Showing posts with label paapa. Show all posts
Showing posts with label paapa. Show all posts

Saturday, July 26, 2025

ಲಾಭವೂ ನಿನ್ನದೇ; ನಷ್ಟವೂ ನಿನ್ನದೇ!


ಮನುಷ್ಯನಿಗೆ ಬಹಳ ಮುಖ್ಯವಾದ ಮೂರು ಸಂಪತ್ತುಗಳು ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯ. ಈ ಮೂರು ಸಂಪತ್ತುಗಳು ಎಲ್ಲರಿಗೂ ಸಿಕ್ಕುವುದಿಲ್ಲ. ಏಕೆ ಸಿಕ್ಕುವುದಿಲ್ಲ? ಇದಕ್ಕೆ ಕಾರಣಗಳನ್ನು ಹಿಂದೆ "ಸಂಪತ್ತು ಕಳೆಯುವ ಕಾರಣಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದ್ದೆವು. "ಕೆಸರಿಂದ ಕೆಸರ ತೊಳೆದಂತೆ" ಎಂಬ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ  ಇದರ ಮುಂದಿನ ಭಾಗವನ್ನೂ ನೋಡಿದ್ದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಿ ನೆನಪಿಸಿಕೊಳ್ಳಬಹುದು. 

ನಾವು ಮಾಡುವ ತಪ್ಪುಗಳಿಗೆ ಸಮಾಜದಲ್ಲಿ ಶಿಕ್ಷೆ ಎಂಬುದೊಂದಿದೆ. ಕಾನೂನು-ಕಟ್ಟಲೆಗಳು ಪ್ರತಿಯೊಂದು ತಪ್ಪಿಗೂ ಅದಕ್ಕೆ ಪರ್ಯಾಯವಾದ ಶಿಕ್ಷೆಯನ್ನು ನಿಗದಿ ಪಡಿಸಿವೆ. ಒಂದೇ ತರಹದ ತಪ್ಪುಗಳಾದರೂ ಅವುಗಳ ತೀವ್ರತೆ ಗಮನಿಸಿ ನ್ಯಾಯಾಧೀಶರು ಶಿಕ್ಷೆ ನಿಗದಿ ಪಡಿಸುತ್ತಾರೆ. ಇದೇ ರೀತಿ ನಮ್ಮ ನಂಬಿಕೆಗಳ ಪ್ರಕಾರ ದುಷ್ಕರ್ಮಗಳಿಗೆ ಶಿಕ್ಷೆ ಉಂಟು. ಇಲ್ಲಿಯೂ ಅಂತಹ ಶಿಕ್ಷಾರ್ಹ ತಪ್ಪುಗಳನ್ನು ಮಾಡುವವನ ಪರಿಸ್ಥಿತಿಯನ್ನು ಕಂಡು ಅನುಭವಿಸಬೇಕಾದ ತೀವ್ರತೆ ನಿರ್ಧಾರ ಆಗುತ್ತದೆ. 

ಪರಮಾತ್ಮನ ಸೃಷ್ಟಿಯಲ್ಲಿ ಸರಿ-ತಪ್ಪುಗಳಿಗೆ ವೈದೃಶ್ಯ ಅಥವಾ ಪ್ರತಿಭಾರ ಇರುವುದಿಲ್ಲ. (ಇದನ್ನು ಇಂಗ್ಲಿಷಿನಲ್ಲಿ ಸೆಟ್-ಆಫ್ ಅನ್ನುತ್ತಾರೆ). ಉದಾಹರಣೆಗೆ: ಒಬ್ಬನು ಹತ್ತು ತೂಕ ಪುಣ್ಯ ಮಾಡಿ ಐದು ತೂಕ ಪಾಪ ಮಾಡಿದ್ದಾನೆ ಎನ್ನುವ. "ಐದು ತೂಕ ಪಾಪಕ್ಕೆ ಐದು ತೂಕ ಪುಣ್ಯ ವಜಾ ಹಾಕಿಕೊಳ್ಳಿ. ಮಿಕ್ಕಿದ ಐದು ತೂಕದ ಪುಣ್ಯಕ್ಕೆ ಸುಖ ಕೊಡಿ. ದುಃಖ ಬೇಡ" ಎಂದು ಅವನು ಕೇಳಿದರೆ ಅದನ್ನು ಒಪ್ಪಿಕೊಳ್ಳುವ ಹಾಗಿಲ್ಲ. ಐದು ತೂಕ ಪಾಪದ ದುಃಖ ಅನುಭವಿಸಲೇ ಬೇಕು. ಅಂತೆಯೇ, ಹತ್ತು ತೂಕ ಪುಣ್ಯದ ಫಲವನ್ನೂ ಉಣ್ಣಬೇಕಾಗುತ್ತದೆ. ಹೀಗಾಗಿ ಮಾಡಿದ ಪ್ರತಿ ಕರ್ಮವೂ ಅದಕ್ಕೆ ನಿಗದಿಯಾದ ಸುಖ ಅಥವಾ ದುಃಖ ತಂದೇ ತರುತ್ತದೆ. ತಪ್ಪಿಸಿಕೊಳ್ಳುವಹಾಗಿಲ್ಲ. 

ಹಿಂದೆ ಒಂದು ಸಂಚಿಕೆಯಲ್ಲಿ "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಫಲವು, ಅಸುನಾಥ ಹರಿಯೇ ಪೊರೆಯೊ" ಎನ್ನುವುದನ್ನು ಚರ್ಚಿಸಿದ್ದೆವು. ಇದನ್ನು ಇನ್ನೂ ಸ್ವಲ್ಪ ವಿವರವಾಗಿ ನೋಡಿದರೆ ಒಳ್ಳೆಯದು ಎಂದು ಮಿತ್ರರೊಬ್ಬರು ಸೂಚಿಸಿದ್ದಾರೆ. ಅದನ್ನು ಈಗ ನೋಡೋಣ. 

*****

ಏನೋ ಒಂದು ಕಾರಣದಿಂದ, ತಿಳಿದೋ ತಿಳಿಯದೆಯೋ ಒಂದು ತಪ್ಪು ಆಗಿದೆ. ಮಳೆಯಲ್ಲಿ ನೆನೆದುವು ಅನ್ನೋಣ. ಅದರಿಂದ ಒಂದು ಖಾಯಿಲೆಯೋ, ಜ್ವರವೋ ಬಂತು. ಆಯಿತು. ಅದನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ? ಇರುತ್ತದೆ. ವೈದ್ಯರ ಬಳಿ ಹೋದರೆ ರೋಗಕ್ಕೆ ತಕ್ಕ ಮದ್ದು ಕೊಡುತ್ತಾರೆ. ಆ ಮದ್ದಿನಿಂದ ಖಾಯಿಲೆ ಗುಣ ಆಗಬಹುದು. ಆದರೆ ಸರಿಯಾದ ವೈದ್ಯರ ಬಳಿಗೆ ಹೋಗಬೇಕು. "ಸರಿಯಾದ ವೈದ್ಯ ಸಿಗುವುದು, ಅನುಕೂಲಕರನಾದ ಗಂಡ ಅಥವಾ ಅನುಕೂಲಕರಳಾದ ಹೆಂಡತಿ ಸಿಗುವುದು, ಇವೆರಡೂ ಒಂದು ರೀತಿಯ ಲಾಟರಿ" ಎನ್ನುವುದು ಅನೇಕರ ಅನುಭವದಿಂದ ತಿಳಿದ ಸತ್ಯ. ಇದರ ಫಲಿತಾಂಶ ಗೊತ್ತಾಗುವುದು ಕೆಲ ಕಾಲದ ನಂತರವೇ. ಥರ್ಮಾಮೀಟರ್ ನೋಡಿ ಜ್ವರ ಕಂಡುಹಿಡಿಯುವಂತೆ ಇದಕ್ಕೆ ಇನ್ನೂ ಯಾವುದೇ ಮೀಟರ್ ಬಂದಿಲ್ಲ. 

ಒಳ್ಳೆಯ ವೈದ್ಯರೇ ಸಿಕ್ಕಿದರು ಎನ್ನೋಣ. ವೈದ್ಯರು ಬರೆದುಕೊಟ್ಟ ಚೀಟಿಯಂತೆ ಸರಿಯಾದ ಮದ್ದೂ ಸಿಗಬೇಕು. ಇಂದಿನ ಮಾರುಕಟ್ಟೆಯಲ್ಲಿ ನಕಲಿ ವೈದ್ಯರೂ ಉಂಟು. ಅದ್ಕಕಿಂತ ಹೆಚ್ಚಾಗಿ ನಕಲಿ ಔಷಧಗಳೂ ಉಂಟು. ಈಗಿನ ಮದ್ದುಗಳಿಗೆ ಒಂದು ವಿಶೇಷ ಗುಣವಿರುತ್ತದೆ. ಔಷಧದ ಬಾಟಲಿನ ಮೇಲೆ ಅಂಟಿಸಿದ ಚೀಟಿಯಲ್ಲಿ ಎರಡು ಪಟ್ಟಿಗಳಿರುತ್ತವೆ. ಮೊದಲನೆಯದು ಅದು ಗುಣಪಡಿಸುವ ಖಾಯಿಲೆಗಳು. ಎರಡನೆಯದು ಅದರಿಂದ ಆಗಬಹುದಾದ ಅಡ್ಡ ಪರಿಣಾಮಗಳು (ಸೈಡ್ ಎಫೆಕ್ಟ್ಸ್). ಅನೇಕ ವೇಳೆ ಮೊದಲಿನ ಪೆಟ್ಟಿಗಿಂತ ಎರಡನೆಯದೇ ದೊಡ್ಡದಿರುತ್ತದೆ. ವೈದರಿಗೂ ಇದು ಚೆನ್ನಾಗಿ ಗೊತ್ತು. ಆದ್ದರಿಂದ ಮದ್ದು ಕೊಡುವಾಗಲೇ ಜೊತೆಯಲ್ಲಿ ಇನ್ನೊಂದನ್ನು ಕೊಟ್ಟಿರುತ್ತಾರೆ. "ಕೆಲವರಿಗೆ ಈ ಮದ್ದಿನಿಂದ ಹೊಟ್ಟೆ ನೋವು ಬರುತ್ತದೆ. ಹಾಗೆ ಬಂದರೆ ಎರಡನೆಯ ಮದ್ದು ತೆಗೆದುಕೊಳ್ಳಿ" ಎಂದು ಅವರೇ ಹೇಳಿ ಉಪಕಾರ ಮಾಡಿರುತ್ತಾರೆ. 

ಪಾಪ ಕರ್ಮ ಮಾಡಿದ್ದೋ, ಅದಾಗದೆ ಆಯಿತೋ, ಒಟ್ಟಿನಲ್ಲಿ ಅಂಟಿಕೊಂಡಿದೆ. ಅಂಟಿರುವುದು ಗೊತ್ತಾಯಿತು. ಅದಕ್ಕೆ ಪರಿಹಾರ ಹೇಳುವವರು ಒಬ್ಬರು ಬೇಕು. ಅವರು ಸರಿಯಾಗಿರಬೇಕು. ಅವರು ಹೇಳಿದ ಪರಿಹಾರವೂ ಸರಿಯಾಗಿರಬೇಕು. ಯಾವುದೋ ಒಂದು ಹೋಮ ಮಾಡಿ ಎಂದರು. ಅದು ಸರಿಯಾದ ಪ್ರಾಯಶ್ಚಿತ್ತ ಆಗಿರಬೇಕು. ಕ್ರಮವಾಗಿ ಮಾಡಿಸುವವರು ಸಿಗಬೇಕು. ತಂದ ಪದಾರ್ಥಗಳು ಶುದ್ಧವಾಗಿರಬೇಕು. ಮಾಡುವಾಗ ಭಾವ ಶುದ್ದಿ ಇರಬೇಕು. ಎಲ್ಲವೂ ಸರಿಯಾಗಿ ಆಗಬೇಕು. ಆಗ ಸರಿಯಾದ ಪರಿಹಾರ ಸಿಗಬಹುದು. 

ಮಾಡಹೊರಟಿದ್ದು ಒಳ್ಳೆಯ ಕೆಲಸವೇ. ಆದರೆ ಇವುಗಳಲ್ಲಿ ಎಲ್ಲಿಯೋ, ಏನೋ, ಎಡವಟ್ಟಾಯಿತು. ಮಾಡಿಸುವವರು, ತಿದ್ದುವವರೇ ಎಡವಿದರು. ಪದಾರ್ಥಗಳಲ್ಲಿ ಕಂಡೋ, ಕಾಣದೆಯೋ ದೋಷ ಇತ್ತು. ಮಾಡುವಾಗ ಮನಸ್ಸು ಚಂಚಲ ಆಯಿತು. ಪರಿಣಾಮ ಏನು?

ಕೆಸರಿನಿಂದ ಕೊಳಕಾದ ವಸ್ತ್ರ ತೊಳೆಯಲು ಕೊಳಕು ನೀರು ಉಪಯೋಗಿಸಿದಂತೆ ಆಯಿತು. ಒಂದು ದುಷ್ಕರ್ಮ ಕಳೆಯಲು ಏನೋ ಮಾಡ ಹೋಗಿ ಮತ್ತೊಂದು ದುಷ್ಕರ್ಮ ಅಂಟಿಕೊಂಡಿತು. ಬಟ್ಟೆ ಶುದ್ಧವಾಗುವ ಬದಲು ಇನ್ನಷ್ಟು ಕೊಳಕಾಯಿತು. ಕೆಸರಿಂದ ಕೆಸರು ತೊಳೆದಂತೆ ಆಯಿತು. ಇದನ್ನೇ ದಾಸರು "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು" ಎಂದರು. ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ?

*****

ನಮ್ಮ ಮನೆಯ ಎದುರುಗಡೆ ಎರಡು ಅಂಗಡಿಗಳಿವೆ. ಮೊದಲನೆಯದು ಯಜಮಾನನೇ ನಡೆಸುವ ಅಂಗಡಿ. ಬೆಳಗಿನಿಂದ ಸಂಜೆಯವರೆಗೆ ಅವನು ಎಲ್ಲ ವ್ಯವಹಾರ ನಡೆಸುತ್ತಾನೆ. ದಿನದ ಕೊನೆಯಲ್ಲಿ ಲೆಕ್ಕ ನೋಡುತ್ತಾನೆ. ವಹಿವಾಟಿನಲ್ಲಿ ಬಂದ ಹಣವನ್ನೆಲ್ಲಾ ತಿಜೋರಿಯಲ್ಲಿ ಭದ್ರವಾಗಿಡುತ್ತಾನೆ. ವರ್ಷದ ಕೊನೆಯಲ್ಲಿ ಎಲ್ಲಾ ಜಮಾ-ಖರ್ಚು ತಾಳೆ ಹಾಕುತ್ತಾನೆ. ಖರ್ಚಿಗಿಂತ ಆದಾಯ ಜಾಸ್ತಿಯಾದರೆ ಅವನಿಗೆ ಲಾಭ. ಆದಾಯಕ್ಕಿಂತ ಖರ್ಚು ಜಾಸ್ತಿ ಆದರೆ ಅವನಿಗೆ ನಷ್ಟ. ರಾತ್ರಿ ಅಂಗಡಿ ಬಾಗಿಲು ಹಾಕಿದ್ದಾಗ ಕಳ್ಳರು ನುಗ್ಗಿ ಹಣ ದೋಚಿದರೆ ಅವನ ಲಾಭವೆಲ್ಲ ಗೋತ. ಯಾವಾಗಲೂ ಲಾಭದ ಚಿಂತೆ. ನಷ್ಟದ ಭೀತಿ. 

ಎರಡನೆಯ ಅಂಗಡಿಯನ್ನೂ ಒಬ್ಬ ನಡೆಸುತ್ತಿದ್ದಾನೆ. ಅದು ಅವನ ಯಜಮಾನನ ಅಂಗಡಿ. ಯಜಮಾನ ಎಲ್ಲಿಯೋ ಇದ್ದಾನೆ. ಎಲ್ಲ ಭಾರ ಇಲ್ಲಿ ನಡೆಸುವವನ ಮೇಲೆ ಬಿಟ್ಟಿದ್ದಾನೆ. ಇವನು ನಿರ್ವಂಚನೆಯಿಂದ ನಡೆಸುತ್ತಿದ್ದಾನೆ. ಮೊದಲ ಅಂಗಡಿಯವನಂತೆ ಇವನೂ ಎಲ್ಲಾ ಮಾಡುತ್ತಾನೆ. ಸಂಜೆ ಹಣ ತಿಜೋರಿಯಲ್ಲಿ ಭದ್ರ ಮಾಡಿ ಕೀಲಿಕೈ ಯಜಮಾನನಿಗೆ ಒಪ್ಪಿಸುತ್ತಾನೆ. "ಲಾಭವೂ ನಿನ್ನದೇ. ನಷ್ಟವೂ ನಿನ್ನದೇ. ನನ್ನದೇನಿದ್ದರೂ ನ್ಯಾಯವಾಗಿ ವ್ಯವಹಾರ ಮಾಡುವುದು" ಎಂದು ನಡೆಯುತ್ತಾನೆ. ಅಂಗಡಿ ಅವನದಲ್ಲ ಎನ್ನುವ ಪ್ರಜ್ಞೆ ಅವನಿಗಿದೆ. ರಾತ್ರಿ ಹಣ ಕಳುವಾದರೆ ಅವನ ಹಣವಲ್ಲ. ಲಾಭ ಅಥವಾ ನಷ್ಟ ಅವನದಲ್ಲ. ಮೊದಲನೆಯ ಅಂಗಡಿಯವಂತೆ ಇವನಿಗೆ ಲಾಭ-ನಷ್ಟದ ಚಿಂತೆಯಿಲ್ಲ. 

ಬ್ಯಾಂಕಿನಿಂದ ಸಾಲ ತಂದಿದ್ದಾಯಿತು. ಈಗ ತೀರಿಸಲೇಬೇಕು. ತೀರಿಸದಿದ್ದರೆ ವಸೂಲಿ ತಂಡದವರು ಪ್ರಾಣ ತಿನ್ನುತ್ತಾರೆ. ನೋಟೀಸು ಕೊಡುತ್ತಾರೆ. ಆಸ್ತಿ ಹರಾಜು ಹಾಕುತ್ತಾರೆ. ಬಂದಿಖಾನೆಗೂ ದೂಡಬಹುದು. ಸಾಲ ತರಬಾರದಿತ್ತು. ತಂದಾಯಿತು. ಈಗ ಏನು ಮಾಡುವುದು?

ಇದಕ್ಕೂ ಒಂದು ಪರಿಹಾರ ಇದೆ. ಬ್ಯಾಂಕಿನವರ ಬಳಿ ನಮ್ಮ ಕಷ್ಟ-ಸುಖ ಹೇಳಿಕೊಳ್ಳಬೇಕು. ಅವರು ಒಪ್ಪಬಹುದು. ಒಪ್ಪದೇ ಇರಬಹುದು. ಪ್ರಯತ್ನವನ್ನಂತೂ ಮಾಡಬಹುದು. ಅವರು ಒಪ್ಪಿಕೊಂಡು "ಹೋಗಲಿ ಬಿಡಿ. ನಿಮಗೆ ಹಿಂದೆ ಕೊಡುವ ಶಕ್ತಿ ಇಲ್ಲ. ಸಾಲ ಮನ್ನಾ ಮಾಡಿದ್ದೇವೆ" ಅಂದರೆ ಈ ಸಾಲದಿಂದ ಬಿಡುಗಡೆ!

*****

"ದುಷ್ಕರ್ಮ ಪರಿಹರಿಸೋ, ಸ್ವಾಮಿ" ಎಂದು ದಾಸರು ಕೇಳಿರುವುದೂ ಇದರಂತೆಯೇ. ಅವನು ಯಜಮಾನ. ನಾನು ಕೇವಲ ಅಂಗಡಿ ನಡೆಸುವ ಎರಡನೆಯ ಅಂಗಡಿಯವನಂತೆ ಎನ್ನುವುದು ಮರೆತು ಮೊದಲಿನ ಅಂಗಡಿಯವಂತೆ ಬದುಕಿದೆವು. ಲಾಭ-ನಷ್ಟ ನಮಗೆ ಅಂಟಿಕೊಂಡಿತು. ಎರಡನೆಯವನಂತೆ ಇದ್ದಿದ್ದರೆ ಆಗ ನಿಷ್ಕಾಮ ಕರ್ಮ ಆಗುತ್ತಿತ್ತು. ಈಗ ಈ ಭಾರ ಹೊರಲು ಆಗುತ್ತಿಲ್ಲ. ಅವನನ್ನೇ ಮೊರೆ ಹೋಗಿ ಕೇಳುವುದು. "ದಯವಿಟ್ಟು ಈ ಸಾಲ ಮನ್ನಾ ಮಾಡು. ಈ ದುಷ್ಕರ್ಮ ಪರಿಹಾರ ಮಾಡು" ಎಂದು ಕೂಗುವುದು. 

ಅವನು ಒಪ್ಪಬಹುದು. ಒಪ್ಪಿಯಾನು. ಅವನೋ, "ಕರ್ತು೦, ಆಕರ್ತು೦, ಅನ್ಯಥಾ ಕರ್ತು೦ ಶಕ್ತ:". ಏನನ್ನು ಬೇಕಾದರೂ ಮಾಡಬಲ್ಲ. ಮಾಡಿದ್ದನ್ನು ಅಳಿಸಬಲ್ಲ. ಮತ್ತೇನನ್ನೋ ಮಾಡಬಲ್ಲ.  ಸಾಲ ಮನ್ನಾ ಮಾಡಬಹುದು. ಹೊತ್ತಿರುವ ಪಾಪ ಕರ್ಮಗಳ ರಾಶಿಯನ್ನು ಕ್ಷಣಾರ್ಧದಲ್ಲಿ ಸುತ್ತು ಭಸ್ಮ ಮಾಡಿ ಹೆಗಲಿನ ಭಾರದಿಂದ ಮುಕ್ತಿ ಕೊಡಬಹುದು. 

*****

ನಂಬುವವರು ನಂಬಬಹುದು. ಬಿಡುವವರು ಬಿಡಬಹುದು. ಇದು ಒಂದು ರೀತಿಯ ತರ್ಕ. ಅನೇಕರು ಪುನರ್ಜನ್ಮವನ್ನು ನಂಬುವುದಿಲ್ಲ. ದೇವರಿದ್ದಾನೆ ಅನ್ನುವುದನ್ನೂ ನಂಬುವುದಿಲ್ಲ. ಅವರವರಿಗೆ ಬಿಟ್ಟದ್ದು. 

ಎರಡನೇ ಅಂಗಡಿಯವನಂತೆ ಜೀವನ ನಡೆಸಿದವನಿಗೆ ಒಂದು ಖಚಿತವಾದ ಲಾಭ ಉಂಟು. ಈ ಜನ್ಮದಲ್ಲಿ ಬ್ಲಡ್ ಪ್ರೆಶರ್ ಚೆನ್ನಾಗಿರುತ್ತದೆ. ಊಟ ಸೇರುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ದಿನಗಳು ಚೆನ್ನಾಗಿ ಕಳೆಯುತ್ತವೆ. ಮುಂದಿನದನ್ನು ಮುಂದೆ ನೋಡಬಹುದು! 

