನ್ಯಾಯ" ಅನ್ನುತ್ತಾರೆ. ನಮ್ಮ ಬಾಲ್ಯದಲ್ಲಿ ಈ ರೀತಿಯ ಕೆಲವು ಪ್ರಕರಣಗಳನ್ನು ನೋಡಿದ್ದೇವೆ. ಈಗ ಈ ರೀತಿಯ ಉದಾಹರಣೆಗಳು ಸಿಗುವುದಿಲ್ಲ.

ಅನೇಕ ಮಕ್ಕಳಿಲ್ಲದ ದಂಪತಿಗಳು ಆಗಿನ ತಪಸ್ವಿ ಯತಿಗಳನ್ನು ಸಂತಾನಕ್ಕಾಗಿ ಕೋರಿಕೊಳ್ಳುತ್ತಿದ್ದರು. ಹೀಗೆ ಸಂತಾನ ಆಗಲೆಂದು ವರಕೊಟ್ಟ ಯತಿಗಳು ಮೊದಲ ಮಗನನ್ನು ತಮಗೆ ಕೊಡಬೇಕೆಂದೂ, ಮುಂದೆ ಹುಟ್ಟುವ ಮಗುವನ್ನು ಆ ದಂಪತಿಗಳು ಸಂತಾನವಾಗಿ ಇಟ್ಟುಕೊಳ್ಳಬಹುದೆಂದು ಸೂಚಿಸುತ್ತಿದ್ದ ಪದ್ಧತಿ ಇತ್ತು. ಈ ರೀತಿ ಪಡೆದುಕೊಂಡ ಶಿಶುವಿಗೆ ಸನ್ಯಾಸ ಕೊಟ್ಟು ಉತ್ತರಾಧಿಕಾರಿ ಪಡೆದುಕೊಂಡ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತವೆ. ಶ್ರೀ ವಿಷ್ಣು ತೀರ್ಥರು ಹೀಗೆ ಶ್ರೀ ವ್ಯಾಸರಾಜರಿಗೆ ದೊರೆತವರು ಎಂದು ಒಂದು ಅಭಿಪ್ರಾಯ ಇದೆ. ಅವರ ಬಾಲ್ಯದ ಹೆಸರು ವಿಠಲಾಚಾರ್ಯ ಎಂಬುದಾಗಿತ್ತು ಎಂದು ತಿಳಿದುಬರುತ್ತದೆ. ಏಳು-ಎಂಟು ವರುಷದವರಾಗಿದ್ದ ಸಮಯದಲ್ಲೇ ಸನ್ಯಾಸ ಆಗಿದ್ದಿತಂತೆ.

******

ಇಲ್ಲಿ, ಪಕ್ಕದಲ್ಲಿ ಒಬ್ಬ ಬಾಲಕ ಕುಳಿತಿದ್ದಾನೆ. ಅವನಿಗೆ ಭೂಗೋಳದ ಬಗ್ಗೆ ಅಪಾರ ಒಲವಿತ್ತು. ಈಗ ಅದು ಚರಿತ್ರೆ ಬಗ್ಗೆ ಹೊರಳಿದೆ. ಚರಿತ್ರೆಯ ಬಗೆಗಿನ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗಳಿಸುವ ಪ್ರಯತ್ನ. ಅಮೇರಿಕ ಸಂಯುಕ್ತ ಸಂಸ್ಥಾನ (USA) ದೇಶದ ಅಧ್ಯಕ್ಷರ ಬಗ್ಗೆ ಅಭ್ಯಾಸ ಮಾಡುತ್ತಿದ್ದಾನೆ. ಸುತ್ತ ಐದಾರು ಪುಸ್ತಕಗಳು ಹರಡಿವೆ. ಇಲ್ಲಿಯವರೆಗೆ 47 ಅಧ್ಯಕ್ಷರು ತಮ್ಮ ತಮ್ಮ ಸರದಿಯಂತೆ ಅಧ್ಯಕ್ಷ ಪದವಿ ಪಡೆದು ದೇಶವನ್ನು ಮುನ್ನಡೆಸಿದ್ದಾರೆ. ಒಬ್ಬರು 13 ವರುಷದಷ್ಟು ದೀರ್ಘಕಾಲ. ಮತ್ತನೇಕರು ಎಂಟೆಂಟು ವರುಷಗಳು. ಕೆಲವರು ನಾಲ್ಕು ವರುಷ. ಹೀಗೆ ಒಟ್ಟು 45 ಮಹನೀಯರು ಈ 47 ಸರದಿಗಳಲ್ಲಿ ಅಧ್ಯಕ್ಷಪೀಠ ಅಲಂಕರಿಸಿದ್ದಾರೆ. ಮೊದಲ ಅಧ್ಯಕ್ಷರಾದ ಶ್ರೀ ಜಾರ್ಜ್ ವಾಶಿಂಗಟನ್ ಅವರಿಂದ ಈಗಿನ ಅಧ್ಯಕ್ಷರಾದ ಶ್ರೀ ಡೊನಾಲ್ಡ್ ಟ್ರಂಪ್ ಅವರತನಕ ಎಲ್ಲ 45 ಹೆಸರುಗಳನ್ನೂ ತಪ್ಪಿಲ್ಲದೆ ಹೇಳುವುದು ಒಂದು ಸವಾಲು. ಅದಕ್ಕೆ ತಯಾರಿ ನಡೆದಿದೆ. 

ಇದು ಕೇವಲ ಮೊದಲ ಹೆಜ್ಜೆ. ಮುಂದೆ ಈ ಎಲ್ಲ ಅಧ್ಯಕ್ಷರ ಕಾಲಗಳಲ್ಲಿ ನಡೆದ ವಿಶೇಷ ಘಟನೆಗಳು ಮತ್ತು ಸಂಬಂಧಪಟ್ಟ ವಿವರಗಳನ್ನು ಕಲಿತು ತಯಾರಾಗಬೇಕು. 45 ಹೆಸರುಗಳ ಎರಡರಷ್ಟು ಆದರೆ? ಅದಕ್ಕಿಂತ ಹೆಚ್ಚು ಆದರೆ? ಅದೆಷ್ಟು ಪ್ರಯಾಸದ ಕೆಲಸ!

