Saturday, July 26, 2025
ಲಾಭವೂ ನಿನ್ನದೇ; ನಷ್ಟವೂ ನಿನ್ನದೇ!
Friday, July 11, 2025
ಚಿಂತೆ ಎಂಬ ವಿಶಾಲವಾದ ವೃಕ್ಷ

ಲೋಭ: ಪಾಪಶ್ಚ ಬೀಜಂಹಿ ಮೋಹೋ ಮೂಲ೦ಚ ತಸ್ಯಹಿಅಸತ್ಯಂ ತಸ್ಯವೈ ಸ್ಕಂಧಃ ಮಾಯಾ ಶಾಖಾ ಸುವಿಸ್ತರಃದಂಭ ಕೌಟಿಲ್ಯ ಪತ್ರಾಣಿ ಕುಬುಧ್ಯಾ ಪುಷ್ಪಿತಃ ಸದಾಅನೃತಂ ತಸ್ಯವೈ ಸೌಗಂಧ: ಫಲಾ ಅಜ್ನ್ಯಾನಮೇವ ಚ
"ಪಾಪ" ಅನ್ನುವ ಹೆಮ್ಮರಕ್ಕೆ ಈ "ಲೋಭ" ಅನ್ನುವುದೇ ಬೀಜರೂಪವು. ಈ ಲೋಭವು ಮನಸ್ಸು ಎಂಬ ಮಣ್ಣಿನಲ್ಲಿ ಬಿದ್ದ ತಕ್ಷಣ ಬೇರು ಬಿಡಲಾರಂಭಿಸುತ್ತದೆ. ಲೋಭವು ಹೆಚ್ಚಿದಷ್ಟೂ ಬೇರುಗಳು ಆಳ ಮತ್ತು ವಿಶಾಲ ಆಗುತ್ತವೆ. "ಮೋಹ" ಎನ್ನುವುದೇ ಅದರ ಬೇರು. ಈ ಮರಕ್ಕೆ "ಅಸತ್ಯ" ಎನ್ನುವ ಒಂದು ದೊಡ್ಡದಾದ ಕಾಂಡವಿದೆ. "ಕಪಟತನ" (ಮಾಯಾ) ಅನ್ನುವುದು ಈ ಅಸತ್ಯ ಎನ್ನುವ ಭಾರಿ ಕಾಂಡದಿಂದ ಹೊರಡುವ ಅನೇಕ ಕೊಂಬೆಗಳು. "ದಂಭ" ಮತ್ತು "ಕುಟಿಲತೆ" ಅನ್ನುವುವು ಈ ಅಸತ್ಯವೆಂಬ ಕೊಂಬೆಗಳಲ್ಲಿ ಬೆಳೆಯುವ ಅಸಂಖ್ಯಾತ ಎಲೆಗಳು. ಆ ಅನೇಕ ಕೊಂಬೆಗಳ ಮೇಲೆ, ಎಲೆಗಳ ನಡುವೆ, "ಕುಬುದ್ಧಿ" ಎನ್ನುವ ಹೂವು ಸದಾ ಬಿಡುತ್ತದೆ. ಹೂವುಗಳಲ್ಲಿ ಸಾಮಾನ್ಯವಾಗಿ ಸುವಾಸನೆ ಇದ್ದರೆ ಈ ಕುಬುದ್ಧಿ ಅನ್ನುವ ಹೂವಿನಲ್ಲಿ "ಸುಳ್ಳು ಮಾತುಗಳು" ಎನ್ನುವ ಅನೇಕ ರೀತಿಯ ದುರ್ವಾಸನೆಗಳು ಹರಡಲು ತಯಾರು. ಒಂದು ಮರದಲ್ಲಿ ಇಷ್ಟೆಲ್ಲಾ ಇರುವಾಗ ಕಡೆಗೆ ಅದರಲ್ಲಿ ಹಣ್ಣುಗಳು ಬಲೇಬೇಕಲ್ಲ? ಈ ಪಾಪವೆಂಬ ಮರಕ್ಕೆ "ಅಜ್ಞಾನ" ಎನ್ನುವುದೇ ಹಣ್ಣುಗಳಾಗಿ ತೋರುತ್ತವೆ. ಇಂತಹ ಮರದಲ್ಲಿ ಈ ಅಜ್ಞಾನ ಅನ್ನುವ ಹಣ್ಣಿನ ಆಸೆಯಿಂದ ಕಪಟತನ, ಪಾಖಂಡತನ, ಕ್ರೌರ್ಯ, ಅಸೂಯೆ, ಮುಂತಾದ ಇತರ "ದುರ್ಗುಣ" ರೂಪಗಳ ಹಕ್ಕಿಗಳು ಬಂದು ಸೇರುತ್ತವೆ!
