ಕಳೆದ ವಾರ ಧಾರವಾಡದಲ್ಲಿ ನಡೆದ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯ ಪುರ ಪ್ರವೇಶ ಸಂದರ್ಭದಲ್ಲಿ ಆ ಪ್ರದೇಶದ ಸಂಸತ್ ಸದಸ್ಯರೂ, ಕೇಂದ್ರ ಸರ್ಕಾರದ ಮಂತ್ರಿಗಳೂ ಆದ ಶ್ರೀ ಪ್ರಹ್ಲಾದ್ ಜೋಶಿ ಅವರ ಸ್ವಾಗತ ಭಾಷಣದ ವಿಡಿಯೋವೊಂದು ಹೆಚ್ಚಿನ ಪ್ರಚಾರ ಪಡೆದಿದೆ. ಈಗಿನ ಭಾಷೆಯಲ್ಲಿ ಹೇಳಿದರೆ "ವೈರಲ್" ಆಗಿದೆ. "ಈ ಸಂದರ್ಭದಲ್ಲಿ ನಾನು ಅಲ್ಲಿರಬೇಕೆಂದು ಅಭಿಲಾಷೆ ಇತ್ತು. ಆದರೆ ಈಚಿನ ಕೆಲವು ವಿದ್ಯಮಾನಗಳಿಂದ ಮತ್ತು ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅಲ್ಲಿರಲು ಆಗಲಿಲ್ಲ. ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಶುಭಾಶಯಗಳು" ಮುಂತಾಗಿ ಹೇಳಿರುವ ವಿಡಿಯೋ ಅದು. ಶ್ರೀ ಪ್ರಹ್ಲಾದ ಜೋಶಿ ಅವರಿಗೆ ಹೆಚ್ಚಿನ ಜವಾಬ್ದಾರಿಯಾಗಿ ವಿದ್ಯಾ ಖಾತೆಯನ್ನು ಪ್ರಧಾನಮಂತ್ರಿಗಳು ಈಚೆಗೆ ವಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
"ವೈರ" ಅಥವಾ "ವೈರಸ್" ಎನ್ನುವ ಪದಕ್ಕೆ ಭಯಬೀಳುವ ಪರಿಸ್ಥಿತಿ ಒಂದು ಕಾಲದಲ್ಲಿ ಇತ್ತು. ಈಗ ವಿಡಿಯೋಗಳು ವೈರಲ್ ಆಗಲಿ ಎಂದು ಕೆಲವರು ಪ್ರಾಥಿಸುವ ಕಾಲ ಬಂದಿದೆ!
ಈ ಸಂದರ್ಭದಲ್ಲಿ ಮಿತ್ರರೊಬ್ಬರು ಒಂದು ಪ್ರಶ್ನೆ ಕೇಳಿದ್ದಾರೆ. "ಉತ್ತರಾದಿ ಮಠ" ಎನ್ನುವುದು ಬಹಳ ಪ್ರಸಿದ್ಧಿ ಪಡೆದಿದೆ. ಈ ಹೆಸರು ಹೇಗೆ ಬಂತು? "ಪೂರ್ವಾದಿ ಮಠ" ಒಂದು ಇದೆಯೇ?" ಎನ್ನುವುದು ಆ ಪ್ರಶ್ನೆ.
