Showing posts with label Narasimha. Show all posts
Showing posts with label Narasimha. Show all posts

Thursday, December 4, 2025

ಶ್ರೀಕೃಷ್ಣ ಅಂದರೆ ಯಾರು?


ಶ್ರೀಕೃಷ್ಣ ಅಂದರೆ ಯಾರು? ಹೀಗೆ ಯಾರಾದರೂ ನಮ್ಮನ್ನು ಪ್ರಶ್ನೆ ಮಾಡಿದರೆ ನಮ್ಮಲ್ಲಿ ಬಹುತೇಕರು ಪ್ರಶ್ನೆಗೆ ಉತ್ತರ ಕೊಡುವ ಬದಲು ಪ್ರಶ್ನೆ ಕೇಳಿದವರ ಮುಖವನ್ನು ದಿಟ್ಟಿಸಿ ನೋಡುವುದು ಸಹಜ. ಇದೇನು, ಇಂತಹ ಪ್ರಶ್ನೆ ಕೇಳುವುದೇ? ನಮ್ಮಲ್ಲಿ ರಾಮ, ಕೃಷ್ಣರನ್ನು ತಿಳಿಯದ ಮಂದಿ ಇದ್ದಾರೆಯೇ? ವಾಮನ, ತ್ರಿವಿಕ್ರಮ ನೆನಪಿಲ್ಲದಿರಬಹುದು. ವರಾಹ, ಸಂಕರ್ಷಣ ಯಾರೆಂದು ಗೊತ್ತಿಲ್ಲದಿರಬಹುದು. ದಾಮೋದರ ಮತ್ತು ಪ್ರದ್ಯುಮ್ನ ತಿಳಿದಿಲ್ಲದಿರಬಹುದು. ಆದರೆ ರಾಮ, ಕೃಷ್ಣ ಗೊತ್ತಿಲ್ಲವೇ? ಗಣಪ, ಹನುಮ, ಶಿವ, ರಾಮ, ಕೃಷ್ಣ, ಇವರು ಚಿಕ್ಕ ಮಕ್ಕಳಿಗೂ ಗೊತ್ತು. ಅಷ್ಟೇ ಅಲ್ಲ. ಇದು ಚಿಕ್ಕ ಮಕ್ಕಳಿಗೂ ಗೊತ್ತು ಎನ್ನುವುದು ಕೂಡ ಎಲ್ಲರಿಗೂ ಗೊತ್ತು. ಹೀಗಿರುವಾಗ, ಇದೆಂಥ ಪ್ರಶ್ನೆ? 

ಇಂತಹ ಪ್ರಶ್ನೆ ಸುಮ್ಮನೆ ಮಾಡಿದುದಲ್ಲ. ಅದಕ್ಕೆ ಕಾರಣಗಳಿವೆ. ಏನು ಕಾರಣಗಳು ಎನ್ನುವುದನ್ನು ಸ್ವಲ್ಪ ನೋಡೋಣ. 
*****

ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಅಂಚೆಯ ಪೆಟ್ಟಿಗೆ (ಪೋಸ್ಟ್ ಬಾಕ್ಸ್) ಅನ್ನುವ ಒಂದು ವಸ್ತು ಹೆಚ್ಚು ಕಡಿಮೆ ಮರೆತೇಹೋಗಿದೆ. ಕೊರಿಯರ್ ಸೇವೆ ಬಂದು ಹರಡಿದ ನಂತರ ಪೋಸ್ಟ್ ಆಫೀಸಿಗೆ ಹೋಗುವ ಸಂದರ್ಭಗಳು ಬಹಳ ಕಡಿಮೆ ಆದವು. ಸುಮಾರು ನಲವತ್ತು ವರುಷಗಳ ಹಿಂದೆ ಪೋಸ್ಟ್ ಕಾರ್ಡು, ಅಂಚೆ ಚೀಟಿ, ಅಂಚೆ ಡಬ್ಬ, ಅಂಚೆ ಕಚೇರಿ, ಇವೆಲ್ಲ ಪ್ರತಿದಿನ ನೋಡುತ್ತಿದ್ದ, ಆಗಾಗ ಉಪಯೋಗಿಸುತ್ತಿದ್ದ ಸೇವೆಗಳು. ಯಾವುದೋ ಸಂದರ್ಭಗಳಲ್ಲಿ ಪೋಸ್ಟ್ ಮ್ಯಾನ್ ಆಗಮನ ನಿರೀಕ್ಷಿಸಿ ಮನೆಯ ಬಾಗಿಲ ಬಳಿ ಕಾಯುತ್ತಿದ್ದುದೂ ಇರುತ್ತಿತ್ತು. ಕೆಲವು ಅಂಗಡಿಗಳಲ್ಲಿ ಒಂದು ಸಣ್ಣ ಡಬ್ಬಿಯಲ್ಲಿ ಅಂಚೆ ಚೀಟಿಗಳನ್ನು ಇಟ್ಟುಕೊಂಡು ಐದು ಪೈಸೆ ಚೀಟಿಯನ್ನು ಆರು ಪೈಸೆಗೆ ಮಾರುತ್ತಿದ್ದುದೂ ಉಂಟು. ಅಂಚೆ ಕಚೇರಿ ದಿನದ ವಹಿವಾಟು ಮುಗಿಸಿ ಮುಚ್ಚಿದ ನಂತರ ಅಥವಾ ರಜಾ ದಿನಗಳಲ್ಲಿ ಇವುಗಳ ಸೇವೆ ಅಮೂಲ್ಯವಾಗಿಯೂ ಇತ್ತು. 

ಬೇರೆಡೆಗೆ ಕಳುಹಿಸಬೇಕಾದ ಪತ್ರಗಳನ್ನು ಅಂಚೆಯ ಡಬ್ಬದಲ್ಲಿ ಹಾಕುವುದು ಆಗ ಒಂದು ಮುಖ್ಯ ಕೆಲಸ ಆಗಿರುತ್ತಿತ್ತು. ಅಲ್ಲಲ್ಲಿ ಸಣ್ಣ ಕೆಂಪು ಬಣ್ಣದ ಪೋಸ್ಟ್ ಡಬ್ಬಗಳಿರುತ್ತಿದ್ದುವು. ಅವುಗಳ ಮೇಲೆ "Next Clearance" ಎಂದು ಸಮಯ ತೋರಿಸುವ ಬಿಲ್ಲೆಗಳನ್ನು ಹಾಕಿರುತ್ತಿದ್ದರು. ಪ್ರತಿಯೊಂದು ಡಬ್ಬಕ್ಕೂ ಕಾಗದ-ಲಕೋಟೆಗಳನ್ನು ಹಾಕಲು ಒಂದು ಕಿಂಡಿ ಇರುತ್ತಿತ್ತು. ಮುಖ್ಯ ಅಂಚೆ ಕಚೇರಿಗಳ ಮುಂದೆ ದೊಡ್ಡ ಕೆಂಪು ಬಣ್ಣದ ಪೋಸ್ಟ್ ಬಾಕ್ಸುಗಳು. ಅವುಗಳಿಗೆ ಎರಡು ಕಡೆ ಕಿಂಡಿಗಳು. ಒಂದೇ ಸಮಯದಲ್ಲಿ ಇಬ್ಬರು ಪತ್ರಗಳನ್ನು ಅವುಗಳಲ್ಲಿ ಹಾಕುವ ಅನುಕೂಲತೆಗೆ. ಯಾವ ಕಿಂಡಿಯಲ್ಲಿ ಹಾಕಿದರೂ ಅವು ಬೀಳುತ್ತಿದ್ದುದು ಆ ಬಾಕ್ಸುಗಳ ಒಂದೇ ದೊಡ್ಡ ಹೊಟ್ಟೆಗೆ. 

