Showing posts with label Abhisheka. Show all posts
Showing posts with label Abhisheka. Show all posts

Wednesday, December 17, 2025

ರಾಮನಾಮ ಎಂಬ ರಸವುಳ್ಳ ನೀರಿಗೆ


ಕಳೆದ ಸಂಚಿಕೆಯಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬಹು ಜನಪ್ರಿಯ ದೇವರನಾಮ ಶ್ರೀ ಪುರಂದರದಾಸರ ಕೃತಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೇ ಬಿಂದಿಗೆಯ" ವಿಶೇಷಾರ್ಥಗಳ ಅನ್ವೇಷಣೆಯಲ್ಲಿ ಕೃತಿಯ ಪಲ್ಲವಿಯ ಎರಡು ಸಾಲುಗಳಲ್ಲಿ ತುಂಬಿರುವ ಅರ್ಥವಿಶೇಷಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಈಗ ಈ ಹಾಡಿನ ಉಳಿದ ಭಾಗಗಳ ವಿಶೇಷ ಅರ್ಥಗಳನ್ನು ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳಿದ್ದು ನೀರು ತರಲು. ಯಾವ ನೀರು? ನಾವು ನಮ್ಮ ಸುತ್ತ-ಮುತ್ತ ಕಾಣುವ ಮತ್ತು ದಿನಂಪ್ರತಿ ಉಪಯೋಗಿಸುವ ನೀರು ಎನ್ನುವುದು ಸಾಮಾನ್ಯವಾದ ಹೊರ ಅರ್ಥ. ನೀರಿಲ್ಲದೆ ಜೀವನವಿಲ್ಲ. ಗಾಳಿಯ ನಂತರ ಜೀವಿಗೆ ಬೇಕಾದ ಅತ್ಯಂತ ಮುಖ್ಯ ಅವಶ್ಯಕತೆ ನೀರು. ನೀರನ್ನು ಶೇಖರಿಸಿ ತರಲು ಒಂದು ಸಾಧನ ಬೇಕು. ಬಿಂದಿಗೆಯು ಅಂತಹ ಒಂದು ಸಾಧನ. ನೀರಿಲ್ಲದೆ ಕರ್ಮವಿಲ್ಲ. ಏನಾದರೂ ಮಾಡುವ ಮೊದಲು ಕೈ, ಕಾಲುಗಳನ್ನಾದರೂ ತೊಳೆದುಕೊಳ್ಳುತ್ತೇವೆ. ಅದಕ್ಕೆ ನೀರು ಬೇಕು. ಸ್ನಾನ ಮಾಡಿದರೆ ನೀರು ಬೇಕು. ಪೂಜೆ-ಹೋಮಾದಿಗಳನ್ನು ಮಾಡಲು ಮೊದಲು ನೀರಿನಿಂದಲೇ ಪ್ರಾರಂಭ. ಕಡೆಯಲ್ಲಿ ಸಮರ್ಪಣ ಮಾಡಲೂ ನೀರು ಬೇಕು. ನೀರಿನಿಂದ ಪ್ರಾರಂಭವಾದ ಕೆಲಸಗಳು ನೀರಿನಿಂದಲೇ ಕೊನೆ! ಬೇರೆ ಯಾವುದಾದರೂ ಪದಾರ್ಥ ಇಲ್ಲದಿದ್ದರೆ ಹೇಗೋ ಕೆಲಸ ತೂಗಿಸಬಹುದು. ನೀರಿಲ್ಲದಿದ್ದರೆ ಮುಂದೆ ಹೋಗಲು ಆಗುವುದೇ ಇಲ್ಲ.  

ನೀರಿಗೆ ಒಂದು ವಿಶೇಷಾರ್ಥವಿದೆ. ಬಿಂದಿಗೆ ಅನ್ನುವುದು ದೇಹವಾದಾಗ (ಏಕೆ ಅನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ) ನೀರು ಅನ್ನುವುದು ಜೀವಿಯು ಮಾಡುವ "ಕರ್ಮ" ಸೂಚಕವಾಗುತ್ತದೆ. ಬಿಂದಿಗೆಯಲ್ಲಿ ನೀರನ್ನು ತರುವಂತೆ ದೇಹದಿಂದ ಜೀವಿಯು ಕರ್ಮಗಳನ್ನು ಮಾಡಿ ಆ ಮೂಲಕ ಸಾಧನೆಗಳನ್ನು ಮಾಡುತ್ತಾನೆ. 

ಈಶಾವಾಸ್ಯ ಉಪನಿಷತ್ತು ತನ್ನ ನಾಲ್ಕನೆಯ ಮಂತ್ರದಲ್ಲಿ "ತಸ್ಮಿನ್ ಆಪಃ ಮಾತರಿಶ್ವಾ ದಧಾತಿ" ಎಂದು ಹೇಳುತ್ತದೆ. "ಆಪಃ" ಅಂದರೆ ನೀರು. "ಮಾತರಿಶ್ವ" ಅಂದರೆ ವಾಯು. ವಾಯುವು ಕೊಡುವ ನೀರು ಯಾವುದು? ಕೊಡುವುದು ಯಾರಿಗೆ? ಜೀವಿಯ ಎಲ್ಲ ಕರ್ಮಗಳಿಗೆ ಪ್ರತ್ಯಕ್ಷ ಸಾಕ್ಷಿ ಪ್ರಾಣವಾಯು. ಮೊದಲ ಉಸಿರಿನಿಂದ ಪ್ರಾರಂಭವಾದ ಜೀವನದಿಂದ ಕರ್ಮ ಪ್ರಾರಂಭ. ಕೊನೆಯ ಉಸಿರಿನೊಡನೆ ಅದು ಮುಗಿಯಿತು. ಬೇರೆಯವರ ಕಣ್ಣು ತಪ್ಪಿಸಿ ಅನೇಕ ಕೆಲಸಗಳನ್ನು ಮಾಡಬಹುದು. ಹಾಗೆ ಏನಾದರೂ ಮಾಡಿ ಅರಗಿಸಿಕೊಳ್ಳಬಹುದು. ಆದರೆ ಮಾತರಿಶ್ವನ ಕಣ್ಣು ತಪ್ಪಿಸಲಾಗದು. ಇದನ್ನೇ "ಅಂತಃಸಾಕ್ಷಿ" ಎಂದೂ ಹೇಳುತ್ತೇವೆ.  ಜೀವನ ಕಾಲ ಮುಗಿದ ಮೇಲೆ ಜೀವಿಯನ್ನು ಪರಮಾತ್ಮನ ಮುಂದೆ ನಿಲ್ಲಿಸಿ ವಾಯುದೇವನು ಅವನ ಸಮಸ್ತ ಕರ್ಮಗಳನ್ನು ಹಾಜರು ಮಾಡುತ್ತಾನೆ. 

ಈ ಕಾರಣದಿಂದ "ನಾ ನೀರಿಗ್ಹೋಗುವೆ" ಅಂದರೆ "ನೀನು ಕೊಟ್ಟ ದೇಹದಿಂದ ನಾನು ಕರ್ಮಗಳನ್ನು ಆಚರಿಸಿ ಸಾಧನೆಗಳನ್ನು ಮಾಡುವೆ, ಮಹಾಲಕ್ಷ್ಮಿ ಅಕ್ಕಾ" ಎಂದು ಹೇಳುವುದು. ಇದು ಅಂತರಾರ್ಥ. 
***** 

"ರಾಮನಾಮ ಎಂಬೋ ರಸವುಳ್ಳ ನೀರಿಗೆ" ಬಿಂದಿಗೆ ಬೇಕು. ರಾಮನಾಮದ ವಿಶೇಷವೇನು? ಅನಂತರೂಪಿ ಪರಮಾತ್ಮನಿಗೆ ಅನಂತ ಹೆಸರುಗಳು. ಸೃಷ್ಟಿಯಲ್ಲಿ ಇರುವ ಸಕಲ ಶಬ್ದಗಳೂ ಪರಮಾತ್ಮನನ್ನೇ ಹೇಳುತ್ತವೆ ಎನ್ನುವುದು ಒಂದು ಪ್ರಮೇಯ. (ಧ್ವನ್ಯಾತ್ಮಕ ಮತ್ತು ವರ್ಣಾತ್ಮಕ ಶಬ್ದಗಳ ಬಗ್ಗೆ ಹಿಂದೊಂದು ಸಂಚಿಕೆಯಲ್ಲಿ ನೋಡಿದ್ದೇವೆ). "ರಮಯತಿ ಇತಿ ರಾಮಃ". "ಆನಂದ (ಸಂತೋಷ) ಕೊಡುವವನು ರಾಮ" ಎಂದು ಇದರ ಅರ್ಥ. ಜೀವಿಗಳಿಗೆ ಈ ಸುತ್ತುವ ಸಂಸಾರದ ಹುಟ್ಟು-ಸಾವುಗಳಿಂದ ಬಿಡುಗಡೆ ಕೊಟ್ಟು ಶಾಶ್ವತ ಆನಂದ ಕೊಡುವವನು ರಾಮ. ಈ ಮೋಕ್ಷದ ನಂತರದ ಆನಂದಕ್ಕೆ ಅದರ ಪ್ರಮಾಣದಲ್ಲಿ ಆಗಾಗ ಹೆಚ್ಚು-ಕಡಿಮೆ ಆಗುವ ಭಯವಿಲ್ಲ. ಎಂದೋ ಒಂದು ದಿನ ಮುಗಿದುಹೋಗುವುದು ಎನ್ನುವ ಆತಂಕವಿಲ್ಲ. ಅದು ಶಾಶ್ವತವಾದ, ಕೊನೆಯಿಲ್ಲದ, ಪರಿಪೂರ್ಣ ಆನಂದ. 

ರಾಮನು ಎಲ್ಲ ಕಾಲದಲ್ಲೂ ಇದ್ದನು. ಎಲ್ಲ ಕಾಲದಲ್ಲೂ ಇರುತ್ತಾನೆ. ತ್ರೇತಾಯುಗದ ಶ್ರೀರಾಮಚಂದ್ರನು ಅವತಾರ ಮಾಡುವ ಮೊದಲೂ ಇದ್ದನು. ಆ ಅವತಾರ ಮುಗಿದಮೇಲೂ ಇರುತ್ತಾನೆ. ಇಂತಹ ರಾಮನ ಹೆಸರನ್ನೇ ದಶರಥ-ಕೌಸಲ್ಯೆಯರ ಮಗನಿಗೂ ಕೊಟ್ಟರು. ಇಬ್ಬರೂ ಒಂದೇ. ಭೇದವಿಲ್ಲ. 

