Tuesday, February 27, 2024

ಕೆರೆಯ ಪದ್ಮರಸನ "ದೀಕ್ಷಾಬೋಧೆ"


ವಿಶಾಲ ಕನ್ನಡ ಸಾಹಿತ್ಯ ಸಮುದ್ರಕ್ಕೆ ವಿಪುಲ ಸಾಹಿತ್ಯ ಜಲರಾಶಿಯನ್ನು ಕಾಣಿಕೆಯಾಗಿ ಕೊಟ್ಟ ಅನೇಕ ಮಹಾನದಿಗಲ್ಲಿ ಮೂರು ಪ್ರಮುಖವಾದ ಧಾರೆಗಳೆಂದರೆ ಜೈನ ಸಾಹಿತ್ಯ, ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ. ಮೂಲತಃ ಧಾರ್ಮಿಕ ಸ್ರೋತಗಳಿಂದ ಹುಟ್ಟಿದ ರಚನೆಗಳಾದರೂ ಇವುಗಳಲ್ಲಿ ಹೇರಳವಾದ ಕಾವ್ಯ ಸಂಪತ್ತು ಇರುವುದನ್ನು ನೋಡಬಹುದು. ಇವುಗಳಲ್ಲಿನ ಗ್ರಂಥಕರ್ತರು ತಮ್ಮ ತಮ್ಮ ಧಾರ್ಮಿಕ ಅಂಶಗಳನ್ನು ಪ್ರಸಾರ ಮಾಡುವುದಕ್ಕಾಗಿ ರಚನೆಗಳನ್ನು ಮಾಡಿದ್ದರೂ, ಅವರೆಲ್ಲ ತಮ್ಮ ಕ್ಷೇತ್ರಗಳಲ್ಲಿಯೂ ಮತ್ತು ಭಾಷಾಪ್ರಯೋಗದಲ್ಲಿಯೂ ಚತುರರು. ಅನೇಕರು ಮೇಲು ದರ್ಜೆಗೆ ಸೇರಿದ ವಿದ್ವಾಂಸರು. ಭಾಷೆ, ವ್ಯಾಕರಣ, ಅಲಂಕಾರ, ಛಂದಸ್ಸುಗಳಲ್ಲಿ ಪಳಗಿದವರು. ತಮ್ಮ ಧರ್ಮ ಪ್ರಸಾರದ ಜೊತೆ ಜೊತೆಯಲ್ಲಿ ಕನ್ನಡ ಭಾಷೆಯ ವಿಸ್ತಾರ ಮತ್ತು ಬೆಳವಣಿಗೆಗೆ ಇಂಬು ಕೊಟ್ಟವರು. ನಮ್ಮ ಭಾಷೆಯ ಮೇಲೆ ಈಗಿನ ಸನ್ನಿವೇಶದಲ್ಲಿ ನಡೆಯುತ್ತಿರುವ ಆಘಾತಕಾರಿ ಬೆಳವಣಿಗೆಗಳಲ್ಲಿ, ಅನೇಕ ಶತಮಾನಗಳು ಕಳೆದರೂ ಮಾಸದ ಅವರ ಕೊಡುಗೆಯನ್ನು ಕನ್ನಡಿಗರು ಅತ್ಯಂತ ಗೌರವದಿಂದ ನೆನೆಯಬೇಕಾದ ಸಮಯವಿದು.

"ಕರಡಿಗೆಯಿಂದ ಬಂದ ಕರಡಿ" ಸಂಚಿಕೆಯಲ್ಲಿ ಗುರುಗಳಿಂದ "ಲಿಂಗದೀಕ್ಷೆ" ಪಡೆದ ಶಿಷ್ಯನು "ಇಷ್ಟಲಿಂಗ" ಪಡೆದು ಕರಡಿಗೆಯಲ್ಲಿ ಧರಿಸುವ ಬಗ್ಗೆ ಸಂಕ್ಷಿಪ್ತ ಚರ್ಚೆ ನೋಡಿದೆವು. ಈ ರೀತಿಯ ದೀಕ್ಷೆ ಕೊಡುವ ವೇಳೆಯಲ್ಲಿ ಗುರುವು ಶಿಷ್ಯನಿಗೆ ಅವನ ಆಧ್ಯಾತ್ಮಿಕ ಉನ್ನತಿಗಾಗಿ ದಾರಿ ದೀವಿಗೆಯಾಗಿ ನೀಡುವ ಉಪದೇಶವೇ "ದೀಕ್ಷಾಬೋಧೆ". ಹೊಯ್ಸಳ ಧೊರೆ ನರಸಿಂಹ ಬಲ್ಲಾಳನ ಮಂತ್ರಿಯಾಗಿದ್ದ ಕೆರೆಯ ಪದ್ಮರಸ ಈ ಸಂಬಂಧವಾಗಿ "ದೀಕ್ಷಾಬೋಧೆ" ಎಂಬ ಗ್ರಂಥವನ್ನು ಸರಳ ರಗಳೆಯಲ್ಲಿ ರಚಿಸಿದ್ದಾನೆ. ಶರಣ ಸಾಹಿತ್ಯದಲ್ಲಿ ಈ ಗ್ರಂಥಕ್ಕೆ ಉನ್ನತ ಸ್ಥಾನವಿದೆ. ಈ ಗ್ರಂಥ ಕರ್ತೃ, ಗ್ರಂಥ ರಚನೆಯ ಸಂದರ್ಭ ಮತ್ತು ಗ್ರಂಥ ವಿಶೇಷ ಇವುಗಳ ಬಗ್ಗೆ ಸ್ವಲ್ಪ ದೃಷ್ಟಿ ಹಾಯಿಸೋಣ. 

***** 

ಹನ್ನೆರಡನೇ ಶತಮಾನದ ಕೊನೆಯ ಸಮಯದಲ್ಲಿ (ಸುಮಾರು 1190 AD) ನಡೆದ "ಕಲ್ಯಾಣ ಕ್ರಾಂತಿ"  ಸಂದರ್ಭದಲ್ಲಿ ಭಕ್ತಿ ಭಂಡಾರಿ ಬಸವಣ್ಣ ಅವರ ಪ್ರಭಾವಕ್ಕೆ ಒಳಗಾಗಿ ಅನೇಕರು ಅವರ ಅನುಯಾಯಿಗಳಾದರು. ಇಂತಹವರಲ್ಲಿ ಸಮಾಜದ ಎಲ್ಲ ಸ್ತರಗಳ ಜನ ಸಮುದಾಯಕ್ಕೆ ಸೇರಿದವರೂ ಇದ್ದರು. ಜನ ಸಾಮಾನ್ಯರಿಂದ ಹಿಡಿದು ಪಂಡಿತರು ಮತ್ತು ಆಳುವ ವರ್ಗದ ಅಧಿಕಾರಿಗಳೂ, ಅರಸರೂ ಸೇರಿದ್ದರು. ಇಂತಹವರಲ್ಲಿ ಬಸವಣ್ಣನವರಿಗಿಂತ ವಯಸ್ಸಿನಲ್ಲಿ ಹಿರಿಯರಾದ ಶಿವಯೋಗಿ ಮಲ್ಲರಸ ಸಹ ಒಬ್ಬರು. ಇವರನ್ನು ಕೆಲವೆಡೆ ಶಿವಯೋಗಿ ಮಲ್ಲಿಕಾರ್ಜುನ ಎಂದೂ ಕರೆದಿದ್ದಾರೆ. ಕಲ್ಕುರ್ಕಿ ಎನ್ನುವ ಸಂಸ್ಥಾನದ ಅರಸು ಮನೆತನಕ್ಕೆ ಸೇರಿದವರು ಶಿವಯೋಗಿ ಮಲ್ಲರಸರು. ಇವರ ಮಗನೇ ವಚನಕಾರರಾದ ಸಕಳೇಶ ಮಾದರಸ. ಸಕಳೇಶ ಮಾದರಸರು ಬಸವಣ್ಣನವರಿಗಿಂತ ವಯಸ್ಸಿನಲ್ಲಿ ಸ್ವಲ್ಪ ಹಿರಿಯರು. ರಾಜ್ಯಆಡಳಿತದ ನಡುವೆ ಶಿವನಿಗೆ ಆರಾಧನೆಯ ಜೊತೆಗೆ ಸಂಗೀತ ಸೇವೆ ಅರ್ಪಿಸುವ ಕಾಯಕ ನಡೆಸುತ್ತಿದ್ದರು. ವೀಣೆ ಮೊದಲಾದ ತಂತಿ ವಾದ್ಯಗಳ ನುಡಿಸುವಿಕೆಯಲ್ಲಿ ಕುಶಲಿಗಳು. ಅನುಭವ ಮಂಟಪದ ಹಿರಿಯ ಸದಸ್ಯರಾದ ಇವರ 133 ವಚನಗಳು ಸಿಕ್ಕಿವೆ. ಸಕಳೇಶ್ವರ ಅಥವಾ ಸಕಳೇಶ್ವರ ದೇವಾ ಎನ್ನುವುದು ಅವರ ವಚನಗಳ ಅಂಕಿತ ಪದ. ಅವರ ಒಂದು ವಚನ ಹೀಗಿದೆ: 

ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ ಬಳಿಕ 
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಆಲಸ್ಯವಿಲ್ಲದೆ 
ಭಯಭಕ್ತಿಯಿಂದ ಮಾಡೋದು ಭಕ್ತರಿಗೆ ಲಕ್ಷಣ. 
ಇಂತಲ್ಲದೆ ಲಿಂಗಾರ್ಚನೆಯ ಬಿಟ್ಟು, ಕಾಯದಿಚ್ಛೆಗೆ ಹರಿದು 
ಅದ್ವೈತದಿಂದ ಉದರವ ಹೊರೆದೊಡೆ 
ಭವಭವದಲ್ಲಿ ನರಕ ತಪ್ಪದಯ್ಯಾ, ಸಕಳೇಶ್ವರಾ 

ಮೇಲಿನ ವಚನದಲ್ಲಿ "ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ" ಎನ್ನುವುದು ಗುರುವಿನಿಂದ ಪಡೆಯುವ "ಲಿಂಗ ದೀಕ್ಷೆ"ಯನ್ನು ಸೂಚಿಸುತ್ತದೆ. ಕಾಲಕ್ರಮದಲ್ಲಿ ಸಕಳೇಶ ಮಾದರಸರು ಕಲ್ಯಾಣವನ್ನು ಬಿಟ್ಟು ದಕ್ಷಿಣಕ್ಕೆ ಬಂದರು. ನಂತರ ಎಲ್ಲ ಐಹಿಕ ಹೊಣೆಯನ್ನೂ ತಮ್ಮ ಮಗನಾದ ಮಾಯಿದೇವರಸನಿಗೆ ವಹಿಸಿ ಲಿಂಗೈಕ್ಯರಾದರು. ಮಾಯಿದೇವರಸನ ಪತ್ನಿಯ ಹೆಸರು ಮಂಗಳಾದೇವಿ. ಈ ಮಾಯಿದೇವರಸ-ಮಂಗಳಾದೇವಿ ದಂಪತಿಗಳ ಮಗನೇ ಪದ್ಮರಸ. ಪದ್ಮರಸನು ಪ್ರಾಯಕ್ಕೆ ಬರುವ ವೇಳೆಗೆ ಕಲ್ಯಾಣದ ಕ್ರಾಂತಿಯಾಗಿ ಸುಮಾರು ಅರವತ್ತು ವರುಷಗಳು. 

ಪದ್ಮರಸನು ತನ್ನ ವಂಶದ ಹಿರಿಯರಂತೆ ಘನ ಪಂಡಿತನು. ಪದ್ಮರಸನ ಸೋದರಮಾವ ಗೌರಪದ ನಾಯಕ ದೋರಸಮುದ್ರದ ಹೊಯ್ಸಳ ವಂಶದ ಅರಸು ನರಸಿಂಹ ಬಲ್ಲಾಳನ ಮಂತ್ರಿಯಾಗಿದ್ದನು. ತನ್ನ ಮಗಳು ಮಹಾದೇವಿಯನ್ನು ಪದ್ಮರಸನಿಗೆ ಕೊಟ್ಟು ವಿವಾಹ ಮಾಡಿ ದೋರಸಮುದ್ರದಲ್ಲಿಯೇ ಇರಿಸಿಕೊಂಡನು. ಪದ್ಮರಸನ ಪಾಂಡಿತ್ಯ ಮತ್ತು ಆಡಳಿತ ಚತುರತೆಯನ್ನು ಮೆಚ್ಚಿದ ನರಸಿಂಹ ಬಲ್ಲಾಳ ಗೌರಪದನಾಯಕನ ಮರಣಾನಂತರ ಪದ್ಮರಸನನ್ನು ಮಂತ್ರಿಯಾಗಿ ನೇಮಿಸಿದನು. ವೇಲಾಪುರಿಯ ಬಳಿ (ಈಗಿನ ಬೇಲೂರು) "ಬಿಟ್ಟಿ ಸಮುದ್ರ" ಎಂಬ ವಿಶಾಲ ಕೆರೆಯನ್ನು ಕಟ್ಟಿಸಿದ ಕಾರಣ ಪದ್ಮರಸನಿಗೆ "ಕೆರೆಯ ಪದ್ಮರಸ" ಎಂದು ಹೆಸರು ಬಂದು ಪ್ರಖ್ಯಾತನಾದನು. 

*****

ಪ್ರತಿ ಪಂಥದವರೂ ತಮ್ಮ ತಮ್ಮ ಮತ ಪ್ರಚಾರಕ್ಕಾಗಿ ದೇಶ ಸಂಚಾರ ಮಾಡಿ, ಪರ ಮತದವರನ್ನು ವಾದಕ್ಕೆ ಕರೆದು, ಅವರನ್ನು ಸೋಲಿಸಿ ತಮ್ಮ ಮತವನ್ನು ಸ್ಥಾಪಿಸುವ ಪದ್ಧತಿ ನಮ್ಮ ದೇಶದಲ್ಲಿ ಅನೇಕ ಶತಮಾನಗಳಿಂದ ಬಂದಿದೆ. ಇಂತಹ ವಾದದಲ್ಲಿ ಸೋತವರು ತಮ್ಮ ಎಲ್ಲ ಬಿರುದು-ಬಾವಲಿಗಳನ್ನು ಗೆದ್ದವರಿಗೆ ಒಪ್ಪಿಸಿ ಅವರ ಶಿಷ್ಯರಾಗಿ ಗೆದ್ದವರ ಮತವನ್ನು ಸ್ವೀಕರಿಸುವುದೂ ನಡೆದು ಬಂದಿದೆ. "ತ್ರಿಭುವನ ತಾತ" ಎಂದು ಪ್ರಸಿದ್ಧನಾದ ಆಂಧ್ರದ ವೈಷ್ಣವ ವಿದ್ವಾಂಸನು ದೋರಸಮುದ್ರಕ್ಕೆ ಬಂದು ಅಲ್ಲಿನ ಪಂಡಿತರನ್ನು ವಾದಕ್ಕೆ ಕರೆದನು. ಹಿರಿಯನಾಗಿದ್ದ ಪದ್ಮರಸನು ತನ್ನ ಮಗನಾದ ಕುಮಾರ ಪದ್ಮರಸನನ್ನು ತ್ರಿಭುವನ ತಾತನ ಎದುರು ವಾದಕ್ಕೆ ನಿಲ್ಲಿಸಿದನು. ಕುಮಾರ ಪದ್ಮರಸನು ವಾದದಲ್ಲಿ ತ್ರಿಭುವನ ತಾತನನ್ನು ಸೋಲಿಸಿ ಜಯಶಾಲಿಯಾದನು. ಒಪ್ಪಂದದಂತೆ ತ್ರಿಭುವನ ತಾತನು ಕೆರೆಯ ಪದ್ಮರಸನ ಶಿಷ್ಯನಾಗಿ ಲಿಂಗದೀಕ್ಷೆ ಪಡೆದನು. 

