Showing posts with label Parihaara. Show all posts
Showing posts with label Parihaara. Show all posts

Saturday, April 18, 2026

ಪವಮಾನ ಮತ್ತು ಪೂಯಮಾನ ಹೋಮಗಳು

 

ಯಾವುದೇ ವ್ಯಕ್ತಿ ತಾನು ಕೊಳಕಾಗಿರಬೇಕೆಂದು ಬಯಸುವುದಿಲ್ಲ. ತನ್ನನ್ನು ನೋಡಿದವರು ಅಸಹ್ಯ ಪಡದೆ ಮತ್ತೊಮ್ಮೆ ನೋಡಬೇಕೆಂದು ಇಚ್ಚಿಸುವುದು ಸ್ವಾಭಾವಿಕ. ಚೆನ್ನಾಗಿ ಕಾಣಿಸಬೇಕೆಂದು ಅನೇಕ ರೀತಿಯಲ್ಲಿ ಅಲಂಕರಿಸಿಕೊಳ್ಳುವುದು ಮತ್ತು ಸುಗಂಧ ದ್ರವ್ಯಗಳನ್ನು ಪೂಸಿಕೊಳ್ಳುವುದೂ ನಡೆಯುತ್ತಲೇ ಇರುತ್ತದೆ. ಆಕರ್ಷಕವಾಗಿ ಕಾಣಲು ಒಳ್ಳೆಯ ವಸ್ತ್ರಗಳು ಮತ್ತು ಇತರ ಪರಿಕರಗಳನ್ನೂ ಬಳಸುವುದು ಬಹಳ ಹಿಂದಿನಿಂದ ಬಂದಿದೆ. ನಾಗರೀಕತೆ ಬೆಳೆದಂತೆ ಇದರ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸುತ್ತಿರುವುದು ದಿನನಿತ್ಯ ಕಾಣುವ ದೃಶ್ಯ. ಸೌಂದರ್ಯ ವರ್ಧಕಗಳ ಸಂಬಂಧದ ಉದ್ಯಮವು ಹಿಂದೆಂದಿಗಿಂತ ಅಧಿಕ ವೇಗದಲ್ಲಿ ಬೆಳೆದು ಶತಕೋಟಿ ಡಾಲರುಗಳ ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತಿದೆ. 

ಏನೋ ಕಾರಣಕ್ಕೆ ಮನೆಯ ಹೊರಗಡೆ ಹೋಗಿ ಬಂದಾಯಿತು. ಹೊರ ಪ್ರಪಂಚದ ಧೂಳು, ಹೊಗೆ, ಅಂಟು ಪದಾರ್ಥಗಳು, ಮಳೆ-ಗಾಳಿ, ನಮ್ಮ ದೇಹದಲ್ಲೇ ತಯಾರಾದ ಬೆವರು ಮುಂತಾದುವುಗಳಿಂದ ದೇಹ ಮಲಿನವಾಯಿತು. ಇದು ದಿನ ಆಗುವುದೇ. ಏನು ಮಾಡುವುದು? ಆದ್ದರಿಂದ ಹಾಗೇ ಇದ್ದುಗೊಳ್ಳಲಿ. ಹೀಗೆಂದು ನಾವು ಬಿಡುವುದಿಲ್ಲ. ಮನೆಗೆ ಬಂದ ತಕ್ಷಣ ಕೈ-ಕಾಲು, ಮುಖ ತೊಳೆದುಕೊಳ್ಳುತ್ತೇವೆ. ಹೆಚ್ಚಿನ ಪ್ರಮಾಣದ ಕೊಳೆ ಆಗಿದ್ದರೆ ಸ್ನಾನವೂ ಮಾಡುತ್ತೇವೆ. ಮೊದಲು ಧರಿಸಿದ್ದ ಬಟ್ಟೆ-ಬರೆಗಳನ್ನು ಬದಲಿಸಿ ಶುಭ್ರವಾದ ಅರಿವೆ ಧರಿಸುತ್ತೇವೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗೆ ಮಾಡಿಕೊಂಡಾಗ "ಸದ್ಯ, ಈಗ ಆರಾಮ ಎನಿಸಿತು" ಎಂದು ನಮಗೆ ನಾವೇ ಹೇಳಿಕೊಳ್ಳುತ್ತೇವೆ. ಹತ್ತಿರವಿದ್ದವರಿಗೆ ಹಾಗೆ ಹೇಳುವುದೂ ಉಂಟು. 

ಈ ರೀತಿ ಶುಭ್ರವಾಗುವುದಕ್ಕೇ ಚಟುವಟಿಕೆ ನಿಲ್ಲುವುದಿಲ್ಲ. ಮಾರನೆಯ ದಿನ ಹೊರಗಡೆ ಹೋಗುವಾಗ ಹೆಚ್ಚಿನ ಕೊಳೆ-ಗಲೀಜು ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತೇವೆ. ಅದಕ್ಕೆ ಬೇಕಾದ ಪರಿಕರಗಳನ್ನೂ ಹೊಂದಿಸಿಕೊಳ್ಳುತ್ತೇವೆ. ಧೂಳಿನ ವಾತಾವರಣ ಅಥವಾ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ತಂಪು ಕನ್ನಡಕ ಇರಬಹುದು. ಮಳೆ ಬರುವ ವಾತಾವರಣ ಇದ್ದರೆ ಒಂದು ಛತ್ರಿ, ಅದಕ್ಕೆ ಸರಿಯಾದ ಪಾದರಕ್ಷೆ ಇರಬಹುದು. ವಾಹನ ಬದಲಿಸಬಹುದು. ಸ್ಕೂಟರಿನಲ್ಲಿ ಹೋಗುವ ಬದಲು ಕಾರಿನಲ್ಲಿ ಹೋಗಬಹುದು. ಈ ರೀತಿ ಮುಂದೆ ಆಗುವ ಕೊಳೆ  ತಪ್ಪಿಸಿಕೊಳ್ಳಲೂ ಪ್ರಯತ್ನಿಸುತ್ತೇವೆ. 

*****

ಒಂದಲ್ಲ ಒಂದು ಕಾರಣಕ್ಕೆ ನಾವು ಆಗಾಗ ಔಷಧಿಗಳನ್ನು ಸೇವಿಸುತ್ತಿರುತ್ತೇವೆ. ದೇಹಕ್ಕೆ ರೋಗ-ರುಜಿನಗಳು ಬರುವುದು ಸ್ವಾಭಾವಿಕ. ಹೀಗೆ ಕಾಯಿಲೆ-ಕಸಾಲೆಗಳು ಬಂದಾಗ ಅವುಗಳ ಪೀಡೆಯಿಂದ ಹೊರಬಂದು ಮತ್ತೆ ಪೂರ್ಣ ಅರೋಗ್ಯ ಪಡೆಯಲು ಸೇವಿಸುವ ಔಷಧಿಗಳಿಗೆ "ರೋಗ ನಿವಾರಕ" ಔಷಧಿಗಳು ಅನ್ನುತ್ತೇವೆ. ಅಂತೆಯೇ ನಮಗೆ ರೋಗ ಬರದಿರಲು ಕೆಲವು ಔಷಧಗಳನ್ನು, ಟಾನಿಕ್ಕು ಮೊದಲಾದುವುಗಳನ್ನೂ ಸೇವಿಸುತ್ತೇವೆ. ಉದಾಹರಣೆಗೆ ವ್ಯಾಕ್ಸಿನೇಷನ್, ಬೂಸ್ಟರ್ ಮುಂತಾದುವು. ಇವುಗಳಿಗೆ "ರೋಗ ನಿರೋಧಕ" ಅನ್ನುತ್ತೇವೆ. ಆಗಲೇ ಬಂದು ವಕ್ಕರಿಸಿರುವ ರೋಗದಿಂದ ಹೊರಬರಲು ರೋಗ ನಿವಾರಕಗಳು. ರೋಗವೇ ಬಾರದಿರಲು ರೋಗ ನಿರೋಧಕಗಳು!