******
ಶ್ರೀ ಮಧ್ವಾಚಾರ್ಯರು ಕನ್ನಡನಾಡಿನ ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅಲ್ಲಿನ ಪೂಜಾದಿಗಳ ವ್ಯವಸ್ಥೆಯನ್ನು ಚ್ಯುತಿಯಿಲ್ಲದೆ ಮುಂದುವರೆಸಲು ಎಂಟು ಮಠಗಳನ್ನು ಸ್ಥಾಪಿಸಿ ಯತಿಗಳನ್ನು ನೇಮಕ ಮಾಡಿದರು. ಇವು "ಅಷ್ಟ ಮಠಗಳು" ಎಂದು ಪ್ರಸಿದ್ಧಿ ಪಡೆದಿವೆ. ಇದೇ ರೀತಿ ಅವರ ನೇರ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥ ಮುಂತಾದವರು ದ್ವೈತ ಮತ ಪ್ರಸಾರಕ್ಕಾಗಿ ಘಟ್ಟದ ಮೇಲಿನ ಪ್ರದೇಶಗಳಿಗೆ ಮಠವನ್ನು ಮುಂದುವರೆಸಿಕೊಂಡು ಬಂದರು. ಶ್ರೀ ಪದ್ಮನಾಭ ತೀರ್ಥರ ನಂತರ ಕ್ರಮವಾಗಿ ಶ್ರೀ ನರಹರಿ ತೀರ್ಥರು, ಶ್ರೀ ಮಾಧವ ತೀರ್ಥರು, ಶ್ರೀ ಅಕ್ಷೋಭ್ಯ ತೀರ್ಥರು, ಶ್ರೀ ಜಯತೀರ್ಥರು ಮತ್ತು ಶ್ರೀ ವಿದ್ಯಾಧಿರಾಜ ತೀರ್ಥರು ನಡೆಸಿಕೊಂಡು ಬಂದರು. ಶ್ರೀ ವಿದ್ಯಾಧಿರಾಜ ತೀರ್ಥರ ಕಾಲದಲ್ಲಿ ಅವರ ಇಬ್ಬರು ಪ್ರಮುಖ ಶಿಷ್ಯರಾದ ಶ್ರೀ ರಾಜೇಂದ್ರ ತೀರ್ಥರು ಮತ್ತು ಶ್ರೀ ಕವೀಂದ್ರ ತೀರ್ಥರು, ಇವರುಗಳಿಂದ ಎರಡು ಶಾಖೆಗಳು ಆದವು.
ಯಾವುದೇ ಒಂದು ವಸ್ತುವನ್ನು ಎರಡು ಭಾಗ ಮಾಡಿದಾಗ ಸಂಸ್ಕೃತದಲ್ಲಿ ಅವನ್ನು ಪೂರ್ವ ಭಾಗ ಮತ್ತು ಉತ್ತರ ಭಾಗ ಎಂದು ವ್ಯವಹರಿಸುವುದು ವಾಡಿಕೆ. ಇಂಗ್ಲಿಷಿನಲ್ಲಿ First Half ಮತ್ತು Second Half ಅನ್ನುವ ರೀತಿ. ಈ ಕಾರಣದಿಂದ ಶ್ರೀ ರಾಜೇಂದ್ರ ತೀರ್ಥರ ಪರಂಪರೆ "ಪೂರ್ವಾದಿ ಮಠ" ಎಂದು ಪ್ರಸಿದ್ಧವಾಯಿತು. ಶ್ರೀ ಕವೀಂದ್ರ ತೀರ್ಥರ ಪರಂಪರೆ "ಉತ್ತರಾದಿ ಮಠ" ಎಂದು ಪ್ರಸಿದ್ಧವಾಯಿತು.
ಶ್ರೀರಾಮಚಂದ್ರನು ಜನಿಸಿದುದು ಸೂರ್ಯವಂಶದಲ್ಲಿ. ಅನೇಕ ಪ್ರಸಿದ್ಧ ರಾಜರು ಸೂರ್ಯವಂಶದಲ್ಲಿ ರಾಜ್ಯಭಾರ ಮಾಡಿದರು. ಮುಂದೆ ಬಂದ ರಘು ಮಹಾರಾಜ ತನ್ನ ಪೂರ್ವಜರಿಗಿಂತಲೂ ಹೆಚ್ಚು ಪ್ರಸಿದ್ಧನಾದನು. ಲೋಕ ವ್ಯವಹಾರದಲ್ಲಿ ಪ್ರಾರಂಭದಲ್ಲಿ ಮಕ್ಕಳನ್ನು "ಇಂತಹವರ ಮಗ" ಎಂದು ಗುರುತಿಸುತ್ತಾರೆ. ಮುಂದೆ ಮಗನು ಹೆಚ್ಚು ಪ್ರಸಿದ್ಧ ಆದಾಗ ಅವನ ತಂದೆಯನ್ನು "ಇಂತಹವರ ತಂದೆ" ಎನ್ನುತ್ತಾರೆ! ಸೂರ್ಯವಂಶದಲ್ಲಿಯೂ ಹೀಗೆಯೇ ಆಯಿತು. ಕಾಳಿದಾಸ ಮಹಾಕವಿಯ ರಘುವಂಶ ಮಹಾಕಾವ್ಯ ಇದನ್ನೇ ವಿವರಿಸುತ್ತದೆ. ರಘು ಮಹಾರಾಜನ ನಂತರ ಅವನ ಮುಂದಿನವರನ್ನು "ರಘು ವಂಶದವರು" ಎಂದು ಹೇಳುವುದು ರೂಢಿ ಆಯಿತು. ಈ ಕಾರಣದಿಂದ ಶ್ರೀರಾಮಚಂದ್ರನು ರಾಘವ ಎಂದೂ ಪ್ರಖ್ಯಾತನಾದನು.
