Showing posts with label punya. Show all posts
Showing posts with label punya. Show all posts

Saturday, April 18, 2026

ಪವಮಾನ ಮತ್ತು ಪೂಯಮಾನ ಹೋಮಗಳು

 

ಯಾವುದೇ ವ್ಯಕ್ತಿ ತಾನು ಕೊಳಕಾಗಿರಬೇಕೆಂದು ಬಯಸುವುದಿಲ್ಲ. ತನ್ನನ್ನು ನೋಡಿದವರು ಅಸಹ್ಯ ಪಡದೆ ಮತ್ತೊಮ್ಮೆ ನೋಡಬೇಕೆಂದು ಇಚ್ಚಿಸುವುದು ಸ್ವಾಭಾವಿಕ. ಚೆನ್ನಾಗಿ ಕಾಣಿಸಬೇಕೆಂದು ಅನೇಕ ರೀತಿಯಲ್ಲಿ ಅಲಂಕರಿಸಿಕೊಳ್ಳುವುದು ಮತ್ತು ಸುಗಂಧ ದ್ರವ್ಯಗಳನ್ನು ಪೂಸಿಕೊಳ್ಳುವುದೂ ನಡೆಯುತ್ತಲೇ ಇರುತ್ತದೆ. ಆಕರ್ಷಕವಾಗಿ ಕಾಣಲು ಒಳ್ಳೆಯ ವಸ್ತ್ರಗಳು ಮತ್ತು ಇತರ ಪರಿಕರಗಳನ್ನೂ ಬಳಸುವುದು ಬಹಳ ಹಿಂದಿನಿಂದ ಬಂದಿದೆ. ನಾಗರೀಕತೆ ಬೆಳೆದಂತೆ ಇದರ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸುತ್ತಿರುವುದು ದಿನನಿತ್ಯ ಕಾಣುವ ದೃಶ್ಯ. ಸೌಂದರ್ಯ ವರ್ಧಕಗಳ ಸಂಬಂಧದ ಉದ್ಯಮವು ಹಿಂದೆಂದಿಗಿಂತ ಅಧಿಕ ವೇಗದಲ್ಲಿ ಬೆಳೆದು ಶತಕೋಟಿ ಡಾಲರುಗಳ ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತಿದೆ. 

ಏನೋ ಕಾರಣಕ್ಕೆ ಮನೆಯ ಹೊರಗಡೆ ಹೋಗಿ ಬಂದಾಯಿತು. ಹೊರ ಪ್ರಪಂಚದ ಧೂಳು, ಹೊಗೆ, ಅಂಟು ಪದಾರ್ಥಗಳು, ಮಳೆ-ಗಾಳಿ, ನಮ್ಮ ದೇಹದಲ್ಲೇ ತಯಾರಾದ ಬೆವರು ಮುಂತಾದುವುಗಳಿಂದ ದೇಹ ಮಲಿನವಾಯಿತು. ಇದು ದಿನ ಆಗುವುದೇ. ಏನು ಮಾಡುವುದು? ಆದ್ದರಿಂದ ಹಾಗೇ ಇದ್ದುಗೊಳ್ಳಲಿ. ಹೀಗೆಂದು ನಾವು ಬಿಡುವುದಿಲ್ಲ. ಮನೆಗೆ ಬಂದ ತಕ್ಷಣ ಕೈ-ಕಾಲು, ಮುಖ ತೊಳೆದುಕೊಳ್ಳುತ್ತೇವೆ. ಹೆಚ್ಚಿನ ಪ್ರಮಾಣದ ಕೊಳೆ ಆಗಿದ್ದರೆ ಸ್ನಾನವೂ ಮಾಡುತ್ತೇವೆ. ಮೊದಲು ಧರಿಸಿದ್ದ ಬಟ್ಟೆ-ಬರೆಗಳನ್ನು ಬದಲಿಸಿ ಶುಭ್ರವಾದ ಅರಿವೆ ಧರಿಸುತ್ತೇವೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗೆ ಮಾಡಿಕೊಂಡಾಗ "ಸದ್ಯ, ಈಗ ಆರಾಮ ಎನಿಸಿತು" ಎಂದು ನಮಗೆ ನಾವೇ ಹೇಳಿಕೊಳ್ಳುತ್ತೇವೆ. ಹತ್ತಿರವಿದ್ದವರಿಗೆ ಹಾಗೆ ಹೇಳುವುದೂ ಉಂಟು. 

ಈ ರೀತಿ ಶುಭ್ರವಾಗುವುದಕ್ಕೇ ಚಟುವಟಿಕೆ ನಿಲ್ಲುವುದಿಲ್ಲ. ಮಾರನೆಯ ದಿನ ಹೊರಗಡೆ ಹೋಗುವಾಗ ಹೆಚ್ಚಿನ ಕೊಳೆ-ಗಲೀಜು ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತೇವೆ. ಅದಕ್ಕೆ ಬೇಕಾದ ಪರಿಕರಗಳನ್ನೂ ಹೊಂದಿಸಿಕೊಳ್ಳುತ್ತೇವೆ. ಧೂಳಿನ ವಾತಾವರಣ ಅಥವಾ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ತಂಪು ಕನ್ನಡಕ ಇರಬಹುದು. ಮಳೆ ಬರುವ ವಾತಾವರಣ ಇದ್ದರೆ ಒಂದು ಛತ್ರಿ, ಅದಕ್ಕೆ ಸರಿಯಾದ ಪಾದರಕ್ಷೆ ಇರಬಹುದು. ವಾಹನ ಬದಲಿಸಬಹುದು. ಸ್ಕೂಟರಿನಲ್ಲಿ ಹೋಗುವ ಬದಲು ಕಾರಿನಲ್ಲಿ ಹೋಗಬಹುದು. ಈ ರೀತಿ ಮುಂದೆ ಆಗುವ ಕೊಳೆ  ತಪ್ಪಿಸಿಕೊಳ್ಳಲೂ ಪ್ರಯತ್ನಿಸುತ್ತೇವೆ. 

*****

ಒಂದಲ್ಲ ಒಂದು ಕಾರಣಕ್ಕೆ ನಾವು ಆಗಾಗ ಔಷಧಿಗಳನ್ನು ಸೇವಿಸುತ್ತಿರುತ್ತೇವೆ. ದೇಹಕ್ಕೆ ರೋಗ-ರುಜಿನಗಳು ಬರುವುದು ಸ್ವಾಭಾವಿಕ. ಹೀಗೆ ಕಾಯಿಲೆ-ಕಸಾಲೆಗಳು ಬಂದಾಗ ಅವುಗಳ ಪೀಡೆಯಿಂದ ಹೊರಬಂದು ಮತ್ತೆ ಪೂರ್ಣ ಅರೋಗ್ಯ ಪಡೆಯಲು ಸೇವಿಸುವ ಔಷಧಿಗಳಿಗೆ "ರೋಗ ನಿವಾರಕ" ಔಷಧಿಗಳು ಅನ್ನುತ್ತೇವೆ. ಅಂತೆಯೇ ನಮಗೆ ರೋಗ ಬರದಿರಲು ಕೆಲವು ಔಷಧಗಳನ್ನು, ಟಾನಿಕ್ಕು ಮೊದಲಾದುವುಗಳನ್ನೂ ಸೇವಿಸುತ್ತೇವೆ. ಉದಾಹರಣೆಗೆ ವ್ಯಾಕ್ಸಿನೇಷನ್, ಬೂಸ್ಟರ್ ಮುಂತಾದುವು. ಇವುಗಳಿಗೆ "ರೋಗ ನಿರೋಧಕ" ಅನ್ನುತ್ತೇವೆ. ಆಗಲೇ ಬಂದು ವಕ್ಕರಿಸಿರುವ ರೋಗದಿಂದ ಹೊರಬರಲು ರೋಗ ನಿವಾರಕಗಳು. ರೋಗವೇ ಬಾರದಿರಲು ರೋಗ ನಿರೋಧಕಗಳು!

ಕಾನೂನಿನ ವಿದ್ಯಾರ್ಥಿಗಳಿಗೆ ಪಾಠ ಹೇಳುವಾಗ ಕಾನೂನಿನ ಪುಸ್ತಕಗಳನ್ನು ಎರಡು ರೀತಿಯಾಗಿ ವಿಭಾಗಿಸುತ್ತಾರೆ. ಒಂದು "ನಿರ್ಣಾಯಕ ಕಾನೂನು" (Substantive law) ಎಂದು. ನಿರ್ಣಾಯಕ ಕಾನೂನು "ಹಕ್ಕು ಮತ್ತು ಜವಾಬ್ದಾರಿ" ಮತ್ತು "ಅಪರಾಧಗಳು" ಇವುಗಳ ಮಹತ್ವವನ್ನು ವಿವರಿಸುತ್ತವೆ. ಇನ್ನೊಂದು "ಕಾರ್ಯ ವಿಧಾನ ಕಾನೂನು" (Procedural law) ಎಂದು. ಇವು ನ್ಯಾಯ ನಿರ್ಣಯ ಮಾಡುವ ಕ್ರಮವನ್ನು ವಿವರಿಸುತ್ತವೆ. ಕೆಲವು ಕಾನೂನುಗಳು ಇವೆರಡರನ್ನೂ ಒಳಗೊಂಡು ಎರಡು ಭಾಗಗಳಿಗೂ ಸೇರುತ್ತವೆ. 

***** 

ಯಾವುದೋ ಒಂದು ವಿಷಯ ಪೂರ್ತಿಯಾಗಿ ತೀರ್ಮಾನ ಆಗಿರುವುದಿಲ್ಲ. ಇಂತಹ ಹಂತದಲ್ಲಿ ಅವುಗಳ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿರುತ್ತದೆ. ಆಗ ಅದು ಒಂದು ಗೊಂದಲದ ಸ್ಥಿತಿ. ಪೂರ್ತಿ ಚರ್ಚೆ ನಡೆದು, ಸಾಧಕ-ಬಾಧಕಗಳ ಪರಿಶೀಲನೆ ನಡೆದು, ಕೊನೆಯ ತೀರ್ಮಾನ ಹೊರಬರುತ್ತದೆ. ಈಗ ಗೊಂದಲ ನಿವಾರಣೆ ಆಯಿತು. ಸರ್ಕಾರದ ವಿಷಯಗಳಲ್ಲಿ "ಸರ್ಕಾರೀ ಆದೇಶ" (Goverement Order) ಆಯಿತು ಅನ್ನುತ್ತೇವೆ. ಹೀಗೆ ಸರ್ಕಾರಿ ಆದೇಶ ಹೊರಬಿದ್ದಮೇಲೆ ಮತ್ತೆ ಚರ್ಚೆಗೆ ಅವಕಾಶ ಇಲ್ಲ. 

ವೇದಗಳನ್ನು ನಂಬುವವರು ಅವುಗಳಲ್ಲಿ ಹೇಳಿರುವುದನ್ನು ಈ ರೀತಿಯ ಸರ್ಕಾರಿ ಆದೇಶದಂತೆ ಪರಿಗಣಿಸುತ್ತಾರೆ. "ಹೀಗಿರಬೇಕು" ಅಂದರೆ ಹೀಗೆಯೇ ಇರಬೇಕು. ಹಾಗಿರುವಂತಿಲ್ಲ. "ಹೀಗೆ ಮಾಡಬೇಕು" ಅಂದರೆ ಹೀಗೆಯೇ ಮಾಡಬೇಕು. ಹಾಗೆ ಮಾಡುವಂತಿಲ್ಲ. ಏಕೆ ಎಂದು ಕೇಳುವಂತಿಲ್ಲ. ಯಾಕಂದರೆ ಚರ್ಚೆಯ ಕಾಲ ದಾಟಿ ಸರ್ಕಾರಿ ಆದೇಶ ಹೊರಬಂದಿದೆ. ಈಗ ಆದೇಶವನ್ನು ಪ್ರಶ್ನಿಸುವಂತಿಲ್ಲ. ಇಂತಹ ಆದೇಶಗಳ ಪಾಲನೆಯಲ್ಲಿ ದಯೆ-ದಾಕ್ಷಿಣ್ಯ, ಅಂತಃಕರಣ, ಸ್ವಲ್ಪ ಅಡ್ಜಸ್ಟ್ ಮಾಡು, ಇಂತಹವುಗಳಿಗೆ ಅವಕಾಶವಿಲ್ಲ. 
*****

ಮೇಲಿನ ಎಲ್ಲ ಅಂಶಗಳು ಲೌಕಿಕ ವಿಚಾರಗಳಿಗೆ ಅನ್ವಯವಾಗುತ್ತವೆ. ಹಾಗಿದ್ದರೆ, ತಾತ್ವಿಕ ವಿಚಾರಗಳಲ್ಲಿ ಇವುಗಳ ಅನ್ವಯ ಹೇಗೆ? ದೇಹ ಮತ್ತು ಆತ್ಮ ಬೇರೆ ಬೇರೆ. ದೇಹವನ್ನು ಇಲ್ಲಿ ಬಿಡುತ್ತೇವೆ. ಮುಂದಿನ ಲೋಕಕ್ಕೆ ಆತ್ಮ ಪ್ರಯಾಣ ಬೆಳೆಸುತ್ತದೆ. ಇಹಲೋಕ-ಪರಲೋಕ ಎಂಬುವುವು ಉಂಟು. ಪಾಪ-ಪುಣ್ಯ ಎಂದುಂಟು. ಹೀಗೆ ನಂಬಿದಾಗ ಅವುಗಳ ಸಮಾಚಾರ ಏನು? ಈ ಪ್ರಶ್ನೆಗಳಿಗೆ ಉತ್ತರ ಹೇಗೆ? ಇವು ಯೋಚಿಸಬೇಕಾದ ವಿಷಯಗಳೇ. 

ಋಗ್ವೇದದ ಒಂಭತ್ತನೆಯ ಮಂಡಲದ ಕಡೆಯ ಭಾಗದಲ್ಲಿನ ಕೆಲವು ಮಂತ್ರಗಳನ್ನು "ಕರ್ಣ ಮಂತ್ರಗಳು" ಎಂದು ನಿರ್ದೇಶಿಸುತ್ತಾರೆ. ಜೀವಿತದ ಕಡೆಯ ಭಾಗ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಚೆನ್ನಾಗಿರುವಾಗಲೇ ಅಂತ್ಯ ಕಾಲ ಬರಬಹುದು. ಮತ್ತೆ ಕೆಲವರಿಗೆ ಹಾಸಿಗೆ ಹಿಡಿದು ಕಾಲ ಕಳೆಯುವ ಸಂದರ್ಭ ಒದಗಿಬರಬಹುದು. ಹೀಗೆ ಹಾಸಿಗೆ ಹಿಡಿದು ಮಲಗಿದ ಹಿರಿಯರಿಗೆ ಅಂತ್ಯ ಕಾಲದಲ್ಲಿ ಅವರ ಮಕ್ಕಳೋ, ಬಂಧುಗಳೋ ಅವರ ಮುಂದಿನ ಪ್ರಯಾಣದ ಕಾಲದಲ್ಲಿ ಅನುಕೂಲವಾಗಲೆಂದು ಕೆಲವು ವಿಶೇಷವಾದ ಮಂತ್ರಗಳನ್ನು ಅವರ ಕಿವಿಯಲ್ಲಿ ಹೇಳುವ ಪರಿಪಾಠವಿದೆ. ಇವೇ ಕರ್ಣ ಮಂತ್ರಗಳು. 

ವೇದಗಳಲ್ಲಿರುವ ಎಲ್ಲ ಮಂತ್ರಗಳೂ ಪವಿತ್ರವಾದುವೇ. ಅದಕ್ಕೇ ಅವುಗಳಿಗೆ ಅಲ್ಲಿ ಸ್ಥಾನ ಸಿಕ್ಕಿರುವುದು. ಆದರೂ ಎಲ್ಲದರಲ್ಲಿಯೂ "ಯಾವುದು ಮುಖ್ಯ?" ಎಂದು ಹುಡುಕುವುದು ಮಾನವ ಸಹಜ ಅಭ್ಯಾಸ. ಹೀಗೆ ನೋಡಿದಾಗ ಒಂಭತ್ತನೆಯ ಮಂಡಲದ ಭಾಗಗಳನ್ನು "ಪವಿತ್ರನಾಮ್ ಚ ಪವಿತ್ರಂ" ಎಂದು ತಿಳಿದವರು ಹೇಳುತ್ತಾರೆ. ಹೀಗೆ ಹೇಳುವ ಒಟ್ಟು ಸೂಕ್ತಗಳು 114 ಎನ್ನುತ್ತಾರೆ. ಅವುಗಲ್ಲಿ 1,108 ಋಕ್ಕುಗಳಿವೆ. 

