Friday, November 24, 2023
ಪ್ರತೀಕಗಳ ಅವಶ್ಯಕತೆ
Wednesday, November 22, 2023
ವ್ಯಾಪ್ತೋಪಾಸನೆ
ಮನುಷ್ಯನ ಜ್ಞಾನ ಪ್ರಾಪ್ತಿ ಮತ್ತು ಸುತ್ತಮುತ್ತಲಿನ ವಸ್ತುಗಳ ಅನುಭವ ಪಡೆಯುವುದು ಐದು ಜ್ಞಾನೇಂದ್ರಿಯಗಳಿಂದ. ಕಣ್ಣಿನಿಂದ ನೋಡುವುದು, ಕಿವಿಯಿಂದ ಕೇಳುವುದು, ಮೂಗಿನಿಂದ ವಾಸನೆ ಇತ್ಯಾದಿ ಗ್ರಹಿಸುವುದು, ನಾಲಿಗೆಯಿಂದ ರುಚಿ ನೋಡುವುದು ಮತ್ತು ಚರ್ಮದಿಂದ ಸ್ಪರ್ಶ ಮಾಡುವುದು. ಇವುಗಳ ಚೌಕಟ್ಟಿನಲ್ಲೇ ನಮ್ಮ ಎಲ್ಲ ವ್ಯಾಪಾರಗಳೂ ನಡೆಯುವುದು. ಬುದ್ಧಿ ಇವುಗಳ ಹೊರಗಡೆಯೂ ಯೋಚಿಸಬಹುದು. ಮನಸ್ಸು ಎಲ್ಲೆಂದರಲ್ಲಿ ಹರಿದಾಡಬಹುದು. ಆದರೆ ಈ ಐದು ಇಂದ್ರಿಯಗಳ ಯೋಗ್ಯತೆಗಿಂತ ದೊಡ್ಡದಾದ ಪದಾರ್ಥವನ್ನು ಅಥವಾ ವಿಷಯವನ್ನು ತಿಳಿಯುವುದು ಕಷ್ಟ. ದೃಷ್ಟಿ ಹೋಗುವವರೆಗೂ ನೋಡಬಹುದು. ಒಂದು ಅಳತೆಯ ದೂರದವರೆಗಿನ ಶಬ್ದ ಕೇಳಬಹುದು. ಅದರಿಂದ ಹೊರಗಿನ ಪದಾರ್ಥಗಳ ಜ್ಞಾನ ಹೇಗೆ? ಅತೀಂದ್ರಿಯವಾದುದನ್ನು (ಇಂದ್ರಿಯಗಳ ವ್ಯಾಪ್ತಿಯ ಅಥವಾ ಯೋಗ್ಯತೆಯ ಹೊರಗಿನದು) ತಿಳಿಯುವುದು ಹೇಗೆ?
ಅತಿ ಸೂಕ್ಷ್ಮವಾದುದನ್ನು ನೋಡಲು ನಾವು "ಸೂಕ್ಷ್ಮದರ್ಶಕ" (ಮೈಕ್ರೋಸ್ಕೋಪ್) ಬಳಸುತ್ತೇವೆ. ಅತಿ ದೂರದಲ್ಲಿ ಇರುವ ವಸ್ತುಗಳನ್ನು ನೋಡಲು "ದೂರದರ್ಶಕ" (ಟೆಲಿಸ್ಕೋಪ್) ಉಪಯೋಗಿಸುತ್ತೇವೆ. ಇವುಗಳ ಪ್ರಯೋಜನ ಪಡೆದರೂ ಈ ಸಾಧನಗಳ ಶಕ್ತಿಗೂ ಒಂದು ಮಿತಿ ಇದೆ. ನಮ್ಮಲ್ಲಿರುವ ಅತ್ಯಂತ ಶಕ್ತಿಯುತ ಸೂಕ್ಷ್ಮದರ್ಶಕದ ಶಕ್ತಿಯನ್ನೂ ದಾಟಿದ ಅತಿ ಸೂಕ್ಷ್ಮ ವಸ್ತುಗಳು ಸೃಷ್ಟಿಯ ರಹಸ್ಯದಲ್ಲಿ ಅಡಗಿವೆ. ಒಂದು ಕಾಲದಲ್ಲಿ "ಅಣು" ಅತಿ ಚಿಕ್ಕ ವಸ್ತು ಎಂದು ನಂಬಲಾಗಿತ್ತು. ವಿಜ್ನ್ಯಾನಿಗಳು ಅಣುವನ್ನೂ ಭೇದಿಸಿದರು. ಪರಮಾಣು ಬಂದಿತು. ಪರಮಾಣುವನ್ನೂ ಮೀರಿದ ಸೂಕ್ಷ್ಮ ಕಣಗಳು ಇವೆ ಎಂದಾಯಿತು. ಎಷ್ಟು ಶಕ್ತಿಯುತ ದೂರದರ್ಶಕವಾದರೂ ಇನ್ನೂ ನಮ್ಮ "ಹಾಲುಹಾದಿ" (Milkyway) ನಕ್ಷತ್ರಪುಂಜದ (ಗ್ಯಾಲಕ್ಸಿ) ಒಂದು ಭಾಗವನ್ನು ಮಾತ್ರ ತೋರಿಸಲು ಶಕ್ತವಾಗಿವೆ. ನಮ್ಮ ನಕ್ಷತ್ರಪುಂಜಕ್ಕಿಂತಲೂ ದೊಡ್ಡವಾದ ಅನೇಕ ಪುಂಜಗಳು ವಿಶ್ವದಲ್ಲಿ ಇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ನಾವು ತಿಳಿದಿರುವ ಅತಿಸೂಕ್ಷ್ಮ ಪದಾರ್ಥಕ್ಕಿಂತಲೂ ಸೂಕ್ಷ್ಮವಾದದ್ದು ಇದೆ ಎಂದಾಯಿತು. ಅಂತೆಯೇ, ನಾವು ಕಂಡಿರುವ ಅತಿದೊಡ್ಡ ದೃಶ್ಯಕ್ಕಿಂತಲೂ ಅನೇಕ ಪಾಲು ದೊಡ್ಡದಾದ ವಿಶ್ವವಿದೆ ಎಂದೂ ತಿಳಿಯಿತು. ಒಟ್ಟಿನಲ್ಲಿ ಈ ಕಡೆಯೂ ಅನಂತ, ಆ ಕಡೆಯೂ ಅನಂತ. ಇಂತಹ ವಿರಾಟ್ ವಿಶ್ವದ ಯಾವುದೋ ಒಂದು ಕ್ಸುದ್ರ ಕಣದಲ್ಲಿ ಮನುಷ್ಯನಿದ್ದಾನೆ. ಅನಂತ ವಿಶ್ವ ಅವನನ್ನು ಎಲ್ಲ ಕಡೆಯಿಂದಲೂ ವ್ಯಾಪಿಸಿದೆ. ಇಷ್ಟು ಮಾತ್ರವಲ್ಲ. ಮನುಷ್ಯನ ಒಳಗೂ ಅನಂತ ಕಣಗಳಿವೆ. ಮನುಷ್ಯನ ದೇಹದಲ್ಲಿ ಇಷ್ಟೆಲ್ಲಾ ಇದೆಯೇ ಎಂದು ಆಶ್ಚರ್ಯ ಪಡುವಷ್ಟು ಉಂಟು!
ಚಿಂತಿಸಲೂ ಅಗಾಧ.
*****
ಮಹಾಭಾರತದ ಅತಿ ಮುಖ್ಯ ದೃಶ್ಯವೊಂದನ್ನು ನೆನಪಿಗೆ ತರೋಣ. ಎರಡು ಸೈನ್ಯಗಳ, ಹದಿನೆಂಟು ಅಕ್ಷೋಹಿಣಿಗಳ ವಿಶಾಲ ಹಿನ್ನೆಲೆಯ ಮಧ್ಯದಲ್ಲಿ ಪಾರ್ಥ ಮತ್ತು ಪಾರ್ಥಸಾರಥಿ ರಥದಲ್ಲಿ ಕುಳಿತಿದ್ದಾರೆ. ವಿಜಯನಿಗೆ ಜಯಿಸಲಾಗದ ಮೋಹ ಆವರಿಸಿದೆ. ತನ್ನ ಇಡೀ ಜೀವಮಾನ ಕಾಯುತ್ತಿದ್ದ ಯುದ್ಧ ಎದುರು ನಿಂತಿದ್ದರೂ ರಥದಿಂದ ಕೆಳಗಿಳಿದು ಗಾಂಡೀವ ಬಿಸಾಡಿದ್ದಾನೆ. ಯುದ್ಧ ಒಲ್ಲೆ ಎನ್ನುತ್ತಾನೆ. ವಿಚಿತ್ರವಾದ ತರ್ಕದಿಂದ ವಾದಿಸುತ್ತಾನೆ. "ಸ್ತ್ರೀಷು ದುಷ್ಟೇಷು ವಾರ್ಷ್ಣೇಯ ಜಾಯತೇ ವರ್ಣ ಸಂಕರಃ" ಎನ್ನುತ್ತಾನೆ. ಯುದ್ಧದಿಂದ ಸಮಾಜ ಹಾಳಾಗುತ್ತದೆ ಎನ್ನುವ ಸತ್ಯ ಹೇಳಿದರೂ, ಸಮಾಜವನ್ನು ಮತ್ತಷ್ಟು ಹಾಳುಮಾಡುವ ದುಷ್ಟರನ್ನು ಬಿಟ್ಟುಬಿಡಲು ನಿರ್ಧರಿಸಿದ್ದಾನೆ. ಭಿಕ್ಷೆ ಬೇಡಿ ತಿರಿದುಣ್ಣಲೂ ತಯಾರಾಗಿದ್ದಾನೆ.