ಪೂರ್ವದಿ ಮಠ ಪರಂಪರೆಯಲ್ಲಿ ಮುಂದೆ ಶ್ರೀ ವ್ಯಾಸತೀರ್ಥರು ಪೀಠಾಧಿಪತಿಗಳಾದರು. ವಿಜಯನಗರ ಅರಸರಾದವರಿಗೆ ರಾಜಗುರುಗಳಾಗಿ, ಅನೇಕ ಗ್ರಂಥಗಳ ಕರ್ತೃವಾಗಿ, ವಿಶೇಷ ಪಾಂಡಿತ್ಯ, ಸಮಾಜ ಸೇವೆ, ಮುಂತಾದುವುಗಳಿಂದ ಅಧಿಕ ಮನ್ನಣೆಗೆ ಪಾತ್ರರಾದರು. ಶ್ರೀ ವ್ಯಾಸ ತೀರ್ಥ ಎಂದು ಹೆಸರಿದ್ದರೂ "ವ್ಯಾಸರಾಜ" ಎಂದಾಗಿ ಸನ್ಯಾಸಿಗಳಿಗೂ ರಾಜರಂತೆ ಮೆರೆದರು. ಈ ಕಾರಣದಿಂದ "ಪೂರ್ವಾದಿ ಮಠ" ಆ ಹೆಸರಿನ ಬದಲಾಗಿ "ವ್ಯಾಸರಾಜ ಮಠ" ಎಂದು ಹೆಸರುವಾಸಿ ಆಯಿತು.
******
ಉತ್ತರಾಧಿ ಮಠದ ಪರಂಪರೆಯಲ್ಲಿ ಶ್ರೀ ಕವೀಂದ್ರ ತೀರ್ಥರ ನಂತರ ಶ್ರೀ ವಾಗೀಶ ತೀರ್ಥರು ಮತ್ತು ಶ್ರೀ ರಾಮಚಂದ್ರ ತೀರ್ಥರು ಮುಂದುವರೆದರು. ಶ್ರೀ ರಾಮಚಂದ್ರ ತೀರ್ಥರಿಗೆ ಶ್ರೀ ವಿಬುಧೆಂದ್ರ ತೀರ್ಥರು ಮತ್ತು ಶ್ರೀ ವಿದ್ಯಾನಿಧಿ ತೀರ್ಥರು ಇಬ್ಬರು ಪ್ರಮುಖ ಶಿಷ್ಯರು. ಆ ಕಾಲದಲ್ಲಿ ಮತ್ತೆ ಎರಡು ಭಾಗವಾಗಿ ಶ್ರೀ ವಿಭುದೇಂದ್ರ ತೀರ್ಥರ ಮೊದಲ ಭಾಗ (ಪೂರ್ವದಿ ಮಠ ಆಗಲೇ ಇದ್ದ ಕಾರಣ) ತಮಿಳುನಾಡಿನ ಕುಂಭಕೋಣಂ ಎಂಬ ಸ್ಥಳದಲ್ಲಿ ಇದ್ದುದರಿಂದ "ಕುಂಭಕೋಣ ಮಠ" ಎಂದು ಹೆಸರುವಾಸಿ ಆಯಿತು. ಶ್ರೀ ವಿದ್ಯಾನಿಧಿ ತೀರ್ಥರ ಪರಂಪರೆ ಉತ್ತರಾದಿ ಮಠ ಎಂದು ಮುಂದುವರೆಯಿತು.