ಕಾನೂನಿನ ವಿದ್ಯಾರ್ಥಿಗಳಿಗೆ ಪಾಠ ಹೇಳುವಾಗ ಕಾನೂನಿನ ಪುಸ್ತಕಗಳನ್ನು ಎರಡು ರೀತಿಯಾಗಿ ವಿಭಾಗಿಸುತ್ತಾರೆ. ಒಂದು "ನಿರ್ಣಾಯಕ ಕಾನೂನು" (Substantive law) ಎಂದು. ನಿರ್ಣಾಯಕ ಕಾನೂನು "ಹಕ್ಕು ಮತ್ತು ಜವಾಬ್ದಾರಿ" ಮತ್ತು "ಅಪರಾಧಗಳು" ಇವುಗಳ ಮಹತ್ವವನ್ನು ವಿವರಿಸುತ್ತವೆ. ಇನ್ನೊಂದು "ಕಾರ್ಯ ವಿಧಾನ ಕಾನೂನು" (Procedural law) ಎಂದು. ಇವು ನ್ಯಾಯ ನಿರ್ಣಯ ಮಾಡುವ ಕ್ರಮವನ್ನು ವಿವರಿಸುತ್ತವೆ. ಕೆಲವು ಕಾನೂನುಗಳು ಇವೆರಡರನ್ನೂ ಒಳಗೊಂಡು ಎರಡು ಭಾಗಗಳಿಗೂ ಸೇರುತ್ತವೆ. 

***** 

ಯಾವುದೋ ಒಂದು ವಿಷಯ ಪೂರ್ತಿಯಾಗಿ ತೀರ್ಮಾನ ಆಗಿರುವುದಿಲ್ಲ. ಇಂತಹ ಹಂತದಲ್ಲಿ ಅವುಗಳ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿರುತ್ತದೆ. ಆಗ ಅದು ಒಂದು ಗೊಂದಲದ ಸ್ಥಿತಿ. ಪೂರ್ತಿ ಚರ್ಚೆ ನಡೆದು, ಸಾಧಕ-ಬಾಧಕಗಳ ಪರಿಶೀಲನೆ ನಡೆದು, ಕೊನೆಯ ತೀರ್ಮಾನ ಹೊರಬರುತ್ತದೆ. ಈಗ ಗೊಂದಲ ನಿವಾರಣೆ ಆಯಿತು. ಸರ್ಕಾರದ ವಿಷಯಗಳಲ್ಲಿ "ಸರ್ಕಾರೀ ಆದೇಶ" (Goverement Order) ಆಯಿತು ಅನ್ನುತ್ತೇವೆ. ಹೀಗೆ ಸರ್ಕಾರಿ ಆದೇಶ ಹೊರಬಿದ್ದಮೇಲೆ ಮತ್ತೆ ಚರ್ಚೆಗೆ ಅವಕಾಶ ಇಲ್ಲ. 

ವೇದಗಳನ್ನು ನಂಬುವವರು ಅವುಗಳಲ್ಲಿ ಹೇಳಿರುವುದನ್ನು ಈ ರೀತಿಯ ಸರ್ಕಾರಿ ಆದೇಶದಂತೆ ಪರಿಗಣಿಸುತ್ತಾರೆ. "ಹೀಗಿರಬೇಕು" ಅಂದರೆ ಹೀಗೆಯೇ ಇರಬೇಕು. ಹಾಗಿರುವಂತಿಲ್ಲ. "ಹೀಗೆ ಮಾಡಬೇಕು" ಅಂದರೆ ಹೀಗೆಯೇ ಮಾಡಬೇಕು. ಹಾಗೆ ಮಾಡುವಂತಿಲ್ಲ. ಏಕೆ ಎಂದು ಕೇಳುವಂತಿಲ್ಲ. ಯಾಕಂದರೆ ಚರ್ಚೆಯ ಕಾಲ ದಾಟಿ ಸರ್ಕಾರಿ ಆದೇಶ ಹೊರಬಂದಿದೆ. ಈಗ ಆದೇಶವನ್ನು ಪ್ರಶ್ನಿಸುವಂತಿಲ್ಲ. ಇಂತಹ ಆದೇಶಗಳ ಪಾಲನೆಯಲ್ಲಿ ದಯೆ-ದಾಕ್ಷಿಣ್ಯ, ಅಂತಃಕರಣ, ಸ್ವಲ್ಪ ಅಡ್ಜಸ್ಟ್ ಮಾಡು, ಇಂತಹವುಗಳಿಗೆ ಅವಕಾಶವಿಲ್ಲ. 
*****

ಮೇಲಿನ ಎಲ್ಲ ಅಂಶಗಳು ಲೌಕಿಕ ವಿಚಾರಗಳಿಗೆ ಅನ್ವಯವಾಗುತ್ತವೆ. ಹಾಗಿದ್ದರೆ, ತಾತ್ವಿಕ ವಿಚಾರಗಳಲ್ಲಿ ಇವುಗಳ ಅನ್ವಯ ಹೇಗೆ? ದೇಹ ಮತ್ತು ಆತ್ಮ ಬೇರೆ ಬೇರೆ. ದೇಹವನ್ನು ಇಲ್ಲಿ ಬಿಡುತ್ತೇವೆ. ಮುಂದಿನ ಲೋಕಕ್ಕೆ ಆತ್ಮ ಪ್ರಯಾಣ ಬೆಳೆಸುತ್ತದೆ. ಇಹಲೋಕ-ಪರಲೋಕ ಎಂಬುವುವು ಉಂಟು. ಪಾಪ-ಪುಣ್ಯ ಎಂದುಂಟು. ಹೀಗೆ ನಂಬಿದಾಗ ಅವುಗಳ ಸಮಾಚಾರ ಏನು? ಈ ಪ್ರಶ್ನೆಗಳಿಗೆ ಉತ್ತರ ಹೇಗೆ? ಇವು ಯೋಚಿಸಬೇಕಾದ ವಿಷಯಗಳೇ. 