ಇಂಥ ಶಿಷ್ಯನನ್ನು ಇಟ್ಟುಕೊಂಡು ಶ್ರೀಕೃಷ್ಣ ಏನು ಮಾಡಬೇಕು? ಅರ್ಜುನನ್ನು ನೆಪವಾಗಿಟ್ಟುಕೊಂಡು "ಗೀತೋಪದೇಶ" ಮಾಡುತ್ತಾನೆ. ತನ್ನ ವಿರಾಟ್ ಸ್ವರೂಪವನ್ನೂ ತೋರಿಸುತ್ತಾನೆ. "ನಿನ್ನ ಈ ಕಣ್ಣುಗಳು ನನ್ನ ಆ ವಿಶ್ವರೂಪವನ್ನು ನೋಡಲಾರವು. ಅದಕ್ಕಾಗಿ ನಿನಗೆ ದಿವ್ಯ ದೃಷ್ಟಿ ಕೊಡುತ್ತೇನೆ" ಎನ್ನುತ್ತಾನೆ. ಕೊಡುತ್ತಾನೆ. ಅರ್ಜುನ ನೋಡುತ್ತಾನೆ. ದಿವ್ಯ ದೃಷ್ಟಿ ಇದ್ದರೂ ಪೂರ್ತಿ ನೋಡಲಾರ. ಕ್ಷಣಕ್ಕಿಂತ ಹೆಚ್ಚು ಕಾಲ ದಿಟ್ಟಿಸಲಾರ. "ನನ್ನ ಅಂಗಾಂಗಗಳು ಸುಡುತ್ತಿವೆ. ಸೀದಂತಿ ಮಮ ಗಾತ್ರಾಣಿ" ಎಂದು ಕೂಗುತ್ತಾನೆ. ಈ ವಿರಾಟ್ ರೂಪವನ್ನು ಮರೆ ಮಾಡು. ಮೊದಲಿನ ಸೌಮ್ಯ ರೂಪ ತೋರಿಸು" ಎಂದು ಅಂಗಲಾಚುತ್ತಾನೆ!
ವಿರಾಟಪುರುಷನೇ ಕೃಪೆಮಾಡಿ ವಿಶೇಷ ದೃಷ್ಟಿ ಕೊಟ್ಟು ತೋರಿಸಿದ ಆ ರೂಪವನ್ನು ಅರ್ಜುನನಂತಹವನೇ ನೋಡಲಾಗಲಿಲ್ಲ. ಸದಾ ಕೇಶವನ ಹಿಂದೆ-ಮುಂದೆ ಓಡಾಡಿಕೊಂಡಿದ್ದವನು. ಮಾಧವನ ಅನೇಕ ಮುಖಗಳನ್ನು ಕಣ್ಣಾರೆ ಕಂಡವನು. ಯೋಗ್ಯ ಜೀವರಲ್ಲಿ ಅತಿ ಯೋಗ್ಯನು. ಮುಕುಂದನಿಂದಲೇ ತರಬೇತಿ ಪಡೆದವನು. ಇಷ್ಟೆಲ್ಲಾ ಸಿದ್ಧತೆ, ಯೋಗ್ಯತೆ ಇದ್ದರೂ ಅವನಿಂದಲೇ ಆ ರೂಪವನ್ನು ನೋಡಲಾಗಲಿಲ್ಲ.
ನಾವೇನು ಕಂಡೇವು?
*****
ನಾವು ಬಹಳ ಕಷ್ಟ ಪಟ್ಟು ಒಂದು ಮನೆ ಕಟ್ಟುತ್ತೇವೆ. ಎಷ್ಟು ವಿಶಾಲವಾಗಿ ಕಟ್ಟಿದರೂ ಕಡೆಗೆ ನಮ್ಮ ಇಷ್ಟಕ್ಕಿಂತಲೂ ಚಿಕ್ಕದೇ. ಅದರೊಳಗೆ ಸೇರುತ್ತೇವೆ. ಸಾರ್ಥಕ ಭಾವ ಬರುತ್ತದೆ. ಮನೆಯ ಒಳಗೆ ನಾವು ಇದ್ದರೆ ಹೊರಗಿಲ್ಲ. ಹೊರಗೆ ಇದ್ದರೆ ಮನೆಯ ಒಳಗಿಲ್ಲ. ಸ್ವಲ್ಪ ಕಾಲದ ನಂತರ ಒಳಗೂ ಇಲ್ಲ; ಹೊರಗೂ ಇಲ್ಲ. ಮತ್ತೆ ಸ್ವಲ್ಪ ದಿನದ ನಂತರ ಇದ್ದೆವು ಅನ್ನುವ ನೆನಪೂ ಬೇರೆಯವರಿಗೆ ಇಲ್ಲ. ನಾವಂತೂ ಎಂದೋ ಇಲ್ಲವಾದೆವು.
"ವಿಷ್ಣು ಸಹಸ್ರನಾಮ"ದ ಪ್ರತಿಯೊಂದು ಹೆಸರಿಗೂ ನೂರು ಅರ್ಥಗಳಿವೆ ಎಂದು ಹೇಳುತ್ತಾರೆ. "ಗೋವಿಂದ" ಎನ್ನುವ ಪದಕ್ಕೂ ಅನೇಕ ಅರ್ಥಗಳಿವೆ. ಮಹಾಪ್ರಳಯದ ನಂತರ ವಿಶಾಲ ವಿಶ್ವವನ್ನು ಹೊರಗೆ ನಿಂತು ಸೃಷ್ಟಿ ಮಾಡಿದನು ಆ ವಿರಾಟ್ ಪುರುಷ. ಅಷ್ಟೇ ಅಲ್ಲ. ಸೃಷ್ಟಿ ಮಾಡಿದ ನಂತರ ಅದರ ಒಳಗೆ ಪ್ರವೇಶ ಮಾಡಿದನು. ಒಳಗೆ ಆವರಿಸಿದನು. ಆದರೆ ಹೊರಗೂ ಉಳಿದನು. "ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃ" ಅನ್ನುತ್ತದೆ ಮಹಾನಾರಾಯಣೋಪನಿಷತ್. ಹಿಂದೆ ಮಾತ್ರ ಅಲ್ಲ. ಇಂದಷ್ಟೇ ಅಲ್ಲ. ಮುಂದೆಯೂ ಉಂಟು. ಅನಂತ ಕಾಲದಿಂದ ಅನಂತ ಕಾಲದವರೆಗೂ ಅನಂತವಾಗಿದ್ದಾನೆ. ಎಲ್ಲವನ್ನೂ ಅವರಿಸಿದ್ದಾನೆ. ಚಿಕ್ಕದರ ಒಳಗೆ ಅದಕ್ಕಿಂತ ಚಿಕ್ಕದಾಗಿದ್ದಾನೆ. ದೊಡ್ಡದರ ಹೊರಗೆ ಅದಕ್ಕಿಂತ ದೊಡ್ಡದಾಗಿದ್ದಾನೆ.
ಇದರ ತಿಳುವಳಿಕೆ ನಮ್ಮ ಜ್ನ್ಯಾನದ ಪರಿಧಿ ಮೀರಿದ್ದು. ತಾನೇ ಸೃಷ್ಟಿಸಿದ ಜಗತ್ತಿನ ಒಳಗೆ ತಾನೇ ಪ್ರವೇಶ ಮಾಡಿ ಅದರ ಹೊರಗೂ ಉಳಿದಿದ್ದರಿಂದ ಅವನು "ಗೋವಿಂದ".
