Showing posts with label Neeru. Show all posts
Showing posts with label Neeru. Show all posts

Thursday, July 17, 2025

ಪಾರ್ಥಿವ ಶರೀರ


ಚಿತ್ರರಂಗದ ಹಿರಿಯ ನಟಿ, "ಚತುರ್ಭಾಷಾ ತಾರೆ" ಎಂದು ಹೆಸರಾದ ಶ್ರೀಮತಿ ಬಿ. ಸರೋಜಾ ದೇವಿ ಅವರ ನಿಧನ ಕಳೆದ ವಾರ ಸಂಭವಿಸಿ ಕಲಾಲೋಕವನ್ನು ಬಡವಾಗಿಸಿತು.  ಅನೇಕ ದಶಕಗಳ ಕಾಲ ವಿವಿಧ ರೀತಿಯ ಚಲನಚಿತ್ರಗಳ ವಿಶಿಷ್ಟ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ, ಕಲಾಸೇವೆ ಸಲ್ಲಿಸಿ, ಕೀರ್ತಿ ಸಂಪಾದಿಸಿದವರು ಅವರು. ಅವರ ಅಂತ್ಯ ಸಂಸ್ಕಾರಗಳು ತಮ್ಮ ಹುಟ್ಟೂರಾದ ರಾಮನಗರ ಜಿಲ್ಲೆ, ಚನ್ನಪಟ್ಟಣ ಬಳಿಯ ದಶಾವರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ, ಮಂಗಳವಾರ ನಡೆಯಿತು. 

ಈ ಸಂದರ್ಭದಲ್ಲಿ ಕರ್ನಾಟಕ ಮುಖ್ಯ ಮಂತ್ರಿಗಳ ಕಚೇರಿ ನೀಡಿದ ಕನ್ನಡ ಪ್ರಕಟಣೆಯೊಂದು ಅದೇ ಕಚೇರಿಯಿಂದ ಇಂಗ್ಲಿಷಿನಲ್ಲಿ (ಪ್ರಾಯಶಃ ಗೂಗಲ್ ಮೂಲಕ) ತರ್ಜುಮೆಗೊಂಡು "ಮುಖ್ಯ ಮಂತ್ರಿಗಳು ಶ್ರೀಮತಿ ಸರೋಜಾ ದೇವಿಯವರ earthly body ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು" ಎಂದು ತಿಳಿಸಿತು. 

ಕನ್ನಡದಲ್ಲಿ "ಪಾರ್ಥಿವ ಶರೀರ" ಎಂದು ಹೇಳುವ ರೀತಿ ಇಂಗ್ಲೀಷಿನಲ್ಲಿ ಸಾಮಾನ್ಯವಾಗಿ "mortal remains" ಅನ್ನುತ್ತಾರೆ. ಇಂಗ್ಲಿಷಿಗೆ ಹೀಗೆ "earthly body" ಆಗಿ  ಭಾಷಾಂತರಗೊಂಡ ಸಂದರ್ಭದಲ್ಲಿ ಮಿತ್ರರೊಬ್ಬರು "ಹೀಗೆ ಪಾರ್ಥಿವ ಶರೀರ ಎಂದು ಏಕೆ ಹೇಳುತ್ತಾರೆ?" ಎಂದು ಪ್ರಶ್ನಿಸಿದ್ದಾರೆ. ಅದನ್ನಷ್ಟು ನೋಡೋಣ. 

ಪಾರ್ಥಿವ ಅನ್ನುವ ಪದದ ಮೂಲ "ಪೃಥ್ವಿಯಿಂದ ಆದದ್ದು" ಎನ್ನುವುದರಿಂದ ಬಂದದ್ದು. ಈ ಭೂಮಿಗೆ "ಪೃಥ್ವಿ" ಎಂದು ಹೆಸರು ಬಂದದ್ದು "ಪೃಥು ಚಕ್ರವರ್ತಿ" ಕಡೆಯಿಂದ. ಜೀವ ಕೊಟ್ಟವನು ತಂದೆ. ಹಾಗೆಯೇ ಜೀವ ಉಳಿಸಿದವನೂ ತಂದೆಯೇ. ಹಸುವಿನ ರೂಪದಲ್ಲಿ ತಪ್ಪಿಸಿಕೊಂಡು ಓಡುತ್ತಿದ್ದ ಭೂದೇವಿಯ ಸಂಹಾರ ಮಾಡಲು ಹೊರಟ ಪೃಥು, ಅವಳ  ಮನವಿಯ ಮೇರೆಗೆ ಜೀವದಾನ ಮಾಡಿದ. ಆದ್ದರಿಂದ ಭೂದೇವಿಯು ಪೃಥುವಿನ ಮಗಳಾಗಿ, "ಪೃಥ್ವಿ" ಎಂದು ಹೆಸರು ಪಡೆದಳು. ಈ ಪೃಥು ಚಕ್ರವರ್ತಿ ಯಾರು? ನಾವು ವಾಸಿಸುವ ಭೂಮಿಗೆ "ಪೃಥ್ವಿ" ಎಂದು ಹೆಸರು ಏಕೆ ಬಂದಿತು? ಈ ಪ್ರಶ್ನೆಗಳಿಗೆ ಉತ್ತರಕ್ಕೆ ಇಲ್ಲಿ ಕ್ಲಿಕ್ ಮಾಡಿ ಓದಿ ತಿಳಿಯಬಹುದು. 

*****

"ಮಣ್ಣಿಂದ ಕಾಯ ಮಣ್ಣಿಂದ" ಎನ್ನುವುದು ಶ್ರೀ ಪುರಂದರದಾಸರ ಒಂದು ದೇವರನಾಮ. ಅದರಲ್ಲಿ "ಸತ್ತವರನ್ನು ಹೂಳಿ ಸುಡುವುದೇ ಮಣ್ಣು" ಎಂದು ಹೇಳಿದ್ದಾರೆ. "ಪಂಚಭೂತಗಳಿಂದ ಆದ ದೇಹ ಪಂಚಭೂತಗಳಲ್ಲಿ ಲೀನವಾಯಿತು" ಎಂದು ಕಥೆ, ಕಾದಂಬರಿಗಳಲ್ಲಿ ಬರೆಯುತ್ತಾರೆ. "ನುಡಿನಮನ" ನೀಡುವಾಗಲೂ ಈ ರೀತಿ ಹೇಳುತ್ತಾರೆ. ಹಾಗಾದರೆ "ಪಾರ್ಥಿವ ಶರೀರ" ಎಂದರೆ ಏನು? ಇದೇ ರೀತಿ ಬೇರೆಯ ಶರೀರಗಳೂ ಇವೆಯೇ? ಇವೆಲ್ಲ ಕೇಳಬಹುದಾದ, ಕೇಳಬೇಕಾದ ಪ್ರಶ್ನೆಗಳೇ. 

ಸೃಷ್ಟಿಯು ಹೇಗಾಯಿತು? ಅದರ ಕ್ರಮವೇನು? ಈ ಮುಂತಾದ ಪ್ರಶ್ನೆಗಳಿಗೆ ನಮ್ಮ ವೈದಿಕ ವಾಂಗ್ಮಯದಲ್ಲಿ ಅನೇಕ ಕಡೆ ವಿವರಣೆಗಳನ್ನು ಕೊಟ್ಟಿದ್ದಾರೆ. ಉಪನಿಷತ್ತುಗಳು ಮತ್ತು ಪುರಾಣಗಳಲ್ಲಿ ಈ ವಿವರಗಳು ಲಭ್ಯವಿವೆ. ಪದ್ಮ ಪುರಾಣದ ಪ್ರಾರಂಭದಲ್ಲಿಯೇ ಸವಿಸ್ತಾರವಾಗಿ ಇದನ್ನು ನೋಡಬಹುದು. 

ಬ್ರಹ್ಮರ್ಷಿ ವಸಿಷ್ಠರ ಮಗ ಶಕ್ತಿ. ಶಕ್ತಿಯ ಮಗ ಪರಾಶರರು. ಪರಾಶರರ ಮಗ ವೇದವ್ಯಾಸರು. ವೇದವ್ಯಾಸರಿಂದ ಈ ಗ್ರಂಥಗಳೆಲ್ಲ ರಚನೆ ಆದವು. ಶುಕಾಚಾರ್ಯರು ವೇದವ್ಯಾಸರ ಮಗ. ಅವರ ಮೂಲಕ ಶ್ರೀಮದ್ ಭಾಗವತ ಪರೀಕ್ಷಿತ್ ಮಹಾರಾಜನಿಗೆ ಹೇಳಲ್ಪಟ್ಟಿರು. ರೋಮಹರ್ಷಣ ಋಷಿ ವೇದವ್ಯಾಸರ ಮತ್ತೊಬ್ಬ ಮಗ. ಉಗ್ರಶ್ರವಸ್ ರೋಮಹರ್ಷಣರ ಮಗ. ಈ ರೋಮಹರ್ಷಣ ಮತ್ತು ಉಗ್ರಶ್ರವಸ್ ಸಾಕ್ಷಾತ್ ವೇದವ್ಯಾಸರ ಬಳಿ ಅಧ್ಯಯನ ಮಾಡಿದ್ದರಿಂದ ಅವರ ಶಿಷ್ಯರೂ ಹೌದು. ಅನೇಕ ಪುರಾಣಗಳಲ್ಲಿ ಇವರ ಹೆಸರು ಬರುತ್ತದೆ. "ಸೂತಿ" ಅನ್ನುವ ತಾಯಿಯ ಮಗನಾದುದರಿಂದ ಉಗ್ರಶ್ರವಸ್ಸಿಗೆ "ಸೂತ" ಎಂದೂ ಹೆಸರಾಯಿತು. ಪುರಾಣಗಳನ್ನು ಪ್ರಚುರಪಡಿಸಿದ್ದರಿಂದ "ಪುರಾಣೀಕರು" ಎಂದು ವೃತ್ತಿನಾಮ (ಶಾಸ್ತ್ರವನ್ನು ತಿಳಿದು, ಅದನ್ನು ತಿಳಿಸಿ ಹೇಳುವರಿಗೆ ಶಾಸ್ತ್ರೀ ಎನ್ನುವಂತೆ) ಬಂದಿತು. "ಸೂತ ಪುರಾಣೀಕರು" ಎಂದು ಕಥೆಗಳಲ್ಲಿ ಬರುವ ಹೆಸರು ಇವರದೇ. 

