Showing posts with label ananda. Show all posts
Showing posts with label ananda. Show all posts

Friday, December 19, 2025

ನಿರಂಜನ


ಕಳೆದ ತಿಂಗಳಿನ ಒಂದು ಸಂಚಿಕೆಯಲ್ಲಿ "ರಾಗಿ ಮೂಟೆಯ ಮೇಲೆ ಸಾವೇರಿ ರಾಗ" ಅನ್ನುವ ಶಿರೋನಾಮೆಯಡಿಯಲ್ಲಿ ನಮ್ಮ ನಾಡಿನ ಹೆಮ್ಮೆಯ ಸಂಗೀತ ವಿದ್ವಾಂಸರು ಮತ್ತು ಗಾಯಕರಲ್ಲಿ ಒಬ್ಬರಾದ ಭೈರವಿ ಕೆಂಪೇಗೌಡ ಅವರನ್ನು ಕುರಿತು ಕೆಲವು ಸಂಗತಿಗಳನ್ನು ನೋಡಿದ್ದೆವು. ಇದರಲ್ಲಿ ಬೆಂಗಳೂರಿನ ಬದಲಾದ ರೂಪದ ಬಗ್ಗೆ ಕೆಲವು ವಿಷಯಗಳನ್ನು ನೆನಪಿಸಿಕೊಂಡಿದ್ದೆವು. ಈ ಕುರಿತ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಅಲ್ಲಿ ನೋಡಿದ ವಿವರಗಳಲ್ಲಿ ಪ್ರಾಸ್ತಾವಿಕವಾಗಿ "ಧರ್ಮಾ೦ಬುಧಿ ಕೆರೆ" ಎನ್ನುವ ಹೆಸರು ಬಂದಿತ್ತು. ನಗರದ ಮಧ್ಯೆ ಇದ್ದ ಒಂದು ಸುಂದರ ಕೆರೆ ಅದು.  ಅದರ ನೀರು ಕುಡಿದು ಬೆಳೆದ ನಾವು ಕಡೆಗೆ ನಮ್ಮ ನಗರೀಕರಣದ ಪಿಶಾಚಿಯ ಪ್ರೀತಿಗಾಗಿ ಅದನ್ನೇ ನುಂಗಿ ನೀರು ಕುಡಿದಿದ್ದೇವೆ. ಈಗ ಆ ಕೆರೆ ಇತ್ತು ಅನ್ನುವ ಕುರುಹೂ ಉಳಿದಿಲ್ಲ. ಒಂದು ಕಾಲದಲ್ಲಿ ಅದಕ್ಕೆ ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ನೆನಪಿನಲ್ಲಿ "ಸುಭಾಷ್ ನಗರ" ಅನ್ನುವ ಹೆಸರಿತ್ತು. ಕೆರೆಯಲ್ಲಿ ನೀರು ನಿಲ್ಲುವುದು ತಪ್ಪಿದ ಮೇಲೆ ಅದಕ್ಕೆ "ಸುಭಾಷ್ ನಗರ ಕೆರೆಯ ಅಂಗಳ" ಅನ್ನುತ್ತಿದ್ದರು. ವೃತ್ತಿ ನಾಟಕರಂಗದ ಮರೆಯಲಾಗದ ತಂಡ "ಹಿರಣ್ಣಯ್ಯ ಮಿತ್ರ ಮಂಡಳಿ" ಅವರ ಪ್ರಸಿದ್ಧ ನಾಟಕಗಳಾದ "ದೇವದಾಸಿ", "ಸದಾರಮೆ", "ಲಂಚಾವತಾರ" ಮತ್ತು ಇತರ ನಾಟಕಗಳು ಇಲ್ಲಿಯೇ ನಡೆಯುತ್ತಿದ್ದವು. ಈಗ ಅವೆಲ್ಲಾ ನೆನಪು ಮಾತ್ರ. ಇನ್ನು ಕೆಲವೇ ವರ್ಷಗಳಲ್ಲಿ ಅದನ್ನು ನೆನಪಿಸಿಕೊಳ್ಳುವ ತಲೆಮಾರೂ ಇಲ್ಲವಾಗುತ್ತದೆ. 

ಈ ಸುಭಾಷ್ ನಗರ ಕೆರೆಯ ಅಂಗಳದಲ್ಲಿ ಪ್ರತಿವರ್ಷ "ಕಾಂಗ್ರೆಸ್ ವಸ್ತುಪ್ರದರ್ಶನ" ಏರ್ಪಡುತ್ತಿತ್ತು. ವಸ್ತು ಪ್ರದರ್ಶನಕ್ಕೆ ನೋಡಲು ಬಂದ ಜನಜಂಗುಳಿಯಲ್ಲಿ ಕೆಲವರು, ವಿಶೇಷವಾಗಿ ಮಕ್ಕಳು, ತಪ್ಪಿಸಿಕೊಳ್ಳುವುದು ನಡೆಯುತ್ತಿತ್ತು. ವಸ್ತುಪ್ರದರ್ಶನದಲ್ಲಿ ಒಂದು "ಪೊಲೀಸ್ ಔಟ್ ಪೋಸ್ಟ್" ಕೂಡ ಇದ್ದು ಹೀಗೆ ತಪ್ಪಿಸಿಕೊಂಡವರು ಮತ್ತು ಕಳೆದು ಹೋದ ಮತ್ತು ಸಿಕ್ಕಿದ ವಸ್ತುಗಳ ಬಗ್ಗೆ ಆಗಾಗ ಧನಿವರ್ಧಕಗಳ ಮೂಲಕ ಪ್ರಕಟಿಸುತ್ತಿದ್ದರು. ಟಿವಿ ಇಲ್ಲದ ಕಾಲದಲ್ಲಿ ಕುಟುಂಬದ ಸದಸ್ಯರು ಒಟ್ಟಾಗಿ ಒಂದು ಸಂಜೆ ಕಳೆಯಲು ಈ ವಸ್ತುಪ್ರದರ್ಶನ ಸಹಕಾರಿಯಾಗಿತ್ತು. 

ಈಗ ಸುಭಾಷ್ ನಗರ ಅನ್ನುವ ಹೆಸರೇ ಕೇಳಿಬರುವುದಿಲ್ಲ. ದೊಡ್ಡ ಬಸ್ ನಿಲ್ದಾಣ ತಲೆಯೆತ್ತಿ ನಿಂತಿದೆ. ಸುಭಾಷ್ ನಗರ ಮರೆಯಾದರೂ ಹತ್ತಿರವಿದ್ದ "ಮೆಜೆಸ್ಟಿಕ್" ಚಿತ್ರಮಂದಿರದ ಹೆಸರನ್ನು ಜನ ಮರೆತಿಲ್ಲ. ಆ ಸುತ್ತಮುತ್ತಲಿನ ಪ್ರದೇಶಕ್ಕೆ ಈಗಲೂ "ಮೆಜೆಸ್ಟಿಕ್" ಏರಿಯಾ ಅನ್ನುವುದು ನಡೆದೇ ಇದೆ. 

*****

ಹಳ್ಳಿಗಳಲ್ಲಿ ಜನಗಳು ತಪ್ಪಿಸಿಕೊಳ್ಳುವುದು ನಡೆಯದಿದ್ದರೂ ಜಾನುವಾರುಗಳು (ದನಗಳು) ತಪ್ಪಿಸಿಕೊಳ್ಳುವುದು ಅಲ್ಲಲ್ಲಿ ಆಗಾಗ ನಡೆಯುತ್ತಿತ್ತು. ಈಗಿನಂತೆ ಹಳ್ಳಿಗಳಲ್ಲಿ ಆಗ ಹೆಚ್ಚಾಗಿ ರಸ್ತೆಗಳಿರಲ್ಲ. ಮೋಟಾರ್ ಸೈಕಲ್ಗಳಲ್ಲಿ ಓಡಾಡುವವರಿರಲಿಲ್ಲ. ಜಮೀನಿನಲ್ಲಿ ಬೆಳೆ ತೆಗೆಯುವುದರ ಜೊತೆಗೆ ರೈತರ ಜೀವನದ ಮುಖ್ಯ ಭಾಗ "ಹೈನುಗಾರಿಕೆ" ಆಗಿತ್ತು. (ಹಯನು ಅಂದರೆ ಹಾಲು ಕರೆಯುತ್ತಿರುವ ಪ್ರಾಣಿ. ಮುಖ್ಯವಾಗಿ ಹಸು. ಬರಡು ಹಸು ಅಂದರೆ ಹಾಲು ಕೊಡದಿರುವ ಹಸು. "ನೀನೊಲಿದರೆ ಬರಡು ಹಯನಹುದಯ್ಯ" ಎನ್ನುವ ಶರಣರ ವಚನವನ್ನು ನೆನಪಿಸಿಕೊಳ್ಳಬಹುದು). ತಮ್ಮ ಕುಟುಂಬದ ಹಾಲು, ಮೊಸರು, ಮಜ್ಜಿಗೆ, ತುಪ್ಪ ಇವುಗಳ ಪೂರೈಕೆಗಲ್ಲದೇ ಹತ್ತಿರದ ಪಟ್ಟಣಗಳಿಗೆ ಹೆಚ್ಚಿನ ಈ ಪದಾರ್ಥಗಳನ್ನು ಸರಬರಾಜು ಮಾಡುವುದರಿಂದ ರೈತಾಪಿ ಜನ ಕೆಲವು ಪುಡಿಗಾಸು ಸಂಪಾದಿಸುತ್ತಿದ್ದರು. ಹೀಗೆ ತಮ್ಮ ಜೀವನಕ್ಕೆ ಆಧಾರವಾಗಿದ್ದ ಹಸುಗಳು ಕಳೆದುಹೋದರೆ ರೈತರಿಗೆ ಬಲು ಕಷ್ಟ. ಇವುಗಳ ಜೊತೆ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಜನ ಕೆಲವು ಬೆಲೆ ಬಾಳುವ ಅವಶ್ಯಕ ಪದಾರ್ಥಗಳನ್ನು ಆಗಾಗ ಕಳೆದುಕೊಳ್ಳುತ್ತಿದ್ದರು. 

ಹುಲ್ಲು ಮೇಯಲು ಹೊರಗಡೆ ಹೋದ ದನಗಳು ಅಲ್ಲಿ-ಇಲ್ಲಿ ಕಂಡ ಹುಲುಸಾದ ಹಸಿರು ಪೈರಿನ ಆಸೆಯಲ್ಲಿ ಅವರಿವರ ಹೊಲ, ತೋಟಗಳಿಗೆ ನುಗ್ಗಿ ಪೈರುಗಳನ್ನು ತಿನ್ನುವುದು ಕೆಲವೊಮ್ಮೆ ನಡೆಯುತ್ತಿತ್ತು. ಆ ಜಮೀನಿನ ಮಾಲೀಕರಿಗೆ ಅವು ಯಾರ ದನಗಳು ಎಂದು ಗೊತ್ತಾಗುತ್ತಿರಲಿಲ್ಲ. ಮೇಲಾಗಿ, ತಮ್ಮ ಹೊಲಗಳ ಪೈರು ತಿಂದ ದನಗಳ ಮೇಲೆ ಅವರಿಗೆ ಸಹಜವಾಗಿಯೇ ಸ್ವಲ್ಪ ಅಸಹನೆ ಇರುತ್ತ್ತಿತ್ತು. ಪುರಸಭೆಗಳು ಅಲ್ಲಲ್ಲಿ "ತೊಂಡಿನ ಮನೆ" ಎನ್ನುವ ವ್ಯವಸ್ಥೆ ಮಾಡಿರುತ್ತಿದ್ದರು. ಅವು ಹೆಸರಿಗೆ ಮನೆ. ವಾಸ್ತವವಾಗಿ ನಾಲ್ಕು ಗೋಡೆಗಳು ಮತ್ತು ಒಂದು ಬಾಗಿಲು ಇದ್ದು ಬೀಗ ಹಾಕುವ ವ್ಯವಸ್ಥೆ ಇರುತ್ತಿತ್ತು. ದನಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಇರುತ್ತಿತ್ತು. "ತೊಂಡು" ಅನ್ನುವ ಪದಕ್ಕೆ "ದಾರಿ ತಪ್ಪಿದ", "ಹೇಳುವವರು-ಕೇಳುವವರು ಇಲ್ಲದ" ಅಥವಾ "ಅಂಕೆಯಿಲ್ಲದ" ಎಂದು ಅರ್ಥ. ಇಂಗ್ಲೀಷಿನಲ್ಲಿ "ವೈಲ್ಡ್" ಅಥವಾ "ಆನ್-ಕಂಟ್ರೊಲ್ಡ್" ಎನ್ನಬಹುದು. ಯಾರಾದರೂ ಹುಡುಗರು ಮನೆಯಲ್ಲಿ ಹೇಳಿದ ಮಾತು ಕೇಳದಿದ್ದರೆ "ಇವನೇನು, ತೊಂಡು ಬಿದ್ದಿದ್ದಾನೆ" ಎಂದು ಗದರುತ್ತಿದ್ದರು. 

ಜಮೀನಿನ ಮಾಲೀಕರು ತಮ್ಮ ಭೂಮಿಗೆ ನುಗ್ಗಿದ ಹಸುಗಳನ್ನು ಹೊಡೆದುಕೊಂಡು ಹೋಗಿ ತೊಂಡಿನ ಮನೆಗೆ ದಬ್ಬುತ್ತಿದ್ದರು. ದನ ಕಳೆದುಕೊಂಡವರು ಮೊದಲು ತೊಂಡಿನ ಮನೆಗೆ ಹೋಗಿನೋಡಿ, ತಮ್ಮ ಹುಸುಗಳು ಅಲ್ಲಿದ್ದರೆ ಪುರಸಭೆಗೆ ದಂಡ ಕಟ್ಟಿ ಅವನ್ನು ಬಿಡಿಸಿಕೊಂಡು ತಮ್ಮೊಡನೆ ಕರೆದೊಯ್ಯುತ್ತಿದ್ದರು. ಅಲ್ಲಿಯೂ ತಮ್ಮ ಹಸುಗಳು ಇಲ್ಲದಿದ್ದರೆ ಹುಡುಕುವ ಕೆಲಸ ನಡೆಯುತ್ತಿತ್ತು. 

