Showing posts with label life span. Show all posts
Showing posts with label life span. Show all posts

Friday, August 29, 2025

ಸಾವು ಎದುರಲ್ಲಿ ಬಂದು ನಿಂದಾಗ


ಅರ್ಜುನನ ಮೊಮ್ಮಗ, ಅಭಿಮನ್ಯುವಿನ ಮಗ, ಪರೀಕ್ಷಿತ ಮಹಾರಾಜನಿಗೆ ಋಷಿಕುಮಾರ ಶೃಂಗಿಯ ಶಾಪದ ವಿಚಾರ ಗೊತ್ತಾಯಿತು. ಈಗ ಬದುಕಿನಲ್ಲಿ ಇನ್ನುಳಿದಿದ್ದು ಕೇವಲ ಏಳು ದಿನಗಳು. ಜೀವನದ ಕೊನೆಗಾಲ ಬಂದಿದೆ. ಸಾವು ಎದುರಲ್ಲಿ ಬಂದು ನಿಂತಿದೆ. ತಪ್ಪಿಸಿಕೊಳ್ಳುವಹಾಗಿಲ್ಲ. ಯೋಚನೆ ಮಾಡುತ್ತಿದ್ದಷ್ಟೂ ಸಮಯ ಸೋರಿಹೋಗುತ್ತಿದೆ. ಇರುವ ಸಮಯ ಸದುಪಯೋಗ ಮಾಡಿಕೊಳ್ಳಬೇಕು. ಅವನ ಪುಣ್ಯಕ್ಕೆ ವೇದವ್ಯಾಸ ಪುತ್ರರಾದ ಶುಕಾಚಾರ್ಯ ಅದೇ ಸಮಯಕ್ಕೆ ಬಂದರು. ಪರೀಕ್ಷಿತನಿಗೆ ಜೀವನದಲ್ಲಿ ಉಳಿದ ಏಳು ದಿನಗಳಲ್ಲಿ ಹೇಗೆ ಮತ್ತೆ ಮತ್ತೆ ಕಾಡುವ ಜೇವನ-ಮರಣ ಚಕ್ರದಿಂದ ಮುಕ್ತಿ ಪಡೆಯುವುದು ಎಂಬ ಚಿಂತೆ. "ಇಷ್ಟು ಕಡಿಮೆ ಕಾಲದಲ್ಲಿ ಹೇಗೆ ಇಂತಹ ಸಾಧನೆ ಸಾಧ್ಯ?" ಎಂದು ಅವರನ್ನು ಕೇಳಿದ. 

"ನೀನು ಭಾಗ್ಯವಂತ. ನಿನಗೆ ಏಳು ದಿನಗಳ ಕಾಲ ಬಾಕಿ ಇದೆ. ಅದಕ್ಕಿಂತ ಹೆಚ್ಚಾಗಿ, ಇಷ್ಟು ಕಾಲ ಇದೆ ಎಂದೂ ಗೊತ್ತಿದೆ!"
"ತಮ್ಮ ಅಭಿಪ್ರಾಯ ದಯಮಾಡಿ ವಿವರಿಸಬೇಕು"
"ಅನೇಕರಿಗೆ ಎಷ್ಟು ಕಾಲ ಜೀವಿತ ಉಳಿದಿದೆ ಎಂದು ಗೊತ್ತಿರುವುದಿಲ್ಲ. ನಿನಗೆ ಅದು ಖಚಿತವಾಗಿ ಗೊತ್ತಾಯಿತು"
"ಇದು ಒಳ್ಳೆಯದೇ?"
"ಹೇಗೆ ಯೋಚಿಸಿದರೆ ಹಾಗೆ. 'ಅಯ್ಯೋ! ಏಳೇ ದಿನವೇ ಅನ್ನಬಹುದು.' ಅಥವಾ 'ಸದ್ಯ! ಏಳು ದಿನ ಇವೆಯಲ್ಲ' ಅನ್ನಬಹುದು"
"ಹಾಗಿದ್ದರೆ ಇಷ್ಟು ಕಡಿಮೆ ಅವಧಿಯಲ್ಲಿ ಮುಕ್ತಿ ಸಾಧಿಸಬಹುದೇ?"
"ಕೇವಲ ಒಂದು ಮುಹೂರ್ತ ಕಾಲದಲ್ಲಿ ಸಾಧಿಸಿದವರಿದ್ದಾರೆ"
"ಹೌದೇ? ಆ ಬಗ್ಗೆ ಕೃಪೆಮಾಡಿ ತಿಳಿಸಿಕೊಡಿ" 

ಶುಕಾಚಾರ್ಯರು ಪರೀಕ್ಷಿತ ಮಹರ್ರಾಜನಿಗೆ ಈ ವಿಷಯವನ್ನು ವಿವರಿಸಿದರು. ಹೇಳಿದ್ದು ಪರೀಕ್ಷಿತ ಮಹಾರಾಜನಿಗೆ. ಆದರೆ ಅದು ಎಲ್ಲರಿಗೂ ಸಂಬಂಧಿಸಿದ್ದು. ಅವನ ಮೂಲಕ ಸರ್ವರಿಗೂ ತಿಳುವಳಿಕೆ ಕೊಟ್ಟದ್ದು. 

*****

ದೇವತೆಗಳಿಗೂ ಅಸುರರಿಗೂ ತೀರದ ಹಗೆ. ಆಗಾಗ ಜಗಳಗಳು. ದೇವತೆಗಳಿಗೆ ಅಮೃತಪಾನದ ಬಲದಿಂದ ಸಾವಿಲ್ಲದಿದ್ದರೂ ಸೋಲಿಲ್ಲದಿಲ್ಲ. ಅಸುರ ಸಂತಾನದಲ್ಲಿ ಕಾಲಕಾಲಕ್ಕೆ ಪ್ರಬಲರು ಹುಟ್ಟುವರು. ಅವರು ಬಹಳ ಶ್ರಮಪಟ್ಟು ಬ್ರಹ್ಮನನ್ನೋ, ರುದ್ರನನ್ನೋ ಮೆಚ್ಚಿಸುವರು. ಆ ಮೂಲಕ ವರಗಳನ್ನು ಸಂಪಾದಿಸುವರು. ಕೆಲ ಕಾಲ ಅವುಗಳಿಂದ ಬಲಿಷ್ಠರಾಗುವರು. ಆ ಮದದಿಂದ ದೇವತೆಗಳ ಮೇಲೆ ದಂಡೆತ್ತಿ ಬರುವರು. ಯುದ್ಧಗಳಾಗುವುವು. ಹೀಗೆ ನಡೆಯುತ್ತಾ ಇರುವುದು. ಕೆಲವು ವೇಳೆ ಹೀಗೆ ಯುದ್ಧವಾಗುವಾಗ ದೇವತೆಗಳು ಭೂಲೋಕದಲ್ಲಿರುವ ಪ್ರಬಲರಾದ ರಾಜರ ಸಹಾಯ ಕೇಳುವರು. ಆ ರಾಜರು ಕರ್ತವ್ಯವೆಂದೂ, ಧರ್ಮದ ಪರ ಎಂದೂ ದೇವತೆಗಳಿಗೆ ಯುದ್ಧಗಳಲ್ಲಿ ಸಹಾಯ ಮಾಡುವರು. ಹೀಗೆ ಯುದ್ಧಗಳಲ್ಲಿ ಸಹಾಯ ಮಾಡಿದ ರಾಜರುಗಳಿಗೆ ದೇವತೆಗಳು ವರಗಳನ್ನೋ, ಸಂಪತ್ತನ್ನೊ, ಭೋಗ-ಭಾಗ್ಯಗಳನ್ನೋ ಸಂತೋಷದಿಂದ ಕೊಡುವರು. 