ಇದನ್ನು ತಿಳಿಯಲಾಗದೇ ನಾವು ಗೋವಿಂದ!
*****
"ಕಾಲಾಯ ತಸ್ಮೈ ನಮಃ" ಎನ್ನುವುದು ಎಲ್ಲರೂ ಹೇಳುವ ಮಾತು. ಕಾಲವು ಎಲ್ಲವನ್ನೂ ಬದಲಿಸುತ್ತದೆ. ಕಾಲವು ಎಲ್ಲವನ್ನೂ ನುಂಗುತ್ತದೆ. ಕಾಲವೇ ಕೊನೆಗೆ ಉಳಿಯುವುದು. ಎಲ್ಲರ ಕಾಲ ಕಳೆದ ಮೇಲೂ. ಅಂದರೆ ಆ ಪರಮಾತ್ಮನ ಕಥೆ ಏನು? ಅವನಿಗೂ ಒಂದು ಕಾಲವಿಲ್ಲವೇ? ಅವನು ಕಾಲವಾಗುವುದಿಲ್ಲವೇ? ಇದೊಂದು ದೊಡ್ಡ ಪ್ರಶ್ನೆ.
ಮಹಾ ವಿದ್ವಾಂಸರಾದ ಶ್ರೀನಿವಾಸಾಚಾರ್ಯರು, ಮುಂದೆ ಜಗನ್ನಾಥ ದಾಸರೆಂದು ಪ್ರಸಿದ್ಧರಾದವರು, ಇದಕ್ಕೆ ಉತ್ತರ ಕೊಡುತ್ತಾರೆ:
ಕಾಲಾಂತರ್ಗತ ಕಾಲನಿಯಾಮಕ ಕಾಲಾತೀತ ತ್ರಿಕಾಲಜ್ಞ
ಕಾಲಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ
ಕಾಲರೂಪ ತವ ದಾಸೋಹಂ ತವ ದಾಸೋಹಂ
ವಾಸುದೇವ ವಿಘತಾಘಸಂಘ ತವ ದಾಸೋಹಂ ತವ ದಾಸೋಹಂ
ಕಾಲವನ್ನು ಸೃಷ್ಟಿಸಿ, ಕಾಲದಲ್ಲಿದ್ದು, ಕಾಲವನ್ನು ಹಿಡಿತದಲ್ಲಿಟ್ಟು ಎಲ್ಲ ಕಾಲವನ್ನೂ ತಿಳಿದು, ಕಾಲದ ವ್ಯಾಪ್ತಿಯನ್ನೂ ದಾಟಿ ಕಾಲದ ಪರಮ ಸ್ವರೂಪನಾದವನೇ ಆ ವಿರಾಟ್ ಪುರುಷ.
ನಮ್ಮ ಸೀಮಿತ ಕಾಲದಲ್ಲಿ ಅವನ್ನು ಪೂರ್ಣವಾಗಿ ತಿಳಿಯುವುದು ಅಸಾಧ್ಯ. ಹಾಗೆಂದು ಬಿಟ್ಟೀ ಬಿಡೋಣವೇ? ಕೂಡದು. ನೂರಕ್ಕೆ ನೂರು ಅಂಕ ಸಿಗುವುದಿಲ್ಲ ಎಂದು ಪರೀಕ್ಷೆಯೇ ಬರೆಯದಿದ್ದರೆ ಹೇಗೆ?
ಪರೀಕ್ಷೆ ಬರೆಯಲೇ ಬೇಕು. ಪ್ರಯತ್ನ ಪಡಲೇಬೇಕು.
*****
ದೇಶಾತೀತ, ಕಾಲಾತೀತನಾದ, ಸರ್ವವ್ಯಾಪ್ತನಾದ, ಸರ್ವಶಕ್ತನಾದ ಆ ವಿರಾಟ್ರೂಪಿ ಪರಮಾತ್ಮನನ್ನು ಹೇಗೆ ಆರಾಧಿಸುವುದು? ಅವನ ವ್ಯಾಪ್ತಿ ನಮ್ಮ ಕಲ್ಪನೆಗೂ ದೊಡ್ಡದು. ಆದರೆ ಅವನು ಈ ಎಲ್ಲ ಗುಣಗಳನ್ನೂ ಹೊಂದಿರುವವನು ಎಂದು ತಿಳಿದವರಿಗೆ ಎಲ್ಲಿ ನೋಡಿದರಲ್ಲಿ ಅವನೇ ಕಾಣಿಸಬೇಕು. ಆ ಸ್ಥಿತಿ ತಲುಪಿದವರು ಮಾಡುವ ಉಪಾಸನೆಯೇ "ವ್ಯಾಪ್ತೋಪಾಸನೆ". ಅವರ ಆರಾಧನೆ ಹೇಗಿರುತ್ತದೆ?
ಜಲ, ಕಾಷ್ಠ, ಶೈಲ, ಗಗನ, ನೆಲ, ಪಾವಕ, ವಾಯು, ತರು
ಫಲ, ಪುಷ್ಪ, ಬಳ್ಳಿಗಳೊಳಗೆ ಪರಮಾತ್ಮನಿದ್ದಾನೆ
ಎಂದರಿತವಗೆ ಆನಂದ ಆನಂದ
ಆ ರೀತಿ ಉಪಾಸನೆ ಮಾಡುವ ಶಕ್ತಿ ಇದ್ದವರಿಗೆ ಬೇರೆ ಪ್ರತೀಕಗಳ ಅವಶ್ಯಕತೆಯೇ ಇಲ್ಲ. ಅಂತಹ ಸಾಧಕರಿಗೆ "ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ, ಉಂಡು ಉಟ್ಟದ್ದೆಲ್ಲಾ ದೇವಪೂಜೆ". ಆದರೆ ಆ ಮಟ್ಟ ತಲುಪಲು ಬಹಳ ಬಹಳ ಸಾಧನೆ ಬೇಕು.
*****
ವ್ಯಾಪ್ತೋಪಾಸನೆಗೆ ಇಷ್ಟು ಮಹತ್ವ ಇದ್ದರೆ ಎಲ್ಲರೂ ಅದನ್ನೇ ಮಾಡಬಹುದಲ್ಲ! ಬೇರೆ ರೀತಿ ಪ್ರಯತ್ನಗಳು ಯಾಕೆ? ಈ ಪ್ರಶ್ನೆಗೆ ಉತ್ತರ ಮುಂದೆ ನೋಡೋಣ.
Tuesday, November 14, 2023
ತ್ವಮೇವ ಶರಣಂ ಮಮ
ನಮಸ್ಕಾರ, ನಮಸ್ತೇ, ಅಡ್ಡಬಿದ್ದೆ
- ಒಂದು ವ್ಯಕ್ತಿಯಲ್ಲಿ ಅಥವಾ ಪದಾರ್ಥದಲ್ಲಿ ಇಲ್ಲದ ಗುಣಗಳನ್ನು ಆರೋಪಿಸಿ (ಹೇಳಿ ಅಥವಾ ಸೇರಿಸಿ) ಹೊಗಳುವುದು ಪ್ರಶಂಸೆ. ಅನೇಕ ವೇಳೆ ನಮಗೆ ಆ ವ್ಯಕ್ತಿಯಿಂದ ಏನೋ ಕೆಲಸ ಅಥವಾ ಸಹಾಯ ಆಗಬೇಕಾದಾಗ ಹೀಗೆ ಮಾಡುವುದುಂಟು. ತಮಾಷೆಯ ವಿಷಯವೆಂದರೆ ಇವನು ಹೇಳುತ್ತಿರುವುದು ಸುಳ್ಳು ಎಂದು ಪ್ರಶಂಸೆಗೆ ಪಾತ್ರನಾದ ವ್ಯಕ್ತಿಗೂ ಗೊತ್ತಿರುತ್ತದೆ. ಆದರೆ ಕೇಳಲು ಚೆನ್ನ ಎಂದು ಅವರೂ ಸುಮ್ಮನಿರುತ್ತಾರೆ.
- ವ್ಯಕ್ತಿಯಲ್ಲಿ ಅಥವಾ ಪದಾರ್ಥದಲ್ಲಿ ಇರುವ ಗುಣಗಳನ್ನು ಹೇಳಿ ಹೊಗಳುವುದು ಸ್ತುತಿ. ಇಲ್ಲಿ ತೋರಿಕೆಯ ಆಡಂಬರವಿಲ್ಲ. ಸತ್ಯದ ಸಾನ್ನಿಧ್ಯ ಉಂಟು.
