Friday, April 18, 2025

ಎಂಜಲು ಮತ್ತು ಪ್ರಸಾದ


ಹಿಂದಿನ ಸಂಚಿಕೆಯಲ್ಲಿ "ಚರ್ವಿತ ಚರ್ವಣ" ಅನ್ನುವ ಶೀರ್ಷಿಕೆಯಡಿ "ಈ ಪ್ರಪಂಚದಲ್ಲಿರುವ ಸಾಹಿತ್ಯವೆಲ್ಲ  ವ್ಯಾಸರು ಹೇಳಿ ಬಿಟ್ಟದ್ದು" ಎನ್ನುವ ನಾಣ್ಣುಡಿ ನೆನಪಿಸಿಕೊಂಡೆವು. "ವ್ಯಾಸೋಚ್ಛಿಷ್ಟಮ್ ಜಗತ್ ಸರ್ವಂ" ಎನ್ನುವ ಈ ಹೇಳಿಕೆಯ ಹಿನ್ನೆಲೆಯಲ್ಲಿ, ಉಚ್ಚಿಷ್ಟ ಪದಕ್ಕೆ ಸಾಮಾನ್ಯವಾಗಿ "ತಿಂದು ಬಿಟ್ಟದ್ದು" ಅಥವಾ "ಎಂಜಲು" ಎಂದು ಅರ್ಥವಿದ್ದರೂ ಅದರಲ್ಲಿ ಏನಾದರೂ ವಿಶೇಷ ಅರ್ಥ ಇದೆಯೇ ಎಂಬ ಬಗ್ಗೆ ಪ್ರಶ್ನೆ ಹಾಕಿಕೊಂಡಿದ್ದೆವು. ಅದರ ಬಗ್ಗೆ ಈಗ ಸ್ವಲ್ಪ ಯೋಚಿಸೋಣ. ಇದರ ಹಿನ್ನೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. 

ಪರಮಾತ್ಮನ ಸೃಷ್ಟಿ ಕಾರ್ಯದಲ್ಲಿ, ಮೊದಲು ಅನ್ನವನ್ನು ಸೃಷ್ಟಿ ಮಾಡಿ ನಂತರ ಜೀವಿಗಳನ್ನು ಸೃಷ್ಟಿ ಮಾಡಲಾಯಿತು ಎನ್ನುವುದನ್ನು "ಬೃಹದಾರಣ್ಯಕೋಪನಿಷತ್" ಕೃತಿಯ "ಸಪ್ತಾನ್ನ ಪ್ರಕರಣ" ವಿಭಾಗದಲ್ಲಿ ಅತ್ಯಂತ ವಿವರವಾಗಿ ಚರ್ಚಿಸಲಾಗಿದೆ. ಸಾವಿರಾರು ವರುಷಗಳ ಹಿಂದೆ ಇಂಥದೊಂದು ವಿಸ್ತಾರವಾದ ಚರ್ಚೆ ನಮ್ಮಲ್ಲಿ ನಡೆದಿದೆ ಎನ್ನುವುದೇ ಒಂದು ವಿಸ್ಮಯದ ವಿಷಯ. ಇಲ್ಲಿ ಅನ್ನ ಅಂದರೆ ಭತ್ತದಿಂದ ತೆಗೆದ ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಮಾತ್ರವಲ್ಲ. ಆಹಾರ ರೂಪದಲ್ಲಿ ಸಮಸ್ತ ಪ್ರಾಣಿಗಳೂ ಸೇವಿಸುವ ಪದಾರ್ಥಗಳನ್ನು ಒಟ್ಟಾಗಿ "ಅನ್ನ" ಎಂದು ಹೇಳಲಾಗಿದೆ. ಏಳು ರೀತಿಯ ಅನ್ನಗಳು, ಅವನ್ನು ಸೇವಿಸುವ ಗುಂಪುಗಳು ಮತ್ತು ಅವನ್ನು ನೀಡುವ ಪಾಲಕ (ಕಸ್ಟೋಡಿಯನ್) ಇವುಗಳನ್ನು ಒಂದು ಕೋಷ್ಠಕದ ರೀತಿ ವಿವರಿಸಲಾಗಿದೆ. ಇದರ ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ. 