ಅನೇಕ ವೇಳೆ ಇಂತಹ ಸಹಾಯಗಳಿಂದ ದೇವತೆಗಳು ಅಸುರರನ್ನು ಕದನದಲ್ಲಿ ಸೋಲಿಸಿ ಓಡಿಸಿದುದು ನಡೆದಿದೆ. ಶ್ರೀರಾಮಚಂದ್ರನ ತಂದೆಯಾದ ದಶರಥನು ಸಹ ಹೀಗೆ ದೇವಾಸುರ ಯುದ್ಧದಲ್ಲಿ ದೇವತೆಗಳ ಸಹಾಯ ಮಾಡಲು ಹೋಗುತ್ತಿದ್ದನು. ಒಮ್ಮೆ ಹೀಗೆ ಹೋದಾಗ ತನ್ನ ಜೊತೆ ಚಿಕ್ಕ ರಾಣಿ ಕೈಕೆಯನ್ನು ಕರೆದೊಯ್ದ. ಯುದ್ಧದ ಮಧ್ಯೆ ರಥದ ಕಡಾಣಿ ಬಿದ್ದುಹೋದಾಗ ಕೈಕೆ ತನ್ನ ಬೆರಳನ್ನೇ ಕಡಾಣಿಯಾಗಿ ಮಾಡಿ, ನೋವು ಲೆಕ್ಕಿಸದೆ ರಥವನ್ನೂ, ದಶರಥನನ್ನೂ ಕಾಪಾಡಿದಳು. ಆಗ ಅವಳು  ಮಾಡಿದ ಉಪಕಾರಕ್ಕಾಗಿ ದಶರಥನು ತಾನೇ ಅವಳಿಗೆ ವರಗಳನ್ನು ಕೊಟ್ಟುದದರಿಂದ ಮುಂದೆ ರಾಮಾಯಣವೇ ನಡೆಯಿತು ಎನ್ನುವುದನ್ನು ನೆನಪಿಸಿಕೊಳ್ಳಬಹುದು. 

ಒಂದು ಸಮಯದಲ್ಲಿ ಭೂಲೋಕದಲ್ಲಿ ಖಟ್ವಾಂಗ ಎನ್ನುವ ರಾಜರ್ಷಿ ಆಳುತ್ತಿದ್ದ ಕಾಲ. ಬಹಳ ಪರಾಕ್ರಮಿಯೂ, ಧರ್ಮಿಷ್ಟನೂ ಆದ ಚಕ್ರವರ್ತಿ. ಅಸುರರೊಡನೆ ಯುದ್ಧದ ಪ್ರಸಂಗ ದೇವಗಳಿಗೆ ಬಂತು. ದೇವತೆಗಳು ಖಟ್ವಾಂಗನ ಸಹಾಯ ಕೇಳಿದರು. ಖಟ್ವಾಂಗ ಚಕ್ರವರ್ತಿಯು ಒಪ್ಪಿ ದೇವತೆಗಳ ಕಡೆಯಿಂದ ಹೋರಾಡಿದ. ದೇವತೆಗಳಿಗೆ ದೊಡ್ಡ ವಿಜಯವಾಯಿತು. ಖಟ್ವಾಂಗನ ಸಹಾಯಕ್ಕೆ ಅವರು ಕೃತಜ್ಞರಾದರು. 

"ರಾಜರ್ಷಿ ಖಟ್ವಾಂಗ, ನಿನ್ನ ಸಹಾಯದಿಂದ ನಮಗೆ ವಿಜಯವಾಯಿತು. ನಾವು ಬಹಳ ಸಂತುಷ್ಟರಾಗಿದ್ದೇವೆ. ನಿನಗೆ ಏನು ವರ ಬೇಕು? ಕೇಳು. ಧನ-ಕನಕಗಳೇ? ದೇವಲೋಕದ ಅಪೂರ್ವ ಭೋಗ-ಭಾಗ್ಯಗಳೇ? ಅಥವಾ ಮತ್ತೆ ಇನ್ನೇನಾದರೂ ಬೇಕೇ?"
"ನಿಮ್ಮ ಕೃಪೆಯಿಂದ ನನಗೆ ಎಲ್ಲವೂ ಪ್ರಾಪ್ತವಾಗಿವೆ. ನನಗೆ ಇವು ಯಾವುವೂ ಬೇಡ"
"ಹಾಗಿದ್ದರೆ ಇನ್ನೇನು ಕೊಡೋಣ?"
"ಕೊಡುವಹಾಗಿದ್ದಾರೆ ನನ್ನ ಶೇಷ ಆಯು ಪ್ರಮಾಣ ಎಷ್ಟು ಎನ್ನುವುದನ್ನು ತಿಳಿಸಿ"
"ಅದನ್ನು ತಿಳಿಯಬೇಕೇ? ಬೇರೇನೂ ಬೇಡವೇ?"
"ಅದನ್ನು ಹೇಳಿದರೆ ಸಾಕು. ಬೇರೇನೂ ಬೇಡ"
"ಈಗ ನಿನ್ನ ಅಆಯುಸ್ಸಿನಲ್ಲಿ ಒಂದು ಮುಹೂರ್ತ ಕಾಲ ಮಾತ್ರ ಉಳಿದಿದೆ"

ಖಟ್ವಾಂಗನಿಗೆ ಬಹಳ ಆಶ್ಚರ್ಯವಾಯಿತು. ಒಂದು ಮುಹೂರ್ತ ಅಂದರೆ ಎರಡು ಘಳಿಗೆಗಳ ಕಾಲ. ನಲವತ್ತೆಂಟು ನಿಮಿಷಗಳು ಮಾತ್ರ. ಇಂತಹ ಸಂದರ್ಭದಲ್ಲೂ ದೇವತೆಗಳು ಧನ-ಕನಕ, ಭೋಗ-ಭಾಗ್ಯಗಳ ಆಸೆ ತೋರಿಸುತ್ತಿದ್ದಾರೆ! 

ಖಟ್ವಾಂಗ ತಡಮಾಡದೆ ಹಿಂದಿರುಗಿದ. ಅರ್ಧ ಗಳಿಗೆಯಲ್ಲಿ ತನ್ನ ರಾಜ್ಯ-ಕೋಶಗಳಿಗೆ ಮುಂದಿನ ವ್ಯವಸ್ಥೆಗಳನ್ನು ಮಾಡಿ, ಧ್ಯಾನಮಗ್ನನಾಗಿ ದೇಹ ತ್ಯಜಿಸಿ ಮೋಕ್ಷ ಪಡೆದ!

