Wednesday, August 19, 2026

ವೇದಾಂತ ದೇಶಿಕರ "ಯಾದವಾಭ್ಯುದಯಮ್"


ಶ್ರೀ ಗುರು ರಾಘವೇಂದ್ರ ರಾಯರ ಸ್ತೋತ್ರದಲ್ಲಿ ಬರುವ "ವಿಜಯೀ೦ದ್ರ ಕರಾಬ್ಜೋಥಾ ಸುಧೀಂದ್ರ ವರಪುತ್ರಕಃ" ಎನ್ನುವ ಹೇಳಿಕೆಯ ಹಿನ್ನೆಲೆಯಲ್ಲಿ ಅವರ ಗುರು ಪರಂಪರೆಯ ಶ್ರೀ ಸುರೇಂದ್ರ ತೀರ್ಥರು, ಶ್ರೀ ವಿಜಯೀ೦ದ್ರ ತೀರ್ಥರು ಮತ್ತು  ಶ್ರೀ ಸುಧೀಂದ್ರ ತೀರ್ಥರು, ಇವರುಗಳ ಸ್ವಲ್ಪಮಟ್ಟಿನ ಪರಿಚಯಗಳನ್ನು ಈ ಹಿಂದಿನ ಮೂರು ಸಂಚಿಕೆಗಳಲ್ಲಿ ಮಾಡಿಕೊಂಡೆವು.  

"ಅರಳಿದ ಬಂಗಾರದ ಮಲ್ಲಿಗೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ಶ್ರೀ ಸುಧೀಂದ್ರ ತೀರ್ಥರ ಬಗ್ಗೆ ನೋಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು. ಅವುಗಳ ಹಿಂದಿನ ಸಂಚಿಕೆಗಳ ಕೊಂಡಿಗಳು ಹೀಗೆಯೇ ಅಲ್ಲಲ್ಲಿ ಸಿಕ್ಕುತ್ತವೆ. 

"ಇಷ್ಟು ಹೇಳಿದರೆ ನೀನು ಪಂಡಿತ" ಎಂಬ ಶೀರ್ಷಿಕೆಯ ಸಂಚಿಕೆಯನ್ನು ಓದಿದ ಸ್ನೇಹಿತರೊಬ್ಬರು ಶ್ರೀ ವಿಜಯೀ೦ದ್ರ ತೀರ್ಥರ ಮತ್ತು ಶ್ರೀ ಅಪ್ಪಯ್ಯ ದೀಕ್ಷಿತರ ಒಡನಾಟದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಕೆಲವು ಪುಸ್ತಕಗಳಲ್ಲಿ ಬೇರೆ ರೀತಿಯ ಅರ್ಥ ಬರುವ ವಿವರಗಳಿವೆ ಎನ್ನುವುದು ಅವರ ಅನುಮಾನಕ್ಕೆ ಕಾರಣ. 

"ನಮ್ಮ ಮತವೇ ಶ್ರೇಷ್ಠ. ಉಳಿದುವುಗಳೆಲ್ಲ ಲೆಕ್ಕಕ್ಕಿಲ್ಲ. ಇದನ್ನು ನಂಬಿದರೆ ಮಾತ್ರ ನೀವು ನೇರ ಸ್ವರ್ಗ ಅಥವಾ ಮುಕ್ತಿ ಪಡೆಯುತ್ತೀರಿ. ಇಲ್ಲದಿದ್ದರೆ ನೇರ ನರಕ ತಲುಪುತ್ತೀರಿ" ಎಂದು ಹೇಳುವ ಸಾಹಿತ್ಯ ರಾಶಿಗೆ ಏನೂ ಕಡಿಮೆ ಇಲ್ಲ. ಆದರೆ, ನಾವು ಯುವುದೋ ಒಂದು ಪುಸ್ತಕವನ್ನು ಓದಿ, ಅದನ್ನೇ ಪರಮ ಸತ್ಯ ಎಂದು ನಂಬುವುದು ಎಷ್ಟು ಸರಿ? ಅದಕ್ಕೆ ವಿರುದ್ಧವಾದುವುಗಳೂ ಅನೇಕವಿವೆ. ಎಲ್ಲವನ್ನೂ ತಿಳಿಯುವ ಪ್ರಯತ್ನ ಮಾಡಿ, ನಂತರ ನಾವು ಒಂದು ತೀರ್ಮಾನಕ್ಕೆ ಬರುವುದು ಒಂದು ಉತ್ತಮ ಪಕ್ಷ. 

