Showing posts with label Stotra. Show all posts
Showing posts with label Stotra. Show all posts

Monday, February 9, 2026

ಅವರೇ ಆಗಬೇಕೆಂದಿಲ್ಲ!


ಎರಡು ತಿಂಗಳ ಹಿಂದೆ (ಡಿಸೆಂಬರ್ 2025) "ಅಂಥ ಇಂಥವರಲ್ಲ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಅನಂತಾದ್ರೀಶ ಅಂಕಿತದ ಗೋಕಾವಿ ಅನಂತಾದ್ರೀಶ ದಾಸರ (ಗೋಕಾಕ್  ಅನಂತಾಚಾರ್ಯರು) ಕೃತಿಯೊಂದರಲ್ಲಿ ವಿವರಿಸಿರುವ ಶ್ರೀ ರಾಘವೇಂದ್ರ ರಾಯರ ಗ್ರಂಥಗಳ ಮತ್ತು ಅವರ ವ್ಯಕ್ತಿತ್ವದ ಒಂದು ಸಣ್ಣ ನೋಟ ಕಾಣುವ ಪ್ರಯತ್ನ ಮಾಡಿದ್ದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು).

ಒಬ್ಬರ ಗುಣ ವಿಶೇಷಗಳನ್ನು ತಿಳಿದು ಅವುಗಳನ್ನು ಹೇಳುವುದು ಸ್ತೋತ್ರ ಎನಿಸಿಕೊಳ್ಳುತ್ತದೆ. ನಾವು ಅನೇಕರು ಪ್ರತಿದಿನ ನಮಗೆ ಅನುಕೂಲವಿರುವ ಸಮಯಗಳಲ್ಲಿ ನಮ್ಮ ನಮ್ಮ ಪದ್ದತಿಗಳಂತೆ ಸ್ತೋತ್ರಗಳನ್ನು ಹೇಳಿಕೊಳ್ಳುವ ಪರಿಪಾಠ ಇಟ್ಟುಕೊಂಡಿದ್ದೇವೆ. ಈ ರೀತಿಯ ಅನೇಕ ಸ್ತೋತ್ರಗಳು ಒಳ್ಳೆಯ ಕಾವ್ಯಗುಣಗಳನ್ನು ಹೊಂದಿವೆ. ಈ ಬಗೆಯ ಸ್ತೋತ್ರಗಳನ್ನು ಹೇಳಿಕೊಳ್ಳುವುದರಿಂದ ಪದಗಳ ಉಚ್ಚಾರಣೆ ಚೆನ್ನಾಗಿ ಆಗಿ ವಾಕ್ಶುದ್ಧಿಯೂ ಆಗುವುದು. ಸಾಮಾನ್ಯವಾಗಿ ಇಂತಹ ಸ್ತೋತ್ರಗಳು ಕಿವಿಗಳಿಗೆ ಇಂಪಾಗಿ, ಮನಸ್ಸಿಗೂ ಹಿತವಾಗಿ ಇರುತ್ತವೆ. ನೆನಪಿನ ಶಕ್ತಿ ವೃದ್ಧಿಯೂ ಆಗುವುದುಂಟು. ಒಟ್ಟಾರೆ ದಿನಚರಿ ಮತ್ತು ನಡವಳಿಕೆಯಲ್ಲಿ ಒಂದು ರೀತಿಯ ಶಿಸ್ತು ಸಹ ಬರುತ್ತದೆ.  

ಅನೇಕ ವೇಳೆ ಈ ಸ್ತೋತ್ರಗಳಲ್ಲಿ ಹೇಳಿರುವ ವಿಷಯಗಳು ನಮಗೆ ತಿಳಿದಿರುವುದಿಲ್ಲ. ಮನೆಯಲ್ಲಿ ಹಿರಿಯರು ಹೇಳಿಕೊಳ್ಳುತ್ತಿದ್ದಂತೆ, ಅಥವಾ ನಮ್ಮ ನಮ್ಮ ಗುರುಗಳು ಹೇಳಿಕೊಟ್ಟಿದ್ದಂತೆ ಈ ಸ್ತೋತ್ರಗಳನ್ನು ಹೇಳಿಕೊಳ್ಳುತ್ತೇವೆ. ಅಂದಿನ ಸಂದರ್ಭಗಳಿಂದಲೋ, ಅಥವಾ ಸಮಯದ ಅಭಾವದಿಂದಲೋ, ಅವುಗಳ ಪೂರ್ತಿ ಅರ್ಥ ವಿಶೇಷಗಳನ್ನು ಅವರು ಹೇಳಿರುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಅದನ್ನು ಕೇಳಬೇಕೆಂದು ನಮಗೂ ತೋಚಿರುವುದಿಲ್ಲ. ಮುಂದೆಯೂ ನಾವು ತಿಳಿಯುವ ಪ್ರಯತ್ನ ಮಾಡಿರುವುದಿಲ್ಲ. ಕಾಲಕ್ರಮದಲ್ಲಿ ಅವುಗಳ ಅರ್ಥ ಹೇಗೋ ತಿಳಿದುಬಂದಾಗ "ಒಹೋ, ಇದರ ಅರ್ಥ ಹೀಗಿದೆಯೇ?" ಎಂದು ನಾವು ಆಶ್ಚರ್ಯಪಡುವಂತೆ ಆಗುತ್ತದೆ. 

*****

ನಮಗೆ ಯಾವುದೋ ಒಂದು ಸಂಸ್ಥೆಯಲ್ಲಿ ಒಂದು ಕೆಲಸ ಆಗಬೇಕು. ಅದನ್ನು ಮಾಡಿಸಿಕೊಳ್ಳುವುದಕ್ಕೆ ನಮಗೆ ಶಕ್ತಿಯಿಲ್ಲ. ಅಲ್ಲಿ ಯಾರನ್ನು ಕಾಣಬೇಕು ಎಂದು ತಿಳಿದಿಲ್ಲ. ಹೇಗೆ ಕೇಳಬೇಕು ಎಂದು ಗೊತ್ತಿಲ್ಲ. ಏನೇನು ದಸ್ತಾವೇಜು (ಡಾಕ್ಯುಮೆಂಟ್) ತೆಗೆದುಕೊಂಡು ಹೋಗಬೇಕು ಎಂದು ಅರಿವಿಲ್ಲ. ಆದರೂ ಆ ಕೆಲಸವಂತೂ ಆಗಬೇಕು. ಏನು ಮಾಡುವುದು? ಲೋಕಾರೂಢಿಯಲ್ಲಿ ಇಂತಹ ವಿಷಯ ತಿಳಿದ, ನಮಗೆ ಗೊತ್ತಿರುವ ಯಾರೋ ಒಬ್ಬರನ್ನು ಕೇಳುತ್ತೇವೆ. ಅವರು ಕೆಲವು ಸೂಚನೆಗಳನ್ನು ಕೊಡುತ್ತಾರೆ. ಅದರ ಪ್ರಕಾರ ದಸ್ತಾವೇಜು ಹೊಂದಿಸಿಕೊಳ್ಳುತ್ತೇವೆ. ಸಂಸ್ಥೆಯಲ್ಲಿ ಯಾರನ್ನು, ಯಾವಾಗ, ಹೇಗೆ ಕಾಣಬೇಕು ಎಂದು ಅವರು ಹೇಳಿಕೊಟ್ಟಂತೆ ಮಾಡುತ್ತೇವೆ. ಯಾವ ರೀತಿ ಕೇಳಬೇಕು ಎಂದು ಅವರು ಮಾರ್ಗದರ್ಶನ ಕೊಟ್ಟಂತೆ ನಡೆದುಕೊಳ್ಳುತ್ತೇವೆ. ಅನೇಕವೇಳೆ ಹೀಗೆ ಮಾಡುವುದರಿಂದ ನಮ್ಮ ಕೆಲಸ ಆಗುತ್ತದೆ. ಹೀಗಿದ್ದೂ, ಕೆಲವೊಮ್ಮೆ ಕೆಲಸ ಆಗದಿರುವುದೂ ಉಂಟು.  

ಕೆಲವು ಕೆಲಸಗಳು ಅವುಗಳ ಸೂಕ್ಷ್ಮತೆ ಗೊತ್ತಿರುವ ದೊಡ್ಡವರೊಬ್ಬರು ನಮ್ಮ ಜೊತೆ ಬಂದಾಗ ಬಹಳ ಸುಲಭವಾಗಿ ಆಗುತ್ತವೆ. ತುಂಬಾ ದೊಡ್ಡವರ ಬಳಿ ಹೀಗೆ ಸಹಾಯ ಕೇಳಿಕೊಂಡು ಹೋಗುವ ಜನರ ಸಂಖ್ಯೆಯೂ ದೊಡ್ಡದು. ಅವರು ಎಲ್ಲರ ಜೊತೆ ಹೋಗಿ ಕೆಲಸ ಮಾಡಿಸಿಕೊಡಲು ಆಗುವುದಿಲ್ಲ. ಆಗ ಅವರು ಒಂದು ಪತ್ರ (ಲೆಟರ್) ಬರೆದುಕೊಡುತ್ತಾರೆ. ಸಂಸ್ಥೆಯಲ್ಲಿ ಸರಿಯಾದವರ ಬಳಿ ಆ ಪತ್ರ ಕೊಟ್ಟರೆ ನಮ್ಮ ಕೆಲಸ ಸುಲಭವಾಗಿ ಆಗುತ್ತದೆ. ಆ ದೊಡ್ಡವರು ಕೊಟ್ಟ ಕಾಗದಕ್ಕೇ ಅಷ್ಟು ಶಕ್ತಿ ಉಂಟು! ಕೆಲವು ಕೆಲಸಗಳು ನಮಗೆ ಬಹಳ ಮುಖ್ಯ. ದೊಡ್ಡವರ ಬಳಿ ಹೋದಾಗ ಅವರು ನಮ್ಮ ಜೊತೆ ಬರುವುದಿಲ್ಲ. ಪತ್ರವನ್ನೂ ಕೊಡುವುದಿಲ್ಲ. ಯಾರೋ ಒಬ್ಬರ ಹೆಸರನ್ನು ಹೇಳಿ "ಅವರ ಬಳಿ ನಾನು ಕಳುಹಿಸಿದೆ ಎಂದು ಹೇಳು" ಅನ್ನುತ್ತಾರೆ. ಅಷ್ಟು ಮಾಡಿದರೆ ನಮ್ಮ ಕೆಲಸ ಆಗುತ್ತದೆ! 