*****

ಶ್ರೀಮದ್ಭಾಗವತದ (9.9.42) ಶ್ಲೋಕ ಖಟ್ವಾಂಗನ ವೃತ್ತಾಂತವನ್ನು ಹೀಗೆ ಹೇಳುತ್ತದೆ:

ಯೋ ದೇವೈರರ್ಥಿತೋ ಅವಧೀ: ಯುಧಿದುರ್ಜಯಃ 
ಮುಹೂರ್ತಮ್ ಆಯುರ್ಜ್ಞಾತ್ವೈತ್ಯ  ಸ್ವಪುರಂ ಸಂದಧೇ: ಪುನಃ  

ಖಟ್ವಾಂಗ ರಾಜರ್ಷಿಯು ಆಗ ಮಾಡಿದ ಒಂದು ಘಳಿಗೆಯ ಧ್ಯಾನದಿಂದಲೇ ಮೋಕ್ಷ ಸಿಕ್ಕಿತು ಎಂದು ತಪ್ಪು ತಿಳಿಯಬಾರದು.  ಅಡಿಗೆ ಮಾಡುವವರು ಅನೇಕ ಪದಾರ್ಥಗಳನ್ನು ಮಾಡಿ ಮಾಡಿ ಇಟ್ಟಿರುತ್ತಾರೆ. ಕಡೆಯಲ್ಲಿ ಸ್ವಲ್ಪ ಸಮಯದಲ್ಲಿ ಒಗ್ಗರಣೆ ತಯಾರು ಮಾಡಿ ಅವೆಲ್ಲದಕ್ಕೂ ಬೆರೆಸಿ ಅಡಿಗೆ ಮುಗಿಸುತ್ತಾರೆ. ಒಗ್ಗರಣೆಯಿಂದ ಅಡಿಗೆ ಆದದ್ದಲ್ಲ. ಒಗ್ಗರಣೆಯಿಂದ ಅದು ಮುಗಿಯಿತು. ಅದು ಕಡೆಯ ಹಂತ ಮಾತ್ರ. ಇದೂ ಹಾಗೆಯೇ. ಅನೇಕ ಕಾಲಗಳಲ್ಲಿ ಮಾಡಿದ್ದ ಸಾಧನೆಗೆ ಕೊನೆಯ ಕಳಸ ಈ ಒಂದು ಘಳಿಗೆಯಲ್ಲಿ ಮಾಡಿದ ಅಂತಿಮ ಧ್ಯಾನ. ಪರೀಕ್ಷಿತನಿಗೂ ಹೀಗೆಯೇ ಆಯಿತು. ಏಳು ದಿನಗಳ ಅಖಂಡ ಸಾಧನೆ ಶುಕ್ರಾಚಾರ್ಯರ ಮಾರ್ಗದರ್ಶನದಿಂದ ನಡೆಸಿ ಪರಮಪದವನ್ನು ಪಡೆದ.

ಅಜಾಮಿಳನ ಪ್ರಸಂಗದಲೂ ಹೀಗೆ ತಪ್ಪು ಕಲ್ಪನೆ ಇದೆ. ಮಾಡಬಾರದ್ದನ್ನೆಲ್ಲ ಮಾಡಿ, ಕಡೆಯ ಸಮಯದಲ್ಲಿ ಮಗನ ಮೋಹದಿಂದ ಅವನ ಹೆಸರಾದ "ನಾರಾಯಣ" ಎಂದು ಕೂಗಿ ಮೋಕ್ಷ ಪಡೆದ ಎಂದು ಕಥೆ. ನಾರಾಯಣ ಎಂದು ಕರೆದದ್ದರಿಂದ ಅವನಿಗೆ ಹಿಂದಿನ ಸಾಧನೆಗಳ ಸ್ಮರಣೆ ಬಂತು. ಮತ್ತೆ ಕೊನೆಯ ಹಂತದ ಸಾಧನೆ ಮುಗಿಸಿ ಪರಮಪದ ಪಡೆದ. ಇದರ ವಿವರಗಳೂ ಶ್ರೀಮದ್ ಭಾಗವತದಲ್ಲಿ ಇದೆ. (ಹೆಚ್ಚಿನ ವಿವರಗಳಿಗೆ "Ajamila's Cheque" ಎನ್ನುವ ಅಂಕಣವನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). 

*****

"ಜಾತಸ್ಯ ಹಿ ಧ್ರುವಂ ಮೃತ್ಯು:" ಎನ್ನುವುದು ಎಲ್ಲರೂ ತಿಳಿದಿರುವ, ಎಲ್ಲರೊ ಮತ್ತೆ ಮತ್ತೆ ಹೇಳುವ ಮಾತು. ಹುಟ್ಟಿನೊಡನೆ ಬರುವ ಒಂದೇ ಪರಮ ಸತ್ಯವೆಂದರೆ ಸಾವು. ಮುಂದು ಹಾಕಲಾಗದ ಪ್ರಯಾಣದ ಕೊನೆಯ ನಿಲ್ದಾಣ ಅದು. ಇದು ಎಲ್ಲರಿಗೂ ಗೊತ್ತು. ಸಾವು ಎಂದೋ ಒಂದು ದಿನ ನಮ್ಮ ಮುಂದೆ ಬಂದು ನಿಲ್ಲುವ ಅಪರಿಚಿತ ಅಲ್ಲ. ನಾವು ಹುಟ್ಟಿದಂದೇ ಹುಟ್ಟಿ, ಅಂದಿನಿಂದ ನಮ್ಮ ಎದುರು ನಿಂತಿರುವ ಸತ್ಯ ಅದು. ಹುಟ್ಟಿದಾಗ ದೂರದಲ್ಲಿರುತ್ತದೆ. ಅದು ಅಲ್ಲೇ ನಿಂತಿರುತ್ತದೆ. ನಾವು ಮಾತ್ರ ಪ್ರತಿ ಕ್ಷಣ ಅದರ ಹತ್ತಿರ ಹತ್ತಿರ ಹೋಗುತ್ತಿರುತ್ತೇವೆ. ದಿನ, ಕಾಲ ಗೊತ್ತಿಲ್ಲದ ರಿಸರ್ವೇಶನ್ ಅದಕ್ಕೆ ಉಂಟು. 

ನಮ್ಮ ಕಣ್ಣುಗಳು ನಮಗೆ ಏನು ಇಷ್ಟವೂ ಅದನ್ನೇ ತೋರಿಸುತ್ತವೆ. ಇಷ್ಟವಿಲ್ಲದ್ದನ್ನು ಮುಚ್ಚಿಡುತ್ತವೆ. ಆದ್ದರಿಂದ ಸಾವಿನ ವಿಷಯದಲ್ಲಿ ನಮಗೆ ಕಣ್ಣಿನ ಪೊರೆ ಬಂದಂತೆ. ಬಾಕಿಯ ಪ್ರಪಂಚವೆಲ್ಲಾ ನಿಚ್ಚಳವಾಗಿ ಕಂಡರೂ ಸಾವು ಕಾಣದು. ಮನುಷ್ಯನಿಗೆ ಅನೇಕ ಆಸೆಗಳು. "ಆಸೆಯೆಂಬ ತಳ ಒಡೆದ ದೋಣಿಯೊಳು ದೂರತೀರ ಯಾನ" ಎನ್ನುತ್ತದೆ ಅಡಿಗರ "ಅಳುವ ಕಡಲೊಳು ತೇಲಿಬರುತಲಿದೆ ನಗೆಯ ಹಾಯಿ ದೋಣಿ" ಎನ್ನುವ ಗೀತೆ. ಈ ಅನೇಕ ಆಸೆಗಳಲ್ಲಿ ಎರಡು ಬಲು ಮುಖ್ಯವಾದವು. "ಧನಾಶಾ, ಜೀವಿತಾಶಾ ಚ" ಎಂದು ಹೇಳುತ್ತಾರೆ. ಹಣದ ಆಸೆ ಮೊದಲನೆಯದು. ಅದಕ್ಕಿಂತ ಹೆಚ್ಚಿನದು ಇನ್ನಷ್ಟು ದಿನ ಬದುಕುವಾಸೆ. 