ಈ ಚರ್ಚೆಯ ಸಂದರ್ಭದಲ್ಲಿ ಎಂಜಲು, ಶೇಷಾನ್ನ, ಪಿತೃಶೇಷ, ಮಾತೃ ಭೋಜನ ಮತ್ತು ಪ್ರಸಾದ ಎನ್ನುವ ಬೇರೆ ಬೇರೆ ರೀತಿಯ ವರ್ಗೀಕರಣ ಮತ್ತು ಸಮಾಜದಲ್ಲಿ ನಡೆಯುವ ಪದ್ದತಿ ಹಾಗೂ ಸಂಪ್ರದಾಯಗಳನ್ನು ಕೂಡ ನೋಡಬಹುದು. 

*****

ಕೆಲವು ಪದಾರ್ಥಗಳನ್ನು ಒಬ್ಬ ವ್ಯಕ್ತಿಯೇ ತಿಂದು ಮುಗಿಸಬಹುದು. ಕೆಲವು ಪದಾರ್ಥಗಳು ಒಬ್ಬನೇ ವ್ಯಕ್ತಿಗೆ ಅನೇಕ ಸಂಖ್ಯೆಯಲ್ಲಿ ಬೇಕಾಗಬಹುದು. ಮತ್ತೆ ಕೆಲವು ಪದಾರ್ಥಗಳು ಒಬ್ಬರು ತಿಂದು ಮುಗಿಸುವುದಕ್ಕೆ ಅಸಾಧ್ಯವೇ. ಒಂದು ಬಾಳೆಯಹಣ್ಣು ಅಥವಾ ಒಂದು ಕಿತ್ತಳೆಯನ್ನು ಒಬ್ಬನೇ ತಿನ್ನಬಹುದು. ದ್ರಾಕ್ಷಿಯಾದರೆ ಒಬ್ಬನೇ ಹತ್ತಿಪ್ಪತ್ತು ತಿನ್ನಬಹುದು. ಒಂದು ದೊಡ್ಡ ಹಲಸಿನ ಹಣ್ಣಾದರೆ ಒಬ್ಬನೇ ತಿನ್ನಲು ಅಸಾಧ್ಯ. ಹಣ್ಣುಗಳದ್ದು ಒಂದು ಸರಳ ಉದಾಹರಣೆ. ಇದೇ ರೀತಿ ಹೆಚ್ಚಿನ ಪ್ರಮಾಣದಲ್ಲಿ ಮಾಡಿಟ್ಟ ಅನೇಕ ತಿನಿಸುಗಳಿಂದ ಕೂಡಿದ ಅಡಿಗೆ. ಇದನ್ನು ಅನೇಕರು ಒಟ್ಟಿಗೆ ಅಥವಾ ಬೇರೆ ಬೇರೆಯಾಗಿ ಸೇವಿಸಬಹುದು. 

ಇಂತಹ ಒಂದು ಅನೇಕ ವ್ಯಂಜನಗಳಿಂದ (ಪಲ್ಯ, ಗೊಜ್ಜು, ಕೂಟು, ಚಟ್ನಿ ಮುಂತಾದುವುಗಳಿಗೆ ವ್ಯಂಹಜನಗಳು ಎನ್ನುತ್ತಾರೆ) ಕೂಡಿದ ಹತ್ತಾರು ಜನ ಸೇವಿಸಬಹುದಾದ ಪ್ರಮಾಣದ ಅಡಿಗೆಯನ್ನು ತೆಗೆದುಕೊಳ್ಳೋಣ. ಇಪ್ಪತ್ತು ಜನರಿಗೆ ಎಂದು ಮಾಡಿದ ತಯಾರಿ ಅನ್ನೋಣ. ಹತ್ತು ಜನರು ಮೊದಲು ಊಟಕ್ಕೆ ಕುಳಿತರು. ಅಡಿಗೆ ಸೊಗಸಾಗಿತ್ತು. ಊಟದ ಮನೆಯ ವಾತಾವರಣ ಚೆನ್ನವಿತ್ತು. ಬಡಿಸುವವರು ನುರಿತವರು. ಊಟಕ್ಕೆ ಕುಳಿತವರೋ ಭೋಕ್ತಾಪುರುಷರು. (ಒಳ್ಳೆಯ ಪ್ರಮಾಣದಲ್ಲಿ ಪದಾರ್ಥಗಳನ್ನು ಚೆನ್ನಾಗಿ ಊಟ ಹೊಡೆಯುವವರನ್ನು ಭೋಕ್ತಾಪುರುಷರು ಎಂದು ಹೇಳುತ್ತಿದ್ದರು). ಬಹಳ ವಿನೋದ ಮತ್ತು ಸ್ವಲ್ಪ ಸಂಗೀತ ಇತ್ಯಾದಿಗಳ ನಡುವೆ ಊಟ ಚೆನ್ನಾಗಿ ಸಾಗಿತು. ಹತ್ತು ಜನರೂ ಊಟಮಾಡಿ ಎದ್ದಿದ್ದಾರೆ. 

