Showing posts with label Madhavi. Show all posts
Showing posts with label Madhavi. Show all posts

Monday, October 20, 2025

ನಾಲ್ಕು ಮಾತುಗಳು


ಚಂದ್ರವಂಶದವರ ವಿವರಗಳು ಮಹಾಭಾರತ, ಶ್ರೀಮದ್ಭಾಗವತ, ಹರಿವಂಶ ಮತ್ತು ಇತರ ಕಡೆಗಳಲ್ಲಿ ವಿಪುಲವಾಗಿ ದೊರೆಯುತ್ತವೆ. ಚಕ್ರವರ್ತಿ ಯಯಾತಿಯ ಮಗಳಾದ ಮಾಧವಿಯ ವೃತ್ತಾಂತ ಮುಖ್ಯವಾಗಿ ಮಹಾಭಾರತದ ಉದ್ಯೋಗ ಪರ್ವದಲ್ಲಿ ಏಳೆಂಟು ಶ್ಲೋಕಗಳಲ್ಲಿ ಸಿಗುತ್ತದೆ. ಮಾಧವಿಯ ಮಕ್ಕಳ ಚರಿತ್ರೆಗಳು ಶ್ರೀಮದ್ಭಾಗವತದಲ್ಲಿ ವಿವರವಾಗಿ ಸಿಗುತ್ತವೆ. 


ದುರ್ಯೋಧನನು ಯಾವ ಹಿತೈಷಿಗಳ ಮಾತನ್ನೂ ಕೇಳದೆ, ಪಾಂಡವರಿಗೆ ರಾಜ್ಯಭಾಗ ಕೊಡದೇ ಉದ್ಧಟನಾಗಿ ವರ್ತಿಸುವಾಗ ದೇವರ್ಷಿ ನಾರದರು ಅವನಿಗೆ ಬುದ್ಧಿವಾದ ಹೇಳಿ “ಹಠಮಾರಿತನ ಒಳ್ಳೆಯದಲ್ಲ” ಎಂದು ತಿಳಿಸುವ ಸಲುವಾಗಿ ಗಾಲವನ ವೃತ್ತಾಂತ (ಗಾಲವೋಪಾಖ್ಯಾನ) ಹೇಳುತ್ತಾರೆ. ಶಿಷ್ಯ ಗಾಲವನ ಹಠಮಾರಿತನದಿಂದ ಕುಪಿತರಾದ ಅವನ ಗುರುಗಳು ವಿಶ್ವಾಮಿತ್ರರು ಎಂಟುನೂರು “ಶ್ಯಾಮಲಕರ್ಣ” ಕುದುರೆಗಳನ್ನು ಗುರುದಕ್ಷಿಣೆಯಾಗಿ ಕೇಳುತ್ತಾರೆ. ಆ ಸಮಯದಲ್ಲಿ ಭೂಮಿಯ ಮೇಲೆ ಅಂತಹ ಕುದುರೆಗಳು ಕೇವಲ ಆರುನೂರು ಮಾತ್ರ ಇದ್ದುವಂತೆ. ವಿಶ್ವಾಮಿತ್ರರು ಅವನಿಗೆ ಪಾಠ ಕಲಿಸುವ ಸಲುವಾಗಿ ಎಂಟುನೂರು ಶ್ಯಾಮಲಕರ್ಣ ಕುದುರೆಗಳನ್ನು ಕೇಳಿದರಂತೆ. ಹೀಗೆ ನಡೆಯುವ ಕಥೆಯಲ್ಲಿ ಮಾಧವಿಯ ಮೂಲಕ ಆ ಕುದುರೆಗಳ ಸಂಪಾದನೆಯ ಕಥೆ ಬೆಳೆಯುತ್ತದೆ. 


ಮಾಧವಿಯ ಕಥೆಯಂತೆಯೇ ಇರುವ ಇನ್ನೊಂದು ಕಥೆ “ಮೂರುವರೆ ವಜ್ರಗಳು” ಅನ್ನುವುದು. ಇದೂ ಕುದುರೆಯ ಕಥೆಯೇ. ಇದರಲ್ಲಿ ಶಾಪಗ್ರಸ್ತ ಸ್ತ್ರೀ ಒಬ್ಬಳಿಗೆ ಮೂರುವರೆ ವಜ್ರ ತಾಕಿದಾಗ ಶಾಪವಿಮೋಚನೆ ಎಂದು ಹೇಳುವ ಸಮಾಚಾರ. ಇದು ನಡೆದದ್ದು ಶ್ರೀಕೃಷ್ಣ, ಭೀಮಸೇನ, ದುರ್ಯೋಧನರ ಕಾಲದಲ್ಲಿ. ಶ್ರೀಕೃಷ್ಣ ಒಂದು ವಜ್ರ, ಬಲರಾಮ (ಅಥವಾ ಸುದರ್ಶನ) ಒಂದು ವಜ್ರ, ಭೀಮಸೇನ ಒಂದು ವಜ್ರ ಮತ್ತು ದುರ್ಯೋಧನ ಅರ್ಧ ವಜ್ರ. ನಾಲ್ವರು ಸೇರಿ ಮೂರುವರೆ ವಜ್ರ. ವಜ್ರ ಅಂದರೆ ವಜ್ರದೇಹಿಗಳು ಎಂದು. “ಮೂರುವರೆ ವಜ್ರಗಳು” ಹರಿಕಥೆಗಳ ಮುಖಾಂತರ ಹೆಚ್ಚು ಪ್ರಚಲಿತವಾಯಿತು. ಚಲನಚಿತ್ರವಾಗಿ ಜನರಿಗೆ ಇನ್ನಷ್ಟು ಪರಿಚಿತವಾಯಿತು. ಮಾಧವಿಯ ಕಥೆಗೆ ಈ ಭಾಗ್ಯ ಸಿಕ್ಕಲಿಲ್ಲ. 


ಮಾಧವಿಯ ಕಥೆ ಬಹಳ ಕುತೂಹಲಕಾರಿಯೂ, ರೋಮಾಂಚಕವೂ ಆಗಿದೆ. ಇದು ಅನೇಕ ಲೇಖಕರ, ಸಾಹಿತಿಗಳ ಗಮನ ಸೆಳೆದು ಪುಸ್ತಕಗಳು ಪ್ರಕಟವಾಗಿವೆ. ಕನ್ನಡದಲ್ಲಿ ಡಾ. ಅನುಪಮಾ ನಿರಂಜನ ಅವರ “ಮಾಧವಿ” ಬಹಳ ಹಿಂದೆ ಪ್ರಕಟವಾಗಿದೆ. ಪತ್ರಿಕೆಗಳಲ್ಲಿ ಧಾರಾವಾಹಿಯಾಗಿಯೂ ಪ್ರಕಟವಾಗಿವೆ. ಹಿಂದಿ ಭಾಷೆಯಲ್ಲಿಯೂ ಉಂಟು. ಬೇರೆ ಭಾಷೆಗಳಲ್ಲಿಯೂ ಇರಬಹುದು. ಬಹುತೇಕ, ಇವು ಪುರುಷಪ್ರಧಾನ ಸಮಾಜ ಒಬ್ಬ ಸ್ತ್ರೀಯ ಶೋಷಣೆ ಮಾಡಿದ ದೃಷ್ಟಿಯಿಂದ ವಿಶ್ಲೇಷಿಸಿ ಬರೆದವು. 


ನಹುಷ, ಯಯಾತಿ ಮುಂತಾದುವರ ಪ್ರಸಂಗಗಳು ಅನೇಕ ಸಾಹಿತ್ಯ ಕೃತಿಗಳ ರಚನೆಗೆ ಕಾರಣವಾಗಿವೆ. ನನ್ನ roundtheclockstories.blogspot.in ಬ್ಲಾಗ್-ಗಳಲ್ಲಿ “ಯಯಾತಿಯ ಮೊಮ್ಮಕ್ಕಳು” ಮತ್ತು “ಮಾಧವಿಯ ಮಕ್ಕಳು” ಎಂದು ಎರಡು ಸಂಚಿಕೆಗಳು ಒಂದು ತಿಂಗಳ ಹಿಂದೆ (ಸೆಪ್ಟೆಂಬರ್ 2025) ಪ್ರಕಟವಾಗಿದ್ದವು. ಅವುಗಳ ಬಗ್ಗೆ ಬಂದ ಪ್ರತಿಕ್ರಿಯೆಗಳಲ್ಲಿ ಹೆಚ್ಚಿನವು ದೊಡ್ಡವರ ಗುಣ ಮತ್ತು ದೋಷಗಳು, ಅವುಗಳನ್ನು ನೋಡುವ ರೀತಿ, ಇವುಗಳ ಬಗ್ಗೆ ಕೇಂದ್ರೀಕೃತವಾಗಿದ್ದವು. ಅವುಗಳನ್ನು ಓದಿದವರು ಮತ್ತು ಮಿತ್ರರು ಇದನ್ನು ಸ್ವಲ್ಪ ವಿವರವಾಗಿ ಒಂದು ನಾಟಕ ರೂಪವಾಗಿ ಬರೆಯುವಂತೆ ಪ್ರೋತ್ಸಾಹಿಸಿದರು. ಬ್ಲಾಗ್ ಸಂಚಿಕೆಗಳು ಹೊರಬಂದ ನಂತರ ಹೃದಯದ ಶಸ್ತ್ರ ಚಿಕಿತ್ಸೆಯ ಪರಿಣಾಮವಾಗಿ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಾಗ ಅದರ ನೋವನ್ನು ಮರೆಸಿದುದು ಈ ಯಯಾತಿಯ ಮೊಮ್ಮಕ್ಕಳ, ಮಾಧವಿಯ ಮಕ್ಕಳ ಉದಾತ್ತತೆಯ ಬಗ್ಗೆ ಮನಸ್ಸಿನಲ್ಲಿ ನಡೆದ ಮಂಥನ. ಅದರ ಫಲವಾಗಿ ಈ ನಾಟಕರೂಪ ಹೊರಬಂದಿದೆ. ನಾನು ಲೇಖಕನೂ ಅಲ್ಲ; ಸಾಹಿತಿಯೂ ಅಲ್ಲ.  ಸ್ನೇಹಿತರ ಪ್ರೀತಿಯ ಒತ್ತಾಯದ ಕಾರಣವಾಗಿ ಅಲ್ಲಿ ನಡೆದ ಮಂಥನ ಈ ನಾಟಕವಾಗಿ ರೂಪುಗೊಂಡಿದೆ. ಅಷ್ಟೇ. 


ಯಯಾತಿಯ ವ್ಯಕ್ತಿತ್ವದಲ್ಲಿ ಎರಡು ಗಂಟಿನ ಘಟ್ಟಗಳು. ಒಂದು ಮಗ ಪುರುವಿನ ಯೌವನ ತೆಗೆದುಕೊಂಡದ್ದು. ಇನ್ನೊಂದು ಮಗಳು ಮಾಧವಿಯನ್ನು ಗಾಲವರ ಅಶ್ವಗಳ ಅವಶ್ಯಕತೆಯ ಕಾರಣ ಕಳಿಸಿಕೊಟ್ಟದ್ದು. ಒಬ್ಬ ತಂದೆಯಾಗಿ ಅವನು ಅನುಭವಿಸಿರಬಹುದಾದ ವೇದನೆಗಳು, ತಂದೆಯ ಆಜ್ಞಾಧಾರಕಿಯಾಗಿ ಮಾಧವಿಯು ಅನುಭವಿಸಿದ ಹಿಂಸೆ, ಇವು ಇಲ್ಲಿನ ಮುಖ್ಯ ಬಿಂದುಗಳು. ಎರಡು ಕಪ್ಪು ಚುಕ್ಕೆಗಳಿಂದ ಯಯಾತಿಯ ವ್ಯಕ್ತಿತ್ವವನ್ನು ಅಳೆಯಬಾರದು ಎಂದು ನಾಟಕದ ಆಶಯ. ನಂಬುವವರು ಇದು ದೇವತೆಗಳ ಆಟ ಎಂದು ತಿಳಿದರಂತೂ ಅದರ ಸಮಾಧಾನವೇ ಬೇರೆ ರೀತಿಯದು. 


