Showing posts with label Faith. Show all posts
Showing posts with label Faith. Show all posts

Thursday, May 28, 2026

ಅನುಕೂಲ ದಾಂಪತ್ಯ


ಯಾವುದೋ ಕುಟುಂಬದ ಒಂದು ಹುಡುಗ. ಮತ್ಯಾವುದೋ ಕುಟುಂಬದ ಒಂದು ಹುಡುಗಿ. ತಂದೆ-ತಾಯಿಯರೋ, ಮತ್ಯಾರೋ ಹಿರಿಯರೋ ಗೊತ್ತು ಮಾಡಿ ನಡೆದ ವಿವಾಹ. ಹೀಗೆ ನಡೆಯುತ್ತಿದ್ದ ಸಮಾಜ. ಅಲ್ಲೊಂದು-ಇಲ್ಲೊಂದು ವಿಷಮ ವಿವಾಹಗಳು. ಹೆಚ್ಚಿನವು ಬಹಳ ಕಾಲ ನಿಂತ ದಾಂಪತ್ಯಗಳು. ಕಾಲ ಮುಂದುವರೆದಂತೆ ಹುಡುಗ-ಹುಡುಗಿ ತಾವೇ ತಮ್ಮ ಇಚ್ಛೆಯಿಂದ ಆದ ವಿವಾಹಗಳು. ಇವೂ ಬಹಳ ಕಾಲ ನಿಲ್ಲುತ್ತಿದ್ದುದೇ ಹೆಚ್ಚು.

ವಿವಾಹದ ಐವತ್ತು ವರ್ಷದ, ಅರವತ್ತು ವರ್ಷದ ವಾರ್ಷಿಕೋತ್ಸವಗಳು ಸಾಮಾನ್ಯವಾಗಿದ್ದವು. ಚಿಕ್ಕ ವಯಸ್ಸಿನಲ್ಲಿ ಮದುವೆಗಳು ನಡೆಯುತ್ತಿದ್ದುದರಿಂದ ಇವು ಸಾಧ್ಯವಾಗಿದ್ದವು. ಮೊಮ್ಮಕ್ಕಳ ಜೊತೆಗೆ ಮರಿಮಗ ಹುಟ್ಟಿದ ಸಮಯದಲ್ಲಿ "ಪ್ರಪೌತ್ರ ದರ್ಶನ ಶಾಂತಿ" ಎಂದು ಕನಕಾಭಿಷೇಕ ಸಹ ನಡೆಯುತ್ತಿತ್ತು. ನಂತರ ಇಪ್ಪತ್ತೈದು ವರ್ಷದ "ರಜತೋತ್ಸವ" ನಡೆಯುವುದೇ ದೊಡ್ಡದಾಯಿತು. 

ದಶಕಗಳು ಕಳೆದಂತೆ ವಿಚ್ಛೇದನಗಳು ಹುಟ್ಟಿದವು. ವಿಚ್ಛೇದನಗಳು ಸುಲಭವಾಗುತ್ತಿದ್ದಂತೆ ಪುನರ್ವಿವಾಹಗಳು ಹುಟ್ಟಿಬಂದವು. ಅದರ ಮುಂದಿನ ಹಂತದಲ್ಲಿ ವಿವಾಹಗಳೇ ಇಲ್ಲದೆ ನಡೆಯುತ್ತಿರುವ "ಅನುಕೂಲ ಸಿಂಧು ದಾಂಪತ್ಯಗಳು" ಅನ್ನಬಹುದಾದ ಜೊತೆ-ಜೀವನ ನಡೆಸುವ ಕಾಲ ಬಂದು ನಿಂತಿದೆ. ದಿನಂಪ್ರತಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಇಂತಹ ಸಂಬಂಧಗಳು ಕೋರ್ಟಿನ ಮೆಟ್ಟಲುಗಳನ್ನು ಹತ್ತಿರುವ ಸುದ್ದಿಗಳು ಉಂಟು. ಯಾವುದೋ ಯುವಕ ಅಥವಾ ಮತ್ಯಾವುದೋ ಯುವತಿ ತುಂಡು-ತುಂಡಾಗಿ ಪೆಟ್ಟಿಗೆಗಳಲ್ಲಿ ಸಿಕ್ಕುತ್ತಿರುವುದೂ ಹೌದು. ಮೊದಮೊದಲು ಇಂತಹ ಪ್ರಕರಣಗಳು ಭೀತಿ ಹುಟ್ಟಿಸುತ್ತಿದ್ದವು. ಈಗ ಅಷ್ಟು ಭಯಾನಕ ಅನ್ನಿಸದು. ರೋಚಕ ಅನಿಸುವುದೂ ಇಲ್ಲವಾಗಿದೆ. 

ಬಹಳಕಾಲ ಗಂಡ-ಹೆಂಡತಿ ಜೊತೆಯಲ್ಲಿ ಬದುಕಿ, ಇಬ್ಬರ ನಡುವೆ ಒಂದೇ ರೀತಿಯ, ಜೊತೆಯಲ್ಲಿ ಹೆಜ್ಜೆ ಹಾಕುವ ತಾಳ-ಮೇಳ ಏರ್ಪಡುತ್ತಿತ್ತು. ಬಾಯಿಬಿಟ್ಟು ಮಾತುಗಳಲ್ಲಿ ಹೇಳದೆ ಇದ್ದರೂ ಇಬ್ಬರ ನಡುವೆ ಒಂದು ರೀತಿಯ ಸದಾಕಾಲ ನಡೆಯುವ ಸಂವಾದ ಇರುತ್ತಿತ್ತು. "ಇಂಗಿತ" ಅನ್ನುವ ಪದಕ್ಕೆ ಬಹಳ ಬೆಲೆ ಇತ್ತು. "ಮನದ ಇಂಗಿತ ಅರಿಯಬೇಕು" ಅನ್ನುತ್ತಿದ್ದರು. ಇಲ್ಲಿ ಶಬ್ದಪೂರ್ವಕ ಹುಟ್ಟಿದ ಮಾತಿನ ಸಂಭಾಷಣೆ ಇಲ್ಲ. ಮನಸ್ಸು ಮನಸ್ಸನ್ನು ಅರಿವ, ಮೌನದ, ಏನೋ ಒಂದು ಸನ್ನೆಯ, ಅಥವಾ ಏನೂ ಇಲ್ಲದ ಕೇವಲ ಒಂದು ನೋಟದ ಮೂಲಕ ವಿಚಾರ ವಿನಿಮಯ. ಹೀಗೆ ಹುಟ್ಟಿದ "ಇಂಗಿತಜ್ಞತೆ" ಅಂದರೆ ಅದಕ್ಕೆ ಬಹಳ ಬೆಲೆ. 

*****

ಲೇಖನಿಯಿಂದ ಕಾಗದದ ಮೇಲೆ ಬರೆದ "ಕ್ರಯ ಪತ್ರ" ಅನ್ನುವ ದಾಖಲೆಗಿಂತ ಕೊಟ್ಟ ಮಾತು ಹೆಚ್ಚಿನದು ಎಂದು ಜನ ನಂಬಿದ ಕಾಲ. ಆ ಹಳ್ಳಿಯಲ್ಲಿ ಸುಡು ಬಿಸಿಲಿನ ಬೇಗೆ. ತಡೆಯಲಾಗದ ಧಗೆ. ವಾಸವಿರುವ ಜನ ಬೇರೆ ವಿಧಿ ಇಲ್ಲದೆ ಬಾಳುತ್ತಿದ್ದಾರೆ. ತಾಪ ತಡೆಯಲು ಸಾಧ್ಯವಿಲ್ಲದಿದ್ದರೂ ಜೀವನ ನಡೆಯುತ್ತಿದೆ. 

"ತಾಲ್ಲೂಕಿನ ಧಣಿ" ಎಂದು ಕರೆಸಿಕೊಳ್ಳುವ ಅಮಲ್ದಾರರು ನಾಳೆ ಆ ಹಳ್ಳಿಯ ದಾರಿಯಲ್ಲಿಯೇ ಹಾದು ಮುಂದಿನ ಊರಿಗೆ ಹೋಗಬೇಕು. ಈ ಸಂಗತಿ ಊರಿನ ಹಿರಿಯರಲ್ಲಿ ಒಬ್ಬನಾದ ನರಹರಿಗೆ ತಿಳಿಯಿತು. ಬರುವ ಅಧಿಕಾರಿಗೆ ಯೋಗ್ಯ ಸ್ವಾಗತ-ಆತಿಥ್ಯ ಕೊಡಲು ಮುಂದಾಳಾಗಲು ಊರಿನ ದೊಡ್ಡ ಕುಳವಾದ ತನ್ನ ಸ್ನೇಹಿತ ಶಿವನಂಜೇಗೌಡ ಸರಿಯಾದವನು ಎಂದು ನರಹರಿ ಅಭಿಪ್ರಾಯ. ಇವರಿಬ್ಬರ ನೇತೃತ್ವದಲ್ಲಿ ಹಳ್ಳಿಯ ಜನ ಮಾರನೆಯ ದಿನ ಅವರ ಬರವನ್ನು ಕಾಯುತ್ತಾರೆ.

ಮಧ್ಯಾನ್ಹದ ಉರಿಬಿಸಿಲಿನಲ್ಲಿ ಅಮಲ್ದಾರ್ ಕುದುರೆಯ ಮೇಲೆ ಕುಳಿತು ಬಂದರು. ಸ್ವಾಗತವಾಯಿತು. "ಇದೆಂತಹ ಊರು? ಈ ಬಿಸಿಲಿನಲ್ಲಿ ಹೇಗೆ ಬದುಕಿದ್ದೀರಿ?" ಎಂದು ಬಸವಳಿದ ಅಮಲ್ದಾರ್ ಬೇಸರ ವ್ಯಕ್ತಪಡಿಸುತ್ತಾರೆ. "ಏನು ಮಾಡುವುದು ಸ್ವಾಮಿ. ಹಿರಿಯರು ಮಾಡಿದ ಊರು. ಹೇಗೋ ಬಾಳುತ್ತಿದ್ದೇವೆ. ಹಾಲು-ಸಕ್ಕರೆ ಇಡಿಸಿದ್ದೇನೆ. ತೆಗೆದುಕೊಂಡು ಹೊಟ್ಟೆ ತಂಪು ಮಾಡಿಕೊಳ್ಳಿ" ಅನ್ನುತ್ತಾನೆ ಶಿವನಂಜೇಗೌಡ. 

"ಹಾಲು-ಸಕ್ಕರೆ ಬೇಡ. ಎರಡು ಎಳನೀರು ತರಿಸಿ" ಅನ್ನುತ್ತಾರೆ ಅಮಲ್ದಾರ್. "ಸುತ್ತ-ಮುತ್ತ ಎಲ್ಲ ಹುಡುಕಿಸಿದೆವು. ಎಲ್ಲೂ ತೆಂಗಿನ ಮರಗಳಿಲ್ಲ. ಮಜ್ಜಿಗೆ ತರಿಸಲೇ?" ಎಂದು ಕೇಳುತ್ತಾನೆ ನರಹರಿಯಪ್ಪ. 

"ಎಳನೀರು ಇಲ್ಲದ ಮೇಲೆ ಇನ್ನೇನು. ತೆಂಗಿನ ಮರ ಇಲ್ಲದ ಊರೂ ಒಂದು ಊರೇ? ಅದು ಊರಲ್ಲ. ಒಂದು ಸ್ಮಶಾನವೇ ಸರಿ. ಹೋಗಲಿ ಬಿಡಿ. ಮಜ್ಜಿಗೆಯೊ, ಕಲಗಚ್ಚೋ, ಯಾವುದೋ ಒಂದು ತರಿಸಿ" ಅನ್ನುತ್ತಾರೆ, ಕೋಪದಿಂದ ಅಮಲ್ದಾರ್. 
*****

ಜಮಾಬಂದಿಯ ಕೆಲಸ ಮುಗಿದು ಅಮಲ್ದಾರರು ತಮ್ಮ ಹಾದಿ ಹಿಡಿದು ಹೊರಟುಹೋದರು. ಶಿವನಂಜೇಗೌಡನಿಗೆ ತೆಂಗಿನ ಮರ ಇಲ್ಲದ ಕಾರಣ ಅಮಲ್ದಾರರು ತನ್ನ ಊರು ಒಂದು ಸುಡುಗಾಡು ಎಂದುಬಿಟ್ಟರಲ್ಲ ಅನ್ನುವ ನೋವು. ಪೆಚ್ಚಾಗಿ ಹಿಂದಿರುಗುತ್ತಿದ್ದಾಗ ನರಹರಿ ಅವನ ಚಿಂತೆಗೆ ಕಾರಣ ವಿಚಾರಿಸುತ್ತಾನೆ. "ಹೋಗಲಿ ಬಿಡು, ಶಿವನಂಜು. ಅವರು ಹಾಗೆ ಅಂದಮಾತ್ರಕ್ಕೇ ನಮ್ಮ ಊರು ಸುಡುಗಾಡಾಯಿತೇ?" ಅನ್ನುತ್ತಾನೆ ನರಹರಿ.

ಶಿವನಂಜೇಗೌಡನಿಗೆ ತನ್ನ ಊರಿನಲ್ಲಿ ಒಂದು ತೆಂಗಿನ ತೋಟ ಮಾಡಲೇಬೇಕೆಂಬ ಹಠ ಬಂದಿದೆ. "ಇಲ್ಲ, ನರಹರಿಯಪ್ಪ. ಒಂದು ತೆಂಗಿನ ತೋಟ ಮಾಡಲೇ ಬೇಕು. ಇಲ್ಲದಿದ್ದರೆ ನಾನು ನನ್ನ ಅಪ್ಪನ ಮಗನೇ ಅಲ್ಲ. ಊರಿನ ಮರ್ಯಾದೆ ಪ್ರಶ್ನೆ" ಎಂದು ಬಿಗಿಹಿಡಿದು ಕೂಡುತ್ತಾನೆ. "ಅದು ಸುಲಭದ ಮಾತಲ್ಲ. ತೋಟ ಮಾಡಲು ನೆಲ ಸರಿಯಿದೆಯೇ ಎಂದು ತಿಳಿಯಬೇಕು. ತೋಟ ನಿನಗೆ ಆಗಿ ಬರುತ್ತದೆಯೇ ಎಂದು ಕೇಳಿ ತಿಳಿದುಕೊಳ್ಳಬೇಕು" ಎಂದು ಹೇಳಿ ನರಹರಿ ಅವನ ಮನಸ್ಸು ಬದಲಿಸಲು ನೋಡುತ್ತಾನೆ. 

"ಮಣ್ಣು ಸರಿ ಇಲ್ಲ ಅಂದರೆ ನೂರು ಮೈಲಿ ದೂರದಿಂದಲಾದರೂ ಬೇಕಾದ ಮಣ್ಣು ತರಿಸುತ್ತೇನೆ. ಜ್ಯೋತಿಷ್ಯಕ್ಕೆ ನೀನೇ ಇದ್ದೀಯಲ್ಲ. ನೋಡಿ ಹೇಳು" ಅನ್ನುತ್ತಾನೆ ಶಿವನಂಜು. "ಇಂತಹ ವಿಷಯಕ್ಕೆ ನನ್ನ ಪುಡಿ ಜ್ಯೋತಿಷ್ಯ ಸಾಲುವುದಿಲ್ಲ. ಇಂತಹದಕ್ಕೆ ಕುರಿತೇಟಿನಂತೆ ಹೇಳಲು ತಾವರೆಕೆರೆ ವೆಂಕಟರಮಣ ಜೋಯಿಸರೇ ಸರಿ" ಅನ್ನುತ್ತಾನೆ ನರಹರಿ, ಹೀಗಾದರೂ ವಿಷಯ ಮುಂದೆ ಹೋಗಲಿ ಅನ್ನುವ ಬಯಕೆಯಿಂದ.  

ಶಿವನಂಜೇಗೌಡ ಸುಮ್ಮನೆ ಕೂಡುವವನಲ್ಲ. ತಾವರೆಕೆರೆ ಜೋಯೀಸರನ್ನೇ ಕರೆಸಿಬಿಡುತ್ತಾನೆ. ಅವರು ಎಲ್ಲಾ ಲೆಕ್ಕಹಾಕಿ ನೋಡುತ್ತಾರೆ. "ಶಿವನಂಜೇಗೌಡ, ನಿನಗೆ ತೋಟ ಮಾಡೋ ಯೋಗ ಏನೋ ಇದೆ. ಆದರೆ ಅದರಿಂದ ಸುಖ ಪಡೋ ಯೋಗ ಇಲ್ಲ" ಅಂದುಬಿಡುತ್ತಾರೆ. ಬೇರೆ ಉಪಾಯ ಕೇಳುತ್ತಾನೆ. "ಯಾರ ಹೆಸರಿಗೆ ಆಗಿ ಬರುತ್ತೋ ಅವರ ಹೆಸರಿನಲ್ಲಿ ಮಾಡಬಹುದು" ಅನ್ನುತ್ತಾರೆ ಜೋಯಿಸರು. ಶಿವನಂಜು ಇದಕ್ಕೂ ತಯಾರು. ಅಂತಹವರಿಗೆ ತನ್ನ ಭೂಮಿ ದಾನ ಕೊಡಲೂ ಸಿದ್ಧ. ಅವನ ಕುಟುಂಬದ ಹಿತ ದೃಷ್ಟಿಯಿಂದ ಈ ಹುಚ್ಚಾಟ ತಪ್ಪಿಸಲು ನರಹರಿ "ನಿನ್ನ ಹೆಂಡತಿ, ಮಕ್ಕಳನ್ನು ಕೇಳಿ ಮಾಡು" ಎನ್ನುತ್ತಾನೆ. 

