Showing posts with label Narayana. Show all posts
Showing posts with label Narayana. Show all posts

Thursday, January 1, 2026

ಹದಿನಾರು ಮತ್ತು ಇಪ್ಪತ್ತೊಂದು


ಅದೊಂದು ಬಲು ಸುಂದರವಾದ ಮಗು. ಆಗ ತಾನೇ ಹುಟ್ಟಿದ ಕೂಸು. ಅರಳಿದ ಕಮಲದಲ್ಲಿ ಮಲಗಿದ್ದ ಶಿಶು. ಸ್ವಲ್ಪ ವಿಚಿತ್ರವಾದ ಹಸುಳೆ. ಎಲ್ಲಾ ಸರಿ ಇದ್ದರೂ ತಲೆಗಳು ಮಾತ್ರ ನಾಲ್ಕು! ಅದಕ್ಕೆ ಸರಿಯಾಗಿ ನಾಲ್ಕು ಕೈಗಳು. ಅತಿ ಮೋಹಕವಾದ ಶರೀರ. ಎದ್ದ ಮಗು ತಕ್ಷಣ ಕಣ್ಣು ಬಿಟ್ಟಿತು. ತನ್ನ ಸುತ್ತ-ಮುತ್ತ ನೋಡಿತು. 

ಎಲ್ಲ ಕಡೆ ಆವರಿಸಿರುವ ಕತ್ತಲು. ಯಾರೂ ಬೇರೆಯವರು ಕಾಣರು. ತಾನು ಯಾರು? ತನಗೆ ಜನ್ಮ ಕೊಟ್ಟವರು ಯಾರು? ಎಲ್ಲಿಂದ ಬಂದೆ? ಯಾವುದೂ ತಿಳಿಯದು. ಇದೇನು ವಿಚಿತ್ರ?

ಸುಮ್ಮನೆ ಇರುವಂತಹ ಮಗುವಲ್ಲ ಅದು. ತನಗೆ ಆಸರೆಯಾಗಿ, ಹಾಸಿಗೆಯಾಗಿ ಹರಡಿದ್ದ ಕಮಲವನ್ನು ಗಮನಿಸಿತು. ಅದರ ಕೆಳಗಿದ್ದ ದೊಡ್ಡ ಕಾಂಡವನ್ನು ಕಂಡಿತು. ಕಮಲದ ದೇಟಿನೊಳಗೆ ಇಳಿಯಿತು. ಇಳಿದು ಎಲ್ಲೆಡೆ ಹುಡುಕಿತು. ಅಲ್ಲಿ ಎಷ್ಟು ಹುಡುಕಿದರೂ ಯಾರೂ ಕಾಣಲಿಲ್ಲ. 

ಕಾಂಡದ ಆಳದಿಂದ ಹೊರಗೆ ಬಂದು ಅದೇ ಕಮಲದಲ್ಲಿ ಪದ್ಮಾಸನ ಹಾಕಿ ಕೂತಿತು. ಅದಕ್ಕೇನು ಭಯವಿರಲಿಲ್ಲ. ಆದರೂ ಮುಂದೆ ಏನು ಮಾಡಬೇಕೆಂಬ ಸಮಸ್ಯೆ ಎದುರಿಗೆ ಇತ್ತು. ತನಗೆ ಜನ್ಮದಾತರು ಯಾರು? ಮುಂದೆ ತನ್ನ ಕೆಲಸವೇನು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ತೊಡಗಿತು. 

*****

ಹೀಗೆ ಕುಳಿತ ಮಗುವಿಗೆ ವಿಶಾಲ ಆಕಾಶದಲ್ಲಿ ಶಬ್ದದ ಅನುಭವ ಆಯಿತು. ಮಗು ಆ ಶಬ್ದವನ್ನು ಗಮನವಿಟ್ಟು ಕೇಳಿತು. ಅದು ವಿಶ್ವದ ಮೊದಲ "ಆಕಾಶವಾಣಿ". ಶರೀರವಿಲ್ಲದ, ಆದರೆ ಚೆನ್ನಾಗಿ ಕೇಳಿಸಿದ ಧ್ವನಿ. ಅದೊಂದು "ಅಶರೀರವಾಣಿ". ಎರಡೇ ಎರಡು ಶಬ್ದಗಳು. ನಂತರ ಮತ್ತೇನಿಲ್ಲ. ಅಷ್ಟೇ.

"ಹದಿನಾರು. ಇಪ್ಪತ್ತೊಂದು."

ಹದಿನಾರು ಅನ್ನುವ ಒಂದು ಶಬ್ದ. ಇಪ್ಪತ್ತೊಂದು ಅನ್ನುವ ಇನ್ನೊಂದು ಶಬ್ದ. ಈ ಶಬ್ದಗಳ ಹಿಂದೆ ಮೌನ. ಈ ಎರಡು ಶಬ್ದಗಳ ನಂತರ ಮತ್ತೆ ಅದೇ ಮೌನದ ತಾಂಡವ. 

ಮಗು ಈ ಎರಡು ಶಬ್ದಗಳಿಗೆ ಅರ್ಥ ಹುಡುಕಿತು. ಆಗ ಅದಕ್ಕೆ ಹೊಳೆಯಿತು. ಈ ಎರಡು ಶಬ್ದಗಳು ಎರಡು ಸಂಖ್ಯೆಯನ್ನು ಹೇಳುತ್ತಿವೆ. ಈ ಸಂಖ್ಯೆಗಳ ಅರ್ಥವೇನು?  

ಒಹೋ! ಇವು ವರ್ಣಮಾಲೆಯ ಅಕ್ಷರಗಳು!

ಯಾವ ಅಕ್ಷರಗಳು? ಮೊದಲನೆಯದು ಹದಿನಾರು ಎಂದು. ಎರಡನೆಯದು ಇಪ್ಪತ್ತೊಂದು ಎಂದು. ಅಷ್ಟು ಸಂಖ್ಯೆಯ ಸ್ವರ ಅಕ್ಷರಗಳಿಲ್ಲ. ಆದ್ದರಿಂದ ಅವು ವ್ಯಂಜನಾಕ್ಷರಗಳು. 

*****

ಹದಿನಾರು. ಕ-ವರ್ಗದ ಐದು ಅಕ್ಷರಗಳು. ಚ-ವರ್ಗದ ಐದು ಅಕ್ಷರಗಳು ಟ-ವರ್ಗದ ಐದು ಅಕ್ಷರಗಳು. ಅಲ್ಲಿಗೆ ಹದಿನೈದಾಯಿತು. ತ-ವರ್ಗದ "ತ" ಅನ್ನುವುದು ಹದಿನಾರನೆಯ ಅಕ್ಷರ. 

ಮುಂದೆ ಪ-ವರ್ಗದ ಮೊದಲನೆಯ ಅಕ್ಷರ "ಪ" ಅನ್ನುವುದು ಇಪ್ಪತ್ತೊಂದನೆಯ ಅಕ್ಷರ!