"ನೈಮಿಷಾರಣ್ಯ" ಅನ್ನುವುದು ಈಗಿನ ಉತ್ತರ ಪ್ರದೇಶ ರಾಜ್ಯದ ಸೀತಾಪುರ ಜಿಲ್ಲೆಯಲ್ಲಿದೆ. ಗೋಮತಿ ನದಿಯ ತೀರದ ಕ್ಷೇತ್ರ. ಇದು ಹಿಂದೆ ಒಂದು ದಟ್ಟವಾದ ಕಾಡು ಪ್ರದೇಶ. ಇಲ್ಲಿ "ನಿಮಿಷ" ಅನ್ನುವ ಹಣ್ಣು ಕೊಡುವ ಮರಗಳಿದ್ದವಂತೆ. ಈ ಮರದ ಹಣ್ಣುಗಳು ತಪಸ್ವಿಗಳಿಗೆ ಆಧಾರವಾಗಿದ್ದುದರಿಂದ ಮತ್ತು ದಟ್ಟವಾಗಿ ಈ ಮರಗಳು ಆ ಕಾಡಿನಲ್ಲಿ ಬೆಳೆದಿದ್ದುದರಿಂದ ಅದಕ್ಕೆ "ನೈಮಿಷಾರಣ್ಯ" ಎನ್ನುವ ಹೆಸರು ಬಂದಿತು. "ನಿಮಿಷ" ಅನ್ನುವ ಪದಕ್ಕೆ ಬೇರೆ ಬೇರೆ ವಿವರಣೆಗಳೂ ಉಂಟು. ಅಲ್ಲಿ ಶೌನಕರು ಎನ್ನುವ ಹೆಸರಿನ ಋಷಿಗಳು ಒಂದು ಗುರುಕುಲವನ್ನು ನಡೆಸುತ್ತಿದ್ದರು. ಬಹಳ ತಿಳಿದವರೂ, ಜ್ಞಾನಿಗಳೂ ಆದುದರಿಂದ ಈ ಶೌನಕರನ್ನು ಕಾಣಲು ಮತ್ತು ಅವರಿಂದ ಜ್ಞಾನ ಸಂಪಾದಿಸಲು ಅನೇಕ ಋಷಿ-ಮುನಿಗಳು ದೇಶದ ಎಲ್ಲಕಡೆಗಳಿಂದ ನೈಮಿಷಾರಣ್ಯದಲ್ಲಿ ಬಂದು ಸೇರುತ್ತಿದ್ದರು.  ಆ ಪುಣ್ಯಕ್ಷೇತ್ರದಲ್ಲಿ ಅನೇಕ ಯಜ್ಞ-ಯಾಗಾಡಿಗಳೂ ನಡೆಯುತ್ತಿದ್ದುವು. 

ಇಂತಹ ಸಂದರ್ಭಗಳಲ್ಲಿ ಸೇರಿದ ಎಲ್ಲ ಋಷಿ-ಮುನಿಗಳು ಮತ್ತು ಜಿಜ್ಞಾಸು ಮಹನೀಯರು "ಜ್ಞಾನ ಸಭೆ" ನಡೆಸುತ್ತಿದ್ದರು. ಯಾರಿಗಾದರೂ ಅನುಮಾನ, ಪ್ರಶ್ನೆಗಳಿದ್ದರೆ ಆ ಸಭೆಯಲ್ಲಿ ಪ್ರಸ್ತಾಪ ಮಾಡಬಹುದಿತ್ತು. ಸೂಕ್ತ ಉತ್ತರ, ಸಮಾಧಾನ ತಿಳಿದ ಮತ್ತೊಬ್ಬರು ಅವಕ್ಕೆ ಉತ್ತರ ಕೊಡುತ್ತಿದ್ದರು. ಹೀಗೆ  ನಡೆಯುತ್ತಿದ್ದಾಗ ಅಲ್ಲಿಗೆ ಸೂತ ಪುರಾಣೀಕರು ಬಂದರು. ಅವರ ಜ್ಞಾನಪ್ರಭೆಯ ಬಗ್ಗೆ ತಿಳಿದಿದ್ದ ಎಲ್ಲಾ ಸಜ್ಜನರು ಅವರನ್ನು ಆದರದಿ೦ದ ಬರಮಾಡಿಕೊಂಡು ಸತ್ಕರಿಸಿದರು. ನಂತರ ಅವರ ಮುಂದೆ ತಮ್ಮ ತಮ್ಮ ಪ್ರಶ್ನೆ, ಅನುಮಾನಗಳನ್ನು ಇಡುತ್ತಾ ಪರಿಹಾರ ಕಂಡುಕೊಂಡರು. ಅನೇಕ ಪುರಾಣಗಳು ಮೊದಲ ಬಾರಿಗೆ ಅಲ್ಲಿ ಪ್ರವಚನಗೊಂಡವು. ಪ್ರಶ್ನೆ ಕೇಳುವವರು ಶೌನಕರೇ ಮುಂತಾದ ಜ್ಞಾನಿಗಳು. ಆದ್ದರಿಂದ "ಶೌನಕಾದಿಗಳು" ಎಂದು ಸಂಬೋಧನೆ. ಉತ್ತರ ಹೇಳುವವರು ಸೂತ ಪುರಾಣೀಕರು. ಆದ್ದರಿಂದ ಅನೇಕ ಕಥೆಗಳಲ್ಲಿ "ನೈಮಿಷಾರಣ್ಯವಾಸಿಗಳಾದ ಶೌನಕಾದಿ ಋಷಿಗಳಿಗೆ ಸೂತ ಪುರಾಣೀಕರು ಹೀಗೆ ಹೇಳಿದರು....." ಎಂಬ ವಾಕ್ಯದಿಂದ ಪ್ರಾರಂಭ! 

*****

ಐದರ ಐದು ಗುಂಪುಗಳು ಸೇರಿ ಇಪ್ಪತ್ತೈದು ತತ್ವಗಳಾದುವು. ಐದು ಜ್ಞಾನೇಂದ್ರಿಯಗಳು. ಐದು ಕರ್ಮೇಂದ್ರಿಯಗಳು. ಐದು ಪಂಚಭೂತಗಳು. ಐದು ಪಂಚತನ್ಮಾತ್ರಗಳು. ಮನಸ್ಸು-ಬುದ್ಧಿ-ಅಹಂಕಾರ-ಚಿತ್ತ-ಚೇತನ ಇವು ಮತ್ತೈದು. ಇವುಗಳ ವಿವರವನ್ನು ಮತ್ತೆಂದಾದರೂ ನೋಡೋಣ. 

ಪೃಥ್ವಿ-ಅಪ್ಪು-ತೇಜಸ್ಸು-ವಾಯು-ಆಕಾಶ ಇವು ಪಂಚಭೂತಗಳೆಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಇವನ್ನೇ ಕ್ರಮವಾಗಿ ಮಣ್ಣು-ನೀರು-ಬೆಂಕಿ-ಗಾಳಿ-ಆಕಾಶ ಎನ್ನುವುದು. ತೇಜಸ್ಸು ಅಥವಾ ಬೆಂಕಿ ಎಂದರೆ ಕೇವಲ ಉರಿಯುವ ಅಗ್ನಿಯಲ್ಲ. ಎಲ್ಲ ರೀತಿಯ ಶಕ್ತಿ ಸ್ರೋತಗಳೂ ಅಗ್ನಿಯ ರೂಪಗಳೇ. ಆಕಾಶವೆಂದರೆ ನಮ್ಮ ತಲೆಯ ಮೇಲೆ ಎಲ್ಲೋ ಮೇಲೆ ಇದೆ ಎಂದಲ್ಲ. ಆಕಾಶ ಎಂದರೆ ಚಲನೆಗೆ ಅವಕಾಶ. ಇಂಗ್ಲಿಷಿನಲ್ಲಿ ಸ್ಪೇಸ್ ಅನ್ನಬಹುದು. ಆಕಾಶ ಇಲ್ಲದಿದ್ದರೆ ನಮ್ಮ ಕೈ-ಕಾಲುಗಳು ಆಡಲೂ ಸಾಧ್ಯವಿಲ್ಲ. 

ಏನಾದರೂ ವಸ್ತು ತಯಾರು ಮಾಡಬೇಕಾದರೆ ಅದಕ್ಕೆ ಸೂಕ್ತವಾದ "ಪದಾರ್ಥ" ಬೇಕು. ಇದನ್ನು "ದ್ರವ್ಯ' ಅನ್ನುತ್ತಾರೆ. (ದ್ರವ್ಯ ಅಂದರೆ ಕೇವಲ ಹಣ-ಕಾಸು ಅಲ್ಲ). ಇಂಗ್ಲಿಷಿನಲ್ಲಿ ರಾ ಮಟೇರಿಯಲ್ ಅನ್ನಬಹುದು. ಈ  ದ್ರವ್ಯಗಳ ಮಿಶ್ರಣದಿಂದ ಪದಾರ್ಥಗಳು ತಯಾರಾಗುತ್ತದೆ. ಮಿಶ್ರಣದ ಪ್ರಮಾಣ ಮತ್ತು ಮಾಡುವ ವಿಧಾನ ಬದಲಾದಂತೆ ತಯಾರಾಗುವ ಪದಾರ್ಥವೂ ಬದಲಾಗುತ್ತದೆ. ಅಡಿಗೆ ಮಾಡುವವರಿಗೆ ಇದು ಚೆನ್ನಾಗಿ ಗೊತ್ತು. ಒಂದೇ ರೀತಿಯ ಅಡಿಗೆ ಸಾಮಾನುಗಳನ್ನು ಬಳಸಿ, ಬೇರೆ ಬೇರೆ ಪ್ರಮಾಣದಲ್ಲಿ ಸೇರಿಸಿ, ಮಾಡುವ ಕ್ರಮ, ಕಾಲ ಮತ್ತು ಉಷ್ಣಾ೦ಶ ಬದಲಿಸಿ ವಿವಿಧ ತಿಂಡಿ-ತಿನಿಸುಗಳನ್ನು ತಯಾರಿಸುವಂತೆ. 

