Showing posts with label Vyasaraja. Show all posts
Showing posts with label Vyasaraja. Show all posts

Monday, August 17, 2026

ಅರಳಿದ ಬಂಗಾರದ ಮಲ್ಲಿಗೆ


ಬೆಂಗಳೂರು ನಗರದಿಂದ ಉತ್ತರ ದಿಕ್ಕಿನ ಮೂವತ್ತು ಮೈಲಿಗಳ ದೂರದಲ್ಲಿ ದೊಡ್ಡಬಳ್ಳಾಪುರ ಪಟ್ಟಣ ಇರುವುದು ಎಲ್ಲರಿಗೂ ಚಿರಪರಿಚಿತ. ಈ ಪಟ್ಟಣದ ಹೊರವಲಯದಲ್ಲಿ (ಈಗ ಪಟ್ಟಣದಲ್ಲಿಯೇ ಸೇರಿಹೋಗಿದೆ) ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯವಿದೆ. ಈ ದೇವಾಲಯ ಇರುವ ಊರಿಗೆ "ಅರಳುಮಲ್ಲಿಗೆ" ಎಂದು ಹೆಸರು. 

"ಅರಳುಮಲ್ಲಿಗೆ" ಎಂದರೇನು? ಮಲ್ಲಿಗೆ ಬೆಳೆದವರಿಗೆಲ್ಲಾ ಇದು ಗೊತ್ತಿರುವ ವಿಚಾರ. ಮಲ್ಲಿಗೆಯು ಒಂದು ಬಳ್ಳಿಯ ಕುಟುಂಬ ಬಳಗದ ಸಸ್ಯ. ಇದರಲ್ಲಿ ಅನೇಕ ವಿಧಗಳು ಉಂಟು. ಆಸರೆ ಸಿಕ್ಕಿದ ಕಡೆ ಹಬ್ಬಿಕೊಂಡು ಹೋಗುವುದು. ಹೊಲಗಳಲ್ಲಿ ಕೃಷಿ ಮಾಡಿದರೆ ಒಂದು ಪೊದೆಯಂತೆ ಬೆಳೆದು ನಿಲ್ಲುವುದು. ಸಂಜೆಯ ವೇಳೆ ಮೊಗ್ಗು ತುಂಬಿದ ಗಿಡ ಕಾಣಬಹುದು. ಬೆಳಗ್ಗೆ ನೋಡಿದರೆ ಗಿಡದ ತುಂಬಾ ಹೂವುಗಳು. ಮತ್ತೇರಿಸುವ ಸುಗಂಧ. ದೇವರ ಪೂಜೆಗೆ ತುಂಬಾ ಬೇಕಾದ ಹೂವು. ಮದುವೆ-ಮುಂಜಿಗಳಿಗೆ, ಗಣ್ಯರಿಗೆ, ಅತಿಥಿಗಳಿಗೆ ಮಲ್ಲಿಗೆ ಮಾಲೆ ಹಾಕಿ ಸ್ವಾಗತಿಸುವುದು, ಸತ್ಕರಿಸುವುದು ಈಗಲೂ ನಡೆಯುತ್ತದೆ. ಮೈಸೂರಿನ "ದೇವರಾಜ ಮಾರ್ಕೆಟ್" ಒಳಗೆ, ನಾವು ಚಿಕ್ಕವರಿದ್ದಾಗ ಹೂವಿನ ಅಂಗಡಿಗಳ ಮುಂದೆ ಸುಗಂಧ ಸೇವನೆಗಾಗಿ ಸುಮ್ಮನೆ ಈಕಡೆಯಿಂದ ಆಕಡೆ, ಆಕಡೆಯಿಂದ ಈಕಡೆ ಒಮ್ಮೆ ಹೋಗಿ ಬರುತ್ತಿದ್ದುದೂ ಉಂಟು!

ಹಿಂದೆಲ್ಲಾ ಗಂಡು ಮಕ್ಕಳಿಗೂ ಐದಾರು ವರುಷ ಆಗುವವರೆಗೆ ಉದ್ದ ಕೂದಲು ಬೆಳೆಸುತ್ತಿದ್ದರು. ನಂತರ "ಚಂಡಿಕಾ ಕಾರ್ಯಕ್ರಮ" ನಡೆಯುತ್ತಿತ್ತು. "ಚೌಲ" ಅನ್ನುವ ಇದು ಷೋಡಶ (ಹದಿನಾರು) ಕರ್ಮಗಳಲ್ಲಿ ಒಂದಾಗಿತ್ತು. ಕನ್ನಡಲ್ಲಿ "ಮುಡಿ ಕೊಡುವುದು" ಎಂದು ಹೇಳುತ್ತಿದ್ದರು. ಒಂದು ಹಬ್ಬ ಮಾಡಿ, ಕುಲದೇವರ ಮುಂದೆ ಮೊದಲ ಬಾರಿ ತಲೆಯ ಕೂದಲು ಕತ್ತರಿಸುತ್ತಿದ್ದರು. ಅದರ ಹಿಂದಿನ ಒಂದೆರಡು ದಿನಗಳಲ್ಲಿ ಉದ್ದದ ಜಡೆ ಹೆಣೆದು, ಅದಕ್ಕೆ ಮಲ್ಲಿಗೆ, ಕನಕಾಂಬರ, ಸಿಕ್ಕಿದರೆ ತಾಳೆ ಹೂವು, ಮೊದಲಾದ ಹೂವುಗಳಿಂದ "ಮೊಗ್ಗಿನ ಜಡೆ" ಎನ್ನುವ ಹೆಸರಿನಿಂದ ಹೆಣ್ಣು ಮಗುವಿನಂತೆ ಅಲಂಕರಿಸುತ್ತಿದ್ದರು. ಕೆನ್ನೆಯ ಮೇಲೆ ಒಂದು ಕರಿಯ ದೃಷ್ಟಿ ಬೊಟ್ಟು ಇರುತ್ತಿತ್ತು. ನಂತರ ಅವರಿವರ ಮನೆಗೆ ಕರೆದುಕೊಂಡು ಹೋಗಿ ತೋರಿಸಿ, ಫೋಟೋ ಸ್ಟುಡಿಯೋದಲ್ಲಿ ಫೋಟೋ ತೆಗೆಸುತ್ತಿದ್ದರು. ಹೆಣ್ಣು ಮಕ್ಕಳಿಗಂತೂ ಈ "ಮೊಗ್ಗಿನ ಜಡೆ" ಕಾರ್ಯಕ್ರಮ ಆಗಲೇಬೇಕಿತ್ತು. ಕೆಲವರಿಗೆ ಎರಡು-ಮೂರು ಬಾರಿ ಈ ಉತ್ಸವ ಆಗುತ್ತಿದ್ದುದೂ ಉಂಟು. 

******

ಮಲ್ಲಿಗೆ ಗಿಡ ಇರುವ ಕಡೆಗಳಲ್ಲೆಲ್ಲಾ ಸಂಜೆ ಮೊಗ್ಗು ಕಾಣಿಸಿಕೊಂಡು ಮಾರನೆಯ ಬೆಳಿಗ್ಗೆ ಹೂವು ಅರಳಿ ಸುಗಂಧ ಪಸರಿಸುವುದುದು ಇದ್ದದ್ದೇ. ಅಂಥದುದರಲ್ಲಿ ಒಂದು ಊರಿಗೆ ಹೀಗೆ "ಅರಳುಮಲ್ಲಿಗೆ" ಎಂದು ಹೆಸರು ಬರಲು ಕಾರಣ ವಿಶೇಷ ಏನು? ಇದಕ್ಕೆ ಒಂದು ಸೊಗಸಾದ ಇತಿಹಾಸ ಇದೆ. 

ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪರಮ ಗುರುಗಳಾದ ಶ್ರೀ ವಿಜಯೀ೦ದ್ರ ತೀರ್ಥರ ಬಗ್ಗೆ ಹಿಂದಿನ "ಇಷ್ಟು ಹೇಳಿದರೆ ನೀನು ಪಂಡಿತ!" ಅನ್ನುವ ಸಂಚಿಕೆಯಲ್ಲಿ ಕೆಲವು ಸಂಗತಿಗಳನ್ನು ತಿಳಿದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು.

ಸುಮಾರು ನಾಲ್ಕು ನೂರು ವರುಷಗಳ ಹಿಂದಿನ ಮಾತು. ಶ್ರೀ ರಾಘವೇಂದ್ರ ಗುರು ರಾಯರ ನೇರ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರು ಕುಂಭಕೋಣ ಮಠದಲ್ಲಿ ಶ್ರೀ ವಿಜಯೀ೦ದ್ರ ತೀರ್ಥರ ಬಳಿ ಸನ್ಯಾಸ ಸ್ವೀಕರಿಸಿ (1596), ಅಲ್ಲಿ ಕೆಲ ಕಾಲ ಹೆಚ್ಚಿನ ವಿದ್ಯಾರ್ಜನೆ ನಡೆಸಿ, ತಮ್ಮ ಗುರು ಪರಂಪರೆಯ ಎಲ್ಲ ಯತಿಗಳಂತೆ ವ್ಯಾಕರಣ, ತರ್ಕ, ಪೂರ್ವ ಮೀಮಾಂಸಾ, ಉತ್ತರ ಮೀಮಾಂಸಾ ಮೊದಲಾದ ಶಾಸ್ತ್ರಗಳಲ್ಲಿ ವಿಶೇಷ ಪಾಂಡಿತ್ಯ ಗಳಿಸಿದ್ದರು. ತಂಜಾವೂರು ಅರಸರ ಆಸ್ಥಾನದಲ್ಲಿ ನಡೆದ ಅನೇಕ ವಾದಗಳಲ್ಲಿ ಜಯಭೇರಿ ಬಾರಿಸಿ "ಷಟ್-ದರ್ಶನಾಚಾರ್ಯ" ಎಂದು ಬಿರುದನ್ನೂ ಸಂಪಾದಿಸಿದ್ದರು. ಶ್ರೀ ಸುಧೀಂದ್ರ ತೀರ್ಥರು ಯತಿಗಳು ಸಾಮಾನ್ಯವಾಗಿ ಹೆಚ್ಚು ಗಮನ ಕೊಡದ ಕಾವ್ಯ, ಅಲಂಕಾರ, ನಾಟಕ ಮುಂತಾದುವುಗಳಲ್ಲಿ ಸಹ ವಿಶೇಷ ಪರಿಣತಿ ಪಡೆದಿದ್ದರು. ನಂತರ ಗುರುಗಳ ಅಪ್ಪಣೆ ಪ್ರಕಾರ "ವಿಜಯ ಯಾತ್ರೆ" ಹೊರಟಿದ್ದರು. ಹೀಗೆ ಸಂಚಾರದ ಸಮಯದಲ್ಲಿ ದೊಡ್ಡಬಳ್ಳಾಪುರಕ್ಕೆ ಬಂದರು. 

