Showing posts with label Bindu Madhava. Show all posts
Showing posts with label Bindu Madhava. Show all posts

Wednesday, December 17, 2025

ರಾಮನಾಮ ಎಂಬ ರಸವುಳ್ಳ ನೀರಿಗೆ


ಕಳೆದ ಸಂಚಿಕೆಯಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬಹು ಜನಪ್ರಿಯ ದೇವರನಾಮ ಶ್ರೀ ಪುರಂದರದಾಸರ ಕೃತಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೇ ಬಿಂದಿಗೆಯ" ವಿಶೇಷಾರ್ಥಗಳ ಅನ್ವೇಷಣೆಯಲ್ಲಿ ಕೃತಿಯ ಪಲ್ಲವಿಯ ಎರಡು ಸಾಲುಗಳಲ್ಲಿ ತುಂಬಿರುವ ಅರ್ಥವಿಶೇಷಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಈಗ ಈ ಹಾಡಿನ ಉಳಿದ ಭಾಗಗಳ ವಿಶೇಷ ಅರ್ಥಗಳನ್ನು ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳಿದ್ದು ನೀರು ತರಲು. ಯಾವ ನೀರು? ನಾವು ನಮ್ಮ ಸುತ್ತ-ಮುತ್ತ ಕಾಣುವ ಮತ್ತು ದಿನಂಪ್ರತಿ ಉಪಯೋಗಿಸುವ ನೀರು ಎನ್ನುವುದು ಸಾಮಾನ್ಯವಾದ ಹೊರ ಅರ್ಥ. ನೀರಿಲ್ಲದೆ ಜೀವನವಿಲ್ಲ. ಗಾಳಿಯ ನಂತರ ಜೀವಿಗೆ ಬೇಕಾದ ಅತ್ಯಂತ ಮುಖ್ಯ ಅವಶ್ಯಕತೆ ನೀರು. ನೀರನ್ನು ಶೇಖರಿಸಿ ತರಲು ಒಂದು ಸಾಧನ ಬೇಕು. ಬಿಂದಿಗೆಯು ಅಂತಹ ಒಂದು ಸಾಧನ. ನೀರಿಲ್ಲದೆ ಕರ್ಮವಿಲ್ಲ. ಏನಾದರೂ ಮಾಡುವ ಮೊದಲು ಕೈ, ಕಾಲುಗಳನ್ನಾದರೂ ತೊಳೆದುಕೊಳ್ಳುತ್ತೇವೆ. ಅದಕ್ಕೆ ನೀರು ಬೇಕು. ಸ್ನಾನ ಮಾಡಿದರೆ ನೀರು ಬೇಕು. ಪೂಜೆ-ಹೋಮಾದಿಗಳನ್ನು ಮಾಡಲು ಮೊದಲು ನೀರಿನಿಂದಲೇ ಪ್ರಾರಂಭ. ಕಡೆಯಲ್ಲಿ ಸಮರ್ಪಣ ಮಾಡಲೂ ನೀರು ಬೇಕು. ನೀರಿನಿಂದ ಪ್ರಾರಂಭವಾದ ಕೆಲಸಗಳು ನೀರಿನಿಂದಲೇ ಕೊನೆ! ಬೇರೆ ಯಾವುದಾದರೂ ಪದಾರ್ಥ ಇಲ್ಲದಿದ್ದರೆ ಹೇಗೋ ಕೆಲಸ ತೂಗಿಸಬಹುದು. ನೀರಿಲ್ಲದಿದ್ದರೆ ಮುಂದೆ ಹೋಗಲು ಆಗುವುದೇ ಇಲ್ಲ.  

ನೀರಿಗೆ ಒಂದು ವಿಶೇಷಾರ್ಥವಿದೆ. ಬಿಂದಿಗೆ ಅನ್ನುವುದು ದೇಹವಾದಾಗ (ಏಕೆ ಅನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ) ನೀರು ಅನ್ನುವುದು ಜೀವಿಯು ಮಾಡುವ "ಕರ್ಮ" ಸೂಚಕವಾಗುತ್ತದೆ. ಬಿಂದಿಗೆಯಲ್ಲಿ ನೀರನ್ನು ತರುವಂತೆ ದೇಹದಿಂದ ಜೀವಿಯು ಕರ್ಮಗಳನ್ನು ಮಾಡಿ ಆ ಮೂಲಕ ಸಾಧನೆಗಳನ್ನು ಮಾಡುತ್ತಾನೆ. 

ಈಶಾವಾಸ್ಯ ಉಪನಿಷತ್ತು ತನ್ನ ನಾಲ್ಕನೆಯ ಮಂತ್ರದಲ್ಲಿ "ತಸ್ಮಿನ್ ಆಪಃ ಮಾತರಿಶ್ವಾ ದಧಾತಿ" ಎಂದು ಹೇಳುತ್ತದೆ. "ಆಪಃ" ಅಂದರೆ ನೀರು. "ಮಾತರಿಶ್ವ" ಅಂದರೆ ವಾಯು. ವಾಯುವು ಕೊಡುವ ನೀರು ಯಾವುದು? ಕೊಡುವುದು ಯಾರಿಗೆ? ಜೀವಿಯ ಎಲ್ಲ ಕರ್ಮಗಳಿಗೆ ಪ್ರತ್ಯಕ್ಷ ಸಾಕ್ಷಿ ಪ್ರಾಣವಾಯು. ಮೊದಲ ಉಸಿರಿನಿಂದ ಪ್ರಾರಂಭವಾದ ಜೀವನದಿಂದ ಕರ್ಮ ಪ್ರಾರಂಭ. ಕೊನೆಯ ಉಸಿರಿನೊಡನೆ ಅದು ಮುಗಿಯಿತು. ಬೇರೆಯವರ ಕಣ್ಣು ತಪ್ಪಿಸಿ ಅನೇಕ ಕೆಲಸಗಳನ್ನು ಮಾಡಬಹುದು. ಹಾಗೆ ಏನಾದರೂ ಮಾಡಿ ಅರಗಿಸಿಕೊಳ್ಳಬಹುದು. ಆದರೆ ಮಾತರಿಶ್ವನ ಕಣ್ಣು ತಪ್ಪಿಸಲಾಗದು. ಇದನ್ನೇ "ಅಂತಃಸಾಕ್ಷಿ" ಎಂದೂ ಹೇಳುತ್ತೇವೆ.  ಜೀವನ ಕಾಲ ಮುಗಿದ ಮೇಲೆ ಜೀವಿಯನ್ನು ಪರಮಾತ್ಮನ ಮುಂದೆ ನಿಲ್ಲಿಸಿ ವಾಯುದೇವನು ಅವನ ಸಮಸ್ತ ಕರ್ಮಗಳನ್ನು ಹಾಜರು ಮಾಡುತ್ತಾನೆ. 