ಈ ಕುಂಭಕೋಣ ಮಠದಲ್ಲಿ ಕಾಲಕ್ರಮದಲ್ಲಿ ಶ್ರೀ ವಿಭುದೇಂದ್ರ ತೀರ್ಥರ ಸಂತತಿಯಲ್ಲಿ, ಅವರ ನಂತರ ಆರನೆಯವರಾಗಿ ಶ್ರೀ ರಾಘವೇಂದ್ರ ತೀರ್ಥರು ಪಟ್ಟ ಏರಿದರು. ಶ್ರೀ ರಾಘವೇಂದ್ರ ತೀರ್ಥರು ಅತ್ಯಧಿಕ ಹೆಸರುವಾಸಿಯಾಗಿ ಶ್ರೀ ರಾಯರು ಎಂದು ಕರೆಸಿಕೊಳ್ಳುತ್ತಾರೆ. ಅವರು ವೃಂದಾವನಸ್ಥರಾದದ್ದು ಆಂಧ್ರ ಪ್ರದೇಶದ ಮಂತ್ರಾಲಯದಲ್ಲಿ. ಶ್ರೀ ವ್ಯಾಸತೀರ್ಥರ ಕಾರಣ ಪೂರ್ವಾದಿ ಮಠ ವ್ಯಾಸರಾಜ ಮಠ ಆದಂತೆ, ಶ್ರೀ ರಾಘವೇಂದ್ರ ತೀರ್ಥರ ಕಾರಣ ಕುಂಭಕೋಣ ಮಠ "ರಾಯರ ಮಠ" ಅಥವಾ "ಮಂತ್ರಾಲಯ ಮಠ" ಎಂದು ಪ್ರಸಿದ್ಧವಾಗಿದೆ.
******
ಸುಮಾರು 1535 ಇಸವಿಯ ಕಾಲ. ಶ್ರೀ ವ್ಯಾಸರಾಯರು (1460-1539) ಪೂರ್ವಾದಿ ಮಠದ ಅಧಿಪತಿಯಾಗಿ ಇದ್ದ ದಿನಗಳು. ಅವರ ಬಳಿ ಒಂದು ಬಲು ದೊಡ್ಡ ಶಿಷ್ಯ ವೃಂದವೇ ಇತ್ತು. ವಿಜಯನಗರದ ರಾಜಗುರುಗಳು. ಶ್ರೀ ಕೃಷ್ಣದೇವರಾಯ ಮೊದಲಾದ ರಾಜರು ಅವರ ಆಜ್ಞಾಧಾರಕರಾಗಿ ನಡೆಯುತ್ತಿದ್ದ ಸಮಯ. ಶ್ರೀಕೃಷ್ಣದೇವರಾಯ ರಾಜ್ಯ ಆಳಿದ (1509-1529) ಕಾಲ ಕಳೆದು ಅವನ ತಮ್ಮ ಶ್ರೀ ಅಚ್ಯುತ ದೇವರಾಯ ರಾಜನಾಗಿದ್ದ ಸಮಯ. ಬ್ರಹ್ಮಚಾರಿ ಮತ್ತು ಗೃಹಸ್ಥ ಶಿಷ್ಯರಲ್ಲದೇ ಅನೇಕ ಸನ್ಯಾಸಿ ಶಿಷ್ಯರೂ ಶ್ರೀ ವ್ಯಾಸರಾಜರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಶ್ರೀ ಕೇಶವ ತೀರ್ಥ ಅನ್ನುವ ಹೆಸರಿನಿಂದ ಶ್ರೀ ಕೃಷ್ಣ ತೀರ್ಥ ಅನ್ನುವವರೆಗೆ 24 ಸನ್ಯಾಸಿ ಶಿಷ್ಯರು ಅವರಲ್ಲಿ ಇದ್ದರಂತೆ.
