Showing posts with label Yougandharayana. Show all posts
Showing posts with label Yougandharayana. Show all posts

Monday, February 2, 2026

ದೇಶದ್ರೋಹಿ


ಈಚಿನ ದಿನಗಳಲ್ಲಿ ದೇಶದ ಗಡಿಗಳ ರಕ್ಷಣೆ ಬಗ್ಗೆ ಇರುವ ಕಾಳಜಿ ಆಂತರಿಕ ಭದ್ರತೆ ಬಗ್ಗೆಯೂ ಹೆಚ್ಚಿನ ಪ್ರಮಾಣದಲ್ಲಿ ವ್ಯಕ್ತವಾಗುತ್ತಿದೆ. ಅನಧಿಕೃತ ನುಸುಳುಕೋರರ ಹಾವಳಿ ಹಿಂದೆಂದಿಗಿಂತ ಅಧಿಕ ರೀತಿಯಲ್ಲಿ ಕಂಡುಬರುತ್ತಿದೆ. ದೇಶದಲ್ಲಿ ಇಂತಹ ಅನಧಿಕೃತ ಪ್ರವೇಶ ಪಡೆದವರ ಸಹಾಯಕ್ಕಾಗಿ ಒಂದು ಅತ್ಯಂತ ವ್ಯವಸ್ಥಿತ ಜಾಲ ಹರಡಿಕೊಂಡು ಶಾಂತಿ-ಸುವ್ಯವಸ್ಥೆಗೆ ಭಂಗ ತರುವ ಅನೇಕ ಪ್ರಯತ್ನಗಳು ನಿರಂತರ ನಡೆದಿವೆ. ಇದು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಲ್ಲ. ಪ್ರಪಂಚದ ಅನೇಕ ಕಡೆ ಇಂತಹ ಪ್ರಕರಣಗಳು ನಡೆಯುತ್ತಾ ಇರುವುದು ಆಗಾಗ್ಗೆ ವರದಿ ಆಗುತ್ತಿವೆ. 

ನಾವು ಕಷ್ಟಪಟ್ಟು ನಮ್ಮ ಮನೆಯ ಅಂಗಳದಲ್ಲಿ ಏನನ್ನೂ ಬೆಳೆದಿಲ್ಲ. ನಮ್ಮ ಪಕ್ಕದ ಮನೆಯವರು ಶ್ರಮಿಸಿ ಹಣ್ಣು-ತರಕಾರಿ ಬೆಳೆದುಕೊಂಡಿದ್ದಾರೆ. ಸಾಧ್ಯವಾದರೆ ಅವರು ಅತ್ತ ಕಡೆ ನೋಡುತ್ತಿರುವಾಗ ಸ್ವಲ್ಪ ಕಿತ್ತುಕೊಳ್ಳುವುದು. ಅದಕ್ಕಿಂತ ಹೆಚ್ಚಾಗಿ ನಾವೇ ಅವರ ಮನೆಯವರಂತೆ ಸೇರಿಕೊಂಡು ಆ ಅಂಗಳದಲ್ಲಿ ಬೆಳೆದ ಪದಾರ್ಥಗಳ ಸುಖವನ್ನು ಅನುಭವಿಸುವುದು. ಇದರಿಂದ ಅವರ ಕುಟುಂಬದ ಸದಸ್ಯರ ಪಾಲು ಕಡಿಮೆ ಆದರೆ ನಮಗೇನು? ಇದು ಈ ನುಸುಳುಕೋರರ ತಾತ್ವಿಕ ನಿಲುವು. ಈ ರೀತಿಯ ಕೆಲಸಕ್ಕೆ ಅವರ ಮನೆಯವರಲ್ಲಿ ಯಾರಾದರೂ ಸಹಾಯ ಮಾಡಿದರೆ ಬಹಳ ಒಳ್ಳೆಯದು. ಇದೇ ಈಗ ನಡೆಯುತ್ತಿರುವ ವಿದ್ಯಮಾನಗಳು. 

ಎಲ್ಲಿಯಾದರೂ ಒಂದು ದುರ್ಘಟನೆ ನಡೆದ ತಕ್ಷಣ ಭದ್ರತಾ ಪಡೆಗಳು ಮತ್ತು ವ್ಯವಸ್ಥೆಯ ಮೇಲೆ ಮುಗಿಬೀಳಲು ಅನೇಕರು ಕಾತರರಾಗಿರುವುದು ಕಂಡುಬರುತ್ತದೆ. "ಇವರೆಲ್ಲಾ ಏನು ಮಾಡುತ್ತಿದ್ದರು? ಇವರ ಕಣ್ಣು ತಪ್ಪಿಸಿ ಈ ರೀತಿ ಹೇಗೆ ಆಯಿತು? ಇದು ಅಸಮರ್ಥತೆಯ ಪರಮಾವಧಿ" ಎಂದು ಚೀರಾಡುವವರನ್ನು ಅಲ್ಲಲ್ಲಿ ಕಾಣಬಹುದು. ದುರದೃಷ್ಟವಶಾತ್ ಭದ್ರತಾ ಪಡೆಗಳು ಅನೇಕ ಸಂದರ್ಭಗಳಲ್ಲಿ ಕೈ-ಕಾಲು ಕಟ್ಟಿಹಾಕಿಕೊಂಡು ಓಡಬೇಕಾದ ಇಕ್ಕಟ್ಟಿನಲ್ಲಿ ಸಿಲುಕುತ್ತವೆ. ಕಾನೂನಿನ ಚೌಕಟ್ಟಿನಲ್ಲಿಯೇ ಅವು ಕಾರ್ಯ ನಿರ್ವಹಿಸಬೇಕು. ಆದರೆ ನುಸುಳುಕೋರರಿಗೂ ಮತ್ತು ಅವರ ಸಮರ್ಥಕರಿಗೂ ಇಂತಹ ಯಾವುದೇ ಕಟ್ಟುಪಾಡುಗಳಿಲ್ಲ.