"ಆಯಿತು. ನನ್ನ ಮಕ್ಕಳು ಇನ್ನೂ ಚಿಕ್ಕವರು. ಇನ್ನು ನನ್ನ ಹೆಂಡತಿ. ಅವಳನ್ನು ಈಗಲೇ ಕರೆತರುತ್ತೇನೆ" ಎಂದು ಶಿವನಂಜೇಗೌಡ ಹೊರಡುತ್ತಾನೆ. "ನೀನು ಹೋಗಬೇಡ. ಅವಳನ್ನು ಹೆದರಿಸಿ-ಬೆದರಿಸಿ ಕರೆದುಕೊಂಡು ಬರುವುದು ನನಗೆ ಗೊತ್ತು. ನೀನು ಇಲ್ಲೇ ಕೂಡು. ನಾನು ಕರೆಸುತ್ತೇನೆ" ಅನ್ನುತ್ತಾನೆ ನರಹರಿ. ತನ್ನ ಹೆಂಡತಿ ಪಾರ್ವತಿಯನ್ನು ಕಳಿಸಿ ಶಿವನಂಜನ ಹೆಂಡತಿ ಪುಟ್ಟತಾಯಮ್ಮ ಬರುವಂತೆ ಕರೆ ಕಳಿಸುತ್ತಾನೆ.
*****

ಪುಟ್ಟತಾಯಿ ಬಂದಳು. ನರಹರಿ ಮತ್ತು ಪುಟ್ಟತಾಯಿ ಒಂದು ತಾಯಿ ಮಕ್ಕಳಲ್ಲದಿದ್ದರೂ ಅಣ್ಣ-ತಂಗಿ ರೀತಿಯ ಬಾಂಧವ್ಯ. ಉಪಾಯವಾಗಿ ಅವಳನ್ನು ಕರೆದು ನರಹರಿ "ನೋಡು, ಪುಟ್ಟತಾಯಿ, ನಿನ್ನ ಗಂಡ ನಿಮ್ಮ ಭೂಮಿ ಯಾರಿಗೋ ದಾನ ಕೊಟ್ಟು ನೀನು, ನಿನ್ನ ಮಕ್ಕಳ ತಲೆ ಮೇಲೆ ಕಲ್ಲು ಚಪ್ಪಡಿ ಎಳೆದುಬಿಡುತ್ತಾನೆ. ನೀನು ಒಪ್ಪಬೇಡ. ಇದನ್ನು ತಪ್ಪಿಸಿದರೆ ನಿನಗೂ ನಿನ್ನ ಮಕ್ಕಳಿಗೂ ಒಳ್ಳೆಯದು" ಎಂದು ತಿಳಿ ಹೇಳುತ್ತಾನೆ. "ಹೌದಾ ನರಹರಿಯಣ್ಣ? ನೋಡು ನೀನು ಹೀಗೆ ತಿಳಿ ಹೇಳಿದ್ದು ಬಹಳ ಒಳ್ಳೆಯದಾಯಿತು. ನನಗೆ, ನನ್ನ ಮಕ್ಕಳಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ" ಎಂದು ಖಚಿತವಾಗಿ ಹೇಳುತ್ತಾಳೆ. ಕಂಟಕ ತಪ್ಪಿತು ಎಂದು ನರಹರಿಗೆ ಬಲು ಸಂತೋಷ. 

ಜೋಯಿಸರ ಮುಂದೆ ಬಂದು ನಿಂತಾಗ ನರಹರಿ ಮತ್ತೊಮ್ಮೆ "ಪುಟ್ಟತಾಯಿ, ಇದು ನಿನ್ನ ಮತ್ತು ನಿನ್ನ ಮಕ್ಕಳ ಭವಿಷ್ಯದ ಪ್ರಶ್ನೆ. ಏನೂ ಹೆದರಬೇಡ. ನಿನಗೆ ಏನು ಅನ್ನಿಸುತ್ತೋ ಅದನ್ನು ಧೈರ್ಯವಾಗಿ ಹೇಳು" ಎಂದು ಪುಸಲಾಯಿಸುತ್ತಾನೆ. ಧೈರ್ಯ ಕೊಡುತ್ತಾನೆ. 

"ನೀವು ದೊಡ್ಡವರು ಇದ್ದೀರಿ. ಇದು ನನ್ನ, ನನ್ನ ಮಕ್ಕಳ ಮುಂದಿನ ಜೀವನದ ಪ್ರಶ್ನೆ. ಇವರು ನನಗೂ, ನನ್ನ ಮಕ್ಕಳಿಗೂ ಯಜಮಾನರು. ಅವರು ಮಾಡಬೇಕೆನ್ನುವ ಕೆಲಸಕ್ಕೆ ನಾನು ಅಡ್ಡ ಬರಲೇ? ಅವರು ಏನು ಮಾಡಿದರೂ ಅದು ನಮ್ಮ ಒಳ್ಳೆಯದಕ್ಕೇ. ಅವರು ಹೇಳಿದಂತೆ ಮಾಡಿ" ಅಂದುಬಿಡುತ್ತಾಳೆ. ಅಷ್ಟೇ ಅಲ್ಲ. ಭೂಮಿಯನ್ನು ನರಹರಿಗೇ ದಾನ ಕೊಡಿಸಿ ತೋಟ ಮಾಡಲು ಕಾರಣಳಾಗುತ್ತಾಳೆ.
*****

ಇದು ಅರವತ್ತು ವರುಷಗಳ ಹಿಂದೆ ತೆರೆ ಕಂಡ ಕನ್ನಡ ಚಲನಚಿತ್ರ "ಚಂದವಳ್ಳಿಯ ತೋಟ" ಪ್ರಾರಂಭವಾಗುವ ದೃಶ್ಯಗಳು. ಆರು ದಶಕಗಳು ಕಳೆದಿವೆ. ಈಗ ಸಮಾಜವೂ ಬದಲಾಗಿದೆ. ಗಂಡನನ್ನು "ಯಜಮಾನ" ಎಂದು ಒಪ್ಪಿಕೊಳ್ಳುವ ಹೆಣ್ಣುಮಕ್ಕಳು ಕಾಣಸಿಗರು. ಹೆಂಡತಿಯನ್ನು "ನಮ್ಮ ಯಜಮಾನಿ" ಅನ್ನುವ ಗಂಡಂದಿರೂ ಇಲ್ಲ. ಇದು ಸಮಾನತೆಯ ಯುಗ. ಅದರಲ್ಲಿ ತಪ್ಪೇನೂ ಇಲ್ಲ. 

ಎಷ್ಟೇ ಬದಲಾವಣೆಗಳು ಆಗಿದ್ದರೂ ಸಾಮರಸ್ಯ ಇರುವ ಕುಟುಂಬಗಳಲ್ಲಿ ಈ ರೀತಿಯ ಬಾಂಧವ್ಯ ಈಗಲೂ ಕಂಡುಬರುತ್ತದೆ. ಹೊರಗಡೆಯ ಜನರಿಗೆ ಅನೇಕ ವೇಳೆ ಈ ದಂಪತಿಗಳು ಜಗಳ ಕಾಯುತ್ತಲೇ ಇರುತ್ತಾರೆ ಅನ್ನಿಸಿದರೂ, ಒಳಗೊಳಗೇ ಪರಸ್ಪರ ಸರಿಯಾದ ತಿಳುವಳಿಕೆ ಇರುತ್ತದೆ. ಒಬ್ಬರು ಮಾಡಿದ ನಿರ್ಣಯಗಳನ್ನು ಇನ್ನೊಬ್ಬರು ಅನುಮೋದಿಸುತ್ತಾರೆ. "ಹಾಗೆ ಹೇಳಿದ್ದಾರೆ ಅಂದರೆ ಅದಕ್ಕೆ ಏನೋ ಕಾರಣ ಇರುತ್ತದೆ. ಅದು ಸರಿಯೇ ಇರುತ್ತದೆ" ಅನ್ನುವ ನಂಬಿಕೆಯಲ್ಲಿ ಜೀವನ ನಡೆಯುತ್ತದೆ. ಇಷ್ಟರ ಮೇಲೆ ಏನೋ ತಪ್ಪಾಯಿತು ಅನ್ನಿ. "ಏನು ಮಾಡುವುದು? ನಾನೇ ಹಾಗೆ ಮಾಡಬಹುದಿತ್ತು. ಹೋಗಲಿ. ಅಲ್ಲಿಗೇ ಬಿಡೋಣ" ಅನ್ನುವ ತಾಳ್ಮೆಯಿಂದ ಪರಿಹರಿಸಿಕೊಳ್ಳುತ್ತಾರೆ. ಅತಿರೇಕಕ್ಕೆ ಹೋಗುವುದಿಲ್ಲ. 

ದಾಂಪತ್ಯದ ಸಂದರ್ಭದಲ್ಲಿ "ಅನುರೂಪ ದಾಂಪತ್ಯ" ಅನ್ನುವ ಶಬ್ದಗಳನ್ನು ಕೇಳುತ್ತಿರುತ್ತೇವೆ. ಇದು ಹೊರಗಡೆಯ ಜನ ನೋಡುವುದಕ್ಕೆ ಅನ್ವಯಿಸುವಂತಹುದು. ಜೋಡಿ ಚೆನ್ನಾಗಿದೆ. ಹೇಳಿ ಮಾಡಿಸಿದಹಾಗಿದೆ. ನೋಡಲು ಸೊಗಸು. ಹೀಗೆ ತಿಳಿಯಬಹುದು. ಇದರಲ್ಲಿ ಜೀವನಕ್ರಮದ ವಿಶೇಷವೇನೂ ಇಲ್ಲ. ಕೆಲವು ವರುಷಗಳ ನಂತರ, ರೂಪ-ಲಕ್ಷಣ ಮಾಸಿದ ನಂತರ ಅನುರೂಪ ಅಪರೂಪವೇ ಆಗಬಹುದು. 

"ಅನುಕೂಲ ದಾಂಪತ್ಯ" ಹಾಗಲ್ಲ. ಒಂದು ವಸ್ತ್ರವನ್ನು ಕಂಡಾಗ ಅದು ನಮಗೆ ಒಂದಾಗಿ ಕಾಣುತ್ತದೆ. ಅದರಲ್ಲಿ ಹಾಸು-ಹೊಕ್ಕು ಆಗಿ ಅನೇಕ ದಾರಗಳಿವೆ. ಉದ್ದದ ದಾರಗಳು ಒಂದು ಕಡೆ. ಅಡ್ಡದ ದಾರಗಳು ಇನ್ನೊಂದು ಕಡೆ. ಆದರೆ ಅವುಗಳ ಹೊಂದಾಣಿಕೆ ಒಂದೇ ಆಗಿ ವಸ್ತ್ರವಾದಂತೆ ಈ ದಾಂಪತ್ಯ. ಏನೇ ಕಷ್ಟ-ಸುಖ ಬಂದರೂ ಇಂತಹ ದಾಂಪತ್ಯ ಸಮಯದ ಸವಾಲುಗಳು ದಾಟಿ ಗಟ್ಟಿಯಾಗಿ ನಿಲ್ಲುವುದು. ಇಂತಹ ಸಂಬಂಧದಲ್ಲಿ ತರ್ಕಕ್ಕೆ ಮೀರಿ ಪರಸ್ಪರ ಪ್ರೀತಿ-ವಿಶ್ವಾಸಗಳಿಗೆ ಬೆಲೆಯುಂಟು. ಸರಿ-ತಪ್ಪು ಅನ್ನುವುದಕ್ಕಿಂತ ನಂಬಿಕೆ-ಅವಲಂಬನೆ ಇಲ್ಲಿ ಮುಖ್ಯವಾಗುತ್ತದೆ.

*****

ನಲವತ್ತು-ನಲವತ್ತೈದು-ಐವತ್ತು ವರ್ಷಗಳು ಸಾಮರಸ್ಯದಿಂದ ಬಾಳಿ-ಬದುಕಿದ ಜೋಡಿಗಳನ್ನು ನಮ್ಮ ಸುತ್ತ-ಮುತ್ತ ಅಲ್ಲಲ್ಲಿ ಈಗಲೂ ಕಾಣುತ್ತಿರುತ್ತೇವೆ. ಅಂತಹವರನ್ನು ನೋಡಿದಾಗ ಒಂದು ರೀತಿಯ ಸಾತ್ವಿಕ ಸಂತೋಷ ತುಂಬಿ ಬರುತ್ತದೆ. ಹೀಗೆ ಇರುವ ಜೋಡಿಗಳಲ್ಲಿ ಒಬ್ಬರು ಕಾಲಧರ್ಮದ ಕಾರಣ ಇಲ್ಲವಾದಾಗ ಉಳಿದ ಒಂಟಿ ಜೀವಕ್ಕೆ ಎಲ್ಲಿಲ್ಲದ ಚಡಪಡಿಕೆ. ಉಳಿದ ಜೀವನಯಾತ್ರೆ ದುರ್ಭರ. ಆ ಜೋಡಿಯ ಹಿಂದಿನ ಸುಖೀ ಸಹಬಾಳ್ವೆ ಕಂಡ ಸಹೃದಯರಿಗೂ ಅದೊಂದು ವೇದನೆಯ ಸಂಗತಿಯೇ.

ಕೆಲವೇ ದಿನಗಲ್ಲಿ ಈ ರೀತಿಯ ಪ್ರಸಂಗಗಳು ಮತ್ತೆ ಮತ್ತೆ ಎದುರಾದಾಗ, ಈ ಎಲ್ಲ ಅಂಶಗಳೂ ಮನಸ್ಸಿನಲ್ಲಿ ಪುನರಾವರ್ತನೆ ಆಗುವುದು ಸಹಜ. 

Tuesday, May 27, 2025

ಪಿತ್ರಾರ್ಜಿತ ಆಸ್ತಿ ತಗಾದೆಗಳು


ಅಂದು ತಿಮ್ಮಪ್ಪಯ್ಯನವರ ಹೆಂಡತಿಯ ಎರಡನೇ ವರುಷದ ಕಾಲ ಶ್ರಾದ್ಧ. (ಕಾಲಶ್ರಾದ್ಧ ಅಂದರೆ ಪ್ರತಿ ವರುಷ ಮಾಡುವ ಒಂದು ದಿನದ ಶ್ರಾದ್ಧ). ಮೊದಲನೇ ಮಹಾಯುದ್ಧದ ಕಾಲದಲ್ಲಿ ಹುಟ್ಟಿದ ತಿಮ್ಮಪ್ಪಯ್ಯನವರ ಮದುವೆ ಸಂಬಂಧಿಯೊಬ್ಬರ ಮಗಳು ಕಮಲಮ್ಮನೊಡನೆ ಎರಡನೇ ಮಹಾಯುದ್ಧದ ಕಾಲದಲ್ಲಿ ಆಯಿತು. ಎರಡು ಮಹಾಯುದ್ಧಗಳ ಸಂಬಂಧ ಹುಟ್ಟು ಮತ್ತು ಮದುವೆಗಳಿಗೆ ಇದ್ದರೂ, ಐವತ್ತಮೂರು ವರುಷಗಳ ದಾಂಪತ್ಯ ಹೆಚ್ಚಿನ ಕದನಗಳಿಲ್ಲದೇ ಅನ್ಯೋನ್ಯವಾಗಿಯೇ ಕಳೆದಿತ್ತು. ಮೊದಲ ಮಗು ಗಂಡು. ನಂತರ ಎರಡು ಹೆಣ್ಣು. ಆಮೇಲೆ ಮತ್ತೆರಡು ಗಂಡು. ಈಗ ಎಲ್ಲರೂ ದೊಡ್ಡವರಾಗಿ, ವಿವಾಹವಾಗಿ ಅವರವರ ಪಾಡಿಗೆ ಜೀವನ ನಡೆಸಿಕೊಂಡಿದ್ದಾರೆ. ಎಷ್ಟಿದ್ದರೂ ತಿಮ್ಮಪ್ಪಯ್ಯ ಈಗ ಒಂಟಿ. ಇಂದು ಕಮಲಮ್ಮನವರ ಶ್ರಾದ್ಧವಾದದ್ದರಿಂದ ಕುಟುಂಬದ ಎಲ್ಲರೂ ಒಂದೆಡೆ ಸೇರುವ ಅವಕಾಶ.

ತುಮಕೂರಿನಿಂದ ಹನ್ನೆರಡು ಮೈಲುಗಳ ದೂರದ ಪುಟ್ಟ ಗ್ರಾಮದವರು ತಿಮ್ಮಪ್ಪಯ್ಯ. ಎಲ್ಲರಿಗೂ ಅನುಕೂಲವಾಗಲೆಂದು ಬೆಂಗಳೂರಿನ ತಮ್ಮ ಬಹುಕಾಲದ ಸ್ನೇಹಿತರೊಬ್ಬರ ಮನೆಯಲ್ಲಿ ಶ್ರಾದ್ಧದ ವ್ಯವಸ್ಥೆ ಮಾಡಿದ್ದರು. ಸ್ನೇಹಿತರು ಈ ಕೆಲಸ ನಡೆಸಲು ತಮ್ಮ ಮನೆಯ ಮಹಡಿಯ ಭಾಗವನ್ನೇ ಮೀಸಲಿಟ್ಟಿದ್ದರು. ಉಪಾಧ್ಯಾಯರಾಗಿ ನಿವೃತ್ತರಾದ ಮೇಲೆ ಅವರಿಗೆ ಇದು ಸಂಪಾದನೆಯ ದಾರಿಯೂ ಆಗಿತ್ತು. ಶ್ರಾದ್ಧಗಳನ್ನು ಮಾಡುವವರಿಗೆ ಇದು ಬಹಳ ಸಲೀಸು. ಎಲ್ಲಾ ಜವಾಬ್ದಾರಿ ರಾಮಾಜೋಯಿಸರದು. ಫೋನ್ ಮಾಡಿ ದಿನ ಹೇಳಿ ಗೊತ್ತುಮಾಡಿದ್ದರೆ ಆಯಿತು. ಎಲ್ಲಾ ಸಿದ್ಧ ಮಾಡಿಟ್ಟು ಕೆಲಸ ನಡೆಸಿಕೊಡುತ್ತಾರೆ. 

ತಿಮ್ಮಪ್ಪಯ್ಯನವರ ಎರಡನೇ ಮಗ ಮತ್ತು ಮೂರನೇ ಮಗ ಮನೆಯವರ ಜೊತೆ ಬೆಳಿಗ್ಗೆ ಸರಿಯಾದ ಸಮಯಕ್ಕೆ ಬಂದಿದ್ದರು. ದೊಡ್ಡವನು ಇನ್ನೂ ಬಂದಿರಲಿಲ್ಲ. ಒಂದು ಕಾಲು ಗಂಟೆ ಕಾದು ನೋಡಿ ಇಬ್ಬರೂ ಕೆಲಸ ಪ್ರಾರಂಭಿಸಿದರು. ಅದಾದ ಮೇಲೆ ಒಂದು ಘಂಟೆಯ ನಂತರ ದೊಡ್ಡವನು ಬಂದ. ತಡವಾಗಿ ಬಂದಿದ್ದೇನೆ ಎಂದು ಅವನಿಗೂ ಗೊತ್ತು. ಕೆಲಸದ ಮಧ್ಯೆ ಬಂದಿದ್ದರಿಂದ ಮಾಡಿಸುತ್ತಿದ್ದ ರಾಮಾಜೋಯಿಸರಿಗೆ ಕೋಪ ಬಂತು. ಸ್ನೇಹಿತರ ಮಕ್ಕಳನ್ನು ಚಿಕ್ಕಂದಿನಿಂದ ನೋಡಿದ್ದ ಸಲಿಗೆ ಅವರಿಗೆ. 

