Showing posts with label Mahalakshmi. Show all posts
Showing posts with label Mahalakshmi. Show all posts

Wednesday, December 17, 2025

ರಾಮನಾಮ ಎಂಬ ರಸವುಳ್ಳ ನೀರಿಗೆ


ಕಳೆದ ಸಂಚಿಕೆಯಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬಹು ಜನಪ್ರಿಯ ದೇವರನಾಮ ಶ್ರೀ ಪುರಂದರದಾಸರ ಕೃತಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೇ ಬಿಂದಿಗೆಯ" ವಿಶೇಷಾರ್ಥಗಳ ಅನ್ವೇಷಣೆಯಲ್ಲಿ ಕೃತಿಯ ಪಲ್ಲವಿಯ ಎರಡು ಸಾಲುಗಳಲ್ಲಿ ತುಂಬಿರುವ ಅರ್ಥವಿಶೇಷಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಈಗ ಈ ಹಾಡಿನ ಉಳಿದ ಭಾಗಗಳ ವಿಶೇಷ ಅರ್ಥಗಳನ್ನು ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳಿದ್ದು ನೀರು ತರಲು. ಯಾವ ನೀರು? ನಾವು ನಮ್ಮ ಸುತ್ತ-ಮುತ್ತ ಕಾಣುವ ಮತ್ತು ದಿನಂಪ್ರತಿ ಉಪಯೋಗಿಸುವ ನೀರು ಎನ್ನುವುದು ಸಾಮಾನ್ಯವಾದ ಹೊರ ಅರ್ಥ. ನೀರಿಲ್ಲದೆ ಜೀವನವಿಲ್ಲ. ಗಾಳಿಯ ನಂತರ ಜೀವಿಗೆ ಬೇಕಾದ ಅತ್ಯಂತ ಮುಖ್ಯ ಅವಶ್ಯಕತೆ ನೀರು. ನೀರನ್ನು ಶೇಖರಿಸಿ ತರಲು ಒಂದು ಸಾಧನ ಬೇಕು. ಬಿಂದಿಗೆಯು ಅಂತಹ ಒಂದು ಸಾಧನ. ನೀರಿಲ್ಲದೆ ಕರ್ಮವಿಲ್ಲ. ಏನಾದರೂ ಮಾಡುವ ಮೊದಲು ಕೈ, ಕಾಲುಗಳನ್ನಾದರೂ ತೊಳೆದುಕೊಳ್ಳುತ್ತೇವೆ. ಅದಕ್ಕೆ ನೀರು ಬೇಕು. ಸ್ನಾನ ಮಾಡಿದರೆ ನೀರು ಬೇಕು. ಪೂಜೆ-ಹೋಮಾದಿಗಳನ್ನು ಮಾಡಲು ಮೊದಲು ನೀರಿನಿಂದಲೇ ಪ್ರಾರಂಭ. ಕಡೆಯಲ್ಲಿ ಸಮರ್ಪಣ ಮಾಡಲೂ ನೀರು ಬೇಕು. ನೀರಿನಿಂದ ಪ್ರಾರಂಭವಾದ ಕೆಲಸಗಳು ನೀರಿನಿಂದಲೇ ಕೊನೆ! ಬೇರೆ ಯಾವುದಾದರೂ ಪದಾರ್ಥ ಇಲ್ಲದಿದ್ದರೆ ಹೇಗೋ ಕೆಲಸ ತೂಗಿಸಬಹುದು. ನೀರಿಲ್ಲದಿದ್ದರೆ ಮುಂದೆ ಹೋಗಲು ಆಗುವುದೇ ಇಲ್ಲ.  

ನೀರಿಗೆ ಒಂದು ವಿಶೇಷಾರ್ಥವಿದೆ. ಬಿಂದಿಗೆ ಅನ್ನುವುದು ದೇಹವಾದಾಗ (ಏಕೆ ಅನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ) ನೀರು ಅನ್ನುವುದು ಜೀವಿಯು ಮಾಡುವ "ಕರ್ಮ" ಸೂಚಕವಾಗುತ್ತದೆ. ಬಿಂದಿಗೆಯಲ್ಲಿ ನೀರನ್ನು ತರುವಂತೆ ದೇಹದಿಂದ ಜೀವಿಯು ಕರ್ಮಗಳನ್ನು ಮಾಡಿ ಆ ಮೂಲಕ ಸಾಧನೆಗಳನ್ನು ಮಾಡುತ್ತಾನೆ. 

ಈಶಾವಾಸ್ಯ ಉಪನಿಷತ್ತು ತನ್ನ ನಾಲ್ಕನೆಯ ಮಂತ್ರದಲ್ಲಿ "ತಸ್ಮಿನ್ ಆಪಃ ಮಾತರಿಶ್ವಾ ದಧಾತಿ" ಎಂದು ಹೇಳುತ್ತದೆ. "ಆಪಃ" ಅಂದರೆ ನೀರು. "ಮಾತರಿಶ್ವ" ಅಂದರೆ ವಾಯು. ವಾಯುವು ಕೊಡುವ ನೀರು ಯಾವುದು? ಕೊಡುವುದು ಯಾರಿಗೆ? ಜೀವಿಯ ಎಲ್ಲ ಕರ್ಮಗಳಿಗೆ ಪ್ರತ್ಯಕ್ಷ ಸಾಕ್ಷಿ ಪ್ರಾಣವಾಯು. ಮೊದಲ ಉಸಿರಿನಿಂದ ಪ್ರಾರಂಭವಾದ ಜೀವನದಿಂದ ಕರ್ಮ ಪ್ರಾರಂಭ. ಕೊನೆಯ ಉಸಿರಿನೊಡನೆ ಅದು ಮುಗಿಯಿತು. ಬೇರೆಯವರ ಕಣ್ಣು ತಪ್ಪಿಸಿ ಅನೇಕ ಕೆಲಸಗಳನ್ನು ಮಾಡಬಹುದು. ಹಾಗೆ ಏನಾದರೂ ಮಾಡಿ ಅರಗಿಸಿಕೊಳ್ಳಬಹುದು. ಆದರೆ ಮಾತರಿಶ್ವನ ಕಣ್ಣು ತಪ್ಪಿಸಲಾಗದು. ಇದನ್ನೇ "ಅಂತಃಸಾಕ್ಷಿ" ಎಂದೂ ಹೇಳುತ್ತೇವೆ.  ಜೀವನ ಕಾಲ ಮುಗಿದ ಮೇಲೆ ಜೀವಿಯನ್ನು ಪರಮಾತ್ಮನ ಮುಂದೆ ನಿಲ್ಲಿಸಿ ವಾಯುದೇವನು ಅವನ ಸಮಸ್ತ ಕರ್ಮಗಳನ್ನು ಹಾಜರು ಮಾಡುತ್ತಾನೆ. 

