Friday, August 14, 2026

ಇಷ್ಟು ಹೇಳಿದರೆ ನೀನು ಪಂಡಿತ!


ಕಳೆದ ಸಂಚಿಕೆಯಲ್ಲಿ "ನಮಗೆ ಅವರೇ ಬೇಕು!" ಅನ್ನುವ ಶೀರ್ಷಿಕೆಯಡಿ ಕುಂಭಕೋಣ ಮಠದ ಶ್ರೀ ಸುರೇಂದ್ರ ತೀರ್ಥರು ಪೂರ್ವಾದಿ ಮಠದ ಯತಿಗಳಾದ ಶ್ರೀ ವ್ಯಾಸರಾಜರಿಂದ ಅವರ ಪ್ರೀತಿಯ ಶಿಷ್ಯರಾದ ಶ್ರೀ ವಿಷ್ಣುತೀರ್ಥರನ್ನು ದತ್ತು ಪಡೆದುಕೊಂಡು, ಅವರಿಗೆ "ಶ್ರೀ ವಿಜಯೀ೦ದ್ರ ತೀರ್ಥ" ಎಂದು ಮರುನಾಮಕರಣ ಮಾಡಿ, ತಮ್ಮ ನಂತರ ಪೀಠಾಧಿಪತಿಗಳನ್ನಾಗಿ ಮಾಡಿದ ವಿಚಾರ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಶ್ರೀ ವಿಜಯೀ೦ದ್ರ ತೀರ್ಥರ ವಿಚಾರದಲ್ಲಿ ಕೆಲವು ಓದುಗರು ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳ ಬಗ್ಗೆ ಈ ಸಂಚಿಕೆಯಲ್ಲಿ ಸ್ವಲ್ಪ ವಿಚಾರ ಮಾಡೋಣ. 

ಶ್ರೀ ವಿಜಯೀ೦ದ್ರ  ತೀರ್ಥರ ಬಾಲ್ಯದ ಬಗ್ಗೆ ಹೆಚ್ಚು ತಿಳಿಯುವುದಿಲ್ಲ. ಅವರು ಶ್ರೀ ವ್ಯಾಸತೀರ್ಥರ ಪೂರ್ವಾಶ್ರಮದ ಕಡೆಯ ಸಂಬಂಧಿ ಎಂದು ಒಂದು ಅಭಿಪ್ರಾಯವಿದೆ. ಅವರು "ಗೌಡ ಸಾರಸ್ವತ" ಕುಟುಂಬದವರು ಎಂದು ಹೇಳುವ ಕೊಂಕಣಿ ಭಾಷೆಯ ವಿಡಿಯೋ ಒಂದು ಪ್ರಚಲಿತವಿದೆ. ಸ್ನೇಹಿತರೊಬ್ಬರು ಅದನ್ನು ಮೊನ್ನೆ ಕಳಿಸಿಕೊಟ್ಟಿದ್ದಾರೆ. ಅದಕ್ಕೆ ಯಾವುದೇ ಆಧಾರ ಸಿಗುವುದಿಲ್ಲ. ಇದು ಐದು ನೂರು ವರುಷ ಕಳೆದ ಮಾತು. ಆಧಾರ ಎಲ್ಲಿ ಸಿಗಬೇಕು? ಆಗ ಈಗಿನಂತೆ ಅಧಿಕೃತವಾಗಿ ದಾಖಲೆಗಳು ಇರಲಿಲ್ಲವಲ್ಲ.