ಹೀಗೆ ಕಳೆದುಹೋದ ಜಾನುವಾರು ಮತ್ತು ಪದಾರ್ಥಗಳನ್ನು ಹಿಂಪಡೆಯಲು ಸಾಮಾನ್ಯವಾಗಿ ಮೊದಲು ಮಾಡುತ್ತಿದ್ದ ಕೆಲಸ "ಶಾಸ್ತ್ರ ಕೇಳುವುದು". ಅಲ್ಲಲ್ಲಿ ಇದ್ದ ಜೋಯಿಸರು, ಅಯ್ಯನೋರು, ಶಾಸ್ತ್ರಿಗಳು ಮುಂತಾದವರ ಬಳಿ ಹೋಗುವುದು. ಅವರ ಬತ್ತಳಿಕೆಯಲ್ಲಿ ಅನೇಕ ಉಪಾಯಗಳಿದ್ದವು. ಪ್ರಶ್ನೆ ಕೇಳುವುದು, "ಕವಡೆ ಶಾಸ್ತ್ರ", ಚೀಟಿ ಎತ್ತುವುದು ಮುಂತಾದುವು. ಹೀಗೆ ಮಾಡಿ "ನಿಮ್ಮ ಹಸು ಉತ್ತರ ದಿಕ್ಕಿನಲ್ಲಿ ಇದೆ. ಅಲ್ಲಿ ಹುಡುಕಿ" ಮುಂತಾಗಿ ಅವರು ಹೇಳುತ್ತಿದ್ದರು. ಕೆಲವೊಮ್ಮೆ "ಏನೂ ಮಾಡಬೇಡಿ. ಅದೇ ನಿಮ್ಮ ಮನೆಯ ಮುಂದೆ ಬಂದು ನಿಲ್ಲುತ್ತದೆ" ಎಂದೂ ಹೇಳಬಹುದಿತ್ತು. ಇವು ನಿಜವಾದಷ್ಟೂ ಆಯಾ ಶಾಸ್ತ್ರ ಹೇಳುವವರಿಗೆ ಬೆಲೆ ಹೆಚ್ಚುತ್ತಿತ್ತು. 

*****

ಬೆಲೆಬಾಳುವ ವಸ್ತುಗಳು ಕಳೆದು ಹೋದಾಗ ಕಳವಳ ಮತ್ತಷ್ಟು ಹೆಚ್ಚುತ್ತಿತ್ತು. ಹೊಟ್ಟೆ-ಬಟ್ಟೆ ಕಟ್ಟಿ ಆಸೆಯಿಂದ ಸಂಪಾಸಿದ ಬೆಳ್ಳಿ-ಬಂಗಾರದ ಒಡವೆಗಳು ಮುಂತಾದವು ಹೀಗೆ ಕಳೆದುಹೋದರೆ ಅಥವಾ ಕಳವಾದರೆ ಸಹಜವಾದ ನೋವು ಇರುತ್ತಿತ್ತು. ಇವು ದನಗಳನ್ನು ಹುಡುಕಿದಂತೆ ಅಲ್ಲ. ಕವಡೆ ಶಾಸ್ತ್ರ ಮುಂತಾದುವು ಇವುಗಳ ಹುಡುಕುವಿಕೆಗೆ ಸಾಲವು. ಆಗ ಜನಗಳು "ಅಂಜನ" ಹಾಕುವವರ ಮೊರೆಹೋಗುತ್ತಿದ್ದರು. 

ಅಂಜನ ಹಾಕುವವರು ತಮ್ಮ ಬಳಿ ಬಂದವರ ಸಮಸ್ಯೆ ವಿಚಾರಿಸಿ ಅಂಜನ ಹಾಕುತ್ತಿದ್ದರು. "ಅಂಜನ ಹಾಕುವುದು" ಎಂದರೇನು? ಒಂದು ಇಷ್ಟದೈವದ ಪೂಜೆ ಮಾಡುವುದು. ನಂತರ ಒಂದು ಹರಿವಾಣದಲ್ಲಿ (ತಟ್ಟೆ ಅಥವಾ ಬಾಂಡಲೆ) ತಿಳಿಯಾದ ಎಣ್ಣೆ ತುಂಬಿಸುವುದು. ತಮ್ಮ ಬಳಿ ಇರುವ ಕಾಡಿಗೆಯಂತಹ ಒಂದು ಮುಲಾಮು ಕಣ್ಣಿಗೆ ಹಚ್ಚಿಕೊಳ್ಳುವುದು. ನಂತರ ಬಂದವರನ್ನು ಪ್ರಶ್ನೆ ಕೇಳುತ್ತಾ ಆ ಎಣ್ಣೆಯಲ್ಲಿ ನೋಡುತ್ತಾ ಹೋಗುವುದು. ಹೀಗೆ ನೋಡುತ್ತಿರುವಾಗ ಕಳೆದಿರುವ ಪದಾರ್ಥ ಎಲ್ಲಿದೆ ಎಂದು ಅವರಿಗೆ ಕಾಣುವುದು. ಕಂಡದ್ದನ್ನು ಬಂದವರಿಗೆ ಹೇಳುವುದು. ಈ ಸುಳಿವಿನ ಮೇರೆಗೆ ಅವರು ತಮ್ಮ ಹುಡುಕಾಟ ಮುಂದುವರೆಸುವುದು. ಹೀಗೆ ವ್ಯವಸ್ಥೆ. 

ಇದು ನಿಜವೇ? ಹೀಗೆ ಕಾಣಿಸುತ್ತದೆಯೇ? ಈ ರೀತಿಯ ಪ್ರಶ್ನೆಗಳು ಬರುತ್ತವೆ. ಇವೆಲ್ಲಾ ಅವರವರ ನಂಬಿಕೆಯ ಸಮಾಚಾರ. ಹೀಗೆ ಅಂಜನ ಹಾಕಿ ಕೇಳಿ ಪದಾರ್ಥಗಳು ಸಿಕ್ಕಿದ್ದೂ ಉಂಟು. ಸಿಗದಿದ್ದದ್ದೂ ಉಂಟು. ಸಿಕ್ಕಿದ್ದು ಕಾಕತಾಳೀಯ ನ್ಯಾಯ ಇರುವಂತೆ ಇರಬಹುದು. (ಒಬ್ಬ ವ್ಯಕ್ತಿ ಒಂದು ತಾಳೆಯ ಮರದ ಕೆಳಗೆ ಹೋಗಿ ಕುಳಿತುಕೊಂಡ. ಅದೇ ಸಮಯಕ್ಕೆ ಒಂದು ಕಾಗೆ ಆ ಮರದ ಮೇಲೆ ಬಂದು ಕುಳಿತುಕೊಂಡಿತು. ಮರ ಅವನ ಮೇಲೆ ಬಿದ್ದಿತು. ಕಾಗೆಯ ಭಾರಕ್ಕೆ ಮರ ಮುರಿದು ಅವನ ಮೇಲೆ ಬಿತ್ತು ಎನ್ನುವುದು ಕಾಕ-ತಾಳೀಯ ನ್ಯಾಯ ಎಂದು ಹೇಳುವುದು. ಇಂಗ್ಲೀಷಿನಲ್ಲಿ coincidence ಅನ್ನಬಹುದು). ಏನಾದರೂ ಮಾಡಿ ಬೆಲೆಬಾಳುವ ವಸ್ತು ಮರಳಿ ಪಡೆಯಬೇಕೆಂಬ ಆಸೆ ಇರುವ ವ್ಯಕ್ತಿ ಏನು ಬೇಕಾದರೂ ಮಾಡುತ್ತಾನೆ. ಇದು ಮನುಷ್ಯ ಸಹಜ ವ್ಯವಹಾರ. 

*****

ವಿದ್ಯಾರ್ಥಿಗಳಿಗೆ ವಿಜ್ಞಾನದ ತರಗತಿಗಳಲ್ಲಿ, ವಿಶೇಷವಾಗಿ ರಸಾಯನ ಶಾಸ್ತ್ರ ಕಲಿಸುವ ಸಂದರ್ಭದಲ್ಲಿ, ಆಮ್ಲಜನಕ (oxygen) ತಯಾರಿಸುವುದನ್ನು ಕಲಿಸುತ್ತಾರೆ. ಇದಕ್ಕೆ ಅನೇಕ ವಿಧಾನಗಳಿವೆ. (ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಹೈಡ್ರೋಜನ್ ಪರಾಕ್ಸೈಡ್ ಉಪಯೋಗಿಸುವುದು ಒಂದು ವಿಧಾನ). ಸಾಮಾನ್ಯವಾಗಿ ಪೊಟ್ಯಾಸಿಯಂ ಕ್ಲೋರೇಟ್ (Potassium Chlorate - KClO3)) ಹೆಸರಿನ ರಾಸಾಯನಿಕ ಪುಡಿಯನ್ನು ಕಾಯಿಸಿದರೆ ಅದು ಪೊಟ್ಯಾಸಿಯಂ ಕ್ಲೋರೈಡ್ (KCl) ಆಗಿ ರೂಪಾಂತರಗೊಂಡು ಆಮ್ಲಜನಕ (O2) ಬಿಡುಗಡೆ ಆಗುತ್ತದೆ. ಆದರೆ ಈ ಕ್ರಿಯೆ ಬಹಳ ನಿಧಾನ. ಇದು ಬೇಗ ಆಗುವುದಕ್ಕೆ ಪೊಟ್ಯಾಸಿಯಂ ಕ್ಲೋರೇಟ್ ಜೊತೆಗೆ ಸ್ವಲ್ಪ ಮ್ಯಾಂಗನೀಸ್ ಡೈ ಆಕ್ಸೈಡ್ (Mn O2) ಬೆರೆಸುತ್ತಾರೆ. ಹೀಗೆ ಮಾಡುವುದರಿಂದ ಆಮ್ಲಜನಕ ಬೇಗ ಬಿಡುಗಡೆ ಆಗುತ್ತದೆ. ಈ ಮ್ಯಾಂಗನೀಸ್ ಡೈ ಆಕ್ಸೈಡ್ ಅನ್ನುವುದು ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಅದರ ಇರುವುಕೆ ಆಗಬೇಕಾದ ಕೆಲಸವನ್ನು ಬೇಗ ನಡೆಯುವಂತೆ ಮಾಡುತ್ತದೆ.

ಕ್ರೀಡಾಂಗಣಗಳಲ್ಲಿ ಭಾಗವಹಿಸುವ ಆಟಗಾರರಂತೆ ಅವರ ಸಮರ್ಥಕರೂ, ಅಭಿಮಾನಿಗಳೂ, ಸಾಮಾನ್ಯ ಪ್ರೇಕ್ಷಕರೂ ಸೇರಿರುತ್ತಾರೆ. "ಹೊಡಿ, ಹಿಡಿ, ನುಗ್ಗು, ಓಡು, ಎಗರು" ಮುಂತಾಗಿ ಆಟಗಾರರನ್ನು ಅವರು ಹುರಿದುಂಬಿಸುತ್ತಾರೆ. ಆಡುವವರು, ಗೆಲ್ಲುವವರು ಮತ್ತು ಸೋಲುವವರು ಆಟಗಾರರೇ. ಪ್ರೇಕ್ಷಕರಿಗೆ ಅದರಿಂದ ನೋಡಿದ ಸಂತೋಷ ಅಷ್ಟೇ. ಬಹುಮಾನ, ಮನ್ನಣೆ, ಟ್ರೋಫಿ, ಹಣ, ಇವು ಯಾವುವೂ ಪ್ರೇಕ್ಷಕರಿಗೆ ಸಿಗುವುದಿಲ್ಲ. ಅವೆಲ್ಲಾ ಆಟಗಾರರಿಗೆ ಮಾತ್ರ. ಆದರೂ ಕ್ರೀಡಾಂಗಣ ಪ್ರೇಕ್ಷಕರಿಲ್ಲದೆ ಕೋವಿಡ್ ಮಾರಿಯ ಸಮಯದಂತೆ ಬರಿದಾಗಿದ್ದರೆ ಆಟಗಾರರಿಗೆ ಎಲ್ಲ ನೀರಸವಾಗುತ್ತದೆ. 

ಇದು ನಾನ್-ಸ್ಟಿಕ್ ಪಾತ್ರೆಗಳ ಯುಗ. ಸೌದೆ ಒಲೆಯ ಮಸಿಯಿಲ್ಲ. ಎಣ್ಣೆಯ ಜಿಡ್ಡಿಲ್ಲ. ತಂಗಳಿನ ವಾಸನೆಯಿಲ್ಲ. ಸುಮ್ಮನೆ ಸ್ವಲ್ಪ ನೀರು ಹಾಕಿ ಒರೆಸಿದರೆ ಆಯಿತು. ಹಿಂದಿನ ದಿನಗಳಂತೆ ತಿಕ್ಕಿ-ತಿಕ್ಕಿ ತೊಳೆಯುವ ಕೆಲಸವಿಲ್ಲ. ತೊಳೆದರೂ ಮಸಿ ಉಳಿಯಿತೆಂಬ ಕಸಿವಿಸಿ ಇಲ್ಲ. ಮತ್ಯಾರೋ ಏನಾದರೂ ಅನ್ನುತ್ತಾರೆ ಅನ್ನುವ ಅಳುಕಿಲ್ಲ. 
***** 

ಪರಮಾತ್ಮನನ್ನು ಅನೇಕ ಹೆಸರುಗಳಿಂದ ಕರೆಯುತ್ತೇವೆ. ಅವುಗಳಲ್ಲಿ "ನಿರಂಜನ" ಅನ್ನುವುದೂ ಒಂದು. ಹೀಗೆ ನಿರಂಜನ ಎಂದು ಕರೆಯುವುದರ ಕಾರಣವೇನು? 

"ಅಂಜನ" ಅಂದರೆ ಏನು ಅನ್ನುವುದರ ವಿವರವನ್ನು ಮೇಲೆ ನೋಡಿದೆವು. ಅಂಜನ ಹಾಕುವವರು ಕಣ್ಣಿಗೆ ಹಚ್ಚಿಕೊಳ್ಳುವ ಮುಲಾಮಿನಂತಹ ವಸ್ತುವಿಗೆ ಅಂಜನ ಎನ್ನುವುದೇಕೆ? ಅದು ಕಣ್ಣಿಗೆ ಅಂಟಿಕೊಂಡು ಕೂಡುತ್ತದೆ. "ಅಂಜನ" ಪದಕ್ಕೆ "ಅಂಟಿಕೊಳ್ಳುವುದು" ಎಂದು ಅರ್ಥ. 

ಅಂಟಿಕೊಳ್ಳುವ ಪದಾರ್ಥ ಅಂಜನ ಎಂದಾದರೆ ಅಂಟಿಕೊಳ್ಳದ ವಸ್ತು "ನಿರಂಜನ". ಆದ್ದರಿಂದ ಪರಮಾತ್ಮನು "ನಿರಂಜನ". 

