Showing posts with label Surya. Show all posts
Showing posts with label Surya. Show all posts

Tuesday, July 8, 2025

ಮಲಗಿಲ್ಲದವನನ್ನು ಎಬ್ಬಿಸುವುದು!


ಈಗ ಎಲ್ಲೆಲ್ಲೂ ಶಯನೀ ಏಕಾದಶಿಯ ಆಚರಣೆ ವೈಭವ. ಆಷಾಢ ಶುದ್ಧ ಏಕಾದಶಿ "ಶಯನೀ ಏಕಾದಶಿ" ಎಂದು ಪ್ರಸಿದ್ಧಿ. ಅಂದು ದೇಶದ ಎಲ್ಲೆಡೆ ವೈಷ್ಣವ ದೇವಾಲಯಗಳಲ್ಲಿ ಭಕ್ತರ ದಂಡು. ಫಂಡರಾಪುರದ ವಿಠಲ ಮತ್ತು ಶ್ರೀರಂಗದ ರಂಗನಾಥರ ದರ್ಶನಕ್ಕೆ ಸಾಲು ಸಾಲು ಜನ ಸಮೂಹ. ತಿರುಪತಿಯಲ್ಲಂತೂ ಕೇಳುವುದೂ ಬೇಡ. ಎಲ್ಲೆಲ್ಲೂ "ಗೋವಿಂದ" ನಾಮ ಸಂಕೀರ್ತನೆ. 

ಮುಂದೆ, ನಾಲ್ಕು ತಿಂಗಳ ನಂತರ ಬರುವ ಕಾರ್ತೀಕ ಶುದ್ಧ ಏಕಾದಶಿ "ಪ್ರಬೋಧಿನಿ ಏಕಾದಶಿ" ಎಂದು ಪ್ರಸಿದ್ಧಿ. "ಶಯನೀ ಏಕಾದಶಿ"ಯಲ್ಲಿ ಕ್ಷೀರಸಾಗರದಲ್ಲಿ ಪವಡಿಸಿದ ಲಕ್ಷ್ಮೀನಾರಾಯಣನು "ಪ್ರಬೋಧಿನಿ ಏಕಾದಶಿ"ಯಂದು ಏಳುತ್ತಾನಂತೆ. ನಾಲ್ಕು ತಿಂಗಳ ಕಾಲದ ದೀರ್ಘ ನಿದ್ರೆ. ಮಲಗಲೂ ಅವನಿಗೆ ಹಾಲಿನ ಸಮುದ್ರವೇ ಬೇಕು. ಈ ಮಧ್ಯದ ನಾಲ್ಕು ತಿಂಗಳು "ಚಾತುರ್ಮಾಸ ವ್ರತ" ಎಂದು ಆಚರಣೆ. ಏಕಾದಶಿಯ ಆಚರಣೆ ಮತ್ತು ನಾಲ್ಕು ತಿಂಗಳುಗಲ್ಲಿ ಕ್ರಮವಾಗಿ ಶಾಕ (ತರಕಾರಿಗಳು), ದಧಿ (ಮೊಸರು), ಕ್ಷೀರ (ಹಾಲು), ಮತ್ತು ದ್ವಿದಳ (ಬೇಳೆ-ಕಾಳುಗಳು) ಸೇವಿಸುವುದು ಕೂಡದು. ಹಾಲಿನ ಕಡಲಲ್ಲಿ ಮಲಗಿದಂತೆ ನಟಿಸುವವನಿಗೆ ಮುದಕೊಡಲು ಹಾಲು ಮತ್ತು ಅದರಿಂದಾದ ಮೊಸರು ಬಿಡುವ ವ್ರತಗಳು! ಏಕಾದಶಿ ಆಚರಣೆ ಮತ್ತು ಇವುಗಳ ವಿವರವನ್ನು "ಏಕಾದಶಿಯ ದಿನ ಹಾಲು-ಹಣ್ಣು ಸೇವಿಸಿ" ಎನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ನೋಡಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಹಸಿವು, ನಿದ್ರೆ, ಬಾಯಾರಿಕೆ, ಬಸವಳಿಕೆ, ಜನನ, ಮರಣ, ಹಿಂದು, ಮುಂದು, ಮುಂತಾದುವು ಇಲ್ಲದ ಮಹಾಶಯನನಿಗೆ ದೀರ್ಘ ನಿದ್ರೆ ಬರಿಸಿ, ಆ ಕಾಲದಲ್ಲಿ ಈ ಪದಾರ್ಥಗಳಿಲ್ಲದ ಆಹಾರ ಸೇವಿಸಿ, ವ್ರತಾದಿಗಳನ್ನು ಮಾಡಿ ಅವನನ್ನು ಪ್ರೀತನನ್ನಾಗಿಸಿ, ನಂತರ ತಾನು ಕೇಳಿದ್ದು ಸಂಪಾದಿಸುವನು ಈ ಮನುಷ್ಯ. ನಿದ್ದೆ ಮಾಡದವನನ್ನು ಮೊದಲು ಮಲಗಿಸುವುದು. ನಂತರ ಮಲಗಿರದಿದ್ದವನ್ನು ಎಬ್ಬಿಸುವುದು. ಇದೊಂದು ಬಹಳ ವಿಚಿತ್ರದ ವಿನೋದ!

*****

ಒಬ್ಬ ದೊಡ್ಡ ಶ್ರೀಮಂತ. ಜೊತೆಗೆ ಅಷ್ಟೇ ದೊಡ್ಡ ಅಧಿಕಾರವುಂಟು. ನೂರಾರು ಜನರಿಗೆ ಅವನಿಂದ ಸಾವಿರಾರು ಕೆಲಸಗಳು ದಿನ ದಿನವೂ ಆಗಬೇಕು. ಅವನನ್ನು ನೋಡಲು ಕೆಲವರು ಪ್ರತಿದಿನ ಬರುತ್ತಾರೆ. ಬೇರೆ ಕೆಲವರು ಕೆಲಸವಿದ್ದಾಗ ಮಾತ್ರ ಬರುತ್ತಾರೆ. ಮತ್ತೆ ಕೆಲವರು ಅವರ ಕೆಲಸಗಳು ಆಗುವವರೆಗೂ ಬರುತ್ತಿರುತ್ತಾರೆ. ಹಲವರು ದಿನಂಪ್ರತಿ ಹೊಸ ಹೊಸ ಕೆಲಸಗಳನ್ನು ಹೂಡಿಕೊಂಡು ಅವನನ್ನು ನೋಡಲು ಬರುತ್ತಾರೆ. ಒಂದು ಗುಂಪಿನ ಜನರಿಗಂತೂ ಅವನನ್ನು ತಪ್ಪಷ್ಟೇ ದಿನವೂ ನೋಡುವುದೇ ಒಂದು ಉದ್ಯೋಗ. ಹೀಗೆ ಅವನ ಮನೆಯ ಮುಂದೆ ಬೆಳಗಿನಿಂದಲೇ ಜನಜಂಗುಳಿ. 

