Showing posts with label Akshaya Tritiya. Show all posts
Showing posts with label Akshaya Tritiya. Show all posts

Monday, March 30, 2026

ಅಕ್ಷಯ ತೃತೀಯಾ ಗಂಧ ಲೇಪನ

 

ಇನ್ನು ಕೆಲವೇ ದಿನಗಳಲ್ಲಿ "ಅಕ್ಷಯ ತೃತೀಯಾ" ಬರುವುದಿದೆ. ಪ್ರತಿ ವರ್ಷ ವೈಶಾಖ ಮಾಸದ ಮೂರನೆಯ ದಿನ (ವೈಶಾಖ ಶುಕ್ಲ ತೃತೀಯ) ಒಂದು ವಿಶೇಷವಾದ ದಿನ. ಆ ದಿನವನ್ನು ಒಂದು "ಸ್ವಯಂ ಸಿದ್ಧ ಮುಹೂರ್ತ" ಎಂದು ತಿಳಿದು ಅದಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಆ ದಿನ ಮಂತ್ರಾಲಯದಲ್ಲಿರುವ ಶ್ರೀ ಗುರು ರಾಘವೇಂದ್ರ ರಾಯರ ಮೂಲ ಬೃಂದಾವನ ಮತ್ತು ದೇಶದ ವಿವಿಧ ಕಡೆಗಳಲ್ಲಿ ಇರುವ "ಮೃತ್ತಿಕಾ ಬೃಂದಾವನ" (ಈಗ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿಯೂ ಉಂಟು. ಅಮೇರಿಕ ಸಂಯುಕ್ತ ಸಂಸ್ಥಾನ (USA) ಒಂದರಲ್ಲಿಯೇ ಹನ್ನೆರಡು ಇಂತಹ ಬೃಂದಾವನಗಳಿವೆಯಂತೆ) ಇವುಗಳನ್ನು ಶ್ರೀಗಂಧ ಲೇಪನದಿಂದ ಅಲಂಕರಿಸಲಾಗುತ್ತದೆ. ಇದೊಂದು ವಿಶೇಷ ಸೇವೆ. ಅಂದು ಭಕ್ತಾದಿಗಳು ಸರತಿಯಲ್ಲಿ ಕಾದಿದ್ದು ದರ್ಶನ ಪಡೆಯುತ್ತಾರೆ. 

ಅಕ್ಷಯ ತೃತೀಯಾ ದಿನದಂದು ಹೀಗೆ ವೃಂದಾವನಕ್ಕೆ ಗಂಧ ಲೇಪನ ಏಕೆ ಮಾಡುತ್ತಾರೆ? ಹೀಗೆ ಪ್ರಶ್ನೆ ಮಾಡಿದರೆ ಅನೇಕ ವೇಳೆ ಸರಿಯಾದ ಉತ್ತರ ಬರುವುದಿಲ್ಲ. "ಬೇಸಿಗೆ ಕಾಲ. ಆದ್ದರಿಂದ ತಂಪಾಗಿರಲಿ ಎಂದು ಹೀಗೆ ಮಾಡುತ್ತಾರೆ" ಅನ್ನುವುದು ಸಾಮಾನ್ಯ ಉತ್ತರ. ಹಾಗಿದ್ದರೆ, ಎರಡು-ಮೂರು ತಿಂಗಳ ಕಾಲ ಕಡು ಬೇಸಿಗೆ ಇರುತ್ತದೆ. ಅದರಲ್ಲಿ ಈ ದಿನವನ್ನೇ ಏಕೆ ಆರಿಸಿಕೊಂಡರು? ಬಾಕಿ ದಿನ ಬೇಸಗೆಯ ಬೇಗೆ ಇಲ್ಲವೇ? ಆಗಾಗ ಏಕೆ ಮಾಡುವುದಿಲ್ಲ? ಇವೆಲ್ಲಾ ಸಾಧುವಾದ ಪ್ರಶ್ನೆಗಳೇ. ಅಕ್ಷಯ ತೃತೀಯ ಹನ್ನೆರಡು ತಿಂಗಳ ಮಧ್ಯದಲ್ಲಿ ಬರುವ ಒಂದು ದಿನ. ಅದು ಹೇಗೆ "ಸ್ವಯಂ ಸಿದ್ಧ ಮುಹೂರ್ತ" ಆಯಿತು? ಅದಕ್ಕೆ ಅಂತಹ ವಿಶೇಷವೇನು? ಇದೂ ಸಹ ಯೋಚಿಸಬೇಕಾದ ವಿಷಯವೇ. 

*****

ಪ್ರತಿ ಸಂವತ್ಸರದ ಪ್ರಾರಂಭದ ದಿನ ಯುಗಾದಿ. ಅದು ಕಾಲಮಾನದ ಲೆಕ್ಕದ ಪ್ರಾರಂಭ. ಹೀಗಾಗಿ ಅದೊಂದು ಸ್ವಯಂ ಸಿದ್ಧ ಮುಹೂರ್ತ ಆಯಿತು. ವಿಜಯದಶಮಿ ವಿಶೇಷ ಎಲ್ಲರಿಗೂ ಗೊತ್ತಿರುವುದೇ. ಅದೂ ಸರಿ. ಬಲಿಪಾಡ್ಯಮಿ ಅರ್ಧ ದಿನವೂ ಒಂದು ವಿಶೇಷವೇ. ಅಂದು ಬಲಿಯಿಂದ ವಾಮನನು ಮೂರು ಲೋಕಗಳ ಅಧಿಪತ್ಯವನ್ನು ಕಸಿದುಕೊಂಡು ದೇವೇಂದ್ರನಿಗೆ ಹಿಂದಿರುಗಿಸಿದನು. ಇದರ ವಿವರಗಳಿಗೆ ಸಂಬಂಧಿಸಿದ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಆದರೆ ಈ ಅಕ್ಷಯ ತೃತೀಯ ಹೇಗೆ ವಿಶೇಷ? 

ಚತುರ್ಮುಖ ಬ್ರಹ್ಮ ದೇವರು ತಮ್ಮ ಸೃಷ್ಟಿಕಾರ್ಯ ಪ್ರಾರಂಭ ಮಾಡಿದ ದಿನ ಅಕ್ಷಯ ತೃತೀಯಾ. ಯುಗಾದಿ ಕಾಲಮಾನದ ಲೆಕ್ಕದ ಕಾರಣ ಮುಖ್ಯವಾದರೆ ಅಕ್ಷಯ ತೃತೀಯಾ ಸೃಷ್ಟಿಯ ಪ್ರಾರಂಭವಾದದ್ದರಿಂದ ವಿಶೇಷವಾಯಿತು. ಅದೂ ಒಂದು ಸ್ವಯಂ ಸಿದ್ಧ ಮುಹೂರ್ತ ಆಯಿತು. ಯಾವುದೇ ಕೆಲಸ ಪ್ರಾರಂಭ ಮಾಡಲು, ಮತ್ತು ಮುಖ್ಯವಾದ ಕಾರ್ಯಗಳನ್ನು ಮಾಡಲು ದಿನ ಶುದ್ದಿ ನೋಡಿ ಒಳ್ಳೆಯ ಸಮಯ ನಿರ್ಧರಿಸುವ ಪರಿಪಾಠ ಇದೆ. ಆದರೆ ಈ ನಾಲ್ಕು ದಿನಗಳಲ್ಲಿ ಅವುಗಳ ಅವಶ್ಯಕತೆ ಇಲ್ಲ ಎಂದು ನಂಬುತ್ತಾರೆ. 

