Showing posts with label beeesu. Show all posts
Showing posts with label beeesu. Show all posts

Friday, April 25, 2025

ಪಿಷ್ಟ ಪೇಷಣ ಮತ್ತು ತೌಡು ಕುಟ್ಟುವುದು

ಸ್ವಲ್ಪ ದಿನಗಳ ಹಿಂದೆ "ಚರ್ವಿತ ಚರ್ವಣ" ಎಂಬ ಶೀರ್ಷಿಕೆಯಲ್ಲಿ ಶ್ರೀಮದ್ ಭಾಗವತ ಪುರಾಣದ ಏಳನೆಯ ಸ್ಕಂಧದಲ್ಲಿ ವರ್ಣಿತವಾದ ಹಿರಣ್ಯ ಕಷಿಪು ಮತ್ತು ಬಾಲಕ ಪ್ರಹ್ಲಾದನ ನಡುವೆ ನಡೆದ ಸಂಭಾಷಣೆಯಲ್ಲಿ "ಚರ್ವಿತ ಚರ್ವಣ" ಎಂಬುದರ ಪ್ರಯೋಗ ಮತ್ತು ಈಗಿನ ಭಾಷೆಯಲ್ಲಿ ಅದನ್ನು ಹೇಗೆ ಉಪಯೋಗಿಸುತ್ತೇವೆ ಎಂದು ನೋಡಿದೆವು. ಇದರ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 


ಚರ್ವಿತ ಚರ್ವಣ ಅನ್ನುವುದರ ಜೊತೆಯಲ್ಲಿ "ಪಿಷ್ಟ ಪೇಷಣ" ಅನ್ನುವ ಪ್ರಯೋಗವೂ ಉಂಟು. ಚರ್ವಿತ ಚರ್ವಣ ಆಗಲೇ ದೀರ್ಘವಾಗಿದ್ದರಿಂದ ಅದನ್ನು ಅಲ್ಲಿ ಸೇರಿಸಲಿಲ್ಲ. ಮಾನ್ಯ ಸ್ನೇಹಿತರೊಬ್ಬರು ಕನ್ನಡ ಆಡು ಭಾಷೆಯ "ತೌದು ಕುಟ್ಟುವುದು" ಅನ್ನುವುದನ್ನೂ ನೆನಪು ಮಾಡಿದರು. ಚರ್ವಿತ ಚರ್ವಣ ಅನ್ನುವುದರ ಜೊತೆ ಈ ಎರಡು ಪ್ರಯೋಗಗಳನ್ನೂ ಈಗಲೂ ಮಾಡುವುದು, ಮತ್ತು ಅದರಲ್ಲಿಯೂ ಬರವಣಿಗೆಯಲ್ಲಿ ಹೆಚ್ಚಾಗಿ, ಮಾಡುವುದು, ನಡೆದಿದೆ. 

ಇವೆರಡರ  ಅರ್ಥ ಮತ್ತು ಪ್ರಯೋಗವನ್ನು ಈ ಸಂಚಿಕೆಯಲ್ಲಿ ನೋಡೋಣ. 