ಬೆಂಗಳೂರಿನಲ್ಲಿ ವಿಧಾನಸೌಧ ಮತ್ತು ಆಗ ಇದ್ದ ಟ್ರಂಕ್ ಟೆಲಿಫೋನ್ ಎಕ್ಸ್ಚೇಂಜ್ ಕಟ್ಟಡದ ಮಧ್ಯೆ ಇದ್ದ ಹಳೆಯ ಜಿ. ಪಿ. ಓ. ಕಟ್ಟಡದ ಮುಂದೆ (ಈಗ ಅಲ್ಲಿ ಒಂದು ಸೌಧದಂತಹ ಜಿ.ಪಿ.ಓ. ಕಟ್ಟಡ ಬಂದಿದೆ) ಒಂದು ಬಲು ದೊಡ್ಡ ಪೋಸ್ಟ್ ಬಾಕ್ಸ್ ಇತ್ತು. ಅದಕ್ಕೆ ಆರು ಕಿಂಡಿಗಳು! ಅದೂ ಸಹ ದೊಡ್ಡ ದೊಡ್ಡ ಕಿಂಡಿಗಳು. ಒಂದೇ ಸಮಯದಲ್ಲಿ ಆರು ಮಂದಿ ದಪ್ಪ ಕಾಗದ-ಪಾತ್ರಗಳನ್ನು ಅಲ್ಲಿ ತುರುಕಬಹುದಾಗಿತ್ತು. ಎಲ್ಲಿ ತುರುಕಿದರೂ ಅವೆಲ್ಲಾ ತಲುಪುತ್ತಿದ್ದುದು ಆ ಅತಿ ದೊಡ್ಡ ಬಾಕ್ಸಿನ ಒಂದೇ ಬಕಾಸುರ ಹೊಟ್ಟೆಗೆ. ಹೀಗಿದ್ದರೂ ಸಂಜೆಯ ಹೊತ್ತಿನಲ್ಲಿ ಅಲ್ಲಿ ಹೆಚ್ಚಿನ ಜನ ಪತ್ರಗಳನ್ನು ಪೋಸ್ಟ್ ಮಾಡಲು ಬಂದಿರುತ್ತಿದ್ದರು. ಹಳೆಯ ತಲೆಮಾರಿನ ಜನ ಇದನ್ನು ನೆನೆಪಿಸಿಕೊಳ್ಳಬಹುದು. ಆತುರಾತುರದಲ್ಲಿ ಸಂಜೆ ಅಲ್ಲಿಗೆ ಹೋಗಿ, ಡಬ್ಬದಲ್ಲಿ ಪತ್ರ-ಲಕೋಟೆಗಳನ್ನು ಹಾಕಿ, ಕೈ ಮುಗಿದು ಬಂದಿರುವ ಉದಾಹರಣೆಗಳು ಅನೇಕ. 
*****

ಯಾವುದೇ ಪೂಜೆ-ಪುನಸ್ಕಾರ, ಹವನ-ಹೋಮ, ವ್ರತ-ನಿಯಮಗಳನ್ನು ಆಚರಿಸಿದಮೇಲೆ ಕಡೆಯಲ್ಲಿ ಇದೆಲ್ಲ ಪರಮಪುರುಷನಿಗೆ ಸೇರಲಿ ಎಂದು ಭಾವಿಸಿ "ಶ್ರೀಕೃಷ್ಣಾರ್ಪಣಮಸ್ತು" ಎಂದು ಹೇಳುವುದು ವಾಡಿಕೆ. ಜಪ-ತಪ, ದಾನ-ಧರ್ಮಗಳನ್ನು ಮಾಡಿದ್ದು ಕೂಡ ಕಡೆಗೆ ಹೀಗೆಯೇ ವಿನಿಯೋಗ. ಅಷ್ಟೇ ಏಕೆ? ದಾಸರು "ಕೈ ಮೀರಿ ಹೋದದ್ದೇ ಕೃಷ್ಣಾರ್ಪಣ" ಅಂದುಬಿಟ್ಟರು. ಇದನ್ನು ನಾವು ಕೊಡಬೇಕೆಂದು ಕೊಟ್ಟದ್ದಲ್ಲ. ಕೈತಪ್ಪಿ ಜಾರಿರಬಹುದು. ಯಾರೋ ಕಿತ್ತುಕೊಂಡು ಹೋಗಿರಬಹುದು. ಇಲ್ಲವೇ ಕುತಂತ್ರ, ಮೋಸಗಳಿಗೆ ಸಿಕ್ಕಿ ಕಳೆದುಕೊಂಡಿರಬಹುದು. ಹೀಗಿದ್ದರೂ ಸಹ, ಅಂತಹವುಗಳೆಲ್ಲದರ ಗತಿಯೂ ಕಡೆಯ ವಿನಿಯೋಗವನ್ನು  ಮಾಡುವುದು "ಶ್ರೀಕೃಷ್ಣಾರ್ಪಣಮಸ್ತು" ಎಂದು ಹೇಳಿಯೇ. ಕೆಲವರು "ಪರಮೇಶ್ವರಾರ್ಪಣಮಸ್ತು" ಅನ್ನಬಹುದು. ಆದರೂ ಈ ಸಂದರ್ಭಗಳಲ್ಲಿ ಶ್ರೀಕೃಷ್ಣನನ್ನು ನೆನೆಸಿಕೊಳ್ಳುವುದೇ ಹೆಚ್ಚು ವ್ಯಾಪಕ. 

ಈ ಕೃಷ್ಣ ಯಾರು? 

ಕೃಷ್ಣ ಯಾರು ಅಂದರೆ? ಅವನೇ. ಮಥುರೆಯ ಕಂಸನ ಕಾರಾಗೃಹದಲ್ಲಿ ಹುಟ್ಟಿದವನು. ಕಂಸನ ತಂಗಿ ದೇವಕಿಯ ಮಗ. ದೇವಕಿ-ವಸುದೇವರ ಮಗ. ಅವರ ಎಂಟನೆಯ ಕೂಸು. ಹುಟ್ಟಿದ ತಕ್ಷಣ ಅವರಪ್ಪ ಅವನನ್ನು ಎತ್ತಿಕೊಂಡು ತುಂಬಿ ಹರಿಯುತ್ತಿದ್ದ ಯಮುನೆಯನ್ನು ದಾಟಿ, ಗೋಕುಲ ತಲುಪಿ, ಅಲ್ಲಿನ ನಂದಗೋಪನ ಹೆಂಡತಿ ಯಶೋದೆ ಪಕ್ಕ ಮಲಗಿಸಿ, ಅಲ್ಲಿದ್ದ ಹೆಣ್ಣು ಮಗುವನ್ನು ಹೊತ್ತುಕೊಂಡು ಬರಲಿಲ್ಲವೇ? ಅವನೇ. ಪೂತನಿಯಿಂದ ಪ್ರಾರಂಭಿಸಿ, ಅದೆಷ್ಟೋ ರಕ್ಕಸರನ್ನು ಕೊಂದು, ಕಾಳೀಯನನ್ನು ಮರ್ದಿಸಿ, ಗೋವರ್ಧನ ಎಬ್ಬಿಸಿ, ಗೋಪಿಯರ ಮನೆಯ ಹಾಲು-ಮೊಸರು-ಬೆಣ್ಣೆ ಕದ್ದು ಕುಡಿದು-ತಿಂದು-ತೇಗಿ, ಹೆಣ್ಣುಮಕ್ಕಳ ಸೀರೆ-ವಸ್ತ್ರಗಳನ್ನು ಅಪಹರಿಸಿ, ಜಲಕ್ರೀಡೆ-ರಾಸಕ್ರೀಡೆ ಆಡಿ-ಆಡಿಸಿ, ಇನ್ನೂ ಏನೇನೂ ಮಾಡಿದನಲ್ಲ. ಅವನೇ. 

