Showing posts with label Sampattu. Show all posts
Showing posts with label Sampattu. Show all posts

Saturday, July 26, 2025

ಲಾಭವೂ ನಿನ್ನದೇ; ನಷ್ಟವೂ ನಿನ್ನದೇ!


ಮನುಷ್ಯನಿಗೆ ಬಹಳ ಮುಖ್ಯವಾದ ಮೂರು ಸಂಪತ್ತುಗಳು ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯ. ಈ ಮೂರು ಸಂಪತ್ತುಗಳು ಎಲ್ಲರಿಗೂ ಸಿಕ್ಕುವುದಿಲ್ಲ. ಏಕೆ ಸಿಕ್ಕುವುದಿಲ್ಲ? ಇದಕ್ಕೆ ಕಾರಣಗಳನ್ನು ಹಿಂದೆ "ಸಂಪತ್ತು ಕಳೆಯುವ ಕಾರಣಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದ್ದೆವು. "ಕೆಸರಿಂದ ಕೆಸರ ತೊಳೆದಂತೆ" ಎಂಬ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ  ಇದರ ಮುಂದಿನ ಭಾಗವನ್ನೂ ನೋಡಿದ್ದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಿ ನೆನಪಿಸಿಕೊಳ್ಳಬಹುದು. 

ನಾವು ಮಾಡುವ ತಪ್ಪುಗಳಿಗೆ ಸಮಾಜದಲ್ಲಿ ಶಿಕ್ಷೆ ಎಂಬುದೊಂದಿದೆ. ಕಾನೂನು-ಕಟ್ಟಲೆಗಳು ಪ್ರತಿಯೊಂದು ತಪ್ಪಿಗೂ ಅದಕ್ಕೆ ಪರ್ಯಾಯವಾದ ಶಿಕ್ಷೆಯನ್ನು ನಿಗದಿ ಪಡಿಸಿವೆ. ಒಂದೇ ತರಹದ ತಪ್ಪುಗಳಾದರೂ ಅವುಗಳ ತೀವ್ರತೆ ಗಮನಿಸಿ ನ್ಯಾಯಾಧೀಶರು ಶಿಕ್ಷೆ ನಿಗದಿ ಪಡಿಸುತ್ತಾರೆ. ಇದೇ ರೀತಿ ನಮ್ಮ ನಂಬಿಕೆಗಳ ಪ್ರಕಾರ ದುಷ್ಕರ್ಮಗಳಿಗೆ ಶಿಕ್ಷೆ ಉಂಟು. ಇಲ್ಲಿಯೂ ಅಂತಹ ಶಿಕ್ಷಾರ್ಹ ತಪ್ಪುಗಳನ್ನು ಮಾಡುವವನ ಪರಿಸ್ಥಿತಿಯನ್ನು ಕಂಡು ಅನುಭವಿಸಬೇಕಾದ ತೀವ್ರತೆ ನಿರ್ಧಾರ ಆಗುತ್ತದೆ. 

ಪರಮಾತ್ಮನ ಸೃಷ್ಟಿಯಲ್ಲಿ ಸರಿ-ತಪ್ಪುಗಳಿಗೆ ವೈದೃಶ್ಯ ಅಥವಾ ಪ್ರತಿಭಾರ ಇರುವುದಿಲ್ಲ. (ಇದನ್ನು ಇಂಗ್ಲಿಷಿನಲ್ಲಿ ಸೆಟ್-ಆಫ್ ಅನ್ನುತ್ತಾರೆ). ಉದಾಹರಣೆಗೆ: ಒಬ್ಬನು ಹತ್ತು ತೂಕ ಪುಣ್ಯ ಮಾಡಿ ಐದು ತೂಕ ಪಾಪ ಮಾಡಿದ್ದಾನೆ ಎನ್ನುವ. "ಐದು ತೂಕ ಪಾಪಕ್ಕೆ ಐದು ತೂಕ ಪುಣ್ಯ ವಜಾ ಹಾಕಿಕೊಳ್ಳಿ. ಮಿಕ್ಕಿದ ಐದು ತೂಕದ ಪುಣ್ಯಕ್ಕೆ ಸುಖ ಕೊಡಿ. ದುಃಖ ಬೇಡ" ಎಂದು ಅವನು ಕೇಳಿದರೆ ಅದನ್ನು ಒಪ್ಪಿಕೊಳ್ಳುವ ಹಾಗಿಲ್ಲ. ಐದು ತೂಕ ಪಾಪದ ದುಃಖ ಅನುಭವಿಸಲೇ ಬೇಕು. ಅಂತೆಯೇ, ಹತ್ತು ತೂಕ ಪುಣ್ಯದ ಫಲವನ್ನೂ ಉಣ್ಣಬೇಕಾಗುತ್ತದೆ. ಹೀಗಾಗಿ ಮಾಡಿದ ಪ್ರತಿ ಕರ್ಮವೂ ಅದಕ್ಕೆ ನಿಗದಿಯಾದ ಸುಖ ಅಥವಾ ದುಃಖ ತಂದೇ ತರುತ್ತದೆ. ತಪ್ಪಿಸಿಕೊಳ್ಳುವಹಾಗಿಲ್ಲ. 

ಹಿಂದೆ ಒಂದು ಸಂಚಿಕೆಯಲ್ಲಿ "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಫಲವು, ಅಸುನಾಥ ಹರಿಯೇ ಪೊರೆಯೊ" ಎನ್ನುವುದನ್ನು ಚರ್ಚಿಸಿದ್ದೆವು. ಇದನ್ನು ಇನ್ನೂ ಸ್ವಲ್ಪ ವಿವರವಾಗಿ ನೋಡಿದರೆ ಒಳ್ಳೆಯದು ಎಂದು ಮಿತ್ರರೊಬ್ಬರು ಸೂಚಿಸಿದ್ದಾರೆ. ಅದನ್ನು ಈಗ ನೋಡೋಣ. 

