Showing posts with label jeevana. Show all posts
Showing posts with label jeevana. Show all posts

Wednesday, July 8, 2026

ಜ್ಯೋತಿಷ್ಯ, ವಿಮಾನ ಮತ್ತು ಜೀವನ


ಕಳೆದ ಮೂರು ಸಂಚಿಕೆಗಳಲ್ಲಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕೆಲವು ಸಂಗತಿಗಳನ್ನು ನೋಡಿದೆವು. "ಜ್ಯೋತಿಷ್ಯದಲ್ಲಿ ನಂಬಿಕೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ಈ ವಿಷಯದಲ್ಲಿ ಅವರವರ ನಂಬಿಕೆ-ಅಪನಂಬಿಕೆ ಬಗ್ಗೆ ವಿಚಾರ ನಡೆದಿತ್ತು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆ ಓದಬಹುದು. ಅದರ ಹಿಂದಿನ ಸಂಚಿಕೆಗಳ ಕೊಂಡಿಗಳು ಅಲ್ಲಿ ಸಿಗುತ್ತವೆ. 

ಯಾವುದೋ ಒಂದು ಜನಗಳ ಗುಂಪು. ಒಬ್ಬರಿಗೊಬ್ಬರು ಪರಿಚಯ ಇರಬಹುದು, ಇಲ್ಲದಿರಬಹುದು. ಬಸ್ ನಿಲ್ದಾಣದಲ್ಲಿರಬಹುದು. ಮದುವೆ ಮನೆಯಲ್ಲಿರಬಹುದು. ಕ್ರಿಕೆಟ್ ಪಂದ್ಯದ ಊಟದ ವಿರಾಮದ ವೇಳೆಯಲ್ಲಿರಬಹುದು. ಸಂಗೀತ ಕಚೇರಿ ಪ್ರಾರಂಭ ತಡವಾದ ಸಮಯದಲ್ಲಿ ಇರಬಹುದು. ಇಂಥದೇ ಸಮಯ, ಸ್ಥಳ, ಕೂಟ ಎಂದೇನಿಲ್ಲ. ಯಾರೋ ಒಬ್ಬರು ಮೈ ಮುರಿದು ಅವರದೇ ಅಂಗೈ ನೋಡಿಕೊಂಡರೂ ಅವರ ಮುಂದೆ ಇನ್ನೈವರು ಅಂಗೈ ಚಾಚುವರು! ಅಪಘಾತದಲ್ಲಿ ಕೈ ಕಳೆದುಕೊಂಡವರು ಬಹಳ ಬೇಸರಿಸುವರು. ಮುಖ್ಯವಾದ ಒಂದು ಅಂಗವಾದ "ಕೈ" ಉಪಯೋಗ ಇಲ್ಲವೆನ್ನುವುದಕ್ಕಿಂತಲೂ ಮಿಗಿಲಾಗಿ ಕೈ ತೋರಿಸಿ ಭವಿಷ್ಯ ತಿಳಿಯುವ ಅವಕಾಶ ಹೋಯಿತು ಅನ್ನುವ ದುಃಖ. "ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡಂತೆ" ಅನ್ನುವ ಗಾದೆ ಗೊತ್ತಿರುವವರೂ ಎರಡೂ ಕೈ ಚಾಚುವರು. ಇದು ಮನುಜ ಸಹಜ ಗುಣ. ಕಾಣದಿರುವ ನಾಳಿನ ಜೀವನ ಹೇಗಿದೆ ಎನ್ನುವುದನ್ನು ಇಂದೇ ತಿಳಿಯುವ ಹಂಬಲ. 

"ಹಸ್ತ ಸಾಮುದ್ರಿಕ" ಅನ್ನಬಹುದು. "ಪ್ರಶ್ನೆ" ಕೇಳಿ ಉತ್ತರ ಪಡೆದು ಸಮಸ್ಯೆ ಪರಿಹರಿಸಿಕೊಳ್ಳುವ ಕಾತರ ಇರಬಹುದು. "ಕವಡೆ ಶಾಸ್ತ್ರ" ಆಗಬಹುದು. "ಕುಂಡಲಿ" ತೋರಿಸಿ ಹಿಂದೆ ನಡೆದದ್ದು, ಈಗ ನಡೆಯಬೇಕಾದದ್ದು, ಮುಂದೆ ನಡೆಯಬಹುದಾದದ್ದು, ಇವೆಲ್ಲವನ್ನೂ ಚಾಚೂ ತಪ್ಪದೆ ತಿಳಿದುಕೊಂಡು ನಿರಾಳವಾಗುವ ಬಯಕೆಗಳು ತೀರಿಸುವವನಿರಬಹುದು. ರಸ್ತೆಯಲ್ಲಿ ಚಾಪೆ ಹಾಸಿಕೊಂಡು ಕುಳಿತಿರುವ "ಗಿಣಿಶಾಸ್ತ್ರ" ಪಾರಂಗತನಿರಬಹುದು. ಮನೆಯ ಮುಂದೆ ಬಂದು ನಿಂತ "ಬುಡುಬುಡಿಕೆ" ವ್ಯಕ್ತಿ ಇರಬಹುದು. ಮೊದಲೇ ಸಮಯ ಗೊತ್ತುಪಡಿಸಿಕೊಂಡು (ಅಪಾಯಿಂಟ್ಮೆಂಟ್ ಪಡೆದುಕೊಂಡು) ಕಾಣಬೇಕಾದ ಕಂಪ್ಯೂಟರ್ ತಜ್ಞ ಆಧುನಿಕ "ಅಸ್ಟ್ರಾಲಜರ್" ಆಗಬಹುದು.  ಅವನ ಭವಿಷ್ಯವೇ ಗೊತ್ತಿಲ್ಲದೇ ತೊಳಲಾಡುತ್ತಿರುವ "ಅಜ್ಞ" ಆದರೂ ಆಗಬಹುದು. ಅಲ್ಲಿ ಹೋದವರ ಮನಸ್ಸಿನಲ್ಲಿ ತಿಳಿಯುವ ಕುತೂಹಲ ಒಂದೇ ರೀತಿಯದು. 

ಅಂದಂತೆ, ಈ "ಪಾರಂಗತ" ಅನ್ನುವ ಶಬ್ದಕ್ಕೆ ಅರ್ಥ ಏನು? ಒಂದು ವಿಶಾಲ ಜಲರಾಶಿ ಇದೆ. ಸಮುದ್ರ ಅನ್ನಿ. ಕಣ್ಣು ನಮಗೆ ತೋರಿಸುವವರೆಗೆ ನೀರೇ ನೀರು. ಜಲರಾಶಿಯ ಆ ಕಡೆ ಏನು ಇದೆ? ನಮಗೆ ಗೊತ್ತಿಲ್ಲ. ಯಾರೋ ಒಬ್ಬ ಅಲ್ಲಿ, ಅಷ್ಟು ದೂರ, ನಮಗೆ ಗೊತ್ತಿಲದಷ್ಟು ದೂರ, ಹೋಗಿ ನೋಡಿಕೊಂಡು ಬಂದಿದ್ದಾನೆ. ಅವನು ನಾವು ಕಾಣದ ಆ ದಡ ಕಂಡವನು. "ಪಾರ" ಅಂದರೆ ಆ ಕಡೆಯ ದಡ. ಕಾಣದ ತೀರ.  "ಪಾರಂ ದೃಷ್ಟವಾನ್". ಆ ದಡಕ್ಕೆ ಹೋಗಿ ನೋಡಿ ಬಂದವನು. ಪಾರಂ ಗತವಾನ್. ಆದ್ದರಿಂದ "ಪಾರಂಗತ". ("ಪಾರುಗಾಣಿಸೋ ಹರಿಯೇ!" ಎಂದು ಕೂಗುವುದೂ ಅದಕ್ಕೇ. ಕಾಣದ ತೀರವನ್ನು ತಲುಪಿಸಿ, ಮಧ್ಯದಲ್ಲಿ ಮುಳುಗುವುದನ್ನು ತಪ್ಪಿಸು ಎಂದು ಬೇಡುವುದು).