*****

ಒಂದು ಮಡಿಕೆ ಮಾಡುವುದನ್ನೇ ನೋಡೋಣ. ಮಡಿಕೆ ಮಾಡಲು ಮೂಲ ದ್ರವ್ಯ ಮಣ್ಣು. ಕೇವಲ ಮಣ್ಣಿನಿಂದ ಮಡಿಕೆ ಮಾಡಲಾಗುವುದಿಲ್ಲ. ಮಣ್ಣು ಪುಡಿ ಪುಡಿಯಾದ ದ್ರವ್ಯ. ಕೈಯಲ್ಲಿ ಹಿಡಿದುಕೊಂಡು ಕೆಳಗೆ ಬಿಟ್ಟರೆ ಒಂದು ಗುಡ್ಡೆಯಾಗಿ ಬೀಳುತ್ತದೆ. ಅದಕ್ಕೆ ಒಂದು ಆಕಾರ ಕೊಡಬೇಕಾದರೆ ಅದಕ್ಕೆ ನೀರು ಸೇರಿಸಬೇಕು. ಮಣ್ಣನ್ನು ನೀರಿನಿಂದ ಕಲೆಸಿದರೆ ಆ ಮಿಶ್ರಣದಿಂದ ಮಡಿಕೆ ಮಾಡಬಹುದು. ಮಡಿಕೆಯನ್ನೇನೋ ಮಾಡಬಹುದು. ಆದರೆ ಅದು ಉಳಿಯುವುದಿಲ್ಲ. ಅದನ್ನು ಬಿಸಿಲಿನಲ್ಲಿ ಒಣಗಿಸಿದರೆ ಸ್ವಲ್ಪಮಟ್ಟಿಗೆ ಉಳಿಯುತ್ತದೆ. ಆದರೆ ಅದರಲ್ಲಿ ನೀರು ಶೇಖರಿಸಬೇಕಾದರೆ, ಅದು ಪ್ರಯೋಜನಕ್ಕೆ ಬರಬೇಕಾದರೆ, ಅದನ್ನು ಬೆಂಕಿಯಲ್ಲಿ ಕಾಯಿಸಬೇಕು. ಇಷ್ಟೆಲ್ಲಾ ಆದ ನಂತರ ಮಡಿಕೆ ಕೆಲವು ಕಾಲ ಇರಬಲ್ಲದು. 

ಮಡಿಕೆಯ ಖಾಲಿ ಇರುವ ಜಾಗದಲ್ಲಿ ಗಾಳಿ ತುಂಬಿಕೊಳ್ಳುತ್ತದೆ. ಅದು ಈಕಡೆ-ಆಕಡೆ ಚಲಿಸಲು ಅವಕಾಶ (ಆಕಾಶ) ಬೇಕು. ತಯಾರು ಮಾಡಲು ಮೂರು ದ್ರವ್ಯಗಳು. ಮತ್ತೆ ಉಪಯೋಗಕ್ಕೆ ಬರಲು ಇನ್ನೆರಡು ದ್ರವ್ಯಗಳು. 

ನಾಲ್ಕು ಭಾಗ ಮಣ್ಣು, ಮೂರು ಭಾಗ ನೀರು ಮತ್ತು ಒಂದು ಭಾಗ ಬೆಂಕಿಯಿಂದ ಆದ ದೇಹಕ್ಕೆ "ಪಾರ್ಥಿವ" ಎನ್ನುತ್ತಾರೆ. ನಮ್ಮಗಳ ದೇಹವೂ ಇದೇ ಪ್ರಮಾಣದ್ದು. ಮಣ್ಣು-ನೀರುಗಳ ಮಿಶ್ರಣವನ್ನು ಶಕ್ತಿ (ಎನರ್ಜಿ) ಹಿಡಿದಿಟ್ಟಿದೆ. ಅದು ಕೆಲಸಮಾಡಲು ವಾಯು ಮತ್ತು ಆಕಾಶಗಳೂ ಬೇಕು. ಮಣ್ಣಿನ (ಪೃಥ್ವಿ) ಪ್ರಮಾಣ ಎಲ್ಲಕ್ಕೂ ಹೆಚ್ಚು ಇರುವುದರಿಂದ ಅದು "ಪಾರ್ಥಿವ ಶರೀರ" ಎಂದಾಯಿತು. 

ನಾಲ್ಕು ಭಾಗ ನೀರು, ಮೂರು ಭಾಗ ಮಣ್ಣು ಮತ್ತು ಒಂದು ಭಾಗ ಬೆಂಕಿಯಿಂದ ಆದ ಶರೀರಕ್ಕೆ "ಜಲೀಯ" ಶರೀರ ಎಂದು ಹೆಸರು. ಹೆಚ್ಚಿನ ಜಲಚರಗಳು ಈ ಗುಂಪಿಗೆ ಸೇರಿದವು. ನೀರಿನ (ಜಲ) ಪ್ರಮಾಣ ಹೆಚ್ಚಿರುವುದರಿಂದ ಅದು "ಜಲೀಯ ಶರೀರ" ಎಂದಾಯಿತು. 

ನಾಲ್ಕು ಭಾಗ ಶಕ್ತಿ , ಮೂರು ಭಾಗ ನೀರು ಮತ್ತು ಒಂದು ಭಾಗ ಮಣ್ಣು, ಇವುಗಳಿಂದ ಆದ ಶರೀರಕ್ಕೆ "ತೈಜಸ" ಎಂದು ಕರೆಯುವರು. ತೇಜಸ್ಸು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಅದು "ತೈಜಸ ಶರೀರ" ಆಯಿತು. ಅನೇಕ ದೇವತೆಗಳು ಈ ರೀತಿಯ ತೈಜಸ ರೂಪದಲ್ಲಿ ದರ್ಶನ ಕೊಡುತ್ತಾರಂತೆ. ಆಗ ಹೆಚ್ಚಿನ ಶಕ್ತಿಯ ಅನುಭವ ಆಗುತ್ತದಂತೆ. 

ಈ ಪಾರ್ಥಿವ ಶರೀರ, ಜಲೀಯ ಶರೀರ ಮತ್ತು ತೈಜಸ ಶರೀರ ಅಲ್ಲದೆ ಮತ್ತೊಂದು ಉಂಟು. ಅದು "ದಿವ್ಯ ಶರೀರ".  ಅದು ಪೂರ್ಣವಾಗಿ ಬೆಳಕಿನ ರೂಪ. ಆ ರೂಪದಲ್ಲಿ ಅಗಾಧವಾದ ಬೆಳಕು. ಅಂದರೆ ಸೂರ್ಯನಂತೆ ಪ್ರಖರತೆ. ಆದರೆ ಅಂತಹ ತಡೆಯಲಾರದ ಶಾಖವಿಲ್ಲ. ಚಂದ್ರನ ಬೆಳಕಿನಂತೆ ಹಿತಕರ. ಎರಡೂ ಗುಣವುಳ್ಳದ್ದು. ಸೂರ್ಯನ ಪ್ರಖರವಾದ ಕಾಂತಿ. ಆದರೆ ಚಂದ್ರನ ಬೆಳಕಿನ ಶಾಂತವಾದ ಅನುಭವ. ಪರಮಾತ್ಮನು ಮತ್ತು ಕೆಲವು ಹಿರಿಯ ದೇವತೆಗಳು ಹೀಗೆ ದರ್ಶನ ಕೊಡುತ್ತಾರಂತೆ. 

*****

ಪಾರ್ಥಿವ ಶರೀರದಿಂದ ಜೀವನು ನಿರ್ಗಮಿಸಿದ ಮೇಲೆ, ಮಡಿಕೆ ಒಡೆದು ಚೂರಾದಾಗ ಹೇಗೆ ಅದು ಮಣ್ಣು, ನೀರು ಮತ್ತು ವಿಶಾಲ ಶಕ್ತಿಯ ಸ್ರೋತದಲ್ಲಿ ಸೇರುತ್ತದೋ ಹಾಗೆ ಪಾರ್ಥಿವ ದೇಹವೂ ಮತ್ತೆ ಪಂಚಭೂತಗಳಲ್ಲಿ ಸೇರುತ್ತದೆ. ಸುಟ್ಟಾಗ ಬೂದಿ. ಅದೂ ಮಣ್ಣೇ. ಹೂಳಿದಾಗ ಮಣ್ಣಂತೂ ಸರಿಯೇ ಸರಿ. ಹೀಗೂ ಮಣ್ಣು. ಹಾಗೂ ಮಣ್ಣು.  ನೀರಿನ ಅಂಶ ಸುಟ್ಟಾಗ ಆವಿಯಾಗಿ ಗಾಳಿಗೆ ಹೋಯಿತು. ಹೂತಾಗ ಮಣ್ಣಿನಲ್ಲಿ ತೇವವಾಗಿ ಸೇರಿತು. ಹೀಗಾದಾಗ ವಾಯುವೂ ಇಲ್ಲ; ಆಕಾಶವೂ ಇಲ್ಲ. ಪಾರ್ಥಿವ ದೇಹ ಪಂಚ ಭೂತಗಳಲ್ಲಿ ಲೀನವಾಯಿತು ಎನ್ನುತ್ತೇವೆ. 