ಮಾಡಿದ ಅಡಿಗೆಯಲ್ಲಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚಾಗಿ ಖರ್ಚಾಗಿದೆ. ಅಂಕಿ-ಅಂಶಗಳ ಲೆಕ್ಕದಲ್ಲಿ ಹೇಳುವುದಾದರೆ ಶೇಕಡಾ ಅರವತ್ತರಷ್ಟು ಸೇವಿಸಿಯಾಗಿದೆ. ಮಿಕ್ಕ ನಲವತ್ತು ಭಾಗ ತಯಾರಿಸಿದ ಮತ್ತು ಬಡಿಸಿದ ಪಾತ್ರೆಗಳಲ್ಲಿ ಉಳಿದಿದೆ. ಹತ್ತು ಜನ ಊಟ ಮಾಡಿದವರ ಎಲೆಗಳಲ್ಲೂ ಸ್ವಲ್ಪ ಸ್ವಲ್ಪ ಪದಾರ್ಥಗಳು ಉಳಿದಿವೆ. ಈ ರೀತಿ ಊಟ ಮಾಡಿ ಬಿಟ್ಟ ಎಲೆಗಳಲ್ಲಿ ಅಥವಾ ತಟ್ಟೆಗಳಲ್ಲಿ ಬಿಟ್ಟಿರುವ ಪದಾರ್ಥಗಳನ್ನು "ಎಂಜಲು" ಎನ್ನುವುದು ವಾಡಿಕೆ. ಇದನ್ನು ಯಾರೂ ತಿನ್ನುವುದಿಲ್ಲ. ಅವೆಲ್ಲವನ್ನೂ ಒಟ್ಟುಗೂಡಿಸಿ ಹೊರಗಡೆ ಬಿಸಾಡುತ್ತಾರೆ. ಅಲ್ಲಿ ಪ್ರಾಣಿಗಳು ತಿನ್ನಬಹುದು ಇಲ್ಲವೇ ಕಡೆಗೆ ಗೊಬ್ಬರ ಆಗಬಹುದು. ಆದರೆ ತಯಾರಿಸಿದ ಮತ್ತು ಬಡಿಸುವ ಪಾತ್ರೆಗಳಲ್ಲಿ ಉಳಿದಿರುವ ಪದಾರ್ಥಗಳು ಎಂಜಲಲ್ಲ. ಅದನ್ನು ನಿರ್ದೇಶಿಸಲು ಬಳಸುವ ಪದ "ಮಿಕ್ಕಿದ್ದು" ಎಂದು. "ಶೇಷಾನ್ನ" ಎಂದು ಹಿಂದೆ ಹೇಳುತ್ತಿದ್ದರು. ಇದು ಎಂಜಲಲ್ಲ. ಬೇರೆಯವರು ಸೇವಿಸಲು ಯೋಗ್ಯವಾದದ್ದು. 