ಅವನು ಅನೇಕ ವಾಹನಗಳ ಧಣಿಯಾಗಿದ್ದರೂ ಒಂದು ವಿಶೇಷವಾದ ವಾಹನ ಅವನಿಗೇ ಮೀಸಲಾಗಿದೆ. ಅವನು ಅದನ್ನು ಉಪಯೋಗಿಸಲಿ, ಇಲ್ಲದಿರಲಿ, ಪ್ರತಿದಿನ ಅದರ ಚಾಲಕ  ಬೇಗನೆ ಬಂದು ಅದನ್ನು ತಯಾರಿ ಮಾಡುತ್ತಾನೆ. ಅದರ ಮರಮ್ಮತ್ತು ಮಾಡಿ, ತೊಳೆದು, ಒರಸಿ, ಅದರ ಪಕ್ಕದಲ್ಲಿ  ಕಾದು ನಿಂತಿರುತ್ತಾನೆ.  ಅವನಿಗೆ ಇಡೀ ದಿನ ಕೆಲಸವಿಲ್ಲದಿರಬಹುದು. ಯಜಮಾನನು ವಾಹನವನ್ನು ಉಪಯೋಗಿಸದೇ ಬಿಡಬಹುದು. ಆದರೂ ಚಾಲಕನು ಅವನ ಕೆಲಸವನ್ನು ಅವನು ಮಾಡುತ್ತಾನೆ! ಹಾಗೆಂದು, ಬಂದವನು ಯಜಮಾನನು ಮಲಗಿರುವಲ್ಲಿ ಹೋಗಿ ಕೂಗುವುದಿಲ್ಲ. ಬಾಗಿಲ ಹೊರಗೆ ನಿಂತಿರುತ್ತಾನೆ ಅಷ್ಟೇ. ಮನೆಯ ಮಂದಿ ಯಜಮಾನನಿಗೆ ಚಾಲಕ ಬಂದು ನಿಂದಿರುವುದು ಹೇಳಬೇಕು. ಇದೇ ವ್ಯವಸ್ಥೆ. 

ಬೆಳಗಿನ ವಾತಾವರಣ ಹೇಗಿರುತ್ತದೆ? ಹಕ್ಕಿ-ಪಕ್ಷಿಗಳು ಚಿಲ್ಲಿ-ಪಿಲಿಗುಟ್ಟುತ್ತಾ ಅಂದಿನ ಆಹಾರ ಅರಸುತ್ತಾ, ಆಗಸದಲ್ಲಿ ಹಾರಾಡುತ್ತವೆ. ಮೊದಲು ಬೆಟ್ಟಗಳ ಮೇಲೆ ಅರುಣೋದಯವಾಗುತ್ತದೆ. ಶುಭ್ರವಾದ ಆಕಾಶ ಬಣ್ಣಗಳಿಂದ ಬೆಳಗುತ್ತದೆ. ನಂತರ ಸೂರ್ಯದೇವನು ಕೆಂಪಗೆ, ಮೆಲ್ಲಗೆ ಬಂದು ತನ್ನ ಕಿರಣಗಳನ್ನು ಹರಡುತ್ತಾನೆ. ಮೈಮೇಲೆ ಪ್ರಜ್ಞೆ ಅನ್ನುವ ಜ್ಞಾನ ಇರುವ ಯಾವನೂ ಸೂರ್ಯನು ಉದಯಿಸುವ ನಂತರ ನಿದ್ರಿಸಬಾರದು ಎನ್ನುವುದು ಒಂದು ನಿಯಮ. ಪ್ರತಿದಿನ ದೊಡ್ಡವರನ್ನು ನೋಡುವ ಕ್ರಮ ಇಟ್ಟುಕೊಂಡವರು ಆ ಸಮಯಕ್ಕೆ ಬಂದು ನಿಂತು, ನೋಡುವ ಅವಕಾಶಕ್ಕೆ ಕಾದಿರುತ್ತಾರೆ. 

ಆಳುವ ಪ್ರಭುಗಳನ್ನು ಹೊಗಳಲು ವಂದಿ-ಮಾಗಧರು ಎನ್ನುವ ಗುಂಪುಗಳಿರುತ್ತಿದ್ದವು. ಅವರ ಕೆಲಸವೇ ಸುಸ್ವರವಾಗಿ, ರಾಗವಾಗಿ, ಗಟ್ಟಿಯಾಗಿ, ಎಲ್ಲರಿಗೂ ಕೇಳುವಂತೆ ಯಜಮಾನನ ಗುಣಗಳನ್ನು ಕೂಗುವುದು. ಅನೇಕರಿಗೆ ಬೆಳಗಿನ ಕೆಲಸಗಳನ್ನು ಮಾಡುತ್ತಿರುವಾಗ ತಮಗೆ ಪ್ರಿಯವಾದ ಹಾಡುಗಳನ್ನು ಹೇಳುತ್ತಾ ಕೆಲಸಗಳನ್ನು ಮಾಡುವುದು ಅಭ್ಯಾಸ. ಒಂದು ಕಡೆ ಹಾಡು ಹಾಡಿದ ಅನುಭವ. ಮತ್ತೊಂದು ಕಡೆ ಕೆಲಸಗಳೂ ಸಲೀಸಾಗಿ ನಡೆದುವು. ಉಭಯ ರೀತಿಯಲ್ಲಿಯೂ ಅನುಕೂಲ. ಎಲ್ಲೋ ದೂರದಲ್ಲಿರುವವರು ಬೆಳ್ಳಂಬೆಳಿಗ್ಗೆ ತಮ್ಮ ಪ್ರಿಯಜನರ ನೆನಪು ಮಾಡಿಕೊಳ್ಳುವುದೂ ಉಂಟು, 

ಪ್ರಪಂಚದ ಅತಿ ಕಷ್ಟದ ಕೆಲಸಗಳಲ್ಲಿ ಮಲಗಿರುವವರನ್ನು ಎಬ್ಬಿಸುವುದೂ ಒಂದು. ಎಚ್ಚರವಿದ್ದರೂ ಮಲಗಿದಂತೆ ಇರುವವರನ್ನು ಎಬ್ಬಿಸುವುದಂತೂ ಮತ್ತೂ ಕಷ್ಟದ ಕೆಲಸವೇ ಸರಿ. ಒಂದು, ಎರಡು, ಮೂರು ಬಾರಿ ತಾಳ್ಮೆಯಿಂದ ಎಬ್ಬಿಸುವುದು. ನಾಲ್ಕನೆಯ ಬಾರಿ ಧ್ವನಿ ಸ್ವಲ್ಪ ಗಡಸು ಆಗುವುದು ಸಾಮಾನ್ಯ. ಐದನೆಯ ಬಾರಿಯಂತೂ "ಇನ್ನು ಏಳಪ್ಪ! ಎಬ್ಬಿಸಿ, ಎಬ್ಬಿಸಿ, ಸಾಕಾಯಿತು" ಎಂದು ಜೋರಾಗಿ ಕೂಗುವುದು ಆಗಲೇಬೇಕು.  
*****