ಇವುಗನ್ನು ಅನುಕೂಲಕ್ಕಾಗಿ ಎರಡು ಭಾಗ ಮಾಡಿದ್ದಾರೆ. ಮೊದಲ ಭಾಗ (ಪೂರ್ವ ಭಾಗ) 67 ಸೂಕ್ತಗಳ 610 ಋಕ್ಕುಗಳು. ಎರಡನೆಯ ಭಾಗ (ಉತ್ತರ ಭಾಗ) 47 ಸೂಕ್ತಗಳ 498 ಋಕ್ಕುಗಳು. ಪೂರ್ವ ಭಾಗವನ್ನು "ಪವಮಾನ ಸೂಕ್ತ" ಎಂದೂ, ಉತ್ತರ ಭಾಗವನ್ನು "ಪೂಯಮಾನ ಸೂಕ್ತ" ಎಂದೂ ನಿರ್ದೇಶಿಸುತ್ತಾರೆ. ಇವುಗಳ ಪ್ರಧಾನ ದೇವತೆ "ಪವಮಾನ ಸಂಜ್ಞಕ ಸೋಮ". ಸೋಮ ಅನ್ನುವ ಪದಕ್ಕೆ ವಿಶಾಲಾರ್ಥಗಳಿವೆ. ಸಾಮಾನ್ಯವಾಗಿ ಸೋಮ ಅಂದರೆ ಚಂದ್ರ. ಸ-ಉಮಾ (ಅಂದರೆ ಉಮೆಯ ಜೊತೆಯಲ್ಲಿ ಇರುವವನು) ಎಂದು ಅರ್ಥ ಮಾಡಿದ್ದಾಗ ಶಿವನೂ ಸೋಮ ಆಗುತ್ತಾನೆ. ಮಹಾವಿಷ್ಣುವಿಗೂ ಸೋಮ ಶಬ್ದ ಅನ್ವಯವಾಗುತ್ತದೆ ಅನ್ನುತ್ತಾರೆ. 

*****

ಸೋಮ ಎಂಬ ಹೆಸರಿನ ಒಂದು ಬಳ್ಳಿ. ಅದೊಂದು ಬಲು ವಿಶೇಷಕರ ಬಳ್ಳಿ. ಎಲ್ಲ ಬಳ್ಳಿ ರೀತಿಯ ಸಸ್ಯ. ಹಿಮಾಲಯದ ಕೆಲವು ಪ್ರದೇಶಗಳಲ್ಲಿ ಸಿಗುತ್ತದೆ ಅನ್ನುತ್ತಾರೆ. ಬಳ್ಳಿಯಂತೆ ಹಬ್ಬಿಕೊಂಡು ಬೆಳೆಯುವ ಸಸ್ಯಕ್ಕೆ ಸಂಸ್ಕೃತದಲ್ಲಿ "ಲತೆ" ಎಂದು ಹೆಸರು. ಆದ್ದರಿಂದ ಅದು "ಸೋಮ ಲತೆ". ಅದರ ರಸವು ಬಹಳ ಅಮೂಲ್ಯ. ಆದ್ದರಿಂದ ಅದರ ರಸವನ್ನು ಹೋಮ-ಹವನಗಳಲ್ಲಿ ಹವಿಸ್ಸಾಗಿ ಬಳಸುತ್ತಾರೆ. ಮೇಲೆ ಹೇಳಿದ ಸೂಕ್ತಗಳಲ್ಲಿ ಈ ಸೋಮಲತೆಯ ಮರ್ದನ (ಜಜ್ಜಿ ರಸ ತೆಗೆಯುವುದು), ರಸ ಶೋಧನ (ರಸವನ್ನು ಶೋಧಿಸಿ ಶೇಖರಿಸುವುದು), ಸಂಸ್ಕರಣ (ಹೀಗೆ ಶೇಖರಿಸಿದ ರಸಕ್ಕೆ ಬೇರೆ ಪದಾರ್ಥಗಳನ್ನು ಸೇರಿಸಿ ಇನ್ನೂ ಉತ್ತಮ ಮಾಡುವುದು), ನಂತರ ಅಗ್ನಿಯಲ್ಲಿ ಹೋಮ ಮಾಡುವ ಮೂಲಕ ದೇವತೆಗಳಿಗೆ ಅರ್ಪಿಸುವುದು, ಮುಂತಾದುವು ಈ ಸೂಕ್ತಗಳಲ್ಲಿ ಕಂಡುಬರುತ್ತವೆ. 

ಹೀಗೆ ಹೋಮ ಮಾಡುವಾಗ ದೇವತೆಗಳನ್ನು ನಮಗೆ ಬೇಕಾದ ವರಗಳನ್ನು ಬೇಡುವುದು, ಬೇಕಿದ್ದನ್ನು ಕೊಡಿ ಎಂದು ಪ್ರಾರ್ಥಿಸುವುದು. ಸ್ತುತಿಸುವುದು ಮತ್ತು ಸ್ತುತಿಸುವಾಗ ಬೇಡಿಕೆಗಳನ್ನು ಮುಂದಿಡುವುದು. ಈ ಸೋಮರಸದ ಬಣ್ಣ ಹಳದಿಮಿಶ್ರಿತ ಕೆಂಪು. ಇದು ಮುಖ್ಯ ಹೋಮದ್ರವ್ಯ. ಹೀಗೆ ದೇವತೆಗಳಿಗೆ ಅರ್ಪಿಸಿದ ನಂತರ ಮಿಕ್ಕ 'ಸೋಮರಸ" ಪ್ರಸಾದ ರೂಪದಲ್ಲಿ ಸೇವಿಸುವುದು. ಇದೇ "ಸೋಮಪಾನ". ಈಗ ಸೋಮಲತೆ ಸಿಗದಿರುವುದರಿಂದ ಒಳ್ಳೆಯ ತುಪ್ಪವನ್ನು ಹೋಮದ್ರವ್ಯವಾಗಿ ಬಳಸುತ್ತಾರೆ.

ಪವಮಾನ ಸೂಕ್ತದ ಭಾಗ ಐಹಿಕ ಫಲಗಳನ್ನು ಕೊಡುವುದಂತೆ. ಇದು ರೋಗನಿವಾರಕದಂತೆ ಪಾಪನಿವಾರಕ. ದೇಹಕ್ಕೆ ರೋಗಗಳು. ಆತ್ಮಕ್ಕೆ ಪಾಪಗಳು. ರೋಗಗಳಿಗೆ ರೋಗನಿವಾರಕ ಔಷಧಗಳು. ತಿಳಿಯದೆ ಮತ್ತು ತಿಳಿದೂ ಮಾಡಿ ಶೇಖರಿಸಿರಿವ ಪಾಪಗಳಿಂದ ಬಿಡುಗಡೆಗಾಗಿ "ಪವಮಾನ ಹೋಮ". ಮೊದಲು ಶುಚಿ ಆಗುವುದು. ನಂತರ ಮತ್ತೊಮ್ಮೆ ಕೊಳೆ ಆಗದಂತೆ ಪ್ರಯತ್ನ ಮಾಡಲು ಅವಕಾಶ.

ಪೂಯಮಾನ ಸೂಕ್ತದ ಭಾಗ ದೇಹಾವಸಾನದ ನಂತರ ಮತ್ತೆ ಪುನರ್ಜನ್ಮ ಇಲ್ಲದಂತೆ ಮಾಡುವುದಂತೆ. ಜನನ-ಮರಣ ಚಕ್ರದಿಂದ ಹೊರಗಡೆ ತಂದು ಶಂಖ-ಚಕ್ರ-ಗದಾಧಾರಿಯಾದ ಶ್ರೀ ಮಹಾವಿಷ್ಣುವಿನ ಸಾನ್ನಿಧ್ಯ ಮತ್ತು ಮುಕ್ತಿ ಕೊಡುವಂತೆ ಇದರಲ್ಲಿ ಪ್ರಾರ್ಥನೆ. ಈ ಕಾರಣ ಇದು ರೋಗನಿರೋಧಕ ಚುಚ್ಚುಮದ್ದಿನಂತೆ. ಈ ವ್ಯಾಕ್ಸಿನೇಷನ್ ತೆಗೆದುಕೊಂಡರೆ ಮತ್ತೆ ಹುಟ್ಟುವ ರೋಗ ನಿವಾರಣೆ. ಇದು "ಪೂಯಮಾನ ಹೋಮ" ಮಾಡುವ ವಿಶೇಷತೆ.  

ಈ ಎರಡೂ ಸೂಕ್ತಗಳಲ್ಲಿ "ನಿರ್ಣಾಯಕ ಕಾನೂನು" ಮತ್ತು "ಕಾರ್ಯವಿಧಾನ ಕಾನೂನು" ಇರುವಂತೆ ಹೋಮ ದ್ರವ್ಯಗಳನ್ನು ತಯಾರಿಸುವುದು, ಹೋಮ ಮಾಡುವುದು ಮತ್ತು ಅವುಗಳ ಮಹತ್ವ ಮುಂತಾದ ಎಲ್ಲ ವಿಷಯಗಳೂ ಇವೆ. 

ಪ್ರತಿ ಜೀವಿಯೂ ತನ್ನ ಭಾರ ತಾನೇ ಹೊರಬೇಕು. ತನ್ನ ಮುಕ್ತಿಗೆ ತಾನೇ ಶ್ರಮಿಸಬೇಕು. ಅದು ಇನ್ನೊಬ್ಬರು ಕೊಡುವುದಲ್ಲ. "ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಾಶು:" ಎಂದು ಮಾತುಂಟು. (ಮಕ್ಕಳು ಮಾಡುವ ಪಿಂಡಪ್ರದಾನ ಇತ್ಯಾದಿಗಳು ಮಾತ್ರವೇ ಮುಕ್ತಿದಾಯಕವಲ್ಲ ಎಂದು ಭಾವ). ಬೇರೆಯವರು ನಮಗೆ ಮಾಡುವ ನೆರವು ಸಾಕಾಗುವುದಿಲ್ಲ. ಅವುಗಳು ಸ್ವಲ್ಪಮಟ್ಟಿಗೆ ಸಹಾಯಕವಾಗಬಹುದು. ಅಷ್ಟೇ. ನಮ್ಮ ಸಾಧನೆಯೇ ಮುಖ್ಯ. ಅದಕ್ಕೇ ಪೂಯಮಾನ ಹೋಮ ಮಾಡಿ ಕೋರಿಕೊಳ್ಳುವುದು. 

*****

ಈ ಹೋಮಗಳು ಕೇವಲ ವೈದಿಕ ಕ್ರಿಯೆಗಳು ಎಂದು ತಿಳಿಯಬಾರದು. ಇವುಗಳಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವಗಳೂ ಇವೆ. ಇಂತಹ ಮುಖ್ಯ ಹೋಮಗಳನ್ನು ಯಾರೂ ತಮ್ಮ ಪಾಡಿಗೆ ತಾವು ಮನೆಯ ಮಟ್ಟಿಗೆ ಸೀಮಿತವಾಗಿ ಮಾಡಿಕೊಳ್ಳುವುದಿಲ್ಲ. ಬಂಧು-ಬಾಂಧವರು, ಮಿತ್ರರು-ಹಿತೈಷಿಗಳನ್ನು ಆಮಂತ್ರಿಸುತ್ತಾರೆ. ಇಂತಹ ಕೆಲಸಗಳನ್ನು ಸರಿಯಾಗಿ ಮಾಡಲು ಜನಸಹಾಯ ಬಹಳ ಮುಖ್ಯ. ಬಂದವರು ಎರಡು-ಮೂರು ದಿನ ಒಟ್ಟಿಗೆ ಒಂದು ತಂಡವಾಗಿ ಕೆಲಸ ಮಾಡಬೇಕಾಗುತ್ತದೆ. ಊಟ-ಉಪಚಾರಗಳು ಇರುತ್ತವೆ. ಹಾಡು-ಹಸೆ, ಕಥೆ-ಪ್ರವಚನ ನಡೆಯುತ್ತವೆ. ಆದ ಕಾರಣ ಇವು ಒಂದು ರೀತಿಯ ವೈದಿಕ-ಸಾಮಾಜಿಕ-ಸಾಂಸ್ಕೃತಿಕ ಹಬ್ಬ. 

ಪವಮಾನ ಹೋಮದ ಆಚರಣೆ ಸಾಕಷ್ಟು ವ್ಯಾಪಕವಾಗಿ ಉಂಟು. ಅಲ್ಲಲ್ಲಿ ಈ ಹೋಮ ನಡೆಯುವುದು ಕೇಳಿ ಬರುತ್ತದೆ. ಆದರೆ "ಪೂಯಮಾನ ಹೋಮ" ಆಚರಣೆ ಅಷ್ಟು ವ್ಯಾಪಕವಾಗಿಲ್ಲ. ಕೆಲವು ಪಂಗಡಗಳಲ್ಲಿ, ವಿಶೇಷವಾಗಿ ಅದ್ವೈತಿಗಳಲ್ಲಿ, ಇದು ಮೂರು ದಿನದ ಕಾರ್ಯಕ್ರಮ. ಏಕಾದಶಿಯ ದಿನ ಪವಮಾನ ಹೋಮ. ದ್ವಾದಶಿಯ ದಿನ ಪೂಯಮಾನ ಹೋಮ. ಹೀಗೆ ದ್ವಂದ್ವವಾಗಿ ಮಾಡುವ ಪದ್ಧತಿ ಇದೆ. ದ್ವೈತಿಗಳಲ್ಲಿ ಏಕಾದಶಿಯ ದಿನ ಹೋಮ ಮಾಡುವುದಿಲ್ಲ. 

*****

ಈಗಿನ ನಗರಗಳ ಮನೆಗಳಲ್ಲಿ ಹೋಮ-ಹವನದಂತಹ ಕಾರ್ಯಕ್ರಮ ಮಾಡುವುದು ಅಸಾಧ್ಯವೇ. ಯಾವುದಾದರೂ ಪಾರ್ಟಿ ಹಾಲ್ ಅಥವಾ ಛತ್ರಗಳಲ್ಲಿ ನಡೆಸಬಹುದು. ಆದರೆ ಒಬ್ಬ ಮಿತ್ರ ದಂಪತಿಗಳು ಕಳೆದ ವಾರ ಇಂತಹ ಕಾರ್ಯಕ್ರಮವೊಂದನ್ನು ಅಧ್ಭುತವಾಗಿ, ಅಚ್ಚುಕಟ್ಟಾಗಿ ತಮ್ಮ ಮನೆಯಲ್ಲಿಯೇ ನಡೆಸಿದರು. ಆ ಕಾರಣ ನಮಗೂ ಅದರಲ್ಲಿ ಭಾಗವಹಿಸುವ ಆಪೂರ್ವ ಅವಕಾಶ ಸಿಕ್ಕಿತು. ಅವರಿಗೆ ಅನೇಕ ವಂದನೆಗಳು. 

ಇದೊಂದು ಅಪರೂಪದ ಕಾರ್ಯಕ್ರಮ ಆದುದರಿಂದ  ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಉಂಟಾಯಿತು. ಅನೇಕ ಅನುಮಾನಗಳೂ, ಪ್ರಶ್ನೆಗಳೂ ಹುಟ್ಟಿ ನಿಂತವು. ಇಂತಹ ಸಂದರ್ಭದಲ್ಲಿ ನೆನಪಾದ ಹೆಸರು ವೇದಬ್ರಹ್ಮಶ್ರೀ ಡಾ. ಎಸ್. ಆರ್. ನರಸಿಂಹ ಮೂರ್ತಿ ಅವರದು. ಅವರು ಈ ಕ್ಷೇತ್ರದಲ್ಲಿ ಮಾಡಿರುವ ಕೆಲಸ, ಪ್ರಕಟಿಸಿರುವ ಗ್ರಂಥಗಳು, ತಯಾರು ಮಾಡಿರುವ ಶಿಷ್ಯವೃಂದ, ಇವೆಲ್ಲವೂ ಒಂದು ವಿಸ್ಮಯವೇ ಸರಿ. ಅವರೊಡನೆ ಮಾತನಾಡಿದಾಗ ಹಳೆಯ ಪರಿಚಯವೇ ಇಲ್ಲದಿದ್ದರೂ ಅತ್ಯಂತ ಸೌಜನ್ಯದಿಂದ ವಿಷಯಗಳನ್ನು ತಿಳಿಸಿಕೊಟ್ಟರು. ಅವರಿಗೆ ಸಾದರ ಪ್ರಣಾಮಗಳು. 
*****

ಇಂತಹ ಕಾರ್ಯಕ್ರಮ ನಡೆಯುವುದು ತಿಳಿದರೆ ತಪ್ಪಿಸಿಕೊಳ್ಳಬಾರದು. "ಸತ್ಯನಾರಾಯ ಪೂಜೆ" ನಡೆದರೆ ಆಹ್ವಾನವಿಲ್ಲದಿದ್ದರೂ ಹೋಗಬಹುದು ಅನ್ನುತ್ತಾರೆ. ಅದಕ್ಕೆ "ಪೂಯಮಾನ ಹೋಮ" ಕಾರ್ಯಕ್ರಮವನ್ನೂ ಸೇರಿಸಿಕೊಳ್ಳಬಹುದು!

Saturday, July 26, 2025

ಲಾಭವೂ ನಿನ್ನದೇ; ನಷ್ಟವೂ ನಿನ್ನದೇ!


ಮನುಷ್ಯನಿಗೆ ಬಹಳ ಮುಖ್ಯವಾದ ಮೂರು ಸಂಪತ್ತುಗಳು ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯ. ಈ ಮೂರು ಸಂಪತ್ತುಗಳು ಎಲ್ಲರಿಗೂ ಸಿಕ್ಕುವುದಿಲ್ಲ. ಏಕೆ ಸಿಕ್ಕುವುದಿಲ್ಲ? ಇದಕ್ಕೆ ಕಾರಣಗಳನ್ನು ಹಿಂದೆ "ಸಂಪತ್ತು ಕಳೆಯುವ ಕಾರಣಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದ್ದೆವು. "ಕೆಸರಿಂದ ಕೆಸರ ತೊಳೆದಂತೆ" ಎಂಬ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ  ಇದರ ಮುಂದಿನ ಭಾಗವನ್ನೂ ನೋಡಿದ್ದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಿ ನೆನಪಿಸಿಕೊಳ್ಳಬಹುದು. 