ಈ ಕಾರಣದಿಂದ "ನಾ ನೀರಿಗ್ಹೋಗುವೆ" ಅಂದರೆ "ನೀನು ಕೊಟ್ಟ ದೇಹದಿಂದ ನಾನು ಕರ್ಮಗಳನ್ನು ಆಚರಿಸಿ ಸಾಧನೆಗಳನ್ನು ಮಾಡುವೆ, ಮಹಾಲಕ್ಷ್ಮಿ ಅಕ್ಕಾ" ಎಂದು ಹೇಳುವುದು. ಇದು ಅಂತರಾರ್ಥ. 
***** 

"ರಾಮನಾಮ ಎಂಬೋ ರಸವುಳ್ಳ ನೀರಿಗೆ" ಬಿಂದಿಗೆ ಬೇಕು. ರಾಮನಾಮದ ವಿಶೇಷವೇನು? ಅನಂತರೂಪಿ ಪರಮಾತ್ಮನಿಗೆ ಅನಂತ ಹೆಸರುಗಳು. ಸೃಷ್ಟಿಯಲ್ಲಿ ಇರುವ ಸಕಲ ಶಬ್ದಗಳೂ ಪರಮಾತ್ಮನನ್ನೇ ಹೇಳುತ್ತವೆ ಎನ್ನುವುದು ಒಂದು ಪ್ರಮೇಯ. (ಧ್ವನ್ಯಾತ್ಮಕ ಮತ್ತು ವರ್ಣಾತ್ಮಕ ಶಬ್ದಗಳ ಬಗ್ಗೆ ಹಿಂದೊಂದು ಸಂಚಿಕೆಯಲ್ಲಿ ನೋಡಿದ್ದೇವೆ). "ರಮಯತಿ ಇತಿ ರಾಮಃ". "ಆನಂದ (ಸಂತೋಷ) ಕೊಡುವವನು ರಾಮ" ಎಂದು ಇದರ ಅರ್ಥ. ಜೀವಿಗಳಿಗೆ ಈ ಸುತ್ತುವ ಸಂಸಾರದ ಹುಟ್ಟು-ಸಾವುಗಳಿಂದ ಬಿಡುಗಡೆ ಕೊಟ್ಟು ಶಾಶ್ವತ ಆನಂದ ಕೊಡುವವನು ರಾಮ. ಈ ಮೋಕ್ಷದ ನಂತರದ ಆನಂದಕ್ಕೆ ಅದರ ಪ್ರಮಾಣದಲ್ಲಿ ಆಗಾಗ ಹೆಚ್ಚು-ಕಡಿಮೆ ಆಗುವ ಭಯವಿಲ್ಲ. ಎಂದೋ ಒಂದು ದಿನ ಮುಗಿದುಹೋಗುವುದು ಎನ್ನುವ ಆತಂಕವಿಲ್ಲ. ಅದು ಶಾಶ್ವತವಾದ, ಕೊನೆಯಿಲ್ಲದ, ಪರಿಪೂರ್ಣ ಆನಂದ. 

ರಾಮನು ಎಲ್ಲ ಕಾಲದಲ್ಲೂ ಇದ್ದನು. ಎಲ್ಲ ಕಾಲದಲ್ಲೂ ಇರುತ್ತಾನೆ. ತ್ರೇತಾಯುಗದ ಶ್ರೀರಾಮಚಂದ್ರನು ಅವತಾರ ಮಾಡುವ ಮೊದಲೂ ಇದ್ದನು. ಆ ಅವತಾರ ಮುಗಿದಮೇಲೂ ಇರುತ್ತಾನೆ. ಇಂತಹ ರಾಮನ ಹೆಸರನ್ನೇ ದಶರಥ-ಕೌಸಲ್ಯೆಯರ ಮಗನಿಗೂ ಕೊಟ್ಟರು. ಇಬ್ಬರೂ ಒಂದೇ. ಭೇದವಿಲ್ಲ. 

ಪರಮಾತ್ಮನ ಅನಂತ ನಾಮಗಳಲ್ಲಿ ರಾಮನಾಮ ಅತ್ಯಂತ ಸುಲಭವಾದದ್ದು. ಒತ್ತಕ್ಷರಗಳ ಗೊಂದಲವಿಲ್ಲ. ಆರು-ಎಂಟು-ಹತ್ತು ಅಕ್ಷರಗಳ ದೊಡ್ಡ ಹೆಸರಲ್ಲ. ಈಗ ತಾನೇ ಮಾತು ಕಲಿಯುತ್ತಿರುವ ಮಗುವೂ ಸುಖವಾಗಿ "ರಾಮ" ಎಂದು ಹೇಳುವುದು. "ಹೃಷಿಕೇಶ" "ತ್ರಿವಿಕ್ರಮ" "ಪದ್ಮನಾಭ" "ಸಂಕರ್ಷಣ" "ಅಧೋಕ್ಷಜ" ಮುಂತಾದುವನ್ನು ಹೇಳಲು ಅನೇಕರಿಗೆ ಕಷ್ಟವಾಗುತ್ತದೆ. ರಾಮನಾಮಕ್ಕೆ ಇಂತಹ ಬಂಧವಿಲ್ಲ. ಅದು ಗಟ್ಟಿಯಾದ ಚಕ್ಕುಲಿ, ಕೋಡುಬಳೆ, ಪುಳ್ಳಂಗಾಯಿ ಉಂಡೆ ತಿಂದು ಅರಗಿಸಿಕೊಂಡಂತೆ ಅಲ್ಲ. ಪಾಯಸ ಕುಡಿದಂತೆ ಸುಲಭ. ಸಿಹಿಯೂ ಹೌದು. ಆದ್ದರಿಂದ "ರಾಮನಾಮ ಪಾಯಸ"!
*****

ರಾಮನಾಮ ಎಂಬ ನೀರು ಎಂದಾಯಿತು. "ರಸವುಳ್ಳ ನೀರು" ಎಂದೇಕೆ ಹೇಳಿದರು? ನೀರಿನಲ್ಲಿ ಎಂತಹ ರಸ? ನಮಗೆ ಬಾಯಾರಿಕೆ ಆದಾಗ ಕುಡಿಯಲು ನೀರು ಬೇಕು. ಒಳ್ಳೆಯ ಬಾದಾಮಿ ಹಾಲೋ, ಎಳನೀರೋ ಕೊಟ್ಟರೆ ಹೇಗೆ? ಸೊಗಸಾದ ಕಾಫಿ? ಅಥವಾ ಕಿತ್ತಳೆ ರಸ? "ಅದೆಲ್ಲಾ ಇರಲಿ. ಕೊಡುವಿರಂತೆ. ಮೊದಲು ಒಂದು ಲೋಟ ನೀರು ಕೊಡಿ, ಆಮೇಲೆ ಬೇರೆಯದು" ಎನ್ನುತ್ತೇವೆ. ಆಯಿತು. ಕೊಟ್ಟರು. ಎಲ್ಲ ನೀರೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಿನಲ್ಲಿ ಬೋರ್ವೆಲ್ ನೀರು ಕೊಡಬಹುದು. ಯಾವುದೊ ಕೆರೆಯಿಂದ ತಂಡ ಟ್ಯಾಂಕರ್ ನೀರು ಇರಬಹುದು. ಕಾವೇರಿ, ಅರ್ಕಾವತಿ ನೀರು ತಂದಿರಬಹುದು. ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ನೀರು ಕುಡಿದರೆ ಮುಖ ಸಿಂಡರಿಸುತ್ತೇವೆ. "ಈ ನೀರು ಅಷ್ಟು ಸರಿ ಇಲ್ಲ" ಅನ್ನುತ್ತೇವೆ. ಯಾಕೆ? ನೀರು ಚೆನ್ನಾಗಿರಬೇಕು. "ಇಂತಹ ಒಳ್ಳೆಯ ನೀರು ತರುತ್ತೇನೆ, ಬಿಂದಿಗೆ ಕೊಡು" ಅನ್ನುವುದು ಸಾಮಾನ್ಯ ಅರ್ಥ. 