*****

ಶ್ರಾದ್ಧಾದಿ ಕರ್ಮಗಳನ್ನು (ತಿಥಿ ಎಂದು ಹೇಳುವುದು ವಾಡಿಕೆ) ಮಾಡುವ ದಿನ ಆ ಕೆಲಸಕ್ಕಾಗಿಯೇ ವಿಶೇಷ ಅಡಿಗೆ ಮಾಡಿರುತ್ತಾರೆ. ಆ ಕಾರ್ಯಕ್ರಮಕ್ಕೆ ಪಿತೃಗಳ ಪ್ರತಿನಿಧಿಗಳಾಗಿ ಕೆಲವರನ್ನು ಆಮಂತ್ರಿಸಿರುತ್ತಾರೆ. ಅವರನ್ನು ಊಟಕ್ಕೆ ಕೂಡಿಸಿ, ಅವರಲ್ಲಿ ಪಿತೃದೇವತೆಗಳನ್ನು ಆವಾಹಿಸಿ ಭೋಜನ ಮಾಡಿಸುತ್ತಾರೆ. ಅವರ ಊಟ ಮುಗಿದು, ಕೈ ತೊಳೆಯಲು ಏಳುವ ಮುಂಚೆ ಅಲ್ಲಿ ಮಾಡಿರುವ ಅನ್ನದಲ್ಲಿ "ಪಿಂಡದಾನ" ಮಾಡುತ್ತಾರೆ. (ಈ ಪಿಂಡಪ್ರದಾನ ಸಮಯದಲ್ಲೂ ಅಸ್ವಾಭಿಕ ಮರಣಹೊಂದಿದ ಪಿತೃಗಳಿಗೆ "ಉಚ್ಚಿಷ್ಟ ಪಿಂಡ" ಎಂದು ಬೇರೊಂದು ಪಿಂಡಪ್ರದಾನ ಮಾಡುತ್ತಾರೆ).  ಶ್ರಾದ್ಧ ಕರ್ಮಕ್ಕೆ ಬಂದವರ ಊಟ ಆಯಿತು. ಮಾಡಿದ ಅಡಿಗೆ ಇನ್ನೂ ಮಿಕ್ಕಿದೆ. ಇದು ಶೇಷಾನ್ನ. ಪಿತೃಕಾರ್ಯ ಮಾಡಿ ಉಳಿದ ಶೇಷಾನ್ನ ಆದುದರಿಂದ ಇದು "ಪಿತೃ ಶೇಷ" ಎಂದಾಯಿತು. 

ಕಾರ್ಯ ನಡೆಯುವಾಗ ಊಟ ಮಾಡಿದ ಹಿರಿಯರನ್ನು ಕಾರ್ಯ ಮಾಡಿದ ಯಜಮಾನ "ಮಿಕ್ಕ ಅಡಿಗೆಯನ್ನು ಏನು ಮಾಡೋಣ?" (ಶೇಷಾನ್ನ೦ ಕಿಂ ಕರಿಷ್ಯೇ?) ಎಂದು ಕೇಳುತ್ತಾನೆ. "ನಿನ್ನ ಬಂಧುಗಳೊಡನೆ ಸೇವಿಸಬಹುದು" (ಇಷ್ಟೆ:ಸಹ ಭುಂಜತಾಮ್) ಎಂದು ಅವರು ಹೇಳುತ್ತಾರೆ. (ಇದು ಸಂಸ್ಕೃತದಲ್ಲಿ ನಡೆಯುವ ಸಂಭಾಷಣೆಯಾದದ್ದರಿಂದ ಇದೂ ಒಂದು ಮಂತ್ರವೆಂದು ತಿಳಿಯುವುದೂ ಉಂಟು!). ಇದೇ ಪಿತೃಶೇಷ ಸೇವನೆ. ಶ್ರದ್ದಾಳು ಬಂಧುಗಳು "ಪಿತೃಗಳ ಪ್ರಸಾದವಿದು" ಎನ್ನುವ ಪೂಜ್ಯ ಭಾವನೆಯಿಂದ ಈ ವಿಶೇಷಕ್ಕಾಗಿ ದೂರ ದೂರದಿಂದ ಬರುತ್ತಾರೆ. ಬಂಧು-ಭಾಂಧವರಲ್ಲದವರು ಈ ಪದಾರ್ಥಗಳನ್ನು ಸೇವಿಸುವುದಿಲ್ಲ. 