ನಾವು ಮಾಡುವ ತಪ್ಪುಗಳಿಗೆ ಸಮಾಜದಲ್ಲಿ ಶಿಕ್ಷೆ ಎಂಬುದೊಂದಿದೆ. ಕಾನೂನು-ಕಟ್ಟಲೆಗಳು ಪ್ರತಿಯೊಂದು ತಪ್ಪಿಗೂ ಅದಕ್ಕೆ ಪರ್ಯಾಯವಾದ ಶಿಕ್ಷೆಯನ್ನು ನಿಗದಿ ಪಡಿಸಿವೆ. ಒಂದೇ ತರಹದ ತಪ್ಪುಗಳಾದರೂ ಅವುಗಳ ತೀವ್ರತೆ ಗಮನಿಸಿ ನ್ಯಾಯಾಧೀಶರು ಶಿಕ್ಷೆ ನಿಗದಿ ಪಡಿಸುತ್ತಾರೆ. ಇದೇ ರೀತಿ ನಮ್ಮ ನಂಬಿಕೆಗಳ ಪ್ರಕಾರ ದುಷ್ಕರ್ಮಗಳಿಗೆ ಶಿಕ್ಷೆ ಉಂಟು. ಇಲ್ಲಿಯೂ ಅಂತಹ ಶಿಕ್ಷಾರ್ಹ ತಪ್ಪುಗಳನ್ನು ಮಾಡುವವನ ಪರಿಸ್ಥಿತಿಯನ್ನು ಕಂಡು ಅನುಭವಿಸಬೇಕಾದ ತೀವ್ರತೆ ನಿರ್ಧಾರ ಆಗುತ್ತದೆ. 

ಪರಮಾತ್ಮನ ಸೃಷ್ಟಿಯಲ್ಲಿ ಸರಿ-ತಪ್ಪುಗಳಿಗೆ ವೈದೃಶ್ಯ ಅಥವಾ ಪ್ರತಿಭಾರ ಇರುವುದಿಲ್ಲ. (ಇದನ್ನು ಇಂಗ್ಲಿಷಿನಲ್ಲಿ ಸೆಟ್-ಆಫ್ ಅನ್ನುತ್ತಾರೆ). ಉದಾಹರಣೆಗೆ: ಒಬ್ಬನು ಹತ್ತು ತೂಕ ಪುಣ್ಯ ಮಾಡಿ ಐದು ತೂಕ ಪಾಪ ಮಾಡಿದ್ದಾನೆ ಎನ್ನುವ. "ಐದು ತೂಕ ಪಾಪಕ್ಕೆ ಐದು ತೂಕ ಪುಣ್ಯ ವಜಾ ಹಾಕಿಕೊಳ್ಳಿ. ಮಿಕ್ಕಿದ ಐದು ತೂಕದ ಪುಣ್ಯಕ್ಕೆ ಸುಖ ಕೊಡಿ. ದುಃಖ ಬೇಡ" ಎಂದು ಅವನು ಕೇಳಿದರೆ ಅದನ್ನು ಒಪ್ಪಿಕೊಳ್ಳುವ ಹಾಗಿಲ್ಲ. ಐದು ತೂಕ ಪಾಪದ ದುಃಖ ಅನುಭವಿಸಲೇ ಬೇಕು. ಅಂತೆಯೇ, ಹತ್ತು ತೂಕ ಪುಣ್ಯದ ಫಲವನ್ನೂ ಉಣ್ಣಬೇಕಾಗುತ್ತದೆ. ಹೀಗಾಗಿ ಮಾಡಿದ ಪ್ರತಿ ಕರ್ಮವೂ ಅದಕ್ಕೆ ನಿಗದಿಯಾದ ಸುಖ ಅಥವಾ ದುಃಖ ತಂದೇ ತರುತ್ತದೆ. ತಪ್ಪಿಸಿಕೊಳ್ಳುವಹಾಗಿಲ್ಲ. 

ಹಿಂದೆ ಒಂದು ಸಂಚಿಕೆಯಲ್ಲಿ "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಫಲವು, ಅಸುನಾಥ ಹರಿಯೇ ಪೊರೆಯೊ" ಎನ್ನುವುದನ್ನು ಚರ್ಚಿಸಿದ್ದೆವು. ಇದನ್ನು ಇನ್ನೂ ಸ್ವಲ್ಪ ವಿವರವಾಗಿ ನೋಡಿದರೆ ಒಳ್ಳೆಯದು ಎಂದು ಮಿತ್ರರೊಬ್ಬರು ಸೂಚಿಸಿದ್ದಾರೆ. ಅದನ್ನು ಈಗ ನೋಡೋಣ. 

*****

ಏನೋ ಒಂದು ಕಾರಣದಿಂದ, ತಿಳಿದೋ ತಿಳಿಯದೆಯೋ ಒಂದು ತಪ್ಪು ಆಗಿದೆ. ಮಳೆಯಲ್ಲಿ ನೆನೆದುವು ಅನ್ನೋಣ. ಅದರಿಂದ ಒಂದು ಖಾಯಿಲೆಯೋ, ಜ್ವರವೋ ಬಂತು. ಆಯಿತು. ಅದನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ? ಇರುತ್ತದೆ. ವೈದ್ಯರ ಬಳಿ ಹೋದರೆ ರೋಗಕ್ಕೆ ತಕ್ಕ ಮದ್ದು ಕೊಡುತ್ತಾರೆ. ಆ ಮದ್ದಿನಿಂದ ಖಾಯಿಲೆ ಗುಣ ಆಗಬಹುದು. ಆದರೆ ಸರಿಯಾದ ವೈದ್ಯರ ಬಳಿಗೆ ಹೋಗಬೇಕು. "ಸರಿಯಾದ ವೈದ್ಯ ಸಿಗುವುದು, ಅನುಕೂಲಕರನಾದ ಗಂಡ ಅಥವಾ ಅನುಕೂಲಕರಳಾದ ಹೆಂಡತಿ ಸಿಗುವುದು, ಇವೆರಡೂ ಒಂದು ರೀತಿಯ ಲಾಟರಿ" ಎನ್ನುವುದು ಅನೇಕರ ಅನುಭವದಿಂದ ತಿಳಿದ ಸತ್ಯ. ಇದರ ಫಲಿತಾಂಶ ಗೊತ್ತಾಗುವುದು ಕೆಲ ಕಾಲದ ನಂತರವೇ. ಥರ್ಮಾಮೀಟರ್ ನೋಡಿ ಜ್ವರ ಕಂಡುಹಿಡಿಯುವಂತೆ ಇದಕ್ಕೆ ಇನ್ನೂ ಯಾವುದೇ ಮೀಟರ್ ಬಂದಿಲ್ಲ. 

ಒಳ್ಳೆಯ ವೈದ್ಯರೇ ಸಿಕ್ಕಿದರು ಎನ್ನೋಣ. ವೈದ್ಯರು ಬರೆದುಕೊಟ್ಟ ಚೀಟಿಯಂತೆ ಸರಿಯಾದ ಮದ್ದೂ ಸಿಗಬೇಕು. ಇಂದಿನ ಮಾರುಕಟ್ಟೆಯಲ್ಲಿ ನಕಲಿ ವೈದ್ಯರೂ ಉಂಟು. ಅದ್ಕಕಿಂತ ಹೆಚ್ಚಾಗಿ ನಕಲಿ ಔಷಧಗಳೂ ಉಂಟು. ಈಗಿನ ಮದ್ದುಗಳಿಗೆ ಒಂದು ವಿಶೇಷ ಗುಣವಿರುತ್ತದೆ. ಔಷಧದ ಬಾಟಲಿನ ಮೇಲೆ ಅಂಟಿಸಿದ ಚೀಟಿಯಲ್ಲಿ ಎರಡು ಪಟ್ಟಿಗಳಿರುತ್ತವೆ. ಮೊದಲನೆಯದು ಅದು ಗುಣಪಡಿಸುವ ಖಾಯಿಲೆಗಳು. ಎರಡನೆಯದು ಅದರಿಂದ ಆಗಬಹುದಾದ ಅಡ್ಡ ಪರಿಣಾಮಗಳು (ಸೈಡ್ ಎಫೆಕ್ಟ್ಸ್). ಅನೇಕ ವೇಳೆ ಮೊದಲಿನ ಪೆಟ್ಟಿಗಿಂತ ಎರಡನೆಯದೇ ದೊಡ್ಡದಿರುತ್ತದೆ. ವೈದರಿಗೂ ಇದು ಚೆನ್ನಾಗಿ ಗೊತ್ತು. ಆದ್ದರಿಂದ ಮದ್ದು ಕೊಡುವಾಗಲೇ ಜೊತೆಯಲ್ಲಿ ಇನ್ನೊಂದನ್ನು ಕೊಟ್ಟಿರುತ್ತಾರೆ. "ಕೆಲವರಿಗೆ ಈ ಮದ್ದಿನಿಂದ ಹೊಟ್ಟೆ ನೋವು ಬರುತ್ತದೆ. ಹಾಗೆ ಬಂದರೆ ಎರಡನೆಯ ಮದ್ದು ತೆಗೆದುಕೊಳ್ಳಿ" ಎಂದು ಅವರೇ ಹೇಳಿ ಉಪಕಾರ ಮಾಡಿರುತ್ತಾರೆ. 

ಪಾಪ ಕರ್ಮ ಮಾಡಿದ್ದೋ, ಅದಾಗದೆ ಆಯಿತೋ, ಒಟ್ಟಿನಲ್ಲಿ ಅಂಟಿಕೊಂಡಿದೆ. ಅಂಟಿರುವುದು ಗೊತ್ತಾಯಿತು. ಅದಕ್ಕೆ ಪರಿಹಾರ ಹೇಳುವವರು ಒಬ್ಬರು ಬೇಕು. ಅವರು ಸರಿಯಾಗಿರಬೇಕು. ಅವರು ಹೇಳಿದ ಪರಿಹಾರವೂ ಸರಿಯಾಗಿರಬೇಕು. ಯಾವುದೋ ಒಂದು ಹೋಮ ಮಾಡಿ ಎಂದರು. ಅದು ಸರಿಯಾದ ಪ್ರಾಯಶ್ಚಿತ್ತ ಆಗಿರಬೇಕು. ಕ್ರಮವಾಗಿ ಮಾಡಿಸುವವರು ಸಿಗಬೇಕು. ತಂದ ಪದಾರ್ಥಗಳು ಶುದ್ಧವಾಗಿರಬೇಕು. ಮಾಡುವಾಗ ಭಾವ ಶುದ್ದಿ ಇರಬೇಕು. ಎಲ್ಲವೂ ಸರಿಯಾಗಿ ಆಗಬೇಕು. ಆಗ ಸರಿಯಾದ ಪರಿಹಾರ ಸಿಗಬಹುದು. 

ಮಾಡಹೊರಟಿದ್ದು ಒಳ್ಳೆಯ ಕೆಲಸವೇ. ಆದರೆ ಇವುಗಳಲ್ಲಿ ಎಲ್ಲಿಯೋ, ಏನೋ, ಎಡವಟ್ಟಾಯಿತು. ಮಾಡಿಸುವವರು, ತಿದ್ದುವವರೇ ಎಡವಿದರು. ಪದಾರ್ಥಗಳಲ್ಲಿ ಕಂಡೋ, ಕಾಣದೆಯೋ ದೋಷ ಇತ್ತು. ಮಾಡುವಾಗ ಮನಸ್ಸು ಚಂಚಲ ಆಯಿತು. ಪರಿಣಾಮ ಏನು?

ಕೆಸರಿನಿಂದ ಕೊಳಕಾದ ವಸ್ತ್ರ ತೊಳೆಯಲು ಕೊಳಕು ನೀರು ಉಪಯೋಗಿಸಿದಂತೆ ಆಯಿತು. ಒಂದು ದುಷ್ಕರ್ಮ ಕಳೆಯಲು ಏನೋ ಮಾಡ ಹೋಗಿ ಮತ್ತೊಂದು ದುಷ್ಕರ್ಮ ಅಂಟಿಕೊಂಡಿತು. ಬಟ್ಟೆ ಶುದ್ಧವಾಗುವ ಬದಲು ಇನ್ನಷ್ಟು ಕೊಳಕಾಯಿತು. ಕೆಸರಿಂದ ಕೆಸರು ತೊಳೆದಂತೆ ಆಯಿತು. ಇದನ್ನೇ ದಾಸರು "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು" ಎಂದರು. ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ?

*****

ನಮ್ಮ ಮನೆಯ ಎದುರುಗಡೆ ಎರಡು ಅಂಗಡಿಗಳಿವೆ. ಮೊದಲನೆಯದು ಯಜಮಾನನೇ ನಡೆಸುವ ಅಂಗಡಿ. ಬೆಳಗಿನಿಂದ ಸಂಜೆಯವರೆಗೆ ಅವನು ಎಲ್ಲ ವ್ಯವಹಾರ ನಡೆಸುತ್ತಾನೆ. ದಿನದ ಕೊನೆಯಲ್ಲಿ ಲೆಕ್ಕ ನೋಡುತ್ತಾನೆ. ವಹಿವಾಟಿನಲ್ಲಿ ಬಂದ ಹಣವನ್ನೆಲ್ಲಾ ತಿಜೋರಿಯಲ್ಲಿ ಭದ್ರವಾಗಿಡುತ್ತಾನೆ. ವರ್ಷದ ಕೊನೆಯಲ್ಲಿ ಎಲ್ಲಾ ಜಮಾ-ಖರ್ಚು ತಾಳೆ ಹಾಕುತ್ತಾನೆ. ಖರ್ಚಿಗಿಂತ ಆದಾಯ ಜಾಸ್ತಿಯಾದರೆ ಅವನಿಗೆ ಲಾಭ. ಆದಾಯಕ್ಕಿಂತ ಖರ್ಚು ಜಾಸ್ತಿ ಆದರೆ ಅವನಿಗೆ ನಷ್ಟ. ರಾತ್ರಿ ಅಂಗಡಿ ಬಾಗಿಲು ಹಾಕಿದ್ದಾಗ ಕಳ್ಳರು ನುಗ್ಗಿ ಹಣ ದೋಚಿದರೆ ಅವನ ಲಾಭವೆಲ್ಲ ಗೋತ. ಯಾವಾಗಲೂ ಲಾಭದ ಚಿಂತೆ. ನಷ್ಟದ ಭೀತಿ. 

ಎರಡನೆಯ ಅಂಗಡಿಯನ್ನೂ ಒಬ್ಬ ನಡೆಸುತ್ತಿದ್ದಾನೆ. ಅದು ಅವನ ಯಜಮಾನನ ಅಂಗಡಿ. ಯಜಮಾನ ಎಲ್ಲಿಯೋ ಇದ್ದಾನೆ. ಎಲ್ಲ ಭಾರ ಇಲ್ಲಿ ನಡೆಸುವವನ ಮೇಲೆ ಬಿಟ್ಟಿದ್ದಾನೆ. ಇವನು ನಿರ್ವಂಚನೆಯಿಂದ ನಡೆಸುತ್ತಿದ್ದಾನೆ. ಮೊದಲ ಅಂಗಡಿಯವನಂತೆ ಇವನೂ ಎಲ್ಲಾ ಮಾಡುತ್ತಾನೆ. ಸಂಜೆ ಹಣ ತಿಜೋರಿಯಲ್ಲಿ ಭದ್ರ ಮಾಡಿ ಕೀಲಿಕೈ ಯಜಮಾನನಿಗೆ ಒಪ್ಪಿಸುತ್ತಾನೆ. "ಲಾಭವೂ ನಿನ್ನದೇ. ನಷ್ಟವೂ ನಿನ್ನದೇ. ನನ್ನದೇನಿದ್ದರೂ ನ್ಯಾಯವಾಗಿ ವ್ಯವಹಾರ ಮಾಡುವುದು" ಎಂದು ನಡೆಯುತ್ತಾನೆ. ಅಂಗಡಿ ಅವನದಲ್ಲ ಎನ್ನುವ ಪ್ರಜ್ಞೆ ಅವನಿಗಿದೆ. ರಾತ್ರಿ ಹಣ ಕಳುವಾದರೆ ಅವನ ಹಣವಲ್ಲ. ಲಾಭ ಅಥವಾ ನಷ್ಟ ಅವನದಲ್ಲ. ಮೊದಲನೆಯ ಅಂಗಡಿಯವಂತೆ ಇವನಿಗೆ ಲಾಭ-ನಷ್ಟದ ಚಿಂತೆಯಿಲ್ಲ. 

ಬ್ಯಾಂಕಿನಿಂದ ಸಾಲ ತಂದಿದ್ದಾಯಿತು. ಈಗ ತೀರಿಸಲೇಬೇಕು. ತೀರಿಸದಿದ್ದರೆ ವಸೂಲಿ ತಂಡದವರು ಪ್ರಾಣ ತಿನ್ನುತ್ತಾರೆ. ನೋಟೀಸು ಕೊಡುತ್ತಾರೆ. ಆಸ್ತಿ ಹರಾಜು ಹಾಕುತ್ತಾರೆ. ಬಂದಿಖಾನೆಗೂ ದೂಡಬಹುದು. ಸಾಲ ತರಬಾರದಿತ್ತು. ತಂದಾಯಿತು. ಈಗ ಏನು ಮಾಡುವುದು?