ಭದ್ರತಾ ಪಡೆಗಳ ಸಾಹಸದಿಂದ ನೂರರಲ್ಲಿ ತೊಂಬತ್ತೊಂಬತ್ತು ದುರ್ಘಟನೆಗಳು ಮೊಳಕೆಯಲ್ಲಿಯೇ ಚಿವುಟಿ ನಿಲ್ಲುತ್ತವೆ. ಇವುಗಳ ವಿವರಗಳು ಯಾರಿಗೂ ಗೊತ್ತಾಗುವುದಿಲ್ಲ. ಇಷ್ಟರ ಮೇಲೂ ಆಗಾಗ ಶಾಂತಿಭಂಗ ಆಗುವ ಸಂದರ್ಭಗಳು ಉಂಟು. ಇಂತಹ ಪ್ರಕರಣಗಳು ಅತಿ ಹೆಚ್ಚು ಸುದ್ದಿ ಮಾಡುತ್ತವೆ. ಯಾವುದೋ ಸಣ್ಣ-ಪುಟ್ಟ ಆಸೆ-ಆಮಿಷಗಳಿಗೆ ಒಳಗಾಗಿ ದೇಶದ ಭದ್ರತೆಗೆ ಸಂಬಂಧಿಸಿದ ಗುಟ್ಟಿನ  ವಿಷಯಗಳನ್ನು ಶತ್ರುರಾಷ್ಟ್ರಗಳ ದಲ್ಲಾಳಿಗಳಿಗೆ ಮಾರಿಕೊಳ್ಳುವ ದೇಶದ್ರೋಹಿ ವ್ಯಕ್ತಿಗಳು ಅತ್ಯಂತ ಅಪಾಯಕಾರಿಗಳು. ನುಸುಳುಕೋರರ ಸಹಾಯಕ್ಕೆ ಧಾವಿಸುವ ಆಂತರಿಕ ಶತ್ರುಗಳು ಸಹ ಇಷ್ಟೇ ಅಪಾಯಕಾರಿಗಳು. ಈಗಿನ ಪರಿಸ್ಥಿತಿಯಲ್ಲಿ ಇಂತಹವರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮಗಳ ಅಕ್ಕ-ಪಕ್ಕದಲ್ಲೇ ಸೇರಿಕೊಂಡಿರುವುದು ಬಹಳ ಭಯಾನಕ ವಾತಾವರಣ ಉಂಟುಮಾಡಿದೆ. 

*****

ಇದರ ಹಿಂದಿನ ಸಂಚಿಕೆಯಲ್ಲಿ "ತಾಯಿಯ ತೊಳಲಾಟ" (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಎನ್ನುವ ಒಂದು ಶೀರ್ಷಿಕೆಯ ಅಡಿಯಲ್ಲಿ ಅದಕ್ಕೆ ಸೇರಿದ ಅನೇಕ ವಿಷಯಗಳನ್ನು ಚರ್ಚಿಸುತ್ತಾ ಸಾಂದರ್ಭಿಕವಾಗಿ "ಪ್ರತಿಜ್ನಾಯೌಗಂಧರಾಯಣಮ್" ನಾಟಕದ "ಹೆತ್ತ ಒಡಲಿನ ಒಳತೋಟಿ" ಬಗ್ಗೆ ಒಂದು ಹೇಳಿಕೆಯನ್ನು ನೋಡಿದ್ದೆವು. ಅದನ್ನು ಚರ್ಚಿಸುವಾಗ, ಅದೇ ನಾಟಕದ ಇನ್ನೊಂದು ಹೇಳಿಕೆ ಬಗ್ಗೆ ಗಮನ ಹೋಯಿತು. ದೇಶದ್ರೋಹಿಗಳ ಬಗ್ಗೆ ಹೇಳುವ ಈ ಮಾತು ಮೈನವಿರೇಳುವಂತೆ ಇದೆ. 

ಒಂದಲ್ಲಾ ಒಂದು ದಿನ ಸಾವು ಎಲ್ಲರಿಗೂ ಬರುವುದೇ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಅನೇಕ ವರುಷಗಳು ಬಾಳಿ, ಬದುಕಿ, ಈಗ ನಶಿಸಿಹೋದ ದೇಹಕ್ಕೆ ಒಂದು ಯೋಗ್ಯ ರೀತಿಯ ಅಂತಿಮ ಸಂಸ್ಕಾರ ನಡೆಯಬೇಕಿರುವುದು ಸಮಾಜದ ಒಂದು ಪದ್ದತಿ. ದೇಶಕ್ಕಾಗಿ ಪ್ರಾಣ ಕೊಟ್ಟ ಒಬ್ಬ ಸೈನಿಕನಿಗೆ ನೀಡುವ ಅಂತಿಮ ಯಾತ್ರೆ, ಸಂಸ್ಕಾರ ಮತ್ತು ಶ್ರದ್ದಾಂಜಲಿ, ಇವುಗಳಿಗೆ ಅದರದೇ ಆದ ವಿಶೇಷ ಗೌರವ, ಆದರಗಳು ಉಂಟು. ಸೇನೆಯ ಮತ್ತು ಸರ್ಕಾರದ ಅತ್ಯಂತ ಹಿರಿಯ ಅಧಿಕಾರಿಗಳಿಂದ ಆ ಗ್ರಾಮ ಅಥವಾ ಪಟ್ಟಣದ ಸಾಮಾನ್ಯ ಜನರೂ ಕಣ್ಣೀರಿಡುತ್ತಾ ಭಾಗವಹಿಸುತ್ತಾರೆ. ಒಬ್ಬ ಸೈನಿಕ ಅಥವಾ ದೇಶಭಕ್ತನ ಸಾವು ಅವನ ಕುಟುಂಬಕ್ಕೋ ಅಥವಾ ಅವನು ವಾಸಿಸುತ್ತಿದ್ದ ಕೇರಿಗೋ ಸೀಮಿತವಾಗುವುದಿಲ್ಲ. ಅವನ ಸಾವು ಎಲ್ಲರ ಮನೆಯ ಸಾವು. ಹೀಗೆ ಭಾವನೆಗಳು ತೋರಿಬರುತ್ತವೆ. 
*****

"ಪ್ರತಿಜ್ನಾಯೌಗಂಧರಾಯಣಮ್" ನಾಟಕದ ದೇಶದ್ರೋಹಿಯ ಬಗ್ಗೆ ಬರುವ ಶ್ಲೋಕ ಹೀಗಿದೆ:

ನವಂ ಶರಾವಂ ಸಲಿಲೈ: ಸುಪೂರ್ಣ೦ ಸುಸಂಸ್ಕೃತಂ ದರ್ಭಕೃತೋತ್ತರೀಯಮ್ 
ತತ್ತಸ್ಯ ಮಾಭೂನ್ನರಕಂ ಸ ಗಚ್ಚೇತ್ ಯೋ ಭರ್ತೃಪಿಂಡಸ್ಯ ಕೃತೇ ನ ಯುಧ್ಯೇತ್  

"ಯಾವನು ತನ್ನ ಯಜಮಾನನ ಅಥವಾ ದೇಶದ ಪರವಾಗಿ ಹೋರಾಡುವುದಿಲ್ಲವೋ ಅಂತಹ ಮನುಷ್ಯನಿಗೆ ಕ್ರಮವಾಗಿ ಉತ್ತರಕ್ರಿಯಾದಿಗಳನ್ನು ಮಾಡಿ ನೀಡುವ ವಸ್ತುಗಳು (ತರ್ಪಣದ ನೀರು, ಅನ್ನ-ಪಾನಾದಿಗಳು) ಸಿಗದಿರಲಿ. ಅಂತಹವನು ಉತ್ತಮ ಗತಿಗೆ ಯೋಗ್ಯನಲ್ಲ. ಅವನು ನರಕದಲ್ಲಿ ಬಿದ್ದು ಕೊಳೆಯಲಿ!"