ತ್ರಿಭುವನ ತಾತನು ದೀಕ್ಷೆ ಪಡೆಯುವ ವೇಳೆಯಲ್ಲಿ ಪದ್ಮರಸನು ವಿವರಿಸಿದ ತತ್ವ-ರಹಸ್ಯಗಳನ್ನು ವಿವರವಾಗಿ ಎಲ್ಲರಿಗೂ ತಿಳಿಯುವಂತೆ ವ್ಯವಸ್ಥೆ ಮಾಡಬೇಕೆಂದು ತನ್ನ ಗುರುವನ್ನು ಕೇಳಿಕೊಂಡನು. ಪದ್ಮರಸನು ಈ ವಿವರಗಳನ್ನೇ ರಗಳೆಯ ರೂಪದಲ್ಲಿ ವಿವರಿಸಿ "ದೀಕ್ಷಾಬೋಧೆ" ಎನ್ನುವ ಗ್ರಂಥವನ್ನು ರಚಿಸಿದನು. ಅದು ಕನ್ನಡದ ಹೆಮ್ಮೆಯ ಕವಿಗಳಾದ ಹರಿಹರ ಮತ್ತು ಅವನ ಸೋದರಳಿಯನಾದ ರಾಘವಾಂಕ ಅವರ ಕೃತಿಗಳು ರಚಿತವಾಗಿ ಪ್ರಚಲಿತವಾಗಿದ್ದ ಕಾಲ.  ಹರಿಹರನಾದರೋ ರಗಳೆಯ ಕವಿ ಎಂದೇ ಪ್ರಖ್ಯಾತನಾದವನು. ಪದ್ಮರಸನು ತನ್ನ ಕೃತಿಗೆ ರಗಳೆಯನ್ನು ಆರಿಸಿಕೊಂಡದ್ದು ಈ ಕಾಲಘಟ್ಟದಲ್ಲಿ ಸಮಂಜಸವೇ ಆಗಿದೆ. (ಕೆಲವರು "ಏನೋ ನಿನ್ನ ರಗಳೆ!" ಎಂದು ಹೇಳುವ ಪ್ರಯೋಗ ಇದರಿಂದಲೇ ಬಂದಿದೆ). 

*****

ದೀಕ್ಷಾಬೋಧೆಯ ವಿಷಯ ಲಿಂಗದೀಕ್ಷೆ ಕೊಡುವ ಕಾಲದಲ್ಲಿ ಗುರುವು ಶಿಷ್ಯನಿಗೆ ನೀಡುವ ಬೋಧನೆಯ ವಿವರಗಳೇ. ಜೀವನು ಮೂಲತಃ ಶಿವ ಸ್ವರೂಪಿಯೇ. ಆದರೆ, ಆಣವ ಮಲ, ಕಾರ್ಮಿಕ ಮಲ ಮತ್ತು ಮಾಯಾ ಮಲ ಎಂಬ (ಮೂರು ಕೊಳೆಗಳೆಂಬ) ಕಶ್ಮಲಗಳಿಂದ ಸಂಕುಚಿತಗೊಳ್ಳುತ್ತಾನೆ. ಶಿವನ ಸರ್ವ ಪರಿಪೂರ್ಣತ್ವ, ಸರ್ವಜ್ಞತ್ವ, ಮತ್ತು ಸರ್ವ ಕರ್ತೃತ್ವ ಎನ್ನುವ ಗುಣಗಳನ್ನು ಮರೆತವನಾಗಿ ಸಂಸಾರದಲ್ಲಿ ಸಿಲುಕುತ್ತಾನೆ. ಗುರುವಿನಿಂದ ದೀಕ್ಷೆ ಪಡೆದು ಮಲತ್ರಯ ನಿವೃತ್ತಿಯಾಗಿ (ಮೇಲೆ ಹೇಳಿದ ಮೂರು ಕೊಳೆಗಳನ್ನು ತೊಳೆದು ಶುದ್ಧನಾಗಿ) ಮೇಧಾ-ಮಂತ್ರ-ಕ್ರಿಯಾ ದೀಕ್ಷೆ ಪಡೆದು,ತನುತ್ರಯದಲ್ಲಿ ಲಿಂಗತ್ರಯಗಳ ಸಂಬಂಧ ಅರಿಯುತ್ತಾನೆ. 

ದೀಕ್ಷಾಬೋಧೆ ಗ್ರಂಥವು ದೀಕ್ಷೆಯ ಪೂರ್ವದಲ್ಲಿ ತಿಳಿಸುವ ಸದಾಚಾರ ವಿವರಣೆ, ದೀಕ್ಷೆಯ ಸಮಯದಲ್ಲಿ ಮಾಡುವ ಉಪದೇಶ (ಬೋಧನೆ), ಮತ್ತು ದೀಕ್ಷೆಯ ನಂತರದ ಅರ್ಪಿತ ಪ್ರಸಾದಾದಿಗಳನ್ನು ಕುರಿತ ವಿವರಣೆ ಎಂಬ ಮೂರು ಭಾಗಗಳಲ್ಲಿದೆ ಎಂದು ಹೇಳಬಹುದು. ಆಸಕ್ತರು ಹೆಚ್ಚಿನ ವಿವರಗಳಿಗೆ ಮೈಸೂರು ವಿಶ್ವವಿದ್ಯಾನಿಲಯ ಸಂಪಾದಿಸಿ ಪ್ರಕಟಿಸಿರುವ ಪುಸ್ತಕವನ್ನು ನೋಡಬಹುದು. 

*****

ಭಾರತೀಯ ಜ್ಞಾನಪೀಠ ಸ್ಥಾಪಿಸಿದ "ಮೂರ್ತಿದೇವಿ ಪ್ರಶಸ್ತಿ" ಮೊದಲ ವರ್ಷದಲ್ಲೇ ಕನ್ನಡಕ್ಕೆ ತಂದುಕೊಟ್ಟ ಖ್ಯಾತಿ ಕನ್ನಡದ ಹೆಸರಾಂತ ಲೇಖಕ ಸಿ. ಕೆ. ನಾಗರಾಜ ರಾವ್ ಅವರದು. ಅವರ "ಪಟ್ಟಮಹಾದೇವಿ ಶಾಂತಲದೇವಿ" ಎರಡು ಸಾವಿರ ಪುಟಗಳಿಗೂ ಮೀರಿದ ಬೃಹತ್ ಕಾದಂಬರಿ. "ವೀರಗಂಗ ವಿಷ್ಣುವರ್ಧನ" ಮತ್ತು "ದಾಯಾದ ದಾವಾನಳ?" ಈ ಕೃತಿಯ ಮುಂದುವರೆದ ಭಾಗಗಳು. ಹೊಯ್ಸಳರ ಕಾಲದ ಇತಿಹಾಸವನ್ನು ಕಾದಂಬರಿಯ ರೂಪದಲ್ಲಿ ಈ ಕೃತಿಗಳಲ್ಲಿ ಓದಬಹುದು. ಕೆರೆಯ ಪದ್ಮರಸನ ಪ್ರಸ್ತಾಪ ಈ ಕಾದಂಬರಿಗಳಲ್ಲಿ ಅಲ್ಲಲ್ಲಿ ಬರುತ್ತದೆ. 

ಪಂಡಿತ ಕೆ. ಪಿ. ಶಿವಲಿಂಗಯ್ಯ ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದ ಪಂಡಿತರು. ಶರಣ ಸಾಹಿತ್ಯದಲ್ಲಿ ವಿಶೇಷ ಪರಿಶ್ರಮ ಹೊಂದಿದವರು. ಸುಮಾರು ನಲವತ್ತು ವರುಷಗಳ ಹಿಂದೆ ಮೇಲೆ ಹೇಳಿದ ಕಾದಂಬರಿಗಳ ಕುರಿತಾದ ಸಾಹಿತ್ಯ ಗೋಷ್ಠಿಯೊಂದರಲ್ಲಿ "ಕೆರೆಯ ಪದ್ಮರಸನ ದೀಕ್ಷಾಬೋಧೆ"ಎನ್ನುವ ವಿದ್ವತ್ಪೂರ್ಣ ಉಪನ್ಯಾಸ ಮಾಡಿದ್ದರು. ಅದನ್ನು ಕೇಳುವ ಸುಯೋಗ ನನಗೆ ಸಿಕ್ಕಿತ್ತು. ನಲವತ್ತು ವರುಷಗಳು ಕಳೆದಿದ್ದರೂ ಅವರು ನೀಡಿದ ಉಪನ್ಯಾಸ ಈಗಲೂ ನೆನೆಯುವಂತಹುದು. ಈ ಸಂದರ್ಭದಲ್ಲಿ ಅವರನ್ನು ಅತ್ಯಂತ ಕೃತಜ್ಞತೆಯಿಂದ ನೆನೆಯುತ್ತೇನೆ

Monday, February 26, 2024

Ancient View On Types Of Plants


Our present education system leans heavily on the western resources and delivery methods. In many fields, the contents of various subjects start with the foundations of imported thoughts and research. Our own oriental knowledge takes a back seat or even totally disappears in the teaching and learning pictures. While discussing Mahakavi Kalidasa in our classrooms, professors often state that Kalidasa is a great poet and he can be called as "Shakespeare of India", despite the fact that Kalidasa lived and created his works over a thousand years before Shakespeare. One cannot even imagine a professor in England referring to Shakespeare as "Kalidasa of England".

There is a vast treasure of knowledge in our ancient texts and literature on any field of learning. Unfortunately, most of our valuable texts were lost during the invasion of parts of our country by foreign forces. It is said that the library in some of our ancient universities were torched by the invaders and burnt for days together, reducing their resources to ashes. Large valuable literature was lost when the people having them were forced to flee their places due to fear of losing lives. The abolition of Gurukul System and introduction of Macaulay System of education led to the belief that all learning should start with what is given to us by the west. 

In spite of the loss of very valuable resources for the above reasons, whatever is left with us today is itself sufficient to indicate the extent of knowledge available in them. 

***** 

Let us take the example about classification of plants to compare what we have learnt in our education system and knowledge available in our ancient literature.

We learnt in our Science or Botany classes about different types of plants. We were taught that the plant kingdom can be classified into five basic types: Herbs, Shrubs, Trees, Climbers and Creepers.
  • Herbs are short-sized plants. Their stems are soft, delicate and can be easily bent. They have a short life cycle and usually live for one or two years. They have few branches or do not have branches. 
  • Shrubs are medium-sized plants. They grow taller than herbs but shorter than trees. They have hard and woody stems with branches. The stems can be bent easily and have relatively longer life span than herbs. 
  • Trees are longest living plant types and grow tall with many branches, with some exceptions like coconut and palm trees which have no branches. They have strong trunks and provide valuable wood for many uses like making furniture and used in building constructions.
  • Climbers have thin, long and weak stems which cannot stand upright on their own. But they can grow vertically with external support and bear their own weight.
  • Creepers are plants that stay on the ground, spread out and grow. They have thin, long and very fragile stems and cannot bear their own weight.

*****

Discussion about plants can be seen in many ancient texts. Texts on Ayurveda deal extensively with the plant kingdom, various types of plants and their uses as medicine. 

A clear classification of plant types can be seen in "Shat Pashnopanishad", popularly referred as Pashnopanishad. Six scholars from different parts of the country have amassed knowledge during their own studies, but have some unanswered questions. They embark on a journey to find a Guru who can satisfactorily answer their questions. They all get one answer as the person who can answer their questions. They are told by various sources that Bhagwan Pippalada is the right person to answer their questions. They converge and approach Bhagwan Pippalada for advising them on their questions. Interestingly the grouping of questions relate to evolution and formation of the Universe, creation of non-living items around us, creation of plant and animals, and working of the human body in connection with both material world or physical functions as well as spiritual advancement. 

While explaining the evolution of the Plant World, Bhagwan Pippalada has classified the plant world into these six types: Oshadi, Vanaspati, Lataa, Druma, Virudha, Twaksara. Their features are exhaustively explained and can be summarised as under:
  • Oshadi (ओषधिः): These are plants that die after delivering their next generation. Examples are Paddy, Ragi, Wheat, Banana etc. The interesting thing about this classification is that the life of plant ends with the birth of next generation!
  • Vanaspati (वनस्पति): These are plants and trees that give out fruits without flowering. Usually flowering precedes fruit bearing. But in the case of Vanaspati, the plants give fruits directly without flowering. Example is Pippala or Bodhi or Peepul tree or Sacred Fig (Aswatha).
  • Lataa (लता): These are creepers and is the same as creepers referred above. They cannot stand erect on their own but can grow upwards with support of others like trees, pillars etc. 
  • Druma (द्रुम): These are plants or trees that first flower and then give fruits. There are many such trees with best examples being Mango, Jackfruit etc. Most of the fruit yeilding trees are in this category.
  • Virudha (विरुधः): This is same as Shrubs mentioned above. They grow up to three or four feet, have many branches with soft stems and can be easily bent.
  • Twaksaara (त्वक् सार): These are plants which have their strength only in the outer shell, but do not have anything inside them. Best example is the Bamboo family. Twak means skin. Saara means essence. Inside portion is hallow and the strength of the plant is in its outer shell or skin. 
Twaksaara and Vanaspati mentioned above are interesting classifications and match with reality around us. Though most of the fruit bearing trees first flower and then give fruits, there are a very few exceptions and they are grouped here. The classification of herbs, shrubs , creepers, climbers and trees are all included in the above six groups.

A detailed study of Pashnopanishad further makes subtle difference between plants, animals and man. In case of plants, consumed food moves upwards where as in the case of man it moves downwards. It also specifies that plants also have feelings and respond well to favourable atmosphere. The order of creation also is detailed here. 

There are many more interesting explanation here about creation of the external universe as well as internal systems of human beings, and other processes like consumption and digestion of food, growth process from mothers womb onwards, sleep and dreams, thinking process etc.

****
A detailed and systematic study is required about the various branches of knowledge in our Vedic literature and modren scientific findings. 

Saturday, February 17, 2024

ಒಬ್ಬರ ಹಿಂದೆ ಮತ್ತೊಬ್ಬರು!


ಕಡು ಬಡವನೊಬ್ಬ ಕಾಶಿಯಾತ್ರೆ ಮಾಡಬೇಕೆಂದು ಆಸೆ ಪಟ್ಟ. ಅವನಿದ್ದ ಸ್ಥಳಕ್ಕೆ ಕಾಶಿ ಬಹಳ ದೂರದ ಪಟ್ಟಣ. ಅವನ ಬಳಿ ಹಣವಿಲ್ಲ. ಇದ್ದುದು ಕೇವಲ ಎರಡೇ ಎರಡು ಆಸ್ತಿ. ಎರಡು ಹಳೆಯ ಪಂಚೆಗಳು ಮತ್ತು ಒಂದು ಹಳೆಯ ತಾಮ್ರದ ತಂಬಿಗೆ. ಈ ಆಸ್ತಿಯ ಜೊತೆಗೆ ಇದ್ದುದು ಕಾಶಿ ವಿಶ್ವನಾಥನ ದರ್ಶನ ಮಾಡಬೇಕೆಂಬ ಉತ್ಕಟ ಇಚ್ಛೆ. ಸರಿ, ಕಾಶಿಗೆ ಹೋಗುವ ಸಾಧುಗಳ ಗುಂಪೊಂದು ಅವನ ಊರಿಗೆ ಬಂದಾಗ ಅವರ ಜೊತೆ ಸೇರಿಕೊಂಡ. ಹಾಗೂ ಹೀಗೂ ಕಾಶಿ ತಲುಪಿದ. 

ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು ಅವನು. ಕಾಶಿಯಂತಹ ದೊಡ್ಡ ಪಟ್ಟಣವನ್ನು ಹಿಂದೆಂದೂ ನೋಡಿರಲಿಲ್ಲ. ಕಾಶಿ ತಲುಪಿ ಗಂಗಾ ನದಿಯನ್ನು ನೋಡಿದಾಗ ಬಹಳ ಸಂತೋಷ ಆಯಿತು. ಕಾಶಿ ಸೇರಿದಾಗ ಸೂರ್ಯಾಸ್ತದ ಸಮಯ. ಸಾಧುಗಳ ಜೊತೆ ಗಂಗಾ ತೀರದಲ್ಲಿ ಕುಳಿತಿದ್ದ. ಯಾರೋ ಕೆಲವರು ಬುಟ್ಟಿಯಲ್ಲಿ ರೊಟ್ಟಿಗಳನ್ನೂ ಪಲ್ಯವನ್ನೂ ತಂದು ಅಲ್ಲಿದ್ದ ಎಲ್ಲ ಸಾಧುಗಳಿಗೂ ಕೊಟ್ಟರು. ಇವನಿಗೂ ಸಿಕ್ಕಿತು. ರೊಟ್ಟಿ, ಪಲ್ಯ ತಿಂದು ಹೊಟ್ಟೆ ತುಂಬಾ ಗಂಗೆಯ ನೀರು ಕುಡಿದ. ಯಾವುದೋ ಧರ್ಮಶಾಲೆಯ ಜಗುಲಿಯ ಮೇಲೆ ಸ್ವಲ್ಪ ಜಾಗ ಸಿಕ್ಕಿತು. ಒಂದು ಪಂಚೆ ಉಟ್ಟಿದ್ದ. ಇನ್ನೊಂದನ್ನು ಹೊಡೆದ. ತಂಬಿಗೆಯನ್ನೇ ತಲೆದಿಂಬು ಮಾಡಿ ಮಲಗಿದ. ಪ್ರಯಾಣದ ಆಯಾಸದಿಂದ ಸೊಗಸಾದ ನಿದ್ರೆ ಬಂದಿತು. 