"ರಸ" ಅನ್ನುವುದಕ್ಕೆ ವಿಶೇಷಾರ್ಥವೂ ಉಂಟು. ಅದು ತಿಳಿಯಬೇಕಾದರೆ ಶ್ರೀಮದ್ ಭಗವದ್ಗೀತೆಯ ಏಳನೆಯ ಅಧ್ಯಾಯ ನೋಡಬೇಕು. ಎಂಟನೆಯ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳುತ್ತಾನೆ:

ರಸೋಹಂ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ ಸೂರ್ಯಯೋ: 
ಪ್ರಣವಃ ಸರ್ವವೇದೇಷು ಶಬ್ದ: ಖೇ ಪೌರುಷಮ್ ನೃಷು 

"ನೀರಿನಲ್ಲಿ ನಾನು ರಸ ಆಗಿದ್ದೇನೆ. ಚಂದ್ರ-ಸೂರ್ಯರಲ್ಲಿ ಬೆಳಕಾಗಿದ್ದೇನೆ. 
ವೇದಗಳಲ್ಲಿ ಓಂಕಾರವಾಗಿದ್ದೇನೆ. ಆಕಾಶದಲ್ಲಿ ಶಬ್ದ ರೂಪದಲ್ಲಿ ಇದ್ದೇನೆ. 
ಮನುಷ್ಯರಲ್ಲಿ ಕ್ರಿಯಾಶಕ್ತಿಯ ರೂಪವಾಗಿ ನಿಂತಿದ್ದೇನೆ"

ಪರಮಾತ್ಮನ ಸನ್ನಿಧಾನ ಇದ್ದಾಗ ನೀರು ರುಚಿಸುತ್ತದೆ. ಪದಾರ್ಥಗಳ ಸೊಗಸು ನಾಲಿಗೆಗೆ ಸಿಗುತ್ತದೆ. ಕಿತ್ತಳೆ ತೊಳೆ ನೋಡಲು ಕೆಂಪಾಗಿದೆ. ದಪ್ಪಗೂ ಇದೆ. ಆದರೆ ತಿಂದಾಗ ಬರೀ ಬೆಂಡು ಬೆಂಡು. ಯಾಕೆ? ಅಲ್ಲಿ ಪರಮಾತ್ಮನ ಅಭಿವ್ಯಕ್ತಿ ಇಲ್ಲ. ಬಾದಾಮಿ, ಗೋಡಂಬಿ ಬಹಳ ಚೆನ್ನಾಗಿವೆ. ಬಾಯಿಯಲ್ಲಿ ಹಾಕಿಕೊಂಡು ಎಷ್ಟು ಹೊತ್ತು ಇಟ್ಟುಕೊಂಡರೂ ಏನೂ ರುಚಿಯಿಲ್ಲವಲ್ಲ? ಅಗಿದು ಅದಕ್ಕೆ ಸ್ವಲ್ಪ ರಸರೂಪದ ನೀರು ಸೇರಿದರೆ ತಕ್ಷಣ ರುಚಿ ಸಿಕ್ಕಿತು!  

ಮನುಷ್ಯನು ಮಾಡುವ ಕೆಲಸಗಳೂ ಅಂತೆಯೇ. ಯಾವುದೋ ಕಾರಣಕ್ಕೆ ಮಾಡಿದ ಕಾರ್ಯಗಳು ನೀರಸ. "ಪರಮಾತ್ಮನಿಗೆ ಪ್ರೀತಿಯಾಗಲಿ" ಎಂದು ಮಾಡಿದ ತಕ್ಷಣ ಅಲ್ಲಿ ರಸ ಬಂದು ಕೂತಿತು. ಮಾಡಿದ ಕರ್ಮ ಸತ್ಕರ್ಮ ಆಯಿತು. ಅವನಿದ್ದರೆ ಅದು ಸರಸ. ರಸದಿಂದ ಕೂಡಿದ್ದು. ಅವನಿಲ್ಲದಿದ್ದರೆ ಅದು ನೀರಸ. ರಸವಿಲ್ಲದ್ದು. ಅವನಿಗೆ ವಿರುದ್ಧವಾಗಿದ್ದರೆ ವಿರಸ. ಇದೇ ಸತ್ಕರ್ಮಗಳ ರಹಸ್ಯ!

"ರಾಮನಾಮವೆಂಬ ರಸವುಳ್ಳ ನೀರು ತರುತ್ತೇನೆ, ಬಿಂದಿಗೆ ಕೊಡು ಅಕ್ಕಾ" ಅಂದಾಗ "ಸತ್ಕರ್ಮಗಳನ್ನು ಮಾಡಿ ರಸರೂಪವಾದ ಸಾಧನೆಯನ್ನು ದೇಹದಲ್ಲಿ ತುಂಬಿಕೊಳ್ಳುತ್ತೇನೆ" ಎಂದು ಅರ್ಥ. ಇದೇ ಇಲ್ಲಿನ ವಿಶೇಷಾರ್ಥ. 
*****

"ಗೋವಿಂದ ಎಂಬ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ, ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ" ಅನ್ನುವುದು ಮುಂದಿನದು. "ಗೋವಿಂದ" ಅನ್ನುವ ಪದಕ್ಕೆ ಅನೇಕ ಅರ್ಥಗಳು. ಗೋ ಅನ್ನುವ ಪದಕ್ಕೆ "ನೀರು" "ಹಸು" "ಭೂಮಿ" "ವೇದಗಳು" ಇನ್ನೂ ಮುಂತಾಗಿ ವಿವರಣೆಗಳಿವೆ. "ಉತ್ತಮವಾದದ್ದು" ಎಂದೂ ಅರ್ಥವುಂಟು. "ನೀರಿನಲ್ಲಿ ಶ್ರೇಷ್ಠವಾದ ರೀತಿಯ ನೀರು ತರುತ್ತೇನೆ" ಎಂದು ಹೇಳುವುದು ಸಾಮಾನ್ಯ ಅರ್ಥ. 

ಅಮೃತದ ನೀರು ಹೇಗೆ? ಸತ್ಕರ್ಮ ಮಾಡಿದ ಮೇಲೆ ಮುಂದೆ ಜನ್ಮವಿಲ್ಲದ ಮುಕ್ತಿ ಸಿಗುತ್ತದೆ. ಸಾವಿಲ್ಲದ್ದು ಅಮೃತ. ಗೋವಿಂದನ ಪ್ರೀತಿಗಾಗಿ ಮಾಡಿದ ಕರ್ಮಗಳನ್ನು, ನಿಷ್ಕಾಮ ಕರ್ಮಗಳನ್ನು, ತುಂಬಿಕೊಂಡಮೇಲೆ ಮತ್ತೆ ಮರಣವಿಲ್ಲ. ಅಂದರೆ ಅಮೃತತ್ವ ಸಿಕ್ಕಿತು. ಆದ್ದರಿಂದ "ಅಮೃತದ ನೀರು". 

