Showing posts with label Purandaradasaru. Show all posts
Showing posts with label Purandaradasaru. Show all posts

Wednesday, December 17, 2025

ರಾಮನಾಮ ಎಂಬ ರಸವುಳ್ಳ ನೀರಿಗೆ


ಕಳೆದ ಸಂಚಿಕೆಯಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬಹು ಜನಪ್ರಿಯ ದೇವರನಾಮ ಶ್ರೀ ಪುರಂದರದಾಸರ ಕೃತಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೇ ಬಿಂದಿಗೆಯ" ವಿಶೇಷಾರ್ಥಗಳ ಅನ್ವೇಷಣೆಯಲ್ಲಿ ಕೃತಿಯ ಪಲ್ಲವಿಯ ಎರಡು ಸಾಲುಗಳಲ್ಲಿ ತುಂಬಿರುವ ಅರ್ಥವಿಶೇಷಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಈಗ ಈ ಹಾಡಿನ ಉಳಿದ ಭಾಗಗಳ ವಿಶೇಷ ಅರ್ಥಗಳನ್ನು ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳಿದ್ದು ನೀರು ತರಲು. ಯಾವ ನೀರು? ನಾವು ನಮ್ಮ ಸುತ್ತ-ಮುತ್ತ ಕಾಣುವ ಮತ್ತು ದಿನಂಪ್ರತಿ ಉಪಯೋಗಿಸುವ ನೀರು ಎನ್ನುವುದು ಸಾಮಾನ್ಯವಾದ ಹೊರ ಅರ್ಥ. ನೀರಿಲ್ಲದೆ ಜೀವನವಿಲ್ಲ. ಗಾಳಿಯ ನಂತರ ಜೀವಿಗೆ ಬೇಕಾದ ಅತ್ಯಂತ ಮುಖ್ಯ ಅವಶ್ಯಕತೆ ನೀರು. ನೀರನ್ನು ಶೇಖರಿಸಿ ತರಲು ಒಂದು ಸಾಧನ ಬೇಕು. ಬಿಂದಿಗೆಯು ಅಂತಹ ಒಂದು ಸಾಧನ. ನೀರಿಲ್ಲದೆ ಕರ್ಮವಿಲ್ಲ. ಏನಾದರೂ ಮಾಡುವ ಮೊದಲು ಕೈ, ಕಾಲುಗಳನ್ನಾದರೂ ತೊಳೆದುಕೊಳ್ಳುತ್ತೇವೆ. ಅದಕ್ಕೆ ನೀರು ಬೇಕು. ಸ್ನಾನ ಮಾಡಿದರೆ ನೀರು ಬೇಕು. ಪೂಜೆ-ಹೋಮಾದಿಗಳನ್ನು ಮಾಡಲು ಮೊದಲು ನೀರಿನಿಂದಲೇ ಪ್ರಾರಂಭ. ಕಡೆಯಲ್ಲಿ ಸಮರ್ಪಣ ಮಾಡಲೂ ನೀರು ಬೇಕು. ನೀರಿನಿಂದ ಪ್ರಾರಂಭವಾದ ಕೆಲಸಗಳು ನೀರಿನಿಂದಲೇ ಕೊನೆ! ಬೇರೆ ಯಾವುದಾದರೂ ಪದಾರ್ಥ ಇಲ್ಲದಿದ್ದರೆ ಹೇಗೋ ಕೆಲಸ ತೂಗಿಸಬಹುದು. ನೀರಿಲ್ಲದಿದ್ದರೆ ಮುಂದೆ ಹೋಗಲು ಆಗುವುದೇ ಇಲ್ಲ.  

ನೀರಿಗೆ ಒಂದು ವಿಶೇಷಾರ್ಥವಿದೆ. ಬಿಂದಿಗೆ ಅನ್ನುವುದು ದೇಹವಾದಾಗ (ಏಕೆ ಅನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ) ನೀರು ಅನ್ನುವುದು ಜೀವಿಯು ಮಾಡುವ "ಕರ್ಮ" ಸೂಚಕವಾಗುತ್ತದೆ. ಬಿಂದಿಗೆಯಲ್ಲಿ ನೀರನ್ನು ತರುವಂತೆ ದೇಹದಿಂದ ಜೀವಿಯು ಕರ್ಮಗಳನ್ನು ಮಾಡಿ ಆ ಮೂಲಕ ಸಾಧನೆಗಳನ್ನು ಮಾಡುತ್ತಾನೆ. 

ಈಶಾವಾಸ್ಯ ಉಪನಿಷತ್ತು ತನ್ನ ನಾಲ್ಕನೆಯ ಮಂತ್ರದಲ್ಲಿ "ತಸ್ಮಿನ್ ಆಪಃ ಮಾತರಿಶ್ವಾ ದಧಾತಿ" ಎಂದು ಹೇಳುತ್ತದೆ. "ಆಪಃ" ಅಂದರೆ ನೀರು. "ಮಾತರಿಶ್ವ" ಅಂದರೆ ವಾಯು. ವಾಯುವು ಕೊಡುವ ನೀರು ಯಾವುದು? ಕೊಡುವುದು ಯಾರಿಗೆ? ಜೀವಿಯ ಎಲ್ಲ ಕರ್ಮಗಳಿಗೆ ಪ್ರತ್ಯಕ್ಷ ಸಾಕ್ಷಿ ಪ್ರಾಣವಾಯು. ಮೊದಲ ಉಸಿರಿನಿಂದ ಪ್ರಾರಂಭವಾದ ಜೀವನದಿಂದ ಕರ್ಮ ಪ್ರಾರಂಭ. ಕೊನೆಯ ಉಸಿರಿನೊಡನೆ ಅದು ಮುಗಿಯಿತು. ಬೇರೆಯವರ ಕಣ್ಣು ತಪ್ಪಿಸಿ ಅನೇಕ ಕೆಲಸಗಳನ್ನು ಮಾಡಬಹುದು. ಹಾಗೆ ಏನಾದರೂ ಮಾಡಿ ಅರಗಿಸಿಕೊಳ್ಳಬಹುದು. ಆದರೆ ಮಾತರಿಶ್ವನ ಕಣ್ಣು ತಪ್ಪಿಸಲಾಗದು. ಇದನ್ನೇ "ಅಂತಃಸಾಕ್ಷಿ" ಎಂದೂ ಹೇಳುತ್ತೇವೆ.  ಜೀವನ ಕಾಲ ಮುಗಿದ ಮೇಲೆ ಜೀವಿಯನ್ನು ಪರಮಾತ್ಮನ ಮುಂದೆ ನಿಲ್ಲಿಸಿ ವಾಯುದೇವನು ಅವನ ಸಮಸ್ತ ಕರ್ಮಗಳನ್ನು ಹಾಜರು ಮಾಡುತ್ತಾನೆ. 