ಹಿಂದಿನ ತಲೆಮಾರಿನಲ್ಲಿ ಶ್ರಾದ್ಧಗಳ ಸಮಯದಲ್ಲಿ ದೌಹಿತ್ರರಿಗೆ (ಹೆಣ್ಣುಮಕ್ಕಳ ಮಕ್ಕಳು) ವಿಶೇಷ ಸ್ಥಾನವಿತ್ತು. ಗಂಡುಮಕ್ಕಳು ಶ್ರಾದ್ಧ ಮಾಡಿದರೂ, ಅವರ ಅಕ್ಕ-ತಂಗಿಯರು ಮತ್ತು ಅವರ ಮಕ್ಕಳು ಆ ಸಂದರ್ಭದಲ್ಲಿ ಬಂದು ಭಾಗವಹಿಸಲಿ ಎನ್ನುವುದು ಅದರ ಮೂಲ ಕಾರಣ. ಪ್ರತಿ ಮನೆಯಲ್ಲೂ ಅನೇಕ ಮಕ್ಕಳಿರುತ್ತಿದುದರಿಂದ ದೌಹಿತ್ರರು ಬರುವುದು ಅಷ್ಟೇನೂ ಕಷ್ಟವಿರಲಿಲ್ಲ. ಒಬ್ಬನೂ ದೌಹಿತ್ರ ಅಂದು ಬರಲಿಲ್ಲ ಅಂದರೆ ಶ್ರಾದ್ದ ಮಾಡುವವರು ಪೇಚಾಡಿಕೊಳ್ಳುತ್ತಿದ್ದರು. ಈಗ ಈ ಪದ್ಧತಿ ಮರೆತೇಹೋಗಿದೆ. ಎಷ್ಟೋ ಜನರಿಗೆ ಅಕ್ಕ-ತಂಗಿಯರೇ ಇಲ್ಲ. ಅವರ ಮಕ್ಕಳು ಎಲ್ಲಿಂದ ಬರಬೇಕು? ಈ ದೌಹಿತ್ರರ ಪ್ರಾಮುಖ್ಯತೆ ಬಂದಿದ್ದು ಯಯಾತಿಯ ಮೊಮ್ಮಕ್ಕಳು, ಅಂದರೆ ಮಾಧವಿಯ ಮಕ್ಕಳು, ಅಜ್ಜನಿಗೆ (ಮಾತಾಮಹ) ಪುಣ್ಯ ಭಾಗ ಕೊಟ್ಟಿದ್ದರಿಂದ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ಗೊತ್ತಿದ್ದವರಿಗೆ ಮರೆತುಹೋಗಿದೆ. ಈ ನಾಟಕದಲ್ಲಿ ಅದನ್ನು ನೆನಪು ಮಾಡಿಸುವ ಪ್ರಯತ್ನವೂ ಇದೆ. 


ನಮ್ಮಲ್ಲಿ ಅಣ್ಣ-ತಮ್ಮಂದಿರನ್ನು “ಸಹೋದರರು” ಎಂದು ಹೇಳುವುದು ಸ್ವಾಭಾವಿಕವೆನ್ನುವಂತೆ ಆಗಿದೆ. ಸಹೋದರರೆಂದರೆ ಒಂದೇ ಉದರದಲ್ಲಿ (ಹೊಟ್ಟೆಯಲ್ಲಿ, ಅಥವಾ ಇನ್ನೂ ಖಚಿತವಾಗಿ ಹೇಳಿದರೆ ಗರ್ಭದಲ್ಲಿ) ಹುಟ್ಟಿದವರು. ಒಂದೇ ತಂದೆಯ ಮಕ್ಕಳಾದರೂ ತಾಯಿ ಬೇರೆ ಬೇರೆಯವರಾಗಿರಬಹುದು. ಹಾಗೆಯೇ, ಒಂದೇ ತಾಯಿಯ ಮಕ್ಕಳಾದರೂ ತಂದೆ ಬೇರೆಯವರಾಗಿರಬಹುದು. ಹೀಗೆ ತಿಳಿದಾಗ ವ್ಯತ್ಯಾಸ ಗೊತ್ತಾಗುತ್ತದೆ. ಈ ರೀತಿ ನೋಡಿದಾಗ ಐವರು ಪಾಂಡವರು ಅಣ್ಣ-ತಮ್ಮಂದಿರು. ಧರ್ಮಜ-ಭೀಮ-ಅರ್ಜುನ ಸಹೋದರರು. ಹಾಗೆಯೇ ನಕುಲ-ಸಹದೇವರು ಸಹೋದರರು. ಈ ಕಾರಣದಿಂದ ಮಾಧವಿಯ ನಾಲ್ಕು ಮಕ್ಕಳು (ತಂದೆಯರು ಬೇರೆ ಬೇರೆ ಆದರೂ) ಸಹೋದರರು. 


ಮಾಧವಿಯ ಪ್ರಸಂಗದಲ್ಲಿ ಕಾಣಿಸುವ ವಿಶ್ವಾಮಿತ್ರರು ಯಾರು? ಕೆಲವರು “ವಿಶ್ವಾಮಿತ್ರರು ಅನ್ನುವ ಹೆಸರಿನ ಅನೇಕರಿದ್ದರು. ಅವರಲ್ಲಿ ಒಬ್ಬರು ಇವರು. ವಸಿಷ್ಠ-ವಿಶ್ವಾಮಿತ್ರರ ಸಂಬಂಧದ ವಿಶ್ವಾಮಿತ್ರರಲ್ಲ” ಎಂದು ಅಭಿಪ್ರಾಯ ಪಡುತ್ತಾರೆ. ಮಾಧವಿ-ವಿಶ್ವಾಮಿತ್ರರ ಮಗನ ಹೆಸರು ಅಷ್ಟಕ. ಕೆಲವರ ಕೌಶಿಕ ಗೋತ್ರಗಳ ಪ್ರವರದಲ್ಲಿಯೂ ಅಷ್ಟಕ ಎನ್ನುವ ಹೆಸರಿದೆ. ಆದ್ದರಿಂದ ಅವರು ಬ್ರಹ್ಮರ್ಷಿ ವಿಶ್ವಾಮಿತ್ರರು ಎಂದು ಬಲವಾದ ಅಭಿಪ್ರಾಯ. ಇಲ್ಲಿ ಹಾಗೆಯೇ ಸೂಚಿಸಿದೆ. ಎಲ್ಲ ಕಡೆ ಮಹರ್ಷಿ ಎಂದು ಹೇಳಿ, ಕಡೆಯ ದೃಶ್ಯದಲ್ಲಿ ಮಾತ್ರ ಬ್ರಹ್ಮರ್ಷಿ ಎಂದು ಸಂಬೋಧಿಸಿದೆ. ಅವರು ಯಾವಾಗ ಬ್ರಹ್ಮರ್ಷಿ ಆದರು ಅನ್ನುವ ಚರ್ಚೆ ಈ ನಾಟಕದ ಸಂದರ್ಭದಲ್ಲಿ ಬೇಡ. ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. 


ನಾಲ್ಕು ಜನ ಸಹೋದರರು ನೈಮಿಷಾರಣ್ಯದಲ್ಲಿ ಸತ್ರ ನಡೆಸಿದ್ದು, ಅಲ್ಲಿಗೆ ಯಯಾತಿಯು ಸ್ವರ್ಗದಿಂದ ತಳ್ಳಿದಾಗ ಬಿದ್ದದ್ದು, ಅಲ್ಲಿಗೆ ಮಾಧವಿಯು ಬಂದದ್ದು, ಅವಳೂ ತನ್ನ ಪುಣ್ಯದಲ್ಲಿ ಭಾಗ ಕೊಟ್ಟಿದ್ದು, ಇವೆಲ್ಲವೂ ಮೂಲಗಳಲ್ಲಿ ಇರುವ ಸತ್ಯ ಸಂಗತಿಗಳೇ. ಅಲ್ಲಿಗೆ (ನೈಮಿಷಾರಣ್ಯಕ್ಕೆ) ಬ್ರಹ್ಮರ್ಷಿ ವಿಶ್ವಾಮಿತ್ರರು ಬಂದಿದ್ದು ಮಾತ್ರ ಕಲ್ಪನೆ. ನಾಟಕದ ಕೊನೆಯಲ್ಲಿ, ಖಚಿತವಾಗಿ ಹೇಳಿದ ಕಡೆಯ ಮಾತನ್ನು ಎಲ್ಲರೂ ಒಪ್ಪಬೇಕಾದ ಸಂದರ್ಭದಲ್ಲಿ, ಅಧಿಕಾರಯುತವಾಗಿ ಮಾತನಾಡಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡಲಿ ಎನ್ನುವ ದೃಷ್ಟಿಯಿಂದ ಮಾಡಿರುವ ಮಾರ್ಪಾಡು ಇದು. ಅಷ್ಟೇ. 


ಗಾಲವರಿಗೆ ಅಶ್ವಗಳ ಸಂಪಾದನೆಯ ಸಂದರ್ಭದಲ್ಲಿ ಗರುಡನ ಸಹಾಯ ಸಿಕ್ಕಿತು ಎಂದು ಕೆಲವು ಕಡೆ ಸೂಚ್ಯವಾಗಿದೆ. ಈ ನಾಟಕದಲ್ಲಿ ಗರುಡನ ಬದಲು “ವೈನತೇಯ” ಎನ್ನುವ ಗಾಲವನ ಬಾಲ್ಯ ಸ್ನೇಹಿತ ಎಂದು ತೋರಿಸಿದೆ. ರಂಗದ ಮೇಲೆ ಪ್ರಯೋಗ ಮಾಡುವ ಕಾಲದಲ್ಲಿ (ಅದು ಆಗುತ್ತದೆಯೋ, ಇಲ್ಲವೋ ಅನ್ನುವುದು ಬೇರೆ  ವಿಷಯ!) ಬಹಳ ಕಾಲ ಜೊತೆಯಲ್ಲಿ ಇರುವ ಎರಡು ಪಾತ್ರಗಳ ಆತ್ಮೀಯತೆ, ಸ್ವಲ್ಪ ಹಾಸ್ಯ, ಇವು ತರಲು ಮಾಡಿಕೊಂಡಿರುವ ಬದಲಾವಣೆ ಇದು.


ಮಾಧವಿಯ ತಂದೆ ಯಯಾತಿ ಎಂದು ಎಲ್ಲ ಕಡೆ ಹೇಳಿದ್ದರೂ, ತಾಯಿ ಯಾರು ಎಂದು ಸ್ಪಷ್ಟವಿಲ್ಲ. ದೇವಯಾನಿ ಮತ್ತು ಶರ್ಮಿಷ್ಠೆ, ಇಬ್ಬರೂ ಅವಳ ಹೆತ್ತತಾಯಿಯರಲ್ಲ ಅನ್ನುವುದು ಮೊದಲ ನೋಟಕ್ಕೆ ಗೊತ್ತಾಗುತ್ತದೆ. ಆದ್ದರಿಂದ ಅವಳು ಯಯಾತಿಯ ಮತ್ತೊಬ್ಬ ಹೆಂಡತಿಯ ಮಗಳಾಗಿರಬೇಕು. ದೇವಯಾನಿಯ ವಿವಾಹವಾಗುವ ಮೊದಲೇ ಯಯಾತಿಗೆ ಮದುವೆಯಾಗಿರಬಹುದು. ರಾಜರಿಗೆ ಅನೇಕ ಹೆಂಡಿರಿರುತ್ತಿದ್ದರು ಅನ್ನುವುದು ಆಗ ಸಾಮಾನ್ಯವಾಗಿತ್ತು. (ಈಗಿನ ಕಾಲದ ರಾಜ ಸಮಾನರಾದವರಿಗೆ ಹೀಗೆ ಇದ್ದರೂ ಗೊತ್ತಾಗುವುದಿಲ್ಲ). ಇಲ್ಲಿ ಮಾಧವಿ ತಾಯಿ ಇಲ್ಲದ ತಬ್ಬಲಿ ಎಂದು ತೋರಿಸಲಾಗಿದೆ. ತಂದೆಯ ಮನಸ್ಸಿನ ದುಗುಡದ ತೀವ್ರತೆ ಪರಿಣಾಮಕಾರಿಯಾಗಿರಲೂ ಇದು ಸಹಾಯಕ. 


