Friday, March 29, 2024

Walk of Fame and Pantages Theatre


The city of Los Angeles is often referred to as the "Entertainment Capital of the World". This term is also used for Las Vegas for the reason of the variety of entertainment available there, including luxurious and large casino-hotels. Los Angeles is a older city and official history dates back to the year 1781, though native inhabitants have been living here since much before. Las Vegas was founded in 1905 and is a relatively new city. Los Angeles is the city known for movie production at its Hollywood area. The movie industry in Hollywood is now over a century old and its many famous studios have been cradle of development of the film industry. Universal, Paramount, Walt Disney, MGM, 20th Century Fox, Sony and other major film studios were instruments for the growth of the movie industry and thereby providing entertainment all over the world. 

Growth of movie industry in different parts of the world over the last few decades notwithstanding, Hollywood continues to be a great centre for movie making. Ramoji Film City near Hyderabad, India, is considered as the biggest film making facility in the world nowadays. Mumbai and Chennai have been big film producing centres for several decades. Mumbai's film system, popularly known as Bollywood, produces nearly double the number of movies produced in the USA. The total number of movies produced in India, all languages put together, nears 3000 in most years!

The growth in the movie industry has been possible due to the contributions of many people over the years. Producers, directors, technicians, film stars and assistant production staff have all made their contributions. As in any other industry, contributions of some people stand out among all the innumerable contributors. The world has many ways of recognising major contributors in all walks of life. Hollywood too has its own methods. The annual Academy Awards, popularly known as Oscars, is one of them. 

"Hollywood Walk of Fame" is a well established system of identifying and recognising substantial contributions of individuals to the movie industry. The area around "Hollywood Boulevard" and the adjoining "Vine Street" was chosen as the venue for this honours as people keep visiting these areas daily and it would be a good place to perpetuate the memory of these achievers. Stars are made for the achievers and embedded on the footpath in this area. Tourists coming to Los Angeles find this "Walk of Fame" an important destination to visit. This practice started in the year 1958 and continues for the last 66 years. So far 2,775 stars are placed, including the one of Andre Romell Young, popularly known as Dr Dre, identified in the recording discipline and included last week, on 19th March, 2024.

*****

Pantages Theatre stands on Hollywood Boulevard. It is a landmark in Hollywood and was the location for the Academy Awards (Oscars) ceremony for some ten years. Alexander Pantages was the creator of many theatres in westren part of USA and Canada. This theatre carries his name as Pantages theatre and is said to be his last theatre. It was made ready and opened on 4th June, 1930. It will be celebrating its centenary year in six years. The theatre ownership has changed many hands over the years. Its uses also have been varied over the years; as a stage show theatre, movie theatre, venue for oscar awards etc. Since 1977 it is used exclusively for stage shows presenting different shows including pop shows and Broadway musicals. 

For getting into the pantages theatre, one has to cross some of the stars embedded on the pathway in Hall of Fame. The grandeur of the theatre has been maintained even with many modifications and changes made to the building over the years. The theatre can accomodate 2,691 viewers for a show. The lobby is marvellous with its zigzags, starbursts, chevrons and exotic figures.  Most of the shows run to full houses. Guests coming to the shows are provided paid parking facilities close to the theatre. The gold and silver coloured decor in multiple geometric patterns is a delightful sight. The live Broadway productions are a big hit with the art loving people of the city as well as tourists. Despite the huge size of the theatre, it is difficult to get tickets for the shows and plays get sold out weeks in advance. A ticket costs anywhere between 150 dollars to 1,000 dollars depending on the show, view of the stage, show time and day of the week.

*****

New York's Broadway shows are very popular but one cannot always go to New York to see the shows. Broadway has two sets of artistes putting up the shows. One set of artistes stay in New York and produce shows there. Another set of artistes are on tour and perform in over 200 cities of North America. These shows are known for their artistic value and great entertainment as well. Students of music, drama and theatre can learn a lot about stage management, creation of sets, and overall production of plays and sustaining them for years. 

We had an opportunity to watch a show of "To Kill a Mocking Bird" at the Pantages theatre in September last year. One may recall that the film with the same name made in 1962 got an Oscar award for best actor to Gregory Peck. It was a great experience. The experience of a live show is entirely different from that of a movie. 

One of the most popular broadway productions is "Chicago, the Musical". It is being staged since 1975 and yet runs to packed houses wherever it is staged. We had an opportunity to watch this live show last fortnight. It was another wonderful experience!

Tuesday, March 19, 2024

ಡಾ. ವಸಂತ ಕವಲಿ - ಒಂದು ನೆನಪು


ಅಮೇರಿಕ ಸಂಯುಕ್ತ ಸಂಸ್ಥಾನಗಳ ಲಾಸ್ ಎಂಜೆಲೆಸ್ ನಗರ ವಿಶ್ವದ ಹೆಸರಾಂತ ನಗರಗಳಲ್ಲೊಂದು. ಇಲ್ಲಿನ "ಹಾಲಿವುಡ್" ಜಗತ್ತಿನ ಮನರಂಜನೆ ರಾಜಧಾನಿ ಎಂದು ಪ್ರಸಿದ್ಧ. ಹಾಲಿವುಡ್ ಮಾದರಿಯಲ್ಲಿಯೇ ನಮ್ಮಲ್ಲಿ ಬಾಲಿವುಡ್, ಸ್ಯಾಂಡಲ್ವುಡ್, ಟಾಲಿವುಡ್, ಕೊಲಿವುಡ್ ಮುಂತಾಗಿ ಮನರಂಜನೆಯ ಸ್ಥಳಗಳನ್ನು ಗುರುತಿಸುತ್ತಾರೆ. ಹಾಲಿವುಡ್ ಪ್ರದೇಶದ "ಹಾಲಿವುಡ್ ಬುಲ್ವಾರ್ಡ್" ಮತ್ತು ಅದರ ಪಕ್ಕದ "ವೈನ್ ಸ್ಟ್ರೀಟ್" ರಸ್ತೆಗಳ ನಡೆದಾಡುವ ಜಾಗಗಳಲ್ಲಿ ಮನರಂಜನೆಯ ಜಗತ್ತಿನ ಪ್ರಸಿದ್ಧ ಸಾಧಕರ ಹೆಸರುಗಳುಳ್ಳ ನಕ್ಷತ್ರಗಳನ್ನು ರಚಿಸಿದ್ದಾರೆ. "ಹಾಲಿವುಡ್ ವಾಕ್ ಆಫ್ ಫೇಮ್" ಎಂದು ಹೆಸರು ಪಡೆದ ಈ ಪ್ರದೇಶವನ್ನು ನೋಡಲು ಈ ನಗರಕ್ಕೆ ಬಂದ ಪ್ರವಾಸಿಗರು ತಪ್ಪದೆ ಬರುತ್ತಾರೆ. 

1958ರಲ್ಲಿ ಪ್ರಾರಂಭವಾದ ಈ ಪದ್ಧತಿ ಕಳೆದ 66 ವರ್ಷಗಳಿಂದ ನಡೆದು ಬಂದಿದೆ. ಇಲ್ಲಿನವರೆಗೆ 2,774 ಕಲಾಸಾಧಕರ ನಕ್ಷತ್ರಗಳನ್ನು "ವಾಕ್ ಆಫ್ ಫೇಮ್" ನಲ್ಲಿ ಅಳವಡಿಸಲಾಗಿದೆ. ಈ ದಿನ ಮಂಗಳವಾರ, ಮಾರ್ಚ್ 19, 2024. ಈ ದಿನ ಡಾ. ಡ್ರೇ ಎಂದು ಪ್ರಸಿದ್ಧರಾದ ಡಾ. ಅಂಡ್ರೆ ಯಂಗ್ ಅವರ ನಕ್ಷತ್ರವನ್ನು 2775ನೆಯ ನಕ್ಷತ್ರವಾಗಿ ಸೇರಿಸುತ್ತಿದ್ದಾರೆ. ಈಗ ಈ ಕಾರ್ಯಕ್ರಮ ಇದೇ ಸಮಯದಲ್ಲಿ ನಡೆಯುತ್ತಿದೆ. ಡಾ. ಡ್ರೇ ಅವರನ್ನು "ರಿಕಾರ್ಡಿಂಗ್" ವಿಶೇಷಜ್ಞರಾಗಿ ಗುರುತಿಸಿ ಈ ಗೌರವವನ್ನು ನೀಡುತ್ತಿದ್ದಾರೆ. ಕೇವಲ ಮೂರು ವರುಷಗಳ ಹಿಂದೆ ಡಾ. ಡ್ರೇ ಅವರಿಗೆ ಎರಡು ವಾರಗಳ ಸಮಯದಲ್ಲಿ ಮೂರು ಬಾರಿ ಸ್ಟ್ರೋಕ್ ಆಗಿತ್ತಂತೆ. ಅಂತಹ ಆಘಾತದಿಂದ ಚೇತರಿಸಿಕೊಂಡು ಇಂದು ಈ ಗೌರವವನ್ನು ಪಡೆದುಕೊಳ್ಳುತ್ತಿರುವುದು ಬಹಳ ಸಂತೋಷದ ವಿಷಯ. 

