Showing posts with label Jyotishya. Show all posts
Showing posts with label Jyotishya. Show all posts

Wednesday, July 8, 2026

ಜ್ಯೋತಿಷ್ಯ, ವಿಮಾನ ಮತ್ತು ಜೀವನ


ಕಳೆದ ಮೂರು ಸಂಚಿಕೆಗಳಲ್ಲಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕೆಲವು ಸಂಗತಿಗಳನ್ನು ನೋಡಿದೆವು. "ಜ್ಯೋತಿಷ್ಯದಲ್ಲಿ ನಂಬಿಕೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ಈ ವಿಷಯದಲ್ಲಿ ಅವರವರ ನಂಬಿಕೆ-ಅಪನಂಬಿಕೆ ಬಗ್ಗೆ ವಿಚಾರ ನಡೆದಿತ್ತು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆ ಓದಬಹುದು. ಅದರ ಹಿಂದಿನ ಸಂಚಿಕೆಗಳ ಕೊಂಡಿಗಳು ಅಲ್ಲಿ ಸಿಗುತ್ತವೆ. 

ಯಾವುದೋ ಒಂದು ಜನಗಳ ಗುಂಪು. ಒಬ್ಬರಿಗೊಬ್ಬರು ಪರಿಚಯ ಇರಬಹುದು, ಇಲ್ಲದಿರಬಹುದು. ಬಸ್ ನಿಲ್ದಾಣದಲ್ಲಿರಬಹುದು. ಮದುವೆ ಮನೆಯಲ್ಲಿರಬಹುದು. ಕ್ರಿಕೆಟ್ ಪಂದ್ಯದ ಊಟದ ವಿರಾಮದ ವೇಳೆಯಲ್ಲಿರಬಹುದು. ಸಂಗೀತ ಕಚೇರಿ ಪ್ರಾರಂಭ ತಡವಾದ ಸಮಯದಲ್ಲಿ ಇರಬಹುದು. ಇಂಥದೇ ಸಮಯ, ಸ್ಥಳ, ಕೂಟ ಎಂದೇನಿಲ್ಲ. ಯಾರೋ ಒಬ್ಬರು ಮೈ ಮುರಿದು ಅವರದೇ ಅಂಗೈ ನೋಡಿಕೊಂಡರೂ ಅವರ ಮುಂದೆ ಇನ್ನೈವರು ಅಂಗೈ ಚಾಚುವರು! ಅಪಘಾತದಲ್ಲಿ ಕೈ ಕಳೆದುಕೊಂಡವರು ಬಹಳ ಬೇಸರಿಸುವರು. ಮುಖ್ಯವಾದ ಒಂದು ಅಂಗವಾದ "ಕೈ" ಉಪಯೋಗ ಇಲ್ಲವೆನ್ನುವುದಕ್ಕಿಂತಲೂ ಮಿಗಿಲಾಗಿ ಕೈ ತೋರಿಸಿ ಭವಿಷ್ಯ ತಿಳಿಯುವ ಅವಕಾಶ ಹೋಯಿತು ಅನ್ನುವ ದುಃಖ. "ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡಂತೆ" ಅನ್ನುವ ಗಾದೆ ಗೊತ್ತಿರುವವರೂ ಎರಡೂ ಕೈ ಚಾಚುವರು. ಇದು ಮನುಜ ಸಹಜ ಗುಣ. ಕಾಣದಿರುವ ನಾಳಿನ ಜೀವನ ಹೇಗಿದೆ ಎನ್ನುವುದನ್ನು ಇಂದೇ ತಿಳಿಯುವ ಹಂಬಲ. 

"ಹಸ್ತ ಸಾಮುದ್ರಿಕ" ಅನ್ನಬಹುದು. "ಪ್ರಶ್ನೆ" ಕೇಳಿ ಉತ್ತರ ಪಡೆದು ಸಮಸ್ಯೆ ಪರಿಹರಿಸಿಕೊಳ್ಳುವ ಕಾತರ ಇರಬಹುದು. "ಕವಡೆ ಶಾಸ್ತ್ರ" ಆಗಬಹುದು. "ಕುಂಡಲಿ" ತೋರಿಸಿ ಹಿಂದೆ ನಡೆದದ್ದು, ಈಗ ನಡೆಯಬೇಕಾದದ್ದು, ಮುಂದೆ ನಡೆಯಬಹುದಾದದ್ದು, ಇವೆಲ್ಲವನ್ನೂ ಚಾಚೂ ತಪ್ಪದೆ ತಿಳಿದುಕೊಂಡು ನಿರಾಳವಾಗುವ ಬಯಕೆಗಳು ತೀರಿಸುವವನಿರಬಹುದು. ರಸ್ತೆಯಲ್ಲಿ ಚಾಪೆ ಹಾಸಿಕೊಂಡು ಕುಳಿತಿರುವ "ಗಿಣಿಶಾಸ್ತ್ರ" ಪಾರಂಗತನಿರಬಹುದು. ಮನೆಯ ಮುಂದೆ ಬಂದು ನಿಂತ "ಬುಡುಬುಡಿಕೆ" ವ್ಯಕ್ತಿ ಇರಬಹುದು. ಮೊದಲೇ ಸಮಯ ಗೊತ್ತುಪಡಿಸಿಕೊಂಡು (ಅಪಾಯಿಂಟ್ಮೆಂಟ್ ಪಡೆದುಕೊಂಡು) ಕಾಣಬೇಕಾದ ಕಂಪ್ಯೂಟರ್ ತಜ್ಞ ಆಧುನಿಕ "ಅಸ್ಟ್ರಾಲಜರ್" ಆಗಬಹುದು.  ಅವನ ಭವಿಷ್ಯವೇ ಗೊತ್ತಿಲ್ಲದೇ ತೊಳಲಾಡುತ್ತಿರುವ "ಅಜ್ಞ" ಆದರೂ ಆಗಬಹುದು. ಅಲ್ಲಿ ಹೋದವರ ಮನಸ್ಸಿನಲ್ಲಿ ತಿಳಿಯುವ ಕುತೂಹಲ ಒಂದೇ ರೀತಿಯದು. 

ಅಂದಂತೆ, ಈ "ಪಾರಂಗತ" ಅನ್ನುವ ಶಬ್ದಕ್ಕೆ ಅರ್ಥ ಏನು? ಒಂದು ವಿಶಾಲ ಜಲರಾಶಿ ಇದೆ. ಸಮುದ್ರ ಅನ್ನಿ. ಕಣ್ಣು ನಮಗೆ ತೋರಿಸುವವರೆಗೆ ನೀರೇ ನೀರು. ಜಲರಾಶಿಯ ಆ ಕಡೆ ಏನು ಇದೆ? ನಮಗೆ ಗೊತ್ತಿಲ್ಲ. ಯಾರೋ ಒಬ್ಬ ಅಲ್ಲಿ, ಅಷ್ಟು ದೂರ, ನಮಗೆ ಗೊತ್ತಿಲದಷ್ಟು ದೂರ, ಹೋಗಿ ನೋಡಿಕೊಂಡು ಬಂದಿದ್ದಾನೆ. ಅವನು ನಾವು ಕಾಣದ ಆ ದಡ ಕಂಡವನು. "ಪಾರ" ಅಂದರೆ ಆ ಕಡೆಯ ದಡ. ಕಾಣದ ತೀರ.  "ಪಾರಂ ದೃಷ್ಟವಾನ್". ಆ ದಡಕ್ಕೆ ಹೋಗಿ ನೋಡಿ ಬಂದವನು. ಪಾರಂ ಗತವಾನ್. ಆದ್ದರಿಂದ "ಪಾರಂಗತ". ("ಪಾರುಗಾಣಿಸೋ ಹರಿಯೇ!" ಎಂದು ಕೂಗುವುದೂ ಅದಕ್ಕೇ. ಕಾಣದ ತೀರವನ್ನು ತಲುಪಿಸಿ, ಮಧ್ಯದಲ್ಲಿ ಮುಳುಗುವುದನ್ನು ತಪ್ಪಿಸು ಎಂದು ಬೇಡುವುದು).

*****

ಮುಂದಿನ ಚರ್ಚೆಯ ವಿಷಯ ಅರ್ಥವಾಗುವುದಕ್ಕೆ ಸ್ವಲ್ಪ ವಿಮಾನಗಳ ಹೆಚ್ಚಿನ ತಿಳುವಳಿಕೆ ಅಗತ್ಯ. ಒಂದು ದೊಡ್ಡ ಬೋಯಿಂಗ್ ಅಥವಾ ಏರ್-ಬಸ್ ವಿಮಾನದಲ್ಲಿ ಅರವತ್ತು ಲಕ್ಷ ಮೀರಿದ (ಆರು ಮಿಲಿಯನ್) ಬಿಡಿ ಭಾಗಗಳು ಇರುತ್ತವಂತೆ. ಬಿಡಿ ಭಾಗಗಳು ಅನೇಕ ಫ್ಯಾಕ್ಟರಿಗಳಲ್ಲಿ ತಯಾರಾಗುತ್ತವೆ. ಕಡೆಯಲ್ಲಿ ಎಲ್ಲವೂ ಒಂದು ಕಡೆ ಬಂದು ಸೇರುತ್ತವೆ. ಇಂತಹ ಸಂಗಮ ಸ್ಥಳಕ್ಕೆ "ಕಡೆಯ ಜೋಡಣಾ ಸಾಲು" ಅನ್ನುತ್ತಾರೆ. ಇಂಗ್ಲಿಷ್ನಲ್ಲಿ Final Assembly Line (FAL). ಬೋಯಿಂಗ್ ಸಂಸ್ಥೆಯ ಎವೆರೆಟ್ಟ್ (Everette, near Seattle, WA, USA) ಫ್ಯಾಕ್ಟರಿ ಮತ್ತು ಕಳೆದ ವರ್ಷ ಅಲಬಾಮಾ ರಾಜ್ಯದ ಮೊಬೈಲ್ (Mobile, Alabama, USA) ಎಂಬಲ್ಲಿ ವಿಸ್ತರಿಸಲಾದ ಏರ್-ಬಸ್ ಫ್ಯಾಕ್ಟರಿ, ಈ ಸ್ಥಳಗಳಲ್ಲಿ ನೋಡಬಂದ ವೀಕ್ಷಕರಿಗೆ ಇಡೀ ಜೋಡಣೆ ತೋರಿಸುವ ವ್ಯವಸ್ಥೆ (Visitor tours) ಇದೆ. (ಏರ್-ಬಸ್ ಸಂಸ್ಥೆಗೆ ಯೂರೋಪಿನಲ್ಲಿ ಸಹ ಈ ರೀತಿ ಇದೆ). ಹೆಚ್ಚಿನ ವಿವರಗಳಿಗೆ ಇಂಗ್ಲಿಷ್ನಲ್ಲಿ ಇರುವ ಲೇಖನ ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಹೀಗೆ ಫ್ಯಾಕ್ಟರಿಯ ಜೋಡಣಾ ಸಾಲಿನಲ್ಲಿ ಒಮ್ಮೆಗೇ ಮೂರು ವಿಮಾನಗಳು ತಯಾರಾಗುತ್ತಿರುತ್ತವೆ. ಪ್ರತಿಯೊಂದೂ ಮೂರು ಮುಖ್ಯ ಭಾಗಗಳಾಗಿ ಬಂದಿರುತ್ತವೆ. ಇವುಗಳನ್ನು ಒಂದು ಚಲಿಸುವ ವೇದಿಕೆಯ (moving platform) ಮೇಲೆ ಇಟ್ಟಿರುತ್ತಾರೆ. ಮೂರು ಪಾಳಿಯಲ್ಲಿ ಕೆಲಸಗಾರರು ಹಗಲು-ರಾತ್ರಿ ಕೆಲಸ ಮಾಡುತ್ತಾರೆ. ರಜೆ ಎಂಬುದಿಲ್ಲ. ಮೂರು ಭಾಗಗಳಾಗಿ ಬಂದದ್ದು ಈ ಕೊನೆಯಿಂದ ವೇದಿಕೆಯ ಮೇಲೆ ನಿಧಾನವಾಗಿ ಚಲಿಸುತ್ತಿದ್ದಂತೆ ಎಂಜಿನು, ರೆಕ್ಕೆಗಳ ಸೇರುವಿಕೆಯ ನಂತರ, ಮೂರನೆಯ ದಿನ ಆ ಕೊನೆಯಲ್ಲಿ ತಯಾರಾಗಿ ನಿಂತು, ಒಟ್ಟಿಗೆ ಹಾರಿ, ಬೇರೆ ಬೇರೆ ದಿಕ್ಕಿನಲ್ಲಿ ಚಲಿಸುತ್ತಾ, ಅವನ್ನು ಕೊಂಡುಕೊಂಡಿರುವ ಸಂಸ್ಥೆಯ ದೇಶಕ್ಕೆ ಹೋಗುತ್ತವೆ!  

