Wednesday, June 4, 2025

ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ


ಸಾಮಾನ್ಯವಾಗಿ ಕುಟುಂಬಗಳಲ್ಲಿ ಸಂಜೆಯ ಹೊತ್ತು ಮನೆಮಂದಿಯೆಲ್ಲ ಒಟ್ಟಾಗಿ ಸೇರಿ, ಒಂದೆಡೆ ಕುಳಿತು ಸುಖ-ದುಃಖಗಳನ್ನು ಹಂಚಿಕೊಳ್ಳುವುದು, ಅಂದಿನ ಆಗು-ಹೋಗುಗಳನ್ನು ಚರ್ಚಿಸುವುದು ನಡೆಯುತ್ತದೆ. ಕೆಲಸ-ಕಾರ್ಯಗಳಲ್ಲಿ ನಿರತರಾದ ಕುಟುಂಬದ ಸದಸ್ಯರು ಪರಸ್ಪರ ಸಿಗುವುದು ಸಂಜೆಯ ವೇಳೆಯಲ್ಲಿಯೇ ಎನ್ನುವ ಕಾಲವೊಂದಿತ್ತು. ಈಗ ಖಚಿತವಾಗಿ ಹಾಗೆ ಹೇಳಲು ಬರುವುದಿಲ್ಲ. ಟೆಲಿವಿಶನ್ ಸೆಟ್ಟುಗಳು ಮನೆಯ ದಿವಾನಖಾನೆಯನ್ನು ಅಲಂಕರಿಸಲು ಪ್ರಾರಂಭಿಸಿದಾಗಿನಿಂದ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ನೆಲದಮೇಲೆ ಚಾಪೆ ಅಥವಾ ಜಮುಖಾನ ಹಾಸಿ ಕುಳಿತುಕೊಳ್ಳುವುದು ಮರೆತೇಹೋಗಿದೆ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ಕಡಿಮೆಯಾಗಿದೆ. ಟೆಲಿವಿಶನ್ ಜೊತೆಯಲ್ಲಿ ಬಂದಿರುವ ಸೋಫಾಗಳ ಮೇಲೆ ಕುಳಿತು ಕೈನಲ್ಲಿ ತಟ್ಟೆ ಹಿಡಿದು ತಿನ್ನುವುದು ಅಭ್ಯಾಸವಾಗಿದೆ. ಅನೇಕ ವೇಳೆ ಏನು ತಿನ್ನುತ್ತಿದ್ದೇವೆ ಅನ್ನುವುದು ಗೊತ್ತೂ ಆಗದಂತೆ ವಾತಾವರಣ ಇರುತ್ತದೆ. ಅಡುಗೆ ಮಾಡುವವರಿಗೆ ಇದು ಬಹಳ ಒಳ್ಳೆಯದು.  ಉಪ್ಪು-ಖಾರ  ಹೆಚ್ಚು-ಕಡಿಮೆ ಆದರೂ ಯಾರ ಗಮನಕ್ಕೂ ಬರುವುದಿಲ್ಲ. 

ಮೊದಲು ಒಂದು ಮನೆಗೆ ಒಂದು ಟೆಲಿವಿಶನ್ ಸೆಟ್ ಇರುತ್ತಿತ್ತು. ಈಗ ಕೋಣೆಗೊಂದರಂತೆ ಅವು ಬಂದು ಕೂತಿವೆ. ಆದರೂ ಮನೆಮಂದಿ ಎಲ್ಲರೂ ಒಟ್ಟಾಗಿ ನೋಡುವ ಕೆಲವು ಧಾರಾವಾಹಿಗಳು ಇರುತ್ತವೆ. ಕನ್ನಡದಲ್ಲಿಯೂ ಹಾಗೆ ಉಂಟು. ಶ್ರೀ ಟಿ. ಏನ್. ಸೀತಾರಾಮ್ ಅವರ ಧಾರಾವಾಹಿಗಳು ಅಂತಹವು. ಈಚೆಗೆ "ಮಾಡು ಸಿಕ್ಕದಲ್ಲ" ಎನ್ನುವ ಧಾರಾವಾಹಿ ಪ್ರಸಾರವಾಗುತ್ತಿದೆಯಂತೆ. ಸೀತಾರಾಮ್ ಅವರ ಬೇರೆ ಧಾರಾವಾಹಿಗಳಂತೆ ಇದೂ ಜನಪ್ರಿಯವಾಗುವುದರಲ್ಲಿ ಅನುಮಾನವಿಲ್ಲ. 

ಇಂದಿನ ಯುವ ಜನಾಂಗಕ್ಕೆ ಅನೇಕ ಕನ್ನಡ ಪದಗಳು ಅಪರಿಚಿತವಾಗುತ್ತಿವೆ. ಪಟ್ಟಣಗಳಲ್ಲಿ ಹುಟ್ಟಿ ಬೆಳೆದವರಿಗಂತೂ ಈ ಸಮಸ್ಯೆ (ಇದೊಂದು ಸಮಸ್ಯೆ ಎಂದು ತಿಳಿದರೆ) ಇನ್ನೂ ಹೆಚ್ಚು. "ಮಾಡು" ಅನ್ನುವುದು ಒಂದು ಕ್ರಿಯಾಪದವಾಗಿ, ಇಂಗ್ಲೀಷಿನಲ್ಲಿ "ಡು" ಎನ್ನುವುದಕ್ಕೆ ಸಮಾನವಾಗಿ, ಅವರಿಗೆ ಗೊತ್ತು. "ಗೂಡು" ಅನ್ನುವುದರದು ಇನ್ನೂ ಕಡಿಮೆ ಪರಿಚಯ. ಆ ಪದಕ್ಕೆ "ಮನೆ" ಎಂದು ಕೆಲವರಿಗೆ ಅರ್ಥ ಆಗುತ್ತದೆ. ಅದೂ ಒಂದು ಅರ್ಥವೇ. "ಹಕ್ಕಿಗಳ ಗೂಡು" ಎನ್ನುವಂತೆ ಮನುಷ್ಯರ ಗೂಡು ಅಂದರೆ ಮನೆ. ಅದು ಸರಿಯೇ. 