ಆಮ್ಲಜನಕದ ತಯಾರಿಕೆಯಲ್ಲಿ ಉಪಯೋಗಿಸುವ ಮ್ಯಾಂಗನೀಸ್ ಡೈ ಆಕ್ಸೈಡ್ ಎಂಬ ವಸ್ತುವಿಗೆ "ವೇಗವರ್ಧಕ" (Catalyst) ಅನ್ನುತ್ತಾರೆ. ಅದು ತಯಾರಿಕೆಯಲ್ಲಿ ಸುಮ್ಮನೆ ಇರುವುದೇ ಹೊರತು ಆ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಕ್ರಿಯೆಯ ಮೊದಲು ಹೇಗೆ ಇತ್ತೋ ಕ್ರಿಯೆಯ ನಂತರವೂ ಹಾಗೆಯೇ ಉಳಿಯುವುದು. ಕ್ರೀಡಾಂಗಣದಲ್ಲಿ ಸೇರಿದ ಪ್ರೇಕ್ಷಕರೂ ಹಾಗೆಯೇ. ಅವರಿಗೆ ಆಟದ ನೇರ ಲಾಭ ಏನೂ ಇಲ್ಲ. ನಾನ್-ಸ್ಟಿಕ್ ಪಾತ್ರೆಯೂ ಹೀಗೆಯೇ. 

ಪರಮಾತ್ಮನು ನಮ್ಮ ಎಲ್ಲ ಕ್ರಿಯೆಗಳ ಅಂತಃಶಕ್ತಿಯಾಗಿ ಜೊತೆಗಿರುತ್ತಾನೆ. ಅವನಿಗೆ ಈ ಕ್ರಿಯೆಗಳ ಯಾವುದೇ ವಿಕಾರಗಳೂ ಆಗುವುದಿಲ್ಲ. ಮ್ಯಾಂಗನೀಸ್ ಡೈ ಆಕ್ಸೈಡ್ ಆದರೂ ಬೇರೆ ಪದಾರ್ಥಗಳ ಜೊತೆ ಕಾದು, ನಂತರ ತಣ್ಣಗಾಗುತ್ತದೆ. ಪರಮಾತ್ಮನಿಗೆ ಈ ರೀತಿ ವಿಕಾರಗಳೂ ಇಲ್ಲ. ಪ್ರೇಕ್ಷಕರಿಗೆ ಕೂಗಿದುದರಿಂದ ಆಯಾಸ, ತಮ್ಮ ನೆಚ್ಚಿನ ತಂಡ ಗೆದ್ದರೆ ಆನಂದ, ಸೋತರೆ ದುಃಖ ಆಗುತ್ತವೆ. ಪರಮಾತ್ಮನಿಗೆ ಈ ರೀತಿ ಆಗುವುದಿಲ್ಲ. ಅವನಿಗೆ ಲಾಭದ ಆಸೆಯಿಲ್ಲ. ನಷ್ಟದ ಭೀತಿಯಿಲ್ಲ. ಕೆಲಸ ಮಾಡಿದ ಆಯಾಸವಿಲ್ಲ. ನಾನ್-ಸ್ಟಿಕ್ ಪಾತ್ರೆಯಂತೆ ಬಿಸಿಯಾಗುವುದಿಲ್ಲ. ಒಮ್ಮೆ ತೊಳೆದು ಒರೆಸಬೇಕಾದದ್ದೂ ಇಲ್ಲ. ಅವನು ಯಾವುದಕ್ಕೂ ಅಂಟಿಕೊಂಡವನಲ್ಲ. ಆದ್ದರಿಂದ ಪರಮಾತ್ಮ ನಿರಂಜನ. 

ಹಾಗಿದ್ದರೆ ಕರ್ಮಗಳನ್ನು ಮಾಡುವುದರಲ್ಲಿ ಕೆಲವರಿಗೆ ಪಾಪ, ಮತ್ತೆ ಕೆಲವರಿಗೆ ಪುಣ್ಯ ಏಕೆ? ಎಲ್ಲರೂ ಅವನ ಮಕ್ಕಳಲ್ಲವೇ? ಕೆಲವರಿಗೆ ಯಾಕೆ ಕಷ್ಟ? ಮತ್ತೆ ಕೆಲವರಿಗೆ ಯಾಕೆ ಸುಖ? ಅವನು ಒಬ್ಬ ನ್ಯಾಯಾಧೀಶನಂತೆ. ಒಬ್ಬನಿಗೆ ಶಿಕ್ಷೆ. ಮತ್ತೊಬ್ಬನಿಗೆ ಮನ್ನಣೆ. ಅವರವರು ಮಾಡಿದ ಕೆಲಸಗಳಂತೆ ತೀರ್ಪು. ಇದೇ ಅವನ "ಸಂವಿಧಾನ". 
*****

ಭಗವದ್ಗೀತೆ ಮೂರನೆಯ ಅಧ್ಯಾಯ, ಇಪ್ಪತ್ತೆರಡನೆಯ ಶ್ಲೋಕದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ: 

ನ ಮೇ ಪಾರ್ಥಾಸ್ತಿ ಕರ್ತವ್ಯಮ್  ತ್ರಿಷು ಲೋಕೇಷು ಕಿಂಚನ 
ನಾನಾವಾಪ್ತಮವಾಪ್ತವ್ಯಮ್ ವರ್ತ ಏವ ಚ ಕರ್ಮಣಿ 

ಪಾರ್ಥ, ನನಗೆ ಎಲ್ಲಿಯೂ (ಮೂರು ಲೋಕಗಳಲ್ಲಿಯೂ) ಯಾವುದೇ ಕರ್ತವ್ಯಗಳಿಲ್ಲ. 
(ಇಂಥದು ಮಾಡಲೇಬೇಕೆಂಬ ಬಂಧವಿಲ್ಲ). 
ಸಂಪಾದಿಸಬೇಕು, ಗೆಲ್ಲಬೇಕು ಅಥವಾ ಪಡೆಯಬೇಕು ಎನ್ನುವುದು ಯಾವುದೂ ಇಲ್ಲ. 
ಆದರೂ ನಾನು ಕೆಲಸಗಳನ್ನು (ಕರ್ತವ್ಯ ಎನ್ನುವಂತೆ) ಮಾಡುತ್ತಲೇ ಇರುತ್ತೇನೆ. 

ಇದೇ ಅವನ ನಿರಂಜನತ್ವದ ಲಕ್ಷಣ. 

ನಾವು ಮೇಲೆ ಮಾಡಿದ ಚರ್ಚೆಯೆಲ್ಲವೂ ಇದನ್ನೇ ಸೂಚಿಸುತ್ತದೆ. ಪರಮಾತ್ಮನ ಪರಿಪೂರ್ಣ ಜ್ಞಾನ, ಪರಿಪೂರ್ಣ ಆನಂದ, ಮೊದಲಾದ ಗುಣಗಳಂತೆ ಅವನ ನಿರಂಜನ ಗುಣವೂ ಅವನ ಉಪಾಸನೆಯಲ್ಲಿ ಬಹಳ ಮುಖ್ಯವಾದುದು. 

Wednesday, December 17, 2025

ರಾಮನಾಮ ಎಂಬ ರಸವುಳ್ಳ ನೀರಿಗೆ


ಕಳೆದ ಸಂಚಿಕೆಯಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬಹು ಜನಪ್ರಿಯ ದೇವರನಾಮ ಶ್ರೀ ಪುರಂದರದಾಸರ ಕೃತಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೇ ಬಿಂದಿಗೆಯ" ವಿಶೇಷಾರ್ಥಗಳ ಅನ್ವೇಷಣೆಯಲ್ಲಿ ಕೃತಿಯ ಪಲ್ಲವಿಯ ಎರಡು ಸಾಲುಗಳಲ್ಲಿ ತುಂಬಿರುವ ಅರ್ಥವಿಶೇಷಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಈಗ ಈ ಹಾಡಿನ ಉಳಿದ ಭಾಗಗಳ ವಿಶೇಷ ಅರ್ಥಗಳನ್ನು ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳಿದ್ದು ನೀರು ತರಲು. ಯಾವ ನೀರು? ನಾವು ನಮ್ಮ ಸುತ್ತ-ಮುತ್ತ ಕಾಣುವ ಮತ್ತು ದಿನಂಪ್ರತಿ ಉಪಯೋಗಿಸುವ ನೀರು ಎನ್ನುವುದು ಸಾಮಾನ್ಯವಾದ ಹೊರ ಅರ್ಥ. ನೀರಿಲ್ಲದೆ ಜೀವನವಿಲ್ಲ. ಗಾಳಿಯ ನಂತರ ಜೀವಿಗೆ ಬೇಕಾದ ಅತ್ಯಂತ ಮುಖ್ಯ ಅವಶ್ಯಕತೆ ನೀರು. ನೀರನ್ನು ಶೇಖರಿಸಿ ತರಲು ಒಂದು ಸಾಧನ ಬೇಕು. ಬಿಂದಿಗೆಯು ಅಂತಹ ಒಂದು ಸಾಧನ. ನೀರಿಲ್ಲದೆ ಕರ್ಮವಿಲ್ಲ. ಏನಾದರೂ ಮಾಡುವ ಮೊದಲು ಕೈ, ಕಾಲುಗಳನ್ನಾದರೂ ತೊಳೆದುಕೊಳ್ಳುತ್ತೇವೆ. ಅದಕ್ಕೆ ನೀರು ಬೇಕು. ಸ್ನಾನ ಮಾಡಿದರೆ ನೀರು ಬೇಕು. ಪೂಜೆ-ಹೋಮಾದಿಗಳನ್ನು ಮಾಡಲು ಮೊದಲು ನೀರಿನಿಂದಲೇ ಪ್ರಾರಂಭ. ಕಡೆಯಲ್ಲಿ ಸಮರ್ಪಣ ಮಾಡಲೂ ನೀರು ಬೇಕು. ನೀರಿನಿಂದ ಪ್ರಾರಂಭವಾದ ಕೆಲಸಗಳು ನೀರಿನಿಂದಲೇ ಕೊನೆ! ಬೇರೆ ಯಾವುದಾದರೂ ಪದಾರ್ಥ ಇಲ್ಲದಿದ್ದರೆ ಹೇಗೋ ಕೆಲಸ ತೂಗಿಸಬಹುದು. ನೀರಿಲ್ಲದಿದ್ದರೆ ಮುಂದೆ ಹೋಗಲು ಆಗುವುದೇ ಇಲ್ಲ.  

ನೀರಿಗೆ ಒಂದು ವಿಶೇಷಾರ್ಥವಿದೆ. ಬಿಂದಿಗೆ ಅನ್ನುವುದು ದೇಹವಾದಾಗ (ಏಕೆ ಅನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ) ನೀರು ಅನ್ನುವುದು ಜೀವಿಯು ಮಾಡುವ "ಕರ್ಮ" ಸೂಚಕವಾಗುತ್ತದೆ. ಬಿಂದಿಗೆಯಲ್ಲಿ ನೀರನ್ನು ತರುವಂತೆ ದೇಹದಿಂದ ಜೀವಿಯು ಕರ್ಮಗಳನ್ನು ಮಾಡಿ ಆ ಮೂಲಕ ಸಾಧನೆಗಳನ್ನು ಮಾಡುತ್ತಾನೆ. 

ಈಶಾವಾಸ್ಯ ಉಪನಿಷತ್ತು ತನ್ನ ನಾಲ್ಕನೆಯ ಮಂತ್ರದಲ್ಲಿ "ತಸ್ಮಿನ್ ಆಪಃ ಮಾತರಿಶ್ವಾ ದಧಾತಿ" ಎಂದು ಹೇಳುತ್ತದೆ. "ಆಪಃ" ಅಂದರೆ ನೀರು. "ಮಾತರಿಶ್ವ" ಅಂದರೆ ವಾಯು. ವಾಯುವು ಕೊಡುವ ನೀರು ಯಾವುದು? ಕೊಡುವುದು ಯಾರಿಗೆ? ಜೀವಿಯ ಎಲ್ಲ ಕರ್ಮಗಳಿಗೆ ಪ್ರತ್ಯಕ್ಷ ಸಾಕ್ಷಿ ಪ್ರಾಣವಾಯು. ಮೊದಲ ಉಸಿರಿನಿಂದ ಪ್ರಾರಂಭವಾದ ಜೀವನದಿಂದ ಕರ್ಮ ಪ್ರಾರಂಭ. ಕೊನೆಯ ಉಸಿರಿನೊಡನೆ ಅದು ಮುಗಿಯಿತು. ಬೇರೆಯವರ ಕಣ್ಣು ತಪ್ಪಿಸಿ ಅನೇಕ ಕೆಲಸಗಳನ್ನು ಮಾಡಬಹುದು. ಹಾಗೆ ಏನಾದರೂ ಮಾಡಿ ಅರಗಿಸಿಕೊಳ್ಳಬಹುದು. ಆದರೆ ಮಾತರಿಶ್ವನ ಕಣ್ಣು ತಪ್ಪಿಸಲಾಗದು. ಇದನ್ನೇ "ಅಂತಃಸಾಕ್ಷಿ" ಎಂದೂ ಹೇಳುತ್ತೇವೆ.  ಜೀವನ ಕಾಲ ಮುಗಿದ ಮೇಲೆ ಜೀವಿಯನ್ನು ಪರಮಾತ್ಮನ ಮುಂದೆ ನಿಲ್ಲಿಸಿ ವಾಯುದೇವನು ಅವನ ಸಮಸ್ತ ಕರ್ಮಗಳನ್ನು ಹಾಜರು ಮಾಡುತ್ತಾನೆ. 

ಈ ಕಾರಣದಿಂದ "ನಾ ನೀರಿಗ್ಹೋಗುವೆ" ಅಂದರೆ "ನೀನು ಕೊಟ್ಟ ದೇಹದಿಂದ ನಾನು ಕರ್ಮಗಳನ್ನು ಆಚರಿಸಿ ಸಾಧನೆಗಳನ್ನು ಮಾಡುವೆ, ಮಹಾಲಕ್ಷ್ಮಿ ಅಕ್ಕಾ" ಎಂದು ಹೇಳುವುದು. ಇದು ಅಂತರಾರ್ಥ. 
***** 

"ರಾಮನಾಮ ಎಂಬೋ ರಸವುಳ್ಳ ನೀರಿಗೆ" ಬಿಂದಿಗೆ ಬೇಕು. ರಾಮನಾಮದ ವಿಶೇಷವೇನು? ಅನಂತರೂಪಿ ಪರಮಾತ್ಮನಿಗೆ ಅನಂತ ಹೆಸರುಗಳು. ಸೃಷ್ಟಿಯಲ್ಲಿ ಇರುವ ಸಕಲ ಶಬ್ದಗಳೂ ಪರಮಾತ್ಮನನ್ನೇ ಹೇಳುತ್ತವೆ ಎನ್ನುವುದು ಒಂದು ಪ್ರಮೇಯ. (ಧ್ವನ್ಯಾತ್ಮಕ ಮತ್ತು ವರ್ಣಾತ್ಮಕ ಶಬ್ದಗಳ ಬಗ್ಗೆ ಹಿಂದೊಂದು ಸಂಚಿಕೆಯಲ್ಲಿ ನೋಡಿದ್ದೇವೆ). "ರಮಯತಿ ಇತಿ ರಾಮಃ". "ಆನಂದ (ಸಂತೋಷ) ಕೊಡುವವನು ರಾಮ" ಎಂದು ಇದರ ಅರ್ಥ. ಜೀವಿಗಳಿಗೆ ಈ ಸುತ್ತುವ ಸಂಸಾರದ ಹುಟ್ಟು-ಸಾವುಗಳಿಂದ ಬಿಡುಗಡೆ ಕೊಟ್ಟು ಶಾಶ್ವತ ಆನಂದ ಕೊಡುವವನು ರಾಮ. ಈ ಮೋಕ್ಷದ ನಂತರದ ಆನಂದಕ್ಕೆ ಅದರ ಪ್ರಮಾಣದಲ್ಲಿ ಆಗಾಗ ಹೆಚ್ಚು-ಕಡಿಮೆ ಆಗುವ ಭಯವಿಲ್ಲ. ಎಂದೋ ಒಂದು ದಿನ ಮುಗಿದುಹೋಗುವುದು ಎನ್ನುವ ಆತಂಕವಿಲ್ಲ. ಅದು ಶಾಶ್ವತವಾದ, ಕೊನೆಯಿಲ್ಲದ, ಪರಿಪೂರ್ಣ ಆನಂದ. 