ಅಣ್ಣ ಬಲರಾಮನೊಡನೆ ಅಕ್ರೂರನ ಜೊತೆ ಮಧುರೆಗೆ ಹೋಗಿ, ಚಾಣೂರ-ಮುಷ್ಟಿಕ-ಕುವಲಯಾಪೀಡ ಆನೆ, ಇವೆಲ್ಲ ಕೊಂದು, ಕಡೆಗೆ ಕಂಸನಿಗೂ ಒಂದು ಗತಿ ಕಾಣಿಸಿ, ಅಪ್ಪ-ಅಮ್ಮನನ್ನು ಸೆರೆಯಿಂದ ಬಿಡಿಸಿದನಲ್ಲ.  ಅವನೇ. ಭೀಮಸೇನನಿಂದ ಜರಾಸಂಧನನ್ನು ಕೊಲ್ಲಿಸಿ, ಕುರುಕ್ಷೇತ ಯುದ್ಧ ಮಾಡಿಸಿ, ಕೌರವರನ್ನು ಕೊನೆಗಾಣಿಸಿ, ಪಾಂಡವರಿಗೆ ರಾಜ್ಯ ಕೊಡಿಸಿದವನು. ಹದಿನಾರು ಸಾವಿರದ ನೂರಾ ಎಂಟು ಹೆಣ್ಣುಗಳನ್ನು ಮದುವೆ ಮಾಡಿಕೊಂಡವನು. ದ್ವಾರಕಾವತಿ ನಿರ್ಮಿಸಿ, ಯಾದವರನ್ನೆಲ್ಲ ಅಲ್ಲಿಗೆ ಸೇರಿಸಿದವನು. ಹೀಗೆ ಬೇರೆ ಇನ್ನೂ ಏನೇನೋ ಮಾಡಿದವನು. ಅವನೇ. ತಲೆಗೆ ನವಿಲುಗರಿ ಸಿಕ್ಕಿಸಿಕೊಂಡು ಕೊಳಲು ನುಡಿಸುತ್ತಿರುವ ಮುರಳೀಧರ. ದನಗಳನ್ನು ಕಾಯುವ ಗೋಪಾಲ. ಅವನೇ ಶ್ರೀಕೃಷ್ಣ. 

ಕಪ್ಪು ಬಣ್ಣದವನಾದ್ದರಿಂದ ಕೃಷ್ಣ. ವಸುದೇವನ ಮಗ ಆದುದರಿಂದ ವಾಸುದೇವ. ಅವನೇ ವಾಸುದೇವ ಶ್ರೀಕೃಷ್ಣ. ಹೀಗೆ ಸಾಮಾನ್ಯವಾಗಿ ಹೇಳುವುದು. 

*****

ಸರಿ ಹಾಗಿದ್ದರೆ. ಶ್ರೀಕೃಷ್ಣನು ದೇವಕಿ-ವಸುದೇವರ ಎಂಟನೆಯ ಮಗ. ದ್ವಾಪರಯುಗದಲ್ಲಿ ಹುಟ್ಟಿದವನು. ಅವನು ಶ್ರೀವಿಷ್ಣುವಿನ ಒಂದು ಅವತಾರರೂಪ. ಅವನೇ ಅರ್ಜುನನಿಗೆ ಭಗವದ್ಗೀತೆಯನ್ನು ಉದಪದೇಶಿಸಿದವನು. "ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್, ಯತ್ತಪಸ್ಯಸಿ ಕೌಂತೇಯ ತತ್ಕುರುಶ್ವ ಮದರ್ಪಣಂ" ಎಂದವನು. "ನೀನು ಮಾಡಿದ್ದನ್ನೆಲ್ಲ, ನೀನು ಸೇವಿಸಿದ್ದನ್ನೆಲ್ಲ, ಹೋಮಾದಿಗಳಲ್ಲಿ ಹಾಕಿದ್ದನ್ನು, ದಾನಾದಿಗಳಲ್ಲಿ ಕೊಟ್ಟಿದ್ದನ್ನು, ಜಪ-ತಪಗಳಲ್ಲಿ ಪಡೆದದ್ದನ್ನು, ಎಲ್ಲವನ್ನೂ ನನಗೆ ಅರ್ಪಿಸು" ಎಂದು ಭಗವದ್ಗೀತೆಯಲ್ಲಿ ಹೇಳಿದವನು. ಅದಕ್ಕೇ ಅವನಿಗೆ ಅರ್ಪಿಸಲು ಎಂದು ಉದ್ದೇಶಿಸಿ "ಶ್ರೀಕೃಷ್ಣಾರ್ಪಣಮಸ್ತು" ಅನ್ನುತ್ತೇವೆ. 

ಒಪ್ಪೋಣ. ಹಾಗಿದ್ದರೆ ಮಹಾಭಾರತ ನಡೆಯುವುದಕ್ಕೆ ಮುನ್ನ, ದ್ವಾಪರ ಯುಗಕ್ಕೆ ಮುಂಚೆ, ಈ ಕೃಷ್ಣ ಹುಟ್ಟುವ ಮುಂಚೆ, ಏನು ಮಾಡುತ್ತಿದ್ದರು? ಹೇಗೆ ಅರ್ಪಣೆ ನಡೆಯುತ್ತಿತ್ತು? ಇದೊಂದು ಪ್ರಶ್ನೆ ಉಳಿಯಿತು. ಅಲ್ಲವೇ?

ಕೇಶವಾದಿ (ಚತುರ್ವಿಂಶತಿ) ಇಪ್ಪತ್ತನಾಲ್ಕು ನಾಮಗಳು ಎನ್ನುತ್ತೇವೆ. ಕೇಶವನಿಂದ ಹಿಡಿದು, ನಾರಾಯಣ, ಮಾಧವ ಮುಂತಾದ ಇಪ್ಪತ್ತನಾಲ್ಕು ಹೆಸರುಗಳು ಉಂಟು. ಅದರಲ್ಲಿ ಕಡೆಯದು ಶ್ರೀಕೃಷ್ಣ. ಹದಿನಾಲ್ಕನೆಯವನು ವಾಸುದೇವ. ಹತ್ತೊಂಭತ್ತನೆಯವನು ಒಬ್ಬ ನರಸಿಂಹನೂ ಇದ್ದಾನೆ. ಇದು ಎಂದಿನಿಂದಲೂ ಉಂಟು. ಸೃಷ್ಟಿಯ ಮೊದಲಿನಿಂದಲೂ ಇದೆ. ಈ ಕೃಷ್ಣ ಯಾರು? ಈ ಇಪ್ಪತ್ತನಾಲ್ಕರಲ್ಲಿ ಹದಿನಾಲ್ಕನೆಯವನು ವಾಸುದೇವ. ಈ ವಾಸುದೇವ ಯಾರು? ದ್ವಾಪರದ ಕೃಷ್ಣ ಹುಟ್ಟುವ ಮುಂಚೆ ಇವರು ಹೇಗೆ ಇದ್ದರು?