ಈ ಶಿಷ್ಯರಲ್ಲಿ ಐದನೆಯವರು ಶ್ರೀ ವಿಷ್ಣು ತೀರ್ಥ. ಬಲು ಚೂಟಿ ಬಾಲ ಸನ್ಯಾಸಿ. ಶ್ರೀ ವ್ಯಾಸ ತೀರ್ಥರ ಬಳಿ ಅನೇಕ ಬಾರಿ ಶ್ರೀಮನ್ ನ್ಯಾಯಸುಧಾ ಮತ್ತು ಸರ್ವಮೂಲ ಗ್ರಂಥ ಪಾಠ ಕಲಿತಿದ್ದರೆಂದು ಉಲ್ಲೇಖವಿದೆ. (ಶ್ರೀ ಮಧ್ವಾಚಾರ್ಯರ ಸಮಸ್ತ ಕೃತಿಗಳ ಒಟ್ಟು ಹೆಸರು "ಸರ್ವಮೂಲ ಗ್ರಂಥಗಳು" ಎಂದು). ಒಂದೊಂದು ಬಾರಿ ಪಾಠ ಹೇಳುವಾಗಲೂ ಹೊಸ ಹೊಸ ವಿಷಯಗಳು. ಹೇಳಿದ್ದನ್ನೇ ಹೇಳಿದರು ಅನ್ನುವಂತಿಲ್ಲ. ಶ್ರೀ ವ್ಯಾಸತೀರ್ಥರ ಸಂಸ್ಥಾನ ಪೂಜೆಗೆ ಬೆಳಗಿನ ವೇಳೆ ಹೂವು-ತುಳಸಿ ಹೊಂದಿಸಿಡುವುದು ಈ ವಿಷ್ಣುತೀರ್ಥರ ಕೆಲಸ. ಒಂದು ದಿನ ಬೆಳಗ್ಗೆ ಶ್ರೀ ವ್ಯಾಸತೀರ್ಥರು ಪೂಜಾಸಮಯಕ್ಕೆ ಬಂದು ಕುಳಿತರು. ಎದುರಿಗಿದ್ದ ತುಳಸಿ ಅವರ ಕಣ್ಣಿಗೆ ಬಿತ್ತು.
"ವಿಷ್ಣು ತೀರ್ಥ, ತುಳಸಿ ಎಲ್ಲಿಂದ ತಂದೆ?""ನದಿಯ ದಂಡೆಯ ತೋಟದಿಂದ ಗುರುಗಳೇ""ಇದು ಆಗಲೇ ಪರಮಾತ್ಮನಿಗೆ ಅರ್ಪಣೆ ಆಗಿದೆ. ಇದು ನಿರ್ಮಾಲ್ಯ""ಗಿಡದಿಂದ ನಾನೇ ಬಿಡಿಸಿ ತಂದಿದ್ದು, ಗುರುಗಳೇ""ಇರಬಹುದು. ಆದರೆ ಇದು ಅರ್ಪಣೆ ಆಗಿದೆ. ಬೇರೆ ತೆಗೆದುಕೊಂಡು ಬಾ"
ಬೇರೆ ತುಳಸಿ ತಂದು ಪೂಜೆ ನಡೆಯಿತು. (ಒಮ್ಮೆ ಅರ್ಪಿತವಾದ ಹೂವು ಮತ್ತೆ ಬಳಸುವಂತಿಲ್ಲ. ಆದರೆ ತುಳಸಿಗೆ ಹಾಗಲ್ಲ. ಒಮ್ಮೆ ಅರ್ಪಿಸಿದ್ದರೂ, ಬೇರೆ ಇಲ್ಲದಿದ್ದರೆ ಪೂಜಿಸಿದ ತುಳಸಿಯನ್ನು ತೊಳೆದು ಮತ್ತೆ ಉಪಯೋಗಿಸಬಹುದಂತೆ).
"ವಿಷ್ಣು ತೀರ್ಥ, ನದಿ ದಂಡೆಗೆ ಮತ್ತೆ ಹೋಗು. ಸುತ್ತ ಮುತ್ತ ನೋಡು. ಅಲ್ಲಿ ಯಾರೋ ಮಹಾತ್ಮರು ಬಂದಿದ್ದಾರೆ. ಅವರನ್ನು ಕಂಡು, ಇಲ್ಲಿಗೆ ಕರೆದುಕೊಂಡು ಬಾ"
ವಿಷ್ಣು ತೀರ್ಥರು ಮತ್ತೆ ಅಲ್ಲಿಗೆ ಹೋದರು. ಗುರುಗಳು ಹೇಳಿದ್ದಂತೆ ಅಲ್ಲಿ ತೇಜಸ್ವಿಯಾದ ಸನ್ಯಾಸಿ ಒಬ್ಬರು ಕೆಲ ಶಿಷ್ಯರ ಜೊತೆ ಬಿಡಾರ ಮಾಡಿದ್ದರು. ನಯ-ವಿನಯಗಳಿಂದ ಅವರನ್ನು ಕರೆದುಕೊಂಡು ಬಂದರು.