ಪರಮಾತ್ಮನ ಅನಂತ ನಾಮಗಳಲ್ಲಿ ರಾಮನಾಮ ಅತ್ಯಂತ ಸುಲಭವಾದದ್ದು. ಒತ್ತಕ್ಷರಗಳ ಗೊಂದಲವಿಲ್ಲ. ಆರು-ಎಂಟು-ಹತ್ತು ಅಕ್ಷರಗಳ ದೊಡ್ಡ ಹೆಸರಲ್ಲ. ಈಗ ತಾನೇ ಮಾತು ಕಲಿಯುತ್ತಿರುವ ಮಗುವೂ ಸುಖವಾಗಿ "ರಾಮ" ಎಂದು ಹೇಳುವುದು. "ಹೃಷಿಕೇಶ" "ತ್ರಿವಿಕ್ರಮ" "ಪದ್ಮನಾಭ" "ಸಂಕರ್ಷಣ" "ಅಧೋಕ್ಷಜ" ಮುಂತಾದುವನ್ನು ಹೇಳಲು ಅನೇಕರಿಗೆ ಕಷ್ಟವಾಗುತ್ತದೆ. ರಾಮನಾಮಕ್ಕೆ ಇಂತಹ ಬಂಧವಿಲ್ಲ. ಅದು ಗಟ್ಟಿಯಾದ ಚಕ್ಕುಲಿ, ಕೋಡುಬಳೆ, ಪುಳ್ಳಂಗಾಯಿ ಉಂಡೆ ತಿಂದು ಅರಗಿಸಿಕೊಂಡಂತೆ ಅಲ್ಲ. ಪಾಯಸ ಕುಡಿದಂತೆ ಸುಲಭ. ಸಿಹಿಯೂ ಹೌದು. ಆದ್ದರಿಂದ "ರಾಮನಾಮ ಪಾಯಸ"!
*****

ರಾಮನಾಮ ಎಂಬ ನೀರು ಎಂದಾಯಿತು. "ರಸವುಳ್ಳ ನೀರು" ಎಂದೇಕೆ ಹೇಳಿದರು? ನೀರಿನಲ್ಲಿ ಎಂತಹ ರಸ? ನಮಗೆ ಬಾಯಾರಿಕೆ ಆದಾಗ ಕುಡಿಯಲು ನೀರು ಬೇಕು. ಒಳ್ಳೆಯ ಬಾದಾಮಿ ಹಾಲೋ, ಎಳನೀರೋ ಕೊಟ್ಟರೆ ಹೇಗೆ? ಸೊಗಸಾದ ಕಾಫಿ? ಅಥವಾ ಕಿತ್ತಳೆ ರಸ? "ಅದೆಲ್ಲಾ ಇರಲಿ. ಕೊಡುವಿರಂತೆ. ಮೊದಲು ಒಂದು ಲೋಟ ನೀರು ಕೊಡಿ, ಆಮೇಲೆ ಬೇರೆಯದು" ಎನ್ನುತ್ತೇವೆ. ಆಯಿತು. ಕೊಟ್ಟರು. ಎಲ್ಲ ನೀರೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಿನಲ್ಲಿ ಬೋರ್ವೆಲ್ ನೀರು ಕೊಡಬಹುದು. ಯಾವುದೊ ಕೆರೆಯಿಂದ ತಂಡ ಟ್ಯಾಂಕರ್ ನೀರು ಇರಬಹುದು. ಕಾವೇರಿ, ಅರ್ಕಾವತಿ ನೀರು ತಂದಿರಬಹುದು. ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ನೀರು ಕುಡಿದರೆ ಮುಖ ಸಿಂಡರಿಸುತ್ತೇವೆ. "ಈ ನೀರು ಅಷ್ಟು ಸರಿ ಇಲ್ಲ" ಅನ್ನುತ್ತೇವೆ. ಯಾಕೆ? ನೀರು ಚೆನ್ನಾಗಿರಬೇಕು. "ಇಂತಹ ಒಳ್ಳೆಯ ನೀರು ತರುತ್ತೇನೆ, ಬಿಂದಿಗೆ ಕೊಡು" ಅನ್ನುವುದು ಸಾಮಾನ್ಯ ಅರ್ಥ. 

"ರಸ" ಅನ್ನುವುದಕ್ಕೆ ವಿಶೇಷಾರ್ಥವೂ ಉಂಟು. ಅದು ತಿಳಿಯಬೇಕಾದರೆ ಶ್ರೀಮದ್ ಭಗವದ್ಗೀತೆಯ ಏಳನೆಯ ಅಧ್ಯಾಯ ನೋಡಬೇಕು. ಎಂಟನೆಯ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳುತ್ತಾನೆ:

ರಸೋಹಂ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ ಸೂರ್ಯಯೋ: 
ಪ್ರಣವಃ ಸರ್ವವೇದೇಷು ಶಬ್ದ: ಖೇ ಪೌರುಷಮ್ ನೃಷು 

"ನೀರಿನಲ್ಲಿ ನಾನು ರಸ ಆಗಿದ್ದೇನೆ. ಚಂದ್ರ-ಸೂರ್ಯರಲ್ಲಿ ಬೆಳಕಾಗಿದ್ದೇನೆ. 
ವೇದಗಳಲ್ಲಿ ಓಂಕಾರವಾಗಿದ್ದೇನೆ. ಆಕಾಶದಲ್ಲಿ ಶಬ್ದ ರೂಪದಲ್ಲಿ ಇದ್ದೇನೆ. 
ಮನುಷ್ಯರಲ್ಲಿ ಕ್ರಿಯಾಶಕ್ತಿಯ ರೂಪವಾಗಿ ನಿಂತಿದ್ದೇನೆ"

ಪರಮಾತ್ಮನ ಸನ್ನಿಧಾನ ಇದ್ದಾಗ ನೀರು ರುಚಿಸುತ್ತದೆ. ಪದಾರ್ಥಗಳ ಸೊಗಸು ನಾಲಿಗೆಗೆ ಸಿಗುತ್ತದೆ. ಕಿತ್ತಳೆ ತೊಳೆ ನೋಡಲು ಕೆಂಪಾಗಿದೆ. ದಪ್ಪಗೂ ಇದೆ. ಆದರೆ ತಿಂದಾಗ ಬರೀ ಬೆಂಡು ಬೆಂಡು. ಯಾಕೆ? ಅಲ್ಲಿ ಪರಮಾತ್ಮನ ಅಭಿವ್ಯಕ್ತಿ ಇಲ್ಲ. ಬಾದಾಮಿ, ಗೋಡಂಬಿ ಬಹಳ ಚೆನ್ನಾಗಿವೆ. ಬಾಯಿಯಲ್ಲಿ ಹಾಕಿಕೊಂಡು ಎಷ್ಟು ಹೊತ್ತು ಇಟ್ಟುಕೊಂಡರೂ ಏನೂ ರುಚಿಯಿಲ್ಲವಲ್ಲ? ಅಗಿದು ಅದಕ್ಕೆ ಸ್ವಲ್ಪ ರಸರೂಪದ ನೀರು ಸೇರಿದರೆ ತಕ್ಷಣ ರುಚಿ ಸಿಕ್ಕಿತು!  

ಮನುಷ್ಯನು ಮಾಡುವ ಕೆಲಸಗಳೂ ಅಂತೆಯೇ. ಯಾವುದೋ ಕಾರಣಕ್ಕೆ ಮಾಡಿದ ಕಾರ್ಯಗಳು ನೀರಸ. "ಪರಮಾತ್ಮನಿಗೆ ಪ್ರೀತಿಯಾಗಲಿ" ಎಂದು ಮಾಡಿದ ತಕ್ಷಣ ಅಲ್ಲಿ ರಸ ಬಂದು ಕೂತಿತು. ಮಾಡಿದ ಕರ್ಮ ಸತ್ಕರ್ಮ ಆಯಿತು. ಅವನಿದ್ದರೆ ಅದು ಸರಸ. ರಸದಿಂದ ಕೂಡಿದ್ದು. ಅವನಿಲ್ಲದಿದ್ದರೆ ಅದು ನೀರಸ. ರಸವಿಲ್ಲದ್ದು. ಅವನಿಗೆ ವಿರುದ್ಧವಾಗಿದ್ದರೆ ವಿರಸ. ಇದೇ ಸತ್ಕರ್ಮಗಳ ರಹಸ್ಯ!

"ರಾಮನಾಮವೆಂಬ ರಸವುಳ್ಳ ನೀರು ತರುತ್ತೇನೆ, ಬಿಂದಿಗೆ ಕೊಡು ಅಕ್ಕಾ" ಅಂದಾಗ "ಸತ್ಕರ್ಮಗಳನ್ನು ಮಾಡಿ ರಸರೂಪವಾದ ಸಾಧನೆಯನ್ನು ದೇಹದಲ್ಲಿ ತುಂಬಿಕೊಳ್ಳುತ್ತೇನೆ" ಎಂದು ಅರ್ಥ. ಇದೇ ಇಲ್ಲಿನ ವಿಶೇಷಾರ್ಥ. 
*****

"ಗೋವಿಂದ ಎಂಬ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ, ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ" ಅನ್ನುವುದು ಮುಂದಿನದು. "ಗೋವಿಂದ" ಅನ್ನುವ ಪದಕ್ಕೆ ಅನೇಕ ಅರ್ಥಗಳು. ಗೋ ಅನ್ನುವ ಪದಕ್ಕೆ "ನೀರು" "ಹಸು" "ಭೂಮಿ" "ವೇದಗಳು" ಇನ್ನೂ ಮುಂತಾಗಿ ವಿವರಣೆಗಳಿವೆ. "ಉತ್ತಮವಾದದ್ದು" ಎಂದೂ ಅರ್ಥವುಂಟು. "ನೀರಿನಲ್ಲಿ ಶ್ರೇಷ್ಠವಾದ ರೀತಿಯ ನೀರು ತರುತ್ತೇನೆ" ಎಂದು ಹೇಳುವುದು ಸಾಮಾನ್ಯ ಅರ್ಥ. 

ಅಮೃತದ ನೀರು ಹೇಗೆ? ಸತ್ಕರ್ಮ ಮಾಡಿದ ಮೇಲೆ ಮುಂದೆ ಜನ್ಮವಿಲ್ಲದ ಮುಕ್ತಿ ಸಿಗುತ್ತದೆ. ಸಾವಿಲ್ಲದ್ದು ಅಮೃತ. ಗೋವಿಂದನ ಪ್ರೀತಿಗಾಗಿ ಮಾಡಿದ ಕರ್ಮಗಳನ್ನು, ನಿಷ್ಕಾಮ ಕರ್ಮಗಳನ್ನು, ತುಂಬಿಕೊಂಡಮೇಲೆ ಮತ್ತೆ ಮರಣವಿಲ್ಲ. ಅಂದರೆ ಅಮೃತತ್ವ ಸಿಕ್ಕಿತು. ಆದ್ದರಿಂದ "ಅಮೃತದ ನೀರು". 

"ಕಾಮಿನಿಯರ ಕೂಡೆ ಏಕಾಂತವಾಡೆನು, ತಾರೆ ಬಿಂದಿಗೆಯ" ಎಂದರೇನು? ನೀರು ತರಲು ನದಿಗೋ, ಭಾವಿಗೋ ಹೋದಾಗ ಅಲ್ಲಿ ನಮ್ಮಂತೆಯೇ ಅನೇಕರು ಬಂದಿರುತ್ತಾರೆ. ಸಾಮಾನ್ಯವಾಗಿ ನೀರು ತರಲು ಹೋಗುತ್ತಿದ್ದುದು ಲೋಕಾರೂಢಿಯಾಗಿ ಹೆಣ್ಣುಮಕ್ಕಳು. ಕಾಮಿನಿ ಅನ್ನುವ ಪದಕ್ಕೆ ಹೆಣ್ಣು ಎಂದೂ ಒಂದು ಅರ್ಥ. ಒಂದರ್ಥವೇನು, ಇದೇ ಅರ್ಥದಲ್ಲಿ ಆ ಪದವನ್ನು ಸಾಮಾನ್ಯವಾಗಿ ಬಳಸುವುದು. ಕೆಲವರು ಅಲ್ಲಿ ಕಂಡಾಗ ಸಹಜವಾಗಿ ಸ್ವಲ್ಪ ಅದು-ಇದು ಮಾತಾಡುವಂತೆ ಆಗುತ್ತದೆ. ಹರಟೆಯಲ್ಲಿ ಕಾಲಹರಣ ನಡೆಯುತ್ತದೆ. "ನಾನು ಹರಟೆಯಲ್ಲಿ ಕಾಲ ವ್ಯಯ ಮಾಡುವುದಿಲ್ಲ. ಅಲ್ಲಿ ಹೋಗಿ, ನೀರು ತುಂಬಿಕೊಂಡು ಬೇಗ ಬಂದುಬಿಡುತ್ತೇನೆ" ಎನ್ನುವುದು ಸಾಮಾನ್ಯ ಅರ್ಥ. 

"ಕಾಮ" ಅಂದರೆ ಆಸೆ. ಆಸೆ ಯಾವಾಗಲೂ ಒಂದೇ ಒಂದಾಗಿ ಬರುವುದಿಲ್ಲ. ಆಸೆಗಳು ಗುಂಪಾಗಿ ಮನುಷ್ಯನನ್ನು ಕಾಡುತ್ತವೆ. ಕಾಮದಿಂದ ಹುಟ್ಟಿದ್ದು ಕಾಮಿನಿ ಎಂದಾಗುತ್ತದೆ. "ಅಕ್ಕ, ನೀನು ದೇಹವನ್ನು ಕೊಟ್ಟರೆ ಅದನ್ನು ಇತರೆ ಆಸೆಗಳ, ಪ್ರಾಪಂಚಿಕ ಸುಖ-ಭೋಗಗಳ, ತೃಪ್ತಿಗೆ ಬಳಸುವುದಿಲ್ಲ. ಕೇವಲ ಸಾಧನೆಗಾಗಿಯೇ ಜೀವಿತ ಕಾಲವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳುವುದೇ ವಿಶೇಷಾರ್ಥ. 