ಮರಗಿಡಗಳಿಗೆ ಸಾಮಾನ್ಯವಾಗಿ ವರ್ಷದಲ್ಲಿ ಕೆಲವು ತಿಂಗಳುಗಳು ಹೂವು ಮತ್ತು ಹಣ್ಣು ಬಿಡುವ ಕಾಲ. ಆದರೆ ಈ ಪಾಪವೆಂಬ ಮರದಲ್ಲಿ ವರುಷಕ್ಕೆ ಹನ್ನೆರಡು ತಿಂಗಳೂ ಕುಬುದ್ಧಿ ಎನ್ನುವ ಹೂವು ಅರಳುತ್ತದೆ! ಸದಾಕಾಲವೂ ಅಜ್ಞಾನವೆಂಬ ಹಣ್ಣು ತುಂಬಿರುತ್ತದೆ.
"ಜಂಭ" ಮತ್ತು "ದಂಭ" ಇವುಗಳಿಗೆ ವ್ಯತ್ಯಾಸವಿದೆ. ಇರುವುದನ್ನು ಹೆಚ್ಚಾಗಿ ಹೇಳಿಕೊಳ್ಳುವುದು ಜಂಭ. ಇಲ್ಲದೆ ಇರುವುದನ್ನು ಹೇಳಿಕೊಳ್ಳುವುದು ದಂಭ. ಉದಾಹರಣೆಗೆ: ಒಬ್ಬನ ಜೇಬಿನಲ್ಲಿ ಒಂದು ಸಾವಿರ ರೂಪಾಯಿ ಇದೆ. ಅವನು ಹತ್ತು ಸಾವಿರ ರೂಪಾಯಿ ಇದೆ ಎಂದು ಹೇಳಿದರೆ ಅದು ಜಂಭ ಕೊಚ್ಚಿಕೊಳ್ಳುವುದು. ಇನ್ನೊಬ್ಬನ ಜೇಬಿನಲ್ಲಿ ಒಂದು ರೂಪಾಯಿಯೂ ಇಲ್ಲ. ಅವನು ತನ್ನ ಜೇಬಿನಲ್ಲಿ ಒಂದು ಸಾವಿರ ರೂಪಾಯಿ ಇದೆ ಎಂದು ಹೇಳಿದರೆ ಅದು ದಂಭ.
"ಕುಟಿಲ" ಅಂದರೆ "ನೆಟ್ಟಗಿಲ್ಲದ್ದು" ಎಂದು ಅರ್ಥ. ಸೊಟ್ಟಗಿದೆ ಎನ್ನಬಹುದು. ಶ್ರೀಕೃಷ್ಣನ ವರ್ಣನೆಯಲ್ಲಿ "ಕುಟಿಲ ಕುಂತಲಂ ಕುವಲಯ ದಳ ನೀಲಂ" ಎನ್ನುತ್ತೇವೆ. ಇಲ್ಲಿ ಕುಟಿಲ ಕುಂತಲಂ ಅಂದರೆ "ಗುಂಗುರು ಕೂದಲು" ಎಂದು ಅರ್ಥ. ಕೆಲವರಿಗೆ, ಅದರಲ್ಲೂ ಮಕ್ಕಳಿಗೆ, ಗುಂಗುರು ಕೂದಲು ಇದ್ದರೆ ಸುಂದರ. ಆದರೆ ನಡೆ-ನುಡಿ ನೇರವಾಗಿರಬೇಕು. ವಕ್ರವಾಗಿರಬಾರದು. ಹೇಳುವುದು, ತೋರಿಸುವುದು ಒಂದು ರೀತಿ. ಆದರೆ ಅದರ ಅರ್ಥ, ಆಚರಣೆ ಇನ್ನೊಂದು ರೀತಿ. ಹೀಗಿದ್ದರೆ ಇದನ್ನೇ "ಕುಟಿಲ ನೀತಿ" ಅನ್ನುವುದು. ಕುಟಿಲ ಸ್ವಭಾವ ಇರುವವರನ್ನು ನಂಬಬಾರದು. ಮಹಾಭಾರತದ ಶಕುನಿ ಇದಕ್ಕೆ ಅತ್ಯುತ್ತಮ ಉದಾಹರಣೆ.
*****
ಸುಮನಾ ಹೇಳಿರುವ ಮೇಲಿನ ಪಾಪ ಎಂಬ ಮರದ ವಿವರಗಳು ಬಹಳ ಅರ್ಥವತ್ತಾಗಿದ್ದು ಮೊದಲ ನೋಟದಲ್ಲಿ ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ. ಆದರೆ ನಿಧಾನವಾಗಿ ಓದಿ, ನಮ್ಮ ನಮ್ಮ ಅನುಭವದ ಹಿನ್ನೆಲಿಯಲ್ಲಿ ಮೆಲಕು ಹಾಕಿದಾಗ ಅದರ ಸತ್ಯವು ನಿಚ್ಚಳವಾಗಿ ಗೋಚರಿಸುತ್ತದೆ.