Friday, July 11, 2025

ಚಿಂತೆ ಎಂಬ ವಿಶಾಲವಾದ ವೃಕ್ಷ

Large Tree Roots Images – Browse 120,707 Stock Photos, Vectors, and Video |  Adobe Stock

ಚ್ಯವನ ಮಹರ್ಷಿಗಳ ಮಗಳಾದ ಸುಮನಾ ಮತ್ತು ಅವಳ ಪತಿ ಸೋಮಶರ್ಮ ನಡುವೆ ನಡೆದ ಸಂವಾದ, ಮತ್ತು ಆ ಸಂದರ್ಭದಲ್ಲಿ ಸುಮನಾ "ಐದು ರೀತಿಯ ಮಕ್ಕಳು" ಮತ್ತು ಅವರ ಲಕ್ಷಣ, ಜನನದ ಕಾರಣಗಳನ್ನು ವಿವರಿಸುದುದನ್ನು ಹಿಂದಿನ ಅದೇ ಹೆಸರಿನ ಸಂಚಿಕೆಯಲ್ಲಿ ನೋಡಿದೆವು. ಹೇಗೆ ಹಿಂದಿನ ಜನ್ಮಗಳಲ್ಲಿ ಸಾಲಕೊಟ್ಟವರು, ಬೇರೆಯವರಿಂದ ಮೋಸ ಹೋಗಿ ಆಸ್ತಿ-ಪಾಸ್ತಿ ಕಳೆದುಕೊಂಡವರು, ಹಿಂದೆ ಪಡೆದ ಉಪಕಾರಗಳನ್ನು ತೀರಿಸುವವರು ಮತ್ತು ಯಾವುದೇ ಕಾರಣವಿಲ್ಲದೆ ಅವರ ಕರ್ಮಗಳ ಪರಿಪಾಕದಿಂದ ಹುಟ್ಟುವ ನಾಲ್ಕು ವಿಧದ ಮಕ್ಕಳ ಲಕ್ಷಣಗಳನ್ನು ನೋಡಿದೆವು. ಅದೇ ರೀತಿ ಸತ್ಕರ್ಮಗಳನ್ನು ಮಾಡಿದ ಪ್ರಯುಕ್ತ ಹುಟ್ಟುವ ಯೋಗ್ಯ ಮಕ್ಕಳನ್ನು ಪಡೆಯುವ ಸಾಧ್ಯತೆ ಬಗ್ಗೆಯೂ ನೋಡಿದ್ದೆವು. (ಈ "ಐದು ರೀತಿಯ ಮಕ್ಕಳು" ಎನ್ನುವ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಸೋಮಶರ್ಮನಿಗೆ ಎರಡು ಚಿಂತೆಗಳು ಕಾಡುತ್ತಿದ್ದವು. ಮೊದಲನೆಯದು ದಾರಿದ್ರ್ಯ ಅನುಭವಿಸುತ್ತಿರುವುದು. ಎರಡನೆಯದು ಮಕ್ಕಳಿಲ್ಲ ಎಂಬ ಕೊರಗು. ಮಕ್ಕಳ ಸಂಬಂಧ ಸುಮನಾ ನೀಡಿದ ವಿವರಣೆಯನ್ನು ನೋಡಿದೆವು. ದರಿದ್ರತೆ ಮತ್ತು ಒಟ್ಟಿನಲ್ಲಿ ಚಿಂತೆಯ ಬಗೆಗೂ ಅವಳು ಬಹಳ ಸಮರ್ಥವಾದ ವಿವರಣೆಯನ್ನು ನೀಡಿರುವುದು ಪದ್ಮ ಪುರಾಣದಲ್ಲಿ ಕಂಡುಬರುತ್ತದೆ. ಅದರ ಸ್ವಲ್ಪ ತಿರುಳನ್ನು ಈಗ ನೋಡೋಣ.

***** 

"ಚಿತೆ" ಮತ್ತು "ಚಿಂತೆ" ಇವೆರಡಕ್ಕೂ ಒಂದು ಸೊನ್ನೆ ಮಾತ್ರ ವ್ಯತ್ಯಾಸ ಎನ್ನುವ ಮಾತು ಬಹಳ ಜನಜನಿತವಾದದ್ದು. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯಾದರೂ ಈ ಚಿಂತೆ ಅನ್ನುವುದು ಯಾರನ್ನೂ ಬಿಡದು. ಜೀವನದಲ್ಲಿ ಕೆಲವು ವಿಷಯಗಳ ಬಗ್ಗೆ ಯೋಚಿಸಬಾರದೆಂದು ಎಷ್ಟು ಪ್ರಯತ್ನ ಪಟ್ಟರೂ ಚಿಂತೆ ಎನ್ನುವುದು ನಮ್ಮ ಬೆನ್ನು ಬಿಡುವುದಿಲ್ಲ. ಏನಾದರೂ ಕೆಲಸ ಕಾರ್ಯಗಳಲ್ಲಿ ತೊಡಗಿರುವಾಗ ಮತ್ತು ಬೇರೆಯವರ ಸಂಗವಿದ್ದಾಗ ಈ ಚಿಂತೆ ಎನ್ನುವ ಭೂತ ಸ್ವಲ್ಪ ಬಾಲ ಮುದುರಿಕೊಂಡು ಕುಳಿತಿರುತ್ತದೆ. ಒಂಟಿಯಾಗಿ ಸುಮ್ಮನೆ ಕೂತಾಗ ಅಥವಾ ರಾತ್ರಿ ನಿದ್ದೆ ಮಾಡಲು ಯತ್ನಿಸಿದಾಗ ಅದು ಹೆಡೆ, ಬಾಲಗಳನ್ನು ಬಿಚ್ಚಿ ವಿಜೃಂಭಿಸುತ್ತದೆ. ಎಂಥ ತಿಳಿದವರಿಗೂ, ಜ್ಞಾನಿಗಳಿಗೂ ಸಹ ಈ ರೀತಿಯ ಚಿಂತೆಗಳು ಬಾಧಿಸದೆ ಬಿಡುವುದಿಲ್ಲ. 

"ನಾಸ್ತಿ ಚಿಂತಾ ಸಮಂ ದುಃಖಂ ಕಾಯ ಶೋಷಣಮೇವಹಿ" ಎಂದು ಚಿಂತೆಯ ವಿಷಯದಲ್ಲಿ ಹೇಳುತ್ತಾರೆ. ಚಿಂತೆಯಂತಹ ದುಃಖ ಬೇರೆ ಇಲ್ಲ. ಅದರಿಂದ ತಿಂದ ಆಹಾರ ಮೈಗೆ ಹತ್ತುವುದಿಲ್ಲ. ಮನಸ್ಸು ಸರಿಯಾಗಿ ಕೆಲಸ ಮಾಡುವುದಿಲ್ಲ. ಇವುಗಳ ಪರಿಣಾಮದಿಂದ ದೇಹವು ದುರ್ಬಲವಾಗುತ್ತದೆ. ಬಡತನವಂತೂ ಮನುಷ್ಯನನ್ನು ಅಸಂತುಷ್ಟನನ್ನಾಗಿ ಮಾಡುತ್ತದೆ. ಅಂತಹ ವ್ಯಕ್ತಿ ಪ್ರಪಂಚದಲ್ಲಿ ಕಾಣುವ ಎಲ್ಲದರಲ್ಲಿಯೂ ತಪ್ಪನ್ನೇ ಹುಡುಕುತ್ತಾನೆ. ಚಿಂತಾಕ್ರಾಂತನಾದವನಿಗೆ ತನ್ನ ಹಿತೈಷಿಗಳು ಹೇಳುವ ಒಳ್ಳೆಯ ಮಾತುಗಳೂ ಕಹಿ ಎನಿಸುತ್ತವೆ. ಬೇರೆಯವರು ಮತ್ತೇನೋ ವಿಷಯ ಮಾತನಾಡಿಕೊಳ್ಳುತ್ತಿದ್ದರೂ ತನ್ನನ್ನೇ ಕುರಿತು ಅಪಹಾಸ್ಯ ಮಾಡುತ್ತಿರುವರು ಎಂದು ಅನುಮಾನಿಸುತ್ತಾನೆ. 

ಚಾಣಕ್ಯ ನೀತಿಯು "ವರಂ ವನಂ ವ್ಯಾಘ್ರ ಗಜೇಂದ್ರ ಸೇವಿತಂ, ನ ಬಂಧು ಮಧ್ಯೇ ಧನ ಹೀನ ಜೀವನಮ್" ಮುಂತಾಗಿ ಹೇಳುತ್ತದೆ. ಹುಲಿ, ಆನೆ ಮೊದಲಾದ ಪ್ರಾಣಿಗಳಿರುವ ಕಾಡಿನಲ್ಲಿದ್ದರೂ ಸರಿಯೇ; ನೆಂಟರಿಷ್ಟರ ಬಳಿಯಲ್ಲಿ ಬಡತನದ ಜೀವನ ಬೇಡಪ್ಪಾ ಬೇಡ" ಎಂದು ಅನ್ನಿಸುತ್ತದೆ.  "ಏನಾದರೂ ಮಾಡಿ ಹಣವನ್ನು ಕೂಡಿಹಾಕಬೇಕು. ಈ  ಬಂಧುಗಳ ನಡುವೆ ನೆಮ್ಮದಿಯಿಂದ ಬಾಳಬೇಕು" ಎಂದು ಮನುಷ್ಯ ಪರಿತಪಿಸುತ್ತಾನೆ. (ಈ ರೀತಿ ನೆಂಟರಿಷ್ಟರ ಮಧ್ಯೆ ಬಡತನದ ಜೀವನ ಮಾಡುವುದು ಪ್ರಾಯಶಃ ಈಗಿನ ತಲೆಮಾರು ಕಾಣದು. ಈಗ ಎಲ್ಲ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಎಷ್ಟೋ ಸುಧಾರಿಸಿದೆ). ಸ್ವಲ್ಪ ಸ್ವಲ್ಪ ಹಣ ಸೇರುತ್ತಿದ್ದಂತೆ ಇನ್ನಷ್ಟು ಬೇಕೆಂಬ ಲೋಭ ಕಾಡಲು ತೊಡಗುತ್ತದೆ. 

*****

ಈ ಲೋಭವೆನ್ನುವುದು ಎಲ್ಲ ಮುಂದಿನ ತೊಂದರೆಗಳಿಗೂ ತಾಯಿಬೇರು. ಸಮಸ್ತ ಅನಿಷ್ಟ ಬೆಳವಣಿಗೆಗಳೂ ಅಲ್ಲಿಂದಲೇ ಪ್ರಾರಂಭ. ಸುಮನಾ ಈ ಮುಂದಿನ ಎಲ್ಲ ಬೆಳವಣಿಗೆಗಳನ್ನೂ ಒಂದು ಸೂತ್ರದ ರೂಪದಲ್ಲಿ  ಹೇಳುತ್ತಾಳೆ:

ಲೋಭ: ಪಾಪಶ್ಚ ಬೀಜಂಹಿ ಮೋಹೋ ಮೂಲ೦ಚ ತಸ್ಯಹಿ 
ಅಸತ್ಯಂ ತಸ್ಯವೈ ಸ್ಕಂಧಃ ಮಾಯಾ ಶಾಖಾ ಸುವಿಸ್ತರಃ 
ದಂಭ ಕೌಟಿಲ್ಯ ಪತ್ರಾಣಿ ಕುಬುಧ್ಯಾ ಪುಷ್ಪಿತಃ ಸದಾ 
ಅನೃತಂ ತಸ್ಯವೈ ಸೌಗಂಧ: ಫಲಾ ಅಜ್ನ್ಯಾನಮೇವ ಚ 

"ಪಾಪ" ಅನ್ನುವ ಹೆಮ್ಮರಕ್ಕೆ ಈ "ಲೋಭ" ಅನ್ನುವುದೇ ಬೀಜರೂಪವು.  ಈ ಲೋಭವು ಮನಸ್ಸು ಎಂಬ ಮಣ್ಣಿನಲ್ಲಿ ಬಿದ್ದ ತಕ್ಷಣ ಬೇರು ಬಿಡಲಾರಂಭಿಸುತ್ತದೆ. ಲೋಭವು ಹೆಚ್ಚಿದಷ್ಟೂ ಬೇರುಗಳು ಆಳ ಮತ್ತು ವಿಶಾಲ ಆಗುತ್ತವೆ. "ಮೋಹ" ಎನ್ನುವುದೇ ಅದರ ಬೇರು. ಈ ಮರಕ್ಕೆ "ಅಸತ್ಯ" ಎನ್ನುವ ಒಂದು ದೊಡ್ಡದಾದ ಕಾಂಡವಿದೆ. "ಕಪಟತನ" (ಮಾಯಾ) ಅನ್ನುವುದು ಈ ಅಸತ್ಯ ಎನ್ನುವ ಭಾರಿ ಕಾಂಡದಿಂದ ಹೊರಡುವ ಅನೇಕ ಕೊಂಬೆಗಳು. "ದಂಭ" ಮತ್ತು "ಕುಟಿಲತೆ" ಅನ್ನುವುವು ಈ ಅಸತ್ಯವೆಂಬ ಕೊಂಬೆಗಳಲ್ಲಿ ಬೆಳೆಯುವ ಅಸಂಖ್ಯಾತ ಎಲೆಗಳು. ಆ ಅನೇಕ ಕೊಂಬೆಗಳ ಮೇಲೆ, ಎಲೆಗಳ ನಡುವೆ, "ಕುಬುದ್ಧಿ" ಎನ್ನುವ ಹೂವು ಸದಾ ಬಿಡುತ್ತದೆ.  ಹೂವುಗಳಲ್ಲಿ ಸಾಮಾನ್ಯವಾಗಿ ಸುವಾಸನೆ ಇದ್ದರೆ ಈ ಕುಬುದ್ಧಿ ಅನ್ನುವ ಹೂವಿನಲ್ಲಿ "ಸುಳ್ಳು ಮಾತುಗಳು" ಎನ್ನುವ ಅನೇಕ ರೀತಿಯ ದುರ್ವಾಸನೆಗಳು ಹರಡಲು ತಯಾರು. ಒಂದು ಮರದಲ್ಲಿ ಇಷ್ಟೆಲ್ಲಾ ಇರುವಾಗ ಕಡೆಗೆ ಅದರಲ್ಲಿ ಹಣ್ಣುಗಳು ಬಲೇಬೇಕಲ್ಲ? ಈ ಪಾಪವೆಂಬ ಮರಕ್ಕೆ "ಅಜ್ಞಾನ" ಎನ್ನುವುದೇ ಹಣ್ಣುಗಳಾಗಿ ತೋರುತ್ತವೆ. ಇಂತಹ ಮರದಲ್ಲಿ ಈ ಅಜ್ಞಾನ ಅನ್ನುವ ಹಣ್ಣಿನ ಆಸೆಯಿಂದ ಕಪಟತನ, ಪಾಖಂಡತನ, ಕ್ರೌರ್ಯ, ಅಸೂಯೆ, ಮುಂತಾದ ಇತರ "ದುರ್ಗುಣ" ರೂಪಗಳ ಹಕ್ಕಿಗಳು ಬಂದು ಸೇರುತ್ತವೆ! 

ಮರಗಿಡಗಳಿಗೆ ಸಾಮಾನ್ಯವಾಗಿ ವರ್ಷದಲ್ಲಿ ಕೆಲವು ತಿಂಗಳುಗಳು ಹೂವು ಮತ್ತು ಹಣ್ಣು ಬಿಡುವ ಕಾಲ. ಆದರೆ ಈ ಪಾಪವೆಂಬ ಮರದಲ್ಲಿ ವರುಷಕ್ಕೆ ಹನ್ನೆರಡು ತಿಂಗಳೂ ಕುಬುದ್ಧಿ ಎನ್ನುವ ಹೂವು ಅರಳುತ್ತದೆ! ಸದಾಕಾಲವೂ ಅಜ್ಞಾನವೆಂಬ ಹಣ್ಣು ತುಂಬಿರುತ್ತದೆ. 

"ಜಂಭ" ಮತ್ತು "ದಂಭ" ಇವುಗಳಿಗೆ ವ್ಯತ್ಯಾಸವಿದೆ. ಇರುವುದನ್ನು ಹೆಚ್ಚಾಗಿ ಹೇಳಿಕೊಳ್ಳುವುದು ಜಂಭ. ಇಲ್ಲದೆ ಇರುವುದನ್ನು ಹೇಳಿಕೊಳ್ಳುವುದು ದಂಭ. ಉದಾಹರಣೆಗೆ: ಒಬ್ಬನ ಜೇಬಿನಲ್ಲಿ ಒಂದು ಸಾವಿರ ರೂಪಾಯಿ ಇದೆ. ಅವನು ಹತ್ತು ಸಾವಿರ ರೂಪಾಯಿ ಇದೆ ಎಂದು ಹೇಳಿದರೆ ಅದು ಜಂಭ ಕೊಚ್ಚಿಕೊಳ್ಳುವುದು. ಇನ್ನೊಬ್ಬನ ಜೇಬಿನಲ್ಲಿ ಒಂದು ರೂಪಾಯಿಯೂ ಇಲ್ಲ. ಅವನು ತನ್ನ ಜೇಬಿನಲ್ಲಿ ಒಂದು ಸಾವಿರ ರೂಪಾಯಿ ಇದೆ ಎಂದು ಹೇಳಿದರೆ ಅದು ದಂಭ. 

"ಕುಟಿಲ" ಅಂದರೆ "ನೆಟ್ಟಗಿಲ್ಲದ್ದು" ಎಂದು ಅರ್ಥ. ಸೊಟ್ಟಗಿದೆ ಎನ್ನಬಹುದು. ಶ್ರೀಕೃಷ್ಣನ ವರ್ಣನೆಯಲ್ಲಿ "ಕುಟಿಲ ಕುಂತಲಂ ಕುವಲಯ ದಳ ನೀಲಂ" ಎನ್ನುತ್ತೇವೆ. ಇಲ್ಲಿ ಕುಟಿಲ ಕುಂತಲಂ ಅಂದರೆ "ಗುಂಗುರು ಕೂದಲು" ಎಂದು ಅರ್ಥ. ಕೆಲವರಿಗೆ, ಅದರಲ್ಲೂ ಮಕ್ಕಳಿಗೆ, ಗುಂಗುರು ಕೂದಲು ಇದ್ದರೆ ಸುಂದರ. ಆದರೆ ನಡೆ-ನುಡಿ ನೇರವಾಗಿರಬೇಕು. ವಕ್ರವಾಗಿರಬಾರದು. ಹೇಳುವುದು, ತೋರಿಸುವುದು ಒಂದು ರೀತಿ. ಆದರೆ ಅದರ ಅರ್ಥ, ಆಚರಣೆ ಇನ್ನೊಂದು ರೀತಿ. ಹೀಗಿದ್ದರೆ ಇದನ್ನೇ "ಕುಟಿಲ ನೀತಿ" ಅನ್ನುವುದು. ಕುಟಿಲ ಸ್ವಭಾವ ಇರುವವರನ್ನು ನಂಬಬಾರದು. ಮಹಾಭಾರತದ ಶಕುನಿ ಇದಕ್ಕೆ ಅತ್ಯುತ್ತಮ ಉದಾಹರಣೆ. 

***** 

ಸುಮನಾ ಹೇಳಿರುವ ಮೇಲಿನ ಪಾಪ ಎಂಬ ಮರದ ವಿವರಗಳು ಬಹಳ ಅರ್ಥವತ್ತಾಗಿದ್ದು ಮೊದಲ ನೋಟದಲ್ಲಿ ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ. ಆದರೆ ನಿಧಾನವಾಗಿ ಓದಿ, ನಮ್ಮ ನಮ್ಮ ಅನುಭವದ ಹಿನ್ನೆಲಿಯಲ್ಲಿ ಮೆಲಕು ಹಾಕಿದಾಗ ಅದರ ಸತ್ಯವು ನಿಚ್ಚಳವಾಗಿ ಗೋಚರಿಸುತ್ತದೆ. 

"ಪದ್ಮ ಪುರಾಣ" ಸುಮಾರು ಐವತ್ತೈದು ಸಾವಿರ (55,000) ಶ್ಲೋಕಗಳಿರುವ ಒಂದು ಗ್ರಂಥ. ಏಳು (7) ಖಂಡಗಳ ಏಳು ನೂರ ಮೂರು (703) ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ಶ್ರೀಮದ್ ಭಾಗವತಕ್ಕಿಂತ ಗಾತ್ರದಲ್ಲಿ ಮೂರುಪಟ್ಟು ದೊಡ್ಡದು. ಇಷ್ಟು ವಿಶಾಲ ಗ್ರಂಥದಲ್ಲಿರುವ ವಿಷಯಗಳ ಹರವನ್ನು ನೋಡಿದರೆ ವಿಸ್ಮಯವಾಗುತ್ತದೆ. 

ಭಗವಾನ್ ವೇದವ್ಯಾಸರು ನಮಗೆ ಕೊಟ್ಟಿರುವ ಗ್ರಂಥ ಲೋಕವನ್ನು ನಮ್ಮ ಜೀವನ ಕಾಲದಲ್ಲಿ ಒಮ್ಮೆ ಸರಿಯಾಗಿ ಓದಿ ಮನನ  ಮಾಡುವುದೂ ಒಂದು ದೊಡ್ಡ ಸಾಧನೆಯೇ ಆಗುತ್ತದೆ. ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಂತೂ ಇನ್ನೂ ದೂರದ ಮಾತು. ಆಚರಣೆಯಲ್ಲಿ ತರುವುದು ಒಂದು ತಪಸ್ಸೇ ಸರಿ. ಇಷ್ಟು ಕೃತಿರಚನೆ ಹೇಗಾಯಿತು ಎನ್ನುವುದು ನೋಡಿ ಕೇವಲ ಕೈ ಮುಗಿಯಬಹುದು. ಅಷ್ಟೇ. "ವ್ಯಾಸ ಪೂರ್ಣಿಮಾ" ಸಂದರ್ಭದಲ್ಲಿ ಇಂತಹ ಅನೇಕ ಗ್ರಂಥಗಳ ಕರ್ತೃವಾದ ಭಗವಾನ್ ವೇದ ವ್ಯಾಸರಿಗೆ ನಮ್ಮ ಅತ್ಯಂತ ಕೃತಜ್ಞತಾ ಪೂರ್ವಕವಾದ ಗೌರವಾದರ, ನಮನಗಳು ಸಲ್ಲಬೇಕು.  

Sunday, July 6, 2025

ಐದು ರೀತಿಯ ಮಕ್ಕಳು


ಹಿಂದಿನ ಸಂಚಿಕೆಗಳಲ್ಲಿ ಅಷ್ಟ ಭೋಗಗಳು, ಅಷ್ಟ ಭಾಗ್ಯಗಳು ಮತ್ತು ಅಷ್ಟ ಐಶ್ವರ್ಯಗಳು ಎಂಬ ವಿಷಯಗಳ ಬಗ್ಗೆ ಸ್ವಲ್ಪಮಟ್ಟಿಗೆ ನೋಡಿದ್ದೆವು. ಅಷ್ಟ ಐಶ್ವರ್ಯಗಳಲ್ಲಿ ಸಂತಾನವೂ ಒಂದು ಎಂದು ಚರ್ಚಿಸಿದ್ದೆವು. (ಈ ಕೊನೆಯ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ).  ಅನೇಕ ದಂಪತಿಗಳಿಗೆ ಎಲ್ಲ ಭೋಗ-ಭಾಗ್ಯ-ಐಶ್ವರ್ಯಗಳು ದೊರಕಿದ್ದರೂ ಸಂತಾನ ಇಲ್ಲ ಎನ್ನುವ ಒಂದು ಕೊರತೆ ಕಾಡುವುದು ಉಂಟು. ಅನೇಕ ಪುರಾಣದ ಕಥೆಗಳು ಪ್ರಾರಂಭವಾಗುವುದು ಈ ಕೊರತೆಯ ಕಾರಣದಿಂದಲೇ. ಮತ್ತೆ ಕೆಲವು ಕಥೆಗಳು ಪ್ರಾರಂಭವಾಗುವುದು ಈ ಸಂತಾನದ ಕಾರಣದಿಂದ ಉದ್ಭವವಾಗುವ ಸಮಸ್ಯೆಗಳಿಂದಲೂ ಹೌದು. ಹೀಗೆ, ಇದ್ದರೂ ಸಮಸ್ಯೆ, ಇಲ್ಲದಿದ್ದರೂ ಸಮಸ್ಯೆ ಸೃಷ್ಟಿಸುವುದು ಈ ಸಂತಾನವೆಂಬ ಒಂದು ಆಸ್ತಿಯ ವಿಶೇಷತೆ. ಕೆಲವೊಮ್ಮೆ ಈ ಆಸ್ತಿ ಭಾದ್ಯತೆ ಆಗುವುದೂ ಸಾಧ್ಯ. ಹೀಗೂ ಉಂಟು. ಹಾಗೂ ಉಂಟು! 

