Monday, December 25, 2023

ತಿಥಿ - ಅತಿಥಿ - ಅಭ್ಯಾಗತ




ಕಣ್ವ ಋಷಿಗಳು ಆಶ್ರಮದಲ್ಲಿಲ್ಲ. ಅಲ್ಲಿನ ಎಲ್ಲ ನಿರ್ವಹಣೆಯ ಕೆಲಸವನ್ನು ಸಾಕು ಮಗಳು ಶಕುಂತಲೆಗೆ ವಹಿಸಿ ಎಲ್ಲಿಯೋ ಸಂಚಾರ ಹೋಗಿದ್ದಾರೆ. ಶಕುಂತಲೆಯಾದರೋ ತನ್ನದೇ ಪ್ರಪಂಚದಲ್ಲಿ ಮುಳುಗಿಹೋಗಿದ್ದಾಳೆ. ಅತಿ ಶೀಘ್ರದಲ್ಲೇ ರಾಜಧಾನಿಗೆ ಕರೆಸಿಕೊಳ್ಳುವುದಾಗಿ ವಚನ ಕೊಟ್ಟಿದ್ದ ಚಕ್ರವರ್ತಿ ದುಷ್ಯಂತನಾಗಲೀ  ಅಥವಾ ಅವನ ಕಡೆಯ ದೂತರಾಗಲೀ ಇನ್ನೂ ಬಂದಿಲ್ಲ. ಸಾಕುತಂದೆಗೇ ಗೊತ್ತಿಲ್ಲದಹಾಗೆ ವಿವಾಹವೇನೋ ಆಯಿತು. ಆದರೆ ಮುಂದಿನ ಕಥೆಯೇನು? ಈ ಸಮಸ್ಯೆಗೆ ಪರಿಹಾರ ಹೇಗೆ? ಇದು ಅವಳ ಚಿಂತೆ. 

ಮಹರ್ಷಿ ದೂರ್ವಾಸರು ಅದೇ ಸಮಯಕ್ಕೆ ಆಶ್ರಮಕ್ಕೆ ಬಂದರು. ಶಕುಂತಲೆಯ ಮುಂದೆ ನಿಂತರು. ನಿಂತೇ ಇದ್ದರು. ಶಕುಂತಲೆ ನೋಡಲೂ ಇಲ್ಲ; ಮಾತಾಡಲೂ ಇಲ್ಲ. ಆಶ್ರಮಕ್ಕೆ ಬಂದ ಅತಿಥಿ ಎದುರು ನಿಂತಿದ್ದರೂ ಸ್ವಾಗತಿಸಲೂ ಇಲ್ಲ. ದೂರ್ವಾಸರಿಗೆ ಅಖಂಡ ಕೋಪ ಬಂತು. ಶಪಿಸಿದರು. ಹೊರಟುಹೋದರು. 

ಹೀಗೆ ಸಾಗುತ್ತದೆ ಮಹಾಕವಿ ಕಾಳಿದಾಸನ ನಾಟಕದ ಕಥೆ,

*****

ಶೂರಸೇನನ ಮಗಳು ಪೃಥಾ. ವಸುದೇವನ ಸೋದರಿ. ಆದ್ದರಿಂದ ಅವಳು ಮುಂದೆ ಶ್ರೀಕೃಷ್ಣನ ಸೋದರತ್ತೆ. ಮಕ್ಕಳಿಲ್ಲದ ಶೂರಸೇನನ ಸಹೋದರ ಕುಂತಿಭೋಜ ಅವಳನ್ನು ದತ್ತು ತೆಗೆದುಕೊಂಡ. ಅಂದಿನಿಂದ ಅವಳು ಕುಂತಿ ಎಂದು ಹೆಸರು ಪಡೆದಳು. (ಶ್ರುತಶ್ರವೆ ಮತ್ತು ಶ್ರುತದೇವೆ ಸಹ ವಸುದೇವನ ತಂಗಿಯರು. ಶಿಶುಪಾಲ ಮತ್ತು ದಂತವಕ್ರರು ಕ್ರಮವಾಗಿ ಇವರ ಮಕ್ಕಳು). 

ಒಮ್ಮೆ ಮಹರ್ಷಿ ದೂರ್ವಾಸರು ಕುಂತಿಭೋಜನ ಸ್ಥಳಕ್ಕೆ ಅನಿರೀಕ್ಷಿತವಾಗಿ ಬಂದರು. ಕುಂತಿಭೋಜನ ವಿನಂತಿಯಂತೆ ಕೆಲವು ದಿನ ನಿಂತರು. ಮಹರ್ಷಿಗಳ ಸೇವೆಗೆ ಕುಂತಿಭೋಜ ಮಗಳು ಕುಂತಿಯನ್ನು ನೇಮಿಸಿದ. ಕುಂತಿಯ ಸೇವೆಯಿಂದ ಅತ್ಯಂತ ಸಂತುಷ್ಟರಾದ ಮಹರ್ಷಿ ದೂರ್ವಾಸರು ಕುಂತಿಗೆ ಐದು ಅಮೂಲ್ಯ ವರಗಳನ್ನು ಕೊಟ್ಟರು. 

ಆದರ ಫಲವಾಗಿ ಮುಂದೆ ಕರ್ಣ, ಯುಧಿಷ್ಠಿರ, ಭೀಮ ಮತ್ತು ಅರ್ಜುನ ಹುಟ್ಟಿ ಕೌಂತೇಯರಾದರು. ಕುಂತಿ ಐದನೆಯ ವರವನ್ನು ಮಾದ್ರಿಗೆ ವರ್ಗಾಯಿಸಿದಳು. ಅದರಿಂದ ನಕುಲ ಮತ್ತು ಸಹದೇವರ ಜನನ. ಅವರಿಬ್ಬರೂ ಮಾದ್ರೀಯರು. ಕರ್ಣನನ್ನು ಬಿಟ್ಟು ಉಳಿದ ಐವರು ಪಾಂಡುರಾಜನ ಮಕ್ಕಳಾದ್ದರಿಂದ ಪಾಂಡವರಾದರು. ಹೀಗೆ ಮುಂದುವರಿಯುತ್ತದೆ ಮಹಾಭಾರತದ ಕಥೆ,

*****

ವಾಜಶ್ರವಸ ಋಷಿಯ ಮಗಳು ಆರುಣಿ. ಆರುಣಿಯ ಪತಿ ಋಷಿ ಉದ್ದಾಲಕ. ಇವರ ಮಕ್ಕಳು ಶ್ವೇತಕೇತು ಮತ್ತು ನಚಿಕೇತ. ತಂದೆಯ ಯಾಗದಲ್ಲಿ ಅವನು ದಾನ ಕೊಡುವ ಕೆಲವು ನಿರುಪಯೋಗಿ ಗೋವುಗಳನ್ನು ಕಂಡು ನಿರಾಶನಾಗಿ ಪುಟ್ಟ ಬಾಲಕ ನಚಿಕೇತ ಯಾಗದಲ್ಲಿ ಮಗ್ನನಾಗಿರುವ ತಂದೆಯನ್ನು "ಅಪ್ಪ, ನನ್ನನ್ನು ಯಾರಿಗೆ ಕೊಡುತ್ತೀ" ಎಂದು ಮತ್ತೆ ಮತ್ತೆ ಕೇಳುತ್ತಾನೆ. ಮೊದಲಿಗೆ ಅವನ ಪ್ರಶ್ನೆಯನ್ನು ಗಮನಿಸದವನಂತೆ ಇದ್ದರೂ ಪದೇ ಪದೇ ಕೇಳಿದಾಗ ಕೋಪದಿಂದ "ನಿನ್ನನ್ನು ಯಮನಿಗೆ ಕೊಡುತ್ತೇನೆ" ಎಂದುಬಿಡುತ್ತಾನೆ ತಂದೆ. (ನಚಿಕೇತ ವಾಜಶ್ರವಸನ ಮಗಳ ಮಗ. ಮೊಮ್ಮಗ. ಉದ್ದಾಲಕನ ಮಗ. ವಾಜಶ್ರವಸನ ಮಗ ಎನ್ನುವುದು ತಪ್ಪು ಗ್ರಹಿಕೆ). 

ನಚಿಕೇತ ನೇರ ಯಮನ ಪಟ್ಟಣಕ್ಕೆ ಬಂದುಬಿಡುತ್ತಾನೆ. ಯಮ ಸಂಚಾರದಲ್ಲಿ ಇದ್ದಾನೆ. ಮನೆಯವರು ಒಳಗೆ ಕರೆದರೂ ಹೋಗದೆ ನಚಿಕೇತ ಮೂರು ಹಗಲು, ಮೂರು ರಾತ್ರಿ ಯಮನ ಮನೆಯ ಬಾಗಿಲ ಬಳಿಯೇ ಕುಳಿತುಬಿಡುತ್ತಾನೆ. ಮೂರು ದಿನದ ನಂತರ ಬಂದ ಯಮನಿಗೆ ಆಶ್ಚರ್ಯ. ಯಮ ಆಹ್ವಾನ ಕೊಟ್ಟವನಲ್ಲ. ನಚಿಕೇತ ಬರುವುದಾಗಿ ಮುಂಚೆ ತಿಳಿಸಿದವನೂ ಅಲ್ಲ. ಆದರೂ ಯಮನು ಮೂರು ದಿನ ಕಾಯಿಸಿದ ತಪ್ಪಿಗೆ ಮೂರು ವರ ಕೊಡುತ್ತಾನೆ. 

ಆ ವರಗಳ ವಿಷಯ ಮತ್ತು ಯಮನು ನಚಿಕೇತನಿಗೆ ವಿವರಿಸಿದ ರಹಸ್ಯ ತತ್ವಗಳು "ಕಠೋಪನಿಷತ್" ಮುಂದಿನ ವಿವರಗಳು. 

*****

ಮೇಲಿನ ಮೂರು ದೃಷ್ಟಾಂತಗಳಲ್ಲಿ ಮೂರು ವಿಧ ಪರಿಣಾಮಗಳನ್ನು ಕಾಣುತ್ತೇವೆ. ಮೊದಲನೆಯದರಲ್ಲಿ ಸತ್ಕಾರವಂಚಿತ ಅಥಿತಿಯ ಕೋಪದ ಪರಿಣಾಮ. ಎರಡನೆಯದರಲ್ಲಿ ಸತ್ಕಾರದಿಂದ ಪ್ರೀತನಾದ ಅಥಿತಿಯ ಸಂತೋಷದ ಫಲ. ಮೂರನೆಯದರಲ್ಲಿ ಅತಿಥಿ ಕೋಪಿಸಿಕೊಳ್ಳುವ ಸಾಧ್ಯತೆ ಇಲ್ಲದಿದ್ದರೂ ಅವನನ್ನು ಸಮಾಧಿನಿಸಿ ಗೌರವ ತೋರುವ ರೀತಿ. ಮೊದಲನೆಯದು ಅತಿಥಿ ಸತ್ಕಾರದಲ್ಲಿ ನಿರಾಸಕ್ತಿ. ಎರಡನೆಯದರಲ್ಲಿ ಅತಿಥಿ ಸತ್ಕಾರದಲ್ಲಿ ಪೂರ್ಣ ಆಸಕ್ತಿ. ಮೂರನೆಯದರಲ್ಲಿ ತಡವಾದುದಕ್ಕೆ ಪ್ರಾಯಶ್ಚಿತ್ತರೂಪವಾಗಿ ಹೆಚ್ಚಿನ ಸತ್ಕಾರದ ಪ್ರಯತ್ನ. 

