Showing posts with label sri Krishna. Show all posts
Showing posts with label sri Krishna. Show all posts

Wednesday, September 2, 2026

ವಾದಿರಾಜರ ರುಕ್ಮಿಣೀಶ ವಿಜಯ


ಮಹಾಕಾವ್ಯಗಳ ಸಂದರ್ಭದಲ್ಲಿ ಮಾಘ ಕವಿಯ ಬಹು ಮಾನ್ಯ ಕೃತಿ "ಶಿಶುಪಾಲ ವಧ" ಮತ್ತು ಅದಕ್ಕೆ ಸಂಬಂಧಿಸಿದಂತೆ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ" ಕೃತಿಯ ಬಗ್ಗೆ ಸ್ವಲ್ಪ ವಿಚಾರವನ್ನು ಹಿಂದಿನ ಒಂದು ಸಂಚಿಕೆಯಲ್ಲಿ ಮಾಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು. ಶ್ರೀ ವಾದಿರಾಜರ "ರುಕ್ಮಿಣೀಶ ವಿಜಯ" ಕೃತಿ ಸಹ ಇದೇ ಕಥಾವಸ್ತು ಒಳಗೊಂಡದ್ದು. 

"ಕವಿಕುಲಗುರು" ಎಂದು ಗೌರವ ಪಡೆದಿರುವ ಕಾಳಿದಾಸ ಮಹಾಕವಿಯ "ರಘುವಂಶ" ಮತ್ತು "ಕುಮಾರಸಂಭವ", ಭಾರವಿ ಕವಿಯ "ಕಿರಾತಾರ್ಜುನೀಯಂ", ಮಾಘ ಕವಿಯ "ಶಿಶುಪಾಲ ವಧ" ಮತ್ತು ಶ್ರೀಹರ್ಷ ಕವಿಯ "ನೈಷಧೀಯ ಚರಿತ", ಈ ಐದು ಕಾವ್ಯಗಳು ಸಂಸ್ಕೃತದ "ಪಂಚ ಮಹಾಕಾವ್ಯಗಳು" ಎಂದು ಪ್ರಸಿದ್ಧವಾಗಿವೆ. ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳಿಗೆ ಈ ಐದು ಕಾವ್ಯಗಳಲ್ಲಿ ಯಾವುದಾದರೂ ಒಂದನ್ನು ಓದಲೇಬೇಕೆಂಬ ಅಲಿಖಿತ ನಿಯಮ ಉಂಟು. ಒಂದಕ್ಕಿಂತ ಹೆಚ್ಚು ಓದಿದರೆ ಒಳ್ಳೆಯದು. ಎಲ್ಲವನ್ನೂ ಓದಿದರೆ ಬಹಳ ಒಳ್ಳೆಯದು. ಕೆಳಗಿನ ದರ್ಜೆ ತರಗತಿಗಳಿಗೆ ಇವುಗಳ ಯಾವುದಾದರೂ ಒಂದು ಭಾಗವನ್ನಾದರೂ ಪಠ್ಯ ಕ್ರಮದಲ್ಲಿ ಸೇರಿಸಿರುತ್ತಾರೆ. 

ಕಾಳಿದಾಸ ಕವಿಯ ಕಾಲದ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಕ್ರಿಸ್ತಪೂರ್ವ ಕಾಲದಿಂದ ಕ್ರಿಸ್ತಶಕ ನಾಲ್ಕು-ಐದನೆಯ ಶತಮಾನದವರೆಗೂ ಅವನ ಕಾಲವನ್ನು ಎಳೆದಾಡುತ್ತಾರೆ. ಭಾರವಿಯು ಆರನೆಯ ಶತಮಾನದ ಕವಿ. ಮಾಘನು ಅವನ ನಂತರ, ಅಂದರೆ ಏಳನೆಯ ಶತಮಾನದವನು. ಶ್ರೀಹರ್ಷನು ಹನ್ನೆರಡನೆಯ ಶತಮಾನದ ಕವಿ. ವೇದಾಂತ ದೇಶಿಕರು ಹದಿಮೂರು-ಹದಿನಾಲ್ಕನೆಯ ಶತಮಾನದವರು. ವಾದಿರಾಜರು ಹದಿನಾರನೆಯ ಶತಮಾನದವರು. ನೂರಾರು ವರ್ಷಗಳು ಕಳೆದರೂ ಈ ಕೃತಿಗಳು ಇನ್ನೂ ಜನಪ್ರಿಯವಾಗಿ ಮಾನ್ಯವಾಗಿವೆ.

ಮಾಘನ "ಶಿಶುಪಾಲ ವಧ" ಶ್ರೀಕೃಷ್ಣನ ಕಥೆಗೆ ಸಂಬಂಧಿಸಿದುದು. ವೇದಾಂತ ದೇಶಿಕರ "ಯಾದವಾಭ್ಯುದಯ' ಮತ್ತು ವಾದಿರಾಜರ "ರುಕ್ಮಿಣೀಶ ವಿಜಯ" ಕೂಡ ಹೀಗೆಯೇ ಶ್ರೀ ಕೃಷ್ಣನ ಕಥೆಯೇ. ಮೇಲೆ ಹೇಳಿದ ಸಂಚಿಕೆಯಲ್ಲಿ "ಯಾದವಾಭ್ಯುದಯ" ಬಗೆಗೆ ನೋಡಿದೆವು. ಈಗ ವಾದಿರಾಜರ "ರುಕ್ಮಿಣೀಶ ವಿಜಯ" ಕೃತಿಯ ಬಗ್ಗೆ ನೋಡೋಣ.

******

ಶ್ರೀ ವಾದಿರಾಜ ತೀರ್ಥರು (1481-1600) ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಸೋದೆ ಮಠದ ಪೀಠಾಧಿಪತಿಗಳಾಗಿದ್ದವರು. ಒಂದು ನೂರಾ ಇಪ್ಪತ್ತು ವರ್ಷಗಳ ದೀರ್ಘ ಜೀವನ ನಡೆಸಿದವರು. ಶ್ರೀ ವಾಗೀಶ ತೀರ್ಥರ ಬಳಿ ವಿದ್ಯಾಭ್ಯಾಸ ಮಾಡಿದವರು. ಉಡುಪಿಯ ಶ್ರೀಕೃಷ್ಣನ ಪೂಜೆಗೆ ಹಿಂದೆ ಇದ್ದ ಅಷ್ಟ ಮಠಗಳ ಎರಡೆರಡು ತಿಂಗಳ ಸರಣಿಯನ್ನು ಎರಡೆರಡು ವರ್ಷ ಪರ್ಯಾಯ ಎಂದು ಮಾಡಿದವರು ಇವರು. ಎರಡೆರಡು ವರುಷಗಳ ಪರ್ಯಾಯ ಇದ್ದರೆ ಪರ್ಯಾಯ ಪೀಠಾಧಿಪತಿಗಳು ಹೆಚ್ಚಿನ ಧಾರ್ಮಿಕ ಕೆಲಸಗಳನ್ನು ನಡೆಸಲು ಅನುಕೂಲ ಆಗುವುದು, ಮತ್ತು ಇತರ ಪೀಠಾಧಿಪತಿಗಳು ದೀರ್ಘ ದೇಶ ಸಂಚಾರ ಮಾಡಬಹುದು ಎನ್ನುವ ಕಾರಣಕ್ಕೆ ಹೀಗೆ ಬದಲಾವಣೆ ಮಾಡಿದರು ಎಂದು ಹೇಳುತ್ತಾರೆ. ಕಾಲು ನಡಿಗೆಯಲ್ಲಿ ಸಂಚಾರ ಮಾಡಬೇಕಿದ್ದ ಸಮಯದ ಬದಲಾವಣೆ ಇದು. 