ಹೆಣ್ಣುಮಕ್ಕಳಿಗೆ, ಅವರು ರಾಜಕುಮಾರಿಯರಾದರೆ ಏನಂತೆ, ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳುವ ಪೂರ್ಣ ಸ್ವಾತಂತ್ರ್ಯ ಪ್ರಾಯಶಃ ಯಾವ ಕಾಲದಲ್ಲೂ ಇರಲಿಲ್ಲ. ಸ್ವಯಂವರ ಪದ್ಧತಿಯಲ್ಲಿಯೂ ಪೂರ್ಣ ಸ್ವಾತಂತ್ರ್ಯ ಇರಲಿಲ್ಲ. ಬಹಳ ಸಂದರ್ಭಗಳಲ್ಲಿ ಅವರು ಯೋಚನೆ ಮಾಡುವಷ್ಟು ಪ್ರಬುದ್ಧತೆ ಬರುವ ವಯಸ್ಸಿನ ಮೊದಲೇ ವಿವಾಹವಾಗಿರುತ್ತಿತ್ತು. ಎರಡನೆಯ ಪತ್ನಿಯಾಗುವ, ಅಥವಾ ಎಷ್ಟನೆಯದು ಎಂದು ಗೊತ್ತಿಲ್ಲದ, ವಿವಾಹಗಳೂ ನಡೆಯುತ್ತಿದ್ದವು. ಇವುಗಳ ಸೂಚ್ಯವಾದ ನೋಟ ಕೊಡುವ ಪ್ರಯತ್ನ ಇಲ್ಲುಂಟು.


ಕೆಲವು ಸಂಗತಿಗಳು (ಮಾಧವಿಯ ವರದ ವಿವರಗಳು, ಕುದುರೆಗಳ ವಿಚಾರ, ವಿವಾಹದ ನಿಬಂಧನೆಗಳು ಮುಂತಾದುವು) ಮತ್ತೆ ಮತ್ತೆ ಬಂದವಲ್ಲಾ ಅನಿಸಬಹುದು. ವಿಧಿಯಿಲ್ಲ. ಕೆಲವು ಕಡೆ ಊಟದಲ್ಲಿ ಅನ್ನ ನಾಲ್ಕು ಸಲ ಬರುತ್ತದೆ. “ಕೂಟಿಗೂ ಅನ್ನ ಬಂತು, ಸಾರಿಗೂ ಅನ್ನ ಬಂತು, ಚಿತ್ರಾನ್ನದಲ್ಲೂ ಅನ್ನ ಇತ್ತು, ಈಗ ಮಜ್ಜಿಗೆಗೂ ಅನ್ನ ಬಂತಲ್ಲ?” ಎಂದು ಯಾರೂ ಬೇಸರಿಸುವುದಿಲ್ಲ. ಇದೂ ಹಾಗೆಯೇ ಎಂದು ನಕ್ಕು ಸುಮ್ಮನಾಗಬೇಕಷ್ಟೆ!  ಒಬ್ಬ ಅಧ್ಯಾಪಕನು ಒಂದೇ ಪಾಠವನ್ನು ನಾಲ್ಕು ತರಗತಿಗಳಿಗೆ (ಸೆಕ್ಷನ್) ಪಾಠ ಹೇಳುವಾಗ ಅದು ಅವನಿಗೆ ನಾಲ್ಕು ಸಾರಿ ಆಗುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಒಂದೇ ಸಲ. ಅಲ್ಲವೇ? ಹೇಳುವವರಿಗೆ ನಾಲ್ಕು ಸಲ. ಕೇಳುವವರಿಗೆ ಒಂದೇ ಸಲ. ಇಲ್ಲಿಯೂ ಹಾಗೆಯೇ ಎಂದು ತಿಳಿಯಬೇಕು!


ನಾಟಕದ ಒಟ್ಟು ಗಾತ್ರದ ಬಗ್ಗೆ ಟೀಕೆಗಳು ಬರಬಹುದು. ಈಗ ಸಾಮಾನ್ಯವಾಗಿ ಹೆಚ್ಚೆಂದರೆ ಎರಡು ಗಂಟೆಗಳ ಒಳಗಾಗಿ ನಡೆಯುವ ರಂಗಪ್ರಯೋಗಗಳ ಕಾಲ. ರಾತ್ರಿಯೆಲ್ಲ ನಡೆಯುವ ನಾಟಕಗಳು ಕಡಿಮೆಯೇ. ನಾಲ್ಕೈದು ಗಂಟೆಗಳ ನಾಟಕಗಳು ಪ್ರಯೋಗ ಕಂಡರೂ ಅವು ಬಹಳ ಪ್ರಸಿದ್ಧರಾದವರ ರಚನೆಗಳು ಮಾತ್ರ. ಇದೊಂದು ಏಳು ಅಂಕಗಳ ನಾಟಕ. ಏನು ಮಾಡುವುದು? ಇದು ಮೂರು ತಲೆಮಾರುಗಳ ಕಥೆ. ಮಾಧವಿಗೆ ನಾಲ್ಕು ಮದುವೆಗಳು! ಅವಳ ಬದುಕೇ ಆರು ಅಂಕಗಳದ್ದು. ತಂದೆಯ ಮನೆಯಲ್ಲಿ ಮೊದಲಂಕ. ನಂತರ ಮದುವೆಗಳ ನಾಲ್ಕಂಕ. ಕಡೆಯಲ್ಲಿ ಇನ್ನೊಂದಂಕ. ಇನ್ನೂ ಚಿಕ್ಕದು ಮಾಡುವುದು ಕಷ್ಟ. ಯಾರಾದರೂ ರಂಗದ ಮೇಲೆ ತರುವ ಸಾಹಸ ಮಾಡಿದರೆ ಆಗ ಇನ್ನೂ ಸ್ವಲ್ಪ ಚಿಕ್ಕದು ಮಾಡಲು ಅವಕಾಶವಿದೆ. ಸಂದರ್ಭ ಬಂದರೆ (?) ನೋಡೋಣ. 


ರಂಗಪ್ರಯೋಗಕ್ಕೆ ಕೆಲವು ಬಾಧಕಗಳು ಇರಬಹುದು. ಏನೂ ಪರಿಕರಗಳಿಲ್ಲದೇ ಗಾಳಿಯಲ್ಲಿ ಕೈಕಾಲು ಆಡಿಸಿ ಪರಿಕರದ ಭ್ರಮೆ ಹುಟ್ಟಿಸುವ ಪ್ರಯೋಗಗಳಿರುವ ಕಾಲದಲ್ಲಿ ಇದೇನೂ ದೊಡ್ಡದಲ್ಲ. ನುರಿತ ನಿರ್ದೇಶಕರು ಅವಕ್ಕೆ ಸಮಾಧಾನಗಳನ್ನು ಸುಲಭವಾಗಿ ಕಂಡುಕೊಳ್ಳಬಲ್ಲರು. 


ವರಗಳು-ಶಾಪಗಳು, ಗುರುದಕ್ಷಿಣೆ, ಸ್ವರ್ಗ-ಸಾಕ್ಷಾತ್ಕಾರ, ಇವೆಲ್ಲಾ ಈ ಕಾಲದಲ್ಲಿ ಯಾರಿಗೆ ಬೇಕು ಅನ್ನುವ ಪ್ರಶ್ನೆ ಬರಬಹುದು. ನಿಜ. ಕಡಿಮೆಯಿದ್ದರೂ, ಇವನ್ನು ರಸಾನುಭವಕ್ಕಾಗಿ ಅಥವಾ ನಂಬಿಕೆಗಾಗಿ ಓದುವ, ನೋಡುವ ಜನರು ಕೆಲವರಾದರೂ ಈಗಲೂ ಇದ್ದಾರೆ. ಅಲ್ಲವೇ?


ನಾಲ್ಕು ವಿವಾಹದ ಕತೆಗೆ ನಾಲ್ಕು ಮಾತುಗಳು ಅಂದದ್ದು ಕಡೆಗೆ ಎಂಟು ಮಾತಾಯಿತು!


"ಮಾಧವಿ" ನಾಟಕವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


 

Saturday, September 20, 2025

ಮಾಧವಿಯ ಮಕ್ಕಳು


ಹಿಂದಿನ ಸಂಚಿಕೆಯಲ್ಲಿ "ಯಯಾತಿಯ ಮೊಮ್ಮಕ್ಕಳು" ಎನ್ನುವ ಶೀರ್ಷಿಕೆಯಡಿ ಯಯಾತಿ ಚಕ್ರವರ್ತಿ ಸ್ವರ್ಗದಿಂದ ದೂಡಲ್ಪಟ್ಟು ಭೂಮಿಯ ಮೇಲೆ ಬಿದ್ದದ್ದು, ಚತುರ್ಮುಖ ಬ್ರಹ್ಮದೇವರ ಕರುಣೆಯಿಂದ ನೈಮಿಷಾರಣ್ಯದಲ್ಲಿ ಯಜ್ಞ ನಡೆಸುತ್ತಿದ್ದ ತನ್ನ ನಾಲ್ಕು ದೌಹಿತ್ರರ ನಡುವೆ ಬಂದದ್ದು, ಮುಂತಾದ ಕೆಲವು ವಿಚಾರಗಳನ್ನು ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಆ ನಾಲ್ವರು ಯಯಾತಿಯ ಮಗಳಾದ ಮಾಧವಿಯ ಮಕ್ಕಳೆಂದೂ, ಪ್ರತಿಯೊಬ್ಬರೂ ಬಲು ಪ್ರಚಂಡರೆಂದೂ ತಿಳಿದೆವು. ಅವರ ಹುಟ್ಟಿನ ಸಂದರ್ಭಗಳನ್ನು ಮತ್ತು ಅವರ ವಿಶೇಷ ಸಾಧನೆಗಳ ಬಗ್ಗೆ ಸ್ವಲ್ಪವನ್ನು ತಿಳಿಯಲು ಈಗ ಪ್ರಯತ್ನ ಪಡೋಣ. 

*****

ವಿಶ್ವಾಮಿತ್ರ ಮಹರ್ಷಿಯ ಬಳಿ ಗಾಲವ ಎನ್ನುವ ಋಷಿಕುಮಾರ ಶಿಷ್ಯತ್ವ ವಹಿಸಿ ವಿದ್ಯಾರ್ಜನೆ ಮಾಡಿದರು. ಗುರುಗಳಿಗೆ ಅಚ್ಚುಮೆಚ್ಚಿನ ಶಿಷ್ಯ. ಶಿಷ್ಯನಿಗೆ ಅತ್ಯಂತ ಪ್ರಿಯರಾದ ಗುರುಗಳು. ಕಾಲಕ್ರಮದಲ್ಲಿ ವಿದ್ಯಾಭ್ಯಾಸ ಪೂರ್ಣವಾಯಿತು. ಈಗ ಗಾಲವ ಋಷಿಕುಮಾರ ಮಹರ್ಷಿ ಗಾಲವ ಆಗಿದ್ದಾರೆ. ಲೋಕದ ಕ್ರಮದಂತೆ ಶಿಷ್ಯನು ವಿದ್ಯಾಭ್ಯಾಸ ಮುಗಿದ ನಂತರ ಗುರುಕುಲ ತೊರೆದು ಹೋಗಲೇಬೇಕಲ್ಲ. ಆ ಸಮಯ ಬಂದಿತು. 

