Monday, December 25, 2023

ತಿಥಿ - ಅತಿಥಿ - ಅಭ್ಯಾಗತ




ಕಣ್ವ ಋಷಿಗಳು ಆಶ್ರಮದಲ್ಲಿಲ್ಲ. ಅಲ್ಲಿನ ಎಲ್ಲ ನಿರ್ವಹಣೆಯ ಕೆಲಸವನ್ನು ಸಾಕು ಮಗಳು ಶಕುಂತಲೆಗೆ ವಹಿಸಿ ಎಲ್ಲಿಯೋ ಸಂಚಾರ ಹೋಗಿದ್ದಾರೆ. ಶಕುಂತಲೆಯಾದರೋ ತನ್ನದೇ ಪ್ರಪಂಚದಲ್ಲಿ ಮುಳುಗಿಹೋಗಿದ್ದಾಳೆ. ಅತಿ ಶೀಘ್ರದಲ್ಲೇ ರಾಜಧಾನಿಗೆ ಕರೆಸಿಕೊಳ್ಳುವುದಾಗಿ ವಚನ ಕೊಟ್ಟಿದ್ದ ಚಕ್ರವರ್ತಿ ದುಷ್ಯಂತನಾಗಲೀ  ಅಥವಾ ಅವನ ಕಡೆಯ ದೂತರಾಗಲೀ ಇನ್ನೂ ಬಂದಿಲ್ಲ. ಸಾಕುತಂದೆಗೇ ಗೊತ್ತಿಲ್ಲದಹಾಗೆ ವಿವಾಹವೇನೋ ಆಯಿತು. ಆದರೆ ಮುಂದಿನ ಕಥೆಯೇನು? ಈ ಸಮಸ್ಯೆಗೆ ಪರಿಹಾರ ಹೇಗೆ? ಇದು ಅವಳ ಚಿಂತೆ. 

ಮಹರ್ಷಿ ದೂರ್ವಾಸರು ಅದೇ ಸಮಯಕ್ಕೆ ಆಶ್ರಮಕ್ಕೆ ಬಂದರು. ಶಕುಂತಲೆಯ ಮುಂದೆ ನಿಂತರು. ನಿಂತೇ ಇದ್ದರು. ಶಕುಂತಲೆ ನೋಡಲೂ ಇಲ್ಲ; ಮಾತಾಡಲೂ ಇಲ್ಲ. ಆಶ್ರಮಕ್ಕೆ ಬಂದ ಅತಿಥಿ ಎದುರು ನಿಂತಿದ್ದರೂ ಸ್ವಾಗತಿಸಲೂ ಇಲ್ಲ. ದೂರ್ವಾಸರಿಗೆ ಅಖಂಡ ಕೋಪ ಬಂತು. ಶಪಿಸಿದರು. ಹೊರಟುಹೋದರು. 

ಹೀಗೆ ಸಾಗುತ್ತದೆ ಮಹಾಕವಿ ಕಾಳಿದಾಸನ ನಾಟಕದ ಕಥೆ,

*****

ಶೂರಸೇನನ ಮಗಳು ಪೃಥಾ. ವಸುದೇವನ ಸೋದರಿ. ಆದ್ದರಿಂದ ಅವಳು ಮುಂದೆ ಶ್ರೀಕೃಷ್ಣನ ಸೋದರತ್ತೆ. ಮಕ್ಕಳಿಲ್ಲದ ಶೂರಸೇನನ ಸಹೋದರ ಕುಂತಿಭೋಜ ಅವಳನ್ನು ದತ್ತು ತೆಗೆದುಕೊಂಡ. ಅಂದಿನಿಂದ ಅವಳು ಕುಂತಿ ಎಂದು ಹೆಸರು ಪಡೆದಳು. (ಶ್ರುತಶ್ರವೆ ಮತ್ತು ಶ್ರುತದೇವೆ ಸಹ ವಸುದೇವನ ತಂಗಿಯರು. ಶಿಶುಪಾಲ ಮತ್ತು ದಂತವಕ್ರರು ಕ್ರಮವಾಗಿ ಇವರ ಮಕ್ಕಳು). 

ಒಮ್ಮೆ ಮಹರ್ಷಿ ದೂರ್ವಾಸರು ಕುಂತಿಭೋಜನ ಸ್ಥಳಕ್ಕೆ ಅನಿರೀಕ್ಷಿತವಾಗಿ ಬಂದರು. ಕುಂತಿಭೋಜನ ವಿನಂತಿಯಂತೆ ಕೆಲವು ದಿನ ನಿಂತರು. ಮಹರ್ಷಿಗಳ ಸೇವೆಗೆ ಕುಂತಿಭೋಜ ಮಗಳು ಕುಂತಿಯನ್ನು ನೇಮಿಸಿದ. ಕುಂತಿಯ ಸೇವೆಯಿಂದ ಅತ್ಯಂತ ಸಂತುಷ್ಟರಾದ ಮಹರ್ಷಿ ದೂರ್ವಾಸರು ಕುಂತಿಗೆ ಐದು ಅಮೂಲ್ಯ ವರಗಳನ್ನು ಕೊಟ್ಟರು. 

ಆದರ ಫಲವಾಗಿ ಮುಂದೆ ಕರ್ಣ, ಯುಧಿಷ್ಠಿರ, ಭೀಮ ಮತ್ತು ಅರ್ಜುನ ಹುಟ್ಟಿ ಕೌಂತೇಯರಾದರು. ಕುಂತಿ ಐದನೆಯ ವರವನ್ನು ಮಾದ್ರಿಗೆ ವರ್ಗಾಯಿಸಿದಳು. ಅದರಿಂದ ನಕುಲ ಮತ್ತು ಸಹದೇವರ ಜನನ. ಅವರಿಬ್ಬರೂ ಮಾದ್ರೀಯರು. ಕರ್ಣನನ್ನು ಬಿಟ್ಟು ಉಳಿದ ಐವರು ಪಾಂಡುರಾಜನ ಮಕ್ಕಳಾದ್ದರಿಂದ ಪಾಂಡವರಾದರು. ಹೀಗೆ ಮುಂದುವರಿಯುತ್ತದೆ ಮಹಾಭಾರತದ ಕಥೆ,

*****

ವಾಜಶ್ರವಸ ಋಷಿಯ ಮಗಳು ಆರುಣಿ. ಆರುಣಿಯ ಪತಿ ಋಷಿ ಉದ್ದಾಲಕ. ಇವರ ಮಕ್ಕಳು ಶ್ವೇತಕೇತು ಮತ್ತು ನಚಿಕೇತ. ತಂದೆಯ ಯಾಗದಲ್ಲಿ ಅವನು ದಾನ ಕೊಡುವ ಕೆಲವು ನಿರುಪಯೋಗಿ ಗೋವುಗಳನ್ನು ಕಂಡು ನಿರಾಶನಾಗಿ ಪುಟ್ಟ ಬಾಲಕ ನಚಿಕೇತ ಯಾಗದಲ್ಲಿ ಮಗ್ನನಾಗಿರುವ ತಂದೆಯನ್ನು "ಅಪ್ಪ, ನನ್ನನ್ನು ಯಾರಿಗೆ ಕೊಡುತ್ತೀ" ಎಂದು ಮತ್ತೆ ಮತ್ತೆ ಕೇಳುತ್ತಾನೆ. ಮೊದಲಿಗೆ ಅವನ ಪ್ರಶ್ನೆಯನ್ನು ಗಮನಿಸದವನಂತೆ ಇದ್ದರೂ ಪದೇ ಪದೇ ಕೇಳಿದಾಗ ಕೋಪದಿಂದ "ನಿನ್ನನ್ನು ಯಮನಿಗೆ ಕೊಡುತ್ತೇನೆ" ಎಂದುಬಿಡುತ್ತಾನೆ ತಂದೆ. (ನಚಿಕೇತ ವಾಜಶ್ರವಸನ ಮಗಳ ಮಗ. ಮೊಮ್ಮಗ. ಉದ್ದಾಲಕನ ಮಗ. ವಾಜಶ್ರವಸನ ಮಗ ಎನ್ನುವುದು ತಪ್ಪು ಗ್ರಹಿಕೆ). 

ನಚಿಕೇತ ನೇರ ಯಮನ ಪಟ್ಟಣಕ್ಕೆ ಬಂದುಬಿಡುತ್ತಾನೆ. ಯಮ ಸಂಚಾರದಲ್ಲಿ ಇದ್ದಾನೆ. ಮನೆಯವರು ಒಳಗೆ ಕರೆದರೂ ಹೋಗದೆ ನಚಿಕೇತ ಮೂರು ಹಗಲು, ಮೂರು ರಾತ್ರಿ ಯಮನ ಮನೆಯ ಬಾಗಿಲ ಬಳಿಯೇ ಕುಳಿತುಬಿಡುತ್ತಾನೆ. ಮೂರು ದಿನದ ನಂತರ ಬಂದ ಯಮನಿಗೆ ಆಶ್ಚರ್ಯ. ಯಮ ಆಹ್ವಾನ ಕೊಟ್ಟವನಲ್ಲ. ನಚಿಕೇತ ಬರುವುದಾಗಿ ಮುಂಚೆ ತಿಳಿಸಿದವನೂ ಅಲ್ಲ. ಆದರೂ ಯಮನು ಮೂರು ದಿನ ಕಾಯಿಸಿದ ತಪ್ಪಿಗೆ ಮೂರು ವರ ಕೊಡುತ್ತಾನೆ. 

ಆ ವರಗಳ ವಿಷಯ ಮತ್ತು ಯಮನು ನಚಿಕೇತನಿಗೆ ವಿವರಿಸಿದ ರಹಸ್ಯ ತತ್ವಗಳು "ಕಠೋಪನಿಷತ್" ಮುಂದಿನ ವಿವರಗಳು. 

*****

ಮೇಲಿನ ಮೂರು ದೃಷ್ಟಾಂತಗಳಲ್ಲಿ ಮೂರು ವಿಧ ಪರಿಣಾಮಗಳನ್ನು ಕಾಣುತ್ತೇವೆ. ಮೊದಲನೆಯದರಲ್ಲಿ ಸತ್ಕಾರವಂಚಿತ ಅಥಿತಿಯ ಕೋಪದ ಪರಿಣಾಮ. ಎರಡನೆಯದರಲ್ಲಿ ಸತ್ಕಾರದಿಂದ ಪ್ರೀತನಾದ ಅಥಿತಿಯ ಸಂತೋಷದ ಫಲ. ಮೂರನೆಯದರಲ್ಲಿ ಅತಿಥಿ ಕೋಪಿಸಿಕೊಳ್ಳುವ ಸಾಧ್ಯತೆ ಇಲ್ಲದಿದ್ದರೂ ಅವನನ್ನು ಸಮಾಧಿನಿಸಿ ಗೌರವ ತೋರುವ ರೀತಿ. ಮೊದಲನೆಯದು ಅತಿಥಿ ಸತ್ಕಾರದಲ್ಲಿ ನಿರಾಸಕ್ತಿ. ಎರಡನೆಯದರಲ್ಲಿ ಅತಿಥಿ ಸತ್ಕಾರದಲ್ಲಿ ಪೂರ್ಣ ಆಸಕ್ತಿ. ಮೂರನೆಯದರಲ್ಲಿ ತಡವಾದುದಕ್ಕೆ ಪ್ರಾಯಶ್ಚಿತ್ತರೂಪವಾಗಿ ಹೆಚ್ಚಿನ ಸತ್ಕಾರದ ಪ್ರಯತ್ನ. 

ಅಥಿತಿ ಅಭ್ಯಾಗತರ ಸತ್ಕಾರ ಎಂದು ಜೊತೆ ಜೊತೆಯಾಗಿ ಹೇಳುತ್ತಾರೆ. ಅಚ್ಚ ಕನ್ನಡದಲ್ಲಿ ಬಂದವರು-ಹೋದವರು ಎನ್ನುತ್ತೇವೆ. ಬಂದವರು ಹೋಗಿಯೇ ಹೋಗುತ್ತಾರೆ. ಆದರೆ ಅದು ಒಂದು ಹೇಳುವ ರೀತಿ. ಪ್ರೀತಿ-ಗೀತಿ ಅಂದಂತೆ. ಅದರಲ್ಲಿ ಒಂದು ವಿಶೇಷವಿದೆ. ಬಂದವರನ್ನು ಸ್ವಾಗತಿಸುವುದು ಎಷ್ಟು ಮುಖ್ಯವೋ, ಅವರು ಹೋಗುವಾಗ ಕ್ರಮವಾಗಿ ಬೀಳ್ಕೊಡುವುದೂ ಅಷ್ಟೇ ಮುಖ್ಯ. ಹಾಗಿದ್ದರೆ ಅಥಿತಿ ಎಂದರೆ ಯಾರು? ಅಭ್ಯಾಗತ ಅಂದರೆ ಯಾರು? ಎರಡರ ಅರ್ಥವೂ ಒಂದೇ? ಅಥವಾ ಬೇರೆಯೇ? ಅವರ ಸತ್ಕಾರಕ್ಕೆ ಏಕೆ ಇಷ್ಟು ಮಹತ್ವ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯುವುದು ಸಹಜವಾಗಿ ಮಾಡಬೇಕಾದ ಕೆಲಸ. 

*****

ಪಂಚಾಂಗ ಎಂಬ ಪದವನ್ನು ಎಲ್ಲರೂ ಬಳಸುತ್ತೇವೆ. ಪಂಚಾಂಗ ಎಂದರೆ ಒಂದು ಪುಸ್ತಕ; ಪ್ರತಿ ವರುಷ ಬರುವ ಹೊಸ ಪುಸ್ತಕ ಎಂದೇ ಅನೇಕರ ತಿಳುವಳಿಕೆ. ಈಚೆಗಂತೂ ವಾಟ್ಸಪ್ಪ್  ಗುಂಪುಗಳಲ್ಲಿ "ಈ ದಿನದ ಪಂಚಾಂಗ" ಎಂದು ಎಲ್ಲರಿಗೂ ಅದನ್ನು ಸುತ್ತು ಹೊಡೆಸದಿದ್ದರೆ ಕೆಲವರಿಗೆ ನಿದ್ದೆಯೇ ಬರುವುದಿಲ್ಲ. ಈ ಪಂಚಾಂಗ ಎಂದರೆ ಏನು? ಪಂಚ ಎಂದರೆ ಐದು ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಏನು ಈ ಐದು? ಇವು ಯಾವುದರ ಅಂಗಗಳು? 

ಯಾವುದಾದರೂ ಕೆಲಸವನ್ನು ಮಾಡುವಾಗ "ಒಂದು ಒಳ್ಳೆಯ ದಿನವನ್ನು ನೋಡಿ ಮಾಡಿ" ಎಂದು ಎಲ್ಲರೂ ಹೇಳುತ್ತಾರೆ. ಯಾವುದು ಒಳ್ಳೆಯ ದಿನ? ಕೇವಲ ದಿನ ಮಾತ್ರ ಒಳ್ಳೆಯದಾದರೆ ನಮಗೆ ಸಾಲದು. ಒಳ್ಳೆಯ ಹಣ್ಣು ಬೇಕು, ಮಾತ್ರವಲ್ಲ. ಅದರ ಒಳ್ಳೆಯ ಭಾಗವೇ ಬೇಕು! ಆ ದಿನದಲ್ಲೂ ಒಂದು ಒಳ್ಳೆಯ ಸಮಯ, ಅಂದರೆ ಮುಹೂರ್ತ ಹುಡುಕುತ್ತಾರೆ. ಒಳ್ಳೆಯ ದಿನವಾಗಬೇಕಾದರೆ ಐದು ಘಟಕಗಳು ಸೇರಬೇಕು. ಐದು ಘಟಕಗಳು ಪ್ರತಿ ದಿನ ಸೇರೇ ಸೇರುತ್ತವಲ್ಲ! ಐದು ಘಟಕಗಳೂ ಒಳ್ಳೆಯವಾಗಿರಬೇಕು. ದಿನ, ವಾರ, ನಕ್ಷತ್ರ, ಯೋಗ, ಕರಣ ಇವೇ ಆ ಐದು ಅಂಗಗಳು. ಈ ಐದರ ವಿವರಗಳನ್ನು ಕೋಷ್ಟಕದಂತೆ ಕೊಟ್ಟಿರುವ ಪುಸ್ತಕವೇ ಪಂಚಾಂಗ. ಅಷ್ಟೇ ಅಲ್ಲ. ಊಟದಲ್ಲಿ ಐದು ವಿಧವಾದ ಸಿಹಿ ಪದಾರ್ಥ ಇರಬೇಕು ಅಂದರೆ ಬರಿ ಐದು ಸಿಹಿ ತಿಂಡಿ ಮಾಡಿ ಬಡಿಸುವುದಲ್ಲ. ಅವುಗಳ ಜೊತೆ ಬೇರೆ ಅನೇಕ ವ್ಯಂಜಕಗಳೂ ಇರುತ್ತವೆ. ಪಂಚಾಂಗವೂ ಹಾಗೆ. ವರ್ಷದ ಪ್ರತಿ ದಿನದ ಈ ಐದು ಅಂಗಗಳ ಕೋಷ್ಠಕದ ಜೊತೆ ಅನೇಕ ಬೇರೆ ಬೇರೆ ಅವಶ್ಯಕವಾದ ವಿಚಾರಗಳೂ ಪಂಚಾಂಗದಲ್ಲಿ ಇರುತ್ತವೆ. 

ಪಂಚಾಂಗದ ಐದು ಅಂಗಗಳಲ್ಲಿ ಮೊದಲನೆಯದು ದಿನ. ಅನಂತವಾದ ಕಾಲವನ್ನು ನಮ್ಮ ಅನುಕೂಲಕ್ಕಾಗಿ ವಿಭಜಿಸಿ ಲೆಕ್ಕಮಾಡಲು ಸುಲಭವಾದ ಘಟಕಗಳಾಗಿ ಮಾಡಿದ್ದಾರೆ. ಚಂದ್ರ ಮತ್ತು ಸೂರ್ಯರ ಚಲನೆ ಆಧರಿಸಿ ಕಾಲ ಅಳೆಯುವ ಪ್ರಯತ್ನ.  "ಮತ್ತೆ ಮತ್ತೆ ಯುಗಾದಿ! ಯಾವುದಕೆ ಹಾದಿ? ಕಂಭ ಸುತ್ತುವ ವೃತ್ತ, ಕಾಲಗತಿಯೇ ಅನಾದಿ" ಎನ್ನುತ್ತಾರೆ ಕವಿ ಗೋಪಾಲಕೃಷ್ಣ ಅಡಿಗರು. ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಕಾಲ ಹಗಲು. ಸೂರ್ಯಾಸ್ತದಿಂದ ಸೂರ್ಯೋದಯದವರೆಗಿನ ಕಾಲ ರಾತ್ರಿ. ಸೂರ್ಯೋದಯದಿಂದ ಮತ್ತೆ ಮಾರನೆಯ ದಿನ ಸೂರ್ಯೋದಯದವರೆಗಿನ ಕಾಲ ಒಂದು ದಿನ. ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಶುಕ್ಲ ಪಕ್ಷ. ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ ಕೃಷ್ಣ ಪಕ್ಷ. ಅಂದರೆ ಅಮಾವಾಸ್ಯೆಯಿಂದ ಮುಂದಿನ ಅಮಾವಾಸ್ಯೆವರೆಗೆ ಒಂದು ತಿಂಗಳು. 

ಚಂದ್ರನ ಗತಿ ಅನುಸರಿಸಿ ಸುಮಾರು ಇಪ್ಪತೆಂಟು ದಿನಗಳಿಗೆ ಒಂದು ತಿಂಗಳು. ಈ ತಿಂಗಳಲ್ಲಿ ಮೂವತ್ತು ತಿಥಿಗಳು. ಆದ್ದರಿಂದ ಕೆಲವು ವೇಳೆ ಒಂದೇ ದಿನ ಎರಡು ತಿಥಿಗಳೂ ಬರಬಹುದು. ಒಂದು ಹಲ್ಲಿನ ಮೇಲೆ ಹುಟ್ಟಿದ ಇನ್ನೊಂದು ಹಲ್ಲು ಅಥವಾ ಉಬ್ಬು ಹಲ್ಲು ಎಂದು ತಮಾಷೆಯಾಗಿ ಹೇಳಬಹುದು. ಇದನ್ನೇ ಉಪರಿ (ಒಂದರ ಮೇಲೆ ಇನ್ನೊಂದು) ಎನ್ನುತ್ತಾರೆ. ಸಾಮಾನ್ಯವಾಗಿ ಒಂದು ದಿನಕ್ಕೆ ಒಂದು ತಿಥಿ. ಅದಕ್ಕೇ ಐದು ಅಂಗಗಳಲ್ಲಿ ಮೊದಲನೆಯದನ್ನು ದಿನ ಅಥವಾ ತಿಥಿ ಎನ್ನುತ್ತಾರೆ. ಪಾಡ್ಯ, ಬಿದಿಗೆ, ತದಿಗೆ...... ಹುಣ್ಣಿಮೆ ಅಥವಾ ಅಮಾವಾಸ್ಯೆ ಇತ್ಯಾದಿ. 

*****

ಜೀವನದ ವಿವಿಧ ಹಂತಗಳನ್ನು ನಾಲ್ಕು ಆಶ್ರಮಗಳು ಎಂದು ವಿಂಗಡಿಸಿದ್ದಾರೆ. (ಜನ್ಮದಿಂದ) ವಿವಾಹದವರೆಗೂ ಬ್ರಹ್ಮಚರ್ಯ. ನಂತರ ಗೃಹಸ್ಥ. ಹೆಚ್ಚಿನ ಸಾಧನೆಗೋ, ಸಂಸಾರದಲ್ಲಿ ಬೇಸತ್ತು ವೈರಾಗ್ಯ ಬಂದೋ ಸನ್ಯಾಸ ಸ್ವೀಕರಿಸಬಹುದು. ಇಲ್ಲವೇ ಗೃಹಸ್ಥನಾದ ನಂತರ ಕೊನೆಯಲ್ಲಿ ವಾನಪ್ರಸ್ಥ. ಹಿಂದೆ ಸಂಸಾರ ತ್ಯಜಿಸಿ ಕಾಡಿಗೆ ಹೋಗುತ್ತಿದ್ದರು. ಈಗ ಅದೂ ಸಾಧ್ಯವಿಲ್ಲ. ಕಾಡೆಲ್ಲಾ ಊರಾಗಿದೆ. "ನೀನೆಲ್ಲಿ ನಡೆವೆ ದೂರ! ಎಲ್ಲೆಲ್ಲೂ ಲೋಕವೇ!" ಎನ್ನುವಂಥ ಸ್ಥಿತಿ. ಬ್ರಹ್ಮಚಾರಿಗಳೂ ಮತ್ತು ಸನ್ಯಾಸಿಗಳೂ ಗೃಹಸ್ಥರನ್ನೇ ಆಶ್ರಯಿಸಿ ಜೀವಿಸಬೇಕು. ಅದಕ್ಕೇ ಕಾಳಿದಾಸ ಮಹಾಕವಿಯ ರಘುವಂಶದಲ್ಲಿ ಕೌತ್ಸ ರಘು ಮಹಾರಾಜನಿಗೆ "ಸರ್ವೋಪಕಾರ ಕ್ಷಮಮಾಶ್ರಮಂ ತೇ" ಎನ್ನುತ್ತಾನೆ. ಸಮಾಜದ ಆಧಾರ ಕಂಭಗಳೇ ಗೃಹಸ್ಥರು. ಆದ್ದರಿಂದ ಗೃಹಸ್ಥರ ಮನೆಗಳಿಗೆ ಅನೇಕರು ಬಂದು ಹೋಗುತ್ತಾರೆ. ಇವರಲ್ಲಿ ಗೃಹಸ್ಥರೂ ಉಂಟು. ಬ್ರಹ್ಮಚಾರಿ, ಸನ್ಯಾಸಿಗಳೂ ಉಂಟು. 

ಗೃಹಸ್ಥರ ಮನೆಗೆ ಬರುವ ಇಂತಹ ಜನಗಲ್ಲಿ ಎರಡು ವಿಧ. ನಾವಾಗಿ ಆಹ್ವಾನಿಸಿ ಅದಕ್ಕೆ ಸ್ಪಂದಿಸಿ ಬರುವವರು ಒಂದು ವರ್ಗ. ಅವರಾಗಿಯೇ ಬರುವವರು ಇನ್ನೊಂದು ವರ್ಗ. ಮೊದಲನೆಯ ಗುಂಪಿನ ಜನ ಬರುವುದು ನಮಗೆ ಗೊತ್ತು. ಏಕೆಂದರೆ, ನಾವು ಕರೆದಿದ್ದರಿಂದಲೇ ಅವರು ಬರುವುದು. ಹೀಗೆ ಕರೆಯುವುದರಿಂದ ಯಾವ ದಿನ ಅವರು ಬರಬೇಕು ಎನ್ನುವುದನ್ನು ನಾವೇ ನಿಗದಿ ಪಡಿಸುತ್ತೇವೆ. ಇಂತಹ ದಿನ (ತಿಥಿ ಅಥವಾ ದಿನಾಂಕವನ್ನು ನಿಗದಿ ಪಡಿಸಿ) ಬನ್ನಿ ಎಂದು ಹೇಳುತ್ತೇವೆ. ಇಷ್ಟು ಮಾತ್ರವಲ್ಲ, ಸಮಯವನ್ನೂ ನಾವು ಹೇಳಬಹುದು. ಅವರು ಬರುವುದು ನಮಗೆ ಮುಂಚೆಯೇ ಗೊತ್ತಿರುವುದರಿಂದ ಅವರನ್ನು ಸರಿಯಾಗಿ, ಗೌರವಯುತವಾಗಿ ಸ್ವಾಗತಿಸಿ, ಸತ್ಕರಿಸಲು ತಯಾರಿ ಮಾಡಿಕೊಳ್ಳಬಹುದು. ಇವರೇ ಅಭ್ಯಾಗತರು. ಇವರು ಬರುವುದರಲ್ಲಿ ಅನಿರೀಕ್ಷಿತವಾದುದು ಏನೂ ಇಲ್ಲ. 