ಈ ಕಾರಣದಿಂದ "ನಾ ನೀರಿಗ್ಹೋಗುವೆ" ಅಂದರೆ "ನೀನು ಕೊಟ್ಟ ದೇಹದಿಂದ ನಾನು ಕರ್ಮಗಳನ್ನು ಆಚರಿಸಿ ಸಾಧನೆಗಳನ್ನು ಮಾಡುವೆ, ಮಹಾಲಕ್ಷ್ಮಿ ಅಕ್ಕಾ" ಎಂದು ಹೇಳುವುದು. ಇದು ಅಂತರಾರ್ಥ. 
***** 

"ರಾಮನಾಮ ಎಂಬೋ ರಸವುಳ್ಳ ನೀರಿಗೆ" ಬಿಂದಿಗೆ ಬೇಕು. ರಾಮನಾಮದ ವಿಶೇಷವೇನು? ಅನಂತರೂಪಿ ಪರಮಾತ್ಮನಿಗೆ ಅನಂತ ಹೆಸರುಗಳು. ಸೃಷ್ಟಿಯಲ್ಲಿ ಇರುವ ಸಕಲ ಶಬ್ದಗಳೂ ಪರಮಾತ್ಮನನ್ನೇ ಹೇಳುತ್ತವೆ ಎನ್ನುವುದು ಒಂದು ಪ್ರಮೇಯ. (ಧ್ವನ್ಯಾತ್ಮಕ ಮತ್ತು ವರ್ಣಾತ್ಮಕ ಶಬ್ದಗಳ ಬಗ್ಗೆ ಹಿಂದೊಂದು ಸಂಚಿಕೆಯಲ್ಲಿ ನೋಡಿದ್ದೇವೆ). "ರಮಯತಿ ಇತಿ ರಾಮಃ". "ಆನಂದ (ಸಂತೋಷ) ಕೊಡುವವನು ರಾಮ" ಎಂದು ಇದರ ಅರ್ಥ. ಜೀವಿಗಳಿಗೆ ಈ ಸುತ್ತುವ ಸಂಸಾರದ ಹುಟ್ಟು-ಸಾವುಗಳಿಂದ ಬಿಡುಗಡೆ ಕೊಟ್ಟು ಶಾಶ್ವತ ಆನಂದ ಕೊಡುವವನು ರಾಮ. ಈ ಮೋಕ್ಷದ ನಂತರದ ಆನಂದಕ್ಕೆ ಅದರ ಪ್ರಮಾಣದಲ್ಲಿ ಆಗಾಗ ಹೆಚ್ಚು-ಕಡಿಮೆ ಆಗುವ ಭಯವಿಲ್ಲ. ಎಂದೋ ಒಂದು ದಿನ ಮುಗಿದುಹೋಗುವುದು ಎನ್ನುವ ಆತಂಕವಿಲ್ಲ. ಅದು ಶಾಶ್ವತವಾದ, ಕೊನೆಯಿಲ್ಲದ, ಪರಿಪೂರ್ಣ ಆನಂದ. 

ರಾಮನು ಎಲ್ಲ ಕಾಲದಲ್ಲೂ ಇದ್ದನು. ಎಲ್ಲ ಕಾಲದಲ್ಲೂ ಇರುತ್ತಾನೆ. ತ್ರೇತಾಯುಗದ ಶ್ರೀರಾಮಚಂದ್ರನು ಅವತಾರ ಮಾಡುವ ಮೊದಲೂ ಇದ್ದನು. ಆ ಅವತಾರ ಮುಗಿದಮೇಲೂ ಇರುತ್ತಾನೆ. ಇಂತಹ ರಾಮನ ಹೆಸರನ್ನೇ ದಶರಥ-ಕೌಸಲ್ಯೆಯರ ಮಗನಿಗೂ ಕೊಟ್ಟರು. ಇಬ್ಬರೂ ಒಂದೇ. ಭೇದವಿಲ್ಲ. 

ಪರಮಾತ್ಮನ ಅನಂತ ನಾಮಗಳಲ್ಲಿ ರಾಮನಾಮ ಅತ್ಯಂತ ಸುಲಭವಾದದ್ದು. ಒತ್ತಕ್ಷರಗಳ ಗೊಂದಲವಿಲ್ಲ. ಆರು-ಎಂಟು-ಹತ್ತು ಅಕ್ಷರಗಳ ದೊಡ್ಡ ಹೆಸರಲ್ಲ. ಈಗ ತಾನೇ ಮಾತು ಕಲಿಯುತ್ತಿರುವ ಮಗುವೂ ಸುಖವಾಗಿ "ರಾಮ" ಎಂದು ಹೇಳುವುದು. "ಹೃಷಿಕೇಶ" "ತ್ರಿವಿಕ್ರಮ" "ಪದ್ಮನಾಭ" "ಸಂಕರ್ಷಣ" "ಅಧೋಕ್ಷಜ" ಮುಂತಾದುವನ್ನು ಹೇಳಲು ಅನೇಕರಿಗೆ ಕಷ್ಟವಾಗುತ್ತದೆ. ರಾಮನಾಮಕ್ಕೆ ಇಂತಹ ಬಂಧವಿಲ್ಲ. ಅದು ಗಟ್ಟಿಯಾದ ಚಕ್ಕುಲಿ, ಕೋಡುಬಳೆ, ಪುಳ್ಳಂಗಾಯಿ ಉಂಡೆ ತಿಂದು ಅರಗಿಸಿಕೊಂಡಂತೆ ಅಲ್ಲ. ಪಾಯಸ ಕುಡಿದಂತೆ ಸುಲಭ. ಸಿಹಿಯೂ ಹೌದು. ಆದ್ದರಿಂದ "ರಾಮನಾಮ ಪಾಯಸ"!
*****

ರಾಮನಾಮ ಎಂಬ ನೀರು ಎಂದಾಯಿತು. "ರಸವುಳ್ಳ ನೀರು" ಎಂದೇಕೆ ಹೇಳಿದರು? ನೀರಿನಲ್ಲಿ ಎಂತಹ ರಸ? ನಮಗೆ ಬಾಯಾರಿಕೆ ಆದಾಗ ಕುಡಿಯಲು ನೀರು ಬೇಕು. ಒಳ್ಳೆಯ ಬಾದಾಮಿ ಹಾಲೋ, ಎಳನೀರೋ ಕೊಟ್ಟರೆ ಹೇಗೆ? ಸೊಗಸಾದ ಕಾಫಿ? ಅಥವಾ ಕಿತ್ತಳೆ ರಸ? "ಅದೆಲ್ಲಾ ಇರಲಿ. ಕೊಡುವಿರಂತೆ. ಮೊದಲು ಒಂದು ಲೋಟ ನೀರು ಕೊಡಿ, ಆಮೇಲೆ ಬೇರೆಯದು" ಎನ್ನುತ್ತೇವೆ. ಆಯಿತು. ಕೊಟ್ಟರು. ಎಲ್ಲ ನೀರೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಿನಲ್ಲಿ ಬೋರ್ವೆಲ್ ನೀರು ಕೊಡಬಹುದು. ಯಾವುದೊ ಕೆರೆಯಿಂದ ತಂಡ ಟ್ಯಾಂಕರ್ ನೀರು ಇರಬಹುದು. ಕಾವೇರಿ, ಅರ್ಕಾವತಿ ನೀರು ತಂದಿರಬಹುದು. ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ನೀರು ಕುಡಿದರೆ ಮುಖ ಸಿಂಡರಿಸುತ್ತೇವೆ. "ಈ ನೀರು ಅಷ್ಟು ಸರಿ ಇಲ್ಲ" ಅನ್ನುತ್ತೇವೆ. ಯಾಕೆ? ನೀರು ಚೆನ್ನಾಗಿರಬೇಕು. "ಇಂತಹ ಒಳ್ಳೆಯ ನೀರು ತರುತ್ತೇನೆ, ಬಿಂದಿಗೆ ಕೊಡು" ಅನ್ನುವುದು ಸಾಮಾನ್ಯ ಅರ್ಥ. 