*****

ತಾಯಿಗೂ ಮಕ್ಕಳಿಗೂ ಇನ್ನೆಲ್ಲಿಲ್ಲದ ವಿಶೇಷ ಸಂಬಂಧ. ಗರ್ಭದಲ್ಲಿದ್ದಾಗ ತಾಯಿ ಸೇವಿಸಿದ ಆಹಾರವನ್ನು ಹೊಕ್ಕುಳ ಬಳ್ಳಿಯ ಮೂಲಕ ಸೇವಿಸಿ, ಬೆಳೆದು ಹುಟ್ಟಿದ್ದಾಯಿತು. ಮನುಷ್ಯರಲ್ಲಿ ಹುಟ್ಟಿದ ಶಿಶು ದೊಡ್ಡದಾಗಲು ಕೆಲವು ವರುಷಗಳೇ ಆಗುತ್ತವೆ. ಮಗುವಿಗೆ ಎಲ್ಲ ಬೇಕು-ಬೇಡಗಳಿಗೂ ಅಮ್ಮನೇ ಬೇಕು. ಕಂಠದವರೆಗೂ ತಿಂದಿದ್ದರೂ ಅಮ್ಮ ಊಟಕ್ಕೆ ಕುಳಿತಾಗ ಅವಳ ತಟ್ಟೆಯಲ್ಲಿ ಅಥವಾ ಎಲೆಯಲ್ಲಿ ಇರುವ ಪದಾರ್ಥವೇ ಬೇಕು. ಇದು ಯಾವುದೂ ತರ್ಕಕ್ಕೆ ನಿಲುಕುವ ವಿಷಯವಲ್ಲ. ಅದನ್ನು ಅನುಭವವೇ ಅರ್ಥ ಮಾಡಿಸಬೇಕು. ತಾಯಿಯಿರುವ ಎಲ್ಲರೂ ಈ ರೀತಿ ಬೆಳೆದವರೇ. ಒಂದು ವಯಸ್ಸಿನವರೆಗೆ ಹೀಗೆಯೇ ನಡೆಯುತ್ತದೆ. 

"ಉಪನಯನ" ಅಥವಾ "ಮುಂಜಿ" ಎನ್ನುವ ಸಂಸ್ಕಾರ ಮಾಡುವ ಕುಟುಂಬಗಳಲ್ಲಿ ಮಂತ್ರೋಪದೇಶಕ್ಕೆ ಮೊದಲು "ಮಾತೃಭೋಜನ" ಎನ್ನುವ ಒಂದು ಕಾರ್ಯಕ್ರಮ ನಡೆಯುತ್ತದೆ. ಇಂದಿನಿಂದ ಮುಂದೆ ಉಪನಯನ ಆದವನು ಮತ್ತೊಬ್ಬರ ಎಲೆಯಲ್ಲಿ ಇರುವ ಪದಾರ್ಥ ತಿನ್ನುವಂತಿಲ್ಲ. ಅವನು ಪ್ರತಿದಿನ ಮಾಡುವ ಭೋಜನವೂ ತನ್ನಲ್ಲಿರುವ ಪ್ರಾಣಾಗ್ನಿಗೆ ಕೊಡುವ ಆಹುತಿ. ಇದಕ್ಕಾಗಿಯೇ ತಾಯಿ-ಮಗನನ್ನು ಅಂದು ಮಂತ್ರೋಪದೇಶದ ಮುಂಚೆ ಒಟ್ಟಿಗೆ ಕೂಡಿಸಿ ಒಂದೇ ಎಲೆಯಲ್ಲಿ ಆಹಾರ ಬಡಿಸುತ್ತಾರೆ. ಇದೊಂದು ಭಾವನೆಗಳ ಕೇಂದ್ರಿತ ಕಾರ್ಯಕ್ರಮ. ಹಿಂದೆಲ್ಲ ಇದೊಂದು ಸಣ್ಣ ಖಾಸಗಿ ವಿಷಯವಾಗಿ ನಡೆಯುತ್ತಿತ್ತು. ಈಗ ಈವೆಂಟ್ ಮ್ಯಾನೇಜ್ಮೆಂಟ್ ನೇತೃತ್ವದಲ್ಲಿ ಬಹಳ ವೈಭವೋಪೇತವಾಗಿ ನಡೆಯುತ್ತದೆ. 

***** 

ಎಂಜಲು, ಶೇಷಾನ್ನ, ಪಿತೃಶೇಷ ಮತ್ತು ಮಾತೃಭೋಜನದ ಬಗ್ಗೆ ನೋಡಿದ್ದಾಯಿತು. ಇನ್ನು ಪ್ರಸಾದದ ಬಗ್ಗೆ ನೋಡೋಣ. 