*****

ಗೀತೋಪದೇಶ ಕಾಲದಲ್ಲಿ, ಕಡೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಒಮ್ಮೆ ತನ್ನ ವಿರಾಟ್ ರೂಪ ತೋರಿಸುತ್ತಾನೆ. ಅರ್ಜುನನಂತಹವನೂ ಅದನ್ನು ನೋಡಲಾರ. "ಸ್ವಾಮಿ, ಇದನ್ನು ಮರೆ ಮಾಡು. ನನ್ನ ಮೈ ಸುಡುತ್ತಿದೆ. ಮೊದಲಿನ ಸೌಮ್ಯ ರೂಪ ತೋರಿಸು" ಎಂದು ಅಂಗಲಾಚಾಚುತ್ತಾನೆ. ಪರಮಪುರುಷನ ವಿರಾಟ್ ರೂಪವನ್ನು ನಾವು ಕಲ್ಪಿಸಿಕೊಳ್ಳುವುದೂ ಕಷ್ಟ. ಅವನ ಆಯುಧಗಳು ಮೂರು ಅವನ ಜೊತೆಯಲ್ಲಿಯೇ ಇರುತ್ತವೆ. ಸುದರ್ಶನ ಚಕ್ರ, ಪಾಂಚಜನ್ಯ ಶಂಖ ಮತ್ತು ಕೌಮೋದಕಿ ಗದೆ. ಒಂದು ಅಭಯ ಹಸ್ತವೋ, ಕಮಲದ ಕೈಯ್ಯೋ ಬೇಕು. ಅದಕ್ಕೆ ನಾಲ್ಕು ಕೈಗಳ ಶ್ರೀಹರಿಯನ್ನು ಚಿಂತಿಸುವುದು. ಈ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ, ಪದ್ಮ. ಇವುಗಳನ್ನು ಹೇಗೆ ಹಿಡಿದುಕೊಳ್ಳಬೇಕು? ಇದು ಇಪ್ಪತ್ತುನಾಲ್ಕು ರೀತಿ ಸಾಧ್ಯ. ಆದ್ದರಿಂದ ಇಪ್ಪತ್ತುನಾಲ್ಕು ರೂಪಗಳು. ಅವುಗಳಿಗೆ ಕೇಶವನಿಂದ ಶ್ರೀಕೃಷ್ಣನವರೆಗೆ ಇಪ್ಪತ್ತುನಾಲ್ಕು ಮೂಲ ಹೆಸರುಗಳು. 


ಶ್ರೀಕೃಷ್ಣಾರ್ಪಣಮಸ್ತು ಎನ್ನುವಾಗ ವಾಸ್ತವವಾಗಿ ನೆನೆಯುವುದು ಈ ಇಪ್ಪತ್ನಾಲ್ಕು ಮೂಲ ರೂಪಗಳ ಕಡೆಯವನಾದ ಶ್ರೀಕೃಷ್ಣನನ್ನು. ಮೇಲಿನ ಚಿತ್ರದಲ್ಲಿರುವುದು ಶ್ರೀಕೃಷ್ಣ ರೂಪ. ಅವನು ಕ್ರಮವಾಗಿ ಗದೆ, ಪದ್ಮ, ಚಕ್ರ ಮತ್ತು ಶಂಖಗಳನ್ನು ಹಿಡಿದಿದ್ದಾನೆ. ಹದಿನಾಲ್ಕನೆಯವನು ವಾಸುದೇವ. "ಸರ್ವತ್ರ ವಾಸಯತಿ ಇತಿ ವಾಸುದೇವಃ". "ಎಲ್ಲ ಕಡೆಯೂ ವಾಸವಾಗಿ ಇದ್ದಾನೆ. ಆದ್ದರಿಂದ ಅವನಿಗೆ ವಾಸುದೇವ ಎಂದು ಹೆಸರು". ದ್ವಾಪರದ ವಸುದೇವ ಹುಟ್ಟುವ ಮೊದಲೂ ಈ ವಾಸುದೇವ ಮತ್ತು ಶ್ರೀಕೃಷ್ಣರು ಇದ್ದೇ ಇದ್ದರು. ಅನಾದಿ ಕಾಲದಿಂದ ಇದ್ದಾರೆ. ಅನಂತ ಕಾಲದವರೆಗೆ ಇರುತ್ತಾರೆ. 

ಇಪ್ಪತ್ತುನಾಲ್ಕು ಜನರು ಸಾಲಾಗಿ ನಿಂತಿದ್ದಾರೆ. ಹೇಗೆ ಕರೆಯಬೇಕು? ಈ ಕಡೆಯಿಂದ ಕರೆದರೆ "ಕೇಶವಾದಿಗಳೇ, ಬನ್ನಿ" ಎನ್ನಬೇಕು. ಆ ಕಡೆಯಿಂದ ಕೊಟ್ಟರೆ "ಶ್ರೀಕೃಷ್ಣಾದಿಗಳೇ, ತೆಗೆದುಕೊಳ್ಳಿ" ಆನ್ನಬೇಕು. ಆದ್ದರಿಂದ ಸಮರ್ಪಣೆ ಮಾಡುವಾಗ (ಇಪ್ಪತ್ತನಾಲ್ಕರಲ್ಲಿ) ಕಡೆಯ ರೂಪ ಶ್ರೀಕೃಷ್ಣ ಆದುದರಿಂದ "ಶ್ರೀಕೃಷ್ಣಾರ್ಪಣಮಸ್ತು" ಅನ್ನುವುದು.. 

***** 

ಹಾಗಿದ್ದರೆ, ನಾವು ಪ್ರತಿದಿನ ಮಾಡುತ್ತಿರುವುದು ತಪ್ಪೇ? ನಾವು ನವಿಲುಗರಿಯ, ದನಕಾಯುವ, ಬೆಣ್ಣೆ ಕದಿಯುವ, (ಅಥವಾ ಬಿ. ಆರ್. ಛೋಪ್ರಾ ಮಹಾಭಾರತ ಧಾರಾವಾಹಿಯ ನಿತೀಶ್ ಭಾರದ್ವಾಜನನ್ನು) ಇಲ್ಲವೆಂದರೆ ಗೀತೋಪದೇಶ ಮಾಡುತ್ತಿರುವ ಪಾರ್ಥಸಾರಥಿಯನ್ನು ನೆನೆಯುತ್ತೆವಲ್ಲ! ಅದು ಸರಿಯೇ?

ಪರಮಪುರುಷನ ಪೂರ್ಣ ರೂಪ ನಮ್ಮ ಕಲ್ಪನೆಗೆ ನಿಲುಕದ್ದು. ಆದ್ದರಿಂದ ಅವನು ನಮಗೆ ಬಲು ಸುಲಭ ಮಾಡಿಕೊಟ್ಟಿದ್ದಾನೆ. ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆಯೋ, ಹಾಗೆ ತೋರುತ್ತಾನೆ. ಅದಕ್ಕೆ ಅವನೇನು ವೇಷ ಹಾಕಬೇಕಾಗಿಲ್ಲ. ಮೇಕಪ್ ಬೇಕಿಲ್ಲ. ಎಲ್ಲೆಡೆ ವ್ಯಾಪಿಸಿ ನಿಂತಿದ್ದಾನೆ. ಆ ಕೃಷ್ಣನನ್ನು ನೆನೆದು ಕರೆದರೆ ಹಾಗೆ ಬರುತ್ತಾನೆ. ಈ ಕೃಷ್ಣನನ್ನು ನೆನೆದು ಕರೆದರೆ ಹೀಗೆ ಬರುತ್ತಾನೆ. ಅಷ್ಟೇ. 