"ಗಾಲವ, ನಿನ್ನ ವಿದ್ಯಾಭ್ಯಾಸ ಪೂರ್ತಿಯಾಯಿತು. ನೀನಿನ್ನು ಗುರುಕುಲದಿಂದ ಹೊರಟು, ಸ್ವತಂತ್ರವಾಗಿ ಯೋಗ್ಯ ಜೀವನ ನಡೆಸು"
"ನಿಮ್ಮನ್ನು ಬಿಟ್ಟು ಹೋಗಲು ಮನಸ್ಸಿಲ್ಲ"
"ನನಗೂ ನಿನ್ನನ್ನು ಕಳಿಸಲು ಇಷ್ಟವಿಲ್ಲ. ಆದರೂ ಕಾಲಚಕ್ರಕ್ಕೆ ನಾವೇಲ್ಲರೂ ಬಾಗಬೇಕಲ್ಲವೇ?"
"ತಮ್ಮಾಜ್ಞೆ. ಗುರುದಕ್ಷಿಣೆ ನೀಡುವುದು ಉಳಿದಿದೆ. ನಿಮಗೆ ಏನಾದರೂ ಕೊಡುವ ಯೋಗ್ಯತೆ ನನಗಿಲ್ಲ. ಆದರೂ ಏನು ಕೊಟ್ಟರೆ ತಮಗೆ ಸಮ್ಮತ ಎಂದು ದಯಮಾಡಿ ತಿಳಿಸಬೇಕು"
"ಶಿಷ್ಯವೃತ್ತಿಯ ಪೂರ್ಣ ಕಾಲವೂ ಮನತುಂಬಿ ನನ್ನ ಮತ್ತು ಆಶ್ರಮದ ಸೇವೆ ಮಾಡಿದ್ದೀಯೆ. ಅದೇ ಸಾಕು. ಗುರುದಕ್ಷಿಣೆ ಏನೂ ಬೇಡ"
"ಹಾಗಲ್ಲ. ನನ್ನಿಂದ ಲೋಪ ಆಗಬಾರದು. ಕೃಪೆಮಾಡಿ ಏನಾದರೂ ಹೇಳಿ"
"ಹೇಳಿದಮೇಲೆ ಮುಗಿಯಿತು. ನೀನು ಹೋಗಲು ನನ್ನ ಅಪ್ಪಣೆಯಿದೆ"
"ಮತ್ತೊಮ್ಮೆ ಬೇಡುತ್ತೇನೆ. ದಯಮಾಡಿ ಹೇಳುವವರಾಗಿ"

ಗುರುಗಳಿಗೆ ಈಗ ಕೋಪ ಬಂತು. 

"ನಿನ್ನ ಹಟವೇ ಗೆಲ್ಲಬೇಕೆ? ಸರಿ. ಹಾಗಿದ್ದರೆ ಮೈ ಎಲ್ಲ ಚಂದ್ರಕಿರಣದಂತೆ ಬಿಳಿಯಿರುವ, ಒಂದು ಕಿವಿ ಮಾತ್ರ ಕಪ್ಪಗಿರುವ, ಶ್ರೇಷ್ಠ ತಳಿಯ ಎಂಟು ನೂರು "ಶ್ಯಾಮಲಕರ್ಣ" ಕುದುರೆಗಳನ್ನು ಕೊಡು"
"ಆಗಲಿ ಗುರುಗಳೇ. ಸ್ವಲ್ಪ ಸಮಯದಲ್ಲಿ ತಂದು ಕೊಡುತ್ತೇನೆ"

ಗುರುಗಳ ಅಪ್ಪಣೆ ಪಡೆದು ಗಾಲವರು ಹೊರಟರು. "ಶ್ಯಾಮಲಕರ್ಣ" ಕುದುರೆಗಳು ಬಹಳ ಅಪರೂಪ. ಇಂತಹವನ್ನು ಅಶ್ವಮೇಧ ಯಾಗಗಳಿಗೆ ಮೀಸಲಿಡುತ್ತಾರಂತೆ. ಈಗ ಗಾಲವರಿಗೆ ಅಂತಹ ಎಂಟು ನೂರು ಕುದುರೆಗಳು ಬೇಕು!
*****

ಗಾಲವರು ಯೋಚಿಸಿದರು. ಯಾರನ್ನು ಕೇಳುವುದು? ಆಗ ಯಯಾತಿ ಚಕ್ರವರ್ತಿಯ ಆಳ್ವಿಕೆಯ ಕಾಲ. ಅವನನ್ನೇ ಕೇಳುವುದು ಎಂದು ಪ್ರತಿಷ್ಠಾನ ನಗರಕ್ಕೆ ಬಂದರು. ಯಯಾತಿಯು ಅವರನ್ನು ಬರಗೊಂಡು, ಸತ್ಕರಿಸಿ, ಬಂದ ಕಾರಣವನ್ನು ಕೇಳಿದ. ಗಾಲವರು ಎಂಟು ನೂರು ಶ್ಯಾಮಲಕರ್ಣ ಕುದುರೆಗಳನ್ನು ಕೇಳಿದರು. ಯಯಾತಿಯ ಬಳಿ ಅಂತಹ ಕುದುರೆಗಳಿಲ್ಲ. 

"ಮಹರ್ಷಿಗಳೇ, ನನ್ನ ಬಳಿ ಅಂತಹ ಕುದುರೆಗಳಿಲ್ಲ. ಆದರೆ ನನ್ನ ಬಳಿ ಬಂದಿರುವ ನಿಮ್ಮಂತಹ ಮಾನ್ಯರನ್ನು ಹಾಗೆಯೇ ಕಳಿಸಲಾರೆ. ಒಂದು ಕೆಲಸ ಮಾಡಿ. ನನ್ನ ಮಗಳು "ಮಾಧವಿ" ವಿವಾಹಯೋಗ್ಯಳಿದ್ದಾಳೆ. ಇವಳನ್ನು ನಿಮ್ಮ ನೆರಳಲ್ಲಿ ಕಳಿಸಿಕೊಡುತ್ತೇನೆ. ಇವಳು ಸಾಮಾನ್ಯಳಲ್ಲ. ಅಪೂರ್ವ ಲಾವಣ್ಯವತಿ ಅಷ್ಟೇ ಅಲ್ಲ. ತನ್ನ ಸಾಧನೆಯಿಂದ ವಿಶೇಷ ವರವೊಂದನ್ನು ಪಡೆದುಕೊಂಡಿದ್ದಾಳೆ. ಇವಳು ಒಬ್ಬನನ್ನು ವಿವಾಹವಾಗಿ, ಗರ್ಭವತಿಯಾಗಿ, ಪ್ರಸವವಾದ ನಂತರ ಮತ್ತೆ ಕನ್ಯತ್ವ ಮರಳಿ ಪಡೆಯುತ್ತಾಳೆ. ಮತ್ತೆ ಕನ್ಯೆಯಾಗಿ ವಿವಾಹಯೋಗ್ಯಳಾಗುತ್ತಾಳೆ. ಶ್ಯಾಮಲಕರ್ಣ ಕುದುರೆಗಳಿರುವ ಯಾವುದಾದರೂ ರಾಜನಿಗೆ ಇವಳನ್ನು ಕೊಟ್ಟು ವಿವಾಹ ಮಾಡಿ ನೀವು ಕದುರೆಗಳನ್ನು ಪಡೆಯಿರಿ. ನಿಮ್ಮ ಗುರುಗಳಿಗೆ ದಕ್ಷಿಣೆಯಾಗಿ ಕೊಡಿ"

ಯಾಯಾತಿ ಮಹಾರಾಜನ ಈ ಮಾತಿಗೆ ಮಗಳು ಮಾಧವಿ ಸಮ್ಮತಿಸಿದಳು. ಗಾಲವ ಋಷಿಗಳ ಸಂಗಡ ಹೊರಟಳು. 
*****

ಗಾಲವ, ಮಾಧವಿಯರು ಅಯೋಧ್ಯೆಯ ಅರಸು ಹರ್ಯಶ್ವನ ಬಳಿಗೆ ಹೋದರು. ಅವನ ಬಳಿ ಎರಡು ನೂರು ಶ್ಯಾಮಲಕರ್ಣ ಕುದುರೆಗಳಿದ್ದವು. ಗಾಲವರಿಗೆ ಬೇಕಾದದ್ದು ಎಂಟು ನೂರು ಕುದುರೆಗಳು. ಮಾಧವಿಯು ಹರ್ಯಶ್ವ ಮಹಾರಾಜನಿಗೆ ಹೇಳಿದಳು: "ನನ್ನನ್ನು ಮದುವೆಯಾಗಿ ಎರಡು ನೂರು ಕುದುರೆಗಳನ್ನು ಗಾಲವರಿಗೆ ಕೊಡಿ. ಒಂದು ಮಗು ಜನಿಸಿದ ನಂತರ ನಾನು ಮತ್ತೆ ಕನ್ಯೆಯಾಗಿ ಗಾಲವರೊಂದಿಗೆ ಬೇರೆ ಕುದುರೆಗಳನ್ನು ಆರಸಿಕೊಂಡು ಹೋಗುತ್ತೇನೆ". ಹರ್ಯಶ್ವ ಇದಕ್ಕೆ ಒಪ್ಪಿದ. ಗಾಲವರೂ ಸರಿ ಎಂದರು. 

ವಿವಾಹವಾಯಿತು. ಸ್ವಲ್ಪ ಸಮಯದ ನಂತರ ತೇಜೋವಂತ ಗಂಡು ಮಗುವೊಂದು ಜನಿಸಿತು. ಹರ್ಯಶ್ವನು ಆ ಮಗುವಿಗೆ "ವಸುಮನ" ಎಂದು ಹೆಸರಿಟ್ಟನು. ಆಗಿದ್ದ ಒಪ್ಪಂದದಂತೆ ಮಾಧವಿ ಮತ್ತು ಗಾಲವರು ಎರಡು ನೂರು ಕುದುರೆಗಳೊಂದಿಗೆ ಇನ್ನೂ ಬೇಕಾದ ಆರು ನೂರು ಕುದುರುಗಳನ್ನು ಅರಸುತ್ತಾ ಹೊರಟರು. 

ಮುಂದೆ ವಸುಮನ ತಂದೆಯ ನಂತರ ಅಯೋಧ್ಯೆಯ ಮಹಾರಾಜನಾದನು. ಬಹಳ ಪುಣ್ಯ ಸಂಪಾದನೆ ಮಾಡಿ ಜನಾನುರಾಗಿಯಾದ ಆಡಳಿತ ನೀಡಿದನು. ದೇವತೆಗಳು ಅವನ ಧರ್ಮ ಶ್ರದ್ಧೆಗೆ ಮೆಚ್ಚಿ ದಿವ್ಯವಾದ ಮುತ್ತಿನ ರಥ ಉಡುಗೊರೆಯಾಗಿ ಕೊಟ್ಟರು. ರಥ ಬಂದ ಸಮಯದಲ್ಲಿ ಅದನ್ನು ಕಂಡ ನಾರದ ಮಹರ್ಷಿಗಳು ವಸುಮನನಿಗೆ "ರಥ ಬಹಳ ಚೆನ್ನಾಗಿದೆ" ಎಂದರು. ಮರುಮಾತಿಲ್ಲದೇ ವಸುಮನ ಅದನ್ನು ಅವರಿಗೆ ಕೊಟ್ಟುಬಿಟ್ಟನು. 