*****

ಏನೋ ಒಂದು ಕಾರಣದಿಂದ, ತಿಳಿದೋ ತಿಳಿಯದೆಯೋ ಒಂದು ತಪ್ಪು ಆಗಿದೆ. ಮಳೆಯಲ್ಲಿ ನೆನೆದುವು ಅನ್ನೋಣ. ಅದರಿಂದ ಒಂದು ಖಾಯಿಲೆಯೋ, ಜ್ವರವೋ ಬಂತು. ಆಯಿತು. ಅದನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ? ಇರುತ್ತದೆ. ವೈದ್ಯರ ಬಳಿ ಹೋದರೆ ರೋಗಕ್ಕೆ ತಕ್ಕ ಮದ್ದು ಕೊಡುತ್ತಾರೆ. ಆ ಮದ್ದಿನಿಂದ ಖಾಯಿಲೆ ಗುಣ ಆಗಬಹುದು. ಆದರೆ ಸರಿಯಾದ ವೈದ್ಯರ ಬಳಿಗೆ ಹೋಗಬೇಕು. "ಸರಿಯಾದ ವೈದ್ಯ ಸಿಗುವುದು, ಅನುಕೂಲಕರನಾದ ಗಂಡ ಅಥವಾ ಅನುಕೂಲಕರಳಾದ ಹೆಂಡತಿ ಸಿಗುವುದು, ಇವೆರಡೂ ಒಂದು ರೀತಿಯ ಲಾಟರಿ" ಎನ್ನುವುದು ಅನೇಕರ ಅನುಭವದಿಂದ ತಿಳಿದ ಸತ್ಯ. ಇದರ ಫಲಿತಾಂಶ ಗೊತ್ತಾಗುವುದು ಕೆಲ ಕಾಲದ ನಂತರವೇ. ಥರ್ಮಾಮೀಟರ್ ನೋಡಿ ಜ್ವರ ಕಂಡುಹಿಡಿಯುವಂತೆ ಇದಕ್ಕೆ ಇನ್ನೂ ಯಾವುದೇ ಮೀಟರ್ ಬಂದಿಲ್ಲ. 

ಒಳ್ಳೆಯ ವೈದ್ಯರೇ ಸಿಕ್ಕಿದರು ಎನ್ನೋಣ. ವೈದ್ಯರು ಬರೆದುಕೊಟ್ಟ ಚೀಟಿಯಂತೆ ಸರಿಯಾದ ಮದ್ದೂ ಸಿಗಬೇಕು. ಇಂದಿನ ಮಾರುಕಟ್ಟೆಯಲ್ಲಿ ನಕಲಿ ವೈದ್ಯರೂ ಉಂಟು. ಅದ್ಕಕಿಂತ ಹೆಚ್ಚಾಗಿ ನಕಲಿ ಔಷಧಗಳೂ ಉಂಟು. ಈಗಿನ ಮದ್ದುಗಳಿಗೆ ಒಂದು ವಿಶೇಷ ಗುಣವಿರುತ್ತದೆ. ಔಷಧದ ಬಾಟಲಿನ ಮೇಲೆ ಅಂಟಿಸಿದ ಚೀಟಿಯಲ್ಲಿ ಎರಡು ಪಟ್ಟಿಗಳಿರುತ್ತವೆ. ಮೊದಲನೆಯದು ಅದು ಗುಣಪಡಿಸುವ ಖಾಯಿಲೆಗಳು. ಎರಡನೆಯದು ಅದರಿಂದ ಆಗಬಹುದಾದ ಅಡ್ಡ ಪರಿಣಾಮಗಳು (ಸೈಡ್ ಎಫೆಕ್ಟ್ಸ್). ಅನೇಕ ವೇಳೆ ಮೊದಲಿನ ಪೆಟ್ಟಿಗಿಂತ ಎರಡನೆಯದೇ ದೊಡ್ಡದಿರುತ್ತದೆ. ವೈದರಿಗೂ ಇದು ಚೆನ್ನಾಗಿ ಗೊತ್ತು. ಆದ್ದರಿಂದ ಮದ್ದು ಕೊಡುವಾಗಲೇ ಜೊತೆಯಲ್ಲಿ ಇನ್ನೊಂದನ್ನು ಕೊಟ್ಟಿರುತ್ತಾರೆ. "ಕೆಲವರಿಗೆ ಈ ಮದ್ದಿನಿಂದ ಹೊಟ್ಟೆ ನೋವು ಬರುತ್ತದೆ. ಹಾಗೆ ಬಂದರೆ ಎರಡನೆಯ ಮದ್ದು ತೆಗೆದುಕೊಳ್ಳಿ" ಎಂದು ಅವರೇ ಹೇಳಿ ಉಪಕಾರ ಮಾಡಿರುತ್ತಾರೆ. 