ಅಕ್ಷಯ ತೃತೀಯಾ ದಿನದಂದು ಮಾಡಿದ ಒಳ್ಳೆಯ ಕೆಲಸಗಳಿಗೆ (ದಾನ, ಜಪ, ತಪ ಮುಂತಾದುವು) ಹೆಚ್ಚಿನ ಫಲ ಎಂದು ನಂಬಿಕೆ. ಆದರೆ ಈಗ ಅದೊಂದು "ಮಾರಾಟ ಮಾಡುವ ಮೋಡಿ" ಆಗಿದೆ. ಇದರ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

*****

ಶ್ರೀ ವೈಕುಂಠದ ದ್ವಾರ ಪಾಲಕರಾದ ಜಯ-ವಿಜಯರು ಸನಕ-ಸನಂದನಾದಿಗಳಿಗೆ ಶ್ರೀಮನ್ನಾರಾಯಣನ ದರ್ಶನಕ್ಕೆ ಅಡ್ಡಿ ಮಾಡಿದ ಕಾರಣದಿಂದ ಶಾಪಕ್ಕೊಳಗಾದ ಕಥೆ ಎಲ್ಲರಿಗೂ ಗೊತ್ತು. ಆ ಕಾರಣದಿಂದ ಅವರು ಮೂರು ಅಸುರ ಜನ್ಮ ಪಡೆದರು. ಶ್ರೀಹರಿಯ ಹೇಳಿಕೆಯ ಅನುಸಾರ ಅವನೇ ಮೂರು ಅವತಾರ ತೆಗೆದು ಅವರ ವಧೆ ಮಾಡಿ ಅವರ ಶಾಪ ವಿಮೋಚನೆ ಮಾಡಿದನು. 

ಮೊದಲಿಗೆ ಅವರು ಹಿರಣ್ಯಾಕ್ಷ-ಹಿರಣ್ಯಕಶಿಪು ಆಗಿ ಒಂದೇ ತಾಯಿ ದಿತಿಯ ಅವಳಿ ಮಕ್ಕಳಾಗಿ ಹುಟ್ಟಿದರು. ಎರಡನೆಯ ಬಾರಿ ಒಂದೇ ತಾಯಿ ಕೈಕಸೆಯ ಬೇರೆ ಬೇರೆ ಇಬ್ಬರು ಮಕ್ಕಳು ರಾವಣ-ಕುಂಭಕರ್ಣ ಆಗಿ ಹುಟ್ಟಿದರು. ಮೂರನೆಯ ಸಾರಿ ಅಕ್ಕ-ತಂಗಿಯರ ಮಕ್ಕಳು (ಶ್ರುತದೇವೆ ಮತ್ತು ಶ್ರುತಶ್ರವೆ - ವಸುದೇವನ ತಂಗಿಯರು) ಶಿಶುಪಾಲ-ದಂತವಕ್ತ್ರ ಆಗಿ ಹುಟ್ಟಿದರು. ಕ್ರಮವಾಗಿ ಮೊದಲಿಗೆ ವರಾಹ-ನರಸಿಂಹ ಎಂಬ ಎರಡು ರೂಪ, ಎರಡನೆಯದಾಗಿ ಶ್ರೀರಾಮ ರೂಪ ಮತ್ತು ಕಡೆಯದಾಗಿ ಶ್ರೀಕೃಷ್ಣ ರೂಪದಿಂದ ಅವರ ನಿಗ್ರಹವನ್ನು ಶ್ರೀಹರಿಯು ಮಾಡಿದನು. 

ಅವಳಿ ಮಕ್ಕಳಲ್ಲಿ ಲೋಕಾರೂಢಿಯಂತೆ ಮೊದಲು ತಾಯಿಯ ಗರ್ಭದಿಂದ ಬಂದವನು ಅಣ್ಣ ಎಂದೂ, ನಂತರ ಜನಿಸಿದವನು ತಮ್ಮ ಎಂದೂ ವ್ಯವಹರಿಸುತ್ತಾರೆ. ಆದರೆ ನಂತರ ಹುಟ್ಟಿದವನ ಗರ್ಭಧಾರಣೆ ಮೊದಲು ಆಗಿರುತ್ತದೆ. ಮೊದಲು ಜನಿಸಿದವನ ಗರ್ಭಧಾರಣೆ ಆಮೇಲೆ ಆಗಿರುತ್ತದೆ. ಈ ಕಾರಣದಿಂದ ವಾಸ್ತವವಾಗಿ ಹಿರಣ್ಯ ಕಷಿಪು ನಂತರ ಹುಟ್ಟಿದರೂ ಅಣ್ಣನು. ಹಿರಣ್ಯಾಕ್ಷನು ಮೊದಲು ಜನಿಸಿದರೂ ತಮ್ಮ. ಇದು ಸೂಕ್ಷ್ಮವಾದ ವಾಸ್ತವ. ಶ್ರೀಹರಿಯು ಮೊದಲು ವರಾಹರೂಪದಿಂದ ಹಿರಣ್ಯಾಕ್ಷನನ್ನೂ, ನಂತರ ನರಸಿಂಹ ರೂಪದಿಂದ ಹಿರಣ್ಯಕಶಿಪುವನ್ನೂ ಸಂಹರಿಸಿದನು. 