ನೀರು ತರಲೆಂದು ಬಿಂದಿಗೆ ಹಿಡಿದು ಹೊರಟು, ಜಲಾಶಯದ ಬಳಿ ಸಮಯವೆಲ್ಲ ಹರಟೆಯಲ್ಲಿ ಕಳೆದು, ಕಡೆಗೆ ಮನೆಗೆ ಖಾಲಿ ಬಿಂದಿಗೆ ಹಿಡಿದು ಬಂದರೆ ಹೇಗಿರುತ್ತದೆ? ಅಮೂಲ್ಯವಾದ ಮತ್ತು ಅಪರೂಪವಾದ ಮನುಷ್ಯ ಜನ್ಮ ಪಡೆದು. ಲೌಕಿಕ ಸುಖಗಳಲ್ಲಿ ಎಲ್ಲ ಕಾಲ ಕಳೆದು, ಕಡೆಗೆ ಅಲ್ಲಿ ಹೋಗಿ ನಿಂತಾಗ ಖಾಲಿ ಕೈ ಆಗುವಂತಾದರೆ ಹೇಗೆ? ಕಾಡಿ-ಬೇಡಿ ಪಡೆದ ದೇಹ, ಜನ್ಮ ವ್ಯರ್ಥವಾಯಿತು. ಹೀಗಾಗಲು ಬಿಡುವುದಿಲ್ಲ ಎಂದು ಮಹಾಲಕ್ಷ್ಮಿ ದೇವಿಗೆ ವಚನ ಕೊಟ್ಟಂತೆ ಈ ಮಾತು. 
***** 

"ಬಿಂದು ಮಾಧವನ ಘಟ್ಟಕ್ಕೆ ಹೋಗುವೆ, ಪುರಂದರ ವಿಠಲಗೆ ಅಭಿಷೇಕ ಮಾಡುವೆ" ಎನ್ನುವುದು ಕಡೆಯ ನುಡಿಯ ತಿರುಳು. ಕಾಶಿಯಲ್ಲಿ ಬಿಂದುಮಾಧವನ ದೇವಾಲಯ ಇದೆ. ಗಂಗಾನದಿಯ ಪಕ್ಕದಲ್ಲೇ ಇದೆ. "ಒಳ್ಳೆಯ ಗಂಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಬಂದು ವಿಠಲನ ಇನ್ನೊಂದು ರೂಪನಾದ ಮಾಧವನಿಗೆ ಅಭಿಷೇಕ ಮಾಡುತ್ತೇನೆ" ಅನ್ನುವುದು ಸಾಮಾನ್ಯ ಅರ್ಥ. 

"ನೀನು ನನ್ನ ಈ ಬೇಡಿಕೆಯ ಫಲವಾಗಿ ಕೊಡುವ ದೇಹದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಅವುಗಳನ್ನೆಲ್ಲಾ ಪರಮಾತ್ಮನಿಗೆ ಸಮರ್ಪಣ ಮಾಡುತ್ತೇನೆ" ಎಂದು ಮಹಾಲಕ್ಷ್ಮೀದೇವಿಯ ಮುಂದೆ ಪ್ರತಿಜ್ಞೆ ಮಾಡುವುದೇ ಒಟ್ಟು ತಾತ್ಪರ್ಯ ಮತ್ತು ವಿಶೇಷಾರ್ಥ. 

"ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿ ಗರ್ಭಿತಂ" ಎಂದು ಒಂದು ಮಾತಿದೆ. ದೊಡ್ಡವರ ಮಾತುಗಳಲ್ಲಿ ಅವರ ಅನೇಕ ಕಾಲದ ಅನುಭವದ, ಅಧ್ಯಯನದ ಸಾರ ತುಂಬಿರುತ್ತದೆ. ಶ್ರೀ ಪುರಂದರದಾಸರ ಪದಗಳಲ್ಲಿ ಇವನ್ನು ಚೆನ್ನಾಗಿ ಕಾಣಬಹುದು. ಒಂದೊಂದು ಸಾಲಿನಲ್ಲೂ, ಒಂದೊಂದು ಪದದಲ್ಲೂ, ಸಾಮಾನ್ಯ ಅರ್ಥಗಳೂ, ಅವುಗಳ ಜೊತೆ-ಜೊತೆಯಾಗಿ ವಿಶೇಷ ಅರ್ಥಗಳೂ, ಗೂಡಾರ್ಥಗಳೂ ತುಂಬಿರುತ್ತವೆ. ಒಂದು ಸಲ ಓದಿದರೆ ಅಥವಾ ಕೇಳಿದರೆ ಅಷ್ಟಿಷ್ಟು ಅರ್ಥವೇನೋ ಆಗುತ್ತದೆ. ಸರಿಯಾದ ಮೌಲ್ಯ ನಮಗೆ ಸಿಗಬೇಕಾದರೆ ಹೆಚ್ಚಿನ ಅಧ್ಯಯನ ಅಗತ್ಯ. 

*****

ಹಿಂದಿನ ಮತ್ತು ಈ ಸಂಚಿಕೆಯನ್ನು ಓದಿದ ನಂತರ ಹಾಡನ್ನು ಕೇಳಿದರೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಅದನ್ನು ಈ ಕೆಳಗೆ ಕೊಟ್ಟಿದೆ:


ಒಂದು ಬಾರಿ ಓದಿದರೆ ವಿಶೇಷಾರ್ಥಗಳು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಎರಡು ಮೂರು ಬಾರಿ ಓದುವ ತಾಳ್ಮೆ ಬೇಕು. ಒಮ್ಮೆ ಮನಸ್ಸಿನಲ್ಲಿ ನಿಂತರೆ ಮುಂದೆ ಬೇರೆ ಬೇರೆ ವಿಷಯಗಳ ಅಧ್ಯಯನ ಕಾಲದಲ್ಲಿ ಮತ್ತಷ್ಟು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. 

Sunday, June 29, 2025

ಮನವ ಕಬ್ಬಿಣ ಮಾಡು, ಹೇ ಮೃಡನೇ!


"ದೇವರಲ್ಲಿ ಬೇಡುವುದು ಸರಿಯೇ?" ಎಂಬ ಹಿಂದಿನ ಸಂಚಿಕೆಯಲ್ಲಿ ನಾವು ನಂಬಿದ, ಆರಾಧಿಸುವ  ದೇವರು-ದೇವತೆಗಳಲ್ಲಿ ಅನೇಕ ವಿಧವಾಗಿ ವರಗಳನ್ನು ಕೇಳಿಕೊಳ್ಳುವ ರೀತಿ, ಮತ್ತು ಅದರ ಸರಿ-ತಪ್ಪು ಎನ್ನುವ ವಿಚಾರವಾಗಿ ಚರ್ಚೆ ಮಾಡಿದೆವು. ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ನಾವು ದಿನಂಪ್ರತಿ ಉಪಯೋಗಿಸುವ ಅನೇಕ ಸ್ತೋತ್ರ-ಮಂತ್ರಗಳಲ್ಲಿ ಈ ರೀತಿಯ ಬೇಡುವಿಕೆ ವಿಶಾಲವಾಗಿ ಹರಡಿದೆ. ಅನೇಕರು ಬಹಳ ಭಕ್ತಿ-ಶ್ರದ್ಧೆಗಳಿಂದ ಅನುಷ್ಠಾನ ಮಾಡುವ ಇಂತಹ ಒಂದು ಆಚರಣೆ ರುದ್ರ-ಚಮಕಗಳ ಪಾರಾಯಣಾದಿಗಳು. ಅದರ ತಿರುಳು ಕೆಲವರಿಗೆ ಅರ್ಥವಾಗುತ್ತದೆ. ಅನೇಕರಿಗೆ ಗೊತ್ತಾಗುವುದಿಲ್ಲ. ಆದರೆ ನುರಿತವರು ಅದನ್ನು ಹೇಳುವಾಗ ಕೇಳುಗರೆಲ್ಲರಿಗೂ ಒಂದು ವಿಶೇಷ ಅನುಭವ ಆಗುವುದು ಅಲ್ಲಿ ಕುಳಿತು ಕೇಳಿದವರಿಗೆ ಗೊತ್ತು. ಇಲ್ಲಿಯೂ ಅನೇಕ ಬೇಡಿಕೆಗಳನ್ನು ರುದ್ರದೇವರ ಮುಂದೆ ಇಡುವುದು ಉಂಟು. ಇದರ ಬಗ್ಗೆ ತಿಳಿದವರು ಚೆನ್ನಾಗಿ ವಿವರಿಸಬಲ್ಲರು. ಆದರೂ ನಮ್ಮ ಯೋಗ್ಯತೆ ಇರುವಷ್ಟು ನೋಡುವುದರಲ್ಲಿ ತಪ್ಪೇನೂ ಇಲ್ಲ. 

*****

ಇದೊಂದು ನಮಗೆ ಬೇಕೇ ಬೇಕಾದ ಅತಿ ಹತ್ತಿರದ ಕುಟುಂಬ. ಒಬ್ಬ ಮಗನಾದ ಗಣೇಶನು ವಿಘ್ನಗಳನ್ನು ದೂರಮಾಡಿ ಎಲ್ಲವನ್ನೂ ಸುಗಮ ಮಾಡುವ "ಸುಮುಖ". ಇನ್ನೊಬ್ಬ ಮಗ ದೇವಸೇನಾಪತಿಯಾದ "ಕುಮಾರ". ತಾಯಿಯು ಬುದ್ಧಿ ಶಕ್ತಿಯ ಅಭಿಮಾನಿ ದೇವತೆಯಾದ "ಉಮಾದೇವಿ". ಮತಿ ಪ್ರೇರಕಳು. ತಂದೆಯಾದರೋ ಮನೋಭಿಮಾನಿ "ಮಹರುದ್ರದೇವರು". ಎಲ್ಲ ಸಾಧನೆಗಳ ದಾರಿಯಲ್ಲಿ ಬರುವ ತೊಂದರೆಗಳನ್ನು ನಿವಾರಿಸಲು ವಿಘ್ನೇಶ. ಸಾಧನೆಗಳಿಗೆ ಅಡ್ಡಿ ಪಡಿಸುವ ಆಸುರೀಶಕ್ತಿಗಳನ್ನು ಹತ್ತಿಕ್ಕಲು ದೇವತೆಗಳ ಸೇನಾಧಿಪತಿಯಾದ ಷಣ್ಮುಖ. ಕಪಿಯಂತೆ ದಿಕ್ಕಾಪಾಲಾಗಿ ಓಡುವ ಮನಸ್ಸು ನಿಯಂತ್ರಿಸಿ ಏಕಾಗ್ರತೆ ಸಾಧಿಸಲು ಶಂಭುವಿನ ಕರುಣೆ. ಸಾಧನೆಗೆ ಬುದ್ಧಿಯನ್ನು ಕೇಂದ್ರೀಕರಿಸಲು ಗಿರಿಜೆಯ ಅನುಗ್ರಹ. ಈ ಕುಟುಂಬವನ್ನು ಬಿಟ್ಟು ಸಾಧಕನಿಗೆ ಬೇರೆ ಗತಿಯಿಲ್ಲ. 