ಪ್ರತಿಯೊಬ್ಬ ಮನುಷ್ಯನಿಗೂ ಅವನು ಹುಟ್ಟಿ-ಬೆಳೆದ ಅಥವಾ ಅವನು ಸ್ವೀಕರಿಸಿದ ಪದ್ಧತಿಯ ಪ್ರಕಾರ ಅಂತಿಮ ಗೌರವಗಳು ಸಿಗುತ್ತವೆ. ಕೆಲವರಿಗೆ ಅದು ತರ್ಪಣ, ಪಿಂಡಪ್ರದಾನ ಇತ್ಯಾದಿ ರೀತಿಯಲ್ಲಿ ಇರಬಹುದು. ಮತ್ತೆ ಕೆಲವರಿಗೆ ಹಾಲು-ತುಪ್ಪ ಇರಬಹುದು. ಮತ್ತೆ ಕೆಲವರಿಗೆ "ಮೆಮೋರಿಯಲ್ ಸರ್ವಿಸ್" ಇರಬಹುದು. ಅದು ಯಾವುದು ಎನ್ನುವುದು ಮುಖ್ಯವಲ್ಲ. ಅದು ಒಂದು ಅತ್ಯಂತ ಗೌರವಯುತವಾದ ಸಂಸ್ಕಾರ ಆಗಿರಬೇಕು. ಅಷ್ಟೇ. ಯೌಗಂಧರಾಯಣನ ಸಮಯದ ವಿವರಣೆ ಇಲ್ಲುಂಟು. ಕಾಲಕಾಲಕ್ಕೆ ಅದು ಬದಲಾಗಬಹುದು. ಗೌರವದ ರೀತಿ ಹೇಗೆ ಎನ್ನುವುದರ ವಿವರ ಬೇರೆ ಆಗಬಹುದು. ಆದರೆ ತೋರಿಸುವ ಗೌರವ-ಆದರಗಳು ಎಂದಿಗೂ ಒಂದೇ. 

*****

ಎರಡು ಸಾವಿರ ವರುಷಗಳ ಹಿಂದೆ ಹಾಗೆ. ಇಂದಿನ ಭಾವನೆ ಏನು?

ನಾವು ಶಾಲೆಗಳಲ್ಲಿ ಓದುತ್ತಿದ್ದಾಗ ಕನ್ನಡ ಪಠ್ಯ ಪುಸ್ತಕದಲ್ಲಿ ದೇಶದ್ರೋಹಿಯ ಬಗ್ಗೆ ಒಂದು ಪದ್ಯವಿತ್ತು. ಅದರ ಕಡೆಯ ಸಾಲುಗಳು ಹೀಗಿದ್ದವು: 

ದೇಶದ್ರೋಹಿಯು ಸಾಯುವನೆಲ್ಲಿ?
ಸತ್ತರೆ ಅವನಿಗೆ ಸುಡುಗಾಡೆಲ್ಲಿ?
ಸೂಡು ಮಾಡಲು ಕಟ್ಟಿಗೆಯಿಲ್ಲ 
ಬೆಂಕಿ ಹೆಣವನು ಮುಟ್ಟುವುದಿಲ್ಲ 
ನಾಯಿ ನರಿಯೂ ತಿನ್ನುವುದಿಲ್ಲ 
ತಬ್ಬಲಿಗೇನಿಲ್ಲ!

ತಿಳಿಗನ್ನಡದ ಈ ಕವಿತೆಯ ಸಾಲುಗಳಿಗೆ ಯಾವ ವಿವರಣೆಯೂ ಬೇಕಿಲ್ಲ.  ದೇಶದ್ರೋಹಿಯು ಸತ್ತು ಬೀಳುವ ಕಡೆ ಇರುವ ನೆಲ "ಇಲ್ಲಿ ಬೀಳಬೇಡ!" ಅನ್ನುತ್ತದಂತೆ. ಸ್ಮಶಾನ "ಇಲ್ಲಿ ಬರಬೇಡ!" ಎಂದು ಕಿರಿಚುತ್ತದಂತೆ. ಚಿತೆ ಒಟ್ಟುಗೂಡಿಸಲು ತರುವ ಸೌದೆತುಂಡುಗಳು ದೂರ ಓಡಿಹೋಗುತ್ತವಂತೆ. ಬೆಂಕಿ ಅವನ ದೇಹವನ್ನು ಸುಡಲು ಒಲ್ಲದಂತೆ. "ಹಸಿವಿನಿಂದ ಸತ್ತರೂ ಪರವಾಗಿಲ್ಲ. ನಮಗೆ ಇವನ ದೇಹ ತಿನ್ನುವ ದೌರ್ಭಾಗ್ಯ ಬೇಡ!" ಎಂದು ನಾಯಿ-ನರಿಗಳು ದೂರ ಓಡುತ್ತವಂತೆ. ಅವನು ಈಗ ನಿಜವಾಗಿಯೂ ತಬ್ಬಲಿ. ಹೇಳುವವರು, ಕೇಳುವವರು, ಅವನಿಗಾಗಿ ದುಃಖಿಸುವವರು ಯಾರೂ ಇಲ್ಲ. ಅವನು ಎಲ್ಲವನ್ನೂ ಕಳೆದುಕೊಂಡ ಪಾತಕಿ.

*****

ನಮ್ಮ ಬಾಲ್ಯದಲ್ಲಿ ಏನಾದರೂ ಪ್ರಮಾದ ಮಾಡಿದ ಸಮಾಜಘಾತುಕರನ್ನು ನಿರ್ದೇಶಿಸಿ "ಅವನನ್ನು ನೀರು-ನೆರಳು ಇಲ್ಲದ ಕಡೆ ಕಡಿಯಬೇಕು" ಅನ್ನುತ್ತಿದ್ದರು. ಈಗ ಅಂತಹ ಹೇಳಿಕೆ ಅಷ್ಟಾಗಿ ಕೇಳಿಬರುವುದಿಲ್ಲ. ಕಡಿದ ಮೇಲೆ ಮನುಷ್ಯನೇ ಹೋಗುವಾಗ ಅಲ್ಲಿ "ನೀರು-ನೆರಳು" ಏನು ಮಾಡುತ್ತವೆ? ಎಂದು ನಾವು ಹುಡುಗರು ಯೋಚಿಸುತ್ತಿದ್ದೆವು. ಅದರ ಅರ್ಥ ಅದಲ್ಲ. ಒಬ್ಬ ಮನುಷ್ಯನಿಗೆ ಸಿಗಬೇಕಾದ ಕನಿಷ್ಠ ಪದಾರ್ಥಗಳೂ ಸಿಗಬಾರದು. ಅವನು ಅದಕ್ಕೆ ಯೋಗ್ಯನಲ್ಲ ಎಂದು ಹೇಳುವುದು ಅದರ ಉದ್ದೇಶ್ಯ. 