"ಇದೇನು ಬರುವ ಸಮಯವೇ? ನಿನಗಾಗಿ ಎಷ್ಟು ಹೊತ್ತು ಕಾಯಬೇಕು?" ಎಂದು ಥಟ್ಟನೆ ಅಂದುಬಿಟ್ಟರು. 

ಬಂದವನಿಗೆ ಮುಖ ಪೆಚ್ಚಾಯಿತು. ಕುಳಿತಿದ್ದವರಲ್ಲಿ ಕೆಲವರು ಘೊಳ್ಳೆಂದು ನಕ್ಕರು. ಇನ್ನಷ್ಟು ಅವಮಾನವಾಯಿತು. ಏನೂ ಹೇಳಲಾರದೇ ಸುಮ್ಮನೆ ನಿಂತ. 

"ಆಯಿತು ಬಿಡು. ಬೇಗ ಸ್ನಾನ ಮಾಡಿ ಬಂದು ಸೇರಿಕೋ, ಪರವಾಗಿಲ್ಲ" ಎಂದರು ತಿಮ್ಮಪ್ಪಯ್ಯ. 

ತಂದೆಯ ಮಾತಿನಿಂದ ಸ್ವಲ್ಪ ಸಮಾಧಾನವಾಯಿತು. ಬೇಗ ಬಂದು ತಮ್ಮಂದಿರ ಜೊತೆ ಸೇರಿಕೊಂಡ. ಮುಂದಿನ ಕೆಲಸ ನಡೆಯಿತು. ಎಲ್ಲರ ಊಟಗಳಾದ ಮೇಲೆ ಅವರವರ ದಾರಿ ಹಿಡಿದರು. 

*****

ಈಚಿನ ದಿನಗಳಲ್ಲಿ ತಿಮ್ಮಪ್ಪಯ್ಯನವರು ಹೆಚ್ಚು ಕಾಲ ಎರಡನೇ ಮಗನ ಕುಟುಂಬದ ಜೊತೆ ಬೆಂಗಳೂರಿನಲ್ಲಿ ಇರುತ್ತಿದ್ದರು. ಮಧ್ಯೆ ಮಧ್ಯೆ ಹಳ್ಳಿಗೆ ಹೋಗಿ-ಬಂದು ಮಾಡುತ್ತಿದ್ದರು. ಇಂದು ಎರಡನೆಯ ಮಗನಿಗೆ ತಾವು ಸ್ವಲ್ಪ ತಡವಾಗಿ ಬರುವುದಾಗಿ ಹೇಳಿ ಜೋಯಿಸರ ಮನೆಯಲ್ಲಿಯೇ ಉಳಿದರು. ಊಟದ ನಂತರ ವಿಶ್ರಾಂತಿಯಾಯಿತು. ಕಾಫಿ ಬಂದಿತು. ಸ್ನೇಹಿತರಿಬ್ಬರೂ ಕಾಫಿ ಲೋಟಗಳನ್ನು ಹಿಡಿದು ಮಾತಾಡತೊಡಗಿದರು. 

"ಜೋಯಿಸರೇ, ನಿಮಗೆ ನಮ್ಮ ಕುಟುಂಬದ ಬಗ್ಗೆ ಚೆನ್ನಾಗಿ ಗೊತ್ತು. ಆದರೂ ಕೆಲವು ವಿಷಯಗಳನ್ನು ಇವತ್ತು ನಾನು ಇಂದು ನಿಮಗೆ ಹೇಳಬೇಕು. ಅದಕ್ಕೇ ಹಿಂದೆ ಉಳಿದುಕೊಂಡೆ"

"ಹೇಳಿ ತಿಮ್ಮಪ್ಪಯ್ಯನವರೇ. ಏನು ವಿಷಯ?"
"ನಮ್ಮ ದೊಡ್ಡವನು ತಡವಾಗಿ ಬಂದ ಎಂದು ನೀವು ಕೋಪಿಸಿಕೊಂಡಿರಿ. ಅದು ಸಹಜವೇ ಹೌದು. ಆದರೆ ಅದು ಅವನ ತಪ್ಪಲ್ಲ"
"ಹೇಗೆ? ನನಗೆ ಅರ್ಥವಾಗಲಿಲ್ಲ"
"ನೋಡಿ ಜೋಯಿಸರೇ, ನಿಮಗೆ ಗೊತ್ತಿರುವಂತೆ ಐದು ಬೆರಳೂ ಒಂದೇ ಸಮವಿರುವುದಿಲ್ಲ"
"ಅದು ಸರಿ ಆದರೆ ಅದಕ್ಕೂ ಇದಕ್ಕೂ ಏನು ಸಂಬಂಧ?"

"ದೊಡ್ಡವನು ಹುಟ್ಟಿದಾಗ ನಾವು ಹಳ್ಳಿಯ ಹಿರೀಕರು ಕಟ್ಟಿಸಿದ್ದ ಮನೆಯಲ್ಲಿದ್ದವರು. ಆಗಿನ್ನೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಓದು-ವಿದ್ಯೆಗೆ ಅನುಕೂಲಗಳಿರಲಿಲ್ಲ. ಮೂರು ಮೈಲು ದೂರದ ದೊಡ್ಡ ಹಳ್ಳಿಯಲ್ಲಿ ಪ್ರೈಮರಿ ಶಾಲೆ. ಮಾಧ್ಯಮಿಕ, ಪ್ರೌಢ ಶಾಲೆಗಳಿಗೆ ತುಮಕೂರಿಗೆ ಹೋಗಬೇಕಿತ್ತು. ಮಳೆ-ಗಾಳಿಯಲ್ಲಿ ನಡೆದೇ ಹೋಗಬೇಕಿತ್ತು. ಹಾಗೂ-ಹೀಗೂ ಹೈಸ್ಕೂಲ್ ತನಕ ಓದಿದ. ನಂತರ ಓದು ನಿಲ್ಲಿಸಿ ನನ್ನ ಜೊತೆ ಹೊಲ-ಗದ್ದೆ ನೋಡಿಕೊಂಡು ರೈತನಾದ. ಈಗಲೂ ಹೆಂಡತಿ-ಮಕ್ಕಳ ಜೊತೆ ಅಲ್ಲೇ ಇದ್ದಾನೆ"
"ನರಿ. ಗೊತ್ತಾಯಿತು"
"ಎರಡನೆಯವನು ಆಮೇಲೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ ನಂತರ ಬಂದ ಸಂತಾನ. ಅವನು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿತ್ತು. ಸ್ವತಂತ್ರ ಭಾರತ. ಹತ್ತಿರದ ಹಳ್ಳಿಯಲ್ಲಿಯೇ ಮಾಧ್ಯಮಿಕ ಶಾಲೆಯೂ ಆಯಿತು. ನನಗೂ ಸ್ವಲ್ಪ ಆರ್ಥಿಕವಾಗಿ ಶಕ್ತಿ ಕೂಡಿಕೊಂಡಿತ್ತು. ಹಿರಿಯರು ಬಿಟ್ಟು ಹೋಗಿದ್ದ ಜಮೀನಿನ ಜೊತೆ ಇನ್ನೂ ಸ್ವಲ್ಪ ಕೊಂಡುಕೊಂಡೆ. ಎರಡನೆಯವನು ಕಾಲೇಜು ವಿದ್ಯಾಭ್ಯಾಸ ಮುಗಿಸಿ ಸರ್ಕಾರಿ ನೌಕರಿ ಹಿಡಿದ. ಅವನು ಬೆಂಗಳೂರಿನಲ್ಲಿ ಎಂ.ಏ. ಓದುತ್ತಿದ್ದಾಗ ಇಲ್ಲಿ ಒಂದು ಸಣ್ಣ ಮನೆ ಕಟ್ಟಿದೆ. ಈಗ ಅವನ ಕುಟುಂಬ ಅದನ್ನೇ ದೊಡ್ಡದು ಮಾಡಿಕೊಂಡು ಇಲ್ಲೇ ವಾಸವಾಗಿದ್ದಾರೆ. ನಾನೂ ಹೆಚ್ಚಿನ ಸಮಯ ಇಲ್ಲೇ ಕಳೆಯುತ್ತಿದ್ದೇನೆ. ಡಾಕ್ಟರು-ಆಸ್ಪತ್ರೆಗಳಿಗೆ ಹತ್ತಿರ "
"ಅದು ಸರಿಯೇ"

"ಮೂರನೆಯವನು ವಿದ್ಯಾಭ್ಯಾಸಕ್ಕೆ ಬರುವ ವೇಳೆಗೆ ಬೆಂಗಳೂರಿನ ಮನೆಯಿತ್ತು. ಓದಿನ ಖರ್ಚು ಕೊಡಲು ನನಗೂ ಶಕ್ತಿ ಬಂದಿತ್ತು. ಎಂ.ಬಿ.ಬಿ.ಎಸ. ಓಡಿಸಿದೆ. ಅವನ ಜೊತೆಯಲ್ಲಿ ಓದುತ್ತಿದ್ದ ಹುಡುಗಿಯ ತಂದೆ ಮದುವೆಯ ಪ್ರಸ್ತಾಪ ಇಟ್ಟರು. ಅವರು ಮುಂಬಯಿನವರು. ಮದುವೆಯಾಗಿ ಮುಂಬಯಿಗೆ ಹೋದ. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವರೇ ನೋಡಿಕೊಂಡರು. ಈಗ ಅವನು ಮುಂಬಯಿಯಲ್ಲಿ ಹೆಸರಾದ ಡಾಕ್ಟರು. ಗಂಡ-ಹೆಂಡತಿ ಪ್ರಾಕ್ಟಿಸು ಚೆನ್ನಾಗಿಯೇ ನಡೆಯುತ್ತಿದೆ.  ಹೆಂಡತಿ-ಮಕ್ಕಳ ಜೊತೆ ಅಲ್ಲೇ ಇದ್ದಾನೆ"
"ಈಗ ಎಲ್ಲವೂ  ಅರ್ಥವಾಗುತ್ತಿದೆ" 
"ಎರಡನೆಯವನು ಇಲ್ಲಿಂದಲೇ ಇಂದಿನ ಕೆಲಸಕ್ಕೆ ಬಂದ. ಕಡೆಯವನು ನಿನ್ನೆಯೇ ಮುಂಬಯಿಯಿಂದ ವಿಮಾನದಲ್ಲಿ ಬಂದ. ಹೊತ್ತಿಗೆ ಸರಿಯಾಗಿ ಬಂದರು. ಮೊದಲನೆಯವನು ಹಳ್ಳಿಯಿಂದ ಬರಬೇಕು. ವ್ಯವಸಾಯದ ಕೆಲಸ. ಬಿಟ್ಟು ಬಂದರೆ ಆಳುಗಳು ಕೆಲಸ ಕೆಡಿಸುತ್ತಾರೆ. ಬೆಳಿಗ್ಗೆ ಬೇಗ ಹೊರಟು ತುಮಕೂರಿಗೆ ಬಂದು ಮತ್ತೊಂದು ಬಸ್ಸು ಹಿಡಿದು ಇಲ್ಲಿ ಬರಬೇಕು. ಹಳ್ಳಿಯಲ್ಲಿ ಬೆಳಗಿನ ಬಸ್ಸು ಒಂದೊಂದು ದಿನ ಬರುವುದೇಇಲ್ಲ. ಹೀಗಾಗಿ ತಡವಾಗಿದೆ. ಎಲ್ಲರಿಗಿಂತ ಮೊದಲು ಹೊರಟಿರಬೇಕು ಅವನು. ಇಲ್ಲಿ ಬರುವುದರಲ್ಲಿ ತಡವಾಗಿದೆ"
"ನಾನು ರೇಗಿದ್ದು ತಪ್ಪಾಗಿರಬೇಕು. ಈ ಸೂಕ್ಷ್ಮಗಳು ನನಗೆ ಗೊತ್ತಿಲ್ಲ" 

"ಈಗ ನನ್ನ ಕಾಲವೂ ಮುಗಿಯುವಂತೆ ಕಾಣುತ್ತದೆ. ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಕಮಲ ಹೋದ ಮೇಲೆ ಹೆಚ್ಚು ದಿನ ಬದುಕುವ ಉತ್ಸಾಹವೂ ಇಲ್ಲ. ಹಳ್ಳಿಯ ಹೊಲ-ಮನೆ ಹಿರಿಯ ಮಗನಿಗೆ ಕೊಡುತ್ತೇನೆ. ಬೆಂಗಳೂರಿನ ಮನೆ ಎರಡನೇಯವನಿಗೆ. ಕಮಲಳ ಒಡವೆಗಳು, ಇರುವ ಸ್ವಲ್ಪ ನಗದು ಮತ್ತು ಬ್ಯಾಂಕಿನ ಹಣ ಕಡೆಯವನಿಗೆ. ಹೆಣ್ಣು ಮಕ್ಕಳಿಗೆ ಕಾಲಕಾಲಕ್ಕೆ ಚೆನ್ನಾಗಿಯೇ ಕೊಟ್ಟಿದ್ದೇನೆ. ಅವರುಗಳೂ ಅನುಕೂಲವಾಗಿದ್ದಾರೆ. ಈ ರೀತಿ ಭಾಗ ಮಾಡುವುದು ಅವರೆಲ್ಲರಿಗೂ ಒಳ್ಳೆಯದು. ಇವರಿಬ್ಬರೂ ಹಳ್ಳಿಗೆ ಹೋಗುವವರಲ್ಲ. ಅವರಮಟ್ಟಿಗೆ ಚೆನ್ನಾಗಿಯೇ ಇದ್ದಾರೆ. ಹೀಗೆಂದು ಪತ್ರ ಬರೆದಿಟ್ಟಿದ್ದೇನೆ. ನಾನು ಮುಂಚೆ ಹೋದರೆ ನೀವು ಮುಂದೆ ನಿಂತು ಇದನ್ನು ವಿತರಣೆ ಮಾಡಿ"

ಇಷ್ಟು ಹೇಳುವ ಹೊತ್ತಿಗೆ ತಿಮ್ಮಪಯ್ಯನವರ ಕಣ್ಣು ಮಂಜಾಯಿತು. ಜೋಯಿಸರ ಕೈ ಹಿಡಿದುಕೊಂಡರು. 

ಜೋಯಿಸರು, "ಛೇ ಛೇ. ಹಾಗೆ ಹೇಳಬೇಡಿ. ದೇವರು ದೊಡ್ಡವನು. ಯಾವುದಕ್ಕೂ ಒಬ್ಬ ಲಾಯರು ಕಂಡು ವಿಲ್ ಮಾಡುವುದು ಒಳ್ಳೆಯದಲ್ಲವೇ?" ಅಂದರು. 

"ನಾನು ಮತ್ತೆ ಮುಂದಿನ ವಾರ ಬರುತ್ತೇನೆ. ಹಾಗೆಯೇ ಮಾಡೋಣ. ಈಗಂತೂ ಪತ್ರ ಬರೆದಿಟ್ಟಿದ್ದೇನೆ. ಮಕ್ಕಳು ಒಳ್ಳೆಯವರು. ಏನೂ ಸಮಸ್ಯೆ ಆಗಲಾರದು"

ತಿಮ್ಮಪ್ಪಯ್ಯ ಎರಡನೇ ಮಗನ ಮನೆಗೆ ಹೊರಟರು. 

ತಿಮ್ಮಪ್ಪಯ್ಯ ಮತ್ತೆ ರಾಮಾಜೋಯಿಸರ ಮನೆಗೆ ಬರಲಿಲ್ಲ. 

ಅವರ ಕಾರ್ಯಗಳು ಮುಗಿದಮೇಲೆ ಅವರು ಬರೆದಿಟ್ಟಿದ್ದ ಪತ್ರದಂತೆ ಆಸ್ತಿ ಹಂಚಿಕೆಯಾಗಲಿಲ್ಲ. ಮಕ್ಕಳು ಒಪ್ಪಿದರೂ ಅವರ ಮನೆಯವರು ಒಪ್ಪುವಂತಿರಲಿಲ್ಲ. ಎಲ್ಲ ಮಕ್ಕಳೂ ಸಮಾನರು. ಎಲ್ಲವೂ ಸರಿ ಭಾಗ ಆಗಬೇಕೆಂದು ಗುದ್ದಾಟ ಪ್ರಾರಂಭವಾಗಿ ವ್ಯಾಜ್ಯ ಕೋರ್ಟಿನ ಮೆಟ್ಟಲೇರಿತು. 

*****

ಕೆಲವು ತಿಂಗಳ ಹಿಂದೆ ಕರ್ನಾಟಕ ಉಚ್ಛ ನ್ಯಾಯಾಲಯದ ಮುಂದೆ (ಹೈಕೋರ್ಟ್) ಒಂದು ಅಣ್ಣ-ತಮ್ಮಂದಿರ ಆಸ್ತಿ ವಿವಾದದ ಮೊಕದ್ದಮೆ ವಿಚಾರಣೆಗೆ ಬಂದಿತು. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಮುಂದೆ ಕೇಸು ವಿಚಾರಣೆಗೆ ನಡೆಯಿತು. (ಆಗ ಅವರು ಹೇಳಿದ ವಿಷಯಗಳ ತುಣುಕುಗಳ ಮೇಲೆ ಮೇಲಿನ ವಿವರಣೆ ಹೆಣೆದಿದೆ). "ಆಸ್ತಿ ವಿಚಾರದಲ್ಲಿ ಸರಿಯಾದ ತಿಳುವಳಿಕೆ ಬೇಕು. ಕಾನೂನಿನ ಪರಿಹಾರ ಕೇಳುವ ಮೊದಲು ತಂದೆ-ತಾಯಿಯರು ಮಾಡಿರುವ ವ್ಯವಸ್ಥೆ ಬಗ್ಗೆ ಸ್ವಲ್ಪ ಯೋಚಿಸುವುದು ಒಳ್ಳೆಯದು" ಎಂದು ಅವರು ಬುದ್ಧಿ ಮಾತು ಹೇಳಿದರು. ಮುಂದಿನ ವಿಚಾರಣೆ ಏನಾಯಿತೋ ಗೊತ್ತಿಲ್ಲ. 