"ರಸ" ಅನ್ನುವುದಕ್ಕೆ ವಿಶೇಷಾರ್ಥವೂ ಉಂಟು. ಅದು ತಿಳಿಯಬೇಕಾದರೆ ಶ್ರೀಮದ್ ಭಗವದ್ಗೀತೆಯ ಏಳನೆಯ ಅಧ್ಯಾಯ ನೋಡಬೇಕು. ಎಂಟನೆಯ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳುತ್ತಾನೆ:

ರಸೋಹಂ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ ಸೂರ್ಯಯೋ: 
ಪ್ರಣವಃ ಸರ್ವವೇದೇಷು ಶಬ್ದ: ಖೇ ಪೌರುಷಮ್ ನೃಷು 

"ನೀರಿನಲ್ಲಿ ನಾನು ರಸ ಆಗಿದ್ದೇನೆ. ಚಂದ್ರ-ಸೂರ್ಯರಲ್ಲಿ ಬೆಳಕಾಗಿದ್ದೇನೆ. 
ವೇದಗಳಲ್ಲಿ ಓಂಕಾರವಾಗಿದ್ದೇನೆ. ಆಕಾಶದಲ್ಲಿ ಶಬ್ದ ರೂಪದಲ್ಲಿ ಇದ್ದೇನೆ. 
ಮನುಷ್ಯರಲ್ಲಿ ಕ್ರಿಯಾಶಕ್ತಿಯ ರೂಪವಾಗಿ ನಿಂತಿದ್ದೇನೆ"

ಪರಮಾತ್ಮನ ಸನ್ನಿಧಾನ ಇದ್ದಾಗ ನೀರು ರುಚಿಸುತ್ತದೆ. ಪದಾರ್ಥಗಳ ಸೊಗಸು ನಾಲಿಗೆಗೆ ಸಿಗುತ್ತದೆ. ಕಿತ್ತಳೆ ತೊಳೆ ನೋಡಲು ಕೆಂಪಾಗಿದೆ. ದಪ್ಪಗೂ ಇದೆ. ಆದರೆ ತಿಂದಾಗ ಬರೀ ಬೆಂಡು ಬೆಂಡು. ಯಾಕೆ? ಅಲ್ಲಿ ಪರಮಾತ್ಮನ ಅಭಿವ್ಯಕ್ತಿ ಇಲ್ಲ. ಬಾದಾಮಿ, ಗೋಡಂಬಿ ಬಹಳ ಚೆನ್ನಾಗಿವೆ. ಬಾಯಿಯಲ್ಲಿ ಹಾಕಿಕೊಂಡು ಎಷ್ಟು ಹೊತ್ತು ಇಟ್ಟುಕೊಂಡರೂ ಏನೂ ರುಚಿಯಿಲ್ಲವಲ್ಲ? ಅಗಿದು ಅದಕ್ಕೆ ಸ್ವಲ್ಪ ರಸರೂಪದ ನೀರು ಸೇರಿದರೆ ತಕ್ಷಣ ರುಚಿ ಸಿಕ್ಕಿತು!  

ಮನುಷ್ಯನು ಮಾಡುವ ಕೆಲಸಗಳೂ ಅಂತೆಯೇ. ಯಾವುದೋ ಕಾರಣಕ್ಕೆ ಮಾಡಿದ ಕಾರ್ಯಗಳು ನೀರಸ. "ಪರಮಾತ್ಮನಿಗೆ ಪ್ರೀತಿಯಾಗಲಿ" ಎಂದು ಮಾಡಿದ ತಕ್ಷಣ ಅಲ್ಲಿ ರಸ ಬಂದು ಕೂತಿತು. ಮಾಡಿದ ಕರ್ಮ ಸತ್ಕರ್ಮ ಆಯಿತು. ಅವನಿದ್ದರೆ ಅದು ಸರಸ. ರಸದಿಂದ ಕೂಡಿದ್ದು. ಅವನಿಲ್ಲದಿದ್ದರೆ ಅದು ನೀರಸ. ರಸವಿಲ್ಲದ್ದು. ಅವನಿಗೆ ವಿರುದ್ಧವಾಗಿದ್ದರೆ ವಿರಸ. ಇದೇ ಸತ್ಕರ್ಮಗಳ ರಹಸ್ಯ!

"ರಾಮನಾಮವೆಂಬ ರಸವುಳ್ಳ ನೀರು ತರುತ್ತೇನೆ, ಬಿಂದಿಗೆ ಕೊಡು ಅಕ್ಕಾ" ಅಂದಾಗ "ಸತ್ಕರ್ಮಗಳನ್ನು ಮಾಡಿ ರಸರೂಪವಾದ ಸಾಧನೆಯನ್ನು ದೇಹದಲ್ಲಿ ತುಂಬಿಕೊಳ್ಳುತ್ತೇನೆ" ಎಂದು ಅರ್ಥ. ಇದೇ ಇಲ್ಲಿನ ವಿಶೇಷಾರ್ಥ. 
*****

"ಗೋವಿಂದ ಎಂಬ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ, ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ" ಅನ್ನುವುದು ಮುಂದಿನದು. "ಗೋವಿಂದ" ಅನ್ನುವ ಪದಕ್ಕೆ ಅನೇಕ ಅರ್ಥಗಳು. ಗೋ ಅನ್ನುವ ಪದಕ್ಕೆ "ನೀರು" "ಹಸು" "ಭೂಮಿ" "ವೇದಗಳು" ಇನ್ನೂ ಮುಂತಾಗಿ ವಿವರಣೆಗಳಿವೆ. "ಉತ್ತಮವಾದದ್ದು" ಎಂದೂ ಅರ್ಥವುಂಟು. "ನೀರಿನಲ್ಲಿ ಶ್ರೇಷ್ಠವಾದ ರೀತಿಯ ನೀರು ತರುತ್ತೇನೆ" ಎಂದು ಹೇಳುವುದು ಸಾಮಾನ್ಯ ಅರ್ಥ. 

ಅಮೃತದ ನೀರು ಹೇಗೆ? ಸತ್ಕರ್ಮ ಮಾಡಿದ ಮೇಲೆ ಮುಂದೆ ಜನ್ಮವಿಲ್ಲದ ಮುಕ್ತಿ ಸಿಗುತ್ತದೆ. ಸಾವಿಲ್ಲದ್ದು ಅಮೃತ. ಗೋವಿಂದನ ಪ್ರೀತಿಗಾಗಿ ಮಾಡಿದ ಕರ್ಮಗಳನ್ನು, ನಿಷ್ಕಾಮ ಕರ್ಮಗಳನ್ನು, ತುಂಬಿಕೊಂಡಮೇಲೆ ಮತ್ತೆ ಮರಣವಿಲ್ಲ. ಅಂದರೆ ಅಮೃತತ್ವ ಸಿಕ್ಕಿತು. ಆದ್ದರಿಂದ "ಅಮೃತದ ನೀರು". 

"ಕಾಮಿನಿಯರ ಕೂಡೆ ಏಕಾಂತವಾಡೆನು, ತಾರೆ ಬಿಂದಿಗೆಯ" ಎಂದರೇನು? ನೀರು ತರಲು ನದಿಗೋ, ಭಾವಿಗೋ ಹೋದಾಗ ಅಲ್ಲಿ ನಮ್ಮಂತೆಯೇ ಅನೇಕರು ಬಂದಿರುತ್ತಾರೆ. ಸಾಮಾನ್ಯವಾಗಿ ನೀರು ತರಲು ಹೋಗುತ್ತಿದ್ದುದು ಲೋಕಾರೂಢಿಯಾಗಿ ಹೆಣ್ಣುಮಕ್ಕಳು. ಕಾಮಿನಿ ಅನ್ನುವ ಪದಕ್ಕೆ ಹೆಣ್ಣು ಎಂದೂ ಒಂದು ಅರ್ಥ. ಒಂದರ್ಥವೇನು, ಇದೇ ಅರ್ಥದಲ್ಲಿ ಆ ಪದವನ್ನು ಸಾಮಾನ್ಯವಾಗಿ ಬಳಸುವುದು. ಕೆಲವರು ಅಲ್ಲಿ ಕಂಡಾಗ ಸಹಜವಾಗಿ ಸ್ವಲ್ಪ ಅದು-ಇದು ಮಾತಾಡುವಂತೆ ಆಗುತ್ತದೆ. ಹರಟೆಯಲ್ಲಿ ಕಾಲಹರಣ ನಡೆಯುತ್ತದೆ. "ನಾನು ಹರಟೆಯಲ್ಲಿ ಕಾಲ ವ್ಯಯ ಮಾಡುವುದಿಲ್ಲ. ಅಲ್ಲಿ ಹೋಗಿ, ನೀರು ತುಂಬಿಕೊಂಡು ಬೇಗ ಬಂದುಬಿಡುತ್ತೇನೆ" ಎನ್ನುವುದು ಸಾಮಾನ್ಯ ಅರ್ಥ. 