ಹೀಗೆ ಎರಡು ವರುಷಗಳ ಅವಧಿ ಒಂದು ಪರ್ಯಾಯ ಮಾಡಿದುದರಿಂದ ಒಂದು ಮಠಕ್ಕೆ ಹದಿನಾಲ್ಕು ವರುಷಗಳಿಗೆ ಒಮ್ಮೆ ಶ್ರೀಕೃಷ್ಣನ ಪೂಜಾ ಸರದಿ ಸಿಗುತ್ತದೆ. ಹೀಗೆ ಎರಡು ವರುಷಗಳಿಗೆ ಒಮ್ಮೆ ಪರ್ಯಾಯ ಬದಲಾವಣೆ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯುವುದನ್ನು ನಾವು ಈಗಲೂ ನೋಡುತ್ತೇವೆ. ಮೂರು ಬಾರಿ ಎರಡು ತಿಂಗಳ ಪರ್ಯಾಯಗಳ ನಂತರ, ಹದಿನಾಲ್ಕು ವರ್ಷಗಳ ದೀರ್ಘ ಅವಧಿ ಆದರೂ ಐದು ಬಾರಿ ತಾವೇ ಎರಡು ವರ್ಷಗಳ ಪರ್ಯಾಯ ಪೀಠಾಧೀಶರಾಗಿದ್ದುದು ಶ್ರೀ ವಾದಿರಾಜರ ಹೆಗ್ಗಳಿಕೆ. ನೂರಾ ಇಪ್ಪತ್ತು ವರುಷ ಜೀವನ ನಡೆಸಿದುದರಿಂದ ಇದು ಸಾಧ್ಯ ಆಯಿತು. ಕೆಳದಿ ಮತ್ತು ಸೋದೆ ಸಂಸ್ಥಾನಗಳ ಅರಸರು ಇವರನ್ನು ರಾಜಗುರುಗಳಾಗಿ ನಡೆಸಿಕೊಂಡು ಅನೇಕ ಜಹಗೀರುಗಳನ್ನು ಕೊಟ್ಟಿದ್ದರು. 

ಶ್ರೀ ವಾದಿರಾಜರು ಕುಂದಾಪುರ ಬಳಿಯ ಹೂವಿನಕೆರೆ ಗ್ರಾಮದಲ್ಲಿ ಜನಿಸಿದವರು. ದ್ವೈತ ಪರಂಪರೆಯಲ್ಲಿ ಪೀಠಾಧಿಪತಿಗಳಾಗಿ ಅನೇಕ ಸ್ವತಂತ್ರ ಕೃತಿಗಳನ್ನೂ, ಹಿಂದಿನ ಅನೇಕ ಗ್ರಂಥಗಳಿಗೆ ಟೀಕೆ-ಟಿಪ್ಪಣಿಗಳನ್ನೂ ರಚಿಸಿದ್ದಾರೆ. ಸಂಸ್ಕೃತ ಭಾಷೆ ಮಾತ್ರವಲ್ಲದೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಅನೇಕ ದೇವರನಾಮ ಮತ್ತು ದೀರ್ಘ ಗೇಯಕವನ ರಚಿಸಿದ್ದಾರೆ. "ಯುಕ್ತಿಮಾಲಿಕಾ", "ವೈಕುಂಠ ವರ್ಣನೆ", "ಲಕ್ಷ್ಮಿ ಶೋಭಾನೆ" ಮುಂತಾದುವು ಜನಪ್ರಿಯ ಕೃತಿಗಳು. ತಮ್ಮ ದೇಶ ಸಂಚಾರದ ಕಾಲದಲ್ಲಿ ಕಂಡ ಕ್ಷೇತ್ರಗಳ ವಿವರಣೆಯನ್ನು "ತೀರ್ಥ ಪ್ರಭಂಧ" ಎಂಬ ಗ್ರಂಥದಲ್ಲಿ ಕೊಟ್ಟಿದ್ದಾರೆ. "ಹಯವದನ" ಎನ್ನುವ ತಮ್ಮ ಆರಾಧ್ಯ ದೈವದ ಅಂಕಿತದಲ್ಲಿ ಅನೇಕ ಕನ್ನಡ ದೇವರನಾಮಗಳನ್ನು ರಚಿಸಿದ್ದಾರೆ. ಈಗಲೂ ಇವು ಜನಪ್ರಿಯವಾಗಿ ಪ್ರತಿನಿತ್ಯ ಮನೆಮನೆಗಳಲ್ಲಿ ಹಾಡಲ್ಪಡುತ್ತಿವೆ.
******

ಹೀಗೆ ಒಮ್ಮೆ ದೀರ್ಘಕಾಲದ ದೇಶ ಸಂಚಾರದಲ್ಲಿದ್ದ ಸಮಯದಲ್ಲಿ ಶ್ರೀ ವಾದಿರಾಜರು ಪುಣ್ಯಪಟ್ಟಣ ತಲುಪಿದರು. ಪುಣ್ಯಪಟ್ಟಣ ಅನ್ನುವುದು ಈಗಿನ ಪೂನಾ ಅಥವಾ ಪುಣೆ ನಗರದ ಹಿಂದಿನ ಹೆಸರು. ಆಗ ಅಲ್ಲಿ ಪೇಶ್ವೆಯವರ ಆಡಳಿತ ಕಾಲ. ಪೇಶ್ವೆ ಅನ್ನುವುದು ಒಂದು ಹುದ್ದೆ. ಹೆಚ್ಚಿನ ಜನ ತಿಳಿದಿರುವಂತೆ ಅದು ಮರಾಠ ರಾಜರ ಕಾಲದಲ್ಲಿ ಬಂದ ಹುದ್ದೆ ಅಲ್ಲ. ಅದೊಂದು ಪರ್ಷಿಯನ್ ಭಾಷೆಯ ಪದ. ಅದರ ಅರ್ಥ "ನಾಯಕ" ಅಥವಾ "ಅಗ್ರೇಸರ" ಎಂದು. ಮೊದಲು ಈ ಪದವನ್ನು ಹದಿನಾಲ್ಕು-ಹದಿನೈದನೆಯ ಶತಮಾನದಲ್ಲಿ ಬಳಕೆಗೆ ತಂದವರು ಬಹಮನಿ ಸುಲ್ತಾನರು. ಸುಲ್ತಾನರ ನಂತರದ ಅಧಿಕಾರಿಗಳಲ್ಲಿ ಪೇಶ್ವೆ ಅತ್ಯಂತ ಎತ್ತರದವರು. ಮರಾಠ ರಾಜರ ಕಾಲದಲ್ಲಿ ಶಿವಾಜಿ ಮಹಾರಾಜರು ಮೋರೋಪಂತ ಪಿಂಗಳೆ ಅವರನ್ನು ಮೊದಲ ಮರಾಠ ಪೇಶ್ವೆ ಆಗಿ ನೇಮಕ ಮಾಡಿದರು. ಪೇಶ್ವೆ ಪದಕ್ಕೆ ಸಮಾನಾಂತರವಾಗಿ "ಪಂತ ಪ್ರಧಾನ" (ಪ್ರಧಾನ ಮಂತ್ರಿ) ಎನ್ನುವ ಪದ ಬಳಕೆ ಆಯಿತು. ಪಂತ ಪ್ರಧಾನ ಅನ್ನುವ ಪದ ಮರಾಠಿ ಭಾಷೆಯಲ್ಲಿ ಈಗಲೂ ಬಳಕೆಯಲ್ಲಿ ಉಂಟು. ಆದರೂ ಪೇಶ್ವೆ ಅನ್ನುವ ಪದದ ಬಳಕೆ ಜನಸಾಮಾನ್ಯರಲ್ಲಿ ಮುಂದುವರೆಯಿತು. "ತಹಸೀಲ್ದಾರ್" ಅನ್ನುವ ಪದ ಬಂದರೂ ನಮ್ಮ ಜನ "ಅಮಲ್ದಾರ್" ಪದ ಬಳಸುತ್ತಿದ್ದ ರೀತಿಯಲ್ಲಿ.