ಬೆಳಗ್ಗೆ ಇನ್ನೂ ನಿದ್ರೆಯಲ್ಲಿ ಇದ್ದಾಗ ಸುತ್ತ ತುಂಬಾ ಶಬ್ದ ಕೇಳಿಸಿತು. ಎಲ್ಲರೂ ಗುಸುಗುಟ್ಟುತ್ತಿದ್ದರು. ಕೆಲವರು ಅಳುತ್ತಿದ್ದರು. ಮತ್ತೆ ಕೆಲವರು ಅಳುತ್ತಿದ್ದವರಿಗೆ ಸಮಾಧಾನ ಮಾಡುತ್ತಿದ್ದರು. ವಿಷಯ ಏನೆಂದು ಅವನಿಗೆ ಸ್ವಲ್ಪ ಸಮಯದ ನಂತರ ತಿಳಿಯಿತು. ಎಲ್ಲರೂ ಮಲಗಿದ್ದಾಗ ಮಧ್ಯ ರಾತ್ರಿ ಕಳ್ಳರು ಕೈಗೆ ಸಿಕ್ಕಿದ ಪದಾರ್ಥಗಳನ್ನು ಕದ್ದು ಒಯ್ದಿದ್ದರು. ಕೆಲವರ ಹಣವೆಲ್ಲ ಹೋಗಿತ್ತು. ಕೆಲವರ ಬಟ್ಟೆಬರೆ ನಾಪತ್ತೆ. ಮತ್ತೆ ಕೆಲವರ ಆಭರಣದ ಗಂಟು ಕಾಣಿಸದು. ಏನೂ ಕಳೆಯದೆ ಇದ್ದಿದು ಇವನೊಬ್ಬನೇ. ಅಷ್ಟರಮಟ್ಟಿಗೆ ಅವನು ಬಡವನಾಗಿದ್ದುದೇ ಒಳ್ಳೆಯದಾಯಿತು ಅಂದುಕೊಂಡ. 

*****

ಸೂರ್ಯೋದಯವಾಯಿತು. ಎಲ್ಲರ ಜೊತೆ ಗಂಗಾಸ್ನಾನಕ್ಕೆ ಹೋರಟ. ಸ್ನಾನವಾಯಿತು. ಒಗೆದ ಪಂಚೆಯನ್ನು ಮರಳಿನ ಮೇಲೆ ಒಣಗಿಸಿಕೊಂಡ. ಅದನ್ನು ಉಟ್ಟು ಇನ್ನೊಂದನ್ನು ಒಗೆದ. ಈಗ ಅವನ ಉಳಿದ ಆಸ್ತಿ ಒದ್ದೆ ಪಂಚೆಯೊಂದು ಮತ್ತು ತಾಮ್ರದ ತಂಬಿಗೆಯೊಂದು. ತಂಬಿಗೆ ಜಜ್ಜಿ ಹೋಗಿದ್ದರೂ ಅದನ್ನೂ ಯಾರಾದರೂ ಕದ್ದಾರು ಎನ್ನುವ ಭಯ. ಏನು ಮಾಡುವುದು? ಯೋಚಿಸಿದ. ಒಂದು ಉಪಾಯ ಹೊಳೆಯಿತು. ಒದ್ದೆ ಪಂಚೆಯನ್ನು ಹೊದ್ದ. ಮರಳಿನಲ್ಲಿ ಒಂದು ಹೊಂಡ ಮಾಡಿದ. ತಂಬಿಗೆಯನ್ನು ಅದರಲ್ಲಿ ಹೂತ. ವಿಶ್ವನಾಥನ ದರ್ಶನ ಮಾಡಿ ಮರಳಿ ಬಂದು ಒಯ್ಯುವುದು ಎಂದು ತೀರ್ಮಾನಿಸಿದ. ಈಗ ಅದನ್ನು ಯಾರೂ ಕದಿಯಲಾರರು!  ತನ್ನ ಉಪಾಯಕ್ಕೆ ತಾನೇ ನಕ್ಕ. ಎರಡು ಹೆಜ್ಜೆ ದೇವಾಲಯದ ಕಡೆ ಇಟ್ಟ. 

ಅನುಮಾನ ಬಂತು. ಹಿಂದೆ ಬಂದಮೇಲೆ ಈ ವಿಶಾಲ ಮರಳಿನ ರಾಶಿಯಲ್ಲಿ ತನ್ನ ತಂಬಿಗೆ ಹೂತಿರುವ ಜಾಗ ಹುಡುಕುವುದು ಹೇಗೆ? ಹಿಂದೆ ಬಂದು ಆ ಸ್ಥಳದಲ್ಲಿ ಒಂದು ಸಣ್ಣ ಮರಳಿನ ಗುಡ್ಡೆ ಮಾಡಿದ. ಈಗ ಹುಡುಕುವುದು ಸುಲಭ ಎಂದುಕೊಂಡ. ಸ್ವಲ್ಪ ದೂರ ಹೋಗಿ ಹಿಂದೆ ನೋಡಿದ. ಮರಳ ಗುಡ್ಡೆ ಕಾಣಿಸಿತು. ತನ್ನ ಜಾಣ್ಮೆಗೆ ತಾನೇ ಮೆಚ್ಚಿಕೊಂಡ. ಸಂತೋಷ ಚಿತ್ತನಾಗಿ ವಿಶ್ವನಾಥನ ದರ್ಶನಕ್ಕಾಗಿ ಹೋರಟ.  

ದೇವಾಲಯದ ಜನಜಂಗುಳಿಯಲ್ಲಿ ಬಾಕಿ ಎಲ್ಲ ವಿಷಯ ಮರೆತು ಹೋಯಿತು. ವಿಶ್ವನಾಥನ ದಿವ್ಯ ದರ್ಶನವಾಯಿತು. ದೇವಾಲಯದ ಹೊರಗೆ ಬಂದು ಸ್ವಲ್ಪ ದೂರ ನಡೆದು ಯಾರದೋ ಮನೆಯ ಹೊರಗೆ ಕಟ್ಟೆಯ ಮೇಲೆ ಕುಳಿತ. ಯಾರೋ ನಾಲ್ಕು ಮಂದಿ ಬಂದು ರೊಟ್ಟಿ ಪಲ್ಯ ಕೊಟ್ಟರು. ಹೊಟ್ಟೆ ತುಂಬಿ ಆಯಾಸಕ್ಕೆ ಜೋಂಪು ಹತ್ತಿತು. ಕುಳಿತಲ್ಲೇ ನಿದ್ರಿಸಿದ. ಎಚ್ಚರರವಾದಾಗ ಸುಮಾರು ಸಂಜೆ ನಾಲ್ಕು ಗಂಟೆ. ತಂಬಿಗೆ ನೆನಪಾಯಿತು. ಧಡಧಡನೆ ಗಂಗಾ ನದಿಯ ಕಡೆ ಹೆಜ್ಜೆ ಹಾಕಿದ. 

*****

ತಾನು ತಂಬಿಗೆ ಹೂತಿಟ್ಟ ಘಟ್ಟಕ್ಕೆ ಬಂದು ನೋಡಿದ. ಕಂಡ ದೃಶ್ಯ ಅವನ ತಲೆ ತಿರುಗಿಸಿತು. ಅವನ ಕಣ್ಣು ಅವನೇ ನಂಬಲಾರ. ಇದೇನಿದು? ನದಿಯ ಪಕ್ಕ ಮರಳಿನ ಮೇಲೆ ಎಲ್ಲಿ ನೋಡಿದರಲ್ಲಿ ಮರಳಿನ ಲಿಂಗಗಳು. ನೂರಾರು, ಸಾವಿರಾರು ಲಿಂಗಗಳು. ಅನೇಕ ಆಕೃತಿಯ ಚಿಕ್ಕ, ದೊಡ್ಡ ಲಿಂಗಗಳು! ಅನೇಕ ಲಿಂಗಗಳ ಮೇಲೆ ಹೂವು ಪತ್ರೆಗಳು! ನದಿಯಲ್ಲಿ ಸ್ನಾನ ಮಾಡಿ ಮೇಲೆ ಬಂದವರೆಲ್ಲ ಮರಳಿನಲ್ಲಿ ಒಂದು ಲಿಂಗ ಮಾಡಿ, ಅದನ್ನು ಪೂಜಿಸಿ, ನಂತರ ದೇವಾಲಯಕ್ಕೆ ಹೋಗುತ್ತಿದ್ದಾರೆ. 

ಓಡಿ ಹೋಗಿ ತಾನು ತಂಬಿಗೆ ಹೂತಿಟ್ಟ ಜಾಗ ತಲುಪಿ ಅಲ್ಲಿದ್ದ ಲಿಂಗ ಬಗೆದು ಹುಡುಕಿದ. ತಂಬಿಗೆ ಇಲ್ಲ. ಪಕ್ಕದ ಲಿಂಗ ಬಗೆದ. ಅಲ್ಲೂ ತಂಬಿಗೆ ಇಲ್ಲ. ನಂತರ ಇನ್ನೊಂದು. ಆಮೇಲೆ ಮತ್ತೊಂದು. ಬಗೆಯುತ್ತಲೇ ಹೋದ. ಎಲ್ಲೂ ತಂಬಿಗೆ ಕಾಣಿಸಲೇ ಇಲ್ಲ. ಇವನು ಲಿಂಗಗಳನ್ನು ಬಗೆಯುತ್ತಿರುವುದನ್ನು ನೋಡಿದ ಕೆಲವು ಯಾತ್ರಿಕರು ಇವನಿಗೆ ಹೊಡೆಯಲು ಬಂದರು. ಅವರಿಂದ ತಪ್ಪಿಸಿಕೊಂಡು ಓಡಿದ. ಕಡೆಗೆ ಸುಸ್ತಾಗಿ ಒಂದು ಕಡೆ ಮರಳಿನ ಮೇಲೆ ಕುಳಿತ. 

ಆಮೇಲೆ ಅವನಿಗೆ ನಗು ಬಂತು. ಒಂದು ಕಡೆ ತಂಬಿಗೆ ಹೋದ ವ್ಯಥೆ. ಮತ್ತೊಂದು ಕಡೆ ಜನರು ಮಾಡುತ್ತಿರುವ ರೀತಿ ನೋಡಿ ವಿಸ್ಯಯ. ಇವನ ಮರಳಿನ ಗುಡ್ಡೆ ಕಂಡು ಯಾರೋ ಒಬ್ಬರು ತಾವೂ ಒಂದು ಮರಳಿನ ಲಿಂಗ ಮಾಡಿದರು. ಅದನ್ನು ನೋಡಿ ಮತ್ತೊಬ್ಬರು ಇನ್ನೂ ಒಂದು ದೊಡ್ಡ ಲಿಂಗ ಮಾಡಿದರು. ಮಗದೊಬ್ಬರು ಲಿಂಗ ಮಾಡಿ, ಪತ್ರೆ ಮತ್ತು ಹೂವು ಏರಿಸಿದರು. ನಂತರ ಬಂದವರು ಇದೇ ಇಲ್ಲಿನ ಕ್ರಮ ಎಂದು ಸೈಕತ ಲಿಂಗಗಳನ್ನು ಮಾಡಿ ಮಾಡಿ ಪೂಜಿಸಿದರು. ಈ ಲಿಂಗಗಳ ರಾಶಿಯಲ್ಲಿ ನಮ್ಮ ಕಥಾನಾಯಕನ ಮರಳ ಗುಡ್ಡೆ ಕಾಣದಾಯಿತು. ಒಟ್ಟಿನಲ್ಲಿ ಬಹಳ ಜಾಣ್ಮೆಯಿಂದ ಬಚ್ಚಿಟ್ಟಿದ್ದ ಅವನ ಜಜ್ಜಿದ ತಾಮ್ರದ ತಂಬಿಗೆ ವಿಶಾಲ ಮರಳಿನ ರಾಶಿಯಲ್ಲಿ ಎಲ್ಲೊ ಸೇರಿಹೋಯಿತು. 

ಆ ಪ್ರಪಂಚದಲ್ಲಿ ಜನರು ಹೇಗೆ ಒಬ್ಬರನ್ನು ಇನ್ನೊಬ್ಬರು ಅನುಕರಿಸುತ್ತಾರೆ ಎನ್ನುವುದು ಅವನಿಗೆ ಅರ್ಥ ಆಯಿತು. ತಲೆಯ ಮೇಲೆ ಕೈ ಇಟ್ಟುಕೊಂಡು ಹೀಗೆ ಹೇಳಿದ:

ಗತಾನುಗತಿಕೋ ಲೋಕಃ ನ ಲೋಕಃ ಪಾರಮಾರ್ಥಿಕಃ 
ಗಂಗಾಯಾಂ ಸೈಕತ ಲಿಂಗೇಷು ನಷ್ಟಮ್ ಮೇ ತಾಮ್ರಭಾಜನಂ 

"ಈ ಜಗತ್ತಿನಲ್ಲಿ ಎಲ್ಲರೂ ಒಬ್ಬರನ್ನು ಒಬ್ಬರು ಅನುಕರಿಸುವವರು. (ಯಾವ ಕೃತ್ಯವನ್ನೂ ಏಕೆ ಮಾಡುತ್ತಾರೆ ಎಂದು ಯೋಚಿಸದೆ ಅನುಕರಿಸುವವರು). ನಿಜವಾದ ಸತ್ಯದ ಅರಿವು ಹುಡುಕುವವರು ವಿರಳ. ಗಂಗಾ ನದಿಯ ಮರಳಿನ ಲಿಂಗಗಳಲ್ಲಿ ನನ್ನ ತಾಮ್ರದ ತಂಬಿಗೆ ಇದರಿಂದ ಕಳೆದುಹೋಯಿತು!

*****

ಹಿಂದಿನ ಎರಡು ಸಂಚಿಕೆಗಳಲ್ಲಿ "ಗತಾನುಗತಿಕೋ ಲೋಕಃ" ಎಂದು ಉಪಯೋಗಿಸಿದೆ. ಒಬ್ಬರ ಹಿಂದೊಬ್ಬರು ಕುರುಡು ಅನುಕರಣೆ ಮಾಡುವುದು ಎಂದು ಅದರ ಅರ್ಥ. "ಗತಾನುಗತಿಕೋ ಲೋಕಃ" ಎನ್ನುವುದನ್ನು ಅನೇಕರು ಬೇರೆ ಬೇರೆ ಸಂದರ್ಭಗಲ್ಲಿ ಬಳಸುತ್ತಾರೆ. ಅದರ ಮೂಲ ತಿಳಿಸುವ ಕಥೆ ಮೇಲೆ ಕೊಟ್ಟಿರುವುದು. ಮೊದಲಿನ ತರಗತಿಗಳಲ್ಲಿರುವ ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳಿಗೆ ಇದನ್ನು ಹೇಳುತ್ತಿದ್ದರು. ಕಥೆ ರಂಜಕವಾಗಿಯೂ ಇದೆ; ಒಳ್ಳೆಯ ಸಂದೇಶವನ್ನೂ ಕೊಡುತ್ತದೆ.   

Friday, February 16, 2024

ಕರಡಿಗೆಯಿಂದ ಬಂದ ಕರಡಿ


ಕೋಶಗಳಲ್ಲಿ ಕೋಶಕಾರರು ಸಮಾನಾರ್ಥಕ ಪದಗಳನ್ನು ಕೊಡುತ್ತಾರೆ. ಅವು ಒಂದೇ ಅರ್ಥ ಕೊಡುವ ಪದಗಳಾದರೂ ಪದ-ಪದಗಳಲ್ಲಿ ಸೂಕ್ಷ್ಮವಾದ ಅರ್ಥ ಭೇದ ಇರುತ್ತದೆ ಎನ್ನುವುದನ್ನು "ಅಳಿಯ ಅಲ್ಲ; ಮಗಳ ಗಂಡ" ಎನ್ನುವ ಶೀರ್ಷಿಕೆಯಡಿ ನೋಡಿದೆವು. ಕೋಶದಲ್ಲಿ ನೋಡಿದರೆ "ಅಳಿಯ" ಅನ್ನುವ ಪದಕ್ಕೆ ಕೊಟ್ಟಿರುವ ಸಮಾನಾರ್ಥಕ ಪದಗಳಲ್ಲಿ "ಮಗಳ ಗಂಡ" ಅನ್ನುವುದೂ ಒಂದು. ಆದರೆ ಅಳಿಯ ಮತ್ತು ಮಗಳ ಗಂಡ ಎನ್ನುವ ಎರಡು ಪ್ರಯೋಗಗಳ ಸಂದರ್ಭ ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ನೋಡಿಯಾಯಿತು. 

"ಮಗಳ ಗಂಡ" ಎನ್ನುವ ಪದದಂತೆ "ಮಗನ ಹೆಂಡತಿ" ಎನ್ನುವ ಪದ ಪ್ರಯೋಗ ಏಕಿಲ್ಲ ಎಂದು ಕೆಲವು ಸ್ನೇಹಿತರು ಕೇಳಿರುತ್ತಾರೆ. ಒಂದು ವ್ಯಕ್ತಿಯನ್ನು ನಿರ್ದೇಶಿಸುವಾಗ "ಅವನು" ಎಂದು ಹೇಳುತ್ತಾರೆ. ಇಂಗ್ಲೀಷಿನಲ್ಲಿ ಹೇಳುವಂತೆ "He includes She" ರೀತಿ, ಮಗನ ಹೆಂಡತಿ ಪ್ರಾಯಶಃ ಮಗಳ ಗಂಡ ಅನ್ನುವುದರಲ್ಲೇ ಸೇರಿ ಹೋಗಿರಬೇಕು! 