*****

ಮುಂದಿನ ಚರ್ಚೆಯ ವಿಷಯ ಅರ್ಥವಾಗುವುದಕ್ಕೆ ಸ್ವಲ್ಪ ವಿಮಾನಗಳ ಹೆಚ್ಚಿನ ತಿಳುವಳಿಕೆ ಅಗತ್ಯ. ಒಂದು ದೊಡ್ಡ ಬೋಯಿಂಗ್ ಅಥವಾ ಏರ್-ಬಸ್ ವಿಮಾನದಲ್ಲಿ ಅರವತ್ತು ಲಕ್ಷ ಮೀರಿದ (ಆರು ಮಿಲಿಯನ್) ಬಿಡಿ ಭಾಗಗಳು ಇರುತ್ತವಂತೆ. ಬಿಡಿ ಭಾಗಗಳು ಅನೇಕ ಫ್ಯಾಕ್ಟರಿಗಳಲ್ಲಿ ತಯಾರಾಗುತ್ತವೆ. ಕಡೆಯಲ್ಲಿ ಎಲ್ಲವೂ ಒಂದು ಕಡೆ ಬಂದು ಸೇರುತ್ತವೆ. ಇಂತಹ ಸಂಗಮ ಸ್ಥಳಕ್ಕೆ "ಕಡೆಯ ಜೋಡಣಾ ಸಾಲು" ಅನ್ನುತ್ತಾರೆ. ಇಂಗ್ಲಿಷ್ನಲ್ಲಿ Final Assembly Line (FAL). ಬೋಯಿಂಗ್ ಸಂಸ್ಥೆಯ ಎವೆರೆಟ್ಟ್ (Everette, near Seattle, WA, USA) ಫ್ಯಾಕ್ಟರಿ ಮತ್ತು ಕಳೆದ ವರ್ಷ ಅಲಬಾಮಾ ರಾಜ್ಯದ ಮೊಬೈಲ್ (Mobile, Alabama, USA) ಎಂಬಲ್ಲಿ ವಿಸ್ತರಿಸಲಾದ ಏರ್-ಬಸ್ ಫ್ಯಾಕ್ಟರಿ, ಈ ಸ್ಥಳಗಳಲ್ಲಿ ನೋಡಬಂದ ವೀಕ್ಷಕರಿಗೆ ಇಡೀ ಜೋಡಣೆ ತೋರಿಸುವ ವ್ಯವಸ್ಥೆ (Visitor tours) ಇದೆ. (ಏರ್-ಬಸ್ ಸಂಸ್ಥೆಗೆ ಯೂರೋಪಿನಲ್ಲಿ ಸಹ ಈ ರೀತಿ ಇದೆ). ಹೆಚ್ಚಿನ ವಿವರಗಳಿಗೆ ಇಂಗ್ಲಿಷ್ನಲ್ಲಿ ಇರುವ ಲೇಖನ ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಹೀಗೆ ಫ್ಯಾಕ್ಟರಿಯ ಜೋಡಣಾ ಸಾಲಿನಲ್ಲಿ ಒಮ್ಮೆಗೇ ಮೂರು ವಿಮಾನಗಳು ತಯಾರಾಗುತ್ತಿರುತ್ತವೆ. ಪ್ರತಿಯೊಂದೂ ಮೂರು ಮುಖ್ಯ ಭಾಗಗಳಾಗಿ ಬಂದಿರುತ್ತವೆ. ಇವುಗಳನ್ನು ಒಂದು ಚಲಿಸುವ ವೇದಿಕೆಯ (moving platform) ಮೇಲೆ ಇಟ್ಟಿರುತ್ತಾರೆ. ಮೂರು ಪಾಳಿಯಲ್ಲಿ ಕೆಲಸಗಾರರು ಹಗಲು-ರಾತ್ರಿ ಕೆಲಸ ಮಾಡುತ್ತಾರೆ. ರಜೆ ಎಂಬುದಿಲ್ಲ. ಮೂರು ಭಾಗಗಳಾಗಿ ಬಂದದ್ದು ಈ ಕೊನೆಯಿಂದ ವೇದಿಕೆಯ ಮೇಲೆ ನಿಧಾನವಾಗಿ ಚಲಿಸುತ್ತಿದ್ದಂತೆ ಎಂಜಿನು, ರೆಕ್ಕೆಗಳ ಸೇರುವಿಕೆಯ ನಂತರ, ಮೂರನೆಯ ದಿನ ಆ ಕೊನೆಯಲ್ಲಿ ತಯಾರಾಗಿ ನಿಂತು, ಒಟ್ಟಿಗೆ ಹಾರಿ, ಬೇರೆ ಬೇರೆ ದಿಕ್ಕಿನಲ್ಲಿ ಚಲಿಸುತ್ತಾ, ಅವನ್ನು ಕೊಂಡುಕೊಂಡಿರುವ ಸಂಸ್ಥೆಯ ದೇಶಕ್ಕೆ ಹೋಗುತ್ತವೆ!  

ಹೀಗೆ ಒಂದೇ ಸಲ ತಯಾರಾದ ಮೂರು ವಿಮಾನಗಳು ಒಂದೇ ಸಮಯದಲ್ಲಿ ಹುಟ್ಟಿದ ಮೂರು ಮಕ್ಕಳಂತೆ. ಅವು ಮೂರು ಹಾರಿ ಹೋಗುವ ದಿನ ಫ್ಯಾಕ್ಟರಿಯಲ್ಲಿ ಒಂದು ಹಬ್ಬದ ವಾತಾವರಣ! ಅವುಗಳಿಗೆ ಮನುಷ್ಯರಿಗೆ ಬರೆದಂತೆ ಕುಂಡಲಿ ಬರೆದರೆ ಮೂರಕ್ಕೂ ಒಂದೇ ಕುಂಡಲಿ ಇರಬೇಕು. ಒಂದು ಬ್ಯಾಚಿನ ಮೂರು ವಿಮಾನಗಳಿಗೆ ಒಂದೇ ವಿವರಗಳು: ಒಟ್ಟು ತೂಕ, ಎಂಜಿನ್ನುಗಳ ಶಕ್ತಿ, ಒಟ್ಟು ಪ್ರಯಾಣಿಕರ ಕುರ್ಚಿಗಳ ಸಂಖ್ಯೆ, ಇಂಧನ ಟ್ಯಾಂಕುಗಳ ಗಾತ್ರ, ಹಾರುವ ವೇಗ ಕ್ಷಮತೆ, ಹೀಗೆ ಎಲ್ಲ ವಿವರಗಳು. "ತ್ರಿವಳಿಗಳು" ಎಂದು ಧಾರಾಳವಾಗಿ ಕರೆಯಬಹುದು. 

*****

ಹಿಂದಿನ ಸಂಚಿಕೆಯಲ್ಲಿ ನಡೆಯುತ್ತಿದ್ದ ತಂದೆ-ಮಗನ ಸಂವಾದ ಮುಂದುವರೆಯಿತು.

"ನಿನ್ನೆ ಭವಿಷ್ಯ ಹೇಳುವ ಜ್ಯೋತಿಷಿಯ ವಿವೇಚನೆಯ ಬಗ್ಗೆ ಮಾತಾಯಿತು"
"ಹೌದು. ಅದರ ಬಗ್ಗೆ ಈಗ ಏನು?"
"ಈ ವಿವೇಚನೆ ಅನ್ನುವುದು ಹೇಗೆ ತಿಳಿಯುವುದು?"
"ಒಂದೇ ಫ್ಯಾಕ್ಟರಿಯಲ್ಲಿ, ಒಂದೇ ದಿನ ತಯಾರಾದ ಮೂರು ಒಂದೇ ರೀತಿಯ ವಿಮಾನಗಳನ್ನು ತೆಗೆದುಕೊಳ್ಳೋಣ. ತಯಾರಾಗಿ ಕಾರ್ಖಾನೆಯಿಂದ ಹೊರಬಂದ ದಿನ ಎಲ್ಲವೂ ಸಮ ಸಮ. ಅಲ್ಲವೇ?"
"ಹೌದು"
"ಅವುಗಳ ಪರಿಪೂರ್ಣ ಸಾಮ್ಯತೆ ಅಲ್ಲಿಗೆ ಮುಗಿಯಿತು. ಮುಂದಿನ ನಡಾವಳಿ ಒಂದೇ ರೀತಿ ಇರುವುದಿಲ್ಲವಲ್ಲ"
"ಹೌದು"
"ಒಂದು ವಿಮಾನ ನಿಲ್ದಾಣದಿಂದ ಪೂರ್ವಕ್ಕೆ ಹಾರಿತು. ಮತ್ತೊಂದು ಪಶ್ಚಿಮಕ್ಕೆ. ಮೂರನೆಯದು ಉತ್ತರಕ್ಕೆ"
"ಇರಬಹುದು"
"ಪೂರ್ವದಲ್ಲಿ ಸುಗಮ ಹವಾಮಾನ. ಅನುಕೂಲ ವಾತಾವರಣ. ಒಳ್ಳೆಯ ಅನುಚರ ವಾಯು. ಇಂಗ್ಲಿಷಿನಲ್ಲಿ Tail Wind"
" ಹಾರಾಟ ಸುಗಮವಾಗಿರುತ್ತದೆ. ಅದರ ವೇಗದ ಜೊತೆ ಗಾಳಿಯ ಸಹಕಾರ ಸಿಕ್ಕಿದೆ"
"ಪಶ್ಚಿಮಕ್ಕೆ ಹಾರಿದ ವಿಮಾನಕ್ಕೆ ಕೂಡ ಸುಗಮ ಹವಾಮಾನ ಸಿಕ್ಕಿದೆ. ಆದರೆ ಅನುಚರ ವಾಯು ಇಲ್ಲ. ಬದಲಾಗಿ ಪ್ರತಿಕೂಲ ವಾಯು. Heavy Head Wind"
"ಮೊದಲಿನ ವಿಮಾನದಷ್ಟೇ ದೂರ ಕ್ರಮಿಸಲು ಹೆಚ್ಚಿನ ಸಮಯ ಬೇಕು. ಪ್ರಯಾಸ ಸಹ ಜಾಸ್ತಿ. ಹೆಚ್ಚು ಇಂಧನ ಖರ್ಚಾಗುತ್ತದೆ" 
"ಉತ್ತರಕ್ಕೆ ಹಾರಿದ ವಿಮಾನ ಚಂಡಮಾರುತ ತೀವ್ರವಾಗಿರುವ ಹಾದಿಯಲ್ಲಿ ಸಾಗಬೇಕು"
"ಅದೊಂದು ಏರುಪೇರಿನ ಪ್ರಯಾಣ. Bumpy Ride. ಎಲ್ಲ ಕಾಲವೂ ಸೀಟ್ ಬೆಲ್ಟ್ ಕಟ್ಟಿಕೊಂಡೇ ಕೂತಿರಬೇಕು"
"ಅಪಘಾತಗಳಿಗೆ ಹೆಚ್ಚಿನ ಅವಕಾಶ. ಅಲ್ಲವೇ?"
"ಖಂಡಿತ"
"ಜ್ಯೋತಿಷ್ಯದಲ್ಲಿಯೂ ಹಾಗೆಯೇ. ಕೇವಲ ಜನ್ಮ ಕುಂಡಲಿಗಳಿಂದ ಪೂರ್ತಿ ಫಲ ಹೇಳಬಾರದು"
"ಅಂದರೆ?"
"ಜನ್ಮ ಕುಂಡಲಿ ಹುಟ್ಟಿದ ಸಮಯದಲ್ಲಿ ಗ್ರಹಗಳ ಬಲಾಬಲ ಹೇಳುತ್ತದೆ. ಅವುಗಳ ಈಗಿನ ಸ್ಥಿತಿ ಏನು? ಅದನ್ನು "ಗೋಚಾರ" ಅನ್ನುತ್ತಾರೆ. ಇದನ್ನೂ ಗಮನಿಸಬೇಕು"
"ಅಂದರೆ ಹುಟ್ಟಿನ ಕುಂಡಲಿ ಜೊತೆಗೆ ಈಗಿನ ಗೋಚರ ಫಲವನ್ನೂ ಸಾಮ್ಯ ಮಾಡಬೇಕು"
"ಹೌದು"

ಜ್ಯೋತಿಷ್ಯ ಫಲ ಹೇಳಲು ಇಷ್ಟೆಲ್ಲಾ ಬೇಕು! 