ದೊಡ್ಡವರ ಶಕ್ತಿ ಅಂತಹುದು. ಕೆಲವೊಮ್ಮೆ, ಬಹಳ ಗಹನವಾದ ಕೆಲಸವಾದರೆ, ಅವರೇ ಬರಬೇಕಾಗುತ್ತದೆ. ಮತ್ತೆ ಕೆಲವು ಸಂದರ್ಭದಲ್ಲಿ ಅವರು ಕೊಟ್ಟ ಕಾಗದವೇ ಸಾಕಾಗುತ್ತದೆ. ಇನ್ನೂ ಅನೇಕ ಸಲ ಅವರ ಹೆಸರಿನಿಂದಲೇ ನಮ್ಮ ಕೆಲಸಗಳು ಸುಸೂತ್ರವಾಗಿ ಆಗುವುದುಂಟು. "ಇವರು ಅವರ ಕಡೆಯವರಂತೆ. ಮಾಡಿ ಕೊಟ್ಟುಬಿಡು" ಎಂದು ಮೇಲಧಿಕಾರಿಗಳು ಕೈಕೆಳಗಿನವರಿಗೆ ಹೇಳುತ್ತಾರೆ. ಒಟ್ಟಿನಲ್ಲಿ ನಮ್ಮ ಗುರಿ ಸಾಧಿಸಿತು. ನಮಗೆ ಬೇಕಾದುದು ಆಯಿತು. ನಮಗೆ ಅದು ಮುಖ್ಯ. 
*****

ಮಂತ್ರಾಲಯ ಪ್ರಭುಗಳ ವಿಷಯದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ? "ಕರೆದಲ್ಲಿ ಬರುವ ರಾಯರು" ಎಂದೇ ಅವರಿಗೆ ವಿಶೇಷಣ. ದೊಡ್ಡವರ ಬಳಿ ನಾವು ಹೋಗುವುದು ಲೋಕಾರೂಢಿ. ಇವರು ಅತ್ಯಂತ ಕರುಣಾಶಾಲಿಗಳು. ಅದಕ್ಕೇ ಅವರಿಗೆ "ನಮೋ ಅತ್ಯಂತ ದಯಾಳವೇ" ಅನ್ನುವುದು. ಅವರು ಬರೀ ದಯಾಳುಗಳಲ್ಲ. ಅವರು ಅತಿ ದಯಾಳುಗಳೂ ಅಲ್ಲ. ಅವರು ಅತ್ಯಂತ ದಯಾಳುಗಳು! ಅವರಿಗಿಂತ ದಯಾಳುಗಳಾಗಿರುವವರು ಕಾಣಸಿಗರು! ಅವರೇ ನಮ್ಮ ಬಳಿ ಬರುತ್ತಾರೆ. ಸರಿಯಾಗಿ ಕರೆಯಬೇಕು. ಅಷ್ಟೇ. 

ಶ್ರೀ ರಾಘವೇಂದ್ರ ಸ್ತೋತ್ರದಲ್ಲಿ ಒಂದು ಶ್ಲೋಕ ಹೀಗಿದೆ:

ಯತ್ಪಾದ ಕಂಜ ರಜಸಾ ಪರಿಭೂಷಿತಾಂಗಾ 
ಯತ್ಪಾದಪದ್ಮ ಮಧುಪಾಯಿತ ಮಾನಸಾ ಯೇ
ಯತ್ಪಾದಪದ್ಮ ಪರಿಕೀರ್ತನ ಜೀರ್ಣವಾಚ:
ತದ್ದರ್ಶನಮ್ ದುರಿತಕಾನನ ದಾವಭೂತಮ್  

ಏನಿದರ ವಿಶೇಷ?  

ರಾಯರೇ ಬರಬೇಕೆಂದಿಲ್ಲ. ಅವರೇ ಆಗಬೇಕೆಂದಿಲ್ಲ. ಅವರನ್ನು ನೋಡಿ ಬಂದವರು (ಅವರ ಪಾದಧೂಳಿ ಸೋಕಿರುವವರು), ಅವರ ಸ್ತೋತ್ರಾದಿಗಳನ್ನು, ಗುಣಗಳನ್ನು, ಮಹಿಮೆಗಳನ್ನು  ಮನಸ್ಸಿನಲ್ಲಿ ನೆನೆಯುತ್ತಿರುವವರು, ಅವರ ಮಹಿಮೆ ಹೊಗಳುತ್ತಾ ಇರುವವರು (ಜೀರ್ಣವಾಚ: ಅಂದರೆ ಸ್ತೋತ್ರಾದಿಗಳನ್ನು ಹೇಳಿ ಹೇಳಿ, ಸುಸ್ತಾ,ಗಿ ಮಾತನಾಡಲು ಶಕ್ತಿ ಇಲ್ಲದವರು ಎಂದು),  ಇಂತಹವರನ್ನು ನೋಡಿದರೂ ಸಾಕು. ದಟ್ಟವಾದ ಕಾಡಿನಂತೆ ಬೆಳೆದು ನಿಂತಿರುವ ನಮ್ಮ ಪಾಪ ರಾಶಿಗಳು ಬೆಂಕಿಯಿಂದ ಸುಟ್ಟು ಬೂದಿ ಆಗುವಂತೆ ನಾಶವಾಗುತ್ತವೆ ಎಂದು ಇದರ ಭಾವ. 

ತಿರುಪತಿಗೆ ಹೋಗಿ ತಿಮ್ಮಪ್ಪನನ್ನು ನೋಡಿಬಂದವರನ್ನು ಕಂಡರೆ ನಮಗೂ ಸ್ವಲ್ಪ ಪುಣ್ಯ ಬರುತ್ತದೆ ಎಂದು ಹೇಳುವುದು ಇದೇ ಭಾವದಲ್ಲಿ. ಇತರೆ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿ ಬಂದವರ ಬಗ್ಗೆಯೂ ಹೀಗೆ ಹೇಳುವುದು ಉಂಟು.

*****

ಈ ಶ್ಲೋಕದ ಹಿಂದಿನ ಶ್ಲೋಕದಲ್ಲಿ "ಮಹಾ ವಂಧ್ಯಾ ಸುಪುತ್ರಪ್ರದಃ" ಎಂದು ಒಂದುಂಟು. ಏನಿದರ ಅರ್ಥ? ಕೆಲವು ಸ್ತ್ರೀಯರಿಗೆ ಸಂತಾನವಾಗುವುದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ವೈದ್ಯಕೀಯ ವಿಜ್ಞಾನ ಕಾರಣಗಳನ್ನು ಹೇಳುತ್ತದೆ. ಕೆಲವರ ತಡೆಗಳನ್ನು ನಿವಾರಿಸಿದರೆ ಸಂತಾನ ಆಗುತ್ತದೆ. ಕೆಲವು ರೀತಿಯ ಕಾರಣಗಳಿಗೆ ನಿವಾರಣೆಯೇ ಇಲ್ಲ. "ವಂಧ್ಯಾ" ಅಂದರೆ ನಿವಾರಿಸಬಹುದಾದ ತೊಂದರೆ ಇರುವವರು. "ಮಹಾವಂಧ್ಯಾ" ಅಂದರೆ ನಿವಾರಿಸಲಾಗದ, ಶಾಶ್ವತ ತಡೆ ಇರುವವರು. 

ರಾಯರ ಮೊರೆ ಹೋದ ಇಂತಹವರಿಗೆ ಮಕ್ಕಳಾಗಿರುವುದು ಉಂಟು. ವೈದ್ಯರು ಸಾಧ್ಯವೇ ಇಲ್ಲ ಎಂದು ಹೇಳಿದ ಸಂದರ್ಭಗಳಲ್ಲೂ ಸಂತಾನ ಆಗಿರುವುದು ಉಂಟು. "ಮಹಾವಂಧ್ಯಾ ಸುಪುತ್ರಪ್ರದಃ". ಏನೋ ಒಂದು ಮಗು ಆಯಿತು ಎಂದಲ್ಲ. ಒಳ್ಳೆಯ, ಯೋಗ್ಯ ಮಗು. ಅನೇಕ ತಡೆಗಳೇ ಇಲ್ಲದ ಸ್ತ್ರೀಯರಿಗೂ ಒಳ್ಳೆಯ ಸಂತಾನ ಆಗುವುದಿಲ್ಲ. ಅಂತಹದರಲ್ಲಿ ರಾಯರ ಮೊರೆ ಹೋದ ನಿವಾರಿಸಲಾಗದ ತಡೆ ಇರುವವರಿಗೂ ಒಳ್ಳೆಯ ಸಂತಾನ ಆಗುತ್ತದೆ ಎಂದು ಇದರ ಅರ್ಥ. 

*****

ಗಂಗೆಯಲ್ಲಿ ಮಿಂದರೆ ಪುಣ್ಯ ಎಂದು ಅನೇಕರ ನಂಬಿಕೆ. ನಾವು ಕಾಶಿಗೆ ಹೋದೆವು. ಎಲ್ಲರೂ ಗಂಗಾಸ್ನಾನ ಮಾಡುತ್ತಿದ್ದಾರೆ. ಆದ್ದರಿಂದ ನಾವೂ ಮಾಡಿದೆವು. ಇದು ಒಂದು ಪಕ್ಷ. 

ಗಂಗೆಯಲ್ಲಿ ಮಿಂದರೆ ಪುಣ್ಯ ಎಂದು ನಾವು ನಂಬಿದ್ದೇವೆ. ಗಂಗೆಯ ಬಗ್ಗೆ ನಮಗೆ ಜ್ಞಾನ, ಗೌರವ ಇದೆ. ಗಂಗಾಸ್ನಾನ ಮಾಡಬೇಕೆಂಬ ಉತ್ಕಟ ಇಚ್ಛೆ ಇದೆ. ಪ್ರಯತ್ನ ಪಟ್ಟು ಹೋಗಿ ಮಾಡಿದೆವು. ಇದು ಇನ್ನೊಂದು ಪಕ್ಷ. 

ಎಲ್ಲರೂ ಸ್ತೋತ್ರ ಹೇಳುತ್ತಾರೆ. ನಾವೂ ಹೇಳಿದೆವು. ಹಾಗಲ್ಲ, ನಾವು ಆ ಸ್ತೋತ್ರದ ಅರ್ಥ ತಿಳಿದು ಹೇಳಿದೆವು. ಇವೆರಡರ ನಡುವಿನ ವ್ಯತ್ಯಾಸ ಮೇಲಿನ ಗಂಗಾಸ್ನಾನದ ವ್ಯತ್ಯಾಸದಂತೆ. ಅರ್ಥ ತಿಳಿಯುತ್ತಾ ಹೋದಂತೆ ಭಕ್ತಿ, ಗೌರವಗಳು ಹೆಚ್ಚಾಗಿ ಫಲವೂ ಹೆಚ್ಚು. ಜಾಮೂನನ್ನು ಸುಮ್ಮನೆ ನುಂಗಬಹುದು. ಜಗಿದೂ, ಜಗಿದೂ ನುಂಗಬಹುದು!

Saturday, February 15, 2025

ಪ್ರತಿದಿನ ಗಂಗಾ ಸ್ನಾನ?



