Showing posts with label Bandanene. Show all posts
Showing posts with label Bandanene. Show all posts

Friday, February 9, 2024

ಬಂದನೇನೇ? ರಂಗ ಬಂದನೇನೇ?


ಶ್ರೀಪುರಂದರದಾಸರ ಪದಗಳಲ್ಲಿರುವ ಸೊಬಗನ್ನು ನೋಡುತ್ತಾ ಅವರ ಅಹೋಬಲ ನರಸಿಂಹನ ಅವತಾರದ ವರ್ಣನೆ ನೋಡಿದೆವು. ನರಸಿಂಹನ ಉದ್ಭವದ ದೃಶ್ಯ ತಿಳಿಸುವಾಗ ಅವರು ಉಪಯೋಗಿಸಿರುವ ಗಟ್ಟಿ ಶಬ್ದಗಳ ಸೊಗಸು ಮತ್ತು ಆ ಸಂದರ್ಭದ ಭೀಕರತೆಯನ್ನು ಹಿಡಿದಿಟ್ಟಿರುವ ರೀತಿಯನ್ನು ನೋಡಿಯಾಯಿತು. ಅದೇ ಪದದಲ್ಲಿ ನರಸಿಂಹನು ಶಾಂತವಾದಾಗ ಹೇಗೆ ಸೌಮ್ಯ ಪದಗಳು ಪ್ರಯೋಗಿಸಿ ಉಗ್ರ ನರಸಿಂಹನನ್ನು ಪ್ರಹ್ಲಾದ ವರದನನ್ನಾಗಿ ತೋರಿಸಿದರು ಅನ್ನುವುದನ್ನೂ ನೋಡಿದೆವು. 

ಶ್ರೀ ಪುರಂದರದಾಸರ ಶ್ರೀಕೃಷ್ಣನ ವರ್ಣನೆಗಳುಳ್ಳ ಪದಗಳು ನೂರಾರು. ಶ್ರೀಕೃಷ್ಣನ ಜೀವಿತದ ಹಲವು ಘಟ್ಟಗಳಲ್ಲಿ ಬರುವ ಬೇರೆ ಬೇರೆ ಸಂದರ್ಭಗಳನ್ನು ದಾಸರು ತಮ್ಮ ಅನೇಕ ಪದಗಳಲ್ಲಿ ಹಿಡಿದಿಟ್ಟಿದ್ದಾರೆ. ಪ್ರತಿಪದದಲ್ಲಿಯೂ  ಅವರು ಸಂದರ್ಭಕ್ಕೆ ತಕ್ಕಂತೆ ಭಾಷೆಯನ್ನು ಪ್ರದರ್ಶಿಸಿದ್ದಾರೆ. 

ಆಗ ತಾನೇ ಹೆಜ್ಜೆ ಇಡಲು ಪ್ರಾರಂಭಿಸಿರುವ ಪುಟ್ಟ ಕೃಷ್ಣನ ಬರುವಿಕೆ ವರ್ಣಿಸುವ ಈ ಕೆಳಕಂಡ ಪದವು ಬಹಳ ಜನಪ್ರಿಯ. ಹಳ್ಳಿಗಳಲ್ಲಿ ಹಾಡುವುದನ್ನು ಕಲಿಯುವ ಮಕ್ಕಳಿಗೆ ಮೊದಲಿಗೆ ಕಲಿಸುತ್ತಿದ್ದ ಹಾಡುಗಲ್ಲಿ ಇದೂ ಒಂದು. ಕಲಿಯುವ ವಯಸ್ಸಿನ ಮಕ್ಕಳಿಗೆ ಸುಲಭವಾಗಿ ಅರ್ಥ ತಿಳಿಯುವ, ಹೇಳುತ್ತಿದ್ದಂತೆ ಹಾಡಿನ ರೂಪ ತಾಳುವ, ತನ್ನ ಪದಗಳಲ್ಲಿಯೇ ಒಂದು ರೀತಿಯ ಮೋಹಕ ಅನುಭವ ಕೊಡುವ ಕೃತಿ ಇದು. 