******

ಶ್ರೀ ವಿಜಯೀ೦ದ್ರ ತೀರ್ಥರ ಮೊದಲ ಗುರುಗಳಾದ ಪೂರ್ವದಿ ಮಠದ ಶ್ರೀ ವ್ಯಾಸ ತೀರ್ಥರು ವಿಜಯನಗರದ ಅರಸರ ರಾಜಗುರುಗಳಾಗಿದ್ದವರು. ಅಭೂತಪೂರ್ವ ಕೀರ್ತಿ ಸಂಪಾದಿಸಿ ಜಯಶಾಲಿಗಳಾದವರು. ಶ್ರೀ ಮುಖ್ಯಪ್ರಾಣನ ಉಪಾಸಕರಾದ ಅವರು ದಕ್ಷಿಣ ಭಾರತ ಪ್ರದೇಶಗಳ ಮೂಲೆ ಮೂಲೆಗಳಲ್ಲಿ ಸಂಚರಿಸಿ 732 ಆಂಜನೇಯ ವಿಗ್ರಹಗಳನ್ನು ಪ್ರತಿಷ್ಠೆ ಮಾಡಿದ್ದಾರೆ. ಇವುಗಳ ವಿಶೇಷವೆಂದರೆ ಇಂತಹ ಮೂರ್ತಿಗಳ ಬಾಲದ ಕೊನೆಯಲ್ಲಿ ಒಂದು ಗಂಟೆ ಇರುವುದು.

ಶ್ರೀ ಸುಧೀಂದ್ರ ತೀರ್ಥರು ದೊಡ್ಡಬಳ್ಳಾಪುರಕ್ಕೆ ಬಂದಾಗ ಹತ್ತಿರದಲ್ಲೇ ಇದ್ದ, ತಮ್ಮ ಪರಮಗುರುಗಳ ವಿದ್ಯಾಗುರುಗಳಾದ ಶ್ರೀ ವ್ಯಾಸರಾಜ ಪ್ರತಿಷ್ಠಿತ ಮುಖ್ಯಪ್ರಾಣನ ಪೂಜೆ ಮಾಡಲು ಇಚ್ಛಿಸಿದರು. ಅಲ್ಲಿಗೆ ಹೋಗಿ ಪೂಜೆ ಮಾಡುವ ಸಂದರ್ಭದಲ್ಲಿ ಮಲ್ಲಿಗೆ ಹೂವು ಅಥವಾ ಮಾಲೆ ಇರಲಿಲ್ಲ. ಅವರ ಬಳಿ ಚಿನ್ನದಿಂದ ಮಾಡಿದ ಮಲ್ಲಿಗೆ ಮೊಗ್ಗುಗಳ ಸರ ಇತ್ತು. ಅದನ್ನೇ ಆಂಜನೇಯನಿಗೆ ಅರ್ಪಿಸಿ ಪೂಜಿಸಿದರು. ಪೂಜೆಯ ನಂತರ ದೇವಾಲಯದ ಗುಡಿಯ ಬಾಗಿಲು ಹಾಕಿ ಎಲ್ಲರೂ ಹೊರಬಂದರು. ರಾತ್ರಿ ಕಳೆಯಿತು. 

ಮಾರನೆಯ ದಿನ ದೇವಾಲಯದ ಬಾಗಿಲು ತೆರೆದಾಗ ಎಲ್ಲೆಲ್ಲೂ ಮಲ್ಲಿಗೆ ಹೂವುಗಳ ಅಮೋಘ ಪರಿಮಳ. ಆಂಜನೇಯನ ವಿಗ್ರಹಕ್ಕೆ ಹಾಕಿದ್ದ ಬಂಗಾರದ ಮಲ್ಲಿಗೆ ಸರದ ಮೊಗ್ಗುಗಳು ಅರಳಿದ್ದವು. ಅಂದಿನಿಂದ ಆ ಗ್ರಾಮಕ್ಕೆ "ಅರಳುಮಲ್ಲಿಗೆ" ಎಂದು ಹೆಸರಾಯಿತು.

******

ಶ್ರೀ ಸುಧೀಂದ್ರ ತೀರ್ಥರು ತಮ್ಮ ವಿಜಯ ಯಾತ್ರೆಯ ಸಂದರ್ಭದಲ್ಲಿ ಗ್ವಾಲಿಯರ್, ಬರೋಡ, ಜೈಪುರ ಮತ್ತು ಸುತ್ತಮುತ್ತಲಿನ ಇತರೆ ಸಂಸ್ಥಾನಗಳಿಗೂ ಭೇಟಿ ಕೊಟ್ಟಿದ್ದರು. ಗ್ವಾಲಿಯರ್ ಮಹಾರಾಜ ಸಿಂಧಿಯಾ ಅವರ ವಿದ್ವತ್ತಿಗೆ ಮೆಚ್ಚಿ "ರಾಜಗುರು" ಎಂದು ವಿಶೇಷ ಮನ್ನಣೆ ನೀಡಿದ್ದನು. ತಾನು ಉಪಯೋಗಿಸುವಂತಹ ಛತ್ರ, ಚಾಮರ ಮುಂತಾದುವುಗಳನ್ನು ಕೊಟ್ಟು ಗೌರವಿಸಿದನು. ವಿಜಯನಗರದ ವೀರ ವೆಂಕಟರಾಯ ಮಹಾರಾಜನು ಅವರಿಗೆ "ವಿಜಯ ಶಂಖ" ಕೊಟ್ಟು "ರತ್ನಾಭಿಷೇಕ" ಮಾಡಿ ಗೌರವಿಸಿದನು. 

ಬಿಜಾಪುರ ಆಳಿದ ಆದಿಲ್ ಶಾಹಿ ವಂಶದಲ್ಲಿ ಎರಡನೆಯ ಇಬ್ರಾಹಿಂ ಆದಿಲ್ ಷಾ (1579-1626) ಅತ್ಯಂತ ಪ್ರಭಾವಶಾಲಿ ಅರಸು. ಅವನ ಕಾಲದಲ್ಲಿ ಹನ್ನೆರಡು ವರುಷಗಳ ಸುದೀರ್ಘ ಕ್ಷಾಮ ಬಂದಿತ್ತಂತೆ. ಶ್ರೀ ಸುಧೀಂದ್ರ ತೀರ್ಥರಲ್ಲಿ ಬಹಳ ಗೌರವ ಇಟ್ಟಿದ್ದ ಅವನ ಮನವೀಯ ಮೇರೆಗೆ ಅವರು ರಾಜ್ಯದ ಧಾನ್ಯಾಗಾರದಲ್ಲಿ ಒಂದು ವಾರ ಕಾಲ ವಿಶೇಷ ಜಪಾದಿಗಳನ್ನು ನಡೆಸಿದರು. ನಂತರ ಧಾರಾಕಾರ ಮಳೆಯಾಗಿ ಸುಭಿಕ್ಷ ಬಂದಿತು. ಮೊದಲಿಗೆ ಸ್ವಲ್ಪ ಹಿಂಜರಿಯುತ್ತಿದ್ದ ಅವನ ಮಂತ್ರಿಯಾಗಿದ್ದ ಘನಶ್ಯಾಮ ರಾಯ ಅವರ ಶಿಷ್ಯನಾಗಿ "ಆನೆ ಹೊಸೂರು" ಎನ್ನುವ ತನ್ನ ಸ್ವಂತ ಗ್ರಾಮವನ್ನು ಗುರುಗಳಿಗೆ ಬಳುವಳಿಯಾಗಿ ಕೊಟ್ಟನು

ಈ ಎಲ್ಲ ಸಂಗತಿಗಳಿಗೂ ಸಂಬಂಧಪಟ್ಟ ಸ್ಥಳಗಳಲ್ಲಿ ದಾಖಲೆಗಳಿವೆ. ಶ್ರೀ ಸುಧೀಂದ್ರ ತೀರ್ಥರು ಅನೇಕ ಸತ್ವಯುತ ಗ್ರಂಥಗಳ ರಚಯಿತರು. ಅವುಗಳಲ್ಲಿ ಕೆಲವು ಸಿಕ್ಕಿವೆ. ಕೆಲವು ಉಪಲಬ್ಧವಿಲ್ಲ. 

ಶ್ರೀ ರಾಘವೇಂದ್ರ ಗುರುಗಳ ಸ್ತೋತ್ರದಲ್ಲಿ "ವಿಜಯೀ೦ದ್ರ ಕರಾಬ್ಜೋಥಾ ಸುಧೀಂದ್ರ ವರಪುತ್ರಕಃ" ಎಂಧು ಹೇಳುವುದಕ್ಕೆ ಈ ಎಲ್ಲಾ ಹಿನ್ನೆಲೆಗಳಿವೆ.
******

ಈ ತಿಂಗಳ (ಆಗಸ್ಟ್ 2026) 30ನೆಯ ದಿನಾಂಕ ಶ್ರೀ ಗುರು ರಾಘವೇಂದ್ರ ರಾಯರ 355ನೇ ವರ್ಷದ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅವರ ಗುರು ಪರಂಪರೆಯ ಶ್ರೀ ಸುರೇಂದ್ರ ತೀರ್ಥರು, ಶ್ರೀ ವಿಜಯೀ೦ದ್ರ ತೀರ್ಥರು ಮತ್ತು ಶ್ರೀ ಸುದೀಂಧ್ರ ತೀರ್ಥರ ಬಗ್ಗೆ ಸ್ವಲ್ಪ ಪರಿಚಯವನ್ನು ಮೂರು ಸಂಚಿಕೆಗಳಲ್ಲಿ ಮಾಡಿಕೊಂಡೆವು. 