ಹೀಗೆ ಒಂದೇ ಸಲ ತಯಾರಾದ ಮೂರು ವಿಮಾನಗಳು ಒಂದೇ ಸಮಯದಲ್ಲಿ ಹುಟ್ಟಿದ ಮೂರು ಮಕ್ಕಳಂತೆ. ಅವು ಮೂರು ಹಾರಿ ಹೋಗುವ ದಿನ ಫ್ಯಾಕ್ಟರಿಯಲ್ಲಿ ಒಂದು ಹಬ್ಬದ ವಾತಾವರಣ! ಅವುಗಳಿಗೆ ಮನುಷ್ಯರಿಗೆ ಬರೆದಂತೆ ಕುಂಡಲಿ ಬರೆದರೆ ಮೂರಕ್ಕೂ ಒಂದೇ ಕುಂಡಲಿ ಇರಬೇಕು. ಒಂದು ಬ್ಯಾಚಿನ ಮೂರು ವಿಮಾನಗಳಿಗೆ ಒಂದೇ ವಿವರಗಳು: ಒಟ್ಟು ತೂಕ, ಎಂಜಿನ್ನುಗಳ ಶಕ್ತಿ, ಒಟ್ಟು ಪ್ರಯಾಣಿಕರ ಕುರ್ಚಿಗಳ ಸಂಖ್ಯೆ, ಇಂಧನ ಟ್ಯಾಂಕುಗಳ ಗಾತ್ರ, ಹಾರುವ ವೇಗ ಕ್ಷಮತೆ, ಹೀಗೆ ಎಲ್ಲ ವಿವರಗಳು. "ತ್ರಿವಳಿಗಳು" ಎಂದು ಧಾರಾಳವಾಗಿ ಕರೆಯಬಹುದು. 

*****

ಹಿಂದಿನ ಸಂಚಿಕೆಯಲ್ಲಿ ನಡೆಯುತ್ತಿದ್ದ ತಂದೆ-ಮಗನ ಸಂವಾದ ಮುಂದುವರೆಯಿತು.

"ನಿನ್ನೆ ಭವಿಷ್ಯ ಹೇಳುವ ಜ್ಯೋತಿಷಿಯ ವಿವೇಚನೆಯ ಬಗ್ಗೆ ಮಾತಾಯಿತು"
"ಹೌದು. ಅದರ ಬಗ್ಗೆ ಈಗ ಏನು?"
"ಈ ವಿವೇಚನೆ ಅನ್ನುವುದು ಹೇಗೆ ತಿಳಿಯುವುದು?"
"ಒಂದೇ ಫ್ಯಾಕ್ಟರಿಯಲ್ಲಿ, ಒಂದೇ ದಿನ ತಯಾರಾದ ಮೂರು ಒಂದೇ ರೀತಿಯ ವಿಮಾನಗಳನ್ನು ತೆಗೆದುಕೊಳ್ಳೋಣ. ತಯಾರಾಗಿ ಕಾರ್ಖಾನೆಯಿಂದ ಹೊರಬಂದ ದಿನ ಎಲ್ಲವೂ ಸಮ ಸಮ. ಅಲ್ಲವೇ?"
"ಹೌದು"
"ಅವುಗಳ ಪರಿಪೂರ್ಣ ಸಾಮ್ಯತೆ ಅಲ್ಲಿಗೆ ಮುಗಿಯಿತು. ಮುಂದಿನ ನಡಾವಳಿ ಒಂದೇ ರೀತಿ ಇರುವುದಿಲ್ಲವಲ್ಲ"
"ಹೌದು"
"ಒಂದು ವಿಮಾನ ನಿಲ್ದಾಣದಿಂದ ಪೂರ್ವಕ್ಕೆ ಹಾರಿತು. ಮತ್ತೊಂದು ಪಶ್ಚಿಮಕ್ಕೆ. ಮೂರನೆಯದು ಉತ್ತರಕ್ಕೆ"
"ಇರಬಹುದು"
"ಪೂರ್ವದಲ್ಲಿ ಸುಗಮ ಹವಾಮಾನ. ಅನುಕೂಲ ವಾತಾವರಣ. ಒಳ್ಳೆಯ ಅನುಚರ ವಾಯು. ಇಂಗ್ಲಿಷಿನಲ್ಲಿ Tail Wind"
" ಹಾರಾಟ ಸುಗಮವಾಗಿರುತ್ತದೆ. ಅದರ ವೇಗದ ಜೊತೆ ಗಾಳಿಯ ಸಹಕಾರ ಸಿಕ್ಕಿದೆ"
"ಪಶ್ಚಿಮಕ್ಕೆ ಹಾರಿದ ವಿಮಾನಕ್ಕೆ ಕೂಡ ಸುಗಮ ಹವಾಮಾನ ಸಿಕ್ಕಿದೆ. ಆದರೆ ಅನುಚರ ವಾಯು ಇಲ್ಲ. ಬದಲಾಗಿ ಪ್ರತಿಕೂಲ ವಾಯು. Heavy Head Wind"
"ಮೊದಲಿನ ವಿಮಾನದಷ್ಟೇ ದೂರ ಕ್ರಮಿಸಲು ಹೆಚ್ಚಿನ ಸಮಯ ಬೇಕು. ಪ್ರಯಾಸ ಸಹ ಜಾಸ್ತಿ. ಹೆಚ್ಚು ಇಂಧನ ಖರ್ಚಾಗುತ್ತದೆ" 
"ಉತ್ತರಕ್ಕೆ ಹಾರಿದ ವಿಮಾನ ಚಂಡಮಾರುತ ತೀವ್ರವಾಗಿರುವ ಹಾದಿಯಲ್ಲಿ ಸಾಗಬೇಕು"
"ಅದೊಂದು ಏರುಪೇರಿನ ಪ್ರಯಾಣ. Bumpy Ride. ಎಲ್ಲ ಕಾಲವೂ ಸೀಟ್ ಬೆಲ್ಟ್ ಕಟ್ಟಿಕೊಂಡೇ ಕೂತಿರಬೇಕು"
"ಅಪಘಾತಗಳಿಗೆ ಹೆಚ್ಚಿನ ಅವಕಾಶ. ಅಲ್ಲವೇ?"
"ಖಂಡಿತ"
"ಜ್ಯೋತಿಷ್ಯದಲ್ಲಿಯೂ ಹಾಗೆಯೇ. ಕೇವಲ ಜನ್ಮ ಕುಂಡಲಿಗಳಿಂದ ಪೂರ್ತಿ ಫಲ ಹೇಳಬಾರದು"
"ಅಂದರೆ?"
"ಜನ್ಮ ಕುಂಡಲಿ ಹುಟ್ಟಿದ ಸಮಯದಲ್ಲಿ ಗ್ರಹಗಳ ಬಲಾಬಲ ಹೇಳುತ್ತದೆ. ಅವುಗಳ ಈಗಿನ ಸ್ಥಿತಿ ಏನು? ಅದನ್ನು "ಗೋಚಾರ" ಅನ್ನುತ್ತಾರೆ. ಇದನ್ನೂ ಗಮನಿಸಬೇಕು"
"ಅಂದರೆ ಹುಟ್ಟಿನ ಕುಂಡಲಿ ಜೊತೆಗೆ ಈಗಿನ ಗೋಚರ ಫಲವನ್ನೂ ಸಾಮ್ಯ ಮಾಡಬೇಕು"
"ಹೌದು"

ಜ್ಯೋತಿಷ್ಯ ಫಲ ಹೇಳಲು ಇಷ್ಟೆಲ್ಲಾ ಬೇಕು! 