ಈ ಹಿನ್ನೆಲೆಯಲ್ಲಿ ಶ್ರೀ ಅಪ್ಪಯ್ಯ ದೀಕ್ಷಿತರ ಪಾಂಡಿತ್ಯ ಮತ್ತು ಅವರ ಒಟ್ಟಾರೆ ಭಾವ (sentiment) ಹೇಗಿದ್ದಿತು ಎನ್ನುವುದನ್ನು ಇಲ್ಲಿ ಸ್ವಲ್ಪ ನೋಡೋಣ. 

******

ಜ್ಞಾನದ ಯಾವುದೇ ಒಂದು ಶಾಖೆಯಲ್ಲಿ ಸ್ವಲ್ಪಮಟ್ಟಿನ ಪ್ರಭುತ್ವ ಪಡೆಯಬೇಕಾದರೆ ಹತ್ತಾರು ವರ್ಷಗಳ ಅಧ್ಯಯನ ಅವಶ್ಯಕ. ಗುರುಕುಲಗಳಲ್ಲಿ ಮೊದಲ ಕೆಲವು ವರುಷ ಸಾಮಾನ್ಯ ಜ್ಞಾನ ಪಡೆದ ನಂತರ ವಿದ್ಯಾರ್ಥಿಗಳು ಯಾವುದಾದರೂ ಒಂದು ವಿಭಾಗವನ್ನು ಆರಿಸಿಕೊಂಡು ಅದರಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿದ್ದರು. ಈಗಿನ ಶಿಕ್ಷಣ ಪದ್ದತಿಯಲ್ಲಿಯೂ ಈ ರೀತಿಯ ವಿಶೇಷ ಪರಿಣತಿ ಪಡೆಯುವ ಅವಕಾಶ ಇದೆ. ನಾವು ಮೇಲೆ ಹೇಳಿದ ಹೆಸರುಗಳ ಮಹನೀಯರು ಅನೇಕ ವಿಷಯಗಳಲ್ಲಿ ಪರಿಣತಿ ಸಾಧಿಸಿದ ವ್ಯಕ್ತಿಗಳು. "ಒಂದು ಜೀವಿತ ಕಾಲದಲ್ಲಿ ಇಷ್ಟು ಸಾಧನೆ ಸಾಧ್ಯವೇ?" ಎಂದು ನಾವು ಯೋಚಿಸುವಂತೆ ಮಾಡುವ ಶಕ್ತಿಗಳು ಅವರು.

ಶ್ರೀ ಅಪ್ಪಯ್ಯ ದೀಕ್ಷಿತರು "ಶಿವಾದ್ವೈತ" ವಿಭಾಗದಲ್ಲಿ ಎಲ್ಲ ಕಾಲದ ಶ್ರೇಷ್ಠ ವಿದ್ವಾಂಸರಲ್ಲಿ ಅಗ್ರಗಣ್ಯರು. ಅವರ ಅನೇಕ ಬಿರುದುಗಳಲ್ಲಿ "ಅದ್ವೈತ ವಿದ್ಯಾಚಾರ್ಯ" ಅನ್ನುವುದೂ ಒಂದು ಬಿರುದು. "ಅಲಂಕಾರ ಶಾಸ್ತ್ರ" (Poetics) ವಿಷಯದಲ್ಲಿ ಅವರು ರಚಿಸಿರುವ "ಕುವಲಯಾನಂದ" ಒಂದು ಮೇರು ಕೃತಿ. ನಾವು ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿದ್ದಾಗ ಮೂರು-ನಾಲ್ಕು ಅಲಂಕಾರಗಳ (Figure of Speech) ಬಗ್ಗೆ ಸೂಕ್ಷ್ಮವಾಗಿ ಹೇಳಿಕೊಡುತ್ತಿದ್ದರು. ಉಪಮಾಲಂಕಾರ (Simile), ರೂಪಕಾಲಂಕಾರ (Metaphor), ಉತ್ಪ್ರೇಕ್ಷೆ (Hyperbole) ಮುಂತಾದ ಕೆಲವು. ಕುವಲಯಾನಂದ ಕೃತಿಯಲ್ಲಿ 124 ಅಲಂಕಾರಗಳ ವಿವರಣೆ ಇದೆ!