- ಇರುವ ಗುಣಗಳನ್ನು ಕ್ರಮಭದ್ದವಾಗಿ, ಭಾವಪೂರಿತವಾಗಿ ಹೇಳುವುದು ಸ್ತೋತ್ರ. ಇಲ್ಲಿ ಕೇವಲ ಶಬ್ದಗಳ ಗೊಂದಲವಲ್ಲ. ಭಾವನೆಗಳ ಪ್ರತಿಬಿಂಬ ಇರುತ್ತದೆ.
- ಸರಿಯಾಗಿ ಅರ್ಥ ಮಾಡಿಕೊಂಡು, "ನನಗೆ ಪೂರ್ತಿ ಗೊತ್ತಿಲ್ಲ" ಎಂದು ಒಪ್ಪಿಕೊಂಡು ಭಯ-ಭಕ್ತಿಗಳಿಂದ ಮಾಡುವುದು ಸಂಸ್ತುತಿ. ಇಲ್ಲಿ ಪದಗಳಿಗೆ ಎಷ್ಟು ಬೆಲೆಯೋ ಭಾವಕ್ಕೂ ಅಷ್ಟು ತೂಕ. ಇದು ಶ್ರದ್ದೆಯ ಪರಾಕಾಷ್ಠೆ. ಭಾವವಿದ್ದರೆ ಶ್ರದ್ದೆ ಬರುತ್ತದೆ. ಇಲ್ಲದಿದ್ದರೆ ಇಲ್ಲ. ಶ್ರದ್ದೆ ಇದ್ದರೆ ಭಗವಂತ ಒಲಿಯುತ್ತಾನೆ.
- "ಅನೇಕ ದೇವರಿದ್ದಾರೆ. ಅವರೆಲ್ಲ ಸರ್ವ ಶಕ್ತರು" ಎಂದು ತಿಳಿಯುವುದು ಅಜ್ಞಾನ.
- "ಒಬ್ಬನೇ ದೇವರು. ಅವನೇ ಅನೇಕ ರೂಪದಲ್ಲಿದ್ದಾನೆ" ಎಂದು ತಿಳಿಯುವುದು ಜ್ಞಾನ.
- "ಒಬ್ಬನೇ ಪರಮ ಪುರುಷ. ಬಾಕಿ ಎಲ್ಲವೂ ಅವನಿಂದ ಸೃಷ್ಟಿಯಾಯಿತು. ಅವನಿಂದ ಸೃಷ್ಟಿಯಾಗಿ ಬೇರೆ ಬೇರೆ ಕಾರ್ಯ ನಿರ್ವಹಿಸುವ ದೇವತೆಗಳೆಲ್ಲ ಅವನ ಆಜ್ಞಾಧಾರಕರು" ಎಂದು ತಿಳಿಯುವುದು ಸುಜ್ಞಾನ.
- "ದೇವರೇ ಇಲ್ಲ." ಅಥವಾ "ನಾನೇ ದೇವರು" ಎಂದು ತಿಳಿಯುವುದು ವಿಪರೀತ ಜ್ಞಾನ.
ಚಿಕ್ಕ ವಯಸ್ಸಿನಲ್ಲಿ, ರಟ್ಟೆಯಲ್ಲಿ ಬಲವಿದ್ದಾಗ ನಾಸ್ತಿಕವಾದ ಬಹಳ ಸಂತೋಷ ಕೊಡುತ್ತದೆ. ಯಾವುದೇ ಕಟ್ಟುಪಾಡುಗಳಿಲ್ಲದ ಜೀವನ ಬಹಳ ಸುಖ ಎನಿಸುತ್ತದೆ. ವಯಸ್ಸಾದಂತೆ, ಶಕ್ತಿ ಉಡುಗುತ್ತಿದ್ದಂತೆ, ಪಕ್ಕದಲ್ಲೇ ಇರುವ ನೀರಿನ ಪಾತ್ರೆ ತೆಗೆದುಕೊಳ್ಳುವ ಶಕ್ತಿ ಇಲ್ಲದಿದ್ದಾಗ ನಮಗಿಂತ ದೊಡ್ಡ ಮತ್ತು ಎಲ್ಲವನ್ನೂ ನಿಯಂತ್ರಿಸುವ ಶಕ್ತಿ ಒಂದಿದೆ ಎಂದು ಭಾಸವಾಗುತ್ತದೆ. ಶವ ಸಂಸ್ಕಾರವನ್ನು ವಿಡಂಬನೆ ಮಾಡಿ ದೊಡ್ಡವರಾದವರ ಶವ ಸಂಸ್ಕಾರಕ್ಕೆ ಅವರ ಶವದ ತೂಕಕ್ಕಿಂತ ಹೆಚ್ಚಿನ ತೂಕದ ಶ್ರೀಗಂಧ, ಕರ್ಪೂರ, ತುಪ್ಪ ಉಪಯೋಗಿಸಿ ವೈಭವೋಪೇತವಾಗಿ ಸಂಸ್ಕಾರ ಮಾಡಿದ್ದನ್ನು ನಮ್ಮ ಕಾಲದಲ್ಲಿಯೇ ನಾವು ನೋಡಿದ್ದೇವೆ. ದೇವರೇ ಇಲ್ಲ ಎನ್ನುವ ಸಿದ್ಧಾಂತದ ಬಲದಿಂದ ಅಧಿಕಾರಕ್ಕೆ ಬಂದ ಜನರ ಆಯುಷ್ಯ ಹೋಮವನ್ನು ಭರಾಟೆಯಿಂದ ನಡೆಸುತ್ತಿರುವುದನ್ನೂ ನೋಡುತ್ತಿದ್ದೇವೆ!
Sunday, November 12, 2023
N Ganesh
N Ganesh
(06.10.1948 -30.10.2022)
Tuesday, November 7, 2023
K S Anantha Swamy
Sunday, November 5, 2023
"ವೃದ್ಧಾಪ್ಯ"ದಲ್ಲಿ "ಜೀವನ"ದ "ಆನಂದ"
ಪಾಪ, ಪುಣ್ಯ ಮತ್ತು ವೃದ್ಧಾಪ್ಯ:
ಮನುಷ್ಯನಿಗೆ ಒಂದು ಹಣ್ಣು ಬೇಕಾದರೆ ಅದರ ಸಸಿಯನ್ನು ನೆಟ್ಟು, ಮರವಾಗಿ ಬೆಳೆಸಿ, ಫಲಾಗಮನದ ಸಮಯ ಕಾದು ಅದರ ಹಣ್ಣು ಪಡೆಯಬೇಕು. ನೆನೆಸಿದ ತಕ್ಷಣ ಅದು ಸಿಗುವುದಿಲ್ಲ. ಈಗಲೇ ಹಣ್ಣು ಬೇಕಾದರೆ ಹಿಂದೆಂದೋ ನೆಟ್ಟು ಬೆಳೆಸಿದ ಮರದಿಂದ ಪಡೆಯಬಹುದು. ಅದೂ ಹಿಂದೆಂದೋ ಮರ ಬೆಳೆಸಿದ್ದರೆ ಮಾತ್ರ. ಇಲ್ಲದಿದ್ದರೆ ಇಲ್ಲ. ಅಂತೆಯೇ ಒಂದು ಮರವನ್ನು ನೆಟ್ಟು ಬೆಳೆಸಿದರೆ ಅದು ಹಣ್ಣನ್ನು ಕೊಟ್ಟೇ ಕೊಡುತ್ತದೆ. ಕೆಲವಂತೂ ಹೆಚ್ಚು ಆರೈಕೆ ಇಲ್ಲದಿದ್ದರೂ ಧಾರಾಳವಾಗಿ ಹಣ್ಣು ಕೊಡುತ್ತವೆ. ಮರ ಬೆಳಸಿಯಾದ ಮೇಲೆ ಹಣ್ಣು ಬರಬಾರದು ಎನ್ನುವಂತಿಲ್ಲ. ಹಣ್ಣು ಕೊಡುವುದು ಅದರ ಸಹಜ ವೃತ್ತಿ. ಅದರ ಕೆಲಸ ಅದು ಮಾಡುತ್ತದೆ.