ಮಂತ್ರಾಲಯಕ್ಕೆ ಹೋಗಿಬಂದವರಿಗೆ, ಗುರುರಾಯರ ವೃಂದಾವನದ ದರ್ಶನ ಮಾಡಿದವರಿಗೆ ಈಗ ಮುಂದೆ ಹೇಳುವ ವಿಷಯ ಗೊತ್ತು. ಶ್ರೀ ರಾಘವೇಂದ್ರ ರಾಯರ ವೃಂದಾವನದ ಪಕ್ಕದಲ್ಲೇ ಅದೇ ರೀತಿಯ ಇನ್ನೊಂದು ಭವ್ಯ ವೃಂದಾವನ ಇದೆ. ಅದು ಶ್ರೀ ರಾಯರ ನಂತರ ಐದನೆಯವರಾಗಿ ಪೀಠ ಏರಿದ ಶ್ರೀ ವಾದೀಂದ್ರ ತೀರ್ಥ ಶ್ರೀಪಾದರದ್ದು. ಅಂದರೆ, ಶ್ರೀ ವಿಜಯೀ೦ದ್ರ  ತೀರ್ಥ ಗುರುಗಳ ನಂತರ ಏಳನೆಯವರು. ಅವರು 37 ಶ್ಲೋಕಗಳ "ಗುರುಗುಣಸ್ತವನ" ಎಂಬ ಸ್ತೋತ್ರ ಗ್ರಂಥ ರಚಿಸಿದ್ದಾರೆ. ಅದರ ಪ್ರಾರಂಭದಲ್ಲಿ, ಎಂಟನೆಯ ಶ್ಲೋಕದಲ್ಲಿ, ಶ್ರೀ ವಿಜಯೀ೦ದ್ರ ತೀರ್ಥರ ಬಗ್ಗೆ ಹೇಳುತ್ತಾ "ಚತುರಧಿಕ ಶತ ಗ್ರಂಥರತ್ನ ಪ್ರಣೇತಾ" ಎಂದು ವಿವರಿಸುತ್ತಾರೆ. ಶ್ರೀ ವಿಜಯೀ೦ದ್ರ ತೀರ್ಥರು 104 ಗ್ರಂಥ ರತ್ನಗಳನ್ನು ರಚಿಸಿದ ಮಹಾನುಭಾವರು! 

ಮಾಧ್ವ ಸಿದ್ಧಾಂತ ಗ್ರಂಥಗಳ ಅಧ್ಯಯನ ಮಾಡುವ ವಿದ್ವಾಂಸರಲ್ಲಿ ಒಂದು ನಾಣ್ನುಡಿ ಇದೆ. ಆ ವಿಶಾಲ ವಾಗ್ಮಯದ ಆಳ-ಅಗಲಗಳ ಮಾತು ಅತ್ತ ಇಡೋಣ. "ಶ್ರೀ ವಿಜಯೀ೦ದ್ರ ತೀರ್ಥರ 104 ಗ್ರಂಥಗಳ ಹೆಸರು ತಪ್ಪಿಲ್ಲದೆ ಹೇಳು. ಹಾಗೆ ಹೇಳಿದರೆ ಸಾಕು. ಇಷ್ಟು ಹೇಳಿದರೆ ನೀನು ಪಂಡಿತ ಎಂದು ನಾವು ಒಪ್ಪುತ್ತೇವೆ" ಎಂದು. 

ಅಷ್ಟು ಗ್ರಂಥಗಳ ಹೆಸರು ನೆನಪಿಡುವುದೇ ಕಷ್ಟ. ಇನ್ನು ಅಷ್ಟು ಗಾಢ ಪಾಂಡಿತ್ಯಪೂರ್ಣ ಕೃತಿಗಳ ರಚನೆಯ ಬಗೆಗೆ ಏನು ಹೇಳುವುದು? ಈ ಜನಪ್ರಿಯ ಹೇಳಿಕೆ ಶ್ರೀ ವಿಜಯೀ೦ದ್ರ ತೀರ್ಥರ ವಿದ್ವತ್ತಿಗೆ ಮತ್ತು ಕೃತಿ ರಚನಾ ಕೌಶಲ್ಯಕ್ಕೆ ಒಂದು ಕನ್ನಡಿ ಹಿಡಿದಂತೆ.

*******

ಶ್ರೀ ವಿಜಯೀ೦ದ್ರರು (1517-1614) ಕುಂಭಕೋಣಕ್ಕೆ ಬಂದಾಗ ಅದು ಅನೇಕ ವಿದ್ವಾಂಸರ ಬೀಡಾಗಿತ್ತು. ಅಷ್ಟು ಪಂಡಿತ ಮಂಡಳಿಯ ನಡುವೆ ಹೊಸಬರೊಬ್ಬರು ಬಂದು ತಳ ಊರುವುದು ಸಾಮಾನ್ಯ ಮಾತಾಗಿರಲಿಲ್ಲ. ಶ್ರೀ ಅಪ್ಪಯ್ಯ ದೀಕ್ಷಿತರು (1520-1593) ಅದ್ವೈತ ಸಿದ್ಧಾಂತ ಪ್ರತಿಪಾದಕರಲ್ಲಿ ಒಂದು ಬಲು ದೊಡ್ಡ ಹೆಸರು. ಇಬ್ಬರೂ ಸಮ ವಯಸ್ಕರು. ಜೀವನ ಪೂರ್ತಿ ಜೊತೆಯಲ್ಲಿ ಬಾಳಿದವರು. ಸುಮಾರು ಐವತ್ತು ವರುಷ ಕಾಲ ತಮ್ಮ ತಮ್ಮ ಸಿದ್ಧಾಂತವನ್ನು ಎತ್ತಿ ಹಿಡಿದ ಮಹನೀಯರು. ಒಬ್ಬರು ಪ್ರಬಲ ದ್ವೈತಿ. ಇನ್ನೊಬ್ಬರು ಅಂತೆಯೇ ಪ್ರಬಲ ಅದ್ವೈತಿ. ಆದರೂ ತಮ್ಮ ತಮ್ಮ ಸಿದ್ಧಾಂತವನ್ನು ಬಿಡದೆ ಸಾಮರಸ್ಯದಿಂದ ಬಾಳಿದವರು. 

ಸುಮಾರು ನಲವತ್ತು ವರುಷಗಳ ಹಿಂದೆ ಕುಂಭಕೋಣಕ್ಕೆ ಹೋಗಿದ್ದಾಗ ಅಲ್ಲಿನ ಹಿರಿಯರು ಹೇಳಿದ ಮಾತು. ಕುಂಭಕೋಣ ಮಠ ಮತ್ತು ಶ್ರೀ ಅಪ್ಪಯ್ಯ ದೀಕ್ಷಿತರ ಮನೆ ಅಕ್ಕ-ಪಕ್ಕದಲ್ಲಿ. ಮಠದ ಪಕ್ಕದಲ್ಲಿ ದೀಕ್ಷಿತರ ಮನೆ ಎಂದು ತೋರಿಸುತ್ತಿದ್ದರು. ಇವರು ಸನ್ಯಾಸಿಗಳು. ಅವರು ಗೃಹಸ್ಥರು. ಇವರು ದ್ವೈತಿಗಳು. ಅವರು ಅದ್ವೈತಿಗಳು. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶಾಲ ಗ್ರಂಥ ರಾಶಿ ನಿರ್ಮಾಣ ಮಾಡಿದವರು. ಇವರಿಗೆ ವಿಜಯನಗರದ ಅರಸರ ಆಸ್ಥಾನದಲ್ಲಿ ಗುರುಪೀಠ. ಅವರಿಗೆ ವೆಲ್ಲೂರಿನ ಚಿನ್ನಬೋಮ್ಮ ನಾಯಕನ ಆಸ್ಥಾನದಲ್ಲಿ ವಿಶೇಷ ಮನ್ನಣೆ. ಹೀಗೆ ಸಮಾನಾಂತರವಾದ ಜೀವನಗಳು.