ಋಗ್ವೇದದ ಒಂಭತ್ತನೆಯ ಮಂಡಲದ ಕಡೆಯ ಭಾಗದಲ್ಲಿನ ಕೆಲವು ಮಂತ್ರಗಳನ್ನು "ಕರ್ಣ ಮಂತ್ರಗಳು" ಎಂದು ನಿರ್ದೇಶಿಸುತ್ತಾರೆ. ಜೀವಿತದ ಕಡೆಯ ಭಾಗ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಚೆನ್ನಾಗಿರುವಾಗಲೇ ಅಂತ್ಯ ಕಾಲ ಬರಬಹುದು. ಮತ್ತೆ ಕೆಲವರಿಗೆ ಹಾಸಿಗೆ ಹಿಡಿದು ಕಾಲ ಕಳೆಯುವ ಸಂದರ್ಭ ಒದಗಿಬರಬಹುದು. ಹೀಗೆ ಹಾಸಿಗೆ ಹಿಡಿದು ಮಲಗಿದ ಹಿರಿಯರಿಗೆ ಅಂತ್ಯ ಕಾಲದಲ್ಲಿ ಅವರ ಮಕ್ಕಳೋ, ಬಂಧುಗಳೋ ಅವರ ಮುಂದಿನ ಪ್ರಯಾಣದ ಕಾಲದಲ್ಲಿ ಅನುಕೂಲವಾಗಲೆಂದು ಕೆಲವು ವಿಶೇಷವಾದ ಮಂತ್ರಗಳನ್ನು ಅವರ ಕಿವಿಯಲ್ಲಿ ಹೇಳುವ ಪರಿಪಾಠವಿದೆ. ಇವೇ ಕರ್ಣ ಮಂತ್ರಗಳು. 

ವೇದಗಳಲ್ಲಿರುವ ಎಲ್ಲ ಮಂತ್ರಗಳೂ ಪವಿತ್ರವಾದುವೇ. ಅದಕ್ಕೇ ಅವುಗಳಿಗೆ ಅಲ್ಲಿ ಸ್ಥಾನ ಸಿಕ್ಕಿರುವುದು. ಆದರೂ ಎಲ್ಲದರಲ್ಲಿಯೂ "ಯಾವುದು ಮುಖ್ಯ?" ಎಂದು ಹುಡುಕುವುದು ಮಾನವ ಸಹಜ ಅಭ್ಯಾಸ. ಹೀಗೆ ನೋಡಿದಾಗ ಒಂಭತ್ತನೆಯ ಮಂಡಲದ ಭಾಗಗಳನ್ನು "ಪವಿತ್ರನಾಮ್ ಚ ಪವಿತ್ರಂ" ಎಂದು ತಿಳಿದವರು ಹೇಳುತ್ತಾರೆ. ಹೀಗೆ ಹೇಳುವ ಒಟ್ಟು ಸೂಕ್ತಗಳು 114 ಎನ್ನುತ್ತಾರೆ. ಅವುಗಲ್ಲಿ 1,108 ಋಕ್ಕುಗಳಿವೆ. 

ಇವುಗನ್ನು ಅನುಕೂಲಕ್ಕಾಗಿ ಎರಡು ಭಾಗ ಮಾಡಿದ್ದಾರೆ. ಮೊದಲ ಭಾಗ (ಪೂರ್ವ ಭಾಗ) 67 ಸೂಕ್ತಗಳ 610 ಋಕ್ಕುಗಳು. ಎರಡನೆಯ ಭಾಗ (ಉತ್ತರ ಭಾಗ) 47 ಸೂಕ್ತಗಳ 498 ಋಕ್ಕುಗಳು. ಪೂರ್ವ ಭಾಗವನ್ನು "ಪವಮಾನ ಸೂಕ್ತ" ಎಂದೂ, ಉತ್ತರ ಭಾಗವನ್ನು "ಪೂಯಮಾನ ಸೂಕ್ತ" ಎಂದೂ ನಿರ್ದೇಶಿಸುತ್ತಾರೆ. ಇವುಗಳ ಪ್ರಧಾನ ದೇವತೆ "ಪವಮಾನ ಸಂಜ್ಞಕ ಸೋಮ". ಸೋಮ ಅನ್ನುವ ಪದಕ್ಕೆ ವಿಶಾಲಾರ್ಥಗಳಿವೆ. ಸಾಮಾನ್ಯವಾಗಿ ಸೋಮ ಅಂದರೆ ಚಂದ್ರ. ಸ-ಉಮಾ (ಅಂದರೆ ಉಮೆಯ ಜೊತೆಯಲ್ಲಿ ಇರುವವನು) ಎಂದು ಅರ್ಥ ಮಾಡಿದ್ದಾಗ ಶಿವನೂ ಸೋಮ ಆಗುತ್ತಾನೆ. ಮಹಾವಿಷ್ಣುವಿಗೂ ಸೋಮ ಶಬ್ದ ಅನ್ವಯವಾಗುತ್ತದೆ ಅನ್ನುತ್ತಾರೆ. 

*****

ಸೋಮ ಎಂಬ ಹೆಸರಿನ ಒಂದು ಬಳ್ಳಿ. ಅದೊಂದು ಬಲು ವಿಶೇಷಕರ ಬಳ್ಳಿ. ಎಲ್ಲ ಬಳ್ಳಿ ರೀತಿಯ ಸಸ್ಯ. ಹಿಮಾಲಯದ ಕೆಲವು ಪ್ರದೇಶಗಳಲ್ಲಿ ಸಿಗುತ್ತದೆ ಅನ್ನುತ್ತಾರೆ. ಬಳ್ಳಿಯಂತೆ ಹಬ್ಬಿಕೊಂಡು ಬೆಳೆಯುವ ಸಸ್ಯಕ್ಕೆ ಸಂಸ್ಕೃತದಲ್ಲಿ "ಲತೆ" ಎಂದು ಹೆಸರು. ಆದ್ದರಿಂದ ಅದು "ಸೋಮ ಲತೆ". ಅದರ ರಸವು ಬಹಳ ಅಮೂಲ್ಯ. ಆದ್ದರಿಂದ ಅದರ ರಸವನ್ನು ಹೋಮ-ಹವನಗಳಲ್ಲಿ ಹವಿಸ್ಸಾಗಿ ಬಳಸುತ್ತಾರೆ. ಮೇಲೆ ಹೇಳಿದ ಸೂಕ್ತಗಳಲ್ಲಿ ಈ ಸೋಮಲತೆಯ ಮರ್ದನ (ಜಜ್ಜಿ ರಸ ತೆಗೆಯುವುದು), ರಸ ಶೋಧನ (ರಸವನ್ನು ಶೋಧಿಸಿ ಶೇಖರಿಸುವುದು), ಸಂಸ್ಕರಣ (ಹೀಗೆ ಶೇಖರಿಸಿದ ರಸಕ್ಕೆ ಬೇರೆ ಪದಾರ್ಥಗಳನ್ನು ಸೇರಿಸಿ ಇನ್ನೂ ಉತ್ತಮ ಮಾಡುವುದು), ನಂತರ ಅಗ್ನಿಯಲ್ಲಿ ಹೋಮ ಮಾಡುವ ಮೂಲಕ ದೇವತೆಗಳಿಗೆ ಅರ್ಪಿಸುವುದು, ಮುಂತಾದುವು ಈ ಸೂಕ್ತಗಳಲ್ಲಿ ಕಂಡುಬರುತ್ತವೆ. 