ಜಿ. ಪಿ. ಓ. ಮುಂದೆ ಇರುವ ಅಂಚೆ ಡಬ್ಬಿಯ ಆರು ಕಿಂಡಿಗಳಲ್ಲಿ ಯಾವ ಕಿಂಡಿಯಲ್ಲಿ ಪತ್ರ ಹಾಕಿದರೂ ಆ ಡಬ್ಬಿಯ ದೊಡ್ಡ ಹೊಟ್ಟೆಯನ್ನೇ ಸೇರುತ್ತದೆ. "ಅಯ್ಯೋ, ಆ ಕಿಂಡಿಯಲ್ಲಿ ಹಾಕಬೇಕಿತ್ತು. ಇದರಲ್ಲಿ ಹಾಕಿಬಿಟ್ಟೆನಲ್ಲ" ಎಂದು ಚಿಂತಿಸಬೇಕಿಲ್ಲ. ಈ ಕೃಷ್ಣನು ತೆಗೆದುಕೊಂಡರೂ ಒಂದೇ. ಆ ಕೃಷ್ಣನು ತೆಗೆದುಕೊಂಡರೂ ಒಂದೇ. ಇಪ್ಪತ್ತುನಾಲ್ಕು ಮೂಲ ರೂಪಗಳಲ್ಲಿ ಕಡೆಯವನು ಶ್ರೀಕೃಷ್ಣ (ಮೇಲೆ ತೋರಿಸಿರುವ ಚಿತ್ರದಂತೆ) ಎಂದು ಗೊತ್ತಿದ್ದರೆ ಒಳ್ಳೆಯದು. ಅಷ್ಟೇ. 

ಇನ್ನೊಂದು ವಿಶೇಷವುಂಟು. ಅಂಚೆ ಡಬ್ಬಿಯ ಪತ್ರಗಳಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. ಎಲ್ಲೋ ಒಂದು ಕಳೆದುಹೋಗಬಹುದು. ಕಾಗದಗಳ ಗಂಟುಗಳನ್ನು ತೆಗೆದುಕೊಂಡು ಹೋಗುತ್ತಿರುವ ವಾಹನವೋ, ವಿಮಾನವೋ, ಅಪಘಾತಕ್ಕೆ ಈಡಾಗಿ ಸುಟ್ಟು ಹೋಗಬಹುದು. ಮಳೆಯಲ್ಲಿ ನೆನೆದುಹೋಗಬಹುದು. ಬೆಂಗಳೂರಿನ ಜಯನಗರದ ಪಾಪಣ್ಣನ ಪತ್ರ ನೇಪಾಳದ ಗಡಿಯಲ್ಲಿರುವ ಬಿಹಾರದ ಜಯನಗರದ ಪಾಪಣ್ಣನಿಗೆ ರಾಂಗ್ ಡೆಲಿವರಿ ಆಗಬಹುದು. ಕೆಲವೊಮ್ಮೆ ಹತ್ತು ಹನ್ನೆರಡು ವರುಷಗಳ ನಂತರ ಸಿಗಬಹುದು. "ಶ್ರೀಕೃಷ್ಣಾರ್ಪಣಮಸ್ತು" ಡಬ್ಬಿಯಲ್ಲಿ ಹಾಕಿದ ಯಾವ ವಸ್ತುವೂ ಕಳೆದುಹೋಗುವುದಿಲ್ಲ. ತಪ್ಪು ವಿಳಾಸಕ್ಕೆ ಸೇರುವುದಿಲ್ಲ. ಅವನಿಗೇ ಹೋಗಿ ತಲಪುತ್ತದೆ. ಮತ್ತೆ ಅಷ್ಟೇ ಅಲ್ಲ. ಒಂದಕ್ಕೆ ಎರಡಾಗಿ, ನಾಲ್ಕಾಗಿ, ಅನಂತವಾಗಿ, ಹಿಂದಿರುಗಿ ಕೊಡುವ (ಅನಂತಮಡಿಮಾಡಿ ಹಿಂದಿರುಗಿ ಕೊಡುವ) ರೀತಿ ಅವನಿಗೆ ಚೆನ್ನಾಗಿ ಗೊತ್ತು. 

ಅನುಮಾನವಿದ್ದರೆ ಸುದಾಮನನ್ನು (ಕುಚೇಲನನ್ನು) ಕೇಳಬಹುದು. ಕೊಟ್ಟಿದ್ದು ಮೂರು ಹಿಡಿ ಒಣ ಅವಲಕ್ಕಿ. ಅದಕ್ಕೇನು ಕಡಲೆ, ಕಡಲೆಕಾಯಿ ಬೀಜ, ಗೋಡಂಬಿ, ಕರಿಬೇವು, ಒಗ್ಗರಣೆ, ಹಾಕಿರಲೂ ಇಲ್ಲ. ಅವನಿಗೆ ಹಿಂತಿರುಗಿ ಸಿಕ್ಕಿದ್ದು ಶ್ರೀಕೃಷ್ಣನ ಎಂಟು ಹೆಂಡಿರು ಸಾಲಾಗಿ ಬಡಿಸಿದ ಮೃಷ್ಟಾನ್ನ ಭೋಜನ. ದ್ವಾರಾವತಿಯ ಶ್ರೀಕೃಷ್ಣನ ಅರಮನೆಗೆ ಮಿಗಿಲಾದ ಅರಮನೆ. ಅನಂತ ಐಶ್ವರ್ಯ. ಕಡೆಗೆ ಮತ್ತೆ ಹುಟ್ಟುವ ಅವಶ್ಯಕತೆ ಇಲ್ಲದ "ಸಾಯುಜ್ಯ" ಎನ್ನುವ ಮೋಕ್ಷ ಸಾಮ್ರಾಜ್ಯ!

Saturday, February 3, 2024

ಮಹದಾದಿ ದೇವಾ ನಮೋ

 


ಅನೇಕ ದಶಕಗಳ ಹಿಂದೆ ನಾವು ಶಾಲೆಗಳಲ್ಲಿ ಕಲಿಯುತ್ತಿದ್ದಾಗ ಅಂದಿನ ಅಧ್ಯಾಪಕರು ಕೆಲವು ವಿಷಯಗಳನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ಬರೆಯುವ ಅಕ್ಷರಗಳು ಗುಂಡಾಗಿ ಚೆನ್ನಾಗಿರಬೇಕು, ಬರವಣಿಗೆ ಸೊಟ್ಟಾಗಿರದೆ ನೇರವಾಗಿ ಬರೆಯಬೇಕು, ಸಂದರ್ಭಕ್ಕೆ ಸರಿಯಾದ ಪದಗಳನ್ನು ಉಪಯೋಗಿಸಬೇಕು, ಬರೆದುದನ್ನು ಬೇರೆಯವರು ಓದುವಾಗ ಓದುಗನಿಗೆ ಸುಲಭವಾಗಿ ಅರ್ಥ ಆಗಬೇಕು, ಮುಂತಾದವು. ಒಮ್ಮೆ ಉಪಯೋಗಿಸಿದ ಪದವನ್ನು ಆದೇ ವಾಕ್ಯದಲ್ಲಿ ಮತ್ತೆ ಉಪಯೋಗಿಸಬಾರದು; ಅದೇ ವಾಕ್ಯವೇನು, ಆ ಪ್ಯಾರಾದಲ್ಲಿಯೇ ಮತ್ತೆ ಉಪಯೋಗಿಸಬಾರದು ಎನ್ನುವುದು ಮತ್ತೊಂದು. ಹೀಗೆ ಮಾಡುವುದರಿಂದ ನಮ್ಮ ಪದಸಂಪತ್ತು ಹೆಚ್ಚುತ್ತದೆ ಎನ್ನುವ ಕಿವಿಮಾತು ಕೂಡ ಇದರ ಜೊತೆಯಲ್ಲಿ ಇರುತ್ತಿತ್ತು. ಐದು ಅಂಕಗಳು ತಪ್ಪಿಲ್ಲದ ಮತ್ತು ಅಚ್ಚುಕಟ್ಟಾದ ಬರವಣಿಗೆಗೆ ಎಂದು ಮೀಸಲು ಸಹ ಇಡುತ್ತಿದ್ದರು. 

