Showing posts with label Guru Raghavendra. Show all posts
Showing posts with label Guru Raghavendra. Show all posts

Wednesday, August 19, 2026

ವೇದಾಂತ ದೇಶಿಕರ "ಯಾದವಾಭ್ಯುದಯಮ್"


ಶ್ರೀ ಗುರು ರಾಘವೇಂದ್ರ ರಾಯರ ಸ್ತೋತ್ರದಲ್ಲಿ ಬರುವ "ವಿಜಯೀ೦ದ್ರ ಕರಾಬ್ಜೋಥಾ ಸುಧೀಂದ್ರ ವರಪುತ್ರಕಃ" ಎನ್ನುವ ಹೇಳಿಕೆಯ ಹಿನ್ನೆಲೆಯಲ್ಲಿ ಅವರ ಗುರು ಪರಂಪರೆಯ ಶ್ರೀ ಸುರೇಂದ್ರ ತೀರ್ಥರು, ಶ್ರೀ ವಿಜಯೀ೦ದ್ರ ತೀರ್ಥರು ಮತ್ತು  ಶ್ರೀ ಸುಧೀಂದ್ರ ತೀರ್ಥರು, ಇವರುಗಳ ಸ್ವಲ್ಪಮಟ್ಟಿನ ಪರಿಚಯಗಳನ್ನು ಈ ಹಿಂದಿನ ಮೂರು ಸಂಚಿಕೆಗಳಲ್ಲಿ ಮಾಡಿಕೊಂಡೆವು.  

"ಅರಳಿದ ಬಂಗಾರದ ಮಲ್ಲಿಗೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ಶ್ರೀ ಸುಧೀಂದ್ರ ತೀರ್ಥರ ಬಗ್ಗೆ ನೋಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು. ಅವುಗಳ ಹಿಂದಿನ ಸಂಚಿಕೆಗಳ ಕೊಂಡಿಗಳು ಹೀಗೆಯೇ ಅಲ್ಲಲ್ಲಿ ಸಿಕ್ಕುತ್ತವೆ. 

"ಇಷ್ಟು ಹೇಳಿದರೆ ನೀನು ಪಂಡಿತ" ಎಂಬ ಶೀರ್ಷಿಕೆಯ ಸಂಚಿಕೆಯನ್ನು ಓದಿದ ಸ್ನೇಹಿತರೊಬ್ಬರು ಶ್ರೀ ವಿಜಯೀ೦ದ್ರ ತೀರ್ಥರ ಮತ್ತು ಶ್ರೀ ಅಪ್ಪಯ್ಯ ದೀಕ್ಷಿತರ ಒಡನಾಟದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಕೆಲವು ಪುಸ್ತಕಗಳಲ್ಲಿ ಬೇರೆ ರೀತಿಯ ಅರ್ಥ ಬರುವ ವಿವರಗಳಿವೆ ಎನ್ನುವುದು ಅವರ ಅನುಮಾನಕ್ಕೆ ಕಾರಣ. 

"ನಮ್ಮ ಮತವೇ ಶ್ರೇಷ್ಠ. ಉಳಿದುವುಗಳೆಲ್ಲ ಲೆಕ್ಕಕ್ಕಿಲ್ಲ. ಇದನ್ನು ನಂಬಿದರೆ ಮಾತ್ರ ನೀವು ನೇರ ಸ್ವರ್ಗ ಅಥವಾ ಮುಕ್ತಿ ಪಡೆಯುತ್ತೀರಿ. ಇಲ್ಲದಿದ್ದರೆ ನೇರ ನರಕ ತಲುಪುತ್ತೀರಿ" ಎಂದು ಹೇಳುವ ಸಾಹಿತ್ಯ ರಾಶಿಗೆ ಏನೂ ಕಡಿಮೆ ಇಲ್ಲ. ಆದರೆ, ನಾವು ಯುವುದೋ ಒಂದು ಪುಸ್ತಕವನ್ನು ಓದಿ, ಅದನ್ನೇ ಪರಮ ಸತ್ಯ ಎಂದು ನಂಬುವುದು ಎಷ್ಟು ಸರಿ? ಅದಕ್ಕೆ ವಿರುದ್ಧವಾದುವುಗಳೂ ಅನೇಕವಿವೆ. ಎಲ್ಲವನ್ನೂ ತಿಳಿಯುವ ಪ್ರಯತ್ನ ಮಾಡಿ, ನಂತರ ನಾವು ಒಂದು ತೀರ್ಮಾನಕ್ಕೆ ಬರುವುದು ಒಂದು ಉತ್ತಮ ಪಕ್ಷ. 

ಈ ಹಿನ್ನೆಲೆಯಲ್ಲಿ ಶ್ರೀ ಅಪ್ಪಯ್ಯ ದೀಕ್ಷಿತರ ಪಾಂಡಿತ್ಯ ಮತ್ತು ಅವರ ಒಟ್ಟಾರೆ ಭಾವ (sentiment) ಹೇಗಿದ್ದಿತು ಎನ್ನುವುದನ್ನು ಇಲ್ಲಿ ಸ್ವಲ್ಪ ನೋಡೋಣ. 

******

ಜ್ಞಾನದ ಯಾವುದೇ ಒಂದು ಶಾಖೆಯಲ್ಲಿ ಸ್ವಲ್ಪಮಟ್ಟಿನ ಪ್ರಭುತ್ವ ಪಡೆಯಬೇಕಾದರೆ ಹತ್ತಾರು ವರ್ಷಗಳ ಅಧ್ಯಯನ ಅವಶ್ಯಕ. ಗುರುಕುಲಗಳಲ್ಲಿ ಮೊದಲ ಕೆಲವು ವರುಷ ಸಾಮಾನ್ಯ ಜ್ಞಾನ ಪಡೆದ ನಂತರ ವಿದ್ಯಾರ್ಥಿಗಳು ಯಾವುದಾದರೂ ಒಂದು ವಿಭಾಗವನ್ನು ಆರಿಸಿಕೊಂಡು ಅದರಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿದ್ದರು. ಈಗಿನ ಶಿಕ್ಷಣ ಪದ್ದತಿಯಲ್ಲಿಯೂ ಈ ರೀತಿಯ ವಿಶೇಷ ಪರಿಣತಿ ಪಡೆಯುವ ಅವಕಾಶ ಇದೆ. ನಾವು ಮೇಲೆ ಹೇಳಿದ ಹೆಸರುಗಳ ಮಹನೀಯರು ಅನೇಕ ವಿಷಯಗಳಲ್ಲಿ ಪರಿಣತಿ ಸಾಧಿಸಿದ ವ್ಯಕ್ತಿಗಳು. "ಒಂದು ಜೀವಿತ ಕಾಲದಲ್ಲಿ ಇಷ್ಟು ಸಾಧನೆ ಸಾಧ್ಯವೇ?" ಎಂದು ನಾವು ಯೋಚಿಸುವಂತೆ ಮಾಡುವ ಶಕ್ತಿಗಳು ಅವರು.