ಒಬ್ಬರು ಕಣ್ಣ ಮುಂದೆ ಇಲ್ಲವಾದ ಬಳಿಕ ಕೆಲವು ವರುಷಗಳ ನಂತರ ಅವರ ಹೆಸರೂ ಇರುವುದಿಲ್ಲ. ನಾಲ್ಕು ಶತಮಾನ ಕಳೆದ ಬಳಿಕವೂ ಈ ಮಹನೀಯರ ಕಾರ್ಯಗಳು, ಕೃತಿಗಳು ಮತ್ತು ಸಾಧನೆಗಳ ವಿವರಗಳು ವಿಪುಲವಾಗಿ ಸಿಗುತ್ತವೆ. ಮೇಲೆ ಹೇಳಿದ ದೂರ ದೂರದ ಸ್ಥಳಗಳಲ್ಲಿಯೂ ಈಗಲೂ ಅವರ ಬಗ್ಗೆ ಗೌರವಾದರಗಳಿವೆ. ರಾಯರ ಆರಾಧನೆಯಂತೂ ವರುಷದಿಂದ ವರುಷಕ್ಕೆ ಇನ್ನೂ ಬೆಳೆಯುತ್ತಲೇ ಇದೆ. 

ಶ್ರಮಪಟ್ಟು ಆಯಾ ಗ್ರಂಥಗಳನ್ನು ಅಭ್ಯಸಿಸಿ, ಸ್ಥಳಗಳನ್ನು ನೋಡಿ ಬಂದರೆ, ಅವುಗಳ ಪರಿಣಾಮವಾಗಿ ಹೆಚ್ಚಿನ ನಂಬಿಕೆ ಬರುತ್ತದೆ. 

Friday, August 14, 2026

ಇಷ್ಟು ಹೇಳಿದರೆ ನೀನು ಪಂಡಿತ!


ಕಳೆದ ಸಂಚಿಕೆಯಲ್ಲಿ "ನಮಗೆ ಅವರೇ ಬೇಕು!" ಅನ್ನುವ ಶೀರ್ಷಿಕೆಯಡಿ ಕುಂಭಕೋಣ ಮಠದ ಶ್ರೀ ಸುರೇಂದ್ರ ತೀರ್ಥರು ಪೂರ್ವಾದಿ ಮಠದ ಯತಿಗಳಾದ ಶ್ರೀ ವ್ಯಾಸರಾಜರಿಂದ ಅವರ ಪ್ರೀತಿಯ ಶಿಷ್ಯರಾದ ಶ್ರೀ ವಿಷ್ಣುತೀರ್ಥರನ್ನು ದತ್ತು ಪಡೆದುಕೊಂಡು, ಅವರಿಗೆ "ಶ್ರೀ ವಿಜಯೀ೦ದ್ರ ತೀರ್ಥ" ಎಂದು ಮರುನಾಮಕರಣ ಮಾಡಿ, ತಮ್ಮ ನಂತರ ಪೀಠಾಧಿಪತಿಗಳನ್ನಾಗಿ ಮಾಡಿದ ವಿಚಾರ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಶ್ರೀ ವಿಜಯೀ೦ದ್ರ ತೀರ್ಥರ ವಿಚಾರದಲ್ಲಿ ಕೆಲವು ಓದುಗರು ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳ ಬಗ್ಗೆ ಈ ಸಂಚಿಕೆಯಲ್ಲಿ ಸ್ವಲ್ಪ ವಿಚಾರ ಮಾಡೋಣ. 

ಶ್ರೀ ವಿಜಯೀ೦ದ್ರ  ತೀರ್ಥರ ಬಾಲ್ಯದ ಬಗ್ಗೆ ಹೆಚ್ಚು ತಿಳಿಯುವುದಿಲ್ಲ. ಅವರು ಶ್ರೀ ವ್ಯಾಸತೀರ್ಥರ ಪೂರ್ವಾಶ್ರಮದ ಕಡೆಯ ಸಂಬಂಧಿ ಎಂದು ಒಂದು ಅಭಿಪ್ರಾಯವಿದೆ. ಅವರು "ಗೌಡ ಸಾರಸ್ವತ" ಕುಟುಂಬದವರು ಎಂದು ಹೇಳುವ ಕೊಂಕಣಿ ಭಾಷೆಯ ವಿಡಿಯೋ ಒಂದು ಪ್ರಚಲಿತವಿದೆ. ಸ್ನೇಹಿತರೊಬ್ಬರು ಅದನ್ನು ಮೊನ್ನೆ ಕಳಿಸಿಕೊಟ್ಟಿದ್ದಾರೆ. ಅದಕ್ಕೆ ಯಾವುದೇ ಆಧಾರ ಸಿಗುವುದಿಲ್ಲ. ಇದು ಐದು ನೂರು ವರುಷ ಕಳೆದ ಮಾತು. ಆಧಾರ ಎಲ್ಲಿ ಸಿಗಬೇಕು? ಆಗ ಈಗಿನಂತೆ ಅಧಿಕೃತವಾಗಿ ದಾಖಲೆಗಳು ಇರಲಿಲ್ಲವಲ್ಲ.

"ಹಂಸ-ಕ್ಷೀರ ನ್ಯಾಯ", "ಬೀಜ-ವೃಕ್ಷ ನ್ಯಾಯ", "ಕಾಕ-ತಾಳ ನ್ಯಾಯ" ಮುಂತಾದುವುಗಳಂತೆ "ಪುತ್ರಿಕಾ-ಪುತ್ರ ನ್ಯಾಯ" ಎಂದು ಒಂದುಂಟು. ಹೆಣ್ಣು ಮಗಳು ಪಡೆದಿದ್ದು, ಮಗನು ಇಲ್ಲದ ದಂಪತಿಗಳು ಆ ಕಾರಣಕ್ಕಾಗಿ ಅವಳ ವಿವಾಹದ ಸಮಯದಲ್ಲಿ ಅಳಿಯನಲ್ಲಿ ಒಂದು ಬೇಡಿಕೆ ಇಡುತ್ತಿದ್ದರು. ಮುಂದೆ ಆ ದಂಪತಿಗಳಿಗೆ ಹುಟ್ಟುವ ಮೊದಲ ಗಂಡು ಶಿಶುವನ್ನು ತಮಗೆ ದತ್ತು ಕೊಡಬೇಕೆಂದು ಕೇಳುವುದು. ಹೀಗೆ ದತ್ತು ಬಂದ ಮೊಮ್ಮಗನನ್ನು ಮಗ ಎಂದು ಸ್ವೀಕರಿಸುವುದು. ಇದನ್ನು "ಪುತ್ರಿಕಾ-ಪುತ್ರ ನ್ಯಾಯ" ಅನ್ನುತ್ತಾರೆ. ನಮ್ಮ ಬಾಲ್ಯದಲ್ಲಿ ಈ ರೀತಿಯ ಕೆಲವು ಪ್ರಕರಣಗಳನ್ನು ನೋಡಿದ್ದೇವೆ. ಈಗ ಈ ರೀತಿಯ ಉದಾಹರಣೆಗಳು ಸಿಗುವುದಿಲ್ಲ.

ಅನೇಕ ಮಕ್ಕಳಿಲ್ಲದ ದಂಪತಿಗಳು ಆಗಿನ ತಪಸ್ವಿ ಯತಿಗಳನ್ನು ಸಂತಾನಕ್ಕಾಗಿ ಕೋರಿಕೊಳ್ಳುತ್ತಿದ್ದರು. ಹೀಗೆ ಸಂತಾನ ಆಗಲೆಂದು ವರಕೊಟ್ಟ ಯತಿಗಳು ಮೊದಲ ಮಗನನ್ನು ತಮಗೆ ಕೊಡಬೇಕೆಂದೂ, ಮುಂದೆ ಹುಟ್ಟುವ ಮಗುವನ್ನು ಆ ದಂಪತಿಗಳು ಸಂತಾನವಾಗಿ ಇಟ್ಟುಕೊಳ್ಳಬಹುದೆಂದು ಸೂಚಿಸುತ್ತಿದ್ದ ಪದ್ಧತಿ ಇತ್ತು. ಈ ರೀತಿ ಪಡೆದುಕೊಂಡ ಶಿಶುವಿಗೆ ಸನ್ಯಾಸ ಕೊಟ್ಟು ಉತ್ತರಾಧಿಕಾರಿ ಪಡೆದುಕೊಂಡ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತವೆ. ಶ್ರೀ ವಿಷ್ಣು ತೀರ್ಥರು ಹೀಗೆ ಶ್ರೀ ವ್ಯಾಸರಾಜರಿಗೆ ದೊರೆತವರು ಎಂದು ಒಂದು ಅಭಿಪ್ರಾಯ ಇದೆ. ಅವರ ಬಾಲ್ಯದ ಹೆಸರು ವಿಠಲಾಚಾರ್ಯ ಎಂಬುದಾಗಿತ್ತು ಎಂದು ತಿಳಿದುಬರುತ್ತದೆ. ಏಳು-ಎಂಟು ವರುಷದವರಾಗಿದ್ದ ಸಮಯದಲ್ಲೇ ಸನ್ಯಾಸ ಆಗಿದ್ದಿತಂತೆ.

******

ಇಲ್ಲಿ, ಪಕ್ಕದಲ್ಲಿ ಒಬ್ಬ ಬಾಲಕ ಕುಳಿತಿದ್ದಾನೆ. ಅವನಿಗೆ ಭೂಗೋಳದ ಬಗ್ಗೆ ಅಪಾರ ಒಲವಿತ್ತು. ಈಗ ಅದು ಚರಿತ್ರೆ ಬಗ್ಗೆ ಹೊರಳಿದೆ. ಚರಿತ್ರೆಯ ಬಗೆಗಿನ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗಳಿಸುವ ಪ್ರಯತ್ನ. ಅಮೇರಿಕ ಸಂಯುಕ್ತ ಸಂಸ್ಥಾನ (USA) ದೇಶದ ಅಧ್ಯಕ್ಷರ ಬಗ್ಗೆ ಅಭ್ಯಾಸ ಮಾಡುತ್ತಿದ್ದಾನೆ. ಸುತ್ತ ಐದಾರು ಪುಸ್ತಕಗಳು ಹರಡಿವೆ. ಇಲ್ಲಿಯವರೆಗೆ 47 ಅಧ್ಯಕ್ಷರು ತಮ್ಮ ತಮ್ಮ ಸರದಿಯಂತೆ ಅಧ್ಯಕ್ಷ ಪದವಿ ಪಡೆದು ದೇಶವನ್ನು ಮುನ್ನಡೆಸಿದ್ದಾರೆ. ಒಬ್ಬರು 13 ವರುಷದಷ್ಟು ದೀರ್ಘಕಾಲ. ಮತ್ತನೇಕರು ಎಂಟೆಂಟು ವರುಷಗಳು. ಕೆಲವರು ನಾಲ್ಕು ವರುಷ. ಹೀಗೆ ಒಟ್ಟು 45 ಮಹನೀಯರು ಈ 47 ಸರದಿಗಳಲ್ಲಿ ಅಧ್ಯಕ್ಷಪೀಠ ಅಲಂಕರಿಸಿದ್ದಾರೆ. ಮೊದಲ ಅಧ್ಯಕ್ಷರಾದ ಶ್ರೀ ಜಾರ್ಜ್ ವಾಶಿಂಗಟನ್ ಅವರಿಂದ ಈಗಿನ ಅಧ್ಯಕ್ಷರಾದ ಶ್ರೀ ಡೊನಾಲ್ಡ್ ಟ್ರಂಪ್ ಅವರತನಕ ಎಲ್ಲ 45 ಹೆಸರುಗಳನ್ನೂ ತಪ್ಪಿಲ್ಲದೆ ಹೇಳುವುದು ಒಂದು ಸವಾಲು. ಅದಕ್ಕೆ ತಯಾರಿ ನಡೆದಿದೆ. 