ರಾಮನು ಎಲ್ಲ ಕಾಲದಲ್ಲೂ ಇದ್ದನು. ಎಲ್ಲ ಕಾಲದಲ್ಲೂ ಇರುತ್ತಾನೆ. ತ್ರೇತಾಯುಗದ ಶ್ರೀರಾಮಚಂದ್ರನು ಅವತಾರ ಮಾಡುವ ಮೊದಲೂ ಇದ್ದನು. ಆ ಅವತಾರ ಮುಗಿದಮೇಲೂ ಇರುತ್ತಾನೆ. ಇಂತಹ ರಾಮನ ಹೆಸರನ್ನೇ ದಶರಥ-ಕೌಸಲ್ಯೆಯರ ಮಗನಿಗೂ ಕೊಟ್ಟರು. ಇಬ್ಬರೂ ಒಂದೇ. ಭೇದವಿಲ್ಲ. 

ಪರಮಾತ್ಮನ ಅನಂತ ನಾಮಗಳಲ್ಲಿ ರಾಮನಾಮ ಅತ್ಯಂತ ಸುಲಭವಾದದ್ದು. ಒತ್ತಕ್ಷರಗಳ ಗೊಂದಲವಿಲ್ಲ. ಆರು-ಎಂಟು-ಹತ್ತು ಅಕ್ಷರಗಳ ದೊಡ್ಡ ಹೆಸರಲ್ಲ. ಈಗ ತಾನೇ ಮಾತು ಕಲಿಯುತ್ತಿರುವ ಮಗುವೂ ಸುಖವಾಗಿ "ರಾಮ" ಎಂದು ಹೇಳುವುದು. "ಹೃಷಿಕೇಶ" "ತ್ರಿವಿಕ್ರಮ" "ಪದ್ಮನಾಭ" "ಸಂಕರ್ಷಣ" "ಅಧೋಕ್ಷಜ" ಮುಂತಾದುವನ್ನು ಹೇಳಲು ಅನೇಕರಿಗೆ ಕಷ್ಟವಾಗುತ್ತದೆ. ರಾಮನಾಮಕ್ಕೆ ಇಂತಹ ಬಂಧವಿಲ್ಲ. ಅದು ಗಟ್ಟಿಯಾದ ಚಕ್ಕುಲಿ, ಕೋಡುಬಳೆ, ಪುಳ್ಳಂಗಾಯಿ ಉಂಡೆ ತಿಂದು ಅರಗಿಸಿಕೊಂಡಂತೆ ಅಲ್ಲ. ಪಾಯಸ ಕುಡಿದಂತೆ ಸುಲಭ. ಸಿಹಿಯೂ ಹೌದು. ಆದ್ದರಿಂದ "ರಾಮನಾಮ ಪಾಯಸ"!
*****

ರಾಮನಾಮ ಎಂಬ ನೀರು ಎಂದಾಯಿತು. "ರಸವುಳ್ಳ ನೀರು" ಎಂದೇಕೆ ಹೇಳಿದರು? ನೀರಿನಲ್ಲಿ ಎಂತಹ ರಸ? ನಮಗೆ ಬಾಯಾರಿಕೆ ಆದಾಗ ಕುಡಿಯಲು ನೀರು ಬೇಕು. ಒಳ್ಳೆಯ ಬಾದಾಮಿ ಹಾಲೋ, ಎಳನೀರೋ ಕೊಟ್ಟರೆ ಹೇಗೆ? ಸೊಗಸಾದ ಕಾಫಿ? ಅಥವಾ ಕಿತ್ತಳೆ ರಸ? "ಅದೆಲ್ಲಾ ಇರಲಿ. ಕೊಡುವಿರಂತೆ. ಮೊದಲು ಒಂದು ಲೋಟ ನೀರು ಕೊಡಿ, ಆಮೇಲೆ ಬೇರೆಯದು" ಎನ್ನುತ್ತೇವೆ. ಆಯಿತು. ಕೊಟ್ಟರು. ಎಲ್ಲ ನೀರೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಿನಲ್ಲಿ ಬೋರ್ವೆಲ್ ನೀರು ಕೊಡಬಹುದು. ಯಾವುದೊ ಕೆರೆಯಿಂದ ತಂಡ ಟ್ಯಾಂಕರ್ ನೀರು ಇರಬಹುದು. ಕಾವೇರಿ, ಅರ್ಕಾವತಿ ನೀರು ತಂದಿರಬಹುದು. ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ನೀರು ಕುಡಿದರೆ ಮುಖ ಸಿಂಡರಿಸುತ್ತೇವೆ. "ಈ ನೀರು ಅಷ್ಟು ಸರಿ ಇಲ್ಲ" ಅನ್ನುತ್ತೇವೆ. ಯಾಕೆ? ನೀರು ಚೆನ್ನಾಗಿರಬೇಕು. "ಇಂತಹ ಒಳ್ಳೆಯ ನೀರು ತರುತ್ತೇನೆ, ಬಿಂದಿಗೆ ಕೊಡು" ಅನ್ನುವುದು ಸಾಮಾನ್ಯ ಅರ್ಥ. 

"ರಸ" ಅನ್ನುವುದಕ್ಕೆ ವಿಶೇಷಾರ್ಥವೂ ಉಂಟು. ಅದು ತಿಳಿಯಬೇಕಾದರೆ ಶ್ರೀಮದ್ ಭಗವದ್ಗೀತೆಯ ಏಳನೆಯ ಅಧ್ಯಾಯ ನೋಡಬೇಕು. ಎಂಟನೆಯ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳುತ್ತಾನೆ:

ರಸೋಹಂ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ ಸೂರ್ಯಯೋ: 
ಪ್ರಣವಃ ಸರ್ವವೇದೇಷು ಶಬ್ದ: ಖೇ ಪೌರುಷಮ್ ನೃಷು 

"ನೀರಿನಲ್ಲಿ ನಾನು ರಸ ಆಗಿದ್ದೇನೆ. ಚಂದ್ರ-ಸೂರ್ಯರಲ್ಲಿ ಬೆಳಕಾಗಿದ್ದೇನೆ. 
ವೇದಗಳಲ್ಲಿ ಓಂಕಾರವಾಗಿದ್ದೇನೆ. ಆಕಾಶದಲ್ಲಿ ಶಬ್ದ ರೂಪದಲ್ಲಿ ಇದ್ದೇನೆ. 
ಮನುಷ್ಯರಲ್ಲಿ ಕ್ರಿಯಾಶಕ್ತಿಯ ರೂಪವಾಗಿ ನಿಂತಿದ್ದೇನೆ"

ಪರಮಾತ್ಮನ ಸನ್ನಿಧಾನ ಇದ್ದಾಗ ನೀರು ರುಚಿಸುತ್ತದೆ. ಪದಾರ್ಥಗಳ ಸೊಗಸು ನಾಲಿಗೆಗೆ ಸಿಗುತ್ತದೆ. ಕಿತ್ತಳೆ ತೊಳೆ ನೋಡಲು ಕೆಂಪಾಗಿದೆ. ದಪ್ಪಗೂ ಇದೆ. ಆದರೆ ತಿಂದಾಗ ಬರೀ ಬೆಂಡು ಬೆಂಡು. ಯಾಕೆ? ಅಲ್ಲಿ ಪರಮಾತ್ಮನ ಅಭಿವ್ಯಕ್ತಿ ಇಲ್ಲ. ಬಾದಾಮಿ, ಗೋಡಂಬಿ ಬಹಳ ಚೆನ್ನಾಗಿವೆ. ಬಾಯಿಯಲ್ಲಿ ಹಾಕಿಕೊಂಡು ಎಷ್ಟು ಹೊತ್ತು ಇಟ್ಟುಕೊಂಡರೂ ಏನೂ ರುಚಿಯಿಲ್ಲವಲ್ಲ? ಅಗಿದು ಅದಕ್ಕೆ ಸ್ವಲ್ಪ ರಸರೂಪದ ನೀರು ಸೇರಿದರೆ ತಕ್ಷಣ ರುಚಿ ಸಿಕ್ಕಿತು!  

ಮನುಷ್ಯನು ಮಾಡುವ ಕೆಲಸಗಳೂ ಅಂತೆಯೇ. ಯಾವುದೋ ಕಾರಣಕ್ಕೆ ಮಾಡಿದ ಕಾರ್ಯಗಳು ನೀರಸ. "ಪರಮಾತ್ಮನಿಗೆ ಪ್ರೀತಿಯಾಗಲಿ" ಎಂದು ಮಾಡಿದ ತಕ್ಷಣ ಅಲ್ಲಿ ರಸ ಬಂದು ಕೂತಿತು. ಮಾಡಿದ ಕರ್ಮ ಸತ್ಕರ್ಮ ಆಯಿತು. ಅವನಿದ್ದರೆ ಅದು ಸರಸ. ರಸದಿಂದ ಕೂಡಿದ್ದು. ಅವನಿಲ್ಲದಿದ್ದರೆ ಅದು ನೀರಸ. ರಸವಿಲ್ಲದ್ದು. ಅವನಿಗೆ ವಿರುದ್ಧವಾಗಿದ್ದರೆ ವಿರಸ. ಇದೇ ಸತ್ಕರ್ಮಗಳ ರಹಸ್ಯ!

"ರಾಮನಾಮವೆಂಬ ರಸವುಳ್ಳ ನೀರು ತರುತ್ತೇನೆ, ಬಿಂದಿಗೆ ಕೊಡು ಅಕ್ಕಾ" ಅಂದಾಗ "ಸತ್ಕರ್ಮಗಳನ್ನು ಮಾಡಿ ರಸರೂಪವಾದ ಸಾಧನೆಯನ್ನು ದೇಹದಲ್ಲಿ ತುಂಬಿಕೊಳ್ಳುತ್ತೇನೆ" ಎಂದು ಅರ್ಥ. ಇದೇ ಇಲ್ಲಿನ ವಿಶೇಷಾರ್ಥ. 
*****

"ಗೋವಿಂದ ಎಂಬ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ, ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ" ಅನ್ನುವುದು ಮುಂದಿನದು. "ಗೋವಿಂದ" ಅನ್ನುವ ಪದಕ್ಕೆ ಅನೇಕ ಅರ್ಥಗಳು. ಗೋ ಅನ್ನುವ ಪದಕ್ಕೆ "ನೀರು" "ಹಸು" "ಭೂಮಿ" "ವೇದಗಳು" ಇನ್ನೂ ಮುಂತಾಗಿ ವಿವರಣೆಗಳಿವೆ. "ಉತ್ತಮವಾದದ್ದು" ಎಂದೂ ಅರ್ಥವುಂಟು. "ನೀರಿನಲ್ಲಿ ಶ್ರೇಷ್ಠವಾದ ರೀತಿಯ ನೀರು ತರುತ್ತೇನೆ" ಎಂದು ಹೇಳುವುದು ಸಾಮಾನ್ಯ ಅರ್ಥ. 

ಅಮೃತದ ನೀರು ಹೇಗೆ? ಸತ್ಕರ್ಮ ಮಾಡಿದ ಮೇಲೆ ಮುಂದೆ ಜನ್ಮವಿಲ್ಲದ ಮುಕ್ತಿ ಸಿಗುತ್ತದೆ. ಸಾವಿಲ್ಲದ್ದು ಅಮೃತ. ಗೋವಿಂದನ ಪ್ರೀತಿಗಾಗಿ ಮಾಡಿದ ಕರ್ಮಗಳನ್ನು, ನಿಷ್ಕಾಮ ಕರ್ಮಗಳನ್ನು, ತುಂಬಿಕೊಂಡಮೇಲೆ ಮತ್ತೆ ಮರಣವಿಲ್ಲ. ಅಂದರೆ ಅಮೃತತ್ವ ಸಿಕ್ಕಿತು. ಆದ್ದರಿಂದ "ಅಮೃತದ ನೀರು". 

"ಕಾಮಿನಿಯರ ಕೂಡೆ ಏಕಾಂತವಾಡೆನು, ತಾರೆ ಬಿಂದಿಗೆಯ" ಎಂದರೇನು? ನೀರು ತರಲು ನದಿಗೋ, ಭಾವಿಗೋ ಹೋದಾಗ ಅಲ್ಲಿ ನಮ್ಮಂತೆಯೇ ಅನೇಕರು ಬಂದಿರುತ್ತಾರೆ. ಸಾಮಾನ್ಯವಾಗಿ ನೀರು ತರಲು ಹೋಗುತ್ತಿದ್ದುದು ಲೋಕಾರೂಢಿಯಾಗಿ ಹೆಣ್ಣುಮಕ್ಕಳು. ಕಾಮಿನಿ ಅನ್ನುವ ಪದಕ್ಕೆ ಹೆಣ್ಣು ಎಂದೂ ಒಂದು ಅರ್ಥ. ಒಂದರ್ಥವೇನು, ಇದೇ ಅರ್ಥದಲ್ಲಿ ಆ ಪದವನ್ನು ಸಾಮಾನ್ಯವಾಗಿ ಬಳಸುವುದು. ಕೆಲವರು ಅಲ್ಲಿ ಕಂಡಾಗ ಸಹಜವಾಗಿ ಸ್ವಲ್ಪ ಅದು-ಇದು ಮಾತಾಡುವಂತೆ ಆಗುತ್ತದೆ. ಹರಟೆಯಲ್ಲಿ ಕಾಲಹರಣ ನಡೆಯುತ್ತದೆ. "ನಾನು ಹರಟೆಯಲ್ಲಿ ಕಾಲ ವ್ಯಯ ಮಾಡುವುದಿಲ್ಲ. ಅಲ್ಲಿ ಹೋಗಿ, ನೀರು ತುಂಬಿಕೊಂಡು ಬೇಗ ಬಂದುಬಿಡುತ್ತೇನೆ" ಎನ್ನುವುದು ಸಾಮಾನ್ಯ ಅರ್ಥ. 