ಪುಣೆಯ ನಗರದ ಪೇಶ್ವೆಗಳು ಸಾಹತ್ಯ-ಸಂಸ್ಕೃತಿಗಳ ಪೋಷಕರು ಆಗಿದ್ದರು. ಶ್ರೀ ವಾದಿರಾಜರು ಅಲ್ಲಿದ್ದ ಕಾಲದಲ್ಲಿ ಪೇಶ್ವೆಗಳು ಒಂದು ವಿದ್ವನ್ಮಂಡಳಿ ಏರ್ಪಡಿಸಿ, ಸಂಸ್ಕೃತ ಕಾವ್ಯಗಳ ತೌಲನಿಕ ಅಧ್ಯಯನ ಏರ್ಪಡಿಸಿದ್ದರು. ಈ ಅಧ್ಯಯನದಲ್ಲಿ ಮಾಘ ಕವಿಯ "ಶಿಶುಪಾಲ ವಧ" ಶ್ರೇಷ್ಠ ಕಾವ್ಯ ಎಂದು ತೀರ್ಮಾನಿಸಿದರು. ಕಾವ್ಯವನ್ನು ಆನೆಯ ಮೇಲಿನ ಅಂಬಾರಿಯಲ್ಲಿ ಇಟ್ಟು, ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌರವ ಅರ್ಪಿಸಿದರು. ಈ ಸಂಭ್ರಮ ಶ್ರೀ ವಾದಿರಾಜರಿಗೆ ತಿಳಿಯಿತು. ಕಾವ್ಯದ ಹೆಸರು ಅವರಿಗೆ ರುಚಿಸಲಿಲ್ಲ. ಖಳನಾಯಕನಾದ ಶಿಶುಪಾಲನಿಗೆ ಗ್ರಂಥದ ಹೆಸರಿನಲ್ಲಿ ಪ್ರಾಮುಖ್ಯತೆ ಕೊಟ್ಟು ಕಥಾನಾಯಕನಾದ ಶ್ರೀಕೃಷ್ಣನನ್ನು ಕೈಬಿಟ್ಟುದುದು ಅವರಿಗೆ ಸರಿ ಬರಲಿಲ್ಲ. 

ಶ್ರೀ ವಾದಿರಾಜರು ನಂತರ ಪೇಶ್ವೆಯವರನ್ನು ಭೇಟಿ ಮಾಡಿದರು. "ಇದೇ ಕಥಾವಸ್ತುವಿನ ಮೇಲೆ ನಾವೂ ಒಂದು ಕಾವ್ಯ ರಚಿಸಿದ್ದೇವೆ. "ಶ್ರೀ ರುಕ್ಮಿಣೀಶ ವಿಜಯ" ಎಂದು ಅದರ ಹೆಸರು. ಅದು ನಮ್ಮ ಮೂಲ ಸ್ಥಾನವಾದ ಉಡುಪಿ ನಗರದಲ್ಲಿದೆ. ಅದನ್ನು ತರಿಸಲು ನಮಗೆ ಇಪ್ಪತ್ತು ದಿನಗಳು ಕಾಲಾವಕಾಶ ಬೇಕು. ಅಲ್ಲಿಂದ ತರಿಸುತ್ತೇವೆ. ಅದನ್ನೂ ನಿಮ್ಮ ವಿದ್ವನ್ಮಂಡಳಿ ಪರಿಶೀಲಿಸಬೇಕು ಎಂದು ನಮ್ಮ ಅಭಿಲಾಷೆ" ಎಂದರು. ಪೇಶ್ವೆಯವರು ಅದಕ್ಕೆ ಒಪ್ಪಿದರು. 

******

ಹೀಗೆ ನಡೆದಾಗ ಗ್ರಂಥ ಇನ್ನೂ ರಚನೆ ಆಗಿರಲಿಲ್ಲ. ಮಾರನೆಯ ದಿನದಿಂದ ಶ್ರೀ ವಾದಿರಾಜರು ತಮ್ಮ ಸಂಸ್ಥಾನ ಪೂಜೆಯ ನಂತರ, ಭಿಕ್ಷಾ ಸ್ವೀಕರ ಮಾಡುವ ಮೊದಲು, ಈ ನಡುವಿನ ವೇಳೆಯಲ್ಲಿ ಪ್ರತಿದಿನ ಒಂದೊಂದು ಸರ್ಗದಂತೆ ತಮ್ಮ ಶಿಷ್ಯರಿಗೆ ಹೇಳುತ್ತಾ ಹೋದರು. ಶಿಷ್ಯರು ಬರೆದಿಟ್ಟುಕೊಂಡರು. ಒಟ್ಟು ಗ್ರಂಥ 19 ಸರ್ಗಗಳಲ್ಲಿ 1241 ಶ್ಲೋಕಗಳನ್ನು ಒಳಗೊಂಡಿದೆ. ಹತ್ತೊಂಬತ್ತು ದಿನಗಳಲ್ಲಿ ಗ್ರಂಥ ಪೂರ್ಣವಾಯಿತು. ಪ್ರತಿದಿನ ಸುಮಾರು ಅರವತ್ತು-ಎಪ್ಪತ್ತು ಶ್ಲೋಕಗಳು. ಹೀಗೆ ರಚನೆ. ಸತತ ಶ್ರೀಮದ್ಭಾಗವತ ಪಾಠ-ಪ್ರವಚನ ಮಾಡುತ್ತಿದ್ದ ಅವರಿಗೆ ವಿಷಯದ ಹುಡುಕಾಟ ಇರಲಿಲ್ಲ. ಗೊತ್ತಿದ್ದ ವಿಷಯವನ್ನೇ ಕಾವ್ಯವಾಗಿ ಪರಿವರ್ತಿಸಬೇಕಿತ್ತು. ಶ್ರೀಮದ್ಭಾಗವತದ ಹತ್ತನೆಯ ಸ್ಕಂದದ ಶ್ರೀಕೃಷ್ಣನ ಅವತಾರದಿಂದ ರುಕ್ಮಿಣಿ ಸ್ವಯಂವರ ನಡೆಯುವವರೆಗಿನ ಕಥೆ. ಅದಾಯಿತು. 