ಈ ಕಾರಣದಿಂದ "ನಾ ನೀರಿಗ್ಹೋಗುವೆ" ಅಂದರೆ "ನೀನು ಕೊಟ್ಟ ದೇಹದಿಂದ ನಾನು ಕರ್ಮಗಳನ್ನು ಆಚರಿಸಿ ಸಾಧನೆಗಳನ್ನು ಮಾಡುವೆ, ಮಹಾಲಕ್ಷ್ಮಿ ಅಕ್ಕಾ" ಎಂದು ಹೇಳುವುದು. ಇದು ಅಂತರಾರ್ಥ. 
***** 

"ರಾಮನಾಮ ಎಂಬೋ ರಸವುಳ್ಳ ನೀರಿಗೆ" ಬಿಂದಿಗೆ ಬೇಕು. ರಾಮನಾಮದ ವಿಶೇಷವೇನು? ಅನಂತರೂಪಿ ಪರಮಾತ್ಮನಿಗೆ ಅನಂತ ಹೆಸರುಗಳು. ಸೃಷ್ಟಿಯಲ್ಲಿ ಇರುವ ಸಕಲ ಶಬ್ದಗಳೂ ಪರಮಾತ್ಮನನ್ನೇ ಹೇಳುತ್ತವೆ ಎನ್ನುವುದು ಒಂದು ಪ್ರಮೇಯ. (ಧ್ವನ್ಯಾತ್ಮಕ ಮತ್ತು ವರ್ಣಾತ್ಮಕ ಶಬ್ದಗಳ ಬಗ್ಗೆ ಹಿಂದೊಂದು ಸಂಚಿಕೆಯಲ್ಲಿ ನೋಡಿದ್ದೇವೆ). "ರಮಯತಿ ಇತಿ ರಾಮಃ". "ಆನಂದ (ಸಂತೋಷ) ಕೊಡುವವನು ರಾಮ" ಎಂದು ಇದರ ಅರ್ಥ. ಜೀವಿಗಳಿಗೆ ಈ ಸುತ್ತುವ ಸಂಸಾರದ ಹುಟ್ಟು-ಸಾವುಗಳಿಂದ ಬಿಡುಗಡೆ ಕೊಟ್ಟು ಶಾಶ್ವತ ಆನಂದ ಕೊಡುವವನು ರಾಮ. ಈ ಮೋಕ್ಷದ ನಂತರದ ಆನಂದಕ್ಕೆ ಅದರ ಪ್ರಮಾಣದಲ್ಲಿ ಆಗಾಗ ಹೆಚ್ಚು-ಕಡಿಮೆ ಆಗುವ ಭಯವಿಲ್ಲ. ಎಂದೋ ಒಂದು ದಿನ ಮುಗಿದುಹೋಗುವುದು ಎನ್ನುವ ಆತಂಕವಿಲ್ಲ. ಅದು ಶಾಶ್ವತವಾದ, ಕೊನೆಯಿಲ್ಲದ, ಪರಿಪೂರ್ಣ ಆನಂದ. 

ರಾಮನು ಎಲ್ಲ ಕಾಲದಲ್ಲೂ ಇದ್ದನು. ಎಲ್ಲ ಕಾಲದಲ್ಲೂ ಇರುತ್ತಾನೆ. ತ್ರೇತಾಯುಗದ ಶ್ರೀರಾಮಚಂದ್ರನು ಅವತಾರ ಮಾಡುವ ಮೊದಲೂ ಇದ್ದನು. ಆ ಅವತಾರ ಮುಗಿದಮೇಲೂ ಇರುತ್ತಾನೆ. ಇಂತಹ ರಾಮನ ಹೆಸರನ್ನೇ ದಶರಥ-ಕೌಸಲ್ಯೆಯರ ಮಗನಿಗೂ ಕೊಟ್ಟರು. ಇಬ್ಬರೂ ಒಂದೇ. ಭೇದವಿಲ್ಲ. 

ಪರಮಾತ್ಮನ ಅನಂತ ನಾಮಗಳಲ್ಲಿ ರಾಮನಾಮ ಅತ್ಯಂತ ಸುಲಭವಾದದ್ದು. ಒತ್ತಕ್ಷರಗಳ ಗೊಂದಲವಿಲ್ಲ. ಆರು-ಎಂಟು-ಹತ್ತು ಅಕ್ಷರಗಳ ದೊಡ್ಡ ಹೆಸರಲ್ಲ. ಈಗ ತಾನೇ ಮಾತು ಕಲಿಯುತ್ತಿರುವ ಮಗುವೂ ಸುಖವಾಗಿ "ರಾಮ" ಎಂದು ಹೇಳುವುದು. "ಹೃಷಿಕೇಶ" "ತ್ರಿವಿಕ್ರಮ" "ಪದ್ಮನಾಭ" "ಸಂಕರ್ಷಣ" "ಅಧೋಕ್ಷಜ" ಮುಂತಾದುವನ್ನು ಹೇಳಲು ಅನೇಕರಿಗೆ ಕಷ್ಟವಾಗುತ್ತದೆ. ರಾಮನಾಮಕ್ಕೆ ಇಂತಹ ಬಂಧವಿಲ್ಲ. ಅದು ಗಟ್ಟಿಯಾದ ಚಕ್ಕುಲಿ, ಕೋಡುಬಳೆ, ಪುಳ್ಳಂಗಾಯಿ ಉಂಡೆ ತಿಂದು ಅರಗಿಸಿಕೊಂಡಂತೆ ಅಲ್ಲ. ಪಾಯಸ ಕುಡಿದಂತೆ ಸುಲಭ. ಸಿಹಿಯೂ ಹೌದು. ಆದ್ದರಿಂದ "ರಾಮನಾಮ ಪಾಯಸ"!
*****

ರಾಮನಾಮ ಎಂಬ ನೀರು ಎಂದಾಯಿತು. "ರಸವುಳ್ಳ ನೀರು" ಎಂದೇಕೆ ಹೇಳಿದರು? ನೀರಿನಲ್ಲಿ ಎಂತಹ ರಸ? ನಮಗೆ ಬಾಯಾರಿಕೆ ಆದಾಗ ಕುಡಿಯಲು ನೀರು ಬೇಕು. ಒಳ್ಳೆಯ ಬಾದಾಮಿ ಹಾಲೋ, ಎಳನೀರೋ ಕೊಟ್ಟರೆ ಹೇಗೆ? ಸೊಗಸಾದ ಕಾಫಿ? ಅಥವಾ ಕಿತ್ತಳೆ ರಸ? "ಅದೆಲ್ಲಾ ಇರಲಿ. ಕೊಡುವಿರಂತೆ. ಮೊದಲು ಒಂದು ಲೋಟ ನೀರು ಕೊಡಿ, ಆಮೇಲೆ ಬೇರೆಯದು" ಎನ್ನುತ್ತೇವೆ. ಆಯಿತು. ಕೊಟ್ಟರು. ಎಲ್ಲ ನೀರೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಿನಲ್ಲಿ ಬೋರ್ವೆಲ್ ನೀರು ಕೊಡಬಹುದು. ಯಾವುದೊ ಕೆರೆಯಿಂದ ತಂಡ ಟ್ಯಾಂಕರ್ ನೀರು ಇರಬಹುದು. ಕಾವೇರಿ, ಅರ್ಕಾವತಿ ನೀರು ತಂದಿರಬಹುದು. ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ನೀರು ಕುಡಿದರೆ ಮುಖ ಸಿಂಡರಿಸುತ್ತೇವೆ. "ಈ ನೀರು ಅಷ್ಟು ಸರಿ ಇಲ್ಲ" ಅನ್ನುತ್ತೇವೆ. ಯಾಕೆ? ನೀರು ಚೆನ್ನಾಗಿರಬೇಕು. "ಇಂತಹ ಒಳ್ಳೆಯ ನೀರು ತರುತ್ತೇನೆ, ಬಿಂದಿಗೆ ಕೊಡು" ಅನ್ನುವುದು ಸಾಮಾನ್ಯ ಅರ್ಥ. 