ಅಥಿತಿ ಅಭ್ಯಾಗತರ ಸತ್ಕಾರ ಎಂದು ಜೊತೆ ಜೊತೆಯಾಗಿ ಹೇಳುತ್ತಾರೆ. ಅಚ್ಚ ಕನ್ನಡದಲ್ಲಿ ಬಂದವರು-ಹೋದವರು ಎನ್ನುತ್ತೇವೆ. ಬಂದವರು ಹೋಗಿಯೇ ಹೋಗುತ್ತಾರೆ. ಆದರೆ ಅದು ಒಂದು ಹೇಳುವ ರೀತಿ. ಪ್ರೀತಿ-ಗೀತಿ ಅಂದಂತೆ. ಅದರಲ್ಲಿ ಒಂದು ವಿಶೇಷವಿದೆ. ಬಂದವರನ್ನು ಸ್ವಾಗತಿಸುವುದು ಎಷ್ಟು ಮುಖ್ಯವೋ, ಅವರು ಹೋಗುವಾಗ ಕ್ರಮವಾಗಿ ಬೀಳ್ಕೊಡುವುದೂ ಅಷ್ಟೇ ಮುಖ್ಯ. ಹಾಗಿದ್ದರೆ ಅಥಿತಿ ಎಂದರೆ ಯಾರು? ಅಭ್ಯಾಗತ ಅಂದರೆ ಯಾರು? ಎರಡರ ಅರ್ಥವೂ ಒಂದೇ? ಅಥವಾ ಬೇರೆಯೇ? ಅವರ ಸತ್ಕಾರಕ್ಕೆ ಏಕೆ ಇಷ್ಟು ಮಹತ್ವ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯುವುದು ಸಹಜವಾಗಿ ಮಾಡಬೇಕಾದ ಕೆಲಸ. 

*****

ಪಂಚಾಂಗ ಎಂಬ ಪದವನ್ನು ಎಲ್ಲರೂ ಬಳಸುತ್ತೇವೆ. ಪಂಚಾಂಗ ಎಂದರೆ ಒಂದು ಪುಸ್ತಕ; ಪ್ರತಿ ವರುಷ ಬರುವ ಹೊಸ ಪುಸ್ತಕ ಎಂದೇ ಅನೇಕರ ತಿಳುವಳಿಕೆ. ಈಚೆಗಂತೂ ವಾಟ್ಸಪ್ಪ್  ಗುಂಪುಗಳಲ್ಲಿ "ಈ ದಿನದ ಪಂಚಾಂಗ" ಎಂದು ಎಲ್ಲರಿಗೂ ಅದನ್ನು ಸುತ್ತು ಹೊಡೆಸದಿದ್ದರೆ ಕೆಲವರಿಗೆ ನಿದ್ದೆಯೇ ಬರುವುದಿಲ್ಲ. ಈ ಪಂಚಾಂಗ ಎಂದರೆ ಏನು? ಪಂಚ ಎಂದರೆ ಐದು ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಏನು ಈ ಐದು? ಇವು ಯಾವುದರ ಅಂಗಗಳು? 

ಯಾವುದಾದರೂ ಕೆಲಸವನ್ನು ಮಾಡುವಾಗ "ಒಂದು ಒಳ್ಳೆಯ ದಿನವನ್ನು ನೋಡಿ ಮಾಡಿ" ಎಂದು ಎಲ್ಲರೂ ಹೇಳುತ್ತಾರೆ. ಯಾವುದು ಒಳ್ಳೆಯ ದಿನ? ಕೇವಲ ದಿನ ಮಾತ್ರ ಒಳ್ಳೆಯದಾದರೆ ನಮಗೆ ಸಾಲದು. ಒಳ್ಳೆಯ ಹಣ್ಣು ಬೇಕು, ಮಾತ್ರವಲ್ಲ. ಅದರ ಒಳ್ಳೆಯ ಭಾಗವೇ ಬೇಕು! ಆ ದಿನದಲ್ಲೂ ಒಂದು ಒಳ್ಳೆಯ ಸಮಯ, ಅಂದರೆ ಮುಹೂರ್ತ ಹುಡುಕುತ್ತಾರೆ. ಒಳ್ಳೆಯ ದಿನವಾಗಬೇಕಾದರೆ ಐದು ಘಟಕಗಳು ಸೇರಬೇಕು. ಐದು ಘಟಕಗಳು ಪ್ರತಿ ದಿನ ಸೇರೇ ಸೇರುತ್ತವಲ್ಲ! ಐದು ಘಟಕಗಳೂ ಒಳ್ಳೆಯವಾಗಿರಬೇಕು. ದಿನ, ವಾರ, ನಕ್ಷತ್ರ, ಯೋಗ, ಕರಣ ಇವೇ ಆ ಐದು ಅಂಗಗಳು. ಈ ಐದರ ವಿವರಗಳನ್ನು ಕೋಷ್ಟಕದಂತೆ ಕೊಟ್ಟಿರುವ ಪುಸ್ತಕವೇ ಪಂಚಾಂಗ. ಅಷ್ಟೇ ಅಲ್ಲ. ಊಟದಲ್ಲಿ ಐದು ವಿಧವಾದ ಸಿಹಿ ಪದಾರ್ಥ ಇರಬೇಕು ಅಂದರೆ ಬರಿ ಐದು ಸಿಹಿ ತಿಂಡಿ ಮಾಡಿ ಬಡಿಸುವುದಲ್ಲ. ಅವುಗಳ ಜೊತೆ ಬೇರೆ ಅನೇಕ ವ್ಯಂಜಕಗಳೂ ಇರುತ್ತವೆ. ಪಂಚಾಂಗವೂ ಹಾಗೆ. ವರ್ಷದ ಪ್ರತಿ ದಿನದ ಈ ಐದು ಅಂಗಗಳ ಕೋಷ್ಠಕದ ಜೊತೆ ಅನೇಕ ಬೇರೆ ಬೇರೆ ಅವಶ್ಯಕವಾದ ವಿಚಾರಗಳೂ ಪಂಚಾಂಗದಲ್ಲಿ ಇರುತ್ತವೆ. 

ಪಂಚಾಂಗದ ಐದು ಅಂಗಗಳಲ್ಲಿ ಮೊದಲನೆಯದು ದಿನ. ಅನಂತವಾದ ಕಾಲವನ್ನು ನಮ್ಮ ಅನುಕೂಲಕ್ಕಾಗಿ ವಿಭಜಿಸಿ ಲೆಕ್ಕಮಾಡಲು ಸುಲಭವಾದ ಘಟಕಗಳಾಗಿ ಮಾಡಿದ್ದಾರೆ. ಚಂದ್ರ ಮತ್ತು ಸೂರ್ಯರ ಚಲನೆ ಆಧರಿಸಿ ಕಾಲ ಅಳೆಯುವ ಪ್ರಯತ್ನ.  "ಮತ್ತೆ ಮತ್ತೆ ಯುಗಾದಿ! ಯಾವುದಕೆ ಹಾದಿ? ಕಂಭ ಸುತ್ತುವ ವೃತ್ತ, ಕಾಲಗತಿಯೇ ಅನಾದಿ" ಎನ್ನುತ್ತಾರೆ ಕವಿ ಗೋಪಾಲಕೃಷ್ಣ ಅಡಿಗರು. ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಕಾಲ ಹಗಲು. ಸೂರ್ಯಾಸ್ತದಿಂದ ಸೂರ್ಯೋದಯದವರೆಗಿನ ಕಾಲ ರಾತ್ರಿ. ಸೂರ್ಯೋದಯದಿಂದ ಮತ್ತೆ ಮಾರನೆಯ ದಿನ ಸೂರ್ಯೋದಯದವರೆಗಿನ ಕಾಲ ಒಂದು ದಿನ. ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಶುಕ್ಲ ಪಕ್ಷ. ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ ಕೃಷ್ಣ ಪಕ್ಷ. ಅಂದರೆ ಅಮಾವಾಸ್ಯೆಯಿಂದ ಮುಂದಿನ ಅಮಾವಾಸ್ಯೆವರೆಗೆ ಒಂದು ತಿಂಗಳು. 

ಚಂದ್ರನ ಗತಿ ಅನುಸರಿಸಿ ಸುಮಾರು ಇಪ್ಪತೆಂಟು ದಿನಗಳಿಗೆ ಒಂದು ತಿಂಗಳು. ಈ ತಿಂಗಳಲ್ಲಿ ಮೂವತ್ತು ತಿಥಿಗಳು. ಆದ್ದರಿಂದ ಕೆಲವು ವೇಳೆ ಒಂದೇ ದಿನ ಎರಡು ತಿಥಿಗಳೂ ಬರಬಹುದು. ಒಂದು ಹಲ್ಲಿನ ಮೇಲೆ ಹುಟ್ಟಿದ ಇನ್ನೊಂದು ಹಲ್ಲು ಅಥವಾ ಉಬ್ಬು ಹಲ್ಲು ಎಂದು ತಮಾಷೆಯಾಗಿ ಹೇಳಬಹುದು. ಇದನ್ನೇ ಉಪರಿ (ಒಂದರ ಮೇಲೆ ಇನ್ನೊಂದು) ಎನ್ನುತ್ತಾರೆ. ಸಾಮಾನ್ಯವಾಗಿ ಒಂದು ದಿನಕ್ಕೆ ಒಂದು ತಿಥಿ. ಅದಕ್ಕೇ ಐದು ಅಂಗಗಳಲ್ಲಿ ಮೊದಲನೆಯದನ್ನು ದಿನ ಅಥವಾ ತಿಥಿ ಎನ್ನುತ್ತಾರೆ. ಪಾಡ್ಯ, ಬಿದಿಗೆ, ತದಿಗೆ...... ಹುಣ್ಣಿಮೆ ಅಥವಾ ಅಮಾವಾಸ್ಯೆ ಇತ್ಯಾದಿ. 

*****

ಜೀವನದ ವಿವಿಧ ಹಂತಗಳನ್ನು ನಾಲ್ಕು ಆಶ್ರಮಗಳು ಎಂದು ವಿಂಗಡಿಸಿದ್ದಾರೆ. (ಜನ್ಮದಿಂದ) ವಿವಾಹದವರೆಗೂ ಬ್ರಹ್ಮಚರ್ಯ. ನಂತರ ಗೃಹಸ್ಥ. ಹೆಚ್ಚಿನ ಸಾಧನೆಗೋ, ಸಂಸಾರದಲ್ಲಿ ಬೇಸತ್ತು ವೈರಾಗ್ಯ ಬಂದೋ ಸನ್ಯಾಸ ಸ್ವೀಕರಿಸಬಹುದು. ಇಲ್ಲವೇ ಗೃಹಸ್ಥನಾದ ನಂತರ ಕೊನೆಯಲ್ಲಿ ವಾನಪ್ರಸ್ಥ. ಹಿಂದೆ ಸಂಸಾರ ತ್ಯಜಿಸಿ ಕಾಡಿಗೆ ಹೋಗುತ್ತಿದ್ದರು. ಈಗ ಅದೂ ಸಾಧ್ಯವಿಲ್ಲ. ಕಾಡೆಲ್ಲಾ ಊರಾಗಿದೆ. "ನೀನೆಲ್ಲಿ ನಡೆವೆ ದೂರ! ಎಲ್ಲೆಲ್ಲೂ ಲೋಕವೇ!" ಎನ್ನುವಂಥ ಸ್ಥಿತಿ. ಬ್ರಹ್ಮಚಾರಿಗಳೂ ಮತ್ತು ಸನ್ಯಾಸಿಗಳೂ ಗೃಹಸ್ಥರನ್ನೇ ಆಶ್ರಯಿಸಿ ಜೀವಿಸಬೇಕು. ಅದಕ್ಕೇ ಕಾಳಿದಾಸ ಮಹಾಕವಿಯ ರಘುವಂಶದಲ್ಲಿ ಕೌತ್ಸ ರಘು ಮಹಾರಾಜನಿಗೆ "ಸರ್ವೋಪಕಾರ ಕ್ಷಮಮಾಶ್ರಮಂ ತೇ" ಎನ್ನುತ್ತಾನೆ. ಸಮಾಜದ ಆಧಾರ ಕಂಭಗಳೇ ಗೃಹಸ್ಥರು. ಆದ್ದರಿಂದ ಗೃಹಸ್ಥರ ಮನೆಗಳಿಗೆ ಅನೇಕರು ಬಂದು ಹೋಗುತ್ತಾರೆ. ಇವರಲ್ಲಿ ಗೃಹಸ್ಥರೂ ಉಂಟು. ಬ್ರಹ್ಮಚಾರಿ, ಸನ್ಯಾಸಿಗಳೂ ಉಂಟು. 