*****

ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದನನ್ನು ತಂದೆಯು ಬಹಳವಾಗಿ ಹಿಂಸಿಸಿದನು. ಪ್ರಹ್ಲಾದನು ಶ್ರೀಹರಿಯನ್ನು ಬಲವಾಗಿ ನಂಬಿ ಎಲ್ಲ ತೊಂದರೆಗಳನ್ನೂ ಧೈರ್ಯವಾಗಿ ಎದುರಿಸಿದನು. ಕಡೆಗೆ ನರಸಿಂಹರೂಪದಿಂದ ಹಿರಣ್ಯನ ಸಂಹಾರವಾಯಿತು. ನರಸಿಂಹನ ಸ್ತುತಿ ಮಾಡಿದ ಬಾಲಕ ಪ್ರಹ್ಲಾದನು ವರಾಹ ಮತ್ತು ನರಸಿಂಹ ರೂಪ ಎರಡನ್ನೂ ಒಟ್ಟಿಗೆ ನೋಡಬೇಕೆಂದು ಶ್ರೀಹರಿಯನ್ನು ಪ್ರಾರ್ಥಿಸಿದನು. ಆಗ ಶ್ರೀಹರಿಯು ಎರಡು ರೂಪಗಳನ್ನೂ ಒಟ್ಟಿಗೆ ತೋರಿಸಿದನಂತೆ. ಸಾಮಾನ್ಯವಾಗಿ ಕೆಲವೇ ಕೆಲವು ವರಾಹ ರೂಪಿ ಶ್ರೀಹರಿಯ ದೇವಾಲಯಗಳು ಉಂಟು. ನರಸಿಂಹ ರೂಪಿ ಶ್ರೀಹರಿಯ ದೇವಾಲಯಗಳು ಅನೇಕ. ಆದರೆ, ಶ್ರೀವರಾಹ-ನರಸಿಂಹ ರೂಪಿ ಶ್ರೀಹರಿಯ ದೇವಾಲಯ ಒಂದಾಗಿ ಇರುವುದು ಒಂದೇ ಕಡೆ.  ಅದು ಆಂಧ್ರ ಪ್ರದೇಶದ ಸಿಂಹಾಚಲದಲ್ಲಿ. 

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರದ ಉತ್ತರಭಾಗದಲ್ಲಿ "ಸಿಂಹಾಚಲ ಪರ್ವತ ಶ್ರೇಣಿ" ಇದೆ. ಈ ಬೆಟ್ಟ ಪ್ರದೇಶದಲ್ಲಿ ಸಿಂಹಾಚಲ ವರಾಹ-ಲಕ್ಷ್ಮಿನರಸಿಂಹ ದೇವಾಲಯವಿದೆ. ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಿಂದ ಸುಮಾರು ಇಪ್ಪತ್ತು ಕಿಲೋಮೀಟರು ದೂರ. ಈಗ ಈ ಭಾಗ ನಗರದಲ್ಲಿಯೇ ಸೇರಿಹೋದಂತಿದೆ. ಮೇಲಿನ ಚಿತ್ರದಲ್ಲಿ ಕಾಡಿನ ಮಧ್ಯೆ ಇರುವ ದೇವಾಲಯವನ್ನು ನೋಡಬಹುದು. 

ಈ ದೇವಾಲಯದಲ್ಲಿ ಒಂದು ವಿಶೇಷ. ಇಬ್ಬರು ರಕ್ಕಸರನ್ನು ಸಂಹರಿಸಿದ ಶ್ರೀಹರಿಯು ಆ ಸಮಯದಲ್ಲಿ ಅತಿ ಉಗ್ರ ರೂಪವನ್ನು ಧಾರಣೆ ಮಾಡಿದ್ದನಂತೆ. ಆ ರೂಪಗಳನ್ನು ನೋಡಲು ದೇವತೆಗಳಿಗೂ ಅಸಾಧ್ಯವಾಗಿತ್ತಂತೆ. ನೇರವಾಗಿ ನೋಡಲು ಕಷ್ಟವಾದ ತೇಜೋಮೂರ್ತಿಗಳ ಸಂಗಮ. ಅತಿ ಉಗ್ರ ರೂಪ. ಬಾಲಕ ಪ್ರಹ್ಲಾದನು ಭಯವಿಲ್ಲದೆ ನೋಡಿದ ಮಹಾನುಭಾವ. ಅವನಿಗೆ ಈ ಉಗ್ರರೂಪಗಳ ಶ್ರೀಹರಿಯೂ, ಸೌಮ್ಯ ರೂಪಿ ಶ್ರೀಹರಿಯೂ ಒಂದೇ!

*****


ಪುರಾತನವಾದ ಈ ದೇವಸ್ಥಾನ ಕಾಡಿನಲ್ಲಿ ಮುಚ್ಚಿಹೋಗಿತ್ತಂತೆ. ಅದನ್ನು ಚಂದ್ರನ ಮೊಮ್ಮಗ, ಬುಧ-ಇಳಾ ದಂಪತಿಯರ ಮಗನಾದ ಪುರೂರವ ಮತ್ತು ಊರ್ವಶಿಯರು (ನಹುಷನ ತಂದೆ ಮತ್ತು ಯಯಾತಿಯ ತಾತ) ಪುನಃ ಜನರಿಗೆ ದರ್ಶನ ಸಿಗುವಂತೆ ಮಾಡಿದರು ಎಂದು ಸ್ಥಳ ಪುರಾಣ ಹೇಳುತ್ತದೆ. ಈ ದೇವಳದಲ್ಲಿ ಹದಿನಾರು ಕಂಭಗಳ ನಾಟ್ಯಮಂಟಪ ಮತ್ತು ತೊಂಬತ್ತಾರು ಕಂಭಗಳ ಕಲ್ಯಾಣ ಮಂಟಪ ಉಂಟು. 

ಉಗ್ರ ವರಾಹ-ಲಕ್ಷ್ಮೀನರಸಿಂಹ ವಿಗ್ರಹವನ್ನು ವರುಷದ ಒಂದು ದಿನ ಬಿಟ್ಟು, ಬಾಕಿ ಎಲ್ಲಾ ದಿನಗಳಲ್ಲೂ ಶ್ರೀಗಂಧ ಲೇಪನದಿಂದ ಮುಚ್ಚಿರುತ್ತಾರೆ. ಈ ಕಾರಣದಿಂದ ಅದು ಒಂದು ದೊಡ್ಡ ಶಿವಲಿಂಗ ಇರುವಂತೆ ಕಾಣುತ್ತದೆ. ಆ ಗಂಧದಿಂದ ತುಂಬಿದ ಮೂರ್ತಿಯ ಮೇಲೆ ನಾಮ, ಕಣ್ಣು, ಮೂಗು, ಮುಂತಾದುವನ್ನು ಅಂಟಿಸಿ ಅರ್ಚಿಸುತ್ತಾರೆ. ದರ್ಶನಕ್ಕೆ ಬಂದ ಭಕ್ತರಿಗೆ ಕಾಣುವ ಮೂರ್ತಿಯು ಮೇಲಿನ ಚಿತ್ರದಂತೆ ಇರುತ್ತದೆ. 