ತಿಥಿ ಇಲ್ಲದೆ ಬರುವವನು ಅಥಿತಿ. ಅಂದರೆ ಅತಿಥಿ ಬರುವುದಕ್ಕೆ ದಿನ ಅಥವಾ ಕಾಲದ ಕ್ರಮವಿಲ್ಲ. ಧಿಡೀರನೆ ಮನೆಯ ಬಾಗಿಲ ಬಳಿ ಬಂದವರು ಅತಿಥಿಗಳು. ಅವರು ಬರುವ ಸುಳಿವೂ ನಮಗೆ ಗೊತ್ತಿಲ್ಲ. ಆದರೆ ಈಗ ಬಂದಿದ್ದಾರೆ. ಇಂತಹವರನ್ನು ಸ್ವಾಗತಿಸಲು, ಸತ್ಕರಿಸಲು ನಮಗೆ ತಯಾರಿ ಮಾಡಿಕೊಳ್ಳಲು ಸಮಯವಿಲ್ಲ. ಆಗಿಂದಾಗಲೇ ಎಲ್ಲ ಆಗಬೇಕು. ಮನೆಯಲ್ಲಿ ಇರುವ ಸಾಧನ, ಸಾಮಗ್ರಿಗಳಿಂದಲೇ ಎಲ್ಲ ನಡೆಯಬೇಕು. ಗೃಹಸ್ಥನ ಸತ್ಕಾರ ಕೌಶಲ್ಯ ಒರೆಗೆ ಹಚ್ಚುವುದು ಇಂತಹ ಸಮಯದಲ್ಲೇ.  ಇಂತಹ ಸಂದರ್ಭಗಳನ್ನು ಸಹಜವಾಗಿ ನಿಭಾಯಿಸುವ ಕಲೆ ಸಾಮಾನ್ಯವಾಗಿ  ಗೃಹಿಣಿಯರಿಗೆ ಒಲಿದು ಬಂದಿದೆ. ಆದ್ದರಿಂದಲೇ ಗೃಹಸ್ಥರು ಇಕ್ಕಟ್ಟಿನ ಪರಿಸ್ಥಿತಿಯಿಂದ ಸುಲಭವಾಗಿ ಪಾರಾಗುತ್ತಾರೆ! 

ಕೋಶಗಳು ಮತ್ತು ನಿಘಂಟುಗಳಲ್ಲಿ ಅತಿಥಿ ಮತ್ತು ಅಭ್ಯಾಗತ ಅನ್ನುವ ಎರಡೂ ಪದಗಳನ್ನೂ ಅತಿಥಿ ಎನ್ನುವ ಅರ್ಥದಲ್ಲೇ ಕೊಡುತ್ತಾರೆ. ಸಮಾನ ಪದಗಳು ಸುಮಾರಾಗಿ ಒಂದೇ ಅರ್ಥ ಕೊಟ್ಟರೂ ಅವುಗಳಲ್ಲಿ ಸಣ್ಣ ಆದರೆ ಸೂಕ್ಷ್ಮ ಭೇದಗಳಿರುತ್ತವೆ. ಅತಿಥಿ ಅನ್ನುವ ಪದಕ್ಕೆ "ತಿಥಿ ಇಲ್ಲದೆ ಬರುವವನು" ಅನ್ನುವುದನ್ನು ಎಲ್ಲ ಕಡೆ ಖಚಿತವಾಗಿ ಸೂಚಿಸಿದರೂ, ಅಭ್ಯಾಗತ ಅನ್ನುವ ಪದಕ್ಕೆ ಅಷ್ಟು ಖಚಿತವಾಗಿ ಸೂಚಿಸುವುದಿಲ್ಲ. ಸುಮಾರು ಅರವತ್ತು ವರುಷಗಳ ಹಿಂದೆ ನನ್ನ ಬಾಲ್ಯದಲ್ಲಿ ಸಂಸ್ಕೃತ ಕಲಿಸುತ್ತಿದ್ದ ಹಿರಿಯರು ಹೇಳಿದ ಮಾತಿನ ಬಲದ ಮೇಲೆ ಮೇಲೆ ಹೇಳಿದ ಅರ್ಥ ಕೊಟ್ಟಿದ್ದೇನೆ. ಅದು ಸಮಂಜಸವಾಗಿದೆ ಎಂದೂ ತೋರುತ್ತದೆ. ಇಲ್ಲದಿದ್ದರೆ ನಮ್ಮ ಕರೆಯ ಮೇರೆಗೆ ಬರುವ ಮಂದಿಗೆ "ಆಹ್ವಾನಿತರು" ಎಂದೇ ಹೇಳಬೇಕಾಗುತ್ತದೆ. ಈ ರೀತಿ ಹೇಳುವುದು ಬಳಕೆಯಲ್ಲಿಲ್ಲ. ಎಲ್ಲರನ್ನೂ (ಕರೆದು ಬಂದವರನ್ನು ಮತ್ತು ಕರೆಯದೆ ಬಂದವರನ್ನೂ) ಅತಿಥಿ ಎಂದೇ ವ್ಯವಹಾರ ಮಾಡಲಾಗುತ್ತದೆ. ಮೇಲೆ ಹೇಳಿದ ಅರ್ಥಗಳನ್ನು ಒಪ್ಪುವುದೂ ಬಿಡುವುದೂ ಅವರವರ ಸಮ್ಮತಿಗೆ ಬಿಟ್ಟ ವಿಷಯ. 

*****

ತಿಥಿ, ಅತಿಥಿ ಮತ್ತು ಅಭ್ಯಾಗತ ಇವುಗಳ ವ್ಯತ್ಯಾಸವನ್ನು ಸ್ವಲ್ಪ ಮಟ್ಟಿಗೆ ತಿಳಿದಾಯಿತು. ಈ ಸಂಚಿಕೆ ಈಗಲೇ ಸಾಕಷ್ಟು ಉದ್ದವೂ ಆಯಿತು. 

ಅಥಿತಿ, ಅಭ್ಯಾಗತರ ಸತ್ಕಾರದ ಇತರ ಮಜಲುಗಳನ್ನು ಮುಂದೆ ನೋಡೋಣ! 

Monday, December 18, 2023

ಅನೇಕ ಪ್ರತೀಕಗಳು ಏಕೆ ಬೇಕು?


ಒಬ್ಬ ಸಾಧು ಶ್ರೀಮಂತನೊಬ್ಬನನ್ನು ಕಾಣಲೆಂದು ಅವನ ಮನೆಗೆ ಹೋದನಂತೆ. ಶ್ರೀಮಂತನ ಸೇವಕ ಸಾಧುವನ್ನು ಸ್ವಾಗತಿಸಿ ಮನೆಯ ಅಂಗಳದಲ್ಲಿ ಕೂಡಿಸಿದ. "ಯಜಮಾನರು ಪೂಜೆ ಮಾಡುತ್ತಿದ್ದಾರೆ. ಪೂಜೆ ಮುಗಿದ ತಕ್ಷಣ ನಿಮ್ಮನ್ನು ನೋಡುತ್ತಾರೆ" ಎಂದು ಹೇಳಿದ. ಸಾಧು ಅಂಗಳದಲ್ಲಿದ್ದ ಒಂದು ಮರದ ಕೆಳಗಿನ ಕಲ್ಲಿನಮೇಲೆ ಕುಳಿತ. ಸುಮಾರು ಹೊತ್ತಾದರೂ ಶ್ರೀಮಂತ ಹೊರಗೆ ಬರಲಿಲ್ಲ. ಸಾಧು ಸೇವಕನನ್ನು ವಿಚಾರಿಸಿದ. "ಗಣಪತಿಯ ಪೂಜೆ ಆಯಿತು. ಈಗ ಸ್ಕಂದನ ಪೂಜೆ ನಡೆಯುತ್ತಿದೆ" ಎಂದು ಸೇವಕ ಹೇಳಿದ. ಇನ್ನೂ ಸ್ವಲ್ಪ ಸಮಯದ ನಂತರ ಸಾಧು ಸೇವಕನನ್ನು ಮತ್ತೆ ವಿಚಾರಿಸಿದ. "ಸ್ಕಂದ, ಲಕ್ಷ್ಮಿ ಪೂಜೆ ಆಯಿತು. ಈಗ ಶಿವನ ಪೂಜೆ ನಡೆಯುತ್ತಿದೆ" ಎಂದು ಸೇವಕ ಹೇಳಿದ. ಸಾಧು ಮತ್ತೆ ಮತ್ತೆ ವಿಚಾರಿಸುತ್ತಿದ್ದ. ಹೀಗೇ ಎರಡು ಮೂರು ತಾಸು ಕಳೆಯಿತು. 

ಕೊನೆಗೆ ಎಲ್ಲ ದೇವರ ಪೂಜೆ ಮುಗಿದು ಶ್ರೀಮಂತ ಹೊರಗೆ ಬಂದು ಸಾಧುವನ್ನು ಕಂಡ. ಶ್ರೀಮಂತನಿಗೆ ಆಶ್ಚರ್ಯ ಆಯಿತು. ಅಂಗಳದಲ್ಲಿ ಸಣ್ಣ ಸಣ್ಣ ಹೊಂಡಗಳು. ಸಾಧುವಿನ ಕೈ ಮಣ್ಣಾಗಿತ್ತು. "ಇದೇನು ಸ್ವಾಮಿಗಳೇ, ಇಷ್ಟೊಂದು ಹೋಂಡ ತೆಗೆದಿದ್ದೀರಿ?" ಎಂದು ಕೇಳಿದ. ಸಾಧು ನಗುತ್ತಾ "ಬಾಯಾರಿಕೆ ಆಯಿತು. ಅದಕ್ಕೆ ಕುಡಿಯುವ ನೀರಿಗಾಗಿ ಬಾವಿ ತೊಡುತ್ತಿದ್ದೆ" ಎಂದ. ಸಾಹುಕಾರ ನಗುತ್ತಾ "ನೀರು ಬೇಕಿದ್ದರೆ ನನ್ನ ಸೇವಕ ಕೊಡುತ್ತಿದ್ದ. ಹೋಗಲಿ, ನೀವು ಹತ್ತಾರು ಕಡೆ ತೋಡುವ ಬದಲು ಒಂದೇ ಕಡೆ ತೋಡಿದ್ದರೆ  ಅದು ಒಂದು ಬಾವಿಯಾಗಿ ನೀರು ಸಿಕ್ಕಿರುತ್ತಿತ್ತು" ಎಂದ. 

ಈಗ ನಗುವ ಸರದಿ ಸಾಧುವಿನದು. "ಅಷ್ಟು ದೇವರುಗಳ ಪೂಜೆ ಸ್ವಲ್ಪ ಸ್ವಲ್ಪ ಹೊತ್ತು ಮಾಡುವ ಬದಲು ಒಬ್ಬನೇ ದೇವರ ಪೂಜೆ ಅಷ್ಟು ಹೊತ್ತೂ ಮಾಡಿದ್ದರೆ ಆ ಒಬ್ಬ ದೇವರು ಪ್ರತ್ಯಕ್ಷವಾಗಿ ನಿಮಗೆ ಕೇಳಿದ ವರಗಳನ್ನು ಕೊಡುತ್ತಿರಲಿಲ್ಲವೇ?" ಎಂದ ಸಾಧು. 

ಅನೇಕ ಪ್ರತೀಕಗಳ ಪೂಜೆ ಮಾಡುವವರನ್ನು ಹಾಸ್ಯ ಮಾಡಲು ಈ ಕಥೆಯನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. 

*****

ಸಾಧಕನಿಗೆ ಇಷ್ಟೊಂದು ಪ್ರತೀಕಗಳ ಅವಶ್ಯಕತೆ ಏಕೆ? ಒಂದೊ, ಎರಡೋ ಇದ್ದರೆ ಸಾಲದೇ? ಒಂದಾದರ ಮೇಲೆ ಒಂದರಂತೆ ಸರತಿಯಲ್ಲಿ ಪೂಜೆ ಮಾಡುತ್ತಿದ್ದರೆ ಮೇಲಿನ ಕಥೆಯಲ್ಲಿನ ಶ್ರೀಮಂತನಂತೆ ಆಗಲಿಲ್ಲವೇ? ಸಾಧು ಅವನಿಗೆ ಹೇಳಿದ್ದು ಸರಿ ತಾನೇ? ಇವೆಲ್ಲ ನ್ಯಾಯವಾದ ಪ್ರಶ್ನೆಗಳೇ. ಒಂದಾದರ ಮೇಲೆ ಒಂದರಂತೆ ಹೀಗೆ ಪೂಜೆ ಮಾಡುವುದರಲ್ಲಿಯೇ ಕಾಲ ಕಳೆದು ಹೋಗಬಹುದಲ್ಲವೇ? ವಿಮಾನ ಮೇಲೇರುವ ಬದಲು ನಿಲ್ದಾಣದಲ್ಲೇ ಸುತ್ತು ಹೊಡೆದರೆ ಏನು ಪ್ರಯೋಜನ? ಈ ಪ್ರಶ್ನೆಗಳಿಗೆ ಸಮಾಧಾನ ಏನು?

ಪ್ರತೀಕಗಳು ಒಂದು ನಿಮಿತ್ತ; ಆರಾಧಿಸುವುದು ಆ ಪ್ರತೀಕಗಳು ಪ್ರತಿನಿಧಿಸುವ ದೇವತೆಗಳ ಅಂತರ್ಯಾಮಿಯಾದ ಪರಮಪುರುಷನನ್ನು ಎಂದಾದಮೇಲೆ ನಮಗೆ ಅಷ್ಟು ಮಂದಿ ದೇವತೆಗಳೂ, ಅವರ ಪ್ರತೀಕಗಳೂ ಏಕೆ ಬೇಕು? 

ಮನೆಯಲ್ಲಿ ಅಥವಾ ಕಾರ್ಯಾಗಾರದಲ್ಲಿ ಒಂದು "ಉಪಕರಣಗಳ ಪೆಟ್ಟಿಗೆ" ಅಥವಾ "ಟೂಲ್ ಕಿಟ್" ಇರುತ್ತದೆ. ಅದರಲ್ಲಿ ಅನೇಕ ರೀತಿಯ ಉಪಕರಣಗಳು ಇರುತ್ತವೆ. ಅವೆಲ್ಲವನ್ನೂ ಪ್ರತಿದಿನವೂ ಉಪಯೋಗಿಸುವುದಿಲ್ಲ. ಸಮಯ, ಸಂದರ್ಭ, ಅವಶ್ಯಕತೆಗೆ ಹೊಂದಿದಂತೆ ಯಾವ ಉಪಕರಣ ಬೇಕೋ ಅದನ್ನು ಉಪಯೋಗಿಸುತ್ತಾರೆ.  ಕೆಲವನ್ನು ಪ್ರತಿದಿನ ಉಪಯೋಗಿಸುವ ಅವಶ್ಯಕತೆ ಬರುತ್ತದೆ. ಅನೇಕ ವೇಳೆ ಕೆಲವು ಉಪಕರಣಗಳನ್ನು ತಿಂಗಳುಗಟ್ಟಲೆ ಉಪಯೋಗಿಸುವುದಿಲ್ಲ. ಉಪಯೋಗಿಸಲಿಲ್ಲ ಎಂದು ಅವನ್ನು ತ್ಯಜಿಸುವುದೂ ಇಲ್ಲ. 

ಅಡಿಗೆ ಮನೆಯಲ್ಲಿ ಅನೇಕ ಪಾತ್ರೆಗಳು ಇವೆ. ಪ್ರತಿಯೊಂದಕ್ಕೂ ಒಂದು ನಿರ್ದಿಷ್ಟ ಉಪಯೋಗ ಇದೆ. ಇಷ್ಟು ಪಾತ್ರೆಗಳು ಇವೆ ಎಂದು ಅವೆಲ್ಲವನ್ನೂ ಪ್ರತಿದಿನ ಬಳಸುವುದಿಲ್ಲ. ಅಂತೆಯೇ ಪ್ರತಿದಿನ ಬಳಸುವುದಿಲ್ಲ ಎಂದು ಕೆಲವು ಪಾತ್ರೆಗಳನ್ನು ಬಿಸಾಡುವುದೂ ಇಲ್ಲ. 

ಸಾಧಕನು ಪ್ರತೀಕಗಳನ್ನು ಆರಾಧಿಸುವಾಗ ತನ್ನ ವಿವೇಚನೆಯನ್ನು ಬಳಸಬೇಕು. ಪ್ರತಿದಿನ ಸರತಿಯ ಮೇಲೆ ಒಂದಾದ ನಂತರ ಒಂದರಂತೆ ಅನೇಕ ಪ್ರತೀಕಗಳನ್ನು ಆರಾಧಿಸುವುದರಿಂದ ಮೂಲ ಉದ್ದೇಶಗಳನ್ನೇ ಮರೆತಂತಾಗುತ್ತದೆ. ಪ್ರತೀಕಗಳ ಅಂತರ್ಯಾಮಿಯಾದ ಪರಮಪುರುಷನೇ ಪರಮ ಗುರಿ ಎನ್ನುವುದನ್ನು ನೆನಪಿಡಬೇಕು. ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿದ್ದಂತೆ ಸಾಧನೆಯ ಮಾರ್ಗಗಳೂ ಪರಿವರ್ತನೆಗೆ ಒಳಗಾಗುತ್ತವೆ. ಒಂದು ಹಂತ ದಾಟಿದ ಮೇಲೆ ಅನೇಕ ಸಾಧಕರು ತಮ್ಮ ಆರಾಧನೆಯ ಕ್ರಮವನ್ನೇ ಬದಲಿಸುತ್ತಾರೆ. "ಮಾನಸ ಪೂಜೆ" ನಡೆಸುವ ಹಂತ ತಲುಪಿದ ಸಾಧಕರು ಎಲ್ಲೆಲ್ಲೂ ಪರಮಾತ್ಮನನ್ನೇ ಕಾಣುತ್ತಾರೆ. ಅವರು ಪ್ರತೀಕಗಳ ಅವಶ್ಯಕತೆ ದಾಟಿದವರು. ಆದರೂ ಅವರು ಪ್ರತೀಕಗಳನ್ನು ತಿರಸ್ಕರಿಸುವುದಿಲ್ಲ. ಪ್ರತೀಕಗಳ ಆರಾಧಕರನ್ನು ನಿರ್ಲಕ್ಷಿಸುವುದಿಲ್ಲ. 
*****

ಸರಕಾರದ ಕಾರ್ಯ ನಿರ್ವಹಿಸಲು ಅನೇಕ ಖಾತೆ ಅಥವಾ ವಿಭಾಗಗಳಿವೆ. ಪ್ರತಿಯೊಂದು ವಿಭಾಗದಲ್ಲೂ ಅನೇಕ ಹಂತಗಳಿವೆ. ಪ್ರತಿ ಹಂತದಲ್ಲೂ ಅಧಿಕಾರಿಗಳಿದ್ದಾರೆ. ಆದರೆ ಎಲ್ಲ ವಿಭಾಗಗಳ ಕೆಲಸಗಳೂ "ಪ್ರೆಸಿಡೆಂಟ್ ಆಫ್ ಇಂಡಿಯ" ಅಥವಾ "ಭಾರತದ ರಾಷ್ಟ್ರಪತಿ" ಹೆಸರಿನಲ್ಲಿ ನಡೆಯುತ್ತವೆ. ಪ್ರಜೆಗಳ ಬೇಡಿಕೆಗೆ ಅನುಗುಣವಾಗಿ ಆಯಾ ಇಲಾಖೆಯ ಅಧಿಕಾರಿಗಳು ಅವರವರ ಅಧಿಕಾರದ ಯೋಗ್ಯತೆಗೆ ಮತ್ತು ವ್ಯಾಪ್ತಿಗೆ ತಕ್ಕಂತೆ ಮಾಡಿಕೊಡುತ್ತಾರೆ. ಪ್ರತಿ ಕೆಲಸವೂ ರಾಷ್ಟ್ರಪತಿಗಳ ಗಮನಕ್ಕೆ ಬರಬೇಕಾಗಿಲ್ಲ. ಪ್ರತಿ ಕೆಲಸಕ್ಕೂ ರಾಷ್ಟ್ರಪತಿಗಳ ಅಪ್ಪಣೆ ಬೇಕಾಗಿಲ್ಲ. ತಮ್ಮ ಕೆಲಸಗಳಿಗೆ ತಕ್ಕಂತೆ ಪ್ರಜೆಗಳು ಆಯಾ ವಿಭಾಗದ ಮತ್ತು ಸೂಕ್ತ ಹಂತದ ಕಚೇರಿಗಳಿಗೆ ಹೋಗುತ್ತಾರೆ. ಆದರೆ ಕೆಲಸ ಮಾಡುವ ಪ್ರತಿ ಅಧಿಕಾರಿಗೂ ತಾನು ಸರಕಾರದ ಕೆಲಸ ಮಾಡುತ್ತಿದ್ದೇನೆ, ನನ್ನ ಸ್ವಂತದ್ದಲ್ಲ ಎನ್ನುವ ಅರಿವು ಇರುತ್ತದೆ. ಪರಮಾತ್ಮನ ವ್ಯವಸ್ಥೆಯೂ ಹೀಗೆಯೇ. 

ನಮ್ಮ ಸುತ್ತ ಮುತ್ತ ಕಾಣುವಂತೆ ಅನೇಕ ವಿದ್ಯುತ್ ಉಪಕರಣಗಳಿವೆ. ಬೆಳಕು ನೀಡುವುದಕ್ಕಾಗಿಯೇ ಬೇರೆ ಬೇರೆ ಶಕ್ತಿಯ ಬಲ್ಬುಗಳು ಇವೆ. ಗಾಳಿಗಾಗಿ ಫ್ಯಾನ್ ಇವೆ. ಹವಾನಿಯಂತ್ರಣ ಉಪಕರಣಗಳಿವೆ. ವಿದ್ಯುತ್ನಿಂದ ಚಲಿಸುವ ವಾಹನಗಳಿವೆ. ಕಾರ್ಖಾನೆಗಳಲ್ಲಿ ಚಲಿಸುವ ದೊಡ್ಡ ದೊಡ್ಡ ಯಂತ್ರಗಳಿವೆ. ಮಿಕ್ಸರ್, ಗ್ರೈಂಡರ್ ಇವೆ. ರೆಫ್ರಿಜಿರೇಟರ್, ಡಿಶ್ ವಾಷರ್ ಇವೆ. ಇನ್ನೂ ಅನೇಕ ಉಪಕರಣಗಳಿವೆ. ಆದರೆ ಇವೆಲ್ಲ ಕೆಲಸ ಮಾಡುವುದು ಒಂದೇ ವಿದ್ಯುತ್ತಿನಿಂದ. ವಿದ್ಯುತ್ ಹರಿದರೆ ಕೆಲಸ. ಇಲ್ಲದಿದ್ದರೆ ನಿರುಪಯೋಗಿಗಳು. ಪರಮಾತ್ಮನ "ನಿಯಮನ" ಪ್ರಕಾರವೇ ಸೃಷ್ಟಿಯ ಸಮಸ್ತ ಕಾರ್ಯಗಳೂ ನಡೆಯುತ್ತವೆ. ಈ ಎಲ್ಲ ಸಾಧನ ಯಂತ್ರಗಳೂ ಬೇಕು. ಜೊತೆಗೆ ವಿದ್ಯುತ್ ಇರಲೇ ಬೇಕು. 

ಶ್ರೀಮದ್ಭಾಗವತ ಮೊದಲನೇ ಶ್ಲೋಕದಲ್ಲಿ "ಜನ್ಮಾದ್ಯಸ್ಯ" ಎಂದು ಹೇಳುವಾಗ ವಿರಾಟ್ ವಿಶ್ವದ ಸೃಷ್ಟಿಯಿಂದ ಪ್ರಾರಂಭಿಸಿ ಪರಮಾತ್ಮನ ಎಂಟು ಬಗೆಯ ಕರ್ತೃತ್ವವನ್ನು ವಿವರಿಸುತ್ತದೆ. ಸೃಷ್ಟಿ, ಸ್ಥಿತಿ, ಲಯ, ನಿಯಮನ, ಜ್ನ್ಯಾನ, ಅಜ್ನ್ಯಾನ, ಬಂಧ ಮತ್ತು ಮೋಕ್ಷ ಎಂಬ ಎಂಟು ಕರ್ತೃತ್ವಗಳಲ್ಲಿ ನಾಲ್ಕನೆಯದು "ನಿಯಮನ". ಈ ನಿಯಮನ ಎನ್ನುವುದೇ ಆ ವಿಶ್ವಾತ್ಮನ "ಸಂವಿಧಾನ". ಸೃಷ್ಟಿಯಿಂದ ಲಯದವರೆಗೆ, ಮತ್ತು ಲಯದಿಂದ ಪುನಃ ಸೃಷ್ಟಿಯವರೆಗೆ ಎಲ್ಲವೂ ಈ ನಿಯಮನ ಎನ್ನುವ ಸಂವಿಧಾನದ ಪ್ರಕಾರವೇ ನಡೆಯುವುದು. ಆ ಸಂವಿಧಾನದ ಪ್ರಕಾರ ಕೆಲಸ ನಿರ್ವಹಿಸುವ ಅನೇಕ ದೇವತಗಳೇ ಪ್ರಧಾನ ಪ್ರತೀಕಗಳು. ಈ ನಿಯಮನದ ಆದೇಶದಂತೆ ಕಾರ್ಯ ನಿರ್ವಹಿಸುವ ಪ್ರತಿಯೊಂದು ದೇವತೆಯೂ ನಮ್ಮ ಶ್ರದ್ದಾ ಗೌರವಗಳಿಗೆ ಪಾತ್ರರು. ಪ್ರತೀಕಗಳ ಮೂಲಕ ಮಾಡುವ ಸಾಧನೆ ಈ ತತ್ವವನ್ನು ಗೌರವಿಸುವ ಪ್ರಕ್ರಿಯೆಯೇ ಆಗಿದೆ. 