ಇಪ್ಪತ್ತನೆಯ ದಿನ ಪೂರ್ಣವಾದ ಕಾವ್ಯದ ವಾಚನವಾಯಿತು. ಇಪ್ಪತ್ತೊಂದನೆಯ ದಿನ ಗ್ರಂಥವನ್ನು ವಿದ್ವನ್ಮಂಡಳಿ ಮುಂದೆ ಪರಿಶೀಲನೆಗೆ ಇಡಲಾಯಿತು. ಮಂಡಳಿ ತನ್ನ ಅವಗಾಹನೆಯ ನಂತರ ಗ್ರಂಥ ಉತ್ತಮ ಕಾವ್ಯ ಗುಣಗಳಿಂದ ಕೂಡಿದ ತೂಕದ ಕೃತಿ ಎಂದು ತೀರ್ಮಾನಿಸಿತು. ಪೇಶ್ವೆಯವರು ಈ ಗ್ರಂಥವನ್ನೂ ಆನೆಯ ಮೇಲೆ ಅಂಬಾರಿಯಲ್ಲಿಟ್ಟು ಪುಣೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದರು. 

ಶ್ರೀ ರುಕ್ಮಿಣೀಶ ವಿಜಯ ರಚನೆಯ ಸಂದರ್ಭ ಕುರಿತು ಜನಜನಿತವಾಗಿರುವ ಸಂಗತಿ ಇದು. ಶ್ರೀ ವಾದಿರಾಜರು ಸೋದೆಗೆ ಹಿಂದಿರುಗಿದ ನಂತರ ಸೋದೆಯ ಅರಸರು ಸಹ ತಮ್ಮ ರಾಜಧಾನಿಯಲ್ಲಿ ಪುಣೆಯಲ್ಲಿ ನಡೆದಂತೆಯೇ ಈ ಗ್ರಂಥದ ಮೆರವಣಿಗೆ ಮಾಡಿಸಿದರು. 

ಶ್ರೀ ರುಕ್ಮಿಣೀಶ ವಿಜಯ ಗ್ರಂಥದ ಒಂದೆರಡು ಸಂಗತಿಗಳನ್ನು ಮತ್ತೊಮ್ಮೆ ನೋಡೋಣ.

******

ನಮ್ಮಲ್ಲಿ ಉಪಲಬ್ಧವಿರುವ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಉತ್ತಮ ಕಾವ್ಯ ಗುಣಗಳು ತುಂಬಿರುವ ಅನೇಕ ಕೃತಿಗಳಿವೆ. ಈಗಾಗಲೇ ಪರಕೀಯರ ಧಾಳಿಗಳಲ್ಲಿ ಅನೇಕ ಬಹುಮೂಲ್ಯ ಗ್ರಂಥಗಳು ನಷ್ಟವಾಗಿ ನಮಗೆ ಉಳಿದಿರುವುದು ಬಹಳ ಅಲ್ಪ. ಭಾರತೀಯ ತತ್ವ ಶಾಸ್ತ್ರದ ಯಾವುದೇ ಶಾಖೆಯಿರಲಿ, ಅದರ ಪ್ರವರ್ತಕರು ಮತ್ತು ಮುಂದೆ ಅವನ್ನು ಬಲಪಡಿಸಿದ ಮಹನೀಯರುಗಳು ಅಪ್ರತಿಮ ವಿದ್ವಾಂಸರುಗಳು. ಹೀಗಿಲ್ಲದಿದ್ದ ಪಕ್ಷದಲ್ಲಿ ಈ ಕೃತಿಗಳು ನೂರಾರು-ಸಾವಿರಾರು ವರುಷಗಳು ಉಳಿದುಕೊಂಡು ಬಂದು ಪ್ರಚಲಿತ ಇರುತ್ತಿರಲಿಲ್ಲ. ದುರದೃಷ್ಟವಶಾತ್ ಇಂತಹ ಕೃತಿಗಳನ್ನು ನಿರ್ವಿಕಾರ ಭಾವದಿಂದ ನೋಡುವ ಮನಸ್ಥಿತಿ ಅನೇಕ ಜನರಿಗಿಲ್ಲ. ಈ ಕಾರಣದಿಂದಾಗಿ ಈ ಗ್ರಂಥಗಳು ಕೇವಲ ಅವರವರ ಮತಗಳ ಚೌಕಟ್ಟಿನಲ್ಲಿಯೇ ಬಂದಿಯಾಗಿವೆ. 

ನಮ್ಮ ತೋಟದ ಹಣ್ಣು ನಮಗೆ ಚೆನ್ನ. ಸರಿ. ಹಾಗೆಂದು ಬೇರೆ ತೋಟದ ಹಣ್ಣುಗಳು ನಮಗೆ ಬೇಡವೇ ಬೇಡ ಅನ್ನುವುದು ಎಷ್ಟು ಸರಿ? ಹಾಗೆ ಅಭಿಪ್ರಾಯಪಟ್ಟಲ್ಲಿ ನಷ್ಟ ನಮಗೇ ಅಲ್ಲವೇ?

Monday, December 1, 2025

ತಳೋದರಿಯ ಮಾತುಳನ ಮಾವನ...




ಹಿಂದಿನ ಸಂಚಿಕೆಯಲ್ಲಿ ಸಹೋದರಿ, ತಳೋದರಿ, ಮತ್ತು ಮಂಡೋದರಿ ಪದಗಳ ಸಾಮ್ಯ ಮತ್ತು ಭೇದಗಳ ಸ್ವಲ್ಪಮಟ್ಟಿನ ವಿವರಣೆ ನೋಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ವಿಶೇಷವಾಗಿ "ತಳೋದರಿ" ಅನ್ನುವ ಪದದ ಹಿನ್ನೆಲೆ ಮತ್ತು ಸೊಬಗು ಏನು ಎನ್ನುವುದನ್ನು ನೋಡಿದೆವು. 