"ಕುವಲಯಾನಂದ" ಕೃತಿಗೆ "ಪೀಯೂಷವರ್ಷ ಜಯದೇವ" ರಚಿಸಿರುವ "ಚಂದ್ರಾಲೋಕ" ಎಂಬ ಹೆಸರಿನ ವ್ಯಾಖ್ಯಾನ ಇದೆ. 51ನೆಯ ಶ್ಲೋಕದಲ್ಲಿ "ಪ್ರತಿವಸ್ತು ಉಪಮಾಲಂಕಾರ" ಅನ್ನುವ ಅಲಂಕಾರದ ವರ್ಣನೆ ಇದೆ.  ಆ ಶ್ಲೋಕದ ವಿವರಣೆ ಹೀಗಿದೆ:

ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ 
ನ ಹಿ ವಂಧ್ಯಾ ವಿಜಾನಾತಿ ಗುರ್ವಿo  ಪ್ರಸವವೇದನಂ 

ಒಬ್ಬ ವಿದ್ವಾಂಸನ ಶ್ರಮವನ್ನು ಇನ್ನೊಬ್ಬ ವಿದ್ವಾಂಸ ಮಾತ್ರ ತಿಳಿಯಬಲ್ಲನು. (ಕೃತಿ ರಚನೆಯ ಕಷ್ಟವನ್ನು ಕೃತಿಗಳನ್ನು ರಚಿಸಿರುವ ಇನ್ನೊಬ್ಬನು ಮಾತ್ರ ಅರಿಯಬಲ್ಲನು). ಒಂದು ಮಗುವನ್ನೂ ಹಡೆಯದವಳಿಗೆ ಪ್ರಸವ ವೇದನೆ ಏನೆಂಬುದು ಹೇಗೆ ಗೊತ್ತು?

ಸ್ವತಃ ಅದ್ವೈತ ವಿದ್ಯಾಚಾರ್ಯರಾಗಿದ್ದರೂ ಶ್ರೀ ಅಪ್ಪಯ್ಯ ದೀಕ್ಷಿತರು ವೈಷ್ಣವ ಸಿದ್ಧಾಂತ ಸಾರಿ ಹೇಳುವ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯಂ" ಕೃತಿಗೆ ವ್ಯಾಖ್ಯಾನ ಬರೆದಿದ್ದಾರೆ. ವೇದಾಂತ ದೇಶಿಕರಿಗೆ "ಶ್ರೀ ವೈಷ್ಣವಾಚಾರ್ಯ" ಎಂದು ಬಿರುದು. ಕೃತಿ ಬರೆದವರು ಶ್ರೀವೈಷ್ಣವಾಚಾರ್ಯರು. ಅದರ ವ್ಯಾಖ್ಯಾನ ಬರೆದವರು ಅದ್ವೈತವಿದ್ಯಾಚಾರ್ಯರು. ಅದೂ ಸಮಕಾಲೀನ ಕೃತಿಯೊಂದರ ಮೇಲೆ ಬರೆದ ವ್ಯಾಖ್ಯಾನವಲ್ಲ. ಎರಡು ನೂರು ವರುಷ ಹಿಂದಿನ ಕೃತಿ. ಮೇಲೆ ಹೇಳಿದ ಪ್ರತಿವಸ್ತು ಉಪಮಾಲಂಕಾರಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಮತ್ತೆ ಎಲ್ಲಿ ಸಿಕ್ಕೀತು? 

