Sunday, September 6, 2026

ರುಕ್ಮಿಣೀಶ ವಿಜಯದಲ್ಲಿ ಶ್ರೀಕೃಷ್ಣ ಜಯಂತಿ


ಹಿಂದಿನ ಸಂಚಿಕೆಯಲ್ಲಿ, "ವಾದಿರಾಜರ ರುಕ್ಮಿಣೀಶ ವಿಜಯ" ಎನ್ನುವ ಶೀರ್ಷಿಕೆಯಡಿ, ಉಡುಪಿಯ ಹೆಸರಾಂತ ಅಷ್ಟ ಮಠಗಳಲ್ಲಿ ಒಂದಾದ ಸೋದೆ ಮಠ ಪರಂಪರೆಯಲ್ಲಿ ಹದಿನಾರನೆಯ ಶತಮಾನದಲ್ಲಿ ಪೀಠಾಧಿಪತಿಗಳಾಗಿದ್ದ ಶ್ರೀ ವಾದಿರಾಜ ತೀರ್ಥರ "ರುಕ್ಮಿಣೀಶ ವಿಜಯ" ಕೃತಿ ರಚನೆ ಸಂದರ್ಭದ ವಿಶೇಷಗಳನ್ನು ನೋಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು.

ಆ ಸಂಚಿಕೆಯಲ್ಲಿ, ಶ್ರೀ ವಾದಿರಾಜರ ದಿನಂಪ್ರತಿ ಪಾಠ-ಪ್ರವಚನಗಳಲ್ಲಿ ಇರುತ್ತಿದ್ದ ಶ್ರೀಮದ್ ಭಾಗವತ ದಶಮ ಸ್ಕಂದದಲ್ಲಿ ಬಂದಿರುವ ವಿವರಗಳನ್ನು ಮಹಾಕಾವ್ಯ ಲಕ್ಷಣಗಳಿಗೆ ಹೊಂದುವ ರೀತಿಯಲ್ಲಿ ಪರಿವರ್ತಿಸಿದರು, ಮತ್ತು ಇದಕ್ಕಾಗಿ ಅವರಿಗೆ ಕಥಾವಸ್ತು ಹುಡುಕುವ ಅಗತ್ಯವಿರಲಿಲ್ಲ ಎಂದು ಹೇಳಿತ್ತು. ಈ ರೀತಿಯ ವಿವರಗಳನ್ನು ಪ್ರತಿದಿನ ಒಂದೊಂದು ಸರ್ಗ ಲೆಕ್ಕದ ರೀತಿಯಲ್ಲಿ, ಹತ್ತೊಂಬತ್ತು ದಿನಗಳಲ್ಲಿ ಹತ್ತೊಂಬತ್ತು ಸರ್ಗ ವಿಸ್ತಾರದ ಮಹಾಕಾವ್ಯವಾಗಿ ರಚನೆ ಮಾಡಿ ಶಿಷ್ಯರಿಗೆ ಹೇಳಿದರು, ಮತ್ತು ಅವರು ಬರೆದಿಟ್ಟುಕೊಂಡು ಗ್ರಂಥ ಸಿದ್ಧವಾಯಿತು ಎಂದಿದ್ದೆವು. 

ಸಂಸ್ಕೃತದಲ್ಲಿ ಸರ್ಗ ಅಂದರೆ ಸೃಷ್ಟಿ ಎಂದು ಅರ್ಥ. ಸೃಷ್ಟಿ-ಸ್ಥಿತಿ-ಲಯಗಳನ್ನು ಸರ್ಗ-ಸ್ಥಿತಿ-ಪ್ರಳಯ ಎಂದು ಹೇಳುತ್ತಾರೆ.

ಸಂಚಿಕೆಯ ಕೊನೆಯಲ್ಲಿ ಈ ಮಹಾಕಾವ್ಯದ ಕೆಲವು ಸಂಗತಿಗಳನ್ನು ಮತ್ತೊಮ್ಮೆ ನೋಡೋಣ ಎಂದುಕೊಂಡಿದ್ದೆವು. ಕಳೆದ ಎರಡು-ಮೂರು ದಿನಗಳಲ್ಲಿ ಎಲ್ಲೆಲ್ಲಿಯೂ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಬಲು ಸಂಭ್ರಮದ ವಾತಾವರಣ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ತಿಳಿದಿರುವ ವಿವರಗಳು ಮತ್ತು ಅವನ್ನು ಶ್ರೀ ವಾದಿರಾಜರು ಮಹಕಾವ್ಯದಲ್ಲಿ ಹೇಗೆ ಅಳವಡಿಸಿದ್ದಾರೆ ಅನ್ನುವುದನ್ನು ನೋಡೋಣ.