ಯುವ ಮಿತ್ರರೊಬ್ಬರು ಇದರ ಬಗ್ಗೆ ವಿವರಣೆ ಕೇಳಿದ್ದಾರೆ. ಇದು ಒಂದು ಹಾಡಿನ ಮೊದಲ ಸಾಲು ಎಂದು ಕೆಲವರಿಗೆ ಗೊತ್ತು. ಆದರೆ ಪೂರ್ತಿ ಹಾಡು ಅನೇಕರಿಗೆ ಗೊತ್ತಿಲ್ಲ. ಹಾಡು ಗೊತ್ತಿದ್ದವರಿಗೆ ಅದರ ಅರ್ಥ ಗೊತ್ತಿಲ್ಲ. "ಬಾಹ್ಯಾರ್ಥ - ಗೂಡಾರ್ಥ - ಅಂತರಾರ್ಥ" ಎನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಈ ಮೂರು ಅರ್ಥಗಳ ಬಗ್ಗೆ ಸ್ವಲ್ಪ ಚರ್ಚೆ ಮಾಡಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ)  "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವುದು ಶ್ರೀ ಪುರಂದರದಾಸರ ಒಂದು ಕೃತಿ. ಅದನ್ನು ಓದಿದರೆ ಅಥವಾ ಕೇಳಿದರೆ ಅರ್ಥವೇನೋ ಆಗುತ್ತದೆ. ಆದರೆ ಈ ಕೀರ್ತನೆ ಅನೇಕ ಗಹನವಾದ ಪ್ರಮೇಯಗಳನ್ನು ಒಳಗೊಂಡ ಕೃತಿ. ಪ್ರತಿಯೊಂದು ಪದದ ಹಿನ್ನೆಲೆ ಮತ್ತು ಅಂತರಾರ್ಥ ಗೊತ್ತಿಲ್ಲದಿದ್ದರೆ ಅದೊಂದು ಒಗಟಿನಂತೆ ಆಗುತ್ತದೆ. ಇದರ ಸ್ವಲ್ಪ ವಿವರಣೆ ಈಗ ನೋಡೋಣ. 

*****

"ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವ ಹಾಡು ಮೂರು ನುಡಿಗಳನ್ನು ಒಳಗೊಂಡಿದೆ. ಎರಡು ಸಾಲುಗಳ ಒಂದು ನುಡಿ, ಇಂತಹ ಮೂರು ನುಡಿಗಳುಳ್ಳ ಒಂದು ಹಾಡು. ಅವುಗಳ ಮೊದಲಿಗೆ ಎರಡು ಸಾಲುಗಳ ಮುಖ್ಯ ಪ್ರಮೇಯ. ನಂತರದ ಮೂರು ನುಡಿಗಳು ಆ ಪ್ರಮೇಯವನ್ನು ವಿಸ್ತರಿಸುವ ವಿವರಣೆ. 

ಮೊದಲಿಗೆ ಈ ಹಾಡಿನ ಪೂರ್ತಿ ಪಾಠವನ್ನು ತಿಳಿಯೋಣ. ಅದು ಹೀಗಿದೆ:

ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ 
ಜೋಡಿ ಹೆಂಡಿರಿಗಂಜಿ ಓಡಿಹೋಗುವಾಗ, ಗೋಡೆ ಬಿದ್ದು ಬಯಲಾಯಿತಲ್ಲಾ 

ಎಚ್ಚರಗೊಳಲಿಲ್ಲ, ಮನವೇ  ಹುಚ್ಚನಾದೆನಲ್ಲಾ 
ಅಚ್ಚಿನೊಳಗೆ ಮೆಚ್ಚು, ಮೆಚ್ಚಿನೊಳಗೆ ಅಚ್ಚು, ಕಿಚ್ಚೆದ್ದು ಹೋಯಿತಲ್ಲಾ 

ಮುಪ್ಪು ಬಂದಿತಲ್ಲಾ, ಪಾಯಸ ತಪ್ಪದೆ ಉಣಲಿಲ್ಲಾ 
ತುಪ್ಪದ ಬಿಂದಿಗೆ ತಿಪ್ಪೆಯಮೇಲೆ ಧೊಪ್ಪನೆ ಬಿತ್ತಲ್ಲಾ 