ನಮ್ಮ ಎರಡು ಮಹಾಕಾವ್ಯಗಳು ಮತ್ತು ವಾಂಗ್ಮಯದ ಎರಡು ಕಣ್ಣುಗಳಾದ ರಾಮಾಯಣ ಮತ್ತು ಮಹಾಭಾರತ ನಿಜವಾಗಿ ಪ್ರಾರಂಭವಾಗುವುದು ಈ ಸಮಸ್ಯೆಯಿಂದಲೇ. ರಾಮಾಯಣದ ತಿರುಳು ದಶರಥನ ಮಕ್ಕಳಿಲ್ಲವೆಂಬ ಕೊರಗು ಮತ್ತು ಪುತ್ರಕಾಮೇಷ್ಟಿಯಿಂದ ಹುಟ್ಟುತ್ತದೆ. ಮಹಾಭಾರತದ ಅಸಲಿ ಪ್ರಾರಂಭ ಧೃತರಾಷ್ಟ್ರನ ನೂರಾಒಂದು ಮಕ್ಕಳಿಂದ! 

***** 

ನಮ್ಮ ಬಾಲ್ಯದ ಕಾಲದಲ್ಲಿ ಹಿರಿಯರು ಸಂವಾದದಲ್ಲಿ ತೊಡಗಿದಾಗ ಮೊದಲನೇ ಪ್ರಶ್ನೆ "ಮಕ್ಕಳೆಷ್ಟು?" ಎನ್ನುವುದೇ ಆಗಿರುತ್ತಿತ್ತು. ಕೆಲವರಿಗೆ ಹೆಚ್ಚು ಮಕ್ಕಳು. ನಾಲ್ಕು, ಆರು, ಎಂಟು ಮಕ್ಕಳಿರುತ್ತಿದ್ದುದು ಸಾಮಾನ್ಯವಾಗಿರುತ್ತಿತ್ತು. ಹೆಚ್ಚು ಮಕ್ಕಳಿರುವವರಿಗೆ ಕಡಿಮೆಯಿರುವವರು ಸಮಾಧಾನ ಹೇಳುವಂತೆ "ಇರಲಿ ಬಿಡಿ. ಯಾರಾದರೂ ಕೇಳುವುದು 'ಎಷ್ಟು ಮಕ್ಕಳು?' ಎಂದಲ್ಲವೇ? 'ಎಷ್ಟು ಆಸ್ತಿ?' ಎಂದು ಯಾರೂ ಕೇಳುವುದಿಲ್ಲವಲ್ಲ?" ಎನ್ನುತ್ತಿದ್ದರು. ಯಾರಿಗಾದರೂ ಮಕ್ಕಳಿಲ್ಲದಿದ್ದರೆ ಇದ್ದವರು ಇದೇ ರೀತಿ "ಆಗುತ್ತವೆ ಬಿಡಿ. ದೇವರು ಕಣ್ಣು ಬಿಟ್ಟು ನೋಡಿದರೆ ಎಷ್ಟು ಹೊತ್ತು?" ಅನ್ನುತ್ತಿದ್ದರು. ಈಗ ಮಕ್ಕಳ ವಿಷಯ ಮಾತಾಡುವುದೇ ಒಂದು ಕಷ್ಟದ ಕೆಲಸ. ಅದರ ಪ್ರಸ್ತಾಪ ಮಾಡಬೇಕೋ ಮಾಡಬಾರದೋ ಗೊತ್ತಾಗುವುದಿಲ್ಲ. ರಾಜಕೀಯ ವಿಷಯಗಳು ಮತ್ತು ಹವಾಮಾನ ವಿವರದಿಂದ ಮಾತುಕತೆ ಪ್ರಾರಂಭಿಸುವುದು ಉಭಯತ್ರರಿಗೂ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು. 

ನಮ್ಮ ದೇಶ ಸ್ವಾತಂತ್ರ್ಯ ಪಡೆದಾಗಿನಿಂದ "ಅತಿಸಂತಾನ" ಒಂದು ದೊಡ್ಡ ಸಮಸ್ಯೆ ಎಂದು ಗುರುತಿಸಿದ ಸರ್ಕಾರ "ಮಿತಸಂತಾನ" ಎನ್ನುವ ಕಾರ್ಯಕ್ರಮ ರೂಪಿಸಿತು. ಅರವತ್ತರ ದಶಕದಲ್ಲಿ "ಒಂದು ಎರಡು ಬೇಕು; ಮೂರು ಸಾಕು" ಎನ್ನುವ ಘೋಷಣೆ ಚಾಲ್ತಿಯಲ್ಲಿತ್ತು. ಎಪ್ಪತ್ತರ ದಶಕದಲ್ಲಿ ಅದು "ಆರತಿಗೊಬ್ಬ ಮಗಳು; ಕೀರುತಿಗೊಬ್ಬ ಮಗ" ಎಂದು ಬದಲಾಯಿತು. ಎಲ್ಲಾ ಸರ್ಕಾರೀ ಕಟ್ಟಡಗಳ ಮೇಲೆ ಈ ಘೋಷವಾಕ್ಯಗಳು ರಾರಾಜಿಸಿದವು. "ಸ್ತ್ರೀ ಸ್ವಾತಂತ್ಯವಾದಿಗಳು" ಎರಡನೆಯ ಘೋಷಣೆಗೆ ನ್ಯಾಯವಾಗಿಯೇ ಆಕ್ಷೇಪಿಸಿದರು. "ಮಗಳಿಂದ ಕೀರ್ತಿ ಇಲ್ಲವೇ?" ಎಂದು ಪ್ರಬಲವಾಗಿ ಪ್ರತಿರೋಧ ಬಂತು. "ಆರೋಗ್ಯ ಮತ್ತು ಕುಟುಂಬ ಯೋಜನೆ" ಇಲಾಖೆ ತನ್ನ ಹೆಸರು ಬದಲಾಯಿಸಿಕೊಂಡು "ಆರೋಗ್ಯ ಮತ್ತು ಕುಟುಂಬ ಕಲ್ಯಾಣ" ಇಲಾಖೆ ಆಯಿತು. ಎಂಭತ್ತರ ದಶಕದಲ್ಲಿ ಸರ್ಕಾರ ಕಷ್ಟ ಪಡುವ ಕಾಲ ಕಳೆದು ಜನರೇ "ಒಂದು ಮಗು ಸಾಕು" ಎನ್ನತೊಡಗಿದರು. ತೊಂಬತ್ತರ ದಶಕದಲ್ಲಿ "ಇರುವುದಕ್ಕಿಂತ ಇಲ್ಲದಿರುವುದೇ ಒಳ್ಳೆಯದು" ಎಂದು ಬಾಯಲ್ಲಿ ಹೇಳದಿದ್ದರೂ ಆಚರಣೆಯಲ್ಲಿ ತಂದರು. 

ಹೊಸ ಶತಮಾನದಲ್ಲಿ ಇನ್ನೂ ಪ್ರಚಂಡ ಬದಲಾವಣೆಗಳಾದುವು. ಸಮಸ್ಯೆಯ ಮೂಲಕ್ಕೇ ಕೊಡಲಿ ಪೆಟ್ಟು ಬೀಳತೊಡಗಿತು. ಮದುವೆಯೆನ್ನುವುದು ಇದ್ದರೆ ತಾನೇ ಮಕ್ಕಳು ಎನ್ನುವ ಸಮಸ್ಯೆ? ಮದುವೆಯೇ ಬೇಡ. ಹಾಗೆಯೇ ಜೊತೆಯಲ್ಲಿ ಇರೋಣ. ಜೊತೆ ಬೇಡ ಎಂದಾಗ ಸುಮ್ಮನೆ ಬೇರೆ ಹೋದರಾಯಿತು. ಇದರಿಂದ ವಿವಾಹ ವಿಚ್ಚೇದನ ಮತ್ತು ಅದರಿಂದಾಗುವ ಸಮಸ್ಯೆಗಳೇ ರದ್ದು ಎಂದು ಯುವ ಜನಾಂಗ ತೀರ್ಮಾನಿಸಿತು. ಆದರೂ ಕೆಲವೆಡೆ ಅಪಘಾತಗಳಾಗಿ ಮದುವೆಯಿಲ್ಲದೇ ಮಕ್ಕಳಾಗತೊಡಗಿದವು. ಕಳೆದ ದಶಕದಲ್ಲಿ ಈ ಎಲ್ಲ ರೀತಿಯ ಮಕ್ಕಳ ಸಮಸ್ಯೆಗೆ ಅತಿ ದೊಡ್ಡ ಪರಿಹಾರ ಸಿಕ್ಕಿದೆ. ಗಂಡು-ಹೆಣ್ಣು ಮದುವೆಯಾದರೆ ಅಥವಾ ಜೊತೆಯಲ್ಲಿದ್ದರೆ ತಾನೇ ಮಕ್ಕಳ ಸಮಸ್ಯೆ? ಸಲಿಂಗ ವಿವಾಹದಿಂದ ಈ ತೊಂದರೆಯೇ ಇರುವುದಿಲ್ಲವಲ್ಲ. ಗಂಡು-ಗಂಡು ಮತ್ತು ಹೆಣ್ಣು-ಹೆಣ್ಣು ಮದುವೆಯಾದರೆ ಮಕ್ಕಳಾಗುವ ಸಂಭವವೇ ಇಲ್ಲವಲ್ಲ! ಈಗ ಇದರ ಕಾಲ ನಡೆಯುತ್ತಿದೆ. 

*****

ದಂಪತಿಗಳಿಗೆ ಮಕ್ಕಳು ಏಕೆ ಹುಟ್ಟುತ್ತಾರೆ? ಹುಟ್ಟುವ ಮಕ್ಕಳು ಯಾವ ರೀತಿಯವು? ಜನ್ಮ-ಜನ್ಮಗಳ ಸಂಬಂಧಗಳು ಉಂಟೋ? ಈ ರೀತಿಯ ಪ್ರಶ್ನೆಗಳಿಗೆ "ಪದ್ಮ ಪುರಾಣ" ತನ್ನ ಒಂದು ಪ್ರಸಂಗದಲ್ಲಿ ಉತ್ತರ ಕೊಡುತ್ತದೆ. 

ನರ್ಮದಾ ನದಿಯ ತೀರದ "ವಾಮನ ತೀರ್ಥ" ಎನ್ನುವ ಪ್ರದೇಶದಲ್ಲಿ ಸೋಮಶರ್ಮ ಎಂಬ ಒಬ್ಬ ಸಾತ್ವಿಕನು ವಾಸವಾಗಿರುತ್ತಾನೆ. ಅವನ ವಿವಾಹ ಚ್ಯವನ ಋಷಿಗಳ ಮಗಳಾದ ಸುಮನಾ ಎನ್ನುವ ಯುವತಿಯೊಡನೆ ಆಗುತ್ತದೆ. ("ಸತಿ ಸುಕನ್ಯ" ಚಲನಚಿತ್ರ ನೋಡಿದವರಿಗೆ ಸುಕನ್ಯಳ ಗಂಡ ಚ್ಯವನ ಋಷಿ ಎಂದು ನೆನಪಿಗೆ ಬರಬಹುದು. "ಚ್ಯವನಪ್ರಾಶ" ಅನ್ನುವುದನ್ನು ಅಶ್ವಿನಿ ದೇವತೆಗಳ ಕಡೆಯಿಂದ ಭೂಮಿಗೆ ತಂದ ತಪಸ್ವಿಗಳು ಅವರು. ಭೃಗು ಋಷಿಗಳ ವಂಶಜರು).  ತಂದೆಗೆ ತಕ್ಕ ಮಗಳಾದ ಸುಮನಾ ಬಹಳ ತಿಳುವಳಿಕೆಯುಳ್ಳ ಹೆಣ್ಣು ಮಗಳು. ಹೆಸರಿಗೆ ತಕ್ಕಂತೆ ಒಳ್ಳೆಯ ಮನಸ್ಸಿನವಳು. ಸೋಮಶರ್ಮನೂ ಜ್ಞಾನಿಯೇ. ಚೆನ್ನಾಗಿ ಸಂಸಾರ ಮಾಡುತ್ತಿದ್ದ ಈ ದಂಪತಿಗಳಿಗೆ ಮಕ್ಕಳಿರುವುದಿಲ್ಲ. ಸೋಮಶರ್ಮನಿಗೆ ಎರಡು ಚಿಂತೆಗಳು. ಮೊದಲನೆಯದು ದಾರಿದ್ರ್ಯ. ಎರಡನೆಯದು ಮಕ್ಕಳಿಲ್ಲ ಎನ್ನುವುದು. ಹೀಗೆ ಚಿಂತಾಕ್ರಾಂತನಾಗಿರುವ ಸೋಮಶರ್ಮನನ್ನು ಗಮನಿಸಿದ ಸುಮನಾ ಒಂದು ದಿನ ಅವನಿಗೆ ಸಮಾಧಾನ ಹೇಳುತ್ತಾಳೆ. ದಾರಿದ್ರ್ಯದ ವಿಷಯದಲ್ಲಿ ಹೇಳಿದ ಸಮಾಧಾನದ ವಿಷಯ ಮುಂದೊಮ್ಮೆ ನೋಡೋಣ. ಈಗ ಮಕ್ಕಳ ಸಮಸ್ಯೆ ಪ್ರಸ್ತಾಪ ಬಂದಿರುವುದರಿಂದ ಅದನ್ನು ಗಮನಿಸೋಣ. 

ಸುಮನಾ ಹೇಳುವ ಸೂತ್ರರೂಪವಾದ ಮಕ್ಕಳ ನಾಲ್ಕು ವಿಧಗಳ ವಿವರಣೆ ಹೀಗಿದೆ:

ಋಣಸಂಬಂಧಿನಃ ಕೇಚಿತ್ ಕೇಚಿತ್ ನ್ಯಾಸಾಪಹಾರಕಾ:
ಲಾಭಪ್ರದಾ ಭವಂತೇ ಕೇ ಉದಾಸೀನಾ ತಥಾಪರೇ  

  1. ಮೊದಲನೆಯ ವರ್ಗದ ಮಕ್ಕಳು "ಸಾಲ ವಸೂಲಿಗೆ ಬಂದವರು".  ಹಿಂದಿನ ಜನ್ಮಗಳಲ್ಲಿ ನಾವು ಯಾರಿಂದಲಾದರೂ ಹಣ-ಕಾಸು, ವಸ್ತುಗಳನ್ನು ಸಾಲ ಪಡೆದು ಹಿಂದಿರುಗಿಸದಿದ್ದರೆ ಹಾಗೆ ಸಾಲಕೊಟ್ಟವರು ಈ ಜನ್ಮದಲ್ಲಿ ನಮ್ಮ ಮಕ್ಕಳಾಗಿ ಹುಟ್ಟಿ ನಮ್ಮಿಂದ ಅದನ್ನು ಬಡ್ಡಿ ಸಹಿತ ವಸೂಲಿ ಮಾಡಲು ಹುಟ್ಟಿದ ಮಕ್ಕಳು ಇವರು. ಇವರಿಂದ ತಂದೆ-ತಾಯಿಗಳಿಗೆ ಯಾವುದೇ ಪ್ರಯೋಜನ ಇರುವುದಿಲ್ಲ. ತಮ್ಮ ಸಾಲ ವಸೂಲಾಗುವವರೆಗೂ ಜೊತೆಯಲ್ಲಿದ್ದು, ಅದು ಮುಗಿದ ಕೂಡಲೇ ಹೊರಟು ಹೋಗುತ್ತಾರೆ. ಇವರು "ಋಣಸಂಬಂಧಿ ಮಕ್ಕಳು". 
  2. ಎರಡನೆಯ ವರ್ಗದ ಮಕ್ಕಳು "ತಿಂದದ್ದು ಕಕ್ಕಿಸುವವರು". ಯಾವುದೋ ಜನ್ಮದಲ್ಲಿ ಇನ್ನೊಬ್ಬರ ಹಣವನ್ನು ಅಥವಾ ವಸ್ತು-ಆಸ್ತಿಗಳನ್ನು ಅನ್ಯಾಯವಾಗಿ ತಿಂದುಹಾಕಿದ್ದರೆ ಆ ರೀತಿ ಕಳೆದುಕೊಂಡವರು ಈ ಜನ್ಮದಲ್ಲಿ ಮಕ್ಕಳಾಗಿ ಬಂದು ಅದನ್ನು ಹಿಂಪಡೆಯುವವರು. ಮೊದಲನೆಯ ವರ್ಗದವರಿಗೂ ಇವರಿಗೂ ಏನು ವ್ಯತ್ಯಾಸ? ಮೊದಲನೆಯದು ನಾವು ಸಾಲ ಕೇಳಿ ಅವರು ಒಪ್ಪಿ ಕೊಟ್ಟವರು. ಎರಡನೆಯವರು ಅವರಿಂದ ನಾವು ಅನ್ಯಾಯವಾಗಿ ಕಿತ್ತುಕೊಂಡುದರಿಂದ ನಷ್ಟ ಅನುಭವಿಸಿದವರು. ಆದುದರಿಂದ  ಇವರ ವ್ಯವಹಾರ ಮೊದಲನೆಯ ವರ್ಗಕ್ಕಿಂತ ಹೆಚ್ಚು ಕಠಿಣವಾಗಿರುತ್ತದೆ. 
  3. ಮೂರನೆಯ ವರ್ಗದ ಮಕ್ಕಳು "ಲಾಭಪ್ರದರು". ಕಳೆದ ಜನ್ಮಗಳಲ್ಲಿ ನಾವು ಮತ್ತೊಬ್ಬರಿಗೆ ಉಪಕಾರ ಮಾಡಿದ್ದರೆ ಅದರ ಸ್ಮರಣೆಯಿಂದ ಈ ಜನ್ಮದಲ್ಲಿ ನಮಗೆ ಉಪಕಾರ ಮಾಡಲು ಹುಟ್ಟಿದವರು. ಇವರು ತಂದೆ-ತಾಯಿಯರಿಗೆ ಬಹಳ ಅನುಕೂಲ ಮಾಡಿಕೊಡುವ ಮಕ್ಕಳಾಗುತ್ತಾರೆ. ಕೆಲವೊಮ್ಮೆ ಮಕ್ಕಳು ತಾಯಿ ಮತ್ತು ತಂದೆ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅನುಕೂಲರಾಗಿರಬಹುದು. ಇದು ಮಕ್ಕಳಾಗಿ ಹುಟ್ಟಿದವರು ಯಾರಿಂದ ಹಿಂದೆ ಉಪಕೃತರಾಗಿದ್ದರೋ ಅದರ ಮೇಲೆ ಅವಲಂಬಿಸುತ್ತದೆ. 
  4. ನಾಲ್ಕನೆಯ ವರ್ಗದ ಮಕ್ಕಳು "ಉದಾಸೀನ ಪುತ್ರರು". ಇವರು ಮೇಲಿನ ಮೂರೂ ಕಾರಣಗಳಿಲ್ಲದ ಮಕ್ಕಳು. ಇವರು ಅವರ ಹಿಂದಿನ ಜನ್ಮಗಳ ಫಲಗಳನ್ನು ಅನುಭವಿಸಲು ಹುಟ್ಟಿದವರು. ಜನ್ಮ ಪಡೆಯುವುದಕ್ಕಾಗಿ ಮಾತ್ರವೇ ತಾಯಿ-ತಂದೆಯರ ಆಶ್ರಯ ಪಡೆದವರು. ಇಂತಹವರು ತಮ್ಮ ಪಾಡು ತಾವು ನೋಡಿಕೊಂಡು ತಂದೆ-ತಾಯಿಯರ ವಿಷಯದಲ್ಲಿ ಉದಾಸೀನರಾಗಿರುತ್ತಾರೆ. 
ಹಾಗಿದ್ದರೆ ಐದನೆಯ ಗುಂಪಿನ ಮಕ್ಕಳು ಯಾರು? ಹಿಂದಿನ ಯಾವುದೂ ಸಂಬಂಧಗಳಿರದೆ ಈ ಜನ್ಮದಲ್ಲಿ ಮಾಡಿದ ಸತ್ಕರ್ಮಗಳಿಂದ ತಂದೆ-ತಾಯಿಯರ ಮಕ್ಕಳಾಗಿ ಹುಟ್ಟಿದವರು ಈ ಗುಂಪಿಗೆ ಸೇರಿದವರು. ಹಿಂದಿನ ಜನ್ಮಗಳ ಸತ್ಕರ್ಮಗಳ ಕಾರಣವಾಗಿ ವರರೂಪವಾಗಿ ಈಗ ಹುಟ್ಟಿದವರೂ ಆಗಬಹುದು. ವಿವಾಹ ಪೂರ್ವದಲ್ಲಿ ಮಾಡಿದ ಒಳ್ಳೆಯ ಕೆಲಸಗಳ ಕಾರಣ ವಿವಾಹದ ನಂತರ ಶೀಘ್ರದಲ್ಲಿ ಹುಟ್ಟಬಹುದು. ಇಲ್ಲವೇ, ಮಕ್ಕಳಿಲ್ಲವೆಂದು ಕೊರಗುವಾಗ ಮಾಡುವ ಒಳ್ಳೆಯ ಕಾರ್ಯಗಳ ಫಲಸ್ವರೂಪವಾಗಿ ತಡವಾಗಿ ಹುಟ್ಟಿದವರು ಇರಬಹುದು. ಇಂತಹ ಮಕ್ಕಳಿಂದ ಮಾತಾ-ಪಿತೃಗಳಿಗೆ ಅತ್ಯಂತ ಸುಖವೂ, ಕೀರ್ತಿಯೂ, ಸಮಾಜದಲ್ಲಿ ಮನ್ನಣೆಯೂ ದೊರೆಯುವುದು. 

*****

ನಾವು ನಮ್ಮ ತಂದೆ-ತಾಯಿಯರಿಗೆ ಎಂತಹ ಮಕ್ಕಳಾಗಿದ್ದೆವು? ನಮ್ಮ ಮಕ್ಕಳು ಮೇಲಿನ ಯಾವ ಗುಂಪಿಗೆ ಸೇರಿದವರು? ಈ ಪ್ರಶ್ನೆಗಳಿಗೆ ಉತ್ತರ ಅವರವರೇ ಕಂಡುಕೊಳ್ಳಬೇಕು. 

ಜನ್ಮ-ಜನ್ಮಾಂತರಗಳು, ಪುನರ್ಜನ್ಮ, ಪಾಪ-ಪುಣ್ಯಗಳು, ವರ ಪಡೆಯುವುದು ಮುಂತಾದುವನ್ನು ನಂಬುವವರೂ ಇದ್ದಾರೆ. ನಂಬದವರೂ ಇದ್ದಾರೆ. ನಂಬಿದವರು ಮೇಲಿನ ವರ್ಗೀಕರಣವನ್ನು ಒಪ್ಪಿಕೊಳ್ಳಬಹುದು. ನಂಬದವರು ಅಪಹಾಸ್ಯ ಮಾಡಬಹುದು. ಆದರೆ, ಮೇಲಿನ ವರ್ಗೀಕರಣ ಒಂದು ಬಲವಾದ ತರ್ಕದ ತಳಹದಿಯ ಮೇಲೆ ನಿಂತಿದೆ ಎನ್ನುವುದನ್ನು ಖಂಡಿತವಾಗಿ ಒಪ್ಪಬಹುದು. 

Saturday, February 15, 2025

ಪ್ರತಿದಿನ ಗಂಗಾ ಸ್ನಾನ?