ಇದೀಗ ಎಲ್ಲೆಲ್ಲೂ "ಅಪರೂಪದ ಕುಂಭಮೇಳ" ಎನ್ನುವ ಸುದ್ದಿಯೇ ಸುದ್ದಿ. ಕೇವಲ ಹನ್ನೆರಡು ವರುಷದ್ದಲ್ಲ. ಹನ್ನೆರಡು ಹನ್ನೆರಡಲ ನೂರಾ ನಲವತ್ತನಾಲ್ಕು ವರುಷಗಳ ವಿಶೇಷ ಬೇರೆ. ಈಗಾಗಲೇ ಮೂವತ್ತು-ನಲವತ್ತು  ಕೋಟಿ ಮಂದಿ ಕುಂಭಸ್ನಾನ ಮಾಡಿದ್ದಾರೆ ಎಂದು ಒಂದು ಅಂದಾಜು. ಅಥವಾ, ಮೇಳ ಮುಗಿಯುವುದರ ಒಳಗೆ  ಮುಳುಗು ಹಾಕಿದವರ ಸಂಖ್ಯೆ ನಲವತ್ತು ಕೋಟಿ ದಾಟುತ್ತದೆ ಎಂದು ಇನ್ನೊಂದು ಅಂದಾಜು. (ಈಗಾಗಲೇ ಐವತ್ತು ಕೋಟಿ ಸಂಖ್ಯೆ ದಾಟಿದೆ, ಮೂರು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಆದಾಯ ಬಂದಿದೆ, ಎಂದು ಇಂದಿನ ಸುದ್ದಿ).  ನಲವತ್ತು ಕೋಟಿ ಅಂದರೆ ಅದೇನೂ ಒಂದು ಸಾಮಾನ್ಯ ಜನಗಳ ಕೂಟವಲ್ಲ. ಇಡೀ ಅಮೇರಿಕ ಸಂಯುಕ್ತ ಸಂಸ್ಥಾನಗಳ ಒಟ್ಟು ಜನಸಂಖ್ಯೆಗಿಂತ ಐದು ಕೋಟಿ ಹೆಚ್ಚು. ಮೂರು ನೂರು ಕಿಲೋಮೀಟರು ದೂರ ಟ್ರಾಫಿಕ್ ಜಾಮ್ ಆಗಿದೆ ಎಂದು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಚಿತ್ರಗಳು ಹರಿದಾಡುತ್ತಿವೆ. ವಾರಗಟ್ಟಲೆ ಸ್ನಾನ ಮಾಡದವರೂ ಕುಂಭ ಸ್ನಾನ ಮಾಡಿದ್ದಾರೆ! (ಕೆಲವು ಸಾಧುಗಳು ಹೀಗೆ ಅನೇಕ ದಿನ ಸ್ನಾನ ಮಾಡುವುದಿಲ್ಲ ಎಂದು ವರದಿಗಳಿವೆ). ಪ್ರತಿದಿನ ಸ್ನಾನ ಮಾಡುವ ದುರಭ್ಯಾಸ ಇರುವವರ ವಿಷಯ ಹೇಳಲೇಬೇಕಾಗಿಲ್ಲ. 

"ಕುಂಭಮೇಳ ಪ್ರವಾಸ" ಏರ್ಪಡಿಸುವ ಯಾವ ಪ್ರವಾಸಿ ಸಂಸ್ಥೆಯೂ ಈ ವರ್ಷ ನಷ್ಟ ಅನುಭವಿಸುವ ಸಾಧ್ಯತೆಯೇ ಇಲ್ಲ. ಕುಂಭ ಮೇಳ ಕಾಲದಲ್ಲಿ ಪ್ರಯಾಗ್ ರಾಜ್ ವಿಮಾನದ ಟಿಕೆಟ್ ಬೆಲೆ  ದೆಹಲಿ-ಲಂಡನ್ ಮಾರ್ಗದ ಟಿಕೆಟ್ ಬೆಲೆಗಿಂತ ಜಾಸ್ತಿಯಂತೆ. ಇದರ ಬಗ್ಗೆ ಸಂಸತ್ತಿನಲ್ಲಿ ಬಿಸಿ ಬಿಸಿ ಚರ್ಚೆಯೂ ಆಯಿತು. ಮೊದಲ ಪಂಕ್ತಿಗಳಲ್ಲಿ ಊಟ ಮಾಡಲಾಗದೆ ಇದ್ದರೂ ಪರವಾಗಿಲ್ಲ. ಕೊನೆಯ ಪಂಕ್ತಿ ಸಿಕ್ಕಿದರೂ ಸರಿಯೇ ಎಂದು ಕಾಯುವವರಂತೆ ಮೇಳ ಮುಗಿದ ನಂತರವಾದರೂ ಹೋಗೋಣ ಎಂದು ಕಾಯುತ್ತಿರುವವರೂ ಉಂಟು. "ಅಯ್ಯೋ, ಒಂದು ನೂರಾ ನಲವತ್ತನಾಲ್ಕು ವರುಷಗಳ ಕುಂಭ ಸ್ನಾನ ತಪ್ಪಿಸಿಕೊಂಡಿರಲ್ಲ!" ಎಂದು ಬೇರೆಯವರು ಹೇಳಬಾರದು ಎಂದು ಪರಿತಪಿಸುತ್ತಾ ಕಾಯುತ್ತಿರುವವರೂ ಉಂಟು. ಜನಜಂಗುಳಿ, ಹಣ-ಕಾಸಿನ ಮುಗ್ಗಟ್ಟು, ಆರೋಗ್ಯದ ಸಮಸ್ಯೆಗಳು, ಚಳಿ ತಡೆಯಲಾಗದ ಸ್ಥಿತಿ, ಜೊತೆಯಿಲ್ಲದೆ ಹೋಗಲಾಗದ ಬಿಕ್ಕಟ್ಟು, ಇವೆಲ್ಲಕ್ಕಿಂತ ಹೆಚ್ಚಾದ ಸೋಮಾರಿತನ, ಮುಂತಾದ ಅನೇಕ ಕಾರಣಗಳಿಂದ "ಈಗ ಬೇಡ. ಬೇಸಗೆ ಬರಲಿ. ಆಗ ಹೋಗೋಣ. ಸ್ವಲ್ಪ ಪುಣ್ಯ ಕಡಿಮೆ ಬಂದರೂ ಪರವಾಗಿಲ್ಲ" ಎಂದು ಅಂದುಕೊಂಡವರೂ ಉಂಟು.  

ಗಂಗಾನದಿಯ ತಟದಲ್ಲಿರುವವರು ಪುಣ್ಯಾತ್ಮರು. ಪ್ರತಿದಿನ ಗಂಗಾಸ್ನಾನ ಮಾಡುತ್ತಾರೆ ಎನ್ನಬಹುದೇ? ಬೆಂಗಳೂರಿನಲ್ಲಿರುವವರು ಪ್ರತಿದಿನ ಲಾಲ್ ಬಾಗಿಗೆ ಹೋಗುತ್ತಾರೆ ಎನ್ನುವಂತೆ! ಬೇರೆಲ್ಲಿಯೋ ಇರುವವರು ಏನು ಮಾಡಬೇಕು? ಕುಮಾರವ್ಯಾಸನು ಹೇಳುವಂತೆ "ಚೋರ ನಿಂದಿಸಿ ಶಶಿಯ ಬೈದೊಡೆ, ಕ್ಷೀರವನು ಕ್ಷಯ ರೋಗಿ ಹಳಿದಡೆ, ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು?" ಎನ್ನುವುದನ್ನು ನೆನೆಸಿಕೊಂಡು ಸುಮ್ಮನಿರಬೇಕೇ? ದೇಶದ ದಕ್ಷಿಣ ಭಾಗದಲ್ಲಿ ವಾಸಿಸುವವರು ಏನು ಮಾಡಬೇಕು? ಅವರಿಗೂ ಬೇರೆ ದಾರಿ ಉಂಟು. ಗಂಗೆಯ ಸೋದರಿಯರಾದ ಗೋದೆ, ಕೃಷ್ಣೆ, ಕಾವೇರಿಯರಿದ್ದಾರೆ. ಭೀಮೆ, ತುಂಗೆ, ವೈಗೈ ಇದ್ದಾರೆ. ಶರಾವತಿ, ನೇತ್ರಾವತಿಯರಿದ್ದಾರೆ. (ಅರ್ಕಾವತಿ-ವೃಷಭಾವತಿಯರೂ ಇದ್ದರು. ಅಲ್ಲಿ ಸ್ನಾನ ಮಾಡುವ ಭೀತಿ ಬೇಡ). ಈ ಎಲ್ಲ ನದಿಗಳೂ ದೂರ ಇದ್ದರೆ ಏನು ಮಾಡಬೇಕು? ಸಣ್ಣ ಹಳ್ಳಿಯಳ್ಳಿ ಚಿಕ್ಕ ಕೆರೆ ಮಾತ್ರ ಉಂಟು. ಅವರೇನು ಮಾಡಬೇಕು? ಅಥವಾ ದೊಡ್ಡ ನಗರದ ಸಣ್ಣ ಮನೆಯ ಪುಟ್ಟ ಬಚ್ಚಲು ಮನೆ. ನೀರೇ ಬಾರದ ನಲ್ಲಿಯಲ್ಲಿ ಎಂದೋ ನೀರು ಬಂದಾಗ ಹಿಡಿದಿಟ್ಟ ಪ್ಲಾಸ್ಟಿಕ್ ಬಕೆಟ್ಟಿನ ನೀರು ಮಾತ್ರ. ಅವರಿಗೆ ಪುಣ್ಯ ಸ್ನಾನವಿಲ್ಲವೇ? ಇದು ಸ್ವಲ್ಪ ಯೋಚಿಸಬೇಕಾದ ವಿಷಯವೇ. 
*****

ನಾವು ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಭಾಷೆಗಳನ್ನು ಚೆನ್ನಾಗಿ ಕಲಿಯಲಿ ಎಂದು "ಪ್ರಭಂಧ" ಬರೆಸುತ್ತಿದ್ದರು. ಇಂಗ್ಲಿಷಿನಲ್ಲಿ "Pen is mightier than Sword" ಅಥವಾ ಕನ್ನಡದಲ್ಲಿ "ಕತ್ತಿಗಿಂತ ಲೇಖನಿ ಹರಿತ" ಎನ್ನುವ ವಿಷಯದ ಮೇಲೆ ಸಾಮಾನ್ಯವಾಗಿ ಮೊದಲನೇ ಪ್ರಬಂಧ ಬರೆಸುತ್ತಿದ್ದರು. ಹಿಂದಿಯಲ್ಲಾದರೆ ರಾಮಧಾರಿ ಸಿಂಹ "ದಿನಕರ" ಅವರ "ಕಲಂ ಯಾ ತಲವಾರ್" ಎಂಬ ಇದೇ ವಿಷಯದ ಪದ್ಯ ಓದಬೇಕಿತ್ತು. ಲೇಖನಿ ಅಥವಾ ಪೆನ್ನು ಒಂದು ಜಡ ವಸ್ತು. ಅದೇನು ಮಾಡುತ್ತದೆ? ಮೇಜಿನ ಮೇಲೋ ಜೇಬಿನಲ್ಲೋ ಕುಳಿತಿರುತ್ತದೆ. (ಹಿಂದೆಲ್ಲ ಜೇಬಿನಲ್ಲಿ ಪೆನ್ನಿಲ್ಲದ ವಿದ್ಯಾರ್ಥಿಯನ್ನು "ನೀನೆಂಥ ವಿದ್ಯಾರ್ಥಿಯೋ?" ಎಂದು ಬಯ್ಯುತ್ತಿದ್ದರು. ಈಗ ಪೆನ್ನು ಇಟ್ಟುಕೊಳ್ಳುವ ಅಭ್ಯಾಸವೇ ಹೋಗಿದೆ). ಒಂದು ವೈಚಾರಿಕ ಲೇಖನ ಒಂದು ಕತ್ತಿ ಮಾಡುವುದಕ್ಕಿಂತ ಹೆಚ್ಚು ಕ್ರಾಂತಿಕಾರಕ ಕೆಲಸ ಮಾಡುತ್ತದೆ ಎನ್ನುವುದನ್ನು ಒಪ್ಪೋಣ. ಆದರೆ ಆ ಕೆಲಸ ಮಾಡುವುದು ಪೆನ್ನು ಅಥವಾ ಲೇಖನಿ ಅಲ್ಲ. ಪೆನ್ನು ಅಥವಾ ಲೇಖನಿ ಹಿಡಿದ ಕೈ, ಮತ್ತು ಅದಕ್ಕಿಂತ ಹೆಚ್ಚಾಗಿ ಅದನ್ನು ಉಪಯೋಗಿಸಿ ಬರೆಯುವವನ ತಲೆ; ಅದರಲ್ಲಿರುವ ಮಿದುಳು. 