ಶ್ರೀ ಪುರಂದರದಾಸರು ತಮ್ಮ ಒಂದು ಉಗಾಭೋಗದಲ್ಲಿ ಇದನ್ನು ಹೀಗೆ ಒಟ್ಟುಗೂಡಿಸಿ ಹೇಳುತ್ತಾರೆ:

ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ 
ಮತಿಪ್ರೇರಿಸುವಳು ಪಾರ್ವತಿದೇವಿ 
ಮುಕುತಿಪಥಕೆ ಮನವೀವ ಮಹರುದ್ರದೇವರು

ರುದ್ರದೇವರು ಸ್ವತಃ ವೈರಾಗ್ಯ ಮೂರ್ತಿಗಳು. ಅವರಿಗಾಗಿ ಏನನ್ನೂ ಇಟ್ಟುಕೊಂಡವರಲ್ಲ. ಆದರೆ ಭಕ್ತರಿಗಾಗಿ ಎಲ್ಲವನ್ನೂ ಕೊಡಬಲ್ಲವರು!
***** 

ನಮ್ಮ ಕುಟುಂಬದಲ್ಲಿ ಒಂದು ಸೊಗಸು. ನಮ್ಮ ಅಪ್ಪನ ತಂದೆಯ ಕಡೆ (ಪಿತಾಮಹ ವಂಶ) ಮಹಾವಿಷ್ಣುವಿನ ಆರಾಧಕರು. ನಮ್ಮ ಅಪ್ಪನ ತಾಯಿಯ ಕಡೆ (ಮಾತಾಮಹ ವಂಶ) ರುದ್ರದೇವರ ಆರಾಧಕರು. ಇವರ ಮನೆಯಲ್ಲಿ ಎಲ್ಲ ಆಚರಣೆಗಳೂ ಈ ರೀತಿ. ಅವರ ಮನೆಯಲ್ಲಿ ಎಲ್ಲ ಆಚರಣೆಗಳೂ ಆ ರೀತಿ. ಇದು ಹಿಂದಿನ ಮೂರು ತಲೆಮಾರುಗಳಿಂದ ನಡೆದುಬಂದಿತ್ತು. ಉಭಯ ಕುಟುಂಬಗಳಲ್ಲೂ ಒಳ್ಳೆಯ ಸಾಮರಸ್ಯ ನಡೆದಿತ್ತು. ಈ ವಿಷಯವಾಗಿ ಎಂದೂ ಭಿನ್ನಾಭಿಪ್ರಾಯ ಬಂದಿರಲಿಲ್ಲ. ಅವರವರ ನಂಬಿಕೆ, ಆಚರಣೆಗಳು ಅವರವರಿಗೆ. ಅವರ ಹಬ್ಬ-ಉತ್ಸವಗಳಿಗೆ ಇವರು ಹೋಗುವರು. ಇವರ ಹಬ್ಬ-ಆಚರಣೆಗಳಿಗೆ ಅವರು ಬರುವರು. ಒಂದು ಕುಟುಂಬದ ಉಪಸ್ಥಿತಿಯಿಲ್ಲದೆ ಇನ್ನೊಂದು ಕುಟುಂಬದ ಯಾವ ಸಮಾರಂಭವೂ ನಡೆಯದು.  ಹೀಗೆ ನಡೆದುಬಂದಿತ್ತು. 

ನಮ್ಮ ತಂದೆಯವರಿಗೆ ಇಬ್ಬರು ಸೋದರಮಾವಂದಿರು. ಅವರಿಬ್ಬರೂ ವಯಸ್ಸಿನಲ್ಲಿ ನಮ್ಮ ಅಜ್ಜಿಗಿಂತ (ಅವರ ಅಕ್ಕ) ಚಿಕ್ಕವರು. ದೊಡ್ಡ ಸೋದರಮಾವ ತಂದೆಯವರಿಗಿಂತ ಮೂರು ವರುಷ ದೊಡ್ಡವರು. ಚಿಕ್ಕ ಸೋದರಮಾವ ತಂದೆಯವರಿಗಿಂತ ಕೆಲವು ತಿಂಗಳು ದೊಡ್ಡವರು. ಹೀಗಾಗಿ ಇವರು ಮೂವರೂ ಒಂದೇ ಓರಗೆಯವರು. ಜೊತೆಯಲ್ಲಿ ಬೆಳೆದವರು. ಮಾವಂದಿರು - ಸೋದರಳಿಯ ನೆಂಟತನಕ್ಕಿಂತ ಹೆಚ್ಚಾಗಿ ಸ್ನೇಹಿತರು. ಮೂವರೂ ಸೇರಿದಾಗ ವಿನೋದ ಪ್ರಧಾನವಾಗಿ ಕಾಲ ಕಳೆಯುತ್ತಿತ್ತು. 

ನಾನು ಶಾಲೆಗಳಲ್ಲಿ ಓದುತ್ತಿದ್ದಾಗ ತಂದೆಯವರ ಜೊತೆ ಅವರಿರುವಲ್ಲಿಗೆ ಹೋಗುತ್ತಿದ್ದೆ. ಅವರುಗಳ ಮಾತಿನ ವಿಷಯ ಕೆಲವು ವೇಳೆ ಅರ್ಥವಾಗುತ್ತಿತ್ತು. ಕೆಲವು ವೇಳೆ ಇಲ್ಲ. ಆಗ ಕೇಳಿದ ಕೆಲವು ವಿಷಯಗಳು ಮುಂದೆ ಎಂದೋ ನೆನಪಿಗೆ ಬಂದು, ನಮ್ಮ ಜೀವನಾನುಭವದ ಹಿನ್ನೆಲೆಯಲ್ಲಿ  ಅರ್ಥವಾಗಿವೆ. ಇದು ನನ್ನೊಬ್ಬನ ವಿಶೇಷ ಎಂದು ಮಾತ್ರವಲ್ಲ. ಅನೇಕರಿಗೆ ಅವರವರ ಜೀವನಗಳಲ್ಲಿ ಇದೇ ರೀತಿ ಅನುಭವಗಳು ಆಗಿರುತ್ತವೆ. 
*****

ನಮ್ಮ ಬಾಲ್ಯದಲ್ಲಿ ಪ್ರತಿ ಊರಿನಲ್ಲೂ ಪ್ರತಿವರುಷ ಊರಹಬ್ಬ ಆಚರಿಸುತ್ತಿದ್ದರು. ಈಗಲೂ ಅನೇಕ ಕಡೆ ನಡೆಯುತ್ತವೆ. ಊರಹಬ್ಬಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ಹೊರಗಡೆ ಪ್ರದೇಶಗಳಲ್ಲಿ ಓದು, ಕೆಲಸ, ವ್ಯವಹಾರ ಮುಂತಾದ ಕಾರಣಗಳಿಂದ ವಾಸಿಸುತ್ತಿದ್ದ ಜನರು ಊರಹಬ್ಬಕ್ಕೆ ಬಂದು ಸೇರುತ್ತಿದ್ದರು. ಬಂಧು-ಬಾಂಧವರನ್ನು ಮತ್ತು ಸ್ನೇಹಿತರನ್ನು ವರುಷಕ್ಕೊಮ್ಮೆ ನೋಡಲು ಇದು ಒಂದು ಒಳ್ಳೆಯ ಅವಕಾಶವಾಗಿತ್ತು. ಬೆಂಗಳೂರಿನಲ್ಲಿ ಪ್ರತಿ ವರುಷ ಚಿತ್ರಾಪೂರ್ಣಿಮೆ (ಉಗಾದಿಯನಂತರ ಬರುವ ಹುಣ್ಣಿಮೆ) ಊರಹಬ್ಬ ನಡೆಯುತ್ತದೆ. ಅದು "ಬೆಂಗಳೂರು ಕರಗ" ಎಂದು ಪ್ರಸಿದ್ಧಿ. "ಕೆಂಪೇಗೌಡ ದಿನಾಚರಣೆ" ಎಂದೂ ಕರೆಯುತ್ತಾರೆ. ಈಗಲೂ ಬಹಳ ವಿಜೃಂಭಣೆಯಿಂದ  ನಡೆಯುತ್ತದೆ. ಹತ್ತಾರು ದೇವಾಲಯಗಳು ತಮ್ಮ ಉತ್ಸವ ಮೂರ್ತಿಗಳನ್ನು ಕರೆತಂದು ಸಿಟಿ ಮಾರ್ಕೆಟ್ ಬಳಿ ಸೇರುತ್ತಾರೆ. ಬೇರೆ ಊರುಗಳಲ್ಲಿಯೂ ಹೀಗೆಯೇ ಉಂಟು. 

ಒಮ್ಮೆ ತಂದೆಯವರ ಜೊತೆಗೆ ಅವರ ತೌರುಮನೆಗೆ (ತನ್ನ ತಾಯಿಯ ಹುಟ್ಟಿದ ಮನೆಯನ್ನು ಅವರು ಕರೆಯುತ್ತಿದ್ದುದು ಹೀಗೆಯೇ. ತೌರುಮನೆ ಅಂದರೆ "ತಾಯಿಯ ಮನೆ". ಅದು ಗಂಡಸರಿಗೆ ಏಕೆ ಇರಬಾರದು? ಎಂದು ಕೇಳುತ್ತಿದ್ದರು!) ಹೋಗಿದ್ದೆ. ಆಗ ಕೆಂಗೇರಿ ಬೇರೆಯ ಊರಾಗಿತ್ತು. ಈಗಿನಂತೆ ಬೆಂಗಳೂರಿನ ಹೊಟ್ಟೆಯೊಳಗೆ ಸೇರಿಕೊಂಡಿರಲಿಲ್ಲ. ಮಧ್ಯಾನ್ಹದ ಊಟದ ನಂತರ ಮೂವರು ಜೊತೆಗಾರರು ಮನೆಯ ಜಗುಲಿಯ ಮೇಲೆ ಕುಳಿತು ಮಾತಾಡುತ್ತಿದ್ದರು. ನಾನು ಸ್ವಲ್ಪದೂರ ಕುಳಿತು ನೋಡುತ್ತಿದ್ದೆ. 

"ಮುಂದಿನ ತಿಂಗಳು ಊರ ಹಬ್ಬ. ತಪ್ಪದೆ ಬಾ. ಹೋದ ವರುಷದಂತೆ ಚಕ್ಕರ್ ಹಾಕಬೇಡ"
"ನೋಡೋಣ. ಶಾಲೆಗೆ ರಜೆ ಇದ್ದರೆ ಬರುತ್ತೇನೆ"
"ಅದೆಲ್ಲ ಆಗದು. ರಜೆ ಇಲ್ಲದಿದ್ದರೆ ರಜೆ ಹಾಕಿ ಬಾ"
"ಓದುತ್ತಿದ್ದಾಗ ಅವಾಗವಾಗ ಚಕ್ಕರ್ ಹೊಡೆಯುತ್ತಿದ್ದೆ. ಈಗ ಏನು ಕಷ್ಟ?"
ಮೂವರೂ ನಕ್ಕರು. 

ಅಷ್ಟರಲ್ಲಿ ಎದುರು ಮನೆ ಗೃಹಿಣಿ ತನ್ನ ಮಕ್ಕಳು ಕಾಣಲಿಲ್ಲವೆಂದು ಮನೆಯ ಹೊರಗಡೆ ಬಂದು ನೋಡಿದಳು. ಇಬ್ಬರು ಮಕ್ಕಳು ಚೆನ್ನಾಗಿ ಮಣ್ಣಿನಲ್ಲಿ ಆಟ ಆಡುತ್ತಿದ್ದರು. ಮೈಯೆಲ್ಲ ಧೂಳಿನಿಂದ ಮುಚ್ಚಿತ್ತು. ನೋಡಿದ ಅವಳಿಗೆ ಕೋಪ ಬಂತು. "ಆಡಿ, ಆಡಿ; ಚೆನ್ನಾಗಿ ಆಡಿ. ಆಮೇಲೆ ಮನೆಗೆ ಬನ್ನಿ. ನಿಮಗೆ ಹಬ್ಬ ಮಾಡುತ್ತೇನೆ" ಅಂದು ಹೇಳಿ ಒಳಗೆ ಹೋದಳು. 