ಎಲಿಜಬೆತ್ ಟೇಲರ್ ಅನ್ನುವ ಪ್ರಸಿದ್ಧ ಆಂಗ್ಲ ಚಲನಚಿತ್ರಗಳ ನಟಿ "ಕ್ಲಿಯೋಪಾತ್ರ" ಚಿತ್ರೀಕರಣದ ವೇಳೆಯಲ್ಲಿ ಇಪ್ಪತ್ತೊಂದು ಅಂಗುಲದ ನಡು ಹೊಂದಿದ್ದಳು ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.  1963ರ ಚಲನಚಿತ್ರದಲ್ಲಿ ರೋಮ್ ನಗರಕ್ಕೆ ಅವಳು ಬರುವ ದೃಶ್ಯದ ಚಿತ್ರೀಕರಣ ಈಗಲೂ ನೋಡುಗರನ್ನು ಆಕರ್ಷಿಸುತ್ತದೆ. AI ಮೊದಲಾದ ಸಾಧನಗಳಿಲ್ಲದ ಕಾಲದ ಅಂತಹ ದೃಶ್ಯದ ಚಿತ್ರೀಕರಣ ಒಂದು ವಿಸ್ಮಯವೇ ಸರಿ. "ಕೃಶಾಂಗಿ" ಎನ್ನುವ ಪದಕ್ಕೆ ಮುಖ್ಯವಾದ ಲಕ್ಷಣ ಹೀಗೆ ಸಣ್ಣ ನಡುವಿರುವುದು. 

ಅನೇಕ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀಯರ ವರ್ಣನೆಗಳಲ್ಲಿ ಈ ನಡುವಿನ ಸೂಕ್ಷ್ಮತೆ ಬಗ್ಗೆ ವಿವರಣೆಗಳಿವೆ. ಹಸೆಗೆ ಕರೆಯುವ ಹಾಡುಗಳಲ್ಲಿ "ಬಡ ನಡುವಿನ ಬಾಲೆಯರು" ಎಂದು ಸಂಬೋಧನೆಗಳಿವೆ. ಪುರುಷರಿಗೇ ಆಗಲಿ, ಸ್ತ್ರೀಯರಿಗಗೇ ಆಗಲಿ, ಕೆಲವು ಅಂಗಗಳು ಹ್ರಸ್ವವಾಗಿರಬೇಕು. ಕೆಲವು ದೀರ್ಘವಾಗಿರಬೇಕು. (ಕೈ ಮೊಟುಕಾಗಿದ್ದು ಮೂಗು ಬಲು ಉದ್ದವಿದ್ದರೆ ಹೇಗೆ?).  ಕೆಲವು ಸಣ್ಣ ಇರಬೇಕು. ಕೆಲವು ದೊಡ್ಡವಿರಬೇಕು. (ಕೈ-ಕಾಲು ಸಣ್ಣ; ಹೊಟ್ಟೆ ಡುಬ್ಬಣ್ಣ ಅನ್ನುವುದು ಕೇಳಿದ್ದೆವಲ್ಲ!). ಕೆಲವು ಅವಕ್ಕೆ ಅನುಗುಣವಾದ ಬಣ್ಣ ಹೊಂದಿರಬೇಕು. ಹೀಗೆ ಸೌಂದರ್ಯ ಶಾಸ್ತ್ರಗಳ ನಿಯಮಗಳು ಉಂಟು. 

"ನಾವೇನು ಮಾಡುವುದು? ದೇವರು ಅಂಗಾಂಗ ಕೊಟ್ಟಂತಿದ್ದೇವೆ" ಎಂದು ದೇವರ ತಲೆಯಮೇಲೆ ಹೇರುವುದುಂಟು. ಆಯಿತು. ನಮ್ಮ ವಿಷಯಗಳಲ್ಲಿ ಅದು ಸರಿ ಇರಬಹುದು. ಹಾಗಿದ್ದರೂ, ಸೌಂದರ್ಯ ವರ್ಧನೆ ಮಾಡಲು ಎಲ್ಲರೂ ಪಡುವ ಪಾಡು ಅಷ್ಟಿಷ್ಟಲ್ಲ. ಬೊಕ್ಕತಲೆಗೆ ಕೂದಲು ಕಸಿ ಮಾಡುವುದರಿಂದ ಹಿಡಿದು ವಾರಕ್ಕೊಮ್ಮೆ ಮುಖ ತಿದ್ದುವ-ತೀಡುವ ಅಂಗಡಿಗಳ ಮುಂದೆ ಇರುವ ಸರತಿಯ ಸಾಲು ಕಂಡಿದ್ದೆವಲ್ಲ. ನಮ್ಮ ಕಥೆ-ಕವನಗಳ ಪಾತ್ರಗಳಲ್ಲಿ ಹೀಗೆ ಚೆನ್ನಾಗಿರುವುದು ವಿವರಿಸುವುದಕ್ಕೆ ಏನಡ್ಡಿ? ಹೀಗೆ ಚೆನ್ನಾಗಿರುವವರೂ ಅನೇಕರು ಇದ್ದಾರಲ್ಲವೆ? ರಾಕ್ಷಸರನ್ನು ಚಿತ್ರಿಸುವಾಗ ಇವಕ್ಕೆ ವಿರುದ್ಧವಾದ ವರ್ಣನೆಗಳೂ ಉಂಟಲ್ಲ! 

"ತಳೋದರಿ" ಪದವನ್ನು ಕೇವಲ ಒಂದು ಸಾರಿ ಮಾತ್ರ ಉಪಯೋಗಿಸಿ ಅದನ್ನು ವಿಶ್ವ ವಿಖ್ಯಾತ ಮಾಡಿದ ಶ್ರೇಯಸ್ಸು ನಮ್ಮ ಹೆಮ್ಮೆಯ ಕವಿ "ಕುಮಾರವ್ಯಾಸ" ಬಿರುದಿನ ಗದುಗಿನ ನಾರಾಣಪ್ಪನಿಗೆ ಸೇರಬೇಕು ಎಂದು ಸಂಚಿಕೆಯ ಕೊನೆಯಲ್ಲಿ ಹೇಳಿದ್ದೆವು. ಅದು ಏಕೆ ಎಂದು ಈಗ ನೋಡೋಣ. 

*****

ಮನೆಗೆ ಬಂದ ಅತಿಥಿ-ಅಭ್ಯಾಗತರನ್ನು ತೃಪ್ತಿ ಪಡಿಸಲು ಗೃಹಿಣಿ ಮಾಡುವ ಕಸರತ್ತುಗಳಿಗೂ ಕವಿ ತನ್ನ ಕಾವ್ಯ ರಚನೆಯಲ್ಲಿ ಕಾಣುವ ಕಷ್ಟಗಳಿಗೂ ಏನೋ ಒಂದು ವಿಧವಾದ ಸಾದೃಶ್ಯವಿದೆ. ಹಿಂದೆ ಮಾಡಿದ ಅಡಿಗೆ ಪುನರಾವರ್ತನೆ ಆಗಬಾರದು. ಕವಿಗೆ ಹಿಂದೆ ಮಾಡಿದ ವರ್ಣನೆ ಮತ್ತೆ ಬಂದಿರಬಾರದು. ಉಗ್ರಾಣದಲ್ಲಿ ಇರುವ ಪದಾರ್ಥಗಳಿಂದಲೇ ಅಡಿಗೆ ತಯಾರಾಗಬೇಕು. ಕವಿಯ ಪದಸಂಪತ್ತಿನಿಂದಲೇ ಕಾವ್ಯ ಮೂಡಬೇಕು. ಕೆಲವಾದರೂ ಮಾಡಿದ ಪದಾರ್ಥ ಮಕ್ಕಳಿಗೂ ಹಿಡಿಸಬೇಕು. ಹೆಚ್ಚು ತಿಳಿಯದ ಓದುಗರಿಗೂ ಸ್ವಲ್ಪವಾದರೂ ಅರ್ಥ ಆಗುವಂತಿರಬೇಕು. ದೊಡ್ಡವರಿಗೂ ಇಷ್ಟವಾಗುವ ಉಪ್ಪು-ಹುಳಿ-ಖಾರ  ಇರಬೇಕು. ತಿಳಿದ ಓದುಗರಿಗೂ ರಂಜಿಸುವ ರೀತಿ ಕಾವ್ಯ ಇರಬೇಕು. 