*****

ಪುಟ್ಟ ಕೃಷ್ಣ ಬರುವಾಗ ಹೇಗಿರುತ್ತಾನೆ? ಅವನ ವೇಷಭೂಷಣಗಳು ಹೇಗೆ? ಆ ವೇಷ ಮತ್ತು ಅಲಂಕಾರದ ವಸ್ತುಗಳು ಮತ್ತು ಅವನು ನಡೆದಾಡುವಾಗ ಆಗುವ ಶಬ್ಧಗಳೇನು? ಇದೇ ರೀತಿ ಇರುವ ಕಂದಮ್ಮಗಳು ನಡೆದಾಡುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ.  ಈ ವರ್ಣನೆ ಕೇಳುತ್ತಿದ್ದಂತೆ ನಮ್ಮ ಮನಸ್ಸಿನಲ್ಲಿ ಒಂದು ರೂಪ ಮೂಡುತ್ತದೆ! 

ಶ್ರೀಕೃಷ್ಣ ಬಂದನೇ ಎಂದು ಒಂದು ವ್ಯಕ್ತಿ ಮತ್ತೊಬ್ಬಳನ್ನು ಕೇಳುವ ಪ್ರಶ್ನೆಯ ರೀತಿ ಈ ಕೃತಿ ರಚನೆ ಮಾಡಿದ್ದಾರೆ:

ಬಂದನೇನೇ ರಂಗ ಬಂದನೇನೇ? 
ತಂದೆ ಬಾಲಕೃಷ್ಣ ನವನೀತ ಚೋರ 
ಬಂದನೇನೇ ರಂಗ ಬಂದನೇನೇ?

ಘಲು ಘಲು ಘಲುರೆಂಬೊ ಪೊನ್ನಂದುಗೆ ಗೆಜ್ಜೆ 
ಹೊಳೆ ಹೊಳೆ ಹೊಳೆಯುವ ಪಾದವನೂರುತ 
ನಲಿನಲಿದಾಡುವ ಉಂಗುರ ಅರಳೆಲೆ 
ಥಳ ಥಳ ಥಳ ಹೊಳೆಯುತ ಶ್ರೀಕೃಷ್ಣ 

ಕಿಣಿ ಕಿಣಿ ಕಿಣಿರೆಂಬೊ ಕರದ ಕಂಕಣ ಬಳೆ 
ಝಣ ಝಣ ಝಣರೆಂಬೊ ನಡುವಿನಗಂಟೆ 
ಠಣ ಠಣ ಠಣರೆಂಬೊ ಪಾದದ ತೊಡವಿನ 
ಮಿಣಿ ಮಿಣಿ ಮಿಣಿ ಕುಣಿದಾಡುತ ಶ್ರೀಕೃಷ್ಣ 

ಹಿಡಿ ಹಿಡಿ ಹಿಡಿಯೆಂದು ಪುರಂದರ ವಿಠಲನ 
ದುಡು ದುಡು ದುಡು ದುಡನೆ ಓಡಲು 
ನಡಿ  ನಡಿ  ನಡಿಯೆಂದು  ಮೆಲ್ಲನೆ ಪಿಡಿಯಲು 
ಬಿಡಿ ಬಿಡಿ ಬಿಡಿ ದಮ್ಮಯ್ಯ ಎನ್ನುತ 

ಬಂದನೇನೇ ರಂಗ ಬಂದನೇನೇ? 
ತಂದೆ ಬಾಲಕೃಷ್ಣ ನವನೀತ ಚೋರ 
ಬಂದನೇನೇ ರಂಗ ಬಂದನೇನೇ?

ದಾಸರು ಪ್ರಯೋಗಿಸಿರರುವುದು ಅತಿ ಕಡಿಮೆ ಪದಗಳು. ಪ್ರತಿ ಆಭರಣ ಮತ್ತು ಪುಟ್ಟ ಕೃಷ್ಣನ ಚಲನೆಯ ಶಬ್ದ ಮತ್ತು ನಡೆಗಳನ್ನು ಮತ್ತೆ ಮತ್ತೆ ಪ್ರಯೋಗಿಸುವುದರ ಮೂಲಕ ಒಂದು ರೀತಿಯ ವಿಶೇಷ ಅನುಭವವನ್ನು ಕೊಟ್ಟಿದ್ದಾರೆ. ಈ ಕೃತಿ ಒಂದು ಕಲ್ಲು ಸಕ್ಕರೆಯಂತೆ. ಸಿಹಿ ತಿಂಡಿಯಂತೆ ಒಮ್ಮೆಲೇ ತಿಂದು ಮುಗಿಸಬಾರದು. ಮತ್ತೆ ಮತ್ತೆ ಮೆಲುಕಿ ಹಾಕಿ ಆನಂದವನ್ನು ಅನುಭವಿಸಬೇಕು. ದೇವರನ್ನು ನಂಬುವುದೂ, ಬಿಡುವುದೂ ಅವರವರಿಗೆ ಸೇರಿದ ವಿಷಯ. ಆದರೆ ಸಾಹಿತ್ಯ-ಸಂಗೀತಗಳ ಸೊಗಸಿನ ಅನುಭವಕ್ಕೆ ಬೇರೆಲ್ಲ ವಿಷಯಗಳ ಸಂಪರ್ಕವಿಲ್ಲ. 