"ಕಾಮ" ಅಂದರೆ ಆಸೆ. ಆಸೆ ಯಾವಾಗಲೂ ಒಂದೇ ಒಂದಾಗಿ ಬರುವುದಿಲ್ಲ. ಆಸೆಗಳು ಗುಂಪಾಗಿ ಮನುಷ್ಯನನ್ನು ಕಾಡುತ್ತವೆ. ಕಾಮದಿಂದ ಹುಟ್ಟಿದ್ದು ಕಾಮಿನಿ ಎಂದಾಗುತ್ತದೆ. "ಅಕ್ಕ, ನೀನು ದೇಹವನ್ನು ಕೊಟ್ಟರೆ ಅದನ್ನು ಇತರೆ ಆಸೆಗಳ, ಪ್ರಾಪಂಚಿಕ ಸುಖ-ಭೋಗಗಳ, ತೃಪ್ತಿಗೆ ಬಳಸುವುದಿಲ್ಲ. ಕೇವಲ ಸಾಧನೆಗಾಗಿಯೇ ಜೀವಿತ ಕಾಲವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳುವುದೇ ವಿಶೇಷಾರ್ಥ. 

ನೀರು ತರಲೆಂದು ಬಿಂದಿಗೆ ಹಿಡಿದು ಹೊರಟು, ಜಲಾಶಯದ ಬಳಿ ಸಮಯವೆಲ್ಲ ಹರಟೆಯಲ್ಲಿ ಕಳೆದು, ಕಡೆಗೆ ಮನೆಗೆ ಖಾಲಿ ಬಿಂದಿಗೆ ಹಿಡಿದು ಬಂದರೆ ಹೇಗಿರುತ್ತದೆ? ಅಮೂಲ್ಯವಾದ ಮತ್ತು ಅಪರೂಪವಾದ ಮನುಷ್ಯ ಜನ್ಮ ಪಡೆದು. ಲೌಕಿಕ ಸುಖಗಳಲ್ಲಿ ಎಲ್ಲ ಕಾಲ ಕಳೆದು, ಕಡೆಗೆ ಅಲ್ಲಿ ಹೋಗಿ ನಿಂತಾಗ ಖಾಲಿ ಕೈ ಆಗುವಂತಾದರೆ ಹೇಗೆ? ಕಾಡಿ-ಬೇಡಿ ಪಡೆದ ದೇಹ, ಜನ್ಮ ವ್ಯರ್ಥವಾಯಿತು. ಹೀಗಾಗಲು ಬಿಡುವುದಿಲ್ಲ ಎಂದು ಮಹಾಲಕ್ಷ್ಮಿ ದೇವಿಗೆ ವಚನ ಕೊಟ್ಟಂತೆ ಈ ಮಾತು. 
***** 

"ಬಿಂದು ಮಾಧವನ ಘಟ್ಟಕ್ಕೆ ಹೋಗುವೆ, ಪುರಂದರ ವಿಠಲಗೆ ಅಭಿಷೇಕ ಮಾಡುವೆ" ಎನ್ನುವುದು ಕಡೆಯ ನುಡಿಯ ತಿರುಳು. ಕಾಶಿಯಲ್ಲಿ ಬಿಂದುಮಾಧವನ ದೇವಾಲಯ ಇದೆ. ಗಂಗಾನದಿಯ ಪಕ್ಕದಲ್ಲೇ ಇದೆ. "ಒಳ್ಳೆಯ ಗಂಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಬಂದು ವಿಠಲನ ಇನ್ನೊಂದು ರೂಪನಾದ ಮಾಧವನಿಗೆ ಅಭಿಷೇಕ ಮಾಡುತ್ತೇನೆ" ಅನ್ನುವುದು ಸಾಮಾನ್ಯ ಅರ್ಥ. 

"ನೀನು ನನ್ನ ಈ ಬೇಡಿಕೆಯ ಫಲವಾಗಿ ಕೊಡುವ ದೇಹದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಅವುಗಳನ್ನೆಲ್ಲಾ ಪರಮಾತ್ಮನಿಗೆ ಸಮರ್ಪಣ ಮಾಡುತ್ತೇನೆ" ಎಂದು ಮಹಾಲಕ್ಷ್ಮೀದೇವಿಯ ಮುಂದೆ ಪ್ರತಿಜ್ಞೆ ಮಾಡುವುದೇ ಒಟ್ಟು ತಾತ್ಪರ್ಯ ಮತ್ತು ವಿಶೇಷಾರ್ಥ. 

"ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿ ಗರ್ಭಿತಂ" ಎಂದು ಒಂದು ಮಾತಿದೆ. ದೊಡ್ಡವರ ಮಾತುಗಳಲ್ಲಿ ಅವರ ಅನೇಕ ಕಾಲದ ಅನುಭವದ, ಅಧ್ಯಯನದ ಸಾರ ತುಂಬಿರುತ್ತದೆ. ಶ್ರೀ ಪುರಂದರದಾಸರ ಪದಗಳಲ್ಲಿ ಇವನ್ನು ಚೆನ್ನಾಗಿ ಕಾಣಬಹುದು. ಒಂದೊಂದು ಸಾಲಿನಲ್ಲೂ, ಒಂದೊಂದು ಪದದಲ್ಲೂ, ಸಾಮಾನ್ಯ ಅರ್ಥಗಳೂ, ಅವುಗಳ ಜೊತೆ-ಜೊತೆಯಾಗಿ ವಿಶೇಷ ಅರ್ಥಗಳೂ, ಗೂಡಾರ್ಥಗಳೂ ತುಂಬಿರುತ್ತವೆ. ಒಂದು ಸಲ ಓದಿದರೆ ಅಥವಾ ಕೇಳಿದರೆ ಅಷ್ಟಿಷ್ಟು ಅರ್ಥವೇನೋ ಆಗುತ್ತದೆ. ಸರಿಯಾದ ಮೌಲ್ಯ ನಮಗೆ ಸಿಗಬೇಕಾದರೆ ಹೆಚ್ಚಿನ ಅಧ್ಯಯನ ಅಗತ್ಯ. 

*****

ಹಿಂದಿನ ಮತ್ತು ಈ ಸಂಚಿಕೆಯನ್ನು ಓದಿದ ನಂತರ ಹಾಡನ್ನು ಕೇಳಿದರೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಅದನ್ನು ಈ ಕೆಳಗೆ ಕೊಟ್ಟಿದೆ:


ಒಂದು ಬಾರಿ ಓದಿದರೆ ವಿಶೇಷಾರ್ಥಗಳು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಎರಡು ಮೂರು ಬಾರಿ ಓದುವ ತಾಳ್ಮೆ ಬೇಕು. ಒಮ್ಮೆ ಮನಸ್ಸಿನಲ್ಲಿ ನಿಂತರೆ ಮುಂದೆ ಬೇರೆ ಬೇರೆ ವಿಷಯಗಳ ಅಧ್ಯಯನ ಕಾಲದಲ್ಲಿ ಮತ್ತಷ್ಟು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. 