*****

"ಇವೆರಡು ಸರಿಯಾಗಿ ನೋಡಿದರೆ ಆಯಿತು"
"ಇಷ್ಟೇ ಅಲ್ಲ. ಇನ್ನೂ ಒಂದಿದೆ"
"ಅದೇನು?"
"ಪ್ರತಿ ಜೀವಿಯ ಮೇಲೂ ಅನ್ಯರ ಪ್ರಭಾವ ಇರುತ್ತದೆ"
"ಇರಬಹುದು. ಅದಕ್ಕೂ ಇದಕ್ಕೂ ಏನು ಸಂಬಂಧ?"
"ಅಶ್ವಪತಿ ಮಹಾರಾಜನಿಗೆ ಮಗ ಹುಟ್ಟಿದಾಗ ಜ್ಯೋತಿಷ್ಕರು ಮಗು ಅಲ್ಪಾಯು ಎಂದು ಹೇಳಿದರು"
"ಸರಿ"
"ಅವನ ಹೆಸರು ಸತ್ಯವಾನ. ಆದರೆ ಇದನ್ನು ತಿಳಿದೂ ಸಾವಿತ್ರಿ ಹಠ ಹಿಡಿದು ಅವನನ್ನು ಮದುವೆ ಆದಳು"
"ಹೌದು"
"ಅವಳು "ದೀರ್ಘ ಸುಮಂಗಲಿ" ಯೋಗ ಇದ್ದವಳು"
"ಮುಂದೆ?"
"ಯಮನೊಡನೆ ಹೋರಾಡಿ ಗಂಡನನ್ನು ಬದುಕಿಸಿಕೊಂಡಳು"
"ಅಂದರೆ?"
"ಅನೇಕರಿಗೆ ತಂದೆ-ತಾಯಿ, ಹೆಂಡತಿ, ಮಕ್ಕಳು, ಅಣ್ಣ-ತಮ್ಮಂದಿರು, ಮುಂತಾದ ಕಡೆಗಳಿಂದ ವಿಶೇಷ ಸಹಾಯ ಸಿಗುತ್ತದೆ. ಹಾಗೆಯೇ ಕೆಲವರ ಕಡೆಯಿಂದ ಹೆಚ್ಚಿನ ತೊಂದರೆ ಕೂಡ ಆಗಬಹುದು"
"ಇದರ ಸಮನ್ವಯ ಹೇಗೆ?"
"ಜ್ಯೋತಿಷ್ಯ ಫಲ ಹೇಳುವುದು ಕೇವಲ "ಪುಸ್ತಕದ ಬದನೇಕಾಯಿ" ಎಂಬಂತೆ ಆಗಬಾರದು. ಫಲ ಹೇಳುವವನಿಗೆ ಚೆನ್ನಾದ ಲೌಕಿಕ ಜ್ಞಾನ ಇರಬೇಕು"

ಇನ್ನೂ ಹೆಚ್ಚಿನ ಆಳಕ್ಕೆ ಇಳಿಯುವ ಅವಶ್ಯಕತೆ ಇದೆ!

*****

"ಮೂರು ವಿಮಾನಗಳನ್ನು ಮತ್ತೆ ತೆಗೆದುಕೊಳ್ಳೋಣ"
"ಮತ್ತಿನ್ನೇನು?"
"ಒಂದರ ಪೈಲಟ್ಗಳು ಇನ್ನೂ ಹೊಸಬರು. ಮತ್ತೊಂದರವರು ನುರಿತವರು. ಮೂರನೆಯವರು ಮೊದಲ ಬಾರಿ ಸ್ವತಂತ್ರವಾಗಿ ವಿಮಾನ ಚಾಲನೆ ಮಾಡುತ್ತಿದ್ದಾರೆ"
"ಇದು ಬಹಳ ಗಾಢವಾದ ಪರಿಣಾಮ ಮಾಡುತ್ತದೆ"
"ಜೊತೆಗೆ ಇಳಿಯುವ ನಿಲ್ದಾಣದ ಕಾರ್ಯ ಕ್ಷಮತೆ, ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ಸಹಕಾರ, ಮುಂತಾದುವೂ ಮುಖ್ಯ ಆಗುತ್ತವೆ. ಅಲ್ಲವೇ?"
"ಹೌದು"
"ಹತ್ತು ರೂಪಾಯಿ ಪುಸ್ತಕ ಕೊಂಡು, ಐದು ಸಲ ಓದಿ, ಜಾತಕ ಫಲ ಹೇಳಬಾರದು"
"ಅಂದರೆ?"
"ಇನ್ನೂ ಅನೇಕ ಸೂಕ್ಷ್ಮಗಳು ಇರುತ್ತವೆ. ನಂಬಿಕೆ ಇದ್ದರೆ ಕ್ರಮವಾಗಿ ಅಭ್ಯಾಸ ಮಾಡಬೇಕು"
"ಹುಂ"
"ತಿಳಿದವರೊಡನೆ ಒಡನಾಡಿ ಕಲಿಯಬೇಕು"
"ಗ್ರಹ ಸಮಯ ಎಂದೊಂದು ಉಂಟು. ಅದನ್ನೂ ನೋಡಬೇಕು"
"ಅಂದರೆ?"
"ಇಲ್ಲಿ ಇಬ್ಬರಿದ್ದಾರೆ. ಇಬ್ಬರಿಗೂ ಸೋದರಮಾವನ ಕಡೆಯಿಂದ ವಿಶೇಷ ಸಹಾಯ ಎಂದಿದೆ"
"ಸರಿ"
"ಒಬ್ಬನ ಸೋದರಮಾವ ಈಗ ಮಂತ್ರಿ ಆಗಿದ್ದಾನೆ"
"ಇನ್ನೊಬ್ಬನ ಸೋದರಮಾವ?'
"ಯಾವುದೋ ಕಾರಣಕ್ಕೆ ಅವನಿಗೆ ಜೈಲು ವಾಸ ನಡೆಯುತ್ತಿದೆ"
"ಒಹೋ! ಹೀಗೂ ಉಂಟೋ?"
"ಆದಕಾರಣ ಹುಟ್ಟು ಕಾಲದ ಫಲ, ಗೋಚಾರ ಫಲ, ವಾತಾವರಣ ಮುಂತಾದುವನ್ನು ಸಮನ್ವಯ ಮಾಡಬೇಕು"

ಇದು ಅಷ್ಟು ಸುಲಭದ ಕೆಲಸವಲ್ಲ!

*****

"ಇನ್ನೊಂದು ಉದಾಹರಣೆ ಕೊಡುತ್ತೇನೆ, ವಿನೋದಕ್ಕಾಗಿ"
"ಏನು?"
"ಮೂವರಿಗೆ "ಶತ್ರು ನಾಶ ಯೋಗ" ಇದೆ"
"ಹೀಗೊಂದು ಯೋಗ ಇದೆಯೇ?"
"ಇದೊಂದು ಉದಾಹರಣೆ. ಕೆಲವರಿಗೆ ಶತ್ರುಗಳನ್ನು ಜಯಿಸುವ ಯೋಗಗಳು ಇರುತ್ತವೆ"
"ಸರಿ"
"ಒಬ್ಬ ಸೈನ್ಯ ಸೇರುತ್ತಾನೆ. ಇನ್ನೊಬ್ಬ ಪಂಡಿತ ಆಗುತ್ತಾನೆ. ಮೂರನೆಯವ ಅಡಿಗೆ ಭಟ್ಟ ಆಗುತ್ತಾನೆ"
"ಮುಂದೆ?"
"ಸೈನ್ಯಕ್ಕೆ ಸೇರಿದವನು ನಿಜವಾಗಿ ಶತ್ರುಗಳನ್ನು ಕೊಚ್ಚಿ ಹಾಕಬಹುದು"
"ಅದು ಸಾಧ್ಯ"
"ಪಂಡಿತ?"
"ಅವನದೇನು?"
"ಅವನು ಪ್ರತಿವಾದಿಗಳನ್ನು ಸೋಲಿಸುತ್ತಾ ಯಶಸ್ಸು ಪಡೆಯಬಹುದು"
"ಹೌದು. ಅಡಿಗೆ ಭಟ್ಟ?"
"ಅವನು ಬಾಣಸಿಗನಾಗಿ ಅಡಿಗೆ ಮನೆಯಲ್ಲಿ ಸೊಪ್ಪು-ತರಕಾರಿ ಮುಂತಾದುವುಗಳನ್ನು ಚೆನ್ನಾಗಿ ಕತ್ತರಿಸುತ್ತಾ ಸೊಗಸಾಗಿ ಅಡಿಗೆ ಮಾಡುತ್ತಾನೆ!"

ಜೋರಾಗಿ ನಗುವುದನ್ನು ಬಿಟ್ಟು ಮತ್ತಿನ್ನೇನು ಮಾಡುವುದು? ಜ್ಯೋತಿಷಿಗೆ "ಹಾಸ್ಯ ಪ್ರಜ್ಞೆ" ಸಹ ಇರಬೇಕೆ?

*****

ಸ್ವಂತ ಕುಂಡಲಿಗಳ ನಿರೀಕ್ಷಣೆ ಮತ್ತು ದೈವ ಸಹಾಯ ಎನ್ನುವ ಇನ್ನೆರಡು ಪದರಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Sunday, November 5, 2023

"ವೃದ್ಧಾಪ್ಯ"ದಲ್ಲಿ "ಜೀವನ"ದ "ಆನಂದ"


ಪಾಪ, ಪುಣ್ಯ ಮತ್ತು ವೃದ್ಧಾಪ್ಯ:

ಮನುಷ್ಯನಿಗೆ ಒಂದು ಹಣ್ಣು ಬೇಕಾದರೆ ಅದರ ಸಸಿಯನ್ನು ನೆಟ್ಟು, ಮರವಾಗಿ ಬೆಳೆಸಿ, ಫಲಾಗಮನದ ಸಮಯ ಕಾದು ಅದರ ಹಣ್ಣು ಪಡೆಯಬೇಕು. ನೆನೆಸಿದ ತಕ್ಷಣ ಅದು ಸಿಗುವುದಿಲ್ಲ. ಈಗಲೇ ಹಣ್ಣು ಬೇಕಾದರೆ ಹಿಂದೆಂದೋ ನೆಟ್ಟು ಬೆಳೆಸಿದ ಮರದಿಂದ ಪಡೆಯಬಹುದು. ಅದೂ ಹಿಂದೆಂದೋ ಮರ ಬೆಳೆಸಿದ್ದರೆ ಮಾತ್ರ. ಇಲ್ಲದಿದ್ದರೆ ಇಲ್ಲ. ಅಂತೆಯೇ ಒಂದು ಮರವನ್ನು ನೆಟ್ಟು ಬೆಳೆಸಿದರೆ ಅದು ಹಣ್ಣನ್ನು ಕೊಟ್ಟೇ ಕೊಡುತ್ತದೆ. ಕೆಲವಂತೂ ಹೆಚ್ಚು ಆರೈಕೆ ಇಲ್ಲದಿದ್ದರೂ ಧಾರಾಳವಾಗಿ ಹಣ್ಣು ಕೊಡುತ್ತವೆ. ಮರ ಬೆಳಸಿಯಾದ ಮೇಲೆ ಹಣ್ಣು ಬರಬಾರದು ಎನ್ನುವಂತಿಲ್ಲ. ಹಣ್ಣು ಕೊಡುವುದು ಅದರ ಸಹಜ ವೃತ್ತಿ. ಅದರ ಕೆಲಸ ಅದು ಮಾಡುತ್ತದೆ. 

