Showing posts with label Talodari. Show all posts
Showing posts with label Talodari. Show all posts

Monday, December 1, 2025

ತಳೋದರಿಯ ಮಾತುಳನ ಮಾವನ...




ಹಿಂದಿನ ಸಂಚಿಕೆಯಲ್ಲಿ ಸಹೋದರಿ, ತಳೋದರಿ, ಮತ್ತು ಮಂಡೋದರಿ ಪದಗಳ ಸಾಮ್ಯ ಮತ್ತು ಭೇದಗಳ ಸ್ವಲ್ಪಮಟ್ಟಿನ ವಿವರಣೆ ನೋಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ವಿಶೇಷವಾಗಿ "ತಳೋದರಿ" ಅನ್ನುವ ಪದದ ಹಿನ್ನೆಲೆ ಮತ್ತು ಸೊಬಗು ಏನು ಎನ್ನುವುದನ್ನು ನೋಡಿದೆವು. 

ಎಲಿಜಬೆತ್ ಟೇಲರ್ ಅನ್ನುವ ಪ್ರಸಿದ್ಧ ಆಂಗ್ಲ ಚಲನಚಿತ್ರಗಳ ನಟಿ "ಕ್ಲಿಯೋಪಾತ್ರ" ಚಿತ್ರೀಕರಣದ ವೇಳೆಯಲ್ಲಿ ಇಪ್ಪತ್ತೊಂದು ಅಂಗುಲದ ನಡು ಹೊಂದಿದ್ದಳು ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.  1963ರ ಚಲನಚಿತ್ರದಲ್ಲಿ ರೋಮ್ ನಗರಕ್ಕೆ ಅವಳು ಬರುವ ದೃಶ್ಯದ ಚಿತ್ರೀಕರಣ ಈಗಲೂ ನೋಡುಗರನ್ನು ಆಕರ್ಷಿಸುತ್ತದೆ. AI ಮೊದಲಾದ ಸಾಧನಗಳಿಲ್ಲದ ಕಾಲದ ಅಂತಹ ದೃಶ್ಯದ ಚಿತ್ರೀಕರಣ ಒಂದು ವಿಸ್ಮಯವೇ ಸರಿ. "ಕೃಶಾಂಗಿ" ಎನ್ನುವ ಪದಕ್ಕೆ ಮುಖ್ಯವಾದ ಲಕ್ಷಣ ಹೀಗೆ ಸಣ್ಣ ನಡುವಿರುವುದು. 

ಅನೇಕ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀಯರ ವರ್ಣನೆಗಳಲ್ಲಿ ಈ ನಡುವಿನ ಸೂಕ್ಷ್ಮತೆ ಬಗ್ಗೆ ವಿವರಣೆಗಳಿವೆ. ಹಸೆಗೆ ಕರೆಯುವ ಹಾಡುಗಳಲ್ಲಿ "ಬಡ ನಡುವಿನ ಬಾಲೆಯರು" ಎಂದು ಸಂಬೋಧನೆಗಳಿವೆ. ಪುರುಷರಿಗೇ ಆಗಲಿ, ಸ್ತ್ರೀಯರಿಗಗೇ ಆಗಲಿ, ಕೆಲವು ಅಂಗಗಳು ಹ್ರಸ್ವವಾಗಿರಬೇಕು. ಕೆಲವು ದೀರ್ಘವಾಗಿರಬೇಕು. (ಕೈ ಮೊಟುಕಾಗಿದ್ದು ಮೂಗು ಬಲು ಉದ್ದವಿದ್ದರೆ ಹೇಗೆ?).  ಕೆಲವು ಸಣ್ಣ ಇರಬೇಕು. ಕೆಲವು ದೊಡ್ಡವಿರಬೇಕು. (ಕೈ-ಕಾಲು ಸಣ್ಣ; ಹೊಟ್ಟೆ ಡುಬ್ಬಣ್ಣ ಅನ್ನುವುದು ಕೇಳಿದ್ದೆವಲ್ಲ!). ಕೆಲವು ಅವಕ್ಕೆ ಅನುಗುಣವಾದ ಬಣ್ಣ ಹೊಂದಿರಬೇಕು. ಹೀಗೆ ಸೌಂದರ್ಯ ಶಾಸ್ತ್ರಗಳ ನಿಯಮಗಳು ಉಂಟು. 

"ನಾವೇನು ಮಾಡುವುದು? ದೇವರು ಅಂಗಾಂಗ ಕೊಟ್ಟಂತಿದ್ದೇವೆ" ಎಂದು ದೇವರ ತಲೆಯಮೇಲೆ ಹೇರುವುದುಂಟು. ಆಯಿತು. ನಮ್ಮ ವಿಷಯಗಳಲ್ಲಿ ಅದು ಸರಿ ಇರಬಹುದು. ಹಾಗಿದ್ದರೂ, ಸೌಂದರ್ಯ ವರ್ಧನೆ ಮಾಡಲು ಎಲ್ಲರೂ ಪಡುವ ಪಾಡು ಅಷ್ಟಿಷ್ಟಲ್ಲ. ಬೊಕ್ಕತಲೆಗೆ ಕೂದಲು ಕಸಿ ಮಾಡುವುದರಿಂದ ಹಿಡಿದು ವಾರಕ್ಕೊಮ್ಮೆ ಮುಖ ತಿದ್ದುವ-ತೀಡುವ ಅಂಗಡಿಗಳ ಮುಂದೆ ಇರುವ ಸರತಿಯ ಸಾಲು ಕಂಡಿದ್ದೆವಲ್ಲ. ನಮ್ಮ ಕಥೆ-ಕವನಗಳ ಪಾತ್ರಗಳಲ್ಲಿ ಹೀಗೆ ಚೆನ್ನಾಗಿರುವುದು ವಿವರಿಸುವುದಕ್ಕೆ ಏನಡ್ಡಿ? ಹೀಗೆ ಚೆನ್ನಾಗಿರುವವರೂ ಅನೇಕರು ಇದ್ದಾರಲ್ಲವೆ? ರಾಕ್ಷಸರನ್ನು ಚಿತ್ರಿಸುವಾಗ ಇವಕ್ಕೆ ವಿರುದ್ಧವಾದ ವರ್ಣನೆಗಳೂ ಉಂಟಲ್ಲ! 

"ತಳೋದರಿ" ಪದವನ್ನು ಕೇವಲ ಒಂದು ಸಾರಿ ಮಾತ್ರ ಉಪಯೋಗಿಸಿ ಅದನ್ನು ವಿಶ್ವ ವಿಖ್ಯಾತ ಮಾಡಿದ ಶ್ರೇಯಸ್ಸು ನಮ್ಮ ಹೆಮ್ಮೆಯ ಕವಿ "ಕುಮಾರವ್ಯಾಸ" ಬಿರುದಿನ ಗದುಗಿನ ನಾರಾಣಪ್ಪನಿಗೆ ಸೇರಬೇಕು ಎಂದು ಸಂಚಿಕೆಯ ಕೊನೆಯಲ್ಲಿ ಹೇಳಿದ್ದೆವು. ಅದು ಏಕೆ ಎಂದು ಈಗ ನೋಡೋಣ. 