ಪಾಪ ಮತ್ತು ಪುಣ್ಯಗಳು ಒಂದು ರೀತಿಯಲ್ಲಿ ಮರಗಳಿದ್ದಂತೆ. ಮರಗಳನ್ನು ನೆಟ್ಟು ಬೆಳಸಬೇಕು. ಪಾಪ ಮತ್ತು ಪುಣ್ಯ ಎಂಬ ಎರಡು ಮರಗಳು ಮನುಷ್ಯನ ಜೊತೆಯಲ್ಲಿಯೇ ಹುಟ್ಟುತ್ತವೆ. ನಮ್ಮ ಪ್ರತಿಯೊಂದು ಕ್ರಿಯೆಯೂ ಅವುಗಳ ಗೊಬ್ಬರ, ನೀರಾಗಿ ಅವನ್ನು ಬೆಳೆಸುತ್ತವೆ. ನಮ್ಮ ಪ್ರಯತ್ನ ಏನೂ ಬೇಕಿಲ್ಲ. ಕೆಲಸ ಮಾಡಿದವನಿಗೆ ಕೂಲಿ ಸಿಕ್ಕಂತೆ ಪ್ರತಿಫಲವೂ ಸಿಕ್ಕಿಯೇ ಸಿಗುತ್ತದೆ. ಕೆಲಸ ಮಾಡಿ ಕೂಲಿ ಕೊಡುವುದರ ಮುಂಚೆ ಓಡಿಹೋಗಬಹುದು. ಆದರೆ ಇಲ್ಲಿ ಅದೂ ಸಾಧ್ಯವಿಲ್ಲ. ಕೆಲಸಗಾರನನ್ನು ಅಟ್ಟಿಸಿಕೊಂಡು ಬಂದು ಕೂಲಿ ಸೇರುತ್ತದೆ!
ಬೇರೆ ಹಣ್ಣುಗಳಿಗೂ ಪಾಪ, ಪುಣ್ಯಗಳಿಗೂ ಒಂದು ಮುಖ್ಯ ವ್ಯತ್ಯಾಸ ಉಂಟು. ನಮಗೆ ಯಾವುದೋ ಹಣ್ಣು ಬೇಕಾದಾಗ ಬೆಳದವರಿಂದಲೋ, ಆಂಗಡಿಯಿಂದಲೋ ಪಡೆಯಬಹುದು. ನಮ್ಮಲ್ಲಿ ಹಣ್ಣು ಹೆಚ್ಚಿದ್ದಾಗ ಬೇರೆಯವರಿಗೆ ಕೊಡಬಹುದು. ಆದರೆ ಪಾಪ, ಪುಣ್ಯಗಳ ಹಣ್ಣುಗಳ ವಿಷಯದಲ್ಲಿ ಇದು ಸಾಧ್ಯವಿಲ್ಲ. ನಾವು ಕೃಷಿ ಮಾಡಿದ ಹಣ್ಣುಗಳನ್ನು ಬೇರೆಯವರಿಗೆ ಕೊಡುವಹಾಗಿಲ್ಲ. ಬೇರೆಯವರ ಸಾಗುವಳಿಯ ಪದಾರ್ಥ ನಾವು ಪಡೆಯುವಹಾಗಿಲ್ಲ. ಅವರವರ ಬೆಳೆಯ ಫಸಲನ್ನು ಅವರವರೇ ತಿನ್ನಬೇಕು. ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ.
ಈ ಹಿನ್ನೆಲೆಯಲ್ಲಿ ಮನುಷ್ಯನಿಗೆ ಏನು ಬೇಕು, ಏನು ಬೇಡ ಎನ್ನುವುದರ ಬಗ್ಗೆ ಮಹಾಭಾರತದಲ್ಲಿ ಒಂದು ಸೊಗಸಾದ ಶ್ಲೋಕವಿದೆ:
ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನ ಇಚ್ಛಂತಿ ಮಾನವಾ:। ನ ಪಾಪ ಫಲಮಿಚ್ಛ೦ತಿ ಪಾಪಂ ಕುರ್ವoತಿ ಯತ್ನತಃ ।।
"ಮನುಷ್ಯರಿಗೆ ಪುಣ್ಯ ಎನ್ನುವ ಮರ ಬೇಡ. ಆ ಮರವನ್ನು ಬೆಳೆಸುವುದಿಲ್ಲ. ಆದರೆ ಆ ಮರದ ಹಣ್ಣು ಬೇಕು. ಪಾಪ ಎನ್ನುವ ಮರದ ಹಣ್ಣು ಖಂಡಿತಾ ಬೇಡ. ಆದರೆ ಬಹಳ ಕಷ್ಟ ಪಟ್ಟು ಪಾಪದ ಮರವನ್ನು ಬೆಳೆಸುತ್ತಾರೆ!"
ವೃದ್ಧಾಪ್ಯ ಬೇಡ; ಆದರೆ ಬಂದೇ ಬರುತ್ತದೆ!
ವೃದ್ಧಾಪ್ಯ ವರವೆಂದು ಹೇಳುವವರು ಯಾರೂ ಕಾಣರು. ವೃದ್ಧಾಪ್ಯ ಶಾಪವೆಂದು ಹೇಳುವವರು ಬಹಳ ಮಂದಿ. ತಮಾಷೆಯ ವಿಷಯವೆಂದರೆ ಎಲ್ಲರಿಗೂ ದೀರ್ಘಾಯಸ್ಸು ಬೇಕು. ಆದರೆ ವೃದ್ಧಾಪ್ಯ ಬೇಡ. ತಿಳುವಳಿಕೆ ಬಂದನಂತರ (ಅಥವಾ ತಿಳುವಳಿಕೆ ಬರುವ ವಯಸ್ಸು ಬಂದ ಮೇಲೆ. ಏಕೆಂದರೆ ಎಲ್ಲರಿಗೂ ತಿಳುವಳಿಕೆ ಬಂದೇ ಬರುತ್ತದೆ ಎಂದು ಹೇಳುವ ಹಾಗಿಲ್ಲ.) ಮನುಷ್ಯನನ್ನು ಕಾಡುವ ಎರಡು ಆಶೆಗಳು ಉಂಟು- ಧನದಾಶೆ ಮತ್ತು ಜೀವಿತದ ಆಶೆ (ಧನಾಶಾ ಜೀವಿತಾಶಾ ಚ). ಹಣ ಸಂಪಾದನೆ ಮಾಡುವ ಆಸೆ ಮತ್ತು ಚಿರಕಾಲ ಬದುಕುವ ಆಸೆ. ತುಂಬಾ ದಿನ ಬದುಕಿರಬೇಕು. ವೃದ್ಧಾಪ್ಯ ಬರಬಾರದು! ಚಿರಂಜೀವಿಯಾದರೆ ಇನ್ನೂ ಒಳ್ಳೆಯದು. ಆದರೆ ಅದು ಸಾಧ್ಯವಿಲ್ಲವಲ್ಲ!
Saturday, October 14, 2023
ಕಾರಿ ಹೆಗ್ಗಡೆಯ ಮಗಳು
ಕಾವ್ಯ ಮೀಮಾಂಸೆಯ ವಿಷಯ ಚರ್ಚಿಸುವಾಗ ವಿದ್ವಾಂಸರು ಆಚಾರ್ಯ ಆನಂದವರ್ಧನ (820-890 AD) ಮತ್ತು ಆಚಾರ್ಯ ಅಭಿನವ ಗುಪ್ತರನ್ನು (950-1016 AD) ಬಹಳ ಕೃತಜ್ಞತೆಯಿಂದ ನೆನೆಯುತ್ತಾರೆ. ಆಚಾರ್ಯ ಅಭಿನವ ಗುಪ್ತರ ಸಹಸ್ರಮಾನೋತ್ಸವ ಆರೇಳು ವರ್ಷಗಳ ಹಿಂದೆ ಆಚರಿಸಲಾಯಿತು. ಕಾಶ್ಮೀರದವರಾದ ಈ ಇಬ್ಬರು ವಿದ್ವನ್ಮಣಿಗಳು ನಮ್ಮ ಪರಂಪರೆಗೆ ಬಹು ದೊಡ್ಡ ಕಾಣಿಕೆಗಳನ್ನು ಕೊಟ್ಟ ದಿವ್ಯ ಪುರುಷರು. ಇಂದಿನ ವಿಜ್ಞಾನ ಪ್ರಪಂಚದ ಸಾಧನ ಸಲಕರಣೆಗಳು ಇಲ್ಲದ ಕಾಲದಲ್ಲಿ ಈ ಪುಣ್ಯಾತ್ಮರು ಮಾಡಿರುವ ಜ್ಞಾನ ಪ್ರಸಾರ ಕಾರ್ಯ ಒಂದು ವಿಸ್ಮಯವೇ ಸರಿ. ಒಬ್ಬ ವ್ಯಕ್ತಿಯು ಒಂದು ಜೀವಮಾನ ಕಾಲದಲ್ಲಿ ಇಷ್ಟು ಸತ್ವ ಮತ್ತು ಗಾತ್ರದ ಕೃತಿಗಳನ್ನು ಹೇಗೆ ರಚಿಸಿದರು ಎಂದು ಆಶ್ಚರ್ಯ ಪಡುವಂತಾಗುತ್ತದೆ. ಒಂದು ಸಾವಿರ ವರ್ಷಗಳಿಗೂ ಹಿಂದೆಯೇ ಅದ್ಭುತವಾದ ಸಾಧನೆಗಳನ್ನು ಮಾಡಿದ ಇವರಿಗೆ ಸಾದರ ನಮನಗಳನ್ನು ಸಲ್ಲಿಸಿ ಮುಂದೆ ಸಾಗೋಣ.