"ಪದ್ಮ ಪುರಾಣ" ಸುಮಾರು ಐವತ್ತೈದು ಸಾವಿರ (55,000) ಶ್ಲೋಕಗಳಿರುವ ಒಂದು ಗ್ರಂಥ. ಏಳು (7) ಖಂಡಗಳ ಏಳು ನೂರ ಮೂರು (703) ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ಶ್ರೀಮದ್ ಭಾಗವತಕ್ಕಿಂತ ಗಾತ್ರದಲ್ಲಿ ಮೂರುಪಟ್ಟು ದೊಡ್ಡದು. ಇಷ್ಟು ವಿಶಾಲ ಗ್ರಂಥದಲ್ಲಿರುವ ವಿಷಯಗಳ ಹರವನ್ನು ನೋಡಿದರೆ ವಿಸ್ಮಯವಾಗುತ್ತದೆ.
ಭಗವಾನ್ ವೇದವ್ಯಾಸರು ನಮಗೆ ಕೊಟ್ಟಿರುವ ಗ್ರಂಥ ಲೋಕವನ್ನು ನಮ್ಮ ಜೀವನ ಕಾಲದಲ್ಲಿ ಒಮ್ಮೆ ಸರಿಯಾಗಿ ಓದಿ ಮನನ ಮಾಡುವುದೂ ಒಂದು ದೊಡ್ಡ ಸಾಧನೆಯೇ ಆಗುತ್ತದೆ. ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಂತೂ ಇನ್ನೂ ದೂರದ ಮಾತು. ಆಚರಣೆಯಲ್ಲಿ ತರುವುದು ಒಂದು ತಪಸ್ಸೇ ಸರಿ. ಇಷ್ಟು ಕೃತಿರಚನೆ ಹೇಗಾಯಿತು ಎನ್ನುವುದು ನೋಡಿ ಕೇವಲ ಕೈ ಮುಗಿಯಬಹುದು. ಅಷ್ಟೇ. "ವ್ಯಾಸ ಪೂರ್ಣಿಮಾ" ಸಂದರ್ಭದಲ್ಲಿ ಇಂತಹ ಅನೇಕ ಗ್ರಂಥಗಳ ಕರ್ತೃವಾದ ಭಗವಾನ್ ವೇದ ವ್ಯಾಸರಿಗೆ ನಮ್ಮ ಅತ್ಯಂತ ಕೃತಜ್ಞತಾ ಪೂರ್ವಕವಾದ ಗೌರವಾದರ, ನಮನಗಳು ಸಲ್ಲಬೇಕು.
Sunday, July 6, 2025
ಐದು ರೀತಿಯ ಮಕ್ಕಳು
ಋಣಸಂಬಂಧಿನಃ ಕೇಚಿತ್ ಕೇಚಿತ್ ನ್ಯಾಸಾಪಹಾರಕಾ:ಲಾಭಪ್ರದಾ ಭವಂತೇ ಕೇ ಉದಾಸೀನಾ ತಥಾಪರೇ
- ಮೊದಲನೆಯ ವರ್ಗದ ಮಕ್ಕಳು "ಸಾಲ ವಸೂಲಿಗೆ ಬಂದವರು". ಹಿಂದಿನ ಜನ್ಮಗಳಲ್ಲಿ ನಾವು ಯಾರಿಂದಲಾದರೂ ಹಣ-ಕಾಸು, ವಸ್ತುಗಳನ್ನು ಸಾಲ ಪಡೆದು ಹಿಂದಿರುಗಿಸದಿದ್ದರೆ ಹಾಗೆ ಸಾಲಕೊಟ್ಟವರು ಈ ಜನ್ಮದಲ್ಲಿ ನಮ್ಮ ಮಕ್ಕಳಾಗಿ ಹುಟ್ಟಿ ನಮ್ಮಿಂದ ಅದನ್ನು ಬಡ್ಡಿ ಸಹಿತ ವಸೂಲಿ ಮಾಡಲು ಹುಟ್ಟಿದ ಮಕ್ಕಳು ಇವರು. ಇವರಿಂದ ತಂದೆ-ತಾಯಿಗಳಿಗೆ ಯಾವುದೇ ಪ್ರಯೋಜನ ಇರುವುದಿಲ್ಲ. ತಮ್ಮ ಸಾಲ ವಸೂಲಾಗುವವರೆಗೂ ಜೊತೆಯಲ್ಲಿದ್ದು, ಅದು ಮುಗಿದ ಕೂಡಲೇ ಹೊರಟು ಹೋಗುತ್ತಾರೆ. ಇವರು "ಋಣಸಂಬಂಧಿ ಮಕ್ಕಳು".