"ನವಕೋಟಿ ನಾರಾಯಣ" ಎನ್ನುವ ಬಿರುದು ಹೊಂದಿದ್ದ ಶ್ರೀನಿವಾಸ ನಾಯಕರು ಎಲ್ಲವನ್ನೂ ಬಿಟ್ಟು ಹರಿದಾಸರಾದ ಮೇಲೆ ದೇಶದ ಮೂಲೆ ಮೂಲೆ ತಿರುಗಿ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿದರು. ಹೀಗೆ ಕಂಡ ಒಂದೊಂದು ದಿವ್ಯ ಮೂರ್ತಿಯ ಮುಂದೆಯೂ ಮೈಮರೆತು ಹಾಡಿ ಕುಣಿದರು. ಈ ರೀತಿ ಸಂಚರಿಸುತ್ತಿದ್ದಾಗ ಒಮ್ಮೆ ಶ್ರೀರಂಗಕ್ಕೆ ಬಂದು ರಂಗನಾಥನನ್ನು ನೋಡಿದರು. ಮಲಗಿದಂತೆ ಇರುವ ಸ್ವಾಮಿಯನ್ನು ಮೇಲಿನ ಎಲ್ಲ ಅಂಶಗಳನ್ನೂ ಸೇರಿಸಿ, ಮಹಾಲಕ್ಷ್ಮಿ ದೇವಿಯು ಅವನನ್ನು ಎಬ್ಬಿಸುತ್ತಿರುವಂತೆ ಒಂದು ಕೃತಿ ರಚಿಸಿ ಹಾಡಿದರು. ಅದೇ "ರಂಗನಾಯಕ, ರಾಜೀವಲೋಚನ, ರಮಣನೇ ಬೆಳಗಾಯ್ತು , ಎಳೆನ್ನುತ" ಎಂಬ ಕೃತಿ. 

ಇದರ ಐದು ನುಡಿಗಳಲ್ಲಿ ಮೇಲೆ ನಾವು ಬೆಳಗಿನಲ್ಲಿ ಕಾಣುವ ಶ್ರೀಮಂತ, ಅಧಿಕಾರಿಯ ಮನೆಯ ಮುಂದಿನ ದೃಶ್ಯವನ್ನು ಕಾಣಬಹುದು. ಶ್ರೀರಂಗದಲ್ಲಿ ಮಲಗಿರುವವನು ಸಾಮಾನ್ಯ ಶ್ರೀಮಂತನಲ್ಲ. ಅವಂತಹ ಶ್ರೀಮಂತ ಇನ್ನೊಬ್ಬನಿಲ್ಲ. ಅವನು ಅಂತಿಂತಹ ಅಧಿಕಾರಿಯಲ್ಲ. ಅವನಿಗಿರುವ ಅಧಿಕಾರ ಬೇರೆ ಯಾರಿಗೂ ಇಲ್ಲ. ಎಬ್ಬಿಸುವವಳೂ ಜಗದಾಂಬೆಯಾದ ಮಹಾಲಕ್ಷ್ಮಿ ದೇವಿ. 

  1. ಮೊದಲನೆಯ ನುಡಿಯಲ್ಲಿ ವಾಹನನಾದ ಗರುಡನ ಬರವು, ದ್ವಾರದಲ್ಲಿ ಅವನ ನಿರೀಕ್ಷೆ, ಮತ್ತು ಹಕ್ಕಿ-ಪಕ್ಷಿಗಳ ಕಲರವ ರೂಪದ ಪ್ರಾರ್ಥನೆ. ಸೃಷ್ಟಿಯಲ್ಲಿಯ ಸಕಲ ಶಬ್ದಗಳೂ ಪರಮಾತ್ಮನ ಕುರಿತೇ ಹೇಳುತ್ತವೆ ಎನ್ನುವ ಪ್ರಮೇಯದ ನಿರೂಪಣೆ. 
  2. ಎರಡನೆಯ ನುಡಿಯಲ್ಲಿ ಅವನ ದರ್ಶನ ಮಾಡಲು ಪ್ರತಿ ದಿನ ಆಗಮಿಸುವ ಸನಕ, ಸನಂದನ, ಸನತ್ಸುಜಾತ, ಸನತ್ಕುಮಾರರ ಬರವು, ಪರಮಾತ್ಮನ ಕುರಿತು ವಿಶೇಷ ಕೃತಿ ರಚನೆ ಮಾಡಿದ ವ್ಯಾಸ-ವಾಲ್ಮೀಕಿಗಳು, ಮತ್ತು ಅವನ್ನು ಹಾಡಿ-ಹೇಳುತ್ತಾ ಪ್ರಚುರಪಡಿಸಿದ ಶುಕ-ಶೌನಕರ ನೆನಪು. 
  3. ಮೂರನೆಯ ನುಡಿಯಲ್ಲಿ ದೇವತೆಗಳು, ಕಿನ್ನರರು, ಕಿಂಪುರುಷರು, ಉರಗರು ಮೊದಲಾದ ಗುಂಪುಗಳ ಸದಸ್ಯರು ಅವನ ಗುಣಗಳನ್ನು ಹೊಗಳುವ ಪರಿ. ಅರುಣೋದಯ ಮತ್ತು ಬಾಲ ಸೂರ್ಯನ ಕಿರಣಗಳ ಪಸರಿಸುವ ವಿವರಣೆ. 
  4. ನಾಲ್ಕನೆಯ ನುಡಿಯಲ್ಲಿ ವೈಕುಂಠದವರೆಗೂ ಬರಲಾಗದ, ಆದರೆ ಅವರಿದ್ದ ಕಡೆಯೇ ಉದಯರಾಗ ಹಾಡುತ್ತ ತಮ್ಮ ಮನೆ ಕೆಲಸಗಳನ್ನು ಮಾಡುವ ಗೃಹಿಣಿಯರು. ಅವನನ್ನು ಕುರಿತು ಹಾಡುವಾಗ ಮೊಸರು ಕಡೆದರೆ, ಹಾಡು ಮುಗಿಯುವ ವೇಳೆಗೆ ಬೆಣ್ಣೆಯೂ ಬಂತು. 
  5. ಐದನೆಯ ನುಡಿಯಲ್ಲಿ ಪರಿಪರಿಯಿಂದ ಹಾಡುತ್ತಾ ದರ್ಶನ ಬೇಡುವ ಅಸಂಖ್ಯಾತ ಭಕ್ತರ ಆರ್ತನಾದ. ಲೌಕಿಕದಲ್ಲಿ ಮಲಗಿದವರನ್ನು ಎಬ್ಬಿಸುವವರ ತಾಳ್ಮೆ ಕಳೆದುಕೊಳ್ಳುವ ಸೂಚನೆ. "ಪುರಂದರ ವಿಠಲ, ನೀನೇಳೋ!" ಎನ್ನುವ ಗಡಸು ಧ್ವನಿ!
ಶ್ರೀಮತಿ ಸಾಧ್ವಿನಿ ಕೊಪ್ಪ ಅವರು ಹೆಚ್ಚಿನ ವಾದ್ಯಗಳ ಆಡಂಬರವಿಲ್ಲದೆ ಈ ಎಲ್ಲ ಅಂಶಗಳನ್ನು ಗಮನಿಸಬಹುದಾದ ರೀತಿಯಲ್ಲಿ ಹಾಡಿರುವ ಈ ಕೃತಿಯನ್ನು ಇಲ್ಲಿ ಕೇಳಬಹುದು:


ನಮ್ಮ ಹೆಮ್ಮೆಯ ಯಕ್ಷಗಾನ ಕಲಾವಿದರು ಈ ಕೃತಿಯನ್ನು (ರಾತ್ರಿಯೆಲ್ಲ ಯಕ್ಷಗಾನ ಪ್ರಸಂಗ ನಡೆದ ನಂತರ ಬೆಳಗಾಗುತ್ತಿದ್ದಂತೆ ಮುಗಿವ ಸಮಯದಲ್ಲಿ) ಮಂಗಳ ಪದ್ಯವಾಗಿ ಸೊಗಸಾಗಿ ಉಪಯೋಗಿಸುತ್ತಾರೆ. ಇದರಲ್ಲಿ ಅವರ ವಿಶಿಷ್ಟ ಸಂಗೀತ, ಅಭಿನಯ, ಎರಡನ್ನೂ ನೋಡಬಹುದು. ಹಾಡಿನ ಕೇವಲ ಒಂದೇ ಒಂದು ನುಡಿ ಉಪಯೋಗಿಸಿಕೊಂಡರೂ ಸೊಗಸಾದ ಅನುಭವ ಕೊಡುತ್ತದೆ:


ಈ ಹಾಡಿನ ಜೊತೆಗೆ ಅವರ ಕಾರ್ಯಕ್ರಮದ ಭರತವಾಕ್ಯ ಕೂಡ ಸೇರಿಸಿ ಮಂಗಳ ಹಾಡುತ್ತಾರೆ. ಸಾಹಿತ್ಯ, ಸಂಗೀತ, ಅಭಿನಯಗಳ ಅಪೂರ್ವ ರಸಾಯನ. 

*****

ಶ್ರೀ ಪುರಂದರದಾರ ಕೃತಿಗಳು ಕೇವಲ ಭಕ್ತಿ ಪ್ರಧಾನವಾಗಿರದೆ ತಮ್ಮ ಸುತ್ತ-ಮುತ್ತಲ ಪ್ರಾಪಂಚಿಕ ವಿವರಗಳನ್ನೂ ಹೇಗೆ ಒಳಗೊಂಡಿರುತ್ತವೆ ಎನ್ನುವುದಕ್ಕೆ ಇದೊಂದು ಸೊಗಸಾದ ಉದಾಹರಣೆ. 

Monday, June 16, 2025

ಚಂದ್ರ, ಸೂರ್ಯ ಮತ್ತು ಬೆಲ್ಲದ ಪಾಯಸ


ಹೊಲದಲ್ಲಿ ಕಬ್ಬು ಬೆಳೆಯುವ ರೈತ ಆ ಕಬ್ಬನ್ನು  ಮೂರು ರೀತಿಯಲ್ಲಿ ಮಾರಿ ಹಣ ಗಳಿಸಬಹುದು. ಮೊದಲನೆಯದಾಗಿ, ಬೆಳೆ ಕಟಾವು ಮಾಡಿದ ಕೂಡಲೇ ಆ ಕಬ್ಬಿನ ಜಲ್ಲೆಗಳನ್ನು ಕಬ್ಬಿನ ರಸ ತೆಗೆದು ಮಾರುವ ಅಂಗಡಿಗಳಿಗೆ ಕೊಟ್ಟು ಹಣ ಪಡೆಯಬಹುದು. ಎರಡನೆಯದು, ಆ ಕಬ್ಬನ ರಾಶಿಯನ್ನು ಗಾಡಿ ಅಥವಾ ಟ್ರ್ಯಾಕ್ಟರುಗಳಲ್ಲಿ, ಇಲ್ಲವೇ ಲಾರಿಗಳಲ್ಲಿ ಸಾಗಿಸಿ ಹತ್ತಿರದ ಸಕ್ಕರೆ ಕಾರ್ಖಾನೆಗೆ ಮಾರಬಹುದು. ಮೂರನೆಯದಾಗಿ, ತನ್ನ ಹೊಲದಲ್ಲೇ ಆಲೆಮನೆ ಹಾಕಿ, ಬೆಲ್ಲ ಮಾಡಿ, ಆ ಬೆಲ್ಲವನ್ನು ಮಾರಬಹುದು. ಈ ರೀತಿ ಬೆಲ್ಲ ಮಾಡುವ ಕಡೆ ಅದರ ಸುಗಂಧ ಸ್ವಲ್ಪ ದೂರದವರೆಗೂ ಹರಡುತ್ತದೆ. ದೊಡ್ಡ ದೊಡ್ಡ ಕಡಾಯಿಗಳಲ್ಲಿ ಕಬ್ಬಿನ ಹಾಲನ್ನು ಕಾಯಿಸಿ ಮರದ ಅಚ್ಚುಗಳಲ್ಲಿ ಸುರಿದು ಗಟ್ಟಿಯಾದ ಮೇಲೆ ಆ ಅಚ್ಚುಗಳನ್ನು ಪಿಂಡಿಗಳೆಂಬ ಸಣ್ಣ ಸಣ್ಣ ಗಂಟುಗಳಾಗಿ ಮಾಡಿ ಮಾರುತ್ತಾರೆ. ಕೆಲವೆಡೆ ಉಂಡೆ ಬೆಲ್ಲ ಮಾಡುವುದೂ ಉಂಟು. 

ಹೀಗೆ ಹಾಕಿದ್ದ ಒಂದು ಬೆಲ್ಲ ಮಾಡುವ ಆಲೆಮನೆಗೆ ಇಬ್ಬರು ಬಂದು ಹೊಸ ಬೆಲ್ಲದ ಅಚ್ಚುಗಳನ್ನು ಕೊಂಡು ಅವರವರ ಮನೆಗೆ ತೆಗೆದುಕೊಂಡುಹೋದರು. ಮೊದಲನೆಯ ಮನೆಯಲ್ಲಿ ಆ ಬೆಲ್ಲವನ್ನು ಉಪಯೋಗಿಸಿ ಸೊಗಸಾದ ಗಸಗಸೆ ಪಾಯಸ ಮಾಡಿದರು. ಎರಡನೆಯ ಮನೆಯಲ್ಲಿ ಅದೇ ಆಲೆಮನೆಯಿಂದ ಬಂದ ಬೆಲ್ಲವನ್ನು ಬಳಸಿಕೊಂಡು ಆಕ್ಕಿ-ಕಡಲೆಬೇಳೆ ಪಾಯಸ ಮಾಡಿದರು. ಎರಡು ಮನೆಯವರೂ ಪಾಯಸ ಸೇವಿಸಿದರು. ಬೆಲ್ಲದಲ್ಲಿದ್ದ ಪೋಷಕಾಂಶಗಳ ಲಾಭ ಎರಡು ಮನೆಯವರಿಗೂ ಸಿಕ್ಕಿತು. ಎರಡೂ ಸಿಹಿಯಾಗಿತ್ತು. ಆದರೆ ತಯಾರಿಸಿದ ರೀತಿ ಬೇರೆ ಆಗಿತ್ತು. ರುಚಿಯೂ ಸ್ವಲ್ಪ ಭಿನ್ನ. ಕೊನೆಯ ಪ್ರಯೋಜನ ಮಾತ್ರ ಹೆಚ್ಚು-ಕಡಿಮೆ ಒಂದೇ ಎನ್ನಬಹುದು. 