ಬಂದವರು ಕುಂಭಕೋಣ ಮಠದ ಪರಂಪರೆಯಿಂದ ಬಂದ ಶ್ರೀ ಸುರೇಂದ್ರ ತೀರ್ಥರು. ಶ್ರೀ ಸುರೇಂದ್ರ ತೀರ್ಥರು (1504-1575) ಮಹಾತಪಸ್ವಿಗಳು. ಗಿಡಗಳಿದ್ದ ಇಡೀ ತುಳಸಿಯ ವನವನ್ನೇ ಮಾನಸ ಪೂಜೆ ಮಾಡಿ ಪರಮಾತ್ಮನಿಗೆ ಅರ್ಪಿಸಿದ್ದರು. ಅವರು ಉಪವಾಸ ವ್ರತಗಳಲ್ಲಿ ಎತ್ತಿದ ಕೈ. ಮೂರು ಬಾರಿ ಪಾದಚಾರಿಯಾಗಿ ಇಡೀ ದೇಶ ಸಂಚಾರ ಮಾಡಿದ ಧೀಮಂತರು. ವ್ಯಾಸರಾಜರಿಗಿಂತ ವಯಸ್ಸಿನಲ್ಲಿ ನಲವತ್ತು ವರುಷದಷ್ಟು ಚಿಕ್ಕವರು. ಹಾಲು-ಜೇನು ಬೆರೆತಂತೆ ಆಯಿತು.
******
ಮಾರನೆಯ ದಿನ ಭಿಕ್ಷಾಸ್ವೀಕಾರದ ಸಮಯ. ಶ್ರೀ ಸುರೇಂದ್ರ ತೀರ್ಥರು ಅಂಗಯ್ಯಲ್ಲಿ ತೀರ್ಥ ಹಿಡಿದು ಹಾಗೆಯೇ ಕುಳಿತರು. ಶ್ರೀ ವ್ಯಾಸತೀರ್ಥರು ನೋಡಿದರು.
"ಎಲ್ಲ ಆಯಿತು. ತಾವು ಧರಿಸಬಹುದು"
"ತಮ್ಮಲ್ಲಿ ನಮ್ಮದೊಂದು ಕೋರಿಕೆ ಇದೆ"
"ನಮ್ಮಲ್ಲಿ ಕೋರಿಕೆಯೇ? ನಿಮಗೆ ಕೊಡಬಹುದಾದದ್ದು ನಮ್ಮಲ್ಲಿ ಏನಿದೆ? ಮಠದ ಪಟ್ಟದ ದೇವರನ್ನು ನಾವು ಕೊಡುವಂತಿಲ್ಲ. ಈ ವಿಷ್ಣು ತೀರ್ಥ ನಮ್ಮ ಪ್ರಿಯ ಶಿಷ್ಯ. ಇವೆರಡನ್ನು ಬಿಟ್ಟು ಬೇರೆ ಏನನ್ನು ಕೇಳಿದರೂ ನಾವು ಕೊಡಲು ಸಿದ್ಧರಿದ್ದೇವೆ. ಸಂಕೋಚವಿಲ್ಲದೆ ಹೇಳಿ"
"ಪಟ್ಟದ ದೇವರನ್ನು ನಾವು ಕೇಳುವುದಿಲ್ಲ. ನಮಗೆ ನಮ್ಮ ಗುರುಗಳಿಂದ ಬಂದಿರುವುದು ಇದೆ"
"ಹಾಗಿದ್ದರೆ ಮತ್ತೇನು?"
"ನಮಗೆ ವಿಷ್ಣು ತೀರ್ಥರನ್ನು ಕೊಡಿ"
"ಇದೇ ಆಗಬೇಕೇ?"
"ನಮಗೆ ಅವರೇ ಬೇಕು"
"ಇದೇ ತಮ್ಮ ಇಚ್ಛೆಯೇ?"