ನಾವು ಪ್ರಾಥಮಿಕ ಶಾಲಾ ತರಗತಿಗಳಲ್ಲಿ ಇದ್ದಾಗ (ಮೊದಲ ನಾಲ್ಕು ವರ್ಷಗಳು, ಅಂದರೆ ಇಂದಿನ ನಾಲ್ಕನೇ ತರಗತಿವರೆಗೆ) ಸ್ಲೇಟು ಮತ್ತು ಬಳಪ ಉಪಯೋಗಿಸುತ್ತಿದ್ದೆವು. ನೋಟ್ ಬುಕ್ಕು ಮತ್ತು ಪೆನ್ಸಿಲ್ ಅಥವಾ ಪೆನ್ನು  ಕಂಡರಿಯೆವು. ಆ ಸ್ಲೇಟಿನ ಸುತ್ತ ಮರದ ಚೌಕಟ್ಟು ಇರುತ್ತಿತ್ತು. ಅಕ್ಷರ ಸರಿ ಇಲ್ಲದಿದ್ದರೆ ಉಪಾಧ್ಯಾಯರು ಆ ಸ್ಲೇಟಿನ ಚೌಕಟ್ಟಿನಿಂದಲೇ ಬೆರಳುಗಳ ಹಿಂದೆ ಹೊಡೆಯುತ್ತಿದ್ದರು. ಇಂದಿನಂತೆ ಶಿಕ್ಷಕರು ಮಕ್ಕಳಿಗೆ ಹೊಡೆದರೆ ಪೋಷಕರು ಶಾಲೆಗೇ ಹೋಗಿ ಜಗಳ ಆಡುತ್ತಿರಲಿಲ್ಲ. ಪ್ರತಿಯಾಗಿ "ನಮ್ಮ ಮಗನಿಗೆ ಚೆನ್ನಾಗಿ ಹೊಡೆಯಿರಿ. ಸರಿಯಾಗಿ ಬುದ್ಧಿ ಬರಲಿ" ಎಂದು ಹೇಳುವ ಪೋಷಕರೂ ಇದ್ದರು! ಮುದ್ದಾದ ಅಕ್ಷರಗಳಲ್ಲಿ ತಪ್ಪಿಲ್ಲದೆ ಬರೆಯುವ ವಿದ್ಯಾರ್ಥಿಗಳು ಅಧ್ಯಾಪಕರಿಗೆ ಅಚ್ಚು ಮೆಚ್ಚು. 

ಅದಿನ್ನೂ ಕನ್ನಡ ನವೋದಯದ ಕಾಲ. ನವ್ಯ ಮತ್ತು ಬಂಡಾಯ ಎನ್ನುವವು ಇನ್ನೂ ಜನಿಸಿರಲಿಲ್ಲ. ಪಠ್ಯ ಪುಸ್ತಕದ ಪದ್ಯಗಳು ಸಾಮಾನ್ಯವಾಗಿ ಕನ್ನಡದ ಹೆಸರಾಂತ ಕಾವ್ಯಗಳ ಭಾಗವೋ  ಅಥವಾ ನವೋದಯ ಹರಿಕಾರರ ಪದ್ಯಗಳೋ ಆಗಿರುತ್ತಿದ್ದವು. ಶಿಕ್ಷಕರು ಅವುಗಳಲ್ಲಿನ ಕಾವ್ಯಗುಣಗಳನ್ನು ಎತ್ತಿ ಹೇಳುತ್ತಿದ್ದರು. ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ (ಐದರಿಂದ ಹತ್ತನೇ ತರಗತಿಗಳು) ವಿದ್ಯಾರ್ಥಿಗಳಿಗೆ ಈ ವಿಷಯಗಳು ಸ್ವಲ್ಪಮಟ್ಟಿಗೆ ಅರ್ಥ ಆಗುತ್ತಿದ್ದವು. ಈ ಕಾರಣದಿಂದಲೇ ಆಗಿನ ಎಲ್ ಎಸ್ (ಲೋಯರ್ ಸೆಕೆಂಡರಿ, ಅಂದರೆ ಎಂಟನೇ ತರಗತಿವರೆಗೆ) ಓದಿದ್ದವರೂ ಕಾವ್ಯ-ನಾಟಕಗಳಲ್ಲಿನ ಸೊಗಸನ್ನು ಅರಿಯಬಲ್ಲವರಾಗಿದ್ದರು. ಅವರ ಮುಂದಿನ ಜೀವನದಲ್ಲಿ ಕೆಲವು ರಸ ನಿಮಿಷಗಳನ್ನು ಈ ಕಾರಣದಿಂದ ಪಡೆಯಬಲ್ಲವರಾಗಿದ್ದರು. 

*****

ಶ್ರೀಮಹಾವಿಷ್ಣು ಅನೇಕ ಅವತಾರಗಳನ್ನು ಎತ್ತಿದ್ದರೂ ದಶಾವತಾರಗಳಿಗೆ ಹೆಚ್ಚಿನ ಮಹತ್ವ ಬಂದಿದೆ. ಇವುಗಳಲ್ಲಿಯೂ ಶ್ರೀರಾಮ ಮತ್ತು ಶ್ರೀಕೃಷ್ಣ ಅತಿಹೆಚ್ಚು ಪೂಜಿತರು. ಈ ಅವತಾರಗಳ ಗ್ರಂಥಗಳು ಮಹಾಕಾವ್ಯಗಳ ಸಾಲಿನಲ್ಲಿ ಅತಿ ಎತ್ತರದಲ್ಲಿ ನಿಂತಿದುದರಿಂದ ಈ ರೀತಿ ಇರಬಹುದು. ಇವೆರಡರ ನಂತರ ಅತಿ ಹೆಚ್ಚು ಪೂಜಿತವಾದ ರೂಪ ಶ್ರೀನರಸಿಂಹ. ಈ ಮೂರು ರೂಪಗಳಿಗೆ ಪ್ರಸಿದ್ಧವಾದ ನೂರಾರು ಕ್ಷೇತ್ರಗಳು ದೇಶ ವಿದೇಶಗಳಲ್ಲಿ ಹರಡಿವೆ. 

ಮಹಾಭಾರತ, ಭಾಗವತಾದಿ ಗ್ರಂಥಗಳಲ್ಲಿ ಮಹಾವಿಷ್ಣುವಿನ ಅನೇಕ ಅವತಾರಗಳ ವರ್ಣನೆಯಿದೆ. ಸಾಮಾನ್ಯವಾಗಿ ಎಲ್ಲಾರೂಪಗಳನ್ನೂ  "ಅಧ್ಭುತ" ಎಂದು ನಿರ್ದೇಶಿಸುತ್ತಾರೆ. ಆದರೆ ನರಸಿಂಹ ರೂಪವನ್ನು "ಅತ್ಯದ್ಭುತ" ಎಂದು ಹೇಳುತ್ತದೆ ಶ್ರೀಮದ್ಭಾಗವತ. ಎಲ್ಲ ರೂಪಗಳಲ್ಲಿಯೂ ವಿಶೇಷ ಸ್ಥಾನ ಶ್ರೀನರಸಿಂಹ ರೂಪಕ್ಕೆ. ನರಸಿಂಹ ಮಂತ್ರ ಹೇಳುತ್ತದೆ:

ಉಗ್ರಂ ವೀರಂ ಮಹಾವಿಷ್ಣುಮ್ ಜ್ವಲಂತಂ ಸರ್ವತೋಮುಖಮ್ 

ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮೃತ್ಯುಮ್ ನಮಾಮ್ಯಹಮ್ 

ನರಸಿಂಹರೂಪ ಮೃತ್ಯುವಿನ ಅಭಿಮಾನಿ ದೇವತೆಗಳಿಗೂ ಮೃತ್ಯು ಸ್ವರೂಪ. "ಕಠೋಪನಿಷತ್"ನಲ್ಲಿ ನಚಿಕೇತನಿಗೆ ಉಪದೇಶ ಮಾಡುವಾಗ ಯಮನು ಹೇಳುತ್ತಾನೆ: "ಮಹಾಪ್ರಳಯ ಕಾಲದಲ್ಲಿ ಮಹಾಪುರುಷನು ಎಲ್ಲವನ್ನೂ ತಿನ್ನುವಾಗ ಅವನಿಗೆ ನಾನು ಒಂದು ಉಪ್ಪಿನಕಾಯಿ!"