***** 

ಈಗ ಮತ್ತೊಂದು ಪ್ರಶ್ನೆ ಬರಬಹುದು. "ಎಲ್ಲವೂ ಪರಮಾತ್ಮನ ಇಚ್ಛೆಯಿಂದಲೇ ನಡೆಯುವುದಾದರೆ ನಾವು ನೇರವಾಗಿ ಅವನನ್ನೇ ಆರಾಧಿಸುತ್ತೇವೆ. ಬೇರೆಯವರಗೊಡವೆ ನಮಗೆ ಬೇಡ. ಪ್ರತೀಕಗಳೂ ಬೇಡ; ದೇವತೆಗಳೂ ಬೇಡ. ಅವುಗಳೂ ಅವುಗಳ ಆರಾಧನೆಯೂ ಬೇಡ. ನೇರವಾಗಿ ಅವನನ್ನೇ ಆಶ್ರಯಿಸುತ್ತೇವೆ. ಆರಾಧಿಸುತ್ತೇವೆ." ಎಂದು ಕೆಲವರು ಹೇಳಬಹುದು. ಇದು ನಮಗೆ ಯಾವ ಅಧಿಕಾರಿಯ ಸಹವಾಸವೂ ಬೇಡ. ನೆಟ್ಟಗೆ ರಾಷ್ಟ್ರಪತಿಗಳ ಬಳಿಯಲ್ಲಿಯೇ ನಮ್ಮ ಕೆಲಸ ಮಾಡಿಸಿಕೊಳ್ಳುತ್ತೇವೆ ಎಂದಂತಾಯಿತು. ಆದರೆ  ನಿಯಮನದ ಪ್ರಕಾರ ಪರಮಾತ್ಮನನ್ನು ಧ್ಯಾನಿಸುವಾಗ ಅವನ ಪರಿವಾರ ಸಮೇತ ಧ್ಯಾನಿಸಬೇಕು. ಒಂದು ಲಗ್ನಪತ್ರಿಕೆ ಕೊಡುವಾಗ ಸಕುಟುಂಬ ಸಪರಿವಾರ ಸಮೇತ ಆಗಮಿಸಿ ಎಂದು ಬಿನ್ನೈಸಿಕೊಳ್ಳುವ ನಾವು (ಈಗ ಲಗ್ನಪತ್ರಿಕೆಯಲ್ಲಿ ಈ ರೀತಿಯ ಒಕ್ಕಣೆಯನ್ನು ಕಾಣುವುದು ಬಹಳ ವಿರಳ) ಪರಮಾತ್ಮನ ಚಿಂತನೆಯಲ್ಲಿ ಅದನ್ನು ಯಾಕೆ ಮಾಡಬಾರದು? 

ದೇವತೆಗಳ ಆರಾಧನೆ ಮಾಡುವಾಗ ಇದೇ ಕೊನೆ ಎಂಬ ಭಾವನೆ ಇರದೇ "ಎಲ್ಲ ದೇವ, ದೇವತೆಗಳಿಗೆ ಮಾಡುವ ನಮಸ್ಕಾರವೂ ಪರಮಾತ್ಮನಿಗೇ ತಲುಪುತ್ತವೆ" ಎಂಬ ಸುಜ್ಞಾನ ಇರಬೇಕು. 

ಅನೇಕ ವ್ರತ, ವಿಧಿ, ವಿಧಾನಗಳನ್ನು ಒಳಗೊಂಡ ಪೂಜಾದಿ ಕೈಂಕರ್ಯಗಳಲ್ಲಿಯೂ ಕಡೆಗೆ ಸಮರ್ಪಣೆ ಮಾಡುವಾಗ ಒಂದೇ ಇಷ್ಟ ದೈವಕ್ಕೆ (ಉದಾಹರಣೆಗೆ: ಕೃಷ್ಣಾರ್ಪಣಮಸ್ತು) ಎಂದೇ ಹೇಳುತ್ತಾರೆ. ಗಣೇಶ ಚೌತಿಯಂದು ಒಂದೂವರೆ ಗಂಟೆ ಪೂಜೆ ನಡೆಸಿ ಶ್ರೀ ಕೃಷ್ಣಾರ್ಪಣಮಸ್ತು ಎಂದೇ ಹೇಳುತ್ತಾರೆ, ಅಥವಾ ಶ್ರೀ ಪರಮೇಶ್ವರಾರ್ಪಣಮಸ್ತು ಎನ್ನುತ್ತಾರೆ!

Monday, December 11, 2023

ನಿರ್ಗುಣ, ನಿರಾಕಾರ - ಸಗುಣ, ಸಾಕಾರ





ನಮ್ಮ ದೇಶ ಅನೇಕ ಕಾರಣಗಳಿಂದ "ಅನನ್ಯ". ಅನನ್ಯ ಅಂದರೆ ಏನು? ಇಂಗ್ಲಿಷ್ ಭಾಷೆಯಲ್ಲಿ ಸುಲಭವಾಗಿ ಯುನಿಕ್ (Unique) ಎಂದು ಹೇಳಬಹುದು. ಅನನ್ಯ ಅಂದರೆ ಅನ್ಯರಿಲ್ಲ. ಅಂದರೆ, ಈ ರೀತಿ ಮತ್ತೊಂದಿಲ್ಲ ಅಥವಾ ಮತ್ತೊಬ್ಬರಿಲ್ಲ. ಈ ವಸ್ತು ಅಥವಾ ವ್ಯಕ್ತಿಗೆ ಹೋಲಿಸಲು ಮತ್ತೊಂದು ವಸ್ತು ಅಥವಾ ವ್ಯಕ್ತಿ ಸಿಗುವುದಿಲ್ಲ. 

ನಮ್ಮ ದೇಶ ಅನನ್ಯವಾಗಿರುವದಕ್ಕೆ ಅನೇಕ ಕಾರಣಗಳು ಇವೆ. ಅವುಗಳಲ್ಲಿ ದಿವ್ಯ ಶಕ್ತಿಯ ಆರಾಧನೆಗೆ ಬಳಸುವ ದಾರಿಗಳೂ, ನಂಬಿಕೆಗಳೂ ಒಂದು ಬಹಳ ಮುಖ್ಯ ಕಾರಣ. ನಿರೀಶ್ವರವಾದದಿಂದ ಹಿಡಿದು, ನಿರ್ಗುಣ-ನಿರಾಕಾರ ಎನ್ನುವುದನ್ನು ದಾಟಿ, ಸದ್ಗುಣ-ಸಾಕಾರ ಅನ್ನುವವರೆಗೆ ನಂಬಿ ಆರಾಧಿಸುವ ಜನಗಳು ಇಲ್ಲುಂಟು. 

ದಕ್ಷಿಣ ಭಾರತದ, ತಮಿಳುನಾಡು ರಾಜ್ಯದ ದಕ್ಷಿಣ ಭಾಗದಲ್ಲಿರುವ "ಚಿದಂಬರಂ" ನಂಬಿದವರಿಗೆ ಅತ್ಯಂತ ಪವಿತ್ರ ಯಾತ್ರಾ ಸ್ಥಳ. ಬಂಗಾಲ ಕೊಲ್ಲಿಯ ಸಮೀಪದಲ್ಲಿರುವ ಕೇಂದ್ರ. ಅನೇಕ ಕಾರಣಗಳಿಂದ ಇಲ್ಲಿನ ನಟರಾಜ ದೇವಾಲಯ ಬಹು ಪ್ರಸಿದ್ಧವಾಗಿದೆ. ಚಿದಂಬರಂ ವಿಷಯದಲ್ಲಿ ಬಹಳ ಸ್ಥಳ ವಿಶೇಷಗಳನ್ನು ಹೇಳುತ್ತಾರೆ. ಭೌಗೋಳಿಕವಾಗಿ, ಚಾರಿತ್ರಿಕವಾಗಿ, ವೈದಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಈ ಸ್ಥಳ ಬಹಳ ಮಹತ್ವವನ್ನು ಪಡೆದಿದೆ. ಸಂಗೀತ ಮತ್ತು ನೃತ್ಯ ಕಲಾವಿದರಿಗಂತೂ ಇದು ಬಹು ದೊಡ್ಡ ಕ್ಷೇತ್ರ. ವರ್ಷಪೂರ್ತಿ ಇಲ್ಲಿ ಸಂಗೀತ ಮತ್ತು ನೃತ್ಯ ಕಲಾವಿದರು ದೇಶದ ಬೇರೆ ಬೇರೆ ಭಾಗಗಳಿಂದ ಬಂದು ನಟರಾಜನನ್ನು ಆರಾಧಿಸಿ ತಮ್ಮ ಕಲಾಸೇವೆಯನ್ನು ನಟರಾಜನಿಗೆ ಸಮರ್ಪಿಸುತ್ತಾರೆ. 

"ಚಿದಂಬರ ರಹಸ್ಯ" ಎನ್ನುವುದು ಒಂದು ನಾಣ್ನುಡಿಯೇ ಆಗಿಹೋಗಿದೆ. ಯಾರಿಗೂ ಅರ್ಥವಾಗದೇ ಇರುವ ಕಗ್ಗಂಟಾದ ವಿಷಯವನ್ನು "ಅದೊಂದು ಚಿದಂಬರ ರಹಸ್ಯ" ಎಂದು ಹೇಳುವುದು ವಾಡಿಕೆಯಾಗಿಹೋಗಿದೆ. ನಟರಾಜ ದೇವಾಲಯದ ಗರ್ಭ ಗುಡಿಯ ದ್ವಾರದ ಪಕ್ಕದಲ್ಲಿ ಒಂದು ವಿಶೇಷ ಸ್ಥಳವಿದೆ. ದೇವಾಲಯದ ಗೋಡೆಯಲ್ಲಿರುವ ಈ ಸ್ಥಳವನ್ನು ಒಂದು ವಸ್ತ್ರದ ತೆರೆಯಿಂದ ಯಾವಾಗಲೂ ಮುಚ್ಚಿರುತ್ತಾರೆ. ವಿಶೇಷ ಪೂಜೆಯ ಸಂದರ್ಭದಲ್ಲಿ ಮಾತ್ರ ಅರ್ಚಕರು ಈ ತೆರೆಯನ್ನು ಸರಿಸಿ ಮಂಗಳಾರತಿ ಮಾಡುತ್ತಾರೆ. ಭಕ್ತ ವೃಂದ ಈ ಸಮಯಕ್ಕಾಗಿ ಕಾಯುತ್ತಿರುತ್ತಾರೆ. ಮಂಗಳಾರತಿ ಆದ ಸ್ವಲ್ಪ ಸಮಯಕ್ಕೆ ಅರ್ಚಕರು ಮತ್ತೆ ತೆರೆಯಿಂದ ಆ ಜಾಗವನ್ನು ಮುಚ್ಚಿಬಿಡುತ್ತಾರೆ. 

ತೆರೆ ಸರಿಸಿದ ಸಮಯದಲ್ಲಿ ಅಲ್ಲಿ ನೋಡಿದರೆ ಏನೂ ಕಾಣುವುದಿಲ್ಲ. ವಿಗ್ರಹವಾಗಲಿ ಅಥವಾ ಚಿತ್ರವಾಗಲಿ ಅಲ್ಲಿಲ್ಲ. ತೀವ್ರವಾಗಿ ಹತ್ತಿರದಿಂದ ಗಮನಿಸಿದರೆ ಬಂಗಾರದ ಎಲೆಗಳನ್ನು ಕಾಣಬಹುದು. ಬಿಲ್ವ ಪತ್ರೆಯ ರೀತಿಯ ಎಲೆಗಳು. ತೆರೆಯ ಹಿಂದೆ ಶೂನ್ಯ. ಈ ತೆರೆಯನ್ನು ಮಾಯೆಗೆ ಹೋಲಿಸುತ್ತಾರೆ. ಏನೂ ಕಾಣದ ಈ ಸ್ಥಳದಲ್ಲಿ ಶಿವ-ಪಾರ್ವತಿ ನೆಲೆಸಿದ್ದಾರೆ ಎಂದು ಹೇಳುತ್ತಾರೆ. ಜ್ಞಾನಿಗಳಿಗೆ ಈ ಏನೂ ಇಲ್ಲದ, ಏನೂ ಕಾಣದ ಸ್ಥಳದಲ್ಲಿ ಶಿವ ಪಾರ್ವತಿಯರ ದರ್ಶನ ಆಗುತ್ತದೆ ಎಂದು ನಂಬಿಕೆ. ಇದೇ "ಚಿದಂಬರ ರಹಸ್ಯ". ಏನೂ ಇಲ್ಲದ ಶೂನ್ಯ. ಅದರಲ್ಲಿ ಸಾಧಕರು ಪರಮಾತ್ಮನನ್ನು ಕಾಣುತ್ತಾರೆ. 
*****

ಇಡೀ ವಿಶ್ವದ ಸೃಷ್ಟಿಗೆ ಮತ್ತು ನಿರ್ವಹಣೆಗೆ ಏನಾದರೂ ಕಚ್ಚಾವಸ್ತು (rawmaterial) ಮತ್ತು ಸಾಧನಗಳು ಬೇಕಲ್ಲ. ಅವು ಐದು ಬಗೆ ಎಂದು ಸಿದ್ಧಾಂತಗಳು ಹೇಳುತ್ತವೆ. ಒಟ್ಟಾಗಿ ಇವನ್ನೇ "ಪಂಚ ಭೂತಗಳು" ಎನ್ನುತ್ತೇವೆ. ಮೊದಲನೆಯದು ಮಣ್ಣು ಅಥವಾ ಪೃಥ್ವಿ. ಅದರ ಜೊತೆಗೆ ನೀರು ಅಥವಾ ಅಪ್ಪು. ಶಕ್ತಿ ಕೊಡಲು ಬೆಂಕಿ ಅಥವಾ ತೇಜಸ್ಸು. ಸಂವಹನದ ಮಾಧ್ಯಮವಾಗಿ ಗಾಳಿ ಅಥವಾ ವಾಯು. ಕ್ರಿಯೆಗಳಿಗೆ ಜಾಗ ಒದಗಿಸುವ ಸಲುವಾಗಿ ಅವಕಾಶ ಅಥವಾ ಆಕಾಶ. ಆಕಾಶ ಅಂದರೆ ಕೇವಲ ಮೇಲೆ ನೋಡುವುದಲ್ಲ. ಎಲ್ಲ ಕಡೆಯೂ ಚಲನೆಗೆ ಅವಕಾಶ ಕೊಡುವುದೇ ಆಕಾಶ. ನಮ್ಮ ಕೈ, ಕಾಲುಗಳು ಆಡಲು ಆಕಾಶ (Space) ಬೇಕು. ಮನುಷ್ಯ, ಪ್ರಾಣಿಗಳು, ಸಸ್ಯಗಳು ಮತ್ತೆಲ್ಲ ವಸ್ತುಗಳೂ ಈ ಐದು ತತ್ವಗಳಿಂದಲೇ ಕಾರ್ಯ ನಿರ್ವಹಿಸುತ್ತವೆ. 

ಪಂಚಭೂತಗಳಿಂದ ಆದ ಪದಾರ್ಥಗಳಲ್ಲಿ, ಪ್ರಾಣಿಗಳಲ್ಲಿ, ಮನುಷ್ಯರಲ್ಲಿ ಸಹಜವಾಗಿಯೇ ಕೆಲವು ಗುಣಗಳು ವ್ಯಕ್ತವಾಗುತ್ತ್ತವೆ. ಇವುಗಳ ಜೊತೆಗೆ ಜೀವಿಗಳ ಸ್ವರೂಪ ಗುಣವೂ ಸೇರುತ್ತವೆ. ಬೇರೆ ಬೇರೆ ಪ್ರಮಾಣಗಲ್ಲಿ ಈ ಕಚ್ಚಾವಸ್ತುಗಳ ಬೆರಕೆಯಿಂದಾದ ಮತ್ತು ಜೀವಿಗಳ ಸ್ವಭಾವವನ್ನು ಅನುಸರಿಸಿ ಗುಣಗಳು ತೋರಿಸಿಕೊಳ್ಳುತ್ತವೆ. ಒಳ್ಳೆಯ ಗುಣಗಳಿಗೆ ಸತ್ವ ಗುಣ ಎನ್ನುತ್ತಾರೆ. ಕೆಟ್ಟ ಗುಣಗಳಿಗೆ ತಾಮಸ ಗುಣ ಎನ್ನುತ್ತಾರೆ. ಇವೆರಡರ ಮಧ್ಯೆ ಇರುವುವನ್ನು ರಾಜಸ ಗುಣ ಎನ್ನುತ್ತಾರೆ. 

ವಿಶೇಷವೇನೆಂದರೆ, ಎಲ್ಲರಲ್ಲಿಯೂ ಎಲ್ಲ ಮೂರು ಗುಣಗಳೂ ಇರುತ್ತವೆ! ಯಾರೊಬ್ಬರಲ್ಲಿಯೂ ಕೇವಲ ಒಂದೇ ಗುಣ ಪೂರ್ಣವಾಗಿ ತುಂಬಿರುವುದಿಲ್ಲ. ಮೂರರಲ್ಲಿ ಯಾವುದು ಅತಿ ಹೆಚ್ಚು ಪ್ರಮಾಣದಲ್ಲಿ ಇದೆಯೋ ಆ ವ್ಯಕ್ತಿ ಆ ಗುಣಿ (ಗುಣವುಳ್ಳವನು) ಎಂದು ಕರೆಸಿಕೊಳ್ಳುತ್ತಾನೆ. ಸತ್ವ ಗುಣ ಪ್ರಧಾನವಾದವರನ್ನು ಸಾತ್ವಿಕರು ಎನ್ನುತ್ತಾರೆ. ರಾಜಸ ಗುಣ ಪ್ರಧಾನವಾದವರನ್ನು ರಾಜಸರು ಎನ್ನುತ್ತಾರೆ. ತಾಮಸ ಗುಣ ಪ್ರಧಾನವಾದವರನ್ನು ತಾಮಸರು ಎನ್ನುತ್ತಾರೆ. ಇದೇ ಕಾರಣಕ್ಕೆ ಸಾತ್ವಿಕರೂ ಸಹ ಕೆಲವು ವೇಳೆ ಕೋಪಿಷ್ಠರಾಗುವುದು, ಗರ್ವಿತರಾಗುವುದು, ಅಸೂಯಾಪರರಾಗುವುದು ಮುಂತಾದುವನ್ನು ಕಾಣುತ್ತೇವೆ. "ಅಯ್ಯೋ, ಅವರು ಹೀಗೆ ಮಾಡುತ್ತಾರೆ ಅಂದರೆ ನಂಬುವುದು ಕಷ್ಟ" ಎಂದು ಉದ್ಗಾರ ತೆಗೆಯುತ್ತೇವೆ. ತಾಮಸರು ಸಹ ಒಮ್ಮೊಮ್ಮೆ ಸತ್ವ ಗುಣ ತೋರಿಸಿ ಸತ್ಕಾರ್ಯ ಮಾಡುವುದೂ ಉಂಟು. "ಆಹಾ! ಆ ಕಟುಕನಲ್ಲಿಯೂ ಕರುಣೆ ಎಲ್ಲಿಂದ ಬಂತು?" ಎನ್ನುವಂತೆಯೂ ಆಗುತ್ತದೆ. ಒಮ್ಮೊಮ್ಮೆ ಹೀಗೆ, ಒಮ್ಮೊಮ್ಮೆ ಹಾಗೆ ಇರುವವರೂ ಉಂಟು. ಸಜ್ಜನರು ಮತ್ತು ದುರ್ಜನರ ನಡುವೆ ಸಾಮಾನ್ಯರೂ ಕಾಣಸಿಗುವುದು ಈ ಕಾರಣಕ್ಕಾಗಿಯೇ. 

ಹೀಗಿರುವಾಗ, ಪರಮಾತ್ಮನ ವಿಷಯ ಏನು? ಅವನಲ್ಲಿ ಯಾವ ಗುಣ ಪ್ರಧಾನ? ಪರಮಾತ್ಮನು ಪಂಚಭೂತಗಳಿಂದ ಅದವನಲ್ಲ. ಅದರೊಂದಿಗೆ ಅವನು ಸ್ವರೂಪದಿಂದಲೂ ಸ್ವಚ್ಛ, ಶುಭ್ರ. ಆದ್ದರಿಂದ ಅವನು ಈ ಮೂರು ಗುಣಗಳನ್ನೂ ದಾಟಿದವನು. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ಅವನಲ್ಲಿ ಈ ಮೂರು ಗುಣಗಳೂ ಇಲ್ಲ. ಆದ್ದರಿಂದ ಅವನು "ನಿರ್ಗುಣ".  ಇದನ್ನೇ "ತ್ರಿಗುಣಾತೀತ" ಎನ್ನುತ್ತಾರೆ. 

*****

ದೂರದಿಂದ ಬರುತ್ತಿರುವ ವ್ಯಕ್ತಿಯ ಬಗ್ಗೆ ಇಲ್ಲಿರುವ ಇಬ್ಬರಲ್ಲಿ ಚರ್ಚೆ ಆಗುತ್ತದೆ. "ಅದೋ, ಕುಮಾರ ಬರುತ್ತಿದ್ದಾನೆ" ಎಂದು ಒಬ್ಬ ಹೇಳುತ್ತಾನೆ. "ಇಲ್ಲ. ಅವನು ಕುಮಾರ ಅಲ್ಲವೇ ಅಲ್ಲ. ಕುಮಾರ ಇನ್ನೂ ಎತ್ತರ ಇದ್ದಾನೆ. ಅಲ್ಲದೆ ಅವನು ಇಷ್ಟು ದಪ್ಪ ಇಲ್ಲ" ಎಂದು ಇನ್ನೊಬ್ಬ ಹೇಳುತ್ತಾನೆ. ನಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳನ್ನು ಅವರ ಎತ್ತರ, ಗಾತ್ರ, ರೂಪ, ಬಣ್ಣ ಮುಂತಾದ ಗುಣ ಲಕ್ಷಣಗಳಿಂದ ಗುರುತಿಸುತ್ತೇವೆ. ಕಟ್ಟಡಗಳ ಆಕಾರದಿಂದ ಅವು ಯಾವುವು ಎಂದು ಗುರುತು ಹಚ್ಚುತ್ತೇವೆ. ವಾಹನಗಳ ಆಕಾರದಿಂದ ಅವು ಯಾವ ಕಂಪೆನಿಯ ಉತ್ಪನ್ನ ಎಂದು ತಿಳಿಯುತ್ತೇವೆ.  

ಪರಮಾತ್ಮನನ್ನು ಈ ರೀತಿ ಗುರುತಿಸಬಹುದೇ? ಅವನು ಎತ್ತರವೇ ಅಥವಾ ಕುಳ್ಳೇ? ದಪ್ಪವೇ ಅಥವಾ ಸಣ್ಣವೇ? ಅವನ ಆಕಾರವೇನು? ಗುರುತಿಸುವುದು ಹೇಗೆ? ಈ ಪ್ರಶ್ನೆ ನ್ಯಾಯವೇ.  

ಪರಮಾತ್ಮನು ಎಲ್ಲೆಲ್ಲಿಯೂ ವ್ಯಾಪಿಸಿದ್ದಾನೆ ಎಂದ ಮೇಲೆ ಅವನು ಎಲ್ಲ ಆಕಾರದಲ್ಲೂ ಇದ್ದಾನೆ ಎಂದಾಯಿತು. ಅಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಿಗೂ ಇದ್ದಾನೆ. ಯಾವುದೋ ಒಂದು ಅಳತೆಗೆ ಸಿಗುವವನಲ್ಲ ಅವನು. ಆದ್ದರಿಂದ ಅವನನ್ನು ಒಂದು ಆಕಾರಕ್ಕೆ ಸೀಮಿತಗೊಳಿಸಲು ಆಗುವುದಿಲ್ಲ. ಯಾವುದೇ ಒಂದು ಆಕಾರಕ್ಕೆ ಸಿಗದಿರುವುದರಿಂದ ಅವನು "ನಿರಾಕಾರ" ಎಂದು ಅನೇಕ ಸಾಧಕರು ಆರಾಧಿಸುತ್ತಾರೆ. 