Tuesday, December 16, 2025

ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ


ಹಿಂದೊಮ್ಮೆ "ಹೂವು-ಹುಲ್ಲು ಮತ್ತು ಶ್ರೀಕೃಷ್ಣ" ಅನ್ನುವ ಶೀರ್ಷಿಕೆಯಡಿ ಶ್ರೀ ಪುರಂದರದಾಸರ ಜನಪ್ರಿಯ ಕೃತಿ "ಹೂವ ತರುವರ ಮನೆಗೆ ಹುಲ್ಲ ತರುವ, ಅವ್ವ ಲಕುಮಿರಮಣ ಇವಗಿಲ್ಲ ಗರುವ" ಬಗ್ಗೆ ವಿಚಾರ ಮಾಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು.  

ಅನೇಕ ಕೃತಿಗಳಲ್ಲಿ ಹೊರನೋಟಕ್ಕೆ ಕಾಣುವ ಅರ್ಥಕ್ಕೂ, ಒಳಗಿನ ಅಂತರಾರ್ಥಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಒಟ್ಟಿನಲ್ಲಿ ಮೂರು ವಿಧದ ಅರ್ಥಗಳು ಉಂಟು. ಇವನ್ನು ಬಾಹ್ಯಾರ್ಥ, ಅಂತರಾರ್ಥ ಮತ್ತು ಗೂಡಾರ್ಥ ಅನ್ನುತ್ತಾರೆ. ಇದರ ಬಗ್ಗೆ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಇದೇ ಸಂದರ್ಭದಲ್ಲಿ "ಬಿಂದು ಗಂಗೋದಕ" ಎನ್ನುವ ವಿಷಯದ ಚರ್ಚೆಯಲ್ಲಿ ವಾರಣಾಸಿಯಲ್ಲಿರುವ ಬಿಂದುಮಾಧವ ದೇವಾಲಯ, ದೇಶದಲ್ಲಿರುವ ಇತರೆ ಮಾಧವ ದೇವಾಲಯಗಳು ಮತ್ತು ಕಾಶಿಯ ಬಿಂದುಮಾಧವ ಘಟ್ಟ ಮುಂತಾದ ವಿವರಗಳನ್ನು ನೋಡಿದ್ದೆವು. ಓದುಗರೊಬ್ಬರು "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಕೃತಿಯಲ್ಲಿ ಬರುವ "ಬಿಂದು ಮಾಧವನ ಘಟ್ಟಕ್ಕೆ ಹೋಗುವೆ ತಾರೇ ಬಿಂದಿಗೆಯ" ಅಂತರಾರ್ಥ ಮತ್ತು ಗೂಡಾರ್ಥಗಳ ಬಗ್ಗೆ ಕೇಳಿದ್ದಾರೆ. ಈಗ ಅದನ್ನು ಸ್ವಲ್ಪ ನೋಡೋಣ. 

*****

"ತಾರಕ್ಕ ಬಿಂದಿಗೆ.." ಕೃತಿಯಲ್ಲಿ ಒಬ್ಬರು (ಪುರುಷ ಅಥವಾ ಸ್ತ್ರೀ) ಮತ್ತೊಬ್ಬರನ್ನು (ಸ್ತ್ರೀ) ನೀರು ತರಲು ಒಂದು ಬಿಂದಿಗೆ ಕೊಡಲು ಕೇಳುವಂತೆ ಇದೆ. ಇದನ್ನು ನರ್ಸರಿ ಶಾಲೆಯಲ್ಲಿ ಪುಟ್ಟ ಮಕ್ಕಳಿಗೆ ಚೆನ್ನಾಗಿ ಅಲಂಕಾರ ಮಾಡಿ ಶಾಲಾ ವಾರ್ಷಿಕೋತ್ಸವದಂದು ನೃತ್ಯ ಮಾಡಲು ವಿಶೇಷವಾಗಿ ಬಳಸುತ್ತಾರೆ. ಸಂಗೀತ ಕಲಿಯುವ ಮಕ್ಕಳಿಗೆ ಪ್ರಾರಂಭದಲ್ಲಿ ಹೇಳಿಕೊಡುವ ಹಾಡುಗಳಲ್ಲಿ ಇದೂ ಒಂದು. ಸರಳವಾದ ಪದಗಳ ಬಳಕೆಯ ಮೂರು ನುಡಿಗಳ ಪುಟ್ಟ ಹಾಡು. ಕಲಿಯಲು ಸುಲಭ. ನೆನಪಿಡಲು ಸರಳ. ಹಾಡಲು ಸುಗಮ. ಆದರೆ ಅರ್ಥ ಬಹಳ ಗಹನ. ಇದೇ ಇದರ ವಿಶೇಷ. 

ಶ್ರೀ ಪುರಂದರದಾಸರು ಮಾಧ್ವ ಸಂಪ್ರದಾಯದ ಕವಿಗಳು ಮತ್ತು ತತ್ವಜ್ಞರು. "ಸುಮಧ್ವ ವಿಜಯ" ಅನ್ನುವ ಗ್ರಂಥದಲ್ಲಿ (ಅದ್ವೈತದಲ್ಲಿ "ಶ್ರೀ ಶಂಕರ ದಿಗ್ವಿಜಯ" ಗ್ರಂಥವಿದ್ದಂತೆ ದ್ವೈತದಲ್ಲಿ ಈ "ಸುಮಧ್ವ ವಿಜಯ ಗ್ರಂಥ) ಆಚಾರ್ಯ ಮಧ್ವರ ಭಾಷ್ಯಗಳ ಮತ್ತು ಪ್ರವಚನಗಳ ಪರಿಣಾಮಗಳನ್ನು ವರ್ಣಿಸುವ ಪ್ರಸಂಗವಿದೆ. ಈ ಗ್ರಂಥದ ಒಂಭತ್ತನೆಯ ಸರ್ಗದ ಹತ್ತನೆಯ ಶ್ಲೋಕದಲ್ಲಿ "ಬಾಲಸಂಗಮಪಿ ಬೋಧಯದ್ ಭೃಶಂ ದುರ್ನಿರೂಪವಚನಂ ಚ ಪಂಡಿತೈ:" ಎನ್ನುವ ಒಂದು ಹೇಳಿಕೆಯಿದೆ. "ಚಿಕ್ಕಮಕ್ಕಳಿಗೂ ಅರ್ಥವಾಗುವುದು. ಆದರೆ ಘನ ಪಂಡಿತರಿಗೂ ಗೊತ್ತಾಗದು!" ಎಂದು ಅದರ ಅರ್ಥ. ಈ ಹಾಡೂ ಅಂತೆಯೇ. ಬಾಹ್ಯಾರ್ಥ ಪುಟ್ಟ ಮಕ್ಕಳಿಗೂ ಗೊತ್ತಾಗುವುದು. ನೀರು ತರಲು ಬಿಂದಿಗೆ ಕೊಡು ಎನ್ನುವುದು. ಅಂತರಾರ್ಥ-ಗೂಡಾರ್ಥಗಳು ತಿಳಿಯಲು ಅನೇಕ ಗ್ರಂಥಗಳ ಆಳವಾದ ಅಭ್ಯಾಸ ಬೇಕಾಗುವುದು. ಇದು ಏಕೆ ಎನ್ನುವುದನ್ನು ಸ್ವಲ್ಪಮಟ್ಟಿಗೆ ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳುತ್ತಿರುವುದು ಅಕ್ಕನನ್ನು. ಅಕ್ಕ ಯಾರು? ಒಂದು ಮನೆಯಲ್ಲಿ ಹುಟ್ಟಿದ ಹುಡುಗಿ ತನ್ನ ನಂತರ ಹುಟ್ಟಿದ ತಮ್ಮ-ತಂಗಿಯರಿಗೆ ಅಕ್ಕ. ಇದು ಲೋಕಾರೂಢಿ. ತಮ್ಮ-ತಂಗಿಯರು ಏನಾದರೂ ಬೇಕಾದರೆ ತಮಗಿಂತ ದೊಡ್ಡವಳಾದ, ಮತ್ತು ಆ ಕಾರಣದಿಂದ ಮನೆಯಲ್ಲಿ ಸ್ವಲ್ಪ ಹೆಚ್ಚಿನ ಅಧಿಕಾರ ಹೊಂದಿರುವ ಅಕ್ಕನನ್ನು ಕೇಳುವುದು ಸಹಜ. ಅದಲ್ಲದೆ ಅಕ್ಕ ಎಂದರೆ ಸ್ವಲ್ಪ ಸಲಿಗೆಯೂ ಹೆಚ್ಚಾಗಿ ಉಂಟು. ಅಣ್ಣನಿಗಿಂತ ಅಕ್ಕನಲ್ಲಿ ಕೇಳುವುದು ಸುಲಭ. ಅವಳದ್ದು ಹೆಂಗರುಳು. ತುಂಬಿದ ಮನೆಯಲ್ಲಿ ಬೆಳೆದವರಿಗೆ ಇದು ಗೊತ್ತು. ವಯಸ್ಸಿನ ಅಂತರ ಹೆಚ್ಚಿದ್ದರೆ ಕೇಳುವವರು ರಾಗವಾಗಿ ಬೇಡುವುದು ಸಾಮಾನ್ಯ. ಇಲ್ಲಿ ಕೇಳುವುದು ಹಾಗೆ ಇದೆ. "ಕೊಡೇ ಅಕ್ಕಾ...." ಎಂದು ಪ್ರೀತಿಯಿಂದ ಮನವೊಲಿಸುವ ರೀತಿ. ಆದ್ದರಿಂದ "ತಾರೇ ಬಿಂದಿಗೆಯಾ" ಎಂದು ದೀರ್ಘ! ಇದು ಇಲ್ಲಿನ ಸಾಮಾನ್ಯ ಅರ್ಥ. 