***** 


ಈಗ್ಗೆ ಸುಮಾರು ಐವತ್ತು ವರುಷಗಳ ಹಿಂದಿನ ಸಮಯ. ಆಗ ಇನ್ನೂ ಮೊಬೈಲ್ ಫೋನ್ ಎನ್ನುವ ಕಲ್ಪನೆಯೂ ಇರಲಿಲ್ಲ. ಲ್ಯಾಂಡ್ ಲೈನ್ ದೂರವಾಣಿ ಇದ್ದವರೂ ಕಡಿಮೆಯೇ. ಯಾರದ್ದಾದರೂ ಫೋನ್ ನಂಬರ್ ಬೇಕಾಗಿದ್ದರೆ "ಟೆಲಿಫೋನ್ ಡೈರೆಕ್ಟರಿ" ತೆಗೆದು ಹುಡುಕಬೇಕಾಗಿತ್ತು. ದೊಡ್ಡ ಪಟ್ಟಣಗಳಲ್ಲಿ ಮೂರು ನಾಲ್ಕು ದೊಡ್ಡ ಪುಸ್ತಗಳ ಡೈರೆಕ್ಟರಿಗಳು. ಅದರಲ್ಲಿ "ಹಳದಿ ಹಾಳೆಗಳು" (ಯಲ್ಲೋ ಪೇಜಸ್) ಬೇರೆ. ವಾಣಿಜ್ಯ ಸಂಸ್ಥೆಗಳು ಈ ಹಳದಿ ಹಾಳೆಗಳ ಮೇಲೆ ತಮ್ಮ ನಂಬರುಗಳು ಬರುವ ಕಡೆ ತಮ್ಮ ತಮ್ಮ ಜಾಹೀರಾತು (ಅಡ್ವರ್ಟೈಸ್ಮೆಂಟ್) ಹಾಕುತ್ತಿದ್ದರು. ಒಂದೆಡೆಯಿಂದ ಇನ್ನೊಂದೆಡೆಗೆ ಸರಕು-ಸಾಮಾನು ಸಾಗಿಸುವ ಸಂಸ್ಥೆಯೊಂದು ಇಂತಹ ಒಂದು ಜಾಹೀರಾತು ಹಾಕಿತ್ತು. "ನಾವು ಪ್ರಪಂಚದ ಎರಡನೇ ಶ್ರೇಷ್ಠ ಸಾಮಾನು ಪ್ಯಾಕರ್ ಸಂಸ್ಥೆ" ಎಂದು ಅದರ ಜಾಹೀರಾತು!  ಅದನ್ನು ನೋಡಿದವನಿಗೆ ಮೊದಲನೆಯ ಶ್ರೇಷ್ಠ ಪ್ಯಾಕರ್ ಯಾರು ಎಂದು ಕುತೂಹಲ ಹುಟ್ಟಬೇಕು. ಜಾಹೀರಾತಿನ ಜೊತೆ ಒಂದು ಚಿತ್ರ. ಒಂದು ದಾಳಿಂಬೆ ಹಣ್ಣು ಅಥವಾ ಒಂದು ಹಲಸಿನ ಹಣ್ಣು ಇತ್ಯಾದಿ ಹಣ್ಣುಗಳನ್ನು ಮಧ್ಯೆ ಕತ್ತರಿಸಿರುವಂತೆ ಕಾಣುವಂತೆ ಇರುವ ಚಿತ್ರ. ಅವನ್ನು ಪ್ಯಾಕ್ ಮಾಡಿದವನು ಸೃಷ್ಟಿಕರ್ತ. ಅವನೇ ಮೊದಲನೆಯ ಶ್ರೇಷ್ಠ ಪ್ಯಾಕರ್. ಅವನಿಗಿಂತ ಉತ್ತಮನಾದ ಪ್ಯಾಕರ್ ಇನ್ನೊಬ್ಬನಿಲ್ಲ. ಅವನನ್ನು ಬಿಟ್ಟರೆ ನಾವೇ ಶ್ರೇಷ್ಠ ಪ್ಯಾಕರ್ ಅಂಡ್ ಮೂವರ್ಸ್ ಎಂದು ಅದರ ಅಂತರಾರ್ಥ! 