"ಏನಪ್ಪಾ, ನಿಮ್ಮಣ್ಣ ನನ್ನ ಊರಹಬ್ಬಕ್ಕೆ ಕರೀತಿದಾನೆ. ಅವಳು ನೋಡಿದರೆ ಮಕ್ಕಳಿಗೆ "ಹಬ್ಬ ಮಾಡುತ್ತೇನೆ" ಎಂದು ಹೇಳುತ್ತಿದ್ದಾಳೆ"
"ಅಣ್ಣ ನಿನಗೂ ಅಂತದೇ ಹಬ್ಬ ಮಾಡಬಹುದು. ಹುಷಾರಾಗಿರು"
"ಅಯ್ಯೋ, ಹುಚ್ಚಪ್ಪಗಳಾ. ಸಂದರ್ಭ ನೋಡಿ ಮಾತಿಗೆ ಅರ್ಥ ಮಾಡಬೇಕು. ಒಂದು ಮಾತಿಗೆ ಎಲ್ಲ ಕಡೆಯೂ ಒಂದೇ ಅರ್ಥ ಇರುವುದಿಲ್ಲ. ಇದು ಚೆನ್ನಾಗಿ ಗೊತ್ತಿದ್ದೂ ನನ್ನ ಹಾಸ್ಯ ಮಾಡುತ್ತಿದ್ದೀರಾ?"
ಮೂವರು ಮತ್ತೊಮ್ಮೆ ನಕ್ಕರು. 
*****

ನಂತರ ಕೆಲವು ವರುಷಗಳು ಕಳೆದ ಮೇಲೆ ಹಿರಿಯ ಸೋದರಮಾವ ತಿರುಮಕೂಡಲು ನರಸೀಪುರದಲ್ಲಿ (ಟಿ. ನರಸೀಪುರ) ವಾಸವಾಗಿದ್ದರು. ಒಮ್ಮೆ ಅವರ ಹುಟ್ಟಿದ ಹಬ್ಬ ಬಂದಿತು. ಪ್ರಾಯಶಃ "ಭೀಮರಥಿ ಶಾಂತಿ" ಇರಬಹುದು. (70ನೆಯ ವರುಷದ ಹುಟ್ಟಿದ ಹಬ್ಬವನ್ನು ಭೀಮರಥಿ ಶಾಂತಿ ಎಂಬುದಾಗಿ ಆಚರಿಸುತ್ತಾರೆ). ತಿರುಮಕೂಡಲು ಕಪಿಲ-ಕಾವೇರಿ ನದಿಗಳ ಸಂಗಮ ಕ್ಷೇತ್ರ. ಉತ್ತರ ಭಾರತದಲ್ಲಿ ಗಂಗಾ-ಯಮುನಾ-ಸರಸ್ವತಿ ನದಿಗಳ ಸಂಗಮ ಪ್ರಯಾಗದಲ್ಲಿ ಇರುವಂತೆ ಇಲ್ಲಿ ಕಪಿಲಾ-ಕಾವೇರಿ-ಸ್ಫಟಿಕ ಸರೋವರ ನದಿಗಳ ತ್ರಿವೇಣಿ ಸಂಗಮವೆಂದು ಪ್ರತೀತಿ. ಇಲ್ಲಿನ "ಗುಂಜಾ ನರಸಿಂಹಸ್ವಾಮಿ" ಮತ್ತು "ಅಗಸ್ತ್ಯೇಶ್ವರ" ದೇವಾಲಯಗಳು ಇತಿಹಾಸ ಪ್ರಸಿದ್ಧ. 

"ಗರ್ಗೇಶ್ವರಿ" ಅನ್ನುವುದು ತಿರುಮಕೂಡಲಿನಿಂದ ಮೂರು ಮೈಲು ದೂರದ ಒಂದು ಕ್ಷೇತ್ರ. ಇಲ್ಲಿನ ದೊಡ್ಡ ಶಿವಲಿಂಗ "ಅರ್ಧನಾರೀಶ್ವರ" ಅನ್ನುತ್ತಾರೆ. ಈಗ ಈ ಊರೂ ನರಸೀಪುರದಲ್ಲಿಯೇ ಸೇರಿಹೋಗಿದೆ. ಈ ಗರ್ಗೇಶ್ವರಿ ದೇವಸ್ಥಾನದಲ್ಲಿ ಹುಟ್ಟು ಹಬ್ಬದ ಸಮಾರಂಭದ ಪ್ರಯುಕ್ತ "ಏಕಾದಶವಾರ ರುದ್ರಾಭಿಷೇಕ" ಏರ್ಪಡಿಸಿದ್ದರು. ಜ್ಞಾನವೃದ್ಧರೂ, ವಯೋವೃದ್ಧರೂ ಆದ ಘನಪಾಠಿ ಗುರುಗಳು ಶಿಷ್ಯರ ಸಮೇತ ಆಗಮಿಸಿ ರುದ್ರ-ಚಮಕಗಳ ಅದ್ಭುತ ಪಾರಾಯಣ-ಅಭಿಷೇಕಾದಿಗಳನ್ನು ನಡೆಸಿದರು. 

ಕಾರ್ಯಕ್ರಮ ಮುಗಿದ ನಂತರ ಊಟಕ್ಕೆ ತಯಾರಾಗುವ ವೇಳೆಯಲ್ಲಿ ಈ ಮೂವರೂ ಆ ಗುರುಗಳ ಬಳಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದರು. 

"ಗುರುಗಳೇ. ರುದ್ರದೇವರು ಅಖಂಡ ವೈರಾಗ್ಯ ಮೂರ್ತಿಗಳು. ಅವರ ಬಳಿ ನಾವು ಈ ಪ್ರಾರ್ಥನೆಗಳನ್ನು ಮಾಡಿ ಅನೇಕ ವರಗಳನ್ನು ಕೇಳುತ್ತೇವೆ. ಇವುಗಳಲ್ಲಿ ಅನೇಕ ಕೋರಿಕೆಗಳು ಭೌತಿಕ ವಸ್ತುಗಳು. ಈ ನಮ್ಮ ಜೀವನ ಸುಖವಾಗಿರಲು ಕೇಳಿಕೊಳ್ಳುವುವು. ಹೆಚ್ಚೂ-ಕಡಿಮೆ ಪ್ರತಿಯೊಂದು ವಸ್ತುವನ್ನೂ ಕೇಳುತ್ತೇವೆ. ಇದು ಸರಿಯೇ?"
"ಏಕೆ? ಕೇಳಬಾರದೆಂದು ನಿಮ್ಮ ಅಭಿಪ್ರಾಯವೇ?"
"ವೈರಾಗ್ಯ ಮೂರ್ತಿಯ ಬಳಿ ವೈರಾಗ್ಯ ಹುಟ್ಟುವ ರೀತಿಯ ಬೇಡಿಕೆ ಇಡಬೇಕಲ್ಲದೆ ಈ ರೀತಿ ಸುಖ-ಸಾಧನಗಳನ್ನು ಕೇಳುವುದು ನ್ಯಾಯವೇ?"
"ಎಲ್ಲರಿಗೂ ಸುಲಭವಾಗಿ ವೈರಾಗ್ಯ ಬರುವುದಿಲ್ಲವಲ್ಲ?"
"ಅಂದಮಾತ್ರಕ್ಕೆ ವೈರಾಗ್ಯ ಕೇಳದೆ ಈ ಸುಖ ಸಾಧನಗಳನ್ನು ಕೇಳಬಹುದೇ?"

"ಈ ಭೂಮಿಯಲ್ಲಿ ಜೀವನ ಮಾಡುವಾಗ ಇಹ-ಪರ ಎರಡರ ಕುರಿತೂ ಯೋಚಿಸಬೇಕು. ಬಹಳ ಕಡಿಮೆ ಮಂದಿಗೆ ಚಿಕ್ಕ ವಯಸ್ಸಿನಲ್ಲಿ ವೈರಾಗ್ಯ ಬರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಮಂದಿಗೆ ಕಾಲಕ್ರಮದಲ್ಲಿ ವೈರಾಗ್ಯ ಬರುವುದು. ಕೆಲವರಿಗಂತೂ ಅದು ಬರುವುದೇಯಿಲ್ಲ. ಸಾಧನೆಗೆ ಅನೇಕ ಪರಿಕರಗಳು ಬೇಕಲ್ಲ. ಇಲ್ಲಿನ ಜೀವನವೂ ಚೆನ್ನಾಗಿ ನಡೆಯಬೇಕು. ನಾವು ವೈಯುಕ್ತಿಕವಾಗಿ ಏನನ್ನೂ ಬೇಡ ಅನ್ನಬಹುದು. ಆದರೆ ಗೃಹಸ್ಥರಾದ ನಮ್ಮನ್ನು ನಂಬಿ ನಮ್ಮ ಜೊತೆ ಬಾಳುವ ಕುಟುಂಬದವರ ವಿಷಯವೇನು? ಸನ್ಯಾಸಿಯಾಗಿ ಗುರುಕುಲ ನಡೆಸುವವನಾದರೂ ಅವನ ಚಿಕ್ಕ ವಯಸ್ಸಿನ ಶಿಷ್ಯವೃಂದದ ಕಥೆ ಏನು? ಒಂಟಿಯಾಗಿ ಸಾಧನೆ ಮಾಡುವವನಿಗೂ, ಅನೇಕ ಮಂದಿಯ ಜೊತೆಯಲ್ಲಿದ್ದು ಸಾಧನೆ ಮಾಡುವವನಿಗೂ ವ್ಯತ್ಯಾಸವಿಲ್ಲವೇ? ಇಲ್ಲಿಯೂ ಚೆನ್ನಾಗಿ ಬಾಳುವೆ ನಡೆಸಬೇಕು. ಮುಂದಿನ ದಾರಿಯೂ ಸರಿಯಾಗಿ ಗೊತ್ತಾಗಬೇಕು. ಈ ಪ್ರಾರ್ಥನೆಗಳು ಎರಡನ್ನೂ ಸರಿತೂಗಿಸಿ ಜೀವನ ನಡೆಸಲು ಬೇಕಾದುವನ್ನು ಕೇಳುತ್ತವೆ. ಇದರಲ್ಲಿ ತಪ್ಪೇನೂ ಕಾಣುವುದಿಲ್ಲ. ಆದರೆ, ಈ ಪರಿಕರಗಳಿಂದ ಸುಖಿಸುವುದರಲ್ಲಿ ಮುಳುಗಿ ಸಾಧನೆಯನ್ನು ಬಿಡಬಾರದು. ಆ ಎಚ್ಚರ ವಹಿಸಬೇಕು. ಆ ರುದ್ರರೇ ಇದನ್ನು ನಡೆಸಿಕೊಡುತ್ತಾರೆ ಎನ್ನುವುದು ಧೃಡವಾದ ನಂಬಿಕೆಯಾಗಿ ಇರಬೇಕು"

"ಒಂದು ಕಡೆ "ಲೋಹವನ್ನು ಕೊಡು ಎಂದು ಕೇಳುತ್ತೇವಲ್ಲ? ಬದುಕು ಹಸನಾಗಲು, ಸುಖಮಯವಾಗಲು ಬೆಳ್ಳಿ-ಬಂಗಾರ ಮುಂತಾದುವನ್ನು ಕೇಳುವ ಬದಲು ಕಬ್ಬಿಣವನ್ನು ಕೇಳುವುದೇ?"

"ಲೋಹ ಎಂದರೆ ಕೇವಲ ಕಬ್ಬಿಣ ಎಂದು ಅರ್ಥ ಮಾಡಬಾರದು. ಬೆಳ್ಳಿ-ಬಂಗಾರಗಳೂ ಲೋಹಗಳೇ ತಾನೇ? ಲೋಹ (ಮೆಟಲ್) ಆನ್ನುವುದು ವಿಜ್ಞಾದಲ್ಲಿಯೂ ಒಂದು ಧಾತುಗಳ ಕುಟುಂಬ. ಇದಲ್ಲದೆ ಅನೇಕ ವ್ಯವಹಾರಗಳಲ್ಲಿ ಮನುಷ್ಯನ ಮನಸ್ಸು ಬೇರೆ ಬೇರೆ ರೀತಿ ಪ್ರಕಟವಾಗುತ್ತದೆ. ಒಮ್ಮೆ "ಅವರದು ಹೂವಿನಂತಹ ಮನಸ್ಸು" ಎನ್ನುತ್ತೇವೆ. ಮತ್ತೊಮ್ಮೆ "ಅವನದು ಕಲ್ಲಿನ ಮನಸ್ಸು" ಅನ್ನುತ್ತೇವೆ. ಏಕೆ ಹೀಗೆ?"

"ವ್ಯವಹರಿಸುವಲ್ಲಿ ಮನಸ್ಸಿನ ಮೃದುತ್ವ ಅಥವಾ ಕಾಠಿಣ್ಯವನ್ನು ಗುರುತಿಸಲು ಹೀಗೆ ಹೇಳುತ್ತೇವೆ"
"ಕಲ್ಲನ್ನು ಭೇದಿಸಲು ಏನು ಬಳಸುತ್ತಾರೆ?"
"ಉಳಿ ಮತ್ತು ಸುತ್ತಿಗೆ"
"ಉಳಿ ಮತ್ತು ಸುತ್ತಿಗೆಯನ್ನು ಬಂಗಾರದಿಂದ ಮಾಡಬಹುದೋ?"
"ಅರ್ಥವಾಗಲಿಲ್ಲ"

"ಕಲ್ಲಿಗಿಂತಲೂ ಕಠಿಣವಾದುದು ಕಬ್ಬಿಣ. ಇಲ್ಲಿ ಲೋಹವನ್ನು ಕೊಡು ಅಂದರೆ ಕಬ್ಬಿಣದ ಉಂಡೆಯನ್ನು ಕೊಡು ಎಂದು ಅರ್ಥವಲ್ಲ. "ಸಾಧನೆಯ ದಾರಿಯಲ್ಲಿ ನಮ್ಮ ಮನಸ್ಸನ್ನು ಕಬ್ಬಿಣದಂತೆ ಗಟ್ಟಿ ಮಾದು" ಎಂದು ಕೇಳುವ ಭಾವ. ಯಾವುದೇ ಪ್ರಲೋಭನೆಗಳಿಗೆ ಮನಸ್ಸು ಮೆದುವಾಗಿ ಸಾಧನೆಯ ದಾರಿಯಿಂದ ವಿಮುಖವಾಗಬಾರದು. ಬೇರೆ ರೀತಿಯ ಸಂಪತ್ತನ್ನು ಕೇಳಿಯಾಗಿದೆ. ಇಲ್ಲಿ ನಮ್ಮ ಮನಸ್ಸನ್ನು ಕಬ್ಬಿಣದಂತೆ ಗಟ್ಟಿ ಮಾಡು ಎಂದು ಕೇಳುವ ಪ್ರಾರ್ಥನೆ. ಸಂದರ್ಭ ನೋಡಿ ಪದಗಳಿಗೆ ಅರ್ಥ ಮಾಡಬೇಕಲ್ಲವೇ?"