ಎರಡನ್ನೂ ಕೂಡಿಸಿದರೆ "ತಪ' ಎಂದಾಯಿತು. "ತಪ" ಅಂದರೆ ಏನು? "ತಪ್ ತಪನೇ" ಎಂದು. ತಪ ಅನ್ನುವುದರ ಅರ್ಥ "ಆಲೋಚಿಸು" ಎಂದು. ಯಾವುದನ್ನಾದರೂ ಕುರಿತು ಒಂದೇ ಮನಸ್ಸಿನಿಂದ ಯೋಚಿಸುವುದನ್ನೇ ತಪಸ್ಸು ಎನ್ನುವುದು. 

ಹೀಗೆ ಯೋಚಿಸಿದಾಗ ಮಗುವಿಗೆ ಆಕಾಶವಾಣಿಯ ಎರಡು ಶಬ್ದಗಳ ಸೂಚನೆಯ ಅರ್ಥವಾಯಿತು. ಜನನಕ್ಕೆ ಕಾರಣವಾಗಿ ಹುಟ್ಟಿಸಿ ತಂದವನು "ತಂದೆ". ತನ್ನ ಜನನಕ್ಕೆ ಕಾರಣನಾದ ತಂದೆಯನ್ನು ಕುರಿತು ತಪಸ್ಸು ಮಾಡಲು ಪ್ರಾರಂಭಿಸಿತು. 
******

ಅದೇನು ಸಾಧಾರಣವಾದ ತಪಸ್ಸಲ್ಲ. ಒಂದೆರಡು ದಿನ, ವಾರ, ತಿಂಗಳುಗಳ ತಪಸ್ಸಲ್ಲ. ಒಂದೆರಡು ವರುಷಗಳ ತಪಸ್ಸೂ ಅಲ್ಲ. ಒಂದು ನೂರು ವರುಷಗಳ ತಪಸ್ಸು. ನಮ್ಮ ವರುಷದಂತೆ ಮನುಷ್ಯಮಾನದ ವರುಷವಲ್ಲ. ಬ್ರಹ್ಮದೇವರ ವಯೋಮಾನದ ಲೆಕ್ಕದ ಒಂದು ನೂರು ವರ್ಷ!

ಒಂದು ನೂರು ವರುಷದ ತಪಸ್ಸಿನ ನಂತರ ಕೂಸಿನ ತಂದೆ ಕಾಣಿಸಿಕೊಂಡ. ಅವನು ನೀರಿನ ಮೇಲೆ ಮಲಗಿದವನು."ನಾರಾ" ಅಂದರೆ ನೀರು. ಆದ್ದರಿಂದ ಅವನು "ನಾರಾಯಣ".  

ಅವನು ಮಲಗಿರುವುದು ಹಾಲಿನ ಕಡಲ ಮೇಲಲ್ಲವೇ? ಹೌದು. ಆದರೆ ಹಾಲೂ ನೀರಿನಂತೆ. ದ್ರವ ರೂಪ. ಮೇಲಾಗಿ ಇದು ನಡೆದಾಗ ಅವನು "ಪ್ರಳಯಜಲ" ಅಂದರೆ ಎಲ್ಲೆಲ್ಲೂ ಆವರಿಸಿದ್ದ ನೀರಿನ ಮೇಲೆ ಮಲಗಿದ್ದವನು. ಯಾರಾದರೂ ಒಂದು ದ್ರವದ ಮೇಲೆ ಮಲಗಲು ಸಾಧ್ಯವೇ? ಅವನಿಗೆ ಸಾಧ್ಯ. 

ಹೀಗೆ ಕಾಣಿಸಿಕೊಂಡ ತಂದೆ ನಾರಾಯಣ ಮಗ ಬ್ರಹ್ಮನಿಗೆ ನಾಲ್ಕು ಶ್ಲೋಕಗಳ ಸಂಕ್ಷಿಪ್ತವಾದ ಉಪದೇಶ ಮಾಡಿದ. ಇದೇ ಪ್ರಪಂಚದ ಮೊದಲ ಪಾಠ. ಮೊಟ್ಟ ಮೊದಲ ಶಿಕ್ಷಣ. ಅದನ್ನೇ "ಚತುಶ್ಲೋಕೀ ಭಾಗವತ" ಅನ್ನುತ್ತಾರೆ. ಈ ನಾಲ್ಕು ಶ್ಲೋಕಗಳಲ್ಲಿ ಇಡೀ ಸೃಷ್ಟಿಯ ರಹಸ್ಯವನ್ನು ಕಮಲನಾಭ ನಾರಾಯಣನು ಕಮಲಸಂಭವ ಬ್ರಹ್ಮನಿಗೆ ತಿಳಿಸಿ ಹೇಳಿದ. 

***** 

"ಪ್ರಜ್ಞೆ" ಮತ್ತು "ಪ್ರತಿಭೆ" ಅನ್ನುವ ಪದಗಳಿಗೆ ಈಗಿನ ವಾಡಿಕೆಯಲ್ಲಿ ಅನೇಕ ರೀತಿಯ ಅರ್ಥಗಳನ್ನು ಆರೋಪಿಸುತ್ತಾರೆ (ಕೊಡುತ್ತಾರೆ). 

ಒಂದು ವಿಷಯವನ್ನು ಹೇಳಿದರೆ ಅದಕ್ಕೆ ಸಂಬಂಧಿಸಿದ ಎಲ್ಲ ಬೇರೆ ಬೇರೆ ವಿಷಯಗಳನ್ನು ಒಟ್ಟಿಗೆ ತಿಳಿಯುವ ಶಕ್ತಿಗೆ "ಪ್ರಜ್ಞೆ" ಎಂದು ಹೆಸರು. ("ನಿನಗೆ ಮೈಮೇಲೆ ಪ್ರಜ್ಞೆ ಇಲ್ಲವೇ?" ಎಂದು ಕೆಲವೊಮ್ಮೆ ಹೇಳುವುದುಂಟು. ಹೀಗೆ ಹೇಳಿದರೆ "ನಿನಗೆ ಸಮಯ-ಸಂದರ್ಭಗಳ ಹಿನ್ನೆಲೆಯಲ್ಲಿ ತಿಳಿಯುವ ಶಕ್ತಿ ಇಲ್ಲವೇ?" ಎಂದು ತಾನೇ ಕೇಳುವುದು? "ಮೈಮೇಲೆ ಎಚ್ಚರ ಇಲ್ಲವೇ?" ಅನ್ನುವುದು ಅದರ ಅರ್ಥವಲ್ಲ).

