Showing posts with label Prasada. Show all posts
Showing posts with label Prasada. Show all posts

Monday, March 30, 2026

ಅಕ್ಷಯ ತೃತೀಯಾ ಗಂಧ ಲೇಪನ

 

ಇನ್ನು ಕೆಲವೇ ದಿನಗಳಲ್ಲಿ "ಅಕ್ಷಯ ತೃತೀಯಾ" ಬರುವುದಿದೆ. ಪ್ರತಿ ವರ್ಷ ವೈಶಾಖ ಮಾಸದ ಮೂರನೆಯ ದಿನ (ವೈಶಾಖ ಶುಕ್ಲ ತೃತೀಯ) ಒಂದು ವಿಶೇಷವಾದ ದಿನ. ಆ ದಿನವನ್ನು ಒಂದು "ಸ್ವಯಂ ಸಿದ್ಧ ಮುಹೂರ್ತ" ಎಂದು ತಿಳಿದು ಅದಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಆ ದಿನ ಮಂತ್ರಾಲಯದಲ್ಲಿರುವ ಶ್ರೀ ಗುರು ರಾಘವೇಂದ್ರ ರಾಯರ ಮೂಲ ಬೃಂದಾವನ ಮತ್ತು ದೇಶದ ವಿವಿಧ ಕಡೆಗಳಲ್ಲಿ ಇರುವ "ಮೃತ್ತಿಕಾ ಬೃಂದಾವನ" (ಈಗ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿಯೂ ಉಂಟು. ಅಮೇರಿಕ ಸಂಯುಕ್ತ ಸಂಸ್ಥಾನ (USA) ಒಂದರಲ್ಲಿಯೇ ಹನ್ನೆರಡು ಇಂತಹ ಬೃಂದಾವನಗಳಿವೆಯಂತೆ) ಇವುಗಳನ್ನು ಶ್ರೀಗಂಧ ಲೇಪನದಿಂದ ಅಲಂಕರಿಸಲಾಗುತ್ತದೆ. ಇದೊಂದು ವಿಶೇಷ ಸೇವೆ. ಅಂದು ಭಕ್ತಾದಿಗಳು ಸರತಿಯಲ್ಲಿ ಕಾದಿದ್ದು ದರ್ಶನ ಪಡೆಯುತ್ತಾರೆ. 

ಅಕ್ಷಯ ತೃತೀಯಾ ದಿನದಂದು ಹೀಗೆ ವೃಂದಾವನಕ್ಕೆ ಗಂಧ ಲೇಪನ ಏಕೆ ಮಾಡುತ್ತಾರೆ? ಹೀಗೆ ಪ್ರಶ್ನೆ ಮಾಡಿದರೆ ಅನೇಕ ವೇಳೆ ಸರಿಯಾದ ಉತ್ತರ ಬರುವುದಿಲ್ಲ. "ಬೇಸಿಗೆ ಕಾಲ. ಆದ್ದರಿಂದ ತಂಪಾಗಿರಲಿ ಎಂದು ಹೀಗೆ ಮಾಡುತ್ತಾರೆ" ಅನ್ನುವುದು ಸಾಮಾನ್ಯ ಉತ್ತರ. ಹಾಗಿದ್ದರೆ, ಎರಡು-ಮೂರು ತಿಂಗಳ ಕಾಲ ಕಡು ಬೇಸಿಗೆ ಇರುತ್ತದೆ. ಅದರಲ್ಲಿ ಈ ದಿನವನ್ನೇ ಏಕೆ ಆರಿಸಿಕೊಂಡರು? ಬಾಕಿ ದಿನ ಬೇಸಗೆಯ ಬೇಗೆ ಇಲ್ಲವೇ? ಆಗಾಗ ಏಕೆ ಮಾಡುವುದಿಲ್ಲ? ಇವೆಲ್ಲಾ ಸಾಧುವಾದ ಪ್ರಶ್ನೆಗಳೇ. ಅಕ್ಷಯ ತೃತೀಯ ಹನ್ನೆರಡು ತಿಂಗಳ ಮಧ್ಯದಲ್ಲಿ ಬರುವ ಒಂದು ದಿನ. ಅದು ಹೇಗೆ "ಸ್ವಯಂ ಸಿದ್ಧ ಮುಹೂರ್ತ" ಆಯಿತು? ಅದಕ್ಕೆ ಅಂತಹ ವಿಶೇಷವೇನು? ಇದೂ ಸಹ ಯೋಚಿಸಬೇಕಾದ ವಿಷಯವೇ. 

*****

ಪ್ರತಿ ಸಂವತ್ಸರದ ಪ್ರಾರಂಭದ ದಿನ ಯುಗಾದಿ. ಅದು ಕಾಲಮಾನದ ಲೆಕ್ಕದ ಪ್ರಾರಂಭ. ಹೀಗಾಗಿ ಅದೊಂದು ಸ್ವಯಂ ಸಿದ್ಧ ಮುಹೂರ್ತ ಆಯಿತು. ವಿಜಯದಶಮಿ ವಿಶೇಷ ಎಲ್ಲರಿಗೂ ಗೊತ್ತಿರುವುದೇ. ಅದೂ ಸರಿ. ಬಲಿಪಾಡ್ಯಮಿ ಅರ್ಧ ದಿನವೂ ಒಂದು ವಿಶೇಷವೇ. ಅಂದು ಬಲಿಯಿಂದ ವಾಮನನು ಮೂರು ಲೋಕಗಳ ಅಧಿಪತ್ಯವನ್ನು ಕಸಿದುಕೊಂಡು ದೇವೇಂದ್ರನಿಗೆ ಹಿಂದಿರುಗಿಸಿದನು. ಇದರ ವಿವರಗಳಿಗೆ ಸಂಬಂಧಿಸಿದ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಆದರೆ ಈ ಅಕ್ಷಯ ತೃತೀಯ ಹೇಗೆ ವಿಶೇಷ? 

ಚತುರ್ಮುಖ ಬ್ರಹ್ಮ ದೇವರು ತಮ್ಮ ಸೃಷ್ಟಿಕಾರ್ಯ ಪ್ರಾರಂಭ ಮಾಡಿದ ದಿನ ಅಕ್ಷಯ ತೃತೀಯಾ. ಯುಗಾದಿ ಕಾಲಮಾನದ ಲೆಕ್ಕದ ಕಾರಣ ಮುಖ್ಯವಾದರೆ ಅಕ್ಷಯ ತೃತೀಯಾ ಸೃಷ್ಟಿಯ ಪ್ರಾರಂಭವಾದದ್ದರಿಂದ ವಿಶೇಷವಾಯಿತು. ಅದೂ ಒಂದು ಸ್ವಯಂ ಸಿದ್ಧ ಮುಹೂರ್ತ ಆಯಿತು. ಯಾವುದೇ ಕೆಲಸ ಪ್ರಾರಂಭ ಮಾಡಲು, ಮತ್ತು ಮುಖ್ಯವಾದ ಕಾರ್ಯಗಳನ್ನು ಮಾಡಲು ದಿನ ಶುದ್ದಿ ನೋಡಿ ಒಳ್ಳೆಯ ಸಮಯ ನಿರ್ಧರಿಸುವ ಪರಿಪಾಠ ಇದೆ. ಆದರೆ ಈ ನಾಲ್ಕು ದಿನಗಳಲ್ಲಿ ಅವುಗಳ ಅವಶ್ಯಕತೆ ಇಲ್ಲ ಎಂದು ನಂಬುತ್ತಾರೆ. 

ಅಕ್ಷಯ ತೃತೀಯಾ ದಿನದಂದು ಮಾಡಿದ ಒಳ್ಳೆಯ ಕೆಲಸಗಳಿಗೆ (ದಾನ, ಜಪ, ತಪ ಮುಂತಾದುವು) ಹೆಚ್ಚಿನ ಫಲ ಎಂದು ನಂಬಿಕೆ. ಆದರೆ ಈಗ ಅದೊಂದು "ಮಾರಾಟ ಮಾಡುವ ಮೋಡಿ" ಆಗಿದೆ. ಇದರ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

*****

ಶ್ರೀ ವೈಕುಂಠದ ದ್ವಾರ ಪಾಲಕರಾದ ಜಯ-ವಿಜಯರು ಸನಕ-ಸನಂದನಾದಿಗಳಿಗೆ ಶ್ರೀಮನ್ನಾರಾಯಣನ ದರ್ಶನಕ್ಕೆ ಅಡ್ಡಿ ಮಾಡಿದ ಕಾರಣದಿಂದ ಶಾಪಕ್ಕೊಳಗಾದ ಕಥೆ ಎಲ್ಲರಿಗೂ ಗೊತ್ತು. ಆ ಕಾರಣದಿಂದ ಅವರು ಮೂರು ಅಸುರ ಜನ್ಮ ಪಡೆದರು. ಶ್ರೀಹರಿಯ ಹೇಳಿಕೆಯ ಅನುಸಾರ ಅವನೇ ಮೂರು ಅವತಾರ ತೆಗೆದು ಅವರ ವಧೆ ಮಾಡಿ ಅವರ ಶಾಪ ವಿಮೋಚನೆ ಮಾಡಿದನು. 

ಮೊದಲಿಗೆ ಅವರು ಹಿರಣ್ಯಾಕ್ಷ-ಹಿರಣ್ಯಕಶಿಪು ಆಗಿ ಒಂದೇ ತಾಯಿ ದಿತಿಯ ಅವಳಿ ಮಕ್ಕಳಾಗಿ ಹುಟ್ಟಿದರು. ಎರಡನೆಯ ಬಾರಿ ಒಂದೇ ತಾಯಿ ಕೈಕಸೆಯ ಬೇರೆ ಬೇರೆ ಇಬ್ಬರು ಮಕ್ಕಳು ರಾವಣ-ಕುಂಭಕರ್ಣ ಆಗಿ ಹುಟ್ಟಿದರು. ಮೂರನೆಯ ಸಾರಿ ಅಕ್ಕ-ತಂಗಿಯರ ಮಕ್ಕಳು (ಶ್ರುತದೇವೆ ಮತ್ತು ಶ್ರುತಶ್ರವೆ - ವಸುದೇವನ ತಂಗಿಯರು) ಶಿಶುಪಾಲ-ದಂತವಕ್ತ್ರ ಆಗಿ ಹುಟ್ಟಿದರು. ಕ್ರಮವಾಗಿ ಮೊದಲಿಗೆ ವರಾಹ-ನರಸಿಂಹ ಎಂಬ ಎರಡು ರೂಪ, ಎರಡನೆಯದಾಗಿ ಶ್ರೀರಾಮ ರೂಪ ಮತ್ತು ಕಡೆಯದಾಗಿ ಶ್ರೀಕೃಷ್ಣ ರೂಪದಿಂದ ಅವರ ನಿಗ್ರಹವನ್ನು ಶ್ರೀಹರಿಯು ಮಾಡಿದನು. 

ಅವಳಿ ಮಕ್ಕಳಲ್ಲಿ ಲೋಕಾರೂಢಿಯಂತೆ ಮೊದಲು ತಾಯಿಯ ಗರ್ಭದಿಂದ ಬಂದವನು ಅಣ್ಣ ಎಂದೂ, ನಂತರ ಜನಿಸಿದವನು ತಮ್ಮ ಎಂದೂ ವ್ಯವಹರಿಸುತ್ತಾರೆ. ಆದರೆ ನಂತರ ಹುಟ್ಟಿದವನ ಗರ್ಭಧಾರಣೆ ಮೊದಲು ಆಗಿರುತ್ತದೆ. ಮೊದಲು ಜನಿಸಿದವನ ಗರ್ಭಧಾರಣೆ ಆಮೇಲೆ ಆಗಿರುತ್ತದೆ. ಈ ಕಾರಣದಿಂದ ವಾಸ್ತವವಾಗಿ ಹಿರಣ್ಯ ಕಷಿಪು ನಂತರ ಹುಟ್ಟಿದರೂ ಅಣ್ಣನು. ಹಿರಣ್ಯಾಕ್ಷನು ಮೊದಲು ಜನಿಸಿದರೂ ತಮ್ಮ. ಇದು ಸೂಕ್ಷ್ಮವಾದ ವಾಸ್ತವ. ಶ್ರೀಹರಿಯು ಮೊದಲು ವರಾಹರೂಪದಿಂದ ಹಿರಣ್ಯಾಕ್ಷನನ್ನೂ, ನಂತರ ನರಸಿಂಹ ರೂಪದಿಂದ ಹಿರಣ್ಯಕಶಿಪುವನ್ನೂ ಸಂಹರಿಸಿದನು. 

*****

ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದನನ್ನು ತಂದೆಯು ಬಹಳವಾಗಿ ಹಿಂಸಿಸಿದನು. ಪ್ರಹ್ಲಾದನು ಶ್ರೀಹರಿಯನ್ನು ಬಲವಾಗಿ ನಂಬಿ ಎಲ್ಲ ತೊಂದರೆಗಳನ್ನೂ ಧೈರ್ಯವಾಗಿ ಎದುರಿಸಿದನು. ಕಡೆಗೆ ನರಸಿಂಹರೂಪದಿಂದ ಹಿರಣ್ಯನ ಸಂಹಾರವಾಯಿತು. ನರಸಿಂಹನ ಸ್ತುತಿ ಮಾಡಿದ ಬಾಲಕ ಪ್ರಹ್ಲಾದನು ವರಾಹ ಮತ್ತು ನರಸಿಂಹ ರೂಪ ಎರಡನ್ನೂ ಒಟ್ಟಿಗೆ ನೋಡಬೇಕೆಂದು ಶ್ರೀಹರಿಯನ್ನು ಪ್ರಾರ್ಥಿಸಿದನು. ಆಗ ಶ್ರೀಹರಿಯು ಎರಡು ರೂಪಗಳನ್ನೂ ಒಟ್ಟಿಗೆ ತೋರಿಸಿದನಂತೆ. ಸಾಮಾನ್ಯವಾಗಿ ಕೆಲವೇ ಕೆಲವು ವರಾಹ ರೂಪಿ ಶ್ರೀಹರಿಯ ದೇವಾಲಯಗಳು ಉಂಟು. ನರಸಿಂಹ ರೂಪಿ ಶ್ರೀಹರಿಯ ದೇವಾಲಯಗಳು ಅನೇಕ. ಆದರೆ, ಶ್ರೀವರಾಹ-ನರಸಿಂಹ ರೂಪಿ ಶ್ರೀಹರಿಯ ದೇವಾಲಯ ಒಂದಾಗಿ ಇರುವುದು ಒಂದೇ ಕಡೆ.  ಅದು ಆಂಧ್ರ ಪ್ರದೇಶದ ಸಿಂಹಾಚಲದಲ್ಲಿ. 

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರದ ಉತ್ತರಭಾಗದಲ್ಲಿ "ಸಿಂಹಾಚಲ ಪರ್ವತ ಶ್ರೇಣಿ" ಇದೆ. ಈ ಬೆಟ್ಟ ಪ್ರದೇಶದಲ್ಲಿ ಸಿಂಹಾಚಲ ವರಾಹ-ಲಕ್ಷ್ಮಿನರಸಿಂಹ ದೇವಾಲಯವಿದೆ. ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಿಂದ ಸುಮಾರು ಇಪ್ಪತ್ತು ಕಿಲೋಮೀಟರು ದೂರ. ಈಗ ಈ ಭಾಗ ನಗರದಲ್ಲಿಯೇ ಸೇರಿಹೋದಂತಿದೆ. ಮೇಲಿನ ಚಿತ್ರದಲ್ಲಿ ಕಾಡಿನ ಮಧ್ಯೆ ಇರುವ ದೇವಾಲಯವನ್ನು ನೋಡಬಹುದು. 

ಈ ದೇವಾಲಯದಲ್ಲಿ ಒಂದು ವಿಶೇಷ. ಇಬ್ಬರು ರಕ್ಕಸರನ್ನು ಸಂಹರಿಸಿದ ಶ್ರೀಹರಿಯು ಆ ಸಮಯದಲ್ಲಿ ಅತಿ ಉಗ್ರ ರೂಪವನ್ನು ಧಾರಣೆ ಮಾಡಿದ್ದನಂತೆ. ಆ ರೂಪಗಳನ್ನು ನೋಡಲು ದೇವತೆಗಳಿಗೂ ಅಸಾಧ್ಯವಾಗಿತ್ತಂತೆ. ನೇರವಾಗಿ ನೋಡಲು ಕಷ್ಟವಾದ ತೇಜೋಮೂರ್ತಿಗಳ ಸಂಗಮ. ಅತಿ ಉಗ್ರ ರೂಪ. ಬಾಲಕ ಪ್ರಹ್ಲಾದನು ಭಯವಿಲ್ಲದೆ ನೋಡಿದ ಮಹಾನುಭಾವ. ಅವನಿಗೆ ಈ ಉಗ್ರರೂಪಗಳ ಶ್ರೀಹರಿಯೂ, ಸೌಮ್ಯ ರೂಪಿ ಶ್ರೀಹರಿಯೂ ಒಂದೇ!