"ರಸ" ಅನ್ನುವುದಕ್ಕೆ ವಿಶೇಷಾರ್ಥವೂ ಉಂಟು. ಅದು ತಿಳಿಯಬೇಕಾದರೆ ಶ್ರೀಮದ್ ಭಗವದ್ಗೀತೆಯ ಏಳನೆಯ ಅಧ್ಯಾಯ ನೋಡಬೇಕು. ಎಂಟನೆಯ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳುತ್ತಾನೆ:

ರಸೋಹಂ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ ಸೂರ್ಯಯೋ: 
ಪ್ರಣವಃ ಸರ್ವವೇದೇಷು ಶಬ್ದ: ಖೇ ಪೌರುಷಮ್ ನೃಷು 

"ನೀರಿನಲ್ಲಿ ನಾನು ರಸ ಆಗಿದ್ದೇನೆ. ಚಂದ್ರ-ಸೂರ್ಯರಲ್ಲಿ ಬೆಳಕಾಗಿದ್ದೇನೆ. 
ವೇದಗಳಲ್ಲಿ ಓಂಕಾರವಾಗಿದ್ದೇನೆ. ಆಕಾಶದಲ್ಲಿ ಶಬ್ದ ರೂಪದಲ್ಲಿ ಇದ್ದೇನೆ. 
ಮನುಷ್ಯರಲ್ಲಿ ಕ್ರಿಯಾಶಕ್ತಿಯ ರೂಪವಾಗಿ ನಿಂತಿದ್ದೇನೆ"

ಪರಮಾತ್ಮನ ಸನ್ನಿಧಾನ ಇದ್ದಾಗ ನೀರು ರುಚಿಸುತ್ತದೆ. ಪದಾರ್ಥಗಳ ಸೊಗಸು ನಾಲಿಗೆಗೆ ಸಿಗುತ್ತದೆ. ಕಿತ್ತಳೆ ತೊಳೆ ನೋಡಲು ಕೆಂಪಾಗಿದೆ. ದಪ್ಪಗೂ ಇದೆ. ಆದರೆ ತಿಂದಾಗ ಬರೀ ಬೆಂಡು ಬೆಂಡು. ಯಾಕೆ? ಅಲ್ಲಿ ಪರಮಾತ್ಮನ ಅಭಿವ್ಯಕ್ತಿ ಇಲ್ಲ. ಬಾದಾಮಿ, ಗೋಡಂಬಿ ಬಹಳ ಚೆನ್ನಾಗಿವೆ. ಬಾಯಿಯಲ್ಲಿ ಹಾಕಿಕೊಂಡು ಎಷ್ಟು ಹೊತ್ತು ಇಟ್ಟುಕೊಂಡರೂ ಏನೂ ರುಚಿಯಿಲ್ಲವಲ್ಲ? ಅಗಿದು ಅದಕ್ಕೆ ಸ್ವಲ್ಪ ರಸರೂಪದ ನೀರು ಸೇರಿದರೆ ತಕ್ಷಣ ರುಚಿ ಸಿಕ್ಕಿತು!  

ಮನುಷ್ಯನು ಮಾಡುವ ಕೆಲಸಗಳೂ ಅಂತೆಯೇ. ಯಾವುದೋ ಕಾರಣಕ್ಕೆ ಮಾಡಿದ ಕಾರ್ಯಗಳು ನೀರಸ. "ಪರಮಾತ್ಮನಿಗೆ ಪ್ರೀತಿಯಾಗಲಿ" ಎಂದು ಮಾಡಿದ ತಕ್ಷಣ ಅಲ್ಲಿ ರಸ ಬಂದು ಕೂತಿತು. ಮಾಡಿದ ಕರ್ಮ ಸತ್ಕರ್ಮ ಆಯಿತು. ಅವನಿದ್ದರೆ ಅದು ಸರಸ. ರಸದಿಂದ ಕೂಡಿದ್ದು. ಅವನಿಲ್ಲದಿದ್ದರೆ ಅದು ನೀರಸ. ರಸವಿಲ್ಲದ್ದು. ಅವನಿಗೆ ವಿರುದ್ಧವಾಗಿದ್ದರೆ ವಿರಸ. ಇದೇ ಸತ್ಕರ್ಮಗಳ ರಹಸ್ಯ!

"ರಾಮನಾಮವೆಂಬ ರಸವುಳ್ಳ ನೀರು ತರುತ್ತೇನೆ, ಬಿಂದಿಗೆ ಕೊಡು ಅಕ್ಕಾ" ಅಂದಾಗ "ಸತ್ಕರ್ಮಗಳನ್ನು ಮಾಡಿ ರಸರೂಪವಾದ ಸಾಧನೆಯನ್ನು ದೇಹದಲ್ಲಿ ತುಂಬಿಕೊಳ್ಳುತ್ತೇನೆ" ಎಂದು ಅರ್ಥ. ಇದೇ ಇಲ್ಲಿನ ವಿಶೇಷಾರ್ಥ. 
*****

"ಗೋವಿಂದ ಎಂಬ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ, ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ" ಅನ್ನುವುದು ಮುಂದಿನದು. "ಗೋವಿಂದ" ಅನ್ನುವ ಪದಕ್ಕೆ ಅನೇಕ ಅರ್ಥಗಳು. ಗೋ ಅನ್ನುವ ಪದಕ್ಕೆ "ನೀರು" "ಹಸು" "ಭೂಮಿ" "ವೇದಗಳು" ಇನ್ನೂ ಮುಂತಾಗಿ ವಿವರಣೆಗಳಿವೆ. "ಉತ್ತಮವಾದದ್ದು" ಎಂದೂ ಅರ್ಥವುಂಟು. "ನೀರಿನಲ್ಲಿ ಶ್ರೇಷ್ಠವಾದ ರೀತಿಯ ನೀರು ತರುತ್ತೇನೆ" ಎಂದು ಹೇಳುವುದು ಸಾಮಾನ್ಯ ಅರ್ಥ. 

ಅಮೃತದ ನೀರು ಹೇಗೆ? ಸತ್ಕರ್ಮ ಮಾಡಿದ ಮೇಲೆ ಮುಂದೆ ಜನ್ಮವಿಲ್ಲದ ಮುಕ್ತಿ ಸಿಗುತ್ತದೆ. ಸಾವಿಲ್ಲದ್ದು ಅಮೃತ. ಗೋವಿಂದನ ಪ್ರೀತಿಗಾಗಿ ಮಾಡಿದ ಕರ್ಮಗಳನ್ನು, ನಿಷ್ಕಾಮ ಕರ್ಮಗಳನ್ನು, ತುಂಬಿಕೊಂಡಮೇಲೆ ಮತ್ತೆ ಮರಣವಿಲ್ಲ. ಅಂದರೆ ಅಮೃತತ್ವ ಸಿಕ್ಕಿತು. ಆದ್ದರಿಂದ "ಅಮೃತದ ನೀರು". 

"ಕಾಮಿನಿಯರ ಕೂಡೆ ಏಕಾಂತವಾಡೆನು, ತಾರೆ ಬಿಂದಿಗೆಯ" ಎಂದರೇನು? ನೀರು ತರಲು ನದಿಗೋ, ಭಾವಿಗೋ ಹೋದಾಗ ಅಲ್ಲಿ ನಮ್ಮಂತೆಯೇ ಅನೇಕರು ಬಂದಿರುತ್ತಾರೆ. ಸಾಮಾನ್ಯವಾಗಿ ನೀರು ತರಲು ಹೋಗುತ್ತಿದ್ದುದು ಲೋಕಾರೂಢಿಯಾಗಿ ಹೆಣ್ಣುಮಕ್ಕಳು. ಕಾಮಿನಿ ಅನ್ನುವ ಪದಕ್ಕೆ ಹೆಣ್ಣು ಎಂದೂ ಒಂದು ಅರ್ಥ. ಒಂದರ್ಥವೇನು, ಇದೇ ಅರ್ಥದಲ್ಲಿ ಆ ಪದವನ್ನು ಸಾಮಾನ್ಯವಾಗಿ ಬಳಸುವುದು. ಕೆಲವರು ಅಲ್ಲಿ ಕಂಡಾಗ ಸಹಜವಾಗಿ ಸ್ವಲ್ಪ ಅದು-ಇದು ಮಾತಾಡುವಂತೆ ಆಗುತ್ತದೆ. ಹರಟೆಯಲ್ಲಿ ಕಾಲಹರಣ ನಡೆಯುತ್ತದೆ. "ನಾನು ಹರಟೆಯಲ್ಲಿ ಕಾಲ ವ್ಯಯ ಮಾಡುವುದಿಲ್ಲ. ಅಲ್ಲಿ ಹೋಗಿ, ನೀರು ತುಂಬಿಕೊಂಡು ಬೇಗ ಬಂದುಬಿಡುತ್ತೇನೆ" ಎನ್ನುವುದು ಸಾಮಾನ್ಯ ಅರ್ಥ. 