ಗೃಹಸ್ಥರ ಮನೆಗೆ ಬರುವ ಇಂತಹ ಜನಗಲ್ಲಿ ಎರಡು ವಿಧ. ನಾವಾಗಿ ಆಹ್ವಾನಿಸಿ ಅದಕ್ಕೆ ಸ್ಪಂದಿಸಿ ಬರುವವರು ಒಂದು ವರ್ಗ. ಅವರಾಗಿಯೇ ಬರುವವರು ಇನ್ನೊಂದು ವರ್ಗ. ಮೊದಲನೆಯ ಗುಂಪಿನ ಜನ ಬರುವುದು ನಮಗೆ ಗೊತ್ತು. ಏಕೆಂದರೆ, ನಾವು ಕರೆದಿದ್ದರಿಂದಲೇ ಅವರು ಬರುವುದು. ಹೀಗೆ ಕರೆಯುವುದರಿಂದ ಯಾವ ದಿನ ಅವರು ಬರಬೇಕು ಎನ್ನುವುದನ್ನು ನಾವೇ ನಿಗದಿ ಪಡಿಸುತ್ತೇವೆ. ಇಂತಹ ದಿನ (ತಿಥಿ ಅಥವಾ ದಿನಾಂಕವನ್ನು ನಿಗದಿ ಪಡಿಸಿ) ಬನ್ನಿ ಎಂದು ಹೇಳುತ್ತೇವೆ. ಇಷ್ಟು ಮಾತ್ರವಲ್ಲ, ಸಮಯವನ್ನೂ ನಾವು ಹೇಳಬಹುದು. ಅವರು ಬರುವುದು ನಮಗೆ ಮುಂಚೆಯೇ ಗೊತ್ತಿರುವುದರಿಂದ ಅವರನ್ನು ಸರಿಯಾಗಿ, ಗೌರವಯುತವಾಗಿ ಸ್ವಾಗತಿಸಿ, ಸತ್ಕರಿಸಲು ತಯಾರಿ ಮಾಡಿಕೊಳ್ಳಬಹುದು. ಇವರೇ ಅಭ್ಯಾಗತರು. ಇವರು ಬರುವುದರಲ್ಲಿ ಅನಿರೀಕ್ಷಿತವಾದುದು ಏನೂ ಇಲ್ಲ. 

ತಿಥಿ ಇಲ್ಲದೆ ಬರುವವನು ಅಥಿತಿ. ಅಂದರೆ ಅತಿಥಿ ಬರುವುದಕ್ಕೆ ದಿನ ಅಥವಾ ಕಾಲದ ಕ್ರಮವಿಲ್ಲ. ಧಿಡೀರನೆ ಮನೆಯ ಬಾಗಿಲ ಬಳಿ ಬಂದವರು ಅತಿಥಿಗಳು. ಅವರು ಬರುವ ಸುಳಿವೂ ನಮಗೆ ಗೊತ್ತಿಲ್ಲ. ಆದರೆ ಈಗ ಬಂದಿದ್ದಾರೆ. ಇಂತಹವರನ್ನು ಸ್ವಾಗತಿಸಲು, ಸತ್ಕರಿಸಲು ನಮಗೆ ತಯಾರಿ ಮಾಡಿಕೊಳ್ಳಲು ಸಮಯವಿಲ್ಲ. ಆಗಿಂದಾಗಲೇ ಎಲ್ಲ ಆಗಬೇಕು. ಮನೆಯಲ್ಲಿ ಇರುವ ಸಾಧನ, ಸಾಮಗ್ರಿಗಳಿಂದಲೇ ಎಲ್ಲ ನಡೆಯಬೇಕು. ಗೃಹಸ್ಥನ ಸತ್ಕಾರ ಕೌಶಲ್ಯ ಒರೆಗೆ ಹಚ್ಚುವುದು ಇಂತಹ ಸಮಯದಲ್ಲೇ.  ಇಂತಹ ಸಂದರ್ಭಗಳನ್ನು ಸಹಜವಾಗಿ ನಿಭಾಯಿಸುವ ಕಲೆ ಸಾಮಾನ್ಯವಾಗಿ  ಗೃಹಿಣಿಯರಿಗೆ ಒಲಿದು ಬಂದಿದೆ. ಆದ್ದರಿಂದಲೇ ಗೃಹಸ್ಥರು ಇಕ್ಕಟ್ಟಿನ ಪರಿಸ್ಥಿತಿಯಿಂದ ಸುಲಭವಾಗಿ ಪಾರಾಗುತ್ತಾರೆ! 

ಕೋಶಗಳು ಮತ್ತು ನಿಘಂಟುಗಳಲ್ಲಿ ಅತಿಥಿ ಮತ್ತು ಅಭ್ಯಾಗತ ಅನ್ನುವ ಎರಡೂ ಪದಗಳನ್ನೂ ಅತಿಥಿ ಎನ್ನುವ ಅರ್ಥದಲ್ಲೇ ಕೊಡುತ್ತಾರೆ. ಸಮಾನ ಪದಗಳು ಸುಮಾರಾಗಿ ಒಂದೇ ಅರ್ಥ ಕೊಟ್ಟರೂ ಅವುಗಳಲ್ಲಿ ಸಣ್ಣ ಆದರೆ ಸೂಕ್ಷ್ಮ ಭೇದಗಳಿರುತ್ತವೆ. ಅತಿಥಿ ಅನ್ನುವ ಪದಕ್ಕೆ "ತಿಥಿ ಇಲ್ಲದೆ ಬರುವವನು" ಅನ್ನುವುದನ್ನು ಎಲ್ಲ ಕಡೆ ಖಚಿತವಾಗಿ ಸೂಚಿಸಿದರೂ, ಅಭ್ಯಾಗತ ಅನ್ನುವ ಪದಕ್ಕೆ ಅಷ್ಟು ಖಚಿತವಾಗಿ ಸೂಚಿಸುವುದಿಲ್ಲ. ಸುಮಾರು ಅರವತ್ತು ವರುಷಗಳ ಹಿಂದೆ ನನ್ನ ಬಾಲ್ಯದಲ್ಲಿ ಸಂಸ್ಕೃತ ಕಲಿಸುತ್ತಿದ್ದ ಹಿರಿಯರು ಹೇಳಿದ ಮಾತಿನ ಬಲದ ಮೇಲೆ ಮೇಲೆ ಹೇಳಿದ ಅರ್ಥ ಕೊಟ್ಟಿದ್ದೇನೆ. ಅದು ಸಮಂಜಸವಾಗಿದೆ ಎಂದೂ ತೋರುತ್ತದೆ. ಇಲ್ಲದಿದ್ದರೆ ನಮ್ಮ ಕರೆಯ ಮೇರೆಗೆ ಬರುವ ಮಂದಿಗೆ "ಆಹ್ವಾನಿತರು" ಎಂದೇ ಹೇಳಬೇಕಾಗುತ್ತದೆ. ಈ ರೀತಿ ಹೇಳುವುದು ಬಳಕೆಯಲ್ಲಿಲ್ಲ. ಎಲ್ಲರನ್ನೂ (ಕರೆದು ಬಂದವರನ್ನು ಮತ್ತು ಕರೆಯದೆ ಬಂದವರನ್ನೂ) ಅತಿಥಿ ಎಂದೇ ವ್ಯವಹಾರ ಮಾಡಲಾಗುತ್ತದೆ. ಮೇಲೆ ಹೇಳಿದ ಅರ್ಥಗಳನ್ನು ಒಪ್ಪುವುದೂ ಬಿಡುವುದೂ ಅವರವರ ಸಮ್ಮತಿಗೆ ಬಿಟ್ಟ ವಿಷಯ. 

*****

ತಿಥಿ, ಅತಿಥಿ ಮತ್ತು ಅಭ್ಯಾಗತ ಇವುಗಳ ವ್ಯತ್ಯಾಸವನ್ನು ಸ್ವಲ್ಪ ಮಟ್ಟಿಗೆ ತಿಳಿದಾಯಿತು. ಈ ಸಂಚಿಕೆ ಈಗಲೇ ಸಾಕಷ್ಟು ಉದ್ದವೂ ಆಯಿತು. 

ಅಥಿತಿ, ಅಭ್ಯಾಗತರ ಸತ್ಕಾರದ ಇತರ ಮಜಲುಗಳನ್ನು ಮುಂದೆ ನೋಡೋಣ! 

Monday, December 18, 2023

ಅನೇಕ ಪ್ರತೀಕಗಳು ಏಕೆ ಬೇಕು?


ಒಬ್ಬ ಸಾಧು ಶ್ರೀಮಂತನೊಬ್ಬನನ್ನು ಕಾಣಲೆಂದು ಅವನ ಮನೆಗೆ ಹೋದನಂತೆ. ಶ್ರೀಮಂತನ ಸೇವಕ ಸಾಧುವನ್ನು ಸ್ವಾಗತಿಸಿ ಮನೆಯ ಅಂಗಳದಲ್ಲಿ ಕೂಡಿಸಿದ. "ಯಜಮಾನರು ಪೂಜೆ ಮಾಡುತ್ತಿದ್ದಾರೆ. ಪೂಜೆ ಮುಗಿದ ತಕ್ಷಣ ನಿಮ್ಮನ್ನು ನೋಡುತ್ತಾರೆ" ಎಂದು ಹೇಳಿದ. ಸಾಧು ಅಂಗಳದಲ್ಲಿದ್ದ ಒಂದು ಮರದ ಕೆಳಗಿನ ಕಲ್ಲಿನಮೇಲೆ ಕುಳಿತ. ಸುಮಾರು ಹೊತ್ತಾದರೂ ಶ್ರೀಮಂತ ಹೊರಗೆ ಬರಲಿಲ್ಲ. ಸಾಧು ಸೇವಕನನ್ನು ವಿಚಾರಿಸಿದ. "ಗಣಪತಿಯ ಪೂಜೆ ಆಯಿತು. ಈಗ ಸ್ಕಂದನ ಪೂಜೆ ನಡೆಯುತ್ತಿದೆ" ಎಂದು ಸೇವಕ ಹೇಳಿದ. ಇನ್ನೂ ಸ್ವಲ್ಪ ಸಮಯದ ನಂತರ ಸಾಧು ಸೇವಕನನ್ನು ಮತ್ತೆ ವಿಚಾರಿಸಿದ. "ಸ್ಕಂದ, ಲಕ್ಷ್ಮಿ ಪೂಜೆ ಆಯಿತು. ಈಗ ಶಿವನ ಪೂಜೆ ನಡೆಯುತ್ತಿದೆ" ಎಂದು ಸೇವಕ ಹೇಳಿದ. ಸಾಧು ಮತ್ತೆ ಮತ್ತೆ ವಿಚಾರಿಸುತ್ತಿದ್ದ. ಹೀಗೇ ಎರಡು ಮೂರು ತಾಸು ಕಳೆಯಿತು. 