ಕೆಲವು ಕುಟುಂಬಗಳಲ್ಲಿ ತಾಯಿಗೆ "ಅಮ್ಮ" ಎಂದು ಸಂಬೋಧಿಸುವ ಪದ್ಧತಿ ಉಂಟು. ಹೆಚ್ಚಿನ ಕುಟುಂಬಗಳಲ್ಲಿ ಹೀಗೆಯೇ ಅಭ್ಯಾಸ. ಕೆಲವು ಪ್ರದೇಶಗಳಲ್ಲಿ (ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ) "ಅವ್ವ" ಎಂದೂ ಕರೆಯುತ್ತಾರೆ. ಗಂಡ-ಹೆಂಡತಿ ಮದುವೆಯ ನಂತರ ಹೊಸದಾಗಿ ಸಂಸಾರ ಹೂಡಿದಾಗ ಇನ್ನೂ ಸಂತಾನ ಇರುವುದಿಲ್ಲ. ಅವರ ಜೊತೆ ಗಂಡನ ತಮ್ಮ-ತಂಗಿಯರು ವಾಸವಿದ್ದರೆ ಅವರು ಅವನನ್ನು "ಅಣ್ಣ" ಎಂದು ಕರೆಯುತ್ತಾರೆ. ನಂತರ ಆ ದಂಪತಿಗಳ ಸಂತಾನವಾಗಿ ಹುಟ್ಟಿದ ಮಕ್ಕಳು ತಂದೆಯನ್ನು "ಅಣ್ಣ" ಎಂದು ಈ ಕಾರಣದಿಂದ ಕರೆಯುವುದು ಉಂಟು. ಇದೇ ರೀತಿ ಹೆಂಡತಿಯ ತಮ್ಮ-ತಂಗಿಯರು ಅವರೊಡನಿದ್ದರೆ ಆಕೆಯನ್ನು "ಅಕ್ಕ" ಎಂದು ಕರೆಯುತ್ತಾರೆ. ಮುಂದೆ ಹುಟ್ಟಿದ ಮಕ್ಕಳು ಇದನ್ನೇ ಅನುಸರಿಸಿ ತಾಯಿಯನ್ನೂ "ಅಕ್ಕ" ಎಂದೇ ಕರೆಯುತ್ತಾರೆ. ಮಹಾಲಕ್ಷ್ಮಿ ಎಲ್ಲರಿಗೂ ತಾಯಿಯಾದರೂ ಈ ಹಿನ್ನೆಲೆಯಲ್ಲಿ ಅಕ್ಕನೂ ಆಗುತ್ತಾಳೆ.       

ಬಿಂದಿಗೆ ಒಂದು ದಿನಬಳಕೆಯ ಜಡ ಪದಾರ್ಥ. ಸ್ವಲ್ಪ ಅನುಕೂಲವಂತರಾದ ಜನರ ಮನೆಯಾದರೆ ಅಲ್ಲಿ ಹಿತ್ತಾಳೆ ಅಥವಾ ತಾಮ್ರದ ಬಿಂದಿಗೆ ಉಂಟು. ಬಡವರ ಮನೆಯಾದರೆ ಮಣ್ಣಿನ ಮಡಕೆ ಮಾತ್ರ ಇರುವುದು. ಚಿಕ್ಕವರಿಗೆ ಕೊಟ್ಟಾಗ, ಅವರು ಕಳೆದುಕೊಂಡರೆ ಬೆಲೆಬಾಳುವ ವಸ್ತು ಹೋಯಿತು. ಮಣ್ಣಿನದಾದರೆ, ಅವರು ಬಲು ಬೇಗ ಒಡೆದುಹಾಕಿ ಅದು ಹಾಳಾಗಬಹುದು. ಆದ್ದರಿಂದ ಎರಡು ರೀತಿಯಲ್ಲೂ ನಷ್ಟವೇ ಹೌದು. ಈ ಕಾರಣಕ್ಕಾಗಿ ದೊಡ್ಡವರನ್ನು ಕೇಳಿ ಪಡೆದುಕೊಳ್ಳಬೇಕಾಗುತ್ತದೆ. 

ಒಂದೆಡೆ ಒಬ್ಬ ಪರಮಾತ್ಮ. ಇನ್ನೊಂದೆಡೆ ಅನೇಕ ಜೀವರುಗಳು. ಮೂರನೆಯವು ಜಡ ವಸ್ತುಗಳು. ಜಡ ಪ್ರಕೃತಿಗಳಿಗೆ ಅಭಿಮಾನಿ ದೇವತೆ ಮಹಾಲಕ್ಷ್ಮೀದೇವಿ. ಇಲ್ಲಿ ಜೀವಿಗಳು ಮಹಾಲಕ್ಷ್ಮೀದೇವಿಯನ್ನು ತಮಗೊಂದು ದೇಹವನ್ನು ಕೊಡು ಎಂದು ಕೇಳುತ್ತಿರುವುದು ಅಂತರಾರ್ಥ. ನಮ್ಮ ದೇಹವೂ ಒಂದು ಬಿಂದಿಗೆಯಂತೆ ಅಥವಾ ಮಡಕೆಯಂತೆಯೇ ಇದೆ. ಅವುಗಳಿಗೂ ಕತ್ತು ಅಥವಾ ಕಂಠ ಪ್ರದೇಶ ಉಂಟು. ನಮ್ಮ ದೇಹಗಳಿಗೂ ಹೀಗೆಯೇ ಕತ್ತು ಇದೆ. ನದಿಯಲ್ಲೋ, ಜಲಾಶಯದಲ್ಲೋ ಬೇಕಾದಷ್ಟು ನೀರುಂಟು. ಆದರೆ ನೀರು ತರಬೇಕಾದರೆ ಬಿಂದಿಗೆ ಬೇಕು. ಬಿಂದಿಗೆಗಳಲ್ಲಿ ನೀರು ತುಂಬಬಹುದು. ಜೀವನಿಗೆ ಸಾಧನೆ ಮಾಡಲು ಅನೇಕ ಅವಕಾಶಗಳಿವೆ. ಆದರೆ ಸಾಧನೆ ಮಾಡಲು ಒಂದು ದೇಹ ಬೇಕು! ನಮ್ಮ ದೇಹಗಳಿಂದ ಅನೇಕ ರೀತಿಯ ಸಾಧನೆಕ್ರಿಯೆಗಳನ್ನು ಮಾಡಿ ಸಾಧನೆಯ ಫಲವನ್ನು ಜೀವಿಯು ತುಂಬಿಕೊಳ್ಳಬಹುದು. ದೇಹವಿಲ್ಲದಿದ್ದರೆ ಜೀವನು ಏನೂ ಸಾಧನೆ ಮಾಡಲು ಸಾಧ್ಯವಿಲ್ಲ.

"ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ" ಅನ್ನುವಲ್ಲಿ ಜೀವನು ಜಡ ಪ್ರಕೃತಿಯ ಅಭಿಮಾನಿ ದೇವತೆ ಮಹಾಲಕ್ಷ್ಮಿಯನ್ನು ಸಾಧನೆ ಮಾಡುವ ಸಲುವಾಗಿ ನಮಗೆ ಒಂದು ದೇಹವನ್ನು ಕೊಡು ಎಂದು ಬೇಡುವುದು ಅಂತರಾರ್ಥ. 
***** 

ಇನ್ನು "ಬಿಂದಿಗೆ ಒಡೆದರೆ ಒಂದೇ ಕಾಸು" ಎಂದರೇನು? ತಾಮ್ರದ ಅಥವಾ ಹಿತ್ತಾಳೆ ಬಿಂದಿಗೆ ಒಡೆಯುವುದಿಲ್ಲ. ಅವು ಕಳೆದುಹೋಗಬಹುದು ಅಥವಾ ಚಿಕ್ಕವರನ್ನು ಹೆದರಿಸಿ ಮತ್ಯಾರೋ ಧಾಂಡಿಗರು ಕಿತ್ತುಕೊಂಡು ಹೋಗಬಹುದು. ಒಡೆಯಬೇಕಾದರೆ ಅದು ಮಣ್ಣಿನ ಬಿಂದಿಗೆ (ಮಡಕೆ) ಆಗಿರಬೇಕು. ಇದು ನೇರವಾಗಿ ದೇಹವನ್ನೇ ಸೂಚಿಸುತ್ತದೆ. ಯಾರಾದರೂ ಸತ್ತ ಸುದ್ದಿ ಕೇಳಿದಾಗ ಹಿಂದಿನ ದಿನಗಳಲ್ಲಿ "ಒಂದು ಘಟ ಬಿತ್ತು" ಎಂದು ಸೂಚ್ಯವಾಗಿ ಹೇಳುತ್ತಿದ್ದರು. ಘಟ ಸಂಸ್ಕೃತ ಪದ. ಕನ್ನಡಲ್ಲಿ ಮಡಕೆ. 

ಸ್ಮಶಾನದಲ್ಲಿ ಮೃತ ದೇಹಗಳ ಅಂತ್ಯ ಸಂಸ್ಕಾರ ಮಾಡುವಾಗ, ಸಂಸ್ಕಾರ ಮಾಡುತ್ತಿರುವ ವ್ಯಕ್ತಿಯ ಹೆಗಲ ಮೇಲೆ ಒಂದು ನೀರು ತುಂಬಿದ ಮಣ್ಣಿನ ಘಟ (ಮಡಕೆ) ಹೊರಿಸುತ್ತಾರೆ. ಮೃತ ದೇಹದ ಸುತ್ತ ಅವನು ಸುತ್ತುವಾಗ ಒಂದು ಸಣ್ಣ ಕಲ್ಲಿನಿಂದ ಅದಕ್ಕೆ ಮತ್ತೊಬ್ಬರು ಒಂದು ರಂಧ್ರ ಮಾಡುತ್ತಾರೆ. ಮೂರು ಸುತ್ತು. ಒಂದು ಸುತ್ತಿಗೆ ಒಂದರಂತೆ ಮೂರು ರಂಧ್ರಗಳು. ಈ ತೂತುಗಳಿಂದ ನೀರು ಹೊರಗೆ ಸೋರಿಹೋಗುತ್ತಿರುತ್ತದೆ. ಮೂರನೆಯ ಸುತ್ತು ಬಂದ ಮೇಲೆ ಮಡಕೆ ಹೊತ್ತುಕೊಂಡಿರುವ ವ್ಯಕ್ತಿ ಅದನ್ನು ಹಿಮ್ಮುಖವಾಗಿ ಬೀಳಿಸುತ್ತಾನೆ. ಈಗ ಮಡಕೆ ಪೂರ್ತಿ ಒಡೆದು ಚೂರುಗಳಾಗಿ ಬೀಳುತ್ತದೆ. ಹೀಗೆ ಬಿದ್ದ ಒಂದು ದೊಡ್ಡ ಮಡಕೆಯ ಚೂರಿನಲ್ಲಿ ಇರುವ ಸ್ವಲ್ಪ ನೀರನ್ನು ಮುಂದಿನ ಕರ್ಮದ ಕೆಲಸಗಳಿಗೆ ಬಳಸುತ್ತಾರೆ. "ಒಂದು ಘಟ ಬಿತ್ತು" ಎನ್ನುವ ಪದಪ್ರಯೋಗ ಈ ಕಾರಣದಿಂದ ಬಂದದ್ದು. 

ಹಿಂದೆಲ್ಲಾ ಸುಡುಗಾಡಿಗೆ ಅಥವಾ ಸ್ಮಶಾನಕ್ಕೆ ಹೋಗಿ ಇದನ್ನು ನೋಡಿದವರಿಗೆ ಮಾತ್ರ ಇವು ಗೊತ್ತಾಗುತ್ತಿತ್ತು. ಸುಡುವ ಕಾಡು ಸುಡುಗಾಡು. ಈಗ ಟಿವಿ ಕಾರ್ಯಕ್ರಮಗಳಲ್ಲಿ ಮತ್ತು ಸಿನಿಮಾಗಳಲ್ಲಿ ವೈಭವದಿಂದ ತೋರಿಸುವುದರಿಂದ ಹೆಚ್ಚಿನ ಜನಕ್ಕೆ ಗೊತ್ತು. 