"ಕೆಲವರು ಪದಗಳನ್ನು ಅಥವಾ ಪದಪುಂಜಗಳನ್ನು ತಪ್ಪಾಗಿ ಪ್ರಯೋಗಿಸಿ, ಅದನ್ನೇ ಮತ್ತನೇಕರು ಮುಂದುವರೆಸಿ, ಮುಂದೆ ಆ ತಪ್ಪೇ ಸರಿ ಎಂದು ಎಲ್ಲರೂ ತಿಳಿದು, ಆ ತಪ್ಪು ಪ್ರಯೋಗವೇ ಶಾಶ್ವತವಾಗಿ ಉಳಿಯಬಹುದು" ಎಂದು ಹಿಂದೆ ಹೇಳಲಾಗಿತ್ತು. ಅದರಲ್ಲಿಯೂ ಯಾರಾದರೂ ಹೆಸರು ಪಡೆದ ಜನ ಅಥವಾ ಪ್ರಭಾವಶಾಲಿಗಳು ಹೀಗೆ ಉಪಯೋಗಿಸಿದರೆ ಅದೇ ಭದ್ರವಾಗಿ ನಿಲ್ಲುತ್ತದೆ. "ಗತಾನುಗತಿಕೋ ಲೋಕಃ" ಅನ್ನುವಂತೆ ಒಬ್ಬರ ಹಿಂದೆ ಇನ್ನೊಬ್ಬರು. ಅಂತಹ ತಪ್ಪು ಪ್ರಯೋಗವೇ ಶಾಶ್ವತವಾಗಿ ನಿಂತಿರುವುದಕ್ಕೆ ಒಂದು ಅತ್ಯಂತ ಸುಂದರ ಉದಾಹರಣೆ "ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ" ಎನ್ನುವ ಇನ್ನೊಂದು ಪ್ರಸಿದ್ಧ ಗಾದೆ. 

*****

ಅವರವರ ಸಂಪ್ರದಾಯದಂತೆ, ತಾವು ಅನುಸರಿಸುವ ಆರಾಧನಾ ಕ್ರಮದಂತೆ ದೇವರ ಚಿಹ್ನೆಗಳನ್ನು ದೇಹದ ಮೇಲೆ ಧರಿಸುವುದು ಪ್ರಪಂಚದ ಎಲ್ಲಾ ಕಡೆ ಇರುವ ಪದ್ಧತಿ. ಅನೇಕ ಬಗೆಯ ಹಲವು ಬಣ್ಣ ಮತ್ತು ಆಕಾರದ ನಾಮಗಳು, ವಿಭೂತಿ, ಆಂಗಾರ ಮತ್ತು ಅಕ್ಷತೆ, ಕುಂಕುಮ-ಕೇಸರಿ, ಶಿಲುಬೆ, ಚಂದ್ರ ಮತ್ತು ನಕ್ಷತ್ರ ಇತ್ಯಾದಿ ಸಂಕೇತಗಳನ್ನು ಅನೇಕ ಜನರು ಧರಿಸುವುದನ್ನು ನಾವು ನೋಡಿದ್ದೇವೆ. ಈಚೆಗೆ ಇದು ಕಡಿಮೆ ಆಗಿದ್ದರೂ ಈಗಲೂ ಅನೇಕರು ಈ ರೀತಿ ಧರಿಸುತ್ತಾರೆ. ಕೆಲವು ವೈದಿಕರು ಜನಿವಾರ, ಪವಿತ್ರದುಂಗುರ ತೊಡುತ್ತಾರೆ. ಅಂತೆಯೇ ಅನೇಕ ಶಿವಾರಾಧಕರು ಒಂದು ಸಣ್ಣ ಶಿವಲಿಂಗವನ್ನು ತಮ್ಮ ಕೊರಳಲ್ಲಿ ಧರಿಸುತ್ತಾರೆ. ಕೆಲವರು ಒಂದು ಬಟ್ಟೆಯಲ್ಲಿ ಲಿಂಗವನ್ನು ಸುತ್ತಿ ಕುತ್ತಿಗೆಗೆ ಕಟ್ಟಿಕೊಳ್ಳಬಹುದು. ಮತ್ತೆ ಕೆಲವರು ಶಿವಲಿಂಗವನ್ನು ಅದಕ್ಕಾಗಿಯೇ ಮಾಡಿದ ಲೋಹದ ಸಂಪುಷ್ಟದಲ್ಲಿ ಇಟ್ಟು ದಾರದಿಂದ ಇಳಿಬಿಟ್ಟು ಕುತ್ತಿಗೆಗೆ ಧರಿಸಬಹುದು. ಈ ರೀತಿಯ ಸಂಪುಷ್ಟಕ್ಕೆ "ಕರಡಿಗೆ" ಎಂದು ಕರೆಯುತ್ತಾರೆ. 

ಹಿಂದೆ ತುಂಬಾ ಬಳಕೆಯಲ್ಲಿ ಇದ್ದ ಪದಗಳಲ್ಲಿ "ಕರಂಡಕ" ಅನ್ನುವುದೂ ಒಂದು. ಈ ಪದಕ್ಕೆ "ಬಟ್ಟಲು" ಅಥವಾ ಕಪ್ ಎಂದು ಅರ್ಥ. ಈ ಕರಂಡಕದಿಂದ ಹುಟ್ಟಿದ ಪದ ಕರಡಿಕೆ. ಬಟ್ಟಲಿನಂತಹ ಒಂದು ಸಂಪುಷ್ಟದಲ್ಲಿ ಸಣ್ಣ ಶಿವಲಿಂಗವನ್ನು ಇಟ್ಟು ತಿರುಪಿನ ಮುಚ್ಚಳದಿಂದ ಮುಚ್ಚುವಂತೆ ಮಾಡುತ್ತಾರೆ. ಅದರ ಅನೇಕ ರೂಪಾಂತರಗಳೂ ಉಂಟು. ಮೇಲೆ ಚಿತ್ರದಲ್ಲಿ ತೋರಿಸಿರುವ ಕರಡಿಕೆ ಹೆಚ್ಚು ಬಳಕೆಯಲ್ಲಿ ಇರುತ್ತದೆ. ಇದಕ್ಕೆ ಎರಡು ಕಡೆ ದಾರ ಪೋಣಿಸುವ ರೀತಿ ಮಾಡಿ ಪದಕದಂತೆ ಕೊರಳಲ್ಲಿ ಧರಿಸಬಹುದು. ಪಂಚಲೋಹದ, ಬೆಳ್ಳಿಯ ಅಥವಾ ಹೆಚ್ಚು ಅನುಕೂಲವಂತರು ಬಂಗಾರದಲ್ಲಿ ಮಾಡಿಸಿಕೊಂಡು ಕೊರಳಿಗೆ ಆಭರಣದ ರೀತಿ ಕಟ್ಟಿಕೊಳ್ಳುತ್ತಾರೆ.  

ನಾವು ಆಹಾರವಾಗಿ ಸೇವಿಸುವ ಯಾವ ಪದಾರ್ಥವಾದರೂ ಅದನ್ನು ಮೊದಲು ಪರಮಾತ್ಮನಿಗೆ ಅರ್ಪಿಸಿ (ನೈವೇದ್ಯ ಮಾಡಿ) ನಂತರ ಸೇವಿಸಬೇಕು ಎನ್ನುವುದು ಶ್ರದ್ಧಾಳುಗಳು ಪಾಲಿಸುವ ಸಂಪ್ರದಾಯ. ಜನಿವಾರ ಅಥವಾ ಯಜ್ನೋಪವೀತ ಧರಿಸಿದವರು ಊಟಕ್ಕೆ ಮೊದಲು ತಮ್ಮಲ್ಲೇ ಇರುವ ಪಂಚ ಪ್ರಾಣರೂಪಿ ಅಂತರ್ಗತನಾದ ಪರಬ್ರಹ್ಮನಿಗೆ ಮೊದಲು ಸಮರ್ಪಿಸಿ ನಂತರ ಊಟ ಮಾಡುತ್ತಾರೆ. ಅದೇ ರೀತಿ ಕರಡಿಗೆಯಲ್ಲಿ ಶಿವಲಿಂಗವನ್ನು ಧರಿಸಿದ ಶ್ರದ್ಧಾಳುಗಳು ಅದರಲ್ಲಿನ ಶಿವಲಿಂಗವನ್ನು ಅಂಗೈನಲ್ಲಿ ಹಿಡಿದು ಅದಕ್ಕೆ ಅರ್ಪಿಸಿ ನಂತರ ಭೋಜನ ಮಾಡುತ್ತಾರೆ. ಈ ರೀತಿ ನಿವೇದನ ಮಾಡುತ್ತಿರುವ ಅನೇಕ ಚಿತ್ರಗಳನ್ನು ನೋಡಬಹುದು. ಕೊರಳಲ್ಲಿ ಕರಡಿಗೆಯಲ್ಲಿ ಶಿವಲಿಂಗವನ್ನು ಧರಿಸುವುದಕ್ಕೆ ಬಹಳ ಗೌರವ ಉಂಟು. ಸಾಮಾನ್ಯವಾಗಿ ಒಂದು ಸಮಾರಂಭದಲ್ಲಿ ಗುರುಗಳು ಉಪದೇಶ ಮಾಡಿ ಆರಾಧನೆಯ ರೀತಿಯನ್ನು ವಿವರಿಸಿ ಈ ರೀತಿಯ ಶಿವಪೂಜೆ ದಾರಿಯನ್ನು ತಿಳಿಸುತ್ತಾರೆ. ಇದು ಒಂದು ಸಂಕೇತವಾಗಿ ಪರಶಿವನು ಧರಿಸಿದವರ ಆಚಾರ-ವಿಚಾರ ಶುದ್ಧವಾಗಿರಲು ಅನುಗ್ರಹಿಸುತ್ತಾನೆ ಎಂದು ನಂಬಿಕೆ. 

*****

ಶಿವಪೂಜೆ ಮಾಡಲು ಏನೇನು ಸಾಧನಗಳು ಬೇಕು? ಶಿವನು ಅಭಿಷೇಕ ಪ್ರಿಯನು ಎಂದು ನಂಬಿಕೆ. ಅದಕ್ಕೆ ಮೋದಲಿಗೆ ಶುದ್ಧವಾದ ನೀರು ಬೇಕು. ಶಿವನಿಗೆ ಬಿಲ್ವಪತ್ರೆ ಅತಿ ಪ್ರಿಯ. ಆ ಪತ್ರೆ ಬೇಕು. ಇನ್ನೂ ಮುಂದೆ ಹಾಲು, ಮೊಸರು, ಜೇನು ತುಪ್ಪ, ತುಪ್ಪ, ಎಳನೀರು, ಸಕ್ಕರೆ, ಹೂವುಗಳು, ಧೂಪ, ದೀಪ, ಊದುಬತ್ತಿ, ಕರ್ಪೂರ, ನೈವೇದ್ಯಕ್ಕೆ ಪದಾರ್ಥಗಳು ಇತ್ಯಾದಿ. ಆದರೆ ಯಾವುದು ಇಲ್ಲದಿದ್ದರೂ ನೀರು, ಬಿಲ್ವ ಪತ್ರೆ, ಮತ್ತು ಏನಿಲ್ಲದಿದ್ದರೂ ನೈವೇದ್ಯಕ್ಕೆ ಒಂದು ಬೆಲ್ಲದ ತುಂಡು ಅಥವಾ ಕಲ್ಲು ಸಕ್ಕರೆಯೋ ಇತ್ಯಾದಿ ಶಿವ ಕೊಟ್ಟಿದ್ದು. ಈ ಪದಾರ್ಥಗಳಿದ್ದರೆ ಶ್ರದ್ದಾಭಕ್ತಿಗಳಿದ್ದರೆ ಶಿವಪೂಜೆ ಆಯಿತು. ಮಿಕ್ಕಿದ್ದಲ್ಲ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ. ಶಿವನು ಯಾವ ಆಡಂಬರವನ್ನೂ ಕೇಳುವವನಲ್ಲ. 

ಆಯಿತು. ಮೇಲೆ ಹೇಳಿದ ಎಲ್ಲವೂ ತಯಾರಾಯಿತು. ಸಮಸ್ತವೂ ಉಂಟು. ಆದರೆ ಕರಡಿಗೆಯೇ ಇಲ್ಲ. ಕರಡಿಗೆ ಇಲ್ಲ ಅಂದರೆ ಶಿವಲಿಂಗ ಇಲ್ಲ. ಶಿವಲಿಂಗವೇ ಇಲ್ಲ ಅಂದರೆ ಎಲ್ಲಿಯ ಶಿವಪೂಜೆ? ಎಲ್ಲ ವಸ್ತುಗಳಿಗಿಂತಲೂ ಅತ್ಯಂತ ಮುಖ್ಯ ಬೇಕಾದದ್ದು ಶಿವಲಿಂಗ. ಅದು ಕರಡಿಗೆಯಲ್ಲಿ ಇದೆ. ಅದನ್ನೇ ಮರೆತರೆ ಹೇಗೆ?

ಯಾವುದಾದರೂ ಸಂದರ್ಭದಲ್ಲಿ ಅತಿ ಮುಖ್ಯವಾದದ್ದನ್ನು ತರುವುದು ಮರೆತು ಬಿಟ್ಟರೆ ಶಿವಪೂಜೆಯಲ್ಲಿ ಕರಡಿಗೆಯನ್ನು ಬಿಟ್ಟಂತೆ ಎಂದು ಹೇಳುವ ರೀತಿ ಇದರಿಂದ ಬಂತು. ಮುಂದೆ ಅದರಿಂದಲೇ "ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ" ಎಂದು ಹೇಳುವ ಗಾದೆ ಬಂತು!

*****

ಕಾಲಕ್ರಮದಲ್ಲಿ ಯಾರೋ ಒಬ್ಬರು "ಕರಡಿಗೆ" ಪದದಲ್ಲಿನ "ಗೆ" ಬಿಟ್ಟರು! ಕರಡಿಗೆಯ ಬದಲು ಕರಡಿ ಎಂದು ಪ್ರಯೋಗವಾಯಿತು. ಶಿವಪೂಜೆಯಲ್ಲಿ ಕರಡಿ ಬಂದರೆ ಏನಾಗುತ್ತದೆ? ಅದನ್ನು ನೋಡಿದವರು ಚೆಲ್ಲಾಪಿಲ್ಲಿಯಾಗಿ ಓಡುತ್ತಾರೆ. ಅದಕ್ಕೆ ಸ್ವಾತಂತ್ರ್ಯ ಸಿಕ್ಕರೆ ಎಲ್ಲೆಂದರಲ್ಲಿ ನುಗ್ಗಿ ಎಲ್ಲವನ್ನೂ ಧ್ವಂಸ ಮಾಡುತ್ತದೆ. ಒಟ್ಟಿನಲ್ಲಿ, ಸುಖಮಯವಾಗಿ ನಡೆಯುತ್ತಿದ್ದ ಕಾರ್ಯಕ್ರಮ ಹಾಳಾಗುತ್ತದೆ. ಇದು ಶಿವಪೂಜೆಯಲ್ಲಿ ಕರಡಿ ಬಿಟ್ಟರೆ ಆಗುವ ಪರಿಣಾಮ. 

ವಿಚಿತ್ರವೆಂದರೆ, ಕರಡಿಗೆ ಬಹಳ ಜನರಿಗೆ ಗೊತ್ತಿಲ್ಲ. ಆದರೆ ಕರಡಿ ಎಲ್ಲರಿಗೂ ಗೊತ್ತು. ಕರಡಿಗೆ ಬಿಟ್ಟಂತೆ ಎಂದರೆ ಅನೇಕರಿಗೆ ಅರ್ಥ ಆಗುವುದಿಲ್ಲ. ಕರಡಿ ಬಿಟ್ಟರು ಅಂದರೆ ಎಲ್ಲರಿಗೂ ಗೊತ್ತು. ಕರಡಿ ಬಿಡುವುದು ಮನಸ್ಸಿಗೆ ರಂಜಕವೂ ಹೌದು. ಈ ಕಾರಣಗಳಿಂದ "ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ" ಎನ್ನುವುದು ತಪ್ಪು ಪ್ರಯೋಗವಾದರೂ ಬಹಳ ಜನಪ್ರಿಯವಾಯಿತು. ಒಂದು ಒಳ್ಳೆಯ ಕೆಲಸ ನಡೆಯುವಾಗ ಯಾರೋ ಅಥವಾ ಏನೋ ಬಂದು ಆ ಒಳ್ಳೆಯ ಕೆಲಸ ಹಾಳಾಗುವುದನ್ನು ನಿರ್ದೇಶಿಸುವುದಕ್ಕೆ ಈ ರೂಪಾಂತರಿತ ಗಾದೆ ಉಪಯೋಗವಾಯಿತು. 