ಇವರಿಬ್ಬರ ಮೊದಲ ಭೇಟಿ ಬಗ್ಗೆ ಒಂದು ವಿಶೇಷ ಪ್ರಸಂಗ ಹೇಳುತ್ತಾರೆ. ಒಂದು ಕಾಡಿನ ಕಡಿದಾದ ದಾರಿ. ಇತ್ತಕಡೆಯಿಂದ ಶ್ರೀ ವಿಜಯೀ೦ದ್ರರೂ, ಅತ್ತಕಡೆಯಿಂದ ಶ್ರೀ ಅಪ್ಪಯ್ಯ ದೀಕ್ಷಿತರೂ ಅವರವರ ಶಿಷ್ಯರ ಸಂಗಡ ಬಂದು ಎದುರುಬದರಾದರು. ಆ ದಾರಿಯಲ್ಲಿ ಒಬ್ಬರು ಮಾತ್ರ ನಡೆದು ಹೋಗಬಹುದು. ಇಬ್ಬರಲ್ಲಿ ಒಬ್ಬರು ಹಿಂದೆ ಸರಿದು ದಾರಿ ಬಿಡಬೇಕು. "ಯಾರು ಹಿಂದೆ ಸರಿಯಬೇಕು?" ಎಂದು ಪ್ರಶ್ನೆ ಬಂದಿತು. ಜೊತೆಯಲ್ಲಿದ್ದ ವಿದ್ವಾಂಸರೊಬ್ಬರು "ಈ ಕಾಡನ್ನು ವರ್ಣಿಸಿ ಒಂದು ವಾಕ್ಯವನ್ನು ಇಬ್ಬರೂ ಹೇಳಲಿ. ಯಾವುದು ಚೆನ್ನವಿದೆ ಎಂದು ನಾವೆಲ್ಲಾ ಒಪ್ಪುತ್ತೇವೋ, ಅವರಿಗೆ ಇನ್ನೊಬ್ಬರು ದಾರಿ ಬಿಡಲಿ" ಎಂದು ಸೂಚಿಸಿದರು.  

ಮೊದಲು ಶ್ರೀ ಅಪ್ಪಯ್ಯ ದೀಕ್ಷಿತರು ಹೇಳಿದರು: 
ಅಸ್ತ್ಯರಣ್ಯಂ ತರಣ್ಯ೦ಘರಿ ತರಣ್ಯನ್ತರ್ಧಿ ಪಾದಪಂ 

"ಈ ಕಾಡಿನಲ್ಲಿ ಬೆಳೆದಿರುವ ಹೆಮ್ಮರಗಳು ಸೂರ್ಯನ ಕಿರಣಗಳೇ ಭೂಮಿಗೆ ಬೀಳದಂತೆ ತಡೆದಿವೆ"  ಎಂದು ಅರ್ಥ. ಮರಗಳು ಕಾಲಿನಿಂದ (ಪಾದದಿಂದ-ಅಂದರೆ ಬೇರಿನಿಂದ) ನೀರು ಕುಡಿಯುವುದರಿಂದ ಪಾದಪಗಳು. ತರಣಿ ಅಂದರೆ ಸೂರ್ಯ. ಹೀಗೆ ಪ್ರಾಸಗಳಿಂದ ಕೂಡಿದ ವಿಶೇಷ ರಚನೆ. 

ಈಗ ಶ್ರೀ ವಿಜಯೀ೦ದ್ರರ ಸರದಿ: 
ದರೀಸುಪ್ತ ಝರೀದತ್ತ ಪರೀರಂಭ ಸರೀಸೃಪ೦

"ಕಾಡಿನ ಗುಹೆಗಳಲ್ಲಿ ನಾಗ-ನಾಗಿಣಿಯರು ಒಂದಕ್ಕೊಂದು ಹೆಣೆದುಕೊಂಡು ನಿರ್ಭೀತಿಯಿಂದ ಮಲಗಿವೆ" ಎಂದು ಅರ್ಥ. ದರಿ ಅಂದರೆ ಗುಹೆಗಳು. ಗುಹೆಗಳಲ್ಲಿ ಇರುವ ಸರ್ಪಗಳು. ಹೀಗೆ ಪ್ರಾಸಗಳಿಂದ ಕೂಡಿದ ವಿವರಣೆ. 

ಅಂದಿನಿಂದ ಪ್ರಾರಂಭವಾದ ಅವರಿಬ್ಬರ ಜೊತೆ ಮುಂದೆ ಅನೇಕ ದಶಕಗಳು ಮುಂದುವರೆಯಿತು.

******

ಶ್ರೀ ವಿಜಯೀ೦ದ್ರ ತೀರ್ಥರು ಚತುಷಷ್ಠಿ ಕಲೆಗಳಲ್ಲಿ (ಅರವತ್ತನಾಲ್ಕು ವಿದ್ಯೆಗಳು) ಪರಿಣಿತರು. (ಇವುಗಳಲ್ಲಿ ಕೆಲವು ವಿದ್ಯೆಗಳು. ಮತ್ತೆ ಕೆಲವು ಕಲೆಗಳು). ಹೀಗೆ ಪ್ರಸಿದ್ಧರಾದವರನ್ನು ಪರೀಕ್ಷಿಸಲು ಒಬ್ಬ ದೊಂಬರಾಟ ಮಾಡುವವನು ಬಂದನಂತೆ. "ನೀವು ಅಷ್ಟು ವಿದ್ಯೆ ಕಲಿತಿದ್ದರೆ ನನ್ನಂತೆ ಹಗ್ಗದ ಮೇಲೆ ನಡೆದು ತೋರಿಸಿ" ಎಂದು ಸವಾಲು ಹಾಕಿದನಂತೆ. "ಆಗಲಿ. ಮೊದಲು ನಿನ್ನ ವಿದ್ಯೆ ತೋರಿಸು" ಅಂದರಂತೆ ಶ್ರೀ ವಿಜಯೀ೦ದ್ರರು. ಎತ್ತರದಲ್ಲಿ ಎರಡು ಗೂಟಗಳಿಗೆ ಹಗ್ಗ ಕಟ್ಟಿ ದೊಂಬರವನು ನಡೆದು ತೋರಿಸಿದ. ಈಗ ವಿಜಯೀ೦ದ್ರರ ಸರದಿ.

"ನಮಗೆ ನಿನ್ನ ಹಗ್ಗ ತುಂಬಾ ದಪ್ಪ. ಸಣ್ಣದು ಬೇಕು" ಅಂದರಂತೆ. ಆಶ್ಚರ್ಯ ಚಕಿತನಾದ ದೊಂಬರವನು "ನಿಮಗೆ ಎಂತಹ ಹಗ್ಗ ಬೇಕು?" ಎಂದು ಕೇಳಿದನಂತೆ. "ಬಾಳೆಯ ನಾರು ಆಗಬಹುದು" ಅಂದರಂತೆ. ಬಾಳೆಯ ನಾರಿನಮೇಲೆ ನಡೆದು ತೋರಿಸಿದರಂತೆ.

"ಅಣಿಮಾದಿ ಅಷ್ಟ ಸಿದ್ಧಿಗಳು" ಎಂದು ಕೇಳಿದ್ದೇವೆ. "ಅಣಿಮಾ" ಅಂದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು. ಹೀಗೆ ಸಿದ್ಧಿ ಪಡೆದವರು ದೇಹದ ತೂಕವನ್ನು ಇರುವೆಯಷ್ಟು ಇರುವಂತೆ ಮಾಡಿಕೊಳ್ಳಬಲ್ಲರಂತೆ. ಹೀಗೆ ಮಾಡಿಕೊಂಡು ಬಾಳೆಯ ನಾರಿನ ಮೇಲೆ ನಡೆದು ತೋರಿಸಿದರಂತೆ!