ಯಾರಾದರೂ ಇಷ್ಟ ಪಡಲಿ, ಇಲ್ಲದಿರಲಿ, ಭೌತಿಕ ದೇಹಕ್ಕೆ ಅದರದೇ ಆದ ಇತಿ-ಮಿತಿಗಳು ಉಂಟು. ದೇಹ ಕಾಲದಿಂದ ಕಾಲಕ್ಕೆ ಅಲ್ಲಲ್ಲಿ ಅಲಾರಾಂ ಕೊಡುತ್ತಲೇ ಇರುತ್ತದೆ. ಮಧ್ಯೆ ಮಧ್ಯೆ ಆಗುವ ಚಿಕಿತ್ಸೆಗಳು, ಶಸ್ತ್ರ ಚಿಕಿತ್ಸೆಗಳು ಹರಿದ ಬಟ್ಟೆಗೆ ತೇಪೆ ಹಾಕಿದಂತೆ. ಈಗಿನ ಜನಾಂಗಕ್ಕೆ ತೇಪೆ ಎನ್ನುವುದು ಗೊತ್ತಿಲ್ಲ. ಹಿಂದೆ ಡಾರ್ನಿಂಗ್ ಎಂದು ಮಾಡುತ್ತಿದ್ದರು. ಅದು ಒಂದು ರೀತಿ ತೇಪೆ ಹಾಕಿರುವುದು ಗೊತ್ತಾಗದಂತೆ ಮಾಡಿದ ತೇಪೆ. ತೇಪೆ ಹಾಕಿದ ಬಟ್ಟೆ ತೇಪೆ ಹಾಕಿರುವ ಪಕ್ಕದಲ್ಲೇ ಮತ್ತೆ ಪಿಂಜಿಕೊಳ್ಳುತ್ತದೆ. ನಮ್ಮ ದೇಹವೂ ಹಾಗೆಯೇ!

*****

ಕೆಲವು ಜನರಿಗೆ ಸಾವು ಧಿಡೀರ್ ಎಂದು ಬರಬಹುದು. "ಅದೊಂದು ಸುಖ ಮರಣ" ಎಂದು ಜನರಾಡಬಹುದು. ಮತ್ತೆ ಕೆಲವರಿಗೆ ವೈದ್ಯರು ಕೊಟ್ಟ ಗಡುವು ಎಚ್ಚರ ಕೊಡಬಹುದು. ಕೊನೆ ಬಂದಿರುವುದು ಎಂದು ದೇಹ  ಹೇಳುವುದು, ಯಾತನೆ ಹೆಚ್ಚುವುದು ಇವೆಲ್ಲವೂ ಅವರಿಗೆ ಆಗಬಹುದು. ಮತ್ತೆ ಕೆಲವರಿಗೆ ಅದು ಹತ್ತಿರದಲ್ಲಿಯೇ ಇದೆ ಎಂದು ಖಚಿತವಾಗಿ ಪ್ರತಿದಿನ ಅದನ್ನೇ ನೆನೆದು, ನೆನೆದು ಹಿಂಸೆ ಆಗಬಹುದು. 

ಅನತಿ ದೂರದಲ್ಲಿ ಅದು ನಿಂತಿದೆ ಎಂದು ಗೊತ್ತಾದವರು, ನಮ್ಮ ಸುತ್ತ-ಮುತ್ತಲಿನವರು ಅದನ್ನು ಹೇಗೆ ಎದುರಿಸಿದರು? ಕೂಗಾಡಿ-ಅರಚಾಡಿ ಹಿಂಸೆ ಪಟ್ಟು, ಸುತ್ತಲಿನವರಿಗೂ ಕಷ್ಟ ಕೊಟ್ಟವರು ಕಡಿಮೆಯಿಲ್ಲ. ಅದರಂತೆ, ಧೈರ್ಯವಾಗಿ ಅದನ್ನು ಎದುರಿಸಿದವರನ್ನೂ ನಾವು ನಮ್ಮ ಜೀವಿತ ಕಾಲದಲ್ಲೇ ಕಂಡಿದ್ದೇವೆ. ಅನೇಕ ವರ್ಷಗಳ ಕಾಲ ಕುಟುಂಬಗಳ ನಡುವೆ ನಡೆದುಬಂದಿದ್ದ ವೈರತ್ವ ಕೊನೆ ಮಾಡಿ ಶಾಂತಿ ತಂದವರಿದ್ದಾರೆ. ಚಿಕ್ಕ ವಯಸ್ಸಿನ ಹೆಂಡತಿಗೆ ಮರು ಮದುವೆ ವ್ಯವಸ್ಥೆ ಮಾಡಿ ನಂತರ ನಿರಾಳವಾಗಿ ಹೋದವರಿದ್ದಾರೆ. ತಮ್ಮ ಅಪಾರ ಆಸ್ತಿಯನ್ನು ಸದ್ವಿನಿಯೋಗ ಮಾಡಿ ಕಣ್ಮುಚ್ಚಿದವರಿದ್ದಾರೆ. ಅಂಗಾಂಗಗಳ, ಇಡೀ ದೇಹವನ್ನೇ ದಾನ ಮಾಡಿದವರೂ ಉಂಟು. 

"ಸಾಧನ ಶರೀರವಿದು, ನೀ ದಯದಿ ಕೊಟ್ಟದ್ದು; ಸಾಧಾರಣವಲ್ಲ, ಸಾಧುವಂದ್ಯ" ಎಂದು ದಾಸರು ಹೇಳುವಂತೆ ಆದಷ್ಟು ದಿನ ದೇಹವನ್ನು ಕಾಪಾಡಿಕೊಳ್ಳುವುದು ನ್ಯಾಯವೇ. ಆದರೆ ಕಾಲ ಬಂದಾಗ ಮರು ಮಾತಿಲ್ಲದೆ ಹೋಗಲು ತಯಾರಾಗಿರಬೇಕಾದ್ದು ಸಹ ಕರ್ತವ್ಯವೇ. 