ಪ್ರಸಿದ್ಧ ನಿರ್ಮಾಪಕ-ನಿರ್ದೇಶಕ ಬಿ. ಅರ್. ಪಂತುಲು ಅವರ ಹೆಮ್ಮೆಯ "ಶ್ರೀ ಕೃಷ್ಣದೇವರಾಯ" ಚಲನಚಿತ್ರದ ಕಡೆಯಲ್ಲಿ ಕೃಷ್ಣದೇವರಾಯನ ಖಡ್ಗವನ್ನು ತೋರಿಸಿ "ಸಹಸ್ರಾರು ಶತ್ರುಗಳ ಶಿರಛೇದ ಮಾಡಿದ ಖಡ್ಗ ನಿರಾಶ್ರಿತವಾಯಿತು" ಅನ್ನುತ್ತಾರೆ. ಹೀಗೇಕೆ? ವೈರಿಗಳ ತಲೆ ಕತ್ತರಿಸಿದ್ದು ಖಡ್ಗವೇ ಆದರೂ ಅದೂ ಒಂದು ಜಡ ವಸ್ತು. ಆ ಕೆಲಸ ನಿಜವಾಗಿ ಮಾಡಿದ್ದು ಆ ಖಡ್ಗ ಹಿಡಿದ ಕೈ; ಆ ಕೈ ಹಿಂದಿದ್ದ ಅಸಾಧಾರಣ ವ್ಯಕ್ತಿ. ಲೇಖನಿ ಅಥವಾ ಕತ್ತಿ ದೊಡ್ಡದು ಎಂದು ಹೇಳುವುದು ಕೇವಲ ಸೂಚ್ಯವಾಗಿ. ಯಾವುದೇ ಜಡ ವಸ್ತು ತನಗೆ ತಾನೇ ಕೆಲಸ ಮಾಡದು. ಅದರ ಹಿಂದಿರುವ ಚೇತನವೇ ಕೆಲಸಗಳನ್ನು ಮಾಡುವುದು. ಜಡ ವಸ್ತು ಒಂದು ಉಪಕರಣ. ಅಷ್ಟೇ. 

*****

ಜಡವಸ್ತು ಕೇವಲ ಒಂದು ಉಪಕರಣ. ನಿಜವಾಗಿ ಕೆಲಸ ಮಾಡುವುದು ಅದರ ಹಿಂದಿರುವ ಚೇತನ ಎನ್ನುವುದಾದರೆ ಗಂಗಾಸ್ನಾನದ ವಿಷಯ ಏನು? ಗಂಗೆಯಲ್ಲಿ ಹರಿಯುವುದು ನೀರು. ಆ ನೀರೂ ಒಂದು ಜಡ ವಸ್ತುವೇ. ಅದು ದ್ರವರೂಪದಲ್ಲಿರುವುದರಿಂದ ಹರಿಯುತ್ತದೆ. ಎತ್ತರದ ಹಿಮಾಲಯ ಪರ್ವತ ಶ್ರೇಣಿಗಳಿಂದ ಹರಿದು ಬಂದು, ಅದೇ ರೀತಿಯ ಇತರ ಉಪನದಿಗಳಿಂದ ಕೂಡಿ ಮೈದುಂಬಿ, ಭೋರ್ಗರೆಯುತ್ತಾ ಬೆಟ್ಟಗಳಲ್ಲಿ ಹರಿಯುತ್ತದೆ. ಹರಿದ್ವಾರದ ನಂತರ ಬಯಲು ಪ್ರದೇಶಗಳಲ್ಲಿ ಹರಿಯುವುದರಿಂದ ಆ ವಿಶಾಲ ಜಲರಾಶಿ ಬಲು ರಭಸವಾಗಿ ಚಲಿಸುತ್ತದೆ. ಕೋಟಿ ಕೋಟಿ ಜನಗಳ ಜೀವನ ಹಸನು ಮಾಡಿ ಸಮುದ್ರ ಸೇರುತ್ತದೆ. ಆ ನೀರಿನಲ್ಲಿ ಸ್ನಾನ ಮಾಡಿದರೆ ಪಾಪಗಳು ಹೋಗುವುದು ಹೇಗೆ? 

ನಮ್ಮ ಪುರಾತನ ನಂಬಿಕೆಗಳ ಪ್ರಕಾರ ಪ್ರತಿ ಜಡ ವಸ್ತುವಿನ ಹಿಂದೆ ಅದಕ್ಕೆ ಹೊಂದಿದ ಒಂದು ಚೇತನ ಶಕ್ತಿ ಇದೆ. ಅದನ್ನೇ ನಾವು ಆ ಜಡ ಪದಾರ್ಥದ "ಅಭಿಮಾನಿ ದೇವತೆ" ಎನ್ನುವುದು. ಪುಸ್ತಕ ಜಡ ವಸ್ತು. ಅದರ ಹಿಂದೆ ವಿದ್ಯೆಯ ಅಭಿಮಾನಿ ದೇವತೆಯಾದ ಸರಸ್ವತಿ ಇದ್ದಾಳೆ. ಬೆಂಕಿಯ ಹಿಂದೆ ಅಗ್ನಿದೇವ ಇದ್ದಾನೆ. ನೀರಿನ ಹಿಂದೆ ವರುಣ ಇದ್ದಾನೆ. ಗಾಳಿಯ ಹಿಂದೆ ವಾಯುದೇವ ಇದ್ದಾನೆ. ಹೀಗೆ. ಅದೇ ರೀತಿ ಗಂಗಾನದಿಯಲ್ಲಿ ಹರಿಯುವ ನೀರಿನ ಹಿಂದೆ ತಾಯಿ ಗಂಗೆ ಇದ್ದಾಳೆ. ಹಿಂದೆಲ್ಲ ಕೇವಲ ಗಂಗೆ ಎಂದು ಸಂಬೋಧಿಸಿದರೆ ಹೊಡೆಯಲು ಬರುತ್ತಿದ್ದರು. "ಗಂಗಾಜೀ" ಅಥವಾ "ಗಂಗಾಮಯ್ಯಾ" ಅನ್ನು ಎನ್ನುತ್ತಿದ್ದರು. ಗಂಗೆ ಅಂದರೆ ಅಷ್ಟು ಶ್ರದ್ದೆ. ಅಂತಹ ಭಕ್ತಿ. ಗಂಗೆ ಕೇವಲ ಹರಿವ ನೀರಲ್ಲ. ಅವಳು ಹರಿ ಪಾದೋದಕ. ಹರನ ತಲೆಯಿಂದ ಹರಿದು ಬಂದ ತೀರ್ಥ. ಅನೇಕ ಶ್ರದ್ಧಾಳುಗಳು ಮೊದಲು ಮನೆಯಲ್ಲೋ ಅಥವಾ ಛತ್ರದಲ್ಲೋ ಒಮ್ಮೆ ಸ್ನಾನ ಮಾಡಿ ನಂತರ ಗಂಗಾಸ್ನಾನಕ್ಕೆ ನದಿಗೆ ಹೋಗುತ್ತಿದ್ದರಂತೆ! ಗಂಗಾಸ್ನಾನಕ್ಕೆ ಹೋದಾಗ ಗಂಗೆಯ ನೀರನ್ನು ಮುಟ್ಟುವ ಮುಂಚೆ ದೇಹ ಶುದ್ಧವಾಗಿ ಇರಬೇಕೆಂಬ ಕಳಕಳಿಯಿಂದ. 

*****

ಗಂಗಾನದಿಯಲ್ಲಿ ಹರಿಯುವ ನೀರಿನ ಅಭಿಮಾನಿದೇವತೆ ಗಂಗಾದೇವಿ ನಮ್ಮ ಪಾಪಗಳನ್ನು ಕಳೆಯುತ್ತಾಳೆ ಎಂದಾಯಿತು. ಹಾಗಿದ್ದಲ್ಲಿ ಗಂಗೆ ನೀರಿಗೆ ಅಷ್ಟು ದೂರ ಹೋಗಬೇಕು. ಆದರೆ ಅದರ ಅಭಿಮಾನಿ ದೇವತೆ ನಮ್ಮನ್ನು ಹರಸಲು ಅಲ್ಲಿಗೇ ಹೋಗಬೇಕೇ ಎನ್ನುವುದು ಮುಂದಿನ ಪ್ರಶ್ನೆ. ದೇವತೆಗಳಿಗೆ ಎಲ್ಲಿ ಬೇಕೆಂದರಲ್ಲಿ ಹೋಗುವ, ಬರುವ ಸಾಮರ್ಥ್ಯ ಇದೆಯಲ್ಲವೇ? ನಾವು ಅಲ್ಲಿಗೆ ಹೋಗಲು ಅಶಕ್ತರು. ಅಲ್ಲಿಗೆ ಸುಲಭವಾಗಿ ಹೋಗಲಾರೆವು. ಆ ತಾಯಿಯೇ ನಮ್ಮ ಬಳಿ ಬರಬಹುದೇ? ಅದು ಸಾಧ್ಯವಾದರೆ ಎಂತಹ ಪವಾಡ! ಹಾಗಾಗಬಹುದೇ? 