ಪಾರ್ಥಿವ ಶರೀರ ಮತ್ತು ಅದು ಪಂಚ ಭೂತಗಳಲ್ಲಿ ಹೇಗೆ ಲೀನವಾಗುತ್ತದೆ ಎಂದು ತಿಳಿದಂತಾಯಿತು. ಇಪ್ಪತ್ತೈದು ತತ್ವಗಳ ಬಗ್ಗೆ ಮತ್ತೆಂದಾದರೂ ಯೋಚಿಸೋಣ.  

Saturday, June 21, 2025

ಅಷ್ಟ ಭೋಗಗಳು


ಹಿಂದಿನ ಸಂಚಿಕೆಯಲ್ಲಿ "ಕುಳಿತುಕೊಳ್ಳುವ ಆಸನಗಳು" ಎನ್ನುವ ಶೀರ್ಷಿಕೆಯಡಿ ಧ್ಯಾನ-ಜಪ ಮುಂತಾದುವುಗಳ ಅನುಷ್ಠಾನಕ್ಕೆ ಕುಳಿತುಕೊಳ್ಳುವಾಗ ಉಪಯೋಗಿಸುವ ಪೀಠಗಳು (ಆಸನಗಳು) ಮತ್ತು ಅವುಗಳಿಂದ ಬರಬಹುದಾದ ಶುಭ-ಅಶುಭ ಫಲಗಳನ್ನು ನೋಡಿದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ನಮ್ಮ ಆಚರಣೆಗಳಲ್ಲಿ ದೇವರು-ದೇವತೆಗಳನ್ನು ಪ್ರಾರ್ಥಿಸುವಾಗ  "ಸಕಲ ಭೋಗ-ಭಾಗ್ಯ ಸಿಧ್ಯರ್ಥಂ" ಎಂದು ಸಂಕಲ್ಪಿಸಿ ಬೇಡುವುದು ನಡೆದುಬಂದ ವಾಡಿಕೆ. ಗುರು-ಹಿರಿಯರ ಆಶೀರ್ವಾದ ಪಡೆಯುವಾಗ "ಸಕಲ ಭೋಗ-ಭಾಗ್ಯ ಸಿದ್ಧಿರಸ್ತು" ಎಂದು ಅವರು ಆಶೀರ್ವದಿಸುವೂ ಉಂಟು. 

ಈ ಭೋಗಗಳು ಮತ್ತು ಭಾಗ್ಯಗಳು ಯಾವುವು? ಸಾಮಾನ್ಯವಾಗಿ "ಅಷ್ಟಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎಂದು ಹೇಳುತ್ತಾರೆ. ಇವುಗಳ ವಿವರವೇನು ಎಂದು ಸ್ನೇಹಿತರೊಬ್ಬರು ಕೇಳಿದ್ದಾರೆ. 

ಈ ಅಷ್ಟ ಭಾಗ್ಯಗಳು ಯಾವವು ಎನ್ನುವುದನ್ನು ಈಗ ನೋಡೋಣ. 

*****

ಮನುಷ್ಯನು ಸುಖಜೀವನ ನಡೆಸುವುದಕ್ಕೆ ಕೆಲವು ರೀತಿಯ ಅನುಕೂಲಗಳು ಬೇಕೇ ಬೇಕು. ಸಮಾಜವನ್ನು ತೊರೆದು ಕಾಡು-ಮೇಡುಗಳಲ್ಲಿ ಸನ್ಯಾಸಿಯ ಜೀವನ ನಡೆಸುವುದು ಒಂದು ರೀತಿ. ಅಲ್ಲಿ ಯಾವುದೇ ಭೋಗಕ್ಕೆ ಸ್ಥಾನವಿಲ್ಲ. ಆದರೆ ಸಮಾಜದಲ್ಲಿ ಗೃಹಸ್ಥನಾಗಿ ಬದುಕುವ ವ್ಯಕ್ತಿಗೆ ಈ ರೀತಿಯ ಸನ್ಯಾಸಿ ಜೀವನ ಅಷ್ಟು ಹೊಂದುವುದಿಲ್ಲ. ಭೋಗ-ಭಾಗ್ಯಗಳ ಹಿಂದೆ ಬಿದ್ದು ಸಾಧನೆಯನ್ನು ಗೌಣವಾಗಿ ಕಾಣುವುದು ಮನುಷ್ಯ ಜೀವನದ ಉದ್ದೇಶವಲ್ಲ. ಆದರೆ, ಈ ಕಾರಣಕ್ಕಾಗಿ ಗೃಹಸ್ಥನು ಎಲ್ಲವನ್ನೂ ತ್ಯಜಿಸುವುದು ಸಾಧ್ಯವಿಲ್ಲ. ತನ್ನ ಸ್ವಂತ ಉಪಯೋಗಕ್ಕೆ, ಮತ್ತು ಅದಕ್ಕಿಂತ ಹೆಚ್ಚಾಗಿ ತನ್ನನ್ನು ನಂಬಿ ಜೊತೆಯಲ್ಲಿ ಬಾಳುವ ಕುಟುಂಬದ ಸದಸ್ಯರಿಗೆ ಸುಖ ಜೀವನ ನಡೆಸಲು ಈ ಭೋಗ-ಭಾಗ್ಯಗಳು ಬೇಕು. ಇವೆರಡಿಕ್ಕಿಂತ ಹೆಚ್ಚಾಗಿ ತನ್ನ ಮನೆಗೆ ಬಂದ ಅತಿಥಿ-ಅಭ್ಯಾಗತರ ಸೇವೆಗೆ ಈ ಭೋಗ ವಸ್ತುಗಳು ಬೇಕಾಗುತ್ತವೆ. 

ಕಾಳಿದಾಸ ಮಹಾಕವಿಯ "ರಘುವಂಶ" ಮಹಾಕಾವ್ಯದಲ್ಲಿ ವರತಂತು ಮಹರ್ಷಿಗಳ ಶಿಷ್ಯನಾದ ಕೌತ್ಸ ಎಂಬ ಋಷಿಯು ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸಿ ತನ್ನ ಗುರುಗಳಾದ ವರತಂತುಗಳಿಗೆ ಗುರುದಕ್ಷಿಣೆ ಕೊಡಲು ರಘು ಮಹಾರಾಜನ ಬಳಿ ಸಹಾಯಕ್ಕಾಗಿ ಬರುವ ಪ್ರಸಂಗವಿದೆ. ಅಲ್ಲಿ ತನ್ನನ್ನು ಎದುರುಗೊಂಡು, ಸ್ವಾಗತಿಸಿ ಕುಶಲ ಪ್ರಶ್ನೆಗಳನ್ನು ಮಾಡಿದ ಮಹಾರಾಜನಿಗೆ ಕೌತ್ಸನು ಉತ್ತರ ಕೊಡುವಾಗ "ಸರ್ವೋಪಕಾರಕ್ಷಮಮಾಶ್ರಮಂ ತೇ" ಎಂದು ಹೇಳುತ್ತಾನೆ. ನಾಲ್ಕು ವರ್ಣಾಶ್ರಮಗಳಲ್ಲಿ ಗೃಹಸ್ಥಾಶ್ರಮ ಬಹಳ ಮುಖ್ಯವಾದವನು. ಉಳಿದ ಮೂರು ಆಶ್ರಮ ಜೀವಿಗಳಾದ ಬ್ರಹ್ಮಚಾರಿ, ಸನ್ಯಾಸಿ ಮತ್ತು ವಾನಪ್ರಸ್ಥರು ಗೃಹಸ್ಥರನ್ನೇ ಅನೇಕ ವಿಷಯಗಳಿಗೆ ಆಶ್ರಯಿಸಬೇಕಾಗುತ್ತದೆ. ಬ್ರಹ್ಮಚಾರಿಗಳ ಮತ್ತು ಸನ್ಯಾಸಿಗಳ ಜೀವನಕ್ಕೆ ಗೃಹಸ್ಥರೇ ಆಧಾರ. 

ಸ್ವಂತ ಸಂಪಾದನೆಯಲ್ಲದ ವಿದ್ಯಾರ್ಥಿಗಳು ಮತ್ತು ಸಂಪಾದನೆ ಮಾಡಬಾರದ ಸನ್ಯಾಸಿಗಳ ಜೀವನ ಸಮಾಜದಲ್ಲಿರುವ ಗೃಹಸ್ಥರ ಸಹಾಯದಿಂದಲೇ ನಡೆಯುತ್ತದೆ. ಹೀಗಿರುವಾಗ ಗೃಹಸ್ಥರು ಈ ಭೋಗ-ಭಾಗ್ಯಗಳ ವಿಷಯದಲ್ಲಿ ಅತಿಯಾದ ಆಸಕ್ತಿ ತಾಳದಿದ್ದರೂ ಪೂರ್ಣವಾಗಿ ನಿರಾಸಕ್ತರಾಗಲು ಸಾಧ್ಯವಿಲ್ಲ. 
*****  