"ಕಾಮ" ಅಂದರೆ ಆಸೆ. ಆಸೆ ಯಾವಾಗಲೂ ಒಂದೇ ಒಂದಾಗಿ ಬರುವುದಿಲ್ಲ. ಆಸೆಗಳು ಗುಂಪಾಗಿ ಮನುಷ್ಯನನ್ನು ಕಾಡುತ್ತವೆ. ಕಾಮದಿಂದ ಹುಟ್ಟಿದ್ದು ಕಾಮಿನಿ ಎಂದಾಗುತ್ತದೆ. "ಅಕ್ಕ, ನೀನು ದೇಹವನ್ನು ಕೊಟ್ಟರೆ ಅದನ್ನು ಇತರೆ ಆಸೆಗಳ, ಪ್ರಾಪಂಚಿಕ ಸುಖ-ಭೋಗಗಳ, ತೃಪ್ತಿಗೆ ಬಳಸುವುದಿಲ್ಲ. ಕೇವಲ ಸಾಧನೆಗಾಗಿಯೇ ಜೀವಿತ ಕಾಲವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳುವುದೇ ವಿಶೇಷಾರ್ಥ. 

ನೀರು ತರಲೆಂದು ಬಿಂದಿಗೆ ಹಿಡಿದು ಹೊರಟು, ಜಲಾಶಯದ ಬಳಿ ಸಮಯವೆಲ್ಲ ಹರಟೆಯಲ್ಲಿ ಕಳೆದು, ಕಡೆಗೆ ಮನೆಗೆ ಖಾಲಿ ಬಿಂದಿಗೆ ಹಿಡಿದು ಬಂದರೆ ಹೇಗಿರುತ್ತದೆ? ಅಮೂಲ್ಯವಾದ ಮತ್ತು ಅಪರೂಪವಾದ ಮನುಷ್ಯ ಜನ್ಮ ಪಡೆದು. ಲೌಕಿಕ ಸುಖಗಳಲ್ಲಿ ಎಲ್ಲ ಕಾಲ ಕಳೆದು, ಕಡೆಗೆ ಅಲ್ಲಿ ಹೋಗಿ ನಿಂತಾಗ ಖಾಲಿ ಕೈ ಆಗುವಂತಾದರೆ ಹೇಗೆ? ಕಾಡಿ-ಬೇಡಿ ಪಡೆದ ದೇಹ, ಜನ್ಮ ವ್ಯರ್ಥವಾಯಿತು. ಹೀಗಾಗಲು ಬಿಡುವುದಿಲ್ಲ ಎಂದು ಮಹಾಲಕ್ಷ್ಮಿ ದೇವಿಗೆ ವಚನ ಕೊಟ್ಟಂತೆ ಈ ಮಾತು. 
***** 

"ಬಿಂದು ಮಾಧವನ ಘಟ್ಟಕ್ಕೆ ಹೋಗುವೆ, ಪುರಂದರ ವಿಠಲಗೆ ಅಭಿಷೇಕ ಮಾಡುವೆ" ಎನ್ನುವುದು ಕಡೆಯ ನುಡಿಯ ತಿರುಳು. ಕಾಶಿಯಲ್ಲಿ ಬಿಂದುಮಾಧವನ ದೇವಾಲಯ ಇದೆ. ಗಂಗಾನದಿಯ ಪಕ್ಕದಲ್ಲೇ ಇದೆ. "ಒಳ್ಳೆಯ ಗಂಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಬಂದು ವಿಠಲನ ಇನ್ನೊಂದು ರೂಪನಾದ ಮಾಧವನಿಗೆ ಅಭಿಷೇಕ ಮಾಡುತ್ತೇನೆ" ಅನ್ನುವುದು ಸಾಮಾನ್ಯ ಅರ್ಥ. 

"ನೀನು ನನ್ನ ಈ ಬೇಡಿಕೆಯ ಫಲವಾಗಿ ಕೊಡುವ ದೇಹದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಅವುಗಳನ್ನೆಲ್ಲಾ ಪರಮಾತ್ಮನಿಗೆ ಸಮರ್ಪಣ ಮಾಡುತ್ತೇನೆ" ಎಂದು ಮಹಾಲಕ್ಷ್ಮೀದೇವಿಯ ಮುಂದೆ ಪ್ರತಿಜ್ಞೆ ಮಾಡುವುದೇ ಒಟ್ಟು ತಾತ್ಪರ್ಯ ಮತ್ತು ವಿಶೇಷಾರ್ಥ. 

"ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿ ಗರ್ಭಿತಂ" ಎಂದು ಒಂದು ಮಾತಿದೆ. ದೊಡ್ಡವರ ಮಾತುಗಳಲ್ಲಿ ಅವರ ಅನೇಕ ಕಾಲದ ಅನುಭವದ, ಅಧ್ಯಯನದ ಸಾರ ತುಂಬಿರುತ್ತದೆ. ಶ್ರೀ ಪುರಂದರದಾಸರ ಪದಗಳಲ್ಲಿ ಇವನ್ನು ಚೆನ್ನಾಗಿ ಕಾಣಬಹುದು. ಒಂದೊಂದು ಸಾಲಿನಲ್ಲೂ, ಒಂದೊಂದು ಪದದಲ್ಲೂ, ಸಾಮಾನ್ಯ ಅರ್ಥಗಳೂ, ಅವುಗಳ ಜೊತೆ-ಜೊತೆಯಾಗಿ ವಿಶೇಷ ಅರ್ಥಗಳೂ, ಗೂಡಾರ್ಥಗಳೂ ತುಂಬಿರುತ್ತವೆ. ಒಂದು ಸಲ ಓದಿದರೆ ಅಥವಾ ಕೇಳಿದರೆ ಅಷ್ಟಿಷ್ಟು ಅರ್ಥವೇನೋ ಆಗುತ್ತದೆ. ಸರಿಯಾದ ಮೌಲ್ಯ ನಮಗೆ ಸಿಗಬೇಕಾದರೆ ಹೆಚ್ಚಿನ ಅಧ್ಯಯನ ಅಗತ್ಯ. 

*****

ಹಿಂದಿನ ಮತ್ತು ಈ ಸಂಚಿಕೆಯನ್ನು ಓದಿದ ನಂತರ ಹಾಡನ್ನು ಕೇಳಿದರೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಅದನ್ನು ಈ ಕೆಳಗೆ ಕೊಟ್ಟಿದೆ:


ಒಂದು ಬಾರಿ ಓದಿದರೆ ವಿಶೇಷಾರ್ಥಗಳು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಎರಡು ಮೂರು ಬಾರಿ ಓದುವ ತಾಳ್ಮೆ ಬೇಕು. ಒಮ್ಮೆ ಮನಸ್ಸಿನಲ್ಲಿ ನಿಂತರೆ ಮುಂದೆ ಬೇರೆ ಬೇರೆ ವಿಷಯಗಳ ಅಧ್ಯಯನ ಕಾಲದಲ್ಲಿ ಮತ್ತಷ್ಟು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. 