"ಕಾಮಿನಿಯರ ಕೂಡೆ ಏಕಾಂತವಾಡೆನು, ತಾರೆ ಬಿಂದಿಗೆಯ" ಎಂದರೇನು? ನೀರು ತರಲು ನದಿಗೋ, ಭಾವಿಗೋ ಹೋದಾಗ ಅಲ್ಲಿ ನಮ್ಮಂತೆಯೇ ಅನೇಕರು ಬಂದಿರುತ್ತಾರೆ. ಸಾಮಾನ್ಯವಾಗಿ ನೀರು ತರಲು ಹೋಗುತ್ತಿದ್ದುದು ಲೋಕಾರೂಢಿಯಾಗಿ ಹೆಣ್ಣುಮಕ್ಕಳು. ಕಾಮಿನಿ ಅನ್ನುವ ಪದಕ್ಕೆ ಹೆಣ್ಣು ಎಂದೂ ಒಂದು ಅರ್ಥ. ಒಂದರ್ಥವೇನು, ಇದೇ ಅರ್ಥದಲ್ಲಿ ಆ ಪದವನ್ನು ಸಾಮಾನ್ಯವಾಗಿ ಬಳಸುವುದು. ಕೆಲವರು ಅಲ್ಲಿ ಕಂಡಾಗ ಸಹಜವಾಗಿ ಸ್ವಲ್ಪ ಅದು-ಇದು ಮಾತಾಡುವಂತೆ ಆಗುತ್ತದೆ. ಹರಟೆಯಲ್ಲಿ ಕಾಲಹರಣ ನಡೆಯುತ್ತದೆ. "ನಾನು ಹರಟೆಯಲ್ಲಿ ಕಾಲ ವ್ಯಯ ಮಾಡುವುದಿಲ್ಲ. ಅಲ್ಲಿ ಹೋಗಿ, ನೀರು ತುಂಬಿಕೊಂಡು ಬೇಗ ಬಂದುಬಿಡುತ್ತೇನೆ" ಎನ್ನುವುದು ಸಾಮಾನ್ಯ ಅರ್ಥ. 

"ಕಾಮ" ಅಂದರೆ ಆಸೆ. ಆಸೆ ಯಾವಾಗಲೂ ಒಂದೇ ಒಂದಾಗಿ ಬರುವುದಿಲ್ಲ. ಆಸೆಗಳು ಗುಂಪಾಗಿ ಮನುಷ್ಯನನ್ನು ಕಾಡುತ್ತವೆ. ಕಾಮದಿಂದ ಹುಟ್ಟಿದ್ದು ಕಾಮಿನಿ ಎಂದಾಗುತ್ತದೆ. "ಅಕ್ಕ, ನೀನು ದೇಹವನ್ನು ಕೊಟ್ಟರೆ ಅದನ್ನು ಇತರೆ ಆಸೆಗಳ, ಪ್ರಾಪಂಚಿಕ ಸುಖ-ಭೋಗಗಳ, ತೃಪ್ತಿಗೆ ಬಳಸುವುದಿಲ್ಲ. ಕೇವಲ ಸಾಧನೆಗಾಗಿಯೇ ಜೀವಿತ ಕಾಲವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳುವುದೇ ವಿಶೇಷಾರ್ಥ. 

ನೀರು ತರಲೆಂದು ಬಿಂದಿಗೆ ಹಿಡಿದು ಹೊರಟು, ಜಲಾಶಯದ ಬಳಿ ಸಮಯವೆಲ್ಲ ಹರಟೆಯಲ್ಲಿ ಕಳೆದು, ಕಡೆಗೆ ಮನೆಗೆ ಖಾಲಿ ಬಿಂದಿಗೆ ಹಿಡಿದು ಬಂದರೆ ಹೇಗಿರುತ್ತದೆ? ಅಮೂಲ್ಯವಾದ ಮತ್ತು ಅಪರೂಪವಾದ ಮನುಷ್ಯ ಜನ್ಮ ಪಡೆದು. ಲೌಕಿಕ ಸುಖಗಳಲ್ಲಿ ಎಲ್ಲ ಕಾಲ ಕಳೆದು, ಕಡೆಗೆ ಅಲ್ಲಿ ಹೋಗಿ ನಿಂತಾಗ ಖಾಲಿ ಕೈ ಆಗುವಂತಾದರೆ ಹೇಗೆ? ಕಾಡಿ-ಬೇಡಿ ಪಡೆದ ದೇಹ, ಜನ್ಮ ವ್ಯರ್ಥವಾಯಿತು. ಹೀಗಾಗಲು ಬಿಡುವುದಿಲ್ಲ ಎಂದು ಮಹಾಲಕ್ಷ್ಮಿ ದೇವಿಗೆ ವಚನ ಕೊಟ್ಟಂತೆ ಈ ಮಾತು. 
***** 

"ಬಿಂದು ಮಾಧವನ ಘಟ್ಟಕ್ಕೆ ಹೋಗುವೆ, ಪುರಂದರ ವಿಠಲಗೆ ಅಭಿಷೇಕ ಮಾಡುವೆ" ಎನ್ನುವುದು ಕಡೆಯ ನುಡಿಯ ತಿರುಳು. ಕಾಶಿಯಲ್ಲಿ ಬಿಂದುಮಾಧವನ ದೇವಾಲಯ ಇದೆ. ಗಂಗಾನದಿಯ ಪಕ್ಕದಲ್ಲೇ ಇದೆ. "ಒಳ್ಳೆಯ ಗಂಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಬಂದು ವಿಠಲನ ಇನ್ನೊಂದು ರೂಪನಾದ ಮಾಧವನಿಗೆ ಅಭಿಷೇಕ ಮಾಡುತ್ತೇನೆ" ಅನ್ನುವುದು ಸಾಮಾನ್ಯ ಅರ್ಥ. 

"ನೀನು ನನ್ನ ಈ ಬೇಡಿಕೆಯ ಫಲವಾಗಿ ಕೊಡುವ ದೇಹದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಅವುಗಳನ್ನೆಲ್ಲಾ ಪರಮಾತ್ಮನಿಗೆ ಸಮರ್ಪಣ ಮಾಡುತ್ತೇನೆ" ಎಂದು ಮಹಾಲಕ್ಷ್ಮೀದೇವಿಯ ಮುಂದೆ ಪ್ರತಿಜ್ಞೆ ಮಾಡುವುದೇ ಒಟ್ಟು ತಾತ್ಪರ್ಯ ಮತ್ತು ವಿಶೇಷಾರ್ಥ. 

"ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿ ಗರ್ಭಿತಂ" ಎಂದು ಒಂದು ಮಾತಿದೆ. ದೊಡ್ಡವರ ಮಾತುಗಳಲ್ಲಿ ಅವರ ಅನೇಕ ಕಾಲದ ಅನುಭವದ, ಅಧ್ಯಯನದ ಸಾರ ತುಂಬಿರುತ್ತದೆ. ಶ್ರೀ ಪುರಂದರದಾಸರ ಪದಗಳಲ್ಲಿ ಇವನ್ನು ಚೆನ್ನಾಗಿ ಕಾಣಬಹುದು. ಒಂದೊಂದು ಸಾಲಿನಲ್ಲೂ, ಒಂದೊಂದು ಪದದಲ್ಲೂ, ಸಾಮಾನ್ಯ ಅರ್ಥಗಳೂ, ಅವುಗಳ ಜೊತೆ-ಜೊತೆಯಾಗಿ ವಿಶೇಷ ಅರ್ಥಗಳೂ, ಗೂಡಾರ್ಥಗಳೂ ತುಂಬಿರುತ್ತವೆ. ಒಂದು ಸಲ ಓದಿದರೆ ಅಥವಾ ಕೇಳಿದರೆ ಅಷ್ಟಿಷ್ಟು ಅರ್ಥವೇನೋ ಆಗುತ್ತದೆ. ಸರಿಯಾದ ಮೌಲ್ಯ ನಮಗೆ ಸಿಗಬೇಕಾದರೆ ಹೆಚ್ಚಿನ ಅಧ್ಯಯನ ಅಗತ್ಯ. 