ಇದಕ್ಕೂ ಒಂದು ಪರಿಹಾರ ಇದೆ. ಬ್ಯಾಂಕಿನವರ ಬಳಿ ನಮ್ಮ ಕಷ್ಟ-ಸುಖ ಹೇಳಿಕೊಳ್ಳಬೇಕು. ಅವರು ಒಪ್ಪಬಹುದು. ಒಪ್ಪದೇ ಇರಬಹುದು. ಪ್ರಯತ್ನವನ್ನಂತೂ ಮಾಡಬಹುದು. ಅವರು ಒಪ್ಪಿಕೊಂಡು "ಹೋಗಲಿ ಬಿಡಿ. ನಿಮಗೆ ಹಿಂದೆ ಕೊಡುವ ಶಕ್ತಿ ಇಲ್ಲ. ಸಾಲ ಮನ್ನಾ ಮಾಡಿದ್ದೇವೆ" ಅಂದರೆ ಈ ಸಾಲದಿಂದ ಬಿಡುಗಡೆ!

*****

"ದುಷ್ಕರ್ಮ ಪರಿಹರಿಸೋ, ಸ್ವಾಮಿ" ಎಂದು ದಾಸರು ಕೇಳಿರುವುದೂ ಇದರಂತೆಯೇ. ಅವನು ಯಜಮಾನ. ನಾನು ಕೇವಲ ಅಂಗಡಿ ನಡೆಸುವ ಎರಡನೆಯ ಅಂಗಡಿಯವನಂತೆ ಎನ್ನುವುದು ಮರೆತು ಮೊದಲಿನ ಅಂಗಡಿಯವಂತೆ ಬದುಕಿದೆವು. ಲಾಭ-ನಷ್ಟ ನಮಗೆ ಅಂಟಿಕೊಂಡಿತು. ಎರಡನೆಯವನಂತೆ ಇದ್ದಿದ್ದರೆ ಆಗ ನಿಷ್ಕಾಮ ಕರ್ಮ ಆಗುತ್ತಿತ್ತು. ಈಗ ಈ ಭಾರ ಹೊರಲು ಆಗುತ್ತಿಲ್ಲ. ಅವನನ್ನೇ ಮೊರೆ ಹೋಗಿ ಕೇಳುವುದು. "ದಯವಿಟ್ಟು ಈ ಸಾಲ ಮನ್ನಾ ಮಾಡು. ಈ ದುಷ್ಕರ್ಮ ಪರಿಹಾರ ಮಾಡು" ಎಂದು ಕೂಗುವುದು. 

ಅವನು ಒಪ್ಪಬಹುದು. ಒಪ್ಪಿಯಾನು. ಅವನೋ, "ಕರ್ತು೦, ಆಕರ್ತು೦, ಅನ್ಯಥಾ ಕರ್ತು೦ ಶಕ್ತ:". ಏನನ್ನು ಬೇಕಾದರೂ ಮಾಡಬಲ್ಲ. ಮಾಡಿದ್ದನ್ನು ಅಳಿಸಬಲ್ಲ. ಮತ್ತೇನನ್ನೋ ಮಾಡಬಲ್ಲ.  ಸಾಲ ಮನ್ನಾ ಮಾಡಬಹುದು. ಹೊತ್ತಿರುವ ಪಾಪ ಕರ್ಮಗಳ ರಾಶಿಯನ್ನು ಕ್ಷಣಾರ್ಧದಲ್ಲಿ ಸುತ್ತು ಭಸ್ಮ ಮಾಡಿ ಹೆಗಲಿನ ಭಾರದಿಂದ ಮುಕ್ತಿ ಕೊಡಬಹುದು. 

*****

ನಂಬುವವರು ನಂಬಬಹುದು. ಬಿಡುವವರು ಬಿಡಬಹುದು. ಇದು ಒಂದು ರೀತಿಯ ತರ್ಕ. ಅನೇಕರು ಪುನರ್ಜನ್ಮವನ್ನು ನಂಬುವುದಿಲ್ಲ. ದೇವರಿದ್ದಾನೆ ಅನ್ನುವುದನ್ನೂ ನಂಬುವುದಿಲ್ಲ. ಅವರವರಿಗೆ ಬಿಟ್ಟದ್ದು. 

ಎರಡನೇ ಅಂಗಡಿಯವನಂತೆ ಜೀವನ ನಡೆಸಿದವನಿಗೆ ಒಂದು ಖಚಿತವಾದ ಲಾಭ ಉಂಟು. ಈ ಜನ್ಮದಲ್ಲಿ ಬ್ಲಡ್ ಪ್ರೆಶರ್ ಚೆನ್ನಾಗಿರುತ್ತದೆ. ಊಟ ಸೇರುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ದಿನಗಳು ಚೆನ್ನಾಗಿ ಕಳೆಯುತ್ತವೆ. ಮುಂದಿನದನ್ನು ಮುಂದೆ ನೋಡಬಹುದು! 

Sunday, July 6, 2025

ಐದು ರೀತಿಯ ಮಕ್ಕಳು


ಹಿಂದಿನ ಸಂಚಿಕೆಗಳಲ್ಲಿ ಅಷ್ಟ ಭೋಗಗಳು, ಅಷ್ಟ ಭಾಗ್ಯಗಳು ಮತ್ತು ಅಷ್ಟ ಐಶ್ವರ್ಯಗಳು ಎಂಬ ವಿಷಯಗಳ ಬಗ್ಗೆ ಸ್ವಲ್ಪಮಟ್ಟಿಗೆ ನೋಡಿದ್ದೆವು. ಅಷ್ಟ ಐಶ್ವರ್ಯಗಳಲ್ಲಿ ಸಂತಾನವೂ ಒಂದು ಎಂದು ಚರ್ಚಿಸಿದ್ದೆವು. (ಈ ಕೊನೆಯ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ).  ಅನೇಕ ದಂಪತಿಗಳಿಗೆ ಎಲ್ಲ ಭೋಗ-ಭಾಗ್ಯ-ಐಶ್ವರ್ಯಗಳು ದೊರಕಿದ್ದರೂ ಸಂತಾನ ಇಲ್ಲ ಎನ್ನುವ ಒಂದು ಕೊರತೆ ಕಾಡುವುದು ಉಂಟು. ಅನೇಕ ಪುರಾಣದ ಕಥೆಗಳು ಪ್ರಾರಂಭವಾಗುವುದು ಈ ಕೊರತೆಯ ಕಾರಣದಿಂದಲೇ. ಮತ್ತೆ ಕೆಲವು ಕಥೆಗಳು ಪ್ರಾರಂಭವಾಗುವುದು ಈ ಸಂತಾನದ ಕಾರಣದಿಂದ ಉದ್ಭವವಾಗುವ ಸಮಸ್ಯೆಗಳಿಂದಲೂ ಹೌದು. ಹೀಗೆ, ಇದ್ದರೂ ಸಮಸ್ಯೆ, ಇಲ್ಲದಿದ್ದರೂ ಸಮಸ್ಯೆ ಸೃಷ್ಟಿಸುವುದು ಈ ಸಂತಾನವೆಂಬ ಒಂದು ಆಸ್ತಿಯ ವಿಶೇಷತೆ. ಕೆಲವೊಮ್ಮೆ ಈ ಆಸ್ತಿ ಭಾದ್ಯತೆ ಆಗುವುದೂ ಸಾಧ್ಯ. ಹೀಗೂ ಉಂಟು. ಹಾಗೂ ಉಂಟು! 

ನಮ್ಮ ಎರಡು ಮಹಾಕಾವ್ಯಗಳು ಮತ್ತು ವಾಂಗ್ಮಯದ ಎರಡು ಕಣ್ಣುಗಳಾದ ರಾಮಾಯಣ ಮತ್ತು ಮಹಾಭಾರತ ನಿಜವಾಗಿ ಪ್ರಾರಂಭವಾಗುವುದು ಈ ಸಮಸ್ಯೆಯಿಂದಲೇ. ರಾಮಾಯಣದ ತಿರುಳು ದಶರಥನ ಮಕ್ಕಳಿಲ್ಲವೆಂಬ ಕೊರಗು ಮತ್ತು ಪುತ್ರಕಾಮೇಷ್ಟಿಯಿಂದ ಹುಟ್ಟುತ್ತದೆ. ಮಹಾಭಾರತದ ಅಸಲಿ ಪ್ರಾರಂಭ ಧೃತರಾಷ್ಟ್ರನ ನೂರಾಒಂದು ಮಕ್ಕಳಿಂದ! 

***** 

ನಮ್ಮ ಬಾಲ್ಯದ ಕಾಲದಲ್ಲಿ ಹಿರಿಯರು ಸಂವಾದದಲ್ಲಿ ತೊಡಗಿದಾಗ ಮೊದಲನೇ ಪ್ರಶ್ನೆ "ಮಕ್ಕಳೆಷ್ಟು?" ಎನ್ನುವುದೇ ಆಗಿರುತ್ತಿತ್ತು. ಕೆಲವರಿಗೆ ಹೆಚ್ಚು ಮಕ್ಕಳು. ನಾಲ್ಕು, ಆರು, ಎಂಟು ಮಕ್ಕಳಿರುತ್ತಿದ್ದುದು ಸಾಮಾನ್ಯವಾಗಿರುತ್ತಿತ್ತು. ಹೆಚ್ಚು ಮಕ್ಕಳಿರುವವರಿಗೆ ಕಡಿಮೆಯಿರುವವರು ಸಮಾಧಾನ ಹೇಳುವಂತೆ "ಇರಲಿ ಬಿಡಿ. ಯಾರಾದರೂ ಕೇಳುವುದು 'ಎಷ್ಟು ಮಕ್ಕಳು?' ಎಂದಲ್ಲವೇ? 'ಎಷ್ಟು ಆಸ್ತಿ?' ಎಂದು ಯಾರೂ ಕೇಳುವುದಿಲ್ಲವಲ್ಲ?" ಎನ್ನುತ್ತಿದ್ದರು. ಯಾರಿಗಾದರೂ ಮಕ್ಕಳಿಲ್ಲದಿದ್ದರೆ ಇದ್ದವರು ಇದೇ ರೀತಿ "ಆಗುತ್ತವೆ ಬಿಡಿ. ದೇವರು ಕಣ್ಣು ಬಿಟ್ಟು ನೋಡಿದರೆ ಎಷ್ಟು ಹೊತ್ತು?" ಅನ್ನುತ್ತಿದ್ದರು. ಈಗ ಮಕ್ಕಳ ವಿಷಯ ಮಾತಾಡುವುದೇ ಒಂದು ಕಷ್ಟದ ಕೆಲಸ. ಅದರ ಪ್ರಸ್ತಾಪ ಮಾಡಬೇಕೋ ಮಾಡಬಾರದೋ ಗೊತ್ತಾಗುವುದಿಲ್ಲ. ರಾಜಕೀಯ ವಿಷಯಗಳು ಮತ್ತು ಹವಾಮಾನ ವಿವರದಿಂದ ಮಾತುಕತೆ ಪ್ರಾರಂಭಿಸುವುದು ಉಭಯತ್ರರಿಗೂ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು. 

ನಮ್ಮ ದೇಶ ಸ್ವಾತಂತ್ರ್ಯ ಪಡೆದಾಗಿನಿಂದ "ಅತಿಸಂತಾನ" ಒಂದು ದೊಡ್ಡ ಸಮಸ್ಯೆ ಎಂದು ಗುರುತಿಸಿದ ಸರ್ಕಾರ "ಮಿತಸಂತಾನ" ಎನ್ನುವ ಕಾರ್ಯಕ್ರಮ ರೂಪಿಸಿತು. ಅರವತ್ತರ ದಶಕದಲ್ಲಿ "ಒಂದು ಎರಡು ಬೇಕು; ಮೂರು ಸಾಕು" ಎನ್ನುವ ಘೋಷಣೆ ಚಾಲ್ತಿಯಲ್ಲಿತ್ತು. ಎಪ್ಪತ್ತರ ದಶಕದಲ್ಲಿ ಅದು "ಆರತಿಗೊಬ್ಬ ಮಗಳು; ಕೀರುತಿಗೊಬ್ಬ ಮಗ" ಎಂದು ಬದಲಾಯಿತು. ಎಲ್ಲಾ ಸರ್ಕಾರೀ ಕಟ್ಟಡಗಳ ಮೇಲೆ ಈ ಘೋಷವಾಕ್ಯಗಳು ರಾರಾಜಿಸಿದವು. "ಸ್ತ್ರೀ ಸ್ವಾತಂತ್ಯವಾದಿಗಳು" ಎರಡನೆಯ ಘೋಷಣೆಗೆ ನ್ಯಾಯವಾಗಿಯೇ ಆಕ್ಷೇಪಿಸಿದರು. "ಮಗಳಿಂದ ಕೀರ್ತಿ ಇಲ್ಲವೇ?" ಎಂದು ಪ್ರಬಲವಾಗಿ ಪ್ರತಿರೋಧ ಬಂತು. "ಆರೋಗ್ಯ ಮತ್ತು ಕುಟುಂಬ ಯೋಜನೆ" ಇಲಾಖೆ ತನ್ನ ಹೆಸರು ಬದಲಾಯಿಸಿಕೊಂಡು "ಆರೋಗ್ಯ ಮತ್ತು ಕುಟುಂಬ ಕಲ್ಯಾಣ" ಇಲಾಖೆ ಆಯಿತು. ಎಂಭತ್ತರ ದಶಕದಲ್ಲಿ ಸರ್ಕಾರ ಕಷ್ಟ ಪಡುವ ಕಾಲ ಕಳೆದು ಜನರೇ "ಒಂದು ಮಗು ಸಾಕು" ಎನ್ನತೊಡಗಿದರು. ತೊಂಬತ್ತರ ದಶಕದಲ್ಲಿ "ಇರುವುದಕ್ಕಿಂತ ಇಲ್ಲದಿರುವುದೇ ಒಳ್ಳೆಯದು" ಎಂದು ಬಾಯಲ್ಲಿ ಹೇಳದಿದ್ದರೂ ಆಚರಣೆಯಲ್ಲಿ ತಂದರು. 

ಹೊಸ ಶತಮಾನದಲ್ಲಿ ಇನ್ನೂ ಪ್ರಚಂಡ ಬದಲಾವಣೆಗಳಾದುವು. ಸಮಸ್ಯೆಯ ಮೂಲಕ್ಕೇ ಕೊಡಲಿ ಪೆಟ್ಟು ಬೀಳತೊಡಗಿತು. ಮದುವೆಯೆನ್ನುವುದು ಇದ್ದರೆ ತಾನೇ ಮಕ್ಕಳು ಎನ್ನುವ ಸಮಸ್ಯೆ? ಮದುವೆಯೇ ಬೇಡ. ಹಾಗೆಯೇ ಜೊತೆಯಲ್ಲಿ ಇರೋಣ. ಜೊತೆ ಬೇಡ ಎಂದಾಗ ಸುಮ್ಮನೆ ಬೇರೆ ಹೋದರಾಯಿತು. ಇದರಿಂದ ವಿವಾಹ ವಿಚ್ಚೇದನ ಮತ್ತು ಅದರಿಂದಾಗುವ ಸಮಸ್ಯೆಗಳೇ ರದ್ದು ಎಂದು ಯುವ ಜನಾಂಗ ತೀರ್ಮಾನಿಸಿತು. ಆದರೂ ಕೆಲವೆಡೆ ಅಪಘಾತಗಳಾಗಿ ಮದುವೆಯಿಲ್ಲದೇ ಮಕ್ಕಳಾಗತೊಡಗಿದವು. ಕಳೆದ ದಶಕದಲ್ಲಿ ಈ ಎಲ್ಲ ರೀತಿಯ ಮಕ್ಕಳ ಸಮಸ್ಯೆಗೆ ಅತಿ ದೊಡ್ಡ ಪರಿಹಾರ ಸಿಕ್ಕಿದೆ. ಗಂಡು-ಹೆಣ್ಣು ಮದುವೆಯಾದರೆ ಅಥವಾ ಜೊತೆಯಲ್ಲಿದ್ದರೆ ತಾನೇ ಮಕ್ಕಳ ಸಮಸ್ಯೆ? ಸಲಿಂಗ ವಿವಾಹದಿಂದ ಈ ತೊಂದರೆಯೇ ಇರುವುದಿಲ್ಲವಲ್ಲ. ಗಂಡು-ಗಂಡು ಮತ್ತು ಹೆಣ್ಣು-ಹೆಣ್ಣು ಮದುವೆಯಾದರೆ ಮಕ್ಕಳಾಗುವ ಸಂಭವವೇ ಇಲ್ಲವಲ್ಲ! ಈಗ ಇದರ ಕಾಲ ನಡೆಯುತ್ತಿದೆ. 

*****

ದಂಪತಿಗಳಿಗೆ ಮಕ್ಕಳು ಏಕೆ ಹುಟ್ಟುತ್ತಾರೆ? ಹುಟ್ಟುವ ಮಕ್ಕಳು ಯಾವ ರೀತಿಯವು? ಜನ್ಮ-ಜನ್ಮಗಳ ಸಂಬಂಧಗಳು ಉಂಟೋ? ಈ ರೀತಿಯ ಪ್ರಶ್ನೆಗಳಿಗೆ "ಪದ್ಮ ಪುರಾಣ" ತನ್ನ ಒಂದು ಪ್ರಸಂಗದಲ್ಲಿ ಉತ್ತರ ಕೊಡುತ್ತದೆ. 