*****


ಪುರಾತನವಾದ ಈ ದೇವಸ್ಥಾನ ಕಾಡಿನಲ್ಲಿ ಮುಚ್ಚಿಹೋಗಿತ್ತಂತೆ. ಅದನ್ನು ಚಂದ್ರನ ಮೊಮ್ಮಗ, ಬುಧ-ಇಳಾ ದಂಪತಿಯರ ಮಗನಾದ ಪುರೂರವ ಮತ್ತು ಊರ್ವಶಿಯರು (ನಹುಷನ ತಂದೆ ಮತ್ತು ಯಯಾತಿಯ ತಾತ) ಪುನಃ ಜನರಿಗೆ ದರ್ಶನ ಸಿಗುವಂತೆ ಮಾಡಿದರು ಎಂದು ಸ್ಥಳ ಪುರಾಣ ಹೇಳುತ್ತದೆ. ಈ ದೇವಳದಲ್ಲಿ ಹದಿನಾರು ಕಂಭಗಳ ನಾಟ್ಯಮಂಟಪ ಮತ್ತು ತೊಂಬತ್ತಾರು ಕಂಭಗಳ ಕಲ್ಯಾಣ ಮಂಟಪ ಉಂಟು. 

ಉಗ್ರ ವರಾಹ-ಲಕ್ಷ್ಮೀನರಸಿಂಹ ವಿಗ್ರಹವನ್ನು ವರುಷದ ಒಂದು ದಿನ ಬಿಟ್ಟು, ಬಾಕಿ ಎಲ್ಲಾ ದಿನಗಳಲ್ಲೂ ಶ್ರೀಗಂಧ ಲೇಪನದಿಂದ ಮುಚ್ಚಿರುತ್ತಾರೆ. ಈ ಕಾರಣದಿಂದ ಅದು ಒಂದು ದೊಡ್ಡ ಶಿವಲಿಂಗ ಇರುವಂತೆ ಕಾಣುತ್ತದೆ. ಆ ಗಂಧದಿಂದ ತುಂಬಿದ ಮೂರ್ತಿಯ ಮೇಲೆ ನಾಮ, ಕಣ್ಣು, ಮೂಗು, ಮುಂತಾದುವನ್ನು ಅಂಟಿಸಿ ಅರ್ಚಿಸುತ್ತಾರೆ. ದರ್ಶನಕ್ಕೆ ಬಂದ ಭಕ್ತರಿಗೆ ಕಾಣುವ ಮೂರ್ತಿಯು ಮೇಲಿನ ಚಿತ್ರದಂತೆ ಇರುತ್ತದೆ. 

ವರುಷದ ಒಂದು ದಿನ ಮಾತ್ರ, ಅಕ್ಷಯ ತೃತೀಯಾ ದಿನದಂದು, ಈ ಗಂಧ ಲೇಪನ ಎಲ್ಲವನ್ನೂ ತೆಗೆದು ಮೂಲ ವಿಗ್ರಹವನ್ನು ನೋಡಲು ಅವಕಾಶ ಮಾಡಿಕೊಡುತ್ತಾರೆ. ಆ ದಿನವೂ ವಿಗ್ರಹವನ್ನು ನೇರವಾಗಿ ನೋಡಿದರೆ ಕಣ್ಣುಗಳು ಉರಿಯುತ್ತವೆ ಮತ್ತು ರಕ್ತ ಬರುತ್ತದೆ ಎಂದು ನಂಬಿಕೆ. ಆದ ಕಾರಣ ಅಕ್ಷಯ ತೃತೀಯಾ ದಿನದಂದು ಮೂಲ ವಿಗ್ರಹದ ಮುಂದೆ ಒಂದು ಅತಿ ತೆಳುವಾದ ಪರದೆ ಇರುತ್ತದೆ. ಈ ಪರದೆಯ ಮೂಲಕ ವಿಗ್ರಹ ಚೆನ್ನಾಗಿ ಕಾಣುತ್ತದಂತೆ. ಅಂದು ದರ್ಶನ ಪಡೆಯಲು ಜನಜಂಗುಳಿ. ತಿರುಪತಿಯ ಶ್ರೀನಿವಾಸನ ದರ್ಶನದಂತೆ ದರ್ಶನ ಬಲು ಕಠಿಣವಂತೆ. ದರ್ಶನ ಸಿಕ್ಕರೆ ಸಿಗಬಹುದು. ಇಲ್ಲದಿದ್ದರೆ ಇಲ್ಲ. ಹೀಗೆಂದು ನೋಡಿ ಬಂದ  ಮಹಾನುಭಾವರು ಹೇಳುತ್ತಾರೆ. 

*****

ಪರಮಾತ್ಮನಿಗೆ ಅರ್ಪಿಸಿದ ಪ್ರತಿಯೊಂದು ಪದಾರ್ಥವೂ ಪೂಜ್ಯವೇ. ಪೂಜೆಯ ನಂತರ ಅವು ಪ್ರಸಾದವೇ. ಹೀಗಾಗಿ ಅವಕ್ಕೆ ಹೆಚ್ಚಿನ ಮಹತ್ವವುಂಟು. ನಾವು ಸಾಮಾನ್ಯವಾಗಿ ತಿಳಿದಂತೆ ಹಣ್ಣು-ಹಂಪಲು, ತಿಂಡಿ-ಆಹಾರ ಪದಾರ್ಥಗಳು ಮಾತ್ರ ಪ್ರಸಾದ ಅಲ್ಲ. ಹೂವು-ತುಲಸಿಗಳೂ ಪ್ರಸಾದವೇ. ಪೂಜೆಯ ವೇಳೆ ಕೊಟ್ಟ ವಸ್ತ್ರವೂ ಪ್ರಸಾದವಾಗಿ "ಶೇಷ ವಸ್ತ್ರ" ಎಂದು ಉಪಯೋಗ ಆಯಿತು. ಧೂಪಕ್ಕೆ ಉಪಯೋಗಿಸಿದ ಕೆಂಡವು ಆರಿದ ಬಳಿಕ ಇಜ್ಜಲಾಯಿತು. ಅದೂ ಪ್ರಸಾದ ಆದುದರಿಂದ ಹಣೆಯಲ್ಲಿ ಅಂಗಾರ ಆಗಿ ಸ್ವೀಕಾರ ಆಯಿತು. ತಿಂಡಿ-ತಿನಿಸುಗಳು, ಹಣ್ಣು-ಹಂಪಲುಗಳು ಸೇವನೆಗೆ ಯೋಗ್ಯ ಪರಮ ಪ್ರಸಾದ ಆಯಿತು. ಹೀಗೆ ಅವುಗಳ ಪೂಜ್ಯತೆ. 

ಪೂಜೆಗೆ ಗಂಧ ತೆಗೆದು ಅರ್ಪಿಸಿದ್ದಾಯಿತು. ಅದರಲ್ಲಿ ಮಿಕ್ಕಿದ್ದು ಹೀಗೆಯೇ ಪ್ರಸಾದ ಆಯಿತು. ನಮ್ಮ ದೇಹದ ಮೇಲೆ ಹಚ್ಚಿಕೊಳ್ಳುವುದಾಯಿತು. ಅದೇ ಪ್ರಸಾದ ಆದಮೇಲೆ ಅವನ ವಿಗ್ರಹದ ಮೇಲೆ ಏರಿಸಿದ ಗಂಧ ದೊಡ್ಡ ಪ್ರಸಾದ ಎಂದು ಬೇರೆ ಹೇಳಬೇಕಾಗಿಲ್ಲ. ಪ್ರಹ್ಲಾದರಾಜರು ಅವನ್ನು ಪ್ರಸಾದರೂಪದಲ್ಲಿ ಧರಿಸಿದರಂತೆ. 

ಇದೇ ಪ್ರಹ್ಲಾದರಾಜರು ಈಗ ಶ್ರೀ ರಾಘವೇಂದ್ರ ರಾಯರಾಗಿ ಮಂತ್ರಾಲಯದಲ್ಲಿ ವೃಂದಾವನದಲ್ಲಿ ಕುಳಿತಿದ್ದಾರೆ ಎಂದು ನಂಬಿಕೆ. ಅದೇ ಭಾವ ಮೃತ್ತಿಕಾ ವೃಂದಾವನಗಳಲ್ಲಿಯೂ ಉಂಟು. "ಅಂಥ  ಇಂಥವರಲ್ಲ" ಅನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಇದನ್ನು ನೋಡಿದ್ದೇವೆ. (ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು). ಈ ಕಾರಣ ಅಕ್ಷಯ ತೃತೀಯಾ ದಿನದಂದು ಸಿಂಹಾಚಲ ಶ್ರೀ ವರಾಹ-ಲಕ್ಷ್ಮಿ ನರಸಿಂಹನ ದೇವಾಲಯದಲ್ಲಿ ಮೂಲ ಮೂರ್ತಿಗೆ ಗಂಧವಿಲ್ಲದ ದಿನ ಇಲ್ಲಿ ಶ್ರೀ ರಾಯರ ವೃಂದಾವನಕ್ಕೆ ಅವನ ಪ್ರಸಾದ ರೂಪದ ಗಂಧ ಲೇಪನ. ವರುಷದ ಎಲ್ಲ ದಿನ ಅಲ್ಲಿ ಅವನಿಗೆ ಗಂಧ ಲೇಪನ ಮತ್ತು ಭಕ್ತರಿಗೆ ಹಾಗೆ ದರ್ಶನ. ಅವನಿಗೆ ಹೀಗೆ ಗಂಧವಿಲ್ಲದ ಒಂದು ದಿನ ಇಲ್ಲಿ ಶ್ರೀ ರಾಯರಿಗೆ ಅವನ ಪ್ರಸಾದರೂಪದ ಗಂಧ ಲೇಪನ ಮತ್ತು ಭಕ್ತರಿಗೆ ಹೀಗೆ ದರ್ಶನ. ಮಾರನೆಯ ದಿನ ವೃಂದಾವನದ ಮೇಲಿರುವ ಗಂಧ ಶ್ರೀ ರಾಯರ ಪ್ರಸಾದ. ಅದಕ್ಕೆ ಬಹಳ ಗೌರವ ಮತ್ತು ಬೆಲೆ. ಹೀಗೆ ನಡೆಯುತ್ತಿದೆ!

Thursday, November 6, 2025

ಅದು ನಾನು ಬರೆದದ್ದಲ್ಲವಪ್ಪ


ತಿರುಪತಿಯಲ್ಲಿ ತಿಮ್ಮಪ್ಪ ಬಂದು ನಿಂತಿದ್ದಾನೆ. ಎಷ್ಟೋ ಕಾಲದಿಂದ ಅಲ್ಲಿದ್ದಾನೆ. ಅವನು ನಿಂತಿರುವ, ನೆಲೆಸಿರುವ ಬೆಟ್ಟಕ್ಕೇ ಅನೇಕ ಹೆಸರುಗಳು. ಶೇಷಾಚಲ ಅನ್ನುತ್ತಾರೆ. ವೃಷಭಾಚಲ ಅನ್ನುತ್ತಾರೆ. ಅಂಜನಾದ್ರಿ ಅನ್ನುತ್ತಾರೆ. ವೆಂಕಟಾಚಲ ಅನ್ನುತ್ತಾರೆ. ಏಳು ಬೆಟ್ಟಗಳ ಸಮೂಹ ಇರುವುದರಿಂದ ಏಳುಮಲೈ, ಏಡುಕುಂಡಲ, ಸಪ್ತಗಿರಿ ಅನ್ನುತ್ತಾರೆ. ಅವನ ಬೆಟ್ಟಕ್ಕೇ ಅನೇಕ ಹೆಸರುಗಳಾದಮೇಲೆ ಅವನಿಗೆಷ್ಟು ಹೆಸರಿರಬೇಕು? ನಮಗೆ ಗೊತ್ತಿಲ್ಲದಷ್ಟು. ತಿಮ್ಮಪ್ಪ, ಶ್ರೀನಿವಾಸ, ವೆಂಕಟೇಶ, ಏಡುಕುಂಡಲವಾಡ, ವೆಂಕಟಾಚಲಪತಿ, ಶೇಷಗಿರಿವಾಸ, ಸಪ್ತಗಿರೀಶ, ಬಾಲಾಜಿ, ಗೋವಿಂದ ಮುಂತಾದ ಅನೇಕ ಹೆಸರುಗಳು ಅವನಿಗೆ ಉಂಟು. ಯಾವ ಹೆಸರಿನಿಂದ ಕರೆದರೂ ಅವನು "ಓ" ಅನ್ನುತ್ತಾನಂತೆ. 

ಅವನನ್ನು ನೋಡುವುದು ಅಷ್ಟು ಸುಲಭವಲ್ಲ. ಬೆಟ್ಟ ಏರಿ ಹೋಗಬೇಕು. ಅನೇಕರು ನಾಲ್ಕಾರು ಗಂಟೆಗಳ ಕಾಲ ನಡೆದು, ಬೆಟ್ಟಗಳನ್ನು ಕಾಲ್ನಡಿಗೆಯಲ್ಲಿ ಹತ್ತಿ, ಶ್ರಮಪಟ್ಟು ಅವನನ್ನು ನೋಡುತ್ತಾರೆ. ಮತ್ತೆ ಕೆಲವರು ಅವನ ದೇವಾಲಯದ ಹತ್ತಿರದವರೆಗೆ ಹೋಗುವ ವಾಹನಗಳಲ್ಲಿ ಹೋಗುತ್ತಾರೆ. ಲೌಕಿಕ ಅಧಿಕಾರಗಳಲ್ಲಿ ಇರುವವರಿಗೆ ದೇವಾಲಯದ ಮಹಾದ್ವಾರದವರೆಗೆ ವಾಹನಗಳಲ್ಲಿ ಹೋಗುವ ಅವಕಾಶವುಂಟು. 

ಕಾಸು-ಕಾಸು ಗೋಲಕಗಳಲ್ಲಿ ಕೂಡಿಟ್ಟು ಅದರ ಹಣದಲ್ಲಿ ಯಾತ್ರೆ ಮಾಡುವವರುಂಟು. "ಕಳ್ಳ ಒಕ್ಕಲು" ಎಂದು ಹೇಳಿ ತಿರುಪತಿ ಯಾತ್ರೆ ಮಾಡುವ ಮತ್ತೊಬ್ಬರೊಡನೆ ಹೋಗುವವರುಂಟು. ಒಂದೇ ದಿನದಲ್ಲಿ ದರ್ಶನ ಮಾಡಿಸುವ ಲಕ್ಷುರಿ ಬಸ್ಸುಗಳಲ್ಲಿ ಬಂದುಹೋಗುವವರುಂಟು. ಅನೇಕ ದಿನ ಕಾಲ್ನಡಿಗೆಯಲ್ಲಿ ಹೋಗುತ್ತಾ, ದಾರಿಯಲ್ಲಿ ಸಿಗುವ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ದೊಡ್ಡ ಯಾತ್ರೆ ಮಾಡುವವರೂ ಉಂಟು. 

ಇಷ್ಟೆಲ್ಲಾ ಪಾಡುಪಟ್ಟು ಅಲ್ಲಿಗೆ ಹೋಗಿ ಅವನನ್ನು ನೋಡುವುದು ಎಷ್ಟುಹೊತ್ತು? ನಮ್ಮ ಮುಂದೆ ನಿಂತವರು ಅದೆಷ್ಟೋ ಸಾವಿರ ಜನ. ನಮ್ಮ ಹಿಂದೆ ನಿಂತವರೂ ಅದೆಷ್ಟೋ ಸಾವಿರ ಮಂದಿ. ಬ್ರಹ್ಮೋತ್ಸವ, ವಿಶೇಷ ದಿನಗಳಲ್ಲಿ ಲಕ್ಷ ಲಕ್ಷ ಮಂದಿ. ಎಲ್ಲರೂ ಬಂದಿರುವುದು, ನಿಂದಿರುವುದು ಅವನನ್ನು ನೋಡಲೆಂದೇ. ಆದ ಕಾರಣ ಅವನನ್ನು ನೋಡಸಿಗುವುದು ಕೆಲವು ಸೆಕೆಂಡುಗಳು ಮಾತ್ರ. ದೂರದಿಂದ ಕತ್ತು ಕೊಂಕಿಸಿ ನೋಡುತ್ತಾ ಹೋಗಬೇಕು. ಅಲ್ಲಿ ಹೋಗುತ್ತಿದ್ದಂತೆಯೇ "ಜರಗಂಡಿ, ಜರಗಂಡಿ" ಎಂದು ಮುಂದೆ ತಳ್ಳುತ್ತಾರೆ. ಹಿಂದಿರುಗಿ ಬರುವಾಗಲೂ ಸಾಧ್ಯವಾದಷ್ಟು ಕತ್ತು ಹಿಂದೆ ತಿರುಗಿಸಿ ನೋಡುವ ಪ್ರಯತ್ನ. ಸಿಕ್ಕಿದಷ್ಟು, ಕಂಡಷ್ಟು ದರ್ಶನ. ಆದರೂ ಅದೊಂದು ಧನ್ಯಭಾವ ಸುತ್ತುವರೆಯುತ್ತದೆ. ಇಷ್ಟಾಯಿತಲ್ಲ ಅನ್ನುವ ಸಂತಸ. ಇದೂ ಇಲ್ಲದೆ ಹೋಗುವವರು ಎಷ್ಟೋ ಜನ ಎಂದು ನೆನೆದು ಅದೊಂದು ಸಾಂತ್ವನ!
***** 

ಗರ್ಭಗುಡಿಯಿಂದ ಹೊರಗೆ ಬಂದು, ವಿಮಾನ ಶ್ರೀನಿವಾಸನ ದರ್ಶನ ಮಾಡಿ ತಿರುಗಿದರೆ ಕಾಣುವುದು ಮಡಕೆಗಳಲ್ಲಿ ಸಾಲಾಗಿ ಇಟ್ಟಿರುವ ಪ್ರಸಾದದ ದೊಡ್ಡ ಕೂಟ. ಒಂದರಲ್ಲಿ ಪುಳಿಯೋಗರೆ. ಇನ್ನೊಂದರಲ್ಲಿ ಸಿಹಿ ಪೊಂಗಲ್. ಅದರ ಪಕ್ಕ ಖಾರದ ಪೊಂಗಲ್. ಮೊಸರನ್ನವೂ ಉಂಟು. ಬೇರೆ ಇನ್ನೇನೋ ಇರಬಹುದು. ನಮಗೆ ಅವೆಲ್ಲಾ ಕಾಣುವುದಿಲ್ಲ. ಕೊಡುವವರ ಮುಂದೆ ಕೈ ಹಿಡಿದಾಗ ಅವರ ಮುಂದೆ ಇರುವ ಮಡಕೆಯಲ್ಲಿ ಏನಿದೆಯೋ ಅದು ಕೊಡುತ್ತಾರೆ. ಅದೇನೆಂದು ಅವರಿಗೂ ಗೊತ್ತಿಲ್ಲ. ಒಂದು ಬರಿದಾದ ನಂತರ ಮತ್ತೊಂದು ತೆಗೆಯುತ್ತಾರೆ. ಗಂಡ-ಹೆಂಡತಿ, ತಾಯಿ-ಮಗ ಜೊತೆಯಲ್ಲಿ ಹೋಗಿರಬಹುದು. ಒಬ್ಬರಿಗೆ ಪುಳಿಯೋಗರೆ, ಇನ್ನೊಬ್ಬರಿಗೆ ಮೊಸರನ್ನ ಸಿಗಬಹುದು. ಹೀಗೂ ಆಗಬಹುದು. ಒಟ್ಟಿನಲ್ಲಿ ಎಲ್ಲರಿಗೂ ಪ್ರಸಾದ ಸಿಕ್ಕಿತು. ಅವರವರ ಭಾಗ್ಯಕ್ಕೆ ಅನುಸಾರ ಸಿಕ್ಕಿತು. 