- ಎರಡನೆಯ ವರ್ಗದ ಮಕ್ಕಳು "ತಿಂದದ್ದು ಕಕ್ಕಿಸುವವರು". ಯಾವುದೋ ಜನ್ಮದಲ್ಲಿ ಇನ್ನೊಬ್ಬರ ಹಣವನ್ನು ಅಥವಾ ವಸ್ತು-ಆಸ್ತಿಗಳನ್ನು ಅನ್ಯಾಯವಾಗಿ ತಿಂದುಹಾಕಿದ್ದರೆ ಆ ರೀತಿ ಕಳೆದುಕೊಂಡವರು ಈ ಜನ್ಮದಲ್ಲಿ ಮಕ್ಕಳಾಗಿ ಬಂದು ಅದನ್ನು ಹಿಂಪಡೆಯುವವರು. ಮೊದಲನೆಯ ವರ್ಗದವರಿಗೂ ಇವರಿಗೂ ಏನು ವ್ಯತ್ಯಾಸ? ಮೊದಲನೆಯದು ನಾವು ಸಾಲ ಕೇಳಿ ಅವರು ಒಪ್ಪಿ ಕೊಟ್ಟವರು. ಎರಡನೆಯವರು ಅವರಿಂದ ನಾವು ಅನ್ಯಾಯವಾಗಿ ಕಿತ್ತುಕೊಂಡುದರಿಂದ ನಷ್ಟ ಅನುಭವಿಸಿದವರು. ಆದುದರಿಂದ ಇವರ ವ್ಯವಹಾರ ಮೊದಲನೆಯ ವರ್ಗಕ್ಕಿಂತ ಹೆಚ್ಚು ಕಠಿಣವಾಗಿರುತ್ತದೆ.
- ಮೂರನೆಯ ವರ್ಗದ ಮಕ್ಕಳು "ಲಾಭಪ್ರದರು". ಕಳೆದ ಜನ್ಮಗಳಲ್ಲಿ ನಾವು ಮತ್ತೊಬ್ಬರಿಗೆ ಉಪಕಾರ ಮಾಡಿದ್ದರೆ ಅದರ ಸ್ಮರಣೆಯಿಂದ ಈ ಜನ್ಮದಲ್ಲಿ ನಮಗೆ ಉಪಕಾರ ಮಾಡಲು ಹುಟ್ಟಿದವರು. ಇವರು ತಂದೆ-ತಾಯಿಯರಿಗೆ ಬಹಳ ಅನುಕೂಲ ಮಾಡಿಕೊಡುವ ಮಕ್ಕಳಾಗುತ್ತಾರೆ. ಕೆಲವೊಮ್ಮೆ ಮಕ್ಕಳು ತಾಯಿ ಮತ್ತು ತಂದೆ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅನುಕೂಲರಾಗಿರಬಹುದು. ಇದು ಮಕ್ಕಳಾಗಿ ಹುಟ್ಟಿದವರು ಯಾರಿಂದ ಹಿಂದೆ ಉಪಕೃತರಾಗಿದ್ದರೋ ಅದರ ಮೇಲೆ ಅವಲಂಬಿಸುತ್ತದೆ.
- ನಾಲ್ಕನೆಯ ವರ್ಗದ ಮಕ್ಕಳು "ಉದಾಸೀನ ಪುತ್ರರು". ಇವರು ಮೇಲಿನ ಮೂರೂ ಕಾರಣಗಳಿಲ್ಲದ ಮಕ್ಕಳು. ಇವರು ಅವರ ಹಿಂದಿನ ಜನ್ಮಗಳ ಫಲಗಳನ್ನು ಅನುಭವಿಸಲು ಹುಟ್ಟಿದವರು. ಜನ್ಮ ಪಡೆಯುವುದಕ್ಕಾಗಿ ಮಾತ್ರವೇ ತಾಯಿ-ತಂದೆಯರ ಆಶ್ರಯ ಪಡೆದವರು. ಇಂತಹವರು ತಮ್ಮ ಪಾಡು ತಾವು ನೋಡಿಕೊಂಡು ತಂದೆ-ತಾಯಿಯರ ವಿಷಯದಲ್ಲಿ ಉದಾಸೀನರಾಗಿರುತ್ತಾರೆ.
Saturday, February 15, 2025
ಪ್ರತಿದಿನ ಗಂಗಾ ಸ್ನಾನ?