ಇದು ಕೇವಲ ಮೊದಲ ಹೆಜ್ಜೆ. ಮುಂದೆ ಈ ಎಲ್ಲ ಅಧ್ಯಕ್ಷರ ಕಾಲಗಳಲ್ಲಿ ನಡೆದ ವಿಶೇಷ ಘಟನೆಗಳು ಮತ್ತು ಸಂಬಂಧಪಟ್ಟ ವಿವರಗಳನ್ನು ಕಲಿತು ತಯಾರಾಗಬೇಕು. 45 ಹೆಸರುಗಳ ಎರಡರಷ್ಟು ಆದರೆ? ಅದಕ್ಕಿಂತ ಹೆಚ್ಚು ಆದರೆ? ಅದೆಷ್ಟು ಪ್ರಯಾಸದ ಕೆಲಸ!

ಮಂತ್ರಾಲಯಕ್ಕೆ ಹೋಗಿಬಂದವರಿಗೆ, ಗುರುರಾಯರ ವೃಂದಾವನದ ದರ್ಶನ ಮಾಡಿದವರಿಗೆ ಈಗ ಮುಂದೆ ಹೇಳುವ ವಿಷಯ ಗೊತ್ತು. ಶ್ರೀ ರಾಘವೇಂದ್ರ ರಾಯರ ವೃಂದಾವನದ ಪಕ್ಕದಲ್ಲೇ ಅದೇ ರೀತಿಯ ಇನ್ನೊಂದು ಭವ್ಯ ವೃಂದಾವನ ಇದೆ. ಅದು ಶ್ರೀ ರಾಯರ ನಂತರ ಐದನೆಯವರಾಗಿ ಪೀಠ ಏರಿದ ಶ್ರೀ ವಾದೀಂದ್ರ ತೀರ್ಥ ಶ್ರೀಪಾದರದ್ದು. ಅಂದರೆ, ಶ್ರೀ ವಿಜಯೀ೦ದ್ರ  ತೀರ್ಥ ಗುರುಗಳ ನಂತರ ಏಳನೆಯವರು. ಅವರು 37 ಶ್ಲೋಕಗಳ "ಗುರುಗುಣಸ್ತವನ" ಎಂಬ ಸ್ತೋತ್ರ ಗ್ರಂಥ ರಚಿಸಿದ್ದಾರೆ. ಅದರ ಪ್ರಾರಂಭದಲ್ಲಿ, ಎಂಟನೆಯ ಶ್ಲೋಕದಲ್ಲಿ, ಶ್ರೀ ವಿಜಯೀ೦ದ್ರ ತೀರ್ಥರ ಬಗ್ಗೆ ಹೇಳುತ್ತಾ "ಚತುರಧಿಕ ಶತ ಗ್ರಂಥರತ್ನ ಪ್ರಣೇತಾ" ಎಂದು ವಿವರಿಸುತ್ತಾರೆ. ಶ್ರೀ ವಿಜಯೀ೦ದ್ರ ತೀರ್ಥರು 104 ಗ್ರಂಥ ರತ್ನಗಳನ್ನು ರಚಿಸಿದ ಮಹಾನುಭಾವರು! 

ಮಾಧ್ವ ಸಿದ್ಧಾಂತ ಗ್ರಂಥಗಳ ಅಧ್ಯಯನ ಮಾಡುವ ವಿದ್ವಾಂಸರಲ್ಲಿ ಒಂದು ನಾಣ್ನುಡಿ ಇದೆ. ಆ ವಿಶಾಲ ವಾಗ್ಮಯದ ಆಳ-ಅಗಲಗಳ ಮಾತು ಅತ್ತ ಇಡೋಣ. "ಶ್ರೀ ವಿಜಯೀ೦ದ್ರ ತೀರ್ಥರ 104 ಗ್ರಂಥಗಳ ಹೆಸರು ತಪ್ಪಿಲ್ಲದೆ ಹೇಳು. ಹಾಗೆ ಹೇಳಿದರೆ ಸಾಕು. ಇಷ್ಟು ಹೇಳಿದರೆ ನೀನು ಪಂಡಿತ ಎಂದು ನಾವು ಒಪ್ಪುತ್ತೇವೆ" ಎಂದು. 

ಅಷ್ಟು ಗ್ರಂಥಗಳ ಹೆಸರು ನೆನಪಿಡುವುದೇ ಕಷ್ಟ. ಇನ್ನು ಅಷ್ಟು ಗಾಢ ಪಾಂಡಿತ್ಯಪೂರ್ಣ ಕೃತಿಗಳ ರಚನೆಯ ಬಗೆಗೆ ಏನು ಹೇಳುವುದು? ಈ ಜನಪ್ರಿಯ ಹೇಳಿಕೆ ಶ್ರೀ ವಿಜಯೀ೦ದ್ರ ತೀರ್ಥರ ವಿದ್ವತ್ತಿಗೆ ಮತ್ತು ಕೃತಿ ರಚನಾ ಕೌಶಲ್ಯಕ್ಕೆ ಒಂದು ಕನ್ನಡಿ ಹಿಡಿದಂತೆ.

*******

ಶ್ರೀ ವಿಜಯೀ೦ದ್ರರು (1517-1614) ಕುಂಭಕೋಣಕ್ಕೆ ಬಂದಾಗ ಅದು ಅನೇಕ ವಿದ್ವಾಂಸರ ಬೀಡಾಗಿತ್ತು. ಅಷ್ಟು ಪಂಡಿತ ಮಂಡಳಿಯ ನಡುವೆ ಹೊಸಬರೊಬ್ಬರು ಬಂದು ತಳ ಊರುವುದು ಸಾಮಾನ್ಯ ಮಾತಾಗಿರಲಿಲ್ಲ. ಶ್ರೀ ಅಪ್ಪಯ್ಯ ದೀಕ್ಷಿತರು (1520-1593) ಅದ್ವೈತ ಸಿದ್ಧಾಂತ ಪ್ರತಿಪಾದಕರಲ್ಲಿ ಒಂದು ಬಲು ದೊಡ್ಡ ಹೆಸರು. ಇಬ್ಬರೂ ಸಮ ವಯಸ್ಕರು. ಜೀವನ ಪೂರ್ತಿ ಜೊತೆಯಲ್ಲಿ ಬಾಳಿದವರು. ಸುಮಾರು ಐವತ್ತು ವರುಷ ಕಾಲ ತಮ್ಮ ತಮ್ಮ ಸಿದ್ಧಾಂತವನ್ನು ಎತ್ತಿ ಹಿಡಿದ ಮಹನೀಯರು. ಒಬ್ಬರು ಪ್ರಬಲ ದ್ವೈತಿ. ಇನ್ನೊಬ್ಬರು ಅಂತೆಯೇ ಪ್ರಬಲ ಅದ್ವೈತಿ. ಆದರೂ ತಮ್ಮ ತಮ್ಮ ಸಿದ್ಧಾಂತವನ್ನು ಬಿಡದೆ ಸಾಮರಸ್ಯದಿಂದ ಬಾಳಿದವರು. 

ಸುಮಾರು ನಲವತ್ತು ವರುಷಗಳ ಹಿಂದೆ ಕುಂಭಕೋಣಕ್ಕೆ ಹೋಗಿದ್ದಾಗ ಅಲ್ಲಿನ ಹಿರಿಯರು ಹೇಳಿದ ಮಾತು. ಕುಂಭಕೋಣ ಮಠ ಮತ್ತು ಶ್ರೀ ಅಪ್ಪಯ್ಯ ದೀಕ್ಷಿತರ ಮನೆ ಅಕ್ಕ-ಪಕ್ಕದಲ್ಲಿ. ಮಠದ ಪಕ್ಕದಲ್ಲಿ ದೀಕ್ಷಿತರ ಮನೆ ಎಂದು ತೋರಿಸುತ್ತಿದ್ದರು. ಇವರು ಸನ್ಯಾಸಿಗಳು. ಅವರು ಗೃಹಸ್ಥರು. ಇವರು ದ್ವೈತಿಗಳು. ಅವರು ಅದ್ವೈತಿಗಳು. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶಾಲ ಗ್ರಂಥ ರಾಶಿ ನಿರ್ಮಾಣ ಮಾಡಿದವರು. ಇವರಿಗೆ ವಿಜಯನಗರದ ಅರಸರ ಆಸ್ಥಾನದಲ್ಲಿ ಗುರುಪೀಠ. ಅವರಿಗೆ ವೆಲ್ಲೂರಿನ ಚಿನ್ನಬೋಮ್ಮ ನಾಯಕನ ಆಸ್ಥಾನದಲ್ಲಿ ವಿಶೇಷ ಮನ್ನಣೆ. ಹೀಗೆ ಸಮಾನಾಂತರವಾದ ಜೀವನಗಳು.