"ಹಂಸ-ಕ್ಷೀರ ನ್ಯಾಯ", "ಬೀಜ-ವೃಕ್ಷ ನ್ಯಾಯ", "ಕಾಕ-ತಾಳ ನ್ಯಾಯ" ಮುಂತಾದುವುಗಳಂತೆ "ಪುತ್ರಿಕಾ-ಪುತ್ರ ನ್ಯಾಯ" ಎಂದು ಒಂದುಂಟು. ಹೆಣ್ಣು ಮಗಳು ಪಡೆದಿದ್ದು, ಮಗನು ಇಲ್ಲದ ದಂಪತಿಗಳು ಆ ಕಾರಣಕ್ಕಾಗಿ ಅವಳ ವಿವಾಹದ ಸಮಯದಲ್ಲಿ ಅಳಿಯನಲ್ಲಿ ಒಂದು ಬೇಡಿಕೆ ಇಡುತ್ತಿದ್ದರು. ಮುಂದೆ ಆ ದಂಪತಿಗಳಿಗೆ ಹುಟ್ಟುವ ಮೊದಲ ಗಂಡು ಶಿಶುವನ್ನು ತಮಗೆ ದತ್ತು ಕೊಡಬೇಕೆಂದು ಕೇಳುವುದು. ಹೀಗೆ ದತ್ತು ಬಂದ ಮೊಮ್ಮಗನನ್ನು ಮಗ ಎಂದು ಸ್ವೀಕರಿಸುವುದು. ಇದನ್ನು "ಪುತ್ರಿಕಾ-ಪುತ್ರ ನ್ಯಾಯ" ಅನ್ನುತ್ತಾರೆ. ನಮ್ಮ ಬಾಲ್ಯದಲ್ಲಿ ಈ ರೀತಿಯ ಕೆಲವು ಪ್ರಕರಣಗಳನ್ನು ನೋಡಿದ್ದೇವೆ. ಈಗ ಈ ರೀತಿಯ ಉದಾಹರಣೆಗಳು ಸಿಗುವುದಿಲ್ಲ.

ಅನೇಕ ಮಕ್ಕಳಿಲ್ಲದ ದಂಪತಿಗಳು ಆಗಿನ ತಪಸ್ವಿ ಯತಿಗಳನ್ನು ಸಂತಾನಕ್ಕಾಗಿ ಕೋರಿಕೊಳ್ಳುತ್ತಿದ್ದರು. ಹೀಗೆ ಸಂತಾನ ಆಗಲೆಂದು ವರಕೊಟ್ಟ ಯತಿಗಳು ಮೊದಲ ಮಗನನ್ನು ತಮಗೆ ಕೊಡಬೇಕೆಂದೂ, ಮುಂದೆ ಹುಟ್ಟುವ ಮಗುವನ್ನು ಆ ದಂಪತಿಗಳು ಸಂತಾನವಾಗಿ ಇಟ್ಟುಕೊಳ್ಳಬಹುದೆಂದು ಸೂಚಿಸುತ್ತಿದ್ದ ಪದ್ಧತಿ ಇತ್ತು. ಈ ರೀತಿ ಪಡೆದುಕೊಂಡ ಶಿಶುವಿಗೆ ಸನ್ಯಾಸ ಕೊಟ್ಟು ಉತ್ತರಾಧಿಕಾರಿ ಪಡೆದುಕೊಂಡ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತವೆ. ಶ್ರೀ ವಿಷ್ಣು ತೀರ್ಥರು ಹೀಗೆ ಶ್ರೀ ವ್ಯಾಸರಾಜರಿಗೆ ದೊರೆತವರು ಎಂದು ಒಂದು ಅಭಿಪ್ರಾಯ ಇದೆ. ಅವರ ಬಾಲ್ಯದ ಹೆಸರು ವಿಠಲಾಚಾರ್ಯ ಎಂಬುದಾಗಿತ್ತು ಎಂದು ತಿಳಿದುಬರುತ್ತದೆ. ಏಳು-ಎಂಟು ವರುಷದವರಾಗಿದ್ದ ಸಮಯದಲ್ಲೇ ಸನ್ಯಾಸ ಆಗಿದ್ದಿತಂತೆ.