ಕೊನೆಗೆ "ಶಿವಪೂಜೆಯಲ್ಲಿ ಕರಡಿಗೆ ಬಿಟ್ಟರು" ಮರೆತುಹೋಗಿ, "ಶಿವಪೂಜೆಯಲ್ಲಿ ಕರಡಿ ಬಿಟ್ಟರು" ಉಳಿದುಕೊಂಡಿತು. 

ಒಬ್ಬರು ತಪ್ಪು ಪ್ರಯೋಗಿಸಿ, ಅದನ್ನೇ ಮತ್ತನೇಕರು ಮುಂದುವರೆಸಿ, ಮುಂದೆ ಆ ತಪ್ಪೇ ಸರಿ ಎಂದು ಎಲ್ಲರೂ ತಿಳಿದು, ಆ ತಪ್ಪು ಪ್ರಯೋಗವೇ ಶಾಶ್ವತವಾಗಿ ಉಳಿಯಿತು!

Tuesday, February 13, 2024

ಅಳಿಯ ಅಲ್ಲ; ಮಗಳ ಗಂಡ


"ದೇಶ ಸುತ್ತು, ಕೋಶ ಓದು" ಅಥವಾ "ದೇಶ ಸುತ್ತಿ ನೋಡು, ಕೋಶ ಓದಿ ನೋಡು" ಅನ್ನುವುದು ಕೆಲವು ದಶಕಗಳ ಹಿಂದೆ ಬಹಳ ಪ್ರಚಲಿತವಾದ ಗಾದೆ ಮಾತಾಗಿತ್ತು. ಅನುಭವದಿಂದ ಬಂದ ಜ್ನ್ಯಾನವನ್ನು ನಮ್ಮ ಹಿರಿಯರು ಗಾದೆಗಳ ರೂಪದಲ್ಲಿ ಕೊಡುತ್ತಿದ್ದರು. "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎನ್ನುವುದು ಗಾದೆಗಳಿಗೆ ಸಂಭಂದಿಸಿದ ಇನ್ನೊಂದು ಗಾದೆ. ಇದೊಂದು ತಗಾದೆ ಇಲ್ಲದ ಗಾದೆ! ಪುಸ್ತಕದ ಜ್ನ್ಯಾನಕ್ಕಿಂತ ಅನುಭವದ ಜ್ನ್ಯಾನ ಹಿರಿದು ಎನ್ನುವುದನ್ನು ತಿಳಿಸುವ ಸಲುವಾಗಿ ಈ ಗಾದೆ. 

ಜ್ನ್ಯಾನಾರ್ಜನೆಗೆ ಎರಡು ಪ್ರಮುಖವಾದ ದಾರಿಗಳು. ಗ್ರಂಥಗಳನ್ನು ಅಭ್ಯಸಿಸುವುದರಿಂದ  ತಿಳುವಳಿಕೆ ಪಡೆಯುವುದು ಒಂದು ದಾರಿ. ಹೊರಗಡೆಯ ಪ್ರಪಂಚದಲ್ಲಿ ತಿರುಗಾಡಿ ಜ್ನ್ಯಾನ ಸಂಪಾದನೆ ಮಾಡುವುದು ಇನ್ನೊಂದು ದಾರಿ. ಮೇಲೆ ಹೇಳಿದ ದೇಶ-ಕೋಶದ ಗಾದೆ ಇವೆರಡು ದಾರಿಗಳನ್ನೂ ಸೂಚಿಸುತ್ತದೆ. ಇದೇ ಕಾರಣಕ್ಕಾಗಿಯೇ ಪ್ರೌಢ ಶಾಲೆ ಮತ್ತು ಕಾಲೇಜುಗಳಲ್ಲಿ ಕಡೆಯ ವರ್ಷದ ವಿದ್ಯಾರ್ಥಿಗಳನ್ನು "ವಾರ್ಷಿಕ ಪ್ರವಾಸ" ಕರೆದುಕೊಂಡು ಹೋಗುತ್ತಿದ್ದುದು. 

ಇವೆರಡೂ ಅಲ್ಲದೆ ಇನ್ನೊಂದು ವಿಶೇಷವಾದ ದಾರಿ ಇದೆ. ಅದು ತಿಳಿದವರ ಒಡನಾಟ. ಜ್ನ್ಯಾನಿಗಳ ಸಂಗದಲ್ಲಿ ಕಾಲ ಕಳೆದರೆ ಅವರ ಕಲಿಕೆಯ ಒಂದು ಪಾಲು ನಮಗೂ ಸೇರುತ್ತದೆ. "ಮೀನು ಮಾರುವವಳನ್ನು ಮುದ್ದಾಡುವುದಕ್ಕಿಂತ ಗಂಧ ಮಾರುವವಳ ಜೊತೆ ಗುದ್ದಾಡುವುದು ಲೇಸು" ಎನ್ನುವುದು ಇನ್ನೊಂದು ತುಂಟ ಗಾದೆ! ಕೆಡುಗರ ಜೊತೆ ಸ್ನೇಹಕ್ಕಿಂತ ಸಜ್ಜನರ ಜೊತೆ ಹಗೆತನವೇ ವಾಸಿ. ಅಂದಮಾತ್ರಕ್ಕೆ ಸಜ್ಜನರ ಜೊತೆ ಜಗಳ ಮಾಡಬೇಕೆಂದು ಅರ್ಥವಲ್ಲ. ಒಳ್ಳೆಯವರ ಜೊತೆಯ ದ್ವೇಷವೂ ಒಳ್ಳೆಯದನ್ನೇ ಉಂಟು ಮಾಡುತ್ತದೆ ಎಂದರೆ ಅವರ ಜೊತೆ ಪ್ರೀತಿಯ ಫಲ ಇನ್ನೂ ಹೆಚ್ಚಿನ ಹಿತವನ್ನು ಮಾಡುತ್ತದೆ ಎನ್ನುವುದು ಇದರ ತಾತ್ಪರ್ಯ. ಆದ್ದರಿಂದ ಹುಡಿಕಿಕೊಂಡು ಹೋಗಿ ಸಜ್ಜನರ ಸಂಗ ಮಾಡಬೇಕು ಎನ್ನುವುದು ಇದರ ಆಶಯ. 

ಮೇಲಿನ ಗಾದೆಯಲ್ಲಿ ಕೋಶ ಎನ್ನುವ ಪದ "ಗ್ರಂಥ ಕೋಶ" ಎನ್ನುವುದನ್ನು ಸೂಚಿಸುತ್ತದೆ. ಕೋಶ ಎನ್ನುವ ಪದಕ್ಕೆ ಇನ್ನೊಂದು ಅರ್ಥ ಭಾಷೆ, ಮಾತು ಮತ್ತು ಅದರ ಉಪಯೋಗಕ್ಕೆ ಸಂಭಂದಿಸಿದ್ದು. ಈ ಸಂದರ್ಭದಲ್ಲಿ ಇಂಗ್ಲಿಷಿನ "ಡಿಕ್ಷನರಿ" ಮತ್ತು "ಥೆಸರುಸ್" (Dictionary and Thesaurus) ಪದಗಳನ್ನು ನೆನೆಸಿಕೊಳ್ಳಬಹುದು. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ಈ ರೀತಿಯ ಅನೇಕ ಕೋಶಗಳು ಪ್ರಚಲಿತವಿದ್ದವು. ಭಾಷೆಯಲ್ಲಿನ ಪದಗಳ ಅರ್ಥಗಳು, ಸಮಾನಾರ್ಥ ಮತ್ತು ವಿರುದ್ದಾರ್ಥ ಪದಗಳನ್ನು ತಿಳಿಯಲು ಈ ಕೋಶಗಳನ್ನು ಉಪಯೋಗಿಸುತ್ತಿದ್ದರು. ಅಮರಸಿಂಹನ "ಅಮರಕೋಶ" ಅವನ ಕಾಲದವರೆಗೆ ಪ್ರಚಲಿತವಿದ್ದ ಅನೇಕ ಕೋಶಗಳನ್ನು ಸಂಗ್ರಹಿಸಿ ಕೊಟ್ಟಿರುವ ಒಂದು ಕೋಶ. ಅದೆಲ್ಲ ಕಾಗದ, ಅಚ್ಚು, ಇಂಕು ಇಲ್ಲದ ಕಾಲ. ಆದ ಕಾರಣ ಕಲಿಯುವ ಮಕ್ಕಳಿಗೆ ಚಿಕ್ಕಂದಿನಿಂದಲೇ ಇಂತಹ ಕೋಶಗಳನ್ನು ಪ್ರತಿದಿನ ಸಂಜೆ ಉರು ಹೊಡೆಸುತ್ತಿದ್ದರು. 

*****

ಒಂದು ವಾಕ್ಯದಲ್ಲಿ ಒಮ್ಮೆ ಪ್ರಯೋಗಿಸಿದ ಪದವನ್ನು ಮತ್ತೆ ಉಪಯೋಗಿಸಬಾರದು ಎಂದು ಭಾಷಾ ಶಾಸ್ತ್ರಜ್ಞರು ಹೇಳುತ್ತಾರೆ. (ಕಾವ್ಯಗಳಲ್ಲಿ ಬೇಕೆಂದೇ ಈ ರೀತಿ ಉಪಯೋಗಿಸುವ ಪುನರುಕ್ತಿ ವಿಷಯ ಬೇರೆ). ಪ್ರತಿ ಭಾಷೆಯಲ್ಲಿಯೂ ವಿಪುಲವಾದ ಪದಸಂಪತ್ತಿದೆ. ಇರುವ ಈ ಪದಗಳ ಭಂಡಾರವನ್ನು ಚೆನ್ನಾಗಿ ತಿಳಿಯಲಿ ಮತ್ತು ಅವುಗಳ ಉಪಯೋಗವನ್ನು ಮಾಡಲಿ ಎಂದು ಈ ರೀತಿ ಹೇಳುವುದು. ಈ ಕಾರಣಕ್ಕಾಗಿ ಕೋಶಗಳನ್ನು ಉಪಯೋಗಿಸಿ ಸಮಾನಾರ್ಥ ಪದಗಳನ್ನು ಹೊರ ತೆಗೆದು ಬಳಸುವುದು. ಆದರೆ ಕೋಶಕಾರರು ಸಮಾನಾರ್ಥ ಪದಗಳನ್ನು ಕೊಟ್ಟಾಗ ಈ ರೀತಿ ಕೊಟ್ಟಿರುವ ಅನೇಕ ಪದಗಳಲ್ಲಿ ಹೆಚ್ಹೂ ಕಡಿಮೆ ಒಂದೇ ಅರ್ಥ ಬಂದರೂ ಅನೇಕ ಪದಗಳಲ್ಲಿ ಸೂಕ್ಷ್ಮವಾದ ಅರ್ಥ ವ್ಯತ್ಯಾಸಗಳು ಇರುತ್ತವೆ. ಅಡುಗೆ ಮನೆಯಲ್ಲಿ ಇರುವ ಸೌಟುಗಳನ್ನೇ ತೆಗೆದುಕೊಳ್ಳೋಣ. ಅಲ್ಲಿ ಅನೇಕ ಸೌಟುಗಳು ಇವೆ. ಪ್ರತಿಯೊಂದೂ ಸೌಟೇ. ತುಂಬಾ ದೊಡ್ಡದರಿಂದ ಹಿಡಿದು ಪುಟ್ಟ ಸೌಟಿನವರೆಗೂ ಉಂಟು. ಹುಳಿ ಬಡಿಸಲು ದೊಡ್ಡ ಸೌಟು. ಪಾಯಸ ಬಡಿಸಲು ಅದಕ್ಕಿಂತ ಸಲ್ಪ ಚಿಕ್ಕದು. ಗೊಜ್ಜಿಗೆ ಇನ್ನೂ ಸ್ವಲ್ಪ ಚಿಕ್ಕದು. ಉಪ್ಪಿನಕಾಯಿಗೆ ಮತ್ತೂ ಸಣ್ಣದು. ಎಲ್ಲವೂ ಸೌಟು ಎಂದು ಹುಳಿ ಬಡಿಸುವ ಸೌಟಿನಲ್ಲಿ ಉಪ್ಪಿನಕಾಯಿ ಬಡಿಸಿದರೆ ಹೇಗೆ? ಪದಗಳ ಪ್ರಯೋಗದಲ್ಲಿಯೂ ಹಾಗೆ. ಆರಿಸಿದ ಪದ ನಾವು ಹೇಳಬೇಕೆನ್ನುವ ವಿಷಯವನ್ನು ಖಚಿತವಾಗಿ, ಕರಾರುವಾಕ್ಕಾಗಿ ಹೇಳಬೇಕು. ಇಲ್ಲದಿದ್ದಲ್ಲಿ ಏನೋ ಕೊರತೆ ಕಾಡುತ್ತದೆ. 

ಪ್ರಪಂಚ ಪ್ರತಿ ದಿನ ಬದಲಾಗುತ್ತಲೇ ಇರುತ್ತದೆ. ನಿನ್ನೆ ಇದ್ದಂತೆ ಇಂದಿಲ್ಲ. ಇಂದು ಇರುವಂತೆ ನಾಳೆ ಇರುವುದಿಲ್ಲ. ಇನ್ನು ಹತ್ತು ವರುಷದ ನಂತರ ಅನೇಕ ವಿಷಯಗಳಲ್ಲಿ ಗುರುತು ಸಿಗದ ಬದಲಾವಣೆ ಕಾಣುತ್ತೇವೆ. ಪದಗಳ ಪ್ರಯೋಗದಲ್ಲೊ ಹಾಗೆ. ಇಂದು ವ್ಯಾಪಕವಾದ ಅರ್ಥ ಇರುವ ಪದಕ್ಕೆ ಅಥವಾ ಪದಪುಂಜಕ್ಕೆ ಮುಂದೆ ಬೇರೆಯೇ ಅರ್ಥ ಹುಟ್ಟಿಕೊಳ್ಳಬಹುದು. ವಿಪರ್ಯಾಸವೆಂದರೆ ಕೆಲವರು ತಪ್ಪು ಪ್ರಯೋಗ ಮಾಡಿ, ಅದನ್ನೇ ಅನೇಕರು ಮುಂದುವರೆಸಿ, ಮುಂದೆ ಆ ತಪ್ಪೇ ಸರಿಯೆಂದು ಎಲ್ಲರೂ ತಿಳಿದು, ಆ ತಪ್ಪು ಪ್ರಯೋಗವೇ ಶಾಶ್ವತವಾಗಿ ಉಳಿಯಬಹುದು! "ಗತಾನುಗತಿಕೋ ಲೋಕಃ" ಎನ್ನುವಂತೆ ಅನೇಕರು ತಪ್ಪು ದಾರಿ ಹಿಡಿದರೆ ಅವರ ಹಿಂದೆ ಬರುವವರೂ ತಪ್ಪು ದಾರಿ ಹಿಡಿದಂತೆ!

*****

ಈ ಸಂದರ್ಭದಲ್ಲಿ "ಅಳಿಯ ಅಲ್ಲ; ಮಗಳ ಗಂಡ" ಎನ್ನುವ ಗಾದೆಯನ್ನೇ ನೋಡೋಣ. ಇದು ಬಹಳ ಚಾಲ್ತಿಯಲ್ಲಿರುವ ಒಂದು ಗಾದೆ. ಇದನ್ನು ಪ್ರಯೋಗಿಸದಿರುವವರೇ ವಿರಳ. ಇಂದಿನ ಈ ಗಾದೆಯ ಪ್ರಯೋಗದಲ್ಲಿ "ಇದಲ್ಲ. ಅದು" ಎನ್ನುವ ಬದಲು "ಎರಡೂ ಒಂದೇ" ಎನ್ನುವ ಅರ್ಥದಲ್ಲಿ ಪ್ರಯೋಗ ಆಗುತ್ತಿದೆ. "ಹೀಗೆ ಹೇಳುವ ಬದಲು ಹಾಗೆ ಹೇಳಿದರು. ಎಲ್ಲ ಒಂದೇ!" ಎನ್ನುವ ಅರ್ಥ. ಐವತ್ತು ಅರವತ್ತು ವರುಷಗಳ ಹಿಂದೆ ಹಾಗಿರಲಿಲ್ಲ. ಎರಡರ ನಡುವೆ ಬಹಳ ವ್ಯತ್ಯಾಸ ಇತ್ತು. 