ಉಳಿದಿದ್ದು "ಒಂದೇ ಕಾಸು" ಅನ್ನುವುದು. ಒಬ್ಬ ವ್ಯಕ್ತಿ ಸತ್ತ ಮೇಲೆ ಆ ದೇಹವನ್ನು ಏನು ಮಾಡಬೇಕು? ಎಷ್ಟೇ ಪ್ರೀತಿಯ ವ್ಯಕ್ತಿಯಾದರೂ ಆ ದೇಹವನ್ನು ಇಟ್ಟುಕೊಳ್ಳುವಂತಿಲ್ಲ. ಸಂಸ್ಕಾರ ಮಾಡಬೇಕು. ಹಾಗೆ ಮಾಡಿ ದೇಹದ ಕೆಲಸ ಮುಗಿಸಬೇಕು. ಇದು ಲೋಕದಲ್ಲಿ ಎರಡು ರೀತಿಯಲ್ಲಿ ನಡೆಯುತ್ತದೆ. ಕೆಲವರು ಭೂಮಿಯಲ್ಲಿ ಹೂಳುತ್ತಾರೆ. ಮತ್ತೆ ಕೆಲವರು ಬೆಂಕಿಯಲ್ಲಿ ಸುಡುತ್ತಾರೆ. ಬೆಂಕಿಯಲ್ಲಿ ಸುಡುವುದಕ್ಕೆ "ಕಾಯಿಸುವುದು" ಎಂದೂ ಹೇಳುತ್ತಾರೆ. ಆಡು ಭಾಷೆಯಲ್ಲಿ "ಕಾಯಿಸು" ಅನ್ನುವುದು "ಕಾಸು" ಆಗುತ್ತದೆ. "ಇನ್ನೇನು, ಕಾಫಿ ಕಾಸು" ಎಂದು ಹಿಂದೆಲ್ಲಾ ಹೇಳುತ್ತಿದ್ದರು. "ಸ್ನಾನಕ್ಕೆ ನೀರು ಕಾಸು" ಅನ್ನುತ್ತಿದ್ದರು. ದಾಸರು ಇದನ್ನೇ "ಬಿಂದಿಗೆ ಒಡೆದರೆ ಒಂದೇ ಕಾಸು" ಎಂದಿದ್ದಾರೆ. ಒಂದೇ ಕಾಸು. ಏಕೆಂದರೆ "ಮತ್ತೆ ಮತ್ತೆ ಕಾಸುವಂತಿಲ್ಲ". ಇದು ಕಡೆಯ ಕಾಸುವಿಕೆ. ಅಲ್ಲಿಗೆ ಎಲ್ಲ ಮುಗಿಯಿತು. ಹೀಗೆ. 

*****

ಕೇವಲ ಎರಡು ಸಾಲಿನ ಪಲ್ಲವಿಗೇ ಇಷ್ಟಾಯಿತು. ಇದರಲ್ಲೂ "ನೀರು" ಪದದ ವಿಶೇಷಾರ್ಥ ಉಳಿದಿದೆ. ಈಗಿನ ಪೀಳಿಗೆಗೆ ಇಂತಹ ಹೆಚ್ಚು ವಿಷಯಗಳು ಗೊತ್ತಿರುವುದಿಲ್ಲ. ಪ್ರಶ್ನೆಗಳನ್ನು ಕೇಳುವವರು ಬಹುತೇಕ ಈಗಿನ ತಲೆಮಾರಿನವರು. ಆದ್ದರಿಂದ ವಿವರಗಳು ಜಾಸ್ತಿ. ಲೇಖನದ ಉದ್ದವೂ ದೊಡ್ಡದು.

ಮುಂದಿನ ಸಂಚಿಕೆಯಲ್ಲಿ ಈ ಕೃತಿಯ ಇತರೆ ಅಂತರಾರ್ಥ, ಗೂಡಾರ್ಥಗಳನ್ನು ಹುಡುಕುವ ಪ್ರಯತ್ನ ಮಾಡೋಣ.

Sunday, April 17, 2016

Elephant in the Mirror


Many methods and techniques are used by Teachers and Trainers all over the world to impart knowledge and skills to their pupils, especially when conveying complex and abstract concepts. The more popular as well as effective among such tools are the methods known as "Known to Unknown" and "Simple to Complex". In "known to unknown" method, the teacher or trainer starts with some concept or subject that is already known to the student or the trainee. He then develops on it and links the same to a new and more difficult concept to enable the wards to understand the unknown. In "simple to complex" method, the principle or application is started from a simpler idea and then slowly develop the wider and more complex principles or applications. Modren teaching and training methods place a lot of emphasis on using these techniques to ensure faster learning and lasting effects on the students. It is interesting to note that these methods are in use for several centuries and have wide usage and acceptance all over the world. These methods are also in use in explaining the abstract theorems, axioms and assumptions. We can find many such examples in spiritual as well as cultural writings and literature.

*****  

One of the most important theorems of Vedic knowledge and understanding is the concept of "Parabrahma", the supreme Lord. His presence is learnt through his infinite qualities. One such quality is all-pervasiveness. The supreme Lord is believed to be present everywhere; he has occupied all the space that is known as well as beyond that. He can be present everywhere at the same time. He can be bigger than any big thing and smaller than the smallest thing that one can see, imagine or perceive. "Narayana Suktam" which is a part of Yajurveda and believed to be a appendix to "Purusha Suktam" explains this concept beautifully. Narayana Suktam is generally recited at the end of all religious procedures and offered to the supreme Lord as "Mantrapushpam", offering of flowers in the form of words. This concept of all-pervasive and omni-present Parabrahma and his infinite capacity to occupy the biggest as well as the smallest available space is one of the basic tenets of Vedic beliefs.

While it is easy to say that Parabrahma can be bigger than the biggest as well as smaller than the smallest, it is difficult to comprehend the same for many. This is explained by means of many examples. 
*****

Saint Purundara Dasa (1484-1564) who lived during the finest period of Vijayanagara empire in South India was a contemporary of Sage Vyasateertha and King Krishnadevaraya. He is hailed as the Pitamaha (Great-grandfather) of Karnaatic school of music. Legend has it that he has composed 4,75,000 poems (Devaranamas) in the praise of Lord, though only a few thousands are available now. His Devaranamas are in simple Kannada language and yet have succeeded in bringing the essence of Vedic and spiritual knowledge to the common man. Ugabhoga and Suladi are among many forms of compositions made by him and later followed by others in his path. 

In one of his Ugabhogas, he explains the concept of the Lord occupying the smallest place when he is bigger than the biggest known entity and extending beyond that. It is in Kannada and reads as under:

ಜಗವ ಸುತ್ತಿಹುದೆಲ್ಲ ನಿನ್ನ ಮಾಯವಯ್ಯ, 
ನಿನ್ನ ಸುತ್ತಿಹುದೆಲ್ಲ ಎನ್ನ ಮನವಯ್ಯ ।
ಜಗಕೆ ಬಲ್ಲಿದ ನೀನು, ನಿನಗೆ ಬಲ್ಲಿದ ನಾನು, 
ಮೂರು ಜಗವು ನಿನ್ನೊಳಗೆ, ನೀನು ಎನ್ನೊಳಗೆ ।
ಕರಿಯು ಕನ್ನಡಿಯಲ್ಲಿ ಅಡಗಿಪ್ಪ ತೆರನಂದಿ ಎನ್ನೊಳಗೆ ನೀನು ಅಡಗಿದೆಯೋ।
ಸಿರಿ ಪುರಂದರ ವಿಠಲ ।।

The summary of the above Ugabhoga is something like this - "The entire Universe is engulfed by your charm, but my mind is wrapped around your entire presence! You are a big presence for others due to your all pervasiveness; but I am bigger than you since I hold you in me! Just as an Elephant is captured in a small mirror held in its presence, you are present in me! (Elephant is very big but its image can be held even in a small mirror kept before it.) Purandara Vittala, The supreme Lord!

This is the submission of a pious devotee of The Lord. It is not an arrogant statement, but a humble submission. The devotee is bigger than the Lord only because he is holding the biggest possible entity (The Lord) inside him just like the image of a huge elephant in a small mirror.

This is a fine example of "Known to Unknown". In the following devaranama titled "Pillangoviaya chelva Krishnana elli noodidiri?" (Where did you see the flute playing Krishna?), Purandara Dasa expands this theorem by using the "Simple to Complex" method. The follower or devotee is thrilled by the understanding of one of the fundamental tents of the Vedic knowledge. Whether one believes in it or not, the principle and the method of its communication is indeed magnificent.   
*****

The Ugabhoga and Devaranama mentioned above are sung by many and recordings are available on "Youtube". The one sung by Sri Vidyabushana is very popular. You may click on the video below and listen to the same.