ದರ್ಶನ ಹೇಗಾಯಿತು ಎಂದು ಪ್ರಸಾದ ಕೈಯಲ್ಲಿ ಹಿಡಿದು ಹೊರಗೆ ಬಂದವರನ್ನು ಕೇಳಿ. "ದಿವ್ಯ ದರ್ಶನ" ಅನ್ನುವರು ಕೆಲವರು. "ಬಹಳ ಚೆನ್ನಾಗಿ ಆಯಿತು" ಅನ್ನುವವರು ಕೆಲವರು. ಎಲ್ಲರಿಗೂ ಬಹಳ ತೃಪ್ತಿಯ ದರ್ಶನ. ಇನ್ನೊಮ್ಮೆ ನೋಡಬೇಕು ಅನ್ನಿಸುವುದು. ಆದರೆ ಈಗ ಇಷ್ಟಾಯಿತು. ಅದೇ ದೊಡ್ಡದು. ನೋಡಿದ್ದು ಕೆಲವು ಸೆಕೆಂಡುಗಳು. ಅಥವಾ ಒಂದೆರಡು ನಿಮಿಷಗಳು. ಮುಖ ಕಂಡರೆ ಕಾಲು ಕಾಣಲಿಲ್ಲ. ಶಂಖ ಕಂಡರೆ ಚಕ್ರ ಕಾಣಲಿಲ್ಲ. ಹೆಚ್ಚು ಜನರಿಗೆ ಕಂಡದ್ದು ದೊಡ್ಡ ನಾಮವೇ!

ಅದೊಂದು ಸಾಲಿಗ್ರಾಮ ಶಿಲೆಯ ದಿವ್ಯ ಮೂರ್ತಿ. ಅವನ ತುಟಿಯ ಮೇಲಿನ ಕಿರುನಗೆ ಒಂದು ವಿಶೇಷ. "ಪೂರ್ಣಾನಾನ್ಯ ಸುಖೋಧ್ಭಾಸಿ ಮಂದಸ್ಮಿತಮ್ ಆಧೀಶಿತು:" ಅನ್ನುತ್ತಾರೆ. ಅವನ ಮುಗುಳ್ನಗೆಯನ್ನು ನೋಡಿದರೇ ಅದೊಂದು ಪರಮ ಸುಖ ಕೊಡುತ್ತದೆ ಎಂದು ಅದರ ಅರ್ಥ. ಅಂತಹ ಮುಗುಳ್ನಗೆ ಇನ್ನೆಲ್ಲೂ ಕಾಣಸಿಗದು. "ನಗೆ ಮೊಗದಲಿ ಚೆನ್ನಿಗ ನಿಂತಿಹನು" ಎಂದು ಅದನ್ನು ಕಂಡ ಶ್ರೀ ವಿಜಯದಾಸರು ಹಾಡಿದರು. ಅಂತಹ ಮುಗುಳ್ನಗೆಯನ್ನು ನೋಡಿದವರೆಷ್ಟು ಮಂದಿ?

ಪ್ರಸಾದ ಹೇಗಿದೆ ಎಂದು ಕೇಳಿ. "ಪ್ರಸಾದ ಪ್ರಸಾದವೇ. ಹಾಗೆ ಕೇಳಬಾರದು" ಎಂದು ಕೆಲವರು ಹೇಳಬಹುದು. ಆದರೆ ಹೆಚ್ಚು ಜನ "ತುಂಬಾ ಚೆನ್ನಾಗಿದೆ" ಅನ್ನುತ್ತಾರೆ. ಮೊಸರನ್ನ ಸಿಕ್ಕವರು ಹಾಗೆ ಹೇಳುತ್ತಾರೆ. ಪೊಂಗಲ್ ಸಿಕ್ಕವರೂ ಹಾಗೆಯೇ ಹೇಳುತ್ತಾರೆ. ಪುಳಿಯೋಗರೆ ಸಿಕ್ಕವರೂ ಹಾಗೆಯೇ ಹೇಳುತ್ತಾರೆ. ನಮಗೆ ಗೊತ್ತಿಲ್ಲದ ಇನ್ನೊಂದು ಸಿಕ್ಕಿದವರೂ ಅದೇ ಹೇಳುತ್ತಾರೆ!

ಈ ದರ್ಶನ, ಪ್ರಸಾದಗಳ ಅನುಭವ ಶ್ರೀನಿವಾಸನ ವಿಶೇಷ. 

*****

ಒಂದು ಸತ್ವಯುತ ಗ್ರಂಥ ಅಥವಾ ಕೃತಿಯನ್ನು ಓದಿದ ಅನುಭವವೂ ಹೀಗೆಯೇ. ಆ ಗ್ರಂಥಕರ್ತೃವಿನ ಎಲ್ಲ ಕೃತಿಗಳನ್ನೂ ಓದಿದವರೂ ಉಂಟು. ಅದನ್ನು ಓದಲೇಬೇಕು ಎಂದು ತೀರ್ಮಾನಿಸಿ, ಶ್ರಮಪಟ್ಟು ಒಂದು ಗ್ರಂಥ ಸಂಪಾದಿಸಿ, ಗಮನವಿಟ್ಟು ಓದಿ, ಮನನ ಮಾಡುವವರು ಕೆಲವರು. ಯಾರೋ ಓದುತ್ತಿದ್ದಾಗ, ಅವರು ಪುಸ್ತಕ ಕೆಳಗಿಟ್ಟು ಮತ್ತೇನೋ ಮಾಡಲು ಹೋದಾಗ, ನಾಲ್ಕು ಪುಟ ಓದಿದವರು ಕೆಲವರು. ಮೊದಲು ಕೆಲವು ಪುಟ, ಮಧ್ಯೆ ಅಲ್ಲೊಂದು-ಇಲ್ಲೊಂದು ಪುಟ ಮತ್ತು ಕೊನೆಯ ಎರಡು ಪುಟ ಓದಿ "ಪುಸ್ತಕ ಓದಿದ್ದೇನೆ" ಅನ್ನುವವರು ಕೆಲವರು. "ಅಂತಹ ಕೃತಿ ಓದಿಲ್ಲವೇ?" ಎಂದು ಯಾರಾದರೂ ಮೂಗು ಮುರಿದಾರು ಎಂದು ಓದುವವರೂ ಉಂಟು. ಒಟ್ಟಿನಲ್ಲಿ ಎಲ್ಲರೂ ಓದಿದ್ದಾರೆ ಎಂದು ಹೇಳಿಸಿಕೊಳ್ಳಬಹುದು. 

ಓದಿದವರಿಗೆ ಎಷ್ಟು ಅರ್ಥವಾಯಿತು? ಅವರ ಸಿದ್ಧತೆಯಂತೆ, ಅನುಭವದಂತೆ, ಅರಗಿಸಿಕೊಳ್ಳುವ ಶಕ್ತಿಯಂತೆ ಅರ್ಥವಾಯಿತು. ಹಿನ್ನೆಲೆ ತಿಳಿದು, ಸಮಾನ ಗ್ರಂಥಗಳನ್ನು ಓದಿ, ಸಾಮ್ಯ-ವೈರುಧ್ಯಗಳನ್ನು ತೂಕ ಮಾಡಿ, ಓದಿದವರಿಗೆ ಒಂದು ಮಟ್ಟದ ಅರ್ಥ ತಿಳಿಯಿತು. ಒಂದೇ ಗ್ರಂಥವನ್ನು ಓದಿದವರಿಗೆ ಅಷ್ಟು ತಿಳಿಯಿತು. ಮತ್ತೆ-ಮತ್ತೆ ಓದಿ ಮೆಲಕು ಹಾಕಿದವರಿಗೆ ಒಂದು ರೀತಿ ತಿಳಿಯಿತು. ಗ್ರಂಥ ಹತ್ತಿರವಿಟ್ಟುಕೊಂಡು ಆಗಾಗ ಓದಿದವರಿಗೆ ಮತ್ತಷ್ಟು ತಿಳಿಯಿತು. ಹೀಗೆ ಓದಿದವರೆಲ್ಲರಿಗೂ ತಿಳಿಯಿತು. ಆದರೆ ಆ ತಿಳಿವಿನ ಆಳ-ಅಗಲಗಳು ಬೇರೆ ಬೇರೆ. 

*****

ಕನ್ನಡಕ್ಕೆ ಇಬ್ಬರು "ವರ" ಆಗಿ ಬಂದವರು. ಒಬ್ಬರು "ವರಕವಿ" ಬೇಂದ್ರೆಯವರು. ಮತ್ತೊಬ್ಬರು "ವರನಟ" ರಾಜಕುಮಾರ್. ವರಕವಿ ಬೇಂದ್ರೆ ಅವರ ಹೆಸರು "ದತ್ತಾತ್ರೇಯ ರಾಮಚಂದ್ರ ಬೇಂದ್ರೆ". ಅವರ ಕಾವ್ಯನಾಮ "ಅಂಬಿಕಾತನಯದತ್ತ". ಇದು ಎಲ್ಲರಿಗೂ ಗೊತ್ತಿರುವುದೇ. ಎಲ್ಲರಿಗೂ ಅಂದರೆ ಕನ್ನಡ ಗೊತ್ತಿರುವ ಕನ್ನಡಿಗರಿಗೆ. ಕನ್ನಡ ಗೊತ್ತಿಲ್ಲದ ಅನೇಕ ಸಾಹಿತ್ಯಾಸಕ್ತರಿಗೂ ಇದು ಗೊತ್ತು. 

ಬೇಂದ್ರೆಯವರು ಒಬ್ಬ ವರಕವಿ ಆಗಿದ್ದರು ಅನ್ನುವ ಜೊತೆಗೆ ಒಬ್ಬ ದಾರ್ಶನಿಕರು ಕೂಡ ಹೌದು. ಜೀವನದ ಹೊರಗೆ ನಿಂತು ಜೀವನದ ಪದರಗಳನ್ನು ನೋಡುವ, ವಿಶ್ಲೇಷಿಸುವ, ದಾಖಲಿಸುವ ಕೌಶಲ್ಯ ಅವರಿಗೆ ಕರಗತವಾಗಿತ್ತು. ಅವರ ಕೃತಿಗಳನ್ನು ಓದಿದವರಿಗೆ ಒಂದಷ್ಟು ಅರ್ಥವಾಯಿತು. ಅವರ ಗೀತೆಗಳನ್ನು ಕೇಳಿದವರಿಗೆ ಒಂದಷ್ಟು ಅರ್ಥವಾಯಿತು. ಹತ್ತಿರದಿಂದ ನೋಡಿ, ಅವರೊಡನಾಟ ಪಡೆದವರಿಗೆ ಇನ್ನಷ್ಟು ಅರ್ಥವಾಯಿತು. 

ಅವರ "ನಾಕು ತಂತಿ" 1964 ಇಸವಿಯಲ್ಲಿ ಹೊರಬಂದಿತು. 1973 ಇಸವಿಯಲ್ಲಿ ಅದಕ್ಕೆ "ಜ್ಞಾನಪೀಠ" ಪ್ರಶಸ್ತಿ ಬಂದಿತು. ಬಹಳ ಜನಪ್ರಿಯವಾದ ಈ ಕೃತಿಯ ಗೀತೆಗಳು ಈಗಲೂ ಹಾಡಲ್ಪಡುತ್ತವೆ. "ನಾನು, ನೀನು, ಆನು, ತಾನು" ಅನ್ನುವ ನಾಲ್ಕು ತಂತಿಗಳು ಮತ್ತು ಇವುಗಳ ಸುತ್ತ ಇರುವ ಸಂಬಂಧಗಳ ವಿವರಣೆ. ಕೆಲವರು ಇದನ್ನು ಗಂಡು-ಹೆಣ್ಣಿನ ಸಂಬಂಧದ ಸುತ್ತ ಇದೆ ಎಂದು ವಿವರಿಸಿದರು. ಮತ್ತೆ ಕೆಲವರು ಇದು ಪಾರಮಾರ್ಥಿಕ ಎಂದರು. ಅದ್ವೈತದ ಪರವಾಗಿ ಕೆಲವರು ಅರ್ಥ ಮಾಡಿದರು. ಮತ್ತೆ ಕೆಲವರು ದ್ವೈತದ ಅರ್ಥ ಕೊಟ್ಟರು. ಎಲ್ಲರೂ ಓದಿದ್ದು, ಹಾಡಿದ್ದು ಒಂದೇ ಕೃತಿಯನ್ನು. ಅವರವರ ಮನೋಧರ್ಮದಂತೆ ಅವರವರ ಅರ್ಥ ಕೂಡಿಕೊಂಡಿತು. 

ಇಷ್ಟು ಅರ್ಥಗಳಲ್ಲಿ ಯಾವುದು ಸರಿ? ಅವರ ಸ್ನೇಹಿತರೊಬ್ಬರಿಗೆ ಈ ಪ್ರಶ್ನೆ ಕಾಡಿತು. ಪ್ರಶ್ನೆಗೆ ಯಾರು ಉತ್ತರ ಹೇಳಬೇಕು? ಬರೆದವರನ್ನೇ ಕೇಳೋಣ ಎಂದು ಅವರು ಬೇಂದ್ರೆಯವರನ್ನೇ ಕೇಳಿದರು. "ಅದು ನಾನು ಬರೆದದ್ದಲ್ಲವಪ್ಪ. ಅದು ಬರೆದದ್ದು ಅಂಬಿಕಾತನಯದತ್ತ. ಅವನು ಬರೆದ. ಹೋದ. ಈಗ ನಾನು ಅದನ್ನು ಓದಿದರೆ ನಿಮ್ಮಂತೆ ಒಬ್ಬ ಓದುವಂತೆ. ಅಷ್ಟೇ. ನನಗೂ ಒಂದು ಅರ್ಥ ಹೊಳೆಯಬಹುದು. ಅದೇ ಸರಿಯೆಂದು ಹೇಗೆ ಹೇಳುವುದು? ನಿಮ್ಮ ಅರ್ಥವೂ ಸರಿಯಿರಬಹುದು" ಅಂದರಂತೆ. ಅವರೊಡನೆ ಚೆನ್ನಾದ ಒಡನಾಟ ಇದ್ದ "ವಿದ್ಯಾವಾಚಸ್ಪತಿ" ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಉಪನ್ಯಾಸ ಕಾಲದಲ್ಲಿ ಕೆಲವೊಮ್ಮೆ ಇದನ್ನು ನೆನೆಸಿಕೊಳ್ಳುತ್ತಿದ್ದರು. 