ಮಕ್ಕಳ ವಿವಾಹ ಸಂಬಂಧವಾದ ತೀರ್ಮಾನಗಳನ್ನು ವಧು ಅಥವಾ ವರನ ತಂದೆ-ತಾಯಿಗಳು ತೆಗೆದುಕೊಳ್ಳುತ್ತಿದ್ದರು. ವಿವಾಹ ವಧೂ-ವರರು ಇನ್ನೂ ಚಿಕ್ಕ ವಯಸ್ಸಿನವರಿದ್ದಾಗಲೇ ನಡೆಯುತ್ತಿತ್ತು. ಲಗ್ನದ ಸಂದರ್ಭದಲ್ಲಿ ವಧು ಮತ್ತು ವರರ ನಡುವೆ ಒಂದು ವಸ್ತ್ರದ ಅಂತರ್ಪಟ ಹಿಡಿದಿರುತ್ತಿದ್ದರು. ಅದನ್ನು ಸರಿಸಿದಾಗಲೇ ಹುಡುಗ ಮತ್ತು ಹುಡುಗಿ ಒಬ್ಬರನ್ನೊಬ್ಬರು ನೋಡುತ್ತಿದ್ದರು, ಎಂದು ಹೇಳಿದುದನ್ನು ನಾವು ನಮ್ಮ ಬಾಲ್ಯದಲ್ಲಿ ಕೇಳಿದ್ದೇವೆ. ಮೆಚ್ಚಿ ಮದುವೆಯಾದ ಜೋಡಿಗಳು ಅಪರೂಪ ಅಂದಿನ ಕಾಲದಲ್ಲಿ. ಹುಡುಗಿಯ ತಂದೆ-ತಾಯಿಯರಿಗೆ ಹುಡುಗನ ಜೊತೆ ನೇರ ಸಂಭಂದವಿತ್ತು. ಅವನು ಅಳಿಯ ಆಗುತ್ತಿದ್ದ. ಹುಡುಗಿ ಅತ್ತೆಯ ಮನೆಯಲ್ಲಿ ಸೊಸೆ ಆಗುತ್ತಿದ್ದಳು. 

ಕಾಲಕ್ರಮದಲ್ಲಿ ಯುವಕ ಯುವತಿಯರಿಗೆ ಹೆಚ್ಚಿನ ಸ್ವಾತಂತ್ರ್ಯ ಸಮಾಜದಲ್ಲಿ ಸಿಕ್ಕಿತು. ವಿವಾಹವಾಗುವ ವೇಳೆಗೆ ಅವರಿಗೆ ಹೆಚ್ಚಿನ ವಯಸ್ಸೂ ತಿಳುವಳಿಕೆಯೂ ಇರುತ್ತಿದ್ದವು. ತಂದೆ-ತಾಯಿಯರಿಗೆ ತಿಳಿಸಿ, ಅವರ ಒಪ್ಪಿಗೆ ಪಡೆದು, ಕೆಲವರು ಮದುವೆ ಆಗುತ್ತಿದ್ದರು. ಕೆಲವರು ಮದುವೆಯಾದಮೇಲೆ ತಿಳಿಸುತ್ತಿದ್ದರು. ಇನ್ನೂ ಕೆಲವು ಜೋಡಿಗಳು ಹೆದರಿಕೆಯಿಂದ ಮದುವೆಯಾದುದನ್ನು ಕೆಲವು ಕಾಲ ಗುಟ್ಟಾಗಿ ಇಡುತ್ತಿದ್ದುದೂ ಉಂಟು. ಅನೇಕ ಸಂದರ್ಭಗಳಲ್ಲಿ ಹುಡುಗಿಯ ತಂದೆ ತಾಯಿಯರಿಗೆ ಮಗಳು ತಂದ ಹುಡುಗ ಇಷ್ಟವಾಗುತ್ತಿರಲಿಲ್ಲ. ಜಾತಿ, ಪಂಗಡ, ವಿದ್ಯೆ, ಅಂತಸ್ತು, ದೇಶ, ಭಾಷೆ, ವರಸಾಮ್ಯ, ಮೊದಲಾದ ಹತ್ತಾರು ಕಾರಣಗಳಿಂದ ಕುಟುಂಬಗಳಲ್ಲಿ ವಿರಸ ಮೂಡುತ್ತಿತ್ತು. ಕೆಲವು ಹಿರಿಯರು ಮಧ್ಯಸ್ಥಿಕೆ ವಹಿಸಿ ವಾತಾವರಣ ತಿಳಿ ಮಾಡಿ ಮದುವೆ ಮಾಡಿಸುತ್ತಿದ್ದ ಪ್ರಕರಣಗಳೂ ಇದ್ದವು. "ನೀನು ನನ್ನ ಮಗಳಲ್ಲ. ನಾನು ನಿನ್ನ ತಂದೆಯೂ ಅಲ್ಲ. ಇಂದಿಗೆ ನಮ್ಮಿಬ್ಬರ ಸಂಬಂಧ ಕಡಿದುಹೋಯಿತು" ಎಂದು ಹೇಳಿದ ಪ್ರಕರಣಗಳೂ ಬೇಕಾದಷ್ಟಿದ್ದವು. ಇಂತಹ ಪ್ರಕರಣಗಲ್ಲಿ ಸ್ವಲ್ಪ ದಿನ ಕಳೆದ ನಂತರ ಅಥವಾ ಮೊಮ್ಮಗುವಿನ ಆಗಮನದ ನಂತರ ಮತ್ತೆ ಕುಟುಂಬಗಳು ಒಂದಾಗುತ್ತಿದ್ದ ಸುಖಾಂತ್ಯದ ಕೆಲವು ಪ್ರಕರಣಗಳು ಇದ್ದರೂ, ಕೊನೆಯವರೆಗೆ ವಿರಸ ಮುಂದುವರೆದ ಸಂದರ್ಭಗಳೂ ಇದ್ದವು. 

ಹುಡುಗಿಯ ತಂದೆ-ತಾಯಿಗಳು ಒಪ್ಪಿ ನಡೆದ ವಿವಾಹದಲ್ಲಿ ವರ ವಧುವಿನ ತಂದೆ-ತಾಯಿಯರಿಗೆ ಅಳಿಯ ಆಗುತ್ತಿದ್ದ. ಅವರಿಗೆ ಬೇಡದ ಸಂದರ್ಭಗಳಲ್ಲಿ ಹುಡುಗ ಅಳಿಯನಾಗದೇ ಮಗಳ ಗಂಡ ಆಗಿ ಉಳಿದುಬಿಡುತ್ತಿದ್ದ. 

ಈ ವ್ಯತ್ಯಾಸ ಕೆಳಗಿನ ಎರಡು ಚಿತ್ರಗಳಿಂದ ಇನ್ನೂ ವಿಶದವಾಗಿ ತಿಳಿಯಬಹುದು:

 ಅಳಿಯ 

ಅಪ್ಪ/ಮಾವ                                                                  ಮಗಳು 

ಮೇಲಿನ ಚಿತ್ರದಲ್ಲಿ ಅಪ್ಪ-ಅಮ್ಮ, ಮಗಳು ಮತ್ತು ವರನ ಜೊತೆ ಮಧುರವಾದ ಸಂಭಂದ ಇದೆ. ಇಲ್ಲಿ ಮೂರು ಸಂಬಂಧ ಉಂಟು. ಮೊದಲನೆಯದು ತಂದೆ-ತಾಯಿ ಮತ್ತು ಮಗಳ ಸಂಬಂಧ. ಎರಡನೆಯದು ಮಗಳು ಮತ್ತು ಅವಳ ಗಂಡನ ಪತಿ-ಪತ್ನಿ ಸಂಬಂಧ. ಮೂರನೆಯದು ಅತ್ತೆ-ಮಾವ ಮತ್ತು ಅಳಿಯನ ನೇರ ಸಂಬಂಧ. ನೇರ ಸಂಬಂಧ ಅಂದರೆ ಇದರಲ್ಲಿ ಮಗಳ ಕೊಂಡಿಯಿಲ್ಲ. ಈ ರೀತಿ ಮೂರು ಮುಖದ ತ್ರಿಕೋಣಾಕೃತಿಯ ಸಂಬಂಧ ಇರುವಾಗ "ಅಳಿಯ" ಅನ್ನುವ ಪದಕ್ಕೆ ಸರಿಯಾದ ಅರ್ಥ ಸಿಗುತ್ತದೆ. 


ಈಗ ಇನ್ನೊಂದು ಚಿತ್ರ ನೋಡೋಣ:

                               ಅಪ್ಪ                               ಮಗಳು               ಮಗಳ ಗಂಡ 

ಈ ಸಂಬಂಧದಲ್ಲಿ ಮಗಳು ಹಿಡಿದುಕೊಂಡು ಬಂದಿರುವ (!) ಹುಡುಗ ತಂದೆ-ತಾಯಿಯರಿಗೆ ಬೇಡವಾದವನು. ಇಲ್ಲಿ ತ್ರಿಕೋಣಾಕೃತಿಯ ಸಂಬಂಧ ಇಲ್ಲ. ಕೇವಲ ಎರಡೇ ಸಂಬಂಧಗಳು. ಒಂದು ಕಡೆ ತಂದೆ-ತಾಯಿ ಮತ್ತು ಮಗಳ ನೇರ ಸಂಬಂಧ. ಅಂತೆಯೇ, ಮಗಳು ಮತ್ತು ಅವಳ ಗಂಡನ ಪತಿ-ಪತ್ನಿಯ ಸಂಬಂಧ.  ಮಗಳ ಗಂಡನಿಗೂ ಮಗಳ ತಂದೆ-ತಾಯಿಯರಿಗೂ ಸಂಬಂಧ ಇಲ್ಲ. (ಇಲ್ಲಿ ಸಂಬಂಧ ಅಂದರೆ ವ್ಯಾವಹಾರಿಕ ಸಂಬಂಧ. ಕಾನೂನಿನ ಸಂಬಂಧ ಅಲ್ಲ). ಇಂತಹ ಪರಿಸ್ಥಿತಿಯಲ್ಲಿ ಹುಡುಗ ಹುಡುಗಿಯ ತಂದೆ-ತಾಯಿಯರಿಗೆ ಕೇವಲ "ಮಗಳ ಗಂಡ".  ಅವನು ಅಳಿಯನಾಗುವುದೇ ಇಲ್ಲ. 

ಐವತ್ತು-ಅರವತ್ತು ವರುಷಗಳ ಹಿಂದೆ ಎರಡನೇ ಚಿತ್ರದ ರೀತಿಯ ಸಂದರ್ಭಗಳಲ್ಲಿ "ಅವನು ನಮ್ಮ ಅಳಿಯ ಅಲ್ಲ. ಕೇವಲ ಮಗಳ ಗಂಡ" ಎಂದು ಕೆಲವರು ಖಡಾಖಂಡಿತವಾಗಿ ಹೇಳುತ್ತಿದ್ದರು. "ಅವನನ್ನು ನನ್ನ ಅಳಿಯ ಎಂದು ಹೇಳಬೇಡಿ. ಅವನು ಕೇವಲ ನನ್ನ ಮಗಳ ಗಂಡ. ಅಷ್ಟೇ." ಎಂದು ಕೆಲವರು ಹೇಳುತ್ತಿದ್ದರು. ನಮ್ಮಲ್ಲಿ ಅನೇಕರು ಈ ರೀತಿ ಕೆಲವರು ಹೇಳಿದ್ದನ್ನು ಕೇಳಿದ್ದೇವೆ. ಇಂದು ಇಂತಹ ಸಂದರ್ಭಗಳು ಅತಿ ವಿರಳ. 

*****

"ಅಳಿಯ ಅಲ್ಲ; ಮಗಳ ಗಂಡ" ಅನ್ನುವ ಗಾದೆಯ ಹಿಂದೆ ಇಷ್ಟು ಇತಿಹಾಸವಿದೆ. ಹಿಂದೆ ಇದರ ಅರ್ಥ ಇವೆರಡೂ ಬೇರೆ ಬೇರೆ ಎಂದು. 

ಕಾಲಕ್ರಮದಲ್ಲಿ ಭಾಷೆಯ ಬದಲಾವಣೆ ಆದಂತೆ ಗಾದೆಯ ಪ್ರಯೋಗದಲ್ಲಿಯೂ ಬದಲಾವಣೆ ಆಗಿದೆ. ಈಗ "ಅಳಿಯ ಅಲ್ಲ; ಮಗಳ ಗಂಡ" ಅನ್ನುವ ಗಾದೆಗೆ ಎರಡೂ ಒಂದೇ ಎನ್ನುವ ಅರ್ಥ ಬಂದಿದೆ!

*****

ಕೋಶಗಳಲ್ಲಿ ಕೊಡುವ ಸಮಾನಾರ್ಥಕ ಶಬ್ದಗಳಲ್ಲಿ (Synonyms) ಸೂಕ್ಷ್ಮವಾದ, ಆದರೆ ಮುಖ್ಯವಾದ ಅರ್ಥ ವ್ಯತ್ಯಾಸಗಳು ಇರುತ್ತವೆ ಎನ್ನುವುದನ್ನು ವಿಶದೀಕರಿಸುವುದಕ್ಕೆ ಇಷ್ಟೆಲ್ಲಾ ಹೇಳಬೇಕಾಯಿತು. 

Friday, February 9, 2024

ಬಂದನೇನೇ? ರಂಗ ಬಂದನೇನೇ?


ಶ್ರೀಪುರಂದರದಾಸರ ಪದಗಳಲ್ಲಿರುವ ಸೊಬಗನ್ನು ನೋಡುತ್ತಾ ಅವರ ಅಹೋಬಲ ನರಸಿಂಹನ ಅವತಾರದ ವರ್ಣನೆ ನೋಡಿದೆವು. ನರಸಿಂಹನ ಉದ್ಭವದ ದೃಶ್ಯ ತಿಳಿಸುವಾಗ ಅವರು ಉಪಯೋಗಿಸಿರುವ ಗಟ್ಟಿ ಶಬ್ದಗಳ ಸೊಗಸು ಮತ್ತು ಆ ಸಂದರ್ಭದ ಭೀಕರತೆಯನ್ನು ಹಿಡಿದಿಟ್ಟಿರುವ ರೀತಿಯನ್ನು ನೋಡಿಯಾಯಿತು. ಅದೇ ಪದದಲ್ಲಿ ನರಸಿಂಹನು ಶಾಂತವಾದಾಗ ಹೇಗೆ ಸೌಮ್ಯ ಪದಗಳು ಪ್ರಯೋಗಿಸಿ ಉಗ್ರ ನರಸಿಂಹನನ್ನು ಪ್ರಹ್ಲಾದ ವರದನನ್ನಾಗಿ ತೋರಿಸಿದರು ಅನ್ನುವುದನ್ನೂ ನೋಡಿದೆವು. 

ಶ್ರೀ ಪುರಂದರದಾಸರ ಶ್ರೀಕೃಷ್ಣನ ವರ್ಣನೆಗಳುಳ್ಳ ಪದಗಳು ನೂರಾರು. ಶ್ರೀಕೃಷ್ಣನ ಜೀವಿತದ ಹಲವು ಘಟ್ಟಗಳಲ್ಲಿ ಬರುವ ಬೇರೆ ಬೇರೆ ಸಂದರ್ಭಗಳನ್ನು ದಾಸರು ತಮ್ಮ ಅನೇಕ ಪದಗಳಲ್ಲಿ ಹಿಡಿದಿಟ್ಟಿದ್ದಾರೆ. ಪ್ರತಿಪದದಲ್ಲಿಯೂ  ಅವರು ಸಂದರ್ಭಕ್ಕೆ ತಕ್ಕಂತೆ ಭಾಷೆಯನ್ನು ಪ್ರದರ್ಶಿಸಿದ್ದಾರೆ. 

ಆಗ ತಾನೇ ಹೆಜ್ಜೆ ಇಡಲು ಪ್ರಾರಂಭಿಸಿರುವ ಪುಟ್ಟ ಕೃಷ್ಣನ ಬರುವಿಕೆ ವರ್ಣಿಸುವ ಈ ಕೆಳಕಂಡ ಪದವು ಬಹಳ ಜನಪ್ರಿಯ. ಹಳ್ಳಿಗಳಲ್ಲಿ ಹಾಡುವುದನ್ನು ಕಲಿಯುವ ಮಕ್ಕಳಿಗೆ ಮೊದಲಿಗೆ ಕಲಿಸುತ್ತಿದ್ದ ಹಾಡುಗಲ್ಲಿ ಇದೂ ಒಂದು. ಕಲಿಯುವ ವಯಸ್ಸಿನ ಮಕ್ಕಳಿಗೆ ಸುಲಭವಾಗಿ ಅರ್ಥ ತಿಳಿಯುವ, ಹೇಳುತ್ತಿದ್ದಂತೆ ಹಾಡಿನ ರೂಪ ತಾಳುವ, ತನ್ನ ಪದಗಳಲ್ಲಿಯೇ ಒಂದು ರೀತಿಯ ಮೋಹಕ ಅನುಭವ ಕೊಡುವ ಕೃತಿ ಇದು. 