ಇದೇ ಕಾರಣಕ್ಕೆ "ಚಿದಂಬರ ರಹಸ್ಯ" ಎನ್ನುವಾಗ ಅಲ್ಲಿ ಏನೂ ಇಲ್ಲ. ಅದೊಂದು ಶೂನ್ಯ. ನಿರ್ದಿಷ್ಟ ಆಕಾರವಿಲ್ಲ ನಿರ್ದಿಷ್ಟ ಗುಣವಿಲ್ಲ. ಎಲ್ಲವನ್ನೂ ದಾಟಿನಿಂತ ಮಹಾಚೇತನ. ಅದರಿಂದ ಅವನು ನಿರ್ಗುಣ, ನಿರಾಕಾರ. ಅನೇಕ ಸಾಧಕರಿಗೆ ಈ ಚಿಂತನೆಯೇ ಉಪಾಸನೆಯ ಸಾಧನೆ. 
*****

ಯಾವುದೋ ಒಂದು ಸಮಾರಂಭಕ್ಕೋ, ಕಾರ್ಯಕ್ರಮಕ್ಕೋ ಬಹಳ ಹಣ ಖರ್ಚಾಗುವುದು. ಅದು ಸರಿಯಾಗಿ ಆಗಲು ಹಣ ಹೊಂದಿಸಬೇಕು. ಕಾರ್ಯಕರ್ತರು ಚಂದಾ ವಸೂಲಿಗೆ ಹೋಗುತ್ತಾರೆ. ಯಾರ ಬಳಿಗೆ ಹೋಗುವುದು? ಈ ಪ್ರಶ್ನೆಗೆ ಉತ್ತರವೇನು? ಹಣವಂತರ ಬಳಿ ಹೋಗಬೇಕು. ಬರೀ ಹಣವಂತರಾದರೆ ಸಾಲದು. ಕೊಡುವ ಮನಸ್ಸೂ ಇರಬೇಕು. ಹಿಂದೆ ಯಾರಿಗಾದರೂ ಕೊಟ್ಟಿದ್ದಾರೆಯೇ ಎಂದು ವಿಚಾರಿಸುತ್ತಾರೆ. ಕೊಡುಗೈ ದಾನಿಗಳಾದರೆ ಇನ್ನೂ ಒಳ್ಳೆಯದು. ಅಂತಹವರ ಬಳಿಯೇ ಹೋಗಬೇಕು. ಅವನೇ ಇನ್ನೊಬ್ಬರ ಹಿಂದೆ ಕಾಸಿಗೆ ಓಡಾಡುವಾಗ ನಮಗೇನು ಚಂದಾ ಕೊಟ್ಟಾನು? ಧನಿಕರ ಬಳಿ ಹಣ ಕೇಳಬೇಕು. ತೆಂಗಿನಕಾಯಿ ತೋಟದ ಮಾಲೀಕನ ಬಳಿ ತೆಂಗಿನಕಾಯಿ ಕೇಳಬೇಕು. ವಿದ್ಯುತ್ ಕೆಲಸಗಳ ಗುತ್ತಿಗೆದಾರನ ಹತ್ತಿರ ದೀಪಾಲಂಕಾರ ವ್ಯವಸ್ಥೆ ಮಾಡುವಂತೆ ಕೇಳಬೇಕು. ಕಬ್ಬಿಣದ ಅಂಗಡಿಯಲ್ಲಿ ಹೂವು ಸಿಕ್ಕುವುದಿಲ್ಲ. ಅಕ್ಕಿ ಗಿರಣಿಯಲ್ಲಿ ಉಪ್ಪು ಸಿಕ್ಕುವುದಿಲ್ಲ. ಇದೆಲ್ಲದರ ತಾತ್ಪರ್ಯವೇನು? ಯಾರ ಬಳಿ ಯಾವ ವಸ್ತು ಅಧಿಕವಾಗಿದೆಯೋ ಅದನ್ನು ಕೇಳಬೇಕು. ಏನೂ ಇಲ್ಲದವನ ಬಳಿ ಏನನ್ನೂ ಕೇಳಿ ಪ್ರಯೋಜನವಿಲ್ಲ. ತನ್ನಲ್ಲಿ ಇಲ್ಲದ್ದನ್ನು ಅವನು ಹೇಗೆ ಕೊಟ್ಟಾನು?

ಕೆಲವು ಸಾಧಕರು ಹೀಗೆ ಚಿಂತಿಸುತ್ತಾರೆ. ಪರಮಾತ್ಮ ನಿರ್ಗುಣನಾದರೆ ಏನನ್ನು ಕೊಟ್ಟಾನು? ಅಂತಹವನನ್ನು ಆರಾಧಿಸಿ ಪ್ರಯೋಜನವೇನು? "ಮಾರೇ ತೋ ಹಾಥಿ ಕೋ ಮಾರನಾ, ಲೂಟೇ ತೋ  ಖಜಾನೆ  ಕೋ ಲೂಟಿನಾ!" ಎಂದೊಂದು ಉರ್ದುವಿನಲ್ಲಿ ಗಾದೆ. ಕೊಂದರೆ ಆನೆಯನ್ನು ಕೊಲ್ಲಬೇಕು. ಇಲಿಯನ್ನು ಕೊಂದೇನು ಪ್ರಯೋಜನ? ಕಳ್ಳತನ ಮಾಡಲೇಬೇಕಾದರೆ ಖಜಾನೆಯನ್ನೇ ಲೂಟಿ ಹೊಡೆಯಬೇಕು. ಸಣ್ಣ ಪುಟ್ಟ ಕಿಸೆ ಕತ್ತರಿಸಿ ಏನು ಲಾಭ? ಆರಾಧಿಸಿ, ಸಾಕ್ಷಾತ್ಕರಿಸಿಕೊಂಡು ಬೇಡುವುದಾದರೆ ಎಲ್ಲ ಗುಣಗಳ ಗಣಿಯಾಗಿರುವ ಎಲ್ಲವನ್ನೂ ಕೊಡುವ ಶಕ್ತಿ ಇರುವ ಕಲ್ಪನೆಯ ಪರಮಾತ್ಮನ ರೂಪವನ್ನೇ  ಬೇಡಬೇಕು. 

ಮಹಾತ್ಮರಾದ ಕುಲಶೇಖರ ಆಳ್ವಾರರು ತಮ್ಮ "ಮುಕುಂದಮಾಲಾ ಸ್ತೋತ್ರ" ಕೃತಿಯಲ್ಲಿ ಹೇಳುತ್ತಾರೆ:

ನಾಥೇ ನಃ ಪುರುಷೋತ್ತಮೇ ತ್ರಿಜಗತಾಮೇಕಾಧಿಪತಯೇ ಚೇತಸಾ ಸೇವ್ಯೇ 
ಸ್ವಸ್ಯ ಪದಸ್ಯ ದಾತರಿ ಸುರೇ ನಾರಾಯಣೇ ತಿಷ್ಠತಿ 
ಯತ್ಕಂಚಿತ್ ಪುರುಷಾಧಮಮ್ ಕತಿಪಯ ಗ್ರಾಮೇಶಮಲ್ಪಾರ್ಥದಂ  
ಸೇವಾಯೈ ಮೃಗಯಾಮಹೇ, ನರಮಹೋ ಮೂಕಾ ವರಾಕಾ ವಯಮ್ 

ಯಾರಲ್ಲಿ ಬೇಡಿದರೂ ತಮ್ಮಲ್ಲಿರುವುದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಕೊಡಬಲ್ಲರು. ಅವರಬಳಿ ಇರುವುದೇ ಅಲ್ಪ. ಅಂತಹವರ ಹತ್ತಿರ ಕೇಳಿ ಪ್ರಯೋಜನವೇನು? ಆ ಪರಮಪುರುಷನಲ್ಲಿ ಎಲ್ಲವೂ ಇದೆ. ಅಷ್ಟೇ ಅಲ್ಲ. ಅವನು ಏನನ್ನು ಕೇಳಿದರೂ ಕೊಡಬಲ್ಲ ಸರ್ವಶಕ್ತನು. ಅದಕ್ಕಿಂತ ಹೆಚ್ಚಾಗಿ ಭಕ್ತರು ಕೇಳಿದರೆ ತನ್ನ ಸ್ಥಾನವನ್ನೇ ಕೊಡಲೂ ಹಿಂಜರಿಯನು! (ನಿಜವಾದ ಭಕ್ತನು ಅದನ್ನು ಕೇಳುವವನೂ ಅಲ್ಲ; ಅವನು ಕೊಡುವ ಪ್ರಮೇಯವೂ ಬರುವುದಿಲ್ಲ. ಅದು ಬೇರೆ ಮಾತು.) ತನ್ನ ಸ್ಥಳವನ್ನೇ ಬಿಟ್ಟುಕೊಡಲು ತಯಾರಿರುವ ಅವನನ್ನು ಬಿಟ್ಟು ಬೇರೆಯವರ ಬಳಿ ಕೈಯ್ಯೊಡ್ಡುವ ಮಂದಿ ಮಾತುಬಾರದ ಹಂದಿಗಳಂತೆ, ಅನ್ನುತ್ತಾರೆ ಕುಲಶೇಖರ ಅಲ್ವಾರರು. "ಬೇಡಿದರೆ ಎನ್ನೊಡಯನ ಬೇಡುವೆ, ಒಡೆಯಗೆ ಒಡಲನು ತೋರುತ ಎನ್ನ ಬಡತನ ಬಿನ್ನಹ ಮಾಡುವೆ" ಎನ್ನುತ್ತಾರೆ ಶ್ರೀ ಪುರಂದರದಾಸರು. ಇಲ್ಲಿ ಬಡತನ ಎಂದರೆ ಕೇವಲ ಹಣದ ದಾರಿದ್ರ್ಯವಲ್ಲ. ಗುಣಗಳ ಬಡತನ. ನವಕೋಟಿ ನಾರಾಯಣ ಎಂಬ ಬಿರುದು ಹೊತ್ತು ಸಕಲ ಸಂಪತ್ತಿನ ಮೇಲೆ ಒಂದು ತುಳಸೀದಳ ಹಾಕಿ ಹಿಂದಿರುಗಿ ನೋಡದೆ ಹೊರಟವರಿಗೆ ಹಣದ ಹಂಗೇನು?

ಈ ರೀತಿ ಆರಾಧಿಸುವ ಸಾಧಕನಿಗೆ ಆ ಪರಮಪುರುಷ ಎಲ್ಲ ಗುಣಗಳ ಗಣಿ. ಆದ್ದರಿಂದ ಅವನು ಸಗುಣಿ, ಎಲ್ಲ ಗುಣಗಳನ್ನೂ ಹೊಂದಿರುವವನು. ಅವನ ಲೆಕ್ಕದಲ್ಲಿ ಸತ್ವ, ರಜಸ್ಸು ಮತ್ತು ತಮಸ್ಸು ಗುಣಗಳಲ್ಲ. ಅವನಿಗೆ ಅವುಗಳ ಲೇಪವಿಲ್ಲ. 

ಎಲ್ಲ ಕಡೆಯಲ್ಲಿಯೂ ವ್ಯಾಪ್ತನಾದವನು ನಿರಾಕಾರ ಹೇಗಾದಾನು? ಕಂಡು ಕೇಳುವ ಎಲ್ಲ ಆಕಾರಗಳೂ ಅವನನ್ನೇ ನಿರ್ದೇಶಿಸುತ್ತವೆ. ಆದ್ದರಿಂದ ಅವನು ಸಾಕಾರನೇ. ಸಾಕಾರ ಮಾತ್ರವಲ್ಲ. ಎಲ್ಲ ಆಕಾರಗಳೂ ಅವನೇ! "ಸಕಲ ನಿಗಮಗೇಯಂ, ಸಕಲ ಶಬ್ಧಾಭಿದೇಯಂ". ಎಲ್ಲ ರೂಪಗಳೂ ಎಲ್ಲ ಶಬ್ದಗಳೂ ಅವನೇ. 

ಈ ವಿಚಾರಧಾರೆಗೆ ಅವನು ಸಗುಣ, ಸಾಕಾರ. 
***** 

ಈ ಚಿಂತನೆಯ ಹಿಂದೆ ಹೋಗುವ ಸಾಧಕನಿಗೆ ಆ ಸಗುಣ, ಸಾಕಾರ ಪರಮಾತ್ಮನಲ್ಲಿ ಎಷ್ಟು ಗುಣಗಳಿವೆ ಎಂದು ತಿಳಿಯಬೇಕು? ಎಣಿಸಲಾಗದಷ್ಟು ಗುಣಗಳು! ನಾವು ನಮ್ಮ ತಿಳುವಳಿಕೆಯಲ್ಲಿ ಎಣಿಸಬಹುದಾದ ಎಲ್ಲ ಗುಣಗಳು. ಅದರಾಚೆ ಇರುವ ಗುಣಗಳೂ ಕೂಡ. ನೀವು ಯಾವ ಗುಣವನ್ನಾದರೂ ಶೋಧಿಸಿ ನೋಡಿ. ಅದು ಅವನಲ್ಲಿ ಇದೆ. ಇನ್ನೊಬ್ಬರು ನಮಗೆ ತಿಳಿಯದ ಗುಣವೊಂದನ್ನು ಹೇಳಲಿ. ಅದೂ ಕೂಡ ಅವನಲ್ಲಿ ಇದೆ. ಒಟ್ಟಿನಲ್ಲಿ ಅನಂತ ಗುಣಗಳು. ಇಂತಹ ಪ್ರತಿಯೊಂದು ಗುಣದ ವ್ಯಾಪ್ತಿಯೂ ಅನಂತ. ಗ್ರಹಿಸಲು ಕಷ್ಟ. ಅಲ್ಲವೇ? 

ಆದ್ದರಿಂದ ಅವನು ಸಗುಣ ಮಾತ್ರವಲ್ಲ. ಗುಣಸಮುದ್ರ. ಗುಣಸಾಗರ. ಗುಣಾರ್ಣವ. 

ಒಂದು ದಿನ ನಲ್ಲಿಯಲ್ಲಿ ನೀರು ಬರುವುದಿಲ್ಲ ಎಂದು ನಗರಸಭೆ ಸಾರಿತು. "ಎಲ್ಲ ಪಾತ್ರೆಗಲ್ಲಿ ಇಂದು ನೀರು ಶೇಖರಿಸಿ. ನಾಳೆಗೆ ಬೇಕಾಗುತ್ತದೆ" ಎಂದು ಮನೆಯ ಹಿರಿಯರು ಹೇಳಿದರು. ಕಿರಿಯರು ಅದರಂತೆ ಮಾಡಿದರು. ಈಗ ಮನೆಯಲ್ಲಿ ಇರುವ ಎಲ್ಲ ಪಾತ್ರೆಯೂ ಜಲಪೂರ್ಣ. ಎಲ್ಲ ಪಾತ್ರೆಯಲ್ಲೂ ಪೂರ್ತಿ ನೀರು ತುಂಬಿ ಆಯಿತು. 

ಯಾವುದೇ ಪಾತ್ರೆ ತೆಗೆದುಕೊಳ್ಳಿ. ಅದರಲ್ಲಿ ಪೂರ್ತಿ ನೀರು ತುಂಬಿದೆ. ಆದರೆ ಆ ತುಂಬಿದ ಪಾತ್ರೆಯಲ್ಲಿ ಕೆಲವು ಹನಿ ನೀರು ಹಾಕಬಹುದೋ? ಹಾಕಬಹುದು. ಹಾಗಿದ್ದರೆ ಸಾಮಾನ್ಯ ಅರ್ಥದಲ್ಲಿ ಪೂರ್ಣ ಎಂದ ಪೂರ್ಣವೂ ಅಪೂರ್ಣ ಎಂದಾಯಿತು! ಚೀಲದ ತುಂಬಾ ತೆಂಗಿನಕಾಯಿ ತುಂಬಿದೆ. ಇನ್ನೊಂದು ಕಾಯಿ ಹಾಕಲಾಗದು. ಆದರೆ ಸ್ವಲ್ಪ ರವೆ  ಹಾಕಬಹುದು!

ಪರಮಾತ್ಮನಲ್ಲಿ ಹೀಗಿಲ್ಲ. ಪೂರ್ಣ ಎಂದರೆ ಪೂರ್ಣವೇ. ಇನ್ನೊಂದು ತೊಟ್ಟು ನೀರು ಹಾಕಲಾಗದ ನೀರು ತುಂಬಿದ ಪಾತ್ರೆಯಂತೆ. ಅವನಲ್ಲಿ ಪೂರ್ಣವೆಂದರೆ ನಿಜವಾಗಿಯೂ, ಹೇಗೆ ನೋಡಿದರೂ ಪೂರ್ಣ. 

ಅವನು ಗುಣಾರ್ಣವ ಮಾತ್ರವಲ್ಲ. ಪೂರ್ಣ ಗುಣಾರ್ಣವ ಅಷ್ಟೇ ಅಲ್ಲ ಕೂಡ. ಅವನು ಪರಿಪೂರ್ಣ ಗುಣಾರ್ಣವ. ಎಲ್ಲಕಡೆ ಇರುವ ಗುಣಗಳೂ ಅವನಲ್ಲಿವೆ. ಅವನಲ್ಲಿಲ್ಲದ ಗುಣಗಳು ಮತ್ತೆಲ್ಲೂ ಇಲ್ಲ. 

*****

ಸಾಧಕನು ನಿರ್ಗುಣ, ನಿರಾಕಾರ ಸ್ವರೂಪನನ್ನು ಆರಾಧಿಸಬೇಕೇ? ಸಾಕಾರ ಪರಿಪೂರ್ಣ ಗುಣಾರ್ಣವನನ್ನು ಆರಾಧಿಸಬೇಕೇ? 

ಆಯ್ಕೆ ಸಾಧಕನದು. ತನ್ನ ಅನುಭವದ ಬಲದಿಂದ ಗುರ್ತಿಸಿ ಮುಂದೆ ಹೋಗಬಹುದು. 

Friday, November 24, 2023

ಪ್ರತೀಕಗಳ ಅವಶ್ಯಕತೆ


"ತ್ವಮೇವ ಶರಣಂ ಮಮ" ಎಂದು ಹೇಳಿಯಾಯಿತು. "ವ್ಯಾಪ್ತೋಪಾಸನೆ" ಬಗ್ಗೆ ತಿಳಿದಿದ್ದಾಯಿತು. ಅಂತಹ ಉಪಾಸನೆಯ ಮರ್ಮ ಅರಿತ ಮೇಲೆ ಪ್ರತೀಕಗಳ ಉಪಾಸನೆ ಏಕೆ ಮಾಡಬೇಕು? ಎಂಬ ಪ್ರಶ್ನೆ ಎದುರಾಯಿತು. ಆ ಪ್ರಶ್ನೆಗೆ ಉತ್ತರ ಹುಕುವ ಕೆಲಸ  ಪ್ರಾರಂಭವಾಯಿತು. 

ದೂರದ ಊರಿಗೆ ಸುಲಭವಾಗಿ ಮತ್ತು ಶೀಘ್ರವಾಗಿ ತಲುಪಲು ವಿಮಾನದಲ್ಲಿ ಹೋಗಬೇಕು ಎಂದು ನಮಗೆ ಗೊತ್ತು. ಆದರೆ ನೆನೆಸಿದ ತಕ್ಷಣ ವಿಮಾನದಲ್ಲಿ ಹೋಗಲಾದೀತೇ? ನಾವಿರುವ ಸ್ಥಳದಿಂದ ವಿಮಾನ ನಿಲ್ದಾಣ ತಲುಪಬೇಕು. ವಿಮಾನದ ಪ್ರಯಾಣಕ್ಕೆ ಪರವಾನಗಿ ಪಡೆಯಬೇಕು. ಬೇಕಾದ ದಸ್ತಾವೇಜುಗಳನ್ನು ತೋರಿಸಬೇಕು. ಭದ್ರತಾ ತಪಾಸಣೆ ದಾಟಬೇಕು. ವಿಮಾನದವರೆಗೂ ತಲುಪಬೇಕು. ಹತ್ತಿ ವಿಮಾನದಲ್ಲಿ ಕೂಡಬೇಕು. ವಿಮಾನ ಪ್ರಯಾಣ ನಂತರವಷ್ಟೇ ಸಾಧ್ಯ!

ವಿಮಾನದವರೆಗಿನ ಪ್ರಯಾಣಕ್ಕೆ ನಾವು ನಿಲ್ದಾಣದವರೆಗೆ ನಡೆದು ಹೋಗಬೇಕು. ಇಲ್ಲವಾದರೆ ಯಾವುದಾದರೂ ವಾಹನವನ್ನು ಹಿಡಿದು ಅಲ್ಲಿಗೆ ತಲುಪಬೇಕು. ಈ ರೀತಿಯ ವಾಹನಗಳೇ ಪ್ರತೀಕಗಳ ಆರಾಧನೆಗಳು. ಪ್ರತೀಕಗಳೇ (symbols) ಪರಮಾತ್ಮನಲ್ಲ. ಎಲ್ಲೆಲ್ಲೂ  ಇರುವ ಪರಮಾತ್ಮನು ಅವುಗಳಲ್ಲಿ ವಿಶೇಷ ಸನ್ನಿಧಾನ ಇಟ್ಟಿದ್ದಾನೆ ಎಂದು ನಂಬಿ ಆರಾಧಿಸಬೇಕು.

ನಾವು ಮೊದಲನೇ ಅಥವಾ ಎರಡನೇ ತರಗತಿಯಲ್ಲಿ ಇದ್ದಾಗ ಮೊದಲು ವರ್ಣಮಾಲೆ ಹೇಳಿಕೊಟ್ಟರು. ಪೂರ್ತಿ ವರ್ಣಮಾಲೆಯ ಅಕ್ಷರಗಳನ್ನು ತಪ್ಪಿಲ್ಲದೆ ಹೇಳಿದಾಗ ಆನಂದವೋ ಆನಂದ. ನಂತರ ಕಾಗುಣಿತ. ಅದು ಬಂದಾಗಲಂತೂ ಖುಷಿಯೋ ಖುಷಿ. ಆಮೇಲೆ "ಡಬಲ್ ರೂಲ್ಡ್  ನೋಟ್ ಬುಕ್" ಅಂತ ಒಂದು ಕೊಟ್ಟರು, ಅಕ್ಷರ ಆಚೆ ಈಚೆ ಹೋಗದೆ ನೆಟ್ಟ ನೇರವಾಗಿ ಬರೆಯಲು ಬರಲಿ ಎಂದು. ಅದು ಅಭ್ಯಾಸ ಆದ ಮೇಲೆ ಮುಂದಿನ ಹೆಜ್ಜೆ. ಪ್ರತೀಕಗಳ ಆರಾಧನೆ ಈ ರೀತಿಯೇ. ಜೀವಮಾನ ಪೂರ್ತಿ ಡಬಲ್ ರೂಲ್ಡ್  ನೋಟ್ ಬುಕ್"ನಲ್ಲಿ ಬರೆಯುತ್ತ ಕೂಡುವುದಲ್ಲ. ಮುಂದೆ ಹೆಜ್ಜೆ ಇಡಬೇಕು. 

ಸಮುದ್ರದಲ್ಲಿ ಈಜಿ ಗೆದ್ದುಬರುವವರನ್ನು ನಾವು ಕಾಣುತ್ತೇವೆ. ಹಾಗಾದರೆ ನಾವು ಏಕೆ ಸಮುದ್ರಕ್ಕೆ ಹಾರಬಾರದು? ಅವರಿಗೂ ನಮ್ಮಂತೆ ಮೊದಲು ಈಜು ಬರುತ್ತಿರಲಿಲ್ಲ. ಸತತ ಪರಿಶ್ರಮದಿಂದ ಸಣ್ಣದಾಗಿ ಪ್ರಾಂಭ ಮಾಡಿ ಈಗ ಸಮುದ್ರ ಈಜುವ ಹಂತ ತಲುಪಿದ್ದಾರೆ. ಈಜುವ ವಿಷಯದಲ್ಲಿ ಅವರ ಅನುಭವ, ಯೋಗ್ಯತೆ ನಮಗೆ ಸುಲಭವಾಗಿ ಗೊತ್ತಾಗುತ್ತದೆ. ಉಪಾಸನೆಯ ವಿಷಯದಲ್ಲಿ ಉಪಾಸಕರ ನಿಜವಾದ ಯೋಗ್ಯತೆ ನಮಗೆ ಗೊತ್ತಾಗುವುದಿಲ್ಲ. ನಮಗೆ ಅವರ ಯೋಗ್ಯತೆ ಹೇಳಿಕೊಳ್ಳುವುದರಲ್ಲಿ ಅವರಿಗೆ ಆಸಕ್ತಿಯಿಲ್ಲ. ನಾವಾಗಿಯೇ ತಿಳಿದುಕೊಳ್ಳುವ ಶಕ್ತಿ ನಮಗಿಲ್ಲ!

*****

ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದು ಮನಸ್ಸು ಬಂದ ತಕ್ಷಣ ವಾಹನ ಹಿಡಿಯುವಹಾಗಿಲ್ಲ. ಮೊದಲು "ಗುರುತಿನ ಚೀಟಿ" ಪಡೆಯಬೇಕು. ಕೇವಲ ಒಂದು "ಆಧಾರ್ ಕಾರ್ಡ್" ಮಾಡಿಸಲು ಪಟ್ಟ ಬವಣೆಗಳನ್ನು ನೆನಪಿಸಿಕೊಳ್ಳಿ. ನಂತರ ಪರವಾನಗಿ ಪಡೆಯಲು ಹಣ ಹೊಂದಿಸಬೇಕು. ಈ ಕೆಲಸಗಳಿಗೇ ಬಹಳ ಪಾಡು ಪಡಬೇಕು. ಅಲ್ಲಿ ತಲುಪಿದ ಮೇಲೆ ಭದ್ರತಾ ಸಿಬ್ಬಂದಿ ನಮ್ಮನ್ನು ತಪಾಸಣೆಗೆ ಒಳಪಡಿಸಿ ಪ್ರಯಾಣಕ್ಕೆ ಯೋಗ್ಯ ಎಂದು ಠಸ್ಸೆ ಒತ್ತಬೇಕು. ನಂತರವಷ್ಟೇ ಪ್ರಯಾಣ. 