ತನ್ನ ಸೃಷ್ಟಿಯಲ್ಲಿ ಅನೇಕ ಧಾನ್ಯಗಳನ್ನು ಅವನು ನಮಗೆ ಕೊಟ್ಟಿದ್ದಾನೆ. ಅದರ ಪ್ಯಾಕಿಂಗ್ ಹೇಗೆ? ಸಸಿಯಲ್ಲಿ ಒಂದು ತೆನೆ. ಆ ತೆನೆಯಲ್ಲಿ ಹೊರಗಿನ ಹೊದ್ದಿಕೆಯ ಒಳಗೆ ಧಾನ್ಯ. ಭತ್ತ,  ಗೋಧಿ, ರಾಗಿ, ಜೋಳ ಇತ್ಯಾದಿ ಧಾನ್ಯಗಳನ್ನು ಹೊಲಗಳಲ್ಲಿ ನೋಡಿದವರಿಗೆ ಇದು ಗೊತ್ತು. ಮೊದಲು ತೆನೆ ಬೇರ್ಪಡಿಸಿ, ನಂತರ ಧಾನ್ಯ ಹೊರತೆಗೆದುಕೊಳ್ಳಬೇಕು. ಅದ್ಕಕೆ ಸಂಸ್ಕಾರಗಳಿವೆ. ಕತ್ತರಿಸು, ಬಡಿ, ಕೇರು, ತೂರು ಮುಂತಾದವು. ಭತ್ತವನ್ನೇ ತೆಗೆದುಕೊಳ್ಳೋಣ. ಹೀಗೆ ಮಾಡಿದಮೇಲೆ ಭತ್ತ ಸಿಕ್ಕಿತು. ಅದನ್ನೇ ತಿನ್ನುವಹಾಗಿಲ್ಲ. ಅದರ ಹೊರಗಿನ ಪದರ ಬೇರ್ಪಡಿಸಿದಮೇಲೆ ಅಕ್ಕಿ ಸಿಗುತ್ತದೆ. ಅದನ್ನು ನೀರಿನಲ್ಲಿ ನೆನೆಸಿ, ಬೇಯಿಸಿ ತಿನ್ನಬಹುದು. ನೀರಿನಲ್ಲಿ ಬೇಯಿಸಿದರೆ ಅನ್ನ ಆಯಿತು. "ಪರಮಾನ್ನ" ಎಂದೊಂದು ಪದವಿದೆ. ಏನದು ಪರಮಾನ್ನ? ಬಹಳ ಜನ "ಪಾಯಸ" ಅಂತ ಅರ್ಥ ಮಾಡುತ್ತಾರೆ.  ಪರಮಾನ್ನ ಅಂದರೆ ಹಾಲಿನಲ್ಲಿ ಬೇಯಿಸಿ ಮಾಡಿದ ಅನ್ನ. "ಪಂಚಭಕ್ಷ-ಪರಮಾನ್ನ" ಆನ್ನುವಾಗ ಹೇಳುವುದು ಹಾಲಿನಲ್ಲಿ ಬೇಯಿಸಿ ಮಾಡಿದ ಅನ್ನವನ್ನು. (ಎಸ. ಎಲ್. ಭೈರಪ್ಪನವರ "ಪರ್ವ" ಕಾದಂಬರಿಯಲ್ಲಿ ಈ ಪರಮಾನ್ನದ ಮಾತು ಅನೇಕ ಕಡೆ ಬಂದಿದೆ). ಅಕ್ಕಿ-ಕಡಲೆಬೇಳೆ ಪಾಯಸಕ್ಕೆ ಪರಮಾನ್ನ ಎಂದು ಕೆಲವರು ಹೇಳುವುದುಂಟು. 

ಭತ್ತದಿಂದ ಅಕ್ಕಿ ಬೇರ್ಪಡಿಸಬೇಕಾದರೆ ಭತ್ತ ಕುಟ್ಟುತ್ತಿದ್ದರು. ಭತ್ತವನ್ನು ಒರಳಲ್ಲಿ ಹಾಕಿ, ಇಬ್ಬರು ಒನಕೆ ಹಿಡಿದು ಸರದಿಯ ಮೇಲೆ ತಾಳ ಹಾಕಿದಂತೆ ಏಟುಗಳು ಹಾಕುತ್ತಿದ್ದರು. ಇದಕ್ಕಿಂತ ವ್ಯಾಯಾಮ ಬೇಕಿಲ್ಲ, (ಹೀಗೆ ಭತ್ತ ಕುಟ್ಟಿಯೇ ಚಿತ್ರದುರ್ಗದ ಒನಕೆ ಓಬವ್ವನ ರಟ್ಟೆಯಲ್ಲಿ ಹೈದರ್ ಅಲಿಯ ಸೈನಿಕರ ಹೆಣಗಳ ರಾಶಿ ಹಾಕುವ ಶಕ್ತಿ ಬಂದಿರಬೇಕು. ಒಂದು ಏಟಿಗೆ ಒಂದು ತಲೆ. ಹೀಗಿರಬೇಕು ಹೊಡೆತ). ಕುಟ್ಟಿದ ನಂತರ ಬಿದಿರಿನ ಮೊರಗಳಲ್ಲಿ ಕೇರಿ ಅಕ್ಕಿ ಮತ್ತು ತೌಡು (ಹೊಟ್ಟು) ಬೇರ್ಪಡಿಸುತ್ತಿದ್ದರು. ಅಕ್ಕಿ ಮನುಷ್ಯರ ಆಹಾರಕ್ಕೆ. ತೌಡು ದನಗಳ ಆಹಾರಕ್ಕೆ. ಹಿಂಡಿ-ಕಲಗಚ್ಚಿನ ಜೊತೆ. ಹಿಂದೆಲ್ಲ "ಕೊಟ್ಟಣ" ಎನ್ನುವ ಯಂತ್ರದಿಂದ ಕುಟ್ಟಿದ ಅಕ್ಕಿ ಸಿಗುತ್ತಿತ್ತು. ಅದರಲ್ಲಿ ಅನ್ನಸತ್ವಗಳು ಚೆನ್ನಾಗಿ ಇರುತ್ತಿದ್ದವು. ಆಮೇಲಾಮೇಲೆ "ಹಲ್ಲರ್" ಯಂತ್ರಗಳು ಬಂದವು. ಈಗಂತೂ ದೊಡ್ಡ ದೊಡ್ಡ ಯಂತ್ರಗಳ ಫ್ಯಾಕ್ಟರಿಗಳಿವೆ. ಅವುಗಳಿಂದ ಪಡೆದ ಅಕ್ಕಿ ಹೇರಳವಾಗಿ ಸಿಗುತ್ತದೆ, ಆದರೆ ಆದರಿಲ್ಲಿರುವ ಸತ್ವ ಕಡಿಮೆಯೇ. 