ಯೋಗವು ಬಂತಲ್ಲಾ, ಬದುಕು ವಿಭಾಗವಾಯಿತಲ್ಲಾ 
ಭೋಗಿಶಯನ ಶ್ರೀ ಪುರಂದರವಿಠಲನ ಆಗ ನೆನೆಯಲಿಲ್ಲಾ  

ಎಲ್ಲ ಕಡೆಯೂ "ಲ್ಲಾ" ಅನ್ನುವುದು ದೀರ್ಘವೇ. "ಎಚ್ಚರಗೊಳಲಿಲ್ಲ" ಎನ್ನುವುದನ್ನು ಬಿಟ್ಟು.  ಏನಾದರೂ ಕಳೆದು ಹೋದರೆ "ಹೋಯಿತಲ್ಲ" ಎನ್ನುತ್ತೇವೆ. ತುಂಬಾ ಪ್ರಿಯವಾದದ್ದು ಕಳೆದು ಹೋದರೆ ಹಲಬುತ್ತೇವೆ. ಆಗ "ಹೋಯಿತಲ್ಲ" ಅನ್ನುವುದಿಲ್ಲ. "ಹೋಯಿತಲ್ಲಾ" ಎಂದು ಕೂಗುತ್ತೇವೆ. ದಾಸರೂ ಹೀಗೆ ಆರ್ತರಾಗಿ ಹೇಳುವಾಗ ಹೋಯಿತಲ್ಲಾ, ಸಿಕ್ಕದಲ್ಲಾ, ಮುಂತಾಗಿ ಹೇಳುತ್ತಾರೆ. ಇದನ್ನು ಗಮನಿಸಬೇಕು. ಧಾರಾವಾಹಿಯಲ್ಲಿ ತೋರಿಸುವಂತೆ ಅದು "ಮಾಡು ಸಿಕ್ಕದಲ್ಲ"  ಎಂದಲ್ಲ. ವಾಸ್ತವವಾಗಿ "ಮಾಡು ಸಿಕ್ಕದಲ್ಲಾ" ಎಂದು. 

*****

ಆರ್. ಸಿ. ಸಿ. ಮನೆಗಳು ಇಲ್ಲದಿದ್ದ ಕಾಲ. ಮಣ್ಣಿನ ಹೆಂಚು ಛಾವಣಿಗೆ ಹೊದ್ದಿಸಿದ ಮನೆಗಳೇ ಇದ್ದ ಕಾಲ. ಬಯಲು ಸೀಮೆಯಲ್ಲಿ ನಾಡಹೆಂಚುಗಳ ಮನೆಗಳು. ಕೆಲವೆಡೆ "ಮಂಗಳೂರು ಹೆಂಚು" ಹೊದಿಸಿದ ಮನೆಗಳು. ಮೇಲೆ ಕೊಟ್ಟಿರುವ ಚಿತ್ರ ನೋಡಿ. ಛಾವಣಿಗೆ ^ ಆಕಾರ ಇರುತ್ತಿತ್ತು. ಮಳೆಯ ನೀರು ಸುಲಭವಾಗಿ ಹರಿದು ಹೋಗಲು ಈ ವ್ಯವಸ್ಥೆ. ಚಾವಣಿಯ ಮೇಲಿನ ಭಾಗ ದಿನನಿತ್ಯದ ವಾಸಕ್ಕೆ ಅಷ್ಟು ಯೋಗ್ಯವಲ್ಲ. ಆದುದರಿಂದ ಅಲ್ಲಿ "ಮಾಡು" ಎಂದು ಕರೆಯುವ ಜಾಗದ ವ್ಯವಸ್ಥೆ ಮಾಡುತ್ತಿದ್ದರು. ಅದನ್ನು "ಅಟ್ಟ" ಎಂತಲೂ ಕರೆಯುತ್ತಿದ್ದರು. ಇಂಗ್ಲೀಷಿನಲ್ಲಿ Attic ಅನ್ನುತ್ತಾರೆ. ಮನೆಗಳಲ್ಲಿ ಹೆಚ್ಚಿನ ಪೀಠೋಪಕರಣಗಳು, ಕಪಾಟು ಮುಂತಾದುವುಗಳು ಇರುತ್ತಿರಲಿಲ್ಲ. ದಿನನಿತ್ಯ ಉಪಯೋಗಿಸುವ ಪದಾರ್ಥಗಳು ಕೆಳಗೆ ನೆಲದ ಮೇಲೆ ಇರುತ್ತಿದ್ದವು. ಆಗೊಮ್ಮೆ-ಈಗೊಮ್ಮೆ ಉಪಯೋಗಿಸುವ ಪದಾರ್ಥಗಳನ್ನು ಅಟ್ಟದ ಮೇಲೆ ಇಡುತ್ತಿದ್ದರು. ಈ ಕಾರಣಕ್ಕಾಗಿ ಕೆಲವು ಗೂಡುಗಳನ್ನು ಮಾಡಿರುತ್ತಿದ್ದರು. ಇಂತಹ ಗೂಡುಗಲ್ಲಿ ಇಟ್ಟ ಪದಾರ್ಥಗಳನ್ನು ಬೇಕಾದಾಗ ಹೊರತೆಗೆದು ಉಪಯೋಗಿಸಲು ಅಟ್ಟ ಹತ್ತಿ, ಅಲ್ಲಿನ ಗೂಡಿನಿಂದ  ಹೊರತೆಗೆಯಬೇಕಾಗುತ್ತಿತ್ತು. ಇದಕ್ಕೆ ಹೆಚ್ಚಿನ ಪ್ರಯತ್ನ ಬೇಕಿತ್ತು. "ಮಾಡು" ಮತ್ತು  "ಗೂಡು" ಅನ್ನುವ ಪದಗಳಿಗೆ ಈ ಹಿನ್ನೆಲೆ. 