*****

ನಾಕು ತಂತಿಯ ಅನೇಕ ಅರ್ಥಗಳಲ್ಲಿ ನಾನು-ನೀನು ಅನ್ನುವುವು ಹೊರಗೆ ಕಾಣುವ ಬಾಹ್ಯ ರೂಪಗಳು, ಆನು ಮತ್ತು ತಾನು ಅನ್ನುವವು ಸ್ವಯಂ ಮತ್ತು ಬ್ರಹ್ಮ, ಅಥವಾ ಜೀವ ಮತ್ತು ಬ್ರಹ್ಮ ಎಂದು ಕೆಲವರು ಅರ್ಥ ಮಾಡುತ್ತಾರೆ. ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತ ಎನ್ನುತ್ತಾರೆ. (ಇಲ್ಲಿ ಅಹಂಕಾರ ಎಂದರೆ ನಾನು ಎನ್ನುವ ಅರಿವು ಎಂದು ಅರ್ಥ. ದುರಹಂಕಾರ ಎಂದಾಗ ಬರುವ ಅಹಂಕಾರ ಎಂದರ್ಥವಲ್ಲ). ಇನ್ನೂ ಮುಂದೆ ಹೋಗಿ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ ಮತ್ತು ವಿಜ್ಞಾನಮಯ ಕೋಶ ಅನ್ನುತ್ತಾರೆ. ಅವರವರ ಅನುಭವ ಮತ್ತು ಸಾಧನೆಯ ಆಳದ ಮೇಲೆ ಅರ್ಥಗಳು ತೆರೆದುಕೊಳ್ಳುವಂತಹ ಒಂದು ಕೃತಿ ಅದು. 

Sunday, September 14, 2025

ಸರಸ್ವತಿ ದೇವಿಯ ರಂಗಮಂದಿರ


ಒಂದು ತಿಂಗಳ ಹಿಂದೆ, ಶ್ರೀ ರಾಘವೇಂದ್ರ ಸ್ವಾಮಿಗಳ 354ನೆಯ ವರುಷದ ಆರಾಧನೆಯ ಸಂದರ್ಭದಲ್ಲಿ, "ದೊಡ್ಡವರ ಶಾಪಗಳೆಂಬ ವರಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ, ಶಂಕುಕರ್ಣ ಎಂಬ ಕರ್ಮಜದೇವತೆಗೆ ಚತುರ್ಮುಖ ಬ್ರಹ್ಮದೇವರು ಕೊಟ್ಟ ಶಾಪವು ಅನೇಕರಿಗೆ ಹೇಗೆ ವರವಾಗಿ ಪರಿಣಮಿಸಿತು ಎನ್ನುವುದನ್ನು ಸಂಕ್ಷೇಪವಾಗಿ ನೋಡಿದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಇಂತಹ ವಿಷಯಗಳಲ್ಲಿ ಕೆಲವೊಂದು ಕಣ್ಣಿಗೆ ಕಾಣುವ, ಪಂಚೇಂದ್ರಿಯಗಳಿಂದ ತಿಳಿಯುವ ಸತ್ಯಗಳು. ಇನ್ನು ಅನೇಕವು ಅವರವರ ನಂಬಿಕೆಯಿಂದ ಒಪ್ಪುವ, ಸ್ವಾನುಭವ ಮತ್ತು ಪರಾನುಭವದಿಂದ ಅರಿಯುವ ಸಂಗತಿಗಳು.  

ಈ ಸಂಚಿಕೆಯ ಒಂದು ಭಾಗದಲ್ಲಿ ಶಂಕುಕರ್ಣನಿಗೆ ಸರಸ್ವತಿ ದೇವಿಯ ಅನುಗ್ರಹವಾಗಿ ಮುಂದೆ ಅದು ರೂಪತಾಳಿದ ಸೂಚನೆ ಇತ್ತು. ಅದರ ಸ್ವಲ್ಪ ವಿವರಗಳನ್ನು ಈಗ ನೋಡೋಣ. 

ಶ್ರೀ ರಾಘವೇಂದ್ರ ಸ್ವಾಮಿಗಳೆಂದರೆ "ಕಲಿಯುಗದ ಕಾಮಧೇನು", ಸೇವೆ ಮಾಡಿ ಬೇಡಿದರೆ ಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಕರುಣಿಸುವವರು ಎಂದು ಬಹಳ ಜನರಿಗೆ ಗೊತ್ತು. ಅವರನ್ನು "ಪರಿಮಳಾಚಾರ್ಯ" ಎಂದೂ ಕರೆಯುತ್ತರೆ ಎಂದು ಕೆಲವರಿಗೆ ಗೊತ್ತು. ಮಂತ್ರಾಲಯದ ಸಿಹಿ ಪ್ರಸಾದವನ್ನು "ಪರಿಮಳ ಪ್ರಸಾದ" ಎಂದು ಕರೆಯುತ್ತಾರೆ ಎನ್ನುವುದು ಅಲ್ಲಿಗೆ ಹೋದ ಅಥವಾ ಪ್ರಸಾದ ಪಡೆದ ಎಲ್ಲರಿಗೂ ಗೊತ್ತು. ಈ "ಪರಿಮಳ" ಅನ್ನುವ ಪದದ ವಿಶೇಷವೇನು?

*****



ಚೆನ್ನಾಗಿ ತಿಳಿದ ವಿದ್ಯಾವಂತರನ್ನು, ವಾಚಾಳಿಗಳನ್ನು "ಸರಸ್ವತಿ ಪುತ್ರ" ಎಂದು ಕರೆಯುವುದು ವಾಡಿಕೆ. "ಅವರ ನಾಲಿಗೆಯ ಮೇಲೆ ಸರಸ್ವತಿಯು ನಲಿಯುತ್ತಾಳೆ, ನಾಟ್ಯವಾಡುತ್ತಾಳೆ" ಎಂದು ಹೇಳುವುದು ಉಂಟು. ಚತುರ್ಮುಖ ಬ್ರಹ್ಮದೇವರ ದೇವತಾರ್ಚನೆಯ ಸಮಯದಲ್ಲಿ ಸರಸ್ವತಿ ದೇವಿಯು ನೃತ್ಯ ಸೇವೆ ಒಪ್ಪಿಸುತ್ತಾಳೆ.  ಹಾಗೆ ನೃತ್ಯ ಮಾಡಲು ಆಕೆಗೆ ಒಂದು ಸರಿಯಾದ "ರಂಗಸ್ಥಳ" ಬೇಕು ಅನ್ನಿಸಿತಂತೆ. ಯಾವುದು ಅಂತಹ ಸರಿಯಾದ ವೇದಿಕೆ ಎಂದು ಹುಡುಕಿದಳಂತೆ. ಮನುಷ್ಯನ ನಾಲಿಗೆ ಎಲ್ಲ ಅಂಗಗಳಲ್ಲಿಯೂ ಹೆಚ್ಚು ಕೆಟ್ಟದು! ಅದು ಸುಮ್ಮನಿರುವುದಿಲ್ಲ. ಯಾವಾಗಲೂ ಏನಾದರೂ ತಿನ್ನುತ್ತಿರಬೇಕು. ಇಲ್ಲದಿದ್ದರೆ ಏನಾದರೂ ಅನ್ನುತ್ತಿರಬೇಕು. ಆದರೆ, ಇಂತಹ ನಾಲಿಗೆಯನ್ನು ಇಟ್ಟುಕೊಂಡಿದ್ದೂ ತಿನ್ನಬಾರದ್ದನ್ನು ತಿನ್ನದೇ, ಅನ್ನಬಾರದ್ದನ್ನು ಅನ್ನದೆ ಇರುವವರು ಬಹಳ ಅಪರೂಪಕ್ಕೆ ಸಿಕ್ಕುತ್ತಾರೆ. ಸರಸ್ವತಿ ದೇವಿಯು ಹೀಗೆ ಒಂದು ಸರಿಯಾದ ನೃತ್ಯ ವೇದಿಕೆ ಹುಡುಕಿದಾಗ ಶ್ರೀ ರಾಘವೇಂದ್ರ ಸ್ವಾಮಿಗಳ ನಾಲಿಗೆ ಕಾಣಿಸಿತು. ಎಂದೂ ಯಾರನ್ನೂ ಕಟು ಮಾತಿನಿಂದ ನೋಯಿಸಿದವರಲ್ಲ. ಇನ್ನೊಬ್ಬರನ್ನು ಏನೂ ಬೇಡಿದವರಲ್ಲ. ಸದಾಚಾರ ಸಂಪನ್ನರು. ಸದಾಕಾಲ ಪಾಠ-ಪ್ರವಚನಗಳಲ್ಲೇ ತಮ್ಮ ಕಾಲ ಕಳೆಯುತ್ತಿರುವವರು. ಆದ್ದರಿಂದ ಇದೇ ಸರಿಯಾದ ರಂಗಸ್ಥಳ ಎಂದು ತೀರ್ಮಾನಿಸಿದಳಂತೆ. 

ನೃತ್ಯ ಪ್ರಾರಂಭವಾಯಿತು. ದೇವಲೋಕದ ಮಂದಾರ, ಪಾರಿಜಾತ ಮುಂತಾದ ದಿವ್ಯ ಪುಷ್ಪಗಳ ದಂಡೆಯನ್ನು ಸರಸ್ವತಿ ದೇವಿಯು ತನ್ನ ತುರುಬಿನಲ್ಲಿ ಮುಡಿದಿದ್ದಳು. ಆನಂದದಿಂದ ನರ್ತಿಸುವಾಗ ಆ ಹೂವಿನ ದಂಡೆಯಿಂದ ಅನೇಕ ಹೂವುಗಳು ಅದುರಿ ಉದುರಿದವಂತೆ. ನೃತ್ಯ ಮುಗಿದ ಮೇಲೆ ಆ ಹೂವುಗಳು ಶ್ರೀ ರಾಯರ ನಾಲಿಗೆಯ ಮೇಲೆ ಉಳಿದವು. ಅವರು ಅವನ್ನೆಲ್ಲ ಸೇರಿಸಿ, ಪೋಣಿಸಿ, ಅವುಗಳ ಸುಗಂಧದ ಕಾರಣ "ಪರಿಮಳ" ಎಂದು ಹೆಸರಿಟ್ಟು ಕೊಟ್ಟರಂತೆ. ಅದೇ "ಪರಿಮಳ" ಎಂಬ ಹೆಸರಿನ ಗ್ರಂಥವಾಯಿತಂತೆ!

ಮಂತ್ರಾಲಯಕ್ಕೆ ಹೋದವರು ಶ್ರೀ ರಾಯರ ವೃಂದಾವನದ ಪಕ್ಕದಲ್ಲಿಯೇ ಇರುವ ಇನ್ನೊಂದು ಭವ್ಯ ವೃಂದಾವನ ನೋಡಿರುತ್ತಾರೆ. ಇದು ಶ್ರೀ ರಾಘವೇಂದ್ರ ತೀರ್ಥರ ನಂತರ ಬಂದ ಐದನೆಯವರಾದ ಶ್ರೀ ವಾದೀಂದ್ರ ತೀರ್ಥರದ್ದು. ಈ ಶ್ರೀ ವಾದೀಂದ್ರ ತೀರ್ಥರು ಶ್ರೀ ರಾಘವೇಂದ್ರರ ಕುರಿತಾಗಿ "ಗುರುಗುಣಸ್ತವನ" ಎನ್ನುವ ಗ್ರಂಥವೊಂದನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಯರ "ಪರಿಮಳ" ಎನ್ನುವ ಗ್ರಂಥದ ರಚನೆಯ ಕುರಿತಾಗಿ "ಧೀರಶ್ರೀ ರಾಘವೇಂದ್ರ ತ್ವದತುಲರಸನಾ ರಂಗನೃತ್ಯ ಸ್ವಯಂಭೂ...." ಎನ್ನುವ ಶ್ಲೋಕದಲ್ಲಿ ಮೇಲಿನಂತೆ ಚಮತ್ಕಾರಿಕವಾಗಿ ವರ್ಣಿಸಿದ್ದಾರೆ. 

ಮಧ್ವ ಸಂಪ್ರದಾಯದಲ್ಲಿ ಆಚಾರ್ಯ ಮಧ್ವರ ಕೃತಿಗಳಿಗೆ ಟೀಕಾಗ್ರಂಥಗಳನ್ನು ಬರೆದವರಲ್ಲಿ ಶ್ರೀ ಜಯತೀರ್ಥರು ಅಗ್ರಗಣ್ಯರು. ಅವರಿಗೆ "ಟೀಕಾಚಾರ್ಯರು" ಎಂದು ಕರೆಯುವುದು ವಾಡಿಕೆ. ಅವರ "ಶ್ರೀಮನ್ ನ್ಯಾಯಸುಧಾ" ಗ್ರಂಥವು ಬಲು ವಿಖ್ಯಾತ. ಮೂಲ ಗ್ರಂಥಗಳಲ್ಲಿ, ವಿಶೇಷವಾಗಿ ಶ್ರೀಮನ್ಯಾಯಸುಧಾ ಗ್ರಂಥದಲ್ಲಿ,  ಸುಲಭವಾಗಿ ಅರ್ಥ ಆಗದ ವಿಷಯಗಳನ್ನು ಶ್ರೀ ರಾಘವೇಂದ್ರರು ತಮ್ಮ ಪರಿಮಳ ಗ್ರಂಥದಲ್ಲಿ ವಿವರಿಸಿದ್ದಾರೆ. ಈ ಕಾರಣಕ್ಕೆ ಅವರನ್ನು "ಪರಿಮಳಾಚಾರ್ಯರು" ಎಂದು ಕರೆಯುವುದು. ಮುಂದೆ ಇದೇ ನಡೆದು ಬಂದು ಮಂತ್ರಾಲಯದ ಪ್ರಸಾದವೂ "ಪರಿಮಳ ಪ್ರಸಾದ" ಆಗಿದೆ. 

******


ದೇವರಪೂಜೆಯಲ್ಲಿ ದೀಪ, ಹೂವು, ಹೂವಿನ ಹಾರ, ತುಳಸಿ, ಮಂಗಳಾರತಿ, ನೈವೇದ್ಯಗಳ ಉಪಯೋಗ ಉಂಟು. ಇವುಗಳು ಸ್ವಲ್ಪ ಕಾಲ ಇರುವಂತಹವು. ಹೂವು, ತುಳಸಿ ಮಾರನೆಯ ದಿನ ಬಾಡಿರುತ್ತದೆ. ದೀಪ, ಮಂಗಳಾರತಿ ಸ್ವಲ್ಪ ಸಮಯದ ನಂತರ ಆರಿಹೋಗುತ್ತವೆ.  ಸದಾಕಾಲ ಇರಬೇಕಾದರೆ ಏನು ಮಾಡಬೇಕು? ಶ್ರೀ ರಾಘವೇಂದ್ರ ಸ್ವಾಮಿಗಳು ಇದಕ್ಕೆ ಉಪಾಯ ಹುಡುಕಿದರಂತೆ. 

ಎಡಗಡೆ ಮತ್ತು ಬಲಗಡೆ ಇಡಲು ಎರಡು ದೀಪಗಳಾಗಿ "ಭಾವದೀಪ" ಮತ್ತು "ನ್ಯಾಯದೀಪ" ಎಂದು ಎರಡು ಗ್ರಂಥಗಳನ್ನು ರಚಿಸಿದರಂತೆ. ತುಳಸಿಯ ತೆನೆ ಇರುವ ಕುಡಿಯು ಪೂಜೆಗೆ ವಿಶೇಷವಂತೆ. ಅದಕ್ಕೆ "ಮಂಜರಿ" ಅನ್ನುತ್ತಾರೆ. (ಮೇಲಿನ ಚಿತ್ರದಲ್ಲಿ ನೋಡಬಹುದು). ಒಣಗುವ ತುಳಸಿಯ ಬದಲಾಗಿ "ತತ್ತ್ವ ಮಂಜರಿ" ಎನ್ನುವ ಗ್ರಂಥ. ಪೂಜೆಯ ವೇಳೆ ಹೆಚ್ಚಿನ ಬೆಳಕು ಬರಲು "ಚಂದ್ರಿಕಾ ಪ್ರಕಾಶ" ಎನ್ನುವ ಗ್ರಂಥ. (ಶ್ರೀ ವ್ಯಾಸರಾಯರ "ತಾತ್ಪರ್ಯ ಚಂದ್ರಿಕಾ" ಗ್ರಂಥದ ವಿವರಣೆ). ಮತ್ತೆ ಹೂವು-ಗಂಧಗಳಿಗೆ "ಪರಿಮಳ" ಕೃತಿ. ಹಾರದ ಸ್ಥಳದಲ್ಲಿ "ನ್ಯಾಯ ಮುಕ್ತಾವಳಿ" ಎನ್ನುವ ಮುತ್ತಿನ ಹಾರದಂತಹ ಗ್ರಂಥ. ಮಂಗಳಾರತಿಯ ಸಲುವಾಗಿ "ತಂತ್ರದೀಪಿಕಾ". ನೈವೇದ್ಯದ ಹರಿವಾಣದಲ್ಲಿ ಬಗೆಬಗೆಯ ಇತರ ಅನೇಕ ಗ್ರಂಥಗಳು. 

"ಪ್ರಾತಃ ಸಂಕಲ್ಪ ಗದ್ಯ"  ಎನ್ನುವುದು ಅವರು ಪ್ರತಿದಿನ ಬೆಳಿಗ್ಗೆ ಮಾಡುತ್ತಿದ್ದ "ಟು ಡು ಲಿಸ್ಟ್". "ಸರ್ವ ಸಮರ್ಪಣ" ಎನ್ನುವುದು ಅವರು ದಿನದ ಕೊನೆಯಲ್ಲಿ ಅಂದು ಮಾಡಿದುದನ್ನೆಲ್ಲ ಪರಮಾತ್ಮನಿಗೆ ಒಪ್ಪಿಸುತ್ತಿದ್ದ ರೀತಿ. ದಿನಕ್ಕೆ ಹದಿನೆಂಟು ಗಂಟೆಗಳ ಅಧ್ಯಯನ-ಅಧ್ಯಾಪನ; ಪೂಜೆ-ಅತಿಥಿಸೇವೆ. 