ಮೂರು ದಿನಗಳ ಹಿಂದೆ ಇದೇ ಹಾಲಿವುಡ್ ಬುಲ್ವಾರ್ಡ್ನನಲ್ಲಿರುವ "ಪ್ಯಾಂಟೇಜ್ಸ್ " ಥೀಯೇಟರ್ ಕಲಾಕೇಂದ್ರದಲ್ಲಿ ಪ್ರಸಿದ್ಧ ಸಂಗೀತ ರೂಪಕ (ಮ್ಯೂಸಿಕಲ್) "ಷಿಕಾಗೋ" ನೋಡುವ ಸಂದರ್ಭದಲ್ಲಿ ಈ ವಾಕ್ ಆಫ್ ಫೇಮ್ ಮೇಲೆ ನಡೆದು ಹೋಗಬೇಕಾಯಿತು. ಆ ಸಂದರ್ಭದಲ್ಲಿ ನಮ್ಮ ಮಧ್ಯೆ ಇದ್ದು ಸಾಹಿತ್ಯ-ಸಂಗೀತ-ನಾಟಕ ರಂಗಗಳಲ್ಲಿ ಸೇವೆ ಮಾಡಿದ ಮಹನೀಯರ ನೆನಪುಗಳು ತಲೆಯಲ್ಲಿ ತೇಲಿದಾಗ ಬಂದ ಹೆಸರುಗಳಲ್ಲಿ ಡಾ. ವಸಂತ ಕವಲಿ ಅವರದೂ ಒಂದು.
 
*****

ಅರವತ್ತು-ಎಪ್ಪತ್ತರ ದಶಕದಲ್ಲಿ ಟೆಲಿವಿಷನ್ ಕೇಳರಿಯದ್ದು. ಜನಗಳಿಗೆ ಮನರಂಜನೆ ಬೇಕಾದರೆ ಯಾವುದಾದರೂ ಸಭಾಂಗಣಕ್ಕೆ ಹೋಗಿ ಸಂಗೀತ ಅಥವಾ ನಾಟಕವನ್ನೋ, ಅಥವಾ ಚಲನಚಿತ್ರವನ್ನೋ ನೋಡಬೇಕಾಗಿತ್ತು. ಮನೆಯಲ್ಲಿಯೇ ಸುಲಭವಾಗಿ ಹೊತ್ತು ಕಳೆಯಬೇಕು, ಮತ್ತೆ ಹಾಗೇ ಸ್ವಲ್ಪ ಮನರಂಜನೆಯೂ ಬೇಕು ಎಂದರೆ ಸಿಗುತ್ತಿದ್ದುದು ಆಕಾಶವಾಣಿ ಕಾರ್ಯಕ್ರಮಗಳು ಮಾತ್ರ. ಟ್ರಾನ್ಸಿಸ್ಟರುಗಳು ಸುಲಭ ಬೆಲೆಯಲ್ಲಿ ಸಿಗುವಂತಾದಾಗ ಆಕಾಶವಾಣಿಯ ಕಾರ್ಯಕ್ರಮಗಳು ಎಲ್ಲೆಂದರಲ್ಲಿ ಕೇಳುವಂತಾದವು. ಪ್ರತಿ ಭಾನುವಾರ ಬೆಳಗ್ಗೆ ಮುಂದಿನವಾರ ಪ್ರಸಾರವಾಗಲಿರುವ ಕಾರ್ಯಕ್ರಮಗಳ ತುಣುಕುಗಳು "ಪಕ್ಷಿನೋಟ" ಎನ್ನುವ ಶೀರ್ಷಿಕೆಯಲ್ಲಿ ಪ್ರಸಾರ ಆಗುತ್ತಿದ್ದವು. ರೇಡಿಯೋ ಆಲಿಸುವ ಆಸಕ್ತರು ಕಾಯುತ್ತಿದ್ದುದು ಚಲನಚಿತ್ರದ ಧ್ವನಿಸುರಳಿ ಮತ್ತು ಡಾ. ವಸಂತ ಕವಲಿ ಅವರ ನಾಟಕ ಪ್ರಸಾರಕ್ಕಾಗಿ. ಕವಲಿಯವರ ನೇತೃತ್ವದ ನಾಟಕಗಳೆಂದರೆ ಸದಭಿರುಚಿಯ ಸಾಹಿತ್ಯಕ ಪ್ರಸಾರ ಖಾತರಿ. 

ಕನ್ನಡ, ಇಂಗ್ಲಿಷ್, ಸಂಸ್ಕೃತ, ಮತ್ತು ಮರಾಠಿ ಭಾಷೆಗಲ್ಲಿ ಆಳವಾದ ಪಾಂಡಿತ್ಯ, ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ಕ್ರಮವಾಗಿ ಹಿರಿಯ ವಿದ್ವಾಂಸರುಗಳಿಂದ ಕಲಿತ ಸಂಗೀತ ಸಂಪತ್ತು, ಕರ್ನಾಟಕ ಸಂಗೀತದಲ್ಲಿ ಸ್ವಯಂ ಕೃಷಿ, ಅಂದಿನ ಈ ಎಲ್ಲ ಭಾಷೆಗಳ ಹಿರಿಯ ಸಾಹಿತಿಗಳ ಒಡನಾಟ, ಹಿರಿಯ ಮತ್ತು ಕಿರಿಯ ಕಲಾವಿದರಿಂದ ಕಸರತ್ತು ಮಾಡಿಸುವ ಕೌಶಲ್ಯ, ತನ್ನದೇ ಗರಡಿಯಲ್ಲಿ ಪಳಗಿಸಿ ತಯಾರು ಮಾಡಿದ ಶಿಷ್ಯ ಸಂಕುಲ, ಆಕಾಶವಾಣಿಯ ಸಹೋದ್ಯೋಗಿಗಳ ಸಹಕಾರ, ಇವೆಲ್ಲವುಗಳ ಪರಿಪಾಕದಿಂದ ಕವಲಿಯವರ ಆಕಾಶವಾಣಿ ಧ್ವನಿ ಪ್ರಸಾರವಾಗಲೀ, ರಂಗದ ಮೇಲೆ ತಂದ ನಾಟಕಗಳಾಗಲೀ, ಶ್ರೋತೃ-ಪ್ರೇಕ್ಷರಿಗೆ ರಸದೂಟ. ಕೇವಲ ಕಿವಿಯಲ್ಲಿ ಕೇಳಿದ ಹಿರಿಯ ಕವಿಗಳ ಕೃತಿಗಳ ಭಾಗಗಳನ್ನು ಹೆಚ್ಚು ಶ್ರಮವಿಲ್ಲದೆ ಸ್ವಲ್ಪ ಕಾಲದಲ್ಲಿಯೇ ಅನುಭವಿಸುವ ಸೌಕರ್ಯ ಅವರ ಪ್ರಯತ್ನಗಳಿಂದ ಇತರರಿಗೆ ಸಿಗುತ್ತಿತ್ತು. 
*****

ಈಗಿನ ಹಾವೇರಿ ಜಿಲ್ಲೆಯ ಬ್ಯಾಡಗಿ ವಸಂತ ಕವಲಿಯವರ ಸ್ಥಳ. ಪಂಡಿತರ ಮನೆತನದಲ್ಲಿ ಜನನ. ತಂದೆ ಪಂಡಿತ ಚನ್ನಬಸಪ್ಪ ಎಲ್ಲಪ್ಪ ಕವಲಿಯವರು ದೊಡ್ಡ ವಿದ್ವಾಂಸರು. ಆಗಿನ ಸಮಯದಲ್ಲಿ ದಡ್ಡರನ್ನು "ಪಂಡಿತ ಪುತ್ರ" ಎಂದೋ  "ರಜಕಾಶ್ವ" (ಅಗಸನ ಕುದುರೆ ಅಥವಾ ಕತ್ತೆ) ಎಂದೋ ಹಾಸ್ಯ ಮಾಡುತ್ತಿದು ಉಂಟು. ವಸಂತ ಕವಲಿಯವರ ವಿಷಯದಲ್ಲಿ ಹಾಗಿರಲಿಲ್ಲ. ಪರ್ವತವಾಣಿ ನರಸಿಂಗ ರಾವ್ ಹಾಸ್ಯಕ್ಕೆ ವಸಂತ ಕವಲಿ ಅವರು "ಪಂಡಿತ ಪುತ್ರ" ಅಲ್ಲ, "ಪುತ್ರ ಪಂಡಿತ" ಎಂದು ಹೇಳುತ್ತಿದ್ದರು. ವಿದ್ಯಾಭ್ಯಾಸ ಕಾಲದಲ್ಲಿಯೇ ಅಸಾಧಾರಣ ಪ್ರತಿಭೆ ತೋರಿದವರು ವಸಂತ ಕವಲಿಯವರು. ಹೆಚ್ಚಿನ ವಿದ್ಯಾಭ್ಯಾಸವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದರು. ಇಂಗ್ಲಿಷ್ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ ಎಂ. ಎ. ಪದವಿ ಪಡೆದರು. "ದುರಂತ ನಾಟಕಗಳು" ಎನ್ನುವ ವಿಷಯ ಕುರಿತಾದ ಪ್ರಬಂಧವನ್ನು ಮಂಡಿಸಿ ಪಿ.ಎಚ್ ಡಿ ಪಡೆದು ಡಾ. ವಸಂತ ಕವಲಿ ಆದರು. 