*****

ಮರುಜನ್ಮ, ಪಾಪ-ಪುಣ್ಯಗಳು, ಇವೆಲ್ಲಾ ಇವೆಯೋ, ಇಲ್ಲವೋ ಗೊತ್ತಿಲ್ಲ. ಅಲ್ಲಿ ಹೋದವರು ಯಾರೂ ಮತ್ತೆ ಬಂದಿಲ್ಲ. ಆದ್ದರಿಂದ ಅದನ್ನು ಹೇಳುವವರಿಲ್ಲ. ನಮ್ಮ ವೈದಿಕ ವಾಂಗ್ಮಯದಲ್ಲಿ ನಂಬಿಕೆ ಇಟ್ಟವರಿಗೆ, ಶ್ರದ್ದೆ ಇರುವವರಿಗೆ ಈ ರೀತಿ ಸಾವು ಎದುರು ನಿಂತಾಗ ಧೈರ್ಯದಿನ ಎದುರಿಸುವ, ಸ್ವೀಕರಿಸುವ ಮನಸ್ಥಿತಿ ಬರುವುದಂತೂ ನಾವು ಕಂಡ ಸತ್ಯಗಳಲ್ಲಿ ಒಂದು ಎನ್ನಬಹುದು. 

Sunday, March 16, 2025

ಜೀವನದ "ಸ್ಲೋ ಸೈಕಲ್ ರೇಸ್"


ಶಾಲಾ-ಕಾಲೇಜುಗಲ್ಲಿ, ವಾರ್ಷಿಕ ಸಮಾರಂಭಗಳ ಮುನ್ನಾದಿನಗಳಲ್ಲಿ, ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ, ಗೆದ್ದವರಿಗೆ ಬಹುಮಾನಗಳನ್ನು ಘೋಷಿಸಿ, ಸಮಾರಂಭದ ದಿನ ಮುಖ್ಯ ಅತಿಥಿಗಳಿಂದ ಅವರಿಗೆ ಬಹುಮಾನ ಕೊಡಿಸುವುದು ಬಹಳ ಹಿಂದಿನಿಂದಲೂ ಬಂದಿರುವ ಪದ್ದತಿ. ಅವು ಸಾಂಸ್ಕೃತಿಕ ಕಾರ್ಯಕ್ರಮ ಇರಬಹುದು ಅಥವಾ ಕ್ರೀಡಾಸ್ಪರ್ಧೆಗಳು ಕೂಡ ಆಗಿರಬಹುದು. ಈ ರೀತಿಯ ಸ್ಪರ್ಧೆ ಮತ್ತು ಬಹುಮಾನಗಳಿಲ್ಲದೆ ನಡೆಸುವ ಸಮಾರಂಭಗಳು ನೀರಸ ಅನಿಸುತ್ತವೆ. ಅನೇಕರು ಈ ರೀತಿಯ ಸ್ಪರ್ಧೆಗಳಿಗೆ ಕಾದಿರುತ್ತಾರಲ್ಲದೆ ಬಹಳ ತಯಾರಿ ಕೂಡ ನಡೆಸಿರುತ್ತಾರೆ. ಕೆಲವರಿಗೆ ಕೇವಲ ಸ್ಪರ್ಧಿಸುವುದು ಮುಖ್ಯವಾದರೆ ಮತ್ತೆ ಕೆಲವರಿಗೆ ಗೆಲ್ಲುವುದೂ ಅತಿ ಮುಖ್ಯ. ಅನೇಕ ಸ್ಪರ್ಧೆಗಳಲ್ಲಿ  ಕೆಲವರು ಮಾತ್ರ ಬಹುಮಾನ ಗಳಿಸಬಹುದು. ಆದರೆ ಕೆಲವು ರೀತಿಯ ಸ್ಪರ್ಧೆಗಳಲ್ಲಿ ಅನೇಕರು ಬಹುಮಾನ ಗಳಿಸಬಹುದು. 

ಕೆಲವು ಸ್ಪರ್ಧೆಗಳಲ್ಲಿ ಅನೇಕರು ಬಹುಮಾನ ಗಳಿಸಬಹುದು ಅನ್ನುವುದು ಸ್ವಲ್ಪ ಆಶ್ಚರ್ಯ ಹುಟ್ಟಿಸಬಹುದು. ಸಾಮಾನ್ಯವಾಗಿ ಮೊದಲ ಮೂರು ಸ್ಥಾನ ಗೆದ್ದವರಿಗೆ ಬಹುಮಾನಗಳನ್ನೂ, ತುಂಬಾ ಚೆನ್ನಾಗಿ ಪ್ರದರ್ಶನಗಳನ್ನು ನೀಡಿದ್ದರೂ ಕೂಡ ಬಹುಮಾನ ಗೆಲ್ಲಲಾಗದವರಿಗೆ ಸಮಾಧಾನಕರ ಬಹುಮಾನಗಳನ್ನೂ (ಕನ್ಸೋಲೇಷನ್ ಪ್ರೈಜ್) ಕೊಡುವುದು ಸಾಮಾನ್ಯ ರೀತಿ, ಕೆಲವು ಸ್ಪರ್ಧೆಗಳಲ್ಲಿ ಅನೇಕರು ನೂರಕ್ಕೆ ನೂರು ಅಂಕ ಪಡೆಯಬಹುದು. ಒಂದು ಪ್ರಶ್ನೋತ್ತರ ಪರೀಕ್ಷೆ ಅನ್ನೋಣ. ಹತ್ತು ಪ್ರಶ್ನೆ ಕೇಳಲಾಗುವುದು. ಅನೇಕರು ಹತ್ತಕ್ಕೆ ಹತ್ತು ಸರಿ ಉತ್ತರ ಕೊಡಬಹುದು. ಆಗ ಈ ರೀತಿ ಎಲ್ಲಕ್ಕೂ ಸರಿ ಉತ್ತರ ಕೊಟ್ಟವರು ಎಷ್ಟು ಮಂದಿಯಾದರೂ ಅವರೆಲ್ಲರೂ ಗೆದ್ದಂತೆ! 

ನಮ್ಮ ಚಿಕ್ಕ ವಯಸ್ಸಿನಲ್ಲಿ ಶಾಲೆಗಳಲ್ಲಿ ಓಟದ ಸ್ಪರ್ಧೆಗಳು ಇರುತ್ತಿದ್ದವು. ಬೇಗ ಓಡಿ ಮೊದಲು ಗುರಿ ಮುಟ್ಟಿದವರಿಗೆ ಬಹುಮಾನಗಳು ಸಿಗುತ್ತಿದ್ದವು. ಆದರೆ ನಿಧಾನವಾಗಿ ಸೈಕಲ್ ನಡೆಸುವ ಪಂದ್ಯ ಕೂಡ ಇರುತ್ತಿತ್ತು. ಇದಕ್ಕೆ ಸ್ಲೋ ಸೈಕಲ್ ರೇಸ್ ಅನ್ನುತ್ತಿದ್ದರು. (ಈಗಲೂ ಈ ರೀತಿ ಪಂದ್ಯಗಳಿರಬಹುದು) ಈ ಪಂದ್ಯದಲ್ಲಿ ಯಾರು ಅತಿ ನಿಧಾನವಾಗಿ ಸೈಕಲ್ ಚಲಿಸಿ ಕಡೆಯಲ್ಲಿ ಗೆರೆ ದಾಟುವರೋ ಅವರಿಗೆ ಬಹುಮಾನ! ಇಲ್ಲಿ ವೇಗಕ್ಕಿಂತ ಸಮತೋಲನ (ಬ್ಯಾಲನ್ಸ್) ಮತ್ತು ಸಹಿಷ್ಣುತೆ (ಎಂಡ್ಯೂರನ್ಸ್) ಮುಖ್ಯ. ಇದೇನು ಸುಲಭದ ಕೆಲಸವಲ್ಲ. ಈ ಪಂದ್ಯಕ್ಕೇ ತಯಾರಿ ನಡೆಸಿ ಬಹುಮಾನ ಗಿಟ್ಟಿಸುತ್ತಿದ್ದ ಸ್ಪರ್ಧಿಗಳೂ ಇರುತ್ತಿದ್ದರು.
*****