*****

ಒಬ್ಬ ಬಹಳ ದೊಡ್ಡ ಸಾಹುಕಾರ ಇದ್ದಾನೆ. ಅವನಿಗೆ ಅನೇಕ ಪಟ್ಟಣಗಳಲ್ಲಿ, ಅನೇಕ ದೇಶಗಳಲ್ಲಿ, ಕೆಲವಾರು ಮನೆಗಳಿವೆ. ಈ ಪ್ರತಿಯೊಂದು ಮನೆಯೂ ಸುಸಜ್ಜಿತವಾಗಿವೆ. ಅವನಲ್ಲಿ ಅನೇಕ ವಾಹನಗಳಿವೆ. ಅವುಗಳಲ್ಲಿ ನಮ್ಮ ಊರಿನಲ್ಲಿರುವ ಕಾರೂ ಒಂದು. ಈ ಕಾರು ನಮ್ಮ ಮುಂದೆಯೇ ಒಡಾಡುತ್ತಿದೆ. ಇದನ್ನು ನಾವು ಪ್ರತಿ ದಿನವೂ ನೋಡುತ್ತೇವೆ. ಕೆಲವೊಮ್ಮೆ ತುಂಬಾ ಹತ್ತಿರದಲ್ಲಿ, ಚೆನ್ನಾಗಿ ಕಾಣುತ್ತದೆ. ಮತ್ತೆ ಕೆಲವು ವೇಳೆ ಎಲ್ಲೋ ದೂರದಲ್ಲಿ ಚಿಕ್ಕದ್ದಾಗಿ ಕಾಣುತ್ತದೆ. ಎಂದೋ ಒಂದು ದಿನ ಕಾಣಿಸದಿರುವಂತೆಯೂ ಉಂಟು. ಆದರೆ ಅದು ಇದ್ದೇ ಇದೆ. 

ಅವನ ಬೇರೆ ಪಟ್ಟಣಗಳಲ್ಲಿ, ಬೇರೆ ದೇಶಗಳಲ್ಲಿ ಇರುವ ಮನೆಗಳನ್ನೂ, ಕಾರುಗಳನ್ನೂ ನಾವು ನೋಡಿಲ್ಲ. ಆದರೆ ಅವು ಇವೆ ಎಂದು ಕೇಳಿದ್ದೇವೆ. ಅವನಬಳಿ ಇಷ್ಟೆಲ್ಲಾ ಇದ್ದರೂ ಅವನು ಎಲ್ಲಿಯೋ ದೂರದಲ್ಲಿರುವ ಮನೆಯಲ್ಲಿ ವಾಸವಾಗಿದ್ದನಂತೆ. ಆದರೆ ಇಷ್ಟೆಲ್ಲಾ ಮನೆಗಳೂ ವಾಹನಗಳೂ ಅವನ ಅಧೀನವಂತೆ. ಅವನು ಹೇಳಿದಂತೆ ಕೇಳುತ್ತವಂತೆ. ಅವನ್ನು ಎಲ್ಲವನ್ನೂ ಒಟ್ಟಿಗೆ ಅಥವಾ ಕ್ರಮವಾಗಿ ನೋಡುವ ಶಕ್ತಿ ನಮಗಿಲ್ಲ. ಆದರೆ ಅವೆಲ್ಲಾ ಇದ್ದೇ ಇವೆಯಂತೆ. ಹೀಗೆ ತಿಳಿದವರು ಹೇಳುವುದನ್ನು ಕೇಳಿದ್ದೇವೆ. 

ಇಷ್ಟೆಲ್ಲಾ ಇರುವ ಈ ಸಾಹುಕಾರನು ಅವನಿಗಿಂತ ದೊಡ್ಡ ಯಜಮಾನನ ಸೇವಕನಂತೆ. ಇವನ ಮಟ್ಟಿಗೆ ಅವನು ಸ್ವತಂತ್ರನಾದರೂ, ಆ ದೊಡ್ಡ ಯಜಮಾನ ಇವನ ನಿಯಾಮಕ. ಆ ನಿಯಾಮಕನ ನಿಯಮಗಳಂತೆ ಈ ಸಾಹುಕಾರನ ಇರವು ಮತ್ತು ಕೆಲಸ. ತನ್ನ ಪರಿಧಿಯಲ್ಲಿ ಇವನು ಸ್ವತಂತ್ರ. ಆದರೆ ಈ ದೊಡ್ಡ ಯಜಮಾನನ ಅಂಕೆಯಲ್ಲಿಯೇ ಇರಬೇಕು. ಆ ದೊಡ್ಡ ಯಜಮಾನನಿಗೆ ಮಾತ್ರ ಇನ್ನೊಬ್ಬ ಯಜಮಾನ ಅನ್ನುವವನು ಇಲ್ಲ. ಅವನು ಸರ್ವತಂತ್ರ ಸ್ವತಂತ್ರ. 

*****

ನಾವು ಪ್ರತಿದಿನವೂ ನೋಡುವ ಚಂದ್ರ ಎನ್ನುವ ವಸ್ತು ಒಂದು ಜಡ ಪದಾರ್ಥ. ಅದರ ಕರ್ತ ಒಬ್ಬ ಇದ್ದಾನೆ. ಹಿಂದಿನ ಒಂದು ಸಂಚಿಕೆಯಲ್ಲಿ ಲೇಖನಿ ಮತ್ತು ಅದನ್ನು ಹಿಡಿದ ಲೇಖಕನ ಬಗ್ಗೆ ಚರ್ಚಿಸಿದ್ದೇವೆ. ಲೇಖನಿ ಮೇಜಿನ ಮೇಲೆ ಬಿದ್ದಿರುತ್ತದೆ. ತಾನೇ ಸ್ವತಃ ಅದು ಏನನ್ನೂ ಬರೆಯಲಾಗದು. ಅದರ ಯಜಮಾನನಾದ ಲೇಖಕ ಉಪಯೋಗಿಸಿದಂತೆ ಅದರ ಕೆಲಸ. ಯಜಮಾನನ ಬಳಿ ಅನೇಕ ಲೇಖನಿಗಳು ಇವೆ. ಅವನು ಚೇತನ. ಇದು ಜಡ. ಲೇಖನ ಓದಿದ ನಾವು ಬರೆದವನು ಯಾರು ಎನ್ನುವುದನ್ನು ಅರಿಯುತ್ತೇವೆ. ನಾವು ಪ್ರತಿದಿನ ನೋಡುವ ಚಂದ್ರನೆಂಬ ಜಡ ವಸ್ತುವಿಗೆ ಒಬ್ಬ ಅಭಿಮಾನಿ ದೇವತೆ ಇದ್ದಾನೆ, ಅವನು ನಿಜವಾದ ಚಂದ್ರ. ಚಂದ್ರದೇವನು ನಮ್ಮ ಕಿವಿಗಳಲ್ಲಿಯೂ ಅಭಿಮಾನಿ ದೇವತೆಯಾಗಿದ್ದಾನೆ. ಅವನ ಕೆಲಸದಿಂದಲೇ ನಮಗೆ ಶಬ್ದಗಳು ಕೇಳಿಸುವುದು. ಅವನು ಕೆಲಸಮಾಡದಿದ್ದರೆ ನಾವು ಕಿವುಡು. ದೇವತೆಗಳು ಅನೇಕ ರೂಪಗಳಲ್ಲಿ, ಅನೇಕ ಸ್ಥಾನಗಳಲ್ಲಿ , ಒಂದೇ ಕಾಲದಲ್ಲಿ ಅನೇಕ ಕೆಲಸಗಳನ್ನು ನಿರ್ವಹಿಸಲು ಶಕ್ತರು. 