  1. "ಅಷ್ಟ ಭಾಗ್ಯಗಳು" ಎಂದು ಪರಿಗಣಿತವಾದ ಎಂಟರಲ್ಲಿ ಮೊದಲನೆಯದು "ಅನ್ನ". ಯಾವ ಪ್ರಾಣಿಯ ಜೀವನ ನಡೆಯಬೇಕಾದರೂ ಮೊದಲನೆಯ ಅವಶ್ಯಕತೆ ಆಹಾರ. ಇಲ್ಲಿ ಅನ್ನ ಎಂದರೆ, ಹಿಂದೊಮ್ಮೆ ಬೇರೆ ಸಂಚಿಕೆಯಲ್ಲಿ ಚರ್ಚಿಸಿದಂತೆ, ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಮಾತ್ರವಲ್ಲ. ದೇಹದ ಬೆಳವಣಿಗೆ ಮತ್ತು ಬೆಳೆದ ದೇಹವನ್ನು ಸುಸ್ಥಿತಿಯಲ್ಲಿ ಕಾಪಾಡಲು ಬೇಕಾಗುವ ಎಲ್ಲ ಖಾದ್ಯಗಳಿಗೂ "ಅನ್ನ" ಎಂದು ನಿರ್ದೇಶಿಸಿ "ಬೃಹದಾರಣ್ಯಕ ಉಪನಿಷತ್" ಹೇಳುವ "ಸಪ್ತಾನ್ನ ಪ್ರಕರಣ" ತಿಳಿಸಿಕೊಡುತ್ತದೆ. ಅನ್ನವಿಲ್ಲದೇ ಜೀವನವಿಲ್ಲ. ಆದ್ದರಿಂದ ಎಂಟು ಭಾಗ್ಯಗಳಲ್ಲಿ ಮೊದಲೆನೆಯದು ಅನ್ನ. 
  2. ಎರಡನೆಯ ಭಾಗ್ಯ "ಉದಕ". ನೀರಿಲ್ಲದೆ ಬದುಕುವುದು ಸಾಧ್ಯವಿಲ್ಲ. ಉಸಿರಾಡುವ ಎಲ್ಲಾ ಪ್ರಾಣಿಗಳಿಗೂ ಗಾಳಿಯ ನಂತರ ನೀರು ಅತಿ ಮುಖ್ಯ. ವಾಸ್ತವಾಗಿ ಅನ್ನಕ್ಕಿಂತ ಮೊದಲು ನೀರು ಬೇಕು. ಆದರೆ ಕುಡಿಯುವ ನೀರು ಸೃಷ್ಟಿಯಲ್ಲಿ ಸುಲಭವಾಗಿ ಸಿಗುವುದು. ಆದ್ದರಿಂದ ಇಲ್ಲಿ ಅನ್ನ  ಎರಡನೆಯದು ಎಂದು ಗಣಿತವಾಗಿದೆ. (ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ "ಅಷ್ಟ ಭಾಗ್ಯಗಳು" ಎಂದು ನಿರ್ದೇಶಿಸುವ ಎಂಟು ಭಾಗ್ಯಗಳಲ್ಲಿ ನೀರೇ ಮೊದಲನೆಯದು. ಅದರಲ್ಲಿ ಅನ್ನ ಎಂಟರ ಲೆಕ್ಕದಲ್ಲಿ ಸೇರುವುದಿಲ್ಲ. ಮನುಷ್ಯನ ಅನ್ಯಾಯ ಜೀವನ ಕ್ರಮಗಳಿಂದ ಈಚಿನ ದಿನಗಳಲ್ಲಿ ನೀರು ಸಿಗುವುದು ಕಷ್ಟವಾಗಿದೆ).
  3. ಮೂರನೆಯ ಭಾಗ್ಯ "ತಾಂಬೂಲ". ತಾಂಬೂಲ ಎಂದರೆ ಕೇವಲ ಎಲೆ-ಅಡಿಕೆ-ಸುಣ್ಣ ಮಾತ್ರವಲ್ಲ. ತಾಂಬೂಲ ಸೇವನೆ ಊಟದ ಕೊನೆಯ ಅಧ್ಯಾಯ. ಅವುಗಳಲ್ಲಿ ಅವರವರ ಅಂತಸ್ತಿಗೆ ತಕ್ಕಂತೆ ಅಂತರವೂ ಉಂಟು. ಅದು ಕೇವಲ ಗೋಟು ಅಡಿಕೆ ಇರಬಹುದು ಅಥವಾ ಬಣ್ಣ ಕಟ್ಟಿದ, ಕಾಚು, ಸಕ್ಕರೆ, ಸುಗಂಧ ಮಿಶ್ರಿತವಾದ ಪುಡಿಯಡಕೆ ಇರಬಹುದು. ತಾಂಬೂಲ ಸೇವನೆ ಇದೆ ಅಂದರೆ ಊಟದ ನಂತರ ಸ್ವಲ್ಪ ವಿಶ್ರಾಂತಿಗೂ ಅವಕಾಶ ಇದೆ ಎಂದು ಅರ್ಥ. ಜೀವನದ ಇತರ ಚಟುವಟಿಕೆಗಳಿಗೆ ತಕ್ಷಣ ಓಡಬೇಕಾಗಿಲ್ಲ. ಕುಟುಂಬದ ಇತರ  ಸದಸ್ಯರ, ಬಂಧು-ಬಾಂಧವರ, ಸ್ನೇಹಿತರ ಕೂಡ ಸ್ವಲ್ಪ ವಿನೋದದ ಕ್ಷಣಗಳನ್ನೂ ಕಳೆಯುವ ಅವಕಾಶವೂ ಒಂದು ಭೋಗವೇ. 
  4. ನಾಲ್ಕನೆಯದು "ಪುಷ್ಪ". ಈಗ ಗಂಡಸರು ಹೂವಿನ ಹಾರಗಳನ್ನು ಧರಿಸುವುದು ತಪ್ಪಿಹೋಗಿದೆ. ಸ್ತ್ರೀಯರು ಕೂಡ  ಮರೆತಿದ್ದಾರೆ. ಸುಗಂಧಭರಿತ ಹೂವುಗಳು ಮತ್ತು ಹೂವಿನ ಹಾರಗಳನ್ನು ಉಪಯೋಗಿಸುವುದು ಒಂದು ಭೋಗದ ರೀತಿ. ಅನೇಕ ಬಣ್ಣದ, ಸುವಾಸನೆಯ, ಗಾತ್ರದ ಹೂವುಗಳು ಸೊಗಸನ್ನು ಹೆಚ್ಚಿಸುವುದರ ಜೊತೆಗೆ ವಾತಾವರಣವನ್ನೂ ರಂಗೇರಿಸಬಲ್ಲುದು. 
  5. ಐದನೆಯದು "ಚಂದನ". ಗಂಧದ ಮರಗಳು ಹೇರಳವಾಗಿ ಇದ್ದಾಗಿನ ಮಾತು. ಗಂಧ ತಂದು ತೇಯ್ದು ಸುಗಂಧ ಪೂಸಿಕೊಳ್ಳುತ್ತಿದ್ದ ಕಾಲದ ಮಾತು ಇದು. ಪುಟ್ಟಕೃಷ್ಣನ ದಾಸರು ವರ್ಣಿಸುವುದು "ಪೂಸಿದ ಶ್ರೀಗಂಧ ಮಯ್ಯೊಳಗಮ್ಮ" ಎಂದು. (ಈಗ ಅದು ಕೇವಲ ರಾಸಾಯನಿಕ ಗಂಧ ಸಿಂಪಡಣೆಗೆ ಸೀಮಿತವಾಗಿದೆ. ಕೆಲವುಕಡೆಯಂತೂ ದೊಡ್ಡ ಫ್ಯಾನುಗಳು ಈ ಕೆಲವನ್ನು ಬೇಜಾರಿಲ್ಲದೆ ಮಾಡುತ್ತವೆ). 
  6. ಆರನೆಯ ಭೋಗ "ವಸನ". ಮಾನ ಮುಚ್ಚಲು ಬಟ್ಟೆ ಅನ್ನ-ನೀರಿನ ನಂತರದ ಸ್ಥಾನ ಪಡೆಯುತ್ತದೆ. ಅದು ಭೋಗದ ವಸ್ತುವೂ ಆಗಬಹುದು. ಬರಿಯ ಶುಭ್ರ ಬಟ್ಟೆಯಿಂದ ಜರತಾರಿ ಸೀರೆ-ಪಂಚೆ-ದಿರಿಸು, ಮುಂಡಾಸು, ಮೇಲು ಹೊದಿಕೆ, ಮುಂತಾದ ಅನೇಕ ರೀತಿಯಲ್ಲಿ ಜೀವನಕ್ಕೆ ಸೊಗಸನ್ನು ತಂದುಕೊಡುವ ಭೋಗ ಈ ವಸನದ್ದು. 
  7. ಭೋಗಗಳಲ್ಲಿ ಏಳನೆಯದು "ಶಯ್ಯಾ". ಊಟವಾಗಿ ಹೊಟ್ಟೆ ತುಂಬಿತು. ಬಟ್ಟೆ ಸಿಕ್ಕಿತು. ನಂತರದ ಸ್ಥಾನ ದಣಿದ ದೇಹಕ್ಕೆ ನಿದ್ರೆ ಕೊಡುವುದು. ನೆಲದ ಮೇಲೆ ತೋಳನ್ನೇ ತಲೆದಿಂಬಾಗಿ ಇಟ್ಟುಕೊಂಡು ಮಲಗಬಹುದು. ಅದನ್ನು ಯಾರೂ ಭೋಗ ಅನ್ನುವುದಿಲ್ಲ. ಅದೇ ಸೊಗಸಾದ ಮೆತ್ತನೆಯ ಹಾಸಿಗೆಯ ಮೇಲೆ ಆಗಬಹುದು. ಸುಪ್ಪತ್ತಿಗೆಯೂ ಆಗಬಹುದು. ಇವು ನೆಲದ ಬದಲು ಸುಂದರ ಮಂಚದ ಮೇಲೂ ಇರಬಹುದು. ಸೊಳ್ಳೆಪರದೆ ಸೇರಿರಬಹುದು. ಹೊದೆಯಲು ಒಳ್ಳೆಯ ಪದರಗಳ ಹೊದಿಕೆ ಇರಬಹುದು. ಚಳಿಗಾಲದಲ್ಲಿ ಉಣ್ಣೆಯದು ಇರಬಹುದು. ಹೀಗೆ ಭೋಗದ ವಿವಿಧ ಮಜಲುಗಳು. ಜೊತೆಗೆ ತನ್ನದೇ ಮನೆಯಲ್ಲಿಯೂ ಇರಬಹುದು. 
  8. ಎಂಟನೆಯ ಭೋಗವೆಂದರೆ "ಅಲಂಕಾರ". ಬರೀ ಬಟ್ಟೆ ಉಟ್ಟರೆ ಸಾಕೆ? ಆಭರಣಗಳು ಬೇಡವೇ? ಚಿನ್ನ, ವಜ್ರ ಮುಂತಾದವು. ಕುಂಕುಮ ಮುಂತಾದ ಬಣ್ಣ-ಬಣ್ಣದ ದ್ರವ್ಯಗಳು. ಸುಂದರವಾದ ಕೈಚೀಲ. ಕೈಗೆ ಕಸೂತಿ ಹಾಕಿದ ಕರ್ಚೀಫು. ಸ್ವಲ್ಪ ವಯಸ್ಸಾದ ಮೇಲೆ ಕೈಗೊಂಡು ಕೊರೆದ ಬೆತ್ತದ ಕೋಲು. ಹೀಗೆ. ಅವರವರ ಯೋಗ್ಯತೆ-ಅಭಿರುಚಿಗಳಿಗೆ ತಕ್ಕಂತೆ ಇವುಗಳ ಪಟ್ಟಿಯನ್ನು ಪಸರಿಸಬಹುದು. 
ಇಲ್ಲಿಗೆ ಎಂಟು ರೀತಿಯ "ಅಷ್ಟ ಭೋಗ" ವಿಷಯದ ವಿವರಣೆ ಸಾಕು. ಮುಂದೆ ಇವನ್ನು ವಿಸ್ತರಿಸುವುದು ಅವರವರ ಮನಸ್ಸಿಗೆ ಬಿಡುವುದು ಒಳ್ಳೆಯದು. 