*****

ಪುಟ್ಟ ಕೃಷ್ಣ ಬರುವಾಗ ಹೇಗಿರುತ್ತಾನೆ? ಅವನ ವೇಷಭೂಷಣಗಳು ಹೇಗೆ? ಆ ವೇಷ ಮತ್ತು ಅಲಂಕಾರದ ವಸ್ತುಗಳು ಮತ್ತು ಅವನು ನಡೆದಾಡುವಾಗ ಆಗುವ ಶಬ್ಧಗಳೇನು? ಇದೇ ರೀತಿ ಇರುವ ಕಂದಮ್ಮಗಳು ನಡೆದಾಡುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ.  ಈ ವರ್ಣನೆ ಕೇಳುತ್ತಿದ್ದಂತೆ ನಮ್ಮ ಮನಸ್ಸಿನಲ್ಲಿ ಒಂದು ರೂಪ ಮೂಡುತ್ತದೆ! 

ಶ್ರೀಕೃಷ್ಣ ಬಂದನೇ ಎಂದು ಒಂದು ವ್ಯಕ್ತಿ ಮತ್ತೊಬ್ಬಳನ್ನು ಕೇಳುವ ಪ್ರಶ್ನೆಯ ರೀತಿ ಈ ಕೃತಿ ರಚನೆ ಮಾಡಿದ್ದಾರೆ:

ಬಂದನೇನೇ ರಂಗ ಬಂದನೇನೇ? 
ತಂದೆ ಬಾಲಕೃಷ್ಣ ನವನೀತ ಚೋರ 
ಬಂದನೇನೇ ರಂಗ ಬಂದನೇನೇ?

ಘಲು ಘಲು ಘಲುರೆಂಬೊ ಪೊನ್ನಂದುಗೆ ಗೆಜ್ಜೆ 
ಹೊಳೆ ಹೊಳೆ ಹೊಳೆಯುವ ಪಾದವನೂರುತ 
ನಲಿನಲಿದಾಡುವ ಉಂಗುರ ಅರಳೆಲೆ 
ಥಳ ಥಳ ಥಳ ಹೊಳೆಯುತ ಶ್ರೀಕೃಷ್ಣ 

ಕಿಣಿ ಕಿಣಿ ಕಿಣಿರೆಂಬೊ ಕರದ ಕಂಕಣ ಬಳೆ 
ಝಣ ಝಣ ಝಣರೆಂಬೊ ನಡುವಿನಗಂಟೆ 
ಠಣ ಠಣ ಠಣರೆಂಬೊ ಪಾದದ ತೊಡವಿನ 
ಮಿಣಿ ಮಿಣಿ ಮಿಣಿ ಕುಣಿದಾಡುತ ಶ್ರೀಕೃಷ್ಣ 

ಹಿಡಿ ಹಿಡಿ ಹಿಡಿಯೆಂದು ಪುರಂದರ ವಿಠಲನ 
ದುಡು ದುಡು ದುಡು ದುಡನೆ ಓಡಲು 
ನಡಿ  ನಡಿ  ನಡಿಯೆಂದು  ಮೆಲ್ಲನೆ ಪಿಡಿಯಲು 
ಬಿಡಿ ಬಿಡಿ ಬಿಡಿ ದಮ್ಮಯ್ಯ ಎನ್ನುತ 

ಬಂದನೇನೇ ರಂಗ ಬಂದನೇನೇ? 
ತಂದೆ ಬಾಲಕೃಷ್ಣ ನವನೀತ ಚೋರ 
ಬಂದನೇನೇ ರಂಗ ಬಂದನೇನೇ?

ದಾಸರು ಪ್ರಯೋಗಿಸಿರರುವುದು ಅತಿ ಕಡಿಮೆ ಪದಗಳು. ಪ್ರತಿ ಆಭರಣ ಮತ್ತು ಪುಟ್ಟ ಕೃಷ್ಣನ ಚಲನೆಯ ಶಬ್ದ ಮತ್ತು ನಡೆಗಳನ್ನು ಮತ್ತೆ ಮತ್ತೆ ಪ್ರಯೋಗಿಸುವುದರ ಮೂಲಕ ಒಂದು ರೀತಿಯ ವಿಶೇಷ ಅನುಭವವನ್ನು ಕೊಟ್ಟಿದ್ದಾರೆ. ಈ ಕೃತಿ ಒಂದು ಕಲ್ಲು ಸಕ್ಕರೆಯಂತೆ. ಸಿಹಿ ತಿಂಡಿಯಂತೆ ಒಮ್ಮೆಲೇ ತಿಂದು ಮುಗಿಸಬಾರದು. ಮತ್ತೆ ಮತ್ತೆ ಮೆಲುಕಿ ಹಾಕಿ ಆನಂದವನ್ನು ಅನುಭವಿಸಬೇಕು. ದೇವರನ್ನು ನಂಬುವುದೂ, ಬಿಡುವುದೂ ಅವರವರಿಗೆ ಸೇರಿದ ವಿಷಯ. ಆದರೆ ಸಾಹಿತ್ಯ-ಸಂಗೀತಗಳ ಸೊಗಸಿನ ಅನುಭವಕ್ಕೆ ಬೇರೆಲ್ಲ ವಿಷಯಗಳ ಸಂಪರ್ಕವಿಲ್ಲ. 

ಅಹೋಬಲ ನರಸಿಂಹನ ಉದ್ಭವವನ್ನೂ ಮತ್ತು ಈ ಬಾಲಕೃಷ್ಣನ ಆಗಮನವನ್ನೂ ಜೊತೆಯಲ್ಲಿ ಕೇಳಿದರೆ ಸಮಯಕ್ಕೆ ಸರಿಯಾದ ಪದ ಪ್ರಯೋಗದ ಜಾಣ್ಮೆಯನ್ನೂ ಕೈಚಳಕವನ್ನು ದಾಸರ ಪದಗಲ್ಲಿ ಕಾಣಬಹುದು. 

ಹರಿದಾಸರತ್ನಂ ಗೋಪಾಲದಾಸರು "ಗೆಜ್ಜೆ ಗೋಪಾಲದಾಸರು" ಎಂದೇ ಪ್ರಸಿದ್ಧರಾದವರು. ಅರವತ್ತು, ಎಪ್ಪತ್ತು, ಎಂಭತ್ತರ ದಶಕದಲ್ಲಿ ಬಹಳ ಪ್ರಸಿದ್ಧರಾದ ಮತ್ತು ಹರಿಕಥೆ ಎಂಬ ಕಲೆಯಲ್ಲಿ ಬಹಳ ನಿಪುಣರಾದವರು. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸಾಹಿತ್ಯ ಮತ್ತು ಸಂಗೀತಕ್ಕೆ ಸರಿಯಾಗಿ ಹರಿಕಥೆ ಮಾಡುವಾಗಲೇ ಹೆಜ್ಜೆ ಹಾಕುತ್ತಿದ್ದವರು. ದಾಸರ ಪದಗಳನ್ನು ಹಾಡುವುದರಲ್ಲಿ ಬಹಳ ವಿಶೇಷ ಪರಿಶ್ರಮ ಹೊಂದಿದ್ದರು. ಈ ಮೇಲಿನ ಕೃತಿಯನ್ನು ಸುಮಾರು ಮೂವತ್ತು ನಲವತ್ತು ನಿಮಿಷ ಹಾಡುತ್ತಿದ್ದರು. ಪ್ರತಿಯೊಂದು ನುಡಿಯನ್ನೂ ಬೇರೆ ಬೇರೆ ರೀತಿಯಲ್ಲಿ ಹಾಡುತ್ತಿದ್ದರು. ಪ್ರತಿ ಸಾರಿಯೂ ಅದೊಂದು ವಿಶಿಷ್ಟ ಅನುಭವ. ಕಡೆಯ ನುಡಿಯಲ್ಲಂತೂ ಶ್ರೀಕೃಷ್ಣ ಓಡುವುದನ್ನು, ಮತ್ತು ಅವನನ್ನು ಮೆಲ್ಲಗೆ ಹಿಡಿಯುವುದನ್ನೂ, ಅವನು ದಮ್ಮಯ್ಯಗುಡ್ಡೆ ಹಾಕಿ ಬಿಡಿಸಿಕೊಂಡು ಓಡುವುದನ್ನೂ ಶಬ್ದಗಳ ಮೂಲಕವೇ ಚಿತ್ರಿಸುತ್ತಿದ್ದರು. ವೀಣಾ ರಾಜಾರಾಯರು ತಮ್ಮ ಸಂಗೀತಾಭ್ಯಾಸಿ ಶಿಷ್ಯರಿಗೆ ಈ ಪದವನ್ನು ವಿಶೇಷವಾಗಿ ಕಲಿಸುತ್ತಿದ್ದರು. 

*****

ಇಂದು ಪುಷ್ಯ ಬಹುಳ ಅಮಾವಾಸ್ಯೆ ಶ್ರೀ ಪುರಂದರದಾಸರ ಪುಣ್ಯ ದಿನ. ಅವರನ್ನು ನೆನೆಯಲು ಸುದಿನ. 

ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ 
ಪುರಂದರ ಗುರಂ ವಂದೇ ದಾಸ ಶ್ರೇಷ್ಠಮ್ ದಯಾನಿಧಿಮ್ 

Saturday, February 3, 2024

ಮಹದಾದಿ ದೇವಾ ನಮೋ

 


ಅನೇಕ ದಶಕಗಳ ಹಿಂದೆ ನಾವು ಶಾಲೆಗಳಲ್ಲಿ ಕಲಿಯುತ್ತಿದ್ದಾಗ ಅಂದಿನ ಅಧ್ಯಾಪಕರು ಕೆಲವು ವಿಷಯಗಳನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ಬರೆಯುವ ಅಕ್ಷರಗಳು ಗುಂಡಾಗಿ ಚೆನ್ನಾಗಿರಬೇಕು, ಬರವಣಿಗೆ ಸೊಟ್ಟಾಗಿರದೆ ನೇರವಾಗಿ ಬರೆಯಬೇಕು, ಸಂದರ್ಭಕ್ಕೆ ಸರಿಯಾದ ಪದಗಳನ್ನು ಉಪಯೋಗಿಸಬೇಕು, ಬರೆದುದನ್ನು ಬೇರೆಯವರು ಓದುವಾಗ ಓದುಗನಿಗೆ ಸುಲಭವಾಗಿ ಅರ್ಥ ಆಗಬೇಕು, ಮುಂತಾದವು. ಒಮ್ಮೆ ಉಪಯೋಗಿಸಿದ ಪದವನ್ನು ಆದೇ ವಾಕ್ಯದಲ್ಲಿ ಮತ್ತೆ ಉಪಯೋಗಿಸಬಾರದು; ಅದೇ ವಾಕ್ಯವೇನು, ಆ ಪ್ಯಾರಾದಲ್ಲಿಯೇ ಮತ್ತೆ ಉಪಯೋಗಿಸಬಾರದು ಎನ್ನುವುದು ಮತ್ತೊಂದು. ಹೀಗೆ ಮಾಡುವುದರಿಂದ ನಮ್ಮ ಪದಸಂಪತ್ತು ಹೆಚ್ಚುತ್ತದೆ ಎನ್ನುವ ಕಿವಿಮಾತು ಕೂಡ ಇದರ ಜೊತೆಯಲ್ಲಿ ಇರುತ್ತಿತ್ತು. ಐದು ಅಂಕಗಳು ತಪ್ಪಿಲ್ಲದ ಮತ್ತು ಅಚ್ಚುಕಟ್ಟಾದ ಬರವಣಿಗೆಗೆ ಎಂದು ಮೀಸಲು ಸಹ ಇಡುತ್ತಿದ್ದರು. 

ನಾವು ಪ್ರಾಥಮಿಕ ಶಾಲಾ ತರಗತಿಗಳಲ್ಲಿ ಇದ್ದಾಗ (ಮೊದಲ ನಾಲ್ಕು ವರ್ಷಗಳು, ಅಂದರೆ ಇಂದಿನ ನಾಲ್ಕನೇ ತರಗತಿವರೆಗೆ) ಸ್ಲೇಟು ಮತ್ತು ಬಳಪ ಉಪಯೋಗಿಸುತ್ತಿದ್ದೆವು. ನೋಟ್ ಬುಕ್ಕು ಮತ್ತು ಪೆನ್ಸಿಲ್ ಅಥವಾ ಪೆನ್ನು  ಕಂಡರಿಯೆವು. ಆ ಸ್ಲೇಟಿನ ಸುತ್ತ ಮರದ ಚೌಕಟ್ಟು ಇರುತ್ತಿತ್ತು. ಅಕ್ಷರ ಸರಿ ಇಲ್ಲದಿದ್ದರೆ ಉಪಾಧ್ಯಾಯರು ಆ ಸ್ಲೇಟಿನ ಚೌಕಟ್ಟಿನಿಂದಲೇ ಬೆರಳುಗಳ ಹಿಂದೆ ಹೊಡೆಯುತ್ತಿದ್ದರು. ಇಂದಿನಂತೆ ಶಿಕ್ಷಕರು ಮಕ್ಕಳಿಗೆ ಹೊಡೆದರೆ ಪೋಷಕರು ಶಾಲೆಗೇ ಹೋಗಿ ಜಗಳ ಆಡುತ್ತಿರಲಿಲ್ಲ. ಪ್ರತಿಯಾಗಿ "ನಮ್ಮ ಮಗನಿಗೆ ಚೆನ್ನಾಗಿ ಹೊಡೆಯಿರಿ. ಸರಿಯಾಗಿ ಬುದ್ಧಿ ಬರಲಿ" ಎಂದು ಹೇಳುವ ಪೋಷಕರೂ ಇದ್ದರು! ಮುದ್ದಾದ ಅಕ್ಷರಗಳಲ್ಲಿ ತಪ್ಪಿಲ್ಲದೆ ಬರೆಯುವ ವಿದ್ಯಾರ್ಥಿಗಳು ಅಧ್ಯಾಪಕರಿಗೆ ಅಚ್ಚು ಮೆಚ್ಚು. 

ಅದಿನ್ನೂ ಕನ್ನಡ ನವೋದಯದ ಕಾಲ. ನವ್ಯ ಮತ್ತು ಬಂಡಾಯ ಎನ್ನುವವು ಇನ್ನೂ ಜನಿಸಿರಲಿಲ್ಲ. ಪಠ್ಯ ಪುಸ್ತಕದ ಪದ್ಯಗಳು ಸಾಮಾನ್ಯವಾಗಿ ಕನ್ನಡದ ಹೆಸರಾಂತ ಕಾವ್ಯಗಳ ಭಾಗವೋ  ಅಥವಾ ನವೋದಯ ಹರಿಕಾರರ ಪದ್ಯಗಳೋ ಆಗಿರುತ್ತಿದ್ದವು. ಶಿಕ್ಷಕರು ಅವುಗಳಲ್ಲಿನ ಕಾವ್ಯಗುಣಗಳನ್ನು ಎತ್ತಿ ಹೇಳುತ್ತಿದ್ದರು. ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ (ಐದರಿಂದ ಹತ್ತನೇ ತರಗತಿಗಳು) ವಿದ್ಯಾರ್ಥಿಗಳಿಗೆ ಈ ವಿಷಯಗಳು ಸ್ವಲ್ಪಮಟ್ಟಿಗೆ ಅರ್ಥ ಆಗುತ್ತಿದ್ದವು. ಈ ಕಾರಣದಿಂದಲೇ ಆಗಿನ ಎಲ್ ಎಸ್ (ಲೋಯರ್ ಸೆಕೆಂಡರಿ, ಅಂದರೆ ಎಂಟನೇ ತರಗತಿವರೆಗೆ) ಓದಿದ್ದವರೂ ಕಾವ್ಯ-ನಾಟಕಗಳಲ್ಲಿನ ಸೊಗಸನ್ನು ಅರಿಯಬಲ್ಲವರಾಗಿದ್ದರು. ಅವರ ಮುಂದಿನ ಜೀವನದಲ್ಲಿ ಕೆಲವು ರಸ ನಿಮಿಷಗಳನ್ನು ಈ ಕಾರಣದಿಂದ ಪಡೆಯಬಲ್ಲವರಾಗಿದ್ದರು. 