ನಾವು ನಂಬಿದ ದೈವಕ್ಕೆ ಕೃತಜ್ಞತೆ ತೋರಿಸುವ ಸಲುವಾಗಿ ಪೂಜೆ-ಪುನಸ್ಕಾರಗಳನ್ನು ಮಾಡುವುದು ಬಹಳ ಹಿಂದಿನಿಂದ ಬಂದಿರುವ ಒಂದು ಸಂಪ್ರದಾಯ. ಈ ರೀತಿ ಮಾಡುವಾಗ ಭಯ-ಭಕ್ತಿಗಳಿಂದ ಇಷ್ಟದೈವಕ್ಕೆ ಕೊಡಲು ತಿಂಡಿ-ತಿನಿಸು, ಅಡಿಗೆ, ಪಾನೀಯ ಇತ್ಯಾದಿ ಮಾಡುವುದು. ಹಣ್ಣು-ಹಂಪಲುಗಳನ್ನು ಸೇರಿಸುವುದು. ತಯಾರು ಮಾಡಿದ ಮತ್ತು ಸಂಪಾದಿಸಿದ ಇಂತಹ ಪದಾರ್ಥಗನ್ನು ಆವಾಹಿಸಿದ ದೇವರು-ದೇವತೆಗಳ ಮುಂದೆ ಇಟ್ಟು "ಷೋಡಶೋಪಚಾರ" (ಹದಿನಾರು ಹಂತದ ಪೂಜೆ) ಅಂಗವಾಗಿ "ನೈವೇದ್ಯ" ಮಾಡುತ್ತಾರೆ. ಹೀಗೆ ಮಾಡುವಾಗ ಪರಮಾತ್ಮನು ಅಲ್ಲಿ ಇಟ್ಟ ಪದಾರ್ಥಗಳಲ್ಲಿ ತನಗೆ ಯೋಗ್ಯವಾದ ಅಂಶಗಳನ್ನು ರಸರೂಪವಾಗಿ ನೋಟದಿಂದ ಸೇವಿಸುತ್ತಾನೆ ಎಂದು ನಂಬಿಕೆ. ಹೀಗೆ ನೈವೇದ್ಯ ಮಾಡಿದ ಮೇಲೆ ಅಲ್ಲಿ ಉಳಿದ ಪದಾರ್ಥ "ಪ್ರಸಾದ" ಆಯಿತು. ಅನುಗ್ರಹ ರೂಪವಾಗಿ ನಮಗೆ ಹಿಂದೆ ಬಂದಿದ್ದು "ಪ್ರಸಾದ" ಎಂದು ನಿರ್ದೇಶಿತವಾಯಿತು. 

ದೇವರು ಸ್ವೀಕರಿಸಿ (ತಿಂದು) ಬಿಟ್ಟ ಇದನ್ನು ಯಾರೂ ದೇವರ ಎಂಜಲು ಎನ್ನುವುದಿಲ್ಲ. ಬಹಳ ಗೌರವಪೂರ್ವಕ "ಪ್ರಸಾದ" ಎನ್ನುತ್ತಾರೆ. ಯಾರಾದರೂ ಕೊಟ್ಟರೆ ಎರಡೂ ಕೈಗಳಿಂದ ಸ್ವೀಕರಿಸುತ್ತಾರೆ. ಮೊದಲು ನೋಡಿದ ಎಂಜಲು ಮತ್ತು ಈಗ ನೋಡಿದ ಪ್ರಸಾದಕ್ಕೆ ಎಷ್ಟು ವ್ಯತ್ಯಾಸ! ಅದರ ಬೆಲೆ ನಂಬಿಕೆ ಮತ್ತು ಶ್ರದ್ದೆಯಲ್ಲಿ ಇದೆ. ಭೌತಿಕವಾಗಿ ನೋಡಿದರೆ ವ್ಯತ್ಯಾಸವಿಲ್ಲ. ಭಾವನಾತ್ಮಕವಾಗಿ ನೋಡಿದರೆ ಎಲ್ಲಿಲ್ಲದ ವ್ಯತ್ಯಾಸ. 