*****

"ಇವೆರಡು ಸರಿಯಾಗಿ ನೋಡಿದರೆ ಆಯಿತು"
"ಇಷ್ಟೇ ಅಲ್ಲ. ಇನ್ನೂ ಒಂದಿದೆ"
"ಅದೇನು?"
"ಪ್ರತಿ ಜೀವಿಯ ಮೇಲೂ ಅನ್ಯರ ಪ್ರಭಾವ ಇರುತ್ತದೆ"
"ಇರಬಹುದು. ಅದಕ್ಕೂ ಇದಕ್ಕೂ ಏನು ಸಂಬಂಧ?"
"ಅಶ್ವಪತಿ ಮಹಾರಾಜನಿಗೆ ಮಗ ಹುಟ್ಟಿದಾಗ ಜ್ಯೋತಿಷ್ಕರು ಮಗು ಅಲ್ಪಾಯು ಎಂದು ಹೇಳಿದರು"
"ಸರಿ"
"ಅವನ ಹೆಸರು ಸತ್ಯವಾನ. ಆದರೆ ಇದನ್ನು ತಿಳಿದೂ ಸಾವಿತ್ರಿ ಹಠ ಹಿಡಿದು ಅವನನ್ನು ಮದುವೆ ಆದಳು"
"ಹೌದು"
"ಅವಳು "ದೀರ್ಘ ಸುಮಂಗಲಿ" ಯೋಗ ಇದ್ದವಳು"
"ಮುಂದೆ?"
"ಯಮನೊಡನೆ ಹೋರಾಡಿ ಗಂಡನನ್ನು ಬದುಕಿಸಿಕೊಂಡಳು"
"ಅಂದರೆ?"
"ಅನೇಕರಿಗೆ ತಂದೆ-ತಾಯಿ, ಹೆಂಡತಿ, ಮಕ್ಕಳು, ಅಣ್ಣ-ತಮ್ಮಂದಿರು, ಮುಂತಾದ ಕಡೆಗಳಿಂದ ವಿಶೇಷ ಸಹಾಯ ಸಿಗುತ್ತದೆ. ಹಾಗೆಯೇ ಕೆಲವರ ಕಡೆಯಿಂದ ಹೆಚ್ಚಿನ ತೊಂದರೆ ಕೂಡ ಆಗಬಹುದು"
"ಇದರ ಸಮನ್ವಯ ಹೇಗೆ?"
"ಜ್ಯೋತಿಷ್ಯ ಫಲ ಹೇಳುವುದು ಕೇವಲ "ಪುಸ್ತಕದ ಬದನೇಕಾಯಿ" ಎಂಬಂತೆ ಆಗಬಾರದು. ಫಲ ಹೇಳುವವನಿಗೆ ಚೆನ್ನಾದ ಲೌಕಿಕ ಜ್ಞಾನ ಇರಬೇಕು"

ಇನ್ನೂ ಹೆಚ್ಚಿನ ಆಳಕ್ಕೆ ಇಳಿಯುವ ಅವಶ್ಯಕತೆ ಇದೆ!

*****

"ಮೂರು ವಿಮಾನಗಳನ್ನು ಮತ್ತೆ ತೆಗೆದುಕೊಳ್ಳೋಣ"
"ಮತ್ತಿನ್ನೇನು?"
"ಒಂದರ ಪೈಲಟ್ಗಳು ಇನ್ನೂ ಹೊಸಬರು. ಮತ್ತೊಂದರವರು ನುರಿತವರು. ಮೂರನೆಯವರು ಮೊದಲ ಬಾರಿ ಸ್ವತಂತ್ರವಾಗಿ ವಿಮಾನ ಚಾಲನೆ ಮಾಡುತ್ತಿದ್ದಾರೆ"
"ಇದು ಬಹಳ ಗಾಢವಾದ ಪರಿಣಾಮ ಮಾಡುತ್ತದೆ"
"ಜೊತೆಗೆ ಇಳಿಯುವ ನಿಲ್ದಾಣದ ಕಾರ್ಯ ಕ್ಷಮತೆ, ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ಸಹಕಾರ, ಮುಂತಾದುವೂ ಮುಖ್ಯ ಆಗುತ್ತವೆ. ಅಲ್ಲವೇ?"
"ಹೌದು"
"ಹತ್ತು ರೂಪಾಯಿ ಪುಸ್ತಕ ಕೊಂಡು, ಐದು ಸಲ ಓದಿ, ಜಾತಕ ಫಲ ಹೇಳಬಾರದು"
"ಅಂದರೆ?"
"ಇನ್ನೂ ಅನೇಕ ಸೂಕ್ಷ್ಮಗಳು ಇರುತ್ತವೆ. ನಂಬಿಕೆ ಇದ್ದರೆ ಕ್ರಮವಾಗಿ ಅಭ್ಯಾಸ ಮಾಡಬೇಕು"
"ಹುಂ"
"ತಿಳಿದವರೊಡನೆ ಒಡನಾಡಿ ಕಲಿಯಬೇಕು"
"ಗ್ರಹ ಸಮಯ ಎಂದೊಂದು ಉಂಟು. ಅದನ್ನೂ ನೋಡಬೇಕು"
"ಅಂದರೆ?"
"ಇಲ್ಲಿ ಇಬ್ಬರಿದ್ದಾರೆ. ಇಬ್ಬರಿಗೂ ಸೋದರಮಾವನ ಕಡೆಯಿಂದ ವಿಶೇಷ ಸಹಾಯ ಎಂದಿದೆ"
"ಸರಿ"
"ಒಬ್ಬನ ಸೋದರಮಾವ ಈಗ ಮಂತ್ರಿ ಆಗಿದ್ದಾನೆ"
"ಇನ್ನೊಬ್ಬನ ಸೋದರಮಾವ?'
"ಯಾವುದೋ ಕಾರಣಕ್ಕೆ ಅವನಿಗೆ ಜೈಲು ವಾಸ ನಡೆಯುತ್ತಿದೆ"
"ಒಹೋ! ಹೀಗೂ ಉಂಟೋ?"
"ಆದಕಾರಣ ಹುಟ್ಟು ಕಾಲದ ಫಲ, ಗೋಚಾರ ಫಲ, ವಾತಾವರಣ ಮುಂತಾದುವನ್ನು ಸಮನ್ವಯ ಮಾಡಬೇಕು"

ಇದು ಅಷ್ಟು ಸುಲಭದ ಕೆಲಸವಲ್ಲ!

*****

"ಇನ್ನೊಂದು ಉದಾಹರಣೆ ಕೊಡುತ್ತೇನೆ, ವಿನೋದಕ್ಕಾಗಿ"
"ಏನು?"
"ಮೂವರಿಗೆ "ಶತ್ರು ನಾಶ ಯೋಗ" ಇದೆ"
"ಹೀಗೊಂದು ಯೋಗ ಇದೆಯೇ?"
"ಇದೊಂದು ಉದಾಹರಣೆ. ಕೆಲವರಿಗೆ ಶತ್ರುಗಳನ್ನು ಜಯಿಸುವ ಯೋಗಗಳು ಇರುತ್ತವೆ"
"ಸರಿ"
"ಒಬ್ಬ ಸೈನ್ಯ ಸೇರುತ್ತಾನೆ. ಇನ್ನೊಬ್ಬ ಪಂಡಿತ ಆಗುತ್ತಾನೆ. ಮೂರನೆಯವ ಅಡಿಗೆ ಭಟ್ಟ ಆಗುತ್ತಾನೆ"
"ಮುಂದೆ?"
"ಸೈನ್ಯಕ್ಕೆ ಸೇರಿದವನು ನಿಜವಾಗಿ ಶತ್ರುಗಳನ್ನು ಕೊಚ್ಚಿ ಹಾಕಬಹುದು"
"ಅದು ಸಾಧ್ಯ"
"ಪಂಡಿತ?"
"ಅವನದೇನು?"
"ಅವನು ಪ್ರತಿವಾದಿಗಳನ್ನು ಸೋಲಿಸುತ್ತಾ ಯಶಸ್ಸು ಪಡೆಯಬಹುದು"
"ಹೌದು. ಅಡಿಗೆ ಭಟ್ಟ?"
"ಅವನು ಬಾಣಸಿಗನಾಗಿ ಅಡಿಗೆ ಮನೆಯಲ್ಲಿ ಸೊಪ್ಪು-ತರಕಾರಿ ಮುಂತಾದುವುಗಳನ್ನು ಚೆನ್ನಾಗಿ ಕತ್ತರಿಸುತ್ತಾ ಸೊಗಸಾಗಿ ಅಡಿಗೆ ಮಾಡುತ್ತಾನೆ!"

ಜೋರಾಗಿ ನಗುವುದನ್ನು ಬಿಟ್ಟು ಮತ್ತಿನ್ನೇನು ಮಾಡುವುದು? ಜ್ಯೋತಿಷಿಗೆ "ಹಾಸ್ಯ ಪ್ರಜ್ಞೆ" ಸಹ ಇರಬೇಕೆ?

*****

ಸ್ವಂತ ಕುಂಡಲಿಗಳ ನಿರೀಕ್ಷಣೆ ಮತ್ತು ದೈವ ಸಹಾಯ ಎನ್ನುವ ಇನ್ನೆರಡು ಪದರಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Wednesday, July 1, 2026

ಅಂತರಂಗದ ಮಾತುಗಳು


ಅಣ್ಣ-ತಮ್ಮಂದಿರು ಆಸ್ಪತ್ರೆಯ ಕೋಣೆಯೊಂದರಲ್ಲಿ ಸಂಧಿಸಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡ ಒಂದು ಸಂದರ್ಭದ ನೆನಪನ್ನು ಹಿಂದಿನ ಸಂಚಿಕೆಯಲ್ಲಿ ಮಾಡಿಕೊಂಡೆವು. "ಯಾರು ಮೊದಲು ಪ್ರಯಾಣ?" ಅನ್ನುವ ಶೀರ್ಷಿಕೆಯ ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಈ ಸಂಚಿಕೆಯನ್ನು ಕುರಿತು ಅನೇಕ ಪ್ರತಿಕ್ರಿಯೆಗಳು ಬಂದಿವೆ. ಜ್ಯೋತಿಷ್ಯದ ಬಗ್ಗೆ ನಂಬಿಕೆ ಸರಿಯೇ? ನಂಬಬೇಕೇ ಅಥವಾ ಬೇಡವೇ? ನಂಬಿದರೆ ಎಷ್ಟು ಮಟ್ಟಕ್ಕೆ ನಂಬಬೇಕು? ಸಾವಿನ ಬಗ್ಗೆ ಮುಕ್ತ ಚರ್ಚೆ ಒಳ್ಳೆಯದೇ? "ಸಾವಿನ ಬಗ್ಗೆ ಮಾತನಾಡಬಾರದು" ಅನ್ನುತ್ತಾರಲ್ಲಾ? ಜ್ಯೋತಿಷ್ಯ ಶಾಸ್ತ್ರ ನಂಬುವವರೂ ಸಾವಿನ ಬಗ್ಗೆ ತಿಳಿದುಕೊಂಡು ಬದುಕಬಹುದೇ? ತನ್ನ ಕುಂಡಲಿಯನ್ನು ತಾನೇ ಅಭ್ಯಾಸ ಮಾಡಬಾರದು, ಅಲ್ಲವೇ? ಹೀಗೆ ಮಾಡುವುದರಿಂದ ಉಳಿದ ಮುಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಆಗುವುದಿಲ್ಲವೇ? ಹೀಗೆ ಅನೇಕ ಸಂದೇಹಗಳು, ಪ್ರಶ್ನೆಗಳು ಬಂದು ನಿಂತಿವೆ. ಇವುಗಳ ಬಗ್ಗೆ ಈಗ ಸ್ವಲ್ಪ ನೋಡೋಣ.