ದೇಶದ್ರೋಹಿಗೆ ಕಾನೂನಿನಲ್ಲಿ ಅನೇಕ ರೀತಿಯ ಶಿಕ್ಷೆಗಳಿವೆ. ಕೆಲವು ದೇಶದ್ರೋಹಿಗಳಿಗೆ ಈ ರೀತಿಯ ಶಿಕ್ಷೆ ಆಗಬಹುದು. ಕೆಲವರು ಕಾರಣಾಂತರಗಳಿಂದ ಶಿಕ್ಷೆ ತಪ್ಪಿಸಿಕೊಳ್ಳಲೂಬಹುದು. ಆದರೆ ದೇಶವಾಸಿಗಳಿಂದ ಸಿಗುವ ಗೌರವ ದೇಶಭಕ್ತನಿಗೆ ಕಿರೀಟ. ಅದೇ ದೇಶವಾಸಿಗಳಿಂದ ಸಿಗುವ ತಿರಸ್ಕಾರವೇ ದೇಶದ್ರೋಹಿಗೆ ಅತಿ ದೊಡ್ಡ ಶಿಕ್ಷೆ.

Wednesday, January 21, 2026

ತಾಯಿಯ ತೊಳಲಾಟ

 
ಮದುವೆಯ ಮನೆಯಲ್ಲಿ ಬಲು ಸಂಭ್ರಮ. ಸಭಾಂಗಣ ತುಂಬಿದೆ. ಪ್ರತಿಯೊಬ್ಬರಿಗೂ ಅವರದೇ ಆದ ಕೆಲಸ. ಮುಖ್ಯ ಕೆಲಸ ಮಾಡುವವರಿಗೆ ಅವುಗಳ ಚಿಂತೆ. ಅವರ ಸಹಾಯಕರಿಗೆ ಅವರ ಪಾಲಿಗೆ ಹಂಚಿಕೊಟ್ಟ ಕೆಲಸಗಳು. ಅಡಿಗೆಯ ಮನೆಯಂತೂ ತುಂಬು ಚಟುವಟಿಕೆಯಿಂದ ಓಡುತ್ತಿದೆ. ಪುರೋಹಿತರ ತಂಡಕ್ಕೆ ಬಂದ ಕೆಲಸ ಸುಗಮವಾಗಿ ಮುಗಿಸಿ ಮತ್ತೊಂದೆಡೆ ಇರುವ ಸಂಜೆಯ ಕಾರ್ಯಕ್ರಮಕ್ಕೆ ಹೋಗುವ ತವಕ. ವಾದ್ಯದವರಿಗೆ ಹೀಗೆಯೇ ಚಿಂತೆ. ಬಂದ ಅತಿಥಿ-ಅಭ್ಯಾಗತರನ್ನು ಗಮನಿಸುವವರಿಗೆ ಬಾಗಿಲ ಕಡೆಯೇ ಗಮನ. ಉಡುಗೊರೆ ಪೆಟ್ಟಿಗೆಗಳ ಕೀಲಿಕೈ ಹಿಡಿದವರಿಗೆ ಅದರ ಮೇಲೆ ಒಂದು ಕಣ್ಣಾದರೆ ಮತ್ತೊಂದು ಅವನ್ನು ಪಡೆಯಲು ಅರ್ಹರಾದವರ ಮೇಲೆ. ಹೀಗೆ ನಡೆಯುತ್ತಿದೆ. 

ಅಂದ ಮಾತ್ರಕ್ಕೆ ಬೇರೆ ಯಾವುದೇ ಕೆಲಸ ಇಲ್ಲದವರು ಇಲ್ಲವೆಂದಲ್ಲ. ಅವರೂ ಬಂದು ಕುಳಿತಿದ್ದಾರೆ. ಬೆಳಗ್ಗೆ ಗಡತ್ತಾಗಿ ತಿಂಡಿಯ ಸೇವನೆ ಆಗಿದೆ. ಇನ್ನು ಸಮಾರಂಭದ ಮಧ್ಯೆ ಸ್ವಲ್ಪ ಪಾನಕ ಬರಬಹುದು. ಅದೇನೂ ಅಷ್ಟು ದೊಡ್ಡದಲ್ಲ. ಲಗ್ನದ ಸಮಯದ ನಂತರ, ಮಾಂಗಲ್ಯಧಾರಣೆ ಕಳೆದ ಮೇಲೆ ಭೂರಿ ಭೋಜನ ಬರುವವರೆಗೂ ಏನು ಮಾಡುವುದು? ನಾಲಿಗೆ ಸುಮ್ಮನಿರುವುದಿಲ್ಲ. ಅದು ಏನಾದರೂ ತಿನ್ನುತ್ತಿರಬೇಕು. ಇಲ್ಲವೇ ಇನ್ನೇನಾದರೂ ಅನ್ನುತ್ತಿರಬೇಕು. ವಿಮಲಮ್ಮ ಅಂತಹ ನಾಲಗೆಯುಳ್ಳ ಒಬ್ಬ ವ್ಯಕ್ತಿ. 

ವಿಮಲಮ್ಮನ ಕಣ್ಣಿಗೆ ಕಮಲಮ್ಮ ಬಿದ್ದರು. ಸುಮ್ಮನಿರುವುದು ಸಾಧ್ಯವೇ? ಸಾಧ್ಯವಿದ್ದರೂ ಅದು ಸಾಧುವೇ? ಬಾಯಿತುಂಬಾ ಮಾತಿಗೆ ಅವಕಾಶ ಇರುವಾಗ ಸುಮ್ಮನೆ ಇದ್ದರೆ ಅದೊಂದು ಅನ್ಯಾಯವೇ ಅಲ್ಲವೇ? ಸರಸರನೆ ನಡೆದು ಕಮಲಮ್ಮ ಕುಳಿತಿರುವ ಕಡೆ ನುಗ್ಗಿದರು. ಉಭಯ ಕುಶಲೋಪರಿ ಪ್ರಾರಂಭವಾಯಿತು. 