ಕೊನೆಗೆ ಎಲ್ಲ ದೇವರ ಪೂಜೆ ಮುಗಿದು ಶ್ರೀಮಂತ ಹೊರಗೆ ಬಂದು ಸಾಧುವನ್ನು ಕಂಡ. ಶ್ರೀಮಂತನಿಗೆ ಆಶ್ಚರ್ಯ ಆಯಿತು. ಅಂಗಳದಲ್ಲಿ ಸಣ್ಣ ಸಣ್ಣ ಹೊಂಡಗಳು. ಸಾಧುವಿನ ಕೈ ಮಣ್ಣಾಗಿತ್ತು. "ಇದೇನು ಸ್ವಾಮಿಗಳೇ, ಇಷ್ಟೊಂದು ಹೋಂಡ ತೆಗೆದಿದ್ದೀರಿ?" ಎಂದು ಕೇಳಿದ. ಸಾಧು ನಗುತ್ತಾ "ಬಾಯಾರಿಕೆ ಆಯಿತು. ಅದಕ್ಕೆ ಕುಡಿಯುವ ನೀರಿಗಾಗಿ ಬಾವಿ ತೊಡುತ್ತಿದ್ದೆ" ಎಂದ. ಸಾಹುಕಾರ ನಗುತ್ತಾ "ನೀರು ಬೇಕಿದ್ದರೆ ನನ್ನ ಸೇವಕ ಕೊಡುತ್ತಿದ್ದ. ಹೋಗಲಿ, ನೀವು ಹತ್ತಾರು ಕಡೆ ತೋಡುವ ಬದಲು ಒಂದೇ ಕಡೆ ತೋಡಿದ್ದರೆ  ಅದು ಒಂದು ಬಾವಿಯಾಗಿ ನೀರು ಸಿಕ್ಕಿರುತ್ತಿತ್ತು" ಎಂದ. 

ಈಗ ನಗುವ ಸರದಿ ಸಾಧುವಿನದು. "ಅಷ್ಟು ದೇವರುಗಳ ಪೂಜೆ ಸ್ವಲ್ಪ ಸ್ವಲ್ಪ ಹೊತ್ತು ಮಾಡುವ ಬದಲು ಒಬ್ಬನೇ ದೇವರ ಪೂಜೆ ಅಷ್ಟು ಹೊತ್ತೂ ಮಾಡಿದ್ದರೆ ಆ ಒಬ್ಬ ದೇವರು ಪ್ರತ್ಯಕ್ಷವಾಗಿ ನಿಮಗೆ ಕೇಳಿದ ವರಗಳನ್ನು ಕೊಡುತ್ತಿರಲಿಲ್ಲವೇ?" ಎಂದ ಸಾಧು. 

ಅನೇಕ ಪ್ರತೀಕಗಳ ಪೂಜೆ ಮಾಡುವವರನ್ನು ಹಾಸ್ಯ ಮಾಡಲು ಈ ಕಥೆಯನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. 

*****

ಸಾಧಕನಿಗೆ ಇಷ್ಟೊಂದು ಪ್ರತೀಕಗಳ ಅವಶ್ಯಕತೆ ಏಕೆ? ಒಂದೊ, ಎರಡೋ ಇದ್ದರೆ ಸಾಲದೇ? ಒಂದಾದರ ಮೇಲೆ ಒಂದರಂತೆ ಸರತಿಯಲ್ಲಿ ಪೂಜೆ ಮಾಡುತ್ತಿದ್ದರೆ ಮೇಲಿನ ಕಥೆಯಲ್ಲಿನ ಶ್ರೀಮಂತನಂತೆ ಆಗಲಿಲ್ಲವೇ? ಸಾಧು ಅವನಿಗೆ ಹೇಳಿದ್ದು ಸರಿ ತಾನೇ? ಇವೆಲ್ಲ ನ್ಯಾಯವಾದ ಪ್ರಶ್ನೆಗಳೇ. ಒಂದಾದರ ಮೇಲೆ ಒಂದರಂತೆ ಹೀಗೆ ಪೂಜೆ ಮಾಡುವುದರಲ್ಲಿಯೇ ಕಾಲ ಕಳೆದು ಹೋಗಬಹುದಲ್ಲವೇ? ವಿಮಾನ ಮೇಲೇರುವ ಬದಲು ನಿಲ್ದಾಣದಲ್ಲೇ ಸುತ್ತು ಹೊಡೆದರೆ ಏನು ಪ್ರಯೋಜನ? ಈ ಪ್ರಶ್ನೆಗಳಿಗೆ ಸಮಾಧಾನ ಏನು?

ಪ್ರತೀಕಗಳು ಒಂದು ನಿಮಿತ್ತ; ಆರಾಧಿಸುವುದು ಆ ಪ್ರತೀಕಗಳು ಪ್ರತಿನಿಧಿಸುವ ದೇವತೆಗಳ ಅಂತರ್ಯಾಮಿಯಾದ ಪರಮಪುರುಷನನ್ನು ಎಂದಾದಮೇಲೆ ನಮಗೆ ಅಷ್ಟು ಮಂದಿ ದೇವತೆಗಳೂ, ಅವರ ಪ್ರತೀಕಗಳೂ ಏಕೆ ಬೇಕು? 

ಮನೆಯಲ್ಲಿ ಅಥವಾ ಕಾರ್ಯಾಗಾರದಲ್ಲಿ ಒಂದು "ಉಪಕರಣಗಳ ಪೆಟ್ಟಿಗೆ" ಅಥವಾ "ಟೂಲ್ ಕಿಟ್" ಇರುತ್ತದೆ. ಅದರಲ್ಲಿ ಅನೇಕ ರೀತಿಯ ಉಪಕರಣಗಳು ಇರುತ್ತವೆ. ಅವೆಲ್ಲವನ್ನೂ ಪ್ರತಿದಿನವೂ ಉಪಯೋಗಿಸುವುದಿಲ್ಲ. ಸಮಯ, ಸಂದರ್ಭ, ಅವಶ್ಯಕತೆಗೆ ಹೊಂದಿದಂತೆ ಯಾವ ಉಪಕರಣ ಬೇಕೋ ಅದನ್ನು ಉಪಯೋಗಿಸುತ್ತಾರೆ.  ಕೆಲವನ್ನು ಪ್ರತಿದಿನ ಉಪಯೋಗಿಸುವ ಅವಶ್ಯಕತೆ ಬರುತ್ತದೆ. ಅನೇಕ ವೇಳೆ ಕೆಲವು ಉಪಕರಣಗಳನ್ನು ತಿಂಗಳುಗಟ್ಟಲೆ ಉಪಯೋಗಿಸುವುದಿಲ್ಲ. ಉಪಯೋಗಿಸಲಿಲ್ಲ ಎಂದು ಅವನ್ನು ತ್ಯಜಿಸುವುದೂ ಇಲ್ಲ. 

ಅಡಿಗೆ ಮನೆಯಲ್ಲಿ ಅನೇಕ ಪಾತ್ರೆಗಳು ಇವೆ. ಪ್ರತಿಯೊಂದಕ್ಕೂ ಒಂದು ನಿರ್ದಿಷ್ಟ ಉಪಯೋಗ ಇದೆ. ಇಷ್ಟು ಪಾತ್ರೆಗಳು ಇವೆ ಎಂದು ಅವೆಲ್ಲವನ್ನೂ ಪ್ರತಿದಿನ ಬಳಸುವುದಿಲ್ಲ. ಅಂತೆಯೇ ಪ್ರತಿದಿನ ಬಳಸುವುದಿಲ್ಲ ಎಂದು ಕೆಲವು ಪಾತ್ರೆಗಳನ್ನು ಬಿಸಾಡುವುದೂ ಇಲ್ಲ. 

ಸಾಧಕನು ಪ್ರತೀಕಗಳನ್ನು ಆರಾಧಿಸುವಾಗ ತನ್ನ ವಿವೇಚನೆಯನ್ನು ಬಳಸಬೇಕು. ಪ್ರತಿದಿನ ಸರತಿಯ ಮೇಲೆ ಒಂದಾದ ನಂತರ ಒಂದರಂತೆ ಅನೇಕ ಪ್ರತೀಕಗಳನ್ನು ಆರಾಧಿಸುವುದರಿಂದ ಮೂಲ ಉದ್ದೇಶಗಳನ್ನೇ ಮರೆತಂತಾಗುತ್ತದೆ. ಪ್ರತೀಕಗಳ ಅಂತರ್ಯಾಮಿಯಾದ ಪರಮಪುರುಷನೇ ಪರಮ ಗುರಿ ಎನ್ನುವುದನ್ನು ನೆನಪಿಡಬೇಕು. ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿದ್ದಂತೆ ಸಾಧನೆಯ ಮಾರ್ಗಗಳೂ ಪರಿವರ್ತನೆಗೆ ಒಳಗಾಗುತ್ತವೆ. ಒಂದು ಹಂತ ದಾಟಿದ ಮೇಲೆ ಅನೇಕ ಸಾಧಕರು ತಮ್ಮ ಆರಾಧನೆಯ ಕ್ರಮವನ್ನೇ ಬದಲಿಸುತ್ತಾರೆ. "ಮಾನಸ ಪೂಜೆ" ನಡೆಸುವ ಹಂತ ತಲುಪಿದ ಸಾಧಕರು ಎಲ್ಲೆಲ್ಲೂ ಪರಮಾತ್ಮನನ್ನೇ ಕಾಣುತ್ತಾರೆ. ಅವರು ಪ್ರತೀಕಗಳ ಅವಶ್ಯಕತೆ ದಾಟಿದವರು. ಆದರೂ ಅವರು ಪ್ರತೀಕಗಳನ್ನು ತಿರಸ್ಕರಿಸುವುದಿಲ್ಲ. ಪ್ರತೀಕಗಳ ಆರಾಧಕರನ್ನು ನಿರ್ಲಕ್ಷಿಸುವುದಿಲ್ಲ. 
*****

ಸರಕಾರದ ಕಾರ್ಯ ನಿರ್ವಹಿಸಲು ಅನೇಕ ಖಾತೆ ಅಥವಾ ವಿಭಾಗಗಳಿವೆ. ಪ್ರತಿಯೊಂದು ವಿಭಾಗದಲ್ಲೂ ಅನೇಕ ಹಂತಗಳಿವೆ. ಪ್ರತಿ ಹಂತದಲ್ಲೂ ಅಧಿಕಾರಿಗಳಿದ್ದಾರೆ. ಆದರೆ ಎಲ್ಲ ವಿಭಾಗಗಳ ಕೆಲಸಗಳೂ "ಪ್ರೆಸಿಡೆಂಟ್ ಆಫ್ ಇಂಡಿಯ" ಅಥವಾ "ಭಾರತದ ರಾಷ್ಟ್ರಪತಿ" ಹೆಸರಿನಲ್ಲಿ ನಡೆಯುತ್ತವೆ. ಪ್ರಜೆಗಳ ಬೇಡಿಕೆಗೆ ಅನುಗುಣವಾಗಿ ಆಯಾ ಇಲಾಖೆಯ ಅಧಿಕಾರಿಗಳು ಅವರವರ ಅಧಿಕಾರದ ಯೋಗ್ಯತೆಗೆ ಮತ್ತು ವ್ಯಾಪ್ತಿಗೆ ತಕ್ಕಂತೆ ಮಾಡಿಕೊಡುತ್ತಾರೆ. ಪ್ರತಿ ಕೆಲಸವೂ ರಾಷ್ಟ್ರಪತಿಗಳ ಗಮನಕ್ಕೆ ಬರಬೇಕಾಗಿಲ್ಲ. ಪ್ರತಿ ಕೆಲಸಕ್ಕೂ ರಾಷ್ಟ್ರಪತಿಗಳ ಅಪ್ಪಣೆ ಬೇಕಾಗಿಲ್ಲ. ತಮ್ಮ ಕೆಲಸಗಳಿಗೆ ತಕ್ಕಂತೆ ಪ್ರಜೆಗಳು ಆಯಾ ವಿಭಾಗದ ಮತ್ತು ಸೂಕ್ತ ಹಂತದ ಕಚೇರಿಗಳಿಗೆ ಹೋಗುತ್ತಾರೆ. ಆದರೆ ಕೆಲಸ ಮಾಡುವ ಪ್ರತಿ ಅಧಿಕಾರಿಗೂ ತಾನು ಸರಕಾರದ ಕೆಲಸ ಮಾಡುತ್ತಿದ್ದೇನೆ, ನನ್ನ ಸ್ವಂತದ್ದಲ್ಲ ಎನ್ನುವ ಅರಿವು ಇರುತ್ತದೆ. ಪರಮಾತ್ಮನ ವ್ಯವಸ್ಥೆಯೂ ಹೀಗೆಯೇ. 