******


ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ನೆನೆಯಬೇಕಾದ ಹೆಸರುಗಳಲ್ಲಿ ಶ್ರೀ ವೇದಾಂತ ದೇಶಿಕ ಆವರದು ಎತ್ತರದ ಹೆಸರು. ಅವರ ಕಾಲ (1268-1369) ದಕ್ಷಿಣ ಭಾರತದ ಇತಿಹಾಸದಲ್ಲಿ ಬಹಳ ಕ್ಷೋಭೆ ತುಂಬಿದ ಸಮಯ. ಅನೇಕ ಅಡೆ-ತಡೆಗಳ ನಡುವೆ ಗುದ್ದಾಡಿ, ಅನೇಕ ಸತ್ವಯುತ ಗ್ರಂಥಗಳನ್ನು ರಚಿಸಿ 101 ವರುಷದ ತುಂಬು ಜೀವನ ನಡೆಸಿದ ಮಹನೀಯರು. ಅವರ ಹೆಸರಿನ ಜೊತೆ ತಳುಕು ಹಾಕಿಕೊಂಡಿರುವ ಬಿರುದುಗಳೇ ಒಂದು ರೋಮಾಂಚನ ಮಾಡುವಂತಹ ಸರಣಿ. "ಕವಿತಾರ್ಕಿಕ ಸಿಂಹ", "ವೇದಾಂತಾಚಾರ್ಯ" ಮತ್ತು "ಸರ್ವ ತಂತ್ರ ಸ್ವತಂತ್ರ" ಎನ್ನುವುವು ಅವುಗಳಲ್ಲಿ ಕೆಲವು. ಸನ್ಯಾಸಿಗಳಾಗದೆ, ಪೀಠದ ಬಲ ಇಲ್ಲದೆ, ತಮ್ಮ ವಿದ್ವತ್ತಿನ ಕಾರಣ ಪೀಠಾಧಿಪತಿಗಳ ಮನ್ನಣೆಯನ್ನೂ ಗಳಿಸಿದ ಹಿರಿಯರು. ಶ್ರೀ ರಾಮಾನುಜಾಚಾರ್ಯ (1077-1157) ಅವರ ಒಂದು ನೂರು ವರುಷಗಳ ನಂತರ ಬಾಳಿದ ಅವರು ತಾವು ನಂಬಿದ ಸಿದ್ಧಾಂತದ ಜೊತೆಗೆ ವಿಪುಲವಾದ ಸಾಹಿತ್ಯ ಸೇವೆ ಮಾಡಿದವರು. 

ಕಾಂಚಿಪುರಂ ನಗರದ ಬಳಿಯ ತುಪ್ಪಿಲ್ ಎಂಬಲ್ಲಿ ಜನಿಸಿದ ಅವರು ತಮ್ಮ ಜೀವನದ ಮೊದಲ ಕೆಲವು ವರುಷಗಳನ್ನು ತಮಿಳುನಾಡಿನ ಕಡಲೂರು ಬಳಿಯ, ಅಲ್ಲಿಂದ ಮೂರು-ನಾಲ್ಕು ಮೈಲಿ ದೂರದ, ತಿರುವಹಿಂದ್ರಪುರಮ್ (ತಿರುವಂಡಿಪುರಂ) ಎನ್ನುವ ಸ್ಥಳದಲ್ಲಿ ಕಳೆದರಂತೆ. ಅಲ್ಲಿನ ದೇವನಾಥಸ್ವಾಮಿ ದೇವಾಲಯ ಮತ್ತು ಸಮೀಪದ ಬೆಟ್ಟದ ಮೇಲಿರುವ ಶ್ರೀಲಕ್ಷ್ಮೀ-ಹಯಗ್ರೀವ ದೇವರ ಸನ್ನಿಧಿಯಲ್ಲಿ ಇದ್ದರಂತೆ. ಶ್ರೀ ವೈಷ್ಣವ ಪಂಥದ ಅನುಯಾಯಿಗಳು ಆರಾಧಿಸುವ "108 ದಿವ್ಯದೇಶಂ" ದೇವಾಲಯಗಳಲ್ಲಿ ಇದೂ ಒಂದು. 