*****

ಅಷ್ಟ ಭೋಗಗಳ ವಿಷಯಗಳನ್ನು ಇಬ್ಬರು ಬಲ್ಲರು. ಇವು ಇಲ್ಲದವರು. ಇವು ಚೆನ್ನಾಗಿ ಇದ್ದು ಅನುಭವಿಸುವವರು. ಎಲ್ಲ ಭೋಗಗಳ ಸವಲತ್ತಿದ್ದರೂ ಅನುಭವಿಸಲು ಸಾಧ್ಯವಿಲ್ಲದವರ ವಿಷಯ ಚಿಂತಿಸುವುದು ಬೇಡ. 

"ಅಷ್ಟ ಭಾಗ್ಯಗಳು" ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Sunday, April 20, 2025

ಹಾಲು ಕರುವಿನ ಎಂಜಲಲ್ಲವೇ?


ಹಿಂದಿನ "ಎಂಜಲು ಮತ್ತು ಪ್ರಸಾದ" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ಎಂಜಲು, ಶೇಷಾನ್ನ, ಪಿತೃಶೇಷ, ಮಾತೃ ಭೋಜನ ಮತ್ತು ಪ್ರಸಾದ ಇವುಗಳ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚೆ ಮಾಡಿದೆವು. ಈ ಸಂಚಿಕೆ ಬಗ್ಗೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಹೆಚ್ಚಿನ ವಿವರಣೆಗಾಗಿ ಪ್ರಶ್ನೆಗಳನ್ನೂ ಕೇಳಿದ್ದಾರೆ. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಕನ್ನಡದ ಕವಿವರೇಣ್ಯರೂ, ನಮ್ಮ ನಾಡು ಕಂಡ ಹಿರಿಯ ಸಂತರೂ, ಸಮಾಜ ಸುಧಾರಕರೂ ಆದ ಶ್ರೀ ಕನಕದಾಸರು "ಭಕ್ತ ಕನಕದಾಸ" ಎಂದೇ ಹೆಸರಾದವರು. ತಮ್ಮ ಜೀವಮಾನವಿಡೀ ಮಡಿವಂತರ ತಾತ್ಸಾರಕ್ಕೆ ಗುರಿಯಾಗಿ ಅನೇಕ ಕಷ್ಟಗಳನ್ನು ಅನುಭವಿಸಿದರೂ, ಜೀವನದಲ್ಲಿ ಕಹಿಯನ್ನು ಆರೋಪಿಸಿಕೊಳ್ಳದೇ ಸಮಭಾವದಿಂದ ಸಮಾಜ ಸುಧಾರಣೆ ಮಾಡಿದ ಮಹಾನುಭಾವರವರು. ಈ "ಎಂಜಲು" ಎನ್ನುವುದರ ಬಗ್ಗೆ ಅವರು ಕೆಲವು ಮುತ್ತಿನಂತಹ ಮಾತುಗಳನ್ನು ತಮ್ಮ ಕೃತಿಗಳಲ್ಲಿ ಅಲ್ಲಲ್ಲಿ ಪೋಣಿಸಿದ್ದಾರೆ. ಅವರ ಒಂದು ಹಿರಿಮೆಯ ಕೃತಿಯಾದ "ಹರಿಹಾಕ್ತಿಸಾರ" ಈ ವಿಷಯದ ಬಗ್ಗೆ ಅವರ ಆಲೋಚನೆಯ ತಿರುಳನ್ನು ನಮಗೆ ನೀಡುತ್ತದೆ. ಅದನ್ನೂ ಮತ್ತು ಇದೇ ವಿಷಯಕ್ಕೆ ಸಂಬಂಧಿಸಿದ ಕೆಲವು ಇತರ ವಿವರಗಳನ್ನೂ ಈ ಸಂಚಿಕೆಯಲ್ಲಿ ನೋಡೋಣ. 

*****

ನಮ್ಮ ಕುಟುಂಬದ ಹಿತೈಷಿಗಳೂ, ಸಮಾಜದ ಹಿರಿಯರೂ ಮತ್ತು ಕುಟುಂಬದ ಸದಸ್ಯರೆಲ್ಲರ ಮನ್ನಣೆಗೆ ಪಾತ್ರರಾದವರೊಬ್ಬರು ಈ ದಿನ ನಮ್ಮ ಮನೆಗೆ ಬರುವವರಿದ್ದಾರೆ ಎನ್ನೋಣ. ಮಧ್ಯಾನ್ಹದ ಹೊತ್ತಿಗೆ ಬರುವವರಾದ್ದರಿಂದ ಈ ದಿನ ಅವರ ಭೋಜನ ನಮ್ಮಲ್ಲೇ ಆಗಬೇಕೆಂದು ಕೇಳಿದ್ದೇವೆ. ಅವರೂ ಒಪ್ಪಿದ್ದಾರೆ. ಅವರಿಗೆ ಬೇಕೋ ಬೇಡವೋ ಅದು ಮುಖ್ಯವಲ್ಲ. ನಮ್ಮ ಮನಸ್ಸು ಕೇಳುವಂತೆ ಅವರಿಗೆ ಒಳ್ಳೆಯ ಅಡಿಗೆ ಮಾಡಿ ಬಡಿಸಬೇಕೆಂದು ನಮ್ಮ ಅಪೇಕ್ಷೆ. ಊಟ ಷಡ್ರಸೋಪೇತವಾಗಿ ಇರಬೇಕೆಂದು ನಮ್ಮ ಇಚ್ಛೆ. ಕಟು, ಆಮ್ಲ, ಲವಣ, ತಿಕ್ತ, ಮಧುರ ಮತ್ತು ಕಷಾಯ ಎನ್ನುವ ಈ ಆರು ರಸಗಳಲ್ಲಿ ಕಹಿಯೂ ಸೇರಿದೆ. ಆದರೆ ಆ ಕಹಿ ನಾವು ಬೇಕೆಂದು ಹಾಕಿದ ಪದಾರ್ಥದಲ್ಲಿ ಇರಬೇಕು. ಹಾಗಲಕಾಯಿ ಕಹಿ ಆಗಬಹುದು. ಆದರೆ ನಮಗೆ ಬೇಡದಂತೆ ಎಲ್ಲಿಂದಲೋ ಬಂದು ಸೇರುವುದಲ್ಲ. 

ಹೆಸರುಬೇಳೆ ಕೋಸಂಬರಿಗೆ ಸೌತೆಕಾಯಿ ಹಾಕಿದರೆ ಚೆನ್ನಾಗಿರುತ್ತದೆ ಎಂದು ಅವರು ಯಾವುದೋ ಸಂದರ್ಭದಲ್ಲಿ ವಿನೋದಕ್ಕೆ ಹೇಳಿದ್ದು ನೆನಪು ಬಂತು. ಸೌತೆಕಾಯಿ ತಂದಾಗಿದೆ. ಆದರೆ ನೂರು ಸೌತೆಕಾಯಿಯಲ್ಲಿ ಯಾವುದೊ ಒಂದು ಕಹಿ ಇರುತ್ತದೆ. "ಕಹಿ ಸೌತೆ (ಸೋರೆ) ಕುಡಿಯಾದರೇನು? ಮಿಡಿಯಾದರೇನು?" ಎಂದು ಕವಿವಾಣಿಯೇ ಇದೆಯಲ್ಲ. ಎಲ್ಲ ಪದಾರ್ಥ ಚೆನ್ನಾಗಿ ಮಾಡಿ ಈ ಸೌತೆಕಾಯಿ ಕಹಿ ಆದರೆ ಏನು ಮಾಡುವುದು? ಊಟಕ್ಕೆ ಕುಳಿತಾಗ ಎಡವಟ್ಟಾಗುವುದಲ್ಲ! ಸೌತೆಕಾಯಿ ಹೆಚ್ಚುವಾಗ ಮೊದಲು ಒಂದು ಸಣ್ಣ ಚೂರು ತಿಂದು ಪರೀಕ್ಷೆ ಮಾಡುವುದು. ನಂತರ ಕೋಸಂಬರಿಗೆ ಹಾಕುವುದು. ಅಷ್ಟೇ. ಇದರಿಂದ ಏನೂ ತೊಂದರೆಯಿಲ್ಲ. 