ಬೇರೆ ಕುಟುಂಬಗಳಲ್ಲಿನ ಅನೇಕ ಸೂಕ್ಷ್ಮಗಳು ನಮಗೆ ಗೊತ್ತಿರುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ, ಒಂದೇ ಅಳತೆಗೋಲಿನಿಂದ ಲೆಕ್ಕ ಹಾಕುವುದು ಸರಿಯಲ್ಲ. ಅಂತಹ ಸಂದರ್ಭಗಳಲ್ಲಿ ನಾವುಗಳು ಯಾವುದೇ ತೀರ್ಮಾನಗಳಿಗೆ ಬಂದು ಮಾತನಾಡುವ ಮೊದಲು ಸ್ವಲ್ಪ ಯೋಚಿಸಬೇಕಲ್ಲವೇ?  

Sunday, April 20, 2025

ಹಾಲು ಕರುವಿನ ಎಂಜಲಲ್ಲವೇ?


ಹಿಂದಿನ "ಎಂಜಲು ಮತ್ತು ಪ್ರಸಾದ" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ಎಂಜಲು, ಶೇಷಾನ್ನ, ಪಿತೃಶೇಷ, ಮಾತೃ ಭೋಜನ ಮತ್ತು ಪ್ರಸಾದ ಇವುಗಳ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚೆ ಮಾಡಿದೆವು. ಈ ಸಂಚಿಕೆ ಬಗ್ಗೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಹೆಚ್ಚಿನ ವಿವರಣೆಗಾಗಿ ಪ್ರಶ್ನೆಗಳನ್ನೂ ಕೇಳಿದ್ದಾರೆ. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಕನ್ನಡದ ಕವಿವರೇಣ್ಯರೂ, ನಮ್ಮ ನಾಡು ಕಂಡ ಹಿರಿಯ ಸಂತರೂ, ಸಮಾಜ ಸುಧಾರಕರೂ ಆದ ಶ್ರೀ ಕನಕದಾಸರು "ಭಕ್ತ ಕನಕದಾಸ" ಎಂದೇ ಹೆಸರಾದವರು. ತಮ್ಮ ಜೀವಮಾನವಿಡೀ ಮಡಿವಂತರ ತಾತ್ಸಾರಕ್ಕೆ ಗುರಿಯಾಗಿ ಅನೇಕ ಕಷ್ಟಗಳನ್ನು ಅನುಭವಿಸಿದರೂ, ಜೀವನದಲ್ಲಿ ಕಹಿಯನ್ನು ಆರೋಪಿಸಿಕೊಳ್ಳದೇ ಸಮಭಾವದಿಂದ ಸಮಾಜ ಸುಧಾರಣೆ ಮಾಡಿದ ಮಹಾನುಭಾವರವರು. ಈ "ಎಂಜಲು" ಎನ್ನುವುದರ ಬಗ್ಗೆ ಅವರು ಕೆಲವು ಮುತ್ತಿನಂತಹ ಮಾತುಗಳನ್ನು ತಮ್ಮ ಕೃತಿಗಳಲ್ಲಿ ಅಲ್ಲಲ್ಲಿ ಪೋಣಿಸಿದ್ದಾರೆ. ಅವರ ಒಂದು ಹಿರಿಮೆಯ ಕೃತಿಯಾದ "ಹರಿಹಾಕ್ತಿಸಾರ" ಈ ವಿಷಯದ ಬಗ್ಗೆ ಅವರ ಆಲೋಚನೆಯ ತಿರುಳನ್ನು ನಮಗೆ ನೀಡುತ್ತದೆ. ಅದನ್ನೂ ಮತ್ತು ಇದೇ ವಿಷಯಕ್ಕೆ ಸಂಬಂಧಿಸಿದ ಕೆಲವು ಇತರ ವಿವರಗಳನ್ನೂ ಈ ಸಂಚಿಕೆಯಲ್ಲಿ ನೋಡೋಣ. 

*****

ನಮ್ಮ ಕುಟುಂಬದ ಹಿತೈಷಿಗಳೂ, ಸಮಾಜದ ಹಿರಿಯರೂ ಮತ್ತು ಕುಟುಂಬದ ಸದಸ್ಯರೆಲ್ಲರ ಮನ್ನಣೆಗೆ ಪಾತ್ರರಾದವರೊಬ್ಬರು ಈ ದಿನ ನಮ್ಮ ಮನೆಗೆ ಬರುವವರಿದ್ದಾರೆ ಎನ್ನೋಣ. ಮಧ್ಯಾನ್ಹದ ಹೊತ್ತಿಗೆ ಬರುವವರಾದ್ದರಿಂದ ಈ ದಿನ ಅವರ ಭೋಜನ ನಮ್ಮಲ್ಲೇ ಆಗಬೇಕೆಂದು ಕೇಳಿದ್ದೇವೆ. ಅವರೂ ಒಪ್ಪಿದ್ದಾರೆ. ಅವರಿಗೆ ಬೇಕೋ ಬೇಡವೋ ಅದು ಮುಖ್ಯವಲ್ಲ. ನಮ್ಮ ಮನಸ್ಸು ಕೇಳುವಂತೆ ಅವರಿಗೆ ಒಳ್ಳೆಯ ಅಡಿಗೆ ಮಾಡಿ ಬಡಿಸಬೇಕೆಂದು ನಮ್ಮ ಅಪೇಕ್ಷೆ. ಊಟ ಷಡ್ರಸೋಪೇತವಾಗಿ ಇರಬೇಕೆಂದು ನಮ್ಮ ಇಚ್ಛೆ. ಕಟು, ಆಮ್ಲ, ಲವಣ, ತಿಕ್ತ, ಮಧುರ ಮತ್ತು ಕಷಾಯ ಎನ್ನುವ ಈ ಆರು ರಸಗಳಲ್ಲಿ ಕಹಿಯೂ ಸೇರಿದೆ. ಆದರೆ ಆ ಕಹಿ ನಾವು ಬೇಕೆಂದು ಹಾಕಿದ ಪದಾರ್ಥದಲ್ಲಿ ಇರಬೇಕು. ಹಾಗಲಕಾಯಿ ಕಹಿ ಆಗಬಹುದು. ಆದರೆ ನಮಗೆ ಬೇಡದಂತೆ ಎಲ್ಲಿಂದಲೋ ಬಂದು ಸೇರುವುದಲ್ಲ. 

ಹೆಸರುಬೇಳೆ ಕೋಸಂಬರಿಗೆ ಸೌತೆಕಾಯಿ ಹಾಕಿದರೆ ಚೆನ್ನಾಗಿರುತ್ತದೆ ಎಂದು ಅವರು ಯಾವುದೋ ಸಂದರ್ಭದಲ್ಲಿ ವಿನೋದಕ್ಕೆ ಹೇಳಿದ್ದು ನೆನಪು ಬಂತು. ಸೌತೆಕಾಯಿ ತಂದಾಗಿದೆ. ಆದರೆ ನೂರು ಸೌತೆಕಾಯಿಯಲ್ಲಿ ಯಾವುದೊ ಒಂದು ಕಹಿ ಇರುತ್ತದೆ. "ಕಹಿ ಸೌತೆ (ಸೋರೆ) ಕುಡಿಯಾದರೇನು? ಮಿಡಿಯಾದರೇನು?" ಎಂದು ಕವಿವಾಣಿಯೇ ಇದೆಯಲ್ಲ. ಎಲ್ಲ ಪದಾರ್ಥ ಚೆನ್ನಾಗಿ ಮಾಡಿ ಈ ಸೌತೆಕಾಯಿ ಕಹಿ ಆದರೆ ಏನು ಮಾಡುವುದು? ಊಟಕ್ಕೆ ಕುಳಿತಾಗ ಎಡವಟ್ಟಾಗುವುದಲ್ಲ! ಸೌತೆಕಾಯಿ ಹೆಚ್ಚುವಾಗ ಮೊದಲು ಒಂದು ಸಣ್ಣ ಚೂರು ತಿಂದು ಪರೀಕ್ಷೆ ಮಾಡುವುದು. ನಂತರ ಕೋಸಂಬರಿಗೆ ಹಾಕುವುದು. ಅಷ್ಟೇ. ಇದರಿಂದ ಏನೂ ತೊಂದರೆಯಿಲ್ಲ. 

ಹೀಗೆ ಮಾಡಿದರೆ, ಒಂದು ಸಣ್ಣ ತುಂಡು ಸೌತೆಕಾಯಿ ತಿಂದು ಪರೀಕ್ಷಿಸಿದರೆ, ಮಿಕ್ಕ ಸೌತೆಕಾಯಿ ಮತ್ತು ಆಮೇಲೆ ಅದನ್ನು ಹಾಕಿ ಮಾಡಿದ ಕೋಸಂಬರಿ ಎಂಜಲಾಯಿತೇ? ಅಂತಹ ಹಿರಿಯರಿಗೆ ಅದನ್ನು ಬಡಿಸಬಹುದೇ?
*****

ಊಟವಾದ ಮೇಲೆ ಹಣ್ಣು ತಿನ್ನುವುದು ಒಳ್ಳೆಯ ಅಭ್ಯಾಸ. ಹೊಟ್ಟೆಯಲ್ಲಿ ಜಾಗ ಇರುತ್ತದೆಯೋ ಇಲ್ಲವೋ, ಅವರು ತಿನ್ನುತ್ತಾರೋ ಇಲ್ಲವೋ, ಅದು ಆಮೇಲಿನ ವಿಷಯ. ಕೊಡುವುದು ನಮ್ಮ ರೀತಿ. ತೆಗೆದುಕೊಳ್ಳುವುದು ಅಥವಾ ಬಿಡುವುದು ಅವರಿಗೆ ಸೇರಿದ್ದು. ಒಂದು ಸಣ್ಣ ತುಂಡು ಅವರು ತೆಗೆದುಕೊಂಡರೂ ನಮಗೆ ಸಂತೋಷವೇ. ಅವರು ಬೇಡವೆಂದರೆ ಬಿಡೋಣ. ಅಷ್ಟು ಜನ ಸೇರಿರುವಾಗ ಯಾರಾದರೂ ತೆಗೆದುಕೊಂಡಾರು. ಅದೂ ಒಳ್ಳೆಯದೇ. 

ಅಂಗಡಿಯಲ್ಲಿ ಹೊಸ ದ್ರಾಕ್ಷಿ ರಾಶಿಯೇ ಇತ್ತು. ತಂದಿದ್ದಾಗಿದೆ. ಆದರೆ ಕೆಲವೊಮ್ಮೆ ನೋಡಲು ಚೆನ್ನ್ನಾಗಿರುವ ದ್ರಾಕ್ಷಿ ಹುಳಿ ಇರುವುದೂ ಉಂಟು. ಸೊಗಸಾದ ಊಟ ಮಾಡಿ ದ್ರಾಕ್ಷಿಗೆ ಕೈ ಹಾಕಿದರೆ, ಅದು ಹುಳಿ ಇದ್ದರೆ  ಏನು ಚೆನ್ನ? ಒಂದು ಕೆಲಸ ಮಾಡೋಣ. ಒಂದೊಂದು ಗೊಂಚಲಿನಿಂದ ಒಂದು ದ್ರಾಕ್ಷಿ ತೆಗೆದು ತಿಂದು ನೋಡುವುದು. ಸಿಹಿ ಇರುವ ಗೊಂಚಲಿನ ಹಣ್ಣುಗಳನ್ನು ಗುರುತಿಸಿ ತೆಗೆದಿಡುವುದು. ಹೇಗಿದೆ ಈ ಉಪಾಯ? 

ಒಂದು ಗೊಂಚಲಿನಲ್ಲಿ ಒಂದು ಹಣ್ಣು ತಿಂದು ಅತಿಥಿ-ಅಭ್ಯಾಗತರಿಗೆ ಒಳ್ಳೆಯದನ್ನು ಕೊಡುವುದು ಎಂಜಲು ಕೊಟ್ಟಂತೆಯೇ?  
*****

ಮತಂಗ ಋಷಿಗಳು ಮಹಾ ತಪಸ್ವಿಗಳು. ಶಬರಿ ಅವರ ಅನುಯಾಯಿ. ಆಶ್ರಮದ ಕೆಲಸ ಮತ್ತು ಅವರ ಸೇವೆಯಲ್ಲಿಯೇ ಜೀವನ ಸವೆಸಿದವಳು. ಕಾಲಚಕ್ರದಲ್ಲಿ ಇಬ್ಬರಿಗೂ ಮುಪ್ಪು ಬಂತು. ಮತಂಗರಿಗೆ ತಮ್ಮ ಜೀವಿತ ಕಾಲ ಮುಗಿಯುತ್ತಿರುವುದು ಗೊತ್ತಾಯಿತು. (ವೃದ್ಧಾಪ್ಯ ಬಂದಾಗ ನಮಗೂ ಗೊತ್ತಾಗುತ್ತದೆ. ಆದರೆ ನಾವು ಅದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ!) ಶ್ರೀರಾಮಚಂದ್ರನು ಈ ದಾರಿಯಲ್ಲಿ ಬರುವುದು ಖಚಿತವಾದರೂ ಇನ್ನೂ ಸ್ವಲ್ಪ ಕಾಲ ಕಾಯಬೇಕು. "ಶ್ರೀರಾಮನು ಬಂದೇ ಬರುತ್ತಾನೆ. ಅವನನ್ನು ನೋಡುವ ಭಾಗ್ಯ ನಿನಗಿದೆ. ನೀನು ಆ ದಿನಕ್ಕಾಗಿ ಕಾಯುತ್ತಿರು" ಎಂದು ಅವಳಿಗೆ ಹೇಳಿ ದೇಹ ತ್ಯಾಗ ಮಾಡಿದರು. 

ಶಬರಿಯು ಪ್ರತಿದಿನ ಕಾಡಿನಲ್ಲಿ ಹುಡುಕಿ ಹುಡುಕಿ ಚೆನ್ನಾದ ಹಣ್ಣು ತಂದಿಡುವಳು. ಸಂಜೆಯಾದರೂ ರಾಮನು ಬರಲಿಲ್ಲ. ಹಣ್ಣುಗಳನ್ನು ಬಿಸಾಡುವಳು. ಮತ್ತೆ ಮಾರನೆಯ ದಿನ ಹೊಸ ಹಣ್ಣು, ಕಡೆಗೆ ಒಂದು ದಿನ ಅವನು ಬಂದೇ ಬಂದ. ಲಕ್ಷ್ಮಣನ ಜೊತೆ. ಅವನನ್ನು ನೋಡಿ, ಹಣ್ಣು ಕೊಟ್ಟು ಧನ್ಯಳಾದಳು. ಅನೇಕ ವರುಷ ಕಾದಿದ್ದು ಸಾರ್ಥಕವಾಯಿತು. 

ನಮ್ಮಲ್ಲಿಗೆ ಬಂದವರಿಗೆ ಮೊದಲು ನೀರು ಕೊಡುವುದು ವಾಡಿಕೆ. ಅದು ಸೌಜನ್ಯವೂ ಹೌದು; ಸತ್ಕಾರವೂ ಹೌದು. ಅಂತೆಯೇ ದೇವರಿಗೆ ನೈವೇದ್ಯಕ್ಕೆ ಎಷ್ಟೆಲ್ಲಾ ಪದಾರ್ಥಗಳನ್ನು ಮಾಡಿಟ್ಟರೂ ಒಂದು ಸ್ವಲ್ಪ ನೀರು ಇಡಲೇಬೇಕು. ಇಲ್ಲದಿದ್ದರೆ ನೈವೇದ್ಯ ಅಪೂರ್ಣವೇ. 

ಅವಳು "ಯ೦ಜಲ ಫಲ" ಕೊಟ್ಟಳು ಎಂದರು ಕೆಲವರು. ಅವಳು "ಎಂಜಲ ಹಣ್ಣು" ಕೊಟ್ಟಳು ಎಂದರು ಮತ್ತೆ ಕೆಲವರು. ಸಂಸ್ಕೃತದಲ್ಲಿ ಯಂ ಎಂದರೆ ಒಳ್ಳೆಯ ಅಥವಾ ಶ್ರೇಷ್ಠವಾದದ್ದು ಎಂದು ಅರ್ಥ. ಜಲ ಎಂದರೆ ನೀರು ಎಂದು ಗೊತ್ತೇ ಇದೆ. ಭಕ್ತಿಯಿಂದ ತುಂಬಿದ ಒಳ್ಳೆಯ ನೀರು ಮತ್ತು ಹಣ್ಣು ಕೊಟ್ಟಳು ಎಂದರು ಕೆಲವರು. ಮಾತಂಗ ಋಷಿಗಳ ಶಿಷ್ಯೆಯಾಗಿ ಅದು ಸರಿ ಅಂದರು ಅವರು. ಇಲ್ಲ, ಹಣ್ಣುಗಳನ್ನು ರುಚಿ ನೋಡಿ ಎಂಜಲ ಹಣ್ಣು ಕೊಟ್ಟಳು ಎಂದರು ಇನ್ನು ಕೆಲವರು. ಶ್ರೀರಾಮನು ಅವಳ ಭಕ್ತಿ ನೋಡಿ ಎಂಜಲ ಹಣ್ಣು ಎಂದು ಲೆಕ್ಕಿಸದೆ ಸ್ವೀಕರಿಸಿದ ಎಂದು ಅರ್ಥೈಸಿದರು ಆವರು. ವರ್ಗ ಸಂಘರ್ಷದ ಹಿನ್ನೆಲೆಯಲ್ಲಿ ಇದೇ ಚೆನ್ನ. ಸಿನಿಮಾದಲ್ಲಿ ತೋರಿಸುವುದಕ್ಕಂತೂ ಇನ್ನೂ ಚೆನ್ನ. 