ಪಾಪ ಕರ್ಮ ಮಾಡಿದ್ದೋ, ಅದಾಗದೆ ಆಯಿತೋ, ಒಟ್ಟಿನಲ್ಲಿ ಅಂಟಿಕೊಂಡಿದೆ. ಅಂಟಿರುವುದು ಗೊತ್ತಾಯಿತು. ಅದಕ್ಕೆ ಪರಿಹಾರ ಹೇಳುವವರು ಒಬ್ಬರು ಬೇಕು. ಅವರು ಸರಿಯಾಗಿರಬೇಕು. ಅವರು ಹೇಳಿದ ಪರಿಹಾರವೂ ಸರಿಯಾಗಿರಬೇಕು. ಯಾವುದೋ ಒಂದು ಹೋಮ ಮಾಡಿ ಎಂದರು. ಅದು ಸರಿಯಾದ ಪ್ರಾಯಶ್ಚಿತ್ತ ಆಗಿರಬೇಕು. ಕ್ರಮವಾಗಿ ಮಾಡಿಸುವವರು ಸಿಗಬೇಕು. ತಂದ ಪದಾರ್ಥಗಳು ಶುದ್ಧವಾಗಿರಬೇಕು. ಮಾಡುವಾಗ ಭಾವ ಶುದ್ದಿ ಇರಬೇಕು. ಎಲ್ಲವೂ ಸರಿಯಾಗಿ ಆಗಬೇಕು. ಆಗ ಸರಿಯಾದ ಪರಿಹಾರ ಸಿಗಬಹುದು. 

ಮಾಡಹೊರಟಿದ್ದು ಒಳ್ಳೆಯ ಕೆಲಸವೇ. ಆದರೆ ಇವುಗಳಲ್ಲಿ ಎಲ್ಲಿಯೋ, ಏನೋ, ಎಡವಟ್ಟಾಯಿತು. ಮಾಡಿಸುವವರು, ತಿದ್ದುವವರೇ ಎಡವಿದರು. ಪದಾರ್ಥಗಳಲ್ಲಿ ಕಂಡೋ, ಕಾಣದೆಯೋ ದೋಷ ಇತ್ತು. ಮಾಡುವಾಗ ಮನಸ್ಸು ಚಂಚಲ ಆಯಿತು. ಪರಿಣಾಮ ಏನು?

ಕೆಸರಿನಿಂದ ಕೊಳಕಾದ ವಸ್ತ್ರ ತೊಳೆಯಲು ಕೊಳಕು ನೀರು ಉಪಯೋಗಿಸಿದಂತೆ ಆಯಿತು. ಒಂದು ದುಷ್ಕರ್ಮ ಕಳೆಯಲು ಏನೋ ಮಾಡ ಹೋಗಿ ಮತ್ತೊಂದು ದುಷ್ಕರ್ಮ ಅಂಟಿಕೊಂಡಿತು. ಬಟ್ಟೆ ಶುದ್ಧವಾಗುವ ಬದಲು ಇನ್ನಷ್ಟು ಕೊಳಕಾಯಿತು. ಕೆಸರಿಂದ ಕೆಸರು ತೊಳೆದಂತೆ ಆಯಿತು. ಇದನ್ನೇ ದಾಸರು "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು" ಎಂದರು. ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ?

*****

ನಮ್ಮ ಮನೆಯ ಎದುರುಗಡೆ ಎರಡು ಅಂಗಡಿಗಳಿವೆ. ಮೊದಲನೆಯದು ಯಜಮಾನನೇ ನಡೆಸುವ ಅಂಗಡಿ. ಬೆಳಗಿನಿಂದ ಸಂಜೆಯವರೆಗೆ ಅವನು ಎಲ್ಲ ವ್ಯವಹಾರ ನಡೆಸುತ್ತಾನೆ. ದಿನದ ಕೊನೆಯಲ್ಲಿ ಲೆಕ್ಕ ನೋಡುತ್ತಾನೆ. ವಹಿವಾಟಿನಲ್ಲಿ ಬಂದ ಹಣವನ್ನೆಲ್ಲಾ ತಿಜೋರಿಯಲ್ಲಿ ಭದ್ರವಾಗಿಡುತ್ತಾನೆ. ವರ್ಷದ ಕೊನೆಯಲ್ಲಿ ಎಲ್ಲಾ ಜಮಾ-ಖರ್ಚು ತಾಳೆ ಹಾಕುತ್ತಾನೆ. ಖರ್ಚಿಗಿಂತ ಆದಾಯ ಜಾಸ್ತಿಯಾದರೆ ಅವನಿಗೆ ಲಾಭ. ಆದಾಯಕ್ಕಿಂತ ಖರ್ಚು ಜಾಸ್ತಿ ಆದರೆ ಅವನಿಗೆ ನಷ್ಟ. ರಾತ್ರಿ ಅಂಗಡಿ ಬಾಗಿಲು ಹಾಕಿದ್ದಾಗ ಕಳ್ಳರು ನುಗ್ಗಿ ಹಣ ದೋಚಿದರೆ ಅವನ ಲಾಭವೆಲ್ಲ ಗೋತ. ಯಾವಾಗಲೂ ಲಾಭದ ಚಿಂತೆ. ನಷ್ಟದ ಭೀತಿ. 

ಎರಡನೆಯ ಅಂಗಡಿಯನ್ನೂ ಒಬ್ಬ ನಡೆಸುತ್ತಿದ್ದಾನೆ. ಅದು ಅವನ ಯಜಮಾನನ ಅಂಗಡಿ. ಯಜಮಾನ ಎಲ್ಲಿಯೋ ಇದ್ದಾನೆ. ಎಲ್ಲ ಭಾರ ಇಲ್ಲಿ ನಡೆಸುವವನ ಮೇಲೆ ಬಿಟ್ಟಿದ್ದಾನೆ. ಇವನು ನಿರ್ವಂಚನೆಯಿಂದ ನಡೆಸುತ್ತಿದ್ದಾನೆ. ಮೊದಲ ಅಂಗಡಿಯವನಂತೆ ಇವನೂ ಎಲ್ಲಾ ಮಾಡುತ್ತಾನೆ. ಸಂಜೆ ಹಣ ತಿಜೋರಿಯಲ್ಲಿ ಭದ್ರ ಮಾಡಿ ಕೀಲಿಕೈ ಯಜಮಾನನಿಗೆ ಒಪ್ಪಿಸುತ್ತಾನೆ. "ಲಾಭವೂ ನಿನ್ನದೇ. ನಷ್ಟವೂ ನಿನ್ನದೇ. ನನ್ನದೇನಿದ್ದರೂ ನ್ಯಾಯವಾಗಿ ವ್ಯವಹಾರ ಮಾಡುವುದು" ಎಂದು ನಡೆಯುತ್ತಾನೆ. ಅಂಗಡಿ ಅವನದಲ್ಲ ಎನ್ನುವ ಪ್ರಜ್ಞೆ ಅವನಿಗಿದೆ. ರಾತ್ರಿ ಹಣ ಕಳುವಾದರೆ ಅವನ ಹಣವಲ್ಲ. ಲಾಭ ಅಥವಾ ನಷ್ಟ ಅವನದಲ್ಲ. ಮೊದಲನೆಯ ಅಂಗಡಿಯವಂತೆ ಇವನಿಗೆ ಲಾಭ-ನಷ್ಟದ ಚಿಂತೆಯಿಲ್ಲ. 