ಪಾಪ ಮತ್ತು ಪುಣ್ಯಗಳು ಒಂದು ರೀತಿಯಲ್ಲಿ ಮರಗಳಿದ್ದಂತೆ. ಮರಗಳನ್ನು ನೆಟ್ಟು ಬೆಳಸಬೇಕು. ಪಾಪ ಮತ್ತು ಪುಣ್ಯ ಎಂಬ ಎರಡು ಮರಗಳು ಮನುಷ್ಯನ ಜೊತೆಯಲ್ಲಿಯೇ ಹುಟ್ಟುತ್ತವೆ.  ನಮ್ಮ ಪ್ರತಿಯೊಂದು ಕ್ರಿಯೆಯೂ ಅವುಗಳ ಗೊಬ್ಬರ, ನೀರಾಗಿ ಅವನ್ನು ಬೆಳೆಸುತ್ತವೆ. ನಮ್ಮ ಪ್ರಯತ್ನ ಏನೂ ಬೇಕಿಲ್ಲ. ಕೆಲಸ ಮಾಡಿದವನಿಗೆ ಕೂಲಿ ಸಿಕ್ಕಂತೆ ಪ್ರತಿಫಲವೂ ಸಿಕ್ಕಿಯೇ ಸಿಗುತ್ತದೆ. ಕೆಲಸ ಮಾಡಿ ಕೂಲಿ ಕೊಡುವುದರ ಮುಂಚೆ ಓಡಿಹೋಗಬಹುದು. ಆದರೆ ಇಲ್ಲಿ ಅದೂ ಸಾಧ್ಯವಿಲ್ಲ. ಕೆಲಸಗಾರನನ್ನು ಅಟ್ಟಿಸಿಕೊಂಡು ಬಂದು ಕೂಲಿ ಸೇರುತ್ತದೆ! 

ಬೇರೆ ಹಣ್ಣುಗಳಿಗೂ ಪಾಪ, ಪುಣ್ಯಗಳಿಗೂ ಒಂದು ಮುಖ್ಯ ವ್ಯತ್ಯಾಸ ಉಂಟು. ನಮಗೆ ಯಾವುದೋ ಹಣ್ಣು ಬೇಕಾದಾಗ ಬೆಳದವರಿಂದಲೋ, ಆಂಗಡಿಯಿಂದಲೋ ಪಡೆಯಬಹುದು. ನಮ್ಮಲ್ಲಿ ಹಣ್ಣು ಹೆಚ್ಚಿದ್ದಾಗ ಬೇರೆಯವರಿಗೆ ಕೊಡಬಹುದು. ಆದರೆ ಪಾಪ, ಪುಣ್ಯಗಳ ಹಣ್ಣುಗಳ ವಿಷಯದಲ್ಲಿ ಇದು ಸಾಧ್ಯವಿಲ್ಲ. ನಾವು ಕೃಷಿ ಮಾಡಿದ ಹಣ್ಣುಗಳನ್ನು ಬೇರೆಯವರಿಗೆ ಕೊಡುವಹಾಗಿಲ್ಲ. ಬೇರೆಯವರ ಸಾಗುವಳಿಯ ಪದಾರ್ಥ ನಾವು ಪಡೆಯುವಹಾಗಿಲ್ಲ. ಅವರವರ ಬೆಳೆಯ ಫಸಲನ್ನು ಅವರವರೇ ತಿನ್ನಬೇಕು. ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. 

ಈ ಹಿನ್ನೆಲೆಯಲ್ಲಿ ಮನುಷ್ಯನಿಗೆ ಏನು ಬೇಕು, ಏನು ಬೇಡ ಎನ್ನುವುದರ ಬಗ್ಗೆ ಮಹಾಭಾರತದಲ್ಲಿ ಒಂದು ಸೊಗಸಾದ ಶ್ಲೋಕವಿದೆ:

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನ ಇಚ್ಛಂತಿ ಮಾನವಾ:।   ನ ಪಾಪ ಫಲಮಿಚ್ಛ೦ತಿ  ಪಾಪಂ ಕುರ್ವoತಿ ಯತ್ನತಃ ।।

"ಮನುಷ್ಯರಿಗೆ ಪುಣ್ಯ ಎನ್ನುವ ಮರ ಬೇಡ. ಆ ಮರವನ್ನು ಬೆಳೆಸುವುದಿಲ್ಲ. ಆದರೆ ಆ ಮರದ ಹಣ್ಣು ಬೇಕು. ಪಾಪ ಎನ್ನುವ ಮರದ ಹಣ್ಣು ಖಂಡಿತಾ ಬೇಡ. ಆದರೆ ಬಹಳ ಕಷ್ಟ ಪಟ್ಟು ಪಾಪದ ಮರವನ್ನು ಬೆಳೆಸುತ್ತಾರೆ!"

ಪಾಪದ ಮರ ಬೆಳೆಸಿದ ಮೇಲೆ ಅದು ಅದರ ಕೆಲಸ ಮಾಡಿ ಪಾಪದ ಹಣ್ಣು ಕೊಟ್ಟೇ ಕೊಡುತ್ತದೆ. ಆ ಹಣ್ಣನ್ನು ಸೇವಿಸಲೇ ಬೇಕು. ಬೇರೆಯವರಿಗೆ ಕೊಟ್ಟು ಕೈ ತೊಳೆದುಕೊಳ್ಳಲಾಗುವುದಿಲ್ಲ. ಮತ್ತೊಂದು ಕಡೆ, ಪುಣ್ಯದ ಮರ ಬೆಳೆಸಲಿಲ್ಲ.  ಆದರೆ ಪುಣ್ಯದ ಹಣ್ಣು ಬೇಕು! ಇದೊಂದು ವಿಚಿತ್ರ ವಿಪರ್ಯಾಸ. ಗೊತ್ತಿಲ್ಲದೇ ಪೇಚಿಗೆ ಸಿಕ್ಕಿಕೊಂಡ ಪರಿಸ್ಥಿತಿಯೂ ಅಲ್ಲ. ಇರುಳು ಕಂಡ ಭಾವಿಯಲ್ಲಿ ಹಗಲು ಬಿದ್ದಂತೆ!

ಪಾಪ ಮತ್ತು ಪುಣ್ಯದ ಪರಿಭಾಷೆಯನ್ನು ತಿಳಿಯುವುದು ತುಂಬಾ ಅವಶ್ಯಕ. ಪುಣ್ಯವೆಂದರೆ ಒದ್ದೆ ಬಟ್ಟೆ, ಮಂತ್ರ, ತಂತ್ರ, ಅಷ್ಟೇ ಎಂದು ತಿಳಿಯಬಾರದು. "ಕೊರಳೊಳು ಜಪಮಣಿ, ಬಾಯೊಳು ಮಂತ್ರವು, ಅರಿವೆಯ ಮೋರೆಗೆ ಮುಸುಕು ಹಾಕಿ...." ಮುಂತಾಗಿ ಉದರ ವೈರಾಗ್ಯವನ್ನು ಶ್ರೀ ಪುರಂದರ ದಾಸರು ಹಾಸ್ಯ ಮಾಡುತ್ತಾರೆ. "ಪರೋಪಕಾರಂ ಪುಣ್ಯಾಯ, ಪಾಪಾಯ ಪರ ಪೀಡನಮ್" ಎಂದು ಭಗವಾನ್ ವೇದ ವ್ಯಾಸರು ಹೇಳಿದಂತೆ ಸಮಾಜಕ್ಕೆ ಉಪಯೋಗವಾಗುವ ಯಾವುದೇ ಕೆಲಸ ಪುಣ್ಯದ್ದು. ಇನ್ನೊಬ್ಬರರಿಗೆ ವೃಥಾ ತೊಂದರೆ ಕೊಡುವ ಯಾವ ಕೆಲಸವೂ ಪಾಪದ್ದು. ಈ ಸ್ಥೂಲ ತಿಳುವಳಿಕೆ ಎಲ್ಲ ಸಮಯದಲ್ಲೂ ನಮ್ಮಲ್ಲಿ ಇರಬೇಕು. 