ನರ್ಮದಾ ನದಿಯ ತೀರದ "ವಾಮನ ತೀರ್ಥ" ಎನ್ನುವ ಪ್ರದೇಶದಲ್ಲಿ ಸೋಮಶರ್ಮ ಎಂಬ ಒಬ್ಬ ಸಾತ್ವಿಕನು ವಾಸವಾಗಿರುತ್ತಾನೆ. ಅವನ ವಿವಾಹ ಚ್ಯವನ ಋಷಿಗಳ ಮಗಳಾದ ಸುಮನಾ ಎನ್ನುವ ಯುವತಿಯೊಡನೆ ಆಗುತ್ತದೆ. ("ಸತಿ ಸುಕನ್ಯ" ಚಲನಚಿತ್ರ ನೋಡಿದವರಿಗೆ ಸುಕನ್ಯಳ ಗಂಡ ಚ್ಯವನ ಋಷಿ ಎಂದು ನೆನಪಿಗೆ ಬರಬಹುದು. "ಚ್ಯವನಪ್ರಾಶ" ಅನ್ನುವುದನ್ನು ಅಶ್ವಿನಿ ದೇವತೆಗಳ ಕಡೆಯಿಂದ ಭೂಮಿಗೆ ತಂದ ತಪಸ್ವಿಗಳು ಅವರು. ಭೃಗು ಋಷಿಗಳ ವಂಶಜರು).  ತಂದೆಗೆ ತಕ್ಕ ಮಗಳಾದ ಸುಮನಾ ಬಹಳ ತಿಳುವಳಿಕೆಯುಳ್ಳ ಹೆಣ್ಣು ಮಗಳು. ಹೆಸರಿಗೆ ತಕ್ಕಂತೆ ಒಳ್ಳೆಯ ಮನಸ್ಸಿನವಳು. ಸೋಮಶರ್ಮನೂ ಜ್ಞಾನಿಯೇ. ಚೆನ್ನಾಗಿ ಸಂಸಾರ ಮಾಡುತ್ತಿದ್ದ ಈ ದಂಪತಿಗಳಿಗೆ ಮಕ್ಕಳಿರುವುದಿಲ್ಲ. ಸೋಮಶರ್ಮನಿಗೆ ಎರಡು ಚಿಂತೆಗಳು. ಮೊದಲನೆಯದು ದಾರಿದ್ರ್ಯ. ಎರಡನೆಯದು ಮಕ್ಕಳಿಲ್ಲ ಎನ್ನುವುದು. ಹೀಗೆ ಚಿಂತಾಕ್ರಾಂತನಾಗಿರುವ ಸೋಮಶರ್ಮನನ್ನು ಗಮನಿಸಿದ ಸುಮನಾ ಒಂದು ದಿನ ಅವನಿಗೆ ಸಮಾಧಾನ ಹೇಳುತ್ತಾಳೆ. ದಾರಿದ್ರ್ಯದ ವಿಷಯದಲ್ಲಿ ಹೇಳಿದ ಸಮಾಧಾನದ ವಿಷಯ ಮುಂದೊಮ್ಮೆ ನೋಡೋಣ. ಈಗ ಮಕ್ಕಳ ಸಮಸ್ಯೆ ಪ್ರಸ್ತಾಪ ಬಂದಿರುವುದರಿಂದ ಅದನ್ನು ಗಮನಿಸೋಣ. 

ಸುಮನಾ ಹೇಳುವ ಸೂತ್ರರೂಪವಾದ ಮಕ್ಕಳ ನಾಲ್ಕು ವಿಧಗಳ ವಿವರಣೆ ಹೀಗಿದೆ:

ಋಣಸಂಬಂಧಿನಃ ಕೇಚಿತ್ ಕೇಚಿತ್ ನ್ಯಾಸಾಪಹಾರಕಾ:
ಲಾಭಪ್ರದಾ ಭವಂತೇ ಕೇ ಉದಾಸೀನಾ ತಥಾಪರೇ  

  1. ಮೊದಲನೆಯ ವರ್ಗದ ಮಕ್ಕಳು "ಸಾಲ ವಸೂಲಿಗೆ ಬಂದವರು".  ಹಿಂದಿನ ಜನ್ಮಗಳಲ್ಲಿ ನಾವು ಯಾರಿಂದಲಾದರೂ ಹಣ-ಕಾಸು, ವಸ್ತುಗಳನ್ನು ಸಾಲ ಪಡೆದು ಹಿಂದಿರುಗಿಸದಿದ್ದರೆ ಹಾಗೆ ಸಾಲಕೊಟ್ಟವರು ಈ ಜನ್ಮದಲ್ಲಿ ನಮ್ಮ ಮಕ್ಕಳಾಗಿ ಹುಟ್ಟಿ ನಮ್ಮಿಂದ ಅದನ್ನು ಬಡ್ಡಿ ಸಹಿತ ವಸೂಲಿ ಮಾಡಲು ಹುಟ್ಟಿದ ಮಕ್ಕಳು ಇವರು. ಇವರಿಂದ ತಂದೆ-ತಾಯಿಗಳಿಗೆ ಯಾವುದೇ ಪ್ರಯೋಜನ ಇರುವುದಿಲ್ಲ. ತಮ್ಮ ಸಾಲ ವಸೂಲಾಗುವವರೆಗೂ ಜೊತೆಯಲ್ಲಿದ್ದು, ಅದು ಮುಗಿದ ಕೂಡಲೇ ಹೊರಟು ಹೋಗುತ್ತಾರೆ. ಇವರು "ಋಣಸಂಬಂಧಿ ಮಕ್ಕಳು". 
  2. ಎರಡನೆಯ ವರ್ಗದ ಮಕ್ಕಳು "ತಿಂದದ್ದು ಕಕ್ಕಿಸುವವರು". ಯಾವುದೋ ಜನ್ಮದಲ್ಲಿ ಇನ್ನೊಬ್ಬರ ಹಣವನ್ನು ಅಥವಾ ವಸ್ತು-ಆಸ್ತಿಗಳನ್ನು ಅನ್ಯಾಯವಾಗಿ ತಿಂದುಹಾಕಿದ್ದರೆ ಆ ರೀತಿ ಕಳೆದುಕೊಂಡವರು ಈ ಜನ್ಮದಲ್ಲಿ ಮಕ್ಕಳಾಗಿ ಬಂದು ಅದನ್ನು ಹಿಂಪಡೆಯುವವರು. ಮೊದಲನೆಯ ವರ್ಗದವರಿಗೂ ಇವರಿಗೂ ಏನು ವ್ಯತ್ಯಾಸ? ಮೊದಲನೆಯದು ನಾವು ಸಾಲ ಕೇಳಿ ಅವರು ಒಪ್ಪಿ ಕೊಟ್ಟವರು. ಎರಡನೆಯವರು ಅವರಿಂದ ನಾವು ಅನ್ಯಾಯವಾಗಿ ಕಿತ್ತುಕೊಂಡುದರಿಂದ ನಷ್ಟ ಅನುಭವಿಸಿದವರು. ಆದುದರಿಂದ  ಇವರ ವ್ಯವಹಾರ ಮೊದಲನೆಯ ವರ್ಗಕ್ಕಿಂತ ಹೆಚ್ಚು ಕಠಿಣವಾಗಿರುತ್ತದೆ. 
  3. ಮೂರನೆಯ ವರ್ಗದ ಮಕ್ಕಳು "ಲಾಭಪ್ರದರು". ಕಳೆದ ಜನ್ಮಗಳಲ್ಲಿ ನಾವು ಮತ್ತೊಬ್ಬರಿಗೆ ಉಪಕಾರ ಮಾಡಿದ್ದರೆ ಅದರ ಸ್ಮರಣೆಯಿಂದ ಈ ಜನ್ಮದಲ್ಲಿ ನಮಗೆ ಉಪಕಾರ ಮಾಡಲು ಹುಟ್ಟಿದವರು. ಇವರು ತಂದೆ-ತಾಯಿಯರಿಗೆ ಬಹಳ ಅನುಕೂಲ ಮಾಡಿಕೊಡುವ ಮಕ್ಕಳಾಗುತ್ತಾರೆ. ಕೆಲವೊಮ್ಮೆ ಮಕ್ಕಳು ತಾಯಿ ಮತ್ತು ತಂದೆ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅನುಕೂಲರಾಗಿರಬಹುದು. ಇದು ಮಕ್ಕಳಾಗಿ ಹುಟ್ಟಿದವರು ಯಾರಿಂದ ಹಿಂದೆ ಉಪಕೃತರಾಗಿದ್ದರೋ ಅದರ ಮೇಲೆ ಅವಲಂಬಿಸುತ್ತದೆ. 
  4. ನಾಲ್ಕನೆಯ ವರ್ಗದ ಮಕ್ಕಳು "ಉದಾಸೀನ ಪುತ್ರರು". ಇವರು ಮೇಲಿನ ಮೂರೂ ಕಾರಣಗಳಿಲ್ಲದ ಮಕ್ಕಳು. ಇವರು ಅವರ ಹಿಂದಿನ ಜನ್ಮಗಳ ಫಲಗಳನ್ನು ಅನುಭವಿಸಲು ಹುಟ್ಟಿದವರು. ಜನ್ಮ ಪಡೆಯುವುದಕ್ಕಾಗಿ ಮಾತ್ರವೇ ತಾಯಿ-ತಂದೆಯರ ಆಶ್ರಯ ಪಡೆದವರು. ಇಂತಹವರು ತಮ್ಮ ಪಾಡು ತಾವು ನೋಡಿಕೊಂಡು ತಂದೆ-ತಾಯಿಯರ ವಿಷಯದಲ್ಲಿ ಉದಾಸೀನರಾಗಿರುತ್ತಾರೆ. 
ಹಾಗಿದ್ದರೆ ಐದನೆಯ ಗುಂಪಿನ ಮಕ್ಕಳು ಯಾರು? ಹಿಂದಿನ ಯಾವುದೂ ಸಂಬಂಧಗಳಿರದೆ ಈ ಜನ್ಮದಲ್ಲಿ ಮಾಡಿದ ಸತ್ಕರ್ಮಗಳಿಂದ ತಂದೆ-ತಾಯಿಯರ ಮಕ್ಕಳಾಗಿ ಹುಟ್ಟಿದವರು ಈ ಗುಂಪಿಗೆ ಸೇರಿದವರು. ಹಿಂದಿನ ಜನ್ಮಗಳ ಸತ್ಕರ್ಮಗಳ ಕಾರಣವಾಗಿ ವರರೂಪವಾಗಿ ಈಗ ಹುಟ್ಟಿದವರೂ ಆಗಬಹುದು. ವಿವಾಹ ಪೂರ್ವದಲ್ಲಿ ಮಾಡಿದ ಒಳ್ಳೆಯ ಕೆಲಸಗಳ ಕಾರಣ ವಿವಾಹದ ನಂತರ ಶೀಘ್ರದಲ್ಲಿ ಹುಟ್ಟಬಹುದು. ಇಲ್ಲವೇ, ಮಕ್ಕಳಿಲ್ಲವೆಂದು ಕೊರಗುವಾಗ ಮಾಡುವ ಒಳ್ಳೆಯ ಕಾರ್ಯಗಳ ಫಲಸ್ವರೂಪವಾಗಿ ತಡವಾಗಿ ಹುಟ್ಟಿದವರು ಇರಬಹುದು. ಇಂತಹ ಮಕ್ಕಳಿಂದ ಮಾತಾ-ಪಿತೃಗಳಿಗೆ ಅತ್ಯಂತ ಸುಖವೂ, ಕೀರ್ತಿಯೂ, ಸಮಾಜದಲ್ಲಿ ಮನ್ನಣೆಯೂ ದೊರೆಯುವುದು. 

*****

ನಾವು ನಮ್ಮ ತಂದೆ-ತಾಯಿಯರಿಗೆ ಎಂತಹ ಮಕ್ಕಳಾಗಿದ್ದೆವು? ನಮ್ಮ ಮಕ್ಕಳು ಮೇಲಿನ ಯಾವ ಗುಂಪಿಗೆ ಸೇರಿದವರು? ಈ ಪ್ರಶ್ನೆಗಳಿಗೆ ಉತ್ತರ ಅವರವರೇ ಕಂಡುಕೊಳ್ಳಬೇಕು. 

ಜನ್ಮ-ಜನ್ಮಾಂತರಗಳು, ಪುನರ್ಜನ್ಮ, ಪಾಪ-ಪುಣ್ಯಗಳು, ವರ ಪಡೆಯುವುದು ಮುಂತಾದುವನ್ನು ನಂಬುವವರೂ ಇದ್ದಾರೆ. ನಂಬದವರೂ ಇದ್ದಾರೆ. ನಂಬಿದವರು ಮೇಲಿನ ವರ್ಗೀಕರಣವನ್ನು ಒಪ್ಪಿಕೊಳ್ಳಬಹುದು. ನಂಬದವರು ಅಪಹಾಸ್ಯ ಮಾಡಬಹುದು. ಆದರೆ, ಮೇಲಿನ ವರ್ಗೀಕರಣ ಒಂದು ಬಲವಾದ ತರ್ಕದ ತಳಹದಿಯ ಮೇಲೆ ನಿಂತಿದೆ ಎನ್ನುವುದನ್ನು ಖಂಡಿತವಾಗಿ ಒಪ್ಪಬಹುದು. 

Sunday, November 5, 2023

"ವೃದ್ಧಾಪ್ಯ"ದಲ್ಲಿ "ಜೀವನ"ದ "ಆನಂದ"


ಪಾಪ, ಪುಣ್ಯ ಮತ್ತು ವೃದ್ಧಾಪ್ಯ:

ಮನುಷ್ಯನಿಗೆ ಒಂದು ಹಣ್ಣು ಬೇಕಾದರೆ ಅದರ ಸಸಿಯನ್ನು ನೆಟ್ಟು, ಮರವಾಗಿ ಬೆಳೆಸಿ, ಫಲಾಗಮನದ ಸಮಯ ಕಾದು ಅದರ ಹಣ್ಣು ಪಡೆಯಬೇಕು. ನೆನೆಸಿದ ತಕ್ಷಣ ಅದು ಸಿಗುವುದಿಲ್ಲ. ಈಗಲೇ ಹಣ್ಣು ಬೇಕಾದರೆ ಹಿಂದೆಂದೋ ನೆಟ್ಟು ಬೆಳೆಸಿದ ಮರದಿಂದ ಪಡೆಯಬಹುದು. ಅದೂ ಹಿಂದೆಂದೋ ಮರ ಬೆಳೆಸಿದ್ದರೆ ಮಾತ್ರ. ಇಲ್ಲದಿದ್ದರೆ ಇಲ್ಲ. ಅಂತೆಯೇ ಒಂದು ಮರವನ್ನು ನೆಟ್ಟು ಬೆಳೆಸಿದರೆ ಅದು ಹಣ್ಣನ್ನು ಕೊಟ್ಟೇ ಕೊಡುತ್ತದೆ. ಕೆಲವಂತೂ ಹೆಚ್ಚು ಆರೈಕೆ ಇಲ್ಲದಿದ್ದರೂ ಧಾರಾಳವಾಗಿ ಹಣ್ಣು ಕೊಡುತ್ತವೆ. ಮರ ಬೆಳಸಿಯಾದ ಮೇಲೆ ಹಣ್ಣು ಬರಬಾರದು ಎನ್ನುವಂತಿಲ್ಲ. ಹಣ್ಣು ಕೊಡುವುದು ಅದರ ಸಹಜ ವೃತ್ತಿ. ಅದರ ಕೆಲಸ ಅದು ಮಾಡುತ್ತದೆ. 

ಪಾಪ ಮತ್ತು ಪುಣ್ಯಗಳು ಒಂದು ರೀತಿಯಲ್ಲಿ ಮರಗಳಿದ್ದಂತೆ. ಮರಗಳನ್ನು ನೆಟ್ಟು ಬೆಳಸಬೇಕು. ಪಾಪ ಮತ್ತು ಪುಣ್ಯ ಎಂಬ ಎರಡು ಮರಗಳು ಮನುಷ್ಯನ ಜೊತೆಯಲ್ಲಿಯೇ ಹುಟ್ಟುತ್ತವೆ.  ನಮ್ಮ ಪ್ರತಿಯೊಂದು ಕ್ರಿಯೆಯೂ ಅವುಗಳ ಗೊಬ್ಬರ, ನೀರಾಗಿ ಅವನ್ನು ಬೆಳೆಸುತ್ತವೆ. ನಮ್ಮ ಪ್ರಯತ್ನ ಏನೂ ಬೇಕಿಲ್ಲ. ಕೆಲಸ ಮಾಡಿದವನಿಗೆ ಕೂಲಿ ಸಿಕ್ಕಂತೆ ಪ್ರತಿಫಲವೂ ಸಿಕ್ಕಿಯೇ ಸಿಗುತ್ತದೆ. ಕೆಲಸ ಮಾಡಿ ಕೂಲಿ ಕೊಡುವುದರ ಮುಂಚೆ ಓಡಿಹೋಗಬಹುದು. ಆದರೆ ಇಲ್ಲಿ ಅದೂ ಸಾಧ್ಯವಿಲ್ಲ. ಕೆಲಸಗಾರನನ್ನು ಅಟ್ಟಿಸಿಕೊಂಡು ಬಂದು ಕೂಲಿ ಸೇರುತ್ತದೆ! 