ಇದೇ ರೀತಿ ಸ್ವಲ್ಪ ವಿಷಯವನ್ನು ಹೇಳಿದರೆ ಊಹಾಪೋಹ ಮಾಡಿ ಅದನ್ನು ವಿಸ್ತರಿಸಿ ವಿಶಾಲವಾಗಿ ತಿಳಿದುಕೊಳ್ಳುವುದಕ್ಕೆ "ಪ್ರತಿಭೆ" ಎಂದು ಹೆಸರು. 

ಪ್ರಜ್ಞಾ ಮತ್ತು ಪ್ರತಿಭೆ ಇರುವವರಿಗೆ ಸ್ವಲ್ಪ ಸುಳಿವು ಕೊಟ್ಟರೆ ಸಾಕು. ಒಂದು ಸಣ್ಣ ಬೀಜ ಮುಂದೆ ಅರಳಿ ಒಂದು ದೊಡ್ಡ ಮರ ಆಗುವಂತೆ ಸೂಕ್ಶ್ಮವಾಗಿ ಹೇಳಿದ ವಿಷಯ ಅವರ ತಲೆಯಲ್ಲಿ ಅರಳಿ ಪೂರ್ತಿ ಅರಿವು ತುಂಬಿಕೊಳ್ಳುತ್ತದೆ. ಇದನ್ನೇ "ಉಗುರು ತೋರಿಸಿದರೆ ಹಸ್ತ ನುಂಗುವುದು" ಎಂದು ಹೇಳುವುದು.

ಬ್ರಹ್ಮದೇವರಿಗಿಂತ ಹೆಚ್ಚಿನ ಪ್ರಜ್ಞೆ ಮತ್ತು ಪ್ರತಿಭೆ ಈ ಜಗತ್ತಿನಲ್ಲಿ ಯಾರಿಗುಂಟು? 

***** 

ತಂದೆ ನಾರಾಯಣ ಹೇಳಿದ ಪಾಠದಿಂದ ಮುಂದಿನ ದಾರಿ ತಿಳಿದ ಚತುರ್ಮುಖ ಬ್ರಹ್ಮದೇವರು ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಿದರು. ತನ್ನ ಮಾನಸ ಪುತ್ರರಾದ ನಾರದರಿಗೆ ಮುಂದೊಮ್ಮೆ ತಾವು ತಂದೆಯಿಂದ ಕೇಳಿದ ಭಾಗವತವನ್ನು ಉಪದೇಶಿಸಿದರು. ಕಾಲಾನಂತರ ಪರಾಶರ-ಸತ್ಯವತಿಯರ ಮಗನಾದ, ಶ್ರೀಹರಿಯ ಇನ್ನೊಂದು ರೂಪನಾದ ವೇದವ್ಯಾಸ ಮಹರ್ಷಿಯು ನಾರದರಿಂದ ಇದನ್ನು ಪಡೆದರು. ಅದನ್ನು ವಿಶಾಲವಾದ, ಹದಿನೆಂಟನೆಯ ಪುರಾಣವಾದ, ಹದಿನೆಂಟು ಸಾವಿರ ಶ್ಲೋಕದ "ಭಾಗವತ ಪುರಾಣ" ಮಾಡಿ ವಿವರಿಸಿದರು. 

ವೇದವ್ಯಾಸರು ಈ ಭಾಗವತ ಮಹಾಪುರಾಣವನ್ನು ತಮ್ಮ ಮಗನಾದ ಶುಕ ಮಹರ್ಷಿಗೆ ಕೊಟ್ಟರು. ಪರೀಕ್ಷಿತ್ ಮಹಾರಾಜನು ಶುಕಮುಖವಾಗಿ ಇದನ್ನು ಕೇಳಿದನು. ನಂತರ ಅದು ಎಲ್ಲೆಡೆ ಹರಡಿತು. 

*****

ಚತುರ್ಮುಖ ಬ್ರಹ್ಮರ ಮತ್ತೊಬ್ಬ ಮಗನಾದ ಕರ್ದಮ ಪ್ರಜಾಪತಿ ತನಗೆ ಬಂದ ಸೂಚನೆಯಂತೆ ಸ್ವಾಯಂಭುವ ಮನು ಮತ್ತು ಶತರೂಪಾ ದೇವಿಯರ ಮಗಳಾದ ದೇವಹೂತಿ ದೇವಿಯನ್ನು ವಿವಾಹವಾದರು. ಕರ್ದಮರ ತಪಸ್ಸಿಗೆ ಮೆಚ್ಚಿ ಅವರ ಮಗನಾಗಿ ಹುಟ್ಟುತ್ತೇನೆ ಎಂದು ಮಾತು ಕೊಟ್ಟಿದ್ದ ಮಹಾವಿಷ್ಣುವು ಕರ್ದಮ-ದೇವಹೂತಿಯರ ಮಗನಾಗಿ "ಕಪಿಲ ಋಷಿ" ಎಂದು ಅವತರಿಸಿದನು. ಕರ್ದಮರು ವಾನಪ್ರಸ್ಥರಾದ ಸಮಯದಲ್ಲಿ ದೇವಹೂತಿಯ ಮುಂದಿನ ರಕ್ಷಣೆಯ ಹೊಣೆ ಕಪಿಲರಿಗೆ ಒಪ್ಪಿಸಿದರು. 

ಸ್ವಲ್ಪ ಕಾಲಾನಂತರ ದೇವಹೂತಿಯು ಮಗನಾದ ಕಪಿಲನ ಬಳಿಗೆ ಬಂದು ತನಗೆ ಉಪದೇಶ ಮಾಡುವಂತೆ ಕೇಳಿದಳು. 

"ಕಪಿಲ, ನನಗೆ ಇನ್ನು ಬದುಕಿದ್ದು ಸಾಕಾಯಿತು. ನನಗೆ ಉಪದೇಶ ಮಾಡಿ ಮೋಕ್ಷ ಮಾರ್ಗವನ್ನು ಸೂಚಿಸು"

"ಅಮ್ಮಾ, ನೀನು ನನ್ನ ಹೆತ್ತ ತಾಯಿ. ತಾಯಿತನ ಬಹಳ ದೊಡ್ಡದು. ನಾನು ನಿನಗೆ ನಮಸ್ಕರಿಸಬೇಕೇ ಹೊರತು ನೀನು ನನಗೆ ನಮಸ್ಕಾರ ಮಾಡುವಂತಿಲ್ಲ. ಸನ್ಯಾಸಿಗಳಾದವರೂ ಸಹ ತಾಯಿಗೆ ನಮಸ್ಕರಿಸುತ್ತಾರೆ. ಗುರುವಿಗೆ ನಮಸ್ಕರಿಸದಿರುವವರಿಗೆ ಉಪದೇಶ ಮಾಡುವಂತಿಲ್ಲ. ಆದ್ದರಿಂದ ನಾನು ನಿನಗೆ ಉಪದೇಶ ಮಾಡಲಾಗದು"

"ಕಪಿಲ, ನೀನು ನಿಮಿತ್ತಕ್ಕೆ ನನ್ನ ಮಗನಾದರೂ ನೀನು ಶ್ರೀಹರಿ ಎಂದು ನಾನು ಬಲ್ಲೆ. ಆ ಕಾರಣದಿಂದ ನಾನು ನಮಸ್ಕರಿಸಬಹುದು. ನೀನು ಉಪದೇಶ ಮಾಡಬಹುದು"

"ನಾನು ಶ್ರೀಹರಿ ಎನ್ನುವ ಜ್ಞಾನ ನಿನಗೆ ಬಂದಿದೆ ಅಂದರೆ ಮತ್ತೆ ಯಾವ ಉಪದೇಶವೂ ಬೇಕಾಗಿಲ್ಲವಲ್ಲ!"

