ಕುತೋ ಮುಂಡೀ ಗಲಾನ್ಮುಂಡೀಪಂಥಾಸ್ತೇ ಪೃಚ್ಛತಾ ಮಯಾಕಿಮಾಹ ಪಂಥಾ ತ್ವನ್ಮಾತಾಮುಂಡೇತ್ಯಾಹ ತಥೈವಹಿ
ಮಿಶ್ರರು "ಕುತೋಮುಂಡೀ?" ಎಂದು ಕೇಳಿದರು. "ತಲೆ ಬೋಳಿಸಿಕೊಂಡಿರುವ ಯತಿಯೇ, ಎಲ್ಲಿಂದ ಬಂದೆ?" ಎಂದು ಪ್ರಶ್ನೆ. ಇದಕ್ಕೆ ಆಚಾರ್ಯರು "ಎಲ್ಲಿಂದ ಬೋಳಿಸಿದೆ?" ಎಂದು ಅರ್ಥಮಾಡಿ "ಗಲಾನ್ಮುಂಡೀ", ಅಂದರೆ "ಕುತ್ತಿಗೆಯಿಂದ ಮೇಲೆ ಬೋಳಿಸಿದೆ", ಎಂದು ಉತ್ತರ ಕೊಟ್ಟರು.
ಇದರಿಂದ ಕೆರಳಿದ ಮಿಶ್ರರು "ಪಂಥಾಸ್ತೇ ಪೃಚ್ಛತಾ ಮಯಾ" ಎಂದರು. "ನಾನು ಕೇಳಿದ್ದು ದಾರಿಯನ್ನು" ಎಂದು ಪ್ರಶ್ನೆ. ಇದಕ್ಕೆ ಆಚಾರ್ಯರು "ದಾರಿಯನ್ನು ಕೇಳಿದೆ" ಎಂದು ಅರ್ಥಮಾಡಿ "ಕಿಮಾಹ ಪಂಥಾ?", "ದಾರಿಯನ್ನು ಕೇಳಿದೆಯಲ್ಲಾ, ಅದು ಏನು ಹೇಳಿತು?", ಎಂದು ಪುನಃಪ್ರಶ್ನೆ ಮಾಡಿದರು.
ಮಿಶ್ರರು ಮತ್ತಷ್ಟು ಕೋಪಗೊಂಡರು. "ತ್ವನ್ಮಾತಾ ಮುಂಡೇತ್ಯಾಹ", ಅಂದರೆ "ನಿನ್ನ ತಾಯಿ ವಿಧವೆ ಎಂದಿತು" ಎಂದು ಹೇಳಿದರು. ಆಚಾರ್ಯರು "ತಥೈವಹಿ", ಅಂದರೆ "ಹಾಗಿದ್ದರೆ ಸರಿ" ಅಂದರು. ("ದಾರಿಯನ್ನು ಪ್ರಶ್ನೆ ಕೇಳಿದ್ದು ನೀನು. ಅದು ಕೊಟ್ಟ ಉತ್ತರವೂ ನಿನಗೇ ಸೇರಿದ್ದು. ಅಂದರೆ ಅದಕ್ಕೂ ನನಗೂ ಸಂಬಂಧವಿಲ್ಲ" ಎಂದು ಅರ್ಥ).
ಪ್ರಶ್ನೋತ್ತರ ಎಲ್ಲಿಂದ ಎಲ್ಲಿಗೋ ಹೋಯಿತು ಎಂದು ಮತ್ತೆ ಹೇಳಬೇಕಾಗಿಲ್ಲ. ಹೀಗೇ ಸಂಭಾಷಣೆ ಮುಂದುವರೆಯಿತು.
*****
ಇದೆಲ್ಲವನ್ನೂ ಜೈಮಿನಿ-ವ್ಯಾಸರು ನೋಡುತ್ತಿದ್ದರು. ಈಗ ವ್ಯಾಸರು ಮಧ್ಯೆ ಪ್ರವೇಶಿಸಿದರು.
"ಮಿಶ್ರರೇ, ಬಂದಿರುವವರು ಯತಿಗಳು. ಬಂದಿರುವುದು ಶ್ರಾದ್ಧಕಾಲ. ಹೀಗಿರುವಾಗ ಅವರೊಡನೆ ಹೀಗೆ ಸಂವಾದ ಸಲ್ಲದು. ಬಂದಿರುವುದು "ಶ್ರಾದ್ಧ ಸಂರಕ್ಷಕನಾದ ಶ್ರೀ ಮಹಾವಿಷ್ಣು" ಎಂದು ತಿಳಿದು ಅವರನ್ನು ಸತ್ಕರಿಸಿರಿ" ಎಂದರು.