******

ಎಲ್ಲರಿಗೂ ತಿಳಿದಿರುವಂತೆ ಶ್ರೀಮದ್ಭಾಗವತಾದಿ ಗ್ರಂಥಗಳಲ್ಲಿ ಇರುವ ಕೃಷ್ಣನ ಅವತಾರ ಸಮಯದ ವಿವರಣೆಯ ಅಂಶಗಳು ಏನು? ಅವುಗಳನ್ನು ಸಂಕ್ಷೇಪವಾಗಿ ಹೀಗೆ ಹೇಳಬಹುದು:
  • ದುಷ್ಟರ ಉಪಟಳ ಹೆಚ್ಚಿದುದರಿಂದ ಭೂದೇವಿಯ ಪ್ರಾರ್ಥನೆಯ ಕಾರಣ ದೇವತೆಗಳು ಚತುರ್ಮುಖ ಬ್ರಹ್ಮರ ನೇತೃತ್ವದಲ್ಲಿ ಕ್ಷೀರಸಮುದ್ರ ತಲುಪಿ ಶೇಷಶಾಯಿಯಾದ ಶ್ರೀಮನ್ನಾರಾಯನನ್ನು ಭೂಭಾರ ಹರಣ ಮಾಡುವಂತೆ ಕೋರುತ್ತಾರೆ. 
  • ಶ್ರೀಮನ್ನಾರಾಯಣನು ಅವರೆಲ್ಲರ ಕೋರಿಕೆಯಂತೆ ಯದುವಂಶದಲ್ಲಿ ವಸುದೇವ-ದೇವಕಿಯರ ಮಗನಾಗಿ ಜನಿಸಿ ಮುಂದಿನ ಕ್ರಮ ನಡೆಸುವುದಾಗಿ ಅಭಯ ಕೊಡುತ್ತಾನೆ.
  • ದೇವಕಿ ಕಂಸನ ತಂಗಿ. ಅವಳ ಎಂಟನೆಯ ಮಗು ತನ್ನ ಮರಣಕ್ಕೆ ಕಾರಣ ಎಂಬ ಅಶರೀರವಾಣಿ ಕೇಳಿ ಕಂಸ ವಸುದೇವ-ದೇವಕಿಯರನ್ನು ಬಂದಿಖಾನೆಯಲ್ಲಿ ಸೆರೆ ಇಟ್ಟಿರುತ್ತಾನೆ.
  • ವಸುದೇವ-ದೇವಕಿಯರು ಮೂಲತಃ ಕಶ್ಯಪ-ಅದಿತಿ ದಂಪತಿಗಳು.
  • ಈ ದಂಪತಿಗಳಿಗೆ ಶ್ರೀಮನ್ನಾರಾಯಣನು ಶಂಖ-ಚಕ್ರಾದಿ ಲಾಂಛನಗಳನ್ನು ಧರಿಸಿ ದರ್ಶನ ಕೊಟ್ಟು, ಅವರ ಎಂಟನೆಯ ಮಗನಾಗಿ ಅವತರಿಸುತ್ತಾನೆ.
  • ಶ್ರೀಕೃಷ್ಣನ ಅವತಾರದ ಮೊದಲು ಆದಿಶೇಷ ಬಲರಾಮನಾಗಿ ಅವತರಿಸಿದನು.
  • ದೇವಕಿಯ ಗರ್ಭ ಪ್ರವೇಶಿಸಿದ ಶಿಶು ರೂಪಿ ಶ್ರೀಕೃಷ್ಣನನ್ನು ಚತುರ್ಮುಖ ಬ್ರಹ್ಮನ ನೇತೃತ್ವದಲ್ಲಿ ದೇವತೆಗಳು ಸ್ತುತಿಸುತ್ತಾರೆ. ಭಾಗವತದಲ್ಲಿ ಇದನ್ನು "ಗರ್ಭ ಸ್ತುತಿ" ಎಂದು ಹೇಳುತ್ತಾರೆ.