"ಅದೇನೇ ಇರಲಿ. ನಿನ್ನಿಂದ ವಿವರವಾಗಿ ಉಪದೇಶ ಪಡೆಯಬೇಕೆಂದು ನನಗೆ ಆಸೆ. ಈ ಆಸೆಯನ್ನು ಪೂರ್ಣ ಮಾಡು" 

ಮುಂದೆ ಮಾತಿಲ್ಲ. ತಾಯಿಯ ಆಸೆ ಪೂರ್ತಿ ಮಾಡಲು ಕಪಿಲ ಮುನಿಯು ದೇವಹೂತಿ ದೇವಿಗೆ ವಿವರವಾಗಿ ಮುಕ್ತಿ ಮಾರ್ಗವನ್ನು ಉಪದೇಶಿಸಿದನು. ಇದು ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. 

ಕರ್ದಮ-ದೇವಹೂತಿ-ಕಪಿಲ ಮುನಿ ಇವರ ಬಗ್ಗೆ ಹೆಚ್ಚಿನ ವಿವರ ಇರುವ ಇಂಗ್ಲಿಷ್ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು.  
*****

ಭಾರತೀಯ ತತ್ವ್ವಶಾಸ್ತ್ರದಲ್ಲಿ ಸಂಖ್ಯೆಗಳಿಗೆ ಬಹಳ ಮಹತ್ವ ಇದೆ. ಅನೇಕ ಗಹನ ವಿಷಯಗಳನ್ನು ಅರಿಯಲು ಅಂಕಿ-ಸಂಖ್ಯೆಗಳ ತಿಳುವಳಿಕೆ ಬಹಳ ಅವಶ್ಯಕ. ಇದೇ ಕಪಿಲ ಮಹರ್ಷಿ ಮುಂದೆ ಮೊದಲು ಸೂಚಿಸಿದ "ಹದಿನಾರು-ಇಪ್ಪತ್ತೊಂದು" ಸೂತ್ರವನ್ನು ಹಿಗ್ಗಿಸಿ "ಸಂಖ್ಯಾಶಾಸ್ತ್ರ" ರಚಿಸಿದ ಮೂಲ ಪುರುಷರು ಎಂದು ನಂಬಿಕೆ. ವೈದಿಕ ವಾಂಗ್ಮಯ ತಿಳಿಯುವ ಪ್ರಯತ್ನ ಮಾಡುವವರಿಗೆ ಇದರ ಅಭ್ಯಾಸ ಬೇಕು. 

ಹದಿನಾರು-ಇಪ್ಪತ್ತೊಂದು ಎಂದು ಆಕಾಶವಾಣಿಯಲ್ಲಿ ಕೇಳಿಬಂದ ಎರಡು ಶಬ್ದಗಳು ಕಡೆಗೆ ಹೀಗೆ "ಸಂಖ್ಯಾಶಾಸ್ತ್ರ" ಆಗಿ ರೂಪುಗೊಂಡಿತು!

Saturday, May 17, 2025

ಜಯಾ, ಮಾಯಾ, ಕೃತಿ ಮತ್ತು ಶಾಂತಿ


ಪ್ರತಿಯೊಂದಕ್ಕೂ ಒಂದೊಂದು ಕಾಲ ಇರುತ್ತೆ.  ಆ ಕಾಲ ಬರುತ್ತೆ. ಹೌದು. ಆದರೆ ಕೆಲವಕ್ಕೆ ಎಲ್ಲ ಕಾಲವೂ ಸರಿಹೊಂದಿ ನಡೆಯುತ್ತೆ. ಇದೂ ಹೌದು!

ಇದು ಮಾವಿನ ಹಣ್ಣಿನ ಕಾಲ. ಎಲ್ಲೆಲ್ಲಿ ನೋಡಿದರೂ ಮಾವಿನ ಹಣ್ಣು. ಮುಂದೆ ಸೇಬಿನ ಕಾಲ ಬರುತ್ತೆ. ನಂತರ ಇನ್ನೊಂದು ಹಣ್ಣಿನ ಕಾಲ. ಹೀಗೆ ಕೆಲವು ಹಣ್ಣಿಗೆ ಒಂದೊಂದು ಕಾಲ. (ಈಗ ಕೋಲ್ಡ್ ಸ್ಟೋರೇಜುಗಳ ಕಾಲವಾದ್ದರಿಂದ ಎಲ್ಲ ಕಾಲದಲ್ಲೂ ಸ್ವಲ್ಪಮಟ್ಟಿಗೆ ಸಿಗಬಹುದು). ಹಿಂದೆ ಕಲ್ಲಂಗಡಿ, ಕರಬೂಜಕ್ಕೆ ಬೇಸಿಗೆ ಕಾಲವಿತ್ತು. ಈಗ ಹಾಗೆ ಹೇಳುವಂತಿಲ್ಲ. ಆದರೆ ಬಾಳೆ ಹಣ್ಣಿಗೆ ಎಲ್ಲ ಕಾಲವೂ ಸಕಾಲ. ವರುಷದ ಹನ್ನೆರಡು ತಿಂಗಳೂ ಅದರ ಕಾಲವೇ. 