ಹೀಗೆ ಮಾಡಿದರೆ, ಒಂದು ಸಣ್ಣ ತುಂಡು ಸೌತೆಕಾಯಿ ತಿಂದು ಪರೀಕ್ಷಿಸಿದರೆ, ಮಿಕ್ಕ ಸೌತೆಕಾಯಿ ಮತ್ತು ಆಮೇಲೆ ಅದನ್ನು ಹಾಕಿ ಮಾಡಿದ ಕೋಸಂಬರಿ ಎಂಜಲಾಯಿತೇ? ಅಂತಹ ಹಿರಿಯರಿಗೆ ಅದನ್ನು ಬಡಿಸಬಹುದೇ?
*****

ಊಟವಾದ ಮೇಲೆ ಹಣ್ಣು ತಿನ್ನುವುದು ಒಳ್ಳೆಯ ಅಭ್ಯಾಸ. ಹೊಟ್ಟೆಯಲ್ಲಿ ಜಾಗ ಇರುತ್ತದೆಯೋ ಇಲ್ಲವೋ, ಅವರು ತಿನ್ನುತ್ತಾರೋ ಇಲ್ಲವೋ, ಅದು ಆಮೇಲಿನ ವಿಷಯ. ಕೊಡುವುದು ನಮ್ಮ ರೀತಿ. ತೆಗೆದುಕೊಳ್ಳುವುದು ಅಥವಾ ಬಿಡುವುದು ಅವರಿಗೆ ಸೇರಿದ್ದು. ಒಂದು ಸಣ್ಣ ತುಂಡು ಅವರು ತೆಗೆದುಕೊಂಡರೂ ನಮಗೆ ಸಂತೋಷವೇ. ಅವರು ಬೇಡವೆಂದರೆ ಬಿಡೋಣ. ಅಷ್ಟು ಜನ ಸೇರಿರುವಾಗ ಯಾರಾದರೂ ತೆಗೆದುಕೊಂಡಾರು. ಅದೂ ಒಳ್ಳೆಯದೇ. 

ಅಂಗಡಿಯಲ್ಲಿ ಹೊಸ ದ್ರಾಕ್ಷಿ ರಾಶಿಯೇ ಇತ್ತು. ತಂದಿದ್ದಾಗಿದೆ. ಆದರೆ ಕೆಲವೊಮ್ಮೆ ನೋಡಲು ಚೆನ್ನ್ನಾಗಿರುವ ದ್ರಾಕ್ಷಿ ಹುಳಿ ಇರುವುದೂ ಉಂಟು. ಸೊಗಸಾದ ಊಟ ಮಾಡಿ ದ್ರಾಕ್ಷಿಗೆ ಕೈ ಹಾಕಿದರೆ, ಅದು ಹುಳಿ ಇದ್ದರೆ  ಏನು ಚೆನ್ನ? ಒಂದು ಕೆಲಸ ಮಾಡೋಣ. ಒಂದೊಂದು ಗೊಂಚಲಿನಿಂದ ಒಂದು ದ್ರಾಕ್ಷಿ ತೆಗೆದು ತಿಂದು ನೋಡುವುದು. ಸಿಹಿ ಇರುವ ಗೊಂಚಲಿನ ಹಣ್ಣುಗಳನ್ನು ಗುರುತಿಸಿ ತೆಗೆದಿಡುವುದು. ಹೇಗಿದೆ ಈ ಉಪಾಯ? 

ಒಂದು ಗೊಂಚಲಿನಲ್ಲಿ ಒಂದು ಹಣ್ಣು ತಿಂದು ಅತಿಥಿ-ಅಭ್ಯಾಗತರಿಗೆ ಒಳ್ಳೆಯದನ್ನು ಕೊಡುವುದು ಎಂಜಲು ಕೊಟ್ಟಂತೆಯೇ?  
*****

ಮತಂಗ ಋಷಿಗಳು ಮಹಾ ತಪಸ್ವಿಗಳು. ಶಬರಿ ಅವರ ಅನುಯಾಯಿ. ಆಶ್ರಮದ ಕೆಲಸ ಮತ್ತು ಅವರ ಸೇವೆಯಲ್ಲಿಯೇ ಜೀವನ ಸವೆಸಿದವಳು. ಕಾಲಚಕ್ರದಲ್ಲಿ ಇಬ್ಬರಿಗೂ ಮುಪ್ಪು ಬಂತು. ಮತಂಗರಿಗೆ ತಮ್ಮ ಜೀವಿತ ಕಾಲ ಮುಗಿಯುತ್ತಿರುವುದು ಗೊತ್ತಾಯಿತು. (ವೃದ್ಧಾಪ್ಯ ಬಂದಾಗ ನಮಗೂ ಗೊತ್ತಾಗುತ್ತದೆ. ಆದರೆ ನಾವು ಅದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ!) ಶ್ರೀರಾಮಚಂದ್ರನು ಈ ದಾರಿಯಲ್ಲಿ ಬರುವುದು ಖಚಿತವಾದರೂ ಇನ್ನೂ ಸ್ವಲ್ಪ ಕಾಲ ಕಾಯಬೇಕು. "ಶ್ರೀರಾಮನು ಬಂದೇ ಬರುತ್ತಾನೆ. ಅವನನ್ನು ನೋಡುವ ಭಾಗ್ಯ ನಿನಗಿದೆ. ನೀನು ಆ ದಿನಕ್ಕಾಗಿ ಕಾಯುತ್ತಿರು" ಎಂದು ಅವಳಿಗೆ ಹೇಳಿ ದೇಹ ತ್ಯಾಗ ಮಾಡಿದರು. 

ಶಬರಿಯು ಪ್ರತಿದಿನ ಕಾಡಿನಲ್ಲಿ ಹುಡುಕಿ ಹುಡುಕಿ ಚೆನ್ನಾದ ಹಣ್ಣು ತಂದಿಡುವಳು. ಸಂಜೆಯಾದರೂ ರಾಮನು ಬರಲಿಲ್ಲ. ಹಣ್ಣುಗಳನ್ನು ಬಿಸಾಡುವಳು. ಮತ್ತೆ ಮಾರನೆಯ ದಿನ ಹೊಸ ಹಣ್ಣು, ಕಡೆಗೆ ಒಂದು ದಿನ ಅವನು ಬಂದೇ ಬಂದ. ಲಕ್ಷ್ಮಣನ ಜೊತೆ. ಅವನನ್ನು ನೋಡಿ, ಹಣ್ಣು ಕೊಟ್ಟು ಧನ್ಯಳಾದಳು. ಅನೇಕ ವರುಷ ಕಾದಿದ್ದು ಸಾರ್ಥಕವಾಯಿತು. 

ನಮ್ಮಲ್ಲಿಗೆ ಬಂದವರಿಗೆ ಮೊದಲು ನೀರು ಕೊಡುವುದು ವಾಡಿಕೆ. ಅದು ಸೌಜನ್ಯವೂ ಹೌದು; ಸತ್ಕಾರವೂ ಹೌದು. ಅಂತೆಯೇ ದೇವರಿಗೆ ನೈವೇದ್ಯಕ್ಕೆ ಎಷ್ಟೆಲ್ಲಾ ಪದಾರ್ಥಗಳನ್ನು ಮಾಡಿಟ್ಟರೂ ಒಂದು ಸ್ವಲ್ಪ ನೀರು ಇಡಲೇಬೇಕು. ಇಲ್ಲದಿದ್ದರೆ ನೈವೇದ್ಯ ಅಪೂರ್ಣವೇ. 

ಅವಳು "ಯ೦ಜಲ ಫಲ" ಕೊಟ್ಟಳು ಎಂದರು ಕೆಲವರು. ಅವಳು "ಎಂಜಲ ಹಣ್ಣು" ಕೊಟ್ಟಳು ಎಂದರು ಮತ್ತೆ ಕೆಲವರು. ಸಂಸ್ಕೃತದಲ್ಲಿ ಯಂ ಎಂದರೆ ಒಳ್ಳೆಯ ಅಥವಾ ಶ್ರೇಷ್ಠವಾದದ್ದು ಎಂದು ಅರ್ಥ. ಜಲ ಎಂದರೆ ನೀರು ಎಂದು ಗೊತ್ತೇ ಇದೆ. ಭಕ್ತಿಯಿಂದ ತುಂಬಿದ ಒಳ್ಳೆಯ ನೀರು ಮತ್ತು ಹಣ್ಣು ಕೊಟ್ಟಳು ಎಂದರು ಕೆಲವರು. ಮಾತಂಗ ಋಷಿಗಳ ಶಿಷ್ಯೆಯಾಗಿ ಅದು ಸರಿ ಅಂದರು ಅವರು. ಇಲ್ಲ, ಹಣ್ಣುಗಳನ್ನು ರುಚಿ ನೋಡಿ ಎಂಜಲ ಹಣ್ಣು ಕೊಟ್ಟಳು ಎಂದರು ಇನ್ನು ಕೆಲವರು. ಶ್ರೀರಾಮನು ಅವಳ ಭಕ್ತಿ ನೋಡಿ ಎಂಜಲ ಹಣ್ಣು ಎಂದು ಲೆಕ್ಕಿಸದೆ ಸ್ವೀಕರಿಸಿದ ಎಂದು ಅರ್ಥೈಸಿದರು ಆವರು. ವರ್ಗ ಸಂಘರ್ಷದ ಹಿನ್ನೆಲೆಯಲ್ಲಿ ಇದೇ ಚೆನ್ನ. ಸಿನಿಮಾದಲ್ಲಿ ತೋರಿಸುವುದಕ್ಕಂತೂ ಇನ್ನೂ ಚೆನ್ನ. 