ಬೇರೆ ಹಣ್ಣುಗಳಿಗೂ ಪಾಪ, ಪುಣ್ಯಗಳಿಗೂ ಒಂದು ಮುಖ್ಯ ವ್ಯತ್ಯಾಸ ಉಂಟು. ನಮಗೆ ಯಾವುದೋ ಹಣ್ಣು ಬೇಕಾದಾಗ ಬೆಳದವರಿಂದಲೋ, ಆಂಗಡಿಯಿಂದಲೋ ಪಡೆಯಬಹುದು. ನಮ್ಮಲ್ಲಿ ಹಣ್ಣು ಹೆಚ್ಚಿದ್ದಾಗ ಬೇರೆಯವರಿಗೆ ಕೊಡಬಹುದು. ಆದರೆ ಪಾಪ, ಪುಣ್ಯಗಳ ಹಣ್ಣುಗಳ ವಿಷಯದಲ್ಲಿ ಇದು ಸಾಧ್ಯವಿಲ್ಲ. ನಾವು ಕೃಷಿ ಮಾಡಿದ ಹಣ್ಣುಗಳನ್ನು ಬೇರೆಯವರಿಗೆ ಕೊಡುವಹಾಗಿಲ್ಲ. ಬೇರೆಯವರ ಸಾಗುವಳಿಯ ಪದಾರ್ಥ ನಾವು ಪಡೆಯುವಹಾಗಿಲ್ಲ. ಅವರವರ ಬೆಳೆಯ ಫಸಲನ್ನು ಅವರವರೇ ತಿನ್ನಬೇಕು. ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. 

ಈ ಹಿನ್ನೆಲೆಯಲ್ಲಿ ಮನುಷ್ಯನಿಗೆ ಏನು ಬೇಕು, ಏನು ಬೇಡ ಎನ್ನುವುದರ ಬಗ್ಗೆ ಮಹಾಭಾರತದಲ್ಲಿ ಒಂದು ಸೊಗಸಾದ ಶ್ಲೋಕವಿದೆ:

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನ ಇಚ್ಛಂತಿ ಮಾನವಾ:।   ನ ಪಾಪ ಫಲಮಿಚ್ಛ೦ತಿ  ಪಾಪಂ ಕುರ್ವoತಿ ಯತ್ನತಃ ।।

"ಮನುಷ್ಯರಿಗೆ ಪುಣ್ಯ ಎನ್ನುವ ಮರ ಬೇಡ. ಆ ಮರವನ್ನು ಬೆಳೆಸುವುದಿಲ್ಲ. ಆದರೆ ಆ ಮರದ ಹಣ್ಣು ಬೇಕು. ಪಾಪ ಎನ್ನುವ ಮರದ ಹಣ್ಣು ಖಂಡಿತಾ ಬೇಡ. ಆದರೆ ಬಹಳ ಕಷ್ಟ ಪಟ್ಟು ಪಾಪದ ಮರವನ್ನು ಬೆಳೆಸುತ್ತಾರೆ!"

ಪಾಪದ ಮರ ಬೆಳೆಸಿದ ಮೇಲೆ ಅದು ಅದರ ಕೆಲಸ ಮಾಡಿ ಪಾಪದ ಹಣ್ಣು ಕೊಟ್ಟೇ ಕೊಡುತ್ತದೆ. ಆ ಹಣ್ಣನ್ನು ಸೇವಿಸಲೇ ಬೇಕು. ಬೇರೆಯವರಿಗೆ ಕೊಟ್ಟು ಕೈ ತೊಳೆದುಕೊಳ್ಳಲಾಗುವುದಿಲ್ಲ. ಮತ್ತೊಂದು ಕಡೆ, ಪುಣ್ಯದ ಮರ ಬೆಳೆಸಲಿಲ್ಲ.  ಆದರೆ ಪುಣ್ಯದ ಹಣ್ಣು ಬೇಕು! ಇದೊಂದು ವಿಚಿತ್ರ ವಿಪರ್ಯಾಸ. ಗೊತ್ತಿಲ್ಲದೇ ಪೇಚಿಗೆ ಸಿಕ್ಕಿಕೊಂಡ ಪರಿಸ್ಥಿತಿಯೂ ಅಲ್ಲ. ಇರುಳು ಕಂಡ ಭಾವಿಯಲ್ಲಿ ಹಗಲು ಬಿದ್ದಂತೆ!

ಪಾಪ ಮತ್ತು ಪುಣ್ಯದ ಪರಿಭಾಷೆಯನ್ನು ತಿಳಿಯುವುದು ತುಂಬಾ ಅವಶ್ಯಕ. ಪುಣ್ಯವೆಂದರೆ ಒದ್ದೆ ಬಟ್ಟೆ, ಮಂತ್ರ, ತಂತ್ರ, ಅಷ್ಟೇ ಎಂದು ತಿಳಿಯಬಾರದು. "ಕೊರಳೊಳು ಜಪಮಣಿ, ಬಾಯೊಳು ಮಂತ್ರವು, ಅರಿವೆಯ ಮೋರೆಗೆ ಮುಸುಕು ಹಾಕಿ...." ಮುಂತಾಗಿ ಉದರ ವೈರಾಗ್ಯವನ್ನು ಶ್ರೀ ಪುರಂದರ ದಾಸರು ಹಾಸ್ಯ ಮಾಡುತ್ತಾರೆ. "ಪರೋಪಕಾರಂ ಪುಣ್ಯಾಯ, ಪಾಪಾಯ ಪರ ಪೀಡನಮ್" ಎಂದು ಭಗವಾನ್ ವೇದ ವ್ಯಾಸರು ಹೇಳಿದಂತೆ ಸಮಾಜಕ್ಕೆ ಉಪಯೋಗವಾಗುವ ಯಾವುದೇ ಕೆಲಸ ಪುಣ್ಯದ್ದು. ಇನ್ನೊಬ್ಬರರಿಗೆ ವೃಥಾ ತೊಂದರೆ ಕೊಡುವ ಯಾವ ಕೆಲಸವೂ ಪಾಪದ್ದು. ಈ ಸ್ಥೂಲ ತಿಳುವಳಿಕೆ ಎಲ್ಲ ಸಮಯದಲ್ಲೂ ನಮ್ಮಲ್ಲಿ ಇರಬೇಕು. 

ಅಶಕ್ತರ, ಶಿಶುಗಳ, ವೃದ್ಧರ ಮತ್ತು ಆಂಗಹೀನರ ಸೇವೆ ಅತ್ಯಂತ ಪುಣ್ಯದ ಕೆಲಸ. ಇವು ದೇವರ ಪೂಜೆಯ ಅತ್ಯಂತ ಶ್ರೇಷ್ಠ ರೂಪ ಎಂದು ನಮ್ಮ ಮುಖ್ಯ ಗ್ರಂಥಗಳಲ್ಲಿ ಅನೇಕ ಕಡೆ ಕಾಣುತ್ತ್ತೇವೆ. ಸಂತ ಏಕನಾಥರ ಪ್ರವಚನಗಳಲ್ಲಿ ಒಂದು ಕಥೆ ಬರುತ್ತದೆ. ಒಂದು ಸಂತರ ಗುಂಪು ಕಾಶಿ ಯಾತ್ರೆ ಮುಗಿಸಿ ಥಾಲಿಗಳಲ್ಲಿ ಗಂಗೆಯನ್ನು ತುಂಬಿಸಿಕೊಂಡು ರಾಮೇಶ್ವರನಿಗೆ ಆ ಗಂಗಾಜಲದಲ್ಲಿ ಅಭಿಷೇಕ ಮಾಡುವ ಆಸೆ ಹೊತ್ತು ರಾಮೇಶ್ವರದ ಕಡೆ ಹೊರಟಿದ್ದರು. ನಡೆದೇ ಹೋಗಬೇಕಾದ ಕಾಲವದು. ದಾರಿಯಲ್ಲಿ ಮರುಭೂಮಿಯಲ್ಲಿ ಒಂಟೆಯೊಂದು ನೀರಿಲ್ಲದೆ ಬಾಯಾರಿ ಸಾಯುವ ಸ್ಥಿತಿಯಲ್ಲಿ ಕಾಣಸಿಗುತ್ತದೆ. ಎಲ್ಲರ ಬಳಿಯಲ್ಲಿಯೂ ನೀರುಂಟು. ಆದರೆ ಗಂಗಾಜಲ. ಒಂಟೆಗೆ ಕುಡಿಯಲು ಕೊಟ್ಟರೆ ರಾಮೇಶ್ವರನಿಗೆ ಅಭಿಷೇಕವಿಲ್ಲ. ಎಲ್ಲರೂ ಹಿಂದೆ ಮುಂದೆ ನೋಡುತ್ತಾರೆ. ಒಬ್ಬ ಸಂತ  ಮಾತ್ರ ತನ್ನ ಥಾಲಿಯ ಗಂಗೆಯ ನೀರನ್ನು ಒಂಟೆಗೆ ಕುಡಿಸುತ್ತಾನೆ. ಉಳಿದ ಎಲ್ಲರೂ ರಾಮೇಶ್ವರ ತಲುಪಿ ಅಭಿಷೇಕ ಮಾಡುತ್ತಾರೆ. ಆದರೆ ಅವರಿಗೆಲ್ಲ ಬಂದ ಪುಣ್ಯಕ್ಕಿಂತಲೂ ಹೆಚ್ಚು ಒಂಟೆಗೆ ನೀರು ಕುದಿಸಿದ ಸಂತನಿಗೆ ಸಿಗುತ್ತದೆ!

ವೃದ್ಧಾಪ್ಯ ಬೇಡ; ಆದರೆ ಬಂದೇ ಬರುತ್ತದೆ!

ಇನ್ನು ವೃದ್ಧಾಪ್ಯದ ಕಡೆಗೆ ದೃಷ್ಟಿ ಹರಿಸೋಣ. ವೃದ್ಧಾಪ್ಯದ ಮರದ ಕಥೆ ಏನು? ಇದು ಇನ್ನೂ ವಿಚಿತ್ರದ ವಿಷಯ. ವೃಧಾಪ್ಯದ ಮರವೂ ಮನುಷ್ಯನ ಹುಟ್ಟಿನೊಂದಿಗೇ ಹುಟ್ಟುತ್ತದೆ. ಮನುಷ್ಯನೊಡನೆ ಸಮ ಸಮವಾಗಿ ಬೆಳಿಯುತ್ತದೆ. ಅದರ ಸಮಯಕ್ಕೆ ಸರಿಯಾಗಿ ಹಣ್ಣು ಕೊಡುತ್ತದೆ. ಕೆಲವರಿಗೆ ಆ ಮರ ಹಣ್ಣು ಕೊಡುವುದರೊಳಗೆ ಮರಣ ಬರಬಹುದು. ಆಗ ವೃದ್ಧಾಪ್ಯದ ಸುಖವೂ ಇಲ್ಲ, ದುಃಖವೂ ಇಲ್ಲ. ಆ ಮರ ಹಣ್ಣು ಕೊಡುವ ವೇಳೆಯವರೆಗೆ ಬದುಕಿದ್ದಾದರೆ ಆ ಹಣ್ಣನ್ನು ಅನುಭವಿಸಲೇ ಬೇಕು. 

ವೃದ್ಧಾಪ್ಯ ವರವೋ, ಶಾಪವೋ?

ವೃದ್ಧಾಪ್ಯ ವರವೆಂದು ಹೇಳುವವರು ಯಾರೂ ಕಾಣರು. ವೃದ್ಧಾಪ್ಯ ಶಾಪವೆಂದು ಹೇಳುವವರು ಬಹಳ ಮಂದಿ. ತಮಾಷೆಯ ವಿಷಯವೆಂದರೆ ಎಲ್ಲರಿಗೂ ದೀರ್ಘಾಯಸ್ಸು ಬೇಕು. ಆದರೆ ವೃದ್ಧಾಪ್ಯ ಬೇಡ. ತಿಳುವಳಿಕೆ  ಬಂದನಂತರ (ಅಥವಾ ತಿಳುವಳಿಕೆ ಬರುವ ವಯಸ್ಸು ಬಂದ ಮೇಲೆ. ಏಕೆಂದರೆ ಎಲ್ಲರಿಗೂ ತಿಳುವಳಿಕೆ ಬಂದೇ ಬರುತ್ತದೆ ಎಂದು ಹೇಳುವ ಹಾಗಿಲ್ಲ.) ಮನುಷ್ಯನನ್ನು ಕಾಡುವ ಎರಡು ಆಶೆಗಳು ಉಂಟು- ಧನದಾಶೆ ಮತ್ತು ಜೀವಿತದ ಆಶೆ (ಧನಾಶಾ ಜೀವಿತಾಶಾ ಚ). ಹಣ ಸಂಪಾದನೆ ಮಾಡುವ ಆಸೆ ಮತ್ತು ಚಿರಕಾಲ ಬದುಕುವ ಆಸೆ. ತುಂಬಾ ದಿನ ಬದುಕಿರಬೇಕು. ವೃದ್ಧಾಪ್ಯ ಬರಬಾರದು! ಚಿರಂಜೀವಿಯಾದರೆ ಇನ್ನೂ ಒಳ್ಳೆಯದು. ಆದರೆ ಅದು ಸಾಧ್ಯವಿಲ್ಲವಲ್ಲ! 

ವೃದ್ಧಾಪ್ಯದ ಚರ್ಚೆ ಬಂದಾಗ ಯಯಾತಿ ಮತ್ತು ಅವನ ಮಗ ಪುರು ಇವರನ್ನು ನೆನಪಿಸಿಕೊಳ್ಳಲೇಬೇಕು. ಈ ಕಥೆ ಎಲ್ಲರಿಗೂ ಗೊತ್ತಿರುವುದೇ. ಶುಕ್ರಾಚಾರ್ಯರ ಶಾಪದಿಂದ ಬಂದ ಅಕಾಲಿಕ ವೃದ್ಧಾಪ್ಯವನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಯಯಾತಿಯ ಪ್ರಯತ್ನ. ಕಷ್ಟವಾದರೂ ಸರಿ, ತಂದೆಗೆ ಇಚ್ಛೆ ಪೂರ್ತಿಯಾಗಲಿ ಎಂದು ತ್ಯಾಗ ಮಗನಾದ ಪುರುವಿನದು. ಮಹಾಭಾರತದ ಈ ಕಥೆಯನ್ನು ಈ ಕಾಲಮಾನದ ಇಬ್ಬರು ಸಾಹಿತಿಗಳಾದ ವಿ ಎಸ್ ಖಾಂಡೇಕರ್ ಮತ್ತು  ಗಿರೀಶ್ ಕಾರ್ನಾಡ್ ತಮ್ಮದೇ ದೃಷ್ಟಿ ಕೋಣದಿಂದ ನೋಡಿದ್ದಾರೆ. ಮಗನ ಯೌವನವನ್ನು ಪಡೆದ ಯಯಾತಿ ತನ್ನ ಪತ್ನಿಯ ಬಳಿ ಹೋದಾಗ "ನೀನು ಈಗ ನನ್ನ ಮಗ" ಎನ್ನುತ್ತಾಳೆ ಅವಳು.  ಇದು ಖಾಂಡೇಕರ್ ಒತ್ತು ಕೊಟ್ಟ ನೋಟ. ಕಾರ್ನಾಡರ ಯಯಾತಿಯ ಬಳಿ ಬಂದ ಸೊಸೆ "ಈಗ ನೀನೇ ನನ್ನ ಗಂಡ" ಎನ್ನುತ್ತಾಳೆ. ಇದು ಇನ್ನೊಂದು ದೃಷ್ಟಿ. ವಿ. ಎಸ್. ಖಾಂಡೇಕರ್ ಮರಾಠಿ ಭಾಷೆಯ ಪ್ರಸಿದ್ಧ ಸಾಹಿತಿ. ಅವರ "ಯಯಾತಿ" ಕಾದಂಬರಿಗೆ ಸಾಹಿತ್ಯ ಆಕಾಡೆಮಿ ಪ್ರಶಸ್ತಿ (೧೯೬೦) ಸಿಕ್ಕಿತು. ಮತ್ತೆ ಮುಂದೆ ೧೯೭೪ರಲ್ಲಿ "ಭಾರತೀಯ ಜ್ಞಾನಪೀಠ" ಪ್ರಶಸ್ತಿ ಕೂಡ ಲಭಿಸಿತು. ನಮ್ಮ ಕನ್ನಡದ ಪ್ರಖ್ಯಾತ ಸಾಹಿತಿ, ಕಲಾವಿದ ಗಿರೀಶ್ ಕಾರ್ನಾಡ್ ಅವರ "ಯಯಾತಿ" ಒಂದು ನಾಟಕ. ಅವರ ಯಯಾತಿ ನಾಟಕ ೧೯೬೧ರಲ್ಲಿ ಪ್ರಕಟವಾಯಿತು. ಭಾರತೀಯ ಜ್ಞಾನಪೀಠ ಪ್ರಾರಂಭದ ವರ್ಷಗಳಲ್ಲಿ ಒಂದು ಕೃತಿಯ ರಚಯಿತರಿಗೆ ಪ್ರಶಸ್ತಿ ಕೊಡುತ್ತಿತ್ತು. ನಂತರದ ವರ್ಷಗಲ್ಲಿ ಒಂದು ಕೃತಿಯ ಬದಲು ಒಬ್ಬ ಸಾಹಿತಿಯ ಒಟ್ಟಾರೆ ಸಾಹಿತ್ಯ ಸೇವೆಗೆ ಪ್ರಶಸ್ತಿ ಕೊಡಲಾರಂಭಿಸಿತು. (ಶಿವರಾಮ ಕಾರಂತರ "ಮೂಕಜ್ಜಿಯ ಕನಸು" ಕೃತಿಗೆ ಪ್ರಶಸ್ತಿ ಕೊಟ್ಟಾಗ ಬಹಳ ಚರ್ಚೆ ಆಯಿತು. ಪ್ರಶಸ್ತಿ ಕೊಟ್ಟಿದ್ದು ಸರಿ; ಆದರೆ ಕೃತಿಯ ಆಯ್ಕೆ ಸರಿಯಿಲ್ಲ ಎಂದು ಬಹಳ ಅಭಿಪ್ರಾಯಗಳು ಬಂದವು. ಈ ರೀತಿ ಸಮಸ್ಯೆ ತಪ್ಪಿಸಲು ಒಂದು ಕೃತಿಯ ಬದಲು ಒಟ್ಟಾರೆ ಸಾಹಿತ್ಯ ಸೇವೆಗೆ ಪ್ರಶಸ್ತಿ ಎನ್ನುವ ಕ್ರಮ ಜಾರಿಗೆ ಬಂತು ಎಂದು ಒಂದು ಅಭಿಪ್ರಾಯ). ಕಾರ್ನಾಡರಿಗೆ ಒಟ್ಟಾರೆ ಸಾಹಿತ್ಯ ಸೇವೆಗೆ ೧೯೯೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು. 