ದೊಡ್ಡ ಸಮಾರಂಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಗೆ ಮಾಡಿದಾಗ ಪಾಕಶಾಲೆಯಲ್ಲಿಯೇ ನೈವೇದ್ಯ ಮಾಡುತ್ತಾರೆ. ಸಾಮೂಹಿಕ ಭೋಜನಶಾಲೆಗಳಿರುವ ದೇವಾಲಯಗಳಲ್ಲಿ ಇದನ್ನು ನೋಡಬಹುದು. ಮನೆಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ತಯಾರಿಸಿದ ಎಲ್ಲಾ ಪದಾರ್ಥಗಳನ್ನೂ ಒಂದು ಹರಿವಾಣದಲ್ಲಿ ಸ್ವಲ್ಪ ಸ್ವಲ್ಪ ಬಡಿಸಿ ನೈವೇದ್ಯ ಮಾಡುತ್ತಾರೆ. ನಂತರ ಅದನ್ನು ಅದೇ ಕ್ರಮದಲ್ಲಿ ಮಾಡಿರುವ ಹೆಚ್ಚಿನ ಅಡಿಗೆ ಪದಾರ್ಥಗಳಲ್ಲಿ ಸೇರಿಸುತ್ತಾರೆ. ಈಗ ಮಾಡಿದ ಅಡಿಗೆ ಎಲ್ಲ ಪ್ರಸಾದವಾಯಿತು!

ಅನೇಕ ದಶಕಗಳ ಹಿಂದೆ ಕಾಶಿ-ರಾಮೇಶ್ವರ ಯಾತ್ರೆ ಬಹಳ ಕಠಿಣದ್ದಾಗಿತ್ತು. ಹೀಗೆ ಯಾತ್ರೆ ಹೋದವರು ದಾರಿಯಲ್ಲಿ ಸಿಗುವ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿಂದ ಪ್ರಸಾದ ತರುತ್ತಿದ್ದರು. ಸಾಮಾನ್ಯವಾಗಿ ಕಲ್ಲುಸಕ್ಕರೆ, ಒಣದ್ರಾಕ್ಷಿ, ಉತ್ತತ್ತಿ (ಖರ್ಜೂರ), ಪಂಚಕಜ್ಜಾಯ, ಕಲ್ಯಾಣಸೇವೆ ಮುಂತಾದ, ಬಹಳ ದಿನ ಕೆಡದೆ ಇರುವ ಪದಾರ್ಥಗಳ ಪ್ರಸಾದಗಳು. ತಿರುಪತಿಯಂತಹ ಕ್ಷೇತ್ರವಾದರೆ ಲಾಡುವೂ ಆಗಬಹುದು. ಯಾತ್ರೆ ಮುಗಿದು ಊರಿಗೆ ಬಂದ ನಂತರ ಒಂದು ದಿನ ಬಂಧು-ಮಿತ್ರರನ್ನೆಲ್ಲ ಕರೆದು ಸಮಾರಾಧನೆ ನಡೆಸುತ್ತಿದ್ದರು. "ಕಾಶಿ ಸಮಾರಾಧನೆ" ಅಥವಾ "ಗಂಗಾ ಸಮಾರಾಧನೆ" ಎಂದು ಅದಕ್ಕೆ ಹೆಸರು. ಇಷ್ಟದೇವತೆಯ ಜೊತೆಗೆ ಈ ಎಲ್ಲ ಕ್ಷೇತ್ರಗಳ ಪ್ರಸಾದಗಳನ್ನೂ ಪೂಜಿಸಿ ಬಂದವರಿಗೆ ವಿತರಿಸುತ್ತಿದ್ದರು. ಈಗ ಈ ಪದ್ಧತಿ ನಿಂತೇ ಹೋಗಿದೆ. 

*****

ಭಗವಾನ್ ವೇದವ್ಯಾಸರ ಕುರಿತಾದ ನಾಣ್ನುಡಿ ವಿಷಯದಲ್ಲಿ ಉಚ್ಚಿಷ್ಟ ಅನ್ನುವ ಪದಕ್ಕೆ ಎಂಜಲು ಎಂದು ಅರ್ಥ ಮಾಡುವುದು ಅಷ್ಟು ಸಮಂಜಸವಲ್ಲ. ಅವರ ಅನೇಕ ಸೃಷ್ಟಿಗಳಲ್ಲಿ ಒಂದಾದ ಮಹಾಭಾರತದ ವಿಷಯದಲ್ಲಿಯೇ "ಇಲ್ಲಿರುವುದೇ ಬೇರೆಲ್ಲ ಕಡೆ ಇರುವುದು. ಇಲ್ಲಿರದುದು ಬೇರೆಲ್ಲಿಯೂ ಇಲ್ಲ" ಎಂದು ಹೇಳುತ್ತಾರೆ. ಈ ಕೃತಿಯ ಒಂದು ಎಳೆ ಹಿಡಿದು ಕೃತಿ ರಚಿಸಿ ಅನೇಕರು ಮಹಾಕವಿಗಳಾದರು; ಪೂಜ್ಯರೆನಿಸಿದರು. ಕೆಲವು ಕೃತಿಗಳನ್ನು ಒಮ್ಮೆ ಓದಿದರೆ ಮುಗಿಯಿತು. ಆದರೆ ವೇದವ್ಯಾಸರ ಕೃತಿಗಳು ಮತ್ತೆ ಮತ್ತೆ ಓದಿದರೆ ಹೊಸ ಹೊಸ ಅರ್ಥಗಳು ಇಂದಿಗೂ ಹೊಳೆಯುತ್ತವೆ. 