ಬ್ಯಾಂಕಿನಿಂದ ಸಾಲ ತಂದಿದ್ದಾಯಿತು. ಈಗ ತೀರಿಸಲೇಬೇಕು. ತೀರಿಸದಿದ್ದರೆ ವಸೂಲಿ ತಂಡದವರು ಪ್ರಾಣ ತಿನ್ನುತ್ತಾರೆ. ನೋಟೀಸು ಕೊಡುತ್ತಾರೆ. ಆಸ್ತಿ ಹರಾಜು ಹಾಕುತ್ತಾರೆ. ಬಂದಿಖಾನೆಗೂ ದೂಡಬಹುದು. ಸಾಲ ತರಬಾರದಿತ್ತು. ತಂದಾಯಿತು. ಈಗ ಏನು ಮಾಡುವುದು?

ಇದಕ್ಕೂ ಒಂದು ಪರಿಹಾರ ಇದೆ. ಬ್ಯಾಂಕಿನವರ ಬಳಿ ನಮ್ಮ ಕಷ್ಟ-ಸುಖ ಹೇಳಿಕೊಳ್ಳಬೇಕು. ಅವರು ಒಪ್ಪಬಹುದು. ಒಪ್ಪದೇ ಇರಬಹುದು. ಪ್ರಯತ್ನವನ್ನಂತೂ ಮಾಡಬಹುದು. ಅವರು ಒಪ್ಪಿಕೊಂಡು "ಹೋಗಲಿ ಬಿಡಿ. ನಿಮಗೆ ಹಿಂದೆ ಕೊಡುವ ಶಕ್ತಿ ಇಲ್ಲ. ಸಾಲ ಮನ್ನಾ ಮಾಡಿದ್ದೇವೆ" ಅಂದರೆ ಈ ಸಾಲದಿಂದ ಬಿಡುಗಡೆ!

*****

"ದುಷ್ಕರ್ಮ ಪರಿಹರಿಸೋ, ಸ್ವಾಮಿ" ಎಂದು ದಾಸರು ಕೇಳಿರುವುದೂ ಇದರಂತೆಯೇ. ಅವನು ಯಜಮಾನ. ನಾನು ಕೇವಲ ಅಂಗಡಿ ನಡೆಸುವ ಎರಡನೆಯ ಅಂಗಡಿಯವನಂತೆ ಎನ್ನುವುದು ಮರೆತು ಮೊದಲಿನ ಅಂಗಡಿಯವಂತೆ ಬದುಕಿದೆವು. ಲಾಭ-ನಷ್ಟ ನಮಗೆ ಅಂಟಿಕೊಂಡಿತು. ಎರಡನೆಯವನಂತೆ ಇದ್ದಿದ್ದರೆ ಆಗ ನಿಷ್ಕಾಮ ಕರ್ಮ ಆಗುತ್ತಿತ್ತು. ಈಗ ಈ ಭಾರ ಹೊರಲು ಆಗುತ್ತಿಲ್ಲ. ಅವನನ್ನೇ ಮೊರೆ ಹೋಗಿ ಕೇಳುವುದು. "ದಯವಿಟ್ಟು ಈ ಸಾಲ ಮನ್ನಾ ಮಾಡು. ಈ ದುಷ್ಕರ್ಮ ಪರಿಹಾರ ಮಾಡು" ಎಂದು ಕೂಗುವುದು. 

ಅವನು ಒಪ್ಪಬಹುದು. ಒಪ್ಪಿಯಾನು. ಅವನೋ, "ಕರ್ತು೦, ಆಕರ್ತು೦, ಅನ್ಯಥಾ ಕರ್ತು೦ ಶಕ್ತ:". ಏನನ್ನು ಬೇಕಾದರೂ ಮಾಡಬಲ್ಲ. ಮಾಡಿದ್ದನ್ನು ಅಳಿಸಬಲ್ಲ. ಮತ್ತೇನನ್ನೋ ಮಾಡಬಲ್ಲ.  ಸಾಲ ಮನ್ನಾ ಮಾಡಬಹುದು. ಹೊತ್ತಿರುವ ಪಾಪ ಕರ್ಮಗಳ ರಾಶಿಯನ್ನು ಕ್ಷಣಾರ್ಧದಲ್ಲಿ ಸುತ್ತು ಭಸ್ಮ ಮಾಡಿ ಹೆಗಲಿನ ಭಾರದಿಂದ ಮುಕ್ತಿ ಕೊಡಬಹುದು. 