*****

ಹಿಂದಿನ ಮತ್ತು ಈ ಸಂಚಿಕೆಯನ್ನು ಓದಿದ ನಂತರ ಹಾಡನ್ನು ಕೇಳಿದರೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಅದನ್ನು ಈ ಕೆಳಗೆ ಕೊಟ್ಟಿದೆ:


ಒಂದು ಬಾರಿ ಓದಿದರೆ ವಿಶೇಷಾರ್ಥಗಳು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಎರಡು ಮೂರು ಬಾರಿ ಓದುವ ತಾಳ್ಮೆ ಬೇಕು. ಒಮ್ಮೆ ಮನಸ್ಸಿನಲ್ಲಿ ನಿಂತರೆ ಮುಂದೆ ಬೇರೆ ಬೇರೆ ವಿಷಯಗಳ ಅಧ್ಯಯನ ಕಾಲದಲ್ಲಿ ಮತ್ತಷ್ಟು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. 

Sunday, December 8, 2024

ಬಿಂದು ಗಂಗೋದಕ

ನಾವು ಅರವತ್ತು-ಅರವತ್ತೈದು ವರುಷಗಳ ಹಿಂದೆ ಶಾಲೆಗಳಲ್ಲಿ ಓದುತ್ತಿದ್ದಾಗ ಕೆಲವು ಕವನಗಳನ್ನೂ ಮತ್ತು ಗದ್ಯಕಾವ್ಯ ಅಥವಾ ಚಂಪೂ ಕಾವ್ಯಗಳ ಭಾಗಗಳನ್ನು ಕನ್ನಡ ಪಠ್ಯ ಪುಸ್ತಕಗಳಲ್ಲಿ ಸೇರಿಸಿರುತ್ತಿದ್ದರು. ಪಠ್ಯ ಪುಸ್ತಕಗಳಲ್ಲಿ ಈ ಭಾಗದ ನಂತರ "ಕವಿ-ಕಾವ್ಯ ವಿಚಾರ" ಎನ್ನುವ ಶೀರ್ಷಿಕೆಯಡಿ ಕೆಲವು ಸಾಲು ಕವಿಯ ಮತ್ತು ಆ ಕಾವ್ಯದ ಹಿನ್ನೆಲೆಯ ಬಗ್ಗೆ ಕೊಟ್ಟಿರುತ್ತಿದ್ದರು. ಯಾವುದೇ ಸಾಹಿತ್ಯದ ಭಾಗ ಅರ್ಥವಾಗಬೇಕಿದ್ದರೆ ಆ ಕೃತಿಯ ಕರ್ತೃ (ಕೃತಿ ರಚನೆ ಮಾಡಿವರು), ಅವರ ಕಾಲ (ಜೀವಿಸಿದ್ದ ಸಮಯ) ಮತ್ತು ದೇಶ (ಬದುಕಿದ್ದ ಪರಿಸರ) ಇವುಗಳ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇರಬೇಕು. ಇಲ್ಲದೆ ಹೋದರೆ ಆ ಕೃತಿಯ ಪೂರ್ಣ ಪರಿಚಯ ಆಗುವುದಿಲ್ಲ. ನಾವು ಕೃತಿಗಳನ್ನು ಅವಲೋಕಿಸುವುದು ಇಂದಿನ ಕಾಲದಲ್ಲಿ. ನಾವು ಬದುಕುವುದು ನಮ್ಮ ಪರಿಸರದಲ್ಲಿ. ಓದುವ ಕೃತಿಯಾದರೋ ಎಂದೋ ರಚನೆಯಾದದ್ದಿರಬಹುದು. ಕೃತಿಯಲ್ಲಿ ಕವಿ ಅಂದು ಕಂಡ ಪರಿಸರ ಮತ್ತು ಸಮಾಜದ ಪ್ರತಿಬಿಂಬ ಕೊಟ್ಟಿರುತ್ತಾನೆ. ಕೊಂಚವಾದರೂ ಇವುಗಳ ಪರಿಚಯ ಇಲ್ಲದಿದ್ದರೆ ಅದನ್ನು ತಿಳಿಯುವುದು ಹೇಗೆ? ಈ ವಿಷಯದ ಬಗ್ಗೆ ಹೆಚ್ಚು ತಿಳಿಯಲು "ಕಾರಿಹೆಗ್ಗಡೆಯ ಮಗಳು" ಎನ್ನುವ ಸಂಚಿಕೆಯಲ್ಲಿ ಈ ವಿಷಯದ ಬಗ್ಗೆ ಕೊಟ್ಟಿರುವ ವಿವರಣೆಯನ್ನು ನೋಡಬಹುದು. ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಕಾಶಿ ನಮ್ಮ ದೇಶದ ಅತ್ಯಂತ ಪ್ರಮುಖ ಕ್ಷೇತ್ರಗಲ್ಲಿ ಒಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪಟ್ಟಣಕ್ಕೆ ವಾರಾಣಸಿ ಮತ್ತು ಬನಾರಸ್ ಎಂದೂ ಹೆಸರುಂಟು. ಈ ಹೆಸರುಗಳು ಹೇಗೆ ಬಂದವು, ಅವುಗಳ ವಿಶೇಷಗಳು ಏನು ಎನ್ನುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಈ ಕಾಶಿ ಕ್ಷೇತ್ರ ಸಂದರ್ಶಿಸಲು  ಹೋಗುವ ಶ್ರದ್ದಾಳು ಜನಗಳು ವಿಶ್ವನಾಥನ ದೇವಾಲಯವನ್ನು ನೋಡಿ ಹಿಂದಿರುಗುತ್ತಾರೆ. ಆದರೆ ಕಾಶಿ ಕ್ಷೇತ್ರಕ್ಕೆ ಮೂವರು ಮುಖ್ಯ ಅಧಿದೇವತೆಗಳಿದ್ದಾರೆ ಎಂದು ಹೇಳುತ್ತಾರೆ. ಅವರುಗಳು ವಿಶ್ವನಾಥ, ಕಾಲಭೈರವ ಮತ್ತು ಬಿಂದು ಮಾಧವ. ವಾರಾಣಸಿ ಅಥವಾ ಕಾಶಿ ನಗರ ಇರುವ ಪ್ರದೇಶದ ಗಂಗಾನದಿಯ ದಡವನ್ನು ಅನೇಕ ಘಟ್ಟಗಳೆಂದು (ಘಾಟ್ ಎಂದು ಪ್ರಸಿದ್ಧ) ವಿಂಗಡಿಸಿದ್ದಾರೆ. ಈ ಘಟ್ಟಗಳಿಗೆ ಆಯಾಯಾ ಹೆಸರುಗಳು ಬರಲು ಅನೇಕ ಕಾರಣಗಳಿವೆ. ಇದರಲ್ಲಿ ಮಣಿಕರ್ಣಿಕಾ ಘಾಟ್ ಬಹಳ ಪ್ರಸಿದ್ಧ. ಇಲ್ಲಿ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಅನೇಕ ಚಿತೆಗಳು ಉರಿಯುತ್ತಿರುವುದನ್ನು ಕಾಣಬಹುದು. ಮೃತರ ದೇಹಗಳಿಗೆ ಇಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಉನ್ನತ ಲೋಕಗಳು ಮೃತರಿಗೆ ಸಿಗುತ್ತವೆ ಎಂದು ಪ್ರಬಲವಾದ ನಂಬಿಕೆ. 