ಪಂದ್ಯಗಳಲ್ಲಿ ಹೀಗಿದ್ದರೆ ಜೀವನ ಯಾತ್ರೆಯಲ್ಲಿ ಹೇಗೆ? ಇದೇ ತತ್ವವನ್ನು ಜೀವನಕ್ಕೂ ವಿಸ್ತರಿಸಬಹುದೇ? ಅವಶ್ಯವಾಗಿ ವಿಸ್ತರಿಸಬಹುದು. ಜೀವನವೂ ಒಂದು ರೀತಿಯ ಓಟದ ಸ್ಪರ್ಧೆ ತಾನೆ? ಇಲ್ಲಿಯೂ ದೂರ ಮತ್ತು ಸಮಯದ ಎರಡು ಲೆಕ್ಕಗಳು. ಎಷ್ಟು ಸಮಯದಲ್ಲಿ ಕೊಟ್ಟ ದೂರ ಸಾಗುತ್ತಾರೆ ಎನ್ನುವುದು. ಹಾಗಿದ್ದರೆ, ಇದರ ವಿಚಾರ ಸ್ವಲ್ಪ ನೋಡೋಣ. 

ಯಾರಾದರೂ ದೊಡ್ಡವರಿಗೆ ನಮಸ್ಕಾರ ಮಾಡಿದರೆ ಆಶೀರ್ವಾದ ಮಾಡುತ್ತಾರೆ. "ಧೀರ್ಘಾಯುಷ್ಮಾನ್ ಭವ" ಅಂದರೆ "ದೀರ್ಘಾಯುಸ್ಸು ಹೊಂದು" ಎನ್ನುವುದು ಅನೇಕ ಬಾರಿ ಕೇಳುವ ಆಶೀರ್ವಾದ. ವೈದಿಕ ಸಂಪ್ರದಾಯದಲ್ಲಿ "ಶತಮಾನಂ ಭವತಿ ಪುರುಷಃ" ಎನ್ನುತ್ತಾರೆ. "ನೂರು ವರ್ಷ ಬಾಳು" ಎಂದು. ಯಾವ ನೂರು ವರ್ಷ? ಇದೇನು ಪ್ರಶ್ನೆ ಎನ್ನಬಹುದು. ನಾವು ಸಾಮಾನ್ಯವಾಗಿ ಲೆಕ್ಕಕ್ಕೆ ತೆಗೆದುಕೊಳ್ಳುವುದು ಒಂದೇ ಕಾಲ. ಅದು ಬಾಹ್ಯ ಅಂದರೆ ಹೊರಗಿನ ಕಾಲ. ಅದನ್ನು ಅಳೆಯುವುದು ಸೆಕೆಂಡು, ನಿಮಿಷ, ಗಂಟೆ, ದಿನ ಮತ್ತು ವರ್ಷಗಳ ಲೆಕ್ಕದಲ್ಲಿ. ಇದರ ಲೆಕ್ಕದಲ್ಲಿ ನೂರು ವರುಷ ಬಾಳು ಎಂದು. ನೂರೇ ಏಕೆ? ಸಾವಿರ ಏಕೆ ಆಗಬಾರದು? ಅದು ಸಾಧ್ಯವಿಲ್ಲ. ಭೌತಿಕ ದೇಹಕ್ಕೆ ಅದರದೇ ಆದ ಇತಿ-ಮಿತಿಗಳಿವೆ. ಸುಮ್ಮನೆ ಸಾವಿರ ವರುಷ ಬಾಳು ಎಂದರೆ ಅರ್ಥವಿಲ್ಲ. ಹೇಳಿದ ಮಾತಿಗೆ ಒಂದು ಬೆಲೆ, ತೂಕ ಬೇಕು. ಈ ದೇಹಕ್ಕೆ ನೂರು ವರುಷ ಬದುಕಲು ಸಾಧ್ಯ. ಆದ್ದರಿಂದ "ನೂರು ವರುಷ ಬಾಳು" ಎಂದು ಆಶೀರ್ವಾದ.

ಈ ದೇಹಕ್ಕೆ ಹೊರಗಿನ ಕಾಲದಂತೆ ಒಂದು ಒಳಗಿನ ಕಾಲವೂ ಇದೆ! ಅದು ಹೇಗೆ? ಕೆಲವರು ಚಿಕ್ಕ ವಯಸ್ಸಿಗೇ ಮುದುಕರಂತೆ ಕಾಣುತ್ತಾರೆ. ಇನ್ನು ಕೆಲವರು ತುಂಬಾ ವಯಸ್ಸಾದರೂ ಯುವಕರಂತೆ ಕಾಣುತ್ತಾರೆ. ಅದು ಹೇಗೆ? ಇಬ್ಬರು ಒಂದೇ ದಿನ, ಐವತ್ತು ವರುಷದ ಹಿಂದೆ ಹುಟ್ಟಿದವರು. ಇಬ್ಬರಿಗೂ ಹೊರಗಿನ ಕಾಲದಲ್ಲಿ ಈಗ ಐವತ್ತು ವರುಷ ವಯಸ್ಸು. ಆದರೆ ಒಬ್ಬ ಅರವತ್ತೈದು ವಯಸ್ಸಿನವನಂತೆ ಕಾಣುತ್ತಾನೆ. ಇನ್ನೊಬ್ಬ ಮೂವತ್ತೈದು ವಯಸ್ಸಿನವಂತಿದ್ದಾನೆ. ಇದಕ್ಕೆ ಕಾರಣ ದೇಹದ ಒಳಗಿನ ವಯಸ್ಸು. ಮಕ್ಕಳಲ್ಲಿ "ಬೆಳವಣಿಗೆಯ ಬಿರುಸು" (ಗ್ರೋತ್ ಸ್ಪರ್ಟ್) ಇದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. "ಎಲಾ ಇವನೇ! ಒಂದು ವರುಷದಲ್ಲಿ ಎಷ್ಟು ಬೆಳೆದಿದ್ದಾನೆ!" ಎನ್ನುತ್ತೇವೆ. ಹಾಗೆಯೇ ವಯಸ್ಕರಲ್ಲಿ "ವೃದ್ಧಾಪ್ಯದ ಬಿರುಸು" ಉಂಟಂತೆ. (ಇದರ ಬಗ್ಗೆ ಇನ್ನೊಂದು ಸಂಚಿಕೆಯಲ್ಲಿ ನೋಡೋಣ). "ಏನಿದು? ಒಂದು ವರುಷದಲ್ಲಿ ಎಷ್ಟು ಕುಗ್ಗಿಹೋಗಿದ್ಧಾರೆ!" ಅನ್ನುತ್ತೇವೆ. ಅಂದರೆ ಹೊರಗಿನ ವಯಸ್ಸಿನ ಹಾಗೆ (ಬಾಹ್ಯ ವಯಸ್ಸು) ದೇಹದಲ್ಲಿ ಸಹ (ಆಂತರಿಕ ವಯಸ್ಸು) ಒಂದು ಗಡಿಯಾರ ಇದೆ ಎಂದಾಯಿತು.   