ಇದೀಗ ಎಲ್ಲೆಲ್ಲೂ "ಅಪರೂಪದ ಕುಂಭಮೇಳ" ಎನ್ನುವ ಸುದ್ದಿಯೇ ಸುದ್ದಿ. ಕೇವಲ ಹನ್ನೆರಡು ವರುಷದ್ದಲ್ಲ. ಹನ್ನೆರಡು ಹನ್ನೆರಡಲ ನೂರಾ ನಲವತ್ತನಾಲ್ಕು ವರುಷಗಳ ವಿಶೇಷ ಬೇರೆ. ಈಗಾಗಲೇ ಮೂವತ್ತು-ನಲವತ್ತು  ಕೋಟಿ ಮಂದಿ ಕುಂಭಸ್ನಾನ ಮಾಡಿದ್ದಾರೆ ಎಂದು ಒಂದು ಅಂದಾಜು. ಅಥವಾ, ಮೇಳ ಮುಗಿಯುವುದರ ಒಳಗೆ  ಮುಳುಗು ಹಾಕಿದವರ ಸಂಖ್ಯೆ ನಲವತ್ತು ಕೋಟಿ ದಾಟುತ್ತದೆ ಎಂದು ಇನ್ನೊಂದು ಅಂದಾಜು. (ಈಗಾಗಲೇ ಐವತ್ತು ಕೋಟಿ ಸಂಖ್ಯೆ ದಾಟಿದೆ, ಮೂರು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಆದಾಯ ಬಂದಿದೆ, ಎಂದು ಇಂದಿನ ಸುದ್ದಿ).  ನಲವತ್ತು ಕೋಟಿ ಅಂದರೆ ಅದೇನೂ ಒಂದು ಸಾಮಾನ್ಯ ಜನಗಳ ಕೂಟವಲ್ಲ. ಇಡೀ ಅಮೇರಿಕ ಸಂಯುಕ್ತ ಸಂಸ್ಥಾನಗಳ ಒಟ್ಟು ಜನಸಂಖ್ಯೆಗಿಂತ ಐದು ಕೋಟಿ ಹೆಚ್ಚು. ಮೂರು ನೂರು ಕಿಲೋಮೀಟರು ದೂರ ಟ್ರಾಫಿಕ್ ಜಾಮ್ ಆಗಿದೆ ಎಂದು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಚಿತ್ರಗಳು ಹರಿದಾಡುತ್ತಿವೆ. ವಾರಗಟ್ಟಲೆ ಸ್ನಾನ ಮಾಡದವರೂ ಕುಂಭ ಸ್ನಾನ ಮಾಡಿದ್ದಾರೆ! (ಕೆಲವು ಸಾಧುಗಳು ಹೀಗೆ ಅನೇಕ ದಿನ ಸ್ನಾನ ಮಾಡುವುದಿಲ್ಲ ಎಂದು ವರದಿಗಳಿವೆ). ಪ್ರತಿದಿನ ಸ್ನಾನ ಮಾಡುವ ದುರಭ್ಯಾಸ ಇರುವವರ ವಿಷಯ ಹೇಳಲೇಬೇಕಾಗಿಲ್ಲ. 

"ಕುಂಭಮೇಳ ಪ್ರವಾಸ" ಏರ್ಪಡಿಸುವ ಯಾವ ಪ್ರವಾಸಿ ಸಂಸ್ಥೆಯೂ ಈ ವರ್ಷ ನಷ್ಟ ಅನುಭವಿಸುವ ಸಾಧ್ಯತೆಯೇ ಇಲ್ಲ. ಕುಂಭ ಮೇಳ ಕಾಲದಲ್ಲಿ ಪ್ರಯಾಗ್ ರಾಜ್ ವಿಮಾನದ ಟಿಕೆಟ್ ಬೆಲೆ  ದೆಹಲಿ-ಲಂಡನ್ ಮಾರ್ಗದ ಟಿಕೆಟ್ ಬೆಲೆಗಿಂತ ಜಾಸ್ತಿಯಂತೆ. ಇದರ ಬಗ್ಗೆ ಸಂಸತ್ತಿನಲ್ಲಿ ಬಿಸಿ ಬಿಸಿ ಚರ್ಚೆಯೂ ಆಯಿತು. ಮೊದಲ ಪಂಕ್ತಿಗಳಲ್ಲಿ ಊಟ ಮಾಡಲಾಗದೆ ಇದ್ದರೂ ಪರವಾಗಿಲ್ಲ. ಕೊನೆಯ ಪಂಕ್ತಿ ಸಿಕ್ಕಿದರೂ ಸರಿಯೇ ಎಂದು ಕಾಯುವವರಂತೆ ಮೇಳ ಮುಗಿದ ನಂತರವಾದರೂ ಹೋಗೋಣ ಎಂದು ಕಾಯುತ್ತಿರುವವರೂ ಉಂಟು. "ಅಯ್ಯೋ, ಒಂದು ನೂರಾ ನಲವತ್ತನಾಲ್ಕು ವರುಷಗಳ ಕುಂಭ ಸ್ನಾನ ತಪ್ಪಿಸಿಕೊಂಡಿರಲ್ಲ!" ಎಂದು ಬೇರೆಯವರು ಹೇಳಬಾರದು ಎಂದು ಪರಿತಪಿಸುತ್ತಾ ಕಾಯುತ್ತಿರುವವರೂ ಉಂಟು. ಜನಜಂಗುಳಿ, ಹಣ-ಕಾಸಿನ ಮುಗ್ಗಟ್ಟು, ಆರೋಗ್ಯದ ಸಮಸ್ಯೆಗಳು, ಚಳಿ ತಡೆಯಲಾಗದ ಸ್ಥಿತಿ, ಜೊತೆಯಿಲ್ಲದೆ ಹೋಗಲಾಗದ ಬಿಕ್ಕಟ್ಟು, ಇವೆಲ್ಲಕ್ಕಿಂತ ಹೆಚ್ಚಾದ ಸೋಮಾರಿತನ, ಮುಂತಾದ ಅನೇಕ ಕಾರಣಗಳಿಂದ "ಈಗ ಬೇಡ. ಬೇಸಗೆ ಬರಲಿ. ಆಗ ಹೋಗೋಣ. ಸ್ವಲ್ಪ ಪುಣ್ಯ ಕಡಿಮೆ ಬಂದರೂ ಪರವಾಗಿಲ್ಲ" ಎಂದು ಅಂದುಕೊಂಡವರೂ ಉಂಟು.  

ಗಂಗಾನದಿಯ ತಟದಲ್ಲಿರುವವರು ಪುಣ್ಯಾತ್ಮರು. ಪ್ರತಿದಿನ ಗಂಗಾಸ್ನಾನ ಮಾಡುತ್ತಾರೆ ಎನ್ನಬಹುದೇ? ಬೆಂಗಳೂರಿನಲ್ಲಿರುವವರು ಪ್ರತಿದಿನ ಲಾಲ್ ಬಾಗಿಗೆ ಹೋಗುತ್ತಾರೆ ಎನ್ನುವಂತೆ! ಬೇರೆಲ್ಲಿಯೋ ಇರುವವರು ಏನು ಮಾಡಬೇಕು? ಕುಮಾರವ್ಯಾಸನು ಹೇಳುವಂತೆ "ಚೋರ ನಿಂದಿಸಿ ಶಶಿಯ ಬೈದೊಡೆ, ಕ್ಷೀರವನು ಕ್ಷಯ ರೋಗಿ ಹಳಿದಡೆ, ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು?" ಎನ್ನುವುದನ್ನು ನೆನೆಸಿಕೊಂಡು ಸುಮ್ಮನಿರಬೇಕೇ? ದೇಶದ ದಕ್ಷಿಣ ಭಾಗದಲ್ಲಿ ವಾಸಿಸುವವರು ಏನು ಮಾಡಬೇಕು? ಅವರಿಗೂ ಬೇರೆ ದಾರಿ ಉಂಟು. ಗಂಗೆಯ ಸೋದರಿಯರಾದ ಗೋದೆ, ಕೃಷ್ಣೆ, ಕಾವೇರಿಯರಿದ್ದಾರೆ. ಭೀಮೆ, ತುಂಗೆ, ವೈಗೈ ಇದ್ದಾರೆ. ಶರಾವತಿ, ನೇತ್ರಾವತಿಯರಿದ್ದಾರೆ. (ಅರ್ಕಾವತಿ-ವೃಷಭಾವತಿಯರೂ ಇದ್ದರು. ಅಲ್ಲಿ ಸ್ನಾನ ಮಾಡುವ ಭೀತಿ ಬೇಡ). ಈ ಎಲ್ಲ ನದಿಗಳೂ ದೂರ ಇದ್ದರೆ ಏನು ಮಾಡಬೇಕು? ಸಣ್ಣ ಹಳ್ಳಿಯಳ್ಳಿ ಚಿಕ್ಕ ಕೆರೆ ಮಾತ್ರ ಉಂಟು. ಅವರೇನು ಮಾಡಬೇಕು? ಅಥವಾ ದೊಡ್ಡ ನಗರದ ಸಣ್ಣ ಮನೆಯ ಪುಟ್ಟ ಬಚ್ಚಲು ಮನೆ. ನೀರೇ ಬಾರದ ನಲ್ಲಿಯಲ್ಲಿ ಎಂದೋ ನೀರು ಬಂದಾಗ ಹಿಡಿದಿಟ್ಟ ಪ್ಲಾಸ್ಟಿಕ್ ಬಕೆಟ್ಟಿನ ನೀರು ಮಾತ್ರ. ಅವರಿಗೆ ಪುಣ್ಯ ಸ್ನಾನವಿಲ್ಲವೇ? ಇದು ಸ್ವಲ್ಪ ಯೋಚಿಸಬೇಕಾದ ವಿಷಯವೇ. 
*****

ನಾವು ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಭಾಷೆಗಳನ್ನು ಚೆನ್ನಾಗಿ ಕಲಿಯಲಿ ಎಂದು "ಪ್ರಭಂಧ" ಬರೆಸುತ್ತಿದ್ದರು. ಇಂಗ್ಲಿಷಿನಲ್ಲಿ "Pen is mightier than Sword" ಅಥವಾ ಕನ್ನಡದಲ್ಲಿ "ಕತ್ತಿಗಿಂತ ಲೇಖನಿ ಹರಿತ" ಎನ್ನುವ ವಿಷಯದ ಮೇಲೆ ಸಾಮಾನ್ಯವಾಗಿ ಮೊದಲನೇ ಪ್ರಬಂಧ ಬರೆಸುತ್ತಿದ್ದರು. ಹಿಂದಿಯಲ್ಲಾದರೆ ರಾಮಧಾರಿ ಸಿಂಹ "ದಿನಕರ" ಅವರ "ಕಲಂ ಯಾ ತಲವಾರ್" ಎಂಬ ಇದೇ ವಿಷಯದ ಪದ್ಯ ಓದಬೇಕಿತ್ತು. ಲೇಖನಿ ಅಥವಾ ಪೆನ್ನು ಒಂದು ಜಡ ವಸ್ತು. ಅದೇನು ಮಾಡುತ್ತದೆ? ಮೇಜಿನ ಮೇಲೋ ಜೇಬಿನಲ್ಲೋ ಕುಳಿತಿರುತ್ತದೆ. (ಹಿಂದೆಲ್ಲ ಜೇಬಿನಲ್ಲಿ ಪೆನ್ನಿಲ್ಲದ ವಿದ್ಯಾರ್ಥಿಯನ್ನು "ನೀನೆಂಥ ವಿದ್ಯಾರ್ಥಿಯೋ?" ಎಂದು ಬಯ್ಯುತ್ತಿದ್ದರು. ಈಗ ಪೆನ್ನು ಇಟ್ಟುಕೊಳ್ಳುವ ಅಭ್ಯಾಸವೇ ಹೋಗಿದೆ). ಒಂದು ವೈಚಾರಿಕ ಲೇಖನ ಒಂದು ಕತ್ತಿ ಮಾಡುವುದಕ್ಕಿಂತ ಹೆಚ್ಚು ಕ್ರಾಂತಿಕಾರಕ ಕೆಲಸ ಮಾಡುತ್ತದೆ ಎನ್ನುವುದನ್ನು ಒಪ್ಪೋಣ. ಆದರೆ ಆ ಕೆಲಸ ಮಾಡುವುದು ಪೆನ್ನು ಅಥವಾ ಲೇಖನಿ ಅಲ್ಲ. ಪೆನ್ನು ಅಥವಾ ಲೇಖನಿ ಹಿಡಿದ ಕೈ, ಮತ್ತು ಅದಕ್ಕಿಂತ ಹೆಚ್ಚಾಗಿ ಅದನ್ನು ಉಪಯೋಗಿಸಿ ಬರೆಯುವವನ ತಲೆ; ಅದರಲ್ಲಿರುವ ಮಿದುಳು. 

ಪ್ರಸಿದ್ಧ ನಿರ್ಮಾಪಕ-ನಿರ್ದೇಶಕ ಬಿ. ಅರ್. ಪಂತುಲು ಅವರ ಹೆಮ್ಮೆಯ "ಶ್ರೀ ಕೃಷ್ಣದೇವರಾಯ" ಚಲನಚಿತ್ರದ ಕಡೆಯಲ್ಲಿ ಕೃಷ್ಣದೇವರಾಯನ ಖಡ್ಗವನ್ನು ತೋರಿಸಿ "ಸಹಸ್ರಾರು ಶತ್ರುಗಳ ಶಿರಛೇದ ಮಾಡಿದ ಖಡ್ಗ ನಿರಾಶ್ರಿತವಾಯಿತು" ಅನ್ನುತ್ತಾರೆ. ಹೀಗೇಕೆ? ವೈರಿಗಳ ತಲೆ ಕತ್ತರಿಸಿದ್ದು ಖಡ್ಗವೇ ಆದರೂ ಅದೂ ಒಂದು ಜಡ ವಸ್ತು. ಆ ಕೆಲಸ ನಿಜವಾಗಿ ಮಾಡಿದ್ದು ಆ ಖಡ್ಗ ಹಿಡಿದ ಕೈ; ಆ ಕೈ ಹಿಂದಿದ್ದ ಅಸಾಧಾರಣ ವ್ಯಕ್ತಿ. ಲೇಖನಿ ಅಥವಾ ಕತ್ತಿ ದೊಡ್ಡದು ಎಂದು ಹೇಳುವುದು ಕೇವಲ ಸೂಚ್ಯವಾಗಿ. ಯಾವುದೇ ಜಡ ವಸ್ತು ತನಗೆ ತಾನೇ ಕೆಲಸ ಮಾಡದು. ಅದರ ಹಿಂದಿರುವ ಚೇತನವೇ ಕೆಲಸಗಳನ್ನು ಮಾಡುವುದು. ಜಡ ವಸ್ತು ಒಂದು ಉಪಕರಣ. ಅಷ್ಟೇ. 

*****

ಜಡವಸ್ತು ಕೇವಲ ಒಂದು ಉಪಕರಣ. ನಿಜವಾಗಿ ಕೆಲಸ ಮಾಡುವುದು ಅದರ ಹಿಂದಿರುವ ಚೇತನ ಎನ್ನುವುದಾದರೆ ಗಂಗಾಸ್ನಾನದ ವಿಷಯ ಏನು? ಗಂಗೆಯಲ್ಲಿ ಹರಿಯುವುದು ನೀರು. ಆ ನೀರೂ ಒಂದು ಜಡ ವಸ್ತುವೇ. ಅದು ದ್ರವರೂಪದಲ್ಲಿರುವುದರಿಂದ ಹರಿಯುತ್ತದೆ. ಎತ್ತರದ ಹಿಮಾಲಯ ಪರ್ವತ ಶ್ರೇಣಿಗಳಿಂದ ಹರಿದು ಬಂದು, ಅದೇ ರೀತಿಯ ಇತರ ಉಪನದಿಗಳಿಂದ ಕೂಡಿ ಮೈದುಂಬಿ, ಭೋರ್ಗರೆಯುತ್ತಾ ಬೆಟ್ಟಗಳಲ್ಲಿ ಹರಿಯುತ್ತದೆ. ಹರಿದ್ವಾರದ ನಂತರ ಬಯಲು ಪ್ರದೇಶಗಳಲ್ಲಿ ಹರಿಯುವುದರಿಂದ ಆ ವಿಶಾಲ ಜಲರಾಶಿ ಬಲು ರಭಸವಾಗಿ ಚಲಿಸುತ್ತದೆ. ಕೋಟಿ ಕೋಟಿ ಜನಗಳ ಜೀವನ ಹಸನು ಮಾಡಿ ಸಮುದ್ರ ಸೇರುತ್ತದೆ. ಆ ನೀರಿನಲ್ಲಿ ಸ್ನಾನ ಮಾಡಿದರೆ ಪಾಪಗಳು ಹೋಗುವುದು ಹೇಗೆ? 

ನಮ್ಮ ಪುರಾತನ ನಂಬಿಕೆಗಳ ಪ್ರಕಾರ ಪ್ರತಿ ಜಡ ವಸ್ತುವಿನ ಹಿಂದೆ ಅದಕ್ಕೆ ಹೊಂದಿದ ಒಂದು ಚೇತನ ಶಕ್ತಿ ಇದೆ. ಅದನ್ನೇ ನಾವು ಆ ಜಡ ಪದಾರ್ಥದ "ಅಭಿಮಾನಿ ದೇವತೆ" ಎನ್ನುವುದು. ಪುಸ್ತಕ ಜಡ ವಸ್ತು. ಅದರ ಹಿಂದೆ ವಿದ್ಯೆಯ ಅಭಿಮಾನಿ ದೇವತೆಯಾದ ಸರಸ್ವತಿ ಇದ್ದಾಳೆ. ಬೆಂಕಿಯ ಹಿಂದೆ ಅಗ್ನಿದೇವ ಇದ್ದಾನೆ. ನೀರಿನ ಹಿಂದೆ ವರುಣ ಇದ್ದಾನೆ. ಗಾಳಿಯ ಹಿಂದೆ ವಾಯುದೇವ ಇದ್ದಾನೆ. ಹೀಗೆ. ಅದೇ ರೀತಿ ಗಂಗಾನದಿಯಲ್ಲಿ ಹರಿಯುವ ನೀರಿನ ಹಿಂದೆ ತಾಯಿ ಗಂಗೆ ಇದ್ದಾಳೆ. ಹಿಂದೆಲ್ಲ ಕೇವಲ ಗಂಗೆ ಎಂದು ಸಂಬೋಧಿಸಿದರೆ ಹೊಡೆಯಲು ಬರುತ್ತಿದ್ದರು. "ಗಂಗಾಜೀ" ಅಥವಾ "ಗಂಗಾಮಯ್ಯಾ" ಅನ್ನು ಎನ್ನುತ್ತಿದ್ದರು. ಗಂಗೆ ಅಂದರೆ ಅಷ್ಟು ಶ್ರದ್ದೆ. ಅಂತಹ ಭಕ್ತಿ. ಗಂಗೆ ಕೇವಲ ಹರಿವ ನೀರಲ್ಲ. ಅವಳು ಹರಿ ಪಾದೋದಕ. ಹರನ ತಲೆಯಿಂದ ಹರಿದು ಬಂದ ತೀರ್ಥ. ಅನೇಕ ಶ್ರದ್ಧಾಳುಗಳು ಮೊದಲು ಮನೆಯಲ್ಲೋ ಅಥವಾ ಛತ್ರದಲ್ಲೋ ಒಮ್ಮೆ ಸ್ನಾನ ಮಾಡಿ ನಂತರ ಗಂಗಾಸ್ನಾನಕ್ಕೆ ನದಿಗೆ ಹೋಗುತ್ತಿದ್ದರಂತೆ! ಗಂಗಾಸ್ನಾನಕ್ಕೆ ಹೋದಾಗ ಗಂಗೆಯ ನೀರನ್ನು ಮುಟ್ಟುವ ಮುಂಚೆ ದೇಹ ಶುದ್ಧವಾಗಿ ಇರಬೇಕೆಂಬ ಕಳಕಳಿಯಿಂದ. 

*****

ಗಂಗಾನದಿಯಲ್ಲಿ ಹರಿಯುವ ನೀರಿನ ಅಭಿಮಾನಿದೇವತೆ ಗಂಗಾದೇವಿ ನಮ್ಮ ಪಾಪಗಳನ್ನು ಕಳೆಯುತ್ತಾಳೆ ಎಂದಾಯಿತು. ಹಾಗಿದ್ದಲ್ಲಿ ಗಂಗೆ ನೀರಿಗೆ ಅಷ್ಟು ದೂರ ಹೋಗಬೇಕು. ಆದರೆ ಅದರ ಅಭಿಮಾನಿ ದೇವತೆ ನಮ್ಮನ್ನು ಹರಸಲು ಅಲ್ಲಿಗೇ ಹೋಗಬೇಕೇ ಎನ್ನುವುದು ಮುಂದಿನ ಪ್ರಶ್ನೆ. ದೇವತೆಗಳಿಗೆ ಎಲ್ಲಿ ಬೇಕೆಂದರಲ್ಲಿ ಹೋಗುವ, ಬರುವ ಸಾಮರ್ಥ್ಯ ಇದೆಯಲ್ಲವೇ? ನಾವು ಅಲ್ಲಿಗೆ ಹೋಗಲು ಅಶಕ್ತರು. ಅಲ್ಲಿಗೆ ಸುಲಭವಾಗಿ ಹೋಗಲಾರೆವು. ಆ ತಾಯಿಯೇ ನಮ್ಮ ಬಳಿ ಬರಬಹುದೇ? ಅದು ಸಾಧ್ಯವಾದರೆ ಎಂತಹ ಪವಾಡ! ಹಾಗಾಗಬಹುದೇ? 

ಸಂಧ್ಯೆಯನ್ನು ಆಚರಿಸುವಾಗ, ಮತ್ತು ಅನೇಕ ರೀತಿಯ ಸಮಾರಂಭಗಳಲ್ಲಿ ಮಂತ್ರಪೂತ ಜಲದಿಂದ ಸಿಂಪಡಣೆ (ಪ್ರೋಕ್ಷಣೆ ಅಥವಾ ಮಾರ್ಜನ) ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆಗ ಕೆಲವು ಮಂತ್ರಗಳನ್ನು ಹೇಳುತ್ತಾರೆ. ಅವು ಯಾವುವು? ಋಗ್ವೇದದ ಹತ್ತನೆಯ ಮಂಡಲದ "ಆಪಃ ಸೂಕ್ತ" ಮಂತ್ರಗಳು ಅವು. ಅದರಲ್ಲಿ ನೀರಿನ ಅಭಿಮಾನಿ ದೇವತೆಗಳಾದ ಆಪೋದೇವಿಯರನ್ನು ಪ್ರಾರ್ಥಿಸಿಕೊಳ್ಳುವುದು. "ನಿಮ್ಮ ಕರುಣೆಯ ಬಲದಿಂದ ನಾವು ಬದುಕುತ್ತೇವೆ. ನಿಮ್ಮ ಸಹಕಾರದಿಂದ ನಮ್ಮ ಜೀವನ ನಡೆದು ನಾವು ಬಹಳಕಾಲ ಜೀವಿಸುತ್ತೇವೆ. ನಮ್ಮನ್ನು ಯೋಗ್ಯರನ್ನಾಗಿ ಮಾಡುವ, ನಿಮ್ಮಲಿರುವ ಆ ಶಕ್ತಿಯನ್ನು ನಮಗೆ ದಯಪಾಲಿಸಿ" ಎಂದು ಬೇಡುವುದೇ ಈ  ಮಂತ್ರಗಳ ತಿರುಳು. "ಉಷತೀರಿವ ಮಾತರಃ" ಎನ್ನುವುದು ಅಲ್ಲಿ ಬರುವ ವಿಶೇಷಣ. "ಕಂದಮ್ಮಗಳು ಕರೆದಾಗ ಓಡಿ ಬಂದು ಎತ್ತಿಕೊಳ್ಳುವ ತಾಯಿಯರಂತೆ ನೀವು" ಎಂದು ಅವರಲ್ಲಿ ಪ್ರಾರ್ಥನೆ. 