ದೇವತೆಗಳು ಅವನಿಗೆ ಕೆಲ ಕಾಲಾನಂತರ ಎರಡನೇ ದಿವ್ಯವಾದ ರಥವನ್ನು ಕೊಟ್ಟರು. ಆಗಲೂ ಅದನ್ನು ಕಂಡ ದೊಡ್ಡವರೊಬ್ಬರು ರಥ ಸೊಗಸಾಗಿದೆ ಎಂದರು. ಮರುಮಾತಿಲ್ಲದೇ ಅದನ್ನೂ ಅವರಿಗೇ ಕೊಟ್ಟುಬಿಟ್ಟನು. 

ಮತ್ತೆ ಸ್ವಲ್ಪ ಕಾಲದ ನಂತರ ದೇವತೆಗಳು ಅವನಿಗೆ ಮೂರನೆಯ ವಿಶೇಷವಾದ ರಥವನ್ನು ಕೊಟ್ಟರು. ಅದನ್ನು ತನ್ನ ಉಪಯೋಗಕ್ಕೆ ಎಂದು ಇಟ್ಟುಕೊಂಡನು. 

***** 

ಹರ್ಯಶ್ವನಿಂದ ಬೀಳ್ಕೊಂಡು ಹೊರಟ ಗಾಲವ, ಮಾಧವಿಯರು ನಂತರ ಕಾಶೀರಾಜನಾದ ದಿವೋದಾಸನ ಬಳಿಗೆ ಬಂದರು. ದಿವೋದಾಸನ ಬಳಿಯೂ ಎರಡು ನೂರು ಶ್ಯಾಮಲಕರ್ಣ ಕುದುರೆಗಳಿದ್ದವು. ಮತ್ತೆ ಕುದುರೆಗಳ ಸಂಖ್ಯೆ ಸಾಲದಾಯಿತು. ಹರ್ಯಶ್ವನ ಬಳಿ ಮಾಡಿದ ಒಪ್ಪಂದದ ರೀತಿ ಇಲ್ಲಿಯೂ ನಡೆಯಿತು. ದಿವೋದಾಸ, ಗಾಲವ, ಮಾಧವಿಯರು ಒಪ್ಪಿದರು. 

ವಿವಾಹವಾಯಿತು. ಕೆಲ ಕಾಲಾನಂತರ ಹೊಳೆಯುವಂತಿದ್ದ ಗಂಡು ಮಗು ಹುಟ್ಟಿತು. ದಿವೋದಾಸನು ಆ ಮಗುವಿಗೆ "ಪ್ರದರ್ತನ" ಎಂದು ಹೆಸರಿಟ್ಟನು. ನಾಲ್ಕು ನೂರು ಶ್ಯಾಮಲಕರ್ಣ ಕುದುರೆಗಳೊಂದಿಗೆ ಗಾಲವ, ಮಾಧವಿಯರು ಮತ್ತೆ ನಾಲ್ಕು ನೂರು ಕುದುರೆಗಳಿಗಾಗಿ ಹುಡುಕುತ್ತ ಹೊರಟರು. 

ಪ್ರದರ್ತನನು ತಂದೆಯ ನಂತರ ಕಾಶೀರಾಜನಾಗಿ ಬಹಳ ಪ್ರಭಾವಶಾಲಿ ಅರಸಾದನು. ಅನೇಕ ದಾನ-ಧರ್ಮಗಳನ್ನು ಮಾಡಿ ಪುಣ್ಯ ಸಂಪಾದನೆ ಮಾಡಿದನು. ಒಮ್ಮೆ ಅವನು ಅತಿಥಿಗಳನ್ನು ದೂರದ ಪ್ರದೇಶದಲ್ಲಿ ಎದುರುಗೊಂಡು ತನ್ನ ಅರಮನೆಗೆ ಸತ್ಕಾರಕ್ಕಾಗಿ ಕರೆತಂದನು. ಅವರನ್ನು ಕೂರಿಸಿದ್ದ ರಥಕ್ಕೆ ನಾಲ್ಕು ಕುದುರೆಗಳಿದ್ದವು. ಮಾರ್ಗದಲ್ಲಿ ಒಂದು ಕುದುರೆ ಸತ್ತಿತು. ಮೂರು ಕುದುರೆಗಳಿಂದ ಎಳೆಯುತ್ತ ರಥ ಮುಂದೆ ಸಾಗಿತು. ಹೀಗೆ ಒಂದೊಂದಾಗಿ ಕುದುರೆಗಳು ಸತ್ತು ಕುದುರೆಗಳೇ ಇಲ್ಲವಾದುವು. ಆಗ ಪ್ರದರ್ತನನು ರಥದಿಂದ ಇಳಿದು ತಾನೇ ರಥವನ್ನು ಎಳೆದುಕೊಂಡು ಅರಮನೆ ತಲುಪಿ ಅತಿಥಿಗಳ ಸತ್ಕಾರ ನಡೆಸಿದ. 

ಪ್ರದರ್ತನನ ಯೋಗ್ಯತೆ ಅಂತಹುದು. 
*****

ಇತ್ತ ಕಡೆ ಕಾಶಿಯಿಂದ ಹೊರಟ ಗಾಲವ, ಮಾಧವಿಯರು ಧಾರಾನಗರದ ಭೋಜವಂಶದ ಅರಸು ಔಶೀನರನ ಬಳಿಗೆ ಬಂದರು. ಅವನ ಬಳಿಯೂ ಎರಡು ನೂರು ಶ್ಯಾಮಲಕರ್ಣ ಕುದುರೆಗಳು ಮಾತ್ರ ಇದ್ದವು. ಹಿಂದಿನಂತೆಯೇ ಔಶೀನರ, ಮಾಧವಿ ಮತ್ತು ಗಾಲವರ ನಡುವೆ ಒಪ್ಪಂದ ಆಯಿತು. 

ಔಶೀನರ ಮತ್ತು ಮಾಧವಿಯರ ಮದುವೆ ಆಯಿತು. ಕೆಲ ಸಮಯದ ನಂತರ ತೇಜೋವಂತ ಗಂಡು ಮಗುವೊಂದು ಹುಟ್ಟಿತು. ಔಶೀನರನು ಆ ಮಗುವಿಗೆ "ಶಿಬಿ" ಎಂದು ಹೆಸರಿಟ್ಟನು. ಒಪ್ಪಂದದಂತೆ ಗಾಲವ, ಮಾಧವಿಯರು ಈಗ ಆರು ನೂರು ಶ್ಯಾಮಲಕರ್ಣ ಕುದುರೆಗಳೊಂದಿಗೆ ಹೊರಟರು. 

ಕಾಲಾನಂತರ ಶಿಬಿಯು ಚಕ್ರವರ್ತಿಯಾದನು. ದತ್ತಿ-ದಾನಗಳಲ್ಲಿ ಅವನ ಸಮ ಇನ್ನೊಬ್ಬರಿಲ್ಲ ಎನ್ನುವಂತೆ ರಾಜ್ಯವಾಳಿದನು. ಒಂದು ದಿನ ಅವನು ಆಸ್ಥಾನದಲ್ಲಿ ಕುಳಿತಿದ್ದಾಗ ಒಂದು ಪಾರಿವಾಳ ಹೆದರಿಕೊಂಡು ಹಾರಿ ಬಂದು ಅವನ ಮಡಿಲಿನಲ್ಲಿ ಅವಿತುಕೊಂಡಿತು. ಅದರ ಹಿಂದೆಯೇ ಹಾರಿ ಬಂದ ಗಿಡುಗವೊಂದು ಶಿಬಿಯನ್ನು ಕುರಿತು "ಅದು ನನ್ನ ಆಹಾರ. ಅದನ್ನು ಬಿಡು" ಎಂದು ಕೇಳಿತು. ಶಿಬಿಯು "ಅದು ನನ್ನ ಶರಣು ಬಂದಿದೆ. ಅದನ್ನು ಬಿಡುವುದಿಲ್ಲ. ನಿನಗೆ ಅದರ ಬದಲಾಗಿ ಬೇರೆ ಅಷ್ಟೇ ತೂಕದ ಮಾಂಸವನ್ನು ಕೊಡುತ್ತೇನೆ" ಎಂದನು. ಗಿಡುಗವು "ಯಾವುದೋ ಮಾಂಸವು ನನಗೆ ಆಗುವುದಿಲ್ಲ. ನಿನ್ನ ದೇಹದ ಮಾಂಸ ಆದರೆ ಆಗಬಹುದು" ಎಂದಿತು. 

ತಕ್ಕಡಿಯನ್ನು ತರಿಸಿ, ಒಂದು ಕಡೆ ಪಾರಿವಾಳವನ್ನು ಕೂಡಿಸಿ, ಶಿಬಿಯು ತನ್ನ ತೊಡೆಯ ಮಾಂಸವನ್ನೇ ಕೊಯ್ದು ಇನ್ನೊಂದು ಕಡೆ ಹಾಕುತ್ತಾ ತೂಗಿ ನೋಡಿದನು. ಆಶ್ಚರ್ಯವೆಂದರೆ ಎಷ್ಟು ಮಾಂಸ ಹಾಕಿದರೂ ಪಾರಿವಾಳದ ತೂಕಕ್ಕೆ ಸಮ ಆಗಲಿಲ್ಲ. ಕಡೆಗೆ ತಾನೇ ತಕ್ಕಡಿಯಲ್ಲಿ ಕುಳಿತನು. ಆಗ ತೂಕ ಸಮವಾಯಿತು. 

ಅಗ್ನಿದೇವ ಮತ್ತು ದೇವೇಂದ್ರ ಪ್ರತ್ಯಕ್ಷರಾದರು. ಶಿಬಿಯ ಗುಣಗಳನ್ನು ಪರೀಕ್ಷಿಸಲು ಅಗ್ನಿಯು ಪಾರಿವಾಳವಾಗಿ, ಇಂದ್ರನು ಗಿಡುಗನಾಗಿ ಬಂದಿದ್ದರು. ಶಿಬಿಗೆ ಬಹಳ ಕೀರ್ತಿ ಬಂದಿತು. ಶಿಬಿಯ ಗುಣ ಅಂತಹದ್ದು. 

*****

ಇತ್ತ ಆರು ನೂರು ಶ್ಯಾಮಲಕರ್ಣ ಕುದುರೆಗಳು ಮತ್ತು ಮಾಧವಿಯೊಂದಿಗೆ ಧಾರಾನಗರದಿಂದ ಹೊರಟ ಗಾಲವರು ಗುರು ವಿಶ್ವಾಮಿತ್ರರ ಆಶ್ರಮಕ್ಕೆ ಬಂದರು. ಅವರಿಗೆ ಆರು ನೂರು ಕುದುರೆಗಳನ್ನು ಮತ್ತು ಮಾಧವಿಯನ್ನು ಒಪ್ಪಿಸಿದರು. ಎರಡು ನೂರು ಕುದುರೆಗಳ ಬದಲಾಗಿ ಮಾಧವಿಯನ್ನು ವಿವಾಹವಾಗಿ ಗುರುದಕ್ಷಿಣೆ ಪೂರ್ಣವಾದಂತೆ ಹರಸುವಂತೆ ಕೇಳಿಕೊಂಡರು. 

ವಿಶ್ವಾಮಿತ್ರರು ಒಪ್ಪಿದರು. ಅವರ ಮತ್ತು ಮಾಧವಿಯ ಮದುವೆಯಾಯಿತು. ಗಾಲವರ ಕೆಲಸ ಪೂರ್ತಿಯಾಗಿ ಅವರು ಮಾಧವಿಗೆ ಕೃತಜ್ಞತೆ ಸಲ್ಲಿಸಿ ಹೊರಟು ಹೋದರು. 