ದೇಶಿಕರು ಅಲ್ಲಿ ವಾಸವಿದ್ದ ಸಮಯದಲ್ಲಿ ರಚಿಸಿದ "ರಘುವೀರಗದ್ಯ" ಅವರ ಪಾಂಡಿತ್ಯಕ್ಕೂ, ಕವಿತಾ ಪ್ರೌಢಿಮೆಗೂ ಒಂದು ನಿದರ್ಶನ.  ಈಚಿನ ದಿನಗಳಲ್ಲಿ ವಾಟ್ಸಾಪ್ಪ್ ವಿಡಿಯೋಗಳಲ್ಲಿ ಅದನ್ನು ಅನೇಕರು ಹಾಡಿ ತೋರಿಸಿದ್ದಾರೆ. ಅವರಿಗಿದ್ದ "ಸರ್ವ ತಂತ್ರ ಸ್ವತಂತ್ರ" ಹೆಸರಿನ ಬಿರುದು ಕಂಡ ಗಾರೆ ಕೆಸಲದವನು ಒಬ್ಬನು "ನಿಮಗೆ ಎಲ್ಲ ವಿದ್ಯೆ ಗೊತ್ತಿದ್ದರೆ ಒಂದು ಬಾವಿ ತೋಡಿ ತೋರಿಸಿ, ನೋಡೋಣ!" ಎಂದು ಸವಾಲು ಹಾಕಿದನಂತೆ. ಅವರು ತಮ್ಮ ಕೈಯಾರೆ ಆಗ ತೋಡಿದ ಬಾವಿಯನ್ನು ಈಗಲೂ ನೋಡಬಹುದೆಂದು ಕಂಡವರು ಹೇಳುತ್ತಾರೆ. 

******

ಶ್ರೀರಂಗಂ ಕ್ಷೇತ್ರದ ವಿದ್ವಾಂಸರ ಮನವಿಯ ಮೇರೆಗೆ ದೇಶಿಕರು ಅಲ್ಲಿಗೆ ಹೋದರು. ಆ ಸಮಯದಲ್ಲಿ ದೆಹಲಿ ಸುಲ್ತಾನ ಅಲ್ಲಾಉದ್ದೀನ್ ಖಿಲ್ಜಿ ಸೇನಾಧಿಪತಿ ಮಲ್ಲಿಕಾಫರ್ ಮದುರೈ ಮತ್ತು ಶ್ರೀರಂಗಂ ಪ್ರದೇಶಗಳಲ್ಲಿ ದಂಡೆತ್ತಿ ಬಂದ. ಶ್ರೀರಂಗಂ ದೇವಾಲಯದ ಮೇಲೆ ನಡೆದ ದಾಳಿಗಳಲ್ಲಿ ಮತ್ತು ಅಲ್ಲಿನ ಐಶ್ವರ್ಯದ ಲೂಟಿಯ ಸಂದರ್ಭದಲ್ಲಿ ನೂರಾರು ಮಂದಿ ದೇವಾಲಯದ ಸಿಬ್ಬಂದಿ, ಶ್ರೀವೈಷ್ಣವ ಪಂಡಿತರು ಮತ್ತು ಭಕ್ತರನ್ನು ಮುಘಲ್ ಸೈನಿಕರು ಹತ್ಯೆಗೈದರು. ಅದರ ವಿವರಗಳನ್ನು ಕೇಳಿದರೆ ಕಣ್ಣೀರು ಬರುತ್ತದೆ. 