ಮಣಿಕರ್ಣಿಕಾ ಘಾಟ್ ಪ್ರದೇಶವನ್ನು ಮೊದಲು ಮಾಡಿಕೊಂಡು ಅಸ್ಸಿ ಘಾಟ್ ವರೆಗೆ (ಅಸ್ಸಿ ನದಿ ಗಂಗೆ ಸೇರುವ ಸ್ಥಳ) ಶಿವಕಾಶಿ ಎಂದೂ, ಮಣಿಕರ್ಣಿಕಾ ಘಾಟ್ ನಿಂದ ಆದಿಕೇಶವ ಘಾಟ್ ವರೆಗೆ ವಿಷ್ಣು ಕಾಶಿ ಎಂದೂ ಕರೆಯುತ್ತಾರೆ. ಈ ಘಟ್ಟಗಳಲ್ಲಿ ಪಂಚಗಂಗಾ ಘಟ್ಟವೂ ಒಂದು. ಇದರ ಬಳಿಯಲ್ಲಿ ಈಗ ಇರುವ ಸಣ್ಣ ದೇವಸ್ಥಾನವೊಂದು "ಬಿಂದುಮಾಧವ ದೇವಸ್ಥಾನ" ಎಂದು ಹೆಸರಾಗಿದೆ. ಅನೇಕ ಜನ ಶ್ರದ್ಧಾಳುಗಳು ಕಾಶಿಯಾತ್ರೆ ಈ ಬಿಂದು ಮಾಧವನ ದರ್ಶನವಿಲ್ಲದೆ ಪೂರ್ತಿಯಾಗದು ಎಂದು ನಂಬುತ್ತಾರೆ. 

*****

ಶ್ರೀ ಪುರಂದರದಾಸರು ವಿಜಯನಗರದ ಕರ್ನಾಟಕ ಸಾಮ್ರಾಜ್ಯ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದ ಕಾಲದಲ್ಲಿ ಜೀವಿಸಿದ್ದರು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಶ್ರೀ ಕೃಷ್ಣದೇವರಾಯನ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜರು, ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರು ಸಮಕಾಲೀನರು. ಅವರುಗಳ ವಯಸ್ಸಿನಲ್ಲಿ ಸ್ವಲ್ಪ ಅಂತರ ಇದ್ದರೂ ಅವರ ಜೀವಿತದ ಬಹಳ ಕಾಲ ಈ ಮೂವರೂ ವಿಜಯನಗರದಲ್ಲಿ ಬದುಕಿ ಬಾಳಿದವರು. ಶ್ರೀ ಪುರಂದರದಾಸರ ಕಾಲ ಸುಮಾರಾಗಿ 1485 ರಿಂದ 1564 ಎಂದು ನಂಬಲಾಗಿದೆ. 1564ರ ಪುಷ್ಯ ಬಹುಳ ಅಮಾವಾಸ್ಯೆಯಂದು ಅವರು ದೇಹತ್ಯಾಗ ಮಾಡಿದರೆಂದು ಈಗಲೂ ಪುಷ್ಯ ಬಹುಳ ಅಮಾವಾಸ್ಯೆಯಂದು ಅವರ ಆರಾಧನೆಯನ್ನು ನಡೆಸುತ್ತಾರೆ. ಪುರಂದರದಾಸರ ಕಾಲದಲ್ಲಿ ಅವರು ಅನೇಕ ಬಾರಿ ಕಾಶಿ ಕ್ಷೇತ್ರಕ್ಕೆ ಯಾತ್ರೆ ಮಾಡಿದ್ದರು. ಆಗಿನ ದಿನಗಳಲ್ಲಿ ಕಾಶಿ ವಿಶ್ವನಾಥ ಮತ್ತು ಕಾಶಿ ಬಿಂದುಮಾಧವ ಎನ್ನುವ ಎರಡು ವೈಭವೋಪೇತ ದೇವಸ್ಥಾನಗಳು ಇದ್ದವು. ಆದ್ದರಿಂದ ಅವರು ಈ ಎರಡು ದೇವಸ್ಥಾನಗಳನ್ನೂ ನೋಡಿ ದೇವರನಾಮಗಳನ್ನು ರಚಿಸಿದರು. ಇವುಗಳಲ್ಲಿ ಕೆಲವು ಸಿಕ್ಕಿವೆ ಮತ್ತು ಅನೇಕವು ಈಗ ಲಬ್ಧವಿಲ್ಲ. 

1669ರಲ್ಲಿ ಔರಂಗಝೇಬನ ಆಳ್ವಿಕೆಯಲ್ಲಿ ಈ ಸುಂದರವಾದ ಬಿಂದುಮಾಧವ ದೇವಸ್ಥಾನವನ್ನು ಒಡೆದು ಅದರ ಪಕ್ಕ ಮಸೀದಿ ನಿರ್ಮಿಸಿದರು. ದೇವಸ್ಥಾನ ಒಡೆಯುವ ಸುದ್ದಿ ಬಂದಾಗ ದೇವಾಲಯದ ಅರ್ಚಕರು ಮೂಲ ಬಿಂದುಮಾಧವ ಮೂರ್ತಿಯನ್ನು ಗಂಗಾನದಿಯ ನೀರಿನಲ್ಲಿ ಮುಳುಗಿಸಿಟ್ಟಿದ್ದರಂತೆ. ಕೆಲವು ವರುಷಗಳ ನಂತರ ಶಿವಾಜಿ ಮಹಾರಾಜರ ಆಡಳಿತ ಬಂದ ಸಂದರ್ಭದಲ್ಲಿ ಆ ಮೂಲ ವಿಗ್ರಹವನ್ನು ಹೊರತಂದು ಮತ್ತೆ ಪ್ರತಿಷ್ಠಾಪಿಸಿದರಂತೆ. ಇದೆಲ್ಲ ಅಂತೇ ಕಂತೆ ಪುರಾಣವಲ್ಲ. ಬಿಂದು ಮಾಧವ ದೇವಸ್ಥಾನದ ಸೊಗಸನ್ನು ಆ ಕಾಲದಲ್ಲಿ ನಮ್ಮ ದೇಶ ನೋಡಲು ಬಂದ ಹೊರ ದೇಶದ ಯಾತ್ರಿಕರು ತಮ್ಮ ಲೇಖನಗಲ್ಲಿ ಬರೆದಿಟ್ಟಿರುವ ದಾಖಲೆಗಳಿವೆ. ಇದೆ ರೀತಿ ಮಲ್ಲಿಕಾಫರ್ ಶ್ರೀರಂಗದ ದೇವಾಲಯವನ್ನು ಲೂಟಿ ಮಾಡಿದಾಗ ಅನೇಕರು ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದರಿಂದ ಇಂದು ನಾವು ಶ್ರೀರಂಗದ ದೇವಾಲಯ ನೋಡುತ್ತಿದ್ದೇವೆ, 