Monday, February 3, 2025
ಕುಂಭ ಸ್ನಾನ ಮತ್ತು ಪಾಪ ಪರಿಹಾರ
ಎಂ. ವಿ ಕೃಷ್ಣ ಸ್ವಾಮಿ ಎಂಬ ಚಲನಚಿತ್ರ ನಿರ್ಮಾಪಕ-ನಿರ್ದೇಶಕರೊಬ್ಬರು ಇದ್ದರು. ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲಿ ಅವರು ಎತ್ತಿದ ಕೈ. ಸಾರ್ವಕಾಲಿಕ ಶ್ರೇಷ್ಠ ಇಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯ, ವೀಣಾ ವಿದ್ವಾನ್ ದೊರೆಸ್ವಾಮಿ ಅಯ್ಯಂಗಾರ್ ಮುಂತಾದವರ ಬಗ್ಗೆ ಅವರು ತಯಾರಿಸಿದ ಸಾಕ್ಷ್ಯಚಿತ್ರಗಳು ಬಹಳ ಹೆಸರು ಮಾಡಿದವು. ದೊಡ್ಡ ಸೆಟ್ಟುಗಳ, ಕನಸಿನ ರಾಜ್ಯದ ಚಲನಚಿತ್ರಗಳ ನಿರ್ಮಾಪಕ, ನಿರ್ದೇಶಕರಾದ ಹೆಸರಾಂತ ವಿ. ಶಾಂತಾರಾಮ್ ಅವರ ಹೆಸರಿನ ಪ್ರಶಸ್ತಿ ತಮ್ಮ ಜೀವಿತಕಾಲದ ಸಾಧನೆಗಾಗಿ ಕೃಷ್ಣಸ್ವಾಮಿಯವರಿಗೆ ಲಭಿಸಿತ್ತು. ಹಿಂದಿನ ಶತಮಾನದ ನಲವತ್ತನೆಯ ದಶಕದಲ್ಲಿ ಹೊರದೇಶಗಳಲ್ಲಿ ಚಿತ್ರ ಜಗತ್ತಿನಲ್ಲಿ ಕೆಲಸ ಮಾಡಿದ ಸಾಧನೆ ಅವರದು. ಇಟಲಿಯ ಪ್ರಸಿದ್ಧ ನಿರ್ಮಾಪಕ ರೊಬೆರ್ಟೋ ರೊಸ್ಸೆಲಿನಿ ಮತ್ತು ಇಂಗ್ರಿಡ್ ಬೆರ್ಗ್ಮನ್ ಮುಂತಾದವರ ಜೊತೆ ಕೆಲಸ ಮಾಡಿ ಸೈ ಎನ್ನಿಸಿಕೊಂಡವರು ಅವರು. "ಓವರ್ಸಿಸ್ ಫಿಲಂ ಕ್ಲಬ್"ನ ಕಾರ್ಯದರ್ಶಿಗಳಾಗಿದ್ದರು. ಭಾರತೀಯ ಫಿಲ್ಮ್ಸ್ ಡಿವಿಷನ್. ಏನ್. ಎಫ್. ಡಿ. ಸಿ., ಸೆನ್ಸಾರ್ ಬೋರ್ಡ್ ಮತ್ತನೇಕ ಚಲನಚಿತ್ರ ಸಂಬಂಧಿತ ಸಂಸ್ಥೆಗಳಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದವರು ಅವರು. ಹಿಂದಿನ ತಲೆಮಾರಿನ ಅನೇಕ ನಿಆರ್ದೇಶಕರು ಎಂ. ವಿ. ಕೃಷ್ಣಸ್ವಾಮಿಯವರನ್ನು ತಮ್ಮ ಗುರುಗಳು ಎಂದು ತಿಳಿದಿದ್ದರು.
ಕೃಷ್ಣಸ್ವಾಮಿಯವರು ವಾಣಿಜ್ಯ ಚಿತ್ರಗಳನ್ನೂ ನಿರ್ಮಿಸಿದವರು. ವೀಣಾ ದೊರೆಸ್ವಾಮಿ ಅಯ್ಯಂಗಾರ್ ಮತ್ತು ಎಸ. ಕೃಷ್ಣಮೂರ್ತಿ ಅವರ ಅಮೋಘ ಸಂಗೀತದ ಹೆಸರಾಂತ ಚಿತ್ರ "ಸುಬ್ಬಾಶಾಸ್ತ್ರಿ" ಅವರು ನಿರ್ಮಿಸಿ ನಿರ್ದೇಶಿಸಿದ ಚಿತ್ರವೆಂದು ಅನೇಕರಿಗೆ ಗೊತ್ತಿಲ್ಲ. ಆ ಚಿತ್ರದ ಬಾಲ ಮುರಳಿ ಕೃಷ್ಣ ಅವರು ಹಾಡಿರುವ ಹಾಡುಗಳು ಈಗಲೂ ಜನಪ್ರಿಯ. ಅವರು ನಿರ್ದೇಶಿಸಿದ ಇನ್ನೊಂದು ಹೆಸರಾದ ಚಲನಚಿತ್ರ ಈ ಜೋಡಿ ಎರಡು ಜೊತೆ-ಜೊತೆ ಪದಗಳ ಹೆಸರು ಹೊಂದಿದೆ. ಅದೇ "ಪಾಪ ಪುಣ್ಯ" ಚಲನಚಿತ್ರ.