ಶ್ರೀ ಅಪ್ಪಯ್ಯ ದೀಕ್ಷಿತರು "ಶಿವಾದ್ವೈತ" ವಿಭಾಗದಲ್ಲಿ ಎಲ್ಲ ಕಾಲದ ಶ್ರೇಷ್ಠ ವಿದ್ವಾಂಸರಲ್ಲಿ ಅಗ್ರಗಣ್ಯರು. ಅವರ ಅನೇಕ ಬಿರುದುಗಳಲ್ಲಿ "ಅದ್ವೈತ ವಿದ್ಯಾಚಾರ್ಯ" ಅನ್ನುವುದೂ ಒಂದು ಬಿರುದು. "ಅಲಂಕಾರ ಶಾಸ್ತ್ರ" (Poetics) ವಿಷಯದಲ್ಲಿ ಅವರು ರಚಿಸಿರುವ "ಕುವಲಯಾನಂದ" ಒಂದು ಮೇರು ಕೃತಿ. ನಾವು ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿದ್ದಾಗ ಮೂರು-ನಾಲ್ಕು ಅಲಂಕಾರಗಳ (Figure of Speech) ಬಗ್ಗೆ ಸೂಕ್ಷ್ಮವಾಗಿ ಹೇಳಿಕೊಡುತ್ತಿದ್ದರು. ಉಪಮಾಲಂಕಾರ (Simile), ರೂಪಕಾಲಂಕಾರ (Metaphor), ಉತ್ಪ್ರೇಕ್ಷೆ (Hyperbole) ಮುಂತಾದ ಕೆಲವು. ಕುವಲಯಾನಂದ ಕೃತಿಯಲ್ಲಿ 124 ಅಲಂಕಾರಗಳ ವಿವರಣೆ ಇದೆ!

"ಕುವಲಯಾನಂದ" ಕೃತಿಗೆ "ಪೀಯೂಷವರ್ಷ ಜಯದೇವ" ರಚಿಸಿರುವ "ಚಂದ್ರಾಲೋಕ" ಎಂಬ ಹೆಸರಿನ ವ್ಯಾಖ್ಯಾನ ಇದೆ. 51ನೆಯ ಶ್ಲೋಕದಲ್ಲಿ "ಪ್ರತಿವಸ್ತು ಉಪಮಾಲಂಕಾರ" ಅನ್ನುವ ಅಲಂಕಾರದ ವರ್ಣನೆ ಇದೆ.  ಆ ಶ್ಲೋಕದ ವಿವರಣೆ ಹೀಗಿದೆ:

ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ 
ನ ಹಿ ವಂಧ್ಯಾ ವಿಜಾನಾತಿ ಗುರ್ವಿo  ಪ್ರಸವವೇದನಂ 

ಒಬ್ಬ ವಿದ್ವಾಂಸನ ಶ್ರಮವನ್ನು ಇನ್ನೊಬ್ಬ ವಿದ್ವಾಂಸ ಮಾತ್ರ ತಿಳಿಯಬಲ್ಲನು. (ಕೃತಿ ರಚನೆಯ ಕಷ್ಟವನ್ನು ಕೃತಿಗಳನ್ನು ರಚಿಸಿರುವ ಇನ್ನೊಬ್ಬನು ಮಾತ್ರ ಅರಿಯಬಲ್ಲನು). ಒಂದು ಮಗುವನ್ನೂ ಹಡೆಯದವಳಿಗೆ ಪ್ರಸವ ವೇದನೆ ಏನೆಂಬುದು ಹೇಗೆ ಗೊತ್ತು?

ಸ್ವತಃ ಅದ್ವೈತ ವಿದ್ಯಾಚಾರ್ಯರಾಗಿದ್ದರೂ ಶ್ರೀ ಅಪ್ಪಯ್ಯ ದೀಕ್ಷಿತರು ವೈಷ್ಣವ ಸಿದ್ಧಾಂತ ಸಾರಿ ಹೇಳುವ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯಂ" ಕೃತಿಗೆ ವ್ಯಾಖ್ಯಾನ ಬರೆದಿದ್ದಾರೆ. ವೇದಾಂತ ದೇಶಿಕರಿಗೆ "ಶ್ರೀ ವೈಷ್ಣವಾಚಾರ್ಯ" ಎಂದು ಬಿರುದು. ಕೃತಿ ಬರೆದವರು ಶ್ರೀವೈಷ್ಣವಾಚಾರ್ಯರು. ಅದರ ವ್ಯಾಖ್ಯಾನ ಬರೆದವರು ಅದ್ವೈತವಿದ್ಯಾಚಾರ್ಯರು. ಅದೂ ಸಮಕಾಲೀನ ಕೃತಿಯೊಂದರ ಮೇಲೆ ಬರೆದ ವ್ಯಾಖ್ಯಾನವಲ್ಲ. ಎರಡು ನೂರು ವರುಷ ಹಿಂದಿನ ಕೃತಿ. ಮೇಲೆ ಹೇಳಿದ ಪ್ರತಿವಸ್ತು ಉಪಮಾಲಂಕಾರಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಮತ್ತೆ ಎಲ್ಲಿ ಸಿಕ್ಕೀತು? 

******


ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ನೆನೆಯಬೇಕಾದ ಹೆಸರುಗಳಲ್ಲಿ ಶ್ರೀ ವೇದಾಂತ ದೇಶಿಕ ಆವರದು ಎತ್ತರದ ಹೆಸರು. ಅವರ ಕಾಲ (1268-1369) ದಕ್ಷಿಣ ಭಾರತದ ಇತಿಹಾಸದಲ್ಲಿ ಬಹಳ ಕ್ಷೋಭೆ ತುಂಬಿದ ಸಮಯ. ಅನೇಕ ಅಡೆ-ತಡೆಗಳ ನಡುವೆ ಗುದ್ದಾಡಿ, ಅನೇಕ ಸತ್ವಯುತ ಗ್ರಂಥಗಳನ್ನು ರಚಿಸಿ 101 ವರುಷದ ತುಂಬು ಜೀವನ ನಡೆಸಿದ ಮಹನೀಯರು. ಅವರ ಹೆಸರಿನ ಜೊತೆ ತಳುಕು ಹಾಕಿಕೊಂಡಿರುವ ಬಿರುದುಗಳೇ ಒಂದು ರೋಮಾಂಚನ ಮಾಡುವಂತಹ ಸರಣಿ. "ಕವಿತಾರ್ಕಿಕ ಸಿಂಹ", "ವೇದಾಂತಾಚಾರ್ಯ" ಮತ್ತು "ಸರ್ವ ತಂತ್ರ ಸ್ವತಂತ್ರ" ಎನ್ನುವುವು ಅವುಗಳಲ್ಲಿ ಕೆಲವು. ಸನ್ಯಾಸಿಗಳಾಗದೆ, ಪೀಠದ ಬಲ ಇಲ್ಲದೆ, ತಮ್ಮ ವಿದ್ವತ್ತಿನ ಕಾರಣ ಪೀಠಾಧಿಪತಿಗಳ ಮನ್ನಣೆಯನ್ನೂ ಗಳಿಸಿದ ಹಿರಿಯರು. ಶ್ರೀ ರಾಮಾನುಜಾಚಾರ್ಯ (1077-1157) ಅವರ ಒಂದು ನೂರು ವರುಷಗಳ ನಂತರ ಬಾಳಿದ ಅವರು ತಾವು ನಂಬಿದ ಸಿದ್ಧಾಂತದ ಜೊತೆಗೆ ವಿಪುಲವಾದ ಸಾಹಿತ್ಯ ಸೇವೆ ಮಾಡಿದವರು. 