ಶ್ರೀ ಸುದರ್ಶನ ಸೂರಿಗಳು (ಸುದರ್ಶನ ಭಟ್ಟ ಎಂದೂ ಹೇಳುತ್ತಾರೆ) ಆಚಾರ್ಯ ರಾಮಾನುಜರ ಅನೇಕ ಗ್ರಂಥಗಳಿಗೆ ಟೀಕಾಗ್ರಂಥಗಳನ್ನು ಬರೆದಿರುವ ವಿದ್ವಾಂಸರು. ಆಚಾರ್ಯರ "ಶ್ರೀಭಾಷ್ಯ" ಗ್ರಂಥದ ಮೇಲಿನ ಅವರ "ಶ್ರುತ ಪ್ರಕಾಶಿಕಾ" ಟೀಕಾ ಗ್ರಂಥ ಬಹಳ ಹೆಸರು ಮಾಡಿರುವಂಥದು. ಸೂರಿಗಳು ತಮ್ಮ ಹತ್ಯೆಗೆ ಮೊದಲು ತಮ್ಮಲ್ಲಿದ್ದ ಅಮೂಲ್ಯ ತಾಳೆಗರಿ ಗ್ರಂಥಗಳನ್ನು ಮತ್ತು ಇಬ್ಬರು ಮಕ್ಕಳನ್ನು ವೇದಾಂತ ದೇಶಿಕರ ಕೈಗೆ ಒಪ್ಪಿಸಿದರಂತೆ. ಶ್ರುತ ಪ್ರಕಾಶಿಕಾ ಗ್ರಂಥದ ಅದೊಂದೇ ಪ್ರತಿ ಆಗ ಲಭ್ಯವಿತ್ತಂತೆ. ಆ ಅಸಂಖ್ಯ ಶವಗಳ ರಾಶಿಯಲ್ಲಿ ಈ ಗ್ರಂಥಗಳನ್ನೂ ಮತ್ತು ಆ ಎರಡು ಮಕ್ಕಳನ್ನು ಹಿಡಿದಿಟ್ಟುಕೊಂಡು ಮಲಗಿ, ಆ ಮುಘಲ್ ಸೈನಿಕರ ಆಟಾಟೋಪ ಮುಗಿದ ನಂತರ ಕರ್ನಾಟಕದ ಗಡಿಯ ಸತ್ಯಮಂಗಲ ತಲುಪಿದರಂತೆ. ನಂತರ ಮೇಲುಕೋಟೆ ತಲುಪಿ ಅವೆಲ್ಲವನ್ನೂ ಸುರಕ್ಷಿತ ಮಾಡಿದರಂತೆ. ಸುದರ್ಶನ ಸೂರಿಗಳ ಇಬ್ಬರು ಮಕ್ಕಳಿಗೆ ಉಪನಯನಾದಿಗಳನ್ನು ಮಾಡಿ ಅವರಿಗೆ ನೆಲೆ ಮಾಡಿ ಕೊಟ್ಟರಂತೆ. 

ಇಂತಹ ಅಮೂಲ್ಯ ಗ್ರಂಥಗಳನ್ನು ರಕ್ಷಿಸಿದ್ದಕ್ಕೆ ಈ ಇಬ್ಬರು ಮಹಾನ್ ವಿದ್ವಾಂಸರಿಗೆ ನಾವುಗಳು ಎಂದೂ ಋಣಿಯಾಗಿರಬೇಕು. ಮುಂದೆ ದೇಶಿಕರು ಉತ್ತರ ಭಾರತ ಪ್ರವಾಸ ಮಾಡಿ, ಅಲ್ಲಿನ ದೇವಾಲಯಗಳ ಅವಶೇಷಗಳನ್ನು ನೋಡಿ, ಶ್ರೀರಂಗಂ ಹತ್ಯಾಕಾಂಡದ ಹಿನ್ನೆಲೆಯಲ್ಲಿ "ಅಭೀತಿ ಸ್ತವ" (ಭಯದಿಂದ ಬಿಡುಗಡೆ ಸ್ತೋತ್ರ) ರಚಿಸಿದರು. ಉತ್ತರ ಭಾರತದಿಂದ ಹಿಂದಿರುಗಿದ ನಂತರ ಮತ್ತನೇಕ ಗ್ರಂಥಗಳನ್ನು ರಚಿಸಿ, ಅನೇಕ ಸಾರ್ಥಕ ಕೆಲಸಗಳನ್ನು ನಡೆಸಿದರು. ಬಂದ ಆಪತ್ತುಗಳನ್ನು ಧೈರ್ಯ ಮತ್ತು ಯುಕ್ತಿಗಳಿಂದ ಎದುರಿಸಿ, ಅನೇಕ ಗ್ರಂಥ ರಚನೆ ಮಾಡಿ, ಹಲವಾರು ಶಿಷ್ಯರನ್ನು ಸಂಪಾದಿಸಿ ದೇಶಿಕರು ಕೀರ್ತಿಶೇಷರಾದರು. 
******