******

ಅನೇಕ ರೀತಿಯಿಂದ ಅವರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಲು ಪ್ರತಿವಾದಿಗಳು ಪ್ರಯತ್ನಿಸಿದರು. "ನಿಮ್ಮ ಬ್ರಹ್ಮಚರ್ಯ ಪರೀಕ್ಷಿಸಬೇಕು" ಎಂದು ಒಂದು ತಂಡ ಬಂದಿತು. "ಹೇಗೆ ಪರೀಕ್ಷಿಸುತ್ತೀರಿ?" ಎಂದು ಕೇಳಿದರೆ, "ನಾಲ್ವರು ವಾರಾಂಗನೆಯರು ಬಂದು ನಿಮಗೆ ಅಭ್ಯಂಜನ ಮಾಡಿಸುತ್ತಾರೆ. ನಿಮಲ್ಲಿ ಯಾವುದೇ ವಿಕಾರ ಆಗದಿದ್ದರೆ ಆಗ ಒಪ್ಪುತ್ತೇವೆ" ಅಂದರು. ಪರೀಕ್ಷೆ ದಿನ ಬಂತು. ಕೌಪೀನ ಧರಿಸಿ ಶ್ರೀ ವಿಜಯೀ೦ದ್ರರು ಕುಳಿತರು.

ವಾರಾಂಗನೆಯರು ಬಂದರು. ಅವರ ದೇಹಕ್ಕೆ ಎಣ್ಣೆ ಹಚ್ಚಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ದೂರ ನಿಂತರು. "ಏಕೆ? ಮುಂದುವರೆಸಿ" ಅಂದರು ಅವರನ್ನು ಕರೆತಂದವರು. "ಆಗುವುದಿಲ್ಲ. ಮೊದಲು ಎಣ್ಣೆ ಹಚ್ಚಿದೆವು. ಈಗ ಅವರ ಮೈ ಮುಟ್ಟಿದರೆ ಛಳಕು ಹೊಡೆದಂತೆ ಆಗುತ್ತಿದೆ. ನಮ್ಮಿಂದ ಇದು ಸಾಧ್ಯವಿಲ್ಲ" ಎಂದು ಹೇಳಿ, ನಮಸ್ಕರಿಸಿ ಹೊರಟುಹೋದರು. 

ಪರೀಕ್ಷೆಗೆ ಎಂದು ಬಂದವರು ಪರೀಕ್ಷೆಗೆ ಕುಳಿತವರನ್ನು ಎಬ್ಬಿಸಿದರು. ಸ್ವಾಮಿಗಳು "ಅಸಂಪ್ರಜ್ಞಾತ ಸಮಾಧಿ" ಹೊಂದಿ ಕುಳಿತಿದ್ದರು. ಮನಸ್ಸು ಧ್ಯಾನದಲ್ಲಿ ಲೀನವಾಗಿತ್ತು. "ಎಲ್ಲಿ? ಪರೀಕ್ಷಕರು ಬರಲಿಲ್ಲವೇ?" ಎಂದರು. ಪರೀಕ್ಷಕರು ಬಂದು, ಪರೀಕ್ಷೆಯ ಪ್ರಯತ್ನ ಮಾಡಿ, ಹೊರಟುಹೋಗಿ ಎಷ್ಟೋ ಹೊತ್ತಾಗಿತ್ತು. 

ಹೀಗೆ ಸಮಾಧಿಯಲ್ಲಿ ಕುಳಿತವರು "ನಾರಾಯಣ" ಅನ್ನುವ ಪದದ ಅರ್ಥಗಳನ್ನು ಚಿಂತಿಸುತ್ತಿದ್ದರಂತೆ. ಸಮಾಧಿಯಿಂದ ಏಳುವವರೆಗೆ 125 ಅರ್ಥಗಳು ಹೊಳೆದಿತ್ತು. ಅದನ್ನೇ "ನಾರಾಯಣ ಶಬ್ದಾರ್ಥ ನಿರ್ವಚನಂ" ಎನ್ನುವೆ ಹೆಸರಿನಲ್ಲಿ ಗ್ರಂಥ ಮಾಡಿಟ್ಟಿದ್ದಾರೆ. 

*******
ಇವು ಮೂರು ನಾಲ್ಕು ಉದಾಹರಣೆಗಳು. ಅಷ್ಟೇ. ಇವುಗಳಲ್ಲಿ ಕೆಲವನ್ನು ಕೆಲವರು ಅನುಮಾನಿಸಬಹುದು. "ಹೀಗೆ ಸಾಧ್ಯವೇ?" ಎಂದು ಹೇಳಬಹುದು. ಹಿಂದಿನ ದಿನದ ಸಮಸ್ಯೆಗೆ ಮಾರನೆಯ ದಿನ ಒಂದು ಪ್ರಭಂಧ ಬರೆದು ತಂದು ವಿವರಿಸುವವರನ್ನು ನಾವು ಇಂದೂ ಕಾಣಬಹುದು. ಅನೇಕ ಕಲೆಗಳಲ್ಲಿ ಮೂಗಿನ ಮೇಲೆ ಬೆರಳಿಡುವಂತೆ ಸಾಧನೆ ಮಾಡಿದವರು, ಮಾಡುತ್ತಿರುವವರು ಈಗಲೂ ಇದ್ದಾರಲ್ಲವೇ?

ಕನ್ನಡಲ್ಲಿ "ಅಜೇಯ ವಿಜಯೀ೦ದ್ರರು" ಅನ್ನುವ ಗ್ರಂಥವಿದೆ. ಇಂಗ್ಲಿಷಿನಲ್ಲಿ 968 ಪುಟಗಳ, ಮೂರು ಸಂಪುಟಗಳ "The invincible Saint" ಹೆಸರಿನ ಪುಸ್ತಕವಿದೆ. "ಶ್ರೀ ರಾಘವೇಂದ್ರ ವಿಜಯ", "ಶ್ರೀ ಗುರುಗುಣಸ್ತವನ" ಮತ್ತು ಮಾಧವ ಸೂರಿಗಳ "ವಿಜಯೀ೦ದ್ರ ವಿಜಯ" ಇದೆ. ಆಸಕ್ತರು ವಿವರಣೆಗಳನ್ನು ನೋಡಬಹುದು. 

Sunday, August 9, 2026

ನಮಗೆ ಅವರೇ ಬೇಕು!