"ಏನು ಕಮಲಮ್ಮ? ಚೆನ್ನಾಗಿದ್ದೀರಾ? ಮೂರು ವರುಷ ಆಯಿತು ನಿಮ್ಮನ್ನು ನೋಡಿ"
"ಹೌದು ವಿಮಲಮ್ಮ. ತುಂಬಾ ದಿನ ಆಯಿತು. ಚೆನ್ನಾಗಿದ್ದೇವೆ. ನೀವು ಹೇಗೆ?"
"ಏನೋ, ನೋಡಿ. ಹೀಗಿದ್ದೇನೆ. ನಿಮ್ಮನ್ನು ಕಂಡು ಬಹಳ ಸಂತೋಷ ಆಯಿತು"
"ನನಗೂ ಅಷ್ಟೇ. ಈ ರೀತಿ ಸಮಾರಂಭಗಳಿಗೆ ಬಂದರೆ ಒಬ್ಬರನ್ನೊಬ್ಬರು ನೋಡಲು ಅವಕಾಶ"
"ಹೌದು, ನೋಡಿ. ಅಂದಹಾಗೆ ನಿಮ್ಮ ಮಗಳು ಸರಸು ಎಲ್ಲಿ? ಅವಳ ಮದುವೆ ಆಯಿತೇ?"
"ಇಲ್ಲ ವಿಮಲಮ್ಮ. ಒಂದೇ ಸಮ ವರ ಹುಡುಕುತ್ತಿದ್ದೇವೆ. ಆದರೆ ಯಾವುದೂ ಕೂಡಿಬರುತ್ತಿಲ್ಲ"
"ಅಯ್ಯೋ, ಹೌದೇ? ಅಲ್ಲಿ ನೋಡಿ. ನಿಮ್ಮ ಮಗಳ ಜೊತೆಗಾತಿ ಸರಳ"
"ಆಗಲೇ ನೋಡಿ ಮಾತನಾಡಿಸಿದೆ"
"ಅವಳಿಗೆ ಕಂಕಳಲ್ಲೊಂದು, ಕೈಯಲ್ಲೊಂದು. ನೋಡಿದರೆ ಇನ್ನೊಂದೂ ಬರುವಂತಿದೆ"
"ಹೌದು. ಕಳೆ  ಕಳೆಯಾಗಿದ್ದಾಳೆ"
"ನೀವು ನೋಡಿದರೆ ಸರಸುಗೆ ಮದುವೆಯೇ ಆಗಲಿಲ್ಲ ಅನ್ನುತ್ತೀರಿ"
"ಏನು ಮಾಡುವುದು? ನಮಗೆ ಅದೇ ಚಿಂತೆಯಾಗಿದೆ"
"ಹೋಗಲಿ ಬಿಡಿ. ಅವಳಿಗೂ ಆಗುತ್ತೆ. ಯಾವುದಕ್ಕೂ ಋಣಾನುಬಂಧ ಕೂಡಿಬರಬೇಕು"
"ನಿಮ್ಮ ಹಾರೈಕೆಯಿಂದ ಬೇಗ ಹಾಗಾಗಲಿ ಅನ್ನುತ್ತೇನೆ"
"ಚಿಂತಿಸಬೇಡಿ. ಬ್ರಹ್ಮನು ಗಂಟು ಹಾಕಿಯೇ ಕಳಿಸಿರುತ್ತಾನೆ. ಕಂಕಣಬಲ ಕೂಡಿದರೆ ಎಷ್ಟು ಹೊತ್ತು?"

ಅಷ್ಟರಲ್ಲಿ ವಿಮಲಮ್ಮನಿಗೆ ಕನಕಮ್ಮ ಕಣ್ಣಿಗೆ ಬಿದ್ದರು. ಇನ್ನೊಂದು ಸುವರ್ಣ ಅವಕಾಶ. ಆ ಕಡೆ ನುಗ್ಗಿದರು. ಕಮಲಮ್ಮನಿಗೆ ಬಿಡುಗಡೆ ಆಯಿತು. ಈ ಪ್ರಶ್ನೆ ಬರುತ್ತದೆ ಎಂದು ಗೊತ್ತಿತ್ತು. ಅದಕ್ಕೇ ಈ ಮದುವೆಗೆ ಬರುವುದಕ್ಕೆ ಅನುಮಾನಿಸಿ, ಯೋಚಿಸಿ, ತಪ್ಪಿಸಬಾರದ ಮದುವೆ ಅಂತ ಬಂದಿದ್ದರು. ಈ ಪ್ರಶ್ನೆ ಯಾರಾದರೂ ಕೇಳಿದರೆ "ಇನ್ನೂ ಆಗಿಲ್ಲ" ಎಂದು ಹೇಳಲು ಸಂಕೋಚ. ಅದೊಂದು ಲಜ್ಜೆಗೆ ಕಾರಣವಾದ ಪರಿಸ್ಥಿತಿ. 

ಹೆಣ್ಣು ಹೆತ್ತವರಿಗೆ ಈ ರೀತಿ ಸಂದರ್ಭಗಳು ಎದುರಾಗುತ್ತಿದ್ದ ಕಾಲವೊಂದಿತ್ತು. ಐವತ್ತು-ಅರವತ್ತು ವರುಷಗಳ ಹಿಂದೆ ಅದು ಸರ್ವೇಸಾಮಾನ್ಯವಾಗಿತ್ತು. ಈಗಲೂ ಈ ಪ್ರಶ್ನೆ ಬರುವುದೇ ಆದರೂ ಅದರ ತೀವ್ರತೆ ಆಷ್ಟಿರುವುದಿಲ್ಲ. ಹೆಣ್ಣು-ಗಂಡುಗಳು ಪರಸ್ಪರ ಜೊತೆ ಹಾಕಿಕೊಳ್ಳುವುದು ಹೆಚ್ಚಾದ ಕಾಲ ಇದಾದುದರಿಂದ ಪರಿಸ್ಥಿತಿಯೂ ಬದಲಾಗಿದೆ. 

ಏನೇ ಆದರೂ ಹೆಣ್ಣು ಮಕ್ಕಳ ತಾಯಂದಿರಿಗೆ ಈ ರೀತಿಯ ತೊಳಲಾಟ ಎಲ್ಲ ಕಾಲಕ್ಕೂ ಇರುತ್ತದೆ. ಒಂದು ಸರಿಯಾದ ವರ ಸಿಕ್ಕಿ ಮಗಳು ವಿವಾಹಿತಳಾಗಲಿ ಎನ್ನುವ ಆಸೆ ಹೆತ್ತ ಕರುಳಿಗೆ ಎಂದೂ ಇರುವುದೇ. ಇದು ಮಗಳ ಮದುವೆ ಆಗುವ ಮುಂಚಿನ ಕಥೆ. 

***** 

ಧಾರೆ, ನಾಗೋಲಿ ಮುಂತಾದುವೆಲ್ಲಾ ಸಾಂಗವಾಗಿ ನಡೆದವು. ಈಗ ಸಂಜೆಯ ಸಮಯ. ಕೆಲವರಿಗೆ ಮುಂದಿನ ಆರತಕ್ಷತೆಯ ಗಡಿಬಿಡಿ. ಆಗಿನ ಅಲಂಕಾರಕ್ಕೆ ಹೂವಿನ ರಾಶಿಯೇ ಬಂದು ಬಿದ್ದಿದೆ. ಸಂಬಂಧಿಸಿದ ಕೆಲಸಗಾರರು ಬೇಗ ಬೇಗ ತಯಾರಿ ನಡೆಸುತ್ತಿದ್ದಾರೆ. ಹೆಣ್ಣು ಮತ್ತು ಗಂಡು, ಈಗ ಗಂಡ-ಹೆಂಡತಿ, ಅವರ ಮನೆಯವರಿಗೆ ಮುಂದಿನ ನಡವಳಿಕೆ ಒಂದು ದೊಡ್ಡ ಹಂತ. ಗಂಡಿನವರು ಹೆಣ್ಣನ್ನು ಮನೆ ತುಂಬಿಸಿಕೊಳ್ಳಲು ಉತ್ಸುಕರು. ಹೆಣ್ಣಿನ ಕಡೆಯವರು ಒಪ್ಪಿಸಿಕೊಡಬೇಕು. ಈ ಕೋಣೆಯಲ್ಲಿ ಒಂದು ರೀತಿಯ ಸಂಭ್ರಮ. ಆ ಕೋಣೆಯಲ್ಲಿ ಒಂದು ವಿಧದ ದುಗುಡ. 