*****

ಮನೆಗೆ ಬಂದ ಅತಿಥಿ-ಅಭ್ಯಾಗತರನ್ನು ತೃಪ್ತಿ ಪಡಿಸಲು ಗೃಹಿಣಿ ಮಾಡುವ ಕಸರತ್ತುಗಳಿಗೂ ಕವಿ ತನ್ನ ಕಾವ್ಯ ರಚನೆಯಲ್ಲಿ ಕಾಣುವ ಕಷ್ಟಗಳಿಗೂ ಏನೋ ಒಂದು ವಿಧವಾದ ಸಾದೃಶ್ಯವಿದೆ. ಹಿಂದೆ ಮಾಡಿದ ಅಡಿಗೆ ಪುನರಾವರ್ತನೆ ಆಗಬಾರದು. ಕವಿಗೆ ಹಿಂದೆ ಮಾಡಿದ ವರ್ಣನೆ ಮತ್ತೆ ಬಂದಿರಬಾರದು. ಉಗ್ರಾಣದಲ್ಲಿ ಇರುವ ಪದಾರ್ಥಗಳಿಂದಲೇ ಅಡಿಗೆ ತಯಾರಾಗಬೇಕು. ಕವಿಯ ಪದಸಂಪತ್ತಿನಿಂದಲೇ ಕಾವ್ಯ ಮೂಡಬೇಕು. ಕೆಲವಾದರೂ ಮಾಡಿದ ಪದಾರ್ಥ ಮಕ್ಕಳಿಗೂ ಹಿಡಿಸಬೇಕು. ಹೆಚ್ಚು ತಿಳಿಯದ ಓದುಗರಿಗೂ ಸ್ವಲ್ಪವಾದರೂ ಅರ್ಥ ಆಗುವಂತಿರಬೇಕು. ದೊಡ್ಡವರಿಗೂ ಇಷ್ಟವಾಗುವ ಉಪ್ಪು-ಹುಳಿ-ಖಾರ  ಇರಬೇಕು. ತಿಳಿದ ಓದುಗರಿಗೂ ರಂಜಿಸುವ ರೀತಿ ಕಾವ್ಯ ಇರಬೇಕು. 

ಅತಿಥಿ-ಅಭ್ಯಾಗತರಲ್ಲಿ ಅಡಿಗೆ ಮಾಡುವುದರಲ್ಲಿ ನುರಿತವರು ಇರುತ್ತಾರೆ. ಅವರನ್ನೂ ಮೆಚ್ಚಿಸಬೇಕು. ಕವಿಗೂ ಪಂಡಿತ ವಿಮರ್ಶಕ ಜನರ ಮನ ಗೆಲ್ಲಬೇಕು. ಮುಂದೊಂದು ದಿನ ಇನ್ನೆಲ್ಲೋ ಸಿಕ್ಕಾಗ "ಆಹಾ, ಅಂದು ನಿಮ್ಮ ಮನೆಯ ಊಟ ಈಗಲೂ ನೆನೆಸಿಕೊಳ್ಳುತ್ತೇವೆ" ಎಂದು ಊಟ ಮಾಡಿದವರು ಹೇಳಬೇಕು. ಕವಿಗೆ ತನ್ನ ಕೃತಿ ಬಹು ಕಾಲದವರೆಗೆ ನಿಲ್ಲುವಂತೆ ಆಗಬೇಕು. ಅಡಿಗೆ ಶುಚಿ-ರುಚಿಯಾಗಿ ಇರಬೇಕು. ಕವಿಯ ಕೃತಿ ಸತ್ವಯುತವಾಗಿ ಒಂದು ಮಾದರಿಯಾಗಿ ಉಳಿಯಬೇಕು. ಹೀಗೆ ಆಸೆಗಳು. 

ಕುಮಾರವ್ಯಾಸನ "ಕರ್ಣಾಟ ಭಾರತ ಕಥಾಮಂಜರಿ" ಈ ಎಲ್ಲ ಮಾನದಂಡಗಳಲ್ಲಿಯೂ ಗೆದ್ದು ನಿಂತು ಶತಮಾನಗಳ ನಂತರ ಈಗಲೂ ಜನಪ್ರಿಯವಾಗಿರುವ ಕೃತಿ. ಅವನೇ ಹೇಳುವಂತೆ "ಅರಸುಗಳಿಗಿದು ವೀರ, ದ್ವಿಜರಿಗೆ ಪರಮ ವೇದದ ಸಾರ, ಯೋಗ್ಗೀಶ್ವರರ ತತ್ವ ವಿಚಾರ, ಮಂತ್ರಿ ಜನಕೆ ಬುದ್ಧಿಗುಣ" ಮುಂತಾದ ಯೋಗ್ಯತೆಯುಳ್ಳದ್ದು. ವಿರಹಿಗಳ ಶೃಂಗಾರವೂ ಹೌದು. ವಿದ್ಯಾಪರಿಣಿತರ ಅಲಂಕಾರವೂ ಸರಿಯೇ. ಒಟ್ಟಿನಲ್ಲಿ "ಕಾವ್ಯಕೆ ಗುರು" ಆ ಕೃತಿ.  

*****

ಕವಿ ನಾರಾಣಪ್ಪನು ತನ್ನ ಮಂಗಳಾಚರಣೆ ಮಾಡುವಾಗ "ಪೀಠಿಕಾ ಸಂಧಿ" ಭಾಗವಾಗಿ ಇಪ್ಪತ್ತಮೂರು ಪದ್ಯಗಳಲ್ಲಿ ದೇವನ, ದೇವತೆಗಳ ಸ್ತುತಿ ಮಾಡುತ್ತಾನೆ. "ಇಳೆಯ ಜಾಣರು ಮೆಚ್ಚುವಂತೆ" ರಚಿಸಲು ಪಣ ತೊಡುತ್ತಾನೆ. ಅವನಲ್ಲಿ ಅಹಂಕಾರ ಭಾವವಿಲ್ಲ. ಆದರೆ ವೀರನ ಗತ್ತು ಇದೆ. "ವೀರ ನಾರಾಯಣನೆ ಕವಿ, ಕುಮಾರವ್ಯಾಸ ಲಿಪಿಕಾರ" ಎಂದು ವಿನಯದಿಂದ ಹೇಳಿದರೂ "ಪದವಿಟ್ಟಳುಪದೊಂದಗ್ಗಳಿಕೆ" ಅವನದು. ಒಮ್ಮೆ ಬರೆದರೆ ಮುಗಿಯಿತು. ಮತ್ತೆ ಅಳಿಸಿ, ತಿದ್ದಿ, ಒದ್ದಾಡುವಂತಿಲ್ಲ. ಹೀಗೆ ಶಪಥ ಹೂಡಿ ಮುಂದುವರೆಯುತ್ತಾನೆ. 

ಕೃತಿ "ಭಾಮಿನಿ ಷಟ್ಪದಿ" ರಚನೆ. ಪ್ರತಿ ಪದ್ಯವೂ ಆರು ಸಾಲುಗಳು ಇರಬೇಕು. ಮೊದಲ ಸಾಲು ಏಳು ಮತ್ತು ಏಳು, ಒಟ್ಟು ಹದಿನಾಲ್ಕು ಮಾತ್ರೆಗಳು. ಎರಡನೆಯ ಸಾಲೂ ಹೀಗೆಯೇ ಹದಿನಾಲ್ಕು ಮಾತ್ರೆಗಳು. ಮೂರನೆಯದು ಏಳು, ಏಳು, ಎಂಟು, ಒಟ್ಟು ಇಪ್ಪತ್ತೆರಡು ಮಾತ್ರೆಗಳು. ಮೊದಲ ಅರ್ಧ ಪದ್ಯ ಒಟ್ಟು ಐವತ್ತು ಮಾತ್ರೆಗಳು. ಎರಡನೇ ಅರ್ಧ ಪದ್ಯವೂ ಒಟ್ಟು ಹೀಗೆ ಐವತ್ತು ಮಾತ್ರೆಗಳು. ಒಂದು ಪದ್ಯಕ್ಕೆ ಸರಿಯಾಗಿ ಒಂದು ನೂರು ಮಾತ್ರೆಗಳು. ಹೆಚ್ಚು-ಕಡಿಮೆ ಆಗುವಂತಿಲ್ಲ. ಅಷ್ಟು ಕಾಲ ಹಿಡಿಯುವಂತೆ ಪದಗಳ ಜೋಡಣೆ ಇರಬೇಕು.  

