Showing posts with label Dasharatha. Show all posts
Showing posts with label Dasharatha. Show all posts

Friday, August 29, 2025

ಸಾವು ಎದುರಲ್ಲಿ ಬಂದು ನಿಂದಾಗ


ಅರ್ಜುನನ ಮೊಮ್ಮಗ, ಅಭಿಮನ್ಯುವಿನ ಮಗ, ಪರೀಕ್ಷಿತ ಮಹಾರಾಜನಿಗೆ ಋಷಿಕುಮಾರ ಶೃಂಗಿಯ ಶಾಪದ ವಿಚಾರ ಗೊತ್ತಾಯಿತು. ಈಗ ಬದುಕಿನಲ್ಲಿ ಇನ್ನುಳಿದಿದ್ದು ಕೇವಲ ಏಳು ದಿನಗಳು. ಜೀವನದ ಕೊನೆಗಾಲ ಬಂದಿದೆ. ಸಾವು ಎದುರಲ್ಲಿ ಬಂದು ನಿಂತಿದೆ. ತಪ್ಪಿಸಿಕೊಳ್ಳುವಹಾಗಿಲ್ಲ. ಯೋಚನೆ ಮಾಡುತ್ತಿದ್ದಷ್ಟೂ ಸಮಯ ಸೋರಿಹೋಗುತ್ತಿದೆ. ಇರುವ ಸಮಯ ಸದುಪಯೋಗ ಮಾಡಿಕೊಳ್ಳಬೇಕು. ಅವನ ಪುಣ್ಯಕ್ಕೆ ವೇದವ್ಯಾಸ ಪುತ್ರರಾದ ಶುಕಾಚಾರ್ಯ ಅದೇ ಸಮಯಕ್ಕೆ ಬಂದರು. ಪರೀಕ್ಷಿತನಿಗೆ ಜೀವನದಲ್ಲಿ ಉಳಿದ ಏಳು ದಿನಗಳಲ್ಲಿ ಹೇಗೆ ಮತ್ತೆ ಮತ್ತೆ ಕಾಡುವ ಜೇವನ-ಮರಣ ಚಕ್ರದಿಂದ ಮುಕ್ತಿ ಪಡೆಯುವುದು ಎಂಬ ಚಿಂತೆ. "ಇಷ್ಟು ಕಡಿಮೆ ಕಾಲದಲ್ಲಿ ಹೇಗೆ ಇಂತಹ ಸಾಧನೆ ಸಾಧ್ಯ?" ಎಂದು ಅವರನ್ನು ಕೇಳಿದ. 

"ನೀನು ಭಾಗ್ಯವಂತ. ನಿನಗೆ ಏಳು ದಿನಗಳ ಕಾಲ ಬಾಕಿ ಇದೆ. ಅದಕ್ಕಿಂತ ಹೆಚ್ಚಾಗಿ, ಇಷ್ಟು ಕಾಲ ಇದೆ ಎಂದೂ ಗೊತ್ತಿದೆ!"
"ತಮ್ಮ ಅಭಿಪ್ರಾಯ ದಯಮಾಡಿ ವಿವರಿಸಬೇಕು"
"ಅನೇಕರಿಗೆ ಎಷ್ಟು ಕಾಲ ಜೀವಿತ ಉಳಿದಿದೆ ಎಂದು ಗೊತ್ತಿರುವುದಿಲ್ಲ. ನಿನಗೆ ಅದು ಖಚಿತವಾಗಿ ಗೊತ್ತಾಯಿತು"
"ಇದು ಒಳ್ಳೆಯದೇ?"
"ಹೇಗೆ ಯೋಚಿಸಿದರೆ ಹಾಗೆ. 'ಅಯ್ಯೋ! ಏಳೇ ದಿನವೇ ಅನ್ನಬಹುದು.' ಅಥವಾ 'ಸದ್ಯ! ಏಳು ದಿನ ಇವೆಯಲ್ಲ' ಅನ್ನಬಹುದು"
"ಹಾಗಿದ್ದರೆ ಇಷ್ಟು ಕಡಿಮೆ ಅವಧಿಯಲ್ಲಿ ಮುಕ್ತಿ ಸಾಧಿಸಬಹುದೇ?"
"ಕೇವಲ ಒಂದು ಮುಹೂರ್ತ ಕಾಲದಲ್ಲಿ ಸಾಧಿಸಿದವರಿದ್ದಾರೆ"
"ಹೌದೇ? ಆ ಬಗ್ಗೆ ಕೃಪೆಮಾಡಿ ತಿಳಿಸಿಕೊಡಿ" 

ಶುಕಾಚಾರ್ಯರು ಪರೀಕ್ಷಿತ ಮಹರ್ರಾಜನಿಗೆ ಈ ವಿಷಯವನ್ನು ವಿವರಿಸಿದರು. ಹೇಳಿದ್ದು ಪರೀಕ್ಷಿತ ಮಹಾರಾಜನಿಗೆ. ಆದರೆ ಅದು ಎಲ್ಲರಿಗೂ ಸಂಬಂಧಿಸಿದ್ದು. ಅವನ ಮೂಲಕ ಸರ್ವರಿಗೂ ತಿಳುವಳಿಕೆ ಕೊಟ್ಟದ್ದು. 

*****

ದೇವತೆಗಳಿಗೂ ಅಸುರರಿಗೂ ತೀರದ ಹಗೆ. ಆಗಾಗ ಜಗಳಗಳು. ದೇವತೆಗಳಿಗೆ ಅಮೃತಪಾನದ ಬಲದಿಂದ ಸಾವಿಲ್ಲದಿದ್ದರೂ ಸೋಲಿಲ್ಲದಿಲ್ಲ. ಅಸುರ ಸಂತಾನದಲ್ಲಿ ಕಾಲಕಾಲಕ್ಕೆ ಪ್ರಬಲರು ಹುಟ್ಟುವರು. ಅವರು ಬಹಳ ಶ್ರಮಪಟ್ಟು ಬ್ರಹ್ಮನನ್ನೋ, ರುದ್ರನನ್ನೋ ಮೆಚ್ಚಿಸುವರು. ಆ ಮೂಲಕ ವರಗಳನ್ನು ಸಂಪಾದಿಸುವರು. ಕೆಲ ಕಾಲ ಅವುಗಳಿಂದ ಬಲಿಷ್ಠರಾಗುವರು. ಆ ಮದದಿಂದ ದೇವತೆಗಳ ಮೇಲೆ ದಂಡೆತ್ತಿ ಬರುವರು. ಯುದ್ಧಗಳಾಗುವುವು. ಹೀಗೆ ನಡೆಯುತ್ತಾ ಇರುವುದು. ಕೆಲವು ವೇಳೆ ಹೀಗೆ ಯುದ್ಧವಾಗುವಾಗ ದೇವತೆಗಳು ಭೂಲೋಕದಲ್ಲಿರುವ ಪ್ರಬಲರಾದ ರಾಜರ ಸಹಾಯ ಕೇಳುವರು. ಆ ರಾಜರು ಕರ್ತವ್ಯವೆಂದೂ, ಧರ್ಮದ ಪರ ಎಂದೂ ದೇವತೆಗಳಿಗೆ ಯುದ್ಧಗಳಲ್ಲಿ ಸಹಾಯ ಮಾಡುವರು. ಹೀಗೆ ಯುದ್ಧಗಳಲ್ಲಿ ಸಹಾಯ ಮಾಡಿದ ರಾಜರುಗಳಿಗೆ ದೇವತೆಗಳು ವರಗಳನ್ನೋ, ಸಂಪತ್ತನ್ನೊ, ಭೋಗ-ಭಾಗ್ಯಗಳನ್ನೋ ಸಂತೋಷದಿಂದ ಕೊಡುವರು. 

ಅನೇಕ ವೇಳೆ ಇಂತಹ ಸಹಾಯಗಳಿಂದ ದೇವತೆಗಳು ಅಸುರರನ್ನು ಕದನದಲ್ಲಿ ಸೋಲಿಸಿ ಓಡಿಸಿದುದು ನಡೆದಿದೆ. ಶ್ರೀರಾಮಚಂದ್ರನ ತಂದೆಯಾದ ದಶರಥನು ಸಹ ಹೀಗೆ ದೇವಾಸುರ ಯುದ್ಧದಲ್ಲಿ ದೇವತೆಗಳ ಸಹಾಯ ಮಾಡಲು ಹೋಗುತ್ತಿದ್ದನು. ಒಮ್ಮೆ ಹೀಗೆ ಹೋದಾಗ ತನ್ನ ಜೊತೆ ಚಿಕ್ಕ ರಾಣಿ ಕೈಕೆಯನ್ನು ಕರೆದೊಯ್ದ. ಯುದ್ಧದ ಮಧ್ಯೆ ರಥದ ಕಡಾಣಿ ಬಿದ್ದುಹೋದಾಗ ಕೈಕೆ ತನ್ನ ಬೆರಳನ್ನೇ ಕಡಾಣಿಯಾಗಿ ಮಾಡಿ, ನೋವು ಲೆಕ್ಕಿಸದೆ ರಥವನ್ನೂ, ದಶರಥನನ್ನೂ ಕಾಪಾಡಿದಳು. ಆಗ ಅವಳು  ಮಾಡಿದ ಉಪಕಾರಕ್ಕಾಗಿ ದಶರಥನು ತಾನೇ ಅವಳಿಗೆ ವರಗಳನ್ನು ಕೊಟ್ಟುದದರಿಂದ ಮುಂದೆ ರಾಮಾಯಣವೇ ನಡೆಯಿತು ಎನ್ನುವುದನ್ನು ನೆನಪಿಸಿಕೊಳ್ಳಬಹುದು. 

ಒಂದು ಸಮಯದಲ್ಲಿ ಭೂಲೋಕದಲ್ಲಿ ಖಟ್ವಾಂಗ ಎನ್ನುವ ರಾಜರ್ಷಿ ಆಳುತ್ತಿದ್ದ ಕಾಲ. ಬಹಳ ಪರಾಕ್ರಮಿಯೂ, ಧರ್ಮಿಷ್ಟನೂ ಆದ ಚಕ್ರವರ್ತಿ. ಅಸುರರೊಡನೆ ಯುದ್ಧದ ಪ್ರಸಂಗ ದೇವಗಳಿಗೆ ಬಂತು. ದೇವತೆಗಳು ಖಟ್ವಾಂಗನ ಸಹಾಯ ಕೇಳಿದರು. ಖಟ್ವಾಂಗ ಚಕ್ರವರ್ತಿಯು ಒಪ್ಪಿ ದೇವತೆಗಳ ಕಡೆಯಿಂದ ಹೋರಾಡಿದ. ದೇವತೆಗಳಿಗೆ ದೊಡ್ಡ ವಿಜಯವಾಯಿತು. ಖಟ್ವಾಂಗನ ಸಹಾಯಕ್ಕೆ ಅವರು ಕೃತಜ್ಞರಾದರು. 

"ರಾಜರ್ಷಿ ಖಟ್ವಾಂಗ, ನಿನ್ನ ಸಹಾಯದಿಂದ ನಮಗೆ ವಿಜಯವಾಯಿತು. ನಾವು ಬಹಳ ಸಂತುಷ್ಟರಾಗಿದ್ದೇವೆ. ನಿನಗೆ ಏನು ವರ ಬೇಕು? ಕೇಳು. ಧನ-ಕನಕಗಳೇ? ದೇವಲೋಕದ ಅಪೂರ್ವ ಭೋಗ-ಭಾಗ್ಯಗಳೇ? ಅಥವಾ ಮತ್ತೆ ಇನ್ನೇನಾದರೂ ಬೇಕೇ?"
"ನಿಮ್ಮ ಕೃಪೆಯಿಂದ ನನಗೆ ಎಲ್ಲವೂ ಪ್ರಾಪ್ತವಾಗಿವೆ. ನನಗೆ ಇವು ಯಾವುವೂ ಬೇಡ"
"ಹಾಗಿದ್ದರೆ ಇನ್ನೇನು ಕೊಡೋಣ?"
"ಕೊಡುವಹಾಗಿದ್ದಾರೆ ನನ್ನ ಶೇಷ ಆಯು ಪ್ರಮಾಣ ಎಷ್ಟು ಎನ್ನುವುದನ್ನು ತಿಳಿಸಿ"
"ಅದನ್ನು ತಿಳಿಯಬೇಕೇ? ಬೇರೇನೂ ಬೇಡವೇ?"
"ಅದನ್ನು ಹೇಳಿದರೆ ಸಾಕು. ಬೇರೇನೂ ಬೇಡ"
"ಈಗ ನಿನ್ನ ಅಆಯುಸ್ಸಿನಲ್ಲಿ ಒಂದು ಮುಹೂರ್ತ ಕಾಲ ಮಾತ್ರ ಉಳಿದಿದೆ"

ಖಟ್ವಾಂಗನಿಗೆ ಬಹಳ ಆಶ್ಚರ್ಯವಾಯಿತು. ಒಂದು ಮುಹೂರ್ತ ಅಂದರೆ ಎರಡು ಘಳಿಗೆಗಳ ಕಾಲ. ನಲವತ್ತೆಂಟು ನಿಮಿಷಗಳು ಮಾತ್ರ. ಇಂತಹ ಸಂದರ್ಭದಲ್ಲೂ ದೇವತೆಗಳು ಧನ-ಕನಕ, ಭೋಗ-ಭಾಗ್ಯಗಳ ಆಸೆ ತೋರಿಸುತ್ತಿದ್ದಾರೆ! 

ಖಟ್ವಾಂಗ ತಡಮಾಡದೆ ಹಿಂದಿರುಗಿದ. ಅರ್ಧ ಗಳಿಗೆಯಲ್ಲಿ ತನ್ನ ರಾಜ್ಯ-ಕೋಶಗಳಿಗೆ ಮುಂದಿನ ವ್ಯವಸ್ಥೆಗಳನ್ನು ಮಾಡಿ, ಧ್ಯಾನಮಗ್ನನಾಗಿ ದೇಹ ತ್ಯಜಿಸಿ ಮೋಕ್ಷ ಪಡೆದ!

*****

ಶ್ರೀಮದ್ಭಾಗವತದ (9.9.42) ಶ್ಲೋಕ ಖಟ್ವಾಂಗನ ವೃತ್ತಾಂತವನ್ನು ಹೀಗೆ ಹೇಳುತ್ತದೆ:

ಯೋ ದೇವೈರರ್ಥಿತೋ ಅವಧೀ: ಯುಧಿದುರ್ಜಯಃ 
ಮುಹೂರ್ತಮ್ ಆಯುರ್ಜ್ಞಾತ್ವೈತ್ಯ  ಸ್ವಪುರಂ ಸಂದಧೇ: ಪುನಃ  

ಖಟ್ವಾಂಗ ರಾಜರ್ಷಿಯು ಆಗ ಮಾಡಿದ ಒಂದು ಘಳಿಗೆಯ ಧ್ಯಾನದಿಂದಲೇ ಮೋಕ್ಷ ಸಿಕ್ಕಿತು ಎಂದು ತಪ್ಪು ತಿಳಿಯಬಾರದು.  ಅಡಿಗೆ ಮಾಡುವವರು ಅನೇಕ ಪದಾರ್ಥಗಳನ್ನು ಮಾಡಿ ಮಾಡಿ ಇಟ್ಟಿರುತ್ತಾರೆ. ಕಡೆಯಲ್ಲಿ ಸ್ವಲ್ಪ ಸಮಯದಲ್ಲಿ ಒಗ್ಗರಣೆ ತಯಾರು ಮಾಡಿ ಅವೆಲ್ಲದಕ್ಕೂ ಬೆರೆಸಿ ಅಡಿಗೆ ಮುಗಿಸುತ್ತಾರೆ. ಒಗ್ಗರಣೆಯಿಂದ ಅಡಿಗೆ ಆದದ್ದಲ್ಲ. ಒಗ್ಗರಣೆಯಿಂದ ಅದು ಮುಗಿಯಿತು. ಅದು ಕಡೆಯ ಹಂತ ಮಾತ್ರ. ಇದೂ ಹಾಗೆಯೇ. ಅನೇಕ ಕಾಲಗಳಲ್ಲಿ ಮಾಡಿದ್ದ ಸಾಧನೆಗೆ ಕೊನೆಯ ಕಳಸ ಈ ಒಂದು ಘಳಿಗೆಯಲ್ಲಿ ಮಾಡಿದ ಅಂತಿಮ ಧ್ಯಾನ. ಪರೀಕ್ಷಿತನಿಗೂ ಹೀಗೆಯೇ ಆಯಿತು. ಏಳು ದಿನಗಳ ಅಖಂಡ ಸಾಧನೆ ಶುಕ್ರಾಚಾರ್ಯರ ಮಾರ್ಗದರ್ಶನದಿಂದ ನಡೆಸಿ ಪರಮಪದವನ್ನು ಪಡೆದ.

ಅಜಾಮಿಳನ ಪ್ರಸಂಗದಲೂ ಹೀಗೆ ತಪ್ಪು ಕಲ್ಪನೆ ಇದೆ. ಮಾಡಬಾರದ್ದನ್ನೆಲ್ಲ ಮಾಡಿ, ಕಡೆಯ ಸಮಯದಲ್ಲಿ ಮಗನ ಮೋಹದಿಂದ ಅವನ ಹೆಸರಾದ "ನಾರಾಯಣ" ಎಂದು ಕೂಗಿ ಮೋಕ್ಷ ಪಡೆದ ಎಂದು ಕಥೆ. ನಾರಾಯಣ ಎಂದು ಕರೆದದ್ದರಿಂದ ಅವನಿಗೆ ಹಿಂದಿನ ಸಾಧನೆಗಳ ಸ್ಮರಣೆ ಬಂತು. ಮತ್ತೆ ಕೊನೆಯ ಹಂತದ ಸಾಧನೆ ಮುಗಿಸಿ ಪರಮಪದ ಪಡೆದ. ಇದರ ವಿವರಗಳೂ ಶ್ರೀಮದ್ ಭಾಗವತದಲ್ಲಿ ಇದೆ. (ಹೆಚ್ಚಿನ ವಿವರಗಳಿಗೆ "Ajamila's Cheque" ಎನ್ನುವ ಅಂಕಣವನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). 

*****

"ಜಾತಸ್ಯ ಹಿ ಧ್ರುವಂ ಮೃತ್ಯು:" ಎನ್ನುವುದು ಎಲ್ಲರೂ ತಿಳಿದಿರುವ, ಎಲ್ಲರೊ ಮತ್ತೆ ಮತ್ತೆ ಹೇಳುವ ಮಾತು. ಹುಟ್ಟಿನೊಡನೆ ಬರುವ ಒಂದೇ ಪರಮ ಸತ್ಯವೆಂದರೆ ಸಾವು. ಮುಂದು ಹಾಕಲಾಗದ ಪ್ರಯಾಣದ ಕೊನೆಯ ನಿಲ್ದಾಣ ಅದು. ಇದು ಎಲ್ಲರಿಗೂ ಗೊತ್ತು. ಸಾವು ಎಂದೋ ಒಂದು ದಿನ ನಮ್ಮ ಮುಂದೆ ಬಂದು ನಿಲ್ಲುವ ಅಪರಿಚಿತ ಅಲ್ಲ. ನಾವು ಹುಟ್ಟಿದಂದೇ ಹುಟ್ಟಿ, ಅಂದಿನಿಂದ ನಮ್ಮ ಎದುರು ನಿಂತಿರುವ ಸತ್ಯ ಅದು. ಹುಟ್ಟಿದಾಗ ದೂರದಲ್ಲಿರುತ್ತದೆ. ಅದು ಅಲ್ಲೇ ನಿಂತಿರುತ್ತದೆ. ನಾವು ಮಾತ್ರ ಪ್ರತಿ ಕ್ಷಣ ಅದರ ಹತ್ತಿರ ಹತ್ತಿರ ಹೋಗುತ್ತಿರುತ್ತೇವೆ. ದಿನ, ಕಾಲ ಗೊತ್ತಿಲ್ಲದ ರಿಸರ್ವೇಶನ್ ಅದಕ್ಕೆ ಉಂಟು. 

ನಮ್ಮ ಕಣ್ಣುಗಳು ನಮಗೆ ಏನು ಇಷ್ಟವೂ ಅದನ್ನೇ ತೋರಿಸುತ್ತವೆ. ಇಷ್ಟವಿಲ್ಲದ್ದನ್ನು ಮುಚ್ಚಿಡುತ್ತವೆ. ಆದ್ದರಿಂದ ಸಾವಿನ ವಿಷಯದಲ್ಲಿ ನಮಗೆ ಕಣ್ಣಿನ ಪೊರೆ ಬಂದಂತೆ. ಬಾಕಿಯ ಪ್ರಪಂಚವೆಲ್ಲಾ ನಿಚ್ಚಳವಾಗಿ ಕಂಡರೂ ಸಾವು ಕಾಣದು. ಮನುಷ್ಯನಿಗೆ ಅನೇಕ ಆಸೆಗಳು. "ಆಸೆಯೆಂಬ ತಳ ಒಡೆದ ದೋಣಿಯೊಳು ದೂರತೀರ ಯಾನ" ಎನ್ನುತ್ತದೆ ಅಡಿಗರ "ಅಳುವ ಕಡಲೊಳು ತೇಲಿಬರುತಲಿದೆ ನಗೆಯ ಹಾಯಿ ದೋಣಿ" ಎನ್ನುವ ಗೀತೆ. ಈ ಅನೇಕ ಆಸೆಗಳಲ್ಲಿ ಎರಡು ಬಲು ಮುಖ್ಯವಾದವು. "ಧನಾಶಾ, ಜೀವಿತಾಶಾ ಚ" ಎಂದು ಹೇಳುತ್ತಾರೆ. ಹಣದ ಆಸೆ ಮೊದಲನೆಯದು. ಅದಕ್ಕಿಂತ ಹೆಚ್ಚಿನದು ಇನ್ನಷ್ಟು ದಿನ ಬದುಕುವಾಸೆ. 

ಯಾರಾದರೂ ಇಷ್ಟ ಪಡಲಿ, ಇಲ್ಲದಿರಲಿ, ಭೌತಿಕ ದೇಹಕ್ಕೆ ಅದರದೇ ಆದ ಇತಿ-ಮಿತಿಗಳು ಉಂಟು. ದೇಹ ಕಾಲದಿಂದ ಕಾಲಕ್ಕೆ ಅಲ್ಲಲ್ಲಿ ಅಲಾರಾಂ ಕೊಡುತ್ತಲೇ ಇರುತ್ತದೆ. ಮಧ್ಯೆ ಮಧ್ಯೆ ಆಗುವ ಚಿಕಿತ್ಸೆಗಳು, ಶಸ್ತ್ರ ಚಿಕಿತ್ಸೆಗಳು ಹರಿದ ಬಟ್ಟೆಗೆ ತೇಪೆ ಹಾಕಿದಂತೆ. ಈಗಿನ ಜನಾಂಗಕ್ಕೆ ತೇಪೆ ಎನ್ನುವುದು ಗೊತ್ತಿಲ್ಲ. ಹಿಂದೆ ಡಾರ್ನಿಂಗ್ ಎಂದು ಮಾಡುತ್ತಿದ್ದರು. ಅದು ಒಂದು ರೀತಿ ತೇಪೆ ಹಾಕಿರುವುದು ಗೊತ್ತಾಗದಂತೆ ಮಾಡಿದ ತೇಪೆ. ತೇಪೆ ಹಾಕಿದ ಬಟ್ಟೆ ತೇಪೆ ಹಾಕಿರುವ ಪಕ್ಕದಲ್ಲೇ ಮತ್ತೆ ಪಿಂಜಿಕೊಳ್ಳುತ್ತದೆ. ನಮ್ಮ ದೇಹವೂ ಹಾಗೆಯೇ!

*****

ಕೆಲವು ಜನರಿಗೆ ಸಾವು ಧಿಡೀರ್ ಎಂದು ಬರಬಹುದು. "ಅದೊಂದು ಸುಖ ಮರಣ" ಎಂದು ಜನರಾಡಬಹುದು. ಮತ್ತೆ ಕೆಲವರಿಗೆ ವೈದ್ಯರು ಕೊಟ್ಟ ಗಡುವು ಎಚ್ಚರ ಕೊಡಬಹುದು. ಕೊನೆ ಬಂದಿರುವುದು ಎಂದು ದೇಹ  ಹೇಳುವುದು, ಯಾತನೆ ಹೆಚ್ಚುವುದು ಇವೆಲ್ಲವೂ ಅವರಿಗೆ ಆಗಬಹುದು. ಮತ್ತೆ ಕೆಲವರಿಗೆ ಅದು ಹತ್ತಿರದಲ್ಲಿಯೇ ಇದೆ ಎಂದು ಖಚಿತವಾಗಿ ಪ್ರತಿದಿನ ಅದನ್ನೇ ನೆನೆದು, ನೆನೆದು ಹಿಂಸೆ ಆಗಬಹುದು. 

ಅನತಿ ದೂರದಲ್ಲಿ ಅದು ನಿಂತಿದೆ ಎಂದು ಗೊತ್ತಾದವರು, ನಮ್ಮ ಸುತ್ತ-ಮುತ್ತಲಿನವರು ಅದನ್ನು ಹೇಗೆ ಎದುರಿಸಿದರು? ಕೂಗಾಡಿ-ಅರಚಾಡಿ ಹಿಂಸೆ ಪಟ್ಟು, ಸುತ್ತಲಿನವರಿಗೂ ಕಷ್ಟ ಕೊಟ್ಟವರು ಕಡಿಮೆಯಿಲ್ಲ. ಅದರಂತೆ, ಧೈರ್ಯವಾಗಿ ಅದನ್ನು ಎದುರಿಸಿದವರನ್ನೂ ನಾವು ನಮ್ಮ ಜೀವಿತ ಕಾಲದಲ್ಲೇ ಕಂಡಿದ್ದೇವೆ. ಅನೇಕ ವರ್ಷಗಳ ಕಾಲ ಕುಟುಂಬಗಳ ನಡುವೆ ನಡೆದುಬಂದಿದ್ದ ವೈರತ್ವ ಕೊನೆ ಮಾಡಿ ಶಾಂತಿ ತಂದವರಿದ್ದಾರೆ. ಚಿಕ್ಕ ವಯಸ್ಸಿನ ಹೆಂಡತಿಗೆ ಮರು ಮದುವೆ ವ್ಯವಸ್ಥೆ ಮಾಡಿ ನಂತರ ನಿರಾಳವಾಗಿ ಹೋದವರಿದ್ದಾರೆ. ತಮ್ಮ ಅಪಾರ ಆಸ್ತಿಯನ್ನು ಸದ್ವಿನಿಯೋಗ ಮಾಡಿ ಕಣ್ಮುಚ್ಚಿದವರಿದ್ದಾರೆ. ಅಂಗಾಂಗಗಳ, ಇಡೀ ದೇಹವನ್ನೇ ದಾನ ಮಾಡಿದವರೂ ಉಂಟು. 

"ಸಾಧನ ಶರೀರವಿದು, ನೀ ದಯದಿ ಕೊಟ್ಟದ್ದು; ಸಾಧಾರಣವಲ್ಲ, ಸಾಧುವಂದ್ಯ" ಎಂದು ದಾಸರು ಹೇಳುವಂತೆ ಆದಷ್ಟು ದಿನ ದೇಹವನ್ನು ಕಾಪಾಡಿಕೊಳ್ಳುವುದು ನ್ಯಾಯವೇ. ಆದರೆ ಕಾಲ ಬಂದಾಗ ಮರು ಮಾತಿಲ್ಲದೆ ಹೋಗಲು ತಯಾರಾಗಿರಬೇಕಾದ್ದು ಸಹ ಕರ್ತವ್ಯವೇ. 

*****

ಮರುಜನ್ಮ, ಪಾಪ-ಪುಣ್ಯಗಳು, ಇವೆಲ್ಲಾ ಇವೆಯೋ, ಇಲ್ಲವೋ ಗೊತ್ತಿಲ್ಲ. ಅಲ್ಲಿ ಹೋದವರು ಯಾರೂ ಮತ್ತೆ ಬಂದಿಲ್ಲ. ಆದ್ದರಿಂದ ಅದನ್ನು ಹೇಳುವವರಿಲ್ಲ. ನಮ್ಮ ವೈದಿಕ ವಾಂಗ್ಮಯದಲ್ಲಿ ನಂಬಿಕೆ ಇಟ್ಟವರಿಗೆ, ಶ್ರದ್ದೆ ಇರುವವರಿಗೆ ಈ ರೀತಿ ಸಾವು ಎದುರು ನಿಂತಾಗ ಧೈರ್ಯದಿನ ಎದುರಿಸುವ, ಸ್ವೀಕರಿಸುವ ಮನಸ್ಥಿತಿ ಬರುವುದಂತೂ ನಾವು ಕಂಡ ಸತ್ಯಗಳಲ್ಲಿ ಒಂದು ಎನ್ನಬಹುದು. 

Saturday, May 3, 2025

ಒನ್- ಬೈ- ಟು ಮತ್ತು ಟೂ- ಬೈ-ತ್ರೀ



ನಾವು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ವ್ಯವಹಾರ ಜ್ಞಾನ ಬರಲಿ ಎಂಬ ದೃಷ್ಟಿಯಿಂದ ನಮ್ಮ ಮನೆಯ ಹಿರಿಯರು ನಮ್ಮನ್ನು ದಿನಬಳಕೆಗೆ ಬೇಕಾದ ಪದಾರ್ಥಗಳನ್ನು ತರಲು ಅಂಗಡಿಗಳಿಗೆ ಕಳಿಸುತ್ತಿದ್ದರು. ಆಗ ಈಗಿನಂತೆ ಮನೆ ಬಾಗಿಲಿಗೆ ಸಾಮಾನು-ಸರಂಜಾಮು ತಂದು ಕೊಡುವ ವ್ಯವಸ್ಥೆ ಇರಲಿಲ್ಲ. ರೆಫ್ರಿಜಿರೇಟರ್ಗಳು ಇನ್ನೂ ಬಂದಿರಲಿಲ್ಲ. ಪ್ರತಿದಿನ ತರಕಾರಿ ಕೊಂಡು ತರಬೇಕಾಗಿತ್ತು. ಮನೆಯ ಹಿತ್ತಿಲಿನಲ್ಲಿ ಕೆಲವನ್ನು ಬೆಳೆದರೂ ಪೇಟೆಯಿಂದ ಮತ್ತೆ ಕೆಲವು ಕೊಂಡು ತರಬೇಕಾಗಿತ್ತು. ಯಾವ ತರಕಾರಿ ಎಳೆಯದಿರಬೇಕು, ಯಾವುದು ಬಲಿತಿರಬೇಕು, ಕೊಡುವ ಹಣದ ಲೆಕ್ಕ ಮತ್ತು ತರುವ ಪದಾರ್ಥಗಳ ಲೆಕ್ಕ ಮುಂತಾದುವನ್ನು ಹೀಗೆ ಕಲಿಯುತ್ತಿದ್ದೆವು.

ಪೇಟೆಯಲ್ಲಿ ಕೆಲವು ತರಕಾರಿ ಅಂಗಡಿಗಳಿದ್ದವು. ಸುತ್ತ-ಮುತ್ತಲಿನ ಹಳ್ಳಿಗಳ ಜನರು ತಾವು ಬೆಳೆದ ತರಕಾರಿ, ಸೊಪ್ಪು, ಹಣ್ಣುಗಳು ಮುಂತಾದುವನ್ನು ಬೆಳಿಗ್ಗೆ  ಬೇಗನೆ ತಲೆಯ ಮೇಲೆ ಹೊತ್ತುಕೊಂಡು ಹತ್ತಿರದ ಪಟ್ಟಣಗಳಿಗೆ ಬರುತ್ತಿದ್ದರು. ರಸ್ತೆಯ ಪಕ್ಕದಲ್ಲಿ ಗೋಣಿಚೀಲ ಅಥವಾ ಚಾಪೆ ಹಾಸಿಕೊಂಡು ತಂದ ಸರಕನ್ನು ಇಟ್ಟು ಮಾರುತ್ತಿದ್ದರು. ಎಂಟು-ಒಂಬತ್ತು ಗಂಟೆಗಲ್ಲಾ ಅವನ್ನು ಮಾರಿ ಮುಗಿಸಿ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಂಡು ಹಳ್ಳಿಗಳಿಗೆ ಹಿಂತಿರುಗುತ್ತಿದ್ದರು. ಅವರು ವರ್ತಕರಲ್ಲದುದರಿಂದ ಅವರ ಬಳಿ ತಕ್ಕಡಿಗಳು ಇರುತ್ತಿರಲಿಲ್ಲ. ತರಕಾರಿಗಳನ್ನು ಸಣ್ಣ ಸಣ್ಣ ಗುಡ್ಡೆಗಳಾಗಿ ಇಟ್ಟು ಮಾರುತ್ತಿದ್ದರು. ಈಗಿನಂತೆ ಆಗ ಅಂಗಡಿಗಳ ಒಳಗೆ ಹೋಗಿ ಬೇಕಾದ ತರಕಾರಿ ಆರಿಸುವಂತಿರಲಿಲ್ಲ. ಅಂಗಡಿಯವರು ಕೊಟ್ಟಿದ್ದನ್ನು ತರಬೇಕಿತ್ತು. ಅಂಗಡಿಯವರು ಕೆಲವರು ಮಕ್ಕಳು ಕೊಳ್ಳಲು ಹೋದಾಗ ತೂಕದಲ್ಲಿ ವ್ಯತ್ಯಾಸ ಸಹ ಮಾಡುತ್ತಿದ್ದರು. ಗುಡ್ಡೆಗಳಲ್ಲಿ ಹೆಚ್ಚು ತರಕಾರಿ ಇರುವ ಗುಡ್ಡೆ ಆರಿಸಿ ತರುವುದರಲ್ಲಿ ಒಂದು ಆನಂದವಿರುತ್ತಿತ್ತು. ಈ ಕಾರಣಗಳಿಗೆ ನಾವು ರಸ್ತೆ ಬದಿಯ ಗುಡ್ಡೆ ತರಕಾರಿಗಳನ್ನು ಕೊಳ್ಳಲು ಇಷ್ಟ ಪಡುತ್ತಿದ್ದೆವು. 

ಆಗ ರೆಸ್ಟೋರಂಟುಗಳು ಬಹಳ ಕಡಿಮೆ. ಹೈಸ್ಕೂಲು ಮತ್ತು ಕಾಲೇಜು ಓದು ತಲುಪುವವರೆಗೂ ಹೋಟೆಲು ತಿಂಡಿ ಅಪರೂಪವೇ. ಇಬ್ಬರು ಸ್ನೇಹಿತರು ಜೊತೆಯಾಗಿ ಹೋಗಿ ಜೇಬಿನಲ್ಲಿದ್ದ ಹಣವನ್ನು ಕೂಡಿಸಿ ಅವಾಗೊಮ್ಮೆ, ಇವಾಗೊಮ್ಮೆ ತಿಂಡಿ ತಿನ್ನುವುದು ಒಂದು ಸಾಧನೆಯಂತೆ. ಕಾಫಿ ಅಥವಾ ಟೀ ಕುಡಿಯುತ್ತಿರಲಿಲ್ಲ. ಕುಡಿದರೂ ಒಂದನ್ನು ಇಬ್ಬರು ಹಂಚಿಕೊಂಡು ಕುಡಿಯುವುದು. ಮಾಣಿಗೆ "ಒನ್-ಬೈ-ಟು" ಕಾಫಿ ಎಂದು ಹೇಳುವುದರಲ್ಲಿ ಒಂದು ಖುಷಿ. ಮೂವರು ಹೋದರೆ "ಟು-ಬೈ-ತ್ರೀ" ಆಗುತ್ತಿತ್ತು. ಮಾಣಿ ಸಾಮಾನ್ಯವಾಗಿ ಎರಡು ಕಾಫಿ ಮತ್ತು ಒಂದು ಖಾಲಿ ಲೋಟ ತರುತ್ತಿದ್ದ. ನಾವೇ ಹಂಚಿಕೊಳ್ಳುವುದು. ಅದು ಎಲ್ಲರಿಗೂ ಸಮವಾಗಿ ಬರುವಂತೆ ಹಂಚಿಕೊಳ್ಳುವುದು ಒಂದು ಉತ್ಸಾಹದ ಆಟ ಆಗಿರುತ್ತಿತ್ತು. 

ಬೆಂಗಳೂರಿನಲ್ಲಿ, ಅದಕ್ಕಿಂತ ಹೆಚ್ಚಾಗಿ ಮೈಸೂರಿನಲ್ಲಿ, ಹೊಟೇಲುಗಳಲ್ಲಿ ಸೆಟ್ ಮಸಾಲೆ ದೋಸೆ ಸಿಗುತ್ತಿತ್ತು. (ಸೆಟ್ ದೋಸೆ ಈಗಲೂ ಎಲ್ಲ ಕಡೆ ಸಿಗುತ್ತದೆ). ಸೆಟ್ ಮಾಸಾಲೆಯಲ್ಲಿ ಎರಡು ಮಸಾಲೆ ದೋಸೆಗಳು ಇರುತ್ತಿದ್ದವು. ಮಾಮೂಲಿ ಮಸಾಲೆ ದೋಸೆಗಿಂತ ಸ್ವಲ್ಪ ಸಣ್ಣವಾದರೂ ಎರಡು ಸೇರಿದರೆ ಒಂದು ಮಾಮೂಲಿ ಮಸಾಲೆ ದೋಸೆಗಿಂತ ಹೆಚ್ಚಾಗುತ್ತಿತ್ತು. ಆದ್ದರಿಂದ ಅದು "ಟೂ-ಬೈ-ಒನ್" ಎಂದು ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತಿದ್ದೆವು. ಇಂತಹ ಕೆಲವು ರೆಸ್ಟೋರಂಟುಗಳಲ್ಲಿ "ನೋ ಒನ್-ಬೈ-ಟೂ ಸರ್ವಿಸ್" ಎಂದು ಬೋರ್ಡ್ ಕೂಡ ಹಾಕಿರುತ್ತಿದ್ದರು. ಕೆಲವು ಕಡೆ "ಸ್ಪೆಷಲ್ ರೂಮ್" ಇರುತ್ತಿತ್ತು. (ಎಸಿ ರೂಮುಗಳು ಇನ್ನೂ ಬಂದಿರಲಿಲ್ಲ). ಅಲ್ಲಿ ಒಬ್ಬರಿಗೆ  ಐದು ಪೈಸೆ ಹೆಚ್ಚು  ಕೊಡಬೇಕಿತ್ತು. ಹೀಗೆಂದು ಬೋರ್ಡ್ ಬರೆದಿರುತ್ತಿದ್ದರು. ಆ ರೂಮಿನಲ್ಲಿ ಕಪ್ಪು-ಸಾಸರಿನಲ್ಲಿ ಕಾಫಿ ಕೊಡುತ್ತಿದ್ದರು. ಅದರ ಹೊರಗಡೆ ಗಾಜಿನ ಲೋಟದಲ್ಲಿ. ಸ್ಪೆಷಲ್ ರೂಮಿನಲ್ಲಿ ತಿಂಡಿ ತಿಂದರೆ ಅಲ್ಲೇ ಬಿಲ್ ಪಾವತಿಸಬಹುದಿತ್ತು. ಹೊರಗಡೆ ತಿಂದರೆ ಬಿಲ್ ತೆಗೆದುಕೊಂಡು ಹೋಗಿ ಕ್ಯಾಷಿಯರ್ ಬಳಿ ಪಾವತಿ ಮಾಡಬೇಕಿತ್ತು. 

ಈ "ಒನ್-ಬೈ-ಟು" ಆಥವಾ "ಟೂ-ಬೈ-ತ್ರೀ" ಎಂದು ಹೇಳುವುದು ಇಂಗ್ಲಿಷ್ ಕಲಿತಮೇಲೆ ಬಂದದ್ದು. ಆದರೆ ಒಂದನ್ನು ಎರಡು, ಎರಡನ್ನು ಮೂರು, ಅಥವಾ ಎರಡನ್ನು ಒಂದು ಮಾಡುವುದು ಹೊಸದೇನೂ ಅಲ್ಲ. ಅದು ತಲೆತಲಾಂತರದಿಂದ ಬಂದದ್ದೇ. ರಾಮಾಯಣ, ಮಹಾಭಾರತ ಕಾಲಗಳಿಂದಲೂ ಇವು ಇದ್ದೇ ಇವೆ. ಅದು ಹೇಗೆ? ಸ್ವಲ್ಪ ಮುಂದೆ ನೋಡೋಣ. ಹಿಂದಿನ "ರಾಹುಕಾಲ ಮತ್ತು ಬಲಿ ಪಾಡ್ಯಮಿ" ಎಂಬ ಸಂಚಿಕೆಯಲ್ಲಿ ರಾಹುಕಾಲ ಹೇಗೆ "ಸೆವೆನ್-ಬೈ-ಯೈಟ್" ಆಯಿತು ಅನ್ನುವುದನ್ನು ನೋಡಿದ್ದೆವಲ್ಲ! ಅದನ್ನು ಓದಬೇಕಾದರೆ ಇಲ್ಲಿ ಕ್ಲಿಕ್ ಮಾಡಿ.  

*****  

ಕೌರವರು ಮತ್ತು ಪಾಂಡವರು ಇನ್ನೂ ಹುಟ್ಟುವುದರ  ಮುಂಚಿನ ಸಮಾಚಾರ ಇದು. ಮಗಧದ ರಾಜನಾಗಿದ್ದ ಬೃಹದ್ರಥ ರಾಜ್ಯಭಾರ ಮಾಡುತ್ತಿದ್ದ ಕಾಲ. ಅವನು ಕಾಶೀರಾಜನ ಅವಳಿ ಹೆಣ್ಣುಮಕ್ಕಳನ್ನು ವಿವಾಹವಾಗಿದ್ದನು. ಸಂತಾನವಿಲ್ಲದೆ ಚಿಂತಿತನಾಗಿದ್ದನು. ಒಮ್ಮೆ ಮಹಾತಪಸ್ವಿ ಒಬ್ಬರು ಅವನ ಆಸ್ಥಾನಕ್ಕೆ ಬಂದು ಅವನಿಗೆ ಅನುಗ್ರಹಿಸಿ ಒಂದು ಹಣ್ಣನ್ನು ಕೊಟ್ಟರು. ಇದನ್ನು ನಿನ್ನ ಪತ್ನಿ ಸೇವಿಸಿದರೆ ಸಂತಾನ ಆಗುವುದು ಎಂದು ಹೇಳಿದರು. ಬೃಹದ್ರಥನಿಗೆ ಒಬ್ಬಳಿಗೆ ಹಣ್ಣು ಕೊಟ್ಟು ಮತ್ತೊಬ್ಬಳ ಜೊತೆ ಮನಸ್ತಾಪ ಆಗುವುದು ಇಷ್ಟವಿರಲಿಲ್ಲ. ಅವರು ಹೋದ ನಂತರ ಬೃಹದ್ರಥನು ಆ ಹಣ್ಣನ್ನು ಒನ್-ಬೈ-ಟು ಮಾಡಿ ತನ್ನ ಇಬ್ಬರು ಹೆಂಡತಿಯರಿಗೂ ಕೊಟ್ಟನು. ಕಾಲಕ್ರಮದಲ್ಲಿ ಅವರಿಬ್ಬರೂ ಗರ್ಭವತಿಯರಾದರು. ಸಮಯ ಕಳೆದ ಮೇಲೆ ಅವರಿಬ್ಬರೂ ಒಂದೇ ದಿನ ಅರ್ಧ ಅರ್ಧ ಶಿಶುವನ್ನು ಹಡೆದರು. ನೋಡಲು ಭೀಕರವಾಗಿದ್ದ ಆ ಎರಡು ಶಿಶು ಹೋಳುಗಳನ್ನು ನಗರದ ಹೊರಗಡೆ ಬಿಸಾಡುವಂತೆ ರಾಜನು ತನ್ನ ನೌಕರರಿಗೆ ಆಜ್ಞಾಪಿಸಿದನು. ಅದರಂತೆ ಅವರು ತಮ್ಮ ಕೆಲಸ ಮಾಡಿದರು. 

ಸ್ವಲ್ಪ ಸಮಯದ ನಂತರ ಜರೆ ಎಂಬ ಹೆಸರಿನ ರಕ್ಕಸಿಯೊಬ್ಬಳು ಹಸಿವಿನಿಂದ ಬಳಲುತ್ತಾ ಆಹಾರ ಹುಡುಕುತ್ತ ಅಲ್ಲಿ ಬಂದಳು. ಕಂಡ ಎರಡು ಶಿಶು ಹೋಳುಗಳನ್ನು ಎರಡು ಕೈಗಳಲ್ಲಿ ತೆಗೆದುಕೊಂಡು ತಿನ್ನಲು ನೋಡಿದಳು. ಆಗ ಎರಡು ಹೋಳುಗಳೂ ವಿಧಿವಶಾತ್ ಒಂದಾದವು. ಎರಡು ಭಾಗಗಳು ಸೇರಿಕೊಂಡ ತಕ್ಷಣ ಆ ಶಿಶುವಿಗೆ ಜೀವ ಬಂದು ಉಸಿರಾಡುತ್ತಾ ಬಹಳ ಜೋರಾದ ಶಬ್ದದಿಂದ ಅಳಲು ಪ್ರಾರಂಭಿಸಿತು. ಆ ಮಗುವನ್ನು ತಿನ್ನಲು ಮನಸ್ಸು ಬರದೆ ಜರೆಯು ಮಗುವನ್ನು ರಾಜನಿಗೆ ತಂದು ಕೊಟ್ಟಳು. ರಾಜನು ಸಂತೋಷ ಪಟ್ಟು ಆ ಮಗುವಿಗೆ "ಜರಾಸಂಧ" ಎಂದು ಅವಳ ಹೆಸರು ನೆನಪಿರುವಂತೆ ನಾಮಕರಣ ಮಾಡಿದನು. ಬೃಹದ್ರಥನ ನಂತರ ಜರಾಸಂಧನು ಮಗಧದ ರಾಜ ಆದನು. 

ಜರಾಸಂಧನಿಗೆ ಅಸ್ತಿ ಮತ್ತು ಪ್ರಾಪ್ತಿ ಎಂದು ಎರಡು ಹೆಣ್ಣು ಮಕ್ಕಳಿದ್ದರು. ಮಥುರೆಯ ಉಗ್ರಸೇನ ರಾಜನ ಮಗ ಕಂಸನು ತಂದೆಯನ್ನು ಸಿಂಹಾಸನದಿಂದ ಕೆಳಗಿಳಿಸಿ ತಾನು ರಾಜನಾದನು. ಜರಾಸಂಧನು ತನ್ನ ಎರಡೂ ಹೆಣ್ಣು ಮಕ್ಕಳನ್ನು ಅವನಿಗೆ ಕೊಟ್ಟು ಮಡುವೆ ಮಾಡಿ ಟೂ-ಇನ್-ಒನ್ ಸಿಸ್ಟಮ್ಮಿನಲ್ಲಿ ಅಳಿಯನನ್ನಾಗಿ ಮಾಡಿಕೊಂಡನು. ಮುಂದೆ ಕಂಸನ ತಂಗಿ ದೇವಕಿಯನ್ನು ವಸುದೇವನು ಮದುವೆಯಾದದ್ದು, ಬಲರಾಮ-ಕೃಷ್ಣರು ಜನಿಸಿದ್ದು, ಕೃಷ್ಣನು ಕಂಸನನ್ನು ಕೊಂಡಿದ್ದು, ಜರಾಸಂಧ-ಕೃಷ್ಣರ ಅನೇಕ ಯುದ್ಧಗಳು, ಜರಾಸಂಧನ ಉಪಟಳ ತಾಳಲಾರದೆ ಕೃಷ್ಣನು ಯಾದವರನ್ನು ಮಥುರೆಯಿಂದ ದ್ವಾರಕೆಗೆ ಸ್ಥಳಾಂತರಿಸಿದ್ದು ಇವೆಲ್ಲ ನಡೆದುವು. ರಾಜಸೂಯ ಯಾಗಕ್ಕೆ ಮುಂಚೆ ಕೃಷ್ಣನು ಭೀಮಾರ್ಜುನರ ಜೊತೆ ಮಗಧಕ್ಕೆ ಹೋಗಿ ಜರಾಸಂಧನನ್ನು ಭೀಮನಿಂದ ಕುಸ್ತಿ ಕಾಳಗದಲ್ಲಿ ಸಿಕ್ಕಿಸಿದನು. ಕೃಷ್ಣನ ಸೂಚನೆಯಂತೆ ಭೀಮಸೇನನು ಜರಾಸಂಧನನ್ನು ಮತ್ತೆ ಒನ್-ಬೈ-ಟೂ ಮಾಡಿ ಕೊಂದನು. 
*****

ಮಹಾಭಾರತದ ಕಾಲಕ್ಕಿಂತ ಹಿಂದೆ ಹೋಗೋಣ. ದಶರಥನು ರಾಜ್ಯಭಾರ ಮಾಡುತ್ತಾ ಅಯೋಧ್ಯೆಯನ್ನು ಆಳುತ್ತಿದ್ದ ಕಾಲ. ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂರು ರಾಣಿಯರಿದ್ದರೂ ದಶರಥನಿಗೆ ಮಕ್ಕಳಿರಲಿಲ್ಲ. ದಶರಥನು ಬಹಳ ಚಿಂತಿತನಾಗಿದ್ದನು. ಒಮ್ಮೆ ಬೇಟೆಗೆಂದು ಕಾಡಿಗೆ ಹೋಗಿದ್ದಾಗ ಪ್ರಮಾದವಶಾತ್ ಶ್ರವಣ ಕುಮಾರನನ್ನು ಆನೆಯೆಂದು ತಿಳಿದು ಶಬ್ದವೇಧಿ ಬಾಣ ಪ್ರಯೋಗಿಸಿ ಕೊಂದನು. "ನಿನ್ನ ಕೊನೆಯ ಕಾಲದಲ್ಲಿ ನಿನಗೂ ಪುತ್ರ ವಿಯೋಗವಾಗಲಿ" ಎಂದು ಶಪಿಸಿ ಶ್ರವಣನ ತಂದೆ-ತಾಯಿಯರು ದೇಹ ತ್ಯಾಗ ಮಾಡಿದರು. ರಾಜಧಾನಿಗೆ ಬಂದ ದಶರಥನು ವಿಷಾದದಿಂದ ರಾಜಗುರು ವಸಿಷ್ಠರಿಗೆ ವಿಷಯ ತಿಳಿಸಿದನು. "ಚಿಂತಿಸಬೇಡ. ಮೊದಲು ಮಕ್ಕಳಾಗಲಿ" ಎಂದು ವಸಿಷ್ಠರು ಸಮಾಧಾನ ಮಾಡಿದರು. 

ವಸಿಷ್ಟರು ದಶರಥನಿಂದ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸಿದರು. ಯಜ್ಞಪುರುಷನು ಹೋಮಕುಂಡದಿಂದ ಹೊರಬಂದು ಒಂದು ದಿವ್ಯವಾದ ಪಾತ್ರೆಯಲ್ಲಿ ಸಂತಾನ ಕಾರಕ ಪಾಯಸವನ್ನು ಕೊಟ್ಟನು. ಕೌಸಲ್ಯೆಯು ಪಟ್ಟದರಾಣಿ. ಕೈಕೇಯಿ ಇಷ್ಟದ ರಾಣಿ. ಸುಮಿತ್ರೆ ಯಾವಾಗಲೂ ಇವರ ಹಿಂದಿರುವವಳು. ಅವಳಿಗೆ ಅದೇ ಅಭ್ಯಾಸ. ದಶರಥನು ಪಾಯಸವನ್ನು ಒನ್-ಬೈ-ಟೂ ಸಿಸ್ಟಮ್ಮಿನಲ್ಲಿ ಎರಡು ಭಾಗ ಮಾಡಿ ಕೌಸಲ್ಯೆ ಮತ್ತು ಕೈಕೆಯರಿಗೆ ಕೊಟ್ಟನು. ನಂತರ ಹಿಂದೆ ನೋಡಿದರೆ ಸುಮಿತ್ರೆ ನಿಂತಿದ್ದಾಳೆ. ಈಗೇನು ಮಾಡುವುದು? ಆಗ ಸವತಿಯರಲ್ಲಿ ತುಂಬಾ ವಿಸ್ವಾಸವಿತ್ತು. ಇನ್ನೂ ಮಂಥರೆಯ ಉಪದೇಶಗಳು ಪ್ರಭಾವ ಬೀರಿರಲಿಲ್ಲ. ಕೌಸಲ್ಯೆಯು ತನ್ನ ಪಾಲಿನ ಪಾಯಸದಲ್ಲಿ ಅರ್ಧವನ್ನು ಸುಮಿತ್ರೆಗೆ ಕೊಟ್ಟಳು. ಕೈಕೇಯಿಯೂ ಹಾಗೆಯೇ ಮಾಡಿದಳು. ಈಗ ಮೊದಲು ಒನ್-ಬೈ-ಟೂ ಇದ್ದದ್ದು ಟೂ-ಬೈ-ಫೋರ್ ಆಯಿತು. ಎರಡು ಪಾಲು ಸಿಕ್ಕಿದ್ದರಿಂದ ಸುಮಿತ್ರೆಗೆ ಇಬ್ಬರು ಮಕ್ಕಳು ಜನಿಸಿದರು. ಕೌಸಲ್ಯೆ ಮತ್ತು ಕೈಕೇಯಿಗೆ ಒಬ್ಬೊಬ್ಬ ಮಗ. ಒಟ್ಟಿನಲ್ಲಿ ನಾಲ್ಕು. ಹೀಗೆ ನಡೆಯಿತು. 

ಲಕ್ಷ್ಮಣ-ಶತ್ರುಘ್ನರು ಒಂದೇ ತಾಯಿಯ ಮಕ್ಕಳಾದರೂ ಅಷ್ಟಾಗಿ ಜೊತೆಯಲ್ಲಿ ಇರಲಿಲ್ಲ. ಲಕ್ಷ್ಮಣನು ಎಂದೂ ರಾಮನ ಜೊತೆ. ಶತ್ರುಘ್ನನು ಯಾವಾಗಲೂ ಭರತನ ಜೊತೆ. ಏಕೆ ಹೀಗೆ? ತಿಳಿದವರು ಇದು ಪಾಯಸದ ನಂಟು ಅಂದರು. ಕೌಸಲ್ಯೆ ಕೊಟ್ಟ ಪಾಯಸದ ಕೂಸು ಲಕ್ಷ್ಮಣ ಅವಳ ಮಗ ರಾಮನ ಜೊತೆ. ಕೈಕೇಯಿ ಕೊಟ್ಟ ಪಾಯಸದ ಕೂಸು ಶತ್ರುಘ್ನ ಅವಳ ಕೂಸು ಭರತನ ಜೊತೆ. ಹೀಗಂತೆ. 

ಒಟ್ಟಿನಲ್ಲಿ ಇಲ್ಲಿ ಒನ್-ಬ್ಯೆ-ಟೂ, ಟೂ-ಬ್ಯೆ-ತ್ರೀ, ಟೂ-ಬ್ಯೆ-ಫೋರ್ ಎಲ್ಲವೂ ಆದವು. ಮುಂದೆ ರಾಮಾಯಣ ನಡೆಯಿತು. ಅದು ಎಲ್ಲರಿಗೂ ಗೊತ್ತಿದ್ದದ್ದೇ. 

*****

ಕೆಲವರಿಗೆ ಈಗ ಒಂದು ಸಮಸ್ಯೆ ಬರಬಹುದು. ರಾಮಾಯಣದ ಕಾಲದಲ್ಲಿ ನಡೆದಿದ್ದಕ್ಕೂ ಮಹಾಭಾರತದ ಕಾಲದಲ್ಲಿ ನಡೆದಿದ್ದಕ್ಕೂ ಏಕೆ ವ್ಯತ್ಯಾಸ? ಅಲ್ಲಿ ನಾಲ್ಕು ಪೂರ್ಣ ಶಿಶುಗಳು. ಇಲ್ಲಿ ಎರಡು ಅರ್ಧ ಶಿಶುಗಳು. ಇದೇಕೆ ಈ ಗೋಜಲು? 

ಇದಕ್ಕೆ ಉತ್ತರ ಪಾಯಸದಲ್ಲಿ ಮತ್ತು ಹಣ್ಣಿನಲ್ಲಿ ಅಡಗಿದೆ. ಪಾಯಸ ಭಾಗವಾದರೂ ಪಾಯಸವೇ. ಹಣ್ಣು ಭಾಗವಾದರೆ ಹಣ್ಣಾಗಿ ಉಳಿಯುವುದಿಲ್ಲ. ಹಣ್ಣಿನ ಹೋಳಾಗುತ್ತದೆ. ಅಷ್ಟೇ. 

ಒಂದು ಕೆಲಸ ಮಾಡಿ. ಹತ್ತು ಲೀಟರು ಸೊಗಸಾದ ಪಾಯಸ ತಯಾರಿಸಿ. ಎರಡು ಭಾಗ ಮಾಡಿ. ಐದು ಲೀಟರು ಪಾಯಸ ಬಲಗಡೆ ಮನೆಯವರಿಗೆ ಕೊಡಿ. ಇನ್ನೈದು ಲೀಟರು ಪಾಯಸ ಎಡಗಡೆ ಮನೆಯವರಿಗೆ ಕೊಡಿ. ಅವರಿಬ್ಬರೂ ಮತ್ತೆ ಎರಡು ಭಾಗ ಮಾಡಿ, ಒಂದನ್ನು ಅವರೇ ಇಟ್ಟುಕೊಂಡು ಮತ್ತೆ ಒಂದು ಭಾಗವನ್ನು ಅವರ ಪಕ್ಕದ ಮನೆಯವರಿಗೆ ಕೊಡಲಿ. ಈಗ ಎಲ್ಲರೂ ನಮಗೆ ಪಾಯಸ ಸಿಕ್ಕಿತು ಅನ್ನುತ್ತಾರೆ. ಪಾಯಸದ ಹೋಳು ಅನ್ನುವುದಿಲ್ಲ. 

ಇದೇ ಪ್ರಯೋಗ ಒಂದು ಹಣ್ಣಿನಲ್ಲಿ ಮಾಡಿ. ನಮಗೆ ಒಂದು ಹಣ್ಣು ಕೊಟ್ಟರು ಎಂದು ಯಾರೂ ಹೇಳುವುದಿಲ್ಲ. ಹಣ್ಣಿನ ಹೋಳು ಸಿಕ್ಕಿತು ಎಂದೇ ಹೇಳುತ್ತಾರೆ. 

*****

ಮುಂದೆ ಯಾರಾದರೂ ತಪಸ್ವಿಗಳು ನಿಮಗೆ ಸಂತಾನಕ್ಕಾಗಿ ಪಾಯಸವನ್ನೋ ಅಥವಾ ಹಣ್ಣನ್ನೋ ಕೊಟ್ಟರೆ ಈ ಎರಡು ಪ್ರಸಂಗಗಳನ್ನು ನೆನಪಿಟ್ಟುಕೊಳ್ಳಿ. ಇಲ್ಲದಿದ್ದರೆ ಏನಾಗುತ್ತದೆ ಎಂದು ನಿಮಗೇ ಗೊತ್ತು!