"ಹೌದು. ಹಾಗೆಂದು ನಮಗೆ ಶ್ರೀಹರಿಯ ಪ್ರೇರಣೆ ಆಗಿದೆ"
"ಸರಿ. ಆಗಬಹುದು. ಆಪೋಶನ ಧರಿಸಿರಿ"
ಭಿಕ್ಷಾಸ್ವೀಕಾರ ಆಯಿತು. ಪ್ರಾಯಶಃ ಶ್ರೀ ವ್ಯಾಸತೀರ್ಥರು ವಿಷ್ಣು ತೀರ್ಥರನ್ನು ತಮ್ಮ ಮುಂದೆ ಪಟ್ಟಕ್ಕೆ ಇರಲಿ ಎಂದುಕೊಂಡಿದ್ದಿರಬಹುದು. ಕೊಟ್ಟ ಮಾತಿನಂತೆ ಶ್ರೀ ವಿಷ್ಣುತೀರ್ಥರು ಪೂರ್ವಾದಿ ಮಠದಿಂದ ಕುಂಭಕೋಣ ಮಠಕ್ಕೆ ವರ್ಗಾವಣೆ ಆದರ
ಬಾಲಕರನ್ನು "ದತ್ತು ಸ್ವೀಕಾರ" ಮಾಡುವಾಗ ಹಾಗೆ ದತ್ತು ತೆಗೆದುಕೊಂಡವರು ತಮ್ಮ ಮನೆತನಕ್ಕೆ ತಕ್ಕುದಾಗಿ ಹೆಸರು ಬದಲಿಸುವ ಪದ್ಧತಿ ಉಂಟು. ಮನೆಗೆ ಮದುವೆಯಾಗಿ ಬಂದ ಸೊಸೆಗೆ ಹೀಗೇ ಹೆಸರು ಬಲಿಸುವ ಪದ್ಧತಿ ಅನೇಕ ಮನೆತನಗಳಲ್ಲಿ ಉಂಟು. ಸನ್ಯಾಸಿಗಳನ್ನು ಹೀಗೆ ದತ್ತು ಸ್ವೀಕಾರ ಮಾಡುವಾಗ "ದಂಡ ಪಲ್ಲಟ" ಅನ್ನುವ ಕ್ರಮದಂತೆ ಅವರ ದಂಡ (ಸನ್ಯಾಸಿಗಳು ಹಿಡಿದಿರುವ ಕೋಲು) ಬದಲಾಯಿಸಿ ಸ್ವೀಕರಿಸುತ್ತಾರೆ.
ಹೀಗೆ ಮಾಡಿದಾಗ ಶ್ರೀ ವಿಷ್ಣು ತೀರ್ಥರು "ಶ್ರೀ ವಿಜಯೇಂದ್ರ ತೀರ್ಥ" ಎಂದು ಹೆಸರು ಪಡೆದು ಕುಂಭಕೋಣ ಮಠದಲ್ಲಿ ಪ್ರಖ್ಯಾತರಾದರು. 104 ಗ್ರಂಥಗಳನ್ನು ರಚಿಸಿ, ಮಹಾನ್ ಪಂಡಿತರನ್ನು ಜಯಿಸಿ ಹೆಸರಿಗೆ ತಕ್ಕಂತೆ ವಿಜಯೇಂದ್ರರೇ ಆದರು.
*******
ಶ್ರೀ ರಾಘವೇಂದ್ರ ರಾಯರ ಸ್ತೋತ್ರದಲ್ಲಿ "ವಿಜಯೇಂದ್ರ ಕರಾಬ್ಜೋತ್ಥಾ ಸುಧೀಂದ್ರ ವರಪುತ್ರಕಃ" ಎಂದು ಹೇಳುತ್ತೇವೆ. ಶ್ರೀ ವಿಜಯೇಂದ್ರ ಗುರುಗಳ ಶಿಷ್ಯರು ಶ್ರೀ ಸುಧೀಂದ್ರ ತೀರ್ಥರು. ಶ್ರೀ ಸುಧೀಂದ್ರ ತೀರ್ಥರ ಶಿಷ್ಯರೇ ಶ್ರೀ ರಾಘವೇಂದ್ರ ಗುರು ಸಾರ್ವಭೌಮರು.