Friday, November 28, 2025

ಸಹೋದರಿ, ತಳೋದರಿ ಮತ್ತು ಮಂಡೋದರಿ


ಕಳೆದ ತಿಂಗಳ ಒಂದು ಸಂಚಿಕೆಯಲ್ಲಿ (ಅಕ್ಟೋಬರ್ 2025) ಸಹೋದರರು ಮತ್ತು ಅಣ್ಣ-ತಮ್ಮಂದಿರ ನಡುವಿನ ವ್ಯತ್ಯಾಸದ ಪ್ರಸ್ತಾಪ ಬಂದಿತ್ತು. ಒಂದು ತಾಯಿಯ ಮಕ್ಕಳು ಸಹೋದರರು ಎಂದು ನಿರ್ದೇಶಿಸುವಾಗ, ಚಕ್ರವರ್ತಿ ಯಯಾತಿಯ ಮಗಳು ಮಾಧವಿಯ ನಾಲ್ವರು ಮಕ್ಕಳಾದ ಪ್ರದರ್ತನ, ವಸುಮನ, ಶಿಬಿ ಮತ್ತು ಅಷ್ಟಕ ಇವರು ನಾಲ್ಕು ಬೇರೆ ಬೇರೆ ತಂದೆಯರ ಮಕ್ಕಳಾದರೂ ಒಂದೇ ತಾಯಿ ಮಾಧವಿಯ ಮಕ್ಕಳಾದುದರಿಂದ ಸಹೋದರರು ಎಂದು ಹೇಳಿತ್ತು. "ನಾಲ್ಕು ಮಾತುಗಳು" ಎಂಬ ಶೀರ್ಷಿಕೆಯ ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಇದನ್ನು ಓದಿದ ಸ್ನೇಹಿತರೊಬ್ಬರು "ಸಹೋದರಿ" ಶಬ್ದಕ್ಕೂ "ತಳೋದರಿ" ಶಬ್ದಕ್ಕೂ ಏನಾದರೂ ಸಂಬಂಧವಿದೆಯೇ?" ಎಂದು ಕೇಳಿದ್ದಾರೆ. ಹಾಗೆಯೇ, "ರಾವಣನ ಹೆಂಡತಿ ಮಂಡೋದರಿ. ಈ "ಮಂಡೋದರಿ" ಅನ್ನುವುದಕ್ಕೂ ಸಹೋದರಿ ಮತ್ತು ತಳೋದರಿ ಅನ್ನುವುದಕ್ಕೂ ಸಂಬಂಧ ಏನು?" ಎಂದು ಕೇಳಿದ್ದಾರೆ. ಇವುಗಳ ಬಗ್ಗೆ ಸ್ವಲ್ಪ ಈಗ ನೋಡೋಣ. 

*****

ಒಂದು ತಾಯಿಯ ಹೊಟ್ಟೆಯಲ್ಲಿ (ಅಂದರೆ ಗರ್ಭದಲ್ಲಿ) ಹುಟ್ಟಿದ ಗಂಡು ಮಕ್ಕಳು ಪರಸ್ಪರ ಸಹೋದರರು. ಹೆಣ್ಣು ಮಕ್ಕಳು ಸಹೋದರಿಯರು. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಒಟ್ಟಿಗೆ ಸೇರಿ ಪರಸ್ಪರ ಸಹೋದರ-ಸಹೋದರಿಯರು. ಒಂದು ತಂದೆಯ ಮಕ್ಕಳು ಅಣ್ಣ-ತಮ್ಮಂದಿರು ಮತ್ತು ಅಕ್ಕ-ತಂಗಿಯರು. ಯದುವಂಶದ ಬಲರಾಮ ರೋಹಿಣಿಯ ಮಗ. ಶ್ರೀಕೃಷ್ಣ ದೇವಕಿಯ ಮಗ. ಸುಭದ್ರೆ ರೋಹಿಣಿಯ ಮಗಳು. ಮೂವರೂ ವಸುದೇವನ ಮಕ್ಕಳು. ಹೀಗಾಗಿ, ಬಲರಾಮ ಮತ್ತು ಸುಭದ್ರೆ ಸಹೋದರ-ಸಹೋದರಿಯರು. ಬಲರಾಮ-ಶ್ರೀಕೃಷ್ಣ ಅಣ್ಣ-ತಮ್ಮ. ಸುಭದ್ರೆ ಬಲರಾಮನ ಸಹೋದರಿ. ಶ್ರೀಕೃಷ್ಣನ ತಂಗಿ.  

ದೇವಕಿಯನ್ನು ಮದುವೆಯಾದ ತಕ್ಷಣ ವಸುದೇವ ಸೆರೆಮನೆಯನ್ನು ಸೇರಿದ. ಆಮೇಲೆ ಕಂಸನ ಸರ್ಪಗಾವಲು. ನಂತರ ದೇವಕಿಯ ಎಂಟು ಮಕ್ಕಳು ಹುಟ್ಟುವವರೆಗೂ ಅಲ್ಲಿಯೇ ಇದ್ದ. ಅಷ್ಟು ಮಾತ್ರವಲ್ಲ. ಶ್ರೀಕೃಷ್ಣ ಗೋಕುಲದಲ್ಲಿ ಎಂಟು ವರುಷದವರೆಗೆ ಬೆಳೆದು, ಮಥುರೆಗೆ ಬಂದು ಕಂಸನನ್ನು ಕೊಲ್ಲುವವರೆಗೂ ಅಲ್ಲಿಯೇ ಇದ್ದ. ಕಂಸನ ಆಡಳಿತದಲ್ಲಿ ಈಗಿನಂತೆ ಖೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವ ವ್ಯವಸ್ಥೆಯೂ ಇರಲಿಲ್ಲ. ಸುಭದ್ರೆ ಕಂಸನ ವಧೆಯಾಗಿ ವಸುದೇವನ ಬಿಡುಗಡೆಯಾದ ನಂತರ ಹುಟ್ಟಿದವಳಿರಬೇಕು. ಕೃಷ್ಣನಿಗಿಂತ ಸುಮಾರು ಹತ್ತು ವರುಷ ಚಿಕ್ಕವಳು. ಪುಟ್ಟ ತಂಗಿಯಾದ್ದರಿಂದ ಕೃಷ್ಣನಿಗೆ ಅವಳ ಮೇಲೆ ತುಂಬಾ ವಾತ್ಸಲ್ಯ. 

ವಸುದೇವನಿಗೆ ರೋಹಿಣಿ ಮತ್ತು ದೇವಕಿ ಅಲ್ಲದೆ ಬೇರೆ ಹೆಂಡತಿಯರೂ ಇದ್ದರು. ಸುತನು, ವೈಶಾಖಿ, ಭದ್ರುವ, ಮದಿರ, ಉಪಾದೇವಿ ಮೊದಲಾದವರು. ಬಲರಾಮ, ಕೃಷ್ಣ ಮತ್ತು ಸುಭದ್ರೆ ಅಲ್ಲದೆ ಬೇರೆ ಮಕ್ಕಳೂ ಇದ್ದರು. ಪೌಂಡ್ರಕ ವಾಸುದೇವ (ವಸುದೇವ-ಸುತನು ಇವರ ಮಗ), ಶಥ, ಶರಣ, ನಂದಕ, ಅವಗಾಹ ಮೊದಲಾದವರು. ಇವರೆಲ್ಲರೂ ಅಣ್ಣ-ತಮ್ಮ-ತಂಗಿಯರು. ರೋಹಿಣಿಯನ್ನೇನೋ ಮೊದಲೇ ವಿವಾಹವಾಗಿದ್ದ. ಮಿಕ್ಕ ಐವರನ್ನು ಯಾವಾಗ ಮದುವೆಯಾದ ಎಂದು ಖಚಿತವಾಗಿ ಗೊತ್ತಾಗುವುದಿಲ್ಲ. 

ವಸುದೇವನಿಗೆ ಐವರು ತಂಗಿಯರು ಬೇರೆ ಇದ್ದರು. ಪೃಥಾ (ಮುಂದೆ ಕುಂತಿಭೋಜನ ದತ್ತು ಮಗಳಾದ ನಂತರ ಕುಂತಿ ಎಂದು ಪ್ರಸಿದ್ಧಳಾದಳು), ಶ್ರುತಕೀರ್ತಿ, ಶ್ರುತದೇವಿ, ರಾಜಾಧಿದೇವಿ, ಮತ್ತು ಶ್ರುತಶ್ರವಸ್ ತಂಗಿಯರು. ದೇವಶ್ರವ ಮತ್ತು ದೇವಭಾಗ ಎಂದು ಇಬ್ಬರು ತಮ್ಮಂದಿರು. ಶಿಶುಪಾಲ ಮತ್ತು ದಂತವಕ್ತ್ರರು ಕ್ರಮವಾಗಿ ಶ್ರುತಶ್ರವೆ ಮತ್ತು ಶ್ರುತದೇವೆಯರ ಮಕ್ಕಳು. ಒಟ್ಟಿನಲ್ಲಿ ಅವರ ಕುಟುಂಬದ ಸದಸ್ಯರದ್ದೇ ಮೂರು-ನಾಲ್ಕು ಕ್ರಿಕೆಟ್ ಟೀಮ್ ಮಾಡಬಹುದಿತ್ತು.