ಶ್ರೀ ಪುರಂದರದಾಸರು ಈ ಬಿಂದು ಮಾಧವನ ದರ್ಶನ ಮಾಡಿದ್ದರಿಂದ ತಮ್ಮ ಕೃತಿಗಳಲ್ಲಿ "ಬಿಂದು ಮಾಧವ" ಮೂರ್ತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವನ ಸ್ಮರಣೆಯನ್ನು ತಮ್ಮ ಕೃತಿಗಳಲ್ಲಿ ಬಳಸಿದ್ದಾರೆ. ಅವರ ಹೆಚ್ಚು ಜನಪ್ರಿಯ ಕೃತಿಗಳಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೆ ಬಿಂದಿಗೆಯ" ಎನ್ನುವುದೂ ಒಂದು. ಈ ಕೃತಿಯಲ್ಲಿ "ಬಿಂದು ಮಾಧವನ ಘಟ್ಟಕೆ ಹೋಗುವೆ ತಾರೆ ಬಿಂದಿಗೆಯ" ಎನ್ನುವ ಸಾಲು ಇದೆ. ನಾನು ಮೊದಲು ಈ ಕೃತಿ ಕೇಳಿದ್ದು ಸುಮಾರು ಐದು ವರುಷಗಳವನಿದ್ದಾಗ, ನನ್ನ ತಾಯಿ ಹಾಡಿದ್ದು. ಬಿಂದು ಮಾಧವನ ಘಟ್ಟ ಎಂದರೆ ಏನು ಎಂದು ಕೇಳಿ ಸರಿಯಾಗಿ ಉತ್ತರ ಸಿಗದೇ ಮನಸ್ಸಿನಲ್ಲಿ ಕುಳಿತಿತ್ತು. ನಂತರ ಅದರ ಹಿಂದೆ ಹೋಗಿ ಸಂಗ್ರಹಿಸಿದ ವಿವರಗಳು ಈಗ ಈ ಸಂಚಿಕೆಯ ಮೂಲಕ ಹೊರಬಂದಿರುವುದು ಒಂದು ವಿಶೇಷವೇ ಸರಿ! 

*****

ನಮ್ಮ ದೇಶದಲ್ಲಿ ಮುಖ್ಯವಾಗಿ ಐದು ಮಾಧವನ ದೇವಸ್ಥಾನಗಳು ಇವೆ. ಅವು ಯಾವುವೆಂದರೆ:
  1. ಕಾಶಿಯ ಬಿಂದು ಮಾಧವ 
  2. ಪ್ರಯಾಗದ ವೇಣಿ ಮಾಧವ 
  3. ರಾಮೇಶ್ವರದ ಸೇತು ಮಾಧವ 
  4. ತಿರುವನಂತಪುರದ ಸುಂದರ ಮಾಧವ 
  5. ಪೀಠಾಪುರಂನ ಕುಂತೀ ಮಾಧವ 
ಮೊದಲ ಮೂರು ಹೆಸರು ಕೆಲವು ವರುಷಗಳ ಹಿಂದಿನವರೆಗೂ ಚಾಲ್ತಿಯಲ್ಲಿದ್ದವು. ಅನೇಕರು ತಮ್ಮ ಮಕ್ಕಳಿಗೆ ಬಿಂದುಮಾಧವ, ಸೇತುಮಾಧವ ಮತ್ತು ವೇಣಿಮಾಧವ ಎಂದು ಹೆಸರಿಡುತ್ತಿದ್ದರು. ನಾನು ಶಾಲೆಯಲ್ಲಿದ್ದ ಕಾಲದಲ್ಲಿ ಈ ಹೆಸರಿನ ಹುಡುಗರು ನಮ್ಮ ಶಾಲೆಗಲ್ಲಿ ಓದುತ್ತಿದ್ದರು. ಈಗ ನವೀನ ಹೆಸರುಗಳ ಭರಾಟೆಯಲ್ಲಿ ಇದೆಲ್ಲ ಮರೆತುಹೋಗಿದೆ. 

ಮೊದಲ ನಾಲ್ಕು ನಗರಗಳಾದ ಕಾಶಿ, ಪ್ರಯಾಗ (ಅಲಹಾಬಾದ್), ರಾಮೇಶ್ವರ ಮತ್ತು ತಿರುವನಂತಪುರ ಎಲ್ಲರಿಗೂ ಚಿರಪರಿಚಿತ. ಐದನೆಯದಾದ ಪೀಠಾಪುರಂ ಆಂಧ್ರ ರಾಜ್ಯದ ಕಾಕಿನಾಡದ ಬಳಿ ಇರುವ ಪಟ್ಟಣ. ದತ್ತಾತ್ರೇಯನ ಅವತಾರಯೆಂದು ನಂಬಿರುವ ಶ್ರೀಪಾದ ಶ್ರೀವಲ್ಲಭರು ಬಹಳ ದಿನ ಬದುಕಿ ಬಾಳಿದ ಸ್ಥಳ. ಕನ್ನಡದ ಹೆಮ್ಮೆಯ ಚಲನ ಚಿತ್ರ "ಶ್ರೀ ಕೃಷ್ಣದೇವರಾಯ" ದಲ್ಲಿ ಬಂದಿರುವ "ಬಾ ವೀರ ಕನ್ನಡಿಗ" ಮತ್ತು "ಬೆಳಗಲಿ ಬೆಳಗಲಿ ವಿಜಯನಗರ ಸಾಮ್ರಾಜ್ಯ ಬೆಳಗಲಿ" ಎನ್ನುವ ವೀರಗೀತೆಗಳನ್ನು ಹಾಡಿರುವ ನಾಗೇಶ್ವರ ರಾವ್ ಈ ಪೀಠಾಪುರಂನವರು. ಅವರು ಪೀಠಾಪುರಂ ನಾಗೇಶ್ವರ ರಾವ್ ಎಂದೇ ಪರಿಚಿತರು. 

*****

ಇಷ್ಟಕ್ಕೂ ಈ ಮಾಧವ ಯಾರು? ಕೇಶವ ಮತ್ತು ಮಾಧವ ಎನ್ನುವ ಪದಗಳನ್ನು ಜೊತೆಯಾಗಿ ಉಪಯೋಗಿಸುತ್ತಾರೆ. ಇದಕ್ಕೆ ಏನಾದರೂ ಸಂಬಂಧವಿದೆಯೇ? ಇವು ಸಹಜವಾದ ಪ್ರಶ್ನೆಗಳು. ಶ್ರೀ ಮಹಾವಿಷ್ಣುವಿನ 24 ಹೆಸರುಗಳು ಕೇಶವಾದಿ ಚತುರ್ವಿಂಶತಿ ನಾಮಗಳು ಎಂದು ಪ್ರಸಿದ್ಧವಾಗಿವೆ. ಶ್ರೀ ಕನಕದಾಸರ "ಈಶ ನಿನ್ನ ಪಾದ ಭಜನೆ ಆಸೆಯಿಂದ ಮಾಡುವೆನು..." ಎನ್ನುವ ಕೃತಿ ಕೇಶವನಾಮವೆಂದೇ ಪ್ರಸಿದ್ಧವಾಗಿದೆ. ಮಹಾವಿಷ್ಣುವಿನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮಗಳು ಹಿಡಿದಿದ್ದಾನೆ ಎಂದು ವರ್ಣಿತವಾಗಿವೆ. ಈ ನಾಲ್ಕು ವಸ್ತುಗಳನ್ನು ಬೇರೆ ಬೇರೆ ರೀತಿಯಲ್ಲಿ ಹಿಡಿದರೆ ಒಟ್ಟು 24 ರೂಪಗಳಾಗುತ್ತವೆ. ಶಂಖ. ಚಕ್ರ, ಗದ, ಪದ್ಮಗಳನ್ನು ಹಿಡಿರುವ ರೂಪ ಕೇಶವ ರೂಪ. ಬೇಲೂರು ಮುಂತಾದ ಚನ್ನಕೇಶವ ಮಂದಿರಗಳಲ್ಲಿ ಇವನ್ನು ಕಾಣಬಹುದು. ಚಕ್ರ, ಶಂಖ, ಪದ್ಮ, ಗದೆ ಹಿಡಿದಿರುವ ರೂಪವೇ ಮಾಧವ ರೂಪ. ಈ ಸಂಚಿಕೆಯ ಮೇಲೆ ಕೊಟ್ಟಿರುವ ಬಿಂದು ಮಾಧವ ವಿಗ್ರಹದಲ್ಲಿ  ಇದನ್ನು ಕಾಣಬಹುದು. ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ  Keshava to Krishna ಎಂಬ ಸಂಚಿಕೆಗೆ  ಇಲ್ಲಿ ಕ್ಲಿಕ್ ಮಾಡಿ