ಎರಡರಲ್ಲಿ ಯಾವುದು ಸರಿ? ಹಣ್ಣು ಕೊಟ್ಟ ಶಬರಿಗೆ ಗೊತ್ತು. ಆ ಹಣ್ಣು ತಿಂದ ಶ್ರೀರಾಮನಿಗೆ ಗೊತ್ತು. ಇದನ್ನು ನೋಡಿದ ಲಕ್ಷ್ಮಣನಿಗೆ ಗೊತ್ತು.  ನಾಲ್ಕನೆಯವರಿಗೇನು ಗೊತ್ತು? 

*****

"ಅದು ಎಂಜಲು" ಎಂದು ಒಬ್ಬರು ಹೇಳುತ್ತಾರೆ. ಈ ಹೇಳುವ "ಎಂಜಲು' ಎನ್ನುವ ಪದ ಬಾಯಿಯಲ್ಲಿರುವ ನಾಲಿಗೆಯಿಂದಲೇ ಬರಬೇಕು. ನಾಲಿಗೆ ತಾಕಿದರೆ, ಬಾಯಲ್ಲಿ ಬಿದ್ದರೆ ಎಂಜಲು. ಆದ್ದರಿಂದ ಈ 'ಎಂಜಲು" ಎನ್ನುವ ಪದವೇ ಎಂಜಲಲ್ಲವೇ?

ನೀರಿಲ್ಲದೆ ಅಡಿಗೆ ಪದಾರ್ಥಗಳಿಲ್ಲ. ಉಪಯೋಗಿಸಿದ ಪದಾರ್ಥಗಳನ್ನು ತೊಳೆಯಲಾದರೂ ನೀರು ಬೇಕು. ಹಣ್ಣು-ಹಂಪಲಾದರೂ ತೊಳೆಯಲಿಕ್ಕೆ ನೀರು ಬೇಕೇ ಬೇಕು. ಯಾವುದೋ ಮಹಾನದಿಯ ಅಥವಾ ಜಲಾಶಯದ ನೀರು. ಅಥವಾ ಬಾವಿಯಿಂದ ಸೇದಿದ ನೀರು. ಈಗಿನ ಕಾಲದ ಮನೆಯ ನಲ್ಲಿಯ ನೀರಾದರೂ ಅಂತಹ ಕಡೆಯಿಂದಲೇ ಬರಬೇಕು. ನದಿಯಲ್ಲಿ, ಜಲಾಶಯದಲ್ಲಿ, ಬಾವಿಯಲ್ಲಿ ಅಸಂಖ್ಯ ಜಲಚರಗಳಿವೆ. ಮೀನುಂಟು. ಕಪ್ಪೆಯುಂಟು. ಆಮೆಗಳಿವೆ. ಮೊಸಳೆಗಳು ಉಂಟು. ಮತ್ತನೇಕ ನೀರಿನಲ್ಲಿ ಬದುಕುವ ಪ್ರಾಣಿಗಳು ಇವೆ. (ರನ್ನನ ಕೃತಿ ಆಧರಿಸಿದ ಬಿ. ಎಂ. ಶ್ರೀ. ಅವರ  ಗದಾಯುದ್ಧ೦ ನಾಟಕದಲ್ಲಿ, ವೈಶಂಪಾಯನ ಸರೋವರದಲ್ಲಿ ಜಲಸ್ತ೦ಭನ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ದುರ್ಯೋಧನನಿಗೆ ಭೀಮ ಹೇಳುವ ಮಾತಿದು - "ಮತ್ತೀನೀರೊಳಗೆ ಮೀನಿರ್ಕು೦, ಎಸಡಿರ್ಕು೦, ಕಪ್ಪೆಯಿರ್ಕು೦; ಇರ್ಪರೇ ಗಂಡರ್?"). ನೆಲದ ಮೇಲಿನ ಅನೇಕ ಪ್ರಾಣಿಗಳೂ ಮನುಷ್ಯರೂ ಅದರಲ್ಲಿ ನೀರು ಕುಡಿಯುತ್ತಾರೆ. ಎಲ್ಲ ನೀರೂ ಇದರಿಂದ ಎಂಜಲೇ ಅಲ್ಲವೇ?

ಎಲ್ಲ ಪೂಜಾದಿಗಳಿಗೆ ಹಾಲು ಬೇಕು. ಹಾಲಿಲ್ಲದೆ ಮೊಸರಿಲ್ಲ. ಮೊಸರಿಲ್ಲದೆ ಬೆಣ್ಣೆ ಇಲ್ಲ. ಬೆಣ್ಣೆ ಇಲ್ಲದೆ ತುಪ್ಪವಿಲ್ಲ. ಹಾಲು, ಮೊಸರು, ತುಪ್ಪವಿಲ್ಲದೆ ಪಂಚಾಮೃತವಿಲ್ಲ. ಶಿಶುಗಳಿಗೆ ಹಸುವಿನ ಹಾಲು ಬೇಕು. ದೊಡ್ಡವರಿಗೂ ಬೇಕು. ರುಚಿ-ರುಚಿಯಾದ ಅಡಿಗೆ ಮಾಡಲು, ಅನೇಕ ಸಿಹಿ ತಿಂಡಿ ಮಾಡಲು, ಮತ್ತನೇಕ ಸಿಹಿ ತಿಂಡಿ ಜೊತೆಯಾಗಿ ಹಾಲು ಬೇಕೇ ಬೇಕು. 

ದೇವತೆಗಳು ಅಮೃತ ಕುಡಿಯುತ್ತಾರಂತೆ. ಹೀಗೆ ಕೇಳಿ ಗೊತ್ತು. ನಾವು ನೋಡಿಲ್ಲ. ನಾವು ನೋಡಿರುವ, ಸೇವಿಸಿರುವ, ಜೀವನಾಧಾರವಾಗಿ ನಂಬಿರುವ ಅಮೃತವೆಂದರೆ ಹಾಲು. ಶುದ್ಧತೆಗೆ ಇನ್ನೊಂದು ಹೆಸರು ಹಾಲು. "ಅವನದು ಹಾಲಿನಂತಹ ಮನಸ್ಸು" ಎನ್ನುತ್ತೇವೆ. ಸುಖ ಸಂಸಾರ ಕೆಡಿಸುವವರನ್ನು "ಹಾಲಿಗೆ ಹುಳಿ ಹಿಂಡಿದರು" ಅನ್ನುತ್ತೇವೆ. ಇಂತಹ ಹಾಲು ಆ ಹಸುವಿನ ಕರು ಕುಡಿದ ಮೇಲೆ ತಾನೇ ಕರೆದರೆ ಚೆನ್ನಾಗಿ ಬರುವುದು. ಹಾಲುಕರೆಯುವ ಹಸುವಿನ ಕರು ಇಲ್ಲದಿದ್ದರೆ ಮತ್ಯಾವುದೋ ಕರುವನ್ನಾದರೂ ಕೆಚ್ಚಲಿನ ಬಳಿ ಸ್ವಲ್ಪ ಕುಡಿಯಲು ಬಿಟ್ಟು ನಂತರ ಹಾಲು ಕರೆದುಕೊಳ್ಳುತ್ತಾರೆ. ಆದ್ದರಿಂದ ಹಾಲೂ ಕರುವಿನ ಎಂಜಲು ತಾನೇ? 

ಶ್ರೀ ಕನಕದಾಸರು ತಮ್ಮ "ಹರಿಭಕ್ತಿಸಾರ" 101ನೆಯ ಪದ್ಯದಲ್ಲಿ ಹೀಗೆ ಹೇಳುತ್ತಾರೆ:

ಎಂಜಲೆಂಜಲು ಎಂಬರಾನುಡಿ 
ಎಂಜಲಿಲ್ಲವೆ ವಾರಿ ಜಲಚರ
ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ 
ಎಂಜಲೆಲ್ಲಿಯದೆಲ್ಲಿಯು೦ ಪರ 
ರೆಂಜಲಲ್ಲದೆ ಬೇರೆ ಭಾವಿಸ  
ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ 

ಇದನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗಬಾರದು ಎನ್ನುವುದು ಇದರ ಭಾವಾರ್ಥ. 

*****

ನೈವೇದ್ಯಾದಿಗಳಿಗೆ, ಹವನ-ಹೋಮಾದಿಗಳಿಗೆ, ಶ್ರಾದ್ಧಾದಿಗಳಿಗೆ, ಇಂತಹ ಸಂಬಂಧಿತ ಕಾರ್ಯಗಳಿಗೆ ಪದಾರ್ಥ ತಯಾರಿಸುವಾಗ ಯಾವುದೇ ಪದಾರ್ಥದ, ಅವಕ್ಕೆ ಉಪಯೋಗಿಸಿದ ಪರಿಕರಗಳ ರುಚಿ ನೋಡುವ ಪರಿಪಾಠವಿಲ್ಲ. ಬೇರೆ ಸಂದರ್ಭದಲ್ಲಿ ಉದ್ದೇಶಪೂರ್ವಕ ಎಂಜಲು ಮಾಡಬಾರದು ಮತ್ತು ಕೊಡಬಾರದು. ಅದು ಆರೋಗ್ಯ ಮತ್ತು ಶುಚಿತ್ವದ ಸೂಚಕವೂ ಅಲ್ಲ. ಆದರೆ ಎಂಜಲಿನ ಹೆಸರಿನಲ್ಲಿ ಜೀವನವನ್ನೇ ದುರ್ಭರ ಮಾಡಿಕೊಳ್ಳಬಾರದು ಅನ್ನುವುದು ಇಷ್ಟೆಲ್ಲಾ ಚರ್ಚೆಗಳ ತಾತ್ಪರ್ಯ. 

Friday, April 18, 2025

ಎಂಜಲು ಮತ್ತು ಪ್ರಸಾದ


ಹಿಂದಿನ ಸಂಚಿಕೆಯಲ್ಲಿ "ಚರ್ವಿತ ಚರ್ವಣ" ಅನ್ನುವ ಶೀರ್ಷಿಕೆಯಡಿ "ಈ ಪ್ರಪಂಚದಲ್ಲಿರುವ ಸಾಹಿತ್ಯವೆಲ್ಲ  ವ್ಯಾಸರು ಹೇಳಿ ಬಿಟ್ಟದ್ದು" ಎನ್ನುವ ನಾಣ್ಣುಡಿ ನೆನಪಿಸಿಕೊಂಡೆವು. "ವ್ಯಾಸೋಚ್ಛಿಷ್ಟಮ್ ಜಗತ್ ಸರ್ವಂ" ಎನ್ನುವ ಈ ಹೇಳಿಕೆಯ ಹಿನ್ನೆಲೆಯಲ್ಲಿ, ಉಚ್ಚಿಷ್ಟ ಪದಕ್ಕೆ ಸಾಮಾನ್ಯವಾಗಿ "ತಿಂದು ಬಿಟ್ಟದ್ದು" ಅಥವಾ "ಎಂಜಲು" ಎಂದು ಅರ್ಥವಿದ್ದರೂ ಅದರಲ್ಲಿ ಏನಾದರೂ ವಿಶೇಷ ಅರ್ಥ ಇದೆಯೇ ಎಂಬ ಬಗ್ಗೆ ಪ್ರಶ್ನೆ ಹಾಕಿಕೊಂಡಿದ್ದೆವು. ಅದರ ಬಗ್ಗೆ ಈಗ ಸ್ವಲ್ಪ ಯೋಚಿಸೋಣ. ಇದರ ಹಿನ್ನೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. 

ಪರಮಾತ್ಮನ ಸೃಷ್ಟಿ ಕಾರ್ಯದಲ್ಲಿ, ಮೊದಲು ಅನ್ನವನ್ನು ಸೃಷ್ಟಿ ಮಾಡಿ ನಂತರ ಜೀವಿಗಳನ್ನು ಸೃಷ್ಟಿ ಮಾಡಲಾಯಿತು ಎನ್ನುವುದನ್ನು "ಬೃಹದಾರಣ್ಯಕೋಪನಿಷತ್" ಕೃತಿಯ "ಸಪ್ತಾನ್ನ ಪ್ರಕರಣ" ವಿಭಾಗದಲ್ಲಿ ಅತ್ಯಂತ ವಿವರವಾಗಿ ಚರ್ಚಿಸಲಾಗಿದೆ. ಸಾವಿರಾರು ವರುಷಗಳ ಹಿಂದೆ ಇಂಥದೊಂದು ವಿಸ್ತಾರವಾದ ಚರ್ಚೆ ನಮ್ಮಲ್ಲಿ ನಡೆದಿದೆ ಎನ್ನುವುದೇ ಒಂದು ವಿಸ್ಮಯದ ವಿಷಯ. ಇಲ್ಲಿ ಅನ್ನ ಅಂದರೆ ಭತ್ತದಿಂದ ತೆಗೆದ ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಮಾತ್ರವಲ್ಲ. ಆಹಾರ ರೂಪದಲ್ಲಿ ಸಮಸ್ತ ಪ್ರಾಣಿಗಳೂ ಸೇವಿಸುವ ಪದಾರ್ಥಗಳನ್ನು ಒಟ್ಟಾಗಿ "ಅನ್ನ" ಎಂದು ಹೇಳಲಾಗಿದೆ. ಏಳು ರೀತಿಯ ಅನ್ನಗಳು, ಅವನ್ನು ಸೇವಿಸುವ ಗುಂಪುಗಳು ಮತ್ತು ಅವನ್ನು ನೀಡುವ ಪಾಲಕ (ಕಸ್ಟೋಡಿಯನ್) ಇವುಗಳನ್ನು ಒಂದು ಕೋಷ್ಠಕದ ರೀತಿ ವಿವರಿಸಲಾಗಿದೆ. ಇದರ ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ. 

ಈ ಚರ್ಚೆಯ ಸಂದರ್ಭದಲ್ಲಿ ಎಂಜಲು, ಶೇಷಾನ್ನ, ಪಿತೃಶೇಷ, ಮಾತೃ ಭೋಜನ ಮತ್ತು ಪ್ರಸಾದ ಎನ್ನುವ ಬೇರೆ ಬೇರೆ ರೀತಿಯ ವರ್ಗೀಕರಣ ಮತ್ತು ಸಮಾಜದಲ್ಲಿ ನಡೆಯುವ ಪದ್ದತಿ ಹಾಗೂ ಸಂಪ್ರದಾಯಗಳನ್ನು ಕೂಡ ನೋಡಬಹುದು. 

*****

ಕೆಲವು ಪದಾರ್ಥಗಳನ್ನು ಒಬ್ಬ ವ್ಯಕ್ತಿಯೇ ತಿಂದು ಮುಗಿಸಬಹುದು. ಕೆಲವು ಪದಾರ್ಥಗಳು ಒಬ್ಬನೇ ವ್ಯಕ್ತಿಗೆ ಅನೇಕ ಸಂಖ್ಯೆಯಲ್ಲಿ ಬೇಕಾಗಬಹುದು. ಮತ್ತೆ ಕೆಲವು ಪದಾರ್ಥಗಳು ಒಬ್ಬರು ತಿಂದು ಮುಗಿಸುವುದಕ್ಕೆ ಅಸಾಧ್ಯವೇ. ಒಂದು ಬಾಳೆಯಹಣ್ಣು ಅಥವಾ ಒಂದು ಕಿತ್ತಳೆಯನ್ನು ಒಬ್ಬನೇ ತಿನ್ನಬಹುದು. ದ್ರಾಕ್ಷಿಯಾದರೆ ಒಬ್ಬನೇ ಹತ್ತಿಪ್ಪತ್ತು ತಿನ್ನಬಹುದು. ಒಂದು ದೊಡ್ಡ ಹಲಸಿನ ಹಣ್ಣಾದರೆ ಒಬ್ಬನೇ ತಿನ್ನಲು ಅಸಾಧ್ಯ. ಹಣ್ಣುಗಳದ್ದು ಒಂದು ಸರಳ ಉದಾಹರಣೆ. ಇದೇ ರೀತಿ ಹೆಚ್ಚಿನ ಪ್ರಮಾಣದಲ್ಲಿ ಮಾಡಿಟ್ಟ ಅನೇಕ ತಿನಿಸುಗಳಿಂದ ಕೂಡಿದ ಅಡಿಗೆ. ಇದನ್ನು ಅನೇಕರು ಒಟ್ಟಿಗೆ ಅಥವಾ ಬೇರೆ ಬೇರೆಯಾಗಿ ಸೇವಿಸಬಹುದು. 

ಇಂತಹ ಒಂದು ಅನೇಕ ವ್ಯಂಜನಗಳಿಂದ (ಪಲ್ಯ, ಗೊಜ್ಜು, ಕೂಟು, ಚಟ್ನಿ ಮುಂತಾದುವುಗಳಿಗೆ ವ್ಯಂಹಜನಗಳು ಎನ್ನುತ್ತಾರೆ) ಕೂಡಿದ ಹತ್ತಾರು ಜನ ಸೇವಿಸಬಹುದಾದ ಪ್ರಮಾಣದ ಅಡಿಗೆಯನ್ನು ತೆಗೆದುಕೊಳ್ಳೋಣ. ಇಪ್ಪತ್ತು ಜನರಿಗೆ ಎಂದು ಮಾಡಿದ ತಯಾರಿ ಅನ್ನೋಣ. ಹತ್ತು ಜನರು ಮೊದಲು ಊಟಕ್ಕೆ ಕುಳಿತರು. ಅಡಿಗೆ ಸೊಗಸಾಗಿತ್ತು. ಊಟದ ಮನೆಯ ವಾತಾವರಣ ಚೆನ್ನವಿತ್ತು. ಬಡಿಸುವವರು ನುರಿತವರು. ಊಟಕ್ಕೆ ಕುಳಿತವರೋ ಭೋಕ್ತಾಪುರುಷರು. (ಒಳ್ಳೆಯ ಪ್ರಮಾಣದಲ್ಲಿ ಪದಾರ್ಥಗಳನ್ನು ಚೆನ್ನಾಗಿ ಊಟ ಹೊಡೆಯುವವರನ್ನು ಭೋಕ್ತಾಪುರುಷರು ಎಂದು ಹೇಳುತ್ತಿದ್ದರು). ಬಹಳ ವಿನೋದ ಮತ್ತು ಸ್ವಲ್ಪ ಸಂಗೀತ ಇತ್ಯಾದಿಗಳ ನಡುವೆ ಊಟ ಚೆನ್ನಾಗಿ ಸಾಗಿತು. ಹತ್ತು ಜನರೂ ಊಟಮಾಡಿ ಎದ್ದಿದ್ದಾರೆ. 