ವರುಷದ ಒಂದು ದಿನ ಮಾತ್ರ, ಅಕ್ಷಯ ತೃತೀಯಾ ದಿನದಂದು, ಈ ಗಂಧ ಲೇಪನ ಎಲ್ಲವನ್ನೂ ತೆಗೆದು ಮೂಲ ವಿಗ್ರಹವನ್ನು ನೋಡಲು ಅವಕಾಶ ಮಾಡಿಕೊಡುತ್ತಾರೆ. ಆ ದಿನವೂ ವಿಗ್ರಹವನ್ನು ನೇರವಾಗಿ ನೋಡಿದರೆ ಕಣ್ಣುಗಳು ಉರಿಯುತ್ತವೆ ಮತ್ತು ರಕ್ತ ಬರುತ್ತದೆ ಎಂದು ನಂಬಿಕೆ. ಆದ ಕಾರಣ ಅಕ್ಷಯ ತೃತೀಯಾ ದಿನದಂದು ಮೂಲ ವಿಗ್ರಹದ ಮುಂದೆ ಒಂದು ಅತಿ ತೆಳುವಾದ ಪರದೆ ಇರುತ್ತದೆ. ಈ ಪರದೆಯ ಮೂಲಕ ವಿಗ್ರಹ ಚೆನ್ನಾಗಿ ಕಾಣುತ್ತದಂತೆ. ಅಂದು ದರ್ಶನ ಪಡೆಯಲು ಜನಜಂಗುಳಿ. ತಿರುಪತಿಯ ಶ್ರೀನಿವಾಸನ ದರ್ಶನದಂತೆ ದರ್ಶನ ಬಲು ಕಠಿಣವಂತೆ. ದರ್ಶನ ಸಿಕ್ಕರೆ ಸಿಗಬಹುದು. ಇಲ್ಲದಿದ್ದರೆ ಇಲ್ಲ. ಹೀಗೆಂದು ನೋಡಿ ಬಂದ  ಮಹಾನುಭಾವರು ಹೇಳುತ್ತಾರೆ. 

*****

ಪರಮಾತ್ಮನಿಗೆ ಅರ್ಪಿಸಿದ ಪ್ರತಿಯೊಂದು ಪದಾರ್ಥವೂ ಪೂಜ್ಯವೇ. ಪೂಜೆಯ ನಂತರ ಅವು ಪ್ರಸಾದವೇ. ಹೀಗಾಗಿ ಅವಕ್ಕೆ ಹೆಚ್ಚಿನ ಮಹತ್ವವುಂಟು. ನಾವು ಸಾಮಾನ್ಯವಾಗಿ ತಿಳಿದಂತೆ ಹಣ್ಣು-ಹಂಪಲು, ತಿಂಡಿ-ಆಹಾರ ಪದಾರ್ಥಗಳು ಮಾತ್ರ ಪ್ರಸಾದ ಅಲ್ಲ. ಹೂವು-ತುಲಸಿಗಳೂ ಪ್ರಸಾದವೇ. ಪೂಜೆಯ ವೇಳೆ ಕೊಟ್ಟ ವಸ್ತ್ರವೂ ಪ್ರಸಾದವಾಗಿ "ಶೇಷ ವಸ್ತ್ರ" ಎಂದು ಉಪಯೋಗ ಆಯಿತು. ಧೂಪಕ್ಕೆ ಉಪಯೋಗಿಸಿದ ಕೆಂಡವು ಆರಿದ ಬಳಿಕ ಇಜ್ಜಲಾಯಿತು. ಅದೂ ಪ್ರಸಾದ ಆದುದರಿಂದ ಹಣೆಯಲ್ಲಿ ಅಂಗಾರ ಆಗಿ ಸ್ವೀಕಾರ ಆಯಿತು. ತಿಂಡಿ-ತಿನಿಸುಗಳು, ಹಣ್ಣು-ಹಂಪಲುಗಳು ಸೇವನೆಗೆ ಯೋಗ್ಯ ಪರಮ ಪ್ರಸಾದ ಆಯಿತು. ಹೀಗೆ ಅವುಗಳ ಪೂಜ್ಯತೆ. 

ಪೂಜೆಗೆ ಗಂಧ ತೆಗೆದು ಅರ್ಪಿಸಿದ್ದಾಯಿತು. ಅದರಲ್ಲಿ ಮಿಕ್ಕಿದ್ದು ಹೀಗೆಯೇ ಪ್ರಸಾದ ಆಯಿತು. ನಮ್ಮ ದೇಹದ ಮೇಲೆ ಹಚ್ಚಿಕೊಳ್ಳುವುದಾಯಿತು. ಅದೇ ಪ್ರಸಾದ ಆದಮೇಲೆ ಅವನ ವಿಗ್ರಹದ ಮೇಲೆ ಏರಿಸಿದ ಗಂಧ ದೊಡ್ಡ ಪ್ರಸಾದ ಎಂದು ಬೇರೆ ಹೇಳಬೇಕಾಗಿಲ್ಲ. ಪ್ರಹ್ಲಾದರಾಜರು ಅವನ್ನು ಪ್ರಸಾದರೂಪದಲ್ಲಿ ಧರಿಸಿದರಂತೆ. 

ಇದೇ ಪ್ರಹ್ಲಾದರಾಜರು ಈಗ ಶ್ರೀ ರಾಘವೇಂದ್ರ ರಾಯರಾಗಿ ಮಂತ್ರಾಲಯದಲ್ಲಿ ವೃಂದಾವನದಲ್ಲಿ ಕುಳಿತಿದ್ದಾರೆ ಎಂದು ನಂಬಿಕೆ. ಅದೇ ಭಾವ ಮೃತ್ತಿಕಾ ವೃಂದಾವನಗಳಲ್ಲಿಯೂ ಉಂಟು. "ಅಂಥ  ಇಂಥವರಲ್ಲ" ಅನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಇದನ್ನು ನೋಡಿದ್ದೇವೆ. (ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು). ಈ ಕಾರಣ ಅಕ್ಷಯ ತೃತೀಯಾ ದಿನದಂದು ಸಿಂಹಾಚಲ ಶ್ರೀ ವರಾಹ-ಲಕ್ಷ್ಮಿ ನರಸಿಂಹನ ದೇವಾಲಯದಲ್ಲಿ ಮೂಲ ಮೂರ್ತಿಗೆ ಗಂಧವಿಲ್ಲದ ದಿನ ಇಲ್ಲಿ ಶ್ರೀ ರಾಯರ ವೃಂದಾವನಕ್ಕೆ ಅವನ ಪ್ರಸಾದ ರೂಪದ ಗಂಧ ಲೇಪನ. ವರುಷದ ಎಲ್ಲ ದಿನ ಅಲ್ಲಿ ಅವನಿಗೆ ಗಂಧ ಲೇಪನ ಮತ್ತು ಭಕ್ತರಿಗೆ ಹಾಗೆ ದರ್ಶನ. ಅವನಿಗೆ ಹೀಗೆ ಗಂಧವಿಲ್ಲದ ಒಂದು ದಿನ ಇಲ್ಲಿ ಶ್ರೀ ರಾಯರಿಗೆ ಅವನ ಪ್ರಸಾದರೂಪದ ಗಂಧ ಲೇಪನ ಮತ್ತು ಭಕ್ತರಿಗೆ ಹೀಗೆ ದರ್ಶನ. ಮಾರನೆಯ ದಿನ ವೃಂದಾವನದ ಮೇಲಿರುವ ಗಂಧ ಶ್ರೀ ರಾಯರ ಪ್ರಸಾದ. ಅದಕ್ಕೆ ಬಹಳ ಗೌರವ ಮತ್ತು ಬೆಲೆ. ಹೀಗೆ ನಡೆಯುತ್ತಿದೆ!