ನರಸಿಂಹ ಕ್ಷೇತ್ರಗಳಲ್ಲಿ ಒಂದು ವಿಶೇಷ ಕಾಣಬಹುದು. ಹೆಚ್ಚಿನವು ಬೆಟ್ಟ ಪ್ರದೇಶದಲ್ಲಿ ಇವೆ. ಬೆಟ್ಟದ ಮೇಲೆ ಯೋಗಾನರಸಿಂಹಸ್ವಾಮಿ ಮತ್ತು ಬೆಟ್ಟದ ಕೆಳಗೆ ತಪ್ಪಲಿನಲ್ಲಿ ಭೋಗಾನರಸಿಂಹಸ್ವಾಮಿ ಅಥವಾ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳು ಇರುತ್ತವೆ. 

"ಅಹೋಬಲ ನರಸಿಂಹ ಕ್ಷೇತ್ರ" ಆಂಧ್ರ ಪ್ರದೇಶದ ಕರ್ನೂಲ್ ಪಟ್ಟಣದಬಳಿ ಇದೆ. ಇದೇ ಕ್ಷೇತ್ರದಲ್ಲಿ ನರಸಿಂಹಾವತಾರವಾಗಿ ನರಹರಿಯು ಹಿರಣ್ಯಕಶಿಪುವನ್ನು  ಕೊಂದನು ಎಂದು ಪ್ರತೀತಿ. ಈ ಕ್ಷೇತ್ರಕ್ಕೆ "ಗರುಡಾದ್ರಿ" ಎನ್ನುವುದೂ ಇನ್ನೊಂದು ಹೆಸರು. ಇಲ್ಲಿ ಒಂಭತ್ತು ನರಸಿಂಹನ ದೇವಾಲಯಗಳು ಮತ್ತು ಇತರ ದೇವಾಲಯಗಳೂ ಇವೆ. ಶ್ರದ್ದಾಳು ಭಕ್ತರು ಜೀವನದಲ್ಲಿ ಒಮ್ಮೆಯಾದರೂ ಈ ಕ್ಷೇತ್ರ ದರ್ಶನ ಮಾಡಬೇಕೆಂದು ಆಶಿಸುತ್ತಾರೆ. ಭಾರ್ಗವ ನರಸಿಂಹ, ಯೋಗಾನಂದ ನರಸಿಂಹ, ಛತ್ರವಟ ನರಸಿಂಹ, ಅಹೋಬಲ ನರಸಿಂಹ ಅಥವಾ ಉಗ್ರ ನರಸಿಂಹ, ವರಾಹ ನರಸಿಂಹ, ಮಾಲೋಲ ನರಸಿಂಹ ಅಥವಾ ಸೌಮ್ಯ ನರಸಿಂಹ, ಜ್ವಾಲಾ ನರಸಿಂಹ, ಪಾವನ ನರಸಿಂಹ ಮತ್ತು ಕಾರಂಜ ನರಸಿಂಹ ಎಂದು ಈ ಒಂಭತ್ತು ನರಸಿಂಹ ದೇವಾಲಯಗಳು ಇಲ್ಲಿ ಇವೆ. ಕೆಲವರು ತಮ್ಮ ಮನೆಗಳಿಗೆ "ಮಾಲೋಲ" ಎಂದು ಹೆಸರಿಡುವುದು ಈ ಸೌಮ್ಯ ನರಸಿಂಹನ ನೆನಪಿನಲ್ಲಿಯೇ. 

*****

ಶ್ರೀಪುರಂದರ ದಾಸರು ನಮ್ಮ ನಾಡು ಕಂಡ ಅತ್ಯಂತ ಪ್ರತಿಭಾಶಾಲಿ ಕವಿಗಳಲ್ಲಿ ಮೊದಲ ಎಣಿಕೆಯಲ್ಲಿ ನಿಲ್ಲುತ್ತಾರೆ. ಭಕ್ತಿಯ ಭರದಲ್ಲಿ ಅವರ ಪದ, ಸುಳಾದಿ, ಉಗಾಭೋಗಗಳಲ್ಲಿ ಕಾವ್ಯ ಗುಣಗಳನ್ನು ಮರೆಯುವುದೇ ಹೆಚ್ಚು. ಅವರ ಪ್ರತಿಯೊಂದು ಕೃತಿಯಲ್ಲಿಯೂ ಗಮನಿಸಿದರೆ ಅನೇಕ ಕಾವ್ಯ ಗುಣಗಳನ್ನು ಕಾಣಬಹುದು. ಅವರೊಬ್ಬ ವರಕವಿ. ಅವರೆಂದೂ ಹಲಗೆ-ಬಳಪ ಹಿಡಿದೋ, ಲೇಖನಿ ಹಿಡಿದೋ ಕೃತಿ ರಚನೆ ಮಾಡಿದಂತೆ ಕಾಣುವುದಿಲ್ಲ. ಅವರು ಹೇಳಿದ್ದೆಲ್ಲಾ ಪದವಾಯಿತು, ಹಾಡಾಯಿತು, ಕೃತಿಯಾಯಿತು. "ಕರ್ಣಾಟ ಸಂಗೀತ ಪಿತಾಮಹ" ಎಂದು ಕರೆಸಿಕೊಳ್ಳುವ ಅವರು ಸಾಹಿತ್ಯ-ಸಂಗೀತ ಎರಕದ ರಚನೆಗಳಿಗೆ ಕೊನೆಯ ಮಾತು.  

ಶ್ರೀಪುರಂದರದಾಸರು ತಮ್ಮ ಜೀವಿತ ಕಾಲದಲ್ಲಿ ದೇಶವನ್ನೆಲ್ಲಾ ಸುತ್ತಿ ಅನೇಕ ತೀರ್ಥ ಕ್ಷೇತ್ರಗಳನ್ನು ಕಣ್ಣಾರೆ ನೋಡಿದವರು. ಪ್ರತಿ ಕ್ಷೇತ್ರದಲ್ಲಿ ಅಲ್ಲಲ್ಲಿನ ದೇವಾಲಯಗಳಲ್ಲಿ ಕೃತಿ ರಚನೆ ಮಾಡಿದವರು. ಉಡುಪಿ, ಫಂಡರಾಪುರ, ತಿರುಪತಿ, ಶ್ರೀರಂಗ, ಅಹೋಬಲ ಮುಂತಾದ ಕ್ಷೇತ್ರಗಲ್ಲಿ ಅವರು ರಚಿಸಿದ ಅನೇಕ ಕೃತಿಗಳು ಇಂದೂ ಹಾಡಲ್ಪಡುತ್ತಿವೆ. ಅವರ ಅಹೋಬಲ ನಾರಸಿಂಹನ ಕೃತಿಯ ಕೆಲವು ವಿಶೇಷಗಳನ್ನು ನೋಡೋಣ. 