ನಮ್ಮ ಸುತ್ತ ಮುತ್ತ ಕಾಣುವಂತೆ ಅನೇಕ ವಿದ್ಯುತ್ ಉಪಕರಣಗಳಿವೆ. ಬೆಳಕು ನೀಡುವುದಕ್ಕಾಗಿಯೇ ಬೇರೆ ಬೇರೆ ಶಕ್ತಿಯ ಬಲ್ಬುಗಳು ಇವೆ. ಗಾಳಿಗಾಗಿ ಫ್ಯಾನ್ ಇವೆ. ಹವಾನಿಯಂತ್ರಣ ಉಪಕರಣಗಳಿವೆ. ವಿದ್ಯುತ್ನಿಂದ ಚಲಿಸುವ ವಾಹನಗಳಿವೆ. ಕಾರ್ಖಾನೆಗಳಲ್ಲಿ ಚಲಿಸುವ ದೊಡ್ಡ ದೊಡ್ಡ ಯಂತ್ರಗಳಿವೆ. ಮಿಕ್ಸರ್, ಗ್ರೈಂಡರ್ ಇವೆ. ರೆಫ್ರಿಜಿರೇಟರ್, ಡಿಶ್ ವಾಷರ್ ಇವೆ. ಇನ್ನೂ ಅನೇಕ ಉಪಕರಣಗಳಿವೆ. ಆದರೆ ಇವೆಲ್ಲ ಕೆಲಸ ಮಾಡುವುದು ಒಂದೇ ವಿದ್ಯುತ್ತಿನಿಂದ. ವಿದ್ಯುತ್ ಹರಿದರೆ ಕೆಲಸ. ಇಲ್ಲದಿದ್ದರೆ ನಿರುಪಯೋಗಿಗಳು. ಪರಮಾತ್ಮನ "ನಿಯಮನ" ಪ್ರಕಾರವೇ ಸೃಷ್ಟಿಯ ಸಮಸ್ತ ಕಾರ್ಯಗಳೂ ನಡೆಯುತ್ತವೆ. ಈ ಎಲ್ಲ ಸಾಧನ ಯಂತ್ರಗಳೂ ಬೇಕು. ಜೊತೆಗೆ ವಿದ್ಯುತ್ ಇರಲೇ ಬೇಕು. 

ಶ್ರೀಮದ್ಭಾಗವತ ಮೊದಲನೇ ಶ್ಲೋಕದಲ್ಲಿ "ಜನ್ಮಾದ್ಯಸ್ಯ" ಎಂದು ಹೇಳುವಾಗ ವಿರಾಟ್ ವಿಶ್ವದ ಸೃಷ್ಟಿಯಿಂದ ಪ್ರಾರಂಭಿಸಿ ಪರಮಾತ್ಮನ ಎಂಟು ಬಗೆಯ ಕರ್ತೃತ್ವವನ್ನು ವಿವರಿಸುತ್ತದೆ. ಸೃಷ್ಟಿ, ಸ್ಥಿತಿ, ಲಯ, ನಿಯಮನ, ಜ್ನ್ಯಾನ, ಅಜ್ನ್ಯಾನ, ಬಂಧ ಮತ್ತು ಮೋಕ್ಷ ಎಂಬ ಎಂಟು ಕರ್ತೃತ್ವಗಳಲ್ಲಿ ನಾಲ್ಕನೆಯದು "ನಿಯಮನ". ಈ ನಿಯಮನ ಎನ್ನುವುದೇ ಆ ವಿಶ್ವಾತ್ಮನ "ಸಂವಿಧಾನ". ಸೃಷ್ಟಿಯಿಂದ ಲಯದವರೆಗೆ, ಮತ್ತು ಲಯದಿಂದ ಪುನಃ ಸೃಷ್ಟಿಯವರೆಗೆ ಎಲ್ಲವೂ ಈ ನಿಯಮನ ಎನ್ನುವ ಸಂವಿಧಾನದ ಪ್ರಕಾರವೇ ನಡೆಯುವುದು. ಆ ಸಂವಿಧಾನದ ಪ್ರಕಾರ ಕೆಲಸ ನಿರ್ವಹಿಸುವ ಅನೇಕ ದೇವತಗಳೇ ಪ್ರಧಾನ ಪ್ರತೀಕಗಳು. ಈ ನಿಯಮನದ ಆದೇಶದಂತೆ ಕಾರ್ಯ ನಿರ್ವಹಿಸುವ ಪ್ರತಿಯೊಂದು ದೇವತೆಯೂ ನಮ್ಮ ಶ್ರದ್ದಾ ಗೌರವಗಳಿಗೆ ಪಾತ್ರರು. ಪ್ರತೀಕಗಳ ಮೂಲಕ ಮಾಡುವ ಸಾಧನೆ ಈ ತತ್ವವನ್ನು ಗೌರವಿಸುವ ಪ್ರಕ್ರಿಯೆಯೇ ಆಗಿದೆ. 

***** 

ಈಗ ಮತ್ತೊಂದು ಪ್ರಶ್ನೆ ಬರಬಹುದು. "ಎಲ್ಲವೂ ಪರಮಾತ್ಮನ ಇಚ್ಛೆಯಿಂದಲೇ ನಡೆಯುವುದಾದರೆ ನಾವು ನೇರವಾಗಿ ಅವನನ್ನೇ ಆರಾಧಿಸುತ್ತೇವೆ. ಬೇರೆಯವರಗೊಡವೆ ನಮಗೆ ಬೇಡ. ಪ್ರತೀಕಗಳೂ ಬೇಡ; ದೇವತೆಗಳೂ ಬೇಡ. ಅವುಗಳೂ ಅವುಗಳ ಆರಾಧನೆಯೂ ಬೇಡ. ನೇರವಾಗಿ ಅವನನ್ನೇ ಆಶ್ರಯಿಸುತ್ತೇವೆ. ಆರಾಧಿಸುತ್ತೇವೆ." ಎಂದು ಕೆಲವರು ಹೇಳಬಹುದು. ಇದು ನಮಗೆ ಯಾವ ಅಧಿಕಾರಿಯ ಸಹವಾಸವೂ ಬೇಡ. ನೆಟ್ಟಗೆ ರಾಷ್ಟ್ರಪತಿಗಳ ಬಳಿಯಲ್ಲಿಯೇ ನಮ್ಮ ಕೆಲಸ ಮಾಡಿಸಿಕೊಳ್ಳುತ್ತೇವೆ ಎಂದಂತಾಯಿತು. ಆದರೆ  ನಿಯಮನದ ಪ್ರಕಾರ ಪರಮಾತ್ಮನನ್ನು ಧ್ಯಾನಿಸುವಾಗ ಅವನ ಪರಿವಾರ ಸಮೇತ ಧ್ಯಾನಿಸಬೇಕು. ಒಂದು ಲಗ್ನಪತ್ರಿಕೆ ಕೊಡುವಾಗ ಸಕುಟುಂಬ ಸಪರಿವಾರ ಸಮೇತ ಆಗಮಿಸಿ ಎಂದು ಬಿನ್ನೈಸಿಕೊಳ್ಳುವ ನಾವು (ಈಗ ಲಗ್ನಪತ್ರಿಕೆಯಲ್ಲಿ ಈ ರೀತಿಯ ಒಕ್ಕಣೆಯನ್ನು ಕಾಣುವುದು ಬಹಳ ವಿರಳ) ಪರಮಾತ್ಮನ ಚಿಂತನೆಯಲ್ಲಿ ಅದನ್ನು ಯಾಕೆ ಮಾಡಬಾರದು? 

ದೇವತೆಗಳ ಆರಾಧನೆ ಮಾಡುವಾಗ ಇದೇ ಕೊನೆ ಎಂಬ ಭಾವನೆ ಇರದೇ "ಎಲ್ಲ ದೇವ, ದೇವತೆಗಳಿಗೆ ಮಾಡುವ ನಮಸ್ಕಾರವೂ ಪರಮಾತ್ಮನಿಗೇ ತಲುಪುತ್ತವೆ" ಎಂಬ ಸುಜ್ಞಾನ ಇರಬೇಕು. 

ಅನೇಕ ವ್ರತ, ವಿಧಿ, ವಿಧಾನಗಳನ್ನು ಒಳಗೊಂಡ ಪೂಜಾದಿ ಕೈಂಕರ್ಯಗಳಲ್ಲಿಯೂ ಕಡೆಗೆ ಸಮರ್ಪಣೆ ಮಾಡುವಾಗ ಒಂದೇ ಇಷ್ಟ ದೈವಕ್ಕೆ (ಉದಾಹರಣೆಗೆ: ಕೃಷ್ಣಾರ್ಪಣಮಸ್ತು) ಎಂದೇ ಹೇಳುತ್ತಾರೆ. ಗಣೇಶ ಚೌತಿಯಂದು ಒಂದೂವರೆ ಗಂಟೆ ಪೂಜೆ ನಡೆಸಿ ಶ್ರೀ ಕೃಷ್ಣಾರ್ಪಣಮಸ್ತು ಎಂದೇ ಹೇಳುತ್ತಾರೆ, ಅಥವಾ ಶ್ರೀ ಪರಮೇಶ್ವರಾರ್ಪಣಮಸ್ತು ಎನ್ನುತ್ತಾರೆ!

Monday, December 11, 2023

ನಿರ್ಗುಣ, ನಿರಾಕಾರ - ಸಗುಣ, ಸಾಕಾರ





ನಮ್ಮ ದೇಶ ಅನೇಕ ಕಾರಣಗಳಿಂದ "ಅನನ್ಯ". ಅನನ್ಯ ಅಂದರೆ ಏನು? ಇಂಗ್ಲಿಷ್ ಭಾಷೆಯಲ್ಲಿ ಸುಲಭವಾಗಿ ಯುನಿಕ್ (Unique) ಎಂದು ಹೇಳಬಹುದು. ಅನನ್ಯ ಅಂದರೆ ಅನ್ಯರಿಲ್ಲ. ಅಂದರೆ, ಈ ರೀತಿ ಮತ್ತೊಂದಿಲ್ಲ ಅಥವಾ ಮತ್ತೊಬ್ಬರಿಲ್ಲ. ಈ ವಸ್ತು ಅಥವಾ ವ್ಯಕ್ತಿಗೆ ಹೋಲಿಸಲು ಮತ್ತೊಂದು ವಸ್ತು ಅಥವಾ ವ್ಯಕ್ತಿ ಸಿಗುವುದಿಲ್ಲ. 

ನಮ್ಮ ದೇಶ ಅನನ್ಯವಾಗಿರುವದಕ್ಕೆ ಅನೇಕ ಕಾರಣಗಳು ಇವೆ. ಅವುಗಳಲ್ಲಿ ದಿವ್ಯ ಶಕ್ತಿಯ ಆರಾಧನೆಗೆ ಬಳಸುವ ದಾರಿಗಳೂ, ನಂಬಿಕೆಗಳೂ ಒಂದು ಬಹಳ ಮುಖ್ಯ ಕಾರಣ. ನಿರೀಶ್ವರವಾದದಿಂದ ಹಿಡಿದು, ನಿರ್ಗುಣ-ನಿರಾಕಾರ ಎನ್ನುವುದನ್ನು ದಾಟಿ, ಸದ್ಗುಣ-ಸಾಕಾರ ಅನ್ನುವವರೆಗೆ ನಂಬಿ ಆರಾಧಿಸುವ ಜನಗಳು ಇಲ್ಲುಂಟು. 