*****

ಶ್ರೀಮಹಾವಿಷ್ಣು ಅನೇಕ ಅವತಾರಗಳನ್ನು ಎತ್ತಿದ್ದರೂ ದಶಾವತಾರಗಳಿಗೆ ಹೆಚ್ಚಿನ ಮಹತ್ವ ಬಂದಿದೆ. ಇವುಗಳಲ್ಲಿಯೂ ಶ್ರೀರಾಮ ಮತ್ತು ಶ್ರೀಕೃಷ್ಣ ಅತಿಹೆಚ್ಚು ಪೂಜಿತರು. ಈ ಅವತಾರಗಳ ಗ್ರಂಥಗಳು ಮಹಾಕಾವ್ಯಗಳ ಸಾಲಿನಲ್ಲಿ ಅತಿ ಎತ್ತರದಲ್ಲಿ ನಿಂತಿದುದರಿಂದ ಈ ರೀತಿ ಇರಬಹುದು. ಇವೆರಡರ ನಂತರ ಅತಿ ಹೆಚ್ಚು ಪೂಜಿತವಾದ ರೂಪ ಶ್ರೀನರಸಿಂಹ. ಈ ಮೂರು ರೂಪಗಳಿಗೆ ಪ್ರಸಿದ್ಧವಾದ ನೂರಾರು ಕ್ಷೇತ್ರಗಳು ದೇಶ ವಿದೇಶಗಳಲ್ಲಿ ಹರಡಿವೆ. 

ಮಹಾಭಾರತ, ಭಾಗವತಾದಿ ಗ್ರಂಥಗಳಲ್ಲಿ ಮಹಾವಿಷ್ಣುವಿನ ಅನೇಕ ಅವತಾರಗಳ ವರ್ಣನೆಯಿದೆ. ಸಾಮಾನ್ಯವಾಗಿ ಎಲ್ಲಾರೂಪಗಳನ್ನೂ  "ಅಧ್ಭುತ" ಎಂದು ನಿರ್ದೇಶಿಸುತ್ತಾರೆ. ಆದರೆ ನರಸಿಂಹ ರೂಪವನ್ನು "ಅತ್ಯದ್ಭುತ" ಎಂದು ಹೇಳುತ್ತದೆ ಶ್ರೀಮದ್ಭಾಗವತ. ಎಲ್ಲ ರೂಪಗಳಲ್ಲಿಯೂ ವಿಶೇಷ ಸ್ಥಾನ ಶ್ರೀನರಸಿಂಹ ರೂಪಕ್ಕೆ. ನರಸಿಂಹ ಮಂತ್ರ ಹೇಳುತ್ತದೆ:

ಉಗ್ರಂ ವೀರಂ ಮಹಾವಿಷ್ಣುಮ್ ಜ್ವಲಂತಂ ಸರ್ವತೋಮುಖಮ್ 

ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮೃತ್ಯುಮ್ ನಮಾಮ್ಯಹಮ್ 

ನರಸಿಂಹರೂಪ ಮೃತ್ಯುವಿನ ಅಭಿಮಾನಿ ದೇವತೆಗಳಿಗೂ ಮೃತ್ಯು ಸ್ವರೂಪ. "ಕಠೋಪನಿಷತ್"ನಲ್ಲಿ ನಚಿಕೇತನಿಗೆ ಉಪದೇಶ ಮಾಡುವಾಗ ಯಮನು ಹೇಳುತ್ತಾನೆ: "ಮಹಾಪ್ರಳಯ ಕಾಲದಲ್ಲಿ ಮಹಾಪುರುಷನು ಎಲ್ಲವನ್ನೂ ತಿನ್ನುವಾಗ ಅವನಿಗೆ ನಾನು ಒಂದು ಉಪ್ಪಿನಕಾಯಿ!"

ನರಸಿಂಹ ಕ್ಷೇತ್ರಗಳಲ್ಲಿ ಒಂದು ವಿಶೇಷ ಕಾಣಬಹುದು. ಹೆಚ್ಚಿನವು ಬೆಟ್ಟ ಪ್ರದೇಶದಲ್ಲಿ ಇವೆ. ಬೆಟ್ಟದ ಮೇಲೆ ಯೋಗಾನರಸಿಂಹಸ್ವಾಮಿ ಮತ್ತು ಬೆಟ್ಟದ ಕೆಳಗೆ ತಪ್ಪಲಿನಲ್ಲಿ ಭೋಗಾನರಸಿಂಹಸ್ವಾಮಿ ಅಥವಾ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳು ಇರುತ್ತವೆ. 

"ಅಹೋಬಲ ನರಸಿಂಹ ಕ್ಷೇತ್ರ" ಆಂಧ್ರ ಪ್ರದೇಶದ ಕರ್ನೂಲ್ ಪಟ್ಟಣದಬಳಿ ಇದೆ. ಇದೇ ಕ್ಷೇತ್ರದಲ್ಲಿ ನರಸಿಂಹಾವತಾರವಾಗಿ ನರಹರಿಯು ಹಿರಣ್ಯಕಶಿಪುವನ್ನು  ಕೊಂದನು ಎಂದು ಪ್ರತೀತಿ. ಈ ಕ್ಷೇತ್ರಕ್ಕೆ "ಗರುಡಾದ್ರಿ" ಎನ್ನುವುದೂ ಇನ್ನೊಂದು ಹೆಸರು. ಇಲ್ಲಿ ಒಂಭತ್ತು ನರಸಿಂಹನ ದೇವಾಲಯಗಳು ಮತ್ತು ಇತರ ದೇವಾಲಯಗಳೂ ಇವೆ. ಶ್ರದ್ದಾಳು ಭಕ್ತರು ಜೀವನದಲ್ಲಿ ಒಮ್ಮೆಯಾದರೂ ಈ ಕ್ಷೇತ್ರ ದರ್ಶನ ಮಾಡಬೇಕೆಂದು ಆಶಿಸುತ್ತಾರೆ. ಭಾರ್ಗವ ನರಸಿಂಹ, ಯೋಗಾನಂದ ನರಸಿಂಹ, ಛತ್ರವಟ ನರಸಿಂಹ, ಅಹೋಬಲ ನರಸಿಂಹ ಅಥವಾ ಉಗ್ರ ನರಸಿಂಹ, ವರಾಹ ನರಸಿಂಹ, ಮಾಲೋಲ ನರಸಿಂಹ ಅಥವಾ ಸೌಮ್ಯ ನರಸಿಂಹ, ಜ್ವಾಲಾ ನರಸಿಂಹ, ಪಾವನ ನರಸಿಂಹ ಮತ್ತು ಕಾರಂಜ ನರಸಿಂಹ ಎಂದು ಈ ಒಂಭತ್ತು ನರಸಿಂಹ ದೇವಾಲಯಗಳು ಇಲ್ಲಿ ಇವೆ. ಕೆಲವರು ತಮ್ಮ ಮನೆಗಳಿಗೆ "ಮಾಲೋಲ" ಎಂದು ಹೆಸರಿಡುವುದು ಈ ಸೌಮ್ಯ ನರಸಿಂಹನ ನೆನಪಿನಲ್ಲಿಯೇ. 

*****

ಶ್ರೀಪುರಂದರ ದಾಸರು ನಮ್ಮ ನಾಡು ಕಂಡ ಅತ್ಯಂತ ಪ್ರತಿಭಾಶಾಲಿ ಕವಿಗಳಲ್ಲಿ ಮೊದಲ ಎಣಿಕೆಯಲ್ಲಿ ನಿಲ್ಲುತ್ತಾರೆ. ಭಕ್ತಿಯ ಭರದಲ್ಲಿ ಅವರ ಪದ, ಸುಳಾದಿ, ಉಗಾಭೋಗಗಳಲ್ಲಿ ಕಾವ್ಯ ಗುಣಗಳನ್ನು ಮರೆಯುವುದೇ ಹೆಚ್ಚು. ಅವರ ಪ್ರತಿಯೊಂದು ಕೃತಿಯಲ್ಲಿಯೂ ಗಮನಿಸಿದರೆ ಅನೇಕ ಕಾವ್ಯ ಗುಣಗಳನ್ನು ಕಾಣಬಹುದು. ಅವರೊಬ್ಬ ವರಕವಿ. ಅವರೆಂದೂ ಹಲಗೆ-ಬಳಪ ಹಿಡಿದೋ, ಲೇಖನಿ ಹಿಡಿದೋ ಕೃತಿ ರಚನೆ ಮಾಡಿದಂತೆ ಕಾಣುವುದಿಲ್ಲ. ಅವರು ಹೇಳಿದ್ದೆಲ್ಲಾ ಪದವಾಯಿತು, ಹಾಡಾಯಿತು, ಕೃತಿಯಾಯಿತು. "ಕರ್ಣಾಟ ಸಂಗೀತ ಪಿತಾಮಹ" ಎಂದು ಕರೆಸಿಕೊಳ್ಳುವ ಅವರು ಸಾಹಿತ್ಯ-ಸಂಗೀತ ಎರಕದ ರಚನೆಗಳಿಗೆ ಕೊನೆಯ ಮಾತು.  

ಶ್ರೀಪುರಂದರದಾಸರು ತಮ್ಮ ಜೀವಿತ ಕಾಲದಲ್ಲಿ ದೇಶವನ್ನೆಲ್ಲಾ ಸುತ್ತಿ ಅನೇಕ ತೀರ್ಥ ಕ್ಷೇತ್ರಗಳನ್ನು ಕಣ್ಣಾರೆ ನೋಡಿದವರು. ಪ್ರತಿ ಕ್ಷೇತ್ರದಲ್ಲಿ ಅಲ್ಲಲ್ಲಿನ ದೇವಾಲಯಗಳಲ್ಲಿ ಕೃತಿ ರಚನೆ ಮಾಡಿದವರು. ಉಡುಪಿ, ಫಂಡರಾಪುರ, ತಿರುಪತಿ, ಶ್ರೀರಂಗ, ಅಹೋಬಲ ಮುಂತಾದ ಕ್ಷೇತ್ರಗಲ್ಲಿ ಅವರು ರಚಿಸಿದ ಅನೇಕ ಕೃತಿಗಳು ಇಂದೂ ಹಾಡಲ್ಪಡುತ್ತಿವೆ. ಅವರ ಅಹೋಬಲ ನಾರಸಿಂಹನ ಕೃತಿಯ ಕೆಲವು ವಿಶೇಷಗಳನ್ನು ನೋಡೋಣ. 

"ಮಹದಾದಿದೇವ ನಮೋ ಮಹಾಮಹಿಮನೇ ನಮೋ" ಎನ್ನುವುದು ಅಹೋಬಲದಲ್ಲಿ ರಚಿತವಾದ ಕೃತಿ. ಇದರ ಮೂರು ನುಡಿಗಳಲ್ಲಿ ಅವರು ನರಸಿಂಹಾವತಾರದ ಸಂಕ್ಷಿಪ್ತ ವರ್ಣನೆಯನ್ನು ಕೊಡುತ್ತಾರೆ.:

ಮಹದಾದಿ ದೇವಾ ನಮೋ ಮಹಾಮಹಿಮನೇ ನಮೋ 

ಪ್ರಹ್ಲಾದವರದ ಅಹೋಬಲ ನಾರಸಿಂಹ 

ಮೊದಲ ನುಡಿಯಲ್ಲಿ ನರಸಿಂಹನ ಉದ್ಭವದ ಭೀಷಣವನ್ನು ಹೇಳುತ್ತಾರೆ. ಅವರು ಉಪಯೋಗಿಸಿರುವ ಪದಗಳು ಆ ಅವತಾರ ಪ್ರಕಟವಾದ ಭಯಂಕರ ದೃಶ್ಯವನ್ನು ನಮಗೆ ಕೊಡುತ್ತವೆ. 

ಧರಣಿಗುಬ್ಬಸವಾಗೆ  ತಾರಾಪಥವು ನಡುಗೆ 

ಸುರರು ಕಂಗೆಟ್ಟೋಡೆ ನಭವ ಬಿಟ್ಟು 

ವನಗಿರಿಗಳಲ್ಲಾಡೆ  ಶರಧಿಗಳು ಕುದಿದುಕ್ಕೆ 

ಉರಿಯನುಗುಳುತ ಉದ್ಭವಿಸಿದೆ ನಾರಸಿಂಹಾ 

ಸಕಲ ದೇವತೆಗಳ ಪ್ರಾರ್ಥನೆಯ ಮೇರೆಗೇ ಈ ಅವತಾರವಾದದ್ದು. ದೇವತೆಗಳು ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಆ ಅವತಾರದ ಭೀಕರತ್ವ ಅವರ ಊಹೆಗೂ ನಿಲುಕಲಿಲ್ಲ. ಅವರವರ ಸ್ಥಾನಗಳನ್ನೇ ಬಿಟ್ಟು ಸ್ವರಕ್ಷಣೆಗೆ ಓಡಿ ಹೋದರು! ಭದ್ರವಾಗಿ ನಿಲ್ಲುವ ಗುಣಕ್ಕೆ ಉದಾಹರಣೆಯಾದ ಬೆಟ್ಟಗಳೂ ಅದುರಿಹೋದವು. ಇಡೀ ಸೃಷ್ಟಿಯೇ ತಲ್ಲಣಿಸಿತು. ವಿಶಾಲ ಸಮುದ್ರದ  ಜಲರಾಶಿ ಒಂದೇ ಕ್ಷಣದಲ್ಲಿ ಕುದ್ದು ಉಕ್ಕಿದವು!

ಪ್ರಕಟವಾದ ನರಸಿಂಹನು ರಕ್ಕಸನನ್ನು ಹೇಗೆ ಕೊಂದ ಎನ್ನುವುದು ಅವರು ವರ್ಣಿಸುವ ರೀತಿ:

ಸಿಡಿಲಂತೆ ಘರ್ಜಿಸುತ ಉರಿವ ನಾಲಗೆ ಚಾಚಿ 

ಅಡಿಗಡಿಗೆ ಲಂಘಿಸುತ ಕೋಪದಿಂದ 

ಮುಡಿಪಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿ 

ಕಡುಉದರ ಬಗೆದೆ ಕಡುಗಲಿ ನಾರಸಿಂಹಾ 

ಸಿಂಹದ ಲಂಘನ; ಸಿಂಹ ಘರ್ಜನೆ. ಹಿರಣ್ಯಕನ ಜುಟ್ಟು ಹಿಡಿದು ಕುಕ್ಕಿ ಉಗುರಿಂದ ಬಗೆದ. ಗದೆ  ಹಿಡಿದು ಹತ್ತು ನಿಮಿಷ ಹಿರಣ್ಯ ಯುದ್ಧ ಮಾಡುವುದು ಸಿನಿಮಾದಲ್ಲಿ ಮಾತ್ರ.  ಹಿರಣ್ಯಕನ ವಧೆಯಾಯಿತು. 

ಅವತಾರ ತಾಳಿದ ಮುಖ್ಯ ಕೆಲಸವಾಯಿತು. ದೇವತೆಗಳ ಮತ್ತು ಪ್ರಹ್ಲಾದನ ಪ್ರಾರ್ಥನೆಯಿಂದ ಈಗ ನರಸಿಂಹನು ಶಾಂತನಾಗಿದ್ದಾನೆ. ಲಕ್ಷ್ಮಿಯು ತೊಡೆಯಮೇಲೆ ಕುಳಿತಿದ್ದಾಳೆ. ಈಗ ಅವನು "ಮಾಲೋಲ" ಆಗಿದ್ದಾನೆ. ಪ್ರಹ್ಲಾದವರದ ರೂಪ ತಾಳಿದ್ದಾನೆ. ದಾಸರು ಉಪಯೋಗಿಸುವ  ಪದಗಳೂ ಸೌಮ್ಯವಾಗುತ್ತವೆ:

ಸರಸಿಜೋದ್ಭವ ಹರ ಪುರಂದರಾದಿ ಸಮಸ್ತ 

ಸುರರು ಅಂಬರದಿ ಹೂಮಳೆಯ ಕರೆಯೆ 

ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರ 

ಕರುಣಿಸಿದೆ ಪುರಂದರ ವಿಠಲ ನಾರಸಿಂಹ 

ಪ್ರಹ್ಲಾದನಿಗೆ ಕರುಣಿಸಿದ್ದು ಆಯಿತು. ಈಗಲೂ ಬರುವ ಭಕ್ತರಿಗೆ ಕರುಣಿಸುತ್ತಿರುವೆ ಎನ್ನುವುದೇ ತಾತ್ಪರ್ಯ. 

ಅತಿಯಾದ ಪಕ್ಕವಾದ್ಯಗಳ ಆಡಂಬರವಿಲ್ಲದೆ ಸಾಹಿತ್ಯಕ್ಕೆ ಒತ್ತುಕೊಟ್ಟು ಹಾಡಿರುವ ಅನೇಕ ಮುದ್ರಿಕೆಗಳು  ಯೂಟ್ಯೂಬ್ನಲ್ಲಿ ಲಭ್ಯವಿವೆ. 

*****

ನರಸಿಂಹನನ್ನು ವರ್ಣಿಸಲು ಕಠಿಣ ಪದಗಳನ್ನು ಪ್ರಯೋಗಿಸಿದ ದಾಸರು ಬಾಲಕೃಷ್ಣನನ್ನು ವರ್ಣಿಸಲು ಸರಳ ಸುಂದರ ಪದಗಳನ್ನು ಬಳಸುತ್ತಾರೆ. 

ಅದನ್ನು ಇನ್ನೊಮ್ಮೆ ನೋಡೋಣ.