ಕನ್ನಡ ಚಲನಚಿತ್ರ ರಂಗವನ್ನೇ ನೋಡೋಣ. ಪ್ರಾರಂಭದಲ್ಲಿ ಪೌರಾಣಿಕ ಚಿತ್ರಗಳ ಕಾಲ. ನಂತರ ಜಾನಪದ ಚಿತ್ರಗಳ ಕಾಲ. ಅದರನಂತರ ಸಾಮಾಜಿಕ ಚಿತ್ರಗಳ ಕಾಲ. ಅದರಲ್ಲಿಯೂ ಕಾದಂಬರಿ ಆಧಾರಿತ ಚಿತ್ರಗಳ ಸಮಯ. ಅದಾದ ಮೇಲೆ ಹೊಸ ಅಲೆಯ ಚಿತ್ರಗಳ ಕಾಲ. ತದನಂತರ ಸಾಹಸಮಯ, ಜೇಮ್ಸ್ ಬಾಂಡ್ ರೀತಿಯ ಚಿತ್ರಗಳ ಕಾಲ. ಇವಾದಮೇಲೆ ಹಿಂಸಾಪ್ರಧಾನ (ಕೊಲೆ-ರಕ್ತಪಾತ) ಚಿತ್ರಗಳ ಕಾಲ. ಒಂದು ಚಿತ್ರದಲ್ಲಿ ಎಷ್ಟು ಹೆಣಗಳು ಬಿದ್ದವು ಅಥವಾ ಎಷ್ಟು ಲೀಟರು ರಕ್ತ ಸುರಿಯಿತು ಎನ್ನುವುದರ ಮೇಲೆ ಚಿತ್ರ ಯಶಸ್ವಿಯೋ ಅಲ್ಲವೋ ಎಂದು ತೀರ್ಮಾನಿಸುವ ಕಾಲ. ಮತ್ತೆ ಈಗಂತೂ ಇವು ಕನ್ನಡ ಚಿತ್ರಗಳೇ ಎಂದು ಅನುಮಾನಿಸುವ ಕಾಲ! ಈ ಚಿತ್ರಗಳಲ್ಲಿ "ಕನ್ನಡ ಎಲ್ಲಿದೆ?" ಎಂದು ಹುಡುಕುವ ಕಾಲ. ಎಲ್ಲಕ್ಕೂ ಒಂದೊಂದು ಕಾಲ! 

ರವಿಕೆಗಳಿಗೂ ಹೀಗೆಯೇ ಇತ್ತು. ಯಾರೋ ಒಬ್ಬರು ದರ್ಜಿಯೊಬ್ಬನಿಗೆ ರವಿಕೆ ಹೊಲೆಯಲು ಕೊಟ್ಟ ಬಟ್ಟೆ ಸ್ವಲ್ಪ ಹೆಚ್ಚಾಗಿತ್ತು. ಎರಡು ರವಿಕೆ ಹೊಲೆಯಲು ಕಡಿಮೆ. ಒಂದಕ್ಕೆ ಜಾಸ್ತಿ. ಸರಿ, ಏನು ಮಾಡುವುದು? ಮುಂಗೈಗೆ ಹತ್ತಿರ ಬರುವಷ್ಟು ಉದ್ದ ತೋಳಿಟ್ಟು ರವಿಕೆ ಹೊಲೆದ. ಒಂದು ತಿಂಗಳಿನಲ್ಲಿ ಎಲ್ಲರ ರವಿಕೆಯೂ ಹಾಗೆಯೇ ಆಯಿತು. ಬರಬರುತ್ತ ತೋಳು (ರವಿಕೆಯದು) ಮೇಲೆ ಹೋಗಲು ಶುರುವಾಯಿತು. ಕಡೆಗೆ ರವಿಕೈ "ರವಿ" ಆಯಿತು. {ತೋಳೇ ಇಲ್ಲದ, ಕೈ ಇಲ್ಲದ, ಸ್ಲೀವ್ ಲೆಸ್ ರವಿಕೆ). ಈಗ ಡ್ರೆಸ್ಸುಗಳು ಬಂದು ಇದು ಸ್ವಲ್ಪ ಕಡಿಮೆ ಆಗಿರಬಹುದು. ಆದರೆ ನಿರಾಸೆ ಪಡಬೇಕಿಲ್ಲ. ಡ್ರೆಸ್ಸುಗಳ ತೋಳೂ ಹೀಗೆಯೇ ಹುಣ್ಣಿಮೆ-ಅಮಾವಾಸ್ಯೆ ಕಾಣುತ್ತಿವೆ. 

ಪ್ಯಾಂಟುಗಳ ಸ್ಥಿತಿಯೂ ಹಾಗೆಯೇ. ಹಿಂದೆಲ್ಲ  ಪ್ಯಾಂಟಿನ ಕೆಳಗಡೆ ಮಡಿಕೆ ಇರುತ್ತಿತ್ತು. ನಂತರ ಆನೆ ಬುಡದ (ಎಲಿಫೆಂಟ್ ಬಾಟಮ್) ಮಡಿಕೆಯ ಪ್ಯಾಂಟುಗಳು ಬಂದವು. ಟೈಟ್ ಪ್ಯಾಂಟಿಗೂ ಒಂದು ಕಾಲ ಇತ್ತು. ಅವನನ್ನು ನಿಲ್ಲಿಸಿ ಹೊಲೆದುದೋ ಎನ್ನುವಷ್ಟು ಟೈಟು. ಚರ್ಮಕ್ಕೂ ಬಟ್ಟೆಗೂ ಮಧ್ಯೆ ನಿರ್ವಾತ ಪ್ರದೇಶ. ಈಗಂತೂ ಹರಕು ಬಟ್ಟೆಯ ಹೊಸ ಪ್ಯಾಂಟುಗಳು. ಹೊಸ ಪ್ಯಾಂಟು ಹರಿಯಲಿ ಎಂದು ಕಾಯಲೇಬೇಕಿಲ್ಲ. "ನಾವು ಹರಕು ಜನ" ಎಂದು ಬಾಯಲ್ಲಿ ಹೇಳದೇ ಬೇರೆಯವರಿಗೆ ಗೊತ್ತಾಗುವುದು. ಹೀಗೆ ಕಾಲದಿಂದ ಕಾಲಕ್ಕೆ ಬದಲಾವಣೆ. 

*****

ಹೀಗೆ ಕಾಲದಿಂದ ಕಾಲಕ್ಕೆ ಚಾಲ್ತಿಯಲ್ಲಿರುವುದು ಬದಲಾಗುವ ಪದ್ದತಿಗೆ ಹಾಡುಗಳೂ ಹೊರತಲ್ಲ. ಯಾರೋ ಒಬ್ಬರು ಪ್ರಭಾವಿಗಳು ಅಥವಾ ಪ್ರಸಿದ್ಧರು ಹಾಡಿದರೆ ಸಾಕು. ಕೆಲವುಕಾಲ ಆ ಹಾಡಿಗೆ ಶುಕ್ರ ದೆಸೆ. ಮತ್ತೊಂದು ಅದರ ಜಾಗ ಆಕ್ರಮಿಸುವವರೆಗೆ. ಯೂಟ್ಯೂಬ್ ಮತ್ತು ವಾಟ್ಸಾಪ್ ಬಂದಮೇಲಂತೂ ಕೇಳುವುದೇ ಬೇಡ. ಕೆಲವು ಕಾಲ "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ" ನಡೆಯಿತು. ಅದು ಮುಗಿದನಂತರ "ರಘುವೀರ ಗದ್ಯ" ಸ್ವಲ್ಪ ದಿನ. ಅದಾದಮೇಲೆ "ಎಂಥ ಶ್ರೀಮಂತನಂತಾನೋ" ಓಡಿತು. ನಂತರ "ಯಾರೂ ಸಂಗಡ ಬಹೋರಿಲ್ಲ". ಈಗ "ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ" ನಡೆಯುತ್ತಿದೆ. ಮುಂದೆ ಇನ್ನೊಂದು ಕಾಯುತ್ತಿರುತ್ತದೆ. ಹೀಗೆ. 