ಇವರಿಬ್ಬರ ಮೊದಲ ಭೇಟಿ ಬಗ್ಗೆ ಒಂದು ವಿಶೇಷ ಪ್ರಸಂಗ ಹೇಳುತ್ತಾರೆ. ಒಂದು ಕಾಡಿನ ಕಡಿದಾದ ದಾರಿ. ಇತ್ತಕಡೆಯಿಂದ ಶ್ರೀ ವಿಜಯೀ೦ದ್ರರೂ, ಅತ್ತಕಡೆಯಿಂದ ಶ್ರೀ ಅಪ್ಪಯ್ಯ ದೀಕ್ಷಿತರೂ ಅವರವರ ಶಿಷ್ಯರ ಸಂಗಡ ಬಂದು ಎದುರುಬದರಾದರು. ಆ ದಾರಿಯಲ್ಲಿ ಒಬ್ಬರು ಮಾತ್ರ ನಡೆದು ಹೋಗಬಹುದು. ಇಬ್ಬರಲ್ಲಿ ಒಬ್ಬರು ಹಿಂದೆ ಸರಿದು ದಾರಿ ಬಿಡಬೇಕು. "ಯಾರು ಹಿಂದೆ ಸರಿಯಬೇಕು?" ಎಂದು ಪ್ರಶ್ನೆ ಬಂದಿತು. ಜೊತೆಯಲ್ಲಿದ್ದ ವಿದ್ವಾಂಸರೊಬ್ಬರು "ಈ ಕಾಡನ್ನು ವರ್ಣಿಸಿ ಒಂದು ವಾಕ್ಯವನ್ನು ಇಬ್ಬರೂ ಹೇಳಲಿ. ಯಾವುದು ಚೆನ್ನವಿದೆ ಎಂದು ನಾವೆಲ್ಲಾ ಒಪ್ಪುತ್ತೇವೋ, ಅವರಿಗೆ ಇನ್ನೊಬ್ಬರು ದಾರಿ ಬಿಡಲಿ" ಎಂದು ಸೂಚಿಸಿದರು.  

ಮೊದಲು ಶ್ರೀ ಅಪ್ಪಯ್ಯ ದೀಕ್ಷಿತರು ಹೇಳಿದರು: 
ಅಸ್ತ್ಯರಣ್ಯಂ ತರಣ್ಯ೦ಘರಿ ತರಣ್ಯನ್ತರ್ಧಿ ಪಾದಪಂ 

"ಈ ಕಾಡಿನಲ್ಲಿ ಬೆಳೆದಿರುವ ಹೆಮ್ಮರಗಳು ಸೂರ್ಯನ ಕಿರಣಗಳೇ ಭೂಮಿಗೆ ಬೀಳದಂತೆ ತಡೆದಿವೆ"  ಎಂದು ಅರ್ಥ. ಮರಗಳು ಕಾಲಿನಿಂದ (ಪಾದದಿಂದ-ಅಂದರೆ ಬೇರಿನಿಂದ) ನೀರು ಕುಡಿಯುವುದರಿಂದ ಪಾದಪಗಳು. ತರಣಿ ಅಂದರೆ ಸೂರ್ಯ. ಹೀಗೆ ಪ್ರಾಸಗಳಿಂದ ಕೂಡಿದ ವಿಶೇಷ ರಚನೆ. 

ಈಗ ಶ್ರೀ ವಿಜಯೀ೦ದ್ರರ ಸರದಿ: 
ದರೀಸುಪ್ತ ಝರೀದತ್ತ ಪರೀರಂಭ ಸರೀಸೃಪ೦

"ಕಾಡಿನ ಗುಹೆಗಳಲ್ಲಿ ನಾಗ-ನಾಗಿಣಿಯರು ಒಂದಕ್ಕೊಂದು ಹೆಣೆದುಕೊಂಡು ನಿರ್ಭೀತಿಯಿಂದ ಮಲಗಿವೆ" ಎಂದು ಅರ್ಥ. ದರಿ ಅಂದರೆ ಗುಹೆಗಳು. ಗುಹೆಗಳಲ್ಲಿ ಇರುವ ಸರ್ಪಗಳು. ಹೀಗೆ ಪ್ರಾಸಗಳಿಂದ ಕೂಡಿದ ವಿವರಣೆ. 

ಅಂದಿನಿಂದ ಪ್ರಾರಂಭವಾದ ಅವರಿಬ್ಬರ ಜೊತೆ ಮುಂದೆ ಅನೇಕ ದಶಕಗಳು ಮುಂದುವರೆಯಿತು.

******

ಶ್ರೀ ವಿಜಯೀ೦ದ್ರ ತೀರ್ಥರು ಚತುಷಷ್ಠಿ ಕಲೆಗಳಲ್ಲಿ (ಅರವತ್ತನಾಲ್ಕು ವಿದ್ಯೆಗಳು) ಪರಿಣಿತರು. (ಇವುಗಳಲ್ಲಿ ಕೆಲವು ವಿದ್ಯೆಗಳು. ಮತ್ತೆ ಕೆಲವು ಕಲೆಗಳು). ಹೀಗೆ ಪ್ರಸಿದ್ಧರಾದವರನ್ನು ಪರೀಕ್ಷಿಸಲು ಒಬ್ಬ ದೊಂಬರಾಟ ಮಾಡುವವನು ಬಂದನಂತೆ. "ನೀವು ಅಷ್ಟು ವಿದ್ಯೆ ಕಲಿತಿದ್ದರೆ ನನ್ನಂತೆ ಹಗ್ಗದ ಮೇಲೆ ನಡೆದು ತೋರಿಸಿ" ಎಂದು ಸವಾಲು ಹಾಕಿದನಂತೆ. "ಆಗಲಿ. ಮೊದಲು ನಿನ್ನ ವಿದ್ಯೆ ತೋರಿಸು" ಅಂದರಂತೆ ಶ್ರೀ ವಿಜಯೀ೦ದ್ರರು. ಎತ್ತರದಲ್ಲಿ ಎರಡು ಗೂಟಗಳಿಗೆ ಹಗ್ಗ ಕಟ್ಟಿ ದೊಂಬರವನು ನಡೆದು ತೋರಿಸಿದ. ಈಗ ವಿಜಯೀ೦ದ್ರರ ಸರದಿ.

"ನಮಗೆ ನಿನ್ನ ಹಗ್ಗ ತುಂಬಾ ದಪ್ಪ. ಸಣ್ಣದು ಬೇಕು" ಅಂದರಂತೆ. ಆಶ್ಚರ್ಯ ಚಕಿತನಾದ ದೊಂಬರವನು "ನಿಮಗೆ ಎಂತಹ ಹಗ್ಗ ಬೇಕು?" ಎಂದು ಕೇಳಿದನಂತೆ. "ಬಾಳೆಯ ನಾರು ಆಗಬಹುದು" ಅಂದರಂತೆ. ಬಾಳೆಯ ನಾರಿನಮೇಲೆ ನಡೆದು ತೋರಿಸಿದರಂತೆ.

"ಅಣಿಮಾದಿ ಅಷ್ಟ ಸಿದ್ಧಿಗಳು" ಎಂದು ಕೇಳಿದ್ದೇವೆ. "ಅಣಿಮಾ" ಅಂದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು. ಹೀಗೆ ಸಿದ್ಧಿ ಪಡೆದವರು ದೇಹದ ತೂಕವನ್ನು ಇರುವೆಯಷ್ಟು ಇರುವಂತೆ ಮಾಡಿಕೊಳ್ಳಬಲ್ಲರಂತೆ. ಹೀಗೆ ಮಾಡಿಕೊಂಡು ಬಾಳೆಯ ನಾರಿನ ಮೇಲೆ ನಡೆದು ತೋರಿಸಿದರಂತೆ!

******

ಅನೇಕ ರೀತಿಯಿಂದ ಅವರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಲು ಪ್ರತಿವಾದಿಗಳು ಪ್ರಯತ್ನಿಸಿದರು. "ನಿಮ್ಮ ಬ್ರಹ್ಮಚರ್ಯ ಪರೀಕ್ಷಿಸಬೇಕು" ಎಂದು ಒಂದು ತಂಡ ಬಂದಿತು. "ಹೇಗೆ ಪರೀಕ್ಷಿಸುತ್ತೀರಿ?" ಎಂದು ಕೇಳಿದರೆ, "ನಾಲ್ವರು ವಾರಾಂಗನೆಯರು ಬಂದು ನಿಮಗೆ ಅಭ್ಯಂಜನ ಮಾಡಿಸುತ್ತಾರೆ. ನಿಮಲ್ಲಿ ಯಾವುದೇ ವಿಕಾರ ಆಗದಿದ್ದರೆ ಆಗ ಒಪ್ಪುತ್ತೇವೆ" ಅಂದರು. ಪರೀಕ್ಷೆ ದಿನ ಬಂತು. ಕೌಪೀನ ಧರಿಸಿ ಶ್ರೀ ವಿಜಯೀ೦ದ್ರರು ಕುಳಿತರು.

ವಾರಾಂಗನೆಯರು ಬಂದರು. ಅವರ ದೇಹಕ್ಕೆ ಎಣ್ಣೆ ಹಚ್ಚಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ದೂರ ನಿಂತರು. "ಏಕೆ? ಮುಂದುವರೆಸಿ" ಅಂದರು ಅವರನ್ನು ಕರೆತಂದವರು. "ಆಗುವುದಿಲ್ಲ. ಮೊದಲು ಎಣ್ಣೆ ಹಚ್ಚಿದೆವು. ಈಗ ಅವರ ಮೈ ಮುಟ್ಟಿದರೆ ಛಳಕು ಹೊಡೆದಂತೆ ಆಗುತ್ತಿದೆ. ನಮ್ಮಿಂದ ಇದು ಸಾಧ್ಯವಿಲ್ಲ" ಎಂದು ಹೇಳಿ, ನಮಸ್ಕರಿಸಿ ಹೊರಟುಹೋದರು. 

ಪರೀಕ್ಷೆಗೆ ಎಂದು ಬಂದವರು ಪರೀಕ್ಷೆಗೆ ಕುಳಿತವರನ್ನು ಎಬ್ಬಿಸಿದರು. ಸ್ವಾಮಿಗಳು "ಅಸಂಪ್ರಜ್ಞಾತ ಸಮಾಧಿ" ಹೊಂದಿ ಕುಳಿತಿದ್ದರು. ಮನಸ್ಸು ಧ್ಯಾನದಲ್ಲಿ ಲೀನವಾಗಿತ್ತು. "ಎಲ್ಲಿ? ಪರೀಕ್ಷಕರು ಬರಲಿಲ್ಲವೇ?" ಎಂದರು. ಪರೀಕ್ಷಕರು ಬಂದು, ಪರೀಕ್ಷೆಯ ಪ್ರಯತ್ನ ಮಾಡಿ, ಹೊರಟುಹೋಗಿ ಎಷ್ಟೋ ಹೊತ್ತಾಗಿತ್ತು. 

ಹೀಗೆ ಸಮಾಧಿಯಲ್ಲಿ ಕುಳಿತವರು "ನಾರಾಯಣ" ಅನ್ನುವ ಪದದ ಅರ್ಥಗಳನ್ನು ಚಿಂತಿಸುತ್ತಿದ್ದರಂತೆ. ಸಮಾಧಿಯಿಂದ ಏಳುವವರೆಗೆ 125 ಅರ್ಥಗಳು ಹೊಳೆದಿತ್ತು. ಅದನ್ನೇ "ನಾರಾಯಣ ಶಬ್ದಾರ್ಥ ನಿರ್ವಚನಂ" ಎನ್ನುವೆ ಹೆಸರಿನಲ್ಲಿ ಗ್ರಂಥ ಮಾಡಿಟ್ಟಿದ್ದಾರೆ. 