ಅಶಕ್ತರ, ಶಿಶುಗಳ, ವೃದ್ಧರ ಮತ್ತು ಆಂಗಹೀನರ ಸೇವೆ ಅತ್ಯಂತ ಪುಣ್ಯದ ಕೆಲಸ. ಇವು ದೇವರ ಪೂಜೆಯ ಅತ್ಯಂತ ಶ್ರೇಷ್ಠ ರೂಪ ಎಂದು ನಮ್ಮ ಮುಖ್ಯ ಗ್ರಂಥಗಳಲ್ಲಿ ಅನೇಕ ಕಡೆ ಕಾಣುತ್ತ್ತೇವೆ. ಸಂತ ಏಕನಾಥರ ಪ್ರವಚನಗಳಲ್ಲಿ ಒಂದು ಕಥೆ ಬರುತ್ತದೆ. ಒಂದು ಸಂತರ ಗುಂಪು ಕಾಶಿ ಯಾತ್ರೆ ಮುಗಿಸಿ ಥಾಲಿಗಳಲ್ಲಿ ಗಂಗೆಯನ್ನು ತುಂಬಿಸಿಕೊಂಡು ರಾಮೇಶ್ವರನಿಗೆ ಆ ಗಂಗಾಜಲದಲ್ಲಿ ಅಭಿಷೇಕ ಮಾಡುವ ಆಸೆ ಹೊತ್ತು ರಾಮೇಶ್ವರದ ಕಡೆ ಹೊರಟಿದ್ದರು. ನಡೆದೇ ಹೋಗಬೇಕಾದ ಕಾಲವದು. ದಾರಿಯಲ್ಲಿ ಮರುಭೂಮಿಯಲ್ಲಿ ಒಂಟೆಯೊಂದು ನೀರಿಲ್ಲದೆ ಬಾಯಾರಿ ಸಾಯುವ ಸ್ಥಿತಿಯಲ್ಲಿ ಕಾಣಸಿಗುತ್ತದೆ. ಎಲ್ಲರ ಬಳಿಯಲ್ಲಿಯೂ ನೀರುಂಟು. ಆದರೆ ಗಂಗಾಜಲ. ಒಂಟೆಗೆ ಕುಡಿಯಲು ಕೊಟ್ಟರೆ ರಾಮೇಶ್ವರನಿಗೆ ಅಭಿಷೇಕವಿಲ್ಲ. ಎಲ್ಲರೂ ಹಿಂದೆ ಮುಂದೆ ನೋಡುತ್ತಾರೆ. ಒಬ್ಬ ಸಂತ  ಮಾತ್ರ ತನ್ನ ಥಾಲಿಯ ಗಂಗೆಯ ನೀರನ್ನು ಒಂಟೆಗೆ ಕುಡಿಸುತ್ತಾನೆ. ಉಳಿದ ಎಲ್ಲರೂ ರಾಮೇಶ್ವರ ತಲುಪಿ ಅಭಿಷೇಕ ಮಾಡುತ್ತಾರೆ. ಆದರೆ ಅವರಿಗೆಲ್ಲ ಬಂದ ಪುಣ್ಯಕ್ಕಿಂತಲೂ ಹೆಚ್ಚು ಒಂಟೆಗೆ ನೀರು ಕುದಿಸಿದ ಸಂತನಿಗೆ ಸಿಗುತ್ತದೆ!

ವೃದ್ಧಾಪ್ಯ ಬೇಡ; ಆದರೆ ಬಂದೇ ಬರುತ್ತದೆ!

ಇನ್ನು ವೃದ್ಧಾಪ್ಯದ ಕಡೆಗೆ ದೃಷ್ಟಿ ಹರಿಸೋಣ. ವೃದ್ಧಾಪ್ಯದ ಮರದ ಕಥೆ ಏನು? ಇದು ಇನ್ನೂ ವಿಚಿತ್ರದ ವಿಷಯ. ವೃಧಾಪ್ಯದ ಮರವೂ ಮನುಷ್ಯನ ಹುಟ್ಟಿನೊಂದಿಗೇ ಹುಟ್ಟುತ್ತದೆ. ಮನುಷ್ಯನೊಡನೆ ಸಮ ಸಮವಾಗಿ ಬೆಳಿಯುತ್ತದೆ. ಅದರ ಸಮಯಕ್ಕೆ ಸರಿಯಾಗಿ ಹಣ್ಣು ಕೊಡುತ್ತದೆ. ಕೆಲವರಿಗೆ ಆ ಮರ ಹಣ್ಣು ಕೊಡುವುದರೊಳಗೆ ಮರಣ ಬರಬಹುದು. ಆಗ ವೃದ್ಧಾಪ್ಯದ ಸುಖವೂ ಇಲ್ಲ, ದುಃಖವೂ ಇಲ್ಲ. ಆ ಮರ ಹಣ್ಣು ಕೊಡುವ ವೇಳೆಯವರೆಗೆ ಬದುಕಿದ್ದಾದರೆ ಆ ಹಣ್ಣನ್ನು ಅನುಭವಿಸಲೇ ಬೇಕು. 

ವೃದ್ಧಾಪ್ಯ ವರವೋ, ಶಾಪವೋ?

ವೃದ್ಧಾಪ್ಯ ವರವೆಂದು ಹೇಳುವವರು ಯಾರೂ ಕಾಣರು. ವೃದ್ಧಾಪ್ಯ ಶಾಪವೆಂದು ಹೇಳುವವರು ಬಹಳ ಮಂದಿ. ತಮಾಷೆಯ ವಿಷಯವೆಂದರೆ ಎಲ್ಲರಿಗೂ ದೀರ್ಘಾಯಸ್ಸು ಬೇಕು. ಆದರೆ ವೃದ್ಧಾಪ್ಯ ಬೇಡ. ತಿಳುವಳಿಕೆ  ಬಂದನಂತರ (ಅಥವಾ ತಿಳುವಳಿಕೆ ಬರುವ ವಯಸ್ಸು ಬಂದ ಮೇಲೆ. ಏಕೆಂದರೆ ಎಲ್ಲರಿಗೂ ತಿಳುವಳಿಕೆ ಬಂದೇ ಬರುತ್ತದೆ ಎಂದು ಹೇಳುವ ಹಾಗಿಲ್ಲ.) ಮನುಷ್ಯನನ್ನು ಕಾಡುವ ಎರಡು ಆಶೆಗಳು ಉಂಟು- ಧನದಾಶೆ ಮತ್ತು ಜೀವಿತದ ಆಶೆ (ಧನಾಶಾ ಜೀವಿತಾಶಾ ಚ). ಹಣ ಸಂಪಾದನೆ ಮಾಡುವ ಆಸೆ ಮತ್ತು ಚಿರಕಾಲ ಬದುಕುವ ಆಸೆ. ತುಂಬಾ ದಿನ ಬದುಕಿರಬೇಕು. ವೃದ್ಧಾಪ್ಯ ಬರಬಾರದು! ಚಿರಂಜೀವಿಯಾದರೆ ಇನ್ನೂ ಒಳ್ಳೆಯದು. ಆದರೆ ಅದು ಸಾಧ್ಯವಿಲ್ಲವಲ್ಲ! 

ವೃದ್ಧಾಪ್ಯದ ಚರ್ಚೆ ಬಂದಾಗ ಯಯಾತಿ ಮತ್ತು ಅವನ ಮಗ ಪುರು ಇವರನ್ನು ನೆನಪಿಸಿಕೊಳ್ಳಲೇಬೇಕು. ಈ ಕಥೆ ಎಲ್ಲರಿಗೂ ಗೊತ್ತಿರುವುದೇ. ಶುಕ್ರಾಚಾರ್ಯರ ಶಾಪದಿಂದ ಬಂದ ಅಕಾಲಿಕ ವೃದ್ಧಾಪ್ಯವನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಯಯಾತಿಯ ಪ್ರಯತ್ನ. ಕಷ್ಟವಾದರೂ ಸರಿ, ತಂದೆಗೆ ಇಚ್ಛೆ ಪೂರ್ತಿಯಾಗಲಿ ಎಂದು ತ್ಯಾಗ ಮಗನಾದ ಪುರುವಿನದು. ಮಹಾಭಾರತದ ಈ ಕಥೆಯನ್ನು ಈ ಕಾಲಮಾನದ ಇಬ್ಬರು ಸಾಹಿತಿಗಳಾದ ವಿ ಎಸ್ ಖಾಂಡೇಕರ್ ಮತ್ತು  ಗಿರೀಶ್ ಕಾರ್ನಾಡ್ ತಮ್ಮದೇ ದೃಷ್ಟಿ ಕೋಣದಿಂದ ನೋಡಿದ್ದಾರೆ. ಮಗನ ಯೌವನವನ್ನು ಪಡೆದ ಯಯಾತಿ ತನ್ನ ಪತ್ನಿಯ ಬಳಿ ಹೋದಾಗ "ನೀನು ಈಗ ನನ್ನ ಮಗ" ಎನ್ನುತ್ತಾಳೆ ಅವಳು.  ಇದು ಖಾಂಡೇಕರ್ ಒತ್ತು ಕೊಟ್ಟ ನೋಟ. ಕಾರ್ನಾಡರ ಯಯಾತಿಯ ಬಳಿ ಬಂದ ಸೊಸೆ "ಈಗ ನೀನೇ ನನ್ನ ಗಂಡ" ಎನ್ನುತ್ತಾಳೆ. ಇದು ಇನ್ನೊಂದು ದೃಷ್ಟಿ. ವಿ. ಎಸ್. ಖಾಂಡೇಕರ್ ಮರಾಠಿ ಭಾಷೆಯ ಪ್ರಸಿದ್ಧ ಸಾಹಿತಿ. ಅವರ "ಯಯಾತಿ" ಕಾದಂಬರಿಗೆ ಸಾಹಿತ್ಯ ಆಕಾಡೆಮಿ ಪ್ರಶಸ್ತಿ (೧೯೬೦) ಸಿಕ್ಕಿತು. ಮತ್ತೆ ಮುಂದೆ ೧೯೭೪ರಲ್ಲಿ "ಭಾರತೀಯ ಜ್ಞಾನಪೀಠ" ಪ್ರಶಸ್ತಿ ಕೂಡ ಲಭಿಸಿತು. ನಮ್ಮ ಕನ್ನಡದ ಪ್ರಖ್ಯಾತ ಸಾಹಿತಿ, ಕಲಾವಿದ ಗಿರೀಶ್ ಕಾರ್ನಾಡ್ ಅವರ "ಯಯಾತಿ" ಒಂದು ನಾಟಕ. ಅವರ ಯಯಾತಿ ನಾಟಕ ೧೯೬೧ರಲ್ಲಿ ಪ್ರಕಟವಾಯಿತು. ಭಾರತೀಯ ಜ್ಞಾನಪೀಠ ಪ್ರಾರಂಭದ ವರ್ಷಗಳಲ್ಲಿ ಒಂದು ಕೃತಿಯ ರಚಯಿತರಿಗೆ ಪ್ರಶಸ್ತಿ ಕೊಡುತ್ತಿತ್ತು. ನಂತರದ ವರ್ಷಗಲ್ಲಿ ಒಂದು ಕೃತಿಯ ಬದಲು ಒಬ್ಬ ಸಾಹಿತಿಯ ಒಟ್ಟಾರೆ ಸಾಹಿತ್ಯ ಸೇವೆಗೆ ಪ್ರಶಸ್ತಿ ಕೊಡಲಾರಂಭಿಸಿತು. (ಶಿವರಾಮ ಕಾರಂತರ "ಮೂಕಜ್ಜಿಯ ಕನಸು" ಕೃತಿಗೆ ಪ್ರಶಸ್ತಿ ಕೊಟ್ಟಾಗ ಬಹಳ ಚರ್ಚೆ ಆಯಿತು. ಪ್ರಶಸ್ತಿ ಕೊಟ್ಟಿದ್ದು ಸರಿ; ಆದರೆ ಕೃತಿಯ ಆಯ್ಕೆ ಸರಿಯಿಲ್ಲ ಎಂದು ಬಹಳ ಅಭಿಪ್ರಾಯಗಳು ಬಂದವು. ಈ ರೀತಿ ಸಮಸ್ಯೆ ತಪ್ಪಿಸಲು ಒಂದು ಕೃತಿಯ ಬದಲು ಒಟ್ಟಾರೆ ಸಾಹಿತ್ಯ ಸೇವೆಗೆ ಪ್ರಶಸ್ತಿ ಎನ್ನುವ ಕ್ರಮ ಜಾರಿಗೆ ಬಂತು ಎಂದು ಒಂದು ಅಭಿಪ್ರಾಯ). ಕಾರ್ನಾಡರಿಗೆ ಒಟ್ಟಾರೆ ಸಾಹಿತ್ಯ ಸೇವೆಗೆ ೧೯೯೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು. 