ಅಂದರೆ ವಿಮಾನ ನಿಲ್ದಾಣ ತಲುಪಲು ವಾಹನ ಹತ್ತುವ ಮುಂಚೆಯೇ ಬಹಳ ಕೆಲಸ ಇದೆ ಎಂದಾಯಿತು. ಅಂತೆಯೇ ಪ್ರತೀಕಗಳ ಆರಾಧನೆಗೆ ಮುನ್ನವೇ ಬಹಳ ತಯಾರಿ ನಡೆಸಬೇಕು. ಮೈ, ಬುದ್ಧಿ ಮತ್ತು ಮನಸುಗಳನ್ನು ಹದ ಮಾಡಬೇಕು. ಮೈ ಬಗ್ಗಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಬುದ್ಧಿಯನ್ನು ಸರಿಯಾದ ದಾರಿಯಲ್ಲಿ ನಡೆವಂತೆ ತಿರುಗಿಸಬೇಕು. ಮಂಗನಂತೆ ಎಗರಾಡುವ ಮನಸ್ಸನ್ನು ಕಟ್ಟಿ ಒಂದೇ ಕಡೆ ಕೇಂದ್ರೀಕರಿಸಬೇಕು. ಇವೆಲ್ಲ ಮೊದಲ ತಯಾರಿಗಳು. ಈ ರೀತಿ ಸಿದ್ಧತೆ ಮಾಡಿಕೊಂಡು ಪ್ರತೀಕಗಳ ಆರಾಧನೆಯಿಂದ ಪ್ರಾರಂಭಿಸಿ ಕ್ರಮವಾಗಿ ಮೆಟ್ಟಿಲುಗಳನ್ನು ಹತ್ತಿ ನಂತರ ಹೆಚ್ಚಿನ ಮತ್ತು ಕಠಿಣ ಆರಾಧನೆ ಬಗ್ಗೆ ಚಿಂತೆ ಮಾಡಬಹುದು. 

ಸಾಧನೆಯ ದಾರಿ ಬಲು ಕಠಿಣ. ಒಂದೊಂದಾಗಿ ಮೆಟ್ಟಿಲು ಹತ್ತಬೇಕು. ಒಟ್ಟು ಒಂದು ಸಾವಿರ ಮೆಟ್ಟಿಲು ಹತ್ತಬೇಕು ಎನ್ನೋಣ. ಒಂದು ಜೀವಮಾನದಲ್ಲಿ ಅಷ್ಟು ಮೆಟ್ಟಿಲು ಒಟ್ಟಿಗೆ ಹತ್ತಲು ಸಾಧ್ಯವಾಗದಿರಬಹುದು. ಸಾಧ್ಯವಾಗದಿರಬಹುದು ಏನು? ಸಾಧ್ಯವಾಗುವುದಿಲ್ಲ ಎಂದು ತಿಳಿದವರು ಹೇಳುತ್ತಾರೆ. ಹಾಗಿದ್ದರೆ ಏನು ಮಾಡುವುದು? ಇದು ಎಂದಿಗೂ ಆಗದ ಕೆಲಸ. ವೃಥಾ ತೊಂದರೆ ಯಾಕೆ ಎಂದು ಬಿಡಬಹುದೇ? ನಮ್ಮ ಗ್ರಂಥಗಳ ಸೂಕ್ಷ್ಮ ಅಧ್ಯಯನದಿಂದ ಪರಿಹಾರ ತಿಳಿಯುತ್ತದೆ. ಪರಮತ್ಮನು ಬಹಳ ಕರುಣಾಳು. ಸಾಧನೆಯ ಒಂದು ಕಣವೂ ವ್ಯರ್ಥವಾಗುವುದಿಲ್ಲ,  ನಮ್ಮ ಖಾತೆಗೆ ಜಮಾ ಆಗುತ್ತಿರುತ್ತದೆ, 

ಒಬ್ಬ ಪ್ರೌಢ ಶಾಲೆ ವಿದ್ಯಾಭ್ಯಾಸದ ನಂತರ ಓದು ಬಿಟ್ಟ. ಬೇರೇನೋ ಮಾಡಲು ಪ್ರಾರಂಭಿಸಿದ. ಮತ್ತೆ ಸ್ವಲ್ಪ ದಿನದ ಮೇಲೆ ಓದು ಮುಂದುವರೆಸಬೇಕು ಎನಿಸಿತು. ಅವನು ಮತ್ತೆ ಪ್ರಾಥಮಿಕ ಶಾಲೆಗೇ ಹೋಗಬೇಕಾಗಿಲ್ಲ. ಎಲ್ಲಿ ಓದು ನಿಲ್ಲಿಸಿದ್ದನೋ ಅಲ್ಲಿಂದ ಮುಂದೆ ಓದಬಹುದು. ಪರಮಾತ್ಮನ ವ್ಯವಸ್ಥೆಯೂ ಹಾಗೆ. ಯಾವ ಮೆಟ್ಟಿಲಿನಲ್ಲಿ ನಿಂತೆವೋ, ಮುಂದಿನ ಜನ್ಮದಲ್ಲಿ ಆ ಮೆಟ್ಟಿಲಿನ ಬಳಿಯೇ ಬಿಡುತ್ತಾನೆ. ಯಾವುದೋ ಒಂದು ರೀತಿಯಲ್ಲಿ ಹಿಂದಿನ ಸ್ಮರಣೆ ಕೊಡುತ್ತಾನೆ. ಹುಟ್ಟಿದ ಆರೇಳು ವರ್ಷಕ್ಕೇ ಕೆಲವರು ಸೊಗಸಾಗಿ ಸಂಗೀತಗಾರರಾದ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಬಾಕಿ ಮಕ್ಕಳು ಅನೇಕ ವರ್ಷ ಶ್ರಮಪಟ್ಟು ಕಲಿಯುವಷ್ಟನ್ನು ಸ್ವಲ್ಪ ಕಾಲದಲ್ಲಿಯೇ ಕಲಿಯುವ ಮಕ್ಕಳಂತೆ ಇದು. ಆದರೆ ಪ್ರಬಲ ನಂಬಿಕೆ ಬೇಕು. ಇಲ್ಲದಿದ್ದರೆ ಅತಂತ್ರ ಪರಿಸ್ಥಿತಿಯೇ!

*****

ಪ್ರತೀಕಗಳು ಹೇಗಿರಬೇಕು? ಇದು ಮುಂದಿನ ಪ್ರಶ್ನೆ. ಅದು ದೇವಾಲಯದ ಮೂರ್ತಿ ಇರಬಹುದು. ಲೋಹದ ಪ್ರತಿಮೆ ಆಗಬಹುದು. ಒಂದು ಫೋಟೋ ಸಹ ಆಗಬಹುದು. ಗೋವು, ಆಶ್ವತ್ಥ ಅಥವಾ ಔದುಂಬರ (ಅರಳಿ ಅಥವಾ ಅತ್ತಿ) ಮರವಾಗಬಹುದು. ತುಳಸಿಯ ಅಥವಾ ಮತ್ತಾವುದೋ ವೃಂದಾವನ ಇರಬಹುದು. ಆದರೆ ನಾವು ನಡೆಸುವ ಆರಾಧನೆ ಆ ಜಡ ವಸ್ತುವಿಗೋ ಅಥವಾ ಸ್ಥಿರ ವೃಕ್ಷಕ್ಕೋ ಮಾತ್ರವಲ್ಲ, ಅವುಗಳಲ್ಲಿ ಅಂತರ್ಯಾಮಿಯಾಗಿ ಇರುವ ಆ ಪರಮಾತ್ಮನಿಗೆ ಎನ್ನುವ ಪ್ರಜ್ಞೆ ಮಾತ್ರ ಸದಾ ಇರಬೇಕಾಗುತ್ತದೆ. 

ಉಪಾಸನೆಯ ಒಂದು ಮುಖ್ಯ ಅಂಗ ಜಪಾದಿಗಳು. ಸಮಸ್ತ ಜೀವರಾಶಿಗಳಿಗೂ ಪರಮಾತ್ಮನನ್ನು ಆರಾಧಿಸುವ ಹಕ್ಕಿದೆ. ಜಾತಿ, ಜನ್ಮ ಇವುಗಳ ಹಂಗಿಲ್ಲ. ಜ್ಞಾನಿಗಳು ಎಲ್ಲ ವರ್ಗಗಳಿಂದ ಬಂದವರಿದ್ದಾರೆ. ಸುಲಭದ ದಾರಿಗಳೂ ಇವೆ. ಕಠಿಣದ ಹಾದಿಗಳೂ ಇವೆ. ಬೇಕಿದ್ದನ್ನು ಆರಿಸಿಕೊಳ್ಳಬಹುದು. ಒಮ್ಮೆ ಸಾಧನೆಯ ಹಾದಿ ಹಿಡಿದರೆ ಸಾಕು. ಮುಂದಿನ ಸಲಕರಣೆಗಳನ್ನು ಆ ದಯಾಳುವೇ ಒದಗಿಸುತ್ತಾನೆ ಎಂದು ತಿಳಿದವರು ಹೇಳುತ್ತಾರೆ. 

ಜಪಾದಿಗಳನ್ನು ಮಾಡುವಾಗ "ಧ್ಯಾನ ಶ್ಲೋಕ" ಉಪಯೋಗಿಸುತ್ತಾರೆ. ಆರಾಧ್ಯ ದೈವವನ್ನು ವರ್ಣಿಸುವ ಪರಿ ಅವು. ಕಣ್ಣ ಮುಂದೆ ಇರುವ ಪ್ರತೀಕಗಳು ಆ ರೀತಿಯೇ ಇರಬೇಕು. ಆರಾಧನೆಯ ನಂತರ ಜಪ ಮಾಡುವಾಗ, ಕಣ್ಣು ಮುಚ್ಚಿ ಕುಳಿತಾಗ ಧ್ಯಾನ ಶ್ಲೋಕದಲ್ಲಿ ವರ್ಣಿತವಾದ ಆಕಾರ ಮನಸ್ಸಿನಲ್ಲಿ ಮೂಡಬೇಕು. ಮೇಲೆ ಕೊಟ್ಟಿರುವ ದೇವಿ ಲಕ್ಷ್ಮಿಯ ಚಿತ್ರವನ್ನೇ ಗಮನಿಸಬಹುದು, ಶ್ರೀ ಸೂಕ್ತದಲ್ಲಿ ಹೇಳಿರುವಂತೆ ಸಾಮಾನ್ಯವಾಗಿ ಪ್ರತಿಮೆ ಅಥವಾ ಫೋಟೋ ಮಾಡುತ್ತಿದ್ದರು. ಈಗ ಚಿತ್ರಕಾರರ ಸ್ವಾತಂತ್ರ್ಯದ ಹೆಸರಿನಲ್ಲಿ ಮನಸ್ಸಿಗೆ ಬಂದಂತೆ ಮಾಡುತ್ತಾರೆ. ಸೂಕ್ತದಂತೆ ಲಕ್ಷ್ಮಿಯು ಪದ್ಮಾಸನದಲ್ಲಿ ಪದ್ಮದಮೇಲೆ ಕುಳಿತಿರಬೇಕು. ಆನೆಗಳು ಬಂಗಾರದ ಕೊಡಗಳಲ್ಲಿ ನವರತ್ನಗಳನ್ನು ಸುರಿಸುತ್ತಿರಬೇಕು. ಇವೇ ಮುಂತಾದ ಧ್ಯಾನ ಶ್ಲೋಕದ ವಿವರಣೆಯ ರೀತಿಯಲ್ಲಿ ಪ್ರತೀಕ ಮಾಡಿರಬೇಕು. 

ಕೆಲವು ವೇಳೆ ಪ್ರತೀಕ ಇಲ್ಲದಿರಬಹುದು. ಆಗ ಧ್ಯಾನ ಶ್ಲೋಕದಂತೆ ಇರುವ ದೇವತೆ ಕಣ್ಣು ಮುಚ್ಚಿ ಕುಳಿತಾಗ ಸ್ಫುರಿಸುವಂತೆ ಅಭ್ಯಾಸದಿಂದ ಕಲಿಯಬೇಕಾಗುತ್ತದೆ. ಪ್ರತೀಕಗಳಿಗೆ ಪೂಜೆ ಸಲ್ಲಿಸುವಾಗ  ಜಡ ಅಥವಾ ಸ್ಥಿರ ಪ್ರತೀಕದಲ್ಲಿ ಅಂತರ್ಯಾಮಿಯಾದ ದೇವತೆ ಅಥವಾ ಪರಮಾತ್ಮನ ಉಪಸ್ಥಿತಿ ನೆನೆಯುತ್ತಿದ್ದರೆ ಧ್ಯಾನ ಕಾಲದಲ್ಲಿ ಆ ಆಕೃತಿ ಮನಸ್ಸಿನಲ್ಲಿ ಸ್ಫುರಿಸುತ್ತದೆ.  

ಕೆಲವರು ದೇವಾಲಯಗಳಿಗೆ ಹೋದಾಗ ವಿಗ್ರಹಗಳ ಮುಂದೆ ಕಣ್ಣು ಮುಚ್ಚಿ ಕೂಡುತ್ತಾರೆ. ಬಹಳ ಶ್ರಮಪಟ್ಟು ಆ ಮೂರ್ತಿ ನೋಡಲು ಹೋಗಿ ಅಲ್ಲಿ ಇರುವ ಸಾಕ್ಷಾತ್ ಮೂರ್ತಿಯನ್ನು ನೋಡದೆ ಕಣ್ಣು ಮುಚ್ಚಿ ಕೂಡುವುದು ಎಷ್ಟು ಸರಿ? ಸಾಧನೆ ಹೆಚ್ಚಿದಂತೆ ಮನಸ್ಸಿನಲ್ಲಿ ಮೂಡುವ ಆಕಾರ ಸ್ಫುಟವಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಅದಕ್ಕೆ ಸತತ ಪ್ರಯತ್ನ ಬೇಕು. 

 *****

ಮೇಲಿನ ಹಂತ ತಲುಪಿದ ಮೇಲೆ ಪ್ರತೀಕಗಳ ಪೂಜೆ ನಿಲ್ಲಿಸಬೇಕೇ? ಇದೊಂದು ದಿವ್ಯವಾದ ಪ್ರಶ್ನೆ. ದೊಡ್ಡ ದೊಡ್ಡ ಸಭಾಭವನಗಳಲ್ಲಿ ಕಚೇರಿ ನೀಡುವ ಸಂಗೀತ ವಿದ್ವಾಂಸರು ಪ್ರತಿದಿನ "ರಿಯಾಝ್" ಮಾಡುವುದನ್ನು ನಿಲ್ಲಿಸುತ್ತಾರೆಯೇ? ಭಾರಿ ಕ್ರೀಡಾಂಗಣಗಳಲ್ಲಿ ಭರ್ಜರಿ ಶತಕ ಬಾರಿಸುವ ಕ್ರೀಡಾಪಟು "ನೆಟ್ ಪ್ರಾಕ್ಟೀಸ್" ಬಿಟ್ಟು ಬಿಡುತ್ತಾನೆಯೇ? ವ್ಯಾಪ್ತ ಉಪಾಸನೆ ಮಾಡುವ ಸ್ಥಿತಿ ತಲುಪಿದ ಸಾಧಕರೂ ಪ್ರತೀಕಗಳ ಆರಾಧನೆ ನಿಲ್ಲಿಸುವುದಿಲ್ಲ. ಸಂಚಾರದಲ್ಲಿರುವ ಅಧಿಕಾರಿ ಹಾಜರಿ ಪುಸ್ತಕದಲ್ಲಿ ಸಹಿ ಮಾಡುವ ಅಗತ್ಯವಿಲ್ಲ. ಆದರೆ ಪ್ರಧಾನ ಕಚೇರಿಯಲ್ಲಿ ಇದ್ದಾಗ ಹಾಜರಿ ಪುಸ್ತಕದಲ್ಲಿ ಸಹಿ ಮಾಡುತ್ತಾನೆ!

ಸಾಧನೆಯ ಯಾವ ಸ್ಥಿತಿಯಲ್ಲಿ ಸಾಧಕನಿದ್ದರೂ ಮತೊಬ್ಬರ ಸಾಧನೆಯ ರೀತಿಯನ್ನು ಹೀಯಾಳಿಸಬಾರದು. ಅವರವರ ಸಾಧನೆ, ರೀತಿ ನೀತಿಗಳು ಅವರವರಿಗೆ. ಪ್ರತಿಯೊಬ್ಬರೂ ಅವರ ಭಾರವನ್ನು ಅವರೇ ಹೊರಬೇಕು. ಅವರಾಗಿ ಕೇಳಿದರೆ, ಸಾಧ್ಯವಿದ್ದರೆ, ಯೋಗ್ಯತೆಯಿದ್ದರೆ, ಸಹಾಯ ಮಾಡಬಹುದು. ಅಷ್ಟೇ. 

Wednesday, November 22, 2023

ವ್ಯಾಪ್ತೋಪಾಸನೆ

ಮನುಷ್ಯನ ಜ್ಞಾನ ಪ್ರಾಪ್ತಿ ಮತ್ತು ಸುತ್ತಮುತ್ತಲಿನ ವಸ್ತುಗಳ ಅನುಭವ ಪಡೆಯುವುದು ಐದು ಜ್ಞಾನೇಂದ್ರಿಯಗಳಿಂದ. ಕಣ್ಣಿನಿಂದ ನೋಡುವುದು, ಕಿವಿಯಿಂದ ಕೇಳುವುದು, ಮೂಗಿನಿಂದ ವಾಸನೆ ಇತ್ಯಾದಿ ಗ್ರಹಿಸುವುದು, ನಾಲಿಗೆಯಿಂದ ರುಚಿ ನೋಡುವುದು ಮತ್ತು ಚರ್ಮದಿಂದ ಸ್ಪರ್ಶ ಮಾಡುವುದು. ಇವುಗಳ ಚೌಕಟ್ಟಿನಲ್ಲೇ ನಮ್ಮ ಎಲ್ಲ ವ್ಯಾಪಾರಗಳೂ ನಡೆಯುವುದು. ಬುದ್ಧಿ ಇವುಗಳ ಹೊರಗಡೆಯೂ ಯೋಚಿಸಬಹುದು. ಮನಸ್ಸು ಎಲ್ಲೆಂದರಲ್ಲಿ ಹರಿದಾಡಬಹುದು. ಆದರೆ ಈ ಐದು ಇಂದ್ರಿಯಗಳ ಯೋಗ್ಯತೆಗಿಂತ ದೊಡ್ಡದಾದ ಪದಾರ್ಥವನ್ನು ಅಥವಾ ವಿಷಯವನ್ನು ತಿಳಿಯುವುದು ಕಷ್ಟ. ದೃಷ್ಟಿ ಹೋಗುವವರೆಗೂ ನೋಡಬಹುದು. ಒಂದು ಅಳತೆಯ ದೂರದವರೆಗಿನ ಶಬ್ದ ಕೇಳಬಹುದು. ಅದರಿಂದ ಹೊರಗಿನ ಪದಾರ್ಥಗಳ ಜ್ಞಾನ ಹೇಗೆ? ಅತೀಂದ್ರಿಯವಾದುದನ್ನು (ಇಂದ್ರಿಯಗಳ ವ್ಯಾಪ್ತಿಯ ಅಥವಾ ಯೋಗ್ಯತೆಯ ಹೊರಗಿನದು) ತಿಳಿಯುವುದು ಹೇಗೆ?

ಅತಿ ಸೂಕ್ಷ್ಮವಾದುದನ್ನು ನೋಡಲು ನಾವು "ಸೂಕ್ಷ್ಮದರ್ಶಕ" (ಮೈಕ್ರೋಸ್ಕೋಪ್) ಬಳಸುತ್ತೇವೆ. ಅತಿ ದೂರದಲ್ಲಿ ಇರುವ ವಸ್ತುಗಳನ್ನು ನೋಡಲು "ದೂರದರ್ಶಕ" (ಟೆಲಿಸ್ಕೋಪ್) ಉಪಯೋಗಿಸುತ್ತೇವೆ. ಇವುಗಳ ಪ್ರಯೋಜನ ಪಡೆದರೂ ಈ ಸಾಧನಗಳ ಶಕ್ತಿಗೂ ಒಂದು ಮಿತಿ ಇದೆ. ನಮ್ಮಲ್ಲಿರುವ ಅತ್ಯಂತ ಶಕ್ತಿಯುತ ಸೂಕ್ಷ್ಮದರ್ಶಕದ ಶಕ್ತಿಯನ್ನೂ ದಾಟಿದ ಅತಿ ಸೂಕ್ಷ್ಮ  ವಸ್ತುಗಳು ಸೃಷ್ಟಿಯ ರಹಸ್ಯದಲ್ಲಿ ಅಡಗಿವೆ. ಒಂದು ಕಾಲದಲ್ಲಿ "ಅಣು" ಅತಿ ಚಿಕ್ಕ ವಸ್ತು ಎಂದು ನಂಬಲಾಗಿತ್ತು. ವಿಜ್ನ್ಯಾನಿಗಳು ಅಣುವನ್ನೂ ಭೇದಿಸಿದರು. ಪರಮಾಣು ಬಂದಿತು. ಪರಮಾಣುವನ್ನೂ ಮೀರಿದ ಸೂಕ್ಷ್ಮ ಕಣಗಳು ಇವೆ ಎಂದಾಯಿತು. ಎಷ್ಟು ಶಕ್ತಿಯುತ ದೂರದರ್ಶಕವಾದರೂ ಇನ್ನೂ ನಮ್ಮ "ಹಾಲುಹಾದಿ" (Milkyway) ನಕ್ಷತ್ರಪುಂಜದ (ಗ್ಯಾಲಕ್ಸಿ) ಒಂದು ಭಾಗವನ್ನು ಮಾತ್ರ ತೋರಿಸಲು ಶಕ್ತವಾಗಿವೆ. ನಮ್ಮ ನಕ್ಷತ್ರಪುಂಜಕ್ಕಿಂತಲೂ ದೊಡ್ಡವಾದ ಅನೇಕ ಪುಂಜಗಳು ವಿಶ್ವದಲ್ಲಿ ಇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 

ನಾವು ತಿಳಿದಿರುವ ಅತಿಸೂಕ್ಷ್ಮ ಪದಾರ್ಥಕ್ಕಿಂತಲೂ ಸೂಕ್ಷ್ಮವಾದದ್ದು ಇದೆ ಎಂದಾಯಿತು. ಅಂತೆಯೇ, ನಾವು ಕಂಡಿರುವ ಅತಿದೊಡ್ಡ ದೃಶ್ಯಕ್ಕಿಂತಲೂ ಅನೇಕ ಪಾಲು ದೊಡ್ಡದಾದ ವಿಶ್ವವಿದೆ ಎಂದೂ ತಿಳಿಯಿತು. ಒಟ್ಟಿನಲ್ಲಿ ಈ ಕಡೆಯೂ ಅನಂತ, ಆ ಕಡೆಯೂ ಅನಂತ. ಇಂತಹ ವಿರಾಟ್ ವಿಶ್ವದ ಯಾವುದೋ ಒಂದು ಕ್ಸುದ್ರ ಕಣದಲ್ಲಿ ಮನುಷ್ಯನಿದ್ದಾನೆ. ಅನಂತ ವಿಶ್ವ ಅವನನ್ನು ಎಲ್ಲ ಕಡೆಯಿಂದಲೂ ವ್ಯಾಪಿಸಿದೆ. ಇಷ್ಟು ಮಾತ್ರವಲ್ಲ. ಮನುಷ್ಯನ ಒಳಗೂ ಅನಂತ ಕಣಗಳಿವೆ. ಮನುಷ್ಯನ ದೇಹದಲ್ಲಿ ಇಷ್ಟೆಲ್ಲಾ ಇದೆಯೇ ಎಂದು ಆಶ್ಚರ್ಯ ಪಡುವಷ್ಟು ಉಂಟು!

ಚಿಂತಿಸಲೂ ಅಗಾಧ.  

*****

ಮಹಾಭಾರತದ ಅತಿ ಮುಖ್ಯ ದೃಶ್ಯವೊಂದನ್ನು ನೆನಪಿಗೆ ತರೋಣ. ಎರಡು ಸೈನ್ಯಗಳ, ಹದಿನೆಂಟು ಅಕ್ಷೋಹಿಣಿಗಳ ವಿಶಾಲ ಹಿನ್ನೆಲೆಯ ಮಧ್ಯದಲ್ಲಿ ಪಾರ್ಥ ಮತ್ತು ಪಾರ್ಥಸಾರಥಿ ರಥದಲ್ಲಿ ಕುಳಿತಿದ್ದಾರೆ. ವಿಜಯನಿಗೆ ಜಯಿಸಲಾಗದ ಮೋಹ ಆವರಿಸಿದೆ. ತನ್ನ ಇಡೀ ಜೀವಮಾನ ಕಾಯುತ್ತಿದ್ದ ಯುದ್ಧ ಎದುರು ನಿಂತಿದ್ದರೂ ರಥದಿಂದ ಕೆಳಗಿಳಿದು ಗಾಂಡೀವ ಬಿಸಾಡಿದ್ದಾನೆ. ಯುದ್ಧ ಒಲ್ಲೆ ಎನ್ನುತ್ತಾನೆ. ವಿಚಿತ್ರವಾದ ತರ್ಕದಿಂದ ವಾದಿಸುತ್ತಾನೆ. "ಸ್ತ್ರೀಷು ದುಷ್ಟೇಷು ವಾರ್ಷ್ಣೇಯ ಜಾಯತೇ ವರ್ಣ ಸಂಕರಃ" ಎನ್ನುತ್ತಾನೆ. ಯುದ್ಧದಿಂದ ಸಮಾಜ ಹಾಳಾಗುತ್ತದೆ ಎನ್ನುವ ಸತ್ಯ ಹೇಳಿದರೂ, ಸಮಾಜವನ್ನು ಮತ್ತಷ್ಟು ಹಾಳುಮಾಡುವ ದುಷ್ಟರನ್ನು ಬಿಟ್ಟುಬಿಡಲು ನಿರ್ಧರಿಸಿದ್ದಾನೆ. ಭಿಕ್ಷೆ ಬೇಡಿ ತಿರಿದುಣ್ಣಲೂ  ತಯಾರಾಗಿದ್ದಾನೆ. 