******

ಇಲ್ಲಿ, ಪಕ್ಕದಲ್ಲಿ ಒಬ್ಬ ಬಾಲಕ ಕುಳಿತಿದ್ದಾನೆ. ಅವನಿಗೆ ಭೂಗೋಳದ ಬಗ್ಗೆ ಅಪಾರ ಒಲವಿತ್ತು. ಈಗ ಅದು ಚರಿತ್ರೆ ಬಗ್ಗೆ ಹೊರಳಿದೆ. ಚರಿತ್ರೆಯ ಬಗೆಗಿನ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗಳಿಸುವ ಪ್ರಯತ್ನ. ಅಮೇರಿಕ ಸಂಯುಕ್ತ ಸಂಸ್ಥಾನ (USA) ದೇಶದ ಅಧ್ಯಕ್ಷರ ಬಗ್ಗೆ ಅಭ್ಯಾಸ ಮಾಡುತ್ತಿದ್ದಾನೆ. ಸುತ್ತ ಐದಾರು ಪುಸ್ತಕಗಳು ಹರಡಿವೆ. ಇಲ್ಲಿಯವರೆಗೆ 47 ಅಧ್ಯಕ್ಷರು ತಮ್ಮ ತಮ್ಮ ಸರದಿಯಂತೆ ಅಧ್ಯಕ್ಷ ಪದವಿ ಪಡೆದು ದೇಶವನ್ನು ಮುನ್ನಡೆಸಿದ್ದಾರೆ. ಒಬ್ಬರು 13 ವರುಷದಷ್ಟು ದೀರ್ಘಕಾಲ. ಮತ್ತನೇಕರು ಎಂಟೆಂಟು ವರುಷಗಳು. ಕೆಲವರು ನಾಲ್ಕು ವರುಷ. ಹೀಗೆ ಒಟ್ಟು 45 ಮಹನೀಯರು ಈ 47 ಸರದಿಗಳಲ್ಲಿ ಅಧ್ಯಕ್ಷಪೀಠ ಅಲಂಕರಿಸಿದ್ದಾರೆ. ಮೊದಲ ಅಧ್ಯಕ್ಷರಾದ ಶ್ರೀ ಜಾರ್ಜ್ ವಾಶಿಂಗಟನ್ ಅವರಿಂದ ಈಗಿನ ಅಧ್ಯಕ್ಷರಾದ ಶ್ರೀ ಡೊನಾಲ್ಡ್ ಟ್ರಂಪ್ ಅವರತನಕ ಎಲ್ಲ 45 ಹೆಸರುಗಳನ್ನೂ ತಪ್ಪಿಲ್ಲದೆ ಹೇಳುವುದು ಒಂದು ಸವಾಲು. ಅದಕ್ಕೆ ತಯಾರಿ ನಡೆದಿದೆ. 

ಇದು ಕೇವಲ ಮೊದಲ ಹೆಜ್ಜೆ. ಮುಂದೆ ಈ ಎಲ್ಲ ಅಧ್ಯಕ್ಷರ ಕಾಲಗಳಲ್ಲಿ ನಡೆದ ವಿಶೇಷ ಘಟನೆಗಳು ಮತ್ತು ಸಂಬಂಧಪಟ್ಟ ವಿವರಗಳನ್ನು ಕಲಿತು ತಯಾರಾಗಬೇಕು. 45 ಹೆಸರುಗಳ ಎರಡರಷ್ಟು ಆದರೆ? ಅದಕ್ಕಿಂತ ಹೆಚ್ಚು ಆದರೆ? ಅದೆಷ್ಟು ಪ್ರಯಾಸದ ಕೆಲಸ!

ಮಂತ್ರಾಲಯಕ್ಕೆ ಹೋಗಿಬಂದವರಿಗೆ, ಗುರುರಾಯರ ವೃಂದಾವನದ ದರ್ಶನ ಮಾಡಿದವರಿಗೆ ಈಗ ಮುಂದೆ ಹೇಳುವ ವಿಷಯ ಗೊತ್ತು. ಶ್ರೀ ರಾಘವೇಂದ್ರ ರಾಯರ ವೃಂದಾವನದ ಪಕ್ಕದಲ್ಲೇ ಅದೇ ರೀತಿಯ ಇನ್ನೊಂದು ಭವ್ಯ ವೃಂದಾವನ ಇದೆ. ಅದು ಶ್ರೀ ರಾಯರ ನಂತರ ಐದನೆಯವರಾಗಿ ಪೀಠ ಏರಿದ ಶ್ರೀ ವಾದೀಂದ್ರ ತೀರ್ಥ ಶ್ರೀಪಾದರದ್ದು. ಅಂದರೆ, ಶ್ರೀ ವಿಜಯೀ೦ದ್ರ  ತೀರ್ಥ ಗುರುಗಳ ನಂತರ ಏಳನೆಯವರು. ಅವರು 37 ಶ್ಲೋಕಗಳ "ಗುರುಗುಣಸ್ತವನ" ಎಂಬ ಸ್ತೋತ್ರ ಗ್ರಂಥ ರಚಿಸಿದ್ದಾರೆ. ಅದರ ಪ್ರಾರಂಭದಲ್ಲಿ, ಎಂಟನೆಯ ಶ್ಲೋಕದಲ್ಲಿ, ಶ್ರೀ ವಿಜಯೀ೦ದ್ರ ತೀರ್ಥರ ಬಗ್ಗೆ ಹೇಳುತ್ತಾ "ಚತುರಧಿಕ ಶತ ಗ್ರಂಥರತ್ನ ಪ್ರಣೇತಾ" ಎಂದು ವಿವರಿಸುತ್ತಾರೆ. ಶ್ರೀ ವಿಜಯೀ೦ದ್ರ ತೀರ್ಥರು 104 ಗ್ರಂಥ ರತ್ನಗಳನ್ನು ರಚಿಸಿದ ಮಹಾನುಭಾವರು! 