ಕಳೆದ ವಾರ ಧಾರವಾಡದಲ್ಲಿ ನಡೆದ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯ ಪುರ ಪ್ರವೇಶ ಸಂದರ್ಭದಲ್ಲಿ ಆ ಪ್ರದೇಶದ ಸಂಸತ್ ಸದಸ್ಯರೂ, ಕೇಂದ್ರ ಸರ್ಕಾರದ ಮಂತ್ರಿಗಳೂ ಆದ ಶ್ರೀ ಪ್ರಹ್ಲಾದ್ ಜೋಶಿ ಅವರ ಸ್ವಾಗತ ಭಾಷಣದ ವಿಡಿಯೋವೊಂದು ಹೆಚ್ಚಿನ ಪ್ರಚಾರ ಪಡೆದಿದೆ. ಈಗಿನ ಭಾಷೆಯಲ್ಲಿ ಹೇಳಿದರೆ "ವೈರಲ್" ಆಗಿದೆ. "ಈ ಸಂದರ್ಭದಲ್ಲಿ ನಾನು ಅಲ್ಲಿರಬೇಕೆಂದು ಅಭಿಲಾಷೆ ಇತ್ತು. ಆದರೆ ಈಚಿನ ಕೆಲವು ವಿದ್ಯಮಾನಗಳಿಂದ ಮತ್ತು ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅಲ್ಲಿರಲು ಆಗಲಿಲ್ಲ. ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಶುಭಾಶಯಗಳು" ಮುಂತಾಗಿ ಹೇಳಿರುವ ವಿಡಿಯೋ ಅದು. ಶ್ರೀ ಪ್ರಹ್ಲಾದ ಜೋಶಿ ಅವರಿಗೆ ಹೆಚ್ಚಿನ ಜವಾಬ್ದಾರಿಯಾಗಿ ವಿದ್ಯಾ ಖಾತೆಯನ್ನು ಪ್ರಧಾನಮಂತ್ರಿಗಳು ಈಚೆಗೆ ವಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು. 

"ವೈರ" ಅಥವಾ "ವೈರಸ್" ಎನ್ನುವ ಪದಕ್ಕೆ ಭಯಬೀಳುವ ಪರಿಸ್ಥಿತಿ ಒಂದು ಕಾಲದಲ್ಲಿ ಇತ್ತು. ಈಗ ವಿಡಿಯೋಗಳು ವೈರಲ್ ಆಗಲಿ ಎಂದು ಕೆಲವರು ಪ್ರಾಥಿಸುವ ಕಾಲ ಬಂದಿದೆ!

ಈ ಸಂದರ್ಭದಲ್ಲಿ ಮಿತ್ರರೊಬ್ಬರು ಒಂದು ಪ್ರಶ್ನೆ ಕೇಳಿದ್ದಾರೆ. "ಉತ್ತರಾದಿ ಮಠ" ಎನ್ನುವುದು ಬಹಳ ಪ್ರಸಿದ್ಧಿ ಪಡೆದಿದೆ. ಈ ಹೆಸರು ಹೇಗೆ ಬಂತು? "ಪೂರ್ವಾದಿ ಮಠ" ಒಂದು ಇದೆಯೇ?" ಎನ್ನುವುದು ಆ ಪ್ರಶ್ನೆ. 
******

ಶ್ರೀ ಮಧ್ವಾಚಾರ್ಯರು ಕನ್ನಡನಾಡಿನ ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅಲ್ಲಿನ ಪೂಜಾದಿಗಳ ವ್ಯವಸ್ಥೆಯನ್ನು ಚ್ಯುತಿಯಿಲ್ಲದೆ ಮುಂದುವರೆಸಲು ಎಂಟು ಮಠಗಳನ್ನು ಸ್ಥಾಪಿಸಿ ಯತಿಗಳನ್ನು ನೇಮಕ ಮಾಡಿದರು. ಇವು "ಅಷ್ಟ ಮಠಗಳು" ಎಂದು ಪ್ರಸಿದ್ಧಿ ಪಡೆದಿವೆ. ಇದೇ ರೀತಿ ಅವರ ನೇರ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥ ಮುಂತಾದವರು ದ್ವೈತ ಮತ ಪ್ರಸಾರಕ್ಕಾಗಿ ಘಟ್ಟದ ಮೇಲಿನ ಪ್ರದೇಶಗಳಿಗೆ ಮಠವನ್ನು ಮುಂದುವರೆಸಿಕೊಂಡು ಬಂದರು. ಶ್ರೀ ಪದ್ಮನಾಭ ತೀರ್ಥರ ನಂತರ ಕ್ರಮವಾಗಿ ಶ್ರೀ ನರಹರಿ ತೀರ್ಥರು, ಶ್ರೀ ಮಾಧವ ತೀರ್ಥರು, ಶ್ರೀ ಅಕ್ಷೋಭ್ಯ ತೀರ್ಥರು, ಶ್ರೀ ಜಯತೀರ್ಥರು ಮತ್ತು ಶ್ರೀ ವಿದ್ಯಾಧಿರಾಜ ತೀರ್ಥರು ನಡೆಸಿಕೊಂಡು ಬಂದರು. ಶ್ರೀ ವಿದ್ಯಾಧಿರಾಜ ತೀರ್ಥರ ಕಾಲದಲ್ಲಿ ಅವರ ಇಬ್ಬರು ಪ್ರಮುಖ ಶಿಷ್ಯರಾದ ಶ್ರೀ ರಾಜೇಂದ್ರ ತೀರ್ಥರು ಮತ್ತು ಶ್ರೀ ಕವೀಂದ್ರ ತೀರ್ಥರು, ಇವರುಗಳಿಂದ ಎರಡು ಶಾಖೆಗಳು ಆದವು. 

ಯಾವುದೇ ಒಂದು ವಸ್ತುವನ್ನು ಎರಡು ಭಾಗ ಮಾಡಿದಾಗ ಸಂಸ್ಕೃತದಲ್ಲಿ ಅವನ್ನು ಪೂರ್ವ ಭಾಗ ಮತ್ತು ಉತ್ತರ ಭಾಗ ಎಂದು ವ್ಯವಹರಿಸುವುದು ವಾಡಿಕೆ. ಇಂಗ್ಲಿಷಿನಲ್ಲಿ First Half ಮತ್ತು Second Half ಅನ್ನುವ ರೀತಿ. ಈ ಕಾರಣದಿಂದ ಶ್ರೀ ರಾಜೇಂದ್ರ ತೀರ್ಥರ ಪರಂಪರೆ "ಪೂರ್ವಾದಿ ಮಠ" ಎಂದು ಪ್ರಸಿದ್ಧವಾಯಿತು. ಶ್ರೀ ಕವೀಂದ್ರ ತೀರ್ಥರ ಪರಂಪರೆ "ಉತ್ತರಾದಿ ಮಠ" ಎಂದು ಪ್ರಸಿದ್ಧವಾಯಿತು. 