ಈ ಚಂದ್ರನೆಂಬುವ ದೇವತೆ ಇರುವುದು ಎಲ್ಲಿಯೋ ದೂರದಲ್ಲಿರುವ "ಚಂದ್ರಮಂಡಲ" ಎಂಬಲ್ಲಿ. ಆ ಚಂದ್ರಮಂಡಲದಲ್ಲಿರುವ ಚಂದ್ರನ ಅಧೀನದಲ್ಲಿ ನಾವು ನೋಡುವ ಚಂದ್ರ ಎನ್ನುವ ಪದಾರ್ಥ ಇದೆ. ಇದೇ ರೀತಿ ಅನಂತ ವಿಶ್ವದಲ್ಲಿ ಅನೇಕ ಚಂದ್ರನೆಂಬ ಪದಾರ್ಥಗಳಿವೆ. ಅವುಗಳೆಲ್ಲಕ್ಕೂ ಚಂದ್ರನೆಂಬ ದೇವತೆ ಅಭಿಮಾನಿಯಾಗಿ ಕಾರ್ಯ ನಿರ್ವಹಿಸುತ್ತಾನೆ. ಈ ಚಂದ್ರಮಂಡಲದಲ್ಲಿರುವ ಚಂದ್ರದೇವನ ಅಂತರ್ಯಾಮಿಯಾಗಿ ಆ ಪರಮಪುರುಷನು ಕುಳಿತಿದ್ದಾನೆ. ಪುರುಷ ಸೂಕ್ತ ಹೇಳುವಂತೆ ಈ ಚಂದ್ರ ಪರಮಪುರುಷನ ಮನಸ್ಸಿನಿಂದ ಹುಟ್ಟಿದವನು. ಅದಕ್ಕೇ "ಚಂದ್ರಮಾ ಮನಸೋ ಜಾತಃ" ಎನ್ನುವುದು. ಚಂದ್ರನ ಹುಣ್ಣಿಮೆ ಅಮಾವಾಸ್ಯೆಗಳು ನಮ್ಮ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಮನಶಾಸ್ತ್ರ ಹೇಳುತ್ತದೆ. ಚಂದ್ರಮಂಡಲದಲ್ಲಿರುವ ಆ "ಪುರುಷಸೂಕ್ತ" ಪ್ರತಿಪಾದ್ಯ ಪರಮಪುರುಷನಿಗೆ "ಧನ್ವಂತರಿ" ಎಂದು ಹೆಸರು.  ನಾವು ಚಂದ್ರನನ್ನು ಆರಾಅಧಿಸುವಾಗ ಆ ಚಂದ್ರಮಂಡಲದಲ್ಲಿರುವ ಚಂದ್ರನನ್ನೂ, ಅವನ ಅಂತರ್ಯಾಮಿಯಾದ ಧನ್ವಂತರಿಯನ್ನು  ಪೂಜಿಸುತ್ತೇವೆ. 

ಈ ಧನ್ವಂತರಿಯು ಸಮುದ್ರ ಮಥನ ಕಾಲದಲ್ಲಿ ಅಮೃತ ಕಲಶವನ್ನು ಹಿಡಿದು ಬಂದು ದೇವತೆಗಳಿಗೆ ಅಮೃತ ಕೊಟ್ಟವನು. ಅವನಿಂದ ಸದಾಕಾಲವೂ ಅಮೃತ ಕಿರಣಗಳು ಹೊರಬರುತ್ತಿವೆ. ಆಯುರ್ವೇದ ಎನ್ನುವ ಆರೋಗ್ಯಶಾಸ್ತ್ರ ಅವನಿಂದ ಹುಟ್ಟಿತು. 

*****

ಇದೆ ರೀತಿ ನಾವು ಪ್ರತಿದಿನ ನೋಡುವ ಸೂರ್ಯ ಎನ್ನುವ ಜಡ ವಸ್ತು ಉಂಟು. ಅದು ನಮಗೆ ಪ್ರತಿದಿನ ಕಾಣುತ್ತದೆ. (ಭೂಮಿಯ ಕೆಲವು ಭಾಗಗಳಲ್ಲಿ, (ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ) ಕೆಲವು ದಿನಗಳು ಕಾಣುವುದಿಲ್ಲವಂತೆ). ಇಂತಹ ಅನೇಕ ಸೂರ್ಯರು ವಿಶಾಲ ವಿಶ್ವದಲ್ಲಿ ಇದ್ದಾರೆ. ಅವರೆಲ್ಲರ ಅಭಿಮಾನಿ ದೇವತೆಯಾಗಿ, ನಿಯಾಮಕನಾಗಿ, ಸೂರ್ಯದೇವ ಇದ್ದಾನೆ. ಅವನು ಇರುವುದು ಸೂರ್ಯಮಂಡಲದಲ್ಲಿ. ಸೂರ್ಯಮಂಡಲದಲ್ಲಿನ ಸೂರ್ಯದೇವನ ಅಂತರ್ಯಾಮಿಯಾಗಿ ಪರಮಪುರುಷನಾದ "ಸೂರ್ಯನಾರಾಯಣ" ಇದ್ದಾನೆ. ಈ ಸೂರ್ಯನು ಪುರುಷ ಸೂಕ್ತ ಹೇಳುವಂತೆ ಆ ಪರಮಪುರುಷನ ಕಣ್ಣಿನಿಂದ ಹುಟ್ಟಿದವನು. ಆದ್ದರಿಂದಲೇ "ಚಕ್ಷೋ: ಸೂರ್ಯೋ ಅಜಾಯತ". ಸೂರ್ಯನನ್ನು ಆರಾಧಿಸುವಾಗ ನಾವು ಈ ಸೂರ್ಯದೇವನನ್ನೂ, ಅವನ ಅಂತರ್ಗತನಾದ ಸೂರ್ಯನಾರಾಯಣನನ್ನೂ ಆರಾಧಿಸುತ್ತೇವೆ. 

ಈ ಸೂರ್ಯನಾರಾಯಣನು ನಮ್ಮ ಬುದ್ಧಿಯನ್ನು ಪ್ರಚೋದಿಸುವವನು. ಆದ್ದರಿಂದ ಅವನನ್ನು ಗಾಯತ್ರಿ ಮಂತ್ರ ಜಪದ ಮೂಲಕವಾಗಿ ವಿಶೇಷವಾಗಿ ಆರಾಧಿಸುತ್ತೇವೆ. 