ಜ್ಯೋತಿಷ್ಯ ಶಾಸ್ತ್ರ ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ಕೆಲವರು ಬಳಸುವ ಒಂದು ಜೀವನ ವಿಧಾನ ಎಂದು ನಂಬುವವರು ಕೆಲವರು. ಅದನ್ನು ಜೀವನದ ಪರಮ ಧ್ಯೇಯ ಎಂದು ನಂಬಿ ಅದರ ಆಚರಣೆಯಿಂದ ಜೀವನ ಹಾಳು ಮಾಡಿಕೊಂಡವರೂ ಉಂಟು. ಅನುಕೂಲವಿದ್ದಾಗ ನಂಬಿ, ಬೇಡವಾದಾಗ ಬಿಟ್ಟು ಎಡಬಿಡಂಗಿ ಆದವರಿಗೂ ಕಮ್ಮಿಯಿಲ್ಲ!

*****

ಆಸ್ಪತ್ರೆಯಲ್ಲಿ ಮಾತುಕತೆ ಮುಗಿದ ನಂತರ ಅಣ್ಣ ಮತ್ತು ಅವರನ್ನು ಅಲ್ಲಿಗೆ ಕರೆದುಕೊಂಡು ಬಂದಿದ್ದ ಅವರ ಮಗ ಮನೆಗೆ ಹೊರಟರು. ಜೊತೆಯಲ್ಲಿ ಬಂದಿದ್ದ ಮಗನಿಗೆ ವಿಚಾರ ವಿನಿಮಯದ ಅಲ್ಪ-ಸ್ವಲ್ಪ ಭಾಗ ಅರ್ಥ ಆಯಿತು. ಆದರೆ ಹೀಗೆ ಆಸ್ಪತ್ರೆಯಲ್ಲಿ ವಿಚಾರ ಮಾಡಿದುದು ಸರಿಯಲ್ಲ ಎಂದೂ ಮನಸ್ಸಿನಲ್ಲಿ ಒಂದು ಕಡೆ ಅನಿಸಿತು. ಏನೋ, ದೊಡ್ಡವರ ವಿಚಾರ ಎಂದು ಬಿಟ್ಟುಬಿಟ್ಟರೂ "ಪಂಚಾಂಗ ನೋಡಿ, ಹೀಗೆ ಲೆಕ್ಕಾಚಾರ ಮಾಡಿದುದು ನಂಬಿ ಮುಂದಿನ ಹೆಜ್ಜೆಗಳನ್ನು ಇಡುವುದು ಎಷ್ಟು ಸರಿ?" ಎನ್ನುವ ಪ್ರಬಲವಾದ ಸಂದೇಹ ಕಾಡಿತು. ಮುಂದಿನ ವಿಷಯ ತಂದೆಯೊಂದಿಗೆ ಹೇಗೆ ಪ್ರಸ್ತಾಪ ಮಾಡಬೇಕು ಅನ್ನುವುದನ್ನು ಹಿಂದಿರುಗುವ ದಾರಿಯಲ್ಲಿ ನಿರ್ಧರಿಸಿ ಮನೆ ಸೇರಿದ್ದಾಯಿತು. 

ಜೀವನದ ಅನುಭವದಲ್ಲಿ ಮಾಗಿದ ತಂದೆಗೆ ಮಗನ ಮನಸ್ಸಿನಲ್ಲಿ ನಡೆಯುತ್ತಿದ್ದ ಈ ತುಮಲದ ಅರಿವು ಆಯಿತು. ಉಪಾಧ್ಯಾಯ ವೃತ್ತಿಯಲ್ಲಿ ಪಳಗಿದವರಿಗೆ ಎದುರಿಗಿದ್ದವರ ಮನಸ್ಸಿನಲ್ಲಿ ಸಂದೇಹ ಬಂದುದು ಅವರ ಮುಖ ನೋಡಿಯೇ ತಿಳಿಯುತ್ತದೆ. ಇದು ನುರಿತ ಶಿಕ್ಷಕರ ಶಸ್ತ್ರಾಗಾರದ ಪ್ರಬಲ ಅಸ್ತ್ರಗಳಲ್ಲಿ ಒಂದು. ರಾತ್ರಿಯ ಊಟವಾದ ನಂತರ ಅಪ್ಪ ಮಗನನ್ನು ಕರೆದರು. 

"ಏನು? ಆಸ್ಪತ್ರೆಯಿಂದ ಬಂದ ಮೇಲೆ ನಿನ್ನ ಮನಸ್ಸಿನಲ್ಲಿ ಏನೋ ಸಂದೇಹ ಇದ್ದಂತಿದೆ"
"ಸಂದೇಹ ಎಂದಲ್ಲ. ಏನೋ ಕೆಲವು ಅನುಮಾನಗಳು"
"ಭಯವೇನೂ ಇಲ್ಲ. ಸ್ವಲ್ಪ ಅಂಜಿಕೆ" ಅಂದಂತೆ. "ಏನು ಕೇಳಬೇಕೋ ಕೇಳಿಬಿಡು"
"ಏನಿಲ್ಲ. ಸಾವಿನ ಬಗ್ಗೆ ಮಾತಾಡಬಾರದು ಅನ್ನುತ್ತಾರಲ್ಲ. ನೀವಿಬ್ಬರು ಮಾತಾಡಿದ್ದು ಅದೇ ಅಲ್ಲವೇ?"
"ಅದರ ಬಗ್ಗೆ ಮಾತಾಡಬಾರದು ಅನ್ನುವವರು ಯಾರು?"
"ಅನೇಕರು. ನೀವೇ ಹಾಗೆ ಕೆಲವು ವೇಳೆ ಹೇಳಿಲ್ಲವೇ?'
"ಹೌದು. ಹಾಗೆ ಹೇಳುವುದರ ಅರ್ಥ ಮತ್ತು ಔಚಿತ್ಯ ಏನು?"
"ಎಲ್ಲರೂ ಹಾಗೆ ಹೇಳುತ್ತಾರೆ. ಬಹಳ ಜನರಿಗೆ ಅದರ ಬಗ್ಗೆ ಮಾತಾಡಲು ಭಯ"

"ವೈದ್ಯರು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಆಗಾಗ ಸಾವು ನೋಡುತ್ತಿರುತ್ತಾರೆ. ಅಲ್ಲವೇ?'
"ಹೌದು. ಅದು ಅವರ ವೃತ್ತಿಯ ಒಂದು ಬಾಗ"
"ಸ್ಮಶಾನದಲ್ಲಿ ಕೆಲಸ ಮಾಡುವ ಕೆಲವರು?"
"ಅವರ ಕೆಲಸವೇ ಅದಲ್ಲವೇ?"
"ಹಾಗಿದ್ದರೆ ಅವರು ಇದರ ಬಗ್ಗೆ ಮಾತಾಡಬಹುದು ಎಂದಂತಾಯಿತು"
"ಆಡದಿದ್ದರೆ ಅವರ ಕೆಲಸ ನಡೆಯುವುದಾದರೂ ಹೇಗೆ?"
"ಹುಟ್ಟಿದವರಲ್ಲಿ ಎಷ್ಟು ಜನ ಸಾವು ಕಾಣದೇ ಉಳಿಯುತ್ತಾರೆ?"
"ನಾವು ಕೇಳಿದಂತೆ ಚಿರಂಜೀವಿಗಳು ಅನಿಸಿಕೊಂಡವರು. ಮಾರ್ಕಂಡೇಯರು ಮತ್ತೊಬ್ಬರು"
"ಅಂದರೆ ಹುಟ್ಟಿದವರೆಲ್ಲ ಒಂದು ದಿನ ಸಾಯಲೇಬೇಕಲ್ಲವೇ?'
"ಹೌದು. ಆದರೆ ಅದರ ಬಗ್ಗೆ ಯಾಕೆ ಮಾತಾಡಬೇಕು?"
"ಮಾತನಾಡದಿದ್ದರೆ ಸಾವು ದೂರ ಹೋಗುವುದೋ?"
"ಮಾತಾಡಿದರೆ ದೂರ ಹೋಗುವುದೋ?"
"ಎರಡೂ ಇಲ್ಲ. ಆಡಿದ್ದರಿಂದ ಹತ್ತಿರ ಬರುವುದೂ ಇಲ್ಲ"

ಇನ್ನೂ ಸ್ವಲ್ಪ ಯೋಚನೆ ಮಾಡಬೇಕಾದ ಪ್ರಸಂಗ ಬಂತು!

******

"ಸಾವು ಜೀವನದ ಪರಮ ಸತ್ಯ ಅನ್ನುವುದು ನಿಜ. "ಜಾತಸ್ಯ ಹಿ ಧ್ರುವಂ ಮೃತ್ಯು: ತಸ್ಮಾದಪರಿಹಾರ್ಯೇರ್ಥೇ ನ ತ್ವಂ ಶೋಚಿತುಮರ್ಹಸಿ" ಅಂತ ಗೀತಾಚಾರ್ಯನೇ ಹೇಳಿದ್ದಾನೆ. ಜೀವನ ಇರುವುದು ಬದುಕುವುದಕ್ಕೆ. ಸಾರ್ಥಕವಾಗಿ ಜೀವಿಸುವುದಕ್ಕೆ. ಸಾಯುವುದಕ್ಕಲ್ಲ. ಇದು ಒಪ್ಪಲೇಬೇಕಾದ ಮಾತು. ಆದರೆ ಎಲ್ಲಕಾಲಕ್ಕೂ ನಾನು ಬದುಕಿರುತ್ತೇನೆ ಎಂದು ನಂಬುವುದು ಸರಿಯಲ್ಲ. ನಮಗೆ ಇಷ್ಟ ಇರಲಿ, ಬಿಡಲಿ. ಪ್ರತಿ ಕ್ಷಣ ನಾವು ಸಾವಿನ ಹತ್ತಿರ ಹೋಗುತ್ತಲೇ ಇರುತ್ತೇವಲ್ಲ!"
"ಹಾಗಂತ ಅದರ ಬಗ್ಗೆ ಏಕೆ ಚಿಂತಿಸಬೇಕು?"