ಹೀಗೆ ಹೋಮ ಮಾಡುವಾಗ ದೇವತೆಗಳನ್ನು ನಮಗೆ ಬೇಕಾದ ವರಗಳನ್ನು ಬೇಡುವುದು, ಬೇಕಿದ್ದನ್ನು ಕೊಡಿ ಎಂದು ಪ್ರಾರ್ಥಿಸುವುದು. ಸ್ತುತಿಸುವುದು ಮತ್ತು ಸ್ತುತಿಸುವಾಗ ಬೇಡಿಕೆಗಳನ್ನು ಮುಂದಿಡುವುದು. ಈ ಸೋಮರಸದ ಬಣ್ಣ ಹಳದಿಮಿಶ್ರಿತ ಕೆಂಪು. ಇದು ಮುಖ್ಯ ಹೋಮದ್ರವ್ಯ. ಹೀಗೆ ದೇವತೆಗಳಿಗೆ ಅರ್ಪಿಸಿದ ನಂತರ ಮಿಕ್ಕ 'ಸೋಮರಸ" ಪ್ರಸಾದ ರೂಪದಲ್ಲಿ ಸೇವಿಸುವುದು. ಇದೇ "ಸೋಮಪಾನ". ಈಗ ಸೋಮಲತೆ ಸಿಗದಿರುವುದರಿಂದ ಒಳ್ಳೆಯ ತುಪ್ಪವನ್ನು ಹೋಮದ್ರವ್ಯವಾಗಿ ಬಳಸುತ್ತಾರೆ.

ಪವಮಾನ ಸೂಕ್ತದ ಭಾಗ ಐಹಿಕ ಫಲಗಳನ್ನು ಕೊಡುವುದಂತೆ. ಇದು ರೋಗನಿವಾರಕದಂತೆ ಪಾಪನಿವಾರಕ. ದೇಹಕ್ಕೆ ರೋಗಗಳು. ಆತ್ಮಕ್ಕೆ ಪಾಪಗಳು. ರೋಗಗಳಿಗೆ ರೋಗನಿವಾರಕ ಔಷಧಗಳು. ತಿಳಿಯದೆ ಮತ್ತು ತಿಳಿದೂ ಮಾಡಿ ಶೇಖರಿಸಿರಿವ ಪಾಪಗಳಿಂದ ಬಿಡುಗಡೆಗಾಗಿ "ಪವಮಾನ ಹೋಮ". ಮೊದಲು ಶುಚಿ ಆಗುವುದು. ನಂತರ ಮತ್ತೊಮ್ಮೆ ಕೊಳೆ ಆಗದಂತೆ ಪ್ರಯತ್ನ ಮಾಡಲು ಅವಕಾಶ.

ಪೂಯಮಾನ ಸೂಕ್ತದ ಭಾಗ ದೇಹಾವಸಾನದ ನಂತರ ಮತ್ತೆ ಪುನರ್ಜನ್ಮ ಇಲ್ಲದಂತೆ ಮಾಡುವುದಂತೆ. ಜನನ-ಮರಣ ಚಕ್ರದಿಂದ ಹೊರಗಡೆ ತಂದು ಶಂಖ-ಚಕ್ರ-ಗದಾಧಾರಿಯಾದ ಶ್ರೀ ಮಹಾವಿಷ್ಣುವಿನ ಸಾನ್ನಿಧ್ಯ ಮತ್ತು ಮುಕ್ತಿ ಕೊಡುವಂತೆ ಇದರಲ್ಲಿ ಪ್ರಾರ್ಥನೆ. ಈ ಕಾರಣ ಇದು ರೋಗನಿರೋಧಕ ಚುಚ್ಚುಮದ್ದಿನಂತೆ. ಈ ವ್ಯಾಕ್ಸಿನೇಷನ್ ತೆಗೆದುಕೊಂಡರೆ ಮತ್ತೆ ಹುಟ್ಟುವ ರೋಗ ನಿವಾರಣೆ. ಇದು "ಪೂಯಮಾನ ಹೋಮ" ಮಾಡುವ ವಿಶೇಷತೆ.  

ಈ ಎರಡೂ ಸೂಕ್ತಗಳಲ್ಲಿ "ನಿರ್ಣಾಯಕ ಕಾನೂನು" ಮತ್ತು "ಕಾರ್ಯವಿಧಾನ ಕಾನೂನು" ಇರುವಂತೆ ಹೋಮ ದ್ರವ್ಯಗಳನ್ನು ತಯಾರಿಸುವುದು, ಹೋಮ ಮಾಡುವುದು ಮತ್ತು ಅವುಗಳ ಮಹತ್ವ ಮುಂತಾದ ಎಲ್ಲ ವಿಷಯಗಳೂ ಇವೆ. 

ಪ್ರತಿ ಜೀವಿಯೂ ತನ್ನ ಭಾರ ತಾನೇ ಹೊರಬೇಕು. ತನ್ನ ಮುಕ್ತಿಗೆ ತಾನೇ ಶ್ರಮಿಸಬೇಕು. ಅದು ಇನ್ನೊಬ್ಬರು ಕೊಡುವುದಲ್ಲ. "ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಾಶು:" ಎಂದು ಮಾತುಂಟು. (ಮಕ್ಕಳು ಮಾಡುವ ಪಿಂಡಪ್ರದಾನ ಇತ್ಯಾದಿಗಳು ಮಾತ್ರವೇ ಮುಕ್ತಿದಾಯಕವಲ್ಲ ಎಂದು ಭಾವ). ಬೇರೆಯವರು ನಮಗೆ ಮಾಡುವ ನೆರವು ಸಾಕಾಗುವುದಿಲ್ಲ. ಅವುಗಳು ಸ್ವಲ್ಪಮಟ್ಟಿಗೆ ಸಹಾಯಕವಾಗಬಹುದು. ಅಷ್ಟೇ. ನಮ್ಮ ಸಾಧನೆಯೇ ಮುಖ್ಯ. ಅದಕ್ಕೇ ಪೂಯಮಾನ ಹೋಮ ಮಾಡಿ ಕೋರಿಕೊಳ್ಳುವುದು. 

*****

ಈ ಹೋಮಗಳು ಕೇವಲ ವೈದಿಕ ಕ್ರಿಯೆಗಳು ಎಂದು ತಿಳಿಯಬಾರದು. ಇವುಗಳಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವಗಳೂ ಇವೆ. ಇಂತಹ ಮುಖ್ಯ ಹೋಮಗಳನ್ನು ಯಾರೂ ತಮ್ಮ ಪಾಡಿಗೆ ತಾವು ಮನೆಯ ಮಟ್ಟಿಗೆ ಸೀಮಿತವಾಗಿ ಮಾಡಿಕೊಳ್ಳುವುದಿಲ್ಲ. ಬಂಧು-ಬಾಂಧವರು, ಮಿತ್ರರು-ಹಿತೈಷಿಗಳನ್ನು ಆಮಂತ್ರಿಸುತ್ತಾರೆ. ಇಂತಹ ಕೆಲಸಗಳನ್ನು ಸರಿಯಾಗಿ ಮಾಡಲು ಜನಸಹಾಯ ಬಹಳ ಮುಖ್ಯ. ಬಂದವರು ಎರಡು-ಮೂರು ದಿನ ಒಟ್ಟಿಗೆ ಒಂದು ತಂಡವಾಗಿ ಕೆಲಸ ಮಾಡಬೇಕಾಗುತ್ತದೆ. ಊಟ-ಉಪಚಾರಗಳು ಇರುತ್ತವೆ. ಹಾಡು-ಹಸೆ, ಕಥೆ-ಪ್ರವಚನ ನಡೆಯುತ್ತವೆ. ಆದ ಕಾರಣ ಇವು ಒಂದು ರೀತಿಯ ವೈದಿಕ-ಸಾಮಾಜಿಕ-ಸಾಂಸ್ಕೃತಿಕ ಹಬ್ಬ. 