"ಮಹದಾದಿದೇವ ನಮೋ ಮಹಾಮಹಿಮನೇ ನಮೋ" ಎನ್ನುವುದು ಅಹೋಬಲದಲ್ಲಿ ರಚಿತವಾದ ಕೃತಿ. ಇದರ ಮೂರು ನುಡಿಗಳಲ್ಲಿ ಅವರು ನರಸಿಂಹಾವತಾರದ ಸಂಕ್ಷಿಪ್ತ ವರ್ಣನೆಯನ್ನು ಕೊಡುತ್ತಾರೆ.:

ಮಹದಾದಿ ದೇವಾ ನಮೋ ಮಹಾಮಹಿಮನೇ ನಮೋ 

ಪ್ರಹ್ಲಾದವರದ ಅಹೋಬಲ ನಾರಸಿಂಹ 

ಮೊದಲ ನುಡಿಯಲ್ಲಿ ನರಸಿಂಹನ ಉದ್ಭವದ ಭೀಷಣವನ್ನು ಹೇಳುತ್ತಾರೆ. ಅವರು ಉಪಯೋಗಿಸಿರುವ ಪದಗಳು ಆ ಅವತಾರ ಪ್ರಕಟವಾದ ಭಯಂಕರ ದೃಶ್ಯವನ್ನು ನಮಗೆ ಕೊಡುತ್ತವೆ. 

ಧರಣಿಗುಬ್ಬಸವಾಗೆ  ತಾರಾಪಥವು ನಡುಗೆ 

ಸುರರು ಕಂಗೆಟ್ಟೋಡೆ ನಭವ ಬಿಟ್ಟು 

ವನಗಿರಿಗಳಲ್ಲಾಡೆ  ಶರಧಿಗಳು ಕುದಿದುಕ್ಕೆ 

ಉರಿಯನುಗುಳುತ ಉದ್ಭವಿಸಿದೆ ನಾರಸಿಂಹಾ 

ಸಕಲ ದೇವತೆಗಳ ಪ್ರಾರ್ಥನೆಯ ಮೇರೆಗೇ ಈ ಅವತಾರವಾದದ್ದು. ದೇವತೆಗಳು ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಆ ಅವತಾರದ ಭೀಕರತ್ವ ಅವರ ಊಹೆಗೂ ನಿಲುಕಲಿಲ್ಲ. ಅವರವರ ಸ್ಥಾನಗಳನ್ನೇ ಬಿಟ್ಟು ಸ್ವರಕ್ಷಣೆಗೆ ಓಡಿ ಹೋದರು! ಭದ್ರವಾಗಿ ನಿಲ್ಲುವ ಗುಣಕ್ಕೆ ಉದಾಹರಣೆಯಾದ ಬೆಟ್ಟಗಳೂ ಅದುರಿಹೋದವು. ಇಡೀ ಸೃಷ್ಟಿಯೇ ತಲ್ಲಣಿಸಿತು. ವಿಶಾಲ ಸಮುದ್ರದ  ಜಲರಾಶಿ ಒಂದೇ ಕ್ಷಣದಲ್ಲಿ ಕುದ್ದು ಉಕ್ಕಿದವು!

ಪ್ರಕಟವಾದ ನರಸಿಂಹನು ರಕ್ಕಸನನ್ನು ಹೇಗೆ ಕೊಂದ ಎನ್ನುವುದು ಅವರು ವರ್ಣಿಸುವ ರೀತಿ:

ಸಿಡಿಲಂತೆ ಘರ್ಜಿಸುತ ಉರಿವ ನಾಲಗೆ ಚಾಚಿ 

ಅಡಿಗಡಿಗೆ ಲಂಘಿಸುತ ಕೋಪದಿಂದ 

ಮುಡಿಪಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿ 

ಕಡುಉದರ ಬಗೆದೆ ಕಡುಗಲಿ ನಾರಸಿಂಹಾ 

ಸಿಂಹದ ಲಂಘನ; ಸಿಂಹ ಘರ್ಜನೆ. ಹಿರಣ್ಯಕನ ಜುಟ್ಟು ಹಿಡಿದು ಕುಕ್ಕಿ ಉಗುರಿಂದ ಬಗೆದ. ಗದೆ  ಹಿಡಿದು ಹತ್ತು ನಿಮಿಷ ಹಿರಣ್ಯ ಯುದ್ಧ ಮಾಡುವುದು ಸಿನಿಮಾದಲ್ಲಿ ಮಾತ್ರ.  ಹಿರಣ್ಯಕನ ವಧೆಯಾಯಿತು. 

ಅವತಾರ ತಾಳಿದ ಮುಖ್ಯ ಕೆಲಸವಾಯಿತು. ದೇವತೆಗಳ ಮತ್ತು ಪ್ರಹ್ಲಾದನ ಪ್ರಾರ್ಥನೆಯಿಂದ ಈಗ ನರಸಿಂಹನು ಶಾಂತನಾಗಿದ್ದಾನೆ. ಲಕ್ಷ್ಮಿಯು ತೊಡೆಯಮೇಲೆ ಕುಳಿತಿದ್ದಾಳೆ. ಈಗ ಅವನು "ಮಾಲೋಲ" ಆಗಿದ್ದಾನೆ. ಪ್ರಹ್ಲಾದವರದ ರೂಪ ತಾಳಿದ್ದಾನೆ. ದಾಸರು ಉಪಯೋಗಿಸುವ  ಪದಗಳೂ ಸೌಮ್ಯವಾಗುತ್ತವೆ:

ಸರಸಿಜೋದ್ಭವ ಹರ ಪುರಂದರಾದಿ ಸಮಸ್ತ 

ಸುರರು ಅಂಬರದಿ ಹೂಮಳೆಯ ಕರೆಯೆ 

ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರ 

ಕರುಣಿಸಿದೆ ಪುರಂದರ ವಿಠಲ ನಾರಸಿಂಹ 

ಪ್ರಹ್ಲಾದನಿಗೆ ಕರುಣಿಸಿದ್ದು ಆಯಿತು. ಈಗಲೂ ಬರುವ ಭಕ್ತರಿಗೆ ಕರುಣಿಸುತ್ತಿರುವೆ ಎನ್ನುವುದೇ ತಾತ್ಪರ್ಯ. 

ಅತಿಯಾದ ಪಕ್ಕವಾದ್ಯಗಳ ಆಡಂಬರವಿಲ್ಲದೆ ಸಾಹಿತ್ಯಕ್ಕೆ ಒತ್ತುಕೊಟ್ಟು ಹಾಡಿರುವ ಅನೇಕ ಮುದ್ರಿಕೆಗಳು  ಯೂಟ್ಯೂಬ್ನಲ್ಲಿ ಲಭ್ಯವಿವೆ. 

*****

ನರಸಿಂಹನನ್ನು ವರ್ಣಿಸಲು ಕಠಿಣ ಪದಗಳನ್ನು ಪ್ರಯೋಗಿಸಿದ ದಾಸರು ಬಾಲಕೃಷ್ಣನನ್ನು ವರ್ಣಿಸಲು ಸರಳ ಸುಂದರ ಪದಗಳನ್ನು ಬಳಸುತ್ತಾರೆ. 

ಅದನ್ನು ಇನ್ನೊಮ್ಮೆ ನೋಡೋಣ.