ಮುಂದೆ ಕೆಲಕಾಲದಲ್ಲಿ ಈ ದಂಪತಿಗಳಿಗೆ ತೇಜಸ್ವಿ ಗಂಡು ಮಗು ಹುಟ್ಟಿತು. ಅವನಿಗೆ "ಅಷ್ಟಕ" ಎಂದು ಹೆಸರಿಟ್ಟರು. ಅವನು ದೊಡ್ಡವನಾಗಿ ಮಹಾ ತಪಸ್ವಿಯಾಗಿ ಅನೇಕ ಪುಣ್ಯ ಸಂಪಾದನೆ ಮಾಡಿದನು. 

*****

ಅಷ್ಟಕ ಹುಟ್ಟಿದ ಮೇಲೆ ಮಾಧವಿಯು ತಂದೆಯಾದ ಯಯಾತಿಯ ಬಳಿಗೆ ಬಂದಳು. ಆಗ ಯಯಾತಿಯು ಅವಳಿಗೆ ವಿವಾಹಕ್ಕಾಗಿ ಸ್ವಯಂವರವೊಂದನ್ನು ಏರ್ಪಡಿಸಿದ. ಮೊದಲು ಅವಳನ್ನು ಮದುವೆಯಾಗಿದ್ದ ಮಹಾರಾಜರುಗಳನ್ನು ಸೇರಿ ಅನೇಕ ಪ್ರಭಾವಿಗಳು ಅವಳನ್ನು ಕೈಹಿಡಿಯಲು ಕಾತುರರಾಗಿದ್ದರು. ಆದರೆ ಈಗ ಮಾಧವಿಗೆ ವಿವಾಹ ಬೇಡವಾಗಿತ್ತು. ಎಲ್ಲರನ್ನೂ ನಿರಾಕರಿಸಿ, ತಂದೆಯ ಒಪ್ಪಿಗೆ ಪಡೆದು ತಪಸ್ವಿನಿಯಾದಳು. ಕಾಡಿನಲ್ಲಿ ಜಿಂಕೆಗಳಂತೆ ಜೀವನ ನಡೆಸುತ್ತ, ಹುಲ್ಲನ್ನೇ ಆಹಾರವಾಗಿ ಸೇವಿಸುತ್ತಾ ಬಹಳ ಕಾಲ ತಪಸ್ಸು ಮಾಡಿದಳು. ಹೇರಳವಾದ ಪುಣ್ಯಾರಾಶಿಯನ್ನೇ ಸಂಪಾದಿಸಿದಳು. 

ತನ್ನ ನಾಲ್ವರು ಮಕ್ಕಳು ನೈಮಿಷಾರಣ್ಯದಲ್ಲಿ ಯಜ್ಞ ನಡೆಸುತ್ತಿದ್ದ ಸ್ಥಳಕ್ಕೆ, ತಂದೆಯಾದ ಯಯಾತಿಯು ಸ್ವರ್ಗದಿಂದ ಹೊರಬಂದು ಸೇರಿದ ಸಮಯಕ್ಕೆ, ಮಾಧವಿಯೂ ಬಂದಳು. ಅವಳೂ ತನ್ನ ಪುಣ್ಯದಲ್ಲಿ ತಂದೆಗೆ ಪಾಲನ್ನು ನೀಡಿದಳು. ಯಯಾತಿಯು ಮಗಳು ಮಾಧವಿ ಮತ್ತು ದೌಹಿತ್ರರ ಪ್ರೀತಿಗೆ ಕಟ್ಟುಬಿದ್ದು ಇಷ್ಟವಿಲ್ಲದಿದ್ದರೂ ಆ ಪುಣ್ಯಾರಾಶಿಯನ್ನು ಪಡೆದು ಮತ್ತೆ ಸ್ವರ್ಗದಲ್ಲಿ ತನ್ನ ಯೋಗ್ಯ ಸ್ಥಳವನ್ನು ಪಡೆದುಕೊಂಡ. 

*****

ಯಯಾತಿ, ಮಾಧವಿ ಮತ್ತು ಅವಳ ನಾಲ್ಕು ಜನ ಮಕ್ಕಳ ಪ್ರಸಂಗ ಅಧ್ಭುತವಾಗಿದೆ. ಮಾಧವಿಯ ತಾಯಿ ಯಾರು ಎನ್ನುವುದರ ಮಾಹಿತಿ ಸರಿಯಾಗಿ ಸಿಗುವುದಿಲ್ಲ. ಆದರೆ ಮಾಧವಿಯು ತನ್ನ ಬಾಳಿನುದ್ದಕ್ಕೂ ನಡೆದುಕೊಂಡ ರೀತಿ ಅಚ್ಚರಿ ಮೂಡಿಸುತ್ತದೆ. ಯಯಾತಿಯ ದಾನಪರತ್ವ, ಮಾಧವಿಯ ತ್ಯಾಗ ಮತ್ತು ಅವಳ ಮಕ್ಕಳಾದ ನಾಲ್ವರು ಸಹೋದರರ ಯೋಗ್ಯತೆ ಬಹಳ ದೊಡ್ಡದು. ಇದು ಸತ್ಯವಿರಬಹುದು ಅಥವಾ ಕಥೆಯೇ ಆಗಿರಬಹುದು. ನಂಬುವುದೂ ಬಿಡುವುದೂ ಅವರವರಿಗೆ ಸೇರಿದ ವಿಚಾರ. ಕೇವಲ ಕಥೆ ಎಂದುಕೊಂಡರೂ ಅದೆಂಥ ಹರವು; ಎಂತಹ ವಿಸ್ತಾರ! ಕಡೆಗೆ ನೋಡಿದರೆ ಇದು ಮಹಾಭಾರತ ಮತ್ತು ಭಾಗವತಗಳ ಒಂದು ತುಣುಕು ಮಾತ್ರ! ಅವುಗಳಲ್ಲಿ ಇಂತಹ ಅನೇಕ ಪ್ರಸಂಗಗಳು ಸೇರಿಹೋಗಿವೆ. 

ನಾವು ಅಣ್ಣ-ತಮ್ಮಂದಿರಿಗೆ "ಸಹೋದರರು" ಎಂದು ಸುಲಭವಾಗಿ ಹೇಳುತ್ತೇವೆ. ಒಂದೇ ಉದರದಲ್ಲಿ (ಗರ್ಭದಲ್ಲಿ) ಹುಟ್ಟಿದವರು ಸಹೋದರರು. ಅಂದರೆ ಒಂದು ತಾಯಿಯ ಮಕ್ಕಳು. ಆದ್ದರಿಂದ ವಸುಮನ-ಪ್ರದರ್ತನ-ಶಿಬಿ-ಅಷ್ಟಕ ನಾಲ್ಕು ಬೇರೆ ಬೇರೆ ತಂದೆಯರ ಮಕ್ಕಳಾದರೂ ಸಹೋದರರು. ಒಬ್ಬನೇ ತಂದೆಯ, ಆದರೆ ಬೇರೆ ಬೇರೆ ತಾಯಿಯರ ಮಕ್ಕಳು ಅಣ್ಣ-ತಮ್ಮಂದಿರು. ಧರ್ಮರಾಯ-ಭೀಮ-ಅರ್ಜುನ ಸಹೋದರರು. ಹಾಗೆಯೇ, ನಕುಲ-ಸಹದೇವರು ಸಹೋದರರು. ಧರ್ಮರಾಯ-ಭೀಮ-ಅರ್ಜುನ-ನಕುಲ-ಸಹದೇವರು ಅಣ್ಣ-ತಮ್ಮಂದಿರು. ಹೀಗೆ. 

ಸಿಂಧೂನದಿಯ ದಡದಲ್ಲಿ, ಇಂದಿನ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ Sehvan ಎನ್ನುವ ಹೆಸರಿನ ನಗರ ಒಂದಿದೆ. ಪಾಕಿಸ್ತಾನದ ಹೈದರಾಬಾದ್ ನಗರದಿಂದ ಸುಮಾರು 80 ಮೈಲಿಗಳ ದೂರದಲ್ಲಿ. (ಈಗಿನ ತೆಲಂಗಾಣದಲ್ಲಿರುವ ನಮ್ಮ ಹೈದರಾಬಾದ್ ನಗರಕ್ಕೆ ಹಿಂದೆ Hyderabad (Deccan) ಎಂದು ಬರೆಯುತ್ತಿದ್ದು, ಹೇಳುತ್ತಿದ್ದುದು ಇದೇ ಕಾರಣಕ್ಕೆ, ಸ್ವತಂತ್ರಪೂರ್ವದಲ್ಲಿ ಒಂದು ಹೈದರಾಬಾದ್ (ಸಿಂಧ್), ಮತ್ತೊಂದು ಹೈದರಾಬಾದ್ (ದಖನ್) ಎಂದು ಗುರುತಿಸಲು). ಈ Sehvan  ನಗರದ ಹಿಂದಿನ ಹೆಸರು "ಶಿಬಿಸ್ಥಾನ" ಎಂದು. ಶಿಬಿ ಚಕ್ರವರ್ತಿಯ ಹೆಸರಿನಿಂದ ಕಟ್ಟಿದ ಪಟ್ಟಣ ಅದು. ಟರ್ಕಿ ದೇಶದಿಂದ ಬಂದವರ ಧಾಳಿಗೆ ತುತ್ತಾಗಿ ನಂತರ ಷೆವಾನ್ ಎಂದಾಗಿದೆ. 

ತಮಿಳುನಾಡಿನ ತಿರುಚಿನಾಪಳ್ಳಿ ನಗರದಿಂದ ಸುಮಾರು 20 ಮೈಲಿ ದೂರದಲ್ಲಿ ತಿರುವೆಲ್ಲರೈ ಎನ್ನುವ ಸ್ಥಳವೊಂದಿದೆ. ಅಲ್ಲಿ ಪ್ರಸಿದ್ಧವಾದ "ಪುಂಡರೀಕಾಕ್ಷಸ್ವಾಮಿ" ದೇವಾಲಯವೊಂದಿದೆ. ಇದೂ ಶಿಬಿ ಚಕ್ರವರ್ತಿ ಸ್ಥಾಪಿಸಿದ್ದು ಎಂದು ಪ್ರತೀತಿ. 

*****

ಯಯಾತಿ ಚಕ್ರವರ್ತಿಯ ಬಗ್ಗೆ ಅನೇಕ ಅತಿರೇಕದ ಅಭಿಪ್ರಾಯಗಳಿವೆ. ವಾಸ್ತವವಾಗಿ ನಮ್ಮಲ್ಲಿ ಮೂಲ ಗ್ರಂಥಗಳನ್ನು ಸಂಪೂರ್ಣವಾಗಿ ಓದುವ ಅಭ್ಯಾಸವಿಲ್ಲ. ಅಲ್ಲಷ್ಟು-ಇಲ್ಲಷ್ಟು ಓದಿ, ಅವರು ಹೇಳಿದ್ದು- ಇವರು ಹೇಳಿದ್ದು ಕೇಳಿ ನಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವ ಹವ್ಯಾಸವಿದೆ. ಈಗಲೂ ಹಿಂದಿನ ಚಕ್ರವರ್ತಿಗಳ ಹೆಸರುಗಳನ್ನೂ ನೆನೆಸಿಕೊಳ್ಳುವಾಗ ಮಾಂಧಾತ, ನಹುಷ, ಅಂಬರೀಷ, ಯಯಾತಿ, ಯದು ಮುಂತಾದವರು ಎಂದು ಹೇಳುವ ಪರಿಪಾಠ ಉಂಟು. ಸ್ವಲ್ಪವಾದರೂ ದೋಷ ಇಲ್ಲದ ಮನುಷ್ಯ ಎಲ್ಲಿದ್ದಾನೆ? ಅಂದಮಾತ್ರಕ್ಕೆ ಎಲ್ಲೋ ಕಂಡ ಒಂದು ದೋಷವನ್ನೇ ಹಿಗ್ಗಿಸಿ ತೋರಿಸುವುದು ಎಷ್ಟು ಸರಿ? ಜೀವನದಲ್ಲಿ ಹಾದರ ಇದೆ. ಆದರೆ ಹಾದರವೇ ಜೀವನವಲ್ಲ. 