ಮೇಲಿನದು ಹೊರ ಅರ್ಥ. ಶ್ರೀ ಪುರಂದರದಾಸರು ವೈಷ್ಣವ ಸಿದ್ಧಾಂತದ ಪ್ರತಿಪಾದಕರು. ನಾವು ಈಗ ಬದುಕಿರುವುದು ಭೂಲೋಕ. ಅದು ಕೆಳಗಿದೆ ಎಂದು ನಂಬಿಕೆ. ಶ್ರೀವೈಕುಂಠ ಇದರ ಮೇಲಿನ ಲೋಕ. ಆದ್ದರಿಂದ ಅದು ನಮಗೆ ಮಾಡು. ಅದರಲ್ಲಿನ ಗೂಡು ಎಂದರೆ ಆ ವೈಕುಂಠದಲ್ಲಿ ನಾವು ಪಡೆಯಬಹುದಾದ ಸ್ಥಾನ. ಒಟ್ಟಿನಲ್ಲಿ ಈ ಜೀವನ-ಮರಣ ಚಕ್ರದಿಂದ ಹೊರಬಂದು ದುಃಖವಿಲ್ಲದ, ಒಂದು ಶಾಶ್ವತವಾದ ಸ್ಥಾನ ಹೊಂದುವುದು. "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎಂದರೆ ಸರಿಯಾಗಿ ಪ್ರಯತ್ನ ಮಾಡದೇ ಇರುವುದರಿಂದ "ಆ ವೈಕುಂಠ ಸಿಗಲಿಲ್ಲ. ಅಲ್ಲಿ ನನ್ನ ವಾಸದ ಜಾಗ ಸಿಗಲಿಲ್ಲ " ಎಂದು ಪ್ರಲಾಪಿಸುವುದು. ಇದು ಅಂತರಾರ್ಥ. 

ಈ ಹೇಳಿಕೆಯಲ್ಲಿ ಒಂದು ಗೂಡಾರ್ಥವೂ ಇದೆ. ನಮ್ಮ ಶರೀರವೇ ಒಂದು ಮನೆ. ಸರಿಯಾಗಿ ನೋಡಿದರೆ ಕಾಲು, ಸೊಂಟ, ಹೊಟ್ಟೆ ಮುಂತಾದುವು ಮನೆಯ ಕೆಳಭಾಗಗಳು. ಹೊಟ್ಟೆಯ ಮೇಲಿನ ಭಾಗ ಈ ದೇಹವೆಂಬ ಮನೆಯ ಮಾಡು. ಹೃದಯ ಈ ದೇಹವೆಂಬ ಮನೆಯ ಮಾಡಿನ ಭಾಗದಲ್ಲಿರುವ ಒಂದು ಗೂಡು. ಈ ಮನೆಯ ಮೇಲ್ಭಾಗದ ಮಾಡಿನ ಹೃದಯವೆಂಬ ಗೂಡಿನಲ್ಲಿ ಪರಮಾತ್ಮನೆಂಬ ದಿವ್ಯ ವಸ್ತು ಇದೆ. ಅವನು ಅಲ್ಲಿ ನೆಲೆಸಿದ್ದಾನೆ. ಮಾಡು ಹತ್ತಿ ಆ ಗೂಡಿನಲ್ಲಿರುವ ವಸ್ತುವನ್ನು ನಾವು ಪಡೆಯಲು ಪ್ರಯತ್ನಿಸಲೇ ಇಲ್ಲ. ಮನೆಯ ಕೆಳಗಿರುವ ಹೊಟ್ಟೆ ಹೊರೆಯುವ ಪ್ರಯತ್ನದಲ್ಲೇ ಜೀವನವೆಲ್ಲ ಕಳೆಯಿತು! ಯಾವುದು ಸುಖವೇ ಅಲ್ಲವೋ ಅದರ ಹಿಂದೆ ಬಿದ್ದು ನಿಜವಾದ ಸುಖ ಪಡೆಯುವ ಪ್ರಯತ್ನವನ್ನೇ ಮಾಡಲಿಲ್ಲ. ಈಗ, ಜೀವನದ ಕೊನೆಯಲ್ಲಿ, ಮಾಡಿನ ಗೂಡಿನಲ್ಲಿರುವ ಆ ಮುಖ್ಯ ವಸ್ತು ಸಿಗಲಿಲ್ಲ ಎನ್ನುವ ಕೊರಗು. 

ಪರಮಾತ್ಮನೆಂಬ ದಿವ್ಯ ವಸ್ತುವನ್ನು ನಾವು ದಿನಬಳಕೆಗಾಗಿಯೇ ಇಟ್ಟುಕೊಳ್ಳಬೇಕಿತ್ತು. ಆದರೆ ಬೇರೆ ವಸ್ತುಗಳ ಮೋಹದಿಂದ ಇಂತಹ ಮುಖ್ಯ ವಸ್ತುವನ್ನು ಮಾಡಿನ ಮೇಲಿನ ಗೂಡಿನಲ್ಲಿ ಭದ್ರವಾಗಿಟ್ಟೆವು. ಮುಂದೆ ಎಂದೋ, ವೃದ್ಧಾಪ್ಯದಲ್ಲಿ, ಉಪಯೋಗಿಸುವ ಎನ್ನುವ ಅಭಿಲಾಷೆ. ಆದರೆ ಮುದಿತನದಲ್ಲಿ ಮೇಲೆ ಹತ್ತಿ ಆ ಪದಾರ್ಥವನ್ನು ಪಡೆಯುವ ಶಕ್ತಿ ಕುಂದಿದೆ. 