ಕಾಂಚಿಪುರಂ ನಗರದ ಬಳಿಯ ತುಪ್ಪಿಲ್ ಎಂಬಲ್ಲಿ ಜನಿಸಿದ ಅವರು ತಮ್ಮ ಜೀವನದ ಮೊದಲ ಕೆಲವು ವರುಷಗಳನ್ನು ತಮಿಳುನಾಡಿನ ಕಡಲೂರು ಬಳಿಯ, ಅಲ್ಲಿಂದ ಮೂರು-ನಾಲ್ಕು ಮೈಲಿ ದೂರದ, ತಿರುವಹಿಂದ್ರಪುರಮ್ (ತಿರುವಂಡಿಪುರಂ) ಎನ್ನುವ ಸ್ಥಳದಲ್ಲಿ ಕಳೆದರಂತೆ. ಅಲ್ಲಿನ ದೇವನಾಥಸ್ವಾಮಿ ದೇವಾಲಯ ಮತ್ತು ಸಮೀಪದ ಬೆಟ್ಟದ ಮೇಲಿರುವ ಶ್ರೀಲಕ್ಷ್ಮೀ-ಹಯಗ್ರೀವ ದೇವರ ಸನ್ನಿಧಿಯಲ್ಲಿ ಇದ್ದರಂತೆ. ಶ್ರೀ ವೈಷ್ಣವ ಪಂಥದ ಅನುಯಾಯಿಗಳು ಆರಾಧಿಸುವ "108 ದಿವ್ಯದೇಶಂ" ದೇವಾಲಯಗಳಲ್ಲಿ ಇದೂ ಒಂದು. 

ದೇಶಿಕರು ಅಲ್ಲಿ ವಾಸವಿದ್ದ ಸಮಯದಲ್ಲಿ ರಚಿಸಿದ "ರಘುವೀರಗದ್ಯ" ಅವರ ಪಾಂಡಿತ್ಯಕ್ಕೂ, ಕವಿತಾ ಪ್ರೌಢಿಮೆಗೂ ಒಂದು ನಿದರ್ಶನ.  ಈಚಿನ ದಿನಗಳಲ್ಲಿ ವಾಟ್ಸಾಪ್ಪ್ ವಿಡಿಯೋಗಳಲ್ಲಿ ಅದನ್ನು ಅನೇಕರು ಹಾಡಿ ತೋರಿಸಿದ್ದಾರೆ. ಅವರಿಗಿದ್ದ "ಸರ್ವ ತಂತ್ರ ಸ್ವತಂತ್ರ" ಹೆಸರಿನ ಬಿರುದು ಕಂಡ ಗಾರೆ ಕೆಸಲದವನು ಒಬ್ಬನು "ನಿಮಗೆ ಎಲ್ಲ ವಿದ್ಯೆ ಗೊತ್ತಿದ್ದರೆ ಒಂದು ಬಾವಿ ತೋಡಿ ತೋರಿಸಿ, ನೋಡೋಣ!" ಎಂದು ಸವಾಲು ಹಾಕಿದನಂತೆ. ಅವರು ತಮ್ಮ ಕೈಯಾರೆ ಆಗ ತೋಡಿದ ಬಾವಿಯನ್ನು ಈಗಲೂ ನೋಡಬಹುದೆಂದು ಕಂಡವರು ಹೇಳುತ್ತಾರೆ. 

******

ಶ್ರೀರಂಗಂ ಕ್ಷೇತ್ರದ ವಿದ್ವಾಂಸರ ಮನವಿಯ ಮೇರೆಗೆ ದೇಶಿಕರು ಅಲ್ಲಿಗೆ ಹೋದರು. ಆ ಸಮಯದಲ್ಲಿ ದೆಹಲಿ ಸುಲ್ತಾನ ಅಲ್ಲಾಉದ್ದೀನ್ ಖಿಲ್ಜಿ ಸೇನಾಧಿಪತಿ ಮಲ್ಲಿಕಾಫರ್ ಮದುರೈ ಮತ್ತು ಶ್ರೀರಂಗಂ ಪ್ರದೇಶಗಳಲ್ಲಿ ದಂಡೆತ್ತಿ ಬಂದ. ಶ್ರೀರಂಗಂ ದೇವಾಲಯದ ಮೇಲೆ ನಡೆದ ದಾಳಿಗಳಲ್ಲಿ ಮತ್ತು ಅಲ್ಲಿನ ಐಶ್ವರ್ಯದ ಲೂಟಿಯ ಸಂದರ್ಭದಲ್ಲಿ ನೂರಾರು ಮಂದಿ ದೇವಾಲಯದ ಸಿಬ್ಬಂದಿ, ಶ್ರೀವೈಷ್ಣವ ಪಂಡಿತರು ಮತ್ತು ಭಕ್ತರನ್ನು ಮುಘಲ್ ಸೈನಿಕರು ಹತ್ಯೆಗೈದರು. ಅದರ ವಿವರಗಳನ್ನು ಕೇಳಿದರೆ ಕಣ್ಣೀರು ಬರುತ್ತದೆ. 

ಶ್ರೀ ಸುದರ್ಶನ ಸೂರಿಗಳು (ಸುದರ್ಶನ ಭಟ್ಟ ಎಂದೂ ಹೇಳುತ್ತಾರೆ) ಆಚಾರ್ಯ ರಾಮಾನುಜರ ಅನೇಕ ಗ್ರಂಥಗಳಿಗೆ ಟೀಕಾಗ್ರಂಥಗಳನ್ನು ಬರೆದಿರುವ ವಿದ್ವಾಂಸರು. ಆಚಾರ್ಯರ "ಶ್ರೀಭಾಷ್ಯ" ಗ್ರಂಥದ ಮೇಲಿನ ಅವರ "ಶ್ರುತ ಪ್ರಕಾಶಿಕಾ" ಟೀಕಾ ಗ್ರಂಥ ಬಹಳ ಹೆಸರು ಮಾಡಿರುವಂಥದು. ಸೂರಿಗಳು ತಮ್ಮ ಹತ್ಯೆಗೆ ಮೊದಲು ತಮ್ಮಲ್ಲಿದ್ದ ಅಮೂಲ್ಯ ತಾಳೆಗರಿ ಗ್ರಂಥಗಳನ್ನು ಮತ್ತು ಇಬ್ಬರು ಮಕ್ಕಳನ್ನು ವೇದಾಂತ ದೇಶಿಕರ ಕೈಗೆ ಒಪ್ಪಿಸಿದರಂತೆ. ಶ್ರುತ ಪ್ರಕಾಶಿಕಾ ಗ್ರಂಥದ ಅದೊಂದೇ ಪ್ರತಿ ಆಗ ಲಭ್ಯವಿತ್ತಂತೆ. ಆ ಅಸಂಖ್ಯ ಶವಗಳ ರಾಶಿಯಲ್ಲಿ ಈ ಗ್ರಂಥಗಳನ್ನೂ ಮತ್ತು ಆ ಎರಡು ಮಕ್ಕಳನ್ನು ಹಿಡಿದಿಟ್ಟುಕೊಂಡು ಮಲಗಿ, ಆ ಮುಘಲ್ ಸೈನಿಕರ ಆಟಾಟೋಪ ಮುಗಿದ ನಂತರ ಕರ್ನಾಟಕದ ಗಡಿಯ ಸತ್ಯಮಂಗಲ ತಲುಪಿದರಂತೆ. ನಂತರ ಮೇಲುಕೋಟೆ ತಲುಪಿ ಅವೆಲ್ಲವನ್ನೂ ಸುರಕ್ಷಿತ ಮಾಡಿದರಂತೆ. ಸುದರ್ಶನ ಸೂರಿಗಳ ಇಬ್ಬರು ಮಕ್ಕಳಿಗೆ ಉಪನಯನಾದಿಗಳನ್ನು ಮಾಡಿ ಅವರಿಗೆ ನೆಲೆ ಮಾಡಿ ಕೊಟ್ಟರಂತೆ. 