ಇನ್ನು ಕೆಲವು ಪ್ರಶ್ನೆಗಳಾದ ಮೇಲೆ ಊಟದ ಕರೆ ಬಂತು.  

*****

ರುದ್ರದೇವರ ಕರುಣೆಯಿಲ್ಲದೆ ಮನಸ್ಸು ಗಟ್ಟಿಯಾಗದು. ಶ್ರೀವಿಜಯದಾಸರು ಶಂಭುವಿನ ಕುರಿತಾದ ಅವರ ಒಂದು ದೇವರನಾಮದಲ್ಲಿ ಹೀಗೆ ಹೇಳುತ್ತಾರೆ:

ಕೈಲಾಸವಾಸ ಗೌರೀಶ ಈಶ 
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ 
ಕೈಲಾಸವಾಸ ಗೌರೀಶ ಈಶ  
 
ಮನಸು ಕಾರಣವಲ್ಲ ಪಾವ ಪುಣ್ಯಕ್ಕೆಲ್ಲ  
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ 
ದನುಜಗಜ ಮದಹಾರಿ ದಂಡಪ್ರಣಾಮ ಮಾಳ್ಪೆ 
ಮಣಿಸೋ ಈ ಶಿರವನ್ನು ಸಜ್ಜನರ ಚರಣದಲಿ 

ಒಂದು ಪಾತ್ರೆಯಿಂದ ನೀರನ್ನು ಸುರಿಸಿದರೆ ಅದು ಬೀಳುವ ರೀತಿಯನ್ನೂ, ಮತ್ತೊಂದು ಪಾತ್ರೆಯಿಂದ ಎಣ್ಣೆಯನ್ನು ಸುರಿದರೆ ಅದು ಬೀಳುವ ರೀತಿಯನ್ನೂ ಒಟ್ಟಾಗಿ ನೋಡಿದರೆ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. (ಇವನ್ನು ನಾವು ಪ್ರತಿದಿನ ನೋಡುತ್ತಿರುತ್ತೇವೆ. ಗಮನಿಸಿರುವುದಿಲ್ಲ) ಮನಸ್ಸು ಅಲ್ಲಿ-ಇಲ್ಲಿ ಹೋಗದಂತೆ ಒಂದೇ ಧಾರೆಯಾಗಿ ಕೇಂದ್ರೀಕರಿಸಲು ಆ ಶಂಭುವಿನ ಕರುಣೆ ಬೇಕು. 

ಪಂಡಿತ ಭೀಮಸೇನ ಜೋಶಿಯವರು ಹಾಡಿರುವ ಈ ಹಾಡನ್ನು ಇಲ್ಲಿ ಕೇಳಬಹುದು:

https://www.youtube.com/watch?v=KO772laPz3I


******

ಮೇಲಿನ ಹಾಡಿನಲ್ಲಿ "ಮನಸು ಕಾರಣವಲ್ಲ" ಮತ್ತು "ದನುಜ ಗಜ ಮದಹಾರಿ" ಎನ್ನುವ ಪದಗಳ ವಿಶೇಷಾರ್ಥಗಳನ್ನು ಮುಂದೊಮ್ಮೆ ನೋಡೋಣ. 

Saturday, February 15, 2025

ಪ್ರತಿದಿನ ಗಂಗಾ ಸ್ನಾನ?



ಇದೀಗ ಎಲ್ಲೆಲ್ಲೂ "ಅಪರೂಪದ ಕುಂಭಮೇಳ" ಎನ್ನುವ ಸುದ್ದಿಯೇ ಸುದ್ದಿ. ಕೇವಲ ಹನ್ನೆರಡು ವರುಷದ್ದಲ್ಲ. ಹನ್ನೆರಡು ಹನ್ನೆರಡಲ ನೂರಾ ನಲವತ್ತನಾಲ್ಕು ವರುಷಗಳ ವಿಶೇಷ ಬೇರೆ. ಈಗಾಗಲೇ ಮೂವತ್ತು-ನಲವತ್ತು  ಕೋಟಿ ಮಂದಿ ಕುಂಭಸ್ನಾನ ಮಾಡಿದ್ದಾರೆ ಎಂದು ಒಂದು ಅಂದಾಜು. ಅಥವಾ, ಮೇಳ ಮುಗಿಯುವುದರ ಒಳಗೆ  ಮುಳುಗು ಹಾಕಿದವರ ಸಂಖ್ಯೆ ನಲವತ್ತು ಕೋಟಿ ದಾಟುತ್ತದೆ ಎಂದು ಇನ್ನೊಂದು ಅಂದಾಜು. (ಈಗಾಗಲೇ ಐವತ್ತು ಕೋಟಿ ಸಂಖ್ಯೆ ದಾಟಿದೆ, ಮೂರು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಆದಾಯ ಬಂದಿದೆ, ಎಂದು ಇಂದಿನ ಸುದ್ದಿ).  ನಲವತ್ತು ಕೋಟಿ ಅಂದರೆ ಅದೇನೂ ಒಂದು ಸಾಮಾನ್ಯ ಜನಗಳ ಕೂಟವಲ್ಲ. ಇಡೀ ಅಮೇರಿಕ ಸಂಯುಕ್ತ ಸಂಸ್ಥಾನಗಳ ಒಟ್ಟು ಜನಸಂಖ್ಯೆಗಿಂತ ಐದು ಕೋಟಿ ಹೆಚ್ಚು. ಮೂರು ನೂರು ಕಿಲೋಮೀಟರು ದೂರ ಟ್ರಾಫಿಕ್ ಜಾಮ್ ಆಗಿದೆ ಎಂದು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಚಿತ್ರಗಳು ಹರಿದಾಡುತ್ತಿವೆ. ವಾರಗಟ್ಟಲೆ ಸ್ನಾನ ಮಾಡದವರೂ ಕುಂಭ ಸ್ನಾನ ಮಾಡಿದ್ದಾರೆ! (ಕೆಲವು ಸಾಧುಗಳು ಹೀಗೆ ಅನೇಕ ದಿನ ಸ್ನಾನ ಮಾಡುವುದಿಲ್ಲ ಎಂದು ವರದಿಗಳಿವೆ). ಪ್ರತಿದಿನ ಸ್ನಾನ ಮಾಡುವ ದುರಭ್ಯಾಸ ಇರುವವರ ವಿಷಯ ಹೇಳಲೇಬೇಕಾಗಿಲ್ಲ. 

"ಕುಂಭಮೇಳ ಪ್ರವಾಸ" ಏರ್ಪಡಿಸುವ ಯಾವ ಪ್ರವಾಸಿ ಸಂಸ್ಥೆಯೂ ಈ ವರ್ಷ ನಷ್ಟ ಅನುಭವಿಸುವ ಸಾಧ್ಯತೆಯೇ ಇಲ್ಲ. ಕುಂಭ ಮೇಳ ಕಾಲದಲ್ಲಿ ಪ್ರಯಾಗ್ ರಾಜ್ ವಿಮಾನದ ಟಿಕೆಟ್ ಬೆಲೆ  ದೆಹಲಿ-ಲಂಡನ್ ಮಾರ್ಗದ ಟಿಕೆಟ್ ಬೆಲೆಗಿಂತ ಜಾಸ್ತಿಯಂತೆ. ಇದರ ಬಗ್ಗೆ ಸಂಸತ್ತಿನಲ್ಲಿ ಬಿಸಿ ಬಿಸಿ ಚರ್ಚೆಯೂ ಆಯಿತು. ಮೊದಲ ಪಂಕ್ತಿಗಳಲ್ಲಿ ಊಟ ಮಾಡಲಾಗದೆ ಇದ್ದರೂ ಪರವಾಗಿಲ್ಲ. ಕೊನೆಯ ಪಂಕ್ತಿ ಸಿಕ್ಕಿದರೂ ಸರಿಯೇ ಎಂದು ಕಾಯುವವರಂತೆ ಮೇಳ ಮುಗಿದ ನಂತರವಾದರೂ ಹೋಗೋಣ ಎಂದು ಕಾಯುತ್ತಿರುವವರೂ ಉಂಟು. "ಅಯ್ಯೋ, ಒಂದು ನೂರಾ ನಲವತ್ತನಾಲ್ಕು ವರುಷಗಳ ಕುಂಭ ಸ್ನಾನ ತಪ್ಪಿಸಿಕೊಂಡಿರಲ್ಲ!" ಎಂದು ಬೇರೆಯವರು ಹೇಳಬಾರದು ಎಂದು ಪರಿತಪಿಸುತ್ತಾ ಕಾಯುತ್ತಿರುವವರೂ ಉಂಟು. ಜನಜಂಗುಳಿ, ಹಣ-ಕಾಸಿನ ಮುಗ್ಗಟ್ಟು, ಆರೋಗ್ಯದ ಸಮಸ್ಯೆಗಳು, ಚಳಿ ತಡೆಯಲಾಗದ ಸ್ಥಿತಿ, ಜೊತೆಯಿಲ್ಲದೆ ಹೋಗಲಾಗದ ಬಿಕ್ಕಟ್ಟು, ಇವೆಲ್ಲಕ್ಕಿಂತ ಹೆಚ್ಚಾದ ಸೋಮಾರಿತನ, ಮುಂತಾದ ಅನೇಕ ಕಾರಣಗಳಿಂದ "ಈಗ ಬೇಡ. ಬೇಸಗೆ ಬರಲಿ. ಆಗ ಹೋಗೋಣ. ಸ್ವಲ್ಪ ಪುಣ್ಯ ಕಡಿಮೆ ಬಂದರೂ ಪರವಾಗಿಲ್ಲ" ಎಂದು ಅಂದುಕೊಂಡವರೂ ಉಂಟು.  