ಶ್ರೀಕೃಷ್ಣನ ಜೀವನದ ವಿವರಗಳನ್ನು ಕೊಡುವ ಗ್ರಂಥಗಳಲ್ಲಿ ನಮಗೆ ಹತ್ತಿರವಾದದ್ದು ಶ್ರೀಮದ್ ಭಾಗವತ. ಮಹಾಭಾರತದಲ್ಲಿಯೂ ಮತ್ತು ಇತರ ಗ್ರಂಥಗಳಲ್ಲಿಯೂ ಅಲ್ಲಲ್ಲಿ ಕೆಲವು ವಿವರಗಳು ಸಿಕ್ಕರೂ ಸಮಗ್ರ ಮಾಹಿತಿ ದೊರೆಯುವುದು ಭಾಗವತದಲ್ಲಿಯೇ. ಭಾಗವತವು "ಪುರಾಣ" ಎಂದು ವರ್ಗಿಕೃತವಾಗುತ್ತದೆ. ಹದಿನೆಂಟು ಪುರಾಣಗಳಲ್ಲಿ ಅದು ಒಂದು. ಸಂಸ್ಕೃತ ಮಹಾಕಾವ್ಯಗಳ ಲೆಕ್ಕದಲ್ಲಿ ನೋಡುವುದಾದರೆ ಮಾಘ ಕವಿಯ "ಶಿಶುಪಾಲ ವಧ" ಇಂತಹ ಒಂದು ಮಹಾಕಾವ್ಯ. ಇದನ್ನು ಪಂಚಮಹಾಕಾವ್ಯಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. 

ಶ್ರೀಕೃಷ್ಣನು ವೈಷ್ಣವ ಸಿದ್ಧಾಂತಗಳಲ್ಲಿ ಪರದೈವ. ಹೀಗೆ ಅವನನ್ನು ನಾಯಕನನ್ನಾಗಿ ಮಾಡಿಕೊಂಡು ರಚಿಸಿದ ಕಾವ್ಯಗಳ ಸಾಲಿನಲ್ಲಿ ಎರಡು ಕಾವ್ಯಗಳು ಗಮನ ಸೆಳೆಯುತ್ತವೆ. ಮೊದಲನೆಯದು ಹದಿನಾಲ್ಕನೆಯ ಶತಮಾನದ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ". ಇದು ಶ್ರೀವೈಷ್ಣವ ಸಿದ್ಧಾಂತದ ಪ್ರಮೇಯಗಳನ್ನು ಒಳಗೊಂಡ ಕಾವ್ಯ. ನಂತರದ್ದು ಹದಿನಾರನೆಯ ಶತಮಾನದ ಉಡುಪಿಯ ಎಂಟು ಮಠಗಳಲ್ಲಿ ಒಂದಾದ ಸೋದೆ ಮಠದ ಶ್ರೀ ವಾದಿರಾಜ ತೀರ್ಥ ಅವರು ರಚಿಸಿರುವ "ಶ್ರೀ ರುಕ್ಮಿಣೀಶ ವಿಜಯ". ಇದರಲ್ಲಿ ಮಧ್ವ ಸಿದ್ಧಾಂತದ ಪ್ರಮೇಯಗಳನ್ನು ಕಾಣಬಹುದು.

ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ" 24 ಸರ್ಗಗಳಲ್ಲಿ ಹರಡಿಕೊಂಡಿರುವ ಮಹಾಕಾವ್ಯ. ನವರಸಗಳನ್ನು, ಅನೇಕ ಸ್ತೋತ್ರಗಳನ್ನೂ ಒಡಗೊಂಡಿದೆ. ದೇವಕಿಯ ಗರ್ಭವಾಸ್ಥೆಯಿಂದ ಪ್ರಾರಂಭವಾಗಿ, ಶ್ರೀಕೃಷ್ಣನ ಜೀವಿತದ ಎಲ್ಲ ಹಂತಗಳ ವಿವರಣೆ ಇದರಲ್ಲಿದೆ. ದೇಶಿಕರ ಪಾಂಡಿತ್ಯ ಮತ್ತು ಕೃಷ್ಣ ಭಕ್ತಿ, ಎರಡನ್ನೂ ಬೆಸೆದು ರಚಿಸಿರುವ ಕೃತಿ. 