ವೃದ್ಧಾಪ್ಯ  ಯಾವಾಗ?

ನಮ್ಮ ಚಿಕ್ಕ ವಯಸ್ಸಿನಲ್ಲಿ ತಲೆ ಕೂದಲು ಬೆಳ್ಳಗಾಗುವುದು ಮತ್ತು ಕೂದಲು ತುಂಬಿದ ತಲೆ ಬೊಕ್ಕತಲೆ ಆಗುವುದು ವೃದ್ಧಾಪ್ಯದ ಕುರುಹು ಎಂದು ನಂಬುತ್ತಿದ್ದೆವು. ಚಿಕ್ಕ ವಯಸ್ಸಿನವರಿಗೆ ಬಿಳಿ ಕೂದಲು ಬಂದರೆ "ಬಾಲ ನೆರೆ" ಎಂದು ಹಾಸ್ಯ ಮಾಡುತ್ತಿದ್ದುದೂ ಉಂಟು. ಕೂದಲಿಗೆ ಬಣ್ಣ ಬಳಿಯುವ ಮತ್ತು ಕೃತಕ ಅಂಗಾಂಗಗಳ ಕಾಲ ಬಂದಿರುವ ಈಗ ಹಾಗೆ ಹೇಳಲಾಗುವುದಿಲ್ಲ. 

ಸರಕಾರಗಳಂತೂ ವೃದ್ಧಾಪ್ಯಕ್ಕೆ ೬೦ ವರ್ಷಗಳ ಗೆರೆ ನಿಗದಿ ಪಡಿಸಿವೆ. "ಹಿರಿಯ ನಾಗರಿಕ" (Senior Citizen) ಎಂದು ನಾಮಕರಣ ಸಹ ಮಾಡಿವೆ. ವಯಸ್ಸು ೮೦ ಆದರೆ "ಅತಿ ವೃದ್ಧ". ಸೃಷ್ಟಿಯ ದೃಷ್ಟಿಯಲ್ಲಿ ಯಂತ್ರ ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಅದು ಹಳೆಯ ಯಂತ್ರವೇ.  ಪಂಚಭೂತಗಳಿಂದಾದ ದೇಹಕ್ಕೆ ಅದರದೇ ಆದ ಇತಿ ಮಿತಿಗಳಿವೆ. ಅದನ್ನು ದಾಟುವುದು ಆಗದ ಮಾತು. ಎಲ್ಲೋ ಒಬ್ಬ ಚ್ಯವನ ಋಷಿಯಂತವರು ಅದನ್ನು ಗೆದ್ದರು ಎಂದು ಕೇಳುತ್ತೇವೆ. ಕೇಳುತ್ತೇವೆ, ಅಷ್ಟೇ. ನೋಡಿಲ್ಲ. 

ವೃದ್ಧಾಪ್ಯದಲ್ಲಿ ಮೂರು ಮಜಲುಗಳು; ದೈಹಿಕ, ಬೌದ್ಧಿಕ ಮತ್ತು ಮಾನಸಿಕ. ಮೊದಲನೆಯದು ನಮ್ಮ ಕೈ ಮೀರಿದುದು. ಎರಡನೆಯದು ಮತ್ತು ಮೂರನೆಯದನ್ನು ಪ್ರಯತ್ನಪೂರ್ವಕವಾಗಿ ಎಳೆಯದಾಗಿ ಇಟ್ಟುಕೊಳ್ಳುವುದು ನಮ್ಮ ವಶದಲ್ಲೇ ಇದೆ. ಆದರೆ ಇದಕ್ಕೆ ಪ್ರಬಲವಾದ ಮತ್ತು ಸತತ ಪ್ರಯತ್ನ ಬೇಕು. ಸ್ವಲ್ಪ ಉದಾಸೀನ ಮಾಡಿದರೂ ಇವೆರಡು ನಾಯಿಯ ಬಾಲದಂತೆ ತಮ್ಮ ಚಾಳಿಯನ್ನು ತಕ್ಷಣ ತೋರಿಸುತ್ತವೆ. 

ಭಾರತ ಸರ್ಕಾರದ ಒಂದು ವಿಚಿತ್ರ ವಿವರಣೆಯನ್ನು ಇಲ್ಲಿ ನೆನೆಸಿಕೊಳ್ಳಬೇಕು. ಹಿರಿಯ ನಾಗರಿಕರಿಗೆ ಬ್ಯಾಂಕುಗಳ ಠೇವಣಿ ಹಣಕ್ಕೆ ಅರ್ಧ ಪ್ರತಿಶತ ಹೆಚ್ಚು ಬಡ್ಡಿ ಕೊಡುತ್ತಾರೆ. ಬ್ಯಾಂಕುಗಲ್ಲಿ ಸೇವೆ ಮಾಡಿ ನಿವೃತ್ತರಾದವರಿಗೆ ಒಂದು ಪ್ರತಿಶತ ಹೆಚ್ಚು ಬಡ್ಡಿ ಕೊಡುತ್ತಾರೆ. ಆದರೆ ಅವರು "ಅನಿವಾಸಿ" (NRI) ಆದ ತಕ್ಷಣ ಈ ಎರಡೂ ಸೌಲಭ್ಯಗಳು ಖೋತಾ! ಸರಕಾರದ ದೃಷ್ಟಿಯಲ್ಲಿ ಅವರಿಗೆ ತಾರುಣ್ಯ ಮರಳಿ ಬಂದಂತೆ. 

ವೃದ್ಧಾಪ್ಯ ವರವಾಗಲು ಏನು ಮಾಡಬೇಕು?

ವೃದ್ಧಾಪ್ಯ ವರವೋ ಶಾಪವೋ ಆಗುವುದು ವೃದ್ಧಾಪ್ಯದಲ್ಲಿ ನಿರ್ಧಾರ ಆಗುವ ವಿಷಯ ಅಲ್ಲ. ಆದು ವೃದ್ಧಾಪ್ಯದಲ್ಲಿ ಪ್ರಕಟ ಆಗುವ ಫಲಿತಾಂಶ ಮಾತ್ರ. ಜೀವನದ ಹಿಂದಿನ ದಿನಗಳ ಪ್ರತಿಯೊಂದು ಕ್ರಿಯೆಯೂ ಒಂದೊಂದು ಕಣವಾಗಿ ವೃದ್ಧಾಪ್ಯದಲ್ಲಿ ರೂಪ ತಾಳುತ್ತವೆ. ಸರಿಯಾದ ಕ್ರಮದಲ್ಲಿ ಜೀವನ ನಡೆಸಿದ ವ್ಯಕ್ತಿಗೆ ವೃದ್ಧಾಪ್ಯ ವರವಾಗುವ ಸಾಧ್ಯತೆ ಉಂಟು. ಇಲ್ಲದಿದ್ದರೆ ಅದು ಶಾಪವಾಗುವ ಸಂಭವವೇ ಹೆಚ್ಚು. ಇದರಲ್ಲಿ ಅದೃಷ್ಟದ ಆಟವೂ, ಕಾಣದ ಕೈ ಪ್ರಭಾವಗಳೂ ಕೆಲಸ ಮಾಡುತ್ತವೆ. ಅಡಿಗರು ಹೇಳುವಂತೆ "ಯಾರ ಲೀಲೆಗೋ ಯಾರೋ ಏನೋ ಗುರಿಯಿಡದೆ ಬಿಟ್ಟ ಬಾಣ" ಚುಚ್ಚುವುದೂ ಉಂಟು. ಆಟಕ್ಕೆ ಯಾರೋ ಬಾಣವೊಂದನ್ನು ಬಿಟ್ಟರು. ಆದರೆ ಆ ಬಾಣ ತನ್ನ ಕೆಲಸ ಮಾಡಿತು. ತಾಕಿದವನಿಗೆ ಅದರ ನೋವು ತಿನ್ನುವ ಭಾಗ್ಯ. ಬಾಣ ಬಿಟ್ಟವನು "ನನಗೆ ಆ ಅಭಿಪ್ರಾಯ ಇರಲಿಲ್ಲ" ಎಂದು ಹೇಳಿ ಕೈ ಚೆಲ್ಲಬಹುದು. ಆದರೆ ಏಟು ತಿಂದವನಿಗೆ ಅದು ಏನೂ ಸುಖ ಕೊಡದು. ಉನ್ಮತ್ತರಾದ ಯಾರೋ ಯುವಕರು ಚೇಷ್ಟೆಗಾಗಿ ಓಡಿಸಿದ ವಾಹನದ ಕೆಳಗೆ ಸಿಕ್ಕಿ ಕೈ ಕಾಲು ಮುರಿದುಕೊಂಡ ವ್ಯಕ್ತಿಗೆ ಸರಿಯಾದ ಜೀವನ ಕ್ರಮದಲ್ಲಿ ನಡೆದಿದ್ದರೂ ವೃದ್ಧಾಪ್ಯ ಶಾಪವೇ!