ಮಿಶ್ರರಿಗೆ ತಮ್ಮ ತಪ್ಪಿನ ಅರಿವಾಯಿತು. ತಕ್ಷಣ ಆಚಾರ್ಯರನ್ನು "ಭಿಕ್ಷಾ ಸ್ವೀಕಾರ" ಮಾಡಬೇಕೆಂದು ಕೋರಿದರು. ಆಚಾರ್ಯರು "ನನಗೆ ವಾದಭಿಕ್ಷೆ ಬೇಕು. ಅನ್ನದ ಭಿಕ್ಷೆ ಅಲ್ಲ" ಅಂದರು. ಮಿಶ್ರರು "ತಮ್ಮೊಡನೆ ವಾದ ಮಾಡುವುದು ಒಂದು ಭಾಗ್ಯವೇ. ಆದರೆ ಇಂದು ಶ್ರಾದ್ಧ ಕಾಲ. ಇಂದು ಈ ಭಿಕ್ಷಾ ಸ್ವೀಕರಿಸಿ. ವಾದ ನಾಳೆ ನಡೆಯಬಹುದು" ಎಂದರು. ಆಚಾರ್ಯರು ಒಪ್ಪಿದರು.
ಆಚಾರ್ಯರಿಗೆ ಮತ್ತೊಂದು ಎಲೆಯಲ್ಲಿ ಬಡಿಸಿ ಭಿಕ್ಷಾಸ್ವೀಕಾರ ಆಯಿತು. ಜೈಮಿನಿ-ವ್ಯಾಸರನ್ನು ಕೂಡಿಸಿಕೊಂಡು ಶ್ರಾದ್ಧ ಕರ್ಮವೂ ನಡೆಯಿತು. ಹೀಗೆ ಮಿಶ್ರರು "ಯತಿಭಿಕ್ಷಾ" ಮತ್ತು "ಶ್ರಾದ್ಹಕಾರ್ಯ" ಎರಡನ್ನೂ ನಡೆಸಿದರು.
ಮಾರನೆಯ ದಿನದಿಂದ ನಡೆದ ಐತಿಹಾಸಿಕ ವಾದದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಎಂಟು ದಿನಗಳ ಅಖಂಡ ವಾದದಲ್ಲಿ ಸೋತ ಮಂಡನ ಮಿಶ್ರರು ಆಚಾರ್ಯರಿಂದ ಸನ್ಯಾಸ ಸ್ವೀಕರಿಸಿ "ಶ್ರೀ ಸುರೇಶ್ವರಾಚಾರ್ಯ" ಎಂದು ಪ್ರಸಿದ್ಧರಾದರು.
*****
ಕಾಶ್ಮೀರದ ರಾಜಧಾನಿ ಶ್ರೀನಗರ ಪಟ್ಟಣದ ಹೊರಭಾಗದಲ್ಲಿ "ಶಂಕರಾಚಾರ್ಯ ದೇವಾಲಯ" ಎಂದು ಹೆಸರಿನ ಸಣ್ಣ ಬೆಟ್ಟ ಇದೆ. ಅಲ್ಲಿ ಒಂದು ಶಿವನ ದೇವಾಲಯವಿದೆ. ಅದರ ಗರ್ಭಗುಡಿಯ ಕೆಳಭಾಗದಲ್ಲಿ ಒಂದು ಗುಹೆಯಿದೆ. ಶ್ರೀ ಶಂಕರಾಚಾರ್ಯರು ಈ ಗುಹೆಯಲ್ಲಿ ವಾಸಿಸಿ ತಪಸ್ಸು ಮಾಡಿದರೆಂದು ಹೇಳುತ್ತಾರೆ. (ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಈ ಮಾಡಿ ಓದಬಹುದು). ಬೆಟ್ಟದ ದೇವಾಲಯದಿಂದ ನೋಡಿದರೆ ಒಂದು ಕಡೆ "ದಾಲ್ ಲೇಕ್" ಸರೋವರ ಕಾಣುತ್ತದೆ. ಅದರ ಬಳಿ "ಸುರೇಶ್ವರಿ" ಎನ್ನುವ ಹೆಸರಿನ ದೇವಿಯ ದೇವಾಲಯವೊಂದು ಇತ್ತಂತೆ. ಈಗ ಇಲ್ಲ. "ಕಾಶ್ಮೀರಪುರವಾಸಿನಿ" ಶಾರದೆಯನ್ನು ನಮ್ಮ ಕರ್ನಾಟಕಕ್ಕೆ ಕರೆತಂದು ಶೃಂಗೇರಿಯಲ್ಲಿ ನೆಲೆಯಾಗುವಂತೆ ಮಾಡಿದ ಮಹಾನುಭಾವರು ಶ್ರೀ ಶಂಕರಾಚಾರ್ಯರು. ಹಾಗೆಯೇ ಶ್ರೀ ಸುರೇಶ್ವರಾಚಾರ್ಯರನ್ನು ಶೃಂಗೇರಿ ಪೀಠದ ಮೊದಲ ಮಠಾಧೀಶರಾಗಿ ನೇಮಿಸಿದರು.