*****

ಎಲ್ಲ ನೀರಿನಲ್ಲಿರುವ ಆಪೋದೇವಿಯರಂತೆ ಗಂಗಾನದಿ ನೀರಿನಲ್ಲಿ ವಿಶೇಷ ಅಭಿಮಾನಿ ದೇವತೆಯಾಗಿ ತಾಯಿ ಗಂಗೆ ಇದ್ದಾಳೆ. ಅವಳದ್ದು ತಾಯಿಯ ಕರುಳು. ಎಳೆಯ ಮಕ್ಕಳು ಕೂಗಿ ಕರೆದಾಗ, ತಾನು ಮಾಡುತ್ತಿರುವ ಕೆಲಸವನ್ನು ಅಲ್ಲಿಯೇ ಬಿಟ್ಟು ಓಡಿ ಬಂದು ಮಗುವನ್ನು ಎತ್ತಿಕೊಳ್ಳುವ ಅಮ್ಮನಂತೆ ಕರುಣಾಮಯಿ ಅವಳು. ಕೂಗಿ ಕರೆದವರಿಗೆಲ್ಲಾ ಅವಳು ತಾಯಿಯೇ. ಆದ್ದರಿಂದ ಆ ನದಿ ಇರುವಲ್ಲಿಗೆ ಹೋಗಲಾರದವರು ಆರ್ತರಾಗಿ ಕರೆದರೆ ಅವಳು ಕರೆದವರು ಇರುವಲ್ಲಿಗೆ ಬರುತ್ತಾಳೆ! ಸ್ನಾನ ಮಾಡುವಾಗ ನಮ್ಮ ಹಿರಿಯರು ಹೇಳುತ್ತಿದ್ದ ಈ ಕೆಳಗಿನ ಶ್ಲೋಕ ಅದನ್ನೇ ಹೇಳುತ್ತದೆ:

ಗಂಗಾ ಗಂಗೇತಿ ಯೋ ಬೃಯಾತ್ ಯೋಜನಾನಾಂ ಶತೈರಪಿ 
ಮುಚ್ಯತೇ ಸರ್ವ ಪಾಪೇಭ್ಯೋ ವಿಷ್ಣು ಲೋಕಂ ಸ ಗಚ್ಛತಿ 

"ಗಂಗಾ, ಗಂಗೆ ಎಂದು ಯಾರು ಸ್ಮರಣೆ ಮಾಡುತ್ತಾರೋ ಅಂತಹವನು ನೂರಾರು ಯೋಜನ ದೂರವಿದ್ದರೂ ತಾಯಿ ಗಂಗೆಯು (ಅವನಿರುವಲ್ಲಿಗೆ ಬಂದು) ಅವರ ಎಲ್ಲ ಪಾಪಗಳಿಂದಲೂ ಬಿಡುಗಡೆ ಮಾಡುತ್ತಾಳೆ. ಅವನು ವಿಷ್ಣುವಿನ ಲೋಕವಾದ ವೈಕುಂಠವನ್ನು ಸೇರುತ್ತಾನೆ" ಎನ್ನುವುದು ಇದರ ಅರ್ಥ. 
*****

ಹಾಗಿದ್ದರೆ ಬಹಳ ಸುಲಭವಾಯಿತಲ್ಲ! ಗೋಮುಖಕ್ಕೋ, ದೇವಪ್ರಯಾಗಕ್ಕೋ, ಹರಿದ್ವಾರಕ್ಕೋ, ಪ್ರಯಾಗಕ್ಕೋ, ವಾರಾಣಸಿಗೋ, ಏಕೆ ಹೋಗಬೇಕು? ಈ ಶ್ಲೋಕ ಹೇಳಿದರೆ ಆಯಿತಲ್ಲ. ಪ್ರತಿದಿನ ಗಂಗಾಸ್ನಾನ ಮಾಡಿದಂತೆ ಆಯಿತಲ್ಲ. ಎಲ್ಲ ಸುಲಭ. ಅಲ್ಲಿಗೆ ಏಕೆ ಹೋಗಬೇಕು? 

ಅದು ಅಷ್ಟು ಸುಲಭವಾದ ಪರಿಹಾರವಲ್ಲ. 

ನಾವು ಪ್ರತಿದಿನ ಸ್ನಾನ ಮಾಡುತ್ತೇವೆ ಎಂದು ತಿಳಿದಿದ್ದೇವೆ. ವಾಸ್ತವವಾಗಿ ನಾವು ಮಾಡುವುದು ಬರೀ ಮೈ ತೊಳೆದುಕೊಳ್ಳುವ ಕ್ರಿಯೆ. ಸ್ನಾನ ಮಾಡುವಾಗ ನೂರಾರು ಯೋಚನೆಗಳು. ಸ್ನಾನ ಮುಗಿಸಿದರೆ ಸಾಕು. ಬೇರೆ ಕೆಲಸಗಳಿಗೆ ಓಡಬಹುದು ಎನ್ನುವ ಮನಸ್ಥಿತಿ. ಶ್ರೀಹರಿಯ ಪಾದದಿಂದ, ಸದಾಶಿವನ ಶಿರದಿಂದ ಇಳಿದು ಬಂದು, ನನ್ನ ತಲೆಯ ಮೂಲಕ ಹಾದು ದೇವಗಂಗೆ ನನ್ನನ್ನು ಪಾವನ ಮಾಡುತ್ತಿದ್ದಾಳೆ ಎಂದು ಅನುಸಂಧಾನ ಬೇಕು. ಆ ಮಂತ್ರದಲ್ಲಿ ಧೃಡವಾದ ನಂಬಿಕೆ ಬೇಕು. ಏಕಾಗ್ರತೆ ಬೇಕು. ಕ್ಷಣದಿಂದ ಕ್ಷಣಕ್ಕೆ ಕಪಿಯಂತೆ ಹಾರುವ ಮನಸ್ಸಿಗೆ ಅದು ಸುಲಭ ಸಾಧ್ಯವಲ್ಲ. 

ನಮಗೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಈ ಶ್ಲೋಕ ಹೇಳಿಕೊಂಡು ಸ್ನಾನ ಮಾಡುತ್ತೇವಲ್ಲ ಎಂದು ಸುಮ್ಮನೆ ಕೂಡುವಹಾಗಿಲ್ಲ. ಗಂಗಾನದಿ ಇರುವಲ್ಲಿಗೆ ಪ್ರಯತ್ನ ಪೂರ್ವಕ ಹೋಗಿ ವಿಧಿಯಂತೆ ಗಂಗಾಸ್ನಾನ ಮಾಡುವುದು ನಂಬಿದವರಿಗೆ ಒಂದು ಕರ್ತವ್ಯ. ಹೋಗುವ ಶಕ್ತಿ ಇದ್ದರೂ ಕಳ್ಳ ಮೈಯಿಂದ ತಪ್ಪಿಸಿಕೊಂಡು ಮೇಲಿನ ಶ್ಲೋಕ ಹೇಳಿಕೊಂಡು ಎಷ್ಟು ವರ್ಷ ಸ್ನಾನಮಾಡಿದರೂ ಪ್ರಯೋಜನವಿಲ್ಲ. 

*****

ಗಂಗಾಸ್ನಾನಕ್ಕೆ ಹಂಬಲಿಸುತ್ತಾ, ಒಮ್ಮೆಯೂ ಅಲ್ಲಿ ಹೋಗಲಾರದಿದ್ದರೂ ಹೋಗುವವರಿಗೆ ಸೇವೆ, ಸಹಕಾರಗಳನ್ನು ಕೊಡುತ್ತಿದ್ದ ಗಂಗಾದಾಸನಿಗೆ ಪ್ರತಿದಿನ ಗಂಗಾಸ್ನಾನ ಮಾಡಿದವನಿಗಿಂತ ಹೆಚ್ಚಿನ ಪುಣ್ಯ ಬಂದಿತೆಂದು ತಿಳಿಸುವ ಕಥೆಯೊಂದು "ಕಾರ್ತಿಕಮಾಸ ಮಹಾತ್ಮೆ" ಸಂದರ್ಭದಲ್ಲಿ ಬರುತ್ತದೆ. ಅದನ್ನು ತಿಳಿಯಲು ಆಸಕ್ತಿ ಇರುವವರು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

Monday, February 3, 2025

ಕುಂಭ ಸ್ನಾನ ಮತ್ತು ಪಾಪ ಪರಿಹಾರ


ಈಗ ಕೆಲವು ದಿನಗಳಿಂದ ಎಲ್ಲಿಲ್ಲಿ ನೋಡಿದರೂ, ಕೇಳಿದರೂ "ಪ್ರಯಾಗರಾಜ್" ಮತ್ತು ಅಲ್ಲಿ ನಡೆಯುತ್ತಿರುವ "ಕುಂಭ ಮೇಳ", ಅಲ್ಲಿ ಪ್ರತಿದಿನ ನೆರೆದು ಪುಣ್ಯ ಸ್ನಾನ ಮಾಡುತ್ತಿರುವ ಕೋಟ್ಯಾಂತರ ಮಂದಿ ಶ್ರದ್ದಾಳು ಜನರ ಸಮೂಹದ ವಿಷಯವೇ. ಅಲ್ಲಿ ದೇಶದ ನಾನಾ ಕಡೆಗಳಿಂದ ಮತ್ತು ವಿದೇಶಗಳಿಂದ ಹರಿದು ಬರುತ್ತಿರುವ ಜನಸಾಗರ, ಅಲ್ಲಿ ಮಾಡಲಾಗಿರುವ ವ್ಯವಸ್ಥೆಗಳು, ಕಾಲ್ತುಳಿತದಿಂದ ಅನೇಕ ಜನ ಸಾವನ್ನಪ್ಪಿದ ಪ್ರಸಂಗ, ಇವುಗಳ ಚರ್ಚೆಯೇ ಆಗಿದೆ. "ಅಲ್ಲಿ ಸ್ನಾನ ಮಾಡಿದರೆ ಬಡತನ ನಿರ್ಮೂಲನ ಆಗುತ್ತದೆಯೇ?" ಎಂದು ಪ್ರಶ್ನಿಸುವವರು ಕೆಲವರು. ಅಲ್ಲಿ ಹೋಗಿ ಸ್ನಾನ ಮಾಡಿದರೆ ಸಕಲ ಪಾಪಗಳೂ ಪರಿಹಾರ ಆಗುತ್ತವೆ ಎಂದು ವಾದಿಸುವವರು ಕೆಲವರು. "ಅದು ಹೇಗೆ ಸಾಧ್ಯ?" ಎಂದು ಕೇಳುವವರು ಮತ್ತೆ ಕೆಲವರು. "ಕೇವಲ ಪಾಪ ಪರಿಹಾರ ಮಾತ್ರವಲ್ಲ, ಕೈವಲ್ಯವೇ ಸಿಗುತ್ತದೆ" ಎಂದು ಬೇರೆ ಕೆಲವರು. ಈ ಅನೇಕ ಅಭಿಪ್ರಾಯಗಳಲ್ಲಿ ಯಾವುದು ಸರಿ ಎಂದು ಚರ್ಚೆಯಲ್ಲಿಯೇ ಕಾಲ ಕಳೆಯುತ್ತಿರುವವರೂ ಉಂಟು. 

ಕುಂಭ ಮೇಳಕ್ಕೆ ಮಾಡಿದ ಖರ್ಚು, ಅದರ ಅವಶ್ಯಕತೆ, ಆ ಮೇಳದಿಂದ ಬರುವ ಸಂಪಾದನೆ, ಉದ್ಯೋಗ ಸೃಷ್ಟಿ, ಮುಂತಾದವನ್ನು ಅರ್ಥ ಶಾಸ್ತ್ರಿಗಳಿಗೆ ಬಿಡೋಣ. ಎಲ್ಲರಂತೆ ನಮಗೂ ನಮ್ಮ ಅಭಿಪ್ರಾಯ ಹೊಂದಿರುವ ಹಕ್ಕು ಇದೆಯಲ್ಲ! ಕುಂಭ ಮೇಳದಂತಹ ಪರ್ವ ಕಾಲದಲ್ಲಿ ಪ್ರಯಾಗದಂತಹ ವಿಶೇಷ ಸ್ಥಳದಲ್ಲಿ ಪವಿತ್ರ ಸ್ನಾನ ಮಾಡಿದರೆ ಸಿಗುವ ಭಾವನಾತ್ಮಕ ಸಮಾಧಾನದ ಬಗ್ಗೆ ಸ್ವಲ್ಪ ನೋಡೋಣ. 

*****

ನಮ್ಮ ಪುರಾತನ ಗ್ರಂಥಗಳು, ಪುರಾಣ, ಪುಣ್ಯ ಕಥೆಗಳಲ್ಲಿ ಅನೇಕ ಕಡೆ ಕೆಲವು ಕೆಲಸಗಳನ್ನು ಮಾಡುವುದರಿಂದ ಪಾಪ ಪರಿಹಾರ ಆಗುತ್ತದೆ ಎಂದು ಹೇಳಿವೆ. ಇಷ್ಟು ಮಾತ್ರವಲ್ಲ, ಪಾಪಗಳನ್ನೂ ಕಳೆದುಕೊಳ್ಳುವುದಕ್ಕೆ ಪ್ರಾಯಶ್ಚಿತ್ತ ಕ್ರಿಯೆಗಳನ್ನೂ ಹೇಳಿವೆ. ಅನೇಕ ಸಂದರ್ಭಗಳಲ್ಲಿ "ಹೀಗೆ ಮಾಡುವುದರಿಂದ ಮುಕ್ತಿ ಸಿಗುತ್ತದೆ" ಎಂದೂ ಹೇಳಿವೆ. ಮನುಷ್ಯನ ಜೀವನದಲ್ಲಿ ಅನೇಕ ತಪ್ಪುಗಳು ಆಗುತ್ತವೆ. ಕೆಲವು ತಪ್ಪುಗಳು ನಮಗೆ ತಿಳಿಯದೆಯೇ ಆಗುತ್ತವೆ. ಮತ್ತೆ ಕೆಲವು ತಪ್ಪುಗಳನ್ನು ನಾವು ತಿಳಿದೂ ತಿಳಿದೂ ಮಾಡುತ್ತೇವೆ. "ಪ್ರಮಾದ" ಎನ್ನುವ ಒಂದು ಪದವಿದೆ. ತಪ್ಪುಗಳನ್ನು ಇದು ಸಣ್ಣ ತಪ್ಪು, ಇದು ದೊಡ್ಡ ತಪ್ಪು, ಎಂದು ವರ್ಗೀಕರಿಸಿ ಈ ಪ್ರಮಾದ ಎನ್ನುವ ಪದವನ್ನು "ದೊಡ್ಡ ತಪ್ಪು" ಎಂದು ಸೂಚಿಸಲು ಪ್ರಯೋಗಿಸುತ್ತಾರೆ. ವಾಸ್ತವವಾಗಿ ಪ್ರಮಾದ ಎಂದರೆ ಒಮ್ಮೆ ತಪ್ಪು ಮಾಡಿ, ಅದು ತಪ್ಪು ಎಂದು ಗೊತ್ತಾದರೂ ತಿದ್ದಿ ಕೊಳ್ಳದೆ ಮತ್ತೆ ಅದೇ ತಪ್ಪು ಮಾಡುವುದು. ಪದಗಳ ತಪ್ಪು ಬಳಕೆ ಹೆಚ್ಚಾಗಿ, ಎಲ್ಲರೂ ಅದನ್ನೇ ಬಳಸಿ, ಕಡೆಗೆ ಅದೇ ಸರಿಯಾದುದು ಎಂದು ಗಟ್ಟಿಯಾಗಿ ನಿಲ್ಲುವುದಕ್ಕೆ ಇದು ಒಂದು ಒಳ್ಳೆಯ ಉದಾಹರಣೆ. 

ಅನೇಕ ವ್ರತ ಕಥೆಗಲ್ಲಿ ಕಡೆಗೆ ಈ "ವ್ರತ ಮಾಡುವುದರಿಂದ ಮುಕ್ತಿ ಸಿಗುತ್ತದೆ" ಎಂದು ಹೇಳುತ್ತವೆ. ಮುಕ್ತಿ ಎಂದರೆ "ಬಿಡುಗಡೆ". ಯಾವುದರಿಂದ ಮುಕ್ತಿ? ಈಗ ಇರುವ ಕಷ್ಟದ ಪರಿಸ್ಥಿತಿಯಿಂದ ಬಿಡುಗಡೆ ಆದರೆ ಅದೂ ಒಂದು ಮುಕ್ತಿ. ಈ ಜನ್ಮದಿಂದ ಬಿಡುಗಡೆಯಾದರೆ ಅದೂ ಒಂದು ಮುಕ್ತಿಯೇ. ಕಟ್ಟಕಡೆಗೆ ಜೀವನ್ಮರಣ ಚಕ್ರದಿಂದ ಬಿಡುಗಡೆ ಆಗುವುದೂ ಒಂದು ಮುಕ್ತಿಯೇ! ಬಹಳ ಕಾಲ ಹಾಸಿಗೆ ಹಿಡಿದು, ನರಳಿ, ನರಳಿ ಒಬ್ಬ ವ್ಯಕ್ತಿ ಸತ್ತರೆ "ಬಹಳ ಕಷ್ಟ ಪಟ್ಟ. ಸದ್ಯ, ಬದುಕಿದ" ಎನ್ನುತ್ತಾರೆ. ಎದುರುಗಡೆ ಸತ್ತು ಬಿದ್ದಿದ್ದಾನೆ. ಆದರೂ "ಬದುಕಿದ" ಎನ್ನುತ್ತಾರೆ. "ಅಂತೂ ಇಂದಿಗೆ ಅವನಿಗೆ ಬಿಡುಗಡೆ ಆಯಿತಪ್ಪ" ಅನ್ನುತ್ತಾರೆ. ಅನೇಕ ಸಂದರ್ಭಗಳಲ್ಲಿ ಬದುಕಿ ನರಳುತ್ತಿರುವ ವ್ಯಕ್ತಿ ಮತ್ತು ಅವನ ಜನ ಸಾವಿಗಾಗಿ ಪ್ರಾರ್ಥಿಸುವುದೂ ಉಂಟು. ಅದು ಬಂದಾಗ "ಈ ಹಿಂಸೆಯಿಂದ ಮುಕ್ತಿಯಾಯಿತು" ಅನ್ನುವುದೂ ಉಂಟು. 

*****

ಅಮರ ಎನ್ನುತ್ತೇವೆ. ಸಾವಿಲ್ಲದವರು ಎನ್ನುತ್ತೇವೆ. ಸಮುದ್ರ ಮಥನ ಮಾಡಿ ಅಮೃತ ತರಲಾಯಿತು. ಅಮೃತ ಸೇವಿಸಿದವರು ಅಮರಾದರು. ಅವರಿಗೆ ಸಾವಿಲ್ಲ. ಎಲ್ಲಿಯವರೆಗೆ? ಅಮೃತದ ಒಡೆಯ ಯಾರು? ದೇವತೆಗಳ ನಾಯಕನಾದ ದೇವೇಂದ್ರ. ಮಿಕ್ಕೆಲ್ಲ ದೇವತೆಗಳು ಅವನ ಆಳ್ವಿಕೆಗೆ ಒಳಪಟ್ಟವರು. ಅಮೃತ ಅವನಿಗೆ ಸಿಕ್ಕಷ್ಟು ಬೇರಾರಿಗೂ ಸಿಕ್ಕದು. ಅಂದರೆ ಅವನು ಎಲ್ಲಿಯವರೆಗೆ ಅಮರ? ಅಮೃತ ಕುಡಿದು ಅಮರಾದವರೂ ಒಂದು ಕಾಲದ ಮಿತಿವರೆಗೆ ಮಾತ್ರ ಅಮರರು. ಈಗ ನಡೆಯುತ್ತಿರುವುದು ವೈವಸ್ವತ ಮನ್ವಂತರ. ಈ ಮನ್ವಂತರದ ಕಡೆಯವರೆಗೂ ಇತರ ದೇವತೆಗಳ ಜೊತೆ ಅವನೂ ಅಮರ. 

ದೇವೇಂದ್ರನ ಯೋಗ್ಯತೆ ಬಹಳ ದೊಡ್ಡದು. ಅನೇಕ ಸಾಧನೆಗಳನ್ನು ಮಾಡಿ ಸ್ವರ್ಗದ ಅಧಿಪತ್ಯ ಸಿಕ್ಕಿದೆ. ಬಲಿ ಚಕ್ರವರ್ತಿಯ ಯೋಗ್ಯತೆ ಎಷ್ಟು ದೊಡ್ಡದು ಎಂದು ತಿಳಿದಾದರೂ ದೇವೇಂದ್ರನ ಬಗ್ಗೆ ನಮಗೆ ಇರುವ ದುರಭಿಪ್ರಾಯವನ್ನು ಬಿಡಬೇಕು. ಸಿನಿಮಾಗಳಲ್ಲಿ ದೇವೇಂದ್ರನನ್ನು ಒಬ್ಬ ಖಳನಾಯಕನಂತೆ ತೋರಿಸಿ, ಆ ಚಲನಚಿತ್ರಗಳನ್ನು ಅನೇಕ ಬಾರಿ ನೋಡಿ, ನಮಗೆ ದೇವೇಂದ್ರನ ನಿಜವಾದ ಸ್ವರೂಪವೇ ತಿಳಿಯದಾಗಿದೆ! 

ಎಲ್ಲ ಜೀವಿಗಳನ್ನೂ ಅವರ ಪಾಪಗಳಿಗೆ ತಕ್ಕಂತೆ ನರಕಗಳಲ್ಲಿ ಹಾಕಿ ಶಿಕ್ಷಿಸುವವನು ಯಮಧರ್ಮ. ಅವನಿಗೆ ಎರಡು ರೂಪಗಳು. ಪುಣ್ಯಾತ್ಮರು ನೋಡುವ ಸೌಮ್ಯವಾದ ಧರ್ಮ ರೂಪ. ಆ ರೂಪಿನಲ್ಲಿ ಅವನನ್ನು ನೋಡುವುದೇ ಒಂದು ದೊಡ್ಡ ಪುಣ್ಯವಂತೆ. ಪಾಪಿಗಳು ನೋಡುವುದು ಅವನ ಭೀಕರವಾದ ಯಮ ರೂಪ. ಅಂತಹ ಯಮನೇ ಕಠೋಪನಿಷತ್ತಿನಲ್ಲಿ ಹೇಳುತ್ತಾನೆ: "ಮಹಾಪ್ರಳಯ ಕಾಲದಲ್ಲಿ ಆ ಪರಮ ಪುರುಷನು ಎಲ್ಲವನ್ನೂ ನುಂಗುತ್ತಾನೆ. ಆ ಮಹಾ ಭೋಜನದಲ್ಲಿ ನಾನು ಕೇವಲ ಒಂದು ಉಪ್ಪಿನಕಾಯಿ!"

ಈ ಮನ್ವಂತರದ ಕಡೆಯಲ್ಲಿ ಬರುವ ಮಹಾಪ್ರಳಯದಲ್ಲಿ ಈ ಎಲ್ಲ ದೇವತೆಗಳೂ ತಮ್ಮ ಜೀವಿತ ಕಾಲಾವಧಿ ಮುಗಿಸುತ್ತಾರೆ. ಅವರ ನಾಯಕನಾದ ದೇವೇಂದ್ರನೂ ಸಹ. ಮುಂದಿನ ದೇವೇಂದ್ರನು ಕಾಯುತ್ತಿದ್ದಾನೆ. ಅವನು ಯಾರೆಂದು ಎಲ್ಲರಿಗೂ ಗೊತ್ತು. ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದ ವಾಮನನು ಅವನಿಗೆ ಮುಂದಿನ ಸಾವರ್ಣಿ ಮನ್ವಂತರದಲ್ಲಿ ದೇವೇಂದ್ರನ ಪಟ್ಟವನ್ನು ಕಾಯಿದಿರಿಸಿದ್ದಾನೆ! ಮತ್ತೊಂದು ಹೊಸ ದೇವತೆಗಳ ತಂಡ ಅಧಿಕಾರ ವಹಿಸಲು ತಯಾರಾಗಿದೆ. 

ಅಮೃತ ಮಥನದ ನಂತರ ಅಮೃತದ ಬಿಂದುಗಳು ಭೂಮಿಯ ಮೇಲೆ ಬಿದ್ದವು. ಅವು ಬಿದ್ದ ನಾಲ್ಕು ಕಡೆಗಳಲ್ಲಿ ಅದರ ನೆನಪಾಗಿ ಕುಂಭ ಮೇಳ ನಡೆಯುತ್ತವೆ. ಪ್ರಯಾಗ, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕಗಳಲ್ಲಿ. ಆ ಅಮೃತ ಕಲಶದ ಅಧಿಪತಿಯಾದ ದೇವೇಂದ್ರನೇ ಈ ವೈವಸ್ವತ ಮನ್ವಂತರದ ಕಡೆಯಲ್ಲಿ ಹೋಗುತ್ತಾನೆ. ಆ ಕಲಶದಿಂದ ಭೂಮಿಯ ಮೇಲೆ ಅಮೃತದ ತೊಟ್ಟುಗಳು ಬಿದ್ದ ಸ್ಥಳಗಳಲ್ಲಿ ನಡೆಯುವ ಕುಂಭ ಮೇಳಗಳಲ್ಲಿ ಪುಣ್ಯ ಸ್ನಾನ ಮಾಡುವ ಮಂದಿ ಹೇಗೆ ಅಮರರಾಗುತ್ತಾರೆ?