ದಕ್ಷಿಣ ಭಾರತದ, ತಮಿಳುನಾಡು ರಾಜ್ಯದ ದಕ್ಷಿಣ ಭಾಗದಲ್ಲಿರುವ "ಚಿದಂಬರಂ" ನಂಬಿದವರಿಗೆ ಅತ್ಯಂತ ಪವಿತ್ರ ಯಾತ್ರಾ ಸ್ಥಳ. ಬಂಗಾಲ ಕೊಲ್ಲಿಯ ಸಮೀಪದಲ್ಲಿರುವ ಕೇಂದ್ರ. ಅನೇಕ ಕಾರಣಗಳಿಂದ ಇಲ್ಲಿನ ನಟರಾಜ ದೇವಾಲಯ ಬಹು ಪ್ರಸಿದ್ಧವಾಗಿದೆ. ಚಿದಂಬರಂ ವಿಷಯದಲ್ಲಿ ಬಹಳ ಸ್ಥಳ ವಿಶೇಷಗಳನ್ನು ಹೇಳುತ್ತಾರೆ. ಭೌಗೋಳಿಕವಾಗಿ, ಚಾರಿತ್ರಿಕವಾಗಿ, ವೈದಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಈ ಸ್ಥಳ ಬಹಳ ಮಹತ್ವವನ್ನು ಪಡೆದಿದೆ. ಸಂಗೀತ ಮತ್ತು ನೃತ್ಯ ಕಲಾವಿದರಿಗಂತೂ ಇದು ಬಹು ದೊಡ್ಡ ಕ್ಷೇತ್ರ. ವರ್ಷಪೂರ್ತಿ ಇಲ್ಲಿ ಸಂಗೀತ ಮತ್ತು ನೃತ್ಯ ಕಲಾವಿದರು ದೇಶದ ಬೇರೆ ಬೇರೆ ಭಾಗಗಳಿಂದ ಬಂದು ನಟರಾಜನನ್ನು ಆರಾಧಿಸಿ ತಮ್ಮ ಕಲಾಸೇವೆಯನ್ನು ನಟರಾಜನಿಗೆ ಸಮರ್ಪಿಸುತ್ತಾರೆ. 

"ಚಿದಂಬರ ರಹಸ್ಯ" ಎನ್ನುವುದು ಒಂದು ನಾಣ್ನುಡಿಯೇ ಆಗಿಹೋಗಿದೆ. ಯಾರಿಗೂ ಅರ್ಥವಾಗದೇ ಇರುವ ಕಗ್ಗಂಟಾದ ವಿಷಯವನ್ನು "ಅದೊಂದು ಚಿದಂಬರ ರಹಸ್ಯ" ಎಂದು ಹೇಳುವುದು ವಾಡಿಕೆಯಾಗಿಹೋಗಿದೆ. ನಟರಾಜ ದೇವಾಲಯದ ಗರ್ಭ ಗುಡಿಯ ದ್ವಾರದ ಪಕ್ಕದಲ್ಲಿ ಒಂದು ವಿಶೇಷ ಸ್ಥಳವಿದೆ. ದೇವಾಲಯದ ಗೋಡೆಯಲ್ಲಿರುವ ಈ ಸ್ಥಳವನ್ನು ಒಂದು ವಸ್ತ್ರದ ತೆರೆಯಿಂದ ಯಾವಾಗಲೂ ಮುಚ್ಚಿರುತ್ತಾರೆ. ವಿಶೇಷ ಪೂಜೆಯ ಸಂದರ್ಭದಲ್ಲಿ ಮಾತ್ರ ಅರ್ಚಕರು ಈ ತೆರೆಯನ್ನು ಸರಿಸಿ ಮಂಗಳಾರತಿ ಮಾಡುತ್ತಾರೆ. ಭಕ್ತ ವೃಂದ ಈ ಸಮಯಕ್ಕಾಗಿ ಕಾಯುತ್ತಿರುತ್ತಾರೆ. ಮಂಗಳಾರತಿ ಆದ ಸ್ವಲ್ಪ ಸಮಯಕ್ಕೆ ಅರ್ಚಕರು ಮತ್ತೆ ತೆರೆಯಿಂದ ಆ ಜಾಗವನ್ನು ಮುಚ್ಚಿಬಿಡುತ್ತಾರೆ. 

ತೆರೆ ಸರಿಸಿದ ಸಮಯದಲ್ಲಿ ಅಲ್ಲಿ ನೋಡಿದರೆ ಏನೂ ಕಾಣುವುದಿಲ್ಲ. ವಿಗ್ರಹವಾಗಲಿ ಅಥವಾ ಚಿತ್ರವಾಗಲಿ ಅಲ್ಲಿಲ್ಲ. ತೀವ್ರವಾಗಿ ಹತ್ತಿರದಿಂದ ಗಮನಿಸಿದರೆ ಬಂಗಾರದ ಎಲೆಗಳನ್ನು ಕಾಣಬಹುದು. ಬಿಲ್ವ ಪತ್ರೆಯ ರೀತಿಯ ಎಲೆಗಳು. ತೆರೆಯ ಹಿಂದೆ ಶೂನ್ಯ. ಈ ತೆರೆಯನ್ನು ಮಾಯೆಗೆ ಹೋಲಿಸುತ್ತಾರೆ. ಏನೂ ಕಾಣದ ಈ ಸ್ಥಳದಲ್ಲಿ ಶಿವ-ಪಾರ್ವತಿ ನೆಲೆಸಿದ್ದಾರೆ ಎಂದು ಹೇಳುತ್ತಾರೆ. ಜ್ಞಾನಿಗಳಿಗೆ ಈ ಏನೂ ಇಲ್ಲದ, ಏನೂ ಕಾಣದ ಸ್ಥಳದಲ್ಲಿ ಶಿವ ಪಾರ್ವತಿಯರ ದರ್ಶನ ಆಗುತ್ತದೆ ಎಂದು ನಂಬಿಕೆ. ಇದೇ "ಚಿದಂಬರ ರಹಸ್ಯ". ಏನೂ ಇಲ್ಲದ ಶೂನ್ಯ. ಅದರಲ್ಲಿ ಸಾಧಕರು ಪರಮಾತ್ಮನನ್ನು ಕಾಣುತ್ತಾರೆ. 
*****

ಇಡೀ ವಿಶ್ವದ ಸೃಷ್ಟಿಗೆ ಮತ್ತು ನಿರ್ವಹಣೆಗೆ ಏನಾದರೂ ಕಚ್ಚಾವಸ್ತು (rawmaterial) ಮತ್ತು ಸಾಧನಗಳು ಬೇಕಲ್ಲ. ಅವು ಐದು ಬಗೆ ಎಂದು ಸಿದ್ಧಾಂತಗಳು ಹೇಳುತ್ತವೆ. ಒಟ್ಟಾಗಿ ಇವನ್ನೇ "ಪಂಚ ಭೂತಗಳು" ಎನ್ನುತ್ತೇವೆ. ಮೊದಲನೆಯದು ಮಣ್ಣು ಅಥವಾ ಪೃಥ್ವಿ. ಅದರ ಜೊತೆಗೆ ನೀರು ಅಥವಾ ಅಪ್ಪು. ಶಕ್ತಿ ಕೊಡಲು ಬೆಂಕಿ ಅಥವಾ ತೇಜಸ್ಸು. ಸಂವಹನದ ಮಾಧ್ಯಮವಾಗಿ ಗಾಳಿ ಅಥವಾ ವಾಯು. ಕ್ರಿಯೆಗಳಿಗೆ ಜಾಗ ಒದಗಿಸುವ ಸಲುವಾಗಿ ಅವಕಾಶ ಅಥವಾ ಆಕಾಶ. ಆಕಾಶ ಅಂದರೆ ಕೇವಲ ಮೇಲೆ ನೋಡುವುದಲ್ಲ. ಎಲ್ಲ ಕಡೆಯೂ ಚಲನೆಗೆ ಅವಕಾಶ ಕೊಡುವುದೇ ಆಕಾಶ. ನಮ್ಮ ಕೈ, ಕಾಲುಗಳು ಆಡಲು ಆಕಾಶ (Space) ಬೇಕು. ಮನುಷ್ಯ, ಪ್ರಾಣಿಗಳು, ಸಸ್ಯಗಳು ಮತ್ತೆಲ್ಲ ವಸ್ತುಗಳೂ ಈ ಐದು ತತ್ವಗಳಿಂದಲೇ ಕಾರ್ಯ ನಿರ್ವಹಿಸುತ್ತವೆ. 

ಪಂಚಭೂತಗಳಿಂದ ಆದ ಪದಾರ್ಥಗಳಲ್ಲಿ, ಪ್ರಾಣಿಗಳಲ್ಲಿ, ಮನುಷ್ಯರಲ್ಲಿ ಸಹಜವಾಗಿಯೇ ಕೆಲವು ಗುಣಗಳು ವ್ಯಕ್ತವಾಗುತ್ತ್ತವೆ. ಇವುಗಳ ಜೊತೆಗೆ ಜೀವಿಗಳ ಸ್ವರೂಪ ಗುಣವೂ ಸೇರುತ್ತವೆ. ಬೇರೆ ಬೇರೆ ಪ್ರಮಾಣಗಲ್ಲಿ ಈ ಕಚ್ಚಾವಸ್ತುಗಳ ಬೆರಕೆಯಿಂದಾದ ಮತ್ತು ಜೀವಿಗಳ ಸ್ವಭಾವವನ್ನು ಅನುಸರಿಸಿ ಗುಣಗಳು ತೋರಿಸಿಕೊಳ್ಳುತ್ತವೆ. ಒಳ್ಳೆಯ ಗುಣಗಳಿಗೆ ಸತ್ವ ಗುಣ ಎನ್ನುತ್ತಾರೆ. ಕೆಟ್ಟ ಗುಣಗಳಿಗೆ ತಾಮಸ ಗುಣ ಎನ್ನುತ್ತಾರೆ. ಇವೆರಡರ ಮಧ್ಯೆ ಇರುವುವನ್ನು ರಾಜಸ ಗುಣ ಎನ್ನುತ್ತಾರೆ. 

ವಿಶೇಷವೇನೆಂದರೆ, ಎಲ್ಲರಲ್ಲಿಯೂ ಎಲ್ಲ ಮೂರು ಗುಣಗಳೂ ಇರುತ್ತವೆ! ಯಾರೊಬ್ಬರಲ್ಲಿಯೂ ಕೇವಲ ಒಂದೇ ಗುಣ ಪೂರ್ಣವಾಗಿ ತುಂಬಿರುವುದಿಲ್ಲ. ಮೂರರಲ್ಲಿ ಯಾವುದು ಅತಿ ಹೆಚ್ಚು ಪ್ರಮಾಣದಲ್ಲಿ ಇದೆಯೋ ಆ ವ್ಯಕ್ತಿ ಆ ಗುಣಿ (ಗುಣವುಳ್ಳವನು) ಎಂದು ಕರೆಸಿಕೊಳ್ಳುತ್ತಾನೆ. ಸತ್ವ ಗುಣ ಪ್ರಧಾನವಾದವರನ್ನು ಸಾತ್ವಿಕರು ಎನ್ನುತ್ತಾರೆ. ರಾಜಸ ಗುಣ ಪ್ರಧಾನವಾದವರನ್ನು ರಾಜಸರು ಎನ್ನುತ್ತಾರೆ. ತಾಮಸ ಗುಣ ಪ್ರಧಾನವಾದವರನ್ನು ತಾಮಸರು ಎನ್ನುತ್ತಾರೆ. ಇದೇ ಕಾರಣಕ್ಕೆ ಸಾತ್ವಿಕರೂ ಸಹ ಕೆಲವು ವೇಳೆ ಕೋಪಿಷ್ಠರಾಗುವುದು, ಗರ್ವಿತರಾಗುವುದು, ಅಸೂಯಾಪರರಾಗುವುದು ಮುಂತಾದುವನ್ನು ಕಾಣುತ್ತೇವೆ. "ಅಯ್ಯೋ, ಅವರು ಹೀಗೆ ಮಾಡುತ್ತಾರೆ ಅಂದರೆ ನಂಬುವುದು ಕಷ್ಟ" ಎಂದು ಉದ್ಗಾರ ತೆಗೆಯುತ್ತೇವೆ. ತಾಮಸರು ಸಹ ಒಮ್ಮೊಮ್ಮೆ ಸತ್ವ ಗುಣ ತೋರಿಸಿ ಸತ್ಕಾರ್ಯ ಮಾಡುವುದೂ ಉಂಟು. "ಆಹಾ! ಆ ಕಟುಕನಲ್ಲಿಯೂ ಕರುಣೆ ಎಲ್ಲಿಂದ ಬಂತು?" ಎನ್ನುವಂತೆಯೂ ಆಗುತ್ತದೆ. ಒಮ್ಮೊಮ್ಮೆ ಹೀಗೆ, ಒಮ್ಮೊಮ್ಮೆ ಹಾಗೆ ಇರುವವರೂ ಉಂಟು. ಸಜ್ಜನರು ಮತ್ತು ದುರ್ಜನರ ನಡುವೆ ಸಾಮಾನ್ಯರೂ ಕಾಣಸಿಗುವುದು ಈ ಕಾರಣಕ್ಕಾಗಿಯೇ. 