ಹಾಗಿದ್ದಲ್ಲಿ ಈ ಬಾಹ್ಯ ವಯಸ್ಸು ಮತ್ತು ಆಂತರಿಕ ವಯಸ್ಸಿನ ಸಮನ್ವಯ ಅಥವಾ ಹೊಂದಾಣಿಕೆ ಹೇಗೆ? ಇದಕ್ಕೆ ನಮ್ಮ ಹಿರಿಯರು ಸೊಗಸಾಗಿ ತಾಳೆ (ಮ್ಯಾಚಿಂಗ್) ಹಾಕುವ ವಿಧಿ ಹೇಳಿಕೊಟ್ಟಿದ್ದಾರೆ. 

*****

ಏನೂ ಕೆಲಸ ಮಾಡದೇ ಒಂದು ಕಡೆ ಸುಮ್ಮನೆ ಕುಳಿತುಕೊಳ್ಳಿ. ನಿಮ್ಮ ಉಸಿರಾಟದ ಮೇಲೆ ಗಮನವಿಡಿ. ಒಂದು ಸಲ ಶ್ವಾಸದಲ್ಲಿ ಗಾಳಿ ಒಳಗೆ ತಗೆದುಕೊಂಡು ಹೊರಗೆ ಬಿಡಿ. ಸಮಯ ನೋಡಿ. ಸರಿಯಾಗಿ ಉಸಿರು ತೆಗೆದುಕೊಳ್ಳಲು ಎರಡು ಸೆಕೆಂಡ್ ಸಮಯ ಬೇಕು. ಹಾಗೆ, ಪೂರ್ತಿ ಗಾಳಿ ಹೊರಬಿಡಲು ಮತ್ತೆರಡು ಸೆಕೆಂಡ್ ಬೇಕು. ಅಂದರೆ ಒಂದು ಸಾರಿ ಉಸಿರಾಡಲು ನಾಲ್ಕು ಸೆಕೆಂಡ್ ಬೇಕು. 

  • ಉಸಿರು ಒಳಗಡೆ ತೆಗೆದುಕೊಳ್ಳಲು ಎರಡು ಸೆಕೆಂಡುಗಳು. 
  • ಉಸಿರು ಬಿಡಲು ಎರಡು ಸೆಕೆಂಡುಗಳು. 
  • ಒಂದು ಸಲ ಉಸಿರಾಡಲು (ಒಂದು ಶ್ವಾಸ) ನಾಲ್ಕು (4) ಸೆಕೆಂಡುಗಳು. 
  • ಅಂದರೆ, ಒಂದು ನಿಮಿಷಕ್ಕೆ (ಅರವತ್ತು ಸೆಕೆಂಡುಗಳು) ಹದಿನೈದು (15) ಶ್ವಾಸಗಳು. 
  • ಒಂದು ಗಂಟೆಗೆ (60x15) 900 ಶ್ವಾಸಗಳು. 
  • ಒಂದು ದಿನಕ್ಕೆ (24 ಗಂಟೆಗಳು) (900x24) 21,600 ಶ್ವಾಸಗಳು. 
  • ಒಂದು ವರುಷಕ್ಕೆ (360 ದಿನ ಸರಾಸರಿ) (21,600 x 360) 77, 76,000 ಶ್ವಾಸಗಳು. 
  • ನೂರು ವರುಷಕ್ಕೆ (77,76,000 x 100) 77,76,00,000 ಶ್ವಾಸಗಳು! 

ವೈದಿಕ ಕಾಲದಲ್ಲಿ ಲೆಕ್ಕ ಹಾಕುವಾಗ ಚಾಂದ್ರಮಾನ, ಸೌರಮಾನ ವರುಷಗಳ ಪದ್ಧತಿ ಇದೆ. ಎರಡರಲ್ಲಿ ಸ್ವಲ್ಪ ವ್ಯತ್ಯಾಸ  ಉಂಟು. ಆದ ಕಾರಣ ಒಂದು ಸ್ಥೂಲ ಲೆಕ್ಕವಾಗಿ 360 ದಿನಕ್ಕೆ ಒಂದು ವರುಷ. (ಈಗಲೂ ಕೆಲವು ಅನಿವಾಸಿ ಠೇವಣಿಗಳಿಗೆ ಬ್ಯಾಂಕಿನವರು ಬಡ್ಡಿ ಕೊಡುವಾಗ ವರುಷಕ್ಕೆ 360 ದಿನವೆಂದೇ ಲೆಕ್ಕಹಾಕುತ್ತಾರೆ!). 

ಮೇಲಿನ ಸೂತ್ರದಂತೆ ದೇಹದ ಒಳಗಿನ ಲೆಕ್ಕದ ಎಪ್ಪತ್ತೇಳು ಕೋಟಿ ಎಪ್ಪತ್ತಾರು ಲಕ್ಷ ಸಂಖ್ಯೆಯ ಶ್ವಾಸದ ಸಮಯ ಹೊರಗಿನ ಒಂದು ನೂರು ವರುಷಕ್ಕೆ ಸಮವಾಯಿತು. "ನೂರು ವರುಷ ಬಾಳು ಅಂದರೆ ಎಪ್ಪತ್ತೇಳು ಕೋಟಿ ಎಪ್ಪತ್ತಾರು ಲಕ್ಷ ಸಲ ಶ್ವಾಸ ತೆಗೆದು ಕೊಳ್ಳುವ ಕಾಲದವರೆಗೆ ಬದುಕು" ಎಂದ ಹಾಗೆ. 

*****

ಮಹಾಪಂಡಿತ ಕವಿಗಳಾದ ಶ್ರೀನಿವಾಸಾಚಾರ್ಯರು (ಶ್ರೀ ಜಗನ್ನಾಥ ದಾಸರೆಂದು ಪ್ರಸಿದ್ದರಾದವರು) ತಮ್ಮ "ಹರಿಕಥಾಮೃತಸಾರ" ಎಂಬ ಮೇರು ಕೃತಿಯಲ್ಲಿ "ಮಂಗಳಾಚರಣ ಸಂಧಿ" ನಾಲ್ಕನೆಯ ಪದ್ಯದಲ್ಲಿ ಶ್ವಾಸಕ್ರಿಯೆಯ ಮೂಲ ದೇವತೆಯಾದ ಮುಖ್ಯಪ್ರಾಣ ದೇವರನ್ನು ಕುರಿತಾಗಿ ಪ್ರಾರ್ಥಿಸುವಾಗ ಈ ಮೇಲಿನ ಲೆಕ್ಕವನ್ನು ಸೂತ್ರ ರೂಪದಲ್ಲಿ ಹೀಗೆ ಕೊಟ್ಟಿದ್ದಾರೆ: 