Wednesday, April 30, 2025

ಹಿಂದು-ಮುಂದಾದ "ಅಕ್ಷಯ ತೃತೀಯಾ"

ಕಾಮಧೇನು ಮತ್ತು ಕಲ್ಪವೃಕ್ಷಗಳು ದೇವರಾಜನಾದ ಇಂದ್ರನ ಅಧೀನದಲ್ಲಿ ಸ್ವರ್ಗದಲ್ಲಿರುತ್ತವೆ ಎಂದು ನಂಬಿಕೆ. ತಮ್ಮನ್ನು ಆರಾಧಿಸಿ ಬೇಡುವವರಿಗೆ ಕೇಳಿದ್ದನ್ನು ಕೊಡುತ್ತವೆ ಎಂದು ಪ್ರತೀತಿ. 

ಇವು ಎರಡರಲ್ಲಿ ಮುಖ್ಯ ವ್ಯತ್ಯಾಸ ಏನು? ನಾವು ಅವನ್ನು ಕಂಡವರಲ್ಲ. ಅಲ್ಲಿ ಇಲ್ಲಿ ಓದಿ-ಕೇಳಿ ತಿಳಿದದ್ದು. ಕಲ್ಪವೃಕ್ಷವು ಈಗ ನಮ್ಮ ಸುತ್ತ-ಮುತ್ತ ಇರುವ ಎಟಿಎಂ ಇದ್ದಂತೆ. ಅದು ಒಂದು ದಿವ್ಯವಾದ ಮರ. ಒಂದು ಕಡೆ ನೆಟ್ಟು ಬೆಳಿಸಿದಂತೆ. ನಮ್ಮ ಸುತ್ತಲಿನ ಎಟಿಎಂಗಳು ನಗದು ರೂಪದಲ್ಲಿ ಹಣ ಕೊಡುತ್ತವೆ. (ಈಗ ಇಡ್ಲಿ-ವಡೆ ಮುಂತಾದುವನ್ನು ಕೊಡುವ ಎಟಿಎಂಗಳು ಕೂಡ ಬಂದಿವೆಯಂತೆ. ಅವನ್ನು ಇಲ್ಲಿ ಸೇರಿಸುವುದು ಬೇಡ). ಆದರೆ ಅದು ಇರುವಲ್ಲಿಗೆ ಹೋಗಬೇಕು. ಕಾಮಧೇನು ಒಂದು ದಿವ್ಯವಾದ ಹಸು. ಅದು ಓಡಾಡಬಹುದು. ಆದ್ದರಿಂದ ಕಾಮಧೇನು ಒಂದು ಮೊಬೈಲ್ಎಟಿಎಂ ಇದ್ದಂತೆ. ಅದು ನಾವಿರುವಲ್ಲಿಗೇ ಬಂದು ಕೇಳಿದ್ದನ್ನು ಕೊಡುತ್ತದೆ. 

ಹೀಗೆ ಅಲ್ಲಿ ಇಲ್ಲಿ ಓಡಾಡುತ್ತಿದ್ದ ಕಾಮಧೇನು ನಮ್ಮ ಮನೆ ಬೀದಿಯಲ್ಲಿ ಬಂದಿದೆ. ಈಗ ನಮ್ಮ ಮನೆಯ ಮುಂದೆಯೇ ನಿಂತಿದೆ. ಏನು ಕೇಳಿದರೂ ಕೊಡುವ ಕಾಮಧೇನು. ಅದರ ಬಳಿ ಹೋಗಿ ಕೇಳಿಕೊಳ್ಳಬೇಕು. ಅಷ್ಟೇ. 

ಈ ದಿನ ಯಾಕೋ ಪ್ರತಿದಿನ ಬೆಳಿಗ್ಗೆ ನಮ್ಮ ಮನೆಗೆ ಹಾಲು ತಂದು ಕೊಡುವ  ಹುಡುಗ ಬಂದಿಲ್ಲ. ಬೆಳಗಾಗಿ ಎದ್ದು ಕಾಫಿ ಕುಡಿಯುವ ಅಭ್ಯಾಸ. ಕಾಫಿ ಸ್ವಲ್ಪ ತಡವಾದರೆ ಬುದ್ಧಿಯೇ ಓದುವುದಿಲ್ಲ. ಹೇಗೂ ಕಾಮಧೇನು ಮನೆಮುಂದೆ ಬಂದು ನಿಂತಿದೆ. ಹತ್ತಿರ ಹೋಗಿ "ಒಂದು ಅರ್ಧ ಲೀಟರ್ ಹಾಲು ಕೊಡು ತಾಯಿ" ಎಂದು ಕೇಳಿದೆವು. ಆಹಾ! ಕೊಟ್ಟಿತು! ಏನು ಸಂತೋಷ! ಎಂಥ ಉತ್ಸಾಹ!

*****

ಏನಾದರೂ ಒಳ್ಳೆಯ ಕೆಲಸ ಮಾಡಬೇಕಾದರೆ ಏನು ಮಾಡಬೇಕು? ಮಾಡಬೇಕು. ಅಷ್ಟೇ. "ಮಂತ್ರಿಸಿದರೆ ಮಾವಿನಕಾಯಿ ಬೀಳುವುದಿಲ್ಲ. ಅದು ಬೀಳಬೇಕಾದರೆ ಕಲ್ಲು ಹೊಡೆಯಬೇಕು. ಇಲ್ಲವೇ, ಮರ ಹತ್ತಿ ಕೀಳಬೇಕು". ಹೀಗೊಂದು ಪಾಠವಿತ್ತು, ನಾವು ಶಾಲೆಯಲ್ಲಿ ಓದುತ್ತಿದ್ದಾಗ. ಕೆಲಸ ಆಗಬೇಕಾದರೆ ಮೀನ-ಮೇಷ ಎಣಿಸುವುದಲ್ಲ. ಕೆಲಸ ಪ್ರಾರಂಭ ಮಾಡಬೇಕು. ಆದರೆ ನಮ್ಮಲ್ಲಿ ಒಂದು ಒಳ್ಳೆಯ ದಿನ, ಸರಿಯಾದ ಸಮಯ ನೋಡಿ ಪ್ರಾರಂಭ ಮಾಡಬೇಕು ಎನ್ನುವ ಒಂದು ಪದ್ಧತಿ. ಒಳ್ಳೆಯ ದಿನ ನೋಡಿದೆವು. ಸರಿಯಾದ ಸಮಯಕ್ಕೇ ಪ್ರಾರಂಭಿಸಿದೆವು. ಕೆಲಸವಾಗುತ್ತದೆಯೇ? ಸರಿಯಾಗಿ ಪರಿಶ್ರಮ ಪಟ್ಟು ಮಾಡಿದರೆ ಆಗುತ್ತದೆ. ಸುಮ್ಮನೆ ಒಳ್ಳೆಯ ದಿನ, ಸರಿಯಾದ ಸಮಯದಲ್ಲಿ ಪ್ರಾರಂಭ ಮಾಡಿದರೆ ಕೆಲಸ ಆಗುವುದಿಲ್ಲ. "ಪುರುಷ ಪ್ರಯತ್ನ" ಬೇಕೇ ಬೇಕು. "ದೈವದಿಂದ ಆಗುತ್ತದೆ" ಎನ್ನುವವರು ಕೆಲವರು. "ಪುರುಷ ಪ್ರಯತ್ನದಿಂದಲೇ ಆಗುವುದು" ಎನ್ನುವರು ಇನ್ನು ಕೆಲವರು. "ಪುರುಷ ಪ್ರಯತ್ನಕ್ಕೆ ದೈವ ಸಹಾಯವೂ ಸೇರಬೇಕು" ಎನ್ನುವುದು ಇನ್ನೊಂದು ಮಾರ್ಗ. 