ಹೀಗೆ ಒಂದು ದಿನ ಇದ್ದು ಕೆಡುವ-ಬಾಡುವ ಪದಾರ್ಥಗಳ ಬದಲು ಚಿರಕಾಲ ಉಳಿಯುವ ಗ್ರಂಥಗಳನ್ನು ದೇವರಪೂಜೆಗೆ ಮಾಡಿಟ್ಟದ್ದು ಶ್ರೀ ರಾಘವೇಂದ್ರಸ್ವಾಮಿಗಳ ವಿಶೇಷತೆ ಎಂದು ತಿಳಿದವರು ಹೇಳುತ್ತಾರೆ. 


*****

ಶ್ರೀ ರಾಯರ ಅನೇಕ ಪವಾಡಗಳನ್ನು ಹೇಳುತ್ತಾರೆ. ಈ ಎಲ್ಲ ಪವಾಡಗಳಿಗಿಂತ ಹೆಚ್ಚಿನದು ಅವರ ನಲವತ್ತೈದು ಗ್ರಂಥಗಳ ಭಂಡಾರ. ಇವುಗಳಲ್ಲಿ ಅನೇಕವು ಅವರು "ಶ್ರೀ ರಾಘವೇಂದ್ರ ತೀರ್ಥ" ಎಂದು ಪೀಠ ಸ್ವೀಕರಿಸುವ ಮುಂಚೆ, ವೆಂಕಟನಾಥ ಎಂದು ಹೆಸರಿನ ವಟು ಮತ್ತು ಗೃಹಸ್ಥ ಆಗಿದ್ದಾಗ ರಚಿಸಿದ್ದು. 

ವಿಜಯನಗರದ ಅರಸರ ಆಸ್ಥಾನ ವಿದ್ವಾಂಸರಾಗಿ ಅವರಿಗೆ ವೀಣಾ ಗುರುಗಳಾಗಿದ್ದ ವಿದ್ವಾಂಸರ ವಂಶದಲ್ಲಿ ಜನಿಸಿದ್ದು. ಸಿರಿ-ಸಂಪತ್ತಿನಲ್ಲಿ ನಡೆದುಬಂದ ಕುಟುಂಬವಾದರೂ ಇವರ ಕಾಲಕ್ಕೆ ವಿಜಯನಗರ ಸಾಮ್ರಾಜ್ಯ ಹರಿದು-ಹಂಚಿಹೋಗಿ ಇವರಿಗೆ ಹೇಳತೀರದ ದಾರಿದ್ರ್ಯ. ಅಂತಹ ಸಂದರ್ಭಗಳಲ್ಲಿ ಈ ಗ್ರಂಥಗಳ ರಚನೆ. 

ಭಗವದ್ಗೀತೆಗೆ ಹೊಂದಿದ "ಗೀತಾ ವಿವೃತ್ತಿ", ಬ್ರಹ್ಮಸೂತ್ರ ಭಾಷ್ಯಗಳಿಗೆ ಸಂಬಂಧಿಸಿದಂತೆ "ತಂತ್ರದೀಪಿಕಾ", ಋಗ್ವೇದ ಮಂತ್ರಗಳಿಗೆ "ಮಂತ್ರಾರ್ಥ ಮಂಜರಿ", ಹತ್ತು ಪ್ರಮುಖ ಉಪನಿಷತ್ತುಗಳಿಗೆ ಭಾಷ್ಯಗಳು, ಮತ್ತನೇಕ ಗ್ರಂಥಗಳು. ಹಿಂದಿದ್ದ ಗ್ರಂಥಗಳಿಗೆ ಬಂದಿದ್ದ ಟೀಕಾಗ್ರಂಥಗಳಿಗೆ ಟಿಪ್ಪಣಿಗಳು. ಹಿಂದಿದ್ದ ಗ್ರಂಥಗಳಿಗೆ ಟೀಕೆಗಳು. ಜೊತೆಗೆ ಸ್ವತಂತ್ರ ಗ್ರಂಥಗಳು. ದೊಡ್ಡ ಗ್ರಂಥಗಳನ್ನು ಸಂಗ್ರಹ ಮಾಡಿ ಚಿಕ್ಕದಾಗಿಸಿ ಪ್ರತಿನಿತ್ಯ ಪಾರಾಯಣಕ್ಕೆ ಕೊಟ್ಟರು. ಚಿಕ್ಕದಾದ ಗ್ರಂಥಗಳನ್ನು ವಿವರಿಸಿ ದೊಡ್ಡದು ಮಾಡಿ ಕೊಟ್ಟರು. ಹೀಗೂ ಸರಿ. ಹಾಗೂ ಸರಿ.  ಎಲ್ಲದರಲ್ಲೂ ಪ್ರಚಂಡ ವಿದ್ವತ್ ದರ್ಶನ. 

ಕನ್ನಡದಲ್ಲಿ ರಚಿಸಿದ ರಚನೆಗಳು ಸಿಕ್ಕಿಲ್ಲ. ಸಿಕ್ಕಿರುವ ಒಂದೇ "ಇಂದು ಎನಗೆ ಗೋವಿಂದ" ದೇವರನಾಮ ಎಲ್ಲರ ಬಾಯಲ್ಲಿ. 

ಭಜಿಸಿ ಬೇಡಿದ ಭಕ್ತರಿಗೆ ಕೇಳಿದ್ದು ಕೊಟ್ಟಂತೆ, ವಾಂಗ್ಮಯ ವಿಸ್ತಾರದಲ್ಲೂ ಯಾರಿಗೆ ಏನು ಬೇಕೋ ಅದುಂಟು. 

*****

ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯರ ಅಗಲಿಕೆ. ಅಕ್ಕ-ಭಾವ ಮತ್ತು ಅಣ್ಣನ ನೆರಳಿನಲ್ಲಿ ಬಾಲ್ಯ. ಏಳು ವರುಷಕ್ಕೆ ಅಣ್ಣನಿಂದ ಉಪನಯನ. ಹದಿನೆಂಟು ವರುಷಕ್ಕೆ ವಿವಾಹ. ಇಪ್ಪತ್ತಾರು ವರುಷಕ್ಕೆ ಸನ್ಯಾಸ. ಚಿಕ್ಕ ವಯಸ್ಸಿನ ಹೆಂಡತಿ ಮತ್ತು ಏಳು ವರುಷದ ಮಗನನ್ನು ತೊರೆದು ಯತಿಯಾದದ್ದು. ಕಡು ಬಡತನದ ಜೀವನ. ಈ ಹಿನ್ನೆಲೆಯಲ್ಲಿ ಸಂಪಪಾದಿಸಿದ ಪ್ರಚಂಡ ಪಾಂಡಿತ್ಯ. ರಚಿಸಿದ ಗ್ರಂಥ ರಾಶಿ. ಪೀಠ ಸ್ವೀಕರಿಸಿದ ಮೇಲೆ ಐವತ್ತು ವರುಷ ಪೀಠಾಧಿಪತಿಯಾಗಿ ಸಮಾಜದ ಸೇವೆ. ನಂತರ ಜೀವಂತವಾಗಿದ್ದಾಗಲೇ ವೃಂದಾವನ ಪ್ರವೇಶ.  

ವೇದ-ಉಪನಿಷತ್ತುಗಳು, ತರ್ಕ, ವ್ಯಾಕರಣ, ಅಲಂಕಾರ ಶಾಸ್ತ, ಕಾವ್ಯ-ನಾಟಕ, ಮಹಾಭಾಷ್ಯ, ಪೂರ್ವ ಮೀಮಾಂಸಾ, ಜ್ಯೋತಿಷ್ಯ, ಸಂಗೀತ, ವೀಣಾವಾದನ ಮುಂತಾದ ಅನೇಕ ವಿಷಯಗಳಲ್ಲಿ ಪೂರ್ಣ ಪ್ರಭುತ್ವ. ಅನೇಕ ಕಲೆಗಳಲ್ಲಿ ಪರಿಣತಿ. ಒಂದೊಂದರಲ್ಲಿ ಸಾಧನೆ ಮಾಡಲು ಅನೇಕರಿಗೆ ಕಷ್ಟಸಾಧ್ಯ. ಇವರಿಗೆ ಎಲ್ಲವೂ ಸಲೀಸು. 

ರಾಯರ ಬೇರೆ ಪವಾಡಗಳು ಒತ್ತಟ್ಟಿಗಿರಲಿ. ಇವೆಲ್ಲದರ ಹಿನ್ನೆಲೆಯಲ್ಲಿ ಅವರನ್ನು ನೆನೆದಾಗ, ನೋಡಿದಾಗ ಅವರ ಬದುಕೇ ಒಂದು ದೊಡ್ಡ ಪವಾಡ.   

Friday, June 27, 2025

ದೇವರಲ್ಲಿ ಬೇಡುವುದು ಸರಿಯೇ?


ಹಿಂದಿನ ಸಂಚಿಕೆಗಳಲ್ಲಿ "ಅಷ್ಟ ಭೋಗ", "ಅಷ್ಟ ಭಾಗ್ಯ" ಮತ್ತು "ಅಷ್ಟ ಐಶ್ವರ್ಯ" ಇವುಗಳ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚೆ ಮಾಡಿದೆವು. (ಈ ಹಿಂದಿನ ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಇವುಗಳು ತಾವಾಗಿಯೇ ಸಿಗುವುದಿಲ್ಲ. ಕೆಲವನ್ನು ಸ್ವಲ್ಪ ಮಟ್ಟಿಗೆ ನಾವೇ ಸ್ವಂತ ಪರಿಶ್ರಮದಿಂದ ಗಳಿಸಬಹುದಾದರೂ ಅವುಗಳ ಪ್ರಮಾಣ ಹೆಚ್ಚಿರುವುದಿಲ್ಲ. ಅಷ್ಟೇ ಅಲ್ಲ, ಮನುಷ್ಯ ಸಹಜ ಬುದ್ಧಿಯ ಕಾರಣವಾಗಿ ಎಷ್ಟು ಸಂಪಾದನೆ ಮಾಡಿದರೂ ತೃಪ್ತಿ ಎನ್ನುವುದು ಬರುವುದಿಲ್ಲ. "ಇಷ್ಟು ದೊರಕಿದರೆ ಇನ್ನಷ್ಟು ಬೇಕೆಂಬಾಸೆ. ಅಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ. ಕಷ್ಟ ಬೇಡ ಎಂಬಾಸೆ. ಕಡು ಸುಖವ ಕಾಂಬಾಸೆ." ಎಂದು ದಾಸರು ಹೇಳುವಂತೆ ಮನುಷ್ಯನಿಗೆ ಕಷ್ಟ ಬೇಡವೇ ಬೇಡ. ಸುಖ ಬೇಕೇ ಬೇಕು. ಅಷ್ಟೇ ಅಲ್ಲ. ಸುಖ ಇದ್ದಷ್ಟೂ ಇನ್ನೂ ಹೆಚ್ಚು ಬೇಕೆಂಬ ತವಕ. 

ತಾವಾಗಿಯೇ ಸಿಗದ, ನಾವು ಕಷ್ಟ ಪಟ್ಟರೂ ಪೂರ್ಣವಾಗಿ ಎಟುಕದ, ಆದರೆ ಬೇಕೆಂಬ ತುಡಿತವುಳ್ಳ ಈ ವಿಷಯಗಳನ್ನು ಪಡೆಯುವುದು ಹೇಗೆ? ನಮ್ಮ ಅನುಭವ ಹೇಳಿಕೊಟ್ಟಂತೆ ನಮ್ಮಲ್ಲಿ ಇಲ್ಲದಿದ್ದುದನ್ನು ಬೇರೆಯವರಿಂದ ಕೇಳಿ ಪಡೆಯಬಹುದು. ಹಾಗಿದ್ದರೆ ಯಾರನ್ನು ಕೇಳಬೇಕು? ಯಾರಾದರೂ ತಮ್ಮ ಬಳಿ ಇರುವುದನ್ನು ಮಾತ್ರ ಕೊಡಬಲ್ಲರು. ಅವರ ಬಳಿಯೇ ಇಲ್ಲದಿದ್ದುದನ್ನು ಯಾರಾದರೂ ಕೊಡುವುದು ಹೇಗೆ? ಆದಕಾರಣ ನಾವು ನಂಬಿದ ದೇವರನ್ನೋ, ದೇವತೆಯನ್ನೋ ಕೇಳಬಹುದು. ಅದರಲ್ಲಿಯೂ ಯಾರು ಸುಲಭವಾಗಿ ನಮಗೆ ಒಲಿಯುವವರೋ ಅವರನ್ನು ಕೇಳುವುದು. ಅವರಲ್ಲಿ ಕೊಡುವ ಶಕ್ತಿ ಇದ್ದರೂ ಕೇಳಿದರೆ ಕೊಡದವರನ್ನು ಬೇಡಿ ಏನು ಪ್ರಯೋಜನ? 

ಸಾಧನೆಯ ದಾರಿಯಲ್ಲಿ ನಡೆಯುತ್ತಿರುವ ಜಿಜ್ಞಾಸುವಿಗೆ "ಹೀಗೆ ಕೇಳುವುದು ಸರಿಯೇ?" ಎಂಬ ಅನುಮಾನ ಬರುವುದು ಸಹಜ. ವಾಸ್ತವವಾಗಿ ಈ ರೀತಿಯ ಅನುಮಾನ ಬರುವುದೇ ಒಂದು ಒಳ್ಳೆಯ ಸೂಚನೆ. ಎಷ್ಟು ಸಿಕ್ಕಿದರೂ ತೃಪ್ತಿ ಇಲ್ಲದ ಜೀವಕ್ಕೆ ಕೇಳುವುದರ ಎಲ್ಲೆ ಎಲ್ಲಿ? "ಕಿಂಗ್ ಮೈದಾಸ" ಕೇಳಿದಂತೆ ಮುಟ್ಟಿದ್ದೆಲ್ಲವೂ ಚಿನ್ನವಾಗಬೇಕು. ಅದು ನಿಜವಾಗಿ ಮುಟ್ಟಿದ್ದೆಲ್ಲಾ ಚಿನ್ನವಾದಾಗ, ತನ್ನ ಮುದ್ದಿನ ಮಗಳೂ ಒಂದು ಚಿನ್ನದ ಬೊಂಬೆಯಾಗಿ ಕುಳಿತಾಗ, ಅವನ ಕಣ್ಣು ತೆರೆಯಿತು. ಅಂತಹ ಅತಿರೇಕಕ್ಕೆ ಹೋಗದಿದ್ದರೆ ಆ ರೀತಿಯ ಪಾಠ ಕಲಿಯುವುದೂ ಸುಲಭ ಸಾಧ್ಯವಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಒಮ್ಮೆ ಕೇಳುವುದು ಅಭ್ಯಾಸವಾದರೆ ಆ ದುರಭ್ಯಾಸ ನಿಲ್ಲಿಸುವುದು ಕಷ್ಟವೇ. ಇದರಿಂದ ಹೊರಬರುವುದು ಹೇಗೆ?
*****

ಒಬ್ಬ ದೊಡ್ಡ ಧನಿಕ ಇದ್ದಾನೆ. ಅವನ ಬಳಿ ಬೇಕಾದಷ್ಟು ಐಶ್ವರ್ಯ ಇದೆ. ಕೊಡುವ ಶಕ್ತಿಯ ಜೊತೆ ಕೊಡುವ ಮನಸ್ಸೂ ಇದೆ. ಅನೇಕರು ಅವನ ಬಳಿ ಬಂದು, ಬೇಡಿ, ಬೇಕಾದುದನ್ನು ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ತೆಗೆದುಕೊಂಡು ಹೋಗುವವರ ಸರತಿಯ ಸಾಲೇ ಇದೆ. 

ಒಂದು ದಿನ ಮೊದಲನೆಯವನು ಬಂದ. ಅವನಿಗೆ ಸ್ವಂತ ಖರ್ಚಿಗೆ ಹಣ ಬೇಕು. ಅದನ್ನು ಕೇಳುವುದಕ್ಕಾಗಿ ಬಂದಿದ್ದಾನೆ. ಕೇಳಲು ನಾಚಿಕೆ. ಬಹಳ ಸಂಕೋಚದಿಂದ ತಲೆ ಕೆಳಗೆ ಮಾಡಿ ಬೇಡುತ್ತಾನೆ. ಕೊಡುವ ಧನಿಕನ ಕೈ ಯಾವಾಗಲೂ ಮೇಲೆ. ಕೇಳುವವನಿಗೆ ಅನುಮಾನ. "ಕೊಡುತ್ತಾನೋ ಇಲ್ಲವೋ ಗೊತ್ತಿಲ್ಲ. ಹೇಗೆ ಕೇಳುವುದು? ಯಾವ ರೀತಿ ಕೇಳಿದರೆ ಕೊಡಬಹುದು? ಇಲ್ಲ ಅಂದುಬಿಟ್ಟರೆ ಏನು ಮಾಡುವುದು? ಕೊಟ್ಟರೂ ಏನು ಹೇಳಿ ಕೊಡುತ್ತಾನೋ? ಸಾಲ ಎಂದು ಕೊಡಬಹುದು. ಇಷ್ಟು ಬಡ್ಡಿ ಎಂದು ಹೇಳಬಹುದು. ಈಗ ಇಲ್ಲ, ನಾಳೆ ಬಾ ಎನ್ನಬಹುದು. ಹತ್ತು ಬಾರಿ ಓಡಾಡಿಸಿ ಕೊಡಬಹುದು. ಇನ್ನೊಬ್ಬರ ಮುಂದೆ ಅವಮಾನ ಮಾಡಬಹುದು. ಏನಾದರೂ ಕೇಳಲೇಬೇಕು. ವಿಧಿಯಿಲ್ಲ" ಹೀಗೆಲ್ಲಾ ಮನಸ್ಸಿನಲ್ಲಿ ಗೊಂದಲ. ಕಡೆಗೆ ಧೈರ್ಯ ಮಾಡಿ ಕೇಳಿದ. ಸಾಹುಕಾರ ಕೊಟ್ಟೇಬಿಟ್ಟ. ಅವನ ಕೆಲಸವಾಯಿತು. ಹೊರಟುಹೋದ. 