ಈ ವಿಷಯದ ಬಗ್ಗೆ ಹೆಚ್ಚಿನ ಚರ್ಚೆಯನ್ನು ಮುಂದೆ ಎಂದಾದರೂ ಮಾಡೋಣ. 

Friday, September 19, 2025

ಯಯಾತಿಯ ಮೊಮ್ಮಕ್ಕಳು


ಐವತ್ತೈದು ವರುಷಗಳ ಹಿಂದೆ (1971) ಈಶ್ವರಿ ಪ್ರೊಡಕ್ಷನ್ಸ್  ಅವರ "ಕುಲ ಗೌರವ" ಎನ್ನುವ ಹೆಸರಿನ ಕನ್ನಡ ಚಲನಚಿತ್ರವೊಂದು ತೆರೆ ಕಂಡಿತ್ತು. ನಟ ಸಾರ್ವಭೌಮ ದಾಜಕುಮಾರ್ ಮೂರು ಪಾತ್ರಗಳಲ್ಲಿ ಅಭಿನಯಿಸಿದ್ದ ಚಲನಚಿತ್ರ. ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ ಮಾಲೀಕ ಎನ್. ವೀರಾಸ್ವಾಮಿ ಅವರ ಮಗ ರವಿಚಂದ್ರನ್ ಮೊದಲ ಬಾರಿಗೆ ಅದರಲ್ಲಿ ಬಾಲಕಲಾವಿದನಾಗಿ ಅಭಿನಯಿಸಿದ್ದರು. ಮೂರು ತಲೆಮಾರಿನ ಸಂಘರ್ಷವನ್ನು ತೋರಿಸುವ ಕಥೆಯ ಚಿತ್ರವದು. ತಾತ, ಅಪ್ಪ ಮತ್ತು ಮಗ ಅನ್ನುವ ಮೂರು ಪಾತ್ರಗಳು ರಾಜಕುಮಾರ್ ಪಾಲಿಗೆ. 

ತಾತ-ಅಪ್ಪ-ಮಗ ಮತ್ತು ಅಪ್ಪ-ಮಗ-ಮೊಮ್ಮಗ ಎನ್ನುವ ಮೂರು ತಲೆಮಾರುಗಳನ್ನು ಒಟ್ಟಾಗಿ ಸೂಚಿಸುವ ಪದಪ್ರಯೋಗವನ್ನು ನಾವು ಆಗಾಗ್ಗೆ ಕೇಳಬಹುದು. ಅನೇಕ ತಂದೆ-ತಾಯಿಯರಿಗೆ ಹಿಂದೆಲ್ಲ ಅನೇಕ ಮಕ್ಕಳಿರುತ್ತಿದ್ದರು. (ಈಗ ಇದ್ದರೆ ಒಂದೋ ಅಥವಾ ಎರಡೋ ಇರಬಹುದು). ಹೀಗೆ ಇರುತ್ತಿದ್ದ ಅನೇಕ ಮಕ್ಕಳಲ್ಲಿ ಕೆಲವು ಗಂಡು; ಕೆಲವು ಹೆಣ್ಣು. ಗಂಡು ಸಂತಾನಕ್ಕೆ "ಮಗ" ಎಂದೂ ಹೆಣ್ಣು ಸಂತಾನಕ್ಕೆ "ಮಗಳು" ಎಂದೂ ಹೇಳುವುದು. ಈಗಲೂ ಹಾಗೆಯೇ ನಡೆಯುತ್ತಿದೆ. ಎಲ್ಲರನ್ನೂ ಸೇರಿಸಿ ಒಟ್ಟಾಗಿ ನಿರ್ದೇಶಿಸುವಾಗ ಅದು "ಮಕ್ಕಳು" ಎಂದಾಗುತ್ತದೆ. ಇದೇ ರೀತಿ ಮಕ್ಕಳ ಮಕ್ಕಳನ್ನು "ಮೊಮ್ಮಕ್ಕಳು" ಎಂದು ಹೇಳುವುದು. ಈಗಲೂ ಇದು ಹೀಗೆಯೇ ಇದೆ. 

ಮೊಮ್ಮಕ್ಕಳು ಅವರ ತಂದೆ-ತಾಯಿಯರ ತಂದೆ-ತಾಯಿಯರನ್ನು ಏನೆಂದು ಕರೆಯಬೇಕು? ಸಾಮಾನ್ಯವಾಗಿ ನಾವು ಕೇಳುವ ಪದ "ತಾತ" ಮತ್ತು "ಅಜ್ಜಿ" ಎಂದು. ಕೆಲವೊಮ್ಮೆ "ಅಜ್ಜ" ಮತ್ತು "ಅಜ್ಜಿ" ಎಂದು ಹೇಳಬಹುದು. ನಾವು ಚಿಕ್ಕವರಿದ್ದಾಗ ತಂದೆಯ ತಂದೆಯನ್ನು "ತಾತ" ಎಂದೂ, ತಾಯಿಯ ತಂದೆಯನ್ನು "ಅಜ್ಜ" ಎಂದೂ ಕರೆಯುತ್ತಿದ್ದೆವು. ಆದರೆ ಎರಡೂ ಕಡೆಯವರು ಅಜ್ಜಿಯರು. ತೆಲುಗಿನಲ್ಲಿ ತಾಯಿಯ ತಾಯಿಯನ್ನು "ಅಮ್ಮಮ್ಮ" ಅನ್ನುತ್ತಾರೆ. ಈಗಲೂ ಪ್ರಾಯಶಃ ಕರಾವಳಿಯಲ್ಲಿ ಮತ್ತು ಮಲೆನಾಡಿನಲ್ಲಿ "ಅಜ್ಜ" ಅನ್ನುವ ಪದ ಹೆಚ್ಚು ಬಳಕೆಯಲ್ಲಿದೆ ಅನ್ನಿಸುತ್ತದೆ. ಈಗಂತೂ ತಾತ, ಅಜ್ಜ, ಅಜ್ಜಿ ಎಲ್ಲರೂ ಮರೆಯಾಗಿ "ಗ್ರಾಂಡ್ ಪಾ" ಮತ್ತು "ಗ್ರಾಂಡ್ ಮಾ" ಬಂದಿದ್ದಾರೆ. 

ಸಂಸ್ಕೃತದಲ್ಲಿ ಮಗನಿಗೆ ಮತ್ತು ಮಗಳಿಗೆ ನಿರ್ದೇಶಿಸಲು ಅನೇಕ ಪದಗಳು ಇವೆ. ಮಗನಿಗೆ "ಪುತ್ರ" ಎನ್ನುವ ಪದ ಹೆಚ್ಚು ಬಳಕೆಯಲ್ಲುಂಟು. ಹಾಗೆಯೇ ಮಗಳಿಗೆ "ಪುತ್ರೀ" ಎಂದುಂಟು. "ಸುತ" ಮತ್ತು "ಸುತಾ" ಎಂದೂ ಉಂಟು. ಹಾಗೆಯೇ ಉಪಯೋಗಿಸುವ ಅನೇಕ ಪದಗಳಲ್ಲಿ ಮಗಳಿಗೆ "ದುಹಿತಾ" ಎಂದು ಒಂದು ಪದ ಉಂಟು. ತಂದೆಯ ತಂದೆಯನ್ನು "ಪಿತಾಮಹ" ಎಂದು ಸಂಬೋಧಿಸುತ್ತಾರೆ. ಕನ್ನಡದಲ್ಲಿಯೂ ಹೀಗುಂಟು. ತಾಯಿಯ ತಂದೆಯನ್ನು "ಮಾತಾಮಹ" ಎನ್ನುತ್ತಾರೆ. ಹೀಗೆಯೇ ಮಗನ ಮಗನಾದ  ಮೊಮ್ಮಗನಿಗೆ "ಪೌತ್ರ" ಎಂದೂ, ಮಗಳ ಮಗನಾದ ಮೊಮ್ಮಗನಿಗೆ "ದೌಹಿತ್ರ" (ದುಹಿತಾಳ ಮಗ) ಎಂದೂ ಹೇಳುವುದು.  

ಈ ಪಿತಾಮಹ, ಮಾತಾಮಹ, ಪೌತ್ರ ಮತ್ತು ದೌಹಿತ್ರ ಎನ್ನುವ ಪದಗಳಿಂದ ಸಂಬಂಧಗಳು ಖಚಿತವಾಗಿ ತಿಳಿಯುತ್ತವೆ. ಈ ಸಂಚಿಕೆಯ ಹೆಸರು "ಯಯಾತಿಯ ಮೊಮ್ಮಕ್ಕಳು" ಎಂದು. ಮುಂದೆ "ದೌಹಿತ್ರ" ಎನ್ನುವ ಪದ ಬರುತ್ತದೆ. ಆದ್ದರಿಂದ ಇಷ್ಟು ಪೀಠಿಕೆ. 

*****

ಪರೀಕ್ಷಿತ್ ಮಾಹಾರಾಜನಿಗೆ ಏಳು ದಿನದೊಳಗೆ ಸಾವು ಸಂಭವಿಸುವುದು ಎಂದು ತಿಳಿದಿದೆ. ಸಾಧನೆಯ ಒಂದು ರೀತಿಯಾಗಿ ಶುಕಾಚಾರ್ಯರಿಂದ "ಶ್ರೀಮದ್ಭಾಗವತ" ಕೇಳುತ್ತಿದ್ದಾನೆ. ಎಂಟು ಸ್ಕಂದಗಳು ಮುಗಿದಿವೆ. ಪರೀಕ್ಷಿತನಿಗೆ ತಾನು ತಾಯಿಯ ಗರ್ಭದಲ್ಲಿದ್ದಾಗ ಅಶ್ವತ್ಥಾಮಾಚಾರ್ಯರ  ಬ್ರಹ್ಮಾಸ್ತ್ರದಿಂದ ತನ್ನನ್ನು ಕಾಪಾಡಿದ ಶ್ರೀಕೃಷ್ಣನ ಕಥೆ ಕೇಳಬೇಕೆಂದು ಆಸೆ. ತಾನೂ ಚಂದ್ರವಂಶದವನು. ಶ್ರೀಕೃಷ್ಣನೂ ಚಂದ್ರವಂಶದವನು. ಚಂದ್ರವಂಶದವರ ಕಥೆಯನ್ನು ವಿವರವಾಗಿ ಹೇಳಬೇಕೆಂದು ಶುಕಾಚಾರ್ಯರನ್ನು ಕೇಳುತ್ತಾನೆ. ಶುಕರು ಒಂಭತ್ತನೆಯ ಸ್ಕಂದದಲ್ಲಿ ಚಂದ್ರವಂಶದವರ ವೃತ್ತಾಂತವನ್ನೂ, ನಂತರ ಹತ್ತನೆಯ ಸ್ಕಂದದಲ್ಲಿ ವಿಸ್ತಾರವಾಗಿ ಶ್ರೀಕೃಷ್ಣನ ಕಥೆಯನ್ನೂ ಹೇಳುತ್ತಾರೆ. 

ಹೀಗೆ ಹೇಳುವಾಗ ಯಯಾತಿಯ ಮತ್ತು ಅವನ ಮಕ್ಕಳ, ಮೊಮ್ಮಕ್ಕಳ ಪ್ರಸಂಗಗಳು ಬರುತ್ತವೆ. ಮಹಾಭಾರತದಲ್ಲೂ ಯಯಾತಿಯ, ಅವನ ಸಂತತಿಯ ವಿವರಗಳು ಸಿಕ್ಕುತ್ತವೆ. 