ಗಂಗಾನದಿಯ ತಟದಲ್ಲಿರುವವರು ಪುಣ್ಯಾತ್ಮರು. ಪ್ರತಿದಿನ ಗಂಗಾಸ್ನಾನ ಮಾಡುತ್ತಾರೆ ಎನ್ನಬಹುದೇ? ಬೆಂಗಳೂರಿನಲ್ಲಿರುವವರು ಪ್ರತಿದಿನ ಲಾಲ್ ಬಾಗಿಗೆ ಹೋಗುತ್ತಾರೆ ಎನ್ನುವಂತೆ! ಬೇರೆಲ್ಲಿಯೋ ಇರುವವರು ಏನು ಮಾಡಬೇಕು? ಕುಮಾರವ್ಯಾಸನು ಹೇಳುವಂತೆ "ಚೋರ ನಿಂದಿಸಿ ಶಶಿಯ ಬೈದೊಡೆ, ಕ್ಷೀರವನು ಕ್ಷಯ ರೋಗಿ ಹಳಿದಡೆ, ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು?" ಎನ್ನುವುದನ್ನು ನೆನೆಸಿಕೊಂಡು ಸುಮ್ಮನಿರಬೇಕೇ? ದೇಶದ ದಕ್ಷಿಣ ಭಾಗದಲ್ಲಿ ವಾಸಿಸುವವರು ಏನು ಮಾಡಬೇಕು? ಅವರಿಗೂ ಬೇರೆ ದಾರಿ ಉಂಟು. ಗಂಗೆಯ ಸೋದರಿಯರಾದ ಗೋದೆ, ಕೃಷ್ಣೆ, ಕಾವೇರಿಯರಿದ್ದಾರೆ. ಭೀಮೆ, ತುಂಗೆ, ವೈಗೈ ಇದ್ದಾರೆ. ಶರಾವತಿ, ನೇತ್ರಾವತಿಯರಿದ್ದಾರೆ. (ಅರ್ಕಾವತಿ-ವೃಷಭಾವತಿಯರೂ ಇದ್ದರು. ಅಲ್ಲಿ ಸ್ನಾನ ಮಾಡುವ ಭೀತಿ ಬೇಡ). ಈ ಎಲ್ಲ ನದಿಗಳೂ ದೂರ ಇದ್ದರೆ ಏನು ಮಾಡಬೇಕು? ಸಣ್ಣ ಹಳ್ಳಿಯಳ್ಳಿ ಚಿಕ್ಕ ಕೆರೆ ಮಾತ್ರ ಉಂಟು. ಅವರೇನು ಮಾಡಬೇಕು? ಅಥವಾ ದೊಡ್ಡ ನಗರದ ಸಣ್ಣ ಮನೆಯ ಪುಟ್ಟ ಬಚ್ಚಲು ಮನೆ. ನೀರೇ ಬಾರದ ನಲ್ಲಿಯಲ್ಲಿ ಎಂದೋ ನೀರು ಬಂದಾಗ ಹಿಡಿದಿಟ್ಟ ಪ್ಲಾಸ್ಟಿಕ್ ಬಕೆಟ್ಟಿನ ನೀರು ಮಾತ್ರ. ಅವರಿಗೆ ಪುಣ್ಯ ಸ್ನಾನವಿಲ್ಲವೇ? ಇದು ಸ್ವಲ್ಪ ಯೋಚಿಸಬೇಕಾದ ವಿಷಯವೇ. 
*****

ನಾವು ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಭಾಷೆಗಳನ್ನು ಚೆನ್ನಾಗಿ ಕಲಿಯಲಿ ಎಂದು "ಪ್ರಭಂಧ" ಬರೆಸುತ್ತಿದ್ದರು. ಇಂಗ್ಲಿಷಿನಲ್ಲಿ "Pen is mightier than Sword" ಅಥವಾ ಕನ್ನಡದಲ್ಲಿ "ಕತ್ತಿಗಿಂತ ಲೇಖನಿ ಹರಿತ" ಎನ್ನುವ ವಿಷಯದ ಮೇಲೆ ಸಾಮಾನ್ಯವಾಗಿ ಮೊದಲನೇ ಪ್ರಬಂಧ ಬರೆಸುತ್ತಿದ್ದರು. ಹಿಂದಿಯಲ್ಲಾದರೆ ರಾಮಧಾರಿ ಸಿಂಹ "ದಿನಕರ" ಅವರ "ಕಲಂ ಯಾ ತಲವಾರ್" ಎಂಬ ಇದೇ ವಿಷಯದ ಪದ್ಯ ಓದಬೇಕಿತ್ತು. ಲೇಖನಿ ಅಥವಾ ಪೆನ್ನು ಒಂದು ಜಡ ವಸ್ತು. ಅದೇನು ಮಾಡುತ್ತದೆ? ಮೇಜಿನ ಮೇಲೋ ಜೇಬಿನಲ್ಲೋ ಕುಳಿತಿರುತ್ತದೆ. (ಹಿಂದೆಲ್ಲ ಜೇಬಿನಲ್ಲಿ ಪೆನ್ನಿಲ್ಲದ ವಿದ್ಯಾರ್ಥಿಯನ್ನು "ನೀನೆಂಥ ವಿದ್ಯಾರ್ಥಿಯೋ?" ಎಂದು ಬಯ್ಯುತ್ತಿದ್ದರು. ಈಗ ಪೆನ್ನು ಇಟ್ಟುಕೊಳ್ಳುವ ಅಭ್ಯಾಸವೇ ಹೋಗಿದೆ). ಒಂದು ವೈಚಾರಿಕ ಲೇಖನ ಒಂದು ಕತ್ತಿ ಮಾಡುವುದಕ್ಕಿಂತ ಹೆಚ್ಚು ಕ್ರಾಂತಿಕಾರಕ ಕೆಲಸ ಮಾಡುತ್ತದೆ ಎನ್ನುವುದನ್ನು ಒಪ್ಪೋಣ. ಆದರೆ ಆ ಕೆಲಸ ಮಾಡುವುದು ಪೆನ್ನು ಅಥವಾ ಲೇಖನಿ ಅಲ್ಲ. ಪೆನ್ನು ಅಥವಾ ಲೇಖನಿ ಹಿಡಿದ ಕೈ, ಮತ್ತು ಅದಕ್ಕಿಂತ ಹೆಚ್ಚಾಗಿ ಅದನ್ನು ಉಪಯೋಗಿಸಿ ಬರೆಯುವವನ ತಲೆ; ಅದರಲ್ಲಿರುವ ಮಿದುಳು. 

ಪ್ರಸಿದ್ಧ ನಿರ್ಮಾಪಕ-ನಿರ್ದೇಶಕ ಬಿ. ಅರ್. ಪಂತುಲು ಅವರ ಹೆಮ್ಮೆಯ "ಶ್ರೀ ಕೃಷ್ಣದೇವರಾಯ" ಚಲನಚಿತ್ರದ ಕಡೆಯಲ್ಲಿ ಕೃಷ್ಣದೇವರಾಯನ ಖಡ್ಗವನ್ನು ತೋರಿಸಿ "ಸಹಸ್ರಾರು ಶತ್ರುಗಳ ಶಿರಛೇದ ಮಾಡಿದ ಖಡ್ಗ ನಿರಾಶ್ರಿತವಾಯಿತು" ಅನ್ನುತ್ತಾರೆ. ಹೀಗೇಕೆ? ವೈರಿಗಳ ತಲೆ ಕತ್ತರಿಸಿದ್ದು ಖಡ್ಗವೇ ಆದರೂ ಅದೂ ಒಂದು ಜಡ ವಸ್ತು. ಆ ಕೆಲಸ ನಿಜವಾಗಿ ಮಾಡಿದ್ದು ಆ ಖಡ್ಗ ಹಿಡಿದ ಕೈ; ಆ ಕೈ ಹಿಂದಿದ್ದ ಅಸಾಧಾರಣ ವ್ಯಕ್ತಿ. ಲೇಖನಿ ಅಥವಾ ಕತ್ತಿ ದೊಡ್ಡದು ಎಂದು ಹೇಳುವುದು ಕೇವಲ ಸೂಚ್ಯವಾಗಿ. ಯಾವುದೇ ಜಡ ವಸ್ತು ತನಗೆ ತಾನೇ ಕೆಲಸ ಮಾಡದು. ಅದರ ಹಿಂದಿರುವ ಚೇತನವೇ ಕೆಲಸಗಳನ್ನು ಮಾಡುವುದು. ಜಡ ವಸ್ತು ಒಂದು ಉಪಕರಣ. ಅಷ್ಟೇ. 

*****

ಜಡವಸ್ತು ಕೇವಲ ಒಂದು ಉಪಕರಣ. ನಿಜವಾಗಿ ಕೆಲಸ ಮಾಡುವುದು ಅದರ ಹಿಂದಿರುವ ಚೇತನ ಎನ್ನುವುದಾದರೆ ಗಂಗಾಸ್ನಾನದ ವಿಷಯ ಏನು? ಗಂಗೆಯಲ್ಲಿ ಹರಿಯುವುದು ನೀರು. ಆ ನೀರೂ ಒಂದು ಜಡ ವಸ್ತುವೇ. ಅದು ದ್ರವರೂಪದಲ್ಲಿರುವುದರಿಂದ ಹರಿಯುತ್ತದೆ. ಎತ್ತರದ ಹಿಮಾಲಯ ಪರ್ವತ ಶ್ರೇಣಿಗಳಿಂದ ಹರಿದು ಬಂದು, ಅದೇ ರೀತಿಯ ಇತರ ಉಪನದಿಗಳಿಂದ ಕೂಡಿ ಮೈದುಂಬಿ, ಭೋರ್ಗರೆಯುತ್ತಾ ಬೆಟ್ಟಗಳಲ್ಲಿ ಹರಿಯುತ್ತದೆ. ಹರಿದ್ವಾರದ ನಂತರ ಬಯಲು ಪ್ರದೇಶಗಳಲ್ಲಿ ಹರಿಯುವುದರಿಂದ ಆ ವಿಶಾಲ ಜಲರಾಶಿ ಬಲು ರಭಸವಾಗಿ ಚಲಿಸುತ್ತದೆ. ಕೋಟಿ ಕೋಟಿ ಜನಗಳ ಜೀವನ ಹಸನು ಮಾಡಿ ಸಮುದ್ರ ಸೇರುತ್ತದೆ. ಆ ನೀರಿನಲ್ಲಿ ಸ್ನಾನ ಮಾಡಿದರೆ ಪಾಪಗಳು ಹೋಗುವುದು ಹೇಗೆ? 

ನಮ್ಮ ಪುರಾತನ ನಂಬಿಕೆಗಳ ಪ್ರಕಾರ ಪ್ರತಿ ಜಡ ವಸ್ತುವಿನ ಹಿಂದೆ ಅದಕ್ಕೆ ಹೊಂದಿದ ಒಂದು ಚೇತನ ಶಕ್ತಿ ಇದೆ. ಅದನ್ನೇ ನಾವು ಆ ಜಡ ಪದಾರ್ಥದ "ಅಭಿಮಾನಿ ದೇವತೆ" ಎನ್ನುವುದು. ಪುಸ್ತಕ ಜಡ ವಸ್ತು. ಅದರ ಹಿಂದೆ ವಿದ್ಯೆಯ ಅಭಿಮಾನಿ ದೇವತೆಯಾದ ಸರಸ್ವತಿ ಇದ್ದಾಳೆ. ಬೆಂಕಿಯ ಹಿಂದೆ ಅಗ್ನಿದೇವ ಇದ್ದಾನೆ. ನೀರಿನ ಹಿಂದೆ ವರುಣ ಇದ್ದಾನೆ. ಗಾಳಿಯ ಹಿಂದೆ ವಾಯುದೇವ ಇದ್ದಾನೆ. ಹೀಗೆ. ಅದೇ ರೀತಿ ಗಂಗಾನದಿಯಲ್ಲಿ ಹರಿಯುವ ನೀರಿನ ಹಿಂದೆ ತಾಯಿ ಗಂಗೆ ಇದ್ದಾಳೆ. ಹಿಂದೆಲ್ಲ ಕೇವಲ ಗಂಗೆ ಎಂದು ಸಂಬೋಧಿಸಿದರೆ ಹೊಡೆಯಲು ಬರುತ್ತಿದ್ದರು. "ಗಂಗಾಜೀ" ಅಥವಾ "ಗಂಗಾಮಯ್ಯಾ" ಅನ್ನು ಎನ್ನುತ್ತಿದ್ದರು. ಗಂಗೆ ಅಂದರೆ ಅಷ್ಟು ಶ್ರದ್ದೆ. ಅಂತಹ ಭಕ್ತಿ. ಗಂಗೆ ಕೇವಲ ಹರಿವ ನೀರಲ್ಲ. ಅವಳು ಹರಿ ಪಾದೋದಕ. ಹರನ ತಲೆಯಿಂದ ಹರಿದು ಬಂದ ತೀರ್ಥ. ಅನೇಕ ಶ್ರದ್ಧಾಳುಗಳು ಮೊದಲು ಮನೆಯಲ್ಲೋ ಅಥವಾ ಛತ್ರದಲ್ಲೋ ಒಮ್ಮೆ ಸ್ನಾನ ಮಾಡಿ ನಂತರ ಗಂಗಾಸ್ನಾನಕ್ಕೆ ನದಿಗೆ ಹೋಗುತ್ತಿದ್ದರಂತೆ! ಗಂಗಾಸ್ನಾನಕ್ಕೆ ಹೋದಾಗ ಗಂಗೆಯ ನೀರನ್ನು ಮುಟ್ಟುವ ಮುಂಚೆ ದೇಹ ಶುದ್ಧವಾಗಿ ಇರಬೇಕೆಂಬ ಕಳಕಳಿಯಿಂದ. 