ಶ್ರೀರಾಮಚಂದ್ರನು ಜನಿಸಿದುದು ಸೂರ್ಯವಂಶದಲ್ಲಿ. ಅನೇಕ ಪ್ರಸಿದ್ಧ ರಾಜರು ಸೂರ್ಯವಂಶದಲ್ಲಿ ರಾಜ್ಯಭಾರ ಮಾಡಿದರು. ಮುಂದೆ ಬಂದ ರಘು ಮಹಾರಾಜ ತನ್ನ ಪೂರ್ವಜರಿಗಿಂತಲೂ ಹೆಚ್ಚು ಪ್ರಸಿದ್ಧನಾದನು. ಲೋಕ ವ್ಯವಹಾರದಲ್ಲಿ ಪ್ರಾರಂಭದಲ್ಲಿ ಮಕ್ಕಳನ್ನು "ಇಂತಹವರ ಮಗ" ಎಂದು ಗುರುತಿಸುತ್ತಾರೆ. ಮುಂದೆ ಮಗನು ಹೆಚ್ಚು ಪ್ರಸಿದ್ಧ ಆದಾಗ ಅವನ ತಂದೆಯನ್ನು "ಇಂತಹವರ ತಂದೆ" ಎನ್ನುತ್ತಾರೆ! ಸೂರ್ಯವಂಶದಲ್ಲಿಯೂ ಹೀಗೆಯೇ ಆಯಿತು. ಕಾಳಿದಾಸ ಮಹಾಕವಿಯ ರಘುವಂಶ ಮಹಾಕಾವ್ಯ ಇದನ್ನೇ ವಿವರಿಸುತ್ತದೆ. ರಘು ಮಹಾರಾಜನ ನಂತರ ಅವನ ಮುಂದಿನವರನ್ನು "ರಘು ವಂಶದವರು" ಎಂದು ಹೇಳುವುದು ರೂಢಿ ಆಯಿತು. ಈ ಕಾರಣದಿಂದ ಶ್ರೀರಾಮಚಂದ್ರನು ರಾಘವ ಎಂದೂ ಪ್ರಖ್ಯಾತನಾದನು.

ಪೂರ್ವದಿ ಮಠ ಪರಂಪರೆಯಲ್ಲಿ ಮುಂದೆ ಶ್ರೀ ವ್ಯಾಸತೀರ್ಥರು ಪೀಠಾಧಿಪತಿಗಳಾದರು. ವಿಜಯನಗರ ಅರಸರಾದವರಿಗೆ ರಾಜಗುರುಗಳಾಗಿ, ಅನೇಕ ಗ್ರಂಥಗಳ ಕರ್ತೃವಾಗಿ, ವಿಶೇಷ ಪಾಂಡಿತ್ಯ, ಸಮಾಜ ಸೇವೆ, ಮುಂತಾದುವುಗಳಿಂದ ಅಧಿಕ ಮನ್ನಣೆಗೆ ಪಾತ್ರರಾದರು. ಶ್ರೀ ವ್ಯಾಸ ತೀರ್ಥ ಎಂದು ಹೆಸರಿದ್ದರೂ "ವ್ಯಾಸರಾಜ" ಎಂದಾಗಿ ಸನ್ಯಾಸಿಗಳಿಗೂ ರಾಜರಂತೆ ಮೆರೆದರು. ಈ ಕಾರಣದಿಂದ "ಪೂರ್ವಾದಿ ಮಠ" ಆ ಹೆಸರಿನ ಬದಲಾಗಿ "ವ್ಯಾಸರಾಜ ಮಠ" ಎಂದು ಹೆಸರುವಾಸಿ ಆಯಿತು. 
******

ಉತ್ತರಾಧಿ ಮಠದ ಪರಂಪರೆಯಲ್ಲಿ ಶ್ರೀ ಕವೀಂದ್ರ ತೀರ್ಥರ ನಂತರ ಶ್ರೀ ವಾಗೀಶ ತೀರ್ಥರು ಮತ್ತು ಶ್ರೀ ರಾಮಚಂದ್ರ ತೀರ್ಥರು ಮುಂದುವರೆದರು. ಶ್ರೀ ರಾಮಚಂದ್ರ ತೀರ್ಥರಿಗೆ ಶ್ರೀ ವಿಬುಧೆಂದ್ರ ತೀರ್ಥರು ಮತ್ತು ಶ್ರೀ ವಿದ್ಯಾನಿಧಿ ತೀರ್ಥರು ಇಬ್ಬರು ಪ್ರಮುಖ ಶಿಷ್ಯರು. ಆ ಕಾಲದಲ್ಲಿ ಮತ್ತೆ ಎರಡು ಭಾಗವಾಗಿ ಶ್ರೀ ವಿಭುದೇಂದ್ರ ತೀರ್ಥರ ಮೊದಲ ಭಾಗ (ಪೂರ್ವದಿ ಮಠ ಆಗಲೇ ಇದ್ದ ಕಾರಣ) ತಮಿಳುನಾಡಿನ ಕುಂಭಕೋಣಂ ಎಂಬ ಸ್ಥಳದಲ್ಲಿ ಇದ್ದುದರಿಂದ "ಕುಂಭಕೋಣ ಮಠ" ಎಂದು ಹೆಸರುವಾಸಿ ಆಯಿತು. ಶ್ರೀ ವಿದ್ಯಾನಿಧಿ ತೀರ್ಥರ ಪರಂಪರೆ ಉತ್ತರಾದಿ ಮಠ ಎಂದು ಮುಂದುವರೆಯಿತು. 

ಈ ಕುಂಭಕೋಣ ಮಠದಲ್ಲಿ ಕಾಲಕ್ರಮದಲ್ಲಿ ಶ್ರೀ ವಿಭುದೇಂದ್ರ ತೀರ್ಥರ ಸಂತತಿಯಲ್ಲಿ, ಅವರ ನಂತರ ಆರನೆಯವರಾಗಿ ಶ್ರೀ ರಾಘವೇಂದ್ರ ತೀರ್ಥರು ಪಟ್ಟ ಏರಿದರು. ಶ್ರೀ ರಾಘವೇಂದ್ರ ತೀರ್ಥರು ಅತ್ಯಧಿಕ ಹೆಸರುವಾಸಿಯಾಗಿ ಶ್ರೀ ರಾಯರು ಎಂದು ಕರೆಸಿಕೊಳ್ಳುತ್ತಾರೆ. ಅವರು ವೃಂದಾವನಸ್ಥರಾದದ್ದು ಆಂಧ್ರ ಪ್ರದೇಶದ ಮಂತ್ರಾಲಯದಲ್ಲಿ. ಶ್ರೀ ವ್ಯಾಸತೀರ್ಥರ ಕಾರಣ ಪೂರ್ವಾದಿ ಮಠ ವ್ಯಾಸರಾಜ ಮಠ ಆದಂತೆ, ಶ್ರೀ ರಾಘವೇಂದ್ರ ತೀರ್ಥರ ಕಾರಣ ಕುಂಭಕೋಣ ಮಠ "ರಾಯರ ಮಠ" ಅಥವಾ "ಮಂತ್ರಾಲಯ ಮಠ" ಎಂದು ಪ್ರಸಿದ್ಧವಾಗಿದೆ. 

