Showing posts with label Bhagavadgita. Show all posts
Showing posts with label Bhagavadgita. Show all posts

Wednesday, September 17, 2025

ಒಂದು ದೇಹದಲ್ಲಿ ಅನೇಕ ದೇಹಗಳು!

ಶ್ರೀಮದ್ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ವಿವರಿಸಿರುವ ಬಹಳ ವಿಷಯಗಳು ಅನೇಕ ಸಾಂದರ್ಭಿಕ  ಕಾರಣಗಳಿಂದ ಮತ್ತೆ ಮತ್ತೆ ನಮ್ಮ ಗಮನಕ್ಕೆ ಬರುತ್ತಿರುತ್ತವೆ. ಹುಟ್ಟು ಮತ್ತು ಸಾವು, ಅವುಗಳ ತಪ್ಪಿಸಲಾಗದ ಚಕ್ರ, ಅವುಗಳ ವಿಷಯದಲ್ಲಿ ಅತಿಯಾಗಿ ದುಃಖಿಸಬಾರದೆಂಬುದು, ಇವುಗಳ ಚರ್ಚೆ ಬೇರೆ ಬೇರೆ ಸಂವಾದಗಳಲ್ಲಿ ಆಗಾಗ ನಡೆಯುತ್ತಿರುತ್ತದೆ. ಇದೇ ಭಗವದ್ಗೀತೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಹೇಳಿರುವ ಇನ್ನೊಂದು ವಿಷಯವು ಹೆಚ್ಚಾಗಿ ಚರ್ಚಿತವಾಗುವುದಿಲ್ಲ.

ಕಳೆದ ತಿಂಗಳು ಹಿಂದಿನ ಒಂದು ಸಂಚಿಕೆಯಲ್ಲಿ, "ಸಾವು ಎದುರಲ್ಲಿ ಬಂದು ನಿಂತಾಗ" ಎನ್ನುವ ಶೀರ್ಷಿಕೆಯಡಿಯಲ್ಲಿ, ಈ ಸಂಬಂಧದ ಕೆಲವು ಪದರಗಳನ್ನು ಚರ್ಚಿಸಿದ್ದೆವು. (ಇಲ್ಲಿ ಕ್ಲಿಕ್ ಮಾಡಿ ಈ ಸಂಚಿಕೆಯನ್ನು ಓದಬಹುದು).  

ಸಾವಿನ ಕಾಲದಲ್ಲಿ ಜೀವನು ಈಗ ಪಡೆದಿರುವ ದೇಹವು ಕೊನೆಗೊಂಡು ಮತ್ತೆ ಮುಂದೆ ಬೇರೊಂದು ದೇಹ ಪಡೆಯುವ ಜನನ-ಮರಣ ಚಕ್ರದ ಜೊತೆಯಲ್ಲಿಯೇ, ಈಗಿನ ಒಂದು ಜೀವಿತಕಾಲದಲ್ಲಿಯೇ ಜೀವಿಯು ಪಡೆದ ದೇಹವೊಂದರಲ್ಲಿ ಅನೇಕ ದೇಹಗಳು ಅಡಗಿರುವ ಗುಟ್ಟನ್ನು ಶ್ರೀಕೃಷ್ಣನು ಹೇಳಿದ್ದಾನೆ. ಇದೇನೂ ಅಂತಹ ಗುಟ್ಟಿನ ವಿಷಯವಲ್ಲ. ಅದು ಎಲ್ಲರಿಗೂ ಚೆನ್ನಾಗಿ ತಿಳಿದಿದ್ದರೂ, ಅದರ ಸುಪ್ತವಾಗಿ ಉಳಿಯುವ ಗುಣದಿಂದ,  ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. 

*****

ಯಾವುದೇ ಪ್ರಾಣಿಯಿರಲಿ, ಅದರಲ್ಲಿ ವಿಶೇಷವಾಗಿ ಮನುಷ್ಯ, ಹುಟ್ಟುವಾಗ ಇದ್ದ ದೇಹಕ್ಕೂ ಜೀವನದ ಕೊನೆಯ ಕಾಲದಲ್ಲಿ ಇರುವ ದೇಹಕ್ಕೂ ಅಜ-ಗಜಾಂತರ (ಆಡು-ಆನೆ) ವ್ಯತ್ಯಾಸ. ತಾಯಿಯ ಗರ್ಭದಿಂದ ಮಗು ಅಥವಾ ಪ್ರಾಣಿಯ ಮರಿ ಹೊರಬಂದಾಗ, ಅಥವಾ ಮೊಟ್ಟೆಯೊಡೆದು ಮರಿ ಹೊರಗೆ ಬಂದಾಗ ಅದರ ಗಾತ್ರ ಬಹಳ ಸಣ್ಣದಿರುತ್ತದೆ. ನಂತರ ಕಾಲಕ್ರಮದಲ್ಲಿ ಅದರ ಗಾತ್ರ ದೊಡ್ಡದಾಗುತ್ತ ಹೋಗುತ್ತದೆ. ಇನ್ನೂ ಮುಂದೆ ಅದು ಮೊದಲಿನಂತೆ ಪೂರ್ತಿ ಚಿಕ್ಕದಾಗದೇ ಇದ್ದರೂ ಸಾಮಾನ್ಯವಾಗಿ ಕುಗ್ಗಿ ಅಥವಾ ಕೃಶವಾಗಿ ಹೋಗುತ್ತದೆ. ಇದು ಎಲ್ಲರಿಗೂ ದಿನಂಪ್ರತಿ ಕಣ್ಣಿಗೆ ಕಾಣುವ ವಾಸ್ತವ ಸಂಗತಿ. 

ಏಕೆ ಹೀಗೆ? ಇದು ಪ್ರಸವ ಅಥವಾ ಮೊಟ್ಟೆಯೊಡೆದು ಮರಿ ಸುಖವಾಗಿ ಹೊರಬರಲು ಪ್ರಕೃತಿ ಮಾಡಿರುವ ಒಂದು ಉಪಾಯ. ಇದರಿಂದ ಮರಿ ಮತ್ತು ತಾಯಿ ಇಬ್ಬರಿಗೂ ಕ್ಷೇಮ. ಒಂದು ಆನೆಯ ಮರಿ ಆನೆಯ ಗಾತ್ರದ್ದೇ ಆಗಿ ಹುಟ್ಟುವ ಪರಿಯನ್ನು ನೆನೆಸಿಕೊಂಡರೆ ಮೊದಲು ನಗು ಬರುತ್ತದೆ. ಇದೇನು, ಇಂತಹ ಹಾಸ್ಯಾಸ್ಪದ ವಿಷಯ ಎನಿಸುತ್ತದೆ. ಕೆಲವೊಮ್ಮೆ ನಾಕೂವರೆ ಅಡಿ ಎತ್ತರವಿರುವ ತಾಯಿ ಮತ್ತು ಆರೂವರೆ ಅಡಿ ಎತ್ತರ ಇರುವ ಮಗನನ್ನು ಜೊತೆಯಾಗಿ ನೋಡಿದಾಗ ಇದರ ವಾಸ್ತವತೆ ಅರಿವಾಗುತ್ತದೆ. 

ಶಿಶುಪಾಲನೆ ಅನೇಕ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಒಂದು ದೊಡ್ಡ ಕೆಲಸವೇ. ಕೆಲವು ಪ್ರಾಣಿಗಳಲ್ಲಿ ಜನನವಾದ ನಂತರ ತಾಯಿ ಮತ್ತು ಮಗುವಿಗೆ ಯಾವುದೇ ಸಂಬಂಧವಿರುವುದಿಲ್ಲ. ಇನ್ನು ಕೆಲವು ಪ್ರಾಣಿಗಳಲ್ಲಿ ಸ್ವಲ್ಪ ಕಾಲ ಮರಿ ತಾಯಿಗೆ ಅಂಟಿಕೊಂಡಂತೆ ಇರುತ್ತದೆ. ಮನುಷ್ಯರಲ್ಲಿ ಪ್ರಾಯಶಃ ಇದರ ಅವಧಿ ಅತ್ಯಂತ ಹೆಚ್ಚು. ಮಗು ಎಷ್ಟು ದೊಡ್ಡದಾದರೂ ತಾಯಿ-ಮಗ ಅಥವಾ ತಾಯಿ-ಮಗಳ ಸಂಬಂಧ ಕೊಂಚವೂ ಮಾಸುವುದಿಲ್ಲ. 

ಸುಮಾರು ಇಪ್ಪತ್ತು ವರುಷಗಳ ಹಿಂದಿನ ಮಾತು. ನಮ್ಮ ಹಿರಿಯ ಸ್ನೇಹಿತರೊಬ್ಬರಿಗೆ ಎಂಭತ್ತರ ವಯಸ್ಸು. ಅವರ ನಿವೃತ್ತಿಯ ನಂತರ ಪರಸ್ಪರ ಈಮೈಲ್ ಮುಖಾಂತರ ಸಂಪರ್ಕ ಇದ್ದರೂ ಮುಖಾಮುಖಿ ಆಗಿರಲಿಲ್ಲ. ಅಪರೂಪಕ್ಕೆ ಅಮೆರಿಕೆಯ ಸಿಯಾಟಲ್ ನಗರದಲ್ಲಿ ಸಿಕ್ಕರು. ಅದು ಒಂದು ಅವಸರದ ಭೇಟಿ ಆಗಿತ್ತು. ಸಿಕ್ಕಾಗ ಬಹಳ ಉಲ್ಲಸಿತರಾಗಿದ್ದರು. "ಏನು, ಇಷ್ಟು ಸಂತೋಷದಲ್ಲಿದ್ದೀರಿ?" ಎಂದೆ. "ಹೌದಪ್ಪ, ಬಹಳ ಆನಂದದ ದಿನ. ನಾಳೆ ಬೆಂಗಳೂರು ಮಾರ್ಗವಾಗಿ ನನ್ನ ದಕ್ಷಿಣ ಕನ್ನಡದ ಹಳ್ಳಿಗೆ ಹೋಗುತ್ತಿದ್ದೇನೆ. ಅಲ್ಲಿ ನನ್ನ ತಾಯಿಯಿದ್ದಾಳೆ. ಅವಳನ್ನು ನೋಡಿ ಹತ್ತು ವರುಷವಾಗಿದೆ. ಕೆಲವು ತಿಂಗಳಲ್ಲಿ ಅವಳಿಗೆ ಶತಮಾನೋತ್ಸವ. ಕುಟುಂಬದ ಎಲ್ಲರೂ ಅಲ್ಲಿ ಸೇರುತ್ತಾರೆ. ಅವಳನ್ನು ನೋಡುವುದೇ ಒಂದು ಪುಳಕ. ಅದರಿಂದ ಈ ಸಂತೋಷ" ಅಂದರು. ಇವರಿಗೆ ಸ್ವಲ್ಪದರಲ್ಲಿ ಸಹಸ್ರ ಪೂರ್ಣ ಚಂದ್ರ ದರ್ಶನ! ಆಕೆಗೆ ಅದರ ಜೊತೆಯಲ್ಲಿ ಶತಮಾನೋತ್ಸವ! ತಾಯಿ-ಮಕ್ಕಳ ಸಂಬಂಧ ಅಂತಹುದು. 

*****

ಮಗು ಪುಟ್ಟದಿರುವಾಗ ಬಲು ಚೆಂದ. ಸ್ವಲ್ಪ ದೊಡ್ಡದಾಗಿ ಓಡಾಡಲು ಪ್ರಾರಂಭಿಸಿದರೆ ಎಲ್ಲರಿಗೂ ಸಂತಸ. ಹುಟ್ಟಿದ ದೇಹ ಈಗ ಹೋಗಿದೆ. ಬೇರೆ ದೇಹ ಬಂದಿದೆ. ಒಂದು ಕಡೆ ಬಿದ್ದುಕೊಂಡಿರುವ ಕೂಸೆಲ್ಲಿ? ಈಗ ಹಿಡಿಯಲು ಕಷ್ಟಪಡುವ ಈ ಮಗುವೆಲ್ಲಿ? ಆದರೆ ನಮ್ಮ ಮಗುವಿನ ಹಳೆಯ ದೇಹ ಹೋಯಿತಲ್ಲಾ ಎಂದು ಯಾರೂ ಗೋಳಾಡುವುದಿಲ್ಲ. ಒಮ್ಮೆಮ್ಮೆ "ಮಗು ಬೆಳೆಯಿತು. ಮೊದಲಿನಂತೆ ಕೈಗೆ ಸಿಗುವುದಿಲ್ಲ" ಎಂದು ಸ್ವಲ್ಪ ಬೇಜಾರಾಗಬಹುದು. ಆದರೆ ಅದರಿಂದ ದುಃಖವಿಲ್ಲ. ಮುಂದೆ ಯುವಕನಾದಾಗ ಅಥವಾ ಯುವತಿಯಾದಾಗ ಬಾಲಕ ಅಥವಾ ಬಾಲಕಿಯ ದೇಹ ಹೋಗಿದೆ. ಬೇರೆ ದೇಹ ಬಂದಿದೆ. ಹಳೆಯ ದೇಹ ಹೋಯಿತು ಎಂದು ದುಃಖವಿಲ್ಲ. ಹೊಸತು ಬಂದಿತು ಎಂದು ಉತ್ಸಾಹ. ವಿವಾಹ ಮಾಡುವ ಚಿಂತೆ. ನಂತರ ಮುಪ್ಪಿನಲ್ಲಂತೂ ಸರಿಯೇ ಸರಿ. ಬೇರೆ ದೇಹವಾಗಿರುವುದು ಕಣ್ಣು ಮುಚ್ಚಿಕೊಂಡವರಿಗೂ ಕಾಣುವುದು. 

ಹೀಗೆ ಪ್ರತಿ ಹಂತದಲ್ಲೂ ಹೊಸ ದೇಹವೇ ಬಂದಿರುತ್ತದೆ. ಹಿಂದೆ ಕನ್ನಡದಲ್ಲಿ "ಕೊರವಂಜಿ' ಎಂದೊಂದು ಹಾಸ್ಯಪತ್ರಿಕೆ ಬರುತ್ತಿತ್ತು. ಅದರಲ್ಲಿ ಒಂದು ನಗೆಹನಿ. ತಾಯಿಯು ನಾಲ್ಕೈದು ವರುಷದ ಮಗನ ಜೊತೆ ತನ್ನ ಹದಿನೈದು ವಷಗಳ ಹಿಂದಿನ ಮದುವೆಯ ಫೋಟೋ ಆಲ್ಬಮ್ ನೋಡುತ್ತಿದ್ದಾಳೆ. ಆರತಕ್ಷತೆಯ ಸುಂದರ ಫೋಟೋ. ಮಗುವಿಗೆ ತಾಯಿಯ ಗುರುತು ಥಟ್ಟೆ೦ದು ಸಿಕ್ಕಿತು. ಅವಳ ಪಕ್ಕದಲ್ಲಿದ್ದ ಗುಂಗುರು ಕೂದಲಿನ ಸುಂದರ ವ್ಯಕ್ತಿಯ ಗುರುತು ಸಿಗಲಿಲ್ಲ. "ಅಮ್ಮ, ಇವನು ಯಾರು?" ಅಂದಿತು ಮಗು. "ಅಯ್ಯೋ ಮರೀ, ಗೊತ್ತಾಗಲಿಲ್ಲವೇ? ಇದು ನಿಮ್ಮಪ್ಪ ಕಾಣೋ" ಅಂದಳು. ತಕ್ಷಣ ಮಗು, "ಹಾಗಿದ್ದರೆ ನಮ್ಮ ಜೊತೆಯಲ್ಲಿದ್ದಾನಲ್ಲ ಬೋಡಮುಂಡ, ಅವನು ಯಾರು?" ಅಂದಿತು. (ಭಾಷೆಗೆ ಕ್ಷಮೆ ಇರಲಿ. ಕೊರವಂಜಿಯಲ್ಲಿ ಇದ್ದಂತೆ ಹೇಳದಿದ್ದರೆ ಅದರ ನಿಜವಾದ ಮೋಜು ಸಿಗದು).   

ಹೀಗೆ ಬೆಳೆಯುವ ಕಾಲದಲ್ಲಿ ಆಗಾಗ ಹಳೆಯ ದೇಹ ಹೋಗಿ ಹೊಸದು ಬರುತ್ತಿದ್ದರೂ ಅದು ಅಷ್ಟಾಗಿ ನಮಗೆ ಭಾಸವಾಗುವುದಿಲ್ಲ. ಮುಂದೆ ಕಾಲಕ್ರಮದಲ್ಲಿ ಯೌವನ ಮತ್ತು ಮಧ್ಯ ಕಾಲಗಳು ಕಳೆದು ವೃದ್ಧಾಪ್ಯ ಬಂದಾಗ ಅದು ಮಾತ್ರ ಚೆನ್ನಾಗಿ ಕಂಡುಬರುತ್ತದೆ. "ಏನಿದು? ಇಷ್ಟು ಮುದುಕನೇ? ಹಲ್ಲೆಲ್ಲಾ ಬಿದ್ದು ಹೋಗಿವೆ. ಕೂದಲು ನರೆತು ಹೋಗಿದೆ" ಎನ್ನಬಹುದು. "ಎಲಬು ಸೊಟ್ಟಗಾಗಿದೆ. ಬೊಕ್ಕತಲೆ ಆಗಿದೆ" ಎಂದು ಆಶ್ಚರ್ಯಪಡಬಹುದು. ನೆಟ್ಟಗೆ ನಡೆಯುತ್ತಿದ್ದವರಿಗೆ ಈಗ ಕೋಲು ಹಿಡಿಯುವಂತಾಗಿದೆ. ಜೀವನದಲ್ಲಿ ಮುಖ್ಯ ಕಾರ್ಯಕ್ರಮವೆಂದರೆ ಮುಂದಿನ ವೈದ್ಯರ ಸಂದರ್ಶನದ ಸಮಯ ನಿಗದಿಮಾಡುವುದು. ಬೇಜಾರಾದಾಗಲೆಲ್ಲಾ ಒಂದು ಗುಳಿಗೆ ನುಂಗುವುದು. ಜೊತೆಗಾರರ ಸಕ್ಕರೆಯ ಅಂಶ ಎಷ್ಟಿದೆ ಎಂದು ಕೇಳಿ, ಅದು ನಮಗಿಂತ ಕಡಿಮೆ ಇದ್ದಾಗ ಸಮಾಧಾನ ಪಟ್ಟುಕೊಳ್ಳುವುದು.  ಹೀಗೆ. 

ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ 'ಒಂದು ದೇಹದಲ್ಲಿ ಅನೇಕ ದೇಹಗಳು" ಎನ್ನುವುದು. 

*****

ಹಾಗಿದ್ದರೆ ಭಗವದ್ಗೀತೆಯಡ್ನಲ್ಲಿ ಶ್ರೀಕೃಷ್ಣನು ಇದರ ಬಗ್ಗೆ ಹೇಳಿರುವುದು ಏನು? ಎರಡನೆಯ ಅಧ್ಯಾಯದ ಹದಿಮೂರನೆಯ ಶ್ಲೋಕ ಹೀಗಿದೆ:

देहिनोऽस्मिन्यथा देहे कौमारं यौवनं जरा |
तथा देहान्तरप्राप्तिर्धीरस्तत्र न मुह्यति ||  

ದೇಹಿನೋಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ
ತಥಾ ದೇಹಾಂತರಪ್ರಾಪ್ತಿ: ಧೀರಸ್ತತ್ರ ನ ಮುಹ್ಯತಿ 


ಹೇಗೆ ಆತ್ಮನು ತನ್ನ ದೇಹದಲ್ಲಿಯೇ ಬಾಲ್ಯ, ಯೌವನ ಮತ್ತು ಮುಪ್ಪಿನಲ್ಲಿ ದೇಹ ಬಲಾವಣೆಗಳನ್ನು ಕಾಣುತ್ತಾನೋ, ಹಾಗೆ  ಸಾವಿನ ನಂತರ ಮತ್ತೊಂದು ದೇಹವನ್ನು ಪಡೆಯುತ್ತಾನೆ. ಆದ್ದರಿಂದ ತಿಳಿದವರು ಇದರ ಬಗ್ಗೆ ಚಿಂತಿಸುವುದಿಲ್ಲ. 


"ಬದುಕಿರುವಾಗ ಹಂತ ಹಂತಗಳಲ್ಲಿ ಹೇಗೆ ಇದೇ ದೇಹದಲ್ಲಿ ಬದಲಾವಣೆಗಳಾಗುವುದೋ, ಹಾಗೆಯೇ ಸಾವಿನ ನಂತರ ಬರುವ ಬೇರೆ ದೇಹವೂ ಒಂದು ಬಲಾವಣೆಯೇ ಆಗಿರುತ್ತದೆ. ಆದ್ದರಿಂದ ಜ್ಞಾನಿಗಳು ಸಾವಿನ ವಿಷಯದಲ್ಲಿ ಯಾವ ದುಃಖವನ್ನೂ ಹೊಂದುವುದಿಲ್ಲ" ಎನ್ನುವುದು ಇದರ ಭಾವ. 

*****

"ಹೆರಾಕ್ಲಿಟಸ್" ಎನ್ನುವ ಗ್ರೀಕ್ ತತ್ವಜ್ಞಾನಿಯೊಬ್ಬ ಸುಮಾರು ಎರಡು ಸಾವಿರದ ಐದು ನೂರು ವರುಷಗಳ ಹಿಂದೆ "No man ever steps into a river twice" ಎಂದು ಹೇಳಿರುವುದೂ ಹೀಗೆ ಸಮಯದಿಂದ ಆಗುವ ಬದಲಾವಣೆಗಳ ಬಗ್ಗೆಯೇ. ಆಸಕ್ತರು ಇಂಗ್ಲೀಷಿನಲ್ಲಿರುವ ಬ್ಲಾಗ್ ಪೋಸ್ಟನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

Thursday, July 3, 2025

ಗೀತೆ ಎಂಬ ಹಾಲು; ಭಾಗವತವೆಂಬ ಹಣ್ಣು


ಪ್ರತಿಯೊಂದು ವಿಷಯವನ್ನೂ ಸಂದರ್ಭಗಳ ಹಿನ್ನೆಲೆಯಲ್ಲಿ ಸರಿಯಾಗಿ ತಿಳಿಯುವ ಸಲುವಾಗಿ ಅದಕ್ಕೆ ಸಂಬಂಧಿಸಿದ ಗ್ರಂಥಗಳನ್ನೂ, ವಿಶಿಷ್ಟ ವಾಂಗ್ಮಯವನ್ನೂ ಕೂಲಂಕುಷವಾಗಿ ಅಭ್ಯಸಿಸಿ, ಅವುಗಳ ಹಿಂದು-ಮುಂದಿನ ವಿವರಗಳ ಬೆಳಕಿನಲ್ಲಿ ನಿಖರವಾಗಿ ಅರ್ಥ ಮಾಡಿಕೋಳ್ಳಬೇಕೆಂಬ ಪ್ರಮೇಯವನ್ನು ಮುಕುಂದರಾಯರ "ಏಕಾದಶಿಯ ದಿನ ಹಾಲು-ಹಣ್ಣು ಸೇವಿಸಿ" ಎಂಬ ಸಂಚಿಕೆಯ ಅನುಭವದಿಂದ ತಿಳಿದೆವು. ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಮುಕುಂದರಾಯರ ಎಡವಟ್ಟಿನ ಪರಿಸ್ಥಿತಿಯನ್ನು ಕಂಡ ಹಿರಿಯರೊಬ್ಬರು "ನಾಳೆ ಪುರಾಣಕ್ಕೆ ಸ್ವಲ್ಪ ಬೇಗ ಬನ್ನಿ. ಹಾಲು ಎಂದರೆ ಭಗವದ್ಗೀತೆ. ಹಣ್ಣು ಎಂದರೆ ಶ್ರೀಮದ್ ಭಾಗವತ.  ಅದು ಹೇಗೆ ಎಂದು ನಿಮಗೆ ವಿವರಿಸುತ್ತೇನೆ" ಎಂದು ಹೇಳಿದ್ದರು. ಅದರ ವಿವರಗಳನ್ನು ಈಗ ನೋಡೋಣ. 

*****

ಮುಕುಂದರಾಯರು ದೇವಾಲಯವನ್ನು ಬೇಗ ತಲುಪಿ ಹಿರಿಯರ ಬರವಿಗೆ ಕಾತುರದಿಂದ ಕಾಯುತ್ತಿದ್ದರು. ಹೇಳಿದ ಮಾತಿಗೆ ಸರಿಯಾಗಿ ಆ ವೃದ್ಧರು ಬಂದರು. ಇನ್ನೂ ಪುರಾಣ ಕೇಳುವ ಜನಗಳ ಆಗಮನ ಆಗಿರಲಿಲ್ಲ. ಇಬ್ಬರೂ ಪರಸ್ಪರ ಮಾತಾಡಲು ಅನುಕೂಲವಾಗಿರುವ ಒಂದು ಜಾಗದಲ್ಲಿ ಕುಳಿತರು. ಮಾತುಕತೆ ಪ್ರಾರಂಭವಾಯಿತು. 

"ಏನು, ನಿರೀಕ್ಷಿದಂತೆ ಬೇಗ ಬಂದಿದ್ದೀರಿ"
"ನಿನ್ನೆ ಮನೆಗೆ ಹೋದಮೇಲೆ ರಾತ್ರಿಯೆಲ್ಲ  ನೀವು ಹೇಳಿದ "ಗೀತೆಯೇ ಹಾಲು. ಭಾಗವತವೇ ಹಣ್ಣು" ಎಂಬುದನ್ನೇ ಯೋಚಿಸುತ್ತಿದ್ದೆ. ಅದು ಹೇಗೆ ಈ ರೀತಿ ಪ್ರಚುರವಾಯಿತು ಎಂದು ತಿಳಿಯುವ ಕುತೂಹಲ. ನೀವು ವಿವರಿಸುತ್ತೇನೆ ಎಂದು ಹೇಳಿದುದು  ಒಳ್ಳೆಯದಾಯಿತು. ಅದನ್ನು ಸ್ವಲ್ಪ ಬಿಡಿಸಿ ಹೇಳಿದರೆ ನನಗೆ ಬಹಳ ಅನುಕೂಲವಾಗುತ್ತದೆ"
"ಭಗವದ್ಗೀತೆಯನ್ನು ಕ್ರಮವಾಗಿ ಅಭ್ಯಾಸ ಮಾಡುವವರನ್ನು, ಪಾರಾಯಣ ಮಾಡುವವರನ್ನು ನೀವು ನೋಡಿದ್ದೀರಲ್ಲ"
"ಅನೇಕರನ್ನು ನೋಡಿದ್ದೇನೆ"
"ಅವರು ಹೇಗೆ ಪ್ರಾರಂಭಿಸುತ್ತಾರೆ?"
"ಅಂದರೆ ಅರ್ಥವಾಗಲಿಲ್ಲ"
"ನೇರವಾಗಿ ಮೊದಲನೇ ಅಧ್ಯಾಯದಿಂದ ಪ್ರಾರಂಭಿಸುತ್ತಾರೋ, ಅಥವಾ ಅದಕ್ಕೆ ಮೊದಲು ಏನಾದರೂ ಮಾಡುತ್ತಾರೋ?"
"ಮೊದಲು  ಬೇರೆ ಕೆಲವು ಶ್ಲೋಕಗಳನ್ನು ಹೇಳುತ್ತಾರೆ"
"ಅವುಗಳಿಗೆ "ಧ್ಯಾನ ಶ್ಲೋಕಗಳು" ಎನ್ನುತ್ತಾರೆ"
"ಹಾಗಂದರೆ ಏನು?"
"ಕೃತಿಯನ್ನು ಪ್ರಾರಂಭ ಮಾಡುವ ಮೊದಲು ಅದರ ಹುಟ್ಟಿಗೆ ಕಾರಣರಾದವರನ್ನು ನೆನೆಯುವ ಶ್ಲೋಕಗಳನ್ನು ಹೇಳುತ್ತಾರೆ"
"ಹೀಗೆ ಮಾಡುವುದು ಏಕೆ?"
"ಲೌಕಿಕದಲ್ಲಿ ಯಾವುದಾದರೂ ಪುಸ್ತಕ ಓದುವ ಮುಂಚೆ ಅದರ ಬಗ್ಗೆ ಏನಾದರೂ ತಿಳಿದುಕೊಳ್ಳಲು ಪ್ರಯತ್ನ ಪಡುತ್ತೀರೋ? ಅದನ್ನು ಬರೆದವರು ಯಾರು, ಅದರ ಕಥಾವಸ್ತು, ಏನು? ರಚನೆ ಎಲ್ಲಿ ಮತ್ತು ಏಕೆ ಆಯಿತು, ಈ ರೀತಿ"
"ನಾವು ಶಾಲೆಗಳಲ್ಲಿ ಓದುವಾಗ ಕವಿ-ಕಾವ್ಯ ವಿಚಾರ ಎಂದು ಸ್ವಲ್ಪ ಹಿನ್ನೆಲೆ ಓದುತ್ತಿದ್ದೆವು"
"ಯಾವುದಾದರೂ ಅಮೂಲ್ಯವಾದ ಗ್ರಂಥ ಓದುವ ಮೊದಲು ಅದರ ಹಿನ್ನೆಲೆ ಇದೇ ರೀತಿ ತಿಳಿಯುವುದು, ತಿಳಿದಮೇಲೆ ಮತ್ತೆ ಓದುವಾಗ ಅದನ್ನು ನೆನೆಸಿಕೊಳ್ಳುವುದು ನಡೆದುಬಂದಿರುವ ಪದ್ಧತಿ"
"ಭಗವದ್ಗೀತೆ ಓದುವಾಗ ಅಥವಾ ಪಾರಾಯಣ ಮಾಡುವಾಗ ಯಾವ ಶ್ಲೋಕಗಳನ್ನು ಹೇಳುತ್ತಾರೆ?"
"ಅವರವರ ಮನೆತನದ ರೀತಿಯಂತೆ ಅಥವಾ ಗುರುಗಳು ಹೇಳಿಕೊಟ್ಟ ಪದ್ಧತಿಯ ಪ್ರಕಾರ ಹೇಳುತ್ತಾರೆ"
"ಇದರಲ್ಲಿ ಏನು ವಿವರಗಳು ಇರುತ್ತವೆ?"
"ಗ್ರಂಥಕರ್ತೃವಾದ ಭಗವಾನ್ ವೇದವ್ಯಾಸರು ಮತ್ತು ಗೀತೆಯನ್ನು ಉಪದೇಶಿಸಿದ ಶ್ರೀಕೃಷ್ಣ, ಇವರುಗಳ ನೆನಪು ಮಾಡಿಕೊಂಡು ಅವರಿಗೆ ಕೃತಜ್ಞತೆಗಳನ್ನು ಹೇಳುವ ಶ್ಲೋಕಗಳು. ಇದರ ಜೊತೆಗೆ ಭಗವದ್ಗೀತೆಯ ಶ್ರೇಷ್ಠತೆಯನ್ನು ಹೇಳುವ ಶ್ಲೋಕಗವಿರುತ್ತದೆ"
"ಭಗವದ್ಗೀತೆಯ ಉತ್ತಮತೆಯನ್ನು ಹೇಳುವ ಶ್ಲೋಕವೇನು?'
"ಅದು ಹೀಗಿದೆ. ಕೇಳಿ"

ಸರ್ವೋಪನಿಷದೋ ಗಾವಃ ದೋಗ್ಧಾ ಗೋಪಾಲನಂದನಃ 
ಪಾರ್ಥೋ ವತ್ಸ: ಸುಧೀರ್ಭೋಕ್ತಾ ದುಗ್ಧಮ್ ಗೀತಾಮೃತಮ್ ಮಹತ್

"ಎಲ್ಲ ಉಪನಿಷತ್ತುಗಳೇ ಹಸುಗಳು. ಶ್ರೀಕೃಷ್ಣನು ಈ ಹಸುಗಳ ಹಾಲನ್ನು ಕರೆದು ಕೊಡುವ ಗೋಪಾಲಕನು. ಪಾರ್ಥನೆಂಬ ಹೆಸರಿನ ಅರ್ಜುನನೇ ಕರುವು. ಭಕ್ತಮಹಾಜನರೇ ಆ ಅಮೃತಸಮವಾದ ಹಾಲನ್ನು ಸೇವಿಸುವವರು"

"ಎಲ್ಲ ಉಪನಿಷತ್ತುಗಳೇ ಹಸುಗಳು ಅಂದಮೇಲೆ ಬೇರೆ ಸಂಬಂಧಿಸಿದ ವೇದಾದಿ ವಾಂಗ್ಮಯದ ಪಾತ್ರವೇನು?"
"ಉಪನಿಷತ್ತುಗಳೇ ಹಸುಗಳು ಎಂದರೆ ಬರೀ ಉಪನಿಷತ್ತುಗಳೆಂದು ಅರ್ಥವಲ್ಲ. ಉಪನಿಷತ್ತುಗಳು ವಿಶಾಲ ವಾಂಗ್ಮಯದ ಸಿಹಿ ಕೆನೆ ಎಂದು ನಂಬಿಕೆ. ಆದ್ದರಿಂದ ಭಗವದ್ಗೀತೆ ಈ ಎಲ್ಲ ವಾಂಗ್ಮಯದ ಸಾರಭೂತ ಕೃತಿಯೂ ಹೌದು"
"ಅರ್ಜುನನು ಕರು ಎನ್ನುವುದೇಕೆ?"
"ನೀವು ಹಸುವಿನ ಹಾಲು ಕರೆಯುವುದು ನೋಡಿದ್ದೀರಾ?"
"ನೋಡಿದ್ದೇನೆ"
"ಹಾಲು ಕರೆಯುವ ಮೊದಲು ಕರುವನ್ನು ಹಸುವಿನ ಬಳಿ ಬಿಡುತ್ತಾರೆ. ಕರು ಹತ್ತಿರ ಬಂದಾಗ ಹಸು ಸುಲಭವಾಗಿ ಕೆಚ್ಚಲಿನಿಂದ ಹಾಲನ್ನು ಹರಿಸುತ್ತದೆ. ಕರು ಹಾಲು ಕುಡಿದನಂತರ ಮಿಕ್ಕ ಹಾಲನ್ನು ಕರೆದುಕೊಳ್ಳುತ್ತಾರೆ. (ದುರಾಸೆ ಮನುಷ್ಯರು ಕರು ಪೂರ್ತಿ ಕುಡಿಯುವವರೆಗೂ ಬಿಡುವುದಿಲ್ಲ). ಭಗವದ್ಗೀತೆ ಎಂಬ ಹಾಲನ್ನು ಮೊದಲು ಕುಡಿದವನು ಪಾರ್ಥ. ಆದ್ದರಿಂದ ಅವನು ಕರು. ಎಲ್ಲ ಸಜ್ಜನರಿಗೆ ಅವನ ನಿಮಿತ್ತದಿಂದ, ಮತ್ತು ಅವನ ನಂತರ ಸಿಕ್ಕಿತು. ಆದ್ದರಿಂದ ಅವನೇ ವತ್ಸ"
"ಅರ್ಥವಾಯಿತು"
"ಏನು ಅರ್ಥವಾಯಿತು?"
"ನೀವು ಹೇಳಿದ ಎಲ್ಲ ಅಂಶಗಳು ಮತ್ತು  ಎಲ್ಲಕ್ಕಿಂತ ಹೆಚ್ಚಾಗಿ ಪುರಾಣದಲ್ಲಿ ಹೇಳಿದ "ಏಕಾದಶಿಯ ದಿನ ಹಾಲು ಸೇವಿಸಿರಿ ಎಂದರೆ ಭಗವದ್ಗೀತೆಯೆಂಬ ಹಾಲನ್ನು ಕುಡಿಯಿರಿ. ಅದರ ಪಾರಾಯಣ ಮಾಡುವ ಮೂಲಕ", ಎಂದು"
*****

"ಶ್ರೀಮದ್ ಭಾಗವತ ಹಣ್ಣು ಎಂದು ಹೇಗಾಯಿತು?"
"ಶ್ರೀಮದ್ ಭಾಗವತದ ಮೊದಲ ಸ್ಕಂದ, ಮೊದಲ ಅಧ್ಯಾಯದಲ್ಲಿ ಬರುವ ಶ್ಲೋಕ ಹೀಗಿದೆ. ಕೇಳಿ"

ನಿಗಮಕಲ್ಪತರೋರ್ಗಲಿತಂ  ಫಲಂ 
ಶುಕಮುಖಾತ್ ಅಮೃತದ್ರವ ಸಂಯುತಂ 
ಪಿಬತ ಭಾಗವತರಸಮಾಲಯಂ
ಮುಹುರಹೋ ರಸಿಕ ಭುವಿಭಾವುಕ : 

"ದೊಡ್ಡದನ್ನು ತಿಳಿಯಬೇಕೆಂಬ ಮತ್ತು ತಿಳಿದ ಈ ಜಗತ್ತಿನ ಎಲ್ಲ ಮಹಾಜನಗಳೇ! ಶುಕಮಹಾಮುನಿಗಳಿಂದ ಹೇಳಲ್ಪಟ್ಟ ವೈದಿಕ ವಾಂಗ್ಮಯವೆಂಬ ಕಲ್ಪವೃಕ್ಷದ ಅಮೃತದಂತಹ ರಸಭರಿತವಾದ ಶ್ರೀಮದ್ ಭಾಗವತವೆಂಬ ಹಣ್ಣನ್ನು ತಿನ್ನಿರಿ.  ಶ್ರೀಮದ್ ಭಾಗವತವೆಂಬ ಹಣ್ಣಿನ ದಿವ್ಯ ರಸವನ್ನು ಕುಡಿಯಿರಿ. (ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ)" 

"ಭಗವದ್ಗೀತೆ ಹಾಲು ಎಂದಂತೆ ಶ್ರೀಮದ್ ಭಾಗವತ ಹಣ್ಣು ಎಂದು ಅರ್ಥವಾಯಿತು. ಈ ಹಣ್ಣಿನ ರಸದ ವಿಶೇಷವೇನು?"
"ಬೇರೆ ಹಣ್ಣುಗಳ ರಸಕ್ಕೆ ಕಾಲ ಮಿತಿ ಇದೆ. ಭಾಗವತವೆಂಬ ಹಣ್ಣಿನ ರಸಕ್ಕೆ ಕಾಲ ಮಿತಿ ಇಲ್ಲ. ಅಷ್ಟು ಮಾತ್ರವಲ್ಲ. ಇದು ಬರಿಯ ಸಿಹಿಯಾದ ಹಣ್ಣಿನ ರಸವಲ್ಲ. ಅಮೃತದಂತಹ ರಸ. ಅಮೃತ ಸೇವಿಸಿದರೆ ಸಾವಿಲ್ಲ ಎಂದಂತೆ. ದೇವತೆಗಳು ಅಮೃತ ಸವಿದು ಸಾವಿಲ್ಲದವರಾಗುತ್ತಾರೆ. ಆದರೆ ಮಹಾಪ್ರಳಯದಲ್ಲಿ ಅವರ ಕಾಲವೂ ಮುಗಿಯುತ್ತದೆ. ಶ್ರೀಮದ್ ಭಾಗವತದ ಹಣ್ಣಿನ ರಸ ಅಮೃತಕ್ಕಿಂತಲೂ ಹೆಚ್ಚು. ಇದರ ರಸದಿಂದ ಜೀವನ-ಮರಣ ಅನ್ನುವ ಚಕ್ರದಿಂದ ಬಿಡುಗಡೆಯಾಗಿ ಮೋಕ್ಷವೆಂಬ ಅತಿ ದೊಡ್ಡ, ಎಂದಿಗೂ ಹೋಗದ, ಹಾನಿಯಾಗದ ಪದವಿ  ಸಿಗುತ್ತದೆ"
"ಈಗ ಅರ್ಥವಾಯಿತು"
"ಏನು ಅರ್ಥವಾಯಿತು?"
"ಶ್ರೀಮದ್ ಭಾಗವತವನ್ನು ಹಣ್ಣು ಎಂದುದು ಏಕೆ ಎಂದು. "ಏಕಾದಶಿಯಂದು ಹಾಲು-ಹಣ್ಣು ಸೇವಿಸಿ"  ಎಂದು ಹೇಳಿದುದರ ಅರ್ಥ"
"ನಾನು ನಿಮಗೆ ಸ್ವಲ್ಪವೇ ವಿವರ ಕೊಟ್ಟಿದ್ದೇನೆ. ದೊಡ್ಡವರನ್ನು ಕೇಳಿದರೆ ಇನ್ನೂ ಅನೇಕ ಅರ್ಥಗಳನ್ನು ತಿಳಿಸಿಕೊಡುತ್ತಾರೆ" 
"ಆಗಲಿ. ಹೀಗೆಯೇ ಪ್ರಯತ್ನ ಪಡುತ್ತೇನೆ"

ಅಷ್ಟರಲ್ಲಿ ಪುರಾಣೀಕರು ಬಂದು ಪುರಾಣ ಪ್ರಾರಂಭವಾಯಿತು. 

*****

ಮುಕುಂದರಾಯರು ಮುಂದಿನ ಏಕಾದಶಿಯಿಂದ ಈ ಹಾಲು-ಹಣ್ಣುಗಳನ್ನು ಸೇವಿಸಲು ಪ್ರಾರಂಭ ಮಾಡಿದರು.