"ಧ್ವನಿ" ಸಿದ್ಧಾಂತ:
ಆನಂದವರ್ಧನನ "ಧ್ವನ್ಯಾಲೋಕ" ಒಂದು ಮೇರು ಕೃತಿ. ಅಭಿನವ ಗುಪ್ತನು ಈ ಕೃತಿಗೆ "ಧ್ವನ್ಯಾಲೋಕಲೋಚನ" ಎಂಬ ವಿವರವಾದ ವ್ಯಾಖ್ಯಾನವನ್ನು ರಚಿಸಿದ್ದಾನೆ. ಆನಂದವರ್ಧನ ಸೂಚಿಸುವಂತೆ ಕವಿಯೊಬ್ಬ ತನ್ನ ರಚನೆಯಿಂದ ಭಾವತರಂಗಗಳನ್ನು ಹೊರಸೂಸುತ್ತಾನೆ. ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳನ್ನು ಕೇಳುವಾಗ ನಮ್ಮ ಸಾಧನವನ್ನು (ರೇಡಿಯೋ ಅಥವಾ ಟ್ರಾನ್ಸಿಸ್ಟರ್ ಸೆಟ್) ಆ ಕೇಂದ್ರದಿಂದ ಬರುವ ತರಂಗಗಳಿಗೆ ಸರಿಯಾಗಿ ಹೊಂದಿಸಬೇಕು. ಇಲ್ಲದಿದ್ದರೆ ಸರಿಯಾದ ಪ್ರಸಾರ ಸಿಗುವುದಿಲ್ಲ. ಅಂತೆಯೇ ಯಾವುದೇ ಕೃತಿಯ ಓದುಗ ಅಥವಾ ಕೇಳುಗ (ಕೃತಿಯನ್ನು ಓದುವ ಅಥವಾ ಅದರ ವಾಚನ/ಗಾಯನ ಕೇಳುವ ವ್ಯಕ್ತಿ) ಆ ತರಂಗಗಳನ್ನು ಮುಟ್ಟದಿದ್ದರೆ ಅವನಿಗೆ ಅದರ ಪೂರ್ಣ ರಸಾನುಭವ ಆಗುವುದಿಲ್ಲ. ಇದು ನಮ್ಮೆಲ್ಲರಿಗೂ ಅನುಭವದಿಂದ ತಿಳಿದ ಸತ್ಯ.
ದೇಶ-ಕಾಲಗಳ ಪರಿಜ್ಞಾನ:
ಕವಿಯು ಸೃಷ್ಟಿಸಿದ ಭಾವ ತರಂಗಗಳಿಗೆ ತನ್ನನ್ನು ಹೊಂದಿಸಿಕೊಳ್ಳುವುದರ ಜೊತೆಗೆ ಓದುಗ/ಕೇಳುಗ ಆ ಕೃತಿ ರಚನೆಯ ದೇಶ ಮತ್ತು ಕಾಲಗಳ ವಿಷಯವನ್ನೂ ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ಈ ಹಿನ್ನೆಲೆ ತಿಳಿಯದಿದ್ದಾಗ ಅಲ್ಪ ರಸಾನುಭವ ಆದರೂ ಪೂರ್ಣವಾದ ರಸಾಸ್ವಾದನೆ ಸಾಧ್ಯವಾಗದು. ನಮ್ಮದಲ್ಲದ ಭಾಷೆಯ (Foreign Language) ರಚನೆಗಳನ್ನು ಅವಲೋಕಿಸುವಾಗಲಂತೂ ಈ ದೇಶ ಮತ್ತು ಕಾಲಗಳ ಪ್ರಜ್ಞೆ ಇರಬೇಕಾದದ್ದು ಅತ್ಯಂತ ಅವಶ್ಯಕ.
ದೇಶದ (ಭೌಗೋಲಿಕ) ಪರಿಜ್ಞಾನದ ಉದಾಹರಣೆಗೆ, ತಂದೆ ತಾಯಿಗಳನ್ನು ಕಾವಡಿಯಲ್ಲಿ ಕುಳ್ಳಿರಿಸಿ ಹೆಗಲ ಮೇಲೆ ಹೊತ್ತು ತೀರ್ಥ ಯಾತ್ರೆ ಮಾಡಿಸುವ ಶ್ರವಣ ಕುಮಾರನ ಪರಂಪರೆ ನಮ್ಮದು. "ಉಬಾಸೂಟೇ" ಎನ್ನುವ ಒಂದು ಪದ್ದತಿ ಜಪಾನ್ ದೇಶದಲ್ಲಿ ಕೇಳಿ ಬರುತ್ತದೆ. ಇದರಲ್ಲಿ ವಯಸ್ಸಾದ ತಂದೆ-ತಾಯಿಯರನ್ನೋ ಅಥವಾ ಬಂಧುವನ್ನೋ ಹೆಗಲ ಮೇಲೆ ಹೊತ್ತುಕೊಂಡು ಬೆಟ್ಟದ ಅಥವಾ ಕಾಡಿನ ದುರ್ಗಮ ಪ್ರದೇಶದಲ್ಲಿ ಬಿಟ್ಟು ಬರುವ ಉಲ್ಲೇಖವಿದೆ. ಆ ಪರಿಸರದಲ್ಲಿ ಹಿರಿಯ ಜೀವಗಳ ನಿರ್ಯಾಣ ಆಗಲಿ ಎಂದು. ಮುಂದಿನ ತಲೆಮಾರಿನ ಯುವಕರು ಹೀಗೆ ಮಾಡಿದರೆ ಆ ಹಿರಿಯರು ಸಂತೋಷ ಪಡುತ್ತಿದ್ದರು ಎಂದೂ ಹೇಳುತ್ತಾರೆ. ತಾಯಿಯೊಬ್ಬಳು ತನ್ನನ್ನು ಹೀಗೆ ಹೊತ್ತುಕೊಂಡು ಹೋಗುವ ಮಗನಿಗೆ ಹಿಂತಿರುಗಿ ಹೋಗಲು ದಾರಿ ಗೊತ್ತಾಗಲಿ ಎಂದು ಎರಡೂ ಕೈಗಳಿಂದ ಗಿಡಗಳ ಕೊಂಬೆಗಳನ್ನು ಕಿತ್ತು ಹಾಕುತ್ತಾಳೆ. ಈ ರೀತಿಯ ಕವಿತೆ ಓದುವಾಗ ಉಬಾಸೂಟೇ ವಿಷಯ ಗೊತ್ತಿಲ್ಲದಿದ್ದರೆ ಹೇಗಾಗಬೇಡ? ಈ ರೀತಿ ಸಂಪ್ರದಾಯ ನಿಜವಾಗಿ ಇತ್ತೋ ಅಥವಾ ಇಲ್ಲವೋ, ಅದು ಸಾಧುವೋ ಅಲ್ಲವೋ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಎಂಥ ವಿಷಮ ಪರಿಸ್ಥಿತಿಯಲ್ಲೂ ಮಾತೃ ಹೃದಯ ಹೇಗೆ ಯೋಚಿಸಿತು ಎನ್ನುವುದು ಇಲ್ಲಿಯ ರಸ. ಆ ಪರಿಸರದ ಆಚಾರ-ವಿಚಾರಗಳ ತಿಳುವಳಿಕೆ ಇರಬೇಕು ಎನ್ನುವುದನ್ನು ಸೂಚಿಸುವುದಕ್ಕಾಗಿ ಮಾತ್ರ ಈ ಉದಾಹರಣೆ.