******


ಸುಮಾರು 1535 ಇಸವಿಯ ಕಾಲ. ಶ್ರೀ ವ್ಯಾಸರಾಯರು (1460-1539) ಪೂರ್ವಾದಿ ಮಠದ ಅಧಿಪತಿಯಾಗಿ ಇದ್ದ ದಿನಗಳು. ಅವರ ಬಳಿ ಒಂದು ಬಲು ದೊಡ್ಡ ಶಿಷ್ಯ ವೃಂದವೇ ಇತ್ತು. ವಿಜಯನಗರದ ರಾಜಗುರುಗಳು. ಶ್ರೀ ಕೃಷ್ಣದೇವರಾಯ ಮೊದಲಾದ ರಾಜರು ಅವರ ಆಜ್ಞಾಧಾರಕರಾಗಿ ನಡೆಯುತ್ತಿದ್ದ ಸಮಯ. ಶ್ರೀಕೃಷ್ಣದೇವರಾಯ ರಾಜ್ಯ ಆಳಿದ (1509-1529) ಕಾಲ ಕಳೆದು ಅವನ ತಮ್ಮ ಶ್ರೀ ಅಚ್ಯುತ ದೇವರಾಯ ರಾಜನಾಗಿದ್ದ ಸಮಯ. ಬ್ರಹ್ಮಚಾರಿ ಮತ್ತು ಗೃಹಸ್ಥ ಶಿಷ್ಯರಲ್ಲದೇ ಅನೇಕ ಸನ್ಯಾಸಿ ಶಿಷ್ಯರೂ ಶ್ರೀ ವ್ಯಾಸರಾಜರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಶ್ರೀ ಕೇಶವ ತೀರ್ಥ ಅನ್ನುವ ಹೆಸರಿನಿಂದ ಶ್ರೀ ಕೃಷ್ಣ ತೀರ್ಥ ಅನ್ನುವವರೆಗೆ 24 ಸನ್ಯಾಸಿ ಶಿಷ್ಯರು ಅವರಲ್ಲಿ ಇದ್ದರಂತೆ. 

ಈ ಶಿಷ್ಯರಲ್ಲಿ ಐದನೆಯವರು ಶ್ರೀ ವಿಷ್ಣು ತೀರ್ಥ. ಬಲು ಚೂಟಿ ಬಾಲ ಸನ್ಯಾಸಿ. ಶ್ರೀ ವ್ಯಾಸ ತೀರ್ಥರ ಬಳಿ ಅನೇಕ ಬಾರಿ ಶ್ರೀಮನ್ ನ್ಯಾಯಸುಧಾ ಮತ್ತು ಸರ್ವಮೂಲ ಗ್ರಂಥ ಪಾಠ ಕಲಿತಿದ್ದರೆಂದು ಉಲ್ಲೇಖವಿದೆ. (ಶ್ರೀ ಮಧ್ವಾಚಾರ್ಯರ ಸಮಸ್ತ ಕೃತಿಗಳ ಒಟ್ಟು ಹೆಸರು "ಸರ್ವಮೂಲ ಗ್ರಂಥಗಳು" ಎಂದು). ಒಂದೊಂದು ಬಾರಿ ಪಾಠ ಹೇಳುವಾಗಲೂ ಹೊಸ ಹೊಸ ವಿಷಯಗಳು. ಹೇಳಿದ್ದನ್ನೇ ಹೇಳಿದರು ಅನ್ನುವಂತಿಲ್ಲ. ಶ್ರೀ ವ್ಯಾಸತೀರ್ಥರ ಸಂಸ್ಥಾನ ಪೂಜೆಗೆ ಬೆಳಗಿನ ವೇಳೆ ಹೂವು-ತುಳಸಿ ಹೊಂದಿಸಿಡುವುದು ಈ ವಿಷ್ಣುತೀರ್ಥರ ಕೆಲಸ. ಒಂದು ದಿನ ಬೆಳಗ್ಗೆ ಶ್ರೀ ವ್ಯಾಸತೀರ್ಥರು ಪೂಜಾಸಮಯಕ್ಕೆ ಬಂದು ಕುಳಿತರು. ಎದುರಿಗಿದ್ದ ತುಳಸಿ ಅವರ ಕಣ್ಣಿಗೆ ಬಿತ್ತು.

"ವಿಷ್ಣು ತೀರ್ಥ, ತುಳಸಿ ಎಲ್ಲಿಂದ ತಂದೆ?"
"ನದಿಯ ದಂಡೆಯ ತೋಟದಿಂದ ಗುರುಗಳೇ"
"ಇದು ಆಗಲೇ ಪರಮಾತ್ಮನಿಗೆ ಅರ್ಪಣೆ ಆಗಿದೆ. ಇದು ನಿರ್ಮಾಲ್ಯ"
"ಗಿಡದಿಂದ ನಾನೇ ಬಿಡಿಸಿ ತಂದಿದ್ದು, ಗುರುಗಳೇ"
"ಇರಬಹುದು. ಆದರೆ ಇದು ಅರ್ಪಣೆ ಆಗಿದೆ. ಬೇರೆ ತೆಗೆದುಕೊಂಡು ಬಾ"

ಬೇರೆ ತುಳಸಿ ತಂದು ಪೂಜೆ ನಡೆಯಿತು. (ಒಮ್ಮೆ ಅರ್ಪಿತವಾದ ಹೂವು ಮತ್ತೆ ಬಳಸುವಂತಿಲ್ಲ. ಆದರೆ ತುಳಸಿಗೆ ಹಾಗಲ್ಲ. ಒಮ್ಮೆ ಅರ್ಪಿಸಿದ್ದರೂ, ಬೇರೆ ಇಲ್ಲದಿದ್ದರೆ ಪೂಜಿಸಿದ ತುಳಸಿಯನ್ನು ತೊಳೆದು ಮತ್ತೆ ಉಪಯೋಗಿಸಬಹುದಂತೆ).

"ವಿಷ್ಣು ತೀರ್ಥ, ನದಿ ದಂಡೆಗೆ ಮತ್ತೆ ಹೋಗು. ಸುತ್ತ ಮುತ್ತ ನೋಡು. ಅಲ್ಲಿ ಯಾರೋ ಮಹಾತ್ಮರು ಬಂದಿದ್ದಾರೆ. ಅವರನ್ನು ಕಂಡು, ಇಲ್ಲಿಗೆ ಕರೆದುಕೊಂಡು ಬಾ"

ವಿಷ್ಣು ತೀರ್ಥರು ಮತ್ತೆ ಅಲ್ಲಿಗೆ ಹೋದರು. ಗುರುಗಳು ಹೇಳಿದ್ದಂತೆ ಅಲ್ಲಿ ತೇಜಸ್ವಿಯಾದ ಸನ್ಯಾಸಿ ಒಬ್ಬರು ಕೆಲ ಶಿಷ್ಯರ ಜೊತೆ ಬಿಡಾರ ಮಾಡಿದ್ದರು. ನಯ-ವಿನಯಗಳಿಂದ ಅವರನ್ನು ಕರೆದುಕೊಂಡು ಬಂದರು.

ಬಂದವರು ಕುಂಭಕೋಣ ಮಠದ ಪರಂಪರೆಯಿಂದ ಬಂದ ಶ್ರೀ ಸುರೇಂದ್ರ ತೀರ್ಥರು. ಶ್ರೀ ಸುರೇಂದ್ರ ತೀರ್ಥರು (1504-1575) ಮಹಾತಪಸ್ವಿಗಳು. ಗಿಡಗಳಿದ್ದ ಇಡೀ ತುಳಸಿಯ ವನವನ್ನೇ ಮಾನಸ ಪೂಜೆ ಮಾಡಿ ಪರಮಾತ್ಮನಿಗೆ ಅರ್ಪಿಸಿದ್ದರು. ಅವರು ಉಪವಾಸ ವ್ರತಗಳಲ್ಲಿ ಎತ್ತಿದ ಕೈ. ಮೂರು ಬಾರಿ ಪಾದಚಾರಿಯಾಗಿ ಇಡೀ ದೇಶ ಸಂಚಾರ ಮಾಡಿದ ಧೀಮಂತರು. ವ್ಯಾಸರಾಜರಿಗಿಂತ ವಯಸ್ಸಿನಲ್ಲಿ ನಲವತ್ತು ವರುಷದಷ್ಟು ಚಿಕ್ಕವರು. ಹಾಲು-ಜೇನು ಬೆರೆತಂತೆ ಆಯಿತು.