"ಕಾಮ" ಅಂದರೆ ಆಸೆ. ಆಸೆ ಯಾವಾಗಲೂ ಒಂದೇ ಒಂದಾಗಿ ಬರುವುದಿಲ್ಲ. ಆಸೆಗಳು ಗುಂಪಾಗಿ ಮನುಷ್ಯನನ್ನು ಕಾಡುತ್ತವೆ. ಕಾಮದಿಂದ ಹುಟ್ಟಿದ್ದು ಕಾಮಿನಿ ಎಂದಾಗುತ್ತದೆ. "ಅಕ್ಕ, ನೀನು ದೇಹವನ್ನು ಕೊಟ್ಟರೆ ಅದನ್ನು ಇತರೆ ಆಸೆಗಳ, ಪ್ರಾಪಂಚಿಕ ಸುಖ-ಭೋಗಗಳ, ತೃಪ್ತಿಗೆ ಬಳಸುವುದಿಲ್ಲ. ಕೇವಲ ಸಾಧನೆಗಾಗಿಯೇ ಜೀವಿತ ಕಾಲವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳುವುದೇ ವಿಶೇಷಾರ್ಥ. 

ನೀರು ತರಲೆಂದು ಬಿಂದಿಗೆ ಹಿಡಿದು ಹೊರಟು, ಜಲಾಶಯದ ಬಳಿ ಸಮಯವೆಲ್ಲ ಹರಟೆಯಲ್ಲಿ ಕಳೆದು, ಕಡೆಗೆ ಮನೆಗೆ ಖಾಲಿ ಬಿಂದಿಗೆ ಹಿಡಿದು ಬಂದರೆ ಹೇಗಿರುತ್ತದೆ? ಅಮೂಲ್ಯವಾದ ಮತ್ತು ಅಪರೂಪವಾದ ಮನುಷ್ಯ ಜನ್ಮ ಪಡೆದು. ಲೌಕಿಕ ಸುಖಗಳಲ್ಲಿ ಎಲ್ಲ ಕಾಲ ಕಳೆದು, ಕಡೆಗೆ ಅಲ್ಲಿ ಹೋಗಿ ನಿಂತಾಗ ಖಾಲಿ ಕೈ ಆಗುವಂತಾದರೆ ಹೇಗೆ? ಕಾಡಿ-ಬೇಡಿ ಪಡೆದ ದೇಹ, ಜನ್ಮ ವ್ಯರ್ಥವಾಯಿತು. ಹೀಗಾಗಲು ಬಿಡುವುದಿಲ್ಲ ಎಂದು ಮಹಾಲಕ್ಷ್ಮಿ ದೇವಿಗೆ ವಚನ ಕೊಟ್ಟಂತೆ ಈ ಮಾತು. 
***** 

"ಬಿಂದು ಮಾಧವನ ಘಟ್ಟಕ್ಕೆ ಹೋಗುವೆ, ಪುರಂದರ ವಿಠಲಗೆ ಅಭಿಷೇಕ ಮಾಡುವೆ" ಎನ್ನುವುದು ಕಡೆಯ ನುಡಿಯ ತಿರುಳು. ಕಾಶಿಯಲ್ಲಿ ಬಿಂದುಮಾಧವನ ದೇವಾಲಯ ಇದೆ. ಗಂಗಾನದಿಯ ಪಕ್ಕದಲ್ಲೇ ಇದೆ. "ಒಳ್ಳೆಯ ಗಂಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಬಂದು ವಿಠಲನ ಇನ್ನೊಂದು ರೂಪನಾದ ಮಾಧವನಿಗೆ ಅಭಿಷೇಕ ಮಾಡುತ್ತೇನೆ" ಅನ್ನುವುದು ಸಾಮಾನ್ಯ ಅರ್ಥ. 

"ನೀನು ನನ್ನ ಈ ಬೇಡಿಕೆಯ ಫಲವಾಗಿ ಕೊಡುವ ದೇಹದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಅವುಗಳನ್ನೆಲ್ಲಾ ಪರಮಾತ್ಮನಿಗೆ ಸಮರ್ಪಣ ಮಾಡುತ್ತೇನೆ" ಎಂದು ಮಹಾಲಕ್ಷ್ಮೀದೇವಿಯ ಮುಂದೆ ಪ್ರತಿಜ್ಞೆ ಮಾಡುವುದೇ ಒಟ್ಟು ತಾತ್ಪರ್ಯ ಮತ್ತು ವಿಶೇಷಾರ್ಥ. 

"ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿ ಗರ್ಭಿತಂ" ಎಂದು ಒಂದು ಮಾತಿದೆ. ದೊಡ್ಡವರ ಮಾತುಗಳಲ್ಲಿ ಅವರ ಅನೇಕ ಕಾಲದ ಅನುಭವದ, ಅಧ್ಯಯನದ ಸಾರ ತುಂಬಿರುತ್ತದೆ. ಶ್ರೀ ಪುರಂದರದಾಸರ ಪದಗಳಲ್ಲಿ ಇವನ್ನು ಚೆನ್ನಾಗಿ ಕಾಣಬಹುದು. ಒಂದೊಂದು ಸಾಲಿನಲ್ಲೂ, ಒಂದೊಂದು ಪದದಲ್ಲೂ, ಸಾಮಾನ್ಯ ಅರ್ಥಗಳೂ, ಅವುಗಳ ಜೊತೆ-ಜೊತೆಯಾಗಿ ವಿಶೇಷ ಅರ್ಥಗಳೂ, ಗೂಡಾರ್ಥಗಳೂ ತುಂಬಿರುತ್ತವೆ. ಒಂದು ಸಲ ಓದಿದರೆ ಅಥವಾ ಕೇಳಿದರೆ ಅಷ್ಟಿಷ್ಟು ಅರ್ಥವೇನೋ ಆಗುತ್ತದೆ. ಸರಿಯಾದ ಮೌಲ್ಯ ನಮಗೆ ಸಿಗಬೇಕಾದರೆ ಹೆಚ್ಚಿನ ಅಧ್ಯಯನ ಅಗತ್ಯ. 

*****

ಹಿಂದಿನ ಮತ್ತು ಈ ಸಂಚಿಕೆಯನ್ನು ಓದಿದ ನಂತರ ಹಾಡನ್ನು ಕೇಳಿದರೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಅದನ್ನು ಈ ಕೆಳಗೆ ಕೊಟ್ಟಿದೆ:


ಒಂದು ಬಾರಿ ಓದಿದರೆ ವಿಶೇಷಾರ್ಥಗಳು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಎರಡು ಮೂರು ಬಾರಿ ಓದುವ ತಾಳ್ಮೆ ಬೇಕು. ಒಮ್ಮೆ ಮನಸ್ಸಿನಲ್ಲಿ ನಿಂತರೆ ಮುಂದೆ ಬೇರೆ ಬೇರೆ ವಿಷಯಗಳ ಅಧ್ಯಯನ ಕಾಲದಲ್ಲಿ ಮತ್ತಷ್ಟು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. 

Sunday, November 5, 2023

"ವೃದ್ಧಾಪ್ಯ"ದಲ್ಲಿ "ಜೀವನ"ದ "ಆನಂದ"


ಪಾಪ, ಪುಣ್ಯ ಮತ್ತು ವೃದ್ಧಾಪ್ಯ:

ಮನುಷ್ಯನಿಗೆ ಒಂದು ಹಣ್ಣು ಬೇಕಾದರೆ ಅದರ ಸಸಿಯನ್ನು ನೆಟ್ಟು, ಮರವಾಗಿ ಬೆಳೆಸಿ, ಫಲಾಗಮನದ ಸಮಯ ಕಾದು ಅದರ ಹಣ್ಣು ಪಡೆಯಬೇಕು. ನೆನೆಸಿದ ತಕ್ಷಣ ಅದು ಸಿಗುವುದಿಲ್ಲ. ಈಗಲೇ ಹಣ್ಣು ಬೇಕಾದರೆ ಹಿಂದೆಂದೋ ನೆಟ್ಟು ಬೆಳೆಸಿದ ಮರದಿಂದ ಪಡೆಯಬಹುದು. ಅದೂ ಹಿಂದೆಂದೋ ಮರ ಬೆಳೆಸಿದ್ದರೆ ಮಾತ್ರ. ಇಲ್ಲದಿದ್ದರೆ ಇಲ್ಲ. ಅಂತೆಯೇ ಒಂದು ಮರವನ್ನು ನೆಟ್ಟು ಬೆಳೆಸಿದರೆ ಅದು ಹಣ್ಣನ್ನು ಕೊಟ್ಟೇ ಕೊಡುತ್ತದೆ. ಕೆಲವಂತೂ ಹೆಚ್ಚು ಆರೈಕೆ ಇಲ್ಲದಿದ್ದರೂ ಧಾರಾಳವಾಗಿ ಹಣ್ಣು ಕೊಡುತ್ತವೆ. ಮರ ಬೆಳಸಿಯಾದ ಮೇಲೆ ಹಣ್ಣು ಬರಬಾರದು ಎನ್ನುವಂತಿಲ್ಲ. ಹಣ್ಣು ಕೊಡುವುದು ಅದರ ಸಹಜ ವೃತ್ತಿ. ಅದರ ಕೆಲಸ ಅದು ಮಾಡುತ್ತದೆ. 

ಪಾಪ ಮತ್ತು ಪುಣ್ಯಗಳು ಒಂದು ರೀತಿಯಲ್ಲಿ ಮರಗಳಿದ್ದಂತೆ. ಮರಗಳನ್ನು ನೆಟ್ಟು ಬೆಳಸಬೇಕು. ಪಾಪ ಮತ್ತು ಪುಣ್ಯ ಎಂಬ ಎರಡು ಮರಗಳು ಮನುಷ್ಯನ ಜೊತೆಯಲ್ಲಿಯೇ ಹುಟ್ಟುತ್ತವೆ.  ನಮ್ಮ ಪ್ರತಿಯೊಂದು ಕ್ರಿಯೆಯೂ ಅವುಗಳ ಗೊಬ್ಬರ, ನೀರಾಗಿ ಅವನ್ನು ಬೆಳೆಸುತ್ತವೆ. ನಮ್ಮ ಪ್ರಯತ್ನ ಏನೂ ಬೇಕಿಲ್ಲ. ಕೆಲಸ ಮಾಡಿದವನಿಗೆ ಕೂಲಿ ಸಿಕ್ಕಂತೆ ಪ್ರತಿಫಲವೂ ಸಿಕ್ಕಿಯೇ ಸಿಗುತ್ತದೆ. ಕೆಲಸ ಮಾಡಿ ಕೂಲಿ ಕೊಡುವುದರ ಮುಂಚೆ ಓಡಿಹೋಗಬಹುದು. ಆದರೆ ಇಲ್ಲಿ ಅದೂ ಸಾಧ್ಯವಿಲ್ಲ. ಕೆಲಸಗಾರನನ್ನು ಅಟ್ಟಿಸಿಕೊಂಡು ಬಂದು ಕೂಲಿ ಸೇರುತ್ತದೆ! 

ಬೇರೆ ಹಣ್ಣುಗಳಿಗೂ ಪಾಪ, ಪುಣ್ಯಗಳಿಗೂ ಒಂದು ಮುಖ್ಯ ವ್ಯತ್ಯಾಸ ಉಂಟು. ನಮಗೆ ಯಾವುದೋ ಹಣ್ಣು ಬೇಕಾದಾಗ ಬೆಳದವರಿಂದಲೋ, ಆಂಗಡಿಯಿಂದಲೋ ಪಡೆಯಬಹುದು. ನಮ್ಮಲ್ಲಿ ಹಣ್ಣು ಹೆಚ್ಚಿದ್ದಾಗ ಬೇರೆಯವರಿಗೆ ಕೊಡಬಹುದು. ಆದರೆ ಪಾಪ, ಪುಣ್ಯಗಳ ಹಣ್ಣುಗಳ ವಿಷಯದಲ್ಲಿ ಇದು ಸಾಧ್ಯವಿಲ್ಲ. ನಾವು ಕೃಷಿ ಮಾಡಿದ ಹಣ್ಣುಗಳನ್ನು ಬೇರೆಯವರಿಗೆ ಕೊಡುವಹಾಗಿಲ್ಲ. ಬೇರೆಯವರ ಸಾಗುವಳಿಯ ಪದಾರ್ಥ ನಾವು ಪಡೆಯುವಹಾಗಿಲ್ಲ. ಅವರವರ ಬೆಳೆಯ ಫಸಲನ್ನು ಅವರವರೇ ತಿನ್ನಬೇಕು. ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. 

ಈ ಹಿನ್ನೆಲೆಯಲ್ಲಿ ಮನುಷ್ಯನಿಗೆ ಏನು ಬೇಕು, ಏನು ಬೇಡ ಎನ್ನುವುದರ ಬಗ್ಗೆ ಮಹಾಭಾರತದಲ್ಲಿ ಒಂದು ಸೊಗಸಾದ ಶ್ಲೋಕವಿದೆ:

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನ ಇಚ್ಛಂತಿ ಮಾನವಾ:।   ನ ಪಾಪ ಫಲಮಿಚ್ಛ೦ತಿ  ಪಾಪಂ ಕುರ್ವoತಿ ಯತ್ನತಃ ।।

"ಮನುಷ್ಯರಿಗೆ ಪುಣ್ಯ ಎನ್ನುವ ಮರ ಬೇಡ. ಆ ಮರವನ್ನು ಬೆಳೆಸುವುದಿಲ್ಲ. ಆದರೆ ಆ ಮರದ ಹಣ್ಣು ಬೇಕು. ಪಾಪ ಎನ್ನುವ ಮರದ ಹಣ್ಣು ಖಂಡಿತಾ ಬೇಡ. ಆದರೆ ಬಹಳ ಕಷ್ಟ ಪಟ್ಟು ಪಾಪದ ಮರವನ್ನು ಬೆಳೆಸುತ್ತಾರೆ!"

ಪಾಪದ ಮರ ಬೆಳೆಸಿದ ಮೇಲೆ ಅದು ಅದರ ಕೆಲಸ ಮಾಡಿ ಪಾಪದ ಹಣ್ಣು ಕೊಟ್ಟೇ ಕೊಡುತ್ತದೆ. ಆ ಹಣ್ಣನ್ನು ಸೇವಿಸಲೇ ಬೇಕು. ಬೇರೆಯವರಿಗೆ ಕೊಟ್ಟು ಕೈ ತೊಳೆದುಕೊಳ್ಳಲಾಗುವುದಿಲ್ಲ. ಮತ್ತೊಂದು ಕಡೆ, ಪುಣ್ಯದ ಮರ ಬೆಳೆಸಲಿಲ್ಲ.  ಆದರೆ ಪುಣ್ಯದ ಹಣ್ಣು ಬೇಕು! ಇದೊಂದು ವಿಚಿತ್ರ ವಿಪರ್ಯಾಸ. ಗೊತ್ತಿಲ್ಲದೇ ಪೇಚಿಗೆ ಸಿಕ್ಕಿಕೊಂಡ ಪರಿಸ್ಥಿತಿಯೂ ಅಲ್ಲ. ಇರುಳು ಕಂಡ ಭಾವಿಯಲ್ಲಿ ಹಗಲು ಬಿದ್ದಂತೆ!