ಇಂತಹ ಅಮೂಲ್ಯ ಗ್ರಂಥಗಳನ್ನು ರಕ್ಷಿಸಿದ್ದಕ್ಕೆ ಈ ಇಬ್ಬರು ಮಹಾನ್ ವಿದ್ವಾಂಸರಿಗೆ ನಾವುಗಳು ಎಂದೂ ಋಣಿಯಾಗಿರಬೇಕು. ಮುಂದೆ ದೇಶಿಕರು ಉತ್ತರ ಭಾರತ ಪ್ರವಾಸ ಮಾಡಿ, ಅಲ್ಲಿನ ದೇವಾಲಯಗಳ ಅವಶೇಷಗಳನ್ನು ನೋಡಿ, ಶ್ರೀರಂಗಂ ಹತ್ಯಾಕಾಂಡದ ಹಿನ್ನೆಲೆಯಲ್ಲಿ "ಅಭೀತಿ ಸ್ತವ" (ಭಯದಿಂದ ಬಿಡುಗಡೆ ಸ್ತೋತ್ರ) ರಚಿಸಿದರು. ಉತ್ತರ ಭಾರತದಿಂದ ಹಿಂದಿರುಗಿದ ನಂತರ ಮತ್ತನೇಕ ಗ್ರಂಥಗಳನ್ನು ರಚಿಸಿ, ಅನೇಕ ಸಾರ್ಥಕ ಕೆಲಸಗಳನ್ನು ನಡೆಸಿದರು. ಬಂದ ಆಪತ್ತುಗಳನ್ನು ಧೈರ್ಯ ಮತ್ತು ಯುಕ್ತಿಗಳಿಂದ ಎದುರಿಸಿ, ಅನೇಕ ಗ್ರಂಥ ರಚನೆ ಮಾಡಿ, ಹಲವಾರು ಶಿಷ್ಯರನ್ನು ಸಂಪಾದಿಸಿ ದೇಶಿಕರು ಕೀರ್ತಿಶೇಷರಾದರು. 
******

ಶ್ರೀಕೃಷ್ಣನ ಜೀವನದ ವಿವರಗಳನ್ನು ಕೊಡುವ ಗ್ರಂಥಗಳಲ್ಲಿ ನಮಗೆ ಹತ್ತಿರವಾದದ್ದು ಶ್ರೀಮದ್ ಭಾಗವತ. ಮಹಾಭಾರತದಲ್ಲಿಯೂ ಮತ್ತು ಇತರ ಗ್ರಂಥಗಳಲ್ಲಿಯೂ ಅಲ್ಲಲ್ಲಿ ಕೆಲವು ವಿವರಗಳು ಸಿಕ್ಕರೂ ಸಮಗ್ರ ಮಾಹಿತಿ ದೊರೆಯುವುದು ಭಾಗವತದಲ್ಲಿಯೇ. ಭಾಗವತವು "ಪುರಾಣ" ಎಂದು ವರ್ಗಿಕೃತವಾಗುತ್ತದೆ. ಹದಿನೆಂಟು ಪುರಾಣಗಳಲ್ಲಿ ಅದು ಒಂದು. ಸಂಸ್ಕೃತ ಮಹಾಕಾವ್ಯಗಳ ಲೆಕ್ಕದಲ್ಲಿ ನೋಡುವುದಾದರೆ ಮಾಘ ಕವಿಯ "ಶಿಶುಪಾಲ ವಧ" ಇಂತಹ ಒಂದು ಮಹಾಕಾವ್ಯ. ಇದನ್ನು ಪಂಚಮಹಾಕಾವ್ಯಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. 

ಶ್ರೀಕೃಷ್ಣನು ವೈಷ್ಣವ ಸಿದ್ಧಾಂತಗಳಲ್ಲಿ ಪರದೈವ. ಹೀಗೆ ಅವನನ್ನು ನಾಯಕನನ್ನಾಗಿ ಮಾಡಿಕೊಂಡು ರಚಿಸಿದ ಕಾವ್ಯಗಳ ಸಾಲಿನಲ್ಲಿ ಎರಡು ಕಾವ್ಯಗಳು ಗಮನ ಸೆಳೆಯುತ್ತವೆ. ಮೊದಲನೆಯದು ಹದಿನಾಲ್ಕನೆಯ ಶತಮಾನದ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ". ಇದು ಶ್ರೀವೈಷ್ಣವ ಸಿದ್ಧಾಂತದ ಪ್ರಮೇಯಗಳನ್ನು ಒಳಗೊಂಡ ಕಾವ್ಯ. ನಂತರದ್ದು ಹದಿನಾರನೆಯ ಶತಮಾನದ ಉಡುಪಿಯ ಎಂಟು ಮಠಗಳಲ್ಲಿ ಒಂದಾದ ಸೋದೆ ಮಠದ ಶ್ರೀ ವಾದಿರಾಜ ತೀರ್ಥ ಅವರು ರಚಿಸಿರುವ "ಶ್ರೀ ರುಕ್ಮಿಣೀಶ ವಿಜಯ". ಇದರಲ್ಲಿ ಮಧ್ವ ಸಿದ್ಧಾಂತದ ಪ್ರಮೇಯಗಳನ್ನು ಕಾಣಬಹುದು.

ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ" 24 ಸರ್ಗಗಳಲ್ಲಿ ಹರಡಿಕೊಂಡಿರುವ ಮಹಾಕಾವ್ಯ. ನವರಸಗಳನ್ನು, ಅನೇಕ ಸ್ತೋತ್ರಗಳನ್ನೂ ಒಡಗೊಂಡಿದೆ. ದೇವಕಿಯ ಗರ್ಭವಾಸ್ಥೆಯಿಂದ ಪ್ರಾರಂಭವಾಗಿ, ಶ್ರೀಕೃಷ್ಣನ ಜೀವಿತದ ಎಲ್ಲ ಹಂತಗಳ ವಿವರಣೆ ಇದರಲ್ಲಿದೆ. ದೇಶಿಕರ ಪಾಂಡಿತ್ಯ ಮತ್ತು ಕೃಷ್ಣ ಭಕ್ತಿ, ಎರಡನ್ನೂ ಬೆಸೆದು ರಚಿಸಿರುವ ಕೃತಿ. 

ಶ್ರೀ ಅಪ್ಪಯ್ಯ ದೀಕ್ಷಿತರು ಈ ಯಾದವಾಭ್ಯುದಯ ಕೃತಿ ರಚನೆಯ ಸುಮಾರು ಎರಡು ನೂರು ವರುಷ ಕಳೆದ ನಂತರ ಇದಕ್ಕೆ ವ್ಯಾಖ್ಯಾನ ರಚಿಸಿದ್ದಾರೆ. ಪ್ರತಿಗಳು ಸುಲಭವಾಗಿ ಲಭ್ಯವಿವೆ. ಆಸಕ್ತರು ಓದಿ ಆನಂದಿಸಬಹುದು.

ಶ್ರೀ ವಾದಿರಾಜ ಯತಿಗಳ "ರುಕ್ಮಿಣೀಶ ವಿಜಯ" ಕೃತಿಯ ಬಗ್ಗೆ ಮತ್ತೊಮ್ಮೆ ನೋಡೋಣ.

*****

ಒಂದು ಹಣ್ಣಿನ ತೋಟವಿದೆ. ಅದರಲ್ಲಿ ಅನೇಕ ಹಣ್ಣು ಕೊಡುವ ಮರಗಳಿವೆ. ಒಬ್ಬೊಬ್ಬರಿಗೆ ಒಂದೊಂದು ಹಣ್ಣಿನ ಮೇಲೆ ಪ್ರೀತಿ. ಯಾವ ಹಣ್ಣು ತೆಗೆದುಕೊಳ್ಳಬೇಕು ಅನ್ನುವುದು ಅವರವರ ಇಷ್ಟ. ಎಲ್ಲರಿಗೂ ಒಂದೇ ಹಣ್ಣು ಪ್ರಿಯವಾಗಬೇಕು ಎಂದಿಲ್ಲ. 