ಅತಿಥಿ-ಅಭ್ಯಾಗತರಲ್ಲಿ ಅಡಿಗೆ ಮಾಡುವುದರಲ್ಲಿ ನುರಿತವರು ಇರುತ್ತಾರೆ. ಅವರನ್ನೂ ಮೆಚ್ಚಿಸಬೇಕು. ಕವಿಗೂ ಪಂಡಿತ ವಿಮರ್ಶಕ ಜನರ ಮನ ಗೆಲ್ಲಬೇಕು. ಮುಂದೊಂದು ದಿನ ಇನ್ನೆಲ್ಲೋ ಸಿಕ್ಕಾಗ "ಆಹಾ, ಅಂದು ನಿಮ್ಮ ಮನೆಯ ಊಟ ಈಗಲೂ ನೆನೆಸಿಕೊಳ್ಳುತ್ತೇವೆ" ಎಂದು ಊಟ ಮಾಡಿದವರು ಹೇಳಬೇಕು. ಕವಿಗೆ ತನ್ನ ಕೃತಿ ಬಹು ಕಾಲದವರೆಗೆ ನಿಲ್ಲುವಂತೆ ಆಗಬೇಕು. ಅಡಿಗೆ ಶುಚಿ-ರುಚಿಯಾಗಿ ಇರಬೇಕು. ಕವಿಯ ಕೃತಿ ಸತ್ವಯುತವಾಗಿ ಒಂದು ಮಾದರಿಯಾಗಿ ಉಳಿಯಬೇಕು. ಹೀಗೆ ಆಸೆಗಳು. 

ಕುಮಾರವ್ಯಾಸನ "ಕರ್ಣಾಟ ಭಾರತ ಕಥಾಮಂಜರಿ" ಈ ಎಲ್ಲ ಮಾನದಂಡಗಳಲ್ಲಿಯೂ ಗೆದ್ದು ನಿಂತು ಶತಮಾನಗಳ ನಂತರ ಈಗಲೂ ಜನಪ್ರಿಯವಾಗಿರುವ ಕೃತಿ. ಅವನೇ ಹೇಳುವಂತೆ "ಅರಸುಗಳಿಗಿದು ವೀರ, ದ್ವಿಜರಿಗೆ ಪರಮ ವೇದದ ಸಾರ, ಯೋಗ್ಗೀಶ್ವರರ ತತ್ವ ವಿಚಾರ, ಮಂತ್ರಿ ಜನಕೆ ಬುದ್ಧಿಗುಣ" ಮುಂತಾದ ಯೋಗ್ಯತೆಯುಳ್ಳದ್ದು. ವಿರಹಿಗಳ ಶೃಂಗಾರವೂ ಹೌದು. ವಿದ್ಯಾಪರಿಣಿತರ ಅಲಂಕಾರವೂ ಸರಿಯೇ. ಒಟ್ಟಿನಲ್ಲಿ "ಕಾವ್ಯಕೆ ಗುರು" ಆ ಕೃತಿ.  

*****

ಕವಿ ನಾರಾಣಪ್ಪನು ತನ್ನ ಮಂಗಳಾಚರಣೆ ಮಾಡುವಾಗ "ಪೀಠಿಕಾ ಸಂಧಿ" ಭಾಗವಾಗಿ ಇಪ್ಪತ್ತಮೂರು ಪದ್ಯಗಳಲ್ಲಿ ದೇವನ, ದೇವತೆಗಳ ಸ್ತುತಿ ಮಾಡುತ್ತಾನೆ. "ಇಳೆಯ ಜಾಣರು ಮೆಚ್ಚುವಂತೆ" ರಚಿಸಲು ಪಣ ತೊಡುತ್ತಾನೆ. ಅವನಲ್ಲಿ ಅಹಂಕಾರ ಭಾವವಿಲ್ಲ. ಆದರೆ ವೀರನ ಗತ್ತು ಇದೆ. "ವೀರ ನಾರಾಯಣನೆ ಕವಿ, ಕುಮಾರವ್ಯಾಸ ಲಿಪಿಕಾರ" ಎಂದು ವಿನಯದಿಂದ ಹೇಳಿದರೂ "ಪದವಿಟ್ಟಳುಪದೊಂದಗ್ಗಳಿಕೆ" ಅವನದು. ಒಮ್ಮೆ ಬರೆದರೆ ಮುಗಿಯಿತು. ಮತ್ತೆ ಅಳಿಸಿ, ತಿದ್ದಿ, ಒದ್ದಾಡುವಂತಿಲ್ಲ. ಹೀಗೆ ಶಪಥ ಹೂಡಿ ಮುಂದುವರೆಯುತ್ತಾನೆ. 

ಕೃತಿ "ಭಾಮಿನಿ ಷಟ್ಪದಿ" ರಚನೆ. ಪ್ರತಿ ಪದ್ಯವೂ ಆರು ಸಾಲುಗಳು ಇರಬೇಕು. ಮೊದಲ ಸಾಲು ಏಳು ಮತ್ತು ಏಳು, ಒಟ್ಟು ಹದಿನಾಲ್ಕು ಮಾತ್ರೆಗಳು. ಎರಡನೆಯ ಸಾಲೂ ಹೀಗೆಯೇ ಹದಿನಾಲ್ಕು ಮಾತ್ರೆಗಳು. ಮೂರನೆಯದು ಏಳು, ಏಳು, ಎಂಟು, ಒಟ್ಟು ಇಪ್ಪತ್ತೆರಡು ಮಾತ್ರೆಗಳು. ಮೊದಲ ಅರ್ಧ ಪದ್ಯ ಒಟ್ಟು ಐವತ್ತು ಮಾತ್ರೆಗಳು. ಎರಡನೇ ಅರ್ಧ ಪದ್ಯವೂ ಒಟ್ಟು ಹೀಗೆ ಐವತ್ತು ಮಾತ್ರೆಗಳು. ಒಂದು ಪದ್ಯಕ್ಕೆ ಸರಿಯಾಗಿ ಒಂದು ನೂರು ಮಾತ್ರೆಗಳು. ಹೆಚ್ಚು-ಕಡಿಮೆ ಆಗುವಂತಿಲ್ಲ. ಅಷ್ಟು ಕಾಲ ಹಿಡಿಯುವಂತೆ ಪದಗಳ ಜೋಡಣೆ ಇರಬೇಕು.  