*****

ಪುರುಷಸೂಕ್ತವು ನಿರ್ದೇಶಿಸುವ ಆ ಪರಮಪುರುಷನು ಎಲ್ಲ ಕಡೆಯೂ ವ್ಯಾಪಿಸಿದ್ದಾನೆ. ಅವನು ಇಡೀ ವಿಶ್ವವನ್ನು ಸೃಷ್ಟಿಸಿ ಅದರ ಒಳಗಡೆ ಪ್ರವೇಶಿಸಿದನು. ಒಳಗಡೆ ಪ್ರವೇಶಿಸುವುದರ ಜೊತೆ ಹೊರಗಡೆಯೂ ಉಳಿದನು. ಇದು ನಾವು ಮಾಡಬಹುದಾದ ಕೆಲಸವಲ್ಲ. ನಾವು ಒಳಗಿದ್ದರೆ ಹೊರಗಿಲ್ಲ. ಹೊರಗಿದ್ದರೆ ಒಳಗಿಲ್ಲ. ಸ್ವಲ್ಪ ಕಾಲಾನಂತರ ನಾವು ಎಲ್ಲೂ ಇಲ್ಲ. ಇನ್ನೂ ಸ್ವಲ್ಪ ಕಾಲಾನಂತರ ನಾವು ಇದ್ದೆವು ಅನ್ನುವ ನೆನಪೂ ಇರುವುದಿಲ್ಲ. ಅವನು ಹಾಗಲ್ಲ. ಅವನ ಲಕ್ಷಣ ಏನು? "ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ". ಆದ್ದರಿಂದ ಅವನಿಗೆ ಗೋವಿಂದ ಎಂದು ಹೆಸರು. 

ಅವನು ಎಲ್ಲ ಕಡೆಯೂ ಇದ್ದರೂ ನಾವು ದೇವಸ್ಥಾನಗಳಿಗೆ ಹೋಗುತ್ತೇವೆ. ಅಲ್ಲಿ ಅವನ ಅಭಿವ್ಯಕ್ತಿ ಹೆಚ್ಚಿನ ಮಟ್ಟದ್ದು. ಎಲ್ಲ ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಹರಿದರೂ ಹೈ ಟೆನ್ಶನ್ ವೈರಿನಲ್ಲಿ ಹೆಚ್ಚು ಪ್ರಖರ. ಆ ರೀತಿ. ಭಗವದ್ಗೀತೆಯಲ್ಲಿ ಹತ್ತನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ತನ್ನ ವಿಭೂತಿರೂಪಗಳನ್ನು ಹೇಳುತ್ತಾನೆ. ಎಲ್ಲ ಕಡೆಯೂ ತಾನಿದ್ದರೂ ಕೆಲವು ಕಡೆಗಳಲ್ಲಿ ಅವನ ವಿಶೇಷ ಅಭಿವ್ಯಕ್ತಿ ಇದೆ. ಅವೇ ವಿಭೂತಿ ರೂಪಗಳು. 

"ಆದಿತ್ಯಾನಾಮ್ ಅಹಂ ವಿಷ್ಣು:" ಅನ್ನುವುದಕ್ಕೆ "ಸೂರ್ಯರಲ್ಲಿ ನಾನು ವಿಷ್ಣು" ಎಂದು ಅರ್ಥಮಾಡುತ್ತಾರೆ. "ದ್ವಾದಶ ಆದಿತ್ಯರು" ಅಂದರೆ ಹನ್ನೆರಡು ಸೂರ್ಯರು ಎಂದು ಅರ್ಥ ಮಾಡಿ ಅವರಲ್ಲಿ ವಿಷ್ಣು ಎಂಬುವವನು ಎಂದು ಅರ್ಥ ಮಾಡುತ್ತಾರೆ. ಇರುವುದು ಒಬ್ಬನೇ ಸೂರ್ಯ. ಅವನು ಅನಂತ ವಿಶ್ವದ ಅನೇಕ ಸೂರ್ಯರಿಗೆ ಅಭಿಮಾನಿ ದೇವತೆ. ಆದಿತ್ಯರು ಎನ್ನುವ ಹನ್ನೆರಡು ಅದಿತಿಯ ಮಕ್ಕಳು "ದ್ವಾದಶ ಆದಿತ್ಯರು". ಈ ಹನ್ನೆರಡು ಜನರಿಗೆ ಸೃಷ್ಟಿಯಲ್ಲಿ ಅವರದೇ ಆದ ವಿಶೇಷ ಕಾರ್ಯಗಳು೦ಟು. ಈ ಹನ್ನೆರಡು ಜನರಲ್ಲಿ ಒಬ್ಬನ ಹೆಸರು ವಿಷ್ಣು. "ಅವರಲ್ಲಿ (ಆದಿತ್ಯರಲ್ಲಿ) ನಾನು ವಿಷ್ಣು "ಎಂದು ಶ್ರೀಕೃಷ್ಣನು ಹೇಳುವುದು ಈ ವಿಷ್ಣುವನ್ನು . 

"ನಕ್ಷತ್ರಾಣಂ ಅಹಂ ಶಶಿ" ಅನ್ನುವುದೂ ಹೀಗೆಯೇ. ಅಲ್ಲಿ ಚಂದ್ರ ಅಂದರೆ ನಾವು ಕಾಣುವ ಜಡ ವಸ್ತು ಚಂದ್ರನಲ್ಲ. ಚಂದ್ರಮಂಡಲದಲ್ಲಿರುವ ಚಂದ್ರ. "ನಾವು ಕಾಣುವ ಚಂದ್ರ ನಕ್ಷತ್ರವಲ್ಲ. ಅವನು ಗ್ರಹವಲ್ಲ. ಉಪಗ್ರಹ", ಹೀಗೆನ್ನುವ ಇಂದಿನ ವಿಜ್ನ್ಯಾನದ ಅರ್ಥ ವಿಭೂತಿಯೋಗದ ಅರ್ಥವಲ್ಲ. 

*****

ಎಲ್ಲ ಮಂತ್ರ ಜಪಗಳ ಮೊದಲು ಒಳ್ಳೆಯ ಆಸನದ ಮೇಲೆ ಕುಳಿತು, ಮನಸ್ಸನ್ನು ಗಟ್ಟಿಮಾಡಿ ನಿಲ್ಲಿ,ಸಿ, ಅಂಗನ್ಯಾಸ, ಕರನ್ಯಾಸಗಳನ್ನು ಮಾಡಿ ಒಂದು "ಧ್ಯಾನ ಶ್ಲೋಕ" ಹೇಳಿಕೊಳ್ಳುತ್ತಾರೆ. ಧ್ಯಾನಶ್ಲೋಕದಲ್ಲಿ ತಾವು ಯಾವ ಮಂತ್ರ ಜಪಿಸುತ್ತಾರೋ ಆ ಆರಾಧ್ಯ ಮೂರ್ತಿಯನ್ನು ವರ್ಣಿಸುವ ಶ್ಲೋಕದ ಮೂಲಕ ಆ ಮೂರ್ತಿಯನ್ನು ತಮ್ಮ ಮನಸ್ಸಿನಲ್ಲಿ ಚಿಂತಿಸುತ್ತ, ಆ ದೇವರ/ದೇವತೆಯ ಮಂತ್ರವನ್ನು ಜಪಿಸುತ್ತಾರೆ. 