ಆಯಿತು. ಭತ್ತ ಕುಟ್ಟಿ ಅಕ್ಕಿ ಮತ್ತು ತೌಡು ಪಡೆದಿದ್ದಾಯಿತು. ಒಬ್ಬ ಬಹಳ ಬುದ್ಧಿವಂತನಿದ್ದ. ಒಂದಷ್ಟು ತೌದು ತೆಗೆದುಕೊಂಡು ಕುಟ್ಟಲು ಶುರುಮಾಡಿದ. ಕುಟ್ಟುತ್ತ ಹೋದ. ತೌಡು ಇನ್ನಷ್ಟು ಪುಡಿಯಾಯಿತೇ ವಿನಃ ಅಕ್ಕಿಯೇನೂ ಸಿಗಲಿಲ್ಲ. ರಸವೆಲ್ಲಾ ಹೀರಿ ಮಿಕ್ಕಿದ ಕಬ್ಬಿನ ಸಿಪ್ಪೆ ಜಗಿದಂತೆ. "ಚರ್ವಿತ ಚರ್ವಣ"ದಂತೆ. ಹೇಳಿದ್ದೇ ಮತ್ತೆ ಮತ್ತೆ ಹೇಳುವುದು. ಅಗಿದದ್ದೇ ಮತ್ತೆ ಮತ್ತೆ ಅಗಿದದ್ದು. ಕುಟ್ಟಿದ್ದನ್ನೇ ಮತ್ತೆ ಮತ್ತೆ ಕುಟ್ಟುವುದು. ಅದಕ್ಕೇ ಆಡು ಭಾಷೆಯಲ್ಲಿ "ತೌಡು ಕುಟ್ಟುವುದು" ಅನ್ನುತ್ತಾರೆ. ವ್ಯರ್ಥ ಪ್ರಯತ್ನಕ್ಕೆ ಒಳ್ಳೆಯ ದೃಷ್ಟಾಂತ. 
*****

ಅಕ್ಕಿಯಲ್ಲಾದರೆ ಅನ್ನ ಮಾಡಬಹುದು. ಜೋಳದಂತಹ ಧಾನ್ಯದಲ್ಲಿ ಹಾಗೆ ಮಾಡುವ ಪರಿಪಾಠವಿಲ್ಲ, ಮುಸುಕಿನ ಜೋಳಕ್ಕೂ ಹಾಗೆ. ಅವಕ್ಕೆ ಗಟ್ಟಿ  ಹೊರಕವಚ, ಭತ್ತ ಕುಟ್ಟಿ ಅಕ್ಕಿ ಮಾಡುವಾಗಲೂ ಕೆಲವು ಅಕ್ಕಿ ಕಾಳುಗಳು ಚೂರಾಗಿ "ನುಚ್ಚು" ಎಂದು ಕರೆಸಿಕೊಳ್ಳುತ್ತವೆ. ಸಾಮಾನ್ಯವಾಗಿ ಈ ನುಚ್ಚಿನಲ್ಲಿ ಅನ್ನ ಮಾಡುವುದಿಲ್ಲ. ಅಕ್ಕಿ ನುಚ್ಚು, ರಾಗಿ, ಗೋಧಿ, ಜೋಳ ಮೊದಲಾದ ಧಾನ್ಯಗಳನ್ನು ಬೀಸಿ ಪುಡಿ ಮಾಡಿ, ಆ ಹಿಟ್ಟಿನಿಂದ ರೊಟ್ಟಿಯನ್ನೋ, ಮುದ್ದೆಯನ್ನೋ, ಮತ್ತೇನಾದರೊ ತಿನ್ನುವ ಪದಾರ್ಥ ಮಾಡುತ್ತಾರೆ. 