ಈ ಮಾಯಾದೇವಿ ಯಾರು? ಆ ಹೆಸರು ಹೇಗೆ ಬಂತು? ಅದರ ವಿಶೇಷವೇನು? ಹೀಗೆಂದು ಮಿತ್ರರೊಬ್ಬರು ಕೇಳಿದ್ದಾರೆ. "ಪ್ರಳಯ ಕಾಲದಲ್ಲಿ ಅಲದೆಲೆಯ ಮೇಲೆ ಮಲಗಿದಾಗ ಹಲವು ಆಭರಣಗಳು, ಜಲವು ಆಗಿ ಜಾಣತನದಿ" ಅನ್ನುವುದು ನೇರವಾಗಿ ಮಹಾಲಕ್ಷ್ಮಿ ದೇವಿಯನ್ನೇ ಸೂಚಿಸುತ್ತದೆ. "ಎಡಕೆ ಭೂಮಿ, ಬಲಕೆ ಶ್ರೀಯು, ಎದುರಿನಲ್ಲಿ ದುರ್ಗಾದೇವಿ" ಎನ್ನುವುದು ಅವಳದೇ ಆದ ಶ್ರೀ, ಭೂ, ಮತ್ತು ದುರ್ಗಾ ರೂಪಗಳನ್ನು ಹೇಳುತ್ತವೆ. "ಛತ್ರ, ಚಾಮರ, ವ್ಯಜನ, ಪರ್ಯಂಕ, ಪಾತ್ರರೂಪದಲ್ಲಿ ಹರಿಯ ನಿತ್ಯ ಸೇವೆ ಮಾಡುವಂಥ" ಎಂದು ವರ್ಣಿಸುವ "ಏನು ಧನ್ಯಳೋ, ಲಕುಮಿ ಎಂಥ ಮಾನ್ಯಳೋ" ಎನ್ನುವುದನ್ನು ಇನ್ನೊಂದು ರೀತಿ ಹೇಳುವುದು ಇದು. ಆದರೆ "ಮಾಯಾದೇವಿ" ಎಂದು ಏಕೆ ಸಂಬೋಧಿಸಿದರು ದಾಸರು? ಪರಮ ಮಾಯಾವಿಗೇ ಮಾಯ-ಮಾಟ ಮಾಡಿದ್ದಾಳೆ ಎಂದೇ? 
*****

ಮನೆಯಲ್ಲಿ ಒಂದು ಮಗು ಬರುತ್ತದೆ ಎಂದ ತಕ್ಷಣ ಭಾವಿ ತಾಯಿ-ತಂದೆಯರಿಗೆ ಚಿಂತೆಗಳ ಸರಮಾಲೆ ಶುರು. ಬೇರೆ ಅನೇಕ ಚಿಂತೆಗಳಿಗಿಂತ ಹೆಚ್ಚಾಗಿ ಕಾಡುವುದು "ಏನು ಹೆಸರಿಡಬೇಕು?" ಎನ್ನುವುದು. ಹಿಂದೆಲ್ಲಾ ಇದು ಅಂತಹ ಯೋಚಿಸುವ ವಿಷಯವಾಗಿರಲಿಲ್ಲ. ಯಾವುದೋ ಒಂದು ದೇವರ ಹೆಸರು ಇಡುತ್ತಿದ್ದರು. ಇಲ್ಲವೇ ಮನೆಯ ಹಿರಿಯರು ಯಾರಾದರೂ ಸ್ವಲ್ಪ ದಿನದ ಹಿಂದೆ ನಿಧನರಾಗಿದ್ದಾರೆ ಅವರ ಹೆಸರು. ಇಲ್ಲವಾದರೆ ಮನೆದೇವರ ಅನೇಕ ಹೆಸರುಗಳಲ್ಲಿ ಯಾವುದಾದರೂ ಒಂದು. ಈಗ ಹಾಗಿಲ್ಲ. ಯಾರೂ ಇಡದ ಅಪರೂಪದ ಹೆಸರು ಬೇಕು ಎನ್ನುವ ತವಕ. ಅದರ ಅರ್ಥ ಏನು ಎಂದು ಯಾರಿಗೂ ಗೊತ್ತಾಗದಿದ್ದರೂ ಪರವಾಗಿಲ್ಲ. ಯಾರಿಗೂ ಅದು ಅರ್ಥವಾಗದಿದ್ದರೆ ಇನ್ನೂ ಒಳ್ಳೆಯದು. ಇಂಗ್ಲಿಷಿನಲ್ಲಿ "ಏ" ಇಂದ ಪ್ರಾರಂಭವಾಗುವ ಹೆಸರಾದರೆ ಬಹಳ ಒಳ್ಳೆಯದು. ಏಕೆಂದರೆ ಶಾಲೆಯ ಹಾಜರಿ ರಿಜಿಸ್ಟರಿನಲ್ಲಿ ಮೊದಲನೆಯ ಹೆಸರಾಗುತ್ತದೆ. ಈ ರೀತಿ. 

ಸಮಾರಂಭದಲ್ಲಿ ಒಂದು ಮುದ್ದಾದ ಮಗು ಕಂಡಿತು. "ಮಗು ಬಹಳ ಮುದ್ದಾಗಿದೆ" ಅಂದರು ನೋಡಿದವರೊಬ್ಬರು. ತಾಯಿಗೆ ನ್ಯಾಯವಾಗಿಯೇ ಬಲು ಸಂತೋಷವಾಯಿತು. ಮುಖ ಅಗಲಿಸಿದಳು. "ಏನು ಹೆಸರು?" ಎಂದು ಕೇಳಿದರು. ಸ್ವಲ್ಪ ಒದ್ದಾಡಿದರೂ ಕಡೆಗೆ ಸತ್ಯ ಹೇಳಿದಳು. "ಅಪರೂಪದ ಹೆಸರು ಇಟ್ಟಿದ್ದೇವೆ. ತಕ್ಷಣ ನೆನಪಿಗೆ ಬರುತ್ತಿಲ್ಲ. ಮರೆತುಹೋಗಿದೆ. ಕ್ಷಮಿಸಿ" ಅಂದಳು. ಇದು ಕಟ್ಟು ಕಥೆಯಲ್ಲ.  ನಿಜವಾಗಿ ನಡೆದದ್ದು. 