ಪಾಪ ಮತ್ತು ಪುಣ್ಯದ ಪರಿಭಾಷೆಯನ್ನು ತಿಳಿಯುವುದು ತುಂಬಾ ಅವಶ್ಯಕ. ಪುಣ್ಯವೆಂದರೆ ಒದ್ದೆ ಬಟ್ಟೆ, ಮಂತ್ರ, ತಂತ್ರ, ಅಷ್ಟೇ ಎಂದು ತಿಳಿಯಬಾರದು. "ಕೊರಳೊಳು ಜಪಮಣಿ, ಬಾಯೊಳು ಮಂತ್ರವು, ಅರಿವೆಯ ಮೋರೆಗೆ ಮುಸುಕು ಹಾಕಿ...." ಮುಂತಾಗಿ ಉದರ ವೈರಾಗ್ಯವನ್ನು ಶ್ರೀ ಪುರಂದರ ದಾಸರು ಹಾಸ್ಯ ಮಾಡುತ್ತಾರೆ. "ಪರೋಪಕಾರಂ ಪುಣ್ಯಾಯ, ಪಾಪಾಯ ಪರ ಪೀಡನಮ್" ಎಂದು ಭಗವಾನ್ ವೇದ ವ್ಯಾಸರು ಹೇಳಿದಂತೆ ಸಮಾಜಕ್ಕೆ ಉಪಯೋಗವಾಗುವ ಯಾವುದೇ ಕೆಲಸ ಪುಣ್ಯದ್ದು. ಇನ್ನೊಬ್ಬರರಿಗೆ ವೃಥಾ ತೊಂದರೆ ಕೊಡುವ ಯಾವ ಕೆಲಸವೂ ಪಾಪದ್ದು. ಈ ಸ್ಥೂಲ ತಿಳುವಳಿಕೆ ಎಲ್ಲ ಸಮಯದಲ್ಲೂ ನಮ್ಮಲ್ಲಿ ಇರಬೇಕು. 

ಅಶಕ್ತರ, ಶಿಶುಗಳ, ವೃದ್ಧರ ಮತ್ತು ಆಂಗಹೀನರ ಸೇವೆ ಅತ್ಯಂತ ಪುಣ್ಯದ ಕೆಲಸ. ಇವು ದೇವರ ಪೂಜೆಯ ಅತ್ಯಂತ ಶ್ರೇಷ್ಠ ರೂಪ ಎಂದು ನಮ್ಮ ಮುಖ್ಯ ಗ್ರಂಥಗಳಲ್ಲಿ ಅನೇಕ ಕಡೆ ಕಾಣುತ್ತ್ತೇವೆ. ಸಂತ ಏಕನಾಥರ ಪ್ರವಚನಗಳಲ್ಲಿ ಒಂದು ಕಥೆ ಬರುತ್ತದೆ. ಒಂದು ಸಂತರ ಗುಂಪು ಕಾಶಿ ಯಾತ್ರೆ ಮುಗಿಸಿ ಥಾಲಿಗಳಲ್ಲಿ ಗಂಗೆಯನ್ನು ತುಂಬಿಸಿಕೊಂಡು ರಾಮೇಶ್ವರನಿಗೆ ಆ ಗಂಗಾಜಲದಲ್ಲಿ ಅಭಿಷೇಕ ಮಾಡುವ ಆಸೆ ಹೊತ್ತು ರಾಮೇಶ್ವರದ ಕಡೆ ಹೊರಟಿದ್ದರು. ನಡೆದೇ ಹೋಗಬೇಕಾದ ಕಾಲವದು. ದಾರಿಯಲ್ಲಿ ಮರುಭೂಮಿಯಲ್ಲಿ ಒಂಟೆಯೊಂದು ನೀರಿಲ್ಲದೆ ಬಾಯಾರಿ ಸಾಯುವ ಸ್ಥಿತಿಯಲ್ಲಿ ಕಾಣಸಿಗುತ್ತದೆ. ಎಲ್ಲರ ಬಳಿಯಲ್ಲಿಯೂ ನೀರುಂಟು. ಆದರೆ ಗಂಗಾಜಲ. ಒಂಟೆಗೆ ಕುಡಿಯಲು ಕೊಟ್ಟರೆ ರಾಮೇಶ್ವರನಿಗೆ ಅಭಿಷೇಕವಿಲ್ಲ. ಎಲ್ಲರೂ ಹಿಂದೆ ಮುಂದೆ ನೋಡುತ್ತಾರೆ. ಒಬ್ಬ ಸಂತ  ಮಾತ್ರ ತನ್ನ ಥಾಲಿಯ ಗಂಗೆಯ ನೀರನ್ನು ಒಂಟೆಗೆ ಕುಡಿಸುತ್ತಾನೆ. ಉಳಿದ ಎಲ್ಲರೂ ರಾಮೇಶ್ವರ ತಲುಪಿ ಅಭಿಷೇಕ ಮಾಡುತ್ತಾರೆ. ಆದರೆ ಅವರಿಗೆಲ್ಲ ಬಂದ ಪುಣ್ಯಕ್ಕಿಂತಲೂ ಹೆಚ್ಚು ಒಂಟೆಗೆ ನೀರು ಕುದಿಸಿದ ಸಂತನಿಗೆ ಸಿಗುತ್ತದೆ!

ವೃದ್ಧಾಪ್ಯ ಬೇಡ; ಆದರೆ ಬಂದೇ ಬರುತ್ತದೆ!

ಇನ್ನು ವೃದ್ಧಾಪ್ಯದ ಕಡೆಗೆ ದೃಷ್ಟಿ ಹರಿಸೋಣ. ವೃದ್ಧಾಪ್ಯದ ಮರದ ಕಥೆ ಏನು? ಇದು ಇನ್ನೂ ವಿಚಿತ್ರದ ವಿಷಯ. ವೃಧಾಪ್ಯದ ಮರವೂ ಮನುಷ್ಯನ ಹುಟ್ಟಿನೊಂದಿಗೇ ಹುಟ್ಟುತ್ತದೆ. ಮನುಷ್ಯನೊಡನೆ ಸಮ ಸಮವಾಗಿ ಬೆಳಿಯುತ್ತದೆ. ಅದರ ಸಮಯಕ್ಕೆ ಸರಿಯಾಗಿ ಹಣ್ಣು ಕೊಡುತ್ತದೆ. ಕೆಲವರಿಗೆ ಆ ಮರ ಹಣ್ಣು ಕೊಡುವುದರೊಳಗೆ ಮರಣ ಬರಬಹುದು. ಆಗ ವೃದ್ಧಾಪ್ಯದ ಸುಖವೂ ಇಲ್ಲ, ದುಃಖವೂ ಇಲ್ಲ. ಆ ಮರ ಹಣ್ಣು ಕೊಡುವ ವೇಳೆಯವರೆಗೆ ಬದುಕಿದ್ದಾದರೆ ಆ ಹಣ್ಣನ್ನು ಅನುಭವಿಸಲೇ ಬೇಕು. 

ವೃದ್ಧಾಪ್ಯ ವರವೋ, ಶಾಪವೋ?

ವೃದ್ಧಾಪ್ಯ ವರವೆಂದು ಹೇಳುವವರು ಯಾರೂ ಕಾಣರು. ವೃದ್ಧಾಪ್ಯ ಶಾಪವೆಂದು ಹೇಳುವವರು ಬಹಳ ಮಂದಿ. ತಮಾಷೆಯ ವಿಷಯವೆಂದರೆ ಎಲ್ಲರಿಗೂ ದೀರ್ಘಾಯಸ್ಸು ಬೇಕು. ಆದರೆ ವೃದ್ಧಾಪ್ಯ ಬೇಡ. ತಿಳುವಳಿಕೆ  ಬಂದನಂತರ (ಅಥವಾ ತಿಳುವಳಿಕೆ ಬರುವ ವಯಸ್ಸು ಬಂದ ಮೇಲೆ. ಏಕೆಂದರೆ ಎಲ್ಲರಿಗೂ ತಿಳುವಳಿಕೆ ಬಂದೇ ಬರುತ್ತದೆ ಎಂದು ಹೇಳುವ ಹಾಗಿಲ್ಲ.) ಮನುಷ್ಯನನ್ನು ಕಾಡುವ ಎರಡು ಆಶೆಗಳು ಉಂಟು- ಧನದಾಶೆ ಮತ್ತು ಜೀವಿತದ ಆಶೆ (ಧನಾಶಾ ಜೀವಿತಾಶಾ ಚ). ಹಣ ಸಂಪಾದನೆ ಮಾಡುವ ಆಸೆ ಮತ್ತು ಚಿರಕಾಲ ಬದುಕುವ ಆಸೆ. ತುಂಬಾ ದಿನ ಬದುಕಿರಬೇಕು. ವೃದ್ಧಾಪ್ಯ ಬರಬಾರದು! ಚಿರಂಜೀವಿಯಾದರೆ ಇನ್ನೂ ಒಳ್ಳೆಯದು. ಆದರೆ ಅದು ಸಾಧ್ಯವಿಲ್ಲವಲ್ಲ! 

ವೃದ್ಧಾಪ್ಯದ ಚರ್ಚೆ ಬಂದಾಗ ಯಯಾತಿ ಮತ್ತು ಅವನ ಮಗ ಪುರು ಇವರನ್ನು ನೆನಪಿಸಿಕೊಳ್ಳಲೇಬೇಕು. ಈ ಕಥೆ ಎಲ್ಲರಿಗೂ ಗೊತ್ತಿರುವುದೇ. ಶುಕ್ರಾಚಾರ್ಯರ ಶಾಪದಿಂದ ಬಂದ ಅಕಾಲಿಕ ವೃದ್ಧಾಪ್ಯವನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಯಯಾತಿಯ ಪ್ರಯತ್ನ. ಕಷ್ಟವಾದರೂ ಸರಿ, ತಂದೆಗೆ ಇಚ್ಛೆ ಪೂರ್ತಿಯಾಗಲಿ ಎಂದು ತ್ಯಾಗ ಮಗನಾದ ಪುರುವಿನದು. ಮಹಾಭಾರತದ ಈ ಕಥೆಯನ್ನು ಈ ಕಾಲಮಾನದ ಇಬ್ಬರು ಸಾಹಿತಿಗಳಾದ ವಿ ಎಸ್ ಖಾಂಡೇಕರ್ ಮತ್ತು  ಗಿರೀಶ್ ಕಾರ್ನಾಡ್ ತಮ್ಮದೇ ದೃಷ್ಟಿ ಕೋಣದಿಂದ ನೋಡಿದ್ದಾರೆ. ಮಗನ ಯೌವನವನ್ನು ಪಡೆದ ಯಯಾತಿ ತನ್ನ ಪತ್ನಿಯ ಬಳಿ ಹೋದಾಗ "ನೀನು ಈಗ ನನ್ನ ಮಗ" ಎನ್ನುತ್ತಾಳೆ ಅವಳು.  ಇದು ಖಾಂಡೇಕರ್ ಒತ್ತು ಕೊಟ್ಟ ನೋಟ. ಕಾರ್ನಾಡರ ಯಯಾತಿಯ ಬಳಿ ಬಂದ ಸೊಸೆ "ಈಗ ನೀನೇ ನನ್ನ ಗಂಡ" ಎನ್ನುತ್ತಾಳೆ. ಇದು ಇನ್ನೊಂದು ದೃಷ್ಟಿ. ವಿ. ಎಸ್. ಖಾಂಡೇಕರ್ ಮರಾಠಿ ಭಾಷೆಯ ಪ್ರಸಿದ್ಧ ಸಾಹಿತಿ. ಅವರ "ಯಯಾತಿ" ಕಾದಂಬರಿಗೆ ಸಾಹಿತ್ಯ ಆಕಾಡೆಮಿ ಪ್ರಶಸ್ತಿ (೧೯೬೦) ಸಿಕ್ಕಿತು. ಮತ್ತೆ ಮುಂದೆ ೧೯೭೪ರಲ್ಲಿ "ಭಾರತೀಯ ಜ್ಞಾನಪೀಠ" ಪ್ರಶಸ್ತಿ ಕೂಡ ಲಭಿಸಿತು. ನಮ್ಮ ಕನ್ನಡದ ಪ್ರಖ್ಯಾತ ಸಾಹಿತಿ, ಕಲಾವಿದ ಗಿರೀಶ್ ಕಾರ್ನಾಡ್ ಅವರ "ಯಯಾತಿ" ಒಂದು ನಾಟಕ. ಅವರ ಯಯಾತಿ ನಾಟಕ ೧೯೬೧ರಲ್ಲಿ ಪ್ರಕಟವಾಯಿತು. ಭಾರತೀಯ ಜ್ಞಾನಪೀಠ ಪ್ರಾರಂಭದ ವರ್ಷಗಳಲ್ಲಿ ಒಂದು ಕೃತಿಯ ರಚಯಿತರಿಗೆ ಪ್ರಶಸ್ತಿ ಕೊಡುತ್ತಿತ್ತು. ನಂತರದ ವರ್ಷಗಲ್ಲಿ ಒಂದು ಕೃತಿಯ ಬದಲು ಒಬ್ಬ ಸಾಹಿತಿಯ ಒಟ್ಟಾರೆ ಸಾಹಿತ್ಯ ಸೇವೆಗೆ ಪ್ರಶಸ್ತಿ ಕೊಡಲಾರಂಭಿಸಿತು. (ಶಿವರಾಮ ಕಾರಂತರ "ಮೂಕಜ್ಜಿಯ ಕನಸು" ಕೃತಿಗೆ ಪ್ರಶಸ್ತಿ ಕೊಟ್ಟಾಗ ಬಹಳ ಚರ್ಚೆ ಆಯಿತು. ಪ್ರಶಸ್ತಿ ಕೊಟ್ಟಿದ್ದು ಸರಿ; ಆದರೆ ಕೃತಿಯ ಆಯ್ಕೆ ಸರಿಯಿಲ್ಲ ಎಂದು ಬಹಳ ಅಭಿಪ್ರಾಯಗಳು ಬಂದವು. ಈ ರೀತಿ ಸಮಸ್ಯೆ ತಪ್ಪಿಸಲು ಒಂದು ಕೃತಿಯ ಬದಲು ಒಟ್ಟಾರೆ ಸಾಹಿತ್ಯ ಸೇವೆಗೆ ಪ್ರಶಸ್ತಿ ಎನ್ನುವ ಕ್ರಮ ಜಾರಿಗೆ ಬಂತು ಎಂದು ಒಂದು ಅಭಿಪ್ರಾಯ). ಕಾರ್ನಾಡರಿಗೆ ಒಟ್ಟಾರೆ ಸಾಹಿತ್ಯ ಸೇವೆಗೆ ೧೯೯೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು. 