ಮಾಧ್ವ ಸಿದ್ಧಾಂತ ಗ್ರಂಥಗಳ ಅಧ್ಯಯನ ಮಾಡುವ ವಿದ್ವಾಂಸರಲ್ಲಿ ಒಂದು ನಾಣ್ನುಡಿ ಇದೆ. ಆ ವಿಶಾಲ ವಾಗ್ಮಯದ ಆಳ-ಅಗಲಗಳ ಮಾತು ಅತ್ತ ಇಡೋಣ. "ಶ್ರೀ ವಿಜಯೀ೦ದ್ರ ತೀರ್ಥರ 104 ಗ್ರಂಥಗಳ ಹೆಸರು ತಪ್ಪಿಲ್ಲದೆ ಹೇಳು. ಹಾಗೆ ಹೇಳಿದರೆ ಸಾಕು. ಇಷ್ಟು ಹೇಳಿದರೆ ನೀನು ಪಂಡಿತ ಎಂದು ನಾವು ಒಪ್ಪುತ್ತೇವೆ" ಎಂದು. 

ಅಷ್ಟು ಗ್ರಂಥಗಳ ಹೆಸರು ನೆನಪಿಡುವುದೇ ಕಷ್ಟ. ಇನ್ನು ಅಷ್ಟು ಗಾಢ ಪಾಂಡಿತ್ಯಪೂರ್ಣ ಕೃತಿಗಳ ರಚನೆಯ ಬಗೆಗೆ ಏನು ಹೇಳುವುದು? ಈ ಜನಪ್ರಿಯ ಹೇಳಿಕೆ ಶ್ರೀ ವಿಜಯೀ೦ದ್ರ ತೀರ್ಥರ ವಿದ್ವತ್ತಿಗೆ ಮತ್ತು ಕೃತಿ ರಚನಾ ಕೌಶಲ್ಯಕ್ಕೆ ಒಂದು ಕನ್ನಡಿ ಹಿಡಿದಂತೆ.

*******

ಶ್ರೀ ವಿಜಯೀ೦ದ್ರರು (1517-1614) ಕುಂಭಕೋಣಕ್ಕೆ ಬಂದಾಗ ಅದು ಅನೇಕ ವಿದ್ವಾಂಸರ ಬೀಡಾಗಿತ್ತು. ಅಷ್ಟು ಪಂಡಿತ ಮಂಡಳಿಯ ನಡುವೆ ಹೊಸಬರೊಬ್ಬರು ಬಂದು ತಳ ಊರುವುದು ಸಾಮಾನ್ಯ ಮಾತಾಗಿರಲಿಲ್ಲ. ಶ್ರೀ ಅಪ್ಪಯ್ಯ ದೀಕ್ಷಿತರು (1520-1593) ಅದ್ವೈತ ಸಿದ್ಧಾಂತ ಪ್ರತಿಪಾದಕರಲ್ಲಿ ಒಂದು ಬಲು ದೊಡ್ಡ ಹೆಸರು. ಇಬ್ಬರೂ ಸಮ ವಯಸ್ಕರು. ಜೀವನ ಪೂರ್ತಿ ಜೊತೆಯಲ್ಲಿ ಬಾಳಿದವರು. ಸುಮಾರು ಐವತ್ತು ವರುಷ ಕಾಲ ತಮ್ಮ ತಮ್ಮ ಸಿದ್ಧಾಂತವನ್ನು ಎತ್ತಿ ಹಿಡಿದ ಮಹನೀಯರು. ಒಬ್ಬರು ಪ್ರಬಲ ದ್ವೈತಿ. ಇನ್ನೊಬ್ಬರು ಅಂತೆಯೇ ಪ್ರಬಲ ಅದ್ವೈತಿ. ಆದರೂ ತಮ್ಮ ತಮ್ಮ ಸಿದ್ಧಾಂತವನ್ನು ಬಿಡದೆ ಸಾಮರಸ್ಯದಿಂದ ಬಾಳಿದವರು. 