ಪಂಡಿತ ರಾಮರಾವ್ ನಾಯಕ್ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತರು. ಸ್ವಲ್ಪ ಕಾಲ ಪಂಡಿತ ಮಲ್ಲಿಕಾರ್ಜುನ ಮನ್ಸೂರ ಅವರಲ್ಲಿಯೂ ಕಲಿತರಂತೆ. ಮುಂಬೈನ ಕಾಲೇಜೊಂದರಲ್ಲಿ ಲೆಕ್ಚರರ್ ಕೆಲಸ ಸ್ವಲ್ಪ ಕಾಲ ಮಾಡಿದರಂತೆ. ಆ ಸಮಯದಲ್ಲಿ ಆದ ಅನೇಕ ಹಿರಿಯ ಮರಾಠಿ ಸಾಹಿತಿಗಳ ಪರಿಚಯ ಕವಲಿಯವರ ಮುಂದಿನ ಕೆಲಸಗಳಿಗೆ ಪೂರಕವಾಯಿತು. ಮುಂಬೈನಲ್ಲಿ "ಮಧ್ಯಮ ವ್ಯಾಯೋಗ" ಸಂಸ್ಕೃತ ನಾಟಕದ ರಂಗ ಪ್ರಯೋಗ ಮಾಡಿದ್ದರಂತೆ. ಹೀಗೆ ಸಾಹಿತ್ಯ-ಸಂಗೀತಗಳ ಸಂಗಮದ ಸಿರಿಯೊಂದಿಗೆ ಬೆಂಗಳೂರಿಗೆ ಬಂದರು. ಆಕಾಶವಾಣಿಯಲ್ಲಿ ಉದ್ಯೋಗ ಹಿಡಿದು ನಿಂತರು. ನಾಟಕ ವಿಭಾಗದ "ಪ್ರೊಡ್ಯೂಸರ್" ಆದರು. 

ವಸಂತ ಕವಲಿಯವರಿಗೆ ಸಂಶೋಧನೆ, ತೌಲನಿಕ ಅಧ್ಯಯನದಲ್ಲಿ ಆಪಾರ ಒಲವು. ಹಳಗನ್ನಡ, ಹೊಸಗನ್ನಡ ಎರಡರಲ್ಲೂ ಸಲೀಸಾದ ಓಡಾಟ. ಎಂತಹ ವಿದ್ವಾಂಸರನ್ನೂ ಅಲ್ಲಾಡಿಸುವ ಸಾಹಿತ್ಯ ಕೃಷಿ. ಆಗಲೇ ಲಭ್ಯವಿದ್ದ ಸಾಹಿತ್ಯ ಕೃತಿಗಳನ್ನು ನಾಟಕೀಕರಿಸಿ ರಂಗದ ಮೇಲೆ ತಂದರು. ಧ್ವನಿ ನಾಟಕಗಳಾಗಿ ಆಕಾಶವಾಣಿಯಲ್ಲಿ ಪ್ರಸಾರ ಮಾಡಿದರು. ಸ್ವತಃ ನಟರೂ ನಾಟಕಕಾರರೂ ಆದ ಪರ್ವತವಾಣಿ ನರಸಿಂಗ ರಾವ್, ಸಿ. ಕೆ. ನಾಗರಾಜ ರಾವ್ ಅವರಂಥವರ ಜೊತೆಗೆ ಆಗ ಪ್ರಚಲಿತವಿದ್ದ ನಟರನ್ನೂ ಸೇರಿಸಿ, ತಾವು ತಯಾರು ಮಾಡಿದ ಯುವ ಕಲಾವಿದರ ದಂಡನ್ನೂ ಕೂಡಿಸಿ, ತಮ್ಮ ಪಾಂಡಿತ್ಯದ ಕಾರಂಜಿಯ ಸೊಬಗನ್ನು ಎಲ್ಲರಿಗೆ ನೀಡಿದರು. 

ರಾಗ-ರಂಗ, ಕರ್ನಾಟಕ ಪರಂಪರೆ, ಗಂಗಾ-ಕಾವೇರಿ, ಕವಿ ಕಂಡ ಕರ್ನಾಟಕ, ಸರಸಮ್ಮನ ಸಮಾಧಿ (ಮಹಾಸತಿ ಸರಸ್ವತಿ), ತಮ್ಮದೇ ಆದ ರಚನೆ "ಕಣ್ವಕೇಶನ್", ಮುಂತಾದ ಅನೇಕ ರಂಗ ಪ್ರಯೋಗಗಳನ್ನು ಮಾಡಿದರು.  ಭಾಸ ಮಹಾಕವಿಯ "ಸ್ವಪ್ನ ವಾಸವದತ್ತ" ಅವರ ಕೈಯಲ್ಲಿ "ಕನಸಿನ ರಾಣಿ" ಆದಳು. ಆಕಾಶವಾಣಿಯ ಕಾರ್ಯ ಬಾಹುಳ್ಯದಿಂದ ಸಂಗೀತ ಕಚೇರಿಗಳನ್ನು ಮಾಡಲು ಹೆಚ್ಚು ಅವಕಾಶವಿಲ್ಲದಿದ್ದರೂ, ಮಿತ್ರರ ಕೂಟಗಳಲ್ಲಿ ಹಾಡಿದರು. ಅನೇಕರಿಗೆ ಸಂಗೀತವನ್ನೂ ಕಲಿಸಿದರು. ಅವರ ಸಂಗೀತ ಸೇವೆಯನ್ನು ಕೆಲವರು ಈಗಲೂ ನೆನೆಸುತ್ತಾರೆ. 

ಇವೆಲ್ಲವುಗಳ ಮಧ್ಯ ಸ್ವಂತ ಸಾಹಿತ್ಯ ರಚನೆಯನ್ನೂ ಮಾಡಿದರು. "ರಾಗ-ತಾನ-ಸೇನ" ಎಂದು ಯುರೋಪ್ ಪ್ರವಾಸ ಕಥನ ಬರೆದರು. ಕಣ್ವಕೇಶನ್, ಅಲಂಕಾರ, ಘನ ಆನಂದ, ಮತ್ತನೇಕ ಪುಸ್ತಕಗಳನ್ನು ಬರೆದರು. ಇಂಗ್ಲಿಷ್ನಲ್ಲಿ ತಾನ್ ಸೇನ್ ಎಂದು ಪುಸ್ತಕ ಬರೆದರು, ಅವರು ಏನು ಮಾಡಿದರೂ ಅಚ್ಚುಕಟ್ಟು; ಸಮಯದ ಮೇಲೆ ಗಮನ, ಶಿಸ್ತು ಎದ್ದು ಕಾಣುತ್ತಿತ್ತು. ಬ್ಯಾಡಗಿಯವರಾದರೂ ಎಲ್ಲರಿಗೂ ಉದ್ದಕ್ಕೂ ಸಕ್ಕರೆಯನ್ನೇ ಹಂಚಿದರು. ಅವರು ಮೆಣಸಿನಕಾಯಿ ಆಗುತ್ತಿದ್ದುದು "ರಿಹರ್ಸಲ್" ವೇಳೆಯಲ್ಲಿ ಮಾತ್ರ. ಅವರ ನಾಟಕದ ರಿಹರ್ಸಲ್ ಕಾಲಕ್ಕೆ ಬಸ್ಸುಗಳು ಸಕಾಲಕ್ಕೆ ಬರುತ್ತಿದ್ದವು. ಆಟೋದವರು ಆಕಾಶವಾಣಿ ಕಡೆಗೆ ಕರೆದ ತಕ್ಷಣ ಬರುತ್ತಿದ್ದರು. ಏಕೆಂದರೆ ಯಾವ ಕಲಾವಿದರೂ ಬಸ್ಸುಬರಲಿಲ್ಲ ಅಥವಾ ಆಟೋ ಸಿಕ್ಕಲಿಲ್ಲ ಎಂದು ಹೇಳಲಿಲ್ಲ!  