*****

ಎಂ. ವಿ ಕೃಷ್ಣ ಸ್ವಾಮಿ ಎಂಬ ಚಲನಚಿತ್ರ ನಿರ್ಮಾಪಕ-ನಿರ್ದೇಶಕರೊಬ್ಬರು ಇದ್ದರು. ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲಿ ಅವರು ಎತ್ತಿದ ಕೈ. ಸಾರ್ವಕಾಲಿಕ ಶ್ರೇಷ್ಠ ಇಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯ, ವೀಣಾ ವಿದ್ವಾನ್ ದೊರೆಸ್ವಾಮಿ ಅಯ್ಯಂಗಾರ್ ಮುಂತಾದವರ ಬಗ್ಗೆ ಅವರು ತಯಾರಿಸಿದ ಸಾಕ್ಷ್ಯಚಿತ್ರಗಳು ಬಹಳ ಹೆಸರು ಮಾಡಿದವು. ದೊಡ್ಡ ಸೆಟ್ಟುಗಳ, ಕನಸಿನ ರಾಜ್ಯದ ಚಲನಚಿತ್ರಗಳ ನಿರ್ಮಾಪಕ, ನಿರ್ದೇಶಕರಾದ ಹೆಸರಾಂತ ವಿ. ಶಾಂತಾರಾಮ್ ಅವರ ಹೆಸರಿನ ಪ್ರಶಸ್ತಿ ತಮ್ಮ ಜೀವಿತಕಾಲದ ಸಾಧನೆಗಾಗಿ ಕೃಷ್ಣಸ್ವಾಮಿಯವರಿಗೆ ಲಭಿಸಿತ್ತು. ಹಿಂದಿನ ಶತಮಾನದ ನಲವತ್ತನೆಯ ದಶಕದಲ್ಲಿ ಹೊರದೇಶಗಳಲ್ಲಿ ಚಿತ್ರ ಜಗತ್ತಿನಲ್ಲಿ ಕೆಲಸ ಮಾಡಿದ ಸಾಧನೆ ಅವರದು. ಇಟಲಿಯ ಪ್ರಸಿದ್ಧ ನಿರ್ಮಾಪಕ ರೊಬೆರ್ಟೋ ರೊಸ್ಸೆಲಿನಿ ಮತ್ತು ಇಂಗ್ರಿಡ್ ಬೆರ್ಗ್ಮನ್ ಮುಂತಾದವರ ಜೊತೆ ಕೆಲಸ ಮಾಡಿ ಸೈ ಎನ್ನಿಸಿಕೊಂಡವರು ಅವರು. "ಓವರ್ಸಿಸ್ ಫಿಲಂ ಕ್ಲಬ್"ನ ಕಾರ್ಯದರ್ಶಿಗಳಾಗಿದ್ದರು. ಭಾರತೀಯ ಫಿಲ್ಮ್ಸ್ ಡಿವಿಷನ್. ಏನ್. ಎಫ್. ಡಿ. ಸಿ., ಸೆನ್ಸಾರ್ ಬೋರ್ಡ್ ಮತ್ತನೇಕ ಚಲನಚಿತ್ರ ಸಂಬಂಧಿತ ಸಂಸ್ಥೆಗಳಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದವರು ಅವರು. ಹಿಂದಿನ ತಲೆಮಾರಿನ ಅನೇಕ ನಿಆರ್ದೇಶಕರು ಎಂ. ವಿ. ಕೃಷ್ಣಸ್ವಾಮಿಯವರನ್ನು ತಮ್ಮ ಗುರುಗಳು ಎಂದು ತಿಳಿದಿದ್ದರು. 



ಕೃಷ್ಣಸ್ವಾಮಿಯವರು ವಾಣಿಜ್ಯ ಚಿತ್ರಗಳನ್ನೂ ನಿರ್ಮಿಸಿದವರು. ವೀಣಾ ದೊರೆಸ್ವಾಮಿ ಅಯ್ಯಂಗಾರ್ ಮತ್ತು ಎಸ. ಕೃಷ್ಣಮೂರ್ತಿ ಅವರ ಅಮೋಘ ಸಂಗೀತದ ಹೆಸರಾಂತ ಚಿತ್ರ "ಸುಬ್ಬಾಶಾಸ್ತ್ರಿ" ಅವರು ನಿರ್ಮಿಸಿ ನಿರ್ದೇಶಿಸಿದ ಚಿತ್ರವೆಂದು ಅನೇಕರಿಗೆ ಗೊತ್ತಿಲ್ಲ. ಆ ಚಿತ್ರದ ಬಾಲ ಮುರಳಿ ಕೃಷ್ಣ ಅವರು ಹಾಡಿರುವ ಹಾಡುಗಳು ಈಗಲೂ ಜನಪ್ರಿಯ. ಅವರು ನಿರ್ದೇಶಿಸಿದ ಇನ್ನೊಂದು ಹೆಸರಾದ ಚಲನಚಿತ್ರ ಈ ಜೋಡಿ ಎರಡು ಜೊತೆ-ಜೊತೆ ಪದಗಳ ಹೆಸರು ಹೊಂದಿದೆ. ಅದೇ "ಪಾಪ ಪುಣ್ಯ" ಚಲನಚಿತ್ರ. 


ಪ್ರೊಫೆಸರ್ ಎಂ. ವಿ. ಸೀತಾರಾಮಯ್ಯ ಅವರ ಒಂದು ನಾಟಕ "ಶ್ರೀಶೈಲ ಶಿಖರ". ಅದೊಂದು ಜಾನಪದ ಕಥೆಗಳಿಂದ ಪ್ರೇರಿತವಾದದ್ದು. ಆ ನಾಟಕದ ಆಧಾರದ ಮೇಲೆ ಈ ಚಿತ್ರ ನಿರ್ಮಿಸಿದ್ದಾರೆ. "ನಾವು ಬಂದೆವ, ನಾವು ಬಂದೆವ, ನಾವು ಬಂದೆವ ಶ್ರೀಶೈಲ ನೋಡೋದಕ್ಕ, ಸ್ವಾಮಿ ಸೇವಾ ಮಾಡಿ ಮುಂದೆ ಹೋಗೋದಕ್ಕ..." ಎನ್ನುವ ಗೀಗೀ ಪದ ಈ ಚೈತ್ರದ್ದೇ. ಅಂದಿನ ಹೆಸರಾಂತ ಕಲಾವಿದರಾದ ಕಲ್ಯಾಣ್ ಕುಮಾರ್, ಬಿ. ಸರೋಜಾ ದೇವಿ, ಕೆ. ಎಸ. ಅಶ್ವಥ್ ಮುಂತಾದವರು ಅಭಿನಯಿಸಿದ ಚಿತ್ರ ಅದು. ಯೂಟ್ಯೂಬಿನಲ್ಲಿ ಲಭ್ಯ. ಬೇಕಾದವರು ನೋಡಬಹುದು. 


"ಶ್ರೀಶೈಲ ಶಿಖರಂ ದೃಷ್ಟವಾ ಪುನರ್ಜನ್ಮ ನ ವಿದ್ಯತೇ" ಎಂದೊಂದು ನಂಬಿಕೆ. ಶ್ರೀಶೈಲ ದೇವಾಲಯದ ಶಿಖರವನ್ನು ನೋಡಿದವರಿಗೆ ಮತ್ತೊಂದು ಜನ್ಮ ಇಲ್ಲ ಎಂದು ಅದರ ಅರ್ಥ.  ಶ್ರೀಶೈಲಕ್ಕೆ ಹೋದವರೆಲ್ಲ ಆ ದೇವಸ್ಥಾನದ ಶಿಖರವನ್ನು ನೋಡಬಹುದು. ಪ್ರತಿ ವರ್ಷ ರಥೋತ್ಸವಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಎಲ್ಲರೂ ಆ ಶಿಖರ ನೋಡುತ್ತಾರೆ. ಅವರಿಗೆಲ್ಲರಿಗೂ ಮತ್ತೆ ಜನ್ಮ ಇಲ್ಲವೇ? ಇದೇ ಈ ಚಿತ್ರದಲ್ಲಿ ಚರ್ಚಿತವಾಗಿರುವ ಅಂಶ. ಶ್ರೀಶೈಲ ಶಿಖರ ಅಂದರೆ ಕಲ್ಲು, ಮಣ್ಣು, ಗಾರೆಗಳಿಂದ ಮಾಡಿ ನಿಲ್ಲಿಸಿರುವ ಆ ದೇವಾಲಯದ ಶಿಖರ ಅಲ್ಲ. ಶ್ರೀಶೈಲ ಶಿಖರ ಅಂದರೆ ಶ್ರೀ ಮಲ್ಲಿಕಾರ್ಜುನನ ಹೃದಯ. ತನ್ನ ಸಾಧನೆಯಿಂದ, ಅಂದರೆ ಸರಿಯಾದ ಜೀವನ ನಡೆಸಿದ ಕೆಲವರು ಮಾತ್ರ ಆ ಶಿಖರದಲ್ಲಿ ಅವನ ಹೃದಯವನ್ನು ನೋಡುತ್ತಾರೆ. ಅವರು ಮಾತ್ರ ಪರಮಪದ ಹೊಂದುತ್ತಾರೆ ಎಂದು ಅದರ ಭಾವಾರ್ಥ

***** 

ಯಾವುದೇ ಜೀವಿ ಮುಕ್ತಿ ಪಡೆಯಬೇಕಾದರೆ ತನ್ನ ಸಂಚಿತ ಸಾಧನೆಯಿಂದ ಮಾತ್ರ ಸಾಧ್ಯ. ಜೀವನ ಪೂರ್ತಿ ಅನೇಕ ಪಾಪಕರ್ಮಗಳನ್ನು ಮಾಡಿ, ಎಲ್ಲರನ್ನೂ ಗೋಳು ಹೊಯ್ದುಕೊಂಡು ಬದುಕಿ ಶ್ರೀಶೈಲ ಶಿಖರ ನೋಡಿ ಅಥವಾ ಕುಂಭದಲ್ಲಿ ಸ್ನಾನ ಮಾಡಿ ಮುಕ್ತಿ ಸಿಗುವುದಿಲ್ಲ. ಎಲ್ಲದಕ್ಕಿಂತ ಮುಖ್ಯ ಪರೋಪಕಾರಿಯಾಗಿ, ತನಗೆ ಸಾಧ್ಯವಿದ್ದಷ್ಟು ಸಮಾಜಕ್ಕೆ ಉಪಕಾರಿಯಾಗಿ ಬದುಕುವುದು. ಈ ರೀತಿ ಮಾಡುತ್ತಿದ್ದಾಗ ಒಮ್ಮೆ ಎಂದೋ ಮುಕ್ತಿ ಸಿಗುತ್ತದೆ. 

ಅಂದರೆ ಕುಂಭ ಸ್ನಾನಕ್ಕೆ ಹೋಗಬಾರದೇ? ಶ್ರೀಶೈಲಕ್ಕೆ ಹೋಗಬಾರದೇ? ಹೋಗಿ ಪ್ರಯೋಜನವಿಲ್ಲವೇ? ಇದು ಸೊಗಸಾದ ಪ್ರಶ್ನೆ. ಹೋಗುವವರಿಗೆ ಬುದ್ಧಿ ಇಲ್ಲವೇ, ಎಂದೂ ಕೇಳಬಹುದು. ಅವಶ್ಯ ಹೋಗಬೇಕು. ನಮಗೆ ಮಾಮೂಲಿನ ದಿನಗಳಲ್ಲಿ ಒಬ್ಬರು ಒಂದು ಲಕ್ಷ ರೂಪಾಯಿ ಕೊಡುತ್ತಾರೆ. ಅವರಿಗೆ ನಾವು ಕೃತಜ್ಞರಾಗುತ್ತೇವೆ. ಇನ್ನೊಬ್ಬರು ಅದೇ ಒಂದು ಲಕ್ಷ ರೂಪಾಯಿಗಳನ್ನು ನಮಗೆ ಅತ್ಯಂತ ಅಗತ್ಯವಾದ ಆಪತ್ಕಾಲದಲ್ಲಿ ಕೊಡುತ್ತಾರೆ. "ನೀವು ಈಗ ಕೊಟ್ಟ ಈ ಲಕ್ಷ ರೂಪಾಯಿ ಕೋಟಿ ರೂಪಾಯಿ ಸಮ" ಎನ್ನುತ್ತೇವೆ. ಇಬ್ಬರು ಕೊಟ್ಟಿದ್ದೂ ಒಂದೇ ಮೊತ್ತದ ಹಣ. ಹೇಳುವುದರಲ್ಲಿ ಏಕೆ ಈ ವ್ಯತ್ಯಾಸ? 

ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಾನೆ. ವರ್ಷದಲ್ಲಿ ಒಂದು ಮಧ್ಯಮ ವಾರ್ಷಿಕ ಪರೀಕ್ಷೆ. ಮತ್ತೊಂದು ದೊಡ್ಡ ಪರೀಕ್ಷೆಗೆ ಮುನ್ನ ತಯಾರಿ ಪರೀಕ್ಷೆ. ಅಚ್ಚ ಕನ್ನಡದಲ್ಲಿ "ಪ್ರಿಪರೇಟರಿ ಎಕ್ಸಾಮಿನೇಷನ್" ಎನ್ನಬಹುದು. ಮತ್ತೆ ಕೊನೆಯಲ್ಲಿ ಪಬ್ಲಿಕ್ ಪರೀಕ್ಷೆ. ಎಲ್ಲ ಪರೀಕ್ಷೆಗಳಲ್ಲೂ ಅದೇ ಪ್ರಶ್ನ ಪತ್ರಿಕೆ. ಅವೇ ಉತ್ತರಗಳು. ಅದೇ ಅಂಕಗಳ ಸಂಪಾದನೆ. ಆದರೆ ಅವುಗಳ ಮೌಲ್ಯ ಬೇರೆ. ಪರ್ವ ಕಾಲಗಳ ಸಾಧನೆಗೆ ಹೆಚ್ಚಿನ ಮೌಲ್ಯ. 

ಮನುಷ್ಯನ ಸಾಧನೆಗೆ ತಕ್ಕಂತೆ ಫಲ. ಅಮಾವಾಸ್ಯೆ-ಹುಣ್ಣಿಮೆಗಳು, ಸಂಕ್ರಮಣಗಳು, ಗ್ರಹಣ ಕಾಲಗಳು, ಕುಂಭ ಮೇಳ ಕಾಲ, ಮುಂತಾದುವುಗಳು ಪರ್ವಕಾಲಗಳು ಎಂದು ಎಣಿಕೆ. ಅದರಲ್ಲಿಯೂ ಮಹಾ ಕುಂಭ ಮೇಳ ಪರ್ವಕಾಲಗಲ್ಲಿಯೂ ಪರ್ವಕಾಲ. "ತೀರ್ಥಿಕುರ್ವಂತಿ ತೀರ್ಥಾಣಿ" ಎನ್ನುವಂತೆ. ಶುದ್ಧಿ ಮಾಡುವವರನ್ನೂ ಶುದ್ಧಿ ಮಾಡುವುದು. ವೈದ್ಯರನ್ನೂ ಉಪಚರಿಸುವ, ಅವರಿಗೂ ಪಾಠ ಹೇಳುವ ದೊಡ್ಡ ವೈದ್ಯರಿದ್ದಂತೆ! ಅದರಿಂದಲೇ ಈ ಮೇಳಕ್ಕೆ ಅಷ್ಟು ವಿಶೇಷತೆ. 

ಬಲಿ ಚಕ್ರವರ್ತಿಯು ವಾಮನ ಮೂರ್ತಿಗೆ ಮೂರು ಹೆಜ್ಜೆ ಭೂಮಿ ಕೊಟ್ಟನು. ಇಡೀ ಕೆಳಗಿನ ಲೋಕಗಳನ್ನು ವಾಮನನು ಮೊದಲನೇ ಹೆಜ್ಜೆಯಿಂದ ಅಳೆದನು. ಎರಡನೇ ಹೆಜ್ಜೆಗೆ ಮೇಲಿನ ಲೋಕಗಳನ್ನು ಅಳೆಯಲು ಒಂದು ಕಾಲನ್ನು ಮೇಲಕ್ಕೆ ಎತ್ತಿದನು. ಆ ಪಾದ ಬೆಳೆದೂ ಬೆಳೆದೂ  ಅವನ ಬೆರಳಿನ ಉಗುರಿನ ಒಂದು ಕೊನೆಯ ಭಾಗ ಇಡೀ ಬ್ರಹ್ಮಾಂಡ ಕಟಾಹ (ಔಟರ್ ಶೆಲ್ ಅಥವಾ ತೆಂಗಿನಕಾಯಿಯ ಕರಟದಂತೆ ಬ್ರಹ್ಮಾಂಡವನ್ನು ಆವರಿಸಿದ್ದ ಕವಚ) ಭೇದಿಸಿತು. ಆಗ ಬ್ರಹ್ಮಾಂಡ ಕವಚದ ಹೊರಗಿದ್ದ ನೀರು ನುಗ್ಗಿ ಬಂದು ಹರಿಯಿತು. ಚತುರ್ಮುಖ ಬ್ರಹ್ಮ ದೇವರು ಓಡಿಬಂದು ಆ ನೀರನ್ನು ತಮ್ಮ ಕಮಂಡಲದಲ್ಲಿ ಹಿಡಿದರು. ಅದೇ ನೀರಿನಿಂದ ಆ ವಾಮನರೂಪಿ ಮಹಾವಿಷ್ಣುವಿನ ಪಾದ ತೊಳೆದು ಪೂಜಿಸಿದರು. (ಪಾದಪೂಜೆ ಪದ್ಧತಿ ಅಲ್ಲಿಂದ ಪ್ರಾಂಭವಾಯಿತು ಎನ್ನುತ್ತಾರೆ). ಈ ಪಾದಗಳಿಂದ ದೇವಗಂಗೆ ಉದ್ಭವಿಸಿದಳು. ದೇವಲೋಕದಲ್ಲಿದ್ದ ಅವಳನ್ನು ಭಗೀರಥನು ಪ್ರಾರ್ಥಿಸಿ ಭೂಮಿಗೆ ತಂದನು. ಅವಳು ಬರುವ ರಭಸ ತಡೆಯಲು ಮಹೇಶ್ವರನು ತನ್ನ ಜಟೆಯಲ್ಲಿ ಕಟ್ಟಿ ತಲೆಯಲ್ಲಿ ಧರಿಸಿದನು. ಮುಂದೆ ಕಡೆಗೆ ಅವಳು ಗಂಗಾ ನದಿಯಾಗಿ ಹರಿದಳು. ಹಾಗೆ ಧುಮ್ಮಿಕ್ಕಿದಾಗ ಅಲ್ಲಿ-ಇಲ್ಲಿ ಹರಿದ ನೀರು ಬೇರೆ ನದಿಗಳಾದವು. 

ಈ ಪ್ರಸಂಗವನ್ನು ಗ್ರಂಥಗಲ್ಲಿ ವಿಶದವಾಗಿ ಹೇಳಿದೆ. ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಇದನ್ನೇ "ಹರಿಯ ಅಡಿಯಿಂದ, ಹರನ ಮುಡಿಯಿಂದ, ಋಷಿಯ ತೊಡೆಯಿಂದ ......" ಮುಂತಾಗಿ ತಮ್ಮ ಗಂಗಾವತರಣ ಕವನದಲ್ಲಿ ವರ್ಣಿಸಿದ್ದಾರೆ. 

ಕುಂಭಮೇಳ ಸ್ನಾನ ಕಾಲದಲ್ಲಿ "ಇಂತಹ ಗಂಗೆಯಲ್ಲಿ, ತ್ರಿವೇಣಿ ಸಂಗಮದಲ್ಲಿ, ಈ ಮಹಾಪರ್ವ ಕಾಲದಲ್ಲಿ ಸ್ನಾನ ಮಾಡುತ್ತಿದ್ದೇನೆ, ಇದರಿಂದ ನನ್ನ ಪಾಪಗಳು ಹೋಗುತ್ತವೆ" ಎಂಬ  ಧೃಡ ನಂಬಿಕೆಯಿಂದ, ಭಯ-ಭಕ್ತಿಗಳಿಂದ ಸ್ನಾನ ಮಾಡಿದರೆ ಪಾಪಗಳು ಹೋಗಬಹುದು. ಕ್ಯಾಮರಾ ನೋಡಿಕೊಂಡು ಬರೀ ಮುಳುಗು ಹಾಕಿದರೆ ಮೈನಲ್ಲಿ ಇರುವ ಕೊಳೆಯೂ ಹೋಗಲಾರದು!

Sunday, November 5, 2023

"ವೃದ್ಧಾಪ್ಯ"ದಲ್ಲಿ "ಜೀವನ"ದ "ಆನಂದ"


ಪಾಪ, ಪುಣ್ಯ ಮತ್ತು ವೃದ್ಧಾಪ್ಯ:

ಮನುಷ್ಯನಿಗೆ ಒಂದು ಹಣ್ಣು ಬೇಕಾದರೆ ಅದರ ಸಸಿಯನ್ನು ನೆಟ್ಟು, ಮರವಾಗಿ ಬೆಳೆಸಿ, ಫಲಾಗಮನದ ಸಮಯ ಕಾದು ಅದರ ಹಣ್ಣು ಪಡೆಯಬೇಕು. ನೆನೆಸಿದ ತಕ್ಷಣ ಅದು ಸಿಗುವುದಿಲ್ಲ. ಈಗಲೇ ಹಣ್ಣು ಬೇಕಾದರೆ ಹಿಂದೆಂದೋ ನೆಟ್ಟು ಬೆಳೆಸಿದ ಮರದಿಂದ ಪಡೆಯಬಹುದು. ಅದೂ ಹಿಂದೆಂದೋ ಮರ ಬೆಳೆಸಿದ್ದರೆ ಮಾತ್ರ. ಇಲ್ಲದಿದ್ದರೆ ಇಲ್ಲ. ಅಂತೆಯೇ ಒಂದು ಮರವನ್ನು ನೆಟ್ಟು ಬೆಳೆಸಿದರೆ ಅದು ಹಣ್ಣನ್ನು ಕೊಟ್ಟೇ ಕೊಡುತ್ತದೆ. ಕೆಲವಂತೂ ಹೆಚ್ಚು ಆರೈಕೆ ಇಲ್ಲದಿದ್ದರೂ ಧಾರಾಳವಾಗಿ ಹಣ್ಣು ಕೊಡುತ್ತವೆ. ಮರ ಬೆಳಸಿಯಾದ ಮೇಲೆ ಹಣ್ಣು ಬರಬಾರದು ಎನ್ನುವಂತಿಲ್ಲ. ಹಣ್ಣು ಕೊಡುವುದು ಅದರ ಸಹಜ ವೃತ್ತಿ. ಅದರ ಕೆಲಸ ಅದು ಮಾಡುತ್ತದೆ. 

ಪಾಪ ಮತ್ತು ಪುಣ್ಯಗಳು ಒಂದು ರೀತಿಯಲ್ಲಿ ಮರಗಳಿದ್ದಂತೆ. ಮರಗಳನ್ನು ನೆಟ್ಟು ಬೆಳಸಬೇಕು. ಪಾಪ ಮತ್ತು ಪುಣ್ಯ ಎಂಬ ಎರಡು ಮರಗಳು ಮನುಷ್ಯನ ಜೊತೆಯಲ್ಲಿಯೇ ಹುಟ್ಟುತ್ತವೆ.  ನಮ್ಮ ಪ್ರತಿಯೊಂದು ಕ್ರಿಯೆಯೂ ಅವುಗಳ ಗೊಬ್ಬರ, ನೀರಾಗಿ ಅವನ್ನು ಬೆಳೆಸುತ್ತವೆ. ನಮ್ಮ ಪ್ರಯತ್ನ ಏನೂ ಬೇಕಿಲ್ಲ. ಕೆಲಸ ಮಾಡಿದವನಿಗೆ ಕೂಲಿ ಸಿಕ್ಕಂತೆ ಪ್ರತಿಫಲವೂ ಸಿಕ್ಕಿಯೇ ಸಿಗುತ್ತದೆ. ಕೆಲಸ ಮಾಡಿ ಕೂಲಿ ಕೊಡುವುದರ ಮುಂಚೆ ಓಡಿಹೋಗಬಹುದು. ಆದರೆ ಇಲ್ಲಿ ಅದೂ ಸಾಧ್ಯವಿಲ್ಲ. ಕೆಲಸಗಾರನನ್ನು ಅಟ್ಟಿಸಿಕೊಂಡು ಬಂದು ಕೂಲಿ ಸೇರುತ್ತದೆ! 