ಪವಮಾನ ಹೋಮದ ಆಚರಣೆ ಸಾಕಷ್ಟು ವ್ಯಾಪಕವಾಗಿ ಉಂಟು. ಅಲ್ಲಲ್ಲಿ ಈ ಹೋಮ ನಡೆಯುವುದು ಕೇಳಿ ಬರುತ್ತದೆ. ಆದರೆ "ಪೂಯಮಾನ ಹೋಮ" ಆಚರಣೆ ಅಷ್ಟು ವ್ಯಾಪಕವಾಗಿಲ್ಲ. ಕೆಲವು ಪಂಗಡಗಳಲ್ಲಿ, ವಿಶೇಷವಾಗಿ ಅದ್ವೈತಿಗಳಲ್ಲಿ, ಇದು ಮೂರು ದಿನದ ಕಾರ್ಯಕ್ರಮ. ಏಕಾದಶಿಯ ದಿನ ಪವಮಾನ ಹೋಮ. ದ್ವಾದಶಿಯ ದಿನ ಪೂಯಮಾನ ಹೋಮ. ಹೀಗೆ ದ್ವಂದ್ವವಾಗಿ ಮಾಡುವ ಪದ್ಧತಿ ಇದೆ. ದ್ವೈತಿಗಳಲ್ಲಿ ಏಕಾದಶಿಯ ದಿನ ಹೋಮ ಮಾಡುವುದಿಲ್ಲ. 

*****

ಈಗಿನ ನಗರಗಳ ಮನೆಗಳಲ್ಲಿ ಹೋಮ-ಹವನದಂತಹ ಕಾರ್ಯಕ್ರಮ ಮಾಡುವುದು ಅಸಾಧ್ಯವೇ. ಯಾವುದಾದರೂ ಪಾರ್ಟಿ ಹಾಲ್ ಅಥವಾ ಛತ್ರಗಳಲ್ಲಿ ನಡೆಸಬಹುದು. ಆದರೆ ಒಬ್ಬ ಮಿತ್ರ ದಂಪತಿಗಳು ಕಳೆದ ವಾರ ಇಂತಹ ಕಾರ್ಯಕ್ರಮವೊಂದನ್ನು ಅಧ್ಭುತವಾಗಿ, ಅಚ್ಚುಕಟ್ಟಾಗಿ ತಮ್ಮ ಮನೆಯಲ್ಲಿಯೇ ನಡೆಸಿದರು. ಆ ಕಾರಣ ನಮಗೂ ಅದರಲ್ಲಿ ಭಾಗವಹಿಸುವ ಆಪೂರ್ವ ಅವಕಾಶ ಸಿಕ್ಕಿತು. ಅವರಿಗೆ ಅನೇಕ ವಂದನೆಗಳು. 

ಇದೊಂದು ಅಪರೂಪದ ಕಾರ್ಯಕ್ರಮ ಆದುದರಿಂದ  ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಉಂಟಾಯಿತು. ಅನೇಕ ಅನುಮಾನಗಳೂ, ಪ್ರಶ್ನೆಗಳೂ ಹುಟ್ಟಿ ನಿಂತವು. ಇಂತಹ ಸಂದರ್ಭದಲ್ಲಿ ನೆನಪಾದ ಹೆಸರು ವೇದಬ್ರಹ್ಮಶ್ರೀ ಡಾ. ಎಸ್. ಆರ್. ನರಸಿಂಹ ಮೂರ್ತಿ ಅವರದು. ಅವರು ಈ ಕ್ಷೇತ್ರದಲ್ಲಿ ಮಾಡಿರುವ ಕೆಲಸ, ಪ್ರಕಟಿಸಿರುವ ಗ್ರಂಥಗಳು, ತಯಾರು ಮಾಡಿರುವ ಶಿಷ್ಯವೃಂದ, ಇವೆಲ್ಲವೂ ಒಂದು ವಿಸ್ಮಯವೇ ಸರಿ. ಅವರೊಡನೆ ಮಾತನಾಡಿದಾಗ ಹಳೆಯ ಪರಿಚಯವೇ ಇಲ್ಲದಿದ್ದರೂ ಅತ್ಯಂತ ಸೌಜನ್ಯದಿಂದ ವಿಷಯಗಳನ್ನು ತಿಳಿಸಿಕೊಟ್ಟರು. ಅವರಿಗೆ ಸಾದರ ಪ್ರಣಾಮಗಳು. 
*****

ಇಂತಹ ಕಾರ್ಯಕ್ರಮ ನಡೆಯುವುದು ತಿಳಿದರೆ ತಪ್ಪಿಸಿಕೊಳ್ಳಬಾರದು. "ಸತ್ಯನಾರಾಯ ಪೂಜೆ" ನಡೆದರೆ ಆಹ್ವಾನವಿಲ್ಲದಿದ್ದರೂ ಹೋಗಬಹುದು ಅನ್ನುತ್ತಾರೆ. ಅದಕ್ಕೆ "ಪೂಯಮಾನ ಹೋಮ" ಕಾರ್ಯಕ್ರಮವನ್ನೂ ಸೇರಿಸಿಕೊಳ್ಳಬಹುದು!

Saturday, July 26, 2025

ಲಾಭವೂ ನಿನ್ನದೇ; ನಷ್ಟವೂ ನಿನ್ನದೇ!


ಮನುಷ್ಯನಿಗೆ ಬಹಳ ಮುಖ್ಯವಾದ ಮೂರು ಸಂಪತ್ತುಗಳು ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯ. ಈ ಮೂರು ಸಂಪತ್ತುಗಳು ಎಲ್ಲರಿಗೂ ಸಿಕ್ಕುವುದಿಲ್ಲ. ಏಕೆ ಸಿಕ್ಕುವುದಿಲ್ಲ? ಇದಕ್ಕೆ ಕಾರಣಗಳನ್ನು ಹಿಂದೆ "ಸಂಪತ್ತು ಕಳೆಯುವ ಕಾರಣಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದ್ದೆವು. "ಕೆಸರಿಂದ ಕೆಸರ ತೊಳೆದಂತೆ" ಎಂಬ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ  ಇದರ ಮುಂದಿನ ಭಾಗವನ್ನೂ ನೋಡಿದ್ದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಿ ನೆನಪಿಸಿಕೊಳ್ಳಬಹುದು. 