*****

ನಂಬುವವರು ನಂಬಬಹುದು. ಬಿಡುವವರು ಬಿಡಬಹುದು. ಇದು ಒಂದು ರೀತಿಯ ತರ್ಕ. ಅನೇಕರು ಪುನರ್ಜನ್ಮವನ್ನು ನಂಬುವುದಿಲ್ಲ. ದೇವರಿದ್ದಾನೆ ಅನ್ನುವುದನ್ನೂ ನಂಬುವುದಿಲ್ಲ. ಅವರವರಿಗೆ ಬಿಟ್ಟದ್ದು. 

ಎರಡನೇ ಅಂಗಡಿಯವನಂತೆ ಜೀವನ ನಡೆಸಿದವನಿಗೆ ಒಂದು ಖಚಿತವಾದ ಲಾಭ ಉಂಟು. ಈ ಜನ್ಮದಲ್ಲಿ ಬ್ಲಡ್ ಪ್ರೆಶರ್ ಚೆನ್ನಾಗಿರುತ್ತದೆ. ಊಟ ಸೇರುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ದಿನಗಳು ಚೆನ್ನಾಗಿ ಕಳೆಯುತ್ತವೆ. ಮುಂದಿನದನ್ನು ಮುಂದೆ ನೋಡಬಹುದು! 

Saturday, July 19, 2025

ಕೆಸರಿಂದ ಕೆಸರು ತೊಳೆದಂತೆ


ಮನುಷ್ಯನ ಅನೇಕ ಮತ್ತು ತೀರದ ಆಸೆಗಳಲ್ಲಿ ಜೀವನ ಸಂಪದ್ಭರಿತವಾಗಿರಬೇಕೆಂಬುದೂ ಒಂದು. ಸಕಲ ಸೌಭಾಗ್ಯಗಳೂ ಇರಬೇಕು. ಸರ್ವ ಸಂಪತ್ತುಗಳೂ ಸುತ್ತ-ಮುತ್ತ ತುಂಬಿರಬೇಕು. ಕುಟುಂಬದ ಸದಸ್ಯರೆಲ್ಲರೂ ಹೇಳಿದಂತೆ ಕೇಳುತ್ತಾ ಓಡಾಡಿಕೊಂಡಿರಬೇಕು. ದೊಡ್ಡ ಅಧಿಕಾರ ಇರಬೇಕು. ಸಮಾಜದಲ್ಲಿ ಮನ್ನಣೆ, ಗೌರವಗಳು ಸಿಗುತ್ತಿರಬೇಕು. ಹೀಗೆ ನಾನಾ ಬಗೆಯ ಅಸಂಖ್ಯ ಆಸೆಗಳು. 

ಅನೇಕ ಭಾಗ್ಯಗಳಲ್ಲಿ ಅಷ್ಟ ಐಶ್ವರ್ಯಗಳೂ ಸೇರಿದುವು. ಈ ಎಂಟರಲ್ಲಿ ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯಗಳು ಬೇಕಾದುವುಗಳ ಪಟ್ಟಿಯಲ್ಲಿ ಎಲ್ಲದರ ಮೇಲೆ ಕೂಡುತ್ತವೆ. ಆದರೆ ಆರೋಗ್ಯವಿದ್ದವರಿಗೆ ಕೆಲವೊಮ್ಮೆ ಆಯುಸ್ಸು ಇರುವುದಿಲ್ಲ. ಆಯುಸ್ಸು ಇದ್ದವರಿಗೆ ಬಹಳ ಅನಾರೋಗ್ಯ ಕಾಡುವುದು. ಆಯುಸ್ಸು ಮತ್ತು ಅರೋಗ್ಯ ಎರಡೂ ಇದ್ದವರಿಗೆ  ಬಡತನದ ಬವಣೆ. ಅಥವಾ ಇನ್ನೇನಾದರೂ ಒಂದಿಲ್ಲ ಎನ್ನುವ ಕೊರಗು. ಕೆಲವರಿಗೆ ಮಕ್ಕಳಿಲ್ಲ ಎನ್ನುವ ಚಿಂತೆ. ಮತ್ತೆ ಕೆಲವರಿಗೆ ಹೆತ್ತ ಮಕ್ಕಳು ಹತ್ತಿರ ಇಲ್ಲ ಅನ್ನುವ ವ್ಯಥೆ. ಮಕ್ಕಳು ಹತ್ತಿರ ಇರುವವರಿಗೆ ಅವರು ಯೋಗ್ಯರಲ್ಲ ಎನ್ನುವ ಯೋಚನೆಗಳು. ಹೀಗೆ ಏನಾದರೂ ಒಂದು ಕೊರತೆ.  

ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯಗಳು ಹಾಳಾಗಲು ಕಾರಣಗಳೇನು? ಈ ವಿಷಯವನ್ನು ಹಿಂದಿನ "ಸಂಪತ್ತು ಕಳೆಯುವ ಕಾರಣಗಳು" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ನೋಡಿದ್ದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.  ಶ್ರೀ ಗೋಪಾಲದಾಸರ "ಎನ್ನ ಬಿನ್ನಪ ಕೇಳು, ಧನ್ವಂತ್ರಿ ದಯ ಮಾಡು" ಎನ್ನುವ ದೇವರನಾಮದಲ್ಲಿ ಸೂಚಿತವಾದ ಈ ಕಾರಣಗಳ ಚರ್ಚೆ ನೋಡಿದ್ದೆವು. ಈ ಹಾಡಿನಲ್ಲಿ "ಕೆಸರಿನಿಂದ ಕೆಸರು ತೊಳೆದಂತೆ ಕರ್ಮದ ಪಥವು, ಅಸುನಾಥ ಹರಿಯೇ ಪೊರೆಯೊ" ಎನ್ನುವ ಅಭಿವ್ಯಕ್ತಿಯ ವಿಶೇಷ ವಿಷಯಗಳನ್ನು ಮುಂದೊಮ್ಮೆ ನೋಡೋಣ ಎಂದಿದ್ದೆವು. ಅದನ್ನು ಈಗ ಸ್ವಲ್ಪ ನೋಡೋಣ. 