1987ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ಜಾನಪದ ಸಂಗೀತ ಸಮ್ಮೇಳನದಲ್ಲಿ "ಜಾನಪದ ಸಂಗೀತ - ಶಾಸ್ತ್ರೀಯ ಸಂಬಂಧ" ಎನ್ನುವ ವಿಷಯದ ಮೇಲೆ ಪ್ರಾತ್ಯಕ್ಷಿಕೆ ನೀಡಿದರು. ಅವರು ಸ್ವತಃ ಆಕಾಶವಾಣಿ ನಾಟಕಗಳಲ್ಲಿ ಧ್ವನಿ ಕೊಡುತ್ತಿರಲಿಲ್ಲ. ಆದರೆ ಕೆಲವು ನಾಟಕಗಳಲ್ಲಿ ರಂಗದ ಮೇಲೆ ಅಭಿನಯಿಸುತ್ತಿದ್ದರು. ಅವರ "ಕಣ್ವಕೇಶನ್" ನಾಟಕದ ದುಷ್ಯಂತನ ಪಾತ್ರ ನೋಡಿದ್ದ ನೆನಪು. ಮಹರ್ಷಿ ಕಣ್ವರ ಗುರುಕುಲದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲು ಬಂದ ಚಕ್ರವರ್ತಿ ದುಷ್ಯಂತನ ಮುಂದೆ ಪದವಿ ಪಡೆಯಲು ಬಂದ ಗರ್ಭಿಣಿ ಶಕುಂತಲೆಯ ಸನ್ನಿವೇಶ! ಹಾಸ್ಯದ ಹೊನಲು. 

ಖ್ಯಾತ ಮರಾಠಿ ಸಾಹಿತಿ ಪು. ಲ. ದೇಶಪಾಂಡೆ ಅವರ ಸಹಯೋಗದಲ್ಲಿ "ಮರಾಠಿ ನಾಟ್ಯಗೀತೆ - ಕನ್ನಡ ರಂಗಗೀತೆ" ಎನ್ನುವ ಕಾರ್ಯಕ್ರಮ ಮುಂಬಯಿಯ ಗಿರ್ಗಾಮ್ "ಸಾಹಿತ್ಯ ಸಂಘ ಮಂದಿರ"ದಲ್ಲಿ ಅನೇಕ ಹಿರಿಯ ಮರಾಠಿ ಮತ್ತು ಕನ್ನಡ ವಿದ್ವಾಂಸರ ಸಹಕಾರದಿಂದ ನಡೆಸಿದರು. ಆಗಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರಿಂದ ಸಹಕಾರ ಪಡೆದು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಹೆಗಡೆಯವರು ಪೂರ್ತಿ ಕಾರ್ಯಕ್ರಮ ನೋಡಿ, ವಿನೂತನ ಪ್ರಯತ್ನಕ್ಕೆ  ಸಂತೋಷ ಪಟ್ಟರು. 

ಭದ್ರಾವತಿ ಆಕಾಶವಾಣಿ ನಿಲಯದ ನಿರ್ದೇಶಕರಾಗಿ ಬಡ್ತಿ ಪಡೆದು ಅಲ್ಲಿ ಸೇವೆ ಸಲ್ಲಿಸಿದರು, ಕಡೆಯ ಎರಡು-ಮೂರು ವರ್ಷಗಳು ಅವರಿಗೆ ಕಿಡ್ನಿ ಸಮಸ್ಯೆಯಿಂದ ಬಹಳ ತೊಂದರೆ ಅನುಭವಿಸಬೇಕಾಯಿತು. ಅಕ್ಟೋಬರ್ 31, 1988ರಂದು ಸೇವಾನಿವೃತ್ತಿ ಪಡೆದರು. ಕೆಲವೇ ದಿನದ ನಂತರ ಕಿಡ್ನಿ ಸಮಸ್ಯೆ ಉಲ್ಬಣವಾಗಿ ಭದ್ರಾವತಿಯಿಂದ ಬೆಂಗಳೂರಿಗೆ ಹೆಚ್ಚಿನ ವೈದ್ಯಕೀಯ ನೆರವಿಗಾಗಿ ಕರೆತರುತ್ತಿದ್ದಾಗ 17ನೇ ನವೆಂಬರ್, 1988 ರಂದು ತಿಪಟೂರಿನ ಬಳಿ ನಿಧನರಾದರು. ಇಪ್ಪತ್ತು ವರ್ಷ ಸೇವೆ ಸಲ್ಲಿಸಿ ನಲವತ್ತು ವರುಷ ಪಿಂಚಣಿ ಪಡೆಯುವ ಜನರ ಮಧ್ಯೆ, ಮೂವತ್ತು ವರುಷ ಸೇವೆ ಸಲ್ಲಿಸಿ ಒಂದು ತಿಂಗಳೂ ಪಿಂಚಣಿ ಪಡೆಯದಾದರು. 

ಅವರ ಜೀವನ ಯಾತ್ರೆ ಕೊನೆಯಾದಾಗ ಅವರಿಗೆ ಕೇವಲ 56 ವರ್ಷ ವಯಸ್ಸು. ಸೇವಾನಿವೃತ್ತಿಯ ನಂತರ ಮಾಡಬೇಕಾದ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದರು. ಅವೆಲ್ಲ ಹಾಗೆಯೇ ಉಳಿಯಿತು. 

******
 

ಖ್ಯಾತ ಶಿಲಾಶಾಸನ (ಎಪಿಗ್ರಾಫಿಸ್ಟ್ ) ಮತ್ತು ಇತಿಹಾಸ ತಜ್ಞೆ ಡಾ. ವಸುಂಧರಾ ಕವಲಿ-ಫಿಯೋಜಟ್ ವಸಂತ ಕವಲಿಯವರ ತಂಗಿ. ಅವರ ಫ್ರೆಂಚ್ ಪತಿ ಪಿಯಾ ಸೆಲ್ವ ಫಿಯೋಜಟ್ ( Dr Pierre Sylvan Filliozat) ಪ್ರಸಿದ್ಧ ಸಂಸ್ಕೃತ ವಿದ್ವಾಂಸರು. ದಂಪತಿಗಳಿಬ್ಬರೂ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರಗಳಿಂದ ವಿಶೇಷವಾಗಿ ಗೌರವಿಸಲ್ಪಟ್ಟವರು. ಅನೇಕ ಸಂಘ ಸಂಸ್ಥೆಗಳಿಂದ ಪ್ರತಿ ವರ್ಷ ಪ್ರಶಸ್ತಿಗಳನ್ನೂ ಗೌರವಗಳನ್ನೂ ಪಡೆಯುತ್ತಲೇ ಇರುವವರು. ಫಿಯೋಜಟ್ ಅವರಿಗೆ "ಮಹಾಮಹೋಪಾಧ್ಯಾಯ" ಎನ್ನುವ ಗೌರವವೂ ಸಂದಿದೆ. ಫ್ರಾನ್ಸ್ ದೇಶದಲ್ಲಿ ಪ್ರತಿ ವರುಷ "ಸಂಸ್ಕೃತ ದಿನ" ಆಚರಿಸುವುದು ಇವರದೊಂದು ಹೆಗ್ಗಳಿಕೆ. ಅಪಾರ ಗ್ರಂಥ ರಾಶಿಯನ್ನು ಈ ದಂಪತಿಗಳು ಸಾಹಿತ್ಯ ಜಗತ್ತಿಗೆ ನೀಡಿದ್ದಾರೆ. ವಿದ್ಯಾರಣ್ಯ ಪ್ರಶಸ್ತಿ, ಇತಿಹಾಸ ಸಂಸ್ಕೃತಶ್ರೀ, ಕರ್ನಾಟಕ ಕಲಾ ಪ್ರವರ್ತಕ ಮೊದಲಾದವು ಇವರಿಗೆ ಸಂದ ಕೆಲವು ಗೌರವಗಳು. 