ಹೀಗಿರುವಾಗ, ಪರಮಾತ್ಮನ ವಿಷಯ ಏನು? ಅವನಲ್ಲಿ ಯಾವ ಗುಣ ಪ್ರಧಾನ? ಪರಮಾತ್ಮನು ಪಂಚಭೂತಗಳಿಂದ ಅದವನಲ್ಲ. ಅದರೊಂದಿಗೆ ಅವನು ಸ್ವರೂಪದಿಂದಲೂ ಸ್ವಚ್ಛ, ಶುಭ್ರ. ಆದ್ದರಿಂದ ಅವನು ಈ ಮೂರು ಗುಣಗಳನ್ನೂ ದಾಟಿದವನು. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ಅವನಲ್ಲಿ ಈ ಮೂರು ಗುಣಗಳೂ ಇಲ್ಲ. ಆದ್ದರಿಂದ ಅವನು "ನಿರ್ಗುಣ".  ಇದನ್ನೇ "ತ್ರಿಗುಣಾತೀತ" ಎನ್ನುತ್ತಾರೆ. 

*****

ದೂರದಿಂದ ಬರುತ್ತಿರುವ ವ್ಯಕ್ತಿಯ ಬಗ್ಗೆ ಇಲ್ಲಿರುವ ಇಬ್ಬರಲ್ಲಿ ಚರ್ಚೆ ಆಗುತ್ತದೆ. "ಅದೋ, ಕುಮಾರ ಬರುತ್ತಿದ್ದಾನೆ" ಎಂದು ಒಬ್ಬ ಹೇಳುತ್ತಾನೆ. "ಇಲ್ಲ. ಅವನು ಕುಮಾರ ಅಲ್ಲವೇ ಅಲ್ಲ. ಕುಮಾರ ಇನ್ನೂ ಎತ್ತರ ಇದ್ದಾನೆ. ಅಲ್ಲದೆ ಅವನು ಇಷ್ಟು ದಪ್ಪ ಇಲ್ಲ" ಎಂದು ಇನ್ನೊಬ್ಬ ಹೇಳುತ್ತಾನೆ. ನಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳನ್ನು ಅವರ ಎತ್ತರ, ಗಾತ್ರ, ರೂಪ, ಬಣ್ಣ ಮುಂತಾದ ಗುಣ ಲಕ್ಷಣಗಳಿಂದ ಗುರುತಿಸುತ್ತೇವೆ. ಕಟ್ಟಡಗಳ ಆಕಾರದಿಂದ ಅವು ಯಾವುವು ಎಂದು ಗುರುತು ಹಚ್ಚುತ್ತೇವೆ. ವಾಹನಗಳ ಆಕಾರದಿಂದ ಅವು ಯಾವ ಕಂಪೆನಿಯ ಉತ್ಪನ್ನ ಎಂದು ತಿಳಿಯುತ್ತೇವೆ.  

ಪರಮಾತ್ಮನನ್ನು ಈ ರೀತಿ ಗುರುತಿಸಬಹುದೇ? ಅವನು ಎತ್ತರವೇ ಅಥವಾ ಕುಳ್ಳೇ? ದಪ್ಪವೇ ಅಥವಾ ಸಣ್ಣವೇ? ಅವನ ಆಕಾರವೇನು? ಗುರುತಿಸುವುದು ಹೇಗೆ? ಈ ಪ್ರಶ್ನೆ ನ್ಯಾಯವೇ.  

ಪರಮಾತ್ಮನು ಎಲ್ಲೆಲ್ಲಿಯೂ ವ್ಯಾಪಿಸಿದ್ದಾನೆ ಎಂದ ಮೇಲೆ ಅವನು ಎಲ್ಲ ಆಕಾರದಲ್ಲೂ ಇದ್ದಾನೆ ಎಂದಾಯಿತು. ಅಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಿಗೂ ಇದ್ದಾನೆ. ಯಾವುದೋ ಒಂದು ಅಳತೆಗೆ ಸಿಗುವವನಲ್ಲ ಅವನು. ಆದ್ದರಿಂದ ಅವನನ್ನು ಒಂದು ಆಕಾರಕ್ಕೆ ಸೀಮಿತಗೊಳಿಸಲು ಆಗುವುದಿಲ್ಲ. ಯಾವುದೇ ಒಂದು ಆಕಾರಕ್ಕೆ ಸಿಗದಿರುವುದರಿಂದ ಅವನು "ನಿರಾಕಾರ" ಎಂದು ಅನೇಕ ಸಾಧಕರು ಆರಾಧಿಸುತ್ತಾರೆ. 

ಇದೇ ಕಾರಣಕ್ಕೆ "ಚಿದಂಬರ ರಹಸ್ಯ" ಎನ್ನುವಾಗ ಅಲ್ಲಿ ಏನೂ ಇಲ್ಲ. ಅದೊಂದು ಶೂನ್ಯ. ನಿರ್ದಿಷ್ಟ ಆಕಾರವಿಲ್ಲ ನಿರ್ದಿಷ್ಟ ಗುಣವಿಲ್ಲ. ಎಲ್ಲವನ್ನೂ ದಾಟಿನಿಂತ ಮಹಾಚೇತನ. ಅದರಿಂದ ಅವನು ನಿರ್ಗುಣ, ನಿರಾಕಾರ. ಅನೇಕ ಸಾಧಕರಿಗೆ ಈ ಚಿಂತನೆಯೇ ಉಪಾಸನೆಯ ಸಾಧನೆ. 
*****

ಯಾವುದೋ ಒಂದು ಸಮಾರಂಭಕ್ಕೋ, ಕಾರ್ಯಕ್ರಮಕ್ಕೋ ಬಹಳ ಹಣ ಖರ್ಚಾಗುವುದು. ಅದು ಸರಿಯಾಗಿ ಆಗಲು ಹಣ ಹೊಂದಿಸಬೇಕು. ಕಾರ್ಯಕರ್ತರು ಚಂದಾ ವಸೂಲಿಗೆ ಹೋಗುತ್ತಾರೆ. ಯಾರ ಬಳಿಗೆ ಹೋಗುವುದು? ಈ ಪ್ರಶ್ನೆಗೆ ಉತ್ತರವೇನು? ಹಣವಂತರ ಬಳಿ ಹೋಗಬೇಕು. ಬರೀ ಹಣವಂತರಾದರೆ ಸಾಲದು. ಕೊಡುವ ಮನಸ್ಸೂ ಇರಬೇಕು. ಹಿಂದೆ ಯಾರಿಗಾದರೂ ಕೊಟ್ಟಿದ್ದಾರೆಯೇ ಎಂದು ವಿಚಾರಿಸುತ್ತಾರೆ. ಕೊಡುಗೈ ದಾನಿಗಳಾದರೆ ಇನ್ನೂ ಒಳ್ಳೆಯದು. ಅಂತಹವರ ಬಳಿಯೇ ಹೋಗಬೇಕು. ಅವನೇ ಇನ್ನೊಬ್ಬರ ಹಿಂದೆ ಕಾಸಿಗೆ ಓಡಾಡುವಾಗ ನಮಗೇನು ಚಂದಾ ಕೊಟ್ಟಾನು? ಧನಿಕರ ಬಳಿ ಹಣ ಕೇಳಬೇಕು. ತೆಂಗಿನಕಾಯಿ ತೋಟದ ಮಾಲೀಕನ ಬಳಿ ತೆಂಗಿನಕಾಯಿ ಕೇಳಬೇಕು. ವಿದ್ಯುತ್ ಕೆಲಸಗಳ ಗುತ್ತಿಗೆದಾರನ ಹತ್ತಿರ ದೀಪಾಲಂಕಾರ ವ್ಯವಸ್ಥೆ ಮಾಡುವಂತೆ ಕೇಳಬೇಕು. ಕಬ್ಬಿಣದ ಅಂಗಡಿಯಲ್ಲಿ ಹೂವು ಸಿಕ್ಕುವುದಿಲ್ಲ. ಅಕ್ಕಿ ಗಿರಣಿಯಲ್ಲಿ ಉಪ್ಪು ಸಿಕ್ಕುವುದಿಲ್ಲ. ಇದೆಲ್ಲದರ ತಾತ್ಪರ್ಯವೇನು? ಯಾರ ಬಳಿ ಯಾವ ವಸ್ತು ಅಧಿಕವಾಗಿದೆಯೋ ಅದನ್ನು ಕೇಳಬೇಕು. ಏನೂ ಇಲ್ಲದವನ ಬಳಿ ಏನನ್ನೂ ಕೇಳಿ ಪ್ರಯೋಜನವಿಲ್ಲ. ತನ್ನಲ್ಲಿ ಇಲ್ಲದ್ದನ್ನು ಅವನು ಹೇಗೆ ಕೊಟ್ಟಾನು?

ಕೆಲವು ಸಾಧಕರು ಹೀಗೆ ಚಿಂತಿಸುತ್ತಾರೆ. ಪರಮಾತ್ಮ ನಿರ್ಗುಣನಾದರೆ ಏನನ್ನು ಕೊಟ್ಟಾನು? ಅಂತಹವನನ್ನು ಆರಾಧಿಸಿ ಪ್ರಯೋಜನವೇನು? "ಮಾರೇ ತೋ ಹಾಥಿ ಕೋ ಮಾರನಾ, ಲೂಟೇ ತೋ  ಖಜಾನೆ  ಕೋ ಲೂಟಿನಾ!" ಎಂದೊಂದು ಉರ್ದುವಿನಲ್ಲಿ ಗಾದೆ. ಕೊಂದರೆ ಆನೆಯನ್ನು ಕೊಲ್ಲಬೇಕು. ಇಲಿಯನ್ನು ಕೊಂದೇನು ಪ್ರಯೋಜನ? ಕಳ್ಳತನ ಮಾಡಲೇಬೇಕಾದರೆ ಖಜಾನೆಯನ್ನೇ ಲೂಟಿ ಹೊಡೆಯಬೇಕು. ಸಣ್ಣ ಪುಟ್ಟ ಕಿಸೆ ಕತ್ತರಿಸಿ ಏನು ಲಾಭ? ಆರಾಧಿಸಿ, ಸಾಕ್ಷಾತ್ಕರಿಸಿಕೊಂಡು ಬೇಡುವುದಾದರೆ ಎಲ್ಲ ಗುಣಗಳ ಗಣಿಯಾಗಿರುವ ಎಲ್ಲವನ್ನೂ ಕೊಡುವ ಶಕ್ತಿ ಇರುವ ಕಲ್ಪನೆಯ ಪರಮಾತ್ಮನ ರೂಪವನ್ನೇ  ಬೇಡಬೇಕು. 