ಸುಮಾರು ನಲವತ್ತು ವರುಷಗಳ ಹಿಂದೆ ಕುಂಭಕೋಣಕ್ಕೆ ಹೋಗಿದ್ದಾಗ ಅಲ್ಲಿನ ಹಿರಿಯರು ಹೇಳಿದ ಮಾತು. ಕುಂಭಕೋಣ ಮಠ ಮತ್ತು ಶ್ರೀ ಅಪ್ಪಯ್ಯ ದೀಕ್ಷಿತರ ಮನೆ ಅಕ್ಕ-ಪಕ್ಕದಲ್ಲಿ. ಮಠದ ಪಕ್ಕದಲ್ಲಿ ದೀಕ್ಷಿತರ ಮನೆ ಎಂದು ತೋರಿಸುತ್ತಿದ್ದರು. ಇವರು ಸನ್ಯಾಸಿಗಳು. ಅವರು ಗೃಹಸ್ಥರು. ಇವರು ದ್ವೈತಿಗಳು. ಅವರು ಅದ್ವೈತಿಗಳು. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶಾಲ ಗ್ರಂಥ ರಾಶಿ ನಿರ್ಮಾಣ ಮಾಡಿದವರು. ಇವರಿಗೆ ವಿಜಯನಗರದ ಅರಸರ ಆಸ್ಥಾನದಲ್ಲಿ ಗುರುಪೀಠ. ಅವರಿಗೆ ವೆಲ್ಲೂರಿನ ಚಿನ್ನಬೋಮ್ಮ ನಾಯಕನ ಆಸ್ಥಾನದಲ್ಲಿ ವಿಶೇಷ ಮನ್ನಣೆ. ಹೀಗೆ ಸಮಾನಾಂತರವಾದ ಜೀವನಗಳು.

ಇವರಿಬ್ಬರ ಮೊದಲ ಭೇಟಿ ಬಗ್ಗೆ ಒಂದು ವಿಶೇಷ ಪ್ರಸಂಗ ಹೇಳುತ್ತಾರೆ. ಒಂದು ಕಾಡಿನ ಕಡಿದಾದ ದಾರಿ. ಇತ್ತಕಡೆಯಿಂದ ಶ್ರೀ ವಿಜಯೀ೦ದ್ರರೂ, ಅತ್ತಕಡೆಯಿಂದ ಶ್ರೀ ಅಪ್ಪಯ್ಯ ದೀಕ್ಷಿತರೂ ಅವರವರ ಶಿಷ್ಯರ ಸಂಗಡ ಬಂದು ಎದುರುಬದರಾದರು. ಆ ದಾರಿಯಲ್ಲಿ ಒಬ್ಬರು ಮಾತ್ರ ನಡೆದು ಹೋಗಬಹುದು. ಇಬ್ಬರಲ್ಲಿ ಒಬ್ಬರು ಹಿಂದೆ ಸರಿದು ದಾರಿ ಬಿಡಬೇಕು. "ಯಾರು ಹಿಂದೆ ಸರಿಯಬೇಕು?" ಎಂದು ಪ್ರಶ್ನೆ ಬಂದಿತು. ಜೊತೆಯಲ್ಲಿದ್ದ ವಿದ್ವಾಂಸರೊಬ್ಬರು "ಈ ಕಾಡನ್ನು ವರ್ಣಿಸಿ ಒಂದು ವಾಕ್ಯವನ್ನು ಇಬ್ಬರೂ ಹೇಳಲಿ. ಯಾವುದು ಚೆನ್ನವಿದೆ ಎಂದು ನಾವೆಲ್ಲಾ ಒಪ್ಪುತ್ತೇವೋ, ಅವರಿಗೆ ಇನ್ನೊಬ್ಬರು ದಾರಿ ಬಿಡಲಿ" ಎಂದು ಸೂಚಿಸಿದರು.  