ಅಹೋಬಲ ನರಸಿಂಹನ ಉದ್ಭವವನ್ನೂ ಮತ್ತು ಈ ಬಾಲಕೃಷ್ಣನ ಆಗಮನವನ್ನೂ ಜೊತೆಯಲ್ಲಿ ಕೇಳಿದರೆ ಸಮಯಕ್ಕೆ ಸರಿಯಾದ ಪದ ಪ್ರಯೋಗದ ಜಾಣ್ಮೆಯನ್ನೂ ಕೈಚಳಕವನ್ನು ದಾಸರ ಪದಗಲ್ಲಿ ಕಾಣಬಹುದು. 

ಹರಿದಾಸರತ್ನಂ ಗೋಪಾಲದಾಸರು "ಗೆಜ್ಜೆ ಗೋಪಾಲದಾಸರು" ಎಂದೇ ಪ್ರಸಿದ್ಧರಾದವರು. ಅರವತ್ತು, ಎಪ್ಪತ್ತು, ಎಂಭತ್ತರ ದಶಕದಲ್ಲಿ ಬಹಳ ಪ್ರಸಿದ್ಧರಾದ ಮತ್ತು ಹರಿಕಥೆ ಎಂಬ ಕಲೆಯಲ್ಲಿ ಬಹಳ ನಿಪುಣರಾದವರು. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸಾಹಿತ್ಯ ಮತ್ತು ಸಂಗೀತಕ್ಕೆ ಸರಿಯಾಗಿ ಹರಿಕಥೆ ಮಾಡುವಾಗಲೇ ಹೆಜ್ಜೆ ಹಾಕುತ್ತಿದ್ದವರು. ದಾಸರ ಪದಗಳನ್ನು ಹಾಡುವುದರಲ್ಲಿ ಬಹಳ ವಿಶೇಷ ಪರಿಶ್ರಮ ಹೊಂದಿದ್ದರು. ಈ ಮೇಲಿನ ಕೃತಿಯನ್ನು ಸುಮಾರು ಮೂವತ್ತು ನಲವತ್ತು ನಿಮಿಷ ಹಾಡುತ್ತಿದ್ದರು. ಪ್ರತಿಯೊಂದು ನುಡಿಯನ್ನೂ ಬೇರೆ ಬೇರೆ ರೀತಿಯಲ್ಲಿ ಹಾಡುತ್ತಿದ್ದರು. ಪ್ರತಿ ಸಾರಿಯೂ ಅದೊಂದು ವಿಶಿಷ್ಟ ಅನುಭವ. ಕಡೆಯ ನುಡಿಯಲ್ಲಂತೂ ಶ್ರೀಕೃಷ್ಣ ಓಡುವುದನ್ನು, ಮತ್ತು ಅವನನ್ನು ಮೆಲ್ಲಗೆ ಹಿಡಿಯುವುದನ್ನೂ, ಅವನು ದಮ್ಮಯ್ಯಗುಡ್ಡೆ ಹಾಕಿ ಬಿಡಿಸಿಕೊಂಡು ಓಡುವುದನ್ನೂ ಶಬ್ದಗಳ ಮೂಲಕವೇ ಚಿತ್ರಿಸುತ್ತಿದ್ದರು. ವೀಣಾ ರಾಜಾರಾಯರು ತಮ್ಮ ಸಂಗೀತಾಭ್ಯಾಸಿ ಶಿಷ್ಯರಿಗೆ ಈ ಪದವನ್ನು ವಿಶೇಷವಾಗಿ ಕಲಿಸುತ್ತಿದ್ದರು. 

*****

ಇಂದು ಪುಷ್ಯ ಬಹುಳ ಅಮಾವಾಸ್ಯೆ ಶ್ರೀ ಪುರಂದರದಾಸರ ಪುಣ್ಯ ದಿನ. ಅವರನ್ನು ನೆನೆಯಲು ಸುದಿನ. 

ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ 
ಪುರಂದರ ಗುರಂ ವಂದೇ ದಾಸ ಶ್ರೇಷ್ಠಮ್ ದಯಾನಿಧಿಮ್