ವೃದ್ಧಾಪ್ಯ  ಯಾವಾಗ?

ನಮ್ಮ ಚಿಕ್ಕ ವಯಸ್ಸಿನಲ್ಲಿ ತಲೆ ಕೂದಲು ಬೆಳ್ಳಗಾಗುವುದು ಮತ್ತು ಕೂದಲು ತುಂಬಿದ ತಲೆ ಬೊಕ್ಕತಲೆ ಆಗುವುದು ವೃದ್ಧಾಪ್ಯದ ಕುರುಹು ಎಂದು ನಂಬುತ್ತಿದ್ದೆವು. ಚಿಕ್ಕ ವಯಸ್ಸಿನವರಿಗೆ ಬಿಳಿ ಕೂದಲು ಬಂದರೆ "ಬಾಲ ನೆರೆ" ಎಂದು ಹಾಸ್ಯ ಮಾಡುತ್ತಿದ್ದುದೂ ಉಂಟು. ಕೂದಲಿಗೆ ಬಣ್ಣ ಬಳಿಯುವ ಮತ್ತು ಕೃತಕ ಅಂಗಾಂಗಗಳ ಕಾಲ ಬಂದಿರುವ ಈಗ ಹಾಗೆ ಹೇಳಲಾಗುವುದಿಲ್ಲ. 

ಸರಕಾರಗಳಂತೂ ವೃದ್ಧಾಪ್ಯಕ್ಕೆ ೬೦ ವರ್ಷಗಳ ಗೆರೆ ನಿಗದಿ ಪಡಿಸಿವೆ. "ಹಿರಿಯ ನಾಗರಿಕ" (Senior Citizen) ಎಂದು ನಾಮಕರಣ ಸಹ ಮಾಡಿವೆ. ವಯಸ್ಸು ೮೦ ಆದರೆ "ಅತಿ ವೃದ್ಧ". ಸೃಷ್ಟಿಯ ದೃಷ್ಟಿಯಲ್ಲಿ ಯಂತ್ರ ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಅದು ಹಳೆಯ ಯಂತ್ರವೇ.  ಪಂಚಭೂತಗಳಿಂದಾದ ದೇಹಕ್ಕೆ ಅದರದೇ ಆದ ಇತಿ ಮಿತಿಗಳಿವೆ. ಅದನ್ನು ದಾಟುವುದು ಆಗದ ಮಾತು. ಎಲ್ಲೋ ಒಬ್ಬ ಚ್ಯವನ ಋಷಿಯಂತವರು ಅದನ್ನು ಗೆದ್ದರು ಎಂದು ಕೇಳುತ್ತೇವೆ. ಕೇಳುತ್ತೇವೆ, ಅಷ್ಟೇ. ನೋಡಿಲ್ಲ. 

ವೃದ್ಧಾಪ್ಯದಲ್ಲಿ ಮೂರು ಮಜಲುಗಳು; ದೈಹಿಕ, ಬೌದ್ಧಿಕ ಮತ್ತು ಮಾನಸಿಕ. ಮೊದಲನೆಯದು ನಮ್ಮ ಕೈ ಮೀರಿದುದು. ಎರಡನೆಯದು ಮತ್ತು ಮೂರನೆಯದನ್ನು ಪ್ರಯತ್ನಪೂರ್ವಕವಾಗಿ ಎಳೆಯದಾಗಿ ಇಟ್ಟುಕೊಳ್ಳುವುದು ನಮ್ಮ ವಶದಲ್ಲೇ ಇದೆ. ಆದರೆ ಇದಕ್ಕೆ ಪ್ರಬಲವಾದ ಮತ್ತು ಸತತ ಪ್ರಯತ್ನ ಬೇಕು. ಸ್ವಲ್ಪ ಉದಾಸೀನ ಮಾಡಿದರೂ ಇವೆರಡು ನಾಯಿಯ ಬಾಲದಂತೆ ತಮ್ಮ ಚಾಳಿಯನ್ನು ತಕ್ಷಣ ತೋರಿಸುತ್ತವೆ. 

ಭಾರತ ಸರ್ಕಾರದ ಒಂದು ವಿಚಿತ್ರ ವಿವರಣೆಯನ್ನು ಇಲ್ಲಿ ನೆನೆಸಿಕೊಳ್ಳಬೇಕು. ಹಿರಿಯ ನಾಗರಿಕರಿಗೆ ಬ್ಯಾಂಕುಗಳ ಠೇವಣಿ ಹಣಕ್ಕೆ ಅರ್ಧ ಪ್ರತಿಶತ ಹೆಚ್ಚು ಬಡ್ಡಿ ಕೊಡುತ್ತಾರೆ. ಬ್ಯಾಂಕುಗಲ್ಲಿ ಸೇವೆ ಮಾಡಿ ನಿವೃತ್ತರಾದವರಿಗೆ ಒಂದು ಪ್ರತಿಶತ ಹೆಚ್ಚು ಬಡ್ಡಿ ಕೊಡುತ್ತಾರೆ. ಆದರೆ ಅವರು "ಅನಿವಾಸಿ" (NRI) ಆದ ತಕ್ಷಣ ಈ ಎರಡೂ ಸೌಲಭ್ಯಗಳು ಖೋತಾ! ಸರಕಾರದ ದೃಷ್ಟಿಯಲ್ಲಿ ಅವರಿಗೆ ತಾರುಣ್ಯ ಮರಳಿ ಬಂದಂತೆ. 

ವೃದ್ಧಾಪ್ಯ ವರವಾಗಲು ಏನು ಮಾಡಬೇಕು?

ವೃದ್ಧಾಪ್ಯ ವರವೋ ಶಾಪವೋ ಆಗುವುದು ವೃದ್ಧಾಪ್ಯದಲ್ಲಿ ನಿರ್ಧಾರ ಆಗುವ ವಿಷಯ ಅಲ್ಲ. ಆದು ವೃದ್ಧಾಪ್ಯದಲ್ಲಿ ಪ್ರಕಟ ಆಗುವ ಫಲಿತಾಂಶ ಮಾತ್ರ. ಜೀವನದ ಹಿಂದಿನ ದಿನಗಳ ಪ್ರತಿಯೊಂದು ಕ್ರಿಯೆಯೂ ಒಂದೊಂದು ಕಣವಾಗಿ ವೃದ್ಧಾಪ್ಯದಲ್ಲಿ ರೂಪ ತಾಳುತ್ತವೆ. ಸರಿಯಾದ ಕ್ರಮದಲ್ಲಿ ಜೀವನ ನಡೆಸಿದ ವ್ಯಕ್ತಿಗೆ ವೃದ್ಧಾಪ್ಯ ವರವಾಗುವ ಸಾಧ್ಯತೆ ಉಂಟು. ಇಲ್ಲದಿದ್ದರೆ ಅದು ಶಾಪವಾಗುವ ಸಂಭವವೇ ಹೆಚ್ಚು. ಇದರಲ್ಲಿ ಅದೃಷ್ಟದ ಆಟವೂ, ಕಾಣದ ಕೈ ಪ್ರಭಾವಗಳೂ ಕೆಲಸ ಮಾಡುತ್ತವೆ. ಅಡಿಗರು ಹೇಳುವಂತೆ "ಯಾರ ಲೀಲೆಗೋ ಯಾರೋ ಏನೋ ಗುರಿಯಿಡದೆ ಬಿಟ್ಟ ಬಾಣ" ಚುಚ್ಚುವುದೂ ಉಂಟು. ಆಟಕ್ಕೆ ಯಾರೋ ಬಾಣವೊಂದನ್ನು ಬಿಟ್ಟರು. ಆದರೆ ಆ ಬಾಣ ತನ್ನ ಕೆಲಸ ಮಾಡಿತು. ತಾಕಿದವನಿಗೆ ಅದರ ನೋವು ತಿನ್ನುವ ಭಾಗ್ಯ. ಬಾಣ ಬಿಟ್ಟವನು "ನನಗೆ ಆ ಅಭಿಪ್ರಾಯ ಇರಲಿಲ್ಲ" ಎಂದು ಹೇಳಿ ಕೈ ಚೆಲ್ಲಬಹುದು. ಆದರೆ ಏಟು ತಿಂದವನಿಗೆ ಅದು ಏನೂ ಸುಖ ಕೊಡದು. ಉನ್ಮತ್ತರಾದ ಯಾರೋ ಯುವಕರು ಚೇಷ್ಟೆಗಾಗಿ ಓಡಿಸಿದ ವಾಹನದ ಕೆಳಗೆ ಸಿಕ್ಕಿ ಕೈ ಕಾಲು ಮುರಿದುಕೊಂಡ ವ್ಯಕ್ತಿಗೆ ಸರಿಯಾದ ಜೀವನ ಕ್ರಮದಲ್ಲಿ ನಡೆದಿದ್ದರೂ ವೃದ್ಧಾಪ್ಯ ಶಾಪವೇ!

ಒಟ್ಟಿನಲ್ಲಿ ವೃದ್ಧಾಪ್ಯ ವರವಾಗಬೇಕಾದರೆ ಆರೋಗ್ಯ ಚೆನ್ನಾಗಿರಬೇಕು. ಜೊತೆಗೆ ಸ್ವಲ್ಪವಾದರೂ ಧನಬಲ ಇರಲೇಬೇಕು. ಪ್ರೀತಿಯಿಂದ ಕಾಣುವ ಕುಟುಂಬ ವರ್ಗ ಮೂರನೆಯ ಭಾಗ್ಯ. ಇವೇ ರೊಟ್ಟಿ, ಅನ್ನ, ಪಲ್ಯ. ಒಳ್ಳೆಯ ಸ್ನೇಹಿತರು, ಶುಚಿ-ರುಚಿಯಾದ ಹವ್ಯಾಸಗಳು, ಈಗ ಪ್ರಯೋಜನಕ್ಕೆ ಬರುವ ಹಿಂದೆ ಶೇಖರಿಸಿದ ಪದಾರ್ಥಗಳು ಒಗ್ಗರಣೆ, ಉಪ್ಪಿನಕಾಯಿ, ಹಪ್ಪಳ ಇದ್ದಂತೆ. ರೊಟ್ಟಿ, ಅನ್ನ, ಪಲ್ಯದಿಂದ ಊಟ ಆಗಬಹುದು. ಸ್ವಲ್ಪ ನೀರಸ ಇರಬಹುದು. ಆದರೆ ಉಪ್ಪಿನಕಾಯಿ ಮತ್ತು ಹಪ್ಪಳದಿಂದ ಊಟ ಆಗುವುದಿಲ್ಲ!

ಆರೋಗ್ಯ ಚೆನ್ನಾಗಿರಬೇಕು ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಅದೂ ವೃದ್ಧರ ಕೈಯಲ್ಲಿ ಇರುವುದಿಲ್ಲ. "ಕಾಣದ ಕೈ" ವಿಚಿತ್ರವಾದ ವ್ಯಾಧಿಗಳನ್ನು ಕರುಣಿಸಬಹುದು. ಎಲ್ಲ ಸಮಯಗಳಲ್ಲಿಯೂ ಎದೆಗುಂದದೆ ಎದುರಿಸುವ ಮನಸ್ಥಿತಿ ಬಹಳ ಮುಖ್ಯ. ಜೊತೆಗೆ ಔಷಧ-ಉಪಚಾರಗಳು ಸುಲಭವಾಗಿ ಮತ್ತು ಶೀಘ್ರವಾಗಿ ಸಿಗುವ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕು. ಸೋಮಾರಿತನವಿಲ್ಲದೆ ಕಾಲಕಾಲಕ್ಕೆ ವೈದ್ಯರು ನೀಡಿರುವ ಮದ್ದುಗಳನ್ನು ತೆಗೆದುಕೊಳ್ಳಬೇಕಾದ್ದು ಅತ್ಯಂತ ಅವಶ್ಯಕ. ಸ್ವಂತ ಬುದ್ಧಿಯಿಂದ ತಾನೇ ಮದ್ದು ತೆಗೆದುಕೊಳ್ಳುವುದು ಅಪಾಯಕಾರಿಯೇ. 

ಹಣ-ಕಾಸಿನ ವಿಷಯದಲ್ಲಿ ಜಾಗರೂಕತೆ ಇರಬೇಕು. ನಾನು ಯಾರನ್ನೂ ನಂಬುವುದಿಲ್ಲ ಎನ್ನುವವರಿಗೆ ಯಾರನ್ನಾದರೂ ಯೋಗ್ಯರನ್ನು ನಂಬುವವರಿಗಿಂತ ಹೆಚ್ಚು ಅಪಾಯ ಕಟ್ಟಿಟ್ಟ ಬುತ್ತಿ. ವೃದ್ಧಾಪ್ಯ ಹೊಸ ಕನಸುಗಳನ್ನು ಕಟ್ಟುವ ಕಾಲವಲ್ಲ. ಆರ್ಥಿಕ ವಿಷಯಗಳಲ್ಲಿ ಇದನ್ನು ಇನ್ನೂ ಹೆಚ್ಚಾಗಿ ಅನುಸರಿಸಬೇಕು. 

ಹಿಂದಿನ ಜೀವನದಲ್ಲಿ ಬಹಳ ಮುಖ್ಯ ಎಂದುಕೊಂಡಿದ್ದ ಅನೇಕ ವಿಷಯಗಳ ಅನುಪಯುಕ್ತತೆಯನ್ನು ವೃದ್ಧಾಪ್ಯದಲ್ಲಿ ಕಾಣಬಹುದು. ಅಯ್ಯೋ, ಇಷ್ಟು ಸಣ್ಣ ವಿಷಯಕ್ಕೆ ಎಷ್ಟು ಪರದಾಡಿದೆ ಎಂದು ಈಗ ಪೇಚಾಡುವ ಸಮಯ! ಉದ್ವೇಗ ಉಂಟುಮಾಡುವ ವಿಷಯಗಳನ್ನು ಬಿಡುವುದೇ ವಾಸಿ. 

"ನಾನು ಯಾರನ್ನೂ ಲೆಕ್ಕಕ್ಕಿಡುವುದಿಲ್ಲ. ನಾನು ನೇರ, ನಿರ್ಭೀತ. ನನಗೆ ದಯಾ, ದಾಕ್ಷಿಣ್ಯ ಇಲ್ಲ." ಎಂದು ಹೇಳುವ ಅನೇಕರನ್ನು ನಾವು ಕಾಣುತ್ತೇವೆ. ವಿಶಾಲ ಸೃಷ್ಟಿಯಲ್ಲಿ ಯಾವುದೇ ಲೆಕ್ಕಕ್ಕೂ ಬಾರದ ಅತಿ ಸಣ್ಣ ಕಣ ನಾವು ಎನ್ನುವ ಅರಿವು ಇರುವವನಿಗೆ ದಯಾ ದಾಕ್ಷಿಣ್ಯ ಇರಲೇ ಬೇಕು. ಭರ್ತೃಹರಿಯು ಇದನ್ನೇ "ದ್ದಾಕ್ಷಿಣ್ಯಮ್ ಸ್ವಜನೇ, ದಯಾ ಪರಿಜನೇ... " ಮುಂತಾಗಿ ಹೇಳಿದ್ದು. ಪುರಂದರದಾಸರು ಸೊಗಸಾಗಿ ಹೇಳುತ್ತಾರೆ:

ಕಲ್ಲಾಗಿ ಇರಬೇಕು ಕಠಿಣ ಭವ ತೊರೆಯೊಳಗೆ 
ಬಿಲ್ಲಾಗಿ ಇರಬೇಕು ಬಲ್ಲವರೊಳಗೆ 
ಬೆಲ್ಲವಾಗಿರಬೇಕು ಬಂಧು ಜನದೊಳಗೆ  

"ನಾನು ಅದು ಮಾಡುತ್ತೇನೆ. ಹೀಗೆ ಮಾಡುತ್ತೇನೆ" ಎಂದು ಹಾರಾಡುವುದು ಮೊದಲು ನಿಲ್ಲಿಸಬೇಕು. "ಇದು ಬಾಳು ನೋಡು, ನಾ ತಿಳಿದೆನೆಂದರೂ ತಿಳಿದ ಧೀರನಿಲ್ಲ" ಎನ್ನುತ್ತಾರೆ ಅಡಿಗರು. ಪ್ರಕೃತಿಯ ನಿಯಮಗಳಿಗೆ ನಮ್ಮನ್ನು ಒಪ್ಪಿಸಿಕೊಂಡು ಆನಂದ ಕಂಡುಕೊಳ್ಳಬೇಕು. "ಜಗಕೆ ಸಂತಸವೀವ ಘನನು ತಾನೆಂತೆಂಬ ವಿಪರೀತ ಮತಿಯನಳಿದು" ಎನ್ನುವ ಕವಿವಾಣಿಯನ್ನು ದಿನಾ ಮೂರು ಬಾರಿ ಹೇಳಿಕೊಳ್ಳುವುದು ಒಳ್ಳೆಯದು. ಜೀವನದ ಕಾವ್ಯದಲ್ಲಿ ನಾವು ಅನೇಕ ಕಸರತ್ತು ಮಾಡಬಹುದು. ಕೆಲವದರಲ್ಲಿ ಗೆಲ್ಲಬಹುದು. ಅನೇಕದರಲ್ಲಿ ಬೀಳಬಹುದು. ಆದರೆ ಜೀವನ ಕಾವ್ಯದ ಪೂರ್ಣ ವಿರಾಮ (full stop) ಹಾಕುವ ಅಧಿಕಾರವನ್ನು ಅವನು ಇನ್ನೂ ತನ್ನಲ್ಲಿಯೇ ಇಟ್ಟುಕೊಂಡಿದ್ದಾನೆ. ಇದನ್ನು ಮರೆಯದೆ ಬುಲಾವು ಬಂದಾಗ ಹೊರಡಲು ತಯಾರಿದ್ದವನಿಗೆ ವೃದ್ಧಾಪ್ಯದಲ್ಲಿ ಏನು ಕಂಡಿತೋ ಅದರಲ್ಲಿ ಆನಂದ ಅನುಭವಿಸುವ ಕಲೆ ಸಿದ್ಧಿಸುತ್ತದೆ. 