*****

"ಜೋಡಿ ಹೆಂಡಿರಿಗಂಜಿ ಓಡಿಹೋಗುವಾಗ" ಎನ್ನುವುದು ಈ ಹಾಡಿನ ಜೀವಾಳ. (ನಮ್ಮ ಉಗುರು ಮತ್ತು ಬೆಟ್ಟುಗಳ ಚರ್ಮದ ಮಧ್ಯೆ ಇರುವ ದಾರದಂತಹ ವಸ್ತುವಿಗೆ "ಜೀವಾಳ" ಎನ್ನುತ್ತಾರೆ. ಈ ಜೀವಾಳ ಉಗುರನ್ನು ದೇಹಕ್ಕೆ ಬಂಧಿಸಿಟ್ಟಿದೆ. ಅದು ಇಲ್ಲದಿದ್ದರೆ ಉಗುರೂ ಸಹ ಹಲ್ಲಿನಂತೆ ಬಿದ್ದುಹೋಗಬಹುದು. ಒಮ್ಮೊಮ್ಮೆ ಉಗುರು ಕತ್ತರಿಸುವಾಗ ಈ ಜೀವಾಳದ ಸ್ವಲ್ಪ ಭಾಗ ಕತ್ತರಿಸುವುದೂ ಉಂಟು. ಆಗ ಬಹಳ ನೋವಾಗುತ್ತದೆ. ಅದನ್ನು ಅನುಭವಿಸಿದವರಿಗೆ ಗೊತ್ತು). ಈ ಜೋಡಿ ಹೆಂಡಿರು ಯಾರು? ಅವರು ಗಂಡಸರಿಗೆ ಮಾತ್ರವೇ ಸಂಬಂಧಿಸಿದವರೇ? ಹಾಗಿದ್ದರೆ ಈ ಹಾಡಿಗೂ ಸ್ತ್ರೀಯರಿಗೂ ಏನೂ ಸಂಬಂಧವಿಲ್ಲವೇ? ಒಬ್ಬಳೇ ಹೆಂಡತಿ ಇರುವ ಗಂಡಸಿಗೂ ಇದು ಬೇಕಾಗಿಲ್ಲ, ಅಲ್ಲವೇ? ಇವೆಲ್ಲವೂ ಸಾಧುವಾದ ಪ್ರಶ್ನೆಗಳೇ. 

ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಶ್ರೀಮದ್ ಭಾಗವತದ "ಪುರಂಜನೋಪಾಖ್ಯಾನ" ನೋಡಬೇಕು. ಅದರ ವಿವರಗಳನ್ನು ಮತ್ತೊಮ್ಮೆ ವಿವರವಾಗಿ ನೋಡೋಣ. ಈಗ ಸೂಕ್ಷ್ಮವಾಗಿ ಇಷ್ಟು ಹೇಳಿದರೆ ಸಾಕು. "ಪುರ" ಅಂದರೆ ಈ ದೇಹ ಅನ್ನುವ ಪಟ್ಟಣ. ಈ ದೇಹವೆಂಬ ಮನೆಯಲ್ಲಿ ಯಜಮಾನನಾಗಿ ವಾಸಿಸುವವನೇ "ಪುರುಷ" ಎಂಬ ಪರಮಾತ್ಮ. ಆ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುವವನೇ ಜೀವ. ಈ ಜೀವ ಗಂಡು ದೇಹದಲ್ಲಾದರೂ ಇರಬಹುದು; ಹೆಣ್ಣು ದೇಹದಲ್ಲಾದರೂ ಇರಬಹುದು. ಆದ್ದರಿಂದ ಇಲ್ಲಿ ಹೇಳಿದ ಎರಡು ಹೆಂಡಿರು ಸ್ತ್ರೀಯರಿಗೂ ಮತ್ತು ಪುರುಷರಿಗೂ ಸಮಾನವಾಗಿ ಅನ್ವಯ ಆಗುತ್ತದೆ. ಇಲ್ಲಿ ಹೆಂಡಿರು ಅಂದರೆ ನಮ್ಮ ವ್ಯಾವಹಾರಿಕ ಜೀವನದಲ್ಲಿ ನಿರ್ದೇಶಿಸುವ ಹೊಂಡತಿ ಅಲ್ಲ. ಆದ್ದರಿಂದ ಇದು ಎಲ್ಲರಿಗೂ ಸಮಾನವಾಗಿ ಅನ್ವಯ. 

ಪುರಂಜನೋಪಾಖ್ಯಾನದಲ್ಲಿ "ಬುದ್ಧೀತು ಪ್ರಮದಾಮ್ ವಿದ್ಧಿ" ಎಂದು ಹೇಳಿದ್ದಾರೆ. ಅಂದರೆ "ಬುದ್ಧಿ ಅನ್ನುವುದು ಒಂದು ಸ್ತ್ರೀಯಂತೆ. ಅದನ್ನು ಜೀವನು ಹೆಂಡತಿ ಎನ್ನುವಂತೆ ತಿಳಿಯಬೇಕು" ಎಂದು ಅರ್ಥ. ಹೆಂಡತಿ (ಅಥವಾ ಗಂಡ) ಸಾಂಸಾರಿಕ ಜೀವನದಲ್ಲಿ ಬಹಳ ಮುಖ್ಯ. ಸುಖಜೀವನಕ್ಕೆ ಹೇಗೆ ಹೆಂಡತಿ (ಅಥವಾ ಗಂಡ) ಸಹಕಾರಿಯಾಗಬಹುದೋ ಹಾಗೆಯೇ ಜೀವನ ದುರ್ಭರ ಆಗಲೂ ಕಾರಣ ಆಗಬಹುದು. ಬುದ್ಧಿ ಒಂದು ಹೆಂಡತಿ ಆದರೆ ಎರಡನೆಯ ಹೆಂಡತಿ ಯಾರು? ಅದು "ಮನಸ್ಸು". ಬುದ್ಧಿ ಮತ್ತು ಮನಸ್ಸು ಪ್ರತಿಯೊಬ್ಬರಿಗೂ (ಹೆಣ್ಣು ಗಂಡು ಎಂಬ ಭೇದವಿಲ್ಲದೆ} ಇರುವ ಇಬ್ಬರು ಹೆಂಡತಿಯರು. 