*****

"ಕೆಸರಿನಿಂದ ಕೆಸರು ತೊಳೆದಂತೆ ಕರ್ಮದ ಪಥವು" ಅನ್ನುವುದರ ಅರ್ಥವೇನು? ಅದರ ಮೂಲ ಎಲ್ಲಿದೆ? ಯಾರಾದರೂ ಕೆಸರಿನಿಂದ ಕೊಳಕಾಗಿರುವ ವಸ್ತುವನ್ನು ಕೆಸರು ನೀರಿನಿಂದ ತೊಳೆಯುವ ತಪ್ಪು ಮಾಡುತ್ತಾರೆಯೇ? ಇವು ನಿಜವಾಗಿ ಕೇಳಲೇಬೇಕಾದ ಪ್ರಶ್ನೆಗಳು. 

ಯಾವುದೋ ಒಂದು ಕಾರಣಕ್ಕೆ ಬಟ್ಟೆ ಕೊಳಕಾಯಿತು ಅನ್ನೋಣ. ಬಿಳಿ ಬಟ್ಟೆ ಉಟ್ಟು ಹೊರಗಿನ ಕೆಲಸಕ್ಕೆ ಬಂದದ್ದಾಯಿತು. ಮಳೆ ಬಂತು. ಬಟ್ಟೆ ಕೊಳಕಾಯಿತು. ಯಾರೋ ಒಬ್ಬ ಸ್ಕೂಟರ್ ಸವಾರ ಮಳೆಯ ರಸ್ತೆಯಲ್ಲಿಯೇ ವೇಗವಾಗಿ ಹೋದ. ಅವನಿಗೆ ಅದೊಂದು ಆಟ. ನೀರು ಎರಚಿತು. ಬಟ್ಟೆ ಕೆಸರಿನಿಂದ ನೆನೆಯಿತು. ಈಗ ಮಾಡುವುದು? ಮನೆಗೆ ಹೋದಮೇಲೆ ಮೈ ಶುಚಿ ಮಾಡಿಕೊಂಡು, ಕೊಳೆಯ ಬಟ್ಟೆಯನ್ನು ತಿಳಿ ನೀರಿನಿಂದ ಒಗೆದು ಸ್ವಚ್ಛ ಮಾಡಬೇಕು. ಕೆಲವು ವೇಳೆ ಎಷ್ಟೇ ಸ್ವಚ್ಛ ಮಾಡಿದರೂ ಮೊದಲಿನಂತೆ ಬಟ್ಟೆ ಬಿಳಿ ಆಗುವುದಿಲ್ಲ. ಮೂರು-ನಾಲ್ಕು ಒಗೆತ ಆದಮೇಲೆ ಸರಿ ಹೋಗಬಹುದು. ಇಂತಹ ಸ್ಥಿತಿಯಲ್ಲಿ ಆ ಕೊಳೆಯ ಬಟ್ಟೆಯನ್ನು ಅದೇ ರಸ್ತೆಯ ಪಕ್ಕ ನಿಂತಿರುವ ಕೆಸರು ನೀರಿನಿಂದ ಒಗೆದರೆ ಹೇಗಾಗಬೇಡ? ಬಟ್ಟೆಗೆ ಮತ್ತಷ್ಟು ಕೆಸರು ಅಂಟಿಕೊಂಡು ಇನ್ನಷ್ಟು ರಾಡಿಯಾದೀತೇ ವಿನಃ ಸ್ವಚ್ಛವಂತೂ ಆಗುವುದಿಲ್ಲ. 

ಒಂದು ಗಾಜಿನ ಪಾತ್ರೆಯಲ್ಲಿ ಎಲ್ಲರಿಗೂ ಸುರೆ (ವೈನ್ ಅನ್ನೋಣ) ಹಂಚಿದ್ದಾರೆ. ಆ ಕಾರಣ ಅದಕ್ಕೆ ಸ್ವಲ್ಪ ಸುರೆ ಅಂಟಿಕೊಂಡಿದೆ. ಈಗ ಅದನ್ನು ಸ್ವಚ್ಛ ಮಾಡಬೇಕು. ಅದನ್ನು ಇನ್ನಷ್ಟು ಸುರೆ ಸುರಿದು ತೊಳೆದರೆ? ಅದು ಹೇಗೆ ಸ್ವಚ್ಛವಾದೀತು? ತಿಳಿಯಾದ ನೀರಿನಿಂದ ಮಾತ್ರ ಅದು ಶುದ್ಧವಾಗಬಲ್ಲದು. ಇಲ್ಲದಿದ್ದರೆ ಅದು ಇನ್ನಷ್ಟು ಸುರೆಯಲ್ಲಿ ಮುಳುಗೀತೇ ವಿನಃ ಶುದ್ಧವಾಗುವುದು ಸಾಧ್ಯವೇ ಇಲ್ಲ. 