ಎಲ್ಲರಿಗಿಂತ ಹೆಚ್ಚು ಕಳವಳ ಪಡುತ್ತಿರುವವಳು ಹುಡುಗಿಯ ಹೆತ್ತತಾಯಿ. ತನ್ನ ಕಣ್ಣ ಮುಂದಿನ ಕೂಸು ಇಂದು ಮನೆ ಬಿಟ್ಟು ಹೋಗುತ್ತಿದ್ದಾಳೆ. ಮುಂದೆ ಅವಳ ಜೀವನ ಹೇಗೋ, ಏನೋ? ಅಳೆದು-ಸುರಿದು ಸಂಬಂಧ ಗೊತ್ತು ಮಾಡಿದ್ದಾಯಿತು. ಗಂಡಿನ ಕಡೆಯವರು ಒಳ್ಳೆಯವರೆಂದೇ ನಂಬಿಕೆ. ಹತ್ತು ಜನ ಹಾಗೆ ಹೇಳಿದ್ದು ಕೇಳಿದಮೇಲೆ ತಾನೇ ಮದುವೆ ಗೊತ್ತು ಮಾಡಿದ್ದು. ಮದುವೆ ಮಾಡುವುದರಲ್ಲಿ ಏನೂ ಕೊರತೆಯಿಲ್ಲ. ಕೊಡುವುದೆಲ್ಲ ಕೊಟ್ಟಾಯಿತು. ಸಾಲ-ಸೋಲ ಮಾಡಿದ್ದು ಹೇಗಾದರೂ ಮಾಡಿ ತೀರಿಸಬಹುದು. ಆದರೆ ಮುಂದಿನ ದಿನಗಳಲ್ಲಿ ಮಗಳು ಅತ್ತೆಯ ಮನೆಯಲ್ಲಿ ಹೇಗಿರುತ್ತಾಳೋ, ಏನೋ? ಅತ್ತೆ-ಅತ್ತಿಗೆ-ನಾದಿನಿಯರು ಹೇಗೆ ನಡೆದುಕೊಂಡಾರೋ? ಮಾವ ಒಳ್ಳೆಯವರಂತೆ ಕಾಣುತ್ತಾರೆ. ಆದರೂ ಏನೂ ಹೇಳುವಂತಿಲ್ಲ. 

"ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ಬಂದಿರುವೆವು....." ಎಂದು ಯಾರೋ ಹಾಡಲು ಶುರು ಮಾಡಿದ್ದಾರೆ. ವಿ. ಸೀತಾರಾಮಯ್ಯನವರ ಈ ಹಾಡಿಲ್ಲದೆ ಹೆಣ್ಣು ಒಪ್ಪಿಸಿಕೊಡುವುದು ಮುಗಿಯುವಂತಿರಲಿಲ್ಲ. ಬೇರೆ ಹಂತಗಳಲ್ಲಿ ಕೆಲಸ ತೂಗಿಸಲು ಮಂತ್ರಗಳು ಉಂಟು. ಈ ಹಂತದಲ್ಲಿ ಅವರ ಹಾಡೇ ಆಗಬೇಕು. ಹಾಡುತ್ತಿರುವವರಿಗೆ ಅವರ ಹಾಡುವಿಕೆಯ ಮೇಲೆ ಅಭಿಮಾನ. ತಾಯಿಗಾದಾರೋ ಆ ಹಾಡಿನ ಒಂದೊಂದು ಪದವೂ ಮೊದಲೇ ಬೆದರಿರುವ ಹೃದಯದ ಮೇಲೆ ಒಂದೊಂದು ಏಟು ಹಾಕುತ್ತಿದೆ. ಎಷ್ಟು ಸಮಾಧಾನ ಪಟ್ಟುಕೊಂಡರೂ ದುಃಖ ನುಗ್ಗುತ್ತಾ ಬರುತ್ತಿದೆ. ಕಣ್ಣುಗಳಲ್ಲಿ ನೀರು ತುಂಬಿಕೊಂಡು ದೃಷ್ಟಿ ಮಂಜಾಗಿದೆ. ಮುಂದೆ ಮಗಳ ಜೀವನ ಹೇಗೋ ಎಂದು ಆತಂಕ ಆವರಿಸಿದೆ. 

ಈಗ ಕಾಲ ಬದಲಾಗಿದೆ. "ಅಷ್ಟ ವರ್ಷಾ ಭವೇತ್ ಕನ್ಯಾ" ಅನ್ನುವುದಿಲ್ಲ. "ಆದಷ್ಟು ವರ್ಷ ಭವೇತ್ ಕನ್ಯಾ" ಎಂದಾಗಿದೆ. ಮಗಳೂ ತಿಳಿದವಳು. ವಿದ್ಯಾವಂತೆ. ಸಮಾಜವೂ ಎಷ್ಟೋ ಬದಲಾಗಿದೆ. ಆದರೂ ಮಾತೃ ಹೃದಯ ಚೀರುತ್ತಲೇ ಇದೆ. ಇದು ಮಗಳ ಮದುವೆಯ ನಂತರದ ಕಥೆ. 

*****

ಮೇಲಿನ ಸಂಗತಿಗಳು ಕೇವಲ ಐವತ್ತು-ಅರವತ್ತು ವರುಷಗಳ ಸಂಗತಿಯಲ್ಲ. ಎರಡು ಸಾವಿರ ವರುಷಗಳ ಹಿಂದೆಯೂ ಇದೇ ಪರಿಸ್ಥಿತಿ ಇತ್ತು. "ಸ್ವಪ್ನ ವಾಸವದತ್ತಮ್" ನಾಟಕ ಚಿರಪರಿಚಿತ. ಭಾಸ ಮಹಾಕವಿಯ ಈ ನಾಟಕ ಎರಡು ಸಾವಿರ ವರುಷಗಳ ಹಿಂದಿನದು ಎನ್ನುವ ಅಭಿಪ್ರಾಯವಿದೆ. ಮಹಾಕವಿ ಕಾಳಿದಾಸ ತನ್ನ "ಮಾಳವಿಕಾಗ್ನಿಮಿತ್ರ" ನಾಟಕದ ಪ್ರಾರಂಭದಲ್ಲಿ ಭಾಸ, ಸೌಮಿಲ್ಲ, ಕವಿಪುತ್ರ ಮೊದಲಾದ ತನಗಿಂತ ಹಿಂದಿನ ಪ್ರಸಿದ್ಧ ಕವಿಗಳ ನಾಟಕಗಳನ್ನು ನೆನೆಸಿಕೊಳ್ಳುತ್ತಾನೆ. ಆರು ಅಂಕಗಳ ಈ ನಾಟಕದ ಹಿಂದಿನ ಭಾಗ ನಾಲ್ಕು ಅಂಕಗಳ ಇನ್ನೊಂದು ನಾಟಕ "ಪ್ರತಿಜ್ನಾಯೌಗಂಧರಾಯಣಮ್". ಯೌಗಂಧರಾಯಣ ವತ್ಸರಾಜನಾದ ಉದಯನನ ಪ್ರಧಾನ ಮಂತ್ರಿ. 