ಪ್ರತಿ ಪದ್ಯವೂ ಒಂದು ದೊಡ್ಡ ಹಾರದ ಮುತ್ತೊಂದರಂತೆ ಇರಬೇಕು. ಹಿಂದು-ಮುಂದಕ್ಕೆ ಕೊಂಡಿಯಂತಿರಬೇಕು. ಕಥೆಯ ಒಟ್ಟು ಓಟಕ್ಕೆ ಸರಿಯಾಗಿ ಕೂಡಿಕೊಂಡಿರಬೇಕು. ಬೇಕಾದ ರಸ-ಭಾವಗಳಿಗೆ ಪೂರಕವಾಗಿರಬೇಕು. ಒಂದು ಪದ್ಯವೂ ಊಟದ ಮಧ್ಯೆ ಸಣ್ಣ ಕಲ್ಲಿನ ಚೂರು ಸಿಕ್ಕಂತೆ ಇರಬಾರದು. ಇವು ಅವನ ಮುಂದಿರುವ ಅನೇಕ ಸವಾಲುಗಳಲ್ಲಿ ಕೆಲವು ಮಾತ್ರ. 

ಒಂದು ಸಣ್ಣ ಪತ್ರ ಬರೆಯಬೇಕಾದರೆ ಹೇಗೆ ಪ್ರಾರಂಭ ಮಾಡಬೇಕು, ಯಾವ ಪದ ಉಪಯೋಗಿಸಬೇಕು, ಎಂದು ತಿಣುಕಾಡಿ, ಹತ್ತು ಬಾರಿ ಬದಲಾಯಿಸಿ, ಹೊಡೆದುಹಾಕಿ, ತಿದ್ದಿ-ತೀಡಿ, ಒದ್ದಾಡುವ ಪರಿಸ್ಥಿತಿಯ ಮುಂದೆ ಇವನ್ನು ಗಮನಿಸಬೇಕು. ಎಲ್ಲ ಬರೆದು ಮುಗಿಸಿದ ಮೇಲೆ "ಅಯ್ಯೋ, ಇದು ಸೇರಿಸುವುದು ಬಿಟ್ಟೆ ಹೋಯಿತಲ್ಲ!" ಎಂದು ಗೋಳಾಡುವುದು ಕೂಡದು. 

*****

ಇಷ್ಟೆಲ್ಲಾ ಕಠಿಣ ಚೌಕಟ್ಟಿನ ಸಂದರ್ಭದಲ್ಲಿ ಪೀಠಿಕಾ ಸಂಧಿಯ ಇಪ್ಪತ್ತಮೂರನೆಯ ಮತ್ತು ಕಡೆಯ ಪದ್ಯದಲ್ಲಿ ಕವಿ ಒಂದು ಸುಂದರ ಒಗಟು ಇಟ್ಟಿದ್ದಾನೆ. ಬಹಳ ಜನಪ್ರಿಯವಾಗಿರುವ ಆ ಪದ್ಯ ಹೀಗಿದೆ:

ವೇದಪುರುಷನ ಸುತನಸುತನ ಸ 
ಹೋದರನ ಮೊಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜಬಲದಿ 
ಕಾದಿ ಗೆಲಿದನ ಅಣ್ಣ ನವ್ವೆಯ 
ನಾದಿನಿಯ ಜಠರದಲಿ ಜನಿಸಿದ 
ನಾದಿ ಮೂರತಿ ಸಲಹೊ ಗದುಗಿನ ವೀರನಾರಯಣ 

ಮೇಲೆ ಕೊಟ್ಟಿರುವ ಚಿತ್ರವನ್ನು ನೋಡಿಕೊಂಡು ಈ ಪದ್ಯವನ್ನು ಓದಿಕೊಂಡರೆ ಒಗಟನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದು.  

  • ವೇದಪುರುಷನ - ಶ್ರೀಮನ್ನಾರಾಯಣನ  
  • ಸುತನ (ಮಗ) - ಚತುರ್ಮುಖ ಬ್ರಹ್ಮನ  
  • ಸುತನ (ಮಗ) - ನಾರದನ  
  • ಸಹೋದರನ - ಮರೀಚಿಯ 
  • ಮೊಮ್ಮಗನ - ಮಗ ಕಶ್ಯಪನ ಮಗನಾದ ಇಂದ್ರನ 
  • ಮಗನ - ಅರ್ಜುನನ
  • ತಳೋದರಿಯ - ಹೆಂಡತಿಯಾದ ಸುಭದ್ರೆಯ 
  • ಮಾತುಳನ - ಸೋದರಮಾವನಾದ ಕಂಸನ 
  • ಮಾವನ - ಕಂಸನಿಗೆ ಹೆಣ್ಣುಕೊಟ್ಟ ಮಾವ ಜರಾಸಂಧನನ್ನು 
  • ಅತುಲ ಭುಜಬಲದಿ ಕಾದು ಗೆಲಿದನ - ಭೀಮಸೇನನ 
  • ಅಣ್ಣನ - ಧರ್ಮರಾಯನ 
  • ಅವ್ವೆಯ - ತಾಯಿ ಕುಂತಿಯ 
  • ನಾದಿನಿಯ - ದೇವಕಿಯ 
  • ಜಠರದಲಿ ಜನಿಸಿದ ಅನಾದಿ ಮೂರುತಿ - ಶ್ರೀಕೃಷ್ಣ 
ಶ್ರೀಮನ್ನಾರಾಯಣನಿಂದ ಪ್ರಾರಂಭಿಸಿ ಹದಿಮೂರು ಜನರ ನಂತರ ಅವನ ಇನ್ನೊಂದು ರೂಪನಾದ ಶ್ರೀಕೃಷ್ಣನೇ ಬಂದು ನಿಂತ. ಅವನು ನಮ್ಮನ್ನು ಸಲಹಲಿ ಎಂದು ಪ್ರಾರ್ಥನೆ. ಒಂದು ಹದಿಮೂರು ಮುತ್ತುಗಳ ಹಾರ. ಶ್ರೀಮನ್ನಾರಾಯಣನ ಅವತಾರಿ ಶ್ರೀಕೃಷ್ಣನೇ ಆ ಹಾರದ ಪದಕ. 

*****

 ಈ ಪದ್ಯದಲ್ಲಿ ಅಡಗಿದ ಬೇರೆ ವಿಶೇಷಗಳು ಏನುಂಟು?