"ಹಾಗೆ ಚಿಂತಿಸಲು ಎರಡು ಕಾರಣಗಳು ಉಂಟು. ಮೊದಲನೆಯದು, ನಾವು ಒಂದು ದಿನ ಇಲ್ಲಿಂದ ಹೋಗಬೇಕು ಎನ್ನುವುದು ಯೋಚಿಸಿದಾಗ ವಯಸ್ಸಾಗುತ್ತಿದ್ದಂತೆ ಲೌಕಿಕ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿ, ಹೊಣೆಗಳನ್ನು ದಾಟಿ, ಮುಂದಿನ ವ್ಯವಸ್ಥೆಗಳನ್ನು ಮಾಡುವ ಮನಸ್ಸು ಮತ್ತು ಕರ್ತೃತ್ವ ಶಕ್ತಿ ಬರುತ್ತವೆ"
"ಎರಡನೆಯದು?"
"ಸದಾ ಇಲ್ಲಿರುವುದಿಲ್ಲ ಎನ್ನುವ ಪರಿಜ್ಞಾನದಿಂದ ಅಡ್ಡ ದಾರಿ ಹಿಡಿಯದೇ ನೇರ ಜೀವನ ನಡೆಸುವ ಇರಾದೆ ಪಕ್ವವಾಗುತ್ತದೆ"

"ಹೌದು ಅನ್ನೋಣ. ಆದರೆ ಅದರ ಬಗ್ಗೆ ಚಿಂತಿಸುವುದರಿಂದ ಮತ್ತು ಮಾತನಾಡುವುದರಿಂದ, ಹೇಗಿದ್ದರೂ ಹೋಗಬೇಕು ಎನ್ನುವ ಯೋಚನೆ ಪ್ರಬಲವಾಗಿ ಜೀವನದಲ್ಲಿ ನಿರಾಸಕ್ತಿ ಮೂಡಿದರೆ?"
"ಇಲ್ಲಿಯೇ ಮನುಷ್ಯನ ನಿಜವಾದ ಯೋಗ್ಯತೆ ಒರೆ ಹಚ್ಚುವುದು. ಈ ಜೀವನ ಒಂದು ದಿನ ಕೊನೆ ಆಗುತ್ತದೆ ಅನ್ನುವ ಎಚ್ಚರ ಇರಬೇಕು. ಇರುವವರೆಗೂ ಕರ್ತವ್ಯಗಳನ್ನು ಮಾಡುತ್ತಲೇ ಇರಬೇಕೆಂಬ ಪ್ರಜ್ಞೆ ಜಾಗೃತವಾಗಿರಬೇಕು. ಇದೇ ಅಲ್ಲವೇ ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ ಕರ್ಮಯೋಗ?"
"ತಾವರೆ ಎಲೆಯ ಮೇಲಿನ ನೀರನ ಹನಿಯಂತೆ ಅನ್ನುವುದಕ್ಕೆ ಈ ವಿಶಾಲ ಅರ್ಥವೇ?"
"ಕರ್ತವ್ಯಗಳನ್ನು ಮಾಡುತ್ತಿರುವಾಗ ಅವುಗಳಿಗೆ ಸಂಬಂಧಿಸಿದವರ ಮತ್ತು ಸಾಧನಗಳ ಮೇಲೆ ಅತಿಯಾದ ಮೋಹ ಇರಬಾರದು ಅನ್ನುವುದನ್ನು ಅದಕ್ಕೆ ಸೇರಿಸಿಕೊಳ್ಳಬೇಕು"

ಸಾವಿನ ಬಗ್ಗೆ ಮಾತನಾಡುವುದು ತಪ್ಪಲ್ಲ. ಅದರ ಬಗ್ಗೆಯೇ ಮಾತನಾಡುತ್ತ ಬೇರೆಲ್ಲ ಬಿಡುವುದು ತಪ್ಪು ಎಂದಾಯಿತು. ಗಮನವಿರಬೇಕು. ಅತಿಯಾದ ಗಮನವಿರಬಾರದು. ಇಲ್ಲಿಯೂ ಕತ್ತಿಯ ಅಲುಗಿನ ಮೇಲೆ ನಡೆದಂತೆ!

******

"ನೀವು ಹೇಳಿದುದರಂತೆ ಸಾವಿನ ಬಗ್ಗೆಯೇ ಮಾತನಾಡುತ್ತಿರಬಾರದು. ಅದರೊಡನೆ ಎಲ್ಲರ ಕೂಡ ಮಾತನಾಡುತ್ತಿರಬಾರದು. ಹಾಗಿದ್ದರೆ ಯಾರೊಡನೆ ಮಾತಾಡಬೇಕು? ಯಾವಾಗ ಮಾತಾಡಬೇಕು? ಈ ಎರಡು ಪ್ರಶ್ನೆಗಳು ಉಳಿದವು"
"ಇವುಗಳ ಮೊದಲು ಇನ್ನೊಂದು ವಿಚಾರವಿದೆ"
"ಏನದು?"
"ತಂದೆ ಬದುಕಿರುವವರು (ಜೀವಿತಪಿತೃಗಳು) ಸ್ಮಶಾನಘಟ್ಟಕ್ಕೆ ಹೋಗಬಾರದು ಅನ್ನುವುದು"
"ಅದನ್ನು ಈಗಲೂ ಎಲ್ಲರೂ ಪಾಲಿಸುತ್ತಾರಲ್ಲ"
"ಹಿಂದೆ ಇದನ್ನು ಕಟ್ಟುನಿಟಾಗಿ ಪಾಲಿಸುತ್ತ್ತಿದ್ದರು. ಕೆಲವು ಪಂಗಡಗಳಲ್ಲಿ ಎಲ್ಲರೂ ಹೋಗುತ್ತಾರೆ. ಕೆಲವರಲ್ಲಿ ಇಲ್ಲ"
"ಹೀಗೆ ನಿಬಂಧನೆ ಮಾಡಲು ಕಾರಣ?"
"ಚಿಕ್ಕ ವಯಸ್ಸಿನಲ್ಲಿ ರುದ್ರಭೂಮಿ ಅಂದರೆ ಒಂದು ರೀತಿಯ ಭಯ ಇರುತ್ತದೆ. ಆಗ ಅಲ್ಲಿಗೆ ಹೋಗಲೇಬೇಕಾದ ಪರಿಸ್ಥಿತಿ ಇರುವುದಿಲ್ಲ. ಈ ಕಾರಣಗಳು"
"ಹಾಗಿದ್ದರೆ ತಂದೆ ಬದುಕಿದ್ದಾಗಲೂ ಹೋಗಬಹುದೋ?"
"ಯಾರಾದರೂ ತೀರಿಕೊಂಡಾಗ ಅವರ ಅಂತ್ಯ ಸಂಸ್ಕಾರಕ್ಕೆ ಸಹಕಾರ ಕೊಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ. ಅಗಲಿದ ವ್ಯಕ್ತಿಗೆ ನಮ್ಮ ಗೌರವದ ಸೂಚಕ"

"ಅಂದರೆ?"
"ಈಗ ಕೊನೆಯಯಾತ್ರೆಗೆ ವಾಹನಗಳು ಬಂದಿವೆ. ಮೊದಲೆಲ್ಲ ಹೆಗಲ ಮೇಲೆ ಹೊತ್ತುಕೊಂಡು ಹೋಗಬೇಕಾಗಿತ್ತು. ಶವಸಂಸ್ಕಾರದ ಅನುಕೂಲಗಳಿರಲಿಲ್ಲ. ಹೀಗಾಗಿ ಸಹಕಾರ ಕೊಡುವುದು ಅತ್ಯವಶ್ಯಕ ಆಗಿತ್ತು. ತಂದೆ ಅನಾರೋಗ್ಯದಿಂದಲೋ, ವೃದ್ಧಾಪ್ಯದಿಂದಲೋ ಹೋಗಲಾಗದಿದ್ದರೆ ವಯಸ್ಕ ಮಕ್ಕಳಿಗೆ ಹೋಗುವಂತೆ ಅನುಮತಿ ಕೊಡುವುದು ನಾನು ನೋಡಿದ್ದೇನೆ. ಈಗ ಅದರ ಅವಶ್ಯಕತೆ ಅಷ್ಟಾಗಿ ತೋರಿಬರುತ್ತಿಲ್ಲ. ಚಲನಚಿತ್ರಗಳಲ್ಲಿ ಚಿತಾದಹನದ ದೃಶ್ಯಗಳನ್ನು ದೊಡ್ಡದಾಗಿ ತೋರಿಸುತ್ತಾರೆ. ಕೆಲವು ಗಣ್ಯ ವ್ಯಕ್ತಿಗಳು, ರಾಜಕೀಯ ನಾಯಕರು ಕಾಲವಾದಾಗ ಗಂಟೆಗಟ್ಟಲೆ ದೂರದರ್ಶನದಲ್ಲಿ ನೇರ ಪ್ರಸಾರ ತೋರಿಸುತ್ತಾರೆ. ಪುಟ್ಟ ಮಕ್ಕಳೂ ಇದನ್ನು ನೋಡುತ್ತವೆ. ಈಗ ಈ ದೃಶ್ಯಗಳಿಗೆ ಘನತೆಯೂ ಉಳಿದಿಲ್ಲ; ಭಯವೂ ಇಲ್ಲ"
"ಅಂದರೆ ತಂದೆಯ ಅನುಮತಿ ಪಡೆದು ಹೋಗಬಹುದು ಎಂದಾಯಿತು"
"ಹೋಗಬಾರದು ಎಂದು ಪದ್ಧತಿ ಇರುವ ಕುಟುಂಬಗಳಿಗೆ ಹೀಗೆ. ಎಲ್ಲರೂ ಹೋಗುವ ಕುಟುಂಬಗಳಿಗೆ ಇದರ ಅವಶ್ಯಕತೆ ಇಲ್ಲವಲ್ಲ"
*****