  • ಶ್ರೀಕೃಷ್ಣ ಜನಿಸಿದ ದಿನ ಕೃಷ್ಣ ಪಕ್ಷದ ಅಷ್ಟಮಿ. ಅರ್ಧ ಚಂದ್ರ ಆಕಾಶದಲ್ಲಿದ್ದಾನೆ. ಮಧ್ಯ ರಾತ್ರಿ ಮಗುವಿನ ಜನನ. ರೋಹಿಣಿ ನಕ್ಷತ್ರ. ರವಿಯು ಸಿಂಹರಾಶಿಯಲ್ಲಿ ಸ್ವಸ್ಥಾನದಲ್ಲಿ ಇದ್ದಾನೆ. 
  • ಶ್ರಾವಣ ಮಾಸ. ಮಳೆಗಾಲ. ಮೋಡ ಕವಿದ ವಾತಾವರಣ. ಶ್ರೀಮನ್ನಾರಾಯಣನು ವಸುದೇವ-ದೇವಕಿಯರಿಗೆ ಕಾಣುವಂತೆ ಪ್ರಕಟನಾದಾಗ ಸ್ವಲ್ಪ ಕಾಲ ಶುಭ್ರವಾದ ಆಕಾಶ. ವಸುದೇವನು ಶ್ರೀಕೃಷ್ಣನನ್ನು ಗೋಕುಲಕ್ಕೆ ತೆಗೆದುಕೊಂಡು ಹೋಗುವಾಗ ಮತ್ತೆ ಮೋಡಗಳು ತುಂಬಿಕೊಂಡು ಭಾರಿ ಮಳೆ ಉಂಟಾಗುತ್ತದೆ.
  • ಶ್ರೀ ಕೃಷ್ಣನ ಜನನವಾದಾಗ ಗಂಧರ್ವರು ಹಾಡುತ್ತಾರೆ. ಅಪ್ಸರೆಯರು ನರ್ತನ ಮಾಡುತ್ತಾರೆ. 
  • ದೇವತೆಗಳು ಪಾರಿಜಾತ ಮೊದಲಾದ ಪುಷ್ಪ ವೃಷ್ಟಿ ಮಾಡುತ್ತಾರೆ.
  • ದೇವದುಂಧುಭಿಗಳು ತಾವೇತಾವಾಗಿ ಮೊಳಗುತ್ತವೆ.
  • ವಸುದೇವನ ಅನೇಕ ಹೆಸರುಗಳಲ್ಲಿ ಆನಕ ದುಂಧುಭಿ ಅನ್ನುವುದು ಒಂದು ಹೆಸರು.
  • ಶ್ರಾವಣ ಮಾಸ ಆದುದರಿಂದ ಸರೋವರಗಳು ನೀರಿನಿಂದ ತುಂಬಿದ್ದವು.
  • ಜನನದ ಸಮಯದಲ್ಲಿ ಮೋಡಗಳು ಮರೆಯಾದಾಗ ಮಿಂಚಿದ ನಕ್ಷತ್ರಗಳು ಮತ್ತೆ ಮೋಡ ತುಂಬಿಕೊಂಡಾಗ ಮರೆಯಾದವು.
  • ಜನನದ ಸಮಯದಲ್ಲಿ ತಂದೆ-ತಾಯಿಯರ ಬೇಡಿಗಳು ಕಳಚಿಕೊಂಡವು.
ಈ ಎಲ್ಲ ವಾಸ್ತವ ಅಂಶಗಳನ್ನು ಶ್ರೀ ವಾದಿರಾಜರು ಕಾವ್ಯಮಯವಾಗಿ ಉಪಯೋಗಿಸಿಕೊಂಡು ಶ್ರೀ ರುಕ್ಮಿಣೀಶ ವಿಜಯದಲ್ಲಿ ಚಿತ್ರಿಸಿದ್ದಾರೆ. 
*****