ಈಗ ಎರಡನೆಯವನು ಬಂದ. ಇವನು ತನಗೋಸ್ಕರ ಹಣ ಕೇಳಲು ಬಂದವನಲ್ಲ. ಇವನು ಯಾವುದೋ ಸಂಸ್ಥೆಯ ಒಬ್ಬ ವಿಶ್ವಸ್ತ ಮಂಡಳಿಯವನು (ಟ್ರಸ್ಟೀ). ಕೇಳುತ್ತಿರುವುದು ತನಗಾಗಿ ಅಲ್ಲ. ಟ್ರಸ್ಟಿಗಾಗಿ. ಪಡೆವ ಹಣದಿಂದ ಸ್ವಂತಕ್ಕೆ ಪ್ರಯೋಜನ ಪಡೆಯುವ ಅಭಿಲಾಷೆ ಇಲ್ಲ. ಹಣ ತೆಗೆದುಕೊಂಡಮೇಲೆ ತನ್ನದು ಅನ್ನುವ ಭಾವನೆ ಇಲ್ಲ. ದುರುಪಯೋಗ ಮಾಡಬೇಕೆಂಬ ಇರಾದೆ ಇಲ್ಲ. ತನಗಾಗಿ ಎಂದು ಕೇಳದುದರಿಂದ ಸಂಕೋಚವೂ ಇಲ್ಲ. ಕೊಡುವವನು ಇದನ್ನು ಸಾಲ ಎಂದು ಕೊಡುವುದಿಲ್ಲ. ಹಣ ಕೇಳಲು ಬಂದಿದ್ದರೂ ಸಾಹುಕಾರ ಗೌರವದಿಂದ ಕಾಣುತ್ತಾನೆ. ಕೂಡಿಸಿ ಮಾತನಾಡಿಸುತ್ತಾನೆ. ಸಾಹುಕಾರ ಕೊಡುತ್ತಾನೆ. ಇವನು ತೆಗೆದುಕೊಂಡು ಹೋಗುತ್ತಾನೆ. ತೆಗೆದುಕೊಂಡುದನ್ನು ಸರಿಯಾಗಿ, ಕೇಳಿದ ಉದ್ದೇಶ ಸಾಧನೆಗೆ ಉಪಯೋಗಿಸುತ್ತಾನೆ. 

ಇಬ್ಬರಾದಮೇಲೆ ಮೂರನೆಯವನು ಬಂದ . ಅವನು ಏನನ್ನೂ ಕೇಳಲು ಬಂದವನಲ್ಲ. ಅವನಿಗೆ ಏನೂ ಬೇಕಾಗಿಲ್ಲ. ಇರುವುದರಲ್ಲೇ ತೃಪ್ತನಾಗಿದ್ದಾನೆ. ಅವನಿಗೆ ಯಾವ ಪದಾರ್ಥವನ್ನೂ ಕೇಳಬೇಕೆಂಬ ಅಭಿಲಾಷೆ ಇಲ್ಲ. ಬದಲಾಗಿ ಅವನೇ ಸಾಹುಕಾರನಿಗೆ ಕೊಡಲು ಹಣ್ಣನ್ನು ತಂದಿದ್ದಾನೆ. ಹಣ್ಣು ಕೊಡುತ್ತಾನೆ. ಅಷ್ಟೇ. ಆದರೆ ಸಾಹುಕಾರ "ನಿನಗೆ ಏನು ಬೇಕು? ಕೇಳು. ಸಂತೋಷದಿಂದ ಕೊಡುತ್ತೇನೆ" ಅನ್ನುತ್ತಾನೆ. "ನನಗೆ ಏನೂ ಬೇಡ. ನಿನ್ನನ್ನು ಕಾಣಲು ಬಂದೆ. ನೋಡಿದ್ದಾಯಿತು. ಅಷ್ಟು ಸಾಕು" ಅನ್ನುತ್ತಾನೆ ಬಂದವನು. ಸಾಹುಕಾರ ಬಲವಂತ ಮಾಡಿ ಏನನ್ನೋ ಕೊಡುತ್ತಾನೆ.  ಬಂದವನು ಅದನ್ನು ತೆಗೆದುಕೊಂಡು ಹೋಗುತ್ತಾನೆ. ಕೊಡು ಎಂದು ಕೇಳಲಿಲ್ಲ. ಕೊಡದಿದ್ದರೆ ದುಃಖವಿಲ್ಲ. ಸಾಹುಕಾರ ತಾನಾಗಿಯೇ ಕೊಟ್ಟಿದ್ದನ್ನು ತೆಗೆದುಕೊಂಡಾಗ ಸಂತೋಷವಿಲ್ಲ. ಸಂತೋಷವಿಲ್ಲ ಎಂದರೆ ವಿಷಾದವೂ ಇಲ್ಲ. ಒಂದು ರೀತಿಯ ನಿರ್ಲಿಪ್ತ ಭಾವನೆ. "ನೀನು ಕೊಟ್ಟೆ. ಅದನ್ನು ಗೌರವಪೂರ್ವಕ ಸ್ವೀಕರಿಸುತ್ತೇನೆ. ಅದರ ಮೌಲ್ಯ ನೋಡಿ ಅಲ್ಲ. ಕೊಟ್ಟವನಾದ ನಿನ್ನ ದೊಡ್ಡತನ ನೋಡಿ ತೆಗೆದುಕೊಂಡೆ" ಎನ್ನುವ ಭಾವ. 
*****

ಭಗವಂತನೆಂಬ ದೊಡ್ಡ ಸಾಹುಕಾರ. ಬಂದವರು ಮೂರು ರೀತಿಯ ಭಕ್ತರು. ಮೊದಲನೆಯವನು ತನಗೆ ಬೇಕು ಎಂದು ಕೇಳುವ "ಸಕಾಮಿ ಭಕ್ತ". ಕೇಳಿ ಪಡೆದದ್ದರಿಂದ ಸುಖ ಪಡುವ ಅಭಿಲಾಷೆ. ಸಾಹುಕಾರನ ಬಳಿ ಹೋಗುವಾಗಲೇ ಏನು ಬೇಕು ಎಂದು ತೀರ್ಮಾನ ಮಾಡಿ ಅದನ್ನು ಕೇಳಿದವ. ಕೇಳಿದ ಉದ್ದೇಶದಲ್ಲಿ ಅನುಮಾನವಿಲ್ಲ. ಅದು ಸ್ವಾರ್ಥಕ್ಕೇ. ಆದರೂ ಭಗವಂತ ಕೊಟ್ಟ. ಭಕ್ತನಿಗೆ ಸಂತೋಷ. ಮತ್ತೆ ಇನ್ನೊಂದು ದಿನ ಮತ್ತೊಂದು ಬೇಕಾದಾಗ ಹೀಗೆ ಅವನ ಬಳಿ ಹೋಗುತ್ತಾನೆ. ಎಂದೋ ಒಂದು ದಿನ ಮುಂದಿನ ಹಂತಕ್ಕೆ ತೇರ್ಗಡೆ ಆಗಬಹುದು. ಪರಮಾತ್ಮ ಕರುಣಾಳು. ಅವನನ್ನು ತಳ್ಳಿ ಓಡಿಸುವುದಿಲ್ಲ. ಹೆಚ್ಚಿನ ಭಕ್ತರು, ಅವರ ಅನುಷ್ಠಾನಗಳು ಈ ರೀತಿಯವೇ. 

ಎರಡನೆಯವನೂ ಬೇಡಲೆಂದೇ ಬಂದವನು. ಆದರೆ ಪಡೆದುದರಿಂದ ಸುಖ ಪಡುವ ಅಭಿಲಾಷೆ ಇಲ್ಲ. ಆ ಪರಿಕರಗಳಿಂದ ಮತ್ತಷ್ಟು ಸಾಧನೆ ಮಾಡಲು ಅನುಕೂಲ ಎಂದು ಬೇಡುತ್ತಿದ್ದಾನೆ. ಇವನಿಗೆ ಕೊಡುವುದರಿಂದ ಸರಿದಾರಿಯಲ್ಲಿ ಮುಂದುವರೆಯುತ್ತಾನೆ ಎನ್ನುವುದು ಅವನಿಗೂ ಗೊತ್ತು. (ಅವನಿಗೆ ಎಲ್ಲವೂ ಗೊತ್ತು). ಮೊದಲಿನವನಂತೆ ಇವನೂ ಬೇಡುವವನೇ ಆದರೂ ಇವನಿಗೆ ಗೌರವವೂ ಸಿಗುತ್ತದೆ. ಕೇಳಿದ್ದೂ ಸಿಗುತ್ತದೆ. ಈ ರೀತಿ ಭಕ್ತರು ಮೊದಲಿನವರಿಗಿಂತ ಸಂಖ್ಯೆಯಲ್ಲಿ ಕಡಿಮೆ. 

ಮೂರನೆಯವರದು ಬೇರೆಯೇ ರೀತಿ. ಅವರಿಗೆ ಭಗವಂತನ ಪ್ರೀತಿ ಬಿಟ್ಟು ಬೇರೆ ಏನೂ ಬೇಕಾಗಿಲ್ಲ. ಮಾಡಿದ ಪ್ರತಿ ಕೆಲಸವೂ ಅವನ ಪ್ರೀತಿಗಾಗಿ. ಸಂಕಲ್ಪ ಮಾಡುವಾಗ "ಅಸ್ಮಾಕಂ ಸಹಕುಟುಂಬಾನಾಂ" ಇಲ್ಲ. "ಲೋಕ ಕಲ್ಯಾಣಾರ್ಥಂ" ಮಾತ್ರವೇ ಉಂಟು. "ಪರಮೇಶ್ವರ ಪ್ರೇರಣಯಾ, ಪರಮೇಶ್ವರ ಪ್ರೀತ್ಯರ್ಥಂ" ಎನ್ನುವುದೇ ಧ್ಯೇಯ. "ಕರ್ಮ ಫಲ" ಎಂಬ ಹಣ್ಣನ್ನೂ ಭಗವಂತನಿಗೇ ಕೊಡುತ್ತಾರೆ. ಅದರ ಮೇಲೂ ಪ್ರೀತಿಯಾಗಲೀ, ಅಧಿಕಾರವಾಗಲೀ ಇಲ್ಲವೇ ಇಲ್ಲ. ಪರಮಾತ್ಮನೇ ತಾನಾಗಿ ಕೊಟ್ಟದ್ದನ್ನು "ಪ್ರಸಾದ" ಎಂದು ಸ್ವೀಕರಿಸುತ್ತಾರೆ. ತಿರಸ್ಕರಿಸುವ ಅಹಂಕಾರವಿಲ್ಲ. ಸಿಕ್ಕಿತು ಎಂಬ ಬೀಗುವಿಕೆಯಂತೂ ಮೊದಲೇ ಇಲ್ಲ. 

*****

ಸ್ವಾತಂತ್ರ್ಯಾನಂತರದ ಎರಡು-ಮೂರು ದಶಕಗಳಲ್ಲಿ ಹುಟ್ಟಿದ ತಲೆಮಾರಿನ ಜನರಿಗೆ ಮೂರು ರೀತಿಯಲ್ಲಿ ತೊಂದರೆಗಳು. ಹೆಚ್ಚಿನವರು ನಮ್ಮ ಅನುಷ್ಠಾನಗಳನ್ನು ಕ್ರಮವಾಗಿ ಕಲಿತವರಲ್ಲ. ಅಪ್ಪ, ಅಜ್ಜಂದಿರು ಮಾಡುತ್ತಿದ್ದರು. ಆದ್ದರಿಂದ ನಾವೂ ಮಾಡುತ್ತೇವೆ. (ನಮ್ಮ ಹಿಂದಿನ ತಲೆಮಾರಿನ ಜನ ಸಾಮಾನ್ಯವಾಗಿ ಇವನ್ನು ಕ್ರಮವಾಗಿ ಕಲಿತಿದ್ದರು. ಮುಂದಿನ ತಲೆಮಾರಿನವರು ಹೆಚ್ಚು-ಕಡಿಮೆ ಬಿಟ್ಟೀ ಬಿಟ್ಟರು.) ಮಂತ್ರ-ಸ್ತೋತ್ರಗಳ ಸರಿಯಾದ ಅರ್ಥಗಳು ತಿಳಿದಿಲ್ಲ. ಆದ್ದರಿಂದ ಹಿಂದಿನವರಂತೆ ಮಾಡುತ್ತಾ ಹೋಗುವುದು. ಇದು ಮೊದಲನೆಯ ತೊಂದರೆ. ಕ್ರಮೇಣ ವ್ಯವಹಾರ ಜ್ಞಾನದ ಜೊತೆಗೆ ಅನುಭವದ ಜ್ಞಾನ ಸೇರಿದಾಗ "ಇದೇನು ಹೀಗಿದೆ? ಕೆಲವು ಸರಿ ಕಾಣುವುದಿಲ್ಲ?" ಎನ್ನುವ ಅನುಮಾನ ಬರುತ್ತದೆ.

ಎರಡನೆಯ ಸಿಕ್ಕು  ಅಂದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ನಾವು ಹುಟ್ಟಿದ ಮನೆಯ ಆಚರಣೆಯೇ ಸರ್ವಶ್ರೇಷ್ಠ.. ಹೀಗೆಂದು ಪ್ರತಿ ಮತವೂ, ಪಂಗಡವೂ ಹೇಳುತ್ತವೆ. ಬೇರೆಯದರಲ್ಲೂ ಸ್ವಲ್ಪ ಒಳ್ಳೆಯದಿರಬಹುದು ಎಂದು ಒಪ್ಪುವ ಉದಾರ ಮನೋಭಾವ ಕಡಿಮೆ. ಜೊತೆಗೆ ಯಾವುದಾದರೂ ಸರಿ ಇಲ್ಲ ಅಂದರೆ ಅದನ್ನು ಬಿಟ್ಟುಬಿಡುವ ದಾರ್ಢ್ಯ ಇರುವುದಿಲ್ಲ. ಏಕೆಂದರೆ ಅದು ಸರಿಯಾಗಿಲ್ಲ ಎಂದು ಖಚಿತವಾದ ಅಭಿಪ್ರಾಯಕ್ಕೆ ಬರುವ ತಳಹದಿ ಭದ್ರವಿಲ್ಲ. 

ಮೂರನೆಯ ಸಮಸ್ಯೆ ಅಂದರೆ ನಾವು ತತ್ವಕ್ಕೂ ಮತ-ಪಂಗಡಗಳಿಗೂ ಇರುವ ವ್ಯತ್ಯಾಸವನ್ನು ಮಸಕು-ಮಸಕಾಗಿ ಕಾಣುತ್ತೇವೆ. ನಮ್ಮ ವೈದಿಕ ವಾಂಗ್ಮಯದಲ್ಲಿ, ವಿಶೇಷವಾಗಿ ಉಪನಿಷತ್ತುಗಳಲ್ಲಿ, ಹೇಳುವಂತೆ "ಎಲ್ಲವನ್ನೂ ತಿಳಿ; ನಿನಗೆ ಸರಿ ಅನ್ನಿಸಿದ್ದನ್ನು ಮಾಡು" ಎನ್ನುವುದರಲ್ಲಿ ನಮಗೆ ಹೆಚ್ಚಿನ ಪರಿಶ್ರಮವಿಲ್ಲ. ಆದ್ದರಿಂದ ಮೊದಲಿನಿಂದ ಮಾಡಿಕೊಂಡು ಬಂದ ಯಾವುದನ್ನೂ ಅದು ಈಗ ನಮಗೆ ಸರಿಕಾಣುತ್ತಿಲ್ಲ ಎಂದು ಬಿಡುವುದಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ಅನುಮಾನಗಳಿಗೆ ಮುಕ್ತ ಮನಸ್ಸಿನಿಂದ ಸಮಾಧಾನ ಹೇಳುವ ಹಿರಿಯರೂ ತಿಳಿದವರೂ ಸಿಗುವುದು ಬಹಳ ಅಪರೂಪ. 