ನಾವು ಮಾಡುವ ತಪ್ಪುಗಳಿಗೆ ಸಮಾಜದಲ್ಲಿ ಶಿಕ್ಷೆ ಎಂಬುದೊಂದಿದೆ. ಕಾನೂನು-ಕಟ್ಟಲೆಗಳು ಪ್ರತಿಯೊಂದು ತಪ್ಪಿಗೂ ಅದಕ್ಕೆ ಪರ್ಯಾಯವಾದ ಶಿಕ್ಷೆಯನ್ನು ನಿಗದಿ ಪಡಿಸಿವೆ. ಒಂದೇ ತರಹದ ತಪ್ಪುಗಳಾದರೂ ಅವುಗಳ ತೀವ್ರತೆ ಗಮನಿಸಿ ನ್ಯಾಯಾಧೀಶರು ಶಿಕ್ಷೆ ನಿಗದಿ ಪಡಿಸುತ್ತಾರೆ. ಇದೇ ರೀತಿ ನಮ್ಮ ನಂಬಿಕೆಗಳ ಪ್ರಕಾರ ದುಷ್ಕರ್ಮಗಳಿಗೆ ಶಿಕ್ಷೆ ಉಂಟು. ಇಲ್ಲಿಯೂ ಅಂತಹ ಶಿಕ್ಷಾರ್ಹ ತಪ್ಪುಗಳನ್ನು ಮಾಡುವವನ ಪರಿಸ್ಥಿತಿಯನ್ನು ಕಂಡು ಅನುಭವಿಸಬೇಕಾದ ತೀವ್ರತೆ ನಿರ್ಧಾರ ಆಗುತ್ತದೆ. 

ಪರಮಾತ್ಮನ ಸೃಷ್ಟಿಯಲ್ಲಿ ಸರಿ-ತಪ್ಪುಗಳಿಗೆ ವೈದೃಶ್ಯ ಅಥವಾ ಪ್ರತಿಭಾರ ಇರುವುದಿಲ್ಲ. (ಇದನ್ನು ಇಂಗ್ಲಿಷಿನಲ್ಲಿ ಸೆಟ್-ಆಫ್ ಅನ್ನುತ್ತಾರೆ). ಉದಾಹರಣೆಗೆ: ಒಬ್ಬನು ಹತ್ತು ತೂಕ ಪುಣ್ಯ ಮಾಡಿ ಐದು ತೂಕ ಪಾಪ ಮಾಡಿದ್ದಾನೆ ಎನ್ನುವ. "ಐದು ತೂಕ ಪಾಪಕ್ಕೆ ಐದು ತೂಕ ಪುಣ್ಯ ವಜಾ ಹಾಕಿಕೊಳ್ಳಿ. ಮಿಕ್ಕಿದ ಐದು ತೂಕದ ಪುಣ್ಯಕ್ಕೆ ಸುಖ ಕೊಡಿ. ದುಃಖ ಬೇಡ" ಎಂದು ಅವನು ಕೇಳಿದರೆ ಅದನ್ನು ಒಪ್ಪಿಕೊಳ್ಳುವ ಹಾಗಿಲ್ಲ. ಐದು ತೂಕ ಪಾಪದ ದುಃಖ ಅನುಭವಿಸಲೇ ಬೇಕು. ಅಂತೆಯೇ, ಹತ್ತು ತೂಕ ಪುಣ್ಯದ ಫಲವನ್ನೂ ಉಣ್ಣಬೇಕಾಗುತ್ತದೆ. ಹೀಗಾಗಿ ಮಾಡಿದ ಪ್ರತಿ ಕರ್ಮವೂ ಅದಕ್ಕೆ ನಿಗದಿಯಾದ ಸುಖ ಅಥವಾ ದುಃಖ ತಂದೇ ತರುತ್ತದೆ. ತಪ್ಪಿಸಿಕೊಳ್ಳುವಹಾಗಿಲ್ಲ. 

ಹಿಂದೆ ಒಂದು ಸಂಚಿಕೆಯಲ್ಲಿ "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಫಲವು, ಅಸುನಾಥ ಹರಿಯೇ ಪೊರೆಯೊ" ಎನ್ನುವುದನ್ನು ಚರ್ಚಿಸಿದ್ದೆವು. ಇದನ್ನು ಇನ್ನೂ ಸ್ವಲ್ಪ ವಿವರವಾಗಿ ನೋಡಿದರೆ ಒಳ್ಳೆಯದು ಎಂದು ಮಿತ್ರರೊಬ್ಬರು ಸೂಚಿಸಿದ್ದಾರೆ. ಅದನ್ನು ಈಗ ನೋಡೋಣ. 

*****

ಏನೋ ಒಂದು ಕಾರಣದಿಂದ, ತಿಳಿದೋ ತಿಳಿಯದೆಯೋ ಒಂದು ತಪ್ಪು ಆಗಿದೆ. ಮಳೆಯಲ್ಲಿ ನೆನೆದುವು ಅನ್ನೋಣ. ಅದರಿಂದ ಒಂದು ಖಾಯಿಲೆಯೋ, ಜ್ವರವೋ ಬಂತು. ಆಯಿತು. ಅದನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ? ಇರುತ್ತದೆ. ವೈದ್ಯರ ಬಳಿ ಹೋದರೆ ರೋಗಕ್ಕೆ ತಕ್ಕ ಮದ್ದು ಕೊಡುತ್ತಾರೆ. ಆ ಮದ್ದಿನಿಂದ ಖಾಯಿಲೆ ಗುಣ ಆಗಬಹುದು. ಆದರೆ ಸರಿಯಾದ ವೈದ್ಯರ ಬಳಿಗೆ ಹೋಗಬೇಕು. "ಸರಿಯಾದ ವೈದ್ಯ ಸಿಗುವುದು, ಅನುಕೂಲಕರನಾದ ಗಂಡ ಅಥವಾ ಅನುಕೂಲಕರಳಾದ ಹೆಂಡತಿ ಸಿಗುವುದು, ಇವೆರಡೂ ಒಂದು ರೀತಿಯ ಲಾಟರಿ" ಎನ್ನುವುದು ಅನೇಕರ ಅನುಭವದಿಂದ ತಿಳಿದ ಸತ್ಯ. ಇದರ ಫಲಿತಾಂಶ ಗೊತ್ತಾಗುವುದು ಕೆಲ ಕಾಲದ ನಂತರವೇ. ಥರ್ಮಾಮೀಟರ್ ನೋಡಿ ಜ್ವರ ಕಂಡುಹಿಡಿಯುವಂತೆ ಇದಕ್ಕೆ ಇನ್ನೂ ಯಾವುದೇ ಮೀಟರ್ ಬಂದಿಲ್ಲ. 