ಮಹಾತ್ಮರಾದ ಕುಲಶೇಖರ ಆಳ್ವಾರರು ತಮ್ಮ "ಮುಕುಂದಮಾಲಾ ಸ್ತೋತ್ರ" ಕೃತಿಯಲ್ಲಿ ಹೇಳುತ್ತಾರೆ:

ನಾಥೇ ನಃ ಪುರುಷೋತ್ತಮೇ ತ್ರಿಜಗತಾಮೇಕಾಧಿಪತಯೇ ಚೇತಸಾ ಸೇವ್ಯೇ 
ಸ್ವಸ್ಯ ಪದಸ್ಯ ದಾತರಿ ಸುರೇ ನಾರಾಯಣೇ ತಿಷ್ಠತಿ 
ಯತ್ಕಂಚಿತ್ ಪುರುಷಾಧಮಮ್ ಕತಿಪಯ ಗ್ರಾಮೇಶಮಲ್ಪಾರ್ಥದಂ  
ಸೇವಾಯೈ ಮೃಗಯಾಮಹೇ, ನರಮಹೋ ಮೂಕಾ ವರಾಕಾ ವಯಮ್ 

ಯಾರಲ್ಲಿ ಬೇಡಿದರೂ ತಮ್ಮಲ್ಲಿರುವುದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಕೊಡಬಲ್ಲರು. ಅವರಬಳಿ ಇರುವುದೇ ಅಲ್ಪ. ಅಂತಹವರ ಹತ್ತಿರ ಕೇಳಿ ಪ್ರಯೋಜನವೇನು? ಆ ಪರಮಪುರುಷನಲ್ಲಿ ಎಲ್ಲವೂ ಇದೆ. ಅಷ್ಟೇ ಅಲ್ಲ. ಅವನು ಏನನ್ನು ಕೇಳಿದರೂ ಕೊಡಬಲ್ಲ ಸರ್ವಶಕ್ತನು. ಅದಕ್ಕಿಂತ ಹೆಚ್ಚಾಗಿ ಭಕ್ತರು ಕೇಳಿದರೆ ತನ್ನ ಸ್ಥಾನವನ್ನೇ ಕೊಡಲೂ ಹಿಂಜರಿಯನು! (ನಿಜವಾದ ಭಕ್ತನು ಅದನ್ನು ಕೇಳುವವನೂ ಅಲ್ಲ; ಅವನು ಕೊಡುವ ಪ್ರಮೇಯವೂ ಬರುವುದಿಲ್ಲ. ಅದು ಬೇರೆ ಮಾತು.) ತನ್ನ ಸ್ಥಳವನ್ನೇ ಬಿಟ್ಟುಕೊಡಲು ತಯಾರಿರುವ ಅವನನ್ನು ಬಿಟ್ಟು ಬೇರೆಯವರ ಬಳಿ ಕೈಯ್ಯೊಡ್ಡುವ ಮಂದಿ ಮಾತುಬಾರದ ಹಂದಿಗಳಂತೆ, ಅನ್ನುತ್ತಾರೆ ಕುಲಶೇಖರ ಅಲ್ವಾರರು. "ಬೇಡಿದರೆ ಎನ್ನೊಡಯನ ಬೇಡುವೆ, ಒಡೆಯಗೆ ಒಡಲನು ತೋರುತ ಎನ್ನ ಬಡತನ ಬಿನ್ನಹ ಮಾಡುವೆ" ಎನ್ನುತ್ತಾರೆ ಶ್ರೀ ಪುರಂದರದಾಸರು. ಇಲ್ಲಿ ಬಡತನ ಎಂದರೆ ಕೇವಲ ಹಣದ ದಾರಿದ್ರ್ಯವಲ್ಲ. ಗುಣಗಳ ಬಡತನ. ನವಕೋಟಿ ನಾರಾಯಣ ಎಂಬ ಬಿರುದು ಹೊತ್ತು ಸಕಲ ಸಂಪತ್ತಿನ ಮೇಲೆ ಒಂದು ತುಳಸೀದಳ ಹಾಕಿ ಹಿಂದಿರುಗಿ ನೋಡದೆ ಹೊರಟವರಿಗೆ ಹಣದ ಹಂಗೇನು?

ಈ ರೀತಿ ಆರಾಧಿಸುವ ಸಾಧಕನಿಗೆ ಆ ಪರಮಪುರುಷ ಎಲ್ಲ ಗುಣಗಳ ಗಣಿ. ಆದ್ದರಿಂದ ಅವನು ಸಗುಣಿ, ಎಲ್ಲ ಗುಣಗಳನ್ನೂ ಹೊಂದಿರುವವನು. ಅವನ ಲೆಕ್ಕದಲ್ಲಿ ಸತ್ವ, ರಜಸ್ಸು ಮತ್ತು ತಮಸ್ಸು ಗುಣಗಳಲ್ಲ. ಅವನಿಗೆ ಅವುಗಳ ಲೇಪವಿಲ್ಲ. 

ಎಲ್ಲ ಕಡೆಯಲ್ಲಿಯೂ ವ್ಯಾಪ್ತನಾದವನು ನಿರಾಕಾರ ಹೇಗಾದಾನು? ಕಂಡು ಕೇಳುವ ಎಲ್ಲ ಆಕಾರಗಳೂ ಅವನನ್ನೇ ನಿರ್ದೇಶಿಸುತ್ತವೆ. ಆದ್ದರಿಂದ ಅವನು ಸಾಕಾರನೇ. ಸಾಕಾರ ಮಾತ್ರವಲ್ಲ. ಎಲ್ಲ ಆಕಾರಗಳೂ ಅವನೇ! "ಸಕಲ ನಿಗಮಗೇಯಂ, ಸಕಲ ಶಬ್ಧಾಭಿದೇಯಂ". ಎಲ್ಲ ರೂಪಗಳೂ ಎಲ್ಲ ಶಬ್ದಗಳೂ ಅವನೇ. 

ಈ ವಿಚಾರಧಾರೆಗೆ ಅವನು ಸಗುಣ, ಸಾಕಾರ. 
***** 

ಈ ಚಿಂತನೆಯ ಹಿಂದೆ ಹೋಗುವ ಸಾಧಕನಿಗೆ ಆ ಸಗುಣ, ಸಾಕಾರ ಪರಮಾತ್ಮನಲ್ಲಿ ಎಷ್ಟು ಗುಣಗಳಿವೆ ಎಂದು ತಿಳಿಯಬೇಕು? ಎಣಿಸಲಾಗದಷ್ಟು ಗುಣಗಳು! ನಾವು ನಮ್ಮ ತಿಳುವಳಿಕೆಯಲ್ಲಿ ಎಣಿಸಬಹುದಾದ ಎಲ್ಲ ಗುಣಗಳು. ಅದರಾಚೆ ಇರುವ ಗುಣಗಳೂ ಕೂಡ. ನೀವು ಯಾವ ಗುಣವನ್ನಾದರೂ ಶೋಧಿಸಿ ನೋಡಿ. ಅದು ಅವನಲ್ಲಿ ಇದೆ. ಇನ್ನೊಬ್ಬರು ನಮಗೆ ತಿಳಿಯದ ಗುಣವೊಂದನ್ನು ಹೇಳಲಿ. ಅದೂ ಕೂಡ ಅವನಲ್ಲಿ ಇದೆ. ಒಟ್ಟಿನಲ್ಲಿ ಅನಂತ ಗುಣಗಳು. ಇಂತಹ ಪ್ರತಿಯೊಂದು ಗುಣದ ವ್ಯಾಪ್ತಿಯೂ ಅನಂತ. ಗ್ರಹಿಸಲು ಕಷ್ಟ. ಅಲ್ಲವೇ? 

ಆದ್ದರಿಂದ ಅವನು ಸಗುಣ ಮಾತ್ರವಲ್ಲ. ಗುಣಸಮುದ್ರ. ಗುಣಸಾಗರ. ಗುಣಾರ್ಣವ. 

ಒಂದು ದಿನ ನಲ್ಲಿಯಲ್ಲಿ ನೀರು ಬರುವುದಿಲ್ಲ ಎಂದು ನಗರಸಭೆ ಸಾರಿತು. "ಎಲ್ಲ ಪಾತ್ರೆಗಲ್ಲಿ ಇಂದು ನೀರು ಶೇಖರಿಸಿ. ನಾಳೆಗೆ ಬೇಕಾಗುತ್ತದೆ" ಎಂದು ಮನೆಯ ಹಿರಿಯರು ಹೇಳಿದರು. ಕಿರಿಯರು ಅದರಂತೆ ಮಾಡಿದರು. ಈಗ ಮನೆಯಲ್ಲಿ ಇರುವ ಎಲ್ಲ ಪಾತ್ರೆಯೂ ಜಲಪೂರ್ಣ. ಎಲ್ಲ ಪಾತ್ರೆಯಲ್ಲೂ ಪೂರ್ತಿ ನೀರು ತುಂಬಿ ಆಯಿತು. 

ಯಾವುದೇ ಪಾತ್ರೆ ತೆಗೆದುಕೊಳ್ಳಿ. ಅದರಲ್ಲಿ ಪೂರ್ತಿ ನೀರು ತುಂಬಿದೆ. ಆದರೆ ಆ ತುಂಬಿದ ಪಾತ್ರೆಯಲ್ಲಿ ಕೆಲವು ಹನಿ ನೀರು ಹಾಕಬಹುದೋ? ಹಾಕಬಹುದು. ಹಾಗಿದ್ದರೆ ಸಾಮಾನ್ಯ ಅರ್ಥದಲ್ಲಿ ಪೂರ್ಣ ಎಂದ ಪೂರ್ಣವೂ ಅಪೂರ್ಣ ಎಂದಾಯಿತು! ಚೀಲದ ತುಂಬಾ ತೆಂಗಿನಕಾಯಿ ತುಂಬಿದೆ. ಇನ್ನೊಂದು ಕಾಯಿ ಹಾಕಲಾಗದು. ಆದರೆ ಸ್ವಲ್ಪ ರವೆ  ಹಾಕಬಹುದು!

ಪರಮಾತ್ಮನಲ್ಲಿ ಹೀಗಿಲ್ಲ. ಪೂರ್ಣ ಎಂದರೆ ಪೂರ್ಣವೇ. ಇನ್ನೊಂದು ತೊಟ್ಟು ನೀರು ಹಾಕಲಾಗದ ನೀರು ತುಂಬಿದ ಪಾತ್ರೆಯಂತೆ. ಅವನಲ್ಲಿ ಪೂರ್ಣವೆಂದರೆ ನಿಜವಾಗಿಯೂ, ಹೇಗೆ ನೋಡಿದರೂ ಪೂರ್ಣ. 

ಅವನು ಗುಣಾರ್ಣವ ಮಾತ್ರವಲ್ಲ. ಪೂರ್ಣ ಗುಣಾರ್ಣವ ಅಷ್ಟೇ ಅಲ್ಲ ಕೂಡ. ಅವನು ಪರಿಪೂರ್ಣ ಗುಣಾರ್ಣವ. ಎಲ್ಲಕಡೆ ಇರುವ ಗುಣಗಳೂ ಅವನಲ್ಲಿವೆ. ಅವನಲ್ಲಿಲ್ಲದ ಗುಣಗಳು ಮತ್ತೆಲ್ಲೂ ಇಲ್ಲ. 

*****

ಸಾಧಕನು ನಿರ್ಗುಣ, ನಿರಾಕಾರ ಸ್ವರೂಪನನ್ನು ಆರಾಧಿಸಬೇಕೇ? ಸಾಕಾರ ಪರಿಪೂರ್ಣ ಗುಣಾರ್ಣವನನ್ನು ಆರಾಧಿಸಬೇಕೇ? 

ಆಯ್ಕೆ ಸಾಧಕನದು. ತನ್ನ ಅನುಭವದ ಬಲದಿಂದ ಗುರ್ತಿಸಿ ಮುಂದೆ ಹೋಗಬಹುದು.