ಮಾಡಿದ ಅಡಿಗೆಯಲ್ಲಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚಾಗಿ ಖರ್ಚಾಗಿದೆ. ಅಂಕಿ-ಅಂಶಗಳ ಲೆಕ್ಕದಲ್ಲಿ ಹೇಳುವುದಾದರೆ ಶೇಕಡಾ ಅರವತ್ತರಷ್ಟು ಸೇವಿಸಿಯಾಗಿದೆ. ಮಿಕ್ಕ ನಲವತ್ತು ಭಾಗ ತಯಾರಿಸಿದ ಮತ್ತು ಬಡಿಸಿದ ಪಾತ್ರೆಗಳಲ್ಲಿ ಉಳಿದಿದೆ. ಹತ್ತು ಜನ ಊಟ ಮಾಡಿದವರ ಎಲೆಗಳಲ್ಲೂ ಸ್ವಲ್ಪ ಸ್ವಲ್ಪ ಪದಾರ್ಥಗಳು ಉಳಿದಿವೆ. ಈ ರೀತಿ ಊಟ ಮಾಡಿ ಬಿಟ್ಟ ಎಲೆಗಳಲ್ಲಿ ಅಥವಾ ತಟ್ಟೆಗಳಲ್ಲಿ ಬಿಟ್ಟಿರುವ ಪದಾರ್ಥಗಳನ್ನು "ಎಂಜಲು" ಎನ್ನುವುದು ವಾಡಿಕೆ. ಇದನ್ನು ಯಾರೂ ತಿನ್ನುವುದಿಲ್ಲ. ಅವೆಲ್ಲವನ್ನೂ ಒಟ್ಟುಗೂಡಿಸಿ ಹೊರಗಡೆ ಬಿಸಾಡುತ್ತಾರೆ. ಅಲ್ಲಿ ಪ್ರಾಣಿಗಳು ತಿನ್ನಬಹುದು ಇಲ್ಲವೇ ಕಡೆಗೆ ಗೊಬ್ಬರ ಆಗಬಹುದು. ಆದರೆ ತಯಾರಿಸಿದ ಮತ್ತು ಬಡಿಸುವ ಪಾತ್ರೆಗಳಲ್ಲಿ ಉಳಿದಿರುವ ಪದಾರ್ಥಗಳು ಎಂಜಲಲ್ಲ. ಅದನ್ನು ನಿರ್ದೇಶಿಸಲು ಬಳಸುವ ಪದ "ಮಿಕ್ಕಿದ್ದು" ಎಂದು. "ಶೇಷಾನ್ನ" ಎಂದು ಹಿಂದೆ ಹೇಳುತ್ತಿದ್ದರು. ಇದು ಎಂಜಲಲ್ಲ. ಬೇರೆಯವರು ಸೇವಿಸಲು ಯೋಗ್ಯವಾದದ್ದು. 

*****

ಶ್ರಾದ್ಧಾದಿ ಕರ್ಮಗಳನ್ನು (ತಿಥಿ ಎಂದು ಹೇಳುವುದು ವಾಡಿಕೆ) ಮಾಡುವ ದಿನ ಆ ಕೆಲಸಕ್ಕಾಗಿಯೇ ವಿಶೇಷ ಅಡಿಗೆ ಮಾಡಿರುತ್ತಾರೆ. ಆ ಕಾರ್ಯಕ್ರಮಕ್ಕೆ ಪಿತೃಗಳ ಪ್ರತಿನಿಧಿಗಳಾಗಿ ಕೆಲವರನ್ನು ಆಮಂತ್ರಿಸಿರುತ್ತಾರೆ. ಅವರನ್ನು ಊಟಕ್ಕೆ ಕೂಡಿಸಿ, ಅವರಲ್ಲಿ ಪಿತೃದೇವತೆಗಳನ್ನು ಆವಾಹಿಸಿ ಭೋಜನ ಮಾಡಿಸುತ್ತಾರೆ. ಅವರ ಊಟ ಮುಗಿದು, ಕೈ ತೊಳೆಯಲು ಏಳುವ ಮುಂಚೆ ಅಲ್ಲಿ ಮಾಡಿರುವ ಅನ್ನದಲ್ಲಿ "ಪಿಂಡದಾನ" ಮಾಡುತ್ತಾರೆ. (ಈ ಪಿಂಡಪ್ರದಾನ ಸಮಯದಲ್ಲೂ ಅಸ್ವಾಭಿಕ ಮರಣಹೊಂದಿದ ಪಿತೃಗಳಿಗೆ "ಉಚ್ಚಿಷ್ಟ ಪಿಂಡ" ಎಂದು ಬೇರೊಂದು ಪಿಂಡಪ್ರದಾನ ಮಾಡುತ್ತಾರೆ).  ಶ್ರಾದ್ಧ ಕರ್ಮಕ್ಕೆ ಬಂದವರ ಊಟ ಆಯಿತು. ಮಾಡಿದ ಅಡಿಗೆ ಇನ್ನೂ ಮಿಕ್ಕಿದೆ. ಇದು ಶೇಷಾನ್ನ. ಪಿತೃಕಾರ್ಯ ಮಾಡಿ ಉಳಿದ ಶೇಷಾನ್ನ ಆದುದರಿಂದ ಇದು "ಪಿತೃ ಶೇಷ" ಎಂದಾಯಿತು. 

ಕಾರ್ಯ ನಡೆಯುವಾಗ ಊಟ ಮಾಡಿದ ಹಿರಿಯರನ್ನು ಕಾರ್ಯ ಮಾಡಿದ ಯಜಮಾನ "ಮಿಕ್ಕ ಅಡಿಗೆಯನ್ನು ಏನು ಮಾಡೋಣ?" (ಶೇಷಾನ್ನ೦ ಕಿಂ ಕರಿಷ್ಯೇ?) ಎಂದು ಕೇಳುತ್ತಾನೆ. "ನಿನ್ನ ಬಂಧುಗಳೊಡನೆ ಸೇವಿಸಬಹುದು" (ಇಷ್ಟೆ:ಸಹ ಭುಂಜತಾಮ್) ಎಂದು ಅವರು ಹೇಳುತ್ತಾರೆ. (ಇದು ಸಂಸ್ಕೃತದಲ್ಲಿ ನಡೆಯುವ ಸಂಭಾಷಣೆಯಾದದ್ದರಿಂದ ಇದೂ ಒಂದು ಮಂತ್ರವೆಂದು ತಿಳಿಯುವುದೂ ಉಂಟು!). ಇದೇ ಪಿತೃಶೇಷ ಸೇವನೆ. ಶ್ರದ್ದಾಳು ಬಂಧುಗಳು "ಪಿತೃಗಳ ಪ್ರಸಾದವಿದು" ಎನ್ನುವ ಪೂಜ್ಯ ಭಾವನೆಯಿಂದ ಈ ವಿಶೇಷಕ್ಕಾಗಿ ದೂರ ದೂರದಿಂದ ಬರುತ್ತಾರೆ. ಬಂಧು-ಭಾಂಧವರಲ್ಲದವರು ಈ ಪದಾರ್ಥಗಳನ್ನು ಸೇವಿಸುವುದಿಲ್ಲ. 

*****

ತಾಯಿಗೂ ಮಕ್ಕಳಿಗೂ ಇನ್ನೆಲ್ಲಿಲ್ಲದ ವಿಶೇಷ ಸಂಬಂಧ. ಗರ್ಭದಲ್ಲಿದ್ದಾಗ ತಾಯಿ ಸೇವಿಸಿದ ಆಹಾರವನ್ನು ಹೊಕ್ಕುಳ ಬಳ್ಳಿಯ ಮೂಲಕ ಸೇವಿಸಿ, ಬೆಳೆದು ಹುಟ್ಟಿದ್ದಾಯಿತು. ಮನುಷ್ಯರಲ್ಲಿ ಹುಟ್ಟಿದ ಶಿಶು ದೊಡ್ಡದಾಗಲು ಕೆಲವು ವರುಷಗಳೇ ಆಗುತ್ತವೆ. ಮಗುವಿಗೆ ಎಲ್ಲ ಬೇಕು-ಬೇಡಗಳಿಗೂ ಅಮ್ಮನೇ ಬೇಕು. ಕಂಠದವರೆಗೂ ತಿಂದಿದ್ದರೂ ಅಮ್ಮ ಊಟಕ್ಕೆ ಕುಳಿತಾಗ ಅವಳ ತಟ್ಟೆಯಲ್ಲಿ ಅಥವಾ ಎಲೆಯಲ್ಲಿ ಇರುವ ಪದಾರ್ಥವೇ ಬೇಕು. ಇದು ಯಾವುದೂ ತರ್ಕಕ್ಕೆ ನಿಲುಕುವ ವಿಷಯವಲ್ಲ. ಅದನ್ನು ಅನುಭವವೇ ಅರ್ಥ ಮಾಡಿಸಬೇಕು. ತಾಯಿಯಿರುವ ಎಲ್ಲರೂ ಈ ರೀತಿ ಬೆಳೆದವರೇ. ಒಂದು ವಯಸ್ಸಿನವರೆಗೆ ಹೀಗೆಯೇ ನಡೆಯುತ್ತದೆ. 

"ಉಪನಯನ" ಅಥವಾ "ಮುಂಜಿ" ಎನ್ನುವ ಸಂಸ್ಕಾರ ಮಾಡುವ ಕುಟುಂಬಗಳಲ್ಲಿ ಮಂತ್ರೋಪದೇಶಕ್ಕೆ ಮೊದಲು "ಮಾತೃಭೋಜನ" ಎನ್ನುವ ಒಂದು ಕಾರ್ಯಕ್ರಮ ನಡೆಯುತ್ತದೆ. ಇಂದಿನಿಂದ ಮುಂದೆ ಉಪನಯನ ಆದವನು ಮತ್ತೊಬ್ಬರ ಎಲೆಯಲ್ಲಿ ಇರುವ ಪದಾರ್ಥ ತಿನ್ನುವಂತಿಲ್ಲ. ಅವನು ಪ್ರತಿದಿನ ಮಾಡುವ ಭೋಜನವೂ ತನ್ನಲ್ಲಿರುವ ಪ್ರಾಣಾಗ್ನಿಗೆ ಕೊಡುವ ಆಹುತಿ. ಇದಕ್ಕಾಗಿಯೇ ತಾಯಿ-ಮಗನನ್ನು ಅಂದು ಮಂತ್ರೋಪದೇಶದ ಮುಂಚೆ ಒಟ್ಟಿಗೆ ಕೂಡಿಸಿ ಒಂದೇ ಎಲೆಯಲ್ಲಿ ಆಹಾರ ಬಡಿಸುತ್ತಾರೆ. ಇದೊಂದು ಭಾವನೆಗಳ ಕೇಂದ್ರಿತ ಕಾರ್ಯಕ್ರಮ. ಹಿಂದೆಲ್ಲ ಇದೊಂದು ಸಣ್ಣ ಖಾಸಗಿ ವಿಷಯವಾಗಿ ನಡೆಯುತ್ತಿತ್ತು. ಈಗ ಈವೆಂಟ್ ಮ್ಯಾನೇಜ್ಮೆಂಟ್ ನೇತೃತ್ವದಲ್ಲಿ ಬಹಳ ವೈಭವೋಪೇತವಾಗಿ ನಡೆಯುತ್ತದೆ. 

***** 

ಎಂಜಲು, ಶೇಷಾನ್ನ, ಪಿತೃಶೇಷ ಮತ್ತು ಮಾತೃಭೋಜನದ ಬಗ್ಗೆ ನೋಡಿದ್ದಾಯಿತು. ಇನ್ನು ಪ್ರಸಾದದ ಬಗ್ಗೆ ನೋಡೋಣ. 

ನಾವು ನಂಬಿದ ದೈವಕ್ಕೆ ಕೃತಜ್ಞತೆ ತೋರಿಸುವ ಸಲುವಾಗಿ ಪೂಜೆ-ಪುನಸ್ಕಾರಗಳನ್ನು ಮಾಡುವುದು ಬಹಳ ಹಿಂದಿನಿಂದ ಬಂದಿರುವ ಒಂದು ಸಂಪ್ರದಾಯ. ಈ ರೀತಿ ಮಾಡುವಾಗ ಭಯ-ಭಕ್ತಿಗಳಿಂದ ಇಷ್ಟದೈವಕ್ಕೆ ಕೊಡಲು ತಿಂಡಿ-ತಿನಿಸು, ಅಡಿಗೆ, ಪಾನೀಯ ಇತ್ಯಾದಿ ಮಾಡುವುದು. ಹಣ್ಣು-ಹಂಪಲುಗಳನ್ನು ಸೇರಿಸುವುದು. ತಯಾರು ಮಾಡಿದ ಮತ್ತು ಸಂಪಾದಿಸಿದ ಇಂತಹ ಪದಾರ್ಥಗನ್ನು ಆವಾಹಿಸಿದ ದೇವರು-ದೇವತೆಗಳ ಮುಂದೆ ಇಟ್ಟು "ಷೋಡಶೋಪಚಾರ" (ಹದಿನಾರು ಹಂತದ ಪೂಜೆ) ಅಂಗವಾಗಿ "ನೈವೇದ್ಯ" ಮಾಡುತ್ತಾರೆ. ಹೀಗೆ ಮಾಡುವಾಗ ಪರಮಾತ್ಮನು ಅಲ್ಲಿ ಇಟ್ಟ ಪದಾರ್ಥಗಳಲ್ಲಿ ತನಗೆ ಯೋಗ್ಯವಾದ ಅಂಶಗಳನ್ನು ರಸರೂಪವಾಗಿ ನೋಟದಿಂದ ಸೇವಿಸುತ್ತಾನೆ ಎಂದು ನಂಬಿಕೆ. ಹೀಗೆ ನೈವೇದ್ಯ ಮಾಡಿದ ಮೇಲೆ ಅಲ್ಲಿ ಉಳಿದ ಪದಾರ್ಥ "ಪ್ರಸಾದ" ಆಯಿತು. ಅನುಗ್ರಹ ರೂಪವಾಗಿ ನಮಗೆ ಹಿಂದೆ ಬಂದಿದ್ದು "ಪ್ರಸಾದ" ಎಂದು ನಿರ್ದೇಶಿತವಾಯಿತು. 

ದೇವರು ಸ್ವೀಕರಿಸಿ (ತಿಂದು) ಬಿಟ್ಟ ಇದನ್ನು ಯಾರೂ ದೇವರ ಎಂಜಲು ಎನ್ನುವುದಿಲ್ಲ. ಬಹಳ ಗೌರವಪೂರ್ವಕ "ಪ್ರಸಾದ" ಎನ್ನುತ್ತಾರೆ. ಯಾರಾದರೂ ಕೊಟ್ಟರೆ ಎರಡೂ ಕೈಗಳಿಂದ ಸ್ವೀಕರಿಸುತ್ತಾರೆ. ಮೊದಲು ನೋಡಿದ ಎಂಜಲು ಮತ್ತು ಈಗ ನೋಡಿದ ಪ್ರಸಾದಕ್ಕೆ ಎಷ್ಟು ವ್ಯತ್ಯಾಸ! ಅದರ ಬೆಲೆ ನಂಬಿಕೆ ಮತ್ತು ಶ್ರದ್ದೆಯಲ್ಲಿ ಇದೆ. ಭೌತಿಕವಾಗಿ ನೋಡಿದರೆ ವ್ಯತ್ಯಾಸವಿಲ್ಲ. ಭಾವನಾತ್ಮಕವಾಗಿ ನೋಡಿದರೆ ಎಲ್ಲಿಲ್ಲದ ವ್ಯತ್ಯಾಸ. 

ದೊಡ್ಡ ಸಮಾರಂಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಗೆ ಮಾಡಿದಾಗ ಪಾಕಶಾಲೆಯಲ್ಲಿಯೇ ನೈವೇದ್ಯ ಮಾಡುತ್ತಾರೆ. ಸಾಮೂಹಿಕ ಭೋಜನಶಾಲೆಗಳಿರುವ ದೇವಾಲಯಗಳಲ್ಲಿ ಇದನ್ನು ನೋಡಬಹುದು. ಮನೆಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ತಯಾರಿಸಿದ ಎಲ್ಲಾ ಪದಾರ್ಥಗಳನ್ನೂ ಒಂದು ಹರಿವಾಣದಲ್ಲಿ ಸ್ವಲ್ಪ ಸ್ವಲ್ಪ ಬಡಿಸಿ ನೈವೇದ್ಯ ಮಾಡುತ್ತಾರೆ. ನಂತರ ಅದನ್ನು ಅದೇ ಕ್ರಮದಲ್ಲಿ ಮಾಡಿರುವ ಹೆಚ್ಚಿನ ಅಡಿಗೆ ಪದಾರ್ಥಗಳಲ್ಲಿ ಸೇರಿಸುತ್ತಾರೆ. ಈಗ ಮಾಡಿದ ಅಡಿಗೆ ಎಲ್ಲ ಪ್ರಸಾದವಾಯಿತು!

ಅನೇಕ ದಶಕಗಳ ಹಿಂದೆ ಕಾಶಿ-ರಾಮೇಶ್ವರ ಯಾತ್ರೆ ಬಹಳ ಕಠಿಣದ್ದಾಗಿತ್ತು. ಹೀಗೆ ಯಾತ್ರೆ ಹೋದವರು ದಾರಿಯಲ್ಲಿ ಸಿಗುವ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿಂದ ಪ್ರಸಾದ ತರುತ್ತಿದ್ದರು. ಸಾಮಾನ್ಯವಾಗಿ ಕಲ್ಲುಸಕ್ಕರೆ, ಒಣದ್ರಾಕ್ಷಿ, ಉತ್ತತ್ತಿ (ಖರ್ಜೂರ), ಪಂಚಕಜ್ಜಾಯ, ಕಲ್ಯಾಣಸೇವೆ ಮುಂತಾದ, ಬಹಳ ದಿನ ಕೆಡದೆ ಇರುವ ಪದಾರ್ಥಗಳ ಪ್ರಸಾದಗಳು. ತಿರುಪತಿಯಂತಹ ಕ್ಷೇತ್ರವಾದರೆ ಲಾಡುವೂ ಆಗಬಹುದು. ಯಾತ್ರೆ ಮುಗಿದು ಊರಿಗೆ ಬಂದ ನಂತರ ಒಂದು ದಿನ ಬಂಧು-ಮಿತ್ರರನ್ನೆಲ್ಲ ಕರೆದು ಸಮಾರಾಧನೆ ನಡೆಸುತ್ತಿದ್ದರು. "ಕಾಶಿ ಸಮಾರಾಧನೆ" ಅಥವಾ "ಗಂಗಾ ಸಮಾರಾಧನೆ" ಎಂದು ಅದಕ್ಕೆ ಹೆಸರು. ಇಷ್ಟದೇವತೆಯ ಜೊತೆಗೆ ಈ ಎಲ್ಲ ಕ್ಷೇತ್ರಗಳ ಪ್ರಸಾದಗಳನ್ನೂ ಪೂಜಿಸಿ ಬಂದವರಿಗೆ ವಿತರಿಸುತ್ತಿದ್ದರು. ಈಗ ಈ ಪದ್ಧತಿ ನಿಂತೇ ಹೋಗಿದೆ. 