ಈ ಇಬ್ಬರು ಹೆಂಡತಿಯರು ನಮಗೆ ಸಹಕಾರಿಯಾಗಿರುವಂತೆ ನೋಡಿಕೊಳ್ಳಲಾಗದೆ ಅವರ ಭಯಕ್ಕೆ ಶರಣಾಗುವುದು "ಜೋಡಿ ಹೆಂಡರಿಗಂಜಿ ಓಡಿಹೋಗುವುದು". "ಏನು ಮಾಡಲಿ? ನನ್ನ ಮನಸ್ಸು ನನ್ನ ಮಾತು ಕೇಳುವುದಿಲ್ಲ. ಬುದ್ಧಿ ನನ್ನ ಸ್ಥಿಮಿತದಲ್ಲಿಲ್ಲ" ಎಂದು ಕೈಚೆಲ್ಲುವುದೇ ಈ ಇಬ್ಬರು ಹೆಂಡಿರಿಗಂಜಿ ಓಡಿಹೋಗುವುದು. ಪ್ರಯತ್ನಪೂರ್ವಕವಾಗಿ ಇವೆರಡನ್ನೂ ನಮ್ಮ ಗುರಿ ಸಾಧನೆಗೆ ಅನುಕೂಲ ಮಾಡಿಕೊಳ್ಳುವುದೇ ಅವರ ಜೊತೆ ಹೊಡೆದಾಡಿ ಗೆಲ್ಲುವುದು. ಹೀಗೆ ಗೆದ್ದರೆ ಓಡಿಹೋಗಬೇಕಾಗಿಲ್ಲ. ಹೀಗೆ ಹೋರಾಡಿ ಗೆಲ್ಲದೇ ಹೆದರಿ ಓಡಿಹೋಗುವಾಗ "ಗೋಡೆ ಬಿದ್ದು ಬಯಲಾಯಿತು". ಬಯಲಾಯಿತಲ್ಲ ಎಂದರೆ ಹೊಡೆದಾಟದಲ್ಲಿ ಕಾಲಚಕ್ರ ಓಡಿ ವೃದ್ಧಾಪ್ಯ ಬರುವುದು. ಮುಪ್ಪಿನಲ್ಲಿ ಕೈ-ಕಾಲುಗಳ, ದೇಹದ, ಶಕ್ತಿ ಕುಂದಿ ಗೋಡೆ ಬಿದ್ದ ಮನೆಯಂತೆ ಆಗುತ್ತದೆ. ಗೋಡೆ ಬಿದ್ದರೆ ಮನೆ ಇದ್ದೂ ಇಲ್ಲ. ಶಕ್ತಿ ಕುಂದಿದಮೇಲೆ ಬದುಕಿದ್ದೂ ಸಾಧನೆ ಮಾಡಲಾಗದು. ಪಾಳು ಬಿದ್ದ ಮನೆ ಅನ್ಯರ ಪಾಲು. ಜೂಜು ಆಡುವವರು, ಕುಡುಕರು ಇಂತಹವರ ಬೀಡು ಆ ಮನೆ. ದೇಹದಲ್ಲಾದರೋ, ರೋಗ-ರುಜಿನಗಳಿಗೆ ಹೇರಳವಾದ ಅವಕಾಶ. ಅಂತಹ ದೇಹದಿಂದ ಏನೂ ಪ್ರಯೋಜನವಿಲ್ಲ. ಇದು ಗೂಡಾರ್ಥ. 

*****

ಸಮಯ ಚೆನ್ನಾಗಿದ್ದಾಗ ಎಚ್ಚರದಿಂದ ಸಾಧನೆ ಮಾಡಲಿಲ್ಲ. ಆಗ ಮತ್ತನಾಗಿ ನಿಡ್ರೆ ಮಾಡಿದಂತೆ ಜೀವನ ನಡೆಸಿದ್ದಾಯಿತು. ಬುದ್ಧಿ ಸ್ಥಿಮಿತದಲ್ಲಿ ಇಟ್ಟುಕೊಳ್ಳದೆ ಬುದ್ಧಿಭ್ರಮಣೆ ಆದ ಹುಚ್ಚನಂತೆ ಜೀವನ ಕಳೆಯಿತು. ಹಣ ಸಂಪಾದಿಸುವುದೇ ಜೀವನದ ಗುರಿಯಾಯಿತು. ಸಂಸಾರದ ಸಿಹಿ ಅನ್ನುವ ಬೆಲ್ಲದ ಅಥವಾ ಸಕ್ಕರೆಯ ಅಚ್ಚಿನಲ್ಲಿ ಮನಸ್ಸು ಮುಳುಗಿತು. ಅಚ್ಚು ಅನ್ನುವ ಪದಕ್ಕೆ "ಠಸ್ಸೆ" ಅಥವಾ "ಸೀಲ್" ಎಂದೂ ಅರ್ಥವುಂಟು. ಈ ಸಂಸಾರವೆಂಬ ಅಚ್ಚಿನ ರುಚಿಯಲ್ಲಿ ಜೀವನದ ಉದ್ದೇಶ ಸೀಲ್ ಆಯಿತು. ಆದ್ದರಿಂದ "ಅಚ್ಚಿನೊಳಗೆ ಮೆಚ್ಚು; ಮೆಚ್ಚಿನೊಳಗೆ ಅಚ್ಚು". ಬೆಂಕಿ ಬಿದ್ದಾಗ ಬೆಲ್ಲದ ಅಥವಾ ಸಕ್ಕರೆ ಅಚ್ಚು ಕರಗಿ ಹೋಗುತ್ತದೆ. ಮುಪ್ಪಿನ ಬೆಂಕಿ ಬಿದ್ದಾಗ ಜೀವನವೆಂಬ ಪ್ರೀತಿಯಿಂದ ಕಾಯ್ದುಕೊಂಡಿದ್ದ ಅಚ್ಚು ಕರಗಿಹೋಯಿತು ಎಂದು ಈಗ ಪ್ರಲಾಪ. 