ಈ ರೀತಿ ಮಾಡಿದ ಹಿಟ್ಟಿಗೆ ಸಂಸ್ಕೃತದಲ್ಲಿ "ಪಿಷ್ಟ" ಎನ್ನುತ್ತಾರೆ. ಧಾನ್ಯದ ಹಿಟ್ಟು ಎಂದು ಅರ್ಥ. ಈಗಿನ ವಿಜ್ಞಾನದ ತರಗತಿಗಳಲ್ಲಿ ಉಪಯೋಗಿಸುವ ಭಾಷೆಯಲ್ಲಿ ಪಿಷ್ಟ ಅಂದರೆ ಇಂಗ್ಲಿಷಿನ "ಸ್ಟಾರ್ಚ್" ಎಂಬುದರ ಸಮಾನ ಪದ. ಧಾನ್ಯವನ್ನು ಬೀಸುವಕಲ್ಲಿನಲ್ಲಿ ಬೀಸಿ ಹಿಟ್ಟು ಮಾಡುವ ಕ್ರಿಯೆಗೆ "ಪೇಶಣ" ಎನ್ನುತ್ತಾರೆ. 


ಬೀಸುವಕಲ್ಲಿನಲ್ಲಿ ಹಾಕಿ ಬೀಸಿ ಹಿಟ್ಟು ತೆಗೆಯುವುದು ಹಿಂದೆ ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು. ಬೀಸುವ ಕೆಲಸ ಮಾಡುತ್ತಾ ಹೆಣ್ಣುಮಕ್ಕಳು ಹಾಡುತ್ತಿದ್ದ ಹಾಡುಗಳು ನಮ್ಮ ಜಾನಪದ ಸಾಹಿತ್ಯದ ಒಂದು ಬಂಗಾರದ ಅಧ್ಯಾಯ. ಮದುವೆ-ಮುಂಜಿಗಳಲ್ಲಿ "ಗೋಧಿಕಲ್ಲು ಶಾಸ್ತ್ರ" ಎಂದು ಮಾಡುತ್ತಿದ್ದರು. ಬೀಸುವ ಕಲ್ಲಿಗೆ (ಈಗಿನ ಪೀಳಿಗೆಯವರು ಮೇಲಿನ ಚಿತ್ರದಲ್ಲಿ ಬೀಸುವ ಕಲ್ಲನ್ನು ನೋಡಬಹುದು) ಅಲಂಕಾರ ಮಾಡಿ ಅರಿಸಿನ ಮತ್ತು ಗೋಧಿ ಬೀಸಿ, ಹಿಟ್ಟು ಮಾಡಿ ಶುಭ ಕಾರ್ಯಗಳಲ್ಲಿ ಉಪಯೋಗಿಸುತ್ತಿದ್ದರು. (ಸ್ನೇಹಿತರೊಬ್ಬರು ಕಳಿಸಿರುವ ಅವರ ೪೦ ವರುಷಗಳ ಹಿಂದಿನ ಅವರ ಮದುವೆಯ ಗೋಧಿಕಲ್ಲು ಶಾಸ್ತ್ರದ ಚಿತ್ರ ಮೇಲೆ ಕೊಟ್ಟಿದೆ), ಆಗ ಹೇಳುತ್ತಿದ್ದ ಹಾಡುಗಳು ಹೀಗಿರುತ್ತಿದ್ದವು:

ಅವಸರದಾ ಮುಹೂರ್ತವನ್ನು ಅವರಿಟ್ರು ಜೋಯಿಸರು 
ರಾಯ ಅಣ್ಣಯ್ಯ ಮನೆಗೆ ಬಂದು 
ರಾಯ ಅಣ್ಣಯ್ಯ ಮನೆಗೆ ಬಂದು 
ಅರಿಶಿಣಕೆ ಹಣವ ಕೊಡಿಸಿದ 

ಅವಸರದಾ ಮುಹೂರ್ತವನ್ನು ಅವರಿಟ್ರು ಜೋಯಿಸರು 
ರಾಯ ಮಾವಯ್ಯ ಮನೆಗೆ ಬಂದು
ರಾಯ ಮಾವಯ್ಯ ಮನೆಗೆ ಬಂದು 
ಗೋಧಿಗೆ ಹಣವ ಕೊಡಿಸಿದ 