*****

ನಮ್ಮ ಅನೇಕ ಮಂತ್ರ-ಸ್ತೋತ್ರಗಳಲ್ಲಿ ದೇವರಲ್ಲಿ ಅನೇಕ ವಸ್ತುಗಳನ್ನು ಬೇಡುವ ಪ್ರಕರಣಗಳಿವೆ. ಕೆಲವುಗಳಲ್ಲಿ ಬೇಡಿದ್ದನ್ನೇ ಮತ್ತೆ ಮತ್ತೆ ಕೇಳುವ ಅಂಶಗಳಿವೆ. ನಮ್ಮ ಅರಿವು ಆಳವಾದಂತೆ ಈ ರೀತಿ ಬೇಡುವುದು, ಮತ್ತೆ ಮತ್ತೆ ಅದನ್ನೇ ಕೇಳುವುದು, ಅನವಶ್ಯಕವಾದ ಪದಾರ್ಥಗಳ ಕೋರಿಕೆ, ಮುಂತಾದುವುಗಳ ಸಮಸ್ಯೆ ಕಾಡುತ್ತವೆ. ಇದಕ್ಕೆ ಪರಿಹಾರವೇನು?

ಅಂತಹವುಗಳ ಆಚರಣೆ ಬಿಡುವುದು ಒಂದು ಪರಿಹಾರ. ಆದರೆ ಅನೇಕ ಇಂತಹ ಸಂದರ್ಭಗಳಲ್ಲಿ ಅವುಗಳಲ್ಲಿ ನಮಗೆ ಹಿಡಿಸುವ, ಹಿತವಾದ ಅನೇಕ ವಿಷಯಗಳೂ ಸೇರಿರುತ್ತವೆ. ಕೆಲವಂತೂ ಮನಸ್ಸಿಗೆ ಹೆಚ್ಚಿನ ಮುದವನ್ನೂ, ಶಾಂತಿಯನ್ನೂ ಕೊಡುತ್ತವೆ. ಅನೇಕ ಕಡೆ ನಿಜವಾದ ಭಕ್ತಿ ಹೊರಹೊಮ್ಮುವ ಅವಕಾಶಗಳಿವೆ. ಹೀಗಾಗಿ ಅವನ್ನು ಬಿಡುವುದೂ ಪೂರ್ತಿಯಾಗಿ ಸರಿ ಕಾಣುವುದಿಲ್ಲ. 

ಮೇಲೆ ಚರ್ಚಿಸಿದ ಮೂವರು ಭಕ್ತರ ಗುಂಪುಗಳಲ್ಲಿ ಮೂರನೆಯ ಗುಂಪಿಗೆ ಹೋಗಲು ನಾವು ಬಹಳ ಬಹಳ ದೂರ ಹೋಗಬೇಕಾಗಿದೆ. ಇಂತಹ ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟಿವೆ ಅಂದರೆ ಮೊದಲನೆಯ ರೀತಿಯಲ್ಲಿ ಇರುವುದನ್ನು ದಾಟಿದ್ದೇವೆ ಅನ್ನಬಹುದು. ಆದ್ದರಿಂದ ಇಂತಹ ಬೇಡುವ ಸಂದರ್ಭಗಳಲ್ಲಿ ಮನಸ್ಸನ್ನು ಹದ ಮಾಡಿಕೊಂಡು ಕೇಳುವಾಗ "ಇದು ನಮ್ಮ ಭೋಗಕ್ಕಲ್ಲ. ಹೆಚ್ಚಿನ ಸಾಧನೆಗಾಗಿ ಬೇಡುತ್ತೇವೆ. ದುರುಪಯೋಗ ಮಾಡುವುದಿಲ್ಲ" ಅನ್ನುವ ಅನುಸಂಧಾನ ಇದ್ದು ಎರಡನೇ ವರ್ಗಕ್ಕೆ ಸೇರುವ ಪ್ರಯತ್ನ ಮಾಡಬಹುದು. 
***** 

ಮೂರನೆಯ ಗುಂಪಿನ ಭಕ್ತರ ಗುಣ-ಸ್ವರೂಪಗಳು ಮತ್ತು ಎರಡು-ಮೂರು ಉದಾಹರಣೆಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ ಪ್ರಯತ್ನ ಮಾಡೋಣ. 

Friday, April 18, 2025

ಎಂಜಲು ಮತ್ತು ಪ್ರಸಾದ


ಹಿಂದಿನ ಸಂಚಿಕೆಯಲ್ಲಿ "ಚರ್ವಿತ ಚರ್ವಣ" ಅನ್ನುವ ಶೀರ್ಷಿಕೆಯಡಿ "ಈ ಪ್ರಪಂಚದಲ್ಲಿರುವ ಸಾಹಿತ್ಯವೆಲ್ಲ  ವ್ಯಾಸರು ಹೇಳಿ ಬಿಟ್ಟದ್ದು" ಎನ್ನುವ ನಾಣ್ಣುಡಿ ನೆನಪಿಸಿಕೊಂಡೆವು. "ವ್ಯಾಸೋಚ್ಛಿಷ್ಟಮ್ ಜಗತ್ ಸರ್ವಂ" ಎನ್ನುವ ಈ ಹೇಳಿಕೆಯ ಹಿನ್ನೆಲೆಯಲ್ಲಿ, ಉಚ್ಚಿಷ್ಟ ಪದಕ್ಕೆ ಸಾಮಾನ್ಯವಾಗಿ "ತಿಂದು ಬಿಟ್ಟದ್ದು" ಅಥವಾ "ಎಂಜಲು" ಎಂದು ಅರ್ಥವಿದ್ದರೂ ಅದರಲ್ಲಿ ಏನಾದರೂ ವಿಶೇಷ ಅರ್ಥ ಇದೆಯೇ ಎಂಬ ಬಗ್ಗೆ ಪ್ರಶ್ನೆ ಹಾಕಿಕೊಂಡಿದ್ದೆವು. ಅದರ ಬಗ್ಗೆ ಈಗ ಸ್ವಲ್ಪ ಯೋಚಿಸೋಣ. ಇದರ ಹಿನ್ನೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. 

ಪರಮಾತ್ಮನ ಸೃಷ್ಟಿ ಕಾರ್ಯದಲ್ಲಿ, ಮೊದಲು ಅನ್ನವನ್ನು ಸೃಷ್ಟಿ ಮಾಡಿ ನಂತರ ಜೀವಿಗಳನ್ನು ಸೃಷ್ಟಿ ಮಾಡಲಾಯಿತು ಎನ್ನುವುದನ್ನು "ಬೃಹದಾರಣ್ಯಕೋಪನಿಷತ್" ಕೃತಿಯ "ಸಪ್ತಾನ್ನ ಪ್ರಕರಣ" ವಿಭಾಗದಲ್ಲಿ ಅತ್ಯಂತ ವಿವರವಾಗಿ ಚರ್ಚಿಸಲಾಗಿದೆ. ಸಾವಿರಾರು ವರುಷಗಳ ಹಿಂದೆ ಇಂಥದೊಂದು ವಿಸ್ತಾರವಾದ ಚರ್ಚೆ ನಮ್ಮಲ್ಲಿ ನಡೆದಿದೆ ಎನ್ನುವುದೇ ಒಂದು ವಿಸ್ಮಯದ ವಿಷಯ. ಇಲ್ಲಿ ಅನ್ನ ಅಂದರೆ ಭತ್ತದಿಂದ ತೆಗೆದ ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಮಾತ್ರವಲ್ಲ. ಆಹಾರ ರೂಪದಲ್ಲಿ ಸಮಸ್ತ ಪ್ರಾಣಿಗಳೂ ಸೇವಿಸುವ ಪದಾರ್ಥಗಳನ್ನು ಒಟ್ಟಾಗಿ "ಅನ್ನ" ಎಂದು ಹೇಳಲಾಗಿದೆ. ಏಳು ರೀತಿಯ ಅನ್ನಗಳು, ಅವನ್ನು ಸೇವಿಸುವ ಗುಂಪುಗಳು ಮತ್ತು ಅವನ್ನು ನೀಡುವ ಪಾಲಕ (ಕಸ್ಟೋಡಿಯನ್) ಇವುಗಳನ್ನು ಒಂದು ಕೋಷ್ಠಕದ ರೀತಿ ವಿವರಿಸಲಾಗಿದೆ. ಇದರ ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ. 

ಈ ಚರ್ಚೆಯ ಸಂದರ್ಭದಲ್ಲಿ ಎಂಜಲು, ಶೇಷಾನ್ನ, ಪಿತೃಶೇಷ, ಮಾತೃ ಭೋಜನ ಮತ್ತು ಪ್ರಸಾದ ಎನ್ನುವ ಬೇರೆ ಬೇರೆ ರೀತಿಯ ವರ್ಗೀಕರಣ ಮತ್ತು ಸಮಾಜದಲ್ಲಿ ನಡೆಯುವ ಪದ್ದತಿ ಹಾಗೂ ಸಂಪ್ರದಾಯಗಳನ್ನು ಕೂಡ ನೋಡಬಹುದು. 

*****

ಕೆಲವು ಪದಾರ್ಥಗಳನ್ನು ಒಬ್ಬ ವ್ಯಕ್ತಿಯೇ ತಿಂದು ಮುಗಿಸಬಹುದು. ಕೆಲವು ಪದಾರ್ಥಗಳು ಒಬ್ಬನೇ ವ್ಯಕ್ತಿಗೆ ಅನೇಕ ಸಂಖ್ಯೆಯಲ್ಲಿ ಬೇಕಾಗಬಹುದು. ಮತ್ತೆ ಕೆಲವು ಪದಾರ್ಥಗಳು ಒಬ್ಬರು ತಿಂದು ಮುಗಿಸುವುದಕ್ಕೆ ಅಸಾಧ್ಯವೇ. ಒಂದು ಬಾಳೆಯಹಣ್ಣು ಅಥವಾ ಒಂದು ಕಿತ್ತಳೆಯನ್ನು ಒಬ್ಬನೇ ತಿನ್ನಬಹುದು. ದ್ರಾಕ್ಷಿಯಾದರೆ ಒಬ್ಬನೇ ಹತ್ತಿಪ್ಪತ್ತು ತಿನ್ನಬಹುದು. ಒಂದು ದೊಡ್ಡ ಹಲಸಿನ ಹಣ್ಣಾದರೆ ಒಬ್ಬನೇ ತಿನ್ನಲು ಅಸಾಧ್ಯ. ಹಣ್ಣುಗಳದ್ದು ಒಂದು ಸರಳ ಉದಾಹರಣೆ. ಇದೇ ರೀತಿ ಹೆಚ್ಚಿನ ಪ್ರಮಾಣದಲ್ಲಿ ಮಾಡಿಟ್ಟ ಅನೇಕ ತಿನಿಸುಗಳಿಂದ ಕೂಡಿದ ಅಡಿಗೆ. ಇದನ್ನು ಅನೇಕರು ಒಟ್ಟಿಗೆ ಅಥವಾ ಬೇರೆ ಬೇರೆಯಾಗಿ ಸೇವಿಸಬಹುದು. 

ಇಂತಹ ಒಂದು ಅನೇಕ ವ್ಯಂಜನಗಳಿಂದ (ಪಲ್ಯ, ಗೊಜ್ಜು, ಕೂಟು, ಚಟ್ನಿ ಮುಂತಾದುವುಗಳಿಗೆ ವ್ಯಂಹಜನಗಳು ಎನ್ನುತ್ತಾರೆ) ಕೂಡಿದ ಹತ್ತಾರು ಜನ ಸೇವಿಸಬಹುದಾದ ಪ್ರಮಾಣದ ಅಡಿಗೆಯನ್ನು ತೆಗೆದುಕೊಳ್ಳೋಣ. ಇಪ್ಪತ್ತು ಜನರಿಗೆ ಎಂದು ಮಾಡಿದ ತಯಾರಿ ಅನ್ನೋಣ. ಹತ್ತು ಜನರು ಮೊದಲು ಊಟಕ್ಕೆ ಕುಳಿತರು. ಅಡಿಗೆ ಸೊಗಸಾಗಿತ್ತು. ಊಟದ ಮನೆಯ ವಾತಾವರಣ ಚೆನ್ನವಿತ್ತು. ಬಡಿಸುವವರು ನುರಿತವರು. ಊಟಕ್ಕೆ ಕುಳಿತವರೋ ಭೋಕ್ತಾಪುರುಷರು. (ಒಳ್ಳೆಯ ಪ್ರಮಾಣದಲ್ಲಿ ಪದಾರ್ಥಗಳನ್ನು ಚೆನ್ನಾಗಿ ಊಟ ಹೊಡೆಯುವವರನ್ನು ಭೋಕ್ತಾಪುರುಷರು ಎಂದು ಹೇಳುತ್ತಿದ್ದರು). ಬಹಳ ವಿನೋದ ಮತ್ತು ಸ್ವಲ್ಪ ಸಂಗೀತ ಇತ್ಯಾದಿಗಳ ನಡುವೆ ಊಟ ಚೆನ್ನಾಗಿ ಸಾಗಿತು. ಹತ್ತು ಜನರೂ ಊಟಮಾಡಿ ಎದ್ದಿದ್ದಾರೆ. 

ಮಾಡಿದ ಅಡಿಗೆಯಲ್ಲಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚಾಗಿ ಖರ್ಚಾಗಿದೆ. ಅಂಕಿ-ಅಂಶಗಳ ಲೆಕ್ಕದಲ್ಲಿ ಹೇಳುವುದಾದರೆ ಶೇಕಡಾ ಅರವತ್ತರಷ್ಟು ಸೇವಿಸಿಯಾಗಿದೆ. ಮಿಕ್ಕ ನಲವತ್ತು ಭಾಗ ತಯಾರಿಸಿದ ಮತ್ತು ಬಡಿಸಿದ ಪಾತ್ರೆಗಳಲ್ಲಿ ಉಳಿದಿದೆ. ಹತ್ತು ಜನ ಊಟ ಮಾಡಿದವರ ಎಲೆಗಳಲ್ಲೂ ಸ್ವಲ್ಪ ಸ್ವಲ್ಪ ಪದಾರ್ಥಗಳು ಉಳಿದಿವೆ. ಈ ರೀತಿ ಊಟ ಮಾಡಿ ಬಿಟ್ಟ ಎಲೆಗಳಲ್ಲಿ ಅಥವಾ ತಟ್ಟೆಗಳಲ್ಲಿ ಬಿಟ್ಟಿರುವ ಪದಾರ್ಥಗಳನ್ನು "ಎಂಜಲು" ಎನ್ನುವುದು ವಾಡಿಕೆ. ಇದನ್ನು ಯಾರೂ ತಿನ್ನುವುದಿಲ್ಲ. ಅವೆಲ್ಲವನ್ನೂ ಒಟ್ಟುಗೂಡಿಸಿ ಹೊರಗಡೆ ಬಿಸಾಡುತ್ತಾರೆ. ಅಲ್ಲಿ ಪ್ರಾಣಿಗಳು ತಿನ್ನಬಹುದು ಇಲ್ಲವೇ ಕಡೆಗೆ ಗೊಬ್ಬರ ಆಗಬಹುದು. ಆದರೆ ತಯಾರಿಸಿದ ಮತ್ತು ಬಡಿಸುವ ಪಾತ್ರೆಗಳಲ್ಲಿ ಉಳಿದಿರುವ ಪದಾರ್ಥಗಳು ಎಂಜಲಲ್ಲ. ಅದನ್ನು ನಿರ್ದೇಶಿಸಲು ಬಳಸುವ ಪದ "ಮಿಕ್ಕಿದ್ದು" ಎಂದು. "ಶೇಷಾನ್ನ" ಎಂದು ಹಿಂದೆ ಹೇಳುತ್ತಿದ್ದರು. ಇದು ಎಂಜಲಲ್ಲ. ಬೇರೆಯವರು ಸೇವಿಸಲು ಯೋಗ್ಯವಾದದ್ದು. 

*****

ಶ್ರಾದ್ಧಾದಿ ಕರ್ಮಗಳನ್ನು (ತಿಥಿ ಎಂದು ಹೇಳುವುದು ವಾಡಿಕೆ) ಮಾಡುವ ದಿನ ಆ ಕೆಲಸಕ್ಕಾಗಿಯೇ ವಿಶೇಷ ಅಡಿಗೆ ಮಾಡಿರುತ್ತಾರೆ. ಆ ಕಾರ್ಯಕ್ರಮಕ್ಕೆ ಪಿತೃಗಳ ಪ್ರತಿನಿಧಿಗಳಾಗಿ ಕೆಲವರನ್ನು ಆಮಂತ್ರಿಸಿರುತ್ತಾರೆ. ಅವರನ್ನು ಊಟಕ್ಕೆ ಕೂಡಿಸಿ, ಅವರಲ್ಲಿ ಪಿತೃದೇವತೆಗಳನ್ನು ಆವಾಹಿಸಿ ಭೋಜನ ಮಾಡಿಸುತ್ತಾರೆ. ಅವರ ಊಟ ಮುಗಿದು, ಕೈ ತೊಳೆಯಲು ಏಳುವ ಮುಂಚೆ ಅಲ್ಲಿ ಮಾಡಿರುವ ಅನ್ನದಲ್ಲಿ "ಪಿಂಡದಾನ" ಮಾಡುತ್ತಾರೆ. (ಈ ಪಿಂಡಪ್ರದಾನ ಸಮಯದಲ್ಲೂ ಅಸ್ವಾಭಿಕ ಮರಣಹೊಂದಿದ ಪಿತೃಗಳಿಗೆ "ಉಚ್ಚಿಷ್ಟ ಪಿಂಡ" ಎಂದು ಬೇರೊಂದು ಪಿಂಡಪ್ರದಾನ ಮಾಡುತ್ತಾರೆ).  ಶ್ರಾದ್ಧ ಕರ್ಮಕ್ಕೆ ಬಂದವರ ಊಟ ಆಯಿತು. ಮಾಡಿದ ಅಡಿಗೆ ಇನ್ನೂ ಮಿಕ್ಕಿದೆ. ಇದು ಶೇಷಾನ್ನ. ಪಿತೃಕಾರ್ಯ ಮಾಡಿ ಉಳಿದ ಶೇಷಾನ್ನ ಆದುದರಿಂದ ಇದು "ಪಿತೃ ಶೇಷ" ಎಂದಾಯಿತು. 