*****

ಭಗವಾನ್ ವೇದವ್ಯಾಸರ ಕುರಿತಾದ ನಾಣ್ನುಡಿ ವಿಷಯದಲ್ಲಿ ಉಚ್ಚಿಷ್ಟ ಅನ್ನುವ ಪದಕ್ಕೆ ಎಂಜಲು ಎಂದು ಅರ್ಥ ಮಾಡುವುದು ಅಷ್ಟು ಸಮಂಜಸವಲ್ಲ. ಅವರ ಅನೇಕ ಸೃಷ್ಟಿಗಳಲ್ಲಿ ಒಂದಾದ ಮಹಾಭಾರತದ ವಿಷಯದಲ್ಲಿಯೇ "ಇಲ್ಲಿರುವುದೇ ಬೇರೆಲ್ಲ ಕಡೆ ಇರುವುದು. ಇಲ್ಲಿರದುದು ಬೇರೆಲ್ಲಿಯೂ ಇಲ್ಲ" ಎಂದು ಹೇಳುತ್ತಾರೆ. ಈ ಕೃತಿಯ ಒಂದು ಎಳೆ ಹಿಡಿದು ಕೃತಿ ರಚಿಸಿ ಅನೇಕರು ಮಹಾಕವಿಗಳಾದರು; ಪೂಜ್ಯರೆನಿಸಿದರು. ಕೆಲವು ಕೃತಿಗಳನ್ನು ಒಮ್ಮೆ ಓದಿದರೆ ಮುಗಿಯಿತು. ಆದರೆ ವೇದವ್ಯಾಸರ ಕೃತಿಗಳು ಮತ್ತೆ ಮತ್ತೆ ಓದಿದರೆ ಹೊಸ ಹೊಸ ಅರ್ಥಗಳು ಇಂದಿಗೂ ಹೊಳೆಯುತ್ತವೆ. 

ಈ ದೃಷ್ಟಿಯಿಂದ "ವ್ಯಾಸೋಚ್ಛಿಷ್ಟಮ್ ಜಗತ್ಸರ್ವಂ" ಎನ್ನುವುದಕ್ಕೆ "ವ್ಯಾಸರು ನಮಗೆ ಕೊಟ್ಟಿರುವ ಪ್ರಸಾದ" ಎನ್ನುವುದೇ ಸರಿ ಎನ್ನಬಹುದು. 

ಈ ಸಂಚಿಕೆ ಈಗಾಗಲೇ ದೀರ್ಘವಾಗಿರುವುದರಿಂದ, ಎಂಜಲು ಎನ್ನುವ ವಿಷಯದಲ್ಲಿ ಶ್ರೀಕನಕದಾಸರು ಹೇಳಿರುವ ವಿಶೇಷ ವಿಷಯವನ್ನು ಮುಂದೊಮ್ಮೆ ನೋಡೋಣ. 

Friday, March 7, 2025

ಶ್ರದ್ದೆ ಮತ್ತು ನಂಬಿಕೆ


ಹವಾಮಾನ ಮುನ್ಸೂಚನೆ ಕೊಡುವ ವಿಷಯದಲ್ಲಿ ಇಂದು ಬಹಳ ಪ್ರಗತಿ ಸಾಧಿಸಲಾಗಿದೆ. ಚಂಡಮಾರುತಗಳ ಉಗಮ, ಅವು ಮುಂದುವರೆಯುವ ಮಾರ್ಗ, ಮಹಾಸಾಗರಗಳ ಮಧ್ಯದಲ್ಲಿ ಮೈತಳೆದ ಅವು ಯಾವಾಗ ಸಮುದ್ರ ತೀರವನ್ನು ದಾಟಿ ಭೂಪ್ರವೇಶ ಮಾಡುತ್ತವೆ, ಅವುಗಳ ತೀವ್ರತೆ ಎಷ್ಟು, ಅವುಗಳ ಜೊತೆ ಬರುವ ಗಾಳಿಗಳ ವೇಗವೇನು, ಇನ್ನೂ ಮುಂತಾದ ವಿವರಗಳನ್ನು ಎಷ್ಟೋ ದಿನ ಮುಂಚೆ ಕೊಡುವಷ್ಟರ ಮಟ್ಟಿಗೆ ಮುನ್ಸೂಚನೆ ನೀಡಲು ಇಂದು ಸಾಧ್ಯವಾಗಿದೆ. ಮಧ್ಯಾಹ್ನ ಎರಡು ಗಂಟೆಗೆ ಹಿಮಪಾತ ಪ್ರಾರಂಭವಾಗುತ್ತದೆ ಎಂದು ಸೂಚನೆ ಕೊಟ್ಟರೆ ಸರಿಯಾಗಿ ಎರಡು ಗಂಟೆಗೆ ಹಿಮ ಬೀಳಲು ಪ್ರಾಂಭವಾಗುವದನ್ನು ನೋಡಬಹುದು. ನಾಗರಿಕ ವಿಮಾನಯಾನದಲ್ಲಿ ಚಾಲನೆಯ ಹೊಣೆ ಹೊತ್ತವರಿಗೆ ವಿಮಾನ ಸಾಗಬೇಕಾದ ದಾರಿ ನಿಖರವವಾಗಿ ತಿಳಿಸುವ ವ್ಯವಸ್ಥೆಗಳಿವೆ. 

ಐವತ್ತು ವರುಷಗಳ ಹಿಂದೆ ಹವಾಮಾನ ಇಲಾಖೆಯ ಮುನ್ಸೂಚನೆಗಳು ಆಕಾಶವಾಣಿಯಲ್ಲಿ (ಆಲ್ ಇಂಡಿಯಾ ರೇಡಿಯೋ) ಬಂದರೆ ಅದೊಂದು ನಗೆಪಾಟಿಲಿನ ವಿಷಯ ಆಗಿತ್ತು. ಮಳೆಗಾಲದಲ್ಲಿ ಯಾರಾದರೂ ಛತ್ರಿ ಹಿಡಿದು ಹೊರಗಡೆ ಹೋಗಲು ತಯಾರಾದರೆ "ಯಾಕೆ? ಇಂದು ಮಳೆ ಬರುತ್ತದೆ ಎಂದು ರೇಡಿಯೋದಲ್ಲಿ ಹೇಳಿದ್ದು ಕೇಳಲಿಲ್ಲವೇ? ಕೊಡೆ ಹಿಡಿದು ಹೊರಟಿದ್ದೀಯಲ್ಲ? ಖಂಡಿತ ಮಳೆ ಬರುವುದಿಲ್ಲ!" ಎಂದು ಹೇಳುತ್ತಿದ್ದ ದಿನಗಳು ಅವು. ಮಳೆ ಆಧಾರಿತ ಬೆಳೆ ತೆಗೆಯುವ ರೈತರು ಆಕಾಶ ನೋಡುತ್ತಿರುವ ಚಿತ್ರಗಳು ಸರ್ವೇಸಾಮಾನ್ಯವಾಗಿದ್ದವು. ಮೊದಲು ಹೊಲ ಉಳಲು ಮಳೆಗಾಗಿ ಕಾಯುವುದು. ನಂತರ ಬಿತ್ತನೆ ಮಾಡಲು ಕಾಯುವುದು. ಅದಾದಮೇಲೆ ತೆನೆಗಳು ಕಾಳು ತುಂಬುವ ಕಾಲದಲ್ಲಿ ಮತ್ತೆ ಮತ್ತೆ ಆಕಾಶ ನೋಡುವುದು. ಇವೆಲ್ಲವೂ ಒಂದು ರೀತಿಯ ದಿನಚರಿಯೇ ಆಗಿದ್ದವು ಆ ದಿನಗಳಲ್ಲಿ. 
*****

ಖ್ಯಾತ ಸಾಹಿತಿ ತರಾಸು. (ತ. ರಾ. ಸುಬ್ಬರಾವ್)  ಅವರ ಕಾದಂಬರಿ ಆಧಾರಿತ "ಚಂದವಳ್ಳಿಯ ತೋಟ" ಅರವತ್ತರ ದಶಕದಲ್ಲಿ ತೆರೆಕಂಡ ಒಂದು ಸದಭಿರುಚಿಯ ಚಿತ್ರ. ಹನುಮ ಎಂಬ ಪಾತ್ರದ (ರಾಜಕುಮಾರ್) ತಂದೆ ಮತ್ತು ಊರಿನ ಹಿರಿಯ ಶಿವನಂಜೇಗೌಡ ಪಾತ್ರದಲ್ಲಿ ಉದಯ ಕುಮಾರ್ ಅಭಿನಯ ಅವರಿಗೆ ಬಹಳ ಒಳ್ಳೆಯ ಹೆಸರು ತಂದಿತು. ಆ ಚಿತ್ರದಲ್ಲಿ ಮಳೆ ಕಾಣದೆ ಉರಿಬಿಸಿಲಿನಲ್ಲಿ ಇಡೀ ಹಳ್ಳಿಗಳು ಬೆಂದು ಜನ ನರಳುವ ದೃಶ್ಯಗಳಿವೆ.  ಕೋಪದ ಭರದಲ್ಲಿ ಶಿವನಂಜೇಗೌಡ ಊರ ಮುಂದಿನ ಹನುಮನ ಮೂರ್ತಿಗೆ ಅರೆದ ಮೆಣಸಿನಕಾಯಿ ಹಚ್ಚುತ್ತಾನೆ! ನಂತರ ಮಳೆ ಬಂದ ಮೇಲೆ ತಪ್ಪು ಕಾಣಿಕೆ ಕೊಟ್ಟು ಹಾಲಿನಿಂದ ಅಭಿಷೇಕ ಮಾಡಿಸುತ್ತಾನೆ. ಮಳೆಯಿಲ್ಲದೆ ಪರದಾಡುವ ಜನ ಅನುಭವಿಸುವ ದುಃಖದ ಒಂದು ಚಿತ್ರಣ ಇದು. 

ಮಳೆ ಬರುತ್ತದೆ ಎಂದು ಕಾದು ಕಾದು ಸುಣ್ಣವಾಗಿ ಕಡೆಗೆ ಹಳ್ಳಿಯ ಜನ "ಮಳೆರಾಯನ ಉತ್ಸವ" ಮಾಡುತ್ತಿದ್ದರು. ಒಂದು ಮರದ ಮಣೆಯ ಮೇಲೆ ಜೇಡಿ ಮಣ್ಣಿನಿಂದ ಮಳೆರಾಯನ ಮೂರ್ತಿಯನ್ನು ಮಾಡಿ, ಹುಡುಗನೊಬ್ಬನ ತಲೆಯ ಮೇಲೆ ಹೊರಿಸಿ, ಅವನ ಹಿಂದೆ ಸೇರಿ ಹಳ್ಳಿಯ ಮನೆ ಮನೆಗಳಿಗೆ ಹೋಗುತ್ತಿದ್ದರು. ಮನೆಗಳ ಮುಂದೆ ನಿಂತು "ಹುಯ್ಯೋ, ಹುಯ್ಯೋ, ಮಳೆರಾಯ! ಹೂವಿನ ತೋಟಕ್ಕೆ ನೀರಿಲ್ಲ", "ಹುಯ್ಯೋ, ಹುಯ್ಯೋ, ಮಳೆರಾಯ! ತೆಂಗಿನ ತೋಟಕ್ಕೆ ನೀರಿಲ್ಲ" ಮುಂತಾಗಿ ಕೂಗುತ್ತಿದ್ದರು. ಮನೆಯವರು ಒಂದು ಬಿಂದಿಗೆ ನೀರು ತಂದು ಮಳೆರಾಯನ ಮೇಲೆ ಸುರಿಸುತ್ತಿದ್ದರು. ಊರಿನ ಎಲ್ಲಾ ಮನೆಗಳ ಮುಂದೆ ಹೀಗೆ ಮಾಡಿದ ಮೇಲೆ ಊರ ಮುಂದಿನ ಅಶ್ವತ್ಥ ಕಟ್ಟೆಯಲ್ಲಿ ಅದನ್ನು ಇಟ್ಟು ಪೂಜೆ ಮಾಡುತ್ತಿದ್ದರು. "ಪರ್ಜನ್ಯ ಹೋಮ-ಜಪಗಳು" ಮುಂತಾದುವನ್ನು ನಡೆಸುತ್ತಿದ್ದರು. 

*****

ಸುಮಾರು ಎಂಭತ್ತು ವರುಷಗಳ ಹಿಂದಿನ ಮಾತು. ಈಗಿನ ಕನಕಪುರ ಆಗ "ಕಾನ ಕಾನ್ ಹಳ್ಳಿ" ಎಂದು ಕರೆಸಿಕೊಳ್ಳುತ್ತಿತ್ತು. ಆಗ ಅದು ಬೆಂಗಳೂರಿಂದ ಮೂವತ್ತೈದು ಮೈಲಿ ದೂರದ ಒಂದು ದೊಡ್ಡ ಹಳ್ಳಿ. ಅರ್ಕಾವತಿ ನದಿ ದಡದಲ್ಲಿ ಇದ್ದ ದೊಡ್ಡ ಹಳ್ಳಿಗಳಲ್ಲಿ ಅದೂ ಒಂದು. (ಈಗಿನ ರಾಮನಗರ ಆಗ "ಕ್ಲೋಸ್ ಪೇಟೆ" ಎಂದು ಕರೆಸಿಕೊಳ್ಳುತ್ತಿತ್ತು). ಸುತ್ತಮುತ್ತಲಿನ ಹಳ್ಳಿಗಳಾದ ಕಲ್ಲಹಳ್ಳಿ, ಮಳಗಾಳು, ಚೀರಣಕುಪ್ಪೆ, ಅರಳಾಳು ಮುಂತಾದ ಗ್ರಾಮಗಳ ಜನರು ವಾರಕ್ಕೊಮ್ಮೆ  ಕಾನ ಕಾನ್ ಹಳ್ಳಿಯಲ್ಲಿ ನಡೆಯುವ ಸಂತೆಗೆ ತಮ್ಮ ತರಕಾರಿ, ಬೆಲ್ಲ, ತುಪ್ಪ ಮೊದಲಾದ ಪದಾರ್ಥಗಳನ್ನು ತಂದು ಮಾರಿ, ತಮಗೆ ಬೇಕಾದ ವಸ್ತುಗಳನ್ನು ಕೊಂಡು ಹೋಗುತ್ತಿದ್ದರು. 

ಕಾನ್ ಕಾನ್ ಹಳ್ಳಿಯಲ್ಲಿ ಒಂದು ಪುರಾತನ ಕೋಟೆಯಿದೆ. ಅದರ ಅವಶೇಷಗಳನ್ನು ಈಗಲೂ ಕಾಣಬಹುದು. ಕೋಟೆಯ ಒಳಭಾಗದಲ್ಲಿ ಹಳೆಯ ಊರಿದೆ. ಕೋಟೆಯ ಹೊರಗಡೆ ಭಾಗದಲ್ಲಿ ಪೇಟೆ ಎಂದು ಹೊಸ ಊರಿದೆ. ಈಗ ಎಲ್ಲ ಬೆರೆತುಹೋಗಿದ್ದರೂ ಕೋಟೆ ಮತ್ತು ಪೇಟೆ ಎನ್ನುವ ಪದಗಳ ಬಳಕೆ ಇನ್ನೂ ಇದೆ. ಊರಿನ ಪೂರ್ವ ಭಾಗದಲ್ಲಿ ಅರ್ಕಾವತಿ ನದಿ ಹರಿಯುತ್ತದೆ. ದಕ್ಷಿಣ ಭಾಗದಲ್ಲಿ ಕೋಟೆ ಪ್ರದೇಶ. ಉತ್ತರದಲ್ಲಿ ಪೇಟೆಯ ಭಾಗ. ಕೋಟೆ ಪ್ರದೇಶದಲ್ಲಿ ಕೆಳಗಿನ ಕೋಟೆ ಮತ್ತು ಮೇಲಿನ ಕೋಟೆ ಎಂಬ ವಿಭಾಗವಿತ್ತು. ಐವತ್ತು ವರುಷಗಳ ಹಿಂದೆ ಉತ್ತರ ಭಾಗದಲ್ಲಿ ಎಕ್ಸಟೆನ್ಶನ್ ಎಂದು ಇನ್ನೊಂದು ಬಡಾವಣೆ ಆಯಿತು. ಈಗ ಇನ್ನೂ ಬೇರೆ ಬೇರೆ ಬೆಳವಣಿಗೆಗಳು ಆಗಿವೆ. 