  • ಕವಿಯ ಇಷ್ಟ ದೈವ ವೀರ ನಾರಾಯಣ. ಪದ್ಯದ ಪ್ರಾರಂಭ ನಾರಾಯಣನಿಂದ. ಕಡೆಯಾದದ್ದು ಶ್ರೀಕೃಷ್ಣನಿಂದ. ಇದು ಕೌರವ-ಪಾಂಡವರ ಕಥೆ ಎಂದು ಮೇಲು ನೋಟಕ್ಕೆ ಕಂಡರೂ, ಇದರ ಕಥಾನಾಯಕ ಶ್ರೀಕೃಷ್ಣನೇ. ಇದನ್ನು ಕವಿ ಹೀಗೆ ಸೂಚಿಸಿದ್ದಾನೆ.
  • ನಾರಾಯಣನೇ ಅವತರಿಸಿ ಶ್ರೀಕೃಷ್ಣನಾದ ಎಂದು ಹೇಳಿದಂತಾಯಿತು. 
  • ಕೆಲವು ಮುಖ್ಯ ಪಾತ್ರಧಾರಿಗಳನ್ನು (ಅರ್ಜುನ, ಭೀಮ, ಧರ್ಮಜ, ಕುಂತಿ, ಇಂದ್ರ, ಶ್ರೀಕೃಷ್ಣ, ಸುಭದ್ರೆ) ಪರಿಚಯಿಸಿದ್ದಾಯಿತು. (ಬೇರೆಯವರು ಯಾಕಿಲ್ಲ ಎಂದು ಕೇಳಬಹುದು. ನೂರು ಮಾತ್ರೆಗಳ ನೆನಪಿಡಬೇಕು). 
  • ಪಾಂಡವರ-ಯಾದವರ ಕೊಂಡಿ ಇಲ್ಲಿ ಸಿಕ್ಕಿತು. 
ಇನ್ನು ಕೆಲವು ಸಂಗತಿಗಳು:
  • ಮಹಾನಾರಾಯಣೋಪನಿಷತ್ತು ಮುಂತಾದುವು ಹೇಳುವಂತೆ ನಾರಾಯಣನು ವೇದಪ್ರತಿಪಾದ್ಯನಾದ ವೇದಪುರುಷನು. 
  • ನಾರಾಯನಿಗೆ ಅನೇಕ ನೇರ ಮಕ್ಕಳಿದ್ದರೂ ಬ್ರಹ್ಮನೇ ಮೊದಲಿಗನು. ಅಲ್ಲಿಂದ ಸೃಷ್ಟಿ ಪ್ರಾರಂಭ. 
  • ಚತುರ್ಮುಖನಿಗೆ ಅನೇಕ ಮಾನಸ ಪುತ್ರರಿದ್ದಾರೆ. ಅವರಲ್ಲಿ ಯಾರನ್ನಾದರೂ ತೆಗೆದುಕೊಳ್ಳಬಹುದು. ನಾರದರು ಎಲ್ಲರಿಗೂ ಪರಿಚಿತರು. ಹೀಗಾಗಿ ಅವರನ್ನು ತೆಗೆದುಕೊಳ್ಳುವುದು ವಾಡಿಕೆ. 
  • ಮಾನಸ ಪುತ್ರರೆಲ್ಲರೂ ಬ್ರಹ್ಮನಿಂದ ನೇರ ಹುಟ್ಟಿದವರಾದದ್ದರಿಂದ ಅವನೇ ತಾಯಿ ಮತ್ತು ತಂದೆ. ಹೀಗೆ ಹುಟ್ಟಿದವರೆಲ್ಲರೂ ಸಹೋದರರು. 
  • ಅರ್ಜುನನು ಇಂದ್ರನ ವರಪ್ರಸಾದದಿಂದ ಹುಟ್ಟಿದವನು. ಹೀಗಾಗಿ ಮಗನು. 
  • ಅರ್ಜುನನಿಗೆ ಅನೇಕ ಹೆಂಡತಿಯರಿದ್ದರೂ, ಪಾಂಡವ-ಯಾದವ ಕುಲಗಳ ಕೊಂಡಿ ಸುಭದ್ರೆ. 
  • ಶ್ರೀಕೃಷ್ಣ-ಬಲರಾಮರಂತೆ ಕಂಸನು ಸುಭದ್ರೆಗೂ ಸೋದರಮಾವ. ದೇವಕಿಯ ಅಣ್ಣ. 
  • ಕಂಸನು ಜರಾಸಂಧನ ಇಬ್ಬರು ಹೆಣ್ಣು ಮಕ್ಕಳಾದ ಆಸ್ತಿ-ಪ್ರಾಪ್ತಿಯರನ್ನು ಮದುವೆಯಾಗಿದ್ದನು. ಆದ್ದರಿಂದ ಜರಾಸಂಧನು ಕಂಸನಿಗೆ ಹೆಣ್ಣು ಕೊಟ್ಟ ಮಾವ. 
  • ಭೀಮನ ಅವ್ವೆ ಕುಂತಿಯಾದರೂ ಧರ್ಮರಾಯ ಎಲ್ಲರಿಗೂ ಹಿರಿಯ. ಆದ್ದರಿಂದ ಮುಖ್ಯ. ಅಲ್ಲದೆ ಒಂದು ನೂರು ಮಾತ್ರೆಗಳ ಪದಗಳನ್ನು ಕೂಡಿಸಬೇಕಲ್ಲ!
  • ಕುಂತಿಯು ವಸುದೇವನ ಸಹೋದರಿ. ಇಬ್ಬರೂ ಯಾದವ ಶೂರಸೇನನ ಮಕ್ಕಳು. ಅವಳ ಹುಟ್ಟು ಹೆಸರು ಪೃಥಾ. ಶೂರಸೇನನ ತಮ್ಮ ಕುಂತಿಭೋಜನು ಮಕ್ಕಳಿಲ್ಲದ್ದರಿಂದ ಅವಳನ್ನು ದತ್ತು ತೆಗೆದುಕೊಂಡ. ಆಗ ಅವಳ ಹೆಸರು ಕುಂತಿ ಎಂದಾಯಿತು. 
  • ಕುಂತಿ ಮತ್ತು ವಸುದೇವನ ಹೆಂಡತಿ ದೇವಕಿ ಈ ಕಾರಣದಿಂದ ಅತ್ತಿಗೆ-ನಾದಿನಿಯರು. ಶ್ರೀಕೃಷ್ಣನಿಗೆ ಕುಂತಿ ಸೋದರತ್ತೆ. 
*****

ಮಂಗಳಾಚರಣೆಯ ಈ ಕೊನೆಯ ಪದ್ಯದ ಮೂಲಕ ಕವಿ ತನ್ನ ಇಷ್ಟದೈವ ಗದುಗಿನ ವೀರನಾರಾಯಣನಿಂದ ಕಥಾನಾಯಕ ಶ್ರೀಕೃಷ್ಣವರೆಗೆ ಒಂದು ದೊಡ್ಡ ಮಂಗಳಾರತಿ ಮಾಡಿ ಪ್ರಾರಂಭಿಸಿದ್ದಾನೆ. ಇಲ್ಲಿ ಬಳಸಿದ "ತಳೋದರಿ" ಪದವೂ ಹೀಗೆ ವಿಶ್ವ ವಿಖ್ಯಾತ ಆಯಿತು! 

Friday, November 28, 2025

ಸಹೋದರಿ, ತಳೋದರಿ ಮತ್ತು ಮಂಡೋದರಿ


ಕಳೆದ ತಿಂಗಳ ಒಂದು ಸಂಚಿಕೆಯಲ್ಲಿ (ಅಕ್ಟೋಬರ್ 2025) ಸಹೋದರರು ಮತ್ತು ಅಣ್ಣ-ತಮ್ಮಂದಿರ ನಡುವಿನ ವ್ಯತ್ಯಾಸದ ಪ್ರಸ್ತಾಪ ಬಂದಿತ್ತು. ಒಂದು ತಾಯಿಯ ಮಕ್ಕಳು ಸಹೋದರರು ಎಂದು ನಿರ್ದೇಶಿಸುವಾಗ, ಚಕ್ರವರ್ತಿ ಯಯಾತಿಯ ಮಗಳು ಮಾಧವಿಯ ನಾಲ್ವರು ಮಕ್ಕಳಾದ ಪ್ರದರ್ತನ, ವಸುಮನ, ಶಿಬಿ ಮತ್ತು ಅಷ್ಟಕ ಇವರು ನಾಲ್ಕು ಬೇರೆ ಬೇರೆ ತಂದೆಯರ ಮಕ್ಕಳಾದರೂ ಒಂದೇ ತಾಯಿ ಮಾಧವಿಯ ಮಕ್ಕಳಾದುದರಿಂದ ಸಹೋದರರು ಎಂದು ಹೇಳಿತ್ತು. "ನಾಲ್ಕು ಮಾತುಗಳು" ಎಂಬ ಶೀರ್ಷಿಕೆಯ ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಇದನ್ನು ಓದಿದ ಸ್ನೇಹಿತರೊಬ್ಬರು "ಸಹೋದರಿ" ಶಬ್ದಕ್ಕೂ "ತಳೋದರಿ" ಶಬ್ದಕ್ಕೂ ಏನಾದರೂ ಸಂಬಂಧವಿದೆಯೇ?" ಎಂದು ಕೇಳಿದ್ದಾರೆ. ಹಾಗೆಯೇ, "ರಾವಣನ ಹೆಂಡತಿ ಮಂಡೋದರಿ. ಈ "ಮಂಡೋದರಿ" ಅನ್ನುವುದಕ್ಕೂ ಸಹೋದರಿ ಮತ್ತು ತಳೋದರಿ ಅನ್ನುವುದಕ್ಕೂ ಸಂಬಂಧ ಏನು?" ಎಂದು ಕೇಳಿದ್ದಾರೆ. ಇವುಗಳ ಬಗ್ಗೆ ಸ್ವಲ್ಪ ಈಗ ನೋಡೋಣ. 