ವೃದ್ಧಾಪ್ಯ  ಯಾವಾಗ?

ನಮ್ಮ ಚಿಕ್ಕ ವಯಸ್ಸಿನಲ್ಲಿ ತಲೆ ಕೂದಲು ಬೆಳ್ಳಗಾಗುವುದು ಮತ್ತು ಕೂದಲು ತುಂಬಿದ ತಲೆ ಬೊಕ್ಕತಲೆ ಆಗುವುದು ವೃದ್ಧಾಪ್ಯದ ಕುರುಹು ಎಂದು ನಂಬುತ್ತಿದ್ದೆವು. ಚಿಕ್ಕ ವಯಸ್ಸಿನವರಿಗೆ ಬಿಳಿ ಕೂದಲು ಬಂದರೆ "ಬಾಲ ನೆರೆ" ಎಂದು ಹಾಸ್ಯ ಮಾಡುತ್ತಿದ್ದುದೂ ಉಂಟು. ಕೂದಲಿಗೆ ಬಣ್ಣ ಬಳಿಯುವ ಮತ್ತು ಕೃತಕ ಅಂಗಾಂಗಗಳ ಕಾಲ ಬಂದಿರುವ ಈಗ ಹಾಗೆ ಹೇಳಲಾಗುವುದಿಲ್ಲ. 

ಸರಕಾರಗಳಂತೂ ವೃದ್ಧಾಪ್ಯಕ್ಕೆ ೬೦ ವರ್ಷಗಳ ಗೆರೆ ನಿಗದಿ ಪಡಿಸಿವೆ. "ಹಿರಿಯ ನಾಗರಿಕ" (Senior Citizen) ಎಂದು ನಾಮಕರಣ ಸಹ ಮಾಡಿವೆ. ವಯಸ್ಸು ೮೦ ಆದರೆ "ಅತಿ ವೃದ್ಧ". ಸೃಷ್ಟಿಯ ದೃಷ್ಟಿಯಲ್ಲಿ ಯಂತ್ರ ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಅದು ಹಳೆಯ ಯಂತ್ರವೇ.  ಪಂಚಭೂತಗಳಿಂದಾದ ದೇಹಕ್ಕೆ ಅದರದೇ ಆದ ಇತಿ ಮಿತಿಗಳಿವೆ. ಅದನ್ನು ದಾಟುವುದು ಆಗದ ಮಾತು. ಎಲ್ಲೋ ಒಬ್ಬ ಚ್ಯವನ ಋಷಿಯಂತವರು ಅದನ್ನು ಗೆದ್ದರು ಎಂದು ಕೇಳುತ್ತೇವೆ. ಕೇಳುತ್ತೇವೆ, ಅಷ್ಟೇ. ನೋಡಿಲ್ಲ. 

ವೃದ್ಧಾಪ್ಯದಲ್ಲಿ ಮೂರು ಮಜಲುಗಳು; ದೈಹಿಕ, ಬೌದ್ಧಿಕ ಮತ್ತು ಮಾನಸಿಕ. ಮೊದಲನೆಯದು ನಮ್ಮ ಕೈ ಮೀರಿದುದು. ಎರಡನೆಯದು ಮತ್ತು ಮೂರನೆಯದನ್ನು ಪ್ರಯತ್ನಪೂರ್ವಕವಾಗಿ ಎಳೆಯದಾಗಿ ಇಟ್ಟುಕೊಳ್ಳುವುದು ನಮ್ಮ ವಶದಲ್ಲೇ ಇದೆ. ಆದರೆ ಇದಕ್ಕೆ ಪ್ರಬಲವಾದ ಮತ್ತು ಸತತ ಪ್ರಯತ್ನ ಬೇಕು. ಸ್ವಲ್ಪ ಉದಾಸೀನ ಮಾಡಿದರೂ ಇವೆರಡು ನಾಯಿಯ ಬಾಲದಂತೆ ತಮ್ಮ ಚಾಳಿಯನ್ನು ತಕ್ಷಣ ತೋರಿಸುತ್ತವೆ. 

ಭಾರತ ಸರ್ಕಾರದ ಒಂದು ವಿಚಿತ್ರ ವಿವರಣೆಯನ್ನು ಇಲ್ಲಿ ನೆನೆಸಿಕೊಳ್ಳಬೇಕು. ಹಿರಿಯ ನಾಗರಿಕರಿಗೆ ಬ್ಯಾಂಕುಗಳ ಠೇವಣಿ ಹಣಕ್ಕೆ ಅರ್ಧ ಪ್ರತಿಶತ ಹೆಚ್ಚು ಬಡ್ಡಿ ಕೊಡುತ್ತಾರೆ. ಬ್ಯಾಂಕುಗಲ್ಲಿ ಸೇವೆ ಮಾಡಿ ನಿವೃತ್ತರಾದವರಿಗೆ ಒಂದು ಪ್ರತಿಶತ ಹೆಚ್ಚು ಬಡ್ಡಿ ಕೊಡುತ್ತಾರೆ. ಆದರೆ ಅವರು "ಅನಿವಾಸಿ" (NRI) ಆದ ತಕ್ಷಣ ಈ ಎರಡೂ ಸೌಲಭ್ಯಗಳು ಖೋತಾ! ಸರಕಾರದ ದೃಷ್ಟಿಯಲ್ಲಿ ಅವರಿಗೆ ತಾರುಣ್ಯ ಮರಳಿ ಬಂದಂತೆ. 

ವೃದ್ಧಾಪ್ಯ ವರವಾಗಲು ಏನು ಮಾಡಬೇಕು?

ವೃದ್ಧಾಪ್ಯ ವರವೋ ಶಾಪವೋ ಆಗುವುದು ವೃದ್ಧಾಪ್ಯದಲ್ಲಿ ನಿರ್ಧಾರ ಆಗುವ ವಿಷಯ ಅಲ್ಲ. ಆದು ವೃದ್ಧಾಪ್ಯದಲ್ಲಿ ಪ್ರಕಟ ಆಗುವ ಫಲಿತಾಂಶ ಮಾತ್ರ. ಜೀವನದ ಹಿಂದಿನ ದಿನಗಳ ಪ್ರತಿಯೊಂದು ಕ್ರಿಯೆಯೂ ಒಂದೊಂದು ಕಣವಾಗಿ ವೃದ್ಧಾಪ್ಯದಲ್ಲಿ ರೂಪ ತಾಳುತ್ತವೆ. ಸರಿಯಾದ ಕ್ರಮದಲ್ಲಿ ಜೀವನ ನಡೆಸಿದ ವ್ಯಕ್ತಿಗೆ ವೃದ್ಧಾಪ್ಯ ವರವಾಗುವ ಸಾಧ್ಯತೆ ಉಂಟು. ಇಲ್ಲದಿದ್ದರೆ ಅದು ಶಾಪವಾಗುವ ಸಂಭವವೇ ಹೆಚ್ಚು. ಇದರಲ್ಲಿ ಅದೃಷ್ಟದ ಆಟವೂ, ಕಾಣದ ಕೈ ಪ್ರಭಾವಗಳೂ ಕೆಲಸ ಮಾಡುತ್ತವೆ. ಅಡಿಗರು ಹೇಳುವಂತೆ "ಯಾರ ಲೀಲೆಗೋ ಯಾರೋ ಏನೋ ಗುರಿಯಿಡದೆ ಬಿಟ್ಟ ಬಾಣ" ಚುಚ್ಚುವುದೂ ಉಂಟು. ಆಟಕ್ಕೆ ಯಾರೋ ಬಾಣವೊಂದನ್ನು ಬಿಟ್ಟರು. ಆದರೆ ಆ ಬಾಣ ತನ್ನ ಕೆಲಸ ಮಾಡಿತು. ತಾಕಿದವನಿಗೆ ಅದರ ನೋವು ತಿನ್ನುವ ಭಾಗ್ಯ. ಬಾಣ ಬಿಟ್ಟವನು "ನನಗೆ ಆ ಅಭಿಪ್ರಾಯ ಇರಲಿಲ್ಲ" ಎಂದು ಹೇಳಿ ಕೈ ಚೆಲ್ಲಬಹುದು. ಆದರೆ ಏಟು ತಿಂದವನಿಗೆ ಅದು ಏನೂ ಸುಖ ಕೊಡದು. ಉನ್ಮತ್ತರಾದ ಯಾರೋ ಯುವಕರು ಚೇಷ್ಟೆಗಾಗಿ ಓಡಿಸಿದ ವಾಹನದ ಕೆಳಗೆ ಸಿಕ್ಕಿ ಕೈ ಕಾಲು ಮುರಿದುಕೊಂಡ ವ್ಯಕ್ತಿಗೆ ಸರಿಯಾದ ಜೀವನ ಕ್ರಮದಲ್ಲಿ ನಡೆದಿದ್ದರೂ ವೃದ್ಧಾಪ್ಯ ಶಾಪವೇ!

ಒಟ್ಟಿನಲ್ಲಿ ವೃದ್ಧಾಪ್ಯ ವರವಾಗಬೇಕಾದರೆ ಆರೋಗ್ಯ ಚೆನ್ನಾಗಿರಬೇಕು. ಜೊತೆಗೆ ಸ್ವಲ್ಪವಾದರೂ ಧನಬಲ ಇರಲೇಬೇಕು. ಪ್ರೀತಿಯಿಂದ ಕಾಣುವ ಕುಟುಂಬ ವರ್ಗ ಮೂರನೆಯ ಭಾಗ್ಯ. ಇವೇ ರೊಟ್ಟಿ, ಅನ್ನ, ಪಲ್ಯ. ಒಳ್ಳೆಯ ಸ್ನೇಹಿತರು, ಶುಚಿ-ರುಚಿಯಾದ ಹವ್ಯಾಸಗಳು, ಈಗ ಪ್ರಯೋಜನಕ್ಕೆ ಬರುವ ಹಿಂದೆ ಶೇಖರಿಸಿದ ಪದಾರ್ಥಗಳು ಒಗ್ಗರಣೆ, ಉಪ್ಪಿನಕಾಯಿ, ಹಪ್ಪಳ ಇದ್ದಂತೆ. ರೊಟ್ಟಿ, ಅನ್ನ, ಪಲ್ಯದಿಂದ ಊಟ ಆಗಬಹುದು. ಸ್ವಲ್ಪ ನೀರಸ ಇರಬಹುದು. ಆದರೆ ಉಪ್ಪಿನಕಾಯಿ ಮತ್ತು ಹಪ್ಪಳದಿಂದ ಊಟ ಆಗುವುದಿಲ್ಲ!

ಆರೋಗ್ಯ ಚೆನ್ನಾಗಿರಬೇಕು ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಅದೂ ವೃದ್ಧರ ಕೈಯಲ್ಲಿ ಇರುವುದಿಲ್ಲ. "ಕಾಣದ ಕೈ" ವಿಚಿತ್ರವಾದ ವ್ಯಾಧಿಗಳನ್ನು ಕರುಣಿಸಬಹುದು. ಎಲ್ಲ ಸಮಯಗಳಲ್ಲಿಯೂ ಎದೆಗುಂದದೆ ಎದುರಿಸುವ ಮನಸ್ಥಿತಿ ಬಹಳ ಮುಖ್ಯ. ಜೊತೆಗೆ ಔಷಧ-ಉಪಚಾರಗಳು ಸುಲಭವಾಗಿ ಮತ್ತು ಶೀಘ್ರವಾಗಿ ಸಿಗುವ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕು. ಸೋಮಾರಿತನವಿಲ್ಲದೆ ಕಾಲಕಾಲಕ್ಕೆ ವೈದ್ಯರು ನೀಡಿರುವ ಮದ್ದುಗಳನ್ನು ತೆಗೆದುಕೊಳ್ಳಬೇಕಾದ್ದು ಅತ್ಯಂತ ಅವಶ್ಯಕ. ಸ್ವಂತ ಬುದ್ಧಿಯಿಂದ ತಾನೇ ಮದ್ದು ತೆಗೆದುಕೊಳ್ಳುವುದು ಅಪಾಯಕಾರಿಯೇ. 

ಹಣ-ಕಾಸಿನ ವಿಷಯದಲ್ಲಿ ಜಾಗರೂಕತೆ ಇರಬೇಕು. ನಾನು ಯಾರನ್ನೂ ನಂಬುವುದಿಲ್ಲ ಎನ್ನುವವರಿಗೆ ಯಾರನ್ನಾದರೂ ಯೋಗ್ಯರನ್ನು ನಂಬುವವರಿಗಿಂತ ಹೆಚ್ಚು ಅಪಾಯ ಕಟ್ಟಿಟ್ಟ ಬುತ್ತಿ. ವೃದ್ಧಾಪ್ಯ ಹೊಸ ಕನಸುಗಳನ್ನು ಕಟ್ಟುವ ಕಾಲವಲ್ಲ. ಆರ್ಥಿಕ ವಿಷಯಗಳಲ್ಲಿ ಇದನ್ನು ಇನ್ನೂ ಹೆಚ್ಚಾಗಿ ಅನುಸರಿಸಬೇಕು. 

ಹಿಂದಿನ ಜೀವನದಲ್ಲಿ ಬಹಳ ಮುಖ್ಯ ಎಂದುಕೊಂಡಿದ್ದ ಅನೇಕ ವಿಷಯಗಳ ಅನುಪಯುಕ್ತತೆಯನ್ನು ವೃದ್ಧಾಪ್ಯದಲ್ಲಿ ಕಾಣಬಹುದು. ಅಯ್ಯೋ, ಇಷ್ಟು ಸಣ್ಣ ವಿಷಯಕ್ಕೆ ಎಷ್ಟು ಪರದಾಡಿದೆ ಎಂದು ಈಗ ಪೇಚಾಡುವ ಸಮಯ! ಉದ್ವೇಗ ಉಂಟುಮಾಡುವ ವಿಷಯಗಳನ್ನು ಬಿಡುವುದೇ ವಾಸಿ. 