ಸಂಧ್ಯೆಯನ್ನು ಆಚರಿಸುವಾಗ, ಮತ್ತು ಅನೇಕ ರೀತಿಯ ಸಮಾರಂಭಗಳಲ್ಲಿ ಮಂತ್ರಪೂತ ಜಲದಿಂದ ಸಿಂಪಡಣೆ (ಪ್ರೋಕ್ಷಣೆ ಅಥವಾ ಮಾರ್ಜನ) ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆಗ ಕೆಲವು ಮಂತ್ರಗಳನ್ನು ಹೇಳುತ್ತಾರೆ. ಅವು ಯಾವುವು? ಋಗ್ವೇದದ ಹತ್ತನೆಯ ಮಂಡಲದ "ಆಪಃ ಸೂಕ್ತ" ಮಂತ್ರಗಳು ಅವು. ಅದರಲ್ಲಿ ನೀರಿನ ಅಭಿಮಾನಿ ದೇವತೆಗಳಾದ ಆಪೋದೇವಿಯರನ್ನು ಪ್ರಾರ್ಥಿಸಿಕೊಳ್ಳುವುದು. "ನಿಮ್ಮ ಕರುಣೆಯ ಬಲದಿಂದ ನಾವು ಬದುಕುತ್ತೇವೆ. ನಿಮ್ಮ ಸಹಕಾರದಿಂದ ನಮ್ಮ ಜೀವನ ನಡೆದು ನಾವು ಬಹಳಕಾಲ ಜೀವಿಸುತ್ತೇವೆ. ನಮ್ಮನ್ನು ಯೋಗ್ಯರನ್ನಾಗಿ ಮಾಡುವ, ನಿಮ್ಮಲಿರುವ ಆ ಶಕ್ತಿಯನ್ನು ನಮಗೆ ದಯಪಾಲಿಸಿ" ಎಂದು ಬೇಡುವುದೇ ಈ  ಮಂತ್ರಗಳ ತಿರುಳು. "ಉಷತೀರಿವ ಮಾತರಃ" ಎನ್ನುವುದು ಅಲ್ಲಿ ಬರುವ ವಿಶೇಷಣ. "ಕಂದಮ್ಮಗಳು ಕರೆದಾಗ ಓಡಿ ಬಂದು ಎತ್ತಿಕೊಳ್ಳುವ ತಾಯಿಯರಂತೆ ನೀವು" ಎಂದು ಅವರಲ್ಲಿ ಪ್ರಾರ್ಥನೆ. 

*****

ಎಲ್ಲ ನೀರಿನಲ್ಲಿರುವ ಆಪೋದೇವಿಯರಂತೆ ಗಂಗಾನದಿ ನೀರಿನಲ್ಲಿ ವಿಶೇಷ ಅಭಿಮಾನಿ ದೇವತೆಯಾಗಿ ತಾಯಿ ಗಂಗೆ ಇದ್ದಾಳೆ. ಅವಳದ್ದು ತಾಯಿಯ ಕರುಳು. ಎಳೆಯ ಮಕ್ಕಳು ಕೂಗಿ ಕರೆದಾಗ, ತಾನು ಮಾಡುತ್ತಿರುವ ಕೆಲಸವನ್ನು ಅಲ್ಲಿಯೇ ಬಿಟ್ಟು ಓಡಿ ಬಂದು ಮಗುವನ್ನು ಎತ್ತಿಕೊಳ್ಳುವ ಅಮ್ಮನಂತೆ ಕರುಣಾಮಯಿ ಅವಳು. ಕೂಗಿ ಕರೆದವರಿಗೆಲ್ಲಾ ಅವಳು ತಾಯಿಯೇ. ಆದ್ದರಿಂದ ಆ ನದಿ ಇರುವಲ್ಲಿಗೆ ಹೋಗಲಾರದವರು ಆರ್ತರಾಗಿ ಕರೆದರೆ ಅವಳು ಕರೆದವರು ಇರುವಲ್ಲಿಗೆ ಬರುತ್ತಾಳೆ! ಸ್ನಾನ ಮಾಡುವಾಗ ನಮ್ಮ ಹಿರಿಯರು ಹೇಳುತ್ತಿದ್ದ ಈ ಕೆಳಗಿನ ಶ್ಲೋಕ ಅದನ್ನೇ ಹೇಳುತ್ತದೆ:

ಗಂಗಾ ಗಂಗೇತಿ ಯೋ ಬೃಯಾತ್ ಯೋಜನಾನಾಂ ಶತೈರಪಿ 
ಮುಚ್ಯತೇ ಸರ್ವ ಪಾಪೇಭ್ಯೋ ವಿಷ್ಣು ಲೋಕಂ ಸ ಗಚ್ಛತಿ 

"ಗಂಗಾ, ಗಂಗೆ ಎಂದು ಯಾರು ಸ್ಮರಣೆ ಮಾಡುತ್ತಾರೋ ಅಂತಹವನು ನೂರಾರು ಯೋಜನ ದೂರವಿದ್ದರೂ ತಾಯಿ ಗಂಗೆಯು (ಅವನಿರುವಲ್ಲಿಗೆ ಬಂದು) ಅವರ ಎಲ್ಲ ಪಾಪಗಳಿಂದಲೂ ಬಿಡುಗಡೆ ಮಾಡುತ್ತಾಳೆ. ಅವನು ವಿಷ್ಣುವಿನ ಲೋಕವಾದ ವೈಕುಂಠವನ್ನು ಸೇರುತ್ತಾನೆ" ಎನ್ನುವುದು ಇದರ ಅರ್ಥ. 
*****

ಹಾಗಿದ್ದರೆ ಬಹಳ ಸುಲಭವಾಯಿತಲ್ಲ! ಗೋಮುಖಕ್ಕೋ, ದೇವಪ್ರಯಾಗಕ್ಕೋ, ಹರಿದ್ವಾರಕ್ಕೋ, ಪ್ರಯಾಗಕ್ಕೋ, ವಾರಾಣಸಿಗೋ, ಏಕೆ ಹೋಗಬೇಕು? ಈ ಶ್ಲೋಕ ಹೇಳಿದರೆ ಆಯಿತಲ್ಲ. ಪ್ರತಿದಿನ ಗಂಗಾಸ್ನಾನ ಮಾಡಿದಂತೆ ಆಯಿತಲ್ಲ. ಎಲ್ಲ ಸುಲಭ. ಅಲ್ಲಿಗೆ ಏಕೆ ಹೋಗಬೇಕು? 

ಅದು ಅಷ್ಟು ಸುಲಭವಾದ ಪರಿಹಾರವಲ್ಲ. 

ನಾವು ಪ್ರತಿದಿನ ಸ್ನಾನ ಮಾಡುತ್ತೇವೆ ಎಂದು ತಿಳಿದಿದ್ದೇವೆ. ವಾಸ್ತವವಾಗಿ ನಾವು ಮಾಡುವುದು ಬರೀ ಮೈ ತೊಳೆದುಕೊಳ್ಳುವ ಕ್ರಿಯೆ. ಸ್ನಾನ ಮಾಡುವಾಗ ನೂರಾರು ಯೋಚನೆಗಳು. ಸ್ನಾನ ಮುಗಿಸಿದರೆ ಸಾಕು. ಬೇರೆ ಕೆಲಸಗಳಿಗೆ ಓಡಬಹುದು ಎನ್ನುವ ಮನಸ್ಥಿತಿ. ಶ್ರೀಹರಿಯ ಪಾದದಿಂದ, ಸದಾಶಿವನ ಶಿರದಿಂದ ಇಳಿದು ಬಂದು, ನನ್ನ ತಲೆಯ ಮೂಲಕ ಹಾದು ದೇವಗಂಗೆ ನನ್ನನ್ನು ಪಾವನ ಮಾಡುತ್ತಿದ್ದಾಳೆ ಎಂದು ಅನುಸಂಧಾನ ಬೇಕು. ಆ ಮಂತ್ರದಲ್ಲಿ ಧೃಡವಾದ ನಂಬಿಕೆ ಬೇಕು. ಏಕಾಗ್ರತೆ ಬೇಕು. ಕ್ಷಣದಿಂದ ಕ್ಷಣಕ್ಕೆ ಕಪಿಯಂತೆ ಹಾರುವ ಮನಸ್ಸಿಗೆ ಅದು ಸುಲಭ ಸಾಧ್ಯವಲ್ಲ. 

ನಮಗೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಈ ಶ್ಲೋಕ ಹೇಳಿಕೊಂಡು ಸ್ನಾನ ಮಾಡುತ್ತೇವಲ್ಲ ಎಂದು ಸುಮ್ಮನೆ ಕೂಡುವಹಾಗಿಲ್ಲ. ಗಂಗಾನದಿ ಇರುವಲ್ಲಿಗೆ ಪ್ರಯತ್ನ ಪೂರ್ವಕ ಹೋಗಿ ವಿಧಿಯಂತೆ ಗಂಗಾಸ್ನಾನ ಮಾಡುವುದು ನಂಬಿದವರಿಗೆ ಒಂದು ಕರ್ತವ್ಯ. ಹೋಗುವ ಶಕ್ತಿ ಇದ್ದರೂ ಕಳ್ಳ ಮೈಯಿಂದ ತಪ್ಪಿಸಿಕೊಂಡು ಮೇಲಿನ ಶ್ಲೋಕ ಹೇಳಿಕೊಂಡು ಎಷ್ಟು ವರ್ಷ ಸ್ನಾನಮಾಡಿದರೂ ಪ್ರಯೋಜನವಿಲ್ಲ. 

*****

ಗಂಗಾಸ್ನಾನಕ್ಕೆ ಹಂಬಲಿಸುತ್ತಾ, ಒಮ್ಮೆಯೂ ಅಲ್ಲಿ ಹೋಗಲಾರದಿದ್ದರೂ ಹೋಗುವವರಿಗೆ ಸೇವೆ, ಸಹಕಾರಗಳನ್ನು ಕೊಡುತ್ತಿದ್ದ ಗಂಗಾದಾಸನಿಗೆ ಪ್ರತಿದಿನ ಗಂಗಾಸ್ನಾನ ಮಾಡಿದವನಿಗಿಂತ ಹೆಚ್ಚಿನ ಪುಣ್ಯ ಬಂದಿತೆಂದು ತಿಳಿಸುವ ಕಥೆಯೊಂದು "ಕಾರ್ತಿಕಮಾಸ ಮಹಾತ್ಮೆ" ಸಂದರ್ಭದಲ್ಲಿ ಬರುತ್ತದೆ. ಅದನ್ನು ತಿಳಿಯಲು ಆಸಕ್ತಿ ಇರುವವರು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

Friday, August 23, 2024

"ಮುಕುಂದಮಾಲಾ" ಎಂಬ "ಸಕ್ಕರೆಯ ಸರ"


ಅದೊಂದು ಸೊಗಸಾದ ಸರ. ಎಲ್ಲರಿಗೂ ಕಾಣುವಂತೆಯೇ ಇದೆ. ಆ ಸರದಲ್ಲಿ ಸಿಹಿ ಸಿಹಿಯಾದ ನಲವತ್ತು ಸಕ್ಕರೆಯ ಮಣಿಗಳಿವೆ. ಒಂದೊಂದು ಮಣಿಯೂ ಒಂದೊಂದು ಸಕ್ಕರೆಯ ಘನವಾದ ಉಂಡೆ. ಅನೇಕರಿಗೆ ಎದುರಿಗೆ ಇದ್ದರೂ ಆ ಸರವೇ ಕಾಣಿಸುವುದಿಲ್ಲ. ಕೆಲವರಿಗೆ ಸರ ಕಂಡರೂ ಅದರಲ್ಲಿ ಮಣಿಗಳಿವೆ ಎಂದು ತಿಳಿಯುವುದಿಲ್ಲ. ಮತ್ತೆ ಕೆಲವರಿಗೆ ಉಂಡೆಗಳಿವೆ ಎಂದು ಗೊತ್ತಾದರೂ ಅವು ಸಕ್ಕರೆಯವು ಎಂದು ಅರ್ಥವಾಗುವುದಿಲ್ಲ. ಎಲ್ಲೋ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಇವು ಸಕ್ಕರೆಯ ಉಂಡೆಗಳು ಎಂದು ಜ್ಞಾತವಾಗುತ್ತದೆ. 