ಒಟ್ಟಿನಲ್ಲಿ ವೃದ್ಧಾಪ್ಯ ವರವಾಗಬೇಕಾದರೆ ಆರೋಗ್ಯ ಚೆನ್ನಾಗಿರಬೇಕು. ಜೊತೆಗೆ ಸ್ವಲ್ಪವಾದರೂ ಧನಬಲ ಇರಲೇಬೇಕು. ಪ್ರೀತಿಯಿಂದ ಕಾಣುವ ಕುಟುಂಬ ವರ್ಗ ಮೂರನೆಯ ಭಾಗ್ಯ. ಇವೇ ರೊಟ್ಟಿ, ಅನ್ನ, ಪಲ್ಯ. ಒಳ್ಳೆಯ ಸ್ನೇಹಿತರು, ಶುಚಿ-ರುಚಿಯಾದ ಹವ್ಯಾಸಗಳು, ಈಗ ಪ್ರಯೋಜನಕ್ಕೆ ಬರುವ ಹಿಂದೆ ಶೇಖರಿಸಿದ ಪದಾರ್ಥಗಳು ಒಗ್ಗರಣೆ, ಉಪ್ಪಿನಕಾಯಿ, ಹಪ್ಪಳ ಇದ್ದಂತೆ. ರೊಟ್ಟಿ, ಅನ್ನ, ಪಲ್ಯದಿಂದ ಊಟ ಆಗಬಹುದು. ಸ್ವಲ್ಪ ನೀರಸ ಇರಬಹುದು. ಆದರೆ ಉಪ್ಪಿನಕಾಯಿ ಮತ್ತು ಹಪ್ಪಳದಿಂದ ಊಟ ಆಗುವುದಿಲ್ಲ!

ಆರೋಗ್ಯ ಚೆನ್ನಾಗಿರಬೇಕು ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಅದೂ ವೃದ್ಧರ ಕೈಯಲ್ಲಿ ಇರುವುದಿಲ್ಲ. "ಕಾಣದ ಕೈ" ವಿಚಿತ್ರವಾದ ವ್ಯಾಧಿಗಳನ್ನು ಕರುಣಿಸಬಹುದು. ಎಲ್ಲ ಸಮಯಗಳಲ್ಲಿಯೂ ಎದೆಗುಂದದೆ ಎದುರಿಸುವ ಮನಸ್ಥಿತಿ ಬಹಳ ಮುಖ್ಯ. ಜೊತೆಗೆ ಔಷಧ-ಉಪಚಾರಗಳು ಸುಲಭವಾಗಿ ಮತ್ತು ಶೀಘ್ರವಾಗಿ ಸಿಗುವ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕು. ಸೋಮಾರಿತನವಿಲ್ಲದೆ ಕಾಲಕಾಲಕ್ಕೆ ವೈದ್ಯರು ನೀಡಿರುವ ಮದ್ದುಗಳನ್ನು ತೆಗೆದುಕೊಳ್ಳಬೇಕಾದ್ದು ಅತ್ಯಂತ ಅವಶ್ಯಕ. ಸ್ವಂತ ಬುದ್ಧಿಯಿಂದ ತಾನೇ ಮದ್ದು ತೆಗೆದುಕೊಳ್ಳುವುದು ಅಪಾಯಕಾರಿಯೇ. 

ಹಣ-ಕಾಸಿನ ವಿಷಯದಲ್ಲಿ ಜಾಗರೂಕತೆ ಇರಬೇಕು. ನಾನು ಯಾರನ್ನೂ ನಂಬುವುದಿಲ್ಲ ಎನ್ನುವವರಿಗೆ ಯಾರನ್ನಾದರೂ ಯೋಗ್ಯರನ್ನು ನಂಬುವವರಿಗಿಂತ ಹೆಚ್ಚು ಅಪಾಯ ಕಟ್ಟಿಟ್ಟ ಬುತ್ತಿ. ವೃದ್ಧಾಪ್ಯ ಹೊಸ ಕನಸುಗಳನ್ನು ಕಟ್ಟುವ ಕಾಲವಲ್ಲ. ಆರ್ಥಿಕ ವಿಷಯಗಳಲ್ಲಿ ಇದನ್ನು ಇನ್ನೂ ಹೆಚ್ಚಾಗಿ ಅನುಸರಿಸಬೇಕು. 

ಹಿಂದಿನ ಜೀವನದಲ್ಲಿ ಬಹಳ ಮುಖ್ಯ ಎಂದುಕೊಂಡಿದ್ದ ಅನೇಕ ವಿಷಯಗಳ ಅನುಪಯುಕ್ತತೆಯನ್ನು ವೃದ್ಧಾಪ್ಯದಲ್ಲಿ ಕಾಣಬಹುದು. ಅಯ್ಯೋ, ಇಷ್ಟು ಸಣ್ಣ ವಿಷಯಕ್ಕೆ ಎಷ್ಟು ಪರದಾಡಿದೆ ಎಂದು ಈಗ ಪೇಚಾಡುವ ಸಮಯ! ಉದ್ವೇಗ ಉಂಟುಮಾಡುವ ವಿಷಯಗಳನ್ನು ಬಿಡುವುದೇ ವಾಸಿ. 

"ನಾನು ಯಾರನ್ನೂ ಲೆಕ್ಕಕ್ಕಿಡುವುದಿಲ್ಲ. ನಾನು ನೇರ, ನಿರ್ಭೀತ. ನನಗೆ ದಯಾ, ದಾಕ್ಷಿಣ್ಯ ಇಲ್ಲ." ಎಂದು ಹೇಳುವ ಅನೇಕರನ್ನು ನಾವು ಕಾಣುತ್ತೇವೆ. ವಿಶಾಲ ಸೃಷ್ಟಿಯಲ್ಲಿ ಯಾವುದೇ ಲೆಕ್ಕಕ್ಕೂ ಬಾರದ ಅತಿ ಸಣ್ಣ ಕಣ ನಾವು ಎನ್ನುವ ಅರಿವು ಇರುವವನಿಗೆ ದಯಾ ದಾಕ್ಷಿಣ್ಯ ಇರಲೇ ಬೇಕು. ಭರ್ತೃಹರಿಯು ಇದನ್ನೇ "ದ್ದಾಕ್ಷಿಣ್ಯಮ್ ಸ್ವಜನೇ, ದಯಾ ಪರಿಜನೇ... " ಮುಂತಾಗಿ ಹೇಳಿದ್ದು. ಪುರಂದರದಾಸರು ಸೊಗಸಾಗಿ ಹೇಳುತ್ತಾರೆ:

ಕಲ್ಲಾಗಿ ಇರಬೇಕು ಕಠಿಣ ಭವ ತೊರೆಯೊಳಗೆ 
ಬಿಲ್ಲಾಗಿ ಇರಬೇಕು ಬಲ್ಲವರೊಳಗೆ 
ಬೆಲ್ಲವಾಗಿರಬೇಕು ಬಂಧು ಜನದೊಳಗೆ  

"ನಾನು ಅದು ಮಾಡುತ್ತೇನೆ. ಹೀಗೆ ಮಾಡುತ್ತೇನೆ" ಎಂದು ಹಾರಾಡುವುದು ಮೊದಲು ನಿಲ್ಲಿಸಬೇಕು. "ಇದು ಬಾಳು ನೋಡು, ನಾ ತಿಳಿದೆನೆಂದರೂ ತಿಳಿದ ಧೀರನಿಲ್ಲ" ಎನ್ನುತ್ತಾರೆ ಅಡಿಗರು. ಪ್ರಕೃತಿಯ ನಿಯಮಗಳಿಗೆ ನಮ್ಮನ್ನು ಒಪ್ಪಿಸಿಕೊಂಡು ಆನಂದ ಕಂಡುಕೊಳ್ಳಬೇಕು. "ಜಗಕೆ ಸಂತಸವೀವ ಘನನು ತಾನೆಂತೆಂಬ ವಿಪರೀತ ಮತಿಯನಳಿದು" ಎನ್ನುವ ಕವಿವಾಣಿಯನ್ನು ದಿನಾ ಮೂರು ಬಾರಿ ಹೇಳಿಕೊಳ್ಳುವುದು ಒಳ್ಳೆಯದು. ಜೀವನದ ಕಾವ್ಯದಲ್ಲಿ ನಾವು ಅನೇಕ ಕಸರತ್ತು ಮಾಡಬಹುದು. ಕೆಲವದರಲ್ಲಿ ಗೆಲ್ಲಬಹುದು. ಅನೇಕದರಲ್ಲಿ ಬೀಳಬಹುದು. ಆದರೆ ಜೀವನ ಕಾವ್ಯದ ಪೂರ್ಣ ವಿರಾಮ (full stop) ಹಾಕುವ ಅಧಿಕಾರವನ್ನು ಅವನು ಇನ್ನೂ ತನ್ನಲ್ಲಿಯೇ ಇಟ್ಟುಕೊಂಡಿದ್ದಾನೆ. ಇದನ್ನು ಮರೆಯದೆ ಬುಲಾವು ಬಂದಾಗ ಹೊರಡಲು ತಯಾರಿದ್ದವನಿಗೆ ವೃದ್ಧಾಪ್ಯದಲ್ಲಿ ಏನು ಕಂಡಿತೋ ಅದರಲ್ಲಿ ಆನಂದ ಅನುಭವಿಸುವ ಕಲೆ ಸಿದ್ಧಿಸುತ್ತದೆ. 

*****

"ಭಾರತೀಯ ಜೀವನ್ ಬಿಮಾ ನಿಗಮ" (Life Insurance Corporation of India) ಜೀವನದ ಆನಂದವನ್ನು ನೋಡುವ ರೀತಿಯೇ ಬೇರೆ. ಅದರ ಅನೇಕ ಪಾಲಿಸಿಗಳಲ್ಲಿ ಜೀವನ್ ಆನಂದ್ ಪಾಲಿಸಿಯೂ ಒಂದು. ಇದು ಒಂದು ರೀತಿಯ ಬಹೂಪಯೋಗಿ ಪಾಲಿಸಿ. ಈ ರೀತಿಯ ಪಾಲಿಸಿಯೊಂದನ್ನು ಪಡೆದುಕೊಂಡ ಸ್ನೇಹಿತನೊಬ್ಬನ ಕಥೆಯೊಂದನ್ನು ಅವನ ಭಾಷೆಯಲ್ಲಿಯೇ ಕೇಳುವುದು ಅಥವಾ ಓದುವುದು ಬಹಳ ಚೆಂದ. 