ಕಾಲದ ವಿಷಯದಲ್ಲೂ ಇದೆ ರೀತಿಯ ತಿಳುವಳಿಕೆ ಬೇಕಾಗುತ್ತದೆ. ಸತಿ ಸಾವಿತ್ರಿಯಂತೆ ಯಮನ ಹಿಂದೆ ಹೋಗಿಯೂ ಗಂಡನನ್ನು ಉಳಿಸಿಕೊಳ್ಳುವ ಸಮಯ ಒಂದು ಇತ್ತು. ಸೀತೆಗಾಗಿ ಶ್ರೀರಾಮ ಪಟ್ಟ ಪಾಡಿನ ಕಥೆಯೂ ಗೊತ್ತು. ಆ ಕಾಲದ ಮಾನದಂಡವನ್ನು ವಿವಾಹದ ಸಮಯದಲ್ಲೇ ವಿಚ್ಛೇದನಕ್ಕೆ ದಿನ ನಿಗದಿಪಡಿಸುವ ಕಾಲಕ್ಕೆ ಉಪಯೋಗಿಸಲು ಬರುವುದಿಲ್ಲ. ರಸ ಆಸ್ವಾದನೆಯಲ್ಲಿ ದೇಶ-ಕಾಲಗಳ ಪರಿಜ್ಞಾನದ ಮಹತ್ವವನ್ನು ಸೂಚಿಸಲು ಮಾತ್ರ ಈ ಉದಾಹರಣೆ ಎಂದು ಮತ್ತೊಮ್ಮೆ ಹೇಳಬೇಕು. ಇಲ್ಲದಿದ್ದರೆ ವಿಷಯಾಂತರವಾಗುವ ಪ್ರಬಲವಾದ ಸಾಧ್ಯತೆ ಉಂಟು!
ಭಾಷಾಂತರವೋ, ಭಾವಾಂತರವೊ?
ಪರಭಾಷೆಗಳ ಕಾವ್ಯದ ವಿಷಯದಲ್ಲಿ ಯೋಚಿಸುವಾಗ ಆ ಭಾಷೆಗಳ ಪರಿಚಯವಿಲ್ಲದಿದ್ದರೆ ಭಾಷಾಂತರ ಕೃತಿಗಳನ್ನೇ ಆಸರೆಯಾಗಿ ಪಡೆಯಬೇಕಾಗುತ್ತದೆ. ಈ ಪ್ರಸಂಗಗಳಲ್ಲಿ ಭಾಷೆಯ ಜೊತೆಗೆ ಭಾಷಾಂತರದ ತೊಡಕೂ ಸೇರಿಕೊಳ್ಳುತ್ತದೆ. ಭಾಷಾಂತರಕಾರನಿಗೆ ಮೂಲ ಕೃತಿಯ ಭಾಷೆಯ ನೇರ ಪರಿಚಯವಿದ್ದಲ್ಲಿ ಸ್ವಲ್ಪ ವಾಸಿ. ಇಲ್ಲದಿದ್ದಲ್ಲಿ ಮೂಲದ ಭಾಷೆಗೂ ಮತ್ತು ನಾವು ಓದುವ ಭಾಷೆಗೂ ಮಧ್ಯ ಬೇರೊಂದು ಭಾಷೆ ಸೇರಿ ಪರಿಸ್ಥಿತಿ ಇನ್ನಷ್ಟು ಗೋಜಲಾಗುತ್ತದೆ. ಮೂಲ ಭಾಷೆಯ ಸೊಗಡಿನ ಬದಲು ಮಧ್ಯದ ಭಾಷೆಯ ವಾಸನೆ ದೊಡ್ಡದಾಗುವ ಭೀತಿಯೂ ಉಂಟು. ನೇರವಾದ ಭಾಷಾಂತರವಾದರೂ ಭಾಷಾಂತರಕಾರನಿಗೆ ಎರಡೂ ಭಾಷೆಗಳ ಮೇಲೆ ಪ್ರಭುತ್ವ ಇಲ್ಲದಿದ್ದರೆ ಮುಖ್ಯ ರಸಘಟ್ಟಗಳು ಸೋರಿಹೋಗಿ ಬರೀ ಸಿಪ್ಪೆ-ತೊಂಡುಗಳ ಪಾಕ ಸಿಗುವ ಸಾಧ್ಯತೆಯೂ ಇಲ್ಲದಿಲ್ಲ. ಎರಡೂ ಭಾಷೆಗಳ ಚೆನ್ನಾದ ಪರಿಚಯ ಇರುವ, ಸ್ವತಃ ಕವಿಯೂ ಆದ ಭಾಷಾಂತರಕಾರನು ಸಿಕ್ಕರೆ ಅದು ಓದುಗ/ಕೇಳುಗನ ಭಾಗ್ಯವೆಂದೇ ಹೇಳಬೇಕು.
ಥಾಮಸ್ ಕ್ಯಾಂಬೆಲ್ ನ "ಲಾರ್ಡ್ ಅಲ್ಲಿನ್ಸ್ ಡಾಟರ್" ಕವನ:
ಥಾಮಸ್ ಕ್ಯಾಂಬೆಲ್ಲ್ (Thomas Campbell) (1777-1844) ಒಬ್ಬ ಬಹು ಪ್ರತಿಭಾನ್ವಿತ ಸ್ಕಾಟ್ಲೆಂಡ್ ದೇಶದ ಕವಿ. ಈತನು ವಿಲಿಯಂ ವರ್ಡ್ಸವರ್ತ್ (William Wordsworth) ಮತ್ತು ಸ್ಯಾಮ್ಯುಯೆಲ್ ಟೇಲರ್ ಕೊಲೆರಿಜ್ (Samuel Taylor Coleridge) ಮಹಾಕವಿಗಳ ಸಮಕಾಲೀನ. ಸ್ಕಾಟ್ಲೆಂಡ್ ನ (Scottish Lowlands) ಗ್ಲಾಸ್ಗೋ (Glasgow) ನಗರದಲ್ಲಿ ಹುಟ್ಟಿ ಬೆಳೆದವನು. ಈತನ ಅನೇಕ ಕೃತಿಗಲ್ಲಿ "The Ballad of Lord Ullin's Daughter" ಒಂದು ಪ್ರಸಿದ್ಧವಾದ ನೀಳ್ಗವನ. ಗ್ಲಾಸ್ಗೋ ನಗರದ ವಾಯುವ್ಯದಲ್ಲಿ (northwest) ಸುಮಾರು ೧೦೦ ಮೈಲುಗಳ ದೂರದಲ್ಲಿರುವ Isle of Mull ಪ್ರದೇಶಕ್ಕೆ ಭೇಟಿ ನೀಡಿದಾಗ ಪ್ರೇರಿತನಾಗಿ ಈ ಕೃತಿ ರಚಿಸಿದ್ದಾನೆ ಎಂದು ಹೇಳಲಾಗುತ್ತದೆ.
ಈ ಭೂಭಾಗದಲ್ಲಿ ಉತ್ತರ ಅಟ್ಲಾಂಟಿಕ್ ಸಮುದ್ರದ ಹಿನ್ನೀರು ಚಾಚಿಕೊಂಡು ಭೂಪ್ರದೇಶದಿಂದ ಸುತ್ತುವರಿದು ಅನೇಕ ಸರೋವರಗಳು ನಿರ್ಮಾಣವಾಗಿವೆ. Loch Gyle ಅಥವಾ Loch na Keal ಅಂತಹ ಒಂದು ಸರೋವರ. ಉಲ್ವ (Ulva) ಎನ್ನುವ ಭೂಭಾಗವನ್ನು ಉತ್ತರದ ಮುಲ್ ನಿಂದ (Gribun on Mull) ಈ ಸರೋವರ ಬೇರ್ಪಡಿಸುತ್ತದೆ. ಈ ಕವನದಲ್ಲಿ ಬಣ್ಣಿಸಿರುವುದು ಇದೇ ಪ್ರದೇಶವನ್ನು,
ಕನ್ನಡದ ಕಣ್ವ ಎಂದು ಖ್ಯಾತರಾದ ಪ್ರಾಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಈ ಇಂಗ್ಲಿಷ್ ಕವನವನ್ನು "ಕಾರಿ ಹೆಗ್ಗಡೆಯ ಮಗಳು" ಎಂಬ ಹೆಸರಿಟ್ಟು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ.