ಎಲ್ಲ ಹಣ್ಣುಗಳ ಬಗ್ಗೆ ತಿಳಿದುಕೊಂಡು ಕಡೆಗೆ ನಮಗೆ ಯಾವುದು ಪ್ರಿಯ ಎಂದು ನಿರ್ಧರಿಸಬಹುದು. ನಮ್ಮಲ್ಲಿ ಬಹುತೇಕರು ಮಾಡುವುದು ಏನು? ಮೊದಲಿನಿಂದಲೂ ನಮ್ಮ ಮನೆಯಲ್ಲಿ ಹೀಗೆ ಬಂದಿದೆ. ಆದ್ದರಿಂದ ಅದೇ ಒಳ್ಳೆಯ ಹಣ್ಣು ಎಂಬುದು. ಇರಬಹುದು. ಆದರೆ ಮತ್ತೊಬ್ಬರು ಅವರಿಗೆ ಬೇಕಾದ ಹಣ್ಣು ತಿನ್ನಲಿ. ಅದಕ್ಕೆ ನಮ್ಮ ನಿರ್ಬಂಧವಿಲ್ಲ. 

ಭಾರತೀಯ ತತ್ವಶಾಸ್ತ್ರ ಸಹ ಈ ಹಣ್ಣಿನ ತೋಟದಂತೆ. ನಾವು ನಮ್ಮ ನಮ್ಮ ಮನೆಗಳಲ್ಲಿ ಯಾವ ಆಚರಣೆ ಮಾಡುತ್ತೇವೆ ಅನ್ನುವುದು ನಮಗೆ ಬಿಟ್ಟದ್ದು. ಹಾಗೆ ಅಂದಮಾತ್ರಕ್ಕೆ ಎಲ್ಲರೂ ಅದೇ ಆಚರಣೆ ನಡೆಸಬೇಕು ಎಂದಲ್ಲ. 

ಇಷ್ಟು ತಿಳಿದರೆ ಸಾಮರಸ್ಯ ಮೂಡುವುದು. ವಿಜಯೀoದ್ರರೂ, ಅಪ್ಪಯ್ಯ ದೀಕ್ಷಿತರೂ ಹೀಗಿದ್ದವರು. ಆದ ಕಾರಣ ಪ್ರಬಲ ಅಭಿಪ್ರಾಯ ಭೇದ ಇದ್ದ ಕಡೆಯಲ್ಲಿಯೂ ಸಾಮರಸ್ಯ ಸಾಧ್ಯ ಆಗಿತ್ತು. ನಾವು ಇಷ್ಟು ತಿಳಿದರೆ ಸಾಕು.

Monday, March 30, 2026

ಅಕ್ಷಯ ತೃತೀಯಾ ಗಂಧ ಲೇಪನ

 

ಇನ್ನು ಕೆಲವೇ ದಿನಗಳಲ್ಲಿ "ಅಕ್ಷಯ ತೃತೀಯಾ" ಬರುವುದಿದೆ. ಪ್ರತಿ ವರ್ಷ ವೈಶಾಖ ಮಾಸದ ಮೂರನೆಯ ದಿನ (ವೈಶಾಖ ಶುಕ್ಲ ತೃತೀಯ) ಒಂದು ವಿಶೇಷವಾದ ದಿನ. ಆ ದಿನವನ್ನು ಒಂದು "ಸ್ವಯಂ ಸಿದ್ಧ ಮುಹೂರ್ತ" ಎಂದು ತಿಳಿದು ಅದಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಆ ದಿನ ಮಂತ್ರಾಲಯದಲ್ಲಿರುವ ಶ್ರೀ ಗುರು ರಾಘವೇಂದ್ರ ರಾಯರ ಮೂಲ ಬೃಂದಾವನ ಮತ್ತು ದೇಶದ ವಿವಿಧ ಕಡೆಗಳಲ್ಲಿ ಇರುವ "ಮೃತ್ತಿಕಾ ಬೃಂದಾವನ" (ಈಗ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿಯೂ ಉಂಟು. ಅಮೇರಿಕ ಸಂಯುಕ್ತ ಸಂಸ್ಥಾನ (USA) ಒಂದರಲ್ಲಿಯೇ ಹನ್ನೆರಡು ಇಂತಹ ಬೃಂದಾವನಗಳಿವೆಯಂತೆ) ಇವುಗಳನ್ನು ಶ್ರೀಗಂಧ ಲೇಪನದಿಂದ ಅಲಂಕರಿಸಲಾಗುತ್ತದೆ. ಇದೊಂದು ವಿಶೇಷ ಸೇವೆ. ಅಂದು ಭಕ್ತಾದಿಗಳು ಸರತಿಯಲ್ಲಿ ಕಾದಿದ್ದು ದರ್ಶನ ಪಡೆಯುತ್ತಾರೆ. 

ಅಕ್ಷಯ ತೃತೀಯಾ ದಿನದಂದು ಹೀಗೆ ವೃಂದಾವನಕ್ಕೆ ಗಂಧ ಲೇಪನ ಏಕೆ ಮಾಡುತ್ತಾರೆ? ಹೀಗೆ ಪ್ರಶ್ನೆ ಮಾಡಿದರೆ ಅನೇಕ ವೇಳೆ ಸರಿಯಾದ ಉತ್ತರ ಬರುವುದಿಲ್ಲ. "ಬೇಸಿಗೆ ಕಾಲ. ಆದ್ದರಿಂದ ತಂಪಾಗಿರಲಿ ಎಂದು ಹೀಗೆ ಮಾಡುತ್ತಾರೆ" ಅನ್ನುವುದು ಸಾಮಾನ್ಯ ಉತ್ತರ. ಹಾಗಿದ್ದರೆ, ಎರಡು-ಮೂರು ತಿಂಗಳ ಕಾಲ ಕಡು ಬೇಸಿಗೆ ಇರುತ್ತದೆ. ಅದರಲ್ಲಿ ಈ ದಿನವನ್ನೇ ಏಕೆ ಆರಿಸಿಕೊಂಡರು? ಬಾಕಿ ದಿನ ಬೇಸಗೆಯ ಬೇಗೆ ಇಲ್ಲವೇ? ಆಗಾಗ ಏಕೆ ಮಾಡುವುದಿಲ್ಲ? ಇವೆಲ್ಲಾ ಸಾಧುವಾದ ಪ್ರಶ್ನೆಗಳೇ. ಅಕ್ಷಯ ತೃತೀಯ ಹನ್ನೆರಡು ತಿಂಗಳ ಮಧ್ಯದಲ್ಲಿ ಬರುವ ಒಂದು ದಿನ. ಅದು ಹೇಗೆ "ಸ್ವಯಂ ಸಿದ್ಧ ಮುಹೂರ್ತ" ಆಯಿತು? ಅದಕ್ಕೆ ಅಂತಹ ವಿಶೇಷವೇನು? ಇದೂ ಸಹ ಯೋಚಿಸಬೇಕಾದ ವಿಷಯವೇ. 