ಒಳ್ಳೆಯ ದಿನ, ಸರಿಯಾದ ಸಮಯ ಅಂದರೆ ಏನು? ಅದು ಹೇಗೆ ಸಿಗುತ್ತದೆ? ಇದು ಒಂದು ಮುಖ್ಯ ಪ್ರಶ್ನೆ. ನಂಬಿಕೆ ಇದ್ದವರು ಜೋಯಿಸರ ಬಳಿ ಹೋಗಿ ಕೇಳಬಹುದು. ಈಗಿನ ಕಂಪ್ಯೂಟರ್ ಪರಿಣತರು ಯಾವುದೋ ಸಾಫ್ಟ್ ವೇರ್ ಸಹಾಯದಿಂದ ಅದನ್ನು ಹಿಡಿಯಬಹುದು. ಮೊಬೈಲ್ ಕೈಗೇ ಅಂಟಿಕೊಂಡಿರುವವರು ಅದಕ್ಕೊಂದು "ಅಪ್ಪ" ಹುಡುಕಿ ಅದರಲ್ಲಿ ತೆಗೆಯಬಹುದು. ಇದಕ್ಕೆ ಇಷ್ಟೆಲ್ಲಾ ಮಾಡದೆ ಏನಾದರೂ ಸುಲಭ ಉಪಾಯ ಇದೆಯೇ? 

"ಸಾಡೆತೀನ್ ಮುಹೂರ್ತ" ಎಂದು ಹಿರಿಯರು ಹೇಳುತ್ತಿದ್ದರು. ಮೂರು ದಿನಗಳು ಮತ್ತು ಅದರ ಮೇಲೆ ಅರ್ಧ ದಿನ. "ಈ ದಿನಗಳು ಸ್ವಯಂಸಿದ್ಧ ಮಹೂರ್ತಗಳು. ಈ ದಿನಗಳಲ್ಲಿ ಯಾವುದೇ ಕೆಲಸ ಪ್ರಾರಂಭ ಮಾಡಬಹುದು. ಈ ದಿನಗಳಲ್ಲಿ ಆದರೆ ಅದಕ್ಕೆ ಒಳ್ಳೆ ದಿನ, ಸರಿಯಾದ ಸಮಯ ನೋಡಬೇಕಿಲ್ಲ" ಎಂದು ಬಲವಾದ ನಂಬಿಕೆ.  ಯಾವುವು ಈ ದಿನಗಳು?

ಮೊದಲನೆಯದು ಉಗಾದಿ. ಎರಡನೆಯದು ಅಕ್ಷಯ ತೃತೀಯ. ಮೂರನೆಯದು ವಿಜಯದಶಮಿ. ಇವುಗಳ ಜೊತೆಗೆ ಬಲಿಪಾಡ್ಯಮಿಯಲ್ಲಿ ಮೊದಲ ಅರ್ಧ ದಿನ. ಮೂರೂವರೆ ದಿನ ಆಯಿತಲ್ಲ? 

*****

ಇದರಲ್ಲಿ "ಅಕ್ಷಯ ತೃತೀಯ" ವಿಶೇಷವೇನು? ಚತುರ್ಮುಖ ಬ್ರಹ್ಮದೇವರು ತಮ್ಮ ಸೃಷ್ಟಿಕಾರ್ಯ ಪ್ರಾರಂಭಿಸಿದ ದಿನ ಇದು. ಅವರ ಸೃಷ್ಟಿ ಕಾರ್ಯಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ. ಅದು ಪ್ರಾರಂಭವಾದದ್ದು ಚೆನ್ನಾಗಿ ನಡೆದೇ ಇದೆ. ನಾವು ಏನೇ ಕೆಲಸ ಹೊಸದಾಗಿ ನಡೆಸಿದರೂ ಅದು ಸೃಷ್ಟಿಯ ಮಿತಿಯಲ್ಲಿ ತಾನೇ ಆಗುವುದು? ಆದ್ದರಿಂದ ಇದೊಂದು ಸ್ವಯಂಸಿದ್ಧ ಮಹೂರ್ತ. 

ಇದೇ ದಿನ "ಪರುಶುರಾಮ ಜಯಂತಿ". ಜೈನರ ಮೊದಲ ತೀರ್ಥಂಕರನಾದ ಋಷಭದೇವನು ತನ್ನ ಮರಿಮಗನಿಂದ ಆಹಾರ ಪಡೆದು ನಾಲ್ಕು ನೂರು ದಿನದ ಉಪವಾಸಡಾ ಕೊನೆ ಮಾಡಿದನೆಂದು ಇನ್ನೊಂದು ವಿಶೇಷ, ಹೀಗೆ ಮತ್ತೆ ಕೆಲವು.

ಇದರಲ್ಲಿ "ಅಕ್ಷಯ" ಅನ್ನುವುದರ ವಿಶೇಷ ಏನು? 