ಒಳ್ಳೆಯ ವೈದ್ಯರೇ ಸಿಕ್ಕಿದರು ಎನ್ನೋಣ. ವೈದ್ಯರು ಬರೆದುಕೊಟ್ಟ ಚೀಟಿಯಂತೆ ಸರಿಯಾದ ಮದ್ದೂ ಸಿಗಬೇಕು. ಇಂದಿನ ಮಾರುಕಟ್ಟೆಯಲ್ಲಿ ನಕಲಿ ವೈದ್ಯರೂ ಉಂಟು. ಅದ್ಕಕಿಂತ ಹೆಚ್ಚಾಗಿ ನಕಲಿ ಔಷಧಗಳೂ ಉಂಟು. ಈಗಿನ ಮದ್ದುಗಳಿಗೆ ಒಂದು ವಿಶೇಷ ಗುಣವಿರುತ್ತದೆ. ಔಷಧದ ಬಾಟಲಿನ ಮೇಲೆ ಅಂಟಿಸಿದ ಚೀಟಿಯಲ್ಲಿ ಎರಡು ಪಟ್ಟಿಗಳಿರುತ್ತವೆ. ಮೊದಲನೆಯದು ಅದು ಗುಣಪಡಿಸುವ ಖಾಯಿಲೆಗಳು. ಎರಡನೆಯದು ಅದರಿಂದ ಆಗಬಹುದಾದ ಅಡ್ಡ ಪರಿಣಾಮಗಳು (ಸೈಡ್ ಎಫೆಕ್ಟ್ಸ್). ಅನೇಕ ವೇಳೆ ಮೊದಲಿನ ಪೆಟ್ಟಿಗಿಂತ ಎರಡನೆಯದೇ ದೊಡ್ಡದಿರುತ್ತದೆ. ವೈದರಿಗೂ ಇದು ಚೆನ್ನಾಗಿ ಗೊತ್ತು. ಆದ್ದರಿಂದ ಮದ್ದು ಕೊಡುವಾಗಲೇ ಜೊತೆಯಲ್ಲಿ ಇನ್ನೊಂದನ್ನು ಕೊಟ್ಟಿರುತ್ತಾರೆ. "ಕೆಲವರಿಗೆ ಈ ಮದ್ದಿನಿಂದ ಹೊಟ್ಟೆ ನೋವು ಬರುತ್ತದೆ. ಹಾಗೆ ಬಂದರೆ ಎರಡನೆಯ ಮದ್ದು ತೆಗೆದುಕೊಳ್ಳಿ" ಎಂದು ಅವರೇ ಹೇಳಿ ಉಪಕಾರ ಮಾಡಿರುತ್ತಾರೆ. 

ಪಾಪ ಕರ್ಮ ಮಾಡಿದ್ದೋ, ಅದಾಗದೆ ಆಯಿತೋ, ಒಟ್ಟಿನಲ್ಲಿ ಅಂಟಿಕೊಂಡಿದೆ. ಅಂಟಿರುವುದು ಗೊತ್ತಾಯಿತು. ಅದಕ್ಕೆ ಪರಿಹಾರ ಹೇಳುವವರು ಒಬ್ಬರು ಬೇಕು. ಅವರು ಸರಿಯಾಗಿರಬೇಕು. ಅವರು ಹೇಳಿದ ಪರಿಹಾರವೂ ಸರಿಯಾಗಿರಬೇಕು. ಯಾವುದೋ ಒಂದು ಹೋಮ ಮಾಡಿ ಎಂದರು. ಅದು ಸರಿಯಾದ ಪ್ರಾಯಶ್ಚಿತ್ತ ಆಗಿರಬೇಕು. ಕ್ರಮವಾಗಿ ಮಾಡಿಸುವವರು ಸಿಗಬೇಕು. ತಂದ ಪದಾರ್ಥಗಳು ಶುದ್ಧವಾಗಿರಬೇಕು. ಮಾಡುವಾಗ ಭಾವ ಶುದ್ದಿ ಇರಬೇಕು. ಎಲ್ಲವೂ ಸರಿಯಾಗಿ ಆಗಬೇಕು. ಆಗ ಸರಿಯಾದ ಪರಿಹಾರ ಸಿಗಬಹುದು. 

ಮಾಡಹೊರಟಿದ್ದು ಒಳ್ಳೆಯ ಕೆಲಸವೇ. ಆದರೆ ಇವುಗಳಲ್ಲಿ ಎಲ್ಲಿಯೋ, ಏನೋ, ಎಡವಟ್ಟಾಯಿತು. ಮಾಡಿಸುವವರು, ತಿದ್ದುವವರೇ ಎಡವಿದರು. ಪದಾರ್ಥಗಳಲ್ಲಿ ಕಂಡೋ, ಕಾಣದೆಯೋ ದೋಷ ಇತ್ತು. ಮಾಡುವಾಗ ಮನಸ್ಸು ಚಂಚಲ ಆಯಿತು. ಪರಿಣಾಮ ಏನು?

ಕೆಸರಿನಿಂದ ಕೊಳಕಾದ ವಸ್ತ್ರ ತೊಳೆಯಲು ಕೊಳಕು ನೀರು ಉಪಯೋಗಿಸಿದಂತೆ ಆಯಿತು. ಒಂದು ದುಷ್ಕರ್ಮ ಕಳೆಯಲು ಏನೋ ಮಾಡ ಹೋಗಿ ಮತ್ತೊಂದು ದುಷ್ಕರ್ಮ ಅಂಟಿಕೊಂಡಿತು. ಬಟ್ಟೆ ಶುದ್ಧವಾಗುವ ಬದಲು ಇನ್ನಷ್ಟು ಕೊಳಕಾಯಿತು. ಕೆಸರಿಂದ ಕೆಸರು ತೊಳೆದಂತೆ ಆಯಿತು. ಇದನ್ನೇ ದಾಸರು "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು" ಎಂದರು. ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ?

*****

ನಮ್ಮ ಮನೆಯ ಎದುರುಗಡೆ ಎರಡು ಅಂಗಡಿಗಳಿವೆ. ಮೊದಲನೆಯದು ಯಜಮಾನನೇ ನಡೆಸುವ ಅಂಗಡಿ. ಬೆಳಗಿನಿಂದ ಸಂಜೆಯವರೆಗೆ ಅವನು ಎಲ್ಲ ವ್ಯವಹಾರ ನಡೆಸುತ್ತಾನೆ. ದಿನದ ಕೊನೆಯಲ್ಲಿ ಲೆಕ್ಕ ನೋಡುತ್ತಾನೆ. ವಹಿವಾಟಿನಲ್ಲಿ ಬಂದ ಹಣವನ್ನೆಲ್ಲಾ ತಿಜೋರಿಯಲ್ಲಿ ಭದ್ರವಾಗಿಡುತ್ತಾನೆ. ವರ್ಷದ ಕೊನೆಯಲ್ಲಿ ಎಲ್ಲಾ ಜಮಾ-ಖರ್ಚು ತಾಳೆ ಹಾಕುತ್ತಾನೆ. ಖರ್ಚಿಗಿಂತ ಆದಾಯ ಜಾಸ್ತಿಯಾದರೆ ಅವನಿಗೆ ಲಾಭ. ಆದಾಯಕ್ಕಿಂತ ಖರ್ಚು ಜಾಸ್ತಿ ಆದರೆ ಅವನಿಗೆ ನಷ್ಟ. ರಾತ್ರಿ ಅಂಗಡಿ ಬಾಗಿಲು ಹಾಕಿದ್ದಾಗ ಕಳ್ಳರು ನುಗ್ಗಿ ಹಣ ದೋಚಿದರೆ ಅವನ ಲಾಭವೆಲ್ಲ ಗೋತ. ಯಾವಾಗಲೂ ಲಾಭದ ಚಿಂತೆ. ನಷ್ಟದ ಭೀತಿ. 