ಕೃತಿಯ ಹಿನ್ನೆಲೆ:
ಉಲ್ವ ಪ್ರದೇಶದ ಅಧಿಪತಿ ಅಥವಾ ಪಾಳೇಗಾರನ (Lord Ullin) ಚಲುವೆ ಮಗಳು ಸರೋವರದ ಉತ್ತರ ಭಾಗದ ದ್ವೀಪವೊಂದರ ಪಾಳೇಗಾರನ ತರುಣ ಮಗನನ್ನು ಪ್ರೇಮಿಸಿ ಮದುವೆಯಾಗಲು ಇಷ್ಟ ಪಡುತ್ತಾಳೆ. ಈ ಸಂಭಂಧ ಹುಡುಗಿಯ ತಂದೆಗೆ ಇಷ್ಟವಾಗುವುದಿಲ್ಲ. ಪ್ರಿಯಕರನನ್ನು ಬಿಡಲಾಗದ ಯುವತಿ ಅವನ ಜೊತೆಯಲ್ಲಿ ಪಲಾಯನ ಮಾಡುತ್ತಾಳೆ. ಇದರಿಂದ ಕುಪಿತನಾದ ತಂದೆ ತನ್ನ ನೆಚ್ಚಿನ ರಾವುತರನ್ನು (ಕುದುರೆಯ ಮೇಲೆ ಕುಳಿತು ಯುದ್ಧ ಮಾಡುವ ಸೈನಿಕರು) ಅವರ ಹಿಂದೆ ಛೂ ಬಿಡುತ್ತಾನೆ. ಮಗಳ ಪ್ರಿಯಕರನನ್ನು ಕೊಂದು ಮಗಳನ್ನು ಹಿಂದೆ ಕರೆದುಕೊಂಡು ಬರುವಂತೆ ಆಜ್ಞಾಪಿಸುತ್ತಾನೆ. ಅವರ ಹಿಂದೆ ತಾನೂ ಹೊರಡುತ್ತಾನೆ ಕೂಡ.
ಭೀತಿಯಿಂದ ಯುವ ಜೋಡಿ ಪಲಾಯನ ಮಾಡುತ್ತದೆ. ಕಣಿವೆಗಲ್ಲಿ ಕಣ್ಣಾಮುಚ್ಚಾಲೆಯಂತೆ ಮೂರು ದಿನ ಪಯಣಿಸಿದ ನಂತರ ಸರೋವರದ ದಡಕ್ಕೆ ಬರುತ್ತಾರೆ. ಚಂಡಮಾರುತದ ವಾತಾವರಣ. ಸರೋವರ ದಾಟಿ ಆ ದಡ ತಲುಪಿಬಿಟ್ಟರೆ ಯುವಕನ ಕಡೆಯ ಜನರಿಂದ ರಕ್ಷಣೆ ಸಿಗುತ್ತದೆ. ದಾಟದಿದ್ದರೆ ರಾವುತರ ಕೈಲಿ ಯುವಕನ ಸಾವು ಖಂಡಿತ. ಚಂಡಮಾರುತದ ಸಮಯದಲ್ಲಿ ಯಾರೂ ದೋಣಿ ಹಾಯಿಸಲು ತಯಾರಿಲ್ಲ. ಅಲ್ಲಿ ಇದ್ದ ಒಬ್ಬನೇ ಅಂಬಿಗನನ್ನು ಯುವಕ ಆ ದಡಕ್ಕೆ ಕರೆದೊಯ್ಯುವುದಕ್ಕೆ ಕೇಳುವುದರಿಂದ ಕವನ ಪ್ರಾರಂಭ ವಾಗುತ್ತದೆ.
ತಂದೆ-ಮಗಳ ಸಂಭಂಧ, ವಿಷಮ ವಿವಾಹ, ಮನಸ್ಸುಗಳು ಕೊಡದಿದ್ದಾಗ ಕುಟುಂಬಗಳ ನಡುವೆ ಬರುವ ಗುದ್ದಾಟಗಳು, ಈ ಎಲ್ಲ ಗೋಜಲಿನ ನಡುವೆ ಆಗುವ ದುರಂತ - ಇದು ಈ ಕವನದ ವಸ್ತು. ಮಗಳ ಮೇಲಿನ ಅತಿಯಾದ ಪ್ರೀತಿಯೇ ಹೇಗೆ ಕೋಪಕ್ಕೆ ಕಾರಣವಾಗಿ ಕಡೆಗೆ ಆ ಪ್ರೀತಿಯ ಮಗಳ ಪ್ರಾಣಕ್ಕೇ ಸಂಚಕಾರ ತಂದದ್ದು ವರ್ಣಿತವಾಗಿದೆ. ಕಡೆಯ ಹಂತದಲ್ಲಿ ಮಗಳ ಕಷ್ಟ ಕಂಡ ತಂದೆಯ ಕೋಪ ಕರುಣೆಯಾಗಿ ಪರಿವರ್ತಿತವಾಗುತ್ತದೆ. ಆದರೆ ಸಮಯ ಮಿಂಚಿ ದುರಂತದಲ್ಲಿ ಪರ್ಯವಸಾನ ಆಗುತ್ತದೆ.
ತಂದೆ-ತಾಯಿಯರ ಇಷ್ಟಕ್ಕೆ ವಿರುದ್ಧವಾಗಿ ಮಕ್ಕಳು ವಿವಾಹ ಮಾಡಿಕೊಂಡಾಗ ಉಂಟಾಗುವ ಪರಿಸ್ಥಿತಿ ಇಲ್ಲಿ ಚಿತ್ರಿತವಾಗಿದೆ. ಯಾರು ಸರಿ, ಯಾರು ತಪ್ಪು ಅನ್ನುವ ಪ್ರಶ್ನೆಗಿಂತ ಸಮನ್ವಯವಿಲ್ಲದೆ ವಿರಸ ಮೂಡಿ ದುರಂತ ಎದುರಾಗುತ್ತದೆ. ಇಂತಹ ಸನ್ನಿವೇಶಗಳನ್ನು ಎದುರಿಸಿದವರೇ ಅದನ್ನು ತಿಳಿಯಬಲ್ಲರು.
ಕಾರಿ ಹೆಗ್ಗಡೆಯ ಮಗಳು:
ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳ ಮೇಲೆ ಸಂಪೂರ್ಣ ಪ್ರಭುತ್ವ ಹೊಂದಿ ಎರಡೂ ಭಾಷೆಗಳನ್ನು ಶಿಷ್ಯರಿಗೆ ಪಾಠ ಹೇಳಿದ್ದಲ್ಲದೇ ಅನೇಕ ಘಟಾನುಘಟಿ ಸಾಹಿತಿಗಳನ್ನು ತಯಾರು ಮಾಡಿ ಕೊಟ್ಟ ಪ್ರಾಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಅನೇಕ ಇಂಗ್ಲಿಷ್ ಕವಿತೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು. ಅವರ ಸಾಹಿತ್ಯ ಕೃಷಿ ಅಗಾಧವಾದದ್ದು. ಹಳಗನ್ನಡ ಕೃತಿಗಳನ್ನು ನಾಟಕಗಳಾಗಿ ರೂಪಾಂತರ ಮಾಡಿ ಎಲ್ಲರೂ ಅವುಗಳ ಸೊಗಸನ್ನು ಅರಿಯುವ ಅನುಕೂಲ ಮಾಡಿಕೊಟ್ಟವರು. ಎಲ್ಲಕ್ಕಿಂತ ಹೆಚ್ಚಾಗಿ, ತಮ್ಮ ಸಾಹಿತ್ಯ ರಚನೆಯ ಸಮಯವನ್ನು ಕನ್ನಡದ ಬೆಳವಣಿಗೆಗೆ ವಿನಿಯೋಗಿಸಿ ಅನೇಕ ಕವಿಗಳನ್ನೂ, ಲೇಖಕರನ್ನೂ ಗುರುತಿಸಿ ಕನ್ನಡಕ್ಕೆ ಕೊಟ್ಟವರು.
"ಕಾರಿ ಹೆಗ್ಗಡೆಯ ಮಗಳು" ಕವನವನ್ನು ನೋಡಿದಾಗ ಇದು ಒಂದು ಇಂಗ್ಲಿಷ್ ಕವನದ ಭಾಷಾಂತರ ಎಂದು ಅನಿಸದು. ಮೂಲ ಕೃತಿಯನ್ನು ಪೂರ್ತಿ ಅರಗಿಸಿಕೊಂಡು ಹೊಸ ಕನ್ನಡ ಕವನಕ್ಕೆ ಜನ್ಮ ಕೊಟ್ಟಿದ್ದಾರೆ ಶ್ರೀಕಂಠಯ್ಯನವರು.
ಶ್ರೀಯವರ ಕೈಯ್ಯಲ್ಲಿ ಲಾರ್ಡ್ ಅಲ್ಲಿನ್ ಕಾರಿ ಹೆಗ್ಗಡೆಯಾಗುತ್ತಾನೆ. ಸ್ಕಾಟ್ಲೆಂಡಿನ ಸಮುದ್ರ ಭಾಗ ನಮ್ಮ ಕಾರವಾರದ ಬಳಿಯ ಕಡಲಾಗುತ್ತದೆ. ಸ್ಕಾಟಿಷ್ ಹೈಲ್ಯಾಂಡ್ ಪಡುವದಿಬ್ಬ ಆಗುತ್ತದೆ. ಸಿಲ್ವರ್ ಪೌಂಡ್ ಕೇಳಿದ ಹೊನ್ನು ಆಗುತ್ತದೆ!