ಈ ಪ್ರತಿಜ್ನಾಯೌಗಂಧರಾಯಣಮ್ ನಾಟಕದ ಎರಡನೇ ಅಂಕದಲ್ಲಿ ವಾಸವದತ್ತೆಯ ತಂದೆಯಾದ ಪ್ರದ್ಯೋತ ಮಹಾರಾಜನ ಪಾತ್ರ ರಂಗದ ಮೇಲೆ ಹೇಳುವ ಒಂದು ಶ್ಲೋಕವು ಹೀಗಿದೆ:

ಅದತ್ತೇತಿ ಆಗತಾ ಲಜ್ಜಾ ದತ್ತೇತಿ ವ್ಯಥಿತಂ ಮನಃ 
ಧರ್ಮಸ್ನೇಹಾಂತರೇ ನ್ಯಸ್ತಾ ದುಃಖಿತಾಃ ಖಲು ಮಾತರಃ 

(ವಿವಾಹಯೋಗ್ಯ ವಯಸ್ಸು ತಲುಪಿದ ತನ್ನ ಒಬ್ಬ ಮಗಳು ಮನೆಯಲ್ಲಿದ್ದಾಗ) ಮೊದಲು ಮದುವೆ ಮಾಡಿಕೊಡಲಿಲ್ಲವಲ್ಲಾ ಎಂದು ನಾಚಿಕೆಯಿಂದ ಕೊರಗು. ವಿವಾಹದ ನಂತರ ಮಗಳು ಮನೆ ಬಿಟ್ಟು ಹೋಗುವಳಲ್ಲಾ ಎಂದು ಕೊರಗು. ಹೀಗೆ, ತಾಯಿಯರು ಅತ್ತ ಕಡೆ ತಾಯಿಯಾಗಿ ಮಾಡಬೇಕಾದ ಕರ್ತವ್ಯ  ಮತ್ತು ಇತ್ತ ಕಡೆ ಮಗಳ ಮೇಲಿನ ಅತಿಶಯವಾದ ಪ್ರೀತಿ, ಇವೆರಡರ ನಡುವೆ ತೊಳಲಿ ಬಳಲುವರು. 

ಎರಡು ಸಾವಿರ ವರುಷ ಹಿಂದೆ ವಾಸವದತ್ತೆಯ ಕಾಲದಲ್ಲಿದ್ದಂತೆ, ಕೆಲವು ದಶಕಗಳ ಹಿಂದೆಯೂ ಇತ್ತು. ಈಗ ಅದರ ತೀವ್ರತೆ ಇಳಿದಿದ್ದರೂ ಅದರ ಒಟ್ಟಾರೆ ಪರಿಣಾಮ ತಾಯಿಯರ ಮೇಲೆ ಅದೇ ರೀತಿ ಇರುವುದು. ಇದು ಮಾತೆಯರಿಗೆ ಚೆನ್ನಾಗಿ ಗೊತ್ತು. ಇತರರಿಗೆ ಅಷ್ಟು ವಿಶದವಾಗಿ ಗೊತ್ತಾಗದಿರಬಹುದು.

*****

ಮನುಷ್ಯನ ಜೀವನದಲ್ಲಿ ಅನೇಕ ಮುಖ್ಯ ಘಟ್ಟಗಳಿರುತ್ತವೆ. ಆಯುಪ್ರಮಾಣದ ದೃಷ್ಟಿಯಿಂದ ನಮ್ಮ ಸಂಪ್ರದಾಯಗಳಲ್ಲಿ ಐದು ಪ್ರಮುಖ ಘಟ್ಟಗಳನ್ನು ಗುರುತಿಸಿದ್ದಾರೆ. ಹುಟ್ಟಿನಿಂದ ಅರವತ್ತು ವರುಷಗಳ ಉಗ್ರರಥ ಶಾಂತಿ, ಎಪ್ಪತ್ತು ವರುಷಗಳ ಭೀಮರಥ ಶಾಂತಿ, ಸಹಸ್ರ (ಒಂದು ಸಾವಿರ) ಪೂರ್ಣ ಚಂದ್ರ (ಹುಣ್ಣಿಮೆ ಚಂದ್ರ) ದರ್ಶನ ಶಾಂತಿ, ಪ್ರಪೌತ್ರ ದರ್ಶನ ಶಾಂತಿ (ಮೊಮ್ಮಗನ ಮಗನ ಜನನ), ಮತ್ತು ಶತಮಾನ (ಒಂದು ನೂರು ವರುಷಗಳ ಜೀವನ) ಶಾಂತಿ.  ಇವುಗಳ ಬಗ್ಗೆ ಈ ಹಿಂದೆ (2012 ಫೆಬ್ರವರಿಯಲ್ಲಿ) ಈ ಬ್ಲಾಗಿನಲ್ಲಿ ನೋಡಿದ್ದೇವೆ. ಸಹಸ್ರ ಪೂರ್ಣಚಂದ್ರ ದರ್ಶನ ಶಾಂತಿಯ ಬಗ್ಗೆ ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಸುಮಾರು 81 ವರ್ಷ 2 ತಿಂಗಳುಗಳಿಗೆ ಈ ಘಟ್ಟ ಬರುತ್ತದೆ. 