ಎರಡನೆಯ ಅಂಗಡಿಯನ್ನೂ ಒಬ್ಬ ನಡೆಸುತ್ತಿದ್ದಾನೆ. ಅದು ಅವನ ಯಜಮಾನನ ಅಂಗಡಿ. ಯಜಮಾನ ಎಲ್ಲಿಯೋ ಇದ್ದಾನೆ. ಎಲ್ಲ ಭಾರ ಇಲ್ಲಿ ನಡೆಸುವವನ ಮೇಲೆ ಬಿಟ್ಟಿದ್ದಾನೆ. ಇವನು ನಿರ್ವಂಚನೆಯಿಂದ ನಡೆಸುತ್ತಿದ್ದಾನೆ. ಮೊದಲ ಅಂಗಡಿಯವನಂತೆ ಇವನೂ ಎಲ್ಲಾ ಮಾಡುತ್ತಾನೆ. ಸಂಜೆ ಹಣ ತಿಜೋರಿಯಲ್ಲಿ ಭದ್ರ ಮಾಡಿ ಕೀಲಿಕೈ ಯಜಮಾನನಿಗೆ ಒಪ್ಪಿಸುತ್ತಾನೆ. "ಲಾಭವೂ ನಿನ್ನದೇ. ನಷ್ಟವೂ ನಿನ್ನದೇ. ನನ್ನದೇನಿದ್ದರೂ ನ್ಯಾಯವಾಗಿ ವ್ಯವಹಾರ ಮಾಡುವುದು" ಎಂದು ನಡೆಯುತ್ತಾನೆ. ಅಂಗಡಿ ಅವನದಲ್ಲ ಎನ್ನುವ ಪ್ರಜ್ಞೆ ಅವನಿಗಿದೆ. ರಾತ್ರಿ ಹಣ ಕಳುವಾದರೆ ಅವನ ಹಣವಲ್ಲ. ಲಾಭ ಅಥವಾ ನಷ್ಟ ಅವನದಲ್ಲ. ಮೊದಲನೆಯ ಅಂಗಡಿಯವಂತೆ ಇವನಿಗೆ ಲಾಭ-ನಷ್ಟದ ಚಿಂತೆಯಿಲ್ಲ. 

ಬ್ಯಾಂಕಿನಿಂದ ಸಾಲ ತಂದಿದ್ದಾಯಿತು. ಈಗ ತೀರಿಸಲೇಬೇಕು. ತೀರಿಸದಿದ್ದರೆ ವಸೂಲಿ ತಂಡದವರು ಪ್ರಾಣ ತಿನ್ನುತ್ತಾರೆ. ನೋಟೀಸು ಕೊಡುತ್ತಾರೆ. ಆಸ್ತಿ ಹರಾಜು ಹಾಕುತ್ತಾರೆ. ಬಂದಿಖಾನೆಗೂ ದೂಡಬಹುದು. ಸಾಲ ತರಬಾರದಿತ್ತು. ತಂದಾಯಿತು. ಈಗ ಏನು ಮಾಡುವುದು?

ಇದಕ್ಕೂ ಒಂದು ಪರಿಹಾರ ಇದೆ. ಬ್ಯಾಂಕಿನವರ ಬಳಿ ನಮ್ಮ ಕಷ್ಟ-ಸುಖ ಹೇಳಿಕೊಳ್ಳಬೇಕು. ಅವರು ಒಪ್ಪಬಹುದು. ಒಪ್ಪದೇ ಇರಬಹುದು. ಪ್ರಯತ್ನವನ್ನಂತೂ ಮಾಡಬಹುದು. ಅವರು ಒಪ್ಪಿಕೊಂಡು "ಹೋಗಲಿ ಬಿಡಿ. ನಿಮಗೆ ಹಿಂದೆ ಕೊಡುವ ಶಕ್ತಿ ಇಲ್ಲ. ಸಾಲ ಮನ್ನಾ ಮಾಡಿದ್ದೇವೆ" ಅಂದರೆ ಈ ಸಾಲದಿಂದ ಬಿಡುಗಡೆ!

*****

"ದುಷ್ಕರ್ಮ ಪರಿಹರಿಸೋ, ಸ್ವಾಮಿ" ಎಂದು ದಾಸರು ಕೇಳಿರುವುದೂ ಇದರಂತೆಯೇ. ಅವನು ಯಜಮಾನ. ನಾನು ಕೇವಲ ಅಂಗಡಿ ನಡೆಸುವ ಎರಡನೆಯ ಅಂಗಡಿಯವನಂತೆ ಎನ್ನುವುದು ಮರೆತು ಮೊದಲಿನ ಅಂಗಡಿಯವಂತೆ ಬದುಕಿದೆವು. ಲಾಭ-ನಷ್ಟ ನಮಗೆ ಅಂಟಿಕೊಂಡಿತು. ಎರಡನೆಯವನಂತೆ ಇದ್ದಿದ್ದರೆ ಆಗ ನಿಷ್ಕಾಮ ಕರ್ಮ ಆಗುತ್ತಿತ್ತು. ಈಗ ಈ ಭಾರ ಹೊರಲು ಆಗುತ್ತಿಲ್ಲ. ಅವನನ್ನೇ ಮೊರೆ ಹೋಗಿ ಕೇಳುವುದು. "ದಯವಿಟ್ಟು ಈ ಸಾಲ ಮನ್ನಾ ಮಾಡು. ಈ ದುಷ್ಕರ್ಮ ಪರಿಹಾರ ಮಾಡು" ಎಂದು ಕೂಗುವುದು. 

ಅವನು ಒಪ್ಪಬಹುದು. ಒಪ್ಪಿಯಾನು. ಅವನೋ, "ಕರ್ತು೦, ಆಕರ್ತು೦, ಅನ್ಯಥಾ ಕರ್ತು೦ ಶಕ್ತ:". ಏನನ್ನು ಬೇಕಾದರೂ ಮಾಡಬಲ್ಲ. ಮಾಡಿದ್ದನ್ನು ಅಳಿಸಬಲ್ಲ. ಮತ್ತೇನನ್ನೋ ಮಾಡಬಲ್ಲ.  ಸಾಲ ಮನ್ನಾ ಮಾಡಬಹುದು. ಹೊತ್ತಿರುವ ಪಾಪ ಕರ್ಮಗಳ ರಾಶಿಯನ್ನು ಕ್ಷಣಾರ್ಧದಲ್ಲಿ ಸುತ್ತು ಭಸ್ಮ ಮಾಡಿ ಹೆಗಲಿನ ಭಾರದಿಂದ ಮುಕ್ತಿ ಕೊಡಬಹುದು. 

*****

ನಂಬುವವರು ನಂಬಬಹುದು. ಬಿಡುವವರು ಬಿಡಬಹುದು. ಇದು ಒಂದು ರೀತಿಯ ತರ್ಕ. ಅನೇಕರು ಪುನರ್ಜನ್ಮವನ್ನು ನಂಬುವುದಿಲ್ಲ. ದೇವರಿದ್ದಾನೆ ಅನ್ನುವುದನ್ನೂ ನಂಬುವುದಿಲ್ಲ. ಅವರವರಿಗೆ ಬಿಟ್ಟದ್ದು. 

ಎರಡನೇ ಅಂಗಡಿಯವನಂತೆ ಜೀವನ ನಡೆಸಿದವನಿಗೆ ಒಂದು ಖಚಿತವಾದ ಲಾಭ ಉಂಟು. ಈ ಜನ್ಮದಲ್ಲಿ ಬ್ಲಡ್ ಪ್ರೆಶರ್ ಚೆನ್ನಾಗಿರುತ್ತದೆ. ಊಟ ಸೇರುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ದಿನಗಳು ಚೆನ್ನಾಗಿ ಕಳೆಯುತ್ತವೆ. ಮುಂದಿನದನ್ನು ಮುಂದೆ ನೋಡಬಹುದು!