ಹೆಣ್ಣುಮಕ್ಕಳಿಗೆ ಗಂಗಾ, ಯಮುನಾ, ಗೋದಾವರಿ, ನರ್ಮದಾ, ಕಾವೇರಿ, ಹೀಗೆ ನದಿಗಳ ಹೆಸರು ಇಡುತ್ತಿದ್ದರು. ಇಲ್ಲವೇ ಹಿಂದಿ ಸಿನಿಮಾಗಳಲ್ಲಿ ಬರುವಂತೆ ಚಂಪಾ, ಚಮೇಲಿ, ಗುಲಾಬಿ, ಮಾಲಾ, ಸುರಭಿ ಇತ್ಯಾದಿ. ಈ ರೀತಿಯ ಜನಪ್ರಿಯ ಹೆಸರುಗಳಲ್ಲಿ ಜಯ, ಮಾಯಾ ಮತ್ತು ಶಾಂತಿ ಸಹ ಸೇರಿವೆ. ಜಯಾ ಅಂತೂ ಅನೇಕ ರೂಪಗಳಲ್ಲಿ ಉಂಟು. ಜಯ, ವಿಜಯ, ಜಯಶ್ರೀ, ವಿಜಯಶ್ರೀ, ಜಯಮಾಲಾ, ಜಯಲಲಿತಾ, ವಿಜಯಲಲಿತಾ, ಜಯಗೌರಿ, ಹೀಗೆ ಅನೇಕ ಪ್ರಭೇದಗಳು. ಮಾಯಾ ಎಂದೂ ಹೆಸರಿಡುವುದು ಉಂಟು. ಶಾಂತಿ ಅನ್ನುವುದು ಒಂದು ಕಾಲದಲ್ಲಿ ಹೆಚ್ಚಾಗಿಯೇ ಇತ್ತು. ಗಂಡ-ಹೆಂಡಿರು ಜಗಳಕಾದರೆ ಅತ್ತೆ-ಮಾವ ಅಥವಾ ತಾಯಿ-ತಂದೆ ಕದನವಿರಾಮಕ್ಕೆ "ಶಾಂತೀ" ಎಂದು ಮೊಮ್ಮಗಳನ್ನು ಕರೆಯಬಹುದಿತ್ತು. ಕೃತಿ ಎಂದು ಸಾಮಾನ್ಯವಾಗಿ ಹೆಸರಿಡುತ್ತಿರಲಿಲ್ಲ. "ಪ್ರಕೃತಿ" ಅನ್ನುವುದು ಐವತ್ತು ವರುಷಗಳ ಹಿಂದೆ ಒಂದು ಹೊಸ ಮಾದರಿ ಹೆಸರಾಗಿತ್ತು. 

ಈ ಜಯಾ, ಮಾಯಾ, ಶಾಂತಿ, ಇವರಿಗಿರುವ ಸಂಬಂಧವೇನು? ಇವರ ಜೊತೆ ಕೃತಿ ಏಕೆ ಸೇರಿದಳು? ಇದನ್ನು ಸ್ವಲ್ಪ ವಿಚಾರ ಮಾಡೋಣ.

*****
 
ಕಂಪನಿ ನಾಟಕಗಳು ಜನಪ್ರಿಯವಾಗಿದ್ದ ಕಾಲ ಒಂದಿತ್ತು. ಆ ನಾಟಕಗಳಲ್ಲಿ ಸಾಹಿತ್ಯ, ಸಂಗೀತ, ನಟನ ಕಲೆಗಳ ಮಿಶ್ರಣವಿರುತ್ತಿತ್ತು. ಅನೇಕ ನಟ-ನಟಿಯರು, ಮೇಕಪ್ ಕಲಾವಿದರು, ವಾದ್ಯಗಾರರು ಮುಂತಾದವರು ಒಟ್ಟಿಗೆ  ಇರುತ್ತಿದ್ದರು. ತಂಡ ಊರಿಂದ ಊರಿಗೆ ಪ್ರಯಾಣಿಸಿ ನಾಟಕಗಳನ್ನು ಆಡುತ್ತಿದ್ದವು. ಮುಖ್ಯ ಪಾತ್ರ ಮಾಡುವ ಗಂಡು ಮತ್ತು ಹೆಣ್ಣು ಕಲಾವಿದರಿರುತ್ತಿದ್ದರು. (ಹೆಣ್ಣು ಪಾತ್ರಗಳನ್ನೂ ಗಂಡಸರೇ ಮಾಡುತ್ತಿದ್ದ ಕಾಲ ಕಳೆದ ಮೇಲೆ). ಮುಖ್ಯ ಪುರುಷ ಪಾತ್ರ ಮಾಡುವವನನ್ನು "ರಾಜಾ ಪಾರ್ಟ್" ಎಂದೂ, ಹೆಣ್ಣು ಪಾತ್ರ ಮಾಡುವವರನ್ನು "ರಾಣಿ ಪಾರ್ಟ್" ಎಂದೂ ಕರೆಯುತ್ತಿದ್ದರು. ಇವನು ರಾಜ ಆದರೆ ಅವಳು ರಾಣಿ. ಇವನು ರಾಮನಾದರೆ ಅವಳು ಸೀತೆ. ಇವನು ರೋಮಿಯೋ ಆದರೆ ಅವಳು ಜ್ಯುಲಿಯೆಟ್. ಕನ್ನಡದಲ್ಲಿ ಅದೇ ನಾಟಕವಾದರೆ ರಾಮವರ್ಮ-ಲೀಲಾವತಿ. ಇವನು ಶಿವ ಆದರೆ ಅವಳು ಪಾರ್ವತಿ. ಇವನು ಹರಿಶ್ಚಂದ್ರ ಆದರೆ ಅವಳು ಚಂದ್ರಮತಿ. ಹೀಗೆ ಜೋಡಿ. 

"ಅಮ್ಮ" ಎಂಬ ಹೆಸರಿನ "ಪದ್ಮಿನಿ ಪಿಕ್ಚರ್ಸ್" ಸಂಸ್ಥೆಯ ಕನ್ನಡ ಚಲನಚಿತ್ರ ಬಹಳ ಚೆನ್ನಾಗಿ ಓಡಿತು. ಅದರ ನಿರ್ಮಾಪಕ-ನಿರ್ದೇಶಕ ಬಿ. ಆರ್. ಪಂತುಲು "ಹುಲ್ಲಳ್ಳಿ ರಾಮರಾಯ" ರಾಜಾ ಪಾರ್ಟುಗಳು. ಫಂಡರಿಬಾಯಿ "ಕಮಲಮ್ಮ" ರಾಣಿ ಪಾರ್ಟುಗಳು. ದುಷ್ಯಂತ-ಶಕುಂತಲೆಯಿಂದ ಚಿತ್ರ ಪ್ರಾರಂಭ. "ನಾಗವೇಣಿ, ನಗರಿಗೆ ನಾ ಪೋಗಿ ಬರುವೆನೇ" ಎಂಬ ಕಂದ ಪದ್ಯದಿಂದ ಚಿತ್ರ ಪ್ರಾರಂಭ. ತಂದೆಯ ಮೇಲೆ ವಿರಸಗೊಂಡ ಮೇಲೆ ರಾಜಕುಮಾರ್ ರಾಜಾ ಪಾರ್ಟ್ ಆದರೆ ಭಾರತಿ ರಾಣಿ ಪಾರ್ಟ್. ಹೀಗೆ ಚಿತ್ರ ಮುಂದುವರೆಯುತ್ತದೆ. ರಾಜಾ-ರಾಣಿ ಪಾತ್ರಗಳಿಗೆ ಇದು ಒಂದು  ಉದಾಹರಣೆ. ಅಷ್ಟೇ. ಚಿತ್ರ ಯಟ್ಯೂಬಿನಲ್ಲಿ ಲಭ್ಯವಿದೆ. ಬೇಕಿದ್ದವರು ನೋಡಬಹುದು. 