"ಮುಂದಿನ ಪ್ರಶ್ನೆ ಯಾವುದು?"
"ಆಸ್ಪತ್ರೆಯಲ್ಲಿ ಈ ವಿಷಯದಲ್ಲಿ ಮಾತುಕತೆ ಮಾಡಿದುದು"
"ಅದು ಬೇಕೆಂದೇ ಮಾಡಿದುದಲ್ಲ. ಈ ರೀತಿಯ ವಿಚಾರಗಳನ್ನು ನಾವು ಈ ಹಿಂದೆಯೂ ಅನೇಕ ಬಾರಿ ಚರ್ಚೆ ಮಾಡಿದ್ದೇವೆ. ಸಾಮಾನ್ಯವಾಗಿ ಹೀಗೆ ಪ್ರಸ್ತಾಪ ಮಾಡುವಾಗ ನಾವಿಬ್ಬರೇ ಇರುತ್ತಿದ್ದುದು. ಈ ಸಾರಿ ಮಾತ್ರ ಅದು ಬಹಿರಂಗವಾಗಿ ಆಸ್ಪತ್ರೆಯಲ್ಲಿ ಆಗಬೇಕಾಯಿತು. ಹಿಂದಿನ ಸಂದರ್ಭಗಳಲ್ಲಿ ಅದು ಮತ್ಯಾರದೋ ವಿಷಯ ಆಗಿರುತ್ತಿತ್ತು. ಈ ಬಾರಿ ನಮ್ಮದೇ ಆಯಿತು. ಅಷ್ಟೇ!"
"ಆದರೂ ಆಸ್ಪತ್ರೆಯಲ್ಲಿ ಅಷ್ಟು ಜನರಿದ್ದರಲ್ಲ"
"ಅದಕ್ಕೆ ನಾವೇನು ಮಾಡುವುದು? ನಮ್ಮಿಬ್ಬರ ಜೀವನದ ಕಾಲಘಟ್ಟವನ್ನು ನೋಡು. ವಯಸ್ಸಾದ ಮೇಲೆ ಆಸ್ಪತ್ರೆಯಿಂದ ಪೂರ್ಣ ಗುಣವಾಗಿ ಬರುವುದು ಅಷ್ಟು ಸುಲಭವಲ್ಲ. ಗುಣವಾಗಿ ಬಂದರೂ ಮೊದಲಿನ ಚೈತನ್ಯ ಉಳಿಯುವುದು ಬಹಳ ಅಪರೂಪ. ಆಗಿನ ಚಿಕಿತ್ಸೆ ಏನಿದ್ದರೂ ಬಹುತೇಕ ಹರಿದ ಬಟ್ಟೆಗೆ ತೇಪೆ ಹಾಕಿದಂತೆ. ಭೌತಿಕ ದೇಹಕ್ಕೆ ತನ್ನದೇ ಆದ ಇತಿ-ಮಿತಿಗಳಿವೆ. ನಾವಿಬ್ಬರೂ ಪೂರ್ಣ ಆರೋಗ್ಯವಂತರಾಗಿ ಮತ್ತೆ ಭೇಟಿಯಾಗುವ ಸಾಧ್ಯತೆ ಇದ್ದಿದ್ದರೆ ಅಲ್ಲಿ ಈ ವಿಷಯ ಪ್ರಸ್ತಾಪ ಮಾಡುತ್ತಿರಲಿಲ್ಲ. ಇದು ಹೀಗೆ ಆಗದು ಎಂದು ನನಗೂ ಗೊತ್ತು; ಅವನಿಗೂ ಗೊತ್ತು. ಆದ್ದರಿಂದ ಸಮಯ ಸಿಕ್ಕಾಗ ಮಾತಾಡಬೇಕಾಯಿತು"

ಇದೂ ಒಂದು ಸಮರ್ಥನೆಯೇ.
*****

"ಅಲ್ಲಿ ಸಂವಾದ ನಡೆದದ್ದು ಅನಿವಾರ್ಯ ಎಂದು ಒಪ್ಪಿಕೊಂಡರೂ ಅವರೊಡನೆ, ಆಸ್ಪತ್ರೆಯಲ್ಲಿ ದಾಖಲಾಗಿರುವವರೊಡನೆ ಏಕೆ ಬೇಕಾಗಿತ್ತು?"
"ನಮಗೆ ಬೇಕಾದ ವಿಷಯಗಳನ್ನು ಯಾರೊಡನೆ ಚರ್ಚಿಸಬೇಕು?'
"ನಮಗೆ ಬೇಕಾದವರೊಡನೆ"
"ಅದೇ ಅಲ್ಲವೇ ನಾವಿಬ್ಬರೂ ಮಾಡಿದ್ದು?"
"ಆದರೂ ಅದು ಸರಿ ಎಂದು ಒಪ್ಪುವುದು ಕಷ್ಟ"

"ನಾನು ಎರಡನೇ ಮಹಾಯುದ್ಧ ಕಾಲದಲ್ಲಿ (1939-45) ಸೈನ್ಯದಲ್ಲಿ ಸೇರಿ ಆ ಯುದ್ಧದಲ್ಲಿ ಭಾಗಿಯಾಗಿದ್ದುದು ನಿನಗೆ ಗೊತ್ತು"
"ಕೇಳಿ ಬಲ್ಲೆ. ಫೋಟೋಗಳನ್ನು ನೋಡಿದ್ದೇನೆ. ನೀವು ಆಗಾಗ ಹೇಳಿದ ಅಲ್ಲಿನ ಅನುಭವಗಳನ್ನು ಕೇಳಿದ್ದೇನೆ"
"ಆಗ ನನಗೆ ಇನ್ನೂ ಇಪ್ಪತ್ತು ವರುಷ ವಯಸ್ಸು. ವಿವಾಹವಾಗಿ ಇಬ್ಬರು ಮಕ್ಕಳು. ನನ್ನ ಭಾಗಕ್ಕೆ ಕುಟುಂಬದಿಂದ ಬಂದ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದೆ. ಖಾಯಂ ಕೆಲಸವಿರಲಿಲ್ಲ. ಒಂದು ದಿನ ತಾಲ್ಲೋಕು ಆಫೀಸಿಗೆ ಯಾವುದೊ ಕೆಲಸಕ್ಕೆ ಹೋದೆ. ಸೈನ್ಯಕ್ಕೆ ಯುವಕರ ಭರ್ತಿ ನಡೆಯುತ್ತಿತ್ತು. ಸಾಲಿನಲ್ಲಿ ನಿಂತೆ. ಮನೆಯವರಿಗೆ ಹೇಳಲೂ ಅವಕಾಶ ಇರಲಿಲ್ಲ. ಸಂಜೆಗೆ ಲಾರಿ ಹತ್ತಿಸಿಕೊಂಡು ಬೆಂಗಳೂರು ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋದರು. ಅಲ್ಲಿಂದ ಪೂನಾ. ನಂತರ ಬರ್ಮಾ ಗಡಿಗೆ. ಯುದ್ಧದಲ್ಲಿ ವರ್ಷಗಳು ಕಳೆದವು"
"ಅದು ಸರಿ. ಅದಕ್ಕೂ ಇಂದು ನಡೆದದ್ದಕ್ಕೂ ಸಂಬಂಧ?"
"ಕೆಲವರು ಸೈನ್ಯ ಸೇರಿ ನಿವೃತ್ತರಾಗಬಹುದು. ಒಂದೂ ಯುದ್ಧದಲ್ಲಿ ಭಾಗಿಯಾಗುವ ಕಾಲ ಬಾರದಿರಬಹುದು. ಅದು ಅಪರೂಪ ಆದರೂ ಸಾಧ್ಯ. ನಾನಿದ್ದುದು ಅಷ್ಟೂ ಕಾಲ ಯುದ್ಧ ಭೂಮಿಯಲ್ಲೇ. ಮೊದಲಿಂದ ಕಡೆಯವರೆಗೆ"
"ಏಕೆ ಹಾಗೆ?"
"ಸೇರಿದುದು ಯುದ್ಧ ಪ್ರಾರಂಭವಾದ ದಿನಗಳಲ್ಲಿ. ಯುದ್ಧ ಮುಗಿದ ನಂತರ ಚೀನಾ ಗಡಿಗೆ ವರ್ಗಾಯಿಸಿದರು. ನಾನು ಬೇಡ ಎಂದೆ. ನಿವೃತ್ತಿ ಕೊಟ್ಟು ಉಪಾಧ್ಯಾಯನ ಕೆಲಸ ಕೊಟ್ಟರು"
"ಸರಿ"
"ಯುದ್ಧಭೂಮಿಯಲ್ಲಿ, ಬರ್ಮಾ ಗಡಿಯಲ್ಲಿ ಕಾಲ ಕಳೆಯುವಾಗ ಯಾವ ವಿಷಯದ ಬಗ್ಗೆ ಮಾತಾಡಬೇಕು? ಪ್ರತಿದಿನ ಜೊತೆಯಲ್ಲಿದ್ದವರ ಸಾವಿನ ಸುದ್ದಿಯೇ! ಸಾವಿನ ಭಯ ಹೊರಟುಹೋಯಿತು"
"..............."

"ನಮ್ಮ ಅಂತರಂಗದ ಮಾತುಗಳನ್ನು ಹೇಳಿಕೊಳ್ಳಲು ಪ್ರತಿಯೊಬ್ಬರೂ ಕೆಲವರನ್ನು ಆರಿಸಿಕೊಳ್ಳುತ್ತೇವೆ. ಎಲ್ಲರೊಡನೆ ಎಲ್ಲ ವಿಷಯಗಳನ್ನೂ ಚರ್ಚಿಸಲಾಗುವುದಿಲ್ಲ. ಹಾಗೆ ಆರಿಸಿಕೊಂಡ ವ್ಯಕ್ತಿಗಳು ನಮಗೆ ನಂಬಿಕಸ್ಥರಾಗಬೇಕು. ಗುಟ್ಟುಗಳನ್ನು ಹಿಡಿದಿಟ್ಟುಕೊಳ್ಳುವವರಾಗಬೇಕು. ಮುಕ್ತ ಮನಸ್ಸಿನಿಂದ ಸಲಹೆ-ಸೂಚನೆ ಕೊಡುವವರಾಗಬೇಕು. "ಗುಹ್ಯo ನಿಗೂಹಯತಿ, ಗುಣಾನ್ ಪ್ರಕಟೀಕರೋತಿ" ಎಂದು ಭರ್ತೃಹರಿ ನೀತಿಶತಕದಲ್ಲಿ ಹೇಳಿರುವುದು ಓದಿದ್ದೀಯೆ. ಇಂತಹವರು ಜೀವನದಲ್ಲಿ ಒಬ್ಬರೋ, ಇಬ್ಬರೋ ಸಿಕ್ಕರೆ ಅದು ಭಾಗ್ಯವೇ. ಹತ್ತಾರು ಜನ ಯಾರಿಗೂ ಸಿಗುವುದಿಲ್ಲ"
"ಅದು ಸರಿ"
"ಯುದ್ಧಭೂಮಿಯಲ್ಲಿ ಯಾರಾದರೂ ಸಿಕ್ಕರೆ ಸಾಕು ಅನಿಸುತ್ತದೆ! ಅಲ್ಲಿ ಸಿಕ್ಕವನೇ ಅತಿ ಆಪ್ತ ಆಗುತ್ತಾನೆ!"
"ಊಹೆಯಿಂದ ತಿಳಿಯಬೇಕು"
"ಅಷ್ಟೇ ಅಲ್ಲ. ಅವನು ಯುದ್ಧದಲ್ಲಿ ಬದುಕಿ ಉಳಿಯಬೇಕು"
".........."