ಪ್ರೊಫೆಸರ್ ಎಂ. ವಿ. ಸೀತಾರಾಮಯ್ಯ ಅವರ ಒಂದು ನಾಟಕ "ಶ್ರೀಶೈಲ ಶಿಖರ". ಅದೊಂದು ಜಾನಪದ ಕಥೆಗಳಿಂದ ಪ್ರೇರಿತವಾದದ್ದು. ಆ ನಾಟಕದ ಆಧಾರದ ಮೇಲೆ ಈ ಚಿತ್ರ ನಿರ್ಮಿಸಿದ್ದಾರೆ. "ನಾವು ಬಂದೆವ, ನಾವು ಬಂದೆವ, ನಾವು ಬಂದೆವ ಶ್ರೀಶೈಲ ನೋಡೋದಕ್ಕ, ಸ್ವಾಮಿ ಸೇವಾ ಮಾಡಿ ಮುಂದೆ ಹೋಗೋದಕ್ಕ..." ಎನ್ನುವ ಗೀಗೀ ಪದ ಈ ಚೈತ್ರದ್ದೇ. ಅಂದಿನ ಹೆಸರಾಂತ ಕಲಾವಿದರಾದ ಕಲ್ಯಾಣ್ ಕುಮಾರ್, ಬಿ. ಸರೋಜಾ ದೇವಿ, ಕೆ. ಎಸ. ಅಶ್ವಥ್ ಮುಂತಾದವರು ಅಭಿನಯಿಸಿದ ಚಿತ್ರ ಅದು. ಯೂಟ್ಯೂಬಿನಲ್ಲಿ ಲಭ್ಯ. ಬೇಕಾದವರು ನೋಡಬಹುದು.
"ಶ್ರೀಶೈಲ ಶಿಖರಂ ದೃಷ್ಟವಾ ಪುನರ್ಜನ್ಮ ನ ವಿದ್ಯತೇ" ಎಂದೊಂದು ನಂಬಿಕೆ. ಶ್ರೀಶೈಲ ದೇವಾಲಯದ ಶಿಖರವನ್ನು ನೋಡಿದವರಿಗೆ ಮತ್ತೊಂದು ಜನ್ಮ ಇಲ್ಲ ಎಂದು ಅದರ ಅರ್ಥ. ಶ್ರೀಶೈಲಕ್ಕೆ ಹೋದವರೆಲ್ಲ ಆ ದೇವಸ್ಥಾನದ ಶಿಖರವನ್ನು ನೋಡಬಹುದು. ಪ್ರತಿ ವರ್ಷ ರಥೋತ್ಸವಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಎಲ್ಲರೂ ಆ ಶಿಖರ ನೋಡುತ್ತಾರೆ. ಅವರಿಗೆಲ್ಲರಿಗೂ ಮತ್ತೆ ಜನ್ಮ ಇಲ್ಲವೇ? ಇದೇ ಈ ಚಿತ್ರದಲ್ಲಿ ಚರ್ಚಿತವಾಗಿರುವ ಅಂಶ. ಶ್ರೀಶೈಲ ಶಿಖರ ಅಂದರೆ ಕಲ್ಲು, ಮಣ್ಣು, ಗಾರೆಗಳಿಂದ ಮಾಡಿ ನಿಲ್ಲಿಸಿರುವ ಆ ದೇವಾಲಯದ ಶಿಖರ ಅಲ್ಲ. ಶ್ರೀಶೈಲ ಶಿಖರ ಅಂದರೆ ಶ್ರೀ ಮಲ್ಲಿಕಾರ್ಜುನನ ಹೃದಯ. ತನ್ನ ಸಾಧನೆಯಿಂದ, ಅಂದರೆ ಸರಿಯಾದ ಜೀವನ ನಡೆಸಿದ ಕೆಲವರು ಮಾತ್ರ ಆ ಶಿಖರದಲ್ಲಿ ಅವನ ಹೃದಯವನ್ನು ನೋಡುತ್ತಾರೆ. ಅವರು ಮಾತ್ರ ಪರಮಪದ ಹೊಂದುತ್ತಾರೆ ಎಂದು ಅದರ ಭಾವಾರ್ಥ