*****

ಪ್ರತಿ ಸಂವತ್ಸರದ ಪ್ರಾರಂಭದ ದಿನ ಯುಗಾದಿ. ಅದು ಕಾಲಮಾನದ ಲೆಕ್ಕದ ಪ್ರಾರಂಭ. ಹೀಗಾಗಿ ಅದೊಂದು ಸ್ವಯಂ ಸಿದ್ಧ ಮುಹೂರ್ತ ಆಯಿತು. ವಿಜಯದಶಮಿ ವಿಶೇಷ ಎಲ್ಲರಿಗೂ ಗೊತ್ತಿರುವುದೇ. ಅದೂ ಸರಿ. ಬಲಿಪಾಡ್ಯಮಿ ಅರ್ಧ ದಿನವೂ ಒಂದು ವಿಶೇಷವೇ. ಅಂದು ಬಲಿಯಿಂದ ವಾಮನನು ಮೂರು ಲೋಕಗಳ ಅಧಿಪತ್ಯವನ್ನು ಕಸಿದುಕೊಂಡು ದೇವೇಂದ್ರನಿಗೆ ಹಿಂದಿರುಗಿಸಿದನು. ಇದರ ವಿವರಗಳಿಗೆ ಸಂಬಂಧಿಸಿದ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಆದರೆ ಈ ಅಕ್ಷಯ ತೃತೀಯ ಹೇಗೆ ವಿಶೇಷ? 

ಚತುರ್ಮುಖ ಬ್ರಹ್ಮ ದೇವರು ತಮ್ಮ ಸೃಷ್ಟಿಕಾರ್ಯ ಪ್ರಾರಂಭ ಮಾಡಿದ ದಿನ ಅಕ್ಷಯ ತೃತೀಯಾ. ಯುಗಾದಿ ಕಾಲಮಾನದ ಲೆಕ್ಕದ ಕಾರಣ ಮುಖ್ಯವಾದರೆ ಅಕ್ಷಯ ತೃತೀಯಾ ಸೃಷ್ಟಿಯ ಪ್ರಾರಂಭವಾದದ್ದರಿಂದ ವಿಶೇಷವಾಯಿತು. ಅದೂ ಒಂದು ಸ್ವಯಂ ಸಿದ್ಧ ಮುಹೂರ್ತ ಆಯಿತು. ಯಾವುದೇ ಕೆಲಸ ಪ್ರಾರಂಭ ಮಾಡಲು, ಮತ್ತು ಮುಖ್ಯವಾದ ಕಾರ್ಯಗಳನ್ನು ಮಾಡಲು ದಿನ ಶುದ್ದಿ ನೋಡಿ ಒಳ್ಳೆಯ ಸಮಯ ನಿರ್ಧರಿಸುವ ಪರಿಪಾಠ ಇದೆ. ಆದರೆ ಈ ನಾಲ್ಕು ದಿನಗಳಲ್ಲಿ ಅವುಗಳ ಅವಶ್ಯಕತೆ ಇಲ್ಲ ಎಂದು ನಂಬುತ್ತಾರೆ. 

ಅಕ್ಷಯ ತೃತೀಯಾ ದಿನದಂದು ಮಾಡಿದ ಒಳ್ಳೆಯ ಕೆಲಸಗಳಿಗೆ (ದಾನ, ಜಪ, ತಪ ಮುಂತಾದುವು) ಹೆಚ್ಚಿನ ಫಲ ಎಂದು ನಂಬಿಕೆ. ಆದರೆ ಈಗ ಅದೊಂದು "ಮಾರಾಟ ಮಾಡುವ ಮೋಡಿ" ಆಗಿದೆ. ಇದರ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

*****

ಶ್ರೀ ವೈಕುಂಠದ ದ್ವಾರ ಪಾಲಕರಾದ ಜಯ-ವಿಜಯರು ಸನಕ-ಸನಂದನಾದಿಗಳಿಗೆ ಶ್ರೀಮನ್ನಾರಾಯಣನ ದರ್ಶನಕ್ಕೆ ಅಡ್ಡಿ ಮಾಡಿದ ಕಾರಣದಿಂದ ಶಾಪಕ್ಕೊಳಗಾದ ಕಥೆ ಎಲ್ಲರಿಗೂ ಗೊತ್ತು. ಆ ಕಾರಣದಿಂದ ಅವರು ಮೂರು ಅಸುರ ಜನ್ಮ ಪಡೆದರು. ಶ್ರೀಹರಿಯ ಹೇಳಿಕೆಯ ಅನುಸಾರ ಅವನೇ ಮೂರು ಅವತಾರ ತೆಗೆದು ಅವರ ವಧೆ ಮಾಡಿ ಅವರ ಶಾಪ ವಿಮೋಚನೆ ಮಾಡಿದನು. 

ಮೊದಲಿಗೆ ಅವರು ಹಿರಣ್ಯಾಕ್ಷ-ಹಿರಣ್ಯಕಶಿಪು ಆಗಿ ಒಂದೇ ತಾಯಿ ದಿತಿಯ ಅವಳಿ ಮಕ್ಕಳಾಗಿ ಹುಟ್ಟಿದರು. ಎರಡನೆಯ ಬಾರಿ ಒಂದೇ ತಾಯಿ ಕೈಕಸೆಯ ಬೇರೆ ಬೇರೆ ಇಬ್ಬರು ಮಕ್ಕಳು ರಾವಣ-ಕುಂಭಕರ್ಣ ಆಗಿ ಹುಟ್ಟಿದರು. ಮೂರನೆಯ ಸಾರಿ ಅಕ್ಕ-ತಂಗಿಯರ ಮಕ್ಕಳು (ಶ್ರುತದೇವೆ ಮತ್ತು ಶ್ರುತಶ್ರವೆ - ವಸುದೇವನ ತಂಗಿಯರು) ಶಿಶುಪಾಲ-ದಂತವಕ್ತ್ರ ಆಗಿ ಹುಟ್ಟಿದರು. ಕ್ರಮವಾಗಿ ಮೊದಲಿಗೆ ವರಾಹ-ನರಸಿಂಹ ಎಂಬ ಎರಡು ರೂಪ, ಎರಡನೆಯದಾಗಿ ಶ್ರೀರಾಮ ರೂಪ ಮತ್ತು ಕಡೆಯದಾಗಿ ಶ್ರೀಕೃಷ್ಣ ರೂಪದಿಂದ ಅವರ ನಿಗ್ರಹವನ್ನು ಶ್ರೀಹರಿಯು ಮಾಡಿದನು. 

ಅವಳಿ ಮಕ್ಕಳಲ್ಲಿ ಲೋಕಾರೂಢಿಯಂತೆ ಮೊದಲು ತಾಯಿಯ ಗರ್ಭದಿಂದ ಬಂದವನು ಅಣ್ಣ ಎಂದೂ, ನಂತರ ಜನಿಸಿದವನು ತಮ್ಮ ಎಂದೂ ವ್ಯವಹರಿಸುತ್ತಾರೆ. ಆದರೆ ನಂತರ ಹುಟ್ಟಿದವನ ಗರ್ಭಧಾರಣೆ ಮೊದಲು ಆಗಿರುತ್ತದೆ. ಮೊದಲು ಜನಿಸಿದವನ ಗರ್ಭಧಾರಣೆ ಆಮೇಲೆ ಆಗಿರುತ್ತದೆ. ಈ ಕಾರಣದಿಂದ ವಾಸ್ತವವಾಗಿ ಹಿರಣ್ಯ ಕಷಿಪು ನಂತರ ಹುಟ್ಟಿದರೂ ಅಣ್ಣನು. ಹಿರಣ್ಯಾಕ್ಷನು ಮೊದಲು ಜನಿಸಿದರೂ ತಮ್ಮ. ಇದು ಸೂಕ್ಷ್ಮವಾದ ವಾಸ್ತವ. ಶ್ರೀಹರಿಯು ಮೊದಲು ವರಾಹರೂಪದಿಂದ ಹಿರಣ್ಯಾಕ್ಷನನ್ನೂ, ನಂತರ ನರಸಿಂಹ ರೂಪದಿಂದ ಹಿರಣ್ಯಕಶಿಪುವನ್ನೂ ಸಂಹರಿಸಿದನು. 