ಮೊದಲು ಶ್ರೀ ಅಪ್ಪಯ್ಯ ದೀಕ್ಷಿತರು ಹೇಳಿದರು: 
ಅಸ್ತ್ಯರಣ್ಯಂ ತರಣ್ಯ೦ಘರಿ ತರಣ್ಯನ್ತರ್ಧಿ ಪಾದಪಂ 

"ಈ ಕಾಡಿನಲ್ಲಿ ಬೆಳೆದಿರುವ ಹೆಮ್ಮರಗಳು ಸೂರ್ಯನ ಕಿರಣಗಳೇ ಭೂಮಿಗೆ ಬೀಳದಂತೆ ತಡೆದಿವೆ"  ಎಂದು ಅರ್ಥ. ಮರಗಳು ಕಾಲಿನಿಂದ (ಪಾದದಿಂದ-ಅಂದರೆ ಬೇರಿನಿಂದ) ನೀರು ಕುಡಿಯುವುದರಿಂದ ಪಾದಪಗಳು. ತರಣಿ ಅಂದರೆ ಸೂರ್ಯ. ಹೀಗೆ ಪ್ರಾಸಗಳಿಂದ ಕೂಡಿದ ವಿಶೇಷ ರಚನೆ. 

ಈಗ ಶ್ರೀ ವಿಜಯೀ೦ದ್ರರ ಸರದಿ: 
ದರೀಸುಪ್ತ ಝರೀದತ್ತ ಪರೀರಂಭ ಸರೀಸೃಪ೦

"ಕಾಡಿನ ಗುಹೆಗಳಲ್ಲಿ ನಾಗ-ನಾಗಿಣಿಯರು ಒಂದಕ್ಕೊಂದು ಹೆಣೆದುಕೊಂಡು ನಿರ್ಭೀತಿಯಿಂದ ಮಲಗಿವೆ" ಎಂದು ಅರ್ಥ. ದರಿ ಅಂದರೆ ಗುಹೆಗಳು. ಗುಹೆಗಳಲ್ಲಿ ಇರುವ ಸರ್ಪಗಳು. ಹೀಗೆ ಪ್ರಾಸಗಳಿಂದ ಕೂಡಿದ ವಿವರಣೆ. 

ಅಂದಿನಿಂದ ಪ್ರಾರಂಭವಾದ ಅವರಿಬ್ಬರ ಜೊತೆ ಮುಂದೆ ಅನೇಕ ದಶಕಗಳು ಮುಂದುವರೆಯಿತು.

******

ಶ್ರೀ ವಿಜಯೀ೦ದ್ರ ತೀರ್ಥರು ಚತುಷಷ್ಠಿ ಕಲೆಗಳಲ್ಲಿ (ಅರವತ್ತನಾಲ್ಕು ವಿದ್ಯೆಗಳು) ಪರಿಣಿತರು. (ಇವುಗಳಲ್ಲಿ ಕೆಲವು ವಿದ್ಯೆಗಳು. ಮತ್ತೆ ಕೆಲವು ಕಲೆಗಳು). ಹೀಗೆ ಪ್ರಸಿದ್ಧರಾದವರನ್ನು ಪರೀಕ್ಷಿಸಲು ಒಬ್ಬ ದೊಂಬರಾಟ ಮಾಡುವವನು ಬಂದನಂತೆ. "ನೀವು ಅಷ್ಟು ವಿದ್ಯೆ ಕಲಿತಿದ್ದರೆ ನನ್ನಂತೆ ಹಗ್ಗದ ಮೇಲೆ ನಡೆದು ತೋರಿಸಿ" ಎಂದು ಸವಾಲು ಹಾಕಿದನಂತೆ. "ಆಗಲಿ. ಮೊದಲು ನಿನ್ನ ವಿದ್ಯೆ ತೋರಿಸು" ಅಂದರಂತೆ ಶ್ರೀ ವಿಜಯೀ೦ದ್ರರು. ಎತ್ತರದಲ್ಲಿ ಎರಡು ಗೂಟಗಳಿಗೆ ಹಗ್ಗ ಕಟ್ಟಿ ದೊಂಬರವನು ನಡೆದು ತೋರಿಸಿದ. ಈಗ ವಿಜಯೀ೦ದ್ರರ ಸರದಿ.