ಶ್ರೀ ಅಪ್ಪಯ್ಯ ದೀಕ್ಷಿತರು ಈ ಯಾದವಾಭ್ಯುದಯ ಕೃತಿ ರಚನೆಯ ಸುಮಾರು ಎರಡು ನೂರು ವರುಷ ಕಳೆದ ನಂತರ ಇದಕ್ಕೆ ವ್ಯಾಖ್ಯಾನ ರಚಿಸಿದ್ದಾರೆ. ಪ್ರತಿಗಳು ಸುಲಭವಾಗಿ ಲಭ್ಯವಿವೆ. ಆಸಕ್ತರು ಓದಿ ಆನಂದಿಸಬಹುದು.

ಶ್ರೀ ವಾದಿರಾಜ ಯತಿಗಳ "ರುಕ್ಮಿಣೀಶ ವಿಜಯ" ಕೃತಿಯ ಬಗ್ಗೆ ಮತ್ತೊಮ್ಮೆ ನೋಡೋಣ.

*****

ಒಂದು ಹಣ್ಣಿನ ತೋಟವಿದೆ. ಅದರಲ್ಲಿ ಅನೇಕ ಹಣ್ಣು ಕೊಡುವ ಮರಗಳಿವೆ. ಒಬ್ಬೊಬ್ಬರಿಗೆ ಒಂದೊಂದು ಹಣ್ಣಿನ ಮೇಲೆ ಪ್ರೀತಿ. ಯಾವ ಹಣ್ಣು ತೆಗೆದುಕೊಳ್ಳಬೇಕು ಅನ್ನುವುದು ಅವರವರ ಇಷ್ಟ. ಎಲ್ಲರಿಗೂ ಒಂದೇ ಹಣ್ಣು ಪ್ರಿಯವಾಗಬೇಕು ಎಂದಿಲ್ಲ. 

ಎಲ್ಲ ಹಣ್ಣುಗಳ ಬಗ್ಗೆ ತಿಳಿದುಕೊಂಡು ಕಡೆಗೆ ನಮಗೆ ಯಾವುದು ಪ್ರಿಯ ಎಂದು ನಿರ್ಧರಿಸಬಹುದು. ನಮ್ಮಲ್ಲಿ ಬಹುತೇಕರು ಮಾಡುವುದು ಏನು? ಮೊದಲಿನಿಂದಲೂ ನಮ್ಮ ಮನೆಯಲ್ಲಿ ಹೀಗೆ ಬಂದಿದೆ. ಆದ್ದರಿಂದ ಅದೇ ಒಳ್ಳೆಯ ಹಣ್ಣು ಎಂಬುದು. ಇರಬಹುದು. ಆದರೆ ಮತ್ತೊಬ್ಬರು ಅವರಿಗೆ ಬೇಕಾದ ಹಣ್ಣು ತಿನ್ನಲಿ. ಅದಕ್ಕೆ ನಮ್ಮ ನಿರ್ಬಂಧವಿಲ್ಲ. 

ಭಾರತೀಯ ತತ್ವಶಾಸ್ತ್ರ ಸಹ ಈ ಹಣ್ಣಿನ ತೋಟದಂತೆ. ನಾವು ನಮ್ಮ ನಮ್ಮ ಮನೆಗಳಲ್ಲಿ ಯಾವ ಆಚರಣೆ ಮಾಡುತ್ತೇವೆ ಅನ್ನುವುದು ನಮಗೆ ಬಿಟ್ಟದ್ದು. ಹಾಗೆ ಅಂದಮಾತ್ರಕ್ಕೆ ಎಲ್ಲರೂ ಅದೇ ಆಚರಣೆ ನಡೆಸಬೇಕು ಎಂದಲ್ಲ. 

ಇಷ್ಟು ತಿಳಿದರೆ ಸಾಮರಸ್ಯ ಮೂಡುವುದು. ವಿಜಯೀoದ್ರರೂ, ಅಪ್ಪಯ್ಯ ದೀಕ್ಷಿತರೂ ಹೀಗಿದ್ದವರು. ಆದ ಕಾರಣ ಪ್ರಬಲ ಅಭಿಪ್ರಾಯ ಭೇದ ಇದ್ದ ಕಡೆಯಲ್ಲಿಯೂ ಸಾಮರಸ್ಯ ಸಾಧ್ಯ ಆಗಿತ್ತು. ನಾವು ಇಷ್ಟು ತಿಳಿದರೆ ಸಾಕು.

No comments:

Post a Comment