ಆಗ ರೇಡಿಯೋ ಕೂಡ ಇರಲಿಲ್ಲ. ಸುತ್ತ ಮುತ್ತಲಿನ ಹಳ್ಳಿಯ ಜನರು ತಮಗೆ ಬೇಕಾದ ಅನೇಕ ಕೆಲಸಗಳಿಗೆ, ಸರ್ಕಾರೀ ಕಚೇರಿಗಳಿಗೆ, ಹಾಲು-ಮೊಸರು ಮುಂತಾದುವನ್ನು ಮಾರಲು ಕಾನ ಕಾನ್ ಹಳ್ಳಿಗೆ ಬರಬೇಕಾಗಿತ್ತು. ಎಲ್ಲರೂ ಕಾಲ್ನಡಿಗೆಯಲ್ಲೇ ಬಂದುಹೋಗುತ್ತಿದ್ದರು. ಎಲ್ಲೋ ಒಬ್ಬಿಬ್ಬರು ಸೈಕಲ್ ಇದ್ದವರು ದೊಡ್ಡ ಕುಳ! ರೈತಾಪಿ ಜನರು ತಮಗೆ ಪರಿಚಯವಿದ್ದ ಜೋಯಿಸರು, ಪಂಡಿತರು, ಶಾಸ್ತ್ರಿಗಳು, ವಾದ್ಯಾರ್, ಬುದ್ಯೋರು ಇವರ ಬಳಿ ಮಳೆ ಬರುವ ದಿನಗಳನ್ನು ಜ್ಯೋತಿಷ್ಯ ಕೇಳಿ ತಿಳಿದುಕೊಳ್ಳುತ್ತಿದ್ದರು. ಮಳೆಯ ನಕ್ಷತ್ರ, ಗ್ರಹಗಳ ಬಲಾಬಲ ನೋಡಿ ಅವರುಗಳು ಮಳೆ ಬರಬಹುದಾದ ದಿನಗಳನ್ನು ಹೇಳುತ್ತಿದ್ದರು. ಸಾಮಾನ್ಯವಾಗಿ ಅದರಂತೆ ರೈತರು ಉಳುಮೆ, ಬಿತ್ತನೆ ಮುಂತಾದ ವ್ಯವಸಾಯ ಸಂಬಂಧದ ಕೆಲಸಗಳನ್ನು ಮಾಡುತ್ತಿದ್ದರು.

***** 

ಇದೇ ಸಮಯದ ಘಟನೆಯ ವಿಷಯ. ಬೆಳಗಿನ ಸುಮಾರು ಹನ್ನೊಂದು ಘಂಟೆಯ ಸಮಯ. ವಾದ್ಯಾರ್ ಶ್ರೀನಿವಾಸ ದೀಕ್ಷಿತಾಚಾರ್ಯರು ಕೆಳಗಿನ ಕೋಟೆಯ ತಮ್ಮ ಮನೆಯ ಮುಂದಿನ ಜಗುಲಿಯಲ್ಲಿ ಕುಳಿತು ಯಾವುದೋ ಗ್ರಂಥವನ್ನು ನೋಡುತ್ತಿದ್ದರು. ಅವರಿದ್ದ ಮನೆಗೆ "ವಾದ್ಯಾರ್ ಮನೆ" ಎಂದೇ ಹೆಸರು. ಪರಂಪರೆಯಿಂದ ವಿಶಿಷ್ಟಾದ್ವೈತ ಸಂಪ್ರದಾಯದ ಘನ ಪಂಡಿತರ ವಂಶಾವಳಿ. ಮುಂದಿನ  ತಲೆಮಾರಿನಲ್ಲಿ ಇವರ ಮಗ "ರಾಮಾಯಣಾಚಾರ್ಯ" ಎಂದು ಎಲ್ಲರ ಪ್ರಶಂಸೆಗೆ ಪಾತ್ರರಾದ ಮಹಾ ವಿದ್ವಾಂಸ ಪ್ರೊಫೆಸರ್ ಕೆ. ಎಸ. ನಾರಾಯಣಾಚಾರ್ಯರು. ಅನೇಕ ಪ್ರವಚನಗಳನ್ನು ನೀಡಿ, ಗಾತ್ರದಲ್ಲೂ, ಸತ್ವದಲ್ಲೂ ಬಹು ದೊಡ್ಡದಾದ ಜ್ಞಾನ ಭಂಡಾರವನ್ನು ಅನೇಕ ಪುಸ್ತಕಗಳ ರೂಪದಲ್ಲಿ ಕೊಟ್ಟವರು. 

ನದಿಯ ಆಚೆ ದಡದ ಬದಿಯ ಹಳ್ಳಿಯ ರೈತನೊಬ್ಬ ವಾದ್ಯಾರ್ ಮನೆಯ ಮುಂದೆ ಬಂದು ನಿಂತ. 

"ಅಡ್ಡ ಬಿದ್ದೆ, ಸ್ವಾಮಿ"
"ಏನು ಸೀನಪ್ಪ? ಸಂತೆಗೆ ಬಂದಿದ್ಯಾ?  ಸಂತೆ ವ್ಯವಹಾರ ಆಯಿತೇನು?'
"ಸಂತೆಗೇ ಬಂದಿದ್ದೆ ಬುದ್ಧಿ. ಆದರೆ ಅದಕ್ಕಿಂತ ಹೆಚ್ಚಾಗಿ ನಿಮ್ಮನ್ನೇ ನೋಡಲು ಬಂದಿದ್ದೆ"
"ಏನು ಅಂತಹ ವಿಷಯ. ನನ್ನನ್ನು ನೋಡುವುದು?"
"ಊರಲ್ಲಿ ಎಲ್ಲ ರೈತರೂ ಹೊಲ ಉತ್ತವ್ರೆ. ಬಿತ್ತನೆ ಬೀಜ ತಯಾರು ಮಡಿಕೊಂಡು ಕುಂತವ್ರೆ"
"ಸರಿ ಮತ್ತೆ. ಬಿತ್ತನೆ ಕಾಲ ಬಂತಲ್ಲ. ಬಿತ್ತನೆ ಮಾಡೋದು ತಾನೇ?"
"ಅದೇ ಮಳೆ ವಿಷಯ ಬುದ್ದಿ. ಮಳೆ ಹೆಂಗೈತೆ? ಎಂದು ಬರತೈತೆ? ನಿಮ್ಮನ್ನು ಕೇಳೋಣ ಅಂತ"
"ತಡಿ ನೋಡೋಣ"
ವಾದ್ಯಾರ್ ಒಂದೆರಡು ನಿಮಿಷ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದರು. 

"ಭಾನುವಾರ ಬಿತ್ತನೆ ಮಾಡಿ. ಸೋಮವಾರ ಚೆನ್ನಾಗಿ ಮಳೆ ಬರುತ್ತದೆ"
"ಸೋಮವಾರ ಬಂದೇ ಬರುತ್ತದ, ಬುದ್ಧಿ?'
"ಹೇಳಿದಿನಲ್ಲಯ್ಯ. ಚೆನ್ನಾಗಿ ಮಳೆ ಬರುತ್ತದೆ"
"ಕಷ್ಟ ಪಟ್ಟು ದುಡ್ಡು ಹೊಂದಿಸಿ ಬಿತ್ತನೆ ಬೀಜ ತಂದೀವಿ ಸ್ವಾಮಿ"
"ಅದು ನನಗೂ ಗೊತ್ತು, ಸೀನಪ್ಪ"
"ಬಿತ್ತನೆ ಮಾಡಿದ ತಕ್ಷಣ ಮಳೆ ಬರದಿದ್ದರೆ ಬೀಜವೆಲ್ಲ ಭೂಮಿಯಲ್ಲಿ ಸುಟ್ಟು ಹೋಗುತ್ತೆ ಸ್ವಾಮಿ"
"ಅದು ನನಗೆ ಗೊತ್ತಿಲ್ಲವೇ?"
"ಅದಕ್ಕೆ ಸ್ವಾಮಿ ಭಯ. ಮಳೆ ಖಂಡಿತ ಬರುತ್ತೆ ಅಂತೀರಾ?'

ವಾದ್ಯಾರ್ ಅವರಿಗೆ ಕೋಪ ಬಂದಿರಬೇಕು. ಜನಿವಾರ ಕೈಲಿ ಹಿಡಿದರು ಕೇಳಿದರು. 
"ಏನು ಇದು, ಗೊತ್ತೇ?"
"ಜನಿವಾರ ಅಲ್ಲವೇ ಬುದ್ದಿ"
" ನೀರು ಸೇದೋ  ಹಗ್ಗ ಹೆಗಲ ಮೇಲೆ ಹಾಕಿಕೊಂಡಿದ್ದೇನೆ ಅಂದುಕೊಂಡ್ಯಾ"
"ಯಾಕೆ ಹಾಗೆ ಹೇಳ್ತೀರಿ ಸ್ವಾಮಿ?"
"ಮತ್ತೆ? ಮಳೆ ಬರಲೇಬೇಕು. ಬರದಿದ್ದರೆ ದೇವೇಂದ್ರನ ಸುಟ್ಟುಬಿಡ್ತೀನಿ!" 

ಸೀನಪ್ಪ ಇದನ್ನು ನಿರೀಕ್ಷಿಸಿರಲಿಲ್ಲ. 
"ಸ್ವಾಮಿ, ಊರಲ್ಲಿ ಎಲ್ಲರಿಗೂ ಭಾನುವಾರ ಬಿತ್ತನೆ ಮಾಡಕ್ಕೆ ಹೇಳ್ತಿನಿ. ನಿಮ್ಮನ್ನ ಮತ್ತೆ ಬಂದು ಕಾಣ್ತೀನಿ"

ಇಷ್ಟು ಹೇಳಿ ಸೀನಪ್ಪ ನಮಸ್ಕಾರ ಮಾಡಿ ಹೊರಟುಹೋದ. ಊಟ ತಯಾರಾಗಿದೆ ಎಂದು ವಾದ್ಯಾರ್ ಗೆ ಮನೆ ಒಳಗಿನಿಂದ ಸೂಚನೆ ಬಂತು. ಭೋಜನಕ್ಕೆ ಒಳಗೆ ಹೋದರು. 

ಸೋಮವಾರ ಚೆನ್ನಾಗಿಯೇ ಮಳೆ ಬಂತಂತೆ. ಆ ವರ್ಷ ಬೆಳೆ  ಚೆನ್ನಾಗಿ  ಆಯ್ತ೦ತೆ . (ಅದೊಂದು ಕಾಕತಾಳೀಯ ಅಂದವರೂ ಇದ್ದರು)

ಈ ವೃತ್ತಾಂತ ಒಬ್ಬರಿಂದ ಒಬ್ಬರಿಗೆ ಹರಡಿತಂತೆ. 

*****

ಈ ಘಟನೆ ಕಳೆದು ಕೆಲವು ವರ್ಷಗಳೇ ಕಳೆದಿದ್ದವು. ನಾನು ಕೇಳಿದಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ಕೇಳಿದಾಗ ಕೆಲವು ಅನುಮಾನಗಳು ಬಂದವು. ನಮಗೆ ಮಾತಾಡಲು ಎಲ್ಲರಂತೆ ಸುಲಭವಾಗಿ ಸಿಗುತ್ತಿದ್ದುದು ತಾಯಿಯೇ. ಅಡಿಗೆ ಕೆಲಸ, ಊಟ ಮುಗಿಸಿ ಮಧ್ಯಾಹ್ನ ಅವಳು ವಿಶ್ರಾಂತಿಯಲ್ಲಿ ಇದ್ದಾಗ ಹತ್ತಿರ ಹೋದೆ.

"ಅಮ್ಮ, ಇವತ್ತು ಒಂದು ವಿಷಯ ಕೇಳಿದೆ"
"ಏನದು?"
"ವಾದ್ಯಾರ್ ಮತ್ತು ಮಳೆ ವಿಷಯ" 
"ದೇವೇಂದ್ರನ್ನ ಸುಟ್ಟುಬಿಡುತ್ತೇನೆ ಅಂತ ಹೇಳಿದ್ದು ತಾನೇ?"
" ಹೌದು. ಅದರಲ್ಲಿ ಒಂದು ಅನುಮಾನ ಬಂತು"
"ಏನು ಅನುಮಾನ?"
"ದೇವೇಂದ್ರ ದೇವತೆಗಳ ರಾಜ. ಅವನನ್ನು ಸುಟ್ಟುಬಿಡುತ್ತೇನೆ, ಅನ್ನಬಹುದೇ?"
"ವಾದ್ಯಾರ್ ಮತ್ತು ದೇವೇಂದ್ರನ ಸಂಬಂಧ ನಮಗೇನು ಗೊತ್ತು?"
"ಅಂದರೆ?"
"ಮಳೆಯ ಬಗ್ಗೆ ಪ್ರಶ್ನೆ ಕೇಳಿದವನು ಉತ್ತರ ಹೇಳಿದರೂ ಅನುಮಾನ ಪಟ್ಟ. ಆಗ ಅವರು ಏನು ಮಾಡಬೇಕು? ಮಳೆ ಬಂದರೂ ಬರಬಹುದು. ಇಲ್ಲದಿದ್ದರೂ ಇರಬಹುದು, ಎಂದು ಹೇಳಬೇಕೇ? ಅದು ಅವನಿಗೂ ಗೊತ್ತು. ಇವರೇನು ಹೇಳುವುದು? ಅವನಿಗೆ ಖಚಿತವಾಗಲಿ ಎಂದು ಅವರು ಹಾಗೆ ಹೇಳಿರಬಹುದು. ಉತ್ತರ ಹೇಳುವವರಿಗೇ ಅದರಲ್ಲಿ ನಂಬಿಕೆ ಇಲ್ಲದಿದ್ದರೆ ಪ್ರಶ್ನೆ ಕೇಳುವವರಿಗೆ ಉತ್ತರದಲ್ಲಿ ನಂಬಿಕೆ ಹೇಗೆ ಬರುತ್ತದೆ?"

"ಅವನಿಗೇನೋ ನಂಬಿಕೆ ಬಂದು ಹೊರಟುಹೋದ. ಆದರೆ ಹಾಗೆ  ಹೇಳಿದ್ದು ತಪ್ಪಲ್ಲವೇ?"
"ಅವರು ಹೇಳಿದ್ದು ತಪ್ಪು ಸರಿ ಎಂದು ತೀರ್ಮಾನಿಸಲು ನಾವು ಯಾರು? ದೊಡ್ಡವರ ವಿಷಯ ಕೆಲವು ನಮಗೆ ಅರ್ಥ ಆಗುವುದಿಲ್ಲ. ನೀನು ವಿಶ್ವಾಮಿತ್ರರ ಕಥೆ ಕೇಳಿದ್ದೀಯಲ್ಲ"
"ಯಾವುದು? ತ್ರಿಶಂಕು ಪ್ರಸಂಗವೇ?"
"ಹೌದು. ತನ್ನ ಮಾತು ಕೇಳದ್ದಕ್ಕಾಗಿ ಇನ್ನೊಂದು ಇಂದ್ರನನ್ನು, ಮತ್ತೊಂದು ಸ್ವರ್ಗವನ್ನು ಮಾಡಲು ಅವರು ಹೋಗಲಿಲ್ಲವೇ? 
"ಅದು ಸರಿ"

"ವಾದ್ಯಾರ್ ತಮ್ಮ ಉಪಾಸನೆಯಲ್ಲಿ ಶ್ರದ್ದೆ ಇದ್ದವರು. ತಮ್ಮ ಲೆಕ್ಕಾಚಾರ ಸರಿ ಎಂದು ನಂಬಿದವರು. ಅದಕ್ಕೇ ಹಾಗೆ ಹೇಳಿರಬಹುದು. ನಂತರ ಅವರ, ದೇವೇಂದ್ರನ ನಡುವೆ ಏನಾಯಿತು? ನಮಗೆ ಗೊತ್ತಿಲ್ಲ. ನಮಗೆ ಸಂಬಂಧಿಸದ ವಿಷಯದಲ್ಲಿ ನಾವು ಯಾಕೆ ತಲೆ ಕೆಡಿಸಿಕೊಳ್ಳಬೇಕ? ಈ ಪ್ರಸಂಗದಲ್ಲಿ ನಾವು ಕಲಿಯುವುದೇನು? ಅದು ನಮಗೆ ಮುಖ್ಯ."
"ಏನದು, ನಾವು ಕಲಿಯಬೇಕಾದದ್ದು?"

"ನಾವು ಮಾಡುವ ಕೆಲಸದಲ್ಲಿ ನಮಗೆ ಪೂರ್ಣ ಶ್ರದ್ದೆ ಇರಬೇಕು. ಕಾಟಾಚಾರಕ್ಕೆ,  ತೋರಿಕೆಗೆ, ಅರ್ಧ ಮನಸ್ಸಿನಲ್ಲಿ ಮಾಡುವ ಕೆಲಸಗಳು ಎಂದೂ ಪೂರ್ಣ ಫಲ ಕೊಡುವುದಿಲ್ಲ. ಅನೇಕ ವಿಷಯಗಳಲ್ಲಿ ನಂಬಿಕೆ ಮುಖ್ಯ. ಎಲ್ಲ ವಿಷಯಗಳಲ್ಲೂ ನಂಬಿಕೆ ಪ್ರಶ್ನಿಸುತ್ತ ಹೊರಟರೆ ಏನೂ ಕೆಲಸವಾಗುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ನಂಬಿದವರು ಹಾಳಾಗುವಂತೆ, ಏನನ್ನೂ, ಯಾರನ್ನೂ ನಂಬದವರೂ ಹಾಳಾಗುತ್ತಾರೆ! ಜೀವನದಲ್ಲಿ ಒಂದು ಸಮತೋಲನ ಇರಬೇಕು. ಶ್ರದ್ದೆ ಮತ್ತು ನಂಬಿಕೆ. ಇವು ಬಹಳ ಮುಖ್ಯ. ಆದರೆ ಅಂಧ ಶ್ರದ್ದೆ, ಕುರುಡು ನಂಬಿಕೆ ಕೂಡದು. "

*****

ಹಳ್ಳಿಯಲ್ಲಿ ಹುಟ್ಟಿದವಳು; ಬೆಳೆದವಳು. ಏಳನೆಯ ವಯಸ್ಸಿನಲ್ಲಿ ತಂದೆ ತೀರಿಕೊಂಡರು. ಪ್ರೈಮರಿ ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ಮುಗಿಯಿತು. ಹದಿನಾಲ್ಕು ವರುಷಕ್ಕೆ ಮದುವೆ. ನಂತರ ಹನ್ನೆರಡು ಮಕ್ಕಳು. ಆದರೆ ಸಂಸಾರವೇ ಅವಳ ವಿಶ್ವವಿದ್ಯಾಲಯ. 

 ಮನೆಯೆ ಮೊದಲ ಪಾಠಶಾಲೆ 
ಜನನಿ ತಾನೇ ಮೊದಲ ಗುರುವು 
ಜನನಿಯಿಂದ ಪಾಠ ಕಲಿತ ಜನರು ಧನ್ಯರು!