ಇಂಥ ಶಿಷ್ಯನನ್ನು ಇಟ್ಟುಕೊಂಡು ಶ್ರೀಕೃಷ್ಣ ಏನು ಮಾಡಬೇಕು? ಅರ್ಜುನನ್ನು ನೆಪವಾಗಿಟ್ಟುಕೊಂಡು "ಗೀತೋಪದೇಶ" ಮಾಡುತ್ತಾನೆ. ತನ್ನ ವಿರಾಟ್ ಸ್ವರೂಪವನ್ನೂ ತೋರಿಸುತ್ತಾನೆ. "ನಿನ್ನ ಈ ಕಣ್ಣುಗಳು ನನ್ನ ಆ ವಿಶ್ವರೂಪವನ್ನು ನೋಡಲಾರವು. ಅದಕ್ಕಾಗಿ ನಿನಗೆ ದಿವ್ಯ ದೃಷ್ಟಿ ಕೊಡುತ್ತೇನೆ" ಎನ್ನುತ್ತಾನೆ. ಕೊಡುತ್ತಾನೆ. ಅರ್ಜುನ ನೋಡುತ್ತಾನೆ. ದಿವ್ಯ ದೃಷ್ಟಿ ಇದ್ದರೂ ಪೂರ್ತಿ ನೋಡಲಾರ. ಕ್ಷಣಕ್ಕಿಂತ ಹೆಚ್ಚು ಕಾಲ ದಿಟ್ಟಿಸಲಾರ. "ನನ್ನ ಅಂಗಾಂಗಗಳು ಸುಡುತ್ತಿವೆ. ಸೀದಂತಿ ಮಮ ಗಾತ್ರಾಣಿ" ಎಂದು ಕೂಗುತ್ತಾನೆ. ಈ ವಿರಾಟ್ ರೂಪವನ್ನು ಮರೆ ಮಾಡು. ಮೊದಲಿನ ಸೌಮ್ಯ ರೂಪ ತೋರಿಸು" ಎಂದು ಅಂಗಲಾಚುತ್ತಾನೆ! 

ವಿರಾಟಪುರುಷನೇ ಕೃಪೆಮಾಡಿ ವಿಶೇಷ ದೃಷ್ಟಿ ಕೊಟ್ಟು ತೋರಿಸಿದ ಆ ರೂಪವನ್ನು ಅರ್ಜುನನಂತಹವನೇ ನೋಡಲಾಗಲಿಲ್ಲ. ಸದಾ ಕೇಶವನ ಹಿಂದೆ-ಮುಂದೆ ಓಡಾಡಿಕೊಂಡಿದ್ದವನು. ಮಾಧವನ ಅನೇಕ ಮುಖಗಳನ್ನು ಕಣ್ಣಾರೆ ಕಂಡವನು. ಯೋಗ್ಯ ಜೀವರಲ್ಲಿ ಅತಿ ಯೋಗ್ಯನು. ಮುಕುಂದನಿಂದಲೇ ತರಬೇತಿ ಪಡೆದವನು. ಇಷ್ಟೆಲ್ಲಾ ಸಿದ್ಧತೆ,  ಯೋಗ್ಯತೆ ಇದ್ದರೂ ಅವನಿಂದಲೇ ಆ ರೂಪವನ್ನು ನೋಡಲಾಗಲಿಲ್ಲ. 

ನಾವೇನು ಕಂಡೇವು?

*****

ನಾವು ಬಹಳ ಕಷ್ಟ ಪಟ್ಟು ಒಂದು ಮನೆ ಕಟ್ಟುತ್ತೇವೆ. ಎಷ್ಟು ವಿಶಾಲವಾಗಿ ಕಟ್ಟಿದರೂ ಕಡೆಗೆ ನಮ್ಮ ಇಷ್ಟಕ್ಕಿಂತಲೂ ಚಿಕ್ಕದೇ. ಅದರೊಳಗೆ ಸೇರುತ್ತೇವೆ. ಸಾರ್ಥಕ ಭಾವ ಬರುತ್ತದೆ. ಮನೆಯ ಒಳಗೆ ನಾವು ಇದ್ದರೆ ಹೊರಗಿಲ್ಲ. ಹೊರಗೆ ಇದ್ದರೆ ಮನೆಯ ಒಳಗಿಲ್ಲ. ಸ್ವಲ್ಪ ಕಾಲದ ನಂತರ ಒಳಗೂ ಇಲ್ಲ; ಹೊರಗೂ ಇಲ್ಲ. ಮತ್ತೆ ಸ್ವಲ್ಪ ದಿನದ ನಂತರ ಇದ್ದೆವು ಅನ್ನುವ ನೆನಪೂ ಬೇರೆಯವರಿಗೆ ಇಲ್ಲ. ನಾವಂತೂ ಎಂದೋ ಇಲ್ಲವಾದೆವು. 

"ವಿಷ್ಣು ಸಹಸ್ರನಾಮ"ದ ಪ್ರತಿಯೊಂದು ಹೆಸರಿಗೂ ನೂರು ಅರ್ಥಗಳಿವೆ ಎಂದು ಹೇಳುತ್ತಾರೆ. "ಗೋವಿಂದ" ಎನ್ನುವ ಪದಕ್ಕೂ ಅನೇಕ ಅರ್ಥಗಳಿವೆ. ಮಹಾಪ್ರಳಯದ ನಂತರ ವಿಶಾಲ ವಿಶ್ವವನ್ನು ಹೊರಗೆ ನಿಂತು ಸೃಷ್ಟಿ ಮಾಡಿದನು ಆ ವಿರಾಟ್ ಪುರುಷ. ಅಷ್ಟೇ ಅಲ್ಲ. ಸೃಷ್ಟಿ ಮಾಡಿದ ನಂತರ ಅದರ ಒಳಗೆ ಪ್ರವೇಶ ಮಾಡಿದನು. ಒಳಗೆ ಆವರಿಸಿದನು. ಆದರೆ ಹೊರಗೂ ಉಳಿದನು. "ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃ" ಅನ್ನುತ್ತದೆ ಮಹಾನಾರಾಯಣೋಪನಿಷತ್.  ಹಿಂದೆ ಮಾತ್ರ ಅಲ್ಲ. ಇಂದಷ್ಟೇ ಅಲ್ಲ. ಮುಂದೆಯೂ ಉಂಟು. ಅನಂತ ಕಾಲದಿಂದ ಅನಂತ ಕಾಲದವರೆಗೂ ಅನಂತವಾಗಿದ್ದಾನೆ. ಎಲ್ಲವನ್ನೂ ಅವರಿಸಿದ್ದಾನೆ. ಚಿಕ್ಕದರ ಒಳಗೆ ಅದಕ್ಕಿಂತ ಚಿಕ್ಕದಾಗಿದ್ದಾನೆ. ದೊಡ್ಡದರ ಹೊರಗೆ ಅದಕ್ಕಿಂತ ದೊಡ್ಡದಾಗಿದ್ದಾನೆ. 

ಇದರ ತಿಳುವಳಿಕೆ ನಮ್ಮ ಜ್ನ್ಯಾನದ ಪರಿಧಿ ಮೀರಿದ್ದು. ತಾನೇ ಸೃಷ್ಟಿಸಿದ ಜಗತ್ತಿನ ಒಳಗೆ ತಾನೇ ಪ್ರವೇಶ ಮಾಡಿ ಅದರ ಹೊರಗೂ ಉಳಿದಿದ್ದರಿಂದ ಅವನು "ಗೋವಿಂದ". 

ಇದನ್ನು ತಿಳಿಯಲಾಗದೇ ನಾವು ಗೋವಿಂದ!

*****

"ಕಾಲಾಯ ತಸ್ಮೈ ನಮಃ" ಎನ್ನುವುದು ಎಲ್ಲರೂ ಹೇಳುವ ಮಾತು. ಕಾಲವು ಎಲ್ಲವನ್ನೂ ಬದಲಿಸುತ್ತದೆ. ಕಾಲವು ಎಲ್ಲವನ್ನೂ ನುಂಗುತ್ತದೆ. ಕಾಲವೇ ಕೊನೆಗೆ ಉಳಿಯುವುದು. ಎಲ್ಲರ ಕಾಲ ಕಳೆದ ಮೇಲೂ. ಅಂದರೆ ಆ ಪರಮಾತ್ಮನ ಕಥೆ ಏನು? ಅವನಿಗೂ ಒಂದು ಕಾಲವಿಲ್ಲವೇ? ಅವನು ಕಾಲವಾಗುವುದಿಲ್ಲವೇ? ಇದೊಂದು ದೊಡ್ಡ ಪ್ರಶ್ನೆ. 

ಮಹಾ ವಿದ್ವಾಂಸರಾದ ಶ್ರೀನಿವಾಸಾಚಾರ್ಯರು, ಮುಂದೆ ಜಗನ್ನಾಥ ದಾಸರೆಂದು ಪ್ರಸಿದ್ಧರಾದವರು, ಇದಕ್ಕೆ ಉತ್ತರ ಕೊಡುತ್ತಾರೆ:

ಕಾಲಾಂತರ್ಗತ ಕಾಲನಿಯಾಮಕ ಕಾಲಾತೀತ ತ್ರಿಕಾಲಜ್ಞ 

ಕಾಲಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ 

ಕಾಲರೂಪ ತವ ದಾಸೋಹಂ ತವ ದಾಸೋಹಂ 

ವಾಸುದೇವ ವಿಘತಾಘಸಂಘ ತವ ದಾಸೋಹಂ ತವ ದಾಸೋಹಂ 

ಕಾಲವನ್ನು ಸೃಷ್ಟಿಸಿ, ಕಾಲದಲ್ಲಿದ್ದು, ಕಾಲವನ್ನು ಹಿಡಿತದಲ್ಲಿಟ್ಟು ಎಲ್ಲ ಕಾಲವನ್ನೂ ತಿಳಿದು, ಕಾಲದ ವ್ಯಾಪ್ತಿಯನ್ನೂ ದಾಟಿ ಕಾಲದ ಪರಮ ಸ್ವರೂಪನಾದವನೇ ಆ ವಿರಾಟ್ ಪುರುಷ. 

ನಮ್ಮ ಸೀಮಿತ ಕಾಲದಲ್ಲಿ ಅವನ್ನು ಪೂರ್ಣವಾಗಿ ತಿಳಿಯುವುದು ಅಸಾಧ್ಯ.  ಹಾಗೆಂದು ಬಿಟ್ಟೀ ಬಿಡೋಣವೇ? ಕೂಡದು. ನೂರಕ್ಕೆ ನೂರು ಅಂಕ ಸಿಗುವುದಿಲ್ಲ ಎಂದು ಪರೀಕ್ಷೆಯೇ ಬರೆಯದಿದ್ದರೆ ಹೇಗೆ? 

ಪರೀಕ್ಷೆ ಬರೆಯಲೇ ಬೇಕು. ಪ್ರಯತ್ನ ಪಡಲೇಬೇಕು. 

***** 

ದೇಶಾತೀತ, ಕಾಲಾತೀತನಾದ, ಸರ್ವವ್ಯಾಪ್ತನಾದ, ಸರ್ವಶಕ್ತನಾದ ಆ ವಿರಾಟ್ರೂಪಿ ಪರಮಾತ್ಮನನ್ನು ಹೇಗೆ ಆರಾಧಿಸುವುದು? ಅವನ ವ್ಯಾಪ್ತಿ ನಮ್ಮ ಕಲ್ಪನೆಗೂ ದೊಡ್ಡದು. ಆದರೆ ಅವನು ಈ ಎಲ್ಲ ಗುಣಗಳನ್ನೂ ಹೊಂದಿರುವವನು ಎಂದು ತಿಳಿದವರಿಗೆ ಎಲ್ಲಿ ನೋಡಿದರಲ್ಲಿ ಅವನೇ ಕಾಣಿಸಬೇಕು. ಆ ಸ್ಥಿತಿ ತಲುಪಿದವರು ಮಾಡುವ ಉಪಾಸನೆಯೇ "ವ್ಯಾಪ್ತೋಪಾಸನೆ". ಅವರ ಆರಾಧನೆ ಹೇಗಿರುತ್ತದೆ?

ಜಲ, ಕಾಷ್ಠ, ಶೈಲ, ಗಗನ, ನೆಲ, ಪಾವಕ, ವಾಯು, ತರು 

ಫಲ,  ಪುಷ್ಪ, ಬಳ್ಳಿಗಳೊಳಗೆ  ಪರಮಾತ್ಮನಿದ್ದಾನೆ 

ಎಂದರಿತವಗೆ ಆನಂದ ಆನಂದ 

ಆ ರೀತಿ ಉಪಾಸನೆ ಮಾಡುವ ಶಕ್ತಿ ಇದ್ದವರಿಗೆ ಬೇರೆ ಪ್ರತೀಕಗಳ ಅವಶ್ಯಕತೆಯೇ ಇಲ್ಲ. ಅಂತಹ ಸಾಧಕರಿಗೆ "ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ, ಉಂಡು ಉಟ್ಟದ್ದೆಲ್ಲಾ ದೇವಪೂಜೆ". ಆದರೆ ಆ ಮಟ್ಟ ತಲುಪಲು ಬಹಳ ಬಹಳ ಸಾಧನೆ ಬೇಕು. 

*****

ವ್ಯಾಪ್ತೋಪಾಸನೆಗೆ ಇಷ್ಟು ಮಹತ್ವ ಇದ್ದರೆ ಎಲ್ಲರೂ ಅದನ್ನೇ ಮಾಡಬಹುದಲ್ಲ! ಬೇರೆ ರೀತಿ ಪ್ರಯತ್ನಗಳು ಯಾಕೆ? ಈ ಪ್ರಶ್ನೆಗೆ ಉತ್ತರ ಮುಂದೆ ನೋಡೋಣ. 

Tuesday, November 14, 2023

ತ್ವಮೇವ ಶರಣಂ ಮಮ


ನಮಸ್ಕಾರ, ನಮಸ್ತೇ, ಅಡ್ಡಬಿದ್ದೆ 

ನಮ್ಮ ಸಂಪ್ರದಾಯದಲ್ಲಿ ಎದುರು ಬಂದವರಿಗೆ ಅಥವಾ ಯಾರನ್ನಾದರೂ ಕಂಡಾಗ ಗೌರವ ಕೊಡುವುದು ಮತ್ತು ಹಾಗೆ ಕಂಡವರು ಅಥವಾ ಬಂದವರು ಪರಿಚಯದವರಾದರೆ ಕುಶಲ ಪ್ರಶ್ನೆ ಮಾಡುವುದು, ಇವುಗಳಿಗೆ ಬಹಳ ಮಹತ್ವವಿದೆ.  ಇಂಗ್ಲೀಷಿನಲ್ಲಿ "ಗ್ರೀಟ್" ಅನ್ನುವ ಪದಕ್ಕೆ ಕನ್ನಡದ ನಿಘಂಟಿನಲ್ಲಿ "ನಮಸ್ಕಾರ" ಎಂದೇ ಅರ್ಥ ಉಂಟು. ಅದರ ಮುಖ್ಯ ಪರಿಣಾಮ ಇನ್ನೊಬ್ಬರನ್ನು ಗುರ್ತಿಸುವುದು ಅಥವಾ ಅವರ ಇರುವಿಕೆಯನ್ನು ಗಮನಿಸುವುದು. ಆ ಗುರುತಿಸುವಿಕೆ ಕೇವಲ ಒಂದು ಮುಗುಳ್ನಗೆ ರೂಪದಲ್ಲಿ ಬರಬಹುದು, ಕೈ ಬೀಸುವುದಿರಬಹುದು ಅಥವಾ ಕೈ ಜೋಡಿಸುವುದೂ ಆಗಬಹುದು. ಪರಿಚಯವಿದ್ದವರು ಕಂಡಾಗ ಹೀಗೆ ಮಾಡದಿದ್ದರೆ ಅವರನ್ನು ಉಪೇಕ್ಷೆ ಮಾಡಿದಂತೆ. ಎದುರಿನವರು ಗುರು, ಹಿರಿಯರಾದರೆ ಅಥವಾ ಅರ್ಹತೆ, ಹುದ್ದೆಯಲ್ಲಿ ನಮಗಿಂತ ಮೇಲೆ ಇರುವವರಾದರೆ ಹೀಗೆ ಮಾಡದುದನ್ನು ಅದೊಂದು ಅಹಂಕಾರದ ಕುರುಹು ಎಂದೂ ವ್ಯಾಖ್ಯಾನಿಸಬಹುದು. ಅವಸರದಲ್ಲಿದ್ದಾಗ ಅಥವಾ ಕೈಗಳಲ್ಲಿ ಏನನ್ನಾದರೂ ಹಿಡಿದಿರುವಾಗ ಬಾಯಿಯಲ್ಲಿ "ನಮಸ್ಕಾರ" ಎಂದಾದರೂ ಹೇಳುವ ಸೌಜನ್ಯವನ್ನು ಸುಸಂಸ್ಕೃತ ಸಮಾಜ ನಮ್ಮಿಂದ ನಿರೀಕ್ಷಿಸುತ್ತದೆ. 

ಅನೇಕರು "ನಮಸ್ಕಾರ" ಅನ್ನುವುದರ ಬದಲು "ನಮಸ್ತೇ" ಅನ್ನುತ್ತಾರೆ. ನಮಸ್ತೇ ಅನ್ನುವುದು ಒಂದು ಸಂಸ್ಕೃತದ ಪದ. ತೇ ಅನ್ನುವುದು "ಅವನಿಗೆ" ಎಂದಾಗುತ್ತದೆ. ಎದುರು ಇರುವರನ್ನು ನೋಡಿ "ಅವನಿಗೆ ನಮಸ್ಕಾರ" ಅಂದರೆ ಹೇಗೆ ಇರುತ್ತದೆ? ಆದರೂ ನಮಸ್ತೇ ಅನ್ನುವುದು ಎಷ್ಟು ಲೋಕಾರೂಢಿಯಾಗಿದೆ ಅಂದರೆ ಅದರ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಉದಾಹರಣೆಗೆ "ರೂಪಸಿ" ಅನ್ನುವ ಪದ. ವಾಸ್ತವವಾಗಿ ಅದು "ರೂಪಿಣಿ" ಆಗಬೇಕು (ಗಮನಿಸಿ: ಸರಸ್ವತಿ ನಮಸ್ತುಭ್ಯಮ್ ವರದೇ ಕಾಮ ರೂಪಿಣಿ). ರೂಪಸಿ ಅಲ್ಲ. ಆದರೆ ರೂಪಸಿಯ ಪ್ರಯೋಗ ಎಷ್ಟು ಆಳವಾಗಿದೆ ಅಂದರೆ ಈಗ ಯಾರಾದರೂ ರೂಪಿಣಿ ಎಂದು ಹೇಳಿದರೆ ಅವರಿಗೆ ಭಾಷೆಯೇ ಬರುವುದಿಲ್ಲ ಎನ್ನಬಹುದು! ಕುರೂಪಿಣೀ ಎನ್ನುತ್ತಾರೆ ಎಂದು ರಾಗ ಎಳೆಯಬಹುದು. ಏಕೆಂದರೆ ಕುರೂಪಿಣಿ ಎನ್ನುವ ಪ್ರಯೋಗ ಇದೆ. ಕುರೂಪಸಿ ಪ್ರಯೋಗ ಇಲ್ಲ. 

ಹಿಂದೆ ಹಳ್ಳಿಗಳ ಕಡೆ "ಅಡ್ಡಬಿದ್ದೆ" ಎನ್ನುವ ಮಾತು ಕೇಳಿಬರುತ್ತಿತ್ತು. ಇದೂ ನಮಸ್ಕಾರ ಎನ್ನುವುದೇ. ಅಡ್ಡಬೀಳು ಎನ್ನುವುದು ಬರೀ ನಮಸ್ಕಾರವಲ್ಲ. ಇನ್ನೂ ಹೆಚ್ಚಿನ ಸಾಷ್ಟಾಂಗ ನಮಸ್ಕಾರ. ಭಯ, ಭಕ್ತಿಯಿಂದ ನಮಸ್ಕಾರ ಮಾಡುವುದು. ಎಲ್ಲೋ ರಸ್ತೆಯಲ್ಲಿ ಅಥವಾ ಹೊರಗಡೆ ಸಿಕ್ಕಿದಾಗ ಸಾಷ್ಟಾಂಗ ಪ್ರಣಾಮ ಮಾಡುವ ಪರಿಸ್ಥಿತಿ ಇಲ್ಲದಿರಬಹುದು. ಆಗ ಅಡ್ಡಬಿದ್ದೆ ಎನ್ನುವ ಪದ ಆ ಕ್ರಿಯೆಯ ಸೂಚಕವಾಗುತ್ತದೆ. 

ನಮಸ್ಕಾರದ ಕ್ರಿಯೆ: ವಾಚಿಕವೋ, ದೈಹಿಕವೋ, ಮಾನಸಿಕವೋ?

ನಮಸ್ಕಾರ ಮಾಡುವ ಕ್ರಿಯೆ ದೈಹಿಕವೋ, ಮಾನಸಿಕವೋ ಎನ್ನುವ ಪ್ರಶ್ನೆ ಸಹಜ. ಮೇಲೆ ಕಂಡಂತೆ ನಮಸ್ಕಾರದ ಕ್ರಿಯೆ ಬಾಯಿಯಿಂದ ಹೇಳುವಾಗ ವಾಚಿಕ. ಕೆಲವು ವೇಳೆ ಮಾತಿನಲ್ಲಿ ಹೇಳದೆ ಕೇವಲ ಕೈಗಳಿಂದ ಮಾಡಿದಾಗ ಅದು ದೈಹಿಕ. ಏಕೆ ಬಾಯಿಯಿಂದ ಹೇಳುವುದಿಲ್ಲ ಎಂದು ಕೇಳಬಹುದು. ಭಾವದ ಸೆಲೆ ಕಾರಂಜಿಯಂತೆ ಚಿಮ್ಮಿದಾಗ ಮಾತು ಹೊರಡದಿರಬಹುದು. ವಾಸುದೇವ ಸಾಕ್ಷಾತ್ ಎದುರಿಗೆ ಬಂದಾಗ ಧ್ಯಾನ ಮಗ್ನನಾದ ಧ್ರುವನಿಗೆ ಆದಂತೆ. ರಸ್ತೆಯಲ್ಲಿ ವಾಹನ ನಡೆಸುತ್ತಾ ಹೋಗುತ್ತಿರುವ ಸವಾರನಿಗೆ ಪಕ್ಕದಲ್ಲಿ ಕಂಡ ದೇವಾಲಯದ ದ್ವಾರದಲ್ಲಿ ಮಾನಸಿಕ ನಮಸ್ಕಾರವೇ ಸಾಧ್ಯ. ಇಡೀ ದೇಹ ಬಿಡುವಾಗಿದ್ದರೂ ಮಾಡುವ ಸ್ಥಳ ಚಿಕ್ಕದಿದ್ದರೆ ಸಂಕುಚಿತ ನಮಸ್ಕಾರವನ್ನೇ ಮಾಡಬೇಕಾಗುತ್ತದೆ.  

ಮಾತು, ದೇಹ, ಮನಸ್ಸು, ಬುದ್ಧಿ, ಎಲ್ಲವೂ ಒಂದೇ ಕಡೆ ಕೇಂದ್ರೀಕೃತವಾಗಿ ಆ ಸಮಯದಲ್ಲಿ ನಮಸ್ಕಾರ ಮಾಡುವುದು ಒಂದೇ ಕೆಲಸವಾದರೆ, ಸ್ಥಳವೂ ವಿಶಾಲವಾಗಿದ್ದರೆ ಆಗ ಎಲ್ಲವೂ ಸೇರಿ ದೀರ್ಘ ದಂಡ ನಮಸ್ಕಾರವನ್ನೇ ಮಾಡಬಹುದು. 

ಸಾಷ್ಟಾಂಗ ನಮಸ್ಕಾರ 

ದೇವಿ, ದೇವತೆಗಳ, ಆರಾಧ್ಯ ಮೂರ್ತಿಯ ಹದಿನಾರು ಮೆಟ್ಟಿಲುಗಳ ಷೋಡಶೋಪಚಾರ ಪೂಜೆ ನಡೆಸಿದ ನಂತರ ಅಥವಾ ದೇವಾಲಯ, ಕ್ಷೇತ್ರಗಳಲ್ಲಿ ಹೋದಾಗ, ಪೂಜೆಯ ಕೊನೆಯ ಹಂತದಲ್ಲಿ "ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ" ಎನ್ನುವಾಗ ಮಾಡುವ ನಮಸ್ಕಾರ ಸಾಷ್ಟಾಂಗ ನಮಸ್ಕಾರ ಆಗುತ್ತದೆ. ಆ ಸಂದರ್ಭದಲ್ಲಿ ಮತ್ತೇನೂ ವ್ಯಾಪಾರವಿಲ್ಲ. ನಮ್ಮ ಎಲ್ಲ ಸಾಧನ ಸಾಮಗ್ರಿಗಳನ್ನು ಒಟ್ಟುಗೂಡಿಸಿ ಇಡೀ ದೇಹವನ್ನು ನೆಲದ ಮೇಲೆ ಮಲಗಿಸಿ ಏಕಾಗ್ರ ಚಿತ್ತದಿಂದ ಎಂಟು ಭಾಗಗಳಿಂದ ಮಾಡುವ ನಮಸ್ಕಾರವೇ ಸಾಷ್ಟಾಂಗ ನಮಸ್ಕಾರ. 

ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ 
ಪದ್ಭ್ಯಾಮ್ ಕರಾಭ್ಯಾಮ್ ಜಾನುಭ್ಯಾಮ್ ಪ್ರಣಾಮೋ ಸಾಷ್ಟಾಂಗ ಉಚ್ಯತೇ 

ತಲೆ, ಎದೆ/ಹೊಟ್ಟೆ, ಕೈಕಾಲುಗಳು ಮತ್ತು ತೊಡೆಗಳು (ಅಂದರೆ ಇಡೀ ದೇಹ), ದೃಷ್ಟಿ, ಮಾತು ಮತ್ತು ಮನಸ್ಸು ಎಲ್ಲವೂ ಸೇರಿ ಒಟ್ಟಾಗಿ ಮಾಡುವ ನಮಸ್ಕಾರವೇ ಸಾಷ್ಟಾಂಗ ನಮಸ್ಕಾರ. ಈ ಕ್ರಿಯೆ ನಡೆಯುವಾಗ ನಮ್ಮ ಸಮಸ್ತವೂ ನಮಸ್ಕಾರದಲ್ಲಿಯೇ ಲೀನವಾಗುತ್ತವೆ, ಬೇರೆ ಯಾವ ವ್ಯಾಪಾರವೂ ಇಲ್ಲ. ಅಂದರೆ, ಮತ್ತೇನನ್ನೋ ನೋಡುವುದು ಅಥವಾ ಮತ್ಯಾವುದರ ಬಗ್ಗೆ ಯೋಚಿಸುವುದೂ ಕೂಡದು. ಜೊತೆಗೆ ಇಡೀ ದೇಹ ಭೂಮಿಯ ಮೇಲೆ ಮಲಗುತ್ತದೆ. "ನೀನು ಈಶ, ನಾನು ದಾಸ" ಅನ್ನುವ ಭಾವ ಬಂದು ನನ್ನದೆಲ್ಲವೂ ನಿನ್ನದೇ ಅನ್ನುವ ಸರ್ವ ಸಮರ್ಪಣ ಭಾವ ಬರಬೇಕು. ಇಲ್ಲದಿದ್ದರೆ ಅಂತಹ ಅರೆ ಬೆಂದ ನಮಸ್ಕಾರದಿಂದ ಪ್ರಯೋಜನವಿಲ್ಲ. 

ಇಂತಹ ನಮಸ್ಕಾರಕ್ಕೆ ಏಕೆ ಅಂತಹ ಮಹತ್ವ? ಏಕೆಂದರೆ, ನಾವೇ ಮಾಡಬಹುದಾದ ಒಂದೇ ಕ್ರಿಯೆ ಇದು. ತಂದಿಟ್ಟ ಹಣ್ಣು, ಹೂವು, ಪೂಜಾ ದ್ರವ್ಯಗಳನ್ನು ಯಾರಾದರೂ ಬೇರೆಯವರು ಸಮರ್ಪಣೆ ಮಾಡಬಹುದು. ಮತ್ತೆಲ್ಲ ಪೂಜಾ ಕ್ರಿಯೆಗಳನ್ನು ಇನ್ನೊಬ್ಬರು ನಮ್ಮ ಪರವಾಗಿ ಮಾಡಬಹುದು. ನಮ್ಮ ಹಣವನ್ನು ಮತ್ತೊಬ್ಬರು ಹುಂಡಿಗೆ ಹಾಕಬಹುದು. ಆದರೆ ನಮ್ಮ ಸಾಷ್ಟಾಂಗ ನಮಸ್ಕಾರವನ್ನು ಇನ್ನೊಬ್ಬರು ಮಾಡುವಹಾಗಿಲ್ಲ. ನಮ್ಮ ನಮಸ್ಕಾರದ ಸಂಪೂರ್ಣ ಸ್ವಾಮಿತ್ವ ಅಥವಾ ಅಧಿಕಾರ ನಮ್ಮದೇ!

ಪ್ರದಕ್ಷಿಣ ನಮಸ್ಕಾರ 

ಎಲ್ಲ ಸೇವೆಯ ಕಡೆಯ ಹಂತವಾಗಿ (ಪುನಃ ಪೂಜೆಯ ಮೊದಲು) ಪ್ರದಕ್ಷಿಣ ನಮಸ್ಕಾರ ಮಾಡುವ ಪದ್ಧತಿ ಉಂಟು. ಇದನ್ನು ಹೇಗೆ ಮಾಡಬೇಕು? ಸಾಮಾನ್ಯ ವ್ಯವಹಾರದಲ್ಲಿ ಸುತ್ತು ಹಾಕಿ ಸಾಷ್ಟಾಂಗ ನಮಸ್ಕಾರ ಮಾಡುವುದು. ಅದು ಪ್ರದಕ್ಷಿಣೆ ಆಯಿತೇ? ಪ್ರದಕ್ಷಿಣೆ ಅಂದರೆ ನಮಸ್ಕಾರ ಮಾಡುವ ಪ್ರತೀಕದ ಸುತ್ತ ನೋಡುತ್ತಾ ಗಮನವನ್ನು ಕೇಂದ್ರೀಕರಿಸಿ ಮುಂದುಗಡೆ ಬಂದು ನಮಸ್ಕಾರ ಮಾಡುವುದು. ಪ್ರತೀಕದ ಸುತ್ತ ಬರಲು ಸ್ಥಳವಿದ್ದರೆ ಮಾತ್ರ ಪ್ರದಕ್ಷಿಣೆ ಸಾಧ್ಯ. ದೇವಾಲಯಗಳಲ್ಲಿ ಇದು ಸಾಧ್ಯ. ಅನೇಕ ಕಡೆ ಪ್ರತೀಕಗಳನ್ನು (ಪ್ರತಿಮೆ, ಮೂರ್ತಿ, ಕಲಶ ಇತ್ಯಾದಿ) ಗೋಡೆಗೆ ಸೇರಿಸಿ ಇಟ್ಟಿರುತ್ತಾರೆ. ಇಂತಹ ಕಡೆ ಪ್ರದಕ್ಷಿಣೆ ಅಸಾಧ್ಯ. ಅನೇಕ ಜನ ತಾವು ನಿಂತ ಕಡೆ ಸುತ್ತಿ ನಮಸ್ಕಾರ ಮಾಡುತ್ತಾರೆ. ಹಾಗೆ ಸುತ್ತುವಾಗ ಪ್ರತೀಕಕ್ಕೆ ವಿಮುಖವಾಗಿ ಬರಬೇಕಾಗುತ್ತದೆ, ಇಂತಹ ಪ್ರದಕ್ಷಿಣೆಯಿಂದ ಏನೂ ಪ್ರಯೋಜನವಿಲ್ಲ. ಪ್ರತೀಕದ ಸುತ್ತ ಬರಲು ಸಾಧ್ಯವಿಲ್ಲದಾಗ ಇರುವಲ್ಲಿಯೇ ಸಾಷ್ಟಾಂಗ ನಮಸ್ಕಾರ ಮಾಡಿದರೆ ಸಾಕು. 

ಪ್ರಶಂಸೆ, ಸ್ತುತಿ, ಸ್ತೋತ್ರ ಮತ್ತು ಸಂಸ್ತುತಿ 

ಮೇಲೆ ಹೇಳಿದ ರೀತಿಯಲ್ಲಿ ನಮಸ್ಕಾರ ಮಾಡುವಾಗ ವಚಸಾ ಸಹ ಉಂಟು. ಅಂದರೆ ನಾಲಿಗೆ ಕೂಡ ತನ್ನ ಕಾಣಿಕೆ ಕೊಡುತ್ತದೆ. ಏನು ಹೇಳಬೇಕು? ಇದೊಂದು ಮುಖ್ಯವಾದ ಪ್ರಶ್ನೆ. 

ಪರ್ಯಾಯ ಪದಗಳಲ್ಲಿ ಸೂಕ್ಷ್ಮವಾದ ಅರ್ಥ ಭೇದ ಇರುತ್ತದೆ. (There are subtle differences in Synonyms. They give similar meanings and seldom do give exact equivalent of another word). ಕೋಶಗಳಲ್ಲಿ ಕೊಡುವ ಪದಗಳೂ ಹೀಗೆಯೇ. 

ಈ ಹಿನ್ನೆಲೆಯಲ್ಲಿ, ಪ್ರಶಂಸೆ, ಸ್ತುತಿ, ಸ್ತೋತ್ರ ಮತ್ತು ಸಂಸ್ತುತಿ ಇವುಗಳಲ್ಲಿ ಏನಾದರೂ ಭೇದವಿದೆಯೇ? 
  • ಒಂದು ವ್ಯಕ್ತಿಯಲ್ಲಿ ಅಥವಾ ಪದಾರ್ಥದಲ್ಲಿ ಇಲ್ಲದ ಗುಣಗಳನ್ನು ಆರೋಪಿಸಿ (ಹೇಳಿ ಅಥವಾ ಸೇರಿಸಿ) ಹೊಗಳುವುದು ಪ್ರಶಂಸೆ. ಅನೇಕ ವೇಳೆ ನಮಗೆ ಆ ವ್ಯಕ್ತಿಯಿಂದ ಏನೋ ಕೆಲಸ ಅಥವಾ ಸಹಾಯ ಆಗಬೇಕಾದಾಗ ಹೀಗೆ ಮಾಡುವುದುಂಟು. ತಮಾಷೆಯ ವಿಷಯವೆಂದರೆ ಇವನು ಹೇಳುತ್ತಿರುವುದು ಸುಳ್ಳು ಎಂದು ಪ್ರಶಂಸೆಗೆ ಪಾತ್ರನಾದ ವ್ಯಕ್ತಿಗೂ ಗೊತ್ತಿರುತ್ತದೆ. ಆದರೆ ಕೇಳಲು ಚೆನ್ನ ಎಂದು ಅವರೂ ಸುಮ್ಮನಿರುತ್ತಾರೆ. 
  • ವ್ಯಕ್ತಿಯಲ್ಲಿ ಅಥವಾ ಪದಾರ್ಥದಲ್ಲಿ ಇರುವ ಗುಣಗಳನ್ನು ಹೇಳಿ ಹೊಗಳುವುದು ಸ್ತುತಿ. ಇಲ್ಲಿ ತೋರಿಕೆಯ ಆಡಂಬರವಿಲ್ಲ. ಸತ್ಯದ ಸಾನ್ನಿಧ್ಯ ಉಂಟು. 
  • ಇರುವ ಗುಣಗಳನ್ನು ಕ್ರಮಭದ್ದವಾಗಿ, ಭಾವಪೂರಿತವಾಗಿ ಹೇಳುವುದು ಸ್ತೋತ್ರ. ಇಲ್ಲಿ ಕೇವಲ ಶಬ್ದಗಳ ಗೊಂದಲವಲ್ಲ. ಭಾವನೆಗಳ ಪ್ರತಿಬಿಂಬ ಇರುತ್ತದೆ. 
  • ಸರಿಯಾಗಿ ಅರ್ಥ ಮಾಡಿಕೊಂಡು, "ನನಗೆ ಪೂರ್ತಿ ಗೊತ್ತಿಲ್ಲ" ಎಂದು ಒಪ್ಪಿಕೊಂಡು ಭಯ-ಭಕ್ತಿಗಳಿಂದ ಮಾಡುವುದು ಸಂಸ್ತುತಿ. ಇಲ್ಲಿ ಪದಗಳಿಗೆ ಎಷ್ಟು ಬೆಲೆಯೋ ಭಾವಕ್ಕೂ ಅಷ್ಟು ತೂಕ. ಇದು ಶ್ರದ್ದೆಯ ಪರಾಕಾಷ್ಠೆ. ಭಾವವಿದ್ದರೆ ಶ್ರದ್ದೆ ಬರುತ್ತದೆ. ಇಲ್ಲದಿದ್ದರೆ ಇಲ್ಲ. ಶ್ರದ್ದೆ ಇದ್ದರೆ ಭಗವಂತ ಒಲಿಯುತ್ತಾನೆ. 

ಸರ್ವ ಸಮರ್ಪಣ, ಸಾಷ್ಟಾಂಗ ನಮಸ್ಕಾರ, ಶರಣಾಗತಿ 

ಸರ್ವ ಸಮರ್ಪಣಾ ಬುದ್ಧಿಯಿಂದ, ಭಾವ ತುಂಬಿದ ಶ್ರದ್ದೆಯಿಂದ ಸಾಷ್ಟಾಂಗ ನಮಸ್ಕಾರ ಮಾಡುವಾಗ ನಾಲಿಗೆ ಏನು ಹೇಳುತ್ತದೆ? ಸಾಮಾನ್ಯವಾಗಿ ಹೇಳುವ ಶ್ಲೋಕ ಹೀಗಿರುತ್ತದೆ:

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ 
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇ ಪದೇ 
ಪಾಪೋಹಂ ಪಾಪ ಕರ್ಮಾಹಂ ಪಾಪಾತ್ಮಾ ಪಾಪ ಸಂಭವಾ 
ತ್ರಾಹಿ ಮಾಂ ಕೃಪೆಯಾ ದೇವ ಶರಣಾಗತ ವತ್ಸಲ
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ 
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷೋ ಜನಾರ್ದನ 

ಇದು ಉಪಚಾರಕ್ಕೆ ಹೇಳುವ ಮಾತೋ, ಅಥವಾ ಇದರಲ್ಲಿ ನಿಜವಾಗಿ ನಂಬಿಕೆ ಇದೆಯೋ? ಇದು ಹೇಳಿ ಮುಗಿಸದಿದ್ದರೆ ಮುಂದೆ ಊಟ ಹಾಕುವುದಿಲ್ಲ ಎಂದು ಹೇಳುವ ತಂತ್ರವೋ? ಇದು ಸತ್ಯವಾಗಿ ಸಂಸ್ತುತಿ ಆದರೆ ಹೇಳುವವನಿಗೆ ಜನ್ಮ, ಪುನರ್ಜನ್ಮದಲ್ಲಿ ನಂಬಿಕೆ ಇರಬೇಕು. ನಾನು ಪಾಪ ಮಾಡುತ್ತಿದ್ದೇನೆ ಎನ್ನುವ ಪ್ರಜ್ಞೆ ಇರಬೇಕು, ಪರಮಾತ್ಮನು ದಯಾನಿಧಿ ಎನ್ನುವ ಪ್ರಬಲ ನಂಬಿಕೆ ಬೇಕು, ನನ್ನನ್ನು ಈ ಜೀವನ-ಮರಣ ಚಕ್ರದಿಂದ ಪಾರು ಮಾಡಿಯೇ ಮಾಡುತ್ತಾನೆ ಎಂಬ ಧೃಡ ಹಂಬಲ ಇರಬೇಕು. ಇದೆಲ್ಲದಕ್ಕಿಂತ ಹೆಚ್ಚಾಗಿ ಈಗ ನಾನು ನಮಿಸುತ್ತಿರುವ ದೈವವೇ ಇದನ್ನು ಮಾಡಬಲ್ಲ ಎನ್ನುವ ವಿಶ್ವಾಸ ಬೇಕು. ಆಗ ಮಾತ್ರ ಈ ಸ್ತುತಿ ಸಂಸ್ತುತಿ ಆಗುತ್ತದೆ; ಪ್ರಯೋಜನಕ್ಕೆ ಬರುತ್ತದೆ. ಇಲ್ಲದಿದ್ದರೆ ಅದು ಪ್ರಶಂಸೆ ಆಗಿಯೇ ಉಳಿಯುತ್ತದೆ; ಫಲವೂ ಸಿಗುವುದಿಲ್ಲ!

ಎಲ್ಲರ ಬಳಿಯೂ ಹೇಳುವುದು ಇದೇ - ಅನ್ಯಥಾ ಶರಣಂ ನಾಸ್ತಿ!

ಗಣೇಶ ಚೌತಿಯಂದು ಹೇಳುವುದು ಇದೇ. ಜನಾರ್ದನ ಎನ್ನುವುದು ಗಣಾಧಿಪ ಆಗುತ್ತದೆ. ಸ್ವರ್ಣಗೌರಿ ವ್ರತದಲ್ಲಿಯೂ ಇದೇ. ಜನಾರ್ದನ ಅನ್ನುವುದು ಸುರೇಶ್ವರಿ ಆಗುತ್ತದೆ. ಕೇದಾರೇಶ್ವರ ವ್ರತದಲ್ಲಿಯೂ ಇದೇ  ಹೇಳುವುದು. ಜನಾರ್ದನ ಮಹೇಶ್ವರ ಆಗುತ್ತದೆ. ದೇವೇಂದ್ರನಿಗೆ ಪೂಜೆ ಮಾಡಿದರೂ ಇದನ್ನೇ ಹೇಳುವುದು. ಜನಾರ್ದನ ಸುರಾಧಿಪ ಆಗುತ್ತಾನೆ! 

ಪ್ರತಿಯೊಬ್ಬರಿಗೂ ಭೇದವಿಲ್ಲದೆ "ಅನ್ಯಥಾ ಶರಣಂ ನಾಸ್ತಿ" ಎಂದೇ ಹೇಳುವುದು. ದೇವಾಲಯಗಳಿಗೆ ಹೋದರೆ ಒಂದು ಪ್ರದಕ್ಷಿಣೆ ಬರುವುದರಲ್ಲಿ ಆರೋ ಎಂಟೋ ಸಾರಿ ಬೇರೆಬೇರೆಯವರಿಗೆ ಇದನ್ನೇ ಹೇಳುವುದು. ಇದು ಸರಿಯೇ? ಇದು ಅತ್ಯಂತ ಸಹಜ ಹಾಗೂ ಸಾಧುವಾದ ಪ್ರಶ್ನೆಯೇ. ಇದಕ್ಕೆ ಉತ್ತರ ಏನು?

ಯಾರಿಗೆ ನಮಸ್ಕಾರ?

ಮೇಲಿನ ಪ್ರಶ್ನೆಗೆ ಉತ್ತರ ಕೊಡಬೇಕಾದರೆ ಯಾರಿಗೆ ನಮಸ್ಕಾರ ಮಾಡುತ್ತಿದ್ದೇವೆ ಅನ್ನುವುದು ಮುಖ್ಯವಾಗುತ್ತದೆ. ಅದು ಖಚಿತವಾದರೆ ಪ್ರಶ್ನೆಗೆ ಉತ್ತರವೂ ಸಿಗುತ್ತದೆ; ತೊಡಕೂ ನಿವಾರಣೆ ಆಗುತ್ತದೆ. 

ನಮ್ಮ ವೈದಿಕ ಗ್ರಂಥಗಲ್ಲಿ "ನಮೋ ಮಹದ್ಭ್ಯಹ" ಅನ್ನುವ ಕಡೆಯೇ "ನಮೋ ಅರ್ಭಕೇಭ್ಯಹ, ನಮೋ ಯುವೇಭ್ಯಹ" ಎಂದೂ ಹೇಳುತ್ತದೆ. ಮಕ್ಕಳಿಗೂ ನಮಸ್ಕಾರ ಎಂದರೇನು? ಇದು ಹುಚ್ಚಾಟವಲ್ಲವೇ?

ಪ್ರತಿಯೊಬ್ಬರ ದೇಹದಲ್ಲೂ ಪರಮಾತ್ಮನಿದ್ದಾನೆ. ಅವನು ಇರುವುದರಿಂದಲೇ ಜೀವವುಂಟು. ಅವನು ಹೊರಟರೆ ಜೀವವೂ ಹೋಗಿ ಓಡಾಡುತ್ತಿರುವ ದೇಹ ಜಡವಾಗುತ್ತದೆ. ಒಂದು ಮರದ ಕೊರಡಿಗೂ ಈ ದೇಹಕ್ಕೂ ವ್ಯತ್ಯಾಸವೇ ಇಲ್ಲ. ಮರದ ಕೊರಡಾದರೂ ಯಾವುದಾದರೂ ಕೆಲಸಕ್ಕೆ ಬರಬಹುದು. ಈ ದೇಹ ಯಾವುದಕ್ಕೂ ಬೇಡ. "ಎತ್ತಿದ ಕಸಕಿಂತ  ಕಡೆಯಾಯಿತೀ ದೇಹ" ಎನ್ನುತ್ತಾರೆ ದಾಸರು. ನಾವು ಯಾರಿಗಾದರೂ ಎದುರು ಬಂದವರು ಅಥವಾ ಕಂಡವರಿಗೆ ನಮಸ್ಕರಿಸಿದರೆ ಅದು ಯಾರಿಗೆ? ಅವರು ಸಾಧನೆಯಲ್ಲಿ ನಮಗಿಂತ ದೊಡ್ಡವರಾದರೆ ಅವರಿಗೆ (ಆ ಜೀವನಿಗೆ) ಮತ್ತು ಆ ಜೀವದ ಹೃತ್ಕಮಲದಲ್ಲಿ ನೆಲೆಸಿರುವ ಪರಮಾತ್ಮನಿಗೆ. ನಮಗಿಂತ ಸಾಧನೆಯಲ್ಲಿ ಚಿಕ್ಕವರಾದರೆ ಆ ದೇಹದಲ್ಲಿರುವ ಪರಮಾತ್ಮನಿಗೆ. ನಮೋ ಅರ್ಭಕೇಬ್ಯಹ ಎನ್ನುವಲ್ಲಿಯೂ ಆ ಶಿಶುವಿನಲ್ಲಿಯೂ ಪರಮಾತ್ಮನಿದ್ದಾನೆ ಎಂಬ ಪ್ರಜ್ಞೆ ಜಾಗೃತವಾಯಿತು. 

ಎದುರು ಇರುವವರು ನಮಗಿಂತ ಸಾಧನೆಯಲ್ಲಿ ದೊಡ್ಡವರೋ, ಚಿಕ್ಕವರೋ ಹೇಗೆ ತಿಳಿಯುವುದು? ಇಲ್ಲದಿದ್ದರೆ ಪ್ರಮಾದವಾಗುತ್ತದೆ. ಕೆಲವರು ನಮಗಿಂತ ದೊಡ್ಡವರು ಎನ್ನುವುದು ನಮ್ಮ ಅನುಭವಕ್ಕೆ ಗೊತ್ತಾಗುತ್ತದೆ. ವಯೋವೃದ್ಧರು, ಜ್ಞಾನವೃದ್ಧರು, ಅಭ್ಯಾಸದಲ್ಲಿ ನಮಗಿಂತ ಮುಂದಿರುವವರು ಇತ್ಯಾದಿ. ಆದರೆ ಅನೇಕ ಜ್ಞಾನಿಗಳು ನಮ್ಮ ಸುತ್ತ ಮುತ್ತವೇ ಇರುತ್ತಾರೆ. ಆದರೆ ಅದು ನಮಗೆ ತಿಳಿಯುವುದಿಲ್ಲ. ಅನೇಕ ಅವಧೂತರು ಲೋಕದ ಕಣ್ಣಿಗೆ ಮಂಕಾಗಿ, ಪೆದ್ದರಂತೆ ಇರುತ್ತಾರೆ. ಬೇರೆಯವರು ನನ್ನ ಬಗ್ಗೆ ಏನು ತಿಳಿಯುತ್ತಾರೆ ಎಂದು ಚಿಂತಿಸುವ ಹಂತವನ್ನು ಅವರು ಎಂದೋ ದಾಟಿರುತ್ತಾರೆ. ಜಡಭರತನನ್ನು ಇಡೀ ಪ್ರಪಂಚವೇ ಹಾಸ್ಯ ಮಾಡುತ್ತಿತ್ತು. ರಹೂಗಣ ಮಹಾರಾಜನಿಗೆ ಅವನು ಜ್ಞಾನಿಯೆಂದು ತಿಳಿಯುವವರೆಗೂ. ಆದ್ದರಿಂದ ಯಾರನ್ನೂ ಉಪೇಕ್ಷೆ ಮಾಡಬಾರದು. ಆ ಜೀವದ ಸಾಧನೆಯ ಬಗ್ಗೆ ನಮಗೆ ತಿಳಿಯದಿದ್ದಾಗ ಅದನ್ನು ಪರಮಾತ್ಮನಿಗೇ ಬಿಡಬೇಕು. ಹೊರಗಿನ ಗುಣ ಲಕ್ಷಣಗಳಿಂದ ಯಾರನ್ನೂ ಅಳೆಯಬಾರದು. 

ನಾಸ್ತಿಕರಿಗೂ ನಮಸ್ಕಾರ ಮಾಡಬೇಕೆ?

ಇದು ಒಂದು ವಿಚಿತ್ರ ಸ್ಥಿತಿ. ಎದುರಿನಲ್ಲಿರುವ ನಾಸ್ತಿಕನ ಒಳಗಿರುವ ಪರಮಾತ್ಮನಿಗೆ ನಮಿಸಲು ನಾವು ಸಿದ್ಧ. ಆದರೆ ತನ್ನಲ್ಲಿ ಅವನಿದ್ದಾನೆ ಎಂದು ಅವನೇ ನಂಬುವುದಿಲ್ಲ. ಏನು ಮಾಡುವುದು?

ಒಂದು ಊರಿನಲ್ಲಿ ಅನೇಕ ಮನೆಗಳಿವೆ. ಎಲ್ಲ ಮನೆಗಳಲ್ಲೂ ವಿದ್ಯುತ್ ದೀಪ ಬೆಳಗುತ್ತಿವೆ. ಆದರೆ ಕೆಲವು ಮನೆಗಳಲ್ಲಿ ದೀಪವಿಲ್ಲ. ಮನೆಯವರು ಪ್ರಯತ್ನಪೂರ್ವಕ ಫ್ಯೂಸ್ ಕಿತ್ತು ಹಾಕಿದ್ದಾರೆ. ವಿದ್ಯುತ್ ಇದೆ. ಆದರೆ ಅದರ ಅಭಿವ್ಯಕ್ತಿ ಇಲ್ಲ. 