ಶ್ರೀ ವಾದಿರಾಜರು ಈ ಸಂಗತಿಗಳನ್ನೇ ಕಾವ್ಯದಲ್ಲಿ ಅಳವಡಿಸಿರುವ ರೀತಿ:
  • ಚತುರ್ಮುಖ ಬ್ರಹ್ಮದೇವರು ಎಲ್ಲಾ ದೇವತೆಗಳು ಮತ್ತು ಭೂದೇವಿಯಿಂದ ಕೂಡಿದವರಾಗಿ ಶ್ರೀಮನ್ನಾರಾಯಣನನ್ನು "ಪುರುಷ ಸೂಕ್ತ" ಮಂತ್ರಗಳಿಂದ ಸ್ತೋತ್ರ ಮಾಡಿದರು. "ನಮ್ಮ ಬೇಡಿಕೆಗಳು ಅನೇಕ. ಇತರರಿಗೆ ಒಮ್ಮೆಗೆ ಒಂದು ಕೆಲಸ ಮಾತ್ರ ಮಾಡಿಕೊಡಲು ಸಾಧ್ಯ. ನಮ್ಮ ಅನೇಕ ಕೋರಿಕೆಗಳನ್ನು ಒಂದೇ ಅವತಾರದಲ್ಲಿ ಸಾರ್ಥಕ ಮಾಡಿಕೊಡಲು ಸಹಸ್ರ (ಅನಂತ) ತಲೆಗಳು, ಸಹಸ್ರ ಕಣ್ಣುಗಳು, ಸಹಸ್ರ ಅಂಗಾಂಗಗಳುಳ್ಳ ಪರಮಪುರುಷನಾದ ನೀನೇ ಸಮರ್ಥನು" ಎನ್ನುವುದನ್ನು ಸೂಚಿಸುವುದಕ್ಕಾಗಿ ಅನೇಕ ಸ್ತೋತ್ರಗಳ ನಡುವೆ ಪುರುಷ ಸೂಕ್ತವನ್ನು ಆರಿಸಿಕೊಂಡು ಸ್ತೋತ್ರ ಮಾಡಿದರು. (ಸರ್ಗ 1, ಶ್ಲೋಕ 21)
  • ಯಾರಾದರೂ ಹಿರಿಯ ಅಧಿಕಾರಿಗಳು ಅಥವಾ ಮಂತ್ರಿಗಳು ಪ್ರವಾಸ ಬರುವಾಗ ಅವರು ತಕ್ಷಣ ನೇರವಾಗಿ ಬರುವುದಿಲ್ಲ. ಅವರು ಬರುವ ಮೊದಲು ಸಂಬಂಧಿಸಿದ ಪರಿವಾರದವರು ಬಂದು ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಾರೆ. ಯಾರೋ ಇಂದು ಇದ್ದು, ನಾಳೆ ಹೋಗುವ ಅಧಿಕಾರಿ ಅಥವಾ ಮಂತ್ರಿಗಳಿಗೇ ಹೀಗಿರುವಾಗ, ಹದಿನಾಲ್ಕು ಲೋಕಗಳ ಒಡೆಯ, ಅನಾದಿ ಕಾಲದಿಂದ ಅನಂತ ಕಾಲದವರೆಗೆ ಇರುವ ಪ್ರಭುವಿನ ವ್ಯವಸ್ಥೆ ಹೇಗೆ? ಅದಕ್ಕೇ ಸ್ವಯಂ ಆದಿಶೇಷ ಭೂಮಿಗೆ ಬಲರಾಮನಾಗಿ ಬಂದು ಎಲ್ಲ ವ್ಯವಸ್ಥೆ ಮಾಡಲು ತಾನೇ ಮೊದಲು ನಿಂತನು. (ಸಾವಿರ ಹೆಡೆಗಳುಳ್ಳ ಆದಿಶೇಷನು ಎಲ್ಲಾ ಕಡೆ ಒಂದೇ ಸಮಯದಲ್ಲಿ ಗಮನವಿಟ್ಟು ತಯಾರು ಮಾಡಲು ಶಕ್ತನು ಎಂದು ಭಾವ). (ಸರ್ಗ 1 ಶ್ಲೋಕ 26)
  • ಶ್ರೀಕೃಷ್ಣನು ವಸುದೇವ-ದೇವಕಿಯರಿಗೆ ಎಲ್ಲ ಲಾಂಛನ ಸಹಿತ ಹದಿನಾರು ವರ್ಷದ ಯುವಕನಾಗಿ ಕಾಣಿಸಿಕೊಂಡನು. ನಂತರ ಮಗುವಾಗಿ ಅಲ್ಲಿ ತೋರಿಸಿಕೊಂಡನು. ಅವನಿಗೆ ಗರ್ಭವಾಸಾದಿ ದುಃಖಗಳಿಲ್ಲ. ಅವನು ಅವತಾರ ಮಾಡುವಾಗ ಎಲ್ಲರಂತೆ ಅಳುತ್ತಾ ಹುಟ್ಟುವ ಕೂಸಲ್ಲ. ಸದಾಕಾಲ ನಗುನಗುತ್ತಾ ಇರುವವನು. ಎಲ್ಲರಂತೆ ಏರು-ಪೇರುಗಳಿಲ್ಲ. "ನಿನಗೆ ಗರ್ಭವಾಸ ಇಲ್ಲದಿರುವಂತೆ ನಮಗೂ ಮುಂದೆ ಅದು ಇಲ್ಲದಂತೆ ಮಾಡು" ಎಂದು ಕೇಳಿಕೊಳ್ಳಲು "ಗರ್ಭ ಸ್ತುತಿ" ಮಾಡಿದರು. ಇಂತಹ ಬೇಡಿಕೆ ಅವನು ಗರ್ಭದಲ್ಲಿ ಇದ್ದಂತೆ ತೋರಿಸಿದಾಗ ತಾನೇ ಮಾಡಬೇಕು? (ಕಚೇರಿಯ ಕೆಲಸ ಆಗಬೇಕಾದರೆ ಅಲ್ಲಿ ಹೋಗಿ ಕೇಳಬೇಕು. ಶಾಲೆಯ ಕೆಲಸ ಆಗಬೇಕಾದರೆ ಅಲ್ಲಿಗೆ ಹೋಗಬೇಕು. ಗರ್ಭವಾಸ ತಪ್ಪಬೇಕಾದರೆ ಅವನು ಗರ್ಭದಲ್ಲಿರುವಾಗ ಕೇಳಬೇಕು ಎಂದು ಭಾವ). (ಸರ್ಗ 1 ಶ್ಲೋಕ 30)
ಈ ರೀತಿ ಕೃಷ್ಣಾವತಾರದ ಮೊದಲಿನ ಪ್ರತಿಯೊಂದು ಘಟನೆಗೂ ವಿಶೇಷ ಅರ್ಥ ಕೊಟ್ಟು ಕಾವ್ಯಮಯ ರೀತಿಗೆ ಉಪಯೋಗಿಸಿಕೊಂಡಿದ್ದಾರೆ.