ನೇಪಾಳ ದೇಶದ ಗಂಡಕಿ ನದಿ ಸಾಲಿಗ್ರಾಮ ಶಿಲೆಗಳಿಗೆ ಹೆಸರುವಾಸಿ. ಈಗಲೂ ಜನರು ಸಾಲಿಗ್ರಾಮಗಳನ್ನು ಪಡೆಯಲು ಅಲ್ಲಿಗೆ ಹೋಗುತ್ತಾರೆ. ಆ ಪ್ರದೇಶದಲ್ಲಿ ಬಹಳ ಹಿಂದೆ ಅಗ್ನಿ ಬಿಂದು ಎನ್ನುವ ಋಷಿ ತಪಸ್ಸು ಮಾಡುತ್ತಿದ್ದನಂತೆ. ಅವನ ತಪಸ್ಸಿಗೆ ಮೆಚ್ಚಿ ಮಹಾವಿಷ್ಣುವು ಮಾಧವ ರೂಪದಲ್ಲಿ ಅವನಿಗೆ ದರ್ಶನ ಕೊಟ್ಟು ಕಾಶಿಯಲ್ಲಿ ಮಾಧವನ ಮಂದಿರವನ್ನು ನಿರ್ಮಾಣ ಮಾಡಿ ಅದಕ್ಕೆ "ಬಿಂದು ಮಾಧವ" ಎಂದು ಹೆಸರಿಡಬೇಕೆಂದು ನಿರ್ದೇಶಿಸಿದನಂತೆ. ಆದ ಕಾರಣ ಬಿಂದು ಮಾಧವನ ದೇವಾಲಯ ಬಂತು!

*****

ಈಗಾಗಲೇ ಈ ಸಂಚಿಕೆ ಬಹಳ ದೀರ್ಘವಾಯಿತು. ನಾವು ಹೊರಟಿದ್ದು "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥ ಮತ್ತು ಗುಹ್ಯರ್ಥ ಹುಡುಕಲು. ಅಲ್ಲಿ ಇರುವ ಅನೇಕ ಪದಗಳಲ್ಲಿ ನಾವು ಗಮನಿಸಿದ್ದು ಹತ್ತು ಪದ ಪುಂಜಗಳನ್ನು. ಅದರಲ್ಲಿ ಒಂದೇ ಇಷ್ಟು ದೀರ್ಘವಾಯಿತು. 

ಹೂವ ತರುವರ ಮನೆಗೆ ಎಂಬ ಕೃತಿಯಲ್ಲಿ ಶ್ರೀ ಪುರಂದರದಾಸರು "ಬಿಂದು ಗಂಗೋದಕ" ಎಂದು ಪ್ರಯೋಗಿಸಿದ್ದಾರೆ. ಬಿಂದು ಎನ್ನುವ ಪದಕ್ಕೆ ಕನ್ನಡ, ಸಂಸ್ಕೃತ ಮತ್ತನೇಕ ಭಾರತೀಯ ಭಾಷೆಗಳಲ್ಲಿ ಚುಕ್ಕೆ, ಸೊನ್ನೆ ಮತ್ತು ಒಂದು ನೀರಿನ ಹನಿ ಎನ್ನುವ ಅರ್ಥಗಳಿವೆ. ಸಾಮಾನ್ಯವಾಗಿ ಈ ಪದ ಹಾಡುವಾಗ ಅಥವಾ ಕೇಳುವಾಗ ಈ ಪದಕ್ಕೆ ಒಂದು ತೊಟ್ಟು ನೀರು ಎಂದು ಅರ್ಥ ಮಾಡುತ್ತೇವೆ. ಪುರಂದರದಾಸರು ಉಪಯೋಗಿಸುವ ವಿಶೇಷಾರ್ಥ ಅಥವಾ ಇದರಲ್ಲಿ ಹುದುಗಿರುವ ಗುಹ್ಯಾರ್ಥ ಕೇವಲ ಒಂದು ತೊಟ್ಟು ನೀರಲ್ಲ. ಕಾಶಿ ಯಾತ್ರೆಯಲ್ಲಿ ಬಿಂದು ಮಾಧವನ ದರ್ಶನ ಮಾಡಿ, ಬಿಂದು ಮಾಧವನ ಘಟ್ಟಕ್ಕೆ ಹೋಗಿ ಪ್ರಯಾಸದಿಂದ ತಂದ  ಗಂಗೋದಕ. ಯಾವುದೋ ಒಂದು ತೊಟ್ಟು ನೀರಲ್ಲ!

ಎಲ್ಲರಿಗೂ ಕಾಶಿಯಾತ್ರೆ ಮಾಡಿ ಬಿಂದು ಮಾಧವನ ಘಟ್ಟದ ಗಂಗೋದಕ ತರಲು ಆಗುವುದಿಲ್ಲ. ಹಾಗಾದರೆ ಏನು ಮಾಡಬೇಕು? ಅದಕ್ಕೊಂದು ಸುಲಭೋಪಾಯವಿದೆ. ನೀರನ್ನು ಅರ್ಪಿಸುವಾಗ ಒಂದೇ ಮನಸ್ಸಿನಿಂದ "ನಾನು ತಂದಿರುವ ಈ ನೀರನ್ನೇ ನೀನು ಕೃಪೆಮಾಡಿ ಬಿಂದು ಮಾಧವನ ಘಟ್ಟದ ಗಂಗೋದಕ ಎಂದು ಸ್ವೀಕರಿಸು" ಎಂದು ಕೇಳಿಕೊಂಡರೆ ಆ ಮಹಾಮಹಿಮ ಹಾಗೆಯೇ ಸ್ವೀಕರಿಸುತ್ತಾನಂತೆ. ಅದರಲ್ಲಿ ನಮಗೆ ಅಲ್ಲಾಡದ ವಿಶ್ವಾಸ ಬೇಕು. ಗಟ್ಟಿ ನಂಬಿಕೆ ಬಕು. "ಗಂಗೇಚ ಯಮುನೇಚೈವ" ಎಂಬ ಮಂತ್ರ ಹೇಳುವಾಗ ಇದು ನಿಜವಾಗಿ ಆಗುತ್ತದೆ, ಕೇವಲ ಶಬ್ದಗಳಲ್ಲ ಎನ್ನುವ ಧೃಡ ಭರವಸೆ, ಶ್ರದ್ಧೆಗಳು ಬೇಕು. 

*****

ಒಂದು ಶಬ್ದದ ಗೂಡಾರ್ಥಕ್ಕೇ ಇಷ್ಟಾಯಿತು. ಮಿಕ್ಕವುಗಳ ವಿಶೇಷತೆಯನ್ನು ಮುಂದೆ ಆದಾಗ ಆದಾಗ ನೋಡೋಣ!