ಹಿಂದಿನ ಸಂಚಿಕೆಯಲ್ಲಿ "ಕುಳಿತುಕೊಳ್ಳುವ ಆಸನಗಳು" ಎನ್ನುವ ಶೀರ್ಷಿಕೆಯಡಿ ಧ್ಯಾನ-ಜಪ ಮುಂತಾದುವುಗಳ ಅನುಷ್ಠಾನಕ್ಕೆ ಕುಳಿತುಕೊಳ್ಳುವಾಗ ಉಪಯೋಗಿಸುವ ಪೀಠಗಳು (ಆಸನಗಳು) ಮತ್ತು ಅವುಗಳಿಂದ ಬರಬಹುದಾದ ಶುಭ-ಅಶುಭ ಫಲಗಳನ್ನು ನೋಡಿದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ).
ನಮ್ಮ ಆಚರಣೆಗಳಲ್ಲಿ ದೇವರು-ದೇವತೆಗಳನ್ನು ಪ್ರಾರ್ಥಿಸುವಾಗ "ಸಕಲ ಭೋಗ-ಭಾಗ್ಯ ಸಿಧ್ಯರ್ಥಂ" ಎಂದು ಸಂಕಲ್ಪಿಸಿ ಬೇಡುವುದು ನಡೆದುಬಂದ ವಾಡಿಕೆ. ಗುರು-ಹಿರಿಯರ ಆಶೀರ್ವಾದ ಪಡೆಯುವಾಗ "ಸಕಲ ಭೋಗ-ಭಾಗ್ಯ ಸಿದ್ಧಿರಸ್ತು" ಎಂದು ಅವರು ಆಶೀರ್ವದಿಸುವೂ ಉಂಟು.
ಈ ಭೋಗಗಳು ಮತ್ತು ಭಾಗ್ಯಗಳು ಯಾವುವು? ಸಾಮಾನ್ಯವಾಗಿ "ಅಷ್ಟಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎಂದು ಹೇಳುತ್ತಾರೆ. ಇವುಗಳ ವಿವರವೇನು ಎಂದು ಸ್ನೇಹಿತರೊಬ್ಬರು ಕೇಳಿದ್ದಾರೆ.
ಈ ಅಷ್ಟ ಭಾಗ್ಯಗಳು ಯಾವವು ಎನ್ನುವುದನ್ನು ಈಗ ನೋಡೋಣ.
*****
ಮನುಷ್ಯನು ಸುಖಜೀವನ ನಡೆಸುವುದಕ್ಕೆ ಕೆಲವು ರೀತಿಯ ಅನುಕೂಲಗಳು ಬೇಕೇ ಬೇಕು. ಸಮಾಜವನ್ನು ತೊರೆದು ಕಾಡು-ಮೇಡುಗಳಲ್ಲಿ ಸನ್ಯಾಸಿಯ ಜೀವನ ನಡೆಸುವುದು ಒಂದು ರೀತಿ. ಅಲ್ಲಿ ಯಾವುದೇ ಭೋಗಕ್ಕೆ ಸ್ಥಾನವಿಲ್ಲ. ಆದರೆ ಸಮಾಜದಲ್ಲಿ ಗೃಹಸ್ಥನಾಗಿ ಬದುಕುವ ವ್ಯಕ್ತಿಗೆ ಈ ರೀತಿಯ ಸನ್ಯಾಸಿ ಜೀವನ ಅಷ್ಟು ಹೊಂದುವುದಿಲ್ಲ. ಭೋಗ-ಭಾಗ್ಯಗಳ ಹಿಂದೆ ಬಿದ್ದು ಸಾಧನೆಯನ್ನು ಗೌಣವಾಗಿ ಕಾಣುವುದು ಮನುಷ್ಯ ಜೀವನದ ಉದ್ದೇಶವಲ್ಲ. ಆದರೆ, ಈ ಕಾರಣಕ್ಕಾಗಿ ಗೃಹಸ್ಥನು ಎಲ್ಲವನ್ನೂ ತ್ಯಜಿಸುವುದು ಸಾಧ್ಯವಿಲ್ಲ. ತನ್ನ ಸ್ವಂತ ಉಪಯೋಗಕ್ಕೆ, ಮತ್ತು ಅದಕ್ಕಿಂತ ಹೆಚ್ಚಾಗಿ ತನ್ನನ್ನು ನಂಬಿ ಜೊತೆಯಲ್ಲಿ ಬಾಳುವ ಕುಟುಂಬದ ಸದಸ್ಯರಿಗೆ ಸುಖ ಜೀವನ ನಡೆಸಲು ಈ ಭೋಗ-ಭಾಗ್ಯಗಳು ಬೇಕು. ಇವೆರಡಿಕ್ಕಿಂತ ಹೆಚ್ಚಾಗಿ ತನ್ನ ಮನೆಗೆ ಬಂದ ಅತಿಥಿ-ಅಭ್ಯಾಗತರ ಸೇವೆಗೆ ಈ ಭೋಗ ವಸ್ತುಗಳು ಬೇಕಾಗುತ್ತವೆ.
ಕಾಳಿದಾಸ ಮಹಾಕವಿಯ "ರಘುವಂಶ" ಮಹಾಕಾವ್ಯದಲ್ಲಿ ವರತಂತು ಮಹರ್ಷಿಗಳ ಶಿಷ್ಯನಾದ ಕೌತ್ಸ ಎಂಬ ಋಷಿಯು ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸಿ ತನ್ನ ಗುರುಗಳಾದ ವರತಂತುಗಳಿಗೆ ಗುರುದಕ್ಷಿಣೆ ಕೊಡಲು ರಘು ಮಹಾರಾಜನ ಬಳಿ ಸಹಾಯಕ್ಕಾಗಿ ಬರುವ ಪ್ರಸಂಗವಿದೆ. ಅಲ್ಲಿ ತನ್ನನ್ನು ಎದುರುಗೊಂಡು, ಸ್ವಾಗತಿಸಿ ಕುಶಲ ಪ್ರಶ್ನೆಗಳನ್ನು ಮಾಡಿದ ಮಹಾರಾಜನಿಗೆ ಕೌತ್ಸನು ಉತ್ತರ ಕೊಡುವಾಗ "ಸರ್ವೋಪಕಾರಕ್ಷಮಮಾಶ್ರಮಂ ತೇ" ಎಂದು ಹೇಳುತ್ತಾನೆ. ನಾಲ್ಕು ವರ್ಣಾಶ್ರಮಗಳಲ್ಲಿ ಗೃಹಸ್ಥಾಶ್ರಮ ಬಹಳ ಮುಖ್ಯವಾದವನು. ಉಳಿದ ಮೂರು ಆಶ್ರಮ ಜೀವಿಗಳಾದ ಬ್ರಹ್ಮಚಾರಿ, ಸನ್ಯಾಸಿ ಮತ್ತು ವಾನಪ್ರಸ್ಥರು ಗೃಹಸ್ಥರನ್ನೇ ಅನೇಕ ವಿಷಯಗಳಿಗೆ ಆಶ್ರಯಿಸಬೇಕಾಗುತ್ತದೆ. ಬ್ರಹ್ಮಚಾರಿಗಳ ಮತ್ತು ಸನ್ಯಾಸಿಗಳ ಜೀವನಕ್ಕೆ ಗೃಹಸ್ಥರೇ ಆಧಾರ.
ಸ್ವಂತ ಸಂಪಾದನೆಯಲ್ಲದ ವಿದ್ಯಾರ್ಥಿಗಳು ಮತ್ತು ಸಂಪಾದನೆ ಮಾಡಬಾರದ ಸನ್ಯಾಸಿಗಳ ಜೀವನ ಸಮಾಜದಲ್ಲಿರುವ ಗೃಹಸ್ಥರ ಸಹಾಯದಿಂದಲೇ ನಡೆಯುತ್ತದೆ. ಹೀಗಿರುವಾಗ ಗೃಹಸ್ಥರು ಈ ಭೋಗ-ಭಾಗ್ಯಗಳ ವಿಷಯದಲ್ಲಿ ಅತಿಯಾದ ಆಸಕ್ತಿ ತಾಳದಿದ್ದರೂ ಪೂರ್ಣವಾಗಿ ನಿರಾಸಕ್ತರಾಗಲು ಸಾಧ್ಯವಿಲ್ಲ.
*****
- "ಅಷ್ಟ ಭಾಗ್ಯಗಳು" ಎಂದು ಪರಿಗಣಿತವಾದ ಎಂಟರಲ್ಲಿ ಮೊದಲನೆಯದು "ಅನ್ನ". ಯಾವ ಪ್ರಾಣಿಯ ಜೀವನ ನಡೆಯಬೇಕಾದರೂ ಮೊದಲನೆಯ ಅವಶ್ಯಕತೆ ಆಹಾರ. ಇಲ್ಲಿ ಅನ್ನ ಎಂದರೆ, ಹಿಂದೊಮ್ಮೆ ಬೇರೆ ಸಂಚಿಕೆಯಲ್ಲಿ ಚರ್ಚಿಸಿದಂತೆ, ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಮಾತ್ರವಲ್ಲ. ದೇಹದ ಬೆಳವಣಿಗೆ ಮತ್ತು ಬೆಳೆದ ದೇಹವನ್ನು ಸುಸ್ಥಿತಿಯಲ್ಲಿ ಕಾಪಾಡಲು ಬೇಕಾಗುವ ಎಲ್ಲ ಖಾದ್ಯಗಳಿಗೂ "ಅನ್ನ" ಎಂದು ನಿರ್ದೇಶಿಸಿ "ಬೃಹದಾರಣ್ಯಕ ಉಪನಿಷತ್" ಹೇಳುವ "ಸಪ್ತಾನ್ನ ಪ್ರಕರಣ" ತಿಳಿಸಿಕೊಡುತ್ತದೆ. ಅನ್ನವಿಲ್ಲದೇ ಜೀವನವಿಲ್ಲ. ಆದ್ದರಿಂದ ಎಂಟು ಭಾಗ್ಯಗಳಲ್ಲಿ ಮೊದಲೆನೆಯದು ಅನ್ನ.
- ಎರಡನೆಯ ಭಾಗ್ಯ "ಉದಕ". ನೀರಿಲ್ಲದೆ ಬದುಕುವುದು ಸಾಧ್ಯವಿಲ್ಲ. ಉಸಿರಾಡುವ ಎಲ್ಲಾ ಪ್ರಾಣಿಗಳಿಗೂ ಗಾಳಿಯ ನಂತರ ನೀರು ಅತಿ ಮುಖ್ಯ. ವಾಸ್ತವಾಗಿ ಅನ್ನಕ್ಕಿಂತ ಮೊದಲು ನೀರು ಬೇಕು. ಆದರೆ ಕುಡಿಯುವ ನೀರು ಸೃಷ್ಟಿಯಲ್ಲಿ ಸುಲಭವಾಗಿ ಸಿಗುವುದು. ಆದ್ದರಿಂದ ಇಲ್ಲಿ ಅನ್ನ ಎರಡನೆಯದು ಎಂದು ಗಣಿತವಾಗಿದೆ. (ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ "ಅಷ್ಟ ಭಾಗ್ಯಗಳು" ಎಂದು ನಿರ್ದೇಶಿಸುವ ಎಂಟು ಭಾಗ್ಯಗಳಲ್ಲಿ ನೀರೇ ಮೊದಲನೆಯದು. ಅದರಲ್ಲಿ ಅನ್ನ ಎಂಟರ ಲೆಕ್ಕದಲ್ಲಿ ಸೇರುವುದಿಲ್ಲ. ಮನುಷ್ಯನ ಅನ್ಯಾಯ ಜೀವನ ಕ್ರಮಗಳಿಂದ ಈಚಿನ ದಿನಗಳಲ್ಲಿ ನೀರು ಸಿಗುವುದು ಕಷ್ಟವಾಗಿದೆ).
- ಮೂರನೆಯ ಭಾಗ್ಯ "ತಾಂಬೂಲ". ತಾಂಬೂಲ ಎಂದರೆ ಕೇವಲ ಎಲೆ-ಅಡಿಕೆ-ಸುಣ್ಣ ಮಾತ್ರವಲ್ಲ. ತಾಂಬೂಲ ಸೇವನೆ ಊಟದ ಕೊನೆಯ ಅಧ್ಯಾಯ. ಅವುಗಳಲ್ಲಿ ಅವರವರ ಅಂತಸ್ತಿಗೆ ತಕ್ಕಂತೆ ಅಂತರವೂ ಉಂಟು. ಅದು ಕೇವಲ ಗೋಟು ಅಡಿಕೆ ಇರಬಹುದು ಅಥವಾ ಬಣ್ಣ ಕಟ್ಟಿದ, ಕಾಚು, ಸಕ್ಕರೆ, ಸುಗಂಧ ಮಿಶ್ರಿತವಾದ ಪುಡಿಯಡಕೆ ಇರಬಹುದು. ತಾಂಬೂಲ ಸೇವನೆ ಇದೆ ಅಂದರೆ ಊಟದ ನಂತರ ಸ್ವಲ್ಪ ವಿಶ್ರಾಂತಿಗೂ ಅವಕಾಶ ಇದೆ ಎಂದು ಅರ್ಥ. ಜೀವನದ ಇತರ ಚಟುವಟಿಕೆಗಳಿಗೆ ತಕ್ಷಣ ಓಡಬೇಕಾಗಿಲ್ಲ. ಕುಟುಂಬದ ಇತರ ಸದಸ್ಯರ, ಬಂಧು-ಬಾಂಧವರ, ಸ್ನೇಹಿತರ ಕೂಡ ಸ್ವಲ್ಪ ವಿನೋದದ ಕ್ಷಣಗಳನ್ನೂ ಕಳೆಯುವ ಅವಕಾಶವೂ ಒಂದು ಭೋಗವೇ.
- ನಾಲ್ಕನೆಯದು "ಪುಷ್ಪ". ಈಗ ಗಂಡಸರು ಹೂವಿನ ಹಾರಗಳನ್ನು ಧರಿಸುವುದು ತಪ್ಪಿಹೋಗಿದೆ. ಸ್ತ್ರೀಯರು ಕೂಡ ಮರೆತಿದ್ದಾರೆ. ಸುಗಂಧಭರಿತ ಹೂವುಗಳು ಮತ್ತು ಹೂವಿನ ಹಾರಗಳನ್ನು ಉಪಯೋಗಿಸುವುದು ಒಂದು ಭೋಗದ ರೀತಿ. ಅನೇಕ ಬಣ್ಣದ, ಸುವಾಸನೆಯ, ಗಾತ್ರದ ಹೂವುಗಳು ಸೊಗಸನ್ನು ಹೆಚ್ಚಿಸುವುದರ ಜೊತೆಗೆ ವಾತಾವರಣವನ್ನೂ ರಂಗೇರಿಸಬಲ್ಲುದು.
- ಐದನೆಯದು "ಚಂದನ". ಗಂಧದ ಮರಗಳು ಹೇರಳವಾಗಿ ಇದ್ದಾಗಿನ ಮಾತು. ಗಂಧ ತಂದು ತೇಯ್ದು ಸುಗಂಧ ಪೂಸಿಕೊಳ್ಳುತ್ತಿದ್ದ ಕಾಲದ ಮಾತು ಇದು. ಪುಟ್ಟಕೃಷ್ಣನ ದಾಸರು ವರ್ಣಿಸುವುದು "ಪೂಸಿದ ಶ್ರೀಗಂಧ ಮಯ್ಯೊಳಗಮ್ಮ" ಎಂದು. (ಈಗ ಅದು ಕೇವಲ ರಾಸಾಯನಿಕ ಗಂಧ ಸಿಂಪಡಣೆಗೆ ಸೀಮಿತವಾಗಿದೆ. ಕೆಲವುಕಡೆಯಂತೂ ದೊಡ್ಡ ಫ್ಯಾನುಗಳು ಈ ಕೆಲವನ್ನು ಬೇಜಾರಿಲ್ಲದೆ ಮಾಡುತ್ತವೆ).
- ಆರನೆಯ ಭೋಗ "ವಸನ". ಮಾನ ಮುಚ್ಚಲು ಬಟ್ಟೆ ಅನ್ನ-ನೀರಿನ ನಂತರದ ಸ್ಥಾನ ಪಡೆಯುತ್ತದೆ. ಅದು ಭೋಗದ ವಸ್ತುವೂ ಆಗಬಹುದು. ಬರಿಯ ಶುಭ್ರ ಬಟ್ಟೆಯಿಂದ ಜರತಾರಿ ಸೀರೆ-ಪಂಚೆ-ದಿರಿಸು, ಮುಂಡಾಸು, ಮೇಲು ಹೊದಿಕೆ, ಮುಂತಾದ ಅನೇಕ ರೀತಿಯಲ್ಲಿ ಜೀವನಕ್ಕೆ ಸೊಗಸನ್ನು ತಂದುಕೊಡುವ ಭೋಗ ಈ ವಸನದ್ದು.
- ಭೋಗಗಳಲ್ಲಿ ಏಳನೆಯದು "ಶಯ್ಯಾ". ಊಟವಾಗಿ ಹೊಟ್ಟೆ ತುಂಬಿತು. ಬಟ್ಟೆ ಸಿಕ್ಕಿತು. ನಂತರದ ಸ್ಥಾನ ದಣಿದ ದೇಹಕ್ಕೆ ನಿದ್ರೆ ಕೊಡುವುದು. ನೆಲದ ಮೇಲೆ ತೋಳನ್ನೇ ತಲೆದಿಂಬಾಗಿ ಇಟ್ಟುಕೊಂಡು ಮಲಗಬಹುದು. ಅದನ್ನು ಯಾರೂ ಭೋಗ ಅನ್ನುವುದಿಲ್ಲ. ಅದೇ ಸೊಗಸಾದ ಮೆತ್ತನೆಯ ಹಾಸಿಗೆಯ ಮೇಲೆ ಆಗಬಹುದು. ಸುಪ್ಪತ್ತಿಗೆಯೂ ಆಗಬಹುದು. ಇವು ನೆಲದ ಬದಲು ಸುಂದರ ಮಂಚದ ಮೇಲೂ ಇರಬಹುದು. ಸೊಳ್ಳೆಪರದೆ ಸೇರಿರಬಹುದು. ಹೊದೆಯಲು ಒಳ್ಳೆಯ ಪದರಗಳ ಹೊದಿಕೆ ಇರಬಹುದು. ಚಳಿಗಾಲದಲ್ಲಿ ಉಣ್ಣೆಯದು ಇರಬಹುದು. ಹೀಗೆ ಭೋಗದ ವಿವಿಧ ಮಜಲುಗಳು. ಜೊತೆಗೆ ತನ್ನದೇ ಮನೆಯಲ್ಲಿಯೂ ಇರಬಹುದು.
- ಎಂಟನೆಯ ಭೋಗವೆಂದರೆ "ಅಲಂಕಾರ". ಬರೀ ಬಟ್ಟೆ ಉಟ್ಟರೆ ಸಾಕೆ? ಆಭರಣಗಳು ಬೇಡವೇ? ಚಿನ್ನ, ವಜ್ರ ಮುಂತಾದವು. ಕುಂಕುಮ ಮುಂತಾದ ಬಣ್ಣ-ಬಣ್ಣದ ದ್ರವ್ಯಗಳು. ಸುಂದರವಾದ ಕೈಚೀಲ. ಕೈಗೆ ಕಸೂತಿ ಹಾಕಿದ ಕರ್ಚೀಫು. ಸ್ವಲ್ಪ ವಯಸ್ಸಾದ ಮೇಲೆ ಕೈಗೊಂಡು ಕೊರೆದ ಬೆತ್ತದ ಕೋಲು. ಹೀಗೆ. ಅವರವರ ಯೋಗ್ಯತೆ-ಅಭಿರುಚಿಗಳಿಗೆ ತಕ್ಕಂತೆ ಇವುಗಳ ಪಟ್ಟಿಯನ್ನು ಪಸರಿಸಬಹುದು.
ಇಲ್ಲಿಗೆ ಎಂಟು ರೀತಿಯ "ಅಷ್ಟ ಭೋಗ" ವಿಷಯದ ವಿವರಣೆ ಸಾಕು. ಮುಂದೆ ಇವನ್ನು ವಿಸ್ತರಿಸುವುದು ಅವರವರ ಮನಸ್ಸಿಗೆ ಬಿಡುವುದು ಒಳ್ಳೆಯದು.
*****
ಅಷ್ಟ ಭೋಗಗಳ ವಿಷಯಗಳನ್ನು ಇಬ್ಬರು ಬಲ್ಲರು. ಇವು ಇಲ್ಲದವರು. ಇವು ಚೆನ್ನಾಗಿ ಇದ್ದು ಅನುಭವಿಸುವವರು. ಎಲ್ಲ ಭೋಗಗಳ ಸವಲತ್ತಿದ್ದರೂ ಅನುಭವಿಸಲು ಸಾಧ್ಯವಿಲ್ಲದವರ ವಿಷಯ ಚಿಂತಿಸುವುದು ಬೇಡ.
"ಅಷ್ಟ ಭಾಗ್ಯಗಳು" ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
Very nice eloboration of eight Bhagavan sadhana sadhyas indeed
ReplyDeleteGood explanation about 'Ashta Bhoga' by Keshava Murthyji.
ReplyDeleteGood to know so many meaningful things with examples.
ReplyDelete