ಎರಡರಲ್ಲಿ ಯಾವುದು ಸರಿ? ಹಣ್ಣು ಕೊಟ್ಟ ಶಬರಿಗೆ ಗೊತ್ತು. ಆ ಹಣ್ಣು ತಿಂದ ಶ್ರೀರಾಮನಿಗೆ ಗೊತ್ತು. ಇದನ್ನು ನೋಡಿದ ಲಕ್ಷ್ಮಣನಿಗೆ ಗೊತ್ತು.  ನಾಲ್ಕನೆಯವರಿಗೇನು ಗೊತ್ತು? 

*****

"ಅದು ಎಂಜಲು" ಎಂದು ಒಬ್ಬರು ಹೇಳುತ್ತಾರೆ. ಈ ಹೇಳುವ "ಎಂಜಲು' ಎನ್ನುವ ಪದ ಬಾಯಿಯಲ್ಲಿರುವ ನಾಲಿಗೆಯಿಂದಲೇ ಬರಬೇಕು. ನಾಲಿಗೆ ತಾಕಿದರೆ, ಬಾಯಲ್ಲಿ ಬಿದ್ದರೆ ಎಂಜಲು. ಆದ್ದರಿಂದ ಈ 'ಎಂಜಲು" ಎನ್ನುವ ಪದವೇ ಎಂಜಲಲ್ಲವೇ?

ನೀರಿಲ್ಲದೆ ಅಡಿಗೆ ಪದಾರ್ಥಗಳಿಲ್ಲ. ಉಪಯೋಗಿಸಿದ ಪದಾರ್ಥಗಳನ್ನು ತೊಳೆಯಲಾದರೂ ನೀರು ಬೇಕು. ಹಣ್ಣು-ಹಂಪಲಾದರೂ ತೊಳೆಯಲಿಕ್ಕೆ ನೀರು ಬೇಕೇ ಬೇಕು. ಯಾವುದೋ ಮಹಾನದಿಯ ಅಥವಾ ಜಲಾಶಯದ ನೀರು. ಅಥವಾ ಬಾವಿಯಿಂದ ಸೇದಿದ ನೀರು. ಈಗಿನ ಕಾಲದ ಮನೆಯ ನಲ್ಲಿಯ ನೀರಾದರೂ ಅಂತಹ ಕಡೆಯಿಂದಲೇ ಬರಬೇಕು. ನದಿಯಲ್ಲಿ, ಜಲಾಶಯದಲ್ಲಿ, ಬಾವಿಯಲ್ಲಿ ಅಸಂಖ್ಯ ಜಲಚರಗಳಿವೆ. ಮೀನುಂಟು. ಕಪ್ಪೆಯುಂಟು. ಆಮೆಗಳಿವೆ. ಮೊಸಳೆಗಳು ಉಂಟು. ಮತ್ತನೇಕ ನೀರಿನಲ್ಲಿ ಬದುಕುವ ಪ್ರಾಣಿಗಳು ಇವೆ. (ರನ್ನನ ಕೃತಿ ಆಧರಿಸಿದ ಬಿ. ಎಂ. ಶ್ರೀ. ಅವರ  ಗದಾಯುದ್ಧ೦ ನಾಟಕದಲ್ಲಿ, ವೈಶಂಪಾಯನ ಸರೋವರದಲ್ಲಿ ಜಲಸ್ತ೦ಭನ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ದುರ್ಯೋಧನನಿಗೆ ಭೀಮ ಹೇಳುವ ಮಾತಿದು - "ಮತ್ತೀನೀರೊಳಗೆ ಮೀನಿರ್ಕು೦, ಎಸಡಿರ್ಕು೦, ಕಪ್ಪೆಯಿರ್ಕು೦; ಇರ್ಪರೇ ಗಂಡರ್?"). ನೆಲದ ಮೇಲಿನ ಅನೇಕ ಪ್ರಾಣಿಗಳೂ ಮನುಷ್ಯರೂ ಅದರಲ್ಲಿ ನೀರು ಕುಡಿಯುತ್ತಾರೆ. ಎಲ್ಲ ನೀರೂ ಇದರಿಂದ ಎಂಜಲೇ ಅಲ್ಲವೇ?

ಎಲ್ಲ ಪೂಜಾದಿಗಳಿಗೆ ಹಾಲು ಬೇಕು. ಹಾಲಿಲ್ಲದೆ ಮೊಸರಿಲ್ಲ. ಮೊಸರಿಲ್ಲದೆ ಬೆಣ್ಣೆ ಇಲ್ಲ. ಬೆಣ್ಣೆ ಇಲ್ಲದೆ ತುಪ್ಪವಿಲ್ಲ. ಹಾಲು, ಮೊಸರು, ತುಪ್ಪವಿಲ್ಲದೆ ಪಂಚಾಮೃತವಿಲ್ಲ. ಶಿಶುಗಳಿಗೆ ಹಸುವಿನ ಹಾಲು ಬೇಕು. ದೊಡ್ಡವರಿಗೂ ಬೇಕು. ರುಚಿ-ರುಚಿಯಾದ ಅಡಿಗೆ ಮಾಡಲು, ಅನೇಕ ಸಿಹಿ ತಿಂಡಿ ಮಾಡಲು, ಮತ್ತನೇಕ ಸಿಹಿ ತಿಂಡಿ ಜೊತೆಯಾಗಿ ಹಾಲು ಬೇಕೇ ಬೇಕು. 

ದೇವತೆಗಳು ಅಮೃತ ಕುಡಿಯುತ್ತಾರಂತೆ. ಹೀಗೆ ಕೇಳಿ ಗೊತ್ತು. ನಾವು ನೋಡಿಲ್ಲ. ನಾವು ನೋಡಿರುವ, ಸೇವಿಸಿರುವ, ಜೀವನಾಧಾರವಾಗಿ ನಂಬಿರುವ ಅಮೃತವೆಂದರೆ ಹಾಲು. ಶುದ್ಧತೆಗೆ ಇನ್ನೊಂದು ಹೆಸರು ಹಾಲು. "ಅವನದು ಹಾಲಿನಂತಹ ಮನಸ್ಸು" ಎನ್ನುತ್ತೇವೆ. ಸುಖ ಸಂಸಾರ ಕೆಡಿಸುವವರನ್ನು "ಹಾಲಿಗೆ ಹುಳಿ ಹಿಂಡಿದರು" ಅನ್ನುತ್ತೇವೆ. ಇಂತಹ ಹಾಲು ಆ ಹಸುವಿನ ಕರು ಕುಡಿದ ಮೇಲೆ ತಾನೇ ಕರೆದರೆ ಚೆನ್ನಾಗಿ ಬರುವುದು. ಹಾಲುಕರೆಯುವ ಹಸುವಿನ ಕರು ಇಲ್ಲದಿದ್ದರೆ ಮತ್ಯಾವುದೋ ಕರುವನ್ನಾದರೂ ಕೆಚ್ಚಲಿನ ಬಳಿ ಸ್ವಲ್ಪ ಕುಡಿಯಲು ಬಿಟ್ಟು ನಂತರ ಹಾಲು ಕರೆದುಕೊಳ್ಳುತ್ತಾರೆ. ಆದ್ದರಿಂದ ಹಾಲೂ ಕರುವಿನ ಎಂಜಲು ತಾನೇ? 

ಶ್ರೀ ಕನಕದಾಸರು ತಮ್ಮ "ಹರಿಭಕ್ತಿಸಾರ" 101ನೆಯ ಪದ್ಯದಲ್ಲಿ ಹೀಗೆ ಹೇಳುತ್ತಾರೆ:

ಎಂಜಲೆಂಜಲು ಎಂಬರಾನುಡಿ 
ಎಂಜಲಿಲ್ಲವೆ ವಾರಿ ಜಲಚರ
ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ 
ಎಂಜಲೆಲ್ಲಿಯದೆಲ್ಲಿಯು೦ ಪರ 
ರೆಂಜಲಲ್ಲದೆ ಬೇರೆ ಭಾವಿಸ  
ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ 

ಇದನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗಬಾರದು ಎನ್ನುವುದು ಇದರ ಭಾವಾರ್ಥ. 

*****

ನೈವೇದ್ಯಾದಿಗಳಿಗೆ, ಹವನ-ಹೋಮಾದಿಗಳಿಗೆ, ಶ್ರಾದ್ಧಾದಿಗಳಿಗೆ, ಇಂತಹ ಸಂಬಂಧಿತ ಕಾರ್ಯಗಳಿಗೆ ಪದಾರ್ಥ ತಯಾರಿಸುವಾಗ ಯಾವುದೇ ಪದಾರ್ಥದ, ಅವಕ್ಕೆ ಉಪಯೋಗಿಸಿದ ಪರಿಕರಗಳ ರುಚಿ ನೋಡುವ ಪರಿಪಾಠವಿಲ್ಲ. ಬೇರೆ ಸಂದರ್ಭದಲ್ಲಿ ಉದ್ದೇಶಪೂರ್ವಕ ಎಂಜಲು ಮಾಡಬಾರದು ಮತ್ತು ಕೊಡಬಾರದು. ಅದು ಆರೋಗ್ಯ ಮತ್ತು ಶುಚಿತ್ವದ ಸೂಚಕವೂ ಅಲ್ಲ. ಆದರೆ ಎಂಜಲಿನ ಹೆಸರಿನಲ್ಲಿ ಜೀವನವನ್ನೇ ದುರ್ಭರ ಮಾಡಿಕೊಳ್ಳಬಾರದು ಅನ್ನುವುದು ಇಷ್ಟೆಲ್ಲಾ ಚರ್ಚೆಗಳ ತಾತ್ಪರ್ಯ.