*****

ಗಂಗಾನದಿಯಲ್ಲಿ ಹರಿಯುವ ನೀರಿನ ಅಭಿಮಾನಿದೇವತೆ ಗಂಗಾದೇವಿ ನಮ್ಮ ಪಾಪಗಳನ್ನು ಕಳೆಯುತ್ತಾಳೆ ಎಂದಾಯಿತು. ಹಾಗಿದ್ದಲ್ಲಿ ಗಂಗೆ ನೀರಿಗೆ ಅಷ್ಟು ದೂರ ಹೋಗಬೇಕು. ಆದರೆ ಅದರ ಅಭಿಮಾನಿ ದೇವತೆ ನಮ್ಮನ್ನು ಹರಸಲು ಅಲ್ಲಿಗೇ ಹೋಗಬೇಕೇ ಎನ್ನುವುದು ಮುಂದಿನ ಪ್ರಶ್ನೆ. ದೇವತೆಗಳಿಗೆ ಎಲ್ಲಿ ಬೇಕೆಂದರಲ್ಲಿ ಹೋಗುವ, ಬರುವ ಸಾಮರ್ಥ್ಯ ಇದೆಯಲ್ಲವೇ? ನಾವು ಅಲ್ಲಿಗೆ ಹೋಗಲು ಅಶಕ್ತರು. ಅಲ್ಲಿಗೆ ಸುಲಭವಾಗಿ ಹೋಗಲಾರೆವು. ಆ ತಾಯಿಯೇ ನಮ್ಮ ಬಳಿ ಬರಬಹುದೇ? ಅದು ಸಾಧ್ಯವಾದರೆ ಎಂತಹ ಪವಾಡ! ಹಾಗಾಗಬಹುದೇ? 

ಸಂಧ್ಯೆಯನ್ನು ಆಚರಿಸುವಾಗ, ಮತ್ತು ಅನೇಕ ರೀತಿಯ ಸಮಾರಂಭಗಳಲ್ಲಿ ಮಂತ್ರಪೂತ ಜಲದಿಂದ ಸಿಂಪಡಣೆ (ಪ್ರೋಕ್ಷಣೆ ಅಥವಾ ಮಾರ್ಜನ) ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆಗ ಕೆಲವು ಮಂತ್ರಗಳನ್ನು ಹೇಳುತ್ತಾರೆ. ಅವು ಯಾವುವು? ಋಗ್ವೇದದ ಹತ್ತನೆಯ ಮಂಡಲದ "ಆಪಃ ಸೂಕ್ತ" ಮಂತ್ರಗಳು ಅವು. ಅದರಲ್ಲಿ ನೀರಿನ ಅಭಿಮಾನಿ ದೇವತೆಗಳಾದ ಆಪೋದೇವಿಯರನ್ನು ಪ್ರಾರ್ಥಿಸಿಕೊಳ್ಳುವುದು. "ನಿಮ್ಮ ಕರುಣೆಯ ಬಲದಿಂದ ನಾವು ಬದುಕುತ್ತೇವೆ. ನಿಮ್ಮ ಸಹಕಾರದಿಂದ ನಮ್ಮ ಜೀವನ ನಡೆದು ನಾವು ಬಹಳಕಾಲ ಜೀವಿಸುತ್ತೇವೆ. ನಮ್ಮನ್ನು ಯೋಗ್ಯರನ್ನಾಗಿ ಮಾಡುವ, ನಿಮ್ಮಲಿರುವ ಆ ಶಕ್ತಿಯನ್ನು ನಮಗೆ ದಯಪಾಲಿಸಿ" ಎಂದು ಬೇಡುವುದೇ ಈ  ಮಂತ್ರಗಳ ತಿರುಳು. "ಉಷತೀರಿವ ಮಾತರಃ" ಎನ್ನುವುದು ಅಲ್ಲಿ ಬರುವ ವಿಶೇಷಣ. "ಕಂದಮ್ಮಗಳು ಕರೆದಾಗ ಓಡಿ ಬಂದು ಎತ್ತಿಕೊಳ್ಳುವ ತಾಯಿಯರಂತೆ ನೀವು" ಎಂದು ಅವರಲ್ಲಿ ಪ್ರಾರ್ಥನೆ. 

*****

ಎಲ್ಲ ನೀರಿನಲ್ಲಿರುವ ಆಪೋದೇವಿಯರಂತೆ ಗಂಗಾನದಿ ನೀರಿನಲ್ಲಿ ವಿಶೇಷ ಅಭಿಮಾನಿ ದೇವತೆಯಾಗಿ ತಾಯಿ ಗಂಗೆ ಇದ್ದಾಳೆ. ಅವಳದ್ದು ತಾಯಿಯ ಕರುಳು. ಎಳೆಯ ಮಕ್ಕಳು ಕೂಗಿ ಕರೆದಾಗ, ತಾನು ಮಾಡುತ್ತಿರುವ ಕೆಲಸವನ್ನು ಅಲ್ಲಿಯೇ ಬಿಟ್ಟು ಓಡಿ ಬಂದು ಮಗುವನ್ನು ಎತ್ತಿಕೊಳ್ಳುವ ಅಮ್ಮನಂತೆ ಕರುಣಾಮಯಿ ಅವಳು. ಕೂಗಿ ಕರೆದವರಿಗೆಲ್ಲಾ ಅವಳು ತಾಯಿಯೇ. ಆದ್ದರಿಂದ ಆ ನದಿ ಇರುವಲ್ಲಿಗೆ ಹೋಗಲಾರದವರು ಆರ್ತರಾಗಿ ಕರೆದರೆ ಅವಳು ಕರೆದವರು ಇರುವಲ್ಲಿಗೆ ಬರುತ್ತಾಳೆ! ಸ್ನಾನ ಮಾಡುವಾಗ ನಮ್ಮ ಹಿರಿಯರು ಹೇಳುತ್ತಿದ್ದ ಈ ಕೆಳಗಿನ ಶ್ಲೋಕ ಅದನ್ನೇ ಹೇಳುತ್ತದೆ:

ಗಂಗಾ ಗಂಗೇತಿ ಯೋ ಬೃಯಾತ್ ಯೋಜನಾನಾಂ ಶತೈರಪಿ 
ಮುಚ್ಯತೇ ಸರ್ವ ಪಾಪೇಭ್ಯೋ ವಿಷ್ಣು ಲೋಕಂ ಸ ಗಚ್ಛತಿ 

"ಗಂಗಾ, ಗಂಗೆ ಎಂದು ಯಾರು ಸ್ಮರಣೆ ಮಾಡುತ್ತಾರೋ ಅಂತಹವನು ನೂರಾರು ಯೋಜನ ದೂರವಿದ್ದರೂ ತಾಯಿ ಗಂಗೆಯು (ಅವನಿರುವಲ್ಲಿಗೆ ಬಂದು) ಅವರ ಎಲ್ಲ ಪಾಪಗಳಿಂದಲೂ ಬಿಡುಗಡೆ ಮಾಡುತ್ತಾಳೆ. ಅವನು ವಿಷ್ಣುವಿನ ಲೋಕವಾದ ವೈಕುಂಠವನ್ನು ಸೇರುತ್ತಾನೆ" ಎನ್ನುವುದು ಇದರ ಅರ್ಥ. 
*****

ಹಾಗಿದ್ದರೆ ಬಹಳ ಸುಲಭವಾಯಿತಲ್ಲ! ಗೋಮುಖಕ್ಕೋ, ದೇವಪ್ರಯಾಗಕ್ಕೋ, ಹರಿದ್ವಾರಕ್ಕೋ, ಪ್ರಯಾಗಕ್ಕೋ, ವಾರಾಣಸಿಗೋ, ಏಕೆ ಹೋಗಬೇಕು? ಈ ಶ್ಲೋಕ ಹೇಳಿದರೆ ಆಯಿತಲ್ಲ. ಪ್ರತಿದಿನ ಗಂಗಾಸ್ನಾನ ಮಾಡಿದಂತೆ ಆಯಿತಲ್ಲ. ಎಲ್ಲ ಸುಲಭ. ಅಲ್ಲಿಗೆ ಏಕೆ ಹೋಗಬೇಕು? 

ಅದು ಅಷ್ಟು ಸುಲಭವಾದ ಪರಿಹಾರವಲ್ಲ. 

ನಾವು ಪ್ರತಿದಿನ ಸ್ನಾನ ಮಾಡುತ್ತೇವೆ ಎಂದು ತಿಳಿದಿದ್ದೇವೆ. ವಾಸ್ತವವಾಗಿ ನಾವು ಮಾಡುವುದು ಬರೀ ಮೈ ತೊಳೆದುಕೊಳ್ಳುವ ಕ್ರಿಯೆ. ಸ್ನಾನ ಮಾಡುವಾಗ ನೂರಾರು ಯೋಚನೆಗಳು. ಸ್ನಾನ ಮುಗಿಸಿದರೆ ಸಾಕು. ಬೇರೆ ಕೆಲಸಗಳಿಗೆ ಓಡಬಹುದು ಎನ್ನುವ ಮನಸ್ಥಿತಿ. ಶ್ರೀಹರಿಯ ಪಾದದಿಂದ, ಸದಾಶಿವನ ಶಿರದಿಂದ ಇಳಿದು ಬಂದು, ನನ್ನ ತಲೆಯ ಮೂಲಕ ಹಾದು ದೇವಗಂಗೆ ನನ್ನನ್ನು ಪಾವನ ಮಾಡುತ್ತಿದ್ದಾಳೆ ಎಂದು ಅನುಸಂಧಾನ ಬೇಕು. ಆ ಮಂತ್ರದಲ್ಲಿ ಧೃಡವಾದ ನಂಬಿಕೆ ಬೇಕು. ಏಕಾಗ್ರತೆ ಬೇಕು. ಕ್ಷಣದಿಂದ ಕ್ಷಣಕ್ಕೆ ಕಪಿಯಂತೆ ಹಾರುವ ಮನಸ್ಸಿಗೆ ಅದು ಸುಲಭ ಸಾಧ್ಯವಲ್ಲ. 

ನಮಗೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಈ ಶ್ಲೋಕ ಹೇಳಿಕೊಂಡು ಸ್ನಾನ ಮಾಡುತ್ತೇವಲ್ಲ ಎಂದು ಸುಮ್ಮನೆ ಕೂಡುವಹಾಗಿಲ್ಲ. ಗಂಗಾನದಿ ಇರುವಲ್ಲಿಗೆ ಪ್ರಯತ್ನ ಪೂರ್ವಕ ಹೋಗಿ ವಿಧಿಯಂತೆ ಗಂಗಾಸ್ನಾನ ಮಾಡುವುದು ನಂಬಿದವರಿಗೆ ಒಂದು ಕರ್ತವ್ಯ. ಹೋಗುವ ಶಕ್ತಿ ಇದ್ದರೂ ಕಳ್ಳ ಮೈಯಿಂದ ತಪ್ಪಿಸಿಕೊಂಡು ಮೇಲಿನ ಶ್ಲೋಕ ಹೇಳಿಕೊಂಡು ಎಷ್ಟು ವರ್ಷ ಸ್ನಾನಮಾಡಿದರೂ ಪ್ರಯೋಜನವಿಲ್ಲ. 

*****

ಗಂಗಾಸ್ನಾನಕ್ಕೆ ಹಂಬಲಿಸುತ್ತಾ, ಒಮ್ಮೆಯೂ ಅಲ್ಲಿ ಹೋಗಲಾರದಿದ್ದರೂ ಹೋಗುವವರಿಗೆ ಸೇವೆ, ಸಹಕಾರಗಳನ್ನು ಕೊಡುತ್ತಿದ್ದ ಗಂಗಾದಾಸನಿಗೆ ಪ್ರತಿದಿನ ಗಂಗಾಸ್ನಾನ ಮಾಡಿದವನಿಗಿಂತ ಹೆಚ್ಚಿನ ಪುಣ್ಯ ಬಂದಿತೆಂದು ತಿಳಿಸುವ ಕಥೆಯೊಂದು "ಕಾರ್ತಿಕಮಾಸ ಮಹಾತ್ಮೆ" ಸಂದರ್ಭದಲ್ಲಿ ಬರುತ್ತದೆ. ಅದನ್ನು ತಿಳಿಯಲು ಆಸಕ್ತಿ ಇರುವವರು ಇಲ್ಲಿ ಕ್ಲಿಕ್ ಮಾಡಿ ಓದಬಹುದು.