ಬೇರೆ ಹಣ್ಣುಗಳಿಗೂ ಪಾಪ, ಪುಣ್ಯಗಳಿಗೂ ಒಂದು ಮುಖ್ಯ ವ್ಯತ್ಯಾಸ ಉಂಟು. ನಮಗೆ ಯಾವುದೋ ಹಣ್ಣು ಬೇಕಾದಾಗ ಬೆಳದವರಿಂದಲೋ, ಆಂಗಡಿಯಿಂದಲೋ ಪಡೆಯಬಹುದು. ನಮ್ಮಲ್ಲಿ ಹಣ್ಣು ಹೆಚ್ಚಿದ್ದಾಗ ಬೇರೆಯವರಿಗೆ ಕೊಡಬಹುದು. ಆದರೆ ಪಾಪ, ಪುಣ್ಯಗಳ ಹಣ್ಣುಗಳ ವಿಷಯದಲ್ಲಿ ಇದು ಸಾಧ್ಯವಿಲ್ಲ. ನಾವು ಕೃಷಿ ಮಾಡಿದ ಹಣ್ಣುಗಳನ್ನು ಬೇರೆಯವರಿಗೆ ಕೊಡುವಹಾಗಿಲ್ಲ. ಬೇರೆಯವರ ಸಾಗುವಳಿಯ ಪದಾರ್ಥ ನಾವು ಪಡೆಯುವಹಾಗಿಲ್ಲ. ಅವರವರ ಬೆಳೆಯ ಫಸಲನ್ನು ಅವರವರೇ ತಿನ್ನಬೇಕು. ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. 

ಈ ಹಿನ್ನೆಲೆಯಲ್ಲಿ ಮನುಷ್ಯನಿಗೆ ಏನು ಬೇಕು, ಏನು ಬೇಡ ಎನ್ನುವುದರ ಬಗ್ಗೆ ಮಹಾಭಾರತದಲ್ಲಿ ಒಂದು ಸೊಗಸಾದ ಶ್ಲೋಕವಿದೆ:

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನ ಇಚ್ಛಂತಿ ಮಾನವಾ:।   ನ ಪಾಪ ಫಲಮಿಚ್ಛ೦ತಿ  ಪಾಪಂ ಕುರ್ವoತಿ ಯತ್ನತಃ ।।

"ಮನುಷ್ಯರಿಗೆ ಪುಣ್ಯ ಎನ್ನುವ ಮರ ಬೇಡ. ಆ ಮರವನ್ನು ಬೆಳೆಸುವುದಿಲ್ಲ. ಆದರೆ ಆ ಮರದ ಹಣ್ಣು ಬೇಕು. ಪಾಪ ಎನ್ನುವ ಮರದ ಹಣ್ಣು ಖಂಡಿತಾ ಬೇಡ. ಆದರೆ ಬಹಳ ಕಷ್ಟ ಪಟ್ಟು ಪಾಪದ ಮರವನ್ನು ಬೆಳೆಸುತ್ತಾರೆ!"

ಪಾಪದ ಮರ ಬೆಳೆಸಿದ ಮೇಲೆ ಅದು ಅದರ ಕೆಲಸ ಮಾಡಿ ಪಾಪದ ಹಣ್ಣು ಕೊಟ್ಟೇ ಕೊಡುತ್ತದೆ. ಆ ಹಣ್ಣನ್ನು ಸೇವಿಸಲೇ ಬೇಕು. ಬೇರೆಯವರಿಗೆ ಕೊಟ್ಟು ಕೈ ತೊಳೆದುಕೊಳ್ಳಲಾಗುವುದಿಲ್ಲ. ಮತ್ತೊಂದು ಕಡೆ, ಪುಣ್ಯದ ಮರ ಬೆಳೆಸಲಿಲ್ಲ.  ಆದರೆ ಪುಣ್ಯದ ಹಣ್ಣು ಬೇಕು! ಇದೊಂದು ವಿಚಿತ್ರ ವಿಪರ್ಯಾಸ. ಗೊತ್ತಿಲ್ಲದೇ ಪೇಚಿಗೆ ಸಿಕ್ಕಿಕೊಂಡ ಪರಿಸ್ಥಿತಿಯೂ ಅಲ್ಲ. ಇರುಳು ಕಂಡ ಭಾವಿಯಲ್ಲಿ ಹಗಲು ಬಿದ್ದಂತೆ!

ಪಾಪ ಮತ್ತು ಪುಣ್ಯದ ಪರಿಭಾಷೆಯನ್ನು ತಿಳಿಯುವುದು ತುಂಬಾ ಅವಶ್ಯಕ. ಪುಣ್ಯವೆಂದರೆ ಒದ್ದೆ ಬಟ್ಟೆ, ಮಂತ್ರ, ತಂತ್ರ, ಅಷ್ಟೇ ಎಂದು ತಿಳಿಯಬಾರದು. "ಕೊರಳೊಳು ಜಪಮಣಿ, ಬಾಯೊಳು ಮಂತ್ರವು, ಅರಿವೆಯ ಮೋರೆಗೆ ಮುಸುಕು ಹಾಕಿ...." ಮುಂತಾಗಿ ಉದರ ವೈರಾಗ್ಯವನ್ನು ಶ್ರೀ ಪುರಂದರ ದಾಸರು ಹಾಸ್ಯ ಮಾಡುತ್ತಾರೆ. "ಪರೋಪಕಾರಂ ಪುಣ್ಯಾಯ, ಪಾಪಾಯ ಪರ ಪೀಡನಮ್" ಎಂದು ಭಗವಾನ್ ವೇದ ವ್ಯಾಸರು ಹೇಳಿದಂತೆ ಸಮಾಜಕ್ಕೆ ಉಪಯೋಗವಾಗುವ ಯಾವುದೇ ಕೆಲಸ ಪುಣ್ಯದ್ದು. ಇನ್ನೊಬ್ಬರರಿಗೆ ವೃಥಾ ತೊಂದರೆ ಕೊಡುವ ಯಾವ ಕೆಲಸವೂ ಪಾಪದ್ದು. ಈ ಸ್ಥೂಲ ತಿಳುವಳಿಕೆ ಎಲ್ಲ ಸಮಯದಲ್ಲೂ ನಮ್ಮಲ್ಲಿ ಇರಬೇಕು. 

ಅಶಕ್ತರ, ಶಿಶುಗಳ, ವೃದ್ಧರ ಮತ್ತು ಆಂಗಹೀನರ ಸೇವೆ ಅತ್ಯಂತ ಪುಣ್ಯದ ಕೆಲಸ. ಇವು ದೇವರ ಪೂಜೆಯ ಅತ್ಯಂತ ಶ್ರೇಷ್ಠ ರೂಪ ಎಂದು ನಮ್ಮ ಮುಖ್ಯ ಗ್ರಂಥಗಳಲ್ಲಿ ಅನೇಕ ಕಡೆ ಕಾಣುತ್ತ್ತೇವೆ. ಸಂತ ಏಕನಾಥರ ಪ್ರವಚನಗಳಲ್ಲಿ ಒಂದು ಕಥೆ ಬರುತ್ತದೆ. ಒಂದು ಸಂತರ ಗುಂಪು ಕಾಶಿ ಯಾತ್ರೆ ಮುಗಿಸಿ ಥಾಲಿಗಳಲ್ಲಿ ಗಂಗೆಯನ್ನು ತುಂಬಿಸಿಕೊಂಡು ರಾಮೇಶ್ವರನಿಗೆ ಆ ಗಂಗಾಜಲದಲ್ಲಿ ಅಭಿಷೇಕ ಮಾಡುವ ಆಸೆ ಹೊತ್ತು ರಾಮೇಶ್ವರದ ಕಡೆ ಹೊರಟಿದ್ದರು. ನಡೆದೇ ಹೋಗಬೇಕಾದ ಕಾಲವದು. ದಾರಿಯಲ್ಲಿ ಮರುಭೂಮಿಯಲ್ಲಿ ಒಂಟೆಯೊಂದು ನೀರಿಲ್ಲದೆ ಬಾಯಾರಿ ಸಾಯುವ ಸ್ಥಿತಿಯಲ್ಲಿ ಕಾಣಸಿಗುತ್ತದೆ. ಎಲ್ಲರ ಬಳಿಯಲ್ಲಿಯೂ ನೀರುಂಟು. ಆದರೆ ಗಂಗಾಜಲ. ಒಂಟೆಗೆ ಕುಡಿಯಲು ಕೊಟ್ಟರೆ ರಾಮೇಶ್ವರನಿಗೆ ಅಭಿಷೇಕವಿಲ್ಲ. ಎಲ್ಲರೂ ಹಿಂದೆ ಮುಂದೆ ನೋಡುತ್ತಾರೆ. ಒಬ್ಬ ಸಂತ  ಮಾತ್ರ ತನ್ನ ಥಾಲಿಯ ಗಂಗೆಯ ನೀರನ್ನು ಒಂಟೆಗೆ ಕುಡಿಸುತ್ತಾನೆ. ಉಳಿದ ಎಲ್ಲರೂ ರಾಮೇಶ್ವರ ತಲುಪಿ ಅಭಿಷೇಕ ಮಾಡುತ್ತಾರೆ. ಆದರೆ ಅವರಿಗೆಲ್ಲ ಬಂದ ಪುಣ್ಯಕ್ಕಿಂತಲೂ ಹೆಚ್ಚು ಒಂಟೆಗೆ ನೀರು ಕುದಿಸಿದ ಸಂತನಿಗೆ ಸಿಗುತ್ತದೆ!

ವೃದ್ಧಾಪ್ಯ ಬೇಡ; ಆದರೆ ಬಂದೇ ಬರುತ್ತದೆ!

ಇನ್ನು ವೃದ್ಧಾಪ್ಯದ ಕಡೆಗೆ ದೃಷ್ಟಿ ಹರಿಸೋಣ. ವೃದ್ಧಾಪ್ಯದ ಮರದ ಕಥೆ ಏನು? ಇದು ಇನ್ನೂ ವಿಚಿತ್ರದ ವಿಷಯ. ವೃಧಾಪ್ಯದ ಮರವೂ ಮನುಷ್ಯನ ಹುಟ್ಟಿನೊಂದಿಗೇ ಹುಟ್ಟುತ್ತದೆ. ಮನುಷ್ಯನೊಡನೆ ಸಮ ಸಮವಾಗಿ ಬೆಳಿಯುತ್ತದೆ. ಅದರ ಸಮಯಕ್ಕೆ ಸರಿಯಾಗಿ ಹಣ್ಣು ಕೊಡುತ್ತದೆ. ಕೆಲವರಿಗೆ ಆ ಮರ ಹಣ್ಣು ಕೊಡುವುದರೊಳಗೆ ಮರಣ ಬರಬಹುದು. ಆಗ ವೃದ್ಧಾಪ್ಯದ ಸುಖವೂ ಇಲ್ಲ, ದುಃಖವೂ ಇಲ್ಲ. ಆ ಮರ ಹಣ್ಣು ಕೊಡುವ ವೇಳೆಯವರೆಗೆ ಬದುಕಿದ್ದಾದರೆ ಆ ಹಣ್ಣನ್ನು ಅನುಭವಿಸಲೇ ಬೇಕು. 

ವೃದ್ಧಾಪ್ಯ ವರವೋ, ಶಾಪವೋ?

ವೃದ್ಧಾಪ್ಯ ವರವೆಂದು ಹೇಳುವವರು ಯಾರೂ ಕಾಣರು. ವೃದ್ಧಾಪ್ಯ ಶಾಪವೆಂದು ಹೇಳುವವರು ಬಹಳ ಮಂದಿ. ತಮಾಷೆಯ ವಿಷಯವೆಂದರೆ ಎಲ್ಲರಿಗೂ ದೀರ್ಘಾಯಸ್ಸು ಬೇಕು. ಆದರೆ ವೃದ್ಧಾಪ್ಯ ಬೇಡ. ತಿಳುವಳಿಕೆ  ಬಂದನಂತರ (ಅಥವಾ ತಿಳುವಳಿಕೆ ಬರುವ ವಯಸ್ಸು ಬಂದ ಮೇಲೆ. ಏಕೆಂದರೆ ಎಲ್ಲರಿಗೂ ತಿಳುವಳಿಕೆ ಬಂದೇ ಬರುತ್ತದೆ ಎಂದು ಹೇಳುವ ಹಾಗಿಲ್ಲ.) ಮನುಷ್ಯನನ್ನು ಕಾಡುವ ಎರಡು ಆಶೆಗಳು ಉಂಟು- ಧನದಾಶೆ ಮತ್ತು ಜೀವಿತದ ಆಶೆ (ಧನಾಶಾ ಜೀವಿತಾಶಾ ಚ). ಹಣ ಸಂಪಾದನೆ ಮಾಡುವ ಆಸೆ ಮತ್ತು ಚಿರಕಾಲ ಬದುಕುವ ಆಸೆ. ತುಂಬಾ ದಿನ ಬದುಕಿರಬೇಕು. ವೃದ್ಧಾಪ್ಯ ಬರಬಾರದು! ಚಿರಂಜೀವಿಯಾದರೆ ಇನ್ನೂ ಒಳ್ಳೆಯದು. ಆದರೆ ಅದು ಸಾಧ್ಯವಿಲ್ಲವಲ್ಲ! 

ವೃದ್ಧಾಪ್ಯದ ಚರ್ಚೆ ಬಂದಾಗ ಯಯಾತಿ ಮತ್ತು ಅವನ ಮಗ ಪುರು ಇವರನ್ನು ನೆನಪಿಸಿಕೊಳ್ಳಲೇಬೇಕು. ಈ ಕಥೆ ಎಲ್ಲರಿಗೂ ಗೊತ್ತಿರುವುದೇ. ಶುಕ್ರಾಚಾರ್ಯರ ಶಾಪದಿಂದ ಬಂದ ಅಕಾಲಿಕ ವೃದ್ಧಾಪ್ಯವನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಯಯಾತಿಯ ಪ್ರಯತ್ನ. ಕಷ್ಟವಾದರೂ ಸರಿ, ತಂದೆಗೆ ಇಚ್ಛೆ ಪೂರ್ತಿಯಾಗಲಿ ಎಂದು ತ್ಯಾಗ ಮಗನಾದ ಪುರುವಿನದು. ಮಹಾಭಾರತದ ಈ ಕಥೆಯನ್ನು ಈ ಕಾಲಮಾನದ ಇಬ್ಬರು ಸಾಹಿತಿಗಳಾದ ವಿ ಎಸ್ ಖಾಂಡೇಕರ್ ಮತ್ತು  ಗಿರೀಶ್ ಕಾರ್ನಾಡ್ ತಮ್ಮದೇ ದೃಷ್ಟಿ ಕೋಣದಿಂದ ನೋಡಿದ್ದಾರೆ. ಮಗನ ಯೌವನವನ್ನು ಪಡೆದ ಯಯಾತಿ ತನ್ನ ಪತ್ನಿಯ ಬಳಿ ಹೋದಾಗ "ನೀನು ಈಗ ನನ್ನ ಮಗ" ಎನ್ನುತ್ತಾಳೆ ಅವಳು.  ಇದು ಖಾಂಡೇಕರ್ ಒತ್ತು ಕೊಟ್ಟ ನೋಟ. ಕಾರ್ನಾಡರ ಯಯಾತಿಯ ಬಳಿ ಬಂದ ಸೊಸೆ "ಈಗ ನೀನೇ ನನ್ನ ಗಂಡ" ಎನ್ನುತ್ತಾಳೆ. ಇದು ಇನ್ನೊಂದು ದೃಷ್ಟಿ. ವಿ. ಎಸ್. ಖಾಂಡೇಕರ್ ಮರಾಠಿ ಭಾಷೆಯ ಪ್ರಸಿದ್ಧ ಸಾಹಿತಿ. ಅವರ "ಯಯಾತಿ" ಕಾದಂಬರಿಗೆ ಸಾಹಿತ್ಯ ಆಕಾಡೆಮಿ ಪ್ರಶಸ್ತಿ (೧೯೬೦) ಸಿಕ್ಕಿತು. ಮತ್ತೆ ಮುಂದೆ ೧೯೭೪ರಲ್ಲಿ "ಭಾರತೀಯ ಜ್ಞಾನಪೀಠ" ಪ್ರಶಸ್ತಿ ಕೂಡ ಲಭಿಸಿತು. ನಮ್ಮ ಕನ್ನಡದ ಪ್ರಖ್ಯಾತ ಸಾಹಿತಿ, ಕಲಾವಿದ ಗಿರೀಶ್ ಕಾರ್ನಾಡ್ ಅವರ "ಯಯಾತಿ" ಒಂದು ನಾಟಕ. ಅವರ ಯಯಾತಿ ನಾಟಕ ೧೯೬೧ರಲ್ಲಿ ಪ್ರಕಟವಾಯಿತು. ಭಾರತೀಯ ಜ್ಞಾನಪೀಠ ಪ್ರಾರಂಭದ ವರ್ಷಗಳಲ್ಲಿ ಒಂದು ಕೃತಿಯ ರಚಯಿತರಿಗೆ ಪ್ರಶಸ್ತಿ ಕೊಡುತ್ತಿತ್ತು. ನಂತರದ ವರ್ಷಗಲ್ಲಿ ಒಂದು ಕೃತಿಯ ಬದಲು ಒಬ್ಬ ಸಾಹಿತಿಯ ಒಟ್ಟಾರೆ ಸಾಹಿತ್ಯ ಸೇವೆಗೆ ಪ್ರಶಸ್ತಿ ಕೊಡಲಾರಂಭಿಸಿತು. (ಶಿವರಾಮ ಕಾರಂತರ "ಮೂಕಜ್ಜಿಯ ಕನಸು" ಕೃತಿಗೆ ಪ್ರಶಸ್ತಿ ಕೊಟ್ಟಾಗ ಬಹಳ ಚರ್ಚೆ ಆಯಿತು. ಪ್ರಶಸ್ತಿ ಕೊಟ್ಟಿದ್ದು ಸರಿ; ಆದರೆ ಕೃತಿಯ ಆಯ್ಕೆ ಸರಿಯಿಲ್ಲ ಎಂದು ಬಹಳ ಅಭಿಪ್ರಾಯಗಳು ಬಂದವು. ಈ ರೀತಿ ಸಮಸ್ಯೆ ತಪ್ಪಿಸಲು ಒಂದು ಕೃತಿಯ ಬದಲು ಒಟ್ಟಾರೆ ಸಾಹಿತ್ಯ ಸೇವೆಗೆ ಪ್ರಶಸ್ತಿ ಎನ್ನುವ ಕ್ರಮ ಜಾರಿಗೆ ಬಂತು ಎಂದು ಒಂದು ಅಭಿಪ್ರಾಯ). ಕಾರ್ನಾಡರಿಗೆ ಒಟ್ಟಾರೆ ಸಾಹಿತ್ಯ ಸೇವೆಗೆ ೧೯೯೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು. 

ವೃದ್ಧಾಪ್ಯ  ಯಾವಾಗ?

ನಮ್ಮ ಚಿಕ್ಕ ವಯಸ್ಸಿನಲ್ಲಿ ತಲೆ ಕೂದಲು ಬೆಳ್ಳಗಾಗುವುದು ಮತ್ತು ಕೂದಲು ತುಂಬಿದ ತಲೆ ಬೊಕ್ಕತಲೆ ಆಗುವುದು ವೃದ್ಧಾಪ್ಯದ ಕುರುಹು ಎಂದು ನಂಬುತ್ತಿದ್ದೆವು. ಚಿಕ್ಕ ವಯಸ್ಸಿನವರಿಗೆ ಬಿಳಿ ಕೂದಲು ಬಂದರೆ "ಬಾಲ ನೆರೆ" ಎಂದು ಹಾಸ್ಯ ಮಾಡುತ್ತಿದ್ದುದೂ ಉಂಟು. ಕೂದಲಿಗೆ ಬಣ್ಣ ಬಳಿಯುವ ಮತ್ತು ಕೃತಕ ಅಂಗಾಂಗಗಳ ಕಾಲ ಬಂದಿರುವ ಈಗ ಹಾಗೆ ಹೇಳಲಾಗುವುದಿಲ್ಲ. 

ಸರಕಾರಗಳಂತೂ ವೃದ್ಧಾಪ್ಯಕ್ಕೆ ೬೦ ವರ್ಷಗಳ ಗೆರೆ ನಿಗದಿ ಪಡಿಸಿವೆ. "ಹಿರಿಯ ನಾಗರಿಕ" (Senior Citizen) ಎಂದು ನಾಮಕರಣ ಸಹ ಮಾಡಿವೆ. ವಯಸ್ಸು ೮೦ ಆದರೆ "ಅತಿ ವೃದ್ಧ". ಸೃಷ್ಟಿಯ ದೃಷ್ಟಿಯಲ್ಲಿ ಯಂತ್ರ ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಅದು ಹಳೆಯ ಯಂತ್ರವೇ.  ಪಂಚಭೂತಗಳಿಂದಾದ ದೇಹಕ್ಕೆ ಅದರದೇ ಆದ ಇತಿ ಮಿತಿಗಳಿವೆ. ಅದನ್ನು ದಾಟುವುದು ಆಗದ ಮಾತು. ಎಲ್ಲೋ ಒಬ್ಬ ಚ್ಯವನ ಋಷಿಯಂತವರು ಅದನ್ನು ಗೆದ್ದರು ಎಂದು ಕೇಳುತ್ತೇವೆ. ಕೇಳುತ್ತೇವೆ, ಅಷ್ಟೇ. ನೋಡಿಲ್ಲ. 

ವೃದ್ಧಾಪ್ಯದಲ್ಲಿ ಮೂರು ಮಜಲುಗಳು; ದೈಹಿಕ, ಬೌದ್ಧಿಕ ಮತ್ತು ಮಾನಸಿಕ. ಮೊದಲನೆಯದು ನಮ್ಮ ಕೈ ಮೀರಿದುದು. ಎರಡನೆಯದು ಮತ್ತು ಮೂರನೆಯದನ್ನು ಪ್ರಯತ್ನಪೂರ್ವಕವಾಗಿ ಎಳೆಯದಾಗಿ ಇಟ್ಟುಕೊಳ್ಳುವುದು ನಮ್ಮ ವಶದಲ್ಲೇ ಇದೆ. ಆದರೆ ಇದಕ್ಕೆ ಪ್ರಬಲವಾದ ಮತ್ತು ಸತತ ಪ್ರಯತ್ನ ಬೇಕು. ಸ್ವಲ್ಪ ಉದಾಸೀನ ಮಾಡಿದರೂ ಇವೆರಡು ನಾಯಿಯ ಬಾಲದಂತೆ ತಮ್ಮ ಚಾಳಿಯನ್ನು ತಕ್ಷಣ ತೋರಿಸುತ್ತವೆ. 

ಭಾರತ ಸರ್ಕಾರದ ಒಂದು ವಿಚಿತ್ರ ವಿವರಣೆಯನ್ನು ಇಲ್ಲಿ ನೆನೆಸಿಕೊಳ್ಳಬೇಕು. ಹಿರಿಯ ನಾಗರಿಕರಿಗೆ ಬ್ಯಾಂಕುಗಳ ಠೇವಣಿ ಹಣಕ್ಕೆ ಅರ್ಧ ಪ್ರತಿಶತ ಹೆಚ್ಚು ಬಡ್ಡಿ ಕೊಡುತ್ತಾರೆ. ಬ್ಯಾಂಕುಗಲ್ಲಿ ಸೇವೆ ಮಾಡಿ ನಿವೃತ್ತರಾದವರಿಗೆ ಒಂದು ಪ್ರತಿಶತ ಹೆಚ್ಚು ಬಡ್ಡಿ ಕೊಡುತ್ತಾರೆ. ಆದರೆ ಅವರು "ಅನಿವಾಸಿ" (NRI) ಆದ ತಕ್ಷಣ ಈ ಎರಡೂ ಸೌಲಭ್ಯಗಳು ಖೋತಾ! ಸರಕಾರದ ದೃಷ್ಟಿಯಲ್ಲಿ ಅವರಿಗೆ ತಾರುಣ್ಯ ಮರಳಿ ಬಂದಂತೆ. 