******

ಕೃಷ್ಣ ಜಯಂತಿಯ ದಿನದ ವಿವರಣೆ ಹೇಗೆ ಅನ್ನುವುದನ್ನು ಸ್ವಲ್ಪ ನೋಡೋಣ:
  • ಅವತಾರದ ಮೂಲ ಕಾರಣ ರಾಕ್ಷಸರ ಸಂಹಾರ. ಅವರು ನಿಶಾಚರರು. ರಾತ್ರಿ ಓಡಾಡಿಕೊಂಡಿರುವವರು. ಅವರನ್ನು ಹಿಡಿಯಲು ರಾತ್ರಿಯೇ ಆಗಬೇಕು. ಅದಕ್ಕೇ ಮಧ್ಯರಾತ್ರಿ ಹುಟ್ಟಿದನು! ರಾಕ್ಷಸರು ಎಲ್ಲಿದ್ದಾರೆ? ಎಂಟು ದಿಕ್ಕುಗಳು ತುಂಬಿಕೊಂಡು ಇದ್ದಾರೆ. ಅದಕ್ಕೇ ಶ್ರೀಕೃಷ್ಣನು ಹದಿನೈದು ದಿನಗಳಲ್ಲಿ ಅಷ್ಟಮಿ (ಎಂಟನೆಯ ದಿನ) ಆರಿಸಿಕೊಂಡನು! (ಸರ್ಗ 1 ಶ್ಲೋಕ 31)
  • ಶ್ರೀಕೃಷ್ಣನಿಗೆ ಮೂವರು ತಾಯಂದಿರು. ಹೆತ್ತವಳು ದೇವಕಿ. ಸಾಕಿದವಳು ಯಶೋದೆ. ಇನ್ನೊಬ್ಬಳು (ವಸುದೇವನ ಇನ್ನೊಬ್ಬಳು ಮಡದಿಯಾದ) ದೊಡ್ಡಮ್ಮ ರೋಹಿಣಿ. ಹೆತ್ತವಳು ಮತ್ತು ಸಲಹಿದವಳು ಸಂತೋಷಪಟ್ಟು ಮತ್ತೊಬ್ಬಳು ಬೇಸರ ಮಾಡಿಕೊಳ್ಳಬಾರದಲ್ಲ! ಆ ಕಾರಣಕ್ಕಾಗಿ ಶ್ರೀಕೃಷ್ಣನು ರೋಹಿಣಿ ನಕ್ಷತ್ರ ಆರಿಸಿಕೊಂಡನು. ಇದರಿಂದ ಮೂರು ಮಂದಿ ತಾಯಂದಿರು ಒಟ್ಟಿಗೆ ಸಂತೋಷಪಟ್ಟರು. (ಶ್ರೀಕೃಷ್ಣನನ್ನು ನೆನೆಸಿಕೊಂಡಾಗಲೆಲ್ಲಾ ರೋಹಿಣಿಯನ್ನು ನೆನಪು ಮಾಡಿಕೊಳ್ಳುವುದರಿಂದ ಅವಳಿಗೂ ಸಂತೋಷ ಆಯಿತು ಎಂದು ಭಾವ). (ಸರ್ಗ 1 ಶ್ಲೋಕ 32)
  • ಶ್ರೀ ಕೃಷ್ಣ ಅವತಾರ ಮಾಡಿದಾಗ ಚಂದ್ರನ ಸ್ಥಿತಿ ಏನು? ಮೊದಲಿಗೆ ಅವನಿಗೆ ಸಂತೋಷ ಆಯಿತು. ಶ್ರೀರಾಮನು ಸೂರ್ಯವಂಶದಲ್ಲಿ ಹುಟ್ಟಿದನು. ಈಗ ಶ್ರೀಕೃಷ್ಣನು ಚಂದ್ರವಂಶ ಆರಿಸಿಕೊಂಡು ಹುಟ್ಟಿದುದರಿಂದ ತನ್ನ ಸ್ಥಾನ ಮೇಲೇರಿತು. ಹೀಗಾಗಿ ಈ ಲಾಭದಿಂದ ಚಂದ್ರನು ಹಿಗ್ಗಿದನು. ಆದರೆ ಇದರಿಂದ ಅವನಿಗೆ ನಷ್ಟ ಸಹ ಆಯಿತು. ಮೊದಲಿಗೆ ಎಲ್ಲರೂ ಚಂದ್ರನನ್ನು ನೋಡಿ ಹೊಗಳುತ್ತಿದ್ದರು. ಆದರೆ ಈಗ ಎಲ್ಲರ ಗಮನ ತನಗಿಂತ ಎಷ್ಟೋ ಆಕರ್ಷಕನಾದ ಶ್ರೀಕೃಷ್ಣನ ಕಡೆ ಹೊರಳಿದ್ದರಿಂದ ಚಂದ್ರನನ್ನು ನೋಡುವವರೇ ಇಲ್ಲವಾದರು! ಆಗ ನಷ್ಟದಿಂದ ಕುಗ್ಗಿದನು. ಹೀಗಾಗಿ ಚಂದ್ರನು ಲಾಭ-ನಷ್ಟ ಸಮ-ಸಮ ಹೊಂದಿದ ವರ್ತಕನಂತೆ ಆದನು. ಆ ಕಾರಣ ಎರಡರ ಮಧ್ಯೆ ಅರ್ಧಚಂದ್ರ (ಅಷ್ಟಮಿಯಂದು ಅರ್ಧ ಚಂದ್ರ ದರ್ಶನ) ಆಗಿ ಉಳಿದನು. (ಸರ್ಗ 1 ಶ್ಲೋಕ 33)
ಶ್ರೀಕೃಷ್ಣಾವತಾರದ ದಿನ ಮತ್ತು ಸಮಯ ಇವುಗಳ ವಿವರಣೆ ಹೀಗೆ ಕಾವ್ಯವಾಯಿತು.