*****

ನಾಟಕ ಮತ್ತು ಸಿನಿಮಾಗಳಲ್ಲೇ ಹೀಗಾದರೆ ಜಗತ್ತು ಸೃಷ್ಟಿಸಿದವರ ಕಥೆ ಹೇಗೆ? ಅದನ್ನೇ ತಾನೇ ನಾವು ಕಾಪಿ ಮಾಡುವುದು. ಶ್ರೀಹರಿಯ ಪ್ರತಿಯೊಂದು ರೂಪಗಳಿಗೂ ಅದಕ್ಕೆ ಹೊಂದುವ ಒಂದು ಮಹಾಲಕ್ಷಿಯ ರೂಪವುಂಟು. ಅವನನ್ನು ಬಿಟ್ಟು ಅವಳಿಲ್ಲ. ಅವಳನ್ನು ಬಿಟ್ಟು ಅವನಿಲ್ಲ. ಎದೆಯ ಗೂಡಿನಲ್ಲಿಯೇ ಒಂದು ಅಂತಃಪುರ ಮಾಡಿ ಕೂಡಿಸಿಕೊಂಡಿದ್ದಾನೆ. ಸನ್ಯಾಸಿಯಾದಾಗಲೂ ಬಿಟ್ಟಿಲ್ಲ. (ಈಗಲೂ ಕೆಲವು ಸನ್ಯಾಸಿಗಳು ಸಾಂಸಾರಿಕರಾಗಿದ್ದರೆ ಅವರನ್ನು ಇದೇ ಕಾರಣಕ್ಕೆ ಅಕ್ಷೆಸುಪಿಸುವಂತಿಲ್ಲ). 

ಶ್ರೀಹರಿಯ ಪ್ರಸಿದ್ಧವಾದ "ಪಂಚ ರೂಪಗಳು" ಮತ್ತು ಅವಕ್ಕೆ  ಜೊತೆಯಾದ (ರಾಜ-ರಾಣಿ ಪಾರ್ಟುಗಳಂತೆ ) ಮಹಾಲಕ್ಷ್ಮಿ ರೂಪಗಳು ಹೀಗಿವೆ:

ಸಂಕರ್ಷಣ - ಜಯಾ  
ವಾಸುದೇವ - ಮಾಯಾ  
ಪ್ರದ್ಯುಮ್ನ - ಕೃತಿ 
ಅನಿರುದ್ಧ - ಶಾಂತಿ 
ನಾರಾಯಣ - ಲಕ್ಷ್ಮಿ 

ಲಕ್ಸ್ಮಿ-ನಾರಾಯಣ ಎನ್ನುವುದು ಎಲ್ಲರಿಗೂ ಚಿರಪರಿಚಿತ. ಮಿಕ್ಕವು ಅಷ್ಟಾಗಿ ಪರಿಚಿತವಲ್ಲ. ಮಾಯಾ ಅನ್ನುವುದು ವಾಸುದೇವ ರೂಪಿ ಶ್ರೀಹರಿಯ ಜೊತೆಯಿರುವ ಮಹಾಲಕ್ಷ್ಮಿ. ಒಂದಲ್ಲಾ ಒಂದು ಕಾರಣದಿಂದ ಯಾವಾಗಲೂ ಮಾತ್ರವಲ್ಲ, ಶ್ರೀಹರಿಯು ಯಾವ ರೂಪ ತಳೆದರೂ ಅದಕ್ಕೆ ಜೊತೆಯಾಗಿ ರೂಪ ತಳೆವ ಲಕ್ಶ್ಮಿಯನ್ನು, ಅರೆ-ಹಾಸ್ಯ ಮಿಶ್ರಿತ ಸಂಬೋಧನೆಯಲ್ಲಿ, ಮಾಯಗಾರನಿಗೇ ಮಾಯಮಾಡಿರುವವಳು ಎಂದು ಸೂಚಿಸಲು "ಮಾಯಾದೇವಿ" ಎಂದು ದಾಸರು ಉಪಯೋಗಿಸಿದ್ದಾರೆ.  ಮಗನು ಅಮ್ಮನಿಗೆ ಸಲುಗೆಯಿಂದ "ನೀನೇನೂ ಸಾಮಾನ್ಯಳಲ್ಲ. ಎಲ್ಲರಿಗೂ ಟೋಪಿ ಹಾಕುವ ನಮ್ಮ ಅಪ್ಪನಿಗೇ ಟೋಪಿ ಹಾಕಿದವಳು!" ಎಂದು ಹೇಳುವಂತೆ. 

ಜಯಾ, ಮಾಯಾ, ಮತ್ತು ಶಾಂತಿ ಎನ್ನುವ ಹೆಸರು ಹೆಣ್ಣು ಮಕ್ಕಳಿಗೆ ಇಡುವ ಮೂಲ ಕಾರಣ ಇದು. ಇವೆಲ್ಲವೂ ಮಹಾಲಕ್ಷ್ಮಿಯ ರೂಪಗಳ ಹೆಸರುಗಳೇ. 

*****

ಈ ಪಂಚ ರೂಪಗಳಿಗೂ ನಾವು ನೀರು, ಆಹಾರ ಸೇವಿಸುವುದು, ಅರಗಿಸುವುದು, ಅದರ ರಸಗಳು ದೇಹದ ಎಲ್ಲ ಅಂಗಾಂಗಗಳಿಗೆ ತಲುಪುವುದು, ಇವೆಲ್ಲಕ್ಕೂ ನೇರವಾದ ಸಂಬಂಧವಿದೆ. ತೈತ್ತರೀಯ ಉಪನಿಷತ್ತಿನಲ್ಲಿ ಈ ಪಂಚರೂಪಗಳ ವಿಸ್ತಾರವಾದ ವಿವರಣೆಯಿದೆ. ಅದನ್ನು ಇನ್ನೊಮ್ಮೆ ನೋಡೋಣ.