ಆಯಿತು. ಕೆಲವೇ ಮಂದಿಗೆ ಇವು ಸಕ್ಕರೆಯ ಉಂಡೆಗಳಿಂದ ಮಾಡಿದ ಸರ ಎಂದು ಅರ್ಥವಾಯಿತು. ಅವರಲ್ಲಿಯೂ ಕೆಲವರು ವಿಷಯವನ್ನು ಅಲ್ಲಿಗೇ ಬಿಡುತ್ತಾರೆ. ಸ್ವಲ್ಪ ಮಂದಿಗೆ ಮಾತ್ರ ಆ ಸವಿಯಾದ ಉಂಡೆಗಳ ಸಿಹಿಯನ್ನು ಅನುಭವಿಸುವ ಆಸೆ ಆಗುತ್ತದೆ. ಈ ಸಣ್ಣ ಪ್ರಮಾಣದ ಗುಂಪಿನಲ್ಲಿಯೂ ಮೂರು ಭೇದಗಳು. ಮೊದಲನೆಯದು ಒಂದೊಂದು ಉಂಡೆಯನ್ನೂ ಬಾಯಿಗೆ ಹಾಕಿಕೊಂಡು ಕಹಿ ಗುಳಿಗೆ ನುಂಗಿದಂತೆ ನುಂಗುವವರದು. ಸಕ್ಕರೆ ಹೊಟ್ಟೆಯ ಒಳಗೆ ಹೋದಿದ್ದಷ್ಟೇ ಭಾಗ್ಯ. ಬಾಯಿಗೆ, ನಾಲಿಗೆಗೆ ಸಿಹಿಯ ಅನುಭವೇ ಆಗಲಿಲ್ಲ! ಎರಡನೆಯ ಗುಂಪು ಅಷ್ಟು ಆತುರ ತೋರುವುದಿಲ್ಲ. ಬಾಯಿಯಲ್ಲಿ ಸಕ್ಕರೆಯ ಸ್ವಲ್ಪ ಸವಿ ಅನುಭವಿಸಿ ನುಂಗುತ್ತಾರೆ. ಅಷ್ಟೋ ಇಷ್ಟೋ ಸಿಹಿಯ ಅನುಭವವಾಗಿ ಸಂತೋಷ ಪಡೆದರು. ಮೂರನೆಯ ಗುಂಪು ಆತುರದ ಗುಂಪಲ್ಲ. ಸಾವಕಾಶವಾಗಿ ಒಂದೊಂದು ಸಕ್ಕರೆಯ ಉಂಡೆಯನ್ನೂ ಬಾಯಲ್ಲಿ ತುಂಬಿಕೊಂಡು ನಿಧಾನವಾಗಿ ಚೀಪುತ್ತಾ ಅದರ ಸವಿಯನ್ನು ಬಹಳ ಕಾಲ ಅನುಭವಿಸುತ್ತಾರೆ. ಇವರಿಗೆ ಆ ಸಕ್ಕರೆಯ ಹಾರದ ಸಿಹಿ ಸಿಹಿ ಮಣಿಗಳ ಸಂಪೂರ್ಣ ಪ್ರಯೋಜನ ಸಿಕ್ಕಿತು!

ಅನೇಕರಿಗೆ ಬೆಳಿಗ್ಗೆ ಸ್ನಾನಾದಿಗಳ ನಂತರ ಯಾವುದಾದರೂ ಸ್ತೋತ್ರ ಪಾರಾಯಣ ಮಾಡುವ ಪದ್ಧತಿ ಇದೆ. ಪುಣ್ಯಕ್ಕೆ ನಮ್ಮಲ್ಲಿ ಸ್ತೋತ್ರಗಳ ಕೊರತೆ ಇಲ್ಲ. ಕೇವಲ ನಾಲ್ಕು ಪದ್ಯಗಳಿಂದ ಹಿಡಿದು ಸಹಸ್ರನಾಮದವರೆಗೆ ಉಂಟು. ಇನ್ನೂ ಮಾಡಬೇಕೆಂದರೆ ಮತ್ತೊಂದು ಸ್ತೋತ್ರ. ಎಲ್ಲವೂ ಉಂಟು. ಇಲ್ಲದಿರುವುದು ಸಮಯಾವಕಾಶ ಒಂದೇ. 

ಅನೇಕವೇಳೆ ಸ್ತೋತ್ರ ಪ್ರಾರಂಭ ಮಾಡುವುದರ ಮೂಲ ಉದ್ದೇಶ ಅದನ್ನು ಹೇಳಿ ಮುಗಿಸುವುದೇ ಆಗಿರುತ್ತದೆ. ಮುಗಿದ ತಕ್ಷಣ "ಸದ್ಯ, ಮುಗಿಯಿತಲ್ಲ!" ಎಂಬ ಧನ್ಯತಾ ಭಾವ. "ಬೆಳಗ್ಗೆ ಎದ್ದು ಏನೋ ಮಾಡುತ್ತಾರೆ. ಬೇಗ ಕಾಫಿ ಕೊಡುವುದಿಲ್ಲ. ಸ್ನಾನ ಆಗುವ ವೇಳೆಗೆ ಒಂಭತ್ತೂವರೆ ಘಂಟೆ ಆಯಿತು. ಹತ್ತು ಘಂಟೆಗೆ ಕ್ರಿಕೆಟ್ ಪಂದ್ಯ ಇದೆ. ಮೊದಲ ಚೆಂಡು ಅಂಗಳದಲ್ಲಿ ಪುಟಿದೇಳುವ ಮೊದಲು ಸ್ತೋತ್ರ ಮುಗಿದರೆ ಸಾಕು." ಹೀಗೆನ್ನುವ ಮನಸ್ಥಿತಿ ಅನೇಕ ವೇಳೆ. ಇದು ಸಕ್ಕರೆಯ ಉಂಡೆಯನ್ನು ಕಹಿ ಗುಳಿಗೆ ನುಂಗಿದಂತೆ ಹೇಳುವ ಸ್ತೋತ್ರ. 

ಸ್ತೋತ್ರದ ಅರ್ಥ ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳಬೇಕೆಂಬ ಹಂಬಲವೂ ಇಲ್ಲ. ಅದಕ್ಕಾಗಿ ಪ್ರಯತ್ನವಂತೂ ಮೊದಲೇ ಇಲ್ಲ. ಆದರೆ ಅತಿ ಆತುರವಿಲ್ಲದೆ ಹೇಳುವುದು. ಇದು ಎರಡನೇ ಗುಂಪು. 

ಸ್ತೋತ್ರದ ಹಿನ್ನೆಲೆ ತಿಳಿದು, ಅದರ ಅರ್ಥವನ್ನು ಅರಿತು, ಪ್ರತಿಯೊಂದು ಪದ-ಪದವನ್ನೂ ಅನುಭವಿಸಿ ಮಾಡುವ ಸ್ತೋತ್ರ ಆ ಸಕ್ಕರೆಯ ಉಂಡೆಯ ಪದರ-ಪದರವನ್ನು ಅನುಭವಿಸಿ ಆನಂದಿಸುವ ಪಾರಾಯಣ. ಮುಕುಂದಮಾಲಾ ಸ್ತೋತ್ರದ ನಲವತ್ತು ಮಣಿಗಳ ಸವಿ ಈ ರೀತಿ ಅನುಭವಿಸಿದವರಿಗೇ ಗೊತ್ತು. 

*****

ಮುಕುಂದಮಾಲಾ ಸ್ತೋತ್ರದ ಮೊದಲನೇ ಪದ್ಯವನ್ನೇ ನೋಡೋಣ:

ಶ್ರೀವಲ್ಲಭೇತಿ ವರದೇತಿ ದಯಾಪರೇತಿ 

ಭಕ್ತಪ್ರಿಯೇತಿ ಭವಲುಂಠನ ಕೋವಿದೇತಿ 

ನಾಥೇತಿ ನಾಗಶಯನೇತಿ ಜಗನ್ನಿವಾಸೇತಿ 

ಆಲಾಪಿನಂ ಪ್ರತಿದಿನಂ ಕುರುಮಾಂ ಮುಕುಂದ!

ಏನಿದರ ಅರ್ಥ? ಮೇಲುನೋಟಕ್ಕೆ ಸುಲಭವಾಗಿ ಗೊತ್ತಾಗುತ್ತದೆ. "ಹೇ ಮುಕುಂದ! ಲಕ್ಷ್ಮೀಪತಿ, ವರದ. ದಯಾಳು, ಭಕ್ತಪ್ರಿಯ, ಭವವನ್ನು ದಾಟಿಸುವವ, ಒಡೆಯ, (ಶೇಷನಮೇಲೆ ಮಲಗಿದ) ಶೇಷಶಾಯಿ, ಜಗನ್ನಾಥ, ಇತ್ಯಾದಿ ಪದಗಳಿಂದ ಪ್ರತಿದಿನ ನಿನ್ನನ್ನು ಕರೆಯುವಂತೆ ನನ್ನನ್ನು ಮಾಡು" ಎಂದು ಇದರ ಅರ್ಥ. ಇಲ್ಲಿ ಮೂರು ಮುಖ್ಯ ವಿಷಯಗಳು ಇವೆ. ಪರಮಾತ್ಮನ ಅನೇಕ ಹೆಸರುಗಳು ಇರುವಾಗ ಮುಕುಂದ ಎಂಬ ಹೆಸರಿನಿಂದಲೇ ಏಕೆ ಕರೆದರು? ಮುಕುಂದನಿಗೆ ನೀಡಿರುವ ಈ ವಿಶೇಷಣ ರೂಪಕ ಹೆಸರುಗಳಲ್ಲಿ ಏನಾದರೂ ಹೆಚ್ಚಿನದು ಇದೆಯೇ? ಮುಕುಂದನನ್ನು ಕೂಗಬೇಕಾದರೆ ನಾವೇ ಕೂಗಬಹುದು. ಕರೆಯುವಂತೆ ಮಾಡು ಎಂದು ಅವನನ್ನು ಏಕೆ ಕೇಳಬೇಕು?