ಹಂಪಿಯು "ವರ್ಲ್ಡ್ ಹೆರಿಟೇಜ್ ಸೆಂಟರ್" ಎಂದು 1986ರಲ್ಲಿ ಘೋಷಿತವಾಯಿತು. ಇದರಲ್ಲಿ ಡಾ. ವಸುಂಧರಾ ಅವರ ದೊಡ್ಡ ಕಾಣಿಕೆಯಿದೆ. ಕರ್ನಾಟಕದ, ದೇಶದ ಇತರ ಭಾಗಗಳಲ್ಲಿಯ ಅನೇಕ ಶಾಸನಗಳನ್ನು ಅಭ್ಯಸಿಸಿ "ವಿಜಯನಗರ ಸಾಮ್ರಾಜ್ಯ" ಅನ್ನುವುದು ಒಂದು ತಪ್ಪು ಕಲ್ಪನೆ; ಅದು ವಾಸ್ತವವಾಗಿ "ಕರ್ನಾಟಕ ಸಾಮ್ರಾಜ್ಯ" ಎಂದೇ ಇರಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸಿದವರು ಡಾ. ವಸುಂಧರಾ. ಅವರ ಅನೇಕ ವಿದ್ವತ್ಪೂರ್ಣ ಗ್ರಂಥಗಳು ಕರ್ನಾಟಕದ ಗತಿಸಿದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಅವರು ನೀಡಿರುವ ಕೊಡುಗೆಯನ್ನು ನಾವು ಕೃತಜ್ಞತೆಯಿಂದ ನೆನೆಯಬೇಕು. 
*****

ವಸಂತ ಕವಲಿಯವರ "ಕಣ್ವಕೇಶನ್" ನಾಟಕದ ರಿಹರ್ಸಲ್ ಕೆಲವು ದಿನ ಅವರ ಮನೆಯಲ್ಲಿಯೇ ನಡೆಯಿತು. ಅಂತಹ ಸಂದರ್ಭದಲ್ಲಿ ಒಂದು ದಿನ ಅವರ ಮನೆಗೆ ಭೇಟಿ ನೀಡಿ ಅವರ ರಿಹರ್ಸಲ್ ವ್ಯವಸ್ಥೆಯನ್ನು ನೋಡುವ ಸುಯೋಗ ನನಗೆ ಸಿಕ್ಕಿತ್ತು. ಆಗ ಅವರ ಮೇಜಿನ  ಮೇಲೆ ಇದ್ದ ಅವರ ಲೇಟರ್ ಹೆಡ್ ನೋಡಿದೆ. ಅದರಲ್ಲಿ ಅವರ ಹೆಸರು Dr. Wasant Kawli* ಎಂದಾಗಿತ್ತು! ಇದೇನಿದು, ಈ * ಗುರುತಿನ ಸೂಚನೆ ಎಂದು ಆಶ್ಚರ್ಯ ಆಯಿತು. ಉತ್ತರ ಲೆಟರ್ ಹೆಡ್ ಕೆಳಗೆ ಸಿಕ್ಕಿತು. *Please note the spelling in my name" ಎನ್ನುವುದು ಅದರ ಒಕ್ಕಣೆ! 

ಬ್ಯಾಂಕಿನ ಸಹೋದ್ಯೋಗಿಗಳು ಮತ್ತು ಮುಂದೆ ಬ್ಯಾಂಕ್ ಅಧಿಕಾರಿಗಳ ಉದ್ಯೋಗಕ್ಕೆ ಬರುವ ಪ್ರಶಿಕ್ಷಣಾರ್ಥಿಗಳಿಗೆ ಬ್ಯಾಂಕಿನ ರೆಕಾರ್ಡಗಳಲ್ಲಿ ಗ್ರಾಹಕರ ಸರಿಯಾದ ಹೆಸರು ನಮೂದಿಸುವ ಅವಶ್ಯಕತೆಯನ್ನು ತಿಳಿಸುವಾಗ ಅನೇಕ ಸಲ ಡಾ. ವಸಂತ ಕವಲಿ ಅವರ ಹೆಸರನ್ನು ಉಪಯೋಗಿಸಿ ಅವರನ್ನು ನೆನೆಸಿಕೊಂಡಿದ್ದೇನೆ. 

*****

ನಾಲ್ಕು ದಿನ ಪ್ರಯತ್ನ ಪಟ್ಟರೂ ಡಾ. ವಸಂತ ಕವಲಿ ಅವರ ಸರಿಯಾದ ಭಾವಚಿತ್ರ ಸಿಗಲಿಲ್ಲ. ಯಾರಾದರೂ ಸಹೃದಯರು ಕಳಿಸಿಕೊಟ್ಟರೆ ಕೃತಜ್ಞೆತೆಯಿಂದ ಸೇರಿಸುತ್ತೇನೆ. 

Monday, March 4, 2024

ಸಿನಿಮಾ ಮತ್ತು ಜೂಜಿನ ಹಾಡುಗಳಲ್ಲಿ ಹಾಸ್ಯ ಸಾಹಿತ್ಯ


ಸಾಹಿತ್ಯ ರಸಾಸ್ವಾದನೆಗೆ ದೊಡ್ಡ ದೊಡ್ಡ ಗ್ರಂಥಗಳನ್ನೇ ಹುಡುಕಿಕೊಂಡು ಹೋಗಬೇಕಾಗಿಲ್ಲ. ನಮ್ಮ ದಿನನಿತ್ಯದ ಬದುಕಿನಲ್ಲೇ ಅಲ್ಲಲ್ಲಿ ಸೊಗಸಾದ ಸಾಹಿತ್ಯವನ್ನು ಕಾಣಬಹದು. ಹತ್ತನೆಯ ಶತಮಾನದ ಬಹು ಖ್ಯಾತಿಯ ದಾರ್ಶನಿಕ ಆಚಾರ್ಯ ಅಭಿನವ ಗುಪ್ತನ ಗುರುಗಳೊಲ್ಲೊಬ್ಬನಾದ ಭಟ್ಟ ತೌತ (ಭಟ್ಟ  ತಾತ) ತನ್ನ "ಕಾವ್ಯ ಕೌತುಕ" ಗ್ರಂಥದಲ್ಲಿ "ಪ್ರತಿಭೆ" (Talent) ಎನ್ನುವ ಪದಕ್ಕೆ ಒಂದು ಸೊಗಸಾದ ಅರ್ಥ ಕೊಟ್ಟಿದ್ದಾನೆ. "ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ, ತದನುಪ್ರಾಣನಾಜೀವದ್ ವರ್ಣನಾ ನಿಪುಣಃ ಕವಿ" ಎಂದು ಪ್ರತಿಭೆಯನ್ನೂ ಕವಿಯನ್ನೂ ಜೋಡಿಸುತ್ತಾನೆ. ಪ್ರತಿಭೆ ಎಂದರೆ ಅನುಕರಣೆ ಅಲ್ಲ. ಹೊಸದನ್ನು ಮತ್ತೆ ಮತ್ತೆ ತಕ್ಷಣದಲ್ಲೇ ಹೊಸೆಯುವ ಸಾಮರ್ಥ್ಯಕ್ಕೆ "ಪ್ರತಿಭೆ" ಎಂದು ಹೆಸರು. ಅದರ ಆಧಾರದ ಮೇಲೆ ಕೃತಿ ರಚನೆ ಮಾಡಬಲ್ಲವನು ಕವಿ. ಇಂತಹ ಆ ಗಳಿಗೆಯಲ್ಲಿ ತಯಾರಿಸಿದ ವಸ್ತುವೇ ಒಂದು ರೀತಿಯ ಕವನ ಅಥವಾ ಕಾವ್ಯ. ಅಂದಮಾತ್ರಕ್ಕೆ ಬೇರೆ ರೀತಿಯ ಕೃತಿ ಕವನ ಅಥವಾ ಕಾವ್ಯ ಅಲ್ಲವೆಂದಲ್ಲ. ಒಟ್ಟಿನಲ್ಲಿ ಕಾವ್ಯ ಪ್ರತಿಭೆ ಕಾರಂಜಿಯಂತೆ ಮತ್ತೆ ಮತ್ತೆ ಪುಟಿದೇಳುತ್ತಿರಬೇಕೆನ್ನುವುದು ಮುಖ್ಯ. ಅದು ಎಂದೋ ಒಮ್ಮೆ ಬರುವದಲ್ಲ. ಕವಿಗೆ ಇಂತಹ ಕರ್ತೃತ್ವ ಶಕ್ತಿ ಸದಾಕಾಲವೂ ಇರಬೇಕು. 