ಕಾಲವು ಎಂದೂ ನಿಲ್ಲದು. ಅದು ಚಲಿಸುತ್ತಲೇ ಇರುತ್ತದೆ. ಆದರೆ ಕೆಲವು ಪ್ರಕೃತಿ ವಿಶೇಷಗಳ ಕಾರಣ ಈ ಚಲಿಸುತ್ತಲೇ ಇರುವ ಸಮಯದಲ್ಲಿ ಕೆಲವು ಸಂಧಿಕಾಲಗಳು, ವಿಶೇಷ ಸಂದರ್ಭಗಳು ಒದಗುತ್ತವೆ. ಹುಣ್ಣಿಮೆ ಒಂದು ವಿಶೇಷ. ಅಂದು ಪೂರ್ಣ ಚಂದ್ರನಿದ್ದಾನೆ. ಅಮಾವಾಸ್ಯೆ ಒಂದು ವಿಶೇಷ. ಮಕರ ಸಂಕ್ರಾಂತಿ, ಕರ್ಕಾಟಕ ಸಂಕ್ರಾಂತಿ ವಿಶೇಷ ಕಾಲಗಳು. ಶ್ರಾದ್ಧಗಳ ದೃಷ್ಟಿಯಿಂದ "ಪಕ್ಷ ಮಾಸ' ಒಂದು ಪರ್ವ ಕಾಲ. ಇವೆಲ್ಲ ಸಾರ್ವತ್ರಿಕ ಪರ್ವ ಕಾಲಗಳು. 

ಇನ್ನು ಕೆಲವು ಪರ್ವ ಕಾಲಗಳು ವ್ಯಕ್ತಿಗತ. ನಾವು ಕಾಶಿಗೆ ಹೋದೆವು. ಬದರಿನಾಥಕ್ಕೆ ಹೋದೆವು. ರಾಮೇಶ್ವರಕ್ಕೆ ಹೋದೆವು. ಗಯಾದಲ್ಲಿ ಗದಾಧರನ ದರ್ಶನ ಮಾಡಲು ಹೋದೆವು. ಈ ರೀತಿ ಕ್ಷೇತ್ರಗಳ ದರ್ಶನಕ್ಕೆ ಹೋದದ್ದು. ಇದೇನು ನಾವು ಬೇಕೆಂದಾಗ್ಗೆ ಹೋಗುವಂಥದಲ್ಲ. ಆದ್ದರಿಂದ ನಮ್ಮ ಮಟ್ಟಿಗೆ ಇದು ಪರ್ವ ಕಾಲವೇ. ಆದ್ದರಿಂದ "ಕ್ಷೇತ್ರ ಶ್ರಾದ್ದ" ಎಂದು ಒಂದು ಪದ್ಧತಿ ಇದೆ. ಇಂತಹ ಕ್ಷೇತ್ರಗಳಿಗೆ ಹೋದಾಗ ಅಂದು ಪಿತೃ  ಶ್ರಾದ್ಧ ಮಾಡಬಹುದು. ಅದು ಯಾವ ದಿನವಾದರೂ ಪರವಾಗಿಲ್ಲ. ಹೀಗೆ.  

ಒಳ್ಳೆಯ ಕೆಲಸ ಯಾವಾಗ ಮಾಡಿದರೂ ಪುಣ್ಯ ಸಂಪಾದನೆಗೆ ದಾರಿ. ಪರ್ವ ಕಾಲಗಳಲ್ಲಿ ಮಾಡಿದರೆ ಅದಕ್ಕೆ ಅಧಿಕ ಪುಣ್ಯ.  ತಿಂಗಳಿಗೊಮ್ಮೆ ಬರುವ ಪರ್ವ ಕಾಲದಲ್ಲಿ ಹೆಚ್ಚು ಪುಣ್ಯ. ಆರು ತಿಂಗಳಿಗೊಮ್ಮೆ ಬರುವ ಪರ್ವಕಾಲದಲ್ಲಿ ಅದಕ್ಕಿಂತ ಹೆಚ್ಚು ಪುಣ್ಯ. ವರ್ಷಕ್ಕೊಮ್ಮೆ ಬರುವ ದಿನವಾದರೆ? ಗ್ರಹಣ-ಸಂಕ್ರಮಣಗಳಾದರೆ? ಇನ್ನೂ ಹೆಚ್ಚು ಪುಣ್ಯ.  ಹೀಗೆ ನಂಬಿಕೆ. 

ಚತುರ್ಮುಖ ಬ್ರಹ್ಮ ದೇವರು ಸೃಷ್ಟಿ ಕಾರ್ಯ ಪ್ರಾರಂಭ ಮಾಡಿದ ದಿನ ಒಂದು ದೊಡ್ಡ ವಿಶೇಷ. ಆದ್ದರಿಂದ ಅಂದು ಮಾಡಿದ ಪುಣ್ಯ ಕಾರ್ಯಗಳಿಗೆ, ದಾನ-ಧರ್ಮಗಳಿಗೆ, ಪರೋಪಕಾರಗಳಿಗೆ, ಅಶಕ್ತರು-ವೃದ್ಧರಿಗೆ ಮಾಡಿದ ಸಹಾಯ-ಒತ್ತಾಸೆಗೆ ಹೇಳಲಾಗದಷ್ಟು, ಅಕ್ಷಯ ಅನ್ನುವಷ್ಟು, ಕ್ಷಯವಾಗದಷ್ಟು, ಪುಣ್ಯ. ಆದ್ದರಿಂದ ಅಕ್ಷಯ ತೃತೀಯ ಬಹಳ ಶ್ರದ್ಧೆ-ಭಕ್ತಿಗಳಿಂದ ದಾನ ಮಾಡಬೇಕೆಂದು ವಿಶೇಷವಾಗಿ ಕಟ್ಟಲೆ. 

*****

"ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಶು:" ಎನ್ನುವುದು ಒಂದು ಶ್ರುತಿವಚನ. ಜೀವನ-ಮರಣ ಚಕ್ರದಿಂದ ಬಿಡುಗಡೆ ಸಿಗಬೇಕಾದರೆ ಕಾಮ್ಯಕರ್ಮಗಳಿಂದಲ್ಲ (ನಮಗೆ ಇವು ಬೇಕು ಎಂದು ಮಾಡುವ ಕೆಲಸಗಳು ಕಾಮ್ಯಕರ್ಮಗಳು), ಮಕ್ಕಳು ಮುಂತಾದ ಸಂತತಿಯಿಂದಲ್ಲ, ಧನ-ಕನಕಗಳಿಂದಲ್ಲ, ತ್ಯಾಗದಿಂದ ಮಾತ್ರ ಮುಕ್ತಿ ಸಿಗುತ್ತದೆ ಎಂದು ಇದರ ಅರ್ಥ. ನಮ್ಮ ಸಂಸ್ಕೃತಿಯಲ್ಲಿ ಪಡೆಯುವುದಕ್ಕಿಂತ ಕೊಡುವುದಕ್ಕೆ ಹೆಚ್ಚು ಬೆಲೆ. ದೊಡ್ಡ ಪುರಸ್ಕಾರ. "ಇದ್ದುದರಲ್ಲಿ ಜೀವನ ಮಾಡು. ಅಷ್ಟೇ ಅಲ್ಲ. ಇರುವುದರಲ್ಲಿಯೇ ಸ್ವಲ್ಪವನ್ನಾದರೂ ಬೇರೆಯವರಿಗೆ ಕೊಡು" ಅನ್ನುವುದು ಮೂಲಭೂತ ಸಿದ್ಧಾಂತ. 