ಕಾರ್ಯ ನಡೆಯುವಾಗ ಊಟ ಮಾಡಿದ ಹಿರಿಯರನ್ನು ಕಾರ್ಯ ಮಾಡಿದ ಯಜಮಾನ "ಮಿಕ್ಕ ಅಡಿಗೆಯನ್ನು ಏನು ಮಾಡೋಣ?" (ಶೇಷಾನ್ನ೦ ಕಿಂ ಕರಿಷ್ಯೇ?) ಎಂದು ಕೇಳುತ್ತಾನೆ. "ನಿನ್ನ ಬಂಧುಗಳೊಡನೆ ಸೇವಿಸಬಹುದು" (ಇಷ್ಟೆ:ಸಹ ಭುಂಜತಾಮ್) ಎಂದು ಅವರು ಹೇಳುತ್ತಾರೆ. (ಇದು ಸಂಸ್ಕೃತದಲ್ಲಿ ನಡೆಯುವ ಸಂಭಾಷಣೆಯಾದದ್ದರಿಂದ ಇದೂ ಒಂದು ಮಂತ್ರವೆಂದು ತಿಳಿಯುವುದೂ ಉಂಟು!). ಇದೇ ಪಿತೃಶೇಷ ಸೇವನೆ. ಶ್ರದ್ದಾಳು ಬಂಧುಗಳು "ಪಿತೃಗಳ ಪ್ರಸಾದವಿದು" ಎನ್ನುವ ಪೂಜ್ಯ ಭಾವನೆಯಿಂದ ಈ ವಿಶೇಷಕ್ಕಾಗಿ ದೂರ ದೂರದಿಂದ ಬರುತ್ತಾರೆ. ಬಂಧು-ಭಾಂಧವರಲ್ಲದವರು ಈ ಪದಾರ್ಥಗಳನ್ನು ಸೇವಿಸುವುದಿಲ್ಲ. 

*****

ತಾಯಿಗೂ ಮಕ್ಕಳಿಗೂ ಇನ್ನೆಲ್ಲಿಲ್ಲದ ವಿಶೇಷ ಸಂಬಂಧ. ಗರ್ಭದಲ್ಲಿದ್ದಾಗ ತಾಯಿ ಸೇವಿಸಿದ ಆಹಾರವನ್ನು ಹೊಕ್ಕುಳ ಬಳ್ಳಿಯ ಮೂಲಕ ಸೇವಿಸಿ, ಬೆಳೆದು ಹುಟ್ಟಿದ್ದಾಯಿತು. ಮನುಷ್ಯರಲ್ಲಿ ಹುಟ್ಟಿದ ಶಿಶು ದೊಡ್ಡದಾಗಲು ಕೆಲವು ವರುಷಗಳೇ ಆಗುತ್ತವೆ. ಮಗುವಿಗೆ ಎಲ್ಲ ಬೇಕು-ಬೇಡಗಳಿಗೂ ಅಮ್ಮನೇ ಬೇಕು. ಕಂಠದವರೆಗೂ ತಿಂದಿದ್ದರೂ ಅಮ್ಮ ಊಟಕ್ಕೆ ಕುಳಿತಾಗ ಅವಳ ತಟ್ಟೆಯಲ್ಲಿ ಅಥವಾ ಎಲೆಯಲ್ಲಿ ಇರುವ ಪದಾರ್ಥವೇ ಬೇಕು. ಇದು ಯಾವುದೂ ತರ್ಕಕ್ಕೆ ನಿಲುಕುವ ವಿಷಯವಲ್ಲ. ಅದನ್ನು ಅನುಭವವೇ ಅರ್ಥ ಮಾಡಿಸಬೇಕು. ತಾಯಿಯಿರುವ ಎಲ್ಲರೂ ಈ ರೀತಿ ಬೆಳೆದವರೇ. ಒಂದು ವಯಸ್ಸಿನವರೆಗೆ ಹೀಗೆಯೇ ನಡೆಯುತ್ತದೆ. 

"ಉಪನಯನ" ಅಥವಾ "ಮುಂಜಿ" ಎನ್ನುವ ಸಂಸ್ಕಾರ ಮಾಡುವ ಕುಟುಂಬಗಳಲ್ಲಿ ಮಂತ್ರೋಪದೇಶಕ್ಕೆ ಮೊದಲು "ಮಾತೃಭೋಜನ" ಎನ್ನುವ ಒಂದು ಕಾರ್ಯಕ್ರಮ ನಡೆಯುತ್ತದೆ. ಇಂದಿನಿಂದ ಮುಂದೆ ಉಪನಯನ ಆದವನು ಮತ್ತೊಬ್ಬರ ಎಲೆಯಲ್ಲಿ ಇರುವ ಪದಾರ್ಥ ತಿನ್ನುವಂತಿಲ್ಲ. ಅವನು ಪ್ರತಿದಿನ ಮಾಡುವ ಭೋಜನವೂ ತನ್ನಲ್ಲಿರುವ ಪ್ರಾಣಾಗ್ನಿಗೆ ಕೊಡುವ ಆಹುತಿ. ಇದಕ್ಕಾಗಿಯೇ ತಾಯಿ-ಮಗನನ್ನು ಅಂದು ಮಂತ್ರೋಪದೇಶದ ಮುಂಚೆ ಒಟ್ಟಿಗೆ ಕೂಡಿಸಿ ಒಂದೇ ಎಲೆಯಲ್ಲಿ ಆಹಾರ ಬಡಿಸುತ್ತಾರೆ. ಇದೊಂದು ಭಾವನೆಗಳ ಕೇಂದ್ರಿತ ಕಾರ್ಯಕ್ರಮ. ಹಿಂದೆಲ್ಲ ಇದೊಂದು ಸಣ್ಣ ಖಾಸಗಿ ವಿಷಯವಾಗಿ ನಡೆಯುತ್ತಿತ್ತು. ಈಗ ಈವೆಂಟ್ ಮ್ಯಾನೇಜ್ಮೆಂಟ್ ನೇತೃತ್ವದಲ್ಲಿ ಬಹಳ ವೈಭವೋಪೇತವಾಗಿ ನಡೆಯುತ್ತದೆ. 

***** 

ಎಂಜಲು, ಶೇಷಾನ್ನ, ಪಿತೃಶೇಷ ಮತ್ತು ಮಾತೃಭೋಜನದ ಬಗ್ಗೆ ನೋಡಿದ್ದಾಯಿತು. ಇನ್ನು ಪ್ರಸಾದದ ಬಗ್ಗೆ ನೋಡೋಣ. 

ನಾವು ನಂಬಿದ ದೈವಕ್ಕೆ ಕೃತಜ್ಞತೆ ತೋರಿಸುವ ಸಲುವಾಗಿ ಪೂಜೆ-ಪುನಸ್ಕಾರಗಳನ್ನು ಮಾಡುವುದು ಬಹಳ ಹಿಂದಿನಿಂದ ಬಂದಿರುವ ಒಂದು ಸಂಪ್ರದಾಯ. ಈ ರೀತಿ ಮಾಡುವಾಗ ಭಯ-ಭಕ್ತಿಗಳಿಂದ ಇಷ್ಟದೈವಕ್ಕೆ ಕೊಡಲು ತಿಂಡಿ-ತಿನಿಸು, ಅಡಿಗೆ, ಪಾನೀಯ ಇತ್ಯಾದಿ ಮಾಡುವುದು. ಹಣ್ಣು-ಹಂಪಲುಗಳನ್ನು ಸೇರಿಸುವುದು. ತಯಾರು ಮಾಡಿದ ಮತ್ತು ಸಂಪಾದಿಸಿದ ಇಂತಹ ಪದಾರ್ಥಗನ್ನು ಆವಾಹಿಸಿದ ದೇವರು-ದೇವತೆಗಳ ಮುಂದೆ ಇಟ್ಟು "ಷೋಡಶೋಪಚಾರ" (ಹದಿನಾರು ಹಂತದ ಪೂಜೆ) ಅಂಗವಾಗಿ "ನೈವೇದ್ಯ" ಮಾಡುತ್ತಾರೆ. ಹೀಗೆ ಮಾಡುವಾಗ ಪರಮಾತ್ಮನು ಅಲ್ಲಿ ಇಟ್ಟ ಪದಾರ್ಥಗಳಲ್ಲಿ ತನಗೆ ಯೋಗ್ಯವಾದ ಅಂಶಗಳನ್ನು ರಸರೂಪವಾಗಿ ನೋಟದಿಂದ ಸೇವಿಸುತ್ತಾನೆ ಎಂದು ನಂಬಿಕೆ. ಹೀಗೆ ನೈವೇದ್ಯ ಮಾಡಿದ ಮೇಲೆ ಅಲ್ಲಿ ಉಳಿದ ಪದಾರ್ಥ "ಪ್ರಸಾದ" ಆಯಿತು. ಅನುಗ್ರಹ ರೂಪವಾಗಿ ನಮಗೆ ಹಿಂದೆ ಬಂದಿದ್ದು "ಪ್ರಸಾದ" ಎಂದು ನಿರ್ದೇಶಿತವಾಯಿತು. 

ದೇವರು ಸ್ವೀಕರಿಸಿ (ತಿಂದು) ಬಿಟ್ಟ ಇದನ್ನು ಯಾರೂ ದೇವರ ಎಂಜಲು ಎನ್ನುವುದಿಲ್ಲ. ಬಹಳ ಗೌರವಪೂರ್ವಕ "ಪ್ರಸಾದ" ಎನ್ನುತ್ತಾರೆ. ಯಾರಾದರೂ ಕೊಟ್ಟರೆ ಎರಡೂ ಕೈಗಳಿಂದ ಸ್ವೀಕರಿಸುತ್ತಾರೆ. ಮೊದಲು ನೋಡಿದ ಎಂಜಲು ಮತ್ತು ಈಗ ನೋಡಿದ ಪ್ರಸಾದಕ್ಕೆ ಎಷ್ಟು ವ್ಯತ್ಯಾಸ! ಅದರ ಬೆಲೆ ನಂಬಿಕೆ ಮತ್ತು ಶ್ರದ್ದೆಯಲ್ಲಿ ಇದೆ. ಭೌತಿಕವಾಗಿ ನೋಡಿದರೆ ವ್ಯತ್ಯಾಸವಿಲ್ಲ. ಭಾವನಾತ್ಮಕವಾಗಿ ನೋಡಿದರೆ ಎಲ್ಲಿಲ್ಲದ ವ್ಯತ್ಯಾಸ. 

ದೊಡ್ಡ ಸಮಾರಂಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಗೆ ಮಾಡಿದಾಗ ಪಾಕಶಾಲೆಯಲ್ಲಿಯೇ ನೈವೇದ್ಯ ಮಾಡುತ್ತಾರೆ. ಸಾಮೂಹಿಕ ಭೋಜನಶಾಲೆಗಳಿರುವ ದೇವಾಲಯಗಳಲ್ಲಿ ಇದನ್ನು ನೋಡಬಹುದು. ಮನೆಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ತಯಾರಿಸಿದ ಎಲ್ಲಾ ಪದಾರ್ಥಗಳನ್ನೂ ಒಂದು ಹರಿವಾಣದಲ್ಲಿ ಸ್ವಲ್ಪ ಸ್ವಲ್ಪ ಬಡಿಸಿ ನೈವೇದ್ಯ ಮಾಡುತ್ತಾರೆ. ನಂತರ ಅದನ್ನು ಅದೇ ಕ್ರಮದಲ್ಲಿ ಮಾಡಿರುವ ಹೆಚ್ಚಿನ ಅಡಿಗೆ ಪದಾರ್ಥಗಳಲ್ಲಿ ಸೇರಿಸುತ್ತಾರೆ. ಈಗ ಮಾಡಿದ ಅಡಿಗೆ ಎಲ್ಲ ಪ್ರಸಾದವಾಯಿತು!

ಅನೇಕ ದಶಕಗಳ ಹಿಂದೆ ಕಾಶಿ-ರಾಮೇಶ್ವರ ಯಾತ್ರೆ ಬಹಳ ಕಠಿಣದ್ದಾಗಿತ್ತು. ಹೀಗೆ ಯಾತ್ರೆ ಹೋದವರು ದಾರಿಯಲ್ಲಿ ಸಿಗುವ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿಂದ ಪ್ರಸಾದ ತರುತ್ತಿದ್ದರು. ಸಾಮಾನ್ಯವಾಗಿ ಕಲ್ಲುಸಕ್ಕರೆ, ಒಣದ್ರಾಕ್ಷಿ, ಉತ್ತತ್ತಿ (ಖರ್ಜೂರ), ಪಂಚಕಜ್ಜಾಯ, ಕಲ್ಯಾಣಸೇವೆ ಮುಂತಾದ, ಬಹಳ ದಿನ ಕೆಡದೆ ಇರುವ ಪದಾರ್ಥಗಳ ಪ್ರಸಾದಗಳು. ತಿರುಪತಿಯಂತಹ ಕ್ಷೇತ್ರವಾದರೆ ಲಾಡುವೂ ಆಗಬಹುದು. ಯಾತ್ರೆ ಮುಗಿದು ಊರಿಗೆ ಬಂದ ನಂತರ ಒಂದು ದಿನ ಬಂಧು-ಮಿತ್ರರನ್ನೆಲ್ಲ ಕರೆದು ಸಮಾರಾಧನೆ ನಡೆಸುತ್ತಿದ್ದರು. "ಕಾಶಿ ಸಮಾರಾಧನೆ" ಅಥವಾ "ಗಂಗಾ ಸಮಾರಾಧನೆ" ಎಂದು ಅದಕ್ಕೆ ಹೆಸರು. ಇಷ್ಟದೇವತೆಯ ಜೊತೆಗೆ ಈ ಎಲ್ಲ ಕ್ಷೇತ್ರಗಳ ಪ್ರಸಾದಗಳನ್ನೂ ಪೂಜಿಸಿ ಬಂದವರಿಗೆ ವಿತರಿಸುತ್ತಿದ್ದರು. ಈಗ ಈ ಪದ್ಧತಿ ನಿಂತೇ ಹೋಗಿದೆ. 

*****

ಭಗವಾನ್ ವೇದವ್ಯಾಸರ ಕುರಿತಾದ ನಾಣ್ನುಡಿ ವಿಷಯದಲ್ಲಿ ಉಚ್ಚಿಷ್ಟ ಅನ್ನುವ ಪದಕ್ಕೆ ಎಂಜಲು ಎಂದು ಅರ್ಥ ಮಾಡುವುದು ಅಷ್ಟು ಸಮಂಜಸವಲ್ಲ. ಅವರ ಅನೇಕ ಸೃಷ್ಟಿಗಳಲ್ಲಿ ಒಂದಾದ ಮಹಾಭಾರತದ ವಿಷಯದಲ್ಲಿಯೇ "ಇಲ್ಲಿರುವುದೇ ಬೇರೆಲ್ಲ ಕಡೆ ಇರುವುದು. ಇಲ್ಲಿರದುದು ಬೇರೆಲ್ಲಿಯೂ ಇಲ್ಲ" ಎಂದು ಹೇಳುತ್ತಾರೆ. ಈ ಕೃತಿಯ ಒಂದು ಎಳೆ ಹಿಡಿದು ಕೃತಿ ರಚಿಸಿ ಅನೇಕರು ಮಹಾಕವಿಗಳಾದರು; ಪೂಜ್ಯರೆನಿಸಿದರು. ಕೆಲವು ಕೃತಿಗಳನ್ನು ಒಮ್ಮೆ ಓದಿದರೆ ಮುಗಿಯಿತು. ಆದರೆ ವೇದವ್ಯಾಸರ ಕೃತಿಗಳು ಮತ್ತೆ ಮತ್ತೆ ಓದಿದರೆ ಹೊಸ ಹೊಸ ಅರ್ಥಗಳು ಇಂದಿಗೂ ಹೊಳೆಯುತ್ತವೆ. 

ಈ ದೃಷ್ಟಿಯಿಂದ "ವ್ಯಾಸೋಚ್ಛಿಷ್ಟಮ್ ಜಗತ್ಸರ್ವಂ" ಎನ್ನುವುದಕ್ಕೆ "ವ್ಯಾಸರು ನಮಗೆ ಕೊಟ್ಟಿರುವ ಪ್ರಸಾದ" ಎನ್ನುವುದೇ ಸರಿ ಎನ್ನಬಹುದು. 

ಈ ಸಂಚಿಕೆ ಈಗಾಗಲೇ ದೀರ್ಘವಾಗಿರುವುದರಿಂದ, ಎಂಜಲು ಎನ್ನುವ ವಿಷಯದಲ್ಲಿ ಶ್ರೀಕನಕದಾಸರು ಹೇಳಿರುವ ವಿಶೇಷ ವಿಷಯವನ್ನು ಮುಂದೊಮ್ಮೆ ನೋಡೋಣ.