***** 

ಸಹೋದರ-ಸಹೋದರಿಯರನ್ನು ನೋಡಿದ್ದಾಯಿತು. ಇನ್ನು ತಳೋದರಿಯನ್ನು ನೋಡೋಣ. 

ದ್ರವ ಪದಾರ್ಥವಿರುವ ಒಂದು ಪಾತ್ರೆ. "ತುಪ್ಪದ ತಂಬಿಗೆ" ಅನ್ನೋಣ. (ಬಿಂದಿಗೆಯಲ್ಲಿ ತುಪ್ಪ ಇಡುವ ಸಿರಿವಂತರ ಮನೆ ಆದರೆ "ತುಪ್ಪದ ಬಿಂದಿಗೆ" ಎನ್ನಲೂಬಹುದು). ಮೊದಲು ಅದರ ತುಂಬಾ ತುಪ್ಪ ಇತ್ತು. ಉಪಯೋಗಿಸುತ್ತಾ ಇದ್ದಂತೆ ಕಡಿಮೆಯಾಗುತ್ತಾ ಹೋಯಿತು. ಈಗ ಹೆಚ್ಚು-ಕಡಿಮೆ ಖಾಲಿಯಾಗಿದೆ. ತುಪ್ಪ ಇಲ್ಲವೇ ಇಲ್ಲ ಅನ್ನುವಂತಿಲ್ಲ. ಒಂದೆರಡು ಚಮಚದಷ್ಟು ತಂಬಿಗೆಯ "ತಳ" ಭಾಗದಲ್ಲಿ ಉಳಿದಿದೆ. ಖಂಡಿತ ಇದೆ. ಅಂದರೆ ಇದ್ದೂ ಇಲ್ಲದಂತೆ ಇದೆ. 

ಹೊಟ್ಟೆಯೂ ಅಷ್ಟೇ. ಕೆಲವರಿಗೆ ದೂರದಿಂದಲೇ ಕಾಣುವಂತೆ ಇರುತ್ತದೆ. ಅವರ ದೇಹದ ಎಲ್ಲಾ ಅಂಗಗಳಿಗಿಂತ ಹೊಟ್ಟೆಯೇ ಪ್ರಧಾನ. ನಮ್ಮ ಊರಿನಲ್ಲಿ ಒಬ್ಬರು ಶಾಸ್ತ್ರಿಗಳಿದ್ದರು. ಅವರ ಹೆಸರು ಹೇಳಿದರೆ ಯಾರಿಗೂ ತಿಳಿಯದು. "ಹೊಟ್ಟೆ ಶಾಸ್ತ್ರಿಗಳು" ಅಂದರೆ ಸಣ್ಣ ಮಕ್ಕಳಿಗೂ ಗೊತ್ತು. ಮತ್ತೆ ಕೆಲವರಿಗೆ ಹೊಟ್ಟೆಯೇ ಇರುವುದಿಲ್ಲ. ಹೊಟ್ಟೆಯೇ ಇಲ್ಲದೆ ಹೇಗೆ ಬದುಕಿದ್ದಾರೆ? ಇದೆ. ಆದರೆ ಕಾಣುವಂತೆ ಇಲ್ಲ. ಎಲ್ಲೋ ತಳದಲ್ಲಿ ಇದೆ. ಸುದಾಮನನ್ನು ಕಂಡ ಭಟರು ಶೀಕೃಷ್ಣನಿಗೆ ಹೇಳುತ್ತಾರೆ: "ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಿದೆ".

ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತಿದ್ದರೆ, ಕಂಡೂಕಾಣದಂತಿದ್ದರೆ, ಎಲ್ಲೋ ತಳದಲ್ಲಿದ್ದರೆ ಅಂತಹ ಹೆಣ್ಣು "ತಳೋದರಿ" ಅನ್ನಿಸಿಕೊಳ್ಳುತ್ತಾಳೆ. ಬಾಳೆಯ ಎಲೆಯಂತಹ ಹೊಟ್ಟೆಯಿರುವವಳು "ತಳೋದರಿ". ಬಾಳೆಯ ಗುಡಾಣದಂತಿರುವ ಹೊಟ್ಟೆಯವಳು 'ಗುಂಡೋದರಿ". (ಮನೆಯ ಹಿತ್ತಿಲಿನ ಬಾಳೆಯ ಗಿಡದಲ್ಲಿ ಗೊನೆ ಮೂಡಿ, ಕಾಯಿ ಬಲಿತ ನಂತರ ಅದನ್ನು ಕಡಿದು ತಂದು, ಚಿಪ್ಪುಗಳಾಗಿ ಕತ್ತರಿಸಿ, ಮಣ್ಣಿನ ಗುಡಾಣಗಳಲ್ಲಿ ಬಾಳೆಲೆಗಳ ಮಧ್ಯದಲ್ಲಿ ಸುತ್ತಿ ಬಿಸಿಲಲ್ಲಿ ಇಡುತ್ತಿದ್ದರು. ಮೂರು-ನಾಲ್ಕು ದಿನದಲ್ಲಿ ಹಣ್ಣಾಗುತ್ತಿದ್ದವು. ಗಿಡದಲ್ಲೇ ಬಿಟ್ಟರೆ ಅಳಿಲು, ಹಕ್ಕಿ-ಪಕ್ಷಿಗಳ ಕಾಟ. ಅದನ್ನು ತಪ್ಪಿಸಲು ಈ ಉಪಾಯ).

ಯಾರನ್ನಾದರೂ ವರ್ಣಿಸುವುದು ಹೇಗೆ? ಅವರ  ಅಂಗಾಂಗಗಳನ್ನು ತಾನೇ ವರ್ಣಿಸುವುದು. ಎತ್ತರದ ನಿಲುವು. ಆಜಾನುಬಾಹು (ಕೈಗಳು ಮೊಣಕಾಲು ಮುಟ್ಟುವಂತಿವೆ ಎಂದು). ಮಾಟವಾದ ಮೂಗು. ಮುತ್ತಿನಂತಹ ಹಲ್ಲು. ಈ ರೀತಿ. ಹೊಟ್ಟೆಯನ್ನು ಹೇಳುವಾಗ "ತಳೋದರಿ". ಅದೊಂದು ಸೌಂದರ್ಯದ ಲಕ್ಷಣ. ಆದ್ದರಿಂದ ಈ ಪದದ ಬಳಕೆ. 
*****

ಹಿಂದೆಲ್ಲಾ ಹೆಣ್ಣು ಮಕ್ಕಳಿಗೆ ಪ್ರಸವವಾದ ನಂತರ ಬಾಣಂತಿತನ (ಆಡುಮಾತಿನಲ್ಲಿ ಬಾಣಂತನ) ಮಾಡುವಾಗ "ಸೌಭಾಗ್ಯ ಶುಂಠಿ" ಲೇಹ್ಯವನ್ನು ಕೊಡುವುದರ ಜೊತೆಗೆ, ಶಿಶು ಜನನದಿಂದ ಖಾಲಿಯಾದ ಜಾಗದಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬರಿಸದಿರುವಂತೆ ಒಂದು ಉದ್ದದ ಬಟ್ಟೆಯ ತುಂಡಿನಿಂದ ಹೊಟ್ಟೆಯನ್ನು ಬಲವಾಗಿ ಕಟ್ಟುತ್ತಿದ್ದರು. ಗರ್ಭಿಣಿಯಾಗಿದ್ದಾಗ ಉಬ್ಬಿದ ಹೊಟ್ಟೆ ಮತ್ತೆ ಮೊದಲಿನಂತೆ ಆಗಿ, ಆ ಹುಡುಗಿ ಹಿಂದಿನಂತೆ ತಳೋದರಿಯೇ ಆಗಿ ಉಳಿಯಲಿ ಎನ್ನುವ ದೃಷ್ಟಿಯಿಂದ. 