******

ನಂತರ ನಡೆದ ಘಟನೆಗಳು ಹೇಗೆ? ಅವನ್ನು ನೋಡೋಣ:
  • ಸಿಂಹ ಮಾಸ. ರವಿಯು ಸ್ವಸ್ಥಾನದಲ್ಲಿ ಇದ್ದಾನೆ. ಇನ್ನೊಂದು ಕಡೆ ಶ್ರಾವಣ ಮಾಸ. ಮಧ್ಯ ರಾತ್ರಿ. ಎಲ್ಲರಿಗೂ ಘಾಡ ನಿದ್ರೆಯ ಸಮಯ. ಗಂಧರ್ವರು ಸಂತೋಷದಿಂದ ಹಾಡಿದರು. ಅಪ್ಸರೆಯರು ನರ್ತಿಸಿದರು. ಗಂಧರ್ವರಿಗೆ ಮತ್ತು ಅಪ್ಸರೆಯರಿಗೆ ಶ್ರೀಕೃಷ್ಣನನ್ನು ಮೆಚ್ಚಿಸುವ ತವಕ. ಅವನು ಈಗ ಸಣ್ಣ ಮಗು. ಮಕ್ಕಳನ್ನು ಮೆಚ್ಚಿಸುವುದು ದೊಡ್ಡವರನ್ನು ತೃಪ್ತಿಪಡಿಸುವುದಕ್ಕಿಂತ ಸುಲಭ. ಆದ್ದರಿಂದ ಇದೇ ಸುಸಮಯ! ಮಕ್ಕಳಿಗೆ ಅತ್ಯಂತ ಪ್ರಿಯವಾದದ್ದು ಯಾವುದು? ಹಾಡು ಮತ್ತು ನೃತ್ಯ. ಅದಕ್ಕೇ ಗಂಧರ್ವರು ಮನತುಂಬಿ ಹಾಡಿದರು. ತಿಲೋತ್ತಮೆ ಮೊದಲಾದ ಅಪ್ಸರೆಯರು ಮೈಮರೆತು ಕುಣಿದರು. (ಸರ್ಗ 1 ಶ್ಲೋಕ 34)
  • ದೇವತೆಗಳು ಆನಂದದಿಂದ ತಮ್ಮ (ದೇವ)ಲೋಕದ ಪಾರಿಜಾತ ಮೊದಲಾದ ಹೂವುಗಳ ಪುಷ್ಪವೃಷ್ಟಿ ಮಾಡಿದರು. ಇದರಿಂದ ಶ್ರೀಕೃಷ್ಣನಿಗೆ ನರಕಾಸುರನ ವಧೆಯ ನಂತರ ಸತ್ಯಭಾಮಾದೇವಿಗಾಗಿ ಪಾರಿಜಾತ ವೃಕ್ಷ ತೆಗೆದುಕೊಂಡು ಹೋಗಲು ನೆನಪಿಸಿದಂತೆ ಆಯಿತು! ಮುಂದೆ ದೇವೇಂದ್ರನು ಮಾಡುವ ತಪ್ಪಿಗೆ ಮೊದಲೇ ಕ್ಷಮೆ ಯಾಚಿಸಿದಂತೆಯೂ ಆಯಿತು. (ಸರ್ಗ 1 ಶ್ಲೋಕ 36)
  • ದೇವ ದುಂದುಭಿಗಳು ಮೊಳಗಿದುವು. (ವಸುದೇವನಿಗೆ ಆನಕ ದುಂದುಭಿ ಎಂದೂ ಒಂದು ಹೆಸರು. ಅನೇಕ ನಗಾರಿ, ದುಂದುಭಿ ಮೊದಲಾದ ವಾದ್ಯಗಳು ಅವನ ಬಳಿ ಇದ್ದುವಂತೆ.) ಶ್ರೀಕೃಷ್ಣನು ನಮ್ಮವನು ಎಂದು ಹೇಳಿಕೊಳ್ಳುವ ಹರ್ಷದಲ್ಲಿ ಈ ಆನಕ, ದುಂದುಭಿ (ಬೇರೆ ಬೇರೆ ಗಾತ್ರ ಮತ್ತು ಆಕೃತಿಯ ನಗಾರಿ, ಡೋಲು ಮುಂತಾದುವು) ಮೊದಲಾದ ವಾದ್ಯಗಳು ಮೊಳಗಿದುವು. (ಸರ್ಗ 1 ಶ್ಲೋಕ 36)
  • ವಸುಗಳು (ಎಂಟು ಮಂದಿ ವಸುಗಳು ಅಷ್ಟವಸುಗಳು ಎಂದು ಹೆಸರುಳ್ಳವರು) ಮತ್ತು ದೇವತೆಗಳು ಈ ಕೃಷ್ಣನು ಮುಂದೆ ವಾಸುದೇವ ಎಂದು ಹೆಸರಾಗುತ್ತಾನೆ ಎಂದು ಸಂತೋಷ ಪಟ್ಟು ಸ್ತುತಿಸಿದರು. (ಮಗುವು ನಮ್ಮ ಹೆಸರಿನಿಂದ ಪ್ರಖ್ಯಾತನಾಗುತ್ತಾನೆ ಎಂದು ಭಾವವು). ವಸುದೇವನ ಮಗನಾದುದರಿಂದ ವಾಸುದೇವ ಎಂದು ಹೇಳುವುದು ಸಾಮಾನ್ಯವಾದ ಲೋಕಾರೂಢಿಯ ಅರ್ಥ. "ಸರ್ವತ್ರ ವಾಸಯತಿ ಇತಿ ವಾಸುದೇವಃ" ಅನ್ನುವುದು ನಿಜವಾದ ಅರ್ಥ. (ಎಲ್ಲಕಡೆಯೂ ವಾಸಿಸುವುದರಿಂದ (ವ್ಯಾಪಿಸಿರುವುದರಿಂದ) ವಾಸುದೇವ ಅನ್ನುವುದು ಸರಿಯಾದ ಅರ್ಥ. ಈ ಹೆಸರು ಪರಮಾತ್ಮನಿಗೆ ಅನಾದಿ ಕಾಲದಿಂದಲೂ ಇದೆ). (ಸರ್ಗ 1 ಶ್ಲೋಕ 37)
ಯಾರಾದರೂ ದೊಡ್ಡವರ ಸಮಾಚಾರ ಬಂದರೆ "ಅವರು ನಮ್ಮವರು" ಎಂದು ಹೇಳಿಕೊಳ್ಳಲು ಎಲ್ಲರೂ ಇಷ್ಟಪಡುತ್ತಾರೆ. ಇದನ್ನೇ ವಿಡಂಬನಾತ್ಮಕವಾಗಿ ವಾದಿರಾಜರು ಇಲ್ಲಿ ಬಳಸಿಕೊಂಡಿದ್ದಾರೆ.