ಪರಮಾತ್ಮನ ಲೆಕ್ಕವಿಲ್ಲದ ರೂಪಗಳನ್ನು ತಿಳಿಸುವ ಅನಂತ ಹೆಸರುಗಳಲ್ಲಿ ಅವನನ್ನು ಯಾವ ಹೆಸರಿನಿಂದಾದರೂ ಕರೆಯಬಹುದು. ಆದರೆ ಈ ಸ್ತೋತ್ರದ ಮೂಲ ಉದ್ದೇಶ್ಯ ಏನು? ಯಾವುದೋ ಒಂದು ವರವನ್ನು ಬೇಡುವುದಕ್ಕಲ್ಲ. "ಜನನ-ಮರಣ ಚಕ್ರದಿಂದ ಬಿಡುಗಡೆ ಮಾಡಿ ಪರಮ ಪದವನ್ನು ಕೊಡು; ಮತ್ತೆ ಹುಟ್ಟದಂತೆ ಮಾಡು" ಎಂದು ವಿನಂತಿಸುವುದೇ ಏಕಮೇವ ಗುರಿ.  ಈ ಭವಚಕ್ರದಿಂದ ಪಾರುಮಾಡುವವರು ಯಾರು? ಸರ್ವಶಕ್ತನಾದ ಅವನಿಗೆ ಯಾವ ರೂಪದಲ್ಲಾದರೂ ಈ ಬಿಡುಗಡೆಯನ್ನು ಕೊಡುವ ಶಕ್ತಿಯೇನೋ ಉಂಟು. ಆದರೆ ಅನೇಕ ರೂಪಗಳಿದ್ದರೂ ಮುಕ್ತಿ ಕೊಡುವ ರೂಪ ಮುಕುಂದ ಎನ್ನುವ ರೂಪ ಎಂಬುದು ಬಲವಾದ ನಂಬಿಕೆ. "ಭವಲುಂಠನ ಕೋವಿದೇತಿ" ಎನ್ನುವ ವಿಶೇಷಣವೂ ಇದನ್ನೇ ಸೂಚಿಸುತ್ತದೆ. ಈ ಮನವಿ ಆ ಮುಕ್ತಿ ಕೊಡುವ ಮುಕುಂದನಿಗೆ. ಕೇವಲ ಇದು ಒಂದು ಶ್ಲೋಕದಲ್ಲಿ ಮಾತ್ರವಲ್ಲ. ಇಡಿಯ ಕೃತಿಯ ಪರಮ ಗುರಿ ಸಂಸಾರದಿಂದ ಮುಕ್ತಿ ಪಡೆಯುವುದೇ ಆಗಿದೆ. ಆದ್ದರಿಂದ ಮುಕುಂದನಲ್ಲಿ ಪ್ರಾರ್ಥನೆ. ಇದೇ ಕಾರಣಕ್ಕೆ ಕೃತಿಗೆ "ಮುಕುಂದಮಾಲಾ ಸ್ತೋತ್ರ" ಎಂದು ಹೆಸರು. 

ಮುಕುಂದನ ಅನೇಕ ಗುಣಗಳಲ್ಲಿ ಕೆಲವನ್ನು ಹೇಳುವ ಮೇಲಿನ ಸಂಬೋಧನೆಗಳಲ್ಲಿ ಒಂದೊಂದರಲ್ಲೂ ಅನೇಕ ಅರ್ಥಗಳು ಅಡಗಿವೆ. ಒಂದು ಸಣ್ಣ ಉದಾಹರಣೆ ತೆಗೆದುಕೊಳ್ಳೋಣ. ವರದೇತಿ ಎನ್ನುವ ಸಣ್ಣ ಪದ. ವರದ ಎಂದರೆ ಏನು? ವರವನ್ನು ಕೊಡುವವನು ಎಂದು. ಎಲ್ಲರಿಗೂ ಗೊತ್ತಿರುವ ಅರ್ಥ ಇದು. ಹಾಗಾದರೆ ಮುಕುಂದ ಒಬ್ಬನೇ ವರವನ್ನು ಕೊಡುವವನೇ? ಬೇರೆಯವರು ಯಾರೂ ಇಲ್ಲವೇ? ವರ ಕೊಡುವ ಅನೇಕ ದೇವತೆಗಳು ಇದ್ದಾರಲ್ಲ. ನಾವು ಅವರೆಲ್ಲರನ್ನೂ ಪೂಜಿಸುತ್ತೇವಲ್ಲ. ಹೌದು. ವರ ಕೊಡುವವರು ಬೇರೆಯವರಿದ್ದರೂ ಅವರೆಲ್ಲರಿಗೂ ಪ್ರೇರಕನಾಗಿ ಅಂತಃಶಕ್ತಿಯಾಗಿ ವರ ಕೊಡುವವನು ಅವನೇ! ಅಷ್ಟು ಮಾತ್ರವಲ್ಲ. ಅವನು ವರದ ಅಷ್ಟೇ ಅಲ್ಲ. ಅವನು ವರದರಾಜ. ವರಗಳನ್ನು ಕೊಡುವವರಿಗೆಲ್ಲ ಅವನು ಚಕ್ರವರ್ತಿ. ಅವನಿಗಿಂತ ಹೆಚ್ಚು ಕೊಡುವರು ಯಾರೂ ಇಲ್ಲ. 

ಈ ವಿಷಯವನ್ನು ೨೮ನೆಯ ಶ್ಲೋಕದಲ್ಲಿ ಇನ್ನೂ ವಿವರವಾಗಿ ಕೊಟ್ಟಿದ್ದಾರೆ. ನಮಗೆ ಏನಾದರೂ ಬೇಕಿದ್ದರೆ ಯಾರನ್ನು ಬೇಡಬೇಕು? ಹಣ್ಣಿನ ಅಂಗಡಿಯಲ್ಲಿ ಹೂವು ಸಿಗುವುದಿಲ್ಲ. ಎಣ್ಣೆಯಂಗಡಿಯಲ್ಲಿ ಬಟ್ಟೆ ಸಿಗುವುದಿಲ್ಲ. ಹಾಗೆಯೇ ಬೇರೆ ದೇವತೆಗಳ ಬಳಿ ಯಾವುದಾದರೂ ಒಂದು ರೀತಿಯ ವರ ಸಿಗಬಹುದು. ಎಲ್ಲ ರೀತಿಯ ಪದಾರ್ಥಗಳೂ ಒಂದೇ ಕಡೆ ಸಿಗಬೇಕು ಎಂದರೆ ಸೂಪರ್ ಮಾರ್ಕೆಟ್ ಎನ್ನುವ ದೊಡ್ಡ ಸ್ಥಳಕ್ಕೆ ಹೋಗಬೇಕು. ಎಲ್ಲ ರೀತಿಯ ವರಗಳೂ ಸಿಗುವ ಸೂಪರ್ ಮಾರ್ಕೆಟ್ ಆ ಪರಮಾತ್ಮನೇ. ಯಾರು ಕೊಟ್ಟರೂ ತಮ್ಮಲ್ಲಿರುವುದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಕೊಡಬಲ್ಲರು. ತಮ್ಮಲ್ಲಿರುವುದಕ್ಕಿಂತ ಹೆಚ್ಚು ಕೊಡಲು ಅವರಿಗೆ ಸಾಧ್ಯವಿಲ್ಲ. ಆದರೆ ಆ ಪರಮಪುರುಷ ಹಾಗಲ್ಲ. ಅವನು ಏನನ್ನಾದರೂ ಕೊಡಬಲ್ಲ. ಬೇರೆಯವರು ಕೊಟ್ಟಿದ್ದು ಕಾಲಕ್ರಮದಲ್ಲಿ ಹಾಳಾಗಬಹುದು. ಆದರೆ ಅವನ ಬಳಿ ಹಾಗಲ್ಲ. ಕೊಟ್ಟಿದ್ದು ಅನಂತ ಕಾಲದವರೆಗೂ ಹಾಗೆಯೇ ಇರುತ್ತದೆ. ಹೆಚ್ಚೇನು ಹೇಳುವುದು? "ಸ್ವಸ್ಯ ಪದಸ್ಯ  ದಾತರಿ ಸುರೇ ನಾರಾಯಣೇ ತಿಷ್ಠತಿ" ಎನ್ನುತ್ತಾರೆ. ಕೇಳಿದರೆ ತನ್ನ ಸ್ಥಾನವನ್ನೇ ಕೊಡಲು ಹಿಂದೂ ಮುಂದೆ ನೋಡದವ ಅವನು. ಯೋಗ್ಯ ಭಕ್ತ ಅದನ್ನು ಕೇಳುವುದಿಲ್ಲ ಎನ್ನುವುದು ಬೇರೆ ಮಾತು. ಯಾರ ಮನೆಗಾದರೂ ಹೋಗಿ "ನಿಮ್ಮ ಮನೆಯನ್ನು ನನಗೆ ಕೊಟ್ಟುಬಿಡಿ. ನೀವು ಹೊರಗೆ ಹೋಗಿ" ಎಂದರೆ ಮುಂದೆ ಮಾತನಾಡದಂತೆ ನಮ್ಮನ್ನು ಆ ಕ್ಷಣ ಹೊರಗೆ ಹಾಕುತ್ತಾರೆ. ಅವನಾದರೋ ತನ್ನ ಸ್ಥಾನವನ್ನೇ ಬಿಟ್ಟುಕೊಡಲು ತಯಾರು. ಆದ್ದರಿಂದ ಅವನು ವರದ. ವರದ ಮಾತ್ರವಲ್ಲ, ವರದರಾಜ. 

ಇನ್ನು ಮೂರನೆಯ ಪ್ರಶ್ನೆ. "ನಿನ್ನನ್ನು ಕೂಗುವಂತೆ ಮಾಡು, ಮುಕುಂದ" ಎಂದು ಅವನನ್ನು ಏಕೆ ಕೇಳಬೇಕು? ನಾವೇ ಕೂಗಿದರೆ ಆಗದೇ ಎನ್ನುವ ಸಮಾಚಾರ. ಒಬ್ಬನಿಗೆ ಏನೋ ಒಂದು ಪದಾರ್ಥ ಅಥವಾ ತಿಂಡಿ-ತಿನಿಸು ಬೇಕು ಎಂದು ಎನಿಸಿತು. ತಯಾರು ಮಾಡಿಟ್ಟ. ತಯಾರು ಮಾಡಿಟ್ಟ ನಂತರ ಹಾಗೇ ಕುಳಿತಿದ್ದ. ಏಕೆ ತಿನ್ನಲಿಲ್ಲ ಎಂದು ಮತ್ತೊಬ್ಬರು ಕೇಳಿದರು. ಈಗ ತಿನ್ನುವ ಮನಸ್ಸಿಲ್ಲ ಎಂದ. ಇನ್ನೊಂದು ಸಂದರ್ಭದಲ್ಲಿ ತಟ್ಟೆಯಲ್ಲಿ ಪದಾರ್ಥ ಇದೆ. ಆದರೆ ತಿನ್ನಲು ಆಗುತ್ತಿಲ್ಲ. ಕೈ ಬಾಯಿಯವರೆಗೆ ಹೋಗುತ್ತಲೇ ಇಲ್ಲ. ನಿನ್ನೆಯವರೆಗೆ ಸರಿಯಾಗಿತ್ತು. ಇಂದು ಏಕೋ ಕೈ ಹಿಡಿದುಕೊಂಡಿದೆ ಎನ್ನುತ್ತಾನೆ. ಬಾಯಿಯಲ್ಲಿ ಹೇಗೋ ಹಾಕಿಕೊಂಡ ಮೇಲೆ ನುಂಗಲು ಆಗುತ್ತಿಲ್ಲ. ಇದೇನು ವಿಚಿತ್ರ? ಯಾವುದೂ ನಮ್ಮ ಕೈಯಲ್ಲಿ ಇಲ್ಲವಲ್ಲ? 