"ನಾನು ಯಾರನ್ನೂ ಲೆಕ್ಕಕ್ಕಿಡುವುದಿಲ್ಲ. ನಾನು ನೇರ, ನಿರ್ಭೀತ. ನನಗೆ ದಯಾ, ದಾಕ್ಷಿಣ್ಯ ಇಲ್ಲ." ಎಂದು ಹೇಳುವ ಅನೇಕರನ್ನು ನಾವು ಕಾಣುತ್ತೇವೆ. ವಿಶಾಲ ಸೃಷ್ಟಿಯಲ್ಲಿ ಯಾವುದೇ ಲೆಕ್ಕಕ್ಕೂ ಬಾರದ ಅತಿ ಸಣ್ಣ ಕಣ ನಾವು ಎನ್ನುವ ಅರಿವು ಇರುವವನಿಗೆ ದಯಾ ದಾಕ್ಷಿಣ್ಯ ಇರಲೇ ಬೇಕು. ಭರ್ತೃಹರಿಯು ಇದನ್ನೇ "ದ್ದಾಕ್ಷಿಣ್ಯಮ್ ಸ್ವಜನೇ, ದಯಾ ಪರಿಜನೇ... " ಮುಂತಾಗಿ ಹೇಳಿದ್ದು. ಪುರಂದರದಾಸರು ಸೊಗಸಾಗಿ ಹೇಳುತ್ತಾರೆ:

ಕಲ್ಲಾಗಿ ಇರಬೇಕು ಕಠಿಣ ಭವ ತೊರೆಯೊಳಗೆ 
ಬಿಲ್ಲಾಗಿ ಇರಬೇಕು ಬಲ್ಲವರೊಳಗೆ 
ಬೆಲ್ಲವಾಗಿರಬೇಕು ಬಂಧು ಜನದೊಳಗೆ  

"ನಾನು ಅದು ಮಾಡುತ್ತೇನೆ. ಹೀಗೆ ಮಾಡುತ್ತೇನೆ" ಎಂದು ಹಾರಾಡುವುದು ಮೊದಲು ನಿಲ್ಲಿಸಬೇಕು. "ಇದು ಬಾಳು ನೋಡು, ನಾ ತಿಳಿದೆನೆಂದರೂ ತಿಳಿದ ಧೀರನಿಲ್ಲ" ಎನ್ನುತ್ತಾರೆ ಅಡಿಗರು. ಪ್ರಕೃತಿಯ ನಿಯಮಗಳಿಗೆ ನಮ್ಮನ್ನು ಒಪ್ಪಿಸಿಕೊಂಡು ಆನಂದ ಕಂಡುಕೊಳ್ಳಬೇಕು. "ಜಗಕೆ ಸಂತಸವೀವ ಘನನು ತಾನೆಂತೆಂಬ ವಿಪರೀತ ಮತಿಯನಳಿದು" ಎನ್ನುವ ಕವಿವಾಣಿಯನ್ನು ದಿನಾ ಮೂರು ಬಾರಿ ಹೇಳಿಕೊಳ್ಳುವುದು ಒಳ್ಳೆಯದು. ಜೀವನದ ಕಾವ್ಯದಲ್ಲಿ ನಾವು ಅನೇಕ ಕಸರತ್ತು ಮಾಡಬಹುದು. ಕೆಲವದರಲ್ಲಿ ಗೆಲ್ಲಬಹುದು. ಅನೇಕದರಲ್ಲಿ ಬೀಳಬಹುದು. ಆದರೆ ಜೀವನ ಕಾವ್ಯದ ಪೂರ್ಣ ವಿರಾಮ (full stop) ಹಾಕುವ ಅಧಿಕಾರವನ್ನು ಅವನು ಇನ್ನೂ ತನ್ನಲ್ಲಿಯೇ ಇಟ್ಟುಕೊಂಡಿದ್ದಾನೆ. ಇದನ್ನು ಮರೆಯದೆ ಬುಲಾವು ಬಂದಾಗ ಹೊರಡಲು ತಯಾರಿದ್ದವನಿಗೆ ವೃದ್ಧಾಪ್ಯದಲ್ಲಿ ಏನು ಕಂಡಿತೋ ಅದರಲ್ಲಿ ಆನಂದ ಅನುಭವಿಸುವ ಕಲೆ ಸಿದ್ಧಿಸುತ್ತದೆ. 

*****

"ಭಾರತೀಯ ಜೀವನ್ ಬಿಮಾ ನಿಗಮ" (Life Insurance Corporation of India) ಜೀವನದ ಆನಂದವನ್ನು ನೋಡುವ ರೀತಿಯೇ ಬೇರೆ. ಅದರ ಅನೇಕ ಪಾಲಿಸಿಗಳಲ್ಲಿ ಜೀವನ್ ಆನಂದ್ ಪಾಲಿಸಿಯೂ ಒಂದು. ಇದು ಒಂದು ರೀತಿಯ ಬಹೂಪಯೋಗಿ ಪಾಲಿಸಿ. ಈ ರೀತಿಯ ಪಾಲಿಸಿಯೊಂದನ್ನು ಪಡೆದುಕೊಂಡ ಸ್ನೇಹಿತನೊಬ್ಬನ ಕಥೆಯೊಂದನ್ನು ಅವನ ಭಾಷೆಯಲ್ಲಿಯೇ ಕೇಳುವುದು ಅಥವಾ ಓದುವುದು ಬಹಳ ಚೆಂದ. 

"ನಾನು ಸಂಪಾದನೆ ಮಾಡಲು ಪ್ರಾಂಭಿಸಿದಾಗಿನಿಂದಲೂ ಜೀವ ವಿಮೆ ಮಾಡಿಸುತ್ತಿದ್ದೆ. ನನ್ನ ಮೊದಲ ಸರಿಯಾದ ಕೆಲಸ ಕೊಡುತ್ತಿದ್ದ ತಿಂಗಳ ಸಂಬಳ ಮೂರು ನೂರು ರೂಪಾಯಿ ಮಾತ್ರ. ಈ ಉದ್ಯೋಗಕ್ಕೆ ಮುಂಚೆ ಸಣ್ಣ ಕೆಲಸಗಳು ಇದ್ದರೂ ವಿಮೆ ಮಾಡಿಸುವ ಧೈರ್ಯ ಇರಲಿಲ್ಲ. ಈ ಉದ್ಯೋಗ ಸೇರಿದಾಗ ಒಂದು ಶನಿವಾರ ಸಹೋದ್ಯೋಗಿಯೊಬ್ಬ ಸಂಜೆ ಅವರ ಮನೆಗೆ ಚಹಾ ಸೇವನೆಗೆ ಕರೆದ. ನಾನೂ ನನ್ನಂತೆ ಇನ್ನಿಬ್ಬರು ಸಹೋದ್ಯೋಗಿಗಳೂ ಹೋದೆವು. ಸ್ವಾಗತಿಸಿ ಕೂಡಿಸಿದ ನಂತರ ಸೊಗಸಾದ ಚೂಡಾ, ಬೋಂಡಾದ ಜೊತೆ ಚಹಾ ಬಂತು. ಆ ಗುಂಗಿನಲ್ಲೇ ಇದ್ದಾಗ ಹಿರಿಯರೊಬ್ಬರು ಜೀವದ ಬೆಲೆ, ವಿಮೆಯ ಪ್ರಾಮುಖ್ಯತೆ ಇತ್ಯಾದಿಗಳ ಬಗ್ಗೆ ಪುಟ್ಟ ಭಾಷಣ ಕೊಟ್ಟರು. ಎಲ್ಲರ ಕೈಯ್ಯಲ್ಲೂ ಒಂದೊಂದು ಫಾರಂ ಇಟ್ಟರು. ಕಡೆಗೆ ಅದು ವಿಮೆ ಪಾಲಿಸಿ ಕೊಳ್ಳುವ ಫಾರಂ ಎಂದು ತಿಳಿಯಿತು. ಬೇಡ ಎನ್ನುವ ಮೊದಲೇ ಹದಿನಾಲ್ಕು ರೂಪಾಯಿ ಮಾಸಿಕ ಕಂತಿನ ಐದು ಸಾವಿರ ರೂಪಾಯಿಯ ಪಾಲಿಸಿಗೆ ಸಹಿ ಮಾಡಿಸಿದರು. ಬೋಂಡಾ, ಚಹಾ ನೀಡಿ ಹುಡುಗಿ ಗಂಟು ಹಾಕುವುದು ಕೇಳಿದ್ದೆ. ಇಲ್ಲಿ ಪಾಲಿಸಿ ಗಂಟುಬಿತ್ತು. ನೀವು ಏನೂ ಚಿಂತೆ ಮಾಡಬೇಡಿ. ನಿಮ್ಮ ಸಂಬಳದಿಂದ ಅದಾಗದೇ ವಿಮೆಯ ಕಂತು ಹೋಗುತ್ತದೆ. ನೀವೇನೂ ಕಟ್ಟಬೇಕಾಗಿಲ್ಲ ಎಂದು ಅವರೇ ಹಣ ನೀಡುವ ರೀತಿ ಅಭಯವನ್ನೂ ನೀಡಿದರು. ಹೀಗೆ ಸಂಬಳ ಹೆಚ್ಚುತ್ತಿದ್ದಂತೆ ಬೇರೆ ಬೇರೆ ಪಾಲಿಸಿ ಕೊಂಡೆ". 

"ಇಪ್ಪತ್ತೈದು ವರ್ಷದ ನಂತರ ಮೊದಲ ಪಾಲಿಸಿ ಹಣ ಬಂತು. ಏಳು ಸಾವಿರದ ಐದು ನೂರು ರೂಪಾಯಿ. ಅದು ಆಗ ಬರುತ್ತಿದ್ದ ಒಂದು ತಿಂಗಳ ಸಂಬಳ! ಇಪ್ಪತ್ತೈದು ವರ್ಷ ಪ್ರತಿ ತಿಂಗಳೂ ಕಂತು ಕಟ್ಟಿದ್ದರ ಪ್ರತಿಫಲ. ಹೀಗೆ ಎಲ್ಲ ಪಾಲಿಸಿಗಳೂ ಮುಗಿದು ವಿಮೆಯೇ ಇಲ್ಲದಂತಾಯಿತು."

"ಇನ್ನೊಬ್ಬ ಹಿತೈಷಿ(?) ಮಿತ್ರರು ಈ ಪರಿಸ್ಥಿತಿ ನೋಡಿ ಬಹಳ ಸಂಕಟ ಪಟ್ಟರು. ಐವತ್ತು ವಯಸ್ಸಿಗೆ ವಿಮೆಯೇ ಇಲ್ಲ ಎಂದರೆ ಏನು? ಬಹಳ ತಪ್ಪು. ಹೊಸ "ಜೀವನ್ ಆನಂದ್" ಬಂದಿದೆ. ಪಾಲಿಸಿ ತಗೊಳ್ಳಿ. ಹತ್ತು ವರ್ಷ ಕಂತು ಕಟ್ಟಿ. ನಿಮ್ಮ ನಿವೃತ್ತಿಯ ವೇಳೆಗೆ ಪಾಲಿಸಿ ಹಣ ಬರುತ್ತದೆ. ಅಷ್ಟೇ ಅಲ್ಲ. ಮುಂದೆ ಕಂತು ಕಟ್ಟದಿದ್ದರೂ ವಿಮೆಯ ಅಭಯ ಛತ್ರ ನಿಮ್ಮ ತಲೆಯ ಮೇಲೆ ಇರುತ್ತದೆ. ನಿಮ್ಮ ಮರಣದ ನಂತರ ಪಾಲಿಸಿಯ ಅಷ್ಟೇ ಹಣ ನಿಮಗೆ {!) ಸಿಗುತ್ತದೆ." ಎಂದು ಬಹಳ ಕಳಕಳಿಯಿಂದ ಹೇಳಿದರು. ಸರಿ, ಆಯಿತು, ಪಾಲಿಸಿ ಬಾಂಡ್ ಬಂತು."

"ಪಾಲಿಸಿ ಬಾಂಡ್ ಹಿಡಿದು ಏನನ್ನೋ ಸಾಧಿಸಿದಂತೆ ಮನೆಗೆ ಹೋದೆ. ಹೆಂಡತಿಯ ಕೈಯಲ್ಲಿ ಬಾಂಡ್ ಇಟ್ಟು "ಜೀವನದ ಆನಂದ" ವಿವರಿಸಿದೆ. "ನಿಮ್ಮ ದರಿದ್ರ ಬಾಂಡ್ ನೀವೇ ಇಟ್ಟುಕೊಳ್ಳಿ. ನಿಮ್ಮ ಸಾವಿನ ನಂತರ ಬರುವ ಆನಂದ ನಮಗೆ ಬೇಡ" ಎಂದು ಪಾಲಿಸಿ ನನ್ನ ಕೈಗೇ ತಳ್ಳಿದಳು." 

"ಹತ್ತು ವರುಷದ ನಂತರ ಪಾಲಿಸಿ ಹಣ ಬಂತು. ಖರ್ಚೂ ಆಯಿತು. ಬಾಂಡ್ ಮಾತ್ರ ನನ್ನ ಮರಣದ ನಿರೀಕ್ಷೆಯಲ್ಲಿ ಕಪಾಟಿನಲ್ಲಿ ಕುಳಿತಿತ್ತು."

"ಮತ್ತೆ ಹತ್ತು ವರುಷದ ನಂತರ ಮತ್ತೊಬ್ಬ ಹಿತೈಷಿ "ಜೀವನದ ಆನಂದ"ದ ವಿಷಯ ಮಾತಾಡುವಾಗ ಹೊಸ ವಿಷಯ ಹೇಳಿದರು. ಈ ಬಾಂಡ್ ಸಹವಾಸ ಸಾಕು ಎಂದರೆ ವಿಮಾ ನಿಗಮಕ್ಕೆ ಹಿಂತಿರುಗಿಸಿ ಸ್ವಲ್ಪ ಕಡಿಮೆ ಆದರೂ ನೀವು ಬದುಕಿದ್ದಾಗಲೇ ಹಣ ಪಡೆಯಬಹುದು. ಹಾಗೆ ಮಾಡಿ. ಸಂಸಾರದಲ್ಲಿ ಮನಸ್ತಾಪ ಯಾಕೆ?" ಎಂದು ಸಲಹೆ ಕೊಟ್ಟರು."

"ಹಾಗೆಯೇ ಮಾಡಿದೆ. ಸ್ವಲ್ಪ ಹಣವೂ ಬಂತು. ಹೆಂಡತಿಯ ಮುಖವೂ ಸ್ವಲ್ಪ ಅರಳಿತು. ಎದೆಯಲ್ಲಿ ಚುಚ್ಚಿಕೊಂಡಿದ್ದ ಮುಳ್ಳು ಹೊರ ಬಂದಂತೆ ನಿರಾಳವಾಯಿತು. ಮರಣದ ನಂತರ ಬರುವ ಆನಂದವನ್ನೂ ಬದುಕಿರುವಾಗಲೇ ಕಂಡೆ!"
*****
ಆನಂದ ಅನುಭವಿಸುವುದಕ್ಕೂ ವಿಷಾದ ಪಡುವುದಕ್ಕೂ ಪ್ರತಿನಿತ್ಯ ನೂರು ಕಾರಣಗಳು ಸಿಗುತ್ತವೆ. ಆಯ್ಕೆ ಅವರವರಿಗೆ ಬಿಟ್ಟಿದ್ದು.