ಚತುರ್ಮುಖ ಬ್ರಹ್ಮನ ಅನೇಕ ಮಕ್ಕಳಲ್ಲಿ ಅತ್ರಿ ಋಷಿಗಳೂ ಒಬ್ಬರು. ಅನಸೂಯ-ಅತ್ರಿಯರ ಮಗ ಚಂದ್ರ. ಚಂದ್ರನ ಮಗ ಬುಧ. ಬುಧ ಮತ್ತು ಇಳಾ ದಂಪತಿಗಳ ಮಗ ಪುರೂರವ. ಪುರೂರವ ಮತ್ತು ಆಯುಷ್ ದಂಪತಿಗಳ ಮಗ ನಹುಷ ಚಕ್ರವರ್ತಿ. ನಹುಷ ಚಕ್ರವತಿಯು ಕೆಲವು ಕಾಲ ದೇವೇಂದ್ರನ ಪದವಿಯನ್ನೂ ಹೊಂದಿದ್ದವನು. 

ನಹುಷನಿಗೆ ಪಿತೃ ದೇವತೆಗಳ ಮಗಳಾದ ವಿರಜಾ ಎನ್ನುವವಳು ಹೆಂಡತಿ. ಇವರ ಮಗನೇ ಯಯಾತಿ. ಯಯಾತಿಗೆ ಶುಕ್ರಾಚಾರ್ಯರ ಮಗಳಾದ ದೇವಯಾನಿ ಮತ್ತು ವೃಷಪರ್ವ ರಾಜನ ಮಗಳಾದ ಶರ್ಮಿಷ್ಠೆ ಪತ್ನಿಯರು. "ರಾಜಾನೋ ಬಹುವಲ್ಲಭಾ:" ಎನ್ನುವಂತೆ ಬೇರೆ ಹೆಂಡತಿಯರೂ ಇದ್ದರು. 

ಯಯಾತಿಗೆ ದೇವಯಾನಿಯಿಂದ ಯದು ಮತ್ತು ತುರ್ವಸು ಎಂದು ಮಕ್ಕಳು. ಈ ಯದು ಮಹಾರಾಜನ ಸಂತತಿಯವರೇ ಮುಂದೆ "ಯಾದವರು" ಎಂದಾದರು. 

ಯಯಾತಿಗೆ ಶರ್ಮಿಷ್ಠೆಯಿಂದ ದೃಹ್ಯು, ಅನುದೃಹ್ಯು ಮತ್ತು ಪುರು ಎಂದು ಮೂವರು ಮಕ್ಕಳು. ಈ ಪುರು ಮಹಾರಾಜನ ಸಂತತಿಯಲ್ಲಿ ಬಂದ ಕುರು ಮಹಾರಾಜನ ಹೆಸರಿನಿಂದ, ಮುಂದೆ ಕೌರವರು ಮತ್ತು ಪಾಂಡವರು ಎಂದಾಯಿತು. 

ಹೀಗೆ ಯಾದವರು, ಕೌರವರು ಮತ್ತು ಪಾಂಡವರು, ಈ ಮೂರೂ ಸಂತತಿಗಳಿಗೆ ಯಯಾತಿಯು ಮೂಲಪುರುಷ. 
*****

ತನ್ನ ಪಿತಾಮಹನಾದ ಪುರೂರವ ಮತ್ತು ತಂದೆಯಾದ ನಹುಷ ಚಕ್ರವರ್ತಿಗಳಂತೆ ಯಯಾತಿ ಸಹ ಬಹಳ ಪ್ರತಾಪಿಯೂ ಮತ್ತು ಧರ್ಮಿಷ್ಟನೂ ಆಗಿದ್ದನು. ಬಹು ಸಂಖ್ಯಾತ ಯಜ್ಞ-ಯಾಗಾದಿಗಳನ್ನು ಮಾಡಿ, ನ್ಯಾಯವಾಗಿ ರಾಜ್ಯಪಾಲನೆ ಮಾಡಿ ಬಹಳ ಪುಣ್ಯವನ್ನು ಸಂಪಾದಿಸಿದ್ದನು. ಕಾಲಕ್ರಮದಲ್ಲಿ ಅವನಿಗೆ ತನ್ನ ಯೋಗ್ಯತೆಗೆ ಅನುಗುಣವಾಗಿ ಸ್ವರ್ಗ ಪ್ರಾಪ್ತಿಯಾಯಿತು. ಅವನಿಗೆ ಸ್ವರ್ಗದಲ್ಲಿ ವಿಶೇಷ ಗೌರವಗಳಿದ್ದವು. ಅನೇಕ ದೇವತೆಗಳು "ಇಂತಹ ಪುಣ್ಯವಂತನ ದರ್ಶನ ಸಿಗುವುದೇ ದುರ್ಲಭ" ಎಂದು ಪ್ರತಿದಿನ ಅವನನ್ನು ನೋಡಿಹೋಗುತ್ತಿದ್ದರಂತೆ!

ಆಗಾಗ ದೇವೇಂದ್ರನು "ಯಯಾತಿ, ನಿನ್ನಂತೆ ಅನೇಕ ಯಜ್ಞ-ಯಾಗಗಳನ್ನು ಮಾಡಿರುವವರು ಭೂಲೋಕದಲ್ಲಿ ಬೇರೆ ಯಾರಾದರೂ ಇದ್ದಾರೆಯೇ?" ಎಂದು ಕೇಳುವನು. ಯಯಾತಿಯು "ಅಯ್ಯೋ, ನನ್ನದೇನು ದೊಡ್ಡದು. ನನಗಿಂತ ಎಷ್ಟೋ ದೊಡ್ಡ ಮಹಾತ್ಮರು ಇರುವರು" ಎನ್ನುವನು. ಹೀಗೆಯೇ ಅನೇಕ ಬಾರಿ ನಡೆಯಿತು. 

ಒಮ್ಮೆ ಯಯಾತಿಗೆ ದೇವೇಂದ್ರನು ಹೀಗೆ ಮತ್ತೆ ಮತ್ತೆ ಕೇಳುವುದರಿಂದ ಅಹಂಕಾರ ಉಂಟಾಯಿತು. ದೇವೇಂದ್ರನು ಮತ್ತೆ ಕೇಳಿದಾಗ "ನನ್ನಷ್ಟು ಮಾಡಿರುವವರು ಯಾರಿದ್ದಾರು? ನಾನೇ ಹೆಚ್ಚು" ಎಂದುಬಿಟ್ಟನು. ದೇವೇಂದ್ರನು ಅವನನ್ನು ಸ್ವರ್ಗದಿಂದ ಕೆಳಗೆ ತಳ್ಳಿಸಿಬಿಟ್ಟನು. 

ಹೀಗೆ ಕೆಳಗೆ ಬೀಳುವಾಗ ಯಯಾತಿಯು ಚತುರ್ಮುಖ ಬ್ರಹ್ಮರನ್ನು ಪ್ರಾರ್ಥಿಸಿದನು. ಅವರ ದರ್ಶನವಾಯಿತು. "ನನಗೆ ಏಕೆ ಈ ಗತಿ ಬಂತು?" ಎಂದು ಕೇಳಿದನು. ಬ್ರಹ್ಮರು "ಸ್ವರ್ಗದಲ್ಲಿ ಅಹಂಕಾರಿಗಳಿಗೆ ಜಾಗ ಇಲ್ಲ. ಆದ್ದರಿಂದ ಹೀಗಾಯಿತು" ಎಂದರು. "ಹೋಗಲಿ. ಈಗ ಬೀಳುತ್ತಿರುವುದಂತೂ ನಿಜ. ನನ್ನನ್ನು ಯಾರಾದರೂ ಯೋಗ್ಯರ ಮಧ್ಯದಲ್ಲಿ ಬೀಳುವಂತೆ ಮಾಡಿ" ಎಂದು ಕೇಳಿಕೊಂಡನು. ಅವರು "ಆಗಲಿ" ಎಂದರು. 

*****

ನೈಮಿಷಾರಣ್ಯದಲ್ಲಿ (ಈಗಿನ ಉತ್ತರಪ್ರದೇಶದಲ್ಲಿ ಇದೆ) ನಾಲ್ವರು ಮಹಾ ತೇಜಸ್ವಿಗಳಾದ ಅಣ್ಣ-ತಮ್ಮಂದಿರು ಒಂದು ಯಜ್ಞವನ್ನು ನಡೆಸುತ್ತಿದ್ದರು. ಸ್ವರ್ಗದಿಂದ ಕೆಳಗೆ ಬೀಳುತ್ತಿದ್ದ ಯಯಾತಿಯು ಚತುರ್ಮುಖ ಬ್ರಹ್ಮರ ಕರುಣೆಯಿಂದ ಆ ನಾಲ್ವರ ಮಧ್ಯದಲ್ಲಿ ಬಿದ್ದನು. ಅಣ್ಣ-ತಮ್ಮಂದಿರು ಅವನನ್ನು ಉಪಚರಿಸಿ, ಮಾತನಾಡಿಸಿದರು. 

"ಮಹಾತ್ಮರೇ, ನೀವು ಯಾರು?" 
"ನಾನು ಯಯಾತಿ. ಚಂದ್ರವಂಶದ ಚಕ್ರವರ್ತಿಯಾಗಿದ್ದವನು"
"ಹೀಗೆ ಬೀಳಲು ಕಾರಣವೇನು?"
"ನಾನು ಸ್ವರ್ಗದಲ್ಲಿದ್ದೆ. ಕಾರಣಾಂತರದಿಂದ ಪುಣ್ಯಕ್ಷಯವಾಯಿತು"
"ನಮ್ಮ ಪುಣ್ಯಗಳನ್ನು ನಿಮಗೆ ಧಾರೆ ಎರೆಯುತ್ತೇವೆ. ತಾವು ಮತ್ತೆ ಅಲ್ಲಿಗೆ ಹೋಗಿರಿ"
"ನಾನು ಕ್ಷತ್ರಿಯ. ದಾನ ಕೊಡಬಹುದೇ ಹೊರತು ದಾನ ತೆಗೆದುಕೊಳ್ಳುವಂತಿಲ್ಲ"
"ನಮ್ಮಿಂದ ತೆಗೆದುಕೊಳ್ಳಬಹುದು"
"ಅದು ಹೇಗೆ?"
"ನಾವು ಬೇರೆಯವರಲ್ಲ. ನಿಮ್ಮ ದೌಹಿತ್ರರು. ಆದ್ದರಿಂದ ಇದು ಆಗಬಹುದು"
"ದೌಹಿತ್ರರೇ? ನೀವು ಯಾರು?"
"ನಾವು ನಾಲ್ವರೂ ನಿನ್ನ ಮಗಳು ಮಾಧವಿ ಪಡೆದ ಮಕ್ಕಳು. ನೀನು ನಮ್ಮ ಮಾತಾಮಹ! ನೀನು ನಮ್ಮ ನಡುವೆ ಬಂದದ್ದು ನಮ್ಮ ಭಾಗ್ಯ"
*****

ಮಾಧವಿಯ ನಾಲ್ಕು ಮಕ್ಕಳೂ ಪ್ರಚಂಡರು. ವಿಶೇಷ ಸಾಧನೆಗಳನ್ನು ಮಾಡಿ ಬಹಳ ಪುಣ್ಯ ಸಂಪಾದನೆ ಮಾಡಿದವರು. 

ಸಂಚಿಕೆ ದೀರ್ಘವಾಯಿತು. ಮಾಧವಿಯ ಮಕ್ಕಳ ಸಂಗತಿಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.