ಚಿಕ್ಕ ವಯಸ್ಸಿನಲ್ಲಿ ನನ್ನ ಸಮ ಯಾರಿಲ್ಲ ಎನ್ನುವ ಅಹಂಕಾರ ಮನೆ ಮಾಡಿರುತ್ತದೆ. ಕಾಲ ಕಳೆದಂತೆ, ಜೀವನದಲ್ಲಿ ಮಾಗಿದಂತೆ, ರಟ್ಟೆಯಲ್ಲಿ ಶಕ್ತಿ ಕಡಿಮೆಯಾದಂತೆ "ನಮ್ಮ ಕೈಲಿ ಏನೂ ಇಲ್ಲ" ಎನ್ನುವ ಜ್ನ್ಯಾನ ಬರುತ್ತದೆ. ಏನಾದರೂ ಮಾಡುವ ಮೊದಲು ಆ ಕಾರ್ಯ ಮಾಡಲು ಅವನು ಮನಸ್ಸು ಕೊಡಬೇಕು. ಮನಸ್ಸಿನ ನಂತರ ಆ ಕಡೆ ಕೆಲಸ ಮಾಡುವಂತೆ ಪ್ರೇರಣೆ ಕೊಡಬೇಕು. ಆ ಕೆಲಸ ಮಾಡಲು ಶಕ್ತಿ ಕೊಡಬೇಕು. ಕಡೆಗೆ ಆ ಕೆಲಸದ ಫಲವನ್ನೂ ಅವನೇ ಕೊಡಬೇಕು. ಅಂದರೆ ಯಾವುದೇ ಕಾರ್ಯ ಮಾಡಲು ಪ್ರೇರಣೆಯಿಂದ ಅದರ ಫಲ ಕೊಡುವವರೆಗೂ ಅವನನ್ನೇ ಕೇಳಬೇಕು. ಆದ್ದರಿಂದ ಪ್ರತಿದಿನ ಹೀಗೆ ಕೂಗಿ ಕರೆಯುವಂತೆ ಮಾಡು ಎಂದು ಅವನನ್ನೇ ಕೇಳುವುದು. 

*****

ನಮ್ಮಲ್ಲಿ ಒಬ್ಬ ಆಳು ಕೆಲಸ ಮಾಡಿಕೊಂಡಿದ್ದಾನೆ. ನಾವು ಹೇಳಿದಂತೆ ಅವನು ಕೇಳಬೇಕು. ಕರೆದಾಗ ಬರಬೇಕು. ಹೋಗು ಎಂದು ಹೇಳಿದಾಗ ಸುಮ್ಮನೆ ಹೋಗಬೇಕು. ಕೆಲವೊಮ್ಮೆ ಕರೆದಾಗ ಆ ಆಳೂ ಬರುವುದಿಲ್ಲ. ಅವನಿಗೆ ಕೇಳಿಸದೇ ಇರಬಹುದು. ಅಥವಾ ಬೇರೆ ಕೆಲಸದ ಮೇಲೆ ಇನ್ನೆಲ್ಲೋ ಹೋಗಿರಬಹುದು. ಅಲ್ಲೇ ಇದ್ದರೂ ಮತ್ತೆ ಮತ್ತೆ ಕರೆಯುತ್ತಾರೆ ಎಂದು ಉಪೇಕ್ಷೆಯಿಂದ ಬಾರದೆಯೂ ಇರಬಹುದು. ನಾವು ನೇಮಕ ಮಾಡಿ, ಸಂಬಳ ಕೊಟ್ಟು, ಊಳಿಗಕ್ಕಿಟ್ಟುಕೊಂಡ ಆಳು ಹೀಗೆ ಮಾಡುವಾಗ ನಾವು ಸುಮ್ಮನೆ ಒಂದು ಸಾರಿ ಕರೆದರೆ ಆ ಪರಮಾತ್ಮ ಏಕೆ ಬಂದಾನು? 

ಮಗು ಆಡುತ್ತಿದೆ. ತಾಯಿ ಅಲ್ಲಿಯೇ ಸುತ್ತಮುತ್ತ ಓಡಾಡಿಕೊಂಡಿದ್ದಾಳೆ. ಸುಮ್ಮನೆ ಮಗುವಿನ ಬಳಿ ಬರುವುದಿಲ್ಲ. ಮಗುವಿಗೆ ಅಮ್ಮ ಬೇಕು. ಮಾತು ಬರುವುದಿಲ್ಲ. ಅಳುತ್ತದೆ. ಮಗು ಅಳುತ್ತಿರುವುದು ತಾಯಿಗೆ ಗೊತ್ತು. ಸ್ವಲ್ಪ ಅತ್ತು ಸುಮ್ಮನಾಗಬಹುದು ಎಂದು ನೋಡುತ್ತಾಳೆ. ಮಗು ಸುಮ್ಮನಾದರೆ ಕೆಲಸ ಮುಗಿಯಿತು. ಇಲ್ಲ, ಮಗು ಮತ್ತಷ್ಟು ಅಳುತ್ತದೆ. ಅಳಲಿ ಎಂದು ತಾಯಿ ಸುಮ್ಮನಿರುತ್ತದೆ. "ಬಾಲಾನಾಂ ರೋದನಂ ಬಲಂ" ಎಂದು ಅವಳಿಗೆ ಗೊತ್ತು. ಅಷ್ಟು ಚಿಕ್ಕ ಮಗುವಿಗೆ ಅಳುವೇ ವ್ಯಾಯಾಮ. ಮಗು ಮತ್ತಷ್ಟು ಅತ್ತು ರಚ್ಚೆ ಹಿಡಿಯುತ್ತದೆ. ಆಗ ಅಮ್ಮ ಬಂದು ಮಗುವನ್ನು ಎತ್ತಿಕೊಳ್ಳುತ್ತಾಳೆ. 

ಪರಮಾತ್ಮನೂ ಹಾಗೆಯೇ. ಒಮ್ಮೆ ಕರೆದರೆ ಅವನು ಬರುವುದಿಲ್ಲ. ಮತ್ತೆ ಮತ್ತೆ ಕರೆದರೂ ಬರುವುದಿಲ್ಲ. ಭಕ್ತ ರಚ್ಚೆ ಹಿಡಿಯಬೇಕು. ಚಂಡಿ ಹಿಡಿಯಬೇಕು. ಉತ್ತರ ಕರ್ನಾಟಕದ ಭಾಷೆಯಲ್ಲಿ ಹೇಳುವುದಾದರೆ "ಒಂದೇ ಸಮನೆ ಹೊಯ್ಕೊಳಲಿಕ್ಕೆ ಹತ್ಯಾನೆ" ಎನ್ನುವ ಮಟ್ಟದವರೆಗೆ ಹೋಗಬೇಕು. ಇದು ಒಂದು ದಿನದ ಕಥೆಯಲ್ಲ. ದಿನಂಪ್ರತಿ ನಡೆಯಬೇಕು. ಹಾಗೆ ಭಕ್ತ ಚಂಡಿ ಹಿಡಿದಾಗ ಎಂದೋ ಒಮ್ಮೆ ಪರಮಾತ್ಮ ಬರುತ್ತಾನೆ. ಅದಕ್ಕೇ "ಆಲಾಪಿನಂ ಪ್ರತಿದಿನಂ ಕುರು ಮೇ ಮುಕುಂದ" ಎನ್ನುತ್ತಾರೆ. 

*****

ಕುಲಶೇಖರರು ಮಹಾನುಭಾವರು. ಕೇರಳದ ಚೇರ ವಂಶದ ರಾಜರಾಗಿದ್ದವರು. ಜೀವನದಲ್ಲಿ ತಕ್ಕಮಟ್ಟಿಗೆ ಸುಖ-ಸಾಧನಗಳು ಇದ್ದವರೇ ಲೌಕಿಕದಲ್ಲಿ ಮೈಮರೆತು ಸುಖ-ಭೋಗಗಳಲ್ಲಿ ಮುಳುಗಿ ಹೋಗುತ್ತಾರೆ. ಆದರೆ ಕುಲಶೇಖರ ಅಲ್ವಾರ್ ಅಂತಹ ಸ್ಥಿತಿಯಲ್ಲಿಯೂ ಭಕ್ತಿಯ ಪರಾಕಾಷ್ಠತೆ ಮುಟ್ಟಿದ ದೈವ ಭಕ್ತರು. "ಘುಷ್ಯತೇ ಯಸ್ಯ ನಗರೇ ರಂಗಯಾತ್ರಾ ದಿನೇ ದಿನೇ, ತಮಹಂ ಶಿರಸಾ ವಂದೇ ರಾಜಾನಂ ಕುಲಶೇಕರಮ್" ಎಂದು ಮೊದಲು ಅವರ ಸ್ಮರಣೆ ಮಾಡಿಯೇ ಮುಕುಂದಮಾಲಾ ಸ್ತೋತ್ರವನ್ನು ಪಾರಾಯಣ ಮಾಡುತ್ತಾರೆ. 

ಅಂತಹ ಪಕ್ವ ಮನಸ್ಸಿನ ಆಲ್ವಾರರ ಕೃತಿಯ ಸಕ್ಕರೆಯನ್ನು ನಾವೇನು ಬಲ್ಲೆವು? ಕುಲಶೇಖರರು ಈ ಕಲ್ಲುಸಕ್ಕರೆಯ ಹಾರ ತಯಾರಿಸಿದವರು. ಅದರಲ್ಲೇ ಲೀನವಾದವರು. ಅವರ ಅನುಭವದ ಆಳ-ಅಗಲ ಎಷ್ಟಿರಬೇಡ?

ಶ್ರೀವೈಷ್ಣವ ಸಿದ್ಧಾಂತವನ್ನು ಕ್ರಮವಾಗಿ ಅಭ್ಯಾಸ ಮಾಡಿದ, ಶರಣಾಗತಿಯ ಪರಮ ರಹಸ್ಯವನ್ನು ಬಲ್ಲವರಿಗೆ ಈ ಕಲ್ಲು ಸಕ್ಕರೆಯ ಸರದ ನಿಜವಾದ ಪರಿಚಯ ಚೆನ್ನಾಗಿ ಆದೀತು. "ಪಂಡಿತರಾಜ" ಎಂದು ಕರೆಸಿಕೊಂಡ ಏನ್. ಟಿ. ಶ್ರೀನಿವಾಸ ಐಯ್ಯಂಗಾರ್ಯರು ಅಥವಾ ನಮ್ಮ ಊರಿನವರು (ಕನಕಪುರದವರು) ಎಂದು ನಾವು ಹೆಮ್ಮೆ ಪಡುವ ಕೆ. ಎಸ್ . ನಾರಾಯಣಾಚಾರ್ಯರು ಮುಂತಾದ ವಿದ್ವನ್ಮಣಿಗಳು ನೀಡುತ್ತಿದ್ದ ಉಪನ್ಯಾಸಗಳ ಮೂಲಕ ನಮಗೆ ಅಲ್ಪ ಸ್ವಲ್ಪ ಪರಿಚಯ. ಐವತ್ತು-ಅರವತ್ತು ವರುಷಗಳ ಹಿಂದೆ ಅವರು ನಡೆಸಿದ ಉಪನ್ಯಾಸಗಳು ಈಗಲೂ ಚಿತ್ತದಲ್ಲಿ ಗುಯ್ಗುಡುತ್ತವೆ. 

ಈ ಹಾದಿಯ ಪರಿಚಯವಿದ್ದವರಿಗೆ ಕಲ್ಲು ಸಕ್ಕರೆಯನ್ನು ಪದರ-ಪದರವಾಗಿ ನಿಧಾನವಾಗಿ ಸವಿಯುವ ಅವಕಾಶ!