ಕೆಲವರಿಗೆ ಪಾಯಸ ಅಂದರೆ ಅಷ್ಟಕ್ಕಷ್ಟೇ. ಅದನ್ನು ತಿನ್ನುವುದೇ ಇಲ್ಲ. ತಿಂದರೂ ಆಗೊಮ್ಮೆ-ಈಗೊಮ್ಮೆ ಬಹಳ ಸ್ವಲ್ಪ ಪ್ರಮಾಣದಲ್ಲಿ. ಚಿಕ್ಕ ವಯಸ್ಸಿನಲ್ಲಿ ಪಾಯಸ ತಿನ್ನಲಿಲ್ಲ. ಈಗ ಮುಪ್ಪಿನಲ್ಲಿ ಪಾಯಸ  ತಿನ್ನುವಹಾಗಿಲ್ಲ! ಇಲ್ಲಿ ಪಾಯಸ ಅಂದರೆ "ರಾಮನಾಮ" ಮುಂತಾದ ಪಾಯಸ. "ರಾಮನಾಮ ಪಾಯಸಕೆ ಕೃಷ್ಣನಾಮ ಸಕ್ಕರೆ., ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ"ಎನ್ನುವ ಹಾಡಿನಲ್ಲಿ ಪಾಯಸ ಎಂದರೆ ಏನು ಎನ್ನುವುದನ್ನು ದಾಸರು ಹೇಳಿದ್ದಾರೆ. "ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪನೆ ಬಿತ್ತಲ್ಲ" ಅನ್ನುವುದು ಮುಪ್ಪಿನಲ್ಲಿ ದೇಹ ಹಾಸಿಗೆ ಹಿಡಿದದ್ದನ್ನು ತೋರಿಸುತ್ತದೆ. ತುಪ್ಪದ ಪಾತ್ರೆ ಕೈಜಾರಿ ತುಪ್ಪ ಕೆಳಗೆ ಬಿದ್ದರೆ, ಆ ಜಾಗ ಶುದ್ಧವಾಗಿದ್ದರೆ ಬಾಚಿಕೊಳ್ಳಬಹುದು. ಆದರೆ ಅದು ತಿಪ್ಪೆಯ ಮೇಲೆ ಬಿದ್ದರೆ?  ಪೂರ್ತಿ ಹಾಳು. ಮತ್ತೆ ಮೇಲೆ ಏಳದಂತೆ ಹಾಸಿಗೆ ಹಿಡಿದಂತೆ ಜೀವನ ಆಯಿತು ಎನ್ನುವಂತೆ. 

"ಯೋಗವು ಬಂತಲ್ಲಾ, ಬದುಕು ವಿಭಾಗವಾಯಿತಲ್ಲಾ" ಎನ್ನುವುದು ಬಂದ ಅವಕಾಶ ಕಳೆದುಕೊಂಡು ಜೀವನ ಅಲ್ಲಿ-ಇಲ್ಲಿ ಹರಿದು ಹಂಚಿ ಹೋದಂತೆ ಆಯಿತು ಎನ್ನುವುದನ್ನು ಸೂಚಿಸುತ್ತದೆ. ಭೋಗೀಶಯನನಾದ, ಆದಿಶೇಷನ ಮೇಲೆ ಮಲಗಿರುವ ಶ್ರೀಹರಿಯನ್ನು ಆಗ (ಚಿಕ್ಕವಯಸ್ಸಿನಲ್ಲಿ, ಶಕ್ತಿ, ಆರೋಗ್ಯಗಳು ಇದ್ದಾಗ} ನೆನೆಯಲಿಲ್ಲ. ಈಗ ನೆನೆಯಬೇಕೆಂದರೆ ಆಗುವುದಿಲ್ಲ. ಸಾಧನೆ ಸಾಧ್ಯವಿದ್ದಾಗ ಮಾಡದೇ, ಈಗ ಸಾಧ್ಯವಿಲ್ಲದಿದ್ದಾಗ ಗೋಳಾಡುವಂತೆ ಆಯಿತಲ್ಲ ಎಂದು ವ್ಯಥೆ. 