*****

ಒಂದು ತಾಯಿಯ ಹೊಟ್ಟೆಯಲ್ಲಿ (ಅಂದರೆ ಗರ್ಭದಲ್ಲಿ) ಹುಟ್ಟಿದ ಗಂಡು ಮಕ್ಕಳು ಪರಸ್ಪರ ಸಹೋದರರು. ಹೆಣ್ಣು ಮಕ್ಕಳು ಸಹೋದರಿಯರು. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಒಟ್ಟಿಗೆ ಸೇರಿ ಪರಸ್ಪರ ಸಹೋದರ-ಸಹೋದರಿಯರು. ಒಂದು ತಂದೆಯ ಮಕ್ಕಳು ಅಣ್ಣ-ತಮ್ಮಂದಿರು ಮತ್ತು ಅಕ್ಕ-ತಂಗಿಯರು. ಯದುವಂಶದ ಬಲರಾಮ ರೋಹಿಣಿಯ ಮಗ. ಶ್ರೀಕೃಷ್ಣ ದೇವಕಿಯ ಮಗ. ಸುಭದ್ರೆ ರೋಹಿಣಿಯ ಮಗಳು. ಮೂವರೂ ವಸುದೇವನ ಮಕ್ಕಳು. ಹೀಗಾಗಿ, ಬಲರಾಮ ಮತ್ತು ಸುಭದ್ರೆ ಸಹೋದರ-ಸಹೋದರಿಯರು. ಬಲರಾಮ-ಶ್ರೀಕೃಷ್ಣ ಅಣ್ಣ-ತಮ್ಮ. ಸುಭದ್ರೆ ಬಲರಾಮನ ಸಹೋದರಿ. ಶ್ರೀಕೃಷ್ಣನ ತಂಗಿ.  

ದೇವಕಿಯನ್ನು ಮದುವೆಯಾದ ತಕ್ಷಣ ವಸುದೇವ ಸೆರೆಮನೆಯನ್ನು ಸೇರಿದ. ಆಮೇಲೆ ಕಂಸನ ಸರ್ಪಗಾವಲು. ನಂತರ ದೇವಕಿಯ ಎಂಟು ಮಕ್ಕಳು ಹುಟ್ಟುವವರೆಗೂ ಅಲ್ಲಿಯೇ ಇದ್ದ. ಅಷ್ಟು ಮಾತ್ರವಲ್ಲ. ಶ್ರೀಕೃಷ್ಣ ಗೋಕುಲದಲ್ಲಿ ಎಂಟು ವರುಷದವರೆಗೆ ಬೆಳೆದು, ಮಥುರೆಗೆ ಬಂದು ಕಂಸನನ್ನು ಕೊಲ್ಲುವವರೆಗೂ ಅಲ್ಲಿಯೇ ಇದ್ದ. ಕಂಸನ ಆಡಳಿತದಲ್ಲಿ ಈಗಿನಂತೆ ಖೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವ ವ್ಯವಸ್ಥೆಯೂ ಇರಲಿಲ್ಲ. ಸುಭದ್ರೆ ಕಂಸನ ವಧೆಯಾಗಿ ವಸುದೇವನ ಬಿಡುಗಡೆಯಾದ ನಂತರ ಹುಟ್ಟಿದವಳಿರಬೇಕು. ಕೃಷ್ಣನಿಗಿಂತ ಸುಮಾರು ಹತ್ತು ವರುಷ ಚಿಕ್ಕವಳು. ಪುಟ್ಟ ತಂಗಿಯಾದ್ದರಿಂದ ಕೃಷ್ಣನಿಗೆ ಅವಳ ಮೇಲೆ ತುಂಬಾ ವಾತ್ಸಲ್ಯ. 

ವಸುದೇವನಿಗೆ ರೋಹಿಣಿ ಮತ್ತು ದೇವಕಿ ಅಲ್ಲದೆ ಬೇರೆ ಹೆಂಡತಿಯರೂ ಇದ್ದರು. ಸುತನು, ವೈಶಾಖಿ, ಭದ್ರುವ, ಮದಿರ, ಉಪಾದೇವಿ ಮೊದಲಾದವರು. ಬಲರಾಮ, ಕೃಷ್ಣ ಮತ್ತು ಸುಭದ್ರೆ ಅಲ್ಲದೆ ಬೇರೆ ಮಕ್ಕಳೂ ಇದ್ದರು. ಪೌಂಡ್ರಕ ವಾಸುದೇವ (ವಸುದೇವ-ಸುತನು ಇವರ ಮಗ), ಶಥ, ಶರಣ, ನಂದಕ, ಅವಗಾಹ ಮೊದಲಾದವರು. ಇವರೆಲ್ಲರೂ ಅಣ್ಣ-ತಮ್ಮ-ತಂಗಿಯರು. ರೋಹಿಣಿಯನ್ನೇನೋ ಮೊದಲೇ ವಿವಾಹವಾಗಿದ್ದ. ಮಿಕ್ಕ ಐವರನ್ನು ಯಾವಾಗ ಮದುವೆಯಾದ ಎಂದು ಖಚಿತವಾಗಿ ಗೊತ್ತಾಗುವುದಿಲ್ಲ. 

ವಸುದೇವನಿಗೆ ಐವರು ತಂಗಿಯರು ಬೇರೆ ಇದ್ದರು. ಪೃಥಾ (ಮುಂದೆ ಕುಂತಿಭೋಜನ ದತ್ತು ಮಗಳಾದ ನಂತರ ಕುಂತಿ ಎಂದು ಪ್ರಸಿದ್ಧಳಾದಳು), ಶ್ರುತಕೀರ್ತಿ, ಶ್ರುತದೇವಿ, ರಾಜಾಧಿದೇವಿ, ಮತ್ತು ಶ್ರುತಶ್ರವಸ್ ತಂಗಿಯರು. ದೇವಶ್ರವ ಮತ್ತು ದೇವಭಾಗ ಎಂದು ಇಬ್ಬರು ತಮ್ಮಂದಿರು. ಶಿಶುಪಾಲ ಮತ್ತು ದಂತವಕ್ತ್ರರು ಕ್ರಮವಾಗಿ ಶ್ರುತಶ್ರವೆ ಮತ್ತು ಶ್ರುತದೇವೆಯರ ಮಕ್ಕಳು. ಒಟ್ಟಿನಲ್ಲಿ ಅವರ ಕುಟುಂಬದ ಸದಸ್ಯರದ್ದೇ ಮೂರು-ನಾಲ್ಕು ಕ್ರಿಕೆಟ್ ಟೀಮ್ ಮಾಡಬಹುದಿತ್ತು.