ಗಾಯತ್ರಿ ಮಂತ್ರ ಜಪಿಸುವ ವೇಳೆ ಕೆಲವರು ಆ ಪರಮಪುರುಷನ ಐದು ತಲೆಗಳುಳ್ಳ (ಮುಕ್ತಾ, ವಿದ್ರುಮ, ಹೇಮ, ನೀಲ, ಧವಳ) ಸ್ತ್ರೀರೂಪವನ್ನು ನೆನೆಸಿಕೊಂಡು ಜಪಿಸುತ್ತಾರೆ. (ಪಂಡಿತೋತ್ತಮರಾದ ದೇವುಡು ನರಸಿಂಹ ಶಾಸ್ತ್ರಿಗಳು ತಮ್ಮ "ಮಹಾ ಬ್ರಾಹ್ಮಣ" ಎನ್ನುವ ಕಾದಂಬರಿಯಲ್ಲಿ ಇದರ ವಿವರಗಳನ್ನು ಕೊಟ್ಟಿದ್ದಾರೆ). ಇವಳೇ ಗಾಯತ್ರಿ ಮಾತೆ. ಮತ್ತೆ ಕೆಲವರು ಕೇಯೂರ, ಮಕರ ಕುಂಡಲ, ಕಿರೀಟಗಳನ್ನು ಧರಿಸಿದ ಪರಮಪುರುಷನ ಪುರುಷ ರೂಪವನ್ನು ನೆನೆದು (ಧ್ಯಾಯೇತ್ ಸದಾ ಸವಿತೃ ಮಂಡಲ ಮಧ್ಯವರ್ತೀ ನಾರಾಯಣಃ) ಎಂದು ಅದೇ ಪರಮಪುರುಷನ ಪುರುಷ ರೂಪವನ್ನು ಆರಾಧಿಸುತ್ತಾರೆ.  ಇವನೇ "ಸೂರ್ಯನಾರಾಯಣ".  ಒಂದೇ ಆಲದ ಮನೆಯ ಬೆಲ್ಲದ ಎರಡು ಪಾಯಸ ಎರಡು ಮನೆಯವರಿಗೆ ಸಿಕ್ಕಿದಂತೆ. ಬೆಲ್ಲ ಒಂದೇ. ಮಾಡಿದ ಕ್ರಮ ಬೇರೆ ಆದ್ದರಿಂದ ಪಾಯಸ ಬೇರೆ ಬೇರೆ. 

ಪರಮಪುರುಷನು ನಮ್ಮ ದೇಹಗಳಲ್ಲಿ ಅನೇಕ ರೂಪಗಳಿಂದ ಇರುತ್ತಾನೆ. ಪ್ರತಿ ಮನುಷ್ಯ ದೇಹದಲ್ಲಿ (ಗಂಡು ದೇಹ, ಹೆಣ್ಣು ದೇಹ ಎನ್ನುವ ಭೇದವಿಲ್ಲದೆ) 72,000 ನಾಡಿಗಳಿವೆಯಂತೆ. ಬಲಗಡೆ 36,000 ಪುರುಷ ನಾಡಿ. ಎಡಗಡೆ 36,000 ಸ್ತ್ರೀ ನಾಡಿ. ಹೀಗೆಯೇ ಅವನ ಪ್ರತಿ ಪುರುಷ ರೂಪಕ್ಕೂ ಹೊಂದುವ ಸ್ತ್ರೀ ರೂಪಗಳಿವೆ ಎಂದು ಹೇಳುತ್ತಾರೆ. ಹೀಗೆ ಇರುವುದರಿಂದ ಪ್ರಾಯಶಃ ಪರಮಪುರುಷನನ್ನು ಹೇಗೆ ಗಾಯತ್ರಿ ಮಂತ್ರದಿಂದ ಸ್ತ್ರೀ ಮತ್ತು ಪುರುಷ ರೂಪಗಳೆರಡರಲ್ಲೂ ಆರಾಧಿಸುವುದು ಬಂದಿರಬಹುದು. "ಬೃಹತೀಸಹಸ್ರ" ಉಪಾಸನೆಯಲ್ಲಿ ಹೀಗೆ ಹೇಳುತ್ತಾರೆ. 

ಗಾಯತ್ರಿ ಅನ್ನುವುದು ಇಪ್ಪತ್ತನಾಲ್ಕು ಅಕ್ಷರಗಳ ಒಂದು ಛಂದಸ್ಸು. ಗಾಯತ್ರಿ ಮಂತ್ರ ಜಪಿಸುವಾಗ ಆ ಮಂತ್ರಕ್ಕೆ "ಗಾಯತ್ರಿ ಛಂದಃ" ಎಂದೇ ಹೇಳುವುದು. ಬೃಹತೀ ಅನ್ನುವುದು ಹೀಗೆಯೇ ಮೂವತ್ತಾರು ಅಕ್ಷರಗಳ ಛಂದಸ್ಸು. ಒಂಭತ್ತು ಅಕ್ಷರಗಳ ಒಂದು ಪಾದ. ಹೀಗೆ ನಾಲ್ಕು ಪಾದಗಳಾದರೆ ಮೂವತ್ತಾರು ಅಕ್ಷರಗಳು. ಇವು ಒಂದು ಸಾವಿರವಾದರೆ ಒಂದು ಬೃಹತೀ ಸಹಸ್ರ. ಹೀಗೆ ಲೆಕ್ಕ. ಸಂಖ್ಯಾಶಾಸ್ತ್ರದ ಪ್ರಕಾರ ಹೀಗೆ ವಿವರಣೆ. 

*****

ನಮ್ಮ ವೈದಿಕ ವಾಙ್ಮಯದಲ್ಲಿ ಅನೇಕ ಸಮನ್ವಯಗಳು ಮಾಡಬೇಕಾಗುತ್ತವೆ. "ಏಕಂ ಸತ್. ವಿಪ್ರಾ: ಬಹುಧಾ ವದಂತಿ" ಅನ್ನುವ ನಾಣ್ನುಡಿಯಂತೆ ಅನೇಕ ಮಂದಿ ತಿಳಿದವರು ಅನೇಕ ರೀತಿಯ ವಿವರಣೆಗಳನ್ನು ಕೊಡುತ್ತಾರೆ. ನಮ್ಮ ಪುರಾತನ ಕಲಿಕೆಯ ಮೂಲ ಮಂತ್ರ "ಎಲ್ಲವನ್ನೂ ತಿಳಿ. ಕಡೆಗೆ ನಿನಗೆ ನಿನ್ನ ಅನುಭವದಲ್ಲಿ ಸರಿ ಎಂದದ್ದು ಅನುಸರಿಸು" ಎಂದು. ಯಾವುದನ್ನು ಒಪ್ಪಬೇಕು, ಯಾವುದನ್ನು ಆಚರಿಸಬೇಕು ಅನ್ನುವುದು ಅವರವರ ಆಯ್ಕೆಗೆ ಬಿಟ್ಟದ್ದು. 

ಅಧ್ಯಯನ ಕಾಲದಲ್ಲಿ ಜಿಜ್ಞಾಸುವಿಗೆ ಅನೇಕ ಸಂದೇಹಗಳು ಬರುವುದು ಸಹಜ. ಯಾವುದೋ ಪ್ರಶ್ನೆಯ ಬೀಗಕ್ಕೆ ಮತ್ತೆಲ್ಲೋ ಕೀಲಿಕೈ ಇರುತ್ತದೆ. ಇವೆರಡನ್ನೂ ಸಮನ್ವಯ ಮಾಡಿದಾಗ ಆ ಸಂದೇಹ ಪರಿಹಾರವಾಗುತ್ತದೆ. ಅಧ್ಯಯನ ಮುಂದುವರೆದಂತೆ ಸಂದೇಹಗಳು  ಪರಿಹಾರವಾಗುತ್ತ, ಹೊಸ ಹೊಸ ಬೆಳಕು ಕಾಣುತ್ತದೆ.