******

ಆಯಿತು. ಶ್ರೀಕೃಷ್ಣ ಶಿಶುರೂಪದಲ್ಲಿ ದೇವಕಿ-ವಾಸುದೇವರ ಮುಂದೆ ಮಲಗಿದ. ಮುಂದೆ ಏನಾಯಿತು?
  • ಮೋಡಗಳಿಗೆ ತಮ್ಮ ನೀಲಿಯ ಬಣ್ಣದ ಮೇಲೆ (ನೀಲ ಮೇಘ ಶ್ಯಾಮ) ಬಹಳ ಅಹಂಕಾರ ಇದ್ದಿತು. ಈಗ ಶ್ರೀಕೃಷ್ಣನು ಅವುಗಳಿಗಿಂತ ಸುಂದರವಾದ ಬಣ್ಣದಲ್ಲಿ ಬಂದು ಮಲಗಿದ್ದಾನೆ. ಅವನು ಪ್ರಕಟನಾಗಿದ್ದಾನೆ; ಹುಟ್ಟಲಿಲ್ಲ. ಯಾರೂ ಮೋಡಗಳ ನೀಲಿಯ ಬಣ್ಣ ಗಮನಿಸುತ್ತಿಲ್ಲ. ಈಗ ನೀಲ ಮೇಘ ಶ್ಯಾಮ ಅಂದರೆ ಶ್ರೀಕೃಷ್ಣನೇ ಎಂದು ಎಲ್ಲರೂ ತಿಳಿಯುತ್ತಿದ್ದಾರೆ. ಇದರಿಂದ ಕೋಪಗೊಂಡ ಮೇಘಗಳು (ಪಂದ್ಯದಲ್ಲಿ ಸೋತವರು ಕೋಪಗೊಂಡು ಮಾಡುವಂತೆ) ದೂರ ಹೊರಟುಹೋದುವು. ಸಮುದ್ರದ ಮೇಲೆ ಕಿರಿಚಾಡುತ್ತಾ ನೀರು ಸುರಿಸಿದವು. (ಗುಡುಗು-ಸಿಡಿಲು ಸಹಿತ ಮಳೆ ಬಂದಿತು). ಸಮುದ್ರ ಜಡವಾದುದರಿಂದ ಅದು ಪ್ರತಿಕ್ರಿಯಿಸಲಿಲ್ಲ. (ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಮೋಡಗಳು ವರ್ತಿಸಿದವು). (ಸರ್ಗ 1 ಶ್ಲೋಕ 38)
  • ಸರೋವರಗಳು ಸಂತೋಷದಿಂದ ತುಂಬಿ ತುಳುಕಿದವು. (ಶ್ರಾವಣ ಮಾಸವಾದುದರಿಂದ ನೀರಿನಿಂದ ತುಂಬಿದ್ದವು). ನಮ್ಮಲ್ಲಿ ಇಲ್ಲಿಯವರೆಗೆ ಕಮಲಗಳು ಮಾತ್ರ ತುಂಬಿದ್ದವು. ಇನ್ನು ಮುಂದೆ ಕಮಲನಾಭನು ತನ್ನ ಪಾದಕಮಲಗಳಿಂದ, ಕಮಲದಂತಿರುವ ಮುಖವುಳ್ಳ ಸುಂದರಿಯರ ಸಹಿತ ನಮ್ಮಲ್ಲಿ ಬಂದು ಆಟವಾಡುತ್ತಾನೆ ಎಂದು ಬೀಗಿದವು. (ಮುಂದೆ ಗೋಪಿಯರ ಜೊತೆಯಲ್ಲಿ ಜಲಕ್ರೀಡೆ ಆಡುವನು ಎಂಬುದರ ಸೂಚನೆ). (ಸರ್ಗ 1 ಶ್ಲೋಕ 39)