ವೃದ್ಧಾಪ್ಯ ವರವಾಗಲು ಏನು ಮಾಡಬೇಕು?

ವೃದ್ಧಾಪ್ಯ ವರವೋ ಶಾಪವೋ ಆಗುವುದು ವೃದ್ಧಾಪ್ಯದಲ್ಲಿ ನಿರ್ಧಾರ ಆಗುವ ವಿಷಯ ಅಲ್ಲ. ಆದು ವೃದ್ಧಾಪ್ಯದಲ್ಲಿ ಪ್ರಕಟ ಆಗುವ ಫಲಿತಾಂಶ ಮಾತ್ರ. ಜೀವನದ ಹಿಂದಿನ ದಿನಗಳ ಪ್ರತಿಯೊಂದು ಕ್ರಿಯೆಯೂ ಒಂದೊಂದು ಕಣವಾಗಿ ವೃದ್ಧಾಪ್ಯದಲ್ಲಿ ರೂಪ ತಾಳುತ್ತವೆ. ಸರಿಯಾದ ಕ್ರಮದಲ್ಲಿ ಜೀವನ ನಡೆಸಿದ ವ್ಯಕ್ತಿಗೆ ವೃದ್ಧಾಪ್ಯ ವರವಾಗುವ ಸಾಧ್ಯತೆ ಉಂಟು. ಇಲ್ಲದಿದ್ದರೆ ಅದು ಶಾಪವಾಗುವ ಸಂಭವವೇ ಹೆಚ್ಚು. ಇದರಲ್ಲಿ ಅದೃಷ್ಟದ ಆಟವೂ, ಕಾಣದ ಕೈ ಪ್ರಭಾವಗಳೂ ಕೆಲಸ ಮಾಡುತ್ತವೆ. ಅಡಿಗರು ಹೇಳುವಂತೆ "ಯಾರ ಲೀಲೆಗೋ ಯಾರೋ ಏನೋ ಗುರಿಯಿಡದೆ ಬಿಟ್ಟ ಬಾಣ" ಚುಚ್ಚುವುದೂ ಉಂಟು. ಆಟಕ್ಕೆ ಯಾರೋ ಬಾಣವೊಂದನ್ನು ಬಿಟ್ಟರು. ಆದರೆ ಆ ಬಾಣ ತನ್ನ ಕೆಲಸ ಮಾಡಿತು. ತಾಕಿದವನಿಗೆ ಅದರ ನೋವು ತಿನ್ನುವ ಭಾಗ್ಯ. ಬಾಣ ಬಿಟ್ಟವನು "ನನಗೆ ಆ ಅಭಿಪ್ರಾಯ ಇರಲಿಲ್ಲ" ಎಂದು ಹೇಳಿ ಕೈ ಚೆಲ್ಲಬಹುದು. ಆದರೆ ಏಟು ತಿಂದವನಿಗೆ ಅದು ಏನೂ ಸುಖ ಕೊಡದು. ಉನ್ಮತ್ತರಾದ ಯಾರೋ ಯುವಕರು ಚೇಷ್ಟೆಗಾಗಿ ಓಡಿಸಿದ ವಾಹನದ ಕೆಳಗೆ ಸಿಕ್ಕಿ ಕೈ ಕಾಲು ಮುರಿದುಕೊಂಡ ವ್ಯಕ್ತಿಗೆ ಸರಿಯಾದ ಜೀವನ ಕ್ರಮದಲ್ಲಿ ನಡೆದಿದ್ದರೂ ವೃದ್ಧಾಪ್ಯ ಶಾಪವೇ!

ಒಟ್ಟಿನಲ್ಲಿ ವೃದ್ಧಾಪ್ಯ ವರವಾಗಬೇಕಾದರೆ ಆರೋಗ್ಯ ಚೆನ್ನಾಗಿರಬೇಕು. ಜೊತೆಗೆ ಸ್ವಲ್ಪವಾದರೂ ಧನಬಲ ಇರಲೇಬೇಕು. ಪ್ರೀತಿಯಿಂದ ಕಾಣುವ ಕುಟುಂಬ ವರ್ಗ ಮೂರನೆಯ ಭಾಗ್ಯ. ಇವೇ ರೊಟ್ಟಿ, ಅನ್ನ, ಪಲ್ಯ. ಒಳ್ಳೆಯ ಸ್ನೇಹಿತರು, ಶುಚಿ-ರುಚಿಯಾದ ಹವ್ಯಾಸಗಳು, ಈಗ ಪ್ರಯೋಜನಕ್ಕೆ ಬರುವ ಹಿಂದೆ ಶೇಖರಿಸಿದ ಪದಾರ್ಥಗಳು ಒಗ್ಗರಣೆ, ಉಪ್ಪಿನಕಾಯಿ, ಹಪ್ಪಳ ಇದ್ದಂತೆ. ರೊಟ್ಟಿ, ಅನ್ನ, ಪಲ್ಯದಿಂದ ಊಟ ಆಗಬಹುದು. ಸ್ವಲ್ಪ ನೀರಸ ಇರಬಹುದು. ಆದರೆ ಉಪ್ಪಿನಕಾಯಿ ಮತ್ತು ಹಪ್ಪಳದಿಂದ ಊಟ ಆಗುವುದಿಲ್ಲ!

ಆರೋಗ್ಯ ಚೆನ್ನಾಗಿರಬೇಕು ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಅದೂ ವೃದ್ಧರ ಕೈಯಲ್ಲಿ ಇರುವುದಿಲ್ಲ. "ಕಾಣದ ಕೈ" ವಿಚಿತ್ರವಾದ ವ್ಯಾಧಿಗಳನ್ನು ಕರುಣಿಸಬಹುದು. ಎಲ್ಲ ಸಮಯಗಳಲ್ಲಿಯೂ ಎದೆಗುಂದದೆ ಎದುರಿಸುವ ಮನಸ್ಥಿತಿ ಬಹಳ ಮುಖ್ಯ. ಜೊತೆಗೆ ಔಷಧ-ಉಪಚಾರಗಳು ಸುಲಭವಾಗಿ ಮತ್ತು ಶೀಘ್ರವಾಗಿ ಸಿಗುವ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕು. ಸೋಮಾರಿತನವಿಲ್ಲದೆ ಕಾಲಕಾಲಕ್ಕೆ ವೈದ್ಯರು ನೀಡಿರುವ ಮದ್ದುಗಳನ್ನು ತೆಗೆದುಕೊಳ್ಳಬೇಕಾದ್ದು ಅತ್ಯಂತ ಅವಶ್ಯಕ. ಸ್ವಂತ ಬುದ್ಧಿಯಿಂದ ತಾನೇ ಮದ್ದು ತೆಗೆದುಕೊಳ್ಳುವುದು ಅಪಾಯಕಾರಿಯೇ. 

ಹಣ-ಕಾಸಿನ ವಿಷಯದಲ್ಲಿ ಜಾಗರೂಕತೆ ಇರಬೇಕು. ನಾನು ಯಾರನ್ನೂ ನಂಬುವುದಿಲ್ಲ ಎನ್ನುವವರಿಗೆ ಯಾರನ್ನಾದರೂ ಯೋಗ್ಯರನ್ನು ನಂಬುವವರಿಗಿಂತ ಹೆಚ್ಚು ಅಪಾಯ ಕಟ್ಟಿಟ್ಟ ಬುತ್ತಿ. ವೃದ್ಧಾಪ್ಯ ಹೊಸ ಕನಸುಗಳನ್ನು ಕಟ್ಟುವ ಕಾಲವಲ್ಲ. ಆರ್ಥಿಕ ವಿಷಯಗಳಲ್ಲಿ ಇದನ್ನು ಇನ್ನೂ ಹೆಚ್ಚಾಗಿ ಅನುಸರಿಸಬೇಕು. 

ಹಿಂದಿನ ಜೀವನದಲ್ಲಿ ಬಹಳ ಮುಖ್ಯ ಎಂದುಕೊಂಡಿದ್ದ ಅನೇಕ ವಿಷಯಗಳ ಅನುಪಯುಕ್ತತೆಯನ್ನು ವೃದ್ಧಾಪ್ಯದಲ್ಲಿ ಕಾಣಬಹುದು. ಅಯ್ಯೋ, ಇಷ್ಟು ಸಣ್ಣ ವಿಷಯಕ್ಕೆ ಎಷ್ಟು ಪರದಾಡಿದೆ ಎಂದು ಈಗ ಪೇಚಾಡುವ ಸಮಯ! ಉದ್ವೇಗ ಉಂಟುಮಾಡುವ ವಿಷಯಗಳನ್ನು ಬಿಡುವುದೇ ವಾಸಿ. 

"ನಾನು ಯಾರನ್ನೂ ಲೆಕ್ಕಕ್ಕಿಡುವುದಿಲ್ಲ. ನಾನು ನೇರ, ನಿರ್ಭೀತ. ನನಗೆ ದಯಾ, ದಾಕ್ಷಿಣ್ಯ ಇಲ್ಲ." ಎಂದು ಹೇಳುವ ಅನೇಕರನ್ನು ನಾವು ಕಾಣುತ್ತೇವೆ. ವಿಶಾಲ ಸೃಷ್ಟಿಯಲ್ಲಿ ಯಾವುದೇ ಲೆಕ್ಕಕ್ಕೂ ಬಾರದ ಅತಿ ಸಣ್ಣ ಕಣ ನಾವು ಎನ್ನುವ ಅರಿವು ಇರುವವನಿಗೆ ದಯಾ ದಾಕ್ಷಿಣ್ಯ ಇರಲೇ ಬೇಕು. ಭರ್ತೃಹರಿಯು ಇದನ್ನೇ "ದ್ದಾಕ್ಷಿಣ್ಯಮ್ ಸ್ವಜನೇ, ದಯಾ ಪರಿಜನೇ... " ಮುಂತಾಗಿ ಹೇಳಿದ್ದು. ಪುರಂದರದಾಸರು ಸೊಗಸಾಗಿ ಹೇಳುತ್ತಾರೆ:

ಕಲ್ಲಾಗಿ ಇರಬೇಕು ಕಠಿಣ ಭವ ತೊರೆಯೊಳಗೆ 
ಬಿಲ್ಲಾಗಿ ಇರಬೇಕು ಬಲ್ಲವರೊಳಗೆ 
ಬೆಲ್ಲವಾಗಿರಬೇಕು ಬಂಧು ಜನದೊಳಗೆ  

"ನಾನು ಅದು ಮಾಡುತ್ತೇನೆ. ಹೀಗೆ ಮಾಡುತ್ತೇನೆ" ಎಂದು ಹಾರಾಡುವುದು ಮೊದಲು ನಿಲ್ಲಿಸಬೇಕು. "ಇದು ಬಾಳು ನೋಡು, ನಾ ತಿಳಿದೆನೆಂದರೂ ತಿಳಿದ ಧೀರನಿಲ್ಲ" ಎನ್ನುತ್ತಾರೆ ಅಡಿಗರು. ಪ್ರಕೃತಿಯ ನಿಯಮಗಳಿಗೆ ನಮ್ಮನ್ನು ಒಪ್ಪಿಸಿಕೊಂಡು ಆನಂದ ಕಂಡುಕೊಳ್ಳಬೇಕು. "ಜಗಕೆ ಸಂತಸವೀವ ಘನನು ತಾನೆಂತೆಂಬ ವಿಪರೀತ ಮತಿಯನಳಿದು" ಎನ್ನುವ ಕವಿವಾಣಿಯನ್ನು ದಿನಾ ಮೂರು ಬಾರಿ ಹೇಳಿಕೊಳ್ಳುವುದು ಒಳ್ಳೆಯದು. ಜೀವನದ ಕಾವ್ಯದಲ್ಲಿ ನಾವು ಅನೇಕ ಕಸರತ್ತು ಮಾಡಬಹುದು. ಕೆಲವದರಲ್ಲಿ ಗೆಲ್ಲಬಹುದು. ಅನೇಕದರಲ್ಲಿ ಬೀಳಬಹುದು. ಆದರೆ ಜೀವನ ಕಾವ್ಯದ ಪೂರ್ಣ ವಿರಾಮ (full stop) ಹಾಕುವ ಅಧಿಕಾರವನ್ನು ಅವನು ಇನ್ನೂ ತನ್ನಲ್ಲಿಯೇ ಇಟ್ಟುಕೊಂಡಿದ್ದಾನೆ. ಇದನ್ನು ಮರೆಯದೆ ಬುಲಾವು ಬಂದಾಗ ಹೊರಡಲು ತಯಾರಿದ್ದವನಿಗೆ ವೃದ್ಧಾಪ್ಯದಲ್ಲಿ ಏನು ಕಂಡಿತೋ ಅದರಲ್ಲಿ ಆನಂದ ಅನುಭವಿಸುವ ಕಲೆ ಸಿದ್ಧಿಸುತ್ತದೆ. 

*****

"ಭಾರತೀಯ ಜೀವನ್ ಬಿಮಾ ನಿಗಮ" (Life Insurance Corporation of India) ಜೀವನದ ಆನಂದವನ್ನು ನೋಡುವ ರೀತಿಯೇ ಬೇರೆ. ಅದರ ಅನೇಕ ಪಾಲಿಸಿಗಳಲ್ಲಿ ಜೀವನ್ ಆನಂದ್ ಪಾಲಿಸಿಯೂ ಒಂದು. ಇದು ಒಂದು ರೀತಿಯ ಬಹೂಪಯೋಗಿ ಪಾಲಿಸಿ. ಈ ರೀತಿಯ ಪಾಲಿಸಿಯೊಂದನ್ನು ಪಡೆದುಕೊಂಡ ಸ್ನೇಹಿತನೊಬ್ಬನ ಕಥೆಯೊಂದನ್ನು ಅವನ ಭಾಷೆಯಲ್ಲಿಯೇ ಕೇಳುವುದು ಅಥವಾ ಓದುವುದು ಬಹಳ ಚೆಂದ. 

"ನಾನು ಸಂಪಾದನೆ ಮಾಡಲು ಪ್ರಾಂಭಿಸಿದಾಗಿನಿಂದಲೂ ಜೀವ ವಿಮೆ ಮಾಡಿಸುತ್ತಿದ್ದೆ. ನನ್ನ ಮೊದಲ ಸರಿಯಾದ ಕೆಲಸ ಕೊಡುತ್ತಿದ್ದ ತಿಂಗಳ ಸಂಬಳ ಮೂರು ನೂರು ರೂಪಾಯಿ ಮಾತ್ರ. ಈ ಉದ್ಯೋಗಕ್ಕೆ ಮುಂಚೆ ಸಣ್ಣ ಕೆಲಸಗಳು ಇದ್ದರೂ ವಿಮೆ ಮಾಡಿಸುವ ಧೈರ್ಯ ಇರಲಿಲ್ಲ. ಈ ಉದ್ಯೋಗ ಸೇರಿದಾಗ ಒಂದು ಶನಿವಾರ ಸಹೋದ್ಯೋಗಿಯೊಬ್ಬ ಸಂಜೆ ಅವರ ಮನೆಗೆ ಚಹಾ ಸೇವನೆಗೆ ಕರೆದ. ನಾನೂ ನನ್ನಂತೆ ಇನ್ನಿಬ್ಬರು ಸಹೋದ್ಯೋಗಿಗಳೂ ಹೋದೆವು. ಸ್ವಾಗತಿಸಿ ಕೂಡಿಸಿದ ನಂತರ ಸೊಗಸಾದ ಚೂಡಾ, ಬೋಂಡಾದ ಜೊತೆ ಚಹಾ ಬಂತು. ಆ ಗುಂಗಿನಲ್ಲೇ ಇದ್ದಾಗ ಹಿರಿಯರೊಬ್ಬರು ಜೀವದ ಬೆಲೆ, ವಿಮೆಯ ಪ್ರಾಮುಖ್ಯತೆ ಇತ್ಯಾದಿಗಳ ಬಗ್ಗೆ ಪುಟ್ಟ ಭಾಷಣ ಕೊಟ್ಟರು. ಎಲ್ಲರ ಕೈಯ್ಯಲ್ಲೂ ಒಂದೊಂದು ಫಾರಂ ಇಟ್ಟರು. ಕಡೆಗೆ ಅದು ವಿಮೆ ಪಾಲಿಸಿ ಕೊಳ್ಳುವ ಫಾರಂ ಎಂದು ತಿಳಿಯಿತು. ಬೇಡ ಎನ್ನುವ ಮೊದಲೇ ಹದಿನಾಲ್ಕು ರೂಪಾಯಿ ಮಾಸಿಕ ಕಂತಿನ ಐದು ಸಾವಿರ ರೂಪಾಯಿಯ ಪಾಲಿಸಿಗೆ ಸಹಿ ಮಾಡಿಸಿದರು. ಬೋಂಡಾ, ಚಹಾ ನೀಡಿ ಹುಡುಗಿ ಗಂಟು ಹಾಕುವುದು ಕೇಳಿದ್ದೆ. ಇಲ್ಲಿ ಪಾಲಿಸಿ ಗಂಟುಬಿತ್ತು. ನೀವು ಏನೂ ಚಿಂತೆ ಮಾಡಬೇಡಿ. ನಿಮ್ಮ ಸಂಬಳದಿಂದ ಅದಾಗದೇ ವಿಮೆಯ ಕಂತು ಹೋಗುತ್ತದೆ. ನೀವೇನೂ ಕಟ್ಟಬೇಕಾಗಿಲ್ಲ ಎಂದು ಅವರೇ ಹಣ ನೀಡುವ ರೀತಿ ಅಭಯವನ್ನೂ ನೀಡಿದರು. ಹೀಗೆ ಸಂಬಳ ಹೆಚ್ಚುತ್ತಿದ್ದಂತೆ ಬೇರೆ ಬೇರೆ ಪಾಲಿಸಿ ಕೊಂಡೆ". 

"ಇಪ್ಪತ್ತೈದು ವರ್ಷದ ನಂತರ ಮೊದಲ ಪಾಲಿಸಿ ಹಣ ಬಂತು. ಏಳು ಸಾವಿರದ ಐದು ನೂರು ರೂಪಾಯಿ. ಅದು ಆಗ ಬರುತ್ತಿದ್ದ ಒಂದು ತಿಂಗಳ ಸಂಬಳ! ಇಪ್ಪತ್ತೈದು ವರ್ಷ ಪ್ರತಿ ತಿಂಗಳೂ ಕಂತು ಕಟ್ಟಿದ್ದರ ಪ್ರತಿಫಲ. ಹೀಗೆ ಎಲ್ಲ ಪಾಲಿಸಿಗಳೂ ಮುಗಿದು ವಿಮೆಯೇ ಇಲ್ಲದಂತಾಯಿತು."

"ಇನ್ನೊಬ್ಬ ಹಿತೈಷಿ(?) ಮಿತ್ರರು ಈ ಪರಿಸ್ಥಿತಿ ನೋಡಿ ಬಹಳ ಸಂಕಟ ಪಟ್ಟರು. ಐವತ್ತು ವಯಸ್ಸಿಗೆ ವಿಮೆಯೇ ಇಲ್ಲ ಎಂದರೆ ಏನು? ಬಹಳ ತಪ್ಪು. ಹೊಸ "ಜೀವನ್ ಆನಂದ್" ಬಂದಿದೆ. ಪಾಲಿಸಿ ತಗೊಳ್ಳಿ. ಹತ್ತು ವರ್ಷ ಕಂತು ಕಟ್ಟಿ. ನಿಮ್ಮ ನಿವೃತ್ತಿಯ ವೇಳೆಗೆ ಪಾಲಿಸಿ ಹಣ ಬರುತ್ತದೆ. ಅಷ್ಟೇ ಅಲ್ಲ. ಮುಂದೆ ಕಂತು ಕಟ್ಟದಿದ್ದರೂ ವಿಮೆಯ ಅಭಯ ಛತ್ರ ನಿಮ್ಮ ತಲೆಯ ಮೇಲೆ ಇರುತ್ತದೆ. ನಿಮ್ಮ ಮರಣದ ನಂತರ ಪಾಲಿಸಿಯ ಅಷ್ಟೇ ಹಣ ನಿಮಗೆ {!) ಸಿಗುತ್ತದೆ." ಎಂದು ಬಹಳ ಕಳಕಳಿಯಿಂದ ಹೇಳಿದರು. ಸರಿ, ಆಯಿತು, ಪಾಲಿಸಿ ಬಾಂಡ್ ಬಂತು."

"ಪಾಲಿಸಿ ಬಾಂಡ್ ಹಿಡಿದು ಏನನ್ನೋ ಸಾಧಿಸಿದಂತೆ ಮನೆಗೆ ಹೋದೆ. ಹೆಂಡತಿಯ ಕೈಯಲ್ಲಿ ಬಾಂಡ್ ಇಟ್ಟು "ಜೀವನದ ಆನಂದ" ವಿವರಿಸಿದೆ. "ನಿಮ್ಮ ದರಿದ್ರ ಬಾಂಡ್ ನೀವೇ ಇಟ್ಟುಕೊಳ್ಳಿ. ನಿಮ್ಮ ಸಾವಿನ ನಂತರ ಬರುವ ಆನಂದ ನಮಗೆ ಬೇಡ" ಎಂದು ಪಾಲಿಸಿ ನನ್ನ ಕೈಗೇ ತಳ್ಳಿದಳು." 

"ಹತ್ತು ವರುಷದ ನಂತರ ಪಾಲಿಸಿ ಹಣ ಬಂತು. ಖರ್ಚೂ ಆಯಿತು. ಬಾಂಡ್ ಮಾತ್ರ ನನ್ನ ಮರಣದ ನಿರೀಕ್ಷೆಯಲ್ಲಿ ಕಪಾಟಿನಲ್ಲಿ ಕುಳಿತಿತ್ತು."

"ಮತ್ತೆ ಹತ್ತು ವರುಷದ ನಂತರ ಮತ್ತೊಬ್ಬ ಹಿತೈಷಿ "ಜೀವನದ ಆನಂದ"ದ ವಿಷಯ ಮಾತಾಡುವಾಗ ಹೊಸ ವಿಷಯ ಹೇಳಿದರು. ಈ ಬಾಂಡ್ ಸಹವಾಸ ಸಾಕು ಎಂದರೆ ವಿಮಾ ನಿಗಮಕ್ಕೆ ಹಿಂತಿರುಗಿಸಿ ಸ್ವಲ್ಪ ಕಡಿಮೆ ಆದರೂ ನೀವು ಬದುಕಿದ್ದಾಗಲೇ ಹಣ ಪಡೆಯಬಹುದು. ಹಾಗೆ ಮಾಡಿ. ಸಂಸಾರದಲ್ಲಿ ಮನಸ್ತಾಪ ಯಾಕೆ?" ಎಂದು ಸಲಹೆ ಕೊಟ್ಟರು."

"ಹಾಗೆಯೇ ಮಾಡಿದೆ. ಸ್ವಲ್ಪ ಹಣವೂ ಬಂತು. ಹೆಂಡತಿಯ ಮುಖವೂ ಸ್ವಲ್ಪ ಅರಳಿತು. ಎದೆಯಲ್ಲಿ ಚುಚ್ಚಿಕೊಂಡಿದ್ದ ಮುಳ್ಳು ಹೊರ ಬಂದಂತೆ ನಿರಾಳವಾಯಿತು. ಮರಣದ ನಂತರ ಬರುವ ಆನಂದವನ್ನೂ ಬದುಕಿರುವಾಗಲೇ ಕಂಡೆ!"
*****
ಆನಂದ ಅನುಭವಿಸುವುದಕ್ಕೂ ವಿಷಾದ ಪಡುವುದಕ್ಕೂ ಪ್ರತಿನಿತ್ಯ ನೂರು ಕಾರಣಗಳು ಸಿಗುತ್ತವೆ. ಆಯ್ಕೆ ಅವರವರಿಗೆ ಬಿಟ್ಟಿದ್ದು.