ನಮ್ಮ ಸುತ್ತ ಇರುವ ಅನೇಕರಿಗೆ ಇಂತಹ ಪ್ರತಿಭೆ ಇರುವುದನ್ನು ನಾವು ಕಾಣುತ್ತೇವೆ. ಕೆಲವು ಸಾರ್ಥಕವಾಗುತ್ತವೆ. ಕೆಲವು ಅನ್ಯಾಯವಾಗಿ ಸೋರಿಹೋಗುತ್ತವೆ. ಅದೇ ಕ್ಷಣದಲ್ಲಿ ಹೊಸೆದ ಕೆಲವು ತಮಾಶೆಯಾದ ಕವನಗಳನ್ನು ನೋಡೋಣ. 

ಐವತ್ತು, ಅರವತ್ತು, ಎಪ್ಪತ್ತರ ದಶಕದಲ್ಲಿ ಸದಭಿರುಚಿಯ ಸಿನಿಮಾ ಚಿತ್ರಗಳು ಹೇರಳವಾಗಿ ಬರುತ್ತಿದ್ದವು. ಸಿನಿಮಾ ಮತ್ತು ನಾಟಕಗಳಿಗೆ ಕಥೆ, ಗೀತೆ ಮತ್ತು ಸಂಭಾಷಣೆ ಬರೆಯುತ್ತಿದ್ದವರು ಬಹುತೇಕ ಸಾಹಿತಿಗಳೂ, ವಿದ್ವಾಂಸರೂ ಆಗಿರುತ್ತಿದ್ದರು. ನಟರು ಮತ್ತು ನಿರ್ದೇಶಕರು ಸಾಹಿತ್ಯ-ಸಂಗೀತಗಳ ಉತ್ತಮ ಪರಿಚಯವುಳ್ಳ ಕಲಾವಿದರಾಗಿರುತ್ತಿದ್ದರು. ಈ ಕಾರಣದಿಂದ ಸಿನಿಮಾ ಗೀತೆಗಳು ಮತ್ತು ಸಂಭಾಷಣೆಗಳು ಉತ್ತಮ ದರ್ಜೆಯ ಸಾಹಿತ್ಯವೇ ಆಗಿರುತ್ತಿತ್ತು. ಇವುಗಳ ಬಗ್ಗೆ ಸಮಾಜದಲ್ಲಿ ಅತ್ಯಂತ ಗೌರವ ಇರುತ್ತಿತ್ತು. ಕೆಳಗೆ ಕೊಟ್ಟಿರುವ ಸಂದರ್ಭಗಳು ಕೇವಲ ಲಲಿತ ಹಾಸ್ಯ ತೋರಿಸುವ ಉದಾಹರಣೆಗಳೇ ಹೊರತು ನಾಟಕ ಮತ್ತು ಸಿನಿಮಾ ಸಾಹಿತ್ಯದ ವಿಶ್ಲೇಷಣೆ ಅಲ್ಲವೇ ಅಲ್ಲ. 

*****

ಅರವತ್ತು-ಎಪ್ಪತ್ತರ ದಶಕದ ಸಂಧಿಕಾಲ. ದೂರದ ಹಳ್ಳಿ ವಾಸಿ ದಂಪತಿಗಳು ತಮ್ಮ ಮಗನನ್ನು ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ವಿದ್ಯಾಪೀಠವೊಂದಕ್ಕೆ ಕರೆದು ತಂದು ಸೇರಿಸಿದರು. ಹತ್ತು ವಯಸ್ಸಿನ ಹುಡುಗ ಬಹಳ ಚೂಟಿಯಾಗಿದ್ದ. ಎರಡೇ ದಿನದಲ್ಲಿ ಗುರುಗಳ ಪ್ರೀತಿ ಸಂಪಾದಿಸಿದ. ಗುರುಕುಲವಾದ್ದರಿಂದ ಊಟ, ವಸತಿ ಅಲ್ಲಿಯೇ. ಬೆಳಗ್ಗೆ ಎಂಟರಿಂದ ಮಧ್ಯಾಹ್ನ ಹನ್ನೆರಡರವರೆಗೆ ಪಾಠ. ಹನ್ನೆರಡರಿಂದ ಎರಡು ಘಂಟೆಯವರೆಗೆ ಬಿಡುವು. ಆಗ ಮಧ್ಯಾಹ್ನ ಒಂದು ಗಂಟೆಗೆ ಎಲ್ಲರಿಗೂ ಸೊಗಸಾದ ಊಟ. ಮಧ್ಯಾಹ್ನ ಎರಡರಿಂದ ಸಂಜೆ ಐದು ಗಂಟೆಯವರೆಗೆ ಮತ್ತೆ ಪಾಠ. ನಂತರ ಬಿಡುವು. ರಾತ್ರಿ ಊಟದ ನಂತರ ಸ್ವಂತ ವಿದ್ಯಾಭ್ಯಾಸ. ಹೀಗಿತ್ತು ದಿನಚರಿ. 

ಬೆಳಗಿನ ಪಾಠದಲ್ಲಿ ಈ ವಿದ್ಯಾರ್ಥಿ ಎಲ್ಲರಿಗಿಂತ ಮುಂದು. ಚೆನ್ನಾಗಿ ಊಟ ಹೊಡೆಯುತ್ತಿದ್ದ ಸಹ. ಆದರೆ ಮಧ್ಯಾನ್ಹದ ಪಾಠದ ಸಮಯದಲ್ಲಿ ಆಗಾಗ ಕೆಲವು ದಿನ ಅವನ ಪತ್ತೆ ಇಲ್ಲ. ಊಟದ ನಂತರ ಎಲ್ಲಿ ಹೋಗುತ್ತಾನೆ ಎಂದು ಯಾರಿಗೂ ಗೊತ್ತಿಲ್ಲ. ಬರಬರುತ್ತ ಮಧ್ಯಾಹ್ನ ಅವನು ಪಾಠಕ್ಕೆ ಬರುವುದೇ ನಿಂತುಹೋಯಿತು. ಗುರುಗಳಿಗೆ ಮೊದಲು ಕಸಿವಿಸಿ. ನಂತರ ಬಹಳ ಕೋಪ ಬಂತು. ಒಂದು ದಿನ ಕೊಟ್ಟ ವಿಷಯದ ಮೇಲೆ ಕವನ ಕಟ್ಟುವ ರೀತಿಯ ಬಗ್ಗೆ ಬೆಳಿಗ್ಗೆ ಪಾಠವಾಯಿತು. ಮಧ್ಯಾನ್ಹದ ಪಾಠಕ್ಕೆ ಈ ಹುಡುಗ ಗೈರು. ಗುರುಗಳು ಕಾದಿದ್ದು ಅವನು ಸಂಜೆ ಗುರುಕುಲಕ್ಕೆ ಬಂದಾಗ ಹಿಡಿದರು. "ಎಲ್ಲಿ ಹೋಗಿದ್ದೆಯೋ, ಭಡವ!" ಎಂದು ಜಬರಿಸಿ ಕೇಳಿದರು. ಮೊದಲು ಹುಡುಗ ಏನೂ ಹೇಳಲಿಲ್ಲ. ಬಲವಂತ ಮಾಡಿದಾಗ ಹೇಳಿದ:

ಗರಗರನೆ ತಿರುಗಿ ಹಿಮಗಿರಿಗೆ ಎರಗಿ 
ಉಮೆಯನ್ನು ಕಂಡು ಬಂದೆ
ಸ್ವಪ್ನದಲಿ ಊರ್ವಶಿ ಮೇನಕೆಯ ನರ್ತನವ 
ಕಂಡು ಆನಂದ ನಂದ ಎಂದೆ

ನಟರಾಜನಿಗೆ ಸಂಪಿಗೆಯ ಗೀತಾಂಜಲಿಯ 
ಕೊಟ್ಟು ಸಂತೋಷದಿಂದ ಬಂದೆ 
ಶಿವಾಜಿ ಕಂಡ ಭಾರತದ ಕಲ್ಪನೆಯ ನೋಡಿ 
ಸಾಗರದಿ ಮಿಂದೆ ಎಂದೆ  

ಪ್ರಭಾತದಲಿ ಲಕ್ಷ್ಮಿಯನು ಕಂಡು ಜೈಕಾರ ಹಾಕಿ 
ಕಪಾಲೀಶ್ವರನ ದರುಶನವ ಮಾಡಿ 
ಅಲಂಕಾರ ಸಂಗಮದ ಸೊಗಸನ್ನು ಕಂಡು 
ಕೆಂಪಗಿಲ್ಲಿ ಬಂದು ನಿಂತೆ!