*****

"ಭಾರತೀಯ ಜೀವನ್ ಬಿಮಾ ನಿಗಮ" (Life Insurance Corporation of India) ಜೀವನದ ಆನಂದವನ್ನು ನೋಡುವ ರೀತಿಯೇ ಬೇರೆ. ಅದರ ಅನೇಕ ಪಾಲಿಸಿಗಳಲ್ಲಿ ಜೀವನ್ ಆನಂದ್ ಪಾಲಿಸಿಯೂ ಒಂದು. ಇದು ಒಂದು ರೀತಿಯ ಬಹೂಪಯೋಗಿ ಪಾಲಿಸಿ. ಈ ರೀತಿಯ ಪಾಲಿಸಿಯೊಂದನ್ನು ಪಡೆದುಕೊಂಡ ಸ್ನೇಹಿತನೊಬ್ಬನ ಕಥೆಯೊಂದನ್ನು ಅವನ ಭಾಷೆಯಲ್ಲಿಯೇ ಕೇಳುವುದು ಅಥವಾ ಓದುವುದು ಬಹಳ ಚೆಂದ. 

"ನಾನು ಸಂಪಾದನೆ ಮಾಡಲು ಪ್ರಾಂಭಿಸಿದಾಗಿನಿಂದಲೂ ಜೀವ ವಿಮೆ ಮಾಡಿಸುತ್ತಿದ್ದೆ. ನನ್ನ ಮೊದಲ ಸರಿಯಾದ ಕೆಲಸ ಕೊಡುತ್ತಿದ್ದ ತಿಂಗಳ ಸಂಬಳ ಮೂರು ನೂರು ರೂಪಾಯಿ ಮಾತ್ರ. ಈ ಉದ್ಯೋಗಕ್ಕೆ ಮುಂಚೆ ಸಣ್ಣ ಕೆಲಸಗಳು ಇದ್ದರೂ ವಿಮೆ ಮಾಡಿಸುವ ಧೈರ್ಯ ಇರಲಿಲ್ಲ. ಈ ಉದ್ಯೋಗ ಸೇರಿದಾಗ ಒಂದು ಶನಿವಾರ ಸಹೋದ್ಯೋಗಿಯೊಬ್ಬ ಸಂಜೆ ಅವರ ಮನೆಗೆ ಚಹಾ ಸೇವನೆಗೆ ಕರೆದ. ನಾನೂ ನನ್ನಂತೆ ಇನ್ನಿಬ್ಬರು ಸಹೋದ್ಯೋಗಿಗಳೂ ಹೋದೆವು. ಸ್ವಾಗತಿಸಿ ಕೂಡಿಸಿದ ನಂತರ ಸೊಗಸಾದ ಚೂಡಾ, ಬೋಂಡಾದ ಜೊತೆ ಚಹಾ ಬಂತು. ಆ ಗುಂಗಿನಲ್ಲೇ ಇದ್ದಾಗ ಹಿರಿಯರೊಬ್ಬರು ಜೀವದ ಬೆಲೆ, ವಿಮೆಯ ಪ್ರಾಮುಖ್ಯತೆ ಇತ್ಯಾದಿಗಳ ಬಗ್ಗೆ ಪುಟ್ಟ ಭಾಷಣ ಕೊಟ್ಟರು. ಎಲ್ಲರ ಕೈಯ್ಯಲ್ಲೂ ಒಂದೊಂದು ಫಾರಂ ಇಟ್ಟರು. ಕಡೆಗೆ ಅದು ವಿಮೆ ಪಾಲಿಸಿ ಕೊಳ್ಳುವ ಫಾರಂ ಎಂದು ತಿಳಿಯಿತು. ಬೇಡ ಎನ್ನುವ ಮೊದಲೇ ಹದಿನಾಲ್ಕು ರೂಪಾಯಿ ಮಾಸಿಕ ಕಂತಿನ ಐದು ಸಾವಿರ ರೂಪಾಯಿಯ ಪಾಲಿಸಿಗೆ ಸಹಿ ಮಾಡಿಸಿದರು. ಬೋಂಡಾ, ಚಹಾ ನೀಡಿ ಹುಡುಗಿ ಗಂಟು ಹಾಕುವುದು ಕೇಳಿದ್ದೆ. ಇಲ್ಲಿ ಪಾಲಿಸಿ ಗಂಟುಬಿತ್ತು. ನೀವು ಏನೂ ಚಿಂತೆ ಮಾಡಬೇಡಿ. ನಿಮ್ಮ ಸಂಬಳದಿಂದ ಅದಾಗದೇ ವಿಮೆಯ ಕಂತು ಹೋಗುತ್ತದೆ. ನೀವೇನೂ ಕಟ್ಟಬೇಕಾಗಿಲ್ಲ ಎಂದು ಅವರೇ ಹಣ ನೀಡುವ ರೀತಿ ಅಭಯವನ್ನೂ ನೀಡಿದರು. ಹೀಗೆ ಸಂಬಳ ಹೆಚ್ಚುತ್ತಿದ್ದಂತೆ ಬೇರೆ ಬೇರೆ ಪಾಲಿಸಿ ಕೊಂಡೆ". 

"ಇಪ್ಪತ್ತೈದು ವರ್ಷದ ನಂತರ ಮೊದಲ ಪಾಲಿಸಿ ಹಣ ಬಂತು. ಏಳು ಸಾವಿರದ ಐದು ನೂರು ರೂಪಾಯಿ. ಅದು ಆಗ ಬರುತ್ತಿದ್ದ ಒಂದು ತಿಂಗಳ ಸಂಬಳ! ಇಪ್ಪತ್ತೈದು ವರ್ಷ ಪ್ರತಿ ತಿಂಗಳೂ ಕಂತು ಕಟ್ಟಿದ್ದರ ಪ್ರತಿಫಲ. ಹೀಗೆ ಎಲ್ಲ ಪಾಲಿಸಿಗಳೂ ಮುಗಿದು ವಿಮೆಯೇ ಇಲ್ಲದಂತಾಯಿತು."

"ಇನ್ನೊಬ್ಬ ಹಿತೈಷಿ(?) ಮಿತ್ರರು ಈ ಪರಿಸ್ಥಿತಿ ನೋಡಿ ಬಹಳ ಸಂಕಟ ಪಟ್ಟರು. ಐವತ್ತು ವಯಸ್ಸಿಗೆ ವಿಮೆಯೇ ಇಲ್ಲ ಎಂದರೆ ಏನು? ಬಹಳ ತಪ್ಪು. ಹೊಸ "ಜೀವನ್ ಆನಂದ್" ಬಂದಿದೆ. ಪಾಲಿಸಿ ತಗೊಳ್ಳಿ. ಹತ್ತು ವರ್ಷ ಕಂತು ಕಟ್ಟಿ. ನಿಮ್ಮ ನಿವೃತ್ತಿಯ ವೇಳೆಗೆ ಪಾಲಿಸಿ ಹಣ ಬರುತ್ತದೆ. ಅಷ್ಟೇ ಅಲ್ಲ. ಮುಂದೆ ಕಂತು ಕಟ್ಟದಿದ್ದರೂ ವಿಮೆಯ ಅಭಯ ಛತ್ರ ನಿಮ್ಮ ತಲೆಯ ಮೇಲೆ ಇರುತ್ತದೆ. ನಿಮ್ಮ ಮರಣದ ನಂತರ ಪಾಲಿಸಿಯ ಅಷ್ಟೇ ಹಣ ನಿಮಗೆ {!) ಸಿಗುತ್ತದೆ." ಎಂದು ಬಹಳ ಕಳಕಳಿಯಿಂದ ಹೇಳಿದರು. ಸರಿ, ಆಯಿತು, ಪಾಲಿಸಿ ಬಾಂಡ್ ಬಂತು."

"ಪಾಲಿಸಿ ಬಾಂಡ್ ಹಿಡಿದು ಏನನ್ನೋ ಸಾಧಿಸಿದಂತೆ ಮನೆಗೆ ಹೋದೆ. ಹೆಂಡತಿಯ ಕೈಯಲ್ಲಿ ಬಾಂಡ್ ಇಟ್ಟು "ಜೀವನದ ಆನಂದ" ವಿವರಿಸಿದೆ. "ನಿಮ್ಮ ದರಿದ್ರ ಬಾಂಡ್ ನೀವೇ ಇಟ್ಟುಕೊಳ್ಳಿ. ನಿಮ್ಮ ಸಾವಿನ ನಂತರ ಬರುವ ಆನಂದ ನಮಗೆ ಬೇಡ" ಎಂದು ಪಾಲಿಸಿ ನನ್ನ ಕೈಗೇ ತಳ್ಳಿದಳು." 

"ಹತ್ತು ವರುಷದ ನಂತರ ಪಾಲಿಸಿ ಹಣ ಬಂತು. ಖರ್ಚೂ ಆಯಿತು. ಬಾಂಡ್ ಮಾತ್ರ ನನ್ನ ಮರಣದ ನಿರೀಕ್ಷೆಯಲ್ಲಿ ಕಪಾಟಿನಲ್ಲಿ ಕುಳಿತಿತ್ತು."

"ಮತ್ತೆ ಹತ್ತು ವರುಷದ ನಂತರ ಮತ್ತೊಬ್ಬ ಹಿತೈಷಿ "ಜೀವನದ ಆನಂದ"ದ ವಿಷಯ ಮಾತಾಡುವಾಗ ಹೊಸ ವಿಷಯ ಹೇಳಿದರು. ಈ ಬಾಂಡ್ ಸಹವಾಸ ಸಾಕು ಎಂದರೆ ವಿಮಾ ನಿಗಮಕ್ಕೆ ಹಿಂತಿರುಗಿಸಿ ಸ್ವಲ್ಪ ಕಡಿಮೆ ಆದರೂ ನೀವು ಬದುಕಿದ್ದಾಗಲೇ ಹಣ ಪಡೆಯಬಹುದು. ಹಾಗೆ ಮಾಡಿ. ಸಂಸಾರದಲ್ಲಿ ಮನಸ್ತಾಪ ಯಾಕೆ?" ಎಂದು ಸಲಹೆ ಕೊಟ್ಟರು."

"ಹಾಗೆಯೇ ಮಾಡಿದೆ. ಸ್ವಲ್ಪ ಹಣವೂ ಬಂತು. ಹೆಂಡತಿಯ ಮುಖವೂ ಸ್ವಲ್ಪ ಅರಳಿತು. ಎದೆಯಲ್ಲಿ ಚುಚ್ಚಿಕೊಂಡಿದ್ದ ಮುಳ್ಳು ಹೊರ ಬಂದಂತೆ ನಿರಾಳವಾಯಿತು. ಮರಣದ ನಂತರ ಬರುವ ಆನಂದವನ್ನೂ ಬದುಕಿರುವಾಗಲೇ ಕಂಡೆ!"
*****
ಆನಂದ ಅನುಭವಿಸುವುದಕ್ಕೂ ವಿಷಾದ ಪಡುವುದಕ್ಕೂ ಪ್ರತಿನಿತ್ಯ ನೂರು ಕಾರಣಗಳು ಸಿಗುತ್ತವೆ. ಆಯ್ಕೆ ಅವರವರಿಗೆ ಬಿಟ್ಟಿದ್ದು. 

Sunday, February 1, 2015

The Vicious Circle

A poor man was struggling to manage his day-to-day life.  The state of his poverty could not be measured or explained.  He simply did not have anything, not even two pairs of decent dress.  He moved around in tattered clothes.  He tried many means for earning a livelihood, but nothing worked.  Repeated failures frustrated him.  Others were reluctant to keep his company.  Life was one big unsolved riddle and mystery for him.  "Why should I ever live?", was a question that was confronting him each day.

A saint had embarked on a pilgrimage and on the way he camped in the poor man's village. Someone suggested to the poor man to meet the saint and seek his blessings.  He was also told that the saint had mystic powers and may be able to find a solution to the man's utter poverty. The poor man now had some hope. He visited the saint and waited for an opportunity to meet him when he was alone. When he got a chance, he fell on the saint's feet and cried uncontrollably.  His pent up emotions got better of him and he could not even explain his problem to the saint.

The saint could understand the problem of the poor man, more through common sense than through mystic powers.  He meditated for some time and by using his powers scanned the past history of the poor man.  During his many previous lives, this man had no record of giving away anything to someone else.  He was extremely selfish and had no tendency to share anything he had.  Since he had no habit of giving to others, his ledger showed "Nil" balance.  As he had forgotten the art of giving to others, he had forfeited his entitlement to receive from others. There was no balance in the account to permit debits and there was no possibility of receiving any credits.  Something had to be done for renewing the account. The sage realized that there was not even the possibility of giving him a loan.  He did not have any margin money to show for borrowing from someone else. He had indeed reached a dead end.  He was caught in the vicious circle.

The sage asked him about his assets or something he could give to others.  The poor man replied that he had nothing with him.  The sage saw that something was partly visible from the pocket of his torn dress.  "What is that? Take it out", he commanded.  It was a small brass tumbler he had kept with him for drinking water. "Let us begin with this", the sage said and took him to the village merchant.  He advised the merchant to purchase the tumbler and give the value to the poor man. "What value can I give to this battered brass tumbler?  It is not even worth three spoons of sugar!", the merchant exclaimed.  "Then you give him two spoons of sugar", advised the sage.  The merchant complied with the instructions.  The sage returned to his camp with the poor man and the small sugar packet. He took out a lemon from his bag and advised the poor man to prepare lemon juice using the sugar with him.  The small quantity of juice was distributed to a few persons available near the camp.  "Your future will be brighter now on.  Lead a pious life and help others, in whatever way you can", advised the sage and left on his pilgrimage.  The poor man followed the advice and continued with his life.

The sage returned from his pilgrimage after a few years and again camped at the village. By this time, the poor man's tide had turned.  He was in much better shape socially and economically.  He helped others whenever the opportunity arose and shared whatever he had with others.  His poverty had gone and he had come out of the vicious circle.  The sage was happy that the account was revived and continued his journey. 
*****
Poverty comes in many shades.  But the general perception is only about one of them; economic poverty.  That is so because it is very evident and visible to all.  It is also due to constant measurement of economic status by people around us. There are other types of poverty as well.  Social poverty or not having a sense of belonging to any recognizable group is another.  We hear of people going into depression or committing suicide despite being financially well off.  A feeling of being unwanted by their close groups at family, friends or at work is often a reason for this and it is a sign of social poverty.  Psychological poverty closely follows social poverty and acts on the mind of the concerned person. Intellectual poverty and moral poverty are still higher orders of poverty.  Of course, these are not very visible and can be easily camouflaged deliberately or otherwise.   

*****
"Garuda Purana" is one of the eighteen puranas and gets its name as it is in the form of a discussion between Lord Mahavishnu and Garuda.  It deals with details of life after death and the rituals that are performed after the death of a person, in some parts of our country. There is a practice of reciting this purana or arrange for its discourse during the fortnight immediately following the death of a person, when the heirs perform sacred rituals. May be due to this practice, no one reads it at other times! Many details in the purana deal with the punishments given to a person in hell for the misdeeds done when alive. This make people shudder at the thought of life after the death and avoid reading this purana itself.

One of the verses in "Garuda Purana" deals with this vicious cycle of poverty and sins.  It clearly identifies the reasons for poverty as not sharing one's wealth with others and not doing good deeds when one is capable of.  It reads thus:

अदत्त दानाच्च भवेत् दरिद्रः दारिद्र दोषात् करोति पापम् |
पाप प्रभावात् नरकं स याति पुनर्दरिद्रः पुनरेव पापी ||

adatta daanachha bhavet daridraha, daridra doshat karoti papam
papa prabhaavat narakam sa yaati, punardaridraha punareva paapi

Due to not giving (sharing), he becomes poor; he commits sins because of that poverty.  As a result of those sins he goes to the lower world (naraka) as a punishment, he is again born poor and repeats the sins.  The vicious cycle continues.......
*****
That leaves us with a pertinent question - should we believe in the theory of existence of other worlds and in re-birth and repeated births?

No one knows for sure, whether there are other worlds or there are re-births. But it is a matter of common sense that all material wealth has limitations of time. Likewise, there is true pleasure in sharing one's possessions with others while living as member of a civilized society.  It is better to share and enjoy their utility while they are still useful rather than hoard them and allow them to decay with time.