***** 

ಸಹೋದರ-ಸಹೋದರಿಯರನ್ನು ನೋಡಿದ್ದಾಯಿತು. ಇನ್ನು ತಳೋದರಿಯನ್ನು ನೋಡೋಣ. 

ದ್ರವ ಪದಾರ್ಥವಿರುವ ಒಂದು ಪಾತ್ರೆ. "ತುಪ್ಪದ ತಂಬಿಗೆ" ಅನ್ನೋಣ. (ಬಿಂದಿಗೆಯಲ್ಲಿ ತುಪ್ಪ ಇಡುವ ಸಿರಿವಂತರ ಮನೆ ಆದರೆ "ತುಪ್ಪದ ಬಿಂದಿಗೆ" ಎನ್ನಲೂಬಹುದು). ಮೊದಲು ಅದರ ತುಂಬಾ ತುಪ್ಪ ಇತ್ತು. ಉಪಯೋಗಿಸುತ್ತಾ ಇದ್ದಂತೆ ಕಡಿಮೆಯಾಗುತ್ತಾ ಹೋಯಿತು. ಈಗ ಹೆಚ್ಚು-ಕಡಿಮೆ ಖಾಲಿಯಾಗಿದೆ. ತುಪ್ಪ ಇಲ್ಲವೇ ಇಲ್ಲ ಅನ್ನುವಂತಿಲ್ಲ. ಒಂದೆರಡು ಚಮಚದಷ್ಟು ತಂಬಿಗೆಯ "ತಳ" ಭಾಗದಲ್ಲಿ ಉಳಿದಿದೆ. ಖಂಡಿತ ಇದೆ. ಅಂದರೆ ಇದ್ದೂ ಇಲ್ಲದಂತೆ ಇದೆ. 

ಹೊಟ್ಟೆಯೂ ಅಷ್ಟೇ. ಕೆಲವರಿಗೆ ದೂರದಿಂದಲೇ ಕಾಣುವಂತೆ ಇರುತ್ತದೆ. ಅವರ ದೇಹದ ಎಲ್ಲಾ ಅಂಗಗಳಿಗಿಂತ ಹೊಟ್ಟೆಯೇ ಪ್ರಧಾನ. ನಮ್ಮ ಊರಿನಲ್ಲಿ ಒಬ್ಬರು ಶಾಸ್ತ್ರಿಗಳಿದ್ದರು. ಅವರ ಹೆಸರು ಹೇಳಿದರೆ ಯಾರಿಗೂ ತಿಳಿಯದು. "ಹೊಟ್ಟೆ ಶಾಸ್ತ್ರಿಗಳು" ಅಂದರೆ ಸಣ್ಣ ಮಕ್ಕಳಿಗೂ ಗೊತ್ತು. ಮತ್ತೆ ಕೆಲವರಿಗೆ ಹೊಟ್ಟೆಯೇ ಇರುವುದಿಲ್ಲ. ಹೊಟ್ಟೆಯೇ ಇಲ್ಲದೆ ಹೇಗೆ ಬದುಕಿದ್ದಾರೆ? ಇದೆ. ಆದರೆ ಕಾಣುವಂತೆ ಇಲ್ಲ. ಎಲ್ಲೋ ತಳದಲ್ಲಿ ಇದೆ. ಸುದಾಮನನ್ನು ಕಂಡ ಭಟರು ಶೀಕೃಷ್ಣನಿಗೆ ಹೇಳುತ್ತಾರೆ: "ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಿದೆ".

ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತಿದ್ದರೆ, ಕಂಡೂಕಾಣದಂತಿದ್ದರೆ, ಎಲ್ಲೋ ತಳದಲ್ಲಿದ್ದರೆ ಅಂತಹ ಹೆಣ್ಣು "ತಳೋದರಿ" ಅನ್ನಿಸಿಕೊಳ್ಳುತ್ತಾಳೆ. ಬಾಳೆಯ ಎಲೆಯಂತಹ ಹೊಟ್ಟೆಯಿರುವವಳು "ತಳೋದರಿ". ಬಾಳೆಯ ಗುಡಾಣದಂತಿರುವ ಹೊಟ್ಟೆಯವಳು 'ಗುಂಡೋದರಿ". (ಮನೆಯ ಹಿತ್ತಿಲಿನ ಬಾಳೆಯ ಗಿಡದಲ್ಲಿ ಗೊನೆ ಮೂಡಿ, ಕಾಯಿ ಬಲಿತ ನಂತರ ಅದನ್ನು ಕಡಿದು ತಂದು, ಚಿಪ್ಪುಗಳಾಗಿ ಕತ್ತರಿಸಿ, ಮಣ್ಣಿನ ಗುಡಾಣಗಳಲ್ಲಿ ಬಾಳೆಲೆಗಳ ಮಧ್ಯದಲ್ಲಿ ಸುತ್ತಿ ಬಿಸಿಲಲ್ಲಿ ಇಡುತ್ತಿದ್ದರು. ಮೂರು-ನಾಲ್ಕು ದಿನದಲ್ಲಿ ಹಣ್ಣಾಗುತ್ತಿದ್ದವು. ಗಿಡದಲ್ಲೇ ಬಿಟ್ಟರೆ ಅಳಿಲು, ಹಕ್ಕಿ-ಪಕ್ಷಿಗಳ ಕಾಟ. ಅದನ್ನು ತಪ್ಪಿಸಲು ಈ ಉಪಾಯ).

ಯಾರನ್ನಾದರೂ ವರ್ಣಿಸುವುದು ಹೇಗೆ? ಅವರ  ಅಂಗಾಂಗಗಳನ್ನು ತಾನೇ ವರ್ಣಿಸುವುದು. ಎತ್ತರದ ನಿಲುವು. ಆಜಾನುಬಾಹು (ಕೈಗಳು ಮೊಣಕಾಲು ಮುಟ್ಟುವಂತಿವೆ ಎಂದು). ಮಾಟವಾದ ಮೂಗು. ಮುತ್ತಿನಂತಹ ಹಲ್ಲು. ಈ ರೀತಿ. ಹೊಟ್ಟೆಯನ್ನು ಹೇಳುವಾಗ "ತಳೋದರಿ". ಅದೊಂದು ಸೌಂದರ್ಯದ ಲಕ್ಷಣ. ಆದ್ದರಿಂದ ಈ ಪದದ ಬಳಕೆ. 
*****

ಹಿಂದೆಲ್ಲಾ ಹೆಣ್ಣು ಮಕ್ಕಳಿಗೆ ಪ್ರಸವವಾದ ನಂತರ ಬಾಣಂತಿತನ (ಆಡುಮಾತಿನಲ್ಲಿ ಬಾಣಂತನ) ಮಾಡುವಾಗ "ಸೌಭಾಗ್ಯ ಶುಂಠಿ" ಲೇಹ್ಯವನ್ನು ಕೊಡುವುದರ ಜೊತೆಗೆ, ಶಿಶು ಜನನದಿಂದ ಖಾಲಿಯಾದ ಜಾಗದಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬರಿಸದಿರುವಂತೆ ಒಂದು ಉದ್ದದ ಬಟ್ಟೆಯ ತುಂಡಿನಿಂದ ಹೊಟ್ಟೆಯನ್ನು ಬಲವಾಗಿ ಕಟ್ಟುತ್ತಿದ್ದರು. ಗರ್ಭಿಣಿಯಾಗಿದ್ದಾಗ ಉಬ್ಬಿದ ಹೊಟ್ಟೆ ಮತ್ತೆ ಮೊದಲಿನಂತೆ ಆಗಿ, ಆ ಹುಡುಗಿ ಹಿಂದಿನಂತೆ ತಳೋದರಿಯೇ ಆಗಿ ಉಳಿಯಲಿ ಎನ್ನುವ ದೃಷ್ಟಿಯಿಂದ. 