Sunday, November 5, 2023
"ವೃದ್ಧಾಪ್ಯ"ದಲ್ಲಿ "ಜೀವನ"ದ "ಆನಂದ"
ಪಾಪ, ಪುಣ್ಯ ಮತ್ತು ವೃದ್ಧಾಪ್ಯ:
ಮನುಷ್ಯನಿಗೆ ಒಂದು ಹಣ್ಣು ಬೇಕಾದರೆ ಅದರ ಸಸಿಯನ್ನು ನೆಟ್ಟು, ಮರವಾಗಿ ಬೆಳೆಸಿ, ಫಲಾಗಮನದ ಸಮಯ ಕಾದು ಅದರ ಹಣ್ಣು ಪಡೆಯಬೇಕು. ನೆನೆಸಿದ ತಕ್ಷಣ ಅದು ಸಿಗುವುದಿಲ್ಲ. ಈಗಲೇ ಹಣ್ಣು ಬೇಕಾದರೆ ಹಿಂದೆಂದೋ ನೆಟ್ಟು ಬೆಳೆಸಿದ ಮರದಿಂದ ಪಡೆಯಬಹುದು. ಅದೂ ಹಿಂದೆಂದೋ ಮರ ಬೆಳೆಸಿದ್ದರೆ ಮಾತ್ರ. ಇಲ್ಲದಿದ್ದರೆ ಇಲ್ಲ. ಅಂತೆಯೇ ಒಂದು ಮರವನ್ನು ನೆಟ್ಟು ಬೆಳೆಸಿದರೆ ಅದು ಹಣ್ಣನ್ನು ಕೊಟ್ಟೇ ಕೊಡುತ್ತದೆ. ಕೆಲವಂತೂ ಹೆಚ್ಚು ಆರೈಕೆ ಇಲ್ಲದಿದ್ದರೂ ಧಾರಾಳವಾಗಿ ಹಣ್ಣು ಕೊಡುತ್ತವೆ. ಮರ ಬೆಳಸಿಯಾದ ಮೇಲೆ ಹಣ್ಣು ಬರಬಾರದು ಎನ್ನುವಂತಿಲ್ಲ. ಹಣ್ಣು ಕೊಡುವುದು ಅದರ ಸಹಜ ವೃತ್ತಿ. ಅದರ ಕೆಲಸ ಅದು ಮಾಡುತ್ತದೆ.
ಪಾಪ ಮತ್ತು ಪುಣ್ಯಗಳು ಒಂದು ರೀತಿಯಲ್ಲಿ ಮರಗಳಿದ್ದಂತೆ. ಮರಗಳನ್ನು ನೆಟ್ಟು ಬೆಳಸಬೇಕು. ಪಾಪ ಮತ್ತು ಪುಣ್ಯ ಎಂಬ ಎರಡು ಮರಗಳು ಮನುಷ್ಯನ ಜೊತೆಯಲ್ಲಿಯೇ ಹುಟ್ಟುತ್ತವೆ. ನಮ್ಮ ಪ್ರತಿಯೊಂದು ಕ್ರಿಯೆಯೂ ಅವುಗಳ ಗೊಬ್ಬರ, ನೀರಾಗಿ ಅವನ್ನು ಬೆಳೆಸುತ್ತವೆ. ನಮ್ಮ ಪ್ರಯತ್ನ ಏನೂ ಬೇಕಿಲ್ಲ. ಕೆಲಸ ಮಾಡಿದವನಿಗೆ ಕೂಲಿ ಸಿಕ್ಕಂತೆ ಪ್ರತಿಫಲವೂ ಸಿಕ್ಕಿಯೇ ಸಿಗುತ್ತದೆ. ಕೆಲಸ ಮಾಡಿ ಕೂಲಿ ಕೊಡುವುದರ ಮುಂಚೆ ಓಡಿಹೋಗಬಹುದು. ಆದರೆ ಇಲ್ಲಿ ಅದೂ ಸಾಧ್ಯವಿಲ್ಲ. ಕೆಲಸಗಾರನನ್ನು ಅಟ್ಟಿಸಿಕೊಂಡು ಬಂದು ಕೂಲಿ ಸೇರುತ್ತದೆ!