ಇದು ಜೀವನದ ಒಂದು ಕಟು ಸತ್ಯ. 
*****

ಮಹಾಭಾರತದ ಪ್ರಸಂಗ. ಧರ್ಮಕ್ಷೇತ್ರ ಕುರುಕ್ಷೇತ್ರದ ಹದಿನೆಂಟು ದಿನಗಳ ಘನ ಘೋರ ಯುದ್ಧ ಮುಗಿದಿದೆ. ಹದಿನೆಂಟು ಅಕ್ಷೋಹಿಣಿ ಸೈನ್ಯ ನಾಶವಾಗಿದೆ. ಎಲ್ಲರ ಮನೆಯಲ್ಲೂ ಯಾರೋ ಒಬ್ಬರಾದರೂ ಯುದ್ಧದಲ್ಲಿ ಸತ್ತಿದ್ದಾರೆ. ಕೆಲವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಯುದ್ಧದ ನಂತರ ಇಲ್ಲವಾಗಿದ್ದಾರೆ. ಎಲ್ಲೆಲ್ಲೂ ಸೂತಕದ ಛಾಯೆ. ದ್ರೋಣ, ಕರ್ಣ, ಅಭಿಮನ್ಯು, ನೂರು ಮಂದಿ ಕೌರವರು, ಶಲ್ಯ, ಶಕುನಿ, ಮತ್ತನೇಕ ವೀರರು ಸ್ವರ್ಗಸ್ಥರಾದರು. 

ಮುಂದಿನ ಜೀವನ ನಡೆಯಬೇಕಲ್ಲ. ಯುಧಿಷ್ಠಿರನಿಗೆ ಪಟ್ಟಾಭಿಷೇಕವಾಯಿತು. ಅಷ್ಟು ದುಃಖದಲ್ಲಿ ಒಂದಷ್ಟು ಸುಖ. ಜೀವನವೇ ಹೀಗೆ. ಸುಖ-ದುಃಖಗಳು ಜೊತೆ ಜೊತೆ. ಅದಕ್ಕೇ ಯುಗಾದಿಯಂದು ಬೇವು-ಬೆಲ್ಲ ತಿನ್ನುವುದು. ಪಟ್ಟಾಭಿಷೇಕದ ಸಂಭ್ರಮದಲ್ಲೂ ಧರ್ಮರಾಯನಿಗೆ ಸಂತೋಷವಿಲ್ಲ. ಇಷ್ಟೊಂದು ಮಂದಿ ಬಂಧು-ಬಾಂಧವರನ್ನು, ಅದೆಷ್ಟೋ ಅಣ್ಣ-ತಮ್ಮಂದಿರ ಜಗಳಕ್ಕೆ ಸಂಬಂಧಿಸದ ಅಮಾಯಕರನ್ನು ಸೇರಿಸಿ, ಕೊಂದು ಸಂಪಾದಿಸಿದ ಸಾಮ್ರಾಜ್ಯ. ಇಲ್ಲಿ ತಲೆಯ ಮೇಲೆ ಕಿರೀಟ ಬಂದು ಕೂತಿದೆ. ಅಲ್ಲಿ ತಾತ ಭೀಷ್ಮರು ಚೂಪು ಬಾಣಗಳ ಮಂಚದ ಮೇಲೆ ಮಲಗಿದ್ದಾರೆ. ಯಾವ ಸುಖಕ್ಕೆ ಈ ರಾಜ್ಯ-ಕೋಶಗಳು? ಅವನಿಗೆ ತಡೆಯಲಾಗದ ದುಗುಡ-ದುಮ್ಮಾನ. ಪಾರ್ಥನಿಗೆ ಯುದ್ಧಕ್ಕೆ ಮೊದಲು ಕ್ಲೈಬ್ಯ ಬಂದಿತು. ಧರ್ಮರಾಯನಿಗೆ ಯುದ್ಧದ ನಂತರ ಬಂದಿದೆ. 

ಶ್ರೀ ಕೃಷ್ಣನ ಮುಂದೆ ದುಃಖ ತೋಡಿಕೊಳ್ಳುತ್ತಾನೆ. ಶ್ರೀಕೃಷ್ಣ ಅವನನ್ನು ಸಮಾಧಾನ ಪಡಿಸುತ್ತಾನೆ. ಒಂದು ಚಿಕ್ಕ ಗೀತೋಪದೇಶ ಅವನಿಗೂ ಆಗುತ್ತದೆ. ಆದರೆ ಯುಧಿಷ್ಠಿರನಿಗೆ ಸಮಾಧಾನವಿಲ್ಲ. ಶ್ರೀಕೃಷ್ಣನು ಅವನಿಗೆ ಅಶ್ವಮೇಧ ಯಾಗ ಮಾಡಲು ಸೂಚಿಸುತ್ತಾನೆ. ಅದರಿಂದ ಅವನು ಯುದ್ಧದಿಂದ ಬಂದಿದೆ ಅಂದುಕೊಂಡ ಪಾಪಗಳು ತೊಳೆದುಹೋಗುತ್ತವೆ. ಹೀಗೆಂದು ಯಾಗ ಮಾಡಲು ಸೂಚನೆ. 

ಇದಕ್ಕೆ ಉತ್ತರವಾಗಿ ಧರ್ಮರಾಯನು ಹೇಳಿದ್ದನ್ನು ಶ್ರೀಮದ್ ಭಾಗವತದ (1.8.52) ಶ್ಲೋಕ ಹೀಗೆ ಹೇಳುತ್ತದೆ:

ಯಥಾ ಪಂಕೇನ ಪಂಕಾಂಭ: 
ಸುರಯಾ ವಾ ಸುರಾಕೃತಂ 
ಭೂತಹತ್ಯಂ ತಥೈವಕಂ
ನ್ ಯಜ್ನಯಿ ಮರ್ತುಮರ್ಹತಿ    
 
 
"ಹೇಗೆ ಕೆಸರನ್ನು ಕೆಸರಿನಿಂದ ತೊಳೆಯಲಾಗದೋ, ಮತ್ತು ಹೇಗೆ ಮದ್ಯಪಾತ್ರೆಯನ್ನು ಮದ್ಯದಿಂದ ಶುದ್ಧಿಮಾಡಲಾಗದೋ, ಹಾಗೆಯೇ ಮನುಷ್ಯರನ್ನು ಕೊಂದ ಪಾಪಗಳನ್ನು ಪ್ರಾಣಿಗಳನ್ನು ಬಲಿ ಕೊಟ್ಟು ಕಳೆದುಕೊಳ್ಳಲಾಗದು" 