*****

ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದನನ್ನು ತಂದೆಯು ಬಹಳವಾಗಿ ಹಿಂಸಿಸಿದನು. ಪ್ರಹ್ಲಾದನು ಶ್ರೀಹರಿಯನ್ನು ಬಲವಾಗಿ ನಂಬಿ ಎಲ್ಲ ತೊಂದರೆಗಳನ್ನೂ ಧೈರ್ಯವಾಗಿ ಎದುರಿಸಿದನು. ಕಡೆಗೆ ನರಸಿಂಹರೂಪದಿಂದ ಹಿರಣ್ಯನ ಸಂಹಾರವಾಯಿತು. ನರಸಿಂಹನ ಸ್ತುತಿ ಮಾಡಿದ ಬಾಲಕ ಪ್ರಹ್ಲಾದನು ವರಾಹ ಮತ್ತು ನರಸಿಂಹ ರೂಪ ಎರಡನ್ನೂ ಒಟ್ಟಿಗೆ ನೋಡಬೇಕೆಂದು ಶ್ರೀಹರಿಯನ್ನು ಪ್ರಾರ್ಥಿಸಿದನು. ಆಗ ಶ್ರೀಹರಿಯು ಎರಡು ರೂಪಗಳನ್ನೂ ಒಟ್ಟಿಗೆ ತೋರಿಸಿದನಂತೆ. ಸಾಮಾನ್ಯವಾಗಿ ಕೆಲವೇ ಕೆಲವು ವರಾಹ ರೂಪಿ ಶ್ರೀಹರಿಯ ದೇವಾಲಯಗಳು ಉಂಟು. ನರಸಿಂಹ ರೂಪಿ ಶ್ರೀಹರಿಯ ದೇವಾಲಯಗಳು ಅನೇಕ. ಆದರೆ, ಶ್ರೀವರಾಹ-ನರಸಿಂಹ ರೂಪಿ ಶ್ರೀಹರಿಯ ದೇವಾಲಯ ಒಂದಾಗಿ ಇರುವುದು ಒಂದೇ ಕಡೆ.  ಅದು ಆಂಧ್ರ ಪ್ರದೇಶದ ಸಿಂಹಾಚಲದಲ್ಲಿ. 

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರದ ಉತ್ತರಭಾಗದಲ್ಲಿ "ಸಿಂಹಾಚಲ ಪರ್ವತ ಶ್ರೇಣಿ" ಇದೆ. ಈ ಬೆಟ್ಟ ಪ್ರದೇಶದಲ್ಲಿ ಸಿಂಹಾಚಲ ವರಾಹ-ಲಕ್ಷ್ಮಿನರಸಿಂಹ ದೇವಾಲಯವಿದೆ. ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಿಂದ ಸುಮಾರು ಇಪ್ಪತ್ತು ಕಿಲೋಮೀಟರು ದೂರ. ಈಗ ಈ ಭಾಗ ನಗರದಲ್ಲಿಯೇ ಸೇರಿಹೋದಂತಿದೆ. ಮೇಲಿನ ಚಿತ್ರದಲ್ಲಿ ಕಾಡಿನ ಮಧ್ಯೆ ಇರುವ ದೇವಾಲಯವನ್ನು ನೋಡಬಹುದು. 

ಈ ದೇವಾಲಯದಲ್ಲಿ ಒಂದು ವಿಶೇಷ. ಇಬ್ಬರು ರಕ್ಕಸರನ್ನು ಸಂಹರಿಸಿದ ಶ್ರೀಹರಿಯು ಆ ಸಮಯದಲ್ಲಿ ಅತಿ ಉಗ್ರ ರೂಪವನ್ನು ಧಾರಣೆ ಮಾಡಿದ್ದನಂತೆ. ಆ ರೂಪಗಳನ್ನು ನೋಡಲು ದೇವತೆಗಳಿಗೂ ಅಸಾಧ್ಯವಾಗಿತ್ತಂತೆ. ನೇರವಾಗಿ ನೋಡಲು ಕಷ್ಟವಾದ ತೇಜೋಮೂರ್ತಿಗಳ ಸಂಗಮ. ಅತಿ ಉಗ್ರ ರೂಪ. ಬಾಲಕ ಪ್ರಹ್ಲಾದನು ಭಯವಿಲ್ಲದೆ ನೋಡಿದ ಮಹಾನುಭಾವ. ಅವನಿಗೆ ಈ ಉಗ್ರರೂಪಗಳ ಶ್ರೀಹರಿಯೂ, ಸೌಮ್ಯ ರೂಪಿ ಶ್ರೀಹರಿಯೂ ಒಂದೇ!

*****


ಪುರಾತನವಾದ ಈ ದೇವಸ್ಥಾನ ಕಾಡಿನಲ್ಲಿ ಮುಚ್ಚಿಹೋಗಿತ್ತಂತೆ. ಅದನ್ನು ಚಂದ್ರನ ಮೊಮ್ಮಗ, ಬುಧ-ಇಳಾ ದಂಪತಿಯರ ಮಗನಾದ ಪುರೂರವ ಮತ್ತು ಊರ್ವಶಿಯರು (ನಹುಷನ ತಂದೆ ಮತ್ತು ಯಯಾತಿಯ ತಾತ) ಪುನಃ ಜನರಿಗೆ ದರ್ಶನ ಸಿಗುವಂತೆ ಮಾಡಿದರು ಎಂದು ಸ್ಥಳ ಪುರಾಣ ಹೇಳುತ್ತದೆ. ಈ ದೇವಳದಲ್ಲಿ ಹದಿನಾರು ಕಂಭಗಳ ನಾಟ್ಯಮಂಟಪ ಮತ್ತು ತೊಂಬತ್ತಾರು ಕಂಭಗಳ ಕಲ್ಯಾಣ ಮಂಟಪ ಉಂಟು. 

ಉಗ್ರ ವರಾಹ-ಲಕ್ಷ್ಮೀನರಸಿಂಹ ವಿಗ್ರಹವನ್ನು ವರುಷದ ಒಂದು ದಿನ ಬಿಟ್ಟು, ಬಾಕಿ ಎಲ್ಲಾ ದಿನಗಳಲ್ಲೂ ಶ್ರೀಗಂಧ ಲೇಪನದಿಂದ ಮುಚ್ಚಿರುತ್ತಾರೆ. ಈ ಕಾರಣದಿಂದ ಅದು ಒಂದು ದೊಡ್ಡ ಶಿವಲಿಂಗ ಇರುವಂತೆ ಕಾಣುತ್ತದೆ. ಆ ಗಂಧದಿಂದ ತುಂಬಿದ ಮೂರ್ತಿಯ ಮೇಲೆ ನಾಮ, ಕಣ್ಣು, ಮೂಗು, ಮುಂತಾದುವನ್ನು ಅಂಟಿಸಿ ಅರ್ಚಿಸುತ್ತಾರೆ. ದರ್ಶನಕ್ಕೆ ಬಂದ ಭಕ್ತರಿಗೆ ಕಾಣುವ ಮೂರ್ತಿಯು ಮೇಲಿನ ಚಿತ್ರದಂತೆ ಇರುತ್ತದೆ. 