"ನಮಗೆ ನಿನ್ನ ಹಗ್ಗ ತುಂಬಾ ದಪ್ಪ. ಸಣ್ಣದು ಬೇಕು" ಅಂದರಂತೆ. ಆಶ್ಚರ್ಯ ಚಕಿತನಾದ ದೊಂಬರವನು "ನಿಮಗೆ ಎಂತಹ ಹಗ್ಗ ಬೇಕು?" ಎಂದು ಕೇಳಿದನಂತೆ. "ಬಾಳೆಯ ನಾರು ಆಗಬಹುದು" ಅಂದರಂತೆ. ಬಾಳೆಯ ನಾರಿನಮೇಲೆ ನಡೆದು ತೋರಿಸಿದರಂತೆ.

"ಅಣಿಮಾದಿ ಅಷ್ಟ ಸಿದ್ಧಿಗಳು" ಎಂದು ಕೇಳಿದ್ದೇವೆ. "ಅಣಿಮಾ" ಅಂದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು. ಹೀಗೆ ಸಿದ್ಧಿ ಪಡೆದವರು ದೇಹದ ತೂಕವನ್ನು ಇರುವೆಯಷ್ಟು ಇರುವಂತೆ ಮಾಡಿಕೊಳ್ಳಬಲ್ಲರಂತೆ. ಹೀಗೆ ಮಾಡಿಕೊಂಡು ಬಾಳೆಯ ನಾರಿನ ಮೇಲೆ ನಡೆದು ತೋರಿಸಿದರಂತೆ!

******

ಅನೇಕ ರೀತಿಯಿಂದ ಅವರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಲು ಪ್ರತಿವಾದಿಗಳು ಪ್ರಯತ್ನಿಸಿದರು. "ನಿಮ್ಮ ಬ್ರಹ್ಮಚರ್ಯ ಪರೀಕ್ಷಿಸಬೇಕು" ಎಂದು ಒಂದು ತಂಡ ಬಂದಿತು. "ಹೇಗೆ ಪರೀಕ್ಷಿಸುತ್ತೀರಿ?" ಎಂದು ಕೇಳಿದರೆ, "ನಾಲ್ವರು ವಾರಾಂಗನೆಯರು ಬಂದು ನಿಮಗೆ ಅಭ್ಯಂಜನ ಮಾಡಿಸುತ್ತಾರೆ. ನಿಮಲ್ಲಿ ಯಾವುದೇ ವಿಕಾರ ಆಗದಿದ್ದರೆ ಆಗ ಒಪ್ಪುತ್ತೇವೆ" ಅಂದರು. ಪರೀಕ್ಷೆ ದಿನ ಬಂತು. ಕೌಪೀನ ಧರಿಸಿ ಶ್ರೀ ವಿಜಯೀ೦ದ್ರರು ಕುಳಿತರು.

ವಾರಾಂಗನೆಯರು ಬಂದರು. ಅವರ ದೇಹಕ್ಕೆ ಎಣ್ಣೆ ಹಚ್ಚಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ದೂರ ನಿಂತರು. "ಏಕೆ? ಮುಂದುವರೆಸಿ" ಅಂದರು ಅವರನ್ನು ಕರೆತಂದವರು. "ಆಗುವುದಿಲ್ಲ. ಮೊದಲು ಎಣ್ಣೆ ಹಚ್ಚಿದೆವು. ಈಗ ಅವರ ಮೈ ಮುಟ್ಟಿದರೆ ಛಳಕು ಹೊಡೆದಂತೆ ಆಗುತ್ತಿದೆ. ನಮ್ಮಿಂದ ಇದು ಸಾಧ್ಯವಿಲ್ಲ" ಎಂದು ಹೇಳಿ, ನಮಸ್ಕರಿಸಿ ಹೊರಟುಹೋದರು. 