ಧರ್ಮರಾಯನ ಈ ದುಃಖ ಶಮನವಾಗುವ ಮುನ್ನ ರಣರಂಗದಲ್ಲಿ ಶರಶಯ್ಯೆಯಲ್ಲಿ ಮಲಗಿರುವ ಭೀಷ್ಮರನ್ನು ನೋಡಲು ಎಲ್ಲರೂ ಹೋಗುತ್ತಾರೆ. ಅಲ್ಲಿ ಭೀಷ್ಮರು ಧರ್ಮರಾಯನಿಗೆ ಅನೇಕ ವಿಷಯಗಳ ಬಗ್ಗೆ ವಿವಿಧ ರೀತಿಯಲ್ಲಿ ತಿಳಿಸಿಕೊಡುತ್ತಾರೆ. ನಂತರ ಅವನು ಅಶ್ವಮೇಧ ಯಾಗ ಮಾಡುತ್ತಾನೆ. ಈ ವಿವರಗಳೆಲ್ಲ ಮಹಾಭಾರತದಲ್ಲಿ ಅಶ್ವಮೇಧ ಪರ್ವದಲ್ಲಿ ಸಿಗುತ್ತವೆ. 

 ***** 

ಹರಿದಾಸರ ಪದ, ಸುಳಾದಿ, ಉಗಾಭೋಗಗಳಲ್ಲಿ ಬರುವ ಪದಪುಂಜಗಳಲ್ಲಿ ವೈದಿಕ ವಾಂಗ್ಮಯದ ತಿರುಳಿನ ಸೂಚನೆಗಳು ಇರುತ್ತವೆ. ನೋಡುವುದಕ್ಕೆ, ಕೇಳುವುದಕ್ಕೆ ಆಡುಭಾಷೆಯ ಮಾತಾಗಿದ್ದರೂ ಅವುಗಳ ಹಿಂದೆ ಗಾಢವಾದ ಚಿಂತನೆ ಇರುವುದು. ಈ "ಕೆಸರಿನಿಂದ ಕೆಸರು ತೊಳೆದಂತೆ" ಅನ್ನುವುದು ಹೀಗೆಯೇ ಶ್ರೀಮದ್ ಭಾಗವತದ ಮೇಲೆ ಹೇಳಿದ ಶ್ಲೋಕದ ಸಾರಾಂಶವನ್ನು ಹೇಳುವ ರೀತಿ. ವಿಶಾಲ ವಾಂಗ್ಮಯದ ಆಳವಾದ ಪರಿಚಯ ಆಗುತ್ತಿದ್ದಂತೆ ಅವೇ ಪದ, ಸುಳಾದಿಗಳ ವಿಶೇಷಾರ್ಥಗಳು ತೆರೆದುಕೊಳ್ಳುತ್ತವೆ.  

ಪ್ರತಿ ಜೀವಿ ಹುಟ್ಟುವಾಗ ಅವನ (ದೇಹ ಗಂಡಾಗಿರಬಹುದು ಅಥವಾ ಹೆಣ್ಣಾಗಿರಬಹುದು) ಜೊತೆ ಪರಮಾತ್ಮನೂ ಮತ್ತು ಮುಖ್ಯ ಪ್ರಾಣನು ಜನಿಸುತ್ತಾರೆ. ಅವರಿಬ್ಬರೂ ಇರುವವರೆಗೆ ಜೀವನ ಈ ದೇಹದಲ್ಲಿಯ ಜೀವನಯಾತ್ರೆ. ಅವರು ದೇಹ ಬಿಟ್ಟು ಹೊರಟರೆ ವ್ಯಾಪಾರ ಮುಗಿಯಿತು. (ಸಾಮಾನ್ಯ ವ್ಯವಹಾರದಲ್ಲಿ ವ್ಯಾಪಾರ ಎಂದರೆ ಕೊಡು-ಕೊಳ್ಳುವಿಕೆಯ ರೀತಿ, ವ್ಯಾಪಾರಕ್ಕೆ ಇಲ್ಲಿ ಚಟುವಟಿಕೆ (ಆಕ್ಟಿವಿಟಿ) ಎಂದು ಅರ್ಥ).  ಪ್ರಾಣವಾಯು (ಅಸು) ಆಡುವುದು ನಿಂತರೆ "ಅಸು ನೀಗಿದರು" ಎನ್ನುತ್ತಾರೆ. ಆದ್ದರಿಂದ ಆ ಪರಮಾತ್ಮನಿಗೆ "ಅಸುನಾಥ"ಎಂದು ಹೇಳುವುದು. ಉಸಿರು ಎನ್ನುವ ಆಸುವಿಗೆ ಅಥವಾ ಪ್ರಾಣನಿಗೆ ಒಡೆಯ ಆದುದರಿಂದ ಅಸುನಾಥ, ಪ್ರಾಣನಾಥ ಅಥವಾ ಪ್ರಾಣೇಶ. 

*****

"ದುಷ್ಕರ್ಮ ಪರಿಹರಿಸೋ" ಅನ್ನುವುದನ್ನು ಮತ್ತು ಅಂಟಿಕೊಂಡ ಕೊಳೆಯನ್ನು ತೊಳೆಯಲು ಏನು ಮಾಡಬೇಕೆನ್ನುವುದನ್ನು ಮುಂದಿನ ಒಂದು ಸಂಚಿಕೆಯಲ್ಲಿ ನೋಡೋಣ.