ಬೇರೆ ಹಣ್ಣುಗಳಿಗೂ ಪಾಪ, ಪುಣ್ಯಗಳಿಗೂ ಒಂದು ಮುಖ್ಯ ವ್ಯತ್ಯಾಸ ಉಂಟು. ನಮಗೆ ಯಾವುದೋ ಹಣ್ಣು ಬೇಕಾದಾಗ ಬೆಳದವರಿಂದಲೋ, ಆಂಗಡಿಯಿಂದಲೋ ಪಡೆಯಬಹುದು. ನಮ್ಮಲ್ಲಿ ಹಣ್ಣು ಹೆಚ್ಚಿದ್ದಾಗ ಬೇರೆಯವರಿಗೆ ಕೊಡಬಹುದು. ಆದರೆ ಪಾಪ, ಪುಣ್ಯಗಳ ಹಣ್ಣುಗಳ ವಿಷಯದಲ್ಲಿ ಇದು ಸಾಧ್ಯವಿಲ್ಲ. ನಾವು ಕೃಷಿ ಮಾಡಿದ ಹಣ್ಣುಗಳನ್ನು ಬೇರೆಯವರಿಗೆ ಕೊಡುವಹಾಗಿಲ್ಲ. ಬೇರೆಯವರ ಸಾಗುವಳಿಯ ಪದಾರ್ಥ ನಾವು ಪಡೆಯುವಹಾಗಿಲ್ಲ. ಅವರವರ ಬೆಳೆಯ ಫಸಲನ್ನು ಅವರವರೇ ತಿನ್ನಬೇಕು. ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ.
ಈ ಹಿನ್ನೆಲೆಯಲ್ಲಿ ಮನುಷ್ಯನಿಗೆ ಏನು ಬೇಕು, ಏನು ಬೇಡ ಎನ್ನುವುದರ ಬಗ್ಗೆ ಮಹಾಭಾರತದಲ್ಲಿ ಒಂದು ಸೊಗಸಾದ ಶ್ಲೋಕವಿದೆ:
ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನ ಇಚ್ಛಂತಿ ಮಾನವಾ:। ನ ಪಾಪ ಫಲಮಿಚ್ಛ೦ತಿ ಪಾಪಂ ಕುರ್ವoತಿ ಯತ್ನತಃ ।।
"ಮನುಷ್ಯರಿಗೆ ಪುಣ್ಯ ಎನ್ನುವ ಮರ ಬೇಡ. ಆ ಮರವನ್ನು ಬೆಳೆಸುವುದಿಲ್ಲ. ಆದರೆ ಆ ಮರದ ಹಣ್ಣು ಬೇಕು. ಪಾಪ ಎನ್ನುವ ಮರದ ಹಣ್ಣು ಖಂಡಿತಾ ಬೇಡ. ಆದರೆ ಬಹಳ ಕಷ್ಟ ಪಟ್ಟು ಪಾಪದ ಮರವನ್ನು ಬೆಳೆಸುತ್ತಾರೆ!"
ವೃದ್ಧಾಪ್ಯ ಬೇಡ; ಆದರೆ ಬಂದೇ ಬರುತ್ತದೆ!
ವೃದ್ಧಾಪ್ಯ ವರವೆಂದು ಹೇಳುವವರು ಯಾರೂ ಕಾಣರು. ವೃದ್ಧಾಪ್ಯ ಶಾಪವೆಂದು ಹೇಳುವವರು ಬಹಳ ಮಂದಿ. ತಮಾಷೆಯ ವಿಷಯವೆಂದರೆ ಎಲ್ಲರಿಗೂ ದೀರ್ಘಾಯಸ್ಸು ಬೇಕು. ಆದರೆ ವೃದ್ಧಾಪ್ಯ ಬೇಡ. ತಿಳುವಳಿಕೆ ಬಂದನಂತರ (ಅಥವಾ ತಿಳುವಳಿಕೆ ಬರುವ ವಯಸ್ಸು ಬಂದ ಮೇಲೆ. ಏಕೆಂದರೆ ಎಲ್ಲರಿಗೂ ತಿಳುವಳಿಕೆ ಬಂದೇ ಬರುತ್ತದೆ ಎಂದು ಹೇಳುವ ಹಾಗಿಲ್ಲ.) ಮನುಷ್ಯನನ್ನು ಕಾಡುವ ಎರಡು ಆಶೆಗಳು ಉಂಟು- ಧನದಾಶೆ ಮತ್ತು ಜೀವಿತದ ಆಶೆ (ಧನಾಶಾ ಜೀವಿತಾಶಾ ಚ). ಹಣ ಸಂಪಾದನೆ ಮಾಡುವ ಆಸೆ ಮತ್ತು ಚಿರಕಾಲ ಬದುಕುವ ಆಸೆ. ತುಂಬಾ ದಿನ ಬದುಕಿರಬೇಕು. ವೃದ್ಧಾಪ್ಯ ಬರಬಾರದು! ಚಿರಂಜೀವಿಯಾದರೆ ಇನ್ನೂ ಒಳ್ಳೆಯದು. ಆದರೆ ಅದು ಸಾಧ್ಯವಿಲ್ಲವಲ್ಲ!