ವರುಷದ ಒಂದು ದಿನ ಮಾತ್ರ, ಅಕ್ಷಯ ತೃತೀಯಾ ದಿನದಂದು, ಈ ಗಂಧ ಲೇಪನ ಎಲ್ಲವನ್ನೂ ತೆಗೆದು ಮೂಲ ವಿಗ್ರಹವನ್ನು ನೋಡಲು ಅವಕಾಶ ಮಾಡಿಕೊಡುತ್ತಾರೆ. ಆ ದಿನವೂ ವಿಗ್ರಹವನ್ನು ನೇರವಾಗಿ ನೋಡಿದರೆ ಕಣ್ಣುಗಳು ಉರಿಯುತ್ತವೆ ಮತ್ತು ರಕ್ತ ಬರುತ್ತದೆ ಎಂದು ನಂಬಿಕೆ. ಆದ ಕಾರಣ ಅಕ್ಷಯ ತೃತೀಯಾ ದಿನದಂದು ಮೂಲ ವಿಗ್ರಹದ ಮುಂದೆ ಒಂದು ಅತಿ ತೆಳುವಾದ ಪರದೆ ಇರುತ್ತದೆ. ಈ ಪರದೆಯ ಮೂಲಕ ವಿಗ್ರಹ ಚೆನ್ನಾಗಿ ಕಾಣುತ್ತದಂತೆ. ಅಂದು ದರ್ಶನ ಪಡೆಯಲು ಜನಜಂಗುಳಿ. ತಿರುಪತಿಯ ಶ್ರೀನಿವಾಸನ ದರ್ಶನದಂತೆ ದರ್ಶನ ಬಲು ಕಠಿಣವಂತೆ. ದರ್ಶನ ಸಿಕ್ಕರೆ ಸಿಗಬಹುದು. ಇಲ್ಲದಿದ್ದರೆ ಇಲ್ಲ. ಹೀಗೆಂದು ನೋಡಿ ಬಂದ  ಮಹಾನುಭಾವರು ಹೇಳುತ್ತಾರೆ. 

*****

ಪರಮಾತ್ಮನಿಗೆ ಅರ್ಪಿಸಿದ ಪ್ರತಿಯೊಂದು ಪದಾರ್ಥವೂ ಪೂಜ್ಯವೇ. ಪೂಜೆಯ ನಂತರ ಅವು ಪ್ರಸಾದವೇ. ಹೀಗಾಗಿ ಅವಕ್ಕೆ ಹೆಚ್ಚಿನ ಮಹತ್ವವುಂಟು. ನಾವು ಸಾಮಾನ್ಯವಾಗಿ ತಿಳಿದಂತೆ ಹಣ್ಣು-ಹಂಪಲು, ತಿಂಡಿ-ಆಹಾರ ಪದಾರ್ಥಗಳು ಮಾತ್ರ ಪ್ರಸಾದ ಅಲ್ಲ. ಹೂವು-ತುಲಸಿಗಳೂ ಪ್ರಸಾದವೇ. ಪೂಜೆಯ ವೇಳೆ ಕೊಟ್ಟ ವಸ್ತ್ರವೂ ಪ್ರಸಾದವಾಗಿ "ಶೇಷ ವಸ್ತ್ರ" ಎಂದು ಉಪಯೋಗ ಆಯಿತು. ಧೂಪಕ್ಕೆ ಉಪಯೋಗಿಸಿದ ಕೆಂಡವು ಆರಿದ ಬಳಿಕ ಇಜ್ಜಲಾಯಿತು. ಅದೂ ಪ್ರಸಾದ ಆದುದರಿಂದ ಹಣೆಯಲ್ಲಿ ಅಂಗಾರ ಆಗಿ ಸ್ವೀಕಾರ ಆಯಿತು. ತಿಂಡಿ-ತಿನಿಸುಗಳು, ಹಣ್ಣು-ಹಂಪಲುಗಳು ಸೇವನೆಗೆ ಯೋಗ್ಯ ಪರಮ ಪ್ರಸಾದ ಆಯಿತು. ಹೀಗೆ ಅವುಗಳ ಪೂಜ್ಯತೆ. 

ಪೂಜೆಗೆ ಗಂಧ ತೆಗೆದು ಅರ್ಪಿಸಿದ್ದಾಯಿತು. ಅದರಲ್ಲಿ ಮಿಕ್ಕಿದ್ದು ಹೀಗೆಯೇ ಪ್ರಸಾದ ಆಯಿತು. ನಮ್ಮ ದೇಹದ ಮೇಲೆ ಹಚ್ಚಿಕೊಳ್ಳುವುದಾಯಿತು. ಅದೇ ಪ್ರಸಾದ ಆದಮೇಲೆ ಅವನ ವಿಗ್ರಹದ ಮೇಲೆ ಏರಿಸಿದ ಗಂಧ ದೊಡ್ಡ ಪ್ರಸಾದ ಎಂದು ಬೇರೆ ಹೇಳಬೇಕಾಗಿಲ್ಲ. ಪ್ರಹ್ಲಾದರಾಜರು ಅವನ್ನು ಪ್ರಸಾದರೂಪದಲ್ಲಿ ಧರಿಸಿದರಂತೆ. 

ಇದೇ ಪ್ರಹ್ಲಾದರಾಜರು ಈಗ ಶ್ರೀ ರಾಘವೇಂದ್ರ ರಾಯರಾಗಿ ಮಂತ್ರಾಲಯದಲ್ಲಿ ವೃಂದಾವನದಲ್ಲಿ ಕುಳಿತಿದ್ದಾರೆ ಎಂದು ನಂಬಿಕೆ. ಅದೇ ಭಾವ ಮೃತ್ತಿಕಾ ವೃಂದಾವನಗಳಲ್ಲಿಯೂ ಉಂಟು. "ಅಂಥ  ಇಂಥವರಲ್ಲ" ಅನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಇದನ್ನು ನೋಡಿದ್ದೇವೆ. (ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು). ಈ ಕಾರಣ ಅಕ್ಷಯ ತೃತೀಯಾ ದಿನದಂದು ಸಿಂಹಾಚಲ ಶ್ರೀ ವರಾಹ-ಲಕ್ಷ್ಮಿ ನರಸಿಂಹನ ದೇವಾಲಯದಲ್ಲಿ ಮೂಲ ಮೂರ್ತಿಗೆ ಗಂಧವಿಲ್ಲದ ದಿನ ಇಲ್ಲಿ ಶ್ರೀ ರಾಯರ ವೃಂದಾವನಕ್ಕೆ ಅವನ ಪ್ರಸಾದ ರೂಪದ ಗಂಧ ಲೇಪನ. ವರುಷದ ಎಲ್ಲ ದಿನ ಅಲ್ಲಿ ಅವನಿಗೆ ಗಂಧ ಲೇಪನ ಮತ್ತು ಭಕ್ತರಿಗೆ ಹಾಗೆ ದರ್ಶನ. ಅವನಿಗೆ ಹೀಗೆ ಗಂಧವಿಲ್ಲದ ಒಂದು ದಿನ ಇಲ್ಲಿ ಶ್ರೀ ರಾಯರಿಗೆ ಅವನ ಪ್ರಸಾದರೂಪದ ಗಂಧ ಲೇಪನ ಮತ್ತು ಭಕ್ತರಿಗೆ ಹೀಗೆ ದರ್ಶನ. ಮಾರನೆಯ ದಿನ ವೃಂದಾವನದ ಮೇಲಿರುವ ಗಂಧ ಶ್ರೀ ರಾಯರ ಪ್ರಸಾದ. ಅದಕ್ಕೆ ಬಹಳ ಗೌರವ ಮತ್ತು ಬೆಲೆ. ಹೀಗೆ ನಡೆಯುತ್ತಿದೆ!