ಅಕ್ಷಯ ತೃತೀಯ ಪರ್ವಕಾಲದಲ್ಲಿಯೂ ಅಷ್ಟೇ. ಕೊಡುವುದಕ್ಕೆ ಇದು ಅತ್ಯಂತ ಪ್ರಶಸ್ತವಾದ ಕಾಲ. ಇಂತಹ ಕಾಲ ಬರಲಿ ಎಂದು ಕಾತುರದಿಂದ ಕಾದುಕೊಂಡು ಕೊಡಬೇಕು. ಅದೇ ಅಕ್ಷಯ ತೃತೀಯದ ವೈಶಿಷ್ಟ್ಯ. 

*****

ಇದು "ಸೇಲ್ಸ್ ಮತ್ತು ಮಾರ್ಕೆಟಿಂಗ್" ಕಾಲ. ಪೀಟರ್ ಡ್ರಕರ್ ಎನ್ನುವ ಮ್ಯಾನೇಜ್ಮೆಂಟ್ ಗುರು ಹೇಳುತ್ತಾನೆ: "ಇನ್ನೋವೇಷನ್ ಮತ್ತು ಮಾರ್ಕೆಟಿಂಗ್" ಅನ್ನುವುದು ಯಾವುದೇ ವ್ಯವಹಾರ (ಬಿಸನೆಸ್ಸ್} ಸಫಲವಾಗಲು ಮೂಲ ಕಾರಣಗಳು ಎನ್ನುವ ಮಂತ್ರ. ಪ್ರತಿಯೊಂದಕ್ಕೂ ಒಂದು ಮಾರಾಟದ ತಂತ್ರ. ವರುಷದ ಪ್ರತಿ ದಿನವೂ ಒಂದೊಂದು ಆಚರಣೆ. ತಾಯಿಗೆ ಒಂದು ದಿನ. ತಂದೆಗೆ ಒಂದು ದಿನ. ಪ್ರೇಯಸಿಗೆ ಅಥವಾ ಪ್ರಿಯಕರನಿಗೆ ಒಂದು ದಿನ. ಕಂಡರೆ ಆಗದವರಿಗೆ ಒಂದು ದಿನ. (ಇದು ಇದೆ ಎಂದು ನಂಬಿಕೆ). ಹೀಗೆ. 

ಈಗಿನ ಮಾರಾಟಗಾರರು, ಅದರಲ್ಲೂ ಚಿನ್ನ-ವಜ್ರ ಮುಂತಾದುವುಗಳ ಮಾರಾಟಗಾರರು "ಅಕ್ಷಯ ತೃತೀಯ" ಪರ್ವಕಾಲವನ್ನು "ಹೈಜಾಕ್" ಮಾಡಿದ್ದಾರೆ. ಕೊಡುವುದರ ಬದಲು ಕೊಳ್ಳುವುದು ಮುಖ್ಯ ಮಾಡಿದ್ದಾರೆ. ಕೊಡುವುದು ಹಿಂದೆ ಉಳಿಯಿತು. ಈಗ ಕೊಳ್ಳುವುದು ಮುಖ್ಯ. ಅದರಲ್ಲೂ ಬೆಲೆ ಹೆಚ್ಚಿರುವ ಪದಾರ್ಥಗಳು. ಒಡವೆ-ಆಭರಣಗಳು. ಇತ್ಯಾದಿ. ಮೊದಲೇ ಹುಡುಕಿ, ಆರಿಸಿಟ್ಟು, ಬಿಲ್ ಮಾಡಿಸಿ, ದುಡ್ಡು ತೆತ್ತು ಈ ದಿನ ಮನೆಗೆ ತಂದರೆ ಅದು ಅಕ್ಷಯವಾಗುತ್ತದೆ ಅನ್ನುವ ಪ್ರಚಾರ. ತಂದ ಪದಾರ್ಥ ಮೈಮೇಲೆ ಧರಿಸುವಹಾಗಿಲ್ಲ. ಹಾಕಿಕೊಂಡರೆ ಜೀವಭಯ. ಪೆಟ್ಟಿಗೆಯಲ್ಲಿಟ್ಟರೆ ಕಳ್ಳ-ಕಾಕರ ಭಯ. ಅದಕ್ಕೆ ಬ್ಯಾಂಕಿನಲ್ಲಿ ಒಂದು ಲಾಕರ್. ಅದಕ್ಕೆ ವರ್ಷಕ್ಕೆ ಬಾಡಿಗೆ. ಅದರ ಬೀಗದಕೈ ಕೈಲಿ ಹಿಡಿದು ಸಂಭ್ರಮ! 

ಮಗುವಿನ ಜಾತಕ ಚೆನ್ನಾಗಿರಲಿ ಎಂದು ಗ್ರಹಗತಿ ಶೋಧಿಸಿ, ನೋಡಿಸಿ, ಮೊದಲೇ ಜನನದ ದಿನ, ಸಮಯ ನಿರ್ಧರಿಸಿ ಸಿಸೇರಿಯನ್ ಹೆರಿಗೆ ಮಾಡಿಸಿದಂತೆ. 

*****

ಕೊಡಬೇಕು ಅನ್ನುವ "ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಶು:" ಹಿಂದೆ ಹೋಯಿತು. ತರಬೇಕು ಅನ್ನುವ "ಇನ್ನೋವೇಷನ್ ಮತ್ತು ಮಾರ್ಕೆಟಿಂಗ್" ಮುಂದೆ ಬಂತು. 

ಭತ್ತ ಬೆಳೆಯುವವನಿಗೆ ಹುಲ್ಲು ತಾನಾಗಿಯೇ ಸಿಕ್ಕುತ್ತದೆ. ಕೇವಲ ಹುಲ್ಲು ಬೆಳೆಯುವವನಿಗೆ ಭತ್ತ ಸಿಗುವುದಿಲ್ಲ. ಮೋಕ್ಷ ಸಾಧಿಸುವವನಿಗೆ ಅರ್ಥ, ಕಾಮಗಳು ತಾವಾಗಿಯೇ ಸಿಗುತ್ತವೆ. ಈಗಿನ ಮಾರಾಟ ತಂತ್ರ ಇದನ್ನು ಪೂರ್ತಿ ಮರೆಸಿತು. 

ಮನೆಯಮುಂದೆ ಬಂದಿರುವ ಕಾಮಧೇನು ಬಳಿ ಅರ್ಧ ಲೀಟರ್ ಹಾಲು ಕೇಳಿದಂತಾಯಿತು. 

ಒಟ್ಟಿನಲ್ಲಿ "ಅಕ್ಷಯ ತೃತೀಯಾ"  ದಿನದ ವಿಶೇಷತೆ ಹಿಂದು-ಮುಂದಾಯಿತು.