ಮೊದಲ ಎರಡು ಸಾಲುಗಳ ಪ್ರಮೇಯವನ್ನು ಹೀಗೆ ಮುಂದಿನ ಮೂರು ನುಡಿಗಳಲ್ಲಿ ವಿಸ್ತರಿಸಿ ದಾಸರು ಹೇಳಿದ್ದಾರೆ. ಇದನ್ನು ಅವರು ತಮಗೇ ಹೇಳಿಕೊಂಡಿದ್ದಾರೆ ಎಂದು ತಪ್ಪಾಗಿ ತಿಳಿಯಬಾರದು. "ನವಕೋಟಿ  ನಾರಾಯಣ" ಎನ್ನುವ ಬಿರುದು ಹೊಂದಿದ್ದು, ಎಲ್ಲವನ್ನೂ ಬಿಟ್ಟು ಬಂದು "ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿದಳಯ್ಯಾ" ಎಂದವರು ಅವರು. ಸಾಮಾನ್ಯರಾದ ನಮ್ಮಂತಹವರ ಸ್ಥಿತಿಯನ್ನು ಹೇಳುವ ಹಾಡು ಇದು. 

*****

ಕಳೆದ ಶತಮಾನದ ಐವತ್ತು-ಅರವತ್ತರ ದಶಕದಲ್ಲಿ ಕನ್ನಡದ ಭಾವಗೀತೆಗಳ ಮೊದಲ ಗಾಯಕ ಹರಿಕಾರರಲ್ಲೊಬ್ಬರಾದ ಮಾನ್ಯ ಪಿ. ಕಾಳಿಂಗರಾಯರು ತಮ್ಮ ಗೋಷ್ಠಿಗಳಲ್ಲಿ ಈ ಹಾಡನ್ನು ಸೊಗಸಾಗಿ ಹಾಡುತ್ತಿದ್ದರು. ಆರ್ತರಾಗಿ ಕೂಗುವಂತಹುದು ಅವರ ಹಾಡಿನಲ್ಲಿ ಚೆನ್ನಾಗಿ ಧ್ವನಿತವಾಗಿದೆ. ಪುಣ್ಯಕ್ಕೆ ಅದರ ಧ್ವನಿಮುದ್ರಿಕೆ ಯೂಟ್ಯೂಬಿನಲ್ಲಿ ಸುಲಭವಾಗಿ ಲಭ್ಯವಿದೆ. ಅದರ ಲಿಂಕ್ ಕೆಳಗೆ ಕೊಟ್ಟಿದೆ. ಆಸಕ್ತರು ಕೇಳಬಹುದು:


https://www.youtube.com/watch?v=e-yowKKUL1k

*****

ವಿವರಣೆ ಸ್ವಲ್ಪ ದೀರ್ಘವಾಯಿತು ಎನ್ನಿಸಬಹುದು. ಆದರೆ ವಿಧಿಯಿಲ್ಲ. ಹಾಡಿನ ಮೇಲುನೋಟದ  ಅರ್ಥಕ್ಕೂ, ಅಂತರಾರ್ಥ, ಗೂಡಾರ್ಥಗಳಿಗೂ ಬಹಳ ಅಂತರ ಉಂಟು. ಆಳವಾಗಿ ಯೋಚಿಸಿದಷ್ಟೂ, ಅಧ್ಯಯನ ಮಾಡಿದಷ್ಟೂ ವಿಶೇಷ ಅರ್ಥಗಳು  ಹೊಳೆಯುತ್ತವೆ,

"ಬುದ್ಧಿ ಮತ್ತು ಮನಸ್ಸು" ಮತ್ತು "ಪುರಂಜನೋಪಾಖ್ಯಾನ" ಇವುಗಳ ಬಗ್ಗೆ ಹೆಚ್ಚಿನ ವಿವರಣೆಯನ್ನು  ಮತ್ತೆ ಎಂದಾದರೂ ಅವಕಾಶ ಆದಾಗ ನೋಡೋಣ!

4 comments:

  1. Good review of various issues which we are facing in life. Hats off to Keshava Murthyji.

    ReplyDelete
  2. ವಿವರಣೆ ಸೊಗಸಾಗಿದೆ.ದೀರ್ಘ ಏನೂ ಇಲ್ಲ. ಕ್ಲುಪ್ತ ವಾಗಿಯೇ ಇದೆ.ಧನ್ಯವಾದಗಳು!

    ReplyDelete
  3. ರಾಘವೇಂದ್ರJune 6, 2025 at 7:38 AM

    👌ಈ ಲೇಖನ, ಇವತ್ತಿನ ಪೀಳಿಗೆಗೆ ಬಹಳ ಸೂಕ್ತ.
    ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು, ಕೈ ತುತ್ತು ಊಟ, ಇವೆಲ್ಲವೂ ಕನಸಿನ ಮಾತು.

    ಪುರಂದರ ದಾಸರ ಈ ರಚನೆಯ ವರ್ಣನೆ, ಬಹಳ ಸೊಗಸಾಗಿದೆ, ಅದರಲ್ಲೂ, *ಜೋಡಿ ಹೆಂಡಿರಿಗಂಜಿ ಓಡಿಹೋಗುವಾಗ" * ಅಧ್ಬುತ.

    ನಿಮ್ಮ ಆಳವಾದ ಅಧ್ಯಯನದಿಂದ, ನಮಗೆ ರಸದೌತಣವನ್ನು, ನೀಡುತ್ತಿರುವಿರಿ.

    ಧನ್ಯವಾದಗಳು.

    ReplyDelete
  4. ಹಾಡನ್ನು ಬಹಳ ಸಾರಿ ಕೇಳಿದ್ದರು ಅದರ ಒಳಾರ್ಥ ಗೊತ್ತಿರಲಿಲ್ಲ ಸೊಗಸಾದ ವಿವರಣೆ ನೀಡಿ ಸಂದೇಹವನ್ನು ಪರಿಹರಿಸಿದ್ದೀರಿ ಧನ್ಯವಾದಗಳು

    ReplyDelete