ಹುಡುಗನಿಗೆ ಚಿಕ್ಕ ವಯಸ್ಸು. ಸಿನಿಮಾ ನೋಡುವ ಹುಚ್ಚು. ಮಧ್ಯಾನ್ಹ ಊಟದ ನಂತರ ಪಾಠಕ್ಕೆ ಚಕ್ಕರ್ ಹಾಕಿ ಮ್ಯಾಟಿನಿ ಶೋ ನೋಡಲು ಹೋಗುತ್ತಿದ್ದ. ಗುರುಗಳು ಕೇಳಿದಾಗ ಬೆಳಗಿನ ಪಾಠದ ಪ್ರಭಾವದಿಂದ ಸಿನಿಮಾ ಮಂದಿರಗಳ ಹೆಸರಿನಲ್ಲೇ ಕವಿತೆ ಮಾಡಿದ!

ಹಿಮಾಲಯ (ಹಿಮಗಿರಿ), ಉಮ, ಸಪ್ನಾ, ಊರ್ವಶಿ, ಮೇನಕಾ, ನರ್ತಕಿ, ಆನಂದ, ನಂದಾ, ನಟರಾಜ, ಸಂಪಿಗೆ, ಗೀತಾಂಜಲಿ, ಸಂತೋಷ್, ಶಿವಾಜಿ, ಭಾರತ್, ಕಲ್ಪನ, ಸಾಗರ್, ಪ್ರಭಾತ್, ಲಕ್ಷ್ಮಿ, ಜೈಹಿಂದ್ (ಅಥವಾ ಜಯಶ್ರೀ), ಕಪಾಲಿ, ಅಲಂಕಾರ್, ಸಂಗಮ್, ಇವು ಆಗ ಇದ್ದ ಕೆಲವು ಚಿತ್ರಮಂದಿರಗಳ ಹೆಸರುಗಳು.  ಕೆಲವು ಈಗ ಇಲ್ಲ. ಮೊದಲಲ್ಲಿ "ಹಿಮಗಿರಿಗೆ ಎರಗಿ ಉಮೆಯನ್ನು ಕಂಡು ಬಂದೆ" ಎಂದಾಗ ಎರಡು ಚಿತ್ರಮಂದಿರದ ಜೊತೆಗೆ ಹಿಮವಂತನ ಮಗಳು ಪಾರ್ವತೀ (ಉಮಾ) ಎನ್ನುವ ಧ್ವನಿ. ಕೊನೆಯಲ್ಲಿ "ಕೆಂಪಗಿಲ್ಲಿ ಬಂದು ನಿಂತೆ" ಅನ್ನುವುದು ಕೆಂಪೇಗೌಡ ಚಿತ್ರಮಂದಿರವೂ ಆಗಬಹುದು; ಅಥವಾ ಬಿಸಿಲಲ್ಲಿ ಅಲೆದು ಮುಖ ಕೆಂಪಗಾಯಿತು ಎಂದೂ ಇರಬಹುದು!  

ಗುರುಗಳು ಕಷ್ಟಪಟ್ಟು ಅವನು ಪಾಠ ತಪ್ಪಿಸಿ ಸಿನಿಮಾ ನೋಡುವುದನ್ನು ಬಿಡಿಸಿದರಂತೆ! ಮುಂದೆ ಅವನ ಪ್ರತಿಭೆ ವಿದ್ಯಾಭಾಸದ ಕಡೆ ಪೂರ್ತಿ ತಿರುಗಿ ಹೆಸರಾಂತ ವಿದ್ವಾಂಸ ಆದನಂತೆ.  

*****

ಮಾನ್ವಿ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಒಂದು ಪಟ್ಟಣ. ಹರಿದಾಸ ಪಂಥದ ಶ್ರೇಷ್ಠ ದಾಸರಾದ ಜಗನ್ನಾಥ ದಾಸರ ಸ್ಥಳ. ಈಗಲೂ ಹರಿದಾಸ ಪಂಥದ ಅನೇಕರು ಅಲ್ಲಿ ವಾಸವಾಗಿದ್ದಾರೆ. ನಿಷ್ಠರಾದ ಕೆಲವು ಮಿತ್ರರಿಗೆ ಇಸ್ಪೀಟ್ ಆಡುವ ಹುಚ್ಚು ಅಂಟಿಕೊಂಡಿತ್ತು. ಅತಿಯಾಗಿ ಕುಡಿದರೆ ಪಂಚಾಮೃತವೂ ಕೆಟ್ಟದೇ. ಅಂತಹದರಲ್ಲಿ ಜೂಜಿನ ವಿಷಯ ಹೇಳುವುದೇ ಬೇಡ. ಬಾಕಿಯಂತೆ ಒಳ್ಳೆಯವರೂ, ತಿಳಿದವರೂ ಆದರೂ ಇಸ್ಪೀಟಿನ ಎಲೆಯ ಆಟದ ಖಯಾಲಿ ಕಾರಣ ಸ್ನೇಹಿತರು ಪ್ರತಿದಿನ ಸೇರಿ ಆಟ ಆಡುವುದು. ಹಣ ಕಟ್ಟಿ ಆಡುವಾಗ ಕಳೆದುಕೊಳ್ಳುವುದೇ ಹೆಚ್ಚು.  

ಕೆಲವು ದಶಕಗಳ ಹಿಂದೆ ಅಲ್ಲಿ ವಾಸವಿದ್ದ ಇಸ್ಪೀಟ್ ಸ್ನೇಹಿತರು ಒಂದು ದಿನ ಆಡಲು ಶುರು ಮಾಡಿದರು. ಮಾನ್ವಿ ಗೋವಿಂದ ದಾಸರೆಂಬುವರು ಒಂದು ಆಟ ಸೋತರು. ಪಕ್ಕದಲ್ಲಿದ್ದವರು 'ದಾಸರೇ, ಆಟ ಸೋತಿರಲ್ಲ!" ಎಂದರು. "ಏನು ಮಾಡುವುದು? ರಾಣಿ ಕೈ ಕೊಟ್ಟಳು!" ಎಂದರು ಅವರು. ಇಸ್ಪೀಟ್ ರಾಣಿ ಎಲೆಗಾಗಿ ಕಾದಿದ್ದು, ಆ ಎಲೆ ಬರದೇ ಸೋತೆ ಎಂದರು. ಇದರ ಮೇಲೆ ಒಂದು ಹಾಡು ಮಾಡಿ ಎಂದರು ಮತ್ತೊಬ್ಬರು. ಮಾನ್ವಿ ಶಾಮಸುಂದರ ದಾಸರು ತಾಯಿ ಮಹಾಲಕ್ಷ್ಮಿಯನ್ನು ಸಂಬೋಧಿಸಿ ಒಂದು ಸೊಗಸಾದ ದೇವರನಾಮವನ್ನೇ ಮಾಡಿ ಹೀಗೆ ಹಾಡಿದರು:

ಜಾಣೆ ನಂಬಿದೆ ಇಸ್ಪೀಟ್ ರಾಣೀ ನೀ ಒಲಿದೆನ್ನ 
ಪಾಣಿಯೊಳಗೆ ಬಂದು ಕಾಣಿಸಮ್ಮ 
ವಾಣಿ ಶ್ರೀಲಕುಮೀಶ ರುದ್ರಾಣಿಯರಿಗಿಂತ 
ಕ್ಷೋಣಿಯೊಳಗೆ ಬಹು ಮಾನ್ವಿತೆ ನೀನಮ್ಮ 

ಜನಕನು ಗಳಿಸಿದ ಧನವೆಲ್ಲ ಕಳಕೊಂಡೆ 
ದನಕರು ಹೊಲ-ಮನೆಯನು ಮಾರಿದೆ 
ಜನರೊಳಗಪಹಾಸ್ಯಕ್ಕೊಳಗಾದೆ ಕೇಳಮ್ಮ 
ಮಡದಿ ಮಕ್ಕಳ ಕೈಗೆ ಕೊನೆಗೆ ಪರಕೆ ಕೊಟ್ಟೆ 

ಉಣಲು ಅನ್ನವ ಕಾಣೆ ಉಡಲು ವಸ್ತ್ರವ ಕಾಣೆ 
ಕಡುಕಷ್ಟ ಕಡಲೊಳು ಮುಳುಗಿದೆನಮ್ಮ 
ಪೊಡವಿಯೊಳ್ ನಿನ್ ಹೊರತು ಕಡೆಹಾಯಿಸುವಂಥ 
ಒಡೆಯರ ಕಾಣೆ ಕೈಪಿಡಿದು ರಕ್ಷಿಸಮ್ಮ 

ಎಷ್ಟಂತ ಹೇಳಲಿ ಮಡದಿಯ ಗೋಳಾಟ 
ತಾಳಿ ಹೊರತು ಎಲ್ಲ ಹಾಳಾಯಿತು 
ಸಾಲ ಬಹಳಾಯ್ತು ಜೋಳಿಗೆ ಬಂದಿತು 
ಕೂಳಿಗೆ ಮನೆಮನೆ ಚಾಲುವರಿದೆನಮ್ಮ 