ಪ್ರತಿ ಪದ್ಯವೂ ಒಂದು ದೊಡ್ಡ ಹಾರದ ಮುತ್ತೊಂದರಂತೆ ಇರಬೇಕು. ಹಿಂದು-ಮುಂದಕ್ಕೆ ಕೊಂಡಿಯಂತಿರಬೇಕು. ಕಥೆಯ ಒಟ್ಟು ಓಟಕ್ಕೆ ಸರಿಯಾಗಿ ಕೂಡಿಕೊಂಡಿರಬೇಕು. ಬೇಕಾದ ರಸ-ಭಾವಗಳಿಗೆ ಪೂರಕವಾಗಿರಬೇಕು. ಒಂದು ಪದ್ಯವೂ ಊಟದ ಮಧ್ಯೆ ಸಣ್ಣ ಕಲ್ಲಿನ ಚೂರು ಸಿಕ್ಕಂತೆ ಇರಬಾರದು. ಇವು ಅವನ ಮುಂದಿರುವ ಅನೇಕ ಸವಾಲುಗಳಲ್ಲಿ ಕೆಲವು ಮಾತ್ರ. 

ಒಂದು ಸಣ್ಣ ಪತ್ರ ಬರೆಯಬೇಕಾದರೆ ಹೇಗೆ ಪ್ರಾರಂಭ ಮಾಡಬೇಕು, ಯಾವ ಪದ ಉಪಯೋಗಿಸಬೇಕು, ಎಂದು ತಿಣುಕಾಡಿ, ಹತ್ತು ಬಾರಿ ಬದಲಾಯಿಸಿ, ಹೊಡೆದುಹಾಕಿ, ತಿದ್ದಿ-ತೀಡಿ, ಒದ್ದಾಡುವ ಪರಿಸ್ಥಿತಿಯ ಮುಂದೆ ಇವನ್ನು ಗಮನಿಸಬೇಕು. ಎಲ್ಲ ಬರೆದು ಮುಗಿಸಿದ ಮೇಲೆ "ಅಯ್ಯೋ, ಇದು ಸೇರಿಸುವುದು ಬಿಟ್ಟೆ ಹೋಯಿತಲ್ಲ!" ಎಂದು ಗೋಳಾಡುವುದು ಕೂಡದು. 

*****

ಇಷ್ಟೆಲ್ಲಾ ಕಠಿಣ ಚೌಕಟ್ಟಿನ ಸಂದರ್ಭದಲ್ಲಿ ಪೀಠಿಕಾ ಸಂಧಿಯ ಇಪ್ಪತ್ತಮೂರನೆಯ ಮತ್ತು ಕಡೆಯ ಪದ್ಯದಲ್ಲಿ ಕವಿ ಒಂದು ಸುಂದರ ಒಗಟು ಇಟ್ಟಿದ್ದಾನೆ. ಬಹಳ ಜನಪ್ರಿಯವಾಗಿರುವ ಆ ಪದ್ಯ ಹೀಗಿದೆ:

ವೇದಪುರುಷನ ಸುತನಸುತನ ಸ 
ಹೋದರನ ಮೊಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜಬಲದಿ 
ಕಾದಿ ಗೆಲಿದನ ಅಣ್ಣ ನವ್ವೆಯ 
ನಾದಿನಿಯ ಜಠರದಲಿ ಜನಿಸಿದ 
ನಾದಿ ಮೂರತಿ ಸಲಹೊ ಗದುಗಿನ ವೀರನಾರಯಣ 

ಮೇಲೆ ಕೊಟ್ಟಿರುವ ಚಿತ್ರವನ್ನು ನೋಡಿಕೊಂಡು ಈ ಪದ್ಯವನ್ನು ಓದಿಕೊಂಡರೆ ಒಗಟನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದು.  

  • ವೇದಪುರುಷನ - ಶ್ರೀಮನ್ನಾರಾಯಣನ  
  • ಸುತನ (ಮಗ) - ಚತುರ್ಮುಖ ಬ್ರಹ್ಮನ  
  • ಸುತನ (ಮಗ) - ನಾರದನ  
  • ಸಹೋದರನ - ಮರೀಚಿಯ 
  • ಮೊಮ್ಮಗನ - ಮಗ ಕಶ್ಯಪನ ಮಗನಾದ ಇಂದ್ರನ 
  • ಮಗನ - ಅರ್ಜುನನ
  • ತಳೋದರಿಯ - ಹೆಂಡತಿಯಾದ ಸುಭದ್ರೆಯ 
  • ಮಾತುಳನ - ಸೋದರಮಾವನಾದ ಕಂಸನ 
  • ಮಾವನ - ಕಂಸನಿಗೆ ಹೆಣ್ಣುಕೊಟ್ಟ ಮಾವ ಜರಾಸಂಧನನ್ನು 
  • ಅತುಲ ಭುಜಬಲದಿ ಕಾದು ಗೆಲಿದನ - ಭೀಮಸೇನನ 
  • ಅಣ್ಣನ - ಧರ್ಮರಾಯನ 
  • ಅವ್ವೆಯ - ತಾಯಿ ಕುಂತಿಯ 
  • ನಾದಿನಿಯ - ದೇವಕಿಯ 
  • ಜಠರದಲಿ ಜನಿಸಿದ ಅನಾದಿ ಮೂರುತಿ - ಶ್ರೀಕೃಷ್ಣ 
ಶ್ರೀಮನ್ನಾರಾಯಣನಿಂದ ಪ್ರಾರಂಭಿಸಿ ಹದಿಮೂರು ಜನರ ನಂತರ ಅವನ ಇನ್ನೊಂದು ರೂಪನಾದ ಶ್ರೀಕೃಷ್ಣನೇ ಬಂದು ನಿಂತ. ಅವನು ನಮ್ಮನ್ನು ಸಲಹಲಿ ಎಂದು ಪ್ರಾರ್ಥನೆ. ಒಂದು ಹದಿಮೂರು ಮುತ್ತುಗಳ ಹಾರ. ಶ್ರೀಮನ್ನಾರಾಯಣನ ಅವತಾರಿ ಶ್ರೀಕೃಷ್ಣನೇ ಆ ಹಾರದ ಪದಕ. 

*****

 ಈ ಪದ್ಯದಲ್ಲಿ ಅಡಗಿದ ಬೇರೆ ವಿಶೇಷಗಳು ಏನುಂಟು?