ಅರ್ಜುನನೊಡನೆ ಮದುವೆಯಾಗುವ ಮೊದಲು ಸುಭದ್ರೆಯು ಅತ್ಯಂತ ಸುಂದರಿಯೂ, ತಳೋದರಿಯೂ ಆಗಿದ್ದಳಂತೆ. ಅಭಿಮನ್ಯುವಿನ ಜನನದ ಸಮಯದಲ್ಲಿ ಹೆರಿಗೆಗೆ ತೌರು ಮನೆ ದ್ವಾರಕಿಗೆ ಬಂದಳು. ಅವಳಿಗೆ (ಹಿರಿಯ ಅತ್ತಿಗೆ ಬಲರಾಮನ ಹೆಂಡತಿ) ರೇವತಿಯ ಜೊತೆಗೆ ಶ್ರೀಕೃಷ್ಣನ ಕಡೆಯಿಂದ ಹದಿನಾರು ಸಾವಿರದ ಒಂದು ನೂರಾ ಎಂಟು ಅತ್ತಿಗೆಯರು. ಹೊಟ್ಟೆ ಕಟ್ಟುವವರಿಗೆ ಏನೂ ಕಡಿಮೆಯಿರಲಿಲ್ಲ. ಹೀಗಾಗಿ ಸುಭದ್ರೆಯು ಅಭಿಮನ್ಯು ಹುಟ್ಟಿದಮೇಲೂ ತಳೋದರಿಯಾಗಿಯೇ ಉಳಿದಳು. 
*****

ರಾವಣನ ಹೆಂಡತಿಯಾದ ಮಂಡೋದರಿ ಅಸುರರ ರಾಜನಾದ ಮಯಾಸುರ ಮತ್ತು ಹೇಮಾ ಎನ್ನುವ ಹೆಸರಿನ ಅಪ್ಸರೆಯ ಮಗಳು. ಸಂಸ್ಕೃತದಲ್ಲಿ "ಮಂದ" ಅನ್ನುವ ಪದಕ್ಕೆ (ಇತರೆ ಅನೇಕ ಪದಗಳಂತೆ) ಅನೇಕ ಅರ್ಥಗಳಿವೆ. ಇವುಗಳಲ್ಲಿ "ಕೆಳಗೆ" ಎಂದೂ ಒಂದರ್ಥ. "ಮೆತ್ತಗಿರುವುದು" ಎಂದೂ ಒಂದರ್ಥ. ಮಂಡೋದರಿ ಅವಳ ತಾಯಿ ಅಪ್ಸರೆಯಂತೆ ಅತಿಲೋಕ ಸುಂದರಿ. ಅವಳೂ ತಳೋದರಿಯೇ. ಕೆಲವು ಕಥೆಗಳಲ್ಲಿ ರಾವಣನು ಈಶ್ವರನನ್ನು ಪಾರ್ವತಿಯನ್ನೇ ಕೊಡು ಎಂದು ಕೇಳಿದಾಗ (ಭೂಕೈಲಾಸ ನೆನಪಿಸಿಕೊಳ್ಳಬಹುದು) ಕಪ್ಪೆಯ ಮರಿ ಒಂದನ್ನು ಪಾರ್ವತಿಯಂತೆಯೇ ಸುಂದರಳಾದ ಹೆಣ್ಣಾಗಿ ಮಾಡಿ ಕೊಡಲಾಯಿತು ಎಂದು ಹೇಳಿದೆ. (ಹೀಗೆ ಮಾಡಿದವರು ಯಾರೆಂದರೆ ಬೇರೆ ಬೇರೆ ಕಥೆಗಳಲ್ಲಿ ಶಿವ, ಪಾರ್ವತೀ, ವಿಷ್ಣು ಎಂದೆಲ್ಲಾ ಉಂಟು). ಕಪ್ಪೆಗೆ "ಮಂಡೋದರಿ" ಎಂದೂ ಹೆಸರುಂಟು. ಈ ಕಾರಣಗಳಿಂದ ಅವಳಿಗೆ ಮಂಡೋದರಿ ಎಂದು ಹೆಸರು ಬಂತಂತೆ. 

ಸಹೋದರಿಗೂ ಮಂಡೋದರಿಗೂ ಸಂಬಂಧವಿಲ್ಲ. ಮೆತ್ತಗಿರುವ ಮತ್ತು ಕೆಳಗಿರುವ ಹೊಟ್ಟೆಯ ಕಾರಣದಿಂದ ಅವಳು ತಳೋದರಿಯೂ ಹೌದು, ಮಂಡೋದರಿಯೂ ಹೌದು. ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹನುಮಂತನು ರಾವಣನ ಅಂತಃಪುರದಲ್ಲಿ ಮಂಡೋದರಿಯನ್ನು ನೋಡಿ ಸೀತೆ ಎಂದು ಕ್ಷಣ ಕಾಲ ಚಿಂತಿತನಾದನು ಎಂದು ಹೇಳುವ ಸಂಗತಿಯಿದೆ. ನಂತರ ಪಾದವನ್ನು ನೋಡಲಾಗಿ, ಮಂಡೋದರಿಗೆ ಕಾಕರೇಖೆ ಇತ್ತಂತೆ. ಸೀತಾದೇವಿಗೆ ಪದ್ಮರೇಖೆ. (ಅಂದರೆ ಮಂಡೋದರಿಯೂ ಸೀತೆಯಂತೆಯೇ ಸುಂದರಿ ಎಂದು ತಾತ್ಪರ್ಯ). 

*****

ಹೆಂಗಸರು ಮಾತ್ರ ತಳೋದರಿಯಾರಾಗಿರಬೇಕೇ? ಹೀಗೇಕೆಂದು "ಸ್ತ್ರೀ ವಿಮೋಚನಾ ವಾದಿ" ಸಂಘಗಳು ಯೋಚಿಸಬೇಕಾಗಿಲ್ಲ. ಗಂಡಸರೂ ಸಹ "ತಳೋದರ" ಆಗಿಯೇ ಇರಬೇಕಂತೆ. ಇದರಲ್ಲಿ ಅವರಿಗೆ ಏನೂ ವಿನಾಯಿತಿ ಇಲ್ಲ. ಶ್ರೀಮನ್ನಾರಾಯನನ್ನು ಚಿಂತಿಸುವಾಗ ಅವನನ್ನು ಪಾದದಿಂದ ಮೇಲೆ ಪ್ರತಿಯೊಂದು ಅಂಗವನ್ನೂ ನೆನಪಿಸಿಕೊಳ್ಳಬೇಕಂತೆ. ಹಾಗೆ ನೋಡುವಾಗ ಅವನ ಹೊಟ್ಟೆಯೂ ತೆಳುವೇ. ಶ್ರೀ ಮಧ್ವಾಚಾರ್ಯರು ತಮ್ಮ "ದ್ವಾದಶ ಸ್ತೋತ್ರ" ಕೃತಿಗಳಲ್ಲಿ ಹೀಗೆ ಹೇಳುತ್ತಾರೆ:

ಉದರಂ ಚಿಂತ್ಯಮೀಶಸ್ಯ ತನುತ್ವೇಪ್ಯಖಿಲಂಭರಂ 
ವಲಿತ್ರಯಾಂಕಿತ೦ ನಿತ್ಯಂ ಉಪಗೂಢ೦ ಶ್ರೀಯೈಕಯಾ 

ತನ್ನ ಹೊಟ್ಟೆಯಲ್ಲಿ ಹದಿನಾಲ್ಕು ಲೋಕಗಳನ್ನು ತುಂಬಿಕೊಂಡಿದ್ದರೂ ಅವನ ಹೊಟ್ಟೆಯು ಬಾಳೆ ಎಲೆಯಂತೆ ತೆಳುವಾಗಿಯೇ ಇದೆ. ಅಷ್ಟು ಮಾತ್ರವಲ್ಲ. ಅವನ ಹೊಟ್ಟೆಯಮೇಲೆ ಮೂರು ಗೆರೆಗಳು ಬೀಳುತ್ತವಂತೆ. ಹೊಟ್ಟೆ ಒಣಗಿಕೊಂಡವರಿಗೆ ಮಾತ್ರ ಈ ರೀತಿ ಗೆರೆಗಳು ಬೀಳುತ್ತವೆ ಎಂದು ನಾವು ನೋಡಿ ತಿಳಿದಿದ್ದೇವೆ. ಆದರೆ ಶ್ರೀಹರಿಯ ಹೊಟ್ಟೆಯ ಮೇಲಿನ ಗೆರೆಗಳು ಸುಲಭವಾಗಿ ಕಾಣುವುದಿಲ್ಲ. ಏಕೆಂದರೆ ಆ ತಾಯಿ ಮಹಾಲಕ್ಷ್ಮಿಯು ಅವನನ್ನು ಯಾವಾಗಲೂ ತಬ್ಬಿಕೊಂಡೇ ಕುಳಿತಿರುತ್ತಾಳೆ. ಅವಳ ಕರುಣೆಯಾದರೆ ಮಾತ್ರ ಸ್ವಲ್ಪ ಪಕ್ಕಕ್ಕೆ ತಿರುಗಿ ನಮಗೆ ಅದರ ದರ್ಶನ ಮಾಡಿಸುತ್ತಾಳೆ!

ಶ್ರೀಹರಿ ಹೀಗಿದ್ದರೆ ಅವನ ಹೆಂಡತಿ ಕಥೆಯೇನು? ಮಹಾಲಕ್ಸ್ಮಿ ದೇವಿಯೂ ತಳೋದರಿಯೇ. ಶ್ರೀಹರಿ ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ. ಮಹಾಲಕ್ಷ್ಮಿಯು ಆಲದೆಲೆಯಾಗಿ ಜೊತೆಗಿದ್ದಳು. (ಛತ್ರ, ಚಾಮರ, ಮಂಚ, ಬೇರೆ ಪದಾರ್ಥಗಳು (ವ್ಯಜನ), ಪಾತ್ರೆ-ಪಡಗ, ಕಡೆಗೆ ಪ್ರಳಯದ ನೀರೂ ಅವಳೇ ಆಗಿ ಅವನನ್ನು ಸುತ್ತುವರೆದಿದ್ದಳು). ಮುಂದೆ ಸೃಷ್ಟಿ ಕಾರ್ಯ ಸಾಗಬೇಕು. ಮಹಾಲಕ್ಷ್ಮಿಯ ಮೂಲಕ ಮಕ್ಕಳು ಪಡೆಯಬೇಕಾದರೆ ತಳೋದರಿಯಾಗಿರುವ ಅವಳು ಬಾಣಂತಿತನದಲ್ಲಿ ಸರಿಯಾಗಿ ಹೊಟ್ಟೆ ಕಟ್ಟದಿದ್ದರೆ ಮುಂದೆ "ಗುಂಡೋದರಿ" ಆಗಬಹುದು. ಹೊಟ್ಟೆ ಕಟ್ಟಲು ಬೇರೆ ಯಾರೂ ಇಲ್ಲ. ಇರುವುದು ಅವರಿಬ್ಬರೇ. ಪಕ್ಕದ ಮನೆಯವರ ಸಹಾಯ ಕೇಳೋಣವೆಂದರೆ ಅಕ್ಕ-ಪಕ್ಕ ಮನೆಗಳೇ ಇಲ್ಲ. ಎಲ್ಲಾ ನೀರಿನಮಯ. ಏನು ಮಾಡುವುದು?

ಯೋಚಿಸಿ ಯೋಚಿಸಿ ಕಡೆಗೆ ಅವಳ ಸೌಂದರ್ಯ ಮಾಸಬಾರದೆಂದು ತನ್ನ ಕರುಳಿನಿಂದಲೇ ಬ್ರಹ್ಮನನ್ನು ಹೆತ್ತ. ಆಮೇಲೆ ಅವನಿಗೆ ಅದೇ ಅಭ್ಯಾಸವಾಗಿಹೋಯಿತು. ಪ್ರಾಣದಿಂದ ವಾಯುವನ್ನು ಹಡೆದ. ಮನಸ್ಸಿನಿಂದ ಚಂದ್ರನನ್ನೂ, ಕಣ್ಣಿನಿಂದ ಸೂರ್ಯನನ್ನೂ ಪಡೆದ. ಮುಖದಿಂದ ಇಂದ್ರನನ್ನೂ ಅಗ್ನಿಯನ್ನೂ ಮಕ್ಕಳಾಗಿ ಪಡೆದ. 

ಸೂಕ್ತಗಳ ರಾಜನಾದ "ಪುರುಷ ಸೂಕ್ತ" ಇದನ್ನೇ ಹೇಳುತ್ತದೆ:

ಚಂದ್ರಮಾ ಮನಸೋ ಜಾತಃ ಚಕ್ಷೋ: ಸೂರ್ಯೋ ಅಜಾಯತ 
ಮುಖಾತ್ ಇಂದ್ರಶ್ಚ ಅಗ್ನಿಶ್ಚ ಪ್ರಾಣಾತ್ ವಾಯುರಾಜಾಯತ 


ಈ ಕಾರಣದಿಂದ ಮಹಾಲಕ್ಷ್ಮಿಗೆ ಮಕ್ಕಳ ಹಡೆಯುವುದೂ, ಹೊಟ್ಟೆ ಕಟ್ಟಿಸಿಕೊಳ್ಳುವುದೂ ಬೇಕೇ ಆಗಲಿಲ್ಲ. ಅವಳು "ತಳೋದರಿ" ಆಗಿಯೇ ಉಳಿದಳು! ಅವನು ತಳೋದರ. ಅವಳು ತಳೋದರಿ. ಅನುರೂಪ ದಾಂಪತ್ಯ. 

ಶ್ರೀ ಪುರಂದರ ದಾಸರು ಇದನ್ನೇ "ಮರಳು ಮಾಡಿಕೊಂಡೆಯಲ್ಲೇ, ಮಾಯಾದೇವಿಯೇ"  ಎಂದು ಹೀಗೆ ಹಾಡುತ್ತಾರೆ:

ಮಕ್ಕಳು ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು 
ಪೊಕ್ಕುಲೊಳು ಮಕ್ಕಳ ಪಡೆದು ಕಕ್ಕುಲಾತಿ ಮೆರೆವಂತೆ
ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ! 

ಇದರ ಬಗ್ಗೆ ಹೆಚ್ಚಿಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

*****

"ತಳೋದರಿ" ಅನ್ನುವ ಪದವನ್ನು ಕೇವಲ ಒಂದು ಸಾರಿ ಮಾತ್ರ ಉಪಯೋಗಿಸಿ ಅದನ್ನು ವಿಶ್ವ ವಿಖ್ಯಾತ ಮಾಡಿದ ಶ್ರೇಯಸ್ಸು ನಮ್ಮ ಕನ್ನಡದ ಹೆಮ್ಮೆಯ ಕವಿ ಕುಮಾರವ್ಯಾಸ ಬಿರುದಿನ ಗದುಗಿನ ನಾರಾಣಪ್ಪನಿಗೆ ಸೇರಬೇಕು. ಅದು ಹೇಗೆಂದು ಮುಂದಿನ ಸಂಚಿಕೆಯಲ್ಲಿ ನೋಡೋಣ.