ಅಕ್ಕರದಲ್ಲಿ ಎರಡೆಕ್ಕದೊಳಗೆ ಬಂದು 
ಫಕ್ಕನೆ ನೀ ಎನ್ನ ಕರದೊಳು ಬಾರಮ್ಮ 
ಮುಕ್ಕಣ್ಣ ಸಖ ತನ್ನ ಬೊಕ್ಕಸದೊಳಗಿನ 
ರೊಕ್ಕ ಹಾಕಲು ಅವನ ಲೆಕ್ಕಿಸೆ ನಾನಮ್ಮ 

ಕಾಮಿತದಾಯಿನಿ ಕಾಮಿನಿ ಶಿರೋಮಣಿ 
ಶಾಮಸುಂದರ ಸಾರ್ವಭೌಮನ ರಾಣಿ 
ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ 
ನಾ ಮೊರೆ ಹೊಕ್ಕೆನು ನೀ ದಯ ಮಾಡು ತಾಯೆ 

ಜೂಜಿನ ನಷ್ಟಕ್ಕೆ ಸಿಲುಕಿ ಮನೆ, ಹೊಲ, ಪಶು ಸಂಪತ್ತು, ಚಿನ್ನ-ಬೆಳ್ಳಿ ಎಲ್ಲ ಮಾರಿ ಕಳಕೊಂಡು, ಹೆಂಡತಿ ಮಕ್ಕಳ ಹೀನಾಯ ಸ್ಥಿತಿಗೆ ಕಾರಣನಾದೆ. ಸಾಲಗಾರನಾಗಿ ಮನೆ ಮನೆ ತಿರುಗಿ ಭಿಕ್ಷೆ ಬೇಡುವ ಸ್ಥಿತಿ ಬಂತು. ಹೀಗಿದೆ ನನ್ನ ಸ್ಥಿತಿ. ನನ್ನ ಕಾಪಾಡಲು ಯಾರಿಗೂ ಸಾಧ್ಯವಿಲ್ಲ. ನೀನೇ ನನಗೆ ಆಟದಲ್ಲಿ ಬೇಕಾದ ಎಲೆಯಾಗಿ ಬಂದು, ಕೈಯಲ್ಲಿ ಕುಳಿತು, ಗೆಲ್ಲಿಸಿ, ಈ ಕಷ್ಟಗಳಿಂದ ಪಾರು ಮಾಡು ಎಂದು ಮೊರೆ ಇಡುತ್ತಾರೆ. 

ಪ್ರಪಂಚದಲ್ಲಿ ಎಲ್ಲರಿಗಿಂತ ಶ್ರೀಮಂತ ಶಿವನ ಮಿತ್ರನಾದ ಕುಬೇರ. ಅವನೇ ಆಟಕ್ಕೆ ಬಂದು ತನ್ನ ಖಜಾನೆಯಲ್ಲಿ ಇರುವ ಎಲ್ಲ ಹಣವನ್ನೂ ಪಣಕ್ಕಿಡುತ್ತಾ ಹೋಗಲಿ. ನಿನ್ನ ಕರುಣೆ ಇದ್ದರೆ, ನೀನು ಬೇಕಾದ ಎಲೆಯಾಗಿ ನನ್ನ ಕಯ್ಯಲ್ಲಿ ಬಂದು ಕೂಡುತ್ತಿದ್ದರೆ, ನಾನು ಕುಬೇರನನ್ನೂ ಲೆಕ್ಕಿಸದೆ ಗೆಲ್ಲುತ್ತ ಹೋಗುತ್ತೇನೆ ಎನ್ನುತ್ತಾರೆ.!

ಕೊನೆಯ ನುಡಿಯಲ್ಲಿ ಅವರ ಮತದ ವಿಶೇಷ ಪ್ರಮೇಯ ಒಂದನ್ನು ಹೇಳುತ್ತಾರೆ. ಮಹಾಲಕ್ಷ್ಮಿ ಕೇಳಿದ್ದನ್ನು ಕೊಡುವ ಶಕ್ತಿಯುಳ್ಳ ಕಾಮಿತದಾಯಿನಿ. ಮೂರು ಲೋಕಗಲ್ಲಿಯೂ ಅತಿ ಶ್ರೇಷ್ಠ ಮಹಿಳೆ. ಶಾಮಸುಂದರನಾದ ಶ್ರೀ ಮಹಾವಿಷ್ಣುವಿನ ಮಹಾರಾಣಿ. ಹೀಗೆಂದು ಹೇಳಿದಮೇಲೆ ಅವಳನ್ನು ಶ್ರೀಮಂತ ಜೋಕರನ ಸೋದರಿ ಎಂದು ಸಂಬೋಧಿಸುತ್ತಾರೆ. ಲಕ್ಷ್ಮಿ ಹೇಗೆ ಸೋದರಿ ಆದಾಳು? 

ಮಹಾಲಕ್ಷ್ಮಿಗೆ ಶ್ರೀ, ಭೂ, ದುರ್ಗಾ ಎಂದು ಮೂರು ರೂಪಗಳು. ಶ್ರೀ ಕೃಷ್ಣ ಇಸ್ಪೀಟ್ ಆಟದ ಜೋಕರ್ ಇದ್ದಂತೆ. ಅವನು ಮಹಾಭಾರತದಲ್ಲಿ, ಭಾಗವತದಲ್ಲಿ ಮಾಡದಿದ್ದ ಕೆಲಸವೇ ಇಲ್ಲ. "ಪಾಂಡವರ ಮನೆಯಲ್ಲಿ ಕುದುರೆಗಳ ತಾ ತೊಳೆದು ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿದ". ಪಾರ್ಥನಿಗೆ ಸಾರಥಿಯಾಗಿ "ಪಾರ್ಥಸಾರಥಿ" ಸಹ ಆದ. ರಾಜಸೂಯ ಯಾಗದಲ್ಲಿ ಎಲ್ಲ ಅತಿಥಿಗಳು ಊಟ ಮಾಡಿದ ಎಂಜಲು ಎಲೆಯನ್ನೂ ಎತ್ತಿದ. ಕಡೆಗೆ ಅದೇ ಯಾಗದಲ್ಲಿ ಆಗ್ರ ಪೂಜೆಯನ್ನೂ ಸ್ವೀಕರಿಸಿದ! ಆದ್ದರಿಂದ ಆಳಿನಿಂದ ಹಿಡಿದು ಅರಸನ ವರೆಗೆ ಎಲ್ಲ ಪಾತ್ರಗಳನ್ನೂ ನಿಭಾಯಿಸಿದ. ಇಸ್ಪೀಟ್ ಆಟದಲ್ಲಿ ಜೋಕರನೂ ಹಾಗೇ ಅಲ್ಲವೇ? ಅದರಿಂದ ಅವನು ಮಹಾಲಕ್ಷ್ಮಿಯ ಗಂಡನಾದ ಶ್ರೀಮಂತ ಜೋಕರ. ಮಹಾಲಕ್ಷ್ಮಿಯು ದುರ್ಗಾ ರೂಪದಿಂದ ದೇವಕಿಯ ಏಳನೇ ಗರ್ಭವನ್ನು ವಸುದೇವನ ಇನ್ನೊಬ್ಬ ಹೆಂಡತಿ ರೋಹಿಣಿಯಲ್ಲಿ ಸೇರಿಸಿ ತಾನೇ ದುರ್ಗಾ ರೂಪದಿಂದ ಕಂಸನಿಗೆ ಬೇಕೆಂದೇ ಸಿಕ್ಕಳು. ಆದರೆ ಅವನಿಗೆ ದಕ್ಕದೆ ತಪ್ಪಿಸಿಕೊಂಡಳು. ನಂತರ ಶ್ರೀಕೃಷ್ಣನ ಜನನವಾಯಿತು. ಆದ್ದರಿಂದ ಅವಳು ಕೃಷ್ಣನ ಪ್ರೇಮದ ಭಗಿನಿಯಾದಳು! ಇದನ್ನೇ ನಿರ್ದೇಶಿಸುತ್ತಾರೆ ಕೊನೆಯ ನುಡಿಯಲ್ಲಿ. 

ಈ ಹಾಡು ಯು ಟ್ಯೂಬಿನಲ್ಲಿ ಲಭ್ಯವಿದೆ. ಈ ಕೆಳಕಂಡ ಲಿಂಕ್ ನಲ್ಲಿ ಕೇಳಬಹುದು:

 https://www.youtube.com/watch?v=DcZCBS8L0fI

ಲಿಂಕ್ ಕಾಪಿ ಪೇಸ್ಟ್ ಮಾಡಿ ಕೇಳಿ ನೋಡಿ.