ಮಂಡನ ಮಿಶ್ರರ ಮನೆಯಲ್ಲಿ ನಡೆದ ಈ ಘಟನೆ ನಂತರ ಶ್ರಾದ್ಧಗಳಲ್ಲಿ "ಶ್ರಾದ್ಧ ಸಂರಕ್ಷಕ ಶ್ರೀ ಮಹಾವಿಷ್ಣು" ಬಂದಿದ್ದಾನೆ ಎಂದು ಭಾವಿಸಿ "ದೇವರ ಎಲೆ" ಹಾಕುವ ಸಂಪ್ರದಾಯ ನಡೆದು ಬಂದಿದೆ. (ದ್ವೈತಿಗಳಲ್ಲಿ ಈ ಸಂಪ್ರದಾಯ ಇಲ್ಲ). ಜ್ಞಾನವೃದ್ಧರು ಮತ್ತು ವಯೋವೃದ್ಧರೊಬ್ಬರನ್ನು ಕರೆದು ಈ ಎಲೆಯಲ್ಲಿ ಭೋಜನಕ್ಕೆ ಕೂಡಿಸುತ್ತಿದ್ದರು. ಅಥವಾ ಆ ಸಮಯದಲ್ಲಿ ಅನಿರೀಕ್ಷಿತವಾಗಿ ಬಂದ ಅತಿಥಿಗೆ ಅಲ್ಲಿ ಅವಕಾಶ ಇತ್ತು. ಯಾರೂ ಬಾರದಿದ್ದರೆ ನಂತರ ಮನೆಯ ಹಿರಿಯರು ಅಥವಾ ಶ್ರಾದ್ಧ ಮಾಡುವ ಕರ್ತೃಗಳಲ್ಲಿ ಒಬ್ಬರು ಅಲ್ಲಿ ಭೋಜನ ಮಾಡುತ್ತಿದ್ದರು.
"ನಾಲ್ಕು ಮಾತುಗಳು" ಅನ್ನುವ ಸಂಚಿಕೆಯಲ್ಲಿ ಶ್ರಾದ್ಧ ಕರ್ಮಗಳಲ್ಲಿ ದೌಹಿತ್ರರ ಆಹ್ವಾನದ ವಿಷಯ ಬಂದಿದೆ. (ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಮಿತ್ರರೊಬ್ಬರು ದೌಹಿತ್ರರು ಹೆಣ್ಣಾಗಿದ್ದರೆ ಈ ಎಲೆಯಲ್ಲಿ ಭೋಜನ ಮಾಡಲು ಕೂಡಿಸುತ್ತಾರೆ ಎಂದು ತಿಳಿಸಿದ್ದಾರೆ. ಅವರವರ ಮನೆಯ ಸಂಪ್ರದಾಯದಂತೆ ಇದು ನಡೆಯುತ್ತದೆ.
ಹೀಗೆ ನಡೆದುಬಂದಿರುವ "ದೇವರ ಎಲೆ" ಒಂದು ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆ ಇರುವ, ಬಹಳ ಗೌರವದಿಂದ ಕೂಡಿರುವ ಆಚರಣೆ.
Very interesting to know about ‘Devara Yele’. Your topics in your blog give us a meaning we are looking for about why certain things are done certain way. There is always an instance to prove it like in this one. The divine purpose has played a part in it all the time. UR….
ReplyDeleteಅವೀಕ ವಷಯಗಳು ತಿಳಿಯದ್ದು ಇಲ್ಲ ತಿಳಿಯುವ ಅವಕಾಶ ಶ್ರೀಮಾನ್ಯರು ಕಲ್ಪಿಸಿರುತ್ತಾರೆ
ReplyDeleteಧನ್ಯೋಸ್ಮಿ
ನಮ್ಮ ಪೂರ್ವಜರು ಆಚರಿಸುತ್ತಿದ್ದ ಎಲ್ಲ ಕ್ರಿಯೆಗಳಿಗೂ ವೈಜ್ಞಾನಿಕ/ವೈಚಾರಿಕ ಹಿನ್ನೆಲೆ ಇದೆ. ಅದನ್ನು ನಾವು ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ.ಈ ನಿಟ್ಟಿನಲ್ಲಿ ನಿಮ್ಮ ಕೊಡುಗೆ ಶ್ಲಾಘನೀಯ. ಧನ್ಯವಾದಗಳು.
ReplyDelete