  • ನಕ್ಷತ್ರಗಳು ಕೂಡ ಬಹಳ ಆನಂದಪಟ್ಟವು. ಎಲ್ಲೆಡೆಯೂ ತುಂಬಿರುವ ದೇವನು ಈಗ ಇಷ್ಟು ಚಿಕ್ಕ ಆಕೃತಿಯಲ್ಲಿ ಮಲಗಿದ್ದಾನೆ! ಈ ಸಂತೋಷದಲ್ಲಿ ಅವು ತಾವೇ ಒಂದು ಹಾರದಂತೆ ಅವನ ಸುತ್ತ ಇರುವಂತೆ ಕಂಗೊಳಿಸಿದವು. (ಸರ್ಗ 1 ಶ್ಲೋಕ 40)
ಮೊದಲ ಸರ್ಗದಲ್ಲಿ 67 ಶ್ಲೋಕಗಳಿವೆ. ಇಲ್ಲಿ 13 ಶ್ಲೋಕಗಳ ಸಾರಾಂಶ ಮಾತ್ರ ಕೊಟ್ಟಿದೆ. ಮೂಲ ಗ್ರಂಥ ಓದಿದಾಗ ಅದರ ಪೂರ್ಣ ಅನುಭವ ಆಗುವುದು. ಉಪಮೆ, ಉತ್ಪ್ರೇಕ್ಷೆ, ಶ್ಲೇಷೆ ಮುಂತಾದ ಅರ್ಥಲಂಕಾರ-ಶಬ್ದಾಲಂಕಾರ ಮೊದಲಾದುವುಗಳನ್ನು ಕಾಣಬಹುದು.

******

ಈ ಸಂಚಿಕೆ ಸ್ವಲ್ಪ ದೀರ್ಘ ಅನ್ನಿಸಬಹುದು. ಶ್ರೀ ವಾದಿರಾಜರು ಇರುವ ವಾಸ್ತವಾಂಶಗಳನ್ನು ಹೇಗೆ ಕಾವ್ಯವಾಗಿ ಪರಿವರ್ತಿಸಿದ್ದಾರೆ ಎನ್ನುವುದನ್ನು ತೋರಿಸುವ ಪ್ರಯತ್ನ ಇದಷ್ಟೇ. ತಾಳ್ಮೆಯಿಂದ ನೋಡಿದಾಗ ಇನ್ನೂ ಅನೇಕ ಅಂಶಗಳು ಹೊಳೆಯಬಹುದು. ನಮಗೆ ತಿಳಿಯುವ ಅಂಶಗಳು ಕಡಿಮೆಯೇ. 

ಶ್ರೀಕೃಷ್ಣನು ಕಾಣಿಸಿಕೊಂಡಾಗ ವಸುದೇವ-ದೇವಕಿಯರ ಬೇಡಿಗಳು ತಾವಾಗಿಯೇ ಕಳಚಿಕೊಂಡವು. ಅವನನ್ನು ವಸುದೇವ ಗೋಕುಲದಲ್ಲಿ ಬಿಟ್ಟು ಬಂದ ತಕ್ಷಣ ಬೇಡಿಗಳು ಮತ್ತೆ ಕೂಡಿಕೊಂಡವು. 

ಪರಮಾತ್ಮನನ್ನು ನೆನೆದಾಗ ಸಂಸಾರದಿಂದ ಮುಕ್ತಿ. ಅವನನ್ನು ಮರೆತ ತಕ್ಷಣ ಸಂಸಾರ ಬಂಧನ. ನಂಬಿದವರಿಗೆ ಇದೇ ಜ್ಞಾನ!

No comments:

Post a Comment