ಈ ದೃಷ್ಟಿಯಿಂದ "ವ್ಯಾಸೋಚ್ಛಿಷ್ಟಮ್ ಜಗತ್ಸರ್ವಂ" ಎನ್ನುವುದಕ್ಕೆ "ವ್ಯಾಸರು ನಮಗೆ ಕೊಟ್ಟಿರುವ ಪ್ರಸಾದ" ಎನ್ನುವುದೇ ಸರಿ ಎನ್ನಬಹುದು. 

ಈ ಸಂಚಿಕೆ ಈಗಾಗಲೇ ದೀರ್ಘವಾಗಿರುವುದರಿಂದ, ಎಂಜಲು ಎನ್ನುವ ವಿಷಯದಲ್ಲಿ ಶ್ರೀಕನಕದಾಸರು ಹೇಳಿರುವ ವಿಶೇಷ ವಿಷಯವನ್ನು ಮುಂದೊಮ್ಮೆ ನೋಡೋಣ. 

4 comments:

  1. Interesting and Very good to know. UR…..

    ReplyDelete
  2. ಭಾನುಮತಿApril 20, 2025 at 3:14 AM

    ಶೇಷಾನ್ನ, ಪಿತೃ ಶೇಷ, ಮಾತೃಭೋಜನ ಹಾಗೂ ಭಗವಂತನಿಗೆ ಸಮರ್ಪಿಸಿದ ಪರಮಪ್ರಸಾದಗಳ ಬಗೆಗಿನ ವಿವರಣೆ ತುಂಬ ಸೊಗಸಾಗಿದೆ.

    ನೀವು ಹೇಳಿದಂತೆ ಈಗ ಕಾಶೀ ಇತ್ಯಾದಿ ತೀರ್ಥಯಾತ್ರೆಗಳು ಸುಲಭವಾಗಿ ಮಾಡಬಹುದಾದ ಕಾರಣ ತತ್ಸಂಬಂಧಿತ ಸಮಾರಾಧನೆಗಳನ್ನು ಯಾರೂ ಮಾಡುತ್ತಿಲ್ಲವೇನೋ. ಅಲ್ಲಿಂದ ತಂದ ಪ್ರಸಾದಗಳನ್ನು ಹತ್ತಿರದ ಬಂಧು ಬಾಂಧವರು ಹಾಗೂ ಸ್ನೇಹಿತರಿಗೆ ಹಂಚುವುದಕ್ಕೆ ಸೀಮಿತವಾಗಿದೆ.

    ಇನ್ನು ದೇವರಿಗೆ ನೈವೇದ್ಯ ಮಾಡಿದ ಪ್ರಸಾದದ ರುಚಿಗೆ ಸರಿಸಾಟಿಯಾಗಿ ಯಾವುದೂ ಇಲ್ಲವೆನ್ನುವುದು ಎಲ್ಲರಿಗೂ ಅನುಭವವೇದ್ಯ🙏. ಭಗವಾನ್ ವೇದವ್ಯಾಸರು ನಮಗೆ ಅನುಗ್ರಹಿಸಿರುವ ಕೃತಿಗಳೂ ಇದಕ್ಕೆ ಹೊರತಲ್ಲ. ಎಂದಿನಂತೆ ಹೃತ್ಪೂರ್ವಕ ಧನ್ಯವಾದಗಳು ಕೇಶವ ಸರ್🙏

    ReplyDelete
  3. Very interesting. The meaning from Enjalu to Prasada was so clinically brought out. 👌👌

    ReplyDelete