"ಹೀಗೆ ನಾವು ಆರಿಸಿಕೊಳ್ಳುವ ಆಪ್ತರು ನಮ್ಮ ಹತ್ತಿರದವರೇ ಆಗಬಹುದು. ಒಡಹುಟ್ಟಿದವರೇ ಆಗಬಹುದು. ಜೊತೆಯಲ್ಲಿ ಬೆಳೆದವರೇ ಆಗಬಹುದು."
"ಹೌದು"
"ನಾವು ಮೂವರು ಅಣ್ಣ-ತಮ್ಮಂದಿರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡವರು. ಮಧ್ಯದವನು ಮಧ್ಯ ವಯಸ್ಸಿನಲ್ಲಿಯೇ ತೀರಿಹೋದ. ಮತ್ತೆ ಉಳಿದವರು ನಾವಿಬ್ಬರೇ"
"ಒಡಹುಟ್ಟಿದವರು, ಸಹಪಾಠಿಗಳು ಆದರೆ ಕೆಲವು ಅನುಕೂಲಗಳು ಉಂಟು. ಅವರ ಎಲ್ಲ ವಿಷಯಗಳು ನಮಗೆ ತಿಳಿದಿರುತ್ತವೆ. ನಮ್ಮ ವಿಷಯಗಳೂ ಅವರಿಗೆ ತಿಳಿದಿರುತ್ತವೆ"
"ನಿನ್ನೆ ಆಗಿದ್ದೂ ಅದೇ"

ಆಸ್ಪತ್ರೆಯಲ್ಲಿಯೇ ಏಕೆ ಮಾತು-ಕತೆ ಆಯಿತು? ಅವರೊಡನೆಯೇ ಏಕೆ ಆಯಿತು? ಅಂದೇ ಏಕೆ ಆಯಿತು? ಈ ವಿಷಯಗಳಿಗೆ ಸ್ಪಷ್ಟನೆ ಸಿಕ್ಕಿತು. 

"ಅನುಮಾನಗಳು ಪರಿಹಾರ ಆಯಿತೇ? ಇನ್ನೂ ಏನಾದಾರೂ ಬಾಕಿ ಇದೆಯೋ?"
"ನಿನ್ನಿನ ವಿಚಾರ ತಿಳಿಯಾಯಿತು. ಜ್ಯೋತಿಷ್ಯದ ವಿಷಯ ಕೆಲವಿವೆ"
"ಇಂದು ತಡವಾಯಿತು. ನಾಳೆ ನಿನಗೆ ಆಫೀಸಿಗೆ ಹೋಗಬೇಕಿದೆ. ನಾಳೆ ಸಂಜೆ ಮುಂದುವರೆಸೋಣ"

*****

ಅನುಭವದಿಂದ ಕಲಿತ ಪಾಠಗಳು ಅನುಗಾಲ ನೆನಪಿನಲ್ಲಿ ಇರುತ್ತವೆ. ಅಂತಹ ಸಂದರ್ಭಗಳು ಜೀವನದಲ್ಲಿ ಮತ್ತೆ ಪುನರಾವರ್ತನೆ ಆದಾಗ ಮನಸ್ಸು ಅವನ್ನು ಗಾಢವಾಗಿ ಮೆಲಕು ಹಾಕುತ್ತದೆ.  

Saturday, June 27, 2026

ಯಾರು ಮೊದಲು ಪ್ರಯಾಣ?


ಎಂಭತ್ತು ವರುಷದ ಅಣ್ಣ. ಒಂದೈದು ಆರು ವರುಷಗಳು ಕಡಿಮೆ ಇರುವ ತಮ್ಮ. ಇಬ್ಬರೂ ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದು ನಿವೃತ್ತರಾದವರು. ಅಣ್ಣ ವಂಶಪಾರಂಪರ್ಯವಾಗಿ ಬಂದಿದ್ದ ಮನೆತನದ ಹುಟ್ಟೂರಿನ ದೈವ ಶ್ರೀರಾಮಚಂದ್ರನ ಆರಾಧಕರು. ತಮ್ಮ ಅವರ ದೊಡ್ಡಪ್ಪ ಅದೇ ಊರಿನಲ್ಲಿ ಸ್ಥಾಪಿಸಿದ ಮಂದಿರದ ಅಧಿದೈವ ಶ್ರೀ ದತ್ತಾತ್ರೇಯರ ಉಪಾಸಕರು. 

ತಂದೆಯ ಕಡೆಯಿಂದ ಬಂದಿದ್ದ ಜ್ಯೋತಿಷ್ಯದ ಬಗ್ಗೆ ಇಬ್ಬರಿಗೂ ಆಸಕ್ತಿ. ಒಂದೇ ವಿಷಯವಾದರೂ ಇಬ್ಬರ ವಿಧಾನಗಳು ಸ್ವಲ್ಪ ಬೇರೆ ಬೇರೆ. ಅಣ್ಣನ ಲೆಕ್ಕಾಚಾರ ಹೆಚ್ಚಾಗಿ ಮನಸ್ಸಿನಲ್ಲಿ. ಪೆನ್ನು, ಪುಸ್ತಕ ಹಿಡಿದು ಲೆಕ್ಕ ಮಾಡುವುದು ಕಡಿಮೆ. ಬೇಕಿದ್ದಾಗ ಹಾಗೆ ಮಾಡುವುದೂ ಉಂಟು. ತಮ್ಮ ಮಾತ್ರ ಖಚಿತ ಲೆಕ್ಕಾಚಾರ. ಪ್ರತಿಯೊಂದಕ್ಕೂ ವಿವರವಾಗಿ ನೋಡಿ, ಆಳ-ಅಗಲ ಸೋಸಿ, ಬರೆದಿಡುವುದು ಅಭ್ಯಾಸ. 

ಅಣ್ಣನ ವಾಸ ದಕ್ಷಿಣ ಬೆಂಗಳೂರಿನಲ್ಲಿ. ತಮ್ಮನದು ಉತ್ತರ ಬೆಂಗಳೂರು. ಆಗಲೋ ಈಗಲೋ ಪರಸ್ಪರ ಭೇಟಿ. ಇಬ್ಬರೇ ಇದ್ದಾಗ ಈ ವಿಷಯದಲ್ಲಿ ಚರ್ಚೆ. ಜ್ಯೋತಿಷ್ಯದಲ್ಲಿ ಪ್ರವೇಶ ಇದ್ದವರಿಗೆ ಅವರ ಸಂವಾದ ಅಲ್ಪ-ಸ್ವಲ್ಪ ಅರ್ಥ ಆಗುವುದು. ಇತರರಿಗೆ ಇಬ್ಬರೂ ಜಗಳ ಆಡುತ್ತಿದ್ದಾರೆ ಅನ್ನಿಸಿದರೂ ಆಶ್ಚರ್ಯವಿಲ್ಲ. ಅವರ ಸಂವಾದದ ಸಮಯದಲ್ಲಿ ಯಾರೂ ಮಧ್ಯೆ ಪ್ರವೇಶಿಸುತ್ತಿರಲಿಲ್ಲ. 

*****

ಒಂದು ದಿನ ಅಣ್ಣ ಮನೆಯಲ್ಲಿದ್ದ ತಮ್ಮ ಮಗನನ್ನು ಹತ್ತಿರ ಕರೆದರು. ಭಾನುವಾರದ ಕಾರಣ ಮಗನಿಗೆ ಕೆಲಸಕ್ಕೆ ರಜೆ. ಮನೆಯಲ್ಲಿಯೇ ಇದ್ದ. 

"ಏನು, ಕರೆದಿರಿ"
"ನಿಮ್ಮ ಚಿಕ್ಕಪ್ಪನಿಗೆ ಅನಾರೋಗ್ಯವಂತೆ. ಆಸ್ಪತ್ರೆಗೆ ಸೇರಿಸಿದ್ದಾರಂತೆ"
"ಫೋನ್ ಮಾಡಿ ವಿಚಾರಿಸೋಣವೇ?"
"ಇಲ್ಲ. ಹೋಗಿ ನೋಡಬೇಕು. ಮಧ್ಯಾನ್ಹ ಕರೆದುಕೊಂಡು ಹೋಗು"
"ಯಾವ ಆಸ್ಪತ್ರೆ?"
"ಮತ್ತೀಕೆರೆಯಲ್ಲಿ ಸುಬ್ಬಯ್ಯ ಆಸ್ಪತ್ರೆ ಅಂತೆ. ಅವರ ಮನೆ ಹತ್ತಿರ"
"ಆಯಿತು. ಸಂಜೆ ಸಂದರ್ಶನದ ವೇಳೆ ಇರುತ್ತದೆ. ಹೋಗೋಣ"

ಸಂಜೆ ಇಬ್ಬರೂ ಅಲ್ಲಿಗೆ ಹೋದರು. ಸಂದರ್ಶನದ ವೇಳೆ. ಕೊಠಡಿಗೆ ಹೋಗಿ ಭೇಟಿ ಮಾಡಿದರು. ಅಣ್ಣ-ತಮ್ಮ ಮಾತುಕತೆ ಪ್ರಾರಂಭಿಸಿದರು. 
*****

"ಏನು? ಇಲ್ಲಿಗೆ ಯಾವಾಗ ಬಂದಿ?"
"ಎರಡು ದಿನವಾಯಿತು"
"ಈಗ ಹೇಗಿದ್ದೀ? ಚೇತರಿಕೆ ಕಂಡಿದೆಯೇ?"
"ಸ್ವಲ್ಪ ಪರವಾಗಿಲ್ಲ. ಡಾಕ್ಟರು ಉತ್ತಮವಾಗಿದೆ ಅನ್ನುತ್ತಾರೆ"
"ಯಾವನಾದರೂ ಡಾಕ್ಟರು ಪೇಷಂಟ್ ಬಳಿ "ಉತ್ತಮವಾಗಿಲ್ಲ" ಅಂದಿದ್ದು ಕೇಳಿದ್ದೀಯಾ?"
"ಮತ್ತೆ ಏನು ಮಾಡುವುದು? ಅವರು ಹೇಳಿದ್ದು ತಾನೇ ನಂಬಬೇಕು?"
"ಮನೆಯವರಲ್ಲಿ ಒಬ್ಬರನ್ನು ಪಕ್ಕಕ್ಕೆ ಕರೆದು ಅವರ ಬಳಿ ಸಹಜ ಸ್ಥಿತಿ ಹೇಳುತ್ತಾರೆ"
"ಹೌದು. ಅದು ಅವರ ಅಭ್ಯಾಸ"