ಅರ್ಜುನನೊಡನೆ ಮದುವೆಯಾಗುವ ಮೊದಲು ಸುಭದ್ರೆಯು ಅತ್ಯಂತ ಸುಂದರಿಯೂ, ತಳೋದರಿಯೂ ಆಗಿದ್ದಳಂತೆ. ಅಭಿಮನ್ಯುವಿನ ಜನನದ ಸಮಯದಲ್ಲಿ ಹೆರಿಗೆಗೆ ತೌರು ಮನೆ ದ್ವಾರಕಿಗೆ ಬಂದಳು. ಅವಳಿಗೆ (ಹಿರಿಯ ಅತ್ತಿಗೆ ಬಲರಾಮನ ಹೆಂಡತಿ) ರೇವತಿಯ ಜೊತೆಗೆ ಶ್ರೀಕೃಷ್ಣನ ಕಡೆಯಿಂದ ಹದಿನಾರು ಸಾವಿರದ ಒಂದು ನೂರಾ ಎಂಟು ಅತ್ತಿಗೆಯರು. ಹೊಟ್ಟೆ ಕಟ್ಟುವವರಿಗೆ ಏನೂ ಕಡಿಮೆಯಿರಲಿಲ್ಲ. ಹೀಗಾಗಿ ಸುಭದ್ರೆಯು ಅಭಿಮನ್ಯು ಹುಟ್ಟಿದಮೇಲೂ ತಳೋದರಿಯಾಗಿಯೇ ಉಳಿದಳು. 
*****

ರಾವಣನ ಹೆಂಡತಿಯಾದ ಮಂಡೋದರಿ ಅಸುರರ ರಾಜನಾದ ಮಯಾಸುರ ಮತ್ತು ಹೇಮಾ ಎನ್ನುವ ಹೆಸರಿನ ಅಪ್ಸರೆಯ ಮಗಳು. ಸಂಸ್ಕೃತದಲ್ಲಿ "ಮಂದ" ಅನ್ನುವ ಪದಕ್ಕೆ (ಇತರೆ ಅನೇಕ ಪದಗಳಂತೆ) ಅನೇಕ ಅರ್ಥಗಳಿವೆ. ಇವುಗಳಲ್ಲಿ "ಕೆಳಗೆ" ಎಂದೂ ಒಂದರ್ಥ. "ಮೆತ್ತಗಿರುವುದು" ಎಂದೂ ಒಂದರ್ಥ. ಮಂಡೋದರಿ ಅವಳ ತಾಯಿ ಅಪ್ಸರೆಯಂತೆ ಅತಿಲೋಕ ಸುಂದರಿ. ಅವಳೂ ತಳೋದರಿಯೇ. ಕೆಲವು ಕಥೆಗಳಲ್ಲಿ ರಾವಣನು ಈಶ್ವರನನ್ನು ಪಾರ್ವತಿಯನ್ನೇ ಕೊಡು ಎಂದು ಕೇಳಿದಾಗ (ಭೂಕೈಲಾಸ ನೆನಪಿಸಿಕೊಳ್ಳಬಹುದು) ಕಪ್ಪೆಯ ಮರಿ ಒಂದನ್ನು ಪಾರ್ವತಿಯಂತೆಯೇ ಸುಂದರಳಾದ ಹೆಣ್ಣಾಗಿ ಮಾಡಿ ಕೊಡಲಾಯಿತು ಎಂದು ಹೇಳಿದೆ. (ಹೀಗೆ ಮಾಡಿದವರು ಯಾರೆಂದರೆ ಬೇರೆ ಬೇರೆ ಕಥೆಗಳಲ್ಲಿ ಶಿವ, ಪಾರ್ವತೀ, ವಿಷ್ಣು ಎಂದೆಲ್ಲಾ ಉಂಟು). ಕಪ್ಪೆಗೆ "ಮಂಡೋದರಿ" ಎಂದೂ ಹೆಸರುಂಟು. ಈ ಕಾರಣಗಳಿಂದ ಅವಳಿಗೆ ಮಂಡೋದರಿ ಎಂದು ಹೆಸರು ಬಂತಂತೆ. 

ಸಹೋದರಿಗೂ ಮಂಡೋದರಿಗೂ ಸಂಬಂಧವಿಲ್ಲ. ಮೆತ್ತಗಿರುವ ಮತ್ತು ಕೆಳಗಿರುವ ಹೊಟ್ಟೆಯ ಕಾರಣದಿಂದ ಅವಳು ತಳೋದರಿಯೂ ಹೌದು, ಮಂಡೋದರಿಯೂ ಹೌದು. ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹನುಮಂತನು ರಾವಣನ ಅಂತಃಪುರದಲ್ಲಿ ಮಂಡೋದರಿಯನ್ನು ನೋಡಿ ಸೀತೆ ಎಂದು ಕ್ಷಣ ಕಾಲ ಚಿಂತಿತನಾದನು ಎಂದು ಹೇಳುವ ಸಂಗತಿಯಿದೆ. ನಂತರ ಪಾದವನ್ನು ನೋಡಲಾಗಿ, ಮಂಡೋದರಿಗೆ ಕಾಕರೇಖೆ ಇತ್ತಂತೆ. ಸೀತಾದೇವಿಗೆ ಪದ್ಮರೇಖೆ. (ಅಂದರೆ ಮಂಡೋದರಿಯೂ ಸೀತೆಯಂತೆಯೇ ಸುಂದರಿ ಎಂದು ತಾತ್ಪರ್ಯ). 

*****

ಹೆಂಗಸರು ಮಾತ್ರ ತಳೋದರಿಯಾರಾಗಿರಬೇಕೇ? ಹೀಗೇಕೆಂದು "ಸ್ತ್ರೀ ವಿಮೋಚನಾ ವಾದಿ" ಸಂಘಗಳು ಯೋಚಿಸಬೇಕಾಗಿಲ್ಲ. ಗಂಡಸರೂ ಸಹ "ತಳೋದರ" ಆಗಿಯೇ ಇರಬೇಕಂತೆ. ಇದರಲ್ಲಿ ಅವರಿಗೆ ಏನೂ ವಿನಾಯಿತಿ ಇಲ್ಲ. ಶ್ರೀಮನ್ನಾರಾಯನನ್ನು ಚಿಂತಿಸುವಾಗ ಅವನನ್ನು ಪಾದದಿಂದ ಮೇಲೆ ಪ್ರತಿಯೊಂದು ಅಂಗವನ್ನೂ ನೆನಪಿಸಿಕೊಳ್ಳಬೇಕಂತೆ. ಹಾಗೆ ನೋಡುವಾಗ ಅವನ ಹೊಟ್ಟೆಯೂ ತೆಳುವೇ. ಶ್ರೀ ಮಧ್ವಾಚಾರ್ಯರು ತಮ್ಮ "ದ್ವಾದಶ ಸ್ತೋತ್ರ" ಕೃತಿಗಳಲ್ಲಿ ಹೀಗೆ ಹೇಳುತ್ತಾರೆ:

ಉದರಂ ಚಿಂತ್ಯಮೀಶಸ್ಯ ತನುತ್ವೇಪ್ಯಖಿಲಂಭರಂ 
ವಲಿತ್ರಯಾಂಕಿತ೦ ನಿತ್ಯಂ ಉಪಗೂಢ೦ ಶ್ರೀಯೈಕಯಾ 

ತನ್ನ ಹೊಟ್ಟೆಯಲ್ಲಿ ಹದಿನಾಲ್ಕು ಲೋಕಗಳನ್ನು ತುಂಬಿಕೊಂಡಿದ್ದರೂ ಅವನ ಹೊಟ್ಟೆಯು ಬಾಳೆ ಎಲೆಯಂತೆ ತೆಳುವಾಗಿಯೇ ಇದೆ. ಅಷ್ಟು ಮಾತ್ರವಲ್ಲ. ಅವನ ಹೊಟ್ಟೆಯಮೇಲೆ ಮೂರು ಗೆರೆಗಳು ಬೀಳುತ್ತವಂತೆ. ಹೊಟ್ಟೆ ಒಣಗಿಕೊಂಡವರಿಗೆ ಮಾತ್ರ ಈ ರೀತಿ ಗೆರೆಗಳು ಬೀಳುತ್ತವೆ ಎಂದು ನಾವು ನೋಡಿ ತಿಳಿದಿದ್ದೇವೆ. ಆದರೆ ಶ್ರೀಹರಿಯ ಹೊಟ್ಟೆಯ ಮೇಲಿನ ಗೆರೆಗಳು ಸುಲಭವಾಗಿ ಕಾಣುವುದಿಲ್ಲ. ಏಕೆಂದರೆ ಆ ತಾಯಿ ಮಹಾಲಕ್ಷ್ಮಿಯು ಅವನನ್ನು ಯಾವಾಗಲೂ ತಬ್ಬಿಕೊಂಡೇ ಕುಳಿತಿರುತ್ತಾಳೆ. ಅವಳ ಕರುಣೆಯಾದರೆ ಮಾತ್ರ ಸ್ವಲ್ಪ ಪಕ್ಕಕ್ಕೆ ತಿರುಗಿ ನಮಗೆ ಅದರ ದರ್ಶನ ಮಾಡಿಸುತ್ತಾಳೆ!

ಶ್ರೀಹರಿ ಹೀಗಿದ್ದರೆ ಅವನ ಹೆಂಡತಿ ಕಥೆಯೇನು? ಮಹಾಲಕ್ಸ್ಮಿ ದೇವಿಯೂ ತಳೋದರಿಯೇ. ಶ್ರೀಹರಿ ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ. ಮಹಾಲಕ್ಷ್ಮಿಯು ಆಲದೆಲೆಯಾಗಿ ಜೊತೆಗಿದ್ದಳು. (ಛತ್ರ, ಚಾಮರ, ಮಂಚ, ಬೇರೆ ಪದಾರ್ಥಗಳು (ವ್ಯಜನ), ಪಾತ್ರೆ-ಪಡಗ, ಕಡೆಗೆ ಪ್ರಳಯದ ನೀರೂ ಅವಳೇ ಆಗಿ ಅವನನ್ನು ಸುತ್ತುವರೆದಿದ್ದಳು). ಮುಂದೆ ಸೃಷ್ಟಿ ಕಾರ್ಯ ಸಾಗಬೇಕು. ಮಹಾಲಕ್ಷ್ಮಿಯ ಮೂಲಕ ಮಕ್ಕಳು ಪಡೆಯಬೇಕಾದರೆ ತಳೋದರಿಯಾಗಿರುವ ಅವಳು ಬಾಣಂತಿತನದಲ್ಲಿ ಸರಿಯಾಗಿ ಹೊಟ್ಟೆ ಕಟ್ಟದಿದ್ದರೆ ಮುಂದೆ "ಗುಂಡೋದರಿ" ಆಗಬಹುದು. ಹೊಟ್ಟೆ ಕಟ್ಟಲು ಬೇರೆ ಯಾರೂ ಇಲ್ಲ. ಇರುವುದು ಅವರಿಬ್ಬರೇ. ಪಕ್ಕದ ಮನೆಯವರ ಸಹಾಯ ಕೇಳೋಣವೆಂದರೆ ಅಕ್ಕ-ಪಕ್ಕ ಮನೆಗಳೇ ಇಲ್ಲ. ಎಲ್ಲಾ ನೀರಿನಮಯ. ಏನು ಮಾಡುವುದು?

ಯೋಚಿಸಿ ಯೋಚಿಸಿ ಕಡೆಗೆ ಅವಳ ಸೌಂದರ್ಯ ಮಾಸಬಾರದೆಂದು ತನ್ನ ಕರುಳಿನಿಂದಲೇ ಬ್ರಹ್ಮನನ್ನು ಹೆತ್ತ. ಆಮೇಲೆ ಅವನಿಗೆ ಅದೇ ಅಭ್ಯಾಸವಾಗಿಹೋಯಿತು. ಪ್ರಾಣದಿಂದ ವಾಯುವನ್ನು ಹಡೆದ. ಮನಸ್ಸಿನಿಂದ ಚಂದ್ರನನ್ನೂ, ಕಣ್ಣಿನಿಂದ ಸೂರ್ಯನನ್ನೂ ಪಡೆದ. ಮುಖದಿಂದ ಇಂದ್ರನನ್ನೂ ಅಗ್ನಿಯನ್ನೂ ಮಕ್ಕಳಾಗಿ ಪಡೆದ. 

ಸೂಕ್ತಗಳ ರಾಜನಾದ "ಪುರುಷ ಸೂಕ್ತ" ಇದನ್ನೇ ಹೇಳುತ್ತದೆ:

ಚಂದ್ರಮಾ ಮನಸೋ ಜಾತಃ ಚಕ್ಷೋ: ಸೂರ್ಯೋ ಅಜಾಯತ 
ಮುಖಾತ್ ಇಂದ್ರಶ್ಚ ಅಗ್ನಿಶ್ಚ ಪ್ರಾಣಾತ್ ವಾಯುರಾಜಾಯತ 


ಈ ಕಾರಣದಿಂದ ಮಹಾಲಕ್ಷ್ಮಿಗೆ ಮಕ್ಕಳ ಹಡೆಯುವುದೂ, ಹೊಟ್ಟೆ ಕಟ್ಟಿಸಿಕೊಳ್ಳುವುದೂ ಬೇಕೇ ಆಗಲಿಲ್ಲ. ಅವಳು "ತಳೋದರಿ" ಆಗಿಯೇ ಉಳಿದಳು! ಅವನು ತಳೋದರ. ಅವಳು ತಳೋದರಿ. ಅನುರೂಪ ದಾಂಪತ್ಯ. 

ಶ್ರೀ ಪುರಂದರ ದಾಸರು ಇದನ್ನೇ "ಮರಳು ಮಾಡಿಕೊಂಡೆಯಲ್ಲೇ, ಮಾಯಾದೇವಿಯೇ"  ಎಂದು ಹೀಗೆ ಹಾಡುತ್ತಾರೆ:

ಮಕ್ಕಳು ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು 
ಪೊಕ್ಕುಲೊಳು ಮಕ್ಕಳ ಪಡೆದು ಕಕ್ಕುಲಾತಿ ಮೆರೆವಂತೆ
ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ! 

ಇದರ ಬಗ್ಗೆ ಹೆಚ್ಚಿಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

*****

"ತಳೋದರಿ" ಅನ್ನುವ ಪದವನ್ನು ಕೇವಲ ಒಂದು ಸಾರಿ ಮಾತ್ರ ಉಪಯೋಗಿಸಿ ಅದನ್ನು ವಿಶ್ವ ವಿಖ್ಯಾತ ಮಾಡಿದ ಶ್ರೇಯಸ್ಸು ನಮ್ಮ ಕನ್ನಡದ ಹೆಮ್ಮೆಯ ಕವಿ ಕುಮಾರವ್ಯಾಸ ಬಿರುದಿನ ಗದುಗಿನ ನಾರಾಣಪ್ಪನಿಗೆ ಸೇರಬೇಕು. ಅದು ಹೇಗೆಂದು ಮುಂದಿನ ಸಂಚಿಕೆಯಲ್ಲಿ ನೋಡೋಣ.