"ನಾನು ಸಂಪಾದನೆ ಮಾಡಲು ಪ್ರಾಂಭಿಸಿದಾಗಿನಿಂದಲೂ ಜೀವ ವಿಮೆ ಮಾಡಿಸುತ್ತಿದ್ದೆ. ನನ್ನ ಮೊದಲ ಸರಿಯಾದ ಕೆಲಸ ಕೊಡುತ್ತಿದ್ದ ತಿಂಗಳ ಸಂಬಳ ಮೂರು ನೂರು ರೂಪಾಯಿ ಮಾತ್ರ. ಈ ಉದ್ಯೋಗಕ್ಕೆ ಮುಂಚೆ ಸಣ್ಣ ಕೆಲಸಗಳು ಇದ್ದರೂ ವಿಮೆ ಮಾಡಿಸುವ ಧೈರ್ಯ ಇರಲಿಲ್ಲ. ಈ ಉದ್ಯೋಗ ಸೇರಿದಾಗ ಒಂದು ಶನಿವಾರ ಸಹೋದ್ಯೋಗಿಯೊಬ್ಬ ಸಂಜೆ ಅವರ ಮನೆಗೆ ಚಹಾ ಸೇವನೆಗೆ ಕರೆದ. ನಾನೂ ನನ್ನಂತೆ ಇನ್ನಿಬ್ಬರು ಸಹೋದ್ಯೋಗಿಗಳೂ ಹೋದೆವು. ಸ್ವಾಗತಿಸಿ ಕೂಡಿಸಿದ ನಂತರ ಸೊಗಸಾದ ಚೂಡಾ, ಬೋಂಡಾದ ಜೊತೆ ಚಹಾ ಬಂತು. ಆ ಗುಂಗಿನಲ್ಲೇ ಇದ್ದಾಗ ಹಿರಿಯರೊಬ್ಬರು ಜೀವದ ಬೆಲೆ, ವಿಮೆಯ ಪ್ರಾಮುಖ್ಯತೆ ಇತ್ಯಾದಿಗಳ ಬಗ್ಗೆ ಪುಟ್ಟ ಭಾಷಣ ಕೊಟ್ಟರು. ಎಲ್ಲರ ಕೈಯ್ಯಲ್ಲೂ ಒಂದೊಂದು ಫಾರಂ ಇಟ್ಟರು. ಕಡೆಗೆ ಅದು ವಿಮೆ ಪಾಲಿಸಿ ಕೊಳ್ಳುವ ಫಾರಂ ಎಂದು ತಿಳಿಯಿತು. ಬೇಡ ಎನ್ನುವ ಮೊದಲೇ ಹದಿನಾಲ್ಕು ರೂಪಾಯಿ ಮಾಸಿಕ ಕಂತಿನ ಐದು ಸಾವಿರ ರೂಪಾಯಿಯ ಪಾಲಿಸಿಗೆ ಸಹಿ ಮಾಡಿಸಿದರು. ಬೋಂಡಾ, ಚಹಾ ನೀಡಿ ಹುಡುಗಿ ಗಂಟು ಹಾಕುವುದು ಕೇಳಿದ್ದೆ. ಇಲ್ಲಿ ಪಾಲಿಸಿ ಗಂಟುಬಿತ್ತು. ನೀವು ಏನೂ ಚಿಂತೆ ಮಾಡಬೇಡಿ. ನಿಮ್ಮ ಸಂಬಳದಿಂದ ಅದಾಗದೇ ವಿಮೆಯ ಕಂತು ಹೋಗುತ್ತದೆ. ನೀವೇನೂ ಕಟ್ಟಬೇಕಾಗಿಲ್ಲ ಎಂದು ಅವರೇ ಹಣ ನೀಡುವ ರೀತಿ ಅಭಯವನ್ನೂ ನೀಡಿದರು. ಹೀಗೆ ಸಂಬಳ ಹೆಚ್ಚುತ್ತಿದ್ದಂತೆ ಬೇರೆ ಬೇರೆ ಪಾಲಿಸಿ ಕೊಂಡೆ". 

"ಇಪ್ಪತ್ತೈದು ವರ್ಷದ ನಂತರ ಮೊದಲ ಪಾಲಿಸಿ ಹಣ ಬಂತು. ಏಳು ಸಾವಿರದ ಐದು ನೂರು ರೂಪಾಯಿ. ಅದು ಆಗ ಬರುತ್ತಿದ್ದ ಒಂದು ತಿಂಗಳ ಸಂಬಳ! ಇಪ್ಪತ್ತೈದು ವರ್ಷ ಪ್ರತಿ ತಿಂಗಳೂ ಕಂತು ಕಟ್ಟಿದ್ದರ ಪ್ರತಿಫಲ. ಹೀಗೆ ಎಲ್ಲ ಪಾಲಿಸಿಗಳೂ ಮುಗಿದು ವಿಮೆಯೇ ಇಲ್ಲದಂತಾಯಿತು."

"ಇನ್ನೊಬ್ಬ ಹಿತೈಷಿ(?) ಮಿತ್ರರು ಈ ಪರಿಸ್ಥಿತಿ ನೋಡಿ ಬಹಳ ಸಂಕಟ ಪಟ್ಟರು. ಐವತ್ತು ವಯಸ್ಸಿಗೆ ವಿಮೆಯೇ ಇಲ್ಲ ಎಂದರೆ ಏನು? ಬಹಳ ತಪ್ಪು. ಹೊಸ "ಜೀವನ್ ಆನಂದ್" ಬಂದಿದೆ. ಪಾಲಿಸಿ ತಗೊಳ್ಳಿ. ಹತ್ತು ವರ್ಷ ಕಂತು ಕಟ್ಟಿ. ನಿಮ್ಮ ನಿವೃತ್ತಿಯ ವೇಳೆಗೆ ಪಾಲಿಸಿ ಹಣ ಬರುತ್ತದೆ. ಅಷ್ಟೇ ಅಲ್ಲ. ಮುಂದೆ ಕಂತು ಕಟ್ಟದಿದ್ದರೂ ವಿಮೆಯ ಅಭಯ ಛತ್ರ ನಿಮ್ಮ ತಲೆಯ ಮೇಲೆ ಇರುತ್ತದೆ. ನಿಮ್ಮ ಮರಣದ ನಂತರ ಪಾಲಿಸಿಯ ಅಷ್ಟೇ ಹಣ ನಿಮಗೆ {!) ಸಿಗುತ್ತದೆ." ಎಂದು ಬಹಳ ಕಳಕಳಿಯಿಂದ ಹೇಳಿದರು. ಸರಿ, ಆಯಿತು, ಪಾಲಿಸಿ ಬಾಂಡ್ ಬಂತು."

"ಪಾಲಿಸಿ ಬಾಂಡ್ ಹಿಡಿದು ಏನನ್ನೋ ಸಾಧಿಸಿದಂತೆ ಮನೆಗೆ ಹೋದೆ. ಹೆಂಡತಿಯ ಕೈಯಲ್ಲಿ ಬಾಂಡ್ ಇಟ್ಟು "ಜೀವನದ ಆನಂದ" ವಿವರಿಸಿದೆ. "ನಿಮ್ಮ ದರಿದ್ರ ಬಾಂಡ್ ನೀವೇ ಇಟ್ಟುಕೊಳ್ಳಿ. ನಿಮ್ಮ ಸಾವಿನ ನಂತರ ಬರುವ ಆನಂದ ನಮಗೆ ಬೇಡ" ಎಂದು ಪಾಲಿಸಿ ನನ್ನ ಕೈಗೇ ತಳ್ಳಿದಳು." 

"ಹತ್ತು ವರುಷದ ನಂತರ ಪಾಲಿಸಿ ಹಣ ಬಂತು. ಖರ್ಚೂ ಆಯಿತು. ಬಾಂಡ್ ಮಾತ್ರ ನನ್ನ ಮರಣದ ನಿರೀಕ್ಷೆಯಲ್ಲಿ ಕಪಾಟಿನಲ್ಲಿ ಕುಳಿತಿತ್ತು."

"ಮತ್ತೆ ಹತ್ತು ವರುಷದ ನಂತರ ಮತ್ತೊಬ್ಬ ಹಿತೈಷಿ "ಜೀವನದ ಆನಂದ"ದ ವಿಷಯ ಮಾತಾಡುವಾಗ ಹೊಸ ವಿಷಯ ಹೇಳಿದರು. ಈ ಬಾಂಡ್ ಸಹವಾಸ ಸಾಕು ಎಂದರೆ ವಿಮಾ ನಿಗಮಕ್ಕೆ ಹಿಂತಿರುಗಿಸಿ ಸ್ವಲ್ಪ ಕಡಿಮೆ ಆದರೂ ನೀವು ಬದುಕಿದ್ದಾಗಲೇ ಹಣ ಪಡೆಯಬಹುದು. ಹಾಗೆ ಮಾಡಿ. ಸಂಸಾರದಲ್ಲಿ ಮನಸ್ತಾಪ ಯಾಕೆ?" ಎಂದು ಸಲಹೆ ಕೊಟ್ಟರು."

"ಹಾಗೆಯೇ ಮಾಡಿದೆ. ಸ್ವಲ್ಪ ಹಣವೂ ಬಂತು. ಹೆಂಡತಿಯ ಮುಖವೂ ಸ್ವಲ್ಪ ಅರಳಿತು. ಎದೆಯಲ್ಲಿ ಚುಚ್ಚಿಕೊಂಡಿದ್ದ ಮುಳ್ಳು ಹೊರ ಬಂದಂತೆ ನಿರಾಳವಾಯಿತು. ಮರಣದ ನಂತರ ಬರುವ ಆನಂದವನ್ನೂ ಬದುಕಿರುವಾಗಲೇ ಕಂಡೆ!"
*****
ಆನಂದ ಅನುಭವಿಸುವುದಕ್ಕೂ ವಿಷಾದ ಪಡುವುದಕ್ಕೂ ಪ್ರತಿನಿತ್ಯ ನೂರು ಕಾರಣಗಳು ಸಿಗುತ್ತವೆ. ಆಯ್ಕೆ ಅವರವರಿಗೆ ಬಿಟ್ಟಿದ್ದು.