ಪರೀಕ್ಷೆಗೆ ಎಂದು ಬಂದವರು ಪರೀಕ್ಷೆಗೆ ಕುಳಿತವರನ್ನು ಎಬ್ಬಿಸಿದರು. ಸ್ವಾಮಿಗಳು "ಅಸಂಪ್ರಜ್ಞಾತ ಸಮಾಧಿ" ಹೊಂದಿ ಕುಳಿತಿದ್ದರು. ಮನಸ್ಸು ಧ್ಯಾನದಲ್ಲಿ ಲೀನವಾಗಿತ್ತು. "ಎಲ್ಲಿ? ಪರೀಕ್ಷಕರು ಬರಲಿಲ್ಲವೇ?" ಎಂದರು. ಪರೀಕ್ಷಕರು ಬಂದು, ಪರೀಕ್ಷೆಯ ಪ್ರಯತ್ನ ಮಾಡಿ, ಹೊರಟುಹೋಗಿ ಎಷ್ಟೋ ಹೊತ್ತಾಗಿತ್ತು. 

ಹೀಗೆ ಸಮಾಧಿಯಲ್ಲಿ ಕುಳಿತವರು "ನಾರಾಯಣ" ಅನ್ನುವ ಪದದ ಅರ್ಥಗಳನ್ನು ಚಿಂತಿಸುತ್ತಿದ್ದರಂತೆ. ಸಮಾಧಿಯಿಂದ ಏಳುವವರೆಗೆ 125 ಅರ್ಥಗಳು ಹೊಳೆದಿತ್ತು. ಅದನ್ನೇ "ನಾರಾಯಣ ಶಬ್ದಾರ್ಥ ನಿರ್ವಚನಂ" ಎನ್ನುವೆ ಹೆಸರಿನಲ್ಲಿ ಗ್ರಂಥ ಮಾಡಿಟ್ಟಿದ್ದಾರೆ. 

*******
ಇವು ಮೂರು ನಾಲ್ಕು ಉದಾಹರಣೆಗಳು. ಅಷ್ಟೇ. ಇವುಗಳಲ್ಲಿ ಕೆಲವನ್ನು ಕೆಲವರು ಅನುಮಾನಿಸಬಹುದು. "ಹೀಗೆ ಸಾಧ್ಯವೇ?" ಎಂದು ಹೇಳಬಹುದು. ಹಿಂದಿನ ದಿನದ ಸಮಸ್ಯೆಗೆ ಮಾರನೆಯ ದಿನ ಒಂದು ಪ್ರಭಂಧ ಬರೆದು ತಂದು ವಿವರಿಸುವವರನ್ನು ನಾವು ಇಂದೂ ಕಾಣಬಹುದು. ಅನೇಕ ಕಲೆಗಳಲ್ಲಿ ಮೂಗಿನ ಮೇಲೆ ಬೆರಳಿಡುವಂತೆ ಸಾಧನೆ ಮಾಡಿದವರು, ಮಾಡುತ್ತಿರುವವರು ಈಗಲೂ ಇದ್ದಾರಲ್ಲವೇ?

ಕನ್ನಡಲ್ಲಿ "ಅಜೇಯ ವಿಜಯೀ೦ದ್ರರು" ಅನ್ನುವ ಗ್ರಂಥವಿದೆ. ಇಂಗ್ಲಿಷಿನಲ್ಲಿ 968 ಪುಟಗಳ, ಮೂರು ಸಂಪುಟಗಳ "The invincible Saint" ಹೆಸರಿನ ಪುಸ್ತಕವಿದೆ. "ಶ್ರೀ ರಾಘವೇಂದ್ರ ವಿಜಯ", "ಶ್ರೀ ಗುರುಗುಣಸ್ತವನ" ಮತ್ತು ಮಾಧವ ಸೂರಿಗಳ "ವಿಜಯೀ೦ದ್ರ ವಿಜಯ" ಇದೆ. ಆಸಕ್ತರು ವಿವರಣೆಗಳನ್ನು ನೋಡಬಹುದು. 

No comments:

Post a Comment