  • ಕವಿಯ ಇಷ್ಟ ದೈವ ವೀರ ನಾರಾಯಣ. ಪದ್ಯದ ಪ್ರಾರಂಭ ನಾರಾಯಣನಿಂದ. ಕಡೆಯಾದದ್ದು ಶ್ರೀಕೃಷ್ಣನಿಂದ. ಇದು ಕೌರವ-ಪಾಂಡವರ ಕಥೆ ಎಂದು ಮೇಲು ನೋಟಕ್ಕೆ ಕಂಡರೂ, ಇದರ ಕಥಾನಾಯಕ ಶ್ರೀಕೃಷ್ಣನೇ. ಇದನ್ನು ಕವಿ ಹೀಗೆ ಸೂಚಿಸಿದ್ದಾನೆ.
  • ನಾರಾಯಣನೇ ಅವತರಿಸಿ ಶ್ರೀಕೃಷ್ಣನಾದ ಎಂದು ಹೇಳಿದಂತಾಯಿತು. 
  • ಕೆಲವು ಮುಖ್ಯ ಪಾತ್ರಧಾರಿಗಳನ್ನು (ಅರ್ಜುನ, ಭೀಮ, ಧರ್ಮಜ, ಕುಂತಿ, ಇಂದ್ರ, ಶ್ರೀಕೃಷ್ಣ, ಸುಭದ್ರೆ) ಪರಿಚಯಿಸಿದ್ದಾಯಿತು. (ಬೇರೆಯವರು ಯಾಕಿಲ್ಲ ಎಂದು ಕೇಳಬಹುದು. ನೂರು ಮಾತ್ರೆಗಳ ನೆನಪಿಡಬೇಕು). 
  • ಪಾಂಡವರ-ಯಾದವರ ಕೊಂಡಿ ಇಲ್ಲಿ ಸಿಕ್ಕಿತು. 
ಇನ್ನು ಕೆಲವು ಸಂಗತಿಗಳು:
  • ಮಹಾನಾರಾಯಣೋಪನಿಷತ್ತು ಮುಂತಾದುವು ಹೇಳುವಂತೆ ನಾರಾಯಣನು ವೇದಪ್ರತಿಪಾದ್ಯನಾದ ವೇದಪುರುಷನು. 
  • ನಾರಾಯನಿಗೆ ಅನೇಕ ನೇರ ಮಕ್ಕಳಿದ್ದರೂ ಬ್ರಹ್ಮನೇ ಮೊದಲಿಗನು. ಅಲ್ಲಿಂದ ಸೃಷ್ಟಿ ಪ್ರಾರಂಭ. 
  • ಚತುರ್ಮುಖನಿಗೆ ಅನೇಕ ಮಾನಸ ಪುತ್ರರಿದ್ದಾರೆ. ಅವರಲ್ಲಿ ಯಾರನ್ನಾದರೂ ತೆಗೆದುಕೊಳ್ಳಬಹುದು. ನಾರದರು ಎಲ್ಲರಿಗೂ ಪರಿಚಿತರು. ಹೀಗಾಗಿ ಅವರನ್ನು ತೆಗೆದುಕೊಳ್ಳುವುದು ವಾಡಿಕೆ. 
  • ಮಾನಸ ಪುತ್ರರೆಲ್ಲರೂ ಬ್ರಹ್ಮನಿಂದ ನೇರ ಹುಟ್ಟಿದವರಾದದ್ದರಿಂದ ಅವನೇ ತಾಯಿ ಮತ್ತು ತಂದೆ. ಹೀಗೆ ಹುಟ್ಟಿದವರೆಲ್ಲರೂ ಸಹೋದರರು. 
  • ಅರ್ಜುನನು ಇಂದ್ರನ ವರಪ್ರಸಾದದಿಂದ ಹುಟ್ಟಿದವನು. ಹೀಗಾಗಿ ಮಗನು. 
  • ಅರ್ಜುನನಿಗೆ ಅನೇಕ ಹೆಂಡತಿಯರಿದ್ದರೂ, ಪಾಂಡವ-ಯಾದವ ಕುಲಗಳ ಕೊಂಡಿ ಸುಭದ್ರೆ. 
  • ಶ್ರೀಕೃಷ್ಣ-ಬಲರಾಮರಂತೆ ಕಂಸನು ಸುಭದ್ರೆಗೂ ಸೋದರಮಾವ. ದೇವಕಿಯ ಅಣ್ಣ. 
  • ಕಂಸನು ಜರಾಸಂಧನ ಇಬ್ಬರು ಹೆಣ್ಣು ಮಕ್ಕಳಾದ ಆಸ್ತಿ-ಪ್ರಾಪ್ತಿಯರನ್ನು ಮದುವೆಯಾಗಿದ್ದನು. ಆದ್ದರಿಂದ ಜರಾಸಂಧನು ಕಂಸನಿಗೆ ಹೆಣ್ಣು ಕೊಟ್ಟ ಮಾವ. 
  • ಭೀಮನ ಅವ್ವೆ ಕುಂತಿಯಾದರೂ ಧರ್ಮರಾಯ ಎಲ್ಲರಿಗೂ ಹಿರಿಯ. ಆದ್ದರಿಂದ ಮುಖ್ಯ. ಅಲ್ಲದೆ ಒಂದು ನೂರು ಮಾತ್ರೆಗಳ ಪದಗಳನ್ನು ಕೂಡಿಸಬೇಕಲ್ಲ!
  • ಕುಂತಿಯು ವಸುದೇವನ ಸಹೋದರಿ. ಇಬ್ಬರೂ ಯಾದವ ಶೂರಸೇನನ ಮಕ್ಕಳು. ಅವಳ ಹುಟ್ಟು ಹೆಸರು ಪೃಥಾ. ಶೂರಸೇನನ ತಮ್ಮ ಕುಂತಿಭೋಜನು ಮಕ್ಕಳಿಲ್ಲದ್ದರಿಂದ ಅವಳನ್ನು ದತ್ತು ತೆಗೆದುಕೊಂಡ. ಆಗ ಅವಳ ಹೆಸರು ಕುಂತಿ ಎಂದಾಯಿತು. 
  • ಕುಂತಿ ಮತ್ತು ವಸುದೇವನ ಹೆಂಡತಿ ದೇವಕಿ ಈ ಕಾರಣದಿಂದ ಅತ್ತಿಗೆ-ನಾದಿನಿಯರು. ಶ್ರೀಕೃಷ್ಣನಿಗೆ ಕುಂತಿ ಸೋದರತ್ತೆ. 
*****

ಮಂಗಳಾಚರಣೆಯ ಈ ಕೊನೆಯ ಪದ್ಯದ ಮೂಲಕ ಕವಿ ತನ್ನ ಇಷ್ಟದೈವ ಗದುಗಿನ ವೀರನಾರಾಯಣನಿಂದ ಕಥಾನಾಯಕ ಶ್ರೀಕೃಷ್ಣವರೆಗೆ ಒಂದು ದೊಡ್ಡ ಮಂಗಳಾರತಿ ಮಾಡಿ ಪ್ರಾರಂಭಿಸಿದ್ದಾನೆ. ಇಲ್ಲಿ ಬಳಸಿದ "ತಳೋದರಿ" ಪದವೂ ಹೀಗೆ ವಿಶ್ವ ವಿಖ್ಯಾತ ಆಯಿತು!