"ಅದಿರಲಿ. ನಿನ್ನ ವಿಷಯ ಹೇಳು. ಮೊಮ್ಮಗನಿಗೆ ಮಗ ಹುಟ್ಟಿದನಂತೆ"
"ಹೌದು. "ಪ್ರಪೌತ್ರ ದರ್ಶನ" ಆಗುತ್ತಿದೆ"
"ಅಂತೂ ಅಪರೂಪದ ಚಾನ್ಸು ಹೊಡೆದೆ"
"ಹೌದು. ಅಪರೂಪವೇ. ಅದೇನು ಎಲ್ಲರಿಗೂ ಆಗುವುದಲ್ಲವಲ್ಲ"
"ಕನಕಾಭಿಷೇಕ ಮಾಡಿಸಿಕೊಳ್ಳುತ್ತೀಯೋ?"
"ನನಗೇನು? ಮಾಡಿದರೆ ಮಾಡಿಸಿಕೊಳ್ಳುವುದು"
"ಯಾವಾಗ ಮಾಡುತ್ತಾರಂತೆ?"
"ಮಗ ಬಂದಿದ್ದ. "ಮಗು ಸ್ವಲ್ಪ ದೊಡ್ಡದಾಗಲಿ. ವರುಷದ ಮೇಲೆ ಮಾಡೋಣ" ಅಂದ"
"ಯಾಕಂತೆ ತಡ?"
"ಮಗು ದೊಡ್ಡದಾದರೆ ಕೈಯಲ್ಲಿ ಬಂಗಾರದ ಹೂವು ಹಿಡಿದು ಚೆನ್ನಾಗಿ ಮಾಡುತ್ತೆ ಅಂತ"
"ಅವರ ಅಭಿಪ್ರಾಯ ಸರಿ. ನಿನ್ನ ಲೆಕ್ಕಾಚಾರ ಏನು?"
"ಅವರು ಬೇಕಾದಾಗ ಮಾಡಲಿ. ಆದರೆ ಆಯಿತು. ಇಲ್ಲದಿದ್ದರೆ ಇಲ್ಲ"
"ಅದೇಕೆ ಹಾಗೆ ಹೇಳುತ್ತೀಯೆ?"
"ನಿನಗೇ ಗೊತ್ತಲ್ಲ ಕಾರಣಗಳು. ನೀನು ಗುಣಿಸಿ ನೋಡಿಲ್ಲವೇ?"

*****

ಕುಳಿತು ಕೇಳುತ್ತಿದ್ದವನಿಗೆ ಸ್ವಲ್ಪ ಸಂದೇಹ ಬಂತು. ಕನಕಾಭಿಷೇಕ ಮಾಡುವವರು ಅವರು. ಮಾಡಿಸಿಕೊಳ್ಳುವವರು ಇವರು. ಇದರಲ್ಲಿ ಗುಣಿಸುವುದು ಏನು ಬಂತು? ಸ್ವಲ್ಪ ಯೋಚಿಸಿದಮೇಲೆ ಅರ್ಥ ಆಯಿತು.

"ನನ್ನನ್ನು ಏಕೆ ಕೇಳುತ್ತೀಯೆ? ನೀನು ಲೆಕ್ಕ ಮಾಡಿಲ್ಲವೇ?"
"ಮಾಡಿದ್ದೇನೆ. ನೀನೂ ಮಾಡಿದ್ದೀ ಅಂತಾನೂ ನನಗೆ ಗೊತ್ತು"
"ಸರಿ. ನಿನ್ನ ಅಭಿಪ್ರಾಯವೇನು?'
"ಪ್ರಯಾಣ ಹೋರಾಡಬೇಕಲ್ಲಪ್ಪ. ಅವರು ಮಾಡುವ ದಿನದವರೆಗೆ ನಾನು ಇಲ್ಲಿರಬೇಕಲ್ಲ"
"ನೀನು ಇಲ್ಲಿಯೇ ಇರುತ್ತೇನೆ ಅಂದರೆ ಯಾರ ಅಡ್ಡಿ?"
"ಕೆಂಪಣ್ಣ ಬಿಡಬೇಕಲ್ಲ. ಕಾದು ಕುಳಿತಿದ್ದಾನೆ"
"ಕನಕಾಭಿಷೇಕಕ್ಕೆ ನನ್ನನ್ನು ಕರೆಯುತ್ತೀಯೋ?"
"ಕರೆದರೆ ಬರುತ್ತೀಯೋ?"
"ಬರಬೇಕು. ನನ್ನದೂ ಪ್ರಯಾಣವಿದೆಯಲ್ಲ"
"ಖಂಡಿತ ಬಾ. ಆಮೇಲೆ ನಾವು ಒಬ್ಬರಿಗೊಬ್ಬರು ಸಿಗುವುದು ಕಷ್ಟ" 
"ಆದರೆ ರವಿಯಣ್ಣ ಬರಲು ಬಿಡಬೇಕಲ್ಲ"
"ಹೌದು. ಪ್ರಯಾಣಗಳನ್ನು ಮುಂದೂಡುವಂತಿಲ್ಲವಲ್ಲ"
"ನೋಡೋಣ. ಯಾರು ಮೊದಲು ಪ್ರಯಾಣ?"
"ಒಬ್ಬ ಮುಂದೆ. ಇನ್ನೊಬ್ಬ ಹಿಂದೆ. ಮೊದಲು ಬಂದವನು ಮೊದಲು ಹೋಗುವುದು ನ್ಯಾಯ"

ಕೆಂಪಣ್ಣ ಅಂದರೆ ಕುಜ ಗ್ರಹ. ಕುಜ (ಅಂಗಾರಕ) ಕೆಂಪು ಗ್ರಹ. ಅದಕ್ಕೇ ಕೆಂಪಣ್ಣ ಆದ. ಅವನು ಕೆಂಪಣ್ಣ ಆದ್ದರಿಂದ ಇವನು ರವಿಯಣ್ಣ ಆದ. ಕುಜ ಅವರಿಗೆ ಮಾರಕ. ರವಿ ಇವರಿಗೆ ಮಾರಕ. 

"ನಾನು ಹೇಳುವುದು ಹೇಳಿದ್ದೇನೆ. ಮುಂದಿನ ತಿಂಗಳು ದಿನ ನಿಷ್ಕರ್ಷೆ ಮಾಡಿ ಅಂದೇ ಆಗಬೇಕು ಅಂದಿದ್ದೇನೆ. ಇಷ್ಟರ ಮೇಲೆ ಅವರಿಷ್ಟ"
"ನೀನು ಹಾಗೆ ಖಂಡಿತವಾಗಿ ಹೇಳಿದ ಮೇಲೆ ಅವರು ಮಾಡೇ ಮಾಡುತ್ತಾರೆ. ನಾನೂ ಬರುತ್ತೇನೆ"

ಇವರ ಮಾತಿನ ಧಾಟಿ, ಏರು ಮಾತಿನ ಶಬ್ದ ಅಲ್ಲಿದ್ದವರಿಗೆ ಸ್ವಲ್ಪ ಮೋಜೆನಿಸಿತು. ಕೆಲವರು ವಾರ್ಡಬಾಯ್, ಮತ್ತು ನರ್ಸುಗಳು ಬಾಗಿಲಲ್ಲಿ ಗುಂಪುಗಟ್ಟಿದರು. ರೌಂಡ್ಸ್ ಬಂದ ಡಾಕ್ಟರ್ ಗುಂಪು ನೋಡಿ ಗದರಿದರು.

*****

ಕುಳಿತು ಕೇಳಿಸಿಕೊಳ್ಳುತ್ತಿದ್ದವ ಹೊರಗೆ ಬಂದ. ನಿಂತಿದ್ದವರು ಇಬ್ಬರು ಬಂದು ಅವನನ್ನು ಕೇಳಿದರು.

"ಯಾವ ಊರಿಗೆ ಹೋಗುವ ವಿಚಾರ ಅವರು ಮಾತಾಡುತ್ತಿರುವುದು" 
"ಊರಿಗಲ್ಲ. ಪರಲೋಕಕ್ಕೆ"
"ಅಂತಹ ವಿಷಯ ಇಷ್ಟು ಸುಲಭವಾಗಿ ಮಾತಾಡುತ್ತಾರೆಯೇ?"
"ನೀವೇ ಕೇಳುತ್ತಿದ್ದೀರಲ್ಲ"
"ಮತ್ತೆ ಇಬ್ಬರೂ ನಗುನಗುತ್ತಲೇ ಮಾತಾಡುತ್ತಿದ್ದರಲ್ಲ"
"ಅವರಿಬ್ಬರೂ ಹಾಗೇ. ಅವರ ಸ್ವಭಾವ"
*****

ಅವರು ಹೇಳಿದ್ದ ದಿನವೇ "ಕನಕಾಭಿಷೇಕ" ಆಯಿತು. ಕುಜ ಮೇಲೆ ಹೇಳಿದಂತೆ ಕೆಂಪು ಗ್ರಹ. ವಿಜ್ಞಾನಿಗಳೂ ಅದನ್ನೇ ಹೇಳುತ್ತಾರೆ. ಕುಜ ಮಾರಕ ಆದರೆ ರಕ್ತಗಾಯ ಆಗಿ ಕೊನೆ. ಕಾಲಿನಲ್ಲಿ ಆದ ಗಾಯ ನೆಪವಾಗಿ ಅದೇ ತಿಂಗಳ ಅಮಾವಾಸ್ಯೆ ಕೆಂಪಣ್ಣ ತನ್ನ ಕೆಲಸ ಮಾಡಿದ.

ಮುಂದೆ ಮೂರೇ ವಾರಗಳಲ್ಲಿ ರವಿಯಣ್ಣನೂ ತನ್ನ ಕೆಲಸ ಮುಗಿಸಿದ.

ಈಗ ಇಬ್ಬರೂ ಪರವೂರಿನಲ್ಲಿ ಮತ್ತೊಂದು ವಿಷಯದ ಬಗ್ಗೆ ಚರ್ಚೆ ನಡೆಸಿರಬೇಕು!