ನಾಸ್ತಿಕರಲ್ಲಿಯೂ ಭಗವಂತನಿದ್ದಾನೆ. ಎಲ್ಲರ ಹೃದಯದಲ್ಲೂ ಅವನು ಕುಳಿತಿದ್ದಾನೆ. ಆದರೆ ಅವನು ಕುಳಿತಿರುವುದು ಅವರಿಗೆ ಗೊತ್ತಿಲ್ಲ. ಒಬ್ಬನ ಮನೆಯಲ್ಲಿ ಒಂದು ಪೆಟ್ಟಿಗೆಯಿದೆ. ಅದರಲ್ಲಿ ಬಹಳ ಬೆಲೆ ಬಾಳುವ ಆಭರಣಗಳಿವೆ. ಆದರೆ ಅವನಿಗೆ ಅದು ಇರುವುದು ಗೊತ್ತಿಲ್ಲದೇ ಭಿಕ್ಷೆ ಬೇಡುತ್ತಿದ್ದಾನೆ. ನಮಗೂ ಅದಕ್ಕೂ ಸಂಬಂಧವಿಲ್ಲ. ಪರಮಾತ್ಮನಿಲ್ಲದಿದ್ದರೆ ಅವನು ಓಡಾಡುತ್ತಲೇ ಇರಲಿಲ್ಲ. ಆದ್ದರಿಂದ ಅವನಿಲ್ಲಿರುವ ಪರಮಾತ್ಮನಿಗೂ ನಾವು ಗೌರವ ಕೊಡಲೇಬೇಕು. 

ಜ್ಞಾನ, ಅಜ್ಞಾನ, ಸುಜ್ಞಾನ, ವಿಪರೀತ ಜ್ಞಾನ 

ನಮ್ಮ ಜೀವನ ರೀತಿಯಲ್ಲಿ, ನಮ್ಮ ಆರಾಧನೆಯ ದಾರಿಯಲ್ಲಿ ನಮಗಿಂತ ಹೆಚ್ಚಾಗಿ ಬೇರೆಯವರು ಹೇಳಿದ್ದನ್ನೇ ನಾವು ನಂಬುವ ಸ್ಥಿತಿ ಇಂದಿದೆ. "ನಿಮ್ಮಲ್ಲಿ ಅನೇಕ ದೇವರಿದ್ದಾರೆ." ಎಂದು ಹೇಳುವುದನ್ನು ಕೇಳಿ, ಕೇಳಿ ನಾವೂ ಅದನ್ನು ನಂಬುವುದಕ್ಕೆ ಪ್ರಾಂಭ ಮಾಡಿದ್ದೇವೆ. 

ನಮ್ಮ ಸಂಪ್ರದಾಯಗಳಿಗೆ ಮುಖ್ಯ ಆಧಾರವಾದ "ಪುರುಷ ಸೂಕ್ತ", ಋಗ್ವೇದದ "ಮಹಾನಾರಾಯಣೋಪನಿಷದ್" ಮತ್ತನೇಕ ಆಧಾರಗಳು ಸಾರಿ ಸಾರಿ ಹೇಳುತ್ತವೆ: ಎಲ್ಲಕ್ಕೂ ಆಧಾರವಾದ ವಿರಾಟ್ ಪುರುಷ ಇದ್ದಾನೆ. ಅವನೊಬ್ಬನೇ ದೇವರು. ಬಾಕಿಯವರಲ್ಲ ದೇವತೆಗಳು. ಅವನಿಂದ ಹುಟ್ಟಿದವರು. ಪಾಶ್ಚಾತ್ಯರು "ದೇವರು ಮತ್ತು ದೇವದೂತರು" (God and Angels) ಎಂದು ಖಚಿತವಾಗಿ ವಿಭಾಗ ಮಾಡುತ್ತಾರೆ. ನಮ್ಮ ಗ್ರಂಥಗಳಲ್ಲೂ ಇದು ಅದಕ್ಕಿಂತ ಹಿಂದಿನಿಂದ ಇದ್ದರೂ ನಮ್ಮಲ್ಲಿ ಅನೇಕ ದೇವರಿದ್ದಾರೆ ಎಂದು ನಮ್ಮನ್ನು ಮರುಳು ಮಾಡುವುದರಲ್ಲಿ ಅವರು ಸಫಲರಾಗಿದ್ದಾರೆ. 

  • "ಅನೇಕ ದೇವರಿದ್ದಾರೆ. ಅವರೆಲ್ಲ ಸರ್ವ ಶಕ್ತರು" ಎಂದು ತಿಳಿಯುವುದು ಅಜ್ಞಾನ. 
  •  "ಒಬ್ಬನೇ ದೇವರು. ಅವನೇ ಅನೇಕ ರೂಪದಲ್ಲಿದ್ದಾನೆ" ಎಂದು ತಿಳಿಯುವುದು ಜ್ಞಾನ. 
  • "ಒಬ್ಬನೇ ಪರಮ ಪುರುಷ. ಬಾಕಿ ಎಲ್ಲವೂ ಅವನಿಂದ ಸೃಷ್ಟಿಯಾಯಿತು. ಅವನಿಂದ ಸೃಷ್ಟಿಯಾಗಿ ಬೇರೆ ಬೇರೆ ಕಾರ್ಯ ನಿರ್ವಹಿಸುವ ದೇವತೆಗಳೆಲ್ಲ ಅವನ ಆಜ್ಞಾಧಾರಕರು" ಎಂದು ತಿಳಿಯುವುದು ಸುಜ್ಞಾನ. 
  • "ದೇವರೇ ಇಲ್ಲ." ಅಥವಾ "ನಾನೇ ದೇವರು" ಎಂದು ತಿಳಿಯುವುದು ವಿಪರೀತ ಜ್ಞಾನ.
ಚಿಕ್ಕ ವಯಸ್ಸಿನಲ್ಲಿ, ರಟ್ಟೆಯಲ್ಲಿ ಬಲವಿದ್ದಾಗ ನಾಸ್ತಿಕವಾದ ಬಹಳ ಸಂತೋಷ ಕೊಡುತ್ತದೆ. ಯಾವುದೇ ಕಟ್ಟುಪಾಡುಗಳಿಲ್ಲದ ಜೀವನ ಬಹಳ ಸುಖ ಎನಿಸುತ್ತದೆ. ವಯಸ್ಸಾದಂತೆ, ಶಕ್ತಿ ಉಡುಗುತ್ತಿದ್ದಂತೆ, ಪಕ್ಕದಲ್ಲೇ ಇರುವ ನೀರಿನ ಪಾತ್ರೆ ತೆಗೆದುಕೊಳ್ಳುವ ಶಕ್ತಿ ಇಲ್ಲದಿದ್ದಾಗ ನಮಗಿಂತ ದೊಡ್ಡ ಮತ್ತು ಎಲ್ಲವನ್ನೂ ನಿಯಂತ್ರಿಸುವ ಶಕ್ತಿ ಒಂದಿದೆ ಎಂದು ಭಾಸವಾಗುತ್ತದೆ.  ಶವ ಸಂಸ್ಕಾರವನ್ನು ವಿಡಂಬನೆ ಮಾಡಿ ದೊಡ್ಡವರಾದವರ ಶವ ಸಂಸ್ಕಾರಕ್ಕೆ ಅವರ ಶವದ ತೂಕಕ್ಕಿಂತ ಹೆಚ್ಚಿನ ತೂಕದ ಶ್ರೀಗಂಧ, ಕರ್ಪೂರ, ತುಪ್ಪ ಉಪಯೋಗಿಸಿ ವೈಭವೋಪೇತವಾಗಿ ಸಂಸ್ಕಾರ ಮಾಡಿದ್ದನ್ನು ನಮ್ಮ ಕಾಲದಲ್ಲಿಯೇ ನಾವು ನೋಡಿದ್ದೇವೆ. ದೇವರೇ ಇಲ್ಲ ಎನ್ನುವ ಸಿದ್ಧಾಂತದ ಬಲದಿಂದ ಅಧಿಕಾರಕ್ಕೆ ಬಂದ ಜನರ ಆಯುಷ್ಯ ಹೋಮವನ್ನು ಭರಾಟೆಯಿಂದ ನಡೆಸುತ್ತಿರುವುದನ್ನೂ ನೋಡುತ್ತಿದ್ದೇವೆ!


ಪ್ರಾರ್ಥನೆ ಪ್ರತೀಕಗಳ ಮುಂದೆ 

ನಮ್ಮ ಆಚರಣೆ, ಪೂಜೆ, ನಮಸ್ಕಾರ ಎಲ್ಲವೂ ಆ ಪರಮಪುರುಷನ ಪ್ರತೀಕಗಳ ಮುಂದೆ. "ಅನ್ಯಥಾ ಶರಣಂ ನಾಸ್ತಿ" ಎಂದು ಹೇಳುವುದು ಆ ಪ್ರತೀಕಗಳ ಅಂತರ್ಯಾಮಿಯಾದ ಪರಮಪುರುಷನಿಗೆ. ಕೆಲವರು ಆ ಪರಮಪುರುಷನ ಸ್ತ್ರೀ ರೂಪವನ್ನೂ ಆರಾಧಿಸಬಹುದು. (ಅದ್ವೈತಿಗಳು ಆರಾಧಿಸುವ ಗಾಯತ್ರಿ ದೇವಿಯು ಆ ಪರಮಪುರುಷನ ಸ್ತ್ರೀ ರೂಪವೇ ಎಂದು ಮಹಾ ವಿದ್ವಾಂಸರಾದ ದೇವುಡು ನರಸಿಹ ಶಾಸ್ತ್ರಿಗಳು ತಿಳಿಸುತ್ತಾರೆ). ಯಾವುದೇ ಪ್ರತೀಕದ ಮುಂದೆ ಸಾಷ್ಟಾಂಗ ಮಾಡಿ "ಅನ್ಯಥಾ ಶರಣಂ ನಾಸ್ತಿ" ಎಂದು ಹೇಳುವುದೂ ಆ ಪ್ರತೀಕಗಳ ಅಂತರ್ಯಾಮಿ ಪರಮಪುರುಷನಿಗೇ. ಹೇಗೆ ಎದುರು ಬಂಡ ವ್ಯಕ್ತಿಗೂ ಅವನ ಅಂತರ್ಯಾಮಿಯಾದ ಭಗವಂತನಿಗೂ ನಮಸ್ಕರಿಸುತ್ತೇವೆಯೋ, ಅದೇ ರೀತಿ ಇಲ್ಲಿಯೂ ನಡೆಯುತ್ತಿದೆ ಎನ್ನುವ ಅನುಸಂಧಾನವಿದ್ದರೆ ಎಲ್ಲವೂ ಸುಗಮ. 

ದೊಡ್ಡ ದೇವಾಲಯಗಳ ಹುಂಡಿಯಲ್ಲಿ ಅನೇಕ ರಂಧ್ರಗಳನ್ನು ಮಾಡಿರುತ್ತಾರೆ, ಅನೇಕ ಭಕ್ತರು ಒಂದೇ ವೇಳೆ ಕಾಣಿಕೆ ಕೊಡಲೆಂದು. ಹುಂಡಿಯಲ್ಲಿ ಹಣ ಹಾಕುವವನು ರಂಧ್ರವನ್ನು ಗಮನಿಸುವುದಿಲ್ಲ. ಏಕೆಂದರೆ ಎಲ್ಲ ರಂಧ್ರದಲ್ಲಿ ಹಾಕಿದ ಹಣವೂ ಹುಂಡಿಗೇ ಸೇರುತ್ತದೆ ಎನ್ನುವ ಜ್ನ್ಯಾನ ಇರುವುದರಿಂದ. 

ಹೀಗೆ ಚಿಂತಿಸಲು ಸಾಧ್ಯವೇ?

ಅಂಗಡಿಯಿಂದ ಗಣೇಶನ ಮಣ್ಣಿನ ಮೂರ್ತಿಯನ್ನು ತರುತ್ತೇವೆ. ಅದನ್ನು ಇಟ್ಟು ಪೂಜಾ ವಿಧಿಗಳನ್ನು ನಡೆಸುತ್ತೇವೆ. ನಮಸ್ಕಾರ ಮಾಡುವಾಗ ಯಾರಿಗೆ ಮಾಡುತ್ತೇವೆ? ಮಣ್ಣಿನ ಮೂರ್ತಿಗೋ, ಗಣೇಶನಿಗೋ? ಗಣೇಶನಿಗೆ ಹೇಗಾಯಿತು? ಇಲ್ಲಿ ಗಣೇಶ ಕುಳಿತಿದ್ದಾನೆ ಎನ್ನುವ ಅನುಸಂಧಾನದಿಂದ. ಅಂತೆಯೇ, ಯಾವ ಪ್ರತೀಕಕ್ಕೂ ನಮಸ್ಕಾರ ಮಾಡುವ ವೇಳೆಯಲ್ಲಿ ಇದು ಆ ಪರಮಪುರುಷನ ಪ್ರತೀಕ. ಇದಕ್ಕೆ ನಮಿಸಿದರೆ ಅದು ಆ ಪರಮಪುರುಷನಿಗೆ ತಲುಪುತ್ತದೆ ಎನ್ನುವ ಅನುಸಂಧಾನ ಇದ್ದರೆ ಯಾವ ಪ್ರತೀಕಕ್ಕೂ ಅಡ್ಡ ಬಿದ್ದಾಗ "ಅನ್ಯಥಾ ಶರಣಂ ನಾಸ್ತಿ" ಎಂದು ಹೇಳುವುದರಲ್ಲಿ ಯಾವುದೇ ವಿರೋಧ ಕಂಡುಬರುವುದಿಲ್ಲ. 

ಈಗಾಗಲೇ ದೀರ್ಘವಾಯಿತು. ಇದಕ್ಕೇ ಸಂಭಂದಿಸಿದ "ವ್ಯಾಪ್ತಉಪಾಸನೆ" ಬಗ್ಗೆ ಮುಂದೆ ನೋಡೋಣ. 

Sunday, November 12, 2023

N Ganesh

N Ganesh

(06.10.1948 -30.10.2022)


We come across many types of people in our lives. There are the ones who believe in dominating anything coming in their ambit. There are others who do not even exhibit their presence. There are some who do small things but boast big. There are some others who confine to disclosing what they did; neither less nor more. Then there are a small group of people who are totally silent about their achievements. Silent to the extent that even their own family and friends do not know the full extent of their achievements. N Ganesh belonged to the last group. Despite reaching to the top most echelons in Tyre Industry, not many in his circles know of his full accomplishments.

Ganesh was born as the fifth of the eight children of C K Nagaraja Rao - Rajamani couple, on 6th October 1948. Those were the early days of Independent India. His was a family of patriots who contributed to the freedom movement silently, ranging from providing logistic support to freedom fighters to sheltering them in disguise as per demands of the times in the freedom movement. He was born on a Chaturthi day, a day earmarked for special devotion to Lord Ganesha. The family had a tradition of naming a child after an event connected with the birth of the child. The new arrival was naturally named Ganesha. Darling of the family as a child, he was born after four daughters, and later became an elder brother to three more arrivals in the family in due course; one younger brother and two younger sisters. 

He had his initial education around Basavanagudi area in Bangalore, where his family lived. He moved on to National College there and played cricket as the school had a great cricket team in those days. B S Chandrashekhar, who later on came to be known as spin wizard, was his classmate. Bright in academics, he got his B. Sc degree from the college. Despite being keen on further studies, as was the case with many youngsters in those days, demands on the family front motivated him to look for a job immediately after completing the college education. 

Madras Rubber Factory, later renamed as MRF Limited, was the first Tyre company in India to manufacture Nylon Tyres. While expanding the activities before this milestone and setting up manufacturing facilities in Kottayam and Goa, the company wanted to build a team of dedicated young rubber professionals for its research and manufacturing wings. It recruited a batch of Technical Assistants and Ganesh who was looking for a job opportunity was picked by them as a member of the team. His devotion to duty and working to completing the tasks unmindful of clock and calendar earned him the appreciation of his superiors. That led to his being specially groomed in R&D segment of the tyre industry. Nylon Tyres to Radial Tyres to Tubeless Tyres and so on, Ganesh's life progression got merged with the progress in the Tyre industry. 

While working in MRF, Chennai, Ganesh identified himself with the shop floor workers and mixed with them freely. He learnt Tamil and got attracted to the rich culture of the area. In an era when TV was not there and movies, music and theatre were the major purveyors of leisure and recreation, he took to watching Tamil movies and theatre. He was a great fan of Shivaji Ganeshan and used to enthral his family and friends by mimicking the various artistes,  His talent for mimicry developed over the years and was a regular source of fun for the next generation.  

Ganesh was deputed for an intensive training program in Rubber and Tyre Technology conducted by Institute of Rubber Industry, London, UK. His efforts were well recognised and he won an award there. When Modi Tyres came up with expanded operations and started their unit in Modipuram near Meerut, UP, Ganesh was offered a position which he accepted and moved to North India. His work culture was appreciated and soon he had an offer from JK Tyres for their new factory in Kankroli, Rajasthan. Ganesh had a major role in the introduction of Radial tyre production of the company.

It was during this time that Ganesh got married to Smt. Sheela on 25th June, 1978. Family life started, but Ganesh's devotion to duty never wavered. He found quality time for the family life and yet did full justice to his duties in the company. He had developed culinary skills already as he was required to stay alone during the earlier days. These skills further blossomed now and turned into a hobby. When in Bangalore on holidays, he would entertain the whole extended family with his variety of dishes in addition to the mimicry skills.

It was now the turn of CEAT Tyres to offer him a senior position in the company's R&D facility at Mumbai. He was closely associated with the setting up of the company's plant at Nashik and was located there as well for some time. He rose to the position of Head of the R&D wing and spent a long period in the Mumbai facility. During all these years he was deputed for study tours and on-location training by his employers at various leading Tyre manufacturers all over the world like Mansfield Tyres, General Tyres, USA, Yokohama Tyres, Japan, and others in USA, Russia, China, UK, Germany, Canada and other countries. He traveled in 18 countries visiting their Tyre factories and exchanging developments in the industry. Those were the days without computers and such visits were crucial for staying ahead in the field. His paper on "Processing of Polymers in Tyre Industry" submitted in 1994 got him wide appreciation.

Though an integral part of the top management and enjoyed the full respect of the top technocrats, Ganesh was most humane while dealing with the shop floor workers. He mixed with them freely and did not hesitate to mess up his fingers and dress with carbon black. Those familiar with the tyre industry know how messy the working environment on the shop floor is. 

One particular incident in one of the factories gives an indication to the extent of his involvement with the workers. Once there was industrial unrest and labour unions went on strike. Militant leaders decided that the executives will be picketed in their cabins. The members of the union agreed to block the cabins of executives and not allow them to get out, except for Ganesh. "Ganesh Sir ko aise nahi karte", they said. The leaders agreed for the exemption but the next step was to block all the cars of executives entering and leaving the factory. This was going on and cars were being blocked. A car came and was duly blocked. Someone in the group shouted, "Ye Ganesh Sir ka car hai, Chod do". Before the leaders realised what was happening, the car was let go.

Ganesh regularly won awards for contribution to quality enhancement, reduction in Turnover Time, reduction of costs for the organisations etc. In recognition of his services to the Tyre Industry, the Industry Association gave him a "Life Time Achievement Award". A close family friend came to know of this from a third source and chided Ganesh for not telling such an important milestone to him. "What is there to tell? I did my duty and they did theirs", was all his reply.

The demands of his profession compelled Ganesh to stay away from Bangalore during his entire professional life. His visits to Bangalore on vacation or for attending major family events like wedding of a sibling or arrival of a new addition to the family etc. were looked forward a great deal by himself as well as his parents and siblings in Bangalore. The very arrival brought with him fun and pleasure to one and all. He and his family"s entire period of presence was for celebration and merriment.

Ganesh wanted a quiet retired life after retirement from CEAT Tyres and returned to Bangalore. But the industry did not leave him. Falcon Tyres in Mysore insisted that he join them as a consultant and help them cut costs as they were in a delicate financial position. He spent about three years with them and than moved on to Bangalore for a quiet life.

Just as he was benefited by the mentoring of the stalwarts in the industry in his initial years, he mentored a host of new quality control experts in his later years. He used to have regular visits and communications from these mentees during his years in Bangalore.

Moving around in the areas of Bangalore where he grew up, visiting his close friends, making dishes in their kitchen as well and having a leisurely breakfast in Vidyarthi Bhavan were his favourite pastimes. Revisiting old Kannada and Tamil movies was another.

A quiet man by nature, he had the many sterling qualities of his mother and most of his action reminded of her. Totally devoted to his family and the extended large family, he was a jewel in the family necklace. Brief illness took its toll and the family got him the best of medical care and provided loving surroundings. The laws of nature had the final say and he left for his heavenly abode on 30th October, 2022.
*****

Ganesh has been missed for a year now. I could not pay my tribute to him last year as I was myself recovering from a long intensive hospitalisation and rehabilitation. His son Chi. Vikram's loving invitation for the "First Year Memorial Functions" coming up this week being held in Sunnyvale, California, USA, has provided me an opportunity to recall the wonderful 44 years of life that we shared in many ways. Dear Ganesh, we miss you a lot!

Tuesday, November 7, 2023

K S Anantha Swamy





It was a fine morning on the first day of the year 1942. The celebrations for welcoming the new year were muted as they were the dark years of Second World War. A 25-year-old young man was getting ready for a challenging day that was to come up in his life on the next day. He was a cricketer in whom his near and dear ones saw great promise. He had earned the distinction of representing his state, Mysore State, later on named as Karnataka, in the prestigious Ranji Trophy tournament. He was a fine right-hand batsman and also bowled fast medium right handed. His earlier matches did show lot of promise but did not result in a memorable performance. 

His wife Nagarathna was away to assist his elder sister Lakshmidevamma, who was expecting a baby in those days. The young man went to that house to tell his wife about the big event next day and get her best wishes. He also met the sister-in-law (wife's elder sister) and wished her smooth delivery. She in turn wished him well and joked that they both had a big challenge on them, the next day as she was getting into labour and he was getting into a crucial match.

Even today matches between Karnataka and Tamilnadu (Mysore and Madras states in those days) are looked forward to eagerly. That match was played on the Central College Grounds (situate between Kempe Gowda Road on the south and Centra Jail on the north. (The jail has since been demolished). The young man's turn to bat arrived quickly as early wickets fell. He started cautiously, exhibiting stout defense against a very capable bowling attack. Once well set, he opened his range of attacking shots and consolidated the innings. By afternoon he was in sight of his century. A beautiful cover drive brought up his 100 and he went on to score 127 runs that day. He made the day memorable by scoring the first century in Ranji Trophy for his state side!

Just as he was scoring his century, his sister-in-law delivered a handsome baby boy. The boy was named as K S Anantha Swamy. The date is memorable. 2nd January 1942.

Capt. K Thimmappaiah was a highly respected and big name in Karnataka cricket. He served in the Army as a Doctor and discharged his duties with great distinction. Later on, he moved into cricket administration and held various positions in the MSCA, which later on became KSCA. He was the President of KSCA for 8 years, from 1990 to 1998. 

***** 

K S Anantha Swamy, popular as "Anti" among his relatives and friends, born on that eventful day, 2nd January, 1042, charted a silent and wonderful life for 82 years and left us last week, on 30th October, 2023. He left a mark on the lives of many who had the fortune to interact with him over the years.

A Civil Engineer by profession he served the HAL with distinction. His early grooming in the construction industry was under one of his uncles who was a civil contractor for sometime. He picked up the key aspects of construction of buildings and managing the workforce and supervisors. He learnt Tamil as most of the workers and supervisors were speaking that language. Just as his knowledge about Kannada culture and literature was strong, he developed an affinity towards Tamil culture, language, films and TV serials. He always had some interesting anecdotes about all these when drawn into long conversations.

His uniting with Mangala in 1977, his companion for 46 years, was a perfect match. Both complemented each other in serving others around them. For all events and functions in the family, extended family and anyone known to them, the couple were available full time, all the time. Arriving before the hosts, taking charge of the function halls and choultry, supervising preparations and operations, receiving and taking leave of guests, ensuring that food and refreshments were served to all without any hitch, and finally disposing the leftover assets and waste, they were a formidable team. 

The "Design Engineer" in him was very evident in what all he did. For him design was not just angles, curves and lines; they were a medium of expression. The way he got made his furniture items, the manner in which he picked decorations, and even the arrangement of items around him showed that artistry. His nephews and nieces were fond of the way he bound their books with wrappings at the beginning of the academic year. They are all done with full heart and soul; not a just a job to be started and finished.

He was an honorary architect for many of his relatives and friends. He handled the projects from drawing board to the sumptuous "Gruhapravesh" lunch. No honorarium or fee. Forget it, he would even spend from his own pocket to visit the sites. He always prioritised convenience and aesthetic beauty while planning but with the cost at the minimum. The beneficiaries of his benevolence will sorely miss him.

A frail looking man with moderate eating habits, he knew all the best restaurants and the delicacies available in them. His next generation buddies in the family visiting from outside Bangalore always had two days earmarked for breakfast and lunch with Anti. It was a must for them and they enjoyed visiting the joints as much as being with him on those visits.

Not just family functions and celebrations. First to arrive when there was a death in the family and friends circle, he was the eternal pallbearer, companion in the burial ground and strong source of strength and well wisher for the bereaved family. No job was small for him. He gave dignity to all and sundry errands and motivated the others in the group to share the burden.

His sense of humour was wonderful. He had great light hearted stories and would use them to soften the atmosphere when required. He could invent humour all of a sudden in a given situation. 

Easily approachable, always pleasant smooth to talk to and ever available for consultation and comforting, never betraying confidence reposed in him, Anti was available to one and all. A legendary walker, his weekly (and many times in between) walks to Lalbagh were a regular feature. Half cup of coffee when near a "Darshini" was his favourite item. 

When you are with him you could find that there would always be some friend to say Hi to him, be it a function, walk on a road, a park or even a restaurant. He had a tremendous memory and could recall many things about people, places and events. Absolutely no confusion.

People speak good about some people. People speak bad about some other people. Anti was a rare exception. He never spoke ill of anyone. And well and truly, no one could speak bad of him. Not a word. Don't even think of a sentence.  

You were of a rare breed, Anti. One of a type. A remarkable man. All light and no sound.  Symbolising giving all one had without taking anything. Defining what service to the society means. You will be missed. Missed a lot.