ಮಗಳ ಮದುವೆ ಮಾಡಲು ಲಗ್ನ ಕಟ್ಟಿಸಲು ಹಳ್ಳಿಯ ಹೆಣ್ಣು ಮಗಳೊಬ್ಬಳು ತನ್ನ ಅಣ್ಣ ಮತ್ತು ಸೋದರಮಾವರ ಜೊತೆಯಲ್ಲಿ ಜೋಯಿಸರ ಮನೆಗೆ ಹೋದಳು. ಜೋಯಿಸರು ಪಂಚಾಂಗ ತೆಗೆದು ಬಹಳ ಸನಿಹದ (ಹತ್ತಿರದ) ಮುಹೂರ್ತ ಹೇಳಿದರು. ಈ ಹೆಣ್ಣು ಮಗಳ ಬಳಿ ಅಷ್ಟು ಶೀಘ್ರವಾಗಿ ಮದುವೆ ಮಾಡಲು ಹಣವಿಲ್ಲ. ದುಡ್ಡು ಹೊಂದಿಸಲು ಸಮಯ ಬೇಕು. ಮುಂದಿನ ಮುಹೂರ್ತ ಹೇಳಿ ಎಂದರೆ ಜೋಯಿಸರು ಇದನ್ನು ಬಿಟ್ಟರೆ ಕೆಲವು ತಿಂಗಳ ಕಾಲ ಮುಹೂರ್ತವೇ ಇಲ್ಲ ಅಂದುಬಿಟ್ಟರು. ಪೆಚ್ಚು ಮೊರೆ ಹಾಕಿ ಕುಳಿತಳು ಇವಳು. ಜೊತೆಯಲ್ಲಿ ಬಂದಿದ್ದ ಅಣ್ಣ ಮತ್ತು ಸೋದರಮಾವ ಧೈರ್ಯ ಹೇಳಿ ಹತ್ತಿರದ ಮುಹೂರ್ತವನ್ನೇ ಇಡಿಸಿದರು. ಮನೆಗೆ ಬಂದ ನಂತರ ಇಬ್ಬರೂ ಬೇಕಿದ್ದ ಹಣ ಕೊಟ್ಟು ಮುಂದಿನ ಕೆಲಸ ಮಾಡಲು ಸುಗಮ ಮಾಡಿದರು. ಆ ಹಣದಲ್ಲಿ ಮಂಗಳ ಪದಾರ್ಥಗಳನ್ನು ತಂದು ಕೆಲಸ ನಡೆಸುತ್ತಿದ್ದಾಳೆ. ಸಮಯದಲ್ಲಿ ಸಹಾಯ ಮಾಡಿದ ಅಣ್ಣ ಮತ್ತು ಮಾವನನ್ನು ಅವಳು ಈ ರೀತಿ ಹಾಡು ಹೇಳುತ್ತಾ ನೆನೆಸುತ್ತಿದ್ದಾಳೆ! 

*****

ಧಾನ್ಯವನ್ನು ಬೀಸಿದರೆ ಹಿಟ್ಟು ಬಂದೀತು. ಆದರೆ ಹಿಟ್ಟನ್ನೇ ಬೀಸಿದರೆ? ಹಿಟ್ಟೇ ಉಳಿದೀತು. ಅಷ್ಟೇ. ಅದೇನೂ ಹೆಚ್ಚುವುದಿಲ್ಲ. ಅಥವಾ ಹಿಟ್ಟು ಮತ್ತೇನೋ ಆಗುವುದಿಲ್ಲ. ಪಿಷ್ಟ ಪೇಷಣ ಮಾಡಿದರೆ ಪಿಷ್ಟವೇ ಉಳಿಯುವುದು. ಇದು ವ್ಯರ್ಥ ಪ್ರಯತ್ನಕ್ಕೆ ಇನ್ನೊಂದು ಉದಾಹರಣೆ. ಈ ಮಾತು ಮಾಡಿದ್ದನ್ನೇ ಮತ್ತೆ ಮತ್ತೆ ಮಾಡಿ ಪ್ರಯೋಜವಿಲ್ಲವಾಗುವುದು ತೋರಿಸಲು ದೃಷ್ಟಾಂತ. ಬೀಸಿದರೆ ಧಾನ್ಯ ಬೀಸಬೇಕು; ಹಿಟ್ಟನ್ನಲ್ಲ ಎಂದು ಹೇಳುವು ಇದರ ಗುರಿ. 

"ಪಿಷ್ಟ ಪೀಷಣ" ಮತ್ತು "ತೌಡು ಕುಟ್ಟುವುದು" ಇವೆರಡರಲ್ಲಿ ಯಾವುದು ಉತ್ತಮ? ಆಯ್ಕೆ ನಿಮಗೆ ಬಿಟ್ಟದ್ದು!