ಎಂಭತ್ತು ವರುಷಗಳ ಹುಟ್ಟು ಹಬ್ಬ ಆಚರಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅಂದಾಜುಗಳ ಪ್ರಕಾರ ನೂರಕ್ಕೆ ಐದಾರು ಮಂದಿ ಮಾತ್ರ ಈ ಘಟ್ಟ ತಲಪುತ್ತಾರೆ. ಎಂಭತ್ತರ ಹುಟ್ಟು ಹಬ್ಬ ಈ ಕಾರಣದಿಂದ ಒಂದು ವಿಶೇಷವೇ. ಇದೇ ರೀತಿ ಒಂದು ಪುಸ್ತಕವನ್ನು ಬರೆಯಲು ಪ್ರಾರಂಭಿಸಿ, ಮುಗಿಸಿ, ಮುದ್ರಿಸಿ, ಪ್ರಕಟಿಸುವ ಯಶಸ್ಸು ನೂರಕ್ಕೆ ಒಬ್ಬರಿಗಿಂತಲೂ (ಶೇಕಡಾ ೦.4 ಎಂದು ಒಂದು ಅಂದಾಜು) ಕಡಿಮೆ ಜನರಿಗೆ ಸಿಕ್ಕುವುದು. ಪುಸ್ತಕ ಬಿಡುಗಡೆ ಒಂದು ಸಾಧನೆ. ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿ ಮನುಷ್ಯನೂ ಒಬ್ಬ ಕವಿಯೇ. ಹೆಚ್ಚಿನವರಿಗೆ ಅದು ಒಂದು ಮಿಂಚಿನಂತೆ ಬಂದು ಮಾಯವಾಗುವುದು. ಅದು ಬೌದ್ಧಿಕವಿರಬಹುದು ಅಥವಾ ಭಾವನಾತ್ಮಕ ಇರಬಹುದು. ಬುದ್ಧಿಯಲ್ಲಿ ಅಥವಾ ಮನಸ್ಸಿನಲ್ಲಿ ಬಂದ ಹೊಳಹುಗಳನ್ನು ಕಾಗದದ ಮೇಲೆ ಇಳಿಸುವುದು ಅಪರೂಪ. ಅವೆಲ್ಲವನ್ನೂ ಒಂದೆಡೆ ಸೇರಿಸಿ, ಪರಿಷ್ಕರಿಸಿ, ಪ್ರಕಟಿಸುವುದು ಅನೇಕರಿಗೆ ಸಾಧ್ಯ ಆಗುವುದಿಲ್ಲ. ಇದಕ್ಕೆ ಮತ್ತೆ ಕೆಲವರ ಒತ್ತಾಸೆಯೂ ಬೇಕಾಗುತ್ತದೆ. ಇದು ಇನ್ನೊಂದು ರೀತಿಯ ಭಾಗ್ಯ. 

ಈ ಎರಡೂ ರೀತಿಯ ಭಾಗ್ಯಗಳು ಒಟ್ಟಾಗಿ ಸಿಗುವುದು ಎಷ್ಟು ಅಪರೂಪ ಎಂದು ಇನ್ನೊಮ್ಮೆ ಹೇಳಬೇಕಾಗಿಲ್ಲ. ಕಳೆದ ಭಾನುವಾರ (18 ಜನವರಿ 2026) ಇಂತಹ ಸುಂದರ ಸಮಾರಂಭವೊಂದು ಬೆಂಗಳೂರಿನಲ್ಲಿ ನಡೆಯಿತು. "ಸಮನ್ವಯ" ಅನ್ನುವ ಕವನ ಸಂಕಲನ ಬಿಡುಗಡೆ ಆಯಿತು. 

ಶೈಲಾ ಬಿ. ಅಗಡಿ ಅವರು ಕನ್ನಡ ಮತ್ತು ಹಿಂದಿಯಲ್ಲಿ ಆಗಾಗ ಬರೆದು ಜೋಪಾನವಾಗಿಟ್ಟಿದ್ದ ಕವನಗಳನ್ನು ಅವರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಒಟ್ಟುಗೂಡಿಸಿ, ಮುದ್ರಿಸಿ ಅಂದು ಬಿಡುಗಡೆ ಮಾಡಿದರು. ಪುಸ್ತಕದ ಚಿತ್ರವನ್ನು ಮೇಲುಗಡೆ ನೋಡಬಹುದು. 

*****

"ಸಮನ್ವಯ" ಕವನ ಸಂಕಲದಲ್ಲಿ ಇರುವ ಕವನಗಳಲ್ಲಿ "ಮಡಿಲ ಅಳಲು" ಮತ್ತು "ಸ್ವ-ಸಾಂತ್ವನ" ಎನ್ನುವ ಎರಡು ಕವನಗಳು ಮೇಲೆ ಚರ್ಚಿಸಿದ ಒಬ್ಬ "ತಾಯಿಯ ತೊಳಲಾಟ" ಕುರಿತಾದ ವಸ್ತುವನ್ನು ಬಿಂಬಿಸುವುವು. 

"ಮಡಿಲ ಅಳಲು" ಕವನದ ಕೆಲವು ಸಾಲುಗಳು:

ತುತ್ತು ಉಣುವ ಪುಟ್ಟ ಹಕ್ಕಿಗೆ 
ಹೊಂಬಣ್ಣದ ರೆಕ್ಕೆ ಮೂಡಿರಲು 
ಹೆತ್ತೊಡಲು ಬರಿದು ಮಾಡುವ 
ಸಂಚು ಹೂಡಿರಲು, ಪಣ ತೊಟ್ಟಿರಲು 
ಕಂದಾ, ನೀ ಮಡಿಲ ತೊರೆದು ಪೊದೆಯಾ? 

ಹೀಗೆ ದುಃಖಿಸುವ ಮಾತೃಹೃದಯ ತನಗೆ ತಾನೇ ಕೊಡುವ ಉತ್ತರ "ಸ್ವ-ಸಾಂತ್ವನ" ಕವನ. ಅದರ ಕೆಲವು ಸಾಲುಗಳು:

ಮರಳಿ ಪಡೆಯುವ ಅತಿಯಾಸೆ ಬೇಡ ನಿನಗೆ 
ಕುಸುಮಕೆ ಪ್ರೀತಿಯ  ಧಾರೆಯೆರೆಯನೆರೆವವರು 
ಮತ್ತೂ ಇಹರೆಂಬುದ ನೀ ಮರೆಯದಿರು 
ನೀ ನಡೆದು ಬಂದ ಪಥವ ಮರೆತೆಯಾ? 

ಹೀಗೆ  ತೊಳಲಾಡುವ ಪ್ರತಿ ತಾಯಿಯೂ ಹಿಂದೆ ಒಂದು ದಿನ ಇದೇ ರೀತಿ ತನ್ನ ಹುಟ್ಟಿನ ಗೂಡನ್ನು ತೊರೆದು ಬಂದವಳೇ ಅಲ್ಲವೇ? ಈಗ ಗೂಡು ಬಿಟ್ಟು ಹಾರುತ್ತಿರುವ ಹಕ್ಕಿಯೂ ಮುಂದೆ ಒಂದು ದಿನ ಇದೇ ಹಂತ ತಲುಪುವವಳಲ್ಲವೇ? ಇದೇ ತಾನೇ ಸೃಷ್ಟಿಯ ಮತ್ತು ಸಮಾಜದಲ್ಲಿ ಜೀವನ ನಡೆಸುವ ಸೊಬಗು?

*****

ಎರಡು ಹಿರಿಮೆಯ ಘಟ್ಟಗಳನ್ನು ದಾಟಿ, ಎಂಭತ್ತರ ವಿಶೇಷ ಹುಟ್ಟುಹಬ್ಬದ ಆಚರಣೆ ಮತ್ತು ಕವನ ಸಂಕಲನದ ಬಿಡುಗಡೆ ಸುಸಂದರ್ಭದಲ್ಲಿ ಶ್ರೀಮತಿ ಶೈಲಾ ಅವರಿಗೆ ಅನೇಕ ಸಾದರ ಶುಭಾಶಯಗಳು.