****** 

ಮಾರನೆಯ ದಿನ ಭಿಕ್ಷಾಸ್ವೀಕಾರದ ಸಮಯ. ಶ್ರೀ ಸುರೇಂದ್ರ ತೀರ್ಥರು ಅಂಗಯ್ಯಲ್ಲಿ ತೀರ್ಥ ಹಿಡಿದು ಹಾಗೆಯೇ ಕುಳಿತರು. ಶ್ರೀ ವ್ಯಾಸತೀರ್ಥರು ನೋಡಿದರು.

"ಎಲ್ಲ ಆಯಿತು. ತಾವು ಧರಿಸಬಹುದು"
"ತಮ್ಮಲ್ಲಿ ನಮ್ಮದೊಂದು ಕೋರಿಕೆ ಇದೆ"
"ನಮ್ಮಲ್ಲಿ ಕೋರಿಕೆಯೇ? ನಿಮಗೆ ಕೊಡಬಹುದಾದದ್ದು ನಮ್ಮಲ್ಲಿ ಏನಿದೆ? ಮಠದ ಪಟ್ಟದ ದೇವರನ್ನು ನಾವು ಕೊಡುವಂತಿಲ್ಲ. ಈ ವಿಷ್ಣು ತೀರ್ಥ ನಮ್ಮ ಪ್ರಿಯ ಶಿಷ್ಯ. ಇವೆರಡನ್ನು ಬಿಟ್ಟು ಬೇರೆ ಏನನ್ನು ಕೇಳಿದರೂ ನಾವು ಕೊಡಲು ಸಿದ್ಧರಿದ್ದೇವೆ. ಸಂಕೋಚವಿಲ್ಲದೆ ಹೇಳಿ"
"ಪಟ್ಟದ ದೇವರನ್ನು ನಾವು ಕೇಳುವುದಿಲ್ಲ. ನಮಗೆ ನಮ್ಮ ಗುರುಗಳಿಂದ ಬಂದಿರುವುದು ಇದೆ"
"ಹಾಗಿದ್ದರೆ ಮತ್ತೇನು?"
"ನಮಗೆ ವಿಷ್ಣು ತೀರ್ಥರನ್ನು ಕೊಡಿ"
"ಇದೇ ಆಗಬೇಕೇ?"
"ನಮಗೆ ಅವರೇ ಬೇಕು"
"ಇದೇ ತಮ್ಮ ಇಚ್ಛೆಯೇ?"
"ಹೌದು. ಹಾಗೆಂದು ನಮಗೆ ಶ್ರೀಹರಿಯ ಪ್ರೇರಣೆ ಆಗಿದೆ"
"ಸರಿ. ಆಗಬಹುದು. ಆಪೋಶನ ಧರಿಸಿರಿ"

ಭಿಕ್ಷಾಸ್ವೀಕಾರ ಆಯಿತು. ಪ್ರಾಯಶಃ ಶ್ರೀ ವ್ಯಾಸತೀರ್ಥರು ವಿಷ್ಣು ತೀರ್ಥರನ್ನು ತಮ್ಮ ಮುಂದೆ ಪಟ್ಟಕ್ಕೆ ಇರಲಿ ಎಂದುಕೊಂಡಿದ್ದಿರಬಹುದು. ಕೊಟ್ಟ ಮಾತಿನಂತೆ ಶ್ರೀ ವಿಷ್ಣುತೀರ್ಥರು ಪೂರ್ವಾದಿ ಮಠದಿಂದ ಕುಂಭಕೋಣ ಮಠಕ್ಕೆ ವರ್ಗಾವಣೆ ಆದರ

ಬಾಲಕರನ್ನು "ದತ್ತು ಸ್ವೀಕಾರ" ಮಾಡುವಾಗ ಹಾಗೆ ದತ್ತು ತೆಗೆದುಕೊಂಡವರು ತಮ್ಮ ಮನೆತನಕ್ಕೆ ತಕ್ಕುದಾಗಿ ಹೆಸರು ಬದಲಿಸುವ ಪದ್ಧತಿ ಉಂಟು. ಮನೆಗೆ ಮದುವೆಯಾಗಿ ಬಂದ ಸೊಸೆಗೆ ಹೀಗೇ ಹೆಸರು ಬಲಿಸುವ ಪದ್ಧತಿ ಅನೇಕ ಮನೆತನಗಳಲ್ಲಿ ಉಂಟು. ಸನ್ಯಾಸಿಗಳನ್ನು ಹೀಗೆ ದತ್ತು ಸ್ವೀಕಾರ ಮಾಡುವಾಗ "ದಂಡ ಪಲ್ಲಟ" ಅನ್ನುವ ಕ್ರಮದಂತೆ ಅವರ ದಂಡ (ಸನ್ಯಾಸಿಗಳು ಹಿಡಿದಿರುವ ಕೋಲು) ಬದಲಾಯಿಸಿ ಸ್ವೀಕರಿಸುತ್ತಾರೆ. 

ಹೀಗೆ ಮಾಡಿದಾಗ ಶ್ರೀ ವಿಷ್ಣು ತೀರ್ಥರು "ಶ್ರೀ ವಿಜಯೇಂದ್ರ ತೀರ್ಥ" ಎಂದು ಹೆಸರು ಪಡೆದು ಕುಂಭಕೋಣ ಮಠದಲ್ಲಿ ಪ್ರಖ್ಯಾತರಾದರು. 104 ಗ್ರಂಥಗಳನ್ನು ರಚಿಸಿ, ಮಹಾನ್ ಪಂಡಿತರನ್ನು ಜಯಿಸಿ ಹೆಸರಿಗೆ ತಕ್ಕಂತೆ ವಿಜಯೇಂದ್ರರೇ ಆದರು.

*******

ಶ್ರೀ ರಾಘವೇಂದ್ರ ರಾಯರ ಸ್ತೋತ್ರದಲ್ಲಿ "ವಿಜಯೇಂದ್ರ ಕರಾಬ್ಜೋತ್ಥಾ ಸುಧೀಂದ್ರ ವರಪುತ್ರಕಃ" ಎಂದು ಹೇಳುತ್ತೇವೆ. ಶ್ರೀ ವಿಜಯೇಂದ್ರ ಗುರುಗಳ ಶಿಷ್ಯರು ಶ್ರೀ ಸುಧೀಂದ್ರ ತೀರ್ಥರು. ಶ್ರೀ ಸುಧೀಂದ್ರ ತೀರ್ಥರ ಶಿಷ್ಯರೇ ಶ್ರೀ ರಾಘವೇಂದ್ರ ಗುರು ಸಾರ್ವಭೌಮರು.