*******
ಇವು ಮೂರು ನಾಲ್ಕು ಉದಾಹರಣೆಗಳು. ಅಷ್ಟೇ. ಇವುಗಳಲ್ಲಿ ಕೆಲವನ್ನು ಕೆಲವರು ಅನುಮಾನಿಸಬಹುದು. "ಹೀಗೆ ಸಾಧ್ಯವೇ?" ಎಂದು ಹೇಳಬಹುದು. ಹಿಂದಿನ ದಿನದ ಸಮಸ್ಯೆಗೆ ಮಾರನೆಯ ದಿನ ಒಂದು ಪ್ರಭಂಧ ಬರೆದು ತಂದು ವಿವರಿಸುವವರನ್ನು ನಾವು ಇಂದೂ ಕಾಣಬಹುದು. ಅನೇಕ ಕಲೆಗಳಲ್ಲಿ ಮೂಗಿನ ಮೇಲೆ ಬೆರಳಿಡುವಂತೆ ಸಾಧನೆ ಮಾಡಿದವರು, ಮಾಡುತ್ತಿರುವವರು ಈಗಲೂ ಇದ್ದಾರಲ್ಲವೇ?

ಕನ್ನಡಲ್ಲಿ "ಅಜೇಯ ವಿಜಯೀ೦ದ್ರರು" ಅನ್ನುವ ಗ್ರಂಥವಿದೆ. ಇಂಗ್ಲಿಷಿನಲ್ಲಿ 968 ಪುಟಗಳ, ಮೂರು ಸಂಪುಟಗಳ "The invincible Saint" ಹೆಸರಿನ ಪುಸ್ತಕವಿದೆ. "ಶ್ರೀ ರಾಘವೇಂದ್ರ ವಿಜಯ", "ಶ್ರೀ ಗುರುಗುಣಸ್ತವನ" ಮತ್ತು ಮಾಧವ ಸೂರಿಗಳ "ವಿಜಯೀ೦ದ್ರ ವಿಜಯ" ಇದೆ. ಆಸಕ್ತರು ವಿವರಣೆಗಳನ್ನು ನೋಡಬಹುದು. 

Sunday, August 9, 2026

ನಮಗೆ ಅವರೇ ಬೇಕು!


ಕಳೆದ ವಾರ ಧಾರವಾಡದಲ್ಲಿ ನಡೆದ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯ ಪುರ ಪ್ರವೇಶ ಸಂದರ್ಭದಲ್ಲಿ ಆ ಪ್ರದೇಶದ ಸಂಸತ್ ಸದಸ್ಯರೂ, ಕೇಂದ್ರ ಸರ್ಕಾರದ ಮಂತ್ರಿಗಳೂ ಆದ ಶ್ರೀ ಪ್ರಹ್ಲಾದ್ ಜೋಶಿ ಅವರ ಸ್ವಾಗತ ಭಾಷಣದ ವಿಡಿಯೋವೊಂದು ಹೆಚ್ಚಿನ ಪ್ರಚಾರ ಪಡೆದಿದೆ. ಈಗಿನ ಭಾಷೆಯಲ್ಲಿ ಹೇಳಿದರೆ "ವೈರಲ್" ಆಗಿದೆ. "ಈ ಸಂದರ್ಭದಲ್ಲಿ ನಾನು ಅಲ್ಲಿರಬೇಕೆಂದು ಅಭಿಲಾಷೆ ಇತ್ತು. ಆದರೆ ಈಚಿನ ಕೆಲವು ವಿದ್ಯಮಾನಗಳಿಂದ ಮತ್ತು ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅಲ್ಲಿರಲು ಆಗಲಿಲ್ಲ. ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಶುಭಾಶಯಗಳು" ಮುಂತಾಗಿ ಹೇಳಿರುವ ವಿಡಿಯೋ ಅದು. ಶ್ರೀ ಪ್ರಹ್ಲಾದ ಜೋಶಿ ಅವರಿಗೆ ಹೆಚ್ಚಿನ ಜವಾಬ್ದಾರಿಯಾಗಿ ವಿದ್ಯಾ ಖಾತೆಯನ್ನು ಪ್ರಧಾನಮಂತ್ರಿಗಳು ಈಚೆಗೆ ವಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು. 

"ವೈರ" ಅಥವಾ "ವೈರಸ್" ಎನ್ನುವ ಪದಕ್ಕೆ ಭಯಬೀಳುವ ಪರಿಸ್ಥಿತಿ ಒಂದು ಕಾಲದಲ್ಲಿ ಇತ್ತು. ಈಗ ವಿಡಿಯೋಗಳು ವೈರಲ್ ಆಗಲಿ ಎಂದು ಕೆಲವರು ಪ್ರಾಥಿಸುವ ಕಾಲ ಬಂದಿದೆ!

ಈ ಸಂದರ್ಭದಲ್ಲಿ ಮಿತ್ರರೊಬ್ಬರು ಒಂದು ಪ್ರಶ್ನೆ ಕೇಳಿದ್ದಾರೆ. "ಉತ್ತರಾದಿ ಮಠ" ಎನ್ನುವುದು ಬಹಳ ಪ್ರಸಿದ್ಧಿ ಪಡೆದಿದೆ. ಈ ಹೆಸರು ಹೇಗೆ ಬಂತು? "ಪೂರ್ವಾದಿ ಮಠ" ಒಂದು ಇದೆಯೇ?" ಎನ್ನುವುದು ಆ ಪ್ರಶ್ನೆ. 
******

ಶ್ರೀ ಮಧ್ವಾಚಾರ್ಯರು ಕನ್ನಡನಾಡಿನ ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅಲ್ಲಿನ ಪೂಜಾದಿಗಳ ವ್ಯವಸ್ಥೆಯನ್ನು ಚ್ಯುತಿಯಿಲ್ಲದೆ ಮುಂದುವರೆಸಲು ಎಂಟು ಮಠಗಳನ್ನು ಸ್ಥಾಪಿಸಿ ಯತಿಗಳನ್ನು ನೇಮಕ ಮಾಡಿದರು. ಇವು "ಅಷ್ಟ ಮಠಗಳು" ಎಂದು ಪ್ರಸಿದ್ಧಿ ಪಡೆದಿವೆ. ಇದೇ ರೀತಿ ಅವರ ನೇರ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥ ಮುಂತಾದವರು ದ್ವೈತ ಮತ ಪ್ರಸಾರಕ್ಕಾಗಿ ಘಟ್ಟದ ಮೇಲಿನ ಪ್ರದೇಶಗಳಿಗೆ ಮಠವನ್ನು ಮುಂದುವರೆಸಿಕೊಂಡು ಬಂದರು. ಶ್ರೀ ಪದ್ಮನಾಭ ತೀರ್ಥರ ನಂತರ ಕ್ರಮವಾಗಿ ಶ್ರೀ ನರಹರಿ ತೀರ್ಥರು, ಶ್ರೀ ಮಾಧವ ತೀರ್ಥರು, ಶ್ರೀ ಅಕ್ಷೋಭ್ಯ ತೀರ್ಥರು, ಶ್ರೀ ಜಯತೀರ್ಥರು ಮತ್ತು ಶ್ರೀ ವಿದ್ಯಾಧಿರಾಜ ತೀರ್ಥರು ನಡೆಸಿಕೊಂಡು ಬಂದರು. ಶ್ರೀ ವಿದ್ಯಾಧಿರಾಜ ತೀರ್ಥರ ಕಾಲದಲ್ಲಿ ಅವರ ಇಬ್ಬರು ಪ್ರಮುಖ ಶಿಷ್ಯರಾದ ಶ್ರೀ ರಾಜೇಂದ್ರ ತೀರ್ಥರು ಮತ್ತು ಶ್ರೀ ಕವೀಂದ್ರ ತೀರ್ಥರು, ಇವರುಗಳಿಂದ ಎರಡು ಶಾಖೆಗಳು ಆದವು. 

ಯಾವುದೇ ಒಂದು ವಸ್ತುವನ್ನು ಎರಡು ಭಾಗ ಮಾಡಿದಾಗ ಸಂಸ್ಕೃತದಲ್ಲಿ ಅವನ್ನು ಪೂರ್ವ ಭಾಗ ಮತ್ತು ಉತ್ತರ ಭಾಗ ಎಂದು ವ್ಯವಹರಿಸುವುದು ವಾಡಿಕೆ. ಇಂಗ್ಲಿಷಿನಲ್ಲಿ First Half ಮತ್ತು Second Half ಅನ್ನುವ ರೀತಿ. ಈ ಕಾರಣದಿಂದ ಶ್ರೀ ರಾಜೇಂದ್ರ ತೀರ್ಥರ ಪರಂಪರೆ "ಪೂರ್ವಾದಿ ಮಠ" ಎಂದು ಪ್ರಸಿದ್ಧವಾಯಿತು. ಶ್ರೀ ಕವೀಂದ್ರ ತೀರ್ಥರ ಪರಂಪರೆ "ಉತ್ತರಾದಿ ಮಠ" ಎಂದು ಪ್ರಸಿದ್ಧವಾಯಿತು. 

ಶ್ರೀರಾಮಚಂದ್ರನು ಜನಿಸಿದುದು ಸೂರ್ಯವಂಶದಲ್ಲಿ. ಅನೇಕ ಪ್ರಸಿದ್ಧ ರಾಜರು ಸೂರ್ಯವಂಶದಲ್ಲಿ ರಾಜ್ಯಭಾರ ಮಾಡಿದರು. ಮುಂದೆ ಬಂದ ರಘು ಮಹಾರಾಜ ತನ್ನ ಪೂರ್ವಜರಿಗಿಂತಲೂ ಹೆಚ್ಚು ಪ್ರಸಿದ್ಧನಾದನು. ಲೋಕ ವ್ಯವಹಾರದಲ್ಲಿ ಪ್ರಾರಂಭದಲ್ಲಿ ಮಕ್ಕಳನ್ನು "ಇಂತಹವರ ಮಗ" ಎಂದು ಗುರುತಿಸುತ್ತಾರೆ. ಮುಂದೆ ಮಗನು ಹೆಚ್ಚು ಪ್ರಸಿದ್ಧ ಆದಾಗ ಅವನ ತಂದೆಯನ್ನು "ಇಂತಹವರ ತಂದೆ" ಎನ್ನುತ್ತಾರೆ! ಸೂರ್ಯವಂಶದಲ್ಲಿಯೂ ಹೀಗೆಯೇ ಆಯಿತು. ಕಾಳಿದಾಸ ಮಹಾಕವಿಯ ರಘುವಂಶ ಮಹಾಕಾವ್ಯ ಇದನ್ನೇ ವಿವರಿಸುತ್ತದೆ. ರಘು ಮಹಾರಾಜನ ನಂತರ ಅವನ ಮುಂದಿನವರನ್ನು "ರಘು ವಂಶದವರು" ಎಂದು ಹೇಳುವುದು ರೂಢಿ ಆಯಿತು. ಈ ಕಾರಣದಿಂದ ಶ್ರೀರಾಮಚಂದ್ರನು ರಾಘವ ಎಂದೂ ಪ್ರಖ್ಯಾತನಾದನು.

ಪೂರ್ವದಿ ಮಠ ಪರಂಪರೆಯಲ್ಲಿ ಮುಂದೆ ಶ್ರೀ ವ್ಯಾಸತೀರ್ಥರು ಪೀಠಾಧಿಪತಿಗಳಾದರು. ವಿಜಯನಗರ ಅರಸರಾದವರಿಗೆ ರಾಜಗುರುಗಳಾಗಿ, ಅನೇಕ ಗ್ರಂಥಗಳ ಕರ್ತೃವಾಗಿ, ವಿಶೇಷ ಪಾಂಡಿತ್ಯ, ಸಮಾಜ ಸೇವೆ, ಮುಂತಾದುವುಗಳಿಂದ ಅಧಿಕ ಮನ್ನಣೆಗೆ ಪಾತ್ರರಾದರು. ಶ್ರೀ ವ್ಯಾಸ ತೀರ್ಥ ಎಂದು ಹೆಸರಿದ್ದರೂ "ವ್ಯಾಸರಾಜ" ಎಂದಾಗಿ ಸನ್ಯಾಸಿಗಳಿಗೂ ರಾಜರಂತೆ ಮೆರೆದರು. ಈ ಕಾರಣದಿಂದ "ಪೂರ್ವಾದಿ ಮಠ" ಆ ಹೆಸರಿನ ಬದಲಾಗಿ "ವ್ಯಾಸರಾಜ ಮಠ" ಎಂದು ಹೆಸರುವಾಸಿ ಆಯಿತು. 
******

ಉತ್ತರಾಧಿ ಮಠದ ಪರಂಪರೆಯಲ್ಲಿ ಶ್ರೀ ಕವೀಂದ್ರ ತೀರ್ಥರ ನಂತರ ಶ್ರೀ ವಾಗೀಶ ತೀರ್ಥರು ಮತ್ತು ಶ್ರೀ ರಾಮಚಂದ್ರ ತೀರ್ಥರು ಮುಂದುವರೆದರು. ಶ್ರೀ ರಾಮಚಂದ್ರ ತೀರ್ಥರಿಗೆ ಶ್ರೀ ವಿಬುಧೆಂದ್ರ ತೀರ್ಥರು ಮತ್ತು ಶ್ರೀ ವಿದ್ಯಾನಿಧಿ ತೀರ್ಥರು ಇಬ್ಬರು ಪ್ರಮುಖ ಶಿಷ್ಯರು. ಆ ಕಾಲದಲ್ಲಿ ಮತ್ತೆ ಎರಡು ಭಾಗವಾಗಿ ಶ್ರೀ ವಿಭುದೇಂದ್ರ ತೀರ್ಥರ ಮೊದಲ ಭಾಗ (ಪೂರ್ವದಿ ಮಠ ಆಗಲೇ ಇದ್ದ ಕಾರಣ) ತಮಿಳುನಾಡಿನ ಕುಂಭಕೋಣಂ ಎಂಬ ಸ್ಥಳದಲ್ಲಿ ಇದ್ದುದರಿಂದ "ಕುಂಭಕೋಣ ಮಠ" ಎಂದು ಹೆಸರುವಾಸಿ ಆಯಿತು. ಶ್ರೀ ವಿದ್ಯಾನಿಧಿ ತೀರ್ಥರ ಪರಂಪರೆ ಉತ್ತರಾದಿ ಮಠ ಎಂದು ಮುಂದುವರೆಯಿತು. 

ಈ ಕುಂಭಕೋಣ ಮಠದಲ್ಲಿ ಕಾಲಕ್ರಮದಲ್ಲಿ ಶ್ರೀ ವಿಭುದೇಂದ್ರ ತೀರ್ಥರ ಸಂತತಿಯಲ್ಲಿ, ಅವರ ನಂತರ ಆರನೆಯವರಾಗಿ ಶ್ರೀ ರಾಘವೇಂದ್ರ ತೀರ್ಥರು ಪಟ್ಟ ಏರಿದರು. ಶ್ರೀ ರಾಘವೇಂದ್ರ ತೀರ್ಥರು ಅತ್ಯಧಿಕ ಹೆಸರುವಾಸಿಯಾಗಿ ಶ್ರೀ ರಾಯರು ಎಂದು ಕರೆಸಿಕೊಳ್ಳುತ್ತಾರೆ. ಅವರು ವೃಂದಾವನಸ್ಥರಾದದ್ದು ಆಂಧ್ರ ಪ್ರದೇಶದ ಮಂತ್ರಾಲಯದಲ್ಲಿ. ಶ್ರೀ ವ್ಯಾಸತೀರ್ಥರ ಕಾರಣ ಪೂರ್ವಾದಿ ಮಠ ವ್ಯಾಸರಾಜ ಮಠ ಆದಂತೆ, ಶ್ರೀ ರಾಘವೇಂದ್ರ ತೀರ್ಥರ ಕಾರಣ ಕುಂಭಕೋಣ ಮಠ "ರಾಯರ ಮಠ" ಅಥವಾ "ಮಂತ್ರಾಲಯ ಮಠ" ಎಂದು ಪ್ರಸಿದ್ಧವಾಗಿದೆ. 

******


ಸುಮಾರು 1535 ಇಸವಿಯ ಕಾಲ. ಶ್ರೀ ವ್ಯಾಸರಾಯರು (1460-1539) ಪೂರ್ವಾದಿ ಮಠದ ಅಧಿಪತಿಯಾಗಿ ಇದ್ದ ದಿನಗಳು. ಅವರ ಬಳಿ ಒಂದು ಬಲು ದೊಡ್ಡ ಶಿಷ್ಯ ವೃಂದವೇ ಇತ್ತು. ವಿಜಯನಗರದ ರಾಜಗುರುಗಳು. ಶ್ರೀ ಕೃಷ್ಣದೇವರಾಯ ಮೊದಲಾದ ರಾಜರು ಅವರ ಆಜ್ಞಾಧಾರಕರಾಗಿ ನಡೆಯುತ್ತಿದ್ದ ಸಮಯ. ಶ್ರೀಕೃಷ್ಣದೇವರಾಯ ರಾಜ್ಯ ಆಳಿದ (1509-1529) ಕಾಲ ಕಳೆದು ಅವನ ತಮ್ಮ ಶ್ರೀ ಅಚ್ಯುತ ದೇವರಾಯ ರಾಜನಾಗಿದ್ದ ಸಮಯ. ಬ್ರಹ್ಮಚಾರಿ ಮತ್ತು ಗೃಹಸ್ಥ ಶಿಷ್ಯರಲ್ಲದೇ ಅನೇಕ ಸನ್ಯಾಸಿ ಶಿಷ್ಯರೂ ಶ್ರೀ ವ್ಯಾಸರಾಜರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಶ್ರೀ ಕೇಶವ ತೀರ್ಥ ಅನ್ನುವ ಹೆಸರಿನಿಂದ ಶ್ರೀ ಕೃಷ್ಣ ತೀರ್ಥ ಅನ್ನುವವರೆಗೆ 24 ಸನ್ಯಾಸಿ ಶಿಷ್ಯರು ಅವರಲ್ಲಿ ಇದ್ದರಂತೆ. 

ಈ ಶಿಷ್ಯರಲ್ಲಿ ಐದನೆಯವರು ಶ್ರೀ ವಿಷ್ಣು ತೀರ್ಥ. ಬಲು ಚೂಟಿ ಬಾಲ ಸನ್ಯಾಸಿ. ಶ್ರೀ ವ್ಯಾಸ ತೀರ್ಥರ ಬಳಿ ಅನೇಕ ಬಾರಿ ಶ್ರೀಮನ್ ನ್ಯಾಯಸುಧಾ ಮತ್ತು ಸರ್ವಮೂಲ ಗ್ರಂಥ ಪಾಠ ಕಲಿತಿದ್ದರೆಂದು ಉಲ್ಲೇಖವಿದೆ. (ಶ್ರೀ ಮಧ್ವಾಚಾರ್ಯರ ಸಮಸ್ತ ಕೃತಿಗಳ ಒಟ್ಟು ಹೆಸರು "ಸರ್ವಮೂಲ ಗ್ರಂಥಗಳು" ಎಂದು). ಒಂದೊಂದು ಬಾರಿ ಪಾಠ ಹೇಳುವಾಗಲೂ ಹೊಸ ಹೊಸ ವಿಷಯಗಳು. ಹೇಳಿದ್ದನ್ನೇ ಹೇಳಿದರು ಅನ್ನುವಂತಿಲ್ಲ. ಶ್ರೀ ವ್ಯಾಸತೀರ್ಥರ ಸಂಸ್ಥಾನ ಪೂಜೆಗೆ ಬೆಳಗಿನ ವೇಳೆ ಹೂವು-ತುಳಸಿ ಹೊಂದಿಸಿಡುವುದು ಈ ವಿಷ್ಣುತೀರ್ಥರ ಕೆಲಸ. ಒಂದು ದಿನ ಬೆಳಗ್ಗೆ ಶ್ರೀ ವ್ಯಾಸತೀರ್ಥರು ಪೂಜಾಸಮಯಕ್ಕೆ ಬಂದು ಕುಳಿತರು. ಎದುರಿಗಿದ್ದ ತುಳಸಿ ಅವರ ಕಣ್ಣಿಗೆ ಬಿತ್ತು.

"ವಿಷ್ಣು ತೀರ್ಥ, ತುಳಸಿ ಎಲ್ಲಿಂದ ತಂದೆ?"
"ನದಿಯ ದಂಡೆಯ ತೋಟದಿಂದ ಗುರುಗಳೇ"
"ಇದು ಆಗಲೇ ಪರಮಾತ್ಮನಿಗೆ ಅರ್ಪಣೆ ಆಗಿದೆ. ಇದು ನಿರ್ಮಾಲ್ಯ"
"ಗಿಡದಿಂದ ನಾನೇ ಬಿಡಿಸಿ ತಂದಿದ್ದು, ಗುರುಗಳೇ"
"ಇರಬಹುದು. ಆದರೆ ಇದು ಅರ್ಪಣೆ ಆಗಿದೆ. ಬೇರೆ ತೆಗೆದುಕೊಂಡು ಬಾ"

ಬೇರೆ ತುಳಸಿ ತಂದು ಪೂಜೆ ನಡೆಯಿತು. (ಒಮ್ಮೆ ಅರ್ಪಿತವಾದ ಹೂವು ಮತ್ತೆ ಬಳಸುವಂತಿಲ್ಲ. ಆದರೆ ತುಳಸಿಗೆ ಹಾಗಲ್ಲ. ಒಮ್ಮೆ ಅರ್ಪಿಸಿದ್ದರೂ, ಬೇರೆ ಇಲ್ಲದಿದ್ದರೆ ಪೂಜಿಸಿದ ತುಳಸಿಯನ್ನು ತೊಳೆದು ಮತ್ತೆ ಉಪಯೋಗಿಸಬಹುದಂತೆ).

"ವಿಷ್ಣು ತೀರ್ಥ, ನದಿ ದಂಡೆಗೆ ಮತ್ತೆ ಹೋಗು. ಸುತ್ತ ಮುತ್ತ ನೋಡು. ಅಲ್ಲಿ ಯಾರೋ ಮಹಾತ್ಮರು ಬಂದಿದ್ದಾರೆ. ಅವರನ್ನು ಕಂಡು, ಇಲ್ಲಿಗೆ ಕರೆದುಕೊಂಡು ಬಾ"

ವಿಷ್ಣು ತೀರ್ಥರು ಮತ್ತೆ ಅಲ್ಲಿಗೆ ಹೋದರು. ಗುರುಗಳು ಹೇಳಿದ್ದಂತೆ ಅಲ್ಲಿ ತೇಜಸ್ವಿಯಾದ ಸನ್ಯಾಸಿ ಒಬ್ಬರು ಕೆಲ ಶಿಷ್ಯರ ಜೊತೆ ಬಿಡಾರ ಮಾಡಿದ್ದರು. ನಯ-ವಿನಯಗಳಿಂದ ಅವರನ್ನು ಕರೆದುಕೊಂಡು ಬಂದರು.

ಬಂದವರು ಕುಂಭಕೋಣ ಮಠದ ಪರಂಪರೆಯಿಂದ ಬಂದ ಶ್ರೀ ಸುರೇಂದ್ರ ತೀರ್ಥರು. ಶ್ರೀ ಸುರೇಂದ್ರ ತೀರ್ಥರು (1504-1575) ಮಹಾತಪಸ್ವಿಗಳು. ಗಿಡಗಳಿದ್ದ ಇಡೀ ತುಳಸಿಯ ವನವನ್ನೇ ಮಾನಸ ಪೂಜೆ ಮಾಡಿ ಪರಮಾತ್ಮನಿಗೆ ಅರ್ಪಿಸಿದ್ದರು. ಅವರು ಉಪವಾಸ ವ್ರತಗಳಲ್ಲಿ ಎತ್ತಿದ ಕೈ. ಮೂರು ಬಾರಿ ಪಾದಚಾರಿಯಾಗಿ ಇಡೀ ದೇಶ ಸಂಚಾರ ಮಾಡಿದ ಧೀಮಂತರು. ವ್ಯಾಸರಾಜರಿಗಿಂತ ವಯಸ್ಸಿನಲ್ಲಿ ನಲವತ್ತು ವರುಷದಷ್ಟು ಚಿಕ್ಕವರು. ಹಾಲು-ಜೇನು ಬೆರೆತಂತೆ ಆಯಿತು.

****** 

ಮಾರನೆಯ ದಿನ ಭಿಕ್ಷಾಸ್ವೀಕಾರದ ಸಮಯ. ಶ್ರೀ ಸುರೇಂದ್ರ ತೀರ್ಥರು ಅಂಗಯ್ಯಲ್ಲಿ ತೀರ್ಥ ಹಿಡಿದು ಹಾಗೆಯೇ ಕುಳಿತರು. ಶ್ರೀ ವ್ಯಾಸತೀರ್ಥರು ನೋಡಿದರು.

"ಎಲ್ಲ ಆಯಿತು. ತಾವು ಧರಿಸಬಹುದು"
"ತಮ್ಮಲ್ಲಿ ನಮ್ಮದೊಂದು ಕೋರಿಕೆ ಇದೆ"
"ನಮ್ಮಲ್ಲಿ ಕೋರಿಕೆಯೇ? ನಿಮಗೆ ಕೊಡಬಹುದಾದದ್ದು ನಮ್ಮಲ್ಲಿ ಏನಿದೆ? ಮಠದ ಪಟ್ಟದ ದೇವರನ್ನು ನಾವು ಕೊಡುವಂತಿಲ್ಲ. ಈ ವಿಷ್ಣು ತೀರ್ಥ ನಮ್ಮ ಪ್ರಿಯ ಶಿಷ್ಯ. ಇವೆರಡನ್ನು ಬಿಟ್ಟು ಬೇರೆ ಏನನ್ನು ಕೇಳಿದರೂ ನಾವು ಕೊಡಲು ಸಿದ್ಧರಿದ್ದೇವೆ. ಸಂಕೋಚವಿಲ್ಲದೆ ಹೇಳಿ"
"ಪಟ್ಟದ ದೇವರನ್ನು ನಾವು ಕೇಳುವುದಿಲ್ಲ. ನಮಗೆ ನಮ್ಮ ಗುರುಗಳಿಂದ ಬಂದಿರುವುದು ಇದೆ"
"ಹಾಗಿದ್ದರೆ ಮತ್ತೇನು?"
"ನಮಗೆ ವಿಷ್ಣು ತೀರ್ಥರನ್ನು ಕೊಡಿ"
"ಇದೇ ಆಗಬೇಕೇ?"
"ನಮಗೆ ಅವರೇ ಬೇಕು"
"ಇದೇ ತಮ್ಮ ಇಚ್ಛೆಯೇ?"
"ಹೌದು. ಹಾಗೆಂದು ನಮಗೆ ಶ್ರೀಹರಿಯ ಪ್ರೇರಣೆ ಆಗಿದೆ"
"ಸರಿ. ಆಗಬಹುದು. ಆಪೋಶನ ಧರಿಸಿರಿ"

ಭಿಕ್ಷಾಸ್ವೀಕಾರ ಆಯಿತು. ಪ್ರಾಯಶಃ ಶ್ರೀ ವ್ಯಾಸತೀರ್ಥರು ವಿಷ್ಣು ತೀರ್ಥರನ್ನು ತಮ್ಮ ಮುಂದೆ ಪಟ್ಟಕ್ಕೆ ಇರಲಿ ಎಂದುಕೊಂಡಿದ್ದಿರಬಹುದು. ಕೊಟ್ಟ ಮಾತಿನಂತೆ ಶ್ರೀ ವಿಷ್ಣುತೀರ್ಥರು ಪೂರ್ವಾದಿ ಮಠದಿಂದ ಕುಂಭಕೋಣ ಮಠಕ್ಕೆ ವರ್ಗಾವಣೆ ಆದರ

ಬಾಲಕರನ್ನು "ದತ್ತು ಸ್ವೀಕಾರ" ಮಾಡುವಾಗ ಹಾಗೆ ದತ್ತು ತೆಗೆದುಕೊಂಡವರು ತಮ್ಮ ಮನೆತನಕ್ಕೆ ತಕ್ಕುದಾಗಿ ಹೆಸರು ಬದಲಿಸುವ ಪದ್ಧತಿ ಉಂಟು. ಮನೆಗೆ ಮದುವೆಯಾಗಿ ಬಂದ ಸೊಸೆಗೆ ಹೀಗೇ ಹೆಸರು ಬಲಿಸುವ ಪದ್ಧತಿ ಅನೇಕ ಮನೆತನಗಳಲ್ಲಿ ಉಂಟು. ಸನ್ಯಾಸಿಗಳನ್ನು ಹೀಗೆ ದತ್ತು ಸ್ವೀಕಾರ ಮಾಡುವಾಗ "ದಂಡ ಪಲ್ಲಟ" ಅನ್ನುವ ಕ್ರಮದಂತೆ ಅವರ ದಂಡ (ಸನ್ಯಾಸಿಗಳು ಹಿಡಿದಿರುವ ಕೋಲು) ಬದಲಾಯಿಸಿ ಸ್ವೀಕರಿಸುತ್ತಾರೆ. 

ಹೀಗೆ ಮಾಡಿದಾಗ ಶ್ರೀ ವಿಷ್ಣು ತೀರ್ಥರು "ಶ್ರೀ ವಿಜಯೇಂದ್ರ ತೀರ್ಥ" ಎಂದು ಹೆಸರು ಪಡೆದು ಕುಂಭಕೋಣ ಮಠದಲ್ಲಿ ಪ್ರಖ್ಯಾತರಾದರು. 104 ಗ್ರಂಥಗಳನ್ನು ರಚಿಸಿ, ಮಹಾನ್ ಪಂಡಿತರನ್ನು ಜಯಿಸಿ ಹೆಸರಿಗೆ ತಕ್ಕಂತೆ ವಿಜಯೇಂದ್ರರೇ ಆದರು.

*******

ಶ್ರೀ ರಾಘವೇಂದ್ರ ರಾಯರ ಸ್ತೋತ್ರದಲ್ಲಿ "ವಿಜಯೇಂದ್ರ ಕರಾಬ್ಜೋತ್ಥಾ ಸುಧೀಂದ್ರ ವರಪುತ್ರಕಃ" ಎಂದು ಹೇಳುತ್ತೇವೆ. ಶ್ರೀ ವಿಜಯೇಂದ್ರ ಗುರುಗಳ ಶಿಷ್ಯರು ಶ್ರೀ ಸುಧೀಂದ್ರ ತೀರ್ಥರು. ಶ್ರೀ ಸುಧೀಂದ್ರ ತೀರ್ಥರ ಶಿಷ್ಯರೇ ಶ್ರೀ ರಾಘವೇಂದ್ರ ಗುರು ಸಾರ್ವಭೌಮರು.