ಆರು ಮೂರೆರಡೊಂದು ಸಾವಿರ 
ಮೂರೆರಡು ಶತ ಶ್ವಾಸಜಪಗಳ 
ಮೂರುವಿಧ ಜೀವರೊಳಗಬ್ಜಜಕಲ್ಪ ಪರ್ಯಂತ 
ತಾರಚಿಸಿ ಸಾತ್ವರಿಗೆ ಸುಖ ಸಂಸಾರ
ಮಿಶ್ರರಿಗೆ ಅಧಮ ಜನರಿಗಪಾರ 
ದುಃಖಗಳೀವ ಗುರು ಪವಮಾನ ಸಲಹೆಮ್ಮ 

ಈ ಸೂತ್ರದಲ್ಲಿ ಸ್ವಲ್ಪ ಒಗಟಿದೆ. ಮೊದಲ ಸಾಲಿನಲ್ಲಿ ಆರು ಮೂರು ಎನ್ನುವುದನ್ನು ಗುಣಿಸಬೇಕು. ಆಗ ಹದಿನೆಂಟು ಬರುತ್ತದೆ. ಎರಡೊಂದು ಎನ್ನುವುದನ್ನು ಕೂಡಬೇಕು. ಆಗ ಮೂರು ಸಿಗುತ್ತದೆ. ಹದಿನೆಂಟು + ಮೂರು = ಇಪ್ಪತ್ತೊಂದು ಸಾವಿರ ಆಯಿತು. ಎರಡನೆಯ ಸಾಲಿನ ಮೂರೆರಡು ಅನ್ನುವಲ್ಲಿ ಮೂರನ್ನು ಎರಡರಿಂದ ಗುಣಿಸಬೇಕು. ಆಗ ಆರು ನೂರು ಬಂತು. ಒಟ್ಟು ಇಪ್ಪತ್ತೊಂದು ಸಾವಿರದ ಆರು ನೂರು ಆಯಿತು!

ಈ ಪದ್ಯದಲ್ಲಿ ಇನ್ನೊಂದು ವಿಶೇಷವಿದೆ. ಇದು "ಭಾಮಿನಿ ಷಟ್ಪದಿ" ಪದ್ಯ. ಭಾಮಿನಿ ಷಟ್ಪದಿಯಲ್ಲಿ ಒಟ್ಟು ಆರು ಸಾಲುಗಳು. ಮೊದಲ ಸಾಲಿನಲ್ಲಿ ಏಳು ಮತ್ತು ಏಳು ಒಟ್ಟು ಹದಿನಾಲ್ಕು ಮಾತ್ರೆಗಳು. ಎರಡನೆಯ ಸಾಲಿನಲ್ಲಿಯೂ ಹೀಗೆ ಹದಿನಾಲ್ಕು ಮಾತ್ರೆಗಳು. ಮೂರನೆಯ ಸಾಲಿನಲ್ಲಿ ಏಳು, ಏಳು ಮತ್ತು ಎಂಟು ಮಾತ್ರೆಗಳು. ಅಂದರೆ ಇಪ್ಪತ್ತೆರಡು ಮಾತ್ರೆಗಳು. ಮೂರು ಸಾಲು ಸೇರಿದರೆ ಐವತ್ತು ಮಾತ್ರೆಗಳು. ನಾಲ್ಕು, ಐದು ಮತ್ತು ಆರನೆಯ ಸಾಲಿನಲ್ಲಿ ಹೀಗೆಯೇ ಮತ್ತೆ ಐವತ್ತು ಮಾತ್ರೆಗಳು. ಒಟ್ಟಿನಲ್ಲಿ ಎಲ್ಲ ಸೇರಿ ನೂರು ಮಾತ್ರೆಗಳು! ನೂರು ವರುಷದ ಲೆಕ್ಕಕ್ಕೆ ನೂರು ಮಾತ್ರೆಗಳ ಛಂದಸ್ಸು! ಆದಕಾರಣ ಹೀಗೆ ಗುಣಿಸುವ ಮತ್ತು ಕೂಡುವ ಲೆಕ್ಕದ ಒಗಟಿನ ಸೂತ್ರ ಕೊಟ್ಟಿದ್ದಾರೆ.

ಭಾರತೀಯ ತತ್ವಶಾಸ್ತ್ರದಲ್ಲಿ "ಸಂಖ್ಯಾ ಶಾಸ್ತ್ರ" ಬಹಳ ಮಹತ್ವದ್ದು. ಕೆಲವು ವಿಷಯಗಳು ಸುಲಭವಾಗಿ ಅರ್ಥ ಆಗುವುದಿಲ್ಲ. ಬಹುಶ್ರುತ ವಿದ್ವಾಂಸರಾದ ಕೀರ್ತಿಶೇಷ ಬನ್ನಂಜೆ ಗೋವಿಂದಾಚಾರ್ಯರು ಇಂತಹ ವಿಷಯಗಳನ್ನು ವಿವರಿಸುವುದರಲ್ಲಿ ಎತ್ತಿದ ಕೈ ಆಗಿದ್ದರು. ಅವರನ್ನು ಇಂತಹ ಸಂದರ್ಭಗಳಲ್ಲಿ ಖಂಡಿತ ನೆನೆಯಬೇಕು. 

***** 

ಮನುಷ್ಯನು ದೇಹದ ಒಳಗಿನ ಲೆಕ್ಕದಲ್ಲಿ ಒಟ್ಟು 77,76,00,000 ಬಾರಿ ಉಸಿರಾಡಿದರೆ ನೂರು ವರುಷ ಆಗುತ್ತದೆ. ಪ್ರಾಣಾಯಾಮಾದಿಗಳನ್ನು ಅಭ್ಯಾಸ ಮಾಡಿ ಶ್ವಾಸದ ಮೇಲೆ ಹಿಡಿತ ಸಾಧಿಸಿದರೆ, ಉಸಿರು ಬಿಗಿ ಹಿಡಿದು ಎಂಟು ಸೆಕೆಂಡಿಗೆ ಒಂದರಂತೆ ಉಸಿರಾಡಿದರೆ ಹೊರಗಿನ ಕಾಲ ಎರಡು ನೂರು ವರುಷ ಬದುಕಬಹುದು! ಸ್ಲೋ ಸೈಕಲ್ ರೇಸಿನಂತೆ.  ಅದೇ ರೀತಿ ಆರು ಸೆಕೆಂಡಿಗೆ ಒಮ್ಮೆ ಉಸಿರಾಡಿದರೆ ನೂರೈವತ್ತು ವರ್ಷ. ಮೂರು ಸೆಕೆಂಡಿಗೊಮ್ಮೆ ಆದರೆ, ಏದುಸಿರು ಬಿಟ್ಟರೆ ಎಪ್ಪತ್ತೈದೇ ವರ್ಷ. ಹೀಗೆಯೇ ಲೆಕ್ಕ. 

ಮೇಲಿನ ಪದ್ಯದಲ್ಲಿ ಶ್ವಾಸಜಪದ ಬಗ್ಗೆ ಹೇಳಿದ್ದಾರೆ. ಮೂರುವಿಧ ಜೀವರು ಎಂದಿದ್